25.4 C
Karnataka
Wednesday, May 20, 2026
    Home Blog Page 173

    ಅಮ್ಮಾ…ಬೋ..ರು ಎನ್ನುವ ಉದ್ಗಾರದಿಂದ ಮಕ್ಕಳನ್ನು ಹೊರತರುವುದು ಹೇಗೆ?

    ಹಲವರ ಮನವಿ, ಕೆಲವರ ವಿರೋಧಗಳ ನಡುವೆ ಅಂತೂ ಇಂತೂ ಆನ್ ಲೈನ್ ತರಗತಿಗಳು ತಾತ್ಕಾಲಿಕವಾಗಿ ನಿಲ್ಲಿಸಲ್ಪಟ್ಟಿವೆ. ಯಾವುದೇ ವಿಷಯದ ಬಗ್ಗೆ ಪರ ಅಥವಾ ವಿರೋಧವಾಗಿ ಮಾತನಾಡುವುದು ಆ ಕ್ಷಣಕ್ಕೆ ಸುಲಭ ಆದರೆ ಒಂದು ನಿರ್ಧಾರಕ್ಕೆ ಬಂದ ಮೇಲೆ ಅದಕ್ಕೊಂದು ಪರ್ಯಾಯ ಪರಿಹಾರವನ್ನು ನೀಡುವುದು ಬಹಳ ಮುಖ್ಯ. ಸದ್ಯದ ಪರಿಸ್ಥಿತಿಯಲ್ಲಿ 1 ರಿಂದ 5ನೇ ತರಗತಿಯವರೆಗೆ ಆನ್ಲೈನ್ ತರಗತಿಯನ್ನು ನಿಲ್ಲಿಸಿ, 6ರಿಂದ 10ನೇ  ತರಗತಿಯ ಮಕ್ಕಳಿಗೆ ಸೂಕ್ತ ಮಾರ್ಗದರ್ಶಿ ನಿಯಮಗಳ ಪ್ರಕಾರ ಮುಂದುವರಿಸಿ ಎಂದು ಶಿಕ್ಷಣ ಇಲಾಖೆಯ ಅಧಿಕೃತ ಆದೇಶ ಹೊರಬಿದ್ದಿದೆ.

    ಈಗಿರುವುದು ನಿಜವಾದ ಸವಾಲು. ತರಗತಿಗಳೇ ಇಲ್ಲವೆಂದು ಕುಣಿಯುತ್ತಿರುವ ಒಂದರಿಂದ ಐದನೇ ತರಗತಿಯ ಚಿನ್ನಾರಿಗಳು ಹಾಗೂ ಮೂರರಿಂದ ನಾಲ್ಕು ತಾಸುಗಳ ಕಾಲ ಆನ್ ಲೈನ್ ಪಾಠ ಪ್ರವಚನಗಳಲ್ಲಿ ವ್ಯಸ್ತರಾಗುವ ಆರರಿಂದ ಹತ್ತರವರೆಗಿನ ಮಕ್ಕಳು ತಮ್ಮ ಉಳಿದ ಅವಧಿಯನ್ನು ಹೇಗೆ ಕಳೆಯಬೇಕು? ಕೊರೋನಾದ ಕಾಟದಿಂದ ಹೊರಾಂಗಣದ ಆಟಗಳನ್ನಾಡುವಂತಿಲ್ಲ, ಸ್ನೇಹಿತರೊಡನೆ ಬೆರೆಯುವಂತಿಲ್ಲ, ಸಿನೆಮಾ ಥಿಯೇಟರ್ ಗಳಿಲ್ಲ, ಮಾಲ್ ಗಳಿಗೆ  ಹೋಗುವಂತಿಲ್ಲ. ಪೋಷಕರ ಬಾಧ್ಯತೆಗಳು ಹೆಚ್ಚಾಗುವ ಸಂದರ್ಭವಿದು. ಹಾಗೆಯೇ ಮಕ್ಕಳು ಯಾಂತ್ರಿಕ ಓದಿನ ಜೀವನದಿಂದ ಹೊರಬಂದು ತನ್ನ  ಇಷ್ಟದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಸದಾವಕಾಶವೂ ಹೌದು. ಅಮ್ಮಾ ಬೋ……….ರು ಎಂಬ  ಉದ್ಗಾರದಿಂದ ಹೊರಬಂದು ಮಕ್ಕಳು ತಮ್ಮ ಏಕತಾನತೆಯ ದಿನಗಳನ್ನು ಹೇಗೆ ಸುಂದರವಾಗಿಸಿಕೊಳ್ಳಬಹುದು ಎಂದು ಯೋಚಿಸೋಣ. .

    ಯೋಗಾಭ್ಯಾಸ ಮತ್ತು ಧ್ಯಾನ

    ಮಕ್ಕಳ ದಿನಚರಿಯನ್ನು ಸೂರ್ಯನಮಸ್ಕಾರ ಯೋಗಾಭ್ಯಾಸ ಮತ್ತು ಪ್ರಾಣಾಯಾಮಗಳಿಂದ ಪ್ರಾರಂಭಿಸುವಂತೆ ಮನೆಯ ಹಿರಿಯರು ಮಾರ್ಗದರ್ಶನ ನೀಡಬೇಕು.
    ಮಗುವಿನ ವಯಸ್ಸಿಗೆ ಅನುಗುಣವಾಗಿ ಇದನ್ನು ನಿರ್ವಹಿಸುವುದರಿಂದ ಮಗುವಿನಲ್ಲಿ ಏಕಾಗ್ರತೆ, ಬದುಕನ್ನು ಎದುರಿಸುವ ಧೈರ್ಯ ಮತ್ತು ಈಗಿನ ಸಂದರ್ಭದಲ್ಲಿ ಅತೀ ಅವಶ್ಯಕವಾದ ರೋಗನಿರೋಧಕ ಶಕ್ತಿಯೂ ವೃದ್ಧಿಯಾಗುತ್ತದೆ.

    ಒಳಾಂಗಣ, ಜನಪದ ಆಟಗಳು.

    ಚೌಕಾ ಬಾರಾ

    ಮಗು ಮತ್ತು ಮಗುವಿನ ಕ್ರಿಯೇಟಿವಿಟಿಗಳ ನಡುವಿನ ಸೇತುವೆಯೇ ಆಟ. ಒಳಾಂಗಣ ಆಟಗಳಾದ ಚೆಸ್, ಕೇರಂ, ಹಾವು ಏಣಿ ಮುಂತಾದ ಆಟಗಳನ್ನು ಕಲಿಯಲು ಇದು ಸಕಾಲ. ಅಜ್ಜಿ ತಾತಂದಿರು ಎಂದೋ ಆಡಿ ಮರೆತ ಆಟಗಳಾದ ಅಳಿಗುಳಿ ಆಟ, ಕಡ್ಡಿ ಆಟ, ಪಗಡೆ, ಹುಲಿಮನೆ ,ಚೌಕಾಬಾರ ಆಟಗಳಂತಹ ಜನಪದ ಆಟಗಳನ್ನು ತಮ್ಮ ಮೊಮ್ಮಕ್ಕಳಿಗೆ ಕಲಿಸಿ ತಮ್ಮ ಬಾಲ್ಯದ ಸವಿ ನೆನಪುಗಳನ್ನು ಮೆಲುಕು ಹಾಕುವುದರಲ್ಲಿರುವ ಸಂತೋಷ ಬೇರೆಲ್ಲಿ?  ಕೌಟುಂಬಿಕ ಬಾಂಧವ್ಯ ವೃದ್ಧಿಯೊಂದಿಗೆ ಮಕ್ಕಳ ಮನಸ್ಸು ಪ್ರಫುಲ್ಲವಾಗುತ್ತದೆ.


    ಹವ್ಯಾಸಗಳು

    ಒಳ್ಳೆಯ ಹವ್ಯಾಸಗಳು ಮಕ್ಕಳಿಗೆ ತಮ್ಮ ಆಂತರಿಕ ಶಕ್ತಿಯನ್ನು ತಾವೇ  ಆವಿಷ್ಕರಿಸುತ್ತ ಆತ್ಮವಿಶ್ವಾಸವನ್ನು ಉನ್ನತೀಕರಿಸಲು ಎನರ್ಜಿ ಬೂಸ್ಟರ್ ಗಳಂತೆ ಕೆಲಸ ಮಾಡುತ್ತವೆ. ಶಾಲಾದಿನಗಳಲ್ಲಿ ಸಮಯಾಭಾವದಿಂದ ತ್ಯಜಿಸಿದ ಹತ್ತುಹಲವು ಹವ್ಯಾಸಗಳನ್ನು ಮತ್ತೆ ಚಿಗುರೊಡೆಸಲು ಈ ಸಮಯ ಸೂಕ್ತವಾಗಿದೆ. ಸಂಗೀತ, ಚಿತ್ರಕಲೆ ,ಓದು, ಕ್ಲೇ ಮಾಡೆಲ್ ಗಳ ತಯಾರಿಕೆ, ಒರಿಗೆಮಿ, ಸಂಗೀತೋಪಕರಣಗಳ ಕಲಿಕೆ ಹೀಗೆ ಪಟ್ಟಿ ಮುಂದುವರಿಯುತ್ತದೆ. ಆದರೆ ಇವೆಲ್ಲ ಸಾಮಾನ್ಯವಾಗಿ ಎಲ್ಲ ಮಕ್ಕಳಿಗೂ ಇರುವ ಹವ್ಯಾಸಗಳೇ, ವಿಶೇಷ ಕೌಶಲ್ಯಗಳನ್ನು ಬೆಳೆಸಿಕೊಳ್ಳುವತ್ತ ಗಮನ ಹರಿಸಿದರೆ ಕೊರೋನ ಕಾಲದ ಅನುಭವವು ಮುಂದಿನ  ಜೀವನಕ್ಕೆ ಸ್ಫೂರ್ತಿದಾಯಕವಾಗಬಹುದು. ಗಾರ್ಡನಿಂಗ್ ನ ಮೂಲಕ ಪರಿಸರ ಪ್ರೇಮ, ರಾತ್ರಿಯಾಗಸದಲ್ಲಿ ಮಿನುಗುವ ನಕ್ಷತ್ರಗಳ ವೀಕ್ಷಣೆ, ಸಪ್ತರ್ಷಿಮಂಡಲದ ಗುರುತಿಸುವಿಕೆ, ಯು ಟ್ಯೂಬ್ ವಿಡಿಯೋಗಳನ್ನು ನೋಡಿಕೊಂಡು ಮ್ಯಾಜಿಕ್ ಕಲಿಕೆ, ಕ್ವಿಲ್ಲಿಂಗ್, ಚಿಕ್ಕಚಿಕ್ಕ ವೈಜ್ಞಾನಿಕ ಪ್ರಯೋಗಗಳನ್ನು ಮಾಡುವುದು, ಜರ್ಮನ್, ಫ್ರೆಂಚ್, ಸ್ಪಾನಿಷ್ ನಂತಹ ಬೇರೆ ಬೇರೆ ಭಾಷೆಗಳನ್ನು ಕಲಿಯುವುದು, ಪಪೆಟ್ ಗಳನ್ನು ತಯಾರಿಸಿ ಕುಣಿಸುವುದು, ಇವೆಲ್ಲ ಮಕ್ಕಳು ಸಮಯವನ್ನು ರಚನಾತ್ಮಕವಾಗಿ ಕಳೆಯುವಂತೆ  ಮಾಡುತ್ತವೆ.

    ನವನವೀನ ಹವ್ಯಾಸ

    ಮಕ್ಕಳ ಅರಿವಿಗೇ ಇಲ್ಲದ ನವನವೀನ ಹವ್ಯಾಸಗಳಿವೆ. ಫ್ಲವರ್ ಪ್ರೆಸ್ಸಿಂಗ್ (flower pressing) ನಿಂದ ಕಲಾಕೃತಿಗಳನ್ನು ತಯಾರಿಸುವುದು, ಉತ್ತಮ ಸಂದೇಶವಿರುವ      5 – 10 ನಿಮಿಷದ ಕಿರುಚಿತ್ರಗಳನ್ನು ಬರೆದು ನಿರ್ದೇಶಿಸಿ ನಟಿಸಿ ಮೊಬೈಲ್ಗಳ ಮೂಲಕ ಚಿತ್ರೀಕರಣ ಮಾಡುವುದು,  ರೋಬೋಟಿಕ್ಸ್ ಮುಂತಾದ ಸಾಫ್ಟ್ ವೇರ್ ಸ್ಕಿಲ್ ಗಳನ್ನು ಬೆಳೆಸಿಕೊಳ್ಳುವುದು, ಇವೆಲ್ಲ ಮಕ್ಕಳ ಜ್ಞಾನದ ಪರಿಧಿಯನ್ನು ವಿಸ್ತಾರಗೊಳಿಸುತ್ತವೆ.

    ಕಲಿಯುವವನಿಗೆ ಕಲಿಕೆಯ ಮೂಲಗಳು ತಾನೇತಾನಾಗಿ ದೊರೆಯುತ್ತವೆ. 5ನೇ ತರಗತಿಯ ಮಗು ಯು ಟ್ಯೂಬನ್ನು ನೋಡಿ sensor and voice automated sanitiser ನ್ನು ತಯಾರಿಸಬಲ್ಲದಾದರೆ ಮಕ್ಕಳ ಪ್ರತಿಭೆಗೆ ಎಲ್ಲೆಯೇ ಇಲ್ಲ. ಪ್ರೋತ್ಸಾಹಿಸುವವರು ಬೇಕಷ್ಟೆ.

    ಸರ್ಕಾರಿ ಶಾಲೆಗಳ  ಮಕ್ಕಳ ಪಾಡೇನು

    ಮೇಲೆ ತಿಳಿಸಿದ ಹಲವು ಹವ್ಯಾಸಗಳು ಪೋಷಕರ ಸಹಾಯ, ಕೊಂಚ ಹಣ, ಮತ್ತು ಇಂಟರ್ನೆಟ್ ಸೌಲಭ್ಯವನ್ನು ಅವಲಂಬಿಸಿವೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಓದುವ ಬಡ ಮಕ್ಕಳ ಪೋಷಕರಿಗೆ ತುತ್ತಿನ ಚೀಲ ತುಂಬಿಸುವುದೇ ದೊಡ್ಡ ಸವಾಲಾಗಿರುವಾಗ ಹವ್ಯಾಸಗಳಿಗೆಲ್ಲಿ ಮಹತ್ವ? ಹಾಗಾದರೆ ಇಂತಹ ಮಕ್ಕಳು ಶಾಲೆಯಿಲ್ಲದ ಈ ಸಮಯದಲ್ಲಿ ಬೀದಿ ಬೀದಿ ಸುತ್ತ ಬೇಕೇ? ಇಂತಹ ಸಂದರ್ಭಗಳಲ್ಲಿ ಸಮುದಾಯ ಮತ್ತು ಸರ್ಕಾರದ ನಿಜವಾದ ಬಾಧ್ಯತೆಗಳು ಮುಂಚೂಣಿಗೆ ಬರುತ್ತವೆ.

    ಸರಕಾರೇತರ ಸಂಸ್ಥೆಗಳು (NGO) ಸಮಾಜದ ಉದ್ಧಾರದಲ್ಲಿ  ಆಸಕ್ತಿ ಇರುವ ಸಂಘ ಸಂಸ್ಥೆಗಳು ಬಡ ಮಕ್ಕಳನ್ನು ಗುರುತಿಸಿ ಅವರಿಗೆ  playing kits, ಕ್ಲೇ ಮಾಡೆಲ್ ಗಳು,  ಒರಿಗೆಮಿ ಹಾಳೆಗಳು,  ಮಾದರಿಗಳ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು ನೀಡುವ ಜವಾಬ್ದಾರಿಯನ್ನು ತೆಗೆದುಕೊಂಡರೆ, ಆ ಮಕ್ಕಳನ್ನೂ ಮುಖ್ಯವಾಹಿನಿಗೆ ತರಲು ಅನುಕೂಲವಾಗುತ್ತದೆ . ಇದರಿಂದ ಮಕ್ಕಳು ಕೊರೋನಾ ಅವಧಿಯ ನಂತರವೂ ಕಲಿಕೆಯಲ್ಲಿ ಆಸಕ್ತಿಯನ್ನು ಉಳಿಸಿಕೊಳ್ಳುತ್ತಾರೆ.

    ಸರಕಾರವು ಈ ನಿಟ್ಟಿನಲ್ಲಿ ಕಾರ್ಯಯೋಜನೆಯನ್ನು ಹಾಕಿಕೊಂಡು ಕೆಲಸ ಮಾಡಬೇಕಿದೆ. ಸರಕಾರದ “ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ” (Department of Skill Development and Enterpreneurship and Livelihood)   ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ, ಕೌಶಲ್ಯ ಹವ್ಯಾಸಗಳನ್ನು ಉದ್ದೀಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಇದಕ್ಕಿಂತ ಸಕಾಲ ಇನ್ನಿಲ್ಲ. ಇದು ಅವರ ಜವಾಬ್ದಾರಿ ಕೂಡ ಆಗಿದೆ.  ಇಲಾಖೆಯು  ಒದಗಿಸುತ್ತಿರುವ ಕೌಶಲ್ಯ ತರಬೇತಿಯನ್ನು ಮಕ್ಕಳಿಗೂ ವಿಸ್ತರಿಸುವ ಹಾಗೂ ತಲುಪಿಸುವ ಕೆಲಸ ಆಗಬೇಕಿದೆ.  ಈ ಇಲಾಖೆಗಳನ್ನು ಸ್ಥಾಪಿಸಿದ ಉದ್ದೇಶವೇ ಮಗುವಿನ ದೈಹಿಕ ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಭದ್ರ ಅಡಿಪಾಯ ಹಾಕುವುದು . “ಕರ್ನಾಟಕ ಕೌಶಲ್ಯ ಮಿಶನ್”(Kaushalkar.com) ನಲ್ಲಿ ಮಕ್ಕಳಿಗೂ ಅವಕಾಶವನ್ನು ನೀಡಿ ತರಗತಿಗಳು ನಡೆಯದ ಈ ಸಮಯದಲ್ಲಿ ಹವ್ಯಾಸಗಳ ಬೆಳವಣಿಗೆಗೆ ಸಹಾಯ ಹಸ್ತ ಚಾಚಬೇಕಿದೆ.

    ಪುಸ್ತಕದ ಬದನೇಕಾಯಿಯನ್ನು ಬಿಟ್ಟು ಕೌಶಲ್ಯಗಳನ್ನು ರೂಢಿಸಿಕೊಳ್ಳುವ ಸದವಕಾಶ ಮಕ್ಕಳಿಗೆ ತಾನೇ ತಾನಾಗಿ ಒದಗಿ ಬಂದಿದೆ. ಕೊರೋನಾದ ಶಾಪಗ್ರಸ್ತ ಕಾಲವನ್ನು ಜೀವನಾವಶ್ಯಕ ಅನುಭವಗಳಾಗಿ ಪರಿವರ್ತಿಸಿಕೊಳ್ಳುವಲ್ಲಿ ಪೋಷಕರು, ಸಮುದಾಯ ಮತ್ತು ಸರ್ಕಾರ ಎಲ್ಲರೂ ಸೇರಿ ಮಕ್ಕಳಿಗೆ ಮಾರ್ಗದರ್ಶನ ಮಾಡೋಣ. 

    ಚಿತ್ರಗಳು: ಕಿರಣ ಆರ್ ಮತ್ತು PEXELS ,

    ಶಾಂತಿ ಪ್ರಿಯರು ನಾವು, ಕೆಣಕಿದರೆ ಜೋಕೆ

    ಕೌಶಿಕ್ ಗಟ್ಟಿಗಾರು

    ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಗುಡುಗಿದ್ದಾರೆ. ಕಳೆದ ಬಾರಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರು ಪುಲ್ವಾಮಾ ಸಿಆರ್ ಪಿಎಫ್ ಶಿಬಿರದ ಮೇಲೆ ದಾಳಿ ನಡೆಸಿ 40 ಯೋಧರನ್ನು ಕೊಂದಾಗ ಇದೇ ರೀತಿ ಹೇಳಿಕೆ ನೀಡಿದ್ದರು. ಬಳಿಕ ನಡೆದ ಸರ್ಜಿಕಲ್ ಸ್ಟ್ರೈಕ್ ಎಂಬ ವಿನೂತನ ಯಶಸ್ವಿ ಯುದ್ಧ ತಂತ್ರ ಎಲ್ಲೆಡೆ ಗಮನ ಸೆಳೆದಿತ್ತು.

    ಈಗ ಚೀನಾದ ಸರದಿ. ನಮ್ಮ ಯೋಧರ ಬಲಿದಾನ ವ್ಯರ್ಥವಾಗಲಾರದು ಎಂದು ಹೇಳಿದ್ದಾರೆ. ನಾವು ಶಾಂತಿ ಪ್ರಿಯರು. ಕೆಣಕಿದರೆ ಜೋಕೆ ಎಂದು ಚೀನಾಕ್ಕೆ ತಿರುಗೇಟು ಕೊಟ್ಟಿದ್ದಾರೆ. ಆದರೆ ಈ ಬಾರಿ ಒಂದಿಷ್ಟು ಸಂಯಮ ವಹಿಸಿದಂತಿದೆ. ಸರ್ಜಿಕಲ್ ದಾಳಿ ಏಕಾಏಕಿ ತೆಗೆದುಕೊಂಡ ತೀರ್ಮಾನ ಮತ್ತು ಈ ಸಂದರ್ಭದಲ್ಲಿ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಮಾಹಿತಿ ಇತ್ತು ಎಂದು ಹೇಳಲಾಗಿದೆ. ಆದರೆ ಈ ಬಾರಿ, ಶುಕ್ರವಾರ ಸರ್ವ ಪಕ್ಷ ಸಭೆ ಕರೆದು ಚರ್ಚಿಸಿ ಬಳಿಕ ನಿರ್ಧಾರ ತೆಗೆದುಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.

    ಹಾಗೆಂದು ಇದರಿಂದಲೇ ಪ್ರಧಾನಿ ಮೋದಿ ಎದೆಗುಂದಿದ್ದಾರೆ ಎಂದು ವಿಶ್ಲೇಷಿಸಲು ಸಾಧ್ಯವಿಲ್ಲ. ಪಾಕ್ ಮತ್ತು ಚೀನಾ ನಡುವೆ ಇರುವ ಅಗಾಧ ವ್ಯತ್ಯಾಸವೇ ಇದಕ್ಕೆ ಕಾರಣ. ಹೀಗಾಗಿಯೇ ಎರಡು ಬಲಾಢ್ಯ ರಾಷ್ಟ್ರಗಳ ನಡುವಿನ ಸಂಘರ್ಷ ಇನ್ನಷ್ಟು ತೀವ್ರಗೊಳ್ಳಬಾರದು ಎಂಬ ಉದ್ದೇಶದಿಂದಲೇ ವಿಶ್ವಸಂಸ್ಥೆ ಮತ್ತು ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ತಕ್ಷಣವೇ ಮಧ್ಯಪ್ರವೇಶಿಸಿ ಸಂಧಾನದ ಮೂಲಕ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳುವಂತೆ ಒಕ್ಕೊರಲಿನಿಂದ ಆಗ್ರಹ ಮಾಡಿವೆ ಎಂಬುದು ಇಲ್ಲಿ ಉಲ್ಲೇಖನೀಯ.

    ಚೀನಾದ ತಂತ್ರ

    ಇಲ್ಲಿ ಚೀನಾ ಸೇನಾ ಪಡೆ ನಡೆಸಿದ ಯುದ್ಧ ತಂತ್ರದ ಬಗ್ಗೆ ಗಮನ ನೀಡಲೇಬೇಕಾಗುತ್ತದೆ. ಬಂದೂಕು ಬಳಕೆಯಾಗಿಲ್ಲ. ಆ ಮೂಲಕ ಇದು ಯುದ್ಧವಲ್ಲ ಎಂದು ಜಗತ್ತಿಗೆ ಹೇಳುವ ತಂತ್ರವನ್ನು ಚೀನಾ ಬಳಸಿದೆ. ಕಬ್ಬಿಣದ ರಾಡ್, ದೊಣ್ಣೆಗಳಿಂದ ಭಾರತದ ಯೋಧರ ಮೇಲೆ ಚೀನಾ ಮುಗಿಬಿದ್ದಿದೆ. ನಮ್ಮವರೇನೂ ಹಿಂದೆ ಬಿದ್ದಿಲ್ಲ. ಗರಿಷ್ಠ ಹಾನಿಯನ್ನೇ ಮಾಡಿದ್ದಾರೆ. ಮೂಲಗಳ ಪ್ರಕಾರ 35ಕ್ಕೂ ಹೆಚ್ಚು ಚೀನಾ ಯೋಧರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದ್ದು, ಈ ಸಂಖ್ಯೆ ಹೆಚ್ಚಾದರೂ ಆಶ್ಚರ್ಯವಿಲ್ಲ.

    ರಾಷ್ಟ್ರೀಯತೆ ವಿಷಯ ಬಂದಾಗ ಜನತೆ ಒಟ್ಟಾಗುತ್ತಾರೆ ಎಂಬುದು ಎಲ್ಲರಿಗೂ ತಿಳಿದ ವಿಚಾರ ಇದಕ್ಕೆ ತನ್ನ ವೈಫಲ್ಯ, ಸಫಲತೆಗಳನ್ನು ಒಳಗಡೆಯೇ ಬಚ್ಚಿಟ್ಟುಕೊಂಡಿರುವ ಚೀನಾ ಕೂಡ ಹೊರತಲ್ಲ. ಅದಕ್ಕಾಗಿಯೇ ಒಂದೆಡೆ ಕೊರೊನಾ ವೈರಸ್ ಸಮಸ್ಯೆಯ ಭೀಕರತೆ, ಇನ್ನೊಂದೆಡೆ ಹಾಂಗ್ ಕಾಂಗ್ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ರಹಸ್ಯವಾಗಿ ಸಿದ್ಧಪಡಿಸಿ ಚೀನಾ ಸಂಸತ್ತಿನ ಅನುಮೋದನೆ ಪಡೆದ ರಾಷ್ಟ್ರೀಯ ಭದ್ರತಾ ಕಾನೂನು ಒಂದು ರೀತಿಯಲ್ಲಿ ಚೀನಾದ ಮೇಲೆ ಅಂತಾರಾಷ್ಟ್ರೀಯ ಒತ್ತಡವನ್ನು ಹೆಚ್ಚಿಸಿದೆ. ಈ ಮೂಲಕ ರಾಷ್ಟ್ರೀಯತೆಯ ಭಾವನೆಯನ್ನು ಬಡಿದೆಬ್ಬಿಸಿ ಆ ಮೂಲಕ ತನ್ನ ಮೇಲೆ ವೈಯಕ್ತಿಕವಾಗಿ ಕೇಳಿ ಬಂದಿರುವ ಎಲ್ಲಾ ಆರೋಪ ಮತ್ತು ಅಪಾದನೆಗಳನ್ನು ಹತ್ತಿಕ್ಕಲು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೊಸದಾಗಿ ಹೆಣೆದಿರುವ ಬಲೆಯೇ ಭಾರತ-ಚೀನಾ ನಡುವಿನ ಸಂಘರ್ಷ.

    ಲಡಾಖ್ ನ ಪ್ಯಾಂಗೋಂಗ್ ತ್ಸು ಕಣಿವೆಯಲ್ಲಿ ಅತಿಕ್ರಮಣ ಪ್ರವೇಶ ಮಾಡಿ, ಭಾರತ-ಚೀನಾ ಎರಡೂ ಕಡೆಯಿಂದ ಸೇನಾ ಜಮಾವಣೆ ಆಯಿತು. ಭಾರತದ ಯುದ್ಧ ವಿಮಾನಗಳು ಕೂಡ ಬೆಂಗಳೂರಿನಂತಹ ದೂರದ ಪ್ರದೇಶಗಳಲ್ಲಿ ಕಾರ್ಯಕ್ಷಮತೆಯ ಪರೀಕ್ಷೆ ನಡೆಸಿಯೂ ಆಯಿತು. ಉಭಯ ದೇಶಗಳ ಸೇನಾ ಪ್ರಮುಖರ ನಡುವಿನ ಮಾತುಕತೆಯ ಬಳಿಕ ಪರಿಸ್ಥಿತಿ ಏನೋ ತಿಳಿಯಾಯಿತು ಎನ್ನುವಾಗಲೇ ಬರಸಿಡಿಲಿನಂತೆ ಚೀನಾ ಆಕ್ರಮಣಕಾರಿ ಉನ್ಮಾದದ ನೀತಿಯನ್ನು ಅನುಸರಿಸಿದೆ. ನಮ್ಮ ಕಡೆ 20 ಯೋಧರು ಹುತಾತ್ಮರಾದರೆ, ಅವರ 50ಕ್ಕೂ ಹೆಚ್ಚು ಯೋಧರು ಮೃತ ಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

    ಏನಿದು ವಿವಾದದ ಕೇಂದ್ರ

    ಹಿಂದಿನ ಚೀನಾ ಸಂಘರ್ಷದಿಂದ ಪಾಠ ಕಲಿತಿರುವ ಭಾರತ, ಈ ಆಯಕಟ್ಟಿನ ಪ್ರದೇಶದಲ್ಲಿ ಭವಿಷ್ಯದಲ್ಲಿ ಎದುರಾಗಬಹುದಾದ ಅಪಾಯಗಳನ್ನು ಲಕ್ಷ್ಯದಲ್ಲಿರಿಸಿಕೊಂಡು ಹೆದ್ದಾರಿಯನ್ನು ನಿರ್ಮಿಸುತ್ತಿದೆ. ಬಹುತೇಕ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿಯೂ ಇದೆ. ಧರ್ಬುಲ್-ಸಯೋಕ್- ಡಿಬಿಒ ಅಂದರೆ ದೌಲತ್ ಬೆಗ್ ಓಲ್ಡಿ ರಸ್ತೆಯೂ ಇವುಗಳ ಪೈಕಿ ಒಂದು. ವಿಶ್ವದ ಅತಿ ಎತ್ತರದ ಅಂದರೆ ಸುಮಾರು 16,600 ಅಡಿ ಎತ್ತರದಲ್ಲಿರುವ ಸೇನಾ ವಿಮಾನ ನಿಲ್ದಾಣ (ಯುದ್ಧ ವಿಮಾನ ಇಳಿಯುವ ಮತ್ತು ಟೇಕಾಫ್ ಮಾಡುವ) ಇದಾಗಿದೆ.

    ಗಡಿ ಭಾಗದ ಅಕಾಯ್ ಚೀನಾದಿಂದ ಕೇವಲ 9 ಕಿ.ಮೀ. ವ್ಯಾಪ್ತಿಯಲ್ಲಿ ಇದು ಇದೆ. ಲೇಹ್ ಅನ್ನು ಅತಿ ಇಳಿದಾದ ಪ್ರದೇಶದಲ್ಲಿ ಮೂಲಕ ಗಡಿ ನಿಯಂತ್ರಣ ರೇಖೆಗೆ ಸೇರಿಸುವ ರಸ್ತೆ ಇದಾಗಿದೆ ಎಂಬುದು ಇಲ್ಲಿ ಗಮನಾರ್ಹ. ಇದಕ್ಕೆ ಉಪ ರಸ್ತೆಗಳನ್ನು ಕೂಡ ನಿರ್ಮಿಸಲಾಗುತ್ತಿದ್ದು, ಇದರ ಪೈಕಿ ಗಾಲ್ವಾನ್ ನದಿಗೆ ಸೇತುವೆ ನಿರ್ಮಿಸುವ ಯೋಜನೆಯೂ ಜಾರಿಯಲ್ಲಿದೆ. ಈ ರಸ್ತೆಯು ಪೂರ್ಣಗೊಂಡರೆ ಆಗ ಚೀನಾದ ಆಕಾಯ್ ಚೀನಾ (ಪದೇ ಪದೇ ಚೀನಾ ಎತ್ತುತ್ತಿರುವ ಪ್ರಶ್ನೆ)ದ ಮೂಲಕ ಅಲ್ಲಿನ ಕ್ಸಿನಿಯಾಂಗ್-ಟಿಬೆಟ್ ಸಂಪರ್ಕ ರಸ್ತೆಯ ಮೂಲಕ ಚೀನಾ ಸೇನೆಯ ಚಲನವಲನಗಳ ಮೇಲೆ ಭಾರತಕ್ಕೆ ಹದ್ದಿನಕಣ್ಣು ಇಡಲು ಸಾಧ್ಯವಾಗುತ್ತದೆ. ಇನ್ನು ಇದರ ಮೂಲಕವೇ ಚೀನಾ-ಪಾಕ್ ಗಡಿ ಭಾಗದ ಕಾರಕೋರಂ ಕಣಿವೆ ಹೆದ್ದಾರಿಯ ಮೇಲೆಯೂ ಭಾರತ ನಿಗಾ ಇಡಲು ಸಾಧ್ಯವಾಗುತ್ತದೆ.

    ಭಾರತದ ಅವಿಭಾಜ್ಯ ಅಂಗ

    1962ರ ಯುದ್ಧದಲ್ಲಿ ಭಾರತ ಸೋಲು ಕಂಡಿತು. ಈ ಸಂದರ್ಭದಲ್ಲಿ ಚೀನಾ ಲಡಾಕ್ ನ ಪೂರ್ವ ಭಾಗದ 90 ಸಾವಿರ ಚದರ ಕಿ.ಮೀ. ಮತ್ತು ಪಶ್ಚಿಮ ಭಾಗದ 38 ಸಾವಿರ ಚದರ ಕಿ.ಮೀ. ಭಾಗವನ್ನು ಆಕ್ರಮಿಸಿಕೊಂಡಿತು. ಆ ಬಳಿಕ ಚೀನಾ ದೇಶವು ತಾನು ಸ್ವಾಧೀನಕ್ಕೆ ತೆಗೆದುಕೊಂಡಿರುವ ಪ್ರದೇಶವನ್ನು ಹೊರತು ಪಡಿಸಿದ ಭಾರತದ ಗಡಿ ಭಾಗವೇ ವಾಸ್ತವ ನಿಯಂತ್ರಣ ರೇಖೆ (ಎಲ್ ಎಸಿ). ಎಲ್ ಎಸಿಯ ಇಕ್ಕಡೆಗಳಲ್ಲಿ ಒಂದೆಡೆ ಭಾರತ, ಇನ್ನೊಂದೆಡೆ ಚೀನಾ ಸೇನಾ ಜಮಾವಣೆ ಅದಕ್ಕೆ ಬೇಕಾದ ಮೂಲ ಸೌಕರ್ಯ (ಬಂಕರ್ ಗಳು)ಗಳನ್ನು ನಿರ್ಮಿಸುತ್ತಲೇ ಬಂದಿದೆ. ಇಲ್ಲಿ ದಿನಂಪ್ರತಿ ಉಭಯ ಸೇನೆಗಳ ಗಸ್ತು ನಡೆಯುತ್ತಲೇ ಇದೆ.

    ಭಾರತ-ಚೀನಾ ಗಡಿ ಭಾಗದಲ್ಲಿರುವ ಗಾಲ್ವಾನ್ ಭಾರತದ ಅವಿಭಾಜ್ಯ ಅಂಗ. ಇದು ನಮ್ಮ ಗಡಿಯಿಂದ ಏಳು ಕಿ.ಮೀ. ಒಳಗಡೆಯಿದೆ. ಇದುವರೆಗೆ ಗಾಲ್ವಾನ್ ಬಗ್ಗೆ ತಕರಾರು ಎತ್ತದ ಚೀನಾ ಈಗ ಹೆದ್ದಾರಿ ಕಾಮಗಾರಿ ವೇಗ ಪಡೆದುಕೊಳ್ಳುತ್ತಿರುವಂತೆಯೇ ತನ್ನ ಷಡ್ಯಂತ್ರ ಆರಂಭಿಸಿದೆ.

    ರಾಜಕೀಯ ಕಾರಣ

    ಈಗ ಚೀನಾದಲ್ಲಿ ನಾಯಕತ್ವದ ಬದಲಾವಣೆಯ ಮಾತು ಪ್ರಬಲವಾಗುತ್ತಿದೆ. ರಾಜಕೀಯ ನಾಯಕರು ಸಾರ್ವಜನಿಕ ಆರೋಗ್ಯದ ಜತೆ ಆಟವಾಡುತ್ತಿದ್ದಾರೆ. ಯುವ ಜನಾಂಗಕ್ಕೆ ಅಲ್ಲಿ ರಾಜಕೀಯ ಪ್ರವೇಶಕ್ಕೆ ಅವಕಾಶವೇ ಇಲ್ಲ. ಅಲ್ಲಿಯೂ ಜನರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇದ್ದ ನಿರ್ಬಂಧಗಳನ್ನು ಜನರು ಧಿಕ್ಕರಿಸಲು ಆರಂಭಿಸಿದ್ದಾರೆ. ಹೀಗಾಗಿ ಏನಾದರೂ ಮಾಡಿ ನಾಗರಿಕರ ಗಮನವನ್ನು ಬೇರೆಡೆಗೆ ಸೆಳೆಯುವ ಯತ್ನ ಆಗಲೇಬೇಕಾಗಿದೆ. ಜನರು ನೈಜ ವಿಷಯದ ನಿರೀಕ್ಷೆಯಲ್ಲಿದ್ದಾರೆ. ಅದಕ್ಕಾಗಿ ಮಾಧ್ಯಮಗಳ ಮೇಲೆ ಒತ್ತಡ ಹೆಚ್ಚುತ್ತಲೇ ಇದೆ. ಸರಕಾರಿ ಪ್ರಾಯೋಜಿತ ಸುದ್ದಿಗಳ ಬದಲು ಗ್ರೌಂಡ್ ರಿಯಾಲಿಟಿ ಅಂದರೆ ವಾಸ್ತವಾಂಶಗಳನ್ನು ಹೇಳಿ ಎಂಬ ಕೂಗು ಹೆಚ್ಚು ಹೆಚ್ಚು ಕೇಳಿ ಬರುತ್ತಿದೆ.

    ಇದರ ಜತೆಗೆ ನಾನಾ ಕಾರಣಗಳು ಕೂಡ ಚೀನಾದ ನಡೆಯ ಹಿಂದಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಮೊದಲನೇದಾಗಿ ಕೊರೊನಾ ವೈರಸ್ ಹರಡುವಿಕೆಯ ಮೂಲದ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಾ ದೊಡ್ಡ ಮಟ್ಟದ ಸಮಸ್ಯೆಯನ್ನು ಎದುರಿಸುತ್ತಿದೆ. ತಾನೂ ಅಣ್ವಸ್ತ್ರ ಶಕ್ತ, ಅತ್ತ ಭಾರತವೂ ಅಣ್ವಸ್ತ್ರ ಶಕ್ತವಾಗಿರುವುದರಿಂದ ಈ ಸಂದರ್ಭದಲ್ಲಿ ವಿಶ್ವದ ಗಮನವನ್ನು ಬೇರೆಡೆಗೆ ಸೆಳೆಯಲು ಇಂತಹ ತಂತ್ರವನ್ನು ಹೆಣೆಯುವುದರಲ್ಲಿ ಅದು ನರಿ ಬುದ್ಧಿಯನ್ನು ತೋರಿಸುತ್ತಲೇ ಬಂದಿದೆ. ಜತೆಗೆ ಹಾಂಗ್ ಕಾಂಗ್ ಸಮಸ್ಯೆ ಅದಕ್ಕೆ ಮಗ್ಗುಲಿನ ಮುಳ್ಳಾಗಿದೆ. ಚೀನಾದಿಂದ ಹೊರ ಬರುತ್ತಿರುವ ಉದ್ಯಮಗಳಿಗೆ ಭಾರತ ಕೆಂಪುಹಾಸಿನ ಸ್ವಾಗತ ನೀಡುತ್ತಿದೆ. ಇನ್ನು ಸ್ವತಃ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಕೂಡ ಪ್ರಜೆಗಳ ಅದರಲ್ಲೂ ಮುಖ್ಯವಾಗಿ ಪಕ್ಷದ ಅತ್ಯುನ್ನತ ನೀತಿ ನಿರೂಪಣಾ ಮಂಡಳಿಯಾದ ಸಿಪಿಎಂ ಪಾಲಿಟ್ ಬ್ಯೂರೋದ ವಿಚಾರ-ವಿಮರ್ಶೆಗೆ ಒಳ ಪಡುತ್ತಿದ್ದಾರೆ. ಇವುಗಳ ನಡುವೆ ಗಮನವನ್ನು ಬೇರೆಡೆಗೆ ಸೆಳೆಯಲು ಅದಕ್ಕೆ ಇರುವ ಏಕೈಕ ಮಾರ್ಗವೆಂದರೆ ಭಾರತದ ಜತೆ ಜಗಳ. ಆದರೆ ಆಗಿನ ಭಾರತ, ಈಗಿನ ಭಾರತವಲ್ಲ. ಸೇನೆ, ವಿದೇಶಿ ಬೆಂಬಲ ಸೇರಿದಂತೆ ಸಕಲ ಸಂಪನ್ಮೂಲಗಳಿಂದ ಸಜ್ಜಿತವಾಗಿದೆ. ಹೀಗಾಗಿ ಅಷ್ಟು ಸುಲಭವಾಗಿ ಚೀನಾದ ಹೊಸ ತಂತ್ರ ಯಶಸ್ವಿಯಾಗುವ ಸಾಧ್ಯತೆ ಕಡಿಮೆಯಿದೆ ಎಂದು ಹೇಳಬಹುದಾಗಿದೆ.

    ತಮ್ಮ ಭವಿಷ್ಯಕ್ಕೆ ತಾವೇ ಚಪ್ಪಡಿ ಎಳೆದುಕೊಂಡರೇ ವಿಶ್ವನಾಥ್?


    ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ರಾಜ್ಯ ಕೋರ್ ಕಮಿಟಿಯಂತೆಯೇ ಬಿಜೆಪಿ ವರಿಷ್ಠರೂ ಸಮತೋಲನದ ಹೆಜ್ಜೆ ಇರಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಿಫಾರಸು ಮಾಡಿದ್ದ ಮೂವರ ಪೈಕಿ ಅಡಗೂರು ಎಚ್.ವಿಶ್ವನಾಥ್ ಹೊರತುಪಡಿಸಿ ಎಂ.ಟಿ.ಬಿ.ನಾಗರಾಜ್ ಮತ್ತು ಆರ್.ಶಂಕರ್ ಅವರಿಗೆ ಟಿಕೆಟ್ ನೀಡಲಾಗಿದೆ.

    ಕೋರ್ ಕಮಿಟಿ ಶಿಫಾರಸಿನಂತೆ ಚಿಂಚೋಳಿ ಮಾಜಿ ಶಾಸಕ ಸುನೀಲ್ ವಲ್ಯಾಪುರೆ ಅವರನ್ನು ಕಣಕ್ಕೆ ಇಳಿಸಿದ್ದರೆ, ಸಾಮಾನ್ಯ ಕಾರ್ಯಕರ್ತನ ಕೋಟಾದಲ್ಲಿ ದಕ್ಷಿಣ ಕನ್ನಡದ ಪ್ರತಾಪ್‌ಸಿಂಹ ನಾಯಕ್ ಅವರಿಗೆ ಟಿಕೆಟ್ ನೀಡಲಾಗಿದೆ.

    ಇಲ್ಲಿ ಯಡಿಯೂರಪ್ಪ, ಕೋರ್ ಕಮಿಟಿ, ವರಿಷ್ಠರು ಈ ಮೂವರಲ್ಲಿ ಯಾರಿಗೂ ಅಸಮಾಧಾನವಾಗಿಲ್ಲ, ಯಾರೂ ಸೋತಿಲ್ಲ.
    ನಿಜವಾಗಿ ಸೋತವರು ಎಂದರೆ ವಿಶ್ವನಾಥ್ ಮಾತ್ರ.

    ಒಂದರ್ಥದಲ್ಲಿ ಇಲ್ಲಿಗೆ ವಿಶ್ವನಾಥ್ ಅವರ ರಾಜಕೀಯ ಬದುಕು ಬಹುತೇಕ ಮುಗಿದಂತಾಗಿದೆ.ಹುಣಸೂರು ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಅವರು ದುಡುಕದೇ ಇದ್ದಿದ್ದರೆ ರಾಜಕೀಯ ಪುನರ್ಜನ್ಮ ಪಡೆಯಲು ಅವಕಾಶವಿತ್ತು. ಅಲ್ಲಿ `ಹಳ್ಳಿ ಹಕ್ಕಿ’ಗೆ ಸೋಲು ಖಚಿತ ಎನ್ನುವುದನ್ನು ಗುಪ್ತಚರ ಇಲಾಖೆ ಸ್ಪಷ್ಟವಾಗಿ ತಿಳಿಸಿತ್ತು. ಬಿಜೆಪಿ ಆಂತರಿಕ ವರದಿಯೂ ಅದನ್ನೇ ಹೇಳಿತ್ತು. ಖುದ್ದು ಮುಖ್ಯಮಂತ್ರಿ ಸಹ, `ಅವಸರಪಡಬೇಡಿ. ಸ್ದಲ್ಪ ತಡೆದುಕೊಳ್ಳಿ. ಎಮ್ಮೆಲ್ಸಿ ಮಾಡಿ ಮಂತ್ರಿ ಮಾಡ್ತೀನಿ. ಉಪ ಚುನಾವಣೆಗೆ ಸ್ಪರ್ಧೆ ಬೇಡ’ ಎಂದು ಸಾರಿಸಾರಿ ಹೇಳಿದ್ದರು. ಆದರೂ ವಿಶ್ವನಾಥ್ ಪ್ರತಿಷ್ಠೆಗೆ ಬಿದ್ದು ತಮ್ಮ ಭವಿಷ್ಯಕ್ಕೆ ತಾವೇ ಕಲ್ಲು ಹಾಕಿಕೊಂಡರು.

    ರಾಣೆಬೆನ್ನೂರು ಕ್ಷೇತ್ರದ ಪಕ್ಷೇತರ ಶಾಸಕರಾಗಿದ್ದ ಆರ್.ಶಂಕರ್ ಸಹ ಸೋಲುತ್ತಾರೆಂಬ ವರದಿ ಇತ್ತು. ಹೀಗಾಗಿ ಅವರಿಗೆ ಆಗ ಟಿಕೆಟ್ ನೀಡದೇ, ಕೊಟ್ಟ ಮಾತಿನಂತೆ ವಿಧಾನ ಪರಿಷತ್‌ಗೆ ಟಿಕೆಟ್ ನೀಡಲಾಗಿದೆ. ವಿಶ್ವನಾಥ್ ಸಹ ಉಪ ಚುನಾವಣೆ ವೇಳೆ ದುಡುಕದೇ ಇದ್ದಿದ್ದರೆ ಈಗ ಶಾಸಕರಾಗಿ ಮಂತ್ರಿಯೂ ಆಗಬಹುದಿತ್ತು. ವಿಶ್ವನಾಥ್ ಪರವಾಗಿ ಅವರೊಂದಿಗೆ ರಾಜೀನಾಮೆ ನೀಡಿದ್ದ ಎಲ್ಲರೂ ವಕಾಲತ್ತು ವಹಿಸಿದ್ದರು. ಪಕ್ಷಕ್ಕೆ ಕರೆತಂದ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಸಹ ವಿಧಾನ್ ಪರಿಷತ್‌ಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದರು. ಟಿಕೆಟ್ ನೀಡದಿದ್ದರೆ ವಿಶ್ವನಾಥ್ ಬಾಯಿ ಮುಚ್ಚಿಸುವುದು ಕಷ್ಟ ಎಂಬ ಕಾರಣದಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಲಹೆಯಂತೆ ಕೋರ್ ಕಮಿಟಿ ಸಹ ವಿಶ್ವನಾಥ್ ಹೆಸರನ್ನು ವರಿಷ್ಠರಿಗೆ ರವಾನಿಸಿತ್ತು.

    ಆದರೆ ಬಿಜೆಪಿ ಕೇಂದ್ರ ಚುನಾವಣಾ ಮಂಡಳಿ ವಿಶ್ವನಾಥ್ ಬಗ್ಗೆ ಒಲವು ತೋರಿಸಿಲ್ಲ. ಅದಕ್ಕೆ ಅವರ ಬಾಯಿಬಡುಕತನ, ವಯಸ್ಸು ಮತ್ತು ಅನಾರೋಗ್ಯ ಮೂರೂ ಕಾರಣ ಇರಬಹುದು. ಜತೆಗೆ ಎಂ.ಟಿ.ಬಿ., ಶಂಕರ್, ವಿಶ್ವನಾಥ್ ಮೂವರೂ ಕುರುಬ ಸಮುದಾಯದವರು ಎಂಬ ಕಾರಣವೂ ಇರಬಹುದು. ಸಲಹೆ ಧಿಕ್ಕರಿಸಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ಕಾರಣದಿಂದ ಅಂತಿಮವಾಗಿ ವಿಶ್ವನಾಥ್‌ಗೆ ಟಿಕೆಟ್ ನಿರಾಕರಿಸಲಾಗಿದೆ.

    ಹೊಸಕೋಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಎಂ.ಟಿ.ಬಿ. ನಾಗರಾಜ್ ಸಹ ಸೋತಿಲ್ಲವೆ? ಅವರಿಗೆ ಟಿಕೆಟ್ ನೀಡಿ ವಿಶ್ವನಾಥ್‌ಗೆ ನಿರಾಕರಿಸಿರುವುದು ತಪ್ಪಲ್ಲವೇ ಎಂಬ ಪ್ರಶ್ನೆ ಏಳಬಹುದು. ಇಬ್ಬರ ಪ್ರಕರಣದಲ್ಲಿ ಭಿನ್ನತೆ ಇದೆ. ಎಂ.ಟಿ.ಬಿ. ಗೆಲ್ಲುವ ಸಾಧ್ಯತೆಗಳಿದ್ದವು, ಅವರಿಗೆ ಅಡ್ಡಗಾಲು ಹಾಕಿದ್ದು ಬಿಜೆಪಿ ಸಂಸದರೇ ಆಗಿರುವ ಬಿ.ಎನ್.ಬಚ್ಚೇಗೌಡ ಮತ್ತು ಅವರ ಪುತ್ರ ಶರತ್ ಬಚ್ಚೇಗೌಡ. ಎಂ.ಟಿ.ಬಿ ಸೋಲಿನಲ್ಲಿ ಬಿ.ಎನ್.ಬಚ್ಚೇಗೌಡರ ಕೊಡುಗೆ ದೊಡ್ಡದು. ಅದು ವರಿಷ್ಠರಿಗೂ ಗೊತ್ತು. ಹೀಗಾಗಿಯೇ ಆಗ ಪರೋಕ್ಷವಾಗಿ ಪಕ್ಷದಿಂದಲೇ ಆಗಿರುವ ಅನ್ಯಾಯವನ್ನು ಈಗ ಸರಿಪಡಿಸಿದ್ದಾರೆ.

    ಪಕ್ಷ ಸಂಘಟನೆ, ಸಂಪನ್ಮೂಲದ ವಿಚಾರದಲ್ಲಿ ಸಹ ವಿಶ್ವನಾಥ್, ಎಂ.ಟಿ.ಬಿ. ಅವರನ್ನು ಹೋಲಿಸಲಾಗದು. ಮೈಸೂರು ರಾಜಕಾರಣದ ಒಳಸುಳಿಗಳಿಂದಾಗಿ ಸೋಲು ಖಚಿತವೆಂಬುದು ತಿಳಿದೂ ವಿಶ್ವನಾಥ್ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಕೈ ಸುಟ್ಟುಕೊಂಡಿದ್ದಾರೆ.

    ವಿಶ್ವನಾಥ್ ಹೊರತುಪಡಿಸಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದ ವಿರುದ್ಧ ಬಂಡೆದ್ದು, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಸ್ವಿತ್ವಕ್ಕೆ ಬರಲು ಕಾರಣರಾದ ಬಹುತೇಕ ಎಲ್ಲರಿಗೂ ಈಗ ಸ್ಥಾನಮಾನ ಸಿಕ್ಕಂತಾಗಿದೆ. ಅಲ್ಲಿಗೆ ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಂಡAತಾಗಿದೆ. ಈಗ ಅವರು ನಿರಾಳ. ರಾಜರಾಜೇಶ್ವರಿ ಕ್ಷೇತ್ರದ ಮುನಿರತ್ನ, ಮಸ್ಕಿಯ ಪ್ರತಾಪ್‌ಗೌಡ ಪಾಟೀಲ್ ಪ್ರಕರಣಗಳು ಕೋರ್ಟ್ನಲ್ಲಿ ಇತ್ಯರ್ಥಕ್ಕೆ ಕಾಯುತ್ತಿವೆ.

    ಕಾಂಗ್ರೆಸ್ ಅಚ್ಚರಿಯ ಆಯ್ಕೆ


    ಬಿಜೆಪಿಯಂತೆಯೇ ಕಾಂಗ್ರೆಸ್ ಸಹ ಅಚ್ಚರಿಯ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ನಾಲ್ಕು ಅವಧಿಗೆ ರಾಜ್ಯಸಭೆ ಸದಸ್ಯರಾಗಿದ್ದ ಬಿ.ಕೆ.ಹರಿಪ್ರಸಾದ್ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಮಾಡುತ್ತಿರುವುದು ರಾಜ್ಯ ನಾಯಕರಿಗೆ ಹಲವು ಸಂದೇಶಗಳನ್ನೂ ರವಾನಿಸಿದೆ. ಹರಿಪ್ರಸಾದ್‌ಗೆ ಕೆಲವರ್ಷಗಳಿಂದ ಈಚೆಗೆ ರಾಜ್ಯ ರಾಜಕಾರಣದ ಬಗ್ಗೆ ಆಸಕ್ತಿ ಮೂಡಿರುವುದು ಅದಕ್ಕೆ ಕಾರಣ.

    ವಿಶೇಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಈಗ ಸಮತೋನದ ಹೆಜ್ಜೆ
    ಇರಿಸಬೇಕಿದೆ. ಹೈಕಮಾಂಡ್‌ಗೆ ರಾಜ್ಯದ ವಿದ್ಯಮಾನಗಳ ನಿಖರ ಮಾಹಿತಿ ನೀಡುವ ವಿಶ್ವಾಸಾರ್ಹ ವ್ಯಕ್ತಿಯೊಬ್ಬರು ಬೇಕು ಎಂಬ ಲೆಕ್ಕಾಚಾರವೂ ಇದರ ಹಿಂದೆ ಇರಬಹುದು. ರಾಜ್ಯಸಭೆ ಸದಸ್ಯರಾಗಿದ್ದವರನ್ನು ವಿಧಾನ ಪರಿಷತ್‌ಗೆ ನೇಮಕ ಮಾಡುವುದು ಕಾಂಗ್ರೆಸ್‌ನಲ್ಲಿ ಹೊಸತೇನೂ ಅಲ್ಲ. ಕೇಂದ್ರದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಹಾಯಕ ಸಚಿವರಾಗಿದ್ದ ಎಂ.ವಿ.ರಾಜಶೇಖರನ್ ಅವರನ್ನೂ ಎಮ್ಮೆಲ್ಸಿ ಮಾಡಲಾಗಿತ್ತು. ಇನ್ನು
    ನಜೀರ್ ಅಹಮದ್‌ಗೆ ಟಿಕೆಟ್ ನೀಡುವ ಮೂಲಕ ಮುಸ್ಲಿಂ ಲಾಬಿಗೆ ಕಡಿವಾಣ ಹಾಕುವುದರ ಜತೆಗೆ ಪಕ್ಷ ಅಲ್ಪಸಂಖ್ಯಾತರ ಪರ ಎಂಬ ಸಂದೇಶವನ್ನೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ರವಾನಿಸಿದ್ದಾರೆ.

    ಪಿಒಕೆ : ರಾಜ್‌ನಾಥ್ ಸಿಂಗ್ ಮಾತಿನ ಅಂತರಾರ್ಥವೇನು?

    ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರ ಪಾಕ್ ಆಕ್ರಮಿತ ಕಾಶ್ಮೀರದ ಕುರಿತ ಹೇಳಿಕೆಯೊಂದು ಎಲ್ಲೆಡೆ ಸಂಚಲನ ಮೂಡಿಸಿದೆ. ಕ್ಷಣ ಮಾತ್ರದಲ್ಲಿ ಪ್ರತಿಕ್ರಿಯಿಸಿರುವ ಪಾಕಿಸ್ತಾನ, ಸಚಿವ ಸಿಂಗ್ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದರೆ, ಕಾಶ್ಮೀರದ ಬಹುತೇಕ ಪತ್ರಿಕೆಗಳು ಸಚಿವರಿಗೆ ಶ್ಲಾಘನೆಯ ಸುರಿ ಮಳೆಯನ್ನೇ ಹರಿಸಿದ್ದಾರೆ.

    ಆಗಿದಷ್ಟು ಇಷ್ಟೇ. ಜಮ್ಮು ಜನ ಸಂವಾದ್ ರಾಲಿಯನ್ನು ಉದ್ದೇಶಿಸಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಸಚಿವ ಸಿಂಗ್, ಮೋದಿ ಆಡಳಿತದ ಅವಧಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಅಭೂತಪೂರ್ವ ಅಭಿವೃದ್ಧಿ ಕಾರ್ಯಗಳು ಆಗುತ್ತಿವೆ. ಇದನ್ನು ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಜನತೆಯೂ ವೀಕ್ಷಿಸುತ್ತಿದ್ದು, ಸ್ವಲ್ಪ ಕಾಯಿರಿ. ಮುಂದಿನ ದಿನಗಳಲ್ಲಿ ಅವರೇ ಸ್ವಯಂ ಪ್ರೇರಿತವಾಗಿ ಭಾರತದ ಜತೆ ಪುನರ್ ವಿಲೀನಕ್ಕೆ ಹೋರಾಟ ಮಾಡಲು ಮುಂದಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು.

    ಇಡೀ ವಿಷಯ ನಾವು ಅಂದುಕೊಂಡಷ್ಟು ಸರಳವಲ್ಲ. ಇಂತಹ ಹೇಳಿಕೆ ಇದೇ ಮೊದಲ ಬಾರಿಗೆ ಬಂದಿಲ್ಲ. ಪಾಕ್ ಭಯೋತ್ಪಾದಕರನ್ನು ರವಾನಿಸುವುದನ್ನು ನಿಲ್ಲಿಸದಿದ್ದರೆ ಪೂರ್ವ ಪಾಕಿಸ್ತಾನದ (ಈಗಿನ ಬಾಂಗ್ಲಾದೇಶ) ಗತಿಯೇ ಭವಿಷ್ಯದಲ್ಲಿ ಬರಬಹುದು ಎಂದು ಹೇಳಿದ್ದರು. ಇದರ ಬೆನ್ನಹಿಂದೆಯೇ ಪಾಕ್, ಭಾರತದ ಇಬ್ಬರು ರಾಜತಾಂತ್ರಿಕ ಅಧಿಕಾರಿಗಳನ್ನು ವಶಕ್ಕೆ ಪಡೆದು ಬಳಿಕ, ಅತೀವ ಒತ್ತಡದ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆ ಮಾಡಿದ್ದೂ ಆಯಿತು. ವಾಸ್ತವವಾಗಿ ಅವರಿಬ್ಬರನ್ನು ಪಾಕ್ ಗುಪ್ತಚರ ಸಂಸ್ಥೆ ಐಎಸ್ಐನ ಏಜೆಂಟರು ಬೈಕ್ ನಲ್ಲಿ ಫಾಲೋ ಮಾಡಿದ್ದರು. ಈಗ ಆದ ಚಿಕ್ಕ ಅಪಘಾತವನ್ನೇ ನೆಪವಾಗಿಟ್ಟುಕೊಂಡು ಅವರ ವಿಚಾರಣೆ ನಡೆಸಲಾಯಿತು ಎಂದು ಹೇಳಲಾಗುತ್ತಿದೆ.

    ಇದೇ ಮೊದಲಲ್ಲ

    ಪಾಕ್ ಕುರಿತ ಬಿಜೆಪಿ ಸರಕಾರದ ಕಠಿಣ ನಿಲುವು ಇದೇ ಮೊದಲ ಬಾರಿಗೆ ವ್ಯಕ್ತವಾಗಿಲ್ಲ. ಅಣ್ವಸ್ತ್ರ ಪ್ರಯೋಗವನ್ನು ನಾವೇ ಮೊದಲ ಬಾರಿಗೆ ಮಾಡುವುದಿಲ್ಲ ಎಂದು ಭಾರತದ ನಿಲುವನ್ನು ಮುಂದಿನ ದಿನಗಳಲ್ಲಿ ಪರಿಷ್ಕರಿಸಬೇಕಾದೀತು ಎಂದು ಎಚ್ಚರಿಕೆಯನ್ನೂ ಈ ಹಿಂದೆ ರಾಜ್ ನಾಥ್ ಸಿಂಗ್ ನೀಡಿದ್ದರು. ಇನ್ನು ಪುಲ್ವಾಮಾ ಯೋಧರ ಹತ್ಯೆಗೆ ಪ್ರತಿಕಾರವಾಗಿ ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಅಂತೂ ಎಲ್ಲರಿಗೂ ಗೊತ್ತಿದೆ. ಹೀಗಿರುವಾಗ ರಾಜ್ ನಾಥ್ ಸಿಂಗ್ ಅವರ ಈ ಹೇಳಿಕೆಯನ್ನು ಕೂಡ ಲಘುವಾಗು ಪರಿಗಣಿಸುವುದು ಕಷ್ಟ ಎಂದೇ ಹೇಳಬಹುದು. ಆರ್ಥಿಕವಾಗಿ ಅತೀವ ಸಂಕಷ್ಟದಲ್ಲಿರುವ ಪಾಕಿಸ್ತಾನವಂತೂ ಸದ್ಯ ಪೂರ್ಣ ಪ್ರಮಾಣದ ಒಂದು ದಿನದ ಯುದ್ಧವನ್ನೂ ತಡೆದುಕೊಳ್ಳುವ ಶಕ್ತಿ ಹೊಂದಿಲ್ಲ. ಶೀತಲ ಸಮರವಿಲ್ಲದ ಈ ಕಾಲದಲ್ಲಿ ಅಮೆರಿಕದ ನೆರವು ಕೂಡ ಅದಕ್ಕೆ ದೊರೆಯುವುದಿಲ್ಲ ಎಂಬುದು ಅಷ್ಟೇ ಶತಸ್ಸಿದ್ಧ.

    ಪಿಒಕೆ ಆಸಕ್ತಿದಾಯಕ ವಿಷಯಗಳು

    ಇತಿಹಾಸದ ಪುಟಗಳನ್ನು ತೆರೆಯುತ್ತಾ ಹೋದರೆ ಪಾಕ್ ಆಕ್ರಮಿತ ಕಾಶ್ಮೀರದ ಕುರಿತು ಹಲವಾರು ಆಸಕ್ತಿದಾಯಕ ವಿಷಯಗಳು ತಿಳಿಯುತ್ತವೆ. 1947ರಲ್ಲಿ ಪಾಕಿಸ್ತಾನ ತನ್ನ ಗುಡ್ಡಗಾಡು ಜನರ ಪಡೆಯ ಮೂಲಕ ಪರೋಕ್ಷವಾಗಿ ಸಮರ ಸಾರಿ ಈ ಭಾಗವನ್ನು ಆಕ್ರಮಿಸಿಕೊಂಡಿತು. ಇದು ಎರಡು ಹಂತದ ಆಡಳಿತಾತ್ಮಕ ವ್ಯವಸ್ಥೆಯನ್ನು ಹೊಂದಿದೆ. ಒಂದು ಜಮ್ಮು ಮತ್ತು ಕಾಶ್ಮೀರ ಹಾಗೂ ಇನ್ನೊಂದು ಗಿಲ್ಗಿಟ್-ಬಾಲ್ಟೀಸ್ತಾನ್. ಪಿಒಕೆಯನ್ನು ಪಾಕಿಸ್ತಾನ ಅಜಾದ್ ಕಾಶ್ಮೀರ ಎಂದೇ ಕರೆಯುತ್ತಿದೆ. ಅದಕ್ಕೆ ಪ್ರತ್ಯೇಕವಾಗಿ ಅಧ್ಯಕ್ಷ ಮತ್ತು ಪ್ರಧಾನಮಂತ್ರಿಯಿದ್ದಾರೆ. ಈ ವ್ಯವಸ್ಥೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರೂ, ಪಾಕ್ ಮೂಗಿನ ನೇರದಲ್ಲೇ ಎಲ್ಲವೂ ಅಲ್ಲಿ ನಡೆಯುತ್ತಿವೆ ಎನ್ನುವುದು ಹಗಲಿನಷ್ಟೇ ನಿಚ್ಚಳ.

    ಅಜಾದ್ ಕಾಶ್ಮೀರ (ಗಿಲ್ಗಿಟ್ -ಬಾಲ್ಟಿಸ್ತಾನ್) ಸುಮರು 13,300 ಚದರ ಕಿ.ಮೀ. ವಿಸ್ತಾರವನ್ನು ಹೊಂದಿದೆ. ಜನಸಂಖ್ಯೆ ಸುಮಾರು 52 ಲಕ್ಷ ಎಂದು ತಿಳಿಯುತ್ತದೆ. ಇದರ ಭಾಗಗಳು ಪಾಕಿಸ್ತಾನದ ಪಂಜಾಬ್, ಅಫ್ಘಾನಿಸ್ತಾನದ ವಖ್ಹಾನ್ ಕಾರಿಡಾರ್ ಮತ್ತು ಚೀನಾದ ಕ್ಸಿನ್ ಜಿಯಾಂಗ್ ಪ್ರಾಂತ್ಯದ ಜತೆಗೆ ಕೂಡ ಗಡಿಯನ್ನು ಹಂಚಿಕೊಂಡಿದೆ. 10 ಜಿಲ್ಲೆಗಳು, 33 ತಾಲೂಕು, 182 ಫೆಡರಲ್ ಕೌನ್ಸಿಲ್ ಹೊಂದಿರುವ ಇದರ ರಾಜಧಾನಿ ಮುಝಾಫರಾಬಾದ್.

    1963ರಲ್ಲಿ ಹುಂನ್ಝಾ-ಗಿಲ್ಗಿಟ್ ಭಾಗದ ಸಂಕ್ಸಗಂ ಕಣಿವೆ ಪ್ರದೇಶವನ್ನು ಪಾಕಿಸ್ತಾನ ಚೀನಾಕ್ಕೆ ಹಸ್ತಾಂತರಿಸಿದ್ದು, ಈಗ ಇದನ್ನು ಬಿಡುಗಡೆ ಹೊಂದಿದ ಪ್ರದೇಶ ಎಂದು ಘೋಷಿಸಲಾಗಿದೆ.

    ನೆಹರು ಮನಸ್ಸು ಮಾಡಲಿಲ್ಲ

    1947ರ ವಿಭಜನೆಯ ಸಂದರ್ಭದಲ್ಲಿ ಪಶ್ತೂನ್ ಬುಡಕಟ್ಟು ಜನರು ಕಾಶ್ಮೀರ ಸ್ವಾತಂತ್ರ್ಯಕ್ಕಾಗಿ ಮಾಡಿದ ಹೋರಾಟಕ್ಕೆ ತಾವು ಬೆಂಬಲ ನೀಡಿದ್ದೆವು ಎಂದು ಪಾಕಿಸ್ತಾನ ಹೇಳಿಕೊಳ್ಳುತ್ತಿದೆ. ಆದರೆ ಆಗ ಅಲ್ಲಿನ ಮಹಾರಾಜರಾಗಿದ್ದ ರಾಜಾ ಹರಿಸಿಂಗ್ ನೆಹರೂ ಸರಕಾರದ ಜತೆಗೆ ಒಪ್ಪಂದ ಮಾಡಿಕೊಂಡು ರಕ್ಷಣೆ, ಅಂತಾರಾಷ್ಟ್ರೀಯ ವ್ಯವಹಾರ ಮತ್ತು ಸಂವಹನ ಕ್ಷೇತ್ರಗಳಲ್ಲಿ ಮಾತ್ರ ಭಾರತದ ಹಸ್ತಕ್ಷೇಪಕ್ಕೆ ಅವಕಾಶ ಸಿಗುವಂತಾಯಿತು. ಇದನ್ನು ಹೊರತು ಪಡಿಸಿ ಉಳಿದಂತೆ ಅದೊಂದು ಸ್ವಾಯತ್ತ ರಾಜ್ಯ ಅಂದರೆ ಪರೋಕ್ಷವಾಗಿ ದೇಶವಾಗಿಯೇ ಉಳಿಯಿತು.

    ಪಾಕಿಸ್ತಾನದ ಆಕ್ರಮಣದ ಹಿನ್ನೆಲೆಯಲ್ಲಿ ಆಗ ಪ್ರಧಾನಿಯಾಗಿದ್ದ ನೆಹರು ಮನಸ್ಸು ಮಾಡಿದ್ದರೆ ಪಾಕಿಗಳನ್ನು ಹೊಡೆದಟ್ಟಬಹುದಿತ್ತು. ಆದರೆ ನೆಹರು ಈ ವಿಷಯವನ್ನು ವಿಶ್ವಸಂಸ್ಥೆಯ ಬಾಗಿಲಿಗೆ ತಂದು ಬಿಟ್ಟರು. ಆಗಲೋ ಭಾರತ ಯಾವುದೇ ರೀತಿಯ ಒತ್ತಡವನ್ನು ಹಾಕುವ ಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ ಅಮೆರಿಕ (ಶೀತಲ ಸಮರ ಕಾಲ) ಪ್ರೇರಿತ ರಾಜಕೀಯದಿಂದಾಗಿ ಕಾಶ್ಮೀರದಲ್ಲಿ ಜನ ಮತಗಣನೆಗೆ ಅದು ಸೂಚಿಸಿತು. ಇದನ್ನೇ ಇಟ್ಟುಕೊಂಡು ಈಗಲೂ ಪಾಕಿಸ್ತಾನ, ಈ ವಿಷಯವನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಸ್ತಾಪಿಸುತ್ತಲೇ ಬಂದಿದೆ.

    ಭಯೋತ್ಪದಕರ ತಾಣ

    ಅಜಾದ್ ಕಾಶ್ಮೀರವನ್ನು ಪಾಕಿಸ್ತಾನ ಯಾವತ್ತೂ ಭಾರತದ ವಿರುದ್ಧದ ಷಡ್ಯಂತ್ರದ ಅಸ್ತ್ರವಾಗಿಯೇ ಬಳಸಿಕೊಂಡು ಬಂದಿದೆ. ಗಡಿಭಾಗವಾಗಿದ್ದರಿಂದ ಅಲ್ಲಿ ಭಯೋತ್ಪಾದಕರ ನೆಲೆಗಳು, ತರಬೇತಿ ಕೇಂದ್ರಗಳನ್ನು ಕೂಡ ನಿರ್ಮಿಸಿದೆ. ನೇರವಾಗಿ ಅಲ್ಲಿಗೆ ಹೋಗಿ ಭಾರತ ಯುದ್ಧ ಮಾಡಿದರೆ ಆಗ ಅದು ಅಂತಾರಾಷ್ಟ್ರೀಯ ವಿಷಯವಾಗಿ ಪರಿಸ್ಥಿತಿ ವಿಷಮಕ್ಕೆ ಹೋಗಬಹುದು ಎಂಬ ಒಂದೇ ಕಾರಣದಿಂದ ಭಾರತ ಕೂಡ ಸುಮ್ಮನಿರುತ್ತಾ ಬಂದಿದೆ. ಯಾಕೆಂದರೆ ಎರಡೂ ದೇಶಗಳು ಅಣ್ವಸ್ತ್ರ ಸಜ್ಜಿತವಾಗಿವೆ. ಆದರೆ, ಭಾರತಕ್ಕೆ ಇರುವ ಅಂತಾರಾಷ್ಟ್ರೀಯ ಮತ್ತು ಮಾನವೀಯ ಬದ್ಧತೆ ಪಾಕಿಸ್ತಾನಕ್ಕೆ ಇಲ್ಲದಿರುವುದು ಇದಕ್ಕೆ ಕಾರಣ ಎಂದೇ ವಿಶ್ಲೇಷಿಸಲಾಗುತ್ತಿದೆ.

    ‘ನಾವು ಈ ಸಮಾಜದ ವರ, ನಮಗೆ ಕೊರೊನಾ ಶಾಪವಾಗಬಾರದು’

    ಮೂರು ತಿಂಗಳು ಮುಗಿದಿವೆ. ಆದರೂ ಕೋವಿಡ್, ಕೊರೊನಾ, ಲಾಕ್ಡೌನ್, ಸೀಲ್ಡೌನ್ ಎನ್ನುವ ಭೀತಿ ಹುಟ್ಟಿಸುವ ಪದಗಳ ಆಡಂಬರ ನಿಂತಿಲ್ಲ. ಕಣ್ಣಿಗೆ ಕಾಣದ ಒಂದು ಸಣ್ಣ ವೈರಸ್ ತಂದೊಡ್ಡಿದ ತಾಪತ್ರಯ ಅಷ್ಟಿಷ್ಟಲ್ಲ.

    ಯಾರ್ಯಾರಿಗೆ ಎಂಥೆಂತದ್ದೋ ಸಂಕಟ. ಯಾರನ್ನೇ ಮಾತಾಡಿಸಿದರೂ ಕೊರೊನಾ ಕಷ್ಟಗಳ ಉದ್ದುದ್ದ ಸರಣಿ ಬಿಚ್ಚಿಡುವವರೇ. ಅರಮನೆಯ ಅಂಬಾನಿಯಿಂದ ಹಿಡಿದು ಹಾದಿಯಲ್ಲಿ ಹೋಗುವ ಜೋಗಯ್ಯನವರೆಗೆ ಎಲ್ಲರಿಗೂ ಕೊರೊನಾ ಬಾಧೆ ತಟ್ಟದೇ ಬಿಟ್ಟಿಲ್ಲ. ಅಂದಹಾಗೆ, ಜೋಗಯ್ಯ ಎಂದ ತಕ್ಷಣ ನೆನಪಾಗುವ ಜೋಗುತಿಯರ ಬಗ್ಗೆಯೂ ಈ ಘಳಿಗೆ ಒಂದಷ್ಟು ಯೋಚಿಸಲೇಬೇಕಾದ ಸಂಗತಿಗಳಿವೆ.

    ಹೇಮಾ, ಶಿವನ್ಯ

    ಎಲ್ಲರಿಗೂ ತಂತಮ್ಮ ಕಷ್ಟಗಳೇ ಭಾರಿ ದೊಡ್ಡದು ಎನ್ನಿಸಿ ಕೊರಗುವುದುಂಟು.
    ಈ ಸಾಲಿನಲ್ಲಿ ಜೋಗುತಿಯರು ಅಥವಾ ಮಂಗಳಮುಖಿಯರು ಹೀಗೆ ಹಲವು ಹೆಸರುಗಳಲ್ಲಿ ಕರೆಯಲ್ಪಡುವ LGBTQ ಸಮುದಾಯಕ್ಕೆ ಸೇರಿದ ತೃತೀಯ ಲಿಂಗಿಗಳಿದ್ದಾರೆ. ಈಗ ಬಿಸ್ನೆಸ್ ಲಾಸ್ ಆಯಿತು ಎಂದು ಕೊರಗುತ್ತಿಲ್ಲ. ಪೇಮೆಂಟ್ ಕಡಿತವಾಗಿದೆ ಎಂದು ದಿಗಿಲುಬಿದ್ದಿಲ್ಲ. ಕೆಲಸ ಹೋಯಿತಲ್ಲಾ ಎಂದು ಗೋಳಾಡುವುದೂ ಇಲ್ಲ. ಜನ ಸಾಮಾನ್ಯರ ಸಂಕಟಗಳಿಗಿಂತ ಇವರ ಸಂಕಟ ಭಿನ್ನ. ನಮ್ಮ ನಡುವೆ ಇದ್ದೂ ನಮ್ಮಂತೆ ಬದುಕದವರು. ಆದರೆ ಇವರಿಗೂ ಕೊರೊನಾ ಸಂಕಟ ಕಾಡಿರುವುದು ಸತ್ಯ. ಅದು ಯಾವ ರೀತಿಯ ಕೊರೊನಾ ಕಷ್ಟ ? ಇದು ಕುತೂಹಲ….
    ರಸ್ತೆ ಸಿಗ್ನಲ್, ಬಾಜಾರು ಬೀದಿ, ಅಂಗಡಿ ಮುಂಗಟ್ಟು ಮುಂದೆ ಠಳಾರ್ ಎಂದು ಚಪ್ಪಾಳೆ ತಟ್ಟಿ, ಗಟ್ಟಿದನಿಯಲ್ಲಿ ‘ಏ ಕೊಡು’ ಎಂದು ಕೈಚಾಚುವ ಆ ಮಂಗಳಮುಖಿಯರು ಈಗ ಮಾಯವಾದದ್ದಾದರೂ ಎಲ್ಲಿ? ಅವರಿಗೆ ತಟ್ಟಿರುವ ಕೊರೊನಾ ಬಿಸಿಯಾದರೂ ಎಂಥದ್ದು? ಇಂತಹ ಕುತೂಹಲದ ಹಲವು ಪ್ರಶ್ನೆಗಳನ್ನು ಹೊತ್ತು, ಸಾಮಾಜಿಕ ಕಳಕಳಿಯೊಂದಿಗೆ ಕನ್ನಡಪ್ರೆಸ್.ಕಾಂ ಬೆಂಗಳೂರು ನಗರದ ಹಲವು ಬಡಾವಣೆ ಎಡತಾಕಿದಾಗ ಎಲ್ಲಿಯೂ ಅವರ ದರ್ಶನ ಇಲ್ಲ! ನಿತ್ಯ ಕಾಣಿಸುವ ಸಿಗ್ನಲ್ ಬಳಿಯೂ ಅವರು ಗಾಯಬ್. ಕೊರೊನಾ ಭೀತಿಯಿಂದ ಅವರು ನಗರವನ್ನೇ ತೊರೆದು ಓಡಿದರೇ? ಹೀಗೆಂದು ಬಾಣಸವಾಡಿಯ ಸಮಾಜಸೇವಕ ವಿ.ಜಯರಾಮ್ ಅವರನ್ನು ವಿಚಾರಿಸಿದಾಗ “ಅರೇ, ಇಷ್ಟಕ್ಕೆಲ್ಲ ಅವರು ಹೆದರುವುದುಂಟೆ? ಮನೆಮಂದಿಯನ್ನೇ ತೊರೆದು ಬಂದ ಅವರಿಗೆ ಅಸಾಧ್ಯ ಧೈರ್ಯ ಇದೆ. ಅಷ್ಟಕ್ಕೂ ಅವರು ಯಾವ ಸಂಬಂಧ ಅರಸಿ, ಹೋಗಬೇಕಾದರೂ ಎಲ್ಲಿಗೆ ಹೇಳಿ? ಇಲ್ಲೇ ಇದ್ದಾರೆ ಬನ್ನಿ” ಎಂದು ಈ ಲಾಕ್ಡೌನ್ ಪಿರೇಡ್ ನಲ್ಲಿ ಕಷ್ಟಸುಖಗಳಿಗೆ ಆಸರೆ ನೀಡಿ ತಮ್ಮ ಸಂಪರ್ಕದಲ್ಲಿ ಇಟ್ಟುಕೊಂಡಿದ್ದ ಒಂದಷ್ಟು ಮಂಗಳಮುಖಿಯರನ್ನು ಕರೆಸಿದರು.

    ಸೀಮಾ

    ಎಲ್ಲರೂ ಶುಭ್ರ ಉಡುಗೆ ಧರಿಸಿ, ಮಾಸ್ಕ್ ಮರೆಯಲ್ಲೇ ಮುಗುಳ್ನಗೆ ಬೀರುತ್ತ ಆಟೋ ಇಳಿದು ಬಂದು ಎದುರುಬದಿ ಸೀಟುಗಳಲ್ಲಿ ಕುಳಿತರು.
    “ಹೇಳಿ” ಎನ್ನುವಂತೆ ಮುಖ ಎತ್ತಿ ನಮ್ಮತ್ತ ದಿಟ್ಟಿಸಿದರು.
    …ಕೊರೊನಾ ಕಷ್ಟ ಎಂದು ಪ್ರಶ್ನೆ ಎತ್ತುತಿದ್ದಂತೆಯೇ ವಿವರಿಸ ತೊಡಗಿದಳು ಸೀಮಾ.


    “ಎಲ್ಲರಿಗೂ ದೊಡ್ಡವರ ಕಷ್ಟಗಳೇ ದೊಡ್ಡದಾಗಿ ಕಾಣ್ತಾವೆ. ಸಭ್ಯತೆಯ ಚೌಕಟ್ಟು ರೂಪಿಸಿಕೊಂಡ ಸಮಾಜಕ್ಕೆ ನಮ್ಮಂಥವರ ಕಷ್ಟ ಕೇಳುವ ದರ್ದಾದ್ರೂ ಏನಿದೆ ಹೇಳಿ? ನಾವು ದೇವರ ಮಕ್ಕಳು. ಪ್ರಕೃತಿ ಸೃಷ್ಟಿಸಿದ ನಮ್ಮ ದೇಹದ ಭಿನ್ನತೆಯನ್ನು ಇಷ್ಟೆಲ್ಲ ನಾಗರಿಕ ಎಂದು ಹೇಳಿಕೊಳ್ಳುವ ಈ ಸಮಾಜ ಅರ್ಥಮಾಡಿಕೊಳ್ಳುತ್ತಿಲ್ಲ. ಇದು ಅಜ್ಞಾನ. ಈ ಅಜ್ಞಾನದಿಂದಲೇ ನಮ್ಮ ಕಷ್ಟಗಳು ಹೆಚ್ಚಿವೆ. ಕೊರೊನಾ ಕಾಲದಲ್ಲಿ ಈ ಗೋಳು ಹೇಳತೀರದ ಮಟ್ಟ ಮುಟ್ಟಿದೆ” ಎಂದು ನಿಡುಸುಯ್ದು ನಿಂತಳು.

    ಸೂರಿ


    “ಹೇಳಿ… ಎಲ್ಲರಿಗೂ ಇದು ಕಷ್ಟದ ಕಾಲವೇ. ಶ್ರೀಮಂತರು, ಬಡವರು ಎಲ್ಲರನ್ನು ಸಮನಾಗಿ ಬಾಧಿಸಿದೆ” ಎಂದಾಗ, “ಅಲ್ಲ ಸ್ವಾಮಿ, ಶ್ರೀಮಂತರ ಜತೆ ನಮ್ಮನ್ನು ಯಾಕೆ ಹೋಲಿಸಿ ನೋಡ್ತೀರಾ? ನಮ್ ಕಷ್ಟಗಳೇ ಬೇರೆ ಸ್ವರೂಪದವು. ನಾವು ಭಿಕ್ಷೆ ಬೇಡಿ ಹೊಟ್ಟೆ ಬಟ್ಟೆ ನೀಗಿಸಿಕೊಳ್ಳುವವರು. ಕಳೆದ ಮೂರು ತಿಂಗಳಿಂದ ಯಾವೊಬ್ಬ ಮಂಗಳಮುಖಿಯೂ ಒಂದು ನಯಾಪೈಸೆ ದುಡುಮೆ ಮಾಡಿಲ್ಲ.

    ಸಿಂಧು

    ತರಕಾರಿ ಖರೀದಿಸಲೂ ಹಣ ಇಲ್ಲ. ಸರಕಾರ ನೀಡುವ ರೇಷನ್ ಸದ್ಯ ನಮ್ಮ ನಿತ್ಯದ ಗಂಜಿ ಚಿಂತೆ ದೂರ ಮಾಡಿದೆ. ಕೆಲವರಿಗೆ ಮಂಗಳಮುಖಿ ಮಾಸ್ಯಾಸನ ಬರುತ್ತೆ. ಅಂಥವರು ಮನೆಯಲ್ಲೇ ಕುಳಿತು ತುಸು ನೆಮ್ಮದಿಯಿಂದ ಕಾಲದೂಡುತ್ತಿದ್ದಾರೆ. ಆದರೆ, ಈ ದೇಶದಲ್ಲಿ ಸುಮಾರು ಅರ್ಧಕೋಟಿ ಮಂಗಳಮುಖಿಯರು ಇದ್ದಾರೆ, ಅವರೆಲ್ಲರಿಗೂ ಈ ಎಲ್ಲ ಸವಲತ್ತು ಇಲ್ಲ. ನಮ್ಮ ರಾಜ್ಯದಲ್ಲೇ ಮುಕ್ಕಾಲು ಪಾಲು ಮಂಗಳಮುಖಿಯರಿಗೆ ರೇಷನ್ ಕಾರ್ಡು, ವೋಟರ್ ಕಾರ್ಡು ಯಾವುದೂ ಇಲ್ಲ. ಅಂಥವರಿಗೆ ಈ ಲಾಕ್ಡೌನ್ ಸಮಯ ಯಮಯಾತನೆಯೇ ಸರಿ. ಕೆಲವರು ದಾನಿಗಳು ನೀಡಿದ ರೇಷನ್ ಕಿಟ್ ಪಡೆದು ಈವರೆಗೆ ಕಾಲದೂಡಿದ್ದಾರೆ. ಇನ್ನು ಮುಂದೇನು ಎನ್ನುವುದೇ ಅರ್ಥವಾಗದ ಸಂದಿಗ್ದ” ಎಂದು ಗೋಡೆ ಮೇಲಿನ ಪಟಗಳನ್ನು ದಿಟ್ಟಿಸಿದರು ಸೀಮಾ. ಅವರ ಮಗ್ಗುಲಲ್ಲಿದ್ದ ಹೇಮಾಳದ್ದೂ ಭಿನ್ನ ಅಭಿಪ್ರಾಯವೇನು ಇರಲಿಲ್ಲ.

    ಅವರ ಸುಖದುಃಖದ ಅನುಭವ ಅವರದ್ದೇ ಬಾಯಲ್ಲಿ ಕೇಳಿ ನೋಡಿ


    ಕಾರ್ಮಿಕರ ಸಂಕಷ್ಟಗಳಿಗೆ ಕಣ್ಣೀರು ಹಾಕುವವರು ನಮ್ಮತ್ತಲೂ ಒಮ್ಮೆ ಗಮನಹರಿಸಲಿ. ನಾವು ದುಡಿಯಬಲ್ಲೆವು. ಆದರೆ, ನಮ್ಮ ಶಕ್ತಿಯ ಬಗ್ಗೆ ಮಾಲೀಕರಿಗೆ ಅಪನಂಬಿಕೆ. ಬೀದಿಗಳು ಬಂದ್ ಆಗಿ, ಬಿಸ್ನೆಸ್ಸೂ ಡಲ್ ಆಗಿ ಕಂಗೆಟ್ಟಿರುವ ಈ ಘಳಿಗೆ ನಾವು ಯಾರ ಮುಂದೆ ಭಿಕ್ಷಾಂದೇಹಿ ಎಂದು ಕೈಚಾಚುವುದು ಹೇಳಿ. ಇಂತಹ ಬಿಕ್ಕಟ್ಟಿನ ಸಮಯ ಸರಕಾರಗಳೇ ನಮ್ಮನ್ನು ಪೊರೆಯಬೇಕು. ನಾವು ಈ ಸಮಾಜದ ವರ, ಶಾಪ ಅಲ್ಲ. ಕೊರೊನಾ ನಮಗೆ ಶಾಪ ಆಗಬಾರದು. ಉಳ್ಳವರು ಇದಕ್ಕೆ ಆಸ್ಪದ ನೀಡಬಾರದು” ಎಂದು ಅವರು ಕೈಮುಗಿದರು.

    (ವಿಡಿಯೋ :ಜಯರಾಮ್ , ಚಿತ್ರಗಳು :studeo 23 )

    ಕೋವಿಡ್-19; ಗರಬಡಿದ ನೇಯ್ಗೆ ಉದ್ಯಮ, ಸಂಕಷ್ಟದಲ್ಲಿ ನೇಕಾರ

    “ಅಮಾನಿ*ಯಿಂದ ಆಗಲೇ ಕಡಿಮೆ ಸೀರೆ ನೇಯುತ್ತಿದ್ದೆವು. ಲಾಕ್ ಡೌನ್ ಕೆಲಸ ಪೂರ್ತಿ ನಿಲ್ಲಿಸಿಯೇ ಬಿಟ್ಟಿತು” ಎನ್ನುವುದು ದೊಡ್ಡಬಳ್ಳಾಪುರದ ನೇಕಾರ ಡಿ.ಸಿ.ಬಾಬು ಅಳಲು. ವಿದ್ಯೆಗೆ ತಿಲಾಂಜಲಿ ನೀಡಿ ವಂಶ ಪಾರಂಪರ್ಯವಾಗಿ ಬಂದಿರುವ ನೇಯ್ಗೆ ಉದ್ಯಮವನ್ನು ಆರಿಸಿಕೊಂಡಾಗ ನೇಯ್ಗೆ ಉದ್ಯಮದಲ್ಲಿ ಬೆಳೆಯುವ ಹುರುಪು, ಉತ್ಸಾಹವಿತ್ತು. ಅದಕ್ಕೆ ತಕ್ಕಂತೆ ಅವಕಾಶಗಳೂ ಇದ್ದವು. ಆದರೆ ಕಳೆದ ಒಂದು ದಶಕದಲ್ಲಿ ಆಗುತ್ತಿರುವ ಆರ್ಥಿಕತೆಯ ತೀವ್ರ ಬದಲಾವಣೆಗಳು ಬದುಕನ್ನು ದುಸ್ತರಗೊಳಿಸುತ್ತಿರುವಾಗ ಲಾಕ್ ಡೌನ್ ಎನ್ನುವುದು ಮತ್ತೊಂದು ಮಾರಣಾಂತಿಕ ಪೆಟ್ಟು.

    ಕೋವಿಡ್-19 ಸಾಂಕ್ರಾಮಿಕ ದೇಶವನ್ನಷ್ಟೇ ಅಲ್ಲ, ವಿಶ್ವವನ್ನೂ ಲಾಕ್ ಡೌನ್ ಗೆ ಕೊಂಡೊಯ್ಯಿತು. ಲಾಕ್ ಡೌನ್ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿತು.

    ಪರಿಹಾರ ಎಂಬ ಮರೀಚಿಕೆ

    ಈಗಾಗಲೇ ಸಂಕಷ್ಟದಲ್ಲಿದ್ದ ನೇಕಾರರಿಗೆ ರಾಜ್ಯ ಸರ್ಕಾರ ತಲಾ 2000ರೂ. ಪರಿಹಾರ ನೀಡುವ ಭರವಸೆಯನ್ನು ಮೇ 20, 2020ರಂದು ನೀಡಿತು. ಆದರೆ ಒಂದು ತಿಂಗಳಾದರೂ ಇನ್ನೂ ಅದಕ್ಕೆ ಸಂಬಂಧಿಸಿದ ಅರ್ಜಿ ಮಾದರಿ ವಿದ್ಯುಚ್ಛಾಲಿತ ಮಗ್ಗಗಳ ನೇಕಾರರಿಗೆ ದೊರೆತಿಲ್ಲ. ಕೈಮಗ್ಗ ನೇಕಾರರು ಈ ಪರಿಹಾರಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮಾತ್ರ ಪ್ರಾರಂಭವಾಗಿದೆ ಎಂದು ದೊಡ್ಡಬಳ್ಳಾಪುರ ನೇಕಾರ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಜಿ.ಹೇಮಂತರಾಜ್ ಹೇಳುತ್ತಾರೆ.

    ರಾಜ್ಯದಲ್ಲಿ 1,25,000 ನೇಕಾರರಿಗೆ ಮಾತ್ರ ಪರಿಹಾರ ಘೋಷಿಸಲಾಗಿದೆ. ಆದರೆ ವಾಸ್ತವವಾಗಿ ವಿದ್ಯುಚ್ಛಾಲಿತ ಮಗ್ಗಗಳೇ ಸುಮಾರು 1,80,000ಕ್ಕೂ ಹೆಚ್ಚು ಇದ್ದು ಅವುಗಳಿಗೆ ಪೂರಕ ಕೆಲಸಗಳೂ ಸೇರಿ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಆಧಾರಪಟ್ಟಿದ್ದಾರೆ. ಕೈ ಮಗ್ಗಗಳು ಸುಮಾರು 34,000 ಇವೆ ಎಂದು ಅಂದಾಜಿಸಲಾಗಿದೆ. ನೇಯ್ಗೆಯೊಂದಿಗೆ ನೇಯ್ಗೆ ಸಂಬಂಧಿಸಿದ ಬಣ್ಣ ಹಾಕುವುದು, ಅಚ್ಚು ಕೆತ್ತುವುದು, ವಾರ್ಪು ಸುತ್ತುವುದು, ಜಾಕಾರ್ಡ್ ಕಾರ್ಡ್ ಪಂಚಿಂಗ್, ಡಿಸೈನ್ ರೂಪಿಸುವುದು ಇತ್ಯಾದಿ ಅಸಂಖ್ಯವಾದ ಸಂಬಂಧಿಸಿದ ಕೆಲಸಗಳಿವೆ. ಅವುಗಳನ್ನು ನೇಯ್ಗೆ ಎಂದು ಪರಿಗಣಿಸಲಾಗಿಲ್ಲ.

    ಇತರೆ ವೃತ್ತಿಯವರಿಗೆಲ್ಲಾ ಸರ್ಕಾರ ತಲಾ 5000ರೂ. ಪರಿಹಾರ ಘೋಷಿಸಿ ನೇಕಾರರಿಗೆ ಕೇವಲ 2000ರೂ. ಪರಿಹಾರ ನೀಡುವ ಮೂಲಕ ನಿರ್ಲಕ್ಷಿಸಿದೆ ಎನ್ನುವುದು ಅವರ ಆರೋಪ. ಬೆಂಗಳೂರು, ಮೈಸೂರು ಹಾಗೂ ದಕ್ಷಿಣ ಕರ್ನಾಟಕಕ್ಕೆ ಧರ್ಮಾವರಂ, ತೆಲಂಗಾಣ, ತಮಿಳುನಾಡು ಪ್ರಮುಖ ಮಾರುಕಟ್ಟೆಗಳು. ಉತ್ತರ ಕರ್ನಾಟಕದ ನೇಕಾರರಿಗೆ ಮಹಾರಾಷ್ಟ್ರ ಪ್ರಮುಖ ಮಾರುಕಟ್ಟೆ. ಆದರೆ ಪ್ರಸ್ತುತ ಅಲ್ಲಿ ಸಾಂಕ್ರಾಮಿಕ ಭೀತಿಯಿಂದ ವ್ಯಾಪಾರ ವಹಿವಾಟುಗಳು ಹಿನ್ನಡೆ ಕಂಡಿವೆ. ಈ ಕೋವಿಡ್ ಆತಂಕ ದೂರವಾದ ನಂತರ ಮಾತ್ರ ಜನರು ಬಟ್ಟೆ ಕೊಳ್ಳಲು ಬರಬಹುದು. ಅದರ ಲಕ್ಷಣಗಳು ಸದ್ಯಕ್ಕಂತೂ ಕಾಣುತ್ತಿಲ್ಲ ಎನ್ನುವುದು ನೇಕಾರರ ಅಭಿಪ್ರಾಯ.

    ಹೊಸ ತಲೆಮಾರಿಗೆ ನೇಕಾರಿಕೆ ಬೇಡ

    ಈ ಬೆಳವಣಿಗೆಗಳಿಂದ ಕೃಷಿಯಂತೆಯೇ ಹೊಸ ತಲೆಮಾರು ನೇಯ್ಗೆ ಉದ್ಯಮವನ್ನು ಆಯ್ಕೆ ಮಾಡಿಕೊಳ್ಳುತ್ತಿಲ್ಲ. ಸಣ್ಣ ಸಂಬಳವಾದರೂ ವೇತನದ ಕೆಲಸಕ್ಕೆ ಹೋದರೆ ಸಾಕು ಎಂಬ ತೀರ್ಮಾನಕ್ಕೆ ಹೊಸ ತಲೆಮಾರು ಬಂದಿದೆ. ಹೊಸದಾಗಿ ಮಗ್ಗದ ಕಸುಬು ಕಲಿತುಕೊಳ್ಳುವವರ ಸಂಖ್ಯೆ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ರಾಜ್ಯದ ಪ್ರಮುಖ ನೇಯ್ಗೆ ಪ್ರದೇಶಗಳಾದ ನೆಲಮಂಗಲ, ಹೊಸಕೋಟೆ, ಆನೇಕಲ್, ಮೊಳಕಾಲ್ಮೂರು, ಇಳಕಲ್, ಶಹಾಪುರ, ಗದಗ, ಬೆಟಗೇರಿ, ಚಾಮರಾಜನಗರ, ಚಿಂತಾಮಣಿ, ತುಮಕೂರುಗಳಲ್ಲೂ ಈ ಪ್ರವೃತ್ತಿ ಮುಂದುವರಿದಿದೆ. ಕಿರಿಯ ತಲೆಮಾರಿನ ಯುವಕರು ಈ ಸಾಂಪ್ರದಾಯಿಕ ನೇಕಾರಿಕೆಯನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋಗಿ ಲಾಭದ ಸಾಧ್ಯತೆಗಳನ್ನು ಕಂಡುಕೊಳ್ಳುವುದರ ಬದಲು ಅನ್ಯ ಉದ್ಯೋಗಗಳತ್ತ ವಲಸೆ ಹೋಗುತ್ತಿದ್ದಾರೆ.

    ಆಂಧ್ರ ಮಾದರಿ ಇರಲಿ

    ಆಂಧ್ರಪ್ರದೇಶದಲ್ಲಿ ಸಾಕಷ್ಟು ವರ್ಷಗಳ ಹಿಂದೆಯೇ ಜವಳಿ ಇಲಾಖೆ ವತಿಯಿಂದ ನೇಕಾರಿಕೆಯಲ್ಲಿ ತೊಡಗಿರುವವರ ನೋಂದಣಿ ಮಾಡಿಕೊಂಡು ಗುರುತಿನ ಚೀಟಿ ವಿತರಿಸಿದೆ. ಸರ್ಕಾರದ ಯಾವುದೇ ಸೌಲಭ್ಯಗಳನ್ನು ನೀಡುವಾಗ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು. ಇದರಿಂದಾಗಿ ಲಾಕ್‌ಡೌನ್‌ ಜಾರಿ ಸಂದರ್ಭದಲ್ಲಿ ಅಲ್ಲಿನ ಸರ್ಕಾರ ನೇಕಾರಿಕೆಝಢಝಝಯಲ್ಲಿ ತೊಡಗಿಸಿಕೊಂಡಿರುವವರಿಗೆ ಆರ್ಥಿಕ ನೆರವು ಸೇರಿದಂತೆ ಸಾಕಷ್ಟು ಇತರೆ ಸೌಲಭ್ಯಗಳನ್ನು ನೀಡಿದೆ. ಇದೇ ಮಾದರಿಯಲ್ಲಿ ನಮ್ಮಲ್ಲೂ ನೇಕಾರಿಕೆಯಲ್ಲಿ ತೊಡಗಿರುವ ಕಾರ್ಮಿಕರು ಸೇರಿದಂತೆ ಎಲ್ಲರಿಗೂ ಜವಳಿ ಇಲಾಖೆ ವತಿಯಿಂದ ಗುರುತಿನ ಚೀಟಿ ನೀಡುವ ಕೆಲಸ ತುರ್ತಾಗಿ ಆಗಬೇಕು ಎನ್ನುವುದು ನೇಕಾರರ ಆಗ್ರಹ.

    ನೇಕಾರರು ಕಾರ್ಮಿಕರಲ್ಲ

    ವಿದ್ಯುತ್‌  ಚಾಲಿತ ಮಗ್ಗಗಳ ಮುಖ್ಯಜೀವಾಳವೇ ಕಾರ್ಮಿಕರು. ಆದರೆ ಇವರು ಅಸಂಘಟಿತರು. ಬಹುತೇಕರು ತಮ್ಮದೇ ಮಗ್ಗಗಳನ್ನು ಮನೆಗಳಲ್ಲಿ ಹಾಕಿಕೊಂಡು ಗೃಹ ಕೈಗಾರಿಕೆ ನಡೆಸುವವರು. ಹೆಚ್ಚು ಮಗ್ಗಗಳ ಫ್ಯಾಕ್ಟರಿಯಲ್ಲಿ ನೇಯ್ಗೆ ಮಾಡುವವರಿಗೆ ಕಾರ್ಮಿಕ ಕಾನೂನುಗಳ ಅನುಷ್ಠಾನಕ್ಕೂ ಹಲವು ಬಿಕ್ಕಟ್ಟುಗಳಿವೆ. ನೋಂದಣಿ ಇಲ್ಲದ ಕಾರಣಕ್ಕೆ ಕಾರ್ಮಿಕರು ಯಾವುದೇ ಸವಲತ್ತುಗಳು, ಸರ್ಕಾರಿ ಪ್ರಯೋಜನಗಳನ್ನು ಪಡೆಯಲು ಆಗುವುದಿಲ್ಲ. ಇಡೀ ಜೀವನ ಅಸಂಘಟಿತ ಕಾರ್ಮಿಕರಾಗಿಯೇ ಕಳೆಯುತ್ತಿದ್ದಾರೆ. ಕನಿಷ್ಠ ಇಎಸ್ಐನಂತಹ ಸೌಲಭ್ಯಗಳನ್ನು ಪಡೆಯಲೂ ಸಾಧ್ಯವಿಲ್ಲ. ಇದನ್ನು ವ್ಯವಸ್ಥಿತಗೊಳಿಸಲು ಸಾಕಷ್ಟು ಇಚ್ಛಾಶಕ್ತಿ ಬೇಕಾಗುತ್ತದೆ. ನೇಯ್ಗೆ ಉದ್ಯಮದಲ್ಲಿ ಕಾರ್ಮಿಕರ ಹೋರಾಟಗಳು ಮತ್ತು ಅವರ ತ್ಯಾಗಗಳು ಮಾಲೀಕರಿಗೆ ಅನುಕೂಲವಾಗಿ ಅವರ ಹೆಸರಲ್ಲಿ ಮಾಲೀಕರು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಗಳೆ ಹೆಚ್ಚಾಗಿವೆ. ಆದುದರಿಂದ  ಸರ್ಕಾರ ಕೂಡಲೆ ತ್ವರಿತವಾಗಿ ಕಾರ್ಮಿಕರ ಸರ್ವೆ ನಡೆಸಿ ಗುರುತಿನ ಚೀಟಿಯನ್ನು ಕೊಡುವ ಅಗತ್ಯವಿದೆ ಎನ್ನುವುದು ಕಾರ್ಮಿಕ ಪರ ಹೋರಾಟಗಾರ ಎಂ.ಕೃಷ್ಣಮೂರ್ತಿ ಅವರ ಅಭಿಪ್ರಾಯ.

    *ಅಮಾನಿ : ವ್ಯಾಪಾರ ವಹಿವಾಟು ನೀರಸವಾಗಿರುವ ಅವಧಿ

    ಪರಿಷತ್ : ಬಿ ಎಸ್ ವೈ ಆಯ್ಕೆಯನ್ನುಬಿಜೆಪಿ ಹೈ ಕಮಾಂಡ್ ಒಪ್ಪುವುದೆ?

    ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ಜೂನ್ ೨೯ರಂದು ನಡೆಯುವ ಚುನಾವಣೆಗೆ ಬಿಸಿ ಏರುತ್ತಿದೆ. ಇಂದು ಮೂರು ಪಕ್ಷಗಳು ಬಿರುಸಿನ ಸಭೆಗಳನ್ನು ನಡೆಸಿವೆ. ಯಾರಿಗೆ ಟಿಕೆಟ್ ಸಿಗಲಿದೆ ಎಂಬುದು ಇನ್ನೂ ನಿಗೂಢ. ಈ ಹಿನ್ನೆಲೆಯಲ್ಲಿ ಕನ್ನಡಪ್ರೆಸ್.ಕಾಮ್ ನ ಪ್ರಧಾನ ಸೆಂಪಾದಕ ಶ್ರೀವತ್ಸ ನಾಡಿಗ್ ಮತ್ತು ಹಿರಿಯ ರಾಜಕೀಯ ವಿಶ್ಲೇಷಕ ಕೂಡ್ಲಿ ಗುರುರಾಜ ನಡೆಸಿದ ಪಾಡ್ಕಾಸ್ಚ್ ಇದು. ಆಲಿಸಿ ನಿಮ್ಮ ಅಭಿಪ್ರಾಯ ತಿಳಿಸಿ.

    ಲಖನೌ ಬಿರಿಯಾನಿ

    ದೊಗಲೆ ಪೈಜಾಮ. ಅದರ ಮೇಲೊಂದು ನಿಲುವಂಗಿ. ಉದ್ದನೆಯ ಮೂಗು, ಅದರ ಮೇಲೆ ದೊಡ್ಡ ಗಾತ್ರದ ಕನ್ನಡಕ. ಎತ್ತರದ ಆಸಾಮಿ. ನಡೆಯುವಾಗ ಬಾಗುವ ಕಾಲುಗಳು . ಇವರು ಮಿರ್ಜಾ ನವಾಬ್ .  ಈ ವ್ಯಕ್ತಿ ನಿಮಗೆ ಕಾಣ ಸಿಗುವುದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿರುವ ಗುಲೋಬೋ ಸಿತಾಬೋ ಸಿನಿಮಾದಲ್ಲಿ.  ಈ ಸಿನಿಮಾದ ಬಗ್ಗೆ ಹೆಚ್ಚಿನ ಪೂರ್ವ ಮಾಹಿತಿ ಇಲ್ಲದೆ ಸಿನಿಮಾ ನೋಡಲು ಕೂತರೆ ಮಿರ್ಜಾ ಪಾತ್ರಧಾರಿ ಯಾರು ಎಂಬುದು ತಕ್ಷಣಕ್ಕೆ ಗೊತ್ತಾಗುವುದಿಲ್ಲ. ಗೊತ್ತಾದಾಗ  ಅರೆ ಇದು ಅಮಿತಾಭ್ ಬಚ್ಚನ್ ಎಂದು ನಿಮ್ಮ ಬಾಯಿಂದ  ಉದ್ಗಾರ ಬರದಿದ್ದರೆ ಹೇಳಿ.  ಅಮಿತಾಭ್ ಬಚ್ಚನ್ ಮಿರ್ಜಾ ನವಾಬನಾಗಿ ತಮ್ಮ ವೃತ್ತಿ  ಜೀವನದ ಮತ್ತೊಂದು ಹಂತ ಪ್ರವೇಶಿಸಿದ್ದಾರೆ.

    ಈ ಎಪ್ಪತ್ತೇಳರ ಹರಯದಲ್ಲೂ ಬಚ್ಚನ್ ಅವರ ನಟನೋತ್ಸಾಹಕ್ಕೆ ಯಾರಾದರು ಸೈ ಎನ್ನಲೇ ಬೇಕು.  ಇಡೀ ಸಿನಿಮಾವನ್ನು ಆವರಿಸಿರುವುದು ಅವರೇ.  ನಿರ್ದೇಶಕ ಸುಜಿತ್ ಸರ್ಕಾರ್ ತಮ್ಮ ಹಿಂದಿನ ಪೀಕೂವಿನಲ್ಲೂ ಅಮಿತಾಭ್  ಜೊತೆ ಇದೇ ರೀತಿಯ ಪ್ರಯೋಗ ಮಾಡಿದ್ದರು.  ಮಲಬದ್ಧತೆಯಿಂದ ನರಳುವ ವೃದ್ಧನ ಪಾತ್ರದಲ್ಲಿ ಅಮಿತಾಭ್ ಮನಮುಟ್ಟುವಂತೆ ನಟಿಸಿದ್ದರು. ತಾವೊಬ್ಬ ಸೂಪರ್ ಸ್ಚಾರ್ ಎಂಬುದನ್ನು ಮರೆತು ಇಮೇಜಿನ ಹಂಗಿಲ್ಲದೆ ಪಾತ್ರದಲ್ಲಿ ಲೀನವಾಗಿದ್ದರು.

    ಆ ಚಿತ್ರದಲ್ಲೂ  ತಾವು ಕಟ್ಟಿಸಿ ವಾಸಿಸುತ್ತಿದ್ದ ಮನೆಯ ಬಗ್ಗೆಅವರಿಗೆ ಅತೀವ ಪ್ರೀತಿ. ಈ ಸಿನಿಮಾದಲ್ಲೂ   ತಮ್ಮ ಪತ್ನಿ ಬೇಗಂ  ಹೆಸರಲ್ಲಿರವ  ಫಾತಿಮಾ ಮಹಲಿನ ಬಗ್ಗೆ ಮಿರ್ಜಾ ನವಾಬನಿಗೆ  ಅಷ್ಟೇ ಪ್ರೀತಿ . ಹಳೇ ಲಖನೌ ಪಟ್ಟಣದಲ್ಲಿರುವ ಈ ಮಹಲು ಭರ್ಜರಿಯಾಗಿದೆ. ಮಿರ್ಜಾ, ಆತನ ಪತ್ನಿ ಬೇಗಂ ಅಲ್ಲದೆ ಹಲವಾರು ಮಂದಿ ಈ ಮಹಲಿನ ಹಲವು ಭಾಗಗಳಲ್ಲಿ ವರ್ಷಾನಗಟ್ಟಲೆಯಿಂದ ಬಾಡಿಗೆಗೆ ಇದ್ದಾರೆ.  ಈ ಮಹಲನ್ನು ಹೇಗಾದರು ಮಾಡಿ ತನ್ನ ಹೆಸರಿಗೆ ಮಾಡಿಕೊಳ್ಳಬೇಕು ಹಾಗೂ ವರ್ಷಾನುಗಟ್ಟಲೆ ಬಾಡಿಗೆ ಕೊಡದ ಬಾಂಕೆ ಸೋಂದಿಯನ್ನು (ಆಯುಷ್ಮಾನ್ ಖುರಾನ )ಮಹಲಿನಿಂದ ಹೊರಹಾಕಬೇಕು. ಇದು ಮುದುಕ ಮಿರ್ಜಾ ನವಾಬನ ಪ್ಲಾನ್. ಆದರೆ ಅವನ ಪ್ಲಾನ್ ಕಾರ್ಯರೂಪಕ್ಕೆ ತರುವಲ್ಲಿ ನೂರೆಂಟು ವಿಘ್ನ.

    ಅಸಲಿಗೆ ಈ ಮಹಲಿನ ಒಡತಿ  ಬೇಗಂ ಈ ಮುದುಕನಿಗಿಂತ ದೊಡ್ಜಾಕೆ. ಆಕೆ ಸತ್ತರೆ ಸಾಕು ಮಹಲಿಗೆ ನಾನೇ ವಾರಸುದಾರ ಎಂಬುದು ಇವನ ಕನಸು.  ಆ ಬೇಗಂ ಘಾಟಿ  ಮುದುಕಿ. ಇನ್ನೇನು ಸತ್ತೇ ಬಿಟ್ಟಳು ಎಂದು ಈ ಮುದುಕ ಭಾವಿಸುವಷ್ಟರಲ್ಲಿ ಎದ್ದು ಕೂತಿರುತ್ತಾಳೆ.  ಈ ಮಹಲಿಗೋ  ನೂರು ವರುಷ ದಾಟಿದೆ. ಪುರಾತತ್ವ ಇಲಾಖೆ ಕಣ್ಣೂ ಬಿದ್ದಿದೆ.  ಅದಕ್ಕೆ  ಬಾಡಿಗೆ ದಾರ ಬಾಂಕೆ ಸೋಂದಿಯ ಬೆಂಬಲ ಬೇರೆ. ಆತನಿಗೆ ಈ ಮಹಲು ಸರಕಾರಕ್ಕೆ ಹೋದರೆ ತಮಗೆ  ಎಲ್‌ಐಜಿ  ಮನೆ ಸಿಗಬಹುದೆಂಬ ಆಸೆ. ಒಂದು ಕಡೆ ಬೇಗಂ ನಿಂದ  ಮನೆ ತನ್ನ ಹೆಸರಿಗೆ  ವರ್ಗಾಯಿಸಿಕೊಳ್ಳಲು ಮುದುಕನ ಸರ್ಕಸ್ . ಇನ್ನೊಂದೆಡೆ ಪುರಾತತ್ವ ಇಲಾಖೆ. ಇನ್ನೊಂದೆಡೆ  ಆ ಮಹಲವನ್ನು ಬಿಲ್ಡರ್ ಒಬ್ಬನಿಗೆ ಮಾರಿಸಲು ವಕೀಲನ ತಂತ್ರ. ಯಾರು ಊಹಿಸದ ರೀತಿ ಕಥೆ ಮುಗಿಯುತ್ತದೆ. ಅದು ಗೊತ್ತಾಗಬೇಕಾದರೆ ಸಿನಿಮಾ ನೋಡಿ.

    ಹಳೇ ಲಖನೌ ನಗರದ ಇಡೀ ಚಿತ್ರಣ ಇಲ್ಲಿ ಸಿಗುತ್ತದೆ.  ಅಲ್ಲಿನ ಗಲ್ಲಿಗಳು, ಸೈಕಲ್ ರಿಕ್ಷಾಗಳು, ಸರಕಾರಿ ಕಚೇರಿಗಳು ಒಂದೊಂದಾಗೆ ಇಲ್ಲಿ ತೆರೆದುಕೊಳ್ಳುತ್ತವೆ. ನಮ್ಮ ಪುಟ್ಟಣ್ಣ ನಾಗರಹಾವಿನ ಕಥೆ ಹೇಳುತ್ತಲೆ ದುರ್ಗದ ಬೀದಿ ಬೀದಿಯನ್ನು ತೋರಿಸಿದ ಹಾಗೆ ಇಲ್ಲಿ ಸುಜಿತ್ ಸರ್ಕಾರ್ ನಮಗೆ  ಲಖನೌ ದರ್ಶನ ಮಾಡಿಸುತ್ತಾರೆ.  ಪೀಕು ವಿನಲ್ಲಿ ಇದೇ ರೀತಿ ಕೊಲ್ಕತಾ ನಗರ ನೋಡುವ ಅವಕಾಶ ಸಿಕ್ಕಿತ್ತು,

    ಮಿರ್ಜಾ ನವಾಬ್ ನಂತೆ ನಿಮ್ಮ ಗಮನ ಸೆಳೆಯುವ ಮತ್ತೊಂದು ಪಾತ್ರ ಬಾಂಕೆ ಸೋದಿ. ತಂಗಿಯರ ವಿದ್ಯಾಭ್ಯಾಸಕ್ಕಾಗಿ  ತನ್ನ ಓದನ್ನು ಬದಿಗೊತ್ತಿ ಹಿಟ್ಟಿನ ಗಿರಣಿಯಲ್ಲಿ ದುಡಿಯುವ ಈ ಬಾಂಕೆ ಸದಾ ಕಾಲ  ಮಿರ್ಜಾ ನವಾಬ್ ನ ಜಗಳ ಕಾಯುತ್ತಾ ಅವನಿಗೆ ಸರಿ ಸಮವಾಗಿ ನಟಿಸಿದ್ದಾರೆ.  ಆರ್ಟಿಕಲ್ ೧೫, ಅಂಧಾದುನ್‌ನ ಆಯುಷ್ಮಾನ್ ಖುರಾನ ಇವರೇನಾ ಎಂದೆನಿಸುವಷ್ಟರ ಮಟ್ಟಿಗೆ ಅವರು ಖುರಾನ ನಿಮಗೆ ಆಪ್ತವಾಗುತ್ತಾರೆ.

    ನ್ನೂ ಚಿತ್ರಮಂದಿರಗಳು ಬಾಗಿಲು ತೆರೆಯದ ಈ ದಿನಗಳಲ್ಲಿ   ಒಟಿಟಿ ಯಲ್ಲಿ ಬಿಡುಗಡೆಯಾದ ಮೊದಲ  ಹಿಂದೀ ಚಿತ್ರ ಇದು. ವೀಕ್ಷಕರು ಇದನ್ನು ಸ್ವಾಗತಿಸಿರುವ ಪರಿಯನ್ನು ನೋಡಿದರೆ ಮುಂಬರುವ ದಿನಗಳಲ್ಲಿ ಹೊಸ ಸಿನಿಮಾಗಳು ನೇರವಾಗಿ ಒಟಿಟಿ ಯಲ್ಲೇ ಬಿಡುಗಡೆಯಾದರು ಅಚ್ಚರಿಪಬೇಕಿಲ್ಲ.

    ಇಂಥ ಹಲವು ಸಿನಿಮಾಗಳು ನಿಮಗೆ ಅಮೆಜಾನ್ ಪ್ರೈಮ್ ನಲ್ಲಿ ಸಿಗುತ್ತವೆ . 999 ರೂಪಾಯಿಗೆ ಇಡೀ ವರ್ಷ ಸಿನಿಮಾ ನೋಡಬಹುದು. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿದರೆ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ ಅಧ್ಬುತ ಮನರಂಜನಾ ಜಗತ್ತು.

    ಕರೋನ ನಂತರವೂ ಮನೆಯೇ ಆಫೀಸ್ ; ಕಾಯಂ ಆಗಲಿದೆ WFH


    ಕಳೆದ ಹತ್ತು ವರ್ಷಗಳಲ್ಲಿ IT  ಕೆಲಸಗಳಲ್ಲಿ ಸಾಕಷ್ಟು ಬದಲಾವಣೆಗಳು, ಸುಧಾರಣೆಗಳು ಆಗುತ್ತಾ ಬಂದಿವೆ. ತಂತ್ರಜ್ಞಾನ ಬೆಳೆದಂತೆ ಕೆಲಸ ಮಾಡುವ ರೀತಿ, ಸಮಯ ಹಾಗು ಕ್ಷಮತೆ ಬದಲಾಗುತ್ತಾ ಹೋಗುತ್ತಿದೆ.  ಅದರಲ್ಲೂ ಮೊಬೈಲ್ ನೆಟ್ವರ್ಕ್, ಫೈಬರ್ ನೆಟ್ ಹಾಗು ಹಾಟ್ ಸ್ಪಾಟ್ ಗಳ ಸಂಖ್ಯೆ ಜಾಸ್ತಿ ಆದಂತೆ  ಹಾಗೂ  ದಿನೇ ದಿನೇ ನಗರದ ಟ್ರಾಫಿಕ್ ಸಮಸ್ಯೆ ಹೆಚ್ಚಾದಂತೆ ಮನೆಯಿಂದ ಕೆಲಸ ಮಾಡುವವರ ಸಂಖ್ಯೆ ಹೆಚ್ಚುತ್ತಾ ಹೋಗಿದೆ.   

    ಕರೋನ ತನ್ನಬಾಹುಗಳನ್ನು ಚಾಚಲು ಪ್ರಾರಂಭ ಮಾಡಿದ ಮೇಲೆ ಪ್ರಪಂಚದಾದ್ಯಂತ  ಲಾಕ್ ಡೌನ್ ಹೇರಲಾಯಿತು. ಈ  ಸಮಯದಲ್ಲಿ  IT ಕೆಲಸ ಒಂದು ದಿನವೂ ನಿಲ್ಲಲಿಲ್ಲ . WFH ಕಲ್ಪನೆ (ಈಗ ವಾಸ್ತವ)  IT  ಕಂಪನಿಗಳಿಗೆ ಹೆಚ್ಚಿನ ನಷ್ಟ ತಪ್ಪಿಸಿರುವುದರ ಜೊತೆಗೆ  ಭವಿಷ್ಯದ ಕಾಯಕ ಪರಿಕಲ್ಪನೆಗೂ ನಾಂದಿ ಹಾಡಿತು.

    ಇನ್ನುಮುಂದೆ ಆಕಾಶದೆತ್ತರದ ಕಟ್ಟಡಗಳ ಗಾಜಿನ ಪಂಜರದೊಳಗೆ ನೀಟಾಗಿ  ಇಸ್ತ್ರಿ ತಿಕ್ಕಿದ ಶರ್ಟ್, ಪ್ಯಾಂಟ್, ಸೂಟು ಬೂಟು ಹಾಕಿಕೊಂಡು ಕುತ್ತಿಗೆಗೆ ಟೈ ಬಿಗಿದುಕೊಂಡು ಕೆಲಸ ಮಾಡುವವರು ಕಾಣಿಸುವುದಿಲ್ಲ. ಕ್ಯಾಬ್ ಬಂದೇ ಬಿಡ್ತು ಎಂದು ಓಡುವವರು ಇರುವುದಿಲ್ಲ.ಬೆನ್ನಿಗೊಂದು ಲ್ಯಾಪ್ ಟಾಪ್ ಬ್ಯಾಗು ಹಾಕಿಕೊಂಡು ಸಂಜೆ 7ರ ವೇಳೆಗೆ ಬೈಯಪ್ಪನಹಳ್ಳಿಯಲ್ಲೋ, ಚರ್ಚ್ ಸ್ಟ್ರೀಟ್ ನ ಮೆಟ್ರೋ ನಿಲ್ದಾಣದ ಮುಂದೋ ಬಸವಳಿದು ನಿಂತಿರುವ ಹುಡುಗ ಹುಡುಗಿಯರ ಕ್ಯೂ ಕಾಣುವುದಿಲ್ಲ. ಈಗಾಗಲೆ ಐಟಿ ಕಂಪೆನಿಗಳಿಗೆಂದು ಕಟ್ಟಿರುವ ಕಟ್ಟಡಗಳು ಏನಾಗುವುದೆಂಬುದು ಗೊತ್ತಿಲ್ಲ. ಮನೆಯಲ್ಲಿಯೇ ಒಂದು ರೂಮಿನಲ್ಲಿ   ಮೇಜು, ಕುರ್ಚಿ, docking  System,  Big Monitors,  ಫ್ಯಾನ್, ಮೊಬೈಲ್, ಏಸಿ, ಬ್ಯಾಟರಿ ಬ್ಯಾಕಪ್, ಫೈಬರ್ ನೆಟ್ ಕನೆಕ್ಷನ್  ತೆಗೆದುಕೊಂಡು  ಕುಳಿತು ಕೆಲಸ ಮಾಡುವ ವ್ಯವಸ್ಥೆ ಕಾಯಂ ಆಗುವ ಸಾಧ್ಯತೆಗಳೇ ದಟ್ಟವಾಗಿವೆ.

    IT ಕಂಪನಿಗಳು  ಸದ್ಯ ಆಫೀಸ್ ನಲ್ಲಿ ಒಂದು ಮೇಜಿಗೆ ತಿಂಗಳಿಗೆ ಸರಿ ಸುಮಾರು 25  ಸಾವಿರದಿಂದ  35 ಸಾವಿರದ ವರೆಗೆ  ವ್ಯಯಿಸುತ್ತಿವೆ. ( ಸೆಕ್ಯೂರಿಟಿ , ಕಾಫೀ, ಟಿ,ಎಸಿ , ವಿದ್ಯುತ್, ನೆಟ್ ವರ್ಕ್, ಹೌಸ್ ಕೀಪಿಂಗ್ ಇತ್ಯಾದಿ ಒಳಗೊಂಡಂತೆ)ಇನ್ನು ಸಾವಿರಾರು ನೌಕರರಿರುವ IT  ಕಂಪನಿಗಳಿಗೆ   WFH  ಪದ್ದತಿಯಿಂದ ಈ ಹಣ ಪೂರ್ತಿ   ಉಳಿತಾಯವಾಗುತ್ತದೆ.  ಮುಂದೆ ಕೇವಲ ದಿನನಿತ್ಯದ ಆಗುಹೋಗುಗಳಿಗೆ  ಬೇಕಾದ ನೌಕರರನ್ನು ಒಂದು ಸಣ್ಣ ಆಫೀಸ್ ಸ್ಪೇಸ್ ನಲ್ಲಿ  ಕಂಪನಿಗಳು ಕಾರ್ಯನಿರ್ವಹಿಸಿ, ಉಳಿದವರನ್ನೆಲ್ಲಾ WFH  ವ್ಯವಸ್ಥೆಗೆ ಕಾಯಂ ಒಳಪಡಿಸಿ,  ವಾರಕ್ಕೋ ತಿಂಗಳಿಗೋ ಒಮ್ಮೆ ಯಾವುದಾದರೂ ಹೋಟೆಲ್ / ಮೀಟಿಂಗ್ ಹಾಲ್ ನಲ್ಲಿ ಭೇಟಿ ಮಾಡುವ  ವ್ಯವಸ್ಥೆ ಬರುವ ಲಕ್ಷಣ ಕಾಣಿಸುತ್ತಿವೆ.  

    ಎಷ್ಟು ಉಪಯೋಗವೋ ಅಷ್ಟೇ ಅನಾನುಕೂಲ

    WFH  ಎಷ್ಟು ಉಪಯೋಗವೋ ಅಷ್ಟೇ ಅನಾನುಕೂಲಗಳೂ ಇವೆ, ಈ ಬದಲಾದ ಪರಿಸ್ಥಿತಿಯಲ್ಲಿ  ಏಕಾಗ್ರತೆ ಉಳಿಸಿಕೊಂಡು, ನಿರಂತರ ವಿದ್ಯುತ್, ನೆಟ್ವರ್ಕ್ ಸವಾಲುಗಳ ಮಧ್ಯೆ  ಹಲವಾರು ಅಡತಡೆಗಳನ್ನು ಎದುರಿಸಿ ಮಾನಸಿಕ ಒತ್ತಡ ಇಟ್ಟು ಕೊಂಡೇ  ಕೆಲಸ ಮಾಡಬೇಕಾದ ಅನಿವಾರ್ಯತೆ ಬಂದೊದಗುತ್ತದೆ.

    ವಿಡಿಯೋ ಕಾಲ್ ಗಳಲ್ಲಿ ಮೇಲೆ ಕೋಟ್ ಹಾಕಿ  ಕೆಳಗೆ ಶಾರ್ಟ್ಸ್ ಹಾಕಿಕೊಂಡು ಕೆಲಸ ಮಾಡುವ,  ನಮ್ಮ ಹಿಂಬದಿಯಲ್ಲಿ ಮನೆ ಉಡುಗೆಯಲ್ಲೇ ಇದ್ದ ಮನೆಯವರು ಓಡಾಡುವುದನ್ನು ಪ್ರಪಂಚದ ಎಲ್ಲರಿಗೂ ಲೈವ್ ತೋರಿಸುವ, ಸ್ವಲ್ಪ ಯಾಮಾರಿದರೂ  ವಿಡಿಯೋ ಕಾಲ್ ಗಳಲ್ಲಿ ಕೌಟುಂಬಿಕ  ಕಲಹಗಳು ಏನಾದರೂ ಬಂದರೆ ಅದು ಬಿತ್ತರವಾಗಿ   ಮಾನ ಹರಾಜು ಆಗುವ ಸಾಧ್ಯತೆಯೂ ಹೆಚ್ಚಿದೆ.  ಎಷ್ಟೇ ಕೌಟುಂಬಿಕ ಕಲಹಗಳಿದ್ದರೂ ಮುಂಜಾನೆ ಆಫೀಸ್ ಹೋಗಿ  ಎಲ್ಲವನ್ನು ಮರೆತು ಕೆಲಸ ಮುಗಿಸಿ ಸಂಜೆ ಮನೆ ಬರುವುದರಲ್ಲಿ  ಶಮನವಾಗುತ್ತಿದ್ದ ಸಂದರ್ಭಗಳು ತಪ್ಪಿಹೋಗಲಿವೆ. 

    ಇವೆಲ್ಲಾ ತಪ್ಪಿಸಲು  ‘ಹೋಮ್ ಆಫೀಸ್’ ಗಾಗಿ ಮನೆಯಲ್ಲಿಯೇ ಒಂದು ರೂಮ್ ಅನ್ನು ಕಾಯ್ದಿರಿಸಬೇಕಿದೆ.  ಚಿಕ್ಕ ಚಿಕ್ಕ ಮನೆ ಇರುವವರಿಗೆ ಇದು ಒಂದು ಸವಾಲಾಗೇ ಉಳಿಯಲಿದೆ.  ಒಂದು ಮನೆಯಲ್ಲಿ ಗಂಡ, ಹೆಂಡತಿ ಇಬ್ಬರೂ ಕೆಲಸ ಮಾಡುತ್ತಿದ್ದರೆ ಬೇರೆ ಬೇರೆ ರೂಮ್ ಗಳಲ್ಲಿ  ಹೋಮ್ ಆಫೀಸ್ setup  ಮಾಡಿಕೊಳ್ಳಬೇಕಾಗಿದೆ 

    ಜೊತೆಯಲ್ಲಿ ಈ ರೀತಿ ಮನೆಯಲ್ಲಿಯೇ ಕುಳಿತು ಎಂಟರಿಂದ ಹತ್ತುಗಂಟೆ  ಕೆಲಸ ಮಾಡುವುದರಿಂದ ಮಾನಸಿಕ , ದೇಹದ ಹಾಗು ಆರೋಗ್ಯದ ಸಮತೋಲನ  ಕಾಪಾಡಲು  ಪ್ರತಿಯೊಬ್ಬ ನೌಕರರು ತಮ್ಮ ದೈನಂದಿನ ಚಟುವಟಿಕೆಗಳನ್ನು, ಅಭ್ಯಾಸಗಳನ್ನು, ಬದಲಾಯಿಸಬೇಕಾದ ಅನಿವಾರ್ಯತೆಯೂ ಇದೆ.ಕೆಲಸದ ಸಮಯದಲ್ಲಿ,  ವರ್ಚುಯಲ್ ಮೀಟಿಂಗ್ ಗಳಲ್ಲಿ ನಿರತರಾಗಿದ್ದಾಗ ಮಕ್ಕಳನ್ನು  ನೋಡಿಕೊಳ್ಳುವ, ಅವರು ಮಾಡುವ ತುಂಟತನ ಗಲಾಟೆಯನ್ನು ತಡೆಯಲು ಮೊಬೈಲ್ ಕೈಗೆ ಕೊಟ್ಟು  ಕೆಲಸ ಮುಂದುವರಿಸುವ  ಸಮಸ್ಯೆ ಇದೆ.  ಮನೆಯಲ್ಲೇ ಇದ್ದರೂ  ಮಕ್ಕಳು, ಅಪ್ಪ ಅಮ್ಮ, ಅತ್ತೆ ಮಾವನವರ ಹತ್ತಿರ ಮಾತನಾಡಲೂ ಆಗದೆ ಇರುವಂತೆ ಆಗುತ್ತಿದೆ.  ಮನೆಗೆ ಬರುವ ನೆಂಟರಿಷ್ಟರಿಗೆ ಕೆಲಸ ಇದೆ, ಮೀಟಿಂಗ್ ಇದೆ, ಒಂದು ಗಂಟೆ  ಕುಳಿತುಕೊಳ್ಳಿ ಎಂದು ಹೇಳಿ ಮತ್ತೆ  ಏಕಾಗ್ರತೆ ಉಳಿಸಿಕೊಂಡು ಕೆಲಸ ಮಾಡುವ ಸವಾಲಿದೆ.  

    ಬ್ಯಾಚುಲರ್ಸ್ ಕಥೆ
      
    ಇದೆಲ್ಲಕ್ಕಿಂತ ಹೆಚ್ಚಾಗಿ ಬ್ಯಾಚುಲರ್ಸ್ ಕಥೆ ಅಂತೂ ಇನ್ನೂ ವಿಚಿತ್ರ.   ಮನೆಯಲ್ಲಿಯೇ ಇರುವುದರಿಂದ ಮೊಬೈಲ್ ನಲ್ಲಿ ಕೂಡ ಮಾತನಾಡಲಾಗದೆ, ವಾಟ್ಸ್ ಆಪ್ ಮೆಸೇಜ್ ಮೇಲೆ ಅವಲಂಬಿಸಬೇಕು.  ಆಫೀಸ್ ಕೆಲಸ ಮುಗಿದು ಸಂಜೆ ಸುತ್ತಾಡಿ ಆಫೀಸ್ ಕೆಲ್ಸಜಾಸ್ತಿ ಅಂತ ಸುಳ್ಳು ಹೇಳಿ ಕಳೆಯುತ್ತಿದ್ದ ಕಾಲ ಸಂಪೂರ್ಣ ಈಗಗಾಲೇ ನಿಂತುಹೋಗಿದೆ.ಅದು ಮುಂದುವರಿಯುವುದು ನಿಶ್ಶಿತ.  ಮಾಲ್, ಮೂವಿ, ಚಾಟ್ಸ್, ಪಾರ್ಕ್, ಲಾಂಗ್ ಡ್ರೈವ್,  ಗುಂಡು, ತುಂಡು ಪಾರ್ಟಿಗಳು ಹಾಗು ಔಟಿಂಗ್ ಸಂಪೂರ್ಣ ನಿಲ್ಲುವ ಹಂತಕ್ಕೆ ಬಂದಿದೆ. ಕಂಪನಿಗಳಲ್ಲಿ ಅರಳುತ್ತಿದ್ದ ಪ್ರೇಮ ಕಥೆಗಳಿಗೆ ಪೂರ್ಣ ವಿರಾಮ ಬೀಳಲಿದೆ.

    IT  ಕಂಪೆನಿಗಳಲ್ಲಿ ಮೂರೂ ತಿಂಗಳಿಗೊಮ್ಮೆ ಟೀಮ್ ಬಿಲ್ಡಿಂಗ್  ಅನ್ನೋ ನೆಪದಲ್ಲಾದರೂ ಯಾವೊದೋ ರೆಸಾರ್ಟ್ ಅಥವಾ ಅಮ್ಯೂಸ್ಮೆಂಟ್ ಪಾರ್ಕ್ ಹೋಗಿ ಮನಸ್ಸು ಹಗುರ ಮಾಡಿಕೊಂಡು ಬರುತ್ತಿದ್ದ ಸಮಯ  ಕರೋನ ಸಂಪೂರ್ಣ ಹತೋಟಿಗೆ ಬರುವವರೆಗೆ ಮತ್ತೆ ಶುರುವಾಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ. 

    ಈ ಹೊಸಾ ವ್ಯವಸ್ಥೆಗೆ IT  ನೌಕರರು ಹೊಂದಿಕೊಳ್ಳುವದು ಕಳೆದ ಎರಡು ತಿಂಗಳಿಂದ ಸ್ವಲ್ಪ ಮಟ್ಟಿಗೆ ಸಾಧ್ಯವಾಗಿದ್ದರೂ, ಮುಂದೆ  ಧೀರ್ಘ ಕಾಲ ಮನೆಯಲ್ಲಿಯೇ ಇದ್ದಾಗ ಆಗುವ ಮಾನಸಿಕ, ಸಾಮಾಜಿಕ  ದುಷ್ಪರಿಣಾಮಗಳ ಅವಲೋಕನ ಮಾಡಬೇಕಾಗಿದೆ. 

    WFH  ಕೇವಲ IT  ಕಂಪನಿಗಳು  ಮಾತ್ರ ಅನುಕೂಲತೆಗಳನ್ನು ಮಾಡಿದರೆ ಸಾಲದು  ಮನೆಯೆಲ್ಲಿ ಕೆಲಸ ಮಾಡುವವರು, ಮಾಡದವರು  ಒಟ್ಟಿಗೆ ಚರ್ಚಿಸಿ ಹಲವಾರು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಿದೆ. ಗಂಡ, ಹೆಂಡತಿ, ಮಕ್ಕಳು, ಪೋಷಕರು  ಒಬ್ಬರಿಗೊಬ್ಬರು ಹೆಚ್ಚಿನ ಬೆಂಬಲ ಕೊಡಬೇಕಾಗಿದೆ. 

    ಈ  WFH ನಲ್ಲಿ  ಮಾನಸಿಕ, ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ಕೊಟ್ಟು, ಹಲವಾರು ಸಾಧಕ, ಭಾದಕಗಳ ಸುಧೀರ್ಘ ಚರ್ಚೆ, ಚಿಂತನೆ ನಡೆಸಿ,  ನೌಕರರಿಗೆ ಬೇಕಾದ ಹಲವಾರು  ಅನುಕೂಲತೆಗಳನ್ನು ಮಾಡಿಕೊಡುವ ನಿಟ್ಟಿನಲ್ಲಿ IT  ಕಂಪನಿಗಳು ಯೋಚಿಸಬೇಕಾಗಿದೆ.  ವರ್ಚುಯಲ್ ಭ್ರಮಾಲೋಕ  ತ್ರಿಶಂಕು ಸ್ವರ್ಗವಾಗದಿರುವಂತೆ ನೋಡಿಕೊಳ್ಳುವ ಹೆಚ್ಚಿನ ಜವಾಬ್ದಾರಿ ನಮ್ಮ ಸರ್ಕಾರಗಳ ಮೇಲೂ ಇದೆ.

    ನೇಪಾಳದ ದಿಢೀರ್ ಆಕ್ರಮಣ ನೀತಿಯ ಹಿಂದಿನ ಅಸಲಿ ರಹಸ್ಯ

    ಒಂದು ಕಾಲದಲ್ಲಿ ವಿಶ್ವದ ಏಕೈಕ ಅಧಿಕೃತ ಹಿಂದೂ ರಾಷ್ಟ್ರವಾಗಿದ್ದ ನೇಪಾಳ ಇತ್ತೀಚಿನ ದಿನಗಳಲ್ಲಿ ಭಾರತ ಬಗ್ಗೆ ಆಕ್ರಮಣಕಾರಿ ನೀತಿಯನ್ನು ಅನುಸರಿಸಲು ಆರಂಭಿಸಿದೆ. ಇದಕ್ಕೆ ಅಂಕುರಾರ್ಪಣೆ ಮಾಡಿದವರು ಮೊದಲ ಬಾರಿಗೆ ನೇಪಾಳದ ಪ್ರಧಾನಿ ಗದ್ದುಗೆಯೇರಿದ್ದ ಕಮ್ಯೂನಿಸ್ಟ್ ಪಕ್ಷದ ನಾಯಕ ಪ್ರಚಂಡ. 

    ಪುಟ್ಟ ರಾಷ್ಟ್ರವಾದರೂ ಗಡಿಯಲ್ಲಿ ಸೇನಾ ಜಮಾವಣೆ. ಅಪ್ರಚೋದಿತ ಗುಂಡಿನ ದಾಳಿಯಿಂದ ರೈತನೊಬ್ಬನ ಹತ್ಯೆ. ತನ್ನ ದೇಶದ ನಕಾಶೆ (ಮ್ಯಾಪ್) ಪರಿಷ್ಕರಣೆಗೆ ತರಾತುರಿಯಲ್ಲಿ ಅಲ್ಲಿನ ಸಂಸತ್ತಿನಿಂದ ಅನುಮೋದನೆ. ತನ್ಮೂಲಕ ಗಡಿ ವಿಸ್ತರಣೆಯ ಅಭಿಲಾಷೆ. ಇದರ ಹಿಂದಿನ ಕಾರಣಗಳು ಊಹಿಸಿದಷ್ಟು ಸರಳವಲ್ಲ.

    ಪ್ರಸಕ್ತ ನೇಪಾಳ ಪ್ರಧಾನಿಯಾಗಿರುವ ಕೆ. ಪಿ. ಶರ್ಮಾ ಓಲಿ, ಮೂಲತಃ ಕಮ್ಯೂನಿಸ್ಟ್ ಪಕ್ಷದ ಹಿನ್ನೆಲೆ ಹೊಂದಿರುವರು. ಈ ಹಿಂದೆ ನೇಪಾಳವನ್ನು ಹಿಂದೂ ರಾಷ್ಟ್ರದ ಪಟ್ಟಿಯಿಂದ ಹೊರಗಿಟ್ಟಿರುವವರೂ ಇದೇ ಕಮ್ಯೂನಿಸ್ಟ್ ಪಕ್ಷದ ಹಿನ್ನೆಲೆ ಹೊಂದಿದ್ದ ಪ್ರಚಂಡ.

    ರಸ್ತೆಯೇ ಮುಖ್ಯ

    ಪವಿತ್ರ ಮಾನಸ ಸರೋವರ ಯಾತ್ರೆಗೆ ಹೋಗುವ ದಾರಿಯನ್ನು ಸುಗಮಗೊಳಿಸುವ ಉದ್ದೇಶದಿಂದ ಭಾರತ-ಟಿಬೇಟ್ ಗಡಿ ಭಾಗದ ಲಿಪು ಲೇಕ್ (ಲಿಪು ಸರೋವರ) ಪಾಸ್ ಮೂಲಕ ಸಾಗುವ ಹೆದ್ದಾರಿಯನ್ನು ಭಾರತ ನಿರ್ಮಿಸುತ್ತಿದೆ. ಇದು ಚೀನಾ-ಭಾರತ ವಾಸ್ತವ ನಿಯಂತ್ರಣ ಗಡಿ ರೇಖೆ (ಎಲ್ಎಸಿ)ಗೆ ಹೊಂದಿಕೊಂಡಿದೆ. ಚೀನಾಕ್ಕೆ ಸ್ವಲ್ಪ ಮಟ್ಟಿಗೆ ಇರಿಸು-ಮುರುಸು ಆರಂಭವಾಗಲು ಇದು ಒಂದು ಕಾರಣ. ಹಾಗಾಗಿಯೇ ಲಡಾಕ್ ಜತೆಗಿನ ಗಡಿ ಸಂಘರ್ಷದ ಜತೆಗೆ ನೇಪಾಳದ ಮೂಲಕ ಬೇರೆ ವಿಷಯವನ್ನೂ ಅದು ಎತ್ತುವಂತೆ ಮಾಡಿದೆ ಎನ್ನಲಾಗುತ್ತಿದೆ.

    1999ರಲ್ಲೇ ಆಗಿನ ಕೇಂದ್ರ ಸರಕಾರ ಈ ಹೆದ್ದಾರಿ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. ಆದರೆ ಇಷ್ಟು ವರ್ಷಗಳ ಬಳಿಕ ನೇಪಾಳ ಆಕ್ಷೇಪ ಎತ್ತುವುದರ ಹಿಂದಿನ ರಹಸ್ಯವೇನು ? ಇದನ್ನು ಹುಡುಕುತ್ತಾ ಹೋದರೆ ಸಾಕಷ್ಟು ವಿಚಾರಗಳು ಬಹಿರಂಗಗೊಳ್ಳುತ್ತಿವೆ.

    ಕಮ್ಯೂನಿಸ್ಟ್ ಪಕ್ಷದ ನೆರವು

    ಬೇರೆ ಪಕ್ಷಗಳ ನೆರವಿನಿಂದಲೇ ಅಧಿಕಾರಕ್ಕೇರಿರುವ ನೇಪಾಳ ಪ್ರಧಾನಿ, ಕೆ. ಪಿ. ಶರ್ಮಾ ಓಲಿ ಅವರು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಕಷ್ಟ. ಅದರಲ್ಲೂ ಮುಖ್ಯವಾಗಿ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಚೀನಾದ ಮಾತಿಗೆ ತಲೆಬಾಗಲೇ ಬೇಕಾದ ಅನಿವಾರ್ಯತೆ ಅವರ ಮುಂದಿದೆ. ಆದರೆ ಭಾರತವನ್ನು ಎದುರು ಹಾಕಿಕೊಂಡು ಬಾಳುವುದೂ ಕೂಡ ನೇಪಾಳಕ್ಕೆ ಕಷ್ಟ. ಭಾವನಾತ್ಮಕವಾಗಿ ನೇಪಾಳ ಭಾರತಕ್ಕೆ ಹತ್ತಿರ.

    2017ರಲ್ಲಿ ಚೀನಾದ ಜತೆಗೆ ಎದುರಾದ ಡೋಕ್ಲಾಂ ಸಂಘರ್ಷದ ಬಳಿಕ ಗಡಿ ಭಾಗದ ಹಲವು ರಸ್ತೆ ಪ್ರಾಜೆಕ್ಟ್ ಗಳಿಗೆ ಭಾರತ ತಕ್ಷಣದ ಅನುಮತಿ ನೀಡಿತ್ತು. 2017ರಲ್ಲಿ ರಕ್ಷಣಾ ವ್ಯವಸ್ಥೆಯ ಕುರಿತಾದ ಸ್ಥಾಯಿ ಸಮಿತಿ ವರದಿಯಲ್ಲಿ “ಗಡಿ ಭಾಗದ ವಿಷಯದಲ್ಲಿ ನಾವು ಕೈಗೊಂಡಿರುವ ರಸ್ತೆ ವಿಸ್ತರಣೆ ಅಥವಾ ನವೀಕರಣದಲ್ಲಿ ಕೇವಲ 22 ಯೋಜನೆಗಳು ಮಾತ್ರ ಪೂರ್ಣಗೊಂಡಿವೆ, ಹೀಗಾಗಿ ಇವುಗಳಿಗೆ ಹೆಚ್ಚುವರಿ ಹಣಕಾಸು ನೆರವು ಒದಗಿಸಬೇಕು ಎಂದು ಕಳವಳ ವ್ಯಕ್ತವಾಗಿತ್ತು.

    ರಸ್ತೆ ಉದ್ಘಾಟನೆ

    ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ನೇಪಾಳ ಮೂಲಕ ಸಾಗುವ ಹೆದ್ದಾರಿಗೆ ಮೇ 11ರಂದು ಚಾಲನೆ ನೀಡಿದ್ದರು. ಅದರ ಮರುದಿನವೇ ನೇಪಾಳ, ತನ್ನ ದೇಶದ ನಕಾಶೆಯನ್ನು ತಿದ್ದುಪಡಿ ಮಾಡಿದೆ. ಅದಕ್ಕೆ ತನ್ನ ದೇಶದ ಸಂಸತ್ತಿನ ಕೆಳಮನೆಯಲ್ಲಿ ತರಾತುರಿಯ ಅನುಮೋದನೆಯನ್ನೂ ಪಡೆದಿದೆ.

    ಈ ಎಲ್ಲಾ ಬೆಳವಣಿಗೆ ನೋಡಿದರೆ ಮತ್ತೆ ನೆನಪಾಗುವುದು ಕಮ್ಯೂನಿಸ್ಟ್ ಆಡಳಿತದ ಚೀನಾ. ಭಾರತವನ್ನು ನೇರವಾಗಿ ಎದುರಿಸಲಾಗದೆ ಚೀನಾ ಹೂಡಿರುವ ತಂತ್ರವೇ ಇದು ಎಂಬುದು ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ.

    error: Content is protected !!