ಇದು ಕೊರೊನಾ ಕಾಲದ ಆಕರ್ಷಕ ಘೋಷಣೆ. ದೇಶದ ಖಾಸಗಿ ಶಾಲಾ- ಕಾಲೇಜುಗಳ ದುಬಾರಿ ಶುಲ್ಕ ನೀತಿಯಿಂದ ಬಸವಳಿದ ಪೋಷಕರಿಗೆ ಈ ಘೋಷಣೆಯು ಒಂಥರಾ ಫೀಲ್ ಗುಡ್ ಫ್ಯಾಕ್ಟರ್. ಸರಕಾರಿ ಶಿಕ್ಷಣ ಸಂಸ್ಥೆಗಳು ಪೋಷಕರ ವಿಶ್ವಾಸ ಗಳಿಸುವಲ್ಲಿ ಸೋತಿರುವಾಗ ಖಾಸಗಿ ಸಂಸ್ಥೆಗಳು ಸುಗ್ಗಿ ಮಾಡುತ್ತಿವೆ. ಇದು ಸಹಜ ಬೆಳವಣಿಗೆ. ಆದರೆ ಕೊರೊನಾ ಈಗ ವಿಚಿತ್ರವಾದ ಸಂದಿಗ್ಧವನ್ನು ಸೃಷ್ಟಿಸಿದೆ.
ಒಂದೆಡೆ ಎಷ್ಟೆಲ್ಲ ಹೊಟ್ಟೆಬಟ್ಟೆ ಕಟ್ಟಿಟ್ಟು ಮಕ್ಕಳ ಫೀಸ್ ಕಟ್ಟುವ ತಂದೆತಾಯಿಗೆ ಸದ್ಯ ಅತ್ತ ದುಡ್ಡೂ ಉಳಿಯುತ್ತಿಲ್ಲ, ಇತ್ತ ಮುದ್ದಿನ ಮಕ್ಕಳ ಶಾಲಾ ಓದೂ ಸಾಧ್ಯವಾಗುತ್ತಿಲ್ಲ ಎಂದರೆ ಹೇಗಾಗಬೇಡ? ನಗರಗಳ ಅನೇಕ ಪೋಷಕರು ತಮ್ಮ ಮಕ್ಕಳ ಭವಿಷ್ಯ ನೆನೆದು ನಿದ್ದೆಗೆಟ್ಟಿದ್ದಾರೆ. ಎಲ್ಲವೂ ಶಾಲೆಯ ಪಾಠ ಆಧರಿಸಿಯೇ ನಿರ್ಧಾರಗೊಳ್ಳುತ್ತದೆ ಎಂದು ಭ್ರಮಿಸುವವರಿಗೆ ಇಂದಿನ ಸ್ಥಿತಿಯು ಮನೋಭಿತ್ತಿಯಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಈ ಬಿರುಗಾಳಿಯೇ ಈಗ ತಮ್ಮ ಈವರೆಗಿನ ನೆಚ್ಚಿನ ಶಾಲೆಗಳತ್ತ ಇದ್ದಕ್ಕಿದ್ದಂತೆ ಆಕ್ರೋಶದ ಅಲೆ ಸೃಷ್ಟಿಸಲು ಕಾರಣವಾಗಿದೆ. ಪೋಷಕರು-ಖಾಸಗಿ ಶಾಲೆಗಳದ್ದು ಹೊಂದಾಣಿಕೆಯಾಗದ ಅತ್ತೆ-ಸೊಸೆ ಸಂಬಂಧ. ಆಗಾಗ ಕಿತ್ತಾಟ, ಅನಿವಾರ್ಯ ಹೊಂದಾಣಿಕೆ.
LKG ಮತ್ತು UKG ಯ ಆ ಕಂದಗಳಿಗೂ On-line ಶಿಕ್ಷಣ ಕೊಡುವ ಮನಸ್ಥಿತಿಗೆ ಏನೆನ್ನಬೇಕು?
— S.Suresh Kumar, Minister – Govt of Karnataka (@nimmasuresh) May 16, 2020
ಹಣದ ದುರಾಸೆಯಷ್ಟೇ!
ಅವರಿಗೆಲ್ಲಾ ಶಿಕ್ಷಣ ಇಲಾಖೆಯ ಕ್ರಮ ಕಾದಿದೆ.
ಈಗ ತರಗತಿ ನಡೆಯದ ಸಂಕಷ್ಟ ಘಳಿಗೆ ಸುಖಾಸುಮ್ಮನೆ ಶುಲ್ಕ ಭರಿಸಬೇಕಾದ ಒತ್ತಡಕ್ಕೆ ಬಳಲಿ ಸಿಡಿದು ಹೋಗುತ್ತಿದ್ದಾರೆ ಪೋಷಕರು. ಆದರೆ ಇದೇ ವೇಳೆ ಶಾಲೆಗಳ ಆಡಳಿತ ಮಂಡಳಿಗಳು ಕೂಡ ಸುಗ್ಗಿ ಕಾಲದ ಹಿಗ್ಗು ಕರಗಿ ಹೋಗಿರುವುದರಿಂದ ಕಂಗೆಟ್ಟಿವೆ. ಜತೆಗೆ ಶುಲ್ಕ ಕಟ್ಟದೇ ಮೊಂಡುಬಿದ್ದು ಪೋ ಷಕರ ವಿರುದ್ಧ ದಿನಕ್ಕೊಂದು ತಂತ್ರ ಪ್ರಯೋಗಿಸುತ್ತಿವೆ.
ಇದೊಂಥರಾ ಖಾಜಿ ನ್ಯಾಯದ ಮಟ್ಟಕ್ಕೆ ಬಂದು ನಿಂತಿದೆ. “ಕನ್ನಡಪ್ರೆಸ್.ಕಾಂ” ಇಲ್ಲಿ ಇಬ್ಬರ ಅಭಿಪ್ರಾಯ ಕೇಳಿ ಮೂರನೇ ತಜ್ಞ ಸಲಹೆಯ ದಾರಿ ತೆರೆದಿಟ್ಟಿದೆ.
There are complaints about private educational institutions illegally charging higher fee for students.@CMofKarnataka & @nimmasuresh should intervene and immediately stop these unethical practices.
— Siddaramaiah (@siddaramaiah) June 9, 2020
ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಆನ್ ಲೈನ್ ಶಿಕ್ಷಣವನ್ನು ಕೂಡಾ ದುಡ್ಡುಮಾಡುವ ಹೊಸ ದಂದೆಯಾಗಿ ಮಾಡಿಕೊಂಡಿದ್ದಾರೆ.
— Siddaramaiah (@siddaramaiah) June 9, 2020
ಪ್ರಾಥಮಿಕ ಹಂತದಲ್ಲಿಯೇ ಶುರುವಾಗಿರುವ ಹಾವಳಿಯನ್ನು
ಈ ಹಂತದಲ್ಲಿಯೇ ನಿಯಂತ್ರಿಸುವ ಕೆಲಸವನ್ನು
@CMofKarnataka ಮತ್ತು ಶಿಕ್ಷಣ ಸಚಿವರಾದ @nimmasuresh
ಆದ್ಯತೆ ನೀಡಿ ಮಾಡಬೇಕು.
2/2
ನಾವ್ ಕೊಡೋದಿಲ್ಲ
ಮೊದಲಿಗೆ “ನೋ ಫೀಸ್” ಎಂದು ಹಟ ಹಿಡಿದ ಪೋಷಕರನ್ನು ಮಾತಾಡಿಸಿದಾಗ ಹೊರಬಿದ್ದ ಅಭಿಪ್ರಾಯವನ್ನು ಅವರದ್ದೇ ಮಾತುಗಳಲ್ಲಿ ಕೇಳಿ:
“ಕೊರೊನಾದಿಂದ ನನ್ನ ಕೆಲಸ ಹೋಗಿದೆ. ಈಗ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಇಷ್ಟರ ಮಧ್ಯ ಕೆಲಸ ಇದ್ದಾಗ ಕೈಬಾಯಿ ಕಟ್ಟಿ ಮಗನ ಓದಿಗೆ ಫೀಸು ಹೊಂದಿಸುತ್ತಿದ್ದೆ. ಒಂದನೆ ತರಗತಿಯಿಂದ ಒಂಬತ್ತನೆ ಕ್ಲಾಸಿಗೆ ಬಂದಿರುವ ಮಗನಿಗೆ ಪ್ರತಿವರ್ಷ ಹೆಚ್ಚಿಸುವ ಶುಲ್ಕವನ್ನು ಪ್ರಶ್ನಿಸದೇ ಭರಿಸಿದ್ದೇನೆ. ಈಗ ನಮಗೆ ಕಷ್ಟ ಕಾಲ. ಅತ್ತ ಕೆಲಸ ಇಲ್ಲ, ಇತ್ತ ಮಗನ ಶಾಲೆ ಇಲ್ಲ. ದಿನಸಿ ದರಗಳೂ ಏರಿವೆ. ಸಾಲಕೊಡುವವರೂ ಇಲ್ಲ. ಇಂತಹ ಸಮಯ ನಮ್ಮ ಕಷ್ಟಕ್ಕೆ ಶಾಲೆಗಳು ಸ್ಪಂದಿಸಬೇಕು. ಕ್ಲಾಸ್ ನಡೆಯದ ಈ ಸಮಯ ಶುಲ್ಕ ಮನ್ನಾ ಮಾಡಬೇಕು. ಇದರಲ್ಲಿ ನ್ಯಾಯ ಇದೆ. ಯಾಕೆಂದರೆ ಬಹುತೇಕ ಶಿಕ್ಷಣ ಸಂಸ್ಥೆಗಳು ಇದುವರೆಗೆ ಸಾಕಷ್ಟು ದುಡ್ಡು ಮಾಡಿವೆ. ಆಸ್ತಿ ಖರೀದಿಸಿವೆ. ಸಾಕಷ್ಟು ಹಣ ಕೂಡಿಟ್ಟಿವೆ. ಈಗ ಒಂದೆರಡು ತಿಂಗಳು ಫೀಸ್ ಸ್ಟಾಪ್ ಮಾಡಿದ್ರೆ ಅವರಿಗೇನೂ ಬಡತನ ಬರೋದಿಲ್ಲ. ಅಷ್ಟಕ್ಕೂ ನಾವು ಶಾಶ್ವತ ನಿಲುಗಡೆಗೆ ಕೇಳುತ್ತಿಲ್ಲ. ಕ್ಲಾಸ್ ಶುರುವಾದರೆ, ಮತ್ತೇ ಕಷ್ಟವೊ ಸುಖವೊ ಹೇಗಾದರೂ ಹೊಂದಿಸಿ ಕಟ್ಟುತ್ತೇವೆ. ಅಲ್ಲಿವರೆಗೆ ಶುಲ್ಕ ವಸೂಲಿ ಮಾಡ್ಬಾರ್ದು. ನಾವು ಕಟ್ಟೋದಿಲ್ಲ” ಎನ್ನುತ್ತಾರೆ ಬೆಂಗಳೂರಿನ ಅನೇಕ ಬಡಾವಣೆಗಳ ನಿವಾಸಿಗರು.
ನಾವ್ ಬಿಡೋದಿಲ್ಲ
ಇದಾಗಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳನ್ನು ಮಾತಿಗೆಳೆದರೆ ಅವರಿಂದ ಬರುವ ಗೋಳಿನ ಕಥೆಯೂ ಕರುಣಾಜನಕ.
“ನಾವು ಶೋಷಕರಲ್ಲ. ಸುಲಿಗೆಕೋರರು ಖಂಡಿತ ಅಲ್ಲ. ಒತ್ತಡದ ಕಾರಣ ಪೋಷಕರು ಈಗ ಆ ರೀತಿ ಮಾತಾಡುತ್ತಿದ್ದಾರೆ. ಇದೇ ಪೋಷಕರು ತಮ್ಮ ಮಕ್ಕಳಿಗೆ ಸೀಟು ಕೇಳಲು ಬಂದಾಗ ತೋರಿದ ವಿನಯ, ನೀಡಿದ ಭರವಸೆಗಳನ್ನು ಮರೆತಿದ್ದಾರೆ.
ಒಂದು ಕ್ಷಣ ತಾಳ್ಮೆಯಿಂದ ಯೋಚಿಸಿ ನೋಡಿ. ನಾವು ಶಾಲಾ ಕಟ್ಟಡ ಮಾರಿಲ್ಲ. ಸಿಬ್ಬಂದಿಗೆ ಸಂಬಳ ಕೊಡೋದು ನಿಲ್ಲಿಸಿಲ್ಲ. ಸರಕಾರಕ್ಕೆ ಕಟ್ಟಬೇಕಾದ ರಾಯಲ್ಟಿ ಸ್ಟಾಪ್ ಆಗಿಲ್ಲ. ಖರ್ಚಿನ ಬಾಬ್ತು ಯಾವ್ದು ಕಡಿಮೆಯಾಗಿದೆ ಹೇಳಿ? ಮಿಗಿಲಾಗಿ ಇವರ ಮಕ್ಕಳಿಗೆ ಆನ್ ಲೈನ್ ಕ್ಲಾಸ್ ನಡೆಸುತ್ತಿದ್ದೇವೆ. ಅದಕ್ಕೊಂದಿಷ್ಟು ಎಕ್ಸ್ಟ್ರಾ ಖರ್ಚು. ನಾಳೆ ತರಗತಿ ಶುರುವಾದ್ರೆ ಹೆಚ್ಚುವರಿ ಅವಧಿ ದುಡಿದು ಪೋರ್ಷನ್ ಮುಗಿಸಿ, ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ದಮಾಡ್ತೇವೆ. ಆಗ ಇವರಿಂದ ಎಕ್ಟ್ರಾ ಫೀಸ್ ಕೇಳಲ್ವಲ್ಲಾ? ಈಗ ಕಷ್ಟ ಅವರೊಬ್ಬರಿಗೇ ಇಲ್ಲವಲ್ಲ? ಎಲ್ಲರ ಸ್ಥಿತಿಯೂ ಒಂದೇ ಆಗಿದೆ. ಅವರು ಅರ್ಥ ಮಾಡಿಕೊಳ್ಳಬೇಕು” ಎನ್ನುತ್ತಾರೆ ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಬೆಂಗಳೂರಿನ ಖಾಸಗಿ ಶಾಲೆಯೊಂದರ ವ್ಯವಸ್ಥಾಪಕರು
ಈ ಬಿಕ್ಕಟ್ಟಿಗೆ ತಜ್ಞರು ತೆರೆದಿಟ್ಟ ಸಲಹೆ:
೧.ಕ್ಲಾಸ್ ಶುರು ಆಗದ ಹೊರತು ಫೀಸ್ ಕಟ್ಟುವುದೇ ಇಲ್ಲ ಅನ್ನುವ ಪೋಷಕರ ವಾದ ಒಪ್ಪಿತ ಅಲ್ಲ. ಏಕೆಂದರೆ ಹಲವು ಶಿಕ್ಷಕರಿಗೆ ಫೀಸ್ ಕೊಟ್ಟರೆ ಸಂಬಳ ಸಿಗುವುದು.
೨.ಈಗಿನ ಸ್ಥಿತಿ ಟೆಂಪರರಿಯಾದದ್ದು. ಅದೇ ಶಾಲೆಗೆ ನಾಳೆ ಮಕ್ಕಳನ್ನು ಕಳಿಸುವುದು ಪೋಷಕರಿಗೆ ಅನಿವಾರ್ಯ. ಆದ್ದರಿಂದ ತಂಟೆ ಇರದ ಸುಗಮ ದಾರಿಗಳ ಬಗ್ಗೆ ಯೋಚಿಸಬೇಕು.
೩.ಒಂದಷ್ಟು ಹೊರೆ ಎನ್ನಿಸದ ಫೀಸ್ ಕಟ್ಟಿ ಶಾಲೆಗಳಿಗೂ ಉಸಿರಾಡಲು ಅನುವಾಗಬೇಕು. ಯಾವುದಕ್ಕೂ ಪರಸ್ಪರ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಬೇಕು.
೪.ಶಾಲಾ ಮ್ಯಾನೇಜ್ಮೆಂಟ್ ಕೂಡ ಈ ವಿಷಯದಲ್ಲಿ ಹಟ ಮಾಡಬಾರದು. ಎಷ್ಟುಸಾಧ್ಯವೋ ಅಷ್ಟನ್ನು ಈ ಸಂಕಷ್ಟ ಅವಧಿ ಮಾಸಿಕ ಶುಲ್ಕ ಕಡಿಮೆ ಮಾಡಬೇಕು. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ ಸಂಪನ್ಮೂಲ ಹೊಂದಾಣಿಕೆ ಮಾಡಬೇಕು.
೫.ವಿಶೇಷವಾಗಿ ಅನೇಕ ಪೋಷಕರಿಗೆ ವ್ಯಾನ್ ಫೀಸ್ ದೊಡ್ಡ ಹೊರೆ. ಸಾಧ್ಯವಾದರೆ ಇದನ್ನು ಕೊರೊನಾ ತಿಂಗಳಲ್ಲಿ ನಿಲುಗಡೆ ಮಾಡಬೇಕು.
೬.ಬಡ ಕುಟುಂಬದ ಮಕ್ಕಳಿಗೆ ವಿಶೇಷ ರಿಯಾಯಿತಿ ಯೋಜನೆ ಜಾರಿಗೊಳಿಸಬೇಕು.
೭. ಫೀಸಿಗಾಗಿ ಪುಟ್ಟ ಮಕ್ಕಳಿಗೂ ಆನ್ ಲೈನ್ ಕ್ಲಾಸಸ್ ಗಳು ಸರಿ ಅಲ್ಲ.











