24.1 C
Karnataka
Friday, May 22, 2026
    Home Blog Page 42

    ಖಂಡಿತವಾದಿ ಲೋಕಕ್ಕೆ ನಿಷ್ಠುರವಾದಿ

    ಸುಮಾವೀಣಾ

    ಕಂಡುದದ ಆಡೆ ಭೂಮಂಡಲ ಮುನಿವುದು-ಸರ್ವಜ್ಞನ ತ್ರಿಪದಿಯಲ್ಲಿ  ಉಲ್ಲೇಖಿಸಲಾಗಿರುವ ಮಾತು. ನಾವು ನೇರವಾಗಿ ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ ಕೆಲವರಿಗೆ ಅದು ಇಷ್ಟವಾಗುವುದಿಲ್ಲ. ಸತ್ಯ ಯಾವಾಗಲೂ ಕಹಿ ಅನ್ನುತ್ತಾರಲ್ಲ ಹಾಗೆ. 

    ಒಟ್ಟಾರೆಯಾಗಿ  ಈ ಜಗತ್ತು,  ಈ ಜನಗಳು  ಭ್ರಮಾಲೋಕದಲ್ಲಿಯೇ ಇರುವರೇನೋ ಅನ್ನಿಸುತ್ತದೆ. ಸತ್ಯವನ್ನು ಕಂಡರೆ, ಕೇಳಿದರೆ ಅಪಥ್ಯ  ಅನ್ನುವ ಹಾಗೆ ಆಡುತ್ತಾರೆ. ನೇರವಾಗಿ ನುಡಿಯುವವರ ಮೇಲೆ  ಜನರು ಕೋಪಿಸಿಕೊಳ್ಳುತ್ತಾರೆ. ಖಂಡಿತವಾದಿ ಲೋಕಕ್ಕೆ ನಿಷ್ಠುರವಾದಿ ಎನ್ನುವ ಮಾತನ್ನು ಇಲ್ಲಿ ಸಂವಾದಿಯಾಗಿ ತೆಗೆದುಕೊಳ್ಳಬಹುದು.

    ಸತ್ಯಯಾವಾಗಲೂ ಕಠಿಣ ಆದರೆ ಸುಳ್ಳು  ತಕ್ಷಣಕ್ಕೆ ಸಿಹಿಯಾಗಿರುವುದರಿಂದ  ಅದನ್ನೆ ಸ್ವೀಕರಿಸುತ್ತಾರೆ.  ಮೇಲ್ನೋಟಕ್ಕೆ ಸುಂದರವಾಗಿ ಕಾಣುವುದೆಲ್ಲ  ನಮಗೆ ಅನುಕೂಲವಾಗಿರುತ್ತದೆ ಎಂಬುದು ಭ್ರಮೆ  ಅಷ್ಟೆ.

    ರತ್ನಾಕರವರ್ಣಿಯ  ‘ಭರತೇಶವೈಭವ’ದಲ್ಲಿ ಬರುವ ಪ್ರಸಂಗವೊಂದರಲ್ಲಿ ಭರತ ಚಕ್ರವರ್ತಿ  ಭೂಮಂಡಲವನ್ನೇ ಗೆದ್ದ ಸಂತಸದಲ್ಲಿ  ವೃಷಭಾದ್ರಿಯನ್ನು  ಏರಿ ಅಲ್ಲಿ ಬೆಟ್ಟದ ತುದಿಯಲ್ಲಿ ನಾನೇ ಜಗದೇಕ ವೀರ  ಎಂದು ಶಾಸನವನ್ನು ಕೆತ್ತಿಸುವ ಸಂದರ್ಭದಲ್ಲಿ ಅವನಿಗೂ ಮೊದಲೆ  ಭೂಮಂಡಲವನ್ನು ಗೆದ್ದ   ಸತ್ಯವನ್ನು ಕಂಡಾಗ  ಅದನ್ನು ಸಹಿಸದೆ ಕೋಪಗೊಳ್ಳುತ್ತಾನೆ.ಇದರಿಂದ ತಿಳಿಯುವುದು ಇಷ್ಟೆ ರಾಜನಾಗಲಿ  ಶ್ರೀಸಾಮಾನ್ಯನೆ ಆಗಲಿ ಇದ್ದುದನ್ನುಇದ್ದ ಹಾಗೆ ಸ್ವೀಕರಿಸಲಾರರು ಎಂದು. ಕರಿ ಕಾಗೆ ಬೆಳ್ಳಗೆ ಮಾಡಲಾದೀತೆ ಎಂಬ ಮಾತಿನಂತೆ ಸತ್ಯ ಯಾವಾಗಲೂ  ಸಾಲಿಡ್ ಅದರ ಸ್ವರೂಪ ಬದಲಿಸಲು ಸಾಧ್ಯವಿಲ್ಲ.

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    kannadapress.com explained : AY4.2 ರೂಪಾಂತರಿ ಅಪಾಯಕಾರಿಯೇ? ಇಲ್ಲವೇ?

    ಎರಡು ವರ್ಷದ ಹಿಂದೆ ಕೊರೋನಾ-covid- ವೈರಸ್ ಪತ್ತೆಯಾದ ದಿನದಿಂದ ಅದು ರೂಪಾಂತರ ಗೊಳ್ಳುತ್ತಲೇ ಇದೆ. ಕಳೆದ ಬಾರಿ ಈ ರೀತಿ ರೂಪಾಂತರ ಗೊಂಡ ವೈರಸ್ ಎರಡನೇ ಅಲೆಯಲ್ಲಿ ಭಾರಿ ಅವಾಂತರವನ್ನೇ ಸೃಷ್ಟಿಸಿತ್ತು.

    ಈಗ ಮತ್ತೊಂದು ರೂಪಾಂತರಿ AY4.2 ಡೆಲ್ಟಾದ ಅವಾಂತರ. ಇನ್ನೂ ಇದರ ಆಳ ಅಗಲಗಳ ಪರಿಚಯವಾಗಿಲ್ಲ. ಈಗಾಗಲೇ ಕೋಟ್ಯಾಂತರ ಲಸಿಕೆಗಳನ್ನು ಹಾಕಿರುವದರಿಂದ ಇದರ ಆಟ ನಡೆಯುವದಿಲ್ಲ ಎಂದೇ ಭಾವಿಸಬಹುದಾಗಿದೆ. ಆದರೂ ನಮ್ಮ ಎಚ್ಚರಿಕೆಯಲ್ಲಿ ನಾವಿರಲೇ ಬೇಕು.

    ಈ ಬಗ್ಗೆ ನಮ್ಮ ಓದುಗರಿಗೆ ಹೆಚ್ಚಿನ ವಿಷಯ ತಿಳಿಸಲು ನಾವು ಮೈಸೂರಿನ ಪ್ರಖ್ಯಾತ ವೈದ್ಯ ಡಾ. ಸಿ ಜಿ ಪ್ರಹ್ಲಾದರಾವ್ ಅವರನ್ನು ಮಾತನಾಡಿಸಿದೆವು. ಅವರು ಈ ಬಗ್ಗೆ ಹೇಳಿದ ಸಂಗತಿಗಳು ಇಲ್ಲಿಮ ವಿಡಿಯೋದಲ್ಲಿ ದಾಖಲಾಗಿದೆ. ಆಲಿಸಿ , ವೀಕ್ಷಿಸಿ ಮತ್ತು ಪ್ರತಿಕ್ರಿಯಿಸಿ.

    ವಿಡಿಯೋ ನೋಡಿ ಸುಮ್ಮನಾಗಬೇಡಿ. ದಯಮಾಡಿ ವಿಡಿಯೋದಲ್ಲಿರುವ subscribe ಮತ್ತು bell icon ಒತ್ತಿ. ನಿಮ್ಮ ಒಂದು subscribe ನಮಗೆ ನೂರಾನೆ ಬಲ ಮತ್ತು ಮುಂದಿನ ಉಪಯುಕ್ತ ವಿಡಿಯೋಗಳಿಗೆ ಸ್ಪೂರ್ತಿ.

    INDIAN STOCK MARKET :ಮನಿ ವಿಕಾಸ ಮಾಡದ ಕಾರ್ಪೊರೇಟ್ ಫಲಗಳು

    ಷೇರುಪೇಟೆಯ ಸೂಚ್ಯಂಕಗಳು ಹೆಚ್ಚು ಹೆಚ್ಚು ವಿಜೃಂಭಿಸಿದರೂ ಪೇಟೆಯಲ್ಲಿ ಅನೇಕ ರೀತಿಯ ಹೂಡಿಕೆ ಅವಕಾಶಗಳು ಸೃಷ್ಟಿ ಯಾಗುತ್ತಿರುತ್ತವೆ. ಹೆಚ್ಚಿನ ಅಗ್ರಮಾನ್ಯ ಕಂಪನಿಗಳು ಉತ್ತಮ ಸಾಧನೆಯ ಅಂಕಿ ಅಂಶಗಳನ್ನು ಪ್ರಕಟಿಸಿದರೂ, ಹೂಡಿಕೆ ಮಾಡಿರುವ ಷೇರುದಾರರಿಗೆ ಪ್ರಯೋಜನವಿಲ್ಲದಂತಾಗಿದೆ. ಕಾರಣ ಕಂಪನಿಗಳ ತ್ರೈಮಾಸಿಕದ ಲಾಭಗಳಿಕೆಯು ಹಲವು ಪಟ್ಟು ಹೆಚ್ಚಿದ್ದರೂ ಕಾರ್ಪೊರೇಟ್‌ ಫಲಗಳನ್ನು ವಿತರಿಸದೇ ಸಾಧನೆಯನ್ನು ಕೇವಲ ಭಾಷಣಕ್ಕೆ ಭೂಷಣ ಎನ್ನುವಂತೆ ಮಾಡಿವೆ.

    ಅವೆನ್ಯೂ ಸೂಪರ್‌ ಮಾರ್ಕೆಟ್ಸ್, ಬೊರೊಸಿಲ್‌ ರಿನ್ಯೂವಬಲ್ಸ್‌, ಟಾಟಾ ಪವರ್‌, ಟಾಟಾ ಸ್ಟೀಲ್‌, ಡಾಕ್ಟರ್‌ ರೆಡ್ಡೀಸ್‌ ಲ್ಯಾಬ್‌, ವೇದಾಂತ ಮುಂತಾದ ಕಂಪನಿಗಳು ಪ್ರಕಟಿಸಿದ ಸಾಧನೆಯ ಅಂಕಿ ಅಂಶಗಳು ಮನೋಲ್ಲಾಸಗೊಳಿಸುವ ಮಟ್ಟದ್ದಾದರೂ, ʼಮನಿʼ ವಿಕಾಸವಿಲ್ಲದಂತೆ ಕೇವಲ ಮೂಗಿನ ತುದಿಗೆ ತುಪ್ಪ ಸವರುವ ಕಾರ್ಯದಂತಿದೆ.

    ಕಂಪನಿಗಳಾದ ಭಾರತ್‌ ಪೆಟ್ರೋಲಿಯಂ ಮತ್ತು ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಗಳು ಪ್ರತಿ ಷೇರಿಗೆ ರೂ.5 ರಂತೆ ಲಾಭಾಂಶ ಘೋಷಣೆ ಮಾಡಿವೆ. ಸ್ಟೀಲ್‌ ಅಥಾರಿಟಿ ಆಫ್‌ ಇಂಡಿಯಾ ಪ್ರತಿ ಷೇರಿಗೆ ರೂ.4 ರಂತೆ, ಆರ್‌ ಇ ಸಿ ಲಿಮಿಟೆಡ್‌ ಪ್ರತಿ ಷೇರಿಗೆ ರೂ.2.50 ರಂತೆ, ಜಿ ಇ ಶಿಪ್ಪಿಂಗ್‌ ಪ್ರತಿ ಷೇರಿಗೆ ರೂ.4.50 ಯಂತೆ, ಜೊತೆಗೆ ಕೇರ್‌ ರೇಟಿಂಗ್ಸ್‌, ಕೇವಲ್‌ ಕಿರಣ್‌ ನಂತಹ ವಿವಿಧ ಕಂಪನಿಗಳು ಲಾಭಾಂಶ ಪ್ರಕಟಿಸಿವೆಯಾದರೂ, ಹೆಚ್ಚಿನ ಅಗ್ರಮಾನ್ಯ ಕಂಪನಿಗಳು ಉತ್ತಮ ಸಾಧನೆ ಪ್ರದರ್ಶಿಸಿದರೂ, ಹೂಡಿಕೆದಾರರನ್ನು ಹರ್ಷಿತಗೊಳಿಸಲು ವಿಫಲವಾಗಿವೆ. ಇದು ಷೇರುದಾರರು ಮತ್ತು ಕಂಪನಿಗಳ ನಡುವೆ ಇರುವ ಲಾಯಲ್ಟಿ ಅಂಶವನ್ನು ಕಡೆಗಣಿಸಿ, ಷೇರುದಾರರು ಪೇಟೆಯ ವಾತಾವರಣವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಬೇಕೆಂದರೆ ಅವರು ಹೊಂದಿರುವ ಷೇರುಗಳನ್ನು ಮಾರಾಟಮಾಡಿದಲ್ಲಿ ಮಾತ್ರ ಹೂಡಿಕೆಯ ಲಾಭ ಪಡೆಯಬಹುದಾಗಿದೆ.

    ಹಿಂದೂಸ್ಥಾನ್‌ ಯೂನಿಲೀವರ್‌ ಕಂಪನಿ ಪ್ರತಿ ಒಂದು ಷೇರಿಗೆ ರೂ.15 ರೂಪಾಯಿಗಳಂತೆ, ಸುಮಾರು ಶೇ.2 ರಷ್ಟು ಕಳಪೆ ಸಾಧನೆ ಪ್ರದರ್ಶಿಸಿದೆ ಎಂಬ ಕಾರಣಕ್ಕೆ ಮಾರಾಟದ ಒತ್ತಡಕ್ಕೊಳಗಾಗಿರುವ ಕಾಲ್ಗೇಟ್‌ ಪಾಲ್ಮೊಲಿವ್‌ ಪ್ರತಿ ಷೇರಿಗೆ ರೂ.19 ರಂತೆ ಡಿವಿಡೆಂಡ್‌ ಘೋಷಿಸಿ, ನಿಗದಿತ ದಿನಾಂಕವೂ ಮುಗಿದಿದೆ. ಮುಂದಿನ ದಿನಗಳಲ್ಲಿ ಕುಸಿತದಿಂದ ಚೇತರಿಕೆ ಕಾಣಬಹುದೇ ಕಾದು ನೋಡೋಣ.

    ಈಚಿನ ದಿನಗಳಲ್ಲಿ ಕಂಪನಿಗಳು ಕೇವಲ ಅಲಂಕಾರಿಕವೆಂಬಂತೆ ಸಾಧನೆಯ ಅಂಶಗಳನ್ನು ವರ್ಣರಂಜಿತವಾಗಿ ಪ್ರಕಟಿಸುತ್ತವೆಯಾದರೂ, ಷೇರುದಾರರನ್ನು ಕಡೆಗಣಿಸುವುದು ಹವ್ಯಾಸವಾದಂತಾಗಿದೆ. ಇದು ಷೇರುದಾರರ ಮತ್ತು ಕಂಪನಿಗಳ ಬಾಂಧವ್ಯವು ಬದ್ಧತೆಮುಕ್ತವಾಗಿಸಿದೆ. ಅದಕ್ಕೆ ಪೂರಕವಾಗಿ ಸರ್ಕಾರದ ನಿಯಮಗಳೂ ಸಹ ಸಹಕಾರಿಯಾಗಿವೆ. ಷೇರುದಾರರು ಡಿವಿಡೆಂಡನ್ನು ಕಂಪನಿಗಳಿಂದ ಪಡೆಯುವುದಾದರೆ ಅದನ್ನು ನೇರವಾಗಿ ಷೇರುದಾರರ ತೆರಿಗೆಗೊಳಪಡುವ ಲಾಭವೆಂದು, ಯಾವುದೇ ರಿಯಾಯಿತಿ ಇಲ್ಲದೆ, ಪರಿಗಣಿಸಲಾಗುವುದು. ಆದರೆ ಷೇರಿನ ಬೆಲೆ ಏರಿಕೆಯಾದಾಗ ಮಾರಾಟಮಾಡಿದಲ್ಲಿ ಅದಕ್ಕೆ ಅಲ್ಪಕಾಲೀನ ಅವಧಿಯ ಲಾಭ ಎಂದು ವಿಂಗಡಿಸಿ ಅದಕ್ಕೆ ಶೇ.15 ರಂತೆ ತೆರಿಗೆಗೊಳಪಡಿಸುವರು. ಈ ಕ್ರಮವು ಷೇರುದಾರರಲ್ಲಿರುವ ದೀರ್ಘ ಕಾಲೀನ ಹೂಡಿಕೆ ಎಂಬ ಚಿಂತನೆಗೆ ತಿಲಾಂಜಲಿ ಹೇಳಿದಂತೆ.

    ಈಗಿನ ಚಿಂತನೆಗಳು, ವಿಶ್ಲೇಷಣೆಗಳ ಪರಿಸ್ಥಿತಿ ಹೇಗೆ ಬದಲಾಗಿದೆ ಎಂಬುದನ್ನು ನೋಡೋಣ:

    ಪ್ರಕರಣ : 1

    2008 ರ ಡಿಸೆಂಬರ್‌ 16 ರಂದು ಸಂಜೆ ಕಂಪನಿಯೊಂದು ತನ್ನ ಮಕ್ಕಳ ಕಂಪನಿಯ ಭಾಗಿತ್ವವನ್ನು 1.6 ಶತಕೋಟಿ ಡಾಲರ್‌ ಗೆ ಖರೀದಿಸುವ ತೀರ್ಮಾನವನ್ನು ಪ್ರಕಟಿಸಿತು. ಇದರ ಪರಿಣಾಮವಾಗಿ ಅಮೇರಿಕಾದಲ್ಲಿ ಆ ಕಂಪನಿಯ ಎ ಡಿ ಆರ್‌ ಗಳು ಶೇ.50 ಕ್ಕೂ ಹೆಚ್ಚಿನ ಕುಸಿತಕ್ಕೊಳಗಾಯಿತು. ಕಂಪನಿಯ ತೀರ್ಮಾನಕ್ಕೆಸ್ಥಳೀಯ ಮತ್ತು ಜಾಗತಿಕ ಮಟ್ಟದಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. ಈ ಕಾರಣಗಳಿಂದ ಕಂಪನಿಯು ರಾತ್ರೋರಾತ್ರಿ ಯೋಜನೆಯನ್ನು ಕೈಬಿಟ್ಟಿತಾದರೂ, ಈ ಜಾರಿಗೊಳಗಾಗದ ನಿರ್ಧಾರವು ಕಂಪನಿಯ ಕಾರ್ಪೊರೇಟ್ ನೀತಿ ಪಾಲನೆಯಲ್ಲಿನ ಲೋಪವೆಂದು ಪರಿಗಣಿಸಿ 17 ರಂದು ಷೇರಿನ ಬೆಲೆಯು ರೂ.222 ರ ಸಮೀಪದಿಂದ ರೂ.113 ರವರೆಗೂ ಕುಸಿಯುವಂತಾಯಿತು. ಆ ಸಂದರ್ಭದಲ್ಲಿ ಪ್ರವರ್ತಕರು ಹೊಂದಿದ್ದ ಶೇ.8.27 ರ ಭಾಗಿತ್ವವು ಒತ್ತೆ ಇಡಲಾಗಿದ್ದ ಕಾರಣ ಕುಸಿದಿಂದುಟಾದ ಪರಿಣಾಮದಿಂದ ಪಾವತಿಸಬೇಕಾದ ಮಾರ್ಜಿನ್‌ ಹಣದ ಕೊರತೆಯ ಕಾರಣ ಫೈನಾನ್ಶಿಯರ್‌ ಗಳು ಒತ್ತೆ ಇಟ್ಟ ಷೇರುಗಳನ್ನು ಮಾರ್ಜಿನ್‌ ಹಣಕ್ಕಾಗಿ ಮಾರಾಟ ಮಾಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಈ ಕಾರಣದಿಂದ ಪ್ರವರ್ತಕರ ಭಾಗಿತ್ವವು ಶೇ.4.4 ಕ್ಕೆ ಕುಸಿಯಿತು. ಒಂದು ಜಾರಿಗೊಳಿಸಲಾಗದ ನಿರ್ಧಾರವನ್ನು ಪೇಟೆಯು ಆರಂಭಕ್ಕೂ ಮುನ್ನವೇ ಹಿಂದಿರುಗಿಪಡೆದರೂ ಅದನ್ನು ಕಾರ್ಪರೇಟ್‌ ನೀತಿ ಪಾಲನೆಯ ಲೋಪವೆಂದು ಪರಿಗಣಿಸಲಾಯಿತು.

    ಪ್ರಕರಣ : 2.

    2021 ರ ಅಕ್ಟೋಬರ್‌ 28 ರಂದು ಸಂಜೆ, ಐ ಆರ್‌ ಸಿ ಟಿ ಸಿ ಕಂಪನಿಯು ಆನ್‌ ಲೈನ್‌ ಬುಕ್ಕಿಂಗ್‌ ಮಾಡುವ ಗ್ರಾಹಕರಿಂದ ಸಂಗ್ರಹಿಸಿದ ಶುಲ್ಕದಲ್ಲಿ ರೇಲ್ವೇಗೂ ಪಾಲು ಕೊಡಬೇಕೆಂಬ ಸುತ್ತೋಲೆಯ ಕಾರಣ ಕಂಪನಿಯ ಲಾಭಗಳಿಕೆಯು ಕುಸಿಯುವುದೆಂದು ಭಾವಿಸಲಾಯಿತು. ಈ ಕಾರಣದಿಂದ ನಂತರದ ದಿನ ಪೇಟೆಯು ಆರಂಭವಾಗುತ್ತಿದ್ದಂತೆಯೇ ಮಾರಾಟದ ಒತ್ತಡ ಹೆಚ್ಚಾಗಿ ಷೇರಿನ ಬೆಲೆ ರೂ.822 ರಿಂದ ರೂ.639 ರವರೆಗೂ, ಷೇರುದಾರರಿಗೆ ಮಾರಾಟಮಾಡಲೂ ಸಹ ಅವಕಾಶ ನೀಡದೆ ಏಕಮುಖವಾಗಿ ಕುಸಿಯಿತು. ಮಾಡಬೇಕಾಗಿದ್ದಷ್ಠು ಹಾನಿಯನ್ನು ಉಂಟುಮಾಡಿದ ಮೇಲೆ ಎಚ್ಚೆತ್ತುಕೊಂಡ ಸರ್ಕಾರ DIPAM (Department of Investment and Public Asset Management) ಕಾರ್ಯದರ್ಶಿಗಳು ಸಾರ್ವಜನಿಕ ಷೇರುದಾರರ ಹಿತದ ದೃಷ್ಟಿಯಿಂದ ಇಂಥ ಕ್ರಮ ಸರಿಯಲ್ಲವೆಂಬ ಕಾರಣಕ್ಕಾಗಿ ಈ ಸುತ್ತೋಲೆಯನ್ನು ಹಿಂಪಡೆಯಲಾಗಿದೆ ಎಂದು ದಿನದ ಚಟುವಟಿಕೆಯ ಮಧ್ಯೆ ಪ್ರಕಟಿಸಿದರು. ಆದರೂ ಅಷ್ಠೊತ್ತಿಗಾಗಲೇ ಆಗಬೇಕಾಗಿದ್ದ ಹಾನಿಯು ಪೂರ್ಣವಾಗಿತ್ತು. ಈ ಪ್ರಕಟಣೆಯ ನಂತರ ಷೇರಿನ ಬೆಲೆ ಮತ್ತೊಮ್ಮೆ ಚೇತರಿಕೆಯಿಂದ ರೂ.900 ರ ಗಡಿ ತಲುಪಿ ರೂ.845 ರ ಸಮೀಪ ದಿನದ ಅಂತ್ಯಗೊಂಡಿತು.

    ಈ ಮೇಲಿನ ಎರಡು ಪ್ರಕರಣಗಳನ್ನು ಪರಿಶೀಲಿಸಿದಾಗ ಮೊದಲನೆಯದರಲ್ಲಿ ಮಾರ್ಕೆಟ್‌ ಆರಂಭಕ್ಕೂ ಮುನ್ನವೇ ತೀರ್ಮಾನವನ್ನು ಹಿಂಪಡೆಯಲಾಯಿತಾದರೂ ಅದನ್ನ ಕಾರ್ಪೊರೇಟ್‌ ನೀತಿ ಪಾಲನೆ ಎಂದು ವಿಶ್ಲೇಷಿಸಲಾಯಿತು. ಎರಡನೆಯದರಲ್ಲಿ ಮಾರ್ಕೆಟ್‌ ಆರಂಭವಾಗಿ ಅರ್ಧದಿನದ ಸಮಯದಲ್ಲಿ ತೀರ್ಮಾನವನ್ನು ಹಿಂಪಡೆದು ಅನೇಕರಿಗೆ ಹಾನಿಯುಂಟುಮಾಡಿದರೂ ಅದು ನೀತಿ ಪಾಲನಾ ದೋಶ ಎಂದು ಗೋಚರಿಸಲಿಲ್ಲ. ಇದೂ ಒಂದು ರೀತಿಯ ಬದಲಾವಣೆ. ಇಂತಹ ಅನಿರೀಕ್ಷಿತ ಬೆಳವಣಿಗೆಗಳಿಂದಲೂ ಹೂಡಿಕೆದಾರರು ಎಚ್ಚರ ವಹಿಸಿಕೊಳ್ಳುವ ಕ್ರಮ ಕೈಗೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು

    ದಿಲ್ ವಾಲೆ ದಿಲ್ಲಿಯ ಜನರ ಉಮಂಗ್ ಭರಿ ತ್ಯೋಹಾರ್

    ದಿಲ್ಲಿ-DELHI-ಯಲ್ಲಿ ದೀಪಾವಳಿ ಹಬ್ಬದ ಆಚರಣೆಯನ್ನು ಬಹಳ ವಿಜೃಂಭಣೆಯಿಂದ ಮಾಡುತ್ತಾರೆ. ಮನೆಗಳ ಬಾಲ್ಕನಿಯಲ್ಲಿ ಅಂದವಾಗಿ ದೀಪಗಳನ್ನು ಹಚ್ಚಿ ಬಣ್ಣ ಬಣ್ಣದ ದೀಪಗಳಿಂದ ಅಲಂಕರಿಸುತ್ತಾರೆ. ಪ್ರತಿಯೊಬ್ಬರೂ ತಮ್ಮ ತಮ್ಮ ಒಳ್ಳೆಯ ಭಾವನೆಗಳನ್ನು ದೀಪದ ಮೂಲಕ ಅನಾವರಣ ಮಾಡುತ್ತಿದ್ದಾರೆ ಎಂದು ಇದನ್ನು ನೋಡಿದ ನನಗೆ ಅನ್ನಿಸುತ್ತಿತ್ತು. ಪರಸ್ಪರ ಸಿಹಿ ಹಂಚಿಕೊಂಡು, ಒಬ್ಬರನ್ನೊಬ್ಬರು ಅಪ್ಪಿಕೊಂಡು ದೀಪಾವಳಿಯ ಶುಭಾಶಯಗಳನ್ನು ಹೇಳುವ ದಿಲ್ ವಾಲೆ ದಿಲ್ಲಿಯ ಜನರನ್ನು ಮೆಚ್ಚಲೇಬೇಕು. ನಿಷ್ಕಲ್ಮಶವಾಗಿ ಒಬ್ಬರನ್ನೊಬ್ಬರು ಪ್ರೀತಿಯಿಂದ ಮಾತನಾಡಿಸಿ ಸಂತೋಷದಿಂದ ನಕ್ಕು-ನಲಿವ ಜನರಿದ್ದರೆ ಉಮಂಗ್ ಭರಿ ತ್ಯೋಹಾರುಗಳಿಗೆ ಮತ್ತಷ್ಟು ಸಂಭ್ರಮ.

    ಅವತ್ತು ಹೀಗೆಯೇ ದೀಪಾವಳಿ ಸಡಗರ. ಅಕ್ಕಪಕ್ಕದವರು ಸ್ನೇಹಿತರು ಗುರುತು ಪರಿಚಯವಿರುವವರು ಒಬ್ಬರಾದ ಮೇಲೆ ಒಬ್ಬರು ಮನೆಗೆ ಬರುತ್ತಲೇ ಇದ್ದಾರೆ . ನಾವು ನಮ್ಮ ಕಾಲೋನಿ ನಿವಾಸಿಗಳನ್ನು ಹಿಂದಿನ ದಿನವೇ ಭೇಟಿ ಮಾಡಿ ಹಬ್ಬದ ಶುಭಾಶಯಗಳನ್ನು ಹೇಳಿ ಬಿಟ್ಟಿದ್ದೆವು. ಹೀಗಾಗಿ ಇಂದು ಮನೆಗೆ ಬರುವ ಅತಿಥಿಗಳನ್ನು ಸ್ವಾಗತಿಸಿ ಶುಭಾಶಯ ಸ್ವೀಕರಿಸುವ ಸಂಭ್ರಮ ನಮಗೆ.

    ಈ ಮಧ್ಯೆ ನಾನೇ ಸ್ವತಃ ಫ್ರಾಕ್ ಗಳನ್ನು ಹೊಲೆದು ಎಂಬ್ರಾಯ್ಡರಿ ಮಾಡಿ ಮುದ್ದಾಗಿರುವ ನನ್ನ ಮಗಳಿಗೆ ಹಾಕಲೇಬೇಕು ಎಂಬ ಆಸೆಯೂ ನನಗೆ. ಈ ಫ್ರಾಕುಗಳನ್ನು ನೋಡಿದ ಎಲ್ಲರೂ ತುಂಬಾ ಚೆನ್ನಾಗಿದೆ ಎಲ್ಲಿ ತೆಗೆದುಕೊಂಡಿರಿ ಎಂದು ಕೇಳಬೇಕು. ಅದೇ ರೀತಿ ಫ್ರಾಕುಗಳನ್ನು ಹೊಲಿದು ಮಗಳಿಗೆ ಹಬ್ಬದ ದಿನ ಹಾಕಿ ಬೀಗಿದ್ದು ಆಯಿತು. ಮಗಳು ಕೇಳಿದವರಿಗೆ ನನ್ನ ಅಮ್ಮನೆ ಹೊಲಿದಿದ್ದು ಎಂದು ಹಿಂದಿಯಲ್ಲಿ ಹೇಳುತ್ತಿದ್ದರೆ ನನಗೆ ಹಬ್ಬದ ಸಡಗರ ನೂರ್ಮಡಿಸುತ್ತಿತ್ತು.

    ಆ ಸಮಯದಲ್ಲಿ ಎಲ್ಲ ಮಕ್ಕಳು ಆಟವಾಡುತ್ತ ಒಬ್ಬರು ಮತ್ತೊಬ್ಬರ ಮನೆಗೆ ಹೋಗುವುದು ಸಾಮಾನ್ಯವಾಗಿತ್ತು. ಈಗಿನ ಮಕ್ಕಳಿಗೆ ಬಿಡಿ. ಕೈಯಲ್ಲಿ ಮೊಬೈಲ್ ಇದ್ದರೆ ಯಾರೂ ಬೇಡ. ಆಗತಾನೆ ದಿಲ್ಲಿಯಲ್ಲಿ ಡಯೋನೋರಾ, ವೆಸ್ಟ ನ್, ವಿಡಿಯೋಕಾನ್ ಟೀವಿಗಳು ಅಡಿ ಇಡುತ್ತಿದ್ದ ಕಾಲ. ನಮ್ಮ ಕಾಲೋನಿಯ ಕೆಲವರ ಮನೆಗೂ ಟೀವಿ ಬಂದಿತ್ತು. ಮಕ್ಕಳು ಒಂದಾಗಿ ಟೀವಿ ನೋಡಲು ಒಬ್ಬೊಬ್ಬರ ಮನೆಗೆ ಹೋಗುವುದು ಸಾಮಾನ್ಯವಾಗಿತ್ತು. ಮಕ್ಕಳು ಮನೆಗೆ ಬಂದರೆ ಯಾರೂ ಬೇಸರ ಪಡುತ್ತಿರಲಿಲ್ಲ. ಸಂತಸವನ್ನೇ ಪಡುತ್ತಿದ್ದರು.

    ನಾವಿಬ್ಬರೂ ಬಂದವರೊಡನೆ ಮಾತುಕತೆಯಲ್ಲಿ ಬಿಝಿ ಇದ್ದಾಗ ನನ್ನ ನಾಲ್ಕು ವರ್ಷದ ಮಗಳು ಯಾವಾಗ ಕಣ್ಣುತಪ್ಪಿಸಿ ಹೊರಗೆ ಹೋದಳೋ ಗೊತ್ತಾಗಲಿಲ್ಲ. ಪಕ್ಕದ ಸರ್ದಾರ್ ಜೀ ಮನೆಯಲ್ಲಿ ಮಕ್ಕಳಿಗೆ ಮದುವೆಯಾದ ಮೇಲೆ ಮೊದಲ ದೀಪಾವಳಿ ಆಚರಿಸುತ್ತಿದ್ದರು.ಅವರ ಪಟಾಕಿ ಸಡಗರವೂ ಜೋರಾಗಿಯಿ ಇತ್ತು. ಪಕ್ಕದ ಪಾರ್ಕಿನಲ್ಲಿ ಬೇರೆ ಆನೆ ಪಟಾಕಿ ಹಚ್ಚುತ್ತಿದ್ದಾರೆ. ಶಬ್ದಜೋರಾಗಿದೆ. ಪಟಾಕಿ ಸದ್ದಿನ ಆರ್ಭಟದಲ್ಲಿ ಮನೆಯ ಮನೆಯಿಂದ ಹೊರಗೆ ಹೋಗುವುದು ಸಾಧ್ಯವೇ ಇಲ್ಲ. ಬಾಲ್ಕನಿಯಲ್ಲಿಯೇ ನಿಂತು ಒಬ್ಬರಿಗೊಬ್ಬರು ಶುಭಾಶಯಗಳನ್ನು ಹೇಳಬೇಕಾದ ಅಂತಹ ಸ್ಥಿತಿ.

    ಈ ಗದ್ದಲದಲ್ಲಿಯೇ ಮಗಳು ಕಾಣದಿದ್ದಾಗ ಬಾಲ್ಕನಿಯಲ್ಲಿಯೇ ನಿಂತು ಅಕ್ಕಪಕ್ಕದವರನ್ನು ಮಗಳು ನಿಮ್ಮ ಮನೆಗೆ ಬಂದಿದ್ದಾಳ ಎಂದು ಕೇಳಿದೆ. ಮಕ್ಕಳ ಜೊತೆ ಪಾರ್ಕಿನಲ್ಲಿ ಆಟವಾಡುತ್ತಿದ್ದಾಳೆೆ ಎಂದರು ಒಬ್ಬರು. ಪಾರ್ಕಿಗೆ ಹೋದರೆ ಅಲ್ಲಿ ಒಬ್ಬ ಮಕ್ಕಳು ಕಾಣುತ್ತಿಲ್ಲ. ಗಾಬರಿಯಾಯಿತು.

    ನಾವಿಬ್ಬರೂ ಅಕ್ಕಪಕ್ಕದವರ ಮನೆಗೆ ಹೋಗಿ ಮಗಳು ರಂಜು ಬಂದಿದ್ದಾಳ ಕೇಳಿದಾಗ ಯಾರೂ ತಮ್ಮ ಮನೆಗೆ ಬಂದಿಲ್ಲವೆಂದರು. ನನಗೆ ಕಣ್ಣೀರು . ಮಕ್ಕಳ ಮೇಲೆ ಗಮನವೇ ಇರುವುದಿಲ್ಲ ಎಂದು ಯಜಮಾನರು ಬೇರೆ ರೇಗಾಡುತ್ತಾ ನನ್ನ ತಪ್ಪಿತಸ್ಥ ಭಾವನೆಗೆ ತುಪ್ಪ ಸುರಿಯುತ್ತಿದ್ದರು. ಸಾಧ್ಯವಾದಷ್ಟು ಬೇಗ ಪೊಲೀಸರಿಗೆ ದೂರು ಕೊಡಲು ಅವರು ಯೋಚಿಸುತ್ತಿದ್ದಾರೆ ಎಂದು ನನಗೆ ಅರಿವಾಯಿತು.

    ಈ ಸಮಯದಲ್ಲಿ ನಮಗೆ ಇನ್ನು ಪರಿಚಯ ಇರದ, ಕಾಲೋನಿಗೆ ಹೊಸದಾಗಿ ಬಂದವರ ಮನೆ ಮುಂದೆ ನಾಲ್ಕಾರು ಮಕ್ಕಳು ನಗುನಗುತ್ತಾ ಒಬ್ಬರ ಕೈಯನ್ನು ಒಬ್ಬರು ಹಿಡಿದುಕೊಂಡು ಪಟಾಕಿ ಹೊಡೆದಿದ್ದು ಮುಗಿಯಲಿ ಮನೆಗೆ ಹೋಗೋಣ ಎಂದು ಮಾತನಾಡುತ್ತಿದ್ದು ನನ್ನ ಕಿವಿಗೆ ಬಿತ್ತು. ತಿರುಗಿ ನೋಡಿದರೆ ಆ ಮಕ್ಕಳ ಜೊತೆ ನನ್ನ ಮಗಳು ಇದ್ದಾಳೆ. ಹೋದ ಜೀವ ಮರಳಿ ಬಂದಂತೆ ಆಯ್ತು.

    ಎಲ್ಲಿಗೆ ಹೋಗಿದ್ದೇ ರಂಜು ಇಷ್ಟು ಹೊತ್ತು ಎಂದರೆ ಹೊಸ ಆಂಟಿ, ಅಂಕಲ್ ಮನೆಯಲ್ಲಿ ಟಾಮ್ ಆ್ಯಂಡ್ ಜೆರ್ರಿ ನೋಡುತ್ತಿದ್ದೆವು ಎನ್ನಬೇಕೆ. ಅವಳ ಮಾತು ಕೇಳಿ ನನಗೆ ನಗಬೇಕೋ ಅಳ ಬೇಕೋ ಗೊತ್ತಾಗಲಿಲ್ಲ.

    ಈಗ ಬೆಂಗಳೂರಿನ ಜಯನಗರದಲ್ಲಿ ನೆಲೆಸಿರುವ ನನಗೆ ಮೊಮ್ಮಗ ವಿಖ್ಯಾತನ ಪಟಾಕಿ ಸದ್ದು ಕೇಳುತಿದ್ದಂತೆ ಈ ಘಟನೆ ನೆನಪಾಯಿತು.

    ರಾಜ್ಯದಲ್ಲಿ ‘ಕೌಶಲ ಬೇಡಿಕೆ ನಿರ್ಧಾರಣಾ ಸಮೀಕ್ಷೆ’ ನಡೆಸಲು ನಿರ್ಧಾರ

    NEW DELHI NOV 3

    ಯೋಜಿತ ಕೌಶಲ ತರಬೇತಿಗೆ ಅನುಕೂಲವಾಗುವಂತೆ ಕರ್ನಾಟಕ ರಾಜ್ಯದಲ್ಲಿ ‘ಕೌಶಲ ಬೇಡಿಕೆ ನಿರ್ಧಾರಣಾ ಸಮೀಕ್ಷೆ’ ನಡೆಸಲು ಬುಧವಾರ ಇಲ್ಲಿ ನಿರ್ಧರಿಸಲಾಯಿತು. ಕೇಂದ್ರದ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತಾ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರೊಂದಿಗೆ ಕರ್ನಾಟಕದ ಕೌಶಲಾಭಿವೃದ್ಧಿ ಹಾಗೂ ಐಟಿ/ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ನಡೆಸಿದ ಸಭೆಯ ವೇಳೆ ಈ ನಿರ್ಧಾರ ಹೊರಹೊಮ್ಮಿತು.

    ಈ ರೀತಿಯ ಸಮೀಕ್ಷೆ ಮಾಡಿಸುವುದರಿಂದ ರಾಜ್ಯದ ಯಾವ್ಯಾವ ವಲಯದಲ್ಲಿ ಎಂತೆಂತಹ ಕೌಶಲಗಳಿಗೆ ಬೇಡಿಕೆ ಇದೆ ಎಂಬುದರ ಸ್ಪಷ್ಟ ಚಿತ್ರಣ ಸಿಗುತ್ತದೆ. ಇದನ್ನು ಆಧರಿಸಿ ಪ್ರಸ್ತುತ ಬೇಡಿಕೆಗಳಿಗೆ ಅನುಸಾರವಾಗಿ ಯುವಜನತೆಯನ್ನು ತರಬೇತುಗೊಳಿಸಲು ಅನುಕೂಲವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

    ಇದೇ ವೇಳೆ ರಾಜೀವ್ ಚಂದ್ರಶೇಖರ್ ಅವರು, ರಾಷ್ಟ್ರೀಯ ಮಟ್ಟದ ಐ.ಟಿ.ಸಚಿವರ ಸಮಾವೇಶವೊಂದನ್ನು ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಆಗ ಅಶ್ವತ್ಥ ನಾರಾಯಣ ಅವರು, ಇಂತಹ ಸಮಾವೇಶವನ್ನು ಕರ್ನಾಟಕದಲ್ಲೇ ನಡೆಸಲು ಕೋರಿದರು. ಇದರಿಂದ ಐಟಿ ಹಾಗೂ ಐಟಿಇಎಸ್ ಆಧಾರಿತ ಹೊಸ ತಾಂತ್ರಿಕತೆಗಳಲ್ಲಿ ರಾಜ್ಯದಲ್ಲಿ ಆಗಿರುವ ಬೆಳವಣಿಗೆಗಳನ್ನು ಪ್ರದರ್ಶಿಸಲು ಅವಕಾಶವಾಗುತ್ತದೆ ಎಂದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ರಾಜೀವ್ ಅವರು, ಈ ಸಂಬಂಧವಾಗಿ ಕೇಂದ್ರ ಇಲಾಖೆಗೆ ಪತ್ರವನ್ನು ಬರೆಯಲು ಸಲಹೆ ನೀಡಿದರು.

    ಸಚಿವ ಅಶ್ವತ್ಥ ನಾರಾಯಣ ಅವರು ‘ಮೇಕ್ ಇನ್ ಇಂಡಿಯಾ’ ರೀತಿಯಲ್ಲಿ ‘ಮೇಕ್ ಇನ್ ಕರ್ನಾಟಕ’ಕ್ಕೆ ಆದ್ಯತೆ ಕೊಡಬೇಕಾದ ಅಗತ್ಯವಿದೆ ಎಂದರು. ಜೊತೆಗೆ, ಕೈಮಗ್ಗದವರು ಸೇರಿದಂತೆ ರಾಜ್ಯದೆಲ್ಲೆಡೆ ಇರುವ ಕುಶಲಕರ್ಮಿಗಳ ಮ್ಯಾಪಿಂಗ್ ಸಿದ್ಧಪಡಿಸಬೇಕಾದ ಮಹತ್ವದ ಬಗ್ಗೆ ಪ್ರಸ್ತಾಪಿಸಿದರು. ರಾಜ್ಯದಲ್ಲಿ ಅರೆವಾಹಕ ಮತ್ತು ಎಲೆಕ್ಟ್ರಾನಿಕ್ಸ್ ವಲಯಗಳ ಬೆಳವಣಿಗೆಗೆ ಒತ್ತು ಕೊಡುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.

    ಇದಕ್ಕೆ ಮುನ್ನ ಸಚಿವ ನಾರಾಯಣ ಅವರು ಮಂಗಳವಾರ ಐವರು ಕೇಂದ್ರ ಸಚಿವರನ್ನು ಭೇಟಿಯಾಗಿ ತಮ್ಮ ಇಲಾಖೆಗಳ ಪ್ರಸ್ತಾವಗಳ ಬಗ್ಗೆ ಚರ್ಚಿಸಿ ಸಹಕಾರ ಕೋರಿದ್ದರು.

    ವ್ಯಾಯಾಮಕ್ಕೆ ಮುನ್ನ ಹೃದಯದ ಶಕ್ತಿ ಗಮನಿಸಿ

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹಠಾತ್ ನಿರ್ಗಮನ ಎಲ್ಲರಲ್ಲೂ ದಿಗ್ಭ್ರಾಂತಿ ಮೂಡಿಸಿದೆ. ಇಡೀ ನಾಡನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಈ ಬಾರಿಯ ದೀಪಾವಳಿ ಮಂಕಾಗಿದೆ. ಈ ಶಾಕ್ ನಿಂದ ಹೊರಬರುವುದು ಸಾಧ್ಯವಾಗುತ್ತಿಲ್ಲ.

    ದೇಹದಾರ್ಢ್ಯತೆ ಎನ್ನುವುದು ಅಪಾಯಕಾರಿಯೇ ಎಂಬ ಪ್ರಶ್ನೆಗಳನ್ನು ಈ ನಿರ್ಗಮನ ಹುಟ್ಟು ಹಾಕಿದೆ. ರಾಜ್ಯ ಸರ್ಕಾರವು ಜಿಮ್ ಗಳಿಗೆ ಮಾರ್ಗಸೂಚಿ ಹೊರಡಿಸುವಷ್ಟು ಆತಂಕ ಎಲ್ಲರಲ್ಲೂ ಹುಟ್ಟಿಸಿದೆ.ತಜ್ಞರೊಂದಿಗೆ ಚರ್ಚಿಸಿ ಮಾರ್ಗಸೂಚಿ ಹೊರಡಿಸುವುದಾಗಿ ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ.

    ಸದೃಢರಾಗಿದ್ದೂ ಕ್ರೀಡಾಪಟುಗಳು ಹಾಗೂ ಫುಟ್ ಬಾಲ್ ಆಟಗಾರರು ಮರಣಿಸಿದ ಕುರಿತು ಹೃದಯ ತಜ್ಞ ಡಾ.ಸಿ.ಎನ್.ಮಂಜುನಾಥ್ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ ಕೆಲವು ಅಂಶಗಳನ್ನುಇಲ್ಲಿ ಗಮನಿಸಬಹುದು.

    * ಕ್ರೀಡಾಪಟುಗಳು ಮತ್ತು ಅತಿಯಾದ ವ್ಯಾಯಾಮ ಮಾಡುವವರು ಅವರ ಹೃದಯಕ್ಕೆ ಅಪಾರ ದಣಿವನ್ನುಂಟು ಮಾಡುತ್ತಾರೆ.

    * ವ್ಯಾಯಾಮ ಹೆಚ್ಚು ಶ್ರಮದಾಯಕವಾದಂತೆ ಹೃದಯ ಅತಿಯಾಗಿ ಕೆಲಸ ಮಾಡಬೇಕಾಗುತ್ತದೆ ಏಕೆಂದರೆ ಅದು ರಕ್ತವನ್ನು ಪಂಪ್ ಮಾಡುತ್ತಿರುತ್ತದೆ. ಕೆಲವೊಮ್ಮೆ ಅದು ವಿಸ್ತರಣೆಯಾಗುತ್ತದೆ. ಅತಿಯಾದ ಕೆಲಸದ ಒತ್ತಡದಿಂದ ಅದು ಕೆಲಸ ಮಾಡುವುದನ್ನು ನಿಲ್ಲಿಸಬಹುದು.
    ಆದ್ದರಿಂದ ಹೃದಯದ ಮೇಲೆ ಬೀಳುವ ಒತ್ತಡ ಸಾಮಾನ್ಯಕ್ಕಿಂತ ಹೆಚ್ಚಾಗಬಾರದು.

    *ವರ್ಕೌಟ್ ನಿಂದ ವಿಸ್ತಾರಗೊಂಡ ಹೃದಯವು ಸಹಜ ಸ್ಥಿತಿಗೆ ಮರಳಲು ಒಂದು ವರ್ಷ ತೆಗೆದುಕೊಳ್ಳಬಹುದು. ಅತಿಯಾದ ವ್ಯಾಯಾಮಗಳನ್ನು ಕೈಗೊಳ್ಳುವ ಮುನ್ನ ಈ ವಿಷಯಗಳ ಕುರಿತು ಅರಿವನ್ನು ಹೊಂದಿರಬೇಕು.

    ಅನುವಂಶಿಕತೆಯ ಪಾತ್ರ

    ಅನುವಂಶಿಕತೆ ಹೃದಯ ಸಂಬಂಧಿ ರೋಗಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ ಭಾರತೀಯರಲ್ಲಿ ಹೃದಯ ರೋಗಗಳ ಸಂಭವನೀಯತೆ ಹೆಚ್ಚಾಗಿದೆ. ಭಾರತೀಯರಲ್ಲಿ ಕಿರಿಯ ವಯಸ್ಸಿಗೆ ಹೃದಯಾಘಾತದ ಸಂಭವನೀಯತೆ ಹೆಚ್ಚು. ವೈದ್ಯರ ಪ್ರಕಾರ ಶೇ.45ರಷ್ಟು ಮಂದಿ ಸೈಲೆಂಟ್ ಇಷೆಮಿಯಾದಿಂದ ಬಳಲುತ್ತಿರಬಹುದು. ಅದು ತೀವ್ರ ಹೃದಯಾಘಾತವಾಗುವವರೆಗೂ ಗೊತ್ತಾಗುವುದೇ ಇಲ್ಲ.

    ತೀವ್ರವಾದ ವ್ಯಾಯಾಮವು ಹೃದಯದ ಅಪಧಮನಿಗಳಿಗೆ ಒತ್ತಡ ಉಂಟು ಮಾಡುತ್ತದೆ. ಅದು ರಕ್ತನಾಳಗಳನ್ನು ಛಿದ್ರಗೊಳಿಸಿ ರಕ್ತ ಪ್ರಸಾರಕ್ಕೆ ಅಡಚಣೆ ತಂದೊಡ್ಡಬಹುದು. ಇದರಿಂದ ಹೃದಯಾಘಾತ ಸಂಭವಿಸಿರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

    ಹಠಾತ್ ಸಾವಿನ ಸಂದರ್ಭದಲ್ಲಿ ವೆಂಟ್ರಿಕ್ಯುಲರ್ ಫೈಬ್ರಿಲಿಯೇಷನ್ (ಅಸಹಜ ಹೃದಯಬಡಿತದ ಒಂದು ಬಗೆ)ಎಂಬ ಸಮಸ್ಯೆ ಉಂಟಾಗಿರುತ್ತದೆ. ಈ ಸಂದರ್ಭದಲ್ಲಿ ಯಾವುದೇ ರೋಗಿಗೆ ಡಿಫಿಬ್ರಿಲಿಯೇಷನ್ ಮೆಷಿನ್ ಬಳಸಿ ನಾಲ್ಕು ನಿಮಿಷಗಳ ಒಳಗೆ ಶಾಕ್ ನೀಡಿದ್ದಲ್ಲಿ ಅವರನ್ನು ಉಳಿಸುವ ಸಾಧ್ಯತೆ ಇರುತ್ತದೆ. ಸೈಲೆಂಟ್ ಇಷೆಮಿಯಾದಿಂದ ಬಳಲುತ್ತಿರುವವರಿಗೆ ಯಾವುದೇ ಮುನ್ಸೂಚನೆಯೂ ಇರುವುದೇ ಇಲ್ಲ ಎಂದು ವೈದ್ಯರು ಅಭಿಪ್ರಾಯ ಪಡುತ್ತಾರೆ.

    ಕುಟುಂಬ ವೈದ್ಯರಿಂದ ಮಾರ್ಗದರ್ಶನ ಪಡೆದು ಐದೇ ನಿಮಿಷದಲ್ಲಿ ಆಸ್ಪತ್ರೆ ಸೇರಲು ಸಾಧ್ಯವಾಗಿದ್ದರೂ ಪುನೀತ್ ಅವರನ್ನು ಈ ಯಾವ ತಂತ್ರಜ್ಞಾನವೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನುವುದು ಅವರನ್ನು ಅಭಿಮಾನಿಸುವ ಪ್ರತಿಯೊಬ್ಬರಲ್ಲೂ ತೀವ್ರವಾದ ಕೊರಗಾಗಿ ಉಳಿದಿದೆ.

    ಹೀಗಾಗಿ ಪ್ರತಿವರುಷಕ್ಕೊಮ್ಮೆ ಎಲ್ಲರೂ ಹೃದಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ ಎಂದು ಮತ್ತೊಬ್ಬ ತಜ್ಞ ವೈದ್ಯ ಡಾ.ದೇವಿ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.

    DEEPAVALI :ಸಾಲು ಹಣತೆಗಳ ಹಬ್ಬ-ದೀಪಾವಳಿ

    ಎಂ.ವಿ.ಶಂಕರಾನಂದ

    ದೀಪಾವಳಿ- ಶಬ್ದವು ದೀಪ ಮತ್ತು ಅವಳಿ ಹೀಗೆ ರೂಪಿತಗೊಂಡಿದೆ. ಇದರ ಅರ್ಥ ದೀಪಗಳ ಸಾಲು ಎಂದಾಗುತ್ತದೆ. ಮನೆಯ ತುಂಬಾ ದೀಪಗಳನ್ನು ಹಚ್ಚಿ, ಅದರ ನಗುವಿನ ಬೆಳಕಲ್ಲಿ ನಾವು ನಗುತ್ತಾ ಸಂಭ್ರಮಿಸುವುದೇ ದೀಪಾವಳಿ ಹಬ್ಬ.

    ದೀಪಯತಿ ಸ್ವಯಂ ಪರ ಚ ಇತಿ ದೀಪಃ’’ ಅಂದರೆ ತಾನು ಬೆಳಗಿ ಬೇರೆಯವರನ್ನು ಬೆಳಗಿಸುವ ಶಕ್ತಿ ದೀಪಕ್ಕಿದೆ.ತಮಸೋಮಾ ಜ್ಯೋತಿರ್ಗಮಯ’’ ಎಂಬ ಮಾತಿನಂತೆ ಅಜ್ಞಾನದ ಕತ್ತಲೆಯಿಂದ ಜ್ಞಾನದ ದಿಕ್ಕಿಗೆ ನಮ್ಮನ್ನು ಕೊಂಡೊಯ್ಯುವುದೇ ದೀಪ. ಅಂತರಂಗದಲ್ಲಿರುವ ಕತ್ತಲೆಯನ್ನೋಡಿಸಿ, ಬೆಳಕಿನ ಹಣತೆಯ ಹಚ್ಚಿ ದೀಪ ಬೆಳಗಿಸುವ ಮೂಲಕ ಮನೆ ಮನ ಬೆಳಗುವ ಎಲ್ಲೆಲ್ಲೂ ಜ್ಞಾನ, ನಿರ್ಮಲ ಆನಂದ, ಶುದ್ಧ ಮನಸ್ಸಿನ ಪ್ರೀತಿಯ ಬೆಳಗಿಸುವ ಸಂಕೇತವಾಗಿ ಆಚರಿಸಲ್ಪಡುವ ದಿವ್ಯ ಜ್ಯೋತಿಯ ಹಬ್ಬ ದೀಪಾವಳಿ.

    ಈ ದೀಪಗಳನ್ನು ಬೆಳಗಿಸುವುದರಿಂದ ಮಾನವನ ಪಾಪಗಳು ದೂರವಾಗಿ ಆತನಿಗೆ ವಿಶೇಷವಾದ ಪುಣ್ಯ ಸಿಗುತ್ತದೆ ಎಂಬುದಾಗಿ ಶಾಸ್ತ್ರಗಳು ಹೇಳುತ್ತವೆ. ಯಾವ ಮನೆಯಲ್ಲಿ ಪ್ರತಿನಿತ್ಯವೂ ಸೂರ್ಯಾಸ್ತದಿಂದ ಸೂರ್ಯೋದಯದವರೆಗೂ ದೀಪ ಬೆಳಗುತ್ತದೆಯೋ ಆ ಮನೆಯಲ್ಲಿ ಸುಖಸಂಪತ್ತು ಸಮೃದ್ಧವಾಗಿರುತ್ತದೆ. ಮತ್ತೆ ಅಂತಹ ಮನೆಗಳಲ್ಲಿ ದಾರಿದ್ರ್ಯ ಸುಳಿಯುವುದಿಲ್ಲ. ಹಾಗಾಗಿ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ದೀಪಕ್ಕೆ ವಿಶೇಷ ಮಹತ್ವವಿದೆ.

    ದೀಪೇನ ಲೋಕಾನ್ ಯಜತಿ ದೀಪಸ್ತೇಜೋಮಯಃ ಸ್ಮೃತಃI
    ಚರುರ್ವರ್ಗಪ್ರದೋ ದೀಪಸ್ತಸ್ಮಾದ್ ದೀಪೈರ್ಯಜೇತ್ ಪ್ರಿಯೇII

    ತೇಜೋಮಯವಾದ ದೀಪವು ಧರ್ಮ, ಅರ್ಥ, ಕಾಮ, ಮೋಕ್ಷ ರೂಪವಾದ ನಾಲ್ಕು ವರ್ಗಪ್ರದವಾಗಿದೆ. ಅಂತಹ ದೀಪವನ್ನು ಬೆಳಗಿಸು ಎಂದು ಈ ಶ್ಲೋಕವು ತಿಳಿಸುತ್ತದೆ.

    ದೀಪಾವಳಿ ಆರಂಭ ಎಂದಿನಿಂದ ?

    ಹದಿನಾಲ್ಕು ವರ್ಷಗಳ ವನವಾಸವನ್ನು ಮುಗಿಸಿ ಶ್ರೀರಾಮಚಂದ್ರನು ಅಯೋಧ್ಯೆಗೆ ಹಿಂತಿರುಗಿದಾಗ ಪ್ರಜೆಗಳು ಬಂಗಾರದ ಕಲಶವನ್ನು ಮಣಿರತ್ನಗಳಿಂದ ಅಲಂಕರಿಸಿ, ಮನೆಯೆದುರು ಹೊಸ್ತಿಲಿನ ಮೇಲಿಟ್ಟರು, ದೀಪೋತ್ಸವವನ್ನು ಆಚರಿಸಿದರು. ಅಂದಿನಿಂದ ದೀಪಾವಳಿ ಹಬ್ಬದ ಆಚರಣೆ ಪ್ರಾರಂಭವಾಯಿತು ಎನ್ನುತ್ತಾರೆ.

    ದೀಪಾವಳಿಯನ್ನು ಭಾರತದಲ್ಲಷ್ಟೇ ಅಲ್ಲದೆ, ಶ್ರೀಲಂಕಾ, ಮಲೇಷ್ಯಾ, ಸಿಂಗಾಪುರ, ಆಸ್ಟ್ರೇಲಿಯಾ, ಥಾಯ್ಲೆಂಡ್‌ಗಳಲ್ಲಿ ಸಹ ಆಚರಿಸುತ್ತಾರೆ. ಇದು ಜೈನರ 24ನೇ ತೀರ್ಥಂಕರರಾದ ಮಹಾವೀರರು ನಿರ್ವಾಣ ಹೊಂದಿದ ದಿನವಾದ್ದರಿಂದ ಜೈನರು ಇದರ ಅಮಾವಾಸ್ಯೆಯನ್ನು ಹೊಸವರ್ಷದ ಆರಂಭವಾಗಿ ಆಚರಿಸುತ್ತಾರೆ. ಈ ದಿನದಂದೇ ಅಶೋಕ ಚಕ್ರವರ್ತಿ ಬೌದ್ದ ಧರ್ಮಕ್ಕೆ ಪರಿವರ್ತನೆಯಾದನು ಎಂಬ ಪ್ರತೀತಿ ಬೌದ್ಧರಲ್ಲಿದೆ. ಹೀಗಾಗಿ ಅವರು ದೀಪಾವಳಿಯನ್ನು ಅಶೋಕ ವಿಜಯದಶಮಿಯಾಗಿ ಆಚರಿಸುತ್ತಾರೆ. ಸಿಖ್ಖರ ೬ನೇ ಗುರು ಹರಗೋವಿಂದ ಸಿಂಗ್ ೧೬೧೯ರಂದು ಗ್ವಾಲೀಯಾರ್ ಕೋಟೆಯ ಸೆರೆಮನೆಯಿಂದ ಈ ದಿನವೇ ಬಿಡುಗಡೆ ಹೊಂದಿದ್ದರು. ಆದ್ದರಿಂದ ಗುರು ತಮ್ಮ ಬಾಳಿಗೆ ಬೆಳಕು ತಂದುದಕ್ಕಾಗಿ ಸಿಖ್ಖರು ದೀಪಾವಳಿಯನ್ನು ಬಂದಿಚಾರ್ ದಿನವಾಗಿ ಆಚರಿಸುತ್ತಾರೆ.

    ದೀಪಾವಳಿಯನ್ನು ಆಶ್ವಯುಜದ ಕೊನೆಯಲ್ಲಿನ ಕೃಷ್ಣ ತ್ರಯೋದಶಿ(ಧನ ತ್ರಯೋದಶಿ), ಕೃಷ್ಣ ಚತುರ್ದಶಿ(ನರಕ ಚತುರ್ದಶಿ), ಅಮಾವಾಸ್ಯೆ(ಲಕ್ಷ್ಮೀಪೂಜೆ) ಮತ್ತು ಕಾರ್ತೀಕ ಮಾಸದ ಆರಂಭದ ಶುಕ್ಲ ಪಾಡ್ಯ(ಬಲಿ ಪಾಡ್ಯಮಿ), ಯಮ ದ್ವಿತೀಯಗಳಂದು ಅದ್ಧೂರಿಯಾಗಿ ಐದು ದಿನಗಳ ಹಬ್ಬವನ್ನಾಗಿ, ಸಾಂಪ್ರದಾಯಕವಾಗಿ ಆಚರಿಸುತ್ತೇವೆ.

    ಹಬ್ಬದ ಆಚರಣೆ

    ಆಶ್ವಯುಜ ಬಹುಳ ತ್ರಯೋದಶಿಯಂದು ದೀಪಾವಳಿ ಹಬ್ಬವು ಆರಂಭವಾಗುತ್ತದೆ. ಆ ದಿನ ರಾತ್ರಿ ಎಳ್ಳೆಣ್ಣೆ ದೀಪ ಹಚ್ಚಿ, ಮನೆ ಮುಂದಿರುವ ಬಹು ಎತ್ತರವಾದ ಜಾಗದಲ್ಲಿ ದೀಪ ಇಡುವುದರಿಂದ ಅಪಮೃತ್ಯು’ ನಿವಾರಣೆಯಾಗುತ್ತದೆ. ಈ ದೀಪವನ್ನು ಯಮದೇವರ ಪ್ರೀತಿಗಾಗಿ, ಮೃತ್ಯು ನಿವಾರಣೆಗಾಗಿ ಇಡುತ್ತೇವೆ. ಹಾಗಾಗಿ ಈ ದೀಪವನ್ನುಯಮದೀಪ’ ಎನ್ನುತ್ತೇವೆ. ಅದೇ ದಿನದ ಸಂಜೆ ಹಂಡೆಯಲ್ಲಿ ನೀರು ತುಂಬಿಸುವ ಹಬ್ಬ ಎನ್ನುತ್ತೇವೆ. ಹಂಡೆಯನ್ನು ವಿವಿಧ ಹೂಗಳಿಂದ ಅಲಂಕಾರ ಮಾಡಿ, ಸುಣ್ಣ ಮತ್ತು ಕೆಮ್ಮಣ್ಣಿನಿಂದ ರಂಗೋಲಿ ಬಿಡಿಸುತ್ತಾರೆ. ಹಂಡೆಗೆ ನೀರು ತುಂಬಿಸಿ ಎಲೆ ಅಡಿಕೆ, ಹೂವು, ನಾಣ್ಯ ಹಾಕಿ ಪೂಜಿಸುತ್ತಾರೆ. ಈ ದಿನವನ್ನು ಧನತ್ರಯೋದಶಿ ಎಂದೂ ಕರೆಯುತ್ತಾರೆ. ಈ ದಿನ ಹೊಸ ಬಂಗಾರವನ್ನು ಖರೀದಿ ಮಾಡುವುದರಿಂದ ಮನೆಯಲ್ಲಿ ವರ್ಷವಿಡೀ ಧನಲಕ್ಷ್ಮಿಯು ನೆಲೆಸಿರುತ್ತಾಳೆ ಎಂಬ ನಂಬಿಕೆ ಇದೆ.

    ಮಾರನೇ ದಿನವೇ ನರಕ ಚತುರ್ದರ್ಶಿ. ದೀಪಾವಳಿಯ ಪ್ರಮುಖ ದಿನ. ನರಕ ಎಂಬುವುದಕ್ಕೆ ಅಜ್ಞಾನ ಎಂದರ್ಥ. ಈ ಅಜ್ಞಾನವು ಚತುರ್ದಶಿಯ ದಿನವೇ ನಾಶವಾಗಿ ಜ್ಞಾನವು ದೊರೆಯಲಿ ಎಂದು ಈ ನರಕ ಚತುರ್ದಶಿಯನ್ನು ಆಚರಿಸಲಾಗುತ್ತದೆ. ಚತುರ್ದಶಿ ಎಂದರೆ ೧೪ ವಿದ್ಯೆ ಎಂದರ್ಥ. ಜ್ಞಾನವನ್ನು ಪಡೆಯಲು ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣ ವೇದ, ಕಲ್ಪ, ಸಂಹಿತೆ, ಜ್ಯೋತಿಷ್ಯ, ಪುರಾಣ, ಸ್ಮೃತಿ, ವ್ಯಾಕರಣ, ಶೀಕ್ಷಾ, ನ್ಯಾಯ, ಛಂದಸ್ಸು, ಮೀಮಾಂಸೆ ಎಂಬ ೧೪ ವಿದ್ಯೆಗಳನ್ನು ಕಲಿಯಬೇಕೆಂದು ಶಾಸ್ತ್ರವು ತಿಳಿಸುತ್ತದೆ. ಅಂದು ವಿಶೇಷವಾಗಿ ಅಭ್ಯಂಜನ ಮಾಡುವುದನ್ನು ನಮ್ಮ ಧರ್ಮಶಾಸ್ತ್ರ ಹೇಳುತ್ತದೆ.

    ತೈಲೇ ಲಕ್ಷ್ಮೀರ್ಜಲೇ ಗಂಗಾ ದೀಪಾವಲ್ಯಾಂ ಚತುದರ್ಶಿ
    ಪ್ರಾತಃ ಸ್ನಾನಂ ತು ಯಃ ಕುರ್ಯಾದ್ಯಮಲೋಕಂ ನ ಪಶ್ಯತಿ


    ಎಣ್ಣೆಯಲ್ಲಿ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯೂ, ನೀರಿನಲ್ಲಿ ಗಂಗೆಯೂ ನೆಲೆಸಿರುತ್ತಾರೆ. ಎಣ್ಣೆ ಹಚ್ಚಿಸಿಕೊಂಡು ಹದವಾದ ಬಿಸಿನೀರಿನಲ್ಲಿ ಮಾಡುವ ಅಭ್ಯಂಗ ಸ್ನಾನದಿಂದ ಗಂಗಾ-ಲಕ್ಷ್ಮಿಯರ ಅನುಗ್ರಹವಾಗಿ ಆಯುರಾರೋಗ್ಯ ಭಾಗ್ಯವುಂಟಾಗಿ ನವಚೈತನ್ಯ ಮೂಡುತ್ತದೆ. ಹಾಗೆಯೇ ಅಜ್ಞಾನವೆಂಬ ಕತ್ತಲೆ ದೂರವಾಗಿ ಸುಜ್ಞಾನವೆಂಬ ಬೆಳಕು ಮಾನವನಿಗೆ ಲಭಿಸುತ್ತದೆ.

    ಪೌರಾಣಿಕ ಹಿನ್ನಲೆ

    ನರಕ ಚತುರ್ದಶಿಯ ಬಗ್ಗೆ ಒಂದು ಪೌರಾಣಿಕ ಹಿನ್ನಲೆಯಿದೆ. ಇಂದಿನ ಅಸ್ಸಾಂ ಹಿಂದೆ ಕಾಮರೂಪವೆಂಬ ಹೆಸರಿನ ರಾಜ್ಯವಾಗಿತ್ತು. ನರಕಾಸುರನೆಂಬ ರಾಕ್ಷಸರಾಜ ಅದನ್ನು ಆಳುತ್ತಿದ್ದ. ಅವನು ಭೂದೇವಿಯ ಮಗನಾಗಿದ್ದು, ಬಹಳ ದೊಡ್ಡ ತಪಸ್ಸು ಮಾಡಿ ಬ್ರಹ್ಮನಿಂದ ವರವನ್ನು ಪಡೆದಿದ್ದ. ಎಲ್ಲ ದೇವತೆಗಳು, ಯಕ್ಷರನ್ನು, ಭೂಲೋಕದ ರಾಜರನ್ನು ಸೋಲಿಸಿ ಅಜೇಯನಾಗಿ, ಹದಿನಾರು ಸಾವಿರ ಕನ್ಯೆಯರನ್ನು ಸೆರೆಮನೆಯಲ್ಲಿ ಬಂದಿಸಿದ್ದ. ದೇವತೆಗಳ ಮಾತೆಯಾದ ಅದಿತಿಯ ಕರ್ಣಕುಂಡಲಗಳನ್ನು ಕಿತ್ತು ತಂದಿದ್ದ ಕ್ರೂರಿಯಾಗಿದ್ದ. ಎಲ್ಲಾ ದೇವತೆಗಳು ಸೇರಿ ಶ್ರೀಕೃಷ್ಣನನ್ನು ಪ್ರಾರ್ಥಿಸಿದಾಗ, ಶ್ರೀಕೃಷ್ಣನು ಭೂದೇವಿ ಸ್ವರೂಪಿಯಾದ ಸತ್ಯಭಾಮೆಯೊಂದಿಗೆ ಆಶ್ವಯುಜ ಕೃಷ್ಣ ಚತುರ್ದಶಿಯ ಮಧ್ಯರಾತ್ರಿ ಸರಕಾಸುರನನ್ನು ಕೊಂದು ಹಾಕಿದ. ಆ ದಿನವನ್ನೇ ನರಕ ಚತುರ್ದಶಿಯೆಂದು ಲೋಕಾದ್ಯಂತ ಹಬ್ಬವಾಗಿ ಆಚರಿಸಲಾಗುತ್ತದೆ. ಅಷ್ಟೇ ಅಲ್ಲದೆ ಅಂದು ನರಕಾಸುರನ ಸಂಹಾರ ಮಾಡಿ ಬಂದ ಕೃಷ್ಣನಿಗೆ ಸುಮಂಗಲೆಯರು ಆರತಿ ಬೆಳಗುತ್ತಾರೆ. ಆ ಪದ್ಧತಿಯಂತೆ ಇಂದಿಗೂ ಮನೆಯಲ್ಲಿನ ಮಕ್ಕಳಿಗೆ ಆರತಿ ಮಾಡುವುದು ಸಂಪ್ರದಾಯದಂತೆ ಬೆಳೆದು ಬಂದಿದೆ.


    ಮೂರನೆಯ ದಿನ ಸಾಯಂಕಾಲ ಅಮಾವಾಸ್ಯೆಯ ರಾತ್ರಿ ಮನೆಯಲ್ಲಿನ ಅಲಕ್ಷ್ಮಿಯನ್ನು ಹೊರಹಾಕುವ ಉದ್ದೇಶದಿಂದ ಲಕ್ಷ್ಮಿಪೂಜೆಯನ್ನು ಮಾಡಿ ಮನೆಯ ತುಂಬಾ ದೀಪವನ್ನು ಬೆಳಗಬೇಕೆಂದು ಕೂಡ ಶಾಸ್ತ್ರ ತಿಳಿಸುತ್ತದೆ. ಈ ದಿನ ಲಕ್ಷ್ಮಿ ಪೂಜೆಗೆ ತುಂಬಾ ಪ್ರಶಸ್ತವಾದ ದಿನ. ಹಿರಣ್ಮಯಿ, ತೇಜಸ್ವಿ, ಜೀವನಪೋಷಕ ಹಾಗೂ ಚೈತನ್ಯಮಯಿಯಾದ ಲಕ್ಷ್ಮಿಯನ್ನು ವಾದ್ಯಘೋಷಗಳ ಸಹಿತ ಪ್ರವೇಶದ್ವಾರದಿಂದ ಮನೆಯೊಳಗೆ ಕರೆತಂದು ಅವಳ ವಾಸ್ತವ್ಯಕ್ಕೆ ಸ್ಥಾನ ನೀಡಿ ಪೂಜೆ ಮಾಡುವುದೇ-ಲಕ್ಷ್ಮೀಪೂಜೆ. ಈ ಅಮಾವಾಸ್ಯೆಯು ಕಲ್ಯಾಣಸ್ವರೂಪಿಯಾಗಿರುತ್ತದೆ. ಈ ಸಮಯದಲ್ಲಿ ರೈತರು ಬೆಳೆದ ದವಸ ಧಾನ್ಯಗಳು ಮನೆಗೆ ಬಂದಿರುತ್ತವೆ. ಮನೆಯಲ್ಲಿ ಆನಂದವಿರುತ್ತದೆ. ತಾವು ಪಟ್ಟ ಪರಿಶ್ರಮದ ಫಲವು ಭಗವಂತನ ಕೃಪೆಯಿಂದ ಅವರಿಗೆ ದೊರಕಿರುತ್ತದೆ. ಕೃಷಿಯಿಂದ ಉತ್ಪನ್ನವಾದ ಬೆಳೆಯೇ ನಿಜವಾದ ಲಕ್ಷ್ಮಿಯಾಗಿರುತ್ತದೆ. ಇಂದು ಮಹಾವಿಷ್ಣು ಮಹಾಲಕ್ಷ್ಮಿಯರ ವಾಷಿಕ ಪುನರ್ಮಿಲನ ದಿನ ಎನ್ನುತ್ತಾರೆ. ಅಮಾವಾಸ್ಯೆ ಕಗ್ಗತ್ತಲಾಗಿರುತ್ತದೆ. ದೀಪ ಬೆಳಗಿಸಿ ಕತ್ತಲನ್ನು ಓಡಿಸುವುದು ಜ್ಯೋತಿ ಸ್ವರೂಪಿಣಿಯಾದ ಮಹಾಲಕ್ಷ್ಮಿ. ಹಾಗಾಗಿ ಈ ದಿನ ಸಂಜೆ ಪ್ರಾಜ್ಞರಿಗೆ ದೀಪ ದಾನ ಮಾಡಿದರೆ ಸರ್ವ ಇಷ್ಟಾರ್ಥ ನೆರವೇರಿ, ಸಕಲ ಸಂಪತ್ತು ವೃದ್ಧಿಸುತ್ತದೆ. ಹಾಗೆಯೇ ಇದು ಶ್ರೀಕೃಷ್ಣನು ದೇಹತ್ಯಾಗ ಮಾಡಿದ ದಿನವೆಂದೂ, ನಚಿಕೇತನಿಗೆ ಆತ್ಮ ಸಾಕ್ಷಾತ್ಕಾರವಾದ ದಿನವೆಂದೂ ಹೇಳುತ್ತಾರೆ.

    ನಾಲ್ಕನೇಯ ದಿನವನ್ನು ಬಲಿಪಾಡ್ಯಮಿ ಎಂದು ಕರೆಯುತ್ತಾರೆ. ಮಹಾವಿಷ್ಣುವು ವಾಮನಾವತಾರದಿಂದ ಬಲಿಚಕ್ರವರ್ತಿಯ ಅಹಂಕಾರವನ್ನು ತೊಲಗಿಸಿ, ಆತನನ್ನು ಪಾತಾಳಕ್ಕೆ ನೂಕಿದ ದಿನ. ಪ್ರತಿವರ್ಷ ಕಾರ್ತೀಕ ಮಾಸದ ಮೊದಲ ದಿನವಾದ ಇಂದು ಸಂಜೆ ಬಲಿ ಚಕ್ರವರ್ತಿಯು ತನ್ನ ಸಾಮ್ರಾಜ್ಯವನ್ನು ನೋಡಲೆಂದು ಭೂಮಿಗೆ ಬಂದು ಮೂರೂಮುಕ್ಕಾಲು ಘಳಿಗೆ ಇರುತ್ತಾನೆಂದೂ ನಂಬಿಕೆಯಿದೆ. ಹೀಗಾಗಿಯೇ ಅಂದು ಸಂಜೆ ಬಲೀಂದ್ರನ ಪೂಜೆ ಮಾಡಲಾಗುತ್ತದೆ. ಹೊಲ ಗದ್ದೆ, ಮನೆಗಳಲ್ಲಿ ಬಲೀಂದ್ರನ ಸ್ವಾಗತಿಸಲೆಂದು ಸಾಲು ದೀಪಗಳನ್ನು ಹಚ್ಚಿಡುತ್ತಾರೆ. ಶ್ರೀಕೃಷ್ಣನು ಗೋವರ್ಧನಗಿರಿಯನ್ನು ಎತ್ತಿದ್ದು ಇದೇ ದಿನವಂತೆ. ಆದ್ದರಿಂದ ಈ ದಿನ ಗೋಪೂಜೆ ಹಾಗೂ ಗೋವರ್ಧನನ ಪೂಜೆಗೆ ಮಹತ್ವ. ಈ ದಿನ ಗೋವಿನ ಪೂಜೆ ಮಾಡಿ ಅದಕ್ಕೆ ಅಕ್ಕಿ, ಬೆಲ್ಲ ನೀಡಿ ಪ್ರಾರ್ಥಿಸುವುದರಿಂದ ಮಾನವನಿಗೆ ಇಹದಲ್ಲಿ ಸೌಖ್ಯ, ಪರದಲ್ಲಿ ಮುಕ್ತಿವುಂಟಾಗುತ್ತದೆ ಎನ್ನುತ್ತಾರೆ.

    ಐದನೇಯ ದಿನವನ್ನು ಯಮ ದ್ವಿತೀಯ ಅಥವಾ ಭ್ರಾತೃ ದ್ವಿತೀಯ ಎಂದು ಆಚರಿಸುತ್ತಾರೆ. ಈ ದಿನ ಯಮ ತನ್ನ ತಂಗಿ ಯಮಿಯ ಮನೆಗೆ ಭೇಟಿ ಕೊಡುತ್ತಾನೆಂಬ ನಂಬಿಕೆ ಇದೆ. ತಂಗಿ ಅಣ್ಣನಿಗೆ ತಿಲಕವಿಟ್ಟು, ಸಿಹಿ ತಿನ್ನಿಸಿ, ಆರತಿ ಎತ್ತುತ್ತಾಳೆಂಬ ಪ್ರತೀತಿ. ಕಾರ್ತೀಕ ಪಾಡ್ಯದಿಂದ ಮನೆಬಾಗಿಲಲ್ಲಿ ಮತ್ತು ತುಳಸಿ ಕಟ್ಟೆಯ ಎದುರು ಒಂದು ತಿಂಗಳು ಪೂರ್ತಿ ದೀಪವನ್ನು ಹಚ್ಚಿಡುತ್ತಾರೆ. ಕೆಲವರು ಮನೆಯೆದುರು ಆಕಾಶಬುಟ್ಟಿಗಳನ್ನು ಕಟ್ಟುತ್ತಾರೆ. ಈ ರೀತಿ ದೀಪವನ್ನು ಹಚ್ಚಿಡುವ ದೀಪದ ಜ್ಯೋತಿಯು ಸತ್ತ ನಂತರ ಆತ್ಮ ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗುವಾಗ ಬೆಳಕು ತೋರುತ್ತದೆ ಎಂಬುದು ನಂಬಿಕೆ.

    ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.

    ಮನೆ ಬಾಗಿಲಿಗೇ ಬರಲಿದೆ ಆಧಾರ್‌, ಪಿಂಚಣಿ, ಖಾತಾ, ಆರೋಗ್ಯ ಕಾರ್ಡ್‌

    ಜನವರಿ 26ರಂದು ಗ್ರಾಮೀಣ ಭಾಗಕ್ಕೂ ವಿಸ್ತರಣೆ

    ಸದ್ಯಕ್ಕೆ 8 ಇಲಾಖೆಗಳ 58 ಸೇವೆಗಳು ಲಭ್ಯ

    ಕೇವಲ 115 ರೂ ಶುಲ್ಕ ನಿಗದಿ

    ಬೆಂಗಳೂರು:

    ಆಧಾರ್ ಕಾರ್ಡ್, ವಿಧವಾ ಪಿಂಚಣಿ, ವೃದ್ಧಾಪ್ಯ ವೇತನ ಸೇರಿದಂತೆ ಸರಕಾರದ ವಿವಿಧ ಇಲಾಖೆಗಳ 58 ಸೇವೆಗಳನ್ನು ಜನರ ಮನೆ ಬಾಗಿಲಿಗೇ ತಲುಪಿಸುವ ಜನ ಸೇವಕ’ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಮಲ್ಲೇಶ್ವರನಲ್ಲಿ ಚಾಲನೆ ನೀಡಿದರು.

    ಪ್ಯಾಲೇಸ್ ಗುಟ್ಟಹಳ್ಳಿಯ 4 ಮತ್ತು 5ನೇ ಅಡ್ಡರಸ್ತೆಗಳಲ್ಲಿರುವ ಆಯ್ದ 10 ಮನೆಗಳಿಗೆ ಸ್ಥಳೀಯ ಶಾಸಕರೂ ಆದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರ ಜತೆ ತೆರಳಿದ ಮುಖ್ಯಮಂತ್ರಿಯವರು ವಿವಿಧ ಸೇವೆಗಳನ್ನು ಸಂಬಂಧಪಟ್ಟವರ ಮನೆಯೊಳಗೇ ಹೋಗಿ ತಲುಪಿಸಿದರು. ಇದರಿಂದ ಸ್ಥಳೀಯ ಜನರು ಹರ್ಷಚಿತ್ತರಾದರು. ಮುಖ್ಯಮಂತ್ರಿ ಮತ್ತು ಸಚಿವರಿಗೆ ಪುಷ್ಪವೃಷ್ಟಿ ಮಾಡಿ ಸಂಭ್ರಮಿಸಿದರು. ಪ್ರತಿ ಮನೆಯ ಒಳಗೆ ಹೋಗಿ, ಅವರಿಗೆ ಆಧಾರ್‌ ಕಾರ್ಡ್‌, ಆರೋಗ್ಯ ಕಾರ್ಡ್‌, ಎಪಿಎಲ್‌ ಕಾರ್ಡ್‌ ನೀಡಿದರು. ನಿರ್ಮಾಣ ಹಂತದ ಕಟ್ಟಡದೊಳಗೆ ಹೋಗಿ ಅಲ್ಲಿದ್ದ ಕಾರ್ಮಿಕರಿಗೆ ಕಾರ್ಮಿಕರ ಕಾರ್ಡ್‌ ನೀಡಿದರು. ತಳ್ಳುವ ಗಾಡಿಯಲ್ಲಿ ಹೂವು ಮಾರಾಟ ಮಾಡುತ್ತಿದ್ದ ಮಹಿಳೆಗೆ ಆರೋಗ್ಯ ಕಾರ್ಡ್‌ ನೀಡಿದರು. ಮುಖ್ಯಮಂತ್ರಿಯೇ ಬಂದು ಈ ರೀತಿ ಸೇವೆ ಒದಗಿಸಿದ್ದು ನಿಜಕ್ಕೂ ಸಂತಸ ತಂದಿದೆ ಎಂದು ಎಲ್ಲರೂ ಧನ್ಯತೆ ಮೆರೆದರು.

    ಈ ಯೋಜನೆಯನ್ನು ಇಡೀ ಬೆಂಗಳೂರಿನಲ್ಲಿ ಜಾರಿ ಮಾಡುತ್ತಿದ್ದು, ಅದರ ಸಾಂಕೇತಿಕ ಉದ್ಘಾಟನೆ ಮಲ್ಲೇಶ್ವರದಲ್ಲಿ ಆಗಿದೆ. ಜನವರಿ 26ರಿಂದ ರಾಜ್ಯದ ಗ್ರಾಮೀಣ ಭಾಗಕ್ಕೂ ಈ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು. ಜನರ ಮನೆ ಬಾಗಿಲಿಗೆ ಸರ್ಕಾರಿ ಸೇವೆ ಒದಗಿಸುವುದರ ಜತೆಗೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ದೂರುಗಳನ್ನು ಆಲಿಸಲು ಕಾಲ್ ಸೆಂಟರ್ ಕೂಡ ಆರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಪಡಿತರ ಕೂಡ ನೇರವಾಗಿ ಮನೆ ಬಾಗಿಲಿಗೇ ತಲುಪಿಸುವ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ಹೇಳಿದರು. ಜನಪ್ರತಿನಿಧಿಗಳು, ತಮ್ಮನ್ನು ಆರಿಸಿದ ಜನರ ಬಳಿಗೆ ತಾವೇ ಹೋಗಬೇಕೆನ್ನುವುದು ಸರಕಾರದ ಆಶಯವಾಗಿದೆ. ಈ ಆಶಯಕ್ಕೆ ಅನುಗುಣವಾಗಿಜನಸೇವಕ’ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಅವರು ಹೇಳಿದರು.

    ನಡೆದೇ ಹೋದ ಸಿಎಂ, ಸಚಿವರು!

    ಮುಖ್ಯಮಂತ್ರಿಯವರು ಖುದ್ದು ಜನಸೇವಕರಂತೆ ಸ್ಕೂಟರಿನಲ್ಲಿ ಹೋಗಿಯೇ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸಬೇಕಿತ್ತು. ಆದರೆ, ಕಾರ್ಯಕ್ರಮಕ್ಕೆ ಭಾರೀ ಜನ ಸೇರಿದ್ದ ಕಾರಣ, ಅವರು ಸಚಿವ ಅಶ್ವತ್ಥನಾರಾಯಣ ಅವರೊಂದಿಗೆ ನಡೆದುಕೊಂಡು ಹೋಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕ್ಷಣದಲ್ಲಿ ಇಕ್ಕೆಲಗಳಲ್ಲೂ ಅಕ್ಕಪಕ್ಕದ ಮಹಡಿಯ ಮೇಲೆಲ್ಲ ನೆರೆದಿದ್ದ ಜನರು ಸಿಎಂ ಮತ್ತು ಸಚಿವರ ಮೇಲೆ ಪುಷ್ಪವೃಷ್ಟಿ ಮಾಡಿ, ಹರ್ಷಿಸಿದರು. ಒಟ್ಟಿನಲ್ಲಿ, ಕಾರ್ಯಕ್ರಮದ ಅಂಗವಾಗಿ ಮಲ್ಲೇಶ್ವರಂನಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು.

    8 ಇಲಾಖೆಗಳ 58 ಸೇವೆಗಳು ಲಭ್ಯ

    `ಜನಸೇವಕ’ ಯೋಜನೆಯಡಿ ಸದ್ಯಕ್ಕೆ ರಾಜ್ಯ ಸರಕಾರದ 8 ಇಲಾಖೆಗಳ 58 ಸೇವೆಗಳು ಮನೆ ಬಾಗಿಲಿಗೇ ಬರಲಿವೆ. ಈ ಇಲಾಖೆಗಳಲ್ಲಿ ಕಂದಾಯ, ಆರೋಗ್ಯ, ಪೊಲೀಸ್, ವಸತಿ, ಶಿಕ್ಷಣ, ಜಲಮಂಡಲಿ, ಇಂಧನ, ಸಾರಿಗೆ, ಆಹಾರ ಇಲಾಖೆ ಸೇರಿವೆ. ಇದರ ವ್ಯಾಪ್ತಿಗೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಇಲಾಖೆ ಹಾಗೂ ಸೇವೆಗಳನ್ನು ಸೇರಿಸಲಾಗುವುದು. ವಿವರಗಳಿಗೆ www.janasevakakarnataka.gov.in ನೋಡಬಹುದು. ಅಥವಾ ಫೋನ್ ನಂ. 080-44554455ನ್ನು ಸಂಪರ್ಕಿಸಬಹುದು. ಮಲ್ಲೇಶ್ವರಂ ಕ್ಷೇತ್ರದ ನಾಗರಿಕರು ಸಂಪರ್ಕಿಸಬಹುದಾದ ಸಂಖ್ಯೆ 080-23563943.

    ಯಾವ್ಯಾವ ಸೇವೆಗಳು ಸಿಗಲಿವೆ?

    `ಜನಸೇವಕ’ ಯೋಜನೆಯಡಿ ಸದ್ಯಕ್ಕೆ ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ವಿಧವಾ ವೇತನ, ವೃದ್ಧಾಪ್ಯ ವೇತನ, ಬಿಬಿಎಂಪಿ ಖಾತಾ ಸೇವೆಗಳು, ಹಿರಿಯ ನಾಗರಿಕರ ಕಾರ್ಡ್, ಆಧಾರ್ ಕಾರ್ಡ್, ಆಯುಷ್ಮಾನ್ ಭಾರತ- ಆರೋಗ್ಯ, ಕರ್ನಾಟಕ ಐಡಿ ಕಾರ್ಡ್ (ಹೆಲ್ತ್ ಕಾರ್ಡ್), ಮತದಾರರ ಗುರುತಿನ ಚೀಟಿಗಳು ಕೋರಿಕೆಯ ಮೇರೆಗೆ ಕ್ಷಿಪ್ರ ಗತಿಯಲ್ಲಿ ಮನೆ ಬಾಗಿಲಿಗೇ ತಲುಪಲಿವೆ. ಈ ಕೆಲಸವನ್ನು ನಿರ್ದಿಷ್ಟ ವಿನ್ಯಾಸದ ಟೀ-ಶರ್ಟ್ ಧಾರಿಗಳಾಗಿ ಸ್ಕೂಟರಿನಲ್ಲಿ ಬರುವ ಜನಸೇವಕರ ಪಡೆ ಮಾಡಲಿದೆ.

    ದಣಿವಿನ ಉಸಾಬರಿ ಇಲ್ಲ, ಸುಲಭ ಶುಲ್ಕ

    `ಜನಸೇವಕ’ ಯೋಜನೆಯಡಿ ಸಾರ್ವಜನಿಕರು ನಿಶ್ಚಿಂತೆಯಿಂದ ಇರಬಹುದು. ಅಂದರೆ, ಆಗಬೇಕಾದ ಕೆಲಸಗಳಿಗಾಗಿ ಹತ್ತಾರು ಸಲ ಸುತ್ತುವುದು, ಟ್ರಾಫಿಕ್ ಜಾಮ್ ನ ಕಿರಿಕಿರಿ, ವ್ಯರ್ಥ ಕಾಲಹರಣ ಏನೂ ಇಲ್ಲ. ಸರಕಾರವು ಇದರಡಿಯಲ್ಲಿ ಕೇವಲ 115 ರೂ.ಶುಲ್ಕ ನಿಗದಿಪಡಿಸಿದ್ದು, ಇದರ ಮೇಲೊಂದಿಷ್ಟು ಸೇವಾಶುಲ್ಕ ಸೇರಿಸಲಾಗಿದೆ ಅಷ್ಟೆ.

    ಮೊದಲ ದಿನದ ಫಲಾನುಭವಿಗಳು

    ಮೊದಲ ದಿನದಂದೇ ಮಲ್ಲೇಶ್ವರದ ಧನಲಕ್ಷ್ಮಿ (ಮನೆ ಪ್ರಮಾಣ ಪತ್ರ), ಶ್ರವ್ಯಾ (ಜಾತಿ ಮತ್ತು ಆದಾಯ ಪ್ರಮಾಣ ಪತ್ರ), ನಾಗೇಶ್ (ಖಾತಾ), ನಾಗರತ್ನ ಮತ್ತು ಮುಕ್ತಾ (ವಿಧವಾ ವೇತನ), ರಮೇಶ್ (ಲೇಬರ್ ಕಾರ್ಡ್), ನಜೀರ್ (ಹಿರಿಯ ನಾಗರಿಕರ ಕಾರ್ಡ್), ಶಿವಶಂಕರ್ (ಆಧಾರ್), ಶ್ರೀನಿವಾಸಮೂರ್ತಿ (ಎಪಿಎಲ್ ಕಾರ್ಡ್), ಜಯರಾಂ ಮತ್ತು ವೆಂಕಟಲಕ್ಷ್ಮಿ (ಎಆರ್ಕೆಎಚ್) ಸೇವೆಗಳನ್ನು ಪಡೆದುಕೊಂಡರು. ಇವರಲ್ಲಿ ಬೀದಿ ಬದಿಯಲ್ಲಿ ಹೂ ಮಾರುವವರು, ಗುಡಿಸಲಿನಲ್ಲಿ ವಾಸವಿರುವವರು, ಕಟ್ಟಡ ಕಾರ್ಮಿಕರು, ಒಂಟಿಯಾಗಿ ಬದುಕುತ್ತಿರುವ ಹಿರಿಯ ನಾಗರಿಕರು ಎಲ್ಲರೂ ಇದ್ದುದೊಂದು ವಿಶೇಷ.

    ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ ಸಿಂಗ್‌, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ, ಬಿಬಿಎಂಪಿ ಪಶ್ಚಿಮ ವಲಯದ ಆಯುಕ್ತ ಬಸವರಾಜು, ಇಡಿಸಿಎಸ್ ನಿರ್ದೇಶಕಿ ದೀಪ್ತಿ ಕಾನಡೆ, ಜನಸೇವಕ ಯೋಜನೆಯ ನಿರ್ದೇಶಕ ವರಪ್ರಸಾದ್ ರೆಡ್ಡಿ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

    ಎಲ್ಲಾದರು ಇರು ಎಂತಾದರು ಇರು ಕನ್ನಡಿಗನಾಗಿ ಹೆಮ್ಮೆಯಿಂದ ಇರು

    ಇಂದು ನವೆಂಬರ್ 1,    ವಿಶ್ವಾದ್ಯಂತ  ಕನ್ನಡಿಗರಿಗೆಲ್ಲರಿಗೂ   ಸಂಭ್ರಮದ ದಿನ.    ದಕ್ಷಿಣ ಭಾರತದ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ಅಖಂಡ  ರಾಜ್ಯವನ್ನಾಗಿ  ಘೋಷಣೆ ಮಾಡಿದ  ಸುದಿನ.  1956ರ ನವೆಂಬರ್ 1ರಂದು  ಮೈಸೂರು ರಾಜ್ಯವು(ಈಗಿನ ಕರ್ನಾಟಕ) ನಿರ್ಮಾಣವಾದುದರ ಸಂಕೇತವಾಗಿ ಅಂದಿನಿಂದ  ಕನ್ನಡ  ರಾಜ್ಯೋತ್ಸವವನ್ನು ನಾಡಹಬ್ಬವನ್ನಾಗಿ  ಆಚರಿಸಲಾಗುತ್ತದೆ.    ಸುಮಾರು 2000 ವರ್ಷಗಳಿಗಿಂತಲೂ ಮಿಗಿಲಾದ ಇತಿಹಾಸ ಇರುವ ಕನ್ನಡ ನಾಡು  ನುಡಿಯು   ಕಲೆ,  ಸಾಹಿತ್ಯ, ಸಂಸ್ಕೃತಿ, ಶಿಕ್ಷಣ,  ಕ್ರೀಡೆ,  ವಾಸ್ತುಶಿಲ್ಪ, ವಾಣಿಜ್ಯ,  ಆರ್ಥಿಕತೆ, ಶಿಲ್ಪಕಲೆ,  ಪ್ರವಾಸ,  ವಿಜ್ಞಾನ,  ತಂತ್ರಜ್ಞಾನ, ಅನೇಕ  ವಿಷಯಗಳಲ್ಲಿ  ರಾಷ್ಟ್ರ ಮಾತ್ರವಲ್ಲ  ವಿಶ್ವದಲ್ಲಿಯೇ  ಒಂದು ವಿಶೇಷ ಸ್ಥಾನಮಾನ ಹೊಂದಿದೆ.    ಕನ್ನಡ ನಾಡಿನ   ವಿಶೇಷತೆಗಳು, ಸಾಧನೆಗಳು  ಒಂದೆರಡಲ್ಲ, ನೂರಾರು.  ಅವುಗಳಲ್ಲಿ  ಕೆಲವೊಂದನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ.  ಅವುಗಳನ್ನು ಒಂದೊಂದಾಗಿ ತಿಳಿಯುತ್ತಾ ಹೋದಂತೆ     ಪ್ರತಿಯೊಬ್ಬ ಕನ್ನಡಿಗನಲ್ಲಿಯೂ   ಕನ್ನಡಿಗನಾಗಿ ಹುಟ್ಟಿರುವುದಕ್ಕೆ  ಅಭಿಮಾನ ತನ್ನಿಂತಾನೇ ಮೂಡಿಬರುತ್ತದೆ.  ಇದೇ  ಅಭಿಮಾನದಲ್ಲಿ  ಕನ್ನಡ ರಾಜ್ಯೋತ್ಸವದ ದಿನದಂದು ಮಾತ್ರವಲ್ಲ ಪ್ರತಿ ದಿನ, ಪ್ರತಿ ಕ್ಷಣವು ಕನ್ನಡಿಗರೆಲ್ಲರೂ ಹೆಮ್ಮೆಯಿಂದ ಸಂಭ್ರಮಿಸಬಹುದು.

    • ತಾರ್ಕಿಕವಾಗಿ ಮತ್ತು ವೈಜ್ಞಾನಿಕವಾಗಿ99.99 % ಪರಿಪೂರ್ಣವಾಗಿರುವ ಭಾಷೆ ಎಂದು ಗುರುತಿಸಲ್ಪಟ್ಟಿರುವ  ಭಾಷೆ  ಕನ್ನಡ.
    • ಪ್ರಾಚೀನವಾದ ಹಲ್ಮಿಡಿ ಶಾಸನದಲ್ಲಿ  ಕಾಣುವ  ಕನ್ನಡ   ಲಿಪಿಯು     ಕ್ರಿ.ಶ 450 ರ   ಸಮಯದಲ್ಲೇ   ಕನ್ನಡ ಆಡಳಿತ ಭಾಷೆಯಾಗಿತ್ತು ಎಂಬುವುದನ್ನು  ದೃಢಪಡಿಸುತ್ತದೆ.(ಚಿತ್ರ ನೋಡಿ)
    • ಎರಡನೇ ಶತಮಾನದಷ್ಟು ಹಿಂದೆಯೇ ಕನ್ನಡ ಭಾಷೆ ಗ್ರೀಸ್ ದೇಶದವರೆಗೂ ತನ್ನ ಕಂಪನ್ನು ಬೀರಿತ್ತು; ಚಾರಿಯಟ್ ಮೈಮ್ (Charition mime) ಎಂಬ ಎರಡನೇ ಶತಮಾನದ ಗ್ರೀಕ್ ನಾಟಕವೊಂದರಲ್ಲಿ  ಕನ್ನಡ ನುಡಿಗಟ್ಟುಗಳನ್ನು ಬಳಸಲಾಗಿತ್ತು. 
    • ಜಗತ್ತಿನಲ್ಲಿರುವ ಒಟ್ಟು  7,117 ಭಾಷೆಗಳಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಮಾತನಾಡುವ ಭಾಷೆಗಳ ಪಟ್ಟಿಯಲ್ಲಿ 30 ನೇ ಸ್ಥಾನದಲ್ಲಿರುವ ಭಾಷೆ ಕನ್ನಡ.
    • ಜರ್ಮನಿಯ ರೆವರೆಂಡ್ ಎಫ್. ಕಿಟ್ಟೆಲ್,    1894ರಲ್ಲಿ ಭಾರತೀಯ ಉಪಖಂಡದ ಇತಿಹಾಸ,  ಸಂಸ್ಕೃತಿ, ಭಾಷೆ, ಮತ್ತು ಸಾಹಿತ್ಯದ ಬಗ್ಗೆ ಅಧ್ಯಯನ ಮಾಡಲು  ಆಯ್ಕೆಮಾಡಿಕೊಂಡಿರುವುದು ಕನ್ನಡನಾಡು  ಮತ್ತು ಅವರು ನಿಘಂಟು ರಚಿಸಿರುವ  ಭಾರತೀಯ ಏಕೈಕ  ಭಾಷೆ ಕನ್ನಡ.
    • ಭಾರತ ಸರ್ಕಾರದಿಂದ  ಶಾಸ್ತ್ರೀಯ ಭಾಷೆಯ ಸ್ಥಾನವನ್ನು ಪಡೆದಿರುವ ೬ ಭಾಷೆಗಳಲ್ಲಿ ಕನ್ನಡವೂ ಒಂದು.
    • ಭಾರತದಲ್ಲಿ ಅತಿ ಹೆಚ್ಚು  ಜ್ಞಾನಪೀಠ  ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ   ಸಾಹಿತ್ಯ ದಿಗ್ಗಜರನ್ನು ಹೊಂದಿರುವ ರಾಜ್ಯ ಕರ್ನಾಟಕ (ಕುವೆಂಪು,  ಶ್ರೀ ರಾಮಾಯಣ ದರ್ಶನಂ-1967; ದ. ರಾ. ಬೇಂದ್ರ, ನಾಕುತಂತಿ – 1973; ಕೆ. ಶಿವರಾಮ ಕಾರಂತ, ಮೂಕಜ್ಜಿಯ ಕನಸುಗಳು – 1977; ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ – 1983; ವಿ. ಕೃ. ಗೋಕಾಕ, ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ – 1990; ಯು. ಆರ್. ಅನಂತಮೂರ್ತಿ ಕನ್ನಡ ಸಾಹಿತ್ಯಕ್ಕೆ ಸಮಗ್ರ – 1994;  ಗಿರೀಶ್ ಕಾರ್ನಾಡ್ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ, ನಾಟಕಗಳು – 1998;  ಚಂದ್ರಶೇಖರ ಕಂಬಾರ – ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ  -2010).
    • ವಿಕಿಪೀಡಿಯ ವಿಶ್ವಕೋಶ ಲಾಂಚನದಲ್ಲಿ ಸ್ಥಾನ ಪಡೆದಿರುವ ಜಗತ್ತಿನ  ಭಾಷೆಗಳಲ್ಲಿ ಕನ್ನಡವು ಒಂದು. 
    • ಜಗತ್ಪ್ರಸಿದ್ಧ  ವಚನ ಸಾಹಿತ್ಯ ಮತ್ತು   ದಾಸ ಸಾಹಿತ್ಯ ಪರಂಪರೆಯು ಬೆಳೆದುಬಂದಿರುವ ತಾಣ ಕನ್ನಡ ನಾಡು.
    • ತಾಜ್ ಮಹಲ್ ನಂತರ ಭಾರತದ  ಅತ್ಯಂತ ಅತೀ  ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ  ತಾಣ  ಕೃಷ್ಣರಾಜೇಂದ್ರ ಒಡೆಯರು  ನಿರ್ಮಿಸಿದ ಮೈಸೂರು ಅರಮನೆ.
    • 57 ಅಡಿ ಎತ್ತರವಿದ್ದು,  ಸುಮಾರು  30 ಕಿ.ಮೀ ದೂರದಿಂದಲೂ   ನೋಡಬಹುದಾದ  ವಿಶ್ವದ ಅತಿದೊಡ್ಡ ಏಕಶಿಲೆಯ ಪ್ರತಿಮೆ ಇರುವುದು ಕರ್ನಾಟಕದ  ಶ್ರವಣಬೆಳಗೋಳದಲ್ಲಿ. 
    • ಪ್ರತಿ ಶಬ್ದವೂ ಏಳು ಬಾರಿ ಪ್ರತಿಧ್ವನಿತವಾಗುವ  ಮತ್ತು  “ಪಿಸುಗುಟ್ಟುವ ಶಾಲೆ”ಯಲ್ಲಿ ಅತಿ ಸಣ್ಣ ಶಬ್ದವೂ 37 ಮೀಟರ್  ದೂರದಲ್ಲಿ ಸ್ಪಷ್ಟವಾಗಿ ಕೇಳಿಬರುವ  ವಿಶಿಷ್ಟ  ವಾಸ್ತುಶೈಲಿಯ ವಿಶ್ವದ ಏಕೈಕ  ಕಟ್ಟಡ ಮತ್ತು   ವಿಶ್ವದ ಎರಡನೆ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್   ಬಿಜಾಪುರದ (ವಿಜಯಪುರ) ಗೋಲ ಗುಮ್ಮಟ. 
    • ದೇಶದ ಎರಡನೇ  ಅತ್ಯಂತ  ಎತ್ತರದಿಂದ ಧುಮುಕುವ ಜಲಪಾತ ಹಾಗೂ  ವಿಶ್ವದಲ್ಲಿ 13  ನೇ ಸ್ಥಾನದಲ್ಲಿರುವ ಪ್ರವಾಸಿಗರ ಆಕರ್ಷಣೀಯ ತಾಣ ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿರುವ ಜೋಗ ಜಲಪಾತ. 
    • ‘ಭಾರತೀಯ ಶಿಲ್ಪಕಲೆಯ ತೊಟ್ಟಿಲು’ ಎಂದು ಖ್ಯಾತಿ ಹೊಂದಿರುವ ಪ್ರವಾಸಿ ತಾಣ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ   ಐಹೊಳೆ.
    • ರಾಷ್ಟ್ರೀಯ ಪ್ರಾಣಿ   ಹುಲಿ  ಅತಿ  ಹೆಚ್ಚು ಸಂಖ್ಯೆಯಲ್ಲಿರುವ  ಭಾರತದ  ಎರಡನೇ  ರಾಜ್ಯ ಕರ್ನಾಟಕ.
    • ನಾಯಕ ನಟನಾಗಿ ಅತ್ಯುತ್ತಮ ಹಿನ್ನೆಲೆ ಗಾಯನಕ್ಕಾಗಿ  ರಾಷ್ಟ್ರೀಯ ಪ್ರಶಸ್ತಿ ಪಡೆದ ಭಾರತದ ಏಕೈಕ ಸಿನಿಮಾ ತಾರೆ  ಡಾ. ರಾಜಕುಮಾರ್. 
    • ನೀರೊಳಗಿನ ಚಿತ್ರೀಕರಣ ಮಾಡಿದ ಮೊದಲ ಭಾರತೀಯ ಚಿತ್ರ  ಶಂಕರ್ ನಾಗ್ ನಿರ್ದೇಶನದ ‘ಒಂದು ಮುತ್ತಿನ ಕಥೆ’.
    • ಭಾರತದ ಅತಿದೊಡ್ಡ ಕಚ್ಚಾ ರೇಷ್ಮೆ ಉತ್ಪಾದನಾ ಘಟಕಗಳ ನೆಲೆ ಎಂದು ಗುರುತಿಸಿಕೊಂಡಿರುವ ರಾಜ್ಯ  ಕರ್ನಾಟಕ;  ಪೇಟೆಂಟ್ ಪಡೆದಿರುವ   ಮೈಸೂರು ರೇಷ್ಮೆ ಜಗತ್ತಿನ ಅತ್ಯಂತ ಉತ್ಕೃಷ್ಟ ರೇಷ್ಮೆಗಳಲ್ಲಿ ಒಂದು ಎಂದು ಮನ್ನಣೆ ಪಡೆದಿದೆ.
    • ಭಾರತದ ರಾಷ್ಟ್ರ ಧ್ವಜಗಳನ್ನು ತಯಾರಿಸಲು ಮತ್ತು ಪೂರೈಸಲು ಸರ್ಕಾರದ ಅಧಿಕೃತ ಅನುಮತಿಯನ್ನು ಹೊಂದಿರುವ ಭಾರತದ ಏಕೈಕ ಘಟಕ ಹುಬ್ಬಳ್ಳಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ.
    • ಭಾರತದಲ್ಲಿನ ಎಲ್ಲಾ ಚುನಾವಣೆಗಳಿಗೆ ಬಳಸಲಾಗುವ ಅಳಿಸಲಾಗದ ಕಪ್ಪು ಶಾಯಿಯನ್ನು ತಯಾರಿಸಲು ಅಧಿಕಾರ ಹೊಂದಿರುವ ಏಕೈಕ ಸ್ಥಳ ಮೈಸೂರಿನಲ್ಲಿರುವ  ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್.
    • 1780 ರ ದಶಕದಲ್ಲಿ,  ಟಿಪ್ಪು ಸುಲ್ತಾನ್ ಮತ್ತು ಹೈದರ್ ಆಲಿ ಆಳ್ವಿಕೆಯ ಕಾಲದಲ್ಲಿ ಲೋಹ-ಸಿಲಿಂಡರ್ ಮತ್ತು ಕಬ್ಬಿಣ-ಕೇಸ್ಡ್ ರಾಕೆಟ್ ಫಿರಂಗಿಗಳನ್ನು ಪ್ರಥಮ ಬಾರಿಗೆ ಅಭಿವೃದ್ಧಿಪಡಿಸಲಾಗಿದೆ.  
    • ಭಾರತೀಯ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯವು  ಅತ್ಯಂತ ಶ್ರೀಮಂತ ಸಾಮ್ರಾಜ್ಯಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿದ್ದು,  ಅಲ್ಲಿ ವ್ಯಾಪಾರಿಗಳು ಚಿನ್ನ ಮತ್ತು ಅಮೂಲ್ಯ ರತ್ನಗಳನ್ನು ಸಂತೆಗಳಲ್ಲಿ ವ್ಯಾಪಾರ ಮಾಡುತ್ತಿದ್ದರು.
    • ವಸಾಹತುಶಾಹಿ ಶಕ್ತಿಗಳ ವಿರುದ್ಧ ಹೋರಾಡಿದ   ರಾಣಿ ಅಬ್ಬಕ್ಕ ‘ಭಾರತದ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ’.  
    • ಭಾರತೀಯ ಸೇನೆಯು ಕಂಡ  ಅತ್ಯಂತ ಶ್ರೇಷ್ಠ ಮಿಲಿಟರಿ ಅಧಿಕಾರಿ, ಎರಡನೆಯ ಮಹಾಯುದ್ಧದ ಸಮಯದಲ್ಲಿ ಕಾಲಾಳುಪಡೆ ದಳಕ್ಕೆ ಯುದ್ಧ ಮಾಡಿದ ಏಕೈಕ ಭಾರತೀಯ  ಕರ್ನಾಟಕದ  ಜನರಲ್ ಕೆ.  ಎಸ್. ತಿಮ್ಮಯ್ಯ. 
    • ಭಾರತೀಯ ಸೇನೆಯ ಮೊದಲ ಕಮಾಂಡರ್-ಇನ್-ಚೀಫ್ (ಸಿ-ಇನ್-ಸಿ) ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರಿಯಪ್ಪ.
    • ದೇಶದ ಪ್ರಮುಖ ಮಾಹಿತಿ ತಂತ್ರಜ್ಞಾನ (ಐಟಿ) ರಫ್ತು ಮಾಡುವ ‘ಭಾರತದ ಸಿಲಿಕಾನ್ ವ್ಯಾಲಿ”  ಹಾಗೂ  “ಭಾರತದ ಐಟಿ ರಾಜಧಾನಿ’ ಎಂದು ಪರಿಗಣಿಸಲ್ಪಟ್ಟ  ದೇಶದ ಏಕೈಕ ನಗರ ಬೆಂಗಳೂರು. 
    • ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ 3 ನೇ  ಸ್ಥಾನದಲ್ಲಿರುವ .’ದಕ್ಷಿಣದ ಚಿರಾಪುಂಜಿ’  ಎಂದು ಗುರುತಿಸಿ ಸಲ್ಪಟ್ಟ ಪ್ರದೇಶ ಕರ್ನಾಟಕದ  ಆಗುಂಬೆ.  
    • ಭಾರತದಲ್ಲಿ ಅತಿ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಹೊಂದಿದ್ದು  ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರನ್ನು ಉತ್ಪಾದಿಸುವ ರಾಜ್ಯ ಕರ್ನಾಟಕ.
    • ಅತಿ  ಹೆಚ್ಚು  ರಾಷ್ಟ್ರೀಕೃತ  ಬ್ಯಾಂಕ್ ಗಳನ್ನು  ಸ್ಥಾಪಿಸಿ  ‘ಭಾರತದ ಬ್ಯಾಂಕಿಂಗ್ ತೊಟ್ಟಿಲು’ ಎಂದು ಮನ್ನಣೆ ಪಡೆದಿರುವ ರಾಜ್ಯ ಕರ್ನಾಟಕ (ದೇಶದ ಏಳು ಪ್ರಮುಖ ಬ್ಯಾಂಕುಗಳಾದ ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ವಿಜಯ ಬ್ಯಾಂಕ್, ಕರ್ನಾಟಕ ಬ್ಯಾಂಕ್, ವೈಶ್ಯ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು  ಜನ್ಮ ಪಡೆದಿರುವುದು  ಕರ್ನಾಟಕದಲ್ಲಿ).
    • ವಿಶ್ವ ದಾಖಲೆಯ  ಮಟ್ಟದ ವೇಗದಲ್ಲಿ  ಓಡಿ    ‘ಭಾರತದ ಉಸೇನ್ ಬೋಲ್ಟ್’  ಎಂದು ಹೆಸರು ಗಳಿಸಿದ  ಏಕೈಕ ವ್ಯಕ್ತಿ ಮೂಡುಬಿದಿರೆಯ ಕಂಬಳ ಓಟಗಾರ  ಶ್ರೀನಿವಾಸ ಗೌಡ. 
    • ಜಗತ್ತಿನಲ್ಲಿ 25 ಬಾರಿ ಮರುಮುದ್ರಣಗೊಂಡ ಏಕೈಕ ಕವನ ಸಂಕಲನಗಳ ಪುಸ್ತಕ ನಾಡೋಜ  ಪ್ರೊ. ಕೆ.ಎಸ್. ನಿಸಾರ್ ಅಹಮದ್ ಅವರ ‘ ನಿತ್ಯೋತ್ಸವ ‘.
    • ಒಂದನೇ ಸ್ಥಾನದಲ್ಲಿರುವ ಭಾರತದ ಶೈಕ್ಷಣಿಕ ಕೇಂದ್ರ (Educational hub) ಎಂದು ಅಂತರರಾಷ್ಟ್ರೀಯ ಮನ್ನಣೆ ಪಡೆದ ನಗರ ಬೆಂಗಳೂರು.
    • “ಜಗತ್ತಿನ ಅತ್ಯಂತ ಜೀವವೈವಿಧ್ಯತೆಯ ತಾಣಗಳಲ್ಲಿ  ಒಂದಾಗಿರುವ  ಪಶ್ಚಿಮ ಘಟ್ಟಗಳ (ರಾಷ್ಟ್ರೀಯ ಉದ್ಯಾನಗಳು, ವನ್ಯಜೀವಿ ಅಭಯಾರಣ್ಯಗಳು ಮತ್ತು ಮೀಸಲು ಕಾಡುಗಳು ಸೇರಿದಂತೆ) ವಿಶ್ವ ಪರಂಪರೆಯ ಹತ್ತು  ತಾಣಗಳಿರುವುದು ಕರ್ನಾಟಕದಲ್ಲಿ.
    • ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐ.ಐ.ಎಸ್ಸಿ.),  ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಶನ್ (ಇಸ್ರೋ), ಸೆಂಟ್ರಲ್ ಫುಡ್ ಟೆಕ್ನಾಲಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ (ಸಿ.ಎಫ್.ಟಿ. ಆರ್. ಐ.),  ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ (ನಿಮ್ಹಾನ್ಸ್), ಒಟ್ಟು ಸುಮಾರು ೫೦ ಅಂತಾರಾಷ್ಟ್ರೀಯ ಮಟ್ಟದಲ್ಲಿ  ಹೆಸರು ಗಳಿಸಿರುವ ಸಂಶೋಧನಾ ಕೇಂದ್ರಗಳು ಇರುವುದು ಕರ್ನಾಟಕದಲ್ಲಿ. 
    • ವಿಶಿಷ್ಟ ಶೈಲಿ ಮತ್ತು ರಂಗಭೂಮಿ ತಾಂತ್ರಿಕತೆಯೊಂದಿಗೆ  ನೃತ್ಯ, ಸಂಗೀತ, ಸಂಭಾಷಣೆ, ವೇಷಭೂಷಣ, ಮೇಕಪ್    ಸಮ್ಮಿಶ್ರಣದಿಂದ ಕೂಡಿರುವ ವಿಶ್ವದ ಏಕೈಕ ಕಲೆ  ಕರ್ನಾಟಕದ  ಯಕ್ಷಗಾನ.  
    • ಭಾರತದ ಮೊದಲ ಖಾಸಗಿ ರೇಡಿಯೊ ಕೇಂದ್ರ  ‘ಆಕಾಶವಾಣಿ’ಯನ್ನು ಸ್ಥಾಪಿಸಿದ್ದು ಕರ್ನಾಟಕದ ಮೈಸೂರಿನಲ್ಲಿ (1936 ರಲ್ಲಿ ಎಂ. ವಿ. ಗೋಪಾಲಸ್ವಾಮಿ).
    • ನೀರೊಳಗಿನ ಚಿತ್ರೀಕರಣ ಮಾಡಿದ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು  ಶಂಕರ್ ನಾಗ್ ನಿರ್ದೇಶಿಸಿರುವ  ‘ಒಂದು  ಮುತ್ತಿನ  ಕಥೆ’.
    • ಭಾರತ ವಿಶ್ವದ ಅತಿದೊಡ್ಡ ಚಲನಚಿತ್ರಗಳ ನಿರ್ಮಾಣ ಮಾಡುವ ದೇಶ; ೨೦೧೯ರಲ್ಲಿಅತಿ ಹೆಚ್ಚು ಚಲನಚಿತ್ರಗಳನ್ನು ನಿರ್ಮಿಸಿರುವ ರಾಜ್ಯ  ಕರ್ನಾಟಕ.
    • ಇಲೆಕ್ಟ್ರಾನಿಕ್ ವೋಟಿಂಗ್ ಮಿಷಿನ್ (ಇವಿಎಂ) ಗಳನ್ನು ತಯಾರಿಸುವ  ಸಂಸ್ಥೆ ಕರ್ನಾಟಕದಲ್ಲಿರುವ  ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್. 
    • ಸರ್ ಎಂ. ವಿಶ್ವೇಶ್ವರಯ ಅವರ ಜನ್ಮ ದಿನಾಚರಣೆಯನ್ನು (ಸೆಪ್ಟೆಂಬರ್ 15) ರಾಷ್ಟ್ರೀಯ ಇಂಜಿನಿಯರ್ಸ್  ದಿನಾಚರಣೆ ಎಂದು  ಆಚರಿಸಲಾಗುತ್ತದೆ.
    • ಭಾರತ ಕ್ರಿಕೆಟ್ ತಂಡಕ್ಕೆ  ಅತಿ ಹೆಚ್ಚು ಆಟಗಾರರನ್ನು  ನೀಡಿರುವ  ರಾಜ್ಯ ಕರ್ನಾಟಕ.
    • ವಿಧಾನಸೌಧ ಭಾರತದ ಅತಿದೊಡ್ಡ ಶಾಸಕಾಂಗ ಕಟ್ಟಡವಾಗಿದೆ.
    • ಕರ್ನಾಟಕ ರಾಜ್ಯದ ಸಾಫ್ಟ್‌ವೇರ್ ಉದ್ಯಮವು ಭಾರತದ ಆರ್ಥಿಕತೆಯ ಪ್ರಮುಖ ಆಧಾರಸ್ತಂಭಗಳಲ್ಲಿ ಒಂದಾಗಿದ್ದು, ಭಾರತದಲ್ಲಿ ಸಾಫ್ಟ್‌ವೇರ್ ರಫ್ತಿನಿಂದ ಬರುವ ಆದಾಯ ಗಳಿಕೆಯಲ್ಲಿ ಮೊದಲ ಸ್ಥಾನದಲ್ಲಿರುವ   ರಾಜ್ಯ ಕರ್ನಾಟಕ.
    • ಜಾಗತಿಕವಾಗಿ ‘ಸೈನ್ಸ್ ಕೆರಿಯರ್ಸ್ ಟಾಪ್ 20 ಉದ್ಯೋಗದಾತರು’ ಪಟ್ಟಿಯಲ್ಲಿ ಅಗ್ರ ಐದು ಬಯೋಟೆಕ್ ಉದ್ಯೋಗದಾತರಲ್ಲಿ ಸ್ಥಾನ ಪಡೆದಿರುವ ಬಯೋಕಾನ್  ಲಿಮಿಟೆಡ್ ಸಂಸ್ಥೆ ಇರುವುದು ಬೆಂಗಳೂರಿನಲ್ಲಿ ಮತ್ತು  ಅದರ ಸಂಸ್ಥಾಪಕಿ   ಕಿರಣ್ ಮಜುಂದಾರ್-ಶಾ ಅವರು ಶಿಕ್ಷಣ ಪಡೆದಿರುವುದು ಕರ್ನಾಟಕದಲ್ಲಿ.  
    • ಇನ್ಫೋಸಿಸ್ ಭಾರತದ ಎರಡನೇ ಅತಿದೊಡ್ಡ ಐಟಿ ಕಂಪನಿಯಾಗಿದೆ.
    • ವಿದ್ಯುತ್ ಬೀದಿ ದೀಪಗಳನ್ನು ಬಳಸಿದ ಏಷ್ಯಾದ ಮೊದಲ ನಗರ ಬೆಂಗಳೂರು.
    • ಸರ್ ಎಂ. ವಿಶ್ವೇಶ್ವರಯ್ಯ; ಭೀಮ್ಸೆನ್ ಜೋಶಿ; ಪ್ರೊ. ಸಿ.ಎನ್.ಆರ್. ರಾವ್ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ಗೆ ಭಾಜನರಾದ ಕರ್ನಾಟಕದ ಶ್ರೇಷ್ಠ  ಸಾಧಕರು.  

      ಹೀಗೆ ಕನ್ನಡ  ನಾಡು ನುಡಿಯ  ವಿಶಿಷ್ಟತೆ,  ಸಾಧನೆ, ಸಾಧಕರುಗಳ ಪಟ್ಟಿ ಮಾಡುತ್ತಾ ಹೋದರೆ   ಬೆಳೆಯುತ್ತಾ ಹೋಗುತ್ತದೆ.  ಕುವೆಂಪು ಅವರ   ಕವನದ ಸಾಲುಗಳು ಕನ್ನಡಿಗರೆಲ್ಲರಿಗೂ ಎಂದೆಂದಿಗೂ ಸ್ಪರ್ತಿದಾಯಕ. 

    “ಎಲ್ಲಾದರು ಇರು

    ಎಂತಾದರು ಇರು

    ಎಂದೆಂದಿಗೂ ನೀ ಕನ್ನಡವಾಗಿರು

    ಕನ್ನಡವೇ ಸತ್ಯ

    ಕನ್ನಡವೇ ನಿತ್ಯ”

    ಆಲೂರು ವೆಂಕಟರಾವ್,  ಅನಕೃ, ಕೆ. ಶಿವರಾಮ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಎನ್.ಕೃಷ್ಣರಾವ್, ಬಿ.ಎಂ.ಶ್ರೀಕಂಠಯ್ಯ ಮತ್ತು ಅಂದಿನ ರಾಜ್ಯದ ಮುಖ್ಯಮಂತ್ರಿ  ದೇವರಾಜ ಅರಸ್  ಕರ್ನಾಟಕ ಏಕೀಕರಣಕ್ಕಾಗಿ ದುಡಿದಿರುವ ಎಲ್ಲರಿಗೂ  ಕನ್ನಡ ರಾಜ್ಯೋತ್ಸವದ  ಈ ಶುಭ ಸಂದರ್ಭದಲ್ಲಿ  ಗೌರವಾರ್ಪಣೆ ಸಲ್ಲಿಸೋಣ.  

    ಕಷ್ಟಗಳಿದ್ದರೂ ತೋರ್ಪಡಿಸಿಕೊಳ್ಳದ ಬದುಕು

    ಸುಮಾ ವೀಣಾ

    ಸೀಗೆಯೊಳಗಣ ಬಾಳೆಗೆಣೆ– ‘ಕರುಣಾ ರಸ’ಕ್ಕೆಂದೇ ಮೀಸಲಾಗಿರುವ ಕಾವ್ಯ  ಎಂದರೆ ರಾಘವಾಂಕನ  ‘ಹರಿಶ್ಚಂದ್ರಕಾವ್ಯ’.ಪ್ರಸ್ತುತ  ‘ಸೀಗೆಯೊಳಗಣ ಬಾಳೆಗೆಣೆ’ಯಾದುದು ವಾಕ್ಯವನ್ನು ಚಂದ್ರಮತಿಯ ಪ್ರಲಾಪದಿಂದ ಆರಿಸಲಾಗಿದೆ.

    ಸೀಗೆ ಸ್ವಭಾವತಃ ಮುಳ್ಳುಗಳನ್ನು ಹೊಂದಿರುತ್ತದೆ. ಇದು ಇರುವಿಕೆಯ ಜಾಗವನ್ನು ಪೊದೆ ಎಂದು ಕರೆಯುತ್ತಾರೆ. ಮೊದಲೆ ಮುಳ್ಳು ಅದೂ ಪೊದೆಯಾಗಿರುವುದು ಅದರ ನಡುವೆ ಬಾಳೆಗಿಡ ಗೊನೆಬಿಟ್ಟು  ಎಡರು ತೊಡರುಗಳಿಲ್ಲದೆ ಹಣ್ಣಾಗಲು ಸಾಧ್ಯವೇ ಇಲ್ಲ  ಎಂಬ  ಅರ್ಥ ಇಲ್ಲಿ ಬರುತ್ತದೆ.

    ಹಾಗೆ ಚಂದ್ರಮತಿಯ ಪ್ರಲಾಪದ ಸಂದರ್ಭದಲ್ಲಿ  ಚಂದ್ರಮತಿಯ ಸಂಕಟವು  ಒಳಹೊಕ್ಕ ಬಾಣದಂತೆ  ಹೊರಗೆ ಕಾಣಿಸದೆ ಇದ್ದರೂ  ಮನಸ್ಸಿನಲ್ಲೆ  ಸಂಕಟವನ್ನು ಅನುಭವಿಸುತ್ತಿರುತ್ತಾಳೆ. ಮನೆಯೊಡತಿಗೆ ಅಂಜಿ, ಇನ್ನು ಬಾರದೆ ಇರುವ ಮಗನನ್ನು ನೆನಪಿಸಿಕೊಂಡು  ನಿತ್ಯದ ಕೆಲಸವನ್ನು  ಎಚ್ಚರದಿಂದ ಮಾಡುತ್ತಿದ್ದಳು.  ಹೇಳಿಕೊಳ್ಳಲಾಗದೆ ಅನುಭವಿಸಲಾದೆ  ಮಗನ  ಕುರಿತಾದ ತಹತಹಗಳನ್ನು ಚಂದ್ರಮತಿ ಏಕಾಂಗಿಯಾಗಿ ಅನುಭವಿಸಿ ಸಂಕಟದ ತೀವ್ರತೆಯನ್ನು ಬೇರೆಯವರಿಗೆ ತೋರಗೊಡುವುದಿಲ್ಲ. .ಅವಳ ಸಂಕಟವನ್ನು ಓದುಗರಿಗೆ ಪರಿಣಾಮಕಾರಿಯಾಗಿ ವಿವರಿಸಲು ರಾಘವಾಂಕ  ಇಂಥದ್ದೊಂದು ವಾಕ್ಯನ್ನು ನಿಬದ್ಧಗೊಳಿಸಿದ್ದಾನೆ ಎನ್ನಬಹುದು.

    ಲೋಕಾಭಿರಾಮವಾಗಿ ನೋಡುವುದಾದರೂ ಮನಸ್ಸಿನಲ್ಲಿ ಬೆಟ್ಟದಷ್ಟು ಕಷ್ಟವನ್ನು ಮನಸ್ಸಿನಲ್ಲಿ ಆವಕಮಾಡಿಕೊಂಡು ಬೇರೆಯವರ ಕಣ್ಣಿಗೆ ಅತ್ಯಂತ ಸುಖಿಗಳೆಂದು ತೋರಿಸಿಕೊಳ್ಳುವ ಅನೇಕರನ್ನು ಕಾಣಬಹುದು.

    ಕೆಲವರು ಹಾಗೆಯೇ ಕಷ್ಟವನ್ನು ಹೇಳಿಕೊಳ್ಳಲು ಇಚ್ಛಿಸದೆ ಸುಖವನ್ನು ಮಾತ್ರ  ಇತರರಿಗೆ ನೀಡಬಯಸುತ್ತಾರೆ. ಹೊರನೋಟಕ್ಕೆ ಪರಿಪಕ್ವವಾದ ಹಣ್ಣೊಂದರ ರೂಪವನ್ನು ಇರಿಸಿಕೊಂಡಿದ್ದರೂ ಸುಲಿದು ನೋಡಿದರೆ ಸಂಪೂರ್ಣ ಹುಳುಕಾಗಿರುವ  ಹಣ್ಣಿನಂತೆ ಕೆಲವರು ಇರಬಹುದು. ಇಲ್ಲವೇ ಸಮಾಜದ ವ್ಯಂಗ್ಯ ಕುಹಕ  ಇತ್ಯಾದಿಗಳನ್ನು ಛಲಬಿಡದ ತ್ರಿವಿಕ್ರಮರಂತೆ  ಸಹಿಸಿಕೊಳ್ಳುವ  ಅನೇಕರನ್ನು ಕಾಣಬಹುದು.

    ಸೀಗೆಯೊಳಗಣ ಬಾಳೆ ಈ ಮಾತಿಗೆ ಕೆಸರಿನಲ್ಲಿ ಅರಳಿದ ಕಮಲ ಎಂಬ  ಮಾತನ್ನೂ  ಸರಿಸುಮಾರು ಸಂವಾದಿಯಾಗಿ ತೆಗೆದುಕೊಳ್ಳಬಹುದು.  ಎಂಥ ಕ್ಲಿಷ್ಟ ಪರಿಸ್ಥಿತಿ ಇದ್ದರೂ ಹೂವಿನಂತೆ ಅರಳುವುದರಲ್ಲಿಯೇ ಮನುಷ್ಯನ ಮಹತಿ ಅಡಗಿದೆ.

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    error: Content is protected !!