24.8 C
Karnataka
Wednesday, May 20, 2026
    Home Blog Page 168

    ಹ್ಯಾಂಡ್ ಮೇಡ್ ಸೋಪು ತಯಾರಿಸಿ ಯಶಸ್ವಿ ಉದ್ಯಮಿಯಾದ ಗೃಹಿಣಿ

    ಇಪ್ಪತ್ತೈದು ವರ್ಷಗಳಿಂದ ಮುಂಬೈನಲ್ಲಿ ನೆಲೆಸಿರುವ ಲೇಖಕಿ ಅಲ್ಲಿ ಹ್ಯಾಂಡ್ ಮೇಡ್ ಸಾಬೂನು ತಯಾರಿಕೆ ಆರಂಭಿಸಿ ಯಶಸ್ವಿ ಉದ್ಯಮಿಯಾಗುವ ನಿಟ್ಟಿನಲ್ಲಿ ಮುಂದುವರೆದಿದ್ದಾರೆ. ಕನ್ನಡಪ್ರೆಸ್. ಕಾಮ್ ಓದುಗರಿಗೆ ಇದು ಸ್ಪೂರ್ತಿ ತುಂಬಲಿ. ಆ ಮೂಲಕ ಮತ್ತಷ್ಟು ಉದ್ಯಮಿಗಳು ಉದಯವಾಗಲಿ ಎಂಬ ಆಶಯ ನಮ್ಮದು.

    ನಾನು ಸುಮಾರು ಇಪ್ಪತ್ತೈದು ವರ್ಷಗಳಾಯ್ತು ಮುಂಬೈ ವಾಸಿಯಾಗಿ. ಸಂಸಾರ, ಮಕ್ಕಳ ಬೆಳವಣಿಗೆ ಒಂದು ಹಂತಕ್ಕೆ ಬಂದಿದೆ ಇನ್ನು ನನ್ನನ್ನು ನಾನು ಗಮನಿಸಿಕೊಳ್ಳುವ ಸಮಯ ಎನ್ನುವಂತಾದಾಗ ಒಂದಷ್ಟು ಸಂಸಾರದಾಚೆಯ ಪ್ರಪಂಚ ನೋಡಲು ಶುರುಮಾಡಿದ್ದೆ. ಗೆಳತಿಯರೊಡನೆ ಓಡಾಟ ಆಗಷ್ಟೇ ಶುರುವಾಗಿದ್ದ ಫೇಸ್ಬುಕ್ ಅನ್ನುವ ವರ್ಚುಯಲ್ ಪ್ರಪಂಚ ಒಳಗಿನ ಜಗತ್ತು ಶುರುವಾಗಿತ್ತು.

    ‌‌‌‌ ಆಗೀಗ ಗಂಡನೊಂದಿಗೆ ಕೈಗಾರಿಕಾ ಮೇಳ ಕರಕುಶಲ ಮೇಳ ಅಂತೆಲ್ಲಾ ಸುತ್ತುವಾಗ ಬಿಡದಂತೆ ಗಮನ ಸೆಳೆಯುತ್ತಿದ್ದದ್ದು ಬಣ್ಣ ಬಣ್ಣದ ಗಾಜಿನಂತ ಸೋಪುಗಳು. ಕೈಯಲ್ಲೊಮ್ಮೆ ಹಿಡಿದು ನಿಂತುಬಿಟ್ಟರೆ ಅವರು ವಿವರಿಸುತ್ತಿದ್ಧದ್ದು ಕಿವಿಯಿಂದಾಚೆ ಎಲ್ಲೋ ಸೇರುತ್ತಿತ್ತು. ಬಣ್ಣಗಳು ಚಿಕ್ಕಂದಿನಿಂದ ನನಗೆ ಸೋಜಿಗ ಸಂಭ್ರಮ ಹುಟ್ಟಿಸುತ್ತಿತ್ತು. ಅದರಲ್ಲೂ ಬಣ್ಣದ ಗಾಜುಗಳು ಹರಳುಗಳು ಕೈಗೆ ಸಿಕ್ಕರೆ ದಿಟ್ಟಿಸುತ್ತಾ ಪ್ರಪಂಚವನ್ನೇ ಮರೆತು ಅದರೊಳಗೇ ಮುಳುಗುತ್ತಿದ್ದೆ. ಆ ಬಣ್ಣಗಳ ಆಕರ್ಷಣೆಯಿಂದಾಗಿಯೇ ಮಧ್ಯದಲ್ಲಿ ಒಮ್ಮೆ ಒಂದು ವರ್ಷಗಳ ಕಾಲ ಕಲಾ ಮಾಧ್ಯಮದಲ್ಲಿ ಕಲಿಯಲು ಅವಕಾಶ ಸಿಕ್ಕಿತ್ತು. ನಂತರ ಮದುವೆ. ಎಲ್ಲಾ ಮರೆತಂತೆ ಜೀವನ ಸಾಗಿದ್ದಾಗ ಮತ್ತೆ ನನ್ನನ್ನು ಸೆಳೆದದ್ದು ಹ್ಯಾಂಡ್ ಮೇಡ್ ಸೋಪುಗಳು.

    ಹಾಗೆ ನೋಡಿದರೆ ನಾನು ಅಷ್ಟೇನು ಅಲಂಕಾರ ಪ್ರಿಯಳಲ್ಲ. ಆದರೂ ಈ ಸೋಪಿನ ಆಕರ್ಷಣೆ ಎಷ್ಟಾಯಿತೆಂದರೆ ಹೇಗಾದರೂ ಕಲಿಯಬೇಕು ಎಂದು ಹಠ ಮೂಡುವಷ್ಟು. ಅದಕ್ಕೆ ಪೂರಕವೆಂಬಂತೆ ಅಂಧೇರಿಯಲ್ಲಿ ಅದಕ್ಕೆ ಸಂಬಂಧಿಸಿದ ತರಗತಿಗಳು ನೆಡೆಯುತ್ತಿರುವುದು ಆನ್ ಲೈನ್ ಅಲ್ಲಿ ತಿಳಿದುಬಂತು. ಸೇರಿಕೊಂಡೆ. ಅಲ್ಲಿ ಸೋಪು ತಯಾರಿಕೆ ಹೇಳಿಕೊಟ್ಟರಾದರೂ ಅದರಲ್ಲಿ ಕಲೆ ಅರಳಿಸುವುದು ನಮ್ಮ ಅಭ್ಯಾಸದ ಬಲದಿಂದಷ್ಟೇ ಸಾಧ್ಯವಿತ್ತು. ಅಲ್ಲದೆ ಜೊತೆಗೆ ಕೇವಲ ಆಕರ್ಷಣೆಯ ವಸ್ತುವಾಗಷ್ಟೇ ಉಳಿದರೆ ಪ್ರಯೋಜನ ಸಾಲದು, ಅವುಗಳಲ್ಲಿ ಬಳಕೆ ಆಗುವ ಗಿಡಮೂಲಿಕೆ, ವಿವಿಧ ಎಣ್ಣೆಗಳ ಸುಗಂಧ ದ್ರವ್ಯಗಳ ಉಪಯೋಗ ಅವುಗಳ ಗುಣ, ಕ್ರಿಯೆಗಳ ಬಗ್ಗೆ ತಿಳಿವಳಿಕೆ ಅತ್ಯಗತ್ಯವಾಗಿತ್ತು. ಪ್ರತಿಯೊಂದನ್ನೂ ಯಾವ ಹಂತದಲ್ಲಿ ಯಾವ ರೀತಿಯಲ್ಲಿ ಯಾವ ರೂಪದಲ್ಲಿ ಬಳಕೆ ಮಾಡಬೇಕು ಎಂಬುದರ ಜ್ಞಾನ ಅತೀ ಮುಖ್ಯ ಎಂದು ಅರಿವಾಗಿ ನಂತರದ ದಿನಗಳಲ್ಲಿ ದೊಡ್ಡ ದೊಡ್ಡ ಅನುಭವಿಗಳು ಕಾಸ್ಮೆಟಿಕ್ ವಲಯದ ದಿಗ್ಗಜರೆನಿಸಿಕೊಂಡವರು ನೆಡೆಸುವ ವರ್ಕ್ ಶಾಪ್ ಗಳಿಗೆ ಸೇರಿಕೊಂಡೆ. ಕಲೆಯ ಜೊತೆ ವಿಜ್ಞಾನ ಅತ್ಯವಶ್ಯಕ ಎಂಬುದು ತಿಳಿಯಿತು.

    ಅವರು ಕೊಡುತ್ತಿದ್ದ ಮಾಹಿತಿಗಳೊಡನೆ ಅವರು ಹೇಳುತ್ತಿದ್ದ ಎಲ್ಲಾ ಸೋಪ್ ಸಂಬಂಧಿ ಬ್ಲಾಗ್ ಬರಹಗಳನ್ನು ಓದಲು ಶುರುಮಾಡಿದೆ. ಮಾಹಿತಿ ಸಿಗಬಹುದಾದ ಎಲ್ಲಾ ಮಾಧ್ಯಮಗಳನ್ನೂ ಸಿಕ್ಕಷ್ಟೂ ಜಾಲಾಡಿ ಕಲಿಯುತ್ತಾ ಹೋದೆ ಜೊತೆ ಜೊತೆಗೆ ತಯಾರಿಕೆ ಮಾಡುತ್ತಾ ನಡು ನಡುವೆ ಎದುರಾಗುತ್ತಿದ್ದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಕಾಸ್ಮೆಟಾಲಜಿ ಮಾಡಿದ್ದವರ ಬಳಿ ಸತತವಾಗಿ ಸಂಪರ್ಕದಲ್ಲಿದ್ದು ಸಲಹೆ ಕೇಳುತ್ತಿದ್ದೆ. ದುಡ್ಡು ಕೊಟ್ಟು ಅವರ ವರ್ಕ್ ಶಾಪ್ ಮಾಡಿದವರಿಗೆ ಮಾತ್ರ ಹಂಚಿಕೆಯಾಗುವ ಮಾಹಿತಿಗಳವು. ಕಲಿಯಲೇ ಬೇಕೆಂಬ ಹಠ ಇದ್ದ ಕಾರಣ ದುಡ್ಡು ಕೊಟ್ಟು ಮತ್ತೆ ಮತ್ತೆ ಹೋಗುತ್ತಿದ್ದೆ.

    ದುಬಾರಿ ಕಲಿಕೆ

    ಹಾಗೆ ನೋಡಿದರೆ ಇದು ದುಬಾರಿ ಕಲಿಕೆಯೇ. ಅದಕ್ಕಿಂತಾ ದುಬಾರಿ ಅವುಗಳ ತಯಾರಿಕೆಗೆ ಬೇಕಾಗುವ ಸಾಮಾನುಗಳು. ಒಟ್ಟಿನಲ್ಲಿ ಒಂದೂವರೆ ವರ್ಷದ ಸತತ ಪ್ರಯೋಗ ಮುಗಿಸಿ ಒಂದು ವರ್ಷದಿಂದೀಚೆಗೆ ನಾನು ತಯಾರಿಸುವ ಸಾಬೂನುಗಳು ಈಗಾಗಲೆ ಮಾರಾಟವಾಗುತ್ತಿರುವ ಬ್ರಾಂಡ್ ಸೋಪುಗಳ ಸಾಲಿನಲ್ಲಿ ನಿಲ್ಲಬಹುದು ಎನ್ನುವ ಭರವಸೆ ಕಲಿಸಿದವರಿಂದ ಸಿಕ್ಕಿತು. ಮೊದ ಮೊದಲು ಮನೆಯವರಿಗೆ,ಸಂಬಂಧಿಕರಿಗೆ ಬಳಸಲು ಕೊಟ್ಟು ಅವರಿಂದ ಜೈ ಅನ್ನಿಸಿಕೊಂಡು ನಂತರ ನನ್ನ ಗೆಳತಿಯರಿಗೆ ಮೊದ ಮೊದಲು ಮಾರಾಟ ಮಾಡಲು ಆರಂಭಿಸಿದೆ.

    ಅದೃಷ್ಟವಶಾತ್ ಪ್ರತಿಯೊಬ್ಬ ಗೆಳತಿಯೂ ಆ ವಿಷಯಕ್ಕೆ ಪ್ರೋತ್ಸಾಹಿಸಿ ಕೊಂಡುಕೊಂಡರು. ಪ್ರತಿಯೊಬ್ಬರ ಚರ್ಮದ ಮೇಲೂ ಅವರವರ ಚರ್ಮದ ಗುಣಕ್ಕೆ ಅನುಗುಣವಾಗಿ ಬೇರೆ ಬೇರೆ ಪರಿಣಾಮ ಬೀರುತ್ತಿದ್ದರಿಂದ ಅವರಿಗಾಗುತ್ತಿದ್ದ ಅನುಭವಗಳನ್ಬು ಹಂಚಿಕೊಳ್ಳುತ್ತಿದ್ದರು. ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳಲು ಮಾರ್ಗದರ್ಶನ ಮಾಡುತ್ತಿದ್ದರು. ಆರೇಳು ತಿಂಗಳಲ್ಲಿ ಸಾಕಷ್ಟು ಅನುಭವ ಆಗಿ ಕೈ ಕೂಡ ಪಳಗಿ ಹೊಸ ಹೊಸ ಡಿಸೈನ್ ಸೋಪುಗಳನ್ನು ಮಾಡಲು ಕಲಿಯುತ್ತಾ ಬಂದಿದ್ದೇನೆ. ಅದನ್ನು ಇಷ್ಟ ಪಟ್ಟು ಕೊಂಡುಕೊಳ್ಳುವ ಒಂದು ಗುಂಪಿನ ಜನರೂ ಸಹ ಸಿಕ್ಕಿದ್ದಾರೆ. ಈ ಕಲಿಕೆಗೆ ಕೊನೆ ಎನ್ನುವುದೇ ಇಲ್ಲ. ಈ ಸೋಪ್ ಪ್ರಪಂಚ ಕೂಡ ಪ್ರಕೃತಿಯಷ್ಟೇ ವಿಶಾಲವಾದುದು.. ಕಲಿಕೆ ನಿರಂತರವಾಗಿದೆ. ಜೊತೆಗೆ ಗಳಿಕೆಯೂ ಆಗುತ್ತಿದೆ.

    ತಯಾರಿಕೆಯಲ್ಲಿ ಒಂದು ಮಟ್ಟಕ್ಕೆ ಬಂದ ನಂತರ ನಮ್ಮನ್ನು ನಾವು ವ್ಯಾಪಾರದ ಜಗತ್ತಿಗೆ ತೆರೆದುಕೊಳ್ಳಲು ಇನ್ನೂ ಸಾಕಷ್ಟು ಪಳಗಬೇಕಿದೆ. ಕಾಯಿದೆ, ಕಾನೂನು ರೆಜಿಸ್ಟ್ರೇಷನ್ ಪ್ರಕ್ರಿಯೆಗಳಲ್ಲಿ ತೊಡಗಬೇಕಿದೆ. ಮನೆ ಮಟ್ಟಿಗೆ ಗೆಳೆಯರು ಸಂಬಂಧಿಕರಿಗೆ ಕೊಡಲು ಮಾಡುವಾಗ ಇವುಗಳ ಅಗತ್ಯ ಇಲ್ಲದಿದ್ದರೂ ಮಾರುಕಟ್ಟೆಯಲ್ಲಿ ನಿಲ್ಲಲು ಅವೆಲ್ಲಾ ಅನಿವಾರ್ಯ. ಕುಶಲತೆ ತಯಾರಿಕೆಯಲ್ಲಿ ಇದ್ದರೆ ಮಾತ್ರ ಸಾಲದು. ವ್ಯವಹಾರದಲ್ಲೂ ಬೇಕು.

    ಉತ್ತರ ಭಾರತೀಯರು ಮತ್ತು ದಕ್ಷಿಣ ಭಾರತೀಯರು

    ನನ್ನ ಇಷ್ಟು ವರ್ಷದ ಅನುಭವದಲ್ಲಿ ಇಲ್ಲಿಯ ಜನರ ನಡವಳಿಕೆ ಹಾಗೂ ದಕ್ಷಿಣ ಭಾರತದವರ ನಡವಳಿಕೆ ತಕ್ಕಮಟ್ಟಿಗೆ ಅರ್ಥ ಮಾಡಿಕೊಂಡಿದ್ದೀನಿ.‌ ಈ ಉತ್ತರ ಭಾರತದ ಮಹಿಳೆಯರಿಗೆ ಹಿಂದಿನಿಂದಲೂ ಕಟ್ಟು ಪಾಡುಗಳು ಹೆಚ್ಚು. ಪುರುಷ ಪ್ರಾಧಾನ್ಯತೆ ಅನ್ನುವುದು‌ ಅವರಲ್ಲಿ ಇವತ್ತಿಗೂ ಅಂಟಿಕೊಂಡಿರುವ ವಿಷಯ. ಅವರವರ ಪರಿಸ್ಥಿತಿಗೆ ತಕ್ಕಂತೆ ಅಪವಾದಗಳು ಇರಬಹುದಾದರೂ ಶೇಕಡವಾರು ಲೆಕ್ಕ ತೆಗೆದುಕೊಂಡರೆ ಪುರುಷ ಪ್ರಾಧಾನ್ಯತೆ ಇವರ ಕುಟುಂಬಗಳಲ್ಲಿ ಹೆಚ್ಚು. ಈ ವಿಷಯದಲ್ಲಿ ಮುಂಬೈಯ ಮಾರಾಠಿ ಮಹಿಳೆಯರನ್ನು ಬೆಂಗಾಲಿ ಮಹಿಳೆಯರನ್ನು ಹೊರತು ಪಡಿಸಿ ಹೇಳಬೇಕಾಗುತ್ತದೆ. (ಅದಕ್ಕೆ ಹಲವಾರು ಕಾರಣಗಳಿವೆ)

    ಮಾರ್ವಾಡಿ ಗುಜರಾತಿ ಬಿಹಾರಿ ರಾಜಸ್ಥಾನಿ.. ಇವರಲ್ಲಿನ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಹಾಗೂ ವೃತ್ತಿ ಆಯ್ಕೆ ಸ್ವಾತಂತ್ರ್ಯ ಕಡಿಮೆ. ಅದರಲ್ಲೂ ಓದಿದ್ದರೂ ವೃತ್ತಿಯ ಕಾರಣಕ್ಕೆ ಹೊರಗೆ ಒಬ್ಬಂಟಿಯಾಗಿ ಹೋಗುವ ಅವಕಾಶಗಳಂತೂ ತೀರಾ ಕಡಿಮೆ.‌ಇವರಲ್ಲಿ ಹೆಚ್ಚಿನಂಶ ವ್ಯಾಪಾರಸ್ಥ ಕುಟುಂಬದವರೇ ಆದ್ದರಿಂದ ಸಾಕಷ್ಟು ಮನೆಗಳಲ್ಲಿ ಆರ್ಥಿಕ ತೊಂದರೆ ಅಷ್ಟಾಗೇನೂ ಕಾಡುವುದಿಲ್ಲ. ಹಾಗೆ ನೋಡಿದರೆ ತುಂಬಾ ಅನುಕೂಲಸ್ಥರು ಸಾಕಷ್ಟು ಜನರಿದ್ದಾರೆ.

    ಇವರ ಮನೆಯ ಹೆಣ್ಣು ಮಕ್ಕಳಿಗೆ ಐಶಾರಾಮಕ್ಕೇನೂ ಕೊರತೆ ಇರುವುದಿಲ್ಲ. ಆದರೂ ಇತ್ತೀಚೆಗೆ ಅಂಥ ಕುಟುಂಬದ ಹೆಣ್ಣುಮಕ್ಕಳಿಗೂ ಸ್ವತಃ ದುಡಿಯುವ ತಮ್ಮ ಅಸ್ತಿತ್ವ ಕಂಡುಕೊಳ್ಳುವ ತುಡಿತ ಹೆಚ್ಚಾಗಿದೆ.ಮನೆಯಲ್ಲಿ ವ್ಯಾಪಾರಸ್ಥರೇ ಹೆಚ್ಚಾಗಿ‌ ಇರುವ ಕಾರಣ ಸಹಜವಾಗಿಯೇ ವ್ಯಾಪಾರದ ಗುಟ್ಟುಗಳು ಚಿಕ್ಕ ವಯಸ್ಸಿನಿಂದಲೇ ಕರತಲಾಮಲಕವಾಗಿರುತ್ತದೆ.
    ಈ ಅನುಕೂಲಗಳಿಂದಾಗಿ ಇಂದಿನ ಹೆಚ್ಚು ಉತ್ತರ ಭಾರತೀಯ ಮಹಿಳೆಯರು ಹೆಚ್ಚು ಪ್ರಚಾರಕ್ಕೆ ಬರದೆಯೂ ಮನೆಯಿಂದಲೇ ವ್ಯಾಪಾರ ವಹಿವಾಟುಗಳನ್ನು ಮಾಡುತ್ತಾ ಸಬಲೀಕರಣ ಹೊಂದುತ್ತಿದ್ದಾರೆ. ಅವರಿಗೆ ತಾವು ವ್ಯಾಪಾರ ಮಾಡುತ್ತಿರುವುದರ ಬಗ್ಗೆ ಯಾವುದೇ ಕೀಳರಿಮೆ ಇಲ್ಲ. ಕೆಲವು ಮಹಿಳೆಯರಂತೂ‌ ವ್ಯಾಪಾರದಲ್ಲಿ ಪುರುಷರನ್ನೂ ಮೀರಿಸುವ ಚಾಕಚಕ್ಯತೆ ತೋರಿಸಿ ಕಡೆಗೆ ಅವರ ಮನೆಯ ಪುರುಷರೇ ಅವರ ವ್ಯವಹಾರಗಳಿಗೆ ಒತ್ತಾಸೆಯಾಗಿ ನಿಲ್ಲುತ್ತಿದ್ದಾರೆ.

    ಹೀಗೆ ಮನೆಯಿಂದಲೇ ವ್ಯಾಪಾರ ಮಾಡಿ ಅಂತರಾಷ್ಟ್ರೀಯ ಮಟ್ಟದ ವರೆಗೆ ಹೆಸರು ಮಾಡಿದವರ ಬಗ್ಗೆ ನಾನೇನು ಹೇಳಬೇಕಿಲ್ಲ. ಎಲ್ಲವೂ ಮಾಧ್ಯಮದ ಮೂಲಕ ತಿಳಿಯುವಂತದ್ದೆ.‌ ಇವರಿಂದ ಇಡೀ ಭಾರತದ ಮಹಿಳೆಯರು ಕಲಿಯುವಂತದ್ದು ಸಾಕಷ್ಟಿದೆ. ಇವರ ವ್ಯಾಪಾರ ಕೌಶಲ್ಯಗಳು ಅನುಕರಣೀಯ. ಇಂಥವರಲ್ಲಿ ದುಡಿಮೆ ಅನ್ನುವುದು ಅವಶ್ಯಕತೆಗಿಂತ ಅಭ್ಯಾಸ ಆಗಿ ಹೋಗಿದೆ.

    ಅದೇ ನಮ್ಮ ದಕ್ಷಿಣದ ಕಡೆಯ ಹೆಣ್ಣು ಮಕ್ಕಳನ್ನು ತೆಗೆದುಕೊಂಡರೆ ಬಹಳ ಬೇಗ ಸಾಕ್ಷರತೆಗೆ ತೆರೆದುಕೊಂಡವರು ಹಾಗೂ ಶೇಕಡವಾರು ಲೆಕ್ಕದಲ್ಲಿ ವಿದ್ಯಾಭ್ಯಾಸ ಹಾಗು ವೃತ್ತಿಯ ಆಯ್ಕೆ ವಿಷಯದಲ್ಲಿ ಉತ್ತರ ಭಾರತೀಯ ಮಹಿಳೆಯರಿಗಿಂತ ಹೆಚ್ಚು ಸ್ವತಂತ್ರರು. ಇವರ ತಲೆಗಳಲ್ಲಿ ಚಿಕ್ಕಂದಿನಿಂದಲೂ ವಿದ್ಯಾಭ್ಯಾಸದ ಪ್ರಾಮುಖ್ಯತೆ ಬಗ್ಗೆ ಮನೆ ಮನೆಗಳಲ್ಲಿ ತುಂಬಿರುತ್ತಾರಾಗಲೀ, ವ್ಯಾಪಾರ ವ್ಯವಹಾರದ ಬಗ್ಗೆ ಅಲ್ಲ. ವ್ಯಾಪಾರ ಮಾಡುವವರ ಬಗ್ಗೆ ಇವರಲ್ಲಿ ಒಂದು ರೀತಿಯ ಉದಾಸೀನತೆ ಅಥವಾ ಅದು ಅನವಶ್ಯಕ ಕೆಲಸ ಎನ್ನುವ ಭಾವವೇ ಹೆಚ್ಚು. ಇಲ್ಲೂ ಕೂಡ ಕೆಲವರು ಅಪವಾದವಾಗಿ ಇರಬಹುದು.

    ಇವತ್ತಿಗೂ ಮನೆಯಿಂದ ವ್ಯಾಪಾರ ವ್ಯವಹಾರ ಮಾಡುತ್ತಿರುವ ಮಹಿಳೆಯರನ್ನು ಕಂಡರೆ ಹೆಚ್ಚಿನವರಿಗೆ ಪಾಪ ಹೆಚ್ಚು ಕಲಿಯದವರೇನೋ ಅನ್ನುವ ಅನಿಸಿಕೆ ಹುಟ್ಟಿಬಿಡುತ್ತದೆ. ಹಾಗಾಗಿ ವ್ಯಾಪಾರದ ವಿಷಯದಲ್ಲಿ ನಮ್ಮ ದಕ್ಷಿಣ ಭಾರತದ ಮಹಿಳೆಯರು ಉತ್ತರ ಭಾರತೀಯ ಮಹಿಳೆಗಿಂತ ಹಿಂದೆ ಎಂದೇ ಹೇಳಬೇಕು. ನಾವಿನ್ನು ಎಂಜಿನಿಯರ್ ಡಾಕ್ಟರ್ ಸರ್ಕಾರಿ ಅಧಿಕಾರಿಗಳು ಇಂಥವರು ಮಾತ್ರ ಸಮಾಜದಲ್ಲಿ ಮಾನ್ಯರು ಅನ್ನುವ ದೃಷ್ಟಿಕೋನದಿಂದ ಹೊರ ಬರಬೇಕಾದ ಅವಶ್ಯಕತೆ ಹಿಂದೆಂದಿಗಿಂತ ಇಂದು ಅತ್ಯಗತ್ಯವಾಗಿದೆ.

    ಮನೆಯಿಂದ ಸಣ್ಣ ಪುಟ್ಟ ವ್ಯವಹಾರ- ವ್ಯಾಪಾರ ಮಾಡುವುದು ನಾಲ್ಕು ಜನರಿಗೆ ತಿಳಿದರೆ ವ್ಯಕ್ತಿತ್ವಕ್ಕೆ ಧಕ್ಕೆಯಾಗುತ್ತದೆ ಎಂಬ ಹುಂಬತನದಿಂದ‌ ಇಲ್ಲಿಯ ಮಹಿಳೆಯರು ಮೊದಲು ಹೊರಬರಬೇಕಿದೆ. ಹಾಗೆಯೇ ಮನೆಯ ಇತರ ಸದಸ್ಯರೂ ಕೂಡ ತಮ್ಮ ಮನೆಯ ಹೆಂಗಸರಲ್ಲಿ ಸೂಕ್ತವಾದ ಯಾವುದೇ ಕೌಶಲ್ಯ ವಿದ್ದರೆ ಅವರನ್ನು ಪ್ರೋತ್ಸಾಹಿಸಿ ಆ ಮೂಲಕ ಆರ್ಥಿಕ ಭದ್ರತೆ ಕಂಡುಕೊಳ್ಳಲು ಸಹಾಯ ಮಾಡಬೇಕಿದೆ. ಈಗಂತೂ ಸೋಶಿಯಲ್ ಮೀಡಿಯಾಗಳು ಬೆರಳ ತುದಿಯಲ್ಲೇ ಲಭ್ಯವಿರುವಾಗ ಅವುಗಳ ಸದುಪಯೋಗ ಮಾಡಿಕೊಂಡು ದೇಶದ ಆರ್ಥಿಕ ಬೆಳವಣಿಗೆಗೆ ಸಣ್ಣ ಮಟ್ಟದಲ್ಲೇ ಸರಿ, ಕೊಡುಗೆ ನೀಡಬಹುದಾಗಿದೆ.

    ಟಿಫಿನ್ ಲಂಚ್ ಚಾಟ್ ಸರ್ವಿಸ್

    ಇದಕ್ಕೆ ಪೂರಕವಾದ ಒಂದು ಸಂಗತಿಯನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟ ಪಡುತ್ತೇನೆ. ನಾನು ನಮ್ಮ ಬೆಂಗಳೂರಿನ ಫ್ಲಾಟ್ ಒಂದನ್ನು ಬಾಡಿಗೆದಾರರಿಂದ ಬಿಡಿಸಿಕೊಂಡು ನಾವು ಮುಂಬೈಯಿಂದ ಬೆಂಗಳೂರಿಗೆ ಆಗಾಗ ಹೋದಾಗ ಉಳಿದುಕೊಳ್ಳುವುದಕ್ಕೆ ಬೇಕಾಗುತ್ತದೆ ಎಂದು ಅಗತ್ಯ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೆವು. ಆ ಸಮಯದಲ್ಲಿ ಅಲ್ಲಿಯ ವಸತಿ ಸಮುಚ್ಚಯದಲ್ಲಿಯೇ ಸುಮಾರು ವಾಟ್ಸಾಪ್ ಗ್ರೂಪ್ಗಳು ಇರುವುದು ಪರಿಚಿತರಿಂದ ತಿಳಿದು ಬಂತು. ಹಲವಾರು ವ್ಯಾಪಾರಗಳು ಆ ಮೂಲಕ ನಡೆಯುತ್ತದೆ. ಅದರಲ್ಲಿ ಸ್ಥಳೀಯ ಮಹಿಳೆಯರೇ ಟಿಫಿನ್ ಲಂಚ್ ಚಾಟ್ ಸರ್ವಿಸ್ ನೆಡೆಸುವ ವ್ಯವಸ್ಥೆ ಕೂಡ ಮಾಡಿಕೊಂಡಿದ್ದಾರೆ. ಅಲ್ಲಿರುವ ಹೆಚ್ಚಿನಂಶ‌ ಎಲ್ಲರೂ ಆರ್ಥಿಕವಾಗಿ ಅನುಕೂಲಸ್ಥರೆ. ಹೆಚ್ಚಿನವರು ಉತ್ತರ ಭಾರತೀಯರು. ಅವರು ತಮ್ಮ ಮನೆಗಳಿಂದಲೇ ಖಾದ್ಯಗಳನ್ನು ತಯಾರಿಸಿ ಗ್ರೂಪ್ ಅಲ್ಲಿ ಪ್ರಾಚಾರ ಕೊಟ್ಟು ಮಾರಾಟ ಮಾಡುತ್ತಾ ಬಂದಿದ್ದಾರೆ. ಆ ಇಡೀ ಗುಂಪಿನಲ್ಲಿ ಸರಿಯಾದ ದಕ್ಷಿಣ ಭಾರತದ ತಿನಿಸು ಮಾತ್ರ ಸಿಗುವುದಿಲ್ಲ. ಸಿಕ್ಕರೂ ಹೇಳಿಕೊಳ್ಳುವಂಥದ್ದಲ್ಲ. ಕಾರಣ ಮತ್ತೆ ಹೇಳಬೇಕಿಲ್ಲ.

    ಒಮ್ಮೆ ನಾನು ನಾಲ್ಕು ಪಾನಿಪುರಿ ಆರ್ಡರ್ ಕೊಟ್ಟಿದ್ದೆ. ತಯಾರಿಸಿ ಮಾರುವ ಮಹಿಳೆ‌ ಇಪ್ಪತ್ತು ರುಪಾಯಿಗೆ ಒಂದು ಪ್ಲೇಟ್ ಮನೆಗೇ ತಲುಪಿಸುವವರಿದ್ದರು. ನನಗೆ ಇಲ್ಲಿಯ ಪಾನಿಪುರಿ ಮಾರುವವರನ್ನು ಹೆಚ್ಚಾಗಿ ನೋಡಿದ್ದ ಕಾರಣ.. ತಂದು ಕೊಡುವವರ ಬಗ್ಗೆ ಹೆಚ್ಚೇನೂ ನಿರೀಕ್ಷೆ ಇರಲಿಲ್ಲ. ಮನೆಯ ಸಾಮಾನುಗಳನ್ನು ಜೋಡಿಸುವುದರಲ್ಲಿ ನಾವು ನಿರತರಾಗಿದ್ದೆವು. ಬಟ್ಟೆಗಳು ಗಲೀಜಾಗಿ ನಾವೇ ಸ್ವತಃ ಏನಾದರು ಮನೆಯಲ್ಲೇ ಮಾಡಿಕೊಂಡು ತಿನ್ನಲು ಸಮಾಯಾಭಾವವೂ ಇತ್ತು. ಹಾಗಾಗಿ ಹೊರಗಿಂದ ತರಿಸುವುದು ಅನಿವಾರ್ಯವೂ ಆಗಿತ್ತು.

    ಕೆಲ ಸಮಯದ ನಂತರ ಆರ್ಡರ್ ಕೊಟ್ಟ ಪಾನಿಪುರಿ ಮನೆಗೆ ಬಂತು. ತಂದವರು ಎಷ್ಟು ಶಿಸ್ತಾಗಿ ಶುಭ್ರವಾಗಿ ಸುಂದರವಾಗಿ ತಾಯಾರಾಗಿ ಬಂದಿದ್ದರೆಂದರೆ ನಮಗೆ ನಮ್ಮ ಆ ಸ್ಥಿತಿಯಲ್ಲಿ ಅವರನ್ನು ಸ್ವಾಗತಿಸಬೇಕಾಗಿ ಬಂದದ್ದು ಬಹಳ ಮುಜುಗರವನ್ನುಂಟು ಮಾಡಿತ್ತು.

    ಬಂದವರು ಪಾನಿಪುರಿ ತಯಾರಿಸುವ ಮಹಿಳೆಯ ಪತಿ. ಅವರು ಒಳ್ಳೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ನಮ್ಮ ಕಮಿಟಿಯ ಸದಸ್ಯರು ಹೌದು ಎಂಬುದು ನಂತರ ತಿಳಿದುಬಂತು. ಕೊಡುವ ಒಂದು ಇಪ್ಪತ್ತು ರುಪಾಯಿ ಪಾನಿ ಪುರಿಯ ಬಗ್ಗೆ ಅದೆಂತಾ ಹೆಮ್ಮೆ ಇತ್ತು ಎನ್ನುವುದು ಅವರ ಮಾತು ಹಾವ ಭಾವವನ್ನು ನೋಡಿಯೇ ತಿಳಿಯಬೇಕು. ಅವರ ಪತ್ನಿ ತಯಾರಿಸುವ ಪಾನಿಪುರಿ ಉತ್ಕೃಷ್ಟ ಮಟ್ಟದ್ದೆಂದು, ಅದನ್ನು ತಿಂದ ಮೇಲೆ ಅದರ ಬಗ್ಗೆ ನಮ್ಮ ಅನಿಸಿಕೆ ಹೇಳುವುದು ಬಹಳ ಮುಖ್ಯವೆಂದು‌ ದೊಡ್ಡ ಕಾರ್ಪೋರೇಟ್‌ ಡೀಲ್ ಎನ್ನುವ ರೀತಿಯಲ್ಲಿ ತಾಳ್ಮೆಯಿಂದ ವಿವರಿಸಿ ಹೋದರು. ಅವರು ಹೇಳಿದ ರೀತಿಯಲ್ಲೇ ಪಾನಿಪುರಿ ಚೆನ್ನಾಗಿತ್ತು ಸಹ. ಅದನ್ನು ಅವರಿಗೆ ಮೆಸೇಜ್ ಮಾಡಿ ತಿಳಿಸಿದೆವು ಅವರಿಗೂ ಸಿಕ್ಕ ಪ್ರೋತ್ಸಾಹಕ್ಕೆ ಖುಶಿ ಆಯಿತು. ಅವತ್ತಿನಿಂದ ನಾವು ಅವರು ಪರಿಚಿತರಾದೆವು.ಎರಡು ಸಾವಿರ ಮನೆಗಳನ್ನು ಹೊಂದಿರುವ ಕಾಂಪ್ಲೆಕ್ಸ್ ಅಲ್ಲಿ ಯಾವುದೇ ಸಂಭ್ರಮಾಚರಣೆಗಳು ನೆಡೆಯುತ್ತಿದ್ದರೂ ಆತ ಮುಂದೆ ನಿಂತು ಎಲ್ಲರನ್ನು ಪಾಲ್ಗೊಳ್ಳುವಂತೆ ಹುರಿದುಂಬಿಸುವ ರೀತಿಯನ್ನು ನಾವು ಇವತ್ತಿಗೂ ಅಚ್ಚರಿ ಹಾಗು ಮೆಚ್ಚುಗೆಯಿಂದ ನೋಡುತ್ತೇವೆ. ನಾವು ಮಾಡುವ ಯಾವುದೇ ಕೆಲಸದಲ್ಲಿ ಘನತೆ ಹೇಗಿರಬೇಕೆಂದು ಅರ್ಥವಾಗಿದೆ.

    ನನಗೀಗ ಸ್ವತಃ ನಾನು ಮಾಡುತ್ತಿರುವ ಹ್ಯಾಂಡ್ ಮೇಡ್ ಸೋಪುಗಳ ಬಗ್ಗೆ ಅದರ ಮಾರಾಟದ ಬಗ್ಗೆ ಮತ್ತಷ್ಟು ಗೌರವ ಆಸಕ್ತಿ ಹೆಚ್ಚಾಗಿದೆ. ನಿಮಗೂ ಈ ಬರಹ ಆ ನಿಟ್ಟಿನಲ್ಲಿ ಪ್ರೋತ್ಸಾಹಿಸಲಿ ಎಂಬುದು ನನ್ನ ಆಶಯ.

    ಮಂಗಳನ ಅಂಗಳದ ಏಲಿಯಾನ್ಸ್ ಸುಧಾರಿತ ತಂತ್ರಜ್ಞಾನ ಹೊಂದಿವೆಯಾ ?

    ಭೂಮಿಯಲ್ಲಿರುವ ಮಾನವರು ನಾವೇ ಶ್ರೇಷ್ಠರು, ನಮ್ಮಷ್ಟು ವಿಜ್ಞಾನ-ತಂತ್ರಜ್ಞಾನದಲ್ಲಿ ಮುಂದುವರಿದವರು ಇಲ್ಲ ಎಂದು ಹೆಮ್ಮೆಯಿಂದ ಬೀಗುತ್ತಿದ್ದೇವೆ. ಆದರೆ, ಈ ಬ್ರಹ್ಮಾಂಡದಲ್ಲಿ ಅದೆಷ್ಟು ಭೂಮಿಯಂತಹ ಗ್ರಹಗಳು ಇವೆಯೋ ಮತ್ತು ಅವು ಎಷ್ಟು ಸಹಸ್ರ ವರ್ಷಗಳ ಹಿಂದೆಯೇ ಹುಟ್ಟಿದ್ದು, ಆ ಮೂಲಕವೇ ಅಂತಹ ಗ್ರಹಗಳಲ್ಲಿ ಇರುವ ಜೀವಿಗಳು ಅಂದರೆ ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಅನ್ಯಗ್ರಹ ಜೀವಿಗಳು (ಯುಎಫ್ಒ- ಅನ್ ಐಡೆಂಟಿಫೈಡ್ ಫ್ಲೈಯಿಂಗ್ ಆಬ್ಜೆಕ್ಟ್ಸ್- ಆಕ್ಸ್ ಫರ್ಡ್ ಇಂಗ್ಲಇಂಗ್ಲಿಷ್ ಡಿಕ್ಷನರಿ) ನಾನಾ ರೀತಿಯಲ್ಲಿ ವಿಜ್ಞಾನ-ತಂತ್ರಜ್ಞಾನದಲ್ಲಿ ಅಗಣಿತ ಪರಿಣತಿಯನ್ನು ಸಾಧಿಸಿವೆಯೋ ಎಂಬ ಬಗ್ಗೆ ಇನ್ನೂ ನಾವು ಭೂಮಿಯಲ್ಲಿರುವ ಜನರು ಅಜ್ಞಾನಿಗಳಾಗಿಯೇ ಇದ್ದೇವೆ. ಯಾವುದೇ ಸಂದರ್ಭ, ಸನ್ನಿವೇಶದಲ್ಲಿ ಇಂತಹದ್ದೊಂದು ಕಾಣಿಸಿತ್ತಂತೆ, ಎಂಬ ಮಾತಿನಲ್ಲೇ ನಾವು ಆ ಕುರಿತು ಯೋಚನೆ ಮಾಡುತ್ತಿದ್ದೇವೆ.

    ಇಷ್ಟೆಲ್ಲಾ ಪೀಠಿಕೆ ಮಾತು ಯಾಕೆಂದರೆ ಇತ್ತೀಚೆಗೆ ಅನ್ಯಗ್ರಹ ಜೀವಿಗಳ ಬಗ್ಗೆ ಖಾಸಗಿಯಾಗಿ ಅವಿರತವಾಗಿ ಸಂಶೋಧನೆ ಮಾಡುತ್ತಿರುವ ಸುಪ್ರಸಿದ್ಧ ಏಲಿಯನ್ ಹಂಟರ್ ಸ್ಕಾಟ್ ಸಿ ವಾರಿಂಗ್ ಈ ಕುರಿತು ಹೊಸ ವಿಷಯವನ್ನು ಹೊರ ಹಾಕಿದ್ದಾರೆ.

    ಅವರ ಪ್ರಕಾರ ಮಂಗಳ ಗ್ರಹದಲ್ಲಿ ವಿನೂತನ ಯಂತ್ರವೊಂದು ಕಂಡು ಬಂದಿದ್ದು, ಇದು ಕೆಂಪು ಗ್ರಹದಲ್ಲಿ ಜೀವಿಸುತ್ತಿರುವ ಏಲಿಯನ್ಸ್ ನದ್ದು ಎಂದವರು ಪ್ರತಿಪಾದಿಸಿದ್ದಾರೆ.  ನಾಸಾ ಕ್ಯೂರಿಸಿಟಿ ರೋವರ್ ಕ್ಯಾಮರಾದಲ್ಲಿ ಕಂಡು ಬಂದ ಈ ವಿಶಿಷ್ಟ ವಾಹನ ಅಥವಾ ಯಂತ್ರದ ವಿಶ್ಲೇಷಣೆಯನ್ನು ತಾವು ಮಾಡಿದ್ದು, ಈ ಮೂಲಕ ಇಂತಹ ಪ್ರತಿಪಾದನೆ ಮಾಡಿರುವುದಾಗಿ ಅವರು ಹೇಳಿದ್ದಾರೆ.

    ಉದ್ದವಾದ, ಸಿಲಿಂಡರ್ ಆಕೃತಿಯ ಲೋಹದ ವಸ್ತುವೊಂದು ತಾನು ಬಳಸಿದ ದೂರದರ್ಶಕದಲ್ಲಿ ಕಂಡು ಬಂದಿದ್ದು, ಇದು ಏಲಿಯನ್ಸ್ ಗಳು ನಮ್ಮಿಂದ ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದೆ ಹೋಗಿವೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ. ಹೀಗಾಗಿ ತಾನು ಏಲಿಯನ್ಸ್ ಇರುವಿಕೆಯ ಬಗ್ಗೆ ಸದೃಢವಾದ ಪುರಾವೆಯನ್ನು ತೋರಿಸಬಲ್ಲೆ ಎಂದವರು ಹೇಳಿದ್ದು, ಮಂಗಳ ಗ್ರಹದಲ್ಲಿ ವಿಮಾನವನ್ನೇ ಹೋಲುವ ಪ್ರಾಚೀನ ವಸ್ತುವೊಂದು ಕಾಣಿಸಿಕೊಂಡಿದ್ದು, ಇದು ಬಹುತೇಕ ಈಗಿನ ಜೆಟ್ ವಿಮಾನಗಳನ್ನೇ ಹೋಲುತ್ತಿದೆ. ಇದರಿಂದ ಅನ್ಯಗ್ರಹ ಜೀವಿಗಳು ನಮ್ಮಿಂದ ತುಂಬಾ ಹಿಂದೆಯೇ ತಂತ್ರಜ್ಞಾನದಲ್ಲಿ ಮುಂದುವರಿದಿದ್ದರೆ ಎಂಬುದು ತಿಳಿಯುತ್ತದೆ ಎಂದು ವಿವರಿಸಿದ್ದಾರೆ.

    ಈ ವಿಮಾನ ರೀತಿಯ ವಸ್ತು ಹಳೆಯದಾಗಿರಬಹುದು, ದೂಳಿನಿಂದಅಚ್ಛಾದಿತವಾಗಿರಬಹುದು ಆದರೆ, ನಮ್ಮಿಂದ ಮೊದಲೇ ಮಂಗಳ ಗ್ರಹದಲ್ಲಿ ಇಂತಹ ವಿಶೇಷ ವಾಹನ ಸಿದ್ಧವಾಗಿತ್ತು ಎಂಬುದಕ್ಕೆ ಇದು ಸಾಕ್ಷಿ ಎಂದಿದ್ದಾರೆ. ಈ ಬಗ್ಗೆ ತಮ್ಮ ಇಟಿ ಡೇಟಾಬೇಸ್ ಎಂಬ ಬ್ಲಾಗ್ ನಲ್ಲಿ ಅವರು ಸವಿವರವಾಗಿ ವಿಷಯ ತಿಳಿಸಿದ್ದಾರೆ.

    ಈಗ ಕಂಡು ಬಂದಿರುವ ವಾಹನವು ತಾಮ್ರ ಅಥವಾ ಚಿನ್ನದಿಂದ ನಿರ್ಮಿತವಾಗಿರಬಹುದು ಎಂದವರು ಅಂದಾಜಿಸಿದ್ದಾರೆ. ಮಂಗಳ ಗ್ರಹದಲ್ಲಿದ್ದ ಜೀವಿಗಳು ತಮ್ಮ ರಕ್ಷಣೆಗಾಗಿ ಮೊರೆ ಹೋದ ದೇವರ ಚಿತ್ರವು ಇದರಲ್ಲಿದೆ ಎಂದು ಹೇಳಬಹುದು. ವಾಹನವು ಸಿಲಿಂಡರ್ ಆಕೃತಿಯಲ್ಲಿದ್ದರೂ ಅದನ್ನು ದೇವರ ವಿಗ್ರಹವೆಂದು ಪರಿಗಣಿಸಲು ಸಾಧ್ಯವಿದೆ. ಯಾಕೆಂದರೆ ಇಲ್ಲಿಂದ ಅದನ್ನು ಅಂದಾಜಿಸಲು ಸಾಧ್ಯವಿಲ್ಲ ಎಂದವರು ಹೇಳಿದ್ದಾರೆ. ಆದರೆ ಬುದ್ಧಿವಂತರಾದ ಜೀವಿಗಳು ಮಂಗಳ ಗ್ರಹದಲ್ಲಿ ಜೀವಿಸಿದ್ದರು ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಇದರ ಮಧ್ಯೆಯೇ ಸ್ಕಾಟ್ ಅವರ ವೆಬ್ ಸೈಟ್ ಸಾರ್ವಜನಿಕರಿಗೆ ಸಿಗುತ್ತಿಲ್ಲ. ಇದರಿಂದಾಗಿ ಅಮೆರಿಕ ಸರಕಾರ ಇಂತಹ ವಿಷಯಗಳ ಬಗ್ಗೆ ಸಾಕಷ್ಟು ರಹಸ್ಯವನ್ನು ಕಾಪಾಡುತ್ತಿದೆಯಾ ಎಂಬ ಅನುಮಾನ ಕಾಡಲಾರಂಭಿಸಿದೆ. ಯಾಕೆಂದರೆ ಈಗಾಗಲೇ ಅಮೆರಿಕದ ನೌಕಾಪಡೆಯ ನೆಲೆಯೊಂದು ಟಾಪ್ ಸಿಕ್ರೆಟ್ ಪಟ್ಟಿಯನ್ನು ಕಟ್ಟಿಕೊಂಡಿದೆ. ಅಲ್ಲಿಗೆ ಯಾರಿಗೂ ಪ್ರವೇಶವಿಲ್ಲ ಮಾತ್ರವಲ್ಲ ಅಲ್ಲಿ ಏನಿದೆ ಹಾಗೂ ಏನಾಗುತ್ತಿದೆ ಎಂಬ ಬಗ್ಗೆ ಯಾರಿಗೂ ಗೊತ್ತಿಲ್ಲ. ಬಹುತೇಕ ನಂಬಿಕೆಯ ಪ್ರಕಾರ ಅಲ್ಲಿ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಸಿಕ್ಕಿದ ಅನ್ಯಗ್ರಹ ಜೀವಿಯ ದೇಹದ ಕುರಿತು ಸಂಶೋಧನೆ ನಡೆಯುತ್ತಿದೆ ಎಂಬ ಮಾಹಿತಿ ಇದೆ.

    ಲಾಕ್‌ಡೌನ್ ಕೊರೊನಾ ನಿಯಂತ್ರಿಸುವುದಕ್ಕೋ, ಎದುರಿಸುವುದಕ್ಕೊ?

    ಅಶೋಕ ಹೆಗಡೆ

    ‘ಯಾವ ಕಾರಣಕ್ಕೂ ಬೆಂಗಳೂರಿನಲ್ಲಿ ಮತ್ತೆ ಲಾಕ್‌ಡೌನ್ ಮಾಡಲ್ಲ. ದಯವಿಟ್ಟು ಬೆಂಗಳೂರು ಬಿಟ್ಟು ತೆರಳಬೇಡಿ,’ ಎಂದು ಗೃಹ ಸಚಿವರಾದಿಯಾಗಿ ಬಹುತೇಕ ಮಂತ್ರಿಗಳು ವಾರದ ಹಿಂದೆ ಜನತೆಗೆ ಮನವಿ ಮಾಡಿದ್ದರು. ಮತ್ತೊಂದೆಡೆ ಕೆಲವು ಸಚಿವರು ಲಾಕ್‌ಡೌನ್ ಸೂಚನೆ ನೀಡುತ್ತಲೇ ಇದ್ದರು. ಆದರೆ ಜನ ಮಾತ್ರ, ಸೋಂಕು ಹೆಚ್ಚುತ್ತಲೇ ಇರುವುದರಿಂದ ‘ಮತ್ತೊಂದು ಲಾಕ್‌ಡೌನ್ ಖಚಿತ,’ ಎಂಬ ನಿಲುವಿಗೆ ಬಂದಿದ್ದರು. ಅದೇ ನಿಜವಾಗಿದೆ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಜುಲೈ 14ರಿಂದ 21ರವರೆಗೆ ಲಾಕ್‌ಡೌನ್; ಸೋಂಕು ಹೆಚ್ಚಿರುವ 12 ಜಿಲ್ಲೆಗಳಲ್ಲಿಯೂ ಮತ್ತೆ ಲಾಕ್‌ಡೌನ್ ಜಾರಿಯಾಗುವ ಸಾಧ್ಯತೆ ಇದೆ.

    ಮೊದಲಿನ ಲಾಕ್‌ಡೌನ್‌ಗೂ, ಈಗಿನ ಲಾಕ್‌ಡೌನ್‌ಗೂ ಬಹಳ ವ್ಯತ್ಯಾಸವಿದೆ. ಮೊದಲು ಕೊರೊನಾ ಸೋಂಕಿನ ಪ್ರಸರಣದ ಸರಪಳಿಗೆ ತಡೆ ಹಾಕುವ ಉದ್ದೇಶದಿಂದ ಲಾಕ್‌ಡೌನ್ ಜಾರಿ ಮಡಲಾಗಿತ್ತು. ಈಗ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಪರಿಸ್ಥಿತಿ ಎದುರಿಸುವ ಸಿದ್ಧತೆ ಮಾಡಿಕೊಳ್ಳುವ ಸಲುವಾಗಿ ಲಾಕ್‌ಡೌನ್ ಜಾರಿಗೊಳಿಸಲಾಗುತ್ತದೆ!

    ರಾಜ್ಯದಲ್ಲಿ ಜುಲೈ ತಿಂಗಳಲ್ಲೇ 12000ಕ್ಕೂ ಅಧಿಕ ಹೊಸ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಂತೂ ಪರಿಸ್ಥಿತಿ ಅಧ್ವಾನ. ರೋಗಿಗಳಿಗೆ ಹಾಸಿಗೆ ಸಿಗುತ್ತಿಲ್ಲ. ಹೋಮ್ ಕ್ವಾರಂಟೈನ್ ಜಾರಿಯೂ ಸಮರ್ಪಕವಾಗಿಲ್ಲ. ಶೇ.99ರಷ್ಟು ಪ್ರಕರಣಗಳಲ್ಲಿ ಸೋಂಕಿನ ಮೂಲವೇ ಪತ್ತೆಯಾಗುತ್ತಿಲ್ಲ. ಬೆಂಗಳೂರು ಸೇರಿ ನಗರಗಳಲ್ಲಿ ಬದುಕು ಕಟ್ಟಿಕೊಂಡಿದ್ದ ಜನ ಹಳ್ಳಿಗಳಿಗೆ ಮರಳುತ್ತಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿಯೂ ಸೋಂಕು ನಿರೀಕ್ಷೆಗೂ ಮೀರಿದ ವೇಗದಿಂದ ಹರಡುತ್ತಿದೆ. ಸರಕಾರಕ್ಕೆ ಏನು ಮಾಡಬೇಕು ಎಂದೇ ತೋಚುತ್ತಿಲ್ಲ. ಹೀಗಾಗಿ ಮಧ್ಯಂತರ ವ್ಯವಸ್ಥೆಯಾಗಿ ಲಾಕ್‌ಡೌನ್ ಮೊರೆ ಹೋಗಲಾಗಿದೆ.

    ಸೋಂಕಿನ ವೇಗಕ್ಕೆ ಕಡಿವಾಣ

    ಅಷ್ಟಕ್ಕೂ ಈಗ ಲಾಕ್‌ಡೌನ್ ಜಾರಿ ಮಾಡುವುದರಿಂದ ಸೋಂಕು ನಿಯಂತ್ರಣಕ್ಕೆ ಬಂದು ಬಿಡುತ್ತಾ? ‘ಹೌದು’ ಎಂದು ಯಾವ ಆರೋಗ್ಯ ತಜ್ಞರೂ ಖಚಿತವಾಗಿ ಹೇಳುತ್ತಿಲ್ಲ. ಆದರೆ, ಒಂದು ವಾರದ ಅವಧಿಯಲ್ಲಿ ಸೋಂಕಿನ ವೇಗಕ್ಕೆ ಕಡಿವಾಣ ಹಾಕಬಹುದು ಎಂದು ಡಾ.ಸುದರ್ಶನ ಬಲ್ಲಾಳ್ ಸೇರಿ ಹಲವು ತಜ್ಞರು ಅಭಿಪ್ರಾಯಪಟ್ಟಿದ್ದರೆ. ಈ ಅವಧಿಯಲ್ಲಿ ಮುಂದಿನ ಸ್ಥಿತಿ ಎದುರಿಸಲು, ಒಂದಷ್ಟು ಸಾವಿರ ಹಾಸಿಗೆಗಳನ್ನು ವ್ಯವಸ್ಥೆ ಮಾಡಿಕೊಳ್ಳಲು ಸರಕಾರಕ್ಕೆ ಸ್ವಲ್ಪ ಅವಕಾಶ ಸಿಗುತ್ತದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಎದುರಾಗಲಿರುವ ತೀವ್ರತೆಯನ್ನು ಎದುರಿಸುವ ಸಿದ್ಧತೆಗೆ ರಾಜ್ಯ ಸರಕಾರ ಮಾಡಿಕೊಂಡಿರುವ ಮಧ್ಯಂತರ ವ್ಯವಸ್ಥೆ ಇದು.

    ಜನರೇ ಅರ್ಥ ಮಾಡಿಕೊಳ್ಳಬೇಕು

    ಸರಕಾರ ಎಷ್ಟೇ ಪ್ರಯತ್ನಿಸಿದರೂ, ಸೋಂಕು ಹೋಗಲಾಡಿಸುವ ಲಸಿಕೆ ಅಥವಾ ಔಷಧ ಕಂಡುಹಿಡಿದರೂ ಕೊರೊನಾದಿಂದ ಸಂಪೂರ್ಣ ಮುಕ್ತಿ ಸಿಗಲು ಸಾಧ್ಯವೇ ಇಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಮುಖ್ಯವಾಗಿ ಆಗಬೇಕಾದದ್ದು ಸೋಂಕು ಹರಡುವುದಕ್ಕೆ ಕಡಿವಾಣ ಹಾಕುವ ಕ್ರಮಗಳು. ಅದನ್ನು ಸರಕಾರ ಮಾಡಲು ಸಾಧ್ಯವಿಲ್ಲ. ಜನ ತಮ್ಮ ಹೊಣೆಗಾರಿಕೆ ಅರಿತುಕೊಂಡು ನಡೆಯಬೇಕು. ತಾಲ್ಲೂಕು ಕೇಂದ್ರಗಳಲ್ಲಿ, ಹಳ್ಳಿಗಳಲ್ಲಿ ಜನ ಸ್ವಯಂ ‘ದಿಗ್ಬಂಧನ’ ವಿಧಿಸಿಕೊಳ್ಳುತ್ತಿದ್ದಾರೆ. ವ್ಯಾಪಾರ-ವಹಿವಾಟಿನ ಸಮಯವನ್ನು ತಾವೇ ನಿರ್ಧರಿಸಿಕೊಂಡು ಭಾಗಶಃ ಲಾಕ್‌ಡೌನ್ ಅನುಷ್ಠಾನಕ್ಕೆ ತಂದುಕೊಂಡಿದ್ದಾರೆ. ಅಷ್ಟು ಸಾಲದು.

    ಕೆಲವರಿಗೆ ಕಂಡಲ್ಲಿ ಉಗುಳುವ ಚಟ. ಕೆಲವರಿಗೆ ‘ಬರುವುದಿದ್ದರೆ ಹೇಗಿದ್ದರೂ ಕೊರೊನಾ ಬಂದೇ ಬರುತ್ತದೆ’ ಎಂಬ ಧೋರಣೆ. ಕೆಲವರದ್ದು ಮೊದಲಿನಿಂದಲೂ ವ್ಯವಸ್ಥೆಯ ವಿರುದ್ಧ ಹೋಗುವ ಅಥವಾ ಅವರ ‘ನಿಯಂತ್ರಕ’ ವ್ಯವಸ್ಥೆ ಹೇಳಿದರೆ ಮಾತ್ರ ಕೇಳುವ ಮನೋಭಾವ. ಇಂತಹ ವರ್ತನೆಗಳಲ್ಲಿ ಮೊದಲು ಸುಧಾರಣೆಯಾಗಬೇಕು.

    ಸರಕಾರ ಲಾಕ್‌ಡೌನ್‌ಗಿಂತಲೂ ಇಂತಹ ಸಂಗತಿಗಳತ್ತ ಗಂಭೀರವಾಗಿ ಗಮನ ಕೊಡಬೇಕು. ಕಂಡಲ್ಲಿ ಉಗುಳಬಾರದು, ಮಾಸ್ಕ್ ಧರಿಸದೇ ಅಡ್ಡಾಡಬಾರದು ಎಂಬ ನಿಯಮ ಇದೆ. ಅವುಗಳನ್ನು ಉಲ್ಲಂಘಿಸುವವರ ವಿರುದ್ಧ ಮುಲಾಜಿಲ್ಲದೇ ಕ್ರಮ ಜರುಗಿಸಲು ಮುಂದಾಗಬೇಕು. ದಂಡ ಅಥವಾ ಬಂಧನದಿಂದ ಸರಿ ಹೋಗುತ್ತದೆ ಅಂತಲ್ಲ, ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಜಾರಿ ಮಾಡಿದರೆ ಅಥವಾ ಸದಾ ನೆನಪುಳಿಯುವ ರೀತಿ ಯಾವುದಾದರೂ ಪ್ರಹಾರ ಮಾಡಿದರೆ ಅದರ ನೋವಿನ ನೆನಪಿನಲ್ಲಾದರೂ ಒಂದಷ್ಟು ಪುಂಡರು ಮನೆಯಲ್ಲಿ ಕುಳಿತುಕೊಂಡಾರು, ಸೋಂಕು ತಕ್ಕಮಟ್ಟಿಗೆ ನಿಯಂತ್ರಣಕ್ಕೆ ಬಂದೀತು.

    ದುಃಖತಪ್ತರಾದ ಸೀನಿಯರ್ಸ್; ಟಪ್ಪಾಂಗುಚ್ಚಿ ಹಾಕಿದ ಜೂನಿಯರ್ಸ್

    ಫೇಸ್ ಬುಕ್ಕಲ್ಲಿ, ವಾಟ್ಸಾಪ್ , ಇನ್ಸ್ಟಾ ದಲ್ಲಿ ಕಳೆದು ಹೋಗುತ್ತಿರುವ ನಮ್ಮ ವಿದ್ಯಾರ್ಥಿ ಸಮುದಾಯದಲ್ಲಿ ಬರೆಯುವ ಅಭ್ಯಾಸವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕನ್ನಡಪ್ರೆಸ್ ಆರಂಭಿಸುತ್ತಿರುವ ಕ್ಯಾಂಪಸ್ ಪ್ರೆಸ್ ಅಂಕಣದ ಚೊಚ್ಚಲ ಬರಹ ಇದು. ವಿಶ್ವವಿದ್ಯಾಲಯ ಕಾಲೇಜು ,ಮಂಗಳೂರು ಇಲ್ಲಿನ ಪ್ರಥಮ ಬಿಎ ವಿದ್ಯಾರ್ಥಿನಿ ಪ್ರಜ್ಞಾ , ಪದವಿ ಪರೀಕ್ಷೆಗಳು ಕ್ಯಾನ್ಸಲ್ ಆದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಭಾವನೆಯನ್ನು ನವಿರಾದ ಹಾಸ್ಯದೊಂದಿಗೆ ಇಲ್ಲಿ ಹಂಚಿಕೊಂಡಿದ್ದಾರೆ.

    ಕೂತಲ್ಲಿ, ನಿಂತಲ್ಲಿ, ನಿದ್ದೆಯ ಮಂಪರಿನಲ್ಲಿ, ಲಾಕ್ಡೌನ್ ಮೋಜಿನಲ್ಲಿ, ಕೋರೋನ ಟೆನ್ಶನ್ನಲ್ಲಿ , ಮನೆಯವರ ಜತೆಗಿನ  ಜಗಳದಲ್ಲಿ, ಗೆಳೆಯರೊಂದಿಗಿನ ವಿಡಿಯೋ ಕಾಲ್‌ನಲ್ಲಿ, ವಾಟ್ಸಪ್ಪ್ನಲ್ಲಿ, ಫೇಸ್ಬುಕ್ನಲ್ಲಿ, ಎಲ್ಲೆಲ್ಲೂ  ಪದವಿ ವಿದ್ಯಾರ್ಥಿಗಳಿಗೆ ತಮ್ಮ ಪರೀಕ್ಷೆಯದ್ದೇ  ಚಿಂತೆ. ಅತ್ತ  ಎಕ್ಸಾಂ ಇಲ್ಲವೆಂಬ ಅತಿಯಾದ ವಿಶ್ವಾಸ, ಇತ್ತ ಒಂದೊಮ್ಮೆ ನಡೆಸಿಯೇ ಬಿಟ್ಟರೆ ಎಂಬ ಆತಂಕದಲ್ಲೇ ತಮ್ಮ ಅರ್ಧ  ಲಾಕ್ಡೌನ್  ರಜೆಯನ್ನೇ ಕಳೆದುಬಿಟ್ಟರು! 

    ಇನ್ನೇನು ʼಮುಂಗಾರು ಮಳೆʼಯ ಗಣೇಶನಂತೆ ತಮ್ಮ ಮೆದುಳಿನೊಳಗೆ ಕೈ ಹಾಕಿ ಪರಪರ  ಎಂದು ಕೆರೆದುಕೊಂಡು ದೊಡ್ಡ ಗಾಯ ಆಗುವಷ್ಟರಲ್ಲಿ  ಆಪತ್ಪಾಂಧವರಾಗಿ  ಬಂದ ಸಚಿವ ಅಶ್ವಥ್ ನಾರಾಯಣರು  ಎಕ್ಸಾಂ ಇಲ್ಲವೆಂದು  ಘೋಷಿಸಿಯೇ ಬಿಟ್ಟರಲ್ಲ!   

    ಎಕ್ಸಾಂ ಇಲ್ಲವೆಂದು ತಿಳಿಸಿದ ನಾರಾಯಣರು  ಕೊನೆಗೂ ಫೈನಲ್ ಯಿಯರ್ಸ್‌ಗೆ  ಪರೀಕ್ಷೆ  ಇದೆ  ಎಂದು  ಘೋಷಿಸಿ  ಬಿಟ್ಟರಲ್ಲ, ಅದೇ ಟ್ವಿಸ್ಟ್. ದುಃಖತಪ್ತರಾದ  ಸೀನಿಯರ್ಸ್  ಮನಸಲ್ಲೇ  ಬಯ್ಯುತ್ತಾ , ಶಾಪಹಾಕುತ್ತ  ಲಾಕ್ಡೌನ್‌ನಲ್ಲಿ ಮೂಲೆಸೇರಿದ್ದ, ಗುಜರಿ ಅಂಗಡಿಗೆ ಮೀಸಲಾಗಿರಿಸಿದ್ದ  ತಮ್ಮ  ಧೂಳು  ಹಿಡಿದ ಪುಸ್ತಕಗಳ  ಮೇಲೆ  ಒಂದೆರಡು  ಬಾರಿ  ಬಡಿದು  ಧೂಳ ತೆಗೆದು  ಮನಸಿಲ್ಲದ  ಮನಸ್ಸಿನಲ್ಲಿ  ಓದಲು ಕುಳಿತರಂತೆ. 

    ಇನ್ನೂ ಪ್ರಥಮ ಹಾಗೂ ದ್ವಿತೀಯ  ವರ್ಷದ ಪದವಿ ವಿದ್ಯಾರ್ಥಿಗಳಲ್ಲೂ  ಹಲವು  ವಿಧಗಳಿವೆ. ಛೆ.. ! ಈ ಭಾರಿ  ಚೆನ್ನಾಗಿ ಓದಿ  100ಕ್ಕೆ  101 ಅಂಕಗಳಿಸಬೇಕೆಂದಿದ್ದೆ ಎಲ್ಲ  ನೀರಲ್ಲಿ  ಹೋಮ  ಮಾಡಿದಂತಯಿತು , ಎಂದು  ಫಸ್ಟ್ಬೆಂಚರ್ಸ್  ತಲೆ ಜಜ್ಜಿಕೊಂಡರೆ , ಇತ್ತ ಎಕ್ಸಾಮ್  ಇದ್ರೂ , ಇರದಿದ್ರೂ  ಓಕೆ  ಎಂಬ  ಮನಸ್ಥಿತಿ  ಮಿಡಲ್ ಬೆಂಚರ್ಸ್  ಹೊಂದಿದ್ದರು.  ಅತ್ತ  ಕ್ಲಾಸಿನ  ಮುಖ್ಯ  ಆಕರ್ಷಣೆ  ಅಂದರೆ ಲಾಸ್ಟ್ ಬೆಂಚ್‌  ಸ್ಟೂಡೆಂಟ್ಸ್  ಟಪ್ಪಾಂಗುಚ್ಚಿ   ಹಾಡಿಗೆ  ಸ್ಟೆಪ್ಸ್  ಹಾಕಿ  ಸೋಶಿಯಲ್  ಮೀಡಿಯಾ ದಲ್ಲಿ  ತಮ್ಮ ಸಂತಸವನ್ನು  ಹಂಚಿಕೊಂಡಿದ್ದಾರೆ!

    Photo by Roberto Arias on Unsplash

    ಮಳೆ ಅನುಭವಿಸಲು ಮಲೆನಾಡಿಗೇ ಬರಬೇಕು

    ಮಳೆ ಮತ್ತು ಇಳೆಗೆ ಪ್ರೀತಿಯ ಬಂಧ. ಏಪ್ರಿಲ್ ತಿಂಗಳ ಬಿಸಿಲ ಧಗೆಗೆ ಮೈಸುಟ್ಟುಕೊಂಡಂತಿದ್ದ ನೆಲ, ಮರಗಿಡಗಳು, ಚಿಗುರೊಡೆದು ನಳನಳಿಸುವುದು ಮಳೆಯ ಸಿಂಚನದಿಂದಲೇ. ಮಳೆಗಾಲದಲ್ಲಿ ಪ್ರಕೃತಿ ಹಸಿರು ಹೊದ್ದು ಮಲಗಿದಂತಿರುತ್ತದೆ. ಭತ್ತದ ಬೇಸಾಯ ಆರಂಭಗೊಳ್ಳುವುದು ಮಳೆಗಾಲದಲ್ಲಿಯೇ. ಹಾಗಾಗಿ ಮಳೆಗಾಲದಲ್ಲಿ ಮಲೆನಾಡು ಚಟುವಟಿಕೆಯಿಂದಲೇ ಕೂಡಿರುತ್ತದೆ. ಮಳೆಗಾಲಕ್ಕೆ ಬೇಕಾದ ಸಿದ್ಧತೆಗಳನ್ನು ಆಗಲೇ ಮಾಡಿಕೊಂಡಿರುತ್ತಾರೆ. ಮಲೆನಾಡಲ್ಲಿ ಬಿರುಸಾಗಿ ಸುರಿವ ಮಳೆಗೆ ಅಲ್ಲಿನವರು ಒಂದು ರೀತಿಯಲ್ಲಿ ಒಗ್ಗಿಕೊಂಡಿರುತ್ತಾರೆ. ಹಾಗಾಗಿ ಬಿಡದೇ ಸುರಿವ ಮಳೆ ಎಂದೂ ಕಿರಿಕಿರಿ ಎನ್ನಿಸುವುದಿಲ್ಲ. ಮಳೆಗಾಲಕ್ಕೆಂದೇ ತಯಾರಿಸಿಟ್ಟ ಹಲಸಿನಕಾಯಿ ಹಪ್ಪಳ, ಚಿಪ್ಸ್, ಸಂಡಿಗೆಗಳು ಜಿಟಿ ಜಿಟಿ ಸುರಿವ ಸಂಜೆಯ ಮಳೆಗೆ ಸಾಥ್ ನೀಡುತ್ತವೆ.

    ಮಲೆನಾಡಿನಲ್ಲಿ ಮಳೆಗಾಲ ಅಂದರೆ ಅದೇನೋ ಸಂಭ್ರಮ. ಪ್ರಕೃತಿಯಲ್ಲಿ ಸಿಗುವ ಕಣಿಲೆ, ಚಗಟೆ ಸೊಪ್ಪು, ಪತ್ರೋಡೆ, ಮೊಳಕೆಯೊಡೆದ ಗೇರುಬೀಜ… ಹೀಗೆ ನಿತ್ಯವೂ ಪ್ರಕೃತಿಯಲ್ಲಿ ಅದರಲ್ಲೂ ಮಳೆಗಾಲದಲ್ಲಿ ಮಾತ್ರ ಸಿಗುವ ಆಹಾರ ಪದಾರ್ಥಗಳಿಂದ ತರಹೇವಾರಿ ತಿನಿಸು ತಯಾರಿಸಿ ಸವಿಯುವ ಸಂಭ್ರಮ.


    ಎತ್ತ ನೋಡಿದರೂ ಹಸಿರು. ಅಲ್ಲಲ್ಲಿ ನೀರಿನ ಝರಿಗಳು, ಬತ್ತದ ಒರತೆಗಳು, ಕೆರೆ, ಕುಂಟೆ, ತೋಡುಗಳಲ್ಲಿ ಹರಿಯುವ ನೀರಿನ ಜುಳು ಜುಳು ನಾದ, ರಾತ್ರಿಯಾದರೆ ಸಾಕು ವಟಗುಟ್ಟುವ ಕಪ್ಪೆಗಳು, ಇವು ಪ್ರಕೃತಿಯ ನಡುವೆ ಇರುವವರ ಪಾಲಿಗೆ ಮಳೆಗಾಲದ ಮಾತ್ರ ದಕ್ಕುವ ಸೌಭಾಗ್ಯ.

    ಮಳೆಗಾಲ ಕುರಿತು ಕವಿವರೇಣ್ಯರು ಹಲವಾರು ಹಾಡುಗಳನ್ನು ಬರೆದಿದ್ದಾರೆ. ಹಾಡುಗಳಲ್ಲೆಲ್ಲ ಮಳೆಯ ಬಗೆಗಿನ ವರ್ಣನೆ ಬಲು ಸೊಗಸು. ಮಳೆ ಮಳೆ ಒಲವಿನಾ ಸುರಿಮಳೆ, ಮನ ಹರೆಯದ ನದಿಯಾಗಿದೆ…. ಮಳೆ ಎಲ್ಲರ ಮನಸ್ಸಿಗೂ ಹರೆಯದ ಸ್ಪರ್ಶವನ್ನು ನೀಡುತ್ತದೆ. ಅಂದರೆ ಮಳೆಯನ್ನು ಎಲ್ಲರೂ ಖುಷಿಯಿಂದಲೇ ಅನುಭವಿಸುತ್ತಾರೆ. ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಮಳೆಯನ್ನು ಅನುಭವಿಸದವರಿಲ್ಲ. ಮಳೆ ಮಾಡುವ ಚಮತ್ಕಾರವೇ ಅಂತಹದ್ದು.

    ಜೂನ್ ತಿಂಗಳಿನಲ್ಲಿ ಮಳೆಯ ಆರ್ಭಟ ಜೋರಾಗಿಯೇ ಇರುತ್ತದೆ. ಶಾಲೆ ಆರಂಭವಾಗುವುದೂ ಜೂನ್‍ನಲ್ಲಿಯೇ. ಆದರೆ ಈ ಬಾರಿ ಕೊರೊನಾ ಕಾರಣದಿಂದ ಮಕ್ಕಳಿಗೆ ಮಳೆಗಾಲವನ್ನು ಸಂಪೂರ್ಣವಾಗಿ ಅನುಭವಿಸುವ ಅವಕಾಶ.

    ಮಕ್ಕಳು ಮಳೆಯಲ್ಲಿ ನೆಪ ಮಾತ್ರಕ್ಕೆ ಕೊಡೆ ಹಿಡಿದು ಆಡುವುದು. ಆದರೆ ಮಳೆ ನೀರಿನಲ್ಲಿ ಪೂರ್ತಿ ಒದ್ದೆಯಾಗಿಸಿಕೊಂಡು ಮೈಮರೆಯುವುದೇ ಸಂಭ್ರಮ. ಗದ್ದೆ ಬದಿಗಳಲ್ಲಿ, ಸಣ್ಣ ಸಣ್ಣ ತೋಡುಗಳಲ್ಲಿ ಚಳಪಳ ಮಾಡಿಸಿಕೊಂಡು, ಒಬ್ಬರ ಮೇಲೊಬ್ಬರು ನೀರೆರಚಿಕೊಂಡು, ಆಟವಾಡಿ ದಿನಕ್ಕೆ ಕನಿಷ್ಟ ಮೂರು ನಾಲ್ಕು ಬಾರಿಯಾದರೂ ಬಟ್ಟೆ ಬದಲಾಯಿಸಿಕೊಳ್ಳದಿದ್ದರೆ ಸಮಾಧಾನವಿಲ್ಲ. ಸರಳೀ ಹಣ್ಣು, ಮೊಗ್ಗರೆಕಾಯಿ, ಚಾಕೋಟೆ ಹಣ್ಣು, ಚೂರಿ ಕಾಯಿ, ಹೀಗೆ ಗುಡ್ಡ ಗಾಡು ಅಲೆದು ಮಕ್ಕಳ ಪಾಲಿನ ಕಾಡಿನ ಸಂಪತ್ತನ್ನು ತಂದು ಸವಿಯುವುದು ಮಳೆಗಾಲದ ಸಂಭ್ರಮ. ಆದರೆ ಮಳೆ ಗಾಳಿಗೆ ಶೀತ, ನೆಗಡಿಯಾದೀತು ಎಂಬ ಭಯ ಹೆತ್ತವರಿಗಷ್ಟೇ.

    ಮಳೆಗಾಲದಲ್ಲಿ ಪ್ರಕೃತಿಯಲ್ಲಿ ಅಮೋಘ ಬದಲಾವಣೆ. ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ಹಸಿರು ವನ, ಹರಿಯುವ ನದಿಯ ಜುಳು ಜುಳು ನಿನಾದ ಕಣ್ಣಿಗೆ ತಂಪು, ಕಿವಿಗೆ ಇಂಪು. ಗದ್ದೆ ಉಳುವ ಯೋಗಿ, ಭತ್ತ ಬಿತ್ತುವ ಖುಷಿ, ಪುರುಷರು ಮಹಿಳೆಯರು ಸೇರಿ ಗದ್ದೆಯಲ್ಲಿ ಭತ್ತದ ಸಸಿಗಳನ್ನು ನಾಟಿ ಮಾಡುವ ಸಂಭ್ರಮ ಹೀಗೆ…. ಎಲ್ಲವೂ ಕಣ್ಣಿಗೆ ಕಳೆಗಟ್ಟುವುದು ಮಳೆನಾಡು ಎನ್ನಿಸಿಕೊಂಡ ಮಲೆನಾಡಿನಲ್ಲಿ ಮಾತ್ರ ಸಾಧ್ಯ.
    ಕಾಂಕ್ರೀಟ್ ಕಾಡಿನ ನಡುವೆ ಬದುಕುವ ಜೀವಗಳು ಪ್ರಕೃತಿಯ ಸೊಬಗನ್ನು ಪದಗಳಲ್ಲಿ ಕಾಣಬೇಕಷ್ಟೇ. ಅದನ್ನು ಅನುಭವಿಸಲು ಮಲೆನಾಡಿಗೇ ಬರಬೇಕು

    ಪೇಟೆಯ ವಾಸ್ತವ ಚಟುವಟಿಕೆ ಆಧರಿಸಿ ನಿರ್ಧರಿಸಿ

    ಷೇರುಪೇಟೆಯ ಚಲನೆಯು ಇತ್ತೀಚಿನ ದಿನಗಳಲ್ಲಿ ಹೆಚ್ಚು ರಭಸದಿಂದ ಕೂಡಿದೆ. ಇಳಿಕೆಯಾಗಲಿ ಅಥವಾ ಏರಿಕೆಯಾಗಲಿ ಅತಿ ವೇಗವಾಗಿರುತ್ತದೆ. ಹಿಂದಿನ ದಿನಗಳಲ್ಲಿ ಎರಡು ದಿನ ಕ್ರೂರಿ ಮೂರುದಿನ ಕ್ರೂರಿ ಎಂಬತೆ ಕಂಡರೂ ಇಂದಿನ ದಿನಗಳಿಗೆ ಹೋಲಿಸಿದಲ್ಲಿ ಅದೇ ಉತ್ತಮವೆನಿಸುವಷ್ಟರ ಮಟ್ಟಿಗೆ ಬದಲಾವಣೆ ಕಾಣುತ್ತಿದೆ. ಕೇವಲ ಹಣ ಸಂಪಾದನೆಯೊಂದೇ ಇಂದಿನ ವಹಿವಾಟುದಾರರ ಗುರಿ ಎನಿಸುತ್ತದೆ. ಇದಕ್ಕೆ ಇಂದಿನ (ಶುಕ್ರವಾರ) ಚಟುವಟಿಕೆಯಲ್ಲಿ ಅಲೋಕ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಪ್ರದರ್ಶಿಸಿದ ಏರಿಳಿತಗಳೇ ಸಾಕ್ಷಿ.

    ದಿನದ ಆರಂಭಿಕ ಸಮಯದಿಂದಲೂ ಕನಿಷ್ಠ ಆವರಣಮಿತಿಯಲ್ಲಿದ್ದ ಈ ಕಂಪನಿ ಷೇರಿನ ಬೆಲೆ ರೂ..41.10 ರಲ್ಲಿ ಸುಮಾರು 2.8 ಕೋಟಿ ಷೇರುಗಳು ಮಾರಾಟಕ್ಕಿದ್ದವು. ಸುಮಾರು ಒಂದು ಗಂಟೆಯ ಸಮಯದ ನಂತರ ಹೆಚ್ಚಿನ ಬೇಡಿಕೆಯ ಕಾರಣ ಆವರಣ ಮಿತಿಯಿಂದ ಹೊರಬಂದ ಷೇರು ಸುಮಾರು ಶೇ.10 ರಷ್ಟು ಏರಿಕೆಯಿಂದ ರೂ.45.40 ರ ವರೆಗೂ ತಲುಪಿ ಗರಿಷ್ಠ ಆವರಣ ಮಿತಿ ತಲುಪಿ ವಿಜೃಂಭಿಸಿತು. ಆದರೆ ಈ ವಿಜೃಂಭಣೆ ಹೆಚ್ಚು ಸಮಯವಿರದೆ ಕೇವಲ ಕೆಲವೇ ನಿಮಿಷಗಳಲ್ಲಿ ಮಾಯವಾಗಿ ಷೇರಿನ ಬೆಲೆ ಜಾರತೊಡಗಿತು. ಸುಮಾರು ಅರ್ಧ ಗಂಟೆಯ ಸಮಯದಲ್ಲಿ ಮತ್ತೆ ಕನಿಷ್ಠಆವರಣಮಿತಿಗೆ ತಲುಪಿ ದಿನದ ಅಂತ್ಯದವರೆಗೂ ಮುಂದುವರೆಯಿತು.

    ಈ ಮಿಂಚಿನ ಏರಿಕೆ – ಸಿಡಿಲಿನ ಇಳಿಕೆಯ ಪ್ರಕ್ರಿಯೆಯಲ್ಲಿ NSE ಲ್ಲಿ ಸುಮಾರು12 ಕೋಟಿ ಷೇರುಗಳು ವಹಿವಾಟಾಗಿವೆ. ಅಂದರೆ ಸುಮಾರು ಒಂದು ಗಂಟೆಯ ಅವಧಿಯಲ್ಲಿ ಪ್ರದರ್ಶಿತವಾದ ಈ ಹಾವು ಏಣಿ ಆಟವು ಅನೇಕರನ್ನು ಆಕರ್ಷಿಸಿ ಹಾನಿಗೊಳಪಡಿಸಿರಬಹುದು. ಅನೇಕರನ್ನು ಅವಕಾಶ ವಂಚಿತರನ್ನಾಗಿಸಿಯೂ ಇರಬಹದು. ಕೇವಲ ಪ್ರಚಲಿತದ ಅಂಶಗಳನ್ನಾಧರಿಸಿಯಾಗಲಿ, ಮಾಧ್ಯಮಗಳ ವಿಶ್ಲೇಷಣೆಗಳಿಗಾಗಲಿ ಆದ್ಯತೆ ನೀಡದೆ ವಾಸ್ತವದ ಪೇಟೆಯ ಚಟುವಟಿಕೆಯ ನಡೆಯನ್ನಾಧರಿಸಿ ನಿರ್ಧರಿಸುವುದು ಈಗಿನ ಪೇಟೆಗಳಲ್ಲಿ ಉತ್ತಮ ಫಲಿತಾಂಶ ಕಾಣಲು ಸಾಧ್ಯ.

    ಅಲೋಕ್‌ ಇಂಡಸ್ಟ್ರೀಸ್‌ ಲಿಮಿಟೆಡ್‌, ಒಂದು ರೋಗ ಗ್ರಸ್ತ ಕಂಪನಿಯಾಗಿತ್ತು. ಕಳೆದ ಅಕ್ಟೋಬರ್‌ ತಿಂಗಳಲ್ಲಿ ಈ ಷೇರಿನ ಬೆಲೆ ರೂ.1.40 ರ ಸಮೀಪವಿತ್ತು. ಆ ಸಂದರ್ಭದಲ್ಲಿ ಸಾಲಗಾರರು NCLT ಮೆಟ್ಟಲೇರಿದರು. ಅಲ್ಲಿ ಈ ಕಂಪನಿಯನ್ನು ರಿಲಯನ್ಸ್‌ ಇಂಡಸ್ಟ್ರೀಸ್‌‌ ಕಂಪನಿಯು ಈ ಕಂಪನಿಯ ಶೇ.37.7 ರಷ್ಟನ್ನು ರೂ.250 ಕೋಟಿಗೆ ಈ ವರ್ಷದ ಫೆಬ್ರವರಿಯಲ್ಲಿ ಖರೀದಿಸಿ ತನ್ನ ಸಮೂಹಕ್ಕೆ ಸೇರಿಸಿಕೊಂಡಿತು. ಏಪ್ರಿಲ್‌ ತಿಂಗಳಲ್ಲಿ ರೂ.5 ರ ಸಮೀಪವಿದ್ದ ಈ ಕಂಪನಿ ಷೇರು ಮೇ ತಿಂಗಳಲ್ಲಿ ರೂ.14 ರ ಸಮೀಪವಿತ್ತು. ಅಲ್ಲಿಂದ ನಿರಂತರವಾಗಿ ಕನಿಷ್ಠ ಆವರಣಮಿತಿಯ ಮೂಲಕ ಖರೀದಿಗೆ ಅವಕಾಶ ಕೊಡದೆ, ರೂ.61 ರ ವರೆಗೂ ಏರಿಕೆ ಕಂಡಿತು. ನಂತರ ಮಾರಾಟಕ್ಕೆ ಅವಕಾಶ ನೀಡದ ರೀತಿಯಲ್ಲಿ ಇಂದು ರೂ.41.10 ರ ವರೆಗೂ ಕುಸಿದು ಈ ನಾಟಕೀಯ ರೀತಿ ಏರಿಳಿತಗಳನ್ನ ಪ್ರದರ್ಶಿಸಿದೆ.

    ಇಂದಿನ ದಿನಗಳಲ್ಲಿ ಷೇರು ವಹಿವಾಟು ಚಿಟಿಕೆ ಹೊಡೆಯುವಷ್ಟರಲ್ಲಿ ಸಾಹುಕಾರರನ್ನಾಗಿಸುತ್ತದೆ ಎಂದೆನಿಸಿದರೂ, ಇಂತಹ ವಾತಾವರಣದಲ್ಲಿ ವ್ಯಾಮೋಹಕ್ಕೆ ಬಲಿಯಾಗಿ ಹಾನಿಗೊಳಗಾಗುವವರೇ ಹೆಚ್ಚು. ಎಚ್ಚರದ ವಹಿವಾಟು, ಸಮಯ ಪ್ರಜ್ಣೆಯಾಧಾರಿತ ಹಿಡಿತದ ನಿರ್ಧಾರ ಮಾಡುವುದು ಸಂತಸದ ಸರದಾರ

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಇವೆಂದರೆ ಧೈರ್ಯ, ಇವಿದ್ದರೆ ನಂಬಿಕೆ

    ಪ್ರತಿದಿನ ಮನೆಯಲ್ಲಿ ಯಾರಾದರೊಬ್ಬರು ಮನೆಯ ಎಲ್ಲಾ ಕಡೆ ಹುಡುಕುತ್ತಲೇ ಇರುತ್ತಾರೆ , ತಂದು ಒಂದು ಕಡೆ ಇಡಲ್ಲ ಅದೆಲ್ಲಿ ಹಾಕ್ಬಿಡ್ತಿರೋ ? ನಿನ್ ರೂಮಲ್ಲಿ ನೋಡ್ದಾ ? ಪ್ಯಾಂಟ್ ಜೇಬಲ್ಲೇ ಇರುತ್ತೆ ನೋಡು , ಹೀಗೆ ಅಮ್ಮ ಹೇಳ್ತಿರ್ತಾರೆ ..

    ‘ಕೀ ‘ ಗಾಗಿ ಹುಡುಕಾಟ , ಅನ್ವೇಷಣೆ ….ಕೊನೆಗೆ ಸಿಕ್ತು ….ಅನ್ನೋ ಸಮಾಧಾನ ಇದು ನಿತ್ಯ ನಮ್ಮಲ್ಲಿ ನಡೆಯುವ ಚಟುವಟಿಕೆ .‌

    ಸಣ್ಣವಯಸ್ಸಿನಲ್ಲಿ ಬೊಂಬೆಗಳಿಗೆ ಕೀ ಕೊಟ್ಟು ತಿರುಗಿಸಿ ಅದು ಆಡುತಿದ್ದರೆ ನೋಡೋಕೆ ಅದೇನೋ ಖುಷಿ. ಬೊಂಬೆ ಮೇಲಿನ ಪ್ರೀತಿಗಿಂತ ಆ ಸಣ್ಣ ಕೀ ಮೇಲಿನ ಪ್ರೀತಿಯೇ ಜಾಸ್ತಿ ಇರೋದು. ಸ್ಕೂಲು ಮುಗಿಸಿ ಬಂದಾಗ ಮನೆಬೀಗ ಹಾಕಿದ್ರೆ ಅಕ್ಕಪಕ್ಕದ ಮನೆಗಳಲ್ಲೆಲ್ಲಾ ಬೀಗದ ಕೈ ಕೊಟ್ಟವ್ರ ಬೀಗದ ಕೈ ಕೊಟ್ಟವ್ರ ಅಂತ ಕೇಳ್ತಿದ್ವಿ . ಗಡುಸಾದ ಕಬ್ಬಿಣದ ಅಲ್ಲಲ್ಲಿ ತಾಮ್ರದ ಟಚ್ ಹೊಂದಿದ್ದ ಬೀಗ ಮನೆಯ ಪ್ರಮುಖ ಸದಸ್ಯನಂತೆ ಕಾಣುತ್ತಿತ್ತು . ಅಮ್ಮ ಹೊರಗೆ ಹೋಗ್ಬೇಕಾದ್ರೆ ನಾವು ಬೀಗ ಹಾಕಿ ಇನ್ನೆಲ್ಲಿ ಕೀ ಕಳದಾಕ್ ಬಿಡ್ತೀವೋ ಅಂತ ‘ಬರೀ ಚಿಲಕ ಹಾಕ್ಕೊಂಡ್ ಹೋಗೋ ಬೀಗ ಹಾಕ್ಬೇಡ ‘ ಅಂತ ಹೇಳಿ ಹೋಗೋವ್ರು .

    ಊರುಗಳಲ್ಲಿ ಅಜ್ಜಿದೀರು ಕೀಯನ್ನು ತಮ್ಮ ಕತ್ತಲ್ಲಿರುವ ಕರಿಮಣಿ ದಾರದಲ್ಲಿ , ಕಡ್ಡಿಪುಡೀ ಚೀಲದಲ್ಲಿ , ತಾತಂದಿರು ತಮ್ಮ ಉಡುದಾರದಲ್ಲಿ ಸುರಕ್ಷಿತವಾಗಿ ಇಟ್ಟಿರುತ್ತಿದ್ದರು.

    ನಾವುಗಳು ಮನೆ ಬೀಗ ಹಾಕಿ ಕೀನ ಮರೆತು ಜೇಬಲ್ಲಿ ಹಾಕ್ಕೊಂಡು ಹೋಗೋವಾಗ್ಲೋ ಆಟಾಡೋವಾಗ್ಲೋ ಕಳೆದಾಕಿದ್ರೆ ಮುಗುದೋಯ್ತು…ಮನೆಬೀಗ ಕಳೆದವ್ನೆ ಅನ್ನೋದಕ್ಕಿಂತಾ ಹೆಚ್ಚಾಗಿ ಮನೆಬೀಗ ಮುರಿದು ಕಳ್ತನಾನೇ ಮಾಡವ್ನೇನೋ ಅನ್ನೋ ಥರ ಬಾಸುಂಡೆ ಬರಂಗ್ ಬಾರಿಸೋವ್ರು .

    ಧರ್ಮ ಕ್ಷೇತ್ರಗಳಿಗೆ ಹೋದಾಗ ಲಾಡ್ಜ್ ನವರು ಬೀಗ ಕಳೆದಾಕಿದ್ರೆ ದಂಡ ಬೇರೆ ಕಟ್ಟಿಸ್ಕೊಳ್ಳೋವ್ರು . ಮದುವೆ ಚೌಟ್ರಿಗಳಲ್ಲೂ ಅಷ್ಟೇ ಗಂಡು ಕಡೆಯವರಿಗೆ ಐದೋ ಹತ್ತೋ ರೂಮು ಕೊಟ್ಟು ಅವರಲ್ಲಿ ಯಾರಾದ್ರೂ ಮರೆತು ಕೀ ತಗೊಂಡೋಗಿದ್ರೆ ಮುಗೀತು ಪಾಪ ಹೆಣ್ಣುಕಡೆಯವರೇ ಚೌಟ್ರಿ ಅವನ ಹತ್ರ ಪೇಮೆಂಟ್ ಸೆಟಲ್ ಮಾಡ್ಬೇಕಿತ್ತು . ಸಿನಿಮಾಗಳಲ್ಲಿ ಐನೂರೊಂದು ಬಾರ್ ಸೋಪ್ ಮೇಲೆ ಕೀ ಇಟ್ಟು ಅಚ್ಚು ಪಡೆದು ನಕಲಿ ಕೀ ಮಾಡಿಸ್ಕೊಳ್ಳೋ ಸೀನು ತುಂಬಾನೇ ರೋಮಾಂಚಕವಾಗಿರ್ತಿತ್ತು . ಸೀರಿಯಲ್ನಲ್ಲೂ ಅಷ್ಟೇ… ಮಗನ ಕೈ ಹಿಡಿದ ಸೊಸೆ ಮನೆಗೆ ಬಂದೊಡನೆ ಆಕೆಯ ನೋಟವನ್ನು ಅತ್ತೆಯ ಸೊಂಟದಲ್ಲಿರ್ತಿದ್ದ ಬೆಳ್ಳೀ ಕೀ ಗೊಂಚಲಿನ ಕಡೆ ತಿರುಗಿಸುತ್ತಿದ್ದರು. ಈ ದೃಶ್ಯದಲ್ಲೇ ಇಡಿ ಕತೆ ಅಡಗಿರೋದು.

    ಸ್ಕೂಲಿನ ಪ್ರಾರ್ಥನೆ ಮುಗಿದ ನಂತರ ಮಾಸ್ತರು ಇದ್ಯಾರ್ದೋ ಕೀ ಸಿಕ್ಕಿದೆ ಬಂದು ತಗೋಳೀ ಅನ್ನೋವ್ರು . ಆಟ ಆಡ್ತಿದ್ದಾಗ ನಮಗೆ ಸಿಕ್ಕಿದ್ರೂ ಅಷ್ಟೇ ಅದನ್ನ ಪಿ ಟಿ ಮಾಸ್ಟರ್ ಹತ್ರ ಕೊಡ್ತಿದ್ವಿ . ನಮ್ಮ ಜೊತೆಗೇ ಇದ್ದ ಸ್ನೇಹಿತನೊಬ್ಬನಿಗೆ ಮೂರ್ಚೇ ಖಾಯಿಲೆ ಬಂದೆರಗಿದಾಗ ಹಿರಿಯರು ಅವನ ಕೈಗೆ ಕೀ ಗೊಂಚಲ್ಲನಿರಿಸಿ ಶುಶ್ರೂಷೆ ಮಾಡಿದಾಗ ಕೀ ನಮಗೆ ಚಿಕಿತ್ಸೆಯಂತೆ ಕಂಡಿತ್ತು .ಕಾರಾಗೃಹ ಪೋಲೀಸರ ಮುದ್ರೆಯಲ್ಲಿ ಕೀ ಚಿತ್ರ ಇರುತ್ತದೆ , ಪ್ರತಿಷ್ಠಿತ ಬ್ಯಾಂಕಾದ ಎಸ್ ಬಿ ಐ ನ ಲಾಂಛನ ಈ ಕೀನ ಕಿಂಡಿ .

    ಮೊದಲೆಲ್ಲಾ ಮನೆಗೊಂದೇ ಬೀಗ ಆ ಬೀಗಕ್ಕೊಂದೇ ಕೀ ಇರೋದು. ಬೀಗ ರಿಪೇರಿ ಮಾಡುವವರಿಗೆ ಭಾರೀ ಬೇಡಿಕೆಯಿರೋದು . ಈಗ ಬೀಗಗಳ ಜೊತೆಗೇ ಎರಡು ಕೀ ಬರುತ್ತೆ , ಅದಲ್ಲದೇ ಎಲ್ಲಂದರಲ್ಲಿ ಕಂಪ್ಯೂಟರಯಸ್ಡ್ ಕೀ ಮೇಕಿಂಗ್ ಮಳಿಗೆಗಳು ತಲೆಎತ್ತಿವೆ.ಕೀ ಗಳು ಒರಿಜಿನಾಲಿಟಿ ಕಳ್ಕೊಂಡಿದಾವೆ .

    ಡೋರ್ಲಾಕು, ಹ್ಯಾಂಡ್ ಲಾಕು , ವಾರ್ಡ್ ರೋಬ್ ಲಾಕು , ಸೀಕ್ರೆಟ್ ಲಾಕು , ಸೆನ್ಸಾರ್ ಲಾಕು , ಥಂಬ್ ಲಾಕು, ಆಟೋಮ್ಯಾಟಿಕ್ ಲಾಕು ಹೀಗೆ ನೂರಾರು ಲಾಕುಗಳು ಆಧೂನಿಕತೆಯ ಪ್ರವಾಹದಲ್ಲಿ ಬಂದು ಬಾಲ್ಯದಿಂದ ರಕ್ಷಣಾಮಂತ್ರಿಯಂತಿದ್ದ ಬೀಗ ಮತ್ತು ಬೀಗದ ಕೈಯನ್ನು ಮೂಲೆಗೆ ಸೇರಿಸಿದೆ .

    ಮನೆಯಲ್ಲಿ ಕೀ ಆಕಾರದ ಸ್ಟ್ಯಾಂಡು ಬಂದಿದೆ ಅದರಲ್ಲಿ ಒಂದಷ್ಟು ನೇತಾಡುತ್ತಿರುತ್ತದೆ . ಫ್ರಿಡ್ಜ್ ನ ಮೇಲೊಂದಷ್ಟು ಬಿದ್ದಿರುತ್ತದೆ .ಟೇಬಲ್ಲಿನ ಡ್ರಾನಲ್ಲೊಂದಷ್ಟು ಶೇಖರವಾಗಿರುತ್ತದೆ . ಇಷ್ಟೆಲ್ಲಾ ಇದ್ರೂ ಬೇಕಾಗಿರೋ ಕೀ ಟೈಮ್ಗೆ ಸಿಗಲಿಲ್ಲ ಅಂದಾಗ ಆ ದಿನದ ಅಷ್ಟೂ ಕೆಲಸ ವ್ಯತ್ಯಯವಾಗುತ್ತದೆ .

    ಏನೇ ಹೇಳಿ ‘ಬಾಗಿಲು ಚಿಲಕ ಬೀಗ ಕೀಲಿ ‘ ಈ ಗುಂಪು ಎಂಥಾ ಒಂಟಿಯನ್ನು ಸಹ ಧೈರ್ಯವಾಗಿ ಇರಿಸುತ್ತಿದ್ದಂತವು , ಅಂದಿನಿಂದಲೂ ನಮ್ಮನ್ನು ಕಾಪಾಡಿಕೊಂಡು ಬಂದಂತವು , ನಮಗೆ ಇವೆಂದರೆ ಧೈರ್ಯ, ಇವಿದ್ದರೆ ನಂಬಿಕೆ .

    ಕಿರಣ ಆರ್

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೈಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ.ಹಲವಾರು ಕವಿತೆಗಳಿಗೆ ಇಲಸ್ಟ್ರೇಷನ್ ಮಾಡಿದ್ದಾರೆ. ಇಂಟಿರೀಯರ್ ಡಿಸೈನ್ ಮತ್ತು ಇದರ ಬಗ್ಗೆ ಕೆಲವು ಲೇಖನಗಳನ್ನು ಪತ್ರಿಕೆಗೆ ಬರೆದಿದ್ದಾರೆ. ಅಅಜೊತೆಗೆ ಕವಿತೆಗಳನ್ನು ಕೂಡ ಬರೆಯುತ್ತಾರೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    ಕೋವಿಡ್ -19 ನ್ನು ಯುದ್ಧಕ್ಕೆ ಹೋಲಿಸಬಹುದೇ?

    ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.ಸಾಯುವವರ ಸಂಖ್ಯೆಯೂ ಅಧಿಕವಾಗುತ್ತಿದೆ.ಹಲವು ಕಡೆ ಸಮುದಾಯಗಳಲ್ಲೇ ಹರಡಿಕೆ ಕಂಡು ಬಂದಿದ್ದು ಭಾರತ ಅಲ್ಲಲ್ಲಿ ಮೂರನೇ ಹಂತಕ್ಕೆ ಕಾಲಿಟ್ಟಿದೆ ಎಂಬುದು ದೃಢವಾಗಿದೆ. ಈಗ ಕೋವಿಡ್ ಸೋಂಕು ಉಲ್ಬಣವಾದ ಅಥವಾ ಒತ್ತಟ್ಟಿಗೆ ಕೋವಿಡ್ ನ ಹಲವು ಲಕ್ಷಣಗಳಿರುವವರನ್ನು ಮಾತ್ರವೇ ಪರೀಕ್ಷಿಸಲಾಗುತ್ತಿದೆ. ಹೀಗಾಗಿ ಪ್ರಕಟಗೊಳ್ಳುತ್ತಿರುವವರ ಸಂಖ್ಯೆಗಿಂತ ಅತಿಹೆಚ್ಚು ಸೋಂಕಿತರು ಇರುವ ವಿಚಾರ ಎಲ್ಲರನ್ನೂ ಬಾಧಿಸುತ್ತಿದೆ. ಲಾಕ್ ಡೌನ್ ತೆರವಾದ ಅಥವಾ ಸಡಿಲಗೊಂಡ ಸ್ಥಳಗಳಲ್ಲಿ ಸೋಂಕಿತರ ಸಂಖ್ಯೆಗಳು ಅತ್ಯಂತ ವೇಗದ ಏರುಹಾದಿಯಲ್ಲಿ ಸಾಗಿವೆ.ಜನರು ದೊಡ್ಡ ನಗರಗಳನ್ನು ತೊರೆದು ಓಡುತ್ತಿದ್ದಾರೆ.ಆದರೆ ಇಡೀ ದೇಶ ಒಂದೇ ಹಂತದಲ್ಲಿಲ್ಲ.ನಾಲ್ಕನೆಯ ಹಂತವನ್ನಿನ್ನೂ ಭಾರತ ನೋಡಿಲ್ಲ.

    ಪ್ರಪಂಚದಲ್ಲಿಯೂ ಸೋಂಕಿತರ ಸಂಖ್ಯೆ ದಾಖಲೆ ಮಟ್ಟದಲ್ಲಿ ಹೆಚ್ಚಾಗುತ್ತಿದೆ.ಪ್ರಪಂಚದ ಹಲವು ದೇಶಗಳು ಎರಡನೆಯ ಕೋವಿಡ್ ಅಲೆಯನ್ನು ಎದುರಿಸುತ್ತಿದ್ದಾರೆ. ಲ್ಯಾಟಿನ್ ಅಮೆರಿಕಾದ ಬ್ರೆಝಿಲ್ ನಲ್ಲಿ  ಈ ತಿಂಗಳ ಕೊನೆಯ ವೇಳೆಗೆ ಸಾವಿನ ಸಂಖ್ಯೆ ಪ್ರಪಂಚದಲ್ಲೇ ಮೊದಲ ಸ್ಥಾನ ಪಡೆಯಬಹುದು ಎನ್ನುವ ಅಂದಾಜನ್ನು ಮಾಡಲಾಗಿದೆ. ಮೆಕ್ಸಿಕೊ, ಬೊಲಿವಿಯ, ಪೆರು, ಚಿಲಿ, ರಷಿಯಾ ಇತ್ಯಾದಿ ದೇಶಗಳು ಕೂಡ ವೈರಸ್ಸಿನ ವಿರುದ್ಧದ ತಮ್ಮ ಹೋರಾಟವನ್ನು ಮುಂದುವರೆಸಿವೆ.

    ಜೂನ್ 23 ನೇ ತಾರೀಖು ಕೋವಿಡ್ -19ನ ಕಾರಣ ಅಮೆರಿಕಾದಲ್ಲಿ ಮೃತರಾದವರ ಸಂಖ್ಯೆ ಒಂದನೇ ಪ್ರಪಂಚ ಯುದ್ಧದಲ್ಲಿ ಮಡಿದ ಅಮೆರಿಕನ್ನರ ಸಂಖ್ಯೆಯನ್ನೂ ಹಿಂದಿಟ್ಟು ಮುಂದಕ್ಕೆ ನಡೆಯಿತು. ಒಂದನೇ ಪ್ರಪಂಚ ಯುದ್ಧದಲ್ಲಿ ಮಡಿದ ಅಮೆರಿಕನ್ನರ ಸಂಖ್ಯೆ 116,516 . ನಂತರ ನಡೆದ ವಿಯೆಟ್ನಾಂ (58,209 ಸಾವು ), ಕೊರಿಯನ್ (36,516 ಸಾವು) ಎರಡೂ ಯುದ್ಧಗಳನ್ನು ಒಟ್ಟುಗೂಡಿಸಿದರೂ ಕಾಣದಷ್ಟುಸಾವನ್ನು ಅಮೆರಿಕಾ ಕೋವಿಡ್ ನ ಕಾರಣ ಕಂಡಿದೆ. ನವೆಂಬರ್ ವೇಳೆಗೆ ಈ ಸಂಖ್ಯೆ180,000- 200,000 ಸಾವಿರ ದಾಟಬಹುದು ಎಂಬ ಅಂದಾಜನ್ನು ಅಮೆರಿಕಾ ನೀಡಿದೆ.

    1918 ರ ಸ್ಪಾನಿಶ್ ಫ್ಲೂ ಪ್ರಪಂಚದ 50 ಕೋಟಿ ಜನರಿಗೆ ಸೋಂಕನ್ನು ಹರಡಿತ್ತು. ಇದರಿಂದ ಅಮೆರಿಕಾದಲ್ಲಿ ಮಡಿದವರ ಸಂಖ್ಯೆ 6,75,000. ಇದು ಅಮೆರಿಕಾ ದೇಶ ಎಲ್ಲ ಯುದ್ಧಗಳಲ್ಲಿ  ಕಳೆದುಕೊಂಡ ಜೀವಗಳಿಗಿಂತ ಹೆಚ್ಚಿನ ಸಂಖ್ಯೆಯ ಸಾವು. ಅಂದರೆ, ಪ್ಯಾಂಡೆಮಿಕ್ ಗಳು ದೇಶವೊಂದು ಯಾವುದೇ ಯುದ್ಧಗಳಲ್ಲಿ ಕಳೆದುಕೊಳ್ಳುವುದಕ್ಕಿಂತ ಹೆಚ್ಚು ಜೀವಗಳನ್ನು ಅತ್ಯಂತ ಕಡಿಮೆಅವಧಿಯಲ್ಲಿ ಬಲಿತೆಗೆದುಕೊಳ್ಳ ಬಲ್ಲವು.

    ಸ್ಪಾನಿಶ್ ಫ್ಲೂ ಬಂದದ್ದು 102 ವರ್ಷಗಳ ಹಿಂದೆ. ನೂರು ವರ್ಷಗಳ ವೈಜ್ಞಾನಿಕ ಪ್ರಗತಿ, ತಂತ್ರ ಜ್ಞಾನದ ಸಾಧನೆಗಳ ನಂತರವೂ ಅಮೆರಿಕಾದಂತಹ ದೇಶ ವೈರಾಣುವೊಂದಕ್ಕೆ ನೂರಾರು ಸಾವಿರ ಜನರನ್ನು ಕಳೆದುಕೊಂಡಿದೆ.ಇದು,ಯಕಃಚಿತ್ ವೈರಾಣುವೊಂದರ  ಶಕ್ತಿಯನ್ನು ತೋರಿಸಿದರೆ ಅದರ ಜೊತೆ ಜೊತೆಯಲ್ಲಿಯೇ ಮನುಷ್ಯರು ಕಾಲಚಕ್ರದಲ್ಲಿ ಸಾಧಿಸುವ ಪ್ರಗತಿಗೂ ಮಿತಿಯಿದ್ದೇ ಇದೆ ಎಂಬ ವಿಚಾರವನ್ನು ಧೃಡಪಡಿಸುತ್ತದೆ.ಪ್ರಪಂಚದ ಸಾಧನೆಗಳ ಮೇಲೆ ಪ್ರಕೃತಿಯ ಕಡಿವಾಣವಿರುವುದನ್ನು ನಿಚ್ಚಳವಾಗಿ ತೋರಿಸುತ್ತದೆ.

    ಸಕಾರಾತ್ಮಕವಾಗಿ ಚಿಂತಿಸವವರಿಗೆ ವಿಶ್ವ ವ್ಯಾಪೀ ಹೊಸ ವ್ಯಾಧಿಯೊಂದು ಬಂದಾಗ ಹಲವು ನೂರು ಸಾವಿರ ಸಾವುಗಳನ್ನು ತಡೆಗಟ್ಟುವಲ್ಲಿ ದೇಶವೊಂದು ಶತಮಾನವೊಂದರ ಸಮಯ ತೆಗೆದುಕೊಂಡು ಯಶಸ್ವಿಯಾಗಿದೆ- ಎಂದು ಕೂಡ ಅನ್ನಿಸಬಹುದು. 

     ಈ ನಡುವೆ ಕೋವಿಡ್ ನ ಹಾವಳಿ ಹೆಚ್ಚಿದಂತೆಲ್ಲ ಇದನ್ನು ಯುದ್ಧಕ್ಕೆ ಹೋಲಿಸಿ ಮಾತನಾಡುವುದು ಕೇಳಿಬರುತ್ತಿದೆ.ಕೋವಿಡ್ ಕದನವೆನ್ನುವ ಪದದ ವ್ಯಾಪಕ ಬಳಕೆಯಾಗಿದೆ.ಕೋವಿಡ್ ವಿರುದ್ಧ ಸೆಣೆಸುತ್ತಿರುವ ವೈದ್ಯರು, ದಾದಿಯರು ಮತ್ತು ಇನ್ನಿತರ ಅಗತ್ಯ ಕೆಲಸಗಾರರನ್ನು ವೀರ ಯೋಧರೆಂದು ಕರೆಯಲಾಗಿದೆ.

    ವೈದ್ಯಲೋಕ ಇದನ್ನು ಒಪ್ಪುತ್ತದೆಯೇ?

    ಸೋಂಕಿನಿಂದ ಭಾದಿತರಾದವರನ್ನು ಆಸ್ಪತ್ರೆಗಳ ಕೆಲಸಗಾರರು ರಕ್ಷಿಸಬೇಕಾಗಿದೆಯೆನ್ನುವುದು ನಿಜ.ಆದರೆ ವೈರಸ್ಸಿನ ಈ ಅನಿರೀಕ್ಷಿತ ದಾಳಿ ನಡೆದಾಗ ವೈದ್ಯಲೋಕಕ್ಕೆ ಈ ಹೊಸವ್ಯಾಧಿಯ ಬಗ್ಗೆ ಅರಿವಿರಲಿಲ್ಲ, ತರಬೇತಿಯಿರಲಿಲ್ಲ, ಅವರನ್ನು ಅವರು  ರಕ್ಷಿಸಿಕೊಳ್ಳಬೇಕಾದ ಪರಿಕರಗಳಿರಲಿಲ್ಲ. ವೈರಿ ಕಣ್ಣಿಗೆ ಕಾಣದ ವ್ಯಕ್ತಿಯಾಗಿದ್ದ. ಆರೋಗ್ಯದ ರಕ್ಷಣೆಗೆ ಇದ್ದವರ ಸಂಖ್ಯೆಯೂ ಅತ್ಯಂತ ಮಿತವಾಗಿತ್ತು.

    ಸಮುದಾಯ ಜೀವನಿರೋಧಕ ಶಕ್ತಿಯನ್ನು (Herd Immunity)ಯನ್ನು ತಲುಪಲು ದೇಶವೊಂದರ ಶೇಕಡ 70 ರಷ್ಟು ಜನರಿಗೆ ಈ ಸೋಂಕು ಹರಡಬೇಕು. ಆದರೆ, ಆ ಬಗೆಯ ಸಂಖ್ಯೆ ಯಾವುದೇ ದೇಶದ ಮೇಲಿನ ದಾಳಿಗಿಂತಲೂ ಹೆಚ್ಚಿನ ಮಟ್ಟದ .ಸಮಸ್ಯೆಯಾಗುತ್ತದೆ.ಊಹಿಸಲಸಾಧ್ಯವಾದ ಈ ದಾಳಿಯಲ್ಲಿ ಸ್ವದೇಶಿಗಳು, ಬಂಧುಗಳು, ಸಮಾಜವೇ ಸೋಂಕನ್ನು ಹರಡುವ ಮೂಲಗಳಾಗುತ್ತವೆ.ಜೊತೆಯಲ್ಲಿ ಕೆಲಸಮಾಡುವವರು ಕೂಡ ಆಪತ್ತಿಗೆ ಕಾರಣರಾಗುತ್ತಾರೆ.ಹಾಗಾಗಿ, ವೈರಸ್ಸನ್ನು ಸೋಲಿಸುವುದು ಹೇಗೆ?

    ಯುದ್ಧವೊಂದರಲ್ಲಿ ಸೈನಿಕರ ಬಳಿ ಹೋರಾಡಲು ಶಸ್ತ್ರಗಳಾದರೂ ಇರುತ್ತವೆ. ಆದರೆ ಸೋಂಕಿನ ಲಕ್ಷಣಗಳನ್ನು ಮಾತ್ರ ನಿಭಾಯಿಸಲು ಶಕ್ತವಾಗಿರುವ ವೈದ್ಯಲೋಕದಲ್ಲಿ ಈ ವೈರಾಣು ಶತ್ರುವಿನ ವಿರುದ್ಧ ಹೋರಾಡಲು ಸದ್ಯಕ್ಕೆ ಯಾವುದೇ ಚಿಕಿತ್ಸೆಯ ಅಸ್ತ್ರಗಳೂ ಇಲ್ಲ. ತಡೆಯಬಲ್ಲ ಲಸಿಕೆಯೂ ಇಲ್ಲ. ಹೀಗಿರುವಾಗ  “ರಣಕೇಕೆ ಹಾಕುವ ವೈರಾಣು ಫಿರಂಗಿಗಳಿಗೆ ಎದೆ ತೆರೆದುಕೊಂಡು ಬರಿಗೈಲಿ ಹೋಗಿ ಹೋರಾಡಿ ಎನ್ನಬೇಡಿ. ಕನಿಷ್ಠ ಸ್ವರಕ್ಷಣಾ ಕವಚಗಳನ್ನಾದರೂ ನೀಡಿ ’ ಎಂದು ವೈದ್ಯರುಗಳು ಸರಕಾರಕ್ಕೆ ಮೊರೆಯಿಡಬೇಕಾಯಿತು. ನಮ್ಮನ್ನು  ನೇರವಾಗಿ .ಸೈನಿಕರಿಗೆ ಹೋಲಿಸಬೇಡಿ ಎಂದು ಎಚ್ಚರಿಕೆಯ ಮನವಿಗಳನ್ನು ನೀಡಬೇಕಾಯಿತು.ಆ ವೇಳೆಗಾಗಲೇ ಹಲವು ವೈದ್ಯ- ದಾದಿಯರ ಬಲಿಯೂ ಆಗಿತ್ತು.

    ಸಾರ್ವಜನಿಕ ಪ್ರಶಂಸೆ

    ಯುದ್ಧವೊಂದರಲ್ಲಿ ಮಡಿಯುವವರ ಸಂಖ್ಯೆಯನ್ನು ಆತ್ಯಾಧುನಿಕ ಕೃತಕ ಬುದ್ದಿಮತ್ತತೆಯ ಬಳಕೆಯಿಂದ, ತಂತ್ರಜ್ಞಾನದ ಬಳಕೆಯಿಂದ, ಹೊಸ ವೈದ್ಯಕೀಯ ಚಿಕಿತ್ಸೆಗಳಿಂದ ಮಿತಗೊಳಿಸುವುದನ್ನುಇಂದಿನ ಪ್ರಪಂಚ ಕಲಿತಿದೆ. ಡಿಪ್ಲೊಮಸಿ, ನಿಷೇಧ ಹೇರಿಕೆಗಳು, ವಾಣಿಜ್ಯ ಮತ್ತು ಆರ್ಥಿಕ  ತೆರಿಗೆಗಳ ಹೇರಿಕೆ ಮತ್ತು ಕೋಲ್ಡ್ ವಾರ್ ತಂತ್ರಗಳ ಮೂಲಕ ಯುದ್ಧಗಳನ್ನು ತಡೆಯಬಲ್ಲದಾಗಿದೆ.ಆದರೆ ವೈದ್ಯಲೋಕಕ್ಕೆ ಈ ಯಾವುದೇ ಸೌಲಭ್ಯಗಳಿಲ್ಲ.

      “ಯುದ್ಧಕಾಲೇ ಶಸ್ತ್ರಾಭ್ಯಾಸ “- ಎನ್ನುವಂತೆ ವೈದ್ಯಲೋಕ ಅಲ್ಪ -ಸ್ವಲ್ಪ ಭರವಸೆ ನೀಡಬಲ್ಲ ಎಲ್ಲ ಚಿಕಿತ್ಸೆಗಳನ್ನು ಕಲಿಯುತ್ತ ಅದನ್ನು ಕೋವಿಡ್ ವಿರುದ್ಧ ಬಳಸುತ್ತಿದ್ದಾರೆ.ಹೊಸ ವಿಧಾನಗಳು ಬೆಳಕಿಗೆ ಬಂದಂತೆಲ್ಲ ಅವನ್ನು ಕಲಿತು ಪ್ರಯೋಗಿಸುತ್ತಿದ್ದಾರೆ.ತಮಗೆ ತಿಳಿದಿರುವ, ಆಧಾರವಿರುವ ಎಲ್ಲ ಬಗೆಯ ಚಿಕಿತ್ಸೆಗಳನ್ನು,ಅನುಭವಗಳನ್ನು ಬೆರೆಸಿ ಪ್ರಯೋಗಿಸುತ್ತಿದ್ದಾರೆ.

    ತಾವು ಬಲಿಪಶುಗಳಾಗುತ್ತಿದ್ದರೂ ವೃತ್ತಿಪರ ಕರ್ತವ್ಯಗಳಿಗಾಗಿ ಹೋರಾಡುತ್ತಿರುವ ವೈದ್ಯ ಲೋಕಕ್ಕೆ ಇದೇ ಕಾರಣಕ್ಕೆ ಸಾರ್ವಜನಿಕರು ಚಪ್ಪಾಳೆ ತಟ್ಟಿ, ಊಟ-ತಿಂಡಿಗಳನ್ನು ಕಳಿಸಿ, ವಿಶೇಷ ಸವಲತ್ತುಗಳನ್ನು ನೀಡಿ ಸೈನಿಕರನ್ನು, ಪೋಲೀಸರನ್ನು ಹುರಿದುಂಬಿಸುವಂತೆ ಪ್ರಪಂಚದಾದ್ಯಂತ ಹುರಿದುಂಬಿಸಿದ್ದಾರೆ.ಪ್ರಪಂಚದಾದ್ಯಂತ ರೋಗಿಗಳ ಸೇವೆಯಲ್ಲಿ ಮಡಿದ ನೂರಾರು ವೈದ್ಯರು ಮತ್ತು ಇತರೆ ಸಿಬ್ಬಂದಿಗಾಗಿ ಮರುಗಿದ್ದಾರೆ.

    ಅವ್ಯವಸ್ಥೆಯ ಕಾರಣ ಕುಸಿಯುತ್ತಿರುವ ನೈತಿಕ ಸ್ಥೈರ

    ಕೋವಿಡ್ ಬಂದ ಕೆಲವರು ತಮ್ಮ ಯಾವುದೇ ಲಕ್ಷಣಗಳನ್ನು ಹೇಳಿಕೊಳ್ಳದೆ ಸುಮ್ಮನಿದ್ದುಬಿಡುತ್ತಿದ್ದಾರೆ.ವಾಟ್ಸಾಪ್ ಗಳಲ್ಲಿ ಹರಡಿದ ಕೆಲ ವೈರಲ್ ವಿಡಿಯೋಗಳಿಂದ ಭೀತಿ ಗೊಳ್ಳುತ್ತಿದ್ದಾರೆ. ಬಂದದೆಲ್ಲಾ ನಿಜ ಎಂಬ ಮನೋಭಾವನೆ ರೂಢಿಸಿಕೊಂಡಿದ್ದಾರೆ. ಸಾಮಾಜಿಕ ಜಾಲ ತಾಣಗಳ ಹಾವಳಿಿಯಿಂದ ನಿಜ ಯಾವುದು ಫೇಕ್ ಯಾವುದು ಎಂಬುದೇ ಗೊತ್ತಾಗದ ಒದ್ದಾಡುವ ಸ್ಥಿತಿ ಇದೆ. ಇನ್ನು ಕೆಲವರು ಕ್ವಾರೈಂಟೈನ್ ಕ್ಯಾಂಪುಗಳಿಂದ ತಪ್ಪಿಸಿಕೊಂಡು ಓಡಿಹೋಗಿದ್ದಾರೆ. ರೋಗ ಬಂದದ್ದು ಖಾತ್ರಿಯಾದ ನಂತರ ಹೆದರಿಕೆ ಮತ್ತು ಖಿನ್ನತೆಯಿಂದ ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದಾರೆ. ಇವರಲ್ಲಿ ವ್ಯವಸ್ಥೆಯ ಬಗ್ಗೆ ನಂಬಿಕೆ, ಭರವಸೆ ಎರಡೂ ಶೂನ್ಯವಾಗಿವೆ. ಈ ವಾತಾವರಣ ರೋಗಿಗಳಲ್ಲಿ ಮಾತ್ರವಲ್ಲ ಬದಲಿಗೆ ವೈದ್ಯಕೀಯ ಸಿಬ್ಬಂದಿಯಲ್ಲೂ ಮನೋಧೈರ್ಯ ಕುಸಿಯುವಂತೆ ಮಾಡಿದೆ. ಬೆಂಗಳೂರಲ್ಲಿ ರೋಗಿಯೊಬ್ಬರು ರಸ್ತೆಯಲ್ಲೇ ಮೃತಪಟ್ಟಾಗ ಅಂಬುಲೆನ್ಸ್ ಬರಲೇ ಇಲ್ಲ. ಈ ಅಚಾತುರ್ಯಕ್ಕಾಗಿ ನಗರಪಾಲಿಕೆ ಆಯುಕ್ತರು ನೊಂದವರ ಮನೆಗೆ ಹೋಗಿ ಕ್ಷಮೆಯಾಚಿಸಿದ ಘಟನೆಯೂ ನಡೆಯಿತು.

    ಅತ್ಯಧಿಕ ಕೇಸುಗಳಿರುವ ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಯ  ವೈದ್ಯರುಗಳು ತಮಗೇ ಸ್ವರಕ್ಷಣಾ ಕವಚಗಳಿಲ್ಲವೆಂದು ಹೇಳಿಕೊಂಡರು.ರೋಗಿಗಳನ್ನು ನೋಡಿಕೊಳ್ಳಲು ಉಪಕರಣಗಳೇ ಇಲ್ಲದ ತಮ್ಮ ದಾರುಣ ಪರಿಸ್ಥಿತಿಯಲ್ಲಿ ರೋಗಿಗಳನ್ನು ನಾವು ಹೇಗೆ ಬದುಕಿಸಿಡಲು ಸಾಧ್ಯ?- ಎಂದು ಕೇಳುತ್ತ ಅಲ್ಲಿನ ಅವ್ಯವಸ್ಥೆಗಳ ವಿಡೀಯೋವನ್ನು ಹಂಚಿಕೊಂಡು ತಮ್ಮ ಅಳಲನ್ನು ತೋಡಿಕೊಂಡರು.  ವೈದ್ಯರ ಪ್ರಾಣಗಳೇ ಅಪಾಯದಲ್ಲಿರುವ ಈ ಸ್ಥಿತಿಯಲ್ಲಿ ಹಲವು ಆಸ್ಪತ್ರೆಗಳಲ್ಲಿ ಉಪಕರಣಗಳಿದ್ದು, ರೋಗಿಗಳಿದ್ದೂ ಇದೀಗ ಅವರನ್ನು ನೋಡಿಕೊಳ್ಳಲು ವೈದ್ಯರಿಲ್ಲವಾಗಿದೆ.

    ಇದರ ಜೊತೆಗೆ ಹಿರಿಯ ಅನುಭವೀ ವೈದ್ಯರು, ವಶೀಲಿಯಿರುವವರು, ಕಿರಿಯ ವೈದ್ಯರಿಗೆ ಮಾರ್ಗದರ್ಶನ ನೀಡುವುದಕ್ಕೂ ಮುಂದಾಗದೆ ಮನೆಯಲ್ಲೇ ಉಳಿದು, ವಿದ್ಯಾರ್ಥಿ ದೆಸೆಯ ವೈದ್ಯರುಗಳನ್ನು, ಕಿರಿಯ ವೈದ್ಯರನ್ನು ಮುಂದಕ್ಕೆ ತಳ್ಳಿ ಕರ್ತವ್ಯಗಳನ್ನು ವಂಚಿಸಿ ಮಾಯವಾಗಿದ್ದಾರೆ.ಹಲವು ರೀತಿಯ ಶೋಷಣೆಗಳನ್ನು ಎದುರಿಸುತ್ತಿರುವ ಕಿರಿಯ ವಯಸ್ಸಿನ ವೈದ್ಯರುಗಳು ಮಾನಸಿಕವಾಗಿ ಒತ್ತಡಕ್ಕೊಳಗಾಗಿ ತಮ್ಮ ಅಳಲನ್ನು ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರ ಮುಂದೆ ತೋಡಿಕೊಂಡಿದ್ದಾರೆ.

    ಸೈನಿಕರಂತೆ ಹೋರಾಡಲು ವೈದ್ಯರ ಮೇಲೆ ಕಡ್ಡಾಯದ ನಿಯಮಗಳೇನೂ ಇರುವುದಿಲ್ಲ. ಸರ್ಕಾರೀ ಕೆಲಸದಲ್ಲಿಲ್ಲದಿದ್ದರೆ ಅವರ ಮೇಲೆ ಒತ್ತಡ ಹೇರಲು ಇತರರಿಗೆ ಸಾಧ್ಯವೂ ಇಲ್ಲ. ಮನುಷ್ಯರಾದ ಅವರಿಗೆ ಬೇಕಾದ ರಕ್ಷಣೆ, ಸವಲತ್ತುಗಳು, ಅನುಕಂಪ, ಮಾನವೀಯತೆಗಳ ಭರವಸೆ ನಮ್ಮ ವ್ಯವಸ್ಥೆಯಲ್ಲಿ ಸಿಗುವವರೆಗೆ ಸರ್ಕಾರ ಅದೆಷ್ಟೇ ದೊಡ್ಡ ಆಸ್ಪತ್ರೆಗಳನ್ನು ನಿರ್ಮಿಸಿ, ಹಾಸಿಗೆ ಜೋಡಿಸಿದರೂ ಅದಕ್ಕೆ ತಕ್ಕಷ್ಟು  ವೈದ್ಯರನ್ನು ಒದಗಿಸಲು ಹೆಣಗಬೇಕಾಗುತ್ತದೆ. ಕಡಿಮೆ ವೈದ್ಯರ ಮೇಲೆ ಕೆಲಸದ ಒತ್ತಡ ಹೆಚ್ಚಾದರೆ ಅವರ  ಭೌತಿಕ ಮತ್ತು ಮಾನಸಿಕ ಸ್ವಾಸ್ಥ್ಯಗಳು ಕುಸಿದು  ಮತ್ತೂ ಹೆಚ್ಚಿನ  ಸಮಸ್ಯೆಗೆ ನಾಂದಿಯಾಗುತ್ತದೆ.

    ಯುದ್ಧ ಮತ್ತು ಪ್ಯಾಂಡೆಮಿಕ್ ನ ಸಾವುಗಳು

    ಯುದ್ಧದ ಸಾವುಗಳನ್ನೂ, ಪ್ಯಾಂಡೆಮಿಕ್ ನಲ್ಲಿ ಉಂಟಾಗುವ ಸಾವುಗಳನ್ನೂ ನೇರವಾಗಿ ಹೋಲಿಸಲಾಗುವುದಿಲ್ಲ. ಏಕೆಂದರೆ ಯುದ್ದದಲ್ಲಿ ಮಡಿದವರ ಲೆಕ್ಕಕ್ಕೆ ನೇರ ಹೋರಾಟದಲ್ಲಿ ಸತ್ತವರನ್ನು ಮಾತ್ರ ಹೆಸರಿಸಲಾಗುತ್ತದೆ. ಆದರೆ ಯುದ್ಧದ ಆಗು-ಹೋಗುಗಳ ನಡುವೆ ಖಾಯಿಲೆಯಿಂದ ಸತ್ತವರು ಕೂಡ ಬಹಳಷ್ಟು ಮಂದಿಯಿರುತ್ತಾರೆ. ಅಂಗಾಂಗಗಳನ್ನು ಕಳೆದುಕೊಂಡವರು, ಮಾನಸಿಕ ಖಾಯಿಲೆಗಳಿಗೆ ತುತ್ತಾದವರು, ಆರ್ಥಿಕವಾಗಿ ಭ್ರಷ್ಟರಾದವರು, ಮಾನಸಿಕ ಖಾಯಿಲೆಗಳಿಗೆ ತುತ್ತಾದವರು ಹೀಗೆ ಹಲವು ಬಗೆಯ ನೋವುಗಳಾಗಿರುತ್ತವೆ.

    ಯುದ್ಧಗಳಂತೆ ಪ್ಯಾಂಡೆಮಿಕ್ ಗಳೂ ಹಲವು ರೀತಿಯ ಸಂಕಷ್ಟಗಳನ್ನು ಸೃಷ್ಟಿಸಿವೆ.ಯುದ್ದಗಳಂತೆಯೇ ಲಕ್ಷಾಂತರ ಜನರು ಸಾವು-ನೋವು, ಆರ್ಥಿಕ ಕಷ್ಟ-ನಷ್ಟಗಳನ್ನು ಎದುರಿಸುತ್ತಿದ್ದಾರೆ. ಕೋವಿಡ್ ನಲ್ಲಿ ಸಾಯುವವರ ಸಂಖ್ಯೆ ಕಡಿಮೆಯೆನ್ನುವುದು ಅತ್ಯಂತ ಅದೃಷ್ಟಕರ ಸಂಗತಿ. ಆದರೆ ಇನ್ನು ಕೆಲವು ವಿಚಾರಗಳಲ್ಲಿ, ಪ್ಯಾಂಡೆಮಿಕ್ ಗಳು ಕೆಲವು ಯುದ್ದಗಳಿಗಿಂತಲೂ ಹೆಚ್ಚಿನ ನಷ್ಟವನ್ನು ಉಂಟುಮಾಡಬಲ್ಲವು.

    ಯುದ್ದಗಳಲ್ಲಿ ತೊಡಗಿದ ದೇಶಗಳನ್ನು ಬಿಟ್ಟರೆ ಇತರರಿಗೆ ಈ ಯುದ್ದದ ನೋವುಗಳು ಹರಡುವುದು ಪರೋಕ್ಷವಾಗಿ. ಆದರೆ ಕೋವಿಡ್ ನಂತಹ ಹೊಸ ವ್ಯಾಧಿಗಳು ಇಡೀ ಪ್ರಪಂಚವನ್ನು ನಲುಗಿಸಿವೆ.ಇಲ್ಲಿ ದೇಶಗಳ ಗಡಿಯನ್ನು, ಪ್ರಜೆಗಳನ್ನು ಕಾಯುವ ಯೋಧರಷ್ಟೇ ಅಲ್ಲದೆ ಪ್ರಪಂಚದ ಪ್ರತಿ ಪ್ರಜೆಯೂ ತನ್ನನ್ನು ತಾನು ವೈರಾಣುವಿನ ಧಾಳಿಯಿಂದ ರಕ್ಷಿಸಿಕೊಳ್ಳಬೇಕಾಗಿದೆ. ಸರ್ಕಾರದ ಜೊತೆಗೂಡಿ ಸಹಕರಿಸಬೇಕಿದೆ. ಇಷ್ಟಾದರೂ ಪ್ಯಾಂಡೆಮಿಕ್ ನಲ್ಲಿ ಸತ್ತವರಿಗೆ ದೇಶಕ್ಕಾಗಿ ಹೋರಾಡಿ ಮಡಿದವರ ಪಟ್ಟ ದೊರಕುವುದಿಲ್ಲ. ಹಣಕಾಸಿನ ನೆರವೂ ದಕ್ಕುವುದಿಲ್ಲ. ಸಮಾಧಾನವೂ ಸಿಗುವುದಿಲ್ಲ. ಸಣ್ಣದೊಂದು ವೈರಾಣುವಿನ ಕಾರಣ ಮಾರಣಹೋಮದ ಸೃಷ್ಟಿಯಾಗಿದೆ.ಹಲವು ಹಿರಿಯರು ಇದೇ ಕಾರಣಕ್ಕೆ “ ಪ್ರಪಂಚ ಪ್ರಳಯವೆಂದರೆ ಇದೇ ಇರಬೇಕು”-ಎಂದು ಉದ್ಗರಿಸಿದ್ದಾರೆ.

    ಕೋವಿಡ್ ಸೋಂಕಿತರನ್ನು ರಕ್ಷಿಸಲು, ಅತ್ಯಲ್ಪ ಸಹಾಯದೊಂದಿಗೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದುಡಿಯುವಾಗ ಅಕಸ್ಮಿಕವಾಗಿ ಸಾಯುತ್ತಿರುವ ಆರೋಗ್ಯ ಮತ್ತು ಇತರೆ ಸಿಬ್ಬಂದಿ ವರ್ಗದವರಿಗೆ ಕೆಲವು ಸರ್ಕಾರಗಳು  ಹೆಚ್ಚುವರಿ ಹಣಕಾಸನ್ನು ಪರಿಹಾರವಾಗಿ ಘೋಷಿಸಿವೆ.ಅವರು ಸೇವೆಯನ್ನು ಮುಂದುವರೆಸಲು ಉತ್ತೇಜನ ಮತ್ತು ಪ್ರೇರಣೆಗಳನ್ನು ನೀಡಿವೆ.ಒಂದು ರೀತಿಯಲ್ಲಿ ಇದು ಯುದ್ದದಲ್ಲಿ ಮಡಿವವರಿಗಾಗಿ ’ ’ವೀರ ಮರಣ ’ ಎನ್ನುವ ಪ್ರಶಂಸಾ ಪತ್ರವಿಲ್ಲದೆ ಕೊಡಲಾಗುತ್ತಿರುವ ಪರಿಹಾರ ಧನವಾಗಿದೆ.

    ಯೋಧರು ಮತ್ತು ವೈದ್ಯರು

    ದೇಶವನ್ನು ಕಾಯುವ ಯೋಧರು ಯುದ್ಧ ಭೂಮಿಗಿಳದಾಗ ಜರ್ಜರಿತರಾಗುವ ಅವರ ಶುಶ್ರೂಷೆಗೆ ಒಂದು ವೈದ್ಯಕೀಯ ತಂಡವೇ ದುಡಿಯುತ್ತದೆ. ವೈದ್ಯಲೋಕ ಎದುರಿಸುತ್ತಿರುವ ಪ್ಯಾಂಡೆಮಿಕ್ ನ ಈ ಕಷ್ಟಕಾಲದಲ್ಲಿ  ಪ್ರಜೆಗಳನ್ನು ಹತೋಟಿಯಲ್ಲಿಡಲು, ಕೆಲವೊಂದು ಆಸ್ಪತ್ರೆಗಳ ನಿರ್ಮಾಣಗಳಿಗೆ, ಪರೀಕ್ಷೆ ಇತ್ಯಾದಿ ನಡೆಸಲು ಪೋಲೀಸರು ಮತ್ತು ಅರೆ-ಸೇನಾ ಮತ್ತು ಸೇನಾ ಪಡೆಗಳು ನೆರವನ್ನು ಒದಗಿಸಿವೆ. ಆದರೆ ಈ ಎರಡೂ ಪಡೆಗಳ ನೇರ ತುಲನೆಯನ್ನು ಯಾವುದೇ ಒಂದೇ ಒಂದು ಪರಿಸ್ಥಿತಿಗೆ ಹೋಲಿಸಿ ನೋಡಲಾಗುವುದಿಲ್ಲ.

    ಅತ್ಯಲ್ಪ ಕಾಲದಲ್ಲಿ ಅತಿ ಹೆಚ್ಚಿನ ಸಾವು-ನೋವನ್ನು ನೋಡಿದ ಯೋಧರು ಮತ್ತು ವೈದ್ಯರ ಮನಸ್ಸುಗಳು ವೃತ್ತಿಯ ಪರಿಮಿತಿಯನ್ನು ಮೀರಿ ಸಾಮಾನ್ಯ ಮನುಷ್ಯರಂತೆ ಮಿಡಿಯುವುದು ಕೂಡ ಸತ್ಯ.

    ಶತ್ರುಗಳ ರುಂಡ-ಮುಂಡ ಚೆಲ್ಲಾಡಲೆಂದೇ ಹೋಗುವ ಸೈನಿಕರು ಕೂಡ ಸಾವು ನೋವುಗಳನ್ನು ಹೆಚ್ಚಾಗಿ ನೋಡಿದಲ್ಲಿ ಅದರಿಂದ ಬದುಕಿಡೀ ನರಳುವ ಮಾನಸಿಕ ಕಾಯಿಲೆಗಳಿಗೆ ತುತ್ತಾಗಬಲ್ಲರು.  ಅಂತೆಯೇ ರೋಗ, ಸೋಂಕು, ಸಾವುಗಳನ್ನು ನೋಡುವ ವೈದ್ಯರುಗಳು ಕೂಡ ಹಿಂದೆ ಕಂಡಿಲ್ಲದ ಪ್ರಮಾಣದ ಸಾವು ನೋವುಗಳನ್ನು ನೋಡಿದಾಗ ಮಾನಸಿಕ ಖಾಯಿಲೆಗಳಿಗೆಆಘಾತಗಳಿಗೆ,  ಒಳಗಾಗಬಲ್ಲರು.

    44,000 ಸಾವಿರಕ್ಕೂ ಹೆಚ್ಚು ಸಾವುಗಳನ್ನು ನೋಡಿರುವ ಯುನೈಟೆಡ್ ಕಿಂಗ್ಡಮ್ ನ ಆಸ್ಪತ್ರೆಗಳ, ಕೋವಿಡ್ ವಾರ್ಡುಗಳಲ್ಲಿ ಕೆಲಸಮಾಡುತ್ತಿರುವ ವೈದ್ಯರುಗಳು ದಿನವೊಂದರಲ್ಲಿ ಹಲವು ಸಂಸಾರದವರಿಗೆ ಸಾವಿನ ವಾರ್ತೆಯನ್ನು ತಿಳಿಸಬೇಕಾಯಿತು. ಇಲ್ಲಿನ ಆಸ್ಪತ್ರೆಗಳಲ್ಲಿ “ಬ್ರೇಕಿಂಗ್ ಬ್ಯಾಡ್ ನ್ಯೂಸ್” ಎನ್ನುವುದು ಅತ್ಯಂತ ನಾಜೂಕಿನ ಕೆಲಸ. ಸತ್ತವರ ಸಂಸಾರದ ವ್ಯಕ್ತಿಗಳ ಭಾವನೆಗಳಿಗೆ ಘಾಸಿಮಾಡದಂತೆ ಕೆಟ್ಟಸುದ್ದಿಯನ್ನು ಹೇಳುವುದನ್ನು ಒಂದು  ’ವೃತ್ತಿಪರ ಕಲೆ ’. ಆದರೆ ಕೋವಿಡ್ ಸಾವುಗಳು ತಿಂಗಳ ಹಿಂದೆ ಅದೆಷ್ಟು  ತ್ವರಿತಗತಿಯಲ್ಲಾಗುತ್ತಿದ್ದವೆಂದರೆ,ದಿನವೊಂದರ ಕೊನೆಗೆ ವೈದ್ಯರುಗಳೇ ಕಣ್ಣೀರಾಗಿ ಕುಸಿದ ಘಟನೆಗಳು ನಡೆದವು.ಅವರ ಇಡೀ ವೃತ್ತಿ ಬದುಕಿನಲ್ಲಿ ಇಂತಹ ಸಾವಿನ ಸುರಿಮಳೆಯನ್ನು ಅವರು ಹಿಂದೆಂದೂ ಕಂಡಿರಲಿಲ್ಲ.

    ವೈದ್ಯರೇ ಆದರೂ ಅವಿರತ ಸಾವು, ನೋವು,  ಆಕ್ರಂದನಗಳನ್ನು ನೋಡುವ ಅವರ ಮನಸ್ಸೂ ಮನುಷ್ಯರದೇ ಆದ ಕಾರಣ ಅವರನ್ನೂ ಮಾನಸಿಕ ಹಿಂಸೆಗಳು ತಕ್ಷಣ ಅಥವಾ ಮುಂದಿನ ಬದುಕಿನುದ್ದಕ್ಕೂ ಬಾಧಿಸಬಲ್ಲವು ಎಂಬುದನ್ನು ಮರೆಯಲು ಸಾಧ್ಯವಿಲ್ಲ.ವೈರಾಣುವಿನ ಈ ದಾಳಿಯಲ್ಲಿ  ವೈದ್ಯರು ಯೋಧರೋ ಅಲ್ಲವೋ ಆದರೆ ಸೈನಿಕರಂತೆ ಅವರೂ ಮನುಷ್ಯರೇ. ಆದರೆ ಅವರ ಯುದ್ದ ಸೈನಿಕರಿಗಿಂತ ಅತ್ಯಂತ ಭಿನ್ನವಾದ್ದಾಗಿದೆ ಎಂದು ಧಾರಾಳವಾಗಿ ಹೇಳಬಹುದು.

    Photo by Edward Jenner from Pexels

    ಆನ್ ಲೈನ್ ಶಿಕ್ಷಣ ಹೇಗಿರಬೇಕು?

    ಕರ್ನಾಟಕದಲ್ಲಿ ಎಲ್ ಕೆ ಜಿ ಯಿಂದ ಹತ್ತನೇ ತರಗತಿವರೆಗೆ ಆನ್ ಲೈನ್ ಶಿಕ್ಷಣದ ಬಗ್ಗೆ ಇಂದು ವಿವಾದ ತಲೆದೋರಿದೆ. ಆನ್ ಲೈನ್ ಶಿಕ್ಷಣ ಬೇಕೇ? ಬೇಡವೇ? ಬೇಕಿದ್ದರೆ ಇದರ ಸ್ವರೂಪ ಹೇಗಿರಬೇಕು? ಅಥವಾ ಪರ್ಯಾಯ ಮಾರ್ಗಗಳೇನು? ಈ ಕುರಿತು ಕನ್ನಡಪ್ರೆಸ್ .ಕಾಮ್ ನಡಸಿದ ಪಾಡ್ಕಾಸ್ಟ್ ನಲ್ಲಿ ಹೆಸರಾಂತ ಶಿಕ್ಷಣ ತಜ್ಞ ಸಾಹಿತಿ ಪ್ರೊ. ಕೆ. ಇ. ರಾಧಾಕೃಷ್ಣ ಮತ್ತು ಹಿರಿಯ ಪತ್ರಕರ್ತ ಡಾ ಕೂಡ್ಲಿ ಗುರುರಾಜ ಅವರು ಭಾಗವಹಿಸಿದ್ದಾರೆ. ಸರಕಾರಕ್ಕೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ಆಲಿಸಿ ನಿಮ್ಮ ಅಭಿಪ್ರಾಯ ತಿಳಿಸಿ.

    ಅವಕಾಶ ವಂಚಿತರಿಗೆ ಅವಕಾಶ

    ಹಣ ಇದ್ದವರಿಗೆ ಹಣ ಸೇರುವ ಹಾಗೆ ಅವಕಾಶ ಸಿಕ್ಕವರನ್ನೇ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಆದರೆ ಅವಕಾಶ ವಂಚಿತರು ಮಾತ್ರ ಅವಕಾಶಗಳೇ ಇಲ್ಲದೆ ಮುರುಟಿ ಹೋಗುತ್ತಾರೆ.  ಬೆಂಗಳೂರಿನಲ್ಲಿರುವ ಸಂಸ್ಥೆಯೊಂದು ಅವಕಾಶ ವಂಚಿತರಿಗಾಗಿಯೇ ಕೆಲಸಮಾಡುತ್ತಿದೆ. ಅವಕಾಶ ವಂಚಿತರಿಗೆ  ಅವಕಾಶ ಕಲ್ಪಿಸುತ್ತಿದೆ. ಈ ಸಂಸ್ಥೆಯ ಹೆಸರು ಅಭ್ಯುದಯ.  

    ಪ್ರತಿಯೊಂದು ಸಂಸ್ಥೆ ಹುಟ್ಟುವುದರ ಹಿಂದೆ ಕ್ರಿಯಾಶೀಲ ಹಾಗೂ ಸೇವಾ ಮನೋಭಾವನೆಯ ಮನಸ್ಸೊಂದು ಇರುತ್ತದೆ. ಯಾವುದೋ ಘಳಿಗೆಯಲ್ಲಿ ಇಂಥ ಮನಸ್ಸುಗಳಿಗೆ ಆಗುವ ಪ್ರೇರಣೆ ಸಮಾಜಮುಖಿ ಕೆಲಸಗಳಿಗೆ ಕೈ ಹಾಕುವಂತೆ ಮಾಡುತ್ತದೆ. ಅಭ್ಯುದಯದ ವಿಚಾರದಲ್ಲಿ  ಇಂಥ ಪ್ರೇರಣೆ ಆಗಿದ್ದು ಡಿ. ಲಕ್ಷ್ಮಿನಾರಾಯಣ ಅವರಿಗೆ. ಕೆಪಿಟಿಸಿಎಲ್ ಉದ್ಯೋಗಿ   ಲಕ್ಷ್ಮಿನಾರಾಯಣ 2004 ರಲ್ಲಿ ಆನಂದರಾವ್ ಸರ್ಕಲ್ ನಲ್ಲಿರವ ಕಚೇರಿಯಲ್ಲಿ ಕೆಲಸ ಮಾಡುತ್ತಿರುತ್ತಾರೆ. ಎಲ್ಲರಂತೆ ಹತ್ತರಿಂದ ಐದರ ತನಕ ಕೆಲಸ ಮಾಡುವ ಜಾಯಮಾನ ಇವರದ್ದಲ್ಲ. ಊರ ಉಸಾಬರಿ ನಮಗೇಕೆ ಎನ್ನುವ ವ್ಯಕ್ತಿತ್ವವೂ ಇವರದ್ದಲ್ಲ. ಹೀಗಾಗಿಯೇ ಸಂದರ್ಭವೊಂದರಲ್ಲಿ ಬಾಲಾಪರಾಧಿಗಳ ಬಗ್ಗೆ ಇವರಿಗೆ  ಕುತೂಹಲ ಹುಟ್ಟುತ್ತದೆ. ಬಾಲ್ಯದಲ್ಲೇ ಮಕ್ಕಳು ಅಪರಾಧ ಮಾಡುತ್ತಾರೆ ಅಂದರೆ ಅದು ಅವರ ತಪ್ಪಲ್ಲ . ಅದು ಸಮಾಜದ ತಪ್ಪಲ್ಲವೆ ಎಂಬ ಪ್ರಶ್ನೆ ಅವರ ಮನಸ್ಸಿನಲ್ಲಿ ಏಳುತ್ತದೆ.

    ಡಿ. ಲಕ್ಷ್ಮಿನಾರಾಯಣ

    ಈ ವೇಳೆಗಾಗಲೇ ಕೇಶವ ಕೃಪಾ ಸಂವರ್ಧನಾ ಸಮಿತಿಯ  ಅರಕಲಿ ನಾರಾಯಣರಾವ್ ಮತ್ತು ಕೃ. ನರಹರಿ ಅವರುಗಳ   ಸಂಪರ್ಕಕ್ಕೆ ಬಂದು  ಅದರ ಸದಸ್ಯರಲ್ಲಿ ಒಬ್ಬರಾಗಿದ್ದ ಲಕ್ಷ್ಮಿನಾರಾಯಣ ವೈಯಕ್ತಿಕ ನೆಲೆಯಲ್ಲಿ ಇಂಥ ಅವಕಾಶ ವಂಚಿತ ಮಕ್ಕಳಿಗಾಗಿ ಕೆಲಸ ಮಾಡಲು ಮುಂದಾಗುತ್ತಾರೆ.

    ಈ ದಿಸೆಯಲ್ಲಿ ಮುಂದುವರೆದಾಗ ಹಾದಿ ತಪ್ಪಿದ ಹನ್ನೆರಡು ಹುಡುಗರ ಬಗ್ಗೆ ಇವರಿಗೆ ಗೊತ್ತಾಗುತ್ತದೆ. ಈ ಹುಡುಗರ ಪೂರ್ವಪರ ಹುಡುಕುತ್ತಾರೆ. ಇವರಲ್ಲಿ ಏನಾದರು ಬದಲಾವಣೆ ತರಬೇಕೆಂದು ಬಯಸುತ್ತಾರೆ. ಅಧಿಕಾರಿಗಳ ಮನ ಒಲಿಸಿ ಈ ಹುಡುಗರ ಪಾಲಕರನ್ನು ಭೇಟಿ  ಮಾಡಿ ವಾಪಸ್ಸು ಅವರವರ ಮನೆಗಳಿಗೆ ಸೇರಿಸುತ್ತಾರೆ. ಈ ಮಕ್ಕಳು ಮನೆಗೆ ವಾಪಸ್ಸು ಬಂದಾಗ ಪಾಲಕರಿಂದ ಮಿಶ್ರ ಪ್ರತಿಕ್ರಿಯೆ. ಕೆಲವರಿಗೆ ಮಕ್ಕಳು ಮತ್ತೆ ಮನಗೆ  ಬಂದರೆಂಬ ಸಂತಸ. ಇನ್ನು ಕೆಲವರಿಗೆ ಯಾಕಾದರೂ ಇವರನ್ನು ವಾಪಸ್ ಕರೆದುಕೊಂಡು ಬಂದರೆಂಬ ಭಾವನೆ.

    ಸುಲಭದ ಕೆಲಸವಲ್ಲ

    ಹುಡುಗರನ್ನು ಸರಿ ಮಾಡುತ್ತೇನೆ ಎಂಬ ನಿರ್ಧಾರವನ್ನೇನೋ ಲಕ್ಷ್ಮಿನಾರಾಯಣ ಅವರು ಮಾಡಿದ್ದೂ ಆಗಿದೆ. ಮುಂದೆ ಸರಿ ದಾರಿಗೆ ತರಬೇಕಲ್ಲ.ಅದೇನು ಸುಲಭದ ಕೆಲಸವೇ..? ಎಲ್ಲಾ 7 ರಿಂದ 10 ನೇ ತರಗತಿ ಓದುತ್ತಿರುವ ಮಕ್ಕಳು. ಶಾಲೆಗೆ ಮತ್ತೆ ಸೇರಿಸಲು ಹೋದರೆ ಅಲ್ಲಿ ಪ್ರತಿರೋಧ. ಉಳಿದ ಮಕ್ಕಳು ಇವರಂತೆ ಆಗಿಬಿಟ್ಟರೆ ಎಂಬ ಭಯ. ಆದರೆ ಲಕ್ಷ್ಮಿನಾರಾಯಣರ ಸಂಕಲ್ಪಕ್ಕೆ ಇದು ಯಾವುದೂ ಅಡ್ಡಿ ಆಗಲೇ ಇಲ್ಲ. ಶಿಕ್ಷಣ ಇಲಾಖೆಯ ಮನ ಒಲಿಸಿ ಮಕ್ಕಳನ್ನು ಸ್ಕೂಲಿಗೆ ಸೇರಿಸುತ್ತಾರೆ.ಏನಾದರು ಆದರೆ ತಾವೇ ಜವಾಬ್ದಾರಿ ಎಂದು ಅಭಯ ನೀಡುತ್ತಾರೆ. ಮೂರು ತಿಂಗಳ ಅವಧಿ ಸಿಗುತ್ತದೆ.

    ಈ ಸಮಯದಲ್ಲಿ ಒಂದಿಬ್ಬರು ಗೆಳೆಯರು ಲಕ್ಷ್ಮಿನಾರಾಯಣರ ಜೊತೆ ಸೇರುತ್ತಾರೆ. ಸುಧಾರಣೆ ಮುಂದುವರಿಯುತ್ತದೆ. ಮೊದಲಿಗೆ ಹುಡುಗರನ್ನು ತಪ್ಪದೆ ಸ್ಕೂಲಿಗೆ ಕಳಿಸುವ ಕೆಲಸ. ಹೋಮ್ ವರ್ಕ್ ಮಾಡದಿದ್ದರೂ ಪರವಾಗಿಲ್ಲ .ಸ್ಕೂಲಿಗೆ ತಪ್ಪದೆ  ಹೋಗಿ ಬನ್ನಿ ಸಾಕು ಎಂದು ಮನವೊಲಿಸುತ್ತಾರೆ. ಸಂಜೆ ನಿತ್ಯ ಅವರಿಗೆ ಕಥೆ ಹೇಳುತ್ತಾರೆ. ಆಟ ಜೊತಗೆ ಪಾಠವನ್ನೂ ಮಾಡುತ್ತಾರೆ.

    ಮಾಡುವ ಕೆಲಸದಲ್ಲಿ ನಂಬಿಕೆ ಇದ್ದರೆ ಯಶಸ್ಸು ಸಿಗಲೇ ಬೇಕು. ಇಲ್ಲೂ ಹಾಗೆ ಆಯಿತು. ಲಕ್ಷ್ಮಿನಾರಾಯಣರ ನಿರೀಕ್ಷೆ ಹುಸಿಯಗಲಿಲ್ಲ. ಮಿಡ್ ಟರ್ಮ್ ಪರೀಕ್ಷೆಯಲ್ಲಿ ಮಕ್ಕಳು ಶೇಕಡ 25 ರಿಂದ 30ರಷ್ಟು ಅಂಕ ಪಡೆಯುವ ಮಟ್ಟಕ್ಕೆ ಸುಧಾರಿಸುತ್ತಾರೆ. ವಾರ್ಷಿಕ ಪರೀಕ್ಷೆ ವೇಳೆಗೆ ಪರಿಸ್ಥಿತಿ ಮತ್ತಷ್ಟು ಸುಧಾರಿಸಿ ಮಕ್ಕಳು ಪಾಸ್ ಆಗುವ ಅಂಕ ಪಡೆಯುವಲ್ಲಿ ಸಫಲರಾಗುತ್ತಾರೆ. ಓದಿನ ಕಡೆ ಗಮನ ಹೋಗಿದ್ದರಿಂದ ಸಹಜವಾಗಿಯೇ  ಈ ಮಕ್ಕಳಿದ್ದ ಪ್ರದೇಶದಲ್ಲಿ ಅಪರಾಧಗಳು ಕಡಿಮೆ ಆಗುತ್ತವೆ.  

    ಈ ಪ್ರಯೋಗ ಅವಕಾಶ ವಂಚಿತರಿಗೆ ಅವಕಾಶ ದೊರಕಿಸಿಕೊಟ್ಟರೆ ಎಂಥ ಪವಾಡ ಮಾಡಬಲ್ಲದು ಎಂಬುದನ್ನು ತೋರಿಸಿಕೊಡುತ್ತದೆ.  ಈ ಯಶಸ್ಸು ಲಕ್ಷ್ಮಿನಾರಾಯಣ ಮತ್ತು ಅವರ ಗೆಳೆಯರ ತಂಡವನ್ನು ಮತ್ತೆ ಹಿಂತಿರುಗಿ ನೋಡುವಂತೆ ಮಾಡಲಿಲ್ಲ. ವೈಯಕ್ತಿಕ ಪ್ರಯತ್ನವೊಂದು ಸಾಂಸ್ಥಿಕ ಸ್ವರೂಪ ಪಡೆದು ಅಭ್ಯುದಯವಾಯಿತು.

    ಯೋಗಾಯೋಗ

    ಟಿ ಆರ್ ವಿದ್ಯಾಶಂಕರ

    ಇಂಥದೇ ಒಂದು ಸಂದರ್ಭದಲ್ಲಿ ಅಮೆರಿಕದಿಂದ ಆಗತಾನೆ ವಾಪಸ್ಸಾಗಿದ್ದ ಟಿ ಆರ್ ವಿದ್ಯಾಶಂಕರ ಎಂಬ ಉತ್ಸಾಹಿ ಯೊಬ್ಬರ  ಪರಿಚಯ ಲಕ್ಷ್ಮಿನಾರಾಯಣ ಅವರಿಗೆ ಆಗುತ್ತದೆ. ಇಪ್ಪತ್ತೆರಡು ವರುಷ ಅಮೆರಿಕದಲ್ಲಿ ಕಂಪೆನಿಯೊಂದರ ಮುಖ್ಯಸ್ಥರಾಗಿ ದುಡಿದಿದ್ದ ವಿದ್ಯಾಶಂಕರ, ಅಭ್ಯುದಯದ ಕತೆ ಕೇಳಿ ಎಷ್ಟರ ಮಟ್ಟಿಗೆ ಪ್ರಭಾವಿತರಾದರು ಎಂದರೆ ತಮ್ಮನ್ನು ತಾವೆ ಅಭುದ್ಯಯಕ್ಕೆ ಒಪ್ಪಿಸಿಕೊಂಡು ಬಿಡುತ್ತಾರೆ.ಈಗ ಅಭ್ಯುದಯದ ಸಲಹೆಗಾರರು ಆಗಿರುವ ವಿದ್ಯಾಶಂಕರ ಅದನ್ನು ಮತ್ತಷ್ಟು ಎತ್ತರಕ್ಕೆ ಒಯ್ಯಲು ಕಾರಣಕರ್ತರಾದರು. ವಿದ್ಯಾಶಂಕರ ತಮಗೆ ಸಿಕ್ಕಿದ್ದು ಯೋಗಾಯೋಗ ಎನ್ನುತ್ತಾರೆ ಲಕ್ಷ್ಮಿನಾರಾಯಣ. ವಿದ್ಯಾಶಂಕರ ಅವರ ಪಾಂಡಿತ್ಯ ಅಭ್ಯುದಯಕ್ಕೆ ಒಂದು ವರದಾನವಾಗಿದೆ.

    ಆ ಹನ್ನೆರಡು ಮಕ್ಕಳ ಅಭ್ಯುದಯದಿಂದ ಆರಂಭವಾದ ಈ ಸಂಸ್ಥೆ   15 ವರ್ಷಗಳಲ್ಲಿ ಸಾಧಿಸಿದ್ದು ಅಪಾರ. ತನ್ನ ನೆಲೆಯನ್ನು ವಿಸ್ತರಿಸುತ್ತಾ ಸಾಮಾಜಿಕವಾಗಿ ಆರ್ಥಿಕವಾಗಿ ಅವಕಾಶ ವಂಚಿತರ ಬಾಳಿನ ಬೆಳಕಾಗುತ್ತಾ ಮುನ್ನಡೆದಿದೆ.

    ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶಾಲಾನಂತರದಲ್ಲಿ ಶಿಕ್ಷಣ ನೀಡುವ ಕಲಿಕಾ ಕೇಂದ್ರಗಳು (25000 ವಿದ್ಯಾರ್ಥಿಗಳು) ಎಸ್‌ಎಸ್‌ಎಲ್ ಸಿ  ಮತ್ತು ಪಿಯುಸಿ  ವಿದ್ಯಾರ್ಥಿಗಳಿಗಾಗಿ ಜ್ಞಾನಗಿರಿ(1600 ವಿದ್ಯಾರ್ಥಿಗಳು), ಆರ್ಥಿಕ ನೆರವು ನೀಡುವ ವಿದ್ಯಾನಿಧಿ(5000 ಫಲಾನುಭವಿಗಳು), ವೃತ್ತಿಪರ ಹಾಗೂ ಮನೋವೈಜ್ಞಾನಿಕ ಸಲಹೆ ನೀಡುವ ಉನ್ನತಿ, ವಾರ್ಷಿಕ ಸ್ಪರ್ಧೆಗಳ ಆರೋಹಣ, ಆವಶ್ಯಕತೆ ಇರುವ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಚೇತನ (125 ಫಲಾನುಭವಿಗಳು), ಮದ್ಯ ಮಾದಕ ವ್ಯಸನಿಗಳ ಹಾಗೂ ಅಪರಾಧಿಗಳ ಪರಿವರ್ತನೆ ಮಾಡುವ ಪರಿವರ್ತನಾ(510 ಕುಟುಂಬ), ಕಾಲೇಜು ವಿದ್ಯಾರ್ಥಿಗಳಿಗಾಗಿ ಸ್ವಯಂ ಸೇವಕ ಸೇವಾವೃತ್ತಿ ನೀಡುವ ಸೇವಾ ಹಾಗೂ ಆಯ್ದ ಗ್ರಾಮೀಣ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸುವ ನಮ್ಮ ಶಾಲೆ  (43 ಶಾಲೆಗಳು) ಹೀಗೆ ಹಲವಾರು ಚಟುವಟಿಕೆಗಳು ನಿರಂತರ ನಡೆಯುತ್ತಿವೆ.

    ಅಭ್ಯುದಯದಿಂದ ಉನ್ನತಿ ಹೊಂದಿದ ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ ಅತ್ಯಂತ ಗಣ್ಯ ಸ್ಥಾನ ಪಡೆದಿದ್ದು ಅದರಲ್ಲಿ ಅನೇಕರು ಇಂದು ಕೆರೆಯ ನೀರನು ಕೆರೆಗೆ ಚೆಲ್ಲುಎಂಬಂತೆ ಈ ಸಂಸ್ಥೆಯ ಉನ್ನತಿಗಾಗಿ ಬೆಂಬಲವಾಗಿ ನಿಂತಿದ್ದಾರೆ. ಕೋವಿಡ್ ಸಂಕಷ್ಟ ಕಾಲದಲ್ಲಿ ಅಭ್ಯುದಯದ ನೂರಾರು ಸ್ವಯಂ ಸೇವಕರು ಹಗಲಿರಳು ಸ್ವಯಂಸೇವಕರಾಗಿ ಕೆಲಸ ಮಾಡಿದ್ದಾರೆ.ಮಾಸ್ಕ್ ಗಳನ್ನು ಹಂಚಿದ್ದಾರೆ . ಪಡಿತರ ಕಿಟ್ ಗಳನ್ನು ನೀಡಿದ್ದಾರೆ. ಸ್ಯಾನಿಟೈಜರ್ ವಿತರಿಸಿದ್ದಾರೆ.

    They alone live, who live for others-ಪರರಿಗಾಗಿ ಜೀವಿಸುವವರೆ ಜೀವಿತರು ಎನ್ನುವ ವಿವೇಕವಾಣಿಯಂತೆ ಕೆಲಸ ಮಾಡುತ್ತಿರುವ ಅಭ್ಯುದಯದ ನೂರಾರು ಕುಟುಂಬಗಳ ನೆಮ್ಮದಿಯ ಜೀವನಕ್ಕೆ ಕಾರಣವಾಗಿದೆ. ಬಿಡುವಾದಾಗ ಒಮ್ಮೆ ಅಭ್ಯುದಯಕ್ಕೆ ಹೋಗಿ ಬನ್ನಿ . ವಿಳಾಸ : ಜ್ಞಾನಗಿರಿ, #75 / 76, 4ನೇ ಅಡ್ಡ ರಸ್ತೆ , ಸೌದಾಮಿನಿ ಬಡಾವಣೆ, ಕೋಣನಕುಂಟೆ, ಬೆಂಗಳೂರು. ಮತ್ತಷ್ಟು ತಿಳಿಯಲು https://abhyudayakkss.org ಇಲ್ಲಿಗೆ ಭೇಟಿ ನೀಡಿ.

    error: Content is protected !!