31.2 C
Karnataka
Sunday, May 12, 2024

    ಕಚಗುಳಿ ಇಡುತ್ತ ಆಪ್ತ ಸಂವಾದ ನಡೆಸಿಕೊಟ್ಟ ಚೇತನ್ ಭಗತ್; ಸಾಟಿ ಇಲ್ಲದ ಸ್ಟಾರ್ಟಪ್ ಸಂಸ್ಕೃತಿಯ ತವರು ಬೆಂಗಳೂರು!

    Must read

    BENGALURU NOV 18

    ಅಲ್ಲಿ ಉತ್ಸಾಹದ ಕಚಗುಳಿ ಇತ್ತು; ಬೆಂಗಳೂರಿನ ನವೋದ್ಯಮ ಸಂಸ್ಕೃತಿಯ ಬಗ್ಗೆ ರೋಮಾಂಚನವಿತ್ತು; ಇಲ್ಲಿನ ಉದ್ಯಮ ನಾಳೆ ಜಿಗಿಯುವ ದಿಗಂತದ ಬಗ್ಗೆ ಕುತೂಹಲವಿತ್ತು; ಇಲ್ಲಿನ ಟ್ರಾಫಿಕ್ ಸಮಸ್ಯೆ ಬಗ್ಗೆ ಗಮನ ಸೆಳೆಯುವ ಪ್ರಯತ್ನವಿತ್ತು; ಜತೆಗೆ ಸಮಸ್ಯೆಗಳೇ ಹೇಗೆ ಹೊಸ ಉದ್ಯಮದ ಹುಟ್ಟಿಗೆ ಪ್ರೇರಣೆಯಾಗುತ್ತದೆಂಬ ತಮಾಷೆ ಇತ್ತು; ಯಶಸ್ವಿ ಹೂಡಿಕೆದಾರರಿಗೆ ಪ್ರಶ್ನೆಗಳಿದ್ದವು; ಪ್ರತಿಯಾಗಿ ಉತ್ತರಗಳು ಬರುತ್ತಿದ್ದವು; ಬೆಂಗಳೂರಿಗೂ ದೇಶದ ಉಳಿದ ನಗರಗಳಿಗೂ ಇರುವ ವ್ಯತ್ಯಾಸವೇನೆಂದು ಬೆಳಕು ಚೆಲ್ಲಲಾಗುತ್ತಿತ್ತು. ಇವೆಲ್ಲವನ್ನೂ ಚುಂಬಕಶಕ್ತಿಯಂತೆ ಹಿಡಿದಿಟ್ಟಿದ್ದಅಂಶ ಒಂದೇಒಂದು- ಅದು, ಬೆಂಗಳೂರು!

    ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ಜನಪ್ರಿಯ ಲೇಖಕ ಮತ್ತು ಅಂಕಣಕಾರ ಚೇತನ್ ಭಗತ್ ಗುರುವಾರದಂದು ನಡೆಸಿಕೊಟ್ಟ `ಬೆಂಗಳೂರು ನೆಕ್ಸ್ಟ್’ ಸಮಾವೇಶ ಸಂವಾದದಲ್ಲಿದ್ದ ಲಹರಿಗಳಿವು. ಇದಕ್ಕೆ ತಕ್ಕಂತೆ ಚೇತನ್ ಭಗತ್ ಉದ್ದಿಮೆ, ಬದುಕಿನ ಸತ್ಯಗಳು, ಕನಸುಗಾರಿಕೆ, ಉದ್ಯಮಿಗಳು ಪಾಲಿಸುವ ಮೌ್ಲ್ಯಗಳು, ಯುವಜನರ ಸೆಳೆತ ಎಲ್ಲವುಗಳನ್ನೂ ನಡುನಡುವೆ ಹೇಳುತ್ತಿದ್ದರು; ಹಾಗೆಯೇ ಉದ್ಯಮಗಳ ಯಶೋಗಾಥೆಯನ್ನು ಹಂಚಿಕೊಳ್ಳುವಂತೆ ಸಭಾಂಗಣದಲ್ಲಿದ್ದ ಅನೇಕ ಉದ್ಯಮಿಗಳನ್ನು ಆಮಂತ್ರಿಸುತ್ತಿದ್ದರು.

    ಮೊದಲಿಗೆ ಚೇತನ್ ಭಗತ್ ಅವರಿಗೆ ಬೆಂಗಳೂರೊಂದರಲ್ಲೇ 36 ಯೂನಿಕಾರ್ನ್ ಸ್ಥಾನಮಾನದ ಕಂಪನಿಗಳಿರುವ ಬಗ್ಗೆ ರೋಮಾಂಚನವಿತ್ತು. ಇದು ಅಲ್ಲೇ ಪ್ರಶ್ನೆಯಾಗಿ ರೂಪಾಂತರ ಹೊಂದಿತು. ಇದಕ್ಕೆ ರಾಜ್ಯ ಸ್ಟಾರ್ಟಪ್ ವಿಷನ್ ಗ್ರೂಪಿನ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್ ಉತ್ತರಿಸಿದರು.

    `ಕರ್ನಾಟಕ ಇವತ್ತು ನವೋದ್ಯಮಕ್ಕೆ ಇನ್ನೊಂದು ಹೆಸರಾಗಿದೆ. ಇದರ ಶ್ರೇಯಸ್ಸು ಶೇ.90ರಷ್ಟು ನಮ್ಮ ರಾಜ್ಯದ ಸುಸಂಸ್ಖೃತಿಗೆ ಸಲ್ಲಬೇಕು. ಇಲ್ಲಿ ಯಾವ ಪಕ್ಷದ ಸರಕಾರ ಬಂದರೂ ಉದ್ಯಮಸ್ನೇಹಿಯಾಗಿರುತ್ತದೆ. ವಿಷನ್ ಗ್ರೂಪ್ ಗಳನ್ನು ಸ್ಥಾಪಿಸಿದವರಲ್ಲಿ ನಮ್ಮವರೇ ಮೊದಲಿಗರು. ಇಡೀ ದೇಶದಲ್ಲಿ ಇಂತಹ ಇನ್ನೊಂದು ನಗರವಿಲ್ಲ,’ ಎನ್ನುವುದು ಅವರ ಉತ್ತರವಾಗಿತ್ತು.

    ಇದಕ್ಕೆ ವೇದಿಕೆಯ ಮೇಲಿದ್ದ ಉದ್ಯಮಿಗಳಾದ ಸುಜಿತ್ ಕುಮಾರ್, ಹರ್ಷಿಲ್ ಮಾಥೂರ್ ದನಿಗೂಡಿಸಿದರು. ಜತೆಗೆ ಬೆಂಗಳೂರಿನಲ್ಲಿ ಇಂತಹ ಸ್ಟಾರ್ಟಪ್-ಸ್ನೇಹಿ ವಾತಾವರಣ ಇರುವುದನ್ನು ಕಂಡೇ ತಾವಿಬ್ಬರೂ ದೂರದ ದೆಹಲಿ ಮತ್ತು ಜೈಪುರಗಳಿಂದ ಇಲ್ಲಿಗೆ ಕಂಪನಿಗಳನ್ನು ಸ್ಥಳಾಂತರಿಸಿದ್ದಾಗಿ ಹೇಳಿದರು. ಪಕ್ಕದಲ್ಲಿದ್ದ ಕಿಂಡ್ರೆಲ್ ಕಂಪನಿಯ ಲಿಂಗರಾಜ ಸಾಹುಕಾರ್ ಕೂಡ 19 ಸಾವಿರ ಉದ್ಯೋಗಿಗಳಿರುವ ತಮ್ಮ ಕಂಪನಿಯನ್ನು ಸ್ಟಾರ್ಟಪ್ ಎಂದೇ ಆರಂಭಿಸಿರುವುದಾಗಿ ಗುಟ್ಟು ಬಿಟ್ಟುಕೊಟ್ಟರು.

    ಆಗ ಹುಬ್ಬೇರಿಸುವ ಸರದಿ ಚೇತನ್ ಭಗತ್ ಅವರದಾಗಿತ್ತು! ಕೂಡಲೇ ಅವರು ಮುಂಬೈನಲ್ಲಿ ಸಿನಿಮಾ ಸಂಸ್ಕೃತಿ ಇದೆ; ಅಲ್ಲಿ ಎಲ್ಲರೂ ಇಲ್ಲಿ ಶಾರುಖ್ ಖಾನ್ ಮನೆ ಇದೆ, ಅಲ್ಲಿ ಸಲ್ಮಾನ್ ಖಾನ್ ಮನೆ ಇದೆ’ ಎಂದು ಮಾತಾಡುತ್ತಿರುತ್ತಾರೆ. ಹಾಗೆಯೇ ಬೆಂಗಳೂರಿನಲ್ಲಿ ಉದ್ಯಮಸಂಸ್ಕೃತಿ ಇದೆ. ಇಲ್ಲಿನ ಜನಇದು ಇನ್ಫೋಸಿಸ್ ನಾರಾಯಣಮೂರ್ತಿಗಳ ಮನೆ, ಅದು ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಂಜಿ ಮನೆ ಇದೆ ಅಂತ ಹೇಳ್ತಾರೆ. ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂದ ಟ್ಯಾಕ್ಸಿ ಚಾಲಕ ಕೂಡ ಇಲ್ಲಿನ ಯಾವುದೋ ಒಂದು ಯೂನಿಕಾರ್ನ್ ಕಂಪನಿಗೆ ಕೆಲಸ ಮಾಡ್ತಾ ಇದ್ದವನೇ!’ ಎಂದು ಉದ್ಗರಿಸಿದರು.

    ಸಚಿವರಿಗೂ ಪ್ರಶ್ನೆ ಹಾಕಿದ ಚೇತನ್ ಭಗತ್!

    ಸಭಿಕರ ಮಧ್ಯೆ ಇದ್ದ ಐಟಿ ಸಚಿವ ಅಶ್ವತ್ಥನಾರಾಯಣ ಅವರತ್ತಲೂ ಚೇತನ್ ಭಗತ್ ಪ್ರಶ್ನೆಗಳನ್ನೆಸೆದರು. ಇದಕ್ಕೆ ಉತ್ತರಿಸಿದ ಸಚಿವರು, `ಹಣ ಸರಿಯಾದವರ ಬಳಿ ಇರಬೇಕು. ಆಗ ಅದು ಬೆಳೆಯುತ್ತ ಹೋಗುತ್ತದೆ. ಅಂಥವರನ್ನು ನಮ್ಮ ಸರಕಾರ ಗುರುತಿಸಿ, ಪುರಸ್ಕರಿಸುತ್ತಿದೆ. ಇದು ನಮ್ಮ ಕರ್ತವ್ಯ. ಇಂಥವರಿಂದ ರಾಜ್ಯ ಪ್ರಗತಿ ಸಾಧಿಸುತ್ತದೆ. ನೂತನ ಶಿಕ್ಷಣ ನೀತಿಯಲ್ಲಿ ನಾವು ನಾವೀನ್ಯತೆ, ಕೌಶಲ್ಯ ಪೂರೈಕೆ ಮತ್ತು ಗುಣಮಟ್ಟದ ಬೋಧನೆಗೆ ಒತ್ತು ಕೊಟ್ಟಿದ್ದೇವೆ. ಇವೆಲ್ಲದರ ಹಿಂದೆ ಪ್ರಧಾನಿ ಮೋದಿಯವರ ಒತ್ತಾಸೆ, ದೂರದೃಷ್ಟಿ ಕೂಡ ಇವೆ,’ ಎಂದರು.

    ಜತೆಗೆ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಸಿಲಿಕಾನ್ ಸಿಟಿಯಲ್ಲಿ ಕೂಡ ಬಿಟಿಎಸ್ ನಂತಹ ಕಾರ್ಯಕ್ರಮವನ್ನು ನಡೆಸುವ ಮಹತ್ವಾಕಾಂಕ್ಷೆ ತಮಗಿದೆ ಎಂದು ಅವರು ಹೇಳಿದರು. ಇದರ ಬೆನ್ನಲ್ಲೇ ಪ್ರಶಾಂತ್ ಪ್ರಕಾಶ್, `ಕರ್ನಾಟಕದಲ್ಲಿರುವ ಉದ್ಯಮಿಗಳು ಕೆರೆಯ ನೀರನು ಕೆರೆಗೆ ಚೆಲ್ಲುವ ಸಂಸ್ಕೃತಿಯವರು,’ ಎನ್ನುತ್ತ, ಎದುರಲ್ಲೇ ಆಸೀನರಾಗಿದ್ದ ಉದ್ಯಮಿ ಕ್ರಿಸ್ ಗೋಪಾಲಕೃಷ್ಣನ್ ಅವರ ಮಾದರಿ ಹಾದಿಯನ್ನು ಉಲ್ಲೇಖಿಸಿದರು.

    ಚೇತನ್ ಭಗತ್ ನಡೆಸಿಕೊಟ್ಟ ಆಪ್ತ ಶೈಲಿಯ ಸಂವಾದಕ್ಕೆ ಸಭಾಂಗಣದಲ್ಲಿದ್ದವರೆಲ್ಲ ಕಿವಿ ತೆರೆದಿದ್ದರು; ನಡುನಡುವೆ ಚಪ್ಪಾಳೆಯ ಮಳೆ  ಬೀಳುತ್ತಿತ್ತು; ವೇದಿಕೆಯ ಮೇಲಿದ್ದ ಉದ್ಯಮಿಗಳು ಬೆಂಗಳೂರಿನ ಹಿತಕರ ಹವೆಯನ್ನು ಹೊಗಳಿದ್ದಕ್ಕೆ ತಕ್ಕಂತೆ ಹೊರಗಡೆಯೂ ವರ್ಷಧಾರೆ ಸುರಿಯುತ್ತಿತ್ತು.


    ಬೆಂಗಳೂರಿನಲ್ಲಿ ಈಗ ಶತಕೋಟಿ ಡಾಲರ್ ವಹಿವಾಟು ನಡೆಸುವ ಯೂನಿಕಾರ್ನ್ ಕಂಪನಿಗಳು ಸದ್ದು ಮಾಡುತ್ತಿವೆ. ಇನ್ನು ಒಂದೆರಡು ವರ್ಷಗಳಲ್ಲಿ ಇಲ್ಲಿ 10 ಶತಕೋಟಿ ಡಾಲರ್ ವಹಿವಾಟು ನಡೆಸುವ ಡೆಕಾಕಾರ್ನ್ ಕಂಪನಿಗಳು ರಾರಾಜಿಸಲಿವೆ.

    -ಪ್ರಶಾಂತ್ ಪ್ರಕಾಶ್, ಸ್ಟಾರ್ಟಪ್ ವಿಷನ್ ಗ್ರೂಪ್ ಮುಖ್ಯಸ್ಥ


    • 2013ರಲ್ಲಿ ನಾನು ಜೈಪುರದಿಂದ ಬೆಂಗಳೂರಿಗೆ ಬಂದೆ. ಅದಕ್ಕೂ ಮುನ್ನ ನಾನು ಈ ನಗರವನ್ನೇ ನೋಡಿರಲಿಲ್ಲ. ಕರ್ನಾಟಕದಲ್ಲಿ ಎಲ್ಲ ಕೆಲಸಗಳೂ ಕ್ಷಿಪ್ರ ಗತಿಯಲ್ಲಿ ಆಗುತ್ತವೆ. ನಾನೀಗ ಸರಕಾರದ ಫಿನ್ಟೆಕ್ ಕಾರ್ಯಪಡೆಯ ಮುಖ್ಯಸ್ಥನಾಗಿದ್ದೇನೆ.

    -ಹರ್ಷಿಲ್ ಮಾಥೂರ್, ಸಂಸ್ಥಾಪಕ, ರೇಜರ್ ಪೇ.


    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!