32.6 C
Karnataka
Monday, May 25, 2026
    Home Blog Page 105

    ಇಂದು ಸಂಜೆ ದೇಶವನ್ನುದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

    ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಜೂನ್ 7) ಸಂಜೆ 5 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಬಗ್ಗೆ ಪ್ರಧಾನ ಮಂತ್ರಿ ಕಚೇರಿ ಟ್ವೀಟ್ ಮಾಡಿದೆ.

    ಪ್ರಧಾನ ಮಂತ್ರಿಗಳು ಯಾವ ವಿಷಯದ ಬಗ್ಗೆ ಮಾತನಾಡುತ್ತಾರೆ ಎಂಬುದು ಗೊತ್ತಿಲ್ಲವಾದರು ದೇಶದ ಕೋವಿಡ್ ಪರಿಸ್ಥಿತಿ ಮತ್ತು ವ್ಯಾಕ್ಸಿನೇಷನ್ ಪ್ರಗತಿಯ ಬಗ್ಗೆ ಮಾತಾನಾಡುತ್ತಾರೆ ಎಂದು ನಿರೀಕ್ಷಿಸಲಾಗಿದೆ.

    ಜಿಲ್ಲಾವಾರು ಕೋವಿಡ್ ವಸ್ತುಸ್ಥಿತಿ ಆಧರಿಸಿ ಲಾಕ್ಡೌನ್ ಸಡಿಲಿಕೆ ಬಗ್ಗೆ ನಿರ್ಧಾರ

    ಜಿಲ್ಲಾ ಮಟ್ಟದಲ್ಲಿ ಇರುವ ಕೋವಿಡ್ ಸೋಂಕಿನ ವಸ್ತುಸ್ಥಿತಿಯನ್ನು ಆಧರಿಸಿ ಜೂನ್ 14ರ ನಂತರ ಯಾವ ರೀತಿ ಲಾಕ್ಡೌನ್ ಅನ್ನು ಸಡಿಲಿಕೆ ಮಾಡಬೇಕು ಎಂಬುದರ ಕುರಿತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯಲಿರುವ ಹಿರಿಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಮಹತ್ವದ ಸಭೆಯಲ್ಲಿ ಅಂತಿಮ ನಿರ್ಧಾರ ಆಗಲಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಬಸವರಾಜ್ ಬೊಮ್ಮಾಯಿ ತಿಳಿಸಿದರು.

    ಹಾವೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ಡೌನ್ ಸಡಿಲಿಕೆಗೆ ಸಂಬಂಧಿಸಿದಂತೆ ಈಗಾಗಲೇ ಹಲವು ಸಲಹೆ-ಸೂಚನೆಗಳು ಬರುತ್ತಿವೆ ಎಂದರು

    ಎಲ್ಲಿ ಪಾಸಿಟಿವಿಟಿ ರೇಟ್ ಕಡಿಮೆ ಇದೆ? ಯಾವ ಜಿಲ್ಲೆಯಲ್ಲಿ ಕಡಿಮೆ ಇದೆ ? ಅಂತಹ ಜಿಲ್ಲೆಗಳಲ್ಲಿ ಸಡಿಲಿಕೆ ಕ್ರಮ ಗಳನ್ನು ಜರುಗಿಸಬೇಕು ಮಾಡಬೇಕು ಎಂಬ ಸಲಹೆ ಬಂದಿದೆ ಕೈಗಾರಿಕಾ ವಲಯ ದಿಂದಲೂ ಸಹಿತ ಹಲವು ಸಲಹೆಗಳು ಬಂದಿವೆ ಹೀಗಾಗಿ ಬೆಂಗಳೂರು ನಗರ ಸೇರಿದಂತೆ ಜಿಲ್ಲಾವಾರು ಕೋವಿಡ್ ವಸ್ತುಸ್ಥಿತಿಯನ್ನು ಪರಿಶೀಲನೆ ಮಾಡಿ ಅಂತಿಮವಾಗಿ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಅವರು ತಿಳಿಸಿದರು.

    ಇಳಿಯುತ್ತಿದೆ ಸೋಂಕಿತರ ಸಂಖ್ಯೆ; ದೇಶದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಎರಡು ತಿಂಗಳಲ್ಲಿಯೇ ಕನಿಷ್ಠ

    ಭಾರತದಲ್ಲಿ  ಕಳೆದ 24 ಗಂಟೆಗಳಲ್ಲಿ ದೈನಿಕ 1,14,460 ಹೊಸ ಪ್ರಕರಣಗಳು ವರದಿಯಾಗಿವೆ. ಕಳೆದ ಎರಡು ತಿಂಗಳಲ್ಲಿಯೇ ಇದು ಅತ್ಯಂತ ಕನಿಷ್ಠ ಸಂಖ್ಯೆಯಾಗಿದೆ. ದೇಶವು ಸತತ 10 ನೇ ದಿನವೂ ದೈನಿಕ 2 ಲಕ್ಷಕ್ಕಿಂತ ಕಡಿಮೆ ಹೊಸ ಪ್ರಕರಣಗಳನ್ನು ದಾಖಲಿಸಿದೆ.

    https://static.pib.gov.in/WriteReadData/userfiles/image/image0012CDK.jpg

    ಭಾರತದ ಸಕ್ರಿಯ ಪ್ರಕರಣಗಳ ಹೊರೆ ಸತತ ಇಳಿಕೆಯಾಗುತ್ತಿದೆ. ಇಂದು ದೇಶದ ಸಕ್ರಿಯ ಪ್ರಕರಣಗಳ ಹೊರೆ 15 ಲಕ್ಷಕ್ಕಿಂತ ಕೆಳಗಿಳಿದಿದೆ ಮತ್ತು ಅದು 14,77,799 ರಲ್ಲಿದೆ. ಸತತ ಆರನೇ ದಿನವೂ ಪ್ರಕರಣಗಳ ಹೊರೆ 20 ಲಕ್ಷಕ್ಕಿಂತ ಕಡಿಮೆ ಇದೆ.

    ಕಳೆದ 24 ಗಂಟೆಗಳಲ್ಲಿ 77,449 ನಿವ್ವಳ ಇಳಿಕೆ ಕಂಡು ಬಂದಿದೆ. ಮತ್ತು ದೇಶದ ಒಟ್ಟು ಪಾಸಿಟಿವ್ ಪ್ರಕರಣಗಳಿಗೆ ಹೋಲಿಸಿದರೆ ಸಕ್ರಿಯ ಪ್ರಕರಣಗಳ ಸಂಖ್ಯೆ ಬರೇ 5.13% ರಷ್ಟಿದೆ.

    https://static.pib.gov.in/WriteReadData/userfiles/image/image002UWXJ.jpg

    ಕೋವಿಡ್ -19 ಸೋಂಕಿನಿಂದ ಹೆಚ್ಚು ಜನರು ಗುಣಮುಖರಾಗುತ್ತಿದ್ದು, ಭಾರತದ ದೈನಿಕ ಚೇತರಿಕೆ/ಗುಣಮುಖ ಪ್ರಕರಣಗಳ ಸಂಖ್ಯೆ ಸತತ 24 ನೇ ದಿನವೂ  ದೈನಿಕ ಹೊಸ ಪ್ರಕರಣಗಳ ಸಂಖ್ಯೆಗಿಂತ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ 1,89,232 ಮಂದಿ ಗುಣಮುಖರಾಗಿದ್ದಾರೆ.

    ಕಳೆದ 24 ಗಂಟೆಗಳಲ್ಲಿ ದೈನಿಕ ಹೊಸ ಪ್ರಕರಣಗಳಿಗೆ ಹೋಲಿಸಿದರೆ ಗುಣಮುಖ ಪ್ರಕರಣಗಳು 74,772 ರಷ್ಟು ಹೆಚ್ಚಾಗಿವೆ.

    https://static.pib.gov.in/WriteReadData/userfiles/image/image003D8UY.jpg

    ಸಾಂಕ್ರಾಮಿಕವು ಜಾಗತಿಕವಾಗಿ ಆರಂಭಗೊಂಡಂದಿನಿಂದ ಸೋಂಕಿತರಾಗಿದ್ದವರ 2,69,84,781 ಮಂದಿ ಈಗಾಗಲೇ ಕೋವಿಡ್ -19 ರಿಂದ ಗುಣಮುಖರಾಗಿದ್ದಾರೆ.  ಇದರಿಂದ  ಒಟ್ಟು  ಗುಣಮುಖ ದರ 93.67%, ಆಗಿದೆ, ಅದು ಹೆಚ್ಚಳದ ಪ್ರವೃತ್ತಿಯನ್ನು ದಾಖಲಿಸುತ್ತಿದೆ.

    ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 20,36,311 ಪರೀಕ್ಷೆಗಳನ್ನು ನಡೆಸಲಾಗಿದೆ ಮತ್ತು ಭಾರತವು ಇದುವರೆಗೆ ಒಟ್ಟು 36.4 ಕೋಟಿ (36,47,46,522) ಪರೀಕ್ಷೆಗಳನ್ನು ನಡೆಸಿದೆ.ಒಂದೆಡೆ ದೇಶಾದ್ಯಂತ ಪರೀಕ್ಷೆಗಳನ್ನು ಹೆಚ್ಚಿಸಲಾಗಿದ್ದರೆ, ಸಾಪ್ತಾಹಿಕವಾಗಿ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದೆ. ಸಾಪ್ತಾಹಿಕ ಪಾಸಿಟಿವ್ ದರ ಪ್ರಸ್ತುತ 6.54% ಇದೆ, ದೈನಿಕ ಪಾಸಿಟಿವ್ ದರ ಇಂದು 5.62% ಆಗಿದೆ. ಅದು ಸತತ 13ನೇ ದಿನವೂ 10% ಗಿಂತ ಕೆಳಗಿದೆ.

    https://static.pib.gov.in/WriteReadData/userfiles/image/image004R1Z2.jpg

    ಇನ್ನೊಂದು ಪ್ರಮುಖ ಸಾಧನೆಯಲ್ಲಿ,  ದೇಶದಲ್ಲಿ ರಾಷ್ಟ್ರವ್ಯಾಪೀ ಲಸಿಕಾ ಆಂದೋಲನದ ಮೂಲಕ ಹಾಕಲಾದ ಕೋವಿಡ್ -19 ಲಸಿಕಾ ಡೋಸ್ ಗಳ ಒಟ್ಟು ಪ್ರಮಾಣ ಇಂದು 23 ಕೋಟಿ ದಾಟಿದೆ. ರಾಷ್ಟ್ರವ್ಯಾಪ್ತಿ ಲಸಿಕಾ ಆಂದೋಲನದ ಮೂಲಕ 23.13 ಕೋಟಿ ಲಸಿಕಾ ಡೋಸ್ ಗಳನ್ನು  ಹಾಕಲಾಗಿದೆ.  ಕಳೆದ 24 ಗಂಟೆಗಳಲ್ಲಿ  33,53,539 ಲಸಿಕಾ ಡೋಸ್ ಗಳನ್ನು ಹಾಕಲಾಗಿದೆ.

    ಇಂದು ಬೆಳಿಗ್ಗೆ 7 ಗಂಟೆಯವರೆಗಿನ  ತಾತ್ಕಾಲಿಕ ವರದಿಗಳ ಪ್ರಕಾರ 23,13,22,417 ಲಸಿಕಾ ಡೋಸ್ ಗಳನ್ನು ಹಾಕಲಾಗಿದೆ.

    ವಿವರಗಳು ಈ ಕೆಳಗಿನಂತಿವೆ:

    ಆರೋಗ್ಯ ಕಾರ್ಯಕರ್ತರು1ನೇ ಡೋಸ್99,63,790
    2ನೇ  ಡೋಸ್68,55,261
    ಮುಂಚೂಣಿ ಕಾರ್ಯಕರ್ತರು.1ನೇ ಡೋಸ್1,61,65,342
    2ನೇ ಡೋಸ್86,62,859
    18-44 ವರ್ಷ ವಯೋಗುಂಪಿನವರು1ನೇ ಡೋಸ್2,77,39,545
    2ನೇ ಡೋಸ್1,61,253
    45 ರಿಂದ  60 ವರ್ಷ ವಯೋಗುಂಪಿನವರು1ನೇ ಡೋಸ್7,07,15,580
    2ನೇ ಡೋಸ್1,12,99,332
    60ವರ್ಷಕ್ಕಿಂತ ಮೇಲ್ಪಟ್ಟವರು1ನೇ ಡೋಸ್6,05,54,245
    2ನೇ ಡೋಸ್1,92,05,210
    ಒಟ್ಟು23,13,22,417

    (ವರದಿ ಪಿಐಬಿ)

    ಜುಲೈ ಅಂತ್ಯಕ್ಕೆ ಯಶವಂತಪುರ ಸಂಪೂರ್ಣ ವ್ಯಾಕ್ಸಿನೇಟೆಡ್ ಕ್ಷೇತ್ರ

    ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ವ್ಯಾಕ್ಸಿನೇಶನ್ ಪ್ರಕ್ರಿಯೆಗೆ ಕಾರ್ಯಯೋಜನೆಯನ್ನು ರೂಪಿಸಿದ್ದು, ಜೂನ್ ಮಾಸಾಂತ್ಯದೊಳಗೆ ವ್ಯಾಕ್ಸಿನೇಶನ್ ಕಾರ್ಯವು ಒಂದು ಹಂತಕ್ಕೆ ಬರಲಿದೆ. ಜುಲೈ ಮಾಸಾಂತ್ಯದೊಳಗೆ ಯಶವಂತಪುರ ಕ್ಷೇತ್ರವು ಶೇಕಡಾ ನೂರು ವ್ಯಾಕ್ಸಿನೇಶನ್ ಪಡೆದ ಕ್ಷೇತ್ರವಾಗಲಿದೆ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.

    ತರಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ನಿಂದ ಮೃತಪಟ್ಟ ಕುಟುಂಬದವರಿಗೆ ವೈಯಕ್ತಿಕವಾಗಿ ಕೊಡಮಾಡುವ 1 ಲಕ್ಷ ರೂಪಾಯಿ ಸಹಾಯಧನವನ್ನು ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ವ್ಯಾಕ್ಸಿನೇಶನ್ ಗೆ ಸಂಬಂಧಪಟ್ಟಂತೆ ಗೊಂದಲಗಳು ಬಗೆಹರಿದಿವೆ. ಕೆಲವರು ವೃಥಾ ಆರೋಪಗಳನ್ನು ಮಾಡಿದರು, ಕೊರತೆ ಇದೆ ಎಂದೆಲ್ಲ ಹೇಳಿದರು. ಆದರೆ, ಎಲ್ಲವೂ ಸರಿ ಇದ್ದು, ನಾಳೆಯಿಂದಲೇ 1 ವಾರ್ಡ್ ಗೆ 1 ಸಾವಿರ ಜನರಿಗೆ ವ್ಯಾಕ್ಸಿನೇಶನ್ ಮಾಡುವ ಕಾರ್ಯಕ್ಕೆ ಚಾಲನೆ ದೊರೆಯಲಿದೆ. 18ರಿಂದ 45 ವರ್ಷದವರಿಗೂ ಲಸಿಕೆ ಲಭ್ಯವಾಗಲಿದೆ.

    ವ್ಯಾಕ್ಸಿನೇಶನ್ ಬಗ್ಗೆಯ ತಪ್ಪು ಕಲ್ಪನೆ ದೂರ ಮಾಡಿಕೊಳ್ಳಿ
    ವ್ಯಾಕ್ಸಿನೇಶನ್ ಬಗ್ಗೆ ಅನೇಕ ಗೊಂದಲಗಳು, ತಪ್ಪು ಕಲ್ಪನೆಗಳು ಮೂಡಿದ್ದು, ಇದನ್ನು ಎಲ್ಲರೂ ದೂರ ಮಾಡಿಕೊಳ್ಳಬೇಕು. ಜ್ವರ ಬರಲಿದೆ, ತಲೆನೋವು ಬರಲಿದೆ ಹೀಗೆ ಏನೆಲ್ಲ ಹೇಳಲಾಗುತ್ತದೆ. ಆದರೆ, ಇದು ಎಲ್ಲರಿಗೂ ಆಗುವುದಿಲ್ಲ. ಒಂದು ವೇಳೆ ಜ್ವರ ಬಂದರೂ ಸಹ ಅದಕ್ಕೆ ವೈದ್ಯರು ಮಾತ್ರೆಯನ್ನು ಕೊಟ್ಟು ಕಳುಹಿಸುತ್ತಾರೆ. ಇಂದು ದೇಶದಲ್ಲಿ ಕೋಟ್ಯಂತರ ಜನ ವ್ಯಾಕ್ಸಿನೇಶನ್ ಪಡೆದಿದ್ದಾರೆ. ಹಾಗಾಗಿ ಭಯ ಬೇಡ. ಇನ್ನು ವ್ಯಾಕ್ಸಿನೇಶನ್ ಸಿಗದು ಎಂಬ ಭಯ, ಆತಂಕ ಯಾರಿಗೂ ಬೇಡ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.

    ಚಿಕಿತ್ಸೆ ಪಡೆಯುವುದೊಂದೇ ಇದಕ್ಕೆ ಪರಿಹಾರ
    ಕೊರೋನಾ ಎರಡನೇ ಅಲೆ ವಿಪರೀತವಾಗಿದೆ. ಇದರಿಂದ ಸಾವು-ನೋವಿನ ಪ್ರಮಾಣ ಹೆಚ್ಚಿವೆ. ಏನೆಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡರೂ ಸಹ ನಿಯಂತ್ರಣ ಕಷ್ಟವಾಗಿದೆ. ನನ್ನ ಕ್ಷೇತ್ರದಲ್ಲಿಯೇ ಸುಮಾರು ಏಳೂವರೆ ಸಾವಿರ ಸೋಂಕು ಪ್ರಕರಣಗಳು ದಾಖಲಾಗಿದ್ದವು. ಅವರಲ್ಲಿ ಆರೂವರೆ ಸಾವಿರಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ. ಹೀಗಾಗಿ ಯಾರೂ ಧೈರ್ಯಗೆಡಬಾರದು ಚಿಕಿತ್ಸೆ ಪಡೆಯುವುದೊಂದೇ ಇದಕ್ಕೆ ಪರಿಹಾರ ಎಂದು ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.

    ಸೋಂಕಿನ ಲಕ್ಷಣಗಳು ಕಂಡಕೂಡಲೇ ವೈದ್ಯರ ಬಳಿ ಚಿಕಿತ್ಸೆ ಪಡೆದು, ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು. ಸೋಂಕು ತಗುಲಿದ್ದರೆ, ಕೂಡಲೇ ಟ್ರಯಾಜ್ ಸೆಂಟರ್ ಗಳಿಗೆ ಭೇಟಿ ಕೊಟ್ಟರೆ, ಅಲ್ಲಿರುವ ವೈದ್ಯರು ಸೋಂಕಿನ ತೀವ್ರತೆ, ಯಾವ ರೀತಿಯ ಚಿಕಿತ್ಸೆ ಅವಶ್ಯಕತೆ ಇದೆ, ಮನೆಯಲ್ಲಿದ್ದರೆ ಸಾಕೇ? ಕೋವಿಡ್ ಕೇರ್ ಸೆಂಟರ್ ಗೆ ಬರಬೇಕೇ? ಆಕ್ಸಿಜನ್ ಬೆಡ್ ಅವಶ್ಯಕತೆ ಇದೆಯೇ? ಎಂಬಿತ್ಯಾದಿ ಮಾಹಿತಿಯನ್ನು ಕೊಡುತ್ತಾರೆ ಎಂದು ಸಚಿವರು ಮಾಹಿತಿ ನೀಡಿದರು.

    ಮನೆಯತ್ತ ವೈದ್ಯರು
    ಕೋವಿಡ್ ನಿಯಂತ್ರಣ ಮಾಡಲೇಬೇಕೆಂಬ ನಿಟ್ಟಿನಲ್ಲಿ ನಮ್ಮ ಕ್ಷೇತ್ರದಲ್ಲಿ ವೈದ್ಯರ ತಂಡದೊಂದಿಗೆ ಸಾಕಷ್ಟು ಶ್ರಮಿಸಲಾಗುತ್ತಿದೆ. ಹೀಗಾಗಿ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದು, ಹಳ್ಳಿಗಳ ಮನೆ ಮನೆಗೆ ಭೇಟಿ ನೀಡುತ್ತಿದ್ದು, ಲಕ್ಷಣಗಳು ಕಂಡು ಬಂದರೆ ಅಲ್ಲಿಯೇ ಟೆಸ್ಟ್ ಮಾಡಿ, ಚಿಕಿತ್ಸೆ ಕೊಡಿಸುವ ಕೆಲಸವನ್ನೂ ಮಾಡಲಾಗುತ್ತಿದೆ ಎಂದು ಸಚಿವರಾದ ಸೋಮಶೇಖರ್ ಅವರು ತಿಳಿಸಿದರು.

    ಕ್ಷೇತ್ರದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ
    ಯಶವಂತಪುರ ಕ್ಷೇತ್ರದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಮುಖ ಕಂಡಿದೆ. ಸಾವಿನ ಪ್ರಮಾಣದಲ್ಲೂ ಕಡಿಮೆಯಾಗುತ್ತಿದೆ. ಹೀಗಾಗಿ ಚಿಕಿತ್ಸೆ ಪಡೆದು ಎಲ್ಲರೂ ಗುಣಮುಖರಾಗಬೇಕು. ಜೊತೆಗೆ ವ್ಯಾಕ್ಸಿನೇಶನ್ ಪಡೆದುಕೊಳ್ಳಬೇಕು ಎಂದು ಸಚಿವರಾದ ಎಸ್.ಟಿ.ಸೋಮಶೇಖರ್ ಕಿವಿಮಾತು ಹೇಳಿದರು.

    24 ಕುಟುಂಬಗಳಿಗೆ 1 ಲಕ್ಷ ರೂ. ಸಹಾಯಧನ ವಿತರಣೆ
    ಕೊರೋನಾ ಮಹಾಮಾರಿಯಿಂದ ಮೃತಪಟ್ಟ ಆರ್ಥಿಕವಾಗಿ ಹಿಂದುಳಿದ ಕುಟುಂಬದವರಿಗೆ ಸಚಿವರಾದ ಸೋಮಶೇಖರ್ ಅವರು 1 ಲಕ್ಷ ರೂಪಾಯಿಗಳ ವೈಯಕ್ತಿಕ ಧನಸಹಾಯವನ್ನು ಇಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ವಿವಿಧೆಡೆ ವಿತರಣೆ ಮಾಡಿದರು. ತರಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಮಂದಿಗೆ, ಸೋಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 6 ಮಂದಿ ಹಾಗೂ ನೆಲಗುಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 8 ಮಂದಿಯ ಆರ್ಥಿಕವಾಗಿ ಹಿಂದುಳಿದವರ ಕುಟುಂಬ ವರ್ಗದವರಿಗೆ ಸಹಾಯಧನವನ್ನು ಸಚಿವರು ವಿತರಿಸಿದರು. ಈ ಮೂಲಕ ಒಟ್ಟು 24 ಕುಟುಂಬಗಳಿಗೆ ಭಾನುವಾರ ವೈಯಕ್ತಿಕವಾಗಿ 1 ಲಕ್ಷ ರೂಪಾಯಿಗಳ ಸಹಾಯಧನವನ್ನು ಸಚಿವರು ವಿತರಣೆ ಮಾಡಿದರು.

    ಕೊರೋನಾ ವಾರಿಯರ್ಸ್ ಗಳಿಗೆ ಪ್ರೋತ್ಸಾಹಧನ ವಿತರಣೆ
    ಸೋಮನಹಳ್ಳಿ, ತರಳು, ನೆಲಗುಳಿ ಗ್ರಾಮ ಪಂಚಾಯಿತಿಗಳ ಅಂಗನವಾಡಿ, ಆಶಾ ಕಾರ್ಯಕರ್ತರಿಗೆ ಹಾಗೂ ವಾಟರ್ ಮನ್ ಗಳಿಗೆ ಆಯಾ ಗ್ರಾಮ ಪಂಚಾಯಿತಿ ವತಿಯಿಂದ ಪ್ರೋತ್ಸಾಹಧನ ಮತ್ತು ಪಡಿತರ ಕಿಟ್ ಅನ್ನು ವಿತರಣೆ ಮಾಡಲಾಯಿತು.
    ಕಗ್ಗಲಿಪುರ ಗ್ರಾಮ ಪಂಚಾಯಿತಿ ವತಿಯಿಂದ ಕೊರೋನಾ ವಾರಿಯರ್ಸ್ ಗಳಾದ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು, ಆಸ್ಪತ್ರೆ ಸಿಬ್ಬಂದಿಗೆ 5 ಸಾವಿರ ರೂಪಾಯಿ ಪ್ರೋತ್ಸಾಹಧನ, ರೇಷನ್ ಕಿಟ್ ಗಳನ್ನು ವಿತರಿಸಲಾಯಿತು.

    ಸರ್ವಋತುವಿನಲ್ಲೂ ಒಣಗೇ ಇರುತ್ತಿದ್ದ ಚಿತ್ರಾವತಿ ನದಿ ದಂಡೆಯಲ್ಲಿ ʼಜ್ಞಾನಗಂಗೆʼಯನ್ನು ಹರಿಸಿದ ಶಿಕ್ಷಣ ಸಂತ


    ಇಂದು ಗಾಂಧೀವಾದಿ ಎಚ್ ನರಸಿಂಹಯ್ಯ ನವರ 101 ನೇ ಜನ್ಮದಿನ. ಅವರು ಕಟ್ಟಿದ ಶಾಲೆಯಲ್ಲೇ ಓದಿದ ಹಿರಿಯ ಪತ್ರಕರ್ತ CKNEWSNOW.COM ಜಾಲ ತಾಣದ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ ಪಿ.ಕೆ. ಚನ್ನಕೃಷ್ಣ ಅವರು ಎಚ್ ಎನ್ ಅವರೊಂದಿಗಿನ ತಮ್ಮ ನೆನಪಿನ ಬುತ್ತಿಯನ್ನು ಇಲ್ಲಿ ದಾಖಲಿಸಿದ್ದಾರೆ.


    ಬೆಂಗಳೂರಿನ ಹೃದಯ ಮೆಜೆಸ್ಟಿಕ್‌ನಿಂದ ಸರಿಯಾಗಿ ನೂರಎರಡು ಕಿ.ಮೀ ದೂರದಲ್ಲಿರುವ ಬಾಗೇಪಲ್ಲಿ ಎಂಬ ನತದೃಷ್ಟ ಪಟ್ಟಣಕ್ಕೆ ‘ಭಾಗ್ಯನಗರ’ ಎಂಬ ಇನ್ನೊಂದು ಹೆಸರಿದೆ. ಹೆಸರಲ್ಲೇನಿದೆ ಭಾಗ್ಯ? ಇವತ್ತಿಗೂ ಭಾಗ್ಯವನ್ನೇ ಕಾಣದ ಇಲ್ಲಿನ ಜನರು ನೆಚ್ಚಿಕೊಂಡಿರುವುದು ಅನತಿದೂರದಲ್ಲಿ ನೆಲೆಸಿರುವ ಗಡಿದಂ ಶ್ರೀ ವೆಂಕಟೇಶ್ವರ ಸ್ವಾಮಿ ಅವರನ್ನು ಮತ್ತೂ ತಮ್ಮ ಬೆವರನ್ನು.

    ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಪರಗೋಡು-ಚಿತ್ರಾವತಿ ಅಣೆಕಟ್ಟೆ ದಾಟಿ ಎರಡುಮೂರು ನಿಮಿಷ ಕ್ರಮಿಸಿ ಬಸ್ಸಿನ ಕಿಟಕಿಯಿಂದ ಬಲಕ್ಕೆ ಇಣುಕಿದರೆ ದೂರದಲ್ಲಿ ಗಡಿದಂ ದೇಗುಲದ ರಾಜಗೋಪುರ ವಿರಾಜಮಾನವಾಗಿ ಕಾಣುತ್ತಿದೆ. ಆ ನೋಟವನ್ನು ಸ್ವಲ್ಪ ಮೊಟಕು ಮಾಡಿದರೆ ಕಲ್ಲುಬಂಡೆಗಳ ಗುಡ್ಡಂತೆ ಕಾಣುವ ಬೆಟ್ಟದ ಮುನ್ನೆಲೆಯಲ್ಲಿ ಮರಗಳ ದೊಡ್ಡ ಗುಂಪು ಗೋಚರವಾಗುತ್ತದೆ. ಆ ಹಸಿರುರಾಶಿ ನಡುವೆ ವಿಶಾಲವಾಗಿ ಮೈಚಾಚಿಕೊಂಡಿದೆ ಬಾಗೇಪಲ್ಲಿ ನ್ಯಾಷನಲ್ ಕಾಲೇಜು.

    ಈ ಪರಿ ಹಸಿರು ಹೊದಿಕೆ ಹೊದ್ದುಕೊಂಡು ತಣ್ಣಗಿರುವ ಈ ಕಾಲೇಜು ನನ್ನ ಪಾಲಿಗೆ ಅಕ್ಷರಶಃ ಅಕ್ಷರಕಾಶಿಯೇ. ಮೂರು ವರ್ಷ ನಾನೂ ಆ ಕಾಶಿಯಲ್ಲೇ ಇದ್ದೆ. ದೇವರನ್ನೇ ನಂಬದ ವಿಚಾರವಾದಿ ಪದ್ಮಭೂಷಣ ಡಾ.ಎಚ್.ನರಸಿಂಹಯ್ಯನವರು ಅದರ ನಿರ್ಮಾತೃ. ತಮ್ಮ ನರನಾಡಿಗಳಲ್ಲೂ ವಿಜ್ಞಾನವನ್ನೇ ತುಂಬಿಕೊಂಡು ವೈಚಾರಿಕತೆಯನ್ನೇ ಉಸಿರಾಡುತ್ತಿದ್ದ ಅವರು ವಿಶಾಲ ಹೃದಯದಿಂದ ಹಳ್ಳಿಮಕ್ಕಳ ಉದ್ಧಾರಕ್ಕಾಗಿ ಕಾಲೇಜನ್ನು ಕಟ್ಟಿಸಿದ್ದರು. ಬಡಮಕ್ಕಳು, ಅದರಲ್ಲೂ ರೈತಮಕ್ಕಳಿಗೇ ಒಳ್ಳೆಯ & ಗುಣಮಟ್ಟದ ಶಿಕ್ಷಣ ಸಿಗಲಿ ಎಂದು ಆಶಿಸಿ ಈ ಮಹತ್ಕಾರ್ಯ ಮಾಡಿದ್ದರು.

    ಹೆಜ್ಜೆಗೆ ಒಂದುನೂರು ತೆಲುಗು ಶಬ್ದಗಳೇ ಕೇಳುವ ಬಾಗೇಪಲ್ಲಿಗೆ 1976ರಲ್ಲಿ ನ್ಯಾಷನಲ್ ಕಾಲೇಜು ಬಂದಿತು. ಎಚ್ಚೆನ್ ಎಂಬ ʼಶಿಕ್ಷಣಸಂತʼ ಅಲ್ಲಿಗೆ ಹೆಜ್ಜೆ ಇಟ್ಟಿದ್ದು ಆಗಲೇ. ಆ ಹೊತ್ತಿಗೆ ಕರ್ನಾಟಕದ ಶಿಕ್ಷಣ ವ್ಯವಸ್ಥೆ ದುಡ್ಡಿದ್ದವರ ಪಾಲಾಗುವ ಅನಿಷ್ಠ ಪರ್ವ ಆರಂಭವಾಗಿತ್ತು. ಬೆಂಗಳೂರಿನಲ್ಲಿ ಮಾತ್ರವಲ್ಲ, ರಾಜ್ಯವ್ಯಾಪಿ ಜಾತಿಗೊಂದು ಶಿಕ್ಷಣ ಸಂಸ್ಥೆ ತಲೆ ಎತ್ತುತ್ತಿದ್ದ, ಡೊನೇಷನ್ ಹಾವಳಿಗೆ ಗಟ್ಟಿ ತಳಪಾಯ ಹಾಕುತ್ತಿದ್ದ ವೇಳೆಯಲ್ಲೇ ಎಚ್ಚೆನ್ ಅವರು ಕನ್ನಡಕ್ಕೆ ಹತ್ತಿರವಿದ್ದರೂ ಅದರ ಸೊಗಡಿನಿಂದ ಬಹುದೂರವಿದ್ದ ಬಾಗೇಪಲ್ಲಿಯಲ್ಲಿ ಕಾಲೇಜಿಗೆ ಅಡಿಗಲ್ಲು ಹಾಕಿಬಿಟ್ಟರು. ಅವರ ನಿರ್ಧಾರ ಕೇಳಿ ಮೂಗುಮುರಿದವರೆಷ್ಟೋ.. ಲೆಕ್ಕವಿಲ್ಲ. ಬೆಂಗಳೂರಿನಲ್ಲಿ ಬಿಟ್ಟು ನಮ್ಮೂರಲ್ಲಿ ಈ ಮನುಷ್ಯ ಏಕೆ ಕಾಲೇಜು ಮಾಡುತ್ತಿದ್ದಾರೆಂದು ಸ್ಥಳೀಯರೂ ಚಕಿತರಾಗಿ ಅವರನ್ನು “ಬಂಧುಗಳೇ ಇಲ್ಲದ ಭೈರಾಗಿ” ಎಂದು ಮೂದಲಿಸಿದ್ದರು.

    ಆದರೆ, ಎಚ್ಚೆನ್ ಆಲೋಚನೆಯೇ ಬೇರೆಯಾಗಿತ್ತು. ಅನಕ್ಷರತೆ, ಬಡತನ, ಬರ ಮತ್ತು ತೆಲುಗು ಮೈವೆತ್ತಿದ್ದ ಆ ನೆಲಕ್ಕೆ ಈ ಕಾಲೇಜು ನಿಜಕ್ಕೂ ಒಂದು ಓಯೆಸಿಸ್. ’ಅ’ಭಾಗ್ಯನಗರದ ಆಸುಪಾಸಿನ ಹೆಣ್ಣುಮಕ್ಕಳಿಗೆ ನಿಜವಾಗಿಯೂ ಎಚ್ಚೆನ್ ಭಾಗ್ಯದ ಬಾಗಿಲನ್ನೇ ತೆರೆದರು. ಆಗ ಪಿಯುಸಿ ದಾಟಿ ಡಿಗ್ರಿ ಬೇಕಿದ್ದರೆ 42 ಕಿ.ಮೀ ದೂರದ ಚಿಕ್ಕಬಳ್ಳಾಪುರ ಮುನಿಸಿಪಲ್ ಕಾಲೇಜಿಗೆ ಹೋಗಬೇಕಿತ್ತು. ಆಗ ಎಂತಹ ದುಃಸ್ಥಿತಿ ಇತ್ತೆಂದರೆ ಪೋಷಕರು ತಮ್ಮ ಹೆಣ್ಣುಮಕ್ಕಳನ್ನು ಬಾಗೇಪಲ್ಲಿ ಹೆದ್ದಾರಿಯ ಹೆಬ್ಬಾಗಿಲು ಟಿಬಿ ಕ್ರಾಸ್ ದಾಟಿಸುವುದು ಕೂಡ ಕಷ್ಟವಿದ್ದ ಕಾಲವದು. ಎಷ್ಟೋ ಪ್ರತಿಭಾವಂತ ಹೆಣ್ಣುಮಕ್ಕಳು ಹತ್ತಕ್ಕೆ ಇಲ್ಲವೇ ಪಿಯುಸಿ ಆದ ಕೂಡಲೇ ಹಸೆಮಣೆಗೆ ಸಿದ್ಧರಾಗಿಬಿಡುತ್ತಿದ್ದರು. “ನಮ್ಮ ಮಗಳದ್ದು ಪಿಯುಸಿ ಆಯಿತು, ಎಸ್ಸೆಸ್ಸೆಲ್ಸಿ ಪಾಸಾಯಿತು, ಇನ್ನೇನಿದ್ದರೂ ಈ ವರ್ಷ ಮದುವೆ” ಎಂದು ಅಪ್ಪ-ಅಮ್ಮ ಹೇಳುತ್ತಿದ್ದ ಸಮಯವದು. ಹುಡುಗರ ಕಥೆಯೂ ಹೆಚ್ಚೂಕಡಿಮೆ ಅಷ್ಟೇ.

    ನಮ್ಮ ಎಚ್ಚೆನ್ ಇದನ್ನು ಬದಲಾಯಿಸಿದರು. ಬಾಗೇಪಲ್ಲಿ ಎಂಬ ಗಡಿಪಟ್ಟಣಕ್ಕೆ ಬರಲು ತಾಯಿ ಸರಸ್ವತಿಗೆ ಬಾಗಿಲು ತೆರೆದದ್ದು ಅವರೇ. ಸರ್ವಋತುವಿನಲ್ಲೂ ಒಣಗೇ ಇರುತ್ತಿದ್ದ ಚಿತ್ರಾವತಿ ನದಿ ದಂಡೆಯಲ್ಲಿ ʼಜ್ಞಾನಗಂಗೆʼಯನ್ನು ಅವರು ಹರಿಯುವಂತೆ ಮಾಡಿದ್ದು ಹೀಗೆ.

    ಗೌರಿಬಿದನೂರಿನಲ್ಲೂ ಹೀಗೆ ಆಯಿತು. 1964ರಲ್ಲಿಯೇ ಅಲ್ಲೂ ನ್ಯಾಷನಲ್ ಕಾಲೇಜು ಸ್ಥಾಪಿಸಿ ಉಳ್ಳವರ ಮನೆಗಳ ಕೂಲಿಗಳಾಗುತ್ತಿದ್ದ ಹುಡುಗರ ಕೈಗೆ ಪೆನ್ನು-ಪುಸ್ತಕ ಕೊಟ್ಟರು ಎಚ್ಚೆನ್. ಡಿಗ್ರಿಯ ಉತ್ಕಟತೆ ಇದ್ದರೂ ಗತ್ಯಂತರವಿಲ್ಲದೆ ಮದುವೆಗೆ ಕೊರಳೊಡ್ಡುತ್ತಿದ್ದ ಯುವತಿಯರು ಕಾಲೇಜಿನ‌ ಲಾಬ್‌ಗಳಲ್ಲಿ ಪ್ರಯೋಗ ಮಾಡತೊಡಗಿದರು. ಗ್ರಾಮೀಣ ವಿದ್ಯಾರ್ಥಿಗಳಿಗೆ, ಅದರಲ್ಲೂ ಕನ್ನಡದ ಕಸುವೇ ಕಾಣದ ನೆಲದಲ್ಲಿ ಶಿಕ್ಷಣ ಕೈಂಕರ್ಯವನ್ನು ಯಶಸ್ವಿಯಾಗಿ ಶುರು ಮಾಡಿದ್ದರು ಅವರು. ಒಣಗಿ ಬೆಂಡಾಗಿ ಹೋಗಿದ್ದ ಪಿನಾಕಿನಿ ನದಿಯ ತಟದಲ್ಲಿ ಜ್ಞಾನವೃಕ್ಷಗಳು ಚಿಗುರೊಡೆತೊಡಗಿದ್ದು ಹೀಗೆ.

    ಅವರೆಡೂ ಕಾಲೇಜುಗಳನ್ನೂ ಸ್ಥಾಪಿಸಿದಾಗ ಕೋಲಾರ ಜಿಲ್ಲೆಯೊಂದೇ ಇತ್ತು. ಆಗ ಗೌರಿಬಿದನೂರು, ಬಾಗೇಪಲ್ಲಿ ತಾಲೂಕುಗಳು ಕರ್ನಾಟಕದಲ್ಲೇ ಅತ್ಯಂತ ಹಿಂದುಳಿದ ಪ್ರದೇಶಗಳೆಂಬ ಕುಖ್ಯಾತಿಗೆ ಒಳಗಾಗಿದ್ದವು. ಆದರೂ ಎಚ್ಚೆನ್ ಅವರು ಇವೆರಡೂ ಪ್ರದೇಶಗಳಿಗೆ ಜ್ಞಾನಗಂಗೆಯನ್ನು ಹರಿಸಿ ಶೈಕ್ಷಣಿಕವಾಗಿ ಮರುಭೂಮಿಯಾಗಿದ್ದ ನೆಲದಲ್ಲಿ ಜ್ಞಾನಸೆಲೆಯನ್ನು ಉಕ್ಕಿಸಿದ್ದರು. ಓದಿನ, ಅಪರಿಮಿತ ಜ್ಞಾನದ ಹಸಿವಿನಿಂದ ಹೊಸೂರು ಎಂಬ ಹಳ್ಳಿಯಿಂದ ಬೆಂಗಳೂರಿಗೆ 85 ಕಿ.ಮೀ ನಡೆದಿದ್ದ ಅವರು ಅದಕ್ಕೆ ಪ್ರತಿಯಾಗಿ ಈ ಎರಡು ತಾಲೂಕುಗಳಿಗೆ ಎರಡು ಉತ್ಕೃಷ್ಟ ಕಾಲೇಜುಗಳನ್ನು ಕೊಟ್ಟು ಅಜರಾಮರರಾದರು.


    ಇನ್ನು ನಾನು. ಗುಡಿಬಂಡೆಯಲ್ಲಿ ಪಿಯುಸಿ ಮುಗಿಸಿ ಡಿಗ್ರಿಗೆ ಯಾವ ಕಾಲೇಜು ಸೇರಬೇಕೆಂಬ ಪರಮ ಗೊಂದಲದಲ್ಲಿದ್ದ ಸಂದರ್ಭವದು. ಚಿಕ್ಕಬಳ್ಳಾಪುರದ ಮುನಿಸಿಪಲ್ ಕಾಲೇಜಿಗೆ ಸೇರುವಂತೆ ಕೆಲ ಗೆಳೆಯರು ಹೇಳಿದ್ದರು. ಅದೇ ಹೊತ್ತಿಗೇ ನಮ್ಮ ಗುಡಿಬಂಡೆಯಲ್ಲಿ ಎಚ್ಚೆನ್ ಹೆಸರು ಜನಜನಿತವಾಗಿತ್ತು. ನನ್ನ ಜತೆಯಲ್ಲೇ 10ನೇ ತರಗತಿ ಓದಿದ್ದ ಎಚ್.ನರಸಿಂಹಯ್ಯ ಎಂಬ ಗೆಳೆಯನ ಮೂಲಕ ಎಚ್ಚೆನ್‌ ಅವರ ಹೆಸರು ನನಗೆ ಗೊತ್ತಾಯಿತು.

    ಹೀಗೆ ಬಾಗೇಪಲ್ಲಿ ನ್ಯಾಷನಲ್ ಕಾಲೇಜು ಸೇರಿದ ನನಗೆ ಅನೇಕ ಸಲ ಎಚ್ಚೆನ್ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. ಪ್ರಥಮ ಪದವಿಯಲ್ಲಿದ್ದಾಗಲೇ ನನಗೆ ಅವರ ದರ್ಶನವಾಯಿತು. ಆಮೇಲೆ ವರ್ಷಕ್ಕೆರಡು ಅಥವಾ ಮೂರು ಬಾರಿಯಾದರೂ ಅವರನ್ನು ನೋಡುವ ಭಾಗ್ಯವಿರುತ್ತಿತ್ತು. ಮುಖ್ಯವಾಗಿ ಎನ್ನೆಸ್ಸೆಸ್ ಕ್ಯಾಂಪಿನ ಸಮಾರೋಪಕ್ಕೆ ಅವರು ಬರುವುದು ತಪ್ಪುತ್ತಿರಲಿಲ್ಲ. ಇದಾದ ಮೇಲೆ ಬೆಂಗಳೂರಿಗೆ ಬಂದಾಗ ಬಸವನಗುಡಿ ನ್ಯಾಷನಲ್ ಕಾಲೇಜು ಹಾಸ್ಟೆಲ್‌ನಲ್ಲಿ ಅವರನ್ನು ಭೇಟಿಯಾಗಿದ್ದೆ. ಒಂದು ದಿನ ಕಲ್ಲುಪ್ಪು ಬೆರೆಸಿದ್ದ ಬಿಸಿನೀರಿನಲ್ಲಿ ಕಾಲಿಟ್ಟುಕೊಂಡು ಮರದ ಕುರ್ಚಿ ಮೇಲೆ ಕೂತಿದ್ದ ಅವರನ್ನು ನೋಡಿದಾಗ ಮಾತು ಹೊರಡದೇ ತಡವರಿಸಿದ್ದೆ. ‘ಕಾಲು ನೋವು ಕಣಪ್ಪಾ, ಉಪ್ಪುನೀರು ಬಿಸಿ ಒಳ್ಳೆಯದು’ ಎಂದು ಅವರೇ ಹೇಳಿದ್ದರು. ತಿನ್ನಲೊಂದು ಹಣ್ಣು ಕೊಟ್ಟರು. ಅದಾದ ಮೇಲೆ ಬೆಂಗಳೂರಿಗೆ ಬಂದಾಗಲೆಲ್ಲ ನನ್ನ ಬಸವನಗುಡಿ ಯಾತ್ರೆ ತಪ್ಪುತ್ತಿರಲಿಲ್ಲ. ಆಗೆಲ್ಲ ಎಚ್ಚೆನ್ ಭೇಟಿ ಆಗದಿದ್ದರೆ ಬಸವನಗುಡಿ ಕಾಲೇಜನ್ನೇ ಕಣ್ತುಂಬಿಕೊಂಡು ಊರಿಗೆ ಮರಳುತ್ತಿದ್ದೆ.


    ಪತ್ರಿಕೋದ್ಯಮಕ್ಕೆ ಬಂದ ಮೇಲೆ ಅವರನ್ನು ನಿರಂತರವಾಗಿ ಭೇಟಿಯಾಗುವುದು, ಅವರ ಭಾಷಣಗಳನ್ನು ವರದಿ ಮಾಡುವುದು ಶುರುವಾಯಿತು. ಆ ಲಗಾಯ್ತಿನಿಂದ ನನಗೆ ಅವರ ಅರಿವು ಇನ್ನೊಂದು ಮಜಲು ಮುಟ್ಟಿತು. ಎಚ್.ಡಿ. ದೇವೇಗೌಡರ ಕ್ಯಾಬಿನೇಟ್‌ನಲ್ಲಿ ಸಚಿವರಾಗಿದ್ದ ಎಂ.ಪಿ. ಪ್ರಕಾಶ್‌ರನ್ನು ಒಮ್ಮೆ ಎಚ್ಚೆನ್ ಅವರು ಹೊಸೂರು ಶಾಲೆಗೆ ಭಾಷಣಕಾರರನ್ನಾಗಿ ಕರೆತಂದಿದ್ದರು. ನಾನು ಪತ್ರಕರ್ತನಾಗಿ ಅವರ ಭಾಷಣವನ್ನು ಮೊದಲು ವರದಿ ಮಾಡಿದ್ದು ಅದೇ ಮೊದಲು. ಚಿಕ್ಕಬಳ್ಳಾಪುರದ ವಾರ್ತಾಧಿಕಾರಿ ಸಿ.ಎಂ.ರಂಗಾರೆಡ್ಡಿ ಸಾರಥ್ಯದಲ್ಲಿ ಹೊಸೂರಿಗೆ ಚಿಕ್ಕಬಳ್ಳಾಪುರ ಪತ್ರಕರ್ತರ ಸವಾರಿ ಹೋಗಿತ್ತು. ಹಿರಿಯರಾದ ಭವಾನಿ ಲಕ್ಷ್ಮೀನಾರಾಯಣ ಮತ್ತವರ ಕ್ಯಾಮೆರಾ ಹಾಗೂ ವಯಸ್ಸಿನಲ್ಲಿ ಕೊಂಚ ಹಿರಿಯರಾದ ʼಸಂಯುಕ್ತ ಕರ್ನಾಟಕʼ ವರದಿಗಾರ ಜಯರಾಂ ಜತೆಯಲ್ಲಿದ್ದರು.

    ಮಾಮೂಲಿಯಾಗಿ ಸಚಿವರು ಬಂದರೆ ಅವರ ಭಾಷಣವನ್ನೇ ಸುದ್ದಿ ಮಾಡುತ್ತಿದ್ದ ದಿನಗಳವು. ನನಗೂ ಅದೇ ಸರಿ ಅಂತ ನಂಬಿಕೆ. ಆದರೆ, ಕಾರ್ಯಕ್ರಮ ಮುಗಿಸಿ ಚಿಕ್ಕಬಳ್ಳಾಪುರಕ್ಕೆ ವಾಪಸ್ ಬಂದು ಸುದ್ದಿ ಬರೆದು ಮುಗಿಸಿದ ಮೇಲೆ ಎಚ್ಚೆನ್ ಹೇಳಿದ್ದೇ ʼಇಂಟ್ರೋʼ ಆಗಿ ದೇಶಾವರಿಯಾಗಿ ಭಾಷಣ ಮಾಡಿದ ಎಂ.ಪಿ.ಪ್ರಕಾಶ್ ಅವರ ಮಾತುಗಳೆಲ್ಲ ಸಬ್ ಹೆಡ್ಡಿಗೆ ಬಂದಿದ್ದವು. “ಹಳ್ಳಿ ಮಕ್ಕಳು ಓದಬೇಕು, ಯಾಕೆ?” ಎಂದು ಕಾರಣಗಳನ್ನು ಹೇಳುತ್ತಲೇ ಹೊಸೂರು ನ್ಯಾಷನಲ್‌ ಶಾಲೆ ಕಥೆಯನ್ನು ಹೇಳಿದ್ದರು ಎಚ್ಚೆನ್.‌ ನನ್ನ ಮೇಲೆ ಅಚ್ಚಳಿಯದೇ ಬಿದ್ದ ಮುದ್ರೆ ಅದು.

    ಮತ್ತೊಂದು ಪ್ರಸಂಗ. ಆವತ್ತೊಂದು ದಿನ ನನಗೆ ಬೆಳಗ್ಗೆಯೇ ಮುಖ್ಯಮಂತ್ರಿ ನಿವಾಸಕ್ಕೆ ಅಸೈನ್‌ಮೆಂಟಿತ್ತು. ʼಸಂಯುಕ್ತ ಕರ್ನಾಟಕʼ ಪತ್ರಿಕೆಯ ಮುಖ್ಯ ವರದಿಗಾರ ಯಗಟಿ ಮೋಹನ್ ನನಗೆ ಮುಖ್ಯಮಂತ್ರಿಗಳ ಆಧಿಕೃತ ನಿವಾಸ ಮತ್ತು ಕಚೇರಿ ʼಅನುಗ್ರಹʼ, ʼಕೃಷ್ಣಾʼಕ್ಕೆ ಕಳಿಸಿದ್ದರು. ನಾನು ಬೆಳಗ್ಗೆ ಎಂಟೂವರೆಗೇ ಅನುಗ್ರಹದಲ್ಲಿದ್ದೆ. ಮುಖ್ಯಮಂತ್ರಿಗಳ ಫೋಟೊಗ್ರಾಫರ್ ನಟರಾಜ್ ಅವರು ಗಡಿಬಿಡಿಯಿಂದ ʼಅನುಗ್ರಹʼದ ಗೇಟಿಗೆ ಓಡಿಬಂದರು. “ಯಾಕೆ? ಯಾರು ಬರ್ತಾರೆ ಸರ್” ಅಂತ ಕೇಳಿದೆ. ಯಾರೋ ಹಿರಿಯರು, ಗಾಂಧೀವಾದಿಗಳು ಬರ್ತಾರಂತೆ ಅಂದರು ಅವರು. ಕೆಲ ಕ್ಷಣಗಳಲ್ಲೇ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರೂ ʼಅನುಗ್ರಹʼದ ಗೇಟಿಗೆ ಬಂದು ನಿಂತರು. ಆಗ ಅಂಬಾಸಿಡರ್ ಕಾರಿನಲ್ಲಿ ಬಂದು ಇಳಿದವರು ನಮ್ಮ ಎಚ್ಚೆನ್. ಬಾಗೇಪಲ್ಲಿ ನ್ಯಾಷನಲ್ ಕಾಲೇಜು ಕಾರ್ಯಕ್ರಮವೊಂದಕ್ಕೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಲು ಅವರು ಬಂದಿದ್ದರು. ಸುಮಾರು ಹತ್ತದಿನೈದು ನಿಮಿಷಗಳ ಮಾತುಕತೆಯ ನಂತರ ಕೃಷ್ಣ ಅವರು ಗೇಟಿನವರೆಗೂ ಬಂದು ಎಚ್ಚೆನ್ ಅವರನ್ನು ಬೀಳ್ಕೊಟ್ಟರು. ನಾನು ಅವರಿಗೆ ನಮಸ್ಕಾರ ಹಾಕಿ, “ಸರ್, ನನ್ನ ಹೆಸರು ಚನ್ನಕೃಷ್ಣ, ಬಾಗೇಪಲ್ಲಿ ನ್ಯಾಷನಲ್ ಕಾಲೇಜು ವಿದ್ಯಾರ್ಥಿ” ಎಂದೆ. ಅವರಿಗೆ ಬಹಳ ಸಂತೋಷವಾಯಿತು. ನನ್ನ ಬೆನ್ನುತಟ್ಟಿದರು. ಪಕ್ಕದಲ್ಲೇ ಇದ್ದ ಕೃಷ್ಣ ಅವರು ನನ್ನಡೆ ನೋಡಿ ನಗೆಬೀರಿ, “ನೋಡಿ, ನಿಮ್ಮ ಶಿಷ್ಯರೂ ಇಲ್ಲೂ ಇದ್ದಾರೆ” ಎಂದರು. ನನ್ನ ಹೆಮ್ಮೆ, ಆನಂದಕ್ಕೆ ಪಾರವೇ ಇಲ್ಲ.

    ಎಚ್ಚೆನ್ ಎಂದರೆ ಅಷ್ಟು ಎತ್ತರ. ಅವರ ಸರಳತೆ, ಪ್ರಾಮಾಣಿಕತೆ, ಪ್ರಖರ ವಿಚಾರ, ನಂಬಿದ ಗಾಂಧೀವಾದ, ತೊಟ್ಟ ಖಾದಿ, ಆಡಿದ ಮಾತು… ಎಲ್ಲವನ್ನೂ ತಮ್ಮ ಕೊನೆಕ್ಷಣದವರೆಗೂ ಜೀವಿಸಿ ಬಿಟ್ಟುಹೋಗಿದ್ದಾರೆ. ಕಾಲೇಜಿನಲ್ಲಿದ್ದಷ್ಟೂ ದಿನ ಪಾಠ ಮಾಡದಿದ್ದರೂ ನಮಗೆ ಅವರು ಗುರುವೇ ಆಗಿದ್ದರು. ನಮಗೆ ಬೋಧಿಸುತ್ತಿದ್ದ ಎನ್ನೆನ್, ಎಚ್ಚಾರ್ಕೆ, ನಿಂಗಪ್ಪ, ರಾಜು, ಎಲ್ಲಾರ‍್ಕೆ, ಆರ‍್ಟಿವಿ ಮತ್ತೂ ಕಲಿಸದಿದ್ದರೂ ಜೀವನದ ಪಾಠ ಹೇಳಿಕೊಟ್ಟ ಡಿಎಸ್, ಬಿಪಿವಿ, ಕೆಟಿವಿ, ಸಿದ್ದಪ್ಪ ಅವರೆಲ್ಲರಲ್ಲೂ ನಾನು ಕಂಡಿದ್ದು ಎಚ್ಚೆನ್ ಎಂಬ ಸ್ಫೂರ್ತಿಯ ಸೆಲೆಯನ್ನೆ.

    2020ರ ಜೂನ್ 6ರಂದು ಎಚ್ಚೆನ್ ಅವರ ಜನ್ಮಶಮಾನೋತ್ಸವವಿತ್ತು. ಆವತ್ತೇ ನನಗೆ ಇದೆಲ್ಲವನ್ನು ಬರೆಯಲಾಗದ್ದಕ್ಕೆ ವಿಷಾದವಿದೆ. ಕೆಲ ತಿಂಗಳ ಹಿಂದೆ ನನ್ನ ಹಿರಿಯ ಮಗಳ ಜತೆ ಬಸವನಗುಡಿ ಕಾಲೇಜಿಗೆ ಹೋಗಿದ್ದೆ. ನನ್ನ ಎಕಾಮಿಕ್ಸ್ ಗುರುವರ್ಯರಾದ ಎಚ್ಚಾರ‍್ಕೆ (ಎಚ್.ಆರ್.ಕೃಷ್ಣಮೂರ್ತಿ) ಡಿಗ್ರಿ ಕಾಲೇಜಿನ ಪ್ರಾಂಶುಪಾಲರ ಕುರ್ಚಿಯಲ್ಲಿದ್ದರು. ನನ್ನ ಕಂಗಳು ತುಂಬಿಬಂದಿದ್ದವು. ಗುರುವಲ್ಲದ ಗೆಳೆಯ ಪ್ರಕಾಶ್, ಬಾಗೇಪಲ್ಲಿಯಿಂದ ಬಸವನಗುಡಿಗೆ ಶಿಫ್ಟ್ ಆಗಿದ್ದರು. ಎಚ್ಚೆನ್ ಕೋಣೆಯನ್ನು ತೋರಿಸಿದರು. ಅಲ್ಲಿ ನಿಲ್ಲಿಸಿ ನಮ್ಮಿಬ್ಬರ ಫೋಟೋ ತೆಗೆದರು. ಎಚ್ಚೆನ್ ಮಲಗಿದ್ದ ಕಾಟ್, ಹಾಸಿಗೆ, ದಿಂಬು, ಮಿಕ್ಸಿ, ನೀರಿನ ಫಿಲ್ಟರ್, ಗ್ಲಾಸು ಜತೆಗೆ ಅವರು ಧರಿಸಿದ್ದ ಉಡುಪುಗಳು ಅಲ್ಲೇ ಇವೆ, ಜತನವಾಗಿ.. ಬಹು ಜೋಪಾನವಾಗಿ. ಜತೆಗೆ ಅವರು ಬಿಟ್ಟುಹೋಗಿರುವ ಸ್ಮೃತಿಗಳು ಮತ್ತು ಮೌಲ್ಯಗಳು ಕೂಡ.


    ಗಾಂಧೀಜಿ ಅವರ ಬಗ್ಗೆ ಅಲ್ಬರ್ಟ್ ಐನ್‌ಸ್ಟಿನ್ ಹೀಗೆ ಹೇಳಿದ್ದರು..
    “ರಕ್ತ ಮಾಂಸಗಳಿಂದ ಕೂಡಿದ ಇಂಥ ಒಬ್ಬ ವ್ಯಕ್ತಿಯೊಬ್ಬರು ಈ ಭೂಮಿಯ ಮೇಲೆ ನಡೆದಾಡಿದ್ದರೆಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹುದು”.

    ಇದೇ ಮಾತನ್ನು ಎಚ್ಚೆನ್ ಅವರಿಗೂ ಅನ್ವಯಿಸಿ ಹೀಗೆ ಹೇಳಬಹುದು..
    “ಸಮಾಜದ ಕಟ್ಟಕಡೆಯ ಮಗುವಿಗೂ ಶಿಕ್ಷಣ ಸಿಗಬೇಕು. ಡೊನೇಷನ್ ಇಲ್ಲದ ವ್ಯವಸ್ಥೆ ಬರಬೇಕು ಎಂದು ಕನಸು ಕಂಡಿದ್ದ, ಅದಕ್ಕಾಗಿ ಜೀವಿತಾವಧಿಯುದ್ದಕ್ಕೂ ಅವಿರತವಾಗಿ ಶ್ರಮಿಸಿದ್ದ ವ್ಯಕ್ತಿಯೊಬ್ಬರು ಕ್ಯಾಪಿಟೇಷನ್ ಶಿಕ್ಷಣ ವ್ಯವಸ್ಥೆಯನ್ನೇ ಮೈವೆತ್ತ ಕರ್ನಾಟಕದಂಥ ರಾಜ್ಯದಲ್ಲಿ ಜೀವಿಸಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು..”

    ಉತ್ಪ್ರೇಕ್ಷೆ ಏನಲ್ಲ, ಇದು ಸತ್ಯವೂ ಹೌದು. ಶಿಕ್ಷಣ ಇವತ್ತು ಉಳ್ಳವರ ಜಹಗೀರು. (ಬರಹ ಕೃಪೆ :CKNEWSNOW.COM)

    ಕಾರ್ಯ ಸಾಧನೆಗೆ ಅಡ್ಡದಾರಿ ಎಂದಿಗೂ ಸಲ್ಲ

    ಸುಮಾ ವೀಣಾ

    ತನ್ನಿಕ್ಕಿ ದ ತತ್ತಿಯನ್ ತಾನೆ ನೊಣೆವಂತಕ್ಕುಂ– ಪ್ರಸ್ತುತ ಸಾಲು ಪಂಪನ ‘ವಿಕ್ರಮಾರ್ಜುನ ವಿಜಯ’ದ  ದಶಮಾಸ್ವಾಸದಲ್ಲಿ  ಉಲ್ಲೇಖವಾಗಿರುವಂಥದ್ದು.  ಕುರುಕುಲ ಪಿತಾಮಹಾ ಭೀಷ್ಮರು  ಮಹಾಭಾರತ ಯುದ್ಧ ನಡೆಯುವ ಪೂರ್ವದಲ್ಲಿ   ದಂಡನಾಯಕನ ಪಟ್ಟ ಕಟ್ಟುವ ಸಂದರ್ಭದಲ್ಲಿ   ಉಭಯಸಂಕಟ ಅನುಭವಿಸುವ ಸಂದರ್ಭದಲ್ಲಿದೆ.  ಪಾಂಡವರು ಹಾಗು ಕೌರವರು ಕುರುಕುಲಪಿತಾಮಹ ಭೀಷ್ಮರಿಗೆ ಮೊಮ್ಮಕ್ಕಳೇ .ಅವರುಗಳೆ ಪರಸ್ಪರ ಹೋರಾಟ ಮಾಡಿಕೊಳ್ಳುತ್ತಿದ್ದಾರೆ  ಅವರನ್ನು ರಕ್ಷಿಸಲಾಗುತ್ತಿಲ್ಲವಲ್ಲ.  ಕೈಕಟ್ಟಿದಂಥ ಪರಿಸ್ಥಿತಿ ಎಂದು ಭೀಷ್ಮರು ನೊಂದುಕೊಳ್ಳುತ್ತಾರೆ. ಹಾವು ತಾನೆ ಇಟ್ಟ ಮೊಟ್ಟೆಗಳನ್ನು ತಾನೆ ನಷ್ಟಮಾಡಿಕೊಂಡು ತನ್ನ ವಂಶವನ್ನೆ  ನಾಶಮಾಡಿಕೊಳ್ಳುವಂತೆ ನಾನು ನನ್ನ ವಂಶವನ್ನು ನಾನೆ ನಾಶ ಮಾಡಿಕೊಳ್ಳುತ್ತಿದ್ದೇನಲ್ಲಾ ಯಾರಿಗೂ ಬರಬಾರದ ಧರ್ಮ ಸಂಕಟ  ಎಂದು  ದುಃಖಿಸುತ್ತಾರೆ.

    ಕೆಲವೊಮ್ಮೆ ಹಾಗೆ ನಮ್ಮ ತಪ್ಪುಗಳೆ, ನಾವೆ ಮಾಡಿಕೊಳ್ಳುವ ಎಡವಟ್ಟುಗಳೆ   ನಮಗೆ ಉರುಳಾಗುವ ಸಂದರ್ಭಗಳು ಬರುತ್ತವೆ. “ಅವರವರ ತಲೆಯ ಮೇಲೆ ಅವರವರವೇ ಕೈಗಳು” ಅನ್ನುತ್ತಾರಲ್ಲ ಹಾಗೆ. ಇಲ್ಲಿ ಮೋಹಿನ ಭಸ್ಮಾಸುರರ ಕತೆ ನೆನಪಾಗುತ್ತಾದೆ .  ವಿಷ್ಣು ಮೋಹಿನಿ ಅವತಾರ ತಾಳಿದ್ದೆ ಭಸ್ಮಾಸುರನ ಸಂಹಾರಕ್ಕೆ ಅವನು ಯಾವಾಗ ಅವನ ತಲೆ ಮೇಲೆ ಕೈಯನ್ನಿಟ್ಟುಕೊಳ್ಳುವನೋ ಅಂದೇ ಮರಣಿಸುವನು ಎಂಬ ವರವನ್ನು ಪಡೆದಿರುತ್ತಾನೆ.   ಮಿತಿಮೀರಿದ ಭಸ್ಮಾಸುರನ ಅಟ್ಟಹಾಸ ಸಹಿಸಲು  ಸಾಧ್ಯವಾಗದೇ ಹೋದಾಗ ಮೋಹಕ ರೂಪ ಅವತರಿಸಿ ಬಂದ  ವಿಷ್ಣು ನೃತ್ಯ ಹೇಳಿಕೊಡುವ ನೆಪದಲ್ಲಿ  ಅವನ ತಲೆಯ  ಮೇಲೆ ಕೈಇಡುವಂತೆ  ಮಾಡುತ್ತಾನೆ. ಭಸ್ಮಾಸುರನನ್ನು ಸಂಹರಿಸುತ್ತಾನೆ.

    ಭೀಷ್ಮರ   ಉಭಯಸಂಕಟ,  ಭಸ್ಮಾಸುರನ  ಅಟ್ಟಹಾಸ ಬೇರೆ ಬೇರೆ ಸನ್ನಿವೇಶಗಳು.   ಪ್ರಸ್ತುತ ಕಾಲಘಟ್ಟದಲ್ಲೂ  ಈ ವಿಜ್ಞಾನ ತಂತ್ರಜ್ಞಾನ ಯುಗದಲ್ಲೂ  “ತನ್ನಿಕ್ಕಿದ ತತ್ತಿಯನೆ ತಾನೆ ನೊಣವಂತಕ್ಕುಂ” ಎಂಬ ಮಾತು ಅಕ್ಷರಷಃ ಅನ್ವಯಿಸುತ್ತದೆ. ಮಾನವ ಸಂಶೋಧನೆಗಳನ್ನು ಮಾಡುವುದು    ಜೀವಪರ ಕಾಳಜಿಯಿಂದ .ಜನರ   ಉಪಯೋಗಕ್ಕೆ ಬರುವಂತೆ. ಆದರೆ ಅವುಗಳೆ ಮನುಕುಲದ ನಾಶಕ್ಕೆ ಕಾರಣವಾಗಿ ಅಪಸವ್ಯಗಳಾಗಿ ಕಾಡುತ್ತಿವೆ.

    ಉದಾಹರಣೆಗೆ  ಪ್ರಸವ ಪೂರ್ವ ಸ್ಕ್ಯಾನಿಂಗ್ ಬೆಳೆಯಲಿರುವ  ಭ್ರೂಣದ ಆರೋಗ್ಯ  ಪರೀಕ್ಷೆಗಾಗಿರುವುದು ಇದನ್ನೆ  ಕೆಲವು ಅವಿವೇಕಿಗಳು ಲಿಂಗ ಪತ್ತೆಗೆ ದುರ್ಬಳಕೆ ಮಾಡಿಕೊಂಡ ಅನೇಕ  ಸಾಲು ಸಾಲು ಉದಾಹರಣೆಗಳಿವೆ. ಉಳಿದಂತೆ  ನಮ್ಮ ನಾಗರಿಕರೂ ಕೂಡ  ಸುಲಭದಲ್ಲಿ ಕಾರ್ಯ ಸಾಧಸಿಕೊಳ್ಳಲು ಅಡ್ಡದಾರಿಗಳನ್ನು, ನ್ಯಾಯವಲ್ಲದ  ಉಪ ಮಾರ್ಗಗಳನ್ನು ಹಿಡಿಯುತ್ತಾರೆ . ಇವು  ಕ್ರಮೇಣ ಅವರಿಗೇ ತೊಡಕುಗಳಾಗುತ್ತವೆ“ತಾನೇ ತೋಡಿದ ಹಳ್ಳದಲ್ಲಿ ತಾನೆ ಬಿದ್ದಂತೆ”   ಎಂದು  ಇದನ್ನು ಇನ್ನೊಂದು ರೀತಿಯಲ್ಲಿ ಹೇಳಬಹುದು. ಮನುಷ್ಯ ಸದಾ ನೇರ- ನಿಷ್ಟರ ಜೀವನ ನಡೆಸಬೇಕು , ಅನ್ಯಮಾರ್ಗಿಗಳಾದರೆ, ದಾಕ್ಷಿಣ್ಯಕ್ಕೆ ಕಟ್ಟುಬಿದ್ದರೆ  ತೊಡಕುಗಳು ಅವರಿಸುತ್ತವೆ ಎಂಬ ಸೂಕ್ಷ್ಮವನ್ನು ಅರಿಯಬೇಕು.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

    ಬ್ಯಾಂಕಿಂಗ್‌ ವಲಯದಲ್ಲಿ ಸಾಲದ ಬೇಡಿಕೆ ಕುಸಿಯುವುದೇ?

    ವಿತ್ತೀಯ ಪೇಟೆಯಲ್ಲಿ ಸಂಪನ್ಮೂಲ ಸಂಗ್ರಹಣೆ, ವಿತರಣೆ, ಸುಧಾರಣೆಗಳು, ಫಂಡಿಂಗ್‌ ಮೂಲಕ ಹರಿದುಬರುತ್ತಿರುವ ಹಣದ ಗಾತ್ರ ಮುಂದಿನ ದಿನಗಳಲ್ಲಿ ಬ್ಯಾಂಕ್‌ ಗಳು ವಿಶೇಷವಾಗಿ ಖಾಸಗಿ ಬ್ಯಾಂಕ್‌ ಗಳು ಸಾಲಗಳ ಬೇಡಿಕೆಯ ಕೊರತೆಯನ್ನೆದುರಿಸಬಹುದೆಂದೆನಿಸುತ್ತದೆ. ಅವುಗಳು ತಮ್ಮ ಸಂಪಾದನೆಯನ್ನು ಬೇರೆ ಮೂಲಗಳಿಂದ ಹೆಚ್ಚಿಸಿಕೊಳ್ಳುವಂತಹ ಸಂದರ್ಭವನ್ನೂ ತಳ್ಳಿಹಾಕುವಂತಿಲ್ಲ. ಕೊನೆಗೆ ಸಣ್ಣ ಸಣ್ಣ ಗ್ರಾಹಕರೇ ಮುಂದಿನ ದಿನಗಳಲ್ಲಿ ಬ್ಯಾಂಕಿಂಗ್‌ ವಲಯದ ಅಗ್ರಮಾನ್ಯ ಗ್ರಾಹಕರಾಗುವ ಸಾಧ್ಯತೆಯಿದೆ. ಈ ದಿಶೆಯಲ್ಲಿ ಜನಸಾಮಾನ್ಯರಲ್ಲಿಯೂ ಆರ್ಥಿಕ ಸಾಕ್ಷರತೆಯ ಅಗತ್ಯತೆ ಹೆಚ್ಚಿದೆ.

    ಪಿ ಎನ್‌ ಬಿ ಹೌಸಿಂಗ್‌ ಫೈನಾನ್ಸ್‌ :ಪಿ ಎನ್‌ ಬಿ ಹೌಸಿಂಗ್‌ ಫೈನಾನ್ಸ್‌ ಕಂಪನಿಯು ಕಾರ್ಲೈಲ್‌ ಗ್ರೂಪ್‌ ನ ಪ್ಲೂಟೋ ಇನವೆಸ್ಟ್ಮೆಂಟ್ಸ್‌ ನವರ ರೂ.3,185 ಕೋಟಿ, ಎಚ್‌ ಡಿ ಎಫ್‌ ಸಿ ಬ್ಯಾಂಕ್‌ ನ ಹಿಂದಿನ ಮುಖ್ಯಸ್ಥ ಅದಿತ್ಯ ಪುರಿಯವರ ರೂ.25 ಕೋಟಿ ಸೇರಿ ಒಟ್ಟು ರೂ.4,000 ಕೋಟಿ ರೂಪಾಯಿಗಳನ್ನು, ಪ್ರತಿ ಷೇರಿಗೆ ರೂ.390 ರಂತೆ ವಿತರಿಸಿ ತನಗೆ ಅಗತ್ಯವಿರುವ ಬಂಡವಾಳವನ್ನು ಪಡೆದುಕೊಂಡಿದೆ. ಇದರಿಂದ ಕಾರ್ಲೈಲ್‌ ಸಮೂಹವು ಸಂಸ್ಥೆಯಲ್ಲಿ ಶೇ.54.3 ರಷ್ಟರ ಭಾಗಿತ್ವವನ್ನು ಹೊಂದಿದಂತಾಗಿದೆ.

    Photo by MayoFi on Unsplash

    ಗಮನಿಸಿ: ಈ ಸಂಸ್ಥೆಗಳಿಗೆ ಪೇಟೆಯಲ್ಲಿ ಷೇರಿನ ದರ ರೂ.437 ರಲ್ಲಿರುವಾಗ ಷೇರನ್ನು ರೂ.390 ರಂತೆ ವಿತರಿಸಿದರೂ ಈ ಬೆಳವಣಿಗೆಗಳು ಷೇರಿನ ಬೆಲೆಯನ್ನು ವಾರಾಂತ್ಯದಲ್ಲಿ ರೂ.838 ನ್ನು ತಲುಪಿ ವಿಜೃಂಭಿಸಿದೆ. ಈ ಏರಿಕೆಯು ಸಧ್ಯದ ಕಂಪನಿಯ ಆಂತರಿಕ ಸಾಧನೆಯಿಂದಲ್ಲದೆ, ಕೇವಲ ಹೊರಗಿನ ಬೆಳವಣಿಗೆ ಮತ್ತು ನಿರೀಕ್ಷೆಗಳ ಕಾರಣದಿಂದಾಗಿದೆ. ಈ ರೀತಿ ನಿರಂತರವಾಗಿ ಗರಿಷ್ಠ ಆವರಣಮಿತಿಯಲ್ಲಿರುವ ಪರಿಸ್ಥಿತಿಯು ಅನಿರೀಕ್ಷಿತವಾದ ರೀತಿಯಲ್ಲಿ ಷೇರಿಂದ ಹೊರಬರಲು ಸಾಧ್ಯವಾಗದ ರೀತಿಯಲ್ಲಿ ಕನಿಷ್ಠ ಆವರಣಮಿತಿಗೆ ಪರಿವರ್ತನೆಯಾಗುವುದನ್ನೂ ತಳ್ಳಿಹಾಕುವಂತಿಲ್ಲ.

    ಹಿಂದಿನ ವರ್ಷ ಜುಲೈನಲ್ಲಿ ಆದಿತ್ಯ ಪುರಿಯವರು ತಮ್ಮ ನಿವೃತ್ತಿಯ ಸಂದರ್ಭದಲ್ಲಿ 74.2 ಲಕ್ಷ ಹೆಚ್‌ ಡಿ ಎಫ್‌ ಸಿ ಬ್ಯಾಂಕ್‌ ಷೇರುಗಳನ್ನು ಮಾರಿದ್ದರು.

    ವಿತ್ತ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಕೆಲವು ಫಂಡಿಂಗ್‌ ಬೆಳವಣಿಗೆಗಳು:

    • ಆರೋಗ್ಯವಲಯದ ತಾಂತ್ರಿಕ ಕಂಪನಿ Breathe Well-Being ಒಂದು ದಶಲಕ್ಷ ಡಾಲರ್ ಗಳ ಸಂಪನ್ಮೂಲ ಸಂಗ್ರಹಣೆ ಮಾಡಿದೆ.
    • ಅರ್ಬನ್‌ ಕಂಪನಿ ಎಂಬ ಗೃಹೋಪಯೋಗಿ ಸೇವೆಗಳ ಕಂಪನಿ 255 ದಶ ಲಕ್ಷ ಡಾಲರ್‌ ಗಳ ಸಂಪನ್ಮೂಲ ಸಂಗ್ರಹಣೆ ಮಾಡಿದೆ.
    • ಆಫ್‌ ಬ್ಯುಸಿನೆಸ್‌ ಕಂಪನಿ B to B ವ್ಯವಹಾರಿಕ ಸಂಸ್ಥೆಯು ಜಪಾನಿನ ಸಾಫ್ಟ್‌ ಬ್ಯಾಂಕ್‌ ಮೂಲಕ 100 ರಿಂದ 150 ದಶಲಕ್ಷ ಡಾಲರ್‌ ಸಂಪನ್ಮೂಲ ಸಂಗ್ರಹಣೆ ಮಾಡಲಿದೆ.
    • B to B ಸಾಗಾಣಿಕೆ ವಲಯದ ವ್ಯವಹಾರಿಕ ಸಂಸ್ಥೆ ಲೋಕಸ್‌ 50ದಶಲಕ್ಷ ಡಾಲರ್‌ ಸಂಪನ್ಮೂಲ ಸಂಗ್ರಹಣೆ ಮಾಡಿದೆ.
    • ಕ್ರೇಜೋ ಡಾಟ್‌ ಫನ್‌ 3 ದಶಲಕ್ಷ ಡಾಲರ್‌ ಸೀಡ್‌ ಫಂಡಿಂಗ್‌ ಪಡೆದುಕೊಂಡಿದೆ
    • ಮುತೋಟ್‌ ಫೈನಾನ್ಸ್‌ ರೂ.5,000 ಕೋಟಿ ಸಂಪನ್ಮೂಲ ಸಂಗ್ರಹಣೆಯ ಗುರಿ ಹೊಂದಿದೆ.
    • ಜಪಾನಿನ ಸಾಫ್ಟ್‌ ಬ್ಯಾಂಕ್‌ 600 ರಿಂದ 700 ದಶ ಲಕ್ಷ ಡಾಲರ್‌ ನ್ನು ಫ್ಲಿಪ್‌ ಕಾರ್ಟ್‌ ನಲ್ಲಿ ಹೂಡಿಕೆ ಮಾಡಲಿದೆ.
    • ಟಾಟಾ ಮೋಟಾರ್ಸ್‌ 425 ದಶ ಲಕ್ಷ ಡಾಲರ್‌ ನ್ನು 4.35% ರ ಬಡ್ಡಿ ದರದ ಸಾಗರೋತ್ತರ ಬಾಂಡ್‌ ಗಳನ್ನು ವಿತರಿಸುವ ಮೂಲಕ ಸಂಗ್ರಹಿಸಿದೆ.
    • ಇನ್ಫೋಗೇನ್‌ ಡಿಜಿಟಲ್‌ ವೇದಿಕೆ ಕಂಪನಿಯು 200 ದಶ ಲಕ್ಷ ಡಾಲರ್‌ ಸಂಪನ್ಮೂಲ ಸಂಗ್ರಹಣೆಯ ಗುರಿ ಹೊಂದಿದೆ.
    • ನಿದ್ದೆ ಮತ್ತು ಗೃಹ ಪರಿಹಾರ ವಲಯದ ವೇಕ್‌ ಫಿಟ್‌ 50 ದಶ ಲಕ್ಷ ಡಾಲರ್‌ ಸಂಗ್ರಹಣೆಗೆ ಪ್ರಯತ್ನ ನಡೆಸುತ್ತಿದೆ.
    • ಇನ್ಫೋ ಎಡ್ಜ್‌ ಕಂಪನಿ ಬೆಂಬಲಿತ ಝೊಮೆಟೋ ಕಂಪನಿ ತನ್ನ ರೂ.8,250 ಕೋಟಿ ಮೌಲ್ಯದ ಆರಂಭಿಕ ಷೇರು ವಿತರಣೆ ಗುರಿ ಹೊಂದಿದೆ.
    • ಪೇಟಿಎಂ ಕಂಪನಿಯು 1.5 ಶತ ಕೋಟಿ ಡಾಲರ್‌ ಮೌಲ್ಯದ ಐ ಪಿ ಒ ವಿತರಿಸಲಿದೆ.
    • ಹರ್ಷ ಮೊಯಿಲಿ ರವರ 200 ದಶಲಕ್ಷ ಡಾಲರ್‌ ಗಳ ನಿಧಿ ಪರಿಸರ ವಲಯದ ತಾಂತ್ರಿಕ ಕಂಪನಿಗಳಿಗೆ ಆರ್ಥಿಕ ಬೆಂಬಲ ನೀಡಲಿದೆ
    • ಸಾರ್ವಜನಿಕ ವಲಯದ ಬ್ಯಾಂಕ್‌ ಗಳು ಸಹ ಸುಮಾರು ರೂ.9,000 ಕೋಟಿ ಯನ್ನು ಷೇರುಗಳನ್ನು QIPಗಳಿಗೆ ವಿತರಿಸುವ ಮೂಲಕ ಸಂಗ್ರಹಿಸಲಿದೆ.

    ಬ್ಯಾಂಕಿಂಗ್‌ ವಲಯದ ಮೇಲಾಗುವ ಪ್ರಭಾವ:

    ಈ ಎಲ್ಲಾ ಸುದ್ಧಿಗಳು ಕಂಪನಿಗಳಿಗೆ ಸುಲಭವಾಗಿ ಸಂಪನ್ಮೂಲ ಲಭ್ಯವಾಗುತ್ತಿರುವುದನ್ನು ತೋರಿಸುತ್ತದೆ. ಕೇವಲ 4.35% ರ ಬಡ್ಡಿಯಂತೆ ಟಾಟಾ ಮೋಟಾರ್ಸ್‌ 425 ದಶಲಕ್ಷ ಡಾಲರ್‌ ಹಣ ಸಂಗ್ರಹಣೆ ಮಾಡಿದೆ ಎಂದರೆ ಜಾಗತಿಕ ಮಟ್ಟದಲ್ಲಿ ಹರಿದಾಡುತ್ತಿರುವ ಹಣದ ಗಾತ್ರದ ಅರಿವಾಗುವುದು. ಹೀಗಿರುವಾಗ ಕಾರ್ಪೊರೇಟ್‌ ಗಳು ತಮ್ಮ ಯೋಜನೆಗಳ ಅನುಷ್ಠಾನಕ್ಕೆ ಅವಶ್ಯವಿರುವ ಸಂಪನ್ಮೂಲಕ್ಕಾಗಿ ಬ್ಯಾಂಕ್‌ ಗಳನ್ನು ಅವಲಂಬಿಸುವುದರ ಅಗತ್ಯವಿರುವುದಿಲ್ಲ. ಇದು ಬ್ಯಾಂಕಿಂಗ್‌ ವಲಯ ತನ್ನ ಬೆಳವಣಿಗೆಗಾಗಿ ಸಾಂಪ್ರದಾಯಿಕ ರೀಟೇಲ್‌ ಗ್ರಾಹಕರನ್ನು ಅವಲಂಬಿಸಲೇಬೇಕಾಗಿದೆ.

    ಈ ಬೆಳವಣಿಗೆ ಮುಂಬರುವ ದಿನದಲ್ಲಿ ಬ್ಯಾಂಕಿಂಗ್ ವಲಯದ ಷೇರುಗಳ ಮೇಲೆ ಪರಿಣಾಮ ಬೀರುವುದನ್ನು ತಳ್ಳಿ ಹಾಕುವಂತಿಲ್ಲ. ಖಾಸಗಿ ವಲಯದ ಬ್ಯಾಂಕುಗಳಿಗಿಂತ ಸರಕಾರಿ ಸ್ವಾಮ್ಯದ ಬ್ಯಾಂಕುಗಳು ರಿಟೇಲ್ ಗ್ರಾಹಕರನ್ನು ಹೆಚ್ಚಿಗೆ ಅವಲಂಬಿಸಿರುವುದರಿಂದ ಮೇಲಿನ ಬೆಳವಣಿಗೆಗಳು ಅವುಗಳ ಮೇಲೆ ಪರಿಣಾಮ ಕಡಿಮೆ ಎಂದೇ ಭಾವಿಸಬಹುದಾಗಿದೆ.

    ಮನುಷ್ಯನ ಸಹಜ ಹುಟ್ಟು ಗುಣಗಳನ್ನು ಅಳವಡಿಸಿಕೊಳ್ಳಲು ಇದೆಂಥ ಕಸರತ್ತು

    ಮನುಷ್ಯ ಸಕಾರಾತ್ಮಕವಾಗಿ ಯೋಚನೆ ಮಾಡಬೇಕು. ಆಶಾವಾದಿಯಾಗಬೇಕು. ಧೈರ್ಯದಿಂದ ಇರಬೇಕು. ಯಾರು ಹುಚ್ಚ ಅಂದರೂ ಚಿಂತೆ ಮಾಡದೆ ಸದಾ ನಗಬೇಕು,ಕರುಣೆ, ಪ್ರೀತಿ ಇರಬೇಕು. ಸದಾ ಸರ್ವರಿಗೂ ಒಳ್ಳೆಯದಾಗಬೇಕೆಂಬ ಆಶಯ ಹೊಂದಿರಬೇಕು, ಎಲ್ಲಾ ಬಲ್ಲವನು ನಾನು ಅನ್ನುವ ಹಮ್ಮು ಬೇಡ, ಮುಗ್ಧ ಮಗುವಿನ ಮನಸ್ಸಿನ ಹಾಗೆ ಪ್ರತಿಯೊಂದರ ಕಡೆ ಪೂರ್ವಗ್ರಹ ಪೀಡಿತ ಆಗದೆ, ಕುತೂಹಲ ಭರಿತ ನೋಟ ಇರಬೇಕು. ಹೀಗಿದ್ದರೆ ನಮ್ಮ ದೇಹದಲ್ಲಿನ ರಸ ಉತ್ಪತ್ತಿ ಗ್ರಂಥಿಗಳು ಸರಾಗವಾಗಿ ಕೆಲಸ ಮಾಡಿ, ಆರೋಗ್ಯ ಸುಸ್ಥಿತಿಯಲ್ಲಿದ್ದು, ಜೀವನ ಲವಲವಿಕೆಯಿಂದ ಕೂಡಿ ಸಂತೋಷಮಯವಾಗಿರುತ್ತದೆ…..

    Photo by chaitanya pillala on Unsplash

    ಇತ್ತೀಚೆಗೆ ಕರೊನಾ ಬಂದಾಗಿನಿಂದ ಯಾವ ವೈದ್ಯರನ್ನ ಕೇಳಿ, ಮನಃಶಾಸ್ತ್ರಜ್ಞರನ್ನು ಕೇಳಿ, ಅಧ್ಯಾತ್ಮ ಬೋಧಕರನ್ನು ಕೇಳಿ, ಕೊನೆಗೆ ಬಾಯ್ತುಂಬ ತಾಂಬೂಲ ಮೆಲ್ಲುತ್ತ ಎಲೆ,ಬೇರು, ಬೀಜ ಅಂತ ಕಾಡಲ್ಲಿ ಅರಸಿ ತಂದು ಅರೆದು ಔಷಧಿ ಅಂತ ಕೊಡುವ ಮಾಸಿದ ಬಟ್ಟೆಗಳ, ಒರಟು ಭಾಷೆಯ ನಾಟಿ ವೈದ್ಯರನ್ನ ಕೇಳಿ, ಇದನ್ನೇ ಹೇಳೋದಾ?!

    ನನಗೆ ಆಶ್ಚರ್ಯವಾಗಿ ಸುಮ್ಮನೆ ಅವಲೋಕಿಸಿದೆ. ಮನುಷ್ಯನ ಸಹಜ ಹುಟ್ಟು ಗುಣಗಳನ್ನು ಅಳವಡಿಸಿಕೊಳ್ಳಲು ಇಂದಿನ ಸುಧಾರಿತ ಜನಾಂಗ ಯಾಕೆ ಇಷ್ಟು ಕಷ್ಟ ಪಡಬೇಕು ಅಥವಾ ಪಡುತ್ತಿದೆ ಅಂತ. ಇವರು ಹೇಳುತ್ತಿರುವ,ಇಂದು ಮಾನವರಿಗೆ ಅತೀ ಮುಖ್ಯವಾಗಿ ಬೇಕಾಗಿರುವ ಈ ಅಂಶಗಳನ್ನು ಪಡೆಯಲು ಕೋಟಿ ಹಣ ಬೇಕಿಲ್ಲ ಅಥವಾ ಅನ್ನ,ನೀರು ಬಿಟ್ಟು ಕಠಿಣ ತಪಸ್ಸು ಮಾಡಬೇಕಿಲ್ಲ. ಆದರೂ ಇಡೀ ಮಾನವಕುಲ ಇಂದು ಇವುಗಳ ಕೊರತೆಯಿಂದ ನರಳುತ್ತಿರುವುದಾದರೂ ಏತಕ್ಕೆ?

    ನಾಗರಿಕತೆ, ಅಭಿವೃದ್ಧಿ, ಮುಂದುವರಿಕೆಯ ಭಾಗವಾಗಿ ನಾವು ನಮ್ಮ ಹುಟ್ಟುಗುಣಗಳನ್ನು ದೂರಮಾಡಿಕೊಂಡು, ನಮ್ಮದಲ್ಲದ್ದನ್ನ, ನಮಗೆ ಆಗದ್ದನ್ನ ಮೈಗೂಡಿಸಿಕೊಂಡು ಬಿಟ್ಟವಾ?! ನಮಗೆ ಒಗ್ಗದ್ದನ್ನು ನಮಗೆ ತಿಳಿಯದ ಹಾಗೆ ಅನುಸರಿಸಿ, ನಮ್ಮ ಸಹಜತೆಯನ್ನು ಕಳೆದುಕೊಂಡು ಬಿಟ್ಟವಾ? ಇದು ಬೇಕಿತ್ತಾ?!

    ನಾಗರಿಕತೆ ಹೆಸರಲ್ಲಿ ಬಟ್ಟೆ ಹೊದ್ದ ದಿನದಿಂದ ಮಾನವ ಬದಲಾಗಿಬಿಟ್ಟನೇನೋ, ತನ್ನನ್ನು ಮುಚ್ಚಿಕೊಳ್ಳುವುದನ್ನ ಕಲಿತು. ಸಹಜತೆಯಿಂದ ದೂರವಾಗುವ ನಡಿಗೆ ಅಂದೇ ಆರಂಭವಾಗಿರಬೇಕು. ಇಡೀ ವಿಕಸತೆಯಲ್ಲಿ ಮಾನವ ತನ್ನ ಈ ಸಹಜತೆಯನ್ನು ಹೇಗೆ ಮುಚ್ಚಿಡಬೇಕು ಎಂಬುದಕ್ಕೇ ಹೆಚ್ಚು ಒತ್ತು ಕೊಟ್ಟಂತೆ ಕಾಣುತ್ತಿದೆ. ಪರಿಣಾಮ ಇಂದು ಬಲವಂತವಾಗಿ ನಗುವುದನ್ನು ಅಭ್ಯಸಿಸುತ್ತಿದ್ದೇವೆ!

    ಸುಮ್ಮನೆ ಯೋಚಿಸಿ, ಇಂದಿಗೂ ಈಗಲೂ ಇಡೀ ಪ್ರಪಂಚ ನಶಿಸಿ ಹೋದರೂ ನನಗೇನೂ ಆಗುವುದಿಲ್ಲ. ಸಾವು ಸುತ್ತಲಿದ್ದವರಿಗೆ ಬರಬಹುದೇ ವಿನಾ ನನಗೆ ಬರಲ್ಲ ಅನ್ನುವ ನಮ್ಮ ಹುಟ್ಟು ಸ್ವಭಾವ ಇದೆಯಲ್ಲ ಇದಕ್ಕಿಂತಲೂ ಸಕಾರಾತ್ಮಕ ಯೋಚನೆ, ಧೈರ್ಯ, ಆಶಾವಾದಿ ಪ್ರವೃತ್ತಿ ಬೇರೆ ಎಲ್ಲಿಯಾದರೂ ಇರಲು ಸಾಧ್ಯವಾ? ಆದರೂ ಮೈಗೂಡಿಸಿಕೊಳ್ಳುವ ಮಟ್ಟಕ್ಕೆ ನಾವು ಬೆಳೆದುಬಿಟ್ಟಿರುವುದು ವಿಪರ್ಯಾಸ ಅಲ್ಲವಾ?

    ಈ ಧೈರ್ಯ, ಸಕಾರಾತ್ಮಕ ಯೋಚನೆ, ಆಶಾವಾದಕ್ಕೆ ಮೂಲಕಾರಣ ಮರುಘಳಿಗೆಯ ಅಜ್ಞಾನ. ಹೌದು ನಾಳೆ ಏನಾಗುತ್ತೋ ಗೊತ್ತಿಲ್ಲ ಅಂತಲೇ ಇಂದು ಸಂತೋಷದಿಂದ ಇರಲು ಸಾಧ್ಯವಾಗಿದೆ. ಆದರೆ ಮುಂದುವರೆದ ಮನುಷ್ಯನ ಹಂಬಲ ಏನು ಗೊತ್ತಾ?ಆ ನಾಳೆಯನ್ನು ಇಂದೇ ತಿಳಿದುಕೊಳ್ಳೋದು!ಹೀಗಿದ್ದಾಗ ಇನ್ನು ನಮ್ಮನ್ನು ಯಾರು ಪಾರು ಮಾಡಬೇಕು? ಆ ಸೃಷ್ಟಿಸಿದವನೂ ನಿನ್ನ ಕರ್ಮ ಅಂತ ಕೈಬಿಟ್ಟು ತುಂಬಾ ದಿನವಾಗಿರಬೇಕು.

    ಪ್ರಕೃತಿಗೆ ವಿರುದ್ಧವಾದದ್ದನ್ನ ಯೋಚಿಸುತ್ತಾ, ಸಾಧಿಸುವುದು ಮನುಷ್ಯನ ಸಾಧನೆ ಆಗಿ ಎಲ್ಲ ತರಹದ ಅಸೌಖ್ಯಕ್ಕೆ ಕಾರಣ ಆಗಿದೆ. ಮನಃಶಾಂತಿ ಬಿಡಿ, ದೂರದ ಮಾತಾಯ್ತು. ಇಂದು ನಿದ್ರೆ,ಹಸಿವಿಗೆ ಮಾನವ ಪರದಾಡುತ್ತಿದ್ದಾನೆ! ಆದರೂ ತನ್ನ ವಿರುದ್ಧ ದಿಕ್ಕಿನ ಪಯಣ ಅವನಲ್ಲಿ ಅರಿವಾಗದಿರುವುದು ಅಚ್ಚರಿ. ಇಂತಹ ಮುಂದುವರಿಕೆ ನಮಗೆ ಬೇಕಾ?!

    ನಾನು ಸಹಜವಾಗಿ ಇರುವಾಗಲೆಲ್ಲ ನನ್ನ ಅಮ್ಮ, ಅಪ್ಪ, ಗುರುಗಳು, ಹಿರಿಯರು ಆಕ್ಷೇಪಿಸಿರುವುದು ನನ್ನಲ್ಲಿ ಜೀವಂತವಾಗಿವೆ. ಅಮ್ಮ ಅಂತೂ ಮಾತೆತ್ತಿದರೆ, ನಾಲ್ಕು ಜನಕ್ಕೆ ಅಂಜಿ ಜೀವನ ಮಾಡಬೇಕು ಕಣೋ ಅನ್ನುತ್ತಾ ನನ್ನ ಸಹಜತೆಯನ್ನು ದಮನಿಸುವ ಪ್ರಯತ್ನದಲ್ಲೇ ಜೀವನ ಸವೆಸಿದರು. ಎಲ್ಲರೊಡನೆ ನಗುತ್ತಾ ಇರೋದನ್ನ ಅಮ್ಮ ಆಕ್ಷೇಪಿಸಿದರೆ, ಅಪ್ಪ ನನ್ನ ಸಹಜ ಗುಣಗಳಿಗೆ ಕಡಿವಾಣ ಹಾಕುತ್ತಿದ್ದರು. ಏನೋ ನೆನಸಿಕೊಂಡು ಕ್ಲಾಸಲ್ಲಿ ನಕ್ಕಿದ್ದ ನನ್ನನ್ನು ನನ್ನ ಗುರುಗಳು ಇಡೀ ದಿನ ತರಗತಿಯ ಹೊರಗೆ ನಿಲ್ಲಿಸಿದ್ದರು. ಆದರೂ ಇವರೆಲ್ಲರೂ ನನ್ನನ್ನು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ಅಗ್ರ ಗಣ್ಯರು. ಈಗ ಮಾತ್ರ ವೈದ್ಯರು, ಮನಃಶಾಸ್ತ್ರಜ್ಞರು,ಅಧ್ಯಾತ್ಮ ಚಿಂತಕರು ಇವರು ಮಾಡಬೇಡ ಅಂದದ್ದನ್ನು ಮಾಡಿ ಅಂತ ಹೇಳ್ತಿದ್ದಾರೆ. ಎಲ್ಲೋ ಎಡವುತ್ತಿಲ್ಲವಾ ನಾವೆಲ್ಲ?

    Photo by Jem Sahagun on Unsplash

    ಪೆಟ್ರೋಲ್ ಬೆಲೆ ಶತಕ, ಲಸಿಕೆ ಮಂದಗತಿ, ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ ಎಂದ ಡಿಕೆಶಿ

    ‘ಜನವರಿಯಿಂದ ಪೆಟ್ರೋಲ್ ದರ 43 ಬಾರಿ ಏರಿಕೆಯಾಗಿದೆ. ಇದು ದೇಶದ ಆರ್ಥಿಕ ಮತ್ತು ಆಡಳಿತಾತ್ಮಕ ರಂಗಗಳಲ್ಲಿ ಸರ್ಕಾರದ ಅಸಮರ್ಥತೆಯನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಿಡಿಕಾರಿದರು.

    ರಾಮನಗರ ಜಿಲ್ಲೆಯ ಕೂಟಗಲ್ ಹೋಬಳಿಯ ಜಾಲಮಂಗಲ ಗ್ರಾಮದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಬಡವರಿಗೆ ಆಹಾರ ಮತ್ತು ತರಕಾರಿ ಕಿಟ್‌ಗಳನ್ನು ವಿತರಿಸಿ ಮಾತನಾಡಿದ ಅವರು ಹೇಳಿದ್ದಿಷ್ಟು;

    ಇಂದು ದೇಶದ ಹಲವು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ₹100, ಅಡುಗೆ ಎಣ್ಣೆ ಬೆಲೆ ಲೀಟರ್ ₹220 ತಲುಪಿದೆ. ಲಸಿಕೆ ಅಭಿಯಾನ ಆರಂಭವಾಗಿ 5 ತಿಂಗಳಾದರೂ ಕೇವಲ 3.17% ಭಾರತೀಯರು ಮಾತ್ರ ಕೋವಿಡ್ ಲಸಿಕೆ ಪಡೆದಿದ್ದಾರೆ. ಇದು ಕೂಡ ಸರ್ಕಾರದ ವೈಫಲ್ಯಕ್ಕೆ ಸ್ಪಷ್ಟ ಉದಾಹರಣೆ.

    ಜಾತಿ ಮತ್ತು ಧರ್ಮಗಳನ್ನು ಲೆಕ್ಕ ಹಾಕದೆ ಎಲ್ಲಾ ಜನರಿಗೆ ಕಾಂಗ್ರೆಸ್ ಉಚಿತ ಲಸಿಕೆ ನೀಡುತ್ತಿದೆ. ನಿನ್ನೆಯಷ್ಟೇ ನಾನು 3 ಲಕ್ಷ ಜನರಿಗೆ ಉಚಿತ ಲಸಿಕೆ ಹಾಕುವ ಅಭಿಯಾನವನ್ನು ದಾವಣಗೆರೆಯಲ್ಲಿ ಪ್ರಾರಂಭಿಸಿದೆ. ಆದರೆ ಮತ್ತೊಂದೆಡೆ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಪ್ರತಿ ಲಸಿಕೆಗೆ ₹900 ದರ ನಿಗದಿ ಪಡಿಸಿದ್ದಾರೆ. ಇದು ಬಿಜೆಪಿ ಸರ್ಕಾರಕ್ಕಿರುವ ಸಾರ್ವಜನಿಕರ ಮೇಲಿನ ಉದಾಸೀನತೆಗೆ ಸಾಕ್ಷಿ.

    ಬಿಜೆಪಿ ಸರ್ಕಾರವು ಕಾಂಗ್ರೆಸ್ ನ ವ್ಯಾಕ್ಸಿನೇಷನ್ ಯೋಜನೆಗೆ ಅನುಮತಿ ನೀಡಿದರೆ, ಇಡೀ ರಾಜ್ಯಾದ್ಯಂತ ಉಚಿತ ಲಸಿಕೆ ಹಾಕುವ ₹100 ಕೋಟಿ ಯೋಜನೆ ಜಾರಿಗೆ ತರಲು ತಯಾರಿದ್ದೇವೆ.

    ಬೆಲೆ ಏರಿಕೆ ಬರೆ

    ಕೇಂದ್ರದ ಬಿಜೆಪಿ ಸರ್ಕಾರ ಜನವರಿಯಲ್ಲಿ 10 ಬಾರಿ, ಫೆಬ್ರವರಿಯಲ್ಲಿ 16 ಬಾರಿ, ಮೇ ತಿಂಗಳಲ್ಲಿ 16 ಬಾರಿ ಮತ್ತು ಜೂನ್ ಮೊದಲ ವಾರದಲ್ಲಿ ಒಮ್ಮೆ ಪೆಟ್ರೋಲ್ ದರವನ್ನು ಹೆಚ್ಚಿಸಿದೆ. ಐದು ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಬಿಜೆಪಿ ಇಂಧನ ಬೆಲೆ ಹೆಚ್ಚಿಸಿರಲಿಲ್ಲ ಎಂದರು.

    .

    ಕಾಡಿನಲ್ಲಿ ವನ್ಯಮೃಗ ಗಳಿಗಾಗಿ ಹಣ್ಣಿನ ಮರಗಳನ್ನು ನೆಡುವ ಕಾರ್ಯಕ್ರಮ

    ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕರ ಹೊಣೆಯಾಗಿದೆ, ಪ್ರತಿಯೊಬ್ಬರು ಪರಿಸರ ಕಾಳಜಿ ಇಟ್ಟುಕೊಂಡು ತಮ್ಮ ಸುತ್ತಲೂ ಅವಕಾಶವಿರುವ ಕಡೆ ಗಿಡ ನೆಡುವ ಮೂಲಕ ಹಸಿರು ಬೆಳೆಸುವ ಕೆಲಸ ಮಾಡಬೇಕು, ಆಮೂಲಕ ನಮ್ಮ ಸುತ್ತಲ ಪರಿಸರದಲ್ಲಿ ಪ್ರಾಕೃತಿಕವಾಗಿ ಶುದ್ಧ ಆಮ್ಲಜನಕ ಉತ್ಪಾದನೆ ಮಾಡಲು ಮುಂದಾಗಬೇಕೆಂದು ಅರಣ್ಯ ,ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಕರೆ ನೀಡಿದ್ದಾರೆ.

    ಅವರು ಇಂದು ಧರ್ಮಸ್ಥಳದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರ ಉಪಸ್ಥಿತಿಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ‘ಕಾಡಿನಲ್ಲಿ ವನ್ಯಮೃಗ ಗಳಿಗಾಗಿ ಹಣ್ಣಿನ ಮರಗಳನ್ನು ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

    ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ಜಂಟಿ ಸಹಭಾಗಿತ್ವದಲ್ಲಿ ಧರ್ಮಸ್ಥಳದ 125 ಹೆಕ್ಟೇರು ಪ್ರದೇಶದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ.

    ಕಾರ್ಯಕ್ರಮದ ಆರಂಭದಲ್ಲಿ ಪರಿಸರ ಸಂರಕ್ಷಣೆ ಮಾಡುವ ಬಗ್ಗೆ ಎಲ್ಲರೂ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಪರಿಸರ ಸಂರಕ್ಷಣೆ ನಮ್ಮ ಹೊಣೆ ಎಂಬ ದ್ಯೇಯ ವಾಕ್ಯಕ್ಕೆ ದನಿಗೂಡಿಸಿದರು.ಆನಂತರ ವೃಕ್ಷ ಬಂಧನ ವಿಧಿ ನಡೆಸಲಾಯಿತು. ಆ ಮೂಲಕ ಮರಗಳ ಸಂರಕ್ಷಣೆಯ ಬಗ್ಗೆ ಪ್ರತಿಯೊಬ್ಬರು ಬದ್ಧತೆಯಿಂದ ದುಡಿಯುವ, ವೃಕ್ಷ ಕಾಯುವ ಕಾಯಕಕ್ಕೆ ಕೈಜೋಡಿಸಲು ಅನುವು ಮಾಡಿಕೊಡಲಾಯಿತು.

    ನಂತರ ಧರ್ಮಸ್ಥಳದ ಅರಣ್ಯಪ್ರದೇಶದಲ್ಲಿ ಸಚಿವರು ಹಾಗೂ ಧರ್ಮಾಧಿಕಾರಿಗಳು ಗಿಡ ನೆಟ್ಟು ಯೋಜನೆಗೆ ಚಾಲನೆ ನೀಡಿದರು.
    ಅಲ್ಲದೆ, ಸಮಾರಂಭದಲ್ಲಿ ಉಪಸ್ಥಿತರಿದ್ದ ಪ್ರತಿಯೊಬ್ಬರಿಂದಲೂ ಗಿಡ ನಡೆಸಲಾಯಿತು.ಇದೇ ಸಂದರ್ಭದಲ್ಲಿ ಧರ್ಮಸ್ಥಳ ಶ್ರೀ ಕ್ಷೇತ್ರದಲ್ಲಿ ಅರ್ಧ ಎಕರೆ ಅರಣ್ಯ ಪ್ರದೇಶದಲ್ಲಿ ಕೈಗೊಂಡಿರುವ ಮಿಯಾವಾಕಿ ಮಾದರಿ ನೆಡುತೋಪು ಯೋಜನೆ ಉದ್ಘಾಟಿಸಲಾಯಿತು.

    ನಂತರ ಧರ್ಮಸ್ಥಳ ಶ್ರೀ ಕ್ಷೇತ್ರ ನೂತನವಾಗಿ ಜಾರಿಗೆ ತಂದಿರುವ ಹಸಿರು ಬಸ್ ಗೆ ಸಚಿವ ಅರವಿಂದ ಲಿಂಬಾವಳಿ ಚಾಲನೆ ನೀಡಿದರು.

    ಧರ್ಮಸ್ಥಳ ಕ್ಷೇತ್ರದ ಸುತ್ತಮುತ್ತಲಿನಲ್ಲಿ ಅರಣ್ಯ ನಾಶವಾಗಿರುವ ಕಡೆ ಗಿಡ ನೆಡಬೇಕು , ವಿಶೇಷವಾಗಿ ವನ್ಯಮೃಗಗಳಿಗೆ ಆಹಾರ ಕ್ಕಾಗಿ ಹಣ್ಣಿನ ಗಿಡಗಳನ್ನು ನೆಡಬೇಕು ಎಂದು ಎರಡು ತಿಂಗಳ ಹಿಂದೆ ಇಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಂಡಿದ್ದೆವು ಅದರಂತೆ ಇಂದು ಇಲ್ಲಿ ಗಿಡ ನೆಟ್ಟಿದ್ದೇವೆ, ನೀವು ಸಹ ನಿಮ್ಮ ಸುತ್ತಮುತ್ತ ಅವಕಾಶವಿರುವ ಕಡೆ ಗಿಡ ನೆಡಬೇಕು ಎಂದು ಅವರು ಮನವಿ ಮಾಡಿದರು. ಕರೋನಾ ಇದ್ದರೂ ಕೂಡ ವಿಶ್ವ ಪರಿಸರದ ದಿನವಾಗಿ ಇಂದು ನಾವು ಸ್ವಸ್ಥ ಪರಿಸರಕ್ಕಾಗಿ ಈ ಮಹತ್ವದ ಯೋಜನೆಗೆ ಚಾಲನೆ ನೀಡುತ್ತಿದ್ದೇವೆ .ಇದು ನಾಟಿ ಸಮಯವೂ ಆಗಿರುವುದರಿಂದ ಯೋಜನೆಯ ಅನುಷ್ಠಾನಕ್ಕೆ ಉತ್ತಮ ಸಮಯವಾಗಿದೆ. ಸಾರ್ವಜನಿಕರು ಕೂಡ ಇಂತಹ ಒಳ್ಳೆಯ ಕೆಲಸಕ್ಕೆ ಕೈಜೋಡಿಸಿ ಹಸಿರು ಸಂರಕ್ಷಣೆಗೆ ಮುಂದಾಗಬೇಕೆಂದು ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.

    ಈ ಪ್ರದೇಶದಲ್ಲಿ ಮಾವು, ಹಲಸು ,ನೆಲ್ಲಿ, ಕಾಡು ಬಾದಾಮಿ, ಹೆಬ್ಬಲಸು ಮತ್ತು ನೇರಳೆ ಹಣ್ಣಿನ ಗಿಡಗಳನ್ನು ನೆಡಲಾಯಿತು.

    ಸಮಾರಂಭದಲ್ಲಿ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ, ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಜಯ ಮೋನಪ್ಪ ಗೌಡ,ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್, ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನಟಾಲ್ಕರ್ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕರಿಕಾಳನ್ ಹಾಜರಿದ್ದರು.

    error: Content is protected !!