25.1 C
Karnataka
Friday, May 22, 2026
    Home Blog Page 41

    ಕಚಗುಳಿ ಇಡುತ್ತ ಆಪ್ತ ಸಂವಾದ ನಡೆಸಿಕೊಟ್ಟ ಚೇತನ್ ಭಗತ್; ಸಾಟಿ ಇಲ್ಲದ ಸ್ಟಾರ್ಟಪ್ ಸಂಸ್ಕೃತಿಯ ತವರು ಬೆಂಗಳೂರು!

    BENGALURU NOV 18

    ಅಲ್ಲಿ ಉತ್ಸಾಹದ ಕಚಗುಳಿ ಇತ್ತು; ಬೆಂಗಳೂರಿನ ನವೋದ್ಯಮ ಸಂಸ್ಕೃತಿಯ ಬಗ್ಗೆ ರೋಮಾಂಚನವಿತ್ತು; ಇಲ್ಲಿನ ಉದ್ಯಮ ನಾಳೆ ಜಿಗಿಯುವ ದಿಗಂತದ ಬಗ್ಗೆ ಕುತೂಹಲವಿತ್ತು; ಇಲ್ಲಿನ ಟ್ರಾಫಿಕ್ ಸಮಸ್ಯೆ ಬಗ್ಗೆ ಗಮನ ಸೆಳೆಯುವ ಪ್ರಯತ್ನವಿತ್ತು; ಜತೆಗೆ ಸಮಸ್ಯೆಗಳೇ ಹೇಗೆ ಹೊಸ ಉದ್ಯಮದ ಹುಟ್ಟಿಗೆ ಪ್ರೇರಣೆಯಾಗುತ್ತದೆಂಬ ತಮಾಷೆ ಇತ್ತು; ಯಶಸ್ವಿ ಹೂಡಿಕೆದಾರರಿಗೆ ಪ್ರಶ್ನೆಗಳಿದ್ದವು; ಪ್ರತಿಯಾಗಿ ಉತ್ತರಗಳು ಬರುತ್ತಿದ್ದವು; ಬೆಂಗಳೂರಿಗೂ ದೇಶದ ಉಳಿದ ನಗರಗಳಿಗೂ ಇರುವ ವ್ಯತ್ಯಾಸವೇನೆಂದು ಬೆಳಕು ಚೆಲ್ಲಲಾಗುತ್ತಿತ್ತು. ಇವೆಲ್ಲವನ್ನೂ ಚುಂಬಕಶಕ್ತಿಯಂತೆ ಹಿಡಿದಿಟ್ಟಿದ್ದಅಂಶ ಒಂದೇಒಂದು- ಅದು, ಬೆಂಗಳೂರು!

    ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ಜನಪ್ರಿಯ ಲೇಖಕ ಮತ್ತು ಅಂಕಣಕಾರ ಚೇತನ್ ಭಗತ್ ಗುರುವಾರದಂದು ನಡೆಸಿಕೊಟ್ಟ `ಬೆಂಗಳೂರು ನೆಕ್ಸ್ಟ್’ ಸಮಾವೇಶ ಸಂವಾದದಲ್ಲಿದ್ದ ಲಹರಿಗಳಿವು. ಇದಕ್ಕೆ ತಕ್ಕಂತೆ ಚೇತನ್ ಭಗತ್ ಉದ್ದಿಮೆ, ಬದುಕಿನ ಸತ್ಯಗಳು, ಕನಸುಗಾರಿಕೆ, ಉದ್ಯಮಿಗಳು ಪಾಲಿಸುವ ಮೌ್ಲ್ಯಗಳು, ಯುವಜನರ ಸೆಳೆತ ಎಲ್ಲವುಗಳನ್ನೂ ನಡುನಡುವೆ ಹೇಳುತ್ತಿದ್ದರು; ಹಾಗೆಯೇ ಉದ್ಯಮಗಳ ಯಶೋಗಾಥೆಯನ್ನು ಹಂಚಿಕೊಳ್ಳುವಂತೆ ಸಭಾಂಗಣದಲ್ಲಿದ್ದ ಅನೇಕ ಉದ್ಯಮಿಗಳನ್ನು ಆಮಂತ್ರಿಸುತ್ತಿದ್ದರು.

    ಮೊದಲಿಗೆ ಚೇತನ್ ಭಗತ್ ಅವರಿಗೆ ಬೆಂಗಳೂರೊಂದರಲ್ಲೇ 36 ಯೂನಿಕಾರ್ನ್ ಸ್ಥಾನಮಾನದ ಕಂಪನಿಗಳಿರುವ ಬಗ್ಗೆ ರೋಮಾಂಚನವಿತ್ತು. ಇದು ಅಲ್ಲೇ ಪ್ರಶ್ನೆಯಾಗಿ ರೂಪಾಂತರ ಹೊಂದಿತು. ಇದಕ್ಕೆ ರಾಜ್ಯ ಸ್ಟಾರ್ಟಪ್ ವಿಷನ್ ಗ್ರೂಪಿನ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್ ಉತ್ತರಿಸಿದರು.

    `ಕರ್ನಾಟಕ ಇವತ್ತು ನವೋದ್ಯಮಕ್ಕೆ ಇನ್ನೊಂದು ಹೆಸರಾಗಿದೆ. ಇದರ ಶ್ರೇಯಸ್ಸು ಶೇ.90ರಷ್ಟು ನಮ್ಮ ರಾಜ್ಯದ ಸುಸಂಸ್ಖೃತಿಗೆ ಸಲ್ಲಬೇಕು. ಇಲ್ಲಿ ಯಾವ ಪಕ್ಷದ ಸರಕಾರ ಬಂದರೂ ಉದ್ಯಮಸ್ನೇಹಿಯಾಗಿರುತ್ತದೆ. ವಿಷನ್ ಗ್ರೂಪ್ ಗಳನ್ನು ಸ್ಥಾಪಿಸಿದವರಲ್ಲಿ ನಮ್ಮವರೇ ಮೊದಲಿಗರು. ಇಡೀ ದೇಶದಲ್ಲಿ ಇಂತಹ ಇನ್ನೊಂದು ನಗರವಿಲ್ಲ,’ ಎನ್ನುವುದು ಅವರ ಉತ್ತರವಾಗಿತ್ತು.

    ಇದಕ್ಕೆ ವೇದಿಕೆಯ ಮೇಲಿದ್ದ ಉದ್ಯಮಿಗಳಾದ ಸುಜಿತ್ ಕುಮಾರ್, ಹರ್ಷಿಲ್ ಮಾಥೂರ್ ದನಿಗೂಡಿಸಿದರು. ಜತೆಗೆ ಬೆಂಗಳೂರಿನಲ್ಲಿ ಇಂತಹ ಸ್ಟಾರ್ಟಪ್-ಸ್ನೇಹಿ ವಾತಾವರಣ ಇರುವುದನ್ನು ಕಂಡೇ ತಾವಿಬ್ಬರೂ ದೂರದ ದೆಹಲಿ ಮತ್ತು ಜೈಪುರಗಳಿಂದ ಇಲ್ಲಿಗೆ ಕಂಪನಿಗಳನ್ನು ಸ್ಥಳಾಂತರಿಸಿದ್ದಾಗಿ ಹೇಳಿದರು. ಪಕ್ಕದಲ್ಲಿದ್ದ ಕಿಂಡ್ರೆಲ್ ಕಂಪನಿಯ ಲಿಂಗರಾಜ ಸಾಹುಕಾರ್ ಕೂಡ 19 ಸಾವಿರ ಉದ್ಯೋಗಿಗಳಿರುವ ತಮ್ಮ ಕಂಪನಿಯನ್ನು ಸ್ಟಾರ್ಟಪ್ ಎಂದೇ ಆರಂಭಿಸಿರುವುದಾಗಿ ಗುಟ್ಟು ಬಿಟ್ಟುಕೊಟ್ಟರು.

    ಆಗ ಹುಬ್ಬೇರಿಸುವ ಸರದಿ ಚೇತನ್ ಭಗತ್ ಅವರದಾಗಿತ್ತು! ಕೂಡಲೇ ಅವರು ಮುಂಬೈನಲ್ಲಿ ಸಿನಿಮಾ ಸಂಸ್ಕೃತಿ ಇದೆ; ಅಲ್ಲಿ ಎಲ್ಲರೂ ಇಲ್ಲಿ ಶಾರುಖ್ ಖಾನ್ ಮನೆ ಇದೆ, ಅಲ್ಲಿ ಸಲ್ಮಾನ್ ಖಾನ್ ಮನೆ ಇದೆ’ ಎಂದು ಮಾತಾಡುತ್ತಿರುತ್ತಾರೆ. ಹಾಗೆಯೇ ಬೆಂಗಳೂರಿನಲ್ಲಿ ಉದ್ಯಮಸಂಸ್ಕೃತಿ ಇದೆ. ಇಲ್ಲಿನ ಜನಇದು ಇನ್ಫೋಸಿಸ್ ನಾರಾಯಣಮೂರ್ತಿಗಳ ಮನೆ, ಅದು ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಂಜಿ ಮನೆ ಇದೆ ಅಂತ ಹೇಳ್ತಾರೆ. ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂದ ಟ್ಯಾಕ್ಸಿ ಚಾಲಕ ಕೂಡ ಇಲ್ಲಿನ ಯಾವುದೋ ಒಂದು ಯೂನಿಕಾರ್ನ್ ಕಂಪನಿಗೆ ಕೆಲಸ ಮಾಡ್ತಾ ಇದ್ದವನೇ!’ ಎಂದು ಉದ್ಗರಿಸಿದರು.

    ಸಚಿವರಿಗೂ ಪ್ರಶ್ನೆ ಹಾಕಿದ ಚೇತನ್ ಭಗತ್!

    ಸಭಿಕರ ಮಧ್ಯೆ ಇದ್ದ ಐಟಿ ಸಚಿವ ಅಶ್ವತ್ಥನಾರಾಯಣ ಅವರತ್ತಲೂ ಚೇತನ್ ಭಗತ್ ಪ್ರಶ್ನೆಗಳನ್ನೆಸೆದರು. ಇದಕ್ಕೆ ಉತ್ತರಿಸಿದ ಸಚಿವರು, `ಹಣ ಸರಿಯಾದವರ ಬಳಿ ಇರಬೇಕು. ಆಗ ಅದು ಬೆಳೆಯುತ್ತ ಹೋಗುತ್ತದೆ. ಅಂಥವರನ್ನು ನಮ್ಮ ಸರಕಾರ ಗುರುತಿಸಿ, ಪುರಸ್ಕರಿಸುತ್ತಿದೆ. ಇದು ನಮ್ಮ ಕರ್ತವ್ಯ. ಇಂಥವರಿಂದ ರಾಜ್ಯ ಪ್ರಗತಿ ಸಾಧಿಸುತ್ತದೆ. ನೂತನ ಶಿಕ್ಷಣ ನೀತಿಯಲ್ಲಿ ನಾವು ನಾವೀನ್ಯತೆ, ಕೌಶಲ್ಯ ಪೂರೈಕೆ ಮತ್ತು ಗುಣಮಟ್ಟದ ಬೋಧನೆಗೆ ಒತ್ತು ಕೊಟ್ಟಿದ್ದೇವೆ. ಇವೆಲ್ಲದರ ಹಿಂದೆ ಪ್ರಧಾನಿ ಮೋದಿಯವರ ಒತ್ತಾಸೆ, ದೂರದೃಷ್ಟಿ ಕೂಡ ಇವೆ,’ ಎಂದರು.

    ಜತೆಗೆ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಸಿಲಿಕಾನ್ ಸಿಟಿಯಲ್ಲಿ ಕೂಡ ಬಿಟಿಎಸ್ ನಂತಹ ಕಾರ್ಯಕ್ರಮವನ್ನು ನಡೆಸುವ ಮಹತ್ವಾಕಾಂಕ್ಷೆ ತಮಗಿದೆ ಎಂದು ಅವರು ಹೇಳಿದರು. ಇದರ ಬೆನ್ನಲ್ಲೇ ಪ್ರಶಾಂತ್ ಪ್ರಕಾಶ್, `ಕರ್ನಾಟಕದಲ್ಲಿರುವ ಉದ್ಯಮಿಗಳು ಕೆರೆಯ ನೀರನು ಕೆರೆಗೆ ಚೆಲ್ಲುವ ಸಂಸ್ಕೃತಿಯವರು,’ ಎನ್ನುತ್ತ, ಎದುರಲ್ಲೇ ಆಸೀನರಾಗಿದ್ದ ಉದ್ಯಮಿ ಕ್ರಿಸ್ ಗೋಪಾಲಕೃಷ್ಣನ್ ಅವರ ಮಾದರಿ ಹಾದಿಯನ್ನು ಉಲ್ಲೇಖಿಸಿದರು.

    ಚೇತನ್ ಭಗತ್ ನಡೆಸಿಕೊಟ್ಟ ಆಪ್ತ ಶೈಲಿಯ ಸಂವಾದಕ್ಕೆ ಸಭಾಂಗಣದಲ್ಲಿದ್ದವರೆಲ್ಲ ಕಿವಿ ತೆರೆದಿದ್ದರು; ನಡುನಡುವೆ ಚಪ್ಪಾಳೆಯ ಮಳೆ  ಬೀಳುತ್ತಿತ್ತು; ವೇದಿಕೆಯ ಮೇಲಿದ್ದ ಉದ್ಯಮಿಗಳು ಬೆಂಗಳೂರಿನ ಹಿತಕರ ಹವೆಯನ್ನು ಹೊಗಳಿದ್ದಕ್ಕೆ ತಕ್ಕಂತೆ ಹೊರಗಡೆಯೂ ವರ್ಷಧಾರೆ ಸುರಿಯುತ್ತಿತ್ತು.


    ಬೆಂಗಳೂರಿನಲ್ಲಿ ಈಗ ಶತಕೋಟಿ ಡಾಲರ್ ವಹಿವಾಟು ನಡೆಸುವ ಯೂನಿಕಾರ್ನ್ ಕಂಪನಿಗಳು ಸದ್ದು ಮಾಡುತ್ತಿವೆ. ಇನ್ನು ಒಂದೆರಡು ವರ್ಷಗಳಲ್ಲಿ ಇಲ್ಲಿ 10 ಶತಕೋಟಿ ಡಾಲರ್ ವಹಿವಾಟು ನಡೆಸುವ ಡೆಕಾಕಾರ್ನ್ ಕಂಪನಿಗಳು ರಾರಾಜಿಸಲಿವೆ.

    -ಪ್ರಶಾಂತ್ ಪ್ರಕಾಶ್, ಸ್ಟಾರ್ಟಪ್ ವಿಷನ್ ಗ್ರೂಪ್ ಮುಖ್ಯಸ್ಥ


    • 2013ರಲ್ಲಿ ನಾನು ಜೈಪುರದಿಂದ ಬೆಂಗಳೂರಿಗೆ ಬಂದೆ. ಅದಕ್ಕೂ ಮುನ್ನ ನಾನು ಈ ನಗರವನ್ನೇ ನೋಡಿರಲಿಲ್ಲ. ಕರ್ನಾಟಕದಲ್ಲಿ ಎಲ್ಲ ಕೆಲಸಗಳೂ ಕ್ಷಿಪ್ರ ಗತಿಯಲ್ಲಿ ಆಗುತ್ತವೆ. ನಾನೀಗ ಸರಕಾರದ ಫಿನ್ಟೆಕ್ ಕಾರ್ಯಪಡೆಯ ಮುಖ್ಯಸ್ಥನಾಗಿದ್ದೇನೆ.

    -ಹರ್ಷಿಲ್ ಮಾಥೂರ್, ಸಂಸ್ಥಾಪಕ, ರೇಜರ್ ಪೇ.


    ಭವಿಷ್ಯದ ಉದ್ಯೋಗದಾತ ಮಷೀನ್‌ ಲರ್ನಿಂಗ್‌ ಮತ್ತು ಕೃತಕ ಬುದ್ಧಿಮತ್ತೆ

    BENGALURU NOV 18
    ಕೃತಕ ಬುದ್ಧಿಮತ್ತೆ ಮತ್ತು ಮಷೀನ್‌ ಲರ್ನಿಂಗ್‌ ಎನ್ನುವುದು ಪ್ರಚಲಿತದಲ್ಲಿರುವ ಬಹು ಬೇಡಿಕೆಯ ಅಧ್ಯಯನ ಕ್ಷೇತ್ರವಾಗಿದ್ದು, ಭವಿಷ್ಯದ ಉದ್ಯೋಗದಾತ ಎಂಬ ಅಭಿಪ್ರಾಯ 24ನೇ ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಗುರುವಾರ ನಡೆದ ಗೋಷ್ಠಿಯಲ್ಲಿ ತಜ್ಞರಿಂದ ವ್ಯಕ್ತವಾಯಿತು.

    “ಡ್ರೈವಿಂಗ್‌ ನೆಕ್ಟ್‌ ವಿತ್‌ ಆರ್ಟಿಫಿಯಲ್‌ ಇಂಟೆಲಿಜೆನ್ಸ್‌ ಅಂಡ್‌ ಮಷೀನ್‌ ಲರ್ನಿಂಗ್‌” ಕುರಿತು ನಡೆದ ಗೋಷ್ಠಿಯಲ್ಲಿ ಭಾರತವು ಈ ಕ್ಷೇತ್ರದ ಅತಿದೊಡ್ಡ ಮಾರುಕಟ್ಟೆಯಾಗಿರುವ ಜೊತೆಗೆ ಕರ್ನಾಟಕವು ಜಾಗತಿಕ ಕಂಪನಿಗಳಿಗೆ ಅಗತ್ಯವಿರುವಷ್ಟು ತಂತ್ರಜ್ಞರನ್ನು ಪೂರೈಸಲು ಸಮರ್ಥವಾಗಿದೆ ಎನ್ನಲಾಯಿತು.

    ಆಟೊಮೊಬೈಲ್‌, ಸ್ಮಾರ್ಟ್‌ ಡ್ರೈವಿಂಗ್‌, ಇ-ಕಾಮರ್ಸ್‌, ಬ್ಯಾಂಕಿಂಗ್‌, ಎನರ್ಜಿ ಟ್ರಾನ್ಸ್‌ಫಾರ್ಮೇಶನ್‌, ಕ್ಲೈಮೇಟ್‌ ಫ್ರೈಂಡ್ಲಿ ಸಿಸ್ಟಮ್‌, ಪ್ಲಾಂಟ್‌ ಎಂಜಿನಿಯರಿಂಗ್‌, ರಿಮೋಟ್‌ ಮಾನಿಟರಿಂಗ್‌, ಅರ್ಲಿ ಪ್ರಿಡಿಕ್ಷನ್ಸ್‌, ಡಿಜಿಟಲ್‌ ಫಾರ್ಮಿಂಗ್‌, ಹೆಲ್ತ್ ಕೇರ್‌ ಡೇಟಾ ಅನಾಲಿಸಿಸ್‌, ಗ್ರಾಹಕ ಸೇವೆ ಹೀಗೆ ಬಹುತೇಕ ಕ್ಷೇತ್ರಗಳಲ್ಲಿ ಮಷೀನ್‌ ಲರ್ನಿಂಗ್‌ಗೆ ಭಾರಿ ಬೇಡಿಕೆ ಇದ್ದು, ನೂರಾರು ಜನರಿಗೆ ಉದ್ಯೋಗ ಸಿಗಲಿದೆ. ಈ ಉದ್ದೇಶದೊಂದಿಗೆ ಭಾರತವು ಈಗಾಗಲೇ ಜರ್ಮನಿ, ಆಸ್ಟ್ರೇಲಿಯಾ ಸೇರಿ ಹಲವು ದೇಶಗಳೊಂದಿಗೆ ಕಲಿಕೆ ಹಾಗೂ ತಂತ್ರಜ್ಞಾನ ವಿನಿಮಯ ಒಪ್ಪಂದಗಳನ್ನು ಮಾಡಿಕೊಂಡಿದೆ. ಇದರಿಂದ ಭವಿಷ್ಯದಲ್ಲಿ ಭಾರತದಲ್ಲಿ ಉದ್ಯೋಗಾವಕಾಶಗಳು ಹೆಚ್ಚಲಿವೆ ಎಂದು ಇನ್ಫೋಸಿಸ್‌ನ ಚೀಫ್‌ ಆಪರೇಟಿಂಗ್‌ ಆಫಿಸರ್‌ ಯು.ಬಿ. ಪ್ರವೀಣ್‌ ರಾವ್‌ ಅಭಿಪ್ರಾಯಪಟ್ಟರು.

    ಭವಿಷ್ಯದ ಅಗತ್ಯತೆಗಳನ್ನು ಗಮನದಲ್ಲಿರಿಸಿಕೊಂಡೇ ನಮ್ಮ ಸಂಸ್ಥೆಯು, ಡಿಜಿಟಲ್‌ ಇನ್ನೋವೇಷನ್‌ ಸೆಂಟರ್‌ ಮೂಲಕ ದೇಶೀಯ ಹಾಗೂ ಜಾಗತಿಕ ಪಾಲುದಾರ ಕಂಪನಿಗಳ ಸಹಯೋಗದೊಂದಿಗೆ ಉದ್ಯೋಗಿಗಳನ್ನು ಹೊಸ ಸವಾಲುಗಳಿಗೆ ಸಜ್ಜುಗೊಳಿಸಲು ಹಾಗೂ ಅವರಲ್ಲಿ ಕೌಶಲ್ಯ ಹೆಚ್ಚಿಸಲು ಒತ್ತು ನೀಡಿದೆ. ನಾನಾ ಕಂಪನಿಗಳ ಹಾಗೂ ಶೈಕ್ಷಣಿಕ ಸಂಸ್ಥೆಗಳ ಜತೆ ಕೈಜೋಡಿಸಿ ಕೌಶಲ್ಯ ಕೊರತೆ ನಿವಾರಿಸುವತ್ತ ಹೆಜ್ಜೆ ಇರಿಸಲಾಗಿದೆ ಎಂದರು.

    ತಂತ್ರಜ್ಞಾನ ವಿನಿಮಯ ವಿಚಾರದಲ್ಲಿ ಇಂಡೋ-ಜರ್ಮನ್‌ ಚೇಂಬರ್‌ ಆಫ್‌ ಕಾಮರ್ಸ್‌ ಹಲವು ಉಪಕ್ರಮಗಳನ್ನು ಕೈಗೊಂಡಿದೆ. ಕಾಲೇಜುಗಳು, ವಿಶ್ವವಿದ್ಯಾಲಯಗಳು, ಸ್ಟಾರ್ಟಪ್‌ಗಳ ಜತೆ ಜರ್ಮನಿ ಕೈಜೋಡಿಸಿದೆ. ಪಿಪಿಪಿ ಮಾದರಿಯಲ್ಲಿ ಅನುಷ್ಠಾನಕ್ಕೆ ಬರುವ ಯೋಜನೆಗಳ ಪರಿಣಾಮಕಾರಿ ಜಾರಿಗೆ ಉಭಯ ದೇಶಗಳ ಸರ್ಕಾರಗಳ ಬೆಂಬಲ ಅಗತ್ಯವಾಗಿದೆ,ʼʼ ಎಂದು ಬೆಂಗಳೂರಿನಲ್ಲಿರುವ ಜರ್ಮನಿಯ ಕಾನ್ಸುಲೇಟ್‌ನ ಕಾನ್ಸುಲ್‌ ಜನರಲ್‌ ಅಚಿಮ್‌ ಬುರ್ಕಾಟ್‌ ಹೇಳಿದರು.

    ಬೆಂಗಳೂರಿನಲ್ಲಿ ನೂತನ ಕಚೇರಿ
    ಆಸ್ಟ್ರೇಲಿಯಾದಲ್ಲಿ ಮಷೀನ್‌ ಲರ್ನಿಂಗ್‌ಗೆ ಭಾರಿ ಬೇಡಿಕೆ ಇದ್ದು, ಇಲ್ಲಿನ ಕಂಪನಿಗಳು, ವಿಶ್ವವಿದ್ಯಾಲಯಗಳು, ಕಾಲೇಜುಗಳು ಪಾಲುದಾರಿಕೆಯೊಂದಿಗೆ ಕೈಜೋಡಿಸಲು ಮುಂದೆ ಬಂದರೆ ತಮ್ಮ ಕಂಪನಿ ಎಲ್ಲ ರೀತಿಯ ನೆರವು ನೀಡಲಿದೆ. ಬಂಡವಾಳ ಹೂಡಿಕೆಯೊಂದಿಗೆ ಉತ್ತಮ ಆದಾಯ ಮಾರ್ಗಗಳನ್ನು ಕಂಡುಕೊಳ್ಳಬಹುದು ಎಂದು ವರ್ಚ್ಯುಯಲ್ ಆಗಿ ಪಾಲ್ಗೊಂಡಿದ್ದ ಆಸ್ಟ್ರೇಲಿಯಾದ ಎನ್‌ಆರ್‌ಡಬ್ಲ್ಯೂ ಗ್ಲೋಬಲ್‌ ಬ್ಯುಸಿನೆಸ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಫಿಲಿಕ್ಸ್‌ ನಿಯೊಗ್ರಾಟ್‌ ಗೋಷ್ಠಿಯಲ್ಲಿಯೇ ಭಾರತದ ಟೆಕ್‌ ದಿಗ್ಗಜರಿಗೆ ಆಹ್ವಾನ ನೀಡಿದರು.

    ಈ ಕಂಪನಿಯು ಇತ್ತೀಚಿನ ತಿಂಗಳ ಹಿಂದೆ ಬೆಂಗಳೂರಿನಲ್ಲಿ ನೂತನ ಕಚೇರಿ ತೆರೆದಿದ್ದು, ಅದರ ಮುಖ್ಯ ಪ್ರತಿನಿಧಿ ಅಂಬಿಕಾ ಬನೋತ್ರಾ, ಕಂಪನಿಯು ಮುಂದಿನ ದಿನಗಳಲ್ಲಿ ಬ್ಯುಸಿನೆಸ್‌ ಮಾಡ್ಯುಲ್‌ಗಳನ್ನು ಅನಾವರಣಗೊಳಿಸಲಿದೆ ಎಂದರು.

    ಗೋಷ್ಠಿಯಲ್ಲಿ ಜರ್ಮನಿಯ ಇಂಟೆಲಿಜೆಂಟ್‌ ಟೆಕ್ನಿಕಲ್‌ ಸಿಸ್ಟಮ್ಸ್‌ ಒಎಸ್‌ಟಿ ವೆಸ್ಟ್‌ಫ್ಯಾಲೆನ್‌ ಲಿಪ್ಪೆ ಕಂಪನಿಯ ಸ್ಟ್ರ್ಯಾಟಜಿ ಹಾಗೂ ಆರ್‌ ಅಂಡ್‌ ಡಿ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಪ್ರೊ. ಡಾ. ರೊಮನ್‌ ಡ್ಯುಮಿಟ್ರಿಸ್ಕೂ ಸೇರಿ ಹಲವರು ಪಾಲ್ಗೊಂಡಿದ್ದರು.

    ಏನಿದು ಮಷೀನ್‌ ಲರ್ನಿಂಗ್‌ ?
    ಮಷೀನ್‌ ಲರ್ನಿಂಗ್‌ ಎಂಬುದು ಕೃತಕ ಬುದ್ಧಿಮತ್ತೆಯ ಒಂದು ಮೂಲ ಅಂಶ. ಗಣಕಯಂತ್ರ ಅಥವಾ ಎಲೆಕ್ಟ್ರಾನಿಕ್‌ ಸಾಧನ ತನಗೆ ತಾನೇ ಕಲಿತುಕೊಳ್ಳುವಂತೆ ಅದನ್ನು ಯೋಜಿಸಲಾಗುತ್ತದೆ. ಮೂಲದಲ್ಲಿ ನೋಡುವುದಾದರೆ ಇದೊಂದು ಬಿಗ್‌ ಡೇಟಾಗಳ ವಿಶ್ಲೇಷಣೆ. ಮಾಹಿತಿಯನ್ನು ತನಗೆ ತಾನೇ ತೆಗೆದುಕೊಂಡು ಪ್ರೋಗ್ರಾಮ್‌ಗಳನ್ನು ರೂಪಿಸಿಕೊಳ್ಳುವುದಕ್ಕೆ ಬಳಕೆಯಾಗುತ್ತದೆ. ಗೂಗಲ್‌, ಅಮೆಜಾನ್‌, ಫ್ಲಿಪ್‌ ಕಾರ್ಟ್‌ ಹೀಗೆ ಇ-ಕಾಮರ್ಸ್‌ ವೆಬ್‌ಸೈಟ್‌ಗಳು ಗ್ರಾಹಕರ ಖರೀದಿ ಚರಿತ್ರೆಯ ಅಂಕಿ-ಅಂಶ ಮತ್ತು ದಾಖಲೆ ಸಂಗ್ರಹಿಸಿಕೊಂಡು ನಿಮಗೆ ಏನು ಬೇಕು ಎಂಬುದನ್ನು ಊಹಿಸಿ, ನಿಮ್ಮ ಮೇಲ್‌ಗಳಿಗೆ ನೋಟಿಫಿಕೇಷನ್‌ಗಳನ್ನು ರವಾನಿಸುತ್ತದೆ. ಇದೆಲ್ಲವೂ ಮಷೀನ್‌ ಲರ್ನಿಂಗ್‌ ಚಾಕಚಕ್ಯತೆಯಾಗಿದೆ. ಇನ್ನು ಡ್ರೈವರ್‌ ಲೆಸ್‌ ಕಾರಿನ ಚಾಲನೆಯೂ ಇದಕ್ಕೊಂದು ಉದಾಹರಣೆಯಾಗಿದೆ. ನೇರವಾದ ರಸ್ತೆ ಎಲ್ಲಿದೆ? ತಿರುವು ಬಂದರೆ ಹೇಗೆ ತೆಗೆದುಕೊಳ್ಳಬೇಕು? ಹಂಪ್ ಬಂದರೆ, ಟ್ರಾಫಿಕ್‌ನಲ್ಲಿ ಹೇಗೆ ವಾಹನದ ವೇಗ ನಿಧಾನಗೊಳಿಸಬೇಕು? ಎಲ್ಲದರ ಹಿಂದೆಯೂ ಸೆನ್ಸಾರ್‌ ಹಾಗೂ ಮಷೀನ್‌ ಲರ್ನಿಂಗ್‌ ಕೆಲಸ ಮಾಡುತ್ತಿರುತ್ತದೆ.

    car t cell therapy ಕ್ಯಾನ್ಸರ್ ಚಿಕಿತ್ಸೆಗೆ ಪರಿಣಾಮಕಾರಿ ವಿಧಾನ: ಭಾರತದಲ್ಲೂ ಕೈಗೆಟುಕುವ ದರದಲ್ಲಿ ಸಿಗಬೇಕಿದೆ ಈ ಚಿಕಿತ್ಸೆ

    BENGALURU NOV 19

    ಕ್ಯಾನ್ಸರ್ ಬಾಧೆಗೆ ಪರಿಣಾಮಕಾರಿ ಚಿಕಿತ್ಸೆಯು ಜನರ ಕೈಗೆಟುಕಬೇಕಾದರೆ ದೇಶದಲ್ಲಿ ಕಾರ್ಟಿ ಕಂಪನಿಗಳು ಸ್ಥಾಪನೆಯಾಗಬೇಕು ಎಂದು ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ ವೈದ್ಯವಿಜ್ಞಾನ ಲೇಖಕ ಡಾ.ಸಿದ್ಧಾರ್ಥ ಮುಖರ್ಜಿ Dr Siddartha Mukharji -ಅಭಿಪ್ರಾಯಪಟ್ಟರು.

    ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯನ್ನು ಉದ್ದೇಶಿಸಿ ಗುರುವಾರ ವರ್ಚುಯಲ್ ರೂಪದಲ್ಲಿ ಮಾತನಾಡಿದ ಅವರು, ಪಕ್ಕದ ಚೀನಾದಲ್ಲಿ ಇಂತಹ 300 ಕಂಪನಿಗಳಿದ್ದು, ಅಮೆರಿಕದಲ್ಲಿ ನೂರಾರು ಉದ್ದಿಮೆಗಳಿವೆ. ಆದರೆ, ಐಟಿ ವಲಯದಲ್ಲಿ ಜಗತ್ತಿಗೇ ಮಾದರಿಯಾಗಿರುವ ಭಾರತದಲ್ಲಿ ಕಾರ್ಟಿ ಕಂಪನಿಗಳು ಇಲ್ಲದಿರುವುದು ನೋವಿನ ಸಂಗತಿ ಎಂದರು.

    ಭಾರತವು ಕಂಪ್ಯೂಟರ್ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಅಪಾರ ಪರಿಣತಿ ಸಾಧಿಸಿರುವುದು ನಿಜ. ಆದರೆ ಇಲ್ಲಿ ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳೂ ಹೆಚ್ಚಾಗಿದ್ದು, ಇದಕ್ಕೆ ಕೈಗೆಟುಕುವಂತಹ ಚಿಕಿತ್ಸೆ ಸಿಕ್ಕುತ್ತಿಲ್ಲ. ಇದಕ್ಕಾಗಿ ಎಲ್ಲರೂ ಅಮೆರಿಕ, ಇಂಗ್ಲೆಂಡ್ ಮತ್ತು ಜರ್ಮನಿಗಳಿಗೆ ಹೋಗುವುದು ಸಾಧ್ಯವಿಲ್ಲ. ಆದ್ದರಿಂದ ನಮ್ಮಲ್ಲಿ ವ್ಯವಸ್ಥೆ ಮತ್ತು ಶೋಧನಾ ನಿಧಿ ಹೂಡಿಕೆದಾರರ ಮನೋಭಾವನೆ ಬದಲಾಗಬೇಕಾದ ಜರೂರಿದೆ ಎಂದು ಅವರು ಹೇಳಿದರು.

    ಕ್ಯಾನ್ಸರ್ ಚಿಕಿತ್ಸೆಗೆ ಈಗ ಕಾರ್ಟಿ ಥೆರಪಿ, ಇಮ್ಯುನೋಥೆರಪಿ, ಜೀನ್ ಥೆರಪಿ, ಜೀನ್ ಎಡಿಟಿಂಗ್ ಮುಂತಾದವು ಪ್ರವರ್ಧಮಾನಕ್ಕೆ ಬರುತ್ತಿರುವ ಕ್ರಮಗಳಾಗಿವೆ. ಇವು ಮಕ್ಕಳಲ್ಲಿ ಕಂಡುಬರುವ ಕ್ಯಾನ್ಸರ್, ಮೈಲೋಮಾ, ಲಿಂಫೋಮಾ, ಸ್ತನ ಕ್ಯಾನ್ಸರ್ ಮುಂತಾದವನ್ನು ವಾಸಿ ಮಾಡುವಷ್ಟು ಪರಿಣಾಮಕಾರಿಯಾಗಿವೆ ಎಂದು ಸಿದ್ಧಾರ್ಥ ವಿವರಿಸಿದರು.

    ಕ್ಯಾನ್ಸರ್ ಚಿಕಿತ್ಸೆಯಲ್ಲಿ ಈಗ ರೇಡಿಯೇಷನ್ ಮತ್ತು ಕೀಮೋಥೆರಪಿಗಳಲ್ಲದೆ ಹೊಸ ವಿಧಾನಗಳೂ ಬರುತ್ತಿವೆ. ಆದರೆ, ಇವುಗಳನ್ನು ಸರಿಯಾಗಿ ಗುರುತಿಸುವ ಕೆಲಸವಾಗಿಲ್ಲ. ಚೀನಾ ಸಾಧನೆ ಮಾಡುವುದು ಸಾಧ್ಯವಾದರೆ ಭಾರತವೂ ಮಾಡಬಹುದು ಎಂದು ಅವರು ಅಭಿಪ್ರಾಯಪಟ್ಟರು.

    ಆರೋಗ್ಯ ಕ್ಷೇತ್ರವನ್ನು ರಾಷ್ಟ್ರ ನಿರ್ಮಾಣದ ಭಾಗವೆಂದು ಪರಿಗಣಿಸಬೇಕು. ಇದಕ್ಕಾಗಿ ಸರಕಾರಗಳು ಅಮೆರಿಕದ ಮಾದರಿಯಲ್ಲಿ ಆಯೋಗ ರಚಿಸಿ, 6ರಿಂದ 8 ತಿಂಗಳಲ್ಲಿ ವರದಿ ಪಡೆದುಕೊಳ್ಳಬೇಕು. ಜತೆಗೆ ಅಗತ್ಯ ಭೂಮಿ ಮೀಸಲಿಟ್ಟು, ಬಂಡವಾಳ ನೆರವು, ತೆರಿಗೆ ಕಡಿತ ಮತ್ತು ಇನ್ನಿತರ ಉತ್ತೇಜಕ ಕ್ರಮಗಳನ್ನು ತ್ವರಿತ ಗತಿಯಲ್ಲಿ ಅನುಷ್ಠಾನಕ್ಕೆ ತರಬೇಕು ಎಂದು ಸಲಹೆ ನೀಡಿದರು.

    ರಾಜ್ಯ ಸರಕಾರದ ಜೈವಿಕ ತಂತ್ರಜ್ಞಾನ ವಿಷನ್ ಗ್ರೂಪ್ ಮುಖ್ಯಸ್ಥೆ ಮತ್ತು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಷಾ ಸಂವಾದವನ್ನು ನಡೆಸಿಕೊಟ್ಟರು.


    ಯಾವ ಚಿಕಿತ್ಸಾ ಕ್ರಮಗಳೂ ಇದ್ದಕ್ಕಿದ್ದಂತೆ ಬರುವುದಿಲ್ಲ. ಒಂದೊಂದರ ಹಿಂದೆಯೂ 25-30 ವರ್ಷಗಳ ಪರಿಶ್ರಮ, ತ್ಯಾಗ ಮತ್ತು ಬದ್ಧತೆ ಇದೆ. ಇವೆಲ್ಲ ಬರೀ ಪ್ರಯೋಗಾಲಯಗಳಲ್ಲೇ ಉಳಿದರೆ ವ್ಯರ್ಥ. ಅಮೆರಿಕದಲ್ಲಿ ಒಂದು ಡೋಸ್ ಕಾರ್ಟಿ car t therapy ಥೆರಪಿಗೆ 4-5 ಸಾವಿರ ಡಾಲರ್ ಆಗುತ್ತದೆ. ಅಲ್ಲಿಯ ಶ್ರೀಮಂತರಿಗೂ ಇದು ಕೈಗೆಟುಕುವುದಿಲ್ಲ. ಆದ್ದರಿಂದ ಚಿಕಿತ್ಸೆಗಳು ಜನರಿಗೆ ಅಗ್ಗದ ದರದಲ್ಲಿ ಸಿಗಬೇಕಾದ್ದು ಮುಖ್ಯ. ಇದನ್ನು ಮಾಡಬೇಕಾದ್ದು ಸರಕಾರಗಳ ಕರ್ತವ್ಯ.
    ಡಾ.ಸಿದ್ಧಾರ್ಥ ಮುಖರ್ಜಿ, ಪುಲಿಟರ್ಜರ್ ಪುರಸ್ಕೃತ ವೈದ್ಯಕೀಯ ಲೇಖಕ


    BENGALURU TECH SUMMIT:10 ತಿಂಗಳಲ್ಲಿ ಸೃಷ್ಟಿಯಾದ ಕೋವ್ಯಾಕ್ಸಿನ್ ಅಭಿವೃದ್ಧಿಯ ಯಶೋಗಾಥೆ

    BENGALURU NOV 18

    ಕೋವಿಡ್ ಪಿಡುಗು ದೇಶದ ಮೇಲೆರಗಿದಾಗ ಯಾವುದೇ ಲಸಿಕೆ ಇರಲಿಲ್ಲ. ಇದೊಂದು ಕಂಡು ಕೇಳರಿಯದಂತಹ ಸವಾಲಾಗಿತ್ತು. ಏಕೆಂದರೆ, ಕೇವಲ 10 ತಿಂಗಳಷ್ಟೇ ನಮಗೆ ಕಾಲಾವಕಾಶವಿತ್ತು. ಆದರೆ ಮಿಂಚಿನ ವೇಗದಲ್ಲಿ ಕೆಲಸ ಮಾಡಿದ ನಾವು ಕೋವ್ಯಾಕ್ಸಿನ್-COVAXIN- ಲಸಿಕೆಯನ್ನು ಅಭಿವೃದ್ಧಿ ಪಡಿಸಿದೆವು. ಇದು ನಿಜಕ್ಕೂ ಸವಾಲಿನಿಂದ ಕೂಡಿದ್ದ ಮತ್ತು ಅನನ್ಯ ಅನುಭವ.’

    ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ಗುರುವಾರ ನಡೆದ `ಕೋವಿಡ್ ಲಸಿಕೆಯಲ್ಲಿ ಭಾರತದ ನಾಯಕತ್ವ ಗುಣದ ಪ್ರದರ್ಶನ’ ಗೋಷ್ಠಿಯಲ್ಲಿ, ಭಾರತ್ ಬಯೋಟೆಕ್-Bharath Bio Tech- ಕಂಪನಿಯ ನಿರ್ದೇಶಕ ಡಾ.ವಿ.ಕೃಷ್ಣಮೋಹನ್ ಆಡಿದ ಮಾತುಗಳಿವು.

    ಸಂವಾದಕ್ಕೆ ಚಾಲನೆ ನೀಡಿದ ಡಾ.ಮಹೇಶ್ ಬಾಲಘಾಟ್ ಅವರು `ಕೋವ್ಯಾಕ್ಸಿನ್ ಅಭಿವೃದ್ಧಿಯ ಪಯಣದ ಏಳುಬೀಳುಗಳ ಬಗ್ಗೆ’ ಕೇಳಿದ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದ ಅವರು, “ಕೇಂದ್ರ ಸರಕಾರ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಸರಿಯಾದ ಹೆಜ್ಜೆಗಳನ್ನಿಟ್ಟಿತು; ಜೈವಿಕ ತಂತ್ರಜ್ಞಾನ ಇಲಾಖೆಯು ಮೈ ಕೊಡವಿಕೊಂಡು ಎದ್ದಿತು. ಕೆಲವು ವರ್ಷಗಳ ಹಿಂದೆ ಇಂತಹುದನ್ನು ನಾವು ಕಂಡುಕೇಳರಿಯುವುದು ಸಾಧ್ಯವಿರಲಿಲ್ಲ,’’ ಎಂದರು.

    “ಭಾರತ್ ಬಯೋಟೆಕ್ ಕಂಪನಿಯ ಮುಂದೆ ಕೋವ್ಯಾಕ್ಸಿನ್ ಲಸಿಕೆಯನ್ನು ಭಾರತದಲ್ಲೇ ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ, ಉತ್ಪಾದಿಸುವ ಗುರಿ ಇತ್ತು. ಇದಕ್ಕಾಗಿ ಪಟ್ಟಿರುವ ಪರಿಶ್ರಮಕ್ಕೆ ಬೆಲೆ ಕಟ್ಟುವುದು ಸಾಧ್ಯವಿಲ್ಲ. ಆದರೆ, ಲಸಿಕೆ ಉತ್ಪಾದನೆಯಲ್ಲಿ ಗುಣಮಟ್ಟದೊಂದಿಗೆ ಯಾವುದೇ ರಾಜಿ ಮಾಡಿಕೊಂಡಿಲ್ಲ. ಒಟ್ಟಿನಲ್ಲಿ ದಾಖಲೆ ಸಮಯದಲ್ಲಿ ನಾವು ಕೋಟ್ಯಂತರ ಜನರ ಜೀವವನ್ನು ಉಳಿಸಬಲ್ಲ ಕೋವ್ಯಾಕ್ಸಿನ್ ಲಸಿಕೆಯು ಸುಲಭವಾಗಿ ಸಿಗುವಂತೆ ಮಾಡಿದೆವು” ಎಂದು ಅವರು ನೆನಪಿನ ಸುರುಳಿ ಬಿಚ್ಚಿದರು.

    ಭಾರತದ ವೈದ್ಯಕೀಯ ನಿಯಂತ್ರಣ ವ್ಯವಸ್ಥೆ ಕಳೆದ 10 ವರ್ಷಗಳಲ್ಲಿ ಸಕಾರಾತ್ಮಕವಾಗಿ ಬದಲಾಗಿದೆ. ಕೇಂದ್ರ ಸರಕಾರವು ಈಗ ಲಸಿಕೆ ಅಭಿವೃದ್ಧಿ ಯೋಜನೆಗಳಿಗೆ ಕನಿಷ್ಠ 50 ಲಕ್ಷ ರೂ.ಗಳಿಂದ ಹಿಡಿದು ಗರಿಷ್ಠ 50 ಕೋಟಿ ರೂ.ಗಳವರೆಗೂ ನೆರವು ನೀಡುತ್ತಿದೆ. ಆದ್ದರಿಂದ ಈಗ ಔಷಧ ತಯಾರಿಕೆ ಕಂಪನಿಗಳು ಸರಿಯಾದ ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದು ಕೃಷ್ಣ ಮೋಹನ್ ಪ್ರತಿಪಾದಿಸಿದರು.

    ಸಂವಾದದಲ್ಲಿ ಪಾಲ್ಗೊಂಡಿದ್ದ ಡಾ.ರೆಡ್ಡೀಸ್ ಲ್ಯಾಬೊರೇಟರೀಸ್ ಸಿಇಒ ಡಾ.ದೀಪಕ್ ಸಕ್ರಾ, “ಕೋವಿಡ್ ಸಂದರ್ಭವು ನಮ್ಮೆಲ್ಲರಿಗೂ ಒಳ್ಳೆಯ ಪಾಠ ಕಲಿಸಿತು. ರಷ್ಯಾದ ಕಂಪನಿಗಳಿಂದ ಸಿಕ್ಕಿದ ಸಹಭಾಗಿತ್ವದಿಂದಾಗಿ ನಾವು ಸ್ಪುಟ್ನಿಕ್ ಲಸಿಕೆಯನ್ನು ಅಭಿವೃದ್ಧಿ ಪಡಿಸುವುದು ಸಾಧ್ಯವಾಯಿತು. ಇದರಿಂದ ಭಾರತದ ಜೊತೆಗೆ ಇತರ ಅಭಿವೃದ್ಧಿಶೀಲ ದೇಶಗಳಿಗೂ ನೆರವಾಯಿತು. ಆದರೆ, ಸಂಶೋಧನೆ ಮತ್ತು ಅಭಿವೃದ್ಧಿಯ ವಿಚಾರದಲ್ಲಿ ಭಾರತ ಕ್ರಮಿಸಬೇಕಾದ ಹಾದಿ ಬಹಳಷ್ಟಿದೆ,’ ಎಂದರು.

    ಅರಬಿಂದೋ ಫಾರ್ಮಾದ ಹಿರಿಯ ಉಪಾಧ್ಯಕ್ಷೆ ಡಾ.ದಿವ್ಯಾ ಬಿಜಲ್ವಾನ್ ಅವರು, `ದೇಶದಲ್ಲಿ ವಿಜ್ಞಾನ ಪ್ರತಿಭೆಗಳಿಗೇನೂ ಕೊರತೆ ಇಲ್ಲ. ಆದರೆ ಅದನ್ನು ಗುರುತಿಸಿ, ಸೂಕ್ತ ಸ್ಥಾನಮಾನಗಳನ್ನು ಕೊಡುವ ವಾತಾವರಣ ನಮ್ಮಲ್ಲಿಲ್ಲ. ಇದರ ಬಗ್ಗೆ ಲಸಿಕೆ ಮತ್ತು ಔಷಧ ಕಂಪನಿಗಳು ಅವಲೋಕನ ಮಾಡಿಕೊಂಡು, ತಮ್ಮ ಸಂಕುಚಿತ ಧೋರಣೆಯಿಂದ ಹೊರಬರಬೇಕು’ ಎಂದರು.

    ಸಂವಾದದಲ್ಲಿ ಯಾಪನ್ ಬಯೋಪ್ರೈವೇಟ್ ಲಿಮಿಟೆಡ್ ಸಹಸಂಸ್ಥಾಪಕ ಅತಿನ್ ತೋಮರ್ ಭಾಗವಹಿಸಿದ್ದರು.

    1 ರೂಪಾಯಿ ಕಾಯಿನ್ ಮಾತ್ರ ಪಡೆಯುತ್ತಿದ್ದ ಬುದ್ಧಿಮಾಂದ್ಯನ ಅಂತಿಮಯಾತ್ರೆಗೆ ಜನಸಾಗರ

    ಉಜ್ಜಿನಿ ರುದ್ರಪ್ಪ

    KOTTUR NOV 18

    ಆತನ ಶವಯಾತ್ರೆಗೆ ಇಡೀ ಹಡಗಲಿಯೇ ಸೇರಿತ್ತು. ಬೀದಿ ಬೀದಿಯಲ್ಲಿ ಫ್ಲೆಕ್ಸ್ ಗಳನ್ನು ಹಾಕಲಾಗಿತ್ತು.ಸೇರಿದವರೆಲ್ಲರೂ ಹೀಗಾಗಬಾರದಿತ್ತು ಎಂದು ಕಂಬನಿಗೆರೆಯುತ್ತಿದ್ದರು. ಬಡವರು ಶ್ರೀಮಂತರೆನ್ನದೆ ನಡೆದುಕೊಂಡು, ಬೈಕನ್ನೇರಿ, ಕಾರನ್ನೇರಿ ಸಾವಿರಾರು ಜನರು ಆತನ ಅಂತಿಮ ಯಾತ್ರೆಯಲ್ಲಿ ಭಾಗವಹಿಸಿದ್ದರು.

    ಇಷ್ಟೊಂದು ಜನಪ್ರಿಯತೆ ಇರಬೇಕೆಂದರೆ  ಈತ ಹಡಗಲಿಯ ರಾಜಕಾರಣಿಯೋ, ದೊಡ್ಡ ಶ್ರೀಮಂತನೋ,ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧನೋ,  ಸ್ವಾತಂತ್ರ್ಯ ಹೋರಾಟಗಾರನೋ ಅಥವಾ  ಧಾರ್ಮಿಕ ಗುರುವೋ ಆಗಿರಬೇಕು ಎಂದು ನೀವು ಭಾವಿಸಿದ್ದರೆ ಅದು ತಪ್ಪು . ಈತ ಹಡಗಲಿಯಲ್ಲಿ ಅವರಿವರ ಹತ್ತಿರ ಬಿಕ್ಷೆ ಬೇಡಿ, ನೆರಳಿದ್ದಲ್ಲಿ ಮಲಗಿ , ಯಾರಾದರೂ ಕರೆದು ರೊಟ್ಟಿ ಅಥವಾಇನ್ನೇನಾದರೂ ತಿನ್ನಲು ಕೊಟ್ಟರೆ ತಿಂದು ಗುಡಿ ಗುಂಡಾರದಲ್ಲಿರುತ್ತಿದ್ದ ‘ಹುಚ್ಚ’ ಬಸ್ಯಾ!

    ಬಸ್ಯಾ

    ಒಬ್ಬ ಬುದ್ಧಿ ಮಾಂದ್ಯನ ಶವ ಸಂಸ್ಕಾರಕ್ಕೆ ಇಡೀ ಹಡಗಲಿ ಪಟ್ಟಣ ಜನತೆ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಸಾವಿರ ಸಂಖ್ಯೆಯಲ್ಲಿ ಸೇರಿರುವುದು ಬಹುಶಃ ಜಿಲ್ಲೆ, ರಾಜ್ಯ,ದೇಶದಲ್ಲಿ ಎಲ್ಲಿಯೂ ಇರಲಿಕ್ಕೆ ಸಾಧ್ಯವಿಲ್ಲ. ಶರಣರ ಸಾವನ್ನು ಮರಣದಲ್ಲಿ  ಕಾಣು ಎಂಬಂತೆ ಬಸ್ಯಾ ಸಾವಿನಲ್ಲಿ ಶರಣನಾದ.

    ವೈದ್ಯಕೀಯ ಚಿಕಿತ್ಸೆ ಪಡೆಯದೇ ಬೀದಿ ಬೀದಿ ಅಲೆಯವು ಅನಾಥ ಬುದ್ಧಿಮಾಂದ್ಯರು ಎಲ್ಲಾ ಊರಿನಲ್ಲಿಯೂ ಇರುತ್ತಾರೆ. ಕೆಲವರು ಇಂಥವರಿಗೆ ಕಲ್ಲು ಹೊಡೆಯುವುದು. ಬಾಯಿಗೆ ಬಂದಂತೆ ಬೈಯುವುದು ಮಾಡುತ್ತಾರೆ. ಚಿಕಿತ್ಸೆ ಕೊಡಿಸುವ ಮಾತಿರಲಿ ಇಂಥ ಅನಾಥರನ್ನು ಮನುಷ್ಯರೆಂದೇ ಭಾವಿಸುವುದಿಲ್ಲ.

    ಆದರೆ ಈ ಬಸ್ಯಾ ತುಸು ಭಿನ್ನ. ಈತನಿಗೆ ಬಸ್ಯಾ ಎಂದು ಯಾವಾಗ ನಾಮಕರಣವಾಯಿತೋ ಗೊತ್ತಿಲ್ಲ. ಹುಟ್ಟವಾಗಲೆ ಅರೆ ಹುಚ್ಚನಾಗಿದ್ದ ಬಸ್ಯಾನ ತಲೆ ಸ್ವಲ್ಪ ಚಿಕ್ಕದಾಗಿತ್ತು. ತಾಯಿಯ ಜೊತೆಗಿದ್ದ . ಇತ್ತೀಚಿಗೆ ಈತನ ತಾಯಿಯೂ ತೀರಿದ ಮೇಲೆ ತುಸು ಖಿನ್ನನಾಗಿದ್ದ. ತಾಯಿ ಸತ್ತ ಮೇಲೆ ಸಂಪೂರ್ಣ ಅನಾಥನೇ ಆಗಿ ಬಿಟ್ಟ.

    ಯಾರೂ ಕಂಡರೂ ಪ್ರೀತಿಯಿಂದ ಅಪ್ಪಾಜಿ ಅನ್ನುತ್ತಿದ್ದ. ಮುಖ್ಯವಾಗಿ ತಮಗೆ ಇಷ್ಟವಾದರ ಹತ್ತಿರ ಹೋಗಿ ಕೇಳುತ್ತಿದ್ದದ್ದು ಕೇವಲ ಒಂದೇ ಒಂದು ರೂಪಾಯಿ ಮಾತ್ರ. ಅ ದಿನ ಒಂದು ರೂಪಾಯಿ ಕೊಟ್ಟ ವ್ಯಕ್ತಿಗೆ ಅದೃಷ್ಟವೊ ಅದೃಷ್ಟ. ಆಗದಿದ್ದ ಕೆಲಸಗಳೆಲ್ಲ ಆಗುತ್ತಿದ್ದವು.

    ಈ ಬಸ್ಯಾ ಯಾವುದಾದರೂ ಅಂಗಡಿ. ಹೋಟಲ್ ಮುಂದೆ ನಿಂತು ಒಂದು ರೂಪಾಯಿ ಕೇಳಿದನಂದರೆ. ಆ ದಿನ ಅ ಅಂಗಡಿ. ಹೋಟಲ್ ಗೆ ಭರ್ಜರಿ ವ್ಯಾಪಾರ ಆಗಾಗಿ ಈತನ ಬರುವಿಕೆಗಾಗಿ. ಒಂದು ರೂಪಾಯಿ ಕೇಳಲಿ ಎಂದು ಜನರು ಸದಾ ಕಾಯುತ್ತಿರುವುದು ಹಡಗಲಿಯಲ್ಲಿ ಸಾಮಾನ್ಯ ದೃಶ್ಯ.

    ಮಾಜಿ ಉಪ ಮುಖ್ಯಮಂತ್ರಿ ದಿ. ಎಂ.ಪಿ. ಪ್ರಕಾಶ. ಮಾಜಿ ಸಚಿವ ಹಾಲಿ ಶಾಸಕ ಪಿ.ಟಿ. ಪರಮೇಶ್ವರ ಅಂದ್ರೆ ಈ ಬಸ್ಯಾನಿಗೆ ಅತಿ ಪ್ರೀತಿ ಅವರನ್ನು ಅಪ್ಪಾಜಿ ಅನ್ನುತ್ತಿದ್ದ ಬಸ್ಯಾ. ಯಾರೂ ಎಷ್ಟು ರೊಕ್ಕ ಕೊಟ್ಟರೂ ಬೇಡ ಎನ್ನುತ್ತಿದ್ದ ಈತನಿಗೆ ಬೇಕಾಗಿದ್ದು ಕೇವಲ ಒಂದು ರೂಪಾಯಿ ಮಾತ್ರ. ಅದು ಕೂಡ ನಾಣ್ಯವೇ ಆಗಬೇಕಿತ್ತು. ನೋಟು ಕೊಟ್ಟರೆ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ.

    ಆಗಾಗಿ ಇಡೀ ಹಡಗಲಿ ಜನತೆಪಾಲಿಗೆ ಈ ಬಸ್ಯಾ ಒಂದು ರೀತಿಯಲ್ಲಿ ಅದೃಷ್ಟವಂತ. ವರಕೊಡುವ ದೇವರಾಗಿದ್ದ. ದಿನವೂ ಬಸ್ಯಾನಿಗಾಗಿ ಕಾಯುತ್ತಿದ್ದರು. ಮಾತನಾಡಿಸಲು ಹಂಬಲಿಸುತ್ತಿದ್ದರು. ಬಸ್ಯಾನಿಂದ ತನ್ನ ಸಂಕಷ್ಟ ಪರಿಹಾರವಾಗಲಿ. ಅದೃಷ್ಟ ಕುದುರಲಿ ಎಂದು ಕಾಯುತ್ತಿದ್ದರೂ ಈ ‘ದೇವ ಮಾನವ ‘ ಬಸ್ಯಾ ತನಗೆ ಇಷ್ಟವಾದಾಗ. ಇಷ್ಟವಾದವರಲ್ಲಿ ಮಾತ್ರ ಕೇವಲ ಒಂದು ರೂಪಾಯಿ ಕೇಳುವ ರೂಪಾಯಿ ರಾಜನಾಗಿದ್ದ.

    ನವೆಂಬರ್ 15ರಂದು ಅ ದಿನ ಹಡಗಲಿಯಲ್ಲಿ ಜಿಟಿಜಿಟಿ ಮಳೆ. ಪಟ್ಟಣದ ಲಾಲ್ ಬಹಾದ್ದೂರ್ ಶಾಸ್ತ್ರಿ ಸರ್ಕಲ್ ಹತ್ತಿರ ರಾತ್ರಿ ಅಪರಿಚಿತ ವಾಹನ ಕಾಲ ಮೇಲೆ ಹರಿದು ಹೋಗಿದೆ. ಮೊದಲೆ ನಿಶಕ್ತನಾಗಿದ್ದ. ನೋಡಿದವರು ಅಯ್ಯೊ ನಮ್ಮ ಬಸ್ಯಾ ಎಂದು ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜವಾಗದೆ ಕೊನೆ ಉಸಿರು ಎಳೆದ. ಸತ್ತಾಗ ಅವನಿಗೆ 45 ವರ್ಷ.

    ಬಸ್ಯಾನ ಕುರಿತು ಆತನ ಒಳ್ಳೆತನ,ಒಂದು ರೂಪಾಯಿ ಕೊಟ್ಟವರಿಗೆ ಒಲಿಯುತ್ತಿದ್ದ ಅದೃಷ್ಟ, ಹಡಗಲಿಯ ವರದಾದನ ಕುರಿತು ಇಂದಿಗೂ ಪಟ್ಟಣವಾಸಿಗಳು ಕಂಬನಿ ಸುರಿಸುತ್ತಾರೆ. ಶರಣನ ಸಾವನ್ನು ಮರಣದಲ್ಲಿ ಕಾಣು ಎಂಬಂತೆ ಬಸ್ಯಾ ಶರಣನಾಗಿದ್ದಾನೆ.

    ಕನ್ನಡಪ್ರಭ ಸೇರಿದಂತೆ ನಾಡಿ ಹಲವು ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿರುವ ಉಜ್ಜಿನಿ ರುದ್ರಪ್ಪ ಮಾನವಾಸಕ್ತಿಯ ಸಂಗತಿಗಳನ್ನು ಹೆಕ್ಕಿ ತೆಗೆಯಬಲ್ಲ ಚತುರ ವರದಿಗಾರ. ಈಗ ಕೊಟ್ಟೂರಿನಲ್ಲಿ ನೆಲಸಿರುವ ಅವರು ಸ್ವತಂತ್ರ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    INDIAN FESTIVAL: ಇಂದು ತುಳಸಿ ಕಲ್ಯಾಣ ಉತ್ಥಾನ ದ್ವಾದಶಿ

    ಎಂ. ವಿ. ಶಂಕರಾನಂದ

    ತುಳಸಿಯೊಂದಿಗೆ ಶ್ರೀವಿಷ್ಣುವಿನ (ಬಾಲಕೃಷ್ಣನ ಮೂರ್ತಿಯ) ವಿವಾಹವನ್ನು ಮಾಡುವುದೇ ತುಳಸಿ ವಿವಾಹದ ವಿಧಿಯಾಗಿದೆ. ವಿವಾಹದ ಹಿಂದಿನ ದಿನ ತುಳಸಿ ಬೃಂದಾವನವನ್ನು ಬಣ್ಣ ಹಚ್ಚಿ ಅಲಂಕರಿಸುತ್ತಾರೆ. ಬೃಂದಾವನದಲ್ಲಿ ಕಬ್ಬು, ಚೆಂಡು ಹೂವುಗಳನ್ನು ಹಾಕುತ್ತಾರೆ ಮತ್ತು ಅದರ ಬುಡದಲ್ಲಿ ಹುಣಸೇಕಾಯಿ ಮತ್ತು ನೆಲ್ಲಿಕಾಯಿಗಳನ್ನು ಇಡುತ್ತಾರೆ. ಈ ವಿವಾಹದ ವಿಧಿಯನ್ನು ಸಾಯಂಕಾಲ ಮಾಡುತ್ತಾರೆ.

    ವೈಶಿಷ್ಟ್ಯ :ತುಳಸಿ ವಿವಾಹದ ಬಳಿಕ ಚಾತುರ್ಮಾಸದಲ್ಲಿ ಕೈಗೊಂಡ ಎಲ್ಲ ವ್ರತಗಳನ್ನು ಸಮಾಪ್ತಗೊಳಿಸುತ್ತಾರೆ. ಚಾತುರ್ಮಾಸದಲ್ಲಿ ಯಾವ ಪದಾರ್ಥಗಳನ್ನು ವರ್ಜ್ಯ ಮಾಡಿರುತ್ತಾರೆಯೋ, ಆ ಪದಾರ್ಥಗಳನ್ನು ಬ್ರಾಹ್ಮಣರಿಗೆ ದಾನ ಮಾಡಿ ನಂತರ ತಾವೂ ಸೇವಿಸುತ್ತಾರೆ.

    ದೀಪಾವಳಿ ಹಬ್ಬದ ನಂತರ ಬರುವ ಇನ್ನೊಂದು ಹಬ್ಬ ತುಳಸಿ ಹಬ್ಬ ಅಥವಾ ತುಳಸಿ ಮದುವೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಈ ಪವಿತ್ರದಿನವನ್ನು ತುಳಸಿ ಮದುವೆಯನ್ನಾಗಿ ಆಚರಿಸುವರು. ಅಂದಿನ ದಿನ ರೇವತಿ ನಕ್ಷತ್ರದ ಯೋಗವಿದ್ದರೆ ಇನ್ನೂ ಶ್ರೇಷ್ಠ. (ಈ ದಿನದ ವಿಶೇಷ ಹಾಡುಗಳು ಮತ್ತು ವಿವರಗಳಿಗೆ ನಮ್ಮ ಈ ವಿಡಿಯೋ ನೋಡಿ)

    ಉತ್ಥಾನವೆಂದರೆ ಏಳು ಎಂಬರ್ಥ. ಶ್ರೀಮನ್ನಾರಾಯಣನು ತನ್ನ ನಿದ್ರಾವಸ್ಥೆಯಿಂದ ಹೊರ ಬಂದು ತನ್ನ ಭಕ್ತಾದಿಗಳಿಗೆ ದರ್ಶನ ಕೊಡುವನೆಂಬ ಪ್ರತೀತಿ ಇದೆ. ಆ ಭಗವಂತನು ಹಾಲ್ಗಡಲಿನಲ್ಲಿ ಮಲಗಿದ್ದು, ಅವನನ್ನು ಸುಪ್ರಭಾತ ಸೇವೆಯ ಮೂಲಕ ಎಬ್ಬಿಸುವುದರಿಂದ ಈ ವ್ರತವನ್ನು ಕ್ಷೀರಾಬ್ಧಿ ವ್ರತವೆಂದೂ ಕರೆಯುವರು.

    ಕಾರ್ತಿಕ ಶುಕ್ಲ ಪಕ್ಷ ಏಕಾದಶಿಯಂದು ಪ್ರಾತಃಕಾಲದಲ್ಲಿ ಕುಂಭದಾನವನ್ನು ಮಾಡಿ ಉಪವಾಸ ವ್ರತವನ್ನಾಚರಿಸಬೇಕು. ಅಂದು ಸೋಮವಾರವಾಗಿದ್ದು, ಉತ್ತರಾಷಾಢ ನಕ್ಷತ್ರವಾಗಿದ್ದರೆ ತುಂಬಾ ಶ್ರೇಷ್ಠ. ಅಂದಿನ ರಾತ್ರಿಯಂದೇ ವಿಷ್ಣುವನ್ನು ಎಬ್ಬಿಸಬೇಕು. ಹಾಗೆ ಎಬ್ಬಿಸುವಾಗ ಈ ಕೆಳಕಂಡ ವೇದೋಕ್ತ ಮಂತ್ರವನ್ನು ಹೇಳಬೇಕು.

    ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿದಧೇ ಪದಮ್‌।
    ಸಮೂಢಮಸ್ಯ ಪಾಗೇಂಸುರೇ।।

    ಮಳೆಗಾಲದ ನಾಲ್ಕು ತಿಂಗಳುಗಳಲ್ಲಿ ಮಳೆಯು ಹೆಚ್ಚಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಸನ್ಯಾಸಿಗಳು ದೇಶ ಸಂಚಾರವನ್ನು ಮಾಡದೇ ಒಂದೆಡೆಯಲ್ಲಿ, ಚಾತುರ್ಮಾಸ್ಯ ವ್ರತವನ್ನು ಆಚರಿಸುವರು. ಆ ಸಂದರ್ಭದಲ್ಲಿ ಶ್ರೀಮನ್ನಾರಾಯಣನು ನಿದ್ರಾವಸ್ಥೆಯಲ್ಲಿರುತ್ತಾನೆಂದೂ, ಚಾತುರ್ಮಾಸ್ಯ ಮುಗಿಯುವ ವೇಳೆಯಲ್ಲಿ ಅವನನ್ನು ಎಬ್ಬಿಸಲು ಸುಪ್ರಭಾತವನ್ನು ಹಾಡುವರು. ಅದು ಸಂಕ್ಷಿಪ್ತವಾಗಿ ಹೀಗಿದೆ.

    ಉತ್ತಿಷ್ಠೋತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ।
    ಉತ್ತಿಷ್ಠ ಕಮಲಾಕಾಂತ ತ್ರೈಲೋಕ್ಯಂ ಮಂಗಲಂಕುರು।।

    ಚಾತುರ್ಮಾಸ್ಯದ ಕೊನೆಯ ಹಂತದ ಏಕಾದಶಿಯ ರಾತ್ರಿ ಒಂದು ಕುಂಭದಲ್ಲಿ ಉದ್ದಿನಕಾಳಿನ ಪ್ರಮಾಣದ ಚಿನ್ನದ ಮೀನಿನ ಮೂರ್ತಿಗೆ ಪಂಚಾಮೃತ ಅಭಿಷೇಕ ಮಾಡಿ, ಪೂಜಿಸಿ, ಅಂದು ಜಾಗರಣೆಯನ್ನು ಮಾಡಿ, ದ್ವಾದಶಿಯ ಬೆಳಗ್ಗೆ ಮತ್ತೆ ಪೂಜಿಸಿ ಬ್ರಾಹ್ಮಣರಿಗೆ ದಕ್ಷಿಣೆ ಸಮೇತವಾಗಿ ದಾನ ಮಾಡಬೇಕು.

    ಅಂದು ಧಾತ್ರೀ ದೇವಿಯ ಸ್ವರೂಪವಾದ ನೆಲ್ಲಿಯ ಮರವನ್ನು ಪೂಜಿಸಿ, ಧಾತ್ರೀ, ಶಾಂತಿ, ಮೇಧಾ, ಪ್ರಕೃತಿ, ವಿಷ್ಣುಪತ್ನೀ, ಮಹಾಲಕ್ಷ್ಮೀ, ರಮ್ಯಾ, ಕಮಲಾ, ಇಂದಿರಾ, ಲೋಕಮಾತಾ, ಕಲ್ಯಾಣೀ, ಕಮನೀಯಾ, ಸಾವಿತ್ರೀ, ಜಗದ್ಧಾತ್ರೀ, ಗಾಯತ್ರೀ, ಸುಧೃತೀ, ಅವ್ಯಕ್ತಾ, ವಿಶ್ವರೂಪಾ, ಸುರೂಪಾ ಮತು ಅಬ್ಧಿಭವಾ ಎಂಬ ಹೆಸರುಗಳಿಂದ ಅರ್ಚಿಸಬೇಕು. ಕೆಲವು ಮನೆಗಳಲ್ಲಿ ತುಲಸೀ ಮತ್ತು ಶ್ರೀಮನ್ನಾರಾಯಣನಿಗೆ ವಿವಾಹವನ್ನು ಮಾಡುವ ಪದ್ಧತಿಯೂ ಇದೆ.

    ಭಗವಂತನಿಗೆ ಪುರುಷಸೂಕ್ತದಿಂದಲೂ ಮತ್ತು ತುಳಸಿ ದೇವಿಗೆ ಶ್ರೀಸೂಕ್ತದಿಂದಲೂ ಅರ್ಚನೆ ಮಾಡಬೇಕು. ತುಳಸಿಯ ಎದುರಿಗೆ ಶ್ರೀ ಕೃಷ್ಣನ ಪ್ರತಿಮೆಯನ್ನಿರಿಸಿ ಮಧ್ಯದಲ್ಲಿ ಅಂತರಪಟವನ್ನು ಹಿಡಿದು ಮದುವೆ ಮಾಡಿಸುತ್ತಾರೆ. ನೆಲ್ಲಿಯಲ್ಲಿ ವಾತ ಪಿತ್ತಗಳನ್ನು ಶಮನ ಮಾಡುವ ಶಕ್ತಿಯಿದೆ. ರಕ್ತದೋಷವನ್ನೂ ನಿವಾರಿಸುವ ಶಕ್ತಿಯಿದೆ. ಅದರ ಹಾರವನ್ನು ತುಳಸೀ ಮತ್ತು ನಾರಾಯಣನಿಗೆ ಹಾಕುವುದು ಪದ್ಧತಿ. ಪ್ರಾತಃಕಾಲದಲ್ಲಿ ಪೂಜೆಯನ್ನು ಮಾಡಿದರೆ, ಸಂಜೆಯ ಸಮಯದಲ್ಲಿ ತುಳಸಿ ವಿವಾಹವನ್ನು ಮಾಡುವರು.

    This image has an empty alt attribute; its file name is M-V-SHNAKARANANDA.jpg

    ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.

    INDIAN STOCK MARKET : ಕಳೆದ ವಾರದ ಪೇಟೆಯ ನೋಟ

    ಇತ್ತೀಚಿನ ದಿನಗಳಲ್ಲಿ ಹೂಡಿಕೆದಾರರು ಅದರಲ್ಲೂ ವಿಶೇಷವಾಗಿ ಸಣ್ಣ ಹೂಡಿಕೆದಾರರು ಷೇರುಪೇಟೆಯಲ್ಲಿ ಹೂಡಿಕೆ ಆರಂಭಿಸಿದಾಗ ಇದ್ದ ಮೂಲ ಉದ್ದೇಶವನ್ನು ಮರೆತು ಪೇಟೆಯ ಏರಿಳಿತಗಳೊಂದಿಗೆ ತೇಲಾಡಿ ಪರಿಸ್ಥಿತಿಯ ಕೈಗೊಂಬೆಯಂತೆ ಚಟುವಟಿಕೆ ನಡೆಸುವುದು ಹೆಚ್ಚಾಗಿದೆ. ಇದಕ್ಕೆ ಕಾರಣ ಆನ್‌ ಲೈನ್‌ ಟ್ರೇಡಿಂಗ್‌ ನ ವ್ಯಾಮೋಹಕ್ಕೆ ಒಲಿದು, ವೆಚ್ಚವನ್ನು ಉಳಿಸಿದೆನೆಂಬ ಭಾವನೆಯಿಂದ ಖುಷಿ ಪಡುತ್ತಾರೆ, ಆರಂಭದಲ್ಲಿ. ಆದರೆ ನಂತರದಲ್ಲಿ ಪೇಟೆಯು ಖರೀದಿಸಿದ ಷೇರಿಗೆ ಪೇಟೆಯು ಯಾವ ರೀತಿಯ ಸ್ಪಂದನವನ್ನು ನೀಡಿ ಅನುಕೂಲ ಕಲ್ಪಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

    ಲಾಭಾಂಶ ಪ್ರಕಟಿಸಿದ ಕಂಪನಿಗಳು:

    • ಗ್ಲೆನ್‌ ಮಾರ್ಕ್‌ ಲೈಫ್‌ ಸೈನ್ಸಸ್ :‌ರೂ.10.50 ( ನಿಗದಿತ ದಿನಾಂಕ: 23/11/2021)
    • ಇರ್ಕಾನ್‌ ಇಂಟರ್ನ್ಯಾಶನಲ್‌ : ರೂ.0.70 ( ನಿಗದಿತ ದಿನಾಂಕ: 23/11/2021)
    • ಒ ಎನ್‌ ಜಿ ಸಿ : ರೂ.5.50 ( ನಿಗದಿತ ದಿನಾಂಕ: 23/11/2021)
    • ಟೈಡ್‌ ವಾಟರ್‌ ಆಯಿಲ್‌ : ರೂ.20.00 ( ನಿಗದಿತ ದಿನಾಂಕ: 23/11/2021)
    • ಕೊಚ್ಚಿನ್‌ ಶಿಪ್‌ ಯಾರ್ಡ್‌ : ರೂ.6.00 ( ನಿಗದಿತ ದಿನಾಂಕ: 24/11/2021)
    • ಹಿಂದೂಸ್ಥಾನ್‌ ಏರೋನಾಟಿಕ್ಸ್‌ : ರೂ.14.00 ( ನಿಗದಿತ ದಿನಾಂಕ: 24/11/2021)
    • ನ್ಯಾಟ್ಕೋ ಫಾರ್ಮಾ : ರೂ.0.50 ( ನಿಗದಿತ ದಿನಾಂಕ: 24/11/2021)
    • ಆಯಿಲ್‌ ಇಂಡಿಯಾ : ರೂ.3.50 ( ನಿಗದಿತ ದಿನಾಂಕ: 24/11/2021)
    • ಅಮರರಾಜಾ ಬ್ಯಾಟರೀಸ್‌ : ರೂ.4.00 ( ನಿಗದಿತ ದಿನಾಂಕ: 25/11/2021)
    • ಕ್ರಿಸಿಲ್‌ : ರೂ.9.00 ( ನಿಗದಿತ ದಿನಾಂಕ: 25/11/2021)
    • ಗುಜರಾತ್‌ ಥೆಮಿಸ್‌ ಬಯೋ : ರೂ.7.00 ( ನಿಗದಿತ ದಿನಾಂಕ: 25/11/2021)
    • ಹಿಂದುಜಾ ಗ್ಲೋಬಲ್‌ ಸೊಲೂಷನ್ಸ್‌ ರೂ.10.00 ( ನಿಗದಿತ ದಿನಾಂಕ: 25/11/2021)
    • ಪವರ್‌ ಫೈನಾನ್ಸ್‌ ಕಾರ್ಪರೇಷನ್‌ : ರೂ.2.50 ( ನಿಗದಿತ ದಿನಾಂಕ: 25/11/2021)
    • ರಾಷ್ಟ್ರೀಯ ಕೆಮಿಕಲ್ಸ್‌ ಅಂಡ್‌ ಫರ್ಟಿಲೈಸರ್ಸ್: ರೂ.1.35 ( ನಿಗದಿತ ದಿನಾಂಕ: 25/11/2021)
    • ರೈಟ್ಸ್‌ : ರೂ.4.00 ( ನಿಗದಿತ ದಿನಾಂಕ: 25/11/2021)
    • ಭಾರತ್‌ ಫೋರ್ಜ್‌ : ರೂ.1.50 ( ನಿಗದಿತ ದಿನಾಂಕ: 26/11/2021)
    • ಕಾವೇರಿ ಸೀಡ್‌ ಕಂಪನಿ : ರೂ.4.00 ( ನಿಗದಿತ ದಿನಾಂಕ: 26/11/2021)
    • ಪಿ ಟಿ ಸಿ ಇಂಡಿಯಾ : ರೂ. 2.00 ( ನಿಗದಿತ ದಿನಾಂಕ: 26/11/2021)

    ವಾರದ ವಿಸ್ಮಯಕಾರಿ ಬೆಳವಣಿಗೆಗಳು:

    • ಟೈಡ್‌ ವಾಟರ್‌ ಆಯಿಲ್‌ ಕಂಪನಿ ತನ್ನ ತ್ರೈಮಾಸಿಕ ಫಲಿತಾಂಶವನ್ನು 12 ರಂದು ಪ್ರಕಟಿಸುವ ಕಾರ್ಯ ಸೂಚಿ ಪ್ರಕಟಿಸಿದ ದಿನ ಷೇರಿನ ಬೆಲೆ ರೂ.1622 ರಿಂದ ರೂ.1,686 ರವರೆಗೂ ಏರಿಕೆ ಪ್ರದರ್ಶಿಸಿ ನಂತರದ ದಿನ ರೂ.1789 ರವರೆಗೂ ಏರಿಕೆ ಕಂಡು ರೂ.1,717 ಕ್ಕೆ ಕುಸಿಯಿತು. ದಿನಾಂಕ 12 ರಂದು ಪ್ರಕಟಿಸಲಿರುವ ಫಲಿತಾಂಶಕ್ಕೂ ಮುನ್ನವೇ ಏರಿಳಿತಗಳು ಪ್ರದರ್ಶಿಸಿದಂತಾಗಿದೆ.
    • ಲಕ್ಷ್ಮಿ ಆರ್ಗ್ಯಾನಿಕ್‌ ಕೆಮಿಕಲ್ಸ್‌ ಕಂಪನಿ ಷೇರಿನ ಬೆಲೆ ಸೋಮವಾರದಂದು ರೂ.409 ರ ಸಮೀಪ ಕೆಳಗಿನ ಸರ್ಕ್ಯುಟ್‌ ನಲ್ಲಿದ್ದು ಮಂಗಳವಾರದಂದು ಚಟುವಟಿಕೆ ಆರಂಭವಾದ ನಂತರ ಷೇರಿನ ಬೆಲೆ ಗರಿಷ್ಠ ಆವರಣ ಮಿತಿ ತಲುಪಿ ನಂತರ ರೂ.423 ರ ಸಮೀಪಕ್ಕೆ ಹಿಂದಿರುಗಿತು. ವಾರಾಂತ್ಯದಲ್ಲಿ ರೂ.413 ರ ಸಮೀಪ ಕೊನೆಗೊಂಡಿದೆ.
    • ಇಂಡಿಯಾ ಬುಲ್ಸ್‌ ಹೌಸಿಂಗ್‌ ಫೈನಾನ್ಸ್‌ ಕಂಪನಿಯ ಷೇರಿನ ಬೆಲೆ ಬುಧವಾರದಂದು ರೂ.258 ನ್ನು ತಲುಪಿದ್ದು, ಶುಕ್ರವಾರ ರೂ.213 ರವರೆಗೂ ಇಳಿಕೆ ಕಂಡು ರೂ.230 ರ ಸಮೀಪ ಕೊನೆಗೊಂಡಿದೆ. ಶುಕ್ರವಾರ ಪ್ರಕಟಿಸಿದ ಫಲಿತಾಂಶ ಪ್ರೋತ್ಸಾಹದಾಯಕವಾಗಿಲ್ಲ ಎಂಬ ಕಾರಣಕ್ಕೆ ದಿನದ ಮದ್ಯಂತರದಲ್ಲಿ ಚಷೇರಿನ ಬೆಲೆ ರೂ.213 ರ ಸಮೀಪಕ್ಕೆ ಕುಸಿದಿತ್ತು.

    *ಕಲ್ಯಾಣ್‌ ಜುವೆಲ್ಲರ್ಸ್‌ ಕಂಪನಿಯು ಈ ವರ್ಷ ಪ್ರತಿ ರೂ.10 ರ ಮುಖಬೆಲೆಯ ಷೇರಿಗೆ ರೂ.87 ರಂತೆ ಆರಂಭಿಕ ಷೇರು ವಿತರಣೆ ಮಾಡಿದೆ. ನಂತರದಲ್ಲಿ ಮೇ ತಿಂಗಳಲ್ಲಿ ರೂ.56 ರವರೆಗೂ ಕುಸಿದು ನಂತರ ಜೂನ್‌ ತಿಂಗಳಲ್ಲಿ ರೂ.89 ರವರೆಗೂ ಏರಿಕೆ ಕಂಡಿತು. ತದನಂತರದಲ್ಲಿ ಪೇಟೆಯು ಉತ್ತುಂಗಕ್ಕೆ ತಲುಪಿದರೂ ಸಹ ಅದು ವಿತರಣೆ ಬೆಲೆಯನ್ನೂ ಸಹ ತಲುಪದಾಗಿದೆ. ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಉತ್ತಮ ಫಲಿತಾಂಶ ಪ್ರಕಟಿಸಿದರೂ ಅದು ವಿತರಣೆ ಬೆಲೆ ತಲುಪದಾಗಿದೆ. ರೂ.10 ರ ಮುಖಬೆಲೆ, ಲಾಭಗಳಿಸುವ ಕಂಪನಿಯು ಇಷ್ಠು ಕಡಿಮೆಬೆಲೆಯಲ್ಲಿದೆ ಎಂಬುದೂ ಸಹ ವಿಸ್ಮಯಕಾರಿ ಅಂಶವಾಗಿದೆ.

    *ಕ್ಲಾರಿಯಂಟ್‌ ಕಂಪನಿಯು, ಕೆಳಮಧ್ಯಮ ಶ್ರೇಣಿಯ ಕಂಪನಿಯಾದರೂ ಸಹ, ಎಷ್ಠರಮಟ್ಟಿಗೆ ಹೂಡಿಕೆದಾರ ಸ್ನೇಹಿ ಎಂದರೆ ಸುಮಾರು 20 ವರ್ಷಗಳಲ್ಲಿ ಪ್ರತಿ ಒಂದು ಷೇರಿಗೆ ರೂ.650 ಕ್ಕೂ ಹೆಚ್ಚಿನ ಲಾಭಾಂಶವನ್ನು ವಿತರಿಸಿದ ಕಂಪನಿಯಾಗಿದೆ. ಈ ಕಂಪನಿಯ ಷೇರಿನ ಬೆಲೆ ಒಂದು ತಿಂಗಳ ಹಿಂದಷ್ಠೇ ರೂ.625 ರ ವರೆಗೂ ಏರಿಕೆ ಕಂಡು ನಂತರದಲ್ಲಿ ಶುಕ್ರವಾರ 12 ರಂದು ಕಂಪನಿಯ ಸೆಪ್ಟೆಂಬರ್‌ ತ್ರೈಮಾಸಿಕ ಫಲಿತಾಂಶವು ನಿರೀಕ್ಷಿತ ಮಟ್ಟದಲ್ಲಿ ಇಲ್ಲದ ಕಾರಣ ಷೇರಿನ ಬೆಲೆಯು ರೂ.534 ರವರೆಗೂ ಕುಸಿದು ರೂ.541 ರವರೆಗೂ ಏರಿಕೆ ಕಂಡಿದೆ. 2020 ರಲ್ಲಿ ರೂ.151 ರೂಪಾಯಿಗಳ ಲಾಭಾಂಶ ವಿತರಿಸಿದರೆ, 2021 ರಲ್ಲಿ ಪ್ರತಿ ಷೇರಿಗೆ ರೂ.65 ರ ಲಾಭಾಂಶ ವಿತರಿಸಿದೆ. ಷೇರಿನ ಬೆಲೆಯು 2001 ರಲ್ಲಿ ರೂ.36 ರ ಕನಿಷ್ಠದ ಸಮೀಪವಿದ್ದ ಷೇರಿನ ಬೆಲೆಯು 2006 ರಲ್ಲಿ ರೂ.395 ಕ್ಕೆ ಏರಿಕೆ ಕಂಡು, 2009 ರಲ್ಲಿ ರೂ.144 ರ ಸಮೀಪಕ್ಕೆ ಇಳಿಯಿತು. 2011 ರಲ್ಲಿ ರೂ.854 ಕ್ಕೆ ಏರಿಕೆ ಕಂಡು 2013 ರಲ್ಲಿ ರೂ.371 ರವರೆಗೂ ಕುಸಿಯಿತು. 2015 ಕ್ಕೆ ರೂ.1,180 ಕ್ಕೆ ಜಿಗಿಯಿತು. 2019 ರಲ್ಲಿ ರೂ.265 ರ ಸಮೀಪಕ್ಕೆ ಕುಸಿದು 2020 ರಲ್ಲಿ ರೂ.193 ರ ಸಮೀಪಕ್ಕೆ ಜಾರಿತು. ಆದರೆ ಈ ವರ್ಷ ರೂ.642 ರವರೆಗೂ ಜಿಗಿದು ಈಗ ರೂ.541 ರ ಸಮೀಪವಿದೆ.

    *‌ಪೆಂಟಾ ಮೀಡಿಯಾ ಗ್ರಾಫಿಕ್ಸ್ ಕಂಪನಿಯು 2000 ದಲ್ಲಿನ ಷೇರುಪೇಟೆ ಹಗರಣದ ಸಮಯದಲ್ಲಿ ಪ್ರತಿ ಷೇರಿಗೆ ರೂ.3,000 ಕ್ಕೂ ಹೆಚ್ಚಿನ ದರದಲ್ಲಿ ವಹಿವಾಟಾಗುತ್ತಿದ್ದ ಷೇರಾಗಿದ್ದು, ಕಾಲಕ್ರಮೇಣ ಅದು ಕುಸಿಯುತ್ತಾ ಬಂದು ಸಧ್ಯ 30 ಪೈಸೆಗಳಲ್ಲಿದ್ದು, ಇದನ್ನು ವಹಿವಾಟಿನಿಂದ ಅಮಾನತುಗೊಳಿಸಲಾಗಿದೆ. ಆದರೂ ಗ್ರೇಡೆಡ್‌ ಸರ್ವೆಲನ್ಸ್ ಮೆಕ್ಯಾನಿಸಂ ಸ್ಟೇಜ್‌ 3 ರ ಅಡಿಯಲ್ಲಿ ಪ್ರತಿ ಸೋಮವಾರ ಹೆಚ್ಚಿನ ಸುರಕ್ಷಾ ಠೇವಣಿಯೊಂದಿಗೆ ವಹಿವಾಟಿಗೆ ಅನುಮತಿಸಲಾಗಿದೆ. ಈ ಕಂಪನಿ 2001 ರಲ್ಲಿ ಪ್ರತಿ ಷೇರಿಗ ರೂ.3 ರಂತೆ ಡಿವಿಡೆಂಡ್‌ ವಿತರಿಸಿದ ನಂತರ ಕಾರ್ಪೊರೇಟ್‌ ಫಲಗಳನ್ನು ವಿತರಿಸಿಲ್ಲ.

    ಟಾಟಾ ಸ್ಟೀಲ್‌ ಬಿ ಎಸ್‌ ಎಲ್‌ ವಿಲೀನ ವಿಚಾರ:

    ಈ ಹಿಂದೆ ಭೂಷಣ್‌ ಸ್ಟೀಲ್‌ ಎಂದಿದ್ದ ಈ ಕಂಪನಿಯು ಐಬಿಸಿ ನಿಯಮದಡಿ ಟಾಟಾ ಸ್ಟೀಲ್‌ ಕಂಪನಿಯು 2018 ರಲ್ಲಿ ತೆಕ್ಕೆಗೆ ಸೇರಿಕೊಂಡಿತು. ಈಗ ಈ ಕಂಪನಿಯನ್ನು ಟಾಟಾ ಸ್ಟೀಲ್‌ ಕಂಪನಿಯಲ್ಲಿ ವಿಲೀನಗೊಳ್ಳಿಸಲಿರುವ ಕಾರಣ ಸೋಮವಾರದಿಂದ ಟಾಟಾ ಸ್ಟೀಲ್‌ ಬಿ ಎಸ್‌ ಎಲ್‌ ಷೇರುಗಳು ವಹಿವಾಟಾಗುವುದಿಲ್ಲ. ಪ್ರತಿ 15 ಟಾಟಾ ಸ್ಟೀಲ್‌ ಬಿ ಎಸ್‌ ಎಲ್‌ ಗೆ ಒಂದು ಟಾಟಾ ಸ್ಟೀಲ್‌ ಷೇರುಗಳನ್ನು ವಿಲೀನ ಪ್ರಕ್ರಿಯಯಲ್ಲಿ ನೀಡಲಾಗುವುದು.

    ಹೊಸ ಷೇರಿನ ವಿಚಾರ :

    • ಎಫ್‌ ಎಸ್‌ ಎನ್‌ ಇ-ಕಾಮರ್ಸ್‌ ವೆಂಚರ್ಸ್‌ ಲಿ ( ನೈಕಾ) ಷೇರುಗಳು ನವೆಂಬರ್‌ 10 ರಂದು ಬಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿವೆ. ಆರಂಭದ ದಿನ ರೂ.2001 ರ ಸಮೀಪ ಆರಂಭವಾಗಿ ರೂ.2,206 ರ ಸಮೀಪದಲ್ಲಿ ಕೊನೆಗೊಂಡಿತು. ಈ ಕಾರಣ ಕಂಪನಿಯ ಮಾರ್ಕೆಟ್‌ ಕ್ಯಾಪಿಟಲೈಸೇಷನ್‌ ರೂ.1 ಲಕ್ಷಕೋಟಿ ಮೀರಿತು ಆದರೆ 11 ರಂದು ರೂ.2,050 ರವರೆಗೂ ಕುಸಿದು ಮಾರ್ಕೆಟ್‌ ಕ್ಯಾಪಿಟಲೈಸೇಷನ್‌ ರೂ.1 ಲಕ್ಷ ಕೋಟಿಯೊಳಗೆ ಕುಸಿದರೂ, ಶೀಘ್ರವಾಗಿ ಚೇತರಿಕೆ ಕಂಡು ರೂ.2,216 ರಲ್ಲಿ ದಿನದ ಅಂತ್ಯಕಂಡಿತು. 12 ರಂದು ಷೇರಿನ ಬೆಲೆ ರೂ.2,409 ನ್ನು ತಲುಪಿ ರೂ.2,358 ರ ಸಮೀಪ ಕೊನೆಗೊಂಡು ಪರ್ಸನಲ್ ಉತ್ಪನ್ನಗಳ ದೈತ್ಯ ಕಂಪನಿ ಹಿಂದೂಸ್ಥಾನ್‌ ಯೂನಿಲೀವರ್‌ ಷೇರಿನ ಬೆಲೆ ಸಮೀಪದಲ್ಲಿದೆ. ಹಿಂದೂಸ್ಥಾನ್‌ ಯೂನಿಲೀವರ್‌ ಕಂಪನಿಯು ನೈಕಾ ಕಂಪನಿಯ ಉತ್ಪನ್ನವಾದ ಅಲಂಕಾರಿಕ ಸಾಮಾಗ್ರಿಗಳ ಜೊತೆಗೆ ನಿತ್ಯೋಪಯೋಗಿ ಪದಾರ್ಥಗಳಾದ ಸೋಪ್‌ ಗಳು, ಟೂತ್‌ ಪೇಸ್ಟ್ ಗಳು, ಕಾಫಿ ಮತ್ತು ಟೀ, ಹಾರ್ಲಿಕ್ಸ್‌ ನ ಹಲವು ವಿಧಗಳು ಮುಂತಾದವುಗಳನ್ನು ತನ್ನ ತೆಕ್ಕೆಯಲ್ಲಿರಿಸಿಕೊಂಡಿರುವ ಕಂಪನಿಯಾಗಿದೆ. ಷೇರಿನ ಬೆಲೆಗಳು ಸರಿಸಮನಾಗಿರುವುದರಿಂದ ಷೇರುದಾರರು ಹೊಸ ಕಂಪನಿಯಿಂದ ಮತ್ತೊಂದು ಬಲಿಷ್ಠ ಕಂಪನಿಗೆ ಬದಲಾಗಲೂ ಸಹ ಉತ್ತಮ ಅವಕಾಶವೆನಿಸಬಹುದು.
    • ಫಿನೋ ಪೇಮೆಂಟ್‌ ಬ್ಯಾಂಕ್

    ಈ ಕಂಪನಿಯು ಪ್ರತಿ ಷೇರಿಗೆ ರೂ.577 ರಂತೆ ಅಕ್ಟೋಬರ್‌ ತಿಂಗಳಲ್ಲಿ ಆರಂಭಿಕ ಷೇರು ವಿತರಿಸಿತು. 12 ರಂದು ಶುಕ್ರವಾರದಂದು ಬಿ ಗುಂಪಿನಲ್ಲಿ ವಹಿವಾಟಿಗೆ ಬೆಡುಗಡೆಯಾಗಿದೆ. ಆರಂಭದ ದಿನ ರೂ.511 ರವರೆಗೂ ಕುಸಿದು ರೂ.545 ರ ಸಮೀಪ ಕೊನೆಗೊಂಡು ಆರಂಭಿಕ ಷೇರು ವಿತರಣೆಯಲ್ಲಿ ಹೂಡಿಕೆ ಮಡಿದವರಿಗೆ ಹಾನಿಯುಂಟುಮಾಡಿದೆ.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    NEW EDUCATION POLICY :ಉನ್ನತ ಶಿಕ್ಷಣ: ಭವಿಷ್ಯದ ಕಾರ್ಯತಂತ್ರ

    BENGALURU NOV 13

    ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಫಲವಾಗಿ ಇನ್ನು 20 ವರ್ಷಗಳಲ್ಲಿ ಭಾರತವು ಜಗತ್ತಿನಲ್ಲಿ ಅಗ್ರಸ್ಥಾನಕ್ಕೇರಲಿದ್ದು, ದೇಶದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ರಾಮಬಾಣವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರತಿಪಾದಿಸಿದ್ದಾರೆ.

    ರಾಜ್ಯ ಸರಕಾರ ಮತ್ತು ಅಂತಾರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ISDC) ಜಂಟಿಯಾಗಿ ಎನ್ಇಪಿ ಕುರಿತು ಏರ್ಪಡಿಸಿದ್ದ ಪ್ರಪ್ರಥಮ ಸಮಾವೇಶ `ಉನ್ನತ ಶಿಕ್ಷಣ: ಭವಿಷ್ಯದ ಕಾರ್ಯತಂತ್ರ’ವನ್ನು ಉದ್ದೇಶಿಸಿ ಶನಿವಾರ ಅವರು ಮಾತನಾಡಿದರು.

    ಶಿಕ್ಷಣವನ್ನು ಬದಲಿಸುವ ಮೂಲಕ ದೇಶವನ್ನು ಬದಲಿಸಬಹುದು ಎನ್ನುವುದು ಪ್ರಧಾನಿ ಮೋದಿಯವರಿಗೆ ಗೊತ್ತಾಗಿದೆ. ಆದ್ದರಿಂದಲೇ ದೇಶದಲ್ಲಿ 34 ವರ್ಷಗಳ ನಂತರ ಎನ್ಇಪಿ ಜಾರಿಗೆ ತರಲಾಗುತ್ತಿದ್ದು, ದುರ್ಬಲ ವರ್ಗಗಳ ಮಕ್ಕಳಿಗೆ ಈಗ ಶಿಕ್ಷಣವನ್ನು ಪ್ರಧಾನ ಹಕ್ಕನ್ನಾಗಿ ಮಾಡಲಾಗಿದೆ. ಎನ್ಇಪಿ ನೂರಕ್ಕೆ ನೂರರಷ್ಟು ಸಕಾರಾತ್ಮಕವಾಗಿದೆ ಎಂದು ಅವರು ವಿವರಿಸಿದರು.

    ಹಿಂದಿನ ಶಿಕ್ಷಣ ಪದ್ಧತಿಯಲ್ಲಿ ಶೇ.20ರಷ್ಟು ವಿದ್ಯಾರ್ಥಿಗಳು ಮಾತ್ರ ಉದ್ಯೋಗಕ್ಕೆ ಅರ್ಹರಾಗುತ್ತಿದ್ದರು. ಆದರೆ ಈಗ ಕೌಶಲ್ಯ ಮತ್ತು ಡಿಜಿಟಲ್ ಕಲಿಕೆಗೆ ಒತ್ತು ನೀಡಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಉದ್ಯೋಗಕ್ಕೆ ಬೇಕಾದ ಅರ್ಹತೆ ಮತ್ತು ಸಾಮರ್ಥ್ಯಗಳನ್ನು ತನ್ನದಾಗಿಸಿಕೊಳ್ಳಲಿದ್ದಾನೆ ಎಂದು ಅವರು ನುಡಿದರು.

    ಎನ್ಇಪಿಯಿಂದ ಸರಕಾರಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಮೊದಲು ಲಾಭವಾಗಲಿದೆ. ಇಲ್ಲಿರುವ ಮಕ್ಕಳಲ್ಲಿ ಶೇ.95ರಷ್ಟು ವಿದ್ಯಾರ್ಥಿಗಳು ದುರ್ಬಲ ವರ್ಗಗಳಿಗೆ ಸೇರಿದವರೇ ಆಗಿದ್ದಾರೆ. ಆದ್ದರಿಂದ ಎನ್ಇಪಿಯಿಂದ ಶಿಕ್ಷಣದ ವಾಣಿಜ್ಯೀಕರಣ ನಡೆಯುತ್ತಿದೆ ಎನ್ನುವ ಮಾತುಗಳನ್ನು ನಂಬಿ ದಿಕ್ಕು ತಪ್ಪಬಾರದು. ಅಲ್ಪಸಂಖ್ಯಾತರೂ ಸೇರಿದಂತೆ ಯಾರೂ ಅನಗತ್ಯ ಭಯ, ಸಂಶಯಗಳನ್ನು ಇಟ್ಟುಕೊಳ್ಳಬಾರದು ಎಂದು ಅಶ್ವತ್ಥನಾರಾಯಣ ಹೇಳಿದರು.

    ಹಳೆಯ ವ್ಯವಸ್ಥೆಯಲ್ಲಿ ಜ್ಞಾನದ ಒಂದು ತುಣುಕಷ್ಟೇ ಸಿಕ್ಕುತ್ತಿತ್ತು. ಈಗ ದೇಶೀಯವಾದ ಮತ್ತು ಪರಿಪೂರ್ಣವಾದ ಬೋಧನೆ ಸಾಧ್ಯವಾಗಲಿದೆ. ಜಾಗತೀಕರಣದ ಯುಗದಲ್ಲಿ ಶಿಕ್ಷಣ ಸಂಸ್ಥೆಗಳ ಸುಧಾರಣೆ ಮತ್ತು ಹೊಸ ಸಂಸ್ಥೆಗಳ ಅಗತ್ಯ ಎರಡೂ ಇದೆ. ಗುಣಮಟ್ಟದ ವಿಚಾರದಲ್ಲಿ ಸಬೂಬುಗಳನ್ನು ಇನ್ನು ಮುಂದೆ ಸಹಿಸಿಕೊಳ್ಳುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

    ಎನ್ಇಪಿ ಶಿಕ್ಷಣ ಸಂಸ್ಥೆಗಳಿಗೆ ಸ್ವಾತಂತ್ರ್ಯ ಮತ್ತು ಸ್ವಾಯತ್ತೆ ನೀಡಲಿದೆ. ಇದು ಸಮಕಾಲೀನ ಅಗತ್ಯಗಳನ್ನು ಗಮನಕ್ಕೆ ತೆಗೆದುಕೊಂಡಿದ್ದು, ಎಲ್ಲರನ್ನೂ ಒಳಗೊಳ್ಳಲಿದೆ. ವಿಶ್ವ ಗುಣಮಟ್ಟದ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಹೊಂದುವ ಮೂಲಕ ಜಾಗತಿಕ ಮಟ್ಟದ ಶಿಕ್ಷಣವು ಮಕ್ಕಳಿಗೆ ದೊರೆಯುವಂತೆ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.

    ಕಾರ್ಯಕ್ರಮದಲ್ಲಿ ಐಎಸ್ ಡಿಸಿ ಕಾರ್ಯನಿರ್ವಾಹಕ ನಿರ್ದೇಶಕ ಟಾಮ್ ಜೋಸೆಫ್, ನಿರ್ದೇಶಕಿ ತೆರೇಸಾ ಜಾಕೋಬ್ಸ್, ಕಾಲೇಜು ಶಿಕ್ಷಣ ಆಯುಕ್ತ ಪಿ.ಪ್ರದೀಪ, ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ.ಗೋಪಾಲಕೃಷ್ಣ ಜೋಶಿ ಮುಂತಾದವರು ಉಪಸ್ಥಿತರಿದ್ದರು.

    ಆರ್ಟ್ ಫಾರ್ ಹಾರ್ಟ್ -ರೇಖೆಗಳ ಓಟ, ಕಲಾತ್ಮಕ ನೋಟ

    ವಿ ಎಸ್ ನಾಯಕ ಬಳಕೂರು

    ಮಕ್ಕಳಲ್ಲಿ ಅಗಾಧವಾದ ಶಕ್ತಿಯಿದೆ. ಅವರಲ್ಲಿ ಅಡಗಿರುವ ಅಗಾಧವಾದ ಶಕ್ತಿಯನ್ನು ಹೊರತರಬೇಕಾದರೆ ಸರಿಯಾದ ಮಾರ್ಗದರ್ಶನ ನೀಡಿದರೆ ಅವರು ತಮ್ಮ ಜೀವನದಲ್ಲಿ ಸಾಧನೆಯ ಶಿಖರದಲ್ಲಿ ಮುಂದುವರಿಯುತ್ತಾರೆ. ಅದೇ ರೀತಿ ಕಲೆಯೆಂಬುದು ಒಂದಲ್ಲ ಒಂದು ರೀತಿಯಲ್ಲಿ ಮಕ್ಕಳಲ್ಲಿ ಅಡಗಿರುತ್ತದೆ. ಸರಿಯಾದ ಸಂದರ್ಭಕ್ಕೆ ಸರಿಯಾದ ಮಾರ್ಗದರ್ಶನ ಗುರಿ ತೋರಿದರೆ ಜೀವನದಲ್ಲಿ ಯಾರು ಊಹಿಸಲಾರದ ಕಲಾವಿದರಾಗಿ ಹೊರ ಹೊಮ್ಮುವುದರಲ್ಲಿ ಸಂದೇಹವಿಲ್ಲ.

    ಕಲಾವಿದ ವಿಜಯ್ ಕುಮಾರ್ ಯಾದವ್

    ಇಂತಹ ಎಳೆಯ ಮಕ್ಕಳಲ್ಲಿ ಅಡಗಿದ ಕಲಾಪ್ರತಿಭೆಯನ್ನು ಹೊರಹೊಮ್ಮಿಸಲು ಬೆಂಗಳೂರಿನ ಮಲ್ಲೇಶ್ವರದ ಮಾರ್ಗೋಸಾ ರಸ್ತೆಯಲ್ಲಿ ಆರ್ಟ್ ಫಾರ್ ಹಾರ್ಟ್ ಎಂಬ ಕಲಾ ಸಂಸ್ಥೆಯನ್ನು ಪ್ರಾರಂಭಿಸಿದ ಕೀರ್ತಿ ಕಲಾವಿದ ವಿಜಯ್ ಕುಮಾರ್ ಯಾದವ್ ಅವರಿಗೆ ಸಲ್ಲಬೇಕು. ಇವರು ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಅಧ್ಯಯನವನ್ನು ಮುಗಿಸಿ ಉತ್ತಮ ಕಲಾಕಾರರಾಗಿ ಹೊರಹೊಮ್ಮಿ ತಾವು ಕೂಡ ಹಲವಾರು ಕಲಾ ಪ್ರತಿಭೆಗಳನ್ನು ತರುವ ಪ್ರಯತ್ನವನ್ನು ಮಾಡಿದ್ದಾರೆ.

    ಇವರ ಕಲಾ ಸಂಸ್ಥೆ ವಿಭಿನ್ನವಾದ ಕಲಾ ಕಾಳಜಿಯನ್ನು ಬೆಳೆಸುವುದರ ಮೂಲಕ ಚಿಣ್ಣರಲ್ಲಿ ಅಡಗಿರುವ ಕಲಾಪ್ರತಿಭೆಯನ್ನು ಹೊರಹೊಮ್ಮಿಸಲು ಅದ್ಭುತವಾದ ಪ್ರಯತ್ನವನ್ನು ಮಾಡಿರುವುದು ಶ್ಲಾಘನೀಯ. ಇಲ್ಲಿ ಬರುವ ಚಿಕ್ಕ ಮಕ್ಕಳು ತಮಗೆ ಅರಿವಿಲ್ಲದಂತೆ ವಿಭಿನ್ನ ಕಲಾಕೃತಿಗಳನ್ನು ರಚಿಸುವುದರ ಮೂಲಕ ಕಲಾಸಕ್ತರ ಮಡಿಲಿಗೆ ವಿಶೇಷವಾದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ಇವರ ಕಲಾ ಸಂಸ್ಥೆಯಲ್ಲಿ ಮೂರು ವಿಭಾಗದ ಲ್ಲಿ ವಿದ್ಯಾರ್ಥಿಗಳನ್ನು ವಿಂಗಡಿಸಿ ಅವರವರ ಬುದ್ಧಿ ಮಟ್ಟದಲ್ಲಿ ಕಲಾ ತರಬೇತಿಯನ್ನು ಕೊಡುವುದರ ಮೂಲಕ ಎಲ್ಲರೂ ಹುಬ್ಬೇರಿಸುವ ನಿಟ್ಟಿನಲ್ಲಿ ಕಲಾವಿದರನ್ನು ಹೊರ ತರುವ ಪ್ರಯತ್ನವನ್ನು ಮಾಡಿರುವುದು ನಿಜವಾಗಿಯೂ ಮೆಚ್ಚಲೇಬೇಕು.

    ಚಿಕ್ಕಮಕ್ಕಳಿಗೆ ಕಲಾ ತರಬೇತಿಯನ್ನು ಕೊಡುವುದು ಸುಲಭದ ಕೆಲಸವಲ್ಲ ಬಹಳ ತಾಳ್ಮೆಯಿಂದ ಅವರಿಗೆ ಕಲಾ ತರಬೇತಿಯನ್ನು ಮೂಲಕ ಸಮಾಜಕ್ಕೆ ಒಳ್ಳೆಯ ಅವರನ್ನು ಪರಿಚಯಿಸುವ ಕಾರ್ಯವನ್ನು ಮಾಡಿದ್ದಾರೆ. ಇಲ್ಲಿ ಕಲಿತ ಹಲವಾರು ಕಲಾ ವಿದ್ಯಾರ್ಥಿಗಳು ರಾಜ್ಯ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಕಲಾಕಾರರಾಗಿ ಹೊರಹೊಮ್ಮಿದ್ದಾರೆ ಇವರು ರಚಿಸಿದ ಒಂದೊಂದು ಕಲಾಕೃತಿಗಳು ಕೂಡ ಪ್ರತಿಯೊಬ್ಬರನ್ನು ನಿಬ್ಬೆರಗಾಗಿಸುತ್ತದೆ. ಉತ್ತಮ ಕಲಾತ್ಮಕ ನೋಟ ಉಳ್ಳ ವಿಭಿನ್ನ ಕಲಾಕೃತಿಗಳ ಸರಮಾಲೆಗಳು ಪ್ರತಿಯೊಬ್ಬ ಚಿಕ್ಕ ಮಕ್ಕಳಿಂದ ಹಿಡಿದು ಕಲೆಯನ್ನು ಕಲಿಯಲು ಬರುವ ಎಲ್ಲರಿಗೂ ಕೂಡ ಪೂರ್ತಿಯ ಸೆಲೆಯಾಗಿ ಹೊರಹೊಮ್ಮಲಿದೆ.

    ಇಂತಹ ನಿಟ್ಟಿನಲ್ಲಿ ವಿಜಯ್ ಕುಮಾರ್ ಯಾದವ್ ಅದ್ಭುತ ಕಲಾ ಕಾರ್ಯವನ್ನು ಮಾಡಿರುವುದು ಮೆಚ್ಚಲೇಬೇಕು. ಇವರು ಬೆಂಗಳೂರಿನ ಯಶವಂತಪುರದಲ್ಲಿ ಕೂಡ ಇನ್ನೊಂದು ಶಾಖೆಯನ್ನು ಆರಂಭಿಸಿದ್ದಾರೆ. ಇಲ್ಲಿ ವಿದ್ಯಾರ್ಥಿಗಳು ರಚಿಸಿದ ನಿಸರ್ಗ ಚಿತ್ರಗಳು. ಪುರಾಣ ಪುಣ್ಯ ಕಥೆಗಳಲ್ಲಿ ಬರುವ ದೇವರ ಚಿತ್ರಗಳು ಮಹಾನ್ ಸಾಧಕರ ಚಿತ್ರಗಳು ಹೀಗೆ ಒಂದಕ್ಕಿಂತ ಒಂದು ವಿಭಿನ್ನ ಕಲಾಕೃತಿಗಳು ಕಲಾಸಕ್ತರ ಮನಸೂರೆಗೊಳ್ಳುತ್ತದೆ

    ವಿಜಯ್ ಕುಮಾರ್ ಯಾದವ್ ರವರು ಹೇಳುವ ಹಾಗೆ ಕಲೆ ಎಂಬುದು ತಪಸ್ಸು ಅದನ್ನು ಶ್ರದ್ಧೆಯಿಂದ ಮಾಡಿದರೆ ಯಶಸ್ಸು ನಿಜವಾಗಿಯೂ ಕೂಡ ಅವರ ಬೆನ್ನ ಹಿಂದೆ ಇರುತ್ತದೆ ಮುಖ್ಯವಾಗಿ ಅವರಿಗೆ ಬೇಕಾಗಿರುವುದು ಮಾಡುವ ಕೆಲಸದಲ್ಲಿ ಶ್ರದ್ಧೆ ಆಸಕ್ತಿ ಗುರಿ ಇದ್ದರೆ ಸಾಕು ಅಸಾಧ್ಯವಾದುದನ್ನು ಸಾಧಿಸಬಹುದಾಗಿದೆ ಎಂದು ಹೇಳುತ್ತಾರೆ.

    ಉತ್ತಮ ನುರಿತ ಕಲಾ ಶಿಕ್ಷಕರ ತಂಡ ಭವಿಷ್ಯದ ಉತ್ತಮ ಕಲಾವಿದರನ್ನು ಗುರುತಿಸುವಲ್ಲಿ ರೂಪಿಸುವಲ್ಲಿ ಉತ್ತಮವಾದ ಕಾರ್ಯವನ್ನು ಮಾಡುತ್ತಿದೆ. ಇವರ ಕಲಾ ಸೇವೆಗೆ ನಿಜವಾಗಿಯೂ ಪಾಲಿಸಲೇಬೇಕು. ವಿಜಯ್ ಕುಮಾರ್ ರವರ ಕಲಾ ಸೇವೆ ಹೀಗೆ ಮುಂದುವರೆಯಲಿ ಉತ್ತಮ ಕಲಾವಿದರನ್ನು ನೀಡುವುದರ ಮೂಲಕ ಕಾರ್ಯವನ್ನು ಮುಂದುವರಿಸಲಿ ಎಂದು ಅಭಿನಂದಿಸಲು ದೂರವಾಣಿ ಸಂಖ್ಯೆ
    9448687636.

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

    BENGALURU TECH SUMMIT : ಮೊದಲ ಬಾರಿಗೆ ಸಂಯುಕ್ತ ಅರಬ್ ಸಂಸ್ಥಾನ, ವಿಯಟ್ನಾಂ, ಯೂರೋಪಿಯನ್ ಯೂನಿಯನ್ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಭಾಗಿ

    BENGALURU NOV 12

    ನ.17ರಿಂದ 19ರವರೆಗೆ ನಗರದಲ್ಲಿ ನಡೆಯಲಿರುವ 24ನೇ ವರ್ಷದ `ಬೆಂಗಳೂರು ತಂತ್ರಜ್ಞಾನ ಶೃಂಗ’ದಲ್ಲಿ-bengaluru Tech summit -(ಬಿಟಿಎಸ್-2021) ಇದೇ ಮೊದಲ ಬಾರಿಗೆ ಸಂಯುಕ್ತ ಅರಬ್ ಸಂಸ್ಥಾನ, ವಿಯಟ್ನಾಂ, ಯೂರೋಪಿಯನ್ ಯೂನಿಯನ್ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಪಾಲ್ಗೊಳ್ಳುತ್ತಿವೆ ಎಂದು ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

    ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ಜಾಗತಿಕ ನಾವೀನ್ಯತಾ ಮೈತ್ರಿಕೂಟವು (ಜಿಐಎ) ಕೈಗೊಂಡಿರುವ ರಚನಾತ್ಮಕ ಕ್ರಮಗಳಿಂದಾಗಿ 30ಕ್ಕೂ ಹೆಚ್ಚು ದೇಶಗಳೊಂದಿಗೆ ಶಿಕ್ಷಣ, ನವೋದ್ಯಮ, ಸಂಶೋಧನೆ ಹಾಗೂ ಅಭಿವೃದ್ಧಿ ಸಹಭಾಗಿತ್ವಕ್ಕೆ ಮುಂದಡಿ ಇಡಲಾಗಿದೆ ಎಂದರು.

    ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಇದೇ ಪ್ರಥಮ ಬಾರಿಗೆ ಅಮೆರಿಕ-ಭಾರತ ವಾಣಿಜ್ಯ ಸಮಿತಿ ಮತ್ತು ವರ್ಚುಯಲ್ ರೂಪದಲ್ಲಿ ಆಸ್ಟ್ರೇಲಿಯಾದ ಸಿಡ್ನಿ ವಾಣಿಜ್ಯ ವಿಚಾರ ವಿನಿಮಯ ಶೃಂಗಸಭೆಯ ಮತ್ತು ಬಿಟಿಎಸ್ ಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದಾರೆ. ಈ ಸಂಘಟನೆಗಳು ರಾಜ್ಯದೊಂದಿಗೆ ತಮ್ಮ ತಂತ್ರಜ್ಞಾನ ಪರಿಣತಿಯನ್ನು ಪರಸ್ಪರ ನೆಲೆಯಲ್ಲಿ ಪ್ರದರ್ಶಿಸಲಿವೆ. ಅಮೆರಿಕದ ಜತೆಗಿನ ಸಹಭಾಗಿತ್ವವು ನಾವೀನ್ಯತೆಯ ಕ್ಷೇತ್ರದಲ್ಲಿ ಮತ್ತಷ್ಟು ಅಂತಾರಾಷ್ಟ್ರೀಯ ಸರಕಾರಕ್ಕೆ ಅವಕಾಶ ಸೃಷ್ಟಿಸಲಿದೆ ಎಂದು ಅವರು ಆಶಾಭಾವನೆ ವ್ಯಕ್ತಪಡಿಸಿದರು. ಬಿಟಿಎಸ್-2021ರಲ್ಲಿ 30ಕ್ಕೂ ಹೆಚ್ಚು ದೇಶಗಳು ಭಾಗವಹಿಸುತ್ತಿವೆ.

    ಜಾಗತಿಕ ಹೂಡಿಕೆ ಮೈತ್ರಿಕೂಟದ ಭಾಗವಾಗಿ ಆಸ್ಟ್ರೇಲಿಯಾ ನ್ಯೂಸೌತ್ ವೇಲ್ಸ್ ಪ್ರಾಂತ್ಯದ ಉದ್ಯೋಗ, ಹೂಡಿಕೆ ಮತ್ತು ಪ್ರವಾಸೋದ್ಯಮ ಸಚಿವ ಸ್ಟುವರ್ಟ್ ಏಯರ್ಸ್, ಜರ್ಮನಿಯ ನಾರ್ತ್ ರೀನ್-ವೆಸ್ಟ್ ಫಾಲಿಯಾ ಪ್ರಾಂತ್ಯದ ಆರ್ಥಿಕ, ನಾವೀನ್ಯತೆ ಮತ್ತು ಡಿಜಿಟಲೀಕರಣ ಸಚಿವ ಪ್ರೊ.ಆಂಡ್ರಿಯಾಸ್ ಪಿಂಕ್ ವರ್ಟ್, ಫಿನ್ಲೆಂಡಿನ ಸಾರಿಗೆ ಮತ್ತು ಸಂಪರ್ಕ ಸಚಿವ ಟಿಮೋ ಹರಕ್ಕಾ ಹಾಗೂ ವಿಯಟ್ನಾಂನ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ಮಾಜಿ ಸಚಿವ ನುಯೆನ್ ಕ್ವಾನ್ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

    ಇದಲ್ಲದೆ, ಜಾಗತಿಕ ಮಟ್ಟದಲ್ಲಿ ತಮ್ಮ ತಾಂತ್ರಿಕ ಪರಿಣತಿಗೆ ಹೆಸರಾಗಿರುವ ಅಮೆರಿಕದ ದಾವೋಸ್ ನಲ್ಲಿರುವ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಎಎಫ್) ಸಂಸ್ಥಾಪಕ ಮತ್ತು ಮುಖ್ಯಸ್ಥ ಪ್ರೊ.ಕ್ಲಾಸ್ ಶ್ವಾಬ್, ಭಾರತೀಯ ಮೂಲದ ವಿಜ್ಞಾನಿ ಮತ್ತು ಲೇಖಕ ಡಾ.ಸಿದ್ಧಾರ್ಥ ಮುಖರ್ಜಿ, ಚೆಕ್ ಪಾಯಿಂಟ್ ಕಂಪನಿಯ ಸ್ಥಾಪಕ ಮತ್ತು ಸಿಇಒ ಗಿಲ್ ಶ್ವೆಡ್, ಆಪರೇಷನ್ಸ್ ಆಪಲ್ ಇಂಕ್ ಸಮೂಹದ ಉಪಾಧ್ಯಕ್ಷೆ ಪ್ರಿಯಾ ಬಾಲಸುಬ್ರಹ್ಮಣ್ಯಂ, ಮೈಕ್ರೋಸಾಫ್ಟ್ ಇಂಡಿಯಾದ ಮುಖ್ಯಸ್ಥ ಅನಂತ್ ಮಹೇಶ್ವರಿ, ಕಿಂಡ್ರೈಲ್ ಕಂಪನಿಯ ಸಿಇಒ ಮಾರ್ಟಿನ್ ಶ್ರೋಟರ್ ಮತ್ತು ಟೆಲ್ಸ್ಟ್ರಾ ಕಂಪನಿಯ ಪಾಲುದಾರ ಗ್ಯಾವೆನ್ ಸ್ಟ್ಯಾಂಡನ್ ಸೇರಿದಂತೆ 75ಕ್ಕೂ ಹೆಚ್ಚು ಆಹ್ವಾನಿತರು ವಿಚಾರಗೋಷ್ಠಿಗಳಲ್ಲಿ ಮಾತನಾಡಲಿದ್ದಾರೆ ಎಂದು ಅಶ್ವತ್ಥನಾರಾಯಣ ಹೇಳಿದರು.

    ನಾವೀನ್ಯತೆ ಮತ್ತು ತಂತ್ರಜ್ಞಾನ ವಲಯದ ಹತ್ತಾರು ಧಾರೆಗಳಲ್ಲಿ ಅಂತಾರಾಷ್ಟ್ರೀಯ ಸಹಭಾಗಿತ್ವವನ್ನು ಹೊಂದುವುದು ರಾಜ್ಯದ ಉದ್ದೇಶವಾಗಿದ್ದು, ಜಿಐಎ ಇದನ್ನು ನನಸು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಯೂರೋಪಿಯನ್ ಒಕ್ಕೂಟದೊಂದಿಗೆ ಇದೇ ಮೊದಲ ಬಾರಿಗೆ ನವೋದ್ಯಮಗಳನ್ನು ಕುರಿತು ವಿಚಾರಗೋಷ್ಠಿ ಏರ್ಪಡಿಸಲಾಗುತ್ತಿದೆ. ಈ ಮೂಲಕ ರಾಜ್ಯವು ಜಾಗತಿಕ ಮಟ್ಟದಲ್ಲಿ ತನ್ನ ತಂತ್ರಜ್ಞಾನ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ ಎಂದು ಅವರು ನುಡಿದರು.

    ಪತ್ರಿಕಾಗೋಷ್ಠಿಯಲ್ಲಿ ರಾಜ್ಯದೊಂದಿಗೆ ಜಿಐಎ ಸಹಭಾಗಿತ್ವ ಹೊಂದಿರುವ ಆಸ್ಟ್ರಲಿಯಾ, ಡೆನ್ಮಾರ್ಕ್, ಫಿನ್ಲೆಂಡ್, ಜರ್ಮನಿ, ಜಪಾನ್, ಲಿಥುವೇನಿಯಾ, ಸ್ವೀಡನ್, ಸ್ವಿಟ್ಜರ್ಲೆಂಡ್ ಮತ್ತು ಯೂರೋಪಿಯನ್ ಒಕ್ಕೂಟಗಳ ಕೌನ್ಸಲ್ ಜನರಗಳು ಭಾಗವಹಿಸಿದ್ದರು. ಕೆಲವರು ವರ್ಚುವಲ್ ಮೂಲಕ‌.ಭಾಗವಹಿಸಿದ್ದರು.

    ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ್, ಎಸ್ಟಿಪಿಐ ನಿರ್ದೇಶಕ ಶೈಲೇಂದ್ರಕುಮಾರ್ ತ್ಯಾಗಿ ಮತ್ತು  ನವೋದ್ಯಮ ವಿಷನ್ ಗ್ರೂಪಿನ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್ ಮಾತನಾಡಿದರು.

    ಸೈಬರ್ ಸೆಕ್ಯುರಿಟಿ, ಡಿಜಿಟಲೀಕರಣಕ್ಕೆ ಒತ್ತು

    ಬಿಟಿಎಸ್-2021ರಲ್ಲಿ ಮುಖ್ಯವಾಗಿ ಸೈಬರ್ ಸೆಕ್ಯುರಿಟಿ, ಡಿಜಿಟಲೀಕರಣ, ಕೃತಕ ಬುದ್ಧಿಮತ್ತೆ, ಮಷೀನ್ ಲರ್ನಿಂಗ್ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಅತ್ಯಾಧುನಿಕ ತಂತ್ರಜ್ಞಾನಗಳ ಕಡೆಗೆ ಗಮನ ಹರಿಸಲಾಗುವುದು. ಈ ಬಾರಿಯ ಶೃಂಗದಲ್ಲಿ ಆಸ್ಟ್ರೇಲಿಯಾ, ಪೆನ್ಸಿಲ್ವೇನಿಯಾ, ಯುನೈಟೆಡ್ ಕಿಂಗ್ ಡಂ, ಟೊರಾಂಟೋ ಬಿಜಿನೆಸ್ ಡೆವಲಪ್ಮೆಂಟ್ ಸೆಂಟರ್, ಜರ್ಮನಿ ಮತ್ತು ಅಮೆರಿಕ ದೇಶಗಳ ವರ್ಚುಯಲ್ ಬೂತ್ ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.

    `ಸಿಡ್ನಿ ಡೈಲಾಗ್ ಶೃಂಗ’ದ ಲಾಭ

    ಬಿಟಿಎಸ್-2021 ಬೆಂಗಳೂರಿನಲ್ಲಿ ನಡೆಯುತ್ತಿರುವ ಸಂದರ್ಭದಲ್ಲೇ ಆಸ್ಟ್ರೇಲಿಯಾದಲ್ಲಿ ಇದೇ ತರಹದ `ಸಿಡ್ನಿ ಡೈಲಾಗ್ ಸಮಿಟ್’ ಏರ್ಪಾಡಾಗಿದೆ. ಹೀಗಾಗಿ, ಅಲ್ಲಿನ ಚಟುವಟಿಕೆಗಳನ್ನು ಬಿಟಿಎಸ್ ವೇದಿಕೆಯಲ್ಲಿ ಮತ್ತು ಇಲ್ಲಿನ ಚಟುವಟಿಕೆಗಳನ್ನು ಅಲ್ಲಿರುವವರು ವೀಕ್ಷಿಸುವಂತೆ ಸ್ಟ್ರೀಮಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

    ಬೆಂಗಳೂರು ನೆಕ್ಸ್ಟ್ ಸಿಇಒ ಸಮಾವೇಶ

    ಬಿಟಿಎಸ್-2021ರಲ್ಲಿ ನ.17 ಮತ್ತು 18ರಂದು ಸಂಜೆ 5ರಿಂದ 7 ಗಂಟೆಯವರೆಗೆ ಬೆಂಗಳೂರಿನಲ್ಲಿ ತಂತ್ರಜ್ಞಾನ ಬೆಳವಣಿಗೆಗೆ ಸಂಬಂಧಿಸಿದಂತೆ ಇಡಬೇಕಾದ ಮುಂದಿನ ಹೆಜ್ಜೆಗಳನ್ನು ಕುರಿತು `ಬೆಂಗಳೂರು ನೆಕ್ಸ್ಟ್ ಸಿಇಒ’ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಚಿವರು ಹೇಳಿದರು.

    ಇದರಲ್ಲಿ ಮೊದಲನೇ ದಿನ  ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಬಾಷ್ ಕಂಪನಿ ಸಿಇಒ ದತ್ತಾತ್ರಿ ಸಾಲಗಾಮೆ, ಕ್ರಿಸ್ ಗೋಪಾಲಕೃಷ್ಣನ್, ಕಿಂಡ್ರೈಲ್ ಇಂಡಿಯಾದ ಮುಖ್ಯಸ್ಥ ಲಿಂಗರಾಜು ಸಾಹುಕಾರ್ ಮತ್ತು ಕ್ರಿಸ್ ಗೋಪಾಲಕೃಷ್ಣನ್ ಮಾತನಾಡಲಿದ್ದಾರೆ.

    ನ.18ರಂದು ಗ್ಲ್ಯಾನ್ಸ್ ಇನ್ಮೊಬಿ ಸಂಸ್ಥಾಪಕ ನವೀನ್ ತಿವಾರಿ, ಡೈಲಿಹಂಟ್ ಸಹ ಸಂಸ್ಥಾಪಕ ಉಮಾಂಗ್ ಬೇಡಿ, ಫೋನ್-ಪೇ ಸ್ಥಾಪಕ ಸಿಟಿಒ ರಾಹುಲ್ ಚಾರಿ, ರೇಜರ್-ಪೇ ಸ್ಥಾಪಕ ಶಶಾಂಕ್ ಕುಮಾರ್, ಅನ್ಅಕಾಡೆಮಿ ಸಹಸಂಸ್ಥಾಪಕ ಗೌರವ್ ಮುಂಜಾಲ್ ಸೇರಿದಂತೆ ಜಾಗತಿಕ ಮಟ್ಟದ  20ಕ್ಕೂ ಹೆಚ್ಚು ಉದ್ಯಮಿಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.

    ಉದ್ಘಾಟನೆಗೆ ಉಪರಾಷ್ಟ್ರಪತಿ

    24ನೇ ಬೆಂಗಳೂರು ತಂತ್ರಜ್ಞಾನ ಶೃಂಗವನ್ನು ನ.17ರ ಬೆಳಿಗ್ಗೆ 10ಕ್ಕೆ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಉದ್ಘಾಟಿಸಲಿದ್ದು, ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಐಟಿ ಮತ್ತು ಕೌಶಲ್ಯ ಖಾತೆ ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ರಾಜ್ಯ ಸರಕಾರದ ಐಟಿ ವಿಷನ್ ಗ್ರೂಪ್ ಮುಖ್ಯಸ್ಥ ಕ್ರಿಸ್ ಗೋಪಾಲಕೃಷ್ಣನ್, ಬಿಟಿ ವಿಷನ್ ಗ್ರೂಪ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ, ಸ್ಟಾರ್ಟಪ್ ವಿಷನ್ ಗ್ರೂಪ್ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್ ಪಾಲ್ಗೊಳ್ಳಲಿದ್ದಾರೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.

    error: Content is protected !!