26.1 C
Karnataka
Thursday, May 21, 2026
    Home Blog Page 26

    Recruitment of Asst Professor :ಸಹಾಯಕ ಪ್ರಾಧ್ಯಾಪಕರ ನೇಮಕ: ಅಕ್ರಮಕ್ಕೆ ಕಡಿವಾಣ ಹಾಕಲು ಸಹಾಯವಾಣಿ

    BENGALURU MAR 8

    ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಯು ಯಾವುದೇ ಅಕ್ರಮಗಳಿಲ್ಲದೆ, ಪಾರದರ್ಶಕವಾಗಿ ನಡೆಯುತ್ತಿದೆ. ಆದರೆ, ಈ ಬಗ್ಗೆ ಹರಿದಾಡುತ್ತಿರುವ ಅನಪೇಕ್ಷಿತ ವದಂತಿಗಳಿಗೆ ಕಡಿವಾಣ ಹಾಕಿ, ಕಠಿಣ ಕ್ರಮ ಜರುಗಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಹಾಯವಾಣಿಯನ್ನು ಆರಂಭಿಸಿದೆ.

    ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ, ಅಭ್ಯರ್ಥಿಗಳಿಗೆ ಯಾವುದಾದರೂ ಆಮಿಷ ಒಡ್ಡಲು ಯಾರಾದರೂ ಪ್ರಯತ್ನಿಸುತ್ತಿದ್ದರೆ ಅಥವಾ ವದಂತಿಗಳನ್ನು ಹರಡುತ್ತಿರುವವರು ಕಂಡುಬಂದರೆ ಮೊಬೈಲ್ ಸಂಖ್ಯೆ 99015- 81708ಕ್ಕೆ ನೇರವಾಗಿ ಕಚೇರಿ ಸಮಯದಲ್ಲಿ ಕರೆ ಮಾಡಬಹುದು ಇಲ್ಲವೇ ವಾಟ್ಸ್ ಅಪ್ ಮೂಲಕ ತಿಳಿಸಬಹುದು. ಈ ಮಾಹಿತಿಯನ್ನು ಗೌಪ್ಯವಾಗಿಟ್ಟು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

    ಸಹಾಯಕ ಪ್ರಾಧ್ಯಾಪಕರ ನೇಮಕಾತಿಯು ಸರಕಾರಿ ನಿಯಮಗಳಿಗೆ ಅನುಗುಣವಾಗಿ, ಪ್ರತಿಭೆಯನ್ನು ಆಧರಿಸಿ ನಡೆಯುತ್ತಿದೆ. ಈ ಬಗ್ಗೆ ಅಭ್ಯರ್ಥಿಗಳು ವದಂತಿಗಳನ್ನು ನಂಬಿ, ಮೋಸ ಹೋಗಬಾರದು. ಈ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರಕ್ಕಾಗಲಿ, ಅವ್ಯವಹಾರಕ್ಕಾಗಲಿ ಕಿಂಚಿತ್ತೂ ಆಸ್ಪದವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

    ಲಿಖಿತ ಪರೀಕೆಯಲ್ಲಿ‌ ತೆಗೆದುಕೊಂಡ ಒಟ್ಟು ಅಂಕಗಳ ಆಧಾರದ ಮೇಲೆ ನೇಮಕಾತಿ ನಡೆಯುತ್ತದೆ. ಪಾರರ್ದಶಕವಾಗಿ ನಡೆಸಬೇಕು ‌ಎನ್ನುವ ಕಾರಣಕ್ಕೆ ಸಂದರ್ಶನ ಕೂಡ ಇಟ್ಟಿಲ್ಲ ಎಂದು ಅವರು ಹೇಳಿದರು.

    ನೇಮಕಾತಿ ಪ್ರಕ್ರಿಯೆಯ ಅಂಗವಾಗಿ ಈಗಾಗಲೇ ಘೋಷಿಸಿರುವಂತೆ ಮಾರ್ಚ್ 12ರಿಂದ 16ರವರೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಬರಲಿರುವವರು ಸೂಚಿತ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಇದುವರೆಗೂ ಪ್ರವೇಶ ಪತ್ರವನ್ನು ಡೌನ್-ಲೋಡ್ ಮಾಡಿಕೊಳ್ಳದೆ ಇರುವ ಅಭ್ಯರ್ಥಿಗಳು ಪ್ರಾಧಿಕಾರದ ಜಾಲತಾಣದ ಮೂಲಕ ಪ್ರವೇಶಪತ್ರವನ್ನು ತೆಗೆದುಕೊಳ್ಳಬೇಕು.

    ಪರೀಕ್ಷೆಯು ಬೆಂಗಳೂರು, ಮೈಸೂರು, ಮಂಗಳೂರು, ಶಿವಮೊಗ್ಗ, ಧಾರವಾಡ, ಬೆಳಗಾವಿ ಮತ್ತು ಕಲಬುರಗಿಗಳಲ್ಲಿ ನಡೆಯಲಿದೆ. ಎಂದು ಅವರು ತಿಳಿಸಿದ್ದಾರೆ.

    ಪ್ರೀತಿಯಲಿ ಹೆಣ್ಣು ಅಸುರ ವಂಶಸ್ಥೆ ಉಂಡಮೇಲೂ ಅವಳದ್ದು ಅರೆಹೊಟ್ಟೆ

    ಕುಳಿತಿದ್ದ ತನ್ನಿಡೀ ದೇಹಭಂಗಿಗೆ ಒಂದು ಪ್ರಶ್ನಾರ್ಥಕ ಚಿಹ್ನೆಯನ್ನು ಒಗ್ಗಿಸಿಕೊಂಡು ಅವರು ಅವನ ಮುಂದೆ ಕೂತಿದ್ದರು. ಆಫೀಸ್ ಬಾಗಿಲು ತೆರೆದೇ ಇತ್ತು.
    ಅವನು ಒಂದಾನೊಂದು ಕಾಲದ ಅವಳ ‘ಅವನೂ’ ಆಗಿದ್ದಿದ್ದರಿಂದಲೂ ಈಗೊಂದು ಉತ್ತಮ ವರ್ಕಿಂಗ್ ರಿಲೇಶನ್ಷಿಪ್ ಉಳಿದಿದ್ದರಿಂದಲೂ ನೇರ ಒಳಹೋದವಳಿಗೆ ಒಳಗಿನ ಬೆಚ್ಚಗಿನ ವಾತಾವರಣಕ್ಕೆ ಸಣ್ಣ ಗೊಂದಲವಾಯಿತು. ಅವನೆದಿರು ಕುಳಿತ ಅರವತ್ತು ಪ್ಲಸ್ ರ ಆ ಮಹಿಳೆ ಕಣ್ಣ ತುಂಬ ಬೆಳಕನ್ನೂ ದೇಹದಲ್ಲಿ ಕಂಡೂ ಕಾಣದಂತ ತಳಮಳವನ್ನೂ ಹೊದ್ದು ಹೇಗಾದರೂ ನನ್ನ ವ್ಯಾಖ್ಯಾನಿಸು ಎನ್ನುತ್ತಿರುವಂತೆ ಕಾಣ್ತಿದೆ.ತೀರ ಸಣ್ಣ ಫಾರ್ಮಾಲಿಟಿಯೂ ಇಲ್ಲದೇ ಒಳನುಗ್ಗಿದ್ದಕ್ಕೆ ಮತ್ತು ಆ ಹೆಣ್ಣು ತನಗಾಗಿಯೇ ನಿರ್ಮಿಸಿಕೊಂಡಿದ್ದ ಆ ಇಂಟಿಮೇಟ್ ಕ್ಷಣಗಳಿಗೆ ಭಂಗ ತಂದಿದ್ದಕ್ಕೆ ಅವಳಿಗೀಗ ಬೇಸರ.
    ಅದೂ ಅಲ್ಲದೇ ಆ ಒಂದು ಕಾಲದ ತನ್ನ ‘ಅವನಿಗೂ’ ಇನ್ನೊಂದು ಹೆಣ್ಣಿಗೂ ಚೇಂಬರಿನ ಮಧ್ಯಮ ಉಷ್ಣಾಂಶದಲ್ಲಿ ನಡೆಯುತ್ತಿದ್ದ ರಾಸಾಯನಿಕ ಕ್ರಿಯೆಯಲ್ಲಿ ಬಿಡುಗಡೆಯಾಗುವ ಧಾತು ಉಪಧಾತು ಯಾವುದೆಂಬುದು ಯಾರಿಗಾದರೂ ತಿಳಿಯುವಷ್ಟು ಸ್ಪಷ್ಟವಿರುವುದು ಸರಿಯಲ್ಲವೆನಿಸಿ ಬಾಗಿಲಲ್ಲೇ ನಿಂತು ಸಾವರಿಸಿಕೊಂಡು ಎಕ್ಸಕ್ಯೂಸ್ ಮೀ ಎಂದಳು.…

    ಇಬ್ಬರೂ ಬಾಗಿಲೆಡೆಗೆ ಒಂದೇ ಸರ್ತಿ ನೋಡಿದರು.

    ಅವರು ಅದೇ ವಾತ್ಸಲ್ಯದ ಧ್ವನಿಯಲ್ಲಿ ‘ಬಾಮ್ಮ’ ಎಂದರೆ ಅವನು ಯಾವತ್ತಿನಂತೆ ‘ಬಾರೋ’ಎನ್ನದೇ ಬನ್ನಿ ಬನ್ನಿ ಅಂತ ಗಾಂಭೀರ್ಯ ತೋರಿದ. ತನ್ನ ಟೈಮ್ ನಾನಸೆನ್ಸ್ ಬಗ್ಗೆ ಕೆಡುಕೆನಿಸಿತಾದರೂ ಹತ್ತು ನಿಮಿಷದ ಲೋಕಾಭಿರಾಮದ ಮಾತು ಪರಿಸ್ಥಿತಿ ಪರಿಸರ ಹದಕ್ಕೆ ತರುವುದರಲ್ಲಿ ಯಶಸ್ವಿಯಾಗಿ ಅವರಿಬ್ಬರೂ ತಮ್ಮ ಸ್ಥಿತಿಯಿಂದ ಹೊರ ಬಂದಿದ್ದರು.

    ಆದರೆ

    ಆ ಹಿರಿಯ ಹೆಣ್ಣಿಗೆ ಒದಗಿದ್ದ ಅಪರೂಪದ ಕ್ಷಣವನ್ನು ಕಿತ್ತುಕೊಂಡ ವೇದನೆ ಅಲ್ಲಿಂದ ಬಂದ ನಂತರವೂ ಅವಳಲ್ಲಿ ಮುಂದುವರೆದೇ ಇತ್ತು.

    ಮೇಲಿನ ಘಟನೆ ಓದಿದವರು ಅವರವರ ಭಾವಕ್ಕೆ ಭಕ್ತಿಗೆ ಯುಕ್ತಿಗೆ ಆಸಕ್ತಿಗೆ ತಕ್ಕಂತೆ ಪ್ರತಿಕ್ರಿಯೆ ಕೊಡಬಹುದು.ಯಾರೂ ಗ್ರಹಿಸದ,ಗ್ರಹಿಸಿದರೂ ಅದಕ್ಕಿಷ್ಟು ಮಸಾಲೆ ಹಚ್ಚಿ ಒಗ್ಗರಣೆ ಕೊಟ್ಟು ಚಪ್ಪರಿಸುವ,ಸೂಕ್ಷ್ಮ ಮನಸ್ಸಿಗಳಿಗೆ ಮಾತ್ರ ಆ ಕ್ಷಣಗಳ ಮಹತ್ತು ತಿಳಿಯುವ ಸಂಗತಿ ಇದು.

    ಯಾರಿಗೂ ಕೇಡಿಲ್ಲದ ಒಂದು ನಿರುಪದ್ರವಿ ಪ್ಲೆಷರ್.ಆ ಕ್ಷಣದ ಅಮೃತ ಘಳಿಗೆ.
    ಆ ಹಿರಿಯ ಮಹಿಳೆಯ ಬಳಿ ಎಲ್ಲವೂ ಇದೆ. ದೊಡ್ಡ ವಿದ್ಯೆ, ಹುದ್ದೆ,ಹಣ,ಜಮೀನು, ಗಂಡ,ಮಕ್ಕಳು, ಸ್ಥಾನಮಾನ ಆರೋಗ್ಯ ಎಲ್ಲವೂ. ಇಂತಹ ಪ್ರಬುದ್ದ ಹೆಣ್ಣಮಗಳೊಬ್ಬರು ‘ಹೆಣ್ಣಿರುವುದೇ ತನ್ನ ಜಾಣ್ಮೆಯ ಹೊಂಡಕ್ಕೆ ಬೀಳಲು’ ಅಂತ ತಿಳಿದಿರುವ ಆ ಅವನೆದಿರು ಯಾಚಿತರಾಗಿ ನಿಂತಿದ್ದಾರೆ.

    ಯಾಕೆ?

    ಉಹು..ಉತ್ತರವಿಲ್ಲದ ಪ್ರಶ್ನೆ ಇದು.

    ಯಾವ ವಯಸ್ಸಿಗೆ ಯಾವ ಹೊತ್ತಿಗೆ ಯಾವ ಘಳಿಗೆಗೆ ಹೆಣ್ಣಿನ ಅವಶ್ಯಕತೆ ಅನಿವಾರ್ಯತೆ ಗಳೇನು ಎನ್ನುವುದು ಸಾವಿರ ಸಂಶೋಧನೆಗಳ ನಂತರವೂ ನಿಗೂಢವಾಗಿಯೆ ಉಳಿಯುವ ಸಂಗತಿ!!

    ಅಲ್ಲಿಂದ ಹಿಂದಿರುಗಿ ಮನಸ್ಸು ಸಮವಾದ ಮೇಲೆ ಕಾಲದೊಡನೆ ಒಂದೇ ಕೋರಿಕೆ ಇಟ್ಟಳು ಅವಳು.

    ‘ಅವನ ಸೆರಗಿನ ಹಪಹಪಿ ಅವರಿಗೆ ಎಂದೂ ತಿಳಿಯದಿರಲಿ.
    ಆಗಾಗ ಖುಷಿಯ ಕ್ಷಣಗಳು ಅವರ ಹುಡುಕಿ ಬರಲಿ.’
    …..
    ಎಫ್ ಬಿ ಸ್ಟೇಟಸ್ ನಲ್ಲಿ ಹಾಕಿದ್ದ ಪ್ರೇಮದ ತೀವ್ರತೆ ಹೇಳುವ ನಾಲ್ಕು ಸಾಲುಗಳ ಹನಿಗವಿತೆಗೆ ಆರೇಳು ಮಂದಿ ಹೂವು ಹಣ್ಣು ಹೃದಯ ಕೊಡ್ತಿದ್ರು.ಪದ್ಯ ಹುಟ್ಟುವ ಘಳಿಗೆಯ ಪುಳಕದ ಕುರಿತೇ ಹೆಚ್ಚು ಬೆರಗಾಗುವ ನಾನು ಪ್ರಕಟಿಸಿದ ನಂತರ ‘ಅಯ್ಯೋ ಇನ್ನೇನೋ ಆಗಬೇಕಿತ್ತು’ ಅಂತ ಅನ್ನಿಸಿ ಪ್ರತಿಕ್ರಿಯೆಯ ಸಂಭ್ರಮವನ್ನು ಕಳೆದುಕೊಳ್ತೀನಿ.

    ಈ ನಡುವೆ ತರುಣ ಅಂತಲೋ ಹರೆಯ ಅಂತಲೋ ಹೆಸರಿಟ್ಟುಕೊಂಡ ಹುಡುಗನೊಬ್ಬ’ಈ ವಯಸ್ಸಿನಲ್ಲೂ ಇಷ್ಟು ರೋಮ್ಯಾಂಟಿಕ್ ಆಗಿ ಹೇಗೆ ಬರೀತೀರಾ ಆಂಟಿ’
    ಅಂತ ಪ್ರತಿಕ್ರಿಯಿಸಿದ.

    ಅಚ್ಚರಿಯ ಜೊತೆಗೆ ಅವನ ಬಾಲವೃದ್ದಾಪ್ಯಕ್ಕೆ ಮರುಕವೆನಿಸಿತು.

    ಈ ವಯಸ್ಸೂ ಅಂತಂದ್ರೆ ಯಾವ ವಯಸ್ಸು ಮಗುವೇ?

    ಹೆಣ್ಣು ಈ ವಯಸ್ಸಿನಲ್ಲಿ ‌ಮಾತ್ರ ಪ್ರೇಮಕವಿತೆಗಳನ್ನು ಬರೆಯಬಹುದು ಎನ್ನುವ ನಿಯಮ ಮಾಡಿದವರ್ಯಾರೊ?

    ಬಾಯಲ್ಲಿ ಒಂದೆರಡು ಹಲ್ಲು ಉಳಿದ. ,ಪಂಚೇಂದ್ರಿಯಗಳು ಪೂರ್ಣ ಕೆಲಸ ನಿಲ್ಲಿಸಿದ ಕವಿಯೊಬ್ಬರು ಈಗಲೂ ಹೆಣ್ಣಿನ ಕಟಿತುಟಿಗಳನ್ನು ಬಿಡಿಬಿಡಿಯಾಗಿ ವರ್ಣಿಸುವ ಕವಿತೆ ಬರೆದಾಗ ‘ಮನಸ್ಸಿಂದ ಇವರಿನ್ನೂ ಎಷ್ಟು ಯಂಗ್ ಇದಾರೆ’ಅಂತ ಮೆಚ್ಚಿಕೊಂಡವರ ಸಂಖ್ಯೆಯಲ್ಲಿ ಹೆಣ್ಣುಗಳದ್ದೇ ದೊಡ್ಡ ಪಾಲು.

    ನಮಗೆ ಹಾಗನಿಸುವುದು ಇವರಿಗ್ಯಾಕೆ ಹೀಗನಿಸುವುದಿಲ್ಲ.
    ಮುಕ್ತವಾಗಿ ಬರೆದರೆ ಬೋಲ್ಡ್ ಬರೆಯುತ್ತಾಳೆ ಎನ್ನುವ ಹಣೆಪಟ್ಟಿ ಯಾಕೆ?
    ಇದು ಮ್ಯಾನುಪ್ಯಾಕ್ಚರಿಂಗ್ ಡಿಫೆಕ್ಟಾ?

    ಹೊಸ ತಲೆಮಾರಿನವರು ಹೆಚ್ಚು ಮುಕ್ತ ಮನಸ್ಕರಾಗಿದ್ದಾರೆ.
    ಹೆಣ್ಣಿನ ಭಾವನಾತ್ಮಕ ಅವಲಂಬನೆ ದೈಹಿಕ ಅನಿವಾರ್ಯತೆ ಗಳನ್ನು ಅರ್ಥೈಸಿಕೊಳ್ಳಬಲ್ಲವರಾಗಿದ್ದಾರೆ. ಪುಲ್ಲಿಂಗವೇ ಬರೆದಿಟ್ಟ ‘ಹೆಣ್ಣೆಂದರೆ ಹೀಗಿರಬೇಕು’ ಎನ್ನುವ ಮಾದರಿ ಇನ್ನಾದರೂ ಬದಲಾಗಬಹುದು ಎಂದುಕೊಂಡಿದ್ದು ಸುಳ್ಳಾ?

    ಉಹು..

    ಇವನೊಬ್ಬನಿಂದಾಗಿ ಹೊಸ ತಲೆಮಾರನ್ನು ಹೀಗೇ ಅಂತ ನಿರ್ಧರಿಸಲಾರೆ ಎನ್ನುತ್ತಿದೆ ನನ್ನ ಆಶಾವಾದಿ ಮನಸ್ಸು.

    ಇದಾಗಿ ಎರಡನೇ ದಿನಕ್ಕೆ ಮತ್ತೆ

    ‘ಆಂಟಿ..ಪದ್ಯ ಫುಲ್ ಪ್ರೋವೊಕಿಂಗು’ಎಂದ. ಅವನ ಆ ಆಂಟಿ ಎನ್ನುವ ಸಂಭೋಧನೆಯೇ ಅಸಭ್ಯವೆನಿಸಿ ಆ ವೃದ್ದ ತರುಣನನ್ನು ಮುಲಾಜಿಲ್ಲದೆ ಬ್ಲಾಕಿಸಿ ಅಯ್ಯೋ ಜೀವಿಯೇ ಅಂದುಕೊಂಡು ಸುಮ್ಮನಾದೆ.

    ಈ ವೈರುಧ್ಯ ಯಾಕೆ?

    ಯಾವ ತೋರುಗಾರಿಕೆಗೆ ಮಹಿಳಾ ದಿನ..?
    ಗಂಡು ಮಕ್ಕಳನ್ನು ಬೆಳೆಸುವಲ್ಲಿ ಮತ್ತುಮತ್ತೂ ತಪ್ಪುತ್ತಿದ್ದೀವಾ ನಾವು?

    ಇವಳ ಧಾರಣ ಪ್ರತಿಭೆ ಮತ್ತು ಹಡೆಯುವ ಶಕ್ತಿ ಯಿಂದಾಗಿ ಹೆಣ್ಣನ್ನು ಒಂದು ಮುಟಿಗೆ ಮಿಗಿಲೇ ಎತ್ತರದಲ್ಲಿಡಬೇಕಾದ ಮನುಕುಲ ಪ್ರಾಣಿಗಳಿಗಿಂತಲೂ ಕೀಳಾಗಿ ಯಾಕೆ ವರ್ತಿಸುತ್ತದೆ.


    ಒಂದು ಅಚ್ಚರಿಯ ಸಂಗತಿಯನ್ನು ಈ ಒಂದು ದಶಕದೀಚೆಗೆ ಗಮನಿಸುತ್ತಿದ್ದೇನೆ.
    ವಿದೇಶದಿಂದ ಬಂದಂತಹ ದಂಪತಿಗಳಲ್ಲಿ ಗಂಡು ಹೆಚ್ಚು ಪ್ರಜ್ಞಾವಂತನಾಗಿ ವರ್ತಿಸುವುದು, ತನ್ನ ಹೆಣ್ಣಿನ ಆತ್ಮ ಗೌರವದ ರಕ್ಷಣೆ ಮತ್ತು ಅವಳ ಸ್ವಂತದ ಸ್ವಾತಂತ್ರ್ಯ ಕ್ಕೆ ಗೌರವ ಕೊಡುವುದು ಕಾಣಿಸುತ್ತಿದೆ.

    ಇದು ಹೇಗೆ ಸಾಧ್ಯವಾಯಿತು..?

    ”ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ”
    ಎನ್ನುವ ಸಾಲನ್ನೇ ಗಿಳಿಪಾಠದಂತೆ ಒಪ್ಪಿಸುತ್ತಿರುವ ನಮ್ಮವರದ್ದು ತೋರಿಕೆಯ ಪೂಜೆಯಾ?
    ಪಾಶ್ಚಿಮಾತ್ಯ ಸಂಸ್ಕ್ರತಿ ಅಂತ ಮಾತುಮಾತಿಗೂ ಹೀಗಳೆಯುತ್ತಿದ್ದ ಮಂದಿ ಅಲ್ಲಿಂದ ಬಂದವರಿಂದ ಕಿಂಚಿತ್‌ ಕಲಿತರೂ ಇಲ್ಲಿನ ತರತಮ ದೂರವಾಗಬಹುದಾ?

    ಹೆಣ್ಣನ್ನು ದೇವಿ ಎಂದು ಭಾಷಣ ಹೇಳುತ್ತಲೇ ಅವಳ ದೇಹಭಾಷೆಯನ್ನು ಹಡೆಯುವುದಕ್ಕೂ ಹಾದರಕ್ಕೂ ಮಾತ್ರ ಎನ್ನುವಂತೆ ನೋಡುವ ಪ್ರಜ್ಞಾವಂತರು ವಿದ್ಯಾವಂತರು ಎಷ್ಟಿಲ್ಲ‌ ನಮ್ಮ ನಡುವೆ?

    ತತ್ರ ದೇವತಾ ಎನ್ನುವಲ್ಲಿ ತತ್ತರ ದೇವತಾ ಎನ್ನುವಂತ ಪರಿಸರ ಬೆಳೆದಿದ್ದು ಯಾವಾಗ?
    ಅದಕ್ಕೆ ತಕ್ಕಂತೆ ಹೆಣ್ಣಿನ ಮಾನದ ಕುರಿತೇ ಇರುವ ಕೊಳಕು ಬೈಗುಳಗಳ ಪದಗಳು ಇಲ್ಲಿ ಇನ್ನೂ ಅತೀ ಸಹಜವೆನ್ನುವಂತೆ ಬಳಕೆಯಾಗುತ್ತಿವೆ ಎಂದರೆ ಮಹಿಳಾ ದಿನದ ಅರ್ಥವೇನು?
    …..
    ಮೊನ್ನೆ ಅಂತರರಾಷ್ಟ್ರೀಯ ಆಹಾರ ತಜ್ಞೆ ರುಜುತಾ ದಿವಾಕರ್ ಒಂದು ಮಾತನ್ನು ಹೇಳಿದರು.

    ಮೆನೋಫಾಸ್ ಸಮಯದ ಹಾಟ್ ಫ್ಲಷಸ್ ಕಳೆಯುವವರಿಗೂ ‘ಡೋಂಟ್ ಸ್ಲೀಪ್ ವಿತ್ ಯುವರ್ ಹಸ್ಬೆಂಡ್!’

    ಅದಕ್ಕೆ ಅವರು ಕೊಡುವ ಕಾರಣ ಕೇಳಿ ದಿಗ್ಭ್ರಮೆ ಆಯಿತು.

    ಹೆಣ್ಣಿಗೆ ಈ ಸಮಯದಲ್ಲಾಗುವ ಶೆಕೆ,ಥಂಡಿ, ಪದೇಪದೆ ಮೂತ್ರದ ಅವಸರಗಳಿಂದ ಗಂಡಿಗೆ ಕಿರಿಕಿರಿ ಆಗ್ತದಂತೆ.ಅವನ ನಿದ್ದೆ ಹಾಳಾಗಿದ್ದಕ್ಕೆ ಸಂಸಾರ ಏರುಪೇರಾಗಬಹುದಂತೆ.
    ಅದೇ ಗಂಡಿಗೆ ಅರವತ್ತು ಸುಮಾರಿಗೆ ತೀವ್ರವಾಗುವ ಅ್ಯಂಡ್ರೋಪಾಸ್ ನಲ್ಲಿ ಅವರಲ್ಲಾಗುವ ಅನಾರೋಗ್ಯದ ಲಕ್ಷಣಗಳನ್ನು ಹೆಣ್ಣು ಮಮತೆಯಿಂದಲೂ ಪ್ರೇಮದಿಂದಲೂ ಆಲಿಸುವುದನ್ನು ಆರೈಕೆ ಮಾಡುವುದನ್ನೂ ಸಂಭ್ರಮಿಸುತ್ತಾಳಂತೆ!
    ಹಾಗಿದ್ದರೆ ಇದು ನಿಜಕ್ಕೂ ಮ್ಯಾನುಫ್ಯಾಕ್ಚರಿಂಗ್ ಡಿಫೆಕ್ಟೇ ಅಂತ ನಮ್ಮ ಪಾಡಿಗೆ ನಾವು ಮಹಿಳಾ ದಿನವನ್ನು ಆಚರಿಸಿ ಸಂಭ್ರಮಿಸೋಣವಾ?
    ….
    ಈಚೆಗೆ ಒಂದು ಘಟನೆ ನಡೆಯಿತು.
    ಎಪ್ಪತ್ತರ ಸುಮಾರಿನ ಅವರೊಂದಿಗೆ ನನಗೆ ಬಹುಕಾಲದ ಆತ್ಮಿಯತೆ.
    ಬಹಳ ಪ್ರಜ್ಞಾವಂತರಾದ ಅವರೊಂದಿಗೆ ಯಾವುದೇ ಸಂಗತಿಗಳನ್ನೂ ಹೇಳಿಕೇಳಿ ಸಂವಾದಿಸುವುದು ,ಅರಿವಿನ ಪರಿಧಿ ಹಿರಿದಾಗಿಸಿಕೊಳ್ಳುವುದು ನನಗಿಷ್ಟ.
    ಮೊನ್ನೆ ಇಂಥದ್ದೇ ವಿಚಾರ.

    ಪ್ರಾಸಂಗಿಕವಾಗಿ ಮಾತು ಶೃಂಗಾರದ ಕವಿಸಮಯದ ಕಡೆಗೆ ತಿರುಗಿತು.ಕೆಲವು ಸಾಲುಗಳನ್ನು ಉಲ್ಲೇಖಿಸಿ ಎಷ್ಟು ಸಹಜವಾದ ಭಾವವಿದೆ ಇಲ್ಲಿ ಎಂದೆ.ಎಷ್ಟೋ ವರ್ಷದ ಪರಿಚಯದ ಅವರಲ್ಲಿ ಒಂದು ಕ್ಷಣ ಮನೋವಿಕಾರವಾಯಿತು ಕಾಣುತ್ತೆ.

    ‘ಈಗ ನೀವು ಹೇಳಿದ ಸಾಲುಗಳನ್ನು ವಿವರಿಸಬಹುದಾ, ಕೇಳಲು ಉತ್ಸುಕನಾಗಿರುವೆ’
    ಎಂದರು.

    ಎಂದೂ ತನ್ನ ಮಿತಿ ದಾಟದ ಮನುಷ್ಯನಲ್ಲಾಗುತ್ತಿರುವ ವಿಕೃತಿ ಆ ಕ್ಷಣಕ್ಕೆ ಅರಿವಿಗೆ ಬಂದಿತ್ತು‌ ನನಗೆ.

    ಮುಂದಿನ ಮೂರುನಿಮಿಷವನ್ನು ಎಷ್ಟು ಘನತೆಯಿಂದ ನಿಭಾಯಿಸುತ್ತೇನೆ ಎನ್ನುವುದರ ಮೇಲೆ ಬದುಕಿನ ಉಳಿದ ನನ್ನ ಅವರ ಬಾಂಧವ್ಯ ನಿರ್ಧರಿತವಾಗ್ತದೆ ಎನ್ನುವ ಸಂಗತಿ ಮಿಂಚಿನಂತೆ ಹೊಳೆಯಿತು.

    ಕೆಲವು ಪ್ರೇಮದ ಸಾಲುಗಳನ್ನು ಉಲ್ಲೇಖಿಸಿ ಪ್ರೇಮವನ್ನು ಕಾಮವನ್ನೂ ಆಧ್ಯಾತ್ಮದ ಎತ್ತರಕ್ಕೆ ಒಯ್ದಿರುವ ಈ ಶ್ರೇಷ್ಟತೆ ನೋಡಿ ಎಂದೆ.

    ಬಹುಶಃ ಅವರ ಆ ಡಿಸ್ಟಾರ್ಷನ್ ಒಂದೂವರೆ ನಿಮಿಷದ್ದಿರಬೇಕು.

    ತಕ್ಷಣವೇ ವಾಸ್ತವಕ್ಕೆ ಬಂದು ‘ನಿಜ..ಇದಕ್ಕಾಗಿಯೇ ನನಗೆ ನಿನ್ನೊಂದಿಗೆ ಮಾತುಕತೆ ಇಷ್ಟ’
    ಎನ್ನುತ್ತಾ ಎಂದಿನ‌ ಮಮತೆಯ ಮಾತು ಮುಂದುವರೆಸಿದರು. ಆ ಕ್ಷಣದಲ್ಲಿ ನಾನು ಅವರೊಳಗಾದ ಆ ಬದಲಾವಣೆ ನನಗೆ ತಿಳಿದು ಅಸಹ್ಯವಾಯಿತು ಎನ್ನುವುದನ್ನು ತೋರಿಸಿಕೊಂಡಿದ್ದರೆ ಬಹುಶಃ ನನ್ನನ್ನು ಎದುರಾದಾಗಲೆಲ್ಲ ಅವರು ಕೀಳರಿಮೆಯಿಂದ ನರಳುತ್ತಿದ್ದರು. ನಮ್ಮ ಆತ್ಮೀಯ ಬಾಂಧವ್ಯ ಮುಗಿದೇ ಹೋಗುತ್ತಿತ್ತು.
    …..
    ಇಲ್ಲೊಬ್ಬಳು ಹೆಣ್ಣು ಗಂಡನ ಎರಡೆರಡು ಮದುವೆ ,ಮೂರ್ನಾಲ್ಕು ಹೊರಸಂಬಂಧಗಳಿಂದ ಬೇಸತ್ತು ಪ್ರತೀಕಾರಕ್ಕಾಗಿಯೇ ತನ್ನ ಉದ್ದ ನಿಲುವಂಗಿಯ ಹೊರತಾಗಿ ಇಣುಕುವ ತನ್ನ ಕಾಡಿಗೆ ಹಚ್ಚಿದ ಕಣ್ಣಿನಿಂದಲೇ ಕರೆ ನೀಡಿ ಸರಿಸಮಾನ ಪುರುಷನನ್ನು ಕೂಡಿ ಒಂದು ಬಗೆಯ ನಿರಾಳ ಅನುಭವಿಸಿದ್ದಳು.
    ….

    ಹೆಣ್ಣಿನ ಸ್ವಾತಂತ್ರ್ಯಕ್ಕೆ ಸದಾ ಮಿತಿ ಹೇರುವ ಕುರಿತು ಪುಂಖಾನುಪುಂಖವಾಗಿ ಬರೆಯುವ ಈ ಇವಳ ಬದುಕು ಬರೀ ಮುಳ್ಳಿನ ಹಾಸಿಗೆ.ಇವಳ ಮಾತು ಕೃತಿಗೆ ಸಮಾಜದಲ್ಲಿ ದೊರಕಿರುವ ಮನ್ನಣೆಗೆ ಸದಾ ಕುಹಕವಾಡುವುದನ್ನೇ ರೂಢಿಸಿಕೊಂಡಿದ್ದಾನೆ ಆಕೆಯ ಗಂಡ. ಮಾತಿಗೂ ಮೊದಲೂ ಅವನಾಡುವ ಅxxx ಅxxx ಎನ್ನುವ ಹೊಲಸು ಪದಗಳಿಗೆ ಪ್ರತಿಯಾಗಿ ಅವಳು ನಗುನಗುತ್ತ ಸಂಸಾರ ತೂಗಿಸಬೇಕು ಅಂತ ನಿರೀಕ್ಷೆ ಮಾಡ್ತಾನೆ.

    ವಿರೋಧಿಸಿದರೆ ಅಥವಾ ಅವನಿಗೆ ಅರಿವಾಗಲಿ ಅಂತ ತಿರುಗಿಬಿದ್ದರೆ ಅವನದ್ದು‌ ಮಾಮೂಲಿ ಡೈಲಾಗು..’ನಾನು ಗಂಡಸು..ಏನ್ ಬೇಕಾದರೂ ಆಡ್ತೀನಿ ಮಾಡ್ತೀನಿ..ಹೆಣ್ಣಿಗೆ ಅಂಕೆಶಂಕೆ ಇರಬೇಕು’ ಅವನ ಕೊಳಕು ಮನಸ್ಥಿತಿ ಗೆ ಮತ್ತಷ್ಟು ಕುಮ್ಮಕ್ಕು ಕೊಡುವ ಆತನ ತಾಯಿ.
    ಹೊರಗಿನ ಸಮಾಜಕ್ಕೆ ಆಕೆ ಎಷ್ಟು ಜೀವನ್ಮುಖಿಯಾಗಿದ್ದಾಳೋ ಒಳಗೆ ನಿತ್ಯವೋ ಬತ್ತಿ ಬರಡಾಗುತ್ತಿದ್ದಾಳೆ.ಆ ಧರ್ಮದ ಮಿತಿಯ ಬಗ್ಗೆ ಬರೆದದ್ದು ನಗೆಪಾಟಲಿನ ಸಂಗತಿ ಎನಿಸುತ್ತದೆ ಅವಳಿಗೆ.
    ಕಾರಣ…
    ಇವಳ ಆ ಧರ್ಮದ ಒಬ್ಬ ಆತ್ಮೀಯ ಗೆಳೆಯ ತನ್ನ ಸಣ್ಣ ಓದಿನ ಹೆಂಡತಿಯನ್ನು ಅಕ್ಷರಶಃ ಕಣ್ಣ ರೆಪ್ಪೆಯೊಳಗಿಟ್ಟು ಪ್ರೀತಿಸುತ್ತಾನೆ.ತನ್ನ ಹೆಂಡತಿಯನ್ನು ಹೊಗಳುವ ಯಾವ ಅವಕಾಶವನ್ನೂ ಅವನು ತಪ್ಪಿಸಿಕೊಂಡಿದ್ದು ಕಂಡಿಲ್ಲ.
    …..

    ಮಹಿಳಾ ದಿನಕ್ಕೆ ಇಂಥದ್ದೇ ಹೇಳಬೇಕು ಅಂತ ತಿಳಿಯದ ಹೊತ್ತಿನಲ್ಲಿ ಸುತ್ತೂ ಕಂಡ ಸಂಗತಿಗಳ ಕೊಲ್ಯಾಜ್ ಎದುರಿಗಿಟ್ಟಿದ್ದೇನೆ.ಒಂದು ಹೆಣ್ಣಿನ ಸಾಧನೆ ಮತ್ತು ಯಶಸ್ಸನ್ನು ಅವಳ ಸಂಗಾತಿ ಅವಳಿಗೆ ಕೊಡುವ ಗೌರವ ಪ್ರೀತಿಯ ಆಧಾರದ ಮೇಲೇ ಅಳೆಯಬೇಕೆನಿಸುತ್ತಿರುವುದು ನನ್ನ ತಿಳಿವಳಿಕೆಯ ಮಿತಿಯೂ ಇರಬಹುದು.
    ಒಂದು ಅದ್ಭುತವಾದ ಸಂಶೋಧನ ತಂಡದ ಜೊತೆಗೆ ಭಾಗವಹಿಸುವ ಗೌರವ ಪಡೆದು ಯಶಸ್ಸಿನೊಂದಿಗೆ ಹಿಂದಿರುಗಿದ ‌ಹೆಣ್ಣಿಗೆ ತನ್ನ ಸಂಗಾತಿಯಿಂದ ಸಂದೇಹದ ಉಡುಗೊರೆ ಸಿಕ್ಕರೆ ಅವಳು ನೆಮ್ಮದಿಯಾಗಿರಬಲ್ಲಳೆ?

    ಅಥವಾ ಮನೆ ಗೆದ್ದು ಮಾರು ಗೆದ್ದರೆ ಮಾತ್ರ ಅದು ನಿಜವಾದ ಯಶಸ್ಸು ಅಂತ ಕಟಕಿಯಾಡಿದರೆ ಅವಳ ಸಂತೋಷ ಉಳಿಯಬಹುದೇ?

    ಇಲ್ಲಿ ಯಾವುದು ಸ್ವಾತಂತ್ರ್ಯ…
    ಮಿತಿಯೆನ್ನುವುದರ ವ್ಯಾಖ್ಯಾನ ಏನು..
    ಕೋಟೆ ದಾಟಿ ಹೋಗು ಅಂತ ದಿಡ್ಡಿ ಬಾಗಿಲು ತಾವೇ ತೆಗೆದು ಹಿಂದಿನಿಂದ ತಲವಾರು ಇರಿಯುವ ಗಂಡಸರು ಶೇಕಡವಾರು ಎಷ್ಟಿರಬಹುದು.
    ಸರಿ ಎಂದರೇನು?
    ಇದು ತಪ್ಪೆನ್ನುವುದಕ್ಕೆ ಪುರಾವೆ ಯಾರು?
    ….
    ಹೆಣ್ಣು ತನ್ನ ಅತ್ಯುನ್ನತ ಸಾಧನೆಯ ಹೊಸಿಲಿನಲ್ಲಿ ನಿಂತಾಗಲೂ ಅವಳಿಂದ ಬರುವ ಮೊದಲ ಮಾತು’ನನ್ನ ಕುಟುಂಬದ ಸಹಕಾರ ಇಲ್ಲಿ ಬಹಳ ದೊಡ್ಡದು’.

    ಬಹಳ ಸಲೀಸಾಗಿ ಪ್ರತಿ ಯಶಸ್ವಿ ಗಂಡಿನ ಹಿಂದೆ ಹೆಣ್ಣಿದ್ದಾಳೆ ಎನ್ನುವ ತಂಗಳು ಮಾತು ಬಳಸುತ್ತದೆ ನಮ್ಮ ಸಮಾಜ. ಅದೇ ಬಗೆಯಲ್ಲಿ ಹೆಣ್ಣು ಸಾಧಿಸಲು ಕೂಡ ಕುಟುಂಬದ ಸಹಕಾರ ಮುಖ್ಯ ಎನ್ನುವುದನ್ನು ಅರಿಯುವ ಕಾಲ ಯಾವಾಗ ಬರಬಹುದು?
    ಅಥವಾ ಯಾರ ಸಹಕಾರವಿಲ್ಲದೆಯೂ ಸಾಧಿಸಿದ,ಯಶಸ್ವಿಯಾದ ಹೆಣ್ಣಿನ ಕಣ್ಣು ಹೊಮ್ಮಿಸುವ ಒಂಟಿತನದ ಅಸಹಾಯಕತೆಗೆ ಉತ್ತರ ಏನು?

    ಯಾವುದೇ ಮಹಿಳೆಯ ದೃಷ್ಟಿಕೋನವೆಂಬುದು ಅವಳು ಸದ್ಯ ಸಲ್ಲುತ್ತಿರುವ ಸಂಸಾರದ ಪರಿಸರ ಮತ್ತು ಅವಳ ಬಾಳಿನಲ್ಲಿ ಸಂಭವಿಸಿದ ಘಟನಾವಳಿಗಳಿಂದ ರೂಪುಗೊಂಡಿರುತ್ತದೆ.
    ಇದು ಬಹುಶಃ ನನ್ನ ಪರಿಸರದಲ್ಲಿ ‌ನಾನು ಕಂಡ ಸಂಗತಿಗಳು. ಇದಮಿತ್ಥಂ ಎನ್ನುವ ತೀರ್ಮಾನ ಹೇಳಲು ನನ್ನ ಎಟುಕಿಗೆ ಸಿಗುವ ಪ್ರಪಂಚ ಚಿಕ್ಕದು.
    ಅಥವಾ ಹೇಳುವುದಕ್ಕೂ ಮುನ್ನ ನಾನೇ ಗೊಂದಲ ವೈರುಧ್ಯಗಳ ಮೂಟೆ ಎನಿಸುತ್ತದೆ.

    ಮೇಲೆ ಹೇಳಿದ ಯಾವ ತೊಂದರೆಯೂ ಇಲ್ಲದ ಸುಖಿ ದಂಪತಿಗಳ ಸಂತತಿಯೂ ನಮ್ಮ ನಡುವೆ ಬೇಕಾಷ್ಟಿದೆ.ಅಂತಹವರ ಸಂಖ್ಯೆ ಅನಂತವಾಗಲಿ ಅನ್ನುವ ಆಶಯದೊಂದಿಗೇ ಹೀಗೂ ಇದ್ದಾರೆ ಎನ್ನುವುದೂ ತಿಳಿದಿದ್ದರೆ ಆ ಅವರ ದೃಷ್ಟಿಗೆ ಇನ್ನಷ್ಟು ಮೆರುಗು ಸಿಗುತ್ತದೆ ಎನ್ನುವ ಸಣ್ಣ ಸ್ವಾರ್ಥ ನನಗೆ.

    ನನ್ನದೇ ಕವಿತೆಯ ಒಂದು ಸಾಲಿದೆ.

    ‘ಗಂಡೇ..
    ಪ್ರೀತಿಯಲಿ ಹೆಣ್ಣು ಅಸುರ ವಂಶಸ್ಥೆ.
    ಉಂಡಮೇಲೂ ಅವಳದ್ದು ಅರೆಹೊಟ್ಟೆ.
    ಅದ ತುಂಬಿಸುವುದರೆಡೆಗಷ್ಟೆ
    ಇರಲಿ
    ನಿಮ್ಮ ನಿಷ್ಠೆ’

    ಮಹಿಳಾ ದಿನ ಸಾರ್ಥಕ್ಯವೆನಿಸುವುದು ಈ ಕವಿತೆಗೊಂದು ಅರ್ಥ ದೊರೆತಾಗ ಎನ್ನುವುದನ್ನು ‌ಮಾತ್ರ ಈ ಹೊತ್ತಿಗೆ ಹೇಳಬಲ್ಲೆ.

    ಈ ಬರಹದೊಂದಿಗೆ ಪ್ರಕಟವಾಗಿರುವ ಚಿತ್ರ ರಚಿಸಿದವರು ಕಿರಣ್ ಮಾಡಾಳು. ಅರಸೀಕರೆ ತಾಲೂಕು ಮಾಡಾಳು ಗ್ರಾಮದ ಕಿರಣ್ ಫೈನ್ ಆರ್ಟ್ಸ್ ಓದಿದ್ದಾರೆ.ಇಲ್ ಸ್ಟ್ರೇಷನ್, ವ್ಯಂಗ್ಯ ಚಿತ್ರ , ಕಂಪ್ಯೂಟರ್ ಗ್ರಾಫಿಕ್ಸ್ ಎಲ್ಲದರಲ್ಲೂ ಅವರಿಗೆ ಪರಿಣತಿ. ಆಧ್ಯಾತ್ಮ ಸಂಗತಿಗಳ ಬಗ್ಗೆ ವಿಶೇಷ ಪಾಂಡಿತ್ಯ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಲಾವಿದರಾಗಿ ದುಡಿದ ಅನುಭವ. ಪ್ರವಾಸ ಮತ್ತು ಅಧ್ಯಯನದಲ್ಲಿ ಆಸಕ್ತಿ.ಅವರ ಸಂಪರ್ಕ ಸಂಖ್ಯೆ 9964655156



    ಅಳಿದವರನ್ನು ಮತ್ತೆ ತರುತ್ತೇವೆಯೇ?

    ಅನಿವರಂ ತಂದಪೆವೇ( ಅಳಿದವರನ್ನು ಮತ್ತೆ ತರುತ್ತೇವೆಯೇ?)– ಜಗತ್ತು ಇಂದಿಗೆ  ಸಂಘರ್ಷದೊಂದಿಗೆ ಹೆಜ್ಜೆಯಿಡುತ್ತಿದೆ . ರಷ್ಯಾ ಮತ್ತು ಉಕ್ರೇನಿಗೆ ಇಂದು ಯುದ್ಧಕಾಲವಾಗಿದೆ.  ನಿಜ ಅರ್ಥದಲ್ಲಿ ಅವರೆ ಕಷ್ಟಕ್ಕೆ  ನೇರ ಭಾಗಿಗಳು.

    ಬೆಂಕಿ  ದೂರವಿದ್ದರೂ ಆದರ ಕರಿನೆರಳು  ಬಹುದೂರದವರೆಗೂ ಆವರಿಸುವಂತೆ  ಪರೋಕ್ಷವಾಗಿ ನಾವೂ ಕೂಡ ಭಾಗಿಗಳಾಗುತ್ತಿದ್ದೇವೆ  (ಪೆಟ್ರೋಲ್,ಚಿನ್ನದ ದರದ  ಏರಿಕೆ ಇತ್ಯಾದಿಗಳನ್ನು ಗಮನಿಸಿ) ಅನ್ನಿಸುತ್ತಿದೆ. 

    ಯುದ್ಧಗಳು ಮಾನವ ಲೋಕದ ಮಾಯದ ಗಾಯಗಳು.  ಅಹಮಿಕೆಯ ಕಾರಣಕ್ಕೆ ನಡೆದ ಒಂದೊಂದು ಯುದ್ಧಗಳೂ ಒಂದೊಂದು ಬೃಹತ್ ವೃಣವೇ.  ಪ್ರಸ್ತುತ  ಮಹಾಭಾರತ ಯುದ್ಧದ  ಸಂದರ್ಭದಲ್ಲಿ ತೊಂಬತ್ತೊಂಬತ್ತು ಮಕ್ಕಳನ್ನು ಕಳೆದುಕೊಂಡು ಉಳಿದ ಒಬ್ಬ ಮಗ  ದುರ್ಯೋಧನನ್ನು ನಮ್ಮ ಪಾಲಿಗೆ   ನೀನಾದರೂ ಉಳಿದುಕೋ ಎನ್ನುವ  ಗಾಂಧಾರಿ  ಇಂದಿಗೆ ಅತ್ಯಂತ ಪ್ರಸ್ತುತ.

     ‘ಸತ್ತ ಮಗಂದಿರ್  ಸತ್ತರ್ ನೀನೆಮಗುಳ್ಳೊಡೆ ಸಾಲ್ವುದವರನಿಂ ತಂದಪೆವೇ’   ‘ಶಕ್ತಿಕವಿ’ ರನ್ನನ ‘ಸಾಹಸ ಭೀಮ ವಿಜಯಂ’ ನ ‘ಧೃತರಾಷ್ಟ್ರ ವಚನಂ’ ನಲ್ಲಿ ಗಾಂಧಾರಿ ಹೇಳುವ  ಮಾತುಗಳಿವು.  ಸತ್ತ ಮಕ್ಕಳು ಸತ್ತರು!  ಹೋಗಲಿ ಬಿಡು! ನೀನೊಬ್ಬ ನಮ್ಮ ಪಾಲಿಗೆ ಉಳಿದರೆ ಅಷ್ಟು ಮಕ್ಕಳ ದುಃಖವನ್ನು  ನಿನ್ನನ್ನು ನೋಡಿಯೇ ಮರೆಯುವೆ ಎನ್ನುವ ತಾಯಿಯ ಮಾತು  ಎಂಥವರ ಮನಸ್ಸನ್ನೂ ಕಲಕುತ್ತದೆ.   ಹೆತ್ತೊಡಲಿನ ಸಂಕಟವನ್ನು ವಿವರಿಸಲು ಪದಗಳಿಲ್ಲ.  ಇಂಥ  ಎಷ್ಟು ತಾಯಿಹೃದಯಗಳು  ರಷ್ಯಾ- ಉಕ್ರೇನ್  ಯುದ್ಧದಲ್ಲಿ ಕಳೆದುಕೊಂಡ ಜೀವಗಳಿಗಾಗಿ ಪರತಪಿಸುತ್ತಿವೆಯೋ  ತಿಳಿದಿಲ್ಲ. ಈ  ಯುದ್ಧ ಇಲ್ಲಿಗೆ  ಸಾಕು  ಅನ್ನಿಸುತ್ತಿದೆ.

     ಯುದ್ಧದ ಪರಿಣಾಮ ಇದು.  ಯುದ್ಧಗಳು  ಪ್ರಚೋದನೆಗಾಗಿ,  ಪ್ರತಿಷ್ಟೆಗಾಗಿ, ಸೇಡಿಗಾಗಿ.  ಮಣ್ಣು-ಹೊನ್ನಿಗಾಗಿ ನಡೆದಿರಬಹುದು ಆದರೆ   ಅದರ ಕೆಡುಕು  ಮನುಕುಲವನ್ನೇ ಕಾಡುತ್ತದೆ. ಅಣುಬಾಂಬ್ ಸ್ಫೋಟದಿಂದಾದ ದುಷ್ಪರಿಣಾಮ  ಇನ್ನೂ  ಜೀವಂತವಾಗಿರುವಾಗಲೆ  ಇಂಥ  ಯುದ್ಧಗಳು ಬೇಕೇ ಎನ್ನಿಸುತ್ತದೆ. ಇಂದಿಗೆ ರಷ್ಯಾ -ಉಕ್ರೇನ್  ಯುದ್ಧ ಪ್ರಾರಂಭವಾಗಿ 11 ದಿನಗಳು. ಯಾರದು ಮೇಲುಗೈ?  ಯಾರಿಗೆ ಹಿನ್ನಡೆ? ನಮಗದು ಅನವಶ್ಯಕ. ಸದ್ಯ ಆಗಿರುವ ಹಾನಿಯನ್ನು   ಭರಿಸಿಕೊಳ್ಳಲು ಇನ್ನೆಷ್ಟು ದಿನಗಳು ಬೇಕೋ ? ತಿಳಿದಿಲ್ಲ .  ಇನ್ನು ಜೀವಹಾನಿ ತರಿಸುವ  ನೋವು ಸಂಕಟ ಯಾವುದರಿಂದಲೂ ಭರಿಸಲಾಗದ್ದು  ಈ ಕ್ಷಣಕ್ಕಾದರೂ ಯುದ್ಧ ಕೊನೆಗೊಂಡು ಉಭಯರಾಷ್ಟ್ರಗಳಲ್ಲಿ ಶಾಂತಿ ನೆಲಸಲಿ ಎಂಬ ಸದಾಶಯ  ಅಷ್ಟೇ.

    This image has an empty alt attribute; its file name is suma-veena-2-edited.jpg

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    Indian Stock Market: ಚಟುವಟಿಕೆಯನ್ನು ಸಮಯೋಚಿತವಾಗಿ ನಿರ್ವಹಿಸಿದಲ್ಲಿ ಉತ್ತಮ ಫಲಿತಾಂಶ

    ಷೇರುಪೇಟೆಯಲ್ಲಿ ಉಂಟಾಗುತ್ತಿರುವ ಅತೀವ ಪ್ರಮಾಣದ, ರಭಸದ ಏರಿಳಿತಗಳನ್ನು ಪ್ರದರ್ಶಿಸುತ್ತಿರುವುದಕ್ಕೆ ಮುಖ್ಯ ಕಾರಣ ಪ್ರಮುಖ ಸೂಚ್ಯಂಕಗಳು ಮತ್ತು ಹೆಚ್ಚಿನ ಷೇರುಗಳ ಬೆಲೆಗಳು ಗರಿಷ್ಠ ಮಟ್ಟದಲ್ಲಿರುವುದೇ ಅಗಿದೆ. ಬೆಳವಣಿಗೆ ಎಷ್ಠರಮಟ್ಟಿಗೆ ಆಗಿದೆ ಎಂದರೆ ಷೇರುಗಳ ಬೇಡಿಕೆಯ ಪ್ರಮಾಣ ಅತಿ ಹೆಚ್ಚಾಗಿದ್ದು, ಲಭ್ಯತೆ, ವಿಶೇಷವಾಗಿ ಅಗ್ರಮಾನ್ಯ ಕಂಪನಿಗಳ ಲಭ್ಯತೆಯ ಕೊರತೆಯುಂಟಾಗಿದ್ದು, ಇಂತಹ ಷೇರುಗಳಲ್ಲಿ ಸ್ವಲ್ಪಮಟ್ಟಿನ ಇಳಿಕೆ ಕಂಡಲ್ಲಿ ಅದು ಪುಟಿದೇಳುವ ವೇಗವೂ ಅತಿ ಹೆಚ್ಚಾಗಿರುತ್ತದೆ.

    ಮಾರ್ಚ್‌ 5,2021 ರಂದು ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.207.33 ಲಕ್ಷ ಕೋಟಿಯಲ್ಲಿದ್ದು, ಅಂದು ನೋಂದಾವಣೆ ಮಾಡಿಕೊಂಡಿದ್ದ ಗ್ರಾಹಕರ ಸಂಖ್ಯೆಯು 6,27,85,031 ರಲ್ಲಿತ್ತು. ಅದು ಒಂದು ವರ್ಷದ ನಂತರ ಅಂದರೆ ಮಾರ್ಚ್‌ 4, 2022 ರಂದು ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.246.79 ಲಕ್ಷ ಕೋಟಿಗೆ ಏರಿಕೆಯಾಗಿದ್ದು, ನೋಂದಾಯಿತ ಗ್ರಾಹಕರ ಸಂಖ್ಯೆಯು 9,88,98,797 ಕ್ಕೆ ಏರಿಕೆ ಕಂಡಿದೆ. ಅಂದರೆ ಸುಮಾರು ಮೂರೂವರೆ ಕೋಟಿಗೂ ಹೆಚ್ಚಿನ ಹೂಡಿಕೆದಾರರ ಕಾರಣ ಪೇಟೆಯ ಬಂಡವಾಳೀಕರಣ ಮೌಲ್ಯವು ಅದಕ್ಕನುಗುಣವಾದ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಇದು ಇನ್ನೂ ಹೆಚ್ಚಿನ ಏರಿಕೆ ಕಂಡಿದ್ದು, ಸಧ್ಯ ರಷ್ಯ ಮತ್ತು ಯುಕ್ರೇನ್‌ ಸಂಘರ್ಷದ ಕಾರಣ ಪೇಟೆಯು ಇಳಿಕೆ ಕಂಡಿರುವ ಕಾರಣ ಇದೂ ಸಹ ಕುಸಿತಕ್ಕೊಳಗಾಗಿದೆ.

    04.03.2022 Pre-opening sensex

    ಇತ್ತೀಚಿನ ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನ ಅಂಕಿ ಅಂಶಗಳ ಪ್ರಕಾರ ವಿವಿಧ ರಾಜ್ಯಗಳಲ್ಲುಂಟಾದ ಹೂಡಿಕೆದಾರರ ವಾರ್ಷಿಕ ಹೆಚ್ಚಳದ, 26 ನೇ ಫೆಬ್ರವರಿ 2022 ರಂದು, ಪ್ರಮಾಣವು ಈ ಕೆಳಗಿನಂತಿದೆ. ಶೇ.90 ಕ್ಕೂ ಹೆಚ್ಚಿನ ಏರಿಕೆ ಕಂಡಂತಹ ರಾಜ್ಯಗಳ ವಿವರ:

    ಅಸ್ಸಾಂ: ಶೇ.308.16,ಲಕ್ಷದ್ವೀಪ: ಶೇ.109.40,ಅರುಣಾಚಲ ಪ್ರದೇಶ: ಶೇ.124.56,ಬಿಹಾರ: ಶೇ.116.15,ಮಧ್ಯಪ್ರದೇಶ: ಶೇ.109.40,ಒರಿಸ್ಸಾ: ಶೇ.106.16, ಮಿಜೋರಾಂ: ಶೇ.96.55,ಹಿಮಾಚಲ್‌ ಪ್ರದೇಶ: ಶೇ.95.35,ಮಣಿಪುರ: ಶೇ.95.31,ತ್ರಿಪುರಾ: ಶೇ.93.11,ಅಂಡಮಾನ್‌ ಅಂಡ್‌ ನಿಕೋಬಾರ್‌: ಶೇ.92.49,ನಾಗಾಲ್ಯಾಂಡ್‌: ಶೇ.91.79,ಮೇಘಾಲಯ: ಶೇ.90.87

    ಈ ಎಲ್ಲಾ ರಾಜ್ಯಗಳಲ್ಲಿ ಆರ್ಥಿಕ ಸಾಕ್ಷರತೆಯ ಮಟ್ಟ ಯಾವ ಹಂತದಲ್ಲಿದೆ ಎಂಬುದು ತಿಳಿಯದಿದ್ದರೂ ಅವರ ಆಸಕ್ತಿ ಮೆಚ್ಚುವಂತಹುದಾಗಿದೆ. ಉಳಿದಂತೆ ಕರ್ನಾಟಕದಲ್ಲಿ ಹೊಸದಾಗಿ ಪೇಟೆ ಪ್ರವೇಶಿಸಿದವರ ಸಂಖ್ಯೆಯು ಶೇ.52.12 ರಷ್ಟಿದ್ದರೆ, ಗೋವಾದಲ್ಲಿ ಶೇ.44.21 ರಷ್ಟಿದೆ. ಗುಜರಾತ್‌ ನಲ್ಲಿ ಶೇ.32.33 ರಷ್ಟಿದೆ. ತಮಿಳುನಾಡಿನಲ್ಲಿ ಶೇ.35.51 ರಷ್ಟಿದೆ.

    ಇತ್ತೀಚೆಗೆ ಅಂದರೆ ಫೆಬ್ರವರಿ 14 ರಂದು ಸೆನ್ಸೆಕ್ಸ್‌ 1,747 ಪಾಯಿಂಟುಗಳ ಕುಸಿತ ಕಂಡು, 15 ರಂದು 1,736 ಪಾಯಿಂಟುಗಳ ಚೇತರಿಕೆ ಕಂಡ ವೇಗ ಮತ್ತು 24 ರಂದು ಕಂಡ ಭಾರಿ ಕುಸಿತ ಅಂದರೆ 2,702 ಪಾಯಿಂಟುಗಳ ಭರ್ಜರಿ ಕುಸಿತ ಮತ್ತು 25 ರಂದು ಕಂಡು ಬಂದ 1,328 ಪಾಯಿಂಟುಗಳ ಪುಟಿದೇಳುವ ರೀತಿಗಳು, ನಂತರದಲ್ಲಿ ಒಂದೇ ದಿನದಲ್ಲಿ ಪ್ರದರ್ಶಿತವಾಗುತ್ತಿರುವ ಏರಿಳಿತಗಳ ಶೈಲಿ ಹೂಡಿಕೆದಾರರನ್ನು ಅವಕಾಶವಾದಿಗಳನ್ನಾಗಿಸಿ, ದೀರ್ಘಕಾಲೀನ ಹೂಡಿಕೆಯನ್ನು ಅರ್ಥಹೀನವಾಗಿಸಿದೆ.

    ಸುಮಾರು ಶೇ.58 ರಷ್ಟು ಹೂಡಿಕೆದಾರರು ಹೆಚ್ಚಾಗಿರುವ ಈ ಸಂದರ್ಭದಲ್ಲಿ ಅದಕ್ಕನುಗುಣವಾಗಿ ಲಭ್ಯವಾಗುವ ಲೀಸ್ಟೆಡ್‌ ಕಂಪನಿಗಳಲ್ಲಿ ಹೆಚ್ಚಿನ
    ಬದಲಾವಣೆಗಳಿಲ್ಲವಾದ್ದರಿಂದ ಉತ್ತಮ ಕಂಪನಿಗಳಿಗೆ ಬೇಡಿಕೆ ಹೆಚ್ಚಾಗಿ ಅವು ಏರಿಕೆ ಕಂಡರೆ, ಉಳಿದ ಕಂಪನಿಗಳೂ ಏರಿಕೆ ಕಾಣಬಹುದೆಂಬ ನಿರೀಕ್ಷೆಯಿಂದ ಖರೀದಿಗೆ ಮುಂದಾಗುವವರಲ್ಲಿ ಹೊಸ ಹೂಡಿಕೆದಾರರೇ ಹೆಚ್ಚಾಗಿರುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಹೂಡಿಕೆದಾರರು ಗಮನಿಸಲೇಬೇಕಾದ ಕೆಲವು ಅಂಶಗಳು, ಇತರೆ ಮೂಲಭೂತ ಅಂಶಗಳೊಂದಿಗೆ, ಹೂಡಿಕೆಯನ್ನು ಸುರಕ್ಷಿತಗೊಳಿಸಬಹುದು.

    ಆರಂಭಿಕ ಷೇರು ವಿತರಣೆಗಳು ( I P Os)

    1. ವಿತರಣೆ ಮಾಡುತ್ತಿರುವ ಷೇರಿನ ಮುಖಬೆಲೆ
    2. ಷೇರಿನ ವಿತರಣಾ ಬೆಲೆ ( ಪ್ರೀಮಿಯಂನೊಂದಿಗೆ)
    3. ವಿತರಣೆ ಮಾಡುತ್ತಿರುವ ಕಂಪನಿಯ ವಲಯ ಮತ್ತು ಆ ಕಂಪನಿಯ ಉತ್ಪನ್ನಗಳಿಗಿರುವ ಭವಿಷ್ಯ
    4. ವಿತರಣೆಗೂ ಮುನ್ನ ದಿನಗಳಲ್ಲಿ ಕಂಪನಿಯು ಪ್ರೈವೇಟ್‌ ಲಿಮಿಟೆಡ್‌ ನಿಂದ ಪಬ್ಲಿಕ್‌ ಲಿಮಿಟೆಡ್‌ ಕಂಪನಿಗಳಾಗಿ ಪರಿವರ್ತಿಸಲಾಗಿದೆಯೇ ?
    5. ವಿತರಣೆಯಲ್ಲಿ ಹೊಸ ಷೇರುಗಳಿವೆಯೇ ಅಥವಾ ಸಂಪೂರ್ಣವಾಗಿ ಅವು ಪ್ರವರ್ತಕರು ಮತ್ತು ಖಾಸಗಿ ಹೂಡಿಕೆದಾರರು ಆಫರ್‌ ಫಾರ್‌ ಸೇಲ್‌ ಮೂಲಕ ಮಾರಾಟ ಮಾಡುತ್ತಿರುವರೇ ? ಸಂಪೂರ್ಣವಾಗಿ ಆಫರ್‌ ಫಾರ್‌ ಸೇಲ್‌ ಮಾರಾಟವಾದಲ್ಲಿ ಸಂಗ್ರಹಣೆ ಪೂರ್ತಿ ಪ್ರವರ್ತಕರು ಮತ್ತು ಖಾಸಗಿ ಹೂಡಿಕೆದಾರರಿಗೆ ಸೇರುತ್ತದೆ. ಕಂಪನಿಗೆ ಯಾವ ರೀತಿಯ ಅನುಕೂಲವೂ ಇರುವುದಿಲ್ಲ.
    6. ವಿತರಣೆಗೂ ಮುನ್ನ ಕಂಪನಿಯ ಪ್ರವರ್ತಕರು ಷೇರಿನ ಮುಖಬೆಲೆ ಸೀಳಿಕೆ ಮಾಡಿರುವರೇ ?
    7. ಪ್ರವರ್ತಕರು ಷೇರುಗಳನ್ನು ಪಡೆದುಕೊಂಡಿರುವ ಬೆಲೆ ಮತ್ತು ಅವರು ಮಾರಾಟಮಾಡುತ್ತಿರುವ ಬೆಲೆಗಳಲಿರುವ ವ್ಯತ್ಯಾಸ
    8. ವಿತರಣೆಗೂ ಮುನ್ನ ಆ ಕಂಪನಿಯು ಭಾರಿ ಪ್ರಮಾಣದ ಲಾಭಾಂಶವನ್ನಾಗಲಿ, ಬೋನಸ್‌ ಷೇರುಗಳನ್ನಾಗಲಿ ವಿತರಿಸಿ ತನ್ನಲ್ಲಿರುವ ಮೀಸಲು ನಿಧಿಯ ಹುಂಡಿಯನ್ನು ಬರಿದಾಗಿಸಿದೆಯೇ ? ಕಂಪನಿ ಹಾನಿಗೊಳಗಾಗಿದ್ದರೂ ಬೋನಸ್‌ ಷೇರು ವಿತರಣೆ ಮಾಡಿಕೊಳ್ಳಲು ಮೀಸಲು ನಿಧಿಯನ್ನು ಬಳಸಿಕೊಳ್ಳಬಹುದು.
    9. ಕಂಪನಿಯು ನಿಗದಿಪಡಿಸಿರುವ ಪ್ರೀಮಿಯಂ ಬೆಲೆಯು ಕಂಪನಿಯ ಆರ್ಥಿಕ ಸಾಮರ್ಥ್ಯಕ್ಕನುಗುಣವಾಗಿದೆಯೇ. ಅಂದರೆ ಕಂಪನಿಯು ಸ್ಥಿರ ಆಸ್ತಿಯನ್ನು ಹೊಂದಿದ್ದರೆ ಉತ್ತಮ.

    ಸೆಕಂಡರಿ ಮಾರ್ಕೆಟ್‌ ವ್ಯವಹಾರಗಳು (SECONDARY MARKET)

    1. ಖರೀದಿಸುತ್ತಿರುವ ಕಂಪನಿಯು ಯಾವ ಗುಂಪು/ಸಮೂಹದಲ್ಲಿದೆ.
    2. ಖರೀದಿಸುತ್ತಿರುವ ಕಂಪನಿಯು ಲಾಭಗಳಿಸುತ್ತಿದೆಯೇ? ಲಾಭ ಗಳಿಕೆಯು ಕಂಪನಿಯ ವಹಿವಾಟಿನ ಗಾತ್ರಕ್ಕನುಗುಣವಾಗಿದೆಯೇ?
    3. ಆ ಕಂಪನಿಯ ಆಡಳಿತ ಮಂಡಳಿಯ ಚಿಂತನೆ ಹೂಡಿಕೆದಾರರ ಸ್ನೇಹಿಯಾಗಿದ್ದು ಗಳಿಸಿದ ಲಾಭದಲ್ಲಿ ಆಕರ್ಷಕ ಮಟ್ಟದ ಲಾಭಾಂಶ, ಬೋನಸ್‌ ಷೇರುಗಳ ವಿತರಣೆ ಮಾಡಿದೆಯೇ
    4. ಕಂಪನಿಯಲ್ಲಿ ಪ್ರವರ್ತಕರ ಭಾಗಿತ್ವ, ರೀಟೇಲ್‌ ಹೂಡಿಕೆದಾರರ ಭಾಗಿತ್ವ ಮತ್ತು ಇತರೆ ಹೂಡಿಕೆದಾರರ ಭಾಗಿತ್ವದ ಪ್ರಮಾಣ
    5. ಪ್ರವರ್ತಕರ ಭಾಗಿತ್ವದಲ್ಲಿ ಅಡವಿಟ್ಟ ಪ್ರಮಾಣ ಎಷ್ಟಿರಬಹುದು ಎಂಬುದು ಮುಖ್ಯ
    6. ಹೂಡಿಕೆಗೆ ಆಯ್ಕೆ ಮಾಡಿಕೊಂಡ ಕಂಪನಿಯು ಸ್ಥಿರಾಸ್ತಿಯನ್ನು ಹೊಂದಿದ್ದರೆ ಉತ್ತಮ. ಕೇವಲ ಬ್ರಾಂಡ್‌ ವ್ಯಾಲ್ಯು ಹೊಂದಿದ್ದರೆ ಸುರಕ್ಷತೆಯ ಮಟ್ಟ ವಿರಳ.
    7. ಕಂಪನಿ ಷೇರಿನ ಮುಖಬೆಲೆ ಎಷ್ಟಿದೆ ಇದು ಲಾಭಾಂಶದ ಶೇಕಡಾವಾರು ಪ್ರಮಾಣದ ಲೆಕ್ಕಾಚಾರಕ್ಕೆ ಅವಶ್ಯ.
    8. ಕಂಪನಿಯೇನಾದರೂ ತನ್ನ ಹೆಸರನ್ನು ಬದಲಿಸಿಕೊಳ್ಳುತ್ತಿದೆಯೇ?
    9. ಕಂಪನಿಯ ನೀತಿಪಾಲನಾ ಮಟ್ಟವು ಹೇಗಿದೆ, ಅದರ ಮೇಲೇನಾದರೂ ಗುರುತರವಾದ ಅರೋಪಗಳು, ಕಾನೂನಿನ ಕ್ರಮಗಳಿವೆಯೇ?
    10. ಮುಖ್ಯವಾಗಿ ಕೇವಲ ವಿಶ್ಲೇಷಣೆಗಳನ್ನು ಅನುಸರಿಸುವ ಬದಲು, ಕಂಪನಿಗಳ ಅರ್ಹತಾ ಮಟ್ಟವನ್ನು ಮಾಪನ ಮಾಡುವ ಚಿಂತನಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು.
    11. ಕಂಪನಿಗಳ ಬ್ರಾಂಡ್‌ ವ್ಯಾಮೋಹದಿಂದ ಹೊರಬಂದು ಸಹಜ ನಿರ್ಧಾರಗಳನ್ನು ಅಳವಡಿಸಿಕೊಳ್ಳಬೇಕು. ಉದಾಹರಣೆಗೆ: ಶುಕ್ರವಾರದಂದು ಸೆನ್ಸೆಕ್ಸ್‌ ತನ್ನ ಕುಸಿತದ ಹಾದಿಯಲ್ಲಿ ಸಾಗಿತ್ತು. ಅದಕ್ಕನುಗುಣವಾಗಿ ಸೆನ್ಸೆಕ್ಸ್‌ ನ 23 ಕಂಪನಿಗಳು ಹಾನಿಗೊಳಗಾದವು. ಅವುಗಳಲ್ಲಿ ಶೇ.5 ಕ್ಕೂ ಹೆಚ್ಚಿನ ಇಳಿಕೆ ಕಂಡದ್ದು ಟೈಟಾನ್‌ ಕಂಪನಿ. ಈ ಕಂಪನಿ ಶ್ರೇಷ್ಠವಾದುದೇನೋ ಸರಿ. ಆದರೆ ಹೂಡಿಕೆ ಮಾಡುವವರು, ಖರೀದಿಸುವ ಮುನ್ನ ಆ ಕಂಪನಿಯಲ್ಲಿ ಹೂಡಿಕೆ ಮಾಡಿದಲ್ಲಿ ಬಂಡವಾಳ ವೃದ್ಧಿಯಾಗಲು ಅವಕಾಶವಿದೆಯೇ ಎಂಬುದನ್ನು ಪರಿಸ್ಥಿತಿಯನ್ನಾಧರಿಸಿ ನಿರ್ಧರಿಸಬೇಕು. ಅಂದರೆ ಸುಮಾರು ರೂ.130 ರಷ್ಟು ಒಂದೇ ದಿನ ಕರಗಿಸಿದ ಈ ಕಂಪನಿಯ ಷೇರಿನ ಮುಖಬೆಲೆ ರೂ.1. ಅಂದೇ ಬಿ ಎಸ್‌ ಇ ಐಪಿಒ ಸೂಚ್ಯಕದಲ್ಲಿರುವ ಕಲ್ಯಾಣ್‌ ಜ್ಯುವೆಲ್ಲರ್ಸ್‌ ದಿನದ ಮದ್ಯಂತರದಲ್ಲಿ, ಸುಮಾರು ರೂ.3 ರಷ್ಟು ಏರಿಕೆಯನ್ನು ಪಡೆದುಕೊಂಡಿತ್ತು. ಈ ಷೇರಿನ ಮುಖಬೆಲೆ ರೂ.10. ಅಂದರೆ ಒಂದೇ ದಿನ ರೂ.130 ನ್ನು ಕಳೆದುಕೊಂಡ ಷೇರಿನಲ್ಲಿ ಅಡಕವಾಗಿರುವ ಅಪಾಯದ ಮಟ್ಟಕ್ಕೆ ಎರಡು ಕಲ್ಯಾಣ್‌ ಜುವೆಲ್ಲರ್ಸ್‌ ಷೇರನ್ನು ಖರೀದಿಸಬಹುದಾಗಿದೆ. ಅಂದರೆ ಇಂತಹ ನಿರ್ಧಾರವನ್ನು ಕೈಗೊಳ್ಳುವ ಮುನ್ನ ತುಲನಾತ್ಮಕ ಚಿಂತನೆ ಅಗತ್ಯ. Value pick – prafit book ಎಂಬುದು ಷೇರುಪೇಟೆ ವಹಿವಾಟಿಗೆ ಸದಾ ಅನ್ವಯವಾಗುವ ಹಸಿರು ಸಮೀಕರಣವಾಗಿದೆ. ಯಾವುದೇ ಒಂದು ಷೇರು ಖರೀದಿಸುವಾಗ ಅದರ ಮೌಲ್ಯವು ಭಾರಿ ಕುಸಿತದಲ್ಲಿದೆ ಎಂದಾಗ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ಈ ಷೇರಿನ ಬೆಲೆ ಏರಿಕೆ ಕಂಡಾಗ ಹೂಡಿಕೆಯ ಅವಧಿ ಮತ್ತು ಅದು ಗಳಿಸಿಕೊಡುವ ಲಾಭದ ಗಾತ್ರಕ್ಕನುಗುಣವಾಗಿ, ಉತ್ತಮವಾಗಿದ್ದಲ್ಲಿ ಮಾರಾಟ ಮಾಡಿ ನಿರ್ಗಮಿಸಬೇಕು. ಮಾರಾಟಮಾಡಿದ ನಂತರ ಇದೇ ಷೇರು ಮತ್ತಷ್ಟು ಏರಿಕೆ ಕಂಡಲ್ಲಿ ಚಿಂತಿಸದೆ, ಲಾಭ ನಗದೀಕರಿಸಿಕೊಂಡ ತೃಪ್ತಿ ಇದ್ದಲ್ಲಿ ಮುಂದಿನ ನಿರ್ಧಾರಗಳು ಸುಸೂತ್ರವಾಗಿರುತ್ತದೆ. ಹಾಗಾಗಿ ಸಮತೋಲನ ಚಿತ್ತ ಭವಿಷ್ಯದ ಚಟುವಟಿಕೆಗೆ ಅತ್ಯಗತ್ಯ.

    ಪ್ರತಿ ದಿನವೂ, ಪ್ರತಿಗಳಿಗೆಯೂ ಪೇಟೆಯಲ್ಲಿ ಲಾಭಗಳಿಸುವ ಬಗ್ಗೆ ಹೊಸ ಹೊಸ ಮಾದರಿಯ ಪ್ರಯತ್ನಗಳು ನಡೆಯುತ್ತಲೇ ಇರುತ್ತದೆ. ಹಾಗಾಗಿ ಚಟುವಟಿಕೆಯನ್ನು ಸಮಯೋಚಿತವಾಗಿ ನಿರ್ವಹಿಸಿದಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು.

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    Govt Degree college: ಸರಕಾರಿ ಪದವಿ ಕಾಲೇಜುಗಳಿಗೆ ಪ್ರಭಾರಿ ಪ್ರಾಂಶುಪಾಲರ ನೇಮಕ, ಉಪನ್ಯಾಸಕರ ವರ್ಗಾವಣೆಗೆ ಮತ್ತೆ ಚಾಲನೆ

    BENGALURU MAR 5

    ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 410 ಪ್ರಾಂಶುಪಾಲರ ಹುದ್ದೆಗಳಿಗೆ ಹಿರಿಯ ಉಪನ್ಯಾಸಕರನ್ನು ಪ್ರಭಾರಿ ಪ್ರಾಂಶುಪಾಲರಾಗಿ ಕೌನ್ಸೆಲಿಂಗ್ ಮೂಲಕ ನೇಮಕ ಮಾಡಿಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

    ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಹುದ್ದೆಗಳಲ್ಲಿ ಗ್ರೇಡ್-1 ದರ್ಜೆಯ 327 ಹುದ್ದೆಗಳು ಪದವಿ ಕಾಲೇಜುಗಳಲ್ಲಿ ಮತ್ತು ಗ್ರೇಡ್-2 ದರ್ಜೆಯ 38 ಹುದ್ದೆಗಳು ಸ್ನಾತಕೋತ್ತರ ಕೋರ್ಸ್ ಇರುವ ಪದವಿ ಕಾಲೇಜುಗಳಲ್ಲಿ ಲಭ್ಯವಿವೆ. ಈ ಹುದ್ದೆಗಳಲ್ಲಿ ಇದುವರೆಗೂ ಕಾರ್ಯ ನಿರ್ವಹಿಸುತ್ತಿದ್ದವರು ಫೆಬ್ರವರಿ ತಿಂಗಳಲ್ಲಿ ನಿವೃತ್ತರಾಗಿದ್ದಾರೆ. ಹೀಗಾಗಿ, ಕಾಲೇಜುಗಳಲ್ಲಿ ನಾಯಕತ್ವದ ಕೊರತೆ ಉಂಟಾಗಬಾರದೆಂಬ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.

    ಪ್ರಾಂಶುಪಾಲರ ಹುದ್ದೆ ಖಾಲಿ ಇರುವ ಕಾಲೇಜುಗಳ ವಿವರಗಳನ್ನು ಕೌನ್ಸೆಲಿಂಗ್ ಆರಂಭಿಸುವುದಕ್ಕೂ 15 ದಿನಗಳ ಮೊದಲೇ ಕಾಲೇಜು ಶಿಕ್ಷಣ ಇಲಾಖೆಯ ಜಾಲತಾಣದಲ್ಲಿ ಪ್ರಕಟಿಸಲಾಗುವುದು. ಪ್ರಭಾರಿ ನೇಮಕ ಪ್ರಕ್ರಿಯೆಯಲ್ಲೂ ಸೇವಾಜ್ಯೇಷ್ಠತೆಯ ಆಧಾರದ ಮೇಲೆಯೇ ಆಯ್ಕೆ ಶ್ರೇಣಿ ಉಪನ್ಯಾಸಕರು, ಸಹ ಮತ್ತು ಸಹಾಯಕ ಪ್ರಾಧ್ಯಾಪಕರನ್ನು ಮಾತ್ರವೇ ಕೌನ್ಸಿಲಿಂಗಿಗೆ ಕರೆಯಲಾಗುವುದು. ಜತೆಗೆ, ಈ ಹುದ್ದೆಗೆ ಆಯ್ಕೆಯಾಗುವವರು ಬೋಧಿಸುವಂತಹ ವಿಷಯವು ಆಯಾ ಕಾಲೇಜಿನಲ್ಲಿ ಇರುವಂತೆ ನೋಡಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

    ಈ ಕಾಲೇಜುಗಳಿಗೆ ಕಾಯಂ ಪ್ರಾಂಶುಪಾಲರ ನೇಮಕ ಪ್ರಕ್ತಿಯೆಗೆ ಚಾಲನೆ ಸಿಕ್ಕಿದೆ. ಸದ್ಯದಲ್ಲೇ ಅದು ಕೂಡ‌ ನಡೆಯಲಿದೆ. ಅಲ್ಲಿಯವರೆಗೆ ಪ್ರಭಾರಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದರು.

    ಕೌನ್ಸೆಲಿಂಗ್:ಸರಕಾರಿ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆಯನ್ನು ಕೂಡ ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲೇ ನಡೆಸಲು ತೀರ್ಮಾನಿಸಲಾಗಿದ್ದು, ಈ ಪ್ರಕ್ರಿಯೆ ಕೂಡ ಕೌನ್ಸೆಲಿಂಗ್ ಮೂಲಕವೇ ನಡೆಯಲಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದ್ದಾರೆ.

    ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆಗೆ ಕೆಎಟಿ ತಡೆಯಾಜ್ಞೆ ನೀಡಿದ್ದರಿಂದ, ಇದು ನನೆಗುದಿಗೆ ಬಿದ್ದಿತ್ತು. ಈಗ ಈ ತಡೆಯಾಜ್ಞೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ ಎಂದು ಅವರು ವಿವರಿಸಿದ್ದಾರೆ.

    WAR : ಮನುಷ್ಯ ತನಗೆ ತಾನೇ ಭಸ್ಮಾಸುರ ಆಗುತ್ತಿದ್ದಾನೆ!


    ಆರನೇ ದಿನಕ್ಕೆ ಕಾಲಿರಿಸಿರುವ ರಷ್ಯಾ-ಉಕ್ರೇನ್ ಯುದ್ಧ ಇವತ್ತು ನಿಲ್ಲಬಹುದು,ಈಗ ನಿಲ್ಲಬಹುದು ಅನ್ನುವ ನಿರೀಕ್ಷೆಯನ್ನು ಮೀರಿ, ದಿನದಿಂದ ದಿನಕ್ಕೆ ತನ್ನ ಭೀಕರತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಯಾರದೋ ಯುದ್ಧ ದಾಹಕ್ಕೆ ನಮ್ಮೂರಿನ ಹುಡುಗ ಬಲಿ ಆಗಿದ್ದಾನೆ. ಉನ್ನತ ವ್ಯಾಸಂಗಕ್ಕಾಗಿ ಅಲ್ಲಿಗೆ ಹೋಗಿದ್ದು ಆತನ ತಪ್ಪೇ? ಎಲ್ಲಾ ವಿವಾದಗಳಿಗೂ ಯುದ್ಧವೊಂದೇ ಪರಿಹಾರ ಅಲ್ಲ ಎಂದು ಸಮರೋತ್ಸಾಹಿಗಳಿಗೆ ಬುದ್ಧಿ ಹೇಳುವವರು ಯಾರು?


    ಮೋಸದಿಂದ ಕೊಲ್ಲಬಾರದು, ನಿಶಸ್ತ್ರನಾದವನನ್ನು ಕೊಲ್ಲಬಾರದು, ರಾತ್ರಿ ಆದ ನಂತರ ಯುದ್ಧ ಮಾಡಬಾರದು, ಶರಣಾಗತಿ ಕೋರಿ ಬಂದವನನ್ನು ಕೊಲ್ಲ ಬಾರದು…..ಸರಿಸಮ ಇದ್ದವರೊಟ್ಟಿಗೆ ಸೆಣೆಸಬೇಕು….ಅಮಾಯಕರು, ಮಕ್ಕಳು,ಹೆಂಗಸರ ಮೇಲೆ ಯಾವುದೇ ಹಾನಿ ಆಗಬಾರದು…ಹೀಗೆ ಯುದ್ಧ ಸಂಹಿತೆ ಅಂತ ಹೆಸರಿಟ್ಟು ಯುದ್ಧ ಮಾಡುವಾಗ ಏನೇನು ಮಾಡಬೇಕು ಮಾಡಬಾರದು ಅನ್ನೋ ನಿಯಮಗಳನ್ನು ರೂಪಿಸಿ ನಿಗದಿ ಪಡಿಸಿದ ಜಾಗದಲ್ಲಿ, ನಿಗದಿ ಪಡಿಸಿದ ವೇಳೆಯಂತೆ ಯುದ್ಧಗಳನ್ನು ಮಾಡಿರುವ ನಾಗರಿಕತೆ ಅನ್ನೋದು ಭೂಮಿ ಮೇಲೆ ಇದ್ದರೆ ಅದು ನಮ್ಮದು ಮಾತ್ರ…..ಅಂತ ಅಪ್ಪ ರಾಮಾಯಣ,ಮಹಾಭಾರತದ ಯುದ್ಧ ಪರ್ವ/ಕಾಂಡಗಳ ಬಗ್ಗೆ ಹೆಮ್ಮೆಯಿಂದ ಹೇಳುತ್ತಿದ್ದುದು ನನಗೆ ಕುತೂಹಲಕಾರಿಯಾಗಿ ತೋರುತ್ತಿತ್ತು! ಸತ್ತು,ಸಾಯಿಸುವುದಕ್ಕೆ ನಿಯಮಗಳು, ಅದನ್ನು ಪ್ರೇರೇಪಿಸಲೇನೋ ಎಂಬಂತೆ ವೀರಗತಿ , ವೀರ ಮರಣ ಅನ್ನೋ ಪ್ರಶಸ್ತಿ ಪದಗಳು! ಕ್ಷತ್ರಿಯನು ಯುದ್ಧಕ್ಕೆ ಸದಾ ಸಿದ್ಧನಿರಬೇಕು. ಯುದ್ಧ ಬೇಡ ಅನ್ನುವುದು ಹೇಡಿಯ ಲಕ್ಷಣ….ಇಂತಹುದೇ ಯುದ್ಧದ ಮತ್ತು ಯುದ್ಧ ಮಾಡುವವರ ಕುರಿತಾದ ವಿಷಯಗಳನ್ನು ಮೊದಲಿಗೆ ಕೇಳಿಸಿಕೊಳ್ಳುವಾಗ ಏನೇನೋ ಕಲ್ಪಿಸಿಕೊಂಡ ನನ್ನ ಪುಟ್ಟ ಮೆದುಳಿಗೆ ಎಂಥಹುದೋ ಸೋಜಿಗ!

    Photo by Birmingham Museums Trust on Unsplash

    ಸಂಧಾನ , ಯುದ್ಧ ತಂತ್ರ ಯುದ್ಧದ ಅಂಗ. ಪ್ರಾರಂಭದಲ್ಲಿ ಅಥವಾ ಯುದ್ಧ ಮಧ್ಯೆಯಲ್ಲಿ ಇವುಗಳನ್ನು ಅನುಸರಿಸಬಹುದು. ನಿಜವಾದ ಕ್ಷತ್ರಿಯನ ಯುದ್ಧ ತನ್ನ ಹಕ್ಕುಗಳ,ಪ್ರೆಜೆಗಳ ರಕ್ಷಣೆ ಕುರಿತಾಗಿರಬೇಕು. ಪರ ಧನ, ಪರ ರಾಜ್ಯ, ಪರ ಸ್ತ್ರೀ ಗಾಗಿ ಯುದ್ಧ ಮಾಡುವವನು ಸೋಲುವುದು ನಿಶ್ಚಯ…..ಇಡೀ ಆರ್ಯವರ್ತವನ್ನೇ ಗೆಲ್ಲುವ ಸಾಮರ್ಥ್ಯ ಇದ್ದ ಪಾಂಡವರು ಬೇರೊಬ್ಬ ರಾಜನ ರಾಜ್ಯವನ್ನು ಕಬಳಿಸಲಿಲ್ಲ, ಬದಲಾಗಿ ತಮ್ಮ ಹಕ್ಕಿನ ಐದು ಹಳ್ಳಿಗಳನ್ನಾದರೂ ಕೊಡು ಅಂತ ಶ್ರೀಕೃಷ್ಣ ನ ಮುಖಾಂತರ ಸಂಧಾನ ಮಾಡಿಸಿದರು. ರಾವಣನನ್ನು ಕೊಂದು,ರಾಮ ವಿಭೀಷಣನಿಗೆ ಪಟ್ಟ ಕಟ್ಟಿ ಸೀತೆಯನ್ನು ಕರೆತಂದನೇ ಹೊರತು ಶ್ರೀಲಂಕಾ ನಂದು ಅನ್ನಲಿಲ್ಲ. ಇಂಥ ಧರ್ಮ ಪರ ಜಯಗಳಿಸಲು ಅನಿವಾರ್ಯ ಎಂಬಂತೆ ಅಲ್ಲಲ್ಲಿ ಮೋಸ ಮಾಡುವುದು ತಪ್ಪಾಗಲ್ಲ.ಕರ್ಣ,ವಾಲಿಯಂಥ ಪರಾಕ್ರಮಿಗಳನ್ನು ಮೊಸದಿಂದಲಾದರೂ ಕೊಲ್ಲುವುದು ಅವಶ್ಯಕವಾಗಿರುತ್ತದೆ, ಅಂದಿದ್ದರು. ಈ ನ್ಯಾಯ, ಅನ್ಯಾಯ ನಿರ್ಧರಿಸುವರು ಯಾರು, ಯುದ್ಧ ಮಾಡಿ ಅಂತ ಹೇಳುವವರು ಯಾರು ಅನ್ನುವ ಯೋಚನೆ ತುಂಬಾ ದಿನಗಳವರೆಗೆ ನನ್ನನ್ನು ಕಾಡಿತ್ತು!

    ಸೋತವನ ಪರ ಮಾತಾಡಲು,ಅವನ ಬಗ್ಗೆ ವಕಾಲತ್ತು ವಹಿಸಲು , ಅವನ ನಿಲುವುಗಳನ್ನು ತಿಳಿಸಲು ಅವಕಾಶವೇ ಇಲ್ಲದ ಇತಿಹಾಸ ಗೆದ್ದವರನ್ನು ಇಂದ್ರ , ಚಂದ್ರ ಎಂದಿದೆ. ಗೆದ್ದವನ ತಪ್ಪೆಲ್ಲವೂ ಯಾವುದೋ ಕಾರಣಕ್ಕೆ ಸಮರ್ಥಿಸಲಾಗಿದೆ. ಸೋತವನ ಶೌರ್ಯವನ್ನೂ ಕೀಳುಮಟ್ಟಕ್ಕಿಳಿಸಿ ಅವಮಾನಿಸಲಾಗಿದೆ. ಯಾವುದೇ ಯುದ್ಧ,ಎಷ್ಟೇ ಸಮರ್ಥಿಸಿಕೊಂಡರೂ ಗೆದ್ದು ಉಳಿದುಕೊಂಡಿರುವುದು ಅಮಾಯಕರ , ಅಸಹಾಯಕರ ಮೌನದ ನಿಟ್ಟುಸಿರಿನಲ್ಲಿ….

    ಶಿಲಾಯುಗದಿಂದ ಲೋಹ ಯುಗಕ್ಕೆ ಬಂದ ಮಾನವ ಲೋಹದಿಂದ ಆಗುವ ಪ್ರಾಣ ಹಾನಿಯನ್ನು ಲೆಕ್ಕಿಸಿ, ಹಲವಾರು ಕದನ ನಿಯಮಗಳನ್ನು ಹಾಕಿಕೊಂಡಿರಬೇಕು. ಯುದ್ಧದ ದುಷ್ಪರಿಣಾಮವನ್ನು ಶ್ರೀ ಕೃಷ್ಣ ಸಂಧಾನ ಕಾಲದಲ್ಲಿ ಧುರ್ಯೋಧನನಿಗೆ ಹೇಳುತ್ತಾನೆ… ಇಡೀ ಕುರುವಂಶದ ಜೊತೆಗೆ ಬಹುತೇಕ ರಾಜರ, ಆರ್ಯರ ನಾಶ ಆಗುತ್ತದೆ. ಉಳಿದ ನಮ್ಮ ಹೆಣ್ಣುಮಕ್ಕಳು ಕುಲ ಸಂಕರಣ ಕ್ಕೆ ಗುರಿಯಾಗುತ್ತಾರೆ. ಪ್ರಾಮಾಣಿಕರು,ಅಸೀಮ ಧೈರ್ಯವಂತರು ನಶಿಸಿ, ಹೇಡಿಗಳು ಬದುಕುಳಿದು ಈ ಪವಿತ್ರ ಭೂಮಿಯ ಪಾತಿವ್ರತೆಗೆ ಕಳಂಕ ತರುತ್ತಾರೆ. ಮತ್ತೊಮ್ಮೆ ಯೋಚಿಸಿ ಯುದ್ಧದ ನಿರ್ಧಾರ ಹಿಂಪಡೆಯುವುದು ಒಳಿತು ಅಂತ ಹೇಳ್ತಾನೆ. ಯುದ್ಧ ಅಮಲು, ಅದನ್ನು ನಿಶ್ಚಯಿಸಿದವನಿಗೆ ಯಾರು ಏನೇ ಹೇಳಿದರೂ ಕೇಳುವುದಿಲ್ಲ!

    ಹೀಗೆ ಯುದ್ಧದ ಬಗೆಗಿನ ನನ್ನ ಪ್ರಾಥಮಿಕ ತಿಳಿವಳಿಕೆಗಳಲ್ಲಿ ನನ್ನನ್ನು ಆಶ್ಚರ್ಯ ಚಕಿತನನ್ನಾಗಿ ಮಾಡಿದ್ದ ವಿಷಯ ಎಂದರೆ ಯುದ್ಧ ಮಾಡುವ ಸೈನಿಕರ ಬಗೆಗಿನ ಮನಃಸ್ಥಿತಿ! ಯಾವನೋ ಯಾವುದೋ ತೆವಲಿಗೆ ಯುದ್ಧಕ್ಕೆ ಸಿದ್ಧನಾದರೂ ಅಲ್ಲಿ ಬಡಿದುಕೊಂಡು ಸಾಯುವವರು ಎರಡೂ ಕಡೆಯ ಸಾಮಾನ್ಯ ವರ್ಗದ ಸೈನಿಕರು. ಅವರೆಂದೂ ಈ ರಾಜರುಗಳಂತೆ ಐಷಾರಾಮಿ ಜೀವನವನ್ನು ಕಂಡವರಲ್ಲ,ಭೋಗಿಸಿದವರಲ್ಲ. ಆದರೂ ಅದು ಹೇಗೆ ಸಾಯಲು ತಯಾರಾಗಿ ಬಿಡ್ತಾರೆ?

    ಇದರಡಿಯಲ್ಲಿ ಯೋಚಿಸಿದಾಗ ಕಾಣುವುದೇ ಮೊದಲಿಗೆ ಧರ್ಮ,ದೇಶಪ್ರೇಮ ಮುಂತಾದ ಶಬ್ದಗಳು! ರಾಜ ಪ್ರತ್ಯಕ್ಷ ದೈವ ಅಂತ ಹೇಳಿ ದೇವರಿಗಾಗಿ ಪ್ರಾಣ ತೊರೆಯಲು ಪ್ರೇರಣೆ ಪಡೆಯುತ್ತಾರೆ. ಹೋರಾಡದಿದ್ದರೆ ಗೆದ್ದವರು ನಿಮ್ಮ ನೆಮ್ಮದಿ ಹಾಳು ಮಾಡಿ,ನಿಮ್ಮದೆಲ್ಲವನ್ನೂ ನಶಿಸಿ ಹಾಕಿ ಬಿಡುತ್ತಾರೆ ಅಂತ ಉಪದೇಶಿಸುತ್ತಾರೆ. ಅದಕ್ಕಿಂತ ಹೋರಾಡುತ್ತಾ ಸತ್ತರೆ ವೀರ ಸ್ವರ್ಗ ಸಿಗುತ್ತದೆ ಅನ್ನುವ ಆಮಿಷ ತೋರುತ್ತಾರೆ. ಈ ಯುದ್ಧ ಅನಿವಾರ್ಯ ಅನ್ನುವ ಸಂಧರ್ಭಗಳಲ್ಲಿ ಈ ರೀತಿಯ ವ್ಯವಸ್ಥೆಗಳು ಅನಿವಾರ್ಯ ಆಗಿಬಿಡುತ್ತಿದ್ದವು.

    ಇದೆಲ್ಲಾ ನಾಗರಿಕತೆಯ ಪ್ರಯಾಣದಲ್ಲಿ ಯಾವುದೋ ಘಟ್ಟಗಳಲ್ಲಿ ಅನಿವಾರ್ಯ ಆಗಿದ್ದಾಗ ಮಾಡಿಕೊಂಡಂತಹ ವ್ಯವಸ್ಥೆಗಳಿದ್ದಿರಬಹುದು, ಮುಂದುವರೆದ ಮಾನವ ಇಂತಹ ಮೃಗೀಯ ವ್ಯವಸ್ಥೆ ಒಪ್ಪಲಿಕ್ಕಿಲ್ಲ ಅನ್ನುವ ನನ್ನ ಯೋಚನೆ ನಿಜವಲ್ಲ ಅನ್ನುವುದನ್ನು ಪ್ರಪಂಚದ ಒಂದಿಲ್ಲೊಂದು ಕಡೆ ಈ ಯುದ್ಧದ ಕಾರ್ಮೋಡಗಳು ಕವಿದಾಗ ಅನ್ನಿಸುತ್ತಿತ್ತು. 20 ವರ್ಷಗಳ ಹಿಂದಿನ ಕಾರ್ಗಿಲ್ ಯುದ್ಧ, ಅದರಲ್ಲಿ ಭಾಗವಹಿಸಿ ಸತ್ತ ನನ್ನ ಸ್ನೇಹಿತರು ತುಂಬಾ ದಿನಗಳವರೆಗೆ ನನ್ನ ಕಾಡಿದ್ದರು. ಆ ದುಃಖ ಮರೆಸಿ, ಬೇರೆಯವರಿಗೆ ಸ್ಫೂರ್ತಿ ತುಂಬಲು ಅವರಿಗೆ ನೀಡಲಾದ ಮರಣೋತ್ತರ ಸನ್ಮಾನಗಳು ನನ್ನನ್ನು ಬಲು ಯೋಚಿಸುವಂತೆ ಮಾಡಿದ್ದವು. ಮನುಷ್ಯನ ತಿಳಿವಳಿಕೆಗೂ ಈ ಯುದ್ಧಕ್ಕೂ ಯಾವುದೇ ಸಂಬಂಧ ಇಲ್ಲ.ಇದು ನಿರಂತರ,ಚಿರನೂತನ! ಸುತ್ತಲಿನ ಬೆಳವಣಿಗೆಗಳೂ ಸೈನ್ಯ, ಯುದ್ಧ ಮುಂದುವರಿದ ಮಾನವನ ಶಾಂತಿಗೆ ಅತೀ ಮುಖ್ಯ ಅಂತ ಸಾರಿ ಹೇಳುತ್ತಿವೆ.

    green helicopter near big fire
    Photo by Chandler Cruttenden on Unsplash

    ಆರನೇ ದಿನಕ್ಕೆ ಕಾಲಿರಿಸಿರುವ ರಷ್ಯಾ-ಉಕ್ರೇನ್ ಯುದ್ಧ ಇವತ್ತು ನಿಲ್ಲಬಹುದು,ಈಗ ನಿಲ್ಲಬಹುದು ಅನ್ನುವ ನನ್ನ ನಿರೀಕ್ಷೆಯನ್ನು ಮೀರಿ, ದಿನದಿಂದ ದಿನಕ್ಕೆ ತನ್ನ ಭೀಕರತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಅಲ್ಲಿಯ ಎಲ್ಲಾ ರಂಗದ ಪ್ರಜೆಗಳು, ಹೆಂಗಸರು,ವೃದ್ಧರು, ಮಕ್ಕಳು ಕೈಯಲ್ಲಿ ಸಿಕ್ಕ ಸಿಕ್ಕ ಆಯುಧಗಳನ್ನು ಹಿಡಿದು ಹೊರಬರುತ್ತಿರುವುದನ್ನು ನೋಡಿ ನನ್ನ ಯುದ್ಧದ ಬಗೆಗಿನ ಅನಿಸಿಕೆಗಳಿಗೆ ಹೊಸ ವ್ಯಾಖ್ಯಾನ ದೊರಕುತ್ತಿದೆ. ಯುದ್ಧಕ್ಕೆ ನಿಂತ ಇಬ್ಬರಲ್ಲಿ ಯಾರದ್ದು ತಪ್ಪು, ಯಾರದ್ದು ಸರಿ ಅಂತ ಯೋಚಿಸೋದೇ ಮೂರ್ಖತನ. ಯಾವುದರ ಅರಿವೆಯೂ ಇಲ್ಲದೆ ಅಲ್ಲಿ ಜನ್ಮ ತಾಳಿದ ಅದೆಷ್ಟು ಜೀವಗಳು ಇದರಿಂದ ನರಳಬೇಕಲ್ಲಾ ಅಂತ ಯೋಚಿಸಿದರೆ, ಹಿಂಸೆ ಆಗುತ್ತೆ. ಎಲ್ಲೋ ಕೆಲವು ಬಯಲುಗಳಿಗೆ ಮೀಸಲಿರುತ್ತಿದ್ದ ಹಳೆಯ ಯುದ್ಧಗಳನ್ನು ಮನೆಯ ಅಂಗಳಕ್ಕೇ ತಂದಿರುವ ಸುಧಾರಿತ ಮಾನವನನ್ನು ಏನೆನ್ನಬೇಕೋ ತಿಳಿಯದಾಗಿದೆ. ಇಡೀ ವಿಶ್ವವೇ ಒಂದು ಮನೆಯಂತಾಗಿರುವ ಈಗಿನ ದಿನಗಳಲ್ಲಿ ಉಕ್ರೇನ್ ನ ಬಾಂಬುಗಳಿಗೆ ನನ್ನ ನಿಮ್ಮ ನೆರೆ ಹೊರೆಯವರೂ ಅಲ್ಲಿದ್ದು ಸತ್ತರೆ ದೊಡ್ಡ ವಿಷಯವೇ ಅಲ್ಲ. ಇನ್ನೆರೆಡು ದಿನ ಹೀಗೆ ಈ ಯುದ್ಧ ಮುಂದುವರಿದರೆ, ಅಣು ಬಾಂಬುಗಳ ಪ್ರವೇಶವಾಗಿ ನಾವು,ನೀವುಗಳೂ ಇದರಿಂದ ಹೊರತಾಗುವುದು ಅಸಾಧ್ಯವಾಗಬಹುದು.

    ಅಮೆರಿಕಾ- ಇರಾಕ್ , ಕಾರ್ಗಿಲ್ ಯುದ್ಧ, ಇಸ್ರೇಲ್-ಜೆರುಸಲಂ, ಈಗಿನ ರಷ್ಯಾ-ಉಕ್ರೇನ್ ಹಿಂದಿನ ಇತಿಹಾಸದ ಯಾವುದೇ ಯುದ್ಧಗಳಿಗಿಂತಲೂ ಹೆಚ್ಚು ಮಾನವನಿಗೆ ಹಾನಿ ಮಾಡುತ್ತಿವೆ. ಕಾರಣ ಮುಂದುವರಿದ ಯುದ್ಧ ಸಾಮಗ್ರಿಗಳು. ರಷ್ಯಾ ಅಣು ಬಾಂಬನ್ನು ಹೊರತೆಗಿಯುವ ಮಾತಾಡುತ್ತಿದೆ! ಯಾರದೋ ಅಣತಿಗೆ, ಎಲ್ಲಿಗೋ ಬಾಂಬು ಹಾಕಲು, ಯಾವುದೋ ಯಂತ್ರದ ಗುಂಡಿ ಒತ್ತುವುದು ಇಂದು ಯುದ್ಧ ಎನ್ನಿಸಿಕೊಂಡಿದೆ. ಇದಕ್ಕೆ ಯುದ್ಧ ಸಂಹಿತೆ ಇದೆಯಾ?

    ಶಸ್ತ್ರ, ಶಾಸ್ತ್ರ ಕೆಲವೇ ಕೈಗಳಲ್ಲಿ ನಮ್ಮ ಪರಂಪರೆ ಕೊಟ್ಟಿತ್ತು. ಎಲ್ಲರಿಗೂ ಅಲ್ಲ. ಅಂತಹ ಕೈಗಳಿಗೆ ಸರಿಯಾದ ಶಿಕ್ಷಣ, ಒಳ್ಳೆ ಕೆಡುಕು ಹೇಳಿಕೊಟ್ಟು,ಯಾವಾಗ, ಹೇಗೆ, ಎಲ್ಲಿ ಉಪಯೋಗಿಸಬೇಕು ಎನ್ನುವಂತಹ ನಿಯಮಗಳನ್ನೂ ಹಾಕಿತ್ತು. ಈಗ ಸಿಕ್ಕ,ಸಿಕ್ಕವರ ಕೈಗಳಿಗೆ ಶಸ್ತ್ರ ಸಿಕ್ಕು ನಿಯಮ,ನಿರ್ಬಂಧನಗಳ ಗಂಧ,ಗಾಳಿ ಇಲ್ಲದೆ ಮಾನವ ಕುಲ ಅಯೋಮಾಯವಾಗ್ತಿದೆ. ಗುಂಡಿ ಒತ್ತುವುದೇ ಈಗ ಯುದ್ಧವಂತೆ… ಆ ಗುಂಡಿಯನ್ನು ಎಂತಹ ಮನುಷ್ಯ ಒತ್ತುತ್ತಾನೋ ಅಥವಾ ಪ್ರಾಣಿಯೇ ಒತ್ತುತ್ತೋ ಅಂತೂ ಮನುಷ್ಯ ತನಗೆ ತಾನೇ ಭಸ್ಮಾಸುರ ಆಗುತ್ತಿದ್ದಾನೆ….ಅಂತ ಅಪ್ಪ ಕಾರ್ಗಿಲ್ ಯುದ್ಧದ ಸಮಯದಲ್ಲಿ ಹೇಳಿದ್ದು ನೆನಪಿಗೆ ಬರ್ತಿದೆ.

    .

    Shelling in Kharkiv : ರಷ್ಯಾ ಶೆಲ್ ದಾಳಿಗೆ ಹಾವೇರಿ ಮೂಲದ ವಿದ್ಯಾರ್ಥಿ ಬಲಿ

    BENGALURU MAR 1

    ಮಂಗಳವಾರ ಮುಂಜಾನೆ ಉಕ್ರೇನ್ ನ Kharkiv ನಲ್ಲಿ ರಷ್ಯಾ ನಡೆಸಿದ ಶೆಲ್ ದಾಳಿಯಲ್ಲಿ ಕರ್ನಾಟಕದ ಹಾವೇರಿ ಜಿಲ್ಲೆಯ ಚಳಗೇರಿಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಮೃತ ಪಟ್ಟಿದ್ದಾರೆ ಎಂದು ವಿದೇಶಾಂಗ ಇಲಾಖೆಯ ಮೂಲಗಳು ತಿಳಿಸಿವೆ.

    ರಾಜ್ಯದ ಹಾವೇರಿ ಮೂಲದವರಾದ ನವೀನ್ ಉಕ್ರೇನ್ ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಬೆಳಿಗ್ಗೆ ಅಂಗಡಿಗೆ ಹೋಗಲೆಂದು ಹೊರಗೆ ಬಂದಾಗ ಈ ದುರಂತ ಸಂಭವಿಸಿದೆ. ತಮ್ಮ ಮಗನ ಬಗ್ಗೆ ದುಃಖದಿಂದ ಮಾತನಾಡಿದ ತಂದೆ ಶೇಖರಗೌಡ ಗ್ಯಾನ ಗೌಡರ್ ಇಂದು ಮುಂಜಾನೆಯಷ್ಟೆ ತಮ್ಮ ಮಗ ದೂರವಾಣಿ ಕರೆ ಮಾಡಿದ್ದ. ಪ್ರತಿ ದಿನ ಎರಡು ಮೂರು ಬಾರಿ ದೂರವಾಣಿ ಮೂಲಕ ಮಾತಾಡುತ್ತಿದ್ದ ಎಂದು ವಿವರಿಸಿದರು.

    ವಿಷಯ ಗೊತ್ತಾದ ಕೂಡಲೆ ನವೀನ್ ಅವರ ತಂದೆ ಶೇಖರಗೌಡ ಅವರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಸಾಂತ್ವನ ಹೇಳಿದರು. ಇದು ನಿಜಕ್ಕೂ ದೊಡ್ಡ ದುರಂತ. ದೇವರು ನವೀನ್ ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು.

    ನವೀನ್ ಅವರ ಮೃತದೇಹವನ್ನು ಭಾರತಕ್ಕೆ ತರಿಸಿಕೊಳ್ಳುವ ಎಲ್ಲ ಪ್ರಯತ್ನ ನಡೆದಿದೆ.ಈ ಸಂಬಂಧ ವಿದೇಶಾಂಗ ಸಚಿವಾಲಯದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

    Mekedatu Padayatra: ಕಾಂಗ್ರೆಸ್ ಪಾದಯಾತ್ರೆ: ಬೆಂಗಳೂರಿನ ಜನತೆಗೆ ಸಂಕಷ್ಟ; ಸಿಎಂ ಬಸವರಾಜ ಬೊಮ್ಮಾಯಿ

    BENGALURU MAR 1

    ಕಾಂಗ್ರೆಸ್ ಪಕ್ಷ ತನ್ನ ರಾಜಕೀಯ ಹಿತಾಸಕ್ತಿಗೆ ಇಡೀ ಬೆಂಗಳೂರು ಜನರನ್ನು ಸಂಕಷ್ಟಕ್ಕೆ ಈಡು ಮಾಡುತ್ತಿದ್ದಾರೆ. ಇವರ ಪಾದಯಾತ್ರೆಯಿಂದ ಬೆಂಗಳೂರಿಗೆ ಏನೂ ಅನುಕೂಲವಾಗುವುದಿಲ್ಲ. ಬದಲಿಗೆ ಸಂಕಷ್ಟವೇ ಹೆಚ್ಚು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

    ಮೇಕೆದಾಟು ಯೋಜನೆಗೆ ಕುರಿತು ಸರ್ಕಾರವನ್ನು ಒತ್ತಾಯಿಸಲು ಕಾಂಗ್ರೆಸ್ ಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಬೆಂಗಳೂರು ಜನರಿಗೆ ಸಂಕಷ್ಟ

    ಕಾಂಗ್ರೆಸ್ ಸ್ವಾತಂತ್ರ್ಯ ಉದ್ಯಾನವನ ದಲ್ಲಿ ಪ್ರತಿಭಟನೆ, ಭಾಷಣ ಮಾಡಿ ತೆರಳಬಹುದಿತ್ತು. ಬೆಂಗಳೂರಿನಲ್ಲಿ ಮೂರು ದಿನ ಎಲ್ಲಾ ದಿಕ್ಕಿನಲ್ಲಿ ಪಾದಯಾತ್ರೆ ಮಾಡುವ ಮೂಲಕ ಸಂಚಾರ ದಟ್ಟಣೆ ಉಂಟುಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಯಾವುದೋ ಒಂದು ಕಡೆ ಸಂಚಾರ ದಟ್ಟಣೆ ಯಾದರೆ ಅದರ ಪರಿಣಾಮ ಎಲ್ಲಾ ಕಡೆ ಆಗುತ್ತದೆ. ಇದರ ಅರಿವಿದೆ ಅವರಿಗೆ. ಆದರೂ ತಮ್ಮ ರಾಜಕೀಯ ಹಿತಾಸಕ್ತಿಗೆ ಇಡೀ ಬೆಂಗಳೂರು ಜನರನ್ನು ಸಂಕಷ್ಟಕ್ಕೆ ಈಡು ಮಾಡುತ್ತಿದ್ದಾರೆ. ಇವರ ಪಾದಯಾತ್ರೆಯಿಂದ ಬೆಂಗಳೂರಿಗೆ ಏನೂ ಅನುಕೂಲವಾಗುವುದಿಲ್ಲ. ಬದಲಿಗೆ ಸಂಕಷ್ಟವೇ ಹೆಚ್ಚು ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು

    ಸರ್ಕಾರ ಮೇಕೆದಾಟು ಯೋಜನೆಗೆ ಬದ್ಧ

    ಸರ್ಕಾರ ಮೇಕೆದಾಟು ಯೋಜನೆಗೆ ಬದ್ಧವಾಗಿದೆ.ತಮ್ಮ ಕಾಲದಲ್ಲಿ ಯಾವ ಯೋಜನೆಗಳನ್ನು ಮಾಡಲಾಗಿಲ್ಲದವುಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಪಾದಯಾತ್ರೆ, ಧರಣಿ ಮಾಡುತ್ತಿದ್ದಾರೆ. ತಮ್ಮ ಕಾಲದಲ್ಲಿ ಮೇಕೆದಾಟು ಯೋಜನೆಗೆ ಡಿಪಿಆರ್ ಸಹ ಮಾಡಿಲ್ಲ. ಈಗ ಕೂಡಲೇ ಅದರ ಕಾಮಗಾರಿ ಪ್ರಾರಂಭ ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ. ಇದೆ ರೀತಿ ಎಲ್ಲಾ ಯೋಜನೆಗಳ ಬಗ್ಗೆ ಅವರ ಕಾಲದಲ್ಲಿ ಏನೂ ಮಾಡಲಾಗಿಲ್ಲ.ನಮ್ಮ ಕಾಲದಲ್ಲಿ ನಾವು ಪ್ರಗತಿಯನ್ನು ಮಾಡಿದ್ದೇವೆ. ನಮಗೆ ಈ ವಿಷಯದಲ್ಲಿ ನಮಗೆ ಬದ್ಧತೆಯಿದೆ. ಖಂಡಿತವಾಗಿ ಮಾಡಿಯೇ ಮಾಡುತ್ತೇವೆ. ತಮ್ಮ ಕಾಲದಲ್ಲಿ ಏನೂ ಮಾಡದೇ ನಮ್ಮಿಂದ ಕಾಂಗ್ರೆಸ್ಸಿಗೆ ಯಾವುದೇ ನಿರೀಕ್ಷೆ ಮಾಡಲು ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದರು.

    ಕಾಂಗ್ರೆಸ್ ಪಕ್ಷದವರು ಅಧಿಕಾರಾದಲ್ಲಿದ್ದಾಗ ವಿರೋಧಪಕ್ಷದವರ ಮೇಲೆ ಎಷ್ಟು ಕೇಸ್ ಗಳನ್ನು ಹಾಕಿದ್ದಾರೆ. ಎಷ್ಟು ಲಾಠಿ ಚಾರ್ಚ್ ಮಾಡಿದ್ದಾರೆ. ವಿರೋಧಪಕ್ಷದವರನ್ನು ಹತ್ತಿಕ್ಕುವ ಕೆಲಸವನ್ನು ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್ ಮಾಡಿದೆ. ಅದನ್ನು ಅವರು ನೆನಪುಮಾಡಿಕೊಳ್ಳಲಿ. ಕಾನೂನು ತನ್ನ ಕೆಲಸವನ್ನು ಮಾಡಿದಾಗ ವಿಪರೀತವಾಗಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ? ಒಂದು ಜವಾಬ್ದಾರಿಯುತ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಲು ಎಲ್ಲರಿಗೂ ಅವಕಾಶವಿದೆ. ಅದೇ ರೀತಿ ಕಾನೂನಿನ ಅನ್ವಯವೂ ಕೆಲಸ ಮಾಡಲು ಅವಕಾಶವಿದೆ. ಇದರ ವಾಸ್ತವಾಂಶವನ್ನು ಅರ್ಥಮಾಡಿಕೊಳ್ಳದೆ ಈ ಹೇಳಿಕೆ ಕೊಡುತ್ತಿರುವುದು ಕಾಂಗ್ರೆಸ್ ಪಕ್ಷ ಎಷ್ಟರಮಟ್ಟಿಗೆ ರಾಜಕಾರಣದ ಸಲುವಾಗಿ ತಳಮಟ್ಟಕ್ಕೆ ಹೋಗಿದೆ ಎನ್ನುವುದನ್ನು ತಿಳಿಸುತ್ತದೆ ಹಾಗೂ ಅಧಿಕಾರ ಹಿಡಿಯಲು ಅತ್ಯಂತ ಹತಾಶವಾಗಿದೆ ಎಂದರು.

    ಗೃಹ ಸಚಿವರ ಕುರಿತು ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಡಿ.ಕೆ.ಶಿವಕುಮಾರ್ ಅವರು ಹಲವಾರು ಖಾತೆಗಳನ್ನು ಹೊಂದಿದ್ದ ಅನುಭವಿ ರಾಜಕಾರಣಿ. ಇನ್ನೊಬ್ಬರ ಬಗ್ಗೆ ಹೇಳುವುದು ಬಹಳ ಸುಲಭ. ಯಾವ ಸಂದರ್ಭದಲ್ಲಿ, ಯಾವುದಕ್ಕಾಗಿ, ಏನು ನಡೆದಿದೆ ಎಂದು ಅರ್ಥ ಮಾಡಿಕೊಳ್ಳಬೇಕು. ಅದರಲ್ಲಿ ತಮ್ಮ ಪಾತ್ರ ಏನಿದೆ ಎಂದು ವಿಶ್ಲೇಷಣೆ ಮಾಡಿಕೊಳ್ಳಲಿ ಎಂದರು.

    ಮೇಕೆದಾಟು ಮತ್ತು ಕಾಂಗ್ರೆಸ್ ನಾಯಕರ ಚದುರಂಗದಾಟ

    This image has an empty alt attribute; its file name is c-rudrappa-1.jpg

    ಸಿ.ರುದ್ರಪ್ಪ

    ತೊಂಬತ್ತರ ದಶಕದ ಕೊನೆಯ ಭಾಗದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರಲಿಲ್ಲ.ಧರಂ ಸಿಂಗ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.ಮಲ್ಲಿಕಾರ್ಜುನ ಖರ್ಗೆ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿದ್ದರು.ಎಚ್. ಕೆ .ಪಾಟೀಲ್ ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾಗಿದ್ದರು.ಮೂವರು ನಾಯಕರೂ ಅನ್ಯೋನ್ಯವಾಗಿದ್ದರು.ಕೆಲವರು ಅವರನ್ನು ಪ್ರೀತಿಯಿಂದ “ನೀವು ಸೆಟ್ ದೋಸೆ ರೀತಿ ಇದ್ದೀರಿ “ಎಂದು ಕಿಚಾಯಿಸುತ್ತಿದ್ದರು.ಕಳೆದ ಎರಡೂ ಮುಕ್ಕಾಲು ವರ್ಷಗಳಿಂದಲೂ ಕಾಂಗ್ರೆಸ್ ಮತ್ತೆ ಅಧಿಕಾರದಲ್ಲಿಲ್ಲ.

    ಡಿ ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ.ಸಿದ್ದರಾಮಯ್ಯ ವಿಧಾನಸಭೆ ವಿರೋಧಪಕ್ಷದ ನಾಯಕರಾಗಿದ್ದಾರೆ.ಎಸ್ ಆರ್ ಪಾಟೀಲ್ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿದ್ದರು.ಆದರೆ ವಿರೋಧ ಪಕ್ಷದ ನಾಯಕರೆಂದರೆ ಸಿದ್ದರಾಮಯ್ಯನವರೇ ಎಂಬ ಭಾವನೆ ಜನರ ಮನಸ್ಸಿನಲ್ಲಿ ಬೇರೂರಿತ್ತು.ಎಸ್ ಆರ್ ಪಾಟೀಲರು ಮಹತ್ವಾಕಾಂಕ್ಷಿ ಹಾಗೂ ಪ್ರಭಾವಶಾಲಿಯಾಗಿರಲಿಲ್ಲ.ಅವರ ಕಾರ್ಯ ವೈಖರಿಯೂ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ.ಆದರೆ ಶಿಷ್ಟಾಚಾರಕ್ಕೆ ಅನುಗುಣವಾಗಿಯಾದರೂ ಅವರಿಗೆ ಸಿಗಬೇಕಾಗಿದ್ದ ಮನ್ನಣೆ ದೊರೆತಿರಲಿಲ್ಲ.ಸುಮ್ಮನೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಇದ್ದರು.ಸಾರ್ವಜನಿಕ ಸಮಾರಂಭಗಳಲ್ಲಿ,ಪಕ್ಷದ ವೇದಿಕೆಗಳಲ್ಲಿ ಅಗ್ರಗಣ್ಯ ನಾಯಕರ ಸಾಲಿನಲ್ಲಿ ಅವರಿಗೆ ಸ್ಥಾನ ಸಿಕ್ಕಿದ್ದು ಕಡಿಮೆ.ಪೋಸ್ಟರ್ ಗಳಲ್ಲಂತೂ ಒಂದು ಮೂಲೆಯಲ್ಲಿ ಅವರ ಚಿಕ್ಕ ಫೋಟೋ ಇರುತ್ತಿತ್ತು.ಆದರೆ ಇತ್ತೀಚಿಗೆ ಬಿ ಕೆ ಹರಿಪ್ರಸಾದ್ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ನಂತರ ರಾಜಕೀಯ ಚಿತ್ರಣ ಬದಲಾಗಿದೆ.ಅವರಿಗೆ ಪಕ್ಷದ ಅಧ್ಯಕ್ಷರು ಮತ್ತು ವಿಧಾನ ಸಭೆ ವಿರೋಧ ಪಕ್ಷದ ನಾಯಕರಿಗೆ ಸರಿ ಸಮಾನವಾದ ಸ್ಥಾನಮಾನವನ್ನು ಕಲ್ಪಿಸಲಾಗುತ್ತಿದೆ.


    ಮೇಕೆದಾಟು ಪಾದಯಾತ್ರೆಯ ಪೋಸ್ಟರ್ ನಲ್ಲಿ ಹರಿಪ್ರಸಾದ್,ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.ಸೆಟ್ ದೋಸೆಯಂತೆ ಅವರು ಅನ್ಯೋನ್ಯವಾಗಿದ್ದಾರೆ ಎಂದು ಯಾರಾದರೂ ಭಾವಿಸಿದರೆ ಅದು ಅವರ ಭ್ರಮೆಯಷ್ಟೆ.ಈ ಪೋಸ್ಟರ್ ನಲ್ಲಿ ಹರಿಪ್ರಸಾದ್ ಅಧ್ಯಕ್ಷರ ಬಲಕ್ಕೆ ಇರುವುದು ಕೇವಲ ಕಾಕತಾಳೀಯ ಆಗಿರಲಾರದು.

    ರಾಷ್ಟ್ರ ಮಟ್ಟದಲ್ಲಿ ಆರ್ ಎಸ್ ಎಸ್ ಸಿದ್ದಾಂತವನ್ನು ವಿರೋಧಿಸುತ್ತಿರುವವರು ಮತ್ತು “ಮೋದಿ ಭಂಜಕರ”ಪಟ್ಟಿಯಲ್ಲಿ ಸಿದ್ದರಾಮಯ್ಯನವರ ಹೆಸರು ಪ್ರಮುಖವಾಗಿದೆ.ಅದೇ ರೀತಿ ಹರಿಪ್ರಸಾದ್ ಕೂಡ ಸಂಘ ಪರಿವಾರ ಮತ್ತು ಕೋಮುವಾದದ ಉಗ್ರ ಟೀಕಾಕಾರರು.ಅವರಿಗೆ ರಾಷ್ಟ್ರ ರಾಜಕಾರಣದ ಅಪರೂಪದ ಲೋಕದೃಷ್ಟಿ ಮತ್ತು ಭೌದ್ದಿಕ ಪ್ರಖರತೆ(intellectual vigour)ಇದೆ.ದೆಹಲಿ ವರಿಷ್ಠರ ಅಂತಃಪುರಕ್ಕೆ ನೇರ ಪ್ರವೇಶವಿರುವ ಕೆಲವೇ ನಾಯಕರಲ್ಲಿ ಅವರೂ ಒಬ್ಬರು.ಸಿದ್ದರಾಮಯ್ಯನವರಂತೆ ಹರಿಪ್ರಸಾದ್ ಕೂಡ ಒಬ್ಬ ಪರಿಣಾಮಕಾರಿ ಸಂಸದೀಯ ಪಟು.ಶಿವಮೊಗ್ಗದಲ್ಲಿ ಇತ್ತೀಚಿಗೆ ಹತ್ಯೆಗೀಡಾದ ಯುವಕನ ಕುಟುಂಬದವರಿಗೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಿದರೆ ಕಾಂಗ್ರೆಸ್ ಸ್ಪರ್ಧಿಸುವುದಿಲ್ಲ ಎಂದು ಸವಾಲು ಹಾಕುವ ಮೂಲಕ ರಾಜ್ಯದ ಗಮನ ಸೆಳೆದವರು.

    ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಹರಿಪ್ರಸಾದ್ ಅವರಿಂದ ಅಂತರ ಕಾಯ್ದುಕೊಂಡಿದ್ದರು.ಸಿದ್ದರಾಮಯ್ಯನವರ ಪ್ರಾಮುಖ್ಯತೆಯನ್ನು ಕಡಿಮೆ ಮಾಡಲು ಕೆಲವು ರಾಜಕೀಯ ಹಿತಾಸಕ್ತಿಗಳು ಹರಿಪ್ರಸಾದ್ ಅವರನ್ನುಈಗ ಬಳಸುತ್ತಿವೆಯೇ?ಅಥವಾ ಹರಿಪ್ರಸಾದ್ ತಮಗೆ ಗೊತ್ತಿಲ್ಲದಂತೆಯೇ ಸಿದ್ದರಾಮಯ್ಯನವರ ವಿರುದ್ದದ ಅಸ್ತ್ರವಾಗಿ ಬಳಕೆಯಾಗುತ್ತಿದ್ದಾರೆಯೇ?ಇಂತಹ ಕುತೂಹಲಗಳು ಸಹಜ.ಕಾಂಗ್ರೆಸ್ ನಲ್ಲಿ ರಾಜಕೀಯ ಚದುರಂಗದಾಟದ ದಾಳಗಳು ಮತ್ತು ಪ್ರತಿದಾಳಗಳು ಸಲೀಸಾಗಿ ಉರುಳುತ್ತಿವೆ.

    ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ಕಾಂಗ್ರೆಸ್ ಪಕ್ಷದ ಕಚೇರಿಗಿಂತ ಕಾಂಗ್ರೆಸ್ ಶಾಸಕಾಂಗ ಪಕ್ಷದ(CLP)ಕಚೇರಿ,ವಿರೋಧ ಪಕ್ಷದ ನಾಯಕರ ಕೊಠಡಿ ಅಥವಾ ವಿಧಾನಸಭೆ ಮೊಗಸಾಲೆಯಲ್ಲಿ ಸಿದ್ದರಾಮಯ್ಯನವರೊಂದಿಗೆ ಕಾಣಿಸಿಕೊಳ್ಳುತ್ತಿರುವುದೇ ಹೆಚ್ಚು.ಕಾರ್ಯಾಧ್ಯಕ್ಷರುಗಳಂತೂ ಇಬ್ಬರೂ ನಾಯಕರ ನಡುವೆ ಹರಿದು ಹಂಚಿ ಹೋಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.ಒಟ್ಟಿನಲ್ಲಿ ಕಾಂಗ್ರೆಸ್ ವಿದ್ಯಮಾನ ಒಂದು ನೆರಳು-ಬೆಳಕಿನ ಆಟದಂತೆ ಭಾಸವಾಗುತ್ತಿದೆ.ಕಾವೇರಿ ನದಿಗೆ ಅಡ್ಡಲಾಗಿ ಒಂದು ಸಮಾನಾಂತರ ಜಲಾಶಯ(balancing reservoir)ನಿರ್ಮಾಣ ಮಾಡುವುದು ಮೇಕೆದಾಟು ಯೋಜನೆಯ ಉದ್ದೇಶ.ಅದೇ ರೀತಿ ಕಾಂಗ್ರೆಸ್ ಪಕ್ಷದ ವಿವಿಧ ನಾಯಕರ ನಡುವೆ ಒಂದು balancing act ನಡೆಯುತ್ತಿದೆ.


    ಸಿ ರುದ್ರಪ್ಪ ನಾಡಿನ ಹಿರಿಯ ಪತ್ರಕರ್ತರು ಮತ್ತು ರಾಜಕೀಯ ವಿಶ್ಲೇಷಕರು.

    ಕರ್ನಾಟಕದ ಅತ್ಯಂತ ವಿಶಿಷ್ಟ ಶಿವಲಿಂಗಗಳು

    ಕೆಂಗೇರಿ ಚಕ್ರಪಾಣಿ


    1 ಕರ್ನಾಟಕದ ಅತ್ಯಂತ ಪ್ರಾಚೀನ ಶಿವಲಿಂಗ ತಾಳಗುಂದದ ಪ್ರಣವೇಶ್ವರ


    ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನಲ್ಲಿರುವ ಶಿರಾಳಕೊಪ್ಪದಿಂದ ಸುಮಾರು 5 ಕಿ.ಮೀ. ದೂರದಲ್ಲಿರುವ ಅತ್ಯಂತ ಪ್ರಾಚೀನ ಅಗ್ರಹಾರ ತಾಳಗುಂದ. ಇಲ್ಲಿರುವ ಸ್ತಂಭ ಶಾಸನದಿಂದ ಕರ್ನಾಟಕದ ಪ್ರಥಮ ಚಕ್ರವರ್ತಿ ಮಯೂರವರ್ಮನ ಚರಿತ್ರೆ ದೊರೆಯುತ್ತದೆ. ತಾಳಗುಂದದಲ್ಲಿರುವ ಪ್ರಣವೇಶ್ವರ ಲಿಂಗವು ಸುಮಾರು 6 ಅಡಿ ಎತ್ತರವಿದ್ದು 5 ಅಡಿ ಅಗಲವಿರುವ ಬೃಹತ್ ಶಿವಲಿಂಗ. ಅತ್ಯಂತ ಪ್ರಾಚೀನ ಶಿವಲಿಂಗಗಳ ಲಕ್ಷಣವಿರುವ ಈ ಶಿವಲಿಂಗದ ಎದುರಿಗಿರುವ ಸ್ತಂಭಶಾಸನದಲ್ಲಿ ಸಾತಕರ್ಣಿಗಳಿಂದ ಪೂಜಿಸಲ್ಪಟ್ಟಂತಹ ಶಿವ ಎಂದು ಉಲ್ಲೇಖಿಸಲಾಗಿದೆ. ಸಾತಕರ್ಣಿ (ಶಾತವಾಹನರು) ಒಂದು ಅಥವಾ ಎರಡನೆಯ ಶತಮಾನದವರಾಗಿರುವುದರಿಂದ ಪ್ರಸ್ತುತ ಶಿವಲಿಂಗವು ಎರಡನೆಯ ಶತಮಾನಕ್ಕೆ ಸೇರಿದ್ದು ಕನ್ನಡನಾಡಿನ ಅತ್ಯಂತ ಪ್ರಾಚೀನ ಶಿವಲಿಂಗ ಎಂಬ ಕೀರ್ತಿಗೆ ಪಾತ್ರವಾಗಿದೆ.


    2 ಚಂದ್ರವಳ್ಳಿಯ ಧರ್ಮೇಶ್ವರ

    ಚಿತ್ರದುರ್ಗ ಜಿಲ್ಲೆ ಅದೇ ತಾಲ್ಲೂಕಿನ ಜಿಲ್ಲಾಕೇಂದ್ರದಿಂದ ಸುಮಾರು ನಾಲ್ಕು ಕಿ.ಮೀ. ದೂರದಲ್ಲಿ ಚಂದ್ರವಳ್ಳಿಯೆಂಬ ಪ್ರಾಚೀನ ಪ್ರದೇಶವಿದೆ. ಇಲ್ಲಿರುವ ಅಂಕಲಿಮಠದ ಬದಿಯಲ್ಲಿ ಒಂದು ಗುಹಾಂತರ ದೇವಾಲಯವಿದೆ. ಇಲ್ಲಿ ಐದು ಶಿವಲಿಂಗಗಳಿದ್ದು ಎಲ್ಲವೂ ಐದನೆಯ ಶತಮಾನಕ್ಕೆ ಸೇರುವ ಶಿವಲಿಂಗಗಳಾಗಿವೆ. ಇಲ್ಲಿರುವ ಶಿವಲಿಂಗಗಳು ಪಂಚಪಾಂಡವರ ಹೆಸರಿನಲ್ಲಿ ಪ್ರತಿಷ್ಠಾಪಿತವಾಗಿವೆ. ಪ್ರಧಾನ ಶಿವಲಿಂಗವಾದ ಧರ್ಮೇಶ್ವರ ಲಿಂಗವು ಸುಮಾರು 5 ಅಡಿ ಎತ್ತರವಿದೆ. ಶಿವಲಿಂಗದ ಪೂಜಾಭಾಗದಲ್ಲಿ ಬ್ರಹ್ಮಸೂತ್ರವು ಸ್ಪಷ್ಟವಾಗಿ ಗೋಚರಿಸುತ್ತದೆ. ಕರಿಶಿಲೆಯಿಂದ ಮಾಡಿರುವ ಧರ್ಮೆಶ್ವರ ಲಿಂಗವು ಪ್ರಾಚೀನತೆಯಿಂದ ಬಹಳ ಮಹತ್ವವಾದ ಶಿವಲಿಂಗವಾಗಿದೆ.

    3. ಬನವಾಸಿಯ ಮಧುಕೇಶ್ವರ

    ಉತ್ತರ ಕನ್ನಡ ಜಿಲ್ಲೆ ಸಿರಸಿ ತಾಲ್ಲೂಕಿನ ಬನವಾಸಿ ಆದಿ ಕದಂಬರ ರಾಜಧಾನಿಯಾಗಿದ್ದ ಸ್ಥಳ. ಇಲ್ಲಿರುವ ಮಧುಕೇಶ್ವರ ದೇವಾಲಯವು ಒಂದು ಸುಂದರವಾದ ಆಲಯ. ಬನವಾಸಿಯ ಮಧುಕೇಶ್ವರ ಲಿಂಗವು ಕದಂಬರ ಆರಾಧ್ಯ ದೈವವಾಗಿದ್ದು ಬಹಳ ಭವ್ಯವಾಗಿದೆ. ಸುಮಾರು ಏಳು ಅಡಿ ಎತ್ತರದ ಶಿವಲಿಂಗವು ಕಲಾತ್ಮಕವಾದ ಪಾಣಿಪೀಠವನ್ನು ಹೊಂದಿದೆ.
    ಬನವಾಸಿಯ ಮಧುಕೇಶ್ವರನ ವಿಶೇಷತೆ, ಶಿವಲಿಂಗವು ಮಧುವಿನ (ಜೇನಿನ) ಬಣ್ಣವನ್ನು ಹೊಂದಿರುವುದು. ಮಧುಕೇಶ್ವರನು ಅಪಾರವಾದ ಭಕ್ತವೃಂದವನ್ನು ಹೊಂದಿರುವನು.

    4. ಭಾರಂಗಿಯ ಮುಖಲಿಂಗ

    ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಭಾರಂಗಿಯ ಊರ ಹೊರವಲಯದಲ್ಲಿರುವ ಶಿವಲಿಂಗವು ಬಹಳ ವೈಶಿಷ್ಟ್ಯಪೂರ್ಣವಾಗಿದೆ. ಶಿವಲಿಂಗದ ಪೂಜಾಭಾಗವು ಲಿಂಗರೂಪದಲ್ಲಿರದೆ ಮಾನವ ರೂಪದಲ್ಲಿದೆ. ಗುಂಡಾದ ತಲೆ, ನೀಳನಾಸಿಕ, ತೆರೆದ ಕಣ್ಣು, ಅಗಲ ಕಿವಿಗಳನ್ನು ಸ್ಪಷ್ಟವಾಗಿ ಬಿಡಿಸಲಾಗಿದೆ. ಇದೂ ಸಹಾ ಒಂದು ಅಪರೂಪದ ಶಿವಲಿಂಗವಾಗಿದ್ದು ಶಿವಲಿಂಗದ ಪ್ರಭೇದಗಳಾದ ಮುಖಲಿಂಗಕ್ಕೆ ಒಂದು ಉತ್ತಮ ಉದಾಹರಣೆ. ಭಾರಂಗಿಯ ಮುಖಲಿಂಗವು ಒಂಭತ್ತನೆಯ ಶತಮಾನಕ್ಕೆ ಸೇರುತ್ತದೆ.

    5. ಮಹಾಕೂಟದ ಪಂಚಲಿಂಗೇಶ್ವರ

    ಪರಶಿವನನ್ನು ಪಂಚಭೂತಗಳ ಸ್ವರೂಪದಲ್ಲಿ ಆರಾಧಿಸಲಾಗುತ್ತದೆ (ಆಕಾಶ, ಅಗ್ನಿ, ವಾಯು, ಜಲ, ಭೂಮಿ). ಅದೇ ರೀತಿಯಾಗಿ ಪರಶಿವನಿಗೆ ವಾಮದೇವ, ತತ್ಪುರುಷ, ಅಘೋರ, ಸದ್ಯೋಜಾತ ಹಾಗೂ ಈಶಾನ ಎಂಬ ಐದು ಮುಖಗಳು. ಭಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನಲ್ಲಿ ಬಾದಾಮಿಯಿಂದ 5 ಕಿ.ಮೀ. ದೂರದಲ್ಲಿರುವ ಮಹಾಕೂಟವು ಚಾಲುಕ್ಯರ ಒಂದು ಪ್ರಮುಖ ಕೇಂದ್ರ, ಚಾಲುಕ್ಯರ ಆರಾಧ್ಯದೈವ ಮುಕುಟೇಶ್ವರ ದೇವಾಲಯದ ಬದಿಯಲ್ಲಿರುವ ಕಲ್ಯಾಣಿಯಲ್ಲಿರುವ ಒಂದು ಮಂಟಪದಲ್ಲಿ ಅಪರೂಪದ ಸೊಗಸಾದ ಪಂಚಲಿಂಗೇಶ್ವರ ಮೂರ್ತಿಯಿದೆ. ನಾಲ್ಕುದಿಕ್ಕಿನಲ್ಲಿಯೂ, ಮುಖಗಳನ್ನು ಹೊಂದಿರುವ ಶಿವಲಿಂಗದ ಐದನೆಯ ಭಾಗ ಈಶಾನ್ಯಲಿಂಗವು ಶಿವಲಿಂಗದ ಶಿರೋಭಾಗವನ್ನು ಪ್ರತಿನಿಧಿಸುತ್ತದೆ. ಬಾದಾಮಿಯ ಚಾಲುಕ್ಯರ ಕಾಲಕ್ಕೆ ಸೇರಿರುವ ಈ ಪಂಚಲಿಂಗೇಶ್ವರ ಲಿಂಗದ ಕಾಲವು ಆರನೆಯ ಶತಮಾನಕ್ಕೆ ಸೇರಿರುತ್ತದೆ. ಇದೇ ರೀತಿಯ ಪಂಚಲಿಂಗೇಶ್ವರ ಲಿಂಗವು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವೆಯ ಕೇದಾರೇಶ್ವರ ದೇವಾಲಯದ ಸಮೀಪ ದೊರೆಯುತ್ತದೆ. ಹಿಂದೆ ಇಲ್ಲಿ ಪಂಚಲಿಂಗೇಶ್ವರನಿಗಾಗಿಯೇ ದೇವಾಲಯವಿದ್ದುದಾಗಿ ಶಾಸನದಿಂದ ತಿಳಿದು ಬರುತ್ತದೆ. ಶಿವಲಿಂಗವನ್ನು ಇಲ್ಲಿರುವ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಲಾಗಿದೆ. ಧಾರವಾಡ ಜಿಲ್ಲೆ ಉಣಕಲ್ಲಿನಲ್ಲಿರುವ ಚಂದ್ರಮೌಳೇಶ್ವರ ದೇವಾಲಯದಲ್ಲಿಯೂ ಸಹ ಪಂಚಲಿಂಗೇಶ್ವರ ಲಿಂಗವಿದೆ.

    6. ಪಂಕಜನಹಳ್ಳಿಯ ಶತಲಿಂಗ

    ಪಂಕಜನಹಳ್ಳಿಯು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ಕೇಂದ್ರದಿಂದ 15 ಕಿ.ಮೀ. ದೂರದಲ್ಲಿರುವ ಒಂದು ಗ್ರಾಮ. ಇಲ್ಲಿರುವ ಮಲ್ಲಿಕಾರ್ಜುನ ದೇವಾಲಯದಲ್ಲಿರುವ ಮಲ್ಲಿಕಾರ್ಜುನ ಲಿಂಗದ ಪಾಣಿಪೀಠದ ಮೇಲೆ ಒಂದು ಶಿವಲಿಂಗದಲ್ಲಿ ನೂರು ಶಿವಲಿಂಗಗಳನ್ನು ರಚಿಸಲಾಗಿದೆ. ಚಿಕ್ಕದಾದ ಪಾಣಿಪೀಠದ ಮೇಲಿರುವ ಪೂಜಾಭಾಗದಲ್ಲಿ ನೂರು ಶಿವಲಿಂಗಗಳನ್ನು ಪ್ರತಿನಿಧಿಸುವ ಲಿಂಗದ ಮಾದರಿಯ ಗುಂಡುಕಲ್ಲುಗಳಿವೆ. ಮಲ್ಲಿಕಾರ್ಜುನ ದೇವಾಲಯವನ್ನು ದರ್ಶಿಸುವ ಶಿವಭಕ್ತರಿಗೆ ಒಂದೇ ಬಾರಿಗೆ ನೂರು ಶಿವಲಿಂಗಗಳನ್ನು ದರ್ಶಿಸುವ ಭಾಗ್ಯ ಲಭಿಸುವುದೆಂಬ ನಂಬಿಕೆ ಶಿವಭಕ್ತರದು.

    7. ಪುರದ ಸಹಸ್ರಲಿಂಗ

    ಕೊಪ್ಪಳ ಜಿಲ್ಲೆ ಕನಕಗಿರಿ ತಾಲ್ಲೂಕಿನ ಪುರದ ಸೋಮೇಶ್ವರ ದೇವಾಲಯವು ಬಹಳ ವಿಶೇಷತೆಯಿಂದ ಕೂಡಿದೆ. ದೇವಾಲಯದ ಗರ್ಭಗುಡಿಯ ಸುತ್ತಲಿರುವ ಎರಡು ಪ್ರಾಕಾರಗಳಲ್ಲಿ ಶಿವಲಿಂಗಗಳ ಸಾಲುಗಳೇ ಇವೆ. ಇಲ್ಲಿರುವ ಶಿವಲಿಂಗಗಳು ಸಹಾ ಬಹಳ ವೈವಿಧ್ಯತೆಯಿಂದ ಕೂಡಿದೆ. ಒಂದು ಶಿವಲಿಂಗದಲ್ಲಿ ಸಹಸ್ರಲಿಂಗ, ನವಗ್ರಹಗಳನ್ನು ಪ್ರತಿನಿಧಿಸುವ ದಶಲಿಂಗ, ಪಂಚಲಿಂಗ, ಮುಂತಾದ ಶಿವಲಿಂಗಗಳನ್ನು ಪುರದಲ್ಲಿ ಕಾಣಬಹುದು. ಈ ರೀತಿಯ ವಿಶೇಷತೆಯನ್ನು ಹೊಂದಿರುವ ಪುರದ ಸೋಮೇಶ್ವರ ದೇವಾಲಯಕ್ಕೆ ಕೋಟಿಲಿಂಗೇಶ್ವರ ದೇವಾಲಯವೆಂದು ಕರೆಯುವರು. ಕೋಲಾರ ಜಿಲ್ಲೆಯ ಕಮ್ಮಸಂದ್ರದಲ್ಲಿ ಇದೇ ಮಾದರಿಯ ಕೋಟಿಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದ್ದು ಬಹು ಹಿಂದೆಯೇ ಈ ಪರಿಕಲ್ಪನೆಯಲ್ಲಿ ಪುರದ ಸೋಮೇಶ್ವರ ದೇವಾಲಯ ರಚನೆಯಾಗಿರುವುದು ವಿಶೇಷ.

    8.ಸಿರಸಿಯ ಸಹಸ್ರಲಿಂಗ

    ಉತ್ತರ ಕನ್ನಡ ಜಿಲ್ಲೆಯ ಸಿರಸಿಯ ಸಮೀಪ ಶಾಲ್ಮಲಿ ನದಿಯ ತೀರದಲ್ಲಿ ಸಹಸ್ರಲಿಂಗ ಎಂಬ ದಿವ್ಯಕ್ಷೇತ್ರವಿದೆ. ಇಲ್ಲಿ ನದಿ ತೀರದಲ್ಲಿರುವ ಹುಟ್ಟುಬಂಡೆಗಳ ಮೇಲೆ ಹಲವಾರು ಲಿಂಗಗಳನ್ನು ಕೆತ್ತಲಾಗಿದೆ. ಅಭಿಷೇಕ ಪ್ರಿಯನಾದ ಪರಶಿವನಿಗೆ ಇಲ್ಲಿ ನಿತ್ಯವೂ ನದಿ ನೀರಿನಿಂದ ಸಹಜ ಅಭಿಷೇಕ. ಬೇಸಿಗೆಯ ಕಾಲದಲ್ಲಿ ಶಿವಲಿಂಗಗಳ ದರ್ಶನ ಲಭ್ಯ.

    9.ಬಂದಣಿಕೆಯ ಸಹಸ್ರಲಿಂಗ

    ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಬಂದಣಿಕೆಯು ಹಲವಾರು ದೇವಾಲಯಗಳ ಬೀಡು. ಬಂದಣಿಕೆ ಗ್ರಾಮದ ನಡುವಿರುವ ಶಿವಾಲಯದಲ್ಲಿ ಸಹಸ್ರಲಿಂಗವಿದೆ. ವೃತ್ತಾಕಾರದ ಪಾಣಿಪೀಠದ ಮೇಲಿರುವ ಪೂಜಾ ಭಾಗದಲ್ಲಿ ಒಂದು ಸಾವಿರ ಶಿವಲಿಂಗಗಳನ್ನು ಬಿಡಿಸಲಾಗಿದೆ. ಹತ್ತು ಸಾಲುಗಳಿರುವ ಶಿವಲಿಂಗಗಳಲ್ಲಿ ತಲಾ ನೂರು ಶಿವಲಿಂಗಗಳಂತೆ ಸಹಸ್ರಲಿಂಗಗಳನ್ನು ರಚಿಸಲಾಗಿದೆ.ಧಾರವಾಡ ಸಮೀಪದಲ್ಲಿರುವ ನರೇಂದ್ರ ಎಂಬ ಗ್ರಾಮದಲ್ಲಿಯೂ ಒಂದು ಸುಂದರವಾದ ಸಹಸ್ರಲಿಂಗವಿದೆ.

    10. ಚಾಮರಾಜನಗರದ ಸಹಸ್ರಲಿಂಗ

    ಮೈಸೂರು ಜಿಲ್ಲೆಯಿಂದ ಬೇರ್ಪಟ್ಟು ರಚಿತವಾದ ಚಾಮರಾಜನಗರ ಜಿಲ್ಲೆಯ ಜಿಲ್ಲಾಕೇಂದ್ರದಲ್ಲಿರುವ ಚಾಮರಾಜೇಶ್ವರ ದೇವಾಲಯವು ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ರಚಿತವಾದ ಸುಂದರ ಆಲಯ. ಚಾಮರಾಜೇಶ್ವರ ದೇವಾಲಯದ ಪ್ರಾಕಾರದಲ್ಲಿ ಬಂದಣಿಕೆಯಲ್ಲಿರುವಂತೆ ಒಂದು ಸಹಸ್ರಲಿಂಗವಿದೆ. ಕಲಾತ್ಮಕವಾದ ಪಾಣಿಪೀಠದ ಮೇಲಿರುವ ಶಿವಲಿಂಗದ ಪೂಜಾಭಾಗದಲ್ಲಿ ಸಹಸ್ರಲಿಂಗಗಳಿವೆ.

    11. ಹಂಪಿಯ ಸಹಸ್ರಲಿಂಗ

    ವಿಶ್ವವಿಖ್ಯಾತ ಹಂಪಿಯಲ್ಲಿರುವ ಚಕ್ರತೀರ್ಥ ಎಂಬ ಪ್ರದೇಶದಲ್ಲಿ ಶಿವಲಿಂಗದ ವ್ಯೂಹವನ್ನು ಬಿಡಿಸಲಾಗಿದೆ. ತುಂಗಭದ್ರಾ ನದಿಯಲ್ಲಿರುವ ಹುಟ್ಟು ಬಂಡೆಯ ಮೇಲೆ ಒಂದು ಶಿವಲಿಂಗವನ್ನು ಪ್ರಧಾನವಾಗಿ ರಚಿಸಿಕೊಂಡು ಚೌಕಾರಾದಲ್ಲಿ ಶಿವಲಿಂಗಗಳನ್ನು ರಚಿಸಲಾಗಿದೆ. ಹಂಪಿಯಲ್ಲಿರುವ ಮೂಲ್ಯವಂತ ರಘುನಾಥ ದೇವಾಲಯದ ಹಿಂಭಾಗದಲ್ಲಿ ಶಿವಲಿಂಗಗಳ ಎರಡು ಸಾಲುಗಳಿವೆ. ಸಾಲಾಗಿರುವ ಪ್ರತಿ ಶಿವಲಿಂಗಗಳ ಮುಂದೆ ನದಿಯ ಶಿಲ್ಪಗಳನ್ನು ಬಿಡಿಸಿರುವುದು ವಿಶೇಷ.

    12. ಮಹಾಕೂಟದ ಕೋಟಿಲಿಂಗೇಶ್ವರ

    ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನಲ್ಲಿರುವ ಮಹಾಕೂಟದ ಮಹಾಕೋಟೇಶ್ವರ ದೇವಾಲಯದ ಆವರಣದಲ್ಲಿ ಒಂದು ಶಿವಲಿಂಗದಲ್ಲಿ ಕೋಟಿಲಿಂಗಗಳನ್ನು ಬಿಡಿಸಲಾಗಿದೆ. ಶಿವಲಿಂಗದ ಪೂಜಾಭಾಗದಲ್ಲಿ ಸಣ್ಣಸಣ್ಣ ಲಿಂಗಗಳನ್ನು ಬಿಡಿಸಲಾಗಿದ್ದು ಪ್ರತಿ ಲಿಂಗಗಳಲ್ಲಿಯೂ ಅತೀ ಸೂಕ್ಷ್ಮ ಲಿಂಗಗಳಿವೆ.

    13. ಬಂದಣಿಕೆಯ ಬ್ರಹ್ಮೇಶ್ವರ

    ತ್ರಿಮೂರ್ತಿಗಳಲ್ಲೊಬ್ಬನಾದ ಬ್ರಹ್ಮದೇವನಿಗೆ ಸಾಮಾನ್ಯವಾಗಿ ಮೂರ್ತಿಪೂಜೆಯಿರುವುದಿಲ್ಲ. ಆತನನ್ನು ಲಿಂಗ ರೂಪದಲ್ಲಿಯೇ ಆರಾಧಿಸುವ ಸಂಪ್ರದಾಯ. ಬ್ರಹ್ಮಲಿಂಗದ ಪಾಣಿಪೀಠವು ಸಾಮಾನ್ಯವಾಗಿ ಎಡಕ್ಕೆ ತಿರುಗಿರುತ್ತದೆ ಹಾಗೂ ಪಾಣಿಪೀಠದ ಮೇಲೆ ಬ್ರಹ್ಮ ಪೀಠವಾದ ಅರಳಿದ ಕಮಲವನ್ನು ಬಿಡಿಸಲಾಗುತ್ತದೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಬಂದಣಿಕೆಯ ತ್ರಿಮೂರ್ತಿ ದೇವಾಲಯದಲ್ಲಿ ಬ್ರಹ್ಮೇಶ್ವರಲಿಂಗವಿದೆ. ಇದೇ ರೀತಿಯ ಬ್ರಹ್ಮೇಶ್ವರ ಲಿಂಗವನ್ನು ಬಳಳಾರಿ ಜಿಲ್ಲೆ ಹೊಸಪೇಟೆ ಸಮೀಪವಿರುವ ಸಂಡೂರಿನ ಕುಮಾರಸ್ವಾಮಿ ದೇವಾಲಯದ ಆವರಣದಲ್ಲಿರುವ ಒಂದು ಶಿವಲಿಂಗದಲ್ಲಿ ಕಾಣಬಹುದು.

    14. ನೆಲಮನೆ, ಚೌಡಪ್ಪನಹಳ್ಳಿ, ಮೋರ್ಕಂಡಿಯ ಹಾಗೂ ಹೆಗ್ಗೆರೆಯ ದಾರಾಲಿಂಗಗಳು

    ದಾರಾಲಿಂಗವು ಶಿವಲಿಂಗದ ಒಂದು ಪ್ರಭೇದ. ಶಿವಲಿಂಗದ ಪೂಜಾಭಾಗದಲ್ಲಿ ಗೆರೆಗಳನ್ನು ಮೂಡಿಸಲಾಗುತ್ತದೆ. ಈ ರೀತಿಯ ರೇಖೆಗಳು 5, 7, 9, 12, 16, 20, 24, 28, 100 ಮುಖಗಳನ್ನು ಹೊಂದಿರಬೇಕೆಂದು ಸುಪ್ರಭೇದಾಗಮದಲ್ಲಿ ವಿವರಿಸಲಾಗಿದೆ. ಪ್ರತಿ ದಾರಾಲಿಂಗಗಳನ್ನು ಅರ್ಜಿಸುವುದರಿಂದ ಆಗುವ ಫಲಶೃತಿಯನ್ನು ಸಹಾ ನೀಡಲಾಗಿದೆ.

    ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಶ್ರೀರಂಗಪಟ್ಟಣ-ಪಾಂಡವಪುರ ರಸ್ತೆಯ ಸಮೀಪ ಶ್ರೀರಂಗಪಟ್ಟಣಕ್ಕೆ ಆರು ಕಿ.ಮೀ. ದೂರದಲ್ಲಿರುವ ನೆಲಮನೆಯೆಂಬ ಗ್ರಾಮದಲ್ಲಿರುವ ಚಂದ್ರಮೌಳೇಶ್ವರ ಲಿಂಗವು ಒಂದು ಅಪರೂಪದ ದಾರಾಲಿಂಗವಾಗಿರುತ್ತದೆ. ಸುಮಾರು ಏಳು ಅಡಿ ಎತ್ತರವಿರುವ ಶಿವಲಿಂಗದ ಪೂಜಾಭಾಗವು ಹದಿನಾರು ಮೂಲೆಗಳನ್ನು (ಗೆರೆಗಳನ್ನು) ಹೊಂದಿದೆ. ಇದೊಂದು ಅಪರೂಪದ ದಾರಾಲಿಂಗವಾಗಿದೆ. ಅಜಿತಾಗಮದಲ್ಲಿ ದಾರಾಲಿಂಗದ ಆರಾಧನೆಯ ಫಲವನ್ನು ನೀಡಲಾಗಿದೆ.ಹದಿನಾರು ಗೆರೆಗಳನ್ನು ಹೊಂದರುವ ದಾರಾಲಿಂಗವು ಸರ್ವಶ್ರೇಷ್ಠವಾದುದೆಂದೂ ಈ ಶಿವಲಿಂಗವನ್ನು ಅರ್ಚಿಸಿದರೆ ಸಂತೋಷ ಮತ್ತು ಸರ್ವಸುಖ ಲಭಿಸುವುದೆಂದು ತಿಳಿಸಲಾಗಿದೆ. ಇದೇ ರೀತಿಯ ದಾರಾಲಿಂಗವು ಬೆಂಗಳೂರು ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆಯ ಸಮೀಪವಿರುವ ಚೌಡಪ್ಪನಹಳ್ಳಿಯಲ್ಲಿರುವ ತಬ್ಬುಲಿಂಗೇಶ್ವರ ದೇವಾಲಯದಲ್ಲಿದೆ. ದೇವಾಲಯದ ಪ್ರಾಕಾರದಲ್ಲಿ ಎಂಟು ಶಿವಲಿಂಗಗಳಿದ್ದು ಅದರಲ್ಲಿ ಒಂದು ಶಿವಲಿಂಗವು ದಾರಾಲಿಂಗವಾಗಿರುತ್ತದೆ. ದಾರಾಲಿಂಗವು ಒಂಭತ್ತನೆಯ ಶತಮಾನದ ಗಂಗರ ಕಾಲಕ್ಕೆ ಸೇರುತ್ತದೆ. ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಮೋರ್ಕಂಡಿ ಎಂಬ ಗ್ರಾಮದ ಶಿವಾಲಯದಲ್ಲಿರುವ ಪ್ರಧಾನ ಲಿಂಗವು ಸಹಾ ದಾರಾಲಿಂಗವಾಗಿರುತ್ತದೆ. ಪ್ರಸ್ತುತ ದಾರಾಲಿಂಗವು ಆರು ಮುಖಗಳನ್ನು ಹೊಂದಿರುವುದು ವಿಶೇಷ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕು ಹೆಗ್ಗೆರೆಯಲ್ಲಿರುವ ಶಿವಲಿಂಗವು ಸಹ ಹದಿಮೂರು ಮೂಲೆಗಳುಳ್ಳ ದಾರಾಲಿಂಗವಾಗಿರುತ್ತದೆ.

    15. ಗದಗದ ತ್ರಿಕೂಟೇಶ್ವರ

    ಗದಗ ನಗರದ ಮಧ್ಯದಲ್ಲಿರುವ ತ್ರಿಕೂಟೇಶ್ವರ ದೇವಾಲಯವು ಹನ್ನೊಂದನೆಯ ಶತಮಾನಕ್ಕೆ ಸೇರಿರುವ ಸುಂದರ ಆಲಯ. ಈ ದೇವಾಲಯದಲ್ಲಿರುವ ಶಿವಲಿಂಗದಲ್ಲಿ ತ್ರಿಮೂರ್ತಿಗಳನ್ನು ಲಿಂಗರೂಪದಲ್ಲಿ ಅರ್ಚಿಸಲಾಗುತ್ತಿದೆ. ಪಾಣಿಪೀಠದ ಮೇಲೆ ಮೂರು ಶಿವಲಿಂಗಗಳಿದ್ದು ಬ್ರಹ,್ಮ ಮಹೇಶ್ವರ, ವಿಷ್ಣುಗಳ್ನು ಪ್ರತಿನಿಧಿಸುತ್ತವೆ. ಈ ರೀತಿಯ ತ್ರೈಪುರುಷಾರಾಧನೆಯು ಪ್ರಾಚೀನ ಕರ್ನಾಟಕದಲ್ಲಿ ಪ್ರಚಲಿತದಲ್ಲಿತ್ತು.

    16. ಸವಡಿಯ ತ್ರಿಮೂರ್ತಿಲಿಂಗ

    ಗದಗ ಜಿಲ್ಲೆ ರೋಣ ತಾಲ್ಲೂಕಿನ ಸವಡಿಯಲ್ಲಿ ತ್ರಿಮೂರ್ತೇಶ್ವರ ದೇವಾಲಯವಿದೆ. ಒಂಭತ್ತನೆಯ ಶತಮಾನಕ್ಕೆ ಸೇರಿರುವ ರಾಷ್ಟ್ರಕೂಟರ ದೇವಾಲಯವಿದಾಗಿದ್ದು, ಗರ್ಭಗುಡಿಯಲ್ಲಿ ಒಂದೇ ಪಾಣಿಪೀಠದ ಮೇಲೆ ಮೂರ್ತಿರೂಪದಲ್ಲಿ ಸೃಷ್ಟಿಕರ್ತನಾದ ಬ್ರಹ್ಮದೇವ, ಸ್ಥಿತಿಕರ್ತನಾದ ವಿಷ್ಣು ದೇವರುಗಳು ಮೂರ್ತಿರೂಪದಲ್ಲಿದ್ದಾರೆ. ಲಯಕರ್ತನಾದ ಶಿವದೇವನು ಲಿಂಗರೂಪದಲ್ಲಿರುವನು. ಬ್ರಹ್ಮ, ವಿಷ್ಣುದೇವರ ನಡುವಿರುವ ಲಿಂಗವು ನೋಡಲು ಬಹಳ ದಿವ್ಯವಾಗಿದೆ.

    17. ಮುನವಳ್ಳಿಯ ಪಂಚಲಿಂಗೇಶ್ವರ

    ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನಲ್ಲಿರುವ ಮುನವಳ್ಳಿಯಲ್ಲಿ ಪಂಚಲಿಂಗೇಶ್ವರ ದೇವಾಲಯವಿದೆ. ಈ ದೇವಾಲಯದ ವಿಶೇಷವೇನೆಂದರೆ ಒಂದೇ ಪಾಣಿಪೀಠದ ಮೇಲೆ ಐದು ಶಿವಲಿಂಗಗಳನ್ನು ಲಿಂಗರೂದಲ್ಲಿ ಪ್ರತಿಷ್ಠಾಪಿಸಲಾಗಿದೆ. ಪ್ರಸ್ತುತ ಶಿವಲಿಂಗವನ್ನು ಅಗಸ್ತ್ಯರು ಪ್ರತಿಷ್ಠಾಪಿಸಿದರೆಂದು ಐತಿಹ್ಯ. ಶಿವಲಿಂಗದ ಹಿಂಬದಿಯಲ್ಲಿ ಅಗಸ್ತ್ಯಮುನಿಗಳ ಮೂರ್ತಿಯಿದೆ. ಈ ದೇವಾಲಯದ ಆವರಣದಲ್ಲಿ ಅನೇಕ ದೇವಾಲಯಗಳಿದ್ದು ಒಂದು ದೇವಾಲಯವು ತ್ರಿಕೂಟವಾಗಿದ್ದು ಪ್ರತಿ ಗರ್ಭಗುಡಿಯಲ್ಲಿಯೂ ಶಿವಲಿಂಗಗಳಿವೆ.


    18. ಕೊಡಗೇನಹಳ್ಳಿಯ ಕುಕ್ಕುಟಾಂಡಲಿಂಗ

    ಕೋಳಿಯ ಮೊಟ್ಟೆಯ ಆಕಾರದಲ್ಲಿ ಶಿವಲಿಂಗಗಳನ್ನು ಸ್ಥಾಪಿಸುವ ಪದ್ಧತಿಯೂ ಇತ್ತು. ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಮಧುಗಿರಿ-ಹಿಂದೂಪುರ ರಸ್ತೆಯಲ್ಲಿರುವ ಕೊಡಗೇನಹಳ್ಳಿಯಲ್ಲಿರುವ ಶಿವಲಿಂಗವು ಕುಕ್ಕುಟಾಂಡಾಕಾರವನ್ನು ಹೊಂದಿದೆ. ಸುಮಾರು ಐದು ಅಡಿ ಎತ್ತರದ ಶಿವಲಿಂಗದ ಪೂಜಾಭಾಗವು ಮೊಟ್ಟೆಯಾಕಾರವನ್ನು ಹೊಂದಿದ್ದು ಈ ರೀತಿಯ ರಚನೆಯ ಶಿವಲಿಂಗಗಳ ಪ್ರಭೇದಗಳಲ್ಲೊಂದು ಕೊಡಗೇನಹಳ್ಳಿಯ ಶಿವಲಿಂಗದ ಮೇಲಿನ ಬ್ರಹ್ಮಸೂತ್ರದ ಆಧಾರದಿಂದ ಇದರ ಕಾಲವನ್ನು ಹತ್ತನೆಯ ಶತಮಾನುಕ್ಕೆ ಸೇರಿಸಬಹುದು.

    19. ಯಗಟಿಯ ಶ್ರೀಚಕ್ರಲಿಂಗ

    ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕು ಯಗಟಿಯಲ್ಲಿ ಅನೇಕ ದೇವಾಲಯಗಳಿವೆ. ಯಗಟಿಯ ಕೆರೆಯ ಅಂಚಿನಲ್ಲಿರುವ ಕಲ್ಲೇಶ್ವರ ದೇವಾಲಯವು ಹೊಯ್ಸಳರ ದೊರೆ ವಿಷ್ಣುವರ್ಧನನ ಕಾಲಕ್ಕೆ ಸೇರಿರುತ್ತದೆ. ನವೀಕೃತಗೊಂಡ ದೇವಾಲಯದ ಗರ್ಭಗುಡಿಯಲ್ಲಿರುವ ಶಿವಲಿಂಗದ ಪಾಣಿಪೀಠದ ಮೇಲೆ ಶ್ರೀಚಕ್ರವನ್ನು ಬಿಡಿಸಲಾಗಿದೆ. ಹಾಗಾಗಿ ಇದು ಶಿವ ಮತ್ತು ಶಕ್ತಿಯರ ಸಮಾಗಮವನ್ನು ಹೊಂದಿರುವ ಅಪರಪದ ಶಿವಲಿಂಗವಾಗಿದೆ.

    20. ಯಗಟೀಪುರದ ಜಟಾಧಾರಿ ಮಲ್ಲಿಕಾರ್ಜುನ

    ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕು ಯಗಟೀಪುರದಲ್ಲಿ ಸುಪ್ರಸಿದ್ಧ ಮಲ್ಲಿಕಾರ್ಜುನ ದೇವಾಲಯವಿದೆ. ದೇವಾಲಯವು ಪೂರ್ವಾಭಿಮುಖವಾಗಿ ವೇದಾವತಿ ನದಿಯ ದಂಡೆಯ ಮೇಲೆ ವಿಶಾಲವಾದ ಪ್ರಾಕಾರ ಮಂಟಪಗಳ ನಡುವೆ ವಿರಾಜಮಾನವಾಗಿ ಶೋಭಿಸುತ್ತಿದೆ. ಈ ದೇವಾಲಯದ ಗರ್ಭಗುಡಿಯಲ್ಲಿ ದೇವನು ಒಂದು ಬಂಡೆಯ ಮೇಲೆ ಮೂಡಿರುತ್ತಾನೆ. ಶಿವಲಿಂಗದ ಶಿವ ಜಟೆಯನ್ನು ಸಹಾ ಸ್ಪಷ್ಟವಾಗಿ ಮೂಡಿಸಲಾಗಿದೆ. ಯಗಟೀಪುರದ ಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವವು ಫಾಲ್ಗುಣ ಶುದ್ಧದಲ್ಲಿ ಬರುವ ಮಖಾನಕ್ಷತ್ರದಲ್ಲಿ ಬಹು ವೈಭವದಿಂದ ಜರುಗುತ್ತದೆ. ಆ ಸುದಿನ ಗರ್ಭಗುಡಿಯಲ್ಲಿ ತೀರ್ಥೋದ್ಭವವಾಗುತ್ತದೆ.

    21. ತುರುವೇಕೆರೆಯ ಗಂಗಾಧರೇಶ್ವರ

    ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕು ಕೇಂದ್ರದಲ್ಲಿರುವ ಗಂಗಾಧರೇಶ್ವರ ದೇವಾಲಯವು ಬಹಳ ವೈವಿಧ್ಯತೆಯನ್ನು ಹೊಂದಿದೆ. ಗಂಗಾಧರೇಶ್ವರ ಎಂದು ಕರೆಯುವ ಶಿವಲಿಂಗದ ಪೂಜಾಭಾಗದಲ್ಲಿ ಪದ್ಮಾಸನ ಹಾಕಿ ಕುಳಿತಿರುವ ಗಂಗೆಯಿರುವಳು. ಗಂಗೆಯ ಸುತ್ತ ಸರ್ಪದ ಮಾದರಿಯಲ್ಲಿ ಜಟೆ ಮತ್ತು ಸುರುಳಿ ಸುರುಳಿಯಂತೆ ಚಿತ್ರಿಸಿರುವ ಜಡೆಯನ್ನು ಸಹ ಮೂಡಿಸಲಾಗಿದೆ. ಗಂಗೆಯ ಹಿಂದೆ ಅಗ್ನಿಯಿದ್ದು ಅದನ್ನು ತಣಿಸಲು ಗಂಗೆಯಿರುವಂತೆ ಚಿತ್ರಿಸಲಾಗಿದೆ. ಶಿವನ ಜಟೆಯು ಸುರುಳಿಯಾಕಾರದಲ್ಲಿದ್ದು ಅದರಲ್ಲಿ 27 ನಕ್ಷತ್ರಗಳನ್ನು ಗುರುತಿಸಲಾಗಿದೆ. ಗಂಗೆಯ ಎರಡು ಬದಿಯಲ್ಲಿ ಸೂರ್ಯಚಂದ್ರವಿರುವುದು. ಇದು ಒಂದು ಅಪರೂಪದ ಶಿವಲಿಂಗವಾಗಿದ್ದು ಕರ್ನಾಟಕದ ಬೇರ್ಯಾವ ದೇವಾಲಯದಲ್ಲೂ ಪ್ರಧಾನ ದೇವತೆಯಾಗಿ ಪೂಜೆಗೊಳ್ಳುವ ಉದಾಹರಣೆಯು ದೊರೆಯುವುದಿಲ್ಲ.

    ಚಾಮರಾಜನಗರ ಜಿಲ್ಲೆ ಅದೇ ತಾಲ್ಲೂಕಿನ ಉಮತ್ತೂರಿನಲ್ಲಿರುವ ಭಜಂಗೇಶ್ವರ ದೇವಾಲಯದ ಪ್ರಾಕಾರ ಮಂಟಪದಲ್ಲಿರುವ ಶಿವಲಿಂಗಗಳ ಸಾಲಿನಲ್ಲಿ ಗಂಗಾಧರೇಶ್ವರ ಲಿಂಗವಿದ್ದು, ಗಾತ್ರದಲ್ಲಿ ತುರುವೇಕೆರೆಯ ಗಂಗಾಧರೇಶ್ವರನಿಗಿಂತ ಚಿಕ್ಕದಿದೆ.

    22. ಮುದ್ಲಾಪುರದ ಸ್ವಯಂಭುವೇಶ್ವರ

    ಶಿವಲಿಂಗಗಳನ್ನು ಮಾನವನಿರ್ಮಿತವಾಗಿ ಪೂಜಿಸುವುದಲ್ಲದೇ ಸ್ವಯಂಭು ರೂಪದಲ್ಲಿಯೂ ಪೂಜಿಸಲಾಗುತ್ತದೆ. ಇಲ್ಲಿ ಸಹಜವಾಗಿರುವ ಶಿಲೆಗಳನ್ನು ಯಾವ ಕೆತ್ತನೆಯ ಕೆಲಸವು ಇಲ್ಲದೇ ಸ್ಥಾಪಿಸಲಾಗುವುದು.ಈ ರೀತಿಯ ಶಿವಲಿಂಗಗಳು ಪ್ರಾಚೀನತೆಯಿಂದಲೂ ಬಹಳ ಮಹತ್ವವಾಗಿರುತ್ತದೆ. ಹಾಸನ ಜಿಲ್ಲೆ ಅದೇ ತಾಲ್ಲೂಕು ಮುದ್ಲಾಪುರ ಎಂಬ ಗ್ರಾಮವು ಹಾಸನ-ಹಳೇಬೀಡು ರಸ್ತೆಯಲ್ಲಿರುವ ಇಸ್ರೋ ಕೇಂದ್ರದ ಸಮೀಪದಲ್ಲಿದೆ. ಮುದ್ಲಾಪುರದ ಶಿವಲಿಂಗವು ಸ್ವಯಂಭು ಲಿಂಗವಾಗಿರುತ್ತದೆ. ಶಿವಲಿಂಗದಲ್ಲಿ ಐದು ಉದ್ಬುಗಳಿದ್ದು ಪಂಚಲಿಂಗಗಳನ್ನು ಪ್ರತಿನಿಧಿಸುತ್ತದೆ.ಗದಗ ಜಿಲ್ಲೆ ಅದೇ ತಾಲ್ಲೂಕಿನ ಹೊಂಬಳದಲ್ಲಿಯೂ ಸಹಾ ಹನ್ನೊಂದನೆಯ ಶತಮಾನದ ಶಂಕರಲಿಂಗೇಶ್ವರ ದೇವಾಲಯದಲ್ಲಿ ಇದೇ ರೀತಿಯ ಶಿವಲಿಂಗವಿದೆ.

    23. ಹಂಪಿಯ ಬಡಾಲಿಂಗ

    ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ವಿಶ್ವವಿಖ್ಯಾತ ಹಂಪಿಯಲ್ಲಿರುವ ಯೋಗಾ-ಲಕ್ಷ್ಮೀನರಸಿಂಹನ ಮೂರ್ತಿಯ ಬದಿಯಲ್ಲಿ ಬೃಹದಾಕಾರದ ಶಿವಲಿಂಗವಿದೆ. ಸುಮಾರು ಹತ್ತು ಅಡಿಗೂ ಅಧಿಕ ಎತ್ತರದಲ್ಲಿರುವ ಶಿವಲಿಂಗದ ಅಡಿಯಲ್ಲಿ ಸದಾ ನೀರಿರುವುದು ವಿಶೇಷತೆ. ಬಡಾಲಿಂಗವು ನಮ್ಮ ನಾಡಿನ ವಿಜಯನಗರ ಅರಸರ ಕೊಡುಗೆ.

    24. ಬೃಹತ್ ಲಿಂಗಗಳು

    ಕನ್ನಡ ನಾಡಿನಲ್ಲಿ ಅನೇಕ ಬೃಹತ್ ಶಿವಲಿಂಗಗಳಿರುವ ದೇವಾಲಯಗಳವೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕು ಸಖರಾಯಪಟ್ಟಣದ ಸಮೀಪವಿರುವ ಅಯ್ಯನಕೆರೆಯಲ್ಲಿ ಬೃಹದಾಕಾರದ ಶಿವಲಿಂಗವಿದೆ. ಬಲ್ಲಾಳೇಶ್ವರ ಲಿಂಗವೆಂದು ಕರೆಯುವ ಶಿವಲಿಂಗವು ಹೊಯ್ಸಳರ ಕಾಲದ ರಚನೆ. ಶಿವಲಿಂಗದ ಪಾಣಿಪೀಠವು ಅತ್ಯಂತ ಕಲಾತ್ಮಕವಾಗಿದೆ. ದೇವಾಲಯವು ಅಯ್ಯನಕೆರೆಯೆಂದು ಕರೆಯುವ ಸುಂದರವಾದ ಕೆರೆಯ ಬದಿಯಲ್ಲಿದ್ದು ಪರಿಸರವು ಅತ್ಯಂತ ರಮಣೀಯವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ಬೊಮ್ಮವಾರ ಎಂಬ ಗ್ರಾಮದಲ್ಲಿ ಸುಮಾರು ಹತ್ತು ಅಡಿಗಳಷ್ಟು ಅಗಲವಿರುವ ಪಾಣಿಪೀಠವನ್ನು ಹೊಂದಿರುವ ಬೃಹತ್ ಶಿವಲಿಂಗವಿದೆ. ಸುಂದರೇಶ್ವರರೆಂದು ಕರೆಯುವ ಈ ಶಿವಲಿಂಗವು ಇಡೀ ದೇವಾಲಯದ ಗರ್ಭಗುಡಿಯನ್ನು ಆವರಿಸಿಕೊಂಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಸಮೀಪ ಅನಗೊಂಡನಹಳ್ಳಿಯ,ಲ್ಲಿ ಬಾಣೇಶ್ವರ ಎಂದು ಕರೆಯಲ್ಪಡುವ, ಜಿಲ್ಲೆಯಲ್ಲಿಯೇ ಅತ್ಯಂತ ಎತ್ತರದ ಶಿವಲಿಂಗವಿದೆ. ಬಾಣೇಶ್ವರಲಿಂಗವು ಒಂಭತ್ತು ಅಡಿ ಎತ್ತರವಿದ್ದು ಹತ್ತನೆಯ ಶತಮಾನಕ್ಕೆ ಸೇರುತ್ತದೆ.

    25. ಕೆಂಗೇರಿಯ ಸೋಮೇಶ್ವರ ದೇವಾಲಯ

    ಬೆಂಗಳೂರು-ಮೈಸೂರು ರಸ್ತೆಯಲ್ಲಿ ನಗರದಿಂದ ಕೇವಲ 15 ಕಿ.ಮೀ. ದೂರದಲ್ಲಿರುವ ಕೆಂಗೇರಿಯು ಹತ್ತನೆಯ ಶತಮಾನದಿಂದಲೂ ಅಸ್ತಿತ್ವದಲ್ಲಿದ್ದ ಪ್ರಾಚೀನ ಗ್ರಾಮ. ಕೆಂಗೇರಿಯ ಕೋಟೆ ಪ್ರದೇಶದಲ್ಲಿ ಹತ್ತನೆಯ ಶತಮಾನಕ್ಕೆ ಸೇರುವ ಶಿವಲಿಂಗವನ್ನು ಹೊಂದಿರುವ ಸೋಮೇಶ್ವರ ದೇವಾಲಯವಿದೆ. ಎಲ್ಲ ಪ್ರಾಚೀನ ಶಿವ ದೇವಾಲಯಗಳ ನಿಯಮದಂತೆ ಊರ ಹೊರಗೆ ಈಶಾನ್ಯ ದಿಕ್ಕಿನಲ್ಲಿ ಪೂರ್ವಾಭಿಮುಖವಾಗಿ ಶಿವಲಿಂಗವಿದೆ. ಶಿವಲಿಂಗದ ಪೂಜಾಭಾಗದಲ್ಲಿ ಬ್ರಹ್ಮಸೂತ್ರವು ಸ್ಪಷ್ಟವಾಗಿ ಗೋಚರಿಸುತ್ತದೆ ಹಾಗೂ ಇದರ ವಿನ್ಯಾಸದಿಂದ ಹತ್ತನೆಯ ಶತಮಾನದ ಕಾಲಘಟ್ಟಕ್ಕೆ ಶಿವಲಿಂಗವನ್ನು ಸೇರಿಸಬಹುದು.
    ಕೆಂಗೇರಿಯ ಸೋಮೇಶ್ವರನಿಗೆ ಮಹಾಶಿವರಾತ್ರಿ ಹಾಗೂ ಕಾರ್ತಿಕಮಾಸದ ಸೋಮವಾರಗಳಲ್ಲಿ ವಿಶೇಷ ಪೂಜಾ ಕೈಂಕರ್ಯವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಬಹಳ ವೈಭವವಾಗಿ ಜರುಗುವುದು. ಶಿವರಾತ್ರಿಯ ಮಾರನೆಯ ದಿನ ಬೆಳಿಗೆ ಸೂರ್ಯದೇವನ ಕಿರಣಗಳು ಶಿವಲಿಂಗದ ಮೇಲಿ ಬೀಳುವುದು ಬಹು ವಿಶೇಷ.

    ಕೆಂಗೇರಿ ಚಕ್ರಪಾಣಿ ಅವರು ನಾಡಿನ ಹಿರಿಯ ಛಾಯಗ್ರಾಹಕರು ಹಾಗೂ ಇತಿಹಾಸ ಸಂಶೋಧಕರು. ಸಹಪಾಠಿ ಮುನಿ ಅಂಜನಪ್ಪನವರ ಪ್ರೇರಣೆಯಿಂದ ಛಾಯಾಗ್ರಹಣವನ್ನು ಹವ್ಯಾಸವಾಗಿ ಬೆಳೆಸಿಕೊಂಡ ಚಕ್ರಪಾಣಿ ಅದನ್ನು ದೇವಾಲಯಗಳ ಚಿತ್ರೀಕರಣಕ್ಕೆ ಬಳಸಿಕೊಂಡರು. ಇತಿಹಾಸ ತಜ್ಞ ಡಾ.ಎಚ್. ಎಸ್ .ಗೋಪಾಲರಾವ್. ಡಾ. ದೇವರಕೊಂಡಾರೆಡ್ಡಿ, ಡಾ. ಪಿ.ವಿ .ಕೃಷ್ಣಮೂರ್ತಿ,ಡಾ. ಕೆ. ಆರ್. ಗಣೇಶ್ ಅವರ ಮಾರ್ಗದರ್ಶನದಿಂದ ದೇವಾಲಯಗಳ ಇತಿಹಾಸ ಅಧ್ಯಯನದಲ್ಲಿ ಆಸಕ್ತಿ ಬೆಳೆಯಿತು. ದೂರಸಂಪರ್ಕ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದ ಮೇಲೆ ಸಹೋದ್ಯೋಗಿಗಳ ಒತ್ತಾಸೆಯಂತೆ ತಾವು ಸೆರೆಹಿಡಿದ ಛಾಯಚಿತ್ರಗಳ ಪ್ರದರ್ಶನ ಏರ್ಪಡಿಸಲು ಆರಂಭಿಸಿದರು. ಈಗ ಅವರ ಬಳಿ 2000ಕ್ಕೂ ಹೆಚ್ಚು ಛಾಯಚಿತ್ರಗಳ ಸಂಗ್ರಹ ಇದೆ. ನಾಡಿನಾದ್ಯಂತ ಈ ಚಿತ್ರಗಳ ಪ್ರದರ್ಶನ ಏರ್ಪಡಿಸಿದ್ದಾರೆ. ಬೆಂಗಳೂರು ದೂರವಾಣಿ ನೌಕರರ ಪ್ರಾಚೀನ ದೇವಾಲಯಗಳ ಹವ್ಯಾಸಿ ವೀಕ್ಷಣಾ ಬಳಗವನ್ನು ಕಟ್ಟಿಕೊಂಡು ಅದರ ಮೂಲಕ ಮಿತ್ರರನ್ನು ಪುರಾತನ ದೇವಾಲಯಗಳಿಗೆ ಕರೆದುಕೊಂಡು ಹೋಗಿ ಪರಿಚಯಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಪುರಾತನ ದೇವಾಲಯಗಳ ಜೀರ್ಣೋದ್ಧಾರದಲ್ಲಿ ತೊಡಗಿಕೊಂಡಿರುವ ಧರ್ಮಸ್ಥಳದ ಶ್ರೀ ಮಂಜುನಾಥ ಧರ್ಮೋತ್ಥಾನ ಟ್ರಸ್ಟ್ ಇವರನ್ನು ಸಲಹೆಗಾರರನ್ನಾಗಿ ನೇಮಿಸಿಕೊಂಡಿದೆ.

    error: Content is protected !!