25.8 C
Karnataka
Wednesday, May 20, 2026
    Home Blog Page 175

    #No school, No fees!ಫೀಸ್‌‌ಗಾಗಿ ಪುಟ್ಟ ಮಕ್ಕಳಿಗೂ ಆನ್ ಲೈನ್ ಕ್ಲಾಸಸ್ ಬೇಡ


    ಇದು ಕೊರೊನಾ ಕಾಲದ ಆಕರ್ಷಕ ಘೋಷಣೆ. ದೇಶದ ಖಾಸಗಿ ಶಾಲಾ- ಕಾಲೇಜುಗಳ ದುಬಾರಿ ಶುಲ್ಕ ನೀತಿಯಿಂದ ಬಸವಳಿದ ಪೋಷಕರಿಗೆ ಈ ಘೋಷಣೆಯು ಒಂಥರಾ ಫೀಲ್ ಗುಡ್ ಫ್ಯಾಕ್ಟರ್. ಸರಕಾರಿ ಶಿಕ್ಷಣ ಸಂಸ್ಥೆಗಳು ಪೋಷಕರ ವಿಶ್ವಾಸ ಗಳಿಸುವಲ್ಲಿ ಸೋತಿರುವಾಗ ಖಾಸಗಿ ಸಂಸ್ಥೆಗಳು ಸುಗ್ಗಿ ಮಾಡುತ್ತಿವೆ. ಇದು ಸಹಜ ಬೆಳವಣಿಗೆ. ಆದರೆ ಕೊರೊನಾ ಈಗ ವಿಚಿತ್ರವಾದ ಸಂದಿಗ್ಧವನ್ನು ಸೃಷ್ಟಿಸಿದೆ.

    ಒಂದೆಡೆ ಎಷ್ಟೆಲ್ಲ ಹೊಟ್ಟೆಬಟ್ಟೆ ಕಟ್ಟಿಟ್ಟು ಮಕ್ಕಳ ಫೀಸ್ ಕಟ್ಟುವ ತಂದೆತಾಯಿಗೆ ಸದ್ಯ ಅತ್ತ ದುಡ್ಡೂ ಉಳಿಯುತ್ತಿಲ್ಲ, ಇತ್ತ ಮುದ್ದಿನ ಮಕ್ಕಳ ಶಾಲಾ ಓದೂ ಸಾಧ್ಯವಾಗುತ್ತಿಲ್ಲ ಎಂದರೆ ಹೇಗಾಗಬೇಡ? ನಗರಗಳ ಅನೇಕ ಪೋಷಕರು ತಮ್ಮ ಮಕ್ಕಳ ಭವಿಷ್ಯ ನೆನೆದು ನಿದ್ದೆಗೆಟ್ಟಿದ್ದಾರೆ. ಎಲ್ಲವೂ ಶಾಲೆಯ ಪಾಠ ಆಧರಿಸಿಯೇ ನಿರ್ಧಾರಗೊಳ್ಳುತ್ತದೆ ಎಂದು ಭ್ರಮಿಸುವವರಿಗೆ ಇಂದಿನ ಸ್ಥಿತಿಯು ಮನೋಭಿತ್ತಿಯಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಈ ಬಿರುಗಾಳಿಯೇ ಈಗ ತಮ್ಮ ಈವರೆಗಿನ ನೆಚ್ಚಿನ ಶಾಲೆಗಳತ್ತ ಇದ್ದಕ್ಕಿದ್ದಂತೆ ಆಕ್ರೋಶದ ಅಲೆ ಸೃಷ್ಟಿಸಲು ಕಾರಣವಾಗಿದೆ. ಪೋಷಕರು-ಖಾಸಗಿ ಶಾಲೆಗಳದ್ದು ಹೊಂದಾಣಿಕೆಯಾಗದ ಅತ್ತೆ-ಸೊಸೆ ಸಂಬಂಧ. ಆಗಾಗ ಕಿತ್ತಾಟ, ಅನಿವಾರ್ಯ ಹೊಂದಾಣಿಕೆ.


    ಈಗ ತರಗತಿ ನಡೆಯದ ಸಂಕಷ್ಟ ಘಳಿಗೆ ಸುಖಾಸುಮ್ಮನೆ ಶುಲ್ಕ ಭರಿಸಬೇಕಾದ ಒತ್ತಡಕ್ಕೆ ಬಳಲಿ ಸಿಡಿದು ಹೋಗುತ್ತಿದ್ದಾರೆ ಪೋಷಕರು. ಆದರೆ ಇದೇ ವೇಳೆ ಶಾಲೆಗಳ ಆಡಳಿತ ಮಂಡಳಿಗಳು ಕೂಡ ಸುಗ್ಗಿ ಕಾಲದ ಹಿಗ್ಗು ಕರಗಿ ಹೋಗಿರುವುದರಿಂದ ಕಂಗೆಟ್ಟಿವೆ. ಜತೆಗೆ ಶುಲ್ಕ ಕಟ್ಟದೇ ಮೊಂಡುಬಿದ್ದು ಪೋ ಷಕರ ವಿರುದ್ಧ ದಿನಕ್ಕೊಂದು ತಂತ್ರ ಪ್ರಯೋಗಿಸುತ್ತಿವೆ.
    ಇದೊಂಥರಾ ಖಾಜಿ ನ್ಯಾಯದ ಮಟ್ಟಕ್ಕೆ ಬಂದು ನಿಂತಿದೆ. “ಕನ್ನಡಪ್ರೆಸ್.ಕಾಂ” ಇಲ್ಲಿ ಇಬ್ಬರ ಅಭಿಪ್ರಾಯ ಕೇಳಿ ಮೂರನೇ ತಜ್ಞ ಸಲಹೆಯ ದಾರಿ ತೆರೆದಿಟ್ಟಿದೆ.

    ನಾವ್ ಕೊಡೋದಿಲ್ಲ

    ಮೊದಲಿಗೆ “ನೋ ಫೀಸ್” ಎಂದು ಹಟ ಹಿಡಿದ ಪೋಷಕರನ್ನು ಮಾತಾಡಿಸಿದಾಗ ಹೊರಬಿದ್ದ ಅಭಿಪ್ರಾಯವನ್ನು ಅವರದ್ದೇ ಮಾತುಗಳಲ್ಲಿ ಕೇಳಿ:


    “ಕೊರೊನಾದಿಂದ ನನ್ನ ಕೆಲಸ ಹೋಗಿದೆ. ಈಗ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಇಷ್ಟರ ಮಧ್ಯ ಕೆಲಸ ಇದ್ದಾಗ ಕೈಬಾಯಿ ಕಟ್ಟಿ ಮಗನ ಓದಿಗೆ ಫೀಸು ಹೊಂದಿಸುತ್ತಿದ್ದೆ. ಒಂದನೆ ತರಗತಿಯಿಂದ ಒಂಬತ್ತನೆ ಕ್ಲಾಸಿಗೆ ಬಂದಿರುವ ಮಗನಿಗೆ ಪ್ರತಿವರ್ಷ ಹೆಚ್ಚಿಸುವ ಶುಲ್ಕವನ್ನು ಪ್ರಶ್ನಿಸದೇ ಭರಿಸಿದ್ದೇನೆ. ಈಗ ನಮಗೆ ಕಷ್ಟ ಕಾಲ. ಅತ್ತ ಕೆಲಸ ಇಲ್ಲ, ಇತ್ತ ಮಗನ ಶಾಲೆ ಇಲ್ಲ. ದಿನಸಿ ದರಗಳೂ ಏರಿವೆ. ಸಾಲಕೊಡುವವರೂ ಇಲ್ಲ. ಇಂತಹ ಸಮಯ ನಮ್ಮ ಕಷ್ಟಕ್ಕೆ ಶಾಲೆಗಳು ಸ್ಪಂದಿಸಬೇಕು. ಕ್ಲಾಸ್ ನಡೆಯದ ಈ ಸಮಯ ಶುಲ್ಕ ಮನ್ನಾ ಮಾಡಬೇಕು. ಇದರಲ್ಲಿ ನ್ಯಾಯ ಇದೆ. ಯಾಕೆಂದರೆ ಬಹುತೇಕ ಶಿಕ್ಷಣ ಸಂಸ್ಥೆಗಳು ಇದುವರೆಗೆ ಸಾಕಷ್ಟು ದುಡ್ಡು ಮಾಡಿವೆ. ಆಸ್ತಿ ಖರೀದಿಸಿವೆ. ಸಾಕಷ್ಟು ಹಣ ಕೂಡಿಟ್ಟಿವೆ. ಈಗ ಒಂದೆರಡು ತಿಂಗಳು ಫೀಸ್ ಸ್ಟಾಪ್ ಮಾಡಿದ್ರೆ ಅವರಿಗೇನೂ ಬಡತನ ಬರೋದಿಲ್ಲ. ಅಷ್ಟಕ್ಕೂ ನಾವು ಶಾಶ್ವತ ನಿಲುಗಡೆಗೆ ಕೇಳುತ್ತಿಲ್ಲ. ಕ್ಲಾಸ್ ಶುರುವಾದರೆ, ಮತ್ತೇ ಕಷ್ಟವೊ ಸುಖವೊ ಹೇಗಾದರೂ ಹೊಂದಿಸಿ ಕಟ್ಟುತ್ತೇವೆ. ಅಲ್ಲಿವರೆಗೆ ಶುಲ್ಕ ವಸೂಲಿ ಮಾಡ್ಬಾರ್ದು. ನಾವು ಕಟ್ಟೋದಿಲ್ಲ” ಎನ್ನುತ್ತಾರೆ ಬೆಂಗಳೂರಿನ ಅನೇಕ ಬಡಾವಣೆಗಳ ನಿವಾಸಿಗರು.

    ನಾವ್ ಬಿಡೋದಿಲ್ಲ

    ಇದಾಗಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳನ್ನು ಮಾತಿಗೆಳೆದರೆ ಅವರಿಂದ ಬರುವ ಗೋಳಿನ ಕಥೆಯೂ ಕರುಣಾಜನಕ.


    “ನಾವು ಶೋಷಕರಲ್ಲ. ಸುಲಿಗೆಕೋರರು ಖಂಡಿತ ಅಲ್ಲ. ಒತ್ತಡದ ಕಾರಣ ಪೋಷಕರು ಈಗ ಆ ರೀತಿ ಮಾತಾಡುತ್ತಿದ್ದಾರೆ. ಇದೇ ಪೋಷಕರು ತಮ್ಮ ಮಕ್ಕಳಿಗೆ ಸೀಟು ಕೇಳಲು ಬಂದಾಗ ತೋರಿದ ವಿನಯ, ನೀಡಿದ ಭರವಸೆಗಳನ್ನು ಮರೆತಿದ್ದಾರೆ.

    ಒಂದು ಕ್ಷಣ ತಾಳ್ಮೆಯಿಂದ ಯೋಚಿಸಿ ನೋಡಿ. ನಾವು ಶಾಲಾ ಕಟ್ಟಡ ಮಾರಿಲ್ಲ. ಸಿಬ್ಬಂದಿಗೆ ಸಂಬಳ ಕೊಡೋದು ನಿಲ್ಲಿಸಿಲ್ಲ. ಸರಕಾರಕ್ಕೆ ಕಟ್ಟಬೇಕಾದ ರಾಯಲ್ಟಿ ಸ್ಟಾಪ್ ಆಗಿಲ್ಲ. ಖರ್ಚಿನ ಬಾಬ್ತು ಯಾವ್ದು ಕಡಿಮೆಯಾಗಿದೆ ಹೇಳಿ? ಮಿಗಿಲಾಗಿ ಇವರ ಮಕ್ಕಳಿಗೆ ಆನ್ ಲೈನ್ ಕ್ಲಾಸ್ ನಡೆಸುತ್ತಿದ್ದೇವೆ. ಅದಕ್ಕೊಂದಿಷ್ಟು ಎಕ್ಸ್ಟ್ರಾ ಖರ್ಚು. ನಾಳೆ ತರಗತಿ ಶುರುವಾದ್ರೆ ಹೆಚ್ಚುವರಿ ಅವಧಿ ದುಡಿದು ಪೋರ್ಷನ್ ಮುಗಿಸಿ, ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ದಮಾಡ್ತೇವೆ. ಆಗ ಇವರಿಂದ ಎಕ್ಟ್ರಾ ಫೀಸ್ ಕೇಳಲ್ವಲ್ಲಾ? ಈಗ ಕಷ್ಟ ಅವರೊಬ್ಬರಿಗೇ ಇಲ್ಲವಲ್ಲ? ಎಲ್ಲರ ಸ್ಥಿತಿಯೂ ಒಂದೇ ಆಗಿದೆ. ಅವರು ಅರ್ಥ ಮಾಡಿಕೊಳ್ಳಬೇಕು” ಎನ್ನುತ್ತಾರೆ ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಬೆಂಗಳೂರಿನ ಖಾಸಗಿ ಶಾಲೆಯೊಂದರ ವ್ಯವಸ್ಥಾಪಕರು

    ಈ ಬಿಕ್ಕಟ್ಟಿಗೆ ತಜ್ಞರು ತೆರೆದಿಟ್ಟ ಸಲಹೆ:

    ೧.ಕ್ಲಾಸ್ ಶುರು ಆಗದ ಹೊರತು ಫೀಸ್ ಕಟ್ಟುವುದೇ ಇಲ್ಲ ಅನ್ನುವ ಪೋಷಕರ ವಾದ ಒಪ್ಪಿತ ಅಲ್ಲ. ಏಕೆಂದರೆ ಹಲವು ಶಿಕ್ಷಕರಿಗೆ ಫೀಸ್ ಕೊಟ್ಟರೆ ಸಂಬಳ ಸಿಗುವುದು.

    ೨.ಈಗಿನ ಸ್ಥಿತಿ ಟೆಂಪರರಿಯಾದದ್ದು. ಅದೇ ಶಾಲೆಗೆ ನಾಳೆ ಮಕ್ಕಳನ್ನು ಕಳಿಸುವುದು ಪೋಷಕರಿಗೆ ಅನಿವಾರ್ಯ. ಆದ್ದರಿಂದ ತಂಟೆ ಇರದ ಸುಗಮ ದಾರಿಗಳ ಬಗ್ಗೆ ಯೋಚಿಸಬೇಕು.

    ೩.ಒಂದಷ್ಟು ಹೊರೆ ಎನ್ನಿಸದ ಫೀಸ್ ಕಟ್ಟಿ ಶಾಲೆಗಳಿಗೂ ಉಸಿರಾಡಲು ಅನುವಾಗಬೇಕು. ಯಾವುದಕ್ಕೂ ಪರಸ್ಪರ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಬೇಕು.

    ೪.ಶಾಲಾ ಮ್ಯಾನೇಜ್ಮೆಂಟ್ ಕೂಡ ಈ ವಿಷಯದಲ್ಲಿ ಹಟ ಮಾಡಬಾರದು. ಎಷ್ಟುಸಾಧ್ಯವೋ ಅಷ್ಟನ್ನು ಈ ಸಂಕಷ್ಟ ಅವಧಿ ಮಾಸಿಕ ಶುಲ್ಕ ಕಡಿಮೆ ಮಾಡಬೇಕು. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ ಸಂಪನ್ಮೂಲ ಹೊಂದಾಣಿಕೆ ಮಾಡಬೇಕು.

    ೫.ವಿಶೇಷವಾಗಿ ಅನೇಕ ಪೋಷಕರಿಗೆ ವ್ಯಾನ್ ಫೀಸ್ ದೊಡ್ಡ ಹೊರೆ. ಸಾಧ್ಯವಾದರೆ ಇದನ್ನು ಕೊರೊನಾ ತಿಂಗಳಲ್ಲಿ ನಿಲುಗಡೆ ಮಾಡಬೇಕು.

    ೬.ಬಡ ಕುಟುಂಬದ ಮಕ್ಕಳಿಗೆ ವಿಶೇಷ ರಿಯಾಯಿತಿ ಯೋಜನೆ ಜಾರಿಗೊಳಿಸಬೇಕು.

    ೭. ಫೀಸಿಗಾಗಿ ಪುಟ್ಟ ಮಕ್ಕಳಿಗೂ ಆನ್ ಲೈನ್ ಕ್ಲಾಸಸ್ ಗಳು ಸರಿ ಅಲ್ಲ.

    ಧೀಮಂತ ನಟರ ನೆನಪಲ್ಲಿ ಪ್ರಾಣಿ ದತ್ತು

    ಕನ್ನಡ ಸಿನಿಮಾ ರಂಗಕ್ಕೂ ಮೈಸೂರು ಪ್ರಾಣಿ ಸಂಗ್ರಹಾಲಯಕ್ಕೂ ಅವಿನಾಭಾವ ಸಂಬಂಧವಿದೆ. ಕನ್ನಡದ ಅನೇಕ ಸಿನಿಮಾಗಳಲ್ಲಿ ಈ ಮೃಗಾಲಯದ ಪ್ರಾಣಿಗಳು ನಟಿಸಿವೆ. ನಾನಾ ಚಿತ್ರಗಳಲ್ಲಿ ದೃಶ್ಯವಾಗಿ ಮೃಗಾಲಯ ಕಂಡಿದೆ. ಜತೆಗೆ ಅನೇಕ ನಟರು ಈ ಸಂಗ್ರಹಾಲಯದ ಪ್ರಾಣಿಗಳನ್ನು ದತ್ತು ಪಡೆದು ಪೋಷಿಸುತ್ತಿದ್ದಾರೆ. ಇವರ ಸಾಲಿಗೆ ಹೊಸ ಸೇರ್ಪಡೆ ಕನ್ನಡದ ಈ ಧೀಮಂತ ಶಕ್ತಿಗಳು.


    ಮೈಸೂರು ಮೂಲದವರಾದ ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್ ಮತ್ತು ಡಾ.ಅಂಬರೀಶ್ ಹೆಸರಿನಲ್ಲಿ ಸೋಮವಾರ (ಜೂ. 8) ಪ್ರಾಣಿಗಳನ್ನು ದತ್ತು ಪಡೆಯಲಾಗಿದೆ.

    ಸುಮಲತಾ ಅಂಬರೀಶ್ ಮತ್ತು ಸಚಿವ ಸೋಮಶೇಖರ್

    ವರನಟ ಡಾ. ರಾಜ್ ಕುಮಾರ್ ಅವರ ಹೆಸರಿನಲ್ಲಿ ಆನೆ ಹಾಗೂ ರೆಬೆಲ್ ಸ್ಟಾರ್ ಅಂಬರೀಷ್ ಅವರ ಹೆಸರಿನಲ್ಲಿ ಆಫ್ರಿಕನ್ ಆನೆ ಮತ್ತು ಸಾಹಸಸಿಂಹ ವಿಷ್ಣುವರ್ಧನ್ ಹೆಸರಿನಲ್ಲಿ ಒಂದು ಸಿಂಹ ದತ್ತು ಪಡೆಯಲಾಗಿದೆ.


    ರಾಜ್ ಕುಮಾರ್ ಅವರಿಗೆ ಆನೆಗಳ ಮೇಲೆ ವಿಶೇಷ ಪ್ರೀತಿ. ಗಂಧದ ಗುಡಿ ಸೇರಿದಂತೆ ಇವರ ನಟನೆಯ ಹಲವು ಚಿತ್ರಗಳಲ್ಲಿ ಆನೆ ಬಳಸಲಾಗಿದೆ. ಜತೆಗೆ ಶೂಟಿಂಗ್ ಸಮಯದಲ್ಲಿ ಆನೆಗಳ ಜತೆ ರಾಜ್ ಕುಮಾರ್ ಬಿಂದಾಸ್ ಆಗಿ ಕಾಲಕಳೆಯುತ್ತಿದ್ದರು. ಅಂಬರೀಶ್ ಅವರಿಗೂ ಕೂಡ ಆನೆಗಳ ಮೇಲೆ ಅಷ್ಟೇ ಅಕ್ಕರೆ ಹಾಗಾಗಿ ಈ ಇಬ್ಬರ ನಟರ ಹೆಸರಿನಲ್ಲಿ ಆನೆಗಳನ್ನು ದತ್ತು ಪಡೆಯಲಾಗಿದೆ.ಸಾಹಸ ಸಿಂಹ ಅವರ ಅಭಿಮಾನಿಗಳ ಅಭಿಮಾನಕ್ಕೆ ತಕ್ಕಂತೆ ವಿಷ್ಣುವರ್ಧನ್ ಅವರ ಹೆಸರಲ್ಲಿ ಸಿಂಹವನ್ನು ದತ್ತು ಪಡೆಯಲಾಗಿದೆ.


    ಈ ಮೇರು ನಟರ ಹೆಸರಿನಲ್ಲಿ ಪ್ರಾಣಿಗಳನ್ನು ದತ್ತು ಪಡೆದವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್. ಸ್ವತಃ ಸುಮಲತಾ ಅಂಬರೀಶ್ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲೇ ಅವರು ಇಂಥದ್ದೊಂದು ಮೆಚ್ಚುವ ಕಾರ್ಯ ಮಾಡಿದ್ದಾರೆ.

    “ಮೂವರು ನಟರೂ ಮೈಸೂರು ಮೂಲದವರು. ಅವರ ಹೆಸರಿನಲ್ಲಿ ದತ್ತು ತಗೆದುಕೊಳ್ಳುವಂತಹ ಅವಕಾಶ ನನಗೆ ಸಿಕ್ಕಿದೆ. ಹೆಮ್ಮೆಯಿಂದ ಈ ಕೆಲಸಕ್ಕೆ ಮುಂದಾದೆ” ಎಂದಿದ್ದಾರೆ ಸಚಿವರು.


    ಈಗಾಗಲೇ ಸ್ಯಾಂಡಲ್ ವುಡ್ ನಟರಾದ ದರ್ಶನ್, ಸೃಜನ್ ಲೋಕೇಶ್ ಸೇರಿದಂತೆ ಹಲವು ಕಲಾವಿದರು ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ.

    ಬಿಎಸ್‌ವೈ & ಟೀಮ್‌ಗೆ ಬಿಜೆಪಿ ಹೈಕಮಾಂಡ್ ನೀಡಿದ ಸಂದೇಶ ಏನು

    ರಾಜ್ಯಸಭೆ ಚುನಾವಣೆಯಲ್ಲಿ ರಾಯಚೂರಿನ ಅಶೋಕ ಗಸ್ತಿ ಮತ್ತು ಬೆಳಗಾವಿಯ ಈರಣ್ಣ ಕಡಾಡಿ ಅವರಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ನೀಡಿದ ಸಂದೇಶವಾದರು ಏನು? ಇದರ ಹಿಂದಿನ ರಾಜಕೀಯ ಲೆಕ್ಕಾಚಾರವಾದರು ಏನಿದ್ದೀತು ? ಇದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ ಆದ ಹಿನ್ನಡೆಯೇ ? ಈ ಎಲ್ಲಾ ಸಂಗತಿಗಳ ಬಗ್ಗೆ ಕನ್ನಡಪ್ರೆಸ್.ಕಾಮ್ ನ ಪ್ರಧಾನ ಸಂಪಾದಕ ಶ್ರೀವತ್ಸ ನಾಡಿಗ್ ಮತ್ತು ಹಿರಿಯ ರಾಜಕೀಯ ವಿಶ್ಲೇಷಕ ಕೂಡ್ಲಿ ಗುರುರಾಜ ನಡೆಸಿದ ಪಾಡ್ಕಾಸ್ಟ್ ಇದು. ಕೇಳಿ ನಿಮ್ಮ ಅಭಿಪ್ರಾಯ ತಿಳಿಸಿ.

    ಇದನ್ನೂ ಓದಿ : ರಾಜ್ಯ ಕೋರ್ ಕಮಿಟಿ ಶಿಫಾರಸ್ಸಿಗೆ ಕಿಮ್ಮತ್ತು ಕೊಡದ ಬಿಜೆಪಿ ಹೈ ಕಮಾಂಡ್

    ಮಾಧ್ಯಮದವರ ಮೇಲೇಕೆ ಟ್ರಂಪ್‌ಗೆ ಅಷ್ಟೊಂದು ಸಿಟ್ಟು

    ಜಾರ್ಜ್ ಫ್ಲಾಯ್ಡ್ ನ ಹತ್ಯೆ ಖಂಡಿಸಿ ಅಮೆರಿಕಾದಲ್ಲೇ ಅಲ್ಲದೆ, ಪ್ರಪಂಚದ ಮತ್ತೊಂದು ತುದಿಯಲ್ಲಿರುವ ಆಸ್ಟ್ರೇಲಿಯಾದವರೆಗೆ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಪ್ರತಿ ದೇಶದಲ್ಲಿ ವ್ಯಾಪಕವಾಗಿ ಹರಡಿರುವ ಜನಾಂಗೀಯ ದ್ವೇಷವನ್ನು ವಿರೋಧಿಸಿ ಈ ಪ್ರತಿಭಟನೆಗಳು ನಡೆಯುತ್ತಿವೆ.

    ಜಾರ್ಜ್ ಫ್ಲಾಯ್ಡ್ ನ ಸಮಾಧಿ ಕ್ರಿಯೆ ಮುಗಿದಿದ್ದು, ಆತನನ್ನು ಹತ್ಗೈ ಮಾಡಿದ ನಾಲ್ಕೂ ಜನ ಪೊಲೀಸರಿಗೆ ಅಧಿಕ ಸಜೆಯ ಘೋಷಣೆಯಾಗಿದ್ದರೂ ಜೂನ್ 7 ಭಾನುವಾರದಂದು ಅಮೆರಿಕಾದ ರಾಜಧಾನಿ ವಾಷಿಂಗ್ಟನ್ ನಲ್ಲಿ ಅತ್ಯಂತ ಬೃಹತ್  ಪ್ರತಿಭಟನೆ ನಡೆಯಿತು.ಇದುವರೆಗಿನ ಪ್ರತಿಭಟನಾ ನಡಿಗೆಯಲ್ಲೇ ಇದನ್ನು ಅತಿದೊಡ್ಡದು ಎಂದು ಹೇಳಲಾಗಿದೆ.ಇದು ಶಾಂತಿಯುತವಾಗಿ ನಡೆದ ಹಿನ್ನೆಲೆಯಲ್ಲೇ ಡೊನಾಲ್ಡ್ ಟ್ರಂಪ್ ಆಡಳಿತ ವಿವಾದಾಸ್ಪದವಾಗಿದ್ದ ನ್ಯಾಷನಲ್ ಗಾರ್ಡ್ ಗಳನ್ನು ಹಿಂದಕ್ಕೆ ಪಡೆದಿದೆ.

    ಜಾರ್ಜ್ ಫ್ಲಾಯ್ಡ್ ನ ಸಾವು ಆಯಾ ದೇಶದ ಎಲ್ಲ ಅನ್ಯಾಯಗಳು ಮತ್ತು ಸ್ವಾತ್ರಂತ್ರ್ಯದ ಮೇಲಿನ ದಾಳಿಯನ್ನು ಪ್ರತಿಬಿಂಬಿಸುತ್ತವೆ.ವಾಷಿಂಗ್ಟನ್ ಸೇರಿದಂತೆ ಅಮೆರಿಕಾದ ಹಲವು ನಗರಗಳು, ಲಂಡನ್, ಬ್ರಿಸ್ಬೇನ್, ಇಸ್ರೇಲ್, ಜರ್ಮನಿ,ಫ್ರಾನ್ಸ್, ದಕ್ಷಿಣ ಅಮೆರಿಕಾದ ಬ್ರೆಜಿಲ್, ದಕ್ಷಿಣ ಆಫ್ರಿಕಾ ಎಲ್ಲೆಡೆಯೂ ಜನರು ಭುಗಿಲೆದ್ದಿದ್ದಾರೆ.  ಈ ಹೋರಾಟ ಪ್ರಜಾಪ್ರಭುತ್ವ ವ್ಯವಸ್ಥೆಗಳಿಲ್ಲದ  ಹಾಂಗ್ ಕಾಂಗ್ ನಂತಹ  ದೇಶಗಳಿಗೂ ಹರಡಿರುವುದು ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ.

    ಭಾನುವಾರ ಇಂಗ್ಲೆಂಡಿನ ಬ್ರಿಸ್ಟಲ್ ಎನ್ನುವ ನಗರದಲ್ಲಿ ನೆರೆದಿದ್ದ 10,000 ಜನ ಪ್ರತಿಭಟನೆಗಾರರು ಆ ನಗರದ 17 ನೇ ಶತಮಾನದ  ಸ್ಲೇವ್ ಟ್ರೇಡರ್ ನಾಗಿದ್ದ ಎಡ್ವರ್ಡ್ ಕೋಲ್ಸ್ಟನ್ನನ ಪ್ರತಿಮೆಯನ್ನು ಉರುಳಿಸಿ ಹತ್ತಿ ಕುಣಿದು ರಸ್ತೆಯಲ್ಲಿ ದರ ದರನೆ ಎಳೆದುಕೊಂಡು ಹೋಗಿ ಸಮುದ್ರದ ನೀರಲ್ಲಿ  ಎಸೆದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಸುಮಾರು 80,000 ಜನರನ್ನು ಅಟ್ಲಾಂಟಿಕ್ ಸಮುದ್ರದ ಮೂಲಕ ದಾಸ್ಯದ ವ್ಯಾಪಾರ ಮಾಡಿದ್ದ ಎಡ್ವರ್ಡ್ ಇಡೀ ಬ್ರಿಸ್ಟಲ್ ನಗರವನ್ನು ಕಟ್ಟಲು ನೆರವಾಗಿದ್ದ ಪ್ರತಿಷ್ಟಿತ ರಾಜಕಾರಣಿ.ಅವನ ಪ್ರತಿಮೆಯನ್ನು ತೆಗೆಯಿರಿ ಎಂಬ ಒತ್ತಾಯ ಈ ಹಿಂದಿನಿಂದಲೇ ತೀವ್ರವಾಗಿತ್ತು. ಆದರೆ ಚಾರಿತ್ರಿಕ ಕಾರಣಗಳಿಗಾಗಿ ಅದನ್ನು ಉಳಿಸಿಕೊಳ್ಳಲಾಗಿತ್ತು.ಪ್ರಸ್ತುತ ಸಮಸ್ಯೆಯ ಜೊತೆ ಚಾರಿತ್ರಿಕ ತಪ್ಪುಗಳ ಮೇಲೆ ಕೂಡ ಜನರ ಆಕ್ರೋಶ ತಿರುಗುತ್ತಿರುವುದು ಜನರ ಭಾವೋದ್ವೇಗಗಳು ಸುಲಭವಾಗಿ ಕರಗುವುದಿಲ್ಲ ಎನ್ನುವ ವಿಚಾರವನ್ನು ದೃಢಪಡಿಸುತ್ತದೆ. ಲಂಡನ್ನಿನಲ್ಲಿ ರಾತ್ರಿ ಒಂಭತ್ತು ಗಂಟೆಯಾದರೂ ಪ್ರತಿಭಟನೆ ನಡೆಯುತ್ತಲೇ ಇತ್ತು.ಇತರೆ ನಗರಗಳಲ್ಲಿಯೂ ಪ್ರತಿಭಟನೆಗಳು ನಡೆದವು.

    ಮಾಧ್ಯಮಗಳೇ ಟಾರ್ಗೆಟ್

    ‌ಇಂತಹ ಎಲ್ಲ ಬೆಳವಣಿಗೆಯನ್ನು ನಿಸ್ಪೃಹವಾಗಿ ವರದಿಮಾಡುವುದು ಮಾಧ್ಯಮಗಳ ನೈತಿಕ ಜವಾಬ್ದಾರಿ.ಸ್ವತಂತ್ರ ಮಾಧ್ಯಮಗಳು ಪ್ರಜಾಪ್ರಭುತ್ವದ ಕಣ್ಣುಗಳು. ಇದೇ ಕಾರಣಕ್ಕೆ ಅವರಿಗೆ ಕಾನೂನಿನ, ಸಂವಿಧಾನದ ರಕ್ಷಣೆಯೂ ಇರುತ್ತದೆ.ಪತ್ರಕರ್ತರನ್ನು ಪೊಲೀಸರು  ಸಾಮಾನ್ಯವಾಗಿ ಮುಟ್ಟುವುದಿಲ್ಲ. ಅವರ ನಡುವೆ ವೃತ್ತಿ ಸಂಬಂಧಿ ಸಹಕಾರ ಮತ್ತು ಗೌರವಗಳಿರುತ್ತವೆ.

    ಆದರೆ ಅಮೆರಿಕಾದಲ್ಲಿ ಕಳೆದ ಮೂರು ವರ್ಷಗಳಿಂದ ಪೊಲೀಸರು, ಪತ್ರಕರ್ತರ ಮೇಲೆ ವರ್ಷಕ್ಕೆ ಸರಾಸರಿ 150 ದೌರ್ಜನ್ಯಗಳನ್ನು ನಡೆಸಿರುವುದು ದಾಖಲಾಗಿವೆ.ಇದನ್ನು ಮಾಧ್ಯಮದವರು ಅವುಡುಗಚ್ಚಿ ಸಹಿಸುತ್ತಿದ್ದಾರೆ. ಆದರೆ ಇತ್ತೀಚೆಗಿನ ಜಾರ್ಜ್ ಫ್ಲಾಯ್ಡ್ ನ ಘಟನೆಯಲ್ಲಿ ಮಾಧ್ಯಮದವರ ಮೇಲಾಗುತ್ತಿರುವ ದೌರ್ಜನ್ಯಗಳು ನಾಲ್ಕು ಪಟ್ಟಾಗಿವೆ. ಇಡೀ ವರ್ಷದಲ್ಲಿ ನಡೆಯುತ್ತಿದ್ದ ದಾಳಿಗಳಿಗಿಂತ ಹೆಚ್ಚುದಾಳಿಗಳು ಕಳೆದ ಹತ್ತು ದಿನಗಳಲ್ಲಿನಡೆದದ್ದು ಸಾಕ್ಷಿ ಸಮೇತ ದಾಖಲಾಗಿದೆ.

     ಅತ್ತ ಮಿನಿಯಾಪೋಲೀಸ್ ಪೊಲೀಸು ಇಲಾಖೆ ಜಾರ್ಜ್ ಫ್ಲಾಯ್ಡ್ ನ ಹತ್ಯೆಯ ಕೇಸಿನಲ್ಲಿ ಕೋರ್ಟಿನಲ್ಲಿ ಸೋತರು. ಜನರೆದುರು ತಮ್ಮ ಧೂರ್ತತನಕ್ಕೆ ಅವಮಾನಿಸಲ್ಪಟ್ಟರು. ಸಾರ್ವಜನಿಕವಾಗಿ ಕ್ಷಮೆಯನ್ನೂ ಯಾಚಿಸಿದರು. ಇತ್ತ  ಅನುಕಂಪವೇ ಇಲ್ಲದೆ, ಸಾಂತ್ವನ ತೋರದೆ, ಇಂತಹ ಘಟನೆಗಳು ಮುಂದೆ ನಡೆಯದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡದೆ ಬರೇ ಬಲಪ್ರಯೋಗದ ಮಾತುಗಳನ್ನು ಆಡದಿದ್ದರಿಂದ ಮತ್ತು  ಅಂತದ್ದೇ ಪ್ರದರ್ಶನಕಾರೀ ನಡವಳಿಕೆಯಿಂದ ಡೊನಾಲ್ಡ್ ಟ್ರಂಪ್ ಖಳನಾಯಕನಂತೆ ಚಿತ್ರಿತರಾದರು. ತನ್ನದೊಂದು . ಟ್ವೀಟ್ ನಲ್ಲಿ ಸ್ವತಃ ಟ್ರಂಪ್ ಪರೋಕ್ಷವಾಗಿ ಪೋಲೀಸರಿಗೆ ತನ್ನ ಸಲಹೆ ಏನೆಂದು ಸಾರ್ವಜನಿಕವಾಗಿಹೇಳಿಕೊಂಡಿದ್ದಾರೆ.

    ಇದರೊಂದಿಗೆ ಮಾಧ್ಯಮದವರ ಮೇಲಿನ ಪೋಲೀಸರ ದೌರ್ಜನ್ಯ ಅಕಸ್ಮಿಕವೇನೋ ಎಂಬಂತಿಲ್ಲದೇ ನೇರವಾಗಿ ನಡೆಯುತ್ತಿರುವುದರ ವಿಡೀಯೋಗಳು ವೈರಲ್ ಆಗಿ, ಅಧಿಕಾರ ಮತ್ತು ಬಲ ಎರಡೂ ಸೇರಿ  ಅಮೆರಿಕಾದಲ್ಲಿ ಮಾಧ್ಯಮದವರ ಕಣ್ಣು ಕೀಳುವ ಯತ್ನವಾಗುತ್ತಿರುವುದು ನಿಚ್ಚಳವಾಗಿದೆ. ಈ ಬಗ್ಗೆ ಮಾಧ್ಯಮಗಳು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ ವಿರುದ್ದ ಸಿಡಿದೆದ್ದಿದ್ದಾರೆ.

    ಶನಿವಾರ ಪತ್ರಕರ್ತೆ ಲಿಂಡ ಟಿರಾಡೊ ಜಾರ್ಜ್ ಫ್ಲಾಯ್ಡ್ ಸಂಭಂದಿತ ಪ್ರತಿಭಟನೆಯನ್ನು ವರದಿಮಾಡುತ್ತಿದ್ದಳು.ಅವಳ ಮುಖಕ್ಕೇ ರಬ್ಬರ್ ಬುಲೆಟ್ಟಿನಿಂದ ಹೊಡೆದ ಮಿನಿಯಾಪೋಲೀಸ್ ಪೋಲೀಸರು ಅವಳು ಕಾಯಂ ಆಗಿ ಎಡಗಣ್ಣಿನ ದೃಷ್ಟಿ ಕಳೆದುಕೊಳ್ಳುವಂತೆ ಮಾಡಿದ್ದಾರೆ.

    ಡೆನ್ವರ್ ಪೋಸ್ಟ್ ಪತ್ರಿಕೆಯ ಹ್ಯೂಯಾಂಗ್ ಚಾಂಗ್ ಡೆನ್ವರ್ ನಗರದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಚಿತ್ರೀಕರಿಸುತ್ತಿದ್ದ.ಅದನ್ನು ತಡೆಯಲು ಡೆನ್ವರ್ ನ ಪೋಲೀಸರು ಅವನೆಡೆಗೆ ಎರಡು ಪೆಪ್ಪರ್ ಸ್ಪ್ರೇ ಬಾಲ್ ಗಳನ್ನು ಶೂಟ್ ಮಾಡಿದ್ದಾರೆ.

    ಲಾಸ್ ವೆಗಾಸ್ ರಿವ್ಯೂ ಎನ್ನುವ ಜರ್ನಲ್ ನ  ಛಾಯಾಚಿತ್ರಕಾರ ಎಲ್ಲೆನ್ ಸ್ಮಿಡ್ ಮತ್ತು ರಿವ್ಯೂ ಜರ್ನಲ್ ನ ಬ್ರಿಜೆಟ್ ಬೆನ್ನೆಟ್ ಇಬ್ಬರನ್ನೂ ವಿನಾಕಾರಣ ಬಂಧಿಸಿದ್ದಾರೆ.

    ವೇವ್ 3 ಎನ್ನುವ ನ್ಯೂಸ್ ಪೇಪರಿನ ವರದಿಗಾರ್ತಿ ಕೇಟ್ಲಿನ್ ರಸ್ಟ್, ಮತ್ತು ಜೇಮ್ಸ್ ಡಾಬ್ಸನ್ನಿನ ಮೇಲೆ ಲೂಯಿಸ್ವಿಲ್ಲ್ ನ ಪೋಲೀಸರು ಪೆಪ್ಪರ್ ಬಾಲ್ ಗಳ ಪ್ರಯೋಗ ಮಾಡಿರುವುದನ್ನು ಪತ್ರಿಕೆ ಬಲವಾಗಿ ಖಂಡಿಸಿದೆ.

    ಫೀನಿಕ್ಸ್ ಮತ್ತು ಪಿಟ್ಸ್ ಬರೋ ದ ಪತ್ರಕರ್ತರ ಮೇಲೆ ಪ್ರತಿಭಟನೆ ನಡೆಸುತ್ತಿದ್ದವರೇ ಧಾಳಿ ನಡೆಸಿದರು ಆದರೆ ಅವರನ್ನು ರಕ್ಷಿಸಿದ್ದು ಇತರೆ ಪ್ರತಿಭಟನೆಕಾರರು! ಇದರಂತೆ ಫಾಕ್ಸ್ ಟಿ.ವಿ. ಯ ವರದಿಗಾರರ ಮೇಲೆ ಮುಖವನ್ನು ಮುಚ್ಚಿಕೊಂಡಿದ್ದ ದುಷ್ಕರ್ಮಿಗಳು ಧಾಳಿ ಮಾಡಿದ್ದಾರೆ. ಹಾಗಾದಲ್ಲಿ ಪತ್ರಕರ್ತರನ್ನೇ ಗುರಿಗಳನ್ನಾಗಿಸಿಕೊಂಡು ಧಾಳಿ ನಡೆಸಿದ ದುಷ್ಕರ್ಮಿಗಳು ಯಾರ ಪರವಾಗಿ ಕೆಲಸಮಾಡುತ್ತಿದ್ದರು? ಎನ್ನುವ ನಾನಾ ಗುಮಾನಿಗಳನ್ನು ಈ ಘಟನೆಗಳು ಬಡಿದೆಬ್ಬಿಸಿದೆ.

    ಮಿನಿಯಾಪೋಲಿಸ್ ನಲ್ಲಿ ವರದಿಮಾಡುತ್ತಿದ್ದ ಎನ್. ಬಿ. ಸಿ. ಚಾನೆಲ್ ನ ಎಡ್ ಉ ಎಂಬಾತ ತನ್ನ ತಲೆಯ ಮೇಲಿಂದಸುರಿದದ್ದುಅಶ್ರುವಾಯುವೋ, ಪೆಪ್ಪೆರ್ಸ್ಪ್ರೇಯೋ ಅಥವಾ ರಕ್ತವೋಎಂದು ತಡಕಿಕೊಂಡ. ಆಶ್ಚರ್ಯ ಎಂದರೆ  ‘ಪ್ರೆಸ್‘ಎಂದುಹಾಕಿಕೊಂಡಿದ್ದರೂ ಪೋಲೀಸರು ಮೂರನ್ನೂ ಆತನ ಮೇಲೆ ಪ್ರಯೋಗ ಮಾಡಿದ್ದರು. ತಲೆಯಿಂದ ರಕ್ತ ಒಸರುತಿತ್ತು. ವಾಸ್ತವವೆಂದರೆ ಪ್ರೆಸ್ನವನು ಎಂದು ನೋಡಿಯೇ ಬಲಪ್ರಹಾರ ನಡೆದಿತ್ತು. ಆತನ ತಲೆಗೆ ನಾಲ್ಕು ಹೊಲಿಗೆಗಳನ್ನು ಹಾಕಿಸಬೇಕಾಯಿತು

    ಹೆನ್ನೆಸ್ ಫ್ಹಿಸ್ಕಯ್ ಎಂಬಾತ ಸಾರ್ವಜನಿಕ ಪ್ರತಿಭಟನೆಯಷ್ಟೇ ಅಲ್ಲದೆ ಇರಾಕ್ ಮತ್ತು ಆಫ್ಘಾನಿಸ್ತಾನದ  ಯುದ್ಧಗಳನ್ನು ಕೂಡ ವರದಿ ಮಾಡಿದ್ದ ಅನುಭವಿ ಪತ್ರಕರ್ತ.ಎಲ್ಲಿಯೂ ಪೊಲೀಸರು ಮಾಧ್ಯಮದವರನ್ನು ಗುರಿಯನ್ನಾಗಿಸಿದ್ದನ್ನು ನೋಡಿರಲಿಲ್ಲ. ಅಂಥದ್ದರಲ್ಲಿ ಪ್ರಪಂಚಕ್ಕೆಲ್ಲ ಬುದ್ದಿ ಹೇಳುವ ದೊಡ್ಡಣ್ಣ ಅಮೆರಿಕಾ ತನ್ನ ನೆಲದ ಮೇಲೆ ನಡೆಸುತ್ತಿರುವ ಈಗಿನ ದೌರ್ಜನ್ಯದಿಂದ ಆಶ್ಚರ್ಯಚಕಿತನಾಗಿದ್ದಾನೆ.

    ಶನಿವಾರದ ಪ್ರತಿಭಟನೆಯನ್ನು ಲೈವ್ ಸ್ಟ್ರೀಮ್ ಮಾಡುತ್ತಿದ್ದ ಬ್ರಾಂಡೆನ್ ಹಂಟರ್ ನ ಕೈಯಿಂದ ಫೋನನ್ನು ಕಿತ್ತುಕೊಳ್ಳಲಾಗಿದೆ. ಪ್ರೆಸ್ ನವನು ಎಂದರೂ ಕೇಳದೆ  “ we don’t care “ಎಂದು ವರದಿಗಾರರ ಮುಖದ ಮೇಲೆ  ಪೆಪ್ಪರ್ ಸ್ಪ್ರೇ ಹಾಕಿದ್ದು ವೀಡಿಯೋ ಆಗಿದೆ. ಹೇರಿದ್ದ ಕರ್ಫ್ಯೂ ಪ್ರೆಸ್ ನವರಿಗೆ ಅನ್ವಯಿಸದಿದ್ದರೂ ವರದಿಗಾರರನ್ನು ಲಾಕಪ್ಪಿನಲ್ಲಿರಿಸಲಾಗಿದೆ. ಮತ್ತೊಬ್ಬ ವರದಿಗಾರನ ಮೇಲೆ ಪಿಸ್ತೂಲು ಹಿಡಿದು ಅರೆ ಬರೆ ಟ್ರಿಗರ್ ಒತ್ತಿ ಹೆದರಿಸಲಾಗಿದೆ.

    ಅದೆಷ್ಟೋ ಮಂದಿ ವರದಿಗಾರರ ಕ್ಯಾಮೆರಾಗಳು ಪುಡಿ ಪುಡಿಯಾಗಿವೆ. ಕಾರಿನಲ್ಲಿ ಕೂತಿದ್ದ ಚಿಕಾಗೋ ಟ್ರಿಬ್ಯೂನಿನ ವರದಿಗಾರನ ಮೇಲೆ ರಬ್ಬರ್ ಬುಲೆಟ್ ಗಳನ್ನು ಹಾರಿಸಲಾಗಿದೆ. ಅವನಿಗೂ ಹೊಲಿಗೆಗಳು ಬೇಕಾದವು.ಡೆಟ್ರಾಯಿಟ್ ಪೋಲೀಸರು ನಿಕೋಲ್ ಹೆಸ್ಟೆರ್ ಎನ್ನುವ ಮಹಿಳಾ ವರದಿಗಾರಳ ಮೇಲೆ ಧಾಳಿ ನಡೆಸಿದರು.ಇಂತಹ ಪ್ರಕರಣಗಳು ನೂರಾರು.

    ಮೇ 25 ರಿಂದ ಜಾರ್ಜ್ ಫ್ಲಾಯ್ಡ್ ನ ವಿಚಾರವಾಗಿ ಪ್ರತಿಭಟನೆ ಶುರುವಾಯ್ತು. 5 ನೇ ತಾರೀಖು ಜೂನ್ ವೇಳೆಗೆ  US Press Freedom Tracker ಸಂಸ್ಥೆ ಮಾಧ್ಯಮದವರ ಮೇಲೆ ಪೋಲೀಸರು ನಡೆಸಿದ 192 ಪ್ರಕರಣಗಳನ್ನು ದಾಖಲಿಸಿದರು.ಅಂದರೆ ಈ ವರ್ಷ ಮಾಧ್ಯಮದವರ ಮೇಲೆ ನಡೆದಿರುವ ದಾಳಿ ಹಿಂದಿನ ಎಲ್ಲ ದಾಖಲೆಗಳನ್ನು  ಈಗಾಗಲೇ ಮುರಿದಿದೆ. ಮತ್ತೂ ಮುಂದುವರೆಯುವ ಎಲ್ಲ ಸಾಧ್ಯತೆಗಳಿವೆ. ಈ ಎಲ್ಲ ಕಾರಣಗಳಿಗಾಗಿ, ಅಮೆರಿಕಾದ ಸಂವಿಧಾನವನ್ನು ಉಲ್ಲಂಘಿಸಿ ವರದಿಗಾರರ ಮೇಲೆ ನಡೆದ ಧಾಳಿಗಾಗಿ American Civil Liberties Union (ACLU) ತನ್ನ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ದೂರನ್ನು ದಾಖಲಿಸಿ, ನ್ಯಾಯಾಲಯದ ಮೆಟ್ಟಿಲು ಹತ್ತಿದೆ.

    ವರದಿಗಾರರು ನಡೆದದ್ದನ್ನು ನಡೆದಂತೆ ದಾಖಲಿಸುತ್ತಾರೆ. ತಮ್ಮ ಅಭಿಪ್ರಾಯಗಳನ್ನಲ್ಲ. ಹೀಗಿದ್ದೂ ಅವರ ಮೇಲೆ ಇಡೀ ಅಮೆರಿಕಾದಲ್ಲಿ ದಾಳಿ ನಡೆದದ್ದು ಯಾಕೆ ಎಂದು ಎಡ್ ಉ ಅವಿರತವಾಗಿ ಪ್ರಶ್ನೆಗಳನ್ನು ಹಾಕಿದ್ದಾನೆ. ಪ್ರತಿಭಟನೆಕಾರರ ಮೇಲೆ ಪೋಲೀಸರು ಏನನ್ನು ಮಾಡುವ ಹುನ್ನಾರ ಹೊಂದಿದ್ದರು? ಅದನ್ನು ಬಿತ್ತರಿಸದಂತೆ ತಮ್ಮನ್ನು ತಡೆದದ್ದೇ ಅಥವಾ ಮಾಧ್ಯಮದವರನ್ನು ದ್ವೇಷಿಸುವ ಟ್ರಂಪ್ ಅವರ ಮೇಲೆ ದಾಳಿ ಮಾಡಲು ಈ ಸಂದರ್ಭವನ್ನು ಬಳಸಿಕೊಂಡನೇ ಎನ್ನುವ ಪ್ರಶ್ನೆಗಳು ಎಲ್ಲರಲ್ಲೂ ಮೂಡುತ್ತಿವೆ.

    ರಾಜ್ಯ ಕೋರ್ ಕಮಿಟಿ ಶಿಫಾರಸ್ಸಿಗೆ ಕಿಮ್ಮತ್ತು ಕೊಡದ ಬಿಜೆಪಿ ಹೈಕಮಾಂಡ್

    ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಇಬ್ಬರು ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡುವ ಮೂಲಕ `ಲಾಬಿ’ಗೆ ಅವಕಾಶವಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ರವಾನಿಸಿದೆ.ಪ್ರಭಾವಿ ಮುಖಂಡ ಪ್ರಭಾಕರ ಕೋರೆ ಮತ್ತು ಹೋಟೆಲ್ ಉದ್ಯಮಿ ಪ್ರಕಾಶ್ ಶೆಟ್ಟಿ ಅವರಿಗೆ ಟಿಕೆಟ್ ಖಚಿತ ಎಂಬ ಲೆಕ್ಕಾಚಾರಗಳನ್ನು ತಲೆ ಕೆಳಗೆ ಮಾಡಿ ರಾಯಚೂರಿನ ಅಶೋಕ ಗಸ್ತಿ
    ಮತ್ತು ಬೆಳಗಾವಿಯ ಈರಣ್ಣ ಕಡಾಡಿ ಅವರಿಗೆ ಟಿಕೆಟ್ ನೀಡಿದೆ.

    ಗಸ್ತಿ ಬಳ್ಳಾರಿ ವಿಭಾಗದ ಪ್ರಭಾರಿಯಾಗಿದ್ದರೆ, ಕಡಾಡಿ ಬೆಳಗಾವಿ ವಿಭಾಗದ ಪ್ರಭಾರಿಯಾಗಿ ಪಕ್ಷ ಸಂಘಟನೆಯ ಹೊಣೆ ನಿರ್ವಹಿಸುತ್ತಿದ್ದರು. ಇಬ್ಬರೂ ಅಧಿಕಾರಕ್ಕೆ ಹಪಹಪಿಸದೇ, ಎಲೆ ಮರೆಯ ಕಾಯಿಯಂತೆ ತಮ್ಮ
    ಜವಾಬ್ದಾರಿ ನಿಭಾಯಿಸಿಕೊಂಡು ಹೋಗುತ್ತಿದ್ದರು. ಪ್ರಭಾಕರ ಕೋರೆ ಅವರಿಗೆ ಟಿಕೆಟ್ ನೀಡಿದ್ದರೆ ಸಹೋದರ ರಮೇಶ್ ಕತ್ತಿಗೆ ಟಿಕೆಟ್ ಸಿಗಲಿಲ್ಲವೆಂದು ಶಾಸಕ ಉಮೇಶ್ ಕತ್ತಿ ಮುನಿಸಿಕೊಳ್ಳುವ ಅಪಾಯವಿತ್ತು. ಪ್ರಕಾಶ್ ಶೆಟ್ಟಿಯವರನ್ನು ಕಣಕ್ಕೆ ಇಳಿಸಿದ್ದರೆ ಬೇರೆಯೇ ಸಂದೇಶ ರವಾನೆಯಾಗುತ್ತಿತ್ತು. ಹೀಗಾಗಿ
    ಅಳೆದು ತೂಗಿ ಗಸ್ತಿ, ಕಡಾಡಿ ಅವರಿಗೆ ಹೈಕಮಾಂಡ್ ಟಿಕೆಟ್ ನೀಡಿದೆ.

    ರಾಜ್ಯ ಬಿಜೆಪಿಯ ಕೋರ್ ಕಮಿಟಿ ಶಿಫಾರಸು ಮಾಡಿದ್ದ ಪಟ್ಟಿಯಲ್ಲಿ ಇಬ್ಬರ ಹೆಸರೂ ಇರಲಿಲ್ಲ. ಅಂದರೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ಸಿಗುತ್ತದೆ, ಲಾಬಿಗಳಿಗೆ ಅವಕಾಶವಿಲ್ಲ ಎಂಬ ಸಂದೇಶವನ್ನು ವರಿಷ್ಠರು ರವಾನಿಸಿದ್ದಾರೆ. ಅಲ್ಲದೇ ದೇಶದ ಪ್ರತಿ ಬ್ಲಾಕ್‌ನಿಂದಲೂ ತಮ್ಮದೇ ಮೂಲಗಳಿಂದ ಮಾಹಿತಿ ತರಿಸಿಕೊಳ್ಳುವ ಸಾಮರ್ಥ್ಯವಿದೆ ಎಂಬ ಎಚ್ಚರಿಕೆಯನ್ನು ಈ ಇಬ್ಬರ ಮೂಲಕ ರಾಜ್ಯಮಟ್ಟದ `ನಾಯಕ’ರುಗಳಿಗೂ ನೀಡಿದ್ದಾರೆ. ಜತೆಗೆ, ಮುಂಬಯಿ ಕರ್ನಾಟಕ,ಕಲ್ಯಾಣ ಕರ್ನಾಟಕಕ್ಕೆ ಪ್ರಾತಿನಿಧ್ಯ ನೀಡುವ ಮೂಲಕ ಪ್ರಾದೇಶಿಕ ಸಮತೋಲನವನ್ನೂ
    ಸಾಧಿಸಿದ್ದಾರೆ. ಇದರೊಂದಿಗೆ ಒಂದೊಮ್ಮೆ ಕೋರೆ-ಕತ್ತಿ ಅಸಮಾಧಾನಗೊಂಡರೆ ಅದರ ಪರಿಣಾಮ ಪಕ್ಷದ ಮೇಲೆ ಬೀರದಂತೆಯೂ ಜಾಣ್ಮೆಯ ನಡೆ ಇರಿಸಿದ್ದಾರೆ. ಈ ಆಯ್ಕೆ ಕುರಿತು ಯಾರೂ
    ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುವಂತೆಯೇ ಇಲ್ಲ!

    ನರೇಂದ್ರ ಮೋದಿ, ಅಮಿತ್ ಶಾ ಅವರಂತಹ ಧುರೀಣರಿಂದ ಮಾತ್ರವೇ ಇಂತಹ ದಿಟ್ಟತನದ ನಿರ್ಧಾರ ಸಾಧ್ಯ.ಕಾಂಗ್ರೆಸ್‌ನಲ್ಲಿ ಕೂಡ ಈ ಸಲ ಹೈಕಮಾಂಡ್ ರಾಜ್ಯ ನಾಯಕರನ್ನು ವಿಶ್ವಾಸಕ್ಕೆತೆಗೆದುಕೊಳ್ಳದೇ ಏಕಾಏಕಿ ಮಲ್ಲಿಕಾರ್ಜುನ ಖರ್ಗೆಯವರ ಹೆಸರನ್ನು ಅಂತಿಮಗೊಳಿಸಿದೆ
    ಎನ್ನುವುದು ಗಮನಾರ್ಹ.

    ಇನ್ನು ಬಿಜೆಪಿಯು ಮೂರನೇ ಅಭ್ಯರ್ಥಿ ಕಣಕ್ಕೆ ಇಳಿಸದೇ ಇರುವಮೂಲಕ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ರಾಜ್ಯಸಭೆ ಪ್ರವೇಶಕ್ಕೆ ಹಾದಿಸುಗಮಗೊಳಿಸಿದೆ. ಇಲ್ಲಿಯೂ ಖರ್ಗೆ, ಗೌಡರಂತಹ ಹಿರಿಯ ನಾಯಕರನ್ನು ನಾವು ಗೌರವಿಸುತ್ತೇವೆ ಎಂಬ ಸಂದೇಶ ಕಳುಹಿಸುವ ಪ್ರಯತ್ನವನ್ನು ಮೋದಿ, ಶಾ ಮಾಡಿರುವುದು ಸ್ಪಷ್ಟ.

    ನಿನ್ನ ಮಡದಿಯ ಪರವಾಗಿ ನಾನಲ್ಲ.. ಯಾರೂ ನಿನ್ನನ್ನ ಕ್ಷಮಿಸೋದಿಲ್ಲ, ಅರ್ಧಕ್ಕೆ ಯಾತ್ರೆ ಮುಗಿಸಿದವನು ನೀನು ಅಂತ

    ಇಂದು ನಿಧನರಾದ ಚಿರಂಜೀವಿ ಸರ್ಜಾ ಬಗ್ಗೆ ಅವರ ಬಾಲ್ಯದ ಗೆಳೆಯ ಕನ್ನಡಕ್ಕಾಗಿ ಒಂದನ್ನು ಒತ್ತಿ ಮತ್ತು ದಯವಿಟ್ಟು ಗಮನಿಸಿ ಸಿನಿಮಾ ಖ್ಯಾತಿಯ ಅವಿನಾಶ್ ಷಟಮರ್ಶನ ಅವರ ಆಪ್ತ ಬರಹ

    ಚಿರು ಅಂದರೆ ಅವನ ಮುಗ್ಧತೆಗೇ ಫೇಮಸ್! ಇವತ್ತು ಅವನು ಇಲ್ಲ ಅನ್ನುವ ಸುದ್ದಿಯನ್ನು ನನ್ನ ಬುದ್ಧಿ ಒಪ್ಪದೇ ಇರುವಷ್ಟು ಮಂಕು ಕವಿದಿದೆ.
    ಸರಳ, ಸಂಯಮ, ಸ್ನೇಹ ಎಲ್ಲದರಲ್ಲೂ ಅವನು ಧಾರಾಳಿ…

    ಅವಿನಾಶ್ ಷಟಮರ್ಶನ

    ನಾನು ಚಿಕ್ಕ ಹುಡುಗ ಇದ್ದಾಗ ಶಾಲೆಗೆ ರಜಾ ಬಂದರೆ, ಬೆಂಗಳೂರಿಗೆ ಬರ್ತಿದ್ದೆ. ಬೆಂಗಳೂರು ಅಂದರೆ, ಪನ್ನಗನ ಮನೆ. ನನಗೆ ಚೆನ್ನಾಗಿ ನೆನಪಿದೆ ಚಿರು ಹತ್ತಿರ ಪಲ್ಸರ್ 150 ಇತ್ತು. ಕಾದ ಅವನ ಗಾಡಿ ಸೈಲೆನ್ಸರ್ ಗೆ ನಾನು ಕಾಲು ಕೊಟ್ಟು ಸುಟ್ಟು ಕೊಂಡಿದ್ದೆ. ಇದನ್ನು ಗೇಲಿ ಮಾಡಿಕೊಂಡು ಎಲ್ಲರೂ ನಗ್ತಿದ್ದಾಗ ಚಿರು ಅಯ್ಯೋ ಪಾಪ ಅಂತ ಅನುಕಂಪ ತೋರಿಸಿದ್ದ. ಅವನ ಅಂತಃಕರಣ ಮೆರೆದಿದ್ದ!

    ನನಗೆ ಬಹಳ ಮರೆವು ಇದೆ ಅಂದುಕೊಂಡಿದ್ದೆ ಆದರೆ ನಿನ್ನ ಅಗಲಿಕೆ ನನ್ನ ನೆನಪಿನ ತೀವ್ರತೆಯನ್ನ ತೋರಿಸ್ತಾ ಇದೆ.

    ಮೊದಲ ಪಿಯು ನಲ್ಲಿ ಇದ್ದಾಗ ಚಿರು ಹೋಗ್ತಿದ್ದ ಜಿಮ್ ಗೆ ನಾನೂ ಹೋಗ್ತಿದ್ದೆ. ಧ್ರುವನೂ ಅಲ್ಲೇ ಜಿಮ್ ಮಾಡ್ತಾ ಇದ್ದದ್ದು.ಜಿಮ್ ನಲ್ಲೂ ಅಷ್ಟೇ ನನ್ನ ಸಾಮರ್ಥ್ಯದ ಬಗ್ಗೆ ನನಗೆ ತಿಳಿವಳಿಕೆ ತುಂಬಿದ ಮೊದಲಿಗ ಚಿರು ಅಂತ ಹೇಳಬಹುದು!

    ಅವನು ಸಿನಿಮಾ ಮಾಡೋಕಿಂತ ಮೊದಲು ನಾನು ಅವನನ್ನ ಹೇಗೆ ನೋಡಿದ್ದೆ ಅದೇ ನಗು ಮುಖ, ಅದೇ ಪ್ರಸನ್ನತೆ ಹ್ಯಾಪಿ ನ್ಯೂ ಯಿಯರ್ ಸಿನಿಮಾ ಆಡಿಯೋ ಲಾಂಚ್ ನಲ್ಲೂ ನೋಡಿದ್ದೆ. ನಾನು ಅವನನ್ನ ಕಡೆಯದಾಗಿ ನೋಡಿದ್ದು ಅಲ್ಲೇ…..

    ನಿನ್ನಲ್ಲಿದ್ದ ಎಷ್ಟೋ ಗುಣಗಳು ನನಗೆ ಹಿಡಿಸಿತ್ತು ಅನ್ನೋದೇ ನನಗೆ ಗೊತ್ತಿರಲಿಲ್ಲ.ನಿಜ ಹೇಳಬೇಕಂದರೆ ಇವತ್ತು ಬೆಳಗ್ಗೆ ಟೀವಿಯಲ್ಲಿ ನಿನ್ನ ಹಾಡು ನೋಡಿದೆ ಕಣೋ… ನನ್ನ ಹಾಡೇ ನಾನು ನೋಡಲ್ಲ, ಟಿ.ವಿ ನೋಡೋದೇ ಇಲ್ಲ….

    ನಿನ್ನ ಇಚ್ಛೆಯನ್ನ ನಿಮ್ಮ ಕುಟುಂಬ, ಸ್ನೇಹಿತರು, ನಿನ್ನ ಪರಿವಾರವರು ಪೂರ್ಣಗೊಳಿಸುವ ಸಾಮರ್ಥ್ಯ ನೀನೇ ಕೊಟ್ಟು ಎಲ್ಲರಿಗೂ ವಿದಾಯ ಹೇಳಬೇಕು.

    ಕೊನೆಯದಾಗಿ, ನಿನ್ನ ಮಡದಿಯ ಪರವಾಗಿ ನಾನಲ್ಲ ಯಾರೂ ನಿನ್ನನ್ನ ಕ್ಷಮಿಸೋದಿಲ್ಲ, ಅರ್ಧಕ್ಕೆ ಯಾತ್ರೆ ಮುಗಿಸಿದವನು ನೀನು ಅಂತ.

    ಇದನ್ನೂ ಓದಿ:ಇಷ್ಟು ಬೇಗ ಹೊರಟು ಹೋಗಲು ಅವಸರ ಏನಿತ್ತು

    ಇಷ್ಟು ಬೇಗ ಹೊರಟು ಹೋಗಲು ಅವಸರ ಏನಿತ್ತು ಚಿರಂಜೀವಿ

    ಕೊರೊನಾ ದಾಳಿಯಿಂದ ಈಗಾಗಲೇ ತತ್ತರಿಸಿರುವ ಸಿನಿಮಾ ರಂಗಕ್ಕೆ ಮತ್ತೊಂದು ಶಾಕಿಂಗ್ ಸುದ್ದಿ. ಅತೀ ಚಿಕ್ಕ ವಯಸ್ಸಿನಲ್ಲೇ ಚಿರಂಜೀವಿ ಸರ್ಜಾ, ಇಹಲೋಕ ತ್ಯಜಿಸಿದ್ದಾರೆ. ಅವರಿಗೆ ರವಿವಾರ ಮಧ್ಯಾಹ್ನ ಹೃದಯಾಘಾತವಾಗಿದ್ದು, ಚಿಕಿತ್ಸೆ ಫಲಕಾರಿ ಆಗದೇ ಬಾರದ ಲೋಕಕ್ಕೆ ತೆರಳಿದ್ದಾರೆ. ಜತೆಗೆ ಕಳೆದೆರಡು ತಿಂಗಳಿಂದ ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿದ್ದರು ಎನ್ನಲಾಗುತ್ತಿದೆ.

    2009 ರಲ್ಲಿ ವಾಯು ಪುತ್ರ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ಇವರು, ಈವರೆಗೂ 22 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಮ್ಮ ಐ ಲವ್ ಯೂ, ಚಂದ್ರಲೇಖ, ಗಂಡೆದೆ, ಆಟಗಾರ, ವಾಯುಪುತ್ರ ಇವರ ಸೂಪರ್ ಹಿಟ್ ಚಿತ್ರಗಳು. ಕೊನೆಯದಾಗಿ ಇವರ ಶಿವಾರ್ಜುನ ಸಿನಿಮಾ ರಿಲೀಸ್ ಆಗಿತ್ತು. ರಾಜಮಾರ್ತಾಂಡ ಬಿಡುಗಡೆಗೆ ಸಿದ್ಧವಾಗಿದೆ.


    ಕನ್ನಡ ಸಿನಿಮಾ ರಂಗಕ್ಕೆ ಸರ್ಜಾ ಕುಟುಂಬದ ಕೊಡುಗೆ ಅಪಾರ. ಇವರ ಸೋದರ ಮಾವ ಕಿಶೋರ್ ಸರ್ಜಾ ಇವರನ್ನು ವಾಯುಪುತ್ರ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಲಾಂಚ್ ಮಾಡಿದ್ದರು. ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ಇವರ ಬೆನ್ನೆಲುಬಾಗಿ ನಿಂತಿದ್ದರು. ಸಹೋದರ ಧ್ರುವ ಸರ್ಜಾ ಕೂಡ ಸಹೋದರ ಅನೇಕ ಸಿನಿಮಾಗಳಿಗೆ ಸಾಥ್ ನೀಡಿದ್ದರು.
    ಚಿರಂಜೀವಿ ಸರ್ಜಾ ನಟಿ ಮೇಘನಾ ರಾಜ್​ ಅವರ ಜೊತೆ 2017ರಲ್ಲಿ ನಿಶ್ವಿತಾರ್ಥ ಮಾಡಿಕೊಂಡಿದ್ದು, ಈ ಜೋಡಿ 2018ರಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದರು.


    ಅವರ ಸಾವಿಗೆ ಇಡೀ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ನಟಿ, ಸಂಸದೆ ಸುಮಲತಾ ಅಂಬರೀಶ್, ನಟರಾದ ಕಿಚ್ಚ ಸುದೀಪ್, ದರ್ಶನ್, ಗಣೇಶ್, ಶಿವರಾಜ್ ಕುಮಾರ್, ಪುನೀತ್, ನಿರ್ದೇಶಕ ಚೈತನ್ಯ ಸೇರಿದಂತೆ ಸಿನಿಮಾ ರಂಗದ ಅನೇಕ ಗಣ್ಯರು ಚಿರು ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
    ನಟಿ ಸುಮಲತಾ ಅಂಬರೀಶ್ ತಮ್ಮ ಕುಟುಂಬದ ಜತೆಗಿನ ಚಿರು ಒಡನಾಟವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಇದನ್ನೂಓದಿ : ನಿನ್ನ ಮಡದಿಯ ಪರವಾಗಿ ನಾನಲ್ಲ.. ಯಾರೂ ನಿನ್ನನ್ನ ಕ್ಷಮಿಸೋದಿಲ್ಲ, ಅರ್ಧಕ್ಕೆ ಯಾತ್ರೆ ಮುಗಿಸಿದವನು ನೀನು ಅಂತ

    ಶಾಲೆಯೂ ಬೇಡ, ಆನ್ಲೈನ್ ತರಗತಿಗಳೂ ಬೇಡ, ಇನ್ನೂ ಸ್ವಲ್ಪ ದಿನ ಸುಮ್ಮನಿದ್ದು ಬಿಡಿ

    ಕೋವಿಡ್-19 ಇಲ್ಲವೇ ಇಲ್ಲ ಅಂದರೆ ಶೂನ್ಯಕ್ಕೆ ಇಳಿದ 21 ದಿನಗಳ ಬಳಿಕವಷ್ಟೇ ಶಾಲೆಗಳನ್ನು ಮತ್ತೆ ತೆರೆಯಿರಿ ಎಂಬುದು ಬಹುತೇಕ ಹೆತ್ತವರ ಒಕ್ಕೊರಲ ಅಭಿಪ್ರಾಯವಾಗಿದೆ. ವೈರಸ್ ಹಾವಳಿಯ ಬಳಿಕ ಈ ಕುರಿತು ಸಮೀಕ್ಷೆ ನಡೆಸಿದ ಲೋಕಲ್ ಸರ್ಕಲ್ಸ್ (LocalCircles) ನಲ್ಲೂ ಇದೇ ಅಭಿಪ್ರಾಯ ವ್ಯಕ್ತವಾಗಿದೆ. ಇದು ಆಡಳಿತ, ಸಾರ್ವಜನಿಕ ಮತ್ತು ಗ್ರಾಹಕರ ಹಿತಾಸಕ್ತಿಯನ್ನು ಒಳಗೊಂಡ ವೇದಿಕೆಯಾಗಿದೆ. 220 ಜಿಲ್ಲೆಗಳ ಸುಮಾರು 18,000 ಜನರ ಅಭಿಪ್ರಾಯವನ್ನು ಇದರಲ್ಲಿ ಸಂಗ್ರಹಿಸಲಾಗಿದೆ.

    ತಮ್ಮ ರಾಜ್ಯ ಅಥವಾ ಜಿಲ್ಲೆಯಲ್ಲಿ ಕೋವಿಡ್-19 ಶೂನ್ಯ ಪ್ರಮಾಣಕ್ಕೆ ಇಳಿದ ಬಳಿಕವೇ ಮಕ್ಕಳನ್ನು ಶಾಲೆಗೆ ಸೇರಿಸಬೇಕು ಅಥವಾ ಶಾಲೆಯ ಅಡಳಿತ ಮಂಡಳಿ ಅಥವಾ ಸರಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಶೇ. 73ರಷ್ಟು ಹೆತ್ತವರು ಅಭಿಪ್ರಾಯ ಪಟ್ಟಿದ್ದಾರೆ. ಕೇವಲ ಶೇ. 16ರಷ್ಟು ಜನರು ಮಾತ್ರ ಹೊಸ ಪ್ರಕರಣ ವರದಿಯಾಗದಿದ್ದರೆ ಆಗ ಶಾಲೆಯನ್ನು ತೆರೆಯಬಹುದು ಎಂದು ಹೇಳಿದ್ದಾರೆ. ಕೆಲವರಂತೂ ಕೋವಿಡ್-19 ಪ್ರತಿಬಂಧಕ ಲಸಿಕೆ ಸಿದ್ಧವಾದ ಬಳಿಕವೇ ಮಕ್ಕಳಿಗೆ ಅಡ್ಮಿಷನ್ ಮಾಡಬೇಕು ಎಂದು ಹೇಳಿದ್ದಾರೆ.

    ಈ ಹಿನ್ನೆಲೆಯಲ್ಲಿ ಕೆಲವೊಂದು ವಿಚಾರಗಳ ಬಗ್ಗೆ ಚರ್ಚೆ ಮಾಡಲೇಬೇಕಾಗಿದೆ. ಮುಖ್ಯವಾಗಿ ಯಾವುದೇ ಶಾಲೆಯಿರಲಿ ಅಂದರೆ ಲಕ್ಷಾಂತರ ಡೊನೇಷನ್ ಕೊಟ್ಟು ಮಕ್ಕಳನ್ನು ಸೇರಿಸುವ ಅಥವಾ ಕಡಿಮೆ ದುಡ್ಡಿನ ಸರಕಾರಿ ಶಾಲೆಯಿರಲಿ ಅಲ್ಲಿ ನೈರ್ಮಲ್ಯವನ್ನು ಎಷ್ಟು ನಿರ್ವಹಣೆ ಮಾಡುತ್ತಾರೆ ? ಸುಮಾರು ಎಂಟು ಗಂಟೆಗಳ ಕಾಲ ಶಾಲೆಯಲ್ಲಿ ಕಳೆಯುವ ಮಕ್ಕಳು ಶೌಚಾಲಯಕ್ಕೆ ಹೋಗುವ ಅಗತ್ಯವಿದ್ದೇ ಇದೆ. ಇನ್ನು ಬೆಂಗಳೂರಿನಂತಹ ಮಹಾನಗರಗಳಲ್ಲಿ ಬೆಳಗ್ಗೆ ಏಳು-ಎಂಟು ಗಂಟೆಗೆ ಮನ ಬಿಡುವ ಮಕ್ಕಳು ಏನು ಮಾಡಬೇಕು ? ಇರುವ ಬೆರಳೆಣಿಕೆಯಷ್ಟು ಹೌಸ್ ಕೀಪಿಂಗ್ ಸಿಬ್ಬಂದಿ ಎಷ್ಟು ಬಾರಿ ಟಾಯ್ಲೆಟ್ ಕ್ಲೀನಿಂಗ್ ಮಾಡಬಹುದು ? ಅದು ಬಿಡಿ, ಮಕ್ಕಳು ನಾನಾ ಊರಿನಿಂದ ಬಂದಿರುತ್ತಾರೆ. ಅವರ ಸೋಶಿಯಲ್ ಡಿಸ್ಟನ್ಸ್ ಹೇಗೆ ನಿರ್ವಹಣೆ ಮಾಡಬಹುದು ? ಮಕ್ಕಳಂತೂ ಕೇವಲ ಮಾರ್ಕ್ ಮಾಡಿದಲ್ಲೇ ಉಳಿಯುವ ಜಾಯಮಾನ ತೋರಿಸುವ ಸಾಧ್ಯತೆ ತೀರಾ ಕಡಿಮೆ ಎಂದರೆ ತಪ್ಪಾಗಲ್ಲ. ಇಂತಹುದರಲ್ಲಿ ನಾವು ಸೋಶಿಯಲ್ ಡಿಸ್ಟೆಂನ್ಸಿಂಗ್ ಮಾಡಿ ಮಕ್ಕಳನ್ನು ಶಾಲೆಗೆ ಅಡ್ಮಿಟ್ ಮಾಡುತ್ತೇವೆ ಹಾಗೂ ಅವರಿಗೆ ಕಲಿಸುತ್ತೇವೆ ಎನ್ನುವುದು ಎಷ್ಟರ ಮಟ್ಟಿಗೆ ಕಾರ್ಯ ಸಾಧು ಎನ್ನುವುದನ್ನು ಕೂಡ ಯೋಚನೆ ಮಾಡಬೇಕಾಗುತ್ತದೆ ಎಂದು ಬೆಂಗಳೂರಿನ ಶ್ರೀನಗರದಲ್ಲಿ ವಾಸಿಸುತ್ತಿರುವ ಎಂಟನೇ ತರಗತಿಯ ಮಂದಾರನ ತಾಯಿ ಸುಮಿತ್ರಾ ದೊಡ್ಡಮನಿ ಅಭಿಪ್ರಾಯ ಪಟ್ಟರು.

    ಮಾಸ್ಕ್ ವಿಚಾರ

    ಮಾಸ್ಕ್ ಧರಿಸಿಕೊಳ್ಳುವುದು ನಮ್ಮನ್ನು ನಾವು ಕೊರೊನಾ ವೈರಸ್ ನಿಂದ ರಕ್ಷಿಸಿಕೊಳ್ಳುವುದಕ್ಕಷ್ಟೇ ಸೀಮಿತ. ಬೇರೆಯವರು ಸೀನಿದರೆ, ಕೆಮ್ಮಿದರೆ ಆಗ ಹೊರ ಬರುವ ವೈರಸ್ ನಿಂದ ಇದು ರಕ್ಷಣೆ ನೀಡುತ್ತದೆ. ಆದರೆ ಈ ಮಾಸ್ಕ್ ಹಾಕಿಕೊಳ್ಳುವ ಕಾನ್ಸೆಪ್ಟ್ ಕೂಡ ಈಗ ಬದಲಾಗಿದೆ. ಇತ್ತೀಚೆಗಷ್ಟೇ ಮಾಸ್ಕ್ ಹಾಕಿಕೊಂಡಿಲ್ಲ ಎಂದು ವ್ಯಕ್ತಿಯೊಬ್ಬನಿಗೆ ಥಳಿಸಿದ ಘಟನೆಯೂ ಇದಕ್ಕೆ ನಿದರ್ಶನ. ಹಾಗಿದ್ದರೆ ಮಕ್ಕಳು ಶಾಲೆಗೆ ಹೋಗುವಾಗ ಮಾಸ್ಕ್ ಹಾಕಿಕೊಳ್ಳಬೇಕು, ಸ್ಯಾನಿಟೈಸರ್ ತೆಗೆದುಕೊಂಡು ಹೋಗಬೇಕು ಎಂದಾದರೆ ಅದಕ್ಕೆ ಆಗುವ ವೆಚ್ಚವನ್ನು ಯಾರು ಭರಿಸಬೇಕು ? (ಸಾಮಾನ್ಯವಾಗಿ ಮಾಸ್ಕ್ ತೆಗೆದುಕೊಳ್ಳುವವರು ಒಂದು ದಿನ ಖರೀದಿಸಿ ಅದನ್ನು ತಿಂಗಳುಗಟ್ಟಲೆ ಬಳಸುತ್ತಿದ್ದಾರೆ. ಆದರೆ ಮಾಸ್ಕ್ ನ ಅವಧಿಯೆಷ್ಟು ಎಂಬುದು ಬಹುತೇಕರಿಗೆ ತಿಳಿದಿಲ್ಲ.

    ಸರಿ, ಮಾಸ್ಕ್, ಸ್ಯಾನಿಟೈಸರ್ ನಮ್ಮ ಮಕ್ಕಳ ಆರೋಗ್ಯಕ್ಕಾಗಿ ಖರೀದಿಸೋಣ. ಆದರೆ, ಉಳಿದ ಮಕ್ಕಳು ಅಂದರೆ ಅವರ ಹೆತ್ತವರು ಅದೇ ನೀತಿ ಅನುಸರಿಸುತ್ತಾರೆಯೇ ? ಅಥವಾ ಎರಡು ದಿನಕ್ಕೊಮ್ಮೆ 20-30 ರೂ. ಬೆಲೆಯ ಮಾಸ್ಕ್ ಮತ್ತು 50-90 ರೂ. ಸ್ಯಾನಿಟೈಸರ್ ಖರೀದಿಸುವ ಸಾಮರ್ಥ್ಯ ಅವರಲ್ಲಿದೆಯೇ? ಎಂಬ ಪ್ರಶ್ನೆಗಳು ಎದುರಾಗುವುದು ಸಹಜ. ಇನ್ನು ವಾಹನ ವಿಚಾರಕ್ಕೆ ಬಂದರೂ ಅಲ್ಲಿ ಕೂಡ ಒಂದು ವ್ಯಾನ್ ನಲ್ಲಿ ಸೋಶಿಯಲ್ ಡಿಸ್ಟೆನ್ಸ್ ಮೇಂಟೇನ್ ಮಾಡಿ ಮಕ್ಕಳನ್ನು ಕರೆದೊಯ್ಯಲು ಸಾಧ್ಯವೇ, ಸಾಧ್ಯ ಎನ್ನುವುದಾದರೆ ಆಗ ಒನ್ -ಟು-ಡಬಲ್ ಶುಲ್ಕವನ್ನು ವಸೂಲಿ ಮಾಡದೆ ಶಾಲೆಗಳು ಬಿಡುತ್ತವೆಯೇ ? ಇಷ್ಟೆಲ್ಲಾ ಆದರೂ ಕೊನೆಗೆ ತಮ್ಮದ್ದಲ್ಲದ ಕಾರಣದಿಂದ ಕೊರೊನಾ ವೈರಸ್ ಮಕ್ಕಳಿಗೆ ವಕ್ಕರಿಸಿದರೆ ಆ ಮೂಲಕ ಅವರ ಹೆತ್ತವರಿಗೆ ಕೂಡ ಆಕ್ರಮಿಸಿದರೆ ಯಾರು ಹೊಣೆ ?

    ಆದ್ದರಿಂದ ಶಿಕ್ಷಣ ವರ್ಷವನ್ನು ಇನ್ನು ಕೆಲದಿನ ಮುಂದಕ್ಕೆ ಹಾಕುವುದರ ಜೊತೆ ಸಿಲಬಸ್ ಕಡಿಮೆ ಮಾಡುವುದೇ ಸದ್ಯಕ್ಕೆ ಇರುವ ಉಪಾಯ. 10ನೇ ತರಗತಿ ಮೇಲ್ಮಟ್ಟ ಮಕ್ಕಳಿಗೆ ಮಾತ್ರ ಪರ್ಯಾಯವಾಗಿ ಆನ್ ಲೈನ್ ಪಾಠ ಪ್ರವಚನದ ಬಗ್ಗೆ ಯೋಚಿಸ ಬಹುದು.

    ಸಚಿವರ ಹೇಳಿಕೆ

    ಕೊಳ್ಳೇಗಾಲದಲ್ಲಿ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ಜೂನ್ 10ರಿಂದ ಆಯಾ ಶಾಲೆಗಳಲ್ಲಿ ಪೋಷಕರಸಭೆ ನಡೆಯಲಿದೆ.ಅವರ ಅಭಿಪ್ರಾಯ ಪಡೆದೇ ಶಾಲೆಗಳ ಪುನಾರಾರಂಭದ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.

    ಪ್ರತಿಕ್ರಿಯಿಸಿ:  ಶಾಲಾ ಪುನರಾರಂಭದ ಬಗ್ಗೆ ನಿಮಗೇನಿಸುತ್ತದೆ ಎಂಬುದನ್ನು ಈ ಕೆಳಗಿನ ಕಾಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ. ಅದನ್ನು ಶಿಕ್ಷಣ ಸಚಿವರ ಗಮನಕ್ಕೆ ತರುವ ಕೆಲಸವನ್ನು kannadapress.com ಮಾಡುತ್ತದೆ.

    ದಾವೂದ್ ಸಾವಿನ ಸುದ್ದಿ ಹಿಂದೆ ಖಯಾಲಿ ಗ್ಯಾಂಗ್

    ಮೋಸ್ಟ್ ವಾಂಟೆಡ್‌ ದಾವೂದ್ ಅಲಿಯಾಸ್ ದಾವೂದ್ ಇಬ್ರಾಹಿಂ ಕಸ್ಕರ್ ಎಂಬ ಪುರಾತನ ಪಾತಕಿ ಈಗ ಸಾವಿನ ಬೆಡ್ ಮೇಲೆ ಮಲಗಿದ್ದಾನೆ. ಅವನ ಜತೆಗೆ ಪತ್ನಿ ಜುಬೀನಾ ಜರೀನ್ ಅಲಿಯಾಸ್ ಮೆಹಜಬೀನ್ ಶೇಖ್ ಕೂಡ ಹಾಸಿಗೆ ಹಿಡಿದಿದ್ದಾಳೆ.ಇನ್ನೇನು ಈಗಲೋ ಆಗಲೋ ಇಹಲೋಕ ತ್ಯಜಿಸಬಹುದು. 1993ರ ಮುಂಬೈ ಸರಣಿ ಬಾಂಬ್ ಸ್ಫೋಟದಲ್ಲಿ ಮಡಿದ 257 ಜನರ ಆತ್ಮಗಳಿಗೆ ಅಂತಿಮ ಶಾಂತಿ ಸಿಕ್ಕಬಹುದು ಎನ್ನುವ ಸುದ್ದಿಗಳು ಮತ್ತೊಮ್ಮೆ ಹರಿದಾಡತೊಡಗಿವೆ.

    ದಾವೂದ್ ಸತ್ತರೆ ಮುಕ್ಕಾಲು ಪಾಲು ಭಾರತ ನೆಮ್ಮದಿಯ ನಿಟ್ಟುಸಿರು ಬಿಡುತ್ತದೆ. ಆದರೆ ಪಾಪಿ ಚಿರಾಯು. ಸಮುದ್ರಕ್ಕಿಳಿದರೂ ಅವನು ಸಾಯುವುದಿಲ್ಲ. ಬದಲಿಗೆ ಇವನ ಪಾಪಕ್ಕೆ ಬೆದರಿ ಸಮುದ್ರವೇ ಮೊಳಕಾಲಿಗೆ ಇಳಿದು ಹೋಗುತ್ತದೆ. ಯಾಕೆಂದರೆ ಹಿಂದೆ ಇವನ ಬಗ್ಗೆ ಇಂತಹ ಹತ್ತಾರು ಸಾವಿನ ಊಹಾಪೋಹಗಳು ಹುಟ್ಟಿದ್ದವು. ಹುಟ್ಟಿದಷ್ಟೇ ವೇಗದಲ್ಲಿ ಸತ್ತಿದ್ದವು ಕೂಡ. ಈ ಬಾರಿಯೂ ಅದಕ್ಕಿಂತ ಭಿನ್ನ ಸುದ್ದಿ ಕೇಳುವ ಸಾಧ್ಯತೆ ಇಲ್ಲ. ಇದು ನಿಜಕ್ಕೂ ಬೇಸರದ ಸಂಗತಿ.

    ಆಗಿದ್ದೇನು?:

    ದಾವೂದ್ ಮತ್ತು ಅವನ ಹೆಂಡತಿ ಜುಬೀನಾಳಿಗೆ ಕೊರೊನಾ ವೈರಾಣು ಸೋಂಕು ಅಂಟಿದೆ. ಕರಾಚಿಯ ಆರ್ಮಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೂರಲು ಹಿಡಿದು ಇಬ್ರಾಹಿಂ ಕೆಮ್ಮಿಕೆಮ್ಮಿ ಸುಸ್ತಾಗಿದ್ದಾನೆ. ವೆಂಟಿಲೇಟರ್ ಸಪೋರ್ಟ್ ಸದ್ಯ ಅವನ ಪ್ರಾಣ ಕಾಯ್ದಿದೆ. ಆದರೂ ನೋ ಚಾನ್ಸ್. ಉಳಿಯೋದಿಲ್ಲ.  ಇಬ್ಬರ ಸ್ಥಿತಿಯೂ ಸೀರಿಯಸ್.

    ಅವನನ್ನು ರೆಕ್ಕೆಯಲ್ಲಿಟ್ಟು ಸುಮಾರು ಮೂವತ್ತು ವರ್ಷಗಳಿಂದ ಸಲುಹಿದ ಪಾಕ್ ಗುಪ್ತಚರ ಸಂಸ್ಥೆ ಐಎಸ್ಐ ಕಂಗಾಲಾಗಿದೆ ಎನ್ನುವಂತಹ ಭಾರತ ಬಾಯಿ ಚಪ್ಪರಿಸುವ ರಸಗವಳದ ಸುದ್ದಿಗಳು ಒಂದೊಂದಾಗಿ ಹೊರಬೀಳುತ್ತಲೇ ಇವೆ. ಆದರೆ ವಾಸ್ತವ ಹಾಗಿಲ್ಲ. ಭಾರತದ ನಿರೀಕ್ಷೆಯ ದಿನಗಳು ಮುಗಿದ ಹಾಗೆ ಕಾಣಿಸುತ್ತಿಲ್ಲ. ಯಾಕೆಂದರೆ, ಖುದ್ದು ದಾವೂದನ ಸೋದರ ಅನೀಸ್ ಇಬ್ರಾಹಿಂ ನೀಡಿದ ಸ್ಪಷ್ಟನೆ ವರದಿಯಾಗಿದೆ. ಅವನು ಹೇಳುವ ಪ್ರಕಾರ, ದಾವೂದ್ ಮತ್ತು ಅವನ ಹೆಂಡತಿಗೆ ಕೊರೊನಾ ಅಂಟಿಯೇ ಇಲ್ಲ. ಕರಾಚಿಯ ವಿಲಾಸಿ ಕ್ಲಿಪ್ಟನ್ ಬಡಾವಣೆಯ ತನ್ನ ಅರಮನೆಯಿಂದ ಕಳೆದ ಒಂದು ವರ್ಷದಿಂದ ಒಮ್ಮೆಯೂ ಅವನು ಹೊರಬಂದಿಲ್ಲವಂತೆ. ಕೊರೊನಾಕ್ಕಿಂತ ಮೊದಲೇ ಕಾಡಲಾರಂಭಿಸಿದ ಸಾವಿನ ಭೀತಿ ಕಟ್ಟಿಹಾಕಿದೆ.

    ಅಷ್ಟಕ್ಕೂ ಅವನಿಗೆ ಸೋಂಕು ಅಂಟುವ ಸಾಧ್ಯತೆ ಇದ್ದೀತಾದರೂ ಹೇಗೆ? ಪರಿಸ್ಥಿತಿ ನಾರ್ಮಲ್ ಇರುವಾಗಲೇ ಅಪರಿಚಿತರನ್ನು ಅಥವಾ ಆಪ್ತರನ್ನು ಹತ್ತಿರ ಬಿಟ್ಟುಕೊಳ್ಳದವ ಈಗ ಕೊರೊನಾ ಕಂಪನ ಎದ್ದಿರುವಾಗ ಕ್ರಿಮಿಯನ್ನು ಕೂಡ ಹತ್ತಿರ ಬಿಟ್ಟುಕೊಳ್ಳಲಾರ. ಅಂಥವನಿಗೆ ಕೋವಿಡ್ ಕ್ರಿಮಿ ಅಂಟುವ ಸಾಧ್ಯತೆ ಇಲ್ಲ. ಇದು ಸಿಂಪಲ್ ಕಾಮನ್ ಸೆನ್ಸ್. ಹಾಗಾದರೆ ಪಾತಕಿಯ ಸೋಂಕು ಸುದ್ದಿ ಹರಡಿದ್ದು ಯಾಕೆ?

    ಹೌದು, ಇಂತಹ ಲಡಾಸ್ ಸುದ್ದಿಗಳನ್ನು ಸೃಷ್ಟಿಸುವುದಕ್ಕಾಗಿಯೇ ಅವನ ಸುತ್ತ ಒಂದು ಖಯಾಲಿ ಗ್ಯಾಂಗ್ ಇದೆ. ಇಲ್ಲದ ಇಂತಹ ಸುದ್ದಿಯನ್ನು ಹುಟ್ಟು ಹಾಕಿ, ಅದಕ್ಕೆ ಭಾರತದಲ್ಲಿ ವ್ಯಕ್ತವಾಗುವ ಪ್ರತಿಕ್ರಿಯೆ ಆಲಿಸಿ ಆನಂದಿಸುವುದು ಇದರ ದರಿದ್ರ ಚಟ.

    1955ರ ಒಂದು ಅಮಾವಾಸ್ಯೆಯ ರಾತ್ರಿ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಸಣ್ಣಹಳ್ಳಿಯೊಂದರಲ್ಲಿ ಹುಟ್ಟಿದ ದಾವೂದ್, ಡೋಂಗ್ರಿ ಏರಿಯಾಕ್ಕೆ ಬಂದು ಡಾನ್ ಎನಿಸಿಕೊಂಡು ದೇಶ ವಿದೇಶಗಳಲ್ಲಿ ತನ್ನ ನೆಲೆ ವಿಸ್ತರಿಸಿಕೊಂಡ. ನಂತರ ಬಾಬ್ರಿ ಮಸೀದಿ ಧ್ವಂಸದ ಬಳಿಕ 1993ರಲ್ಲಿ ಇಡೀ ಬಾಂಬೆಗೆ ಬಾಂಬ್ ಇಟ್ಟು ವಿಕೃತಿ ಮೆರೆದ. ಜೀವ ಉಳಿಸಿಕೊಳ್ಳಲು ಪಾಕಿಸ್ತಾನಕ್ಕೆ ಪಲಾಯನ ಮಾಡಿದ.  ಹೈಸ್ಕೂಲ್ ಡ್ರಾಪ್ ಔಟ್ ಆಗಿ ಅಡ್ನಾಡಿ ಕೆಲಸಗಳಿಗೆ ಇಳಿದ ದಿನದಿಂದಲೂ ಅವನ ಸುತ್ತ ಇಂತಹ ಸುಳ್ಳುಪಿಳ್ಳು ಸುದ್ದಿಗಳು ರಾಶಿರಾಶಿ ಹುಟ್ಟುತ್ತಲೇ ಬಂದಿವೆ.

    ಅವನಿಗೀಗ ವಯಸ್ಸಾಗಿದೆ. ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ. ಭೂಗತ ಜಗತ್ತಿನ ಮೇಲೆ ಹಿಂದಿನ ಹಿಡಿತ ಉಳಿದಿಲ್ಲ. ಇರುವ ಒಬ್ಬ ಮಗ ಮೋಯಿನ್, ಇಂಗ್ಲೆಂಡಿನ ಬಿಳಿ ಹೆಂಡ್ತಿ ಬಿಟ್ಟು ಸನ್ಯಾಸಿ (ಮೌಲಾನಾ) ಆಗಿದ್ದಾನೆ. ಮೂರನೇ ಮಗಳು ಸತ್ತು ದಶಕಗಳು ಸಂದಿವೆ. ಉಳಿದಿಬ್ಬರು ಹೆಣ್ಣುಮಕ್ಕಳ ಪೈಕಿ ಎರಡನೆಯವಳು ಅಮೆರಿಕದ ಗಂಡನ ಜತೆ ಸೆಟ್ಲ್ ಆಗಿದ್ದಾಳೆ. ಮೊದಲನೆ ಮಗಳು ಮೆಹರಿನ್ ಮಾತ್ರ ಪಾಕ್ ತಂಡದ ಮಾಜಿ ಕ್ರಿಕೆಟರ್ ಮಿಯಾಂದಾದ್ ಮಗ ಜುನೈದ್ ಜತೆ ಮದುವೆಯಾಗಿ ಕರಾಚಿ ಮತ್ತು ದುಬೈ ನಡುವೆ ಓಡಾಡಿಕೊಂಡು ಪಾತಕಿಗೆ ಅಷ್ಟಿಷ್ಟು ಸಮಾಧಾನ ತಂದಿದ್ದಾರೆ. ಇದರ ಮಧ್ಯೆ ತಮ್ಮ ಅನೀಶ್ ನ ತಲೆನೋವು ಹೆಚ್ಚಿದೆ. ಇವನಿಗೆ ಅಣ್ಣನ ಉತ್ತರಾಧಿಕಾರಿಯಾಗುವ ಹುಚ್ಚು ತಲೆಗೇರಿದೆ. ಇದರಿಂದಲೂ ದಾವೂದ್ ನ ರೋಗ ಮತ್ತು ಖಾಯಿಲೆ ಸುದ್ದಿಗಳ ಹೆಚ್ಚಾಗಿವೆ.

    2016ರಲ್ಲಿ ದಾವೂದ್ ಸಾಯುತ್ತಿರುವ ಸುದ್ದಿ ಹರಡಿತ್ತು. ಗ್ಯಾಂಗ್ರಿನ್ ಆಗಿ ಕಾಲು ಕಟ್ ಮಾಡಲಾಗಿದೆ. ಹೆಚ್ಚು ಕಾಲ ಬದುಕಲಾರ ಎನ್ನುವ ಸುದ್ದಿ ಹರಡಿದ್ದವು. ಕೆಲ ತಿಂಗಳ ಬಳಿಕ ಅದು ಸುಳ್ಳಾಯಿತು. ಮಾರನೇ ವರ್ಷ ಡಿಪ್ರೆಷನ್ ಸುದ್ದಿ ಹರಡಿತು. ಹಾಸಿಗೆ ಬಿಟ್ಟು ಏಳಲಾಗುತ್ತಿಲ್ಲ. ಸಾವಿನ ಹೊಸ್ತಿಲಲ್ಲಿದ್ದಾನೆ ಎನ್ನುವ ಊಹಾಪೋಹ. ಇಂತಹ ಹತ್ತಾರು ಸುದ್ದಿಗಳು ಹುಟ್ಟಿ ಸತ್ತು ಹೋಗಿವೆ. ಆದರೆ ಪಾಪಿ ಮಾತ್ರ ಚಿರಾಯು.

    ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ

    ಬೆಂಗಳೂರು ವಿಜಯನಗರದ ಶ್ರೀಧರ್ ತಿಂಗಳಿಗೊಮ್ಮೆಯಾದರು ತಿರುಪತಿ ತಿಮ್ಮಪ್ಪನ ದರ್ಶನ ಮಾಡಿಬರಲೇ ಬೇಕು. ಆಗಲೇ ಅವರಿಗೆ ಸಮಾಧಾನ. ಇದು ಇಂದು ನಿನ್ನೆಯ ಅಭ್ಯಾಸವಲ್ಲ. ಹಲವಾರು ವರ್ಷಗಳಿದ ಅವರು ಇದನ್ನು ತಪ್ಪಿಸಿದವರಲ್ಲ.  ಶ್ರೀಧರ್ ಒಬ್ಬರೇ ಅಲ್ಲ ಇಂಥ ಹಲವಾರು ಭಕ್ತರು  ಇದ್ದಾರೆ.ಕೆಲವರು ತಿಂಗಳಿಗೊಮ್ಮೆ, ಇನ್ನು ಹಲವರು ವಾರಕ್ಕೊಮ್ಮೆ ಹೋಗಿ ದರ್ಶನ ಪಡೆದುಕೊಂಡು ಬರಲೇ ಬೇಕೆಂಬ ನಿಯಮ ಹಾಕಿಕೊಂಡಿದ್ದಾರೆ.

    ತಿಮ್ಮಪ್ಪನೂ ಹಾಗೆ.  ಭಕ್ತರನ್ನು ಪ್ರೀತಿಯಿಂದ ಬರಮಾಡಿಕೊಂಡು ಇಷ್ಟಾರ್ಥ ಈಡೇರಿಸುವ ಕರುಣಾಮಯಿ. ಹಾಗಾಗಿಯೇ ಭಕ್ತರಲ್ಲಿ ಗೋವಿಂದನ ಬಗ್ಗೆ ಅಪಾರ ಪ್ರೀತಿ. ಇಂಥ ತಿಮ್ಮಪ್ಪನಂಥ ತಿಮ್ಮಪ್ಪನನ್ನೇ ಕೋರೋನಾ ಭಕ್ತರಿಂದ ದೂರ ಮಾಡಿತ್ತು.  ಇತಿಹಾಸದಲ್ಲೇ ಮೊದಲ ಬಾರಿಗೆ  80  ದಿನಗಳಿಂದ   ಭಕ್ತರಿಂದ ದೂರವಾಗಿದ್ದ ವೆಂಕಣರಮಣ ನಾಳೆ ಸೋಮವಾರದಿಂದ ಮತ್ತೆ ದರ್ಶನ ಭಾಗ್ಯ ಕರುಣಿಸಲಿದ್ದಾನೆ. ಏಳು ಕೊಂಡಲವಾಡ, ಗೋವಿಂದ ಗೋವಿಂದ ಎಂಬ ನಾಮ ಸ್ಮರಣೆ ಮತ್ತೆ ಕೇಳಿಬರಲಿದೆ.

    ಕೊರೋನಾ ಮುಂಚಿನ  ದಿನಗಳಲ್ಲಿ ಪ್ರತಿನಿತ್ಯ ಸರಾಸರಿ 75000 ದಿಂದ ಒಂದು ಲಕ್ಷ  ಭಕ್ತರು ದೇವಾಲಯಕ್ಕೆ ಭೇಟಿ ಕೊಡುತ್ತಿದ್ದರು. ಗಂಟೆಗಟ್ಟಲೆ  ಪರಮಾತ್ಮನ ದರ್ಶನಕ್ಕೆ ಕಾದು ಕುಳಿತಿರುತ್ತಿದ್ದರು. ಧರ್ಮ ದರ್ಶನ, ವಿಐಪಿ ದರ್ಶನ, ಬ್ರೇಕ್ ಅಪ್ ದರ್ಶನ ಹೀಗೆ ಅವರ ಭಕ್ತಿಭಾವಕ್ಕೆ ತಕ್ಕಂತೆ ದರ್ಶನಗಳು. ತಿಪ್ಪಪ್ಪನ ಹುಂಡಿಗೆ ಸರಾಸರಿ ನಿತ್ಯ 3.18 ಕೋಟಿ ಅಂದರೆ ಪ್ರತಿ ಸೆಕೆಂಡಿಗೆ ರೂ 368.38 ಸಂಗ್ರಹವಾಗುತ್ತಿತ್ತು. ಇದಲ್ಲದೆ ಬೆಟ್ಟದ ಮೇಲಿನ ಹೊಟೇಲ್ ಗಳು,  ಅಂಗಡಿಗಳು,  ಪ್ರವಾಸಿ ವಾಹನಗಳು ,ಬೀದಿ ಬದಿ ವ್ಯಾಪಾರಿಗಳು ಎಲ್ಲವೂ ಭಕ್ತರನ್ನೇ ಅವಲಂಬಿಸಿದ್ದವು.  ಕೊರೊನಾದಿಂದಾಗಿ ಅವರೆಲ್ಲರಿಗೂ  ಗೋವಿಂದನ ಭಜನೆ ಮಾಡುವುದಲ್ಲದೆ ಬೇರೆ ಏನೂ ಉಳಿದಿರಲಿಲ್ಲ. ಟಿಟಿಡಿ ಮೇ 21ರಂದು 400 ಕೋಟಿ ರೂ.ಗಳಷ್ಟು ನಷ್ಟವಾಗಿದ್ದರೂ ತನ್ನ 8000 ಕಾಯಂ ನೌಕರರು ಸೇರಿದಂತೆ 23000 ನೌಕರರಿಗೆ ಯಾವುದೇ ರೀತಿಯ ವೇತನ ಕಡಿತ ಮಾಡುವುದಿಲ್ಲ ಎಂದು ಪ್ರಕಟಿಸಿತು.

    ಬಾಗಿಲನು ತೆರೆದ ಏಳು ಬೆಟ್ಟಗಳ ಒಡೆಯ

    ಇದೀಗ ಸೋಮವಾರದಿಂದ ದರ್ಶನ ಆರಂಭವಾಗಲಿದೆ. ಆರಂಭದಲ್ಲಿ ಪ್ರಾಯೋಗಿಕವಾಗಿ ಟಿಟಿಡಿ ನೌಕರರಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮುಂಚಿತವಾಗಿ ಬುಕ್ ಮಾಡಿದ ನೌಕರರು ಮತ್ತು ಅವರ ಕುಟುಂಬದವರಿಗೆ ಇದೇ 8 ಮತ್ತು 9ರಂದು ದರ್ಶನಕ್ಕೆ ಅವಕಾಶ. ಅದರಲ್ಲೂ ಮಕ್ಕಳು ಮತ್ತು 65 ವರ್ಷ ಮೇಲ್ಪಟ್ಟವರಿಗೆ ಅವಕಾಶ ಇಲ್ಲ. ಜೂನ್ 10 ರಂದು ಸ್ಥಳೀಯರಿಗೆ , 11ರಿಂದ ಸರ್ವ ಭಕ್ತರಿಗೂ ಅವಕಾಶ.

    ಕಂಟೈನ್ಮೆಂಟ್ ಪ್ರದೇಶದವರನ್ನು ಹೊರತು ಪಡಿಸಿ ಉಳಿದವರಿಗೆ ಅವಕಾಶ. ಪ್ರತಿದಿನ ಬೆಳಿಗ್ಗೆ 6-30 ರಿಂದ ಸಂಜೆ 7.30ರವರೆಗೆ ಮಾತ್ರ ದರ್ಶನ . ಗಂಟೆಗೆ 300 ಜನರಿಗೆ ಅವಕಾಶ. ಪ್ರತಿ ಭಕ್ತರಿಗೂ ಹರ್ಬಲ್ ಸ್ಯಾನಿಟೈಸರ್ ಕೊಡಲಾಗುವುದು. ದೇಹದ ಉಷ್ಣತೆ ಚೆಕ್ ಮಾಡಲಾಗುವುದು. ಕೋವಿಡ್ ಸುರಕ್ಷತಾ  ಕ್ರಮಗಳ ಪ್ರಕಟಣೆ ಸದಾ ಕಾಲವೂ ಇರುತ್ತದೆ. ಕೋವಿಡ್ ನಿಯಮಗಳ ಪಾಲನೆ ಕಡ್ಡಾಯ. ವಸತಿ ಗೃಹಗಳನ್ನು ದಿನ ಬಿಟ್ಟು ದಿನದ ಆಧಾರದಲ್ಲಿ ಕೊಡಲಾಗುವುದು. ಒಂದು ರೂಮಿನಲ್ಲಿ ಇಬ್ಬರು ಭಕ್ತರಿಗೆ ಮಾತ್ರ ಅವಕಾಶ. ಅವರೂ 24 ಗಂಟೆ ಮಾತ್ರ ಇರಬಹುದು. ಮದುವೆಗೆ ಕೋವಿಡ್ ನಿಯಮಗಳ ಪ್ರಕಾರ ಮಾತ್ರ ಅನುಮತಿ.

    ಮುಂದಿದೆ ಸವಾಲು

    ಕೆಲವೇ ಗಂಟೆಗಳನ್ನು ಹೊರತು ಪಡಿಸಿ  ದಿನದ 24ಗಂಟೆಯೂ ಭಕ್ತರಿಗೆ ದರ್ಶನ ನೀಡುತ್ತಿದ್ದ ತಿಮ್ಮಪ್ಪನ ದರ್ಶನಕ್ಕೆ ಈಗ ಸಮಯ (ಬೆಳಿಗ್ಗೆ 6.30ರಿಂದ ರಾತ್ರಿ 7.30)  ನಿಗದಿಯಾಗಿರುವುದರಿಂದ  ಸಾಗರದಂತೆ ಹರಿದು ಬರುವ ಭಕ್ತರನ್ನು ನಿಯಂತ್ರಿಸಿ ಅವರಿಗೆಲ್ಲಾ ಸಮಯ  ನಿಗದಿ ಮಾಡುವುದು ದೊಡ್ಡ ಸವಾಲು.  ತಿರುಪತಿಯ ಸರತಿಯ ಸಾಲಿನ ಪದ್ಧತಿ ವಿಶ್ವದಲ್ಲೇ ಹೆಸರು ವಾಸಿ. ಆದರೆ ಈಗ   ಕೋವಿಡ್ ಕಾರಣದಿಂದ ಅಂತರವನ್ನು ಕಾಯ್ದುಕೊಳ್ಳಬೇಕು.  ದೇವರ ಮುಂದೆ ಭಕ್ತಿ ಪರವಶರಾಗುವ ಭಕ್ತರನ್ನು  ಮುಂದೆ  ಕಳಿಸುವುದು  ದೊಡ್ಡ ಸವಾಲು.  ಸಾಮಾನ್ಯ ದಿನಗಳಲ್ಲಿ ಭಗವಂತನ ಮುಂದೆ ನಿಂತಿದ್ದ ಭಕ್ತರನ್ನು ಜರಗಂಡಿ ಎಂದು ಬೆನ್ನು ಹಿಡಿದು ತಳ್ಳಬೇಕಾದ ಸ್ಥಿತಿ ಇತ್ತು, ಈಗ  ಇದು ಸವಾಲಿನ ಕೆಲಸವೇ ಸರಿ ಎನ್ನುತ್ತಾರೆ ದೇವಾಲಯದಲ್ಲಿ  ಈ ಹಿಂದೆ ಸ್ವಯಂ ಸೇವಕಿಯಾಗಿ ಕೆಲಸಮಾಡಿದ್ದ ಶಾಂತಾ ಪ್ರಕಾಶ್ . ಹೀಗಾಗಿ ಟಿಟಿಡಿ ಸಿಬ್ಬಂದಿಗೆ ಸುರಕ್ಷತಾ ಕಿಟ್ ಗಳನ್ನು ನೀಡಬೇಕಾಗುತ್ತದೆ. ಅದನ್ನು ಸಮರ್ಪಕ ಸಂಖ್ಯೆಯಲ್ಲಿ ನೀಡಬೇಕಾದ ಹೊಣೆ ಟಿಟಿಡಿ ಮೇಲಿದೆ,

    ವಿಐಪಿ ಭಕ್ತರು!

    ತಿಮ್ಮಪ್ಪನಿಗೂ ದೇಶದ ವಿಐಪಿಗಳಿಗೂ ಅವಿನಾಭಾವ ಸಂಬಂಧ.  ಅವರೆಲ್ಲರೂ ಬಂದಾಗ ಗಂಟೆಗಟ್ಟಲೇ ಸಾಮಾನ್ಯ ಭಕ್ತರು ಸರತಿಯಲ್ಲೇ ನಿದ್ದೆ ಮಾಡುವ ಸ್ಥಿತಿ ನಿರ್ಮಾಣವಾಗುತ್ತಿತ್ತು. ಆದರೆ ಈಗ  ನಿರ್ದಿಷ್ಟ ಅವಧಿಯ ದರ್ಶನ ಇರುವುದರಿಂದ ಇದನ್ನು ಟಿಟಿಡಿ ಹೇಗೆ ಹ್ಯಾಂಡಲ್ ಮಾಡುತ್ತದೆ ಎಂಬುದನ್ನು  ಕಾದು ನೋಡಬೇಕು. ದರ್ಶನ ಆರಂಭವಾಗುತ್ತಿದ್ದಂತೆ ಈ ದಂಡು ತಿರುಮಲಕ್ಕೆ ಆಗಮಿಸುವುದು  ಖಂಡಿತಾ. ಇವರಿಗೆಲ್ಲಾ ಕಡ್ಡಾಯವಾಗಿ ಸಮಯ ನಿಗದಿ ಮಾಡಲೇಬೇಕು. ಇವರ ಕಾರಣದಿಂದ ಸಾಮಾನ್ಯ ಭಕ್ತರು ದರ್ಶನದಿಂದ ವಂಚಿತರಾಗಬಾರದು.

    ಅಂತಾರಾಜ್ಯ ಭಕ್ತರು

    ತಿರುಮಲಕ್ಕೆ ಬರುವ ಭಕ್ತರಲ್ಲಿ ಅಂತಾರಾಜ್ಯ   ಪ್ರಯಾಣಿಕರು ಅಧಿಕ. ಇದನ್ನು ಹೇಗೆ ನಿರ್ವಹಿಸಲಾಗುತ್ತದೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಆನ್ ಲೈನ್ ನಲ್ಲಿ ದರ್ಶನಕ್ಕೆ ಅವಕಾಶ ಸಿಕ್ಕ ಮಾತ್ರಕ್ಕೆ ಅದು ಆಂಧ್ರಪ್ರದೇಶ ಪ್ರವೇಶಿಸಲು ಸಿಕ್ಕ ರಹದಾರಿ ಎಂದು ಭಾವಿಸಬಾರದು. ಅಂತಾರಾಜ್ಯ ಪ್ರವಾಸಕ್ಕೆ ಇರುವ ಕೋವಿಡ್ ನಿಯಾಮವಳಿಗಳೇ ಅನ್ವಯವಾಗುತ್ತದೆ. ಈ ಬಗ್ಗೆ ಭಕ್ತಾದಿಗಳು ಮೊದಲೇ ಪ್ರಯಾಣಕ್ಕೆ ಅನುಮತಿ ಪಡೆಯಬೇಕು ಎಂದು ಟಿಟಿಡಿ ಸ್ಫಷ್ಟ ಪಡಿಸಿದೆ. (ಚಿತ್ರ ಕೃಪೆ :ಟಿಟಿಡಿ )

    error: Content is protected !!