25.2 C
Karnataka
Friday, May 22, 2026
    Home Blog Page 48

    DASARA: ದಸರಾ ಇತಿಹಾಸ ನಿಮಗೆ ಗೊತ್ತಿರಲಿ

    ನಾಡಿನೆಲ್ಲೆಡೆ ದಸರಾ ಸಂಭ್ರಮ. ಕನ್ನಡಪ್ರೆಸ್.ಕಾಮ್ ತನ್ನ ದಸರಾ ಸಂಗೀತೋತ್ಸವದ ಮೂರನೇ ದಿನವಾದ ಇಂದು ದಸರಾ ಆಚರಣೆಯ ಹಿಂದಿನ ಉದ್ದೇಶ ಮತ್ತುಇತಿಹಾಸವನ್ನು ತನ್ನ ಓದುಗರಿಗೆ ಪರಿಚಯಿಸುತ್ತದೆ.

    ಮೈಸೂರು ದಸರಾ-mysuru dasara- ವಿಶ್ವ ಪ್ರಸಿದ್ಧಿ ಹಾಗೆಯೇ ದೇಶದೆಲ್ಲೆಡೆಯೂ ದಸರಾ ಆಯಾ ಪ್ರದೇಶವಾರು ಆಚರಣೆಯನ್ನು ಹೊಂದಿದೆ. ಇಂದಿನ ಸಂಚಿಕೆಯಲ್ಲಿ ನವರಾತ್ರಿಯ ಆಚರಣೆ ಸಮಗ್ರ ವಿವರವನ್ನು ಉಪನ್ಯಾಸಕಿಯರಾದ ರತ್ನಾ ಶ್ರೀನಿವಾಸ್ ಮತ್ತು ಡಾ. ಚಂದ್ರಾ ಮುತಾಲಿಕ್ ಸೊಗಸಾಗಿ ವಿವರಿಸಿದ್ದಾರೆ,

    ಮುಂಬೈ ವಿವಿಯಿಂದ ಎಂ. ಫಿಲ್ ಮಾಡಿರುವ ರತ್ನಾ ಶ್ರೀನಿವಾಸ್ ಅವರು ಯಲಹಂಕದಲ್ಲಿರುವ ಆದಿತ್ಯ ಪದವಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದಾರೆ. ಮಂಬೈ ವಿವಿಯಲ್ಲಿ ಪಿಎಚ್ .ಡಿ ಮಾಡಿರುವ ಡಾ. ಚಂದ್ರಾ ಮುತಾಲಿಕ್ ಎಂ ಎನ್ ಪದವಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದಾರೆ.

    ದಸರಾ ಇತಿಹಾಸವನ್ನು ಈ ವಿಡಿಯೋ ಮೂಲಕ ಅರಿಯಿರಿ.

    NAVARAATRI: ನವರಾತ್ರಿ ದೇವಿಸ್ತುತಿ

    ಕನ್ನಡಪ್ರೆಸ್ .ಕಾಮ್ ನ ದಸರಾ ಸಂಗೀತೋತ್ಸವದ ಇಂದಿನ ಮುಂಜಾನೆಯ ಕಾರ್ಯಕ್ರಮದಲ್ಲಿ ಬೆಂಗಳೂರು ಶ್ರೀನನಗರ ಶ್ರೀ ವೆಂಕಟರಮಣ ಮಹಿಳಾ ಸಂಘದ ಸದಸ್ಯೆಯರು ದೇವಿ ಸ್ತುತಿಯನ್ನು ಪ್ರಸ್ತುತ ಪಡಸಿದ್ದಾರೆ.

    ಕಳೆದ ಎರಡು ದಶಕಗಳಿಂದ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ಈ ಸಂಘ ವಿಜಯಲಕ್ಷ್ಮಿ ಅವರ ನೇತೃತ್ವದಲ್ಲಿ ಮುನ್ನಡೆಯುತ್ತಿದೆ. ನವರಾತ್ರಿಯ ಈ ಒಂಭತ್ತು ದಿನಗಳಿಗೂ ದೇವಿಯನ್ನು ಆಹ್ವಾನಿಸಿ ಸಂಘದ ಸದಸ್ಯರೆಯರು ಭಕ್ತಿ ಪೂರ್ವಕವಾಗಿ ದೇವಿಯನ್ನು ಸ್ತುತಿಸಿದ್ದಾರೆ.

    ವಿಜಯಲಕ್ಷ್ಮಿ ಅವರ ಜೊತೆ ಗೀತಾ ಗಣೇಶ್,ಲಕ್ಷ್ಮಿ,ಎಂ. ಎ ಪುಷ್ಪಾ,ಸೀತಾಲಕ್ಷ್ಮಿ ಮತ್ತು ಸಂಘಧ ಕಾರ್ಯದರ್ಶಿ ನಾಗರತ್ನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

    ವೀಕ್ಷಿಸಿ , ಆಲಿಸಿ ಪ್ರತಿಕ್ರಿಯಿಸಿ. ಹಾಗೇಯೆ ನಮ್ಮ ಯೂ ಟ್ಯೂಬ್ ಚಾನಲ್ ಗೂ subscribe ಆಗಿ.

    Services of guest lectures to be continued:ಅತಿಥಿ ಉಪನ್ಯಾಸಕರ ಸೇವೆ ಮುಂದುವರಿಸಲು ನಿರ್ಧಾರ

    BENGALURU OCT 8

    ಕಳೆದ ಸಾಲಿನಲ್ಲಿ ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸಿದ ಅತಿಥಿ ಉಪನ್ಯಾಸಕರ-guest lectures- ಸೇವೆಯನ್ನು 2021-22ನೇ ಸಾಲಿಗೂ‌ ಮುಂದುವರಿಸಲು ಆದೇಶಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಆಶ್ವತ್ಥನಾರಾಯಣ -Dr.C.N.Ashwatha Narayana-ಶುಕ್ರವಾರ ತಿಳಿಸಿದ್ದಾರೆ.

    ಕಳೆದ ಸಾಲಿನಲ್ಲಿ ಅತಿಥಿ ಉಪನ್ಯಾಸಕರಾಗಿದ್ದವರನ್ನು ಒಂದು ದಿನದ ಮಟ್ಟಿಗೆ ಸೇವೆಯಿಂದ ಬಿಡುಗಡೆಗೊಳಿಸಿ ಪುನಃ ಸೇವೆಗೆ ಸೇರಿಸಿಕೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.

    ಕೋವಿಡ್ -COVID 19-ವಿಷಮ ಪರಿಸ್ಥಿತಿಯನ್ನು ಪರಿಗಣನೆಗೆ ತೆಗೆದುಕೊಂಡು ಸಾರ್ವಜನಿಕ ಹಾಗೂ ಶೈಕ್ಷಣಿಕ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಶ್ವತ್ಥ ನಾರಾಯಣ ವಿವರಿಸಿದ್ದಾರೆ.

    Dasara Music Fest: ಮರೆಯಬೇಡ ಮನವೆ ನೀನು ಹರಿಯ ಸ್ಮರಣೆಯ

    ಕನ್ನಡಪ್ರೆಸ್.ಕಾಮ್ ನ ನವರಾತ್ರಿ ಸಂಗೀತೋತ್ಸವದ ಎರಡನೇ ದಿನವಾದ ಇಂದಿನ ಸಂಗೀತ ಕಚೇರಿಯನ್ನು ಮೈಸೂರಿನ ಪ್ರಖ್ಯಾತ ವೈದ್ಯ ಡಾ. ಸಿ. ಜಿ ಪ್ರಹ್ಲಾದರಾವ್ ನಡೆಸಿಕೊಡುತ್ತಿದ್ದಾರೆ.

    ವೃತ್ತಿಯಿಂದ ವೈದ್ಯರಾದರು ತಮ್ಮ ಬಿಡುವಿನ ವೇಳೆಯಲ್ಲಿ ಸಂಗೀತ ಅಭ್ಯಾಸ ಮಾಡಿದ್ದಾರೆ. ಶಾಸ್ತ್ರೀಯವಾಗಿ ಸಂಗೀತ ಅಭ್ಯಾಸ ಆಗಿಲ್ಲವಾದರು ಗುರು ಮಡಿಕೇರಿಯ ನಾಗೇಂದ್ರ ಅವರಿಂದ ಸುಗಮ ಸಂಗೀತ ಕಲಿತ್ತಿದ್ದಾರೆ.

    ಗೀತೆಗಳಲ್ಲಿ ಭಾವ ತುಂಬಿ ಹಾಡುವುದು ಇವರ ವೈಶಿಷ್ಟ್ಯ. ಇಂದಿನ ಕಾರ್ಯಕ್ರಮದಲ್ಲಿ ಸತತ ಗಣನಾಥ ಎಂದು ಗಣಪನನ್ನು ಆರಂಭಿಸಿ ಮುಂದೆ ವೀಣಾ ಪಾಣಿ ಬ್ರಹ್ಮಾಣಿ ಎಂದು ಶಾರದೆಯನ್ನು ಸ್ತುತಿಸುತ್ತಾರೆ. ಮುಂದೆ ಮರೆಯಬೇಡ ಮನವೆ ನೀನು ಹರಿಯಾ ಸ್ಮರಣೆಯ ಎಂದು ಹಾಡುತ್ತಾ ಶ್ರೀ ಮಹಾಲಕುಮಿ ದೇವಿಯೇ ಎಂದು ಮಹಾಲಕ್ಷ್ಮಿಯನ್ನು ಕೊಂಡಾಡುತ್ತಾ ಕಾರ್ಯಕ್ರಮ ಮುಗಿಸುತ್ತಾರೆ.

    ಅದನ್ನು ವೀಕ್ಷಿಸಿ ಆಲಸಿ ಪ್ರತಿಕ್ರಿಯಿಸಿ.

    ಸೌಭಾಗ್ಯ ಪಂಚದಶೀ

    ಇದಕ್ಕೂ ಮೊದಲು ಇಂದು ಗಾಯಕಿ ಗೀತಾ ಗಣೇಶ್ ಅವರು ಸೌಭಾಗ್ಯ ಪಂಚದಶೀಯನ್ನು ನಮ್ಮ ವೀಕ್ಷಕರಿಗಾಗಿ ಪ್ರಸ್ತುತ ಪಡಿಸಿದ್ದರು. ಗೀತಾ ಗಣೇಶ್ ಅವರ ಗಾಯನ ಭಕ್ತಿ ಭಾವದಿಂದ ತುಂಬಿತ್ತು. ಅದನ್ನು ಕೂಡ ಆಲಿಸಿ. ವೀಕ್ಷಿಸಿ ಧನ್ಯರಾಗಿ.

    By-election- ಉಪ ಚುನಾವಣೆಯಲ್ಲಿJDS ಸೋಲಿಸಲು ಕಾಂಗ್ರೆಸ್ ಷಡ್ಯಂತ್ರ; ಸಿದ್ಧರಾಮಯ್ಯ ವಿರುದ್ಧ ಹರಿಹಾಯ್ದ ಕುಮಾರ



    CHANNAPATTANA OCT 10

    ಉಪ ಚುನಾವಣೆಯಲ್ಲಿ ಜೆಡಿಎಸ್-JDS- ಪಕ್ಷವನ್ನು ಸೋಲಿಸಲು ಕಾಂಗ್ರೆಸ್ -congress- ನಾಯಕರು ಅಪಪ್ರಚಾರ ನಡೆಸುತ್ತಿದ್ದು, ಎರಡೂ ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಗೆಲ್ಲಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ-H D KUMARA SWAMY_ ಹೇಳಿದರು.ಚನ್ನಪಟ್ಟಣದಲ್ಲಿ ಇಂದು ಬೆಳಗ್ಗೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದ ವೇಳೆ ಮಾಧ್ಯಮಗಳ ಜತೆ ಅವರು ಮಾತನಾಡಿದರು.

    ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ ಬಿಟ್ಟು ಮಾತನಾಡಲು ಬೇರೆ ವಿಷಯ ಇಲ್ಲ. ಅವರ ರಾಜಕೀಯ ನನಗೆ ಬೇಸರ ತರಿಸಿದೆ ಎಂದು ಅವರು ಹೇಳಿದರು.

    ಜೆಡಿಎಸ್ ಪಕ್ಷವು ಬಿಜೆಪಿಯ ಬಿ ಟೀಂ ಅಂತಾರೆ. ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಹಾಕಿದ್ದಾರೆ ಅಂತಾರೆ. ಆರೋಪಗಳಿಗೂ ಒಂದು ಮಿತಿ ಬೇಡವೇ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

    ಸಿದ್ದರಾಮಯ್ಯ ಅವರು ಪದೇ ಪದೇ ನಿಮ್ಮ ಮೇಲೆ ದೂರುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ಅವರು, ಸಿದ್ದರಾಮಯ್ಯ ಅವರ ರೀತಿ ಕುಲಗೆಟ್ಟ ರಾಜಕೀಯ ನಾನು ಮಾಡುವುದಿಲ್ಲ. ಅಲ್ಪಸಂಖ್ಯಾತರು ಜೆಡಿಎಸ್ ಗೆಲ್ಲುವ ಕಡೆ ಜೆಡಿಎಸ್ ಪಕ್ಷಕ್ಕೆ ಮತ ಹಾಕಿ, ಕಾಂಗ್ರೆಸ್ ಗೆಲ್ಲುವ ಕಡೆ ಆ ಪಕ್ಷಕ್ಕೆ ಮತ ಹಾಕಿ ಎಂದು ನಾನು ಹೇಳಿರುವುದು ನಿಜ ಎಂದರು.

    ಜೆಡಿಎಸ್ ಕಾರ್ಯಾಗಾರದಲ್ಲಿ ನಾನೇ ಹೇಳಿದ್ದೆ. ಜೆಡಿಎಸ್ ಪಕ್ಷ ಎಲ್ಲಿ ಸ್ಟ್ರಾಂಗ್ ಇದೆ ಅಲ್ಲಿ ಪಕ್ಷ ಬೆಂಬಲಿಸಿ. ಎಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಮುಂದೆ ಇದೆ ಅಲ್ಲಿ ಅಲ್ಪಸಂಖ್ಯಾತ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಬೆಂಬಲಿಸಿ ಅಂತಾ ಮುಕ್ತವಾಗಿ ಹೇಳಿದ್ದೇನೆ. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದರು.

    ಕಾಂಗ್ರೆಸ್ ಪಕ್ಷದ ನಾಯಕರಿಗೆ ಈ ಹೃದಯ ವೈಶಾಲ್ಯತೆ ಇಲ್ಲ. ಅದರ ಬದಲಿಗೆ ನಮ್ಮ ಪಕ್ಷವನ್ನೇ ಮುಗಿಸುವ ಕೆಟ್ಟ ರಾಜಕೀಯ ಮಾಡುತ್ತಿದ್ದಾರೆ ಎಂದು ಎಚ್ ಡಿಕೆ ತಿಳಿಸಿದರು.

    ರಾಜ್ಯದಲ್ಲಿ ಜ್ಯಾತ್ಯತೀತ ಶಕ್ತಿಗಳು ಉಳಿಯಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷವನ್ನಎ ಬೆಂಬಲಿಸಿ ಅಂತಾ ಹೇಳಿದ್ದೇನೆ. ಆದರೆ, ಸಿದ್ದರಾಮಯ್ಯ ಅವರು ಜೆಡಿಎಸ್ ಪಕ್ಷದ ವಿರುದ್ಧ ಅಪಪ್ರಚಾರ ಮಾಡಿ ತಮ್ಮ ಕೀಳುಮಟ್ಟದ ರಾಜಕೀಯ ಏನೂ ಎಂಬುದನ್ನು ಪ್ರದರ್ಶನ ಮಾಡುತ್ತಿದ್ದಾರೆ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

    ಆರ್.ಎಸ್.ಎಸ್-RSS_ ಬಗ್ಗೆ ನೀಡಿರುವ ಹೇಳಿಕೆಗೆ ಬದ್ಧ:

    ಆರ್ ಎಸ್ ಎಸ್ ಎಸ್ ಬಗ್ಗೆ ನಾನು ಕೊಟ್ಟಿರುವ ಹೇಳಿಕೆಗೆ ಬದ್ಧನಾಗಿದ್ದೇನೆ. ವಾಸ್ತವ ಸಂಗತಿಗಳನ್ನು ಮಾತ್ರ ಹೇಳಿದ್ದೇನೆ. ಆರ್.ಎಸ್.ಎಸ್ ಪ್ರಚಾರಕರೊಬ್ಬರು ಹೇಳಿರುವ ಮಾತುಗಳನ್ನು ನಾನು ಉಲ್ಲೇಖ ಮಾಡಿದ್ದೇನೆ. ಬೇಕಿದ್ದರೆ ನನ್ನ ಹೇಳಿಕೆ ವಿರೋಧ ಮಾಡುವವರು ಸಾರ್ವಜನಿಕವಾಗಿ ಚರ್ಚೆಗೆ ಬರಲಿ. ನಾನು ಸಿದ್ದನಿದ್ದೇನೆ. ಬಿಜೆಪಿ ಹಾಗೂ ಆರ್.ಎಸ್.ಎಸ್ ನಾಯಕರು ಬರಲಿ ಎಂದು ಎಚ್ ಡಿಕೆ ಅವರು ಹೇಳಿದರು.

    ಸ್ವಾತಂತ್ರ್ಯ ಬಂದಾಗ ಆರ್.ಎಸ್.ಎಸ್ ಇಲ್ಲದಿದ್ದರೆ ಭಾರತವು ಪಾಕಿಸ್ತಾನ ಆಗುತಿತ್ತು ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿರುವ ಬಗ್ಗೆ ಪ್ರಶ್ನಿಸಿದಾಗ, ಸ್ವಾತಂತ್ರ್ಯ ಬಂದಾಗ ಈಶ್ವರಪ್ಪ ಅವರು ಹುಟ್ಟಿದ್ದರಾ? ಯಾರ ಯಾರ ಕೊಡುಗೆ ಏನ್ ಏನೇನು ಇದೆ ಎಂದು ಈಶ್ವರಪ್ಪ ಅವರಿಗೇನು ಗೊತ್ತು? ಎಂದು ಟಾಂಗ್ ಕೊಟ್ಟರು.

    ಕಾಶ್ಮೀರದಲ್ಲಿ ಶಾಲೆಗೆ ನುಗ್ಗಿ ಭಯೋತ್ಪಾದಕರು ಶಿಕ್ಷಕರನ್ನ ಸುಟ್ಟಿದ್ದಾರೆ. ದೇವೇಗೌಡರು ಪ್ರಧಾನಿ ಆಗಿದ್ದ ವೇಳೆ ದೇಶದಲ್ಲಿ ನಾಗರಿಕರ ಮೇಲೆ ಗುಂಡು ಹಾರಿಸಿದ ಒಂದೇ ಒಂದು ಘಟನೆ ನಡೆದಿತ್ತಾ? ಕಳೆದ 4 ದಿನಗಳಲ್ಲಿ ಕಾಶ್ಮೀರದಲ್ಲಿ ಪಂಡಿತರು, ಶಿಕ್ಷಕರು, ನಾಗರಿಕರನ್ನು ಭಯೋತ್ಪಾದಕರು ಗುಂಡಿಟ್ಟು ಕೊಂದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ದೂರಿದರು.

    ಕಾಂಗ್ರೆಸ್ ನಾಯಕರ ಜತೆಗೆ ಬಿಜೆಪಿ ನಾಯಕರು ವಾದ ಮಾಡಿದ ಹಾಗೆ ನನ್ನ ಬಳಿ ಚರ್ಚೆ ಬೇಡ. ನಾನು ದಾಖಲೆ, ಆಧಾರ ಇಟ್ಟುಕೊಂಡು ಮಾತನಾಡಿದ್ದೇನೆ. ಆರ್.ಎಸ್.ಎಸ್ ಹಾಗೂ ಬಿಜೆಪಿ ಸೇರಿಕೊಂಡು ಕಾಶ್ಮೀರವನ್ನ ಹಾಳು ಮಾಡುತ್ತಿದ್ದಾರೆ ಎಂದು ಅವರು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.

    ಉಪ ಚುನಾವಣೆಯಲ್ಲಿ ಗೆಲ್ಲುತ್ತೇವೆ:

    ಹಾನಗಲ್ ಮತ್ತು ಸಿಂದಗಿ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಪರ ಎರಡು ಕ್ಷೇತ್ರಗಳಲ್ಲಿ ಉತ್ತಮ ವಾತಾವರಣ ಇದೆ. ಸಿಂದಗಿಯಲ್ಲಿ ನಮ್ಮ ಅಭ್ಯರ್ಥಿ ಗೆಳ್ಳುವುದು ಖಚಿತ. ಹಾನಗಲ್ ನಲ್ಲಿ ಗಟ್ಟಿ ಪೈಪೋಟಿ ನೀಡಲಿದ್ದೇವೆ ಹಾಗೂ ಅಲ್ಲಿಯೂ ನಮ್ಮ ಪರವಾಗಿಯೇ ಅಲೆ ಇದೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

    ನಮ್ಮ ಪಕ್ಷವನ್ನ 2023ಕ್ಕೆ ಅಧಿಕಾರಕ್ಕೆ ತರಲು ಕಾರ್ಯಾಗಾರಗಳನ್ನ ಮಾಡಿದ್ದೇನೆ. ಇದರ ಭಾಗವಾಗಿ ದೇಶಗಳಲ್ಲಿ ನಡೆಯುತ್ತಿರುವ ಘಟನೆಗಳನ್ನು ಜನತೆ ಮುಂದೆ ಇಡಲು ಪ್ರಾರಂಭ ಮಾಡಿದ್ದೇನೆ. ಇದು ಇಲ್ಲಿಗೆ ನಿಲ್ಲಿಸುವ ಪ್ರಶ್ನೆ ಇಲ್ಲ. ಕಾರ್ಯಾಗಾರಗಳನ್ನು ಮಾಡುವ ಮೂಲಕ ಜನರಿಗೆ ಮನವರಿಕೆ ಮಾಡುವ ಕೆಲಸ ಮಾಡುತ್ತೇನೆ. ಉಪ ಚುನಾವಣೆಯಲ್ಲಿ ಯಾರನ್ನೊ ಓಲೈಸಿಕೊಳ್ಳಲು ಈ ಕಾರ್ಯಾಗಾರ ಮಾಡಿಲ್ಲ. ಓಲೈಸೊ ರಾಜಕಾರಣ ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಬಿಟ್ಟಿದ್ದು. ಹಿಂದುತ್ವದ ಹೆಸರಿನಲ್ಲಿ ಸಂದೇಶ ಕೊಡಲು ಬಿಜೆಪಿ ಹೊರಟಿದೆ. ಹಿಂದುತ್ವದ ರಾಜಕಾರಣ ಮಾಡಿಕೊಂಡು ಮತಗಳಿಗೊಸ್ಕರ ನಾನು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿಲ್ಲಾ ಎಂದು ಕುಮಾರಸ್ವಾಮಿ ತಿಳಿಸಿದರು.

    DASARA: ಚಿತ್ರದುರ್ಗದ ಶೋಭಾ-ಸುಮಾ ಅವರ ಮನೆಯ ದಸರಾ ಗೊಂಬೆ ನೋಟ

    ಕಳೆದ ಹತ್ತು ವರ್ಷಗಳಿಂದ ಚಿತ್ರದುರ್ಗದ ಶೋಭಾ ಮಂಜುನಾಥ ತಮ್ಮ ಮನೆಯಲ್ಲಿ ದಸರಾ ಗೊಂಬೆ ಕೂಡಿಸುತ್ತಿದ್ದಾರೆ. ಹಿರಿಯರಿಂದ ಬಂದ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಕೃಷಿ ಅಧಿಕಾರಿಯಾಗಿರುವ ಪತಿ ಹಾಗೂ ಕಾಲೇಜಿನಲ್ಲಿ ಓದುತ್ತಿರುವ ಮಕ್ಕಳು ಬೆಂಬಲವಾಗಿ ನಿಂತಿದ್ದಾರೆ.

    ಈ ಬಾರಿ ನೈಜೇರಿಯಾಲಿದ್ದ ವಾರಗಿತ್ತಿ ಸುಮಾ ಮುರುಗೇಂದ್ರ ಅವರು ಜೊತೆಗೂಡಿರುವದರಿಂದ ಬೊಂಬೆ ಹಬ್ಬದ ಸಡಗರ ಮತ್ತಷ್ಟು ಹೆಚ್ಚಿದೆ. ನೈಜೇರಿಯಾದಿಂದ ತಂದ ಬೊಂಬೆಗಳನ್ನು ಪ್ರತ್ಯೇಕವಾಗಿ ಜೋಡಿಸಿರುವುದು ಈ ಸಂಗ್ರಹ ಮತ್ತಷ್ಟು ಆಕರ್ಷಕವಾಗಲು ಕಾರಣವಾಗಿದೆ.

    ಇವರ ಮನೆಯ ಬೊಂಬೆಗಳ ಲೋಕ ಇಲ್ಲಿ ಅನಾವರಣಗೊಂಡಿದೆ.

    MYSURU DASARA ಟೂರಿಸಂ ಪ್ಯಾಕೇಜ್ ಸಲಹೆ ಕೊಟ್ಟ ಕೃಷ್ಣ

    MYSURU OCT 7

    ಮೈಸೂರು ದಸರಾವನ್ನು ಪ್ಯಾಕೇಜ್ ಟೂರಿಸಂಗೋಸ್ಕರ ಸಿದ್ಧ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ-S M KRISHNA _ ಅವರು ರಾಜ್ಯ ಸರಕಾರಕ್ಕೆ ಮಾಡಿದ್ದಾರೆ.

    ಸಾಂಸ್ಕೃತಿಕ ನಗರಿ ಮೈಸೂರಿನ _MYSURU- ಚಾಮುಂಡಿ ಬೆಟ್ಟದಲ್ಲಿ ನೆಲೆ ನಿಂತಿರುವ  ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆಗೈದು, ದೀಪಬೆಳಗಿಸುವ ಮೂಲಕ ವಿಶ್ವವಿಖ್ಯಾತ 411ನೇ ಮೈಸೂರು ದಸರಾಕ್ಕೆ ಎಸ್.ಎಂ.ಕೃಷ್ಣ ಅವರು ಗುರುವಾರ ವಿಧ್ಯುಕ್ತ ಚಾಲನೆ ನೀಡಿ, ಅವರು ಮಾತನಾಡಿದರು.

    ಮುಂದಿನ ವರ್ಷಕ್ಕೆ ಒಂದು ಪ್ಯಾಕೇಜ್ ಟೂರ್ಸ್ ಮಾಡುವ ಮೂಲಕ ರೂಪುರೇಷೆಗಳು ಹೇಗಿರಬೇಕೆಂಬುದನ್ನು ಸಿದ್ಧಗೊಳಿಸಿ ನಿರ್ಮಿಸಿದರೆ ಬಹುಶಃ ದಸರಾದಿಂದ ರಾಜ್ಯದ ಅಭಿವೃದ್ಧಿ ಕೂಡ ಸಾಧ್ಯವಿದೆ ಎಂದವರು ಹೇಳಿದರು.

    ಕರ್ನಾಟಕ ರಾಜ್ಯಕ್ಕೆ ಸಹಸ್ರಾರು ಮಂದಿ ಬರುತ್ತಾರೆ. ವಿಜಯಪುರ, ಐಹೊಳೆ ಪಟ್ಟದಕಲ್ಲು ಹಂಪಿ ಇವುಗಳನ್ನು ನೋಡಿ ಹೋಗಲು ಅವಕಾಶ ಮಾಡಿದಲ್ಲಿ ಪ್ರವಾಸೋದ್ಯಕ್ಕೆ ಸಂಪನ್ಮೂಲ ಕ್ಷೇತ್ರವನ್ನಾಗಿ ಮಾಡಿಕೊಳ್ಳಬಹುದು. ಉದಾಹರಣೆಗೆ ಸಿಂಗಾಪುರ ಮೈಸೂರಿಗಿಂತ ಸಣ್ಣದು ಮೂಲಭೂತವಾದ ಬಂಡವಾಳದಿಂದಲೇ ಲಕ್ಷಾಂತರ ಜನ ನೋಡಲು ಬರುತ್ತಾರೆ. ಸ್ವಚ್ಛವಾಗಿ ಆ ಪಟ್ಟಣವನ್ನು ರಕ್ಷಣೆ ಮಾಡಿದ್ದಾರೆ ಎಂದರು.

    ಅಧಿದೇವತೆ ತಾಯಿ ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಿ ಮನುಕುಲಕ್ಕೆ ಬಂದಿರತಕ್ಕಂತಹ ಬಹಳ ದೊಡ್ಡ ಗಂಡಾಂತರ ಈ ಕೊರೊನಾ ಪಿಡುಗಿನಿಂದ ಮನುಕುಲವನ್ನು ರಕ್ಷಣೆ ಮಾಡುವಂತೆ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದರು.

    ಮೈಸೂರು ನೆನಪು

    ನನ್ನ ತಂದೆ ಹತ್ತು ಹನ್ನೆರಡು ವರ್ಷಗಳ ಪ್ರಾಯದಲ್ಲಿ ಮೈಸೂರಿಗೆ ಓದಲು ಕಳಿಸಿದರು. ಒಂಟಿಕೊಪ್ಪಲ್ ಮಿಡ್ಲ್ ಸ್ಕೂಲ್ ನಲ್ಲಿ ಕಲಿತೆ, ಆ ನಂತರ ಮಹಾರಾಜ ಹೈಸ್ಕೂಲ್ʼನಲ್ಲಿ ಮೂರು ವರ್ಷ ಕಳೆದೆ. ಆ ನಂತರ ಯುವರಾಜ ಕಾಲೇಜು, ಆ ನಂತರ ಮಹಾರಾಜ ಕಾಲೇಜಿನಲ್ಲಿ ಅಭ್ಯಾಸ ನಡೆಯಿತು.  ನನ್ನ ವ್ಯಕ್ತಿತ್ವ ವಿಕಸನ ಮೈಸೂರಿಗೆ ಹೊಂದಿಕೊಂಡಂತೆ ನಡೆದಿದೆ. ಪ್ರತಿದಿನ ಚಾಮುಂಡಿಬೆಟ್ಟ ನೋಡುವುದು, ಕೈಮುಗಿದು ಹೋಗುವುದು, ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿದ್ದರು. ದಸರಾ ಮಹಾ ಸಡಗರದಿಂದ ನಡೆಯುತ್ತದ್ದ ಕಾಲ, ಆಗ ಈ ರೀತಿಯ ಪಿಡುಗಿರಲಿಲ್ಲ.  ವಿಜಯದಶಮಿಯ ದಿನ ರಾಜ್ಯದ, ದೇಶದ ವಿದೇಶಗಳಿಂದ ಸಹಸ್ರಾರು ಮಂದಿ ಮೈಸೂರಿಗೆ ಬಂದು ಈ ದಸರಾ ಹಬ್ಬದ ಸೊಗಡನ್ನು ಅನುಭವಿಸಿದ್ದಾರೆ ಎಂದು ಎಸ್. ಎಂ. ಕೃಷ್ಣ ತಿಳಿಸಿದರು.

    ಪ್ರಜಾಪ್ರತಿನಿಧಿ ಸಭೆ ಜಗನ್ ಮೋಹನ ಅರಮನೆಯಲ್ಲಿ  ನಡೆಯುತ್ತಿತ್ತು. ಮರಿಮಲ್ಲಪ್ಪದಲ್ಲಿ ವಾಸ್ತವ್ಯಕ್ಕೆ ಅನುಕೂಲ ಮಾಡಿದ್ದರು. ಪ್ರಾತಃ ಸ್ಮರಣಿಯ ಪಿಟೀಲು ಚೌಡಯ್ಯ ಸೇರಿದಂತೆ ಹಲವರು ಪ್ರತಿರಾತ್ರಿ ಸಂಗೀತ ಕಛೇರಿ ಏರ್ಪಾಡು  ಮಾಡುತ್ತಿದ್ದರು. ಮೈಸೂರು ಕುಸ್ತಿಗೆ ಹೆಸರಾಂತ ಪಟ್ಟಣವಾಗಿತ್ತು. ಸಾಹುಕಾರ್ ಚನ್ನಯ್ಯನಂತವರು ಕುಸ್ತಿಗೆ ವಿಶೇಷ ಸೌಲತ್ತು ಒದಗಿಸುತ್ತಿದ್ದರು. ದಸರಾದಷ್ಟೇ  ಖ್ಯಾತವಾಗಿದ್ದ ವಸ್ತುಪ್ರದರ್ಶನ ನೋಡಲು ಸಹಸ್ರಾರು ಮಂದಿ ಬರುತ್ತಿದ್ದರು. ಅದನ್ನು ಅನುಭವಿಸುತ್ತಿದ್ದರು. ಇಂತಹ ಅತ್ಯಂತ ರೋಚಕವಾದಂತಹ ಮತ್ತು ನಮ್ಮನ್ನು ಪುಳಕಿತಗೊಳಿಸತಕ್ಕಂತಹ ಹಲವಾರು ಘಟನೆಗಳು ನಡೆಯುತ್ತಿತ್ತು ಎಂದು ಎಸ್. ಎಂ.ಕೃಷ್ಣ ಅವರು ಗತ ವೈಭವದ ಮೆಲುಕು ಹಾಕಿದರು.

    ಯದುಕುಲದ ಅರಸರು ದಸರಾವನ್ನು ನಾಡಹಬ್ಬವನ್ನಾಗಿ ಪರಿವರ್ತಿಸಲು ಶ್ರಮಪಟ್ಟಿದ್ದಾರೆ. ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್, ಆ ನಂತರ ಬಂದಂತಹ ಅನುವಂಶಿಕರು ದಸರಾ ಉತ್ಸವಕ್ಕೆ ಸಾಕಷ್ಟು ಮೆರಗನ್ನು ತಂದುಕೊಟ್ಟಿದ್ದಾರೆಂದು ಸ್ಮರಿಸಿದರು.

    ಸರ್ ಎಂ ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ದಸರಾ ಮಹೋತ್ಸವಕ್ಕೆ ವಿಶೇಷ ಅರ್ಥ ಕಲ್ಪಿಸಿಕೊಟ್ಟವರು. ರಾಮಕೃಷ್ಣಾಶ್ರಮದಿಂದ ಪ್ರತಿ ತಿಂಗಳು ಬೆಟ್ಟಕ್ಕೆ ನಡೆದುಕೊಂಡು ಹೋಗುತ್ತಿದ್ದೆವು ಅಲ್ಲಿ ತಾಯಿಗೆ ನಮಸ್ಕಾರ ಸಲ್ಲಿಸುತ್ತಿದ್ದೆವು. ಇವೆಲ್ಲವನ್ನು ಸ್ಮರಿಸಿದಾಗ ಓ ದೇವರೇ! ಮತ್ತೆ ಆ ಗಳಿಗೆ ಬಂದೀತೆ ಎಂಬ ಉದ್ಘಾರ ಹೊರಡುತ್ತೆ ಎಂದು ಎಸ್. ಎಂ. ಕೃಷ್ಣ ಉದ್ಘರಿಸಿದರು.

    800 ವರ್ಷಗಳ ಇತಿಹಾಸ

    ದಸರಾ ಉತ್ಸವಕ್ಕೆ 800 ವರ್ಷಗಳ ಇತಿಹಾಸವಿದೆ. ವಿಜಯನಗರ ಅರಸರು ಶಕ್ತಿ ಪ್ರದರ್ಶನಕ್ಕೆ ದಿಗ್ವಿಜಯಕ್ಕೆ ಹೋಗಲು ಉಪಯೋಗಿಸಿಕೊಳ್ಳುತ್ತಿದ್ದರು. ವಿಜಯನಗರ ಅರಸ ಕೃಷ್ಣದೇವರಾಯನ ಕಾಲದಲ್ಲಿ ಹಂಪಿಯಲ್ಲಿ ಮಹಾನವಿಮ ದಿಬ್ಬ ನಿರ್ಮಿಸಲಾಗಿತ್ತು. ಕ್ರೀಡೆ, ಸಾಹಸಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಜರುಗುತ್ತಿತ್ತು. ವಿಜಯ ನಗರ ಸಾಮ್ರಾಜ್ಯದ ದಸರಾ ಪ್ರದರ್ಶನವನ್ನು ಮುಂದುವರಿಸಿಕೊಂಡು ಬಂದವರು ಮೈಸೂರು ಒಡೆಯರ ಸಂತತಿಯವರು. 1610 ಮೈಸೂರು ಒಡೆಯರ್  ಶ್ರೀರಂಗಪಟ್ಟಣದಲ್ಲಿ ದಸರಾ ಪ್ರಾರಂಭಿಸಿದರು. ಅಂಬಾರಿ ಕೂಡ ವಿಜಯ ನಗರದವರಿಂದಲೇ ಪಡೆದಿದ್ದರು. ಮಹಾರಾಷ್ಟ್ರದ ದೇವಿಗಿರಿಯಿಂದ ವಿಜಯನಗರದವರೆಗೂ ಬಂದಿತ್ತು. ಅಂಬಾರಿಗೆ 8 ಶತಮಾನಗಳ ಇತಿಹಾಸವಿದೆ. 750 ಕೆಜಿ ತೂಕವಿರುವ ಸ್ವರ್ಣ ಅಂಬಾರಿಯಲ್ಲೇ ವಿಜಯ ದಸರಾ ಮೆರವಣಿಗೆ ಹೋಗುತ್ತಿದೆ ಎಂದು ಸ್ಮರಿಸಿದರು.

    ಕೆಆರ್ ಎಸ್ ಆಣೆಕಟ್ಟಿನಿಂದ ಮಂಡ್ಯ ಅಭಿವೃದ್ಧಿ ಜಿಲ್ಲೆಯಾಗಿದೆ.  ಅಣೆಕಟ್ಟು ಕಟ್ಟಲು ಮೈಸೂರು ರಾಜರ ಕೊಡುಗೆಯನ್ನು ಸ್ಮರಿಸಿದರು. ಹಿಂದಿನದನ್ನು ನೆನೆಯದೇ ಮುಂದೆ ನಡೆಯಲು ಸಾಧ್ಯವಿಲ್ಲ, ಹಿಂದಿನದನ್ನು ನೆನೆದಾಗ ಮುಂದಿನ ಭವಿಷ್ಯ ಸ್ಪಷ್ಟವಾಗಿ ಕಾಣಿಸುತ್ತದೆ. ದಸರಾ ಪ್ರೇರಕ ಶಕ್ತಿಯಾಗಿದೆ ಎಂದು ತಿಳಿಸಿದರು.

    ಭಾರತ ಅಭಿವೃದ್ಧಿ ಶೀಲ ರಾಷ್ಟ್ರವಾಗಿದೆ. ಚೀನಾ, ಭಾರತದ ಜೊತೆ ಅಭಿವೃದ್ಧಿಯಲ್ಲಿ ಪೈಪೋಟಿ ನಡೆಯುತ್ತಿದೆ. ಮತ್ಸರ ಇಲ್ಲದಿದ್ದಲ್ಲಿ ಸ್ವಾಗತಿಸುವ ಬೆಳವಣಿಗೆ. ನರೇಂದ್ರ ಮೋದಿಯವರ ನೇತೃತ್ವದಲ್ಲಿ ಇಂದು ನಮ್ಮ ದೇಶ ಅಭಿವೃದ್ಧಿಪಥದಲ್ಲಿ ಸಾಗುತ್ತಿದ್ದು,  ಬಹಳ ದೊಡ್ಡ ದೊಡ್ಡ ಕನಸುಗಳನ್ನ ಪ್ರಧಾನ ಮಂತ್ರಿ ಕಂಡಿದ್ದು ಅದನ್ನು ನನಸಾಗಿಸಲು ಶ್ರಮಿಸುತ್ತಿದ್ದಾರೆ. ಅವರ ಕನಸು ನನಸಾಗಲಿ. ತಾಯಿ ಚಾಮುಂಡೇಶ್ವರಿ ಆ ಶಕ್ತಿಯನ್ನು ಅವರಿಗೆ ನೀಡಲಿ.  ಸ್ಮೃತಿಪಟದಲ್ಲಿ ಇಷ್ಟು ಕಟ್ಟಪಟ್ಟು ದೇಶದ ಬಗ್ಗೆ ಇಷ್ಟು ಚಿಂತನೆಗಳನ್ನು ಕೈಗೊಂಡು ರೂಪಿಸಲು ಶ್ರಮಿಸಿದವರನ್ನು ನೋಡಿಲ್ಲ, ಅವರಿಗೆ ನಮ್ಮ ಬೆಂಬಲವಿದೆ. ಯುವ ಜನಾಂಗ ದೇಶದ ಆಸ್ತಿ, ಒಂದು ನಿರ್ದಿಷ್ಟವಾದ

    ಕೃತಿದತ್ತವಾಗಿರುವ ಅವಕಾಶವಿರುವಾಗ ಅದನ್ನು ಸದುಪಯೋಗಪಡಿಸಿಕೊಳ್ಳಲು ಸಾಧ್ಯವಿದೆ. ದಸರಾ ಸುಲಲಿತವಾಗಿ ನಡೆಯಲಿ. ಈ ಸುಂದರ ದಸರಾವನ್ನು ಉಲ್ಲಾಸ ಶ್ರದ್ಧೆ ಭಕ್ತಿಯಿಂದ ಆಚರಿಸೋಣ ಎಂದರು.

    ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.  ಮಾಜಿ ಸಿಎಂ ಎಸ್.ಎಂ ಕೃಷ್ಣ, ಸಿಎಂ ಬಸವರಾಜ ಬೊಮ್ಮಾಯಿ ಮತ್ತವರ ಪತ್ನಿ ಚನ್ನಮ್ಮ  ಅವರಿಗೆ ಪುಸ್ತಕ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಜಿ. ಟಿ. ದೇವೇಗೌಡ ವಹಿಸಿದ್ದರು.

    DASARA MUSIC FEST: ಗಜಮುಖನೆ ಸಿದ್ಧಿದಾಯಕನೇ ವಂದಿಪೆ ಶರಣು

    ಇಂದಿನಿಂದ ಎಲ್ಲೆಡೆ ನವರಾತ್ರಿ ಸಂಭ್ರಮ. ಈ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಕಳೆದ ವರ್ಷದಂತೆ ಈ ವರ್ಷವೂ ನಿಮ್ಮ ನೆಚ್ಚಿನ ಕನ್ನಡ ಪ್ರೆಸ್.ಕಾಮ್ ಇಂದಿನಿಂದ ನವರಾತ್ರಿ ಸಂಗೀತೋತ್ಸವವನ್ನು-Dasara Music Festival- ಸಾದರ ಪಡಿಸುತ್ತಿದೆ.

    ಮೊದಲ ದಿನದ ಸಂಗೀತ ಕಚೇರಿಯನ್ನು ಬೆಂಗಳೂರಿನ ದಂತ ವೈದ್ಯೆ ಡಾ. ಆಶಾ ಜೋಶಿ-Dr Asha Joshi- ನಡೆಸಿಕೊಟ್ಟಿದ್ದಾರೆ. ಇವರ ಸಂಗೀತ ಗುರು ವಿದೂಷಿ ಶಾರದ ಅವರು. ಕರ್ನಾಟಕ ಸಂಗೀತದಲ್ಲಿ ಜ್ಯೂನಿಯರ್ ಪಾಸಾಗಿದ್ದಾರೆ. ದೇವರ ನಾಮ ಮತ್ತು ಭಗವದ್ಗೀತೆಯನ್ನು ಲತಾ ಕುಲಕರ್ಣಿ ಅವರಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಗುರು ಭಾರತಿ ವಿಠ್ಠಲ್ ಅವರಿಂದ ಇದೀಗ ಕಥಕ್ ಅಭ್ಯಾಸ ಮಾಡುತ್ತಿದ್ದಾರೆ.

    ಗಜಮುಖನೆ ಸಿದ್ಧಿದಾಯಕನೇ ವಂದಿಪೆ ಶರಣು ಎಂದು ವಿನಾಯಕ ಸ್ತುತಿಯಿಂದ ಆರಂಭವಾಗುವ ಈ ಕಚೇರಿ ಮುಂದೆ ನೋಡಿದೆ ವೆಂಕಣರಮಣನ ಎಂದು ತಿಮ್ಮಪ್ಪನನ್ನು ಕೊಂಡಾಡುತ್ತದೆ. ವೇಣಿ ಮಾಧವನ ತೋರಿಸೆ ಎಂದು ಹಾಡುತ್ತಾ ಬಾರಯ್ಯ ಶ್ರೀನಿವಾಸ ಭಕ್ತರ ಮನೆಗೆ ಎಂದು ಭಗವಂತನನ್ನು ಕರೆಯಲಾಗುತ್ತದೆ. ಬಾರೇ ಭಾಗ್ಯದ ನಿಧಿಯೇ ಶ್ರೀಜಾನಕಿಯೇ ಎಂಬ ಹಾಡಿನ ಮೂಲಕ ಮಂಗಳವಾಗುತ್ತದೆ.

    ನಿರೂಪಣೆ ಭಾರತಿ ಶ್ರೀನಿವಾಸ್ ಅವರದ್ದು. ಆಲಿಸಿ, ವೀಕ್ಷಿಸಿ ಪ್ರತಿಕ್ರಿಯಿಸಿ.

    ಮಲ್ಲೇಶ್ವರದಲ್ಲಿ ವೈದ್ಯಕೀಯ ಪರೀಕ್ಷೆಗಳ ಹೈಟೆಕ್ ಲ್ಯಾಬ್: ಬಿಬಿಎಂಪಿ-ಮಣಿಪಾಲ್ ಹೆಲ್ತ್ ಒಡಂಬಡಿಕೆ


    BENGALURU OCT 7

    ಬಡವರಿಗೆ ರಿಯಾಯಾತಿ ದರದಲ್ಲಿ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವುದಕ್ಕಾಗಿ ಮಲ್ಲೇಶ್ವರಂನಲ್ಲಿ ಹೈಟೆಕ್ ಡಯಾಗ್ನಾಸ್ಟಿಕ್ ಕೇಂದ್ರ ಸ್ಥಾಪಿಸಲು ಬಿಬಿಎಂಪಿ ಮತ್ತು ಮಣಿಪಾಲ್ ಆಸ್ಪತ್ರೆ ನಡುವೆ ಗುರುವಾರ ಒಡಂಬಡಿಕೆಗೆ (ಎಂಒಯು) ಸಹಿ‌ ಹಾಕಲಾಯಿತು.

    ಮಲ್ಲೇಶ್ವರಂ ಶಾಸಕರೂ ಆದ ಐಟಿ/ಬಿಟಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರ ಸಮ್ಮುಖದಲ್ಲಿ ಗುರುವಾರ ಒಡಂಬಡಿಕೆಗೆ (ಎಂಒಯು) ಸಹಿ ಹಾಕಲಾಯಿತು.

    ಈ ಒಡಂಬಡಿಕೆ ಪ್ರಕಾರ, ಮಲ್ಲೇಶ್ವರಂನ ಚಂದ್ರಶೇಖರ್ ಆಜಾದ್ ಮೈದಾನದ ಬಳಿಯ ಬೆಂಗಳೂರು ಒನ್ ಕಟ್ಟಡದ ಮೊದಲ ಮಹಡಿಯಲ್ಲಿ 45 ದಿನಗಳಲ್ಲಿ ಸ್ಥಾಪನೆಯಾಗಿರುವ ಈ ಲ್ಯಾಬ್ 140 ವಿವಿಧ ವೈದ್ಯಕೀಯ ಪರೀಕ್ಷೆಗಳ ಸೌಲಭ್ಯ ಹೊಂದಿದ್ದು, ದರವು ಬೇರೆ ಕಡೆಗಳಿಗಿಂತ ಶೇ 30ರಷ್ಟು ಕಡಿಮೆ ಇರುತ್ತದೆ. ಇದರ ಜೊತೆಗೆ, ಬಿಪಿಎಲ್ ಕಾರ್ಡುದಾರರಿಗೆ ಶೇ 50ರಷ್ಟು ರಿಯಾಯಿತಿ ದರದಲ್ಲಿ ಹಾಗೂ ಎಪಿಎಲ್ ಕಾರ್ಡುದಾರರಿಗೆ ಶೇ 40ರಷ್ಟು ರಿಯಾಯಿತಿ ದರದಲ್ಲಿ ಪರೀಕ್ಷೆ ಮಾಡಲಾಗುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಅಥವಾ ಸರ್ಕಾರಿ ಆಸ್ಪತ್ರೆಯ ಅಧಿಕೃತ ಸಲಹೆ ಪಡೆದು ಬರುವವರಿಗೂ ಈ ರಿಯಾಯಿತಿ ಸಿಗಲಿದೆ ಎಂದು ಅಶ್ವತ್ಥ ನಾರಾಯಣ ವಿವರಿಸಿದರು.

    ಸರ್ಕಾರಿ- ಖಾಸಗಿ ಸಹಭಾಗಿತ್ವದ (ಪಿಪಿಪಿ) ಈ ಲ್ಯಾಬ್ ನಲ್ಲಿ ಎಕ್ಸ್ ರೇ, ಅಲ್ಟ್ರಾಸೌಂಡ್, ಇಸಿಜಿ, ಪಿ.ಎಫ್.ಟಿ ಸೇರಿದಂತೆ 140 ಬೇರೆ ಬೇರೆ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಈ ಲ್ಯಾಬ್ ಗೆ ಕಟ್ಟಡದ ಜಾಗವನ್ನು ಬಿಬಿಎಂಪಿ ಒದಗಿಸಲಿದ್ದು, ಉಳಿದ ವ್ಯವಸ್ಥೆಗಳನ್ನೆಲ್ಲಾ ಮಣಿಪಾಲ್ ಹೆಲ್ತ್ ಮಾಡಿಕೊಳ್ಳಲಿದೆ. ಈ ಲ್ಯಾಬ್ ನ ಯಶಸ್ಸನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ನಗರದ ಬೇರೆ ಕಡೆಗಳಲ್ಲೂ ಇಂತಹ ಹೈಟೆಕ್ ಲ್ಯಾಬ್ ಗಳನ್ಜು ಸ್ಥಾಪಿಸಲಾಗುವುದು ಎಂದು ತಿಳಿಸಿದರು.

    ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ವಿಶೇಷ ಆಯುಕ್ತ ರಣದೀಪ್, ಪಾಲಿಕೆ ಮುಖ್ಯ ಆರೋಗ್ಯಾಧಿಕಾರಿ ಡಾ.ವಿಜಯೇಂದ್ರ, ಮಣಿಪಾಲ್ ಹೆಲ್ತ್ ನ ಪ್ರಾದೇಶಿಕ ಮುಖ್ಯ ನಿರ್ವಹಣಾಧಿಕಾರಿ ದೀಪಕ್ ವೇಣುಗೋಪಾಲನ್, ಕ್ಲಿನಿಕಲ್ ಆಪರೇಷನ್ ಮುಖ್ಯಸ್ಥರಾದ ಡಾ.ಮುರಳಿ ಅವರು ಇದ್ದರು.

    DASARA- ನವರಾತ್ರಿ ಹಬ್ಬ

    ಎಂ.ವಿ.ಶಂಕರಾನಂದ

    ನಮ್ಮ ಭಾರತೀಯ ಪರಂಪರೆಯಲ್ಲಿ ಮಹಿಷಾಸುರನ ನಾಶಕ್ಕಾಗಿ ಅವತಾರ ತಾಳಿದ ಶ್ರೀದೇವಿಯ ಉತ್ಸವವೇ ನವರಾತ್ರಿ ಎಂದು ಹೆಸರಾಗಿದೆ.ನವರಾತ್ರಿಯಲ್ಲಿ ಶ್ರೀದೇವಿಯ ಉಪಾಸನೆಯನ್ನು ಭಕ್ತಿ ಶ್ರದ್ಧೆಯಿಟ್ಟು ಮಾಡುವುದರಿಂದ ದೇವಿತತ್ತ್ವದ ಲಾಭವಾಗುತ್ತದೆ ಎಂಬ ನಂಬಿಕೆಯಿದೆ.ಹಿಂದೂ ಧರ್ಮದಲ್ಲಿ ಭಗವತೀ ದೇವಿಯ ವಿಶೇಷ ಆರಾಧನೆಯನ್ನು ವರ್ಷದಲ್ಲಿ ವಾಸಂತಿಕ ನವರಾತ್ರಿ ಮತ್ತು ಶಾರದೀಯ ನವರಾತ್ರಿ ಈ ಎರಡು ಸಮಯದಲ್ಲಿ ಮಾಡುತ್ತಾರೆ.

    ಶರದ ಋತುವಿನಲ್ಲಿನ ಪೂಜೆಗೆ ಅಕಾಲ ಪೂಜೆ ಮತ್ತು ವಾಸಂತಿಕ ಪೂಜೆಗೆ ಸಕಾಲ ಪೂಜೆಯೆಂದು ಹೇಳುತ್ತಾರೆ. ಶರದ ಋತುವಿನಲ್ಲಿ ‘ದೇವರಾತ್ರಿ’ಗಳಿರುತ್ತವೆ; ಆದುದರಿಂದ ಈ ಕಾಲದಲ್ಲಿನ ಪೂಜೆಗೆ ಅಕಾಲ ಪೂಜೆಯೆಂದು ಹೇಳುತ್ತಾರೆ. ತಾಂತ್ರಿಕ ಸಾಧಕರ ದೃಷ್ಟಿಯಲ್ಲಿ ಈ ‘ರಾತ್ರಿ’ಗಳು ಮಹತ್ವಪೂರ್ಣವಾಗಿರುತ್ತವೆ. ಹೀಗೆ ಬಹಳಷ್ಟು ರೀತಿಯ ರಾತ್ರಿಗಳಿರುತ್ತವೆ, ಉದಾ. ಕಾಲರಾತ್ರಿ, ಶಿವರಾತ್ರಿ, ಮೋಹರಾತ್ರಿ, ವೀರರಾತ್ರಿ, ದಿವ್ಯರಾತ್ರಿ, ದೇವರಾತ್ರಿ ಇತ್ಯಾದಿ. ಇವುಗಳಲ್ಲಿ ಭಗವತಿಯನ್ನು ಜಾಗೃತಗೊಳಿಸಬೇಕಾಗುತ್ತದೆ; ಆದರೆ ವಾಸಂತಿಕ ಪೂಜೆಯಲ್ಲಿ ಜಾಗೃತಗೊಳಿಸುವ ಆವಶ್ಯಕತೆಯಿರುವುದಿಲ್ಲ.’

    ಒಂದು ಅಭಿಮತಕ್ಕನುಸಾರ ನವರಾತ್ರಿಯಲ್ಲಿನ ಮೊದಲ ಮೂರು ದಿನಗಳಂದು ತಮೋಗುಣವನ್ನು ಕಡಿಮೆ ಮಾಡಲು ತಮೋಗುಣಿ ಮಹಾಕಾಳಿಯ, ನಂತರದ ಮೂರು ದಿನಗಳಂದು ರಜೋಗುಣವನ್ನು ವೃದ್ಧಿಸಲು ಮಹಾಲಕ್ಷ್ಮೀಯ ಮತ್ತು ಕೊನೆಯ ಮೂರು ದಿನಗಳಂದು ಸಾಧನೆಯನ್ನು ತೀವ್ರವಾಗಿ ಮಾಡಲು ಸತ್ತ್ವಗುಣಿ ಮಹಾಸರಸ್ವತಿಯ ಪೂಜೆಯನ್ನು ಮಾಡುತ್ತಾರೆ.

    ನವರಾತ್ರಿಯ ಬಗ್ಗೆ ಧರ್ಮಶಾಸ್ತ್ರದ ಅಭಿಮತ:-

    ‘ರಾತ್ರಿ’ ಎಂದರೆ ಆಗುತ್ತಿರುವ ಬದಲಾವಣೆ. ದೇವಿಯ ಒಂದು ಹೆಸರು ‘ಕಾಲರಾತ್ರಿ’ ಎಂದಾಗಿದೆ. ‘ಕಾಲರಾತ್ರಿ’ ಎಂದರೆ ಕಾಲಪುರುಷನಲ್ಲಿ ಬದಲಾವಣೆ ಮಾಡುವವಳು ಎಂದರ್ಥ.
    ತಿರುಗುವುದು ಪೃಥ್ವಿಯ ಗುಣಧರ್ಮವಾಗಿದೆ. ಪೃಥ್ವಿಯು ತಿರುಗುತ್ತಿರುವುದರಿಂದ ಬದಲಾವಣೆಗಳು ಆಗುತ್ತಿರುತ್ತವೆ, ಅಂದರೆ ರಾತ್ರಿ ಮತ್ತು ಹಗಲು ಆಗುತ್ತವೆ. ಇಂತಹ ಬದಲಾವಣೆಗಳನ್ನು ಸಹಿಸುವ ಶಕ್ತಿಯು ಶರೀರದಲ್ಲಿರಬೇಕೆಂದು ವ್ರತ-ವೈಕಲ್ಯಗಳನ್ನು ಮಾಡುತ್ತಾರೆ.

    ನವರಾತ್ರಿಯ ಹಿನ್ನೆಲೆ:

    ರಾಮಾಯಣದಲ್ಲಿ ರಾಮನಿಂದ ರಾವಣನ ವಧೆಯಾಗಬೇಕೆಂದು ನಾರದರು ರಾಮನಿಗೆ ಶರವನ್ನರಾತ್ರಿ ವ್ರತವನ್ನು ಮಾಡಲು ಹೇಳಿದ್ದರು. ಈ ವ್ರತವನ್ನು ಪೂರ್ಣಗೊಳಿಸಿದ ನಂತರ ರಾಮನು ಲಂಕೆಯ ಮೇಲೆ ಆಕ್ರಮಣ ಮಾಡಿ ಯುದ್ಧದಲ್ಲಿ ರಾವಣನನ್ನು ವಧಿಸಿದನು.

       ದೇವಿಯು, ಮಹಿಷಾಸುರನೆಂಬ ರಾಕ್ಷಸನೊಂದಿಗೆ ಪಾಡ್ಯದಿಂದ ನವಮಿಯವರೆಗೆ ಒಂಬತ್ತು ದಿನಗಳ ಕಾಲ ಯುದ್ಧವನ್ನು ಮಾಡಿ ನವಮಿಯ ರಾತ್ರಿ ಅವನನ್ನು ಕೊಂದಳು. ಅಂದಿನಿಂದ ಅವಳಿಗೆ ಮಹಿಷಾಸುರಮರ್ದಿನಿ ಎನ್ನತೊಡಗಿದರು.

    ನವರಾತ್ರಿಯ ಆಚರಣೆಯ ಮಹತ್ವ:

    ಜಗತ್ತಿನಲ್ಲಿ ಯಾವಾಗ ತಾಮಸಿಕ, ಅಸುರೀ ಮತ್ತು ಕ್ರೂರ ಜನರು ಪ್ರಬಲರಾಗಿ ಸಾತ್ತ್ವಿಕ ಮತ್ತು ಧರ್ಮನಿಷ್ಠ ಸಜ್ಜನರನ್ನು ಪೀಡಿಸುತ್ತಾರೆಯೋ, ಆಗ ದೇವಿಯು ಧರ್ಮಸಂಸ್ಥಾಪನೆಗಾಗಿ ಪುನಃ ಪುನಃ ಅವತಾರ ತಾಳುತ್ತಾಳೆ. ಇದು ಆ ದೇವಿಯ ವ್ರತವಾಗಿದೆ.
    ನವರಾತ್ರಿಯಲ್ಲಿ ದೇವಿತತ್ತ್ವವು ಎಂದಿಗಿಂತ1000 ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ದೇವಿತತ್ತ್ವದ ಲಾಭವನ್ನು ಆದಷ್ಟು ಹೆಚ್ಚು ಪಡೆದುಕೊಳ್ಳಲು ನವರಾತ್ರಿಯ ಕಾಲದಲ್ಲಿ ‘ಶ್ರೀ ದುರ್ಗಾದೇವ್ಯೈ ನಮಃ|’ ಎಂಬ ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು.

    ನವರಾತ್ರಿ ವ್ರತವನ್ನು ಆಚರಿಸುವ ಪದ್ಧತಿ :

    ಅಖಂಡ ದೀಪಪ್ರಜ್ವಲನೆ ಅಂದರೆ ನವರಾತ್ರಿಯ 9 ದಿನಗಳಲ್ಲಿಯೂ ಸತತವಾಗಿ ದೀಪವನ್ನು ಉರಿಸುವುದು, ಶ್ರೀ ದೇವಿಯ ಮಹಾತ್ಮೆಯ ಪಠಣ (ಚಂಡೀಪಾಠ), ಸಪ್ತ ಶತಿಪಾಠ, ದೇವಿಭಾಗವತ, ಬ್ರಹ್ಮಾಂಡಪುರಾಣದಲ್ಲಿನ ಲಲಿತೋಪಾಖ್ಯಾನವನ್ನು ಕೇಳುವುದು, ಲಲಿತಾಪೂಜೆ, ಸರಸ್ವತಿಪೂಜೆ, ಉಪವಾಸ, ಜಾಗರಣೆ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಅವರವರ ಶಕ್ತಿಸಾಮರ್ಥ್ಯಕ್ಕನುಸಾರವಾಗಿ ನವರಾತ್ರಿ ಮಹೋತ್ಸವವನ್ನು ಆಚರಿಸುತ್ತಾರೆ.

    ನವದುರ್ಗೆಯರು:
    ಮಾರ್ಕಂಡೇಯ ಋಷಿಗಳು ಬರೆದಿರುವ ದುರ್ಗಾಸಪ್ತಶತಿ ಎಂಬ ಗ್ರಂಥವು ತಂತ್ರ ಮತ್ತು ಮಂತ್ರ ಈ ಎರಡೂ ಮಾರ್ಗಗಳಲ್ಲಿ ಪ್ರಸಿದ್ಧವಾಗಿದ್ದು ಭಾರತದಲ್ಲಿ ಇಂದು ಲಕ್ಷಾಂತರ ಜನರು ಸಪ್ತಶತಿಯ ಪಠಣ ಮಾಡುತ್ತಿರುವುದು ಕಂಡುಬರುತ್ತದೆ. ಭಗವಾನ ಹಿರಣ್ಯಗರ್ಭ ಮುನಿಗಳು ಮಂತ್ರಯೋಗ ಸಮೀಕ್ಷೆಯಲ್ಲಿ ಹೇಳಿರುವ ಶ್ರೀ ದುರ್ಗಾಸಪ್ತಶತಿಯಲ್ಲಿನ ದೇವಿಯ ಹೆಸರುಗಳ ಶಾಸ್ತ್ರೀಯ ಅರ್ಥ ಮತ್ತು ಇಂದಿನ ಭೌತಿಕ ವಿಜ್ಞಾನವು ಮಾಡಿರುವ ಪ್ರಗತಿಯ ಬಗ್ಗೆ ಇಲ್ಲಿ ನಾವು ವಿಚಾರ ಮಾಡೋಣ.

    1. ಶೈಲಪುತ್ರಿ:- ‘ಶೈಲಮ್’ ಅಂದರೆ ಯಾವ ಪರ್ವತದಲ್ಲಿ ಮಾಣಿಕ್ಯ, ರತ್ನ ಮತ್ತಿತರ ಅತ್ಯಮೂಲ್ಯ ವಸ್ತುಗಳ ಸಂಗ್ರಹವಿದೆಯೋ, ಅಂತಹ ಪರ್ವತ. ಈ ಅತ್ಯಮೂಲ್ಯ ವಸ್ತುಗಳ ಸಂಗ್ರಹವನ್ನು ನೋಡಿಯೂ ಭೌತಿಕ ಸುಖದೆಡೆಗೆ ಆಕರ್ಷಿತಗೊಳ್ಳದೆ, ಭೌತಿಕತೆಯ ತ್ಯಾಗವನ್ನು ಮಾಡಿ ಆತ್ಮಜ್ಞಾನವನ್ನು ಪಡೆಯಲು ಪ್ರವೃತ್ತವಾಗುವವಳೆಂದರೆ ಶೈಲಪುತ್ರಿ.

    2. ಬ್ರಹ್ಮಚಾರಿಣಿ:- ‘ಬ್ರಹ್ಮಚಾರಯಿತುಂ ಶೀಲಂ ಯಸ್ಯಾಃ ಸಾ ಬ್ರಹ್ಮಚಾರಿಣಿ|’ ಅಂದರೆ ಬ್ರಹ್ಮರೂಪವಾಗುವುದು ಯಾರ ಶೀಲವಾಗಿದೆಯೋ ಮತ್ತು ಯಾರ ಆಚಾರಗಳು ಅದರಂತಿವೆಯೋ ಅವಳೇ ಬ್ರಹ್ಮಚಾರಿಣಿ.

    3.ಚಂದ್ರಘಂಟಾ:- ‘ಚಂದ್ರಃ ಘಂಟಾಯಾಂ ಯಸ್ಯಾ ಸಾ ಚಂದ್ರಘಂಟಾ| ಆಹ್ಲಾದಯತಿ ಇತಿ ಚಂದ್ರಃ|’ ಅಂದರೆ ಆಹ್ಲಾದಕಾರಕ ಚಂದ್ರನು ಯಾರ ದ್ವಾರದಲ್ಲಿ ಸ್ಥಿರವಾಗಿದ್ದಾನೆಯೋ ಅವಳೇ ಚಂದ್ರಘಂಟಾ. ಆಹ್ಲಾದವೆಂದರೆ ಮಮತೆ, ಕ್ಷಮಾಶೀಲತೆ ಮತ್ತು ವಾತ್ಸಲ್ಯ ಈ ಮೂರೂ ಗುಣಗಳ ಸಮ್ಮಿಲಿತ ಸ್ಥಿತಿ.

    4 ಕೂಷ್ಮಾಂಡಾ:- ‘ಕುತ್ಸಿತಃ ಉಷ್ಮಾಃ ಕೂಷ್ಮಾಃ|’ ಕುತ್ಸಿತಃ ಅಂದರೆ ಸಹಿಸಲು ಕಠಿಣ ವಾದುದು. ಉಷ್ಮಾ ಎಂದರೆ ಸೂಕ್ಷ್ಮ ಲಹರಿಗಳ ಗೊಂದಲ (ಧ್ವನಿ). ‘ತ್ರಿವಿಧತಾಪಯುಕ್ತಃ ಸಂಸಾರಃ ಸ ಅಂಡೇ ಮಾಂಸಪೇಶ್ಯಾಮ್ ಉದರರೂಪಾಯಾಂ ಯಸಾಃ ಸಾ ಕೂಷ್ಮಾಂಡಾ|’ ಇದರ ಅರ್ಥವು ಹೀಗಿದೆ ? ತ್ರಿವಿಧತಾಪಗಳೆಂದರೆ ಉತ್ಪತ್ತಿ (ಜನ್ಮ), ಸ್ಥಿತಿ (ಬೆಳವಣಿಗೆ) ಮತ್ತು ಲಯ (ಮೃತ್ಯು). ‘ಮೃತ್ಯು (ಮೋಕ್ಷ) ಅಂದರೆ ಅನಿಶ್ಚಿತ ಕಾಲಾವಧಿಯ ವರೆಗೆ ವಿಶಿಷ್ಟ ಪದ್ಧತಿಯಿಂದ ನಾಶವಾಗುವುದು’. ‘ಸಂಸಾರ’ವೆಂದರೆ ‘ಪುನಃಪುನಃ’ ಮತ್ತು ‘ಅಂಡಃ’ ಅಂದರೆ ‘ವಿಶಿಷ್ಟ ನಿಯಂತ್ರಣದಿಂದ ಯುಕ್ತವಾಗಿರುವ ಕೋಶ.’ ಮಾಂಸ, ಜೀವಕೋಶಗಳು, ಉದರ ಮತ್ತು ರೂಪ ಇವುಗಳಿಂದ ಯುಕ್ತಸಂಪನ್ನವಾದ ಜೀವಗಳು ಈ ಕೋಶದಲ್ಲಿ ತ್ರಿವಿಧ ತಾಪಗಳ ಪುನರಾವೃತ್ತಿಯ ಅವಸ್ಥೆಯಿಂದ ಪುನಃಪುನಃ ಹೋಗುತ್ತಾರೆ. ಈ ಪ್ರಕ್ರಿಯೆಯಿಂದ ಬಿಡುಗಡೆ ಹೊಂದಲು ಯಾರ ಕೃಪೆಯ ಆವಶ್ಯಕತೆಯಿದೆಯೋ ಅವಳೇ ಕೂಷ್ಮಾಂಡಾ.

    5. ಸ್ಕಂದಮಾತಾ:- ‘ಭಗಃ’ ಎಂದರೆ ತೇಜಸ್ಸು. ‘ಭಗವತಿ’ ಎಂದರೆ ‘ವಿಶಿಷ್ಟ ಯೋಗ್ಯತೆ ಯುಳ್ಳ ಸ್ಪಂದನ ಲಹರಿಗಳಿಂದ ಯುಕ್ತವಾದಂತಹ ತೇಜಸ್ಸು’. ಬ್ರಹ್ಮದೇವ ಮತ್ತು ಭಗವತಿ ದೇವಿಯ ಸಮ್ಮಿಲಿತ ಅವಸ್ಥೆಯಿಂದ ಸನತ್ಕುಮಾರ ಅಥವಾ ಸ್ಕಂದ ಎಂಬ ಹೆಸರಿನ ವಿಶಿಷ್ಟ ರಚನೆಯ ಕಿರಣ ಸಮೂಹವು ಉತ್ಪನ್ನವಾಯಿತು. ಭೂಲೋಕದಿಂದ ಸತ್ಯಲೋಕದ ವರೆಗಿನ ಲೋಕಗಳನ್ನು ‘ಸ್ಕಂದರೇಷೆ’ ಎನ್ನುತ್ತಾರೆ. ಭೂಲೋಕದಿಂದ ಸತ್ಯಲೋಕದವರೆಗಿನ ವ್ಯಾಹ್ಯತಿಗಳ ಮೇಲೆ ಸ್ಕಂದರೇಷೆಯ ನಿಯಂತ್ರಣವಿದೆ. ವ್ಯಾಹ್ಯತಿ ಅಂದರೆ ಗೂಢ ಸ್ವರ ಅಥವಾ ಮಂತ್ರ. ಸಪ್ತಲೋಕಗಳ ಹೆಸರುಗಳಂತೆ ಅನುಕ್ರಮವಾಗಿ ಭೂಃ, ಭುವಃ, ಸ್ವಃ, ಮಹಃ, ಜನಃ, ತಪಃ ಮತ್ತು ಸತ್ಯ ಇವು ಏಳು ವ್ಯಾಹ್ಯತಿಗಳಾಗಿವೆ. ಈ ಏಳೂ ಲೋಕಗಳ ನಿಯಂತ್ರಕರ ಮಾತೆಯೇ ಸ್ಕಂದಮಾತೆ. ಈ ಏಳೂ ಲೋಕಗಳಿಂದ ಪಾರಾಗಿ ಹೋಗಲು ಯಾರ ಸಹಾಯ ಬೇಕಾಗುತ್ತದೆಯೋ ಅವಳಿಗೆ ಸ್ಕಂದಮಾತೆ ಎನ್ನುತ್ತಾರೆ.

    6, ಕಾತ್ಯಾಯನಿ:- ‘ಕಾತ್ಯಾಯನಸ್ಯ ಅಪತ್ಯಂ ಸ್ತ್ರೀ ಕಾತ್ಯಾಯನಿ|’ (ಕಾತ್ಯಾಯನನ ಮಗಳು ಕಾತ್ಯಾಯನಿ) ‘ಅಯನ’ ಎಂದರೆ ‘ಹಲವಾರು ನಕ್ಷತ್ರ ಸಮೂಹಗಳಿಂದ ಯುಕ್ತವಾಗಿರುವ ಭಾಗ’. ಕಾತ್ಯಾಯನ ಋಷಿಗಳು ಇಂತಹ ಒಂದು ಅಯನದ ಪಾಲಕರಾಗಿದ್ದರು. ಒಮ್ಮೆ ಕಾತ್ಯಾಯನರ ಅಯನಗಳಲ್ಲಿನ ದೇವತೆಗಳ ಮೇಲೆ (ತೇಜಸ್ಸಿನ ಮೇಲೆ) ಅವರದ್ದೇ ಅಯನದಲ್ಲಿನ ಅಯೋಗ್ಯ ಸ್ಪಂದನಲಹರಿಗಳ ಒಂದು ಶಕ್ತಿಯುತ ಸಮೂಹವು ಆಕ್ರಮಣ ಮಾಡಿತು. ಘರ್ಷಣೆಯಿಂದ ಬಹುದೊಡ್ಡ ಉತ್ಪಾತವಾಗುವ ಸಮಯ ಬಂದಿತು. ಆಗ ಕಾತ್ಯಾಯನ ಋಷಿಗಳ ಆಶ್ರಮದಲ್ಲಿ ಸೂಕ್ಷ್ಮಾತಿಸೂಕ್ಷ್ಮ ಶಕ್ತಿಲಹರಿಗಳ ಒಂದು ಅಂಶವು ಒಬ್ಬ ಚಿಕ್ಕ ಬಾಲಕಿಯ ಆಕಾರದಲ್ಲಿ ಪ್ರವೇಶಿಸಿತು. ಈ ಬಾಲಕಿಯನ್ನು ಕಾತ್ಯಾಯನ ಋಷಿಗಳು ತಮ್ಮ ಸಂತಾನವೆಂದು ಪರಿಗಣಿಸಿದರು; ಆದುದರಿಂದ ಅವಳು ‘ಕಾತ್ಯಾಯನಿ’ ಎಂಬ ಹೆಸರಿನಿಂದ ಪ್ರಸಿದ್ಧಿ ಹೊಂದಿದಳು. ಕಾತ್ಯಾಯನಿಯು ಶಕ್ತಿಯುತ ಅಯೋಗ್ಯ ಸ್ಪಂದನಲಹರಿಗಳನ್ನು ಯೋಗ್ಯ ಸ್ಪಂದನಲಹರಿಗಳನ್ನಾಗಿ ಪರಿವರ್ತಿಸಿ ದೇವತೆಗಳಿಗೆ (ತೇಜಸ್ಸಿಗೆ) ಸಹಾಯ ಮಾಡಿದಳು.

    7. ಕಾಳರಾತ್ರಿ:- ಹಲವಾರು ಅಯೋಗ್ಯ ಸ್ಪಂದನಲಹರಿಗಳು ಒಟ್ಟು ಸೇರಿ ಸಿದ್ಧವಾಗುವ ಶಕ್ತಿಯೆಂದರೆ ‘ಕಾಲ’. ವ್ಯಕ್ತಿಯ (ಅಥವಾ ಪ್ರಾಣಿಗಳ) ಅಯೋಗ್ಯ ಸ್ಪಂದನಲಹರಿಗಳು ಆ ವ್ಯಕ್ತಿಯಲ್ಲಿ ಭಯವನ್ನುಂಟು ಮಾಡುತ್ತವೆ. ಆ ಸ್ಪಂದನಲಹರಿಗಳಲ್ಲಿ ವಿಶಿಷ್ಟ ಕ್ಷಮತೆ ಉಂಟಾಯಿತೆಂದರೆ ವಾತಾವರಣದಲ್ಲಿನ ಇದೇ ಜಾತಿಯ ಇತರ ಸ್ಪಂದನಗಳನ್ನು ವ್ಯಕ್ತಿಯ (ಅಥವಾ ಆ ಪ್ರಾಣಿಯ) ಶರೀರದೆಡೆ ಆಕರ್ಷಿಸುತ್ತವೆ. ಈ ರೀತಿ ಅಯೋಗ್ಯ ಸ್ಪಂದನಲಹರಿಗಳ ಶಕ್ತಿಯು ಹೆಚ್ಚಾಯಿತೆಂದರೆ ಆಗಬಾರದಂತಹ ಘಟನೆಗಳು ಮತ್ತು ಕೃತಿಗಳು ಆ ವ್ಯಕ್ತಿಯಿಂದ ಆಗುತ್ತವೆ. ಅವುಗಳ ಪ್ರತಿಕ್ರಿಯೆಗಳನ್ನು ನಾವು ಆಪತ್ತು ಅಥವಾ ಸಂಕಟ ಎನ್ನುತ್ತೇವೆ. ಇಂತಹ ಆಪತ್ತನ್ನು ಅಥವಾ ಸಂಕಟವನ್ನು ತರುವ ಅಯೋಗ್ಯ ಸ್ಪಂದನಲಹರಿಗಳ ಸಾಮೂಹಿಕ ಶಕ್ತಿಯ, ಅಂದರೆ ಕಾಲದ ರಾತ್ರಿಯೇ (ಅಂದರೆ ವಿನಾಶಿಕಾ ಅರ್ಥಾತ್ ವಿನಾಶ ಮಾಡುವವಳು) ‘ಕಾಳರಾತ್ರಿ’. ‘ವಿನಾಶಿಕಾ’ ಅಂದರೆ ‘ವಿಶೇಷೇಣ ನಾಶಯತಿ ಇತಿ|’ (ಸಂಪೂರ್ಣವಾಗಿ ನಾಶ ಮಾಡುವವಳು). ‘ವಿಶೇಷ’ ಎಂದರೆ ‘ವಿಗತಃ ಶೇಷಃ ಯಸ್ಮಾತ್|’ (ವಿಶಿಷ್ಟ) ಶೇಷವೂ ಇಲ್ಲದಂತೆ ನಾಶ ಮಾಡುವುದು.

    8.ಮಹಾಗೌರಿ :-ತಪಸ್ಯೇನೆ ಮಹಾನ್ ‘ಗೌರಃ’, ಅಂದರೆ ‘ತೇಜಸ್ಸ’ನ್ನು ಪ್ರಾಪ್ತಮಾಡಿ ಕೊಂಡವಳೇ ಮಹಾಗೌರಿ’. ಮಂತ್ರಯೋಗಸಮಿಕ್ಷೆಯಲ್ಲಿ ‘ಸಮಾಧಿ’ ಎಂಬ ಪದದ ವ್ಯುತ್ಪತ್ತಿಯನ್ನು ‘ಸಮ್ + ಆ + ಅಧಿ’ ಎಂದು ಹೇಳಲಾಗಿದೆ. ‘ಸಮ್’ ಅಂದರೆ ಸೂಕ್ಷ್ಮಾತಿಸೂಕ್ಷ್ಮ ಶಕ್ತಿತರಂಗಗಳ ಸಮ್ಯಕ್, ‘ಆ’ ಅಂದರೆ ‘ವರೆಗೆ’ ಮತ್ತು ‘ಧಿ’ ಅಂದರೆ ‘ಮಾನವನ ಶರೀರದಿಂದ ನಿರಂತರವಾಗಿ ಉತ್ಸರ್ಜಿತಗೊಳ್ಳುವ ಸ್ಪಂದನಲಹರಿಗಳು’. ಧೀ ಎಂಬ ಲಹರಿಗಳನ್ನು ಸೂಕ್ಷ್ಮಾತಿಸೂಕ್ಷ್ಮಶಕ್ತಿ ಲಹರಿಗಳ ಸಮ್ಯಕ್ ಅವಸ್ಥೆಯ ತನಕ ಕೊಂಡೊಯ್ಯುವ ಪ್ರಕ್ರಿಯೆಯನ್ನು ಸಮಾಧಿ ಎನ್ನುತ್ತಾರೆ. ಈ ರೀತಿ ಪುನಃ ಪುನಃ ಸಮಾಧಿಯನ್ನು ಸಾಧಿಸುವುದಕ್ಕೆ ‘ತಪಸ್ಯಾ’ ಎನ್ನುತ್ತಾರೆ. ಇಂತಹ ತಪಸ್ಸನ್ನು ವಿಶಿಷ್ಟ ಕಾಲಾವಧಿಯ ತನಕ ಮಾಡುವುದರಿಂದ ‘ಗೌರ’ ಅಥವಾ ‘ತೇಜಸ್ಸು’ ಪ್ರಾಪ್ತವಾಗುತ್ತದೆ. ಇಂತಹ ತೇಜಸ್ಸಿನ ಅತ್ಯುಚ್ಚ ತೇಜಸ್ಸನ್ನು ಅಂದರೆ ಮಹಾನ್ ಗೌರವನ್ನು ಯಾವಳು ಪಡೆದುಕೊಂಡಿದ್ದಾಳೆಯೋ ಅವಳು ಮತ್ತು ಯಾರ ಪ್ರಸಾದದಿಂದ ಸಮಾಧಿಯನ್ನು ಸಾಧಿಸಬಹುದೋ ಅವಳೇ ‘ಮಹಾಗೌರಿ’.

    9.ಸಿದ್ಧಿದಾತ್ರಿ:- ಸಾಮಾನ್ಯ ಸ್ಪಂದನಲಹರಿಗಳನ್ನು ಸೂಕ್ಷ್ಮಾತಿಸೂಕ್ಷ್ಮ ಶಕ್ತಿತರಂಗಗಳಲ್ಲಿ ಶಾಶ್ವತವಾಗಿ ಸೇರಿಸುವುದಕ್ಕೆ ‘ಮೋಕ್ಷ ಅಥವಾ ಸಿದ್ಧಿ’ ಎನ್ನುತ್ತಾರೆ. ಸಿದ್ಧಿಯನ್ನು ನೀಡುವವಳು ಸಿದ್ಧಿದಾತ್ರಿ.’

    ದಸರಾ ಹಬ್ಬದ ಮಹತ್ವ:
    ಮಹಿಷಾಸುರನ ಮಾಯೆಯನ್ನು ಗುರುತಿಸಿ ಅವನ ಅಸುರೀ ಪಾಶದಿಂದ ಮುಕ್ತರಾಗಲು ಶಕ್ತಿ ಉಪಾಸನೆಯ ಆವಶ್ಯಕತೆಯಿದೆ. ಇದಕ್ಕಾಗಿ ನವರಾತ್ರಿಯ ಒಂಭತ್ತು ದಿನ ಶಕ್ತಿಯ ಉಪಾಸನೆಯನ್ನು ಮಾಡಬೇಕು. ದಶಮಿಯಂದು ವಿಜಯೋತ್ಸವವನ್ನು ಆಚರಿಸಬೇಕು. ಇದನ್ನೇ ದಸರಾ (ದಶಹರಾ)/ವಿಜಯದಶಮಿ ಎನ್ನುತ್ತಾರೆ.

    ದಸರಾ ಶಬ್ದದ ಉತ್ಪತ್ತಿ :
    ದಸರಾ ಎನ್ನುವ ಶಬ್ದದ ಒಂದು ವ್ಯುತ್ಪತ್ತಿಯು ದಶಹರಾ ಎಂದೂ ಇದೆ. ದಶ ಎಂದರೆ ಹತ್ತು, ಹರಾ ಎಂದರೆ ಸೋತಿವೆ. ದಸರಾದ ಮೊದಲ ಒಂಬತ್ತು ದಿನಗಳ ನವರಾತ್ರಿಗಳಲ್ಲಿ ಹತ್ತೂ ದಿಕ್ಕುಗಳು ದೇವಿಯ ಶಕ್ತಿಯಿಂದ ಸಂಪನ್ನವಾಗಿರುತ್ತವೆ ಮತ್ತು ನಿಯಂತ್ರಣಕ್ಕೊಳಪಟ್ಟಿರುತ್ತವೆ. ಅಂದರೆ ಹತ್ತೂ ದಿಕ್ಕುಗಳಲ್ಲಿನ ದಿಕ್ಪಾಲಕರು, ಗಣರು ಮುಂತಾದವರ ಮೇಲೆ ನಿಯಂತ್ರಣವಿರುತ್ತದೆ. ಹತ್ತೂ ದಿಕ್ಕುಗಳ ಮೇಲೆ ವಿಜಯವು ದೊರಕಿರುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಈ ದಿನಕ್ಕೆ ದಶಹರಾ, ದಸರಾ, ವಿಜಯ ದಶಮಿ ಮುಂತಾದ ಹೆಸರುಗಳಿವೆ

    ಆಯುಧಪೂಜೆ (ಶಸ್ತ್ರಪೂಜೆ) ಅಂದರೆ ಏನು?:
    ಈ ದಿನ ರಾಜರು, ಸಾಮಂತರು, ಸರದಾರರು ತಮ್ಮತಮ್ಮ ಶಸ್ತ್ರಗಳನ್ನು ಸ್ವಚ್ಛಗೊಳಿಸಿ, ಸಾಲಾಗಿ ಇಟ್ಟು ಪೂಜೆ ಮಾಡುತ್ತಾರೆ. ಹಾಗೆಯೇ ರೈತರು ಮತ್ತು ಕುಶಲ ಕರ್ಮಿಗಳು ತಮ್ಮತಮ್ಮ ಶಸ್ತ್ರಗಳ ಪೂಜೆಯನ್ನು ಮಾಡುತ್ತಾರೆ. ಕೆಲವರು ಈ ಪೂಜೆಯನ್ನು ನವಮಿಯಂದೂ ಮಾಡುತ್ತಾರೆ.

    ರಾಜವಿಧಾನ: ‘ದಸರಾ’ ವಿಜಯದ ಹಬ್ಬವಾಗಿರುವುದರಿಂದ ಈ ದಿನ ರಾಜರಿಗೆ ವಿಶೇಷ ವಿಧಿಯನ್ನು ಹೇಳಲಾಗಿದೆ. ಇದು ವಿಜಯದ, ಪರಾಕ್ರಮದ ಹಬ್ಬವಾಗಿದೆ. ಅರ್ಜುನನು ಅಜ್ಞಾತವಾಸದಲ್ಲಿ ಶಮಿಯ ಉಡಿಯಲ್ಲಿ ಇಟ್ಟ ಶಸ್ತ್ರಗಳನ್ನು ತೆಗೆದು, ವಿರಾಟನ ಗೋವುಗಳನ್ನು ಸೆರೆ ಹಿಡಿದ ಕೌರವಸೈನ್ಯದ ಮೇಲೆ ಆಕ್ರಮಣ ಮಾಡಿ ಇದೇ ದಿನ ವಿಜಯವನ್ನು ಸಂಪಾದಿ ಸಿದ್ದನು. ಈ ದಿನದಂದೇ ಶ್ರೀರಾಮಚಂದ್ರನು ರಾವಣನ ಮೇಲೆ ವಿಜಯ ಪಡೆದು ಆತನನ್ನು ವಧಿಸಿದ್ದನು ಎಂದು ನಂಬಲಾಗುತ್ತದೆ. ಈ ಘಟನೆಗಳ ಸಂಕೇತವಾಗಿ ಈ ದಿನಕ್ಕೆ ವಿಜಯದಶಮಿ ಎಂದು ಹೆಸರು ಬಂದಿದೆ. ಹಾಗೆ ನೋಡಿದರೆ ಈ ಹಬ್ಬವು ಬಹಳ ಪ್ರಾಚೀನ ಕಾಲದಿಂದ ನಡೆದು ಬಂದಂತಿದೆ. ಪ್ರಾರಂಭದ ಕಾಲದಲ್ಲಿ ಇದು ಕೃಷಿಗೆ ಸಂಬಂಧಪಟ್ಟ ಒಂದು ಲೋಕೋತ್ಸವವಾಗಿತ್ತು. ಮಳೆಗಾಲದಲ್ಲಿ ಬಿತ್ತಿದ ಪ್ರಥಮ ಪೈರು ಮನೆಗೆ ಬಂದಾಗ ರೈತರು ಈ ಉತ್ಸವವನ್ನು ಆಚರಿಸುತ್ತಿದ್ದರು. ಕಲಶ ಸ್ಥಾಪನೆಯ ದಿನ ಕಲಶದ ಕೆಳಗಿನ ಪೀಠದಲ್ಲಿ ಒಂಭತ್ತು ಧಾನ್ಯಗಳನ್ನು ಬಿತ್ತುತ್ತಾರೆ. ದಸರಾದಂದು ಈ ಧಾನ್ಯದ ಮೊಳಕೆಗಳನ್ನು ತೆಗೆದು ದೇವರಿಗೆ ಅರ್ಪಿಸುತ್ತಾರೆ. ಅನೇಕ ಕಡೆ ಗದ್ದೆಯಲ್ಲಿ ಬೆಳೆದ ಭತ್ತದ ತೆನೆಗಳನ್ನು ಕೊಯ್ದು ತಂದು ಅವುಗಳನ್ನು ಮನೆಯ ಪ್ರವೇಶದ್ವಾರಕ್ಕೆ ತೋರಣದಂತೆ ಕಟ್ಟುತ್ತಾರೆ. ಈ ಪದ್ಧತಿಯಿಂದ ಕೃಷಿಗೆ ಸಂಬಂಧಪಟ್ಟ ಈ ಹಬ್ಬದ ಸ್ವರೂಪ ಸ್ಪಷ್ಟವಾಗುತ್ತದೆ. ಮುಂದೆ ಈ ಹಬ್ಬಕ್ಕೆ ಧಾರ್ಮಿಕ ಸ್ವರೂಪವನ್ನು ಕೊಡಲಾಯಿತು ಮತ್ತು ಇತಿಹಾಸ ಕಾಲದಲ್ಲಿ ಇದು ರಾಜಕೀಯ ಸ್ವರೂಪದ ಹಬ್ಬವಾಯಿತು.

    ನಾವೆಲ್ಲಾ ಭಕ್ತಿ ಶ್ರದ್ಧೆಯಿಂದ ಶ್ರೀ ದುರ್ಗಾದೇವಿಯ ಉಪಾಸನೆಯನ್ನು ಮಾಡಿ ಶ್ರೀ ದೇವಿಯ ಕೃಪೆಯನ್ನು ಪಡೆಯೋಣ.

    This image has an empty alt attribute; its file name is M-V-SHNAKARANANDA.jpg

    ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.

    error: Content is protected !!