25 C
Karnataka
Tuesday, May 14, 2024
    Home Blog Page 3

    ಸಿ ಎಸ್ ಚರಣ್ ಅವರ ಆಸಕ್ತಿದಾಯಕ ‘ಈ’ಕಥೆಗಳು

    ಅಪೂರ್ವ ಅಜ್ಜಂಪುರ

    ಒಂದು ಲಕ್ಷಕ್ಕೂ ಹೆಚ್ಚು ಕಿ.ಮೀ. ಹಾದಿಯನ್ನು ಸೈಕಲ್ ನಲ್ಲಿ ಕ್ರಮಿಸಿರುವ ವಿಭಿನ್ನ ಸೈಕಲ್ಲಿಗ ಚರಣ್ ಅವರ ಕಥಾ ಕಾಲಕ್ಷೇಪವೂ ಕೂಡ ಒಂದು ರೀತಿಯಲ್ಲಿ ಅವರ ಹವ್ಯಾಸದಂತೆ ವಿಭಿನ್ನವಾಗಿದೆ. “ಗಾಲಿ-ಗಾಳಿಯ ಅನೂಹ್ಯಬಂಧ ನನ್ನನ್ನು ಕಥೆಗಾರನನ್ನಾಗಿ ಮಾಡಿದೆ…” ಎಂದು ಹೇಳುವ ಚರಣ್ “….‘ಹ್ಯಾಪಿ ಹಾರ್ಮೋನುಗಳು’ ನನ್ನಲ್ಲಿ ಮರೆಮಾಡಿರುವ ವಿಶಿಷ್ಟ/ವಿಕ್ಷಿಪ್ತವಾದ ವಿಷಯ/ಘಟನೆಗಳು ನನ್ನಿಂದ ಬರೆಸಿಕೊಳ್ಳುವ ಕಥೆಗಳಿಗೆ ಹಿನ್ನೆಲೆ ಒದಗಿಸಿದರೆ ಸುದ್ದಿಯಾಗಿ ಮರೆಯಾದ ವ್ಯಕ್ತಿಗಳು ಬೇರೆಯದೇ ರೂಪದಲ್ಲಿ ಪಾತ್ರಗಳಾಗಿಬಿಡುತ್ತಾರೆ” ಎಂದು ಕಥೆಗಳು ಹುಟ್ಟಿದ ಬಗೆಯನ್ನು ವಿವರಿಸುತ್ತಾರೆ. ಅದೇನೇ ಇರಲಿ, ಚರಣ್ ಅತ್ಯಾಧುನಿಕ ‘ಈ’ತಂತ್ರಜ್ಞಾನದ ಬಳಕೆಯ ಸನ್ನಿವೇಶಗಳ ಸೃಷ್ಟಿಯ ಮೂಲಕ ತಮ್ಮ ಕಥೆಗಳ ಜಾಲವನ್ನು ಹೆಣೆಯುತ್ತಾರೆ. ಇಂತಹ ಜಾಲದ ಹೆಣಿಗೆಯ ಕಥೆಗಳನ್ನು ಅರ್ಥಮಾಡಿಕೊಳ್ಳಲು ತುಸುವಾದರೂ ತಾಂತ್ರಿಕ ಪದಗಳ ಪರಿಚಯವಿರಬೇಕಾಗುತ್ತದೆ.

    ಭಾಷಾಮಾಧ್ಯಮದ ಒಂದು ಹಳೆಯ ಸಾಹಿತ್ಯ ಪ್ರಕಾರವಾದ ಸಣ್ಣಕತೆಗಳ ಸ್ವರೂಪದ ಬಗೆಗೆ ಪೂರ್ವಸೂರಿಗಳು ಹೇಳಿರುವ ಕೆಲವು ಮಾತುಗಳನ್ನು ಇಲ್ಲಿ ಸ್ಮರಿಸಲಿಚ್ಛಿಸುವೆ. ಸಂಸ್ಕೃತದ ಆಖ್ಯಾಯಿಕೆಯು ಮೂಲತಃ ಕತೆಹೇಳುವ ಪ್ರಕಾರವೆ. ಆದರೆ ಅದು ನಿಜವಾದ ಘಟನೆಯನ್ನು ಯಥಾರ್ಥ ನಿರೂಪಿಸುವ ಗದ್ಯಪ್ರಕಾರ ಎಂಬುದು ಬಲ್ಲವರ ಹೇಳಿಕೆ. ಪಾಶ್ಚಿಮಾತ್ಯರಿಂದ ಬಂದ ಸಣ್ಣಕತೆಯ ಪ್ರಕಾರದ ಬಗ್ಗೆ ಅವರೇ ಹೇಳಿರುವುದನ್ನು ಇಲ್ಲಿ ಉಲ್ಲೇಖಿಸುವುದು ಒಳಿತು. ಎಚ್.ಜಿ.ವೆಲ್ಸ್ ಹೇಳುವ ಪ್ರಕಾರ : ಬದುಕಿನ ಏನನ್ನಾದರೂ ಕಲಾತ್ಮಕವಾಗಿ ಕಥೆ ಕಟ್ಟಿ ಹೇಳುತ್ತಾ ಅದು ಉಜ್ವಲವಾಗುವಂತೆಯೂ, ಚಲನಶೀಲವಾಗಿವಂತೆಯೇ ಮಾಡುವುದು ಸಣ್ಣಕತೆಗಳ ಉದ್ದೇಶ.

    ಸಾಮರ‍್ಸೆಟ್ ಮೌಮ್ ನ ದೃಷ್ಟಿಯಲ್ಲಿ ಒಂದು ಸಣ್ಣಕತೆಗೆ ನಿರ್ದಿಷ್ಟ ವಿನ್ಯಾಸವಿರಬೇಕು. ಪ್ರಾರಂಭ, ಬೆಳವಣಿಗೆ, ಶಿಖರ ಮತ್ತು ನಿಲುಗಡೆಯ ಬಿಂದು ಇರಬೇಕು. ಹ್ಯೂಗ್ ವಾಲ್ ಪೋಲ್‌ನ ಪ್ರಕಾರ, ಸಣ್ಣಕತೆಯೆಂದರೆ ಬದುಕಿನಲ್ಲಿ ನಡೆಯುವ ಸಂಗತಿಗಳು, ಘಟನಾವಳಿಯೊಂದಿಗೆ ಕಥೆ ಕಟ್ಟುವುದು. ಅದರಲ್ಲಿ ಶೀಘ್ರಚಲನೆ, ಅನಿರೀಕ್ಷಿತ ಬೆಳವಣಿಗೆಗಳ ಮೂಲಕ ತೃಪ್ತಿಕರ ಅಂತ್ಯ ಕಾಣಿಸುವುದು. ಆಂಟನ್ ಚೆಕಾವ್ ಎಂಬ ರಷಿಯನ್ ಕಥೆಗಾರನ ದೃಷ್ಟಿಯಲ್ಲಿ, ಸಣ್ಣಕತೆಗೆ ಪ್ರಾರಂಭವಾಗಲಿ, ಒಂದು ಅಂತ್ಯವಾಗಲಿ ಇರಬೇಕಿಲ್ಲ. ಸೂಚ್ಯವಾಗಿ ಬದುಕಿನ ಒಂದು ಭಾಗದ ಪ್ರಾತಿನಿಧಿಕ ಚಿತ್ರ. ಚೆಕಾವ್ ಕತೆಗಳ ಅಂತ್ಯಗಳು ಮುಕ್ತವಾಗಿರುತ್ತವೆ.
    ಒಟ್ಟಾರೆ ಕಥೆಯ ಜೀವಾಳ ಬದುಕಿನ ಘಟನೆ/ಘಟನಾವಳಿಯ ಕೌಶಲ್ಯಪೂರ್ಣ ನಿರೂಪಣೆ. ಅಂತಹ ನಿರೂಪಣೆಯ ಮೂಲಕ ಹೊಸ ಅನುಭವವನ್ನು ಕಟ್ಟಿಕೊಡುವುದು ಎಂದು ಹೇಳಬಹುದು.

    ಆ ಪರಿಪ್ರೇಕ್ಷ್ಯದಲ್ಲಿ ಕಥೆಗಾರ ಚರಣ್ ಅನೇಕ ಕಥೆಗಳು ಯಶಸ್ವಿಯಾಗಿವೆ. ವಾಟ್ಸಪ್ ಬಿಗ್ ಬಾಸ್, ಸಿಸಿಟಿವಿ, ರೆಕ್ಕೆ, ವ್ಯೂಹ ಹಾಗೂ ಸಮ್ಮಿಲನ್ ೨.೦(ನೀಳ್ಗತೆ) ಈ ಗುಂಪಿನಲ್ಲಿ ಬರುತ್ತವೆ. ನ್ಯಾನೋ ಕಥೆಗಳು ಸೊಗಸಾಗಿವೆ. ಸಿಗ್ನಲ್, ಮಹಾನುಭಾವ,ಚಕ್ರವ್ಯೂಹ, ಬಾಸ್ ಮತ್ತು ಸ್ಕ್ರಾಚ್ ಕಾರ್ಡ್ ನ್ಯಾನೊ ಕಥೆಗಳಲ್ಲಿ ಕ್ಷಿಪ್ರದಲ್ಲಿ ಅಡಕವಾಗಿ ಸ್ವಾರಸ್ಯಕರವಾಗಿ ಕಥೆಯು ಅನಾವರಣವಾಗುತ್ತದೆ. ಸ್ಕ್ರಾರ್ಚ್ ಕಾರ್ಡ್ ಕಥೆಯು ಅನಿರೀಕ್ಷಿತ ತಿರುವುಗಳಿಂದ ಕೂಡಿದ್ದು, ಕುತೂಹಲಕಾರಿಯಾಗಿದೆ.

    ‘ವಾಟ್ಸಪ್ ಬಿಗ್ ಬಾಸ್’ ಕಥೆಯ ಪ್ರಾರಂಭವು ಒಂದು ಕಾಲದ ಸಹಪಾಠಿಗಳ ಬಿಗ್ ಬಾಯ್ಸ್ ಅಂಡ್ ಗರ್ಲ್ಸ್ ಗ್ರೂಪ್‌ನ ಚಟುವಟಿಕೆಯೊಂದಿಗೆ ಲಘು ಲಹರಿಯಲ್ಲಿ ಇದ್ದು, ಅಂತ್ಯದಲ್ಲಿ ಗಂಭೀರ ತಿರುವು ಪಡೆಯುತ್ತದೆ. ಮನಕಲಕುವ ಸನ್ನಿವೇಶಕ್ಕೆ ಪರಿಹಾರ ಕಂಡುಕೊಳ್ಳುವ ರೀತಿಯೂ ಹೃದಯಸ್ಪರ್ಶಿಯಾಗಿದೆ. ಸಿಸಿಟಿವಿ ಕಥೆಯ ಲಲಿತಮ್ಮನ ಪಾತ್ರದ ಮೂಲಕ ಒಂದು ಮಾನವೀಯ ಪ್ರಸಂಗವನ್ನು ಓದುಗರ ಕಣ್ಮುಂದೆ ತೋರಿಸುತ್ತದೆ. ಓದುಗನ ಮನೋಭಿತ್ತಿಯಲ್ಲಿ ಒಂದು ಅನಿರೀಕ್ಷಿತ ಬೆಳವಣಿಗೆಯನ್ನು ದಾಖಲಿಸುತ್ತದೆ.

    “ಲಲಿತಮ್ಮನ ಹತ್ತಿರ ಹೇಳಿಕೊಳ್ಳುವಷ್ಟು ಹಣ ಇಲ್ಲದಿದ್ದರೂ ಸಹ ಮನೆ ಅವಳ ಹೆಸರಲ್ಲೇ ಇದ್ದುದರಿಂದ ತಾನೇನು ಮಾಡಿದರೂ ತಾನೇನು ಅಂದರೂ ಸೊಸೆಗೆ ಸಹಿಸಿಕೊಳ್ಳದೆ ವಿಧಿಯಿಲ್ಲ ಅಂತ ಗೊತ್ತಿದ್ದರಿಂದ ಮನೆಮುಂದಿನ ಬೆಂಚನ್ನೇ ಸಿಂಹಾಸನ ಮಾಡಿಕೊಂಡು ರಾಜಮಾತೆ ರೀತಿಯಲ್ಲಿ ಕುಳಿತು ದರ್ಪ ತೋರುತ್ತಿದ್ದಳು.” ಹೀಗಿದ್ದ ಲಲಿತಮ್ಮ ತಮ್ಮ ಮೊಮ್ಮಗನ ಮೋಟಾರ್ ಬೈಕಿನ ಅವಾಂತರದಿಂದ ಇಕ್ಕಟ್ಟಿಗೆ ಸಿಲುಕುತ್ತಾಳೆ. ಅಪಘಾತದ ದೆಸೆಯಿಂದ ಕಾಲು ಮುರಿದುಕೊಂಡ ನಾಯಿಯ ವಿಚಾರಕ್ಕೆ ಲಲಿತಮ್ಮನಲ್ಲಿ ಪಾಪಪ್ರಜ್ಞೆಯು ಕಾಡುತ್ತದೆ. ತನಗೆ ತಾನೇ ಶಿಕ್ಷಿಸಿಕೊಳ್ಳಲು ಪ್ರಾರಂಭಿಸುತ್ತಾಳೆ. ಕೊನೆಯಲ್ಲಿ ಲಲಿತಮ್ಮ ಪಾಪಪ್ರಜ್ಞೆಯಿಂದ ಹೊರಬರಲು ಪೊಲೀಸ್ ಇನ್ಸ್‌ಪೆಕ್ಟರ್ ಒಂದು ಪರಿಹಾರವನ್ನು ಸೂಚಿಸುತ್ತಾನೆ.
    ‘ರೆಕ್ಕೆ’ ಕಥೆಯಲ್ಲಿ ಚರಣ್ ಅವರ ಜೀವನದ ಅವಿಭಾಜ್ಯ ಅಂಗವಾದ ಸೈಕಲ್ ಕೂಡ ಒಂದು ಪಾತ್ರವಾಗಿದೆ.

    ಶಿಕ್ಷಣದಿಂದ ವಂಚಿತಳಾದ ಒಬ್ಬ ಬಾಲಕಿಯ ತಾಯಿ ಮನೆಗೆಲಸದವಳು. ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರ ಮನೆಯಲ್ಲಿ ಆಕೆಯ ಕೆಲಸ. ಅಧಿಕಾರಿಯ ಅನುಕಂಪದ ದೆಸೆಯಿಂದ ಆ ಬಾಲಕಿಗೆ ಶಿಕ್ಷಣದ ಅವಕಾಶವೇನೊ ದೊರೆಯುತ್ತದೆ. ಸರ್ಕಾರದ ಉಚಿತ ಸೈಕಲ್ ಕೂಡ ಅವರು ಕೊಡಿಸುತ್ತಾರೆ. ಬಾಲಕಿಗೆ ಸಿಕ್ಕಿದ್ದು, ರೆಕ್ಕೆ-ಪುಕ್ಕಗಳು ಬಂದಂತಾಗುತ್ತದೆ. ಈ ಕಥೆಯಲ್ಲೂ ಡಿಜಿಟಲ್ ಮಾಧ್ಯಮದ ಒಂದು ಅಂಶವು ಕಥೆಯ ತಿರುವಿಗೆ ಕಾರಣವಾಗುತ್ತದೆ. ವಾಟ್ಸಪ್‌ನಲ್ಲಿ ಅಧಿಕಾರಿಯು ಕಳುಹಿಸಿದ ಸಂದೇಶವು ಕೋಲಾಹಲವನ್ನು ಸೃಷ್ಟಿಸುತ್ತದೆ.

    ‘ವ್ಯೂಹ’ದಲ್ಲಿ ಸ್ಮಾರ್ಟ್‌ಫೋನ್ ಬಳಕೆಯು ಒಂದು ಕುಟುಂಬದಲ್ಲಿ ದೈನಂದಿನ ಜೀವನವನ್ನು ಇಡಿಯಾಗಿ ಆವರಿಸಿಕೊಳ್ಳುವುದನ್ನು ಚಿತ್ರಿಸುತ್ತದೆ. ಈ ವ್ಯೂಹವನ್ನು ಭೇದಿಸಿ ಒಳಹೋಗಬಹುದು. ಹೊರಬರಲು ಸಾಧ್ಯವಿಲ್ಲ! ತಂದೆ-ತಾಯಿ ಹಾಗೂ ಮಗ-ಮಗಳು ಎಲ್ಲರೂ ಸ್ಮಾರ್ಟ್‌ಫೋನ್ ಅವಲಂಬಿತರೇ. ಈ ಸ್ಮಾರ್ಟ್‌ಫೋನ್ ಎಂಬ ಮಾಯಾಜಾಲವನ್ನು ಬಿಟ್ಟಿರಲಾರರು. ಒಂದು ರೀತಿಯಲ್ಲಿ ಎಲ್ಲರೂ ಡಿಜಿಟಲ್ ಅಡಿಕ್ಷನ್‌ಗೆ ಒಳಗಾದವರೇ೧ ಹಾಗಾದರೆ ಬಿಡುಗಡೆ?ಕೌನ್ಸಿಲಿಂಗ್ ಪರಿಹಾರವೆ. ಅಥವಾ ಮನೋಬಲವೆ?
    ‘ಸಮ್ಮಿಲನ ೨.೦’ ಒಂದು ಸುದೀರ್ಘ ನೀಳ್ಗತೆ. ಒಂದು ಸ್ಟಾರ್ಟ್‌ಅಪ್ ಉದ್ಯಮಕ್ಕೆ ಬೇಕಾದ ವಿಭಿನ್ನ ಸಾಧ್ಯತೆಯನ್ನು ಈ ಕಥೆಯು ಹೊಂದಿರುವುದು ಒಂದು ವಿಶೇಷತೆ. ಅನ್ವೇಷಣ ಬುದ್ಧಿಯ ನಾಯಕ ಯಶ್, ಹೊಸ ಆಪ್‌ನ್ನೇ ಸೃಷ್ಟಿಸಿಕೊಡುವ ನಾಯಕಿ ಕನ್ನಿಕಾ. ಭಾರತೀಯ ವಿವಾಹ ಸಂಪ್ರದಾಯಗಳನ್ನು ಸ್ವತಃ ಸಾಕ್ಷಿಯಾಗುವ ಮೂಲಕ ವಿದೇಶಿ ಪ್ರವಾಸಿಗರಿಗೆ ಪರಿಚಯಿಸುವ ಹೊಸ ಉದ್ಯಮದ ಪರಿಕಲ್ಪನೆಯು ಕಥೆಯುದ್ದಕ್ಕೂ ಆವರಿಸಿಕೊಳ್ಳುತ್ತದೆ. ಆದರೆ ಕಥೆಯ ಅಂತ್ಯದ ವಿವಾಹವು ಅಂತಹ ಅವಕಾಶವನ್ನು ಕೊಡುವುದಿಲ್ಲ!
    ‘೧೧೧’ ಎಫ್.ಎಂ.ರೇಡಿಯೋದ ಮೂಲಕ ಅನ್ಯಭಾಷಿಕ ಯುವತಿಗೆ ಕನ್ನಡ ಭಾಷೆ ಕಲಿಸುವ ರೀತಿ, ತಂತ್ರಗಾರಿಕೆ ವಿಶಿಷ್ಟವಾಗಿದೆ. ಆಕೆಗೆ ಕನ್ನಡದ ಎಫ್‌ಎಂ ರೇಡಿಯೋ ಜಾಕಿಯಾಗಲು ಕನ್ನಡ ಕಲಿಸುವ ತಂತ್ರ ಸಫಲವಾಗುತ್ತದೆ. ಕಥೆಯಲ್ಲಿ ಇಂಗ್ಲಿಷ್ ಸಂಭಾಷಣೆಗಳು ಅನಿವಾರ‍್ಯವಾದರೂ ಅದಕ್ಕೆ ಕನ್ನಡದ ಸಮಾನ ಸಂಭಾಷಣೆಗಳನ್ನು ಕಂಸಗಳಲ್ಲಿ ಕೊಡಬಹುದಿತ್ತು.

    ಭ್ರಷ್ಟ ವ್ಯವಸ್ಥೆಯು ಒಬ್ಬ ಪಶುವೈದ್ಯಾಧಿಕಾರಿಯ ಸೇವೆಯನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದನ್ನು ‘ವೆಟ್ಟು’ ಕಥೆಯಲ್ಲಿ ಕಾಣಬಹುದು. ‘ಕುದುರೆಮುಖ ಪುಸ್ತಕ’ ಕಥೆಯಲ್ಲಿ ಜೀವಂತ ಗ್ರಂಥಾಲಯದ ಜೀವಂತ ಪುಸ್ತಕಗಳು ಬದುಕಿನ ಸಂಕೀರ್ಣತೆಯನ್ನು ಕಥೆಗಳ ಮೂಲಕ ಹೇಳುತ್ತವೆ.

    ಆಧುನಿಕ ಡಿಜಿಟಲ್ ತಂತ್ರಜ್ಞಾನದ ಅನೇಕ ಅಂಶಗಳು ಕಥೆಯ ಸಾವಯವ ಭಾಗವಾಗಿ ಬಂದಿವೆ. ಎಲ್ಲೂ ಕೃತ್ರಿಮವೆನಿಸುವುದಿಲ್ಲ. ನಗರ ಜೀವನದಲ್ಲಿ ಇಂತಹದೆಲ್ಲ ಸಹಜವೆನ್ನಿಸುವಂತೆ ಚಿತ್ರಿಸಿದ್ದಾರೆ. ಸೈಕಲ್ಲೇರಿ ಪಯಣಿಸುವಾಗ ಚರಣ್‌ರ ‘ತಲೆಯ ಮೇಲೆ ಹತ್ತಿ ಕುಳಿತ’ ಘಟನೆ, ವ್ಯಕ್ತಿಗಳು ಉತ್ತಮವಾದ ಕಥೆಗಳನ್ನು ‘ಬರೆಸಿವೆ’.


    ಅಪೂರ್ವ ಅಜ್ಜಂಪುರ ಅವರ ಹೆಸರು ಜಿ ಬಿ ಅಪ್ಪಾಜಿ. ರಾಜ್ಯ ಸರ್ಕಾರದ ಕೃಷಿ ಇಲಾಖೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಕಥೆ, ಕವನ , ಸಾಹಿತ್ಯ ವಿಮರ್ಶೆ ಬರೆಯುವುದು ಹವ್ಯಾಸ.

    ನಾಳೆ ಸಿಇಟಿ -CET- ಫಲಿತಾಂಶ

    BENGALURU JUNE 14

    ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ(ಕೆಸಿಇಟಿ)ಯ ಫಲಿತಾಂಶ ನಾಳೆ ಜೂನ್ 15 ಗುರುವಾರ ಬೆಳಗ್ಗೆ ಪ್ರಕಟವಾಗಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ತಿಳಿಸಿದೆ.

    ಬೆಳಗ್ಗೆ 9.30ಕ್ಕೆ ಮಲ್ಲೇಶ್ವರದಲ್ಲಿರುವ ಪ್ರಾಧಿಕಾರದ ಕಚೇರಿಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಅವರು ಸಿಇಟಿ ಫಲಿತಾಂಶ ಪ್ರಕಟಿಸಲಿದ್ದಾರೆ.

    ಬೆಳಗ್ಗೆ 11ರ ನಂತರ ಕೆಇಎ ವೆಬ್ ಸೈಟ್ http://kea.kar.nic.in ನಲ್ಲಿ ಫಲಿತಾಂಶವನ್ನು ವಿದ್ಯಾರ್ಥಿಗಳು ಗಮನಿಸಬಹುದಾಗಿದೆ.2023ರ ಮೇ 20 ಮತ್ತು ಮೇ 21 ರಂದು ಸಿಇಟಿ ಪರೀಕ್ಷೆ ನಡೆಸಲಾಗಿತ್ತು. ಸುಮಾರು 2.6 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

    RED U FAIR ಗೆ ಹರಿದು ಬಂದ ವಿದ್ಯಾರ್ಥಿ ಸಮೂಹ:ಮೊದಲ ದಿನವೆ ಉತ್ಸಾಹದ ಪ್ರತಿಕ್ರಿಯೆ

    BENGALURU MAY 27

    ಜೀವನದಲ್ಲಿ ಎಂಥ ದೊಡ್ಡ ಸಾಧನೆ ಮಾಡಿದರು ಅದರಲ್ಲಿ ಮಾನವೀಯತೆಯನ್ನು ಅಳವಡಿಸಿಕೊಳ್ಳವುದು ಮುಖ್ಯ. ಏನಾದರು ಆಗು ನೀನು ಮೊದಲು ಮಾನವನಾಗು ಎಂಬ ಕವಿವಾಣಿಯನ್ನು ಪಾಲಿಸಿದಾಗ ಬದುಕು ಸಾರ್ಥಕ ಎಂದು ಕರ್ನಾಟಕದ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗಡೆ ಅಭಿಪ್ರಾಯ ಪಟ್ಟರು.ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದಿನಿಂದ ಆರಂಭವಾದ ಕರ್ನಾಟಕದ ಅತಿ ದೊಡ್ಢ ಶೈಕ್ಷಣಿಕ ಮೇಳ ರೆಡ್ ಯು ಫೇರ್ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಹಿಂದೆ ನೈತಿಕ ಶಿಕ್ಷಣ ಪಠ್ಯದ ಭಾಗವಷ್ಟೆ ಆಗಿರಲಿಲ್ಲ. ಅದನ್ನು ಜೀವನದಲ್ಲೂ ಅಳವಡಿಸಿಕೊಳ್ಳುವ ಪರಿಪಾಠವೂ ಇತ್ತು. ಆದರೆ ಈಗ ಅದನ್ನು ಅಳವಡಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳು ನೈತಿಕ ಶಿಕ್ಷಣವನ್ನು ಜೀವನದಲ್ಲೂ ಅಳವಡಿಸಿಕೊಳ್ಳಬೇಕು ಎಂದರು.

    ಶಿಕ್ಷಣ ಕ್ಷೇತ್ರದಲ್ಲಿ ಈಗ ಹಿಂದೆ ಇದ್ದ ಸ್ಥಿತಿ ಇಲ್ಲ. ಕಲಿಕೆಗೆ ಸಾಕಷ್ಟು ಅವಕಾಶಗಳಿವೆ. ವಿದ್ಯಾರ್ಥಿಗಳು ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡು ಭವ್ಯ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.

    ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಆರ್ ವಿ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷ ಡಾ. ಎಂ ಪಿ ಶ್ಯಾಮ್ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳು ಮತ್ತು ಉದ್ಯೋಗ ಕ್ಷೇತ್ರದಲ್ಲಿನ ನೂತನ ಸವಾಲುಗಳ ಬಗ್ಗೆ ವಿವರಿಸಿದರು.

    ಹಿರಿಯ ಶಿಕ್ಷಣ ತಜ್ಞ ಡಾ. ಎಂ .ಜಯಪ್ಪ ರೆಡ್ ಯು ಫೇರ್ ಹೇಗೆ ವಿದ್ಯಾರ್ಥಿಗಳ ಭವ್ಯ ಭವಿಷ್ಯ ರೂಪಿಸಲು ಸಹಕಾರಿಯಾಗಲಿದೆ ಎಂಬುದನ್ನು ತಿಳಿಸಿಕೊಟ್ಟರು. ಇನ್ ಸೈಟ್ ಇಂಡಿಯಾ ಐಎಎಸ್ ನ ಸಂಸ್ಥಾಪಕ ಜಿ ಬಿ ವಿನಯ್ ಕುಮಾರ್ ಸ್ಫರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಉಪನ್ಯಾಸ ನೀಡಿದರು.

    ರೆಡ್ ಎಫ್ ಎಂ ನ ಸಿಒಒ ಬಿ ಸುರೇಂದರ್, ಸಿಂಧಿ ಕಾಲೇಜಿನ ನಿರ್ದೇಶಕ ಡಾ. ಬಿ ಎಸ್ ಶ್ರೀಕಂಠ ಮತ್ತು ಕನ್ನಡಪ್ರೆಸ್ .ಕಾಮ್ ನ ಸಂಪಾದಕ ಶ್ರೀವತ್ಸ ನಾಡಿಗ್ ಉಪಸ್ಥಿಿತರಿದ್ದರು.

    ವಿದ್ಯಾರ್ಥಿಗಳು ಪಾಲಕರು ಉತ್ಸಾಹದಿಂದ ಅತ್ಯಧಿಕ ಸಂಖ್ಯೆಯಲ್ಲಿ ಮೇಳದಲ್ಲಿ ಭಾಗವಹಿಸಿ ತಮಗೆ ಬೇಕಾದ ಮಾಹಿತಿ ಪಡೆದರು. ಮೇಳ ನಾಳೆ ಭಾನುವಾರ ಕೂಡ ಮುಂದುವರಿದಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪಾಲಕರು, ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ರೆಡ್ ಎಫ್ ಎಂ ನೆಟ್ ವರ್ಕ್ ನ ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾದ ಸುರೇಶ್ ಗಣೇಶನ್ ತಿಳಿಸಿದ್ದಾರೆ.

    ಅರಮನೆ ಮೈದಾನದಲ್ಲಿ RED U FAIR ಅತಿ ದೊಡ್ಡ ಶೈಕ್ಷಣಿಕ ಮೇಳ ನಾಳೆಯಿಂದ ಆರಂಭ

    BENGALURU MAY 26

    ಕರ್ನಾಟಕದ ಅತಿ ದೊಡ್ಡ ಶೈಕ್ಷಣಿಕ ಮೇಳ ಇದೇ ಶನಿವಾರ ಮತ್ತು ಭಾನುವಾರ ಮೇ 27 ಮತ್ತು 28 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜನೆಗೊಂಡಿದೆ. ಗಾಯಿತ್ರಿ ವಿಹಾರ್ ಸಾಗರ್ ಸಭಾಂಗಣದಲ್ಲಿ ನಡೆಯಲಿರುವ ಈ ಬೃಹತ್ ಮೇಳದಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿವೆ.

    ಯಾವ ಕೋರ್ಸ್ ಭವಿಷ್ಯದಲ್ಲಿ ಉನ್ನತ ಅವಕಾಶ ಒದಗಿಸಲಿದೆ ಎಂಬುದರ ಬಗ್ಗೆ ತಜ್ಞರು ತಿಳಿಸಿ ಕೊಡಲಿದ್ದಾರೆ. ಶೈಕ್ಷಣಿಕ ಪ್ರಗತಿಯೊಂದಿಗೆ ಜೀವನ ಮೌಲ್ಯಗಳ ಉನ್ನತಿಯ ಬಗ್ಗೆಯೂ ಇಲ್ಲಿ ಮಾರ್ಗದರ್ಶನ ಸಿಗಲಿದೆ.

    ಮೇ 27 ರಂದು ಬೆಳಿಗ್ಗೆ 10.30ಕ್ಕೆ ಕರ್ನಾಟಕ ಸರಕಾರದ ಸಚಿವ ರಾಮಲಿಂಗರೆಡ್ಡಿ ಅವರು ಮೇಳವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕದ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗಡೆ ಮತ್ತು ಆರ್ ವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಪಿ ಶ್ಯಾಮ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

    ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಇನ್ ಸೈಟ್ ಇಂಡಿಯಾದ ಮುಖ್ಯಸ್ಥ ಜಿ ಬಿ ವಿನಯ ಕುಮಾರ್ , ಯೋಜನ ಬದ್ದ ಶಿಕ್ಷಣ ಹೇಗೆ ಭವ್ಯ ಭವಿಷ್ಯವನ್ನು ರೂಪಿಸಬಲ್ಲದು ಎಂಬುದರ ಬಗ್ಗೆ ಬಂಜಾರ ಅಕಾಡೆಮಿಯ ಡಾ. ಅಲಿ ಕ್ವಾಜಾ ಮತ್ತು ಪಿಯುಸಿ ನಂತರದ ಅವಕಾಶಗಳ ಬಗ್ಗೆ ಡಾ. ಬಿ ಎಸ್ ಶ್ರೀಕಂಠ ಮಾರ್ಗದರ್ಶನ ನೀಡಲಿದ್ದಾರೆ. ರೆಡ್ ಎಫ್ ಎಂ ನೆಟ್ ವರ್ಕ್ ನ ಸಿಒಒ ಎಂ. ಸುರೇಂದರ್. ಶಿಕ್ಷಣ ತಜ್ಞ ಡಾ ಎಂ. ಜಯಪ್ಪ ಮತ್ತು ಕನ್ನಡಪ್ರೆಸ್ .ಕಾಮ್ ನ ಪ್ರಧಾನ ಸಂಪಾದಕ ಶ್ರೀವತ್ಸ ನಾಡಿಗ್ ಉಪಸ್ಥಿತರಿರುತ್ತಾರೆ.

    ಈ ಮೇಳಕ್ಕೆ ಪ್ರವೇಶ ಉಚಿತವಾಗಿದ್ದು , ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುವಂತೆ ರೆಡ್ ಎಫ್ ಎಂ ನ ಮಾರುಕಟ್ಟೆ ಮುಖ್ಯಸ್ಥ ಸುರೇಶ್ ಗಣೇಶನ್ ಕೋರಿದ್ದಾರೆ. ಕನ್ನಡಪ್ರೆಸ್ .ಕಾಮ್ ಮೇಳಕ್ಕೆ ಡಿಜಿಟಲ್ ಮಾಧ್ಯಮ ಸಹಯೋಗ ಒದಗಿಸಿದೆ.

    ಎಲ್ಲಾ ಅಮ್ಮಂದಿರ ಪ್ರೀತಿಗಾಗಿ

     ಸುಮಾವೀಣಾ             

    ಅಮ್ಮಾ… ಪದಕ್ಕೆ ವ್ಯಾಖ್ಯಾನ ಮಾಡುವುದು ಸುಲಭವೂ, ಸಾಧ್ಯವೂ ಇಲ್ಲದ್ದು. “ಮನೆಯೆ ಮೊದಲ ಪಾಠಶಾಲೆ ಜನನಿತಾನೆ ಮೊದಲಗುರು” ಎಂಬಂತೆ ಗುರುವಾಗಿ, ಮಾರ್ಗದರ್ಶಕಳಾಗಿ, ಹಿತೈಷಿಣಿಯಾಗಿ, ವಿಮರ್ಶಕಳಾಗಿ, ಸ್ನೇಹಿತೆಯಾಗಿ, ಸೃಜನಶೀಲತೆಯನ್ನು ಹುಟ್ಟುಹಾಕಿ, ಸಮಯಪ್ರಜ್ಞೆ ಮೂಡಿಸಿ ಸಮಾಜಕ್ಕೆ ಸಾಕ್ಷೀಭೂತರಾಗುವ ಮಕ್ಕಳ ಬೆನ್ನ ಹಿಂದೆ ಅಮ್ಮಾ ಇದ್ದೇ ಇರುತ್ತಾಳೆ.  ಮನುಷ್ಯನಲ್ಲಿ ಮಾತ್ರವೇ ಈ ಪ್ರೇಮ ಇಲ್ಲ ಬದಲಾಗಿ ಪ್ರಾಣಿ-ಪಕ್ಷಿಗಳಲ್ಲಿಯೂ ಚಿರಸ್ಥಾಯಿಯಾಗಿರುವಂಥದ್ದು.  ರೆಕ್ಕೆಬಲಿಯದ ಪಕ್ಷಿಗಳಿಗೆ ಗುಟುಕು ನೀಡುವ ತಾಯಿ ಪಕ್ಷಿಯಲ್ಲಿ, ಆಗ ತಾನೆ ಹುಟ್ಟಿದ ಕರುವಿನ ಮೈನೆಕ್ಕುವ ಹಸುವಿನಲ್ಲೂ ಅಗಾಧ ಪ್ರೇಮವನ್ನು ಕಾಣಬಹುದು.       

    ನಮ್ಮ ಬೆಕ್ಕು   ನಮ್ಮ ಮನೆಗೆ ಬಂದು ಒಂದೂವರೆ ವರ್ಷದಲ್ಲಿ  ,ಮೂರು ಬಾರಿ  ಮಕ್ಕಳನ್ನು   ಪಡೆದು  ಸಾಕುತ್ತಿದೆ.  ಅದು ತನ್ನ ಮರಿಗಳನ್ನು ರಕ್ಷಿಸಿಕೊಳ್ಳುವ ಪರಿ  ಕಣ್ಣಲ್ಲಿ ನೀರು ತರಿಸುತ್ತದೆ. ತನ್ನ ಮರಿಗಳು  ಇರುವ ಕಡೆ    ನಾಯಿ ನೆರಳು ಬಿದ್ದರೂ ಆಕ್ರೋಶಗೊಳ್ಳುತ್ತದೆ.   ಹೊಸ ಮನೆಯ ಕೆಲಸ ನಿಮಿತ್ತಪ್ಲಂಬರ್ ಗೋಡೆ ಕೊರೆಯಲು ಬಂದಾಗ   ಆ ಸದ್ದಿಗೆ ಹೆದರಿ  ನಾಲ್ಕು ದಿನದ ನಾಲ್ಕು ಮರಿಗಳನ್ನು   ಪಕ್ಕದ ರಾಮೇಗೌಡರ  ಹಿತ್ತಲ್ಲಿ ಎಲ್ಲೊ ಬಚ್ಚಿಟ್ಟು  ನೋಡಿಕೊಂಡು  ಇಪ್ಪತ್ತು ದಿನ ಕಳೆದ ಮೇಲೆ ಮತ್ತೆ  ನಮ್ಮನೆಗೆ ಕರೆದುಕೊಂಡು ಬಂದು ಜೋಪಾನ  ಮಾಡುತ್ತಿತ್ತು. ಅಕಸ್ಮಾತ್ತಾಗಿ ಮರಿ  ಮೊದಲನೆ ಮಹಡಿ  ಹತ್ತಿ ಅರಚಲು ಪ್ರಾರಂಭಿಸಿದಾಗ  ಮರಿ ಎಲ್ಲಿದೆ ಎಂದು ತಿಳಿಯದೆ ಯುಟಿಲಿಟಿ  ಸ್ಪೇಸಲ್ಲಿ ಬಂದು  ನನಗೆ ಏನನ್ನೊ ಹೇಳಿ  ಮೆಟ್ಟಿಲು ಹತ್ತುತ್ತಿತ್ತು  ಅದೇ ಸಮಯಕ್ಕೆ ಆಗ ತಾನೆ  ಕಣ್ಣು ಬಿಟ್ಟ ಮರಿಗಳ ಅಮ್ಮ ಒಂದೇ ಸಮನೆ  ಬೆಕ್ಕು ನಮಗೆಲ್ಲಿ ತೊಂದರೆ ಕೊಡುತ್ತೆ ಎಂದು  ಮರಿಗಳೊಡನೆ  ಕಿರುಚುತ್ತಿತ್ತು . ಬೆಕ್ಕು ಮತ್ತು ಹಕ್ಕಿ    ಇಬ್ಬರಿಗೂ ಮರಿಗಳ  ಮೇಲೆ ಕಾಳಜಿ   ತಾಯ್ತನ ಮನುಷ್ಯ ಲೋಕ ಪ್ರಾಣಿಲೋಕವನ್ನು   ಮೀರಿದ್ದು .  

    ರಾಯಘಡ ಕೋಟೆಯೊಳಗಿನ ಊರಿಗೆ ಪ್ರತಿ ದಿನ ಹೀರಾ ಎನ್ನುವ ಮಹಿಳೆ ಹಾಲು  ಮಾರಲು ಹೋಗುತ್ತಿದ್ದಳು  ಹುಣ್ಣಿಮೆ ಜಾತ್ರೆ  ನಿಮಿತ್ತ  ಹಾಲು    ಮಾರಿ ಸ್ವಲ್ಪ  ತಡವಾಗಿ  ಕೋಟೆ ಬಾಗಿಲಿಗೆ  ಬಂದರೆ ಕಾವಲುಗಾರ  ಮುಚ್ಚಿದ ಕೋಟೆ ಬಾಗಿಲನ್ನು ತೆಗೆಯುವುದಿಲ್ಲ  ಅದೇ ಹೊತ್ತಿಗೆ  ಆಕೆಗೆ ಮಗು  ಅಳುವ ಸದ್ದು ಕೇಳಿದಂತಾಗುತ್ತದೆ.  ಕೋಟೆ ಕೆಳಗೆ ಕಂದಕ ಇದೆ ಎಂದು ತಿಳಿದಿದ್ದರೂ  ಕೋಟೆ ಮೇಲಿಂದ ಜಿಗಿದು ಮನೆಗೆ ಹೋಗಿ ಮಗುವಿಗೆ ಹಾಲುಣಿಸಿ  ಸಂಭ್ರಮಿಸುತ್ತಾಳೆ.  ಈ ವಿಷಯ ತಿಳಿದ ಶಿವಾಜಿ ಆಕೆಯನ್ನು ಕರೆಸಿ ಸನ್ಮಾನಿಸಿ    ಮಾತೃಪ್ರೇಮದ ಮಹಿಮೆಯನ್ನು ಕೊಂಡಾಡಿ  ಆಕೆ ಹಾರಿದ ಸ್ಥಳದಲ್ಲಿ ಬುರುಜನ್ನು ನಿರ್ಮಿಸಿ ಅದಕ್ಕೆ ‘ಹೀರಾಕಣಿ’ ಎಂಬ ಹೆಸರಿಡುತ್ತಾನೆ.    ಮಾನವ ಜೀವಿಗೆ ತಾಯಿಯಂಥ   ಋಣ ಮತ್ತೊಂದಿಲ್ಲ  ಎಂಬ  ಮಾತು ಅಕ್ಷರಶಃ ಸತ್ಯ ಅಲ್ವ!

       ಜಾನಪದ ಹೆಣ್ಣುಮಕ್ಕಳು “ ಕಣ್ಣು ಕಾಣುವ ತನಕ ಬೆನ್ನು ಬಾಗುವ ತನಕ ತಾಯಿಯಿರಲಿ, ತವರಿರಲಿ” ಎಂದು ಹೇಳಿದ್ದಾರೆ. ಅಮ್ಮನನ್ನು ಕುರಿತ  ಎಂಥ ಉದಾತ್ತ ನಿಲುವು? ಅಲ್ವೇ!

     ಯಾರೂ ಇದ್ದರೂ ತನ್ನ ತಾಯವ್ವನ್ಹೋಲರ

    ಸಾವಿರ ಕೊಳ್ಳಿ ಒಲಿಯಾಗ ಇದ್ದರೂ

    ಜ್ಯೋತಿ ನಿನ್ಯಾರ್ ಹೋಲರ ಎಂದು ಮನತುಂಬಿ ಆ ಮಹಾಶಕ್ತಿಗೆ ವಂದಿಸುವುದಿದೆ.

     “ತಾಯಿಗಿಂತ ಬಂಧುವಿಲ್ಲ  ಉಪ್ಪಿಗಿಂತ ರುಚಿಯಿಲ್ಲ” ಎಂಬಂತೆ ಬಂಧುಗಳ ಬಂಧು ಎಂದರೆ ತಾಯಿ ಜೀವವೆ. ನಮ್ಮಲ್ಲಿ ಬಳಕೆಯಲ್ಲಿರುವ motherland, mothertoungue,mother department  ಮುಂತಾದ ಪದಗಳನ್ನು ತೆಗೆದುಕೊಂಡರೆ ಇಲ್ಲೆಲ್ಲಾ ಮದರ್ಸೆ ಇರುತ್ತಾರೆ. ‘ಮಾ’ ಅಂದರೆ ಅಮ್ಮನನ್ನು ಬಿಟ್ಟು  ಅರ್ಥಾತ್ ಇತರರಿಗೆ ಸ್ಥಾನವಿಲ್ಲ. ಎಲ್ಲಾ ವಯೋಮಾನದವರಿಗೂ ಎಲ್ಲಾ  ಸಂಬಂಧಗಳಿಗೂ ಕಡೆಯದಾಗಿ ಅಮ್ಮ ಪದವನ್ನು ಸೇರಿಸಿಕೊಳ್ಳುತ್ತೇವೆ. ಚಿಕ್ಕಮ್ಮ, ದೊಡ್ಡಮ್ಮ, ಅತ್ತಿಗೆಮ್ಮ, ಅತ್ಯಮ್ಮ. ತಂಗ್ಯಮ್ಮ ಇತ್ಯಾದಿ ಇತ್ಯಾದಿ… ಯಾವುದೇ ಸಂಬಂಧ ಹೇಳದೇ ಇದ್ದಾಗಲೂ ಆವಮ್ಮ, ಈವಮ್ಮ ಎಂದಾದರೂ ಹೇಳಿಬಿಡುತ್ತಾರೆ.

    ಅಮ್ಮ’ ಈ ಪದದ ಬದಲಿಗೆ ಬೇರೆ ಪದವನ್ನು ರೀಪ್ಲೇಸ್ ಮಾಡಲು ಸಾಧ್ಯವಿಲ್ಲ. ‘ಅಮ್ಮಾ’ ಎಂದರೆನೆ ಧೈರ್ಯದ ಸಂಕೇತ.  ನಾವೇನೇ ಕೇಳೀದರೂ ಇಲ್ಲ ಎನ್ನದ ಜೀವ! ಉಪಮನ್ಯು ತನ್ನ ತಾಯಿಯ ಬಳಿ ಹೋಗಿ ಕುಡಿಯಲು ಹಾಲು ಬೇಕೆಂದಾಗ   ಇಲ್ಲ ಎನ್ನಲಾಗದೇ ಅಕ್ಕಿ ಹುಡಿಯನ್ನು ನೀರಿನಲ್ಲಿ ಬೆರೆಸಿಕೊಡುತ್ತಾಳೆ. ನಂತರದಲ್ಲಿ ಶಿವ ಪ್ರತ್ಯಕ್ಷನಾಗಿ ಹಾಲಿನ ಕಡಲನ್ನೇ ಕರುಣಿಸುತ್ತಾನೆ.

     ಬ್ಯಾಸಿಗಿ ದಿವಸಕಿ ಬೇವಿನ ಮರತಂಪು

     ಭೀಮಾರತಿ ಎಂಬವ ಹೊಳೆ ತಂಪು

    ತಾಯಿ ತಂಪು ತವರಿಗೆ

     ಎಂಬಂತೆ  ತಾಯಿಯಿದ್ದರೆ ಸರ್ವಸ್ವವೂ ಇದ್ದಂತೆ, ಅಮ್ಮನ ಬಳಿ ಇರುವಷ್ಟು ಮಮತೆ,ನಡೆಯುವಷ್ಟು ಸುಳ್ಳು, ಸಲಿಗೆ, ಹಠ, ಉದ್ಧಟತನ, ಮೊಂಡುತನ, ದಡ್ಡತನ, ಬಾಲಿಷವರ್ತನೆ ಯಾರ ಬಳಿಯೂ ನಡೆಯುವುದಿಲ್ಲ.ಅಮ್ಮನಮನೆ, ತವರುಮನೆ, ತಾಯಿಮನೆ, ಎಂಬ ಪದಗಳೇ ಹೆಚ್ಚು. ಸಂಸ್ಕೃತಿ-ಸಂಸ್ಕಾರದ ಪಾಠ, ಸ್ವಚ್ಛತೆಯ, ಸತ್ಯ, ನಿಷ್ಠೆಯ ಪಾಠವನ್ನು ಸ್ವಾಭಿಮಾನದ ಉದಾರತೆಯ ಪಾಠವನ್ನು ಅಮ್ಮನೇ ಹೇಳಿಕೊಡುವುದು . ಅದಕ್ಕೆ ‘ತಾಯಿಯಂತೆ ಮಗಳು ನೂಲಿನಂತೆ ಸೀರೆ’, ‘ಅಮ್ಮನ ಕೈರುಚಿ’, ‘ಅಮ್ಮನ ಆರೈಕೆ’, ‘ಕರುಳಬಳ್ಳಿಯ ಸಂಬಂಧ’ ಎಂಬ ಪದಪಂಕ್ತಿಗಳು ಚಾಲ್ತಿಯಲ್ಲಿರುವುದು. ಹೊಟ್ಟೆ ಕಿಚ್ಚಿಗೆನಾವು ಅನ್ವರ್ಥವಾಗಿ ನಾವು ಬಳಸುವ ಹೆಸರೆಂದರೆ ಗಾಂಧಾರಿ. ಆಕೆಯೂ ತನ್ನ ಮಕ್ಕಳನ್ನು ಕಳೆದುಕೊಂಡು ಪಟ್ಟ ವೇದನೆ ವರ್ಣಿಸಲಸಾಧ್ಯ ಹಾಗಾಗಿ ಆಕೆ ‘ದುಃಖ ಶತನನಿ’ ಎಂದು  ರನ್ನನಲ್ಲಿ ಕರೆಸಿಕೊಂಡಿದ್ದಾಳೆ.   ಅಷ್ಟಾವಕ್ರಮುನಿಯತಾಯಿ ಸುಜಾತೆ ಮಗನ ಕಾಣುವಿಕೆಗೆ ಯಾವಾಗಲೂ ಹಂಬಲಿಸಿರುತ್ತಾಳೆ ಕುರೂಪಿ ಎಂದು ಭಾವಿಸುವುದೇ ಇಲ್ಲ.

    ಮಾಡದ ತಪ್ಪಿಗೆ ತನ್ನೈವರೂ  ಮಕ್ಕಳನ್ನು ಕರೆದುಕೊಂಡು ವನವಾಸ ಮಾಡುತ್ತಾ ಪ್ರತಿ ಕ್ಷಣದಲ್ಲೂ ತನ್ನನ್ನು ತಾನು ಸವಾಲುಗಳಿಗೆ ಒಡ್ಡಿಕೊಂಡ ಪಾತ್ರ ಎಂದರೆ ಕುಂತಿನೇ. ಆದ್ದರಿಂದ ತಾಯಿಗಿಂತ ಹಿರಿಯ ಪದವಿ ಅವಳಿಗಿರುವ ಮಮಕಾರದ ಬದಲಿಗೆ ಇನ್ನೊಬ್ಬರು ಇರುವುದಿರಲಿ ಇನ್ನೊಂದು ಪದವೂ ಇಲ್ಲ.  ಇದನ್ನು “ಊರಿಗೆ ಅರಸಾದರೂ ತಾಯಿಗೆ ಮಗನಲ್ಲವೇ”. “ಹೆತ್ತವರಿಗೆ ಹೆಗ್ಗಣ ಮುದ್ದು” ಎಂಬ ಗಾದೆಗಳು ಶೃತಪಡಿಸುತ್ತವೆ. ಕಾಸಿಗೆ ಹೋಗುವುದಕ್ಕಿಂತ ತಾಸ್ಹೋತ್ತಿನ ಹಾದಿ ತವರೂರಿನದ್ದು ಎನ್ನುವ  ಹೆಣ್ಣುಮಕ್ಕಳು ದೈವಸನ್ನಿಧಾನಕ್ಕಿಂತ ಮಿಗಿಲಾದ ಸ್ಥಾನವನ್ನು ಕೊಟ್ಟಿದ್ದಾರೆ.

     ಬಿ. ಆರ್. ಲಕ್ಷ್ಮಣರಾವ್ ರವರ ಅಮ್ಮಾ ನಿನ್ನ ಎದೆಯಾಳ ಗೀತೆಯಲ್ಲಿ ಮೂಡಿರುವ  “ಅಮ್ಮಾ ನಿನ್ನ ಎದೆಯಾಳದಲ್ಲಿ  ಗಾಳಕ್ಕೆ ಸಿಕ್ಕ ಮೀನು  ಮಿಡುಕಾಡುತ್ತಿರುವೆ ನಾನು” ಎಂಬ  ಅಭೂತಪೂರ್ವ ಸಾಲುಗಳು ಅಮ್ಮನ ವ್ಯಕ್ತಿಚಿತ್ರಣವೇ ನಮ್ಮ ಕಣ್ಮುಂದೆ ಬಂದುಬಿಡುತ್ತದೆ. “ಆನಂದಾಮೃತಕರ್ಷಿಣಿ,ಅಮೃತವರ್ಷಿಣಿ ಭವಾನಿ ಹರಾದಿಪೂಜಿತೆ ಭವಾನಿ” ಎಂಬಂತೆ  ಮಕ್ಕಳ ಬದುಕಲ್ಲಿ ಆನಂದವನ್ನು ಅನಂತವಾಗಿ ತರಬಯಸುವ ಬಂಧು ಅಮ್ಮಾ. ಸುಖಸ್ವರೂಪಿಣಿ! ಮಧುರಭಾಷಿಣಿ! ನಮ್ಮನ್ನು ತಿದ್ದಿದ ಈ ಜಗತ್ತಿಗೆ ತಂದ  ಎಲ್ಲಾ ತಾಯಂದಿರಿಗೂ ಅಮ್ಮಂದಿರ ದಿನದ ಈ ಸಂದರ್ಭದಲ್ಲಿ ನನ್ನ ಪ್ರೀತಿಯ ನಮಸ್ಕಾರಗಳು.

     

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

    ಇದು ಫಲಿತದ ಅಂಶ  ಮಾತ್ರ  ಅಂತಿಮ ಫಲಿತವಲ್ಲ

     ಸುಮಾವೀಣಾ                    

    ಹತ್ತನೆ ತರಗತಿ,ದ್ವಿತೀಯ ಪಿ.ಯು.ಸಿ-2nd pu result- ಫಲಿತಾಂಶ ಬಂದಾಗ   ಸಂಭ್ರಮಿಸುತ್ತಿರುವ ವಿದ್ಯಾರ್ಥಿಗಳನ್ನು ನೋಡಿ ನಾವೂ ಸಂಭ್ರಮಿಸುತ್ತಿದ್ದೇವೆ. ಆದರೆ ವಿಷಾದದ ಸಂಗತಿ ಎಂದರೆ  ಫಲಿತಾಂಶ ಬಂದ ಬೆನ್ನಲ್ಲೆ  ಒಂದೋ ಎರಡೋ  ಅಥವಾ ಅದಕ್ಕಿಂತ ಹೆಚ್ಚೋ ಆತ್ಮಹತ್ಯಾ ಪ್ರಕರಣಗಳು ಘಟಿಸಿಬಿಡುತ್ತವೆ. ಪರೀಕ್ಷೆಯಲ್ಲಿ ಉತ್ತೀರ್ಣರಾದರೆ rank  ಬಂದಿಲ್ಲ rank ಇಲ್ಲದ  ಅಂಕಗಳು ನನಗೆ ಬೇಡ  ಅನ್ನುವುದು ಒಂದು ನಿರ್ಧಾರವಾದರೆ ಪಾಸ್ ಆಗಿಲ್ಲ ಮನೆಯಲ್ಲಿ ಹೇಗೆ ಮುಖ ತೋರಿಸುವುದು ಅನ್ನುವ ನಿರ್ಧಾರ ಒಂದೆಡೆ. ಈ ನಿರ್ಧಾರಗಳು ಆಧಾರವಿಲ್ಲದವು….

     ಏಕೆ   ಹೀಗೆ ವಿದ್ಯಾರ್ಥಿಗಳು   ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆಯೋ ಗೊತ್ತಿಲ್ಲ ? ಪ್ರಥಮತಃ ಜೀವನ ನಮ್ಮ ಹಕ್ಕು! ಬದುಕಬೇಕು! ಹುಟ್ಟು    ನಮ್ಮಾಜ್ಞೆ ಪಡೆದು ಹೇಗೆ  ನಿರ್ಧಾರವಾಗಿರುವುದಿರಲ್ಲವೋ ಹಾಗೆ ನಮ್ಮ ಜೀವನದ ಕಡೆ ನಿರ್ಧಾರವೂ ನಮ್ಮ ಕೈಯಲ್ಲಿ ಇರುವುದಿಲ್ಲ.   ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಅನುಭವಿಸಿದವರು “ ಕಷ್ಟ ಬರಲಿ  ತೊಂದರೆ ಇಲ್ಲ ಜೊತೆಗೆ ಅದನ್ನು ಸಹಿಸುವ ಕ್ಷಮತೆ ಕೂಡ ಬೇಕು” ಎಂದು ಬಯಸುತ್ತಾರೆ. ಅಂಥ ಕಷ್ಟದ   ಅನುಭೂತಿ  ನಿಮಗಾಗಿದೆಯೇ? ಆಂಥ ಕಷ್ಟ ಅನುಭವಿಸಿದವರು ಸಾಧಕರಾಗಿದ್ದಾರೆ.  ಜೀವ-ಜೀವನ ವಿಮುಖರಾಗಿಲ್ಲ. ಹೀಗಿರುವಾಗ  ಅರಳುವ  ಮೊದಲೆ ಕಮರುವ ನಿಮ್ಮ ನಿರ್ಧಾರ  ಸರಿಯಿಲ್ಲ.   ಇಂಥ ನಿರ್ಧಾರಗಳ ಬಗ್ಗೆ  ಯಾರಿಗೂ ಅನುಕಂಪವಿರದು.  ಅಷ್ಟಕ್ಕೂ ಈ ಪರೀಕ್ಷೆಗಳು ಕಟ್ಟ ಕಡೆಯವಲ್ಲ.

      ವಿದ್ಯಾರ್ಥಿಗಳ  ಮುಖ್ಯ ಸಮಸ್ಯೆ “ಕಡಿಮೆ ಅಂಕಗಳು” ಎಂದಾದರೆ  ಕಡಿಮೆ ಅಂಕಗಳು ಬರಲು ನೀವೆ ಕಾರಣಿಕರ್ತರು. ಒಂದೋ ನಿಮಗೆ ಆ ವಿಷಯ  ಮನನವಾಗಿಲ್ಲ  ಅಥವಾ  ಓದಿನ ಕಡೆ  ನಿಮಗೆ ನಿರಾಸಕ್ತಿ ಇದೆ ಎಂದಾಯಿತಲ್ಲವೆ. ನಿಮ್ಮ ಅನಧ್ಯಯನದ ಹೊಣೆಯನ್ನು ಶಿಕ್ಷಣ ಸಂಸ್ಥೆಯ ಮೇಲೆಯೋ  ಅಥವಾ ಶಿಕ್ಷಕರ ಮೇಲೆಯೋ ಉರುಳಿಸುವುದು ನೀವು ಮಾಡುವ ಸಾಮಾಜಿಕ ದ್ರೋಹ   ಎಂದೇ ನನ್ನನಿಸಿಕೆ.

     ಇಂಥದ್ದೆ ವಿಷಯ ತೆಗೆದುಕೊಳ್ಳಬೇಕು ಎನ್ನುವ ಪೋಷಕ  ವರ್ಗ  ಈಗಿಲ್ಲ. ನಿಮ್ಮ ನಿರ್ಧಾರವನ್ನೇ ಪೋಷಿಸುವ ಪೋಷಕರೇ ಹೆಚ್ಚು. ಸ್ವಂತ ನಿರ್ಧಾರ ತೆಗೆದುಕೊಳ್ಳಲಾರದೆ ಸಮೂಹ ಸನ್ನಿ ಎಂಬಂತೆ  ಎಲ್ಲರೂ ತೆಗೆದುಕೊಳ್ಳುವ  ವಿಷಯವನ್ನೇ ನೀವೇಕೆ ತೆಗೆದುಕೊಳ್ಳಬೇಕು? ಉದಾಹರಣೆಗೆ ಹೇಳುವುದಾದರೆ  ವಿಜ್ಞಾನ ತೆಗೆದುಕೊಂಡಿಲ್ಲ  ಕಲಾ ನಿಕಾಯವೋ ವಾಣಿಜ್ಯ ನಿಕಾಯದಲ್ಲಿಯೋ ಓದುತ್ತೀರಿ ನಿಮಗೆ ಬಹಿಷ್ಕಾರ ಎಂದು ಯಾರಾದರು ಹೇಳಿದ್ದಾರೆಯೇ? ಇಲ್ಲ ಅಲ್ವ! ವಿಜ್ಞಾನ ನಿಕಾಯದಲ್ಲಿ ಎಷ್ಟು ಚೆನ್ನಾಗಿ ಜೀವನ ರೂಪಿಸಿಕೊಳ್ಳಬಹುದೋ ಅಷ್ಟೇ ಜೀವನ ಮಾರ್ಗ ಕಲಾ ನಿಕಾಯ ಅಧ್ಯಯನ ಮಾಡಿದವರಿಗೂ ಆಗುತ್ತದೆ.  ತಾಂತ್ರಿಕ , ವೈದ್ಯಕೀಯ, ಸಂಶೋಧನಾ ಕ್ಷೇತ್ರಗಳು ಬಿಟ್ಟರೆ ಉಳಿದ ಕ್ಷೇತ್ರಗಳಲ್ಲಿ ಕಲಾ ನಿಕಾಯದವರೆ  ಇರುವುದು.  ಆಯ್ಕೆ ಬಹಳಷ್ಟು ಇರುವಾಗ  ಜೀನು ಕಟ್ಟಿದ ಕುದುರೆಯಂತೆ ಏಕಮುಖವಾಗಿ  ಏಕೆ ಸಂಚರಿಸಬೇಕು? ಪರ್ಯಾಯ ಮಾರ್ಗಗಳನ್ನು ಪಡೆದುಕೊಳ್ಳಬಹುದಲ್ಲ  ಎಂಬುದೇ ನನ್ನ ಅನಿಸಿಕೆ.  ಎಲ್ಲಾ ವಿಷಯಗಳೂ ಸಾಧನೆಯ ಸರಕುಗಳೇ..!!

      ವರ್ಷದಾರಭ್ಯ ಪಠ್ಯಗಳು ಪ್ರಾರಂಭವಾದರೂ   ವಿದ್ಯಾರ್ಥಿಗಳು ಓದುವುದಕ್ಕೆ ಪ್ರಾರಂಭಿಸುವುದು ಅರ್ಧ ವರ್ಷ ಕಳೆದ  ನಂತರ…ಒಂದು ಟ್ರಿಪ್ ,ಅಥವಾ ಶಾಲಾ ಕಾಲೇಜುಗಳ  ಫೆಸ್ಟುಗಳು ಕಳೆದ ಮೇಲೆಯೇ. ಶೈಕ್ಷಣಿಕ ವರ್ಷ ಪ್ರಾರಂಭ ಆಗಿದೆ ,ನೀವು ಫೀಸ್ ಕಟ್ಟಿದ್ದೀರಿ ನಿಮಗೊಂದು ಗುರುತಿನ ಚೀಟಿ  ದೊರೆತಿದೆ ಎಂದಮೇಲೆ   ಪರೀಕ್ಷಾ  ದಿನಾಂಕಗಳಿಗೆ ಕಾಯುವುದೇನಿದೆ?  ಶೈಕ್ಷಣಿಕ ವರ್ಷ ಪ್ರಾರಂಭ ಆಗಿದೆ ಎಂದ ಮೇಲೆ ಕಡೆಗೊಂದು ದಿನ ಪರೀಕ್ಷೆ ,ಫಲಿತಾಂಶಗಳು ಸಹಜವೇ ಅಲ್ವೆ!

      ಇಂದಿನ ವಿದ್ಯಾರ್ಥಿಗಳಿಗೆ ಹೆಚ್ಚು ಹೇಳುವುದು  ಏನೂ ಇಲ್ಲ.  ಶಿಕ್ಷಕರಿಗಿಂತ ಮೊದಲೆ ವಿಷಯವನ್ನು ಮನನ ಮಾಡಿಕೊಳ್ಳುವ  ಅವಕಾಶವಿದೆ! ಆಸಕ್ತಿ ಬೇಕು ಅಷ್ಟೇ!  ವರ್ಷಾರಭ್ಯದಲ್ಲೇ ನಿಮಗೆ ಪಠ್ಯ,  ಪೂರಕ ಅಧ್ಯಯನ ಸಾಮಗ್ರಿಗಳು ದೊರಕಿರುತ್ತವೆ. ಸಮಯದ ಬಗ್ಗೆ, ಜೀವನದ ಮಾರ್ಗದ ಬಗ್ಗೆ ಹೆಚ್ಚು ತಿಳಿವಳಿಕೆ ಹೇಳುವವರ ಬಗ್ಗೆ  ನಿಮಗೆ ಗೌರವಾಧರಗಳಿರಲಿ.

     ವಿದ್ಯಾರ್ಥಿಗಳೆ!  ನಿಮ್ಮ ಖುಷಿಯಲ್ಲಿ ನಮ್ಮ ಖುಷಿಯೂ ಇದೆ.  ಶೈಕ್ಷಣಿಕ ಪರೀಕ್ಷೆಯೇ  ಕಡೆಯ ಘಟ್ಟ ಎಂದು ತಿಳಿದಲ್ಲಿ ನಿಮ್ಮಂತಹ  ಮೂರ್ಖರು  ಇಲ್ಲ ಎಂದನ್ನಿಸುತ್ತದೆ.  ಸೋಲುಗಳೆ ಬದುಕನ್ನು ಗಟ್ಟಿಗೊಳಿಸುವುದು.  ‘ಶಕ್ತಿ ಕವಿ ರನ್ನ’ನಿಗೆ “ಕೊಂಡು ತಂದು ಹೊತ್ತು ಮಾರಲು ವಿದ್ಯೆಯೇನು ಬಳೆಯ ಮಲಾರವೆ” ಎಂದಿದ್ದರಂತೆ,   “ಕನಕನಿಗೇನು ಕೋಣನ ಮಂತ್ರ”ಎಂದಿದ್ದರಂತೆ ಅವರೇನು ಸಾಹಿತ್ಯ ಕ್ಷೇತ್ರದಲ್ಲಿ  ಸಾಧನೆ ಮಾಡಿಲ್ಲವೇ ಹಾಗಿದ್ದರೆ.

      ನಮಗೆ ಹೇಗೆ ಸರಿಯೋ ಹಾಗೆ ನಾವು ಬದುಕಬೇಕು. ಬದುಕಿನ ಸುಸ್ಥಿತಿ ನಮಗೆ ಗೊತ್ತಿರುತ್ತದೆ. ಇನ್ಯಾರದೋ ಮರ್ಜಿಗೆ ನಾವು ಬದುಕಬೇಕಿಲ್ಲ.   ಬೇರೆಯವರ ಮೆಚ್ಚುಗೆಯಲ್ಲಿ ಬದುಕುವ   ಅಭ್ಯಾಸ ಬಿಡಬೇಕು! ಇದೊಂದು ನಟನೆಯ ಹಾಗು ನಮ್ಮನ್ನೆ ನಾವು  ಶಿಕ್ಷಿಸಿಕೊಳ್ಳುವ ಹೀನಾಯ ಬದುಕು ಅನ್ನಿಸುತ್ತದೆ.  ಸೋಲಿನಿಂದಲೇ ಪ್ರಾರಂಭವಾಗುವ  ಅದೆಷ್ಟೋ ಯಶೋಗಾಥೆಗಳು ನಮ್ಮಲ್ಲಿವೆ.   ಕಾಲಿಗೆ  ಪಾದರಕ್ಷೆಗಳೂ ಇಲ್ಲದೆ ನದಿ ಧಾಟಲು ಹಣವಿಲ್ಲದೆ ಇದ್ದ ವ್ಯಕ್ತಿ ದೇಶದ ಪ್ರಧಾನಿಯಾದ ಲಾಲ್ ಬಹಾದ್ದೂರ್ ಶಾಸ್ತ್ರಿಗಳ,  ಬೀದಿ ದೀಪದ ಬೆಳಕಿನಲ್ಲಿ ಅಭ್ಯಾಸ ಮಾಡಿದ  ಅಂಬೇಡ್ಕರ್, ಸಾಮಾನ್ಯ ಬೀಗ ರಿಪೇರಿ ಮಾಡುವ ತಂದೆಯ ಮಗನಾಗಿ ದೇಶದ ರಕ್ಷಣಾ ವ್ಯವಸ್ಥೆಯ ಕೀಲಿಕೈ ಪಡೆದ ಕಲಾಂ, ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಹಾಕುತ್ತಿದ್ದ ವ್ಯಕ್ತಿ ಅದೇ  ಕ್ಷೇತ್ರದ ಅನಭಿಷಿಕ್ತ ದೊರೆ ಆದ   ಅಂಬಾನಿ, ಕಾಲು ಕಳೆದುಕೊಂಡಿದ್ದರೂ  ಧೃತಿಗೆಡದ ನೃತ್ಯಗಾರ್ತಿ ಸುಧಾಚಂದ್ರನ್ ಅವರ  ಸ್ಪಷ್ಟ ನಿದರ್ಶನಗಳಿವೆ

      ಅಮಿತಾಬ್ ಬಚ್ಛನರನ್ನು   ಅವರ ಧ್ವನಿ ಕೇಳಿ “ರೆಡಿಯೋ  ಜಾಕಿ ಆಗಲು ಅನ್ಫಿಟ್” ಎಂದು ಕಳುಹಿಸಿದ್ದರಂತೆ,  ತನ್ನ ಪ್ರಯೋಗಾಲಯ ಸಂಪೂರ್ಣ   ಬೆಂಕಿಗಾಹುತಿಯಾದಾಗ  ವಿಚಲಿತನಾಗದೆ ಅದರ ಜ್ವಾಲೆಯನ್ನು ಕಣ್ತುಂಬಿಕೊಂಡು ಹೊಸ ಪ್ರಯೋಗಗಳಿಗೆ ಅಣಿಯಾದ ಥಾಮಸ್ ಆಲ್ವ  ಎಡಿಸನ್ ನಮಗೆ ಮಾದರಿಯೇ .ಇಂದಿಗೆ ಗಾಯನ ಕ್ಷೇತ್ರದಲ್ಲಿ ಹೆಸರು ಮಾಡುತ್ತಿರುವ  ಸಿಡ್ ಶ್ರೀರಾಮರನ್ನು   ಕೂರುವ ಸಂದರ್ಭದಲ್ಲಿ ಖುರ್ಚಿ ಎಳೆದು, ಹಾಡುವ ಸಂದರ್ಭದಲ್ಲಿ ಹಿನ್ನೆಲೆ ಸಂಗೀತ ನೀಡದೆ  ಅವಮಾನ ಮಾಡಿದ ಉದಾಹರಣೆಗಳಿವೆ. ಕೇವಲ  ಒಂದು ಕಿಲೋ ಬೇಳೆಯನ್ನು ಬಂಡವಾಳವಾಗಿಸಿಕೊಂಡು  ಅಮೆರಿಕದಲ್ಲಿ  ಉದ್ಯಮ ಪ್ರಾರಂಭಸಿದ  ಪ್ರಾಪಂಚಿಕ ಮಟ್ಟದ ಶೆಫ್ ವಿಕಾಸ್ ಖನ್ನ  ಇದ್ದಾರೆ. ನಲವತ್ತನೆ ವರ್ಷ  ವಯಸ್ಸಿನಲ್ಲಿ   ಕಾನೂನು ಅಭ್ಯಾಸ ಮಾಡಿ  ಪ್ರಖ್ಯಾತ ನ್ಯಾಯವಾದಿಯಾದ  ನಿಶಾ ಶರ್ಮ,  ಗಂಡ  ಅತ್ತೆಯ ಕಿರುಕುಳದಿಂದ ನೊಂದಾಕೆ   ಪ್ರಸಕ್ತ ಸಾಲಿನಲ್ಲಿ ಐ.ಎ.ಎಸ್ ಪಾಸಾಗಿದ್ದಾರೆ.  ಇಂಥ ಅಗಣಿತ  ಯಶೋಗಾಥೆಗಳೆಷ್ಟೋ?  ಇವುಗಳು ಕಿವಿ ನಿಮಿರಿಸಿಕೊಂಡು ಕೇಳಿ ಮರೆಯುವ ಕತೆಗಳಲ್ಲ! ಜೀವನಕ್ಕೆ  ಮಾದರಿಯನ್ನಾಗಿ ಇರಿಸಿಕೊಳ್ಳ ಬಹುದಾದ  ಬಹುತ್ವದ ಮಾದರಿಗಳು.

      ಶೇಕಡಾ ನೂರರಷ್ಟು ಪ್ರಯತ್ನ ಪಡಿ.  ಪ್ರಯತ್ನ  ಪಡದೆ ಗುರಿ ತಲುಪಲು ಸಾಧ್ಯವಿಲ್ಲ. ಕನಸು ಕಾಣಬೇಕು ಆದರೆ ಆ ಕನಸನ್ನು ನನಸಾಗಿಸಿಕೊಳ್ಳುವ ಛಲವೂ ಇರಬೇಕು.   ಸಾಲಿನಲ್ಲಿ ಹೋಗುವ ಇರುವೆ ಕ್ರಮ ತಪ್ಪಿದರೆ ಮತ್ತೆ ಆ ದಾರಿ ಸರಿ ಮಾಡಿಕೊಳ್ಳುತ್ತದೆ.  ನಿಮ್ಮ ಕಷ್ಟಗಳನ್ನು  ಆಲಿಸದ ಕಟುಕರು ಯಾರೂ ಇಲ್ಲ. ನಿಮ್ಮಾಪ್ತರೊಡನೆ ಸಮಾಲೋಚನೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ಕಡೆಯ ಆಯ್ಕೆ ಎಂದು   ಪ್ರಾಣದವರೆಗೂ ಹೋಗುವ  ದುರಿತದ ನಿರ್ಧಾರ ಬೇಡ. ನೀವು  ಈಗ  ಎದಿರುಗೊಂಡಿರುವ, ಎದುರುಗಾಣುವ ಪರೀಕ್ಷೆಯ  ಅಂಕಗಳು ಅಂತಿಮ ಫಲಿತವಲ್ಲ.  ಅಂಕಗಳ  ಅಂಕೆಯನ್ನು ಬಿಟ್ಟು ಹೊರಬನ್ನಿ. ಫಲಿತದ  ಅಂಶವಷ್ಟೇ. ಆತುರದಲ್ಲಿ ಕೊಯ್ದುಕೊಂಡ  ಮೂಗು ಮತ್ತೆ ಬೆಳೆಯುವುದೇ?  ಆತುರದ ನಿರ್ಧಾರ ಖಂಡಿತಾ ಬೇಡ!  ಬದುಕಿನಲಿ ನೂರು ಆಯ್ಕೆಗಳಿವೆ!  ಯಶಸ್ಸಿಗೆ ಸಾವಿರ ಸೋಪಾನಗಳಿವೆ!!

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

    ಸಂಖ್ಯಾ ದರ್ಶನ!

    ಕಳೆದವಾರ 3ನೇ ಏಪ್ರಿಲ್ 2023 ನಮ್ಮೆಲ್ಲರ ಅವಿಭಾಜ್ಯ ಅಂಗವಾಗಿರುವ ಈ ಮೊಬೈಲ್ ಫೋನಿನ 50ನೇ ವರ್ಷದ ಹುಟ್ಟು ಹಬ್ಬ! ಹೌದು 3ನೇ ಏಪ್ರಿಲ್ 1973 ರಂದು ಅಮೇರಿಕಾದ ಎಂಜಿನಿಯರ್ ಮಾರ್ಟಿನ್ ಕೂಪರ್ ಪ್ರಥಮ ಮೊಬೈಲ್ ನಿಂದ ನ್ಯೂಯಾರ್ಕ್ 6ನೇ ಅವೆನ್ಯೂ ನಿಂದ ಮೊದಲನೆಯ ಕರೆಯನ್ನು ಮಾಡಿ ಇದರ ಜನಕ ಅಂತ ಅನ್ನಿಸಿಕೊಂಡ. ಇದನ್ನು ತಯಾರಿಸಿದ್ದ ಕಂಪನಿಯ ಹೆಸರು ಮೊಟೊರಾಲಾ ಮತ್ತು ಇದರ ಹೆಸರು Dynatac 8000X. ಇದರ ತೂಕ 1100 ಗ್ರಾಮ್. ಇದನ್ನು 24 ಘಂಟೆ ಚಾರ್ಜ್ ಮಾಡಿದರೆ, 25 ನಿಮಿಷ ಬಳಸಬಹುದಿತ್ತು. ಇದನ್ನು ಬ್ಯಾಟರಿ ಸೆಲ್ ಗಳಿಂದ ಚಾರ್ಜ್ ಮಾಡೋದ್ರಿಂದ ಇದಕ್ಕೆ ಸೆಲ್ ಫೋನ್ ಅಂತಾನೂ ಹೆಸರು ಬಂತು!

    ನಂತರ ಇದರ ಬೆಳವಣಿಗೆ, ಇದರ ಅನಿವಾರ್ಯತೆ, ಇಡೀ ಮಾನವ ಜನಾಂಗದ ಅವಿಭಾಜ್ಯ ಅಂಗ ಆದದ್ದು ಮುಂದೊಂದು ದಿನ ಇತಿಹಾಸವಾಗಬಹುದು. ಮಾನವನ ಇತಿಹಾಸದಲ್ಲಿ ಅವಿಷ್ಕರಿಸಲ್ಪಟ್ಟ ಯಾವುದೇ ವೈಜ್ಞಾನಿಕ ಸಾಧನ ಇದರಷ್ಟು ವೇಗವಾಗಿ ಬೆಳೆದು,ಎಲ್ಲಾ ವಯೋಮಾನದ ಮಾನವರನ್ನು ತನ್ನ ತೆಕ್ಕೆಗೆ ಬೀಳಿಸಿ ಕೊಂಡಿದ್ದು ಯಾವುದೂ ಇಲ್ಲ.

    ಅಪ್ಪಾ, ಈ 1 ರಿಂದ 9 ಸಂಖ್ಯೆಗಳನ್ನು ಇಂಡೋ ಅರೇಬಿಕ್ ಸಂಖ್ಯೆಗಳು ಅಂತ ಯಾಕೆ ಕರೆದರು ಅಂತ 5ನೇ ತರಗತಿಯಲ್ಲಿ ಪ್ರಥಮವಾಗಿ ರೋಮನ್ ಸಂಖ್ಯೆ ಕಲಿಯುವಾಗ ಕೇಳಿದ್ದೆ. ವ್ಯಾಪಾರ ವ್ಯವಹಾರಗಳನ್ನು ಅರಬ್ಬರೊಂದಿಗೆ ನಾವುಗಳು ಮಾಡುವಾಗ ಬಹುಶಃ ಈ ಸಂಖ್ಯೆಗಳು ಸುಮಾರು 5ನೇ ಶತಮಾನದಲ್ಲಿ ಹುಟ್ಟಿಕೊಂಡಿರಬೇಕು. ನಾವು ಅರೇಬಿಕ್ ಸಂಖ್ಯೆ ಅಂತಾನೂ ಅವರು ಹಿಂದೂ ಸಂಖ್ಯೆ ಅಂತಾನೂ ಅಂದಿದ್ದಾರೆ. ನಂತರ ರೋಮನ್ ಸಂಖ್ಯೆ ಉಪಯೋಗಿಸುತ್ತಿದ್ದ ಯೂರೋಪ್ ನ್ನು ಇವುಗಳು ತಲುಪಿದಾಗ ಅವರು ಇವನ್ನು ಇಂಡೋ ಅರೇಬಿಕ್ ನ್ಯೂಮೆರಿಕಲ್ಸ್ ಅಂದಿದ್ದಾರೆ. ಇವುಗಳ ವಿನ್ಯಾಸದಲ್ಲಿ ಇಬ್ಬರ ಕೊಡುಗೆ ಇವೆ ಅಂತ ಸಂಶೋಧಕರು ಹೇಳ್ತಾರೆ ಆದ್ರೆ ನನಗೆ ಇವು ನಮ್ಮವೇ ಅನ್ನುವ ವಿಶ್ವಾಸ ಬಲವಾಗಿದೆ. ಯಾಕಂದ್ರೆ ಅರಬ್ಬರು ಕಂಡು ಹಿಡಿದಿದ್ರೆ ಇವುಗಳನ್ನು ಅವರ ಲಿಪಿಯಂತೆ ಬಲದಿಂದ ಎಡಕ್ಕೆ ಬರೀ ಬೇಕಾಗಿತ್ತು ಆದರೆ ಹಾಗಾಗದೆ ನಮ್ಮ ಲಿಪಿಗಳಂತೆ ಎಡಗಡೆಯಿಂದ ಬರೆಯುತ್ತಿದ್ದೇವೆ ಅಂದಿದ್ದರು!

    ಅಷ್ಟೇ ಅಲ್ಲ ಈ ಸಂಖ್ಯೆಗಳನ್ನು ಹೊತ್ತ ನಮ್ಮ ದೇಶದವನೊಬ್ಬ ಅರಬ್ಬ ದೊರೆಯ ಆಸ್ಥಾನದಲ್ಲಿ ಇವುಗಳನ್ನು ಪರಿಚಯಿಸಿದ್ದನ್ನು ಅರಬ್ಬರೇ ಉಲ್ಲೇಖಿಸಿದ್ದಾರೆ ಅಂದಿದ್ದರು. ಅದೇನೇ ಇರಲಿ ಈ ಸಂಖ್ಯೆಗಳು, ಅಕ್ಷರಗಳು ನನ್ನನ್ನು ಚಿಕ್ಕ ವಯಸ್ಸಿನಲ್ಲಿಯೇ ಕೌತುಕದೊಂದಿಗೆ ಆವರಿಸಿಕೊಂಡು ಬಿಟ್ಟಿದ್ದವು. ಇವುಗಳನ್ನು ಹೀಗೆಯೇ ಯಾಕೆ ಬರೀತಾರೆ ಅಂತ ಒಮ್ಮೆ ಕೇಳಿದ್ದ ನನ್ನನ್ನು ಅಪ್ಪ ಸುಮ್ಮನೆ ಸ್ವಲ್ಪ ಹೊತ್ತು ನೋಡಿ ಬಿಟ್ಟಿದ್ದರು!

    ಸಂಖ್ಯಾ, ಯೋಗ, ನ್ಯಾಯ, ವೈಶೇಷಿಕ, ಪೂರ್ವ ಮೀಮಾಂಸ, ಉತ್ತರ ಮೀಮಾಂಸ …..ಈ ಆರು ತತ್ವಗಳನ್ನು “ಷಡ್ ದರ್ಶನ” ಗಳು ಅಂತ ಕರೆದಿದ್ದಾರೆ ನಮ್ಮ ದಾರ್ಶನಿಕರು ಅಂತ ಮತ್ತೆ ಅಪ್ಪ ಸರಿ ಸುಮಾರು ಅದೇ ವಯಸ್ಸಲ್ಲಿ ಒಂದು ಬೇಸಿಗೆಯ ಮಧ್ಯಾನ್ಹ ಹೇಳಿದ್ದು, ಅಲ್ಲಿ ಈ ಸಂಖ್ಯಾ ಎನ್ನುವ ಶಬ್ದ ನನ್ನಲ್ಲಿ ಕುತೂಹಲ ಕೆರಳಿಸಿತ್ತು!

    ಆದರೆ ಈ ಸಂಖ್ಯಾ ಎನ್ನುವುದನ್ನು ನಮ್ಮ ದಾರ್ಶನಿಕರು ಜ್ಞಾನ ಅಂದಿದ್ದಾರೆ, ಜ್ಞಾನವೇ ಮುಕ್ತಿಗೆ ಮಾರ್ಗ ಅಂತ ಹೇಳುವ ತತ್ವಕ್ಕೆ ಸಂಖ್ಯಾ ದರ್ಶನ ಅಂದಿದ್ದಾರೆ ಅಂತ ಅಪ್ಪ ಹೇಳಿದಾಗ ನಿರಾಶೆ ಆಗಿತ್ತು! ಆದರೂ ಜ್ಞಾನ, ಸಂಖ್ಯೆ ಎರಡೂ ಶಬ್ದಗಳು ನನ್ನ ಸ್ಮೃತಿಪಟಲದಲ್ಲಿ ಹಾಗೇ ಸ್ಥಾನ ಮಾಡಿಕೊಂಡು ಆಗಾಗ ನನ್ನ ತಲೆ ತಿನ್ನುತ್ತಿದ್ದವು.

    ಈ ಆರು ದರ್ಶನಗಳನ್ನು ಆಸ್ತಿಕ ದರ್ಶನಗಳು ಅಂದು ಇವುಗಳು ವೇದ ಹೇಳಿದ್ದನ್ನು ಒಪ್ಪಿ, ದೇವರ ಇರುವನ್ನು ನಂಬುತ್ತವೆ ಅಂದಿದ್ದರು. ವೇದವನ್ನು ಒಪ್ಪದ, ದೇವರ ಅಸ್ತಿತ್ವವನ್ನು ನಿರಾಕರಿಸುವ ಇನ್ನೂ ಆರು ದರ್ಶನಗಳು ಇದ್ದು, ಅವುಗಳನ್ನು ನಾಸ್ತಿಕ ದರ್ಶನಗಳು ಅಂದಿದ್ದಾರೆ. ಅವು ಚಾರ್ವಾಕ, ಸೌತಂತ್ರಿಕ, ವೈಭಾಷಿಕ, ಯೋಗಾಕಾರ, ಮಾಧ್ಯಮಿಕ ಮತ್ತು ಅರ್ಹತ (ಜೈನ). ಮೊದಲ ನಾಲ್ಕು ದರ್ಶನಗಳು ಬುದ್ಧನ ಹೇಳಿಕೆಗೆ ಹತ್ತಿರವಿದ್ದು ಅವುಗಳ ಅನುಚರರಿಗೆ ಬುದ್ಧರು ಅಂದು, ಕೊನೆ ಎರಡು ದರ್ಶನಗಳನ್ನು ಜೈನ ದರ್ಶನ ಅಂದಿದ್ದಾರೆ ಅಂತ ಹೇಳಿದ್ದರು.

    ಆಗ ಇವ್ಯಾವೂ ನನಗೆ ಹಿಡಿಸದೆ ಈ ಸಂಖ್ಯಾ ದರ್ಶನ ಆಕರ್ಷಿಸಿತ್ತು. ಯಾಕೋ ಗೊತ್ತಿಲ್ಲ. ಆಳದಲ್ಲಿ ಇದೂ ದೇವರ ಇರುವನ್ನು ಒಪ್ಪದೇ ಜ್ಞಾನಕ್ಕೆ ಸರ್ವಶ್ರೇಷ್ಟತೆಯನ್ನು ಕೊಟ್ಟಿದೆ. ಹಾಗೆ ನೋಡಿದರೆ ಈ ಆಸ್ತಿಕ ಷಡ್ ದರ್ಶನಗಳು ದೇವರ ಇರುವನ್ನು ಎಲ್ಲೂ ಪ್ರತಿಪಾದಿಸಿಲ್ಲ! ಹಾಗೆ ದೇವರ ಇರುವನ್ನು ಒಪ್ಪಿ ಈ ಸೃಷ್ಟಿ ಅವನಿಂದಲೇ ಆಗಿದೆ ಅಂದ್ರೆ ಇಲ್ಲಿಯ ಕೆಡುಕುಗಳಿಗೂ ದೇವರು ಹೊಣೆ ಆಗಬೇಕಾದೀತು ಅಂತಲೋ, ದೇವರ ಇರುವು ಇವರು ಪ್ರತಿಪಾದಿಸುವ ತರ್ಕಗಳಿಗೆ ಸರಿ ಹೊಂದುವುದಿಲ್ಲ ಅಂತಲೋ ಒಟ್ಟು ನಿರಾಕರಿಸಿದ್ದಾರೆ!

    ದೇವರ ವಿಷಯ ಹೊರಗಿಟ್ಟು ನೋಡಿದ್ರೆ, ಈಗಿನ ಅರ್ಥದಲ್ಲಿ ತುಂಬಾ ತರ್ಕ ಬದ್ಧವಾದ, ವೈಜ್ಞಾನಿಕವಾದ ವಿಷಯಗಳ ಮಂಡನೆಗಳನ್ನು ಈ ದರ್ಶನಗಳಲ್ಲಿ ಕಾಣಬಹುದು. ಅದು ಯಾಕೆ ವೇದಗಳನ್ನು ಆಧರಿಸಿ ಇವುಗಳ ವಿಂಗಡಣೆ ಆಯ್ತೋ, ಇವುಗಳನ್ನು ಆಧರಿಸಿ ಧರ್ಮಗಳಾದವೂ, ಯಾರು ಮಾಡಿದರೋ ಕಾಣೆ!

    ನಮ್ಮ ನೆಲದ ವಿಶೇಷತೆಯೇ ಅದು. ಇಲ್ಲಿ ದಾರ್ಶನಿಕರು ತಾವು ಕಂಡು ಕೊಂಡದ್ದನ್ನು ಹೇಳಿದ್ದಾರೆಯೇ ಹೊರತು, ಯಾರ ಮೇಲೂ ಬಲವಂತವಾಗಿ ಹೇರಿಲ್ಲ! ಅವರವರ ವಿವೇಚನೆಗೆ ಬಿಟ್ಟು ಸಾತ್ವಿಕ ಚರ್ಚೆಗೆ ಅನುವು ಮಾಡಿಕೊಟ್ಟಿದ್ದಾರೆ. ಹಾಗಾಗಿ ಇಲ್ಲಿ ಇನ್ನೂ ಸಂಶಯಗಳು, ಚರ್ಚೆಗಳು ಚಾಲ್ತಿಯಲ್ಲಿವೆ….ಕೃಷ್ಣನೂ ಅರ್ಜುನನಿಗೆ ಭಗವದ್ಗೀತೆ ಉಪದೇಶಿಸಿ ಕೊನೆಯಲ್ಲಿ ನಿನ್ನ ವಿವೇಚನೆಗೆ ಬಿಟ್ಟಿದ್ದೇನೆ ಅಂದಿದ್ದಾನೆ. ಅಂದಿದ್ದರು ಅಪ್ಪ ಇತ್ತೀಚಿಗೆ!

    ಜ್ಞಾನ ವಿಶೇಷತೆಯ ಸಾಂಖ್ಯ ಎನ್ನುವ ಶಬ್ದಕ್ಕೆ ಆಧುನಿಕ 1 ರಿಂದ 9 ರ ಚಿಹ್ನೆಗಳಿಗೆ ಸಂಖ್ಯೆಗಳು ಅಂದದ್ದು ಯಾಕಿರಬಹುದು ಅನ್ನೋ ನನ್ನ ಕುತೂಹಲ ಇಂಗಿರಲಿಲ್ಲ!

    ಆಧುನಿಕ ಗಣಿತ, ವಿಜ್ಞಾನಕ್ಕೆ ಈ ಸಂಖ್ಯೆಗಳ ಕೊಡುಗೆ ಎಷ್ಟೆಂದು ವರ್ಣಿಸಲು ಈ ಲೇಖನ ಸಾಕಾಗಲ್ಲ. ಎಲ್ಲಾ ದಾರ್ಶನಿಕರೂ ತಮ್ಮ ತಮ್ಮ ತತ್ವಗಳನ್ನು ಪ್ರಚುರಪಡಿಸಿ, ಈ ತತ್ವಗಳು ಇಡೀ ವಿಶ್ವವನ್ನು ಆವರಿಸುತ್ತವೆ ಅಂತ ಹೇಳಿರುವ ಹೇಳಿಕೆಗಳು ಸಾಕಷ್ಟಿವೆ. ಹಾಗೆ ಈ ಸಾಂಖ್ಯರೂ ಹೇಳಿದ್ದನ್ನು ಅಪ್ಪ ಆಗಾಗ ನೆನಪಿಸುತ್ತಿದ್ದರು. ಜ್ಞಾನಕ್ಕೆ ಅತೀ ಅವಶ್ಯವಾದ ಈ ಚಿಹ್ನೆಗಳಿಗೆ ಸಂಖ್ಯೆ ಎಂದು ಇವುಗಳು ಈ ದಿನ ವಿಶ್ವವನ್ನು ಆವರಿಸಿರುವುದನ್ನು ಕಂಡಾಗ ಒಮ್ಮೊಮ್ಮೆ ಕಂಗಾಲಾಗಿದ್ದೇನೆ. ಸಂಖ್ಯೆಗಳೇ ನಮ್ಮ ದೈನಂದಿನ ಗುರುತಾಗಿದೆ. ಈಗಂತೂ ನಮ್ಮೆಲ್ಲಾ ಜಾತಕ ಹೇಳೋ ಆಧಾರ್ ಅನ್ನೋ ಸಂಖ್ಯೆಗಳು ನಮ್ಮ ಅಸ್ತಿತ್ವನ್ನು ನಿರ್ಧರಿಸಿ ಬಿಟ್ಟಿವೆ! ನಾವು ಉಪಯೋಗಿಸುವ ಮೊಬೈಲ್ ಸಂಖ್ಯೆಯಿಂದಾಗಿ ಈ ಸಂಖ್ಯೆಗಳೇ ನಮ್ಮ ಎಲ್ಲವೂ ಆಗಿ ಬಿಟ್ಟಿವೆ! ದೇವರನ್ನು, ಅಪ್ಪ ಅಮ್ಮನನ್ನು ನೆನೆಸದೇ ಇಂದು ಇರಬಹುದೇನೋ ಆದರೆ ಈ ಸಂಖ್ಯೆಗಳನ್ನು ಉಪಯೋಗಿಸದೆ ಜೀವನ ಅಸಾಧ್ಯ ಅನ್ನುವ ಸ್ಥಿತಿಗೆ ನಾವು ಬಂದಿದ್ದೇವೆ! ಈ ಸಾಂಖ್ಯ ದಾರ್ಶನಿಕರು ಇದನ್ನೇ ಹೇಳಲು ಪ್ರಯತ್ನಿಸಿದ್ದರಾ??

    ಕಪಿಲಾ ಮುನಿಯನ್ನು ಈ ದರ್ಶನದ ದಾರ್ಶನಿಕ ಅಂದು ವೈಶೇಷಿಕ ದರ್ಶನದ ದಾರ್ಶನಿಕ ಕನಾದ ಅಂದಿದ್ದಾರೆ. ಈಗ ಈ ಕನಾದನ ವೈಶೇಷಿಕ ಅಣು, ಪರಮಾಣು ಬಗ್ಗೆ ಹೇಳಿದೆ, ಅತೀ ಚಿಕ್ಕ ಸ್ಥಿತಿಯನ್ನು ಕಣ ಅಂತ ಕನಾದ ತನ್ನ ಹೆಸರನ್ನು ಕೊಟ್ಟಿದ್ದಾನೆ ಅಂತಿದ್ದಾರೆ.

    ನಾವು ಇಂದು ಉಪಯೋಗಿಸುತ್ತಿರುವ, ಇಡೀ ಜಗತ್ತನ್ನು ಮತ್ತೊಂದು ಮುಖದೆಡೆಗೆ ಕೊಂಡು ಹೋಗುತ್ತಿರುವ ಮೊಬೈಲ್, ಕಾಂಪುಟರ್ ಅನ್ನೋ ವೈಜ್ಞಾನಿಕ ಸಾಧನೆಗಳಿಗೆ ಆಹಾರವೇ ಈ ಸಂಖ್ಯೆಗಳು! ಈ ಯುಗವನ್ನು ಡಿಜಿಟಲ್ ಅಂದ್ರೆ ಸಂಖ್ಯೆಗಳ ಯುಗ ಅಂದಿದ್ದಾರೆ! ಸುಮಾರು 100 ವರ್ಷಗಳ ಹಿಂದೆ ಈ ಸಂಖ್ಯೆಗಳ ಪ್ರಾಮುಖ್ಯತೆ ಇಷ್ಟಾಗಬಹುದು ಎಂಬುದನ್ನು ಆಗಿನ ಪೀಳಿಗೆಯವರು ಊಹಿಸಲೂ ಸಾಧ್ಯವಿಲ್ಲ. ಆದರೂ ಸಾವಿರಾರು ವರ್ಷಗಳ ಹಿಂದೆ ಇವುಗಳ ಪ್ರಾಮುಖ್ಯತೆ ಹೇಳುವ ಸಂಖ್ಯಾ ದರ್ಶನವನ್ನು ನಾವು ತಪ್ಪಾಗಿ ಅರ್ಥೈಸಿಕೊಂಡೆವಾ? ಮತ್ತದೇ ದೇವರು,ವೇದ, ಆಸ್ತಿಕ,ನಾಸ್ತಿಕ ಅಂತ ನಮಗೆ ಆಗ ಗೊತ್ತಿರುವ ವಿಷಯಗಳಷ್ಟರಲ್ಲೇ ಇದನ್ನೂ ತಂದೆವಾ? ಶೂನ್ಯದಿಂದ ಏನೂ ಸೃಷ್ಟಿ ಆಗಲ್ಲ ಅಂತಲೂ, (ಕಾರಣ ಇಲ್ಲದೆ ಕಾರ್ಯ ಇಲ್ಲ) ಏನನ್ನೂ ನಾಶ ಪಡಿಸಲು, ಸೃಷ್ಠಿಸಲು ಆಗಲ್ಲ, ಒಂದು ವಿಧದಿಂದ ಮತ್ತೊಂದು ವಿಧಕ್ಕೆ ಬದಲಾಯಿಸಬಹುದು(Energy neither created nor destroyed but can only change from one form to another) ಎನ್ನುವಂತಹ ಮಹತ್ತರ ವೈಜ್ಞಾನಿಕ ವಿಷಯಗಳನ್ನು ತಿಳಿಸಿದ್ದ ಸಂಖ್ಯಾ ದರ್ಶನವನ್ನು ನಾವು ಬೇರೆ ದೃಷ್ಟಿಕೋನದಿಂದ ನೋಡಿ ಬಿಟ್ಟೆವಾ??

    ದರ್ಶನಗಳಲ್ಲೇ ಪುರಾತನವಾದ ಇದು ಪುರುಷ,ಪ್ರಕೃತಿಯ ಮೇಲೆ ಸೃಷ್ಠಿಯ ವಿಷಯ ಹೇಳುವ ಈ ಸಂಖ್ಯಾ ದರ್ಶನಕ್ಕೆ 24 ತತ್ವಗಳಿವೆ.
    5 ಕರ್ಮೇಂದ್ರಿಯಗಳು
    5 ಪಂಚ ವಾಯುಗಳು
    5 ಪಂಚೇಂದ್ರಿಯಗಳು
    5 ಪಂಚ ಭೂತಗಳು
    4 ಮನಸ್ಸು,ಬುದ್ಧಿ, ಪುರುಷ, ಪ್ರಕೃತಿ

    ಹೀಗಾಗಿ ಇವರಿಗೆ ಇದನ್ನು ಸಂಖ್ಯೆಗಳಲ್ಲಿ ಹೇಳುವ ಅನಿವಾರ್ಯತೆ ಉಂಟಾಗಿ ಪ್ರಥಮವಾಗಿ ಸಂಖ್ಯೆಗಳ ಉಗಮಕ್ಕೆ ಕಾರಣರಾಗಿ ತಮ್ಮ ತತ್ವಕ್ಕೆ ಸಾಂಖ್ಯ ದರ್ಶನ ಅಂತ ಹೆಸರಿಟ್ಟರಾ?

    ಅಡ್ಡ ದಾರಿಯ ಫಲ  ನೆಮ್ಮದಿ ತರುವುದಿಲ್ಲ


    ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು , ವಚನ ಸಾಹಿತ್ಯದಲ್ಲಿ ಅಡಗಿರುವ ಸಂಗತಿಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟು ಮತ್ತು ವಚನಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.


    ಎನ್ನೆವರಂ ಜೀವಿಸುವುದು ಅನ್ನೆವರಂ  ಸುಖಂಬಡೆವುದು– ದುರ್ಗಸಿಂಹನ ‘ಪಂಚತಂತ್ರ’ದಲ್ಲಿ ಬರುವ   ಸಾರ್ವಕಾಲಿಕ ತಾತ್ವಿಕ ಮಾತಿದು. ಜೀವಿಸುವುದಕ್ಕೆ ಬಂದಿರುವ  ಈ ಶರೀರ  ಸಂತಸದಿಂದ ಜೀವಿಸಬೇಕು ಅದನ್ನು ಹೊರತು ಪಡಿಸಿ  ನಮಗೆ ನಾವೆ ಸಂಚನೆಯ ಹೊದರಲ್ಲಿ ಸಿಲುಕಬಾರದು ಎನ್ನುವುದನ್ನು ಈ ಮಾತು ಶೃತಪಡಿಸುತ್ತದೆ.

    ವೃಥಾ ಅನ್ಯಪೀಡಕರಾಗದೆ,ವಂಚಕರಾಗದೆ,ಲೋಭಿಗಳಾಗದೆ ತಮ್ಮ  ಆಯವನ್ನು ನೋಡಿಕೊಂಡು ದಾನ-ಧರ್ಮಗಳನ್ನೂ  ಮಾಡುತ್ತಾ ಕುಟುಂಬದವರೊಂದಿಗೆ ಒಲುಮೆಯಿಂದ ಬಾಳಬೇಕು. ಮನುಷ್ಯ  ಬರಬರುತ್ತಾ ಲೌಖಿಕ ವ್ಯಾಮೋಹಗಳಿಗೆ ಅತೀ ಮಾರುಗೋಗಿ  ಆ ಮಾಯಾಜಿಂಕೆಯನ್ನೆ ಬೆನ್ನಟ್ಟುತ್ತಿದ್ದಾನೆ  ಹಾಗೆ ಬೆನ್ನಟ್ಟುವಾಗ ಅದನ್ನು ಪಡೆದೇ ತೀರುವೆ ಎಂಬ  ಹಠದಿಂದ  ಅಡ್ಡದಾರಿಗಳನ್ನೂ ಕ್ರಮಿಸಬೇಕಾಗುತ್ತದೆ.  ‘ಹಾಲು ಕುಡಿದ ಮಕ್ಕಳೆ ಬದುಕವು ವಿಷ ಕುಡಿದವು ಬದುಕುತ್ತವೆಯೇ?’ ಎಂಬ ಮಾತಿನಂತೆ   ಅಡ್ಡ ದಾರಿಯ ಫಲ  ನೆಮ್ಮದಿ ತರುವುದಿಲ್ಲ. 

    ಎಲ್ಲರಂತೆ  ಬದುಕಬೇಕು ಎಂಬುದು ಸರಿ ಆದರೆ ಎಲ್ಲರಂತೆ ನಾನೂ  ಎನ್ನುವ ಹೋಲಿಕೆ ಉದ್ಧಟತನದ್ದು .  ನಮ್ಮ ಅಭಿರುಚಿಗೆ ತಕ್ಕಂತೆ  ನಾವು ಬದುಕಬೇಕಾಗುತ್ತದೆ. ಹೊರಲಾರದ ಹೊರೆಯನ್ನು  ಒಮ್ಮೆಗೆ  ಹೊತ್ತು ಸೋತು ಶಾಂತಿಯನ್ನು ಕಳೆದುಕೊಳ್ಳುವುದರ ಬದಲು ಅದನ್ನೆ ನಿಧಾನವಾಗಿ ಹೊರಬಹುದು, ಇಲ್ಲವೆ ನಮಗಾಗುವಷ್ಟನ್ನು ಹೊರಬಹುದು ಆಗ ಬಾಧೆಗಳು ಬಾಧಿಸವು . 

    ಆಧುನಿಕ ಸೌಲಭ್ಯಗಳೆಲ್ಲಾ ನಮ್ಮೆಟುಕಿನಲ್ಲಿಯೇ ಇರಬೇಕು ಎಂದು ಬಯಸುವ ಬದಲು ಪ್ರೀತಿ, ಕರುಣೆ,ದಯೆ,ಅನುಕಂಪ, ಶಾಂತಿ,ಕ್ಷಮೆ  ಮೊದಲಾದವುಗಳ ಸಂಗಡ ಬದುಕಬೇಕು.   ಕನಿಷ್ಟ ಜೀವಿತದ ಅವಧಿ ನಮಗೆ ಇರುವುದು   ಒಂದಲ್ಲ  ಒಂದು ದಿನ ನಿರ್ಗಮಿಸಬೇಕು ಖಂಡಿತಾ ಎಂದು ತಿಳಿದೂ ಮೈಮೇಲೆ ಸಂಕಟಗಳನ್ನು ಎಳೆದುಕೊಳ್ಳುವುದು ಮೂರ್ಖತನ.

      ಇರುವುದನ್ನೆ  ಸಂತೋಷದಿಂದ  ಅನುಭವಿಸುತ್ತಾ  ಸುಖಪಡುವುದು ಜಾಣತನ ಅಲ್ಲದೆ ನಾವು ಈ  ಬದುಕಿನ ರೀತಿಗೆ ಕೊಡುವ ಗೌರವ .  ನಮಗೆ ಎಲ್ಲಿವರೆಗೆ ಬದುಕಲು ಅವಕಾಶವಿರುತ್ತದೆಯೋ ಅಲ್ಲಿಯವರೆಗೂ ಏನೇ ಬಂದರೂ ಚಿತ್ತಸಮಾಧಾನದಿಂದ ಸ್ವೀಕರಿಸಬೇಕು ಅದರಲ್ಲೆ ಸುಖಿಸಬೇಕು.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

    ಇಂದಿನ ಮಹಿಳೆಯರ ಬದುಕಿಗೂ ಆದರ್ಶಪ್ರಾಯ

    ರತ್ನಾ ಶ್ರೀನಿವಾಸ

    ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರೀ.ಈಕೆಯನ್ನು ಶರಣ ಚಳವಳಿಯ ಪ್ರಮುಖರಾಗಿ,ಸ್ವಾಭಿಮಾನದ ಪ್ರತೀಕವಾಗಿ,ಸ್ತ್ರೀ ವಾದಿ ಚಳುವಳಿಯ ಪ್ರತಿಪಾದಕಿಯಾಗಿ ಅಕ್ಕರೆಯ ಅಕ್ಕನಾಗಿ ಗುರುತಿಸಬಹುದು.

    ಕನ್ನಡ ಸಾಹಿತ್ಯದಮೊದಲ ಬಂಡಾಯ ಕವಿಯತ್ರೀ ಮತ್ತು ವಚನಗಾರ್ತಿ ಮಹಿಳೆಯ ಪ್ರತಿನಿಧಿಯಾಗಿ ಅಭಿವ್ಯಕ್ತಿಯಲ್ಲಿ ಪುರುಷ ಸಮಾಜವನ್ನು ಪ್ರತಿಭಟಿಸಿದವರು.ಸಾಮಾಜಿಕ ಬದಲಾವನೆಗಾಗಿ ಶ್ರಮಿಸಿದರು.

    ತಂದೆ ನಿರ್ಮಲ ಶೆಟ್ಟಿ ತಾಯಿ ಸುಮತಿಯ ಮಗಳಾಗಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಉಡುತಡಿಯಲ್ಲಿ ಚೈತ್ರ ಮಾಸದ ಹುಣ್ಣಿಮೆಯಂದು ಜನಿಸಿದರು.ಈ ಹುಣ್ಣಿ ಮೆಯನ್ನು ಧವನ ಹುಣ್ಣಿಮೆ ಎಂದು ಕರೆಯಲಾಗಿದೆ.

    ಅಕ್ಕ ಪರಮ ವೈರಾಗ್ಯ ಮೂರುತಿಯಾಕೆ.ಲೌಕಿಕ ಪ್ರಪಂಚದ ಲೋಲುಪತೆಗಳನ್ನೆಲ್ಲಾ ಲುಪ್ತವಾಗಿಸಿ ನಿರ್ಲಿಪ್ತವಾಗಿ ನಡೆದು ಹೋದಾಕೆ.ಭೌತಿಕವಾದುದೆಲ್ಲವನ್ನು ತ್ಯಜಿಸಿ,ಬಟ್ಟೆ ಬರೆ ವರ್ಜಿಸಿ,ಕೇಶವನ್ನೇ ಉಡುಪು ಮಾದಿಕೊಂಡಾಕೆ.ಭವಿತನವನ್ನು ತೊರೆದು ಅನುಭಾವಿತನವನ್ನು ಮೆರೆದು ಶರಣ ಚಳವಳಿಯ ಮಂಚೂಣಿಯಲ್ಲಿ ಕಲ್ಯಾ ಣ ಕ್ರಾಂತಿಯನ್ನು ನಡೆಸಿದಾಕೆ.

    ಅಲ್ಲಮಪ್ರಭು, ಬಸವಣ್ಣ, ಚನ್ನಬಸವ ಣ್ಣ ಅಂಥವರ ಶರಣ ಶ್ರೇಷ್ಠರ ಸಮಕಾಲೀನಳಾಗಿ ಅವರುಗಳ ಸಮಕ್ಕೆ ನಿಂತು ಶ್ರೇಷ್ಠ ವಚನಗಳ ನ್ನು ರಚಿಸಿದ ಕನ್ನಡದ ಪ್ರಥಮ ಕವಿಯತ್ರೀ ಅಕ್ಕಮಹಾದೇವಿ. ಶಿವನನ್ನೇ ಪತಿಯೆಂದು ಪರಿಭಾವಿಸಿ ಚೆನ್ನ ಮಲ್ಲಿಕಾರ್ಜುನನನ್ನೆ ವರಿಸಿದಾಕೆ..ಚೆನ್ನಮಲ್ಲಿಕಾರ್ಜುನ ಅಂಕಿತ ನಾಮದಲ್ಲಿ ವಚನಗಳನ್ನ ರಚಿಸಿದರು.
    ಶರಣ ಚಳವಳಿಯಲ್ಲಿಎತ್ತರದ ಚೇತನವಾಗಿ ಮೂಡಿಬಂದ ವ್ಯಕ್ತಿತ್ವ ಅಕ್ಕಮಹಾದೇವಿಯದು.

    ಅವರ ಇಡೀ ಜೀವನ ಕಥನ,ಐತಿಹ್ಯ,ವಿಸ್ಮಯ,ಪ್ರಭಾವಗಳಿಂದ ತುಂಬಿವೆ. ಹರಿಹರ ಮಹಾಕವಿ ರಚಿಸಿರುವ ಮಹಾದೆಯಕ್ಕನ ರಗಳೆ,ಸ್ವತಃ ಅಕ್ಕನೇ ರಚಿಸಿರುವ ವಚನಗಳು ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುವಲ್ಲಿ ಮಹತ್ತರ ಪಾತ್ರವನ್ನುವಹಿಸುತ್ತವೆ.
    ಅಕ್ಕನ ವಚನಗಳು ಕನ್ನಡ ಸಾಹಿತ್ಯದ ಮೌಲಿಕ ಬರವಣಿಗೆಗಳಾಗಿವೆ.ವಚನಕಾರರಲ್ಲಿ ಕಿರಿಯರಾಗಿದ್ದರೂ ವಿಶಿಷ್ಟ ಜೀವನಾನುಭವವನ್ನು ಹೊಂದಿರುವ ಕಾರಣದಿಂದಾಗಿ ಅವರ ವಚನಗಳು ಗಮನಾರ್ಹವಾಗಿವೆ.

    ಸಮಾಜದಲ್ಲಿಪುರುಷರಷ್ಟೇ ಸರಿಸಮಾನ ಸ್ಥಾನ ಮಾನ ಮಹಿಳೆಯಾರಿಗೂ ಕಲ್ಪಿಸಬೇಕೆಂದು 12 ನೇ ಶತಮಾನದಲ್ಲಿಯೆ ಹೋರಾಟ ಮಾಡಿದ ಅಕ್ಕಮಹಾದೇವಿ ಇಂದಿನ ಮಹಿಳೆಯರ ಬದುಕಿಗೆ ಆದರ್ಶಪ್ರಾಯ.ಅಂದು ಸಮಾಜದಲ್ಲಿ ಇದ್ದಂತಹ ಅಂಕುಡೊಂಕುಗ ಳನ್ನು ತಿದ್ದಿ ಸಾಮರಸ್ಯ ಮೂಡಿಸಲು ಶ್ರಮಿಸಿದ ಅಕ್ಕ ಮಹಾದೇ ವಿಯ ಹೆಸರುಇತಿಹಾಸದ ಪುಟದಲ್ಲಿ ಉಳಿದುಕೊಂಡಿ ದ್ದು,ಅವರ ಆದ್ರಶಗ ಳು ಇಂದಿನ ಮಹಿಳೆಯರಿಗೆ ದಾರಿದೀಪವಾಗಿದೆ.

    ” ಯೋಗಾಂಗ ತ್ರೀವಿಧಿ” ಅಕ್ಕನ ಪ್ರಮುಖ ಕೃತಿ.ಇದು 67 ತ್ರಿಪದಿ ಗಳಲ್ಲಿ ರಚಿತ ವಾಗಿದೆ.ಈಕೆ ಶಿವಭಕ್ತೆ.ಕೈ ಹಿಡಿದ ಗಂಡ ಅದರಲ್ಲೂ ರಾಜನಾಗಿದ್ದವನನ್ನು ತಿರಸ್ಕರಿಸಿ, ಸಾಂಪ್ರದಾಯಿಕ ಸಮಾಜದ ವಿವಾಹದ ನಿಯಮಗಳನ್ನು ಗಾಳಿಗೆ ತೂರಿ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿ ಗೆ ದೊರೆತಿದ್ದ ಕೀಳರಿಮೆ ಸ್ಥಾನ ವನ್ನುಪ್ರತಿಭ ಟಿ ಸಿಯಶಸ್ವಿಯಾದದ್ದು ಒಂದು ದೊಡ್ಡ ಸಾಧನೆಯೇ.

    ಅಕ್ಕನ ಕಾವ್ಯದ ಗುಣಗಳು ಒಂದು ವೇದನೆ ಇನ್ನೊದು ನಿವೇದನೆ

    ತಿ.ನಂ.ಶ್ರೀ. ಅವರು ಹೇಳಿರುವಂತೆ ಅಕ್ಕನ “ವಚನಗಳ ಬಹುಭಾಗ ನಿಜವಾಗಿಯೂ ರಸಾರ್ದ್ರ ವಾದದ್ದು, ಉಪಮಾನಗಳಿಂದ ಚಿತ್ರ ಕಲ್ಪನೆಗಳಿಂದ ಮನೊಹರವಾಗಿರತಕ್ಕದ್ದು.ಆಕೆಯದು ಕವಿ ಹೃದಯಕವಿಯ ಕಣ್ಣು ಎಂಬುದನ್ನು ಸಾರತಕ್ಕದ್ದು” ಎಂಬ ಮಾತು ನಿಜಕ್ಕೂ ಪ್ರಶಂ ಸ ನೀಯವಾದುದು.
    ಶೂನ್ಯ ಸಂಪಾದನೆಕಾರರು ಮಹಾದೇವಿ ಅಕ್ಕನ ಸಂಪಾದನೆ ಎಂಬ ಒಂದು ಅಧ್ಯಾಯವನ್ನೆ ರಚಿಸಿ ಅವರ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ.ಹರಿಹರ ಕವಿಯ ಮಹಾದೆವಿಯಕ್ಕನ ರಗಳೆ, ಎಚ್.ತಿಪ್ಪೇರುದ್ರಸ್ವಾಮಿ ಅವರ ಕದಳಿಯಾ ಕರ್ಪೂರ ಅಕ್ಕನವರ ವ್ಯಕ್ತಿತ್ತ್ವ ವನ್ನು ಕಟ್ಟಿ ಕೊಡುವ ಸಮರ್ಥ ಬರಹಗಳಾಗಿವೆ.
    ವಚನ ಸಾಹಿತ್ಯಾಕಾಶದ ಉಜ್ವಲ ನಕ್ಷತ್ರ ವಾಗಿ,ಆದರ್ಶ ಮಹಿಳೆ ಯಾಗಿ ಕಂಡು ಬರುವ ಅಕ್ಕನ ವಚನಗಳು ಕನ್ನಡದ ಸ್ತ್ರೀ ಸಂ ವೇದ ನಾ ಅಭಿವ್ಯಕ್ತಿಯ ಮೊದಲ ದಾಖಲೆ ಗಳಾಗಿ ಅಚ್ಚರಿಯನ್ನು ಉಂಟುಮಾಡಿವೆ.

    ರತ್ನಾ ಶ್ರೀನಿವಾಸ್ ಅವರು ಮೂಲತಃ ಹಾಸನ ಜಿಲ್ಲೆ ಅರಸೀಕೆರೆ ಯವರು.  ಪ್ರಾಥಮಿಕ ಪದವಿಯನ್ನು ಅರಸೀಕೆರೆಯಲ್ಲಿ ಪಡೆದು ಮುಂಬಯಿನಲ್ಲಿ  ಎಂ.ಎ ಎಂ.ಫಿಲ್  ಪಡೆದು ಪ್ರಸ್ತುತ ಆದಿತ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ & ರಿಸರ್ಚ್, ಯಲಹಂಕ, ಇಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಇವರ ಚಾರುವಸಂತದ ಆಯಾಮ ಅನನ್ಯತೆ ಸಂಪ್ರಬಂಧದ  ಪುಸ್ತಕವಾಗಿ ಅಭಿಜಿತ್ ಪ್ರಕಾಶನ ಮುಂಬೈನಿಂದ ಪ್ರಕಟವಾಗಿದೆ.


    ಯುವಜನಾಂಗ, ಸಾಮಾಜಿಕ ಜಾಲತಾಣಗಳು ಮತ್ತು ನೈತಿಕತೆ

    ಸ್ವಾಮಿ ವಿವೇಕಾನಂದರು ಪ್ರಪಂಚ ಕಂಡ, ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ಆಧ್ಯಾತ್ಮಿಕ ಚಿಂತಕರು, ಭೋದಕರು, ತತ್ವಜ್ಞಾನಿಗಳು ಮತ್ತು ಯುವಕರಿಗೆ ಸ್ಪೂರ್ತಿದಾಯಕ ವ್ಯಕ್ತಿತ್ವವನ್ನು ಹೊಂದಿದ್ದ ದೇಶಭಕ್ತ ಮತ್ತು ಸಂತ. ವಿವೇಕಾನಂದರಿಗೆ ಯುವಜನಾಂಗದ ಮೇಲೆ ಅಪಾರವಾದ ವಿಶ್ವಾಸ. ಅವರ ಪ್ರಕಾರ, ಯುವ ಜನಾಂಗದ ಪ್ರಮುಖ ಲಕ್ಷಣ ಆಶಾಭಾವ. ವಿವೇಕಾನಂದರ ಮಾತಿನಲ್ಲೇ ಹೇಳುವುದಾದರೆ- “ಯುವ ಮತ್ತು ಆಧುನಿಕ ಜನಾಂಗದಲ್ಲಿದೆ ನನ್ನ ವಿಶ್ವಾಸ. ನನ್ನ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವರು ಯುವ ಮತ್ತು ಆಧುನಿಕ ಯುವಕ/ಯುವತಿಯರು. ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕಾಳಜಿವಹಿಸಿ, ಸಿಂಹದಂತೆ ಧೈರ್ಯದಿಂದ ಮುನ್ನುಗ್ಗುತ್ತಾರೆ.” ಉಜ್ವಲ ಭವಿಷ್ಯದ ಭಾರತದ ಸ್ಪಷ್ಟ ಕಲ್ಪನೆ ವಿವೇಕಾನಂದರಿಗಿತ್ತು. ಅವರಲ್ಲಿದ್ದ ಶಕ್ತಿ, ಉತ್ಸಾಹ, ಪ್ರಗತಿಪರ ಚಿಂತನೆಗಳನ್ನು ಮನನ ಮಾಡಿ, ಉಪಯೋಗಿಸಿಕೊಂಡು ಭವ್ಯ ಭಾರತವನ್ನು ಕಟ್ಟುವ ಕೆಲಸ ಮಾಡಬೇಕಾಗಿದೆ.

    ಮಹಾತ್ಮ ಗಾಂಧೀಜಿಯವರು, ಯುವಕರನ್ನು ಕುರಿತು ಹೀಗೆ ಹೇಳಿದ್ದಾರೆ, “ಯುವಕ/ಯುವತಿಯರು ಸಾಮಾಜಿಕ ಬದಲಾವಣೆಗಳನ್ನು ತರಬಲ್ಲ ಸಾಧನಗಳಿದ್ದ ಹಾಗೆ ( Youth are the instruments of social change )”. ಮಹಾತ್ಮ ಗಾಂಧೀಜಿಯವರು ಸತ್ಯ, ಅಹಿಂಸೆ, ಸರಳತೆ, ಸಹಿಷ್ಣುತೆ, ದಯೆ ಮತ್ತು ಸರ್ವೋದಯಕ್ಕೆ ಹೆಚ್ಚು ಒತ್ತು ಕೊಟ್ಟವರು ಹಾಗೂ ಯುವಜನಾಂಗ ಈ ಗುಣಗಳನ್ನು ತಮ್ಮ ವ್ಯಕ್ತಿತ್ವದಲ್ಲಿ ಹಾಸು ಹೊಕ್ಕಾಗಬೇಕೆಂದು ಬಯಸಿದವರು. ಭಾರತ ದೇಶದ ಸಾಮಾಜಿಕ ಸುಧಾರಕರು, ತತ್ವಜ್ಞಾನಿಗಳು ನೀಡಿದಂತ ಕರೆಗಳು ಭೌಗೋಳಿಕ ಮತ್ತು ಸಾಮಾಜಿಕ ಕಟ್ಟಳೆಗಳನ್ನು ಮೀರಿ, ಎಂದೆಂದಿಗೂ ಪ್ರಸ್ತುತ ಎಂದು ಹೇಳಬಹುದಾಗಿದೆ.

    ಆದರೆ, ಇಂದಿನ ಪರಿಸ್ಥಿತಿಯನ್ನು ಅವಲೋಕಿಸಿದರೆ, ಸಮಾಜದಲ್ಲಿ ನೈತಿಕತೆ ಅಧೋಗತಿಗೆ ಜಾರಿ, ಭಯಂಕರವಾದ ವಾತಾವರಣ ಸೃಷ್ಟಿಯಾಗಿದೆ. ಇದು ನಿಜವಾಗಿಯೂ ದುರದುಷ್ಟಕರ ಸಂಗತಿ. ಈ ಸಮಸ್ಯೆಗೆ ಪರಿಹಾರ ಸೂಚಿಸುವುದಾದರೆ, ಯುವ ಶಕ್ತಿಯಲ್ಲಿ ಹೆಚ್ಚಿನ ವಿಶ್ವಾಸವಿಟ್ಟು ಯುವ ಶಕ್ತಿಯ ಸದುಪಯೋಗಕ್ಕೆ ಸೂಕ್ತ ರೀತಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಇತ್ತೀಚಿಗೆ ನಡೆಸಿದ ಸಮೀಕ್ಷೆಗಳ ಪ್ರಕಾರ, ಮುಂದಿನ ಹತ್ತು ವರ್ಷಗಳಲ್ಲಿ ನಮ್ಮ ದೇಶ ಪ್ರಪಂಚದಲ್ಲಿಯೇ ಅಧಿಕ ಸಂಖ್ಯೆಯಲ್ಲಿ ಯುವ ಜನಾಂಗವಿರುವ ದೇಶ ಎಂಬ ಹೆಗ್ಗಳಿಕೆಯನ್ನು ಪಡೆಯಲಿದೆ. ಆದ್ದರಿಂದ ಯುವ ಶಕ್ತಿಯನ್ನು ರಾಷ್ಟ್ರವನ್ನು ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳ ಬೇಕಾಗಿರುತ್ತದೆ.

    ಆದರೆ ಇತ್ತೀಚಿನ ದಿನಗಳಲ್ಲಿ ಕಂಡು ಬರುವ ಅಂಶವೆಂದರೆ, ಯುವ ಜನಾಂಗ ಫೇಸ್ ಬುಕ್ಕ್, ಇನ್ಸ್ಟಗ್ರಾಮ್, ಟ್ವಿಟರ್ ಮುಂತಾದ ಜಾಲತಾಣಗಳಲ್ಲಿ ತಲ್ಲೀನರಾಗಿ, ಬೇರೆ ರಚನಾತ್ಮಕ ಅಂಶಗಳ ಕಡೆಗೆ ಗಮನಕೊಡುತ್ತಿಲ್ಲ. ಜಾಲತಾಣಗಳು ಯುವಜನಾಂಗದ ಮೇಲೆ ಋಣಾತ್ಮಕ ಪ್ರಭಾವವನ್ನು ಬೀರುತ್ತಿವೆ. ಸಾಮಾಜಿಕ ಜಾಲತಾಣಗಳು ಯುವ ಜನಾಂಗದ ಜೀವನದ ಅವಿಭಾಜ್ಯ ಅಂಗವಾಗಿವೆ ಎಂದರೆ ತಪ್ಪಾಗಲಾರದು. ಶೇಕಡಾ 33ರಷ್ಟು ಯುವಕರು ಮತ್ತು ಯುವತಿಯರು, ದಿನನಿತ್ಯ ಎರಡರಿಂದ ಮೂರು ಗಂಟೆಗಳ ಕಾಲ ಜಾಲತಾಣಗಳಲ್ಲಿ ಅನವಶ್ಯಕವಾದ ಹಾಗೂ ಅಶ್ಲೀಲ ವಿಷಯಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ನೋಡುತ್ತಾ ಕಾಲ ಕಳೆಯುತ್ತಾರೆ ಎಂಬ ಆತಂಕಕಾರಿ ಸಂಗತಿಯನ್ನು ಇತ್ತೀಚೆಗೆ ನಡೆಸಿದ ಸಮೀಕ್ಷೆ ಬಹಿರಂಗ ಪಡಿಸಿದೆ. ಇನ್ನೂ ಕೆಲವರು ಬೆಳಗಿನಿಂದ, ರಾತ್ರಿಯವರೆವಿಗೂ ಜಾಲತಾಣಗಳಲ್ಲಿ ಮಗ್ನರಾಗಿರುತ್ತಾರೆ. ದುರದುಷ್ಟಕರ ವಿಷಯವೆಂದರೆ ಜಾಲತಾಣಗಳಲ್ಲಿ ಅನವಶ್ಯಕವಾದ, ಪ್ರಚೋದನಕಾರಿ, ಅಪಾಯಕಾರಿ, ಅಶ್ಲೀಲವಾದ ವಿಷಯಗಳನ್ನು ಭಿತ್ತರಿಸಲಾಗುತ್ತಿದೆ. ಇವುಗಳಿಂದ ಆಕರ್ಷಣೆಗೊಂಡ ಯುವಕ, ಯುವತಿಯರು ವಿದ್ಯಾಭ್ಯಾಸ, ವೃತ್ತಿ ಜೀವನದ ಧ್ಯೇಯಗಳನ್ನು ಮರೆತು ಕೆಟ್ಟ ಹವ್ಯಾಸಗಳಿಗೆ ಗುಲಾಮರಾಗಿರುವ ಉದಾಹರಣೆಗಳು ಹಲವಾರು.

    ಪೋಷಕರ ಮತ್ತು ಮಕ್ಕಳ ನಡುವೆ ಜಗಳಗಳು ಉಂಟಾಗಿ ಮನೆಗಳ ವಾತಾವರಣ ಕೆಟ್ಟಿರುವ ಉದಾಹರಣೆಗಳಿವೆ. ಕೆಲವೊಂದು ಸಂದರ್ಭಗಳಲ್ಲಿ ಆತ್ಮಹತ್ಯೆ, ಸಾವುಗಳು ಸಹ ಉಂಟಾಗಿವೆ. ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಿರುವುದಾದರೂ ಏನು, ಹೇಗೆ ಸಮಯ ಕಳೆಯುತ್ತಿದ್ದಾರೆ ಎಂಬ ಅಂಶಗಳ ಬಗ್ಗೆ ಪೋಷಕರಿಗೆ ಮಾಹಿತಿಯಿರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಚಾಲ್ತಿಯಲ್ಲಿರುವ ವಿಭಕ್ತ ಕುಟುಂಬಗಳಲ್ಲಿ ಈ ಸಮಸ್ಯೆ ಹೆಚ್ಚು. ಹಿಂದಿನ ಪೀಳಿಗೆಯಲ್ಲಿ, ಒಂದು ಸಂಸಾರದಲ್ಲಿ, ಸಾಮಾನ್ಯವಾಗಿ ಐದಾರು ಮಕ್ಕಳಿರುತ್ತಿದ್ದರು. ಮಕ್ಕಳಿಗೆ ಪ್ರತ್ಯೇಕ ಕೋಣೆಗಳಿರಲಿಲ್ಲ. ಎಲ್ಲರೂ ಒಟ್ಟಿಗೆ, ದೊಡ್ಡ ಹಾಲ್ ನಲ್ಲಿ ಓದುತ್ತಿದ್ದರು ಮತ್ತು ಮಲಗುತ್ತಿದ್ದರು. ಆದರೆ ಈಗಿನ ವಿಭಕ್ತ ಕುಟುಂಬಗಳಲ್ಲಿ ಒಂದು ಅಥವಾ ಎರಡು ಮಕ್ಕಳಿದ್ದು, ಮಕ್ಕಳಿಗೆ ಪ್ರತ್ಯೇಕ ಕೋಣೆಗಳಿರುತ್ತವೆ. ಹಾಗಾಗಿ, ಕೊಠಡಿಯಲ್ಲಿ ಬಾಗಿಲು ಮುಚ್ಚಿಕೊಂಡು, ಮಕ್ಕಳು ಏನು ಮಾಡುತ್ತಿದ್ದಾರೆ ಎಂಬ ಅಂಶದ ಬಗ್ಗೆ ಪೋಷಕರಿಗೆ ಅರಿವು ಇರುವುದಿಲ್ಲ. ಕೆಲವರು ಮಧ್ಯ ರಾತ್ರಿಯವರೆವಿಗೂ ಸಾಮಾಜಿಕ ಜಾಲತಾಣಗಳಲ್ಲಿ ತಲ್ಲೀನರಾಗಿರುತ್ತಾರೆ. ಹೀಗೆ ನಿದ್ದೆ ಕೆಡುವುದರಿಂದ ಆರೋಗ್ಯಕ್ಕೂ ಹಾನಿಯಾಗಿ, ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ. ಕಾಲೇಜು ಅಥವಾ ಶಾಲೆಗಳ ತರಗತಿಗಳಲ್ಲಿ ತೂಕಡಿಸುತ್ತಾ, ಪಾಠ, ಪ್ರವಚನಗಳು ಅರ್ಥವಾಗದೆ ವಿದ್ಯಾಭ್ಯಾಸ ಕುಂಠಿತವಾಗುತ್ತಿದೆ.

    ನಮ್ಮ ಭಾರತೀಯ ಸಂಸ್ಕೃತಿಯೂ ಸಹ ಯುವಕರಲ್ಲಿ ಕಾಣೆಯಾಗುತ್ತಿದೆ. ಈಗಿನ ವಿದ್ಯಾರ್ಥಿ/ ನಿಯರಲ್ಲಿ ಗುರು ಹಿರಿಯರಿಗೆ, ತಂದೆ ತಾಯಿಗಳಿಗೆ ಗೌರವ ಸೂಚಿಸ ಬೇಕೆಂಬ ಪರಿಪಾಠವು ಇರುವುದಿಲ್ಲ. ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ, ಶಿಕ್ಷಕರು ಜಾಲತಾಣಗಳಿಂದಾಗುವ ಕೆಟ್ಟ ಪರಿಣಾಮಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿ ಬುದ್ಧಿವಾದ ಹೇಳುತ್ತಿದ್ದರೂ ಸಹ ಸರಿಯಾಗಿ ಫಲಕಾರಿಯಾಗುತ್ತಿಲ್ಲ. ಮಕ್ಕಳನ್ನು ನಿಯಂತ್ರಿಸಲು ಸಾಧ್ಯವಾಗದೆ, ಪೋಷಕರು ವಿಫಲವಾಗಿರುವ ಸಂದರ್ಭಗಳಿವೆ. ಇತ್ತೀಚಿನ ದಿನಗಳಲ್ಲಿ ಬದಲಾಗಿರುವ ಮತ್ತು ಬದಲಾಗುತ್ತಿರುವ ಕೌಟುಂಬಿಕ ವ್ಯವಸ್ಥೆಯೂ ಸಹ ಕಾರಣ. ಉದಾಹರಣಗೆ ಹೇಳುವುದಾದರೆ, ಪೋಷಕರ ಪ್ರೀತಿಯ ಕೊರತೆ, ಏಕ ಪೋಷಕ ಸಂಸಾರಗಳು ( Single parent ), ಏಕ ಪುತ್ರ/ ಪುತ್ರಿ, ಅತೀವ ಮುದ್ದು ಮಾಡುವಿಕೆ, ಮಕ್ಕಳಿಗೆ ನೀಡಿರುವ ಸ್ವಾತಂತ್ರ್ಯ ಇವೆಲ್ಲವೂ ಸಹ ಹೆಚ್ಚಿನ ಮಟ್ಟದಲ್ಲಿ ಯುವಕ/ಯುವತಿಯರ ವಿಲಕ್ಷಣ ವರ್ತನೆಗೆ ಕಾರಣಗಳಾಗಿವೆ.  

    ಮೇಲೆ ತಿಳಿಸಿರುವ ಅಂಶಗಳಿಂದ ಜಾಲತಾಣಗಳು ಭಯವನ್ನುಂಟು ಮಾಡಿದರು ಸಹ, ಜಾಲತಾಣಗಳಿಂದ ಬಹಳಷ್ಟು ಉಪಯೋಗಗಳು ಸಹ ಇವೆ. ಆದರೆ, ಜಾಲತಾಣಗಳನ್ನು ಸರಿಯಾದ ರೀತಿಯಲ್ಲಿ ಧನಾತ್ಮಕವಾಗಿ ಬಳಸುವ ಅವಶ್ಯಕತೆಯಿದೆ. ಶೈಕ್ಷಣಿಕವಾಗಿ ಅಭಿವೃ‍ದ‍್ಧಿ ಹೊಂದಲು ಉಪಯೋಗಿಸಬಹುದಾಂತಹ ಹಲವಾರು ಜಾಲತಾಣಗಳಿವೆ. ಈ ಪೀಳಿಗೆಯ ವಿದ್ಯಾ‍ರ್ಥಿ/ನಿಯರು ಹಲವಾರು ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದಿದ್ದಾರೆ.

    ಸಾಮಾಜಿಕ ಜಾಲತಾಣಗಳಿಂದ, ಆರೋಗ್ಯಕರ ರೀತಿಯಲ್ಲಿ ನೆಟ್ವರ್ಕಿಂಗ್ ಬೆಳೆಸಲು, ದೂರದ ಊರಗಳಲ್ಲಿರುವವರು ಪೋಷಕರ ಜೊತೆಯಲ್ಲಿ ಸಂಪ‍ರ್ಕದಲ್ಲಿರಲು ಹೆಚ್ಚು ಉಪಯೋಗವಾಗುತ್ತಿವೆ. ಕೋವಿಡ್ ಸಮಯದಲ್ಲಿ, ಶಿಕ್ಷಣ ಸಂಸ‍್ಥೆಗಳನ್ನು ಮುಚ್ಚಲ್ಪಟ್ಟಾಗ, ಆನ್ ಲೈನ್ ಮೂಲಕ  ಶಿಕ್ಷಣವನ್ನು ನೀಡಲಾಯಿತು. ಈ ರೀತಿಯಾಗಿ ಜಾಲತಾಣಗಳಿಂದ ಅನುಕೂಲಗಳು ಮತ್ತು ಅನಾನುಕೂಲಗಳು ಎರಡು ಇವೆ. ಆದರೆ ಇಂದಿನ ಯುವ ಜನಾಂಗ, ಆರೋಗ್ಯ ಮತ್ತು ವ್ಯಕ್ತಿತ್ವದ ಮೇಲೆ ಋಣಾ‍ತ್ಮಕ ಪರಿಣಾಮಗಳನ್ನು ಬೀರುವ ಅಂಶಗಳ ಕಡೆಗೆ ಹೆಚ್ಚಿನ ಒಲವು ಮತ್ತು ಆಕರ್ಷಣೆ ತೋರುತ್ತಿದ್ದಾರೆ. ತಂತ್ರಜ್ಞಾನ ಮತ್ತು ಸಂಹವನ ಕ್ಷೇತ್ರದಲ್ಲಿ ಅಪಾರವಾದ ಬೆಳವಣಿಯನ್ನು ಕಂಡರು ಸಹ, ಜಾಲತಾಣಗಳ ಬಗ್ಗೆ ಹೇಳುವುದಾದರೆ, ಅನಪೇಕ್ಷಿತ ಸ್ಥಳದಲ್ಲಿದ್ದೇವೆ. ಆದ್ದರಿಂದ ಕೂಡಲೇ ಜಾಗೃತರಾಗಿ, ಈ ಸಮಸ್ಯೆಯ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ, ಪರಿಹಾರ ಕಂಡು ಕೊಳ‍್ಳಬೇಕಾಗಿದೆ.

    ಇಂದಿನ ಯುವ ಜನಾಂಗಕ್ಕೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳು.

    • ಅಸಹಿಷ‍್ಣುತೆ ಮತ್ತು ಕೈಗೆ ಎಟಕದಷ್ಟು ನಿರೀಕ್ಷಣೆ.
    • ಹಣ ಮತ್ತು ಭೌತಿಕ ವಸ್ತುಗಳಿಗಾಗಿ ಅತೀವ ದಾಹ.
    • ಹಿಂಸಾತ್ಮಕ ನಡತೆ.
    • ಜೀವನ ಮತ್ತು ಜೀವನ ವೃತ್ತಿಯಲ್ಲಿರಬೇಕಾದ ಧ್ಯೇಯಗಳ ಅಸ್ಪಷ್ಟತೆ.
    • ಸಾಮಾಜಿಕ ಜಾಲತಾಣಗಳ ಬಗ್ಗೆ ದುರಾಸಕ್ತಿ.  
    • ಭಾರತ ದೇಶದ ಮೌಲ್ಯಗಳು ಮತ್ತು ಸಂಸ್ಕೃತಿಯ ಬಗ್ಗೆ ಅಸಡ್ಡೆ.
    • ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ.
    • ಆದ‍ರ್ಶ ವ್ಯಕ್ತಿಗಳನ್ನು ಆರಿಸುವ ವಿಷಯದಲ್ಲಿ ತಪ್ಪು ಆಯ್ಕೆ.
    • ಅನಾರೋಗ್ಯಕರ ಸಂಬಂಧಗಳು.
    • ಪ್ರತಿಭಾವಂತ ವಿದ್ಯಾರ್ಥಿಗಳು ಬೇರೆ ವಿದ್ಯಾರ್ಥಿಗಳಿಂದ ಪ್ರತ್ಯೇಕತೆಯನ್ನು ಪಾಲಿಸುವುದು. ( Exclusivity )

    ನಾವು ಎಲ್ಲಿ ಎಡವಿದ್ದೇವೆ.

    • ಶಾಲಾ ಕಾಲೇಜುಗಳಲ್ಲಿ ಮಾನವೀಯ ಮೌಲ್ಯಗಳನ್ನು ಕಲಿಸುವ ಮೌಲ್ಯಾಧಾರಿತ ಶಿಕ್ಷಣವಿಲ್ಲದಿರುವುದು, ಇದ್ದರೂ ಹೆಚ್ಚು ಪ್ರಾಮುಖ್ಯತೆಯನ್ನು ಕೊಡದಿರುವುದು.
    • ಅನೈತಿಕ ಪದ್ದತಿಗಳನ್ನು ಅನುಸರಿಸುತ್ತಿರುವ ಶಿಕ್ಷಣ ಸಂಸ‍್ಥೆಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳದಿರುವುದು.
    • ನೈತಿಕತೆ ಮತ್ತು ಭಾರತೀಯ ಸಂಸ್ಕೃತಿಯ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಸಂಸ‍್ಥೆಗಳ ಗೋಚರತೆ ಅಲ್ಪ ಪ್ರಮಾಣದಲ್ಲಿರುವುದು. ಇಂತಹ ಸಂಸ‍್ಥೆಗಳಲ್ಲಿ ಯುವಜನಾಂಗದ ಪ್ರತಿನಿಧಿತ್ವ ಕಡಿಮೆ ಸಂಖ್ಯೆಯಲ್ಲಿರುವುದು.

    ಕಾರ್ಯ ತಂತ್ರ.

    • ಶಿಕ್ಷಣದ ಎಲ್ಲಾ ಹಂತಗಳಲ್ಲೂ ಮೌಲ್ಯಾಧಾರಿತ ಶಿಕ್ಷಣವನ್ನು ಪಠ್ಯಕ್ರಮದ ಒಂದು ಭಾಗವನ್ನಾಗಿ ರಚಿಸಿ, ಕಡ್ಡಾಯ ಮಾಡಿ, ಸರ್ಕಾರ ಸೂಕ್ತ ಕ್ರಮ ತೆಗೆದು ಕೊಳ‍್ಳುವುದು.
    • ಶಾಲಾ ಕಾಲೇಜುಗಳಲ್ಲಿ ಮಹಾತ್ಮ ಗಾಂಧೀ, ಸ್ವಾಮಿ ವಿವೇಕಾನಂದ, ಬಸವಣ‍್ಣ, ಬುದ‍್ಧ, ಡಾ. ಅಂಬೇಡ್ಕರ್ ಮುಂತಾದ ಮಹನೀಯರುಗಳ ಹೆಸರಿನಲ್ಲಿ ನೈತಿಕ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಿ, ಅವರ ಉಪದೇಶಗಳನ್ನು ಪ್ರಚಾರ ಮಾಡಿ ವಿದ್ಯಾರ್ಥಿ/ನಿಯರಿಗೆ ಮನದಟ್ಟು ಮಾಡುವ ಕ್ರಮಗಳನ್ನು ಜಾರಿಗೊಳಿಸುವುದು. ಈ ದಿಶೆಯಲ್ಲಿ, ನಿರಂತರ ಹಾಗೂ ಹೆಚ್ಚು ಅವಧಿಯ ಪ್ರೋತ್ಸಾಹ ಮತ್ತು ತರಬೇತಿಯ ಅವಶ್ಯಕತೆ ಇರುತ್ತದೆ. ಗಾಂಧೀ ಭವನ, ರಾಮಕೃಷ‍್ಣ ಆಶ್ರಮ ಮುಂತಾದ ಆಧ್ಯಾತ್ಮಿಕ ಸಂಸ‍್ಥೆಗಳೊಡನೆ ಭಾಗಿಯಾಗಿ, ಜಂಟಿ ಆಶ್ರಯದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬಹುದು.
    • ಶಾಲಾ ಕಾಲೇಜುಗಳಲ್ಲಿ ಹೆಚ್ಚು ಹೆಚ್ಚು ವಿದಾರ್ಥಿ/ನಿಯರಿಗೆ ಎನ್. ಎಸ್. ಎಸ್. ಯೋಜನೆಗೆ ಪ್ರವೇಶ ನೀಡುವುದು.
    • ಪ್ರಖ್ಯಾತ ವ್ಯಕ್ತಿಗಳ ಜನ್ಮ ದಿನಗಳಂದು ಸಮುದಾಯ ಆಧಾರಿತ ಕಾರ್ಯಕ್ರಮಗಳನ್ನು, ಉದಾಹರಣೆಗೆ ರಕ್ತದಾನ, ನೇತ್ರದಾನ, ಆಯೋಜಿಸುವುದು.
    • ಪೋಷಕರಿಗೂ ಸಹ, ಉತ್ತಮ ಪೋಷಕತ್ವದ ( Good parenting ) ಬಗ್ಗೆ ಕೌನ್ಸೆಲಿಂಗ್ ಷೆಸನ್ ಗಳನ್ನು ಏರ್ಪಡಿಸುವುದು.
    • ಶಿಕ್ಷಕರಿಗೆ ನೈತಿಕತೆ, ನೀತಿಶಾಸ್ತ್ರ ಮತ್ತು ಶಿಕ್ಷಕ ವೃತ್ತಿಯ ಪವಿತ್ರತೆ ಇವುಗಳ ಬಗ್ಗೆ ಸಮಾಲೋಚನಾ ಸಭೆಗಳನ್ನು ಏರ್ಪಡಿಸುವುದು.
    • ಅಂತಿಮ ಫಲಿತಾಂಶಕ್ಕಿಂತ, ಅನುಸರಿಸುವ ಮಾರ್ಗ ಬಹಳ ಮುಖ್ಯ ಎಂಬ ಅಂಶವನ್ನು ಯುವ ಜನಾಂಗಕ್ಕೆ ಅರ್ಥವಾಗುವಂತೆ ತಿಳಿ ಹೇಳುವುದು.

    ಸಾಮಾಜಿಕ ಪರಿವರ್ತನೆ ಮತ್ತು ಮಕ್ಕಳಲ್ಲಿ ನೈತಿಕತೆಯನ್ನು ಬೆಳೆಸಲು ಶಿಕ್ಷಣದ ಮೂಲಕವೇ ಸಾಧ್ಯ. ಸಮಾಜದ ಅಸ್ಪಸ‍್ಥತೆಯನ್ನು ಹೋಗಲಾಡಿಸಲು ಶಿಕ್ಷಣ ರಾಮಬಾಣ ‍ಔಷಧವಿದ್ದಂತೆ. ( Education is the panacea for ills in the society ). ದಕ್ಷಿಣ ಆಫ್ರಿಕಾದ ವಿಶ್ವ ವಿದ್ಯಾಲಯದ ಉಪನ್ಯಾಸಕ, ಕಾಲೇಜಿನ ಪ್ರವೇಶ ದ್ವಾರದಲ್ಲಿ ಕೆಳಗಿನ ಸಂದೇಶದ ಪಲಕವನ್ನು ತಗಲುಹಾಕಿದ್ದರು. ಪಲಕದ ಸಂದೇಶ ಹೀಗಿತ್ತು. ”ಒಂದು ರಾಷ್ಟ್ರವನ್ನು ಧ್ವಂಸ ಮಾಡಲು ಅಣುಬಾಂಬ್ ಗಳ ಅಥವಾ ಬಹುದೂರ ಚಲಿಸುವ ಕ್ಷಿಪಣಿಗಳ ಅವಶ್ಯಕತೆಯಿಲ್ಲ. ಬದಲಾಗಿ, ಶಿಕ್ಷಣದ ಗುಣಮಟ್ಟವನ್ನು ಕೆಳಗಿಳಿಸಿ, ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ನಕಲು ಮಾಡುವ ಅವಕಾಶ ಕಲ್ಪಿಸಿದರೆ ಸಾಕು”. ಸ್ವಾಮಿ ವಿವೇಕಾನಂದರು ಹೇಳಿರುವಂತೆ, ಮಾನವನನ್ನು ತಯಾರು ಮಾಡುವ, ಒಳ‍್ಳೆಯ ನಡತೆಯಿರುವ ವ್ಯಕ್ತಿಯನ್ನು ತಯಾರು ಮಾಡುವ ಶಿಕ್ಷಣದ ಅಗತ್ಯವಿದೆಯೇ ಹೊರತು ಕೇವಲ ಅಕ್ಷರಸ‍್ಥರನ್ನು ತಯಾರು ಮಾಡುವ ಶಿಕ್ಷಣದ ಅಗತ್ಯವಿಲ್ಲ.

    ಶಿಕ್ಷಣ ಕ್ಷೇತ್ರದ ದಿಗ್ಗಜರು, ಪೋಷಕರು, ಶಿಕ್ಷಣ ಆಡಳಿತಗಾರರು, ನೀತಿ ನಿರೂಪಕರು, ಹೆಚ್ಚಿನ ಜವಾಬ್ದಾರಿ ವಹಿಸಿ ಯುವ ಜನಾಂಗದಲ್ಲಿ ನೈತಿಕತೆಯನ್ನು ಮೈಗೂಡಿಸುವುದು ಬಹಳ ಮುಖ್ಯ. ಇಲ್ಲದಿದ್ದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಅತಿದೊಡ್ಡ ಅಪಾಯವನ್ನು ನಾವು ಕಾಣ ಬೇಕಾಗಿರುತ್ತದೆ.

    error: Content is protected !!