24.2 C
Karnataka
Wednesday, May 20, 2026
    Home Blog Page 167

    ನಂಬಿಕೆಯೇ ದೈವ ಕಣೋ

    ಮರದ ಕೊಂಬೆ ಮೇಲೆ ಕುಳಿತ ಪಕ್ಷಿ ಕೊಂಬೆ ಮುರಿದರೂ ಹೆದರುವುದಿಲ್ಲ. ಏಕೆಂದರೆ ಪಕ್ಷಿ ನಂಬಿರುವುದು ತನ್ನ ರೆಕ್ಕೆಯನ್ನು. ಹಾಗೆಯೇ ನಮ್ಮನ್ನು ನಾವು ನಂಬಬೇಕು, ಬೇರೆಯವರನ್ನಲ್ಲ.

    ಹಾಗೆಯೇ ದೈವ ಶಕ್ತಿಯ ಬಗ್ಗೆ ಒಂದು ಮಾತಿದೆ.
    ನಂಬಿ ಕೆಟ್ಟವರಿಲ್ಲವೊ ರಾಯರ ಪಾದ ನಂಬಿ ಕೆಟ್ಟವರಿಲ್ಲವೊ…
    ನಂಬಿದ ಜನರಿಗೆ ಬೆಂಬಲ ತಾನಾಗಿ
    ಹಂಬಲಿಸಿದ ಫಲ ತುಂಬಿ ಕೊಡುವರ.

    ಅಂದರೆ ಭಗವಂತನನ್ನು ನಂಬಿದವರಿಗೆ ಅವನು ಯಾವತ್ತೂ ಮೋಸ ಮಾಡುವುದಿಲ್ಲ ಎಂದು. ನಂಬಿದ ಭಕ್ತರಿಗೆ ಬೆಂಬಲಿಗನಾಗಿ ನಿಲ್ಲುತ್ತಾನವನು. ಬದುಕಿನಲ್ಲಿ ಅವನೇ ಪ್ರತ್ಯಕ್ಷನಾಗದಿದ್ದರೂ ಮತ್ತಾವುದೋ ರೀತಿಯಲ್ಲಿ ದರ್ಶನ ನೀಡುತ್ತಾನೆ. ದೇವರನ್ನು ನಂಬಿದರೆ ದೇವರು ಪ್ರತ್ಯಕ್ಷನಾಗುತ್ತಾನೋ ಇಲ್ಲವೋ ಗೊತ್ತಿಲ್ಲ. ಆದರೆ ಆ ನಂಬಿಕೆಯೇ ನಮ್ಮನ್ನು ಜೀವನಪೂರ್ತಿ ಕೈ ಹಿಡಿದು ಮುನ್ನಡೆಸುತ್ತದೆ ಎಂಬ ಅಚಲವಾದ ನಂಬಿಕೆ.

    ಕೇವಲ ದೇವರನ್ನಷ್ಟೇ ಅಲ್ಲ, ಬದುಕಿನ ಬಗ್ಗೆ, ಇತರ ವ್ಯಕ್ತಿಗಳ ಬಗ್ಗೆ, ನಾವು ಹೊಂದಿರುವ ಗುರಿಗಳ ಬಗ್ಗೆ ನಂಬಿಕೆ ಇರಲೇಬೇಕು. ಆಗ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸುವುದಕ್ಕೆ ಸಾಧ್ಯ. ಸಾಗರದಷ್ಟು ಸಂಕಷ್ಟಗಳ ನಡುವೆ ನಮ್ಮನ್ನು ನೆಮ್ಮದಿಯಿಂದ ಬದುಕುವಂತೆ ಮಾಡುವುದು ನಂಬಿಕೆಯೊಂದೇ.

    ನಂಬಿಕೆ ಎನ್ನುವುದು ಕೇವಲ ಪ್ರಜ್ಞಾಶೂನ್ಯತೆಯನ್ನು ಮೂಡಿಸುವುದಿಲ್ಲ, ಅದು ಪವಾಡವನ್ನೇ ಸೃಷ್ಟಿಸಬಲ್ಲುದು ಎಂದೆಲ್ಲಾ ಹೇಳುತ್ತಾರೆ. ಅದು ಕೂಡಾ ಒಂದು ನಂಬಿಕೆ. ನಂಬಿಕೆ ಅಂದರೆ ವಿಶ್ವಾಸ. ಭರವಸೆ. ಅದು ಇದ್ದಾಗ ಮಾತ್ರ ಗುರಿ ತಲುಪುವುದಕ್ಕೆ ಸಾಧ್ಯ. ನಂಬಿಕೆ ಇರಿಸಿಕೊಂಡಾಗಲೇ ಮಾಡಬೇಕಾದ ಕೆಲಸಕ್ಕೆ ಶ್ರಮ ಹಾಕುತ್ತೇವೆ. ಪ್ರಯತ್ನ ಪಡುತ್ತೇವೆ. ಇಂದಲ್ಲ ನಾಳೆ ಸುಖ ಸಿಗುತ್ತದೆ ಎಂಬ ನಂಬಿಕೆಯನ್ನಿರಿಸಿಕೊಳ್ಳುತ್ತೇವೆ. ನಂಬಿಕೆ ಇಲ್ಲದೆ ಹೋದರೆ ಹಿಡಿದ ಕೆಲಸವನ್ನು ಪೂರ್ಣಗೊಳಿಸುವುದೇ ಇಲ್ಲ. ಆಗುತ್ತೋ ಇಲ್ಲವೋ ಎನ್ನುವ ಸಂಶಯಯವೇ ಮನೆ ಮಾಡಿದರೆ ಕೆಲಸ ಅಪೂರ್ಣವಾಗುತ್ತದೆ.

    ಮಾಡೋ ಕೆಲಸದಲ್ಲಾಗಲಿ ಅಥವಾ ಒಬ್ಬ ವ್ಯಕ್ತಿಯ ಬಗ್ಗೆಯೇ ಆಗಲಿ ನಮಗಿರುವ ನಂಬಿಕೆಯೇ ಪರಸ್ಪರ ಬಂಧವನ್ನು, ಬಾಂಧವ್ಯವನ್ನು ಬೆಳೆಸುತ್ತದೆ. ಸಂಬಂಧದಲ್ಲಿ ಅದಿಲ್ಲದೇ ಹೋದರೆ ಬಂಧ ಬಂಧನವಾಗುವುದು.. ಇಂದು ನಾಳೆಗಳ ಬಗೆಗಿನ ನಂಬಿಕೆಯೇ ನಮ್ಮನ್ನು ಜೀವನ ಪರ್ಯಂತ ಕೈಹಿಡಿದು ಮುನ್ನಡೆಸುವುದು. ಈ ನಂಬಿಕೆ ಅನ್ನುವುದು ಬರಿಯ ಭಾವನೆಯಷ್ಟೇ ಅಲ್ಲ, ಅದು ಬದುಕಿನ ಆಶಾವಾದವನ್ನು ಮೂಡಿಸುವ ಟಾನಿಕ್ ಇದ್ದಂತೆ.

    ಉದಾಹರಣೆಗೆ ಒಳ್ಳೆಯ ಶಿಕ್ಷಣ ಪಡೆದರೆ ಒಳ್ಳೆಯ ಉದ್ಯೋಗ, ಒಳ್ಳೆಯ ಸಂಬಳ, ದೊರೆಯುತ್ತದೆ ಎಂದು ದೊಡ್ಡವರು ಹೇಳುತ್ತಿರುತ್ತಾರೆ. ಇದನ್ನು ಕೇಳಿಸಿಕೊಂಡ ಮಕ್ಕಳು ಒಳ್ಳೆಯ ಶಿಕ್ಷಣ ಪಡೆಯಲು ಶ್ರಮ ಪಡುತ್ತಾರೆ. ಹಣ ಸಿಗುತ್ತದೆ ಎಂಬ ನಂಬಿಕೆಯಿಂದಾಗಿ ಕಷ್ಟಪಟ್ಟು ಓದಿ, ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಒಳ್ಳೆಯ ಗೌರವ ಪಡೆದುಕೊಳ್ಳಲು ಪ್ರಯತ್ನ ಮುಂದುವರೆಯುತ್ತಲೇ ಇರುತ್ತದೆ. ಯಾಕೆಂದರೆ ನಾಳೆ ಸಿಕ್ಕೇ ಸಿಗುತ್ತದೆ ಎನ್ನುವ ನಂಬಿಕೆ ಅವರನ್ನು ಹೆಚ್ಚು ಹೆಚ್ಚು ಕಾರ್ಯಪ್ರವೃತ್ತರನ್ನಾಗಿ ಮಾಡುತ್ತದೆ.

    ಹಾಗೆಯೇ ಕಾಯಿಲೆ ಬಂದಾಗ ವೈದ್ಯರ ಬಳಿ ಹೋಗಿ ಅವರು ಬರೆದುಕೊಟ್ಟ ಪ್ರಿಸ್ಕ್ರಿಪ್ಷನ್‍ನ ಮೇಲೆ ನಂಬಿಕೆ ಇರಿಸಿ ಅದನ್ನು ತೋರಿಸಿ ಔಷಧ ತೆಗೆದುಕೊಂಡು ಹೋಗಿ ಸೇವಿಸುತ್ತೇವೆ. ಅದೇ ನಂಬಿಕೆಯಲ್ಲಿ ಕಾಯಿಲೆ ವಾಸಿಯಾಗಿರುತ್ತದೆ.ಹೀಗೆ ಮನುಷ್ಯಕುಲದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದಾದರೆ ಅದು ನಂಬಿಕೆಯಿಂದಲೇ.

    ಅನಿಶ್ಚಿತತೆಗೆ ಭರವಸೆ

    ನಮ್ಮ ಬದುಕಿನ ಅನಿಶ್ಚಿತತೆಗೆ ಯಾರು ಭರವಸೆಯನ್ನು ನೀಡುವುದಕ್ಕೆ ಸಾಧ್ಯ? ನಾಳೆ ಇರುತ್ತದೋ ಇಲ್ಲವೋ ಗೊತ್ತಿಲ್ಲ, ರಾತ್ರಿ ಮಲಗಿದರೆ ಬೆಳಗ್ಗೆ ಏಳುತ್ತೇವೆಯೋ ಅನ್ನುವುದೂ ಗೊತ್ತಿಲ್ಲ, ಆದರೂ ನಾಳೆಯ ಬಗ್ಗೆ ಚಿಂತಿತರಾಗಿ ನಾಳೆಗೆ ಬೇಕಾದ್ದನ್ನೂ ಇವತ್ತೇ ಮಾಡಿ, ಭವಿಷ್ಯದ ಬಗ್ಗೆ ನಂಬಿಕೆ ಇರಿಸಿಕೊಂಡಿರುತ್ತೇವೆ. ಆ ವರ್ತನೆಯೇ ನಮ್ಮನ್ನು ನಾಳೆಗಳ ಪರಿಸ್ಥಿತಿಗಳನ್ನು ಎದುರಿಸುವುದಕ್ಕೆ ಸಿದ್ಧರಾಗುವಂತೆ ಮಾಡುತ್ತದೆ. ಅದು ನಮ್ಮಲ್ಲಿರುವ ನಂಬಿಕೆಗಳಿಂದ ಮಾತ್ರ ಸಾಧ್ಯ.

    ವ್ಯಾಯಾಮ ದೇಹವನ್ನು ಸುಸ್ಥಿತಿಯಲ್ಲಿಡುವಂತೆ ನಂಬಿಕೆ ಕೂಡಾ ನಮ್ಮನ್ನು ಮಾನಸಿಕವಾಗಿ ಸದೃಢರಾಗುವಂತೆ ಮಾಡುತ್ತದೆ. ನಂಬಿಕೆಯಿಂದ ಇಚ್ಛಾಶಕ್ತಿಯೂ ವೃದ್ಧಿಸುತ್ತದೆ. ಅದರಿಂದಲೇ ಮನಸ್ಸಿಗೆ ಶಾಂತಿ, ಸಂತೋಷ, ಸುಖ ಹಾಗೂ ಜೀವನದ ಉದ್ದೇಶವನ್ನು ಕಂಡುಕೊಳ್ಳುತ್ತೇವೆ. ದೇವರ ಮೇಲಿನ ನಂಬಿಕೆಗೆ ಜೀವವನ್ನು ರಕ್ಷಿಸುವ ಶಕ್ತಿ ಇರುತ್ತದೆ. ಅದು ಕೇವಲ ಭಾವನೆಯಷ್ಟೇ ಅಲ್ಲ, ಅದೊಂದು ಸೂಪರ್ ಪವರ್. ನಂಬಿಕೆಯ ಶಕ್ತಿಯೇ ಅಂಥದ್ದು. ಅದರಿಂದಲೇ ಜೀವನ ಬದಲಾಗುವುದನ್ನೂ ಗಮನಿಸಿರಬಹುದು.

    ನಂಬಿಕೆಯೇ ದೈವ

    ದೇವರಲ್ಲಿ ನಂಬಿಕೆಯನ್ನಿಡುವುದರಿಂದ ಆಗುವ ಲಾಭಗಳು ಅನೇಕ. ಆಚಾರಗಳಲ್ಲಿ, ವಿಚಾರಗಳಲ್ಲಿ, ಪದ್ಧತಿಗಳಲ್ಲಿ, ಆಚರಣೆಯಲ್ಲಿನ ನಂಬಿಕೆಗಳು ವ್ಯಕ್ತಿಯ ಬದುಕಿಗೆ ದಾರಿದೀಪವಿದ್ದಂತೆ. ದೇವರ ಮೇಲೆ ಭಕ್ತಿಯಿಂದ ಪೂಜೆ ಸಲ್ಲಿಸಿ, ಸಂಕಷ್ಟಗಳನ್ನು ಹೇಳಿಕೊಂಡು, ಅವನೇ ನಮ್ಮನ್ನೆಲ್ಲ ಕಾಪಾಡುತ್ತಾನೆ ಎನ್ನುವ ನಂಬಿಕೆ ಆ ಕ್ಷಣಕ್ಕೆ ಶಕ್ತಿ ನೀಡುತ್ತದೆ. ಏನೇ ಬರಲಿ ದೇವರಿದ್ದಾನೆ ಬಿಡು ಎಂಬ ನಂಬಿಕೆ ಇಟ್ಟಿರು ವ ವ ಭವಿಷ್ಯದ ಬಗ್ಗೆ ಚಿಂತಿತನಾಗುವುದಿಲ್ಲ, ಒತ್ತಡವನ್ನು ಕಳೆದುಕೊಳ್ಳುವುದಿಲ್ಲ. ನಂಬಿಕೆಯನ್ನೇ ಬಂಡವಾಳವನ್ನಾಗಿಸಿಕೊಂಡರೆ ಚಿಂತೆಗಳೇ ಇಲ್ಲವಾಗುತ್ತದೆ. ಅನಾರೋಗ್ಯಪೀಡಿತರಾಗಿದ್ದರೂ ನಾನು ಬದುಕುತ್ತೇನೆ ಎಂಬ ಸಕಾರಾತ್ಮಕ ನಂಬಿಕೆ ಬೆಳೆಸಿಕೊಂಡರೆ, ಆ ನಂಬಿಕೆಯಿಂದಲೇ ವ್ಯಕ್ತಿ ಕಾಯಿಲೆ ಮುಕ್ತನಾಗುತ್ತಾನೆ. ಹೀಗೆ ನಂಬಿ ಕೆಟ್ಟವರು ಯಾರೂ ಇಲ್ಲ. ನಂಬಿಕೆ ಬೆಳೆಸಿಕೊಳ್ಳುವುದರಿಂದ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂಬುದು ಇತ್ತೀಚಿನ ಸಂಶೋಧನೆಗಳಿಂದಲೂ ತಿಳಿದುಬಂದಿದೆ.

    Photo by Alex Radelich on Unsplash

    ಉಳಿಸಿದ ಹಣ-ಗಳಿಸಿದ ಹಣ; ಹೂಡುವ ಮುನ್ನ ಬುದ್ಧಿ ನಿಮ್ಮ ಕೈಯಲ್ಲಿರಲಿ

    ಉಳಿತಾಯವೇ ಆಪದ್ಧನ, ಇಂದು ಉಳಿಸಿದ ಮೊಬಲಗು ನಾಳಿನ ಜೀವನಕ್ಕೆ ಮೆರಗು, ಮುಂತಾದ ಉಳಿತಾಯದ ನುಡಿಗಳು ಈಗ ಮರೆಯಾಗಿ ಕೇವಲ ಕೆಲವರೇ ಅಳವಡಿಸಿಕೊಳ್ಳುವ ಹಂತದಲ್ಲಿದ್ದೇವೆ. ಈಗಿನ ಯುವ ಪೀಳಿಗೆಯ ಹೆಚ್ಚಿನವರಿಗೆ ಉಳಿತಾಯ ಎಂಬ ಪದದ ಅರ್ಥವೇ ತಿಳಿದಿರಲಾರದು. ಆದರೆ ಕೋವಿಡ್‌ 19 ನ ಈ ಸಂದರ್ಭದಲ್ಲಿ, ಎಲ್ಲಾ ವಲಯದ ಚಟುವಟಿಕೆಗಳು ಸ್ಥಬ್ಧವಾಗಿರುವಾಗ ಸ್ವಲ್ಪಮಟ್ಟಿನ ನೆಮ್ಮದಿ, ಸಮಾಧಾನ ಕಂಡಿರುವವರೆಂದರೆ ಜೀವನದಲ್ಲಿ ಉಳಿತಾಯ ಹವ್ಯಾಸ ಅಳವಡಿಸಿಕೊಂಡಿರುವವರು ಮಾತ್ರ. ಈಗಿನ ವೆಚ್ಚಬಾಕತನದಿಂದ ಹೊರಬಂದು ಉಳಿತಾಯ ಆಧಾರಿತ ಜೀವನಕ್ಕೆ ಪರಿವರ್ತಿತರಾದಲ್ಲಿ ತಕ್ಕಮಟ್ಟಿನ ಸಮಾಧಾನಕ್ಕೆ ಅವಕಾಶವಾಗುದು.

    ಕೋವಿಡ್‌ 19 ಕಾರಣದಿಂದ ವ್ಯವಹಾರಗಳು ಹೆಚ್ಚಿನ ಮಟ್ಟದಲ್ಲಿ ಸ್ಥಗಿತವಾಗಿವೆ, ಇಲ್ಲವೇ ಭಾರಿ ಪ್ರಮಾಣದ ಕುಸಿತಕ್ಕೊಳಗಾಗಿವೆ. ವೃತ್ತಿಗಳಲ್ಲೂ ಬದಲಾವಣೆಗಳಾಗಿವೆ. ನಿವೃತ್ತರು ತಮ್ಮ ಪಿಂಚಣಿಯೊಂದಿಗೆ, ತಮ್ಮ ಖರ್ಚು ವೆಚ್ಚಗಳನ್ನು ತೂಗಿಸಲು ಕೈಲಿರುವ ಹಣವನ್ನು ಹೂಡಿಕೆ ಮಾಡಲು ವಿವಿಧ ರೀತಿಯ ಯೋಜನೆಗಳ ಆನ್ವೇ಼ಷಣೆಯಲ್ಲಿ ತೊಡಗಿರುತ್ತಾರೆ.

    ಇದಕ್ಕೆ ಕಾರಣ ಮುಖ್ಯವಾಗಿ ಬ್ಯಾಂಕ್‌ ಬಡ್ಡಿದರದಲ್ಲಾಗುತ್ತಿರುವ ಭಾರಿ ಇಳಿಕೆ. ಈಗಿನ ವ್ಯವಸ್ಥೆಯಲ್ಲಿ ಸುರಕ್ಷಿತ, ಸುಭದ್ರ ಎಂಬುದು ಕಾಣದಾಗಿದೆ. ಎಲ್ಲವೂ ಅನಿಶ್ಚಿತ ಎಂಬಂತಾಗಿದೆ. ಕೆಲವರು ಸ್ವಲ್ಪಮಟ್ಟಿನ ಹೆಚ್ಚು ಆದಾಯ ಬರಬಹುದೆಂಬ ನಿರೀಕ್ಷೆಯಿಂದ ಕೆಲವು ಸಹಕಾರಿ ಬ್ಯಾಂಕ್‌, ಸಂಘಗಳಲ್ಲಿ ಹೂಡಿಕೆಮಾಡಿರಲೂಬಹುದು. ಇಂತಹ ಹೂಡಿಕೆಯು ಕೆಲವು ಸಂದರ್ಭದಲ್ಲಿ ಹೆಚ್ಚಿನ ಅಪಾಯ ತಂದೊಡ್ಡಿರುವ ಉದಾಹರಣೆಗಳುಂಟು. ವ್ಯವಹಾರ, ವೃತ್ತಿಗಳು ನಿರಾಶಾದಾಯಕವಾಗಿರುವ ಈ ಸಂದರ್ಭದಲ್ಲಿ ನಿಯಂತ್ರಿತವಾಗಿ, ಬುದ್ಧಿ- ಆಲೋಚನೆಗಳ ಮಿಶ್ರಣದೊಂದಿಗೆ ಚಟುವಟಿಕೆ ನಡೆಸಿ ಆದಾಯಗಳಿಸಲು ಷೇರುಪೇಟೆಯೂ ಒಂದು ಸಾಧನ.

    ಸಾಮಾನ್ಯವಾಗಿ ಷೇರುಪೇಟೆ ಎಂದರೆ ಅದು ಜೂಜಾಟ ಎಂಬ ತಪ್ಪು ಕಲ್ಪನೆ ಹೆಚ್ಚಿನವರಲ್ಲಿದೆ. ಷೇರುಪೇಟೆಯು ಶುದ್ಧ ನೀರಿನಂತೆ. ನಾವು ಅದರೊಂದಿಗೆ ಮಿಶ್ರಮಾಡುವ ಶೈಲಿಯನ್ನವಲಂಭಿಸಿದ ಫಲಿತಾಂಶ ಲಭಿಸುತ್ತದೆ. ಷೇರುಪೇಟೆಯಲ್ಲಿ ದೀರ್ಘಕಾಲೀನ, ಅಲ್ಪಕಾಲೀನ ಹೂಡಿಕೆ, ಡೇ ಟ್ರೇಡಿಂಗ್‌, ಡೆರಿವೆಟೀವ್‌ ಟ್ರೇಡಿಂಗ್‌, ಮಾರ್ಜಿನ್‌ ಟ್ರೇಡಿಂಗ್‌, ಫಂಡಮೆಂಟಲ್ಸ್‌ , ಟೆಕ್ನಿಕಲ್ಸ್‌ ಆಧಾರಿತ ಚಟುವಟಿಕೆ ಮುಂತಾದವುಗಳಿವೆ.

    ಸಾಮಾನ್ಯವಾಗಿ ಅಂತರ್ಗತವಾಗಿ ಅಡಕವಾಗಿರುವ ಅಂಶಗಳನ್ನಾಧರಿಸಿ ಹೂಡಿಕೆಮಾಡಿದಲ್ಲಿ ಅದು ಫಂಡಮೆಂಟಲ್ಸ್‌ ವಿಧ, ಧೀರ್ಘಕಾಲೀನ ಹೂಡಿಕೆಗೂ ಸೇರಿ ಅನುಕೂಲಕರವಾಗಿರುತ್ತದೆ. ಟೆಕ್ನಿಕಲ್ಸ್‌ ಆಧಾರಿತವೆಂದರೆ ಅದು ವ್ಯವಹಾರಿಕತೆಯಿಂದ ಕೂಡಿರುತ್ತದೆ. ಪೇಟೆಯಲ್ಲಿ ಷೇರಿನ ದರಗಳು ಕುಸಿತದಲ್ಲಿದ್ದಾಗ, ಫಂಡಮೆಂಟಲ್ಸ್‌ ಅಂಶಗಳಾಧಾರಿತ ಧೀರ್ಘಕಾಲೀನ ಹೂಡಿಕೆಗೆ ಯೋಗ್ಯವಾದ ಸಮಯವಾಗಿರುತ್ತದೆ.

    ಕೆಲವೊಮ್ಮೆ ಕಂಪನಿಗಳು ಘೋಷಿಸುವ ಕಾರ್ಪೊರೇಟ್‌ ಫಲಗಳಾದ ಲಾಭಾಂಶ (Dividend), ಬೋನಸ್‌, ಹಕ್ಕಿನ ಷೇರು ಮುಂತಾದವುಗಳ ಸಂದರ್ಭದಲ್ಲಿ ಅವು ಪ್ರದರ್ಶಿಸುವ ಏರಿಳಿತಗಳ ಅವಕಾಶವನ್ನು ಉಪಯೋಗಿಸಿಕೊಂಡು ಲಾಭ ಮಾಡಿಕೊಳ್ಳಬಹುದು. ಇದು ಅಲ್ಪಕಾಲೀನವೂ ಆಗಿರಬಹುದು.

    ಡೇ ಟ್ರೇಡಿಂಗ್‌ ಅಂದರೆ ಒಂದು ರೀತಿಯ ಜೂಜಾಟವೇ ಸರಿ. ಕಾರಣ ಖರೀದಿಸಿದ ಷೇರುಗಳ ದರ ಹೆಚ್ಚಾಗಲಿ ಅಥವಾ ಕಡಿಮೆಯಾಗಲಿ ಅಂದೇ ಚುಕ್ತಾ ಮಾಡಿ ಲಾಭ ನಷ್ಟಗಳ ಲೆಕ್ಕ ಹಾಕುವ ವಿಧವಿದಾಗಿರುತ್ತದೆ. ಇನ್ನು ಡೆರಿವೆಟಿವ್‌, ಮಾರ್ಜಿನ್‌ ಟ್ರೇಡಿಂಗ್‌ ಗಳು ಸ್ವಲ್ಪ ಹೆಚ್ಚು ಕಡಿಮೆ ಇದೇ ಗುಂಪಿಗೆ ಸೇರಿದವಾಗಿವೆ.

    ಷೇರುಪೇಟೆಯಲ್ಲಿ ಸುರಕ್ಷಿತವಾದ ರೀತಿಯಲ್ಲಿ (ಅಂದರೆ ಎಲ್ಲಾ ವಲಯದಲ್ಲಿದ್ದಂತೆ ಇಲ್ಲಿಯೂ ಅಪಾಯವಿರುತ್ತದೆ) ಸ್ವಂತ ಆಲೋಚನಯಿಂದ ವ್ಯವಹಾರ ಮಾಡಬೇಕು. ಷೇರುಪೇಟೆಯ ಚಟುವಟಿಕೆಗೆ ಮುನ್ನ ಈ ಕೆಳಗಿನ ಅಂಶಗಳನ್ನು ಗಮನದಲ್ಲಿರಿಸುವುದು ಅಗತ್ಯ.

    • ಭವಿಷ್ಯದ ಘಟನೆಗಳನ್ನು ವರ್ತಮಾನಕ್ಕೆ ಭಟ್ಟಿ ಇಳಿಸಿ ಅದಕ್ಕೆ ಮೌಲೀಕರಣ ಮಾಡುವುದೇ ಷೇರುಪೇಟೆಯ ವೈಶಿಷ್ಟ.
      ಉದಾಹರಣೆಗೆ: ಇತ್ತೀಚೆಗೆ ರಿಲಯನ್ಸ್‌ ಇಂಡಸ್ಟ್ರೀಸ್‌ ಕಂಪನಿಯು ತನ್ನ ಅಂಗ ಸಂಸ್ಥೆ ಜಿಯೋ ಪ್ಲಾಟ್‌ ಫಾರಂ ನ ಸ್ಟೇಕ್‌ ನ್ನು ಹಲವಾರು ವಿದೇಶಿ ಹೂಡಿಕೆ ಸಂಸ್ಥೆಗಳಿಗೆ ಮಾರಾಟ ಮಾಡಿದ ಒಪ್ಪಂದ ಮಾಡಿಕೊಂಡಿದೆ. ಈ ಸಂಸ್ಥೆಗಳಿಂದ ಇನ್ನೂ ಹಣ ಹರಿದುಬಂದಿರುವುದಿಲ್ಲ. ಆದರೂ ಈಗಾಗಲೇ ಈ ಕಾರ್ಯ ನೆರವೇರಿದೆ ಎಂಬಂತೆ ಷೇರಿನ ಬೆಲೆ ಗಗನಕ್ಕೇರಿದೆ.
    • ಕ್ಲಾರಿಯಂಟ್‌ ಕೆಮಿಕಲ್ಸ್‌ ಕಂಪನಿಯು ಪ್ರತಿ ಷೇರಿಗೆ ರೂ.140 ರಂತೆ ಡಿವಿಡೆಂಡ್‌ ಘೋಷಿಸಿದ ನಂತರ ಷೇರಿನ ಬೆಲೆ ರೂ.460 ರ ಸಮೀಪದಿಂದ ರೂ.608 ರ ವರೆಗೂ ಏರಿಕೆಯನ್ನು ಕೇವಲ ಎರಡೇ ದಿನಗಳಲ್ಲಿ ದಾಖಲಿಸಿತು. ಆದರೆ ಡಿವಿಡೆಂಡ್‌ ನಂತರ ಷೇರಿನ ಬೆಲೆ ರೂ.401 ರವರೆಗೂ ಇಳಿಕೆ ಕಂಡಿತು.
    • ಸ್ಮಾಲ್‌ ಕ್ಯಾಪ್‌ ಗಳಲ್ಲಿನ ಹೂಡಿಕೆ ಹೂವಿನಂತೆ ಅಲ್ಪಾಯು, ಲಾರ್ಜ್‌ ಕ್ಯಾಪ್‌ ಕಂಪನಿಗಳಲ್ಲಿ ಹೂಡಿಕೆಯು ಡ್ರೈ ಫ್ರೂಟ್‌ ರೀತಿ ದೀರ್ಘಾಯುವಾಗಿರುತ್ತವೆ. ಸ್ಮಾಲ್‌ ಕ್ಯಾಪ್‌ ಷೇರುಗಳು ಅತಿ ಸೂಕ್ಷ್ಮತೆಯಿಂದ ಕೂಡಿರುತ್ತವೆ. ಹಾಗಾಗಿ ಅಪಾಯದ ಮಟ್ಟವೂ ಹೆಚ್ಚಿರುತ್ತದೆ.
    • ಉದಾಹರಣೆಗೆ ಓಮ್ಯಾಕ್ಸ್‌ ಲಿಮಿಟೆಡ್‌, ಷೇರಿನ ಬೆಲೆ ರೂ.222 ರ ವಾರ್ಷಿಕ ಗರಿಷ್ಠ ದಾಖಲೆ ನಿರ್ಮಿಸಿತು. ಆ ಸಂದರ್ಭದಲ್ಲಿ ಕಂಪನಿಯು ತನ್ನ ಬೋರ್ಡ್‌ ಮೀಟಿಂಗ್‌ ನ್ನು 29ನೇ ಜುಲೈಗೆ ಮುಂದೂಡಿದೆ ಎಂಬ ಸುದ್ಧಿಯು ಷೇರಿನ ಬೆಲೆಯನ್ನು ಗರಿಷ್ಠದ ಹಂತದಿಂದ ಜಾರುವಂತೆ ಮಾಡಿ 17 ರಂದು ರೂ.61.85 ರವರೆಗೂ ಕುಸಿದು ವಾರ್ಷಿಕ ಕನಿಷ್ಠ ದಾಖಲಿಸಿ, ದಿನದ ಮಧ್ಯೆಯೇ ಪುಟಿದೆದ್ದು ರೂ.68.35 ರ ದಿನದ ಗರಿಷ್ಠ ತಲುಪಿತು.
    • ಅಲೋಕ್‌ ಇಂಡಸ್ಟ್ರೀಸ್‌ ಷೇರಿನ ಬೆಲೆಯು ಈ ವರ್ಷದ ಜನವರಿಯಲ್ಲಿ ರೂ.3 ರಲ್ಲಿದ್ದು ನಂತರದ ಬೆಳವಣಿಗೆಗಳ ಕಾರಣ ಜುಲೈನಲ್ಲಿ ರೂ.61 ರ ಗರಿಷ್ಠತಲುಪಿ ವಾರ್ಷಿಕ ದಾಖಲಿಸಿತು. ಅದರೆ ಅದಕ್ಕಿಂತ ಮುಖ್ಯವಾಗಿ ಈ ತಿಂಗಳ 10 ರಂದು ಈ ಕಂಪನಿ ಪ್ರದರ್ಶಿಸಿದ ರಭಸದ ಏರಿಳಿತಗಳು ಅಪಾಯದ ಮಟ್ಟವನ್ನು ತಿಳಿಸುತ್ತದೆ. ಅಂದು ದಿನದ ಆರಂಭಿಕ ಕ್ಷಣಗಳಲ್ಲಿ ರೂ.41.10 ರ ದಿನದ ಕನಿಷ್ಠ ಆವರಣಮಿತಿಯಲ್ಲಿತ್ತು. ಕೋಟಿಗಟ್ಟಲೆ ಷೇರುಗಳ ಮಾರಾಟದ ಒತ್ತಡವಿತ್ತು. ಆದರೆ ಸ್ವಲ್ಪ ಸಮಯದ ನಂತರ ಮಾರಾಟದಲ್ಲಿದ್ದ ಎಲ್ಲಾ ಷೇರುಗಳು ಕರಗಿ ಕ್ರಮೇಣ ಖರೀದಿಯ ಒತ್ತಡದಿಂದ ಏರಿಕೆ ಕಂಡು ರೂ.45 ರ ಸಮೀಪದ ಗರಿಷ್ಠ ಆವರಣಮಿತಿ ತಲುಪಿತು. ಅತ್ಯಲ್ಪ ಸಮಯದಲ್ಲಿ ಅದೆಲ್ಲಾ ಕರಗಿ ಮತ್ತೊಮ್ಮೆ ದಿನದ ಕನಿಷ್ಠಕ್ಕೆ ಕುಸಿಯಿತು. ಈ ಷೇರಿನ ದಿನದ ನಡೆಯು ಸಾಮಾನ್ಯ ಹೂಡಿಕೆದಾರರ ಕಲ್ಪನೆ ಮೀರಿದ್ದು.
    • ಆದ್ದರಿಂದ ಇಂತಹ ಕಂಪನಿಗಳಿಂದ ದೂರವಿದ್ದರೆ ಕ್ಷೇಮ.

    ಲಾರ್ಜ್‌ ಕ್ಯಾಪ್‌ ಕಂಪನಿಗಳಲ್ಲಿಅವಕಾಶಗಳು ಹೇಗೆ ಸೃಷ್ಠಿಯಾಗುತ್ತವೆ ಎಂಬುದಕ್ಕೆ ಈ ವಾರ ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಪ್ರದರ್ಶಿಸಿದ ರೀತಿ ಗಮನಿಸಿದಲ್ಲಿ ಅರಿವಾಗುವುದು. ಗುರುವಾರದಂದು ಷೇರಿನ ಬೆಲೆ ರೂ.360 ರ ಸಮೀಪವಿದ್ದು ನಂತರದ ದಿನ ರೂ.447 ರವರೆಗೂ ಏರಿಕೆ ಕಂಡಿದೆ. ಇದಕ್ಕೆ ಕಾರಣವೇನೇ ಇರಲಿ ಇಂತಹ ಏರಿಕೆಯನ್ನು ನಗದೀಕರಿಸಿಕೊಳ್ಳುವುದು ಸೂಕ್ತ. ಇತ್ತೀಚಿನ ದಿನಗಳಲ್ಲಿ ಪ್ರಮುಖ ಕಂಪನಿಗಳಾದ ಬಯೋಕಾನ್, ಟೈಟಾನ್‌, ಎಂ ಅಂಡ್‌ ಎಂ, ಟಾಟಾ ಸ್ಟೀಲ್‌, ಹೆಚ್‌ ಸಿ ಎಲ್‌ ಟೆಕ್ನಾಲಜೀಸ್‌, ಭಾರತ್‌ ಫೋರ್ಜ್‌, ಆಕ್ಸಿಸ್‌ ಬ್ಯಾಂಕ್‌, ಗ್ಲೆನ್‌ ಮಾರ್ಕ್‌ ಫಾರ್ಮ, ಎಲ್‌ ಐ ಸಿ ಹೌಸಿಂಗ್ ನಂತಹ ಅನೇಕ ಕಂಪನಿಗಳು ಅವಕಾಶಗಳನ್ನು ಕಲ್ಪಿಸಿಕೊಟ್ಟಿವೆ.

    ಈಗಿನ ಕೋವಿಡ್19‌ ರ ಸಂದರ್ಭದಲ್ಲಿ ಷೇರುಪೇಟೆಯತ್ತ ಹರಿದುಬರುತ್ತಿರುವ ಹಣದ ಪ್ರಭಾವದ ಕಾರಣ ಷೇರಿನ ಬೆಲೆಗಳು ಸಾಧನೆಯಾಧಾರಿತದ ಹೊರಗಿನ ಕಾರಣಗಳಿಂದ ಏರಿಳಿತಗಳು ಪ್ರದರ್ಶಿಸುತ್ತಿರುವ ಕಾರಣ ದೊರೆತಂತಹ ಅವಕಾಶಗಳನ್ನು ನಮ್ಮ ಅನುಕೂಲಕ್ಕೆ ಬಳಸಿಕೊಳ್ಳಬಹುದಾಗಿದೆ.

    ಗಮನಿಸಿರಿ: ಷೇರುಗಳು ಡಿಮ್ಯಾಟ್‌ ರೂಪದಲ್ಲಿರುವುದರಿಂದ ಕೇವಲ ಒಂದು ಷೇರನ್ನು ಸಹ ಖರೀದಿಸಬಹುದು. ಆದರೆ ಮಾರಾಟ ಮಾಡುವಾಗ ಒಂದು ಷೇರಾಗಲಿ ಅಥವಾ ಹೆಚ್ಚಾಗಲಿ ಅದಕ್ಕೆ ತಕ್ಕಂತೆ ಚಾರ್ಜನ್ನು ತೆರಬೇಕಾಗುತ್ತದೆ. ಹೊಸದಾಗಿ ಪ್ರವೇಶಿಸುವವರು ಒಂದೇ ಸಲ ಹೆಚ್ಚಿನ ಸಂಖ್ಯೆಯ ಷೇರುಗಳನ್ನು ಖರೀದಿಸುವುದಕ್ಕಿಂತ ಪೇಟೆಯ ಬಗ್ಗೆ ಅರಿವು ಮೂಡಿಸಿಕೊಳ್ಳುವವರೆಗೂ ಮಿತವಾದ ಸಂಖ್ಯೆಯ ಷೇರುಗಳಲ್ಲಿ ವಹಿವಾಟಿನಿಂದ ಚಟುವಟಿಕೆ ನಡೆಸುವುದು ಉತ್ತಮ.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ನಾವೇಕೆ ಎಲ್ಲಾ 64 ವಿದ್ಯೆಗಳನ್ನು ಕಲಿಯಲಿಲ್ಲ

    ಅವನನ್ನು ಮನೆ ಒಳಗೆ ಸೇರಿಸಬೇಡ,ಅವರೊಟ್ಟಿಗೇ ಹೋಗಲಿ,ಅವರ ರೀತಿಯೇ ಊರೂರು ಅಲೆಯುತ್ತ,ಅವರಿವರು ಕೊಟ್ಟಿದ್ದು ತಿನ್ನುತ್ತಾ,ಅವರದ್ದೇ ಹುಡುಗಿಯನ್ನು ಅವರು ಮದುವೆ ಮಾಡುತ್ತಾರೆ,ಮಾಡಿಕೊಳ್ಳಲಿ ಅಂತ ಅಪ್ಪ ರೌದ್ರಾವತಾರ ತಾಳಿ,ಬಯ್ಯುತ್ತಿದ್ದರೆ, ಅವರ ಜೊತೆ ಪಕ್ಕದ ಹಳ್ಳಿಗಳನ್ನು ಸುತ್ತಾಡಿ, ಸುಸ್ತಾಗಿದ್ದ ನಾನು ಅಮ್ಮನಿಂದ ಆಗಲೇ ಒದೆ ತಿಂದು ನಮ್ಮ ಮನೆಯ ಕಟ್ಟೆಯಮೇಲೆ ಹಾಗೇ ನಿದ್ರೆ ಮಾಡಿಬಿಟ್ಟಿದ್ದೆ. ನನಗಾಗ 7-8 ವರ್ಷ ವಯಸ್ಸಿರಬಹುದು. ಇಲ್ಲಿ ಅವರು ಅಂದ್ರೆ ಯಾರು ಅಂತ ನಿಮಗೆ ಅರ್ಥ ಆಗಲಿಲ್ಲ ಅಲ್ಲಾ, ಹೇಳ್ತೀನಿ ಕೇಳಿ.

    ಬಯಲು ಸೀಮೆಯ ಹಳ್ಳಿಯಾದ ನನ್ನೂರು ಸುತ್ತಲಿನ ಐದಾರು ಹಳ್ಳಿಗಳಿಗೆ ಪ್ರಮುಖವಾಗಿತ್ತು. ಹೆಚ್ಚಾಗಿ ರೈತರು, ಗಣಿ ಕಾರ್ಮಿಕರಿದ್ದ ಎಲ್ಲ ಹಳ್ಳಿಗಳಿಗೂ ಶಾಲೆ,ಕಿರಾಣಿ ಸಾಮಾನು,ಬಸ್ಸು ಹತ್ತಿ ಕೂಡ್ಲಿಗಿ,ಸಂಡೂರು ಕಡೆಗೆ ಹೋಗಬೇಕೆಂದರೆ,ನಮ್ಮೂರನ್ನೇ ಆಶ್ರಯಿಸಿ ಬರಬೇಕಿತ್ತು. 70ರ ದಶಕದಲ್ಲಿ. ಇದಲ್ಲದೆ ಋತುಮಾನಗಳಿಗೆ ತಕ್ಕಂತೆ ಯಾವ್ಯಾವುದೋ ಊರುಗಳಿಂದ ಜನ ನಮ್ಮೂರಿಗೆ ಬಂದು ಏರಿ ಮೇಲಿನ ಗಾಳೆಮ್ಮನ ಗುಡಿಯಲ್ಲಿ, ಕೋಡಿ ಬಸವಣ್ಣನ ಗುಡಿಯ ಸುತ್ತ ಬಿಡಾರ ಹೊಡೆದು ತಿಂಗಳುಗಳ ಕಾಲ ಇರುತ್ತಿದ್ದರು. ತಮಿಳುನಾಡಿನ, ತಮಿಳು ಮಾತಾಡುವ ಜನ ಬಾತುಕೋಳಿಗಳನ್ನು ಹಿಂಡು ಗಟ್ಟಲೆ ಅಂದರೆ ಸಾವಿರದ ಲೆಕ್ಕದಲ್ಲಿ ತಂದು,ನಮ್ಮೂರ ಕೆರೆಯ ನೀರಿನಲ್ಲಿ,ಗದ್ದೆಗಳಲ್ಲಿ ಅವುಗಳನ್ನು ಮೇಯಿಸುತ್ತ, ಬಿಡಾರ ಹೊಡೆದು ಕೊಂಡು ಇರುತ್ತಿದ್ದರು.

    ಕಪ್ಪನೆಯ ಧಡೂತಿ ಹೆಂಗಸರು,ಅವರ ಮೂಗಿನ,ಕಿವಿಗಳ ಆಭರಣ,ಅವರ ಹತ್ತಿರ ಬರುತ್ತಿದ್ದ ಬಾತುಕೋಳಿ ಮೊಟ್ಟೆಯ ವಾಸನೆ ಆಗ ನನಗೆ ಏನೋ ಹೊಸ ಅನುಭವದ ವಿಷಯಗಳು. ಮತ್ತೆ ಕೆಲವರು ವೃತ್ತಿ ನಾಟಕ ಕಂಪನಿಯವರು, ಹಗಲು ವೇಷಧಾರಿಯರು, ಹಾವಾಡಿಗರು, ಕರಡಿ ಆಡಿಸುವವರು, ಜೊತೆಗೆ ಜೋಗತಿಯರು ಎನ್ನಿಸಿಕೊಂಡವರ ಒಂದು ತಂಡ ರಾತ್ರಿಯೆಲ್ಲ ಪುರಾಣ ಪ್ರಸಂಗಗಳ ನಾಟಕ ಆಡುತ್ತಿದ್ದರು. ಅವುಗಳಲ್ಲಿ ರೇಣುಕ ಯಲ್ಲಮ್ಮ ನ ನಾಟಕ ಬಹು ಪ್ರಸಿದ್ದಿ. ಬಹುತೇಕ ನಮ್ಮ ಮಹಾಕಾವ್ಯಗಳ ಪರಿಚಯ ಇವರುಗಳ ನಾಟಕ,ಬಯಲಾಟಗಳಿಂದಲೇ ಗ್ರಾಮೀಣ, ಅನಕ್ಷರಸ್ಥ ಜನರಿಗೆ ಆಗಿರುವುದು.

    ಅಪ್ಪ ಬೇಸಿಗೆ ರಜೆಯ ಮಧ್ಯಾಹ್ನದಲ್ಲಿ ರಾಮಾಯಣ,ಮಹಾಭಾರತ ಕಾವ್ಯ ವಾಚನ ನನ್ನ ಮನೆಯ ಕಟ್ಟೆಯಮೇಲೆ ಮಾಡುತ್ತಿದ್ದರೆ, ಶಾನುಭೋಗರ ಶ್ರೀನಿವಾಸ ರಾವ್ ಅವರು ಅವರ ಮನೆಯ ಕಟ್ಟೆಯಮೇಲೆ ಇದನ್ನೇ ಮಾಡುತ್ತಿದ್ದರು.(ವಾಲ್ಮೀಕಿ ರಾಮಾಯಣ,ಗದುಗಿನ ನಾರಾಯಣಪ್ಪನವರ ಗದಾಯುದ್ಧ ಈಗಲೂ ಅಪ್ಪನ ನೆನಪಾಗಿ ನನ್ನಲ್ಲಿ ಇವೆ.ಅವುಗಳ ಪದ್ಯದ ಸಾಲು ನೋಡುತ್ತಿದ್ದರೆ,ಅಪ್ಪನ ಕಂಠದ ಪ್ರಾಸ, ಯಾವ್ಯಾವ ಸಾಲುಗಳನ್ನು ಅಪ್ಪ ಹೇಗೆ ಸುಶ್ರಾವ್ಯವಾಗಿ ಹಾಡಿ, ಅರ್ಥೈಸುತ್ತಿದ್ದರೋ,ಅದು ಕಣ್ಮುಂದೆ ಬರುತ್ತೆ.) ಸಾಯಂಕಾಲಗಳಲ್ಲಿ ಆಗಾಗ ಬೇರೆ ಊರಿಂದ ಬರುತ್ತಿದ್ದವರು ಯಾವುದಾದರೂ ಇವೇ ಮಹಾಕಾವ್ಯಗಳ ಪ್ರಸಂಗ ಕುರಿತ ಹರಿ ಕಥೆ ಹೇಳುತ್ತಿದ್ದರು. ಹಾಗೆ ಬರುವವರಲ್ಲಿ ನನ್ನ ಆಕರ್ಷಣೆಯ ಕೇಂದ್ರ ಆಗಿದ್ದವರು ಒಂದು ಅಲೆಮಾರಿ ಜನಾಂಗ. ಅವರನ್ನು ಜೋಗೇರು, ದೊಂಬರು, ಮೋಡಿ ಮಾಡೋರು, ಕಣ್ಕಟ್ ಮಾಡೋರು ಅಂತ ನಾನಾ ವಿಧವಾಗಿ ಕರೆಯುತ್ತಿದ್ದರು,ನಮ್ಮೂರಲ್ಲಿ.

    ಬಜಾರದ ವೆಂಕಟರಮಣ ಶೆಟ್ರ ಮನೆಮುಂದೆ ಸಾಮಾನ್ಯವಾಗಿ ಇವರೆಲ್ಲರ ಪ್ರದರ್ಶನ ನಡೆಯುತ್ತಿದ್ದವು. ಚಿಕ್ಕ ಹುಡುಗಿ 12-15 ಅಡಿ ಎತ್ತರದಲ್ಲಿ ತಂತಿಯ ಮೇಲೆ ಸೈಕಲ್ ಓಡಿಸುವುದು,ಒಂದು ದೊಡ್ಡ ಬಿದಿರಿನ ಕೋಲು ಅಡ್ಡವಾಗಿ ಕೈಯಲ್ಲಿ ಹಿಡಿದು ಅಡ್ಡಾಡುವುದು, ಕೆಳಗೆ ಮಲಗಿ,ಎದೆಯಮೇಲೆ ಚಪ್ಪಡಿಕಲ್ಲನ್ನು ಅವರಪ್ಪ ಸುತ್ತಿಗೆಯಿಂದ ಹೊಡೆಯುವುದು ಒಂದು ಕಡೆ ಆದರೆ, ಆ ಹುಡುಗಿಯ ಅಪ್ಪ ತನ್ನ ಒಂದು ಕಣ್ಣು ತಾನೇ ಕಿತ್ತುಕೊಂಡು ಅಂಗೈಯಲ್ಲಿಟ್ಟು ಎಲ್ಲರಿಗೂ ತೋರಿಸುತ್ತಿದ್ದುದು ನನ್ನನ್ನು ತಲ್ಲಣಗೊಳಿಸಿತ್ತು!

    ಮಾರನೆಯ ದಿನ ಭಯಂಕರ ವೇಷ ಧರಿಸಿ,ಮನೆ ಮನೆಗೆ ಏನಾದ್ರು ಕೇಳಲು ಬರುವಾಗ ನಾನು ಅವನ ಕಿತ್ತ ಕಣ್ಣನ್ನೇ ನೋಡುತ್ತಾ,ಅವನ ಹಿಂದೆಂದೆ ಹೋಗುತ್ತಿದ್ದೆ,ಶಾಲೆಗೆ ಹೋಗುವದನ್ನು ಮರೆತು. ಅವನ ಹತ್ತಿರ ಒಂದು ಚೀಲ ಇರುತ್ತಿತ್ತು. ಅದರಿಂದ ಹಾವು,ಚೇಳು ಹೊರಗೆ ತೆಗೆದು ಬಜಾರದಲ್ಲಿ ಹಾಸಿದ್ದ ಕಂಬಳಿಯ ಮೇಲೆ ಅಡ್ಡಾಡಲು ಬಿಡುತ್ತಿದ್ದ. ಮತ್ತೆ ಒಳಗೆ ಚೀಲದಲ್ಲಿ ಹಾಕಿಬಿಡುತ್ತಿದ್ದ. ನನಗೆ ಆ ಚೀಲ ನೋಡುವುದೇ ಸಂಭ್ರಮ. ಹಾಗೊಂದು ಸಾರಿ ಅವನಿದ್ದ ಕೋಡಿ ಬಸವಣ್ಣನ ಗುಡಿಯತನಕವೂ ಹೋಗಿ,ಅವನ ಚೀಲದಲ್ಲಿದ್ದ ಗಜ್ಜುಗ,ಕವಡೆ ತಂದು, ಅಮ್ಮನಿಂದ ಹೊಡೆಸಿಕೊಂಡಿದ್ದೆ ಮತ್ತು ಅವುಗಳನ್ನು ದೂರ ಎಸೆದು ಬಿಟ್ಟಿದ್ದಳು . ದುಃಖ ತಡೆಯಲು ಆಗಿರಲಿಲ್ಲ ಆಗ.

    ಅಂತಹುದೇ ಒಂದು ಕುತೂಹಲದಿಂದ ಅವರೊಟ್ಟಿಗೆ ನಮ್ಮೂರ ಪಕ್ಕದ ಜಿಗೇನಹಳ್ಳಿ ಗೆ ಹೋಗಿ ಬಂದಿದ್ದೆ. ಅವತ್ತೇ ಮೊದಲಿಗೆ ಆ ಊರು ನಾನು ನೋಡಿದ್ದು!. ಇಲ್ಲಿ ಅಪ್ಪ,ಅಮ್ಮ ದಿನ ಇಡೀ ಹುಡುಕಿ ಭಯಗೊಂಡು ನಾನು ಸಾಯಂಕಾಲ ಮನೆಗೆ ಬರುತ್ತಿದ್ದಂತೆಯೇ ಮಂಗಳಾರತಿ ಮಾಡಿದ್ದರು. ಹಾಗೆ ನೋಡಿದರೆ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ನಾಯಿ ತಿರುಗಿದ ಹಾಗೆ (ಇದು ನನ್ನ ಅಮ್ಮನ ಭಾಷೆ) ತಿರುಗುವುದು ನನಗೂ ಹೊಸದಲ್ಲ,ಬೈಯುವುದು ಅವರಿಗೂ ಹೊಸದಲ್ಲ.

    ಬೆಳಿಗ್ಗೆ 6 ಗಂಟೆಗೆ ಅಪ್ಪನ ಜೊತೆ ದೇವಸ್ಥಾನದ ಹೊಂಡಕ್ಕೆ ಸ್ನಾನಕ್ಕೆಂದು ಹೋಗುತ್ತಿದ್ದವನು,ಈಸಲು ಯಾವಾಗ ಕಲೆತೆನೋ ನನಗೇ ನೆನಪಿಲ್ಲ. ಊರ ಮುಂದಿನ ಕೆರೆ ತುಂಬಿ ಕೋಡಿ ಬಿದ್ದಾಗ, ಬೆಳಿಗ್ಗೆನೇ ನೀರಲ್ಲಿ ಆಟ ಆಡ್ತಾ,ಎದುರು ನೀರಿಗೆ ಬರುತ್ತಿದ್ದ ಚಿಕ್ಕ,ಚಿಕ್ಕ ಮೀನುಗಳನ್ನು ಹಿಡಿಯುತ್ತ,ಯಾವಾಗ ಮನೆಗೆ ಹೋಗಿದ್ದೋ ನೆನಪಿಲ್ಲ. ಗಂಟೆ ಮಕ್ಕಳು ಕಾಣದಿದ್ದರೆ ಈಗಿನ ರೀತಿ ಆಗ ತಡಪಡಿಸುತ್ತಿರಲಿಲ್ಲ. ಊರಲ್ಲಿಯ ಯಾರಾದರೊಬ್ಬರು ನಾವೆಲ್ಲ ಎಲ್ಲಿದ್ದೇವೆ ಅಂತ ನಮ್ಮ ಮನೆಗಳಿಗೆ ಹೇಳುತ್ತಿದ್ದರು. ಮನೆಯವರೂ ಹೆಚ್ಚಿಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ,ಸಮಯಕ್ಕೆ ಸರಿಯಾಗಿ ಬಂದು ಊಟ ಮಾಡಿ ಹೋದರೆ. ಹೀಗಿದ್ದುದರಿಂದ ನಾನೇನು ಮಾಡಬಾರದ್ದು ಮಾಡಿದ್ದೇನೆಂದು ಅಪ್ಪ,ಅಮ್ಮ ನನ್ನನ್ನು ಹೀಗೆ ಬೈದು,ಊಟಕ್ಕೆ ಕೊಡದೆ ಹೊರಗೆ ಮಲಗಿಸಿದ್ದಾರಲ್ಲ ಅಂತ ನನ್ನ ಸ್ವಗತ ವಾದ. ಅಪ್ಪನ ಎದುರಿಗೆ ಜೋರಾಗಿ ಕೆಮ್ಮಲೂ ಭಯ ಆಗ. ದುರ್ವಾಸ ಮುನಿಯ ಅಪರಾವತಾರ. ಇಷ್ಟು ಭಯದ ನಡುವೆ ಅವರ ಹಿಂದೆ ಮತ್ತೆ,ಮತ್ತೆ ಹೋಗುತ್ತಿದ್ದೆ ಅಂದರೆ,ಅವರೆಡೆಗಿನ ನನ್ನ ಕುತೂಹಲ ನಿಮಗೆ ತಿಳಿದಿರಬೇಕಲ್ಲ ಈಗ.

    ಸರಿ,ತಡೆಯಲಾಗದ ಕುತೂಹಲಗಳನ್ನು ತಣಿಸುತ್ತಿದ್ದುದೇ ಅಪ್ಪ. ಬೆಳಿಗ್ಗೆ ಹೊಂಡಕ್ಕೆ ಇಬ್ಬರೇ ನಡೆದು ಹೋಗುವಾಗ ನನಗೆ ಅಪ್ಪನ ಸಾನಿಧ್ಯದ ಸನಿಹ ಬಹು ಅಚ್ಚುಮೆಚ್ಚು. ಪಾಠಗಳ ಹೊರತಾದ ಎಲ್ಲ ವಿಷಯಗಳ ಅರಿವು ನನಗಾಗುತ್ತಿದುದೇ ಇಲ್ಲಿ. ಅಪ್ಪ ತನ್ನ ಜೀವಿತಾವಧಿಯ 84 ವರ್ಷಗಳಲ್ಲಿ ಸುಮಾರು 78 ವರ್ಷದ ವರೆಗೆ ಮನೆಯಿಂದ ಒಂದು ಕಿಲೋಮೀಟರ್ ಇರುವ ದೇವಸ್ಥಾನದ ಹೊಂಡದಲ್ಲಿ ದಿನಾ ಬೆಳಿಗ್ಗೆ ಈಜುವುದರೊಂದಿಗೆ ಸ್ನಾನ ಆಗಲೇಬೇಕು. ಅದು ನನಗೂ ಊರಲ್ಲಿರುವಷ್ಟು ದಿನ ಅಭ್ಯಾಸವಾಗಿತ್ತು. ಹಾಗೆ ಒಂದು ದಿನ ಅವನ ಕಣ್ಣು ಹೇಗೆ ಕಿತ್ತುಕೊಂಡು ಎಲ್ಲರಿಗೂ ತೋರಿಸುತ್ತಾನೆ ಅಂತ ಕೇಳಿದಾಗ, ಅವರು ಅದನ್ನು ಸಮ್ಮೋಹನ ವಿದ್ಯೆ ಅಂತಾರೆ, ಅದು ನಮ್ಮ ಪರಂಪರೆಯ 64 ವಿದ್ಯೆಗಳಲ್ಲಿ ಒಂದು,ಅದನ್ನು ಮಾನಸಿಕ ರೋಗಿಗಳ ಸುಧಾರಣೆಗಾಗಿ ಬಳಸುತ್ತಿದ್ದರು,ನಂತರ ಜನರನ್ನು ಮರಳುಮಾಡಿ ಕಳ್ಳತನ ಮಾಡಲೂ ಬಳಸುತ್ತಾರೆ. ತಂತ್ರ,ತಾಂತ್ರಿಕರು ಎನ್ನಿಸಿಕೊಂಡ ಒಂದು ಭಾಗದ ಜನರಿಗೆ ಇದು ಬಹು ಅನಿವಾರ್ಯ ವಿದ್ಯೆ ಅಂತ ಹೇಳಿದ್ದರು. ನನ್ನ ಹಲವಾರು ಪ್ರೆಶ್ನೆಗಳಿಗೆ ಅಪ್ಪ,ಇನ್ನು ಸ್ವಲ್ಪ ದೊಡ್ಡವನಾಗು,ಆಗ ಹೇಳ್ತೀನಿ,ನಿನಗೆ ಅರ್ಥ ಆಗುತ್ತೆ ಈಗ ಆಗಲ್ಲ ಅಂತ ಹೇಳ್ತಾ ಇದ್ದರು ಆಗ. ನಾನು ಬೆಳೆದಂತೆಲ್ಲ ನನ್ನ ಕುತೂಹಲಗಳಿಗೆ ಸಮಯವಿಲ್ಲದಂತೆ ಆಯ್ತೇನೋ ಗೊತ್ತಿಲ್ಲ.

    ಎಂಜಿನಿಯರಿಂಗ್ ಗೆ ಅಂತ ಸುರತ್ಕಲ್ ಕಾಲೇಜಿಗೆ ಬಂದೆ. ಮೊದಲೆರೆಡು ವರ್ಷ ಬೆಳಿಗ್ಗೆ ಬೀಚ್ ನಲ್ಲಿ ಓಟ,ಯೋಗ,ಪ್ರಾಣಾಯಾಮ. ಸಾಯಂಕಾಲ ನಮ್ಮ ಹಾಸ್ಟೆಲ್ ಹಿಂದಿನ ರಸ್ತೆಯಲ್ಲಿ ಓಟ. ಹಾಸ್ಟೆಲ್ ಪಕ್ಕ ಇದ್ದ ಜಿಮ್ ನಲ್ಲಿ ಸಾಮು. ಮಲ್ಲಾಡಿಹಳ್ಳಿಯ ವಾಸನೆಯನ್ನು ಮೊದಲೆರಡು ವರ್ಷ ಉಳಿಸಿಕೊಂಡಿದ್ದೆ. ಅದೇ ಸಮಯದಲ್ಲಿ ಕೇರಳದಿಂದ ಒಬ್ಬ Hypnotist ಬಂದಿದ್ದ. ಅಲ್ಲಿದ್ದ Student Activity Centre (SAC)ಅದು ಸುಮಾರು ಸಾವಿರ ಜನರನ್ನು ಕೂರಿಸಿಕೊಳ್ಳುವ ಹೊರಾಂಗಣ. ಇಲ್ಲಿ ವಿದ್ಯಾರ್ಥಿಗಳಾದ ನಮ್ಮ ಮೇಲೆ ಸಮೂಹ ಸಮ್ಮೋಹನ ಮಾಡುವುದಾಗಿ ಹೇಳಿ, ಒಪ್ಪಿಗೆ ಇದ್ದವರು ವೇದಿಕೆಗೆ ಬನ್ನಿ ಎಂದ. ನನಗೋ ಕುತೂಹಲದ ಸಡಗರ! 20-30 ಗೆಳೆಯರೊಂದಿಗೆ ತುಂಬಿದ್ದ ವೇದಿಕೆ ಮೇಲೆ ನಾನೂ ಹೋದೆ ಸಮ್ಮೋಹನಕ್ಕೆ ಒಳಗಾಗಲು. ಏನಾದ್ರು ಆಗಲಿ ನಾನು ಒಳಗಾಗಾಲೇ ಬಾರದು ಅಂತ ಮನದಲ್ಲಿ ನಿಶ್ಚಯಿಸಿದ್ದೆ. ಅವನು ಹೇಗೆ ಮಾಡ್ತಾನೋ ನೋಡುವ ಅಂದುಕೊಂಡು.

    …..1,2,3….10….ಈಗ ನೀವೆಲ್ಲ ನಾನು ಹೇಳಿದ ಹಾಗೆ ಕೇಳ್ತೀರಿ, ನೀವು 10 ವರ್ಷದ ವಯಸ್ಸಿಗೆ ಹೋಗಿ,2 ವರ್ಷದ ವಯಸ್ಸಿಗೆ ಹೋಗಿ,ಅಮ್ಮನ ಗರ್ಭಕ್ಕೆ ಹೋಗಿ,ಹಿಂದಿನ ಜನ್ಮಕ್ಕೆ ಹೋಗಿ….. ಅವನ ಸೂಚನೆಗಳು ಹೀಗೆ ಸಾಗುತ್ತಿದ್ದವು. ವೇದಿಕೆಯಲ್ಲಿಯ ಕೆಲವು ಗೆಳೆಯರು ಸಮ್ಮೋಹನಕ್ಕೆ ಒಳಗಾದ್ರು ಅಂತ ಅವ ಹೇಳ್ತಿದ್ದ,ಕೆಲವರನ್ನು ಕೆಳಗಿಳಿಸಿ ಕಳಿಸಿಕೊಟ್ಟ. ಪ್ರತಿ ಬಾರಿಯೂ ನನಗೇನೂ ಆಗಿಲ್ಲ,ನಾನು ಇಲ್ಲೇ ಇದ್ದೇನೆ,SAC ನಲ್ಲಿ ನಿಮ್ಮ ಎದುರಿಗೆ ಅಂತ ಅವ ಏನು ಹೇಳಿದರೂ ಕೇಳದೆ ವಾದ ಮಾಡ್ತ ಇದ್ದೆ. ಹತ್ತಿರಬಂದು ನೀನು ಯೋಗ,ಪ್ರಾಣಾಯಾಮ ಮಾಡ್ತಿದೀಯ ಅಂದ…ಹೌದು ಈಗ ಸಾಯಂಕಾಲ ಮುಗಿಸಿ,ಊಟ ಮಾಡಿ ಇಲ್ಲಿಗೆ ಬಂದಿದ್ದೇನೆ ಅಂದೆ. ನಾನು ಅವನು ಸೂಚನೆ ಕೊಟ್ಟಂತೆಲ್ಲ ನಾನು ಅವತ್ತು ಬೆಳಿಗ್ಗೆಯಿಂದ ಕಾಲೇಜಿನಲ್ಲಿ,ಹಾಸ್ಟೆಲ್ ನಲ್ಲಿ ಏನಾಯ್ತು ಅಂತ ನೆನಪಿಸಿಕೊಳ್ತಾ ವಾಸ್ತವತೆಯನ್ನು ಬಿಟ್ಟು ಅವನು ಸೂಚಿಸುತ್ತಿದ್ದ ಬಾಲ್ಯ ಅಮ್ಮನ ಗರ್ಭ ಯಾವುದರ ಕಡೆ ಗಮನ ಕೊಡುತ್ತಿರಲಿಲ್ಲ. Almost ಎಲ್ಲರೂ ವೇದಿಕೆಯಿಂದ ಕೆಳಗಿಳಿದರು. ನಾನು,ಅವನು ಮಾತ್ರ ವೇದಿಕೆಯಲ್ಲಿ. ನೀನು ಸಮ್ಮೋಹನಕ್ಕೆ ಒಳಗಾಗಿದ್ದಿಯ,ನಿನಗೆ ತಿಳಿಯುತ್ತಿಲ್ಲ ಅಂತ ಅವನ ವಾದ. ಇಲ್ಲವೇ ಇಲ್ಲ ಅಂತ ನನ್ನ ವಾದ. ಸರಿ ಸಭಿಕರನ್ನು ಉದ್ದೇಶಿಸಿ ಅವ ಹೇಳಿದ,ಇವನು ಸಮ್ಮೋಹನಕ್ಕೆ ಒಳಗಾಗಿದ್ದಾನೆಂದು ನಾನು ನಿಮಗೆ ತೋರಿಸುತ್ತೇನೆ ನೋಡಿ ಅಂತ ಹೇಳಿ ನನ್ನನ್ನು ಸಭಿಕರಿಗೆ ಬೆನ್ನುಮಾಡಿ ನಿಲ್ಲುವಂತೆ ಹೇಳಿದ. ನಾನೂ ಒಪ್ಪಿ ನಿಂತೆ. ಎರಡೂ ಕಣ್ಣನ್ನು ಕಟ್ಟಿದ. ಸಭಿಕರದ್ದು ಯಾರದ್ದೋ ರೂಮ್ ಕೀಲಿ ತಂದು ನನ್ನ ಮುಖಕ್ಕೆ ಹಿಡಿದ. ಮತ್ತೆ ಸಭಿಕರನ್ನು ಉದ್ದೇಶಿಸಿ ಇವನಿಗೆ ಕಣ್ಣು ಕಟ್ಟಿ ಈ ಕೀಲಿ ಸಭಿಕರಲ್ಲಿ ಎಲ್ಲಿರುತ್ತೋ ಅಲ್ಲಿಂದ ತರುವಂತೆ ಹೇಳ್ತೇನೆ,ನೋಡಿ ಹೇಗೆ ತರ್ತಾನೆ ಅಂದ. ನನಗೋ ಆಶ್ಚರ್ಯ. ಬೆನ್ನು ತಿರುಗಿಸಿಯೇ ನಿಂತಿದ್ದೇನೆ. ಅವ ಕೆಳಗೆ ಹೋಗಿ ಕತ್ತಲಲ್ಲಿ ಎಲ್ಲೋ ಕೀಲಿ ಸಭಿಕರ ಮಧ್ಯೆ ಇಟ್ಟು ಬಂದ. ನನಗೆ 1,2,3….10 ಹೊರಡು ಕೀಲಿ ತೆಗೆದುಕೊಂಡು ಬಾ ಅಂದ…ನಂಗೆ ಎಲ್ಲ ಜ್ಞಾಪಕ ಇದೆ.ಯಾವುದೇ ಅತಿಮಾನುಷ ಶಕ್ತಿ ನನ್ನಲ್ಲಿ ಪ್ರವೇಶಿಸಿಲ್ಲ. ಅವನು ಎರಡು ಮೂರು ಬಾರಿ ನನ್ನನ್ನು ತಿರುಗಿಸಿ ಹೊರಡು ಎಂದ. ಕಣ್ಣಿಗೆ ಬಟ್ಟೆ ಕಟ್ಟಿದ್ದಾನೆ,ನನಗೆ ಎಲ್ಲವೂ ಸ್ಪಷ್ಟ ಕಾಣಿಸುತ್ತಿದೆ. ಯಾರನ್ನೂ ತಾಕದೆ, ಕತ್ತಲೆ ಇದ್ದರೂ ಕೂತಿರುವವರ ಮಧ್ಯೆ ಇರುವ ಜಾಗದಲ್ಲಿ ಅರಾಂ ಆಗಿ ನಡೆದು ಹೋಗುತ್ತಿದ್ದೇನೆ…ಈಗ ನನಗೆ ಒಂದು ಸುಂದರವಾದ ಸುವಾಸನೆ ಬರ್ತಿದೆ. ಆ ಸುವಾಸನೆ ಅರಸಿ ನಾನು ಹೋಗ್ತಿದ್ದೇನೆ. ಸುವಾಸನೆಯ ಕಂಪು ಹೆಚ್ಚಾಗಿ ಇರುವಕಡೆ ಬಂದು ನಿಲ್ಲುತ್ತಿದ್ದೇನೆ. ಕಂಪು ಒಂದು ರೀತಿ ಒಂದೇ ಕಡೆಯಿಂದ ಬರ್ತಿದೆ ಅನ್ನಿಸ್ತಿದೆ. ಕೀಲಿ ಇರುವ ವ್ಯಕ್ತಿಯ ಸರಿಯಾದ ಜೇಬಿಗೆ ಕೈ ಹಾಕಿ ಕೀಲಿ ತೆಗೆದುಕೊಂಡು ಬರ್ತಿದ್ದೇನೆ… ಎಲ್ಲರೂ ಚಪ್ಪಾಳೆ ಹೊಡೀತಿದ್ದಾರೆ. ವೇದಿಕೆಗೆ ಬಂದವನ ಕಣ್ಣು ಬಿಚ್ಚಿ ಕೇಳುತ್ತಾನೆ…ಇವರೆಲ್ಲ ಒಪ್ಪಿದ್ದಾರೆ,ನೀನು ಸಮ್ಮೋಹನಗೆ ಒಳಗಾಗಿದ್ದಿಯ ಅಂತ,ನೀನೂ ಒಪ್ಪುತ್ತಿಯಾ ಅಂತ. ಏನೇಳಲಿ?!

    ಅಂದು ನನಗೆ ಆಶ್ಚರ್ಯ ಆದದ್ದಂತೂ ನಿಜ. ಅವನೇಳಿದ ಹಾಗೆ ನನ್ನನ್ನು ತಾಯಿಯ ಗರ್ಭಕ್ಕೆ,ಹಿಂದಿನ ಜನ್ಮಕ್ಕೆ ಕಳುಹಿಸಲು ಅವನಿಗೆ ಆಗದಿದ್ದರೂ ನನ್ನಿಂದ ಮುಚ್ಚಿದ ಕಣ್ಣುಗಳಿಂದ,ಕತ್ತಲೆಯಲ್ಲಿ ಕೀಲಿ ತರಿಸಿದ್ದಂತೂ ಸತ್ಯ. ಎಂತಹಾ ಮಹಾನ್ ವಿದ್ಯೆ ಅಲ್ಲವಾ ಅನ್ನಿಸಿತು. ಯಾಕೆ ನಮಗೆಲ್ಲ ಇಂತಹ ವಿದ್ಯೆಗಳನ್ನು ಕಲಿಸದೆ ಅವರು ದಾಳಿ ಮಾಡಿದರು,ಇವರು ಇದನ್ನು ಒಡೆದುಹಾಕಿದರು,ಇವರು ಇವರನ್ನು ಮುಟ್ಟಿಸಿಕೊಳ್ಳಲಿಲ್ಲ ಎನ್ನುವಂತಹ ಕೆಲಸಕ್ಕೆ ಬಾರದ ವಿದ್ಯೆ ಕಲಿಸುತ್ತಿದ್ದಾರೆ ಅಂತ ಅನ್ನಿಸಿತು. ಅವತ್ತು ಎಲ್ಲಾ ಆದಾಗ ಆ ಕೇರಳಿಗ ಹೇಳಿದ… You are very strong ಅಂತ. ಅದು ನನ್ನಲ್ಲಿ ಎಂತಹ ಆತ್ಮವಿಶ್ವಾಸಕ್ಕೆ ಕಾರಣ ಆಯ್ತು ಎಂದ್ರೆ ಅಂತಹ ಖುಷಿ ನಾನು ಡಿಗ್ರಿಯನ್ನು Distinction ನಲ್ಲಿ ಪಾಸಾದಾಗಲೂ ಪಡಲಿಲ್ಲ!

    ನಾನು ಚಿಕ್ಕವನಿದ್ದಾಗ ಗೋಲಿ ಆಟದಲ್ಲಿ ಮುಂದು. ಊರವರ ಗೋಲಿಗಳನ್ನು ಗೆದ್ದು ನಿಕ್ಕರ್ರಿನ ಜೇಬಿಗೆ ಹಾಕುತ್ತಿದ್ದರೆ, ಜೇಬುಗಳು ಹರಿದು ಹೋಗುತ್ತಿದ್ದವು. ಸುಮಾರು ಅಡಿಗಳ ದೂರದಲ್ಲಿ ಇರುತ್ತಿದ್ದ ಒಂದು ಗೋಲಿಯನ್ನು, ಒಂದು ರೀತಿಯ ನೋಟದಲ್ಲಿ ನೋಡಿ,ಕೈ ಹಸನಾಗಿಸಿ,ಬೆರಳುಗಳಿಂದ ಗೋಲಿಯನ್ನು ತಿರುಗಿಸುತ್ತಾ,ಮಧ್ಯದ ಬೆರಳನ್ನು ನೆಟ್ಟಗೆ ಮಾಡಿ,ತುದಿಯಲ್ಲಿ ಗೋಲಿ ಇಟ್ಟು, ರಭಸವಾಗಿ ತಳ್ಳಿದ ಗೋಲಿ,ಸರಿಯಾಗಿ ಗುರಿ ಇಟ್ಟ ಗೋಲಿಗೆ ತಾಕುತ್ತಿದ್ದನ್ನು ಊಹಿಸಿಕೊಂಡೇ ಎಷ್ಟೋ ಬಾರಿ ಆಶ್ಚರ್ಯ ಹೊಂದಿದ್ದೇನೆ. ಆ ಕ್ಷಣ ಕಾಲ ಕೇಂದ್ರಿತವಾಗುವ ನಮ್ಮ ನೋಟ,ನಮ್ಮಲ್ಲಿರುವ ಗೋಲಿಗೂ, ಅಡಿಗಳ ಅಂತರದಲ್ಲಿರುವ ಗೋಲಿಗೂ ಸಂಪರ್ಕ ಕಲ್ಪಿಸಲು ಸಾಧ್ಯವಾಗುವುದಾದರೆ, ನಮ್ಮ ಮನಸ್ಸಿಗೂ ಒಂದು ಶಕ್ತಿ ಅಂತ ಇರುವುದು ಸಾಧ್ಯವಲ್ಲವೇ? ಇದೇ ಬಿಲ್ವಿದ್ದೆಯಲ್ಲೂ ಉಪಯೋಗವಾಗಿತ್ತಾ?? ಗೊತ್ತಿಲ್ಲ. ಇಂತಹ ಮಹಾನ್ ವಿದ್ಯೆಗಳ ಅರಿವನ್ನು ಹೊಂದಿದ್ದ ಒಂದು ಪೀಳಿಗೆ ಇಲ್ಲಿ ಸಾವಿರಾರು ವರ್ಷಗಳ ಹಿಂದೆ ಇತ್ತು ಅಂತ ನೆನೆಸಿ ಕೊಂಡರೆ ಯಾಕೋ ಡಾರ್ವಿನ್ ನ ವಿಕಾಸ ವಾದದ ಬಗ್ಗೆ ಒಂದು ಕಡೆ ಅನುಮಾನ ಬರುತ್ತದೆ. ಯಾಕೆಂದರೆ ಅವನ ಪ್ರಕಾರ ಮನಸ್ಸು,ಬುದ್ಧಿ ಶಕ್ತಿ ಈಗಿನ ಪೀಳಿಗೆಯಲ್ಲಿ ಅವರಿಗಿಂತ ಹಲವು ಪಟ್ಟು ಹೆಚ್ಚಿರಬೇಕಿತ್ತು. ಆದರೆ ಹಾಗಾಗಿಲ್ಲ.

    ಆತ್ಮಹತ್ಯೆ ಎನ್ನುವುದು ನಮ್ಮ ಮಹಾಕಾವ್ಯಗಳಲ್ಲಾಗಲಿ,ಪುರಾಣ ಗಳಲ್ಲಾಗಲೀ ಎಲ್ಲಿಯೂ ಇಲ್ಲ. ಆದರೆ ಈಗ ಪ್ರತಿ ವಯಸ್ಕರಲ್ಲೂ ಸಾಮಾನ್ಯವಾಗಿದೆ. ಇದಕ್ಕೆ ಕಾರಣ ದುರ್ಬಲ ಮನಸ್ಸಲ್ಲವೇ? ಅಥವಾ ವಿರುದ್ಧವಾಗಿ ಆಂಗ್ಲರು ಹಾಕಿಕೊಟ್ಟ ವಿದ್ಯೆಯ ಮಾರ್ಗದಲ್ಲಿ ನಡೆದು, ತಲೆತಲಾಂತರದಿಂದ ನಮ್ಮಲ್ಲಿ ಅಂತರ್ಗತವಾಗಿ ಬಂದಂತಹ ಶಕ್ತಿಯನ್ನು ಉಪಯೋಗಿಸಿಕೊಳ್ಳದೇ ನಶಿಸಿ ಹೋಯ್ತಾ? ಗೊತ್ತಿಲ್ಲ….ಅಂತೂ ಎಲ್ಲೋ ಎಡವಟ್ಟು ಆಗಿದೆ. ಯಾರನ್ನೋ,ಯಾವುದನ್ನೋ ದೂಷಿಸಲು,ದ್ವೇಷಿಸಲು ಹೋಗಿ,ಮೂರ್ಖರಾದೆವಾ?… ಹಿತ್ತಲ ಗಿಡ ಮದ್ದಲ್ಲ ಎನ್ನುವುದನ್ನು ಅಕ್ಷರಶಃ ಪಾಲಿಸಿಬಿಟ್ಟೆವಾ?

    64 ವಿದ್ಯೆಗಳು

    1.ವೇದ 2. ವೇದಾಂಗ 3.ಇತಿಹಾಸ 4.ಆಗಮ 5.ನ್ಯಾಯ 6.ಕಾವ್ಯ 7.ಅಲಂಕಾರ 8.ನಾಟಕ 9. ಗಾನ 10. ಕವಿತ್ವ 11.ಕಾಮಶಾಸ್ತ್ರ 12.ದೂತನೈಪುಣ್ಯ 13.ದೇಶಭಾಷಾಜ್ಞಾನ 14.ಲಿಪಿಕರ್ಮ 15..ವಾಚನ 16.ಸಮಸ್ತಾವಧಾನ 17.ಸ್ವರಪರೀಕ್ಷಾ 18.ಶಾಸ್ತ್ರಪರೀಕ್ಷಾ 19.ಶಕುನಪರೀಕ್ಷಾ 20.ಸಾಮುದ್ರಿಕಪರೀಕ್ಷಾ 21.ರತ್ನಪರೀಕ್ಷಾ 22. ಸ್ವರ್ಣಪರೀಕ್ಷಾ 23. ಗಜಲಕ್ಷಣ 24.ಅಶ್ವಲಕ್ಷಣ 25. ಮಲ್ಲವಿದ್ಯಾ 26. ಪಾಕಕರ್ಮ 27. ದೋಹಳ 28.ಗಂಧವಾದ 29. ಧಾತುವಾದ 30.ಖನಿವಾದ 31. ರಸವಾದ 32.ಅಗ್ನಿಸ್ತಂಭ 33. ಜಲಸ್ತಂಭ 34. ವಾಯುಸ್ತಂಭ 35. ಖಡ್ಗಸ್ತಂಭ 36.ವಶ್ಯಾ 37. ಆಕರ್ಷಣ 38. ಮೋಹನ 39.ವಿದ್ವೇಷಣ 40.ಉಚ್ಛಾಟನ 41. ಮಾರಣ 42. ಕಾಲವಂಚನ 43. ವಾಣಿಜ್ಯ 44.ಪಶುಪಾಲನ 45. ಕೃಷಿ 46.ಸಮ ಶರ್ಮ 47. ಲಾವುಕಯುದ್ಧ 48. ಮೃಗಯಾ 49.ಪುತಿಕೌಶಲ 50. ದೃಶ್ಯಶರಣ 51. ದ್ಯೂತಕರಣಿ 52.ಚಿತ್ರಲೋಹ 53. ಚೌರ್ಯ 54. ಔಷಧಸಿದ್ಧಿ55. ಮಂತ್ರಸಿದ್ಧಿ56. ಸ್ವರವಂಚನಾ 57.ದೃಷ್ಟಿವಂಚನಾ 58. ಅಂಜನ 59. ಜಲಪ್ಲವನ 60. ವಾಕ್ ಸಿದ್ಧಿ 61.ಘಟಿಕಾಸಿದ್ಧಿ62.ಪಾದುಕಾಸಿದ್ಧಿ 63. ಇಂದ್ರಜಾಲ 64. ಮಹೇಂದ್ರಜಾಲ

    Photo by Pablo Heimplatz on Unsplash

    ಹಳೆ ಹುಲಿಗಳು ಮತ್ತು ಹೊಸಬರು: ಜರ್ಜರಿತವಾಗುತ್ತಿರುವ ಕಾಂಗ್ರೆಸ್

    ಕವಿ ಗೋಪಾಲಕೃಷ್ಣ ಅಡಿಗರ ಕವನದ ಸಾಲೊಂದಿದೆ. ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಗಸು ಎಂಬುದು ಅದು. ಇದು ರಾಜಕೀಯಕ್ಕೂ ಅನ್ವಯವಾಗುತ್ತದೆ. ಅನುಭವ ಹೊಂದಿದ ನಾಯಕರು ಮತ್ತು ಹೊಸ ಚಿಂತನೆ ಹೊಂದಿರುವ ಯುವ ಪೀಳಿಗೆ ಎರಡೂ ಕಲೆತರೆ ಮಾತ್ರ ರಾಜಕೀಯ ಪಕ್ಷವೊಂದು ಉನ್ನತಿಯನ್ನು ಉಳಿಸಿಕೊಳ್ಳಲು ಸಾಧ್ಯ ಎಂಬುದು ಇದರ ತಾತ್ಪರ್ಯ. ಆದರೆ ಶತಮಾನಗಳ ಇತಿಹಾಸದ ಹೆಗ್ಗಳಿಕೆ ಹೊಂದಿದ್ದೇವೆ ಎಂದು ಹೆಗಲು ತಟ್ಟಿಕೊಳ್ಳುತ್ತಲೇ ಸಾಗುತ್ತಿರುವ ಕಾಂಗ್ರೆಸ್ ಗೆ ಇದು ಪಥ್ಯವಾಗುತ್ತಿಲ್ಲ ಎಂಬುದು ಸ್ಪಷ್ಟವಾಗಿ ತಿಳಿದು ಬರುತ್ತದೆ. ಅಲ್ಲಿರುವುದು ಎರಡೇ ವಿಭಾಗ. ಒಂದು ಗಾಂಧಿ ಕುಟುಂಬ, ಇನ್ನೊಂದು ಹಿರಿಯ ನಾಗರಿಕರ ವಿಭಾಗ !

    ಸೋನಿಯಾ ಗಾಂಧೀ ಅವರು ಪಕ್ಷದ ಅಧ್ಯಕ್ಷೆಯಾಗಿ ಮತ್ತೆ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಹಾಜರಿದ್ದ ಕಾಂಗ್ರೆಸ್ ನಾಯಕರನ್ನು ಗಮನಿಸಿ. ಮೋತಿಲಾಲ್ ವೋರಾ (91) ರಾಹುಲ್ ಗಾಂಧೀ (49) ಮನಮೋಹನ ಸಿಂಗ್(86) ಎ ಕೆ ಅಂಟೋನಿ (78) ಆನಂದ್ ಶರ್ಮಾ (69) ಕಪಿಲ್ ಸಿಬಲ್ (71) ಭೂಪೇಂದ್ರ ಹೂಡಾ (71) ಮೊಹಿಸಿನ ಕಿದ್ವಾಯಿ (87) ಜಗದೀಶ್ ಟೈಟ್ಲರ್ (75) ಸಲ್ಮಾನ್ ಖುರ್ಷಿದ್ (77) ಗುಲಾಮ್ ನಭೀ ಆಜಾದ್ (70) ಕೆ. ಸಿ ವೇಣುಗೋಪಾಲ್ (56) ರಾಹುಲ್ ಗಾಂಧೀ ಮತ್ತು ವೇಣುಗೋಪಾಲ್ ಹೊರತು ಪಡಿಸಿದರೆ ಉಳಿದವರೆಲ್ಲರೂ ಹಿರಿಯ ನಾಗರಿಕರು.ಈಗಿನ ಕಾಂಗ್ರೆಸ್ ಪಕ್ಷದ ನಾಯಕರ ವಯಸ್ಸು ಸರಾಸರಿ 70.7

    ಇದರಲ್ಲಿ ಅನೇಕರಿಗೆ ಅನುಭವದಿಂದ ರಾಜಕೀಯ ಚಾಣಕ್ಯತನ ರೂಢಿಸಿಕೊಂಡಿದ್ದರಿಂದ ಸಿಕ್ಕ ಸ್ಥಾನ ಎನ್ನುವ ಬದಲು ಗಾಂಧಿ ಕುಟುಂಬದ ಆಪ್ತ ವರ್ಗಕ್ಕೆ ಸೇರಿದವರು ಎಂಬ ಮಾನದಂಡ ಮಾತ್ರ ಅನ್ವಯವಾಗುತ್ತದೆ. ಇದರಿಂದ ಬೆರಳೆಣಿಕೆಯಷ್ಟು ಯುವ ನಾಯಕರು ಹುಟ್ಟಿಕೊಂಡರೂ, ಹಳೆ ಹುಲಿಗಳು ಮತ್ತು ಹೊಸಬರ ನಡುವಿನ ತಿಕ್ಕಾಟದಿಂದ ಕಾಂಗ್ರೆಸ್ ಜರ್ಜರಿತವಾಗಿದೆ. ಅತ್ತ ಬಿಜೆಪಿ ಹೊಸ ನಾಯಕರನ್ನು ಹುಟ್ಟು ಹಾಕುತ್ತಲೇ ಇದೆ.

    ಹೀಗಾಗಿ ದಶಕದ ಹಿಂದೆಯಷ್ಟು 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಈ ಈಗಿನ ಪರಿಸ್ಥಿತಿ ಇರುವ ರಾಜ್ಯಗಳನ್ನು ಉಳಿಸಿಕೊಂಡರೆ ಸಾಕು ಎನ್ನುವಂತಾಗಿದೆ.

    ರಾಜಸ್ತಾನದ ಬೆಳವಣಿಗೆ

    ಸಂಭ್ರಮದ ಕ್ಷಣಗಳ ಸಂಗ್ರಹ ಚಿತ್ರ

    ರಾಜಸ್ತಾನವನ್ನೇ ಬೆಳವಣಿಗೆಯನ್ನೇ ನೋಡಿ ಯುವ ನಾಯಕ ಸಚಿನ್ ಪೈಲೆಟ್ ಸಿಡಿದೆದಿದ್ದಾರೆ. ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಹೊರಗೆ ತಳ್ಳಲಾಗಿದೆ.ಇವರಿಬ್ಬರೂ ಹೆಚ್ಚಿನ ಅಧಿಕಾರ ಮತ್ತು ಅಧಿಕ ಪ್ರಾತಿನಿಧಿತ್ವ ಕೇಳಿದ್ದು, ಅದಕ್ಕೆ ಹಳೆ ತಲೆಗಳ ಗಡಣ ನಿರಾಕರಿಸಿದ್ದೇ ಕಾರಣ. ಸಚಿನ್ ಪೈಲಟ್ ರಾಜಸ್ತಾನ ಮುಖ್ಯಮಂತ್ರಿಯಾಗುವ ಮಹತ್ವಾಕಾಂಕ್ಷೆ ಹೊಂದಿದ್ದರು. ಅದಕ್ಕಾಗಿ ಕಳೆದ ಚುನಾವಣೆಯಲ್ಲಿ ಹಗಲಿರುಳು ದುಡಿದಿದ್ದರು. ಆದರೆ ಮುಖ್ಯಮಂತ್ರಿ ಪಟ್ಟ ಕೈತಪ್ಪಿ ಅಶೋಕ್ ಗೆಹ್ಲೋಟ್ ಕೈಸೇರಿತು.

    ಇದು ಇಬ್ಬರ ಕಥೆ ಮಾತ್ರವಲ್ಲ. ಕಾಂಗ್ರೆಸ್ ನ ಹಳೆ ಹುಲಿಗಳು ಸಾಕಷ್ಟು ಯುವ ನಾಯಕರನ್ನು ವ್ಯವಸ್ಥಿತವಾಗಿ ಬದಿಗೆ ತುಳಿಯುತ್ತಲೇ ಬಂದಿದೆ. ಮಿಲಿಂದ್ ದಿಯೋರಾ, ಜತಿನ್ ಪ್ರಸಾದ್ ಮೊದಲಾದವರು ರಾಜಕೀಯ ಭವಿಷ್ಯವನ್ನೇ ಕಳೆದುಕೊಳ್ಳುವಂತೆ ಮಾಡಿದೆ. ಪಕ್ಷದಲ್ಲಿ ಆಂತರಿಕ ಚುನಾವಣೆ ನಡೆಸಿ ಎಂಬ ಹಿರಿಯ ನಾಯಕ ಶಶಿ ಥರೂರ್ ಮಾತಿಗೆ ಮನ್ನಣೆ ಸಿಗಲಿಲ್ಲ.

    ಕನಿಷ್ಠ ನನಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಿ ಎಂಬ ಸಿಂಧಿಯಾ ಮಾತಿಗೆ ಮಣೆ ಹಾಕದ ಕಾಂಗ್ರೆಸ್ ನಾಯಕರು, ಪೈಲಟ್, ಸಿಂಧಿಯಾಗೆ ರಾಜಕೀಯ ಕುಟುಂಬದ ಹಿನ್ನೆಲೆಯಿದ್ದರೂ, ಯುವ ನಾಯಕರಾಗಿದ್ದರು ಎಂಬುದು ಸುಳ್ಳಲ್ಲ.ಈ ಶಕ್ತಿಗಳಿಗೆ ಬ್ಯಾಕ್ ರೂಮ್ ಮ್ಯಾನೇಜರ್ಸ್ ಎಂದು ಕರೆಯುತ್ತಾರೆ. ಅವರು ಎದುರಿಗೆ ಕಾಣುವುದೇ ಇಲ್ಲ. ಬದಲಾಗಿ ಹೈಕಮಾಂಡ್ ಕಿವಿ ಚುಚ್ಚಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ.

    ಕರ್ನಾಟಕದಲ್ಲಿ

    ಇದಕ್ಕೆ ಕರ್ನಾಟಕವೂ ಹೊರತಲ್ಲ. ರಾಜ್ಯ ಸಭೆಗೆ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಹೈಕಮಾಂಡ್ ನಿರ್ಧಾರವಾಗಿತ್ತು ಎಂಬುದರಿಂದ ಆರಂಭಿಸಿದರೂ, ಒಂದಿಷ್ಟು ಹಿಂತಿರುಗಿ ನೋಡಿದರೆ, ರೆಸಾರ್ಟ್ ರಾಜಕೀಯದ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದ್ದ ಡಿ. ಕೆ. ಶಿವಕುಮಾರ್ ಅವರು ಸಿದ್ಧರಾಮಯ್ಯ ಸರಕಾರದಲ್ಲಿ ಸಚಿವ ಸ್ಥಾನ ಪಡೆಯಲು ಹರ ಸಾಹಸ ಪಡೆಯಬೇಕಾಯಿತು. ಹಾಗೆಂದು ಭ್ರಷ್ಟಾಚಾರ ಆರೋಪ ಹೊತ್ತ ಇತರರೂ ಸಚಿವರಾಗಿರಲಿಲ್ಲವೇ ?

    ಇನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೂ ಅಷ್ಟೇ. ಖರ್ಗೆ, ಮುನಿಯಪ್ಪ, ಶ್ಯಾಮನೂರು ಶಿವಶಂಕರಪ್ಪ ಮೊದಲಾದವರೇ ಮುಂಚೂಣಿಯಲ್ಲಿ ಟವಲ್ ಹಾಸಿ ಕುಳಿತಿದ್ದರು. ಕೊನೆಗೆ ಅಳೆದೂ ಸುರಿದೂ ಡಿಕೆಶಿಗೆ ಅಧ್ಯಕ್ಷ ಸ್ಥಾನವೇನೋ ಸಿಕ್ಕಿತು.ಅವರಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಹಿರಿಯರು ಬಿಡುವರೆ ಎಂಬುದು ಈಗಿನ ಪ್ರಶ್ನೆ.

    ಹೀಗೆ ಕಾಂಗ್ರೆಸ್ ತನ್ನ ಹಳೆಯ ಚಿಂತನೆಗಳಿಗೆ ಈಗಿನ ಸನ್ನಿವೇಶಕ್ಕೆ ಅನುಗುಣವಾಗಿ ಹೊಸ ರೂಪ ನೀಡಿ, ಹೊಸ ಯುವ ನಾಯಕರಿಗೆ ಅವಕಾಶ ನೀಡದಿದ್ದರೆ ಮುಂದಿನ ದಿನಗಳಲ್ಲಿ ಭೀಕರ ಬರಗಾಲವನ್ನೇ ಎದುರಿಸುವುದರಲ್ಲಿ ಸಂದೇಹವಿಲ್ಲ. ಮುಖ್ಯವಾಗಿ ಹೊಸ ಮುಖಗಳ ಪರಿಚಯವಾಗದಿದ್ದರೆ, ಹಳೆ ಮುಖಗಳನ್ನು ನೋಡಿ ನೋಡಿ ರೋಸಿ ಹೋದ ಜನರು ಇನ್ನಷ್ಟು ದೊಡ್ಡ ಪಾಠ ಕಲಿಸುವುದರಲ್ಲಿ ಸಂಶಯವಿಲ್ಲ.

    ಲಾಕ್‌ಡೌನ್‌ ಸಮಯದಲ್ಲಿ ಜನರ ಜತೆಗಿದ್ದಿದ್ದು ಸಿನಿಮಾ ಮತ್ತು ಮನರಂಜನೆ ಮಾತ್ರ

    ಜಗತ್ತು ಊಹಿಸದ ಒಂದು ಖಾಯಿಲೆ ಎಲ್ಲರನ್ನು ಮನೆಯೊಳಗೆ ಸೇರಿಸಿದೆ, ಎಲ್ಲ ಉದ್ಯಮಗಳನ್ನು ಮುಚ್ಚಿ ಮನೆಯಲ್ಲಿಯೇ ಇರುವಂತೆ ಸರ್ಕಾರವೇ ಸೂಚಿಸುತ್ತಿದೆ.

    ಕೊರೊನಾ ಎಂಬ ಮೂರಕ್ಷರದ ಖಾಯಿಲೆಯಿಂದ ನಷ್ಟಕ್ಕೆ ಒಳಗಾದ ಉದ್ಯಮಗಳಲ್ಲಿ ಸಿನಿಮಾ ಕೂಡಾ ಒಂದು. ಬರೀ ಕನ್ನಡ ಚಿತ್ರೋದ್ಯಮವೇ ವರ್ಷಕ್ಕೆ ಸಾವಿರಾರು ಕೋಟಿ ಟರ್ನ್ ಓವರ್‌ ಮಾಡಿದ್ದಿದೆ. ಅಂತಹ ಉದ್ಯಮಕ್ಕೆ ಕೊರೊನಾ ಕೊಟ್ಟ ಹೊಡೆತ ಇದೆಯಲ್ಲ ಅದನ್ನು ಯಾರಿಂದಲೂ ಊಹಿಸಲಾಗಲಿಲ್ಲ. ಯಾವಾಗಲೂ ಜನರಿಂದ ಗಿಜಿಗುಡುತ್ತಿದ್ದ ರಾಜ್ಯದ ನೂರಾರು ಥಿಯೇಟರ್‌ಗಳು ಕಳೆದ ಮೂರು ತಿಂಗಳಿನಿಂದ ಒಂದು ನರಪಿಳ್ಳೆಯು ಇಲ್ಲದೆ ಬಣಗುಡುತ್ತಿವೆ. ಜನ ಚಿತ್ರಮಂದಿರಕ್ಕೆ ಯಾವಾಗ ಬರುತ್ತಾರೆ ಎಂದು ಚಿತ್ರಮಂದಿರದ ಮಾಲೀಕರು ಕಾಯುವಂತಾಗಿದೆ.

    ಜನ ಮನೆಯಲ್ಲಿ ಸೀರಿಯಲ್‌ ನೋಡಣ ಎಂದರೆ ಚಿತ್ರೀಕರಣವಿಲ್ಲದೇ ಎಲ್ಲ ಚಾನೆಲ್‌ಗಳಲ್ಲೂ ವರ್ಷಗಳ ಹಿಂದೆ ಪ್ರಸಾರವಾದ ಎಪಿಸೋಡ್‌ಗಳೇ ಬರುತ್ತಿವೆ. ಇಂತಹ ಸಮಯದಲ್ಲಿ ಜನರನ್ನು ರಂಜಿಸಿದ್ದು ಮತ್ತು ಅವರ ಜತೆಯಾಗಿದ್ದು ಒಟಿಟಿ ಪ್ಲಾಟ್‌ಫಾರ್ಮ್‌ಗಳು ಎಂದರೆ ತಪ್ಪಾಗುವುದಿಲ್ಲ.

    ಈ ಲಾಕ್‌ಡೌನ್‌ ಸಮಯವನ್ನು ಬಹಳ ಅದ್ಭುತವಾಗಿ ಸದುಪಯೋಗ ಪಡಿಸಿಕೊಂಡ ಬೇರೆ ಬೇರೆ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಚಿತ್ರಮಂದಿರಕ್ಕಿಂತಲೂ ಮುನ್ನವೇ ಕೆಲ ಸಿನಿಮಾಗಳನ್ನು ಜನರಿಗೆ ತೋರಿಸಿದವು. ತಮಿಳಿನ ‘ಪೊಣ್‌ ಮಗಳ್‌ ವಂದಾಳ್‌’ ಹಿಂದಿಯ ‘ಗುಲಾಬೋ ಸಿತಾಬೋ’ ಹೀಗೆ ಎಲ್ಲ ಭಾಷೆಗಳಲ್ಲಿಯೂ ಅಮೇಜಾನ್‌ ಸೇರಿದಂತೆ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸಿನಿಮಾಗಳನ್ನು ರಿಲೀಸ್‌ ಮಾಡಲಾಯಿತು. ಈ ವಾರ ಅಂದರೆ ಶುಕ್ರವಾರ ಆ ಸಾಲಿಗೆ ಕನ್ನಡ ಸಿನಿಮಾ ‘ಲಾ’ ಕೂಡಾ ಸೇರಿದೆ.

    70 ವರ್ಷಕ್ಕಿಂತಲೂ ಹೆಚ್ಚಿನ ಇತಿಹಾಸ ಇರುವ ಕನ್ನಡ ಚಿತ್ರರಂಗದಲ್ಲಿ ಸಿನಿಮಾವೊಂದು ಚಿತ್ರಮಂದಿರದಲ್ಲಿ ರಿಲೀಸ್‌ ಆಗದೇ ಇದೇ ಮೊದಲ ಬಾರಿಗೆ  ಒಟಿಟಿಯಂತಹ ಪ್ಲಾಟ್ ಫಾರ್ಮ್‌ನಲ್ಲಿ ಚಿತ್ರ ರಿಲೀಸ್‌ ಆಗಿದೆ. ಈ ಬಗ್ಗೆ ಏನೇ ಅಭಿಪ್ರಾಯಗಳಿದ್ದರೂ, ‘ಲಾ’ ಚಿತ್ರ ನೋಡಿದಾಗ ಈ ಚಿತ್ರ ಇದು ಚಿತ್ರಮಂದಿರಕ್ಕಿಂತಲೂ ಒಟಿಟಿಗೆ ಸೂಕ್ತ ಎಂಬ ಅಭಿಪ್ರಾಯ ಬರುತ್ತದೆ.

    ನಂದಿನಿ ಎಂಬ ಲಾ ಓದಿದ ಹುಡುಗಿ ತನ್ನ ಮೇಲೆ ಗ್ಯಾಂಗ್‌ ರೇಪ್‌ ಆಗಿದೆ ಎಂದು ಹೋರಾಡುವ ಕಥೆ ಇದರಲ್ಲಿದೆ. ವಿಶೇಷ ಎಂದರೆ ಗ್ಯಾಂಗ್‌ ರೇಪ್‌ ಬಗ್ಗೆ ಸಾಕಷ್ಟು ಸಿನಿಮಾಗಳು ತೆರೆ ಮೇಲೆ ಬಂದಿವೆ. ಅಂತಹ ಸಬ್ಜೆಕ್ಟ್‌ ತೆಗೆದುಕೊಂಡಾಗ ಬಹಳ ಸೂಕ್ಷ್ಮವಾಗಿ ಸಿನಿಮಾಗಳನ್ನು ಮಾಡಬೇಕು. ನಿರ್ದೇಶಕ ರಘು ಸಮರ್ಥ್‌ ಕೂಡಾ ಕೊಂಚ ಸೂಕ್ಷ್ಮವಾಗಿಯೇ ಸಿನಿಮಾವನ್ನು ಕಟ್ಟಿಕೊಟ್ಟಿದ್ದರಾದರೂ, ನಿಧಾನಗತಿಯ ಚಿತ್ರಕಥೆಯಿಂದ ಅಲ್ಲಲ್ಲಿ ಬೋರ್‌ ಎನಿಸುತ್ತದೆ. ಈ ಸಿನಿಮಾವನ್ನು ನೋಡುತ್ತಿದ್ದರೆ ತೆಲುಗಿನ ‘ಎವರು’ ಚಿತ್ರದ ರೀತಿಯೇ ಇದೆ ಎನಿಸುತ್ತದೆ. ವಿಶೇಷ ಎಂದರೆ ಈ ಸಿನಿಮಾ ಆರಂಭವಾಗಿದ್ದು ಎವರು ಚಿತ್ರಕ್ಕಿಂತಲೂ ಮುನ್ನ ಹಾಗಾಗಿ ಇದನ್ನು ಅದರ ರಿಮೇಕ್‌ ಅಥವಾ ಕಾಪಿ ಎನ್ನಲಾಗುವುದಿಲ್ಲ.

    ಆದರೆ ಎವರು ನೋಡಿದವರಿಗೆ ಆಗಾಗ್ಗೆ ಅದೇ ಸಿನಿಮಾ ನೆನಪಿಗೆ ಬಂದರೆ ಅದು ಅವರ ತಪ್ಪಲ್ಲ. ರಾಗಿಣಿ ಚಂದ್ರನ್ ಇದು ತಮ್ಮ ಚೊಚ್ಚಲ ಸಿನಿಮಾ ಎಂಬುದು ನೆನಪಿಗೆ ಬರದಂತೆ ನಟಿಸಿದ್ದಾರೆ. ಇಡೀ ಚಿತ್ರ ಆವರಸಿರುವುದು ಅವರೇ.

    ವರ್ಷದ ಸಬ್‌ಸ್ಕ್ರಿಪ್ಷನ್‌ ತೆಗೆದುಕೊಂಡು ಮನೆಯಲ್ಲಿಯೇ ಕುಳಿತು ಸಿನಿಮಾ ನೋಡಬಯಸುವವರಿಗೆ ಈ ರೀತಿಯ ಸಣ್ಣ ಸಣ್ಣ ಸಿನಿಮಾಗಳು ಇಷ್ಟವಾಗುತ್ತದೆ. ಇದೇ ರೀತಿ ಮುಂದಿನ ವಾರ ಪುನೀತ್‌ ರಾಜ್‌ಕುಮಾರ್‌ ಬ್ಯಾನರ್‌ನದ್ದೇ ಮತ್ತೊಂದು ಚಿತ್ರ ‘ಫ್ರೆಂಚ್‌ ಬಿರಿಯಾನಿ’ ಕೂಡಾ ರಿಲೀಸ್‌ ಆಗಲಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಜನರಿಗೆ ಜತೆಯಾಗಿದ್ದು ಮಾತ್ರ ಮನರಂಜನೆ ಮತ್ತು ಸಿನಿಮಾಗಳು ಮಾತ್ರ ಎಂಬುದು ಒಟಿಟಿಯಲ್ಲಿ ರಿಲೀಸ್‌ ಆಗುತ್ತಿರುವ ಸಿನಿಮಾಗಳನ್ನು ನೋಡಿದರೆ ತಿಳಿಯುತ್ತದೆ. ಇಂತಹ ಪರಿಸ್ಥಿತಿಯನ್ನು ಸರಿಯಾಗಿ ಬಳಸಿಕೊಂಡ ಒಟಿಟಿ ಪ್ಲಾಟ್‌ಫಾರ್ಮ್‌ಗಳ ನಡೆಯನ್ನು ನಮ್ಮ ಕಡೆ ‘ಗಾಳಿ ಯಾವ ಕಡೆ ಬರುತ್ತದೋ ಆ ಕಡೆ ತೂರಿಕೊಳ್ಳಬೇಕು’ ಎಂದು ಕರೆಯುತ್ತಾರೆ.

    ಈ ಕೆಳಗಿನ ಲಿಂಕ್ ಮೂಲಕ ಅಮೆಜಾನ್ ಪ್ರೈಮ್ ಸದಸ್ಯರಾಗಬಹುದು.

    ಆನ್‌ಲೈನ್‌ಶಿಕ್ಷಣ: ಒಪ್ಪಿಕೊಳ್ಳೋಣ ಅಪ್ಪಿಕೊಳ್ಳುವುದು ಬೇಡ

    ಶಾಲೆಗೆ ಹೋಗುವ ಪುಟ್ಟ ಮಕ್ಕಳನ್ನೊಮ್ಮೆ ಗಮನಿಸಿ. ಅವುಗಳ ಪುಟಾಣಿ ಪ್ರಪಂಚದಲ್ಲಿ ಹೆತ್ತವರ ನಂತರದ ಸ್ಥಾನ ಇರುವುದು ಟೀಚರ್‌ಗೆ. ನೀವೇನಾದರೂ ಟೀಚರ್‌ಬಗ್ಗೆ ಹಗುರವಾಗಿ ಮಾತಾನಾಡಿದಿರೋ ಮಗುವಿನ ಪಾಲಿಗೆ ನೀವು ವಿಲನ್‌ಆಗುವುದು ಗ್ಯಾರಂಟಿ! ಇದಕ್ಕೆ ಕಾರಣ ತುಂಬಾ ಸರಳ, ಕಲಿಕೆ ಎಂಬುದು ಒಂದು ಯಾಂತ್ರಿಕ ಕ್ರಿಯೆಯಲ್ಲ. ಅದೊಂದು ಭಾವನಾತ್ಮಕ ಸಂಗತಿ.

    ಈ ಅನುಬಂಧ ನಿಲ್ಲುವುದಿಲ್ಲ. ಮಗು ಬೆಳೆದಂತೆ ತನ್ನ ಶಾಲೆಯನ್ನು, ಶಿಕ್ಷಕರನ್ನು ಹೆಚ್ಚಾಗಿ ಹಚ್ಚಿಕೊಂಡುಬಿಡುತ್ತದೆ. ಅವರನ್ನೇ ಮಾದರಿಯಾಗಿಸಿಕೊಂಡುಬಿಡುತ್ತದೆ. ನೋಡಿ ಕಲಿಯುವ ಮಕ್ಕಳ ಮೇಲೆ ಶಿಕ್ಷಕರು ಬೀರುವ ಪರಿಣಾಮ ದೊಡ್ಡ ಮಟ್ಟದಲ್ಲಿರುತ್ತದೆ. ಅದಕ್ಕಾಗಿಯೇ ಅಲ್ಲವೇ ಹೆತ್ತವರು ತಮ್ಮ ಮಗುವಿಗೆ ಒಳ್ಳೆಯ ಶಿಕ್ಷಕರು ಸಿಗಲಿ ಎಂದು ಬೇಡಿಕೊಳ್ಳುವುದು!

    ಇದೇ ಕಾರಣಕ್ಕೆ ನಮ್ಮ ನೆನಪಿನ ಬುತ್ತಿ ತೆರೆದಾಗ ಅಲ್ಲಿ ಶಿಕ್ಷಕರಿಗೊಂದು ಮಹತ್ವದ ಸ್ಥಾನ ಇದ್ದೇ ಇರುತ್ತದೆ. ಶಿಕ್ಷಕರು ಹೇಳುವ-ಬರೆಯುವ ʼGood’ ಎಂಬ ನಾಲ್ಕಕ್ಷರದ ಪದ, ಅವರ ಒಂದು ನಗು, ಅವರು ಬೆನ್ನು ತಟ್ಟುವಾಗ- ಕೆನ್ನೆ ಹಿಂಡುವಾಗ ಆಗುವ ಸಂತೋಷ, ಬೈಗುಳದ ಪರಿಣಾಮ ಎರಡೂ ಅಪರಿಮಿತ. ಹಾಗಾಗಿಯೇ ನಮಗೆ ಅವರು ಕಲಿಸಿದ ಪಾಠಕ್ಕಿಂತಲೂ ಅವರ ಹಾವಭಾವ, ಪಾಠ ಮಾಡುವ ರೀತಿ, ಉಡುಗೆಯೇ ಹೆಚ್ಚು ನೆನಪಿರುತ್ತದೆ. ಇಲ್ಲಿ ಪಾಠಕ್ಕಿಂತಲೂ ಹೆಚ್ಚಿನದೇನೋ ಇದೆ ಎಂದೇ ಅರ್ಥವಲ್ಲವೇ?

    ಶಿಕ್ಷಣ ಸಾಮಾಜಿಕ ಪ್ರಕ್ರಿಯೆಯೂ ಹೌದು. ಮಗುವಿಗೆ ಶಾಲೆಗೆ ಹೋಗುವ ಬಸ್‌, ಅದರ ಡ್ರೈವರ್‌, ಕಂಡಕ್ಟರ್, ಸ್ನೇಹಿತರ ವಲಯ, ಹೊಡೆದವರು, ಸಮಾಧಾನ ಮಾಡಿದವರು ಎಲ್ಲರೂ ಮುಖ್ಯ. ಹೊಸ ಯೂನಿಫಾರ್ಮ್‌ರ್ಮ್‌ರ್ಮ್‌ಧರಿಸುವ, ಹೊಸ ಚಪ್ಪಲಿ ಧರಿಸಿ ಸ್ನೇಹಿತರಿಗೆ ತೋರಿಸುವುದಕ್ಕಿಂತ ಮಿಗಿಲಾದ ಸಂಭ್ರಮ ಅದಕ್ಕಿಲ್ಲ. ಶಾಲೆ, ತರಗತಿ, ಅಲ್ಲಿನ ಬೆಂಚ್‌, ಡೆಸ್ಕ್‌, ಕಾರಿಡಾರ್‌, ನೋಟಿಸ್‌ಬೋರ್ಡ್‌ರ್ಡ್‌ರ್ಡ್‌, ಆಟ-ಪಾಠ ಎಲ್ಲವೂ ಅದರ ನಿತ್ಯ ಜೀವನದ ಅವಿಭಾಜ್ಯ ಅಂಗಗಳು. ಅದು ಪ್ರತಿದಿನವೂ ಸ್ನೇಹಿತರಿಂದ, ಶಿಕ್ಷಕರಿಂದ ಸಾಕಷ್ಟು ಕಲಿಯುತ್ತದೆ. ಅದಕ್ಕೆ ಸಂತೋಷ ಅನುಭವಿಸುವ, ಹಂಚಿಕೊಳ್ಳುವ, ದುಃಖವನ್ನು ನಿರ್ವಹಿಸುವ ಕಲೆ ಸಿದ್ಧಿಸುತ್ತದೆ. ನೆನಪಿರಲಿ ಇದ್ಯಾವುದೂ ಅದರ ಸಿಲೆಬಸ್‌ನಲ್ಲಿರುವುದಿಲ್ಲ!

    ಈ ಪ್ರಕ್ರಿಯೆ ಮಕ್ಕಳು ಕಾಲೇಜು ಮುಗಿಸುವವರೆಗೂ ಮುಂದುವರಿಯುತ್ತದೆ. ಕಾಲೇಜಿನಲ್ಲಿ ತಮ್ಮ ಜೀವನದ ಅಮೂಲ್ಯ ಘಟ್ಟದಲ್ಲಿರುವ ಮಕ್ಕಳು ಹಲವರಿಂದ ಪ್ರೇರಣೆ ಪಡೆಯುತ್ತಾರೆ. ಕೆಲವು ಪ್ರಾಧ್ಯಾಪಕರಿಂದ ಮಕ್ಕಳ ಜೀವನವೇ ಬದಲಾಗುತ್ತದೆ. ಕೆಲವೊಮ್ಮೆ ಸ್ನೇಹಿತರೇ ಮಾರ್ಗದರ್ಶಕರಾಗುತ್ತಾರೆ. ತಂದೆ ತಾಯಿಯ ಬಳಿ ಹೇಳಲಾಗದ್ದನ್ನು ವಿದ್ಯಾರ್ಥಿಗಳು ತಮ್ಮ ಉಪನ್ಯಾಸಕರ, ಸ್ನೇಹಿತರ ಬಳಿ ಹೇಳಿಕೊಳ್ಳುತ್ತಾರೆ, ಪರಿಹಾರ ಪಡೆದುಕೊಳ್ಳುತ್ತಾರೆ. ಹೆತ್ತವರಿಗೆ ತಿಳಿಯದ ವಿದ್ಯಾರ್ಥಿಗಳ ನಡವಳಿಕೆಯನ್ನು ಶಿಕ್ಷಕರು ಗಮನಿಸಿ ತಿದ್ದುತ್ತಾರೆ. ಕಾಲೇಜ್‌ನ ಲೈಬ್ರೆರಿ, ಆಟದ ಮೈದಾನ, ಸಾಂಸ್ಕೃತಿಕ ಚಟುವಟಿಕೆಗಳು, ಚುನಾವಣೆ, ಸಾಹಿತ್ಯ, ಸಂಶೋಧನೆ ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುತ್ತವೆ. ಆನ್‌ಲೈನ್‌ಕ್ಲಾಸ್‌ನಲ್ಲಿ ಇದ್ಯಾವುದೂ ಆಗುವುದಿಲ್ಲ!

    ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಅಧ್ಯಾಪಕರಿಗೂ ಸವಾಲು

    ಉದಾಹರಣೆಗೆ, ಇದು ಕಾಲ್‌ಹೋಗಿ ವೀಡಿಯೋ ಕಾಲ್‌ಬಂದಿರುವ ಕಾಲ. ನೀವು ಆತ್ಮೀಯರೊಂದಿಗೆ ಗಂಟೆಗಟ್ಟಲೆ ವೀಡಿಯೋ ಕಾಲ್‌ನಲ್ಲಿ ಹರಟುತ್ತೀರಿ ಎಂದಿಟ್ಟುಕೊಳ್ಳಿ. ಅದೂ ನಿಮಗಿಷ್ಟವಾದ ಭಾಷೆ, ನಿಮ್ಮದೇ ದಾಟಿ, ದೇಹ ಭಾಷೆ, ಬಳಸಿಕೊಂಡು. ಆದರೂ ನಿಮಗೆ ಅವರನ್ನೊಮ್ಮೆ ಭೇಟಿಯಾಗಿ ಮಾತನಾಡಬೇಕು ಎಂದು ಅನ್ನಿಸದೇ ಇರದು. ಹೀಗಿರುವಾಗ ಸೀಮಿತ ಅವಧಿಯಲ್ಲಿ, ನಿಮ್ಮನ್ನು ನೀವು ನಿಯಂತ್ರಣದಲ್ಲಿಟ್ಟುಕೊಂಡು, ಗಮನ ಕೇಂದ್ರೀಕರಿಸಿಕೊಂಡು ವಿಷಯಗಳನ್ನು ಅರ್ಥಮಾಡಿಕೊಳ್ಳುವುದು ಸಾಹಸದ ಕೆಲಸ. ಇದು ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಅಧ್ಯಾಪಕರಿಗೂ ಸವಾಲು. ಎಂತದ್ದೇ ಅಪ್ಲಿಕೇಶನ್‌ ಬಂದರೂ ಇಲ್ಲಿ ಪರಿಣಾಮಕಾರಿ ಸಂವಹನ ಕಷ್ಟಸಾಧ್ಯ. ಒಂದು ವೇಳೆ ವಿದ್ಯಾರ್ಥಿ ಪಾಠ ಅರ್ಥೈಸಿಕೊಂಡರೂ ನಿಜಾರ್ಥದಲ್ಲಿ ಆತ ಕಳೆದುಕೊಂಡಿರುವುದೇ ಹೆಚ್ಚು.

    ವಿದ್ಯಾರ್ಥಿಗಳ ಜೊತೆ ಆತ್ಮೀಯವಾಗಿ ಮಾತನಾಡಿ ಪಾಠ ಮಾಡುವ ಅಧ್ಯಾಪಕರಿಗೂ ಇದೊಂದು ಒಲ್ಲದ ಪ್ರಕ್ರಿಯೆ. ಎಲ್ಲರನ್ನೂ ಗಮನಿಸುತ್ತಾ, ಪ್ರಶ್ನೆ ಕೇಳುತ್ತಾ, ಬಯ್ಯುತ್ತಾ, ಹೊಗಳುತ್ತಾ, ವಿದ್ಯಾರ್ಥಿಗಳೊಂದಿಗೆ ಬೆರೆಯುವ ಅನುಭವ ಇಲ್ಲಿಲ್ಲ. ಪಾಠದ ಹೊರತಾಗಿ, ತರಗತಿಯ ಹೊರಗೆ ವಿದ್ಯಾರ್ಥಿಗಳ ಜೊತೆ ಆತ್ಮೀಯವಾಗಿ ಮಾತನಾಡುವ, ಸಮಸ್ಯೆಗಳಿಗೆ ಕಿವಿಯಾಗುವ, ಕಿವಿಮಾತು ಹೇಳುವ ಅವಕಾಶ ಇಲ್ಲಿ ಅಷ್ಟಕ್ಕಷ್ಟೇ. ಈಗ ಅಪ್ಲಿಕೇಶನ್‌ಗಳ ಮೂಲಕವೇ ಅಸೈನ್‌ಮೆಂಟ್‌ನೀಡುವ, ಪರೀಕ್ಷೆ ನಡೆಸುವ ವ್ಯವಸ್ಥೆಯಿದ್ದರೂ ಅದು ತರಗತಿ ಪಾಠಕ್ಕೆ ಸಮನಲ್ಲ. ಜೊತೆಗೆ ಆನ್‌ಲೈನ್‌ಕ್ಲಾಸ್‌ನಲ್ಲಿ ತಂತ್ರಜ್ಞಾನದ ದುರುಪಯೋಗವೂ ಸಾಕಷ್ಟು ವರದಿಯಾಗುತ್ತಿದೆ. ಕೋಲ್ಕತ್ತಾದಲ್ಲಿ ವಿದ್ಯಾರ್ಥಿಯೊಬ್ಬ ತಾನೇ ʼಪ್ರಾಂಶುಪಾಲʼ ನಾಗಿ ಶಾಲೆಗೆ ರಜೆ ಘೋಷಿಸಿದ್ದು, 55 ವರ್ಷ ಪ್ರಾಯದ ಹಿರಿಯ ಪ್ರಾಧ್ಯಾಪಕರೊಬ್ಬರನ್ನು ಅವಮಾನಿಸಿ ಕಣ್ಣೀರಿಡುವಂತೆ ಮಾಡಿದ್ದು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸುದ್ದಿಯಾಗಿದೆ.

    ಹಾಗಾದರೆ ಶಿಕ್ಷಣದಲ್ಲಿ ಬದಲಾವಣೆಯೇ ಬೇಡವೇ ಎಂದರೆ ಬೇಕು. ಆಶ್ರಮದಿಂದ ಆನ್‌ಲೈನ್‌ಶಿಕ್ಷಣದವರೆಗೆ ಬಂದವರು ನಾವು. ಆದರೆ ಹಿಂದಿನ ಬದಲಾವಣೆಗಳು ವಿಶಾಲಾರ್ಥದ ಕಲಿಯುವಿಕೆಗೆ ಅಡ್ಡಿಯಾಗಿರಲಿಲ್ಲ. ನಾವೀಗ ಇಂಟರ್ನೆಟ್‌ಯುಗದಲ್ಲಿ ಬೆರಳ ತುದಿಗೆ ಸಿಗುವ ಅಮೂಲ್ಯ ಜ್ಞಾನವನ್ನು ಕಾಲ್ಕಸ ಮಾಡಲು ಸಾಧ್ಯವಿಲ್ಲ. ಆದರೆ ತಂತ್ರಜ್ಞಾನದ ಅದ್ಭುತ ಪ್ರಗತಿ ನಮ್ಮ ನಿಜಾರ್ಥದ ಶಿಕ್ಷಣಕ್ಕೆ ಪೂರಕವಾಗಿರಬೇಕೇ ಹೊರತು ಅಡ್ಡಿಯಾಗಬಾರದು. ಈಗಾಗಲೇ ನಲುಗಿರುವ ಸಂಬಂಧಗಳು ಇನ್ನಷ್ಟು ಯಾಂತ್ರಿಕವಾಗಬಾರದು. ಜಾಗತೀಕರಣದ ಒಂದು ಪರಿಣಾಮವಾಗಿರುವ ಆನ್‌ಲೈನ್‌ಶಿಕ್ಷಣವನ್ನು ಕೋವಿಡ್ ಕಾಲದಲ್ಲಿ ತಾತ್ಕಲಿಕವಾಗಿ ಒಪ್ಪಿಕೊಳ್ಳೋಣ ಆದರೆ ಅದನ್ನೇ ಕಾಯಂ ಆಗಿ ಅಪ್ಪಿಕೊಳ್ಳುವುದು ಬೇಡ. ಹಾಗೇನಾದರೂ ಆದರೆ ಮುಂದಿನ ಜನಾಂಗ ಪಡೆಯುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು.

    Photo by Nick Morrison on Unsplash

    ಅಪ್ಪ ಅನ್ನೋ ಹೀರೋವನ್ನು ಹೊತ್ತು ತಿರುಗುತ್ತಿದ್ದ ಪುಷ್ಪಕ ವಿಮಾನ

    ಸಣ್ಣ ವಯಸ್ಸಲ್ಲಿ ಸೈಕಲ್ ಅನ್ನುವುದು ನಮ್ಮ ಪಾಲಿಗೆ ಬೆಲೆ ಕಟ್ಟಲಾಗದ ಸಂಪತ್ತು . ಮನೆಯ ಅಂಗಳವೆಂಬ ಲಾಯದಲ್ಲಿ ಸವಾರಿಗೆ ಸಜ್ಜಾಗಿ ನಿಂತಿರುತ್ತಿದ್ದ ಲೋಹದ ಕುದುರೆ, ಕನಸುಗಣ್ಣುಗಳಿಗೆ ಕಾಣ ಸಿಗುತ್ತಿದ್ದ ವಿಶೇಷ ವಾಹನ. ಅಪ್ಪ ಅನ್ನೋ ನಮ್ಮ ಹೀರೋವನ್ನು ಹೊತ್ತು ತಿರುಗುತ್ತಿದ್ದ ಪುಷ್ಪಕ ವಿಮಾನ.

    ನಮ್ಮೊಳಗೆ ಒಂದುಕಡೆ ಹೇಗಾದ್ರು ಮಾಡಿ ಇದನ್ನು ಕಲಿಯಬೇಕೆಂಬ ಮನದಾಸೆ, ಮತ್ತೊಂದು ಕಡೆ ಕಲಿತುಬಿಟ್ಟರೆ ಜಗತ್ತನ್ನು ಸುತ್ತಬಹುದು ಅನ್ನೋ ಮಹದಾಸೆ.ನಮ್ಮ ಜೀವನದ ಮೊಟ್ಟಮೊದಲ ಕುತೂಹಲಭರಿತ ಕಲಿಕೆ ಮತ್ತು ಮರೆಯಲಾರದ ಮನರಂಜನಾ ಚಟುವಟಿಕೆ ಇದಾಗಿತ್ತು.

    ಆಗೆಲ್ಲಾ ವಾರಕ್ಕೆರಡು ಬಾರಿ ಮಾತ್ರ ನೀರು ಬಿಡೋರು, ನೀರು ಬರೋ ದಿನ ಮನೆ ಮುಂದೆ ಸೈಕಲ್ಲನ್ನು ಸ್ಟ್ಯಾಂಡ್ ಹಾಕಿ ನಿಲ್ಲಿಸಿ ಬಕೀಟು ತುಂಬಾ ನೀರು ತುಂಬಿಸಿ ಸ್ವಲ್ಪ ಸರ್ಫ್ ಪೌಡರ್ ಬೆರಸಿ ಅದನ್ನ ನೊರೆ ಬರಂಗ್ ಮಾಡಿ ಆ ನೀರಲ್ಲಿ ಹ್ಯಾಂಡಲ್ಲು ಬಾರು ಬ್ರೇಕು ಬೆಲ್ಲು ಡೂಮು ಡೈನಮೋ ಚೈನ್ ಬಾಕ್ಸು ಹೀಗೆ ಬಿಡಿಬಾಗಗಳನ್ನೆಲ್ಲಾ ತೆಂಗಿನ ನಾರಿನಿಂದ ಉಜ್ಜುತ್ತಿದ್ದೆವು. ಚಕ್ರದ ರಿಮ್ಮು ಮತ್ತದರ ಫೋಕ್ಸುಗಳ ನಡುವಿನ ಕೊಳೆ ಹೋಗಲ್ಲ ಅಂತ ಹಳೆಯ ಟೂತ್ ಬ್ರಷ್ ಉಪಯೋಗಿಸಿ ಚೆನ್ನಾಗಿ ಉಜ್ಜಿ ತೊಳೆಯುತ್ತಿದ್ದೆವು. ಇಡೀ ಸೈಕಲ್ಲು ಪಳಪಳ ಅಂತ ಹೊಳೆಯುತ್ತಾ ಹೊಸ ಸೈಕಲ್ ಥರ ಕಾಣೋವರೆಗು ಬಿಡುತ್ತಿರಲಿಲ್ಲ .

    ಅಪ್ಪನೂ ಅಷ್ಟೇ ಸೈಕಲ್ಲನ್ನು ಎಲ್ಲಂದರಲ್ಲಿ ನಿಲ್ಲಿಸುತ್ತಿರಲಿಲ್ಲ . ಎಲ್ಲೇ ನಿಲ್ಲಿಸಿದ್ರೂ ಬೀಗ ಹಾಕಿ ಭದ್ರಿಸುತ್ತಿದ್ದರು. ರಾತ್ರಿ ಮಲಗುವಾಗ ಮನೆಯ ವರಾಂಡದಲ್ಲೋ ಹಾಲ್ ನಲ್ಲೋ ತಂದು ನಿಲ್ಲಿಸುತ್ತಿದ್ದರು. ಅವರ ಸೀಟಿನ ಮುಂಭಾಗ ಮಕ್ಕಳಿಗಾಗಿಯೇ ಒಂದು ಪುಟ್ಟ ಸೀಟು ಹಾಗೂ ಕಾಲು ಇಡಲು ಸ್ಟ್ಯಾಂಡನ್ನು ಫಿಟ್ ಮಾಡಿಸುತ್ತಿದ್ದರು. ಬಾರಿಗೊಂದು ರೆಕ್ಸಿನ್ನಿನ ಬಣ್ಣದ ಕವರು ಬರೋದು ಆ ಕವರಿನ ಮೇಲೆ ಹೊಸ ಸಿನಿಮಾ ಹೆಸರೋ ಇಲ್ಲ ತುಂಬಾ ಚೆನ್ನಾಗಿ ಓಡಿರೋ ಸಿನಿಮಾ ಹೆಸರೋ ಪ್ರಿಂಟ್ ಆಗಿರೋದು . ಕೆಲವರು ತಮ್ಮ ನೆಚ್ಚಿನ ಸಿನಿಮಾ ಹೀರೋ ಹೆಸರನ್ನು ಸೈಕಲ್ಲಿನ ಚೈನ್ ಬಾಕ್ಸಿನ ಮೇಲೆ ಬರೆಸಿಕೊಳ್ಳುತ್ತಿದ್ದರು .

    ಆಗೆಲ್ಲಾ ಸೈಕಲ್ಲಿನ ಅಲಂಕಾರಕ್ಕೆ ತುಂಬಾ ತಲೆಕೆಡಸ್ಕೋಳ್ಳೋದರ ಜೊತೆಗೆ ಖರ್ಚು ಮಾಡೋವ್ರು .ನಾವು ಮಲಗುವಾಗ ಅಪ್ಪನ ಸೈಕಲ್ಲನ್ನೇ ನೋಡಿ ಕಣ್ತುಂಬಿಕೊಂಡು ಮಲಗುತ್ತಿದ್ದೆವು ನಮ್ಮ ಕನಸಿನಲ್ಲಿ ಸೈಕಲ್ ಕಲಿತಂತೆ…….ರಸ್ತೆಯಲ್ಲಿ ಬೆಲ್ಲು ಹೊಡೆಯುತ್ತಾ ರುಂಯ್ಯನೆ ಓಡಿಸುತ್ತಿದ್ದಂತೆ ಕನಸುಗಳು ಬೀಳೋವು.

    ಬೆಳಿಗ್ಗೆ ಎದ್ದೊಡನೇ ಶತಾಯಗತಾಯ ಕನಸು ನನಸು ಮಾಡ್ಕೋಬೇಕು.ಸೈಕಲ್ ಕಲಿಯಲೇಬೇಕೆಂದು ಮನೆಯಲ್ಲಿ ಹಠ ಮಾಡಿ ಬೈಸಿಕೊಂಡು ಕಾಸು ಪಡೆದು ಬಾಡಿಗೆ ಸೈಕಲ್ ಪಡೆಯಲು ಓಡುತ್ತಿದ್ದೆವು .

    ಆವಾಗ ಬಾಡಿಗೆಗೆ ಚಿಕ್ಕ ದೊಡ್ಡ ಸೈಕಲ್ಗಳು ಗಂಟೆಗಿಷ್ಟು ಅರ್ಧಗಂಟೆಗಿಷ್ಟು ಅನ್ನೋ ಲೆಕ್ಕಾಚಾರದಲ್ಲಿ ಸಿಗುತ್ತಿತ್ತು. ‘ಸ್ವಾಮಿ ಸೈಕಲ್ ಮಾರ್ಟ್ ‘ ಅಂತ ಅಂಗಡಿ ಇದ್ರೆ ‘SCM’ ಅಂತ ಸೈಕಲ್ ಮೇಲೆ ಬರೆದಿರುತ್ತಿದ್ದರು ಪ್ರತೀ ಸೈಕಲ್ಲುಗಳಿಗೂ ಬಿಳೀ ಪೈಂಟಿಂದ 1, 2 ,3 ಅಂತ ನಂಬರ್ ಕೊಟ್ಟಿರೋವ್ರು.
    ಚಿಕ್ಕ ಸೈಕಲ್ಗಳಿಗೆ ನಂಬರ್ ಇರುತ್ತಿರಲಿಲ್ಲ ಎರಡೋ ಮೂರೋ ಸೈಕಲ್ಲುಗಳಿರೋದು ಅದನ್ನ ಗಾತ್ರ ಮತ್ತು ಬಣ್ಣದ ಆಧಾರದ ಮೇಲೆ ಗುರುತಿಸುತ್ತಿದ್ದೆವು. ಅಂಗಡಿಯ ಟೇಬಲ್ಲಿನ ಮೇಲೆ ಒಂದು ಉದ್ದದ ನೋಟ್ಬುಕ್ಕು ಅದರ ಮಧ್ಯೆ ಕ್ಯಾಪಿಲ್ಲದ ಪೆನ್ನು , ಗ್ರೀಸು ಆಯಿಲಿನಿಂದಾಗಿ ಆ ಪುಸ್ತಕ ಯಾವಾಗಲೂ ಕೊಳಕಾಗಿಯೇ ಕಾಣುತ್ತಿತ್ತು .

    ಜೇಬಿನಲ್ಲಿ ಇರುವ ಕಾಸನ್ನು ಎಲ್ಲಿ ಕಳೆದಾಕ್ಕೊಂಡುಬಿಡ್ತೀವೋ ಅನ್ನೋ ಭಯದಲ್ಲಿ ಮೊದಲೇ ಅಂಗಡಿಯವನ ಕೈಗೆ ಕೊಟ್ಟು ಅರ್ಧ ತಾಸು ಬಾಡಿಗೆಗೆ ಸೈಕಲ್ಲನ್ನು ಪಡೆಯುತ್ತಿದ್ದೆವು. ಅಂಗಡಿಯವನಿಗೆ ನಮ್ಮ ಪೂರ್ವಪರ ಎಲ್ಲಾ ಗೊತ್ತಿದ್ರೂನೂ…ಬೇಕಂತಲೇ …. ಎಲ್ಲಿರೋದು ? ಹೆಸರೇನು ? ಯಾರ ಮಗ ? ಅಂತೆಲ್ಲಾ ಪುರಾಣ ಕೇಳ್ಕೊಂಡು, ಆ ಕೊಳಕು ಬುಕ್ಕಲ್ಲಿ ತಗೊಂಡ ಟೈಂ ಮಾತ್ರ ಎಂಟ್ರಿ ಮಾಡೋವ್ನು . ಈ ಪ್ರೋಸಸ್ಸೇ ಐದು ನಿಮಿಷ ಆಗೋದು .

    ಸೈಕಲ್ ಹೇಳಿಕೊಡಕ್ಕೆ ಅಂತ ಅರ್ಧಂಬರ್ದ ಕಲಿತ ಸ್ನೇಹಿತನೊಬ್ಬ ಜೊತೆಗೆ ಬರೋವ್ನು ಅವನಿಗೆ ಬೇರೆ ಒಂದು ರೌಂಡ್ ಕೊಡಬೇಕಿತ್ತು . ಇದರ ಮದ್ಯೆ ಆಗಾಗ ಅಂಗಡಿಯವನ ಹತ್ರ ಹೋಗಿ ಟೈಂ ಆಯ್ತಾ ಟೈಮ್ ಆಯ್ತಾ ಅಂತ ಕೇಳ್ತಿದ್ವಿ ಇದರಲ್ಲಿ ಒಂದು ಐದತ್ತು ನಿಮಿಷ ವೇಸ್ಟಾಗೋದು .

    ಹೀಗೆ ಕಲಿಯಕ್ಕೆ ಬೀಳುವ ಪರಿಪಾಟಲುಗಳು ಒಂದೊಂದಲ್ಲ. ಆವಾಗಾವಾಗ ಬೀಳುವ ಚೈನು , ಟೈರಿನ ಗಾಳಿ ಸಮಸ್ಯೆ …..ಉಫ್ …. ಸಾಮಾನ್ಯವಾಗಿ ಕಲಿಕೆ ಮೂರು ಹಂತದಲ್ಲಿ ನಡೆಯುತ್ತಿತ್ತು ಕತ್ತರಿ , ಬಾರು , ಸೀಟು ಅಂತ .
    ಹೆಂಗೋ ಎದ್ದು ಬಿದ್ದು ಉಗಿಸ್ಕೊಂಡು ಬೈಸ್ಕೊಂಡು ಬೈಸಿಕಲ್ ಕಲಿಯುತ್ತಿದ್ದೆವು.ಕಲಿತು ಅದರ ಮೇಲೆ ಸವಾರಿ ಮಾಡುತ್ತಿದ್ದರೆ ನಿಜಕ್ಕೂ ಜಗತ್ತು ಗೆದ್ದ ಸಂಭ್ರಮ ನಮ್ಮಲ್ಲಿರುತ್ತಿತ್ತು . ಈಗ ರಾಕೆಟ್ ಕಲಿತ್ರೂ ಆ ಮಜಾ ಬರಲ್ಲ .

    ಕ್ರಮೇಣ ಆಟೋಮೊಬೈಲ್ ಕ್ರಾಂತಿಯಿಂದ ರಸ್ತೆಗಿಳಿದ ಸಾವಿರಾರು ಇಂಧನ ಚಾಲಿತ ಮೋಟಾರು ಸೈಕಲ್ಗಳು ಕಾಲಿನಿಂದ ತುಳಿಯುವ ಸೈಕಲ್ಲನ್ನೇ ತುಳಿದು ಬದಿಗೆ ಸರಿಸಿದವು.

    ಏನೇ ಆಗಲಿ….. ಸೈಕಲ್ ನಮ್ಮ ಬದುಕಿಗೆ ತೀರಾ ಹತ್ತಿರವಾಗಲು ಒಂದು ಕಾರಣವಿದೆ. ಅದೇನೆಂದರೆ ಇದನ್ನ ಕಲಿಯಲಿಕ್ಕೆ ಮುಖ್ಯವಾಗಿ ಬೇಕಾದದ್ದು ಬ್ಯಾಲೆನ್ಸಿಂಗ್.ಅದೇ ರೀತಿ ಬದುಕು ಕಲಿಯಕ್ಕೂ ಬಹು ಮುಖ್ಯವಾಗಿ ಬೇಕಾದದ್ದು ಇದೇ ಬ್ಯಾಲೆನ್ಸಿಂಗ್ .

    ಕಿರಣ ಆರ್

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೈಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    ಆರೋಗ್ಯಕ್ಕೆ ಒಂದೇ ಮಂತ್ರ…ಸ್ಮೈಲ್‌ ಪ್ಲೀಸ್‌!

    ಇಂದಿನ ಕ್ಯಾಂಪಸ್ ಪ್ರೆಸ್ ಅಂಕಣದಲ್ಲಿ ವಿಶ್ವವಿದ್ಯಾನಿಲಯ ಕಾಲೇಜು,ಮಂಗಳೂರು ಇಲ್ಲಿನ ದ್ವಿತೀಯ ಬಿಎ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ಪ್ರಮೀಳಾ ನಗುವಿನ ಮಹತ್ವವನ್ನು ವರ್ಣಿಸಿದ್ದಾರೆ.

    ನಗುವುದು ಸಹಜ ಧರ್ಮ; ನಗಿಸುವುದು ಪರಧರ್ಮ
    ನಗುವ ಕೇಳುತ ನಗುವುದತಿಶಯದ ಧರ್ಮ
    ನಗುವ ನಗಿಸುವ ನಗಿಸಿ ನಗುತ ಬಾಳುವ ವರವ
    ಮಿಗೆ ನೀನು ಬೇಡಿಕೊಳೊ-ಮಂಕುತಿಮ್ಮ

    ಕವಿ ಗುಂಡಪ್ಪನವರು ಹೇಳಿದಂತೆಯೇ, ನಗು ಮನುಷ್ಯನಿಗೆ ಸಿದ್ಧಿಸಿದ ಅಮೂಲ್ಯ ಕಲೆಗಳಲ್ಲಿ ಒಂದು. ನಮ್ಮ ಸೌಂದರ್ಯವನ್ನು ದ್ವಿಗುಣಗೊಳಿಸುವ, ಎಲ್ಲೆಡೆ ಸಂತೋಷ ಪಸರಿಸುವ ನಗು ಯಾರಿಗೆ ಬೇಡ… ನಗುವಿನ ಶಕ್ತಿ ಇಷ್ಟು ಮಾತ್ರವಲ್ಲ. “ನಕ್ಕರೆ ನೂರು ವರುಷ ಆಯುಷ್ಯ” ಎಂಬ ಮಾತಿನಂತೆ ಮುಗುಳ್ನಗೆ ಎಂಬ ಆಸ್ತಿ ನಮ್ಮ, ನಮ್ಮವರ ಜೀವನದಲ್ಲಿ ಎಷ್ಟೋ ಬದಲಾವಣೆ ತರಬಹುದು.  

    ಪರಿಚಯ, ಆಸಕ್ತಿ, ಲವಲವಿಕೆಗೆ ನಗುವೆಂಬ ಸ್ನೇಹಿತ ಸಹಕರಿಸುತ್ತಾನೆ. ದುಃಖದಲ್ಲಿ ಎಲ್ಲರೂ ದೂರವಾದರೂ ನಗುವೆಂಬ ಗೆಳೆಯ ನಮ್ಮ ಸಹಭಾಗಿಯಾಗುತ್ತಾನೆ. ನಮ್ಮನ್ನು ಸಮಾಧಾನಿಸಲು ಯತ್ನಿಸುತ್ತಾನೆ. ಅದೆಷ್ಟೋ ಬಾರಿ ನಮ್ಮ ಸಂತೋಷ–ದುಃಖ ಎರಡನ್ನೂ ನಗುವೇ ವ್ಯಕ್ತಪಡಿಸುತ್ತದೆ. ಹೀಗೆ ನಗುವಿಗೆ ಅದರದೇ ಆದ ಮಹತ್ವವಿದೆ. ನಾವದನ್ನು ಅರ್ಥಮಾಡಿಕೊಂಡರೆ ಮಾತ್ರ ಮಾಸದ ನಗು ನಮ್ಮ ಮುಖದ ಭೂಷಣವಾಗಬಹುದು.

    ನಗುವಲ್ಲಿ ಹಲವು ಬಗೆ. ಕೆಲವರದು ಗಹಗಹಿಸುವ ನಗೆಯಾದರೆ, ಕೆಲವರದು ವ್ಯಂಗ್ಯದ ನಗು. ಮತ್ತೆ ಹಲವರದು ಮುಗುಳುನಗೆಯಾದರೆ, ಕೆಲವರದ್ದು ತುಟಿಯಂಚಿನ ಕಿರುನಗೆ. ನಮ್ಮ ಗಹಗಹಿಸುವಿಕೆ, ವ್ಯಂಗ್ಯದ ನಗು ಇತರರ ದುಃಖಕ್ಕೆ ಕಾರಣವಾಗಬಹುದು ಎಂಬ ಎಚ್ಚರ ಸದಾ ಇರಬೇಕು. ಉಳಿದಂತೆ ನಮ್ಮ ಮುಗುಳು ನಗು ನೋವನ್ನು ಮರೆಸಿ ದೀರ್ಘಾಯಸ್ಸಿಗೆ ಕಾರಣವಾಗುತ್ತದೆ. ನಮ್ಮ ಜೀವನದಲ್ಲಿ ಹೊಸ  ಹುರುಪು ಮೂಡಿಸುವುದರ ಜೊತೆಗೆ ನಮ್ಮ ವ್ಯಕ್ತಿತ್ವಕ್ಕೆ ಹೊಸ ಮೆರಗು ನೀಡುತ್ತದೆ.

    ಒಂದು ಪುಟ್ಟ ನಗುವಿಗೆ ಮಾತಿನಲ್ಲಿ ಹೇಳಲಾಗದ್ದನ್ನು ಹೇಳಲು ಸಾಧ್ಯವಿದೆ. ನಮ್ಮ ಜೀವನವನ್ನೇ ಬದಲಿಸುವ ಶಕ್ತಿಯಿದೆ. ಇಷ್ಟಾಗಿಯೂ ನಗಲಾಗದವರ ಕುರಿತು ಒಂದು ಮಾತಿದೆ- “ನಗೆ ಬೇಕು, ನಗಿಸಬೇಕು. ಇದೇ ನಿನ್ನ ಧರ್ಮ, ನಗಲಾರೆ ಎಂದರೆ ಅದು ನಿನ್ನ ಕರ್ಮ” ಎಂದು! ಹಾಗಾಗಿ ಬದುಕಿನ ಪಯಣದಲ್ಲಿ ನಗುವೆಂಬ ಸ್ನೇಹಿತ ಸದಾ ನಮ್ಮ ಜೊತೆಗಿರಲಿ.

    Photo by chaitanya pillala on Unsplash

    ಮಾಸ್ಕ್ ಗಳ ಸತ್ಯ ಮತ್ತು ಮಿಥ್ಯೆ: ಬಳಸುವುದರಿಂದ ಲಾಭವಿದೆಯೇ ಹೊರತು ನಷ್ಟವಿಲ್ಲ

    ಮೂಗು,ಬಾಯಿಗಳನ್ನು ಮುಚ್ಚಿ ಕಿವಿಗಳ ಆಧಾರದ ಮೇಲೆ ಕೂರುವ ’ಮಾಸ್ಕ್ ’ಎನ್ನುವುದುಪುಟ್ಟದೊಂದು ಬಟ್ಟೆ.ಇದು ಪ್ರಪಂಚವನ್ನೇ  ಕಲಕುತ್ತಿರುವ ಕರೋನ ವೈರಸ್ಸನ್ನು ತಡೆಯಲು ಶಕ್ಯವೇ? ಅಥವಾ ಇದು ಬರಿ ಹುಸಿ ಮಿಥ್ಯೆಯೇ?

    ಸಾಮಾನ್ಯವಾಗಿ  ’ ಮೌತ್ ಮಾಸ್ಕ್ ’ (ಬಾಯಿ ಕವಚ) ಅಥವಾ ಫೇಸ್ ಮಾಸ್ಕ್ (ಮುಖ ಕವಚ) ಎನ್ನುವ ಈ ಪುಟ್ಟ ರಕ್ಷಣಾ ಕವಚವನ್ನು  ವೈದ್ಯರು, ದಂತವೈದ್ಯರು, ದಾದಿಯರು, ಪರೀಕ್ಷಾ ಘಟಕಗಳ ಸಿಬ್ಬಂದಿ, ಆಹಾರ ತಯಾರಿಕಾ ಕಾರ್ಖಾನೆಗಳು, ವಾಯುಮಾಲಿನ್ಯ ಇರುವ ಜಾಗಗಳು-ಇಂತಹ ಹಲವು ಸ್ಥಳಗಳಲ್ಲಿ ಮಾತ್ರ ಬಳಸುತ್ತಿದ್ದರು. ಆದರೆ ಇದೀಗ ಹೊರಗೆ ಓಡಾಡುವ ಎಲ್ಲ ಸಾರ್ವಜನಿಕರೂ ಇದನ್ನು ಕಡ್ಡಾಯವಾಗಿ ಧರಿಸಬೇಕಿದೆ. ಹೀಗಾಗಿ ಎಲ್ಲರಿಗೂ ಇದೇನೆಂದು ಗೊತ್ತು. ಮಾಸ್ಕ್ ಧರಿಸದವರು ’ ಅಪರಾಧಿ ’ ಎನ್ನಿಸಿಕೊಂಡು ದಂಡ  ತೆರಬೇಕಿದೆ.ವಿಶ್ವವೇ ಕರೋನ ವೈರಸ್ಸಿನ ಕಾರಣ ಈ ಹೊಸ ಬದಲಾವಣೆಗೆ ಹೊಂದಿಕೊಳ್ಳುತ್ತಿದೆ.

    ಬೆಳಿಗ್ಗೆ ವಾಕ್ ಹೋಗಲು ಹೊರಡುವ ವೆಂಕಮ್ಮ ಮಾಸ್ಕನ್ನು ಭದ್ರವಾಗಿ ಸೊಂಟಕ್ಕೆ ಸಿಕ್ಕಿಸಿಕೊಂಡು ಹೊರಡುತ್ತಾಳೆ. ನಾಗಪ್ಪ ತನ್ನ ಪಾಕೀಟಿನ ಜೇಬಲ್ಲೇ ಇಟ್ಟುಕೊಂಡು ತಿರುಗುತ್ತಾನೆ. “ ಅಕಸ್ಮಾತ್ ಪೊಲೀಸರು ಹಿಡಿದರೆ ಇರಲಿ “-ಎಂದು ಇಬ್ಬರೂ ಮುಂಜಾಗ್ರತೆ ವಹಿಸುತ್ತಾನೆ. ಸುಮ ಒಂದೇ ಮಾಸ್ಕ್ ಅನ್ನು ಒಂದು ತಿಂಗಳಿಂದ ಭದ್ರವಾಗಿಟ್ಟುಕೊಂಡು ಉಪಯೋಗಿಸುತ್ತಿದ್ದಾಳೆ. ಹರಿದರೆ, ಅಥವಾ ಕಳೆದುಹೋದರೆ ಮಾತ್ರ ಇನ್ನೊಂದನ್ನು ಹೊರತೆಗೆಯುತ್ತಾಳೆ. ಕೊಂಡುಕೊಂಡ ಎಲ್ಲ ಮಾಸ್ಕ್ ಗಳು ಮುಗಿದು ಹೋದರೆ ಮತ್ತೆ ಕೊಳ್ಳಬೇಕಲ್ಲ? ಬದಲು ಅಗ್ಗವಾಗಿರುವ ಸೊಗಡಿನ ಸೀಸನಲ್ ಅವರೇಕಾಯಿ ಅವರ ಮನಸ್ಸಿನಲ್ಲಿದ್ದರೆ ಅಚ್ಚರಿಯಿಲ್ಲ.

    ಪರಿಸ್ಥಿತಿ ಹೀಗಿರುವಾಗ ಕರೋನ ನಿಯಂತ್ರಣಕ್ಕೆ ಮಾಸ್ಕ್ ನೆರವಾಗಬಲ್ಲದೇ ಎಂಬ ಮೂಲಭೂತ ಪ್ರಶ್ನೆ ಮತ್ತೆ ಎದುರಾಗುತ್ತದೆ.

    ಪ್ರಪಂಚ ಜ್ಞಾನ ಈ ವಿಚಾರದಲ್ಲಿ ಕಾಲ ಕಳೆದಂತೆಲ್ಲ ಬದಲಾಗುತ್ತಿದೆ. ಕಳೆದ ವಾರ ವಿಶ್ವ ಸಂಸ್ಥೆ ಕರೋನ ವೈರಾಣು ಗಾಳಿಯಿಂದಲೂ ಹರಡಬಲ್ಲದು ಎಂಬ ಅಧಿಕೃತ ಘೋಷಣೆ ಹೊರಡಿಸಿದ ಕೂಡಲೇ ಮಾಸ್ಕ್ ಗಳ ಮಹತ್ವಕ್ಕೆ ಇನ್ನೂ ಹೆಚ್ಚಿನ ಆದ್ಯತೆ ದೊರಕಿದೆ.

    ಮಾಸ್ಕ್ ನ ಬಗೆಗಿನ ಕೆಲವುಸತ್ಯಗಳು

    ಮಾಸ್ಕ್ ಧರಿಸುವುದರಿಂದ ನಮಲ್ಲಿ ಗೊತ್ತಿದ್ದೋ-ಗೊತ್ತಿಲ್ಲದೆಯೋ ಇರಬಹುದಾದ ಕೋವಿಡ್ ಸೋಂಕು ನಮ್ಮಿಂದ ಇತರರಿಗೆ ಹರಡುವುದನ್ನು ಕಡಿಮೆಮಾಡಬಹುದು. ಮಾತನಾಡುವಾಗ, ಸೀನು-ಕೆಮ್ಮು ಬಂದಾಗ ನಮ್ಮ ಎಂಜಲಿನ ಸೂಕ್ಷ್ಮ ಹನಿಗಳು ಮತ್ತು ಉಸಿರಿನ ಗಾಳಿಯ ಮೂಲಕ ವೈರಸ್ಸು  ನೇರವಾಗಿ ಚಿಮ್ಮಿ ಹರಡುವುದನ್ನು ಮಾಸ್ಕ್ ಅಲ್ಪಮಟ್ಟಿಗೆ ತಪ್ಪಿಸುತ್ತದೆ.ದೂರ ದೂರಕ್ಕೆ ಗಾಳಿ ಮತ್ತು ಎಂಜಲಿನ ಮೂಲಕ ಚಿಮ್ಮಬಲ್ಲ  ವೈರಾಣುಗಳ ಮೇಲೆ ಕಡಿವಾಣ ಹಾಕುತ್ತದೆ.ಈ ಕಾರಣಕ್ಕೆಮುಖಗವಸನ್ನು ಧರಿಸುವುದು ಉತ್ತಮ.

    ಮುಖಗವಸನ್ನು ಧರಿಸುವುದರಿಂದ ಇತರರಿಗೆ ಸೋಂಕು ಹರಡುವುದನ್ನು ಮಾತ್ರ ತಡೆಯಬಲ್ಲೆವು ಆದರೆ ಅವುಗಳನ್ನು ಧರಿಸುವವರಿಗೆ ಕೋವಿಡ್ ಸೋಂಕಿನಿಂದ ರಕ್ಷಣೆ ಸಿಗುವುದಿಲ್ಲ ಎಂದೇ ಇದುವರೆಗೆ ನಂಬಿದ್ದೆವು. ಆದರೆ ಕಳೆದ ಕೆಲವು ದಿನಗಳಲ್ಲಿ ವೈಜ್ಞಾನಿಕ ಸಾಕ್ಷ್ಯಿ ಆಧಾರಗಳು ಬದಲಾಗಿವೆ. ವೈರಾಣುಗಳು ಕೇವಲ ಘನ ವಸ್ತುಗಳ ಮೇಲ್ಮೈ ಅಲ್ಲದೆ ಗಾಳಿಯಲ್ಲಿ ಕೂಡ ಬದುಕಿರಬಲ್ಲವು ಎಂಬುದು ತಿಳಿದ ನಂತರ ಮಾಸ್ಕ್ ಧರಿಸುವುದಕ್ಕೆ ಮತ್ತಷ್ಟು ಮನ್ನಣೆ ದೊರೆತಿದೆ. ಮಾಸ್ಕ್ ಗಳನ್ನು ಧರಿಸಿದವರಿಗೆ ಕೂಡ ಅಲ್ಪಮಟ್ಟಿನ ರಕ್ಷಣೆ ದೊರೆಯುತ್ತದೆ ಎಂದಾಗಿದೆ.ಆದರೆ ಮಾಸ್ಕ್ ನಮಗೆ ಸಂಪೂರ್ಣ ರಕ್ಷಣೆಯನ್ನು ಒದಗಿಸುವುದಿಲ್ಲ.

    ಅಳವಡಿಕೆ ಸೂಕ್ತವಾಗಿರಲಿ, ಬೇಕಾ ಬಿಟ್ಟಿ ಧರಿಸಬಾರದು

    ಯಾಕೆಂದರೆ ಮುಖಗವಸನ್ನು ಧರಿಸಿದ್ದರೂ ಅದರ ಅಳವಡಿಕೆ ಅತ್ಯಂತ ಸುರಕ್ಷಿತವಾಗಿಲ್ಲದಿದ್ದಲ್ಲಿ ವೈರಾಣುಗಳು ನಮ್ಮ ಮೂಗು ಮತ್ತು ಬಾಯಿಯ ಮೂಲಕ  ಪ್ರವೇಶಿಸಬಲ್ಲವು.ಇವೇ ಅಲ್ಲದೆ ಕಣ್ಣು, ಆಹಾರ, ಕೈಗಳ ಮೂಲಕವೂ ಅವು ನಮ್ಮ ದೇಹವನ್ನು ಸೇರಬಲ್ಲವು.ಹೀಗಾಗಿ ಮಿಕ್ಕೆಲ್ಲ  ಕ್ರಮಗಳನ್ನು ನಾವು ಪಾಲಿಸುವುದು ಮಾಸ್ಕ ಧರಿಸುವುದಕ್ಕಿಂತಲೂ ಹೆಚ್ಚು ಪರಿಣಾಮಕಾರಿ ಎನ್ನುವ ಅರಿವಿರುವುದು ಅತ್ಯಂತ ಅಗತ್ಯವಾಗಿದೆ.

    ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು, ಜನ ದಟ್ಟಣೆಯಿಂದ ದೂರವಿರುವುದು, ಕನಿಷ್ಠ ಇಪ್ಪತ್ತು ಸೆಕೆಂಡುಗಳ ಕಾಲ ಸೋಪನ್ನು ಬಳಸಿ ಪದೇ ಪದೇ ಕೈ ತೊಳೆಯುವುದು, ಸೋಂಕು ನಿವಾರಕ ಸ್ಯಾನಿಟೈಸರ್ ಗಳನ್ನು ಬಳಸುವುದು, ಲಾಕ್ ಡೌನ್ ನಿಯಮಗಳನ್ನು ಪಾಲಿಸುವುದು ಅತ್ಯಂತ ಮುಖ್ಯವಾಗುತ್ತದೆ.

    ಮೇಲಿನ ಇವೆಲ್ಲ ಕ್ರಮಗಳ ಬಗ್ಗೆ ಎಂದಿಗೂ ವಿವಾದಗಳಿಲ್ಲ. ಆದರೆ, ಪುಟ್ಟದೊಂದು ಬಟ್ಟೆಯನ್ನು ಬಾಯಿ ಮತ್ತು ಮೂಗಿನ ಮುಂದೆ ಕಟ್ಟಿಕೊಳ್ಳುವ ಬಗ್ಗೆ ಮಾತ್ರ ಕಳೆದ ಮೂರು ತಿಂಗಳಿನಿಂದ ಇನ್ನಿಲ್ಲದಂತೆ ಚರ್ಚೆಗಳು ನಡೆದಿವೆ.

    ಮುಖಗವಸನ್ನು ಸುತ್ತುವರೆದಿರುವ ವಿವಾದಗಳು

    ಮುಖಗವಸನ್ನು ಧರಿಸುವುದರಿಂದ ನಿಜಕ್ಕೂ ಲಾಭಗಳಿವೆಯೇ ಎನ್ನುವ ಬಗ್ಗೆ ಬಹಳ ಮೊದಲಿಂದಲೂ ಚರ್ಚೆಗಳು ಹುಟ್ಟಿಕೊಂಡವು. ಭಾರತ, ಚೆಕ್ ರಿಪಬ್ಲಿಕ್, ಚೀನಾ, ಜಪಾನ್ ನಂತಹ ದೇಶಗಳಲ್ಲಿನ ಸರ್ಕಾರಗಳು ಸಾರ್ವಜನಿಕರು ಕಡ್ಡಾಯವಾಗಿ ಧರಿಸಬೇಕು,ಇಲ್ಲದಿದ್ದರೆ ದಂಡ ಹೇರಲಾಗುತ್ತದೆ ಎಂಬ ನಿಯಮಗಳನ್ನು ಜಾರಿಗೆ ತಂದರು. ಆದರೆ , ಇಂಗ್ಲೆಂಡ್, ಅಮೆರಿಕಾದಂತಹ ಕೆಲವು ದೇಶಗಳು ಈ ಬಗ್ಗೆ ಕಡ್ಡಾಯಗಳನ್ನು ಹೇರಲಿಲ್ಲ. ಇವತ್ತಿಗೂ ಇಂಗ್ಲೆಂಡಿನ ಸಾರ್ವಜನಿಕರು ಇದನ್ನು ಕಡ್ಡಾಯವಾಗಿ ಧರಿಸಬೇಕಿಲ್ಲ.

    ಕರೋನ ವೈರಸ್ಸು ಶುರುವಾದ ಹೊಸತರಲ್ಲಿ ಅತ್ಯಂತ ಬೇಡಿಕೆಯಲ್ಲಿದ್ದ ವಸ್ತು ಎಂದರೆ ಅದು ಮುಖಗವಸು. ಈ ಕಾರಣ ಅಮೆರಿಕಾ ಮತ್ತು ಇಂಗ್ಲೆಂಡ್ ಎರಡೂ ಅದನ್ನು ಸಾರ್ವಜನಿಕರ ವೈಯಕ್ತಿಕ ಆಯ್ಕೆಗಾಗಿ ಬಿಟ್ಟರು.ಇದರಿಂದ ಆಸ್ಪತ್ರೆಯ ಸಿಬ್ಬಂದಿಗಳಿಗೆ ಕೊರತೆಯಾಗದಿರುವಂತೆ ಕ್ರಮ ಕೈಗೊಂಡರು. ಸಾರ್ವಜನಿಕರು ಸರ್ಜಿಕಲ್ ಮಾಸ್ಕ್ ತೊಡಬೇಕಿಲ್ಲ, ಬರಿಯ ಬಟ್ಟೆಯ ಮಾಸ್ಕ್ ಗಳನ್ನು ಮನೆಯಲ್ಲೇ ಮಾಡಿ ತೊಡಿರಿ ಎಂದು ಪ್ರಚಾರ ಮಾಡಿದರು. ಇದರಿಂದ ಜನರು ನಾನಾ ರೀತಿಯ ಕಲ್ಪನೆಗಳನ್ನು ಬಳಸಿ ವಿಧ ವಿಧದ ಮಾಸ್ಕ್ ಗಳನ್ನು ಮಾರುಕಟ್ಟೆಗೆ ತಂದರು.

    ಇಂಗ್ಲೆಂಡಿನಲ್ಲಿ ಕೇವಲ ಬಸ್ಸು, ರೈಲು, ವಿಮಾನ ಪ್ರಯಾಣಗಳಂತಹ  ಹೊಸ ಗಾಳಿಯಾಡದಂತಹ ಜಾಗಗಳಲ್ಲಿ ಮತ್ತು ಜನದಟ್ಟಣೆ ಇರುವ ಒಳಾಂಗಣಗಳಲ್ಲಿ ಮಾತ್ರ ಇತ್ತೀಚೆಗೆ ಮುಖಗವಸನ್ನು ಕಡ್ಡಾಯಗೊಳಿಸಲಾಗಿದೆ. ಅಮೆರಿಕಾದUS Centers for Disease Control and Prevention (CDC)ಕೂಡ ಇದೇ ನಿಲುವನ್ನು ಹೊಂದಿದೆ.

    ಇದಕ್ಕೂ ಕಾರಣಗಳಿವೆ. ಕೆಮ್ಮೋ, ಸೀನೋ ಬಂದು ಒತ್ತಡದಿಂದ ಹೊರಬೀಳುವ ಗಾಳಿ ಮಾಸ್ಕ್ ಗೆ ಬಡಿಯುತ್ತಿದ್ದಂತೆ ನೇರವಾಗಿ ಮುಂದುವರೆಯುವುದನ್ನು ನಿಲ್ಲಿಸಿದರೂ, ಬೇರೆ ಎಲ್ಲ ದಿಕ್ಕುಗಳಲ್ಲಿ ಸಿಡಿಯುತ್ತದೆ. ಹಿಂದೆ, ಸುತ್ತ- ಮುತ್ತ ಮತ್ತು ಹತ್ತಿರವೇ ನಿಂತಿರುವವರನ್ನು ತಲುಪುತ್ತದೆ. ಈ ಕಾರಣ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಎಲ್ಲಕ್ಕಿಂತ ಮುಖ್ಯವಾಗುತ್ತದೆ.ಮುಖಗವಸಿಗೆ ಹೆಚ್ಚು ಒತ್ತು ಕೊಟ್ಟರೆ ಜನರಿಗೆ ತಾವು ಸುರಕ್ಷಿತವಾಗಿದ್ದೇವೆಂಬ ಸುಳ್ಳು ಕಲ್ಪನೆ ಬರುತ್ತದೆ ಎಂಬುದು ಮುಖ್ಯ ಕಾರಣ.

    ಅಮೆರಿಕಾದಲ್ಲಿಸಾರ್ವಜನಿಕರು ಮುಖಗವಸನ್ನು ಧರಿಸಬೇಕೆಂಬ ಮಾರ್ಗದರ್ಶನವನ್ನು ಜಾರಿಗೆ ತಂದರು. ಆದರೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತವರ ಬೆಂಬಲಿಗರು ಈ ನಿಯಮಕ್ಕೆ ಬದ್ಧತೆ ತೋರಿಸಲಿಲ್ಲ. ಇದೀಗ ಸಾವಿನ ಸಂಖ್ಯೆಯ ಶಿಖರ ಶೃಂಗವನ್ನು ತಲುಪುವತ್ತ ದಾಪುಗಾಲು ಹಾಕುತ್ತಿರುವ ಬ್ರೆಝಿಲ್ ನ ಅಧ್ಯಕ್ಷರಿಗೂ ಕರೋನ ವೈರಸ್ಸಿನ ಸೋಂಕು ಹರಡಿ ಸುದ್ದಿಮಾಡಿತು. ಇವರೂ ಕೂಡ ಮುಖಗವಸುಗಳ ವಿರೋಧಿ.ಇವರಷ್ಟೇ ಅಲ್ಲದೆ ಹಲವು ವಿಜ್ಞಾನಿಗಳು, ವೈದ್ಯಾಧಿಕಾರಿಗಳು ಮುಖಗವಸು ವೈರಾಣುವನ್ನು ತಡೆಯಲಾರದು ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸಾಕ್ಷ್ಯ ಆಧಾರಗಳನ್ನು ಪ್ರಶ್ನಿಸಿದರು.

    ಸಾಮಾನ್ಯವಾಗಿ ವೈದ್ಯರು ಧರಿಸುವ ಸರ್ಜಿಕಲ್ ಮಾಸ್ಕ (N95) ಗಳು ಕೂಡ ಧರಿಸಿದ ಕೇವಲ 20 ನಿಮಿಷಗಳ ನಂತರ ಪ್ರಯೋಜನವಿಲ್ಲದಾಗುತ್ತವೆ. ಬ್ಯಾಕ್ಟೀರಿಯಾಗಳು ಮುಖಗವಸಿನ ಸುತ್ತಲಿನ ಸಂದುಗಳ ಮೂಲಕ ಕೂಡ ಪ್ರವೇಶಿಸಬಲ್ಲವು ಎಂದು ಅಭಿಪ್ರಾಯ ಇರುವುದೇ ಇದಕ್ಕೆ ಕಾರಣವಾಗಿದೆ. ಇಂಗ್ಲೆಂಡಿನ ಕೆಲವು ಸಂಸ್ಥೆಗಳಲ್ಲಿ ಇದೇ ಕಾರಣಕ್ಕೆ ಪ್ರತಿ ರೋಗಿಗೂ ಹೊಸ ಮಾಸ್ಕ್ ಅನ್ನು ಧರಿಸಿ ಚಿಕಿತ್ಸೆ ನೀಡಿ ಎಂಬ ಮಾರ್ಗದರ್ಶನ ಉಂಟು. ಆದರೆ ಅದರಿಂದ ಉಂಟಾಗುವ ಖರ್ಚು ವೆಚ್ಚಗಳ ಕಾರಣ ಪ್ರತಿ 3-4 ಗಂಟೆಗೊಮ್ಮೆ ಅಥವಾ ಗಲೀಜಾದ ಕೂಡಲೇ ಬದಲಿಸಿ ಎನ್ನುವ ಸಡಿಲ ನಿಯಮಗಳನ್ನು ಕೂಡ ಪಾಲಿಸುತ್ತಾರೆ. ಆದರೆ ಸರ್ಜಿಕಲ್ ಚಿಕಿತ್ಸೆಯನ್ನು ಪಡೆಯುವ ಪ್ರತಿ ರೋಗಿಯನ್ನು ನೋಡುವಾಗ ಮುಖಗವಸನ್ನು ಬದಲಾಯಿಸುವುದು ಕಡ್ಡಾಯ.

    ಸ್ಕಾಟ್ಲ್ಯಾಂಡಿನ ಎಡಿನ್ ಬರೋ ವಿಶ್ವವಿದ್ಯಾಲಯ ಕೋವಿಡ್ ವಿರುದ್ಧವಾಗಿ ಮಾಸ್ಕ್ ಗಳು ಹೇಗೆ ಕೆಲಸಮಾಡುತ್ತವೆ ಎನ್ನುವ ಬಗ್ಗೆ ವಿಸ್ತ್ರುತ ಅಧ್ಯಯನ ಮಾಡಿ ವರದಿ ಸಲ್ಲಿಸಿದೆ. ಆ ಪ್ರಕಾರ ಎಲ್ಲ ಬಗೆಯಮುಖಗವಸುಗಳು ಅಂದರೆ ಬಟ್ಟೆಯ ಮಾಸ್ಕ್, ಸರ್ಜಿಕಲ್ ಮಾಸ್ಕ್ ಮತ್ತು ಉಸಿರಾಡಲು ಕವಾಟ (valve) ಗಳಿರುವ FFPಮುಖ ಗವಸುಗಳು ಅವನ್ನು ಧರಿಸಿರುವವರು ಕೆಮ್ಮಿದರೆ, ಸೀನಿದರೆನೇರ ದಿಕ್ಕಿನಲ್ಲಿ ಹೊರಬೀಳುವ ಗಾಳಿಯ ದೂರವನ್ನು 90% ಕಡಿಮೆ ಮಾಡುತ್ತವೆ. ಆದರೆ ಅವುಗಳನ್ನು ಮುಖದ ಅಳತೆ ಮತ್ತು ಆಕಾರಕ್ಕೆ ಅಳವಡಿಕೆ ಮಾಡಬೇಕಾದ್ದು ಅತ್ಯಂತ ಅಗತ್ಯ.ಇಲ್ಲದಿದ್ದಲ್ಲಿ ಕೆಳಮುಖವಾಗಿ, ಹಿಂಭಾಗಕ್ಕೆ ಮತ್ತು ಬದಿಗಳಿಗೆ ಹಾರಬಲ್ಲ ಎಂಜಲಿನ ಮತ್ತು ಗಾಳಿಯಲ್ಲಿ ಸೇರಬಲ್ಲ ಜೈವಿಕ ದ್ರವಗಳ ಸೂಕ್ಷ್ಮಾತಿ ಸೂಕ್ಷ್ಮ ಹನಿಗಳು ಕೊರೋನವನ್ನು ಹರಡಬಲ್ಲವು.ಇದಕ್ಕೆ ಫಿಟ್ ಟೆಸ್ಟ್ (Fit test) ಮಾಡಬೇಕಾಗುತ್ತದೆ.

     ‘ಫಿಟ್ ಟೆಸ್ಟ್ ಅಂದರೇನು?

    ಸಡಿಲ ಮಾಸ್ಕ್ ಗಳ  ದೋಶಗಳನ್ನು ನಿವಾರಿಸಲು  ಅತ್ಯುತ್ತಮ ರಕ್ಷಣೆಯನ್ನು ಒದಗಿಸಬಲ್ಲ  ಮಾಸ್ಕ್ ಗಳನ್ನು ರೋಗಿಗಳನ್ನು ಪ್ರತಿದಿನ ನೋಡುವ ವೈದ್ಯರಿಗೆ, ದಂತವೈದ್ಯರಿಗೆ, ದಾದಿ ಇನ್ನಿತರರಿಗೆ ಅದರಲ್ಲೂ ಕೋವಿಡ್ ರೋಗಿಗಳನ್ನು ನೋಡಿಕೊಳ್ಳುವವರಿಗೆ  ನೀಡಲಾಗುತ್ತಿದೆ. ಅವರ ಮುಖಕ್ಕೆ ಅದನ್ನು ಅಳವಡಿಸಿ, ಪರೀಕ್ಷೆಗಳನ್ನು ಮಾಡಿ ನಂತರ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ.ಇವನ್ನು FFP  (Filtering face pieces) ಮಾಸ್ಕ್ ಗಳೆಂದು ಕರೆಯುತ್ತಾರೆ.

    ಇವುಗಳಲ್ಲಿ ಹೊರಗಿನ ಗಾಳಿ ಒಳಬರುವ ಮುನ್ನ ಫಿಲ್ಟರ್ ಗಳ ಮೂಲಕ ಹಾದುಬರುತ್ತದೆ. ಇವನ್ನು 28 ದಿನಗಳಿಗೊಮ್ಮೆ ಬದಲಾಯಿಸಲಾಗುತ್ತದೆ. ಅವರು ಉಸಿರಾಡಿದ ಗಾಳಿ ಹೊರಹೋಗಲು ಕವಾಟಗಳಿರುತ್ತವೆ.ಈ ಕಾರಣ ಅವರ ನಿಶ್ವಾಸ ಹೊರ ಹರಿಯಲು ಕವಾಟಗಳು ತೆರೆದುಕೊಂಡರೂ ಹೊರಗಿನ ಗಾಳಿ ಒಳಬರದಂತೆ ವಿನ್ಯಾಸಮಾಡಲಾಗಿರುತ್ತದೆ. ಇದು ಆರೋಗ್ಯ ಸಂಬಂಧೀ ವ್ಯಕ್ತಿಗಳಿಗೆ ಹೆಚ್ಚಿನ ರಕ್ಷಣೆ ಒದಗಿಸುತ್ತದೆ. ಆದರೆ ಇದನ್ನು ಹೆಚ್ಚು ಹೊತ್ತು ಧರಿಸಲಾಗುವುದಿಲ್ಲ. ಇದರ ಮೂಲಕ ಹರಿವ ಗಾಳಿಯಲ್ಲಿ  ಆಮ್ಲಜನಕದ (ಆಕ್ಸಿಜನ್) ಪ್ರಮಾಣ ಕಡಿಮೆಯಾಗುವ ಕಾರಣ ಒಂದು ಗಂಟೆಯ ನಂತರ ಈ ಮಾಸ್ಕ್ ನ್ನು ತೆಗೆದು ವಿರಾಮ ತೆಗೆದುಕೊಳ್ಳಲಾಗಬೇಕಾಗುತ್ತದೆ.ಇದೇ ಕಾರಣ ನೀವು ಟಿವಿ ಯಲ್ಲಿ ನೋಡುವ ಇಂತಹ ಮಾಸ್ಕ್ ಗಳಲ್ಲಿ ಮತ್ತು ಸ್ವರಕ್ಷಣಾ ಉಡುಪುಗಳಲ್ಲಿ ವೈದ್ಯರಿಗೆ ಒಂದೇ ಸಮನೆ ಕೆಲಸಮಾಡಲಾಗುವುದಿಲ್ಲ. ಆಮ್ಲಜನಕದ ಕೊರತೆ ಹೆಚ್ಚು ಕಾಲ ಅದಲ್ಲಿ ಅವರ ಪ್ರಜ್ಞೆತಪ್ಪಬಹುದು. ಆದರೆ ಸಾರ್ವಜನಿಕರು ಧರಿಸುವ ಮಾಸ್ಕ್ ಗಳು ಉಸಿರಾಟಕ್ಕೆ ತೊಂದರೆ ಮಾಡುವುದಿಲ್ಲ.

    FFP  ಮಾಸ್ಕ್ ಗಳು ಧೂಳು, ಹೊಗೆ, ವಿಷಯಕ್ತ ಅನಿಲ, ವೈರಾಣು, ಬ್ಯಾಕ್ಟೀರಿಯ,ಶಿಲೀಂದ್ರ, ಕ್ಯಾನ್ಸರ್  ಕಣಗಳು, ಕ್ಷ-ಕಿರಣ ಕಣಗಳು ಎಲ್ಲದರಿಂದಲೂ ರಕ್ಷಣೆ ಒದಗಿಸಬಲ್ಲವು. FFP1,2,3 ಎನ್ನುವ ಹಲವು ಮಟ್ಟದ ಮಾಸ್ಕ್ ಗಳು ಲಭ್ಯವಿವೆ. ಇದನ್ನು ತರಭೇತಿಯಿರುವ ವ್ಯಕ್ತಿ ಪ್ರತಿಯೊಬ್ಬರ ಮುಖದ ಅಳತಗೆ ತಕ್ಕಂತೆ ಅಳವಡಿಸುತ್ತಾರೆ. ಇದನ್ನೇ ಫಿಟ್ ಟೆಸ್ಟ್ ಎನ್ನುತ್ತೇವೆ.

    ಇವೇ ಅಲ್ಲದೆ ಹಲವು ಬಗೆಯ ಸುಲಭ ರೆಸ್ಪಿರೇಟರ್ ಮಾಸ್ಕ್ ಗಳು ಕೂಡ ಲಭ್ಯವಿವೆ. ಆದರೆ ಎಲ್ಲ ಮುಖಗವಸುಗಳು ಧರಿಸುವವರಿಗೆ ಇದೇ ಬಗೆಯ ರಕ್ಷಣೆ ಒದಗಿಸುವುದಿಲ್ಲ. ಇನ್ನು ಮಾರುಕಟ್ಟೆಯಲ್ಲಿ ಮಾತಾಗಿರುವ ಚಿನ್ನದ, ರೇಶ್ಮೆಯ, ಡಿಸೈನರ್ಮುಖ ಗವಸುಗಳು ಬರಿಯ ಮನರಂಜನೆಗೆ ಮಾತ್ರ ಎನ್ನುವುದನ್ನು ಹೇಳಬೇಕಿಲ್ಲ.

    ಮಾಸ್ಕ್ ಗಳಲ್ಲಿ ರಾಜಕೀಯ ತೂರಿದ್ದು ಯಾವಾಗ?

    “ಮಾಸ್ಕನ್ನು ಧರಿಸುವುದುಸ್ವಾಭಿಮಾನದ ಲಿಬೆರಲ್ಸ್ ಗಾಗಿ ಆದರೆ ಅದನ್ನು ಧರಿಸಲು ನಿರಾಕರಿಸುವುದು ನಿರಂಕುಶ ರೆಪಬ್ಲಿಕನ್ ಗಳಿಗಾಗಿ “- ಎನ್ನುವ ಹೇಳಿಕೆಯೊಂದು ಅಮೆರಿಕಾದಲ್ಲಿ ಸುದ್ದಿ ಮಾಡಿತು.

    ಅಧ್ಯಕ್ಷ ಟ್ರಂಪ್ ಮಾಸ್ಕ್ ತೊಡಲು ತಾನು ಸಿದ್ಧನಿಲ್ಲ ಎಂದ ಮರುದಿನವೇ ಆತನ ಈಗಿನ ಪತ್ನಿ ಮಿಲಾನಿಯ ಮತ್ತು ಪುತ್ರಿ ಇವಾಂಕ ಮಾಸ್ಕ್ ಧರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಾಕಿದರು. ಎಡದವರು ಮಾಸ್ಕ್ ಹಾಕದವರ ಜನ್ಮ ಜಾಲಾಡಿದರೆ, ರಿಪಬ್ಲಿಕನ್ ಗಳಲ್ಲಿ ಹಲವರು ಮತ್ತು ಕಡು ಬಲಪಂಥೀಯರು ತಮ್ಮ ಆರೋಗ್ಯವನ್ನು ಕಡೆಗಣಿಸಿ ಮಾಸ್ಕ್, ಸಾಮಾಜಿಕ ಅಂತರ ಎಲ್ಲವನ್ನೂ ಗಾಳಿಗೆ ತೂರಿ ಆರೋಗ್ಯದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ರಾಜಕೀಯದ ದೃಷ್ಟಿಯಿಂದ ಮಾತ್ರ ನೋಡಿದರು. ಮಾಸ್ಕ್ ರಹಿತ ಮೆರವಣಿಗೆಯನ್ನು ನಡೆಸಿ, ಲಾಕ್ ಡೌನ್ ನ್ನು ವಿರೋಧಿಸಿದರು. ವೈದ್ಯರ, ವಿಜ್ಞಾನಿಗಳ, ವಿಶ್ವ ಸಂಸ್ಥೆಯ ಎಲ್ಲರ ಶಿಫಾರಸ್ಸುಗಳಿಗೆ ರಾಜಕೀಯವನ್ನು ಬೆರೆಸಿ ಕಲಬೆರಕೆ ಮಾಡಿದರು. ಈ ನಡುವೆ  ಸಿಲುಕಿದ ಸಾರ್ವಜನಿಕರು ತಮ್ಮದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಯಿತು. ಇದರಿಂದಾಗಿ ಆರೋಗ್ಯದ ವಿಚಾರ ಮೂಲೆಗುಂಪಾಗಿ ಮಾಸ್ಕ್ ಅಲ್ಲಿನ ಜನರ ವೈಯಕ್ತಿಕ ಹೇಳಿಕೆಗಳಂತೆ ಕಾಣತೊಡಗಿದವು.

    ಇದು ಯಾವ ವಿಕೋಪಕ್ಕೆ ಹೋಯ್ತೆಂದರೆ, ಮೇ 4 ರಂದು ಮಿಶಿಗನ್ ನ ಫ್ಲಿಂಟ್ ಎಂಬಲ್ಲಿ ಡಾಲರ್ ಸ್ಟೋರ್ಸ್ ನ ಅಂಗಡಿಯ ಕೆಲಸಗಾರನೊಬ್ಬ ಗಿರಾಕಿಯೊಬ್ಬನ ಮಗಳು ಮಾಸ್ಕ್ ಧರಿಸದೆ ಅಂಗಡಿಯ ಒಳಬರುವಂತಿಲ್ಲ ಎಂದು ತಡೆದ. ಆ ಗಿರಾಕಿ ಅವನನ್ನೇ ಗುಂಡಿಟ್ಟು ಕೊಂದುಬಿಟ್ಟ.

    ಜುಲೈ 11ನೇ ತಾರೀಖು ಇದೂ ಬದಲಾಯಿತು. ಅಮೆರಿಕಾದಲ್ಲಿ ಒಂದೇ ದಿನ 66000 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆಯಾದರು.ಮಾಸ್ಕ್ ಎನ್ನುವ ಪುಟ್ಟ ಬಟ್ಟೆ ಟ್ರಂಪ್ ನನ್ನೂ ಮಣಿಸಿತು. ಮರುದಿನ ಆತ ಮತ್ತು ಆತನ ಹಿಂಬಾಲಕರು ದೊಡ್ಡ ಕರಿ ಮಾಸ್ಕ್ ನ್ನುಧರಿಸಿ “ ತಾನು ಮಾಸ್ಕ್ ವಿರೋಧಿಯಲ್ಲ, ಆದರೆ ಅದಕ್ಕೆ ಒಂದು ಟೈಂ ಮತ್ತು ಪ್ಲೇಸ್ ಇದೆ “ಎಂದು ಹೇಳಿಕೆ ಕೊಡಬೇಕಾಯಿತು.ಇದು ವಿಪರ್ಯಾಸದ ಸಂಗತಿಯಾದರೂ ಪ್ರಾಣ  ಭಯವಿರುವ ಬಹುಪಾಲು ಅಮೆರಿಕನ್ನರುಮುಖಗವಸನ್ನು ಧರಿಸಿಯೇ ಓಡಾಡುತ್ತಾರೆ.ಇಂಗ್ಲೆಂಡಿನಲ್ಲಿ ಕಾರಣಯುಕ್ತವಾದ ಚರ್ಚೆಗಳು ನಡೆದವು.

     ಮಾಸ್ಕ್ ಧರಿಸುವುದರಿಂದ  ನಿರ್ಧಿಷ್ಠವಾದ ಲಾಭ ಇದೆ ಎಂದು ಯಾವ ನಿಖರ ಸಾಕ್ಷ್ಯಗಳೂ ಇಲ್ಲ. ಆದರೆ ಮಾಸ್ಕ್ ಧರಿಸಿದ ಸಾಮಾನ್ಯ ಜನರು ತಮಗೆ ಕರೋನ ವೈರಸ್ಸಿನಿಂದ ಪೂರ್ತಿ ರಕ್ಷಣೆ ಸಿಕ್ಕಿದೆಯೆಂದು ತಿಳಿದು ಮಿಕ್ಕ ನಿಯಮಗಳನ್ನು ಗಾಳಿಗೆ ತೂರಬಹುದು, ಆದ್ದರಿಂದ ಆದಕ್ಕಿಂತ ಹೆಚ್ಚಿನ ಮಹತ್ವದ ಇತರೆ ಕ್ರಮಗಳ ಮೇಲೆ ಹೆಚ್ಚು ಒತ್ತು ನೀಡಬೇಕೆಂದು ಸರ್ಕಾರ  ಇದುವರೆಗೆ ನಿರ್ಧರಿಸಿತ್ತು. ಆದರೆ,ಮೊದಲ ಕರೋನ ಅಲೆ ನೆಲಕಚ್ಚಿ ಲಾಕ್ ಡೌನ್ ತೆರವಾಗುತ್ತಿರುವ ಈ ದಿನಗಳಲ್ಲಿ ಸಾಕ್ಷ್ಯಿ ಆಧಾರವನ್ನು ಅವಲಂಬಿಸಿ ತನ್ನ ನಿಲುವನ್ನು ಬದಲಿಸಿದೆ. ವ್ಯಾಪಾರವೂ ಸೇರಿದಂತೆ ಎಲ್ಲೆಡೆ ಮಾಸ್ಕ್ ಗಳನ್ನು ಧರಿಸಲು ಸಾರ್ವಜನಿಕರಿಗೆ ಕರೆನೀಡಿದೆ. ಇದೇ ಶುಕ್ರವಾರದಿಂದ ಅದನ್ನು ಒಳಾವರಣಗಳಲ್ಲಿ ಕಡ್ಡಾಯಗೊಳಿಸಿದೆ. ಆದರೆ ಆಫೀಸುಗಳಲ್ಲಿ ಇದು ಕಡ್ಡಾಯವಲ್ಲ.

    ಜಪಾನಿನಲ್ಲಿ ಮಾಸ್ಕ್ ನ್ನು ಧರಿಸುವುದು ಬಹಳ ಹಳೆಯ ಪದ್ದತಿ. 2003 ರ ರಿಂದಲೇ ಅಲ್ಲಿನ ಜನರು ಸಾಮಾನ್ಯ ಕೆಮ್ಮು ನೆಗಡಿಯಾದರೂ ಮಾಸ್ಕ್ ನ್ನು ಧರಿಸಿ ಓಡಾಡುತ್ತಾರೆ. ತಮ್ಮಿಂದ ಇನ್ನೊಬ್ಬರಿಗೆ, ಅವರಿಂದ ಮತ್ತೊಬ್ಬರಿಗೆ ಹರಡದಿರಲಿ ಎಂಬುದೇ ಎಲ್ಲರ ಸಮುದಾಯ ಭಾವನೆ.ಆದ್ದರಿಂದ ಕರೋನ ಕಾಲದಲ್ಲಿ ಮಾಸ್ಕ್ ಧರಿಸುವುದು ಅವರಿಗೆ  ಕಷ್ಟವಾಗಲೇ ಇಲ್ಲ.

    ಭಾರತದಲ್ಲಿ  ಇನ್ನೂ ಹಲವು ತಿಂಗಳ ಕಾಲ ಖಡ್ಡಾಯ ಮುಖಗವಸುಗಳ ಬಳಕೆ ಮುಂದುವರೆಯಲಿದೆ.ಎಲ್ಲರೂ ಧರಿಸಲು ಶುರುಮಾಡಿದರೆ ಅದು ಅಭ್ಯಾಸವೂ ಆಗುತ್ತದೆ. ಮಾಸ್ಕ್ ಗಳನ್ನು ಬಳಸುವುದರಿಂದ ಲಾಭವಿದೆಯೇ ಹೊರತು ನಷ್ಟವಿಲ್ಲ.

    ಮಾಸ್ಕ್ ಕುರಿತ ಮೂಢ ನಂಬಿಕೆಗಳು

    ಸಾಮಾನ್ಯ ಬಟ್ಟೆ ಮತ್ತು ಸರ್ಜಿಕಲ್ ಮಾಸ್ಕ್ ಗಳ (N 95)  ಬಳಕೆಯಿಂದ ಯಾವುದೇ ರೀತಿಯಲ್ಲಿ ಆರೋಗ್ಯಕ್ಕೆ ಬಾಧೆಯಾಗುವುದಿಲ್ಲ. ಅಮೆರಿಕಾದ ಕೆಲವರು ಮಾಸ್ಕ್ ಧರಿಸುವುದು ತಮ್ಮ ಸ್ವತಂತ್ರ್ಯಕ್ಕೆ ಅಡ್ಡಿ ಬರುವ ವಿಚಾರವೆಂಬ ಮೂಢನಂಬಿಕೆಯನ್ನು ತೋರಿಸಿದ್ದಾರೆ. ಕಳೆದವಾರ ಪ್ರಸಿದ್ದ ಕನ್ನಡ ದಿನಪತ್ರಿಕೆಯೊಂದರಲ್ಲಿ ವ್ಯಕ್ತಿಯೊಬ್ಬರು ಸಾಮಾನ್ಯ ಮಾಸ್ಕ್ ನ್ನು ಹೆಚ್ಚುಕಾಲ ಧರಿಸಿದರೆ ಆರೋಗ್ಯಕ್ಕೆ ಹಾನಿ ಎಂದು ಹೇಳುವ ಲೇಖನವನ್ನು ಬರೆದಿರುವುದನ್ನು ಓದಿ ಮಹದಾಶ್ಚರ್ಯವಾಯಿತು.ಮಾಸ್ಕ್ ಧರಿಸಬೇಕಾದ್ದು ಹೊರಗೆ ಹೋದಾಗ ಅಥವಾ ಒಳಾವರಣಗಳಲ್ಲಿ ಜನರು ಸೇರಿದ್ದಾಗ ಮಾತ್ರ. ಮನೆಯಲ್ಲಿದ್ದಾಗ, ತಮ್ಮದೇ ಕಾರು ಓಡಿಸುವಾಗ,ನಿದ್ದೆ ಮಾಡುವಾಗ, ಮನೆಯವರೊಂದಿಗಿದ್ದಾಗ ಇದರ ಅಗತ್ಯವಿಲ್ಲ. ಸರಿಯಾದನಿಯಮಗಳನ್ನು ಪಾಲಿಸಿ FFP ಮಾಸ್ಕ್ ಗಳನ್ನು ಧರಿಸಿದರೂ ಆರೋಗ್ಯಕ್ಕೆ ಹಾನಿಯಾಗುವುದಿಲ್ಲ.

    ಮುಖಗವಸುಗಳನ್ನು ಬರಿಯ ಪೋಲೀಸರ ದಂಡಕ್ಕೆ ಹೆದರಿಕೊಂಡು ಬಳಸದೆ ಕರೋನ ವಿರುದ್ದ ಹೋರಾಡುವ ದೃಷ್ಟಿಯಿಂದ ಧರಿಸಿರಿ.ನಿಮ್ಮನ್ನು ಮತ್ತು ನಿಮ್ಮ ಸುತ್ತ ಮುತ್ತಲಿನ ಇತರರನ್ನು ರಕ್ಷಿಸಿರಿ.

    ಬಿಡುವುನೆಂದರೂ ಬಿಡದ Modern Physics ಎಂಬ ಮಾಯೆ

    ಒಮ್ಮೆ ತತ್ವಜ್ಞಾನಿಯಂತೆ ,ಮತ್ತೊಮ್ಮೆ ವಿಜ್ಞಾನಿಯಂತೆ, ಮಗದೊಮ್ಮೆ ರಾಜಕೀಯ ವಿಶ್ಲೇಷಕರಂತೆ ತಾವು ಕಂಡ ಸಂಗತಿಗಳನ್ನು ಸರಳ ಕನ್ನಡದಲ್ಲಿ ಮಂಡಿಸುವ ಮಂಜುನಾಥ ಬೊಮ್ಮಘಟ್ಟ ಕನ್ನಡಪ್ರೆಸ್ .ಕಾಮ್ ನ ಜನಪ್ರಿಯ ಲೇಖಕರಲ್ಲಿ ಒಬ್ಬರು. . ಎಲ್ಲರನ್ನೂ ಆವರಿಸಿರುವ ಭೌತಶಾಸ್ತ್ರದ ಕೌತುಕಗಳನ್ನು ಬೆಡಗಿನಿಂದ ನೋಡಿದ ಸಂದರ್ಭಗಳನ್ನು ಈ ಬರಹದಲ್ಲಿ ದಾಖಲಿಸಿದ್ದರೆ. ಓದಿ ಪ್ರತಿಕ್ರಿಯಿಸಿ

    ಸೈಕಲ್ ಮತ್ತು ರೇಡಿಯೋ ಗಳು ಶ್ರೀಮಂತ ಜೀವನದ ಸಾಧನಗಳಾಗಿದ್ದ ಕಾಲದಲ್ಲಿ ನನ್ನ ಬಾಲ್ಯ ಕಳೆದಿತ್ತು. ಎಲ್ಲರ ಮನೆ ರೇಡಿಯೋ ಗಳಲ್ಲಿ ಒಬ್ಬಳೇ ಹೆಂಗಸು ಮಾತಾಡ್ತಾಳಲ್ಲ ಎನ್ನುವಂತಹ ಅನುಮಾನ ಬಹಳ ದಿನಗಳವರೆಗೆ ನನ್ನಲ್ಲಿ ಇತ್ತು. ಅಂಚೆ ಇಲಾಖೆ ಹೇಗೆ ಕೆಲಸ ಮಾಡುತ್ತೆ ಅನ್ನುವ ಬಗ್ಗೆ ಪಠ್ಯದಲ್ಲಿ ಹೇಳಿದ್ದರೇ ವಿನಾ ರೇಡಿಯೋ ಬಗ್ಗೆ ಹೇಳಿರಲಿಲ್ಲ. ಅಂದರೆ ಅದು ಆಗ್ಗೆ ಭಯಂಕರ ತಾಂತ್ರಿಕತೆಯನ್ನು ಒಳಗೊಂಡ ಸಾಧನ!

    ನನ್ನ ಅನುಮಾನ ಪರಿಹಾರ ಆದದ್ದು ನಾನು ಎಂಜಿನಿಯರಿಂಗ್ ಸೇರಿದ ಮೇಲೆಯೇ. ಹೌದು ಅಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಟೆಲೆ ಕಮ್ಯುನಿಕೇಶನ್ ಎನ್ನುವ ಭಾಗದ ನನ್ನ ಹಿರಿಯ ಸ್ನೇಹಿತರಲ್ಲಿ ಚರ್ಚಿಸಿ ನನ್ನ ಅನುಮಾನ ಪರಿಹಾರ ಮಾಡಿಕೊಂಡಿದ್ದೆ. ಅಷ್ಟರಲ್ಲಾಗಲೇ ಟೀವಿ ಬಂದಿತ್ತು. ಆದರೆ ಅದರ ವೀಕ್ಷಣೆ ಎಲ್ಲರಿಗೂ ಸಾಧ್ಯ ಇರಲಿಲ್ಲ,ಟವರ್ ಬೇಕಿತ್ತು. ರಾಗಿಂಗ್ ನೆಪದಲ್ಲಿ ಪರಿಚಯವಾಗಿದ್ದ ಧಾರವಾಡದ,ಆಗ 3ನೇ ವರ್ಷದಲ್ಲಿದ್ದ(ಹೆಸರು ನೆನಪಾಗುತ್ತಿಲ್ಲ) ಹಿರಿಯನಲ್ಲಿ ಒಂದು ಸಾಯಂಕಾಲ ಕಾಲೇಜ್ ಬೀಚ್ ನಲ್ಲಿ ‘ಸಾರ್ ಎಲ್ಲೋ ಡೆಲ್ಲಿ,ಶ್ರೀಲಂಕಾ ದಲ್ಲಿ ಮಾತಾಡುವ ಹೆಂಗಸು ರೇಡಿಯೋದಲ್ಲಿ ನಮಗೆ ಎಲ್ಲಿ ಬೇಕಾದ್ರೂ ಕೇಳಿಸ್ತಾಳೆ,ಈ ಟೀವಿ ಜನ ಏಕೆ ನಮ್ಮೂರಲ್ಲಿ ಕಾಣಿಸಲ್ಲ’ ಅಂತ ಕೇಳಿದ್ದೆ. ಶಬ್ದ ತರಂಗಗಳು ಸುರಳಿಯಾಗಿ ಚಲಿಸುತ್ತವೆ,ಬೆಳಕಿನ ಕಿರಣ ನೇರವಾಗಿ ಚಲಿಸುತ್ತೆ ಅಂತ ಓದಿದ್ದೀಯ? ಅಂತ ಕೇಳಿದಾಗ,ಎಲ್ಲ ಒಮ್ಮೆಗೇ ಅರ್ಥವಾದಂತೆ ಭಾಸವಾಗಿತ್ತು.

    ಈ ಅಂಶಗಳನ್ನು 5ನೇ ತರಗತಿಯಲ್ಲಿ UNECEF science ಅಂತ ನಮಗಿದ್ದ ವಿಜ್ಞಾನ ಪಠ್ಯದಲ್ಲಿ ಇದ್ದದ್ದು,ಮೂರು ರಟ್ಟಿನ ಪ್ರಯೋಗ ಮಾಡಿ ಬೆಳಕು ನೇರ ಚಲನೆ ಹೊಂದಿದೆ ಅಂತ ಹೇಳಿದ್ದು ,ನಿಂತ ನೀರಲ್ಲಿ ಕಲ್ಲು ಹಾಕಿದಾಗ ಮೂಡುವ ನೀರಿನ ಸುರಳಿ ನೋಡಿದ್ದೀರಾ ಅಂತ ಕೇಳಿದ್ದ ನನ್ನ ಪ್ರಾಥಮಿಕ ಶಾಲೆಯ ವಿಜ್ಞಾನದ ಶರಣಪ್ಪ ಮೇಸ್ಟ್ರು ಎಲ್ಲ ನೆನಪಾಗಿತ್ತು. 5ನೇ ತರಗತಿಯಲ್ಲಿ ಓದಿದ್ದು ಏನು ಅಂತ ತಿಳಿಯಲು ನಾನು ಪಿಯುಸಿ ಯಲ್ಲಿ ಶೇಕಡ 98 ಅಂಕ ಪಡೆದು,ಸುರತ್ಕಲ್ ಎಂಜಿನಿಯರಿಂಗ್ ಕಾಲೇಜ್ ಸೇರಬೇಕಾಯ್ತು! ಇದನ್ನು ವಿಪರ್ಯಾಸ ಅನ್ನದೆ ಬೇರೆ ಏನು ಹೇಳಲಿ?

    ಇನ್ನು ಸೈಕಲ್…..ಇದರಷ್ಟು ಹುಚ್ಚು ನನಗೆ ಬಾಲ್ಯದಲ್ಲಿ ಬೇರೆ ಯಾವುದೂ ಹುಟ್ಟಿಸಿದ್ದಿಲ್ಲ. ಅದರ ಗಾಲಿಗಳು, ಕಡ್ಡಿಗಳು, ಭಯಂಕರ ಚೂಪಾದ ಹಲ್ಲುಗಳನ್ನು ಹೊಂದಿದ್ದ ಎರಡು ವಿವಿಧ ಗಾತ್ರದ ಸ್ಟೀಲ್ ಚಕ್ರಗಳು,ಅವುಗಳನ್ನ ಸೇರಿಸಿದೆಯೇನೋ ಎನ್ನುವಂತಹ ವಿಚಿತ್ರ ತೂತುಗಳಿರುವ ಚೈನ್, ತ್ರಿಕೋಣದಲ್ಲಿದ್ದ ಒಂದು ಇಂಚು ಗಾತ್ರದ ಕಬ್ಬಿಣದ ಪೈಪಿನಿಂದ ಮಾಡಿದ್ದ ಅದರ ಅಸ್ಥಿಪಂಜರ,ಚಿಕ್ಕ ಆಸನ, ಸ್ಟ್ಯಾಂಡ್ ಜೊತೆ ಸೇರಿಕೊಂಡಿದ್ದ ಹಿಂದಿನ ಆಸನ, ಆತ್ಮೀಯರನ್ನು ಮುಂದಿನ ಕಂಬಿನ ಮೇಲೆ ಕೂರಿಸಿಕೊಂಡು ಮಾಡುವ ಪಯಣ….ಓಹ್…ಒಂದಾ ಎರಡಾ …ನನ್ನನ್ನು ಮೂಕನನ್ನಾಗಿ ಮಾಡಿದ್ದು?!

    ಸೀಟಲ್ಲಿ ಕೂತರೆ ಪೆಡಲಿಗೆ ನನ್ನ ಕಾಲು ತಾಕುತ್ತಿರಲಿಲ್ಲ,ಹಾಗಾಗಿ ಕಂಬಿಯ ನಡುವೆ ಅಡ್ಡ ಕಾಲಿಂದ ಸೈಕಲ್ ಓಡಿಸುವಾಗ,ಅದು ಹೇಗೆ ಇದು ಬೀಳದೆ ಓಡುತ್ತಿದೆ ಎನ್ನುವ ಅಂಶ ತಲೆ ತಿನ್ನುತ್ತಿತ್ತು. ಚಲನೆಯೇ ಅದನ್ನು ಬೀಳದ ಹಾಗೆ ಹಿಡಿದಿಟ್ಟಿರುತ್ತದೆ ಅಂತ ತಿಳಿಯುವಾಗ ತುಟಿಯ ಮೇಲೆ ಸಣ್ಣಗೆ ಕೂದಲು ಬರಲು ಪ್ರಾರಂಭಿಸಿತ್ತು.

    ವಿಚಿತ್ರ ಕುತೂಹಲಗಳು

    ಆ ವಯಸ್ಸಲ್ಲಿ ಮೂಡುತ್ತಿದ್ದ ವಿಚಿತ್ರ ಕುತೂಹಲಗಳೇ ಮುದ ಕೊಡುತ್ತಿವೆ ಈಗ. ಹಾಗೆ ಮೂಡಿದ್ದ ಕುತೂಹಲಗಳಲ್ಲಿ ಈ ವಿದ್ಯುತ್ ಶಕ್ತಿಯದು ಮತ್ತೊಂದು ಅಧ್ಯಾಯ. ಶಿವನ ಸಮುದ್ರದಲ್ಲಿ ಮೇಲಿನಿಂದ ಬೀಳುವ ನೀರಿಗೆ,ಕೆಳಗೆ ಚಕ್ರಗಳು ತಿರುಗುವ ವ್ಯವಸ್ಥೆಯಿಂದ ಈ ವಿದ್ಯುತ್ ತಯಾರಾಗುತ್ತದೆ ಅಂತ ಹೇಳುವುದನ್ನು ಇನ್ನಿಲ್ಲದ ಕುತೂಹಲದಿಂದ ಕೇಳಿದ ದಿನಗಳು ನನ್ನಿಂದ ಇನ್ನೂ ಮರೆಯಾಗಿಲ್ಲ. ಶಾಲೆಯ ದಾರಿಯಲ್ಲಿ ಊರಲ್ಲಿದ್ದ ಒಂದೇ ಟ್ರಾನ್ಸ್ ಫಾರ್ಮರ್ ಲ್ಲಿ ಈ ವಿದ್ಯುತ್ ನ್ನು ಸಂಗ್ರಹಿಸಿ ಇಟ್ಟಿದ್ದಾರೆನೋ ಅನ್ನುವ ಕುತೂಹಲ ಬೇರೆ. ಅಸಲಿಗೆ ಈ ವಿದ್ಯುತ್ ಸಂಗ್ರಹ,ಉಳಿತಾಯ ಎನ್ನುವುದೂ ತುಂಬಾ ದಿನಗಳವರೆಗೆ ನನಗೆ ತಿಳಿಯದ ವಿಷಯದಲ್ಲಿ ಒಂದಾಗಿತ್ತು. ಕಾರಣ ಪ್ರಪಂಚದ ಎಲ್ಲ ವಸ್ತುಗಳು ಘನ, ದ್ರವ, ಗಾಳಿ ರೂಪದಲ್ಲಿವೆ ಎಂದು ಓದಿದ್ದು. ಹಾಗಾದರೆ ಈ ವಿದ್ಯುತ್ ಯಾವ ರೂಪದಲ್ಲಿ ಶೇಖರಣೆ ಆಗಿದೆ?…..ಇವು ಆಗ ತರಲೆ ಪ್ರೆಶ್ನೆಗಳಾಗಿ ಬಿಂಬಿಸಿಕೊಂಡಿದ್ದೂ ಇದೆ. ಇದನ್ನು ಹಿಡಿದಿಡುವ ಯಾವ ಸಾಧನೆಯೂ ಇಲ್ಲ,ಕಾರಣ ಇದಕ್ಕೆ ಆಕಾರ ಇಲ್ಲ,ಇದೊಂದು ಶಕ್ತಿ,ಉತ್ಪಾದಿಸಿದ ಹಾಗೆ ಇದರ ಬಳಕೆ ಆಗಬೇಕು ಅಂತ ನಾನು ತಿಳಿದದ್ದು ಸಿವಿಲ್ ಎಂಜಿನೀರಿಂಗ್ 3ನೇ ವರ್ಷದಲ್ಲಿ ಇದ್ದ ನೀರನ್ನು ಸಂಗ್ರಹಿಸುವ ಡ್ಯಾಮ್ , ನೀರಿಂದ ವಿದ್ಯುತ್ ಉತ್ಪಾದಿಸುವ ಪರಿಕರಗಳನ್ನು ನಿರ್ಮಿಸುವ ವಿಷಯ ಹೇಳುತ್ತಿದ್ದ ಹೈಡ್ರಾಲಿಕ್ಸ್ ಎನ್ನುವ ವಿಷಯ ಕಲಿಯುವಾಗ!

    ಇನ್ನು ಫೋನ್…ಇದನ್ನು ನಾನು ನೋಡಿದ್ದೇ ಸುರತ್ಕಲ್ ಕ್ಯಾಂಪಸ್ ನಲ್ಲಿ ಮತ್ತು ಆಗಿನ ಕೆಲವು ಸಿನೆಮಾಗಳಲ್ಲಿ. ಪ್ರಾಥಮಿಕ ಶಾಲೆಯ ದಿನಗಳಲ್ಲಿಯೇ ಖಾಲಿ ಬೆಂಕಿ ಪೊಟ್ಟಣಗಳಿಗೆ ದಾರ ಕಟ್ಟಿ ಹಲೋ,ಹಲೋ ಅಂತ ಆಟ ಆಡಿದ್ದರಿಂದಲೋ ಏನೋ ಮತ್ತು ಧ್ವನಿ ಸಂವಹನೆಗೆ ಒಂದು ಮಾಧ್ಯಮ ಬೇಕು ಅಂತ ಓದಿದ್ದರಿಂದಲೋ ವಿವರಿಸಲಾಗದ ಅರ್ಥದೊಂದಿಗೆ ಇದರ ಮರ್ಮ ಅರ್ಥ ಆಗಿತ್ತು. ಇದರ ಮುಂದುವರೆದ ಭಾಗಗಳಾಗಿ ಬಂದಿರುವ ಸೆಲ್ ಫೋನ್,ಸ್ಮಾರ್ಟ್ ಫೋನ್ ಈಗ ವಿಸ್ಮಯಗೊಳಿಸುತ್ತಿವೆ. ಇವುಗಳಿಗೆಲ್ಲ ಬುನಾದಿ ಎಂಬಂತಿದ್ದ ನಾನು ಕಲಿತ ಪಿಯುಸಿ ಯಲ್ಲಿನ ಭೌತಶಾಸ್ತ್ರ ವನ್ನು ಯಾಕೋ ಅವಲೋಕಿಸುವ ಮನಸ್ಸಾಗುತ್ತಿದೆ. ಬರೀ ಅಂಕಗಳನ್ನು ಪಡೆದು ಎಂಜಿನಿಯರ್ರೋ,ಡಾಕ್ಟ್ರೋ ಆಗುವ ಭರದಲ್ಲಿ ಆಗ ಅವಲೋಕಿಸುವ ವ್ಯವಧಾನ ಇರಲಿಲ್ಲವೇನೋ….

    ನಮಗೆ ಭೌತಶಾಸ್ತ್ರ 4 ಭಾಗಗಳ ವಿಷಯವಾಗಿ ಹೇಳಲ್ಪಟ್ಟಿತ್ತು. 1.ಬೆಳಕು(Light)2.ಧ್ವನಿ(sound)3.ಬಿಸಿ(Heat) 4, ಆಧುನಿಕ ಭೌತಶಾಸ್ತ್ರ (Modern Physics)

    ಈ Modern Physics.ಏನೆಂದರೆ ಏನೂ ಅರ್ಥ ಆಗದಿದ್ದ ಆ ದಿನಗಳಲ್ಲಿ,ಅರ್ಥ ಆಗಿದ್ದೆಂದರೆ definition, formulas, problem solving ಅಷ್ಟೇ.(ನನಗೆ ಮಾತ್ರ ಅನ್ವಯಿಸಿ ಹೇಳುತ್ತಿದ್ದೇನೆ. ಬೇರೆಯವರಿಗೆ ಎಲ್ಲ ಅರ್ಥ ಆಗಿರಲಿಕ್ಕೂ ಸಾಕು) ಮಾಡರ್ನ್ ಫಿಸಿಕ್ಸ್ ನಲ್ಲಿದ್ದ ನ್ಯೂಟ್ರಾನ್, ಪ್ರೋಟ್ರಾನ್,ಎಲೆಕ್ಟ್ರಾನ್, ಅಲ್ಫಾ ಕಣ, ಗ್ಯಾಮ ಕಣ, ಬೀಟಾ ಕಣ ದೇವರಾಣೆಗೂ ನನಗೆ ಅರ್ಥ ಆಗಿದ್ದಿಲ್ಲ. ಕಾರಣ ತಲೆ,ಬುಡ ಪರಿಚಯಿಸದೆ ಒಮ್ಮೆಲೇ ವಿಷಯಗಳನ್ನು ಹೇಳುವ ನಮ್ಮ ಪಠ್ಯಕ್ರಮ! ವಿಷಯಗಳಿಗೆ ಅಲ್ಪ,ಸ್ವಲ್ಪ ಪೀಠಿಕೆ ತುಂಬಾ ಸಹಾಯ ಆಗುತ್ತೆ ಅನ್ನುವುದು ನನ್ನ ವೈಯಕ್ತಿಕ ಅನಿಸಿಕೆ…ಇರಲಿ.

    Light ಮತ್ತು Sound ನ ಎಲ್ಲ ಪ್ರಯೋಜನಗಳನ್ನು Modern Physics ಸಹಾಯದೊಂದಿಗೆ ನಮ್ಮ ಜೀವಿತ ಅವಧಿಯಲ್ಲಿ ನೋಡಿ ಅನುಭವಿಸುತ್ತಿರುವುದು ನಮ್ಮ ಪೀಳಿಗೆಯ ಹೆಮ್ಮೆಯೇ ಸರಿ. ನಮ್ಮ ಕಾಲದಲ್ಲಿ ಮಾಡರ್ನ್ ಫಿಸಿಕ್ಲ್ ಅಂತ ಅನ್ನಿಸಿಕೊಂಡು ಶೈವಾವಸ್ಥೆಯಲ್ಲಿದ್ದ ವಿಷಯವು ಇಂದು ಎಲೆಕ್ಟ್ರಾನಿಕ್ಸ್, ಕಮ್ಯುನಿಕೇಶನ್ಸ್ , ಕಂಪ್ಯೂಟರ್ಸ್ ಅಂತ ಅನ್ನಿಸಿಕೊಂಡು ಅಕ್ಷರಶಃ ಪ್ರಪಂಚವನ್ನು ಆವರಿಸಿದೆ. ಎಲೆಕ್ಟ್ರಾನಿಕ್ಸ್ , ಡಿಜಿಟಲ್ ಆದಮೇಲೆ,ಇದರ ಓಟ ಊಹೆಗೂ ನಿಲುಕಲು ಅಸಾಧ್ಯ.

    ಯಾರ ನಿಯಂತ್ರಣ ಇಲ್ಲದೆ ಕೊಚ್ಚಿಹೋಗುತ್ತಿರುವ ಅನುಭವ

    ರೇಡಿಯೋ,ಸೈಕಲ್,ವಿದ್ಯುತ್,ಫೋನ್ ಇಲ್ಲದೇ ಬದುಕಿದ್ದ ನಾವು ಇಂದು ಈ ಡಿಜಿಟಲ್ ಎಲೆಕ್ಟ್ರಾನಿಕ್ಸ್ ನ ಸಾಧನೆ ಆದಂತಹ ಕಂಪ್ಯೂಟರ್,ಸೆಲ್ ಫೋನ್ ಇರದೇ ಘಂಟೆಗಳ ಕಾಲ ಇರಲಾಗುತ್ತಿಲ್ಲ. ಏನಿದು? ಯಾಕಿದು? ಹೀಗೆ ಅಂತ ಆಲೋಚಿಸುವ ವ್ಯವಧಾನ ಯಾರಿಗೂ ಇಲ್ಲ. ಪ್ರವಾಹದ ಅಲೆಯಲ್ಲಿ ಎಲ್ಲವೂ ಎಲ್ಲರೂ ಯಾರ ನಿಯಂತ್ರಣ ಇಲ್ಲದೆ ಕೊಚ್ಚಿಹೋಗುತ್ತಿರುವ ಅನುಭವ ಅಂತೂ ನನಗೆ ಆಗುತ್ತಿದೆ. ಊರು, ದೇಶ ಬಿಡಿ, ಗದ್ದಲದ ಮಕ್ಕಳು ಮನೆಯಿಂದ ಕಾಣೆಯಾಗಿದ್ದಾರೆ, ಗೊಣಗುಡುತ್ತಿದ್ದ ವೃದ್ಧಾರೂ ಕಾಣುತ್ತಿಲ್ಲ. ಯಾವಾಗಲೂ ಯಾವುದಾದ್ರು ವಿಷಯದಲ್ಲಿ ಕಾಣೆಯಾಗುವ ನಡು ವಯಸ್ಕರೂ ಇಂದು ಇದರಲ್ಲೇ ಬಿದ್ದಿದ್ದಾರೆ. ಇಡೀ ಮಾನವ ಪ್ರಪಂಚವನ್ನು ಇಂಥಹ ಮಾಯೆ ಆವರಿಸಿದ್ದು ಯಾವ ಇತಿಹಾಸದಲ್ಲಿ,ಯಾವ ಊಹೆಯ ಪುರಾಣದಲ್ಲಿಯೂ ಇಲ್ಲ! ಈಗ ಏನಾದ್ರು ನಮ್ಮ ವಿಷ್ಣು ಅಕಸ್ಮಾತ್ ಅವತಾರ ತಾಳಿದ್ರೆ,ಕೈಯಲ್ಲಿ ಸುದರ್ಶನ ಚಕ್ರದ ಬದಲಿಗೆ ಸೇಲ್ ಫೋನ್, ಗದೆಯ ಬದಲಿಗೆ lap top ಹಿಡಿಯುವುದು ಗ್ಯಾರಂಟಿ.

    ನಾವು ಪುರಾಣಗಳಲ್ಲಿ ಓದಿದ ಎಲ್ಲ ಅಂಶಗಳೂ ರೂಪ,ವೇಷ ಮರೆಸಿಕೊಂಡು ಈಗ ಪ್ರತ್ಯಕ್ಷವಾಗಿ,ಜನ ಸಾಮಾನ್ಯನೂ ಅನುಭವಿಸಿ,ಪ್ರಯೋಜನ ಪಡೆಯುತ್ತಿರುವುದು ಸಾಮಾನ್ಯವಾಗಿದೆ. ಇಡೀ ಪ್ರಪಂಚ Global Village ಅಂತ ಕರೆಯಿಸಿಕೊಂಡ ಹಳ್ಳಿಯಾಗಿದೆ! ಸೂರ್ಯ,ಚಂದ್ರ,ಗ್ರಹಗಳು,ನಿಲುಕದ ದೂರದಲ್ಲಿದ್ದ ತಾರೆಗಳು ಪಕ್ಕದ ಬೀದಿಯ ಮನೆಗಳಂತೆ ಆಗಿವೆ! ಇನ್ನು ಅದೊಂದು ಇದೆ, Nano Bio Technology ಅಂತ. ಅದನ್ನು ಬೇಕಾಗಿಯೇ ಮನುಷ್ಯ ತಡೆ ಹಿಡಿದಿದ್ದಾನೆ. ಇಲ್ಲವಾದ್ರೆ ಅಕ್ಷರಶಃ ರಕ್ತ ಬಿಜಾಸುರರು ನಮ್ಮ ಮಧ್ಯೆದಲ್ಲಿ ಇಷ್ಟೊತ್ತಿಗೆ ಓಡಾಡುತ್ತಿದ್ದರು!

    ಸೈಕಲ್ ನಿಂದ ಮೋಟಾರ್ ಸೈಕಲ್ಲಿಗೆ ಜಗತ್ತು ಬಂದು ತಲುಪಲು ಹಲವು ದಶಕಗಳ ಕಾಲ ಕಾದಿದ್ದ ಜಗತ್ತು ಇಂದು ಯಾವ ವೇಗದಲ್ಲಿ ಓಡುತ್ತಿದೆಯೆಂದ್ರೆ ಮಾನವನ ಊಹೆಗೆ ನಿಲುಕದ ಸಂಗತಿಯಾಗಿದೆ. ಈಗ ಅವಿಷ್ಕಾರಗೊಂಡ ಒಂದು ತಾಂತ್ರಿಕತೆ,ಹೊರಗೆ ಬಂದು ಕಣ್ಣು ಬಿಡುವಷ್ಟರಲ್ಲಿ ಅದರ ಮುಂದುವರೆದ ತಾಂತ್ರಿಕತೆ ರಾರಾಜಿಸುತ್ತಿರುತ್ತದೆ!ಭೂಮಿಯ ವೇಗವನ್ನು ಕಂಡು ಬೆಚ್ಚಿಬಿದ್ದಿದ್ದ ಮನುಷ್ಯ ಮತ್ತೆ ಬೆಚ್ಚಿರುವುದು ಈಗಲೇ….. ಇವೆಲ್ಲವನ್ನು ಕಂಡು ಅನುಭವಿಸಿದ ನಮ್ಮ ಪೀಳಿಗೆ ನಿಜಕ್ಕೂ ಅದ್ಭುತ ಕಾಲಘಟ್ಟಕ್ಕೆ ಸಾಕ್ಷಿಯಾಗಿದೆ ಅಂತ ಅನ್ನಿಸದೇ ಇರಲಾಗದು. Generations are born for future ಎನ್ನುವಂತೆ ಈಗಿನ ಹುಡುಗರು ಯಾವುದೇ ರೀತಿಯ ವಿಸ್ಮಯಗಳಿಲ್ಲದೆ,ಸಾಮಾನ್ಯದಲ್ಲಿ ಸಾಮಾನ್ಯ ಎನ್ನುವಂತೆ ಸಾಗುತ್ತಿರುವುದು ನೋಡಿಯೂ ಒಮ್ಮೊಮ್ಮೆ ನಾನು ವಿಸ್ಮಯಗೊಂಡಿದ್ದೇನೆ.

    ನಾನು ಓದಿದ್ದ ಭೌತಶಾಸ್ತ್ರದ 3ನೇ ಭಾಗವಾದ HEAT ಹಾಗೆಯೇ ಉಳಿದಿದೆ. ಅದರ ಆವಿಷ್ಕಾರ,ವಿರಾಟ ರೂಪದ ಅಂಶಗಳು ಇನ್ನು ಬರಬೇಕಾಷ್ಠೆ! LIGHT & SOUND ಗಳ ಆರ್ಭಟವೇ ಇಷ್ಟಿರಬೇಕಾದ್ರೆ, ಇನ್ನು HEAT ನ ಆರ್ಭಟ ಊಹಿಸಿಕೊಂಡರೇನೇ ವಿಸ್ಮಯವಾಗುತ್ತೆ ನನಗೆ….ನಿಮಗೆ?
    ವಿಸ್ಮಯ ಎನ್ನುವುದು ಮನುಷ್ಯನನ್ನು ಜೀವಂತವಾಗಿಸಿ ತನ್ನನ್ನು ತಾನು ಪ್ರಕಟಗೊಳ್ಳಲು ಪ್ರಕೃತಿ ನೀಡಿದ ಕಾಣಿಕೆಯಂತೆ ಅಪ್ಪ ಆಗಾಗ ಹೇಳ್ತಿದ್ದರು.

    Photo by Karlis Reimanis on Unsplash

    error: Content is protected !!