23.6 C
Karnataka
Thursday, May 21, 2026
    Home Blog Page 20

    WORLD ECONOMIC FORUM :ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಲುಲು ಗ್ರೂಪ್ ಜೊತೆ 2000 ಕೋಟಿ ರೂ. ಹೂಡಿಕೆ ಒಪ್ಪಂದ

    DAVOS MAY 23

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಇಂದು ಸ್ವಿಟ್ಜರ್ಲ್ಯಾಂಡ್ ನ ದಾವೋಸ್ ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಮ್ -WORLD ECONOMIC FORUM- ಸಮಾವೇಶದಲ್ಲಿ ಮೆ: ಲುಲು ಗ್ರೂಪ್-LU LU GROUP- ಇಂಟರ್ ನ್ಯಾಷನಲ್ ನ ನಿರ್ದೇಶಕ ಎ.ವಿ.ಅನಂತ ರಾಮನ್ ಅವರೊಂದಿಗೆ ಕರ್ನಾಟಕದಲ್ಲಿ ಹೂಡಿಕೆ ಮಾಡುವ ಕುರಿತು ಒಪ್ಪಂದಕ್ಕೆ ಸಹಿ ಮಾಡಲಾಯಿತು.

    ಲುಲು ಗ್ರೂಪ್ ರಾಜ್ಯದಲ್ಲಿ ಸುಮಾರು ಎರಡು ಸಾವಿರ ಕೋಟಿ ರೂ. ಹೂಡಿಕೆ ಮಾಡಲು ಮುಂದಾಗಿದ್ದು, 4 ಶಾಪಿಂಗ್ ಮಾಲ್ ಮತ್ತು ಹೈಪರ್ ಮಾರ್ಕೆಟ್ ಹಾಗೂ ರಫ್ತು ಆಧಾರಿತ ಆಹಾರ ಮಳಿಗೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಮೂಲಕ 10 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.

    ವಿಶ್ವದ ಪ್ರಮುಖ ಸಂಸ್ಥೆಗಳೊಂದಿಗೆ ಸಿಎಂ ಚರ್ಚೆ

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ದಾವೋಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಜ್ಯೂಬಿಲಿಯಂಟ್ ಗ್ರೂಪ್, ಹಿಟಾಚಿ ಹಾಗೂ ಸೀಮನ್ಸ್ ಸಂಸ್ಥೆಯ ಮುಖ್ಯಸ್ಥರೊಂದಿಗೆ ಚರ್ಚಿಸಿದರು.

    ಜ್ಯೂಬಿಲಿಯಂಟ್ ಗ್ರೂಪ್

    ಕರ್ನಾಟಕದಲ್ಲಿ ಫಾರ್ಮಾ ಮತ್ತು ಎಫ್.ಎಂ.ಸಿ.ಜಿ ವಲಯದಲ್ಲಿ ಹೂಡಿಕೆಯ ಅವಕಾಶಗಳನ್ನು ಅನ್ವೇಷಿಸುವಂತೆ ತಿಳಿಸಿದ ಮುಖ್ಯ ಮಂತ್ರಿಗಳು, ಧಾರವಾಡದಲ್ಲಿ ಎಫ್.ಎಂ.ಸಿ.ಜಿ ವಲಯದಲ್ಲಿ ಹೂಡಿಕೆಗೆ ವಿಶೇಷ ಪ್ರೋತ್ಸಾಹಕ ಪ್ಯಾಕೇಜ್ ನ್ನು ಸಹ ಪರಿಗಣಿಸಬಹುದಾಗಿದೆ ಎಂದರು.

    ಜ್ಯೂಬಿಲಿಯಂಟ್ ಫುಡ್ ವರ್ಕ್ಸ್ ನೂತನ ಕೇಂದ್ರೀಕೃತ ಪಾಕಶಾಲೆ ಪ್ರಾರಂಭಿಸಲು ಹಾಗೂ ಜ್ಯೂಬಿಲಿಯಂಟ್ ಬಯೋಸಿಸ್ ರಾಜ್ಯ ದೇವನಹಳ್ಳಿಯಲ್ಲಿ 10 ಎಕರೆ ಪ್ರದೇಶದಲ್ಲಿ ನೂತನವಾಗಿ ಆರ್ ಅಂಡ್ ಡಿ ಸೆಂಟರ್ ಸ್ಥಾಪಿಸಲು ತೀರ್ಮಾನಿಸಿದೆ. ಪ್ರಸ್ತುತ ರಾಜ್ಯದಲ್ಲಿ 9000 ಜನರು ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ.

    ಹಿಟಾಚಿ ಎನರ್ಜಿ

    *ಹಿಟಾಚಿ ಎನರ್ಜಿ ಸಂಸ್ಥೆಯ ಮುಖ್ಯಸ್ಥರೊಂದಿಗೆ ನಡೆದ ಮಾತುಕತೆಯ ಸಂದರ್ಭದಲ್ಲಿ ಇ ವಿ ಚಾರ್ಜಿಂಗ್ ಗಾಗಿ ಮೂಲಸೌಕರ್ಯ ಘಟಕ ಸ್ಥಾಪನೆಗೆ ಯೋಜಿಸುತ್ತಿರುವುದಾಗಿ ತಿಳಿಸಿದೆ.

    *ಬೆಂಗಳೂರಿನಲ್ಲಿ ಪ್ರತಿಭೆಯ ಲಭ್ಯತೆ ಇರುವುದರಿಂದ ನವೀಕರಿಸಬಹುದಾದ ಇಂಧನ ಮತ್ತು ಡಿಜಿಟಲೀಕರಣದ ಅವಕಾಶಗಳ ಬಗ್ಗೆ ಆಸಕ್ತಿ ತೋರಿದೆ.

    *ದೊಡ್ಡಬಳ್ಳಾಪುರದಲ್ಲಿ ಇಂಧನ ಗುಣಮಟ್ಟ ಉಪಕರಣ ಘಟಕವನ್ನು ಉದ್ಘಾಟಿಸುತ್ತಿದ್ದಾರೆ

    2 ಸಾವಿರ ಇಂಜಿನಿಯರ್ ಗಳನ್ನು ಹೊಂದಿರುವ ಇಂಜಿನಿಯರಿಂಗ್ ಕೇಂದ್ರವನ್ನು ನಿರ್ಮಿಸುತ್ತಿದ್ದಾರೆ.
    ಹಿಟಾಚಿ ಸಂಸ್ಥೆಯ ಕೇಂದ್ರ ಸ್ಥಾನ ಬೆಂಗಳೂರಿನಲ್ಲಿದೆ.

    ಸೀಮೆನ್ಸ್

    ಬೆಂಗಳೂರಿನಲ್ಲಿ 2 ಯೋಜನೆಗಳನ್ನು ಸೀಮೆನ್ಸ್ ಸಂಸ್ಥೆ ಕೈಗೆತ್ತಿಕೊಳ್ಳಲಿದೆ.
    ಮ್ಯಾಗ್ನೆಟಿಕ್ ಇಮೇಜಿಂಗ್ ಮತ್ತು ಡಯಾಜ್ಞಾಸ್ಟಿಕ್ಸ್ ಮೇಲೆ ಕೇಂದ್ರೀಕೃತವಾದ ಆರ್.ಅಂಡ್ ಡಿ ಆರೋಗ್ಯ ಯೋಜನೆ.

    ಸ್ಥಳೀಯ ಮಾರುಕಟ್ಟೆ ಗಳಿಗೆ ಮಾರಾಟ ಮಾಡಲು ವೈದ್ಯಕೀಯ ಸಲಕರಣೆಗಳನ್ನು ಉತ್ಪಾದಿಸುವ ಘಟಕವನ್ನು ಬೊಮ್ಮಸಂದ್ರದಲ್ಲಿ ಸ್ಥಾಪಿಸಲು ಸೆಪ್ಟೆಂಬರ್ 2022 ರಲ್ಲಿ ಶಂಕುಸ್ಥಾಪನೆಗೆ ಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು
    ಮುಖ್ಯ ಮಂತ್ರಿಗಳನ್ನು ಸಂಸ್ಥೆ ಆಹ್ವಾನಿಸಿದೆ.ಬೆಂಗಳೂರಿನಲ್ಲಿ ಸೀಮನ್ಸ್ ಸಂಸ್ಥೆ 2500 ಇಂಜಿನಿಯರ್ ಗಳನ್ನು ಹೊಂದಿದೆ.

    ಆಧುನಿಕ ವೈದ್ಯಕೀಯ ಉಪಕರಣಗಳ ಉತ್ಪಾದನೆಗೆ ಸಂಬಂಧಿಸಿದಂತೆ ವಿಶೇಷ ಪ್ರೋತ್ಸಾಹಕಗಳನ್ನು ಕರ್ನಾಟಕ ಸರ್ಕಾರ ಒದಗಿಸುವ ಭರವಸೆ ನೀಡಿದೆ.

    ಬಿಯಾಂಡ್ ಬೆಂಗಳೂರು ಯೋಜನೆಯಡಿ ತುಮಕೂರು, ಹುಬ್ಬಳ್ಳಿ- ಧಾರವಾಡ ಮತ್ತು ಮೈಸೂರು ನಗರಗಳಲ್ಲಿಯೂ ಹೂಡಿಕೆ ಮಾಡುವ ಕುರಿತು ರಾಜ್ಯ ಸರ್ಕಾರ ಮತ್ತು ಸೀಮನ್ಸ್ ಸಂಸ್ಥೆ ಮಾತುಕತೆ ನಡೆಸಿತು.

    ರಾಜ್ಯದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣ ರೆಡ್ಡಿ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಕೈಗಾರಿಕಾ ಇಲಾಖೆಯ ಆಯುಕ್ತರಾದ ಗುಂಜನ್ ಕೃಷ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    Design Policy ; ರಾಜ್ಯದಲ್ಲಿ ಶೀಘ್ರವೇ ಡಿಸೈನ್ ನೀತಿ, ಬಿಟಿಎಸ್ ಜತೆಯಲ್ಲೇ `ಬೆಂಗಳೂರು ಡಿಸೈನ್ ಫೆಸ್ಟಿವಲ್’ ಆಯೋಜನೆ

    LONDON MAY 23

    ಕರ್ನಾಟಕ ಸರಕಾರವು ಸದ್ಯದಲ್ಲೇ ಡಿಸೈನ್ ನೀತಿ’ಯನ್ನು ಜಾರಿಗೆ ತರಲಿದ್ದು, ಈ ವರ್ಷದ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ (ಬಿಟಿಎಸ್)Bengaluru Tech Summit (BTS 22) ಜತೆಯಲ್ಲೇ ಬೃಹತ್ಬೆಂಗಳೂರು ಡಿಸೈನ್ ಫೆಸ್ಟಿವಲ್’ ಅನ್ನು ಕೂಡ ಆಯೋಜಿಸಲಿದೆ. ಅಲ್ಲದೆ, ಡಿಸೈನ್ ಕುರಿತ ಚಿಂತನೆ ಮತ್ತು ಜಾಗೃತಿಯನ್ನು ಶಾಲಾಕಾಲೇಜುಗಳ ಪಠ್ಯಕ್ರಮದಲ್ಲೇ ಅಳವಡಿಸಲಾಗುವುದು ಎಂದು ಐಟಿ-ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

    ತಮ್ಮನ್ನು ಇಲ್ಲಿ ಭೇಟಿಯಾದ ವರ್ಲ್ಡ್ ಡಿಸೈನ್ ಕೌನ್ಸಿಲ್ (ಡಬ್ಲ್ಯುಡಿಸಿ)World Design Council (, ವರ್ಲ್ಡ್ ಡಿಸೈನ್ ಆರ್ಗನೈಸೇಶನ್ (ಡಬ್ಲ್ಯುಡಿಓ) ಮತ್ತು ಯುನೈಟೆಡ್ ಕಿಂಗ್ಡಂ ಡಿಸೈನ್ ಕೌನ್ಸಿಲ್ ನ ಉನ್ನತ ಮಟ್ಟದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದ ಅವರು, ಈ ಚಿಂತನೆಯನ್ನು ಹಂಚಿಕೊಂಡಿದ್ದಾರೆ.

    ಈ ಸಂದರ್ಭದಲ್ಲಿ ಮಾತನಾಡಿರುವ ಸಚಿವರು, `ಭಾರತದ ಕೇಂದ್ರ ಸರಕಾರವು ಈಗಾಗಲೇ ರಾಷ್ಟ್ರೀಯ ಡಿಸೈನ್ ನೀತಿಯನ್ನು ಹೊಂದಿದ್ದು, ರಾಜ್ಯವು ಅದರಲ್ಲಿನ ಉಪಯುಕ್ತ ಅಂಶಗಳನ್ನು ತನ್ನ ನೀತಿಯಲ್ಲೂ ಅಳವಡಿಸಿಕೊಳ್ಳಲಿದೆ. ಜತೆಗೆ, ಡಬ್ಲ್ಯುಡಿಸಿ ಯಿಂದಲೂ ಸಲಹೆಗಳನ್ನು ಪಡೆದುಕೊಂಡು, ಸಮಗ್ರ ನೀತಿಯನ್ನು ರೂಪಿಸಲಾಗುವುದು’ ಎಂದಿದ್ದಾರೆ.

    ವಿಚಾರ ವಿನಿಮಯದ ವೇಳೆಯಲ್ಲಿ ನಿಯೋಗವು, `ಬೆಂಗಳೂರು ಡಿಸೈನ್ ಡಿಸ್ಟ್ರಿಕ್ಟ್’ ಅನ್ನು (ಬಿಡಿಡಿ) ಸ್ಥಾಪಿಸಲು ಅಗತ್ಯವಿರುವ ಔದ್ಯಮಿಕ ನೆರವನ್ನು ನೀಡುವ ಆಸಕ್ತಿ ವ್ಯಕ್ತಪಡಿಸಿತು. ಜತೆಗೆ, ಇದನ್ನೆಲ್ಲ ಶಾಲಾಕಾಲೇಜುಗಳ ಪಠ್ಯಕ್ರಮದ ಭಾಗವನ್ನಾಗಿ ಮಾಡುವ ಪ್ರಕ್ರಿಯೆಯಲ್ಲೂ ಸಹಾಯ ನೀಡುವ ಭರವಸೆ ನೀಡಿತು.

    ಬೆಂಗಳೂರು ಡಿಸೈನ್ ಡಿಸ್ಟ್ರಿಕ್ಟ್ ಸ್ಥಾಪಿಸುವ ನಿಟ್ಟಿನಲ್ಲಿ ತಾನು ಅಂತಾರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮದ (ಐಎಸ್ಡಿಸಿ) ಜತೆ ಕೈಗೂಡಿಸುವುದಾಗಿ ಡಬ್ಲ್ಯು ಡಿಸಿ ಪ್ರತಿನಿಧಿಗಳು ಮಾಹಿತಿ ನೀಡಿದರು.

    ಇದಕ್ಕೆ ಸ್ಪಂದಿಸಿದ ಸಚಿವರು, ಹೆಚ್ಚಿನ ಚರ್ಚೆಗಾಗಿ ಬೆಂಗಳೂರಿಗೆ ಬರುವಂತೆ ನಿಯೋಗದ ಸದಸ್ಯರನ್ನು ಆಹ್ವಾನಿಸಿದರು.
    ಅಲ್ಲದೆ, `ಸಮಾಜದಲ್ಲಿ ಡಿಸೈನ್ ಬಗ್ಗೆ ಜಾಗೃತಿ ಮೂಡಿಸಿ, ಈ ಜ್ಞಾನಧಾರೆಗೆ ಬೇಡಿಕೆಯನ್ನು ಸೃಷ್ಟಿಸಲು ಅಗತ್ಯ ವ್ಯವಸ್ಥೆಗಳನ್ನು ಮಾಡುವುದು ನಮ್ಮ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಬಿಡಿಡಿ ಸ್ಥಾಪನೆಯು ನೆರವಾಗಲಿದೆ. ಮೊದಲಿಗೆ, ಪ್ರಾಯೋಗಿಕವಾಗಿ ಆಯ್ದ ಸರಕಾರಿ ಶಾಲೆಗಳಲ್ಲಿ ಡಿಸೈನ್ ಬೋಧನೆಗೆ ಚಾಲನೆ ನೀಡಬಹುದು. ಇದರ ಫಲಿತಾಂಶವನ್ನು ಆಧರಿಸಿ, ನಂತರ ಇದನ್ನು ರಾಜ್ಯಾದ್ಯಂತ ವಿಸ್ತರಿಸಬಹುದು. ರಾಜ್ಯ ಐಟಿ ಇಲಾಖೆಯೇ ನೂತನ ಡಿಸೈನ್ ನೀತಿಯನ್ನು ರೂಪಿಸಲಿದೆ’ ಎಂದು ಅಶ್ವತ್ಥನಾರಾಯಣ ವಿವರಿಸಿದ್ದಾರೆ.

    ನಿಯೋಗದಲ್ಲಿದ್ದ ಡಬ್ಲ್ಯುಡಿಸಿ ಮುಖ್ಯಸ್ಥೆ ಪೌಲಾ ಗ್ರಹಾಂ ಗೆಜಾರ್ಡ್ ಮಾತನಾಡಿ, `ಕರ್ನಾಟಕದ ಉದ್ದೇಶಿತ ಡಿಸೈನ್ ನೀತಿ ಮತ್ತು ಡಿಸೈನ್ ಡಿಸ್ಟ್ರಿಕ್ಟ್ ಸ್ಥಾಪನೆಯು ರಾಜ್ಯವನ್ನು ಜಾಗತಿಕ ಡಿಸೈನ್ ವಲಯದಲ್ಲಿ ಪ್ರತಿಷ್ಠಾಪಿಸಲಿದೆ. ಅಲ್ಲದೆ, ಹೆಚ್ಚಿನ ಬಂಡವಾಳವನ್ನು ಆಕರ್ಷಿಸುವ ಮೂಲಕ ಸಾವಿರಾರು ಉದ್ಯೋಗಗಳನ್ನೂ ಸೃಷ್ಟಿಸಲಿದೆ’ ಎಂದು ಮನದಟ್ಟು ಮಾಡಿಕೊಟ್ಟರು.

    ಈ ವಿಚಾರ ವಿನಿಮಯದಲ್ಲಿ ಡಬ್ಲ್ಯುಡಿಓ ನಿರ್ದೇಶಕರ ಮಂಡಲಿಯ ಸದಸ್ಯ ಪ್ರೊ.ಪ್ರದ್ಯುಮ್ನ ವ್ಯಾಸ್, ಯುಕೆ ಡಿಸೈನ್ ಕೌನ್ಸಿಲ್ ಟ್ರಸ್ಟಿ ಆನ್ ಬೋಡಿಂಗ್ಟನ್, ಐಎಸ್ಡಿಸಿ ಕಾರ್ಯ ನಿರ್ವಾಹಕ ನಿರ್ದೇಶಕ ಟಾಮ್ ಜೋಸೆಫ್, ಡಿಜಿಟಲ್ ವಿಭಾಗದ ನಿರ್ದೇಶಕ ಅರುಣ್ ಬಾಲಚಂದ್ರನ್ ಮತ್ತು ನೂತನ ಉಪಕ್ರಮಗಳ ನಿರ್ದೇಶಕ ಜಾನ್ ಕ್ಸೇವಿಯರ್ ಕೂಡ ಇದ್ದರು.


    .

    ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠ ಜೊತೆ ಚರ್ಚೆಯಾಗಿಲ್ಲ:ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ

    NEW DELHI MAY 21

    ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ವರಿಷ್ಠರ ಜತೆ ಚರ್ಚೆಯಾಗಿಲ್ಲ. ಸುಪ್ರೀಂ ಕೋರ್ಟ್ ಬಿಬಿಎಂಪಿ ಹಾಗೂ ಇತರೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸೂಚಿಸಿರುವ ಹಿನ್ನೆಲೆಯಲ್ಲಿ ಅದರ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಅವರು ಇಂದು ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

    ಅಮಿತ್ ಶಾ ಅವರ ಸೂಚನೆಯಂತೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರೊಂದಿಗೆ ಮಾತನಾಡಿ ಕರ್ನಾಟಕ ವಿಧಾನ ಪರಿಷತ್ ಹಾಗೂ ರಾಜ್ಯ ಸಭಾ ಚುನಾವಣೆಗೆ ಕಳುಹಿಸಲಾಗಿರುವ ಪಟ್ಟಿಯ ಬಗ್ಗೆ ವಿವರಗಳನ್ನು ನೀಡಲಾಗಿದೆ.

    ನಾಲ್ಕು ವಿಧಾನ ಪರಿಷತ್ ಸ್ಥಾನಗಳಿಗೆ 24 ಕಡೇ ದಿನಾಂಕ ವಾಗಿದ್ದು. ತುರ್ತಾಗಿ ನಿರ್ಣಯ ಗಳನ್ನು ಕೈಗೊಳ್ಳಬೇಕಿದೆ. ರಾಜ್ಯ ಸಭೆ ಚುನಾವಣೆಗೆ 31 ರವರೆಗೆ ಸಮಯಾವಕಾಶವಿದೆ. ಕೋರ್ ಕಮಿಟಿ ಚರ್ಚೆಯ ನಿರ್ಣಯಗಳ ಬಗ್ಗೆ ಅರುಣ್ ಸಿಂಗ್ ಅವರಿಗೆ ತಿಳಿಸಲಾಗಿದೆ.ಆದಷ್ಟು ಬೇಗನೆ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ ಎಂದರು.

    SSLC ಫಲಿತಾಂಶ ಪ್ರಕಟ; ಎಂದಿನಂತೆ ಬಾಲಕಿಯರದೇ ಮೇಲುಗೈ

    BENGALURU MAY 19

    2021-22 ಸಾಲಿನ SSLC ಫಲಿತಾಂಶ ಪ್ರಕಟವಾಗಿದ್ದು. ಶೇ.85.63ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ತಿಳಿಸಿದ್ದಾರೆ. ಉತ್ತೀರ್ಣ ಪ್ರಮಾಣ: ಬಾಲಕಿಯರು- ಶೇ. 90.29 ಬಾಲಕರು- ಶೇ. 81.30.

    8,53,436 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 7,30,881 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪೂರಕ ಪರೀಕ್ಷೆ- ಜೂನ್ 27, 2022ರಂದು ನಡೆಯಲಿದೆ.

    ಈ ಸಲದ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಔಟ್ ಆಫ್ ಔಟ್ 625 ಅಂಕಕ್ಕೆ 625 ಅಂಕವನ್ನ 145 ಮಕ್ಕಳು ಪಡೆದುಕೊಂಡಿದ್ದಾರೆ.

    ಇದುವರೆಗೆ ಎಸ್ ಎಸ್ ಎಲ್ ಸಿಯಲ್ಲಿ ಮೊದಲ, ದ್ವಿತೀಯ ಮತ್ತು ತೃತೀಯ ಜಿಲ್ಲೆಗಳೆಂದು ಫಲಿತಾಂಶ ನೀಡಲಾಗುತ್ತಿತ್ತು. ಆದರೆ ಈ ಬಾರಿ ಪ್ರೌಢ ಶಿಕ್ಷಣ ಇಲಾಖೆ ಗ್ರೇಡ್ ಮಾದರಿಯಲ್ಲಿ ಫಲಿತಾಂಶ ನೀಡಿದೆ. 

    20 ಶಾಲೆಗಳು ಶೂನ್ಯ ಸಂಪಾದನೆ ಮಾಡಿದರೆ 3,920 ಶಾಲೆಗಳು ಶೇ.100 ರಷ್ಟು ಫಲಿತಾಂಶ ದಾಖಲಿಸಿದೆ. ರ‍್ಯಾಂಕ್‌ ಪದ್ದತಿ ಕೈ ಬಿಟ್ಟ ಇಲಾಖೆ ಈ ಬಾರಿ ಗ್ರೇಡ್ ವ್ಯವಸ್ಥೆಯಲ್ಲಿ ಫಲಿತಾಂಶ ಘೋಷಣೆ ಮಾಡಿದೆ. ಬೆಂಗಳೂರು ದಕ್ಷಿಣ ಮತ್ತು ಯಾದಗಿರಿ ಜಿಲ್ಲೆಗೆ ಬಿ ಗ್ರೇಡ್ ಸಿಕ್ಕಿದರೆ ಉಳಿದ ಎಲ್ಲಾ ಜಿಲ್ಲೆಗಳಿಗೆ ಎ ಗ್ರೇಡ್ ಸಿಕ್ಕಿದೆ.

    ಫಲಿತಾಂಶ ವೀಕ್ಷಣೆ: ಮಧ್ಯಾಹ್ನ 1 ಗಂಟೆ ಬಳಿಕ ಇಲಾಖೆಯ ವೆಬ್‌ಸೈಟ್ karresults.nic.in ನಲ್ಲಿ ಫಲಿತಾಂಶ ಲಭ್ಯವಾಗಲಿದೆ. ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಫೋನ್ ನಂಬರ್‌ಗಳಿಗೆ SMS ಮೂಲಕ ಫಲಿತಾಂಶ ಕಳುಹಿಸಲಾಗುತ್ತದೆ.

    Man of the Match ಯಾರು ಎಂದು ತೀರ್ಮಾನಿಸಲಾಗದು!

    ಸಂಕೇತದತ್ತ

    ಪ್ರಯೋಗಾತ್ಮಕ ಚಿತ್ರ ಎನ್ನಬಹುದಾದ ಕನ್ನಡದ ಈ ಚಿತ್ರದ ಟೈಟಲ್ ಪ್ರಕಾರ ‘ಮ್ಯಾನ್ ಆಫ್ ದ ಮ್ಯಾಚ್’ ಯಾರು ಎಂದು ತೀರ್ಮಾನಿಸಲಾಗದು!

    ಈ ಪ್ರಶ್ನೆಗೆ ಉತ್ತರ ಹೇಳೋದು ಅಷ್ಟು ಸುಲಭವಲ್ಲ! ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ ಎಂಬಂತಿದೆ ಈ ಚಿತ್ರದ ಫಲಿತಾಂಶ!

    ಹಾಸ್ಯ ಕಲಾವಿದ ಧರ್ಮಣ್ಣ ಕಡೂರ್ ಅವರ ಆ್ಯಕ್ಷನ್ ಸೀನ್ ನಿಂದ ಚಿತ್ರ ಆರಂಭವಾಗುತ್ತೆ. ಶಿವು ಮೇಲೆ ಹಾರಿ ಜೋತು ಬೀಳುವ ಧರ್ಮಣ್ಣ ಈ ಚಿತ್ರದಲ್ಲಿ ನಿರ್ಮಾಪಕನ ಪಾತ್ರ ಮಾಡಿದ್ದಾರೆ. ‘ರಾಮ ರಾಮ ರೇ’ ಖ್ಯಾತಿಯ ನಟರಾಜ್ ಇಲ್ಲಿ ನಿರ್ದೇಶಕನ ಪಾತ್ರ ಮಾಡಿದ್ದು ತಮ್ಮ ಚಿತ್ರಕ್ಕೆ ಆಡಿಷನ್ ಮಾಡಲು ತಯಾರಾಗುತ್ತಾರೆ. ಈ ಸಂದರ್ಭದಲ್ಲಿ ಗಾಂಧಿ ಪಾತ್ರಧಾರಿಯ ಎಂಟ್ರಿ ಆಗುತ್ತೆ. ಅಲ್ಲಿಂದ ಎಲ್ಲವೂ ಟ್ವಿಸ್ಟ್ಗಳೇ!

    ಗಾಂಧಿಯನ್ನು ಡ್ರಮ್ ಮೇಲೆ ಕೂರಿಸಿ ಸ್ಟ್ಯಾಚ್ಯು ಮಾಡಿಸುವ ಡೈರೆಕ್ಟರ್ ಪಾತ್ರಧಾರಿ ಆ ಸ್ಟ್ಯಾಚ್ಯು ಸುತ್ತ ಹಲವು ದೃಶ್ಯಗಳ ಬ್ಲಾಕಿಂಗ್ ಮಾಡುತ್ತಾರೆ.ಅಲ್ಲದೇ ಅದೇ ಗಾಂಧಿ ಸ್ಟ್ಯಾಚ್ಯೂ ಮುಂದೆ ಗಲಭೆ-ಗದ್ದಲಗಳಂತಹ ಹಲವಾರು ದೃಶ್ಯಗಳನ್ನು ಮಾಡಿಸುತ್ತಾರೆ ಚಿತ್ರದ ಒಳಗಿನ ಡೈರೆಕ್ಟರ್! ಗಾಂಧಿಯು ಅಲ್ಲಿದ್ದರೂ, ಅವರನ್ನು ಗಣನೆಗೆ ತೆಗೆದುಕೊಳ್ಳದೇ ಯಾವ ಮುಜುಗರವೂ ಇಲ್ಲದೇ ಎಲ್ಲಾ ದೃಶ್ಯಗಳು ಅವರ ಮುಂದೇ ನಡೆಯುತ್ತವೆ. ನಮ್ಮ ನಿಜ ಜೀವನದಲ್ಲಿ ಗಾಂಧಿ ಪ್ರತಿಮೆಗಳ ಮುಂದೆ ನಡೆವಂತೆ! ಈ ದೃಶ್ಯಗಳಲ್ಲಿ ಅಣಕವಿದೆ, ಕೋಪವಿದೆ, ನೋವಿದೆ!

    ಅದೇ ಗಾಂಧಿ ಪ್ರತಿಮೆಯ ಮುಂದೆ ಹೀರೋ ಹೀರೊಯಿನ್ ಗೆ ಮುತ್ತು ಕೊಡುವ ದೃಶ್ಯವೂ ಇದೆ! ಗಾಂಧಿಯ ಮುಂದೆ ಮುತ್ತು ಕೊಡಲಾಗದು ಎಂಬ ಹೀರೋ ತಕರಾರಿಗೆ ಚಿತ್ರದ ಡೈರೆಕ್ಟರ್ ಪಾತ್ರಧಾರಿ ಹೇಳೋದು ‘ಗಾಂಧಿ ದ್ವೇಷ ಮಾಡಬೇಡಿ ಅಂದ್ರು, ಪ್ರೀತಿ ಮಾಡಬಾರ್ದು ಎಂದಿಲ್ಲಾ!’ ಎನ್ನುವ ಮಾತು ವಿಸ್ತಾರವಾದ ಅರ್ಥ ಕೊಡುತ್ತೆ. ಹೀರೋ ಹಾಗೂ ಹೀರೋಯಿನ್ ಇಬ್ಬರ ಪರಿಚಯವು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿದೆ. ‘ಅಪ್ಪ-ಅಮ್ಮನದು ಕರುಳ ಸಂಬಂಧವಾದ್ರೆ, ಪ್ರೇಮಿಗಳದ್ದು ಬೆರಳ ಸಂಬಂಧ’ ಎಂಬ ಡೈಲಾಗ್ ವಾವ್ ಎನಿಸುತ್ತೆ.

    ಚಿತ್ರದ ಆಡಿಷನ್ ಗೆ ಬಂದವರು ಪಾತ್ರವಾಗ್ತಾರೆ, ಗುಂಪಲ್ಲಿ ಗೋವಿಂದ ಆಗದೇ ತಮ್ಮದೇ ಆದ ಪ್ರತಿಭೆಯನ್ನು ಹೊರ ಹಾಕ್ತಾರೆ. ತಮ್ಮದೇ ಛಾಪಿಗೆ ಟಸ್ಸೇ ಹಾಕೋ ಪ್ರಯತ್ನ ಮಾಡ್ತಾರೆ. ಸಂದರ್ಭಕ್ಕೆ ತಕ್ಕಂತೆ ಕೂಗಾಡ್ತಾರೆ, ಹಾರಾಡ್ತಾರೆ, ನಕ್ಕೂ ನಗಿಸಿ, ಅತ್ತೂ ಕರೆದು ಸಾಂದರ್ಭಿಕ ಶಿಶುವಾಗ್ತಾರೆ!

    ನಿರ್ದೇಶಕನ ಪಾತ್ರದ ಬಲಗೈ ಭಂಟ ಶಿವು, ಆನ್ಸ್ಪಾಟ್ ಸಂಕಲನಕಾರರಾದ ಕೆಂಪರಾಜ್, ನಟರಾಜ್ ಅವರ ಮೊದಲ ಚಿತ್ರಕ್ಕೆ ಶುಭ ಕೋರಲೆಂದು ಬರುವ ಸುಂದರ್ ಹಾಗೂ ವೀಣಾ ಹೀಗೆ ಎಲ್ಲರೂ ಪಾತ್ರವಾಗ್ತಾರೆ!

    ನಟನೆಯ ಹುಚ್ಚಿರುವ ಭಾವಿ ಪತ್ನಿಯನ್ನು ಪ್ರೋತ್ಸಾಹಿಸಲು ಆಡಿಷನ್ಗೆ ಬಂದವನೂ ತನಗೇ ಗೊತ್ತಿಲ್ಲದೇ ಪಾತ್ರವಾಗ್ತಾನೆ. ಎಲ್ಲಾ ಪಾತ್ರಗಳ ನಡುವೆ ಸಂಪರ್ಕದ ಕೊಂಡಿಯಾಗ್ತಾನೆ. ಸಂಘರ್ಷಣೆಯ ಮೂಲವಾಗ್ತಾನೆ. ಸಾಫ್ಟ್ವೇರ್ ಕೆಲಸಗಾರನಾದರೂ ರಫ್ ಅಂಡ್ ಟಫ್ ಆಗ್ತಾನೆ. ಮದುವೆಯಾಗಬೇಕಿದ್ದ ಹುಡುಗಿಯನ್ನೇ ದ್ವೇಷಿಸುವ ಹಂತಕ್ಕೆ ಹೋಗ್ತಾನೆ. ಎಲ್ಲವೂ ಸಮಯ, ಸಂದರ್ಭ ಹಾಗೂ ಮೇಲಿನ ನಿರ್ದೇಶಕನ ಕೈವಾಡ! ಆಡಿಸುವಾತನ ಕೈಗೊಂಬೆಗಳು ಪಾತ್ರಧಾರಿಗಳು ಎಂಬ ಅಗೋಚರ ಸಂದೇಶ ಇಲ್ಲಿ ಪ್ರಸ್ತುತವಾಗುತ್ತೆ!

    ಚಿತ್ರದಲ್ಲಿ ಹೀರೋ ಆಗುವ ಕನಸನ್ನು ಹೊತ್ತ ಹುಡುಗ ಆಡಿಷನ್ಗೇ ಕಟ್ ಔಟ್ ಜೊತೆಗೇ ಬರ್ತಾನೆ. ಸಿನಿಮಾ ಕ್ಷೇತ್ರದಲ್ಲಿ ನಟಿಸಲು ಬರುವ ಪ್ರತಿಯೊಬ್ಬನ ಪ್ರತಿರೂಪವನ್ನು ಈ ಹೀರೋ ಪಾತ್ರದ ಮೂಲಕ ತಂದಿದ್ದಾರೆ ರಿಯಲ್ ನಿರ್ದೇಶಕರು!

    ನಟ-ನಟಿಯರಾಗಲೇ ಬೇಕೆಂದು ಬರುವವರ ಆಸೆ-ಆಕಾಂಕ್ಷೆಗಳನ್ನೂ, ನಟಿಸಲು ಛಾನ್ಸ್ಗಾಗಿ ವರ್ಷಗಟ್ಟಲೇ ಸೈಕಲ್ ಹೊಡೆವವರನ್ನೂ, ನಟನೆಗಾಗಿ ಯಾವ ತ್ಯಾಗಕ್ಕೂ ಸಿದ್ಧವಾಗಿರುವ ಸಿನಿಕರನ್ನೂ ಇಲ್ಲಿ ಪಾತ್ರವಾಗಿಸಿದ್ದಾರೆ!

    ಅವರೆಲ್ಲರ ಕಷ್ಟ ಕಾರ್ಪಣ್ಯ ನೋವುಗಳನ್ನು ನೇರಾನೇರಾ ಆಯಾಯ ಪಾತ್ರಗಳ‌ ಮೂಲಕ ಬಿಂಬಿಸಲಾಗಿದೆ!

    ಪಾತ್ರ ಯಾರು ಪಾತ್ರವಲ್ಲದವರು ಯಾರು! ಯಾರು ಮುಖ್ಯ, ಯಾರು ಮುಖ್ಯವಲ್ಲಾ! ಯಾರ ಜೀವನದಿ ಯಾರು ಯಾವ ಪಾತ್ರವಾಗ್ತಾರೆ ಅನ್ನೋ ಒಳಮರ್ಮವನ್ನು ಇಲ್ಲಿ ತಿಳಿಸಲಾಗಿದೆ.

    ಜಾಲಿ ಮೂಡಿನ, ಹುರುಪು ಉತ್ಸಾಹದ ವಾಸುಕಿ ವೈಭವ್ ಹಾಗೂ ತಂಡದ ಹಾಡು-ಕುಣಿತವಿದೆ. ರಂಗಮಂದಿರದ ತೆರೆ‌ಯ ಮುಂದಿನ ಹಾಗೂ ತೆರೆಯ ಹಿಂದಿನ ಕತೆ-ವ್ಯಥೆಯ ಚಿತ್ರಿಸುವ ಹಾಡಿದೆ. ಪ್ರೇಮ-ಪ್ರೀತಿಯ ಗುಂಗಿನ ರಂಜನೆಯ ಹಾಡಿದೆ. ಪಂಚ್ ಡೈಲಾಗ್ಗೆ ಧರ್ಮಣ್ಣ ಇದ್ದಾರೆ.

    ನನ್ನೊಳು ಮಾಯೆಯೋ ಮಾಯೆಯೊಳು ನಾನೋ ಎಂಬ ತಾಕಲಾಟವನ್ನು ವಿಭಿನ್ನ ಕೋನದಲ್ಲಿ ರಿಯಾಲಿಟಿ ಶೋ ರೀತಿಯಲ್ಲಿ ಕಟ್ಟಿ ಕೊಟ್ಟಿದ್ದಾರೆ ಸೂತ್ರಧಾರ ಸತ್ಯ‌ಪ್ರಕಾಶ್!

    ಒಂದೇ ದಿನದಿ ನಡೆವ ಕತೆಯಿದು. ಹಾಗಿದ್ದೂ ಎಲ್ಲೂ ಕಂಟಿನ್ಯುಟಿ ಮಿಸ್ ಆಗದಂತೆ ಎಚ್ಚರ ವಹಿಸಿದ್ದಾರೆ. ಪೋಲಿಸರ ಪ್ರವೇಶದ ದೃಶ್ಯಗಳಿಗೆ ಕತ್ತರಿ ಬೀಳಬಹುದಿತ್ತು!

    ಕ್ಯಾಮರ ಹಿಂದಿನ ಲವಿತ್ ಹಾಗೂ ಮದನ್ ಅವರ ಕ್ಯಾಮರ ಕೋನಗಳು, ಚಲನವಲನಗಳು ಮೆಚ್ಚಲರ್ಹ. ಈ ಚಿತ್ರದ ಸಂಕಲನವನ್ನು ಮಾಡಿರುವ ಬಿ ಎಸ್ ಕೆಂಪರಾಜ್ ಅವರಿಗೆ ಈ ಚಿತ್ರವು 275ನೇ ಚಿತ್ರವಂತೆ! ಅಲ್ಲದೇ ಈ ಚಿತ್ರದಲ್ಲಿ ಸಂಕಲನಕಾರನ ಪಾತ್ರವನ್ನು ವಹಿಸಿದ್ದು ನೈಜವಾಗಿಯೇ ನಟಿಸಿದ್ದಾರೆ.

    ಆಡಿಷನ್ ಮೂಲಕವೇ ಚಿತ್ರವನ್ನು ಕಟ್ಟಿಕೊಟ್ಟದ್ದರಿಂದ ಸಿನಿಮಾ ಕೆಲವು ದೃಶ್ಯಗಳನ್ನು ನಾಟಕದ ಬ್ಲಾಕಿಂಗಗಳಂತೆ ಸಂಯೋಜಿಸಲಾಗಿದೆ. ಕೆಲವು ಬಾರಿ ಲೈಟಿಂಗ್ ಎಫೆಕ್ಟ್ ಕೂಡ ಥಿಯೇಟರ್ ಹಿನ್ನೆಲೆಯಲ್ಲೇ ಕಂಡು ಬರುತ್ತೆ. ಆದರೆ ಕ್ಯಾಮರಾ ಆ್ಯಂಗಲ್ ಮಾತ್ರ ಈ ದಿನಮಾನದ ಸಿನಿಮಾ ಕ್ಷೇತ್ರದ ಅಪಡೇಟೆಡ್ ವರ್ಶನ್ನಲ್ಲಿದೆ. ಡೈರೆಕ್ಟರ್ ಪಾತ್ರದ ಕ್ಲೋಸಪ್ಗಳ ತಂತ್ರಜ್ಞಾನ ಮೆಚ್ಚಲರ್ಹ.

    ನಟರಾಜ್ ಅವರ ಹಲವು ಸ್ತರಗಳ ವೈವಿಧ್ಯಮಯವಾದ ನಗು ಪ್ರೇಕ್ಷಕರಿಗೆ ಇಷ್ಟವಾಗುತ್ತೆ.ಆದರೆ ಕ್ಲೈಮ್ಯಾಕ್ಸ್ನಲ್ಲಿ ನಟರಾಜ್ ಬೇರೆ ಶೇಡ್ಗೆ ಜಾರ್ತಾರೆ!

    ಎಲ್ಲೆಡೆಯೂ ಕ್ಯಾಮರ ಇದ್ದು ಶೂಟಿಂಗ್ ಫ್ಲೋರ್ ಒಳಗೂ, ಫ್ಲೋರ್ ಹೊರಗೂ ನಡೆಯುವ ನೈಜ ದೃಶ್ಯಗಳು ಚಿತ್ರದ ದೃಶ್ಯಗಳಾಗಿವೆ. ಚಿತ್ರದ ನಂತರ ತಮ್ಮನ್ನೂ ಕ್ಯಾಮರಗಳು ಫಾಲೋ ಮಾಡ್ತಾ ಇದೆಯಾ ಎಂಬ ಗುಮಾನಿಯಲ್ಲಿ ನೋಡುಗ ಸಮ್ಮೋಹನ ಸ್ಥಿತಿಗೆ ಜಾರುತ್ತಾನೆ.

    ಇನ್ಡೋರ್ ನಿಂದ ಔಟ್ಡೋರ್ ಗೆ, ಔಟ್ಡೋರ್ ನಿಂದ ಇಂಡೋರ್ ಗೆ ಶಿಫ್ಟ್ ಆಗುವ ದೃಶ್ಯಗಳ ನಡುವಿನ ಫ್ಲೋರ್ ನ ದೊಡ್ಡ ಬಾಗಿಲು ಕೂಡ ಇಲ್ಲಿ ಪಾತ್ರದಂತೆ ಭಾಸವಾಗುತ್ತೆ!

    ‘ಇದೇನ್ ದಿ ಗೇಟ್ ವೇ ಆಫ್ ಇಂಡಿಯಾನಾ? ತೆಗಿರೋ ಎಂಬ ಧರ್ಮಣ್ಣನ ಮಾತೂ, ಒಳಗೂ ಹೊರಗೂ ಓಡಾಡುವ ಗಾಂಧಿಯ ಪಾತ್ರವೂ, ಕೆಲವು ದೃಶ್ಯಗಳಲ್ಲಿ ಗಾಂಧಿ ಪಾತ್ರಕ್ಕೆ ಅವಕಾಶ ಕೊಡದೇ ಸ್ಕಿಪ್ ಮಾಡುವ ರೀತಿಯು ಕೆಲವು ಸೂಕ್ಷ್ಮತೆಗಳನ್ನೂ, ನಿರ್ದೇಶಕನ ಒಳಗಿನ ನಿರ್ಧಾರಗಳನ್ನೂ ಪರಿಚಯಿಸುತ್ತದೆ.

    ಹೀಗೆ ಒಂದು ಚಿತ್ರದ ಚಿತ್ರೀಕರಣದಲ್ಲಿ ನಡೆವ ಒಳ ಮರ್ಮಗಳನ್ನೂ, ಕಂಡೂ ಕಾಣದ ಕೈಗಳ ಕೈವಾಡಗಳನ್ನೂ, ನಿರ್ಮಾಪಕರ ದಬ್ಬಾಳಿಕೆಯನ್ನೂ, ನಿರ್ದೇಶಕರ ಮೇಲಿನ ಒತ್ತಡವನ್ನೂ, ಪಾತ್ರಧಾರಿಗಳ ಅಸ್ಥಿರತೆಯನ್ನೂ, ಸಹಕಲಾವಿದರ ಹಣಕಾಸಿನ ದುಸ್ಥಿತಿಯನ್ನೂ, ಅಸೋಸಿಯೇಟ್ ಡೈರೆಕ್ಟರ್ ಗ ನೈಜ ವಸ್ತುಸ್ಥಿತಿಯನ್ನೂ, ಹೀಗೆ ಚಿತ್ರವೊಂದು ನಿರ್ಮಾಣವಾಗುವಲ್ಲಿ ಅದರ ಹಿಂದಿನ ಎಲ್ಲ ಸ್ಥರಗಳಲ್ಲಿನ ಏರುಪೇರುಗಳನ್ನೂ ಕಟ್ಟಿಕೊಡುವ ಪ್ರಯತ್ನವನ್ನು ಈ ಚಿತ್ರದ ಸೂತ್ರಧಾರ ಡಿ ಸತ್ಯ ಪ್ರಕಾಶ್ ಮಾಡಿದ್ದಾರೆ.

    ಇಲ್ಲಿ ಗಾಂಧಿ ಪಾತ್ರಧಾರಿಯನ್ನು ಚಿತ್ರಿಸಿರುವ ಪರಿಯು ಪ್ರಸ್ತುತ ಸಮಾಜದಲ್ಲಿನ ಗಾಂಧಿಯ ಪರಿಸ್ಥಿತಿಗೆ ಕನ್ನಡಿಯಾಗಿದೆ.ಪ್ರತಿಮೆಯಾಗಿದ್ದ ಗಾಂಧಿ ಜೀವಂತ ಗಾಂಧಿಯಾಗ್ತಾರೆ. ಸ್ವಾರ್ಥಪರ ಸಮಾಜದ ಘರ್ಷಣೆಯಲ್ಲಿ ಈ ಗಾಂಧಿ ತಮ್ಮ ಪರಿಕರಗಳನ್ನು ಕಳೆದು ಕೊಳ್ತಾರೆ. ಸಮಾಜದಿಂದ ದೂರಾಗ್ತಾರೆ. ಚಿತ್ರದ ಡೈರೆಕ್ಟರ್ ಪಾತ್ರಧಾರಿಯು ಗಾಂಧಿಯ ಆ ಪರಿಕರಗಳನ್ನು ಧರಿಸಿ ತಾನೂ ಗಾಂಧಿಯ ದಾರಿಯನ್ನೇ ಹಿಡಿಯುತ್ತಾನೆ ಎಂಬಲ್ಲಿಗೆ ಚಿತ್ರ ಬಂದು ನಿಲ್ಲುತ್ತೆ!

    ಇಂತಹ ವಿಭಿನ್ನ ಕೋನದ ಕ್ಲೈಮ್ಯಾಕ್ಸ್ ನೋಡಿದ ನೋಡುಗರ ಮನದ ಭಿತ್ತಿಯಲ್ಲಿ ಗಾಂಧಿ ಚಿತ್ರವಾಗ್ತಾರೆ!

    Indian Stock Market:ಷೇರು ದರದ ಒಳ ನೋಟವನ್ನು ಅರಿತು ವ್ಯವಹರಿಸಿ

    ಇತ್ತೀಚೆಗೆ ಪ್ರತಿ ಷೇರಿಗೆ ರೂ.949 ರಂತೆ ಆರಂಭಿಕ ಷೇರು ವಿತರಣೆ ಮಾಡಿದ ಎಲ್‌ಐ ಸಿ ಆಫ್‌ ಇಂಡಿಯಾ ಹಿಂದಿನ ವರ್ಷ ಪ್ರತಿ ಷೇರಿಗೆ ರೂ.76 ರಂತೆ ವಿತರಿಸಿದ ಝೊಮೇಟೋ ಕಂಪನಿ ಷೇರಿಗಿಂತ ಕೇವಲ ರೂ. 18.90 ರಷ್ಟು ಮಾತ್ರ ಹೆಚ್ಚಿದೆ. ಅದೇ ರೀತಿ ನವೆಂಬರ್‌ತಿಂಗಳಿನಲ್ಲಿ ಪ್ರತಿ ಷೇರಿಗೆ ರೂ.2,150 ರಂತೆ ವಿತರಿಸಿದ ಪೇಟಿಎಂ ಕಂಪನಿ ಷೇರಿಗೆ ಹೋಲಿಸಿದಾಗ ಪೇಟಿಎಂ ಷೇರು ರೂ.2,055.10 ರಷ್ಟು ಹೆಚ್ಚಿನ ಬೆಲೆಯಲ್ಲಿ ವಿತರಣೆಯಾಗಿದೆ ಎನ್ನಬಹುದು. ಮೊನ್ನೆಯ ದಿನ ಕೊನೆಗೊಂಡ ಡೆಲಿವೆರಿ ಕಂಪನಿಯು ಪ್ರತಿ ಷೇರಿಗೆ ರೂ.487 ರಂತೆ ವಿತರಿಸಿದೆ, ಅದಕ್ಕೆ ಹೋಲಿಕೆ ಮಾಡಿದಾಗ ಎಲ್‌ಐ ಸಿ ಆಫ್‌ಇಂಡಿಯಾ ರೂ.392.10 ರಷ್ಟು ಕಡಿಮೆ ಬೆಲೆಗೆ ವಿತರಿಸಿದೆ ಎನ್ನಬಹುದು.

    ಏನಿದು ಆಯಾ ಕಂಪನಿಗಳು ವಿತರಿಸಿದ ಬೆಲೆಗೂ ಇಲ್ಲಿ ನಮೂದಿಸಿದ ಬೆಲೆಗೂ ಭಾರಿ ಅಂತರವಿದೆಯಲ್ಲಾ ಎಂದೆನಿಸುವುದು ಸಹಜ. ಅದೇ ವಿಸ್ಮಯಕಾರಿ ಅಂಶ. ಬಹಳಷ್ಠು ಕಂಪನಿಗಳು ಇದನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿವೆ. ಈ ವಿಸ್ಮಯಕಾರಿ ಅಂಶವೆಂದರೆ ಆಯಾ ಕಂಪನಿಗಳು ವಿತರಿಸುತ್ತಿರುವ ಷೇರಿನ ಸ್ವರೂಪಗಳು.

    ಎಲ್‌ಐ ಸಿ ಆಫ್‌ಇಂಡಿಯಾದ ಒಂದು ಘಟಕ ಅಂದರೆ ಷೇರಿನ ಮುಖಬೆಲೆಯು ರೂ.10 ಇದ್ದು ಉಳಿದಂತೆ ಝೊಮೆಟೋ, ಪೇಟಿಎಂ, ಡೆಲಿವೆರಿ ಕಂಪನಿಗಳ ಷೇರಿನ ಮುಖಬೆಲೆಗಳು ರೂ.1 ಅಗಿದೆ. ಅಂದರೆ ಈ ಕಂಪನಿಗಳ 10 ಷೇರುಗಳು ಎಲ್‌ಐ ಸಿ ಆಫ್‌ಇಂಡಿಯಾದ ಒಂದು ಷೇರಿಗೆ ಸಮವಾಗುವುದು. ಅಂದರೆ ಎಲ್‌ಐ ಸಿ ಆಫ್‌ಇಂಡಿಯಾ ರೂ.10 ರ ಕರೆನ್ಸಿಯಾದರೆ, ಇತರೆ ಮೂರು ಕಂಪನಿಗಳು ರೂ.1 ರ ಕರೆನ್ಸಿಯಾದಂತೆ. ಹೀಗೆ ಕಂಪನಿಗಳ ಷೇರುಗಳನ್ನು ತುಲನೆ ಮಾಡಲು ಸಮಾನಾಂತರ ಮುಖಬೆಲೆಗೆ ಪರಿವರ್ತಿಸಿಕೊಂಡಲ್ಲಿ ಮಾತ್ರ ನ್ಯಾಯಸಮ್ಮತವಾದ ವಿಶ್ಲೇಷಣೆ/ಫಲಿತಾಂಶ ಪಡೆಯಲು ಸಾಧ್ಯ.

    ಮುಖ ಬೆಲೆ ಬಹಳ ಮುಖ್ಯ

    ಇತ್ತೀಚಿನ ದಿನಗಳಲ್ಲಿ ಷೇರಿನ ಮುಖಬೆಲೆಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡದೆ ಕೇವಲ ವಿತರಣೆ / ಪೇಟೆಯ ಬೆಲೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಅಂದರೆ ಮನೆ ಮುಖ್ಯವೇ ಹೊರತು ಅದರ ಪ್ರದೇಶ 20 X 30, 30X40, 40X60 ಎಂಬುದನ್ನು ಪರಿಗಣಿಸಲಾಗುತ್ತಿಲ್ಲ ಎಂಬಂತೆ. ನಮ್ಮ ಚಿಂತನೆಗಳನ್ನು ವಾಸ್ತವತೆ ಕಡೆ ತಿರುಗಿಸುವುದು ಅತ್ಯಗತ್ಯ.

    ಷೇರಿನ ಮುಖಬೆಲೆಯು ಯಾವ ರೀತಿ ಪ್ರಭಾವಿಯಾಗುವುದು ಎಂಬುದನ್ನು ತಿಳಿಯೋಣ. ಕಂಪನಿಯು ಶೇ.100 ರಷ್ಟು ಲಾಭಾಂಶ ವಿತರಿಸಿದೆ ಎಂದರೆ ಆ ಕಂಪನಿ ಷೇರಿನ ಮುಖಬೆಲೆ ರೂ.10 ಆಗಿದ್ದರೆ ಆ ಷೇರಿಗೆ ರೂ.10 ರ ಲಾಭಾಂಶ ದೊರೆಯುವುದು. ಒಂದು ವೇಳೆ ಆ ಕಂಪನಿಯ ಷೇರಿನ ಮುಖಬೆಲೆ ರೂ.5 ಆಗಿದ್ದರೆ, ಪ್ರತಿ ಷೇರಿಗೆ ರೂ.5, ರೂ.2 ಆಗಿದ್ದರೆ ಆ ಷೇರಿಗೆ ರೂ.2 ರಂತೆ, ರೂ.1 ಆಗಿದ್ದರೆ ರೂ.1 ರಂತೆ ಲಾಭಾಂಶ ದೊರೆಯುತ್ತದೆ. ಒಂದು ಹೂಡಿಕೆಯಲ್ಲಿ ಲಭ್ಯವಿರುವ ಲಾಭದ ಇಳುವರಿಯ ಮಾಪನ ಮಾಡಲು ಷೇರಿನ ಮುಖಬೆಲೆಯ ಪಾತ್ರ ಅತಿ ಹೆಚ್ಚು.

    ಷೇರಿನ ಸ್ವರೂಪಗಳು ಕಂಪನಿಗಳ ಸ್ವಾಸ್ಥ್ಯತೆಯಾಧರಿಸಿ ಬದಲಾಗುತ್ತಿರುತ್ತವೆ. ಆರೋಗ್ಯಕರವಾದ ಕಂಪನಿಗಳು ತಮ್ಮ ಸಾಧನೆಯ ಮೂಲಕ ಬೋನಸ್‌ ಷೇರುಗಳ ವಿತರಣೆಗೆ ಮುಂದಾಗಬಹುದು. ಈ ಸನ್ನಿವೇಶವನ್ನು ಇತ್ತೀಚಿನ ದಿನಗಳಲ್ಲಿ ಬಿ ಎಸ್‌ಇ, ಹಿಂದೂಜಾ ಗ್ಲೋಬಲ್‌ಸೊಲೂಷನ್ಸ್‌, ಗೋದಾವರಿ ಪವರ್‌ಅಂಡ್‌ಇಸ್ಪಾಟ್‌, ರೆಡಿಂಗ್ಟನ್‌, ಐ ಇ ಎಕ್ಸ್‌ನಂತಹ ಅನೇಕ ಕಂಪನಿಗಳಲ್ಲಿ ಕಂಡಿದ್ದೇವೆ. ಇಲ್ಲಿ ಷೇರಿನ ಮುಖಬೆಲೆಯಲ್ಲಿ ಬದಲಾವಣೆ ಇಲ್ಲದಿದ್ದರೂ, ಕಂಪನಿಯಲ್ಲಿದ್ದ ಮೀಸಲು ನಿಧಿಯು ಬಂಡವಾಳವಾಗಿ ಪರಿವರ್ತನೆಗೊಂಡ ಕಾರಣ ಬೆಲೆ ಕುಸಿತ ಕಾಣಬಹುದಾಗಿದೆ.

    ಹಲವು ಬಾರಿ ಕಂಪನಿಗಳು ರೋಗಗ್ರಸ್ತವಾದಾಗ ಐ ಬಿ ಸಿ ( Insolvency and bankruptsy code) ಅಥವಾ ಎನ್ ಸಿ ಎಲ್‌ಟಿ ( National Company Law Tribunal ) ಗಳ
    ಆದೇಶದ ಮೇರೆಗೆ ಷೇರು ಬಂಡವಾಳವನ್ನು ಮೊಟಕುಗೊಳಿಸುವ ಮೂಲಕ ಪುನರ್‌ರೂಪಿಸಿ, ಷೇರಿನ ಮುಖಬೆಲೆಯನ್ನು ಕಡಿತಗೊಳಿಸಲಾಗುವುದು. ನಂತರ ಕೆಲವು ಕಂಪನಿಗಳು ಮೊಟಕುಗೊಳಿಸಿದ ಷೇರಿನ ಮುಖಬೆಲೆ ಕ್ರೋಡೀಕರಿಸುವುವು. ಅಂದರೆ ಷೇರಿನ ಮುಖಬೆಲೆ ಸ್ಥಿರವಾಗಿದ್ದರೂ, ಕಂಪನಿಯು ಹೊಂದಿರುವ ಷೇರುಗಳ ಸಂಖ್ಯಾಗಾತ್ರವು ಕ್ಷೀಣಿತವಾಗುತ್ತದೆ.

    ಯಾವುದೇ ಒಂದು ಕೈಗಾರಿಕೋದ್ಯಮವನ್ನು ಆರಂಭಿಸಬೇಕಾದರೆ ಅದಕ್ಕೆ ಬೇಕಾದ ಬಂಡವಾಳ ಅತಿ ಹೆಚ್ಚು. ಬಂಡವಾಳದ ಜೊತೆಗೆ ಅದನ್ನು ನಿರ್ವಹಿಸುವುದು ಕೇವಲ ಒಬ್ಬರಿಬ್ಬರಿಂದ ಸಾಧ್ಯವಿಲ್ಲ. ಆ ಉದ್ಯಮವನ್ನು ಆರಂಭಿಸಿ, ಬೆಳೆಸಲು ಹತ್ತಾರು ನೈಪುಣ್ಯರ, ತಜ್ಞರ, ತಾಂತ್ರಿಕ ಪರಿಣಿತರ, ಅನುಷ್ಟಾನ ಕುಶಲತೆಯುಳ್ಳವರ ಕೈಜೋಡಿಸುವಿಕೆ ಅತ್ಯಗತ್ಯ.

    ಹಾಗಾಗಿ ಒಂದು ಉದ್ಯಮವನ್ನು ಸ್ಥಾಪಿಸುವಾಗ ಅದರ ಗಾತ್ರಕ್ಕೆ ತಕ್ಕಂತೆ ಹಲವರು ಭುಜಕ್ಕೆ ಭುಜ ಕೊಟ್ಟು ಬಂಡವಾಳ ಮತ್ತು ಕಾರ್ಯಗಳನ್ನು ಹಂಚಿಕೊಂಡು ಆರಂಭಿಸುವರು. ಈ ಒಗ್ಗೂಡಿಕೆಯನ್ನು ಕಂಪನಿ ಎಂಬ ನಾಮಾಂಕಿತದಿಂದ ಗುರುತಿಸಲಾಗುವುದು. ಆರಂಭಿಕ ಹಂತದಲ್ಲಿ ಪಾಲ್ಗೊಂಡವರನ್ನು ಪ್ರವರ್ತಕರು ಎಂದು ಗುರುತಿಸಲಾಗುವುದು. ಈ ಜೊತೆಗಾರಿಕೆ ಕೇವಲ ಇಷ್ಟಕ್ಕೆ ನಿಲ್ಲದೆ ಕಂಪನಿಯು ಮುಂದೆ ಗಳಿಸಬಹುದಾದ ಲಾಭಕ್ಕೆ ಅವರವರ ಹೂಡಿಕೆಗೆ ಅನುಗುಣವಾಗಿ ಲಾಭವನ್ನು ಹಂಚಿಕೊಳ್ಳುವರು.

    ಹೂಡಿಕೆಯ ಮಾಪನಕ್ಕೆ ಅನುಕೂಲಕವಾಗಲೆಂದು ಅದನ್ನು ಅನೇಕ ಘಟಕಗಳಾಗಿ ರೂಪಿಸಲಾಗಿದ್ದು ಈ ಘಟಕಗಳ ಮುಖಬೆಲೆಯು ರೂ.10, ರೂ.5, ರೂ.2 ಮತ್ತು ರೂ.1 ರಂತಿರುತ್ತದೆ. ಓರ್ವರು ಒಂದು ಲಕ್ಷ ರೂಪಾಯಿಗಳನ್ನು ರೂ.10 ರ ಮುಖಬೆಲೆಯ ಘಟಕಗಳಿರುವಲ್ಲಿ ಹೂಡಿಕೆ ಮಾಡಿದರೆ ಅವರಿಗೆ ಒಟ್ಟು ಹತ್ತು ಸಾವಿರ ಘಟಕಗಳನ್ನು ನೀಡಲಾಗುವುದು. ಈ ಘಟಕವೇ ಷೇರು. ಅಂದರೆ ಷೇರುದಾರರು ಕಂಪನಿಯಲ್ಲಿ ಬಂಡವಾಳ ಹೂಡಿದ್ದಕ್ಕೆ ಕಂಪನಿಗಳಿಸಿದ ಹಣದಲ್ಲಿ ಖರ್ಚು ವೆಚ್ಚಗಳ ನಂತರ ಉಳಿದ ಹಣದಲ್ಲಿ ಲಾಭಾಂಶ ಎಂಬ ಪ್ರತಿಫಲಗಳನ್ನು ಪಡೆಯುವರು. ಇದು ಒಂದು ರೀತಿಯ ನಮ್ಮ ಹಳೇ ಸಂಸ್ಕೃತಿಯಾದ ಒಟ್ಟುಕುಟುಂಬದ ರೀತಿ ಇರುತ್ತದೆ. ಈ ರೀತಿ ಹತ್ತಾರು, ನೂರಾರು, ಸಹಸ್ರಾರು ಹೂಡಿಕೆದಾರರು ಸೇರಿ ನಡೆಸುವ ಈ ಸಂಸ್ಕೃತಿಗೆ ಕಾರ್ಪೊರೇಟ್ ಸಂಸ್ಕೃತಿ ಎನ್ನುವರು.

    ಸಾಮಾನ್ಯವಾಗಿ ವಯಸ್ಕರು, ಹಿರಿಯ ನಾಗರಿಕರು, ಗೃಹಿಣಿಯರು ಭಾವಿಸುವುದೇನೆಂದರೆ ಬ್ಯಾಂಕ್‌ಬಡ್ಡಿ ದರವು ಕ್ಷೀಣಿಸುತ್ತಿರುವುದರಿಂದ ಅದನ್ನವಲಂಬಿಸಿ ನಡೆಸುತ್ತಿರುವ ಜೀವನ ಸುಲಭವಾಗಿಲ್ಲ, ತೊಂದರೆಯಾಗುತ್ತಿದೆ. ಇದಕ್ಕೆ ಪರ್ಯಾಯವಾದ ಆದಾಯ ಗಳಿಕೆಯ ಮಾರ್ಗ ಯಾವುದೆಂಬುದರ ಆನ್ವೇಷಣೆ ಮಾಡುವ ಪ್ರಯತ್ನಗಳು ನಡೆಸುವುದು ಸಹಜವಾಗಿದೆ. ಇಂತಹವರು ತಮ್ಮ ಪ್ರಯತ್ನವನ್ನು ಷೇರುಪೇಟೆಯ ಚಟುವಟಿಕೆಯತ್ತಲೂ ನಡೆಸಬಹುದಾಗಿದೆ.

    ಷೇರುಪೇಟೆಯ ಚಟುವಟಿಕೆ ಎಂದರೆ ಹೆಚ್ಚಿನವರಲ್ಲಿ ತಪ್ಪು ಕಲ್ಪನೆಗಳಿವೆ. ಅದು ಜೂಜಾಟದ ಅಡ್ಡ, ಅಲ್ಲಿ ಅಪಾಯದ ಮಟ್ಟ ಹೆಚ್ಚು, ಷೇರುಪೇಟೆ ಚಟುವಟಿಕೆಗೆ ಹೆಚ್ಚಿನ ಹಣ ಅಗತ್ಯವಿದೆ, ಅದು ಸಾಮಾನ್ಯರ ಪಾಲಿಗಲ್ಲ, ಎಂಬ ಅನೇಕ ನಕಾರಾತ್ಮಕ ಭಾವನೆಗಳಿವೆ.

    ಜಾಗತೀಕರಣಕ್ಕೂ ಮುಂಚೆ ಷೇರುಪೇಟೆ ಚಟುವಟಿಕೆಯು ಸಾಮಾನ್ಯರಿಗೆ ಎಟುಕದು ಎಂಬ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಇತ್ತು. ಆದರೆ ನಂತರದಲ್ಲಿ ತಾಂತ್ರಿಕತೆಯ ಕಾರಣ ಚಟುವಟಿಕೆಯು ಸರಳೀಕೃತಗೊಂಡಿದ್ದು, ಭಾಗವಹಿಸುವ ಸಂಸ್ಥೆಗಳು, ವಿದೇಶೀ ವಿತ್ತೀಯ ಸಂಸ್ಥೆಗಳು ಮತ್ತು ಹೂಡಿಕೆದಾರರು, ವಿಶ್ಲೇಷಣೆಗಳು, ವಿಚಾರಗಳು, ವಿವೇಚನೆಗಳು, ಚಿಂತನೆಗಳು, ಶೈಲಿಗಳು ಮುಂತಾದವುಗಳೂ ಸಹ ಹೆಚ್ಚಿನ ಬದಲಾವಣೆಗಳನ್ನು ಕಂಡಿವೆ. ಷೇರುಪೇಟೆಯಲ್ಲಿನ ಬೆಳವಣಿಗೆಗಳು, ಹೂಡಿಕೆಗೂ ಮುನ್ನ ಅರಿಯಬೇಕಾದ ಅಂಶಗಳು ಅಪಾರವಾಗಿವೆ.

    ದಿನ ನಿತ್ಯದಲ್ಲುಂಟಾಗುತ್ತಿರುವ ಏರುಪೇರುಗಳು ಸಾಮಾನ್ಯರ ನಿರೀಕ್ಷೆಗೂ ಮೀರಿದ ಹಂತದಲ್ಲಿವೆ. ಸ್ವಲ್ಪಮಟ್ಟಿನ ಅಧ್ಯಯನ, ಚಿಂತನೆಗಳಲ್ಲದೆ, ಹೂಡಿಕೆಮಾಡುತ್ತಿರುವ ಕಂಪನಿಗಳ ಬಗ್ಗೆ ಅರಿತು ಹೂಡಿಕೆ ಮಾಡಿದಲ್ಲಿ ಸಕಾರಾತ್ಮಕ ಫಲಿತಾಂಶ ಪಡೆಯಲು ಸಾಧ್ಯ. ಮುಂದಿನ ದಿನಗಳಲ್ಲಿ ಹಣದುಬ್ಬರದ ಪ್ರಭಾವ ತಡೆಯಲು ಪೂರಕವಾದ ಹೂಡಿಕೆ ಎಂದರೆ ಷೇರುಪೇಟೆಯೊಂದೇ ಎಂಬ ಕಾರಣಕ್ಕಾಗಿ ಹೂಡಿಕೆದಾರರ ಸಂಖ್ಯೆ, ಹೂಡಿಕೆದಾರರ ಸಂಸ್ಥೆಗಳು ಹೆಚ್ಚಾಗುತ್ತಿರುವುದು. ಈ ರೀತಿಯ ಪಾಲೊಳ್ಳುವಿಕೆಯು ಹಲವು ಬಾರಿ ಪೇಟೆಯನ್ನು ವಹಿವಾಟಿನ ಕೇಂದ್ರಗಳನ್ನಾಗಿಸುವುದರಿಂದ ಮಧ್ಯಂತರದಲ್ಲಿ ಹತ್ತಾರು ಅವಕಾಶಗಳು ಸೃಷ್ಠಿಯಾಗುವುದರ ಪ್ರಯೋಜನವನ್ನು ಪಡೆಯಬಹುದಾಗಿದೆ.

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    Cabinet Expansion:ಸಂಪುಟ ವಿಸ್ತರಣೆ: ಯಾವಾಗ ಏನು ಬೇಕಾದರೂ ಆಗಬಹುದು: ಬಸವರಾಜ ಬೊಮ್ಮಾಯಿ

    NEW DELHI MAY 11
    ರಾಜ್ಯದ ಸಚಿವ ಸಂಪುಟದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜತೆ ಸಮಾಲೋಚನೆ ನಡೆಸಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವಾಗ ಎನೂ ಬೇಕಾದರೂ ಆಗಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಅವರು ಇಂದು ನವದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

    ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ರಾಜಕೀಯ ಸ್ಥಿತಿಗತಿಗಳು, ಸಚಿವ ಸಂಪುಟದ ಬಗ್ಗೆ ಚರ್ಚಿಸಲಾಗಿದೆ. ಸ್ಥಳಿಯ ಸಂಸ್ಥೆಗಳ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶದ ಪರಿಣಾಮಗಳೇನು, ಚುನಾವಣಾ ಆಯೋಗದ ನಿರ್ಧಾರ, ಸಚಿವ ಸಂಪುಟದ ವಿಸ್ತರಣೆ ಇವೆಲ್ಲವುಗಳುವುದರ ಬಗ್ಗೆ ಬಿ.ಜೆ.ಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಚರ್ಚಿಸಲಾಗುವುದು. ಬರುವ ಎರಡು ಮೂರು ದಿನಗಳ ರಾಜಕೀಯ ಬೆಳವಣಿಗೆಯ ಆಧಾರದ ಮೇಲೆ ನಿರ್ಣಯವನ್ನು ತಿಳಿಸುವುದಾಗಿ ಹೇಳಿದ್ದಾರೆ ಎಂದರು.

    ಮುಂಬರಲಿರುವ ರಾಜ್ಯ ಸಭಾ, ವಿಧಾನ ಪರಿಷತ್, ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಸಚಿವ ಸಂಪುಟದ ಬಗ್ಗೆ ಸುದೀರ್ಘವಾದ ಚರ್ಚೆ ಮಾಡಲಾಗಿದೆ ಎಂದರು.

    ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಒಟ್ಟಾರೆ ರಾಜಕೀಯ ಸ್ಥಿತಿಗತಿಗಳ ಆಧಾರದ ಮೇಲೆ ನಿರ್ಣಯಗಳು ಆಗುತ್ತವೆ. ಸ್ಥಿತಿ ಗತಿಗಳನ್ನು ಅವರಿಗೆ ವಿವರಿಸಲಾಗಿದೆ. ಮುಂದಿನ ಒಂದು ವಾರ ಬಹಳ ಮುಖ್ಯ. ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ದೊಡ್ಡ ಪ್ರಮಾಣದ ಚುನಾವಣೆ ಇರುವುದರಿಂದ ಅದರ ಪರಿಣಾಮಗಳೇನು ಎಂದು ಅಧ್ಯಯನ ಮಾಡಿ ತಿಳಿಸುವುದಾಗಿ ಹೇಳಿದ್ದಾರೆ.

    ಹೆಸರುಗಳ ಬಗ್ಗೆ ಚರ್ಚೆಯಾಗಿಲ್ಲ

    ಸಚಿವ ಸಂಪುಟ ವಿಸ್ತರಣೆಯ ತೀರ್ಮಾನವಾದ ಮೇಲೆ ಅದರ ಸ್ವರೂಪ ಗೊತ್ತಾಗಲಿದೆ. ಸಂಪುಟಕ್ಕೆ ಸೇರ್ಪಡೆಯಾಗುವವರ ಹೆಸರುಗಳು ಚರ್ಚೆಯಾಗಿಲ್ಲ. ಹೆಸರುಗಳನ್ನು ತೀರ್ಮಾನ ಮಾಡುವ ಸಂದರ್ಭ ಬರಲಿಲ್ಲ. ಒಟ್ಟಾರೆ ಸ್ಥಿತಿಗತಿಗಳು, ಅದರ ಆಧಾರದ ಮೇಲೆ ಸಚಿವ ಸಂಪುಟದ ವಿಸ್ತರಣೆ ಬಗ್ಗೆ ಮಾತ್ರ ಚರ್ಚೆಯಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

    ಇತ್ತೀಚೆಗೆ ವಿಜಯನಗರದಲ್ಲಿ ನಡೆದ ಕಾರ್ಯಕಾರಿಣಿ ಸಮಿತಿ ಸಭೆಗೆ ಬಂದಾಗಲೂ ಜೆ.ಪಿ. ನಡ್ಡಾ ಅವರೊಂದಿಗೆ ಈ ಬಗ್ಗೆ ಚರ್ಚೆ ಮಾಡಿದ್ದೆವು. ಅಮಿತ್ ಷಾ ಮತ್ತು ನಡ್ಡಾ ಅವರು ಸೇರಿ ಒಂದು ತೀರ್ಮಾನವನ್ನು ಮಾಡುತ್ತಾರೆ.

    ನಿನ್ನೆ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಇಂದು ಮಧ್ಯಾಹ್ನ ಚುನಾವಣಾ ಆಯೋಗ ತಮ್ಮ ಕಾನೂನು ಸಲಹೆಗಾರರೊಂದಿಗೆ ಮಾತನಾಡುವುದಾಗಿ ತಿಳಿಸಿದ್ದಾರೆ. ಅವರು ಸರ್ಕಾರಕ್ಕೆ ಏನು ತಿಳಿಸುತ್ತಾರೊ ತೀರ್ಮಾನವನ್ನು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.

    ವೃತ್ತಿಯಲ್ಲಿ ಉಪನ್ಯಾಸಕಿ ಪ್ರವೃತ್ತಿಯಲ್ಲಿ ಚಿತ್ರಕಲಾವಿದೆ

    ಳಕೂರು ವಿ ಎಸ್ ನಾಯಕ

    ಕಲೆಯೆಂಬುದು ಯಾವ ರೀತಿಯಲ್ಲಿ ಬೇಕಾದರೂ ಪ್ರತಿಯೊಬ್ಬರನ್ನು ಆಕರ್ಷಿಸಬಹುದು. ಅದು ಹೇಗೆ ಯಾವಾಗ ಎಂದು ಹೇಳುವುದು ಅಸಾಧ್ಯ ಅದಕ್ಕೆ ಮುಖ್ಯವಾಗಿ ಬೇಕಾಗಿರುವುದು ಆಸಕ್ತಿ ಗುರಿ ಮತ್ತು ಸಾಧಿಸುವ ಛಲ.

    ಕೆಲವರು ಕಲೆಯನ್ನು ನೋಡಿ ಕಲಿತರೆ ಕೆಲವರಿಗೆ ಬಾಲ್ಯದಿಂದಲೇ ಅದು ಕರಗತವಾಗಿರುತ್ತದೆ. ಚಿಕ್ಕವಯಸ್ಸಿನಲ್ಲಿ ಶಾಲೆಗೆ ಹೋದಾಗ ಅಲ್ಲಿ ಬಿಳಿಯ ಹಾಳೆಯ ಮೇಲೆ ಗೀಚಿದ ಗೆರೆಗಳಿಂದ ಹಿಡಿದು ಮುಂದಿನ ದಿನಗಳಲ್ಲಿ ತಮಗರಿವಿಲ್ಲದ ವಿಭಿನ್ನವಾದ ಕಲಾಕೃತಿಗಳ ಗುಚ್ಛವನ್ನು ಕಲಾಸಕ್ತರ ಮಡಿಲಿಗೆ ನೀಡಿದಾಗ ಅದನ್ನು ನೋಡಿ ಅಭಿನಂದನೆಗಳ ಮಹಾಪೂರ ಬಂದಾಗ ಒಂದು ಕ್ಷಣ ತಮಗೆ ತಾವೇ ಹೆಮ್ಮೆ ಪಟ್ಟು ಕೊಂಡಿದ್ದು ಇದ್ದೇ ಇರುತ್ತದೆ.

    ಹೀಗೆ ಬಾಲ್ಯದಿಂದಲೇ ಕಲೆಯ ಬಗ್ಗೆ ಅಪಾರ ಆಸಕ್ತಿ ಕೊಡ ಮೂಡಿಸಿಕೊಂಡು ಬಂದ ಕಲಾವಿದೆ ಶ್ರೀಮತಿ ಜಯಶ್ರೀ ಶರ್ಮ. ವೃತ್ತಿಯಲ್ಲಿ ಉಪನ್ಯಾಸಕರಾದರು ಕೂಡ ಕಲೆಯ ಬಲೆಗೆ ಸಿಲುಕಿ ತಮ್ಮದೇ ಆದ ಕಲಾ ಜಗತ್ತನ್ನು ಸೃಷ್ಟಿಸಿಕೊಂಡವರು ಜಯಶ್ರೀ ಶರ್ಮರವರು. ತಾನು ನೋಡಿದ್ದನ್ನು ಅನುಭವಿಸಿದ್ದನ್ನು ಕುಂಚದಲ್ಲಿ ಅರಳಿಸಿ ಎಲ್ಲರೂ ಮೆಚ್ಚುವ ಕಲಾತ್ಮಕ ಚಿತ್ರಗಳನ್ನು ನೀಡಿರುವುದು ಮೆಚ್ಚುಗೆ ವಿಷಯ.

    ಬಾಲ್ಯದಲ್ಲಿ ಶಾಲಾ ದಿನಗಳಿಂದಲೇ ಆರಂಭವಾದ ಕಲಾಪ್ರೀತಿ ಮುಂದಿನ ದಿನಗಳಲ್ಲಿ ಹೆಮ್ಮರವಾಗಿ ಬೆಳೆಯಿತು. ಅಂದಿನಿಂದಲೇ ಅಪಾರವಾದ ಕಲಾಭಿಮಾನಿ ಯಾಗಿ ಕಲೆಯ ಬಗ್ಗೆ ವಿಶೇಷವಾದ ಕಾಳಜಿ ಹೊಂದಿ ಅದ್ಭುತವಾದ ಒಂದರ ಹಿಂದೊಂದು ಕಲಾಕೃತಿಗಳ ಗುಚ್ಛವನ್ನು ರಚಿಸಿರುವ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರು ಪ್ರಸಾದ್ ಕಲಾಶಾಲೆಯಲ್ಲಿ ಚಿತ್ರಕಲೆಯ ಬಗ್ಗೆ ತರಬೇತಿಯನ್ನು ಪಡೆದುಕೊಂಡು ನಂತರ 1994 ರಿಂದ 2015 ನಡುವೆ ಕರ್ನಾಟಕದ ಪುತ್ತೂರು, ಮಡಿಕೇರಿಯಲ್ಲಿ ವಿವಿಧ ಸಂಸ್ಥೆಗಳ ಮೂಲಕ ಐದು ಬಾರಿ ಕಲಾಪ್ರದರ್ಶನವನ್ನು ನೀಡಿದ ಹಿರಿಮೆ ಇವರದು. ಜಲವರ್ಣ ಮತ್ತು ತೈಲವರ್ಣದ ಕಲಾಕೃತಿಗಳು ನಿಜಕ್ಕೂ ಕೂಡ ಕಲಾಸಕ್ತರಿಗೆ ಅದ್ಭುತವಾದ ಅನುಭವವನ್ನು ನೀಡುವುದರಲ್ಲಿ ಸಂದೇಹವಿಲ್ಲ.

    ಒಂದಕ್ಕಿಂತ ಒಂದು ವಿಭಿನ್ನ ಕಲಾಕೃತಿಗಳು ವಿಶೇಷವಾದ ಅನುಭವದ ಜೊತೆಗೆ ಅದ್ಭುತವಾದ ವಿಚಾರಗಳನ್ನು ತಿಳಿಸುವ ಕಾರ್ಯವನ್ನು ಮಾಡುತ್ತವೆ. ಮೈಕ್ರೋಬಯಾಲಜಿ ಎಲ್ಲಿ ಉಪನ್ಯಾಸಕರಾದರು ಕೂಡ ಕಲೆಯ ಬಗ್ಗೆ ಅಪಾರವಾದ ಗಮನವನ್ನು ಹೊಂದಿ ಒಂದಕ್ಕಿಂತ ಒಂದು ಅದ್ಭುತ ಕಲಾಕೃತಿಗಳನ್ನು ರಚಿಸಿರುವ ಕೀರ್ತಿ ಅವರಿಗೆ ಸಲ್ಲುತ್ತದೆ.
    ಇವರು ಮಂಗಳೂರಿನ ಪ್ರಸಾದ್ ಸ್ಕೂಲ್ ಆಪ ಆರ್ಟ್ ನಲ್ಲಿ ಭಾವನಾ ಎಂಬ ಏಕವ್ಯಕ್ತಿ ಕಲಾ ಪ್ರದರ್ಶನ. ಮೂಡಬಿದರೆಯ ಆಳ್ವಾಸ್ ನಲ್ಲಿ ಸೃಜನ ಚಿತ್ರಕಲಾ ಚಾವಡಿಯ ನೊಂದಾಯಿತ ಸದಸ್ಯರಾಗಿದ್ದಾರೆ. ರಾಜ್ಯಮಟ್ಟದ ಚಿತ್ತಾರ ಸ್ಪರ್ಧೆಯಲ್ಲಿ ಬಹುಮಾನ ವಿಜೇತರು, ಇವರು ವರ್ಣ ಸಿಂಚನ ಸಮೂಹಕಲಾಪ್ರದರ್ಶನ ಇದರ ಜೊತೆಗೆ ಹಲವಾರು ಆನ್ಲೈನ್ ಕಲಾಪ್ರದರ್ಶನದಲ್ಲಿ ಭಾಗವಹಿಸಿರುವುದು ವಿಶೇಷ.

    ಇವರ ಉತ್ತಮ ಕಲಾ ಸೇವೆಗಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ : ಡಿ. ವೀರೇಂದ್ರ ಹೆಗ್ಗಡೆಯವರಿಂದ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಇತ್ತೀಚೆಗೆ ನಡೆದ ಉತ್ತರ ಪ್ರದೇಶ ದ ಝಾನ್ಸಿಯ ಮಣಿಕರ್ಣಿಕ ಆರ್ಟ್ ಗ್ಯಾಲರಿ ಯವರು ಮಹಿಳಾ ದಿನಾಚರಣೆಯ ನಿಮಿತ್ತ ಸಿದ್ದ ರಾಷ್ಟ್ರಮಟ್ಟದ ಆನ್ಲೈನ್ ಚಿತ್ರಕಲಾ ಸ್ಪರ್ಧೆಯಲ್ಲಿ ಇವರಿಗೆ ಮಣಿಕರ್ಣಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ವೃತ್ತಿಯಲ್ಲಿ ಉಪನ್ಯಾಸಕರಾದರೂ ಇವರನ್ನು ಆಕರ್ಷಿಸಿತು ಕಲಾ ಜಗತ್ತು ಇನ್ನು ಮುಂದೆ ಇವರ ಕುಂಚದಿಂದ ಅದ್ಭುತ ಕಲಾಕೃತಿಗಳು ಹೊರಹೊಮ್ಮಲಿ ಅಂತರಾಷ್ಟ್ರೀಯ ಮಟ್ಟದ ಕಲಾವಿದರಾಗಿ ಗುರುತಿಸಿಕೊಳ್ಳಲಿ.

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.



    Deputation of the teaching staff : ಬೋಧಕರ ನಿಯೋಜನೆ ರದ್ದತಿಗೆ ವಿದ್ಯಾರ್ಥಿಗಳ ಹಿತವೇ ಕಾರಣ ಎಂದು ಉನ್ನತ ಶಿಕ್ಷಣ ಸಚಿವರ ಪ್ರತಿಪಾದನೆ

    BENGALURU MAY 11

    ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಉಪನ್ಯಾಸಕರ ನಿಯೋಜನೆಯನ್ನು ರದ್ದುಪಡಿಸಿ, ಅವರನ್ನೆಲ್ಲ ಮೂಲಕಾಲೇಜುಗಳಿಗೆ ಕಳಿಸುವಂತೆ ಮರಿತಿಬ್ಬೇಗೌಡರೂ -MLC Maritibbe Gowda- ಸೇರಿದಂತೆ ಎಲ್ಲ ಪಕ್ಷಗಳ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ವಿಧಾನ‌ಮಂಡಲ ಅಧಿವೇಶನದಲ್ಲಿ ಆಗ್ರಹಿಸಿದ್ದರು. ಅವರ ಮನವಿಗೆ ಸ್ಪಂದಿಸಿ ಉನ್ನತ ಶಿಕ್ಷಣ ಇಲಾಖೆಯು ಬೋಧಕರ ನಿಯೋಜನೆಯನ್ನು ರದ್ದುಪಡಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥ ನಾರಾಯಣ Dr C.N.Ashwath Narayan ಸ್ಪಷ್ಟಪಡಿಸಿದ್ದಾರೆ.

    ಬೋಧಕರ ನಿಯೋಜನೆಯನ್ನು ಏಕಾಏಕಿ ಮಾಡಲಾಗಿದೆ ಎಂದು ಎಂಎಲ್ಸಿ ಮರಿತಿಬ್ಬೇಗೌಡ ಅವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು. ಈ ಕುರಿತು ಹಲವು ಸುತ್ತಿನ ಮಾತುಕತೆಗಳ ನಡೆದಿವೆ ಎಂದು ಸಚಿವರು ಪ್ರತಿಕ್ರಿಯಿಸಿದರು. ಮರಿತಿಬ್ಬೇಗೌಡರು ನಡೆಸಿರುವ ಧರಣಿ ಬಗ್ಗೆ ಸೋಮವಾರ ಪ್ರತಿಕ್ರಿಯಿಸಿರುವ ಅವರು ಹೀಗೆಂದಿದ್ದಾರೆ.

    2021ರ ವರ್ಗಾವಣೆ ನಿಯಮಗಳ ಪ್ರಕಾರ, ಬೋಧಕರ ನಿಯೋಜನೆಗೆ ಅವಕಾಶವೇ ಇಲ್ಲ. ಈಗ ಈ ನಿಯಮವನ್ನು ಅನುಸರಿಸಿ, ನಿಯೋಜನೆ ರದ್ದುಪಡಿಸಲಾಗಿದೆ. ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು
    .
    ಕೊರೋನಾ ಹಿನ್ನೆಲೆಯಲ್ಲಿ ಬೋಧಕರ ನಿಯೋಜನೆಯನ್ನು ರದ್ದುಪಡಿಸುವ ಕೆಲಸ ಎರಡು ವರ್ಷ ಮುಂದೂಡಲ್ಪಟ್ಟಿತ್ತು. ಇತ್ತೀಚೆಗೆ ಈ ಪ್ರಕ್ರಿಯೆ ಕೈಗೆತ್ತಿಕೊಂಡಾಗ ಕೆಲವರು ಒಂದು ವಾರ ಮುಂದೂಡುವಂತೆ ಕೇಳಿಕೊಂಡಿದ್ದರು. ಇದಾದ ಮೇಲಷ್ಟೆ ಬೋಧಕರ ನಿಯೋಜನೆಯನ್ನು ರದ್ದು ಪಡಿಸಲಾಗಿದೆ ಎಂದು ಅವರು ವಿವರಿಸಿದರು.

    ಬೋಧಕರನ್ನು ನಿಯೋಜನೆ ಮೇಲೆ ಕಳಿಸಿರುವುದರಿಂದ ಹಲವು ಕಾಲೇಜುಗಳಲ್ಲಿ ಕೇವಲ ಅತಿಥಿ ಉಪನ್ಯಾಸಕರ ಮೇಲೆಯೇ ಅವಲಂಬನೆ ಹೆಚ್ಚಾಗಿತ್ತು. ಆದ್ದರಿಂದ ಇವರನ್ನೆಲ್ಲ ಮೂಲಸಂಸ್ಥೆಗೆ ಕಳಿಸಬೇಕೆಂದು ಕಾಲೇಜು ಅಭಿವೃದ್ಧಿ ಮಂಡಲಿಯ ಮುಖ್ಯಸ್ಥರೂ ಆಗಿರುವ ಶಾಸಕರು ಆಗ್ರಹಿಸಿದ್ದರು. ಆದರೆ ಈಗ ಅದನ್ನು ಮರೆತು, ಮರಿತಿಬ್ಬೇಗೌಡರು ನನ್ನ ಕಚೇರಿಯ ಮುಂದೆ ಧರಣಿ ಕೂತಿರುವುದು ಸೋಜಿಗದ ಸಂಗತಿಯಾಗಿದೆ ಎಂದು ಅವರು ಪ್ರತಿಪಾದಿಸಿದರು.

    ಪ್ರಸ್ತುತ, ಕಾಲೇಜು ಶಿಕ್ಷಣ ಇಲಾಖೆಯಲ್ಲಿ 700ಕ್ಕೂ ಹೆಚ್ಚು ಬೋಧಕರು ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಲ್ಲಿ,  E  ವಲಯಕ್ಕೆ ಸೇರುವ ಹೋಬಳಿ ಮಟ್ಟದ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ 150ಕ್ಕಿಂತ ಹೆಚ್ಚು ಕಾಯಂ ಬೋಧಕರು ಮೂಲ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸದೇ ಇತರ ಉನ್ನತ ವಲಯದ ಕಾಲೇಜುಗಳಿಗೆ ನಿಯೋಜನೆಗೊಂಡಿದ್ದಾರೆ. ಅದೇ ರೀತಿ D ವಲಯಕ್ಕೆ ಸೇರುವ ತಾಲ್ಲೂಕುಮಟ್ಟದ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಸುಮಾರು 250ಕ್ಕೂ ಹೆಚ್ಚು ಬೋಧಕರು ಮೂಲ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸದೇ ಇತರ ವಲಯದ ಕಾಲೇಜುಗಳಿಗೆ ನಿಯೋಜನೆಗೊಂಡಿರುತ್ತಾರೆ. ಹೀಗಾಗಿ, ಈ ನಿಯೋಜನೆಗಳಿಂದಾಗಿ ಒಟ್ಟು 400ಕ್ಕೂ ಹೆಚ್ಚು ಬೋಧಕರು ಮೂಲ ಕಾಲೇಜುಗಳಲ್ಲಿ ಇಲ್ಲದೇ,  ಹೋಬಳಿ ಮತ್ತು ತಾಲ್ಲೂಕುಮಟ್ಟದ ಕಾಲೇಜುಗಳ ಬಹುತೇಕ ಗ್ರಾಮೀಣ ಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ತೊಂದರೆಯಾಗಿದೆ ಎಂದು ವಿವರಿಸಿದ್ದಾರೆ.

    ನಿಯೋಜನೆ ರದ್ದತಿಗೆ ಮುನ್ನ  ಅತಿಥಿ ಉಪನ್ಯಾಸಕರ ಬಗ್ಗೆಯೂ ಆಲೋಚಿಸಲಾಗಿದೆ. ಅವರ ಕಾರ್ಯಭಾರದಲ್ಲಿ ವ್ಯತ್ಯಾಸವಾದರೆ ಸಮೀಪದಲ್ಲೇ ಇರುವ ಕಾಲೇಜುಗಳಲ್ಲಿ ಕಾರ್ಯಭಾರ ಹೊಂದಿಸಲಾಗುವುದು. ನಿಯೋಜನೆ ರದ್ದತಿ ಆದೇಶವನ್ನು ರಾತ್ರೋರಾತ್ರಿಯೇನೂ ಹೊರಡಿಸಿಲ್ಲ ಎಂದು ಸಚಿವರು ನುಡಿದರು.

    ಮರಿತಿಬ್ಬೇಗೌಡರಿಗೆ ಬೆಂಬಲ ಸೂಚಿಸಲು ಸ್ಥಳಕ್ಜೆ ಬಂದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅವರು ನಿಯೋಜನೆ ವಿಷಯ ಬಿಟ್ಟು ವರ್ಗಾವಣೆ ಬಗ್ಗೆ ಮಾತನಾಡಿದ್ದು ಆಶ್ಚರ್ಯ ಉಂಟು ಮಾಡಿದೆ. ಯಾವ ಕಾರಣಕ್ಕೆ ಗೌಡರು ಧರಣಿ ಕುಳಿತಿದ್ದಾರೆ ಎನ್ನುವುದನ್ನು ತಿಳಿಯದೆ ಟೀಕೆ ಮಾಡುವುದಕ್ಕೇ ಬಂದ ಹಾಗೆ ಇತ್ತು ಎಂದರು.

    LIC IPO: ನೀವು ತಿಳಿದಿರಲೇ ಬೇಕಾದ ಮತ್ತಷ್ಟು ಅಂಶಗಳು

    ಬಹು ನಿರೀಕ್ಷಿತ ಎಲ್ ಐ ಸಿ ಐಪಿಒ ಗೆ ನಿರೀಕ್ಷೆ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾನುವಾರವು ಅರ್ಜಿ ಹಾಕಲು ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ ಐ ಸಿ ಸಂಸ್ಥೆಯು ಸಂಗ್ರಹಿಸಿದ ಪ್ರೀಮಿಯಂ ಹಣವನ್ನು ಹೇಗೆ ವಿನಿಯೋಗಿಸುತ್ತದೆ ಎಂಬುದು ಗಮನಿಸಲೇಬೇಕಾದ ಅಂಶ.

    ಎಲ್‌ ಐ ಸಿ ಆಫ್‌ ಇಂಡಿಯಾವು ತನ್ನ ವೈವಿಧ್ಯಮಯ ಯೋಜನೆಗಳ ಮೂಲಕ ಸಂಗ್ರಹಿಸಿದ ಪ್ರೀಮಿಯಂ ಹಣವನ್ನು ಬಳಸಿಕೊಂಡು ಅದರಿಂದ ಬಂದ ಇಳುವರಿಯನ್ನು ತನ್ನ ಪಾಲಿಸಿದಾರರಿಗೆ ಬೋನಸ್‌ ಮೂಲಕ ವಿತರಿಸುವುದಲ್ಲದೆ, ಪಾಲಿಸಿದಾರರಿಗೆ ಜೀವ ವಿಮೆಯನ್ನು ಒದಗಿಸಿ, ಕ್ಲೇಮ್‌ ಹಣವನ್ನು ವಾರಸುದಾರರಿಗೆ ತಲುಪಿಸುವ ಸಾಮಾಜಿಕ ಚಟುವಟಿಕೆಯನ್ನು ನಿರ್ವಹಿಸುತ್ತಿದೆ. ಜಾಗತೀಕರಣಕ್ಕೂ ಮುಂಚಿನದಿನಗಳಲ್ಲಿ, ಉದ್ಯಮಿಗಳಿಗೆ, ಉದ್ಯಮಗಳಿಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎತ್ತಿಕೊಳ್ಳುವ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯವಿರುವ ಸಂಪನ್ಮೂಲವನ್ನು ಎಲ್‌ ಐ ಸಿ ಆಫ್‌ ಇಂಡಿಯಾ ಒದಗಿಸುತ್ತಿದೆ.

    ಎಲ್‌ ಐ ಸಿಯ ಹೂಡಿಕೆಯು ಯಾವ ರೀತಿ ಹಂಚಲ್ಪಟ್ಟಿದೆ ಎಂಬುದನ್ನು ತಿಳಿಯೋಣ.

    ಶೇ.37.45% ರಷ್ಟು ಹೂಡಿಕೆಯು ಕೇಂದ್ರ ಸರ್ಕಾರದ ಸೆಕ್ಯುರಿಟೀಸ್‌ ಗಳಲ್ಲಿ ವಿನಿಯೋಗಿಸಲ್ಪಟ್ಟರೆ,

    ಶೇ.24.62% ರಷ್ಟು ರಾಜ್ಯ ಸರ್ಕಾರಗಳ ಸೆಕ್ಯುರಿಟೀಸ್‌ ಗಳಲ್ಲಿ ಹೂಡಿಕೆ ಮಾಡಲಾಗಿದೆ.

    ಶೇ.24.78% ರಷ್ಟು ಈಕ್ವಿಟಿ ಷೇರುಗಳಲ್ಲಿ

    ಶೇ.8.06% ರಷ್ಟು ಡಿಬೆಂಚರ್‌ ಗಳು, ಬಾಂಡ್‌ ಗಳು,

    ಶೇ.0.78 ರಷ್ಟು  ಮ್ಯುಚುಯಲ್‌ ಫಂಡ್‌, ಇ ಟಿ ಎಫ್‌ ಗಳಲ್ಲಿದೆ.

    ಈ ಅಂಶಗಳು ಮೇಲ್ನೋಟಕ್ಕೆ  ಪರಿಣಾಮಕಾರಿ ಎನಿಸುವುದಿಲ್ಲ.  ಆದರೆ ಈ ಕೆಳಗಿನ ವಿವರಗಳನ್ನು ನೋಡಿದಾಗ ಓದುಗರ ಅನಿಸಿಕೆ ಖಂಡಿತಾ ಹಿತವಾಗಿರಬಹುದು.

    ಎಲ್‌ ಐ ಸಿಯು ಶೇ.24.78 ರಷ್ಟು ಈಕ್ವಿಟಿಯಲ್ಲಿ ಹೂಡಿಕೆ ಮಾಡಿದೆ ಎಂಬ ಅಂಶವು ಹೆಚ್ಚು ಪರಿಣಾಮಕಾರಿಯಾಗಲು ಕಾರಣ ಈ ಅಂಶದಲ್ಲಿ ಅಡಕವಾಗಿರುವ ಕಂಪನಿಗಳ ಗುಣಮಟ್ಟ, ಗೌರವ, ಪ್ರತಿಷ್ಠೆ, ಸಾಧನೆ, ಕೊಡುಗೆಗಳು ಅಪಾರವಾಗಿದೆ.   ಕೆಲವು ಕಂಪನಿಗಳನ್ನು ಇಲ್ಲಿ ಉದಾಹರಿಸೋಣ.

    ಸಂಖ್ಯೆಕಂಪನಿ                                       ಹೊಂದಿರುವ ಷೇರುಗಳು ಕೋಟಿ  ರೂ.ಗಳಲ್ಲಿಭಾಗಿತ್ವ ಪ್ರಮಾಣ
                1.ಎನ್‌ ಎಂ ಡಿ ಸಿ41.4814.16%    
                2.ಎನ್‌ ಟಿ ಪಿ ಸಿ100.4210.00%
                3.ಕೋಲ್‌ ಇಂಡಿಯಾ    67.80         11.00% 
                4.ಆಯಿಲ್‌ ಇಂಡಿಯಾ12.7011.7%
                5.ಬಿ ಪಿ ಸಿ ಎಲ್‌   7.40  16.19  %
                     ಇಂಡಿಯನ್‌ ಆಯಿಲ್‌74.927.96%
                7.ಹೆಚ್‌ ಪಿ ಸಿ ಎಲ್‌3.402.4%
                 8  ಒ ಎನ್‌ ಜಿ ಸಿ    122.35  9.73%
                 9ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ74.138.4%
               10ಮಾರುತಿ ಸುಜುಕಿ1.61 5.33%
               11ಐ ಸಿ ಐ ಸಿ ಐ ಬ್ಯಾಂಕ್‌44.597.92%
               12 ರಿಲಯನ್ಸ್‌ ಇಂಡಸ್ಟ್ರೀಸ್‌  41.356.31%
               13ಕೋಟಕ್‌ ಮಹೀಂದ್ರ ಬ್ಯಾಂಕ್‌10.49 5.29%
               14ಟಾಟಾ ಸ್ಟೀಲ್‌7.90   6.47% 
               15ಏಶಿಯನ್‌ ಪೇಂಟ್ಸ್‌1.952.04%
               16ಅಲ್ಟ್ರಾಟೆಕ್‌ ಸೀಮೆಂಟ್‌1.27  4.42%
               17ಐ ಟಿ ಸಿ 195.02     15.84%
               18ಮಹೀಂದ್ರ ಅಂಡ್‌ ಮಹೀಂದ್ರ8.55    7.1% 
               19ಬಜಾಜ್‌ ಆಟೋ2.037.03%
               20ಹೆಚ್‌ ಡಿ ಎಫ್‌ ಸಿ 7.334.05% 
               21ಟೈಟಾನ್‌ ಕಂಪನಿ            2.79  3.15%  
              22ಟಿ ಸಿ ಎಸ್‌ 13.513.69% 
               23ಲಾರ್ಸನ್‌ ಅಂಡ್‌ ಟೋಬ್ರೋ16.6912.04%
               24ಕೆನರಾ ಬ್ಯಾಂಕ್‌     16.028.83%
              25ಸನ್‌ ಫಾರ್ಮಸ್ಯುಟಿಕಲ್ ಇಂಡಸ್ಟ್ರೀಸ್‌13.98   5.83%  

    ಈ ಪಟ್ಟಿಯು ಸೀಮಿತವಾಗಿದ್ದು ಇನ್ನೂ ಭಾರಿ ಉದ್ದವಾಗಿದ್ದು ಇವೆಲ್ಲದರ ಒಟ್ಟು ಮಾರ್ಕೆಟ್ ಮೌಲ್ಯವನ್ನು ನೋಡಿದಲ್ಲಿ ಅದು ಕಲ್ಪನಾತೀತ ಮಟ್ಟದ್ದಾಗಿರುತ್ತದೆ. ಇಂತಹ ಪ್ರಮುಖ ಕಂಪನಿಗಳಲ್ಲಿ ಭಾರಿ ಮೊತ್ತವನ್ನು ಹೂಡಿಕೆ ಮಾಡಿ ಆ ಕಂಪನಿಗಳ ಶ್ರೇಯೋಭಿವೃದ್ಧಿಗೆ ಕಾರಣವಾಗಿರುವ ಈ ಸಂಸ್ಠೆಯ ಸಾಮರ್ಥ್ಯವನ್ನರಿಯಬಹುದು. ಇಂತಹ ಬಹುಮುಖ ಹೂಡಿಕೆಯುಳ್ಳ, ಸುಭದ್ರ ಆರ್ಥಿಕತೆ ಹೊಂದಿರುವ ಕಂಪನಿಯನ್ನು ಇತ್ತೀಚಿನ ಖಾಸಗಿ ವಿಮಾ ಕಂಪನಿಗಳಿಗೆ ಹೋಲಿಸಲಾಗದು. ಸಧ್ಯದ ವಾತಾವರಣದಲ್ಲಿ ಇಂತಹ ಸಾಮರ್ಥ್ಯದ ಕಂಪನಿಯ ರೂ.10 ರ ಮುಖಬೆಲೆ ಷೇರು ರೂ.949 ಕ್ಕೆ ವಿತರಣೆ ಮಾಡುತ್ತಿರುವುದು ಉತ್ತಮ ಅವಕಾಶವೇ? ಎಂಬುದನ್ನು ನಿರ್ಧರಿಸಬಹುದು.

    ಇಲ್ಲಿ ಕೆಲವು ಕಂಪನಿಗಳು ವಿತರಿಸುತ್ತಿರುವ ಲಾಭಾಂಶಗಳ ವಿವರಗಳನ್ನು ಪರಿಶೀಲಿಸಬಹುದು.   ಇಂತಹ ಅನೇಕ ಕಂಪನಿಗಳು ವಿತರಿಸಬಹುದಾದ ಲಾಭಾಂಶಗಳ ಪ್ರಮಾಣ ಕೋಟಿಗಟ್ಟಲೆ ಷೇರುಗಳಿಗೆ ಲಭಿಸಬಹುದಾದ  ಹಣದ ಇಳುವರಿ ಕಲ್ಪನಾತೀತವಾಗಿದೆ.   ಈ ಅಂಶಗಳು ಹಿಂದಿನದಾಗಿದ್ದು ಮುಂದೆ ಪೇಟೆಯ ವಾತಾವರಣವನ್ನಾಧರಿಸಿ ಬದಲಾಗಬಹುದು ಎಂಬ ಅಂಶವನ್ನು ಗಮನದಲ್ಲಿರಿಸಬಹುದಾದ ಮುಖ್ಯ ಅಂಶ.

    Name of CompanyDividendsPrevious year Rs.
    BPCL5+5+79.00
    COAL INDIA9+ 5 +16.00
    GAIL4+5+ buyback  5.00 + buyback
    H P C L   22.75
    I O C5 + 4 +12.00
    IRCON ( 2)0.70+0.70  2.15 + 1:1 BONUS
    R V N L1.58  2.72
    IRFC0.77+  1.05
    N M D C (1)9.01 +5.73+ 7.76 + BUY BACK
     N T P C4.00 + 6.15 + BUYBACK
    P  F C2.25+2.50+6.00+10.00
    POWER GRID CORP7 +5.50+ 9.00 + 1: 3 BONUS
    OIL INDIA3.50+5.75+ 5.00
    R E C2.50+6.00 8.71
    SAIL4.00+2.50 2.80
    BALMER LAWRI INVESTMENTS 38.00 (37.50 ಹಿಂದಿನವರ್ಷ)
    SANOFI490.00 CD365.00
    ITC5.25+10.75
    TATA STEEL5125
    CANARA BANK6.50

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    error: Content is protected !!