23.5 C
Karnataka
Sunday, May 19, 2024

    ಲಾಕ್‌ಡೌನ್ ಕೊರೊನಾ ನಿಯಂತ್ರಿಸುವುದಕ್ಕೋ, ಎದುರಿಸುವುದಕ್ಕೊ?

    Must read

    ಅಶೋಕ ಹೆಗಡೆ

    ‘ಯಾವ ಕಾರಣಕ್ಕೂ ಬೆಂಗಳೂರಿನಲ್ಲಿ ಮತ್ತೆ ಲಾಕ್‌ಡೌನ್ ಮಾಡಲ್ಲ. ದಯವಿಟ್ಟು ಬೆಂಗಳೂರು ಬಿಟ್ಟು ತೆರಳಬೇಡಿ,’ ಎಂದು ಗೃಹ ಸಚಿವರಾದಿಯಾಗಿ ಬಹುತೇಕ ಮಂತ್ರಿಗಳು ವಾರದ ಹಿಂದೆ ಜನತೆಗೆ ಮನವಿ ಮಾಡಿದ್ದರು. ಮತ್ತೊಂದೆಡೆ ಕೆಲವು ಸಚಿವರು ಲಾಕ್‌ಡೌನ್ ಸೂಚನೆ ನೀಡುತ್ತಲೇ ಇದ್ದರು. ಆದರೆ ಜನ ಮಾತ್ರ, ಸೋಂಕು ಹೆಚ್ಚುತ್ತಲೇ ಇರುವುದರಿಂದ ‘ಮತ್ತೊಂದು ಲಾಕ್‌ಡೌನ್ ಖಚಿತ,’ ಎಂಬ ನಿಲುವಿಗೆ ಬಂದಿದ್ದರು. ಅದೇ ನಿಜವಾಗಿದೆ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಜುಲೈ 14ರಿಂದ 21ರವರೆಗೆ ಲಾಕ್‌ಡೌನ್; ಸೋಂಕು ಹೆಚ್ಚಿರುವ 12 ಜಿಲ್ಲೆಗಳಲ್ಲಿಯೂ ಮತ್ತೆ ಲಾಕ್‌ಡೌನ್ ಜಾರಿಯಾಗುವ ಸಾಧ್ಯತೆ ಇದೆ.

    ಮೊದಲಿನ ಲಾಕ್‌ಡೌನ್‌ಗೂ, ಈಗಿನ ಲಾಕ್‌ಡೌನ್‌ಗೂ ಬಹಳ ವ್ಯತ್ಯಾಸವಿದೆ. ಮೊದಲು ಕೊರೊನಾ ಸೋಂಕಿನ ಪ್ರಸರಣದ ಸರಪಳಿಗೆ ತಡೆ ಹಾಕುವ ಉದ್ದೇಶದಿಂದ ಲಾಕ್‌ಡೌನ್ ಜಾರಿ ಮಡಲಾಗಿತ್ತು. ಈಗ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಪರಿಸ್ಥಿತಿ ಎದುರಿಸುವ ಸಿದ್ಧತೆ ಮಾಡಿಕೊಳ್ಳುವ ಸಲುವಾಗಿ ಲಾಕ್‌ಡೌನ್ ಜಾರಿಗೊಳಿಸಲಾಗುತ್ತದೆ!

    ರಾಜ್ಯದಲ್ಲಿ ಜುಲೈ ತಿಂಗಳಲ್ಲೇ 12000ಕ್ಕೂ ಅಧಿಕ ಹೊಸ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಂತೂ ಪರಿಸ್ಥಿತಿ ಅಧ್ವಾನ. ರೋಗಿಗಳಿಗೆ ಹಾಸಿಗೆ ಸಿಗುತ್ತಿಲ್ಲ. ಹೋಮ್ ಕ್ವಾರಂಟೈನ್ ಜಾರಿಯೂ ಸಮರ್ಪಕವಾಗಿಲ್ಲ. ಶೇ.99ರಷ್ಟು ಪ್ರಕರಣಗಳಲ್ಲಿ ಸೋಂಕಿನ ಮೂಲವೇ ಪತ್ತೆಯಾಗುತ್ತಿಲ್ಲ. ಬೆಂಗಳೂರು ಸೇರಿ ನಗರಗಳಲ್ಲಿ ಬದುಕು ಕಟ್ಟಿಕೊಂಡಿದ್ದ ಜನ ಹಳ್ಳಿಗಳಿಗೆ ಮರಳುತ್ತಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿಯೂ ಸೋಂಕು ನಿರೀಕ್ಷೆಗೂ ಮೀರಿದ ವೇಗದಿಂದ ಹರಡುತ್ತಿದೆ. ಸರಕಾರಕ್ಕೆ ಏನು ಮಾಡಬೇಕು ಎಂದೇ ತೋಚುತ್ತಿಲ್ಲ. ಹೀಗಾಗಿ ಮಧ್ಯಂತರ ವ್ಯವಸ್ಥೆಯಾಗಿ ಲಾಕ್‌ಡೌನ್ ಮೊರೆ ಹೋಗಲಾಗಿದೆ.

    ಸೋಂಕಿನ ವೇಗಕ್ಕೆ ಕಡಿವಾಣ

    ಅಷ್ಟಕ್ಕೂ ಈಗ ಲಾಕ್‌ಡೌನ್ ಜಾರಿ ಮಾಡುವುದರಿಂದ ಸೋಂಕು ನಿಯಂತ್ರಣಕ್ಕೆ ಬಂದು ಬಿಡುತ್ತಾ? ‘ಹೌದು’ ಎಂದು ಯಾವ ಆರೋಗ್ಯ ತಜ್ಞರೂ ಖಚಿತವಾಗಿ ಹೇಳುತ್ತಿಲ್ಲ. ಆದರೆ, ಒಂದು ವಾರದ ಅವಧಿಯಲ್ಲಿ ಸೋಂಕಿನ ವೇಗಕ್ಕೆ ಕಡಿವಾಣ ಹಾಕಬಹುದು ಎಂದು ಡಾ.ಸುದರ್ಶನ ಬಲ್ಲಾಳ್ ಸೇರಿ ಹಲವು ತಜ್ಞರು ಅಭಿಪ್ರಾಯಪಟ್ಟಿದ್ದರೆ. ಈ ಅವಧಿಯಲ್ಲಿ ಮುಂದಿನ ಸ್ಥಿತಿ ಎದುರಿಸಲು, ಒಂದಷ್ಟು ಸಾವಿರ ಹಾಸಿಗೆಗಳನ್ನು ವ್ಯವಸ್ಥೆ ಮಾಡಿಕೊಳ್ಳಲು ಸರಕಾರಕ್ಕೆ ಸ್ವಲ್ಪ ಅವಕಾಶ ಸಿಗುತ್ತದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಎದುರಾಗಲಿರುವ ತೀವ್ರತೆಯನ್ನು ಎದುರಿಸುವ ಸಿದ್ಧತೆಗೆ ರಾಜ್ಯ ಸರಕಾರ ಮಾಡಿಕೊಂಡಿರುವ ಮಧ್ಯಂತರ ವ್ಯವಸ್ಥೆ ಇದು.

    ಜನರೇ ಅರ್ಥ ಮಾಡಿಕೊಳ್ಳಬೇಕು

    ಸರಕಾರ ಎಷ್ಟೇ ಪ್ರಯತ್ನಿಸಿದರೂ, ಸೋಂಕು ಹೋಗಲಾಡಿಸುವ ಲಸಿಕೆ ಅಥವಾ ಔಷಧ ಕಂಡುಹಿಡಿದರೂ ಕೊರೊನಾದಿಂದ ಸಂಪೂರ್ಣ ಮುಕ್ತಿ ಸಿಗಲು ಸಾಧ್ಯವೇ ಇಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಮುಖ್ಯವಾಗಿ ಆಗಬೇಕಾದದ್ದು ಸೋಂಕು ಹರಡುವುದಕ್ಕೆ ಕಡಿವಾಣ ಹಾಕುವ ಕ್ರಮಗಳು. ಅದನ್ನು ಸರಕಾರ ಮಾಡಲು ಸಾಧ್ಯವಿಲ್ಲ. ಜನ ತಮ್ಮ ಹೊಣೆಗಾರಿಕೆ ಅರಿತುಕೊಂಡು ನಡೆಯಬೇಕು. ತಾಲ್ಲೂಕು ಕೇಂದ್ರಗಳಲ್ಲಿ, ಹಳ್ಳಿಗಳಲ್ಲಿ ಜನ ಸ್ವಯಂ ‘ದಿಗ್ಬಂಧನ’ ವಿಧಿಸಿಕೊಳ್ಳುತ್ತಿದ್ದಾರೆ. ವ್ಯಾಪಾರ-ವಹಿವಾಟಿನ ಸಮಯವನ್ನು ತಾವೇ ನಿರ್ಧರಿಸಿಕೊಂಡು ಭಾಗಶಃ ಲಾಕ್‌ಡೌನ್ ಅನುಷ್ಠಾನಕ್ಕೆ ತಂದುಕೊಂಡಿದ್ದಾರೆ. ಅಷ್ಟು ಸಾಲದು.

    ಕೆಲವರಿಗೆ ಕಂಡಲ್ಲಿ ಉಗುಳುವ ಚಟ. ಕೆಲವರಿಗೆ ‘ಬರುವುದಿದ್ದರೆ ಹೇಗಿದ್ದರೂ ಕೊರೊನಾ ಬಂದೇ ಬರುತ್ತದೆ’ ಎಂಬ ಧೋರಣೆ. ಕೆಲವರದ್ದು ಮೊದಲಿನಿಂದಲೂ ವ್ಯವಸ್ಥೆಯ ವಿರುದ್ಧ ಹೋಗುವ ಅಥವಾ ಅವರ ‘ನಿಯಂತ್ರಕ’ ವ್ಯವಸ್ಥೆ ಹೇಳಿದರೆ ಮಾತ್ರ ಕೇಳುವ ಮನೋಭಾವ. ಇಂತಹ ವರ್ತನೆಗಳಲ್ಲಿ ಮೊದಲು ಸುಧಾರಣೆಯಾಗಬೇಕು.

    ಸರಕಾರ ಲಾಕ್‌ಡೌನ್‌ಗಿಂತಲೂ ಇಂತಹ ಸಂಗತಿಗಳತ್ತ ಗಂಭೀರವಾಗಿ ಗಮನ ಕೊಡಬೇಕು. ಕಂಡಲ್ಲಿ ಉಗುಳಬಾರದು, ಮಾಸ್ಕ್ ಧರಿಸದೇ ಅಡ್ಡಾಡಬಾರದು ಎಂಬ ನಿಯಮ ಇದೆ. ಅವುಗಳನ್ನು ಉಲ್ಲಂಘಿಸುವವರ ವಿರುದ್ಧ ಮುಲಾಜಿಲ್ಲದೇ ಕ್ರಮ ಜರುಗಿಸಲು ಮುಂದಾಗಬೇಕು. ದಂಡ ಅಥವಾ ಬಂಧನದಿಂದ ಸರಿ ಹೋಗುತ್ತದೆ ಅಂತಲ್ಲ, ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಜಾರಿ ಮಾಡಿದರೆ ಅಥವಾ ಸದಾ ನೆನಪುಳಿಯುವ ರೀತಿ ಯಾವುದಾದರೂ ಪ್ರಹಾರ ಮಾಡಿದರೆ ಅದರ ನೋವಿನ ನೆನಪಿನಲ್ಲಾದರೂ ಒಂದಷ್ಟು ಪುಂಡರು ಮನೆಯಲ್ಲಿ ಕುಳಿತುಕೊಂಡಾರು, ಸೋಂಕು ತಕ್ಕಮಟ್ಟಿಗೆ ನಿಯಂತ್ರಣಕ್ಕೆ ಬಂದೀತು.

    spot_img

    More articles

    1 COMMENT

    LEAVE A REPLY

    Please enter your comment!
    Please enter your name here

    Latest article

    error: Content is protected !!