20.8 C
Karnataka
Thursday, August 20, 2026
    Home Blog Page 169

    ಅವಕಾಶ ವಂಚಿತರಿಗೆ ಅವಕಾಶ

    ಹಣ ಇದ್ದವರಿಗೆ ಹಣ ಸೇರುವ ಹಾಗೆ ಅವಕಾಶ ಸಿಕ್ಕವರನ್ನೇ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಆದರೆ ಅವಕಾಶ ವಂಚಿತರು ಮಾತ್ರ ಅವಕಾಶಗಳೇ ಇಲ್ಲದೆ ಮುರುಟಿ ಹೋಗುತ್ತಾರೆ.  ಬೆಂಗಳೂರಿನಲ್ಲಿರುವ ಸಂಸ್ಥೆಯೊಂದು ಅವಕಾಶ ವಂಚಿತರಿಗಾಗಿಯೇ ಕೆಲಸಮಾಡುತ್ತಿದೆ. ಅವಕಾಶ ವಂಚಿತರಿಗೆ  ಅವಕಾಶ ಕಲ್ಪಿಸುತ್ತಿದೆ. ಈ ಸಂಸ್ಥೆಯ ಹೆಸರು ಅಭ್ಯುದಯ.  

    ಪ್ರತಿಯೊಂದು ಸಂಸ್ಥೆ ಹುಟ್ಟುವುದರ ಹಿಂದೆ ಕ್ರಿಯಾಶೀಲ ಹಾಗೂ ಸೇವಾ ಮನೋಭಾವನೆಯ ಮನಸ್ಸೊಂದು ಇರುತ್ತದೆ. ಯಾವುದೋ ಘಳಿಗೆಯಲ್ಲಿ ಇಂಥ ಮನಸ್ಸುಗಳಿಗೆ ಆಗುವ ಪ್ರೇರಣೆ ಸಮಾಜಮುಖಿ ಕೆಲಸಗಳಿಗೆ ಕೈ ಹಾಕುವಂತೆ ಮಾಡುತ್ತದೆ. ಅಭ್ಯುದಯದ ವಿಚಾರದಲ್ಲಿ  ಇಂಥ ಪ್ರೇರಣೆ ಆಗಿದ್ದು ಡಿ. ಲಕ್ಷ್ಮಿನಾರಾಯಣ ಅವರಿಗೆ. ಕೆಪಿಟಿಸಿಎಲ್ ಉದ್ಯೋಗಿ   ಲಕ್ಷ್ಮಿನಾರಾಯಣ 2004 ರಲ್ಲಿ ಆನಂದರಾವ್ ಸರ್ಕಲ್ ನಲ್ಲಿರವ ಕಚೇರಿಯಲ್ಲಿ ಕೆಲಸ ಮಾಡುತ್ತಿರುತ್ತಾರೆ. ಎಲ್ಲರಂತೆ ಹತ್ತರಿಂದ ಐದರ ತನಕ ಕೆಲಸ ಮಾಡುವ ಜಾಯಮಾನ ಇವರದ್ದಲ್ಲ. ಊರ ಉಸಾಬರಿ ನಮಗೇಕೆ ಎನ್ನುವ ವ್ಯಕ್ತಿತ್ವವೂ ಇವರದ್ದಲ್ಲ. ಹೀಗಾಗಿಯೇ ಸಂದರ್ಭವೊಂದರಲ್ಲಿ ಬಾಲಾಪರಾಧಿಗಳ ಬಗ್ಗೆ ಇವರಿಗೆ  ಕುತೂಹಲ ಹುಟ್ಟುತ್ತದೆ. ಬಾಲ್ಯದಲ್ಲೇ ಮಕ್ಕಳು ಅಪರಾಧ ಮಾಡುತ್ತಾರೆ ಅಂದರೆ ಅದು ಅವರ ತಪ್ಪಲ್ಲ . ಅದು ಸಮಾಜದ ತಪ್ಪಲ್ಲವೆ ಎಂಬ ಪ್ರಶ್ನೆ ಅವರ ಮನಸ್ಸಿನಲ್ಲಿ ಏಳುತ್ತದೆ.

    ಡಿ. ಲಕ್ಷ್ಮಿನಾರಾಯಣ

    ಈ ವೇಳೆಗಾಗಲೇ ಕೇಶವ ಕೃಪಾ ಸಂವರ್ಧನಾ ಸಮಿತಿಯ  ಅರಕಲಿ ನಾರಾಯಣರಾವ್ ಮತ್ತು ಕೃ. ನರಹರಿ ಅವರುಗಳ   ಸಂಪರ್ಕಕ್ಕೆ ಬಂದು  ಅದರ ಸದಸ್ಯರಲ್ಲಿ ಒಬ್ಬರಾಗಿದ್ದ ಲಕ್ಷ್ಮಿನಾರಾಯಣ ವೈಯಕ್ತಿಕ ನೆಲೆಯಲ್ಲಿ ಇಂಥ ಅವಕಾಶ ವಂಚಿತ ಮಕ್ಕಳಿಗಾಗಿ ಕೆಲಸ ಮಾಡಲು ಮುಂದಾಗುತ್ತಾರೆ.

    ಈ ದಿಸೆಯಲ್ಲಿ ಮುಂದುವರೆದಾಗ ಹಾದಿ ತಪ್ಪಿದ ಹನ್ನೆರಡು ಹುಡುಗರ ಬಗ್ಗೆ ಇವರಿಗೆ ಗೊತ್ತಾಗುತ್ತದೆ. ಈ ಹುಡುಗರ ಪೂರ್ವಪರ ಹುಡುಕುತ್ತಾರೆ. ಇವರಲ್ಲಿ ಏನಾದರು ಬದಲಾವಣೆ ತರಬೇಕೆಂದು ಬಯಸುತ್ತಾರೆ. ಅಧಿಕಾರಿಗಳ ಮನ ಒಲಿಸಿ ಈ ಹುಡುಗರ ಪಾಲಕರನ್ನು ಭೇಟಿ  ಮಾಡಿ ವಾಪಸ್ಸು ಅವರವರ ಮನೆಗಳಿಗೆ ಸೇರಿಸುತ್ತಾರೆ. ಈ ಮಕ್ಕಳು ಮನೆಗೆ ವಾಪಸ್ಸು ಬಂದಾಗ ಪಾಲಕರಿಂದ ಮಿಶ್ರ ಪ್ರತಿಕ್ರಿಯೆ. ಕೆಲವರಿಗೆ ಮಕ್ಕಳು ಮತ್ತೆ ಮನಗೆ  ಬಂದರೆಂಬ ಸಂತಸ. ಇನ್ನು ಕೆಲವರಿಗೆ ಯಾಕಾದರೂ ಇವರನ್ನು ವಾಪಸ್ ಕರೆದುಕೊಂಡು ಬಂದರೆಂಬ ಭಾವನೆ.

    ಸುಲಭದ ಕೆಲಸವಲ್ಲ

    ಹುಡುಗರನ್ನು ಸರಿ ಮಾಡುತ್ತೇನೆ ಎಂಬ ನಿರ್ಧಾರವನ್ನೇನೋ ಲಕ್ಷ್ಮಿನಾರಾಯಣ ಅವರು ಮಾಡಿದ್ದೂ ಆಗಿದೆ. ಮುಂದೆ ಸರಿ ದಾರಿಗೆ ತರಬೇಕಲ್ಲ.ಅದೇನು ಸುಲಭದ ಕೆಲಸವೇ..? ಎಲ್ಲಾ 7 ರಿಂದ 10 ನೇ ತರಗತಿ ಓದುತ್ತಿರುವ ಮಕ್ಕಳು. ಶಾಲೆಗೆ ಮತ್ತೆ ಸೇರಿಸಲು ಹೋದರೆ ಅಲ್ಲಿ ಪ್ರತಿರೋಧ. ಉಳಿದ ಮಕ್ಕಳು ಇವರಂತೆ ಆಗಿಬಿಟ್ಟರೆ ಎಂಬ ಭಯ. ಆದರೆ ಲಕ್ಷ್ಮಿನಾರಾಯಣರ ಸಂಕಲ್ಪಕ್ಕೆ ಇದು ಯಾವುದೂ ಅಡ್ಡಿ ಆಗಲೇ ಇಲ್ಲ. ಶಿಕ್ಷಣ ಇಲಾಖೆಯ ಮನ ಒಲಿಸಿ ಮಕ್ಕಳನ್ನು ಸ್ಕೂಲಿಗೆ ಸೇರಿಸುತ್ತಾರೆ.ಏನಾದರು ಆದರೆ ತಾವೇ ಜವಾಬ್ದಾರಿ ಎಂದು ಅಭಯ ನೀಡುತ್ತಾರೆ. ಮೂರು ತಿಂಗಳ ಅವಧಿ ಸಿಗುತ್ತದೆ.

    ಈ ಸಮಯದಲ್ಲಿ ಒಂದಿಬ್ಬರು ಗೆಳೆಯರು ಲಕ್ಷ್ಮಿನಾರಾಯಣರ ಜೊತೆ ಸೇರುತ್ತಾರೆ. ಸುಧಾರಣೆ ಮುಂದುವರಿಯುತ್ತದೆ. ಮೊದಲಿಗೆ ಹುಡುಗರನ್ನು ತಪ್ಪದೆ ಸ್ಕೂಲಿಗೆ ಕಳಿಸುವ ಕೆಲಸ. ಹೋಮ್ ವರ್ಕ್ ಮಾಡದಿದ್ದರೂ ಪರವಾಗಿಲ್ಲ .ಸ್ಕೂಲಿಗೆ ತಪ್ಪದೆ  ಹೋಗಿ ಬನ್ನಿ ಸಾಕು ಎಂದು ಮನವೊಲಿಸುತ್ತಾರೆ. ಸಂಜೆ ನಿತ್ಯ ಅವರಿಗೆ ಕಥೆ ಹೇಳುತ್ತಾರೆ. ಆಟ ಜೊತಗೆ ಪಾಠವನ್ನೂ ಮಾಡುತ್ತಾರೆ.

    ಮಾಡುವ ಕೆಲಸದಲ್ಲಿ ನಂಬಿಕೆ ಇದ್ದರೆ ಯಶಸ್ಸು ಸಿಗಲೇ ಬೇಕು. ಇಲ್ಲೂ ಹಾಗೆ ಆಯಿತು. ಲಕ್ಷ್ಮಿನಾರಾಯಣರ ನಿರೀಕ್ಷೆ ಹುಸಿಯಗಲಿಲ್ಲ. ಮಿಡ್ ಟರ್ಮ್ ಪರೀಕ್ಷೆಯಲ್ಲಿ ಮಕ್ಕಳು ಶೇಕಡ 25 ರಿಂದ 30ರಷ್ಟು ಅಂಕ ಪಡೆಯುವ ಮಟ್ಟಕ್ಕೆ ಸುಧಾರಿಸುತ್ತಾರೆ. ವಾರ್ಷಿಕ ಪರೀಕ್ಷೆ ವೇಳೆಗೆ ಪರಿಸ್ಥಿತಿ ಮತ್ತಷ್ಟು ಸುಧಾರಿಸಿ ಮಕ್ಕಳು ಪಾಸ್ ಆಗುವ ಅಂಕ ಪಡೆಯುವಲ್ಲಿ ಸಫಲರಾಗುತ್ತಾರೆ. ಓದಿನ ಕಡೆ ಗಮನ ಹೋಗಿದ್ದರಿಂದ ಸಹಜವಾಗಿಯೇ  ಈ ಮಕ್ಕಳಿದ್ದ ಪ್ರದೇಶದಲ್ಲಿ ಅಪರಾಧಗಳು ಕಡಿಮೆ ಆಗುತ್ತವೆ.  

    ಈ ಪ್ರಯೋಗ ಅವಕಾಶ ವಂಚಿತರಿಗೆ ಅವಕಾಶ ದೊರಕಿಸಿಕೊಟ್ಟರೆ ಎಂಥ ಪವಾಡ ಮಾಡಬಲ್ಲದು ಎಂಬುದನ್ನು ತೋರಿಸಿಕೊಡುತ್ತದೆ.  ಈ ಯಶಸ್ಸು ಲಕ್ಷ್ಮಿನಾರಾಯಣ ಮತ್ತು ಅವರ ಗೆಳೆಯರ ತಂಡವನ್ನು ಮತ್ತೆ ಹಿಂತಿರುಗಿ ನೋಡುವಂತೆ ಮಾಡಲಿಲ್ಲ. ವೈಯಕ್ತಿಕ ಪ್ರಯತ್ನವೊಂದು ಸಾಂಸ್ಥಿಕ ಸ್ವರೂಪ ಪಡೆದು ಅಭ್ಯುದಯವಾಯಿತು.

    ಯೋಗಾಯೋಗ

    ಟಿ ಆರ್ ವಿದ್ಯಾಶಂಕರ

    ಇಂಥದೇ ಒಂದು ಸಂದರ್ಭದಲ್ಲಿ ಅಮೆರಿಕದಿಂದ ಆಗತಾನೆ ವಾಪಸ್ಸಾಗಿದ್ದ ಟಿ ಆರ್ ವಿದ್ಯಾಶಂಕರ ಎಂಬ ಉತ್ಸಾಹಿ ಯೊಬ್ಬರ  ಪರಿಚಯ ಲಕ್ಷ್ಮಿನಾರಾಯಣ ಅವರಿಗೆ ಆಗುತ್ತದೆ. ಇಪ್ಪತ್ತೆರಡು ವರುಷ ಅಮೆರಿಕದಲ್ಲಿ ಕಂಪೆನಿಯೊಂದರ ಮುಖ್ಯಸ್ಥರಾಗಿ ದುಡಿದಿದ್ದ ವಿದ್ಯಾಶಂಕರ, ಅಭ್ಯುದಯದ ಕತೆ ಕೇಳಿ ಎಷ್ಟರ ಮಟ್ಟಿಗೆ ಪ್ರಭಾವಿತರಾದರು ಎಂದರೆ ತಮ್ಮನ್ನು ತಾವೆ ಅಭುದ್ಯಯಕ್ಕೆ ಒಪ್ಪಿಸಿಕೊಂಡು ಬಿಡುತ್ತಾರೆ.ಈಗ ಅಭ್ಯುದಯದ ಸಲಹೆಗಾರರು ಆಗಿರುವ ವಿದ್ಯಾಶಂಕರ ಅದನ್ನು ಮತ್ತಷ್ಟು ಎತ್ತರಕ್ಕೆ ಒಯ್ಯಲು ಕಾರಣಕರ್ತರಾದರು. ವಿದ್ಯಾಶಂಕರ ತಮಗೆ ಸಿಕ್ಕಿದ್ದು ಯೋಗಾಯೋಗ ಎನ್ನುತ್ತಾರೆ ಲಕ್ಷ್ಮಿನಾರಾಯಣ. ವಿದ್ಯಾಶಂಕರ ಅವರ ಪಾಂಡಿತ್ಯ ಅಭ್ಯುದಯಕ್ಕೆ ಒಂದು ವರದಾನವಾಗಿದೆ.

    ಆ ಹನ್ನೆರಡು ಮಕ್ಕಳ ಅಭ್ಯುದಯದಿಂದ ಆರಂಭವಾದ ಈ ಸಂಸ್ಥೆ   15 ವರ್ಷಗಳಲ್ಲಿ ಸಾಧಿಸಿದ್ದು ಅಪಾರ. ತನ್ನ ನೆಲೆಯನ್ನು ವಿಸ್ತರಿಸುತ್ತಾ ಸಾಮಾಜಿಕವಾಗಿ ಆರ್ಥಿಕವಾಗಿ ಅವಕಾಶ ವಂಚಿತರ ಬಾಳಿನ ಬೆಳಕಾಗುತ್ತಾ ಮುನ್ನಡೆದಿದೆ.

    ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶಾಲಾನಂತರದಲ್ಲಿ ಶಿಕ್ಷಣ ನೀಡುವ ಕಲಿಕಾ ಕೇಂದ್ರಗಳು (25000 ವಿದ್ಯಾರ್ಥಿಗಳು) ಎಸ್‌ಎಸ್‌ಎಲ್ ಸಿ  ಮತ್ತು ಪಿಯುಸಿ  ವಿದ್ಯಾರ್ಥಿಗಳಿಗಾಗಿ ಜ್ಞಾನಗಿರಿ(1600 ವಿದ್ಯಾರ್ಥಿಗಳು), ಆರ್ಥಿಕ ನೆರವು ನೀಡುವ ವಿದ್ಯಾನಿಧಿ(5000 ಫಲಾನುಭವಿಗಳು), ವೃತ್ತಿಪರ ಹಾಗೂ ಮನೋವೈಜ್ಞಾನಿಕ ಸಲಹೆ ನೀಡುವ ಉನ್ನತಿ, ವಾರ್ಷಿಕ ಸ್ಪರ್ಧೆಗಳ ಆರೋಹಣ, ಆವಶ್ಯಕತೆ ಇರುವ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಚೇತನ (125 ಫಲಾನುಭವಿಗಳು), ಮದ್ಯ ಮಾದಕ ವ್ಯಸನಿಗಳ ಹಾಗೂ ಅಪರಾಧಿಗಳ ಪರಿವರ್ತನೆ ಮಾಡುವ ಪರಿವರ್ತನಾ(510 ಕುಟುಂಬ), ಕಾಲೇಜು ವಿದ್ಯಾರ್ಥಿಗಳಿಗಾಗಿ ಸ್ವಯಂ ಸೇವಕ ಸೇವಾವೃತ್ತಿ ನೀಡುವ ಸೇವಾ ಹಾಗೂ ಆಯ್ದ ಗ್ರಾಮೀಣ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸುವ ನಮ್ಮ ಶಾಲೆ  (43 ಶಾಲೆಗಳು) ಹೀಗೆ ಹಲವಾರು ಚಟುವಟಿಕೆಗಳು ನಿರಂತರ ನಡೆಯುತ್ತಿವೆ.

    ಅಭ್ಯುದಯದಿಂದ ಉನ್ನತಿ ಹೊಂದಿದ ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ ಅತ್ಯಂತ ಗಣ್ಯ ಸ್ಥಾನ ಪಡೆದಿದ್ದು ಅದರಲ್ಲಿ ಅನೇಕರು ಇಂದು ಕೆರೆಯ ನೀರನು ಕೆರೆಗೆ ಚೆಲ್ಲುಎಂಬಂತೆ ಈ ಸಂಸ್ಥೆಯ ಉನ್ನತಿಗಾಗಿ ಬೆಂಬಲವಾಗಿ ನಿಂತಿದ್ದಾರೆ. ಕೋವಿಡ್ ಸಂಕಷ್ಟ ಕಾಲದಲ್ಲಿ ಅಭ್ಯುದಯದ ನೂರಾರು ಸ್ವಯಂ ಸೇವಕರು ಹಗಲಿರಳು ಸ್ವಯಂಸೇವಕರಾಗಿ ಕೆಲಸ ಮಾಡಿದ್ದಾರೆ.ಮಾಸ್ಕ್ ಗಳನ್ನು ಹಂಚಿದ್ದಾರೆ . ಪಡಿತರ ಕಿಟ್ ಗಳನ್ನು ನೀಡಿದ್ದಾರೆ. ಸ್ಯಾನಿಟೈಜರ್ ವಿತರಿಸಿದ್ದಾರೆ.

    They alone live, who live for others-ಪರರಿಗಾಗಿ ಜೀವಿಸುವವರೆ ಜೀವಿತರು ಎನ್ನುವ ವಿವೇಕವಾಣಿಯಂತೆ ಕೆಲಸ ಮಾಡುತ್ತಿರುವ ಅಭ್ಯುದಯದ ನೂರಾರು ಕುಟುಂಬಗಳ ನೆಮ್ಮದಿಯ ಜೀವನಕ್ಕೆ ಕಾರಣವಾಗಿದೆ. ಬಿಡುವಾದಾಗ ಒಮ್ಮೆ ಅಭ್ಯುದಯಕ್ಕೆ ಹೋಗಿ ಬನ್ನಿ . ವಿಳಾಸ : ಜ್ಞಾನಗಿರಿ, #75 / 76, 4ನೇ ಅಡ್ಡ ರಸ್ತೆ , ಸೌದಾಮಿನಿ ಬಡಾವಣೆ, ಕೋಣನಕುಂಟೆ, ಬೆಂಗಳೂರು. ಮತ್ತಷ್ಟು ತಿಳಿಯಲು https://abhyudayakkss.org ಇಲ್ಲಿಗೆ ಭೇಟಿ ನೀಡಿ.

    ಅತಂತ್ರ ಸ್ಥಿತಿಯಲ್ಲಿ ನಿಸ್ಸಹಾಯಕ ಅನುದಾನರಹಿತ ಶಾಲಾ ಶಿಕ್ಷಕರು

    ಕೊವಿಡ್ ಅಟ್ಟಹಾಸದಲ್ಲಿ ಶಾಲಾ – ಕಾಲೇಜುಗಳಿಗೆ ಅನಿಯಮಿತ ರಜೆ ಘೋಷಣೆಯಿಂದ ರಾಜ್ಯಾದ್ಯಂತ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಆಡಳಿತ ಮಂಡಳಿಗಳು ಸಂಬಳ ನೀಡದ ಪರಿಣಾಮ ಜೀವನ ನಿರ್ವಹಣೆಗಾಗಿ ಮುಂದೇನು..? ಎಂಬ ಗೊಂದಲದಲ್ಲಿದ್ದಾರೆ.

    ರಾಜ್ಯದಲ್ಲಿ ಶಿಕ್ಷಕ ತರಬೇತಿ ಕೇಂದ್ರಗಳು ನಾಯಿಕೊಡೆಯಂತೆ ತಲೆ ಎತ್ತಿವೆ. ಪ್ರತಿ ವರ್ಷ ಸಾವಿರಾರು ತರಬೇತಿ ಶಿಕ್ಷಕರು ಪದವಿಯೊಂದಿಗೆ ಉದ್ಯೋಗ ನಿರೀಕ್ಷೆಯಲ್ಲಿ ಹೊರಬರುತ್ತಾರೆ. ಸರ್ಕಾರದಿಂದ ಶಿಕ್ಷಣ ಇಲಾಖೆಗೆ ಭರ್ತಿ ಮಾಡುವ ಪ್ರಕ್ರಿಯ ಅನಿಶ್ವಿತ. ಕೆಲವರಿಗೆ ಮಾತ್ರ ಮೆರಿಟ್ ಮೂಲಕ ಉದ್ಯೋಗ ಸಿಗವುದು. ಉಳಿದವರಿಗೆ ಅನುದಾನ ರಹಿತ ಶಾಲೆಗಳೇ ಗತಿ. ಪ್ರತಿಷ್ಠಿತ ಖಾಸಗಿ ಸಂಸ್ಥೆಗಳಲ್ಲಿ ಕೈ ತುಂಬಾ ಸಂಬಳ ನೀಡುವರು. ಸರ್ಕಾರಿ ಶಿಕ್ಷಕರ ಸಂಬಂಳಕ್ಕೆ ಹೋಲಿಸಿದರೆ ಅರ್ಧದಷ್ಟು ಸಂಬಳ ಬಹುತೇಕ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಸಿಗುವುದಿಲ್ಲ.

    ರಾಜ್ಯದಲ್ಲಿ ಸುಮಾರು 23 ಸಾವಿರ ಅನುದಾನ ರಹಿತ ಶಾಲೆಗಳು

    ರಾಜ್ಯದಲ್ಲಿ ಸುಮಾರು 23 ಸಾವಿರ ಅನುದಾನ ರಹಿತ ಶಾಲೆಗಳಿವೆ. ಹಾಗೆಯೇ 4.5 ಲಕ್ಷ ಶಿಕ್ಷಕರು ಉದ್ಯೋಗ ಭರವಸೆ ಇಲ್ಲದೆ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ಆಡಳಿತ ಮಂಡಳಿಯ ತೀರ್ಮಾನವೇ ಅಂತಿಮ. ಪ್ರಶ್ನಿಸುವಂತಿಲ್ಲ. ಬದುಕಿಗೆ ಅನ್ಯ ಮಾರ್ಗವಿಲ್ಲದೇ ದುಡಿಯುವವರೇ. ಹೆಚ್ಚು. ಬಹುಪಾಲು ಶಿಕ್ಷಕರಿಗೆ ಈ ಸಂಬಳವೇ ಜೀವನಾಧಾರ.

    ಅನುದಾನ ರಹಿತ ಬಹುಪಾಲು ಶಾಲೆಗಳಲ್ಲಿ ಬೇಸಿಗೆ ರಜೆಯಲ್ಲಿ ಸಂಬಳ ಕೊಡುವುದಿಲ್ಲ. ಜೂನ್ ತಿಂಗಳಿನಲ್ಲಿ ಶಾಲೆ ಆರಂಭವಾದ ನಂತರ ಸಂಬಳ ನೀಡುವುದು ಪರಿಪಾಠ. ಖಾಸಗಿ ಆಡಳಿತ ಮಂಡಳಿಗಳು ಕೊಟ್ಟಷ್ಟೆ ಸಂಬಳ, ಕೊಡದಿದ್ದರೆ ಪ್ರಶ್ನೆ ಮಾಡುವಂತಿಲ್ಲ. ಪ್ರಶ್ನೆ ಮಾಡಿದರೆ ಕೆಲಸ ಇಲ್ಲ. ಸಾಕಷ್ಟು ನಿರುದ್ಯೋಗಿ ತರಬೇತಿ ಪಡೆದ ಶಿಕ್ಷಕರ ಲಭ್ಯತೆಯ ಸದರವೇ ಖಾಸಗಿ ಆಡಳಿತ ಮಂಡಳಿಗಿರುವ ಅಸ್ತ್ರ.

    ಕೊರೊನಾದ ಭೀತಿಯಲ್ಲಿ ಶಾಲೆಗಳು ಆರಂಭವಾಗುವ ನಿರ್ದಿಷ್ಟ ದಿನ ಯಾರಿಗೂ ಹೇಳಲಾಗುತ್ತಿಲ್ಲ. ಅಲ್ಲಿವರೆಗೂ ಸಂಬಳ ಇಲ್ಲ. ಇತರ ಉಪ ಕಸುಬುಗಳ ಕೌಶಲ್ಯ ತಿಳಿಯದ ಬಹುಪಾಲು ಶಿಕ್ಷಕರಿಗೆ ಮುಂದೇನು ಎಂಬುವ ಯಕ್ಷ ಪ್ರಶ್ನೆ ಕಾಡುತ್ತಿದೆ. ಸಾಕಷ್ಟು ವಂತಿಗೆ ಸ್ವೀಕರಿಸುವ ಖಾಸಗಿ ಶಾಲೆಗಳು ಸಂಬಳ ನೀಡಲು ನಿರಾಕರಿಸಿವೆ. ಇದರಿಂದ ಶಾಲಾ ಆಡಳಿತ ಮಂಡಳಿ ಭೇಟಿ ಮಾಡಿದ ಶಿಕ್ಷಕರು ನಿರೀಕ್ಷಿತ ಭರವಸೆ ಸಿಗದೆ ಅಳುತ್ತಾ ಮನೆ ಸೇರಿದ್ದಾರೆ. 10 ರಿಂದ 15 ವರ್ಷ ಸೇವೆ ಸಲ್ಲಿಸಿದ ಶಿಕ್ಷಕರ ಭವಿಷ್ಯವೂ ಕರಾಳವಾಗಿದೆ. ದಶಕಗಳ ಅವಿರತ ಸೇವೆಗೆ ಕನಿಷ್ಠ ಮೌಲ್ಯವೂ ಇಲ್ಲದೆ ಶೋಷಣೆಯಂತಾಗಿದೆ ಎನ್ನುತ್ತಾರೆ ಅವರು.

    ಖಾಸಗಿ ಅನುದಾನ ರಹಿತ ಶಾಲೆಯ ಶಿಕ್ಷಕಿಯೊಬ್ಬರು ಸಂಬಳದಿಂದಲೇ ತಂದೆ-ತಾಯಿ ಹಾಗೂ ಮಗಳನ್ನು ಸಾಕಾಬೇಕಾಗಿದೆ. ಬೇರೆ ಕೆಲಸ ಗೊತ್ತಿಲ್ಲದೆ ಜೀವನವೇ ಕಷ್ಟವಾಗಿದೆ ಎಂದು ಅಲವತ್ತುಕೊಳ್ಳುತ್ತಾರೆ.

    ಕೆಲವು ಸಂಸ್ಥೆಗಳಲ್ಲಿ ಕೇವಲ ರೂ.5 ಸಾವಿರ ಸಂಬಳಕ್ಕೆ ಶಿಕ್ಷಕರಾಗಿ ದುಡಿಯುತ್ತಿದ್ದಾರೆ. ಆರ್ಥಿಕ ಸಬಲವಾಗಿರುವ ಸಂಸ್ಥೆಗಳು ಹೆಚ್ಚು ಸಂಬಳ ನೀಡುತ್ತಿವೆ. ಸಾಕಷ್ಟು ವಂತಿಗೆ ಸಂಗ್ರಹಿಸುವ ಖಾಸಗಿ ಆಡಳಿತ ಮಂಡಳಿಗಳು ರಜೆಯಲ್ಲೂ ಶಿಕ್ಷಕರಿಗೆ ಸಂಬಳ ನೀಡಲು ಯೋಜನೆ ರೂಪಿಸಿಕೊಳ್ಳಬೇಕು.

    ಶಾಲಾ ನಿರ್ವಹಣೆಯೇ ಕಷ್ಟ

    ಗ್ರಾಮಾಂತರ ಪ್ರದೇಶದ ಖಾಸಗಿ ಶಾಲೆಗಳಲ್ಲಿ ಆಡಳತ ಮಂಡಳಿಗೆ ಶಾಲಾ ನಿರ್ವಹಣೆಯೇ ಕಷ್ಟವಾಗಿದೆ. ಶಾಲಾ ಬಸ್, ವೇತನ, ಮೂಲ ಸೌಕರ್ಯಗಳಿಗೆ ಬಜೆಟ್ ಮಾಡುವ ಲೆಕ್ಕಚಾರದಲ್ಲಿ ಮುಳುಗಿವೆ. ಅಕಾಲಿಕ ಶಾಲಾವಧಿ ಮುಗಿದ ಕಾರಣ ಫೀಸ್ ಸಂಗ್ರಹಣೆ ಆಗದೆ ಆರ್ಥಿಕ ಮುಗ್ಗಟ್ಟು ಅನುಭವಿಸುತ್ತಿವೆ ಎನ್ನುತ್ತಾರೆ ಖಾಸಗಿ ಶಾಲೆಯ ಮುಖ್ಯಸ್ಥ.

    ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿನ ಶಿಕ್ಷಕರ ಉದ್ಯೋಗ ಭದ್ರತೆಗೆ ಸರ್ಕಾರ ಸಕ್ರಮ ಯೋಜನೆ ರೂಪಿಸಬೇಕು ಎನ್ನುತ್ತಾರೆ ಶಿಕ್ಷಕ ವೃಂದ.

    ಅನುದಾನ ರಹಿತ ಶಾಲಾ ಶಿಕ್ಷಕರ ಭದ್ರೆತೆಗೆ ಈಚೆಗೆ ನಡೆದ ಖಾಸಗಿ ಸಂಸ್ಥೆಗಳ ಸಭೆಯಲ್ಲಿ ಚಿಂತನೆ ನಡೆಯಿತು. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ವಂತಿಗೆ ಪಡೆಯಲು ಆಗುತ್ತಿಲ್ಲ. ಇದರಿಂದ ನಗರದ ಸೌಲಭ್ಯ ನೀಡಲು ಹೆಣಗಾಡುತ್ತಿವೆ. ಸರ್ಕಾರವೂ ಕೈ ಜೋಡಿಸಿದಲ್ಲಿ ಶಿಕ್ಷಕರಿಗೆ ಉದ್ಯೋಗ ಭದ್ರತೆ ನೀಡಲು ಸಿದ್ಧ ಎನ್ನುತ್ತಾರೆ ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಗುರುಬಸವ ಸ್ವಾಮೀಜಿ.

    ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ವಂತಿಗೆ ಪಡೆಯಲು ಆಗುತ್ತಿಲ್ಲ. ಇದರಿಂದ ನಗರದ ಸೌಲಭ್ಯ ನೀಡಲು ಹೆಣಗಾಡುತ್ತಿವೆ. ಸರ್ಕಾರವೂ ಕೈ ಜೋಡಿಸಿದಲ್ಲಿ ಶಿಕ್ಷಕರಿಗೆ ಉದ್ಯೋಗ ಭದ್ರತೆ ನೀಡಲು ಸಿದ್ಧ –ಶ್ರೀಗುರುಬಸವ ಸ್ವಾಮೀಜಿ. ವಿರಕ್ತಮಠ. ಪಾಂಡೋಮಟ್ಟಿ.

    ಈಚೆಗೆ ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ. ಪಟೇಲ್ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಸೂಕ್ತ ಉದ್ಯೋಗ ಭದ್ರತೆ ವಹಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ.

    ಅತಂತ್ರ ಸ್ಥಿತಿ

    ಎಲ್ಲಾ ಬೆಳವಣಿಗೆ ಗಮನಿಸಿದರೆ ಒಂದೆಡೆ ಆಡಳಿತ ಮಂಡಳಿ ಇನ್ನೊಂದೆಡೆ ಸರ್ಕಾರ ಅನುದಾನ ರಹಿತ ಶಾಲಾ ಶಿಕ್ಷಕರನ್ನು ಅತಂತ್ರ ಸ್ಥಿತಿಯಲ್ಲಿಟ್ಟಿರುವುದು ಗೊತ್ತಾಗುತ್ತದೆ.

    ಮನಬಂದಂತೆ ಖಾಸಗಿ ಶಾಲೆಗಳಿಗೆ ಅನುಮತಿ ನೀಡುವಾಗ ಶಿಕ್ಷಕರ ವೇತನ ಹಾಗೂ ಭದ್ರತೆ ಬಗ್ಗೆ ನಿಯಮ ರೂಪಿಸಬೇಕು. ಕನಿಷ್ಠ ಜೀವನ ನಿರ್ವಹಣೆ, ಕಾಲಕಾಲಕ್ಕೆ ಭತ್ಯೆಗಳನ್ನು ಹೆಚ್ಚಿಸುವ ವೇತನ ನೀಡಲಾಗುತ್ತಿದೆಯೇ ಪರಿಶೀಲಿಸಬೇಕು. ಇಲ್ಲವಾದಲ್ಲಿ ಸರ್ಕಾರಿ ಶಾಲೆಗಳನ್ನೆ ಹೆಚ್ಚು ಆರಂಭಿಸುವ ಮೂಲಕ ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕಬೇಕು. ಪಟ್ಟಭದ್ರರ ಓಲೈಕೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರವೇ ಬೆಂಬಲ ನೀಡಿದರೆ ಶಿಕ್ಷಕರ ಪಾಡೇನು…?

    ದೂರುತ್ತಾ ಕುಳಿತರೆ,ನಿನ್ನ ಜೀವನವೆ ನಿನ್ನಿಂದ ದೂರ Lets start fresh…Cheer up…

    ಕೋವಿಡ್ ಜಾಸ್ತಿ ಆದ ಹಿನ್ನೆಲೆಯಲ್ಲಿ ಮೊನ್ನೆ ಶನಿವಾರ ಬೆಂಗಳೂರು ಬಿಟ್ಟು ನೂರಾರು ಮಂದಿ ತಮ್ಮ ತಮ್ಮ ಊರಿನತ್ತ ಹೊರಟಾಗ ಮೂರು ನಾಲ್ಕು ವರುಷಗಳ ಹಿಂದೆ ಪರಪಂಚ ಸಿನಿಮಾಕ್ಕೆ ಯೋಗರಾಜ ಭಟ್ಟರು ಬರೆದಿದ್ದ ಈ ಹಾಡು ಇದ್ದಕ್ಕಿದಂತೆ ವೈರಲ್ ಆಯಿತು. ಹುಟ್ಟಿದ ಊರನ್ನು ಬಿಟ್ಟು ಬಂದ ಮೇಲೆ ಇನ್ನೇನು ಬಿಡುವುದು ಬಾಕಿ ಇದೆ………..ವಾಪಸ್ಸು ಹೋಗು ಮಗನೆ….ಸೀದಾ ನಡಿ ಬಸ್ಸು ಹಿಡಿ ...ಎಂಬ ಈ ಹಾಡಿನಲ್ಲಿ ಪಟ್ಟಣಕ್ಕೆ ಬಂದು ಒದ್ದಾಡುತ್ತಿರುವವರ ಬದುಕನ್ನು ಭಟ್ಟರು ಚೆನ್ನಾಗಿ ವರ್ಣಿಸಿದ್ದರು.

    ನನಗೂ ಈ ಹಾಡನ್ನು ಮತ್ತೊಮ್ಮೆ ಕೇಳಿದ ಮೇಲೆ ಹೌದಲ್ಲವೆ ಎಂದು ಅನ್ನಿಸಿತು. ಕೋಟಿ ವಿದ್ಯೆಯಲ್ಲಿ ಮೇಟಿ ವಿದ್ಯೆ ಮೇಲು ಎಂದಿದ್ದ ನಮ್ಮ ಹಿರಿಯರ ಮಾತಲ್ಲಿದ್ದುದು ಸ್ವಂತ ಮತ್ತು ಸ್ವಾವಲಂಬನೆಯ ಬದುಕಿನೆಡೆಗಿದ್ದ ಅವರ ಅನುಭವದ ಸಾರ. ವೃತ್ತಿಗಳನ್ನು ವಂಶ ಪಾರಂಪರ್ಯ ಮಾಡಿ,ಸಮಾಜದಲ್ಲಿ ವೃತ್ತಿ ಗೌರವಕ್ಕೆ ಚ್ಯುತಿ ಬರದ ಹಾಗೆ,ಸಾಮರಸ್ಯ ಕಂಡುಕೊಂಡಿದ್ದ ನಮ್ಮ ಪೂರ್ವಿಕರ ಬದುಕು, ಸಮಾಜ ಆರೋಗ್ಯಕರವಾಗಿತ್ತು. ವೃತ್ತಿಗಳಲ್ಲಿ ಒಡೆಯ,ಸೇವಕನ ಮಧ್ಯೆ ಅಂತಹ ದೊಡ್ಡ ಕಂದಕ ಇರಲಿಲ್ಲ. ಕಾರಣ ವಂಶ ಪಾರಂಪರ್ಯ ವೃತ್ತಿ. ಮಗನೊ,ಸೋದರ ಸಂಬಧಿಯೊ ಹೆಚ್ಚಾಗಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದುದರಿಂದ ಈಗಿನಂತಹ ಕಿರುಕುಳ,ವೃತ್ತಿ ಬೇಸರ,ಖಿನ್ನತೆ, ಸೇವಕತನದ ಮನೋಭಾವ,ಒಡೆತನದ ಗತ್ತು ಮುಂತಾದುವುಗಳಿಗೆ ಆಸ್ಪದ ಇರಲಿಲ್ಲ.

    ವೃತ್ತಿಯೇ ಜೀವನ ಆಗಿರಲಿಲ್ಲ

    ವೃತ್ತಿಯೇ ಜೀವನ ಆಗಿರಲಿಲ್ಲ,ಜೀವನಕ್ಕಾಗಿ ವೃತ್ತಿ ಆಗಿತ್ತು ಆಗ. ಓದು ಒಕ್ಕಾಲು, ಬುದ್ಧಿ ಮುಕ್ಕಾಲು ಅನ್ನುವ ಮೂಲಕ ಕ್ರಮ ಶಿಕ್ಷಣಕ್ಕಿಂತಲೂ ಲೋಕ ಜ್ಞಾನದ ಕಡೆಗೆ ಹೆಚ್ಚು ಗಮನ ಹರಿಸಿ,ಬದುಕನ್ನು ಸಾರ್ಥಕವಾಗಿ ಅನುಭವಿಸಿ,ಅನಂದಿಸಿದ್ದರು. ಅವರ ಜೀವನ ಕ್ರಮದಲ್ಲಿ ಪ್ರತಿ ಹಂತದಲ್ಲೂ ಒಂದು ಅರ್ಥಗರ್ಭಿತವಾದ ಸಂಯಮವನ್ನು,ಅಂತರವನ್ನು ಕಾಯ್ದುಕೊಂಡು ಆರೋಗ್ಯಕರವಾದ ಸಮಾಜದ ನಿರ್ಮಾತೃಗಳಾಗಿ ಬಾಳಿರುವುದನ್ನು ಕಾಣುತ್ತೇವೆ. ಆಗಿನ ವೃತ್ತಿ ಎಂದರೆ ಸಮಾಜಕ್ಕೆ ಉಪಕಾರವಾಗುವಂಥ ಹುದ್ದೆ ಆಗಿರುತ್ತಿತ್ತು. ಹಾಗಾಗಿ ವೃತ್ತಿಯಲ್ಲಿ ಮೇಲಿರಿಮೆ,ಕೀಳರಿಮೆ ಎನ್ನುವಂತಹದು ಇರಲಿಲ್ಲ. ಏನಾದ್ರೂ ಇದ್ದರೆ,ಅವುಗಳು ಅನಿವಾರ್ಯ ಮಾತ್ರ ಎಂದು ಹೇಳಲು ಹಬ್ಬ,ಜಾತ್ರೆ,ಮದುವೆ ಮುಂತಾದ ಸಮಾರಂಭಗಳಲ್ಲಿ,ಸಮಾಜದ ಎಲ್ಲ ವೃತ್ತಿ ಪರರನ್ನು ಒಳಗೊಂಡ ವ್ಯವಸ್ಥೆ ಇರುತ್ತಿತ್ತು ಮತ್ತು ಅಂತಹ ಅಸಮಾಧಾನವನ್ನು ಇಲ್ಲವಾಗಿಸುತ್ತಿತ್ತು. ನಿಜಕ್ಕೂ ಅದ್ಭುತ ಎನ್ನಿಸುವಂತ ಸಾಮಾಜಿಕ ವ್ಯವಸ್ಥೆಯನ್ನು ನಮ್ಮ ಪೂರ್ವಿಕರು ಕಟ್ಟಿಕೊಂಡಿದ್ದರು.

    ಈ ವೃತ್ತಿ ಪರತೆಯೇ ನಂತರದ ಜಾತಿ ವ್ಯವಸ್ಥೆಗೆ ಭದ್ರ ಬುನಾದಿ ಆಯ್ತು ಅಂತ ಸಮಾಜ ಶಾಸ್ತ್ರಜ್ಞರ ಅಭಿಪ್ರಾಯ. ಇರಬಹುದು. ಆಶ್ವರ್ಯ ಇಲ್ಲ. ಎಂಜಿನಿಯರ್ ಆದ ನಾನು ಎಂಜಿನಿಯರನ್ನೇ ಮದುವೆ ಆಗಲು ಬಯಸುವುದು,ಹಲವಾರು ಬದುಕಿನ ಮಗ್ಗಲುಗಳನ್ನು ಅನಾಯಾಸ ಮಾಡುವ ಪ್ರಯತ್ನವೇ ಹೊರತು,ಯಾರನ್ನೋ ಹೀಯಾಳಿಸಲೊ,ಕೀಳರಿಮೆಯಿಂದ ನೋಡುವುದೋ ಅಲ್ಲ.

    ವ್ಯವಸ್ಥೆ ಯಾವುದೇ ಇರಲಿ,ದೋಷಗಳಿರುವುದು ಸಾಮಾನ್ಯ.ಕಾರಣ ಮನುಷ್ಯ ಇನ್ನು ವಿಕಾಸಗೊಳ್ಳುತ್ತಿದ್ದಾನೆಯೇ ಹೊರತು,ಪರಿಪೂರ್ಣನಾಗಿಲ್ಲ. ಇಂತಹ ಸಮೃದ್ಧ,ವೃತ್ತಿಪರತೆಯ,ಸ್ವಾವಲಂಬಿ ಬದುಕನ್ನು ಅನುಭವಿಸುತ್ತಿದ್ದ ಸಮಾಜಕ್ಕೆ ಮೇಲು,ಕೀಳು ಎಂಬ ಸೋಂಕು ತಗುಲಿತು. ಕೆಲವೆಡೆ ಅಮಾನವೀಯ ಮಟ್ಟಕ್ಕೂ ತಲುಪಿತು. ಹೊರಗಿನಿಂದ ಬಂದ ಅಕ್ರಮಣಕಾರರ ಅನ್ನಿಸಿಕೆಗಳು,ಇದೇ ಸಮಾಜದ ಅಂಗವಾಗಿದ್ದ ಕೆಲವು ವೃತ್ತಿ ಪರರಿಗೆ ಅನುಕೂಲಕರವಾಗಿ ಕೇಳಿಸಿತು. ಸಮಾಜದಲ್ಲಿ ವಿಕಲತೆ ಉಂಟಾಯ್ತು. ವಂಶ ಪಾರಂಪರ್ಯವಿದ್ದ ವೃತ್ತಿಗಳು ಪಲ್ಲಟವಾದವು,ಕನಿಷ್ಠ ಮಟ್ಟದ ಅಂತರವನ್ನಿಟ್ಟುಕೊಂಡು. ವೃತ್ತಿ ಗೌರವಗಳೂ ಎಲ್ಲ ಕಾಲದಲ್ಲೂ ಸಮ ಇತ್ತೆಂದು ಹೇಳಲು ಆಗಲ್ಲ. ದನ ಕಾಯುವುದು ಒಂದು ಕಾಲದಲ್ಲಿ ಶ್ರೇಷ್ಠ ಎನಿಸಿದ್ದು ,ಮತ್ತೊಂದು ಕಾಲದಲ್ಲಿ ಸಮಾಜದ ರಕ್ಷಣೆಗೆ ಅಂತ ಬೇರೆಯವರನ್ನು ಕೊಲ್ಲುವ ವೃತ್ತಿ ಶ್ರೇಷ್ಠ ಎನ್ನಿಸಿಕೊಳ್ಳುತ್ತದೆ.

    ವೃತ್ತಿ ಬದಲಾವಣೆಗೆ ಶಾಸ್ತ್ರಗಳು ಅವಕಾಶ ಕೊಟ್ಟಿದ್ದರೂ,ಅಂದಿನ ಸಾಮಾಜಿಕ ವ್ಯವಸ್ಥೆ ಅಷ್ಟೊಂದು ಬೆಂಬಲಿಸಿಲ್ಲ ಅಂತ ಕಾಣುತ್ತದೆ.ಅದಕ್ಕೆ ಪರ,ವಿರೋಧ ಕಾರಣಗಳು ಸಮ ಪ್ರಮಾಣದಲ್ಲಿವೆ. ಬ್ರಿಟಿಷರು ಬಂದರು. ಸಮಾನತೆಯ ಹೆಸರಲ್ಲಿ ದೇಶದ ಉದ್ದಗಲಕ್ಕೂ ಬೇರುಬಿಟ್ಟಿದ್ದ ಈ ವೃತ್ತಿಪರತೆಯ ಸಮಾಜವನ್ನು,ಅವರ ಒಡೆದು ಆಳುವ ನೀತಿಗೆ ಅನುವುಗೊಳಿಸಿಕೊಂಡು ಬೇರೆಯದೇ ರೀತಿಯ ಸಮಾಜದ ಉಗಮಕ್ಕೆ ನಾಂದಿ ಹಾಡಿದರು. ವೃತ್ತಿಪರತೆ ಯೋಗ್ಯತೆ ಆಧರಿಸಿ ಇರಬೇಕು,ವಂಶಪಾರಂಪರ್ಯ ಸಲ್ಲದು ಎನ್ನುವಂತಹ ಅಭಿಪ್ರಾಯವನ್ನು ಬಲವಾಗಿ ಬೆಂಬಲಿಸಿದ ಸಮಾಜವೊಂದರ ನಿರ್ಮಾಣಕ್ಕೆ ಕಾರಣ ಆಯ್ತು. ಅದನ್ನು ಕೆಲವು ಸಮಾಜ ತಜ್ಞರು ನವ ಸಮಾಜ ಎಂದರು.
    ಈ ನವಸಮಾಜದಲ್ಲಿ ವೃತ್ತಿಪರತೆಯಿಂದ ಉಂಟಾಗಿದ್ದ ಮೇಲು,ಕೀಲುಗಳು ಕಡಿಮೆಯಾಗಿ, ತಜ್ಞರು ಹೇಳಿದ ಹಾಗೆ ಸಮಾನತೆ ಉಂಟಾಗಿದ್ದು ನಿಜವಾದರೂ, ವೈಯಕ್ತಿಕವಾಗಿ ಆಯ್ಕೆ ಮಾಡಿಕೊಂಡ ವೃತ್ತಿ ಜೀವನಗಳಲ್ಲಿ ಹೇಳಲಾಗದ,ಅನುಭವಿಸಲಾಗದ ನೋವುಗಳು ಪ್ರಾರಂಭವಾದವು. ಅವುಗಳಿಗೆ ಖಿನ್ನತೆ,ಒತ್ತಡ,ವೃತ್ತಿ ಅಸಮಾಧಾನ ಅಂತಾನೂ ಹೆಸರಿಸಿದರು. ಅಷ್ಟೇ ಅಲ್ಲ ಇವುಗಳಿಗೆ ಸಂಬಂಧಿಸಿದ ಹಾಗೆ ಹಲವಾರು ಹತ್ಯೆಗಳು,ಆತ್ಮಹತ್ಯೆ ಗಳು ಸಮಾಜದಲ್ಲಿ ಸಾಮಾನ್ಯವಾದವು. ಯಾವ ವ್ಯವಸ್ಥೆಯೂ ಋಣಾತ್ಮಕ ಗುಣಗಳಿಗೆ ಅತೀತವಾಗಿಲ್ಲವಾದರೂ ತೀರಾ ಯುವ ಜನಾಂಗದ ಜೀವನಕ್ರಮಕ್ಕೇ ಮಾರಕ ವಾಗುತ್ತೆ ಅಂತಾದರೆ,ಅದನ್ನು ಗಂಭೀರವಾಗಿ ತೆಗೆದು ಕೊಳ್ಳಲೇ ಬೇಕು.

    ವೃತ್ತಿ ಆಯಿತು ನೌಕರಿ

    ಸಮಾಜದ ಬೇಡಿಕೆ ಪೂರೈಸಲು ಆರಂಭಗೊಂಡಿದ್ದ ವೃತ್ತಿಗಳು,ನವಸಮಾಜದಲ್ಲಿ ಜೀವನಕ್ಕಾಗಿ ಅನಿವಾರ್ಯವಾಯ್ತು. ಈಗ ಸರಕಾರಗಳು,ಖಾಸಗಿ ಒಡೆತನದ ಸಂಘ ಸಂಸ್ಥೆಗಳು ವೃತ್ತಿಗಳ ಬದಲಿಗೆ ನೌಕರಿಗಳನ್ನು ಕೊಡುವವರಾದರು. ಸಮಾನತೆಯ ನಿಲುವಿನಲ್ಲಿ ಉಂಟಾದ ನೌಕರಿ ವಿತರಣೆಯ ಅಸಮಾನತೆ ನಿವಾರಣೆಗೆ ಮತ್ತೆ ಜಾತಿಯ ಆಧಾರದಲ್ಲಿ ಆಯ್ಕೆಯ ಪ್ರಕ್ರಿಯೆ ನಾನಾ ತರಹದ ಸಮಸ್ಯೆಗಳಿಗೆ ನಾಂದಿ ಹಾಡಿತು. ಮೇಲು,ಕೀಳು ಇಲ್ಲೂ ತಪ್ಪಲಿಲ್ಲ!! ಮೇಲು,ಕೀಳೆಂಬುದು ಮನುಷ್ಯನ,ಸಮಾಜದ ಮಾನಸಿಕ ಭ್ರಮೆಯೇ ಹೊರತು ಅದಕ್ಕೆ ಬೌದ್ಧಿಕ ಅಸ್ತಿತ್ವ ಎನ್ನುವುದು ಇಲ್ಲ ಎನ್ನುವುದನ್ನು ತೋರಿಸಲು,ಆಧುನಿಕತೆಯ ನವಸಮಾಜವೂ ಎಡವಿತು. ಅದರ ಕಾರಣಗಳೇ ಒಂದು ಕಾಂಡ ಆಗುತ್ತೆ. ನನ್ನ ಉದ್ದೇಶ ಅದಲ್ಲ. ಹಳತನ್ನು ಬಿಟ್ಟು ಏನೇ ಹೊಸತನ್ನು ರೂಢಿಸಿಕೊಂಡರೂ,ಆಯ್ಕೆ ಮಾಡಿಕೊಂಡರೂ ಹಳತಿನ ಅಡ್ಡಪರಿಣಾಮಗಳನ್ನು ದಾಟಿ ಬರುವಂತಿರಬೇಕು. ಆದರೆ ನಮ್ಮ ನವಸಮಾಜದಲ್ಲಿ,ವಿದ್ಯಾಭ್ಯಾಸದ ಕ್ರಮದಲ್ಲಿ,ನೌಕರಿ ಗಳಿಸಿಕೊಳ್ಳುವ ಪ್ರಕ್ರಿಯೆಗಳಲ್ಲಿ,ಜೀವನ ಎನ್ನುವುದೊಂದು ಇದೆ,ಅದನ್ನು ಸವೆಯಲು ಏನೆಲ್ಲಾ ಬೇಕು,ಅವೆಲ್ಲವನ್ನೂ ಕಳೆದುಕೊಂಡು ಯಂತ್ರಗಳಾಗುತ್ತಿದ್ದೇವೆ ಎನ್ನುವ ಎಲ್ಲ ಲಕ್ಷಣಗಳೂ ಗೋಚರಿಸತೊಡಗಿದವು.

    ಸಮಾಜ ತಜ್ಞರು ಪ್ರತಿ ಸಮಸ್ಯೆಗೂ ಜನಸಂಖ್ಯೆ ಕಾರಣ ಅಂತ ಹೇಳಿ 10-12 ಒಡಹುಟ್ಟಿದವರೊಂದಿಗಿದ್ದ ಸಂಸಾರಗಳನ್ನು 2ಕ್ಕೆ ತಂದದ್ದು ಆಯ್ತು. ಸಮಸ್ಯೆ ದೊಡ್ಡದಾಯ್ತೇ ಹೊರತು ಪರಿಹಾರ ಸಿಗಲಿಲ್ಲ. 2-3 ಎಕರೆ ಭೂಮಿ ಹೊಂದಿ, ಕೈಕೆಲಸ ಅಂತ ಕರಿಸಿಕೊಂಡ ಸಮಾಜ ಮುಖಿ ವೃತ್ತಿ ಮಾಡಿಕೊಂಡು 10-12 ಮಕ್ಕಳೊಂದಿಗೆ ಸಂತೃಪ್ತಿ ಜೀವನ ಸಾಗಿಸಿದ್ದ ನಮ್ಮ ಹಿರಿಯರೊಂದಿಗೆ,ಇಂದಿನ 50 ಸಾವಿರ ಸಂಬಳದ,ಗಂಡ ಹೆಂಡತಿಯ ಎರಡು ನೌಕರಿಯ,2 ಮಕ್ಕಳ ಜೀವನ ಹೋಲಿಸಿಕೊಂಡ್ರೆ,ನಾವು ಕಳೆದುಕೊಂಡದ್ದು ಏನು ಅಂತ ಸ್ಪಷ್ಟವಾಗುತ್ತದೆ. ಒಂದು ಬೇಕೆಂದರೆ,ಮತ್ತೊಂದನ್ನು ಕಳೆದುಕೊಳ್ಳಬೇಕು ಎಂಬಂತಹ ಸಮಾಧಾನ ಹೇಳಿಕೊಳ್ಳುತ್ತ ಒಂದು ತಲೆಮಾರು ಕಳೆದು ಹೋಯ್ತು. ಸಿಕ್ಕಿದ್ದಕ್ಕಿಂತ ಕಳೆದುಕೊಂಡದ್ದೇ ಅಮೂಲ್ಯವಾದದ್ದು ಅಂತ ಒಪ್ಪಿಕೊಳ್ಳಲು ಯಾರೂ ತಯಾರಿಲ್ಲ. ತಯಾರಾಗಲು ಸಮಯ ಇಲ್ಲ!!

    ಬದಲಾವಣೆ ಜಗದ ನಿಯಮ ಜಗದ ಕ್ರಿಮಿಯಾದ ಮಾನವನೂ ಅದಕ್ಕೆ ಹೊರತಲ್ಲ. ಆದರೆ ವಿವೇಕದ ಬದಲಾವಣೆ ಇಲ್ಲದಿದ್ದರೆ,ಈಗಿನ ರೀತಿ ಮದುವೆಯಾದ 3 ತಿಂಗಳಿಗೆ ವಿಚ್ಛೇದನ, ಅತೀ ಸಣ್ಣದು ಎಂದೆನ್ನಿಸುವ ಒತ್ತಡವನ್ನು ತುಂಬಾ ದೊಡ್ಡವರಾದ IAS ಅಧಿಕಾರಿಗಳು,ಚಿತ್ರನಟರು ತಾಳದೆ ಆತ್ಮಹತ್ಯೆಗೆ ಶರಣಾಗುವುದು, ತನ್ನ ಮನೆ,ಹೆಂಡತಿ,ಮಕ್ಕಳು ಎನ್ನುವ ಸಂಕುಚಿತತೆ ತುಂಬಾ ವಿದ್ಯಾವಂತರು ಅಂತ ಅನ್ನಿಸಿಕೊಂಡವರಿಂದ ಬಿತ್ತರ ಗೊಳ್ಳುವುದು ಸಾಮಾನ್ಯವಾಗುತ್ತದೆ. ಆಗಿದೆ ಕೂಡ.

    ಇದಕ್ಕೆಲ್ಲ ಕಾರಣ ಸ್ವಯಂ ಬುದ್ಧಿ ಇಲ್ಲದ ಅಂಧಾನುಕರಣೆ, ಹುಸಿ ಪ್ರತಿಷ್ಠೆ,ಮೌಲ್ಯಯುತ ಜೀವನಕ್ಕೆ ಬೇಕಾದ ಮಾನವೀಯ ಸರಕುಗಳ ಕೊರತೆ. ನಾಲ್ಕು ಗೋಡೆಗಳ ಮಧ್ಯೆಯಿಂದ (ಈಗಂತೂ online education ಅಂತೆ) ಕೆಲಸಕ್ಕೆ ಬಾರದ ವಿಷಯಗಳನ್ನು ತಲೆಯಲ್ಲಿ ಒತ್ತಡ ಎನ್ನುವಷ್ಟು ತುರುಕಿಕೊಂಡು,ನೈಸರ್ಗಿಕವಾಗಿ ನಮ್ಮಲ್ಲಿರುವ ಮಾನವೀಯ ಗುಣಗಳನ್ನು ಕಳೆದುಕೊಂಡು, ಜೀವಂತ ಯಂತ್ರಗಳಾಗಿ,ವಿಶ್ವವಿದ್ಯಾಲಯ ಕೊಡುವ ಕಾಗದ ವನ್ನು ಜೀವ ಮಾನದ ಸಾಧನೆ ಅಂತ ಭಾವಿಸಿ ಹೊರಗೆ ಬರುತ್ತಿರುವುದು. ಬರುವಾಗ ತರುವ ಪ್ರತಿಷ್ಠೆ,ಸೊಕ್ಕು,ಅಮಾನವೀಯ ಅವತಾರ ತಾನು ಬಾಳಲು,ಸಮಾಜ ಬದುಕಲು ಎಷ್ಟರಮಟ್ಟಿಗೆ ಅನುಕೂಲವಾಗಬಹುದು ಎಂಬುದರ ಪರಿವೆಯೇ ಇಲ್ಲದೆ ಇರುವುದು ನಂತರದ ಎಲ್ಲ ಅನಾಹುತಕ್ಕೆ ಕಾರಣ.

    ಕರೊನ ಕಾರಣದಿಂದ ಇಂತಹ ಬಹಳಷ್ಟು ಮಂದಿ ನೌಕರಿ ಕಳೆದುಕೊಂಡು ಜೀವನ ಕೊನೆಯಾಯ್ತು ಅಂದುಕೊಂಡು,ಇಷ್ಟು ದಿನ ಸಾಕಿದ್ದ ಜಾಗಕ್ಕೂ,ಸಂಸ್ಥೆ ಗೂ ಹಿಡಿಶಾಪ ಹಾಕುತ್ತ ಮರಳಿ ಮನೆಕಡೆಗೆ ಅಂತ ಬರ್ತಿದ್ದಾರೆ. ಅವರಿಗೆ ಗೊತ್ತಿಲ್ಲ. ಆವರಂದು ಕೊಂಡ ಮನೆ,ಊರು, ಸಮಾಜ,ಹಿರಿಯರನ್ನು ಕಳೆದುಕೊಂಡು ತುಂಬಾ ದಿನಗಳಾಗಿವೆ ಎಂದು! ಮುಂದಿನ ದಿನಗಳಲ್ಲಿ ಇಂತಹವರ ಆತ್ಮಹತ್ಯೆಗಳು ಹೆಚ್ಚಾದರೂ ಆಶ್ಚರ್ಯ ಪಡಬೇಕಿಲ್ಲ. ಹೇಗೂ ಬೈಯುವುದಕ್ಕೆ ಕರೊನ ಇದೆ,ಚಿಂತೆ ಇಲ್ಲ.

    ಇವರಿಗೆ ಸ್ವಲ್ಪ ಪ್ರಾಪಂಚಿಕ ಜ್ಞಾನ ಇದ್ದರೆ,ಯಾರನ್ನೂ ಬಯ್ಯದೆ ನಗು ನಗುತ್ತಾ ಮುಂದಿರುವ ಭಾಗ್ಯದ ಬಾಗಿಲನ್ನು ತೆರೆಸುಕೊಂಡು ಬದುಕುವ ಬಗ್ಗೆ ತಿಳಿಸಬಯಸುತ್ತೇನೆ ಇಲ್ಲಿ.

    ಯಾವ ಸರ್ಕಾರಗಳೂ ದೇಶದ ಎಲ್ಲ ವಿದ್ಯಾವಂತರಿಗೆ ನೌಕರಿ ಕೊಡುವಷ್ಟು ಶಕ್ತರಲ್ಲ,ಅದು ಅಸಾಧ್ಯವೂ ಕೂಡ. ಕರೊನಾದಿಂದ ದೇಶದಲ್ಲಿ ಏರ್ಪಟ್ಟಿರುವ ಖಾಲಿ ಜಾಗಗಳಲ್ಲಿ ಎಲ್ಲೆಲ್ಲಿ ನೀವು ತುಂಬಿಕೊಳ್ಳಬಹುದು ಎನ್ನುವ ಆಲೋಚನೆಯನ್ನೊಮ್ಮೆ ತಣ್ಣನೆಯ ತಲೆಯಿಂದ ನೀವೇ ಮಾಡಿಕೊಂಡು ತುಲನೆ ಮಾಡಿ. ಯಾರಾದ್ರೂ ನಿಮಗೆ ಕರೆದು ನೌಕರಿ ಕೊಡಬೇಕು ಅನ್ನುವ ಮನೋಭಾವವನ್ನು ದಯಮಾಡಿ ಹೊರಹಾಕಿ,ದೂರ ತಳ್ಳಿ. ಆತ್ಮ ನಿರ್ಭರ ಎನ್ನುವ ಅಸ್ತ್ರವನ್ನು ಸರ್ಕಾರ ನಿಮ್ಮ ಕೈಗೆ ಕೊಡುತ್ತಿದೆ.

    ಅತಿರಥ ವೀರರಾದ ನೀವುಗಳು ಬಾಡಿಗೆ ಸೈನಿಕರಾಗಿ ಯಾರ್ಯಾರಿಗೋ ಯುದ್ಧ ಮಾಡಿದ್ದು ಸಾಕು. ನಿಮ್ಮ ಸಾಮ್ರಾಜ್ಯವನ್ನು ಕಟ್ಟಿ ಕೊಳ್ಳಿ. ನಿಮ್ಮಲ್ಲಿರುವ ಎಲ್ಲ ರೀತಿಯ ಶಕ್ತಿಗೂ ಪ್ರಕಟಗೊಳ್ಳಲು ಇದು ಸಕಾಲ. ಉದಾಹರಿಸಿ ಹೇಳುವುದಾದ್ರೆ ಚೀನಾ ದೇಶದ 59ಕ್ಕೂ ಹೆಚ್ಚು ‌app ಗಳನ್ನು ಸರ್ಕಾರ ನಿರ್ಬಂಧಿಸಿದ ವಿಷಯವನ್ನೇ ತೆಗೆದು ಕೊಂಡು ಯೋಚಿಸಿ. ನಿಮ್ಮಲ್ಲಿನ ಎಷ್ಟೋ ಜನಕ್ಕೆ ಈ app ಗಳಿಗೆ ಬದಲಾಗಿ ಅದೇ ಕೆಲಸದ ಪರ್ಯಾಯ app ಮಾಡುವ ಶಕ್ತಿ ಇರಬಹುದು. ಮತ್ತೂ ಕೆಲವರಿಗೆ ಬೇರೆಯವರಿಂದ ಮಾಡಿಸುವ ಕಲೆ ಗೊತ್ತಿರಬಹುದು,ಮತ್ತೂ ಕೆಲವರಿಗೆ ಇದರಿಂದ ದೇಶದಲ್ಲಿ ಉಂಟಾಗಿರುವ ತೊಂದರೆಯ ತೀವ್ರತೆಯನ್ನು ಯಾವ ರೀತಿ ನೀಗಿಸಬಹುದು ಎನ್ನುವ ಅಂಶದಲ್ಲಿ ಪರಿಣಿತಿ ಹೊಂದಿರಬಹುದು. ನಿಮ್ಮನ್ನು ನೀವು ಹೊರಹಾಕಿ ಕೊಳ್ಳಲು ಇದು ಹೇಳಿ ಮಾಡಿಸಿದ ಸಕಾಲ.

    Necessity is mother of Invention ಇಷ್ಟು ದಿನ ಯಾರೋ ಕರೆದು ನೌಕರಿ ಕೊಟ್ಟರೆಂದು ನಿಮ್ಮನ್ನೇ ಕಳೆದುಕೊಂಡಿರುವ ನೀವು ಧೈರ್ಯಗೆಡಬೇಡಿ. ನಿಮ್ಮನ್ನೇ ನಂಬಿಕೊಂಡಿರುವ ನಿಮ್ಮ ಸಂಸಾರಗಳಿವೆ. ಸೋಲನ್ನೂ ಸುಲಭವಾಗಿ ಒಪ್ಪಿಕೊಳ್ಳಬಾರದು. ಮತ್ತು ಸಾವೆಂದೂ ಯಾವ ಸಮಸ್ಯೆಗೂ ಉತ್ತರವಾದ ಉದಾಹರಣೆ ಇಲ್ಲ. ಜೀವಂತ ಇದ್ದ ನಾವು ಏನೂ ಮಾಡಲು ಆಗಲಿಲ್ಲ ಅಂದ್ರೆ,ಸತ್ತಾದ್ರೂ ಏನು ಸಾಧಿಸುವುದು, ಸುಡುಗಾಡಿಗೆ ಭಾರವಾಗಿ??
    ಮೀನನ್ನು ಮರ ಏರುವ ಸಾಮರ್ಥ್ಯ ದಿಂದ,ಯೋಗ್ಯತೆ ನಿರ್ಧರಿಸಿ, ಮಂಗಕ್ಕೂ,ಮೀನಿಗೂ ಸಮಾನತೆ ಕಲ್ಪಿಸುವ ಭರದಲ್ಲಿ ಕಳೆದುಹೋಗಿರುವ ನಾವು,ನಮ್ಮ ತನವನ್ನು ನಾವೇ ತಿಳಿದು ಜಗತ್ತಿಗೆ ತೋರಿಸಬೇಕು. ಮರ ಏರುವಲ್ಲಿ ವಿಫಲರಾದರೇನು,ಈಜುವುದರಲ್ಲಿ ಸಿದ್ಧಹಸ್ತವಿರುವ ನಾವು ನೀರನ್ನು ಹುಡುಕಿ ಹೋಗೋಣ. ಯಾರೋ ಮೂರ್ಖ ಮರ ಏರುವ ಸ್ಪರ್ಧೆ ಇಟ್ಟರೆ,ಭಾಗ ವಹಿಸುವ ಮೀನಿನಂತಹ ನಾವು ಶತಮೂರ್ಖರಲ್ಲವೇ??? ಇದಕ್ಕೆ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ದೂರಲೇ? ಅದಕ್ಕೆ ನಿಜವಾಗಲೂ ಸಮಯ ಇದೆಯಾ ನಮ್ಮಲ್ಲಿ? ದೂರುತ್ತಾ ಕುಳಿತರೆ,ನಿನ್ನ ಜೀವನ ನಿನ್ನಿಂದ ದೂರ ಆಗುತ್ತೆ. Lets start fresh…Cheer up…

    ಚಿತ್ರ ಸೌಜನ್ಯ : Steve Halama on Unsplash

    ಇಂತಿ ನಿಮ್ಮ ಚಿತ್ರಮಂದಿರ

    ನೆರಳು ಬೆಳಕಿನ ಆಟದ ಮನೆಯಂತಹ ನನ್ನ ಮನಸ್ಸೆಂಬ ಮೈದಾನದಲ್ಲಿ ಹಾಕಿದ್ದ ಕುರ್ಚಿಗಳಲ್ಲಿ ಕುಳಿತು ಕಳೆದುಹೋದ ನಿಮ್ಮ ನಡುವೆ ನಾನೂ ಒಬ್ಬನಾಗಿ ಕಂಡುಕೊಂಡ ಸತ್ಯವೆಷ್ಟೊ ಸಾಕ್ಷಿಯಾದ ಸಂಭ್ರಮಗಳೆಷ್ಟೊ .

    ಅದು ನನ್ನ ಸುದೀರ್ಘ ಬದುಕಿನ ಸಂತೋಷದ ದಿನಗಳು, ತನ್ನ ತಂದೆಯ ಕೈ ಹಿಡಿದು ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಮೊದಲ ಬಾರಿಗೆ ನನನ್ನು ನೋಡಲು ಬಂದ ಮಗುವಿನ ಕಣ್ಣಲ್ಲಿ ಕಂಡ ರೋಮಾಂಚನ, ಮುನಿದು ಕುಳಿತ ಪ್ರೇಮಿಯ ಕೆನ್ನೆಗೆ ಯಾರೂ ಕಾಣದಂತೆ ಸಿಹಿ ಮುತ್ತನ್ನಿಟ್ಟ ಹುಡುಗನಲ್ಲಿ ಕಂಡ ಸಾರ್ಥಕತೆಯ ನಡುವೆ ಮುನಿಸು ಮರೆತ ಗೆಳೆಯರುಗಳೆಷ್ಟೊ ದಿಗಿಲು ಮರೆತ ದಂಪತಿಗಳೆಷ್ಟೊ ಹೀಗೆ ದಿನಕ್ಕೊಂದು ಕತೆ ಹೇಳುವ ದಿವ್ಯ ದೃಷ್ಟಿ ಇರುವ ಅಜ್ಜಿಯ ಹಾಗೆ ನಿಮಗೆಲ್ಲ ಕತೆ ಹೇಳುತ್ತಾ, ಕಪ್ಪು ಬಿಳುಪಿನ ಬಣ್ಣ ಬಣ್ಣದ ಕತೆಗಳನ್ನ ತೋರಿಸುತ್ತ ನಿಮ್ಮದೇ ಜೀವನದಲ್ಲಿ ನೆಡೆದ ಅವಿಸ್ಮರಣೀಯ ಘಟನೆಗಳಿಗೆ ಸಾಕ್ಷಿಯಾದದ್ದು ನನ್ನ ಅದೃಷ್ಟವಲ್ಲದೆ ಇನ್ನೇನು?

    ಅಷ್ಟೇ ಅಲ್ಲ ಮಹಾನ್ ನಟರ ನಿಮ್ಮ ನೆಚ್ಚಿನ ತಾರೆಯರ ಸಿನಿಮಾ ಬಿಡುಗಡೆಯ ದಿನವಂತೂ ತಳಿರು ತೋರಣಗಳಿಂದ ಸಿಂಗಾರಗೊಂಡು, ತಮಟೆ ಜಾಗಟೆಗಳ ಅಭಿಮಾನಿಗಳ ಜಯಘೋಷದ ಪುಷ್ಪವರ್ಷದಲ್ಲಿ ಮಿಂದೆದ್ದು ನಾನು ನಾನಾಗಿದ್ದಕ್ಕೆ ಎಷ್ಟು ಹೆಮ್ಮೆಪಟ್ಟಿದ್ದೆ .

    ಆದರೆ ಈಗ ಏನೆಂದುಹೇಳುವುದು ಇದ್ದಕ್ಕಿದ್ದಂತೆ ಮನುಕುಲಕ್ಕೆ ಧೂಮಕೇತುವಿನಂತೆ ಬಂದೆರಗಿದ ಮಹಾಮಾರಿಯಿಂದಾಗಿ ದೇಶಾನುದೇಶಗಳೇ ನಲುಗಿ ಹೋಗಿದೆಯಂತೆ, ಜನಜೀವನವೇ ಅಸ್ತವ್ಯಸ್ತವಾಗಿದೆಯಂತೆ, ಇನ್ನು ನನ್ನಂತ ಬಡಪಾಯಿಯ ಕಥೆ ? ಕಣ್ಣು ಬಿಟ್ಟಷ್ಟು ದೂರ ಬರಿ ಕತ್ತಲು, ಮುಚ್ಚಿದ ಕಿಟಕಿ ಬಾಗಿಲು ಮುರಿದು ಬಿದ್ದ ಸೀಟುಗಳ ನಡುವೆ ಮನರಂಜನೆಯೆಂಬ ಕೀರಲಾದ ನನ್ನ ಕ್ಷೀಣ ಧ್ವನಿ ಕೇಳುದಾದರೂ ಹೇಗೆ ಇರಲಿ ಕೇಳಿಸುದಾದರೂ ಯಾರಿಗೆ ಇರಲಿ !

    ಎಂತೆಂತಹದೋ ಭೀಕರ ಭೀಬತ್ಸಗಳನ್ನ ಮೆಟ್ಟಿ ನಿಂತ ಈ ರೋಗ ಒಂದು ಲೆಕ್ಕವೇ ? ಆಯುರ್ವೇದ ವೈದ್ಯವಿಜ್ಞಾನ ಹಾಗೂ ಪ್ರಕೃತಿದತ್ತವಾದ ಆತನ ಬುದ್ದಿ ಮತ್ತೆಯ ಸಹಾಯದಿಂದ ಇನ್ನೇನು ಕೆಲವೇ ಕೆಲವು ಸಮಯದಲ್ಲಿ ಆತ ಮೊದಲಿನಂತಾಗಬಲ್ಲ ಎಂಬ ವಿಶ್ವಾಸ ನನಗಿದೆ ಯಾಕೆಂದರೆ ನನಗಂತೂ ನಮ್ಮ ಸಂಭ್ರಮದ ದಿನಗಳನ್ನ ಸಿಂಗಾರಗೊಂಡು ಬರಮಾಡಿಕೊಳ್ಳುವ ಬೆಳಗಿನ ಜಾವದ ಕನಸು ಆದಷ್ಟು ಬೇಗ ನನಸಾಗುದೆಂಬ ವಿಶ್ವಾಸವಿದೆ. ಅಂದಹಾಗೆ ನಾನ್ಯಾರು ಅಂತ ಗೊತ್ತಾಯ್ತಲ್ಲ,

    ಸದ್ಯಕ್ಕೆ ನೀವು ಮರೆತಿರುವ

    ಇಂತಿ ನಿಮ್ಮ
    ಚಿತ್ರಮಂದಿರ

    ಗುರುದತ್ ಗಾಣಿಗ

    ಕೋವಿಡ್ ಕಾರಣದಿಂದ ಚಿತ್ರಮಂದಿರಗಳು ಬಾಗಿಲು ಮುಚ್ಚಿವೆ. ತೆರೆಯುವ ದಿನ ಇನ್ನು ಎಂದೋ ಗೊತ್ತಿಲ್ಲ. ಚಿತ್ರಮಂದಿರವೊಂದರ ಸ್ವಗತವನ್ನು ಇಲ್ಲಿ ಹೇಳಿರುವವರು ಯುವ ನಿರ್ದೇಶಕ ಗುರುದತ್ ಗಾಣಿಗ. ಸುದೀಪ್ ಅವರ ಸಹಾಯಕರಾಗಿ ಅವರ ಬಳಿ ಕೆಲಸಕ್ಕೆ ಸೇರಿಕೊಂಡ ಗುರುದತ್ ಕೆಲವೇ ದಿನಗಳಲ್ಲಿ ತಮ್ಮ ಪ್ರತಿಭೆಯಿಂದ ಸುದೀಪ್ ಅವರ ನಿರ್ದೇಶನ ತಂಡದಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಾರೆ. ಮಾಣಿಕ್ಯ, ರನ್ನ, ಮುಕುಂದ ಮುರಾರಿ ಸೇರಿದಂತೆ ಸಾಕಷ್ಟು ಸಿನಿಮಾಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದರು. ನಂತರ ಸುದೀಪ್ ಅವರೇ ಇವರನ್ನು ಅಂಬರೀಷ್ ಅವರ ಕೊನೆಯ ಚಿತ್ರ ಅಂಬಿ ನಿಂಗೆ ವಯಸ್ಸಾಯ್ತೋ ಗೆ ನಿರ್ದೇಶಕರಾಗಿ ಆಯ್ಕೆ ಮಾಡಿದರು. ಆ ಚಿತ್ರದಲ್ಲಿ ಅಂಬರೀಷ್, ಸುಹಾಸಿನಿ ಸೇರಿದಂತೆ ಸಾಕಷ್ಟು ದೊಡ್ಡ ದೊಡ್ಡ ಕಲಾವಿದರನ್ನು ಹ್ಯಾಂಡಲ್ ಮಾಡಿ ತಾವೊಬ್ಬ ಅದ್ಭುತ ತಂತ್ರಜ್ಞ ಎಂಬುದನ್ನು ನಿರೂಪಿಸಿದರು. ಸದ್ಯ ತಮ್ಮ ಎರಡನೇ ಚಿತ್ರದ ಸ್ಕ್ರಿಪ್ಟ್ ರಚನೆಯಲ್ಲಿ ಅವರು ತೊಡಗಿಸಿಕೊಂಡಿದ್ದಾರೆ ಮೂಲತಃ ಕುಂದಾಪುರದವರು ಗುರುದತ್

    ಕಾವೇರುತ್ತಿದೆ ಅಮೆರಿಕಾ ಅಧ್ಯಕ್ಷ ಚುನಾವಣೆ : ಟ್ರಂಪ್ ಗೆ ಸಿಗುವುದೆ ಮತ್ತೊಂದು ಅವಕಾಶ

    ನಿಂತ ನೆಲ ಕಂಪಿಸಿದರೆ  ಯಾರಾದರೂ ಏನು ಮಾಡಬಹುದು? ತಮಗೆ ಇದುವರೆಗೆ ಆಧಾರ ನೀಡಿದವರನ್ನೇ ಭದ್ರವಾಗಿ ಕಚ್ಚಿ ಹಿಡಿಯಬಹುದು ಅಷ್ಟೇ.

    ಕರೋನ ಪೀಡಿತ ಇಂದಿನ ಅಮೆರಿಕಾದಲ್ಲಿ ಅಧ್ಯಕ್ಷ ಡೊನಾಲ್ದ್ ಟ್ರಂಪ್ ಕೂಡ ಸಧ್ಯಕ್ಕೆ ಇದನ್ನೇ ಮಾಡುತ್ತಿದ್ದಾರೆ. ತನ್ನ ಕಟ್ಟಾ ಬೆಂಬಲಿಗರ ಮತಗಳನ್ನು ಮಾತ್ರವೇ ಎಣಿಸುತ್ತ ಮರುಚುನಾವಣೆಗೆ ತಯಾರಿ ನಡೆಸಿದ್ದಾರೆ.

    ಆದರೆ ಅವನ ಈ ಯುಕ್ತಿ ಫಲವನ್ನು ನೀಡಬಲ್ಲದೇ?

    ಇಂದಿನ ಅಮೆರಿಕಾ ಹಿಂದಿನಂತಿಲ್ಲ. ಇತ್ತ ಕರೋನ ಅತ್ತ ಜನಾಂಗೀಯ ಕದನ- ಎರಡೂ  ಅಮೆರಿಕಾವನ್ನು ಸೀಳಿ ಇಬ್ಭಾಗವಾಗಿಸಿವೆ. ಅದಕ್ಕಿಂತ ಹೆಚ್ಚಾಗಿ ಕಾಲ ಕೆಳಗೆ ಭದ್ರತೆಯನ್ನು ಒದಗಿಸಿದ್ದ ಆರ್ಥಿಕತೆ ಥಟ್ಟನೆ ಜಾರಿ ಹೋಗಿದೆ. ಕಳೆದ ಮೂರು ತಿಂಗಳ ಕರೋನ ವೈರಸ್ಸಿನ ಕಾರಣ, ಬೆಳೆದಿರುವ ನಿರುದ್ಯೋಗ ಸಮಸ್ಯೆ ಅಮೆರಿಕಾ ಈ ಹಿಂದೆ ಎದುರಿಸಿದ ಎರಡು ವರ್ಷಗಳ ಮಹಾ ಆರ್ಥಿಕ ಕುಸಿತಕ್ಕಿಂತ ಹೆಚ್ಚಿನ ಉದ್ಯೋಗಗಳನ್ನು ಕಸಿದಿದೆ. ಫೆಬ್ರವರಿಯಲ್ಲಿ 6.2 ಮಿಲಿಯನ್ ನಿರುದ್ಯೋಗಿಗಳಿದ್ದರೆ ಮೇ ವೇಳೆಗೆ ಅದು 20.5 ಮಿಲಿಯನ್ ಗಳಿಗೆ ಏರಿತು. ಇದೀಗ ಅರೆ ಬರೆ ಚೇತರಿಕೆಯನ್ನು ಕಾಣುತ್ತಿದ್ದರೂ ಸಮಸ್ಯೆಯ ಉಲ್ಬಣತೆ ಹಲವು ರೂಪಗಳಲ್ಲಿ ಅಮೆರಿಕನ್ ಜನತೆಯನ್ನು ತಟ್ಟುತ್ತಿವೆ.

    ಜಾರ್ಜ್ ಫ್ಲಾಯ್ಡ್ ನ ಹತ್ಯೆಯ ನಂತರ ಭುಗಿಲೆದ್ದ ಸಮಸ್ಯೆ ಇನ್ನೂ ಹಸಿ ಗಾಯವಾಗಿದ್ದು ಅಮೆರಿಕಾದ ಹುಟ್ಟಿನ ಮೂಲವನ್ನೇ ಕೆಣಕಿದೆ.ಅಮೆರಿಕಾ ಖಂಡವನ್ನು ಕಂಡುಹಿಡಿದು ಮೂಲ ಅಮೆರಿಕನ್ನರ ಜನಾಂಗೀಯ ನಾಶಕ್ಕೆ ಕಾರಣನಾದ ಕ್ರಿಸ್ಟೋಫರ್ ಕೊಲಂಬಸ್ಸನ ಪ್ರತಿಮೆಯನ್ನು ಬಾಲ್ಟಿಮೋರ್ ನಗರದ ಜನರು ಸಾಂಕೇತಿಕವಾಗಿ ಹೊಡೆದುರುಳಿಸಿದ್ದಾರೆ.

    ಅಮೆರಿಕಾದಲ್ಲಿ ದಿನದಲ್ಲಿ ಐವತ್ತು ಸಾವಿರ ಹೊಸ ಕರೋನ ಸೋಂಕುಗಳು ಪತ್ತೆಯಾಗುತ್ತಿದ್ದರೆ ಸುಮಾರು 1.3 ಲಕ್ಷಕ್ಕೂ ಹೆಚ್ಚು ಜನರು ಈವರೆಗೆ ಪ್ರಾಣ ಕಳೆದುಕೊಂಡಿದ್ದಾರೆ.ಸಾವು, ನೋವು, ಹೋರಾಟಗಳ ನಡುವಿನ ಈ ಪರಿಸ್ಥಿತಿಯಲ್ಲಿ ನವೆಂಬರ್ ಮೂರರ ಚುನಾವಣೆಗೆ ಅಮೆರಿಕಾ ತಯಾರಾಗುತ್ತಿದೆ. ಆದರೆ  ಬಿಗಡಾಯಿಸಿರುವ ಈ ಸಂದರ್ಭ ದಲ್ಲಿ ರಿಪಬ್ಲಿಕ್ ಪಕ್ಷ ಮರುಚುನಾವಣೆಯಲ್ಲಿ ಬದುಕುಳಿಯಲು ಹೋರಾಡಬೇಕಿದೆ.

    ಜುಲೈ 4 ರಂದು ಅಮೆರಿಕಾದ 244 ನೇ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಟ್ರಂಪ್ ದೇಶವನ್ನುದ್ದೇಶಿಸಿ ಮಾಡಿದ ಭಾಷಣ ತನ್ನ ಕಟ್ಟಾ ಬೆಂಬಲಿಗರನ್ನು ಹುರಿದುಂಬಿಸುವ ಹಾಗಿತ್ತೇ ಹೊರತು ಹೆಚ್ಚಿನ ಮತಗಟ್ಟೆಯನ್ನು ಸೃಷ್ಟಿಸಿಕೊಳ್ಳುವ ಯಾವುದೇ  ಪ್ರಯತ್ನವನ್ನು ಮಾಡಿದಂತೆ ತೋರಲಿಲ್ಲ. ಅಮೆರಿಕಾ ಪ್ರಪಂಚದಲ್ಲೇ ಅತ್ಯಂತ ಅಭಿಮಾನ ಪಡಬಹುದಾದ ಶ್ರೇಷ್ಠ ದೇಶ ಎಂದು ಟ್ರಂಪ್ ಬಣ್ಣಿಸಿದರೂ ಕೇವಲ ಶೇಕಡ 17 ಸಾರ್ವಜನಿಕರು ಮಾತ್ರ ಇಂದಿನ ಅಮೆರಿಕಾದ ಸ್ಥಿತಿ ಈಗಲೂ ಉತ್ತಮವಾಗಿದೆ ಎಂದು ನಂಬುತ್ತಾರೆ. ಶೇಕಡ 47ಜನರು ಭವಿಷ್ಯದ ಬಗ್ಗೆ ಭರವಸೆಯಿದೆಯೆಂದರೆ, ಶೇಕಡ 53 ಅಂದರೆ ಅರ್ಧಕ್ಕಿಂತಲೂ ಹೆಚ್ಚು ಜನರು ಭರವಸೆಯಿಲ್ಲವೆಂಬ ಹತಾಶೆಯ ಅಭಿಮತವನ್ನು ವ್ಯಕ್ತಪಡಿಸಿದ್ದಾರೆ.

    ವಿರೋಧ ಪಕ್ಷದ ಡೆಮೋಕ್ರಟ್ ಗಳಿರಲಿ ಟ್ರಂಪ್ ನ ರಿಪಬ್ಲಿಕ್ ಕ್ಯಾಂಪಿನಲ್ಲೂ ಬಿರುಗಾಳಿ ಬೀಸುತ್ತಿದೆ. ಆತನ ನಡತೆ ಮತ್ತು ರಾಷ್ಟ್ರಾಭಿಮಾನವನ್ನು ಪ್ರಶ್ನಿಸಿ ಆತನ ಹತ್ತಿರದ ಸಹವರ್ತಿಗಳು ಹಲವು ಪುಸ್ತಕಗಳನ್ನು ಹೊರತಂದಿದ್ದಾರೆ. ಟ್ರಂಪ್ ವಿರೋಧಿ ರಿಪಬ್ಲಿಕನ್ ಗಳದೇ ಒಂದು ಪಡೆ ನಿರ್ಮಾಣವಾಗಿದೆ.ಹೀಗಾಗಿ ಕೋವಿಡ್ ಮಾರಣಹೋಮದ ನಡುವೆಯೇ ಜೂನ್ 20 ರಂದು ಟ್ರಂಪ್ ನಡೆಸಲು ಯತ್ನಿಸದ ಮೊದಲ ಮರು ಚುನಾವಣಾ ಸಭೆಯಲ್ಲಿ 19,000 ಜನರ ಬದಲು ಕೇವಲ 6000 ಜನರು ಮಾತ್ರವೇ ಭಾಗವಹಿಸಿದ್ದು ಆತನ ಪಕ್ಷದವರಿಗೆ ಶುಭ ಶಕುನದಂತೆ ಕಂಡಿಲ್ಲದಿದ್ದರೆ ಆಶ್ಚರ್ಯವಿಲ್ಲ.

    ಹೀಗಿದ್ದೂ ಜನಪ್ರಿಯತೆಯ ಲೆಕ್ಕಕ್ಕೆ ರಿಪಬ್ಲಿಕ್ (ವಿರೋಧ ಪಕ್ಷ) ಗಳ ನಾಯಕ ಜೋ ಬಿಡೆನ್ ಶೇಕಡ 54  ಇದ್ದರೆ ಟ್ರಂಪ್ ಶೇಕಡ 44 ಮತಗಳಿಸಿದ್ದಾರೆ. ಆದರೆ ಈ ಮತಗಳಲ್ಲಿ ಅತ್ಯಂತ ಆಸಕ್ತಿದಾಯಕ ವಿಚಾರಗಳಿವೆ. ಬಿಡೆನ್ ಗೆ ಮತಹಾಕಿರುವ ಶೇಕಡ 33 ಜನ ಮಾತ್ರ  ಆತನನ್ನು ನಾಯಕನೆಂದು ಮೆಚ್ಚಿ ಮತ ಹಾಕಿದ್ದರೆ, ಶೇಕಡ 67 ಟ್ರಂಪ್ ನನ್ನು ತಡೆಯುವ ಕಾರಣವನ್ನ ಮುಂದೊಡ್ಡುತ್ತಾರೆ. ಆದರೆ ಟ್ರಂಪ್ ಗೆ ಮತಹಾಕಿದ ಶೇಕಡ76 ಜನ ಮುಖ್ಯವಾಗಿ ಅವರಿಗಾಗಿಯೇ ಮತ ಚಲಾಯಿಸಿದ್ದಾರೆ.

     ಚುನಾವಣೆಗೆ ಮುನ್ನ  ನಡೆದ ಮತ್ತೊಂದು ಸರ್ವೆಯಲ್ಲಿ ಎಳೆಯ ವಯಸ್ಸಿನ (16-22) ನ  ಶೇಕಡ 67 ಮತದಾರರು ಟ್ರಂಪ್ ದುರ್ಬಲ ಅಧ್ಯಕ್ಷ ಎಂದರೆ, ಶೇಕಡ42 ಜನ ಆತನನ್ನು ಕೆಟ್ಟ ಅಧ್ಯಕ್ಷನೆಂದಿದ್ದಾರೆ.ಕೇವಲ ಶೇಕಡ 9 ಜನರು ಆತ ಸಾಧಾರಣ ಅಧ್ಯಕ್ಷ ಎಂದಿದ್ದಾರೆ.

    ಬಿಡೆನ್ ವಿಚಾರಕ್ಕೆ  ಶೇಕಡ 28 ಆತನನ್ನು ಗ್ರೇಟ್ ಲೀಡರ್ ಎಂದು ನಂಬುತ್ತಾರೆ. ಶೇಕಡ 29 ಜನ ಆತನನ್ನು ಸಾಧಾರಣ ಎಂದರೆ ಶೇಕಡ 43 ಜನರು ಆತ ಕೆಟ್ಟ ಅಧ್ಯಕ್ಷನಾಗುತ್ತಾನೆ ಎಂದಿದ್ದಾರೆ.

    ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿರುವ ಇಬ್ಬರೂ ಅಭ್ಯರ್ಥಿಗಳು 70 ವರ್ಷಕ್ಕೂ ಮೇಲ್ಪಟ್ಟ ಹಿರಿಯರು. ಆದರೆ, ಚಟುವಟಿಕೆ, ಶಕ್ತಿ ಮತ್ತು  ಶಕ್ತ ಭಾಷಣ ಮಾಡುವ ವಿಚಾರಕ್ಕೆ ಟ್ರಂಪ್ ಗೇ ಹೆಚ್ಚಿನ ಅಂಕಗಳು ದೊರೆತಿವೆ.

    2016 ರಲ್ಲಿ ಟ್ರಂಪ್ ಚುನಾಯಿತ ನಾದ ಸಮಯದಿಂದಲೂ ಟ್ರಂಪ್ ನ ಅನುಯಾಯಿಗಳು ಅವರಿಗೇ ತಮ್ಮ ನಿಯತ್ತನ್ನು  ಮುಂದುವರೆಸಿದ್ದಾರೆ. ಇತರರು ತೀಕ್ಷ್ಣವಾಗಿ ಖಂಡಿಸುತ್ತಲೇ ಇದ್ದಾರೆ. ಈ ಕಾರಣ  ಟ್ರಂಪ್ ನ ಭಾಷಣಗಳು ಅನುಯಾಯಿಗಳಿಗ ಮಾತ್ರ ಸೀಮಿತವಾಗಿದ್ದರೆ ಆಶ್ಚರ್ಯವಿಲ್ಲ.ಮಾಧ್ಯಮಗಳ ಮೇಲೆ ಹರಿಹಾಯವುದನ್ನೂ ಟ್ರಂಪ್ ನಿಲ್ಲಿಸಿಲ್ಲ.

    ಅಮೆರಿಕಾದ ಚುನಾವಣೆ ಮತ್ತು ಫಲಿತಾಂಶಗಳು ಇಡೀ ಪ್ರಪಂಚದ ಮೇಲೆ ಪರಿಣಾಮವನ್ನು ಬೀರಬಲ್ಲದು. ಈ ಕಾರಣ ಎಲ್ಲ ದೇಶಗಳೂ ಅಮೆರಿಕಾದ ಚುನಾವಣೆಯನ್ನು ಅತ್ಯಂತ ಆಸಕ್ತಿಯಿಂದ ನಿರುಕಿಸುತ್ತಾರೆ. ಹಲವು ಅಂತರ ರಾಷ್ಟ್ರೀಯ ಒಪ್ಪಂದಗಳು, ಶಾಂತಿ, ಕದನಗಳು ಎಲ್ಲವೂ ದೊಡ್ಡಣ್ಣ ಅಮೆರಿಕಾದ ಅಧ್ಯಕ್ಷನ ನಿಲುವನ್ನು ಅವಲಂಬಿಸಿವೆ. ಮನಕಲಕುವ ಕರೋನ ಪರಿಸ್ಥಿತಿಯ ನಡುವೆಯೇ ಚುನಾವಣೆಗೆ ನಿಧಾನವಾಗಿ ಕಾವೇರುತ್ತಿದೆ.

    ಇವೆಲ್ಲದರ ನಡುವೆ ನಮ್ಮ ಅರಿವಿಗೇ ಬರದಂತೆ ಪ್ರಪಂಚದಲ್ಲಿ ನಾಲ್ಕನೆಯ ಕೈಗಾರಿಕಾ ಕ್ರಾಂತಿ (4th Industrial revolution) ಈ ಕ್ಷಣದಲ್ಲೂ  ವಿಕಸಿಸುತ್ತಿದೆ. ಸಮಾನತೆ ಮತ್ತು  ನೈಸರ್ಗಿಕ ಸಂಪತ್ತುಗಳನ್ನು ಉಳಿಸಿಕೊಳ್ಳುವ ಹೋರಾಟಗಳು ಎಲ್ಲ ದೇಶಗಳ ಚುನಾವಣೆಯಲ್ಲಿ ಮಹತ್ತರ ಪಾತ್ರ ವಹಿಸಲು ಶುರುಮಾಡಿವೆ.

    ಬೆಳ್ಳಿ, ಚಿನ್ನ ಗಳು ಸುಭದ್ರವಾದ ಹೂಡಿಕೆ ಎಂದೆನಿಸಿದರೂ, ಖರೀದಿಸುವ ಬೆಲೆಯೂ ಮುಖ್ಯ

    ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಗಗನಕ್ಕೇರುತ್ತಿರುವುದು ಎಲ್ಲರ ಗಮನಸೆಳೆಯುತ್ತಿದೆ. ಇದಕ್ಕೆ ಪೂರಕವಾಗಿ ಮಾಧ್ಯಮಗಳಲ್ಲಿಯೂ ಸಹ ಚಿನ್ನದ ಬೆಲೆ ಇನ್ನಷ್ಟು ಏರಿಕೆ ಕಾಣುವುದು ಎಂದು ಬಿಂಬಿಸಲಾಗುತ್ತಿದ್ದು ಹೂಡಿಕೆದಾರರ ಆಸಕ್ತಿಯನ್ನು ಕೆರಳಿಸುತ್ತಿದೆ. ಇದು ಷೇರುಪೇಟೆಯಲ್ಲಿ ಚಿನ್ನಾಭರಣ ವಲಯದ ಕಂಪನಿಗಳು ಹೆಚ್ಚು ಆಕರ್ಷಣೀಯವೆಂದು ಸಹ ಬಿಂಬಿಸಲಾಗುತ್ತಿದೆ. ಈ ಕಾರಣದಿಂದಾಗಿ ಚಿನ್ನದ ಮೇಲೆ ಸಾಲ ನೀಡುವ ಕಂಪನಿಗಳೂ ಸಹ ಹೆಚ್ಚು ಲಾಭದಾಯಕವೆಂಬುದು ಕೆಲವರ ಕಲ್ಪನೆ.

    ಈಗಿನ ಚಿನ್ನದ ಬೆಲೆ ಏರಿಕೆಯು ಅದರ ಮೇಲೆ ಸಾಲ ನೀಡುವ ಕಂಪನಿಗಳಿಗೆ ಅನುಕೂಲಕರವೇನಲ್ಲ. ಈ ಕಂಪನಿಗಳು ನೀಡುವ ಸಾಲ ಹೆಚ್ಚು ಒತ್ತಡಕ್ಕೊಳಗಾಗುವ ಸಾಧ್ಯತೆಯಿದೆ. ಚಿನ್ನದ ಬೆಲೆ ಗರಿಷ್ಠದಲ್ಲಿರುವ ಈ ಸಂದರ್ಭದಲ್ಲಿ ನೀಡಿದ ಸಾಲ ವಸೂಲಾತಿಯು, ಚಿನ್ನದ ಬೆಲೆ ಕುಸಿತಕ್ಕೊಳಗಾದಾಗ ಸುಲಭವಲ್ಲ. ಚಿನ್ನವಾಗಲಿ, ಬೆಳ್ಳಿಯಾಗಲಿ, ತಮ್ಮ ಬೆಲೆಗಳನ್ನು ಸ್ಥಿರವಾಗಿರಿಸಿಕೊಳ್ಳಲು ಸಾಧ್ಯವಿಲ್ಲ.ಕಮಾಡಿಟೀಸ್ ಮಾರ್ಕೆಟ್‌ ಚಟುವಟಿಕೆ ಆರಂಭವಾದ ಮೇಲೆ ಇವು ಸಹ ಸರಕು ಪೇಟೆಯ ವಹಿವಾಟಿನ ಸರಕಾಗಿದೆ. ಅಂದರೆ ಇಲ್ಲಿಯೂ ಏರಿಳಿತಗಳ ಒತ್ತಡವಿರುತ್ತದೆ. ಇದಕ್ಕೆ ಪೂರಕವಾಗಿ ಹಿಂದಿನ ಘಟನೆಯನ್ನು ತಿಳಿಯಿರಿ.

    2008 ರ ಡಿಸೆಂಬರ್‌ ತಿಂಗಳಲ್ಲಿ ಬೆಳ್ಳಿಯ ಬೆಲೆ ರೂ.18,500 ರಲ್ಲಿತ್ತು. ಅಲ್ಲಿಂದ ಕ್ರಮೇಣವಾಗಿ ಏರಿಕೆಯ ಪಥದಲ್ಲಿ ಚಲಿಸುತ್ತಾ 2011 ರ ಏಪ್ರಿಲ್‌ ನಲ್ಲಿ ರೂ.75 ಸಾವಿರ ರೂಪಾಯಿಗಳನ್ನು ತಲುಪಿತು. ಆ ಸಂದರ್ಭದ ವಿಶ್ಲೇಷಣೆಗಳು ಬೆಳ್ಳಿಯ ದರ ರೂ.1,00,000 ಕ್ಕೆ ತಲುಪುವುದೆಂಬ ಮುನ್ನುಡಿದವು. ಅದಕ್ಕೆ ಪೂರಕವಾಗಿ, ರೂ.75 ಸಾವಿರಕ್ಕೂ ಬೆಳ್ಳಿ ಲಭ್ಯವಿಲ್ಲ ಎಂದು ಕಂದು ಬಣ್ಣದ ದಿನಪತ್ರಿಕೆಗಳು ಸುದ್ಧಿ ಪ್ರಕಟಿಸಿದ್ದವು. ಇದು ಇನ್ನಷ್ಟು ಬೇಡಿಕೆ ಹೆಚ್ಚಿಸಿದವು. ಈ ಎಲ್ಲಾ ಬೆಳವಣಿಗೆಗಳ ಹಿಂದೆ ಅಡಕವಾಗಿರುವ ಅಂಶವೆಂದರೆ ಆ ಸಂದರ್ಭವು ಅಕ್ಷಯ ತೃತೀಯ ಆಚರಣೆಯ ಸಮೀಪದ ದಿನವಾಗಿತ್ತು. ವಿಸ್ಮಯವೆಂದರೆ ಮೇ6 ರಂದು ಅಕ್ಷಯ ತೃತೀಯದ ದಿನ ಬೆಳ್ಳಿಯ ಬೆಲೆ ರೂ.53 ಸಾವಿರ ರೂಪಾಯಿಗಳಿಗೆ ಕುಸಿದಿತ್ತು. ನಂತರದ ವರ್ಷಗಳಲ್ಲಿ ಬೆಳ್ಳಿಯ ಬೆಲೆ ರೂ.30 ಸಾವಿರದವರೆಗೂ ಜಾರಿ ಪುನ: ಚೇತರಿಕೆ ಕಂಡಿತು. ಬೆಳ್ಳಿ, ಚಿನ್ನ ಗಳು ಆಂತರಿಕವಾಗಿ ಸುಭದ್ರವಾದ ಹೂಡಿಕೆ ಎಂದೆನಿಸಿದರೂ, ಖರೀದಿಸುವ ಬೆಲೆಯೂ ಮುಖ್ಯ.

    ಸುಮಾರು 11 ವರ್ಷಗಳಿಂದಲೂ ಬೆಳ್ಳಿಯ ಮೇಲಿನ ಹೂಡಿಕೆಗೆ ಅಸಲು ಹಣವೂ ಲಭ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ರೀತಿ ಚಿನ್ನದ ಬೆಲೆ ಗರಿಷ್ಠ ಮಟ್ಟದಲ್ಲಿದ್ದಾಗ ಖರೀದಿಸಿದಲ್ಲಿ ಹೂಡಿಕೆಯ ಹಣ ಸುಭದ್ರವೆನಿಸದಲ್ಲವೇ?

    ಚಿನ್ನದ ಮೇಲೆ ಸಾಲ ನೀಡುವ ಕಂಪನಿಗಳು ಇತ್ತೀಚೆಗೆ ಹೆಚ್ಚುತ್ತಿವೆ. ಅಂದರೆ ಲೀಸ್ಟೆಡ್‌ ಕಂಪನಿಳಿಗೆ ಸ್ಪರ್ಧಿಯಾಗಿವೆ. ಚಿನ್ನದ ಬೆಲೆ ಇಷ್ಟು ಹೆಚ್ಚಿದ್ದರೂ ಸಹ, ಹಿಂದೆ ತೆಗೆದುಕೊಂಡ ಸಾಲ ಮರುಪಾವತಿಮಾಡಲಾಗದೆ, ವಸೂಲಾಗದ ಸಾಲ ಪ್ರಮಾಣ ಹೆಚ್ಚಾಗಿದ್ದು ಇತ್ತೀಚಿನ ದಿನಪತ್ರಿಕೆಗಳಲ್ಲಿ ಕೆಲವು ಕಂಪನಿಗಳು ಚಿನ್ನದ ಹರಾಜಿನ ಪ್ರಕಟಣೆಗಳನ್ನೂ ಸಹ ನೀಡಿವೆ. ಹಾಗಾಗಿ, ಪೇಟೆಯಲ್ಲಿ ಷೇರಿನಬೆಲೆ ಹೆಚ್ಚಾದಾಗ ಮಾರಾಟ ಮಾಡಿ ಹಣ ಶೇಖರಿಸಿಕೊಳ್ಳುವುದೇ ಒಳಿತು. ಇಂದಿನ ಅಸಹಜ ವಾತಾವರಣದಲ್ಲಿ ಶರ ವೇಗದಲ್ಲಿ ಏರಿಕೆಯಾಗಿರುವುದು ಸ್ಥಿರತೆ ಕಾಣುವುದು ಅತಿ ವಿರಳವೆನಿಸುತ್ತದೆ.

    ನೆನಪಿರಲಿ : ಕಳ್ಳ ಮತ್ತು ಲಾಭ ಸಿಕ್ಕಾಗ ಹಿಡಿಬೇಕು, ಬಿಟ್ಟರೆ ಸಿಗದು.

    ಪ್ರಧಾನಿ ನಿಮು ಭೇಟಿಯಿಂದ ಕಂಗಾಲಾಯಿತೇ ಚೀನಾ?

    ಚಿರಾಗ್ ಆರ್.ಎಚ್.
    ಪ್ರಧಾನಿ ನರೇಂದ್ರ ಮೋದಿ ಅವರು ಲಡಾಖ್‌ನ ನಿಮು ಸೇನಾ ನೆಲೆಗೆ ಭೇಟಿ ಯೋಧರಲ್ಲಿ ನೈತಿಕ ಸ್ಥೈರ್ಯ ತುಂಬಿದ್ದಾರೆ. ಪ್ರಧಾನಿ ಭೇಟಿಯನ್ನು ಪ್ರತಿಪಕ್ಷ ಕಾಂಗ್ರೆಸ್ ಟೀಕಿಸಿದೆ, ಚೀನಾ ಆಕ್ಷೇಪಿಸಿದೆ. ಈ ಅನಿರೀಕ್ಷಿತ ಭೇಟಿ ನೆರೆರಾಷ್ಟ್ರಕ್ಕೆ ನೀಡಿರುವ ಸಂದೇಶ ಸ್ಪಷ್ಟ- ನಮ್ಮ ತಂಟೆಗೆ ಬಂದರೆ ಸುಮ್ಮನೆ ಬಿಡಲ್ಲ!

    ತಾಂತ್ರಿಕವಾಗಿ ನಿಮು ಭಾರತದ ವ್ಯೂಹಾತ್ಮಕ ಸೇನಾ ನೆಲೆ. ಪಾಕಿಸ್ತಾನ, ಚೀನಾ ಎರಡೂ ಏಕಕಾಲದಲ್ಲಿ ನಮ್ಮ ಮೇಲೆ ಎರಗಿದರೂ ನಿಮು ನೆಲೆಯಿಂದ ದಾಳಿ ನಡೆಸಬಹುದು. ಸಮುದ್ರ ಮಟ್ಟದಿಂದ ೧೧,೦೦೦ ಅಡಿ ಎತ್ತರದಲ್ಲಿದ್ದರೂ ಏಕಕಾಲದಲ್ಲಿ ನಾಲ್ಕು ಯುದ್ಧ ವಿಮಾನಗಳನ್ನು ಇಲ್ಲಿ ನಿಲುಗಡೆ ಮಾಡಬಹುದು. ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಸಂಗ್ರಹಿಸಿಟ್ಟುಕೊಳ್ಳಬಹುದು. ಹೀಗಾಗಿ ಒಂದು ರೀತಿಯಲ್ಲಿ ಪಾಕಿಸ್ತಾನಕ್ಕೂ ಮೋದಿ ಪರೋಕ್ಷವಾಗಿ ಸಂದೇಶ ರವಾನಿಸಿದ್ದಾರೆ.

    ಆಗಾಗ ಕಾಲು ಕೆರೆದು ಜಗಳ ಮಾಡುತ್ತ, ತಂಟೆ ಮಾಡುತ್ತ, ಅವಕಾಶ ಸಿಕ್ಕರೆ ಗಡಿ ಆಕ್ರಮಿಸಿಕೊಂಡೇಬಿಡುವ ಮನೋಭಾವವನ್ನು ಬಹಳ ವರ್ಷಗಳಿಂದಲೂ ಚೀನಾ ಪ್ರದರ್ಶಸುತ್ತ ಬಂದಿದೆ. ಆದರೆ ಚೀನಾ ಈ ಬಾರಿ ಎಡವಿರುವುದು ಕೇಂದ್ರ ಸರಕಾರದ ಇಚ್ಛಾಶಕ್ತಿಯನ್ನು ಅರ್ಥ ಮಾಡಿಕೊಳ್ಳುವಲ್ಲಿ. ಈಗಿರುವ ಸರಕಾರ ಯಾವುದಕ್ಕೂ ಮಣಿಯುವುದಿಲ್ಲ, ಇನ್ನು ಇಲ್ಲಿನ ಪ್ರತಿಪಕ್ಷಗಳಂತೂ ಸೋತು ಸೊರಗಿವೆ ಎಂಬುದನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅರಿತುಕೊಳ್ಳಲೇ ಇಲ್ಲ. ಹೀಗಾಗಿ ಗಲ್ವಾನ್ ವ್ಯಾಲಿಯಲ್ಲಿ ಭಾರತೀಯ ಯೋಧರನ್ನು ಕೆಣಕಿ ಪೆಟ್ಟು ತಿಂದಿದೆ, ಒಳಗೊಳಗೇ ಭುಸುಗುಡುತ್ತಿದೆ.

    ನಿಮು ಸೇನಾನೆಲೆಯಲ್ಲಿ ಭಾಷಣ ಮಾಡಿದ ಸಂದರ್ಭದಲ್ಲಿ ಪ್ರಧಾನಿಯವರು ಚೀನಾದ ಹೆಸರು ಎತ್ತಲಿಲ್ಲ, ಆದರೆ ವಿಸ್ತರಣಾವಾದದ ಕಾಲ ಮುಗಿಯಿತು ಎನ್ನುವ ಮೂಲಕ ಆ ದೇಶಕ್ಕೇ ಗುರಿ ಇಟ್ಟು ಬಾಣ ಬಿಟ್ಟಿದ್ದಾರೆ. ಅರುಣಾಚಲ, ಜಮ್ಮು-ಕಾಶ್ಮೀರ, ಅಕ್ಸಾಯ್ ಚಿನ್‌ಗಳ ಪರೋಕ್ಷ ಪ್ರಸ್ತಾವ ಅಲ್ಲಿದ್ದು, ಇನ್ನು ನಮ್ಮ ನೆಲಕ್ಕೆ ಕಾಲಿಟ್ಟರೆ ಸಹಿಸುವುದಿಲ್ಲ ಎಂಬ ಎಚ್ಚರಿಕೆ ನೀಡಿದ್ದಾರೆ. ಶ್ರೀಕೃಷ್ಣನ ಸುದರ್ಶನ ಚಕ್ರದ ಉದಾಹರಣೆ ನೀಡುವ ಮೂಲಕ ಗಲ್ವಾನ್‌ನಲ್ಲಿ ಭಾರತೀಯ ಯೋಧರಿಂದ ಚೀನಾ ಸೇನೆಯಲ್ಲಿ ಆಗಿರುವ ಸಾವು-ನೋವನ್ನು ನೆನಪಿಸಿದ್ದಾರೆ, ಜತೆಗೆ ನಮ್ಮ ಸೇನಾ ಸಾಮರ್ಥ್ಯವನ್ನು ನೆನಪು ಮಾಡಿಕೊಟ್ಟಿದ್ದಾರೆ.

    ಇನ್ನೂ ಒಂದು ಸಂಗತಿಯನ್ನು ಗಮನಿಸಬೇಕು. 1962ರ ಯುದ್ಧದಲ್ಲಿ ಭಾರತ ಮನವಿ ಮಾಡಿದ ಬಳಿಕ ಅಮೆರಿಕ ನಮ್ಮ ನೆರವಿಗೆ ಆಗಮಿಸಿತು. ಈ ಬಾರಿ ಹಾಗಲ್ಲ. ನಾವು ಯಾರ ಸಹಾಯವನ್ನೂ ಕೇಳಿಲ್ಲ. ಅಷ್ಟರಲ್ಲಾಗಲೇ ಫ್ರಾನ್ಸ್ ಸೇನಾ ನೆರವು ನೀಡುವ ಭರವಸೆ ನೀಡಿದೆ. ಚೀನಾ ಜತೆ ವಾಣಿಜ್ಯ ಸಮರಕ್ಕಿಳಿದಿರುವ ಅಮೆರಿಕವು ದಕ್ಷಿಣ ಚೀನಾ ಸಮುದ್ರದಲ್ಲಿ ಸಮರ ನೌಕೆಗಳನ್ನೇ ನಿಯೋಜಿಸಿದೆ. ಸಾಗರ ಗಡಿಯಲ್ಲಿ ಚೀನಾದಿಂದ ಕಿರಿಕಿರಿ ಅನುಭವಿಸುತ್ತ ಬಂದಿರುವ ಜಪಾನ್ ಸಹ ತನ್ನ ಬೆಂಬಲ ಭಾರತಕ್ಕೆ ಎಂದು ಸ್ಪಷ್ಟವಾಗಿ ಘೋಷಿಸಿದೆ. ಹಳೆಯ ಮಿತ್ರ ರಷ್ಯಾ ತ್ವರಿತವಾಗಿ ಶಸ್ತ್ರಾಸ್ತ್ರ ಪೂರೈಸುವ ಆಶ್ವಾಸನೆ ನೀಡಿದೆ. ಈಗ ಏಕಾಂಗಿಯಾಗಿರುವುದು ಚೀನಾವೇ ಹೊರತು ಭಾರತ ಅಲ್ಲ.

    ಕೊರೊನಾ ವಿಷಯದಲ್ಲಿ ಚೀನಾ ಮಾಡಿದ ಮೋಸದ ಬಗ್ಗೆ ಹಲವು ದೇಶಗಳಿಗೆ ಅಸಮಾಧಾನವಿದೆ. ಅವಕಾಶ ಸಿಕ್ಕರೆ ಮತ್ತಷ್ಟು ದೇಶಗಳು ಚೀನಾ ವಿರುದ್ಧ ಮುಗಿಬೀಳಲು ಸಿದ್ಧವಾಗಿ ನಿಂತಿವೆ. ಇದನ್ನೆಲ್ಲ ಅರ್ಥ ಮಾಡಿಕೊಂಡ ಬಳಿಕ ಚೀನಾ ತೋರ‍್ಗಾಣಿಕೆಗೆ ಸಂಧಾನದ ಮಾತನಾಡುತ್ತಿದೆ. ಆದರೆ ಚೀನಾವನ್ನು ನಂಬಲು ಯಾರೂ ತಯಾರಿಲ್ಲ.

    ನೇಪಾಳದ ಪಾಠ
    ಚೀನಾವು ನೇಪಾಳವನ್ನು ಭಾರತದ ವಿರುದ್ಧ ಎತ್ತಿಕಟ್ಟಿ ಮತ್ತೊಂದು ಛಾಯಾ ಸಮರಕ್ಕೆ ಯತ್ನಿಸಿತು. ಭಾರತದಿಂದಾಗಿ ಕೊರೊನಾ ಹೆಚ್ಚಿದೆ ಎಂದು ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಆರೋಪ ಮಾಡಿದಾಗಲೂ ಸರಕಾರ ಕಟುವಾಗಿ ಪ್ರತಿಕ್ರಿಯಿಸಲಿಲ್ಲ. ಉತ್ತರಾಖಂಡದ ಮೂರು ಭೂಪ್ರದೇಶಗಳನ್ನು ತನ್ನ ನಕ್ಷೆಗೆ ಸೇರಿಸಿಕೊಂಡಾಗ, ಬಿಹಾರದಲ್ಲಿ ನದಿ ದಂಡೆ ದುರಸ್ತಿಗೆ ಅಡ್ಡಿಪಡಿಸಿದಾಗ, ಅಷ್ಟೇ ಏಕೆ ಗಡಿಯಲ್ಲಿ ಭಾರತೀಯರ ಮೇಲೆ ಹಲ್ಲೆ ನಡೆಸಿದಾಗಲೂ ತುಟಿ ಬಿಚ್ಚಲಿಲ್ಲ. ಬದಲಿಗೆ ನೆರವಿನ ಮಹಾಪೂರವನ್ನೇ ಪುಟ್ಟ ರಾಷ್ಟ್ರಕ್ಕೆ ಹರಿಸಿತು. ‘ಚೀನಾ ಕುಮ್ಮಕ್ಕು ಇರುವುದರಿಂದಲೇ ಭಾರತ ಸುಮ್ಮನಿದೆ’ ಎಂದೇ ಎಲ್ಲರೂ ಭಾವಿಸಿದ್ದರು. ಚೀನಾ ತಾಳಕ್ಕೆ ತಕ್ಕಂತೆ ಕುಣಿದು ಭಾರತದ ವಿರುದ್ಧ ಮುಗಿಬಿದ್ದ ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಈಗ ಹುದ್ದೆ ತೊರೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅದು ಭಾರತದ ಚಾಣಕ್ಷ ನಡೆ.

    ಭಾರತ ಈಗ ಮೊದಲಿನಂತಿಲ್ಲ. ಇದು ಸದೃಢ, ಸಶಕ್ತ ಭಾರತ. ಇನ್ನೊಮ್ಮೆ ತಂಟೆ ತೆಗೆಯುವ ಮುನ್ನ ಚೀನಾ ಅದನ್ನು ಅರ್ಥ ಮಾಡಿಕೊಳ್ಳಬೇಕು.

    ನಮ್ಮ ಸೋಲಿಗೆ ನಮ್ಮ ಮನಸ್ಥಿತಿಯೇ ಕಾರಣ

    ಎಲ್ಲ ಸಂದರ್ಭಗಳಲ್ಲೂ ಆ ಕ್ಷಣದಿಂದ ಬಚಾವಾಗುವುದೊಂದೇ ಜೀವನದ ಗುರಿಯಾಗಿರುತ್ತದೆ. ಕಷ್ಟದ ಸಂದರ್ಭಗಳಲ್ಲಿ ಕಷ್ಟದಿಂದ ಪಾರಾದರೆ ಸಾಕು ಎಂದುಕೊಂಡಿರುತ್ತೇವೆ. ಆದರೆ ಜೀವನ ಅಂದರೆ ಅಷ್ಟೇ ಅಲ್ಲ. ಒಂದು ಕ್ಷಣ ಆ ಘಟನೆಯಿಂದ ತಪ್ಪಿಸಿಕೊಳ್ಳುವುದು ಮಾತ್ರವಲ್ಲ, ಅದರೊಂದಿಗೆ ಆಂತರಿಕ ನೆಮ್ಮದಿಯ ಶೋಧವೂ ಇರಬೇಕು. ಆಂತರಿಕ ನೆಮ್ಮದಿ ಕಂಡುಕೊಂಡಾಗಲೇ ಶಾಶ್ವತ ಸುಖ ಅನುಭವಿಸುವುದಕ್ಕೆ ಸಾಧ್ಯ. ಆಂತರಿಕ ನೆಮ್ಮದಿ ಬೇರೆಲ್ಲೋ ಕಂಡುಕೊಳ್ಳುವುದಕ್ಕೆ ಸಾಧ್ಯ ಇಲ್ಲ. ನಮ್ಮ ಮನಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟುಕೊಂಡು, ಸಂದರ್ಭಗಳಿಗೆ ಪ್ರತಿಕ್ರಿಯಿಸುವ ಜಾಣ್ಮೆಯಿದ್ದರೆ ಮಾತ್ರ ಆಂತರಿಕ ಶಾಶ್ವತ ಶಾಂತಿಯನ್ನು ಕಂಡುಕೊಳ್ಳಬಹುದು.

    ಯಾವಾಗ ನಮ್ಮನ್ನು ನಾವು ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳುತ್ತೇವೆಯೋ ಆಗ ನಾವು ವೈಫಲ್ಯತೆಯ ಹಾದಿಯಲ್ಲಿಯೇ ಸಾಗುತ್ತಿದ್ದೇವೆಯೇನೋ ಅಥವಾ ನಮಗಿಂತ ಮತ್ಯಾರೋ ಉತ್ತಮರಿದ್ದಾರೆ ಅನ್ನುವ ಬೇಸರ ಕಾಡುತ್ತದೆ. ಆಗ ನಮ್ಮ ವೈಫಲ್ಯತೆಗೆ ಪರಿಸ್ಥಿತಿಗಳು ಕಾರಣ ಎಂದುಕೊಳ್ಳುತ್ತೇವೆ. ಆದರೆ ಪರಿಸ್ಥಿತಿಗಳು ಸೋಲಿನ ಮೂಲವಲ್ಲ. ಅವು ನಮ್ಮ ಸೋಲಿಗೆ ಕಾರಣವಲ್ಲ, ನಮ್ಮ ಮನಸ್ಸು. ಯಾವುದೇ ಒಂದು ಸಂದರ್ಭದಲ್ಲಿ ನಾವು ಘಟನೆಗೆ ಯಾವ ರೀತಿ ಪ್ರತಿಕ್ರಿಯಿಸುತ್ತೇವೆ ಎಂಬುದು ಮುಖ್ಯ.

    ನಡವಳಿಕೆಗಳಿಂದಲೇ ನಿರ್ಧರಿತ

    ಗೆಲುವು ಅಥವಾ ಸೋಲು ಯಾವುದೇ ಆಗಿರಲಿ, ನಮ್ಮ ನಡವಳಿಕೆಗಳಿಂದಲೇ ಅದು ನಿರ್ಧರಿತವಾಗಿರುತ್ತವೆ. ಉದಾಹರಣೆಗೆ ಕ್ರೀಡಾ ಕ್ಷೇತ್ರದಲ್ಲಿ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಲೇ ಇರುವ ಕ್ರೀಡಾ ಸಾಧಕರನ್ನು ಕಾಣಬಹುದು. ಕೆಲವೊಮ್ಮೆ ಅವರದೇ ಸಾಧನೆಯನ್ನು ಸ್ವತಃ ಅವರೇ ಮುರಿದು ಮುನ್ನುಗ್ಗುತ್ತಿರುತ್ತಾರೆ. ಅಂತಹ ಸಂದರ್ಭದಲ್ಲಿ ಅವರು ತಮ್ಮ ಹಿಂದಿನ ದಾಖಲೆಯನ್ನು ಸೋಲು ಎಂದುಕೊಳ್ಳುವುದಿಲ್ಲ. ಅದು ಅಭಿವೃದ್ಧಿ ಎಂದುಕೊಳ್ಳುತ್ತಾರೆ.

    ಜೀವನದಲ್ಲಿ ಎಲ್ಲವೂ ಇದೆ ಅಂದುಕೊಂಡಾಗ ಅಥವಾ ಕೊರತೆಗಳು ಇಲ್ಲದೇ ಹೋದಾಗ ಅವರಿಗೆ ಸೋಲು ಎಂಬುದು ಕಾಡುವುದಿಲ್ಲ. ಯಾವಾಗ ತಮ್ಮನ್ನು ತಾವು ಮತ್ತೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳುತ್ತಾರೋ ಆಗ ತಾನು ಸೋಲಿನ ಟ್ರ್ಯಾಕ್‍ನಲ್ಲಿದ್ದೇನೇನೋ ಎಂದೆಣಿಸುವುದು. ಹೋಲಿಕೆ ಮಾಡಿಕೊಳ್ಳುವುದರ ಮೂಲಕ ತಮ್ಮನ್ನು ತಾವು ಅಭಿವೃದ್ಧಿಪಡಿಸಿಕೊಳ್ಳುವುದಕ್ಕೋಸ್ಕರ ಮಾಡಿಕೊಳ್ಳಬೇಕೇ ವಿನಾ ಅದು ತಮ್ಮ ಶಕ್ತಿಯನ್ನು ಕುಗ್ಗಿಸುವಂತಿರಬಾರದು. ತನ್ನನ್ನು ತಾನು ಬೆಳೆಸಿಕೊಳ್ಳುವುದು ಅಂದರೆ ಆಂತರಿಕ ಪರಿಪೂರ್ಣತೆಯನ್ನು ಕಂಡುಕೊಳ್ಳುವುದು. ಕೆಲವೊಮ್ಮೆ ನಮ್ಮ ಸೋಲಿಗೆ ಸಂದರ್ಭಗಳೇ ಕಾರಣ ಎಂದು ಗೊಣಗಿಕೊಳ್ಳುತ್ತೇವೆ.

    ನಿಜ ಹೇಳಬೇಕೆಂದರೆ ನಮ್ಮ ಸೋಲಿಗೆ ನಮ್ಮ ಮನಸ್ಥಿತಿಯೇ ಕಾರಣವಾಗಿರುತ್ತದೆ. ಸೋಲು ಎಂದುಕೊಂಡರೆ ಅದು ಸೋಲು, ಗೆಲುವು ಅಂದುಕೊಂಡರೆ ಅದು ಗೆಲುವು. ನಮ್ಮ ಮನಸ್ಥಿತಿಯೇ ಎಲ್ಲದಕ್ಕೂ ಕಾರಣ. ನಾವು ಸಕಾರಾತ್ಮಕವಾಗಿದ್ದರೆ ಸಕಾರಾತ್ಮಕ ಫಲಿತಾಂಶ ದೊರೆಯುತ್ತದೆ. ಇಲ್ಲವಾದರೆ ನಕಾರಾತ್ಮಕತೆಯ ಗೂಡಾಗುತ್ತದೆ. ಮನಸ್ಸೇ ಆಂತರಿಕ ಸ್ವರ್ಗವನ್ನು ಅಥವಾ ನಮ್ಮೊಳಗಿನ ನರಕವನ್ನು ಸೃಷ್ಟಿಸುವುದು.

    ಒಂದು ವಸ್ತುವನ್ನು ಹೇಗೆ ಬಳಸಿಕೊಳ್ಳಬಹುದು ಅಥವಾ ಬಳಸಿಕೊಳ್ಳುತ್ತೇವೆ ಅಥವಾ ಅದರಿಂದಾಗುವ ಫಲಿತಾಂಶ ಏನು ಎಂಬುದಕ್ಕೆ ಒಂದು ಉದಾಹರಣೆಯನ್ನೇ ಗಮನಿಸುವುದಾದರೆ, ಒಂದು ಹರಿತವಾದ ಕತ್ತಿಯನ್ನು ಯಾವ ರೀತಿ ಉಪಯೋಗಿಸಿಕೊಳ್ಳುತ್ತೇವೆ ಎಂಬುದು ನಮ್ಮ ಮನಸ್ಸಿನ ಆಲೋಚನಾ ಕ್ರಮದಲ್ಲಿದೆ. ಸರಿಯಾದ ಕ್ರಮದಲ್ಲಿ ಬಳಸಿದ್ದೇ ಆದಲ್ಲಿ ಅದರಿಂದ ಸದುಪಯೋಗವಾಗುವುದು, ಇಲ್ಲವೇ ತಪ್ಪಾಗಿ ಬಳಸಿಕೊಂಡರೆ ಅದರಿಂದ ದುಃಖ ದುಮ್ಮಾನ, ಪಶ್ಚಾತ್ತಾಪಗಳೇ ನಮ್ಮನ್ನಾವರಿಸಿಕೊಳ್ಳಬಹುದು. ಹಾಗಾಗಿ ಮನಸ್ಸನ್ನು ಸರಿಯಾದ ಕ್ರಮದಲ್ಲಿಯೇ ಬಳಸಿಕೊಳ್ಳಬೇಕು. ಸಂದರ್ಭವನ್ನು ಬಳಸಿಕೊಳ್ಳಬಹುದಾದ, ನಿರ್ಣಯಗಳನ್ನು ತೆಗೆದುಕೊಳ್ಳುವ ಆಯ್ಕೆಯೂ ನಮ್ಮ ಆಲೋಚನಾ ಕ್ರಮದಲ್ಲಿರುತ್ತದೆ.

    ಕೆಲವೊಂದು ಸಂದರ್ಭಗಳಲ್ಲಿ ಪ್ರಪಂಚವೇ ತಲೆಯ ಮೇಲೆ ಬಿದ್ದಂಥ ಘಟನೆಗಳು ನಡೆಯುವುದು ಸಹಜ. ಅದು ಜಗತ್ತಿನ ನಿಯಮ. ಆಗ ಅದನ್ನು ಮನಸ್ಸು ನೋವು, ಹತಾಶೆ, ಸಿಟ್ಟಿನಿಂದ ಸ್ವೀಕರಿಸಿದರೆ ಮನಸ್ಸು ಅಪವಿತ್ರಗೊಳ್ಳುವುದು. ಇಲ್ಲದ ನೋವು ಹತಾಶೆಗಳು ಕಾಣಿಸಿಕೊಳ್ಳುವುದು. ಇದು ದೈಹಿಕವಾಗಿ ಘಾಸಿಗೊಳಿಸದೇ ಇದ್ದರೂ ಮನಸ್ಸಿಗೆ ನೋವನ್ನುಂಟು ಮಾಡುವುದು ಸಹಜ. ಅಂದರೆ ಒಂದು ಸಂದರ್ಭವನ್ನು ಮನಸ್ಸು ಯಾವ ರೀತಿ ಸ್ವೀಕರಿಸುತ್ತದೆ ಎಂಬುದರ ಮೇಲೆ ಫಲಿತಾಂಶ ನಿರ್ಣಯವಾಗುತ್ತದೆ.

    ಕಲಿಕೆಯ ಜಾಣ್ಮೆ

    ಉದಾಹರಣೆಗೆ ಕಚೇರಿಯಲ್ಲಿ ಕೆಲಸ ಮಾಡುವಿರಾದರೆ ಬಾಸ್ ಬೈಯ್ದಾಗ ಅದನ್ನವರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದು ಬಹಳ ಮುಖ್ಯ. ಬಹಳ ಪಶ್ಚಾತ್ತಾಪದಿಂದ, ಹತಾಶೆಯಿಂದ ಸ್ವೀಕರಿಸಿದ್ದೇ ಆದರೆ ಅದರಿಂದ ಆಂತರಿಕ ಖುಷಿ ಇಲ್ಲವಾಗುವುದು. ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳಬಹುದು. ಅದನ್ನು ಪ್ರೀತಿಯಿಂದ, ಖುಷಿಯಿಂದ ಸ್ವೀಕರಿಸಿದ್ದೇ ಆದರೆ, ಅದರಿಂದ ಕಲಿಯಬೇಕಾದ ಪಾಠವೂ ಇರುತ್ತದೆ. ಅಂತಹ ಮನಸ್ಥಿತಿಯನ್ನು ಕಲಿತುಕೊಳ್ಳದೇ ಹೋದರೆ ಬದುಕಿನಲ್ಲಿ ಕಲಿಕೆಯ ಜಾಣ್ಮೆಯನ್ನು ಕಲಿತುಕೊಳ್ಳುವುದಕ್ಕೆ ಸಾಧ್ಯ ಇಲ್ಲ. ಇಂತಹ ಘಟನೆಗಳು ಜೀವನದಲ್ಲಿ ಸಾಕಷ್ಟು ಬರುತ್ತವೆ. ಅವುಗಳನ್ನು ಸ್ವೀಕರಿಸುವ ಮನೋಭಾವದಲ್ಲಡಗಿದೆ ಆಂತರಿಕ ನೆಮ್ಮದಿ,

    ಚಿತ್ರ ಸೌಜನ್ಯ :Pexels

    ಐಸ್ ನ ಜೊತೆ ಒಂದು ಬಾಂಧವ್ಯ ಇತ್ತು, ಬೆಸುಗೆ ಇತ್ತು, ಜೊತೆಗೆ ಬೇಸಿಗೆ ಇತ್ತು

    ಬೀದಿಯಲ್ಲಿ ಐಸ್ ಐಸ್ ‌….. ಎಂಬ ಕೂಗೋ , ಗಂಟೆಯ ಶಬ್ದವೋ , ರಬ್ಬರ್ ಹಾರನ್ನೋ…. ಕಿವಿಗೆ ಬಿದ್ದರೆ ಸಾಕು ಮನೆಯಿಂದ ಹೊರಗೆ ಓಡಿ ಬರುತ್ತಿದ್ದೆವು. ಮೂರು ಗಾಲಿಯ ಮರದ ಗಾಡಿ ಅದರ ಮೇಲೆ ಮಗುವು ಐಸ್ ಕ್ಯಾಂಡಿ ತಿನ್ನುತ್ತಿರುವ ಚಿತ್ರ . ಮನೆಯವರ ಹತ್ತಿರ ಹಠ ಮಾಡಿ ಬೈಸಿಕೊಂಡು ಕಾಸು ಪಡೆದು ಗಾಡಿಯವನ ಹತ್ತಿರ ಹೋಗಿ ನಿಲ್ಲುತ್ತಿದ್ದೆವು. ಯಾವುದು ಅನ್ನೋ ಮಾತಿಲ್ಲ.ಎಷ್ಟರದ್ದು ಅಂತ ಕೇಳೋವ್ನು . ನಮಗೆ ಆ ಗಾಡಿಯ ಒಳಗಡೆ ನೋಡುವ ಆಸೆ ಆದರೆ ಎಟುಕುತ್ತಿರಲಿಲ್ಲ ಹತ್ತಿ ನೋಡುವಂತೆಯೂ ಇರಲಿಲ್ಲ.

    ಹಳದಿ ಕೆಂಪು ಬಿಳಿ ಹೀಗೆ ಬಣ್ಣ ಹೇಳಿದರೆ ಕೊಡುತ್ತಿದ್ದನು. ನಮ್ ಟೈಂ ಚೆನ್ನಾಗಿದ್ದು ಯಾರಾದ್ರು ದೊಡ್ಡವರು ನಮ್ಮನ್ನ ಎತ್ತಿಕೊಂಡು ಆ ಗಾಡಿಯ ಮರದ ಮುಚ್ಚಳ ಎತ್ತಿ ತೋರಿಸಿದರೆ ಪುಣ್ಯ. ಮ್ಯಾಂಗೊ , ಗ್ರೇಪು , ಶಾವಿಗೆ ಅದನ್ನೇ ನಾವು ಕೊಬ್ಬರಿ ಐಸ್ ಅಂತಿದ್ವಿ.ಒಟ್ನಲ್ಲಿ ಸ್ವರ್ಗವನ್ನೇ ಕಂಡ ಅನುಭವ. ಅದನ್ನ ತಗೊಂಡಿದ್ರೆ ಚೆನ್ನಾಗಿರೋದು ಅನ್ನೊ ಗೊಂದಲದಲ್ಲೇ ತಗೊಂಡಿರೋ ಐಸ್ ಕ್ಯಾಂಡಿಯನ್ನ ತಿಂತಿದ್ವಿ . ಬಾಯಿ ತುಟಿ ಎಲ್ಲಾ ಬಣ್ಣ ಆಗೋಗಿರೋದು .ತಿಂದಾದ್ಮೇಲೂ ಆ ಸಣ್ಣ ಬಿದರಿನ ಕಡ್ಡಿಯನ್ನ ಕಡ್ಕೊಂಡ್ ಇರ್ತಿದ್ವಿ .

    ತಿಂದಿದ್ದೇ ತಡ ಅದೆಲ್ಲಿರೋದೋ ನೆಗಡಿ ! ಮೂಗಿನ ತುದೀಲೇ ಕಾಯ್ತಿತ್ತೇನೋ ಅನ್ನೋ ಥರ ಬಂದ್ಬಿಡೋದು , ಮನೆಯಲ್ಲಿ ಸೊರಕ್ ಸೊರಕ್ ಅಂತ ಶಬ್ದ ಕೇಳಿದ್ ಕೂಡ್ಲೇ ಶುರುವಾಗೋದು ಬೈಗುಳ ‘ ಇನ್ನೊಂದ್ ಸಲ ಐಸ್ ಕ್ಯಾಂಡಿ ಅಂತ ಕೇಳು…ನಿನಗಿದೆ ‘ ಅಂತ ಧಮ್ಕಿ ಹಾಕೋವ್ರು .

    ಒಂದೆರಡು ದಿನಗಳ ನಂತರ ಬರೋದು ‘ ಐಸ್ ಕ್ರೀಂ ‘ ಗಾಡಿ ಅರ್ಧ ಸೈಕಲ್ಲು ಅದಕ್ಕೊಂದಿಕೊಂಡಂತೆಯೇ ಒಂದು ಸ್ಟ್ಯಾಂಡು, ಬಾಕ್ಸು ಎಲ್ಲಾ ಇರೋದು , ಆ ಸ್ಟ್ಯಾಂಡಿನಲ್ಲಿ ಕನಕಾಮ್ರ ಕಲರಿನ ವಿವಿಧ ಸೈಝಿನ ಬಿಸ್ಕತ್ತಿನಿಂದ ತಯಾರಿಸಿದ ಕೋನ್ ಗಳು , ಪಕ್ಕದಲ್ಲಿಯೇ ಬಿಳಿಯ ಕಾಗದದ ಕಪ್ಪುಗಳು . ಆ ಗಾಡಿಯವನ ಕೈಯಲ್ಲಿ ಯಕ್ಹಶ್ಚಿತ್ ಅನ್ನದ ಸೌಟೇ ಇರೋದು.ಅವನು ಬಗ್ಗಿ ಕೆರೆದು ಕೆರೆದು ಬಿಸ್ಕತ್ತಿನ ಕೋನಕ್ಕೆ ಐಸ್ ಕ್ರೀಂ ತುಂಬಿ ಅದರ ಮೇಲೆ ಪಪ್ಪಾಯಿನ ಕೆಂಪು ಕಣಗಳನ್ನು ಇಟ್ಟು ಅದಕ್ಕೊಂದು ಚಿಕ್ಕ ಬಿದಿರಿನ ಚಮಚ ಸಿಕ್ಕಿಸಿ ಕೊಡುತ್ತಿದ್ದ .

    ಅದನ್ನ ಕೈಯಲ್ಲಿ ಹಿಡಿಯುತ್ತಲೇ ನಮ್ಮ ಮನದಲ್ಲೊಂದು ಪ್ರೆಶ್ನೆ ಉದ್ಭವ. ಇದನ್ನ ಯಾವ ರೀತಿ ತಿನ್ನೋಣ ಅಂತ .ಕೋನ್ ಅನ್ನು ಕೆಳಗೆ ತೂತ ಮಾಡಿ ಅಲ್ಲಿಂದ ತಿನ್ನುವುದು , ಬಿಸ್ಕತ್ತನ್ನು ಸ್ವಲ್ಪ ಸ್ವಲ್ಪವೇ ಕಚ್ಚಿ ತಿನ್ನುವುದು . ಹೀಗೆ ಏನೇನೋ ಅವತಾರ ಮಾಡ್ಕೊಂಡು ಮನಸ್ಸಿನಿಂದ ಅನುಭವಿಸಿ ತಿಂದು ಮುಗುಸ್ತಾ ಇದ್ವಿ .

    ಇದರ ಮಧ್ಯೆ ಇನ್ನೊಂದು ಗಾಡಿ ಬರೋದು ಅದರಲ್ಲಿ ಐಸ್ ನೀರಿನ ಮಧ್ಯೆ ಚೌಕಾಕಾರದ ಉದ್ದನೆಯ ಅಲ್ಯೂಮಿನಿಯಂ ಅಚ್ಚುಗಳು ಅದರ ಮದ್ಯೆ ಕಡ್ಡಿ .ತೆಗೆದರೆ ಅದರಲ್ಲಿ ಕುಲ್ಫಿ, ಎಲ್ಲಾ ಒಂದೇ ಬಣ್ಣದ್ದಾಗಿದ್ರೂ , ಇದರಲ್ಲಿ ಕೋವ ಇರ್ತಿದಿದ್ದು ವಿಶೇಷ , ದುಡ್ಡು ಜಾಸ್ತಿ ಕೊಟ್ಟಂಗೆ ಕೋವಾ ಜಾಸ್ತಿ ಇರೋ ಐಸು ಕೊಡೋವ್ನು .

    ಮತ್ತೊಂದು ಆಕರ್ಷಕವಾದ ಗಾಡಿ ಬರೋದು ಬಣ್ಣ ಬಣ್ಣದ ಶರಬತ್ತು ಬಾಟಲಿಗಳನ್ನು ಸುತ್ತಲೂ ಜೋಡಿಸಿಕೊಂಡು ಮದ್ಯೆ ಐಸ್ ಗಡ್ಡೆಯನ್ನೇ ಕೊಬ್ಬರಿಯಂತೆ ತುರಿದು ಅಲ್ಯೂಮಿನಿಯಂ ಅಚ್ಚಿಗೆ ಸುರಿದು ಕಡ್ಡಿ ಸಿಕ್ಕಿಸಿ ಅದಕ್ಕೆ ಮೂರು ಫ್ಲೇವರಿನ ಬಣ್ಣಗಳನ್ನು ಹಾಕಿ ಕೊಡುತ್ತಿದ್ದ. ತಿನ್ನೋದಕ್ಕಿಂತಲೂ ನೋಡೋದಕ್ಕೇ ಸಕ್ಕತ್ತಾಗಿರೋದು .

    ಮನೆಯಲ್ಲಿ ಐಸ್ ಗಂತಲೇ ಹಠ ಉಪವಾಸ ಮಾಡುತ್ತಿದ್ದೆವು , ಬೈಸಿಕೊಳ್ಳುತ್ತಿದ್ದೆವು .ಐಸ್ ತಿಂದಿದ್ದಕ್ಕಿಂತಲೂ ಒದೆ ತಿಂದಿದ್ದೇ ಹೆಚ್ಚು .
    ಮನೆಗೆ ನೆಂಟರು ಬಂದಾಗ ಬೇಕಂತ್ಲೇ ಕೇಳುತ್ತಿದ್ದೆವು. ಅವರ ಮುಂದೆ ನಮ್ಮನೆಯವರು ಒಳಗೆ ಅಗಾಧವಾದ ಸಿಟ್ಟಿದ್ದರೂ ಮೇಲೆ ನಗುತ್ತಲೇ ತಗೋಳೋ ತಗೋ ಹೋಗು ಅಂತ ಕಾಸು ಕೊಡೋವ್ರು. ನೆಂಟರು ಹೊರಟ ಮೇಲೆ ಆ ಸಿಟ್ಟನ್ನ ಸೇಡು ಥರ ತೀರಿಸ್ಕೊಳೋವ್ರು .

    ಯಾವಾಗಲಾದರೂ ಮನೆಯವರೂ ನಮ್ಮ ಜೊತೆ ಐಸ್ ಕ್ರೀಂ ತಿನ್ನಲು ಗಾಡಿ ಬಳಿ ಬಂದ್ರೆ , ಸ್ಕೂಲಿನ ಹತ್ತಿರ ಟೀಚರ್ಗಳು ಅಪರುಪಕ್ಕೊಮ್ಮೆ ಸ್ಟ್ಯಾಫ್ ರೂಂಗೆ ಐಸ್ ಕ್ಯಾಂಡಿ ತರಿಸಿ ತಿಂದರೆ ನಮಗದೇನೋ ಆನಂದ . ನಮ್ಮ ರೋಲ್ ಮಾಡಲ್ಗಳು ಸಹ ಐಸ್ ಕ್ಯಾಂಡಿ ತಿಂತಾರೆ ಅನ್ನೋ ಫೀಲಿಂಗ್ ಆಗೋದು .

    ‘ಐಸು’…….ತಣ್ಣಗಿನ ಸಿಹಿಸ್ವರ್ಗ. ತಂಪಾದ ನವೊಲ್ಲಾಸ . ಸುಲಭಕ್ಕೆ ಸಿಗದ ಹಿಮಾಮೃತ.ಕನಸಲ್ಲೂ ಕಾಡುತ್ತಿದ್ದ ರಂಗಿನಗಡ್ಡೆ ….ಚಿಲ್ಲರೆ ಹಣ ಕೂಡಿಟ್ಟಿಕೊಂಡು ಕಾದಿದೀವಿ , ಓಡಿದೀವಿ , ಬಿದ್ದಿದೀವಿ , ಕಡಿಮೆ ಬೆಲೆಗೆ ಸಿಗುತ್ತೆ ಅಂತ ಐಸ್ಕ್ಯಾಂಡಿ ಫ್ಯಾಕ್ಟರಿ ಬಳಿ ಅಲೆದಿದೀವಿ . ತಿಂದ್ರೆ ಬೇಗ ಮುಗಿದೋಗುತ್ತೆ ಅಂತ ಸ್ಟೀಲ್ ಗ್ಲಾಸಿನಲ್ಲಿ ಹಾಕಿ ಅಲುಗಾಡಿಸುತ್ತಾ ಆ ಕರಗುವ ನೀರನ್ನು ನಾಲಿಗೆಗೆ ಸುರಿದುಕೊಂಡಿದ್ದೀವಿ .ರಚ್ಚೆ ಹಿಡಿದಿದೀವಿ ಹಾಸಿಗೆ ಹಿಡಿದಿದೀವಿ. ಗಂಟಲು ಕಟ್ಟಿಸಿಕೊಂಡಿದೀವಿ ಸೂಜಿ ಚುಚ್ಚಿಸಿಕೊಂಡಿದೀವಿ. ಬೈಸಿಕೊಂಡು, ಹೊಡೆಸಿಕೊಂಡು , ಕೊಡಿಸಿಕೊಂಡು , ಅದೆಷ್ಟೋ ಬಾರಿ ಕಣ್ಣೀರಿನಜೊತೆಯಲ್ಲೇ ಐಸ್ ಕ್ಯಾಂಡಿ ಮೆಕ್ಕಿದ್ದೇವೆ.

    ಏನೇ ಆದರೂ ಈಗ ಇದು ಬಹುದೊಡ್ಡ ಉದ್ಯಮವಾಗಿ ಬೆಳೆದಿದೆ , ನಮ್ಮಲ್ಲಿಗೆ ಅಂತರಾಷ್ಟ್ರೀಯ ಬ್ರಾಂಡ್ಗಳು ಲಗ್ಗೆ ಇಟ್ಟಿವೆ , ಐಷಾರಾಮಿ ಹವಾನಿಯಂತ್ರಿತ ಮಳಿಗೆಗಳು , ಪಾರ್ಲರ್ಗಳು ತಲೆಎತ್ತಿವೆ , ಎಲ್ಲಾ ರೀತಿಯ ತರಹೇವಾರಿ ಸ್ವಾದದ ಐಸ್ ಕ್ರೀಂಗಳು ದಿನದ ಯಾವುದೇ ಸಮಯದಲ್ಲೂ ಋತುವಿನ ಎಲ್ಲಾ ಕಾಲಗಳಲ್ಲೂ ಸಿಗುತ್ತಿವೆ .ಆರ್ಡರ್ ಮಾಡಿದರೆ ಮನೆಬಾಗಿಲಿಗೇ ತಲುಪಿಸುತ್ತಾರೆ . ಈಗಿನ ಮಕ್ಕಳಿಗೆ ಅದರ ಮೇಲೆ ಅಂತಹ ಆಸೆಯಾಗಲೀ ಪ್ರೀತಿಯಾಗಲಿ ಅಷ್ಟಾಗಿ ಕಾಣುವುದಿಲ್ಲ , ಅವರಿಗದು…..ದುಡ್ಡು ಕೊಟ್ರೆ ಸಿಗುತ್ತೆ ಅನ್ನೋ ತಿನಿಸು ಅಷ್ಟೇ !ಏನೇ ಆಗಲಿ ನಮ್ಮ ಬದುಕಲ್ಲಿ ತಣ್ಣಗೆ ಕರಗಿಹೋಗಿದ್ದು ಎರಡೇ ಒಂದು ಐಸ್ ಕ್ಯಾಂಡಿ ಮತ್ತೊಂದು ಬಾಲ್ಯ .

    ಕಿರಣ ಆರ್

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೈಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ.ಹಲವಾರು ಕವಿತೆಗಳಿಗೆ ಇಲಸ್ಟ್ರೇಷನ್ ಮಾಡಿದ್ದಾರೆ. ಇಂಟಿರೀಯರ್ ಡಿಸೈನ್ ಮತ್ತು ಇದರ ಬಗ್ಗೆ ಕೆಲವು ಲೇಖನಗಳನ್ನು ಪತ್ರಿಕೆಗೆ ಬರೆದಿದ್ದಾರೆ. ಜೊತೆಗೆ ಕವಿತೆಗಳನ್ನು ಕೂಡ ಬರೆಯುತ್ತಾರೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    ರಾಜ್ಯ ಕಾಂಗ್ರೆಸ್ ಆಗುವುದೆ ಕೇಡರ್ ಆಧಾರಿತ ಪಕ್ಷ

    ಇಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಪದಗ್ರಹಣ ಮಾಡಿದ್ದಾರೆ. ತಮ್ಮದೆ ಶೈಲಿಯಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡಿ ಕೆ ಶಿವಕುಮಾರ್, ಕೇಡರ್ ಆಧಾರಿತ ಪಕ್ಷ ಕಟ್ಟುವ ಮಾತಾನಾಡಿದ್ದಾರೆ. ಸಾಮೂಹಿಕ ನಾಯಕತ್ವದ ಮಂತ್ರ ಪಠಿಸಿದ್ದಾರೆ. ಅವರು ಇದರಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿ ಆಗಬಹುದು? ಅವರೇ ಹೇಳಿದಂತೆ ವಿಧಾನ ಸೌಧದ ಮೆಟ್ಟಿಲಿನ ಚಪ್ಪಡಿ ಕಲ್ಲಾಗಿ ಕಾಂಗ್ರೆಸ್ ಪಕ್ಷ ಮೂರನೆ ಮಹಡಿ ತಲುಪಿ ಅಧಿಕಾರ ಹಿಡಿಯುವಂತೆ ಮಾಡಬಲ್ಲರೆ ? ಈ ಬಗ್ಗೆ ಕನ್ನಡಪ್ರೆಸ್.ಕಾಮ್ ನ ಪ್ರಧಾನ ಸಂಪಾದಕ ಶ್ರೀವತ್ಸ ನಾಡಿಗ್ ಮತ್ತು ಹಿರಿಯ ರಾಜಕೀಯ ವಿಶ್ಲೇಷಕ ಕೂಡ್ಲಿ ಗುರುರಾಜ ನಡೆಸಿದ ಪಾಡ್ಕಾಸ್ಟ್ ಇದು. ಆಲಿಸಿ ನಿಮ್ಮ ಅಭಿಪ್ರಾಯ ತಿಳಿಸಿ.

    error: Content is protected !!