25.4 C
Karnataka
Wednesday, May 20, 2026
    Home Blog Page 172

    ಭಗವಂತ ಎನ್ನಲೇ? ಸಾಕಾಗಲಿಕ್ಕಿಲ್ಲ

    ಹಾವ ತುಳಿದೇನೆ ಮಾನಿನಿ, ಹಾವ ತುಳಿದೇನೆ… ಇಡಾ, ಪಿಂಗಳ,ಸುಷುಮ್ನಾ…..ಮೂಲಾ ಧಾರದಿಂದ ….ಆಜ್ನ್ಯಾ ಚಕ್ರದವರೆಗೆ….. ಕುಂಡಲಿನಿ …..ಜಾಗ್ರತೆ ಆದಾಗ….ಹಾವ ತುಳಿದೇನೆ, ಮಾನಿನಿ…..

    ಶಿಶುನಾಳ ಶರೀಫಜ್ಜರ ಗೂಡಾರ್ಥಗಳಲ್ಲಿ ಒಂದಾದ ಹಾವ ತುಳಿದೇನೆ ಗೀತೆಯ ಬರುವ ಸಾಲುಗಳನ್ನು ನಾನು ಮೊದಲು ಕೇಳಿದ್ದು ಪ್ರಾಣಾಯಾಮದಲ್ಲಿ. ಪಿಂಗಳ,ಸುಷುಮ್ನಾ ನಾಡಿಗಳ ಜೊತೆ ಮೂಲಾಧಾರ ಸುಪ್ತವಾಗಿರುವ ಹಾವಿನಂತಹ ಕುಂಡಲಿನಿ ಜಾಗ್ರತವಾದಾಗ ಮನುಷ್ಯ ತುಳಿದ ಹಾವಿನಂತಾಗುತ್ತಾನೆ…. ಎಂದು ನಾನು ಪ್ರಥಮವಾಗಿ ಕೇಳಿದ್ದು ಮಲ್ಲಾಡಿಹಳ್ಳಿಯ ಯೋಗ ಶಿಬಿರದಲ್ಲಿ.

    ಪ್ರತೀ ವರ್ಷ ಅಕ್ಟೋಬರ್ ತಿಂಗಳಲ್ಲಿ ನಡೆಯುತ್ತಿದ್ದ 21 ದಿನಗಳ ಯೋಗ ಶಿಬಿರ ದಲ್ಲಿ ಒಂದೊಂದೇ ಆಸನಗಳನ್ನು ಶಿಬಿರದಲ್ಲಿ ಭೌತಿಕವಾಗಿ ಪೂರ್ವಾಚಾರಿ ಮತ್ಚು ವನಿತಾ ಟೀಚರ್ ಪ್ರದರ್ಶಿಸುತ್ತಿದ್ದರೆ ಇತ್ತ ಅವುಗಳ ಮಹತ್ವವನ್ನು ಹೇಳುತ್ತಾ,ಕೆಂಪು ಮಕಮಲ್ ಬಟ್ಟೆಯ ಜಟ್ಟಿ ಚಡ್ಡಿ ಧರಿಸಿ,ಶಿಬಿರಾರ್ಥಿಗಳ ಮಧ್ಯೆ ಪಾದರಸದಂತೆ ಅಡ್ಡಾಡುತ್ತ,ಆಗಾಗ ನಗಿಸುತ್ತ,ಆಸನಗಳ ಆಳಗಳನ್ನು ಮನದಲ್ಲಿ ಸ್ಥಿರಗೊಳಿಸುತ್ತಿದ್ದರು ನಮ್ಮ ಅಭಿನವ ಧನ್ವಂತರಿ,ಯೋಗಾಚಾರ್ಯ ಶ್ರೀ ರಾಘವೇಂದ್ರ ಸ್ವಾಮೀಜಿ.

    ಪರಮಾತ್ಮನ ಸಾಕ್ಷಾತ್ಕಾರ

    ದೇಹದ ಸುಸ್ಥಿರತೆಗೆ ಲಘು ವ್ಯಾಯಾಮ ಮಾಡಿ ಯೋಗಾಸನಕ್ಕೆ ಅಣಿ ಗೊಳ್ಳಬೇಕು.ಆದಮೇಲೆ ಪ್ರಾಣಾಯಾಮ ಮಾಡಬೇಕು.ಅವರವರ ದೇಹ ಪ್ರಕೃತಿ ಅನುಸರಿಸಿ, ಹೊರಗಿನ ವಾತಾವರಣಕ್ಕೆ ತಕ್ಕಂತೆ ಎಡ, ಬಲ (ಇಡಾ,ಪಿಂಗಳ ಅಥವಾ ಸೂರ್ಯ,ಚಂದ್ರ ನಾಡಿ) ಮೂಗಿನ ಹೊಳ್ಳೆಗಳ ಮುಖಾಂತರ ಉಸಿರು ತೆಗೆದುಕೊಳ್ಳುವುದು, ಹಿಡಿದಿಡುವುದು,ಬಿಡುವುದು…ಈ ಪ್ರಕ್ರಿಯೆಯನ್ನು ಪ್ರಾಣಾಯಾಮ ಎನ್ನುತ್ತಾರೆ. ಈ ಪ್ರಾಣಾಯಾಮದ ಮುಖಾಂತರ ಏಳು ಚಕ್ರಗಳನ್ನು ಜಾಗೃತಗೊಳಿಸಿಕೊಂಡು ಬ್ರಹ್ಮಾನಂದವನ್ನು ಪಡೆಯಬಹುದು.ಇದನ್ನೇ ಪರಮಾತ್ಮನ ಸಾಕ್ಷಾತ್ಕಾರ ಅಂತಾರೆ. ಆತ್ಮವನ್ನು ಪರಮಾತ್ಮನಲ್ಲಿ ಲೀನ ಮಾಡುವ ಹಲವಾರು ಸಾಧನೆಗಳಿಗೆ ಇದೇ ರಾಜಮಾರ್ಗ.ಹೀಗೆ ಸೇರಿಸುವ ವಿಧಾನಕ್ಕೆ ಯೋಗ ಅಂತಾರೆ.ಹಾಗಾಗಿ ಈ ಅಸನಗಳು ಯೋಗಾಸನ ಅಂತ ಅಂತಾರೆ ಎಂದು ಸ್ವಾಮೀಜಿ ಹೇಳುತ್ತಿದ್ದನ್ನು ಕೇಳಿದ ನಮಗೆ ಆ ಕ್ಷಣದಲ್ಲೇ ಸಾಕ್ಷತ್ಕಾರವಾದ ಅನುಭವ.

    ಅಸಂಖ್ಯಾತ ಇರುವ ಆಸನಗಳಲ್ಲಿ,ಅವರವರ ದೇಹ ಪ್ರಕೃತಿಗೆ ಹೊಂದುವ ಆಸನಗಳನ್ನು ಅನುಸರಿಸಿ ಸಾಧನೆಗೆ ತೊಡಗಬೇಕು.ಎಲ್ಲರೂ ಸಾಧಕರಾಗಲು ಆಗದಿದ್ದರೂ,ಉತ್ತಮ ಆರೋಗ್ಯಕ್ಕೆ ಇವುಗಳ ಪಾಲನೆ ಅತೀ ಮುಖ್ಯ. ಬರುವ ದಿನಗಳಲ್ಲಿ ಯೋಗದ ಆವಶ್ಯಕತೆ ಮಾನವನಿಗೆ ಅನಿವಾರ್ಯ ಎನ್ನುವಷ್ಟು ಹತ್ತಿರವಾಗುತ್ತದೆ. ಆರೋಗ್ಯದಿಂದ ಇರುವವರು ರೋಗಗಳು ಬರದೇ ಇರಲು, ರೋಗಿಗಳಾದವರಿಗೆ ಆರೋಗ್ಯವಂತರಾಗಲು ಯೋಗ ಅತೀ ಮುಖ್ಯ ಎಂದು ಯೋಗದ ಮಹತ್ವವನ್ನು ನನ್ನಂಥ ಲಕ್ಷಾಂತರ ಗ್ರಾಮೀಣ ಎಳೆ ಮನಸ್ಸುಗಳ ಅರಿವಿಗೆ,ಆಗಲೇ 90 ದಾಟಿದ್ದ ಶ್ರೀ ಗಳು ಹೇಳುತ್ತಿದ್ದರು.

    ಸ್ವಾಮೀಜಿ ಮತ್ತು ಸೂರ್ ದಾಸರು

    ಆ ಸಮಯದಲ್ಲಿ ನಮಗೆ ಮುದೊಂದು ಅಂತಾರಾಷ್ಟ್ರೀಯ ಯೋಗ ದಿನ ಅಂತ ಜೂನ್ 21ರ ದಿನವನ್ನು ಭಾರತ ಸರ್ಕಾರ ಘೋಷಿಸಿ, ಇಡೀ ವಿಶ್ವಕ್ಕೇ ಯೋಗವನ್ನು ಪರಿಚಯಿಸುತ್ತದೆ ಎಂಬುದನ್ನು ಊಹಿಸುವುದು ಅಸಾಧ್ಯವಾಗಿತ್ತು.1977 ರಿಂದ 1982 ರ ಐದು ವರ್ಷಗಳ ಅವಧಿಯನ್ನು ಶ್ರೀಗಳ ಸನಿಹದಲ್ಲಿ,ಆಶ್ರಯದಲ್ಲಿ ಕಳೆದದ್ದು ನನ್ನ ಭಾಗ್ಯವೇ ಸೈ. ಆಶ್ರಮದ ಇಂಚಿಂಚು ಜಾಗವನ್ನು ಸ್ವಚ್ಛ ಮಾಡಿರುವ ಹೆಮ್ಮೆ ನನ್ನದು. ಎಷ್ಟೋ ಇಡೀ ಭಾನುವಾರಗಳನ್ನು ಆಶ್ರಮದ ಆಗ್ನೇಯ ಮೂಲೆಯಲ್ಲಿದ್ದ ಔಷಧಾಲಯದಲ್ಲಿ ವಿವಿಧ ಗಿಡಮೂಲಿಕೆಗಳನ್ನು,ಕುಟ್ಟಿ,ಪುಡಿ ಮಾಡಿ ಸೋಮವಾರ ಬರುತ್ತಿದ್ದ ರೋಗಿಗಳಿಗಾಗಿ ವಿವಿಧ ರೀತಿಯ ಔಷಧಗಳನ್ನು ಸೂರದಾಸ್ ಅವರ ಉಸ್ತುವಾರಿಕೆಯಲ್ಲಿ ತಯಾರಿಸಿದ್ದೇನೆ ಅಂತ ಹೇಳಲು ಎದೆಯುಬ್ಬಿ ಬರುತ್ತೆ.

    ಹಾರುವ ಹಕ್ಕಿಯನ್ನು ಹೋಲುವ ಯೋಗಮಂದಿರ

    ಹಾರುವ ಹಕ್ಕಿಯನ್ನು ಹೋಲುವ ಯೋಗಮಂದಿರ ದ ರೆಕ್ಕೆಗಳ ಛಾವಣಿ ಕೆಲಸಕ್ಕೆ ಸಿಮೆಂಟ್ ಕಾಂಕ್ರೀಟ್ ನ್ನು ಹಗಲು,ರಾತ್ರಿ ಕಬ್ಬಿಣದ ಪುಟ್ಟಿಗಳಲ್ಲಿ ತಲೆಮೇಲೆ ಹೊತ್ತು,ಸಾಲಾಗಿ ನಿಂತ ಗೆಳೆಯರೊಂದಿಗೆ ಹಾಕಿದ ಸಾರ್ಥಕತೆ ನನ್ನದು.

    ತಾಂತ್ರಿಕ ದೋಷದಿಂದ ಒಮ್ಮೆ ಹಾಕಿದ್ದ ಕಾಂಕ್ರೀಟ್ ಬಿದ್ದು, ಮತ್ತೆ ಹಾಕಿ, ತಮಿಳು ಗುತ್ತೇದಾರನ ಮತ್ತು ಸ್ವಾಮಿಗಳ ಜೊತೆಯಲ್ಲಿ ನಿಂತು,ರೆಕ್ಕೆ ನಿಂತದ್ದು ನೋಡಿ ಸಂಭ್ರಮಿಸಿದ ಕ್ಷಣಕ್ಕೆ ಸಾಕ್ಷಿಯಾದದ್ದು ನನ್ನ ಹೆಮ್ಮೆ. ಯೋಗಮಂದಿರದ ಕಿಟಕಿಗಳಿಗೆ ನಮ್ಮ ಶಾಲೆಯ ವರ್ಕ್ ಷಾಪ್ ನ ಗುಡ್ಡಪ್ಪ, ಸ್ವಾಮಿಗಳ ಯೋಗದ ಭಂಗಿಗಳನ್ನು ಅಳವಡಿಸುತ್ತಿದ್ದನ್ನು ಆಶ್ಚರ್ಯಭರಿತ ಕಣ್ಣುಗಳಿಂದ ನೋಡಿ ಆನಂದಿಸುತತಿದ್ದ ನನಗೆ ಮತ್ತು ಗೆಳೆಯರಿಗೆ ಹತ್ತಿರ ಬರಬೇಡಿ ಅಂತ ಆತ ಗದರಿಸುತ್ತಿದ್ದನ್ನು ಮರೆತಿಲ್ಲ.

    ಹತ್ತನೇ ತರಗತಿ ಪಾಸಾದವರಿಗೆ ಮತ್ತು ಪಿಯು 2 ಪಾಸಾದವರಿಗೆ ರಜೆಯಲ್ಲಿ ಇರುತ್ತಿದ್ದ ಶ್ರಮದಾನ ಎನ್ನುವ ಐಶ್ಚಿಕ ಶಿಬಿರದಲ್ಲಿ ತಪೋವನದ ಗಿಡಗಳಿಗೆ ಗುಂಡಿ ತೋಡಿ,ನೆಟ್ಟು,ನೀರು ಹಾಕಿದ್ದು ನನ್ನಲ್ಲಿ ಇನ್ನೂ ಹಸಿರಾಗಿದೆ. ಅಲ್ಲಿಯ ಕೋತಿಗಳಿಗೆ, ಜಿಂಕೆಗಳಿಗೆ,ಪಾರಿವಾಳಗಳಿಗೆ ಅನ್ನ-ನೀರನ್ನು ಇಟ್ಟಿದ್ದು,ದೈಹಿಕ ಶಿಕ್ಷಕ ಎಂ. ನಾಗೇಂದ್ಪಪ್ಪ ಅವರ ಜೊತೆ ಚನ್ನಗಿರಿ ಹತ್ತಿರವಿದ್ದ ಅಮ್ಮನಗುಡ್ಡ ಕ್ಕೆ ಸೌದೆ ತರಲು ಟ್ರಾಕ್ಟರ್ ನಲ್ಲಿ ಹೋದದ್ದು, ಆಶ್ರಮದ ಹೊಲದಲ್ಲಿ ಬಿಳೀ ಜೋಳದ ದಂಟನ್ನು ಕೊರೆಯುವ ಬೆಳಗಿನ ಚಳಿಯಲ್ಲಿ ಕಿತ್ತದ್ದು, ಅದನ್ನು ತಂದು ಗುಡ್ಡೇ ಹಾಕಿ,ಕಣ ಮಾಡಿ ರಾತ್ರಿಯೆಲ್ಲಾ ಕಾಯುತ್ತಾ, ಓದಿ ಪಿಯು2 ಪರೀಕ್ಷೆ ಬರೆದದ್ದು,ಹಗಲಿಡೀ ಕೆಲಸ ಮಾಡಿ,ಸಂಜೆ ವ್ಯಾಯಾಮ ಶಾಲೆ ಸೇರಿ,ರಾತ್ರಿ ಇಡೀ ಮಣ್ಣನ್ನು ಹೊದ್ದು ಮಲಗಿದ್ದ ದಿನಗಳು ಮರೆಯದ ನೆನಪಿನ ಘಟ್ಟಗಳು.

    ಶ್ರಮದ,ಶ್ರಮಿಕನ ಬೆಲೆ

    ಶ್ರಮದ,ಶ್ರಮಿಕನ ಬೆಲೆಯನ್ನು ಅರ್ಥಪೂರ್ಣವಾಗಿ ಬಾಲ್ಯದಲ್ಲೇ ಮನದಟ್ಟು ಮಾಡಿದ ಆಶ್ರಮದ ಜೀವನ,ನನ್ನಂತಹ ಲಕ್ಷಾಂತರ ಗ್ರಾಮೀಣ ಹುಡುಗ,ಹುಡುಗಿಯರ ಮನಸ್ಟ್ರೈರ್ಯ ಹೆಚ್ಚಿಸಿ, ಇಂದಿನ ಜೀವನಗಳನ್ನು ರೂಪಿಸಿಕೊಳ್ಳುವಲ್ಲಿ ಸಹಕಾರಿಯಾಗಿದೆ. ಬಹುಮುಖಿಯಾಗಿ ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ನಮ್ಮ ಸ್ವಾಮೀಜಿಯವರ ಬದ್ಧತೆ,ರೂಪುರೇಷಗಳು, ಮುಂದಿನ ನೂರಾರು ವರ್ಷಗಳವರೆಗೆ ಬರುವ ಜನಾಂಗಕ್ಕೆ ಮಾದರಿಯಾಗಬಲ್ಲದು. ಅಂತಹ ಅನೇಕ ಮುಖಗಳಲ್ಲಿ, ಯೋಗ ಒಂದೇ ಅಷ್ಟೇ.

    ನಿರಂತರ ಪ್ರಾಣಾಯಾಮದಿಂದ ಮೂಲಾಧಾರದಲ್ಲಿ ಸಿಂಬೆ ಸುತ್ತಿಕೊಂಡು ಮಲಗಿರುವ ಹಾವಿನ ತರಹ ಇರುವ ಕುಂಡಲಿನಿ ಶಕ್ತಿ ಜಾಗೃತಗೊಂಡು ಉರ್ಧ್ವಮುಖವಾಗಿ ಚಲಿಸಿ,ಏಳು ಚಕ್ರಗಳನ್ನು ಉದ್ದೀಪನಗೊಳಿಸಿ, ತಲೆಯ ಸುಳಿಯಲ್ಲಿರುವ ಬ್ರಹ್ಮ ರಂಧ್ರದ ಮೂಲಕ ಸಹಸ್ರಾರ ತಲುಪಿದಾಗ ಪಡೆಯುವ ಆನಂದಕ್ಕೆ ಸಮನಾದದ್ದು ಯಾವುದೂ ಇಲ್ಲ.ಇದನ್ನೇ ತಿಳಿದವರು ಬ್ರಹ್ಮಾನಂದ ಎಂದಿದ್ದಾರೆ.ಈ ಸ್ಥಿತಿಯನ್ನು ಪ್ರತಿಯೊಬ್ಬರೂ ಬೇಕಾದಾಗ,ಬೇಕಾದಷ್ಟು ಅನುಭವಿಸುವ ಸಿದ್ಧಿಯನ್ನು ಸಿದ್ಧಿಸಿಕೊಳ್ಳಬಹುದು ಎಂದು ಸ್ವಾಮಿಗಳು ಯೋಗದ ಮಹತ್ವವನ್ನು ಹೇಳುತ್ತಿದ್ದರೆ, ನನಗೆ ಸಾಕ್ಷಾತ್ ಭಗವಂತ ಯೋಗಾಚಾರ್ಯನಾಗಿ ಉಪದೇಶಿಸುತ್ತಿದ್ದಾನೆ ಎನ್ನುವಂತಹ ಅನುಭೂತಿ!

    ಆ ಕುಗ್ರಾಮದಲ್ಲಿ ಗ್ರಾಮೀಣ ಶಿಬಿರಾರ್ಥಿಗಳ ಮುಂದೆ ಅವರಾಡುತ್ತಿದ್ದ ಮಾತುಗಳು,ಭಗವಂತನ ಸನ್ನಿಧಿಗೆ ನೇರವಾಗಿ ಇರುವ ರಾಜಮಾರ್ಗ ಆಗಿದ್ದವು ಎಂದು ನಾನು ಅರಿತು,ಆ ಕುರಿತಾಗಿ ಸ್ವಾಮಿಗಳ ಮುಂದೆ ವಿನಮ್ರನಾಗಿ ನನ್ನ ಸಂದೇಹಗಳನ್ನು ಹೇಳಬೇಕು ಎನ್ನುವಷ್ಟರಲ್ಲಿ ನಮ್ಮಿಂದ ಬಹುದೂರ ಹೊರಟು ಹೋಗಿದ್ದರು ನಮ್ಮ ಸ್ವಾಮಿಗಳು.

    ಆತ್ಮ,ಪರಮಾತ್ಮ ಬಾಹ್ಯ ಇಂದ್ರಿಯಗಳಿಗೆ ತಾಕದ ವಿಷಯಗಳು,ಅವುಗಳನ್ನು ಏನಿದ್ದರೂ ಅನುಭವಿಸಿಯೇ ಸವಿಯಬೇಕು. ಹಾಗೆಯೇ ಇವುಗಳನ್ನು ಒಂದುಮಾಡಲು ಬೇಕಿರುವ ಸಾಧನೆಯೇ ಯೋಗ. ಇದರಲ್ಲೂ ಇಡ, ಪಿಂಗಳ,ಸುಷುಮ್ನಾ ಎನ್ನುವ ನಾಡಿಗಳೂ, ಏಳು ಚಕ್ರಗಳೂ ಯಾವ ಇಂದ್ರಿಯಗಳಿಗೂ ಕಾಣಲಾರವು,ವಿಜ್ಞಾನದ ಯಾವ ಸಾಮಗ್ರಿಗಳಿಗೂ ಕೂಡ. ಇವೆಲ್ಲವನ್ನೂ ಅನುಭವಿಸಿಯೇ ಆನಂದಿಸಬೇಕು ಎನ್ನುವಂತಹ ಅಪರ ಜ್ಞಾನವನ್ನು ಸರಳವಾಗಿ ತಿಳಿಸಿ,ಆತ್ಮಾಭಿಮಾನದ ಶ್ರದ್ಧೆಯನ್ನು ಕಲಿಸಿದ ,ಅಕ್ಷರಶಃ ಜೋಳಿಗೆ ಹಿಡಿದು,ಭಿಕ್ಷೆ ಬೇಡಿ ನಮ್ಮನ್ನೆಲ್ಲ ಸಾಕಿ ಸಲುಹಿದ ಶ್ರೀ ಗಳನ್ನು ಬರೀ ಭಗವಂತ ಎನ್ನಲೇ? ಸಾಕಾಗಲಿಕ್ಕಿಲ್ಲ,ಅವರ ಪೂರ್ಣ ವಿವರಣೆ ಕೊಡುವ ಏಕ ಶಬ್ದ ಇನ್ನೂ ಯಾವ ಭಾಷೆಯಲ್ಲಿ ಬಂದಿಲ್ಲ.

    ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ನನ್ನ ಯೋಗಾಚಾರ್ಯರಿಗೆ ನೆನಪಿನ ಶ್ರದ್ಧಾಂಜಲಿ….

    ಇದನ್ನೂ ಓದಿ: ವಿಶ್ವ ಯೋಗ ದಿನದಂದು ಮಲ್ಲಾಡಿಹಳ್ಳಿ ಸ್ವಾಮೀಜಿ ನೆನಪಾದರು

    ವಿಶ್ವ ಯೋಗ ದಿನದಂದು ಮಲ್ಲಾಡಿಹಳ್ಳಿ ಸ್ವಾಮೀಜಿ ನೆನಪಾದರು

    ಇವತ್ತು ವಿಶ್ವಯೋಗ ದಿನ. ನಮ್ಮ ಪರಂಪರೆಯ ಯೋಗಕ್ಕೆಇಂದು ವಿಶ್ವಮಾನ್ಯತೆ.ಆದರೆ ಇದಾವುದು ಇಲ್ಲದ ದಿನಗಳಲ್ಲಿ ನಮ್ಮ ನಡುವಿನ ಸಂತರೊಬ್ಬರು ಅದನ್ನು ತಪಸ್ಸಿನಂತೆ ಆಚರಿಸಿ ಸಹಸ್ರಾರು ಯೋಗ ಪಟುಗಳನ್ನು ನಾಡಿಗೆ ನೀಡಿದರು. ಅವರೇ ತಿರುಕ ಎಂದು ತಮ್ಮನ್ನು ತಾವೇ ಕರೆದುಕೊಂಡು ಜೋಳಿಗೆಯ ಮೂಲಕ ಪವಾಡವನ್ನೇ ಮಾಡಿದ  ನಮ್ಮ ಮಲ್ಲಾಡಿಹಳ್ಳಿಯ  ಶ್ರೀ ರಾಘವೇಂದ್ರ ಸ್ವಾಮೀಜಿ.

    ಹೆಸರಾಂತ  ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ ಅವರು ತಿರುಕರ ಜೋಳಿಗೆಯ ಪವಾಡ ಆಧರಿಸಿ ಚಲನಚಿತ್ರ ಮಾಡುತ್ತಿದ್ದಾರೆ. ಇಂದು ಈ ಚಿತ್ರದ ಹಾಡುಗಳ ಲೋಕಾರ್ಪಣೆಯೂ ಆಗಿದೆ. ಈ ಹಾಡನ್ನು ನೋಡಲೆಂದು ಯೂ ಟ್ಯೂಬ್ ಗೆ ಹೋದಾಗ ಸ್ವಾಮೀಜಿಯವರ ಹಲವು ವಿಡಿಯೋಗಳು ಸಾಲುಗಟ್ಟಿ ಬಂದವು. ಹಾಗೆಯೆ ನನ್ನ ನೆನಪು ನಲುವತ್ತು ನಲವತ್ತೈದು ವರುಷಗಳ ಹಿಂದಕ್ಕೆ ಓಡಿತು. ಬಾಲ್ಯದಲ್ಲಿ ನಾನು ಕಂಡ ತಿರುಕರ ಬಗ್ಗೆ ನಮ್ಮ ಓದುಗರೊಂದಿಗೆ ಹಲವು ಸಂಗತಿಗಳನ್ನು ಹಂಚಿಕೊಳ್ಳಬೇಕೆಂದು ಈ ನಾಲ್ಕು ಸಾಲು.

    ನಮ್ಮೂರು ಸಂತೇಬೆನ್ನೂರು. ಮಲ್ಲಾಡಿಹಳ್ಳಿಗೆ ಬಹಳ ಹತ್ತಿರ. ಪತ್ರಿಕೋದ್ಯಮಕ್ಕೆ ಹಾಗೂ ಸಮಾಜ ಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳುವ ಮೊದಲು ನನ್ನ ಅಪ್ಪ ಸತ್ಯನಾರಾಯಣ ನಾಡಿಗ್ ಆ ಊರಿನಲ್ಲಿ ಕೆಲ ಕಾಲ ಪೋಸ್ಟ್ ಮಾಸ್ಟರ್ ಆಗಿದ್ದರಂತೆ. ಅಲ್ಲದೆ ನಮ್ಮ ತಾಯಿ ರಮಾ ನಾಡಿಗ್ ಅವರ ತಂದೆ ಗುರುರಾವ್ ದೇಶಪಾಂಡೆ ಆಶ್ರಮದಲ್ಲಿ ಆರಂಭವಾದ ಶಿಕ್ಷಕ ತರಬೇತಿ ಶಾಲೆಯ ಮೊದಲ ಪ್ರಿನ್ಸಿಪಾಲ್. ಜೊತೆಗೆ ನಮ್ಮ ಮಾವ ಗೋಪಿನಾಥ ರಾವ್ ದೇಶಪಾಂಡೆ ಕೂಡ ಆಶ್ರಮದ ಹೈಸ್ಕೂಲಿನಲ್ಲಿ ಉದ್ಯೋಗಿ. ಹೀಗಾಗಿ ಬಾಲ್ಯದಲ್ಲೇ ನನಗೆ ಸ್ವಾಮೀಜಿಯವರ ಸಂಪರ್ಕ.

    ನಮ್ಮೂರಿನಿಂದ ಗುರುರಾಜ ಬಸ್ ಹತ್ತಿದರೆ ಮುಕ್ಕಾಲು ಗಂಟೆಗೆ ಅದು ಮಲ್ಲಾಡಿಹಳ್ಳಿ ಸೇರುತಿತ್ತು. ಬಸ್ ಇಳಿದು ಹಿಂಬದಿ ಗೇಟಿನ ಮೂಲಕವೇ ನಾವು ಆಶ್ರಮ ಪ್ರವೇಶ ಮಾಡುತ್ತಿದ್ದದ್ದು. ಆಶ್ರಮಮಕ್ಕೆ ದೊಡ್ಡ ಗೇಟಿನ ಪ್ರವೇಶ ದ್ವಾರವೂ ಇತ್ತು. ಆ ದ್ವಾರದಿಂದ ಹೋಗಬೇಕಾದರೆ ಬಸ್ ನಿಲ್ದಾಣದಿಂದ ಒಂದು ನಾಲ್ಕು ಹೆಜ್ಜೆ ಹೆಚ್ಚು ಹಾಕಬೇಕಿತ್ತು. ಹೀಗಾಗಿ ಈ ಶಾರ್ಟ್ ಕಟ್ . ಪ್ರಧಾನ ದ್ವಾರದಲ್ಲಿ ಅನಾಥ ಸೇವಾಶ್ರಮ ವಿಶ್ವಸ್ತ ಸಮಿತಿ  ಎಂಬ ಫಲಕ ಅದರ ಕೆಳಗೆ ರಾಜಕೀಯಕ್ಕೆ ಪ್ರವೇಶವಿಲ್ಲ ಎಂಬ ಸಬ್ ಟೈಟಲ್. ಸ್ವಾಮೀಜಿ ಅದೇ ರೀತಿ ನಡೆದುಕೊಂಡರೂ ಕೂಡ.

    ಸುಂದರ ಸ್ವಚ್ಛ ಶಿಸ್ತುಬದ್ಧ

    ನಲವತ್ತು –ನಲವತ್ತೈದು ವರುಷಗಳ ಹಿಂದಿನ ಹಳ್ಳಿಗಳನ್ನು ನೆನಪು ಮಾಡಿಕೊಳ್ಳಿ. ಕಿರಿದಾದ ರಸ್ತೆಗಳು. ಪಕ್ಕದಲ್ಲೇ ಕೊಳಚೆ ನೀರಿನ ಮೋರಿ..ಹಸು ಕರುಗಳ ಗಂಜಲ ಸೆಗಣಿ. ಇವು ಸಾಮಾನ್ಯ ದೃಶ್ಯಗಳು.   ಇಂಥ ದಾರಿಗಳನ್ನು ಕ್ರಮಿಸಿ ಆಶ್ರಮ ಪ್ರವೇಶಿಸಿದ ಕೂಡಲೆ ನನಗಂತೂ ಸುಂದರ ಟೌನ್ ಷಿಪ್ ಗೆ ಬಂದ ಅನುಭವ. ನಗರವೊಂದರ ಸುಂದರ ಬಡಾವಣೆ ಕಂಡಂತ ಫೀಲಿಂಗ್.  ಕಸ ಕಡ್ಡಿಗಳೇ ಕಾಣದ  ಆಶ್ರಮದ ಒಳಗಿನ ರಸ್ತೆಗಳು. ಸಾಲು ವಸತಿ ಗೃಹಗಳು, ಸ್ಕೂಲು ಕಾಲೇಜು ಕಟ್ಟಡಗಳು, ಮಕ್ಕಳು ಆಡಲೆಂದು ಮಕ್ಕಳರಾಜ್ಯ …ಹೀಗೆ ಎಲ್ಲವೂ ಸುಂದರ ,ಸ್ವಚ್ಛ ,ಶಿಸ್ತುಬದ್ಧ.

    ಮಲ್ಲಾಡಿಹಳ್ಳಿಗೆ ಹೋದ ದಿನ ಸಂಜೆ ಸ್ವಾಮೀಜಿ ಅವರನ್ನು ಭೇಟಿ ಮಾಡಲೇಬೇಕು. ಸಂಜೆಯ ವೇಳೆಗೆ ಅವರು ತಮ್ಮ ತಪೋವನದಲ್ಲಿರುತ್ತಿದ್ದರು. ಅಲ್ಲಿಗೆ ಹೋಗುವ ಮಾರ್ಗವೂ ಸುಂದರ. ಸ್ವಾಮೀಜಿ ಅನೇಕ ಪ್ರಾಣಿಗಳನ್ನು ಸಾಕಿದ್ದರು. ಅಲ್ಲಿ ಜಿಂಕೆಗಳೂ ಇದ್ದವು. ನವಿಲುಗಳು ಇದ್ದವು. ಹಲವಾರು ಪಕ್ಷಿಗಳೂ ಇದ್ದವು. ಸುತ್ತಲೂ ಹಸಿರು. ಇದನ್ನು ದಾಟಿಕೊಂಡು ಹೋದರೆ ಸ್ವಾಮೀಜಿ ವಾಸಿಸುತ್ತಿದ್ದ ಗಾಂಧೀ ಮಂದಿರ.

    ನಮ್ಮನ್ನು ನೋಡಿದ ಕೂಡಲೆ ಸ್ವಾಮೀಜಿ ಅವರಿಂದ ಮುಗಳು ನಗೆಯ ಸ್ವಾಗತ. ನಾವು ಮೊದಲು ಮಾಡುತ್ತಿದ್ದ ಕೆಲಸ ಅವರ ಕಾಲಿಗೆರುವುದು. ಸ್ವಾಮೀಜಿ ಕೂಡ ಅಷ್ಟೇ ಪ್ರೀತಿಯಿಂದ ನಮ್ಮನ್ನು ಸ್ಪರ್ಶಿಸಿ ತಮ್ಮ ಕಣ್ಣಿಗೆ ಒತ್ತುಕೊಳ್ಳುತ್ತಿದ್ದರು. ನಮ್ಮ ಅಮ್ಮನನ್ನು ಕಂಡರೆ ಅವರು ಪ್ರೀತಿಯಿಂದ  ಕೆಪಿ ರಮಾ ಎಂದು ಹಾಸ್ಯ ಮಾಡುತ್ತಿದ್ದರು. ನಮ್ಮ ಅಮ್ಮ ನೋಡಲು  ತುಂಬಾ ತೆಳ್ಳಗೆ ಇದ್ದುದು ಅವರು ಹಾಗೆ ಕರೆಯಲು ಕಾರಣ. ಕೆಪಿ ಅಂದರೆ ಕಡ್ಡೀ ಪೈಲ್ವಾನ್! ಆಮೇಲೆ  ನಮಗೆ ಹುಡುಗರಿಗೆ ಸ್ವಾಮೀಜಿ ಏನಾದರು ಹಣ್ಣು ಕೊಡಲೇ ಬೇಕು. ಅವರ ಕೈಗೆಟುಕುವಂತೆ ಹಣ್ಣು ಸಿಗದಿದ್ದರೆ  ಹುಡುಕಿ ತಂದು ಕೊಡುತ್ತಿದ್ದರು. ಅಕ್ಕ ಪಕ್ಕದಲ್ಲಿ ನೂರಾರು ಶಿಷ್ಟಕೋಟಿ ಇರುವ ಮಹಾ ಸ್ವಾಮೀಜಿಗಳನ್ನೇ ಹೆಚ್ಚಾಗಿ ಕಂಡಿರುವ ನಮಗೆ ಇಂಥ ಗಾಂಧೀವಾದಿ ಸ್ವಾಮೀಜಿ ಬಹುಶಃ ಇನ್ನೆಲ್ಲಿ ಸಿಗಬೇಕು.? ಒಮ್ಮೊಮ್ಮೆ ಸ್ವಾಮೀಜಿ ಅವರು ಧ್ಯಾನ ಮಾಡುವ ಸ್ಥಳಕ್ಕೂ ನಮಗೆ ಪ್ರವೇಶ ಸಿಗುತ್ತಿತ್ತು. ನೆಲಮಾಳಿಗೆಯಲ್ಲಿದ್ದ ಸ್ಥಳ ಅದು. ಅಲ್ಲಿನ ಆ ವಾತಾವರಣ ಮತ್ತು ಅದರಿಂದ ಸಿಗುತ್ತಿದ್ದ ಪಾಸಿಟವ್ ಎನರ್ಜಿ ನನಗೆ ಇನ್ನೂ ಕಣ್ಣಿಗೆ ಕಟ್ಟಿದಂತಿದೆ.

    ಶಿವರಾತ್ರಿ ಸಮಯದಲ್ಲಿ ಆಶ್ರಮದ ವಾರ್ಷಿಕೋತ್ಸವ. ಅಂದು ವ್ಯಾಸಪೀಠದಲ್ಲಿ (ಆಶ್ರಮದ ಆರಂಭದಲ್ಲೇ ಇರುವ ಬಯಲು ಸಭಾಂಗಣ) ಭರ್ಜರಿ ಫಂಕ್ಷನ್. ಮೂರು ದಿನ ಸಾಂಸ್ಕೃತಿಕ ಉತ್ಸವ. ನೂರಾರು ವಿದ್ವಾಂಸರ ಉಪನ್ಯಾಸ. ಈ ದಿನಗಳಲ್ಲಿ ಸ್ವಾಮೀಜಿ ಅವರಿಂದ ಅದ್ಭುತ ಯೋಗಪ್ರದರ್ಶನ. ಅದನ್ನು ನೋಡಲು ಎರಡೂ ಕಣ್ಣು ಸಾಲದು. ಕೊನೆಯಲ್ಲಿ ಸ್ವಾಮೀಜಿ  ಶಿಸ್ತಿನ ಮಹತ್ವವನ್ನು ಆಶ್ರಮದ ವಿದ್ಯಾರ್ಥಿಗಳ ಜೊತೆ ವ್ಯಾಯಾಮದ ಮೂಲಕವೇ ಮನವರಿಕೆ ಮಾಡಿಕೊಡುತ್ತಿದ್ದರು. ಬಾಲ್ಯದಲ್ಲಿ ಇದನ್ನು ನೋಡುವುದೇ ನಮಗೆ ಕೌತುಕ. ಸ್ವಾಮೀಜಿ ನಮಗೆ ಸಿದ್ಧಪುರುಷನಂತೆ ಕಾಣಿಸಿದರು. ಆದರ್ಶ ಪ್ರಾಯರಾದರು. ಸ್ವಾಮೀಜಿ ತಮ್ಮನ್ನು ಎಂದೂ ಸ್ವಾಮೀಜಿ ಎಂದು ಕರೆದುಕೊಳ್ಳಲೇ ಇಲ್ಲ. ಅವರ ಪಾಲಿಗೆ ಅವರು ಬಾ. ರಾಘವೇಂದ್ರ ಅಷ್ಟೇ. (ಬಾ ಎಂದರೆ ಅವರ ಊರು ಬಾರ್ಕೂರು) .ಭಕ್ತರು ಅವರಿಗೆ ಪ್ರೀತಿಯಿಂದ  ಸ್ವಾಮೀಜಿ ಪಟ್ಟ ಕಟ್ಟಿದರು.

    ಹಲವು ಗಿಡಮೂಲಿಕೆಗಳ ಸಂಗಮ

    ಆಶ್ರಮದಲ್ಲೊಂದು ವ್ಯಾಯಮ ಶಾಲೆ ಇತ್ತು. ಆ ಗರುಡಿ ಮನೆಯೇ ವಿಶಿಷ್ಟ. ಅಲ್ಲಿದ್ದ ಕೆಂಪು ಮಣ್ಣು ಆಯುರ್ವೇದದ ಹಲವು ಗಿಡಮೂಲಿಕೆಗಳ ಸಂಗಮ. ಆ ಮಣ್ಣಿನಲ್ಲಿ ಮಿಂದೆದ್ದರೆ ಎಂಥ ರೋಗಗಳೂ ಪರಿಹಾರ.  ಸ್ವಾಮೀಜಿ ಆಶ್ರಮಕ್ಕಾಗಿ ಇಡೀ ವಾರ ಸಂಚಾರದಲ್ಲೇ ಇರುತ್ತಿದ್ದರು. ಆಶ್ರಮ ನಡೆಯಬೇಕೆಂದರೆ ಅವರು ಊರೂರು ಸುತ್ತಿ ಜೋಳಿಗೆ ಹಿಡಿಯಬೇಕು. ಆದರೆ ಭಾನುವಾರ ಸಂಜೆ ಎಲ್ಲಿದ್ದರೂ ಅವರು ಆಶ್ರಮಕ್ಕೆ ಬರಲೇ ಬೇಕು. ಪ್ರತಿ ಸೋಮವಾರ ಅವರು ಆಯುರ್ವೇದ ಆಸ್ಪತ್ರೆಯಲ್ಲಿ ರೋಗಿಗಳಿಗೆ ಔಷಧ ಕೊಡುತ್ತಿದ್ದರು. ಎಂಥ ರೋಗವಿದ್ದರೂ ಸ್ವಾಮೀಜಿ ಕೊಡುವ ಔಷಧಿಗೆ ಅದು ಮಣಿಯಲೇಬೇಕು. ಬೆಳಿಗ್ಗೆ ನಾಲ್ಕಕ್ಕೆ ಆರಂಭವಾಗುವ ಆಸ್ಪತ್ರೆ ಒಮ್ಮೊಮ್ಮೆ ಸಂಜೆ ನಾಲ್ಕರವರೆಗೂ ನಿರಂತರವಾಗಿ ನಡೆದದ್ದು ಉಂಟು. ಎಲ್ಲಾ ರೋಗಿಗಳನ್ನು ನೋಡುವವರೆಗೂ ಸ್ವಾಮೀಜಿ  ಏನನ್ನೂ ಸೇವಿಸುತ್ತಿರಲಿಲ್ಲ.  ರೋಗಿಗಳನ್ನು ನೋಡುವುದು ಮುಗಿದ ಮೇಲೆಯೇ ಅವರ ಆಹಾರ ಸೇವನೆ. ಸ್ವಾಮೀಜಿ ಎಲ್ಲಾ ಔಷಧವನ್ನು ಆ ದಿನದಲ್ಲಿಉಚಿತವಾಗಿ ನೀಡುತ್ತಿದ್ದರು. ಸೇವೆ ಎಂದರೆ ಇದೇ  ಅಲ್ಲವೇ. ಪ್ರತಿಯೊಬ್ಬ ರೋಗಿಯನ್ನು ಪರೀಕ್ಷಿಸುವ ಮೊದಲು ಅವರನ್ನು ಕಣ್ಣಿಗೆ ಒತ್ತಿಕೊಳ್ಳುತ್ತಿದ್ದ ಸ್ವಾಮೀಜಿ ರೋಗಿಗಳಲ್ಲಿ ದೇವರನ್ನು ಕಾಣುತ್ತಿದ್ದರು. ಇಂದು ಆಯುರ್ವೇದವೂ ಬ್ರ್ಯಾಂಡ್ ಆಗಿ  ಹಣದ ದಂಧೆ ಆಗಿರುವುದನ್ನು ಕಂಡಾಗ ನಮ್ಮ ಸ್ವಾಮೀಜಿ ಮತ್ತಷ್ಟು ಎತ್ತರವಾಗಿ ಕಾಣುತ್ತಾರೆ.

    ಯೋಗಕ್ಕಾಗಿಯೇ ಆ ದಿನದಲ್ಲಿ ವಿಶ್ವ ಯೋಗ ಕೇಂದ್ರವನ್ನು ಕಟ್ಟಿದರು. ಅದರ ಉದ್ಘಾಟನಗೆ ವರನಟ ಡಾ. ರಾಜ್ ಕುಮಾರ್ ಬಂದಿದ್ದರು. ನಾನು ರಾಜ್‌ಕುಮಾರರನ್ನು ಮೊದಲು ನೋಡಿದ್ದು ಅಲ್ಲಿಯೇ. ಹಲವಾರು ಗಣ್ಯರನ್ನು ನೋಡುವ ಅವಕಾಶ ಬಾಲ್ಯದಲ್ಲೇ ನಮಗೆ ಸಿಗಲು ಮಲ್ಲಾಡಿಹಳ್ಳಿ ಆಶ್ರಮವೇ ಕಾರಣ. ದೇವರಾಜ ಅರಸು, ಉದಯಕುಮಾರ್, ಬಾಲಕೃಷ್ಣ, ದ.ರಾ ಬೇಂದ್ರೆ, ತರಾಸು ಹೀಗೆ ಹಲವರನ್ನು ನೋಡುವ ಅವಕಾಶ ಕೊಟ್ಟಿದ್ದು ಆಶ್ರಮ.

    ಶಿಸ್ತಿಗೆ ಮತ್ತೊಂದು ಹೆಸರು ಸ್ವಾಮೀಜಿ. ಆಶ್ರಮದಲ್ಲಿರುವ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ನಾಲ್ಕಕ್ಕೆಲ್ಲಾ ಸೂರ್ಯ ನಮಸ್ಕಾರ ಕಡ್ಡಾಯ. ಶಿಸ್ತು ಪಾಲಿಸದವರು ಶಿಕ್ಷೆ ತಪ್ಪಿಸಿಕೊಳ್ಳುವಂತೆಯೇ ಇಲ್ಲ. ಒಂದು ಚಡ್ಡಿ ಅದರ ಮೇಲೆ  ಅರ್ಧ ತೋಳಿನ ಜುಬ್ಬ ಇದೇ ಸ್ವಾಮೀಜಿಯವರ ಉಡುಪು. ಹೊಸದಾಗಿ ಆಶ್ರಮಕ್ಕೆ ಬರುವವರು ಸ್ವಾಮೀಜಿ ಅವರ ಬಳಿಯೇ ಸ್ವಾಮೀಜಿ ಅವರು ಎಲ್ಲಿ ಸಿಗುತ್ತಾರೆ ಎಂದು ವಿಚಾರಿಸಿದ್ದು ಉಂಟು.

    ಸ್ವಾಮೀಜಿ ಅವರಿಗೆ ಸರಿ ಸಮವಾಗಿ ಸಾಥ್ ಕೊಟ್ಟಿದ್ದು ಸೂರ್‌ದಾಸ್ ಜೀ . ಅವರು ಕೂಡ ಸ್ವಾಮೀಜಿ ಯಂತೆ ತಮ್ಮ ಜೀವನವನ್ನೇ ಆಶ್ರಮಕ್ಕೆ ಮುಡುಪಾಗಿಟ್ಟವರು. ಊರಿನಲ್ಲಿ ಇದ್ದಾಗ  ಸ್ವಾಮೀಜಿ ಅವರನ್ನು ಆಶ್ರಮದ ಒಳಗೆ ಎಲ್ಲೆಡೆಯೂ ನೀವು ಕಾಣಬಹುದಿತ್ತು. ‌ಅವರು ಆಶ್ರಮದ ಹೊರಗೆ ಕಾಣ ಸಿಗುತ್ತಿದ್ದದ್ದು ಅಪರೂಪ. ಆದರೆ ಸೂರ್‌ದಾಸರು ಹಾಗಲ್ಲ. ಮಲ್ಲಾಡಿಹಳ್ಳಿಯ ಎಲ್ಲೆಡೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರುತ್ತಿದ್ದರು.ನಾರಣಪ್ಪನ ಬೇಕರಿ ಮುಂದೆ ಕಾಡ ಹರಟೆ ಮಾಡುವ ವಿದ್ಯಾರ್ಥಿಗಳಿರಲಿ,ಸ್ನಾನ ಘಟ್ಟದ ಬಳಿ ಟೈಮ್ ವೇಸ್ಟ್ ಮಾಡುವ ಹುಡುಗರಿರಲಿ , ಹಳ್ಳದ ಏರಿಯ ಮೇಲೆ ಟೈಮ್ ಪಾಸ್ ಗೆ ಹೋದವರಾಗಲಿ ಸೂರದಾಸ್‌ಜೀ ಅವರ  ಕಣ್ಣು ತಪ್ಪಿಸಲು ಆಗುತ್ತಿರಲಿಲ್ಲ

    ನಾನು ಉದ್ಯೋಗಕ್ಕೆಂದು ಬೆಂಗಳೂರಿಗೆ ಬಂದ ಮೇಲೆ ಆಶ್ರಮದ ಸಂಪರ್ಕ ಸ್ವಲ್ಪ ಕಡಿಮೆ ಆಯಿತು. ಇದ್ದಕ್ಕಿದ್ದಂತೆ ಒಂದು ದಿನ ಸ್ವಾಮೀಜಿ ತೀರಿಕೊಂಡ ಸುದ್ದಿ ಬಂತು. ನಾನಾಗ ಕನ್ನಡಪ್ರಭ ಪತ್ರಿಕೆಯಲ್ಲಿ ಪತ್ರಕರ್ತ. ವೈಯ್ಯಾಲಿಕಾವಲ್ ನ ಭಕ್ತರೊಬ್ಬರ ಮನೆಯಲ್ಲಿ ಸ್ವಾಮೀಜಿ ಅವರ ಪಾರ್ಥೀವ ಶರೀರ ಇತ್ತು. ಅಂತಿಮ ದರ್ಶನ ಪಡೆದುಕೊಂಡು ಬಂದೆ. ಇದಾದ ಕೆಲವೇ ವರುಷಗಳಲ್ಲಿ ಸೂರ್‌ದಾಸರು ಕೂಡ ನಮ್ಮನ್ನು ಅಗಲಿದರು.

    ಯಾವುದೇ ಪ್ರಶಸ್ತಿಗೆ, ಆಡಂಬರಕ್ಕೆ, ವಿಶ್ವ ಪ್ರಸಿದ್ಧರಾಗಬೇಕೆಂಬ ಬಯಕೆ ಇಲ್ಲದೆ ಕೇವಲ ಸೇವೆಯ ದೀಕ್ಷೆಯೊಂದಿಗೆ ಬಾಳಿ ಬದುಕಿದ ಪುಣ್ಯಾತ್ಮ ನಮ್ಮ ಸ್ವಾಮೀಜಿ.  ನಿರ್ದೇಶಕ ಪಲ್ಲಕ್ಕಿ ಇಂದು ಬಿಡುಗಡೆ ಮಾಡಿದ ಜೋಳಿಗೆಯ ಪವಾಡಕ್ಕಾಗೆ ಡಾ. ಎಚ್  ಎಸ್ ವಿ ಬರೆದ ಗೀತೆ ಕೇಳಿ  ಸ್ವಾಮೀಜಿ ಮತ್ತೆ ನೆನಪಾದರು.

    ಹೆಚ್ಚಿನ ಮಾಹಿತಿಗಾಗಿ ಜೋಳಿಗೆಯ ಪವಾಡದ ಹಾಡಿನ ಕೊಂಡಿ ಮತ್ತು ಸದ್ಗುರು ಜಗ್ಗಿ ವಾಸುದೇವ್  ಸ್ವಾಮೀಜಿ ಅವರು ಹೇಳಿರುವ ಮಾತುಗಳ ಯೂ ಟ್ಯೂಬ್ ಲಿಂಕ್ ಕೂಡ ಇಲ್ಲಿದೆ.

    ವಿಶ್ವಯೋಗದಿನದಂದು ಕರುನಾಡುಕಂಡ ಈ ಮಹಾನ್ ಯೋಗಿಗೆ ಭಕ್ತಿ ಪೂರ್ವಕ ನಮನ.

    ಇದನ್ನೂ ಓದಿ : ಭಗವಂತ ಎನ್ನಲೆ… ಸಾಕಾಗಲಿಕ್ಕಿಲ್ಲ

    ನಾನು ಕಂಡ ಮೊದಲ ಸಾಹುಕಾರ: ಅಪ್ಪನ ಬಗ್ಗೆ ಮಾಸ್ತಿ ಆಪ್ತ ಬರಹ

    ಕನ್ನಡ ಪ್ರೆಸ್.ಕಾಮ್ ನ ತಮ್ಮ ಮೊದಲ ಅಂಕಣದಲ್ಲಿ ಸಂಭಾಷಣೆಗಾರ ಮಾಸ್ತಿ ಅಪ್ಪನ ಬಗ್ಗೆ ಈ ಆಪ್ತ ಬರಹ ಬರೆದಿದದ್ದರು. ಅಪ್ಪಂದಿರ ದಿನದ ಅಂಗವಾಗಿ ಅದನ್ನು ಮತ್ತೊಮ್ಮೆ ಪ್ರಕಟಿಸುತ್ತಿದ್ದೇವೆ. ನಿಮ್ಮ ಅಪ್ಪನ ಬಗ್ಗೆ ನಿಮ್ಮ ಭಾವನೆಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಿ.

    ಮಾತಾಡಿಸ್ತಿದ್ರು …..ವಿಚಾರಿಸ್ತಿದ್ರು …..ತಮಾಷೆ ಮಾಡ್ತಿದ್ರು …..ನಗಿಸ್ತಿದ್ರು …..ಅವರು ಊಟಕ್ಕೆ ಕೂರ್ತಿದಿದ್ದೇ ಮಕ್ಕಳು ತಿಂದ್ರ ಅಂತ ಕೇಳ್ತಾ , ಅವರು ತಿಂತಾ ನಮ್ಮನ್ನ ಕರೆದು ತಟ್ಟೆಯಲ್ಲಿದ್ದ ತರಕಾರೀನೋ , ಒಂದು ತುತ್ತು ಅನ್ನಾನೋ ತಿನ್ನಿಸ್ತಿದ್ರು . ನಮಗೆ ಮೊದಲು ಹೋಟೆಲ್ಲಿಗೆ ಕರ್ಕೊಂಡು ಹೋಗಿದ್ದವರು , ಮೊದಲ ಡ್ರಾಮಾ ಮೊದಲ ಸಿನಿಮಾ ಮೊದಲ ಸರ್ಕಸ್ ತೋರಿಸಿದ್ದವರು ,ನಮ್ಮ ಮೊದಲ ಹೀರೋ ಅವರು, ಟೂರು ಹೊಡೆಸಿದ್ದವರು ,ಅಟಿಕೆ ಕೊಡಿಸಿದ್ದವರು , ಬಟ್ಟೆ ಹೊಲಿಸಿದ್ದವರು , ನಾವು ಕಂಡ ಮೊದಲ ಸಾಹುಕಾರ ಅಪ್ಪ .

     ಅವರ ಜೇಬಿನಲ್ಲಿ ಸದಾ ದುಡ್ಡಿರುತ್ತಿತ್ತು , ಮನೆಯ ದಿನಸಿಗೇ ಆಗಲಿ ನಮ್ಮ ಮುನಿಸಿಗೇ ಆಗಲಿ ನನ್ ಷರ್ಟ ತಗೊಂಡ್ ಬಾ ಅನ್ನೋವ್ರು ಅದರಿಂದ ದುಡ್ಡು ತೆಗೆದು ಕೊಡೋವ್ರು , ನಮ್ಮ ಮೊದಲ ಪಾಕೆಟ್ ಮೊನಿ ಕೊಟ್ಟವರು , ನಮ್ಮ ಮಣ್ಣಿನ ಹುಂಡಿಗೆ ಹಣ ಹಾಕಿದವರು ಅವರು , ಅಪ್ಪ ನಮ್ಮ ಕಣ್ಣಿಗೆ ಯಾವಾಗಲೂ ಪರ್ಫೆಕ್ಟ್ , ಪಕ್ಕಾ ಜಂಟಲ್ಮನ್, ಯಾವತ್ತೂ ಐರನ್ ಬಟ್ಟೆ ಇಲ್ಲದೇ ಹೊರಗೆ ಹೋಗುತ್ತಿರಲಿಲ್ಲ ಅವರು ಹಾಕುವ ವಾಚು , ಧರಿಸುವ ಚಪ್ಪಲಿ ,ಕಟ್ಟುವ ಬೆಲ್ಟು , ಬರೆಯುವ ಪೆನ್ನು ಪ್ರತಿಯೊಂದು ವಿಶೇಷವಾಗಿ ಇರೋವು , ಅವರು ಮನೆಗೆ ಬೇಗ ಬಂದರೆ ಕೇಳುತ್ತಿದ್ದ ಪ್ರಶ್ನೆ ಮಕ್ಕಳೆಲ್ಲಿ ? ಅವರು ಲೇಟಾಗಿ ಬಂದ್ರೂ ಕೇಳುತ್ತಿದ್ದ ಪ್ರೆಶ್ನೆ ಮಕ್ಕಳು ತಿಂದ್ರ ? ಮಲಗ್ಬಿಟ್ರ ? ನಾವು ಹುಷಾರು ತಪ್ಪಿದಾಗ ಅವರು ಒದ್ದಾಡುತ್ತಿದ್ದರು , ನಮಗೆ ಗಾಯವಾದರೆ ಅವರು ನೋವು ತಿಂತಿದ್ರು .

    ಸಸಿಗಳಂತಿದ್ದ ನಾವು ಗಿಡಗಳಾಗುತ್ತಿದ್ದಂತೆ ಸಣ್ಣದಾಗಿ ಬಗ್ಗಿಸಲು ಶುರು ಮಾಡಿದರು …..ಇದು ತಿನ್ನು, ಇದು ಮಾಡು , ಇದೇ ಓದು , ಹಿಂಗೇ ಇರು , ಇದೇ ಕೋರ್ಸ್ ತಗೋ , ಹೇಳಿದ್ ಮಾತು ಕೇಳು, ಹಂಗೆಲ್ಲಾ ಮಾತಾಡ್ಬೇಡ, ನಿನಗೆ ಅರ್ಥ ಆಗಲ್ಲ, ನಿನಗೆ ಗೊತ್ತಾಗಲ್ಲ …ಹೀಗೆ ಕಿವಿ ಹಿಂಡುವುದು, ಗದರುವುದು ಶುರು ಮಾಡುತ್ತಾರೆ ….ಆಗ ನಮಗೆ ಅಪ್ಪ ಯಾಕೋ ಈ ನಡುವೆ ಸ್ವಲ್ಪ ಸ್ಟ್ರಿಕ್ಟ್ ಆದಂಗ್ ಕಾಣ್ತಾರೆ ಅಂತ ಸ್ವಲ್ಪ ಬೇಸರ ಆಗೋದು , ನಮಗೇನೇ ಬೇಕು ಅಂದ್ರೂ ಅಮ್ಮನ ಮೂಲಕವೇ ಹೇಳುವುದು ಕೇಳುವುದು ಮಾಡತೊಡಗಿದೆವು , ನಮ್ಮ ತಪ್ಪುಗಳಿಗೆ ಅಮ್ಮನನ್ನು ಬೈಯ್ಯುತ್ತಿದ್ದರು , ಎಷ್ಟೋ ಸಾರಿ ವಾದ ಮಾಡುತ್ತಿದ್ದೆವು ಆಗ ಅಮ್ಮ ಬಿಡಿಸಿ ಅವರೆದುರು ನಮ್ಮನ್ನ ಬಯ್ದು ಕಳುಹಿಸುತ್ತಿದ್ದಳು , ಅಪ್ಪನೆದರು ಮಕ್ಕಳು ಬಾಯಿ ಕೊಡುವುದು ಅಮ್ಮನಿಗೂ ಇಷ್ಟವಿರಲಿಲ್ಲ , ಅವರಿಗೆ ಗೊತ್ತು ಅಪ್ಪನ ಬದುಕಿನ ಒದ್ದಾಟ ಗುದ್ದಾಟ ಎಲ್ಲವೂ ಮನೆಗಾಗಿಯೇ ಮಕ್ಕಳಿಗಾಗಿಯೇ ಅಂತ , ಕ್ವಾರ್ಟ್ರೆಸ್ಸು ಬಾಡಿಗೆ ಲೀಸು ಆ ಮನೆ ಈ ಮನೆ ಅಂತೆಲ್ಲಾ ಒದ್ದಾಡಿ ಜಿದ್ದಿಗೆ ಬಿದ್ದು ಹೊಟ್ಟೆ ಬಟ್ಟೆ ಕಟ್ಟಿ ಹಣ ಉಳಿಸಿ ಹಣ ಹೊಂದಿಸಿ ಸಾಲ ಮಾಡಿ ಸೈಟು ತಗೊಂಡು ಓಡಾಡಿ ನಿಂತು ಒಂದು ಸ್ವಂತ ಮನೆ ಕಟ್ಟಿ , ಅಪ್ಲಿಕೇಷನ್ನು ಸೀಟು ಅಲಾಟ್ಮೆಂಟು ಡೊನೇಷನ್ನು ಎಂಬ ಹತ್ತು ಸಮಸ್ಯೆಗಳ ಮಧ್ಯೆ ಎಜುಕೇಷನ್ನು ಕೊಡಿಸಿ , ಎಂಪ್ಲಾಯ್ಮೆಂಟು ಲಾಸ್ಟ್ ಡೇಟು ಎಕ್ಸಾಮು ಇನ್ಫ್ಲೂಯೆನ್ಸು ವೇಕೆನ್ಸಿ ಅನ್ನೋ ನೂರು ಸ್ಪರ್ಧೆಗಳ ಮಧ್ಯೆ ನೌಕರಿ ಕೊಡಿಸಿ , ಸಂಬಂಧ ಹುಡುಕಿ ವಿಚಾರಿಸಿ ಹಣ ಕೂಡಿಟ್ಟು ಪತ್ರಿಕೆ ಹೊಡಿಸಿ ಚೌಟ್ರಿ ಹುಡುಕಿ ವರೊಪಚಾರ ನಿಶ್ಚಿತಾರ್ಥ ಅಂತ ಮದುವೆ ಮಾಡ್ಸಿ…. ಅಬ್ಬಾ… ಏನ್ ಸ್ಟ್ರಾಂಗ್ ಗುರೂ ನಮ್ಮಪ್ಪ ! ಅಂತ ಅಂದ್ಕೋತಿದ್ವಿ , ಇಲ್ಲ ಬೇರೆ ಯಾರಿಂದಾನೂ ಆಗಲ್ಲ ಅದು ಅಪ್ಪನಿಂದ ಮಾತ್ರ ಸಾಧ್ಯ ….ಅಪ್ಪ ಇದಾರೆ ಅಂದ್ರೆ ಧೈರ್ಯ ಅಪ್ಪ ಇದಾರೆ ಅಂದ್ರೆ ಭಯ ….ಗೌರವ ಸಂಸ್ಕಾರ ಶಿಸ್ತು ಸಾಧನೆ ಪ್ರತಿಯೊಂದಕ್ಕೂ ಉದಾಹರಣೆ ” ಅಪ್ಪ ” ಅನ್ನೋ ಮಟ್ಟಿಗೆ ಆಗಿದ್ದರು .

     ಅವರೂ ಮನುಷ್ಯರೇ ಅವರಲ್ಲೂ ಕೋಪ ಇತ್ತು ಲೋಪ ಇತ್ತು , ದುಡಿದಿದ್ರೂ ದುಡುಕಿದ್ರೂ , ನಮ್ಮನ್ನೆಲ್ಲಾ ಹೆದರಿಸ್ತಿದ್ದ ಗದರಿಸ್ತಿದ್ದ ಅಪ್ಪಾನೂ ಒಮ್ಮೊಮ್ಮೆ ತಪ್ಪು ಮಾಡಿದಾಗ ಅಮ್ಮನಿಗೆ ಹೆದರುತ್ತಿದ್ರು . ಒಂದಾದ ಮೇಲೆ ಇನ್ನೊಂದು , ಇನ್ನೊಂದಾದ ಮೇಲೆ ಮತ್ತೊಂದು ಜವಾಬ್ದಾರಿ ಮುಗಿಸಿ , ಒತ್ತಡ , ಅನಾರೊಗ್ಯಕ್ಕೆ ಸಿಲುಕಿ ಅವರೂ ಬಳಲಿದ್ದರು, ಅವರಿಗೂ ವಯಸ್ಸಾಗಿತ್ತು …. ಮಗುವಿನಿಂದಲೂ ನೋಡ್ಕೊಂಡು ಬರ್ತಿದ್ದ ಅಪ್ಪ ಸಮಯ ಹೋಗ್ತಿದ್ದಂತೇ ನಮ್ಮ ಮುಂದೆಯೇ ಮಗುವಾಗಿಬಿಟ್ಟಿದ್ದರು , ಯಾವ ದೇಹದ ಮೇಲೆ ನಾವು ಕೂತು ಉಪ್ಪು ಮೂಟೆ ಆಡಿದ್ವೋ ಆ ದೇಹ ಮುಪ್ಪಾಗಿತ್ತು , ಯಾವ ಶಕ್ತಿಯುತ ತೋಳಲ್ಲಿ ನಾವು ಬೆಳದಿದ್ವೋ ಆ ತೋಳು ಶಕ್ತಿ ಕಳೆದುಕೊಂಡು ಆಸರೆ ಬಯಸಿ ಹಾಸಿಗೆ ಸೇರಿತ್ತು

    ಬದುಕು ಕಲಿಸಿದ ಅಪ್ಪ ಒಂದು ದಿನ ನಮ್ಮನ್ನು ಬದುಕಲು ಬಿಟ್ಟು ಹೋಗಿಬಿಡುತ್ತಾರೆ . ಯಜಮಾನ ಅನ್ನೋ ಪದಕ್ಕೆ ಸೂಕ್ತ ಅರ್ಥ ಅವರೇ ಅವರನ್ನು ಬಿಟ್ಟರೆ ಆ ಜಾಗ ತುಂಬಲೂ ಯಾರಿಂದಲೂ ಸಾಧ್ಯವಿಲ್ಲ . ಪರಿಪೂರ್ಣ ಬದುಕನ್ನು ಅನುಭವಿಸಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿ ಕರ್ತವ್ಯಗಳನ್ನು ಮುಗಿಸಿ ಹೊರಟಿರುತ್ತಾರೆ , ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರು ಕಲಿಸಿದ ವಿದ್ಯೆ, ತೋರಿಸಿದ ದಾರಿ , ಮೂಡಿಸಿದ ಭರವಸೆ , ಬೆಳೆಸಿದ ರೀತಿ , ಅವರ ಆದರ್ಶಗಳು ಯಾವತ್ತಿಗೂ ನಮ್ಮೊಂದಿಗಿರುತ್ತವೆ ….. ಇವತ್ತು ನಾವು ತಲೆಯೆತ್ತಿ ಬದುಕುತ್ತಿದ್ದೇವೆಂದರೆ ಅದಕ್ಕೆ ಕಾರಣ ” ಅಪ್ಪ ” ಎನ್ನುವ ಆಕಾಶ 

    ಈ ರಾಹು ಕೇತು ಯಾರು

    ಭಾರತೀಯ ಪಂಚಾಂಗದ ಪ್ರಕಾರ ರಾಹುಗ್ರಸ್ತ ಚೂಡಾಮಣಿ ಸೂರ್ಯಗ್ರಹಣ
    ಶಾರ್ವರಿ ನಾಮ ಸಂವತ್ಸರದ ಜ್ಯೇಷ್ಠ ಕೃಷ್ಣ ಅಮಾವಾಸ್ಯೆ 21-06-2020 ರವಿವಾರ, ಮೃಗಶಿರ ಹಾಗೂ ಆರಿದ್ರಾ ನಕ್ಷತ್ರದಲ್ಲಿ, ಮಿಥುನ  ರಾಶಿಯಲ್ಲಿ, ಸಿಂಹ ಮತ್ತು ಕನ್ಯಾ ಲಗ್ನಗಳಲ್ಲಿ , ಗ್ರಹಣ ಸಂಭವಿಸಲಿದೆ.

    ಗ್ರಹಣ ಸಮಯ : ಜೂನ್ 21, 2020 ರವಿವಾರ   03 ಗಂಟೆ ‌19 ನಿಮಿಷ
    ಸ್ಪರ್ಶ :  ಬೆಳಿಗ್ಗೆ 10-13, ಮಧ್ಯ : ಬೆಳಿಗ್ಗೆ 11-52 ಮೋಕ್ಷ : ಮಧ್ಯಾಹ್ನ 01-32

    ಒಂದಂತೂ ಎಲ್ಲರೂ ಒಪ್ಪುವ ವಿಷಯವೆಂದರೆ, ವೇದಗಳ ಕಾಲದಿಂದಲೂ,  ಸೂರ್ಯ/ಚಂದ್ರ ಗ್ರಹಣಗಳು ಇಷ್ಟೇ ಸಮಯಕ್ಕೆ ಸಂಭವಿಸುತ್ತದೆ  ಹಾಗೂ ಮುಗಿಯುತ್ತದೆ ಎಂದು ಕರಾರುವಕ್ಕಾಗಿ  ಹೇಳುವ ಪಂಚಾಂಗಗಳ  ಹಿಂದೆ ವೈಜ್ಞಾನಿಕ ಲೆಕ್ಕಾಚಾರಗಳು ಇದೆ ಎಂಬುದು ಪಕ್ಕಾ.   

    ಗ್ರಹಣ ಎಂದಕೂಡಲೇ ಕೇವಲ ಕೆಟ್ಟದ್ದು ಸಂಭವಿಸುತ್ತದೆ.  ರಾಹು ಕೇತು ಎಂಬ ರಾಕ್ಷಸರು  ಭೂಮಿಗೆ ಕೆಟ್ಟದ್ದನ್ನ ಮಾಡುತ್ತಾರೆ.   ಅದಕ್ಕೆಇಂಥಹದೇ   ಗ್ರಹಣಾಚರಣೆಗಳನ್ನು ಮಾಡಲೇ ಬೇಕು ಎಂದು  ಇಂದಿಗೂ   ಟಿವಿ  ಗಳಲ್ಲಿ  ಗಂಟೆಗಟ್ಟಲೆ  ಜೋತಿಷ್ಯ  ಕಾರ್ಯಕ್ರಮಗಳಲ್ಲಿ ಪುಕ್ಸಟ್ಟೆ  ಸಲಹೆಗಳನ್ನು ಕೊಡುತ್ತಾ ಭಯದ ವಾತಾವರಣ ಸೃಷ್ಟಿ ಮಾಡಿ  ಮೂಢನಂಬಿಕೆಗಳನ್ನ ಉಳಿಸಿ, ಬೆಳೆಸುತ್ತಿದ್ದಾರೆ. 

     ಗ್ರಹಣ ಸಮಯದಲ್ಲಿ ವೈಜ್ಞಾನಿಕವಾಗಿ ನಭೋಮಂಡಲದಲ್ಲಿ ಆಗುವ ಬದಲಾವಣೆಗಳೇನು? ಹೇಗೆ ಆಗುವ ಬದಲಾವಣೆಯ ಪರಿಣಾಮ ಭೂಮಿಯ ಮೇಲೆ ಏನಾದರು ವ್ಯತ್ಯಾಸವಾಗುತ್ತದೆಯಾ? ಒಂದು ಪಕ್ಷ ಆದರೆ, ಇದರ ಪರಿಣಾಮ ಎಷ್ಟು ದಿನಗಳ ವರೆಗೆ ಇರುಲು ಸಾಧ್ಯ? ನಿಜವಾದ ಗ್ರಹಣಾಚರಣೆಯಲ್ಲಿರುವ ವೈಜ್ಞಾನಿಕ ಹಿನ್ನಲೆ ಏನು ಎಂಬುದನ್ನ ವಿಶ್ಲೇಷಣೆ ಮಾಡುವ ಪ್ರಯತ್ನ ಇಲ್ಲಿದೆ . 

    ಎಲ್ಲರಿಗೂ ತಿಳಿದಿರುವಂತೆ  ಸೂರ್ಯ, ಭೂಮಿ, ಚಂದಿರನ ಪಥಗಳು ಸಮಾನಾಂತರ ರೇಖೆಯಲ್ಲಿ ಬಂದಾಗ  ಗ್ರಹಣಗಳು ( ನೆರಳು) ಸಂಭವಿಸುತ್ತವೆ.   ಭೂಮಿಯ ನೆರಳು ಚಂದ್ರನಲ್ಲಿ ಬಿದ್ದಾಗ. ಚಂದ್ರ ಗ್ರಹಣ ಚಂದಿರನ ನೆರೆಳು ಭೂಮಿಯಲ್ಲಿ  ಹಾದುಹೋದಾಗ ಸೂರ್ಯಗ್ರಹಣ.  ಇಲ್ಲಿ ವಿಶೇಷವಾಗಿ ತಿಳಿಯಬೇಕಾಗಿದ್ದು  ಕೆಲವೊಮ್ಮೆ ರಾಹುಗ್ರಸ್ತ,  ಮತ್ತೊಮ್ಮೆ ಕೇತುಗ್ರಸ್ತ  ಚಂದ್ರ/ಸೂರ್ಯ ಗ್ರಹಣ ಎನ್ನುವ ಪದಗಳು.   

    ರಾಹು ಹಾಗು ಕೇತು ಯಾರು?   

    ರಾಹು ಕೇತುಗಳಿಗೆ ಯಾಕೆ ಭಾರತೀಯ ಪಂಚಾಂಗದಲ್ಲಿ ಇಷ್ಟು ಪ್ರಾಮುಖ್ಯತೆ ಕೊಟ್ಟಿದ್ದಾರೆ?   ರಾಹು ಕೇತುಗಳೆರೆಡೂ ಕೇವಲ ಕಾಲ್ಪನಿಕ ಗ್ರಹಗಳು (  ಭೂಮಿ  ಮತ್ತು ಚಂದ್ರನ ಪರಿಧಿಯ ಉತ್ತರದಿಕ್ಕನ್ನು ಸಂಧಿಸುವುದು ರಾಹು,  ದಕ್ಷಿಣ ದಿಕ್ಕನ್ನು ಸಂಧಿಸುವುದು ಕೇತು) ಗ್ರಹಣ ಕಾಲದಲ್ಲಿ ಭೂಮಿಯ ನೆರೆಳು ಉತ್ತರ ದಿಕ್ಕಿನಲ್ಲಿ ಚಂದಿರನಲ್ಲಿ  ಬಿದ್ದರೆ ರಾಹುಗ್ರಸ್ತ, ದಕ್ಷಿಣದಲ್ಲಿ ಬಿದ್ದರೆ ಕೇತುಗ್ರಸ್ತ.  ಅದೇ ರೀತಿ ಭೂಮಿಯ ಚಂದಿರನ ನೆರೆಳು ಯಾವ ದಿಕ್ಕಿನಲ್ಲಿ  ಬೀಳುತ್ತದೋ ಅದರ ಆಧಾರದ ಮೇಲೆ ರಾಹು ಕೇತು ಗ್ರಸ್ತ ಗ್ರಹಣ ಎಂದು ನಿರ್ಧರಿಸುತ್ತಾರೆ.  

    ಗ್ರಹಣಾಚರಣೆಯ ವೈಜ್ಞಾನಿಕ ವಿಶ್ಲೇಷಣೆ. 

    ಒಂದು ವೈಜ್ಞಾನಿಕ ವರದಿಯ ಪ್ರಕಾರ ಸಾಮಾನ್ಯ ಸೂರ್ಯನ ಬೆಳಕು ಮತ್ತು ಗ್ರಹಣ ಹಂತಕ್ಕೆ ಒಡ್ಡಿಕೊಳ್ಳುವ ಸಮಯದಲ್ಲಿ ಸೂರ್ಯನ ಬೆಳಕಿನಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ. ಈ ಅಧ್ಯಯನದ ಸಮಯದಲ್ಲಿ ಬ್ಯಾಕ್ಟೀರಿಯಾದ ವಸಾಹತುಗಳು ಸ್ಮೀಯರ್ ಪರೀಕ್ಷೆ ಮತ್ತು ಸೂಕ್ಷ್ಮತೆಯ ಮಾದರಿಯಲ್ಲಿ ರೂಪ ವಿಜ್ಞಾನದಲ್ಲಿ ವ್ಯತ್ಯಾಸವನ್ನು ತೋರಿಸಿದೆ. ಒಂದು ಶಿಲೀಂಧ್ರ ಪ್ರಭೇದಗಳು ಮತ್ತು ಮೂರು ಬ್ಯಾಕ್ಟೀರಿಯಾದ ಪ್ರತ್ಯೇಕತೆಗಳನ್ನು ಅಧ್ಯಯನ ಮಾಡಲಾಯಿತು.  ಗ್ರಹಣ ಸಮಯದಲ್ಲಿ ಸೂರ್ಯನ ಬೆಳಕಿಗೆ  ಪ್ರಭೇದಗಳು ಒಡ್ಡಿಕೊಳ್ಳುವುದರ ಮೇಲೆ ಅವುಗಳ ರೂಪವಿಜ್ಞಾನದಲ್ಲಿ ಒಂದು ನಿರ್ದಿಷ್ಟ ಬದಲಾವಣೆಯನ್ನು ತೋರಿಸಿದವು.   ಇದರ ಅರ್ಥ ಗ್ರಹಣ ಸಮಯದಲ್ಲಿ ಭೂಮಿಗೆ ಬಡಿಯುವ ಸೂರ್ಯನ ಬೆಳಕಿನಲ್ಲಿ ಆಗುವ ವ್ಯತ್ಯಾಸ  ಜೀವಿಗಳ ಮೇಲೆ ಸೂಕ್ಷ್ಮ ಬದಲಾವಣೆ ತರುತ್ತದೆ ಎಂದು ನಿಖರವಾಗಿ ತಿಳಿಯಬಹುದು.   

    ಈ ಸೂಕ್ಷ್ಮ ಬದಲಾವಣೆ ಮಾನವನ ದೇಹದ ಆರೋಗ್ಯದಲ್ಲಿ ಏರುಪೇರು ಆಗುವುದನ್ನು ತಡೆಗಟ್ಟಲು, ಗ್ರಹಣಸಮಯದಲ್ಲಿ ಸೂರ್ಯನ ಕಿರಣಗಳಿಗೆ ಮೈ ಒಡ್ಡುವುದನ್ನು ತಪ್ಪಿಸಲು ಗ್ರಹಣಾಚರಣೆ ಬಂದಿರಬಹುದು.  

    ಭಾರತೀಯ ಸಂಸ್ಕೃತಿಯಲ್ಲಿ ಹಿಂದಿನಿಂದಲೂ ಗ್ರಹಣ ಕಾಲದಲ್ಲಿಕೆಳಗಿನ ಪ್ರಮುಖ ಆಚರಣೆಗಳು ಪಾಲಿಸುತ್ತಾ ಬಂದಿದ್ದಾರೆ. 

    ಸ್ನಾನ : ಗ್ರಹಣ ಪ್ರಾರಂಭ ಮತ್ತು ಮುಗಿದ ಮೇಲೆ ಸ್ನಾನ ಮಾಡಬೇಕು. ವೈಜ್ಞಾನಿಕವಾಗಿ  ತಣ್ಣೀರಿನಿಂದ ಸ್ನಾನ ಮಾಡಿದಾಗ ದೇಹ ಶುದ್ಧಿ ಜೊತೆಗೆ ಮನಸ್ಸಿನ ಮೇಲೆ ಹೆಚ್ಚು ಹತೋಟಿ ಇಡಲು  ಸಾಧ್ಯ.  ಗ್ರಹಣ ಕಾಲದಲ್ಲಿ ಸೂರ್ಯನ ಬೆಳಕಿನಲ್ಲಿ ಆಗುವ ವ್ಯತ್ಯಾಸ ದೇಹದ ಮೇಲೆ ಹೆಚ್ಚು ಆಗದಿರಲಿ ಎಂದು ಈ ಸ್ನಾನಾಚರಣೆ ಬಂದಿರಲಿಕ್ಕೂ ಸಾಧ್ಯವಿದೆ. 

    ಆಹಾರ ವಿಚಾರ: ಗ್ರಹಣ ಪ್ರಾರಂಭವಾಗುವ ನಾಲ್ಕು ಗಂಟೆಗೆ ಮೊದಲು  ಲಘು ಆಹಾರ  ಗ್ರಹಣಾ ನಂತರ  ಎಂದಿನಂತೆ ಆಹಾರ ಸ್ವೀಕಾರ.  ನಮ್ಮ ಉದರದಲ್ಲಿ ಒಳ್ಳೆಯ ಹಾಗು ಕೆಟ್ಟ ಬ್ಯಾಕ್ಟೀರಿಯಾಗಳು ಪಚನ ಕ್ರಿಯೆಗೆ ಸಹಾಯ ಮಾಡುತ್ತದೆ ಎಂದು ವಿಜ್ಞಾನ ಹೇಳುತ್ತದೆ.  ಅದರಂತೆ ಗ್ರಹಣದ ಸಮಯದಲ್ಲಿ ಆಹಾರ ಸ್ವೀಕರಿಸಿದರೆ   ಉದರದಲ್ಲಿ ಇರುವ ಆಹಾರದ ಪಚನ ಕ್ರಿಯೆಯಲ್ಲಿ ಬ್ಯಾಕ್ಟೀರಿಯಾಗಳು  ಎಂದಿನಂತೆ ಕಾರ್ಯ ನಿರ್ವಹಿಸದೇ ಇದ್ದಾಗ  ದೇಹದ ಆರೋಗ್ಯದ ಮೇಲೆ ಆಗುವ ಪರಿಣಾಮ ತಡೆಯಲು ಹಾಗು ನಾಲ್ಕು ಗಂಟೆ ಮುಂಚೆ ಹೆಚ್ಚು ಆಹಾರ ಸೇವಿಸಿದರೆ  ಹಿಂದಿನ ಕಾಲದಲ್ಲಿ ಬಹಿರ್ದೆಶೆಗೆ ಗ್ರಹಣ ಕಾಲದಲ್ಲಿ ಊರಿನಿಂದ ದೂರ ಹೋಗಿ ಬರಬೇಕಾದ ಸನ್ನಿವೇಶ ತಪ್ಪಿಸಲು ( ಗ್ರಹಣ ಕಾಲದ ಸೂರ್ಯನ ಕಾಸ್ಮಿಕ್ ಕಿರಣಗಳು ತಾಗದಿರಲಿ, ಅಪ್ಪಿ ತಪ್ಪಿ ಬರೆಕಣ್ಣಿನಿಂದ ಸೂರ್ಯನನ್ನು ನೋಡದಿರಲಿ ಎಂಬ ಉದ್ದೇಶ ವಿರಬಹುದು)  ಈ ಆಚರಣೆ ಬಂದಿರಲು ಸಾಧ್ಯವಿದೆ.     

     ಗ್ರಹಣ ಕಾಲದ ಧ್ಯಾನ,ಶಾಂತಿ, ಹೋಮ ಹವನಗಳು:  ಇವು ಕೂಡಾ  ಗುರುತ್ವಾ ವತ್ಯಾಸದಿಂದ ಮನಸ್ಸಿನ ಮೇಲೆ ಆಗುವ ಪರಿಣಾಮಗಳನ್ನು ನಿಗ್ರಹಿಸಲು ಧ್ಯಾನ,  ಪಾಠ, ಪಾರಾಯಣ, ಶಾಂತಿ ಹೋಮದ ನೆಪದಲ್ಲಿ  ಸೂರ್ಯನ ರೇಶ್ಮಿಗೆ ದೇಹ ಒಡ್ಡದಂತೆ ಮನೆಯಲ್ಲಿಯೇ ಇರಲು ಮಾಡಿರುವ ಆಚರಣೆ ಎನ್ನುವುದು ಗೋಚರಿಸುತ್ತದೆ. 

    ದಾನ:  ಇದು ಕೂಡ ಸನಾತನ ಸಂಸ್ಕೃತಿಯಲ್ಲಿ ಯಾವುದೇ ಆಚರಣೆಯಲ್ಲಿ ದಾನ (ಒಬ್ಬರಿಂದ ಇನ್ನೊಬರಿಗೆ  ಅವರ ಜೀವನೋಪಾಯಕ್ಕೆ ಬೇಕಾದ ಪದಾರ್ಥಗಳ ಹಂಚುವಿಕೆ ) ಕೊಡುವುದು  ಒಂದು ವೃತ್ತಿಯನ್ನೇ ನಂಬಿದ ವರ್ಗವನ್ನು ಸಲುಹಲು ಇರುವ ಒಂದು ಸಾಧನವಷ್ಟೇ .   ಮತ್ತೊಬ್ಬರಿಗೆ ಊಟ ಕೊಡಿಸಿದಾಗ ಸಿಗುವ ಆನಂದದ ಸುಖ ಈ ದಾನಪ್ರಕ್ರಿಯೆ ಇಂದ ಬಂದು ಮನುಷ್ಯ ಧನ್ಯತಾ ಭಾವ ಹೊಂದುವ ಸಾಮಾನ್ಯ ಪ್ರಕ್ರಿಯೆ ಹೊರತು ಇದರಲ್ಲಿ ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ. 

    ಹೀಗೆ ಹಲವಾರು ನಂಬಿಕೆ, ಮೂಢನಂಬಿಕೆಗಳು ಬೆಳೆದುಬಂದಿವೆ.  

    ಮೂಢನಂಬಿಕೆಗೂ ಗ್ರಹಣಾಚರಣೆಗೂ ತುಂಬಾ ವ್ಯತ್ಯಾಸ

    ಮೂಢನಂಬಿಕೆಗೂ ಗ್ರಹಣಾಚರಣೆಗೂ ತುಂಬಾ ವ್ಯತ್ಯಾಸವಿದೆ. ಮೂಢ ನಂಬಿಕೆ ಎಂದರೆ  ಒಂದು ಆಚರಣೆಯ ಬಗ್ಗೆ ಏನೂ ತಿಳಿದುಕೊಳ್ಳದೇ  ಯಾರೋ ಮಾಡುತ್ತಾರೆ ಅದನ್ನ ಅಂಧ ರೀತಿಯಲ್ಲಿ ಅನುಸರಿಸಿ ಆಚರಿಸುವುದು.  ಯಾವುದೇ ವಿಷಯಗಳನ್ನ ಅರಿಯದೆ ಯಾವುದೇ ಆಚರಣೆ ಮಾಡುವುದು ಶುದ್ಧ ತಪ್ಪು.  

    ಈ ವಿಶ್ಲೇಷಣೆಯ  ಉದ್ದೇಶ ಗ್ರಹಣಾಚರಣೆಯನ್ನು ಜನರು ಪಾಲಿಸಲಿ ಎಂಬುವುದಲ್ಲ ಬದಲಾಗಿ ವೈಜ್ಞಾನಿಕವಾಗಿ ಗ್ರಹಣ ಸಂಭವಿಸಿದಾಗ ಪ್ರಕೃತಿಯಲ್ಲಿ ಆಗುವ ಬದಲಾವಣೆ ಹಾಗು ದೇಹದ ಮೇಲೆ ಆಗುವ ಪರಿಣಾಮಗಳ ಸತ್ಯಾಸತ್ಯೆತೆಯ ಬಗ್ಗೆ ಬೆಳಕು ಚಲ್ಲುವುದಾಗಿದೆ.  

    ಗ್ರಹಣ ಸಮಯದಲ್ಲಿ  ನಿಮ್ಮ ದೇಹದ ಸ್ವಾಸ್ಥ್ಯಕ್ಕೆ ಆರೋಗ್ಯಕ್ಕೆ ನಿಮಗೆ ಯಾವುದು  ಉತ್ತಮ ಎಂದು ಎನಿಸುತ್ತದೆಯೋ, ಆ ರೀತಿ ನಿಮ್ಮ ನಿಲುವುಗಳನ್ನು ತೆಗೆದುಕೊಂಡು, ನಮ್ಮ ನಭೋಮಂಡಲದ ನೆರಳು ಬೆಳಕಿನಾಟದ ವಿಸ್ಮಯವನ್ನು ಕಣ್ತುಂಬಿಕೊಳ್ಳಿ.

    ಸೂರ್ಯಗ್ರಹಣ: ಭಯ ಬೇಡ, ಸುರಕ್ಷಿತವಾಗಿ ವೀಕ್ಷಿಸಿ

    ಹರೋನಹಳ್ಳಿ ಸ್ವಾಮಿ

    ನಾಳೆ ಭಾನುವಾರ ಬೆಳಿಗ್ಗೆ (10ಗಂ.12ನಿ.55ಸೆ.)  ಕಂಕಣ ಸೂರ್ಯಗ್ರಹಣ ಸಂಭವಿಸಲಿದ್ದು ನಾವು ಪಾರ್ಶ್ವ ಸೂರ್ಯಗ್ರಹಣ ಮಾತ್ರ ನೋಡಬಹುದಾಗಿದೆ. ಸೂರ್ಯನ ಸುತ್ತಾ ಭೂಮಿ, ಭೂಮಿಯ ಸುತ್ತಾ ನಮ್ಮ ಚಂದ್ರ ದೀರ್ಘ ವೃತ್ತಾಕಾರದ ಪಥದಲ್ಲಿ ಸುತ್ತುತ್ತಿವೆ. ಕೆಲವು ಬಾರಿ ಸೂರ್ಯ ಭೂಮಿ ಮತ್ತು ಚಂದ್ರ ಒಂದೇ ಸರಳರೇಖೆಯಲ್ಲಿ ಬಂದಾಗ ಒಂದರ ನೆರಳು ಮತ್ತೊಂದರ ಮೇಲೆ ಬೀಳುವ ಮೂಲಕ ಗ್ರಹಣಗಳು ಸಂಭವಿಸುತ್ತವೆ.

    ಆದರೆ ನಾಳೆ ಚಂದ್ರನ ತೋರಿಕೆಯ ಗಾತ್ರವು ಸೂರ್ಯನ ತೋರುವಿಕೆಯ ಗಾತ್ರಕ್ಕಿಂತ ಕಡಮೆಯಿದ್ದು, ಚಂದ್ರನು ಸೂರ್ಯನ ಪೂರ್ಣ ಮುಖವನ್ನು ಮುಚ್ಚುವುದಿಲ್ಲ. ಬದಲಾಗಿ ಸೂರ್ಯನ ಅಂಚು ಬಳೆಯಾಕಾರದಲ್ಲಿ ಗೋಚರಿಸುವ ದೃಶ್ಯವೇ “ಕಂಕಣ ಸೂರ್ಯಗ್ರಹಣ” (Annular  Solar Eclipse) ಆದರೆ ನಮಗೆ ಆ ದೃಶ್ಯ ಕಾಣುವುದಿಲ್ಲ ಬದಲಾಗಿ, ಸೂರ್ಯನ ಶೇಕಡಾ ನಲವತ್ತು ಭಾಗ ಚಂದ್ರನಿಂದ ಮುಚ್ಚಲ್ಪಟ್ಟ ಪಾರ್ಶ್ವ ಸೂರ್ಯಗ್ರಹಣವನ್ನು  ನೋಡಬಹುದು.



    ಭಾನುವಾರ ಬೆಳಿಗ್ಗೆ 10.17 ಗಂಟೆಗೆ ಆರಂಭವಾಗಿ, ಮಧ್ಯಾಹ್ನ 1 ಗಂಟೆ 31 ನಿಮಿಷ ದವರಿಗೆ ಸುಮಾರು 3 ಗಂಟೆ 19 ನಿಮಿಷಗಳ ಕಾಲ ಗ್ರಹಣ ಜರುಗುತ್ತದೆ.

    ಎಲ್ಲೆಲ್ಲಿ ಗ್ರಹಣ ಗೋಚರ ವಾಗುತ್ತದೆ:- ಆಫ್ರಿಕಾ, ಫೆಸಿಫಿಕ್ ಮತ್ತು ಹಿಂದು ಮಹಾಸಾಗರ, ಪಾಕಿಸ್ತಾನ, ಭಾರತ  ಚೀನಾ, ಒಮಾನ್, ಯೆಮೆನ್ ದೇಶಗಳಲ್ಲಿ ಕಾಣಸಿಗುವುದು.

    ನೋಡುವ ಬಗೆ ಹೇಗೆ:

    1.ಯಾವುದೇ ಕಾರಣಕ್ಕೂ ಬರಿಗಣ್ಣಿನಿಂದ ಸೂರ್ಯ ಗ್ರಹಣ ವೀಕ್ಷಿಸಬಾರದು.
    2.ಎಕ್ಸ್ ರೇ,  ವೆಲ್ಡಿಂಗ್ ಗ್ಲಾಸ್ ಗಳ ಮೂಲಕವೂ ನೋಡಬಾರದು .

    3.ವೈಜ್ಞಾನಿಕ ಸಂಸ್ಥೆಗಳಿಂದ ದೊರೆಯುವ ಅಧಿಕೃತ “ಸೌರ ಕನ್ನಡಕ” Solar spect’ ನ ಮೂಲಕ ನೋಡಬಹುದು .

    4.ಸೌರ ಕನ್ನಡಕಗಳಿಂದಲೂ ನಿರಂತರವಾಗಿ ನೋಡದೆ,  ಕೆಲ ನಿಮಿಷಗಳ ಬಿಡುವು ನೀಡಿ ಕಣ್ಣಿಗೆ ಆಯಾಸವಾಗದಂತೆ ನೋಡಬೇಕು .

    5.ತೆಳುವಾದ ಕಾರ್ಡ್ ಬೋರ್ಡ್ ನಲ್ಲಿ ಸಣ್ಣ ರಂಧ್ರ ಮಾಡಿ, ಕನ್ನಡಿಯ ಮುಂಭಾಗದಲ್ಲಿಟ್ಟು ಸೂರ್ಯನ ಪ್ರತಿಬಿಂಬವನ್ನು ಗೋಡೆಯ ಮೇಲೆ ಬಿಟ್ಟು ನೋಡಬಹುದು .

    6.ಟಿಲಿಸ್ಕೋಪ್ ಗಳ ಮೂಲಕ ಸೂರ್ಯನ ಪರೋಕ್ಷ ಪ್ರತಿಬಿಂಬವನ್ನು ಪರದೆ ಮೇಲೆ ಬಿಟ್ಟು ವೀಕ್ಷಿಸಬಹುದು.

    ಹರೋನಹಳ್ಳಿ ಸ್ವಾಮಿ

    7.ಬೈನಾಕುಲರ್ ನಿಂದಲೂ ಸೂರ್ಯನ ನೇರ ವೀಕ್ಷಣೆ  ಮಾಡಬಾರದು. ಬದಲಾಗಿ ಸೂರ್ಯನ ಪ್ರತಿಬಿಂಬವನ್ನು ಮಾತ್ರ ನೋಡಬಹುದು.

    ಗ್ರಹಣ ಭಯವೇ?:  ಖಂಡಿತಾ ಸೂರ್ಯಗ್ರಹಣ, ಚಂದ್ರಗ್ರಹಣಗಳ ಭಯವಲ್ಲ, ಬದಲಾಗಿ ಪ್ರಕೃತಿ ಸಹಜ ನೆರಳು ಬೆಳಕಿನ ಆಟವಷ್ಟೇ. ಅನೇಕರು ಮಾಧ್ಯಮಗಳ ಮೂಲಕ ಗ್ರಹಣದಿಂದ ಅನೇಕರಿಗೆ ತೊಂದರೆ,  ಪ್ರಕೃತಿಯ ಅವಘಡಗಳಾಗುತ್ತವೆಂದು  ಅವೈಜ್ಞಾನಿಕವಾಗಿ ಹೆದರಿಸುತ್ತಾರೆ.  ಆದರೆ ಇದಕ್ಕೆ ಯಾವುದೇ  ಆಧಾರಗಳಿಲ್ಲ . ಸೂರ್ಯಗ್ರಹಣ ನಿಸರ್ಗದ ಅದ್ಭುತ ವಿದ್ಯಮಾನ. ಸುರಕ್ಷಿತವಾಗಿ ವೀಕ್ಷಿಸಿ ಆನಂದಿಸಬೇಕಷ್ಟೆ.


    2020ರ ಗ್ರಹಣಗಳು; ಈ ವರ್ಷ 2 ಸೂರ್ಯ ಗ್ರಹಣಗಳು ಮತ್ತು 4 ಚಂದ್ರಗ್ರಹಣಗಳು ಜರುಗುತ್ತವೆ. ಮುಂದಿನ ಸೂರ್ಯಗ್ರಹಣವು ಡಿಸೆಂಬರ್  14 ರಂದು ಜರುಗುತ್ತದೆ.

    ಜಾತ್ರೆ ಮುಗಿದೇ ಹೋಯಿತೇನೋ ಎಂಬ ದುಗಡದಲ್ಲಿ ಹೊಸ ಸ್ವಾತಂತ್ರ್ಯದ ಕಡೆ ಮುಂಬೈ ಚಿತ್ತ

    ಹೇಳಿ ಕೇಳಿ ಮುಂಬೈ ರಾಣಿ ಒಲಿಯುವುದು ಶ್ರಮಕ್ಕೆ ಮಾತ್ರ. ಇಲ್ಲಿ ಬರುವವರು ಮೊದಲು ವಿನಯವಾಗಿ ಬಂದು ಶ್ರಮ ಪಟ್ಟು ಯಶಸ್ಸು ಸಾಧಿಸಬಹುದೇ ಹೊರತು.. ಕಡಿಮೆ ಸಮಯದಲ್ಲಿ ಸಿಕ್ಕ ಹಣ ಕೀರ್ತಿ ರೆಪ್ಪೆ ಅಲುಗಿಸುವಷ್ಟರಲ್ಲಿ ಕೆಳಗೆ ಬಿದ್ದು ಬದುಕು ಮೂರಾಬಟ್ಟೆಯಾದ ಕತೆಗಳು ಇಲ್ಲಿ ಸಾಕಷ್ಟಿವೆ. ಇಲ್ಲಿನ ಯಶಸ್ಸಿಗೆ ಹತ್ತು ಹಲವು ಮುಖಗಳು. ಕೆಲವು ಕಣ್ಣಿಗೆ ಕಾಣುತ್ತವೆಯಾದರೆ ಕೆಲವು ಕಾಣುವುದಿಲ್ಲ.

    ಎಲ್ಲೂ ಬೇಳೆ ಬೇಯದಿದ್ದರೆ, ಶ್ರಮಿಸುವ ಮನಸ್ಸಿದ್ದರೆ ಮುಂಬಾದೇವಿಗೆ ಶರಣುಹೋಗು ಎನ್ನುವುದು ಹಳಬರ ನಾನ್ನುಡಿ. ಒಮ್ಮೆ ಮುಂಬಾದೇವಿಯ ಪಾದಕ್ಕೆ ಬಿದ್ದು ಮಹಾಲಕ್ಷ್ಮಿಯ ಆಶೀರ್ವಾದ ಪಡೆದ ನಂತರ ನಿನ್ನ ಕೈ ನಿನ್ನ ಬಾಯಿ. ಹೀಗಿರುವಾಗ ಈ ಮಾಯಾ ನಗರಿಗೆ ಬರುವವರಿಗೆ ಕೇವಲ ಬರುವ ದಾರಿ ಕಾಣುತ್ತಿತ್ತೇ ವಿನಾ ಹೋಗುವ ದಾರಿಯಲ್ಲ. ಅವಳೂ ತಾನೆ ಎಷ್ಟೆಂದು ಮಡಿಲು ಹಿಗ್ಗಿಸಿಯಾಳು? ಕಳೆದ ಎರಡು ದಶಕಗಳಲ್ಲಂತೂ ಸಮುದ್ರವನ್ನೂ ಜರುಗಿಸುವ, ಅಲ್ಲಿಯೂ ತನ್ನ ಪ್ರಭುತ್ವ ಸ್ಥಾಪಿಸಿಕೊಳ್ಳುವ ಮನುಷ್ಯನ ಹಪಾಹಪಿತನ ಇಡೀ ಮುಂಬೈಯನ್ನೇ ರೊಚ್ಚಿಗೆಬ್ಬಿಸಿದಂತೆ ಕಾಣುತ್ತಿತ್ತು.

    ರಾತ್ರಿಯಲ್ಲಿ ಜಗಮಗಿಸುವ ಕ್ವೀನ್ ನೆಕ್ಲೆಸ್ ಹಗಲಿನಲ್ಲಿ ಬೇರೆಯೇ ಕತೆ ಹೇಳುತ್ತದೆ. ತೊಂಬತ್ತರ ದಶಕದ ವರೆಗೂ ಶ್ರಮ ಪಟ್ಟು ಕಟ್ಟಿಕೊಂಡ ಬದುಕಿನ ಕಟ್ಟಡಗಳ ನಡುವೆ ಅಲ್ಲಿಂದಾಚೆಗೆ ಏನೇನೋ ಬದಲಾಣೆಗಳಿಗೆ ಚಾಲನೆ ಸಿಕ್ಕಿ ಚಾಲೂಕು ಜನರು ಮುಂಬೈ ಆರ್ಥಿಕ ಜಗತ್ತಿನಲ್ಲಿ ನುಸುಳಿ ಹಣದ ಸೌಧಗಳನ್ನು ಕಟ್ಟತೊಡಗಿದರು. ಈ ನಡುವೆ ಶ್ರಮದ ಬದುಕು ನೆಡೆಸುತ್ತಿದ್ದವರ ವ್ಯವಹಾರ ವ್ಯಾಪಾರ ಸಪ್ಪೆಯಾಗಿ ಕಣ್ಣಿಗೆ ಕಾಣದಂತಾಯಿತು. ಅವರೂ ವಿಧಿ ಇಲ್ಲದೆ ಹಣವಂತರ ತಾಳಕ್ಕೆ ಬೇಕೋ ಬೆಡವೋ ಕುಣಿಯಲೇ ಬೇಕಾದ ಅನಿವಾರ್ಯ ಸೃಷ್ಟಿಯಾಯಿತು.

    ಹಾಗೆ ಕಟ್ಟಿದ ಈ ಹಣದ ಸೌಧದ ಅಡಿಪಾಯದಲ್ಲಿ ಶ್ರಮದ ಗಟ್ಟಿತನವಿಲ್ಲದೆ ನಂಬಿಕೆಯ ಭದ್ರತೆ ಇಲ್ಲದೆ ದಶಕದಿಂದೀಚೆಗೆ ಇಂಚಿಂಚಾಗಿ ಕುಸಿಯುತ್ತಿತ್ತು. ಹತ್ತಡಿ ಜಾಗದಲ್ಲಿ ಹತ್ತು ವ್ಯಾಪಾರಗಳು ನೆಡೆಯಲಾರಂಬಿಸಿದ ಪರಿಣಾಮವಾಗಿ ಯಾರಿಗೂ ಹೊಟ್ಟೆ ತುಂಬದ ಪರಿಸ್ಥಿತಿ.

    ಸಣ್ಣ ಪುಟ್ಟ ವ್ಯಾಪಾರಿಗಳೆಲ್ಲಾ ಅವಲಂಬಿಸಿದ್ದ ದೊಡ್ಡ ಕುಳಗಳು ಎಲ್ಲಾ ವ್ಯವಹಾರವನ್ನೂ ಹವಾಲಾ ಮೂಲಕವೇ ಮಾಡುತ್ತಿದ್ದ ಕಾರಣ, ‘ನೋಟ್ ಬಂದಿ’ ಸಮಯದಲ್ಲಿ ಆರ್ಥಿಕ ರಾಜಧಾನಿ ಪಾತಾಳಕ್ಕೆ ಕುಸಿಯುತ್ತಿರುವುದು ಪ್ರತಿಯೊಬ್ಬ ಮುಂಬೈ ವ್ಯಾಪಾರಿಗೂ ನಿಚ್ಛಳವಾಗಿ ಕಾಣುತ್ತಿತ್ತು. ಹೇಗೋ ಹಠದಲ್ಲೇ ಈಜುತ್ತಾ ಬದುಕುತ್ತೇವೆ ಎಂದು ತಾಳ್ಮೆಯಿಂದ ಮುನ್ನೆಡೆದವರಿಗೆ ಭಾರಿ ಹೊಡೆತ ಕೊಟ್ಟಿದ್ದು ಈ ಕೊರೋನಾ.

    ತಪ್ಪು ಮಾಡುವವರು ಯಾರೋ ಅನುಭವಿಸುವರು ಯಾರೋ

    ಇದುವರೆವಿಗೂ ಮುಂಬೈ ನಗರಿ ತನ್ನ ಮೇಲಾದ ಅತ್ಯಾಚಾರ ಸಹಿಸಿ ಸಹಿಸಿ ಇನ್ನು ತಾಳಲಾರೆ ಎಂಬಂತೆ ತಿರುಗಿ ಬಿದ್ದು ಕೊಟ್ಟ ಶಾಪ ಈ ಕೊರೋನಾ ವೈರಸ್ ಎನ್ನುವಂತಾಗಿದೆ. ಈಗ ತಪ್ಪು ಮಾಡುವವರು ಯಾರೋ ಅನುಭವಿಸುವರು ಯಾರೋ.. ಒಟ್ಟಿನಲ್ಲಿ ಸಮುದ್ರವು ಇಲ್ಲಿಯ ಜನರು ಎಸೆದ ತನ್ನೊಡಲೊಳಗಿನ ಕಸವನ್ನು ಅಲೆಗಳ ಸಹಾಯದಿಂದ ಒಮ್ಮೆಗೇ ಮನುಷ್ಯರ ಮುಖದ ಮೇಲೆ ‘ರಪ್ ‘ ಎಂದು ಬಾರಿಸಿದ ಹಾಗಾಗಿದೆ. ಇಡೀ ಮುಂಬೈಗೆ ಮುಂಬೈ ಐಸಿಯು ಹಾಸಿಗೆಯಮೇಲೆ ಬಿದ್ದಿದೆ.

    ಕೊಡುವುದರ ಹತ್ತರಷ್ಟು ಪಡೆವುದೇ ನಿಯಮ ಎಂಬಂತಾಗಿದ್ದ ಮುಂಬೈ ಸಾರ್ವಜನಿಕ ವ್ಯವಸ್ಥೆಗಳು ಅದರಲ್ಲೂ ಮುನಿಸಿಪಾಲಿಟಿ ಆಸ್ಪತ್ರೆಗಳು ಹತಾಶೆಯಿಂದ ಕೈ ಚೆಲ್ಲಿ ಕೂತಿವೆ. ಯಾವುದನ್ನು ಯಾರನ್ನು ನಂಬಿ ಜನ ಬೇರೆ ಬೇರೆ ರಾಜ್ಯಗಳಿಂದ ನುಗ್ಗಿಕೊಂಡು ಬಂದಿದ್ದರೋ ಅವರಿಂದ ಹುಲ್ಲುಕಡ್ಡಿಯ ಆಸರೆಯೂ ಸಿಗದಾಗಿ ಬದುಕು ಸಂಪೂರ್ಣ ಅಸಹಾಯಕ ಸ್ಥಿತಿಯಲ್ಲಿದೆ. ಇಡೀ ಪ್ರಕೃತಿಯೇ ಮನುಷ್ಯ ಕುಲವನ್ನು ಜೂಜಿನ ಕಾಯಿಗಳಂತೆ ಆಡಿಸುತ್ತಿದೆ.
    ಲಾಕ್ ಡೌನ್ ಘೋಷಣೆ ಆದ ಮೊದಲ ತಿಂಗಳಿನಲ್ಲಿ ಜನರಿಗೆ ಮುಂದೆ ಬರಬಹುದಾದ ದಿನಗಳ ಬಗ್ಗೆ ಯಾವ ಊಹೆಯೂ ಇರಲಿಲ್ಲ.

    ಒಂದಷ್ಟು ಜನರಿಗಂತೂ ಇದೊಂದು ರೀತಿ ದಿನ ನಿತ್ಯದ ಜಂಜಡಗಳಿಂದ ಬಿಡುವು ಸಿಕ್ಕಿತು ಎಂದು ಸಮಾಧಾನದಿಂದಲೇ‌ ಇರಲು ತೊಡಗಿದರು. ಕೆಲವರಂತೂ ನಾವು ಸಂಸಾರದೊಂದಿಗೆ ಆನಂದಮಯ ದಿನಗಳನ್ನು ಕಳೆಯುತ್ತಿದ್ದೇವೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಫೋಟೋ ನಿಲುಮೆ ಹಾಕಿಕೊಂಡರು. ತರಾವರಿ ತಿಂಡಿ ಫೋಟೋಗಳ ಮಹಾಪೂರವೇ ಹರಿದು ಬರುತ್ತಿತ್ತು‌. ಮನೋರಂಜನಾ ಕ್ಷೇತ್ರದವರೂ ತಾವೇನು ಕಡಿಮೆ ಎಂಬಂತೆ ತಾವೂ ಅಡಿಗೆ ಮಾಡಿದೆವೆಂದೂ.. ದೊಡ್ಡ ದೊಡ್ಡ ತಾರೆಯರು ತಾವೂ ಕಸ ಗುಡಿಸಿದೆವೆಂದೂ, ಪಾತ್ರೆ ತೊಳೆದೆವೆಂದು ತಮ್ಮ ಸರಳತೆಯನ್ನು ಸಾಬೀತು ಪಡಿಸುತ್ತಿದ್ದರು. ಜೊತೆ ಜೊತೆಗೆ ಟಿಕ್ ಟಾಕ್ ವೀಡಿಯೋಗಳಂತೂ ‌ಭರ್ಜರಿ ಪ್ರದರ್ಶನ ಕಂಡವು. ಕ್ರಿಕೆಟ್ ದೇವರುಗಳು ಪರಸ್ಪರ ಕಾಲೆಳೆದುಕೊಂಡು ಟ್ವೀಟ್ ಮಾಡಿ ಮನೋರಂಜನೆ ಒದಗಿಸುತ್ತಿದ್ದರು. ಗಾಯಕರು ಸೋಷಿಯಲ್ ಮೀಡಿಯಾ ತುಂಬಾ ಗಾಯನ ಕಾರ್ಯಕ್ರಮ ನೆಡೆಸಿ ಪರಸ್ಪರ ಹುರಿದುಂಬಿಸುತ್ತಿದ್ದರು.

    ಈ ಎಲ್ಲಾ ಸಕಾರಾತ್ಮಕ ಬೆಳವಣಿಗೆಯ ನಡುವೆಯೇ.. ಮೆಲ್ಲಗೆ ಕೊರೋನಾ ಉಳ್ಳವರನ್ನು ದಾಟಿ ಸಾರ್ವಜನಿಕ ಸೇವೆಗಳಲ್ಲಿ ನಿರತರಾಗಿದ್ದ ಹಲವು ಶ್ರಮಿಕರು, ಸರ್ಕಾರಿ ಕೆಲಸಗಾರರು, ನಮ್ಮ ನಿಮ್ಮಂತವರ ಹೆಗಲೇರಿ ಆಗಿತ್ತು. ಅದರ ಅರಿವು ಆಗುವಷ್ಟರಲ್ಲಿ ಪರಿಸ್ಥಿತಿ ಕೈ ಮೀರಿತ್ತು. ಕೆಲವು ಕಡೆ ಸರ್ಕಾರದ ನಿರ್ಲಕ್ಷ ಕಾರಣವಾದರೆ ಮತ್ತೆ ಹಲವೆಡೆ ಜನರ ಮಾಮೂಲಿ ಉಡಾಫೆ ಪ್ರವೃತ್ತಿ ಕಾರಣವಾಗಿ ಸಿಕ್ಕ ಸಿಕ್ಕವರನ್ನೆಲ್ಲಾ ಕೊರೋನಾ ಬಲಿಪಶುಗಳನ್ನಾಗಿಸುತ್ತಿತ್ತು.

    ಮುಂಬೈ ಜೋಪಡಿಗಳಲ್ಲಿ ಚಾಳ್ ಗಳಲ್ಲಿ ಹಿಡಿಯಷ್ಟು ಜಾಗಗಳಲ್ಲಿ ಜೇನು ಗೂಡಿನ ಹುಳಗಳಂತೆ ವಾಸಿಸುತ್ತಿದ್ದ ಜನರ ಬದುಕಲ್ಲಿ ಈ ಸೋಂಕು ಅಲ್ಲೋಲ ಕಲ್ಲೋಲ ಉಂಟು ಮಾಡಿತು. ಒಂದು ಟಾಯ್ಲೆಟ್ ಅನ್ನು ನೂರಾರು ಜನ ಬಳಸ ಬೇಕಾದ ಅನಿವಾರ್ಯತೆಯಲ್ಲಿ ‘ ದೋ ಗಜ್ ಕಿ ದೂರಿ’ ಹಳ್ಳ ಹತ್ತಿತ್ತು. ಆ ಹೊತ್ತಿಗಾಗಲೇ ದಿನಗೂಲಿ ನೌಕರರು ಹಸಿವೆಯಿಂದ ಬೇಸತ್ತಿದ್ದರು. ಅವರ ಆಕ್ರೋಶವನ್ನು ಹೊರ ಹಾಕುವ ವೀಡಿಯೋಗಳು ಹೊರಬಂದಿದ್ದೇ ತಡ.. ತಾಮುಂದು ನಾ ಮುಂದು ಎಂದು ಸಹಾಯಗಳ ಮಹಾ ಪೂರವೇ ಹರಿದು ಬಂತು. ಎಲ್ಲಾ ಸೆಲೆಬ್ರಿಟಿಗಳೂ ತಮ್ಮ ಉದಾರತನ ತೋರಿದರು.

    ಗೋಧಿ ಹಿಟ್ಟಿನ ನಡುವೆ ಐದೈದು ಸಾವಿರ ಇಟ್ಟು ಕೊಟ್ಟ ಸುದ್ದಿ, ಆಂಬ್ಯಲೆನ್ಸ್‌ ಸೇವೆ ಒದಗಿಸಿಕೊಟ್ಟ ಸುದ್ದಿ, ದಿನಸಿ ಹಂಚಿದ ಸುದ್ದಿ, ಮಾಸ್ಕ್ ಸ್ಯಾನಿಟೈಸರ್ ಹಂಚಿದ ಸುದ್ದಿ, ನೇರ ಸರಕಾರಕ್ಕೇ ದೇಣಿಗೆ ನೀಡಿದ ಸುದ್ದಿ ಮತ್ತೆ ಕೆಲವರಿಗೆ ತಮ್ಮ ಖರ್ಚಲ್ಲಿ ವಿಮಾನ ಯಾನ ಯೋಗ ಮಾಡಿಸಿದ್ದು ಹೀಗೆ ಪ್ರಚಾರಕ್ಕೋ ಕಳಕಳಿಗೋ ಎಲ್ಲೆಲ್ಲೂ ಸಹಾಯ ಮಾಡುವಿಕೆ ಉತ್ಸಾಹ ನೋಡಲು ಸಿಕ್ಕವು. ಸಹಾಯ ಮಾಡುವವರ ಅನುಕೂಲಕ್ಕೆ ತಕ್ಕಂತೆ ಸಿಕ್ಕವರಿಗೆ ಸೀರುಂಡೆ ಅನ್ನೋ ಹಾಗಾಯಿತು. ದುಡ್ಡಿನ ಅವಶ್ಯಕತೆ ಇದ್ದ ಕೆಲವು ಜನರು ಕೈಚಾಚಲು ಬಯಸದೆ ಮುಜುಗರದಿಂದ ಒಳಗೇ ಅವಿತು ನೋವು ಪಟ್ಟರು. ಮತ್ತೆ ಕೆಲವರು ಸಹಾಯ ಎಂದು ನೀಡಿದ ದಿನಸಿ ಸಾಮಾನು ತರಕಾರಿಗಳನ್ನು ಸಿಕ್ಕ ಕಡೆ ಎಲ್ಲಾ ಪಡೆದು ದುಡ್ಡಿಗೆ ಮಾರಿಕೊಳ್ಳಲಾರಂಬಿಸಿದರು.

    ಗೋರೆಗಾಂವ್ ನ ಫಿಲ್ಮಿಸ್ಥಾನ್ ಕಾಂಪೌಂಡ್ ನ ಒಳಗೆ ಕಾರ್ಮಿಕರಿಗೆಂದು ಕೊಟ್ಟ ಸಾಮಾನು ಆಹಾರ ಪದಾರ್ಥಗಳು ಬೇಕೆಂದವರಿಗೆ ದುಡ್ಡಿಗೆ ಹಂಚಿಕೆ ಆಗುತ್ತಿತ್ತು. ಈ ಸಂಭ್ರಮಗಳೂ ಕೊನೆಗೊಂಡು ಕಾರ್ಮಿಕರು ಬದುಕಲು ದಾರಿ ಕಾಣದೆ ಬಂದ ಊರಿನತ್ತ ಮುಖ ಮಾಡಿದರು. ಸಿಕ್ಕಿದ್ದನ್ನು ಹೊತ್ತು ಖಾಲಿ ಹೊಟ್ಟೆಯಲ್ಲಿ ಸಾವಿರಾರು ಮೈಲಿ ನೆಡೆದರು. ಅಲ್ಪ ಸ್ವಲ್ಪ ದುಡ್ಡಿದ್ದವರು, ಆಟೋ ಸಿಕ್ಕರೆ ಆಟೋ ಲಾರಿ ಸಿಕ್ಕರೆ ಲಾರಿ ಎಂದು ದುಡ್ಡು ತೆತ್ತು ಊರಿಗೆ ಹೊರಟರು. ಈ ಪರದಾಟದ ಗೌಜು ದಿನದಿಂದ ದಿನಕ್ಕೆ ತಣ್ಣಗಾಗಿ ಈಗ ನಿಜವಾದ ಸಂಘರ್ಷ‌ ಶುರುವಾಗಿದೆ.ಕಡಿಮೆ ಎಂದರೂ ಎರಡು ಮೂರು ಸಾವಿರ ಜೋಬಿಗಿಳಿಸಿ ನೆಮ್ಮದಿಯಿಂದ ಮನೆಗೆ ಹೋಗುತ್ತಿದ್ದ ಆಟೋದವರು ಕುಸಿದು ಕೂತಿದ್ದಾನೆ. ಇ ಎಂ ಐ ಕಟ್ಟಿಸಿಕೊಳ್ಳದ ಗಾಡಿಗಳು ಬೀದಿಗೆ ಬಿದ್ದಿವೆ.

    ಇವುಗಳ ನಡುವೆಯೇ ಕೊರೋನಾ ಪ್ರತಾಪ ಮುಂದುವರೆಸುತ್ತಾ ನೆಡೆದಿದೆ. ಆಸ್ಪತ್ರೆ ಒಳಗೆ ಹೋದವರ ಮುಖ ಮತ್ತೆ ವಾಪಸ್ ನೋಡುವುದೂ ಅಸಾಧ್ಯವೇನೋ ಎನ್ನುವಂತಾಗಿ ಜನ ಕಂಗೆಟ್ಟಿದ್ದಾರೆ.ಗುಣ ಮುಖರಾದವರ ಸುದ್ದಿಗಳು ಬರುತ್ತಿವೆ. ಸಾಗರೋಪಾದಿಯಲ್ಲಿ ಜನ ತಮ್ಮ ತಮ್ಮ ಊರಿನ ಕಡೆಗೆ ಹೊರಟು ಹೋಗಿದ್ದಾರೆ. ಈವರೆಗೂ ಗಳಿಸಿ ಜೋಪಾನ ಮಾಡಿದ್ದ ದುಡ್ಡು ಮುಗಿದು ಹಸಿವಿನಿಂದ ಕಂಗೆಟ್ಟ ಮುಖಗಳು ಎಲ್ಲೆಲ್ಲೂ ಕಾಣುತ್ತಿವೆ.ಎಲ್ಲಿಗೂ ಹೋಗಲಾಗದೆ ಇರಲೂ ಜಾಗವಿಲ್ಲದೆ ಬೀದಿಗೆ ಬಿದ್ದವರ ಬವಣೆ ಟೀವಿಯಲ್ಲಿ ನೋಡಿದ ಜನ ‘ಚ್ಚು ಚ್ಚು’ ಎಂದದ್ದಷ್ಟೇ ಲಭ್ಯ.

    ತಂದೆಯನ್ನು ಸೈಕಲ್ ಮೇಲೆ ಸಾಗಿಸಿದ ಮಗಳು.. ತಾಯಿಯನ್ನು ಬೆನ್ನ ಮೇಲೆ ಹೊತ್ತು ನೆಡೆದ ಮಗ ಎಲ್ಲವನ್ನೂ ಅಚ್ಚರಿಯಿಂದ ಹೀಗೂ ಸಾಧ್ಯವೇ? ಎಂದು ಜನ ವಾರ್ತೆಗಳಲ್ಲಿ ನೋಡಿದರು.ಇವೆಲ್ಲಕ್ಕಿಂತ ಭಿನ್ನವಾದ ಎಲ್ಲರ ಕಣ್ಣಿಗೆ ಕಾಣದ ಮನೆ ಮನೆಗಳ ಜಗತ್ತಿನಲ್ಲಿ ಗಲ್ಲಿ ಗಲ್ಲಿಯೊಳಗೆ ಬೇರೆಯದೇ ಧಾರವಾಹಿಗಳು ನೆಡೆಯುತ್ತಿತ್ತು. ಸೌಹಾರ್ದತೆಗೆ ಸಾಧ್ಯ ಮಾಡಿಕೊಟ್ಟಿದ್ದ ಹೊರಗಿನ ಪ್ರಪಂಚ ಇದ್ದಕ್ಕಿದ್ದಂತೆ ಮುಚ್ಚಿ ಹೋಗಿ ಹೊಸ ಹೊಸ ಸಮಸ್ಯೆಗಳು ಹುಟ್ಟಿಕೊಂಡವು.

    ಎಷ್ಟೋ ಮನೆಗಳಲ್ಲಿ ವೈವಾಹಿಕ ಜೀವನದಲ್ಲಿ ಸೋತವರು ತಾಳ್ಮೆಗೆಡುವ ಪರಿಸ್ಥಿತಿ ನಿರ್ಮಾಣ ಆಗುತ್ತಿತ್ತು. ಮಕ್ಕಳಿಗಾಗಿ ನೆಪ ಮಾತ್ರಕ್ಕೆ ಒಂದು ಸೂರಿನಡಿ ಬದುಕುತ್ತಿದ್ದವರು ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿಯೇ ಬೇಡದವರ ಮುಖ ನೋಡುತ್ತಾ ಅವರ ತಿವಿಯುವ ಮಾತುಗಳನ್ನು ಸಹಿಸುತ್ತಾ ತಮ್ಮ ಮನೋಸ್ವಾಸ್ಥ್ಯವನ್ನೇ ಕಳೆದುಕೊಂಡು ಹಾಳಾದರು. ಅಂತದ್ದೇ ಒಂದು ಸಂದರ್ಭದಲ್ಲಿ ಹೆಂಡತಿಯೊಬ್ಬಳು ತನ್ನ ಹುಟ್ಟು ಹಬ್ಬದ ದಿನ ಊರೆಲ್ಲಾ ತನ್ನ ಸ್ನೇಹಿತೆಯರು ಪರಿಚಯದವರು
    ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದು ವಿಶ್ ಮಾಡುವಾಗ, ಗಂಡ ಎನಿಸಿಕೊಂಡವ ಒಂದು ಕೇಕ್ ಕೂಡ ತರದೆ ನಿರ್ಲಕ್ಷ ಮಾಡಿದ, ಅವಮಾನ ಆಯಿತು ಅನ್ನೋ ಕ್ಷುಲ್ಲಕ ಕಾರಣಕ್ಕೆ ನೇಣು ಹಾಕಿಕೊಂಡಳು.
    ಮತ್ತೆ ಸಿನೆಮಾ, ಟೀವಿ ಧಾರವಾಹಿಗಳಲ್ಲಿ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದವರು ಕೆಲಸ ಕಳೆದುಕೊಂಡು ಡಿಪ್ರೆಷನ್ ಗೆ ಸಿಲುಕಿ ಆತ್ಮ ಹತ್ಯೆ ಮಾಡಿಕೊಂಡರು. ಅಂತಹ ಎಷ್ಟು ಸಾವುಗಳಾದವೋ.

    ಇನ್ನು ಕೆಲವು ಕಡೆ ಇದೇ ಸರಿಯಾದ ಸಮಯ ಪೋಸ್ಟ್ ಮಾರ್ಟಂ ಮಾಡಲೂ ಯಾರಿಗೂ ಪುರುಸೊತ್ತಿಲ್ಲ ಎಂಬ ಭಂಡ ಧೈರ್ಯದಲ್ಲಿ ಮಾಡಬಾರದ ಅನ್ಯಾಯಗಳನ್ನು ಮಾಡಿ ಎಷ್ಟೋ ಕೊಲೆಗಳೂ ಆಗಿವೆ.ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಥಳ ಸಿಗದೆ ಪ್ರೈವೇಟ್ ಹಾಸ್ಪಿಟಲ್ ಗೆ ಎಡತಾಕಿದವರನ್ನು ಅವರ ಯೋಗ್ಯತೆಯನ್ನು ಮೀರಿಸುವಷ್ಟು ದುಡ್ಡು ಕಿತ್ತವು.

    ಒಂದೊಮ್ಮೆ ಊರಿನಿಂದ ಬಂದಾಗ ಹಾಡಿ ಹೊಗಳಿ ಉಪಚರಿಸಿ ಮುಂಬೈನವರು ನಮ್ಮ ಕಡೆ ಜನ ಎಂದು ಹೇಳಿಕೊಂಡು ಹೆಮ್ಮೆಯಿಂದ ಬೀಗುತ್ತಿದ್ದ ಜನರು ಇವತ್ತು ಮುಖ ತಿರುಗಿಸಿದ್ದರು.
    ಮುಂಬೈಯ ತಮ್ಮವರು ತರುವ ದುಡ್ಡಿಗೆ, ಉಡುಗೊರೆಗೆ ಏನು ಸೇವೆ ಬೇಕಿದ್ದರೂ ಮಾಡಲು ಸಿದ್ದವಿದ್ದ ಜನ ಈಗ, ಊರಿಗೇ ಬರಬೇಡಿ ಎಂದು ನಿಷೇಧ ಹೇರಿದರು. ಮುಂಬೈ ಪಾಪಗಳ ಕೂಪ, ರೋಗಗಳ ತವರು ಎಂದರು. ಸಂಬಂಧಿಕರೂ ಇಂಥ ಕಷ್ಟದ ಸ್ಥಿತಿಯಲ್ಲಿ ಮುಖ ಮುರಿಯುವ ಹಾಗೆ ನಮ್ಮಲ್ಲಿಗೆ ಬರಲೇ ಬೇಡಿ ಎಂದು‌ ಬಾಗಿಲು ಮುಚ್ಚಿಬಿಟ್ಟರು.

    ಎಲ್ಲೂ ಹೋಗಲು ಸ್ಥಳವಿರದೆ ಇಲ್ಲೇ ಇದ್ದವರ ಪರಿಸ್ಥಿತಿ ಬೇರೆಯೇ ತರ. ಹೇಗೋ ಸಂಸಾರ ಸಾಗಿಸಲೇ ಬೇಕಿದ್ದ ಅನಿವಾರ್ಯತೆ ಮನೆಗಳಲ್ಲಿ. ಖರ್ಚಿಗೆ ಹಣ ಅಗತ್ಯವಿದ್ದಷ್ಟೂ ಸಿಗದೆ ಕುಟುಂಬದ ಎಲ್ಲರಿಗೂ ಮನೋವ್ಯಥೆ. ಒಡ ಹುಟ್ಟಿದವರೊಡನೆ ಜಗಳ, ದ್ವೇಷ .. ಕೇವಲ ಒಂದೆರಡು ತಿಂಗಳಲ್ಲಿ ಎಷ್ಟೋ ಸಂಬಂಧಗಳು ಬುಡ ಮೇಲಾದವು. ಶಾಲೆಗೆ ಹೋಗದೆ ಮಕ್ಕಳು ಉಡಾಳಾದವು. ಮಕ್ಕಳ ಚೇಷ್ಟೆ ಸಹಿಸಿ ಸಹಿಸಿ ತಂದೆ ತಾಯಂದಿರು ಹೈರಾಣಾದರು. ಕೂಡು ಕುಟುಂಬಗಳಲ್ಲಂತೂ ತಾಳ್ಮೆ ಹದ ತಪ್ಪಿ ಸಣ್ಣ ಪುಟ್ಟ ಇರುಸು ಮುರುಸುಗಳೂ ದೊಡ್ಡದಾಗಿ ಒಳಗೇ ಕುದಿವ ಜ್ವಾಲಾಮುಖಿಯ ಗೂಡುಗಳಾಗಿವೆ.

    ಹೊಸ ಕನಸುಗಳನ್ನು ಕಟ್ಟಿಕೊಂಡು ಹೊಸ ಬದುಕಿಗೆ ಅಡಿ ಇಡಬೇಕಿದ್ದ ಯುವ ಚಿಗುರುಗಳು ಮುದುರಿ ಕೂತಿವೆ. ಕೆಲಸಕ್ಕಾಗಿ ಎದುರು ನೋಡುತ್ತಿದ್ದ ಯುವ ಪೀಳಿಗೆಯವರು ತಿಂಗಳುಗಟ್ಟಲೆ ಮನೆಯಲ್ಲೇ ಬಂಧಿಯಾಗಿ ಮಾನಸಿಕ ಕ್ಷೋಬೆಗೆ ಒಳಗಾಗಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಎಲ್ಲಿ ನೋಡಿದರೂ ಕಲಸಕ್ಕಾಗಿ ಬೇಡಿಕೆ ಇಡುತ್ತಿರುವವರು ಕಾಣಬರುತ್ತಿದ್ದಾರೆ. ಲಕ್ಷಾಂತರ ಸಣ್ಣ ಕೈಗಾರಿಕೆ ಘಟಕಗಳು ಮುಚ್ಚಿ ಹೋಗಿ ಕೆಲಸ ಕಳೆದು ಕೊಂಡ ಜನ ಹತಾಶರಾಗಿದ್ದಾರೆ. ಕೆಲಸದಲ್ಲಿ ಇದ್ದ ಯುವಕರು, ನವ ವಿವಾಹಿತರು ಕೆಲಸದ ಭರವಸೆಯ ಮೇಲೆ ಲೋನ್ ಮಾಡಿದ್ದವರು ಪೂರ್ತಿ ಸಂಬಳ ಸಿಗದೆ ಲೋನ್ ಕಟ್ಟಲಾಗದೆ ಒದ್ದಾಡುತ್ತಿದ್ದಾರೆ. ಸೂಚನೆಯೂ ಇಲ್ಲದೆ ಕೆಲಸಗಳಿಂದ ತೆಗೆಯಲ್ಪಟ್ಟಿದ್ದಾರೆ.

    ಬರೀ ಬಣ್ಣದ ಬದುಕನ್ನೇ ಬಿಂಬಿಸುವ ಸಿಮೆಮಾ ರಂಗವೂ ಕೂಡ ನೆಲ ಕಚ್ಚಿದೆ. ಥಿಯೇಟರ್ ಗಳು ಬಿಕೋ ಎನ್ನುತ್ತಿವೆ. ನಿಂತ ಕಾವಲುಗಾರ ತನ್ನ ಸಂಬಳವಾದರೂ ಸಿಕ್ಕೀತೋ ಇಲ್ಲವೊ ಎಂದು ತಳ ಮಳ ಪಡುತ್ತಿದ್ದಾನೆ. ಮಾಲ್ ಗಳಲ್ಲಿ ಹವಾನಿಯಂತ್ರಣ ಇಲ್ಲದೆ ಕೋಟ್ಯಾಂತರ ಬೆಲೆಯ ಸಾಮಾನುಗಳು ಹಾಳಾಗಿವೆ. ಬಾಡಿಗೆಗೆ ಜನ ಬರದೆ ಮನೆಗಳು ಖಾಲಿ ಹೊಡೆಯುತ್ತಿದೆ. ಶುರುವಿನಲ್ಲಿ ಸಹಾಯ ಮಾಡಲು ಮುಂದೆ ಬಂದವರೂ ಸದ್ಧಡಗಿಸಿ ಕೂತಿದ್ದಾರೆ. ರಾವು ಬಡೆದಂತಹ ಶಹರಿನ ಬೀದಿಯಲ್ಲಿ ಆಂಬುಲೆನ್ಸ್ ಸದ್ದುಗಳು ಒಳಗೆ ಅವಿತು ಕೂತವರ ಅಧೀರತೆ ಹೆಚ್ವಿಸುತ್ತಿವೆ. ಲೋಕಲ್ ಟ್ರೈನುಗಳು ಈ ಹಿಂದೆ ಓಡುತ್ತಲೇ ಇರಲಿಲ್ಲವೇನೋ ಎಂಬಂತೆ ನಿಂತಿವೆ. ಬಸ್ಸುಗಳೂ ಕೊರೋನಾ ವಾಹಕವೇನೋ ಎಂಬ ದಿಗಿಲು ಹುಟ್ಟಿಸುತ್ತಿವೆ.

    ಸಕಾರಾತ್ಮಕ ಬದಲಾವಣೆಗಳೂ ಆಗಿವೆ

    ಈ ಎಲ್ಲಾ ಕೆಟ್ಟ ಪರಿಸ್ಥಿತಿಯ ನಡುವೆಯೂ.. ಕೆಲವೇ ಕೆಲವು ಸಕಾರಾತ್ಮಕ ಬದಲಾವಣೆಗಳೂ ಆಗಿವೆ. ಕೊರೊನಾ ಸೋಂಕಿನ ಭಯದಲ್ಲಿ ಜನ ಜವಬ್ಧಾರಿಯುತವಾಗಿ ವರ್ತಿಸುವ ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ. ಆ ಕಾರಣದಿಂದ ಎಲ್ಲೆಡೆ ಸ್ವಚ್ಛತೆ ತಾನಾಗಿಯೇ ಪಾಲನೆಯಾಗುತ್ತಿದೆ. ರಸ್ತೆ ನದಿ ಸಮುದ್ರ ಕಾಡುಗಳು ಸ್ವಚ್ಚತೆಯ ಸಡಗರ ಅನುಭವಿಸುತ್ತಿವೆ. ಪ್ರಧಾನಿಗಳು ಕರೆ ಕೊಡುವ ಮೊದಲೇ ಎಷ್ಟೋ ಜನ ತಾವಾಗಿಯೇ ಆತ್ಮ ನಿರ್ಭರತೆಯನ್ನು ಸಾಧಿಸಿದ್ದಾರೆ. ಕೆಲಸದವರು ಬರದ ಕಾರಣ ತಮ್ಮ ಮನೆಯ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಿದ್ದಾರೆ. ಬೀದಿ ಬದಿಯ ತಿನಿಸು ತಿನ್ನುವುದು ಬಿಟ್ಟು ಸ್ವತಃ ಆರೋಗ್ಯಕರ ಆಹಾರ ಮನೆಯಲ್ಲಿಯೇ ತಯಾರಿಸಿ‌ ತಿನ್ನಿತ್ತಿದ್ದಾರೆ. ಸ್ವಚ್ಛತೆಯ ಕಡೆ ಗಮನ ಹರಿಸಿ ಆರೋಗ್ಯ ಜೀವನ ಶೈಲಿ ರೂಢಿಸಿಕೊಳ್ಳುತ್ತಿದ್ದಾರೆ. ತಮ್ಮ ಮಕ್ಕಳಿಗೆ ತಾವೇ ಪಾಠ ಹೇಳಿಕೊಡುತ್ತಾ ತಾವೂ ಕಲಿಯುತ್ತಿದ್ದಾರೆ. ಬದುಕಲ್ಲಿ ಹೊಸ ಹೊಸ ಕಲಿಕೆಗಳತ್ತ ಮುಖ ಮಾಡಿದ್ದಾರೆ. ಹೊಸ ಸಾಧ್ಯತೆಗಳ ಕಡೆ ಹುಡುಕಾಟ ನೆಡೆಸಿದ್ದಾರೆ. ಒಂದಷ್ಟು ಜನ ಮನೋ ಸ್ವಾಸ್ಥ್ಯ ದೇಹ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಹೊಸ ಹೊಸ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.ಆಶಾವಾದಿಗಳು ಆನ್ ಲೈನ್ ಮೂಲಕ ತಮಗೆ ಕೊಡಲು ಸಾಧ್ಯವಿರುವ ಸೇವೆ ಒದಗಿಸಿ ಹಣ ಮಾಡಿಕೊಳ್ಳುತ್ತಿದ್ದಾರೆ.

    ಸಣ್ಣ ಪ್ರಮಾಣದಲ್ಲಿಯೇ ಸರಿ, ಹಣ ಗಳಿಸಲು ಸಾಕಷ್ಟು ಅವಕಾಶಗಳು ತೆರೆದುಕೊಂಡಿವೆ. ಹೇಗಾದರೂ ಬೆಳೆಯಲೇ ಬೇಕು ಎನ್ನುವವರು ಕೊರೋನಾಗೂ ಸೆಡ್ಡು ಹೊಡೆದು‌ ಒಂದಲ್ಲಾ ಒಂದು ರೀತಿಯಲ್ಲಿ ಸಕ್ರಿಯರಾಗಿದ್ದಾರೆ.ಈ ವರೆಗೂ ಬಿದಿ ಬಿದಿ ತಿರುಗಿಯೇ ಮಾಡಬೇಕಿದ್ದ ಕೆಲಸಗಳು ಕಂಪ್ಯೂಟರ್ ಮೂಲಕ ಹೊಸ ವ್ಯವಸ್ಥೆಗೆ ತೆರೆದುಕೊಂಡಿವೆ.

    ಆದರೂ ಸ್ಚಚ್ಚಂದವಾಗಿ ಯಾವುದೇ ಭಯವಿಲ್ಲದೆ ಮೊನ್ನೆಯವರೆಗೂ ಬದುಕಿದ್ದ ಬದುಕಿನ ಜಾತ್ರೆ ಮುಗಿದೇ ಹೋಯಿತೇನೋ ಎಂಬ ದುಗಡದಲ್ಲಿ ಹೊಸ ಸ್ವಾತಂತ್ರ್ಯದ ಕಡೆ ಪ್ರತೀ ಮನುಷ್ಯನ ಚಿತ್ತ ನೆಟ್ಟಿದೆ.

    ಅಂಚೆ ಮುಂಚೆಯಂತಿಲ್ಲ

    ಮನೆಯಲ್ಲೋ ಹೊರಗೆ ಗೆಳೆಯರ ಸರ್ಕಲ್ಲಲ್ಲೋ ಎಲ್ಲೋ ಒಂದು ಕಡೆ ಸ್ವಲ್ಪ ಪೋಸ್ಟ್ ಆಫೀಸಲ್ಲಿ ಕೆಲಸ ಇದೆ ಹೋಗ್ಬರ್ತೀನಿ ಅನ್ನೋ ಮಾತು ಕಿವೀಗೆ ಬೀಳ್ತಾನೇ ಇರೋದು.ಊರಿನ ಗಾತ್ರಕ್ಕನುಗುಣವಾಗಿ ಪೋಸ್ಟ್ ಅಫೀಸು ಇರುತ್ತಿತ್ತು.ಅದರ ವಿನ್ಯಾಸವೇ ಮಜ . ಮುಂಭಾಗದಲ್ಲಿ ಸ್ಥಾಪಿತವಾಗಿರ್ತಿದ್ದ ಕೆಂಪು ಬಣ್ಣದ ಪೋಸ್ಟ್ ಬಾಕ್ಸು .ಒಳಗೆ ಹೋಗ್ತಿದ್ದಂತೆ ಅರ್ಧ ಫ್ಯಾಬ್ರಿಕೇಟ್ ಆಗಿರುವಂತಹ ಮರದ ತಡೆಗೋಡೆ. ಅತ್ಲಕಡೆ ಸ್ಟ್ಯಾಂಪು, ಇನ್ಲ್ಯಾಂಡ್ ಲೆಟರ್ರು, ಕಾರ್ಡು ,ಎನ್ವಲಪ್ಪು ಕೊಡುವ ಕೌಂಟರ್ರು . ಪಕ್ಕದಲ್ಲಿ ಸ್ಟೀಲಿನ ಸಣ್ಣ ತಕ್ಕಡಿ ಇಟ್ಟುಕೊಂಡು ಕುಳಿತಿರುವ ಮಹಿಳೆ . ಮನಿಯಾರ್ಡರ್ ಸೆಕ್ಷನ್ .ನಂತರದ್ದು ಮತ್ತು ತುಂಬಾ ಗಂಭೀರವಾದ ವಿಭಾಗ ಅಂದ್ರೆ ಅದು ಟೆಲಿಗ್ರಾಮ್ ಸೆಕ್ಷನ್ .

    ಈ ಕೌಂಟರಿಗೆ ಬರಬೇಕು ಅಂದ್ರೆ ಎಂತಾವ್ರದೂ ಹಾರ್ಟು ಹೊಡ್ಕೊತಾ ಇರೋದು… ಅಂತಾದ್ರಲ್ಲಿ ಒಬ್ಬ ವ್ಯಕ್ತಿ ಒಂದು ರಾಶಿ ಪತ್ರಗಳನ್ನು ಮುಂದೆ ಸುರಿದುಕೊಂಡು ಡಬ್ ಡಬ್ ಅಂತ ಹಾರ್ಟ್ ಬೀಟೇ ನಿಂತೋಗೋ ಥರ ಸೀಲು ಬಡೀತಾ ಕೂತಿರೊವ್ನು . ಹಂಗೇ ಗಮನಿಸಿದ್ರೆ ಒಂದು ಮೂಲೆಯಲ್ಲಿ ಒಂದು ಗೋಂದಿನ ನೀಲಿ ಕಲರಿನ ಡಬ್ಬ ಅದರೊಳಗೆ ಕಡ್ಡಿ ಇರ್ತಿತ್ತು. ಆ ಗೋಡೆ ಮೇಜು ಎಲ್ಲಾ ಗೋಂದಿನ ಕಲೆಗಳಿಂದ ಮಾಸೋಗಿರೋದು .


    ಮತ್ತೆ ಪತ್ರ ಬರೆಯೋದೇ ಚೆಂದ ಇರ್ತಿತ್ತು .ಕಾಗದದ ಮೇಲ್ಬಾಗದ ಮಧ್ದದಲ್ಲಿ ‘ಶ್ರೀ’ ಎಡಭಾಗದಲ್ಲಿ ‘ಕ್ಷೇಮ’ ಬಲಭಾಗದಲ್ಲಿ ದಿನಾಂಕ ಅದಕ್ಕೆ ಹೊಂದಿಕೊಂಡಂತೆ ಕೆಳಗೆ ಊರು ….ತೀರ್ಥರೂಪ ಸಮಾನರಾದ , ಗುರು ಸಮಾನರಾದ , ಸೋದರ ಸಮಾನರಾದ , ಸಣ್ಣವರಿಗೆ ಚಿರಂಜೀವಿ ….ಹೀಗೇ ಶುರುವಾಗಿ ನಾವೆಲ್ಲರೂ ಕ್ಷೇಮ ನೀವುಗಳು ಕ್ಷೇಮವಾಗಿದ್ದೀರೆಂದು ನಂಬಿರುತ್ತೇವೆ . ಪತ್ರ ಬರೆಯುತ್ತಿರುವ ವಿಷಯವೇನೆಂದರೆ ಎಂದು ಪ್ರಮುಖ ವಿಷಯ ಬರೆದು, ಈ ಕಾಗದ ತಲುಪಿದ ಕೋಡಲೇ ಪತ್ರ ಬರೆಯಬೇಕೆಂದು ವಿನಂತಿಸಿಕೊಳ್ಳುತ್ತೇನೆ. ಇಂತಿ ನಿಮ್ಮ ಪ್ರೀತಿಯ , ವಿಶ್ವಾಸಿ , ನಂಬುಗೆಯ , ಹೀಗೆ ಬರೆದು ಎಂಡ್ ಮಾಡಿ , ಗಮ್ಮಿನಿಂದಲೋ , ಅನ್ನದ ಅಗುಳಿನಿಂದಲೋ , ಮುದ್ದೆಯಿಂದಲೋ ಅದನ್ನು ಅಂಟಿಸಿ , ತಲುಪಬೇಕಾದ ವಿಳಾಸವನ್ನು ಪತ್ರದ ಮೇಲೆ ನಮೂದಿಸಿರುವ ಬಾಕ್ಸಿನಲ್ಲಿ ಮರೆಯದೇ ಪಿನ್ ಕೋಡ್ ತುಂಬಿ …..ಏರಿಯಾ ಹತ್ತಿರದಲ್ಲಿ ಹುಣಿಸೇಮರಕ್ಕೋ, ಕೆಇಬಿ ಯವರ ಕಂಬಕ್ಕೋ, ತಾಲ್ಲೂಕು ಆಫೀಸಿನ ಗೋಡೆಗೋ ನೇತಾಕಿರುವ ಪೋಸ್ಟ್ ಬಾಕ್ಸಿಗೆ ಹಾಕುತಿದ್ದೆವು.

    ಕಬ್ಬಿಣದ ಕೆಂಪು ಡಬ್ಬದ ಬಾಯಿಗೆ ಒಂದು ಕಪ್ಪು ರೇಕಿನ ಅಲುಗಾಡುವ ನಾಲಿಗೆ ಇರೋದು ಅದರೊಳಗೆ ಹಾಕಿ…… ಒಳಗೆ ಬಿತ್ತಾ ? ಪೋಸ್ಟ್ ಮ್ಯಾನ್ಗೆ ಸಿಗುತ್ತೊ ಇಲ್ವೋ ? ಅಡ್ರೆಸ್ಸು ಸರಿಯಾಗಿ ಬರ್ದಿದ್ನಾ ? ಅಂಚೆ ಯವರು ಇದನ್ನ ತಲುಪುಸ್ತಾರ ? ಹೀಗೆ ಒಂದಷ್ಟು ಸಂದೇಹಗಳೊಂದಿಗೇ ಹಿಂದಿರುಗುತ್ತಿದ್ದೆವು .

    ನಿಜವಾಗ್ಲೂ ಆಗ ಬದುಕು ಒಂದು ದಡ ಸೇರಲು ಅಂಚೆ ಪ್ರಮುಖ ಕಾರಣ ಆಗಿರ್ತಿತ್ತು .ಕೋಟ್ಯಂತರ ಮಂದಿ ಸರ್ಕಾರಿ ನೌಕರಿಗಳಿಗೆ ಸೇರಲು ಅಂಚೆಯಿಂದ ಬಂದ ಅಪಾಯಿಂಟ್ ಮೆಂಟ್ ಲೆಟರ್ ಗಳು ಕಾರಣ. ಕೋಟ್ಯಂತರ ಜೋಡಿಗಳ ಪ್ರೇಮಪತ್ರಗಳು ಮದುವೆಗಳಾಗಲು ಕಾರಣ.ಕೋಟ್ಯಂತರ ರೂಪಾಯಿ ಮನಿಯಾರ್ಡರ್ ಗಳು ಬದುಕು ನಡೆಯಲು ಕಾರಣ .

    ಪ್ರತಿಯೊಂದು ವ್ಯವಹಾರವೂ ಪತ್ರಗಳ ಮೂಲಕವೇ ಜರುಗುತ್ತಿತ್ತು .ವ್ಯವಹಾರವೇ ಅಂತಲ್ಲ ವಿಶ್ವಾಸಕ್ಕೂ, ಸಂಬಂಧಗಳಿಗೂ ಅಂಚೆ ಕಾರಣವಾಗ್ತಿತ್ತು . ಒಂದೂರಿನ ಗಂಡನ್ನೋ ಹೆಣ್ಣನ್ನೋ ತರಬೇಕು ಅಂದ್ರೆ ಆ ಊರಿನ ಅಂಚೆಯವನ ಹತ್ತಿರ ವಿಚಾರಿಸುತ್ತಿದ್ದರು . ಮನೆಯಲ್ಲಿ ಕಾಗದಗಳ ಸಂಗ್ರಹ ಮಾಡುತ್ತಿದ್ದರು ಬಿಡುವಾಗಿದ್ದಾಗ ಅದನ್ನು ಓದಿ ತಮ್ಮ ನೆನಪಿನಂಗಳಕ್ಕೆ ಜಾರುತ್ತಿದ್ದರು . ಪತ್ರಗಳು ಅಕ್ಷರಗಳಿಂದ ಕೂಡಿರ್ತಿರ್ಲಿಲ್ಲ .ಭಾವನೆಗಳಿಂದ ಕೂಡಿರೋದು. ಪ್ರತಿಯೊಂದು ವಾಕ್ಯದಲ್ಲೂ ಗೌರವ ಆತ್ಮೀಯತೆ ಇರೋದು .ಮನೆಯಲ್ಲಿ ಓದುತ್ತಿದ್ದಂತೆ ಕಣ್ಣಂಚಲಿ ತನಗೆ ತಾನೇ ನೀರು ಜಿನುಗೋದು .

    ಅಂಚೆಯ ಟೆಲಿಗ್ರಾಮ್ ಸೇವೆಯಲ್ಲೂ ಅಷ್ಟೇ ಏನೇ ಸಾವು ಜರುಗಿದ್ದರೂ ಸಹ ಸ್ಟಾರ್ಟ್ ಇಮ್ಮೀಡಿಯಟ್ಲಿ ಅಂತಲೇ ಉಲ್ಲೇಖಿಸೊವ್ರು .ಮೌಲ್ಯಗಳ ಬೆಲೆ ಗೊತ್ತಿತ್ತು ಮತ್ತು ಶಿಸ್ತಿನ ಇಲಾಖೆ ಅದಾಗಿತ್ತು . ಮಕ್ಕಳು ಯುವಕ ಯುವತಿಯರು ಸ್ಟಾಂಪ್ ಕಲೆಕ್ಷನ್ ಮಾಡುವ ಹವ್ಯಾಸ ಹೊಂದಿದ್ದರು . ಆಗ ವಿದೇಶದಿಂದ ಬರೋ ಪತ್ರ ನೋಡಕ್ಕೇ ಅತ್ಯಾಕರ್ಷಕವಾಗಿ ಇರೋದು .ಬಿಳಿಯ ಎನ್ವಲಪ್ ಸುತ್ತಲೂ ಕೆಂಪು ನೀಲಿ ಬಣ್ಣದ ಬಾರ್ಡರ್ ಇರೋದು. ಓಡುತ್ತಿರುವ ಜಗತ್ತಿಗೆ ಹೋಲಿಸಿಕೊಂಡಾಗ ತುಸು ನಿಧಾನವೆನಿಸಿತೊ ಏನೋ ಸ್ಪೀಡ್ ಪೋಸ್ಟನ್ನು ಪರಿಚಯಿಸಿದರು .ಲ್ಯಾಂಡ್ ಲೈನ್ ಫೋನು ಚಾಲ್ತಿಗೆ ಬಂತು ನೋಡಿ …..ಅಂಚೆ ಏಕಾಏಕಿ ತನ್ನ ಚಕ್ರಾಧಿಪತ್ಯವನ್ನು ಬದಿಗಿರಿಸಿ ಸಿಂಹಾಸನದಿಂದ ಕೆಳಗಿಳಿಯಿತು . ನಂತರದ STD ISD ಫೋನು ಬೂತುಗಳು , ಒಂದು ರೂಪಾಯಿಯ ಕಾಯಿನ್ ಬೂತುಗಳು , ಪೇಜರ್ಗಳು , ಮೊಬೈಲುಗಳು , ಖಾಸಗೀ ಕೊರಿಯರ್ ಸಂಸ್ಥೆಗಳು …..ಕಾಗದವನ್ನು ಕಳೆದು ಹಾಕಿದವು .

    ತಲುಪಲು ಮೂರು ದಿನ ಸಮಯ ಕೇಳುತ್ತಿದ್ದ ಸುದ್ದಿ ಈಗ ಮೂರು ಸೆಂಕೆಂಡಿನಲ್ಲಿ ತಲುಪುತ್ತಿದೆ . ಊರಿನವನಾಗಿ , ಮನೆಯವನಾಗಿ , ಸ್ನೇಹಿತನಾಗಿ , ಸಂಬಂಧಿಕನಾಗಿ ಕಾಣುತ್ತಿದ್ದ ಅಂಚೆಯವನು ಇಂದು ಅಪರಿಚಿತರಂತೆ ಕಾಣುತ್ತಿದ್ದಾರೆ .

    ಕಿರಣ ಆರ್

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೈಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ.ಹಲವಾರು ಕವಿತೆಗಳಿಗೆ ಇಲಸ್ಟ್ರೇಷನ್ ಮಾಡಿದ್ದಾರೆ. ಇಂಟಿರೀಯರ್ ಡಿಸೈನ್ ಮತ್ತು ಇದರ ಬಗ್ಗೆ ಕೆಲವು ಲೇಖನಗಳನ್ನು ಪತ್ರಿಕೆಗೆ ಬರೆದಿದ್ದಾರೆ. ಜೊತೆಗೆ ಕವಿತೆಗಳನ್ನು ಕೂಡ ಬರೆಯುತ್ತಾರೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    ಭೂಮಿಯತ್ತ ನಿಗಾ ಇಟ್ಟಿವೆಯಾ ಅನ್ಯಲೋಕ ಜೀವಿಗಳು ?

    ಭೂಮಿಗೆ ಹೊರತಾದ, ನಮ್ಮಿಂದಲೂ ಅಂದರೆ ಮನುಷ್ಯರಿಗಿಂತಲೂ ಬುದ್ಧಿವಂತರಾದ ಜೀವಿಗಳು ಇವೆಯಾ ಎಂಬ ಪ್ರಶ್ನೆ ಬಹುಕಾಲದಿಂದಲೇ ಕಾಡುತ್ತಿವೆ. ಇತ್ತೀಚಿನ ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ನಮ್ಮಿಂದಲೂ ಬುದ್ಧಿವಂತರಾದ, ಹೆಚ್ಚು ನಾಗರಿಕತೆ ಬೆಳವಣಿಗೆ ಹೊಂದಿದ 36ಕ್ಕೂ ಹೆಚ್ಚಿನ ಭೂಮಿಯನ್ನು ಹೋಲುವ ಗ್ರಹಗಳಿದ್ದು, ಅದರಲ್ಲಿ ನಾನಾ ಜೀವಿಗಳು ಜೀವಿಸಿರುವ ಬಗ್ಗೆ ಸಂದೇಹ ವ್ಯಕ್ತಪಡಿಸಿವೆ.

     ಏಲಿಯನ್ಸ್ ಅಥವಾ ಅನ್ಯಗ್ರಹ ಜೀವಿಗಳ ಕುರಿತು ನಾಟಿಂಗ್ ಹ್ಯಾಂ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೊಸದಾಗಿ “ಕಾಸ್ಮಿಕ್ ಇವಲ್ಯೂಶನ್” ಎಂಬ ಸಿದ್ಧಾಂತವನ್ನು ಮಂಡಿಸಿದ್ದು, ನಮ್ಮ ಬ್ರಹ್ಮಾಂಡದಲ್ಲೇ ಇಂತಹ ಕನಿಷ್ಠವೆಂದರೂ 36 ಬುದ್ಧಿವಂತ ಜೀವಿಗಳಿವೆ ಎಂದು ಪ್ರತಿಪಾದಿಸಿದ್ದಾರೆ.

    ಈ ಕುರಿತು ಅಧ್ಯಯನ ವರದಿಯು ಆಸ್ಟ್ರೋಫಿಸಿಕಲ್ ಜರ್ನಲ್ ನಲ್ಲಿ ಪ್ರಕಟವಾಗಿದೆ. ಬೇರೆ ಗ್ರಹಗಳು ಮಾತ್ರವಲ್ಲ ಭೂಮಿಯಲ್ಲೇ ಅಂತಹ ನಮಗೆ ಗೋಚರವಾಗದೆ ಉಳಿದಿರುವ ಜೀವಿಗಳಿರಬಹುದು. ಇದಕ್ಕೆ ಮೆಟಾಲಿಸಿಟಿ ಡಿಸ್ಟ್ರಿಬ್ಯೂಶನ್ ಕಾರಣವಿರಬಹುದು ಎಂದು ತರ್ಕಿಸಿದ್ದಾರೆ.

    ಆದರೆ ಅನ್ಯ ಲೋಕ ನಾಗರಿಕತೆಯು ಎಲ್ಲಿರಬಹುದು ಎಂಬ ಪ್ರಶ್ನೆಗೆ ಇದರಲ್ಲಿ ಉತ್ತರವಿಲ್ಲ. ಆದರೆ, ಭೂಮಿಯಲ್ಲಿ ಮಾನವ ವಿಕಾಸವು ಸುಮಾರು 5 ಶತಕೋಟಿ ವರ್ಷಗಳನ್ನು ತೆಗೆದುಕೊಂಡಿದೆ. ಇದಕ್ಕೆ ಮೊದಲು ಕೂಡ ನಮ್ಮ ರೀತಿಯಲ್ಲೇ ಸೌರ ವ್ಯೂಹಗಳು ಅನೇಕವಿದ್ದು, ಅಲ್ಲಿ ಕೂಡ ಭೂಮಿ ರೀತಿಯ ಗ್ರಹಗಳು ಇದ್ದವು. ಅಲ್ಲಿ ನಮ್ಮಿಂದ ಮೊದಲೇ ವಿಕಾಸ ಆರಂಭವಾಗಿತ್ತು. ಹೀಗಾಗಿ ನಮಗೆ ಹೋಲಿಸಿದರೆ ಅವರು ನೂರಾರು ಪಟ್ಟು ಹೆಚ್ಚು ಬುದ್ಧಿವಂತರಾಗಿರಬಹುದು ಎಂದು ಅಭಿಪ್ರಾಯ ಪಟ್ಟಿದೆ.

    ಬಾಯಿ ಬಿಡದ ಅಮೆರಿಕ

    ಅಮೆರಿಕವು ಅನ್ಯಜೀವಿಗಳ ಅಸ್ತಿತ್ವದ ಕುರಿತು ಸಾಕಷ್ಟು ವರ್ಷಗಳಿಂದಲೇ ಸಂಶೋಧನೆ ನಡೆಸುತ್ತಲೇ ಬಂದಿದೆ. ಇದಕ್ಕಾಗಿ ಪ್ರತ್ಯೇಕ ತಂಡವನ್ನೂ ಕೂಡ ರಚಿಸಿದೆ. ಆದರೆ ಅದರ ಪರಿಣಾಮ ಏನು ಎಂಬ ಬಗ್ಗೆ ವಿವರ ಹೊರಗೆ ಬರುತ್ತಿಲ್ಲ. ಅದಕ್ಕೆ ಕಾರಣ ಅದು ಟಾಪ್ ಸೀಕ್ರೇಟ್ ಹಣೆಪಟ್ಟಿ ಕಟ್ಟಿಕೊಂಡಿದೆ. ನೇವಡಾದಲ್ಲಿರುವ ಅಮೆರಿಕ ರಹಸ್ಯ ನೌಕಾಪಡೆ ನೆಲೆಯ ಕುರಿತು ಈ ಬಗ್ಗೆ ಸಂದೇಹಗಳು ಮೂಡಿದ್ದರೂ ಇನ್ನೂ ಯಾವುದೇ ಸ್ಪಷ್ಟ ಚಿತ್ರಣ ಪಡೆಯಲು ಜಗತ್ತಿನ ಯಾವ ರಾಷ್ಟ್ರಗಳಿಗೂ ಸಾಧ್ಯವಾಗಿಲ್ಲ.

    ಸೈಟ್ ನಂ. 51 ಎಂದು ಕರೆಯಲ್ಪಡುವ ಇದನ್ನು 1947ರಲ್ಲಿ ಸ್ಥಾಪಿಸಲಾಯಿತು. ನ್ಯೂ ಮೆಕ್ಸಿಕೋದಲ್ಲಿರುವ ಈ ಪ್ರದೇಶದಲ್ಲಿ ಆಗ ಅಮೆರಿಕದ ವಿಮಾನವೊಂದು ಪತನವಾಯಿತು. ಅದಕ್ಕೆ ಕಾರಣ ಅನ್ಯ ಜೀವಿಗಳ ಬಾಹ್ಯಾಕಾಶ ನೌಕೆ ಎಂದು ಹೇಳಲಾಗುತ್ತಿದ್ದು, ಅಲ್ಲಿ ಈಗಲೂ ಆ ನೌಕೆಯ ಅವಕಾಗಳು ಇವೆ. ಅದರ ಸಂಶೋಧನೆ ಸತತವಾಗಿ ನಡೆಯುತ್ತಿರುವುದರಿಂದಲೇ ಅದನ್ನು ನಿರ್ಬಂಧಿತ ಪ್ರದೇಶವಾಗಿ ಘೋಷಿಸಲಾಗಿದೆ.

    ಸಾಂದರ್ಭಿಕ ಚಿತ್ರ : Greg Rakozy on Unsplash

    ಅರ್ಥಪೂರ್ಣ ಕೆಲಸಗಳನ್ನು ಬಿಟ್ಟು ಇಷ್ಟು ದಿನ ನಾವು ಯಾವುದರ ಬೆನ್ನು ಬಿದ್ದು ಓಡುತ್ತಿದ್ದೆವು

    ಲಾಕ್ ಡೌನ್ ಸಮಯದಲ್ಲಿಪ್ರಪಂಚದ ಬಹುತೇಕರ ಮೇಲೆ ಧುತ್ತೆಂದು ಸಮಯದ ಸುರಿಮಳೆಯಾಗಿದೆ. “ಮನೆಯಲ್ಲಿಯೇ ಇರಿ, ಹೊರಬರಬೇಡಿ “ ಎನ್ನುವ ಸರ್ಕಾರದ ಅಣತಿಯ ಜೊತೆ ಎಲ್ಲ ಸಾರ್ವಜನಿಕ ಸಮಾರಂಭಗಳು, ಸಮಾವೇಶಗಳು,ಕೆಲಸ ಕಾರ್ಯಗಳು, ಮದುವೆ-ಮುಂಜಿ,ದೇವರ ಕೆಲಸಗಳು, ಪ್ರವಾಸಗಳು, ಓಡಾಟ ಇತ್ಯಾದಿಗಳು ರದ್ದಾಗಿವೆ.

    ದಿನವೊಂದರಲ್ಲಿ ಎಲ್ಲ ಮನುಷ್ಯರಿಗೆ ದೊರಕುವುದು ಕೇವಲ 24 ಗಂಟೆಗಳು ಮಾತ್ರ.ಈ ಸಮಯದಲ್ಲಿ ಪ್ರತಿಯೊಬ್ಬರು ಮಾಡುವ ಮೂಲಭೂತ ಕೆಲಸಗಳು ಒಂದೇ. ಆದರೆ ಪ್ರತಿಯೊಬ್ಬರ ಸಮಯವೂ ಅತ್ಯಂತ ಭಿನ್ನವಾಗಿ ವಿನಿಯೋಗವಾಗುತ್ತದೆ.ಒಂದಷ್ಟು ಜನರಿಗೆ ದಿನದಲ್ಲಿ ಸಾಕಾಗುವಷ್ಟು ಸಮಯವಿರುತ್ತದೆ, ಇತರರಿಗೆ ಮಾಡಬೇಕು ಅಂದುಕೊಂಡ ಕೆಲಸಗಳನ್ನೆಲ್ಲ ಮಾಡಲು ದಿನವೊಂದರ ಸಮಯ ಸಾಕಾಗುವುದಿಲ್ಲ. ಮತ್ತೆ ಕೆಲವರಿಗೆ ಹಗಲು-ರಾತ್ರಿಗಳನ್ನು ಅರೆ-ಬರೆ ಬೆರೆಸಿದರೂ ಕೆಲಸಗಳು ಹರಿಯುವುದಿಲ್ಲ.ಕೆಲಸ ಮತ್ತು ಮನೆಕೆಲಸಗಳ ನಡುವೆ ವೈಯಕ್ತಿಕ ಆಸಕ್ತಿಗಳಿಗಾಗಿ ಸಮಯವನ್ನು ನೀಡಲಾಗದ ಮತ್ತೊಂದು ಸಮುದಾಯವೂ ಇದೆ.“ಅಯ್ಯೋ.. ಬೇರೆಲ್ಲ ಮಾಡೋಕೆ ಸಮಯವೇ ಇಲ್ಲ “ ಎನ್ನುವ ಅಂಬೋಣ ಅತ್ಯಂತ ಸಾಮಾನ್ಯವಾಗಿ ಈ ಎಲ್ಲರಿಂದ ಕೇಳಿಬರುತ್ತಿತ್ತು. ಇಂತವರಿಗೆಲ್ಲ ಲಾಕ್ ಡೌನ್ ನಲ್ಲಿ ಸಿಕ್ಕ ಅಧಿಕ ಬಿಡುವಿನ ಸಮಯ  ಅತ್ಯಂತ ಸ್ವಾಗತಾರ್ಹವಾದ ವಿಚಾರವಾಯ್ತು.

    ಒಂದಿಷ್ಟು ಸಮಯ ಸಿಕ್ಕರೆ ಅಥವಾ ರಜಾ ಹಾಕಿಕೊಂಡರೆ ಆ ಸಮಯದಲ್ಲಿ ಏನನ್ನಾದರೂ ಮಾಡಲು ಪೂರ್ವ ನಿರ್ಧರಿತ ಯೋಜನೆಗಳನ್ನು ಹಾಕಿಕೊಳ್ಳುವುದೇ ಇದುವರೆಗೆ ಎಲ್ಲರ ಅಭ್ಯಾಸವಾಗಿತ್ತು. ರಜೆಯ ಸಮಯವನ್ನು ಪ್ರವಾಸಕ್ಕೋ ಮತ್ತೊಂದಕ್ಕೋ ಮೀಸಲಿಡುತ್ತಿದ್ದ ಜನರೇ ಹೆಚ್ಚಿದ್ದರು.ಇಂಥವರಿಗೆಲ್ಲ ನಿಜವಾದ ಅರ್ಥದಲ್ಲಿ ’ ಬಿಡುವು ’ ಅಂದರೆ ಏನು ಎಂದು ತಿಳಿದುಕೊಳ್ಳುವ ಅತ್ಯಂತ ವಿರಳ ಅವಕಾಶವನ್ನು ಲಾಕ್ ಡೌನ್ ದೊರಕಿಸಿಕೊಟ್ಚಿತ್ತು.

    ಮುಂದಿನ ದಿನಗಳು ಹೇಗೆ? ಎನ್ನುವ ಚಿಂತೆ

    ಪ್ರಪಂಚದೆಲ್ಲೆಡೆ ಬಹುತೇಕರು ಮನೆಯಲ್ಲೇ ಮಾಡಬಹುದಾದ ಕೆಲಸಗಳಿಗೆ ಉತ್ಸಾಹದಿಂದ ಕೈ ಹಾಕಿದರು. ಸಮಯವನ್ನು ಕುಟುಂಬದ ಜೊತೆ ಬೆರೆಯುತ್ತ, ಪ್ರಪಂಚದ ಬಗ್ಗೆ ಮಾತಾಡುತ್ತ ಕಳೆದರು. ಮಾಧ್ಯಮಗಳ ಪೈಪೋಟಿ ಬಿತ್ತರವನ್ನು ಓದುತ್ತ, ಕೇಳುತ್ತ “ಮುಂದಿನ ದಿನಗಳು ಹೇಗೆ?” ಎನ್ನುವ ಚಿಂತೆ ಮಾಡಿದರು. ಸಾವು ಮತ್ತು  ಆರ್ಥಿಕ ನೋವುಗಳನ್ನು ಹಲವರೊಡನೆ ಫೋನಿನಲ್ಲಿಯೂ ಹರಟಿದರು.ಮನೆ,ಕಪಾಟು, ಬಟ್ಟೆ, ಪುಸ್ತಕ ಇತ್ಯಾದಿ ಸ್ವಚ್ಛಗೊಳಿಸಿದರು. ಕುಂಡದಲ್ಲೋ, ಮನೆಯ ತೋಟದಲ್ಲೋ ಕೈ ಮಣ್ಣಾಗಿಸಿಕೊಂಡು ಮುಗಿಸಿದ್ದರು.  ತರಾವರಿ ಅಡುಗೆಗಳನ್ನು ಮನೆಯವರೆಲ್ಲ  ಕೂಡಿ ಮಾಡಿ, ಒಟ್ಟಿಗೆ ಕುಳಿತು ಉಂಡು ಖುಷಿಪಟ್ಟರು.ದೇಹ ತೂಕದ ನಿಯಂತ್ರಣಕ್ಕಾಗಿಮನೆಯಲ್ಲಿಯೇ ಮಾಡಬಹುದಾದಹೊಸ ವ್ಯಾಯಾಮಗಳನ್ನು ಶುರುಮಾಡಿದರು . ಹೆಚ್ಚಿನ ನಿದ್ದೆಯ ಸುಖವನ್ನೂಅನುಭವಿಸಿದರು..ಟೀವಿ, ಸಿನಿಮಾ, ಪುಸ್ತಕಗಳು ಮತ್ತು ಅಂತರ್ಜಾಲಗಳಲ್ಲಿ ಬಹುಕಾಲ ಕಳೆದರು.

    ಸದಾ ಬರೆಯುವ ಜಯಂತ ಕಾಯ್ಕಿಣಿಯಂತವರು “ ಸದಾ ಬರೆಯುತ್ತಿದ್ದವರಿಗೆ ಇದು ಓದುವ ಕಾಲವಾಗಬಹುದು“” ಎಂದರು. ಥಟ್ಟಂತ ಹೇಳಿ ಖ್ಯಾತಿಯ ಡಾ.ನಾ.ಸೋಮೇಶ್ವರರು “ ಸದಾ ಓದು,ಬರಹ, ರಿಕಾರ್ಡಿಂಗ್ ಗಳಲ್ಲಿ ತೊಡಗಿರುತ್ತಿದ್ದ ನನಗೆ ಇದೀಗ ಒಂದಿಷ್ಟು ಒಳ್ಳೆಯ ಸಿನಿಮಾಗಳನ್ನು ನೋಡಲುಸಮಯಸಿಕ್ಕಿದೆ“ ಎಂದರು.ಒಟ್ಟಾರೆ, ಎಲ್ಲರ ಸಮಯಗಳು ಹೊಸ ದಿಕ್ಕುಗಳಲ್ಲಿ ಚಲಿಸಿದವು.

    ಇಂಗ್ಲೆಂಡಿನಲ್ಲಿ

    ಇಂಗ್ಲೆಂಡಿನಲ್ಲಿ ಇದೀಗ ಬೇಸಿಗೆಯ ಪ್ರವೇಶವಾಗಿರುವ ಕಾರಣ ಮನೆಯ ಕೈ ತೋಟಗಳಲ್ಲಿ ಜನರು ತೊಡಗಿಕೊಂಡಿದ್ದಾರೆ. ಅದೆಷ್ಟರ ಮಟ್ಟಿಗೆಂದರೆ ಪ್ರತಿ ವರ್ಷಕ್ಕಿಂತ ಮೂರುಪಟ್ಟು ಹೆಚ್ಚಿನತೋಟಗಾರಿಕೆಯಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಕೈ ತೋಟ ಮಾಡಲು ಕೊಳ್ಳಬಹುದಾದ ವಸ್ತುಗಳನ್ನು ಮಾರುವ ಇಲ್ಲಿನ ಮಾರುಕಟ್ಟೆ ಜನರ ಬೇಡಿಕೆಯನ್ನು ಪೂರೈಸಲಾಗದೆ ತತ್ತರಿಸಿದೆ.ಬೇಕಿಂಗ್ ನಲ್ಲಿ ಆಸಕ್ತಿಯಿರುವ ಜನರು ಮನೆಯಲ್ಲಿಯೇ ಬ್ರೆಡ್, ಕೇಕ್, ಪಿಜ್ಜಾ, ಸ್ಕೋನ್ ಗಳನ್ನು ಬೇಕ್ ಮಾಡುವ ಕೆಲಸಕ್ಕಿಳಿದಿದ್ದಾರೆ. ಅದೆಷ್ಟರ ಮಟ್ಟಿಗೆಂದರೆ ಬೇಕಿಂಗ್ ನಲ್ಲಿ ಉಪಯೋಗಿಸುವ ಸಾಮಗ್ರಿಗಳು ಇವತ್ತಿಗೂ ದೊರಕದ ಮಟ್ಟದಲ್ಲಿ ಬೇಡಿಕೆಯಲ್ಲಿವೆ.ಇವರಲ್ಲಿ ಬಿಡುವೆಂದರೆ ’ಬೇಕಿಂಗ್ “ ಎನ್ನುವ ಪರ್ಯಾಯ ಕಲ್ಪನೆ ಇದ್ದೀತೇ ಎಂಬ ಸೋಜಿಗವನ್ನೂ ಹುಟ್ಟುಹಾಕಿದೆ.ಅಷ್ಟೇ ಅಲ್ಲದೆ ’ ಸೈಕ್ಲಿಂಗ್ ನಲ್ಲಿ ಪ್ರತಿದಿನ ತೊಡಗಿಕೊಳ್ಳಬೇಕೆಂದು ಹಂಬಲಿಸುತ್ತಿದ್ದ ಜನರು ಅದೆಷ್ಟು ಶರವೇಗದಲ್ಲಿ ಆ ಕಲ್ಪನೆಯನ್ನು ಸಾಕಾರಕ್ಕೆ ತಂದು ಸವಾರಿ ಮಾಡಿದ್ದಾರೆಂದರೆ ಸೈಕಲ್ ಗಳನ್ನು ಖರೀದಿಸಿದರೂಅವು ತಯಾರಾಗಿ ಬರಲು ಬಹುಕಾಲಕಾಯುವಂತಾಗಿದೆ.

    ಒಟ್ಟಾರೆ ಬದುಕು ಏಕತಾನತೆಯಲ್ಲಿ ಓಡುತ್ತಿದ್ದಾಗ ಜನರು ಯಾವುದಕ್ಕೆ ಆದ್ಯತೆ ನೀಡುತ್ತಿದ್ದರೋ ಈಗ ಅವೆಲ್ಲ ತಮ್ಮ ಬೇಜಾರು ಬರಿಸುವ ಓಘವನ್ನು ಮುರಿದು ಬಿಡುವಿನ ಸಮಯಕ್ಕೆ ಹೊಸ ದಿಸೆಗಳನ್ನು ಕಲ್ಪಿಸಿವೆ.

    ಜನರ ಚಟುವಟಿಕೆಗಳು ಈ ಮೊದಲು ಒಂದು ಬಗೆಯ ಒತ್ತಡದಲ್ಲಿ ಕಳೆಯುತ್ತಿದ್ದವೇ? ಅಥವಾ ಮಾರ್ಕೆಟಿಂಗ್ ಹುನ್ನಾರಗಳ ಒತ್ತಡಕ್ಕೆ ಸಿಲುಕಿ ಅವುಗಳ ಸ್ವರೂಪ ಲಬುಕಿಹೋಗಿತ್ತೇ ಎನ್ನುವ ವಿಚಾರಗಳಿಗೆ ಇಂಬುಕೊಟ್ಟಿವೆ. ನಾವೂ ಎಲ್ಲರಂತೆ ಏನೇನೋ ಮಾಡಬೇಕು ಎನ್ನುವ ’ಮೂಷಿಕ ಸ್ಪರ್ಧೆ’ ಗೆ ನಮ್ಮನ್ನು ನಾವು ಒಡ್ಡಿಕೊಂಡು ಚಡಪಡಿಕೆಗೆ ಬಿದ್ದಿದ್ದೆವೇ ಎನ್ನುವ ಬಗ್ಗೆ ಯೋಚಿಸುವಂತೆ ಮಾಡಿದೆ.ತಮ್ಮ ಮನಸ್ಸು ಮತ್ತು ಮನೆಯಲ್ಲಿ ಮಾಡಬಹುದಾದಎಷ್ಟೊಂದು ಅರ್ಥಪೂರ್ಣ ಕೆಲಸಗಳನ್ನು ಬಿಟ್ಟು ಇಷ್ಟು ದಿನ ನಾವು ಯಾವುದರ ಬೆನ್ನು ಬಿದ್ದು ಓಡುತ್ತಿದ್ದೆವು ಎನ್ನುವ ಪ್ರಶ್ನೆಗಳು ಎದ್ದಿವೆ.

    ಥಟ್ಟನೆ ದೊರೆತ ಈ ಅಧಿಕ ಬಿಡುವಿನ ಸಮಯ ಹಲವು ಗೊಂದಲಗಳನ್ನು ಸೃಷ್ಟಿಸಿದೆ ಎನ್ನುವುದು ಕೂಡ ಸುಳ್ಳಲ್ಲ.  ಯಾಕೆಂದರೆ ಬದಲಾವಣೆಗಳು ಕೆಲವರಲ್ಲಿ ಅಸಾಮಾಧಾನಗಳನ್ನು ಸೃಷ್ಟಿಸಬಲ್ಲವು.

    ಉದ್ಯೋಗಸ್ಥ ಮಹಿಳೆಯರ ಗೃಹಬಂಧನ

    ಮೊದ ಮೊದಲಿನ ಆಘಾತದ ನಡುವೆ, ತಟ್ಟನೆ ಸಿಕ್ಕ ಸಮಯದ ಅವಕಾಶವನ್ನು ಉಪಯೋಗಿಸಿಕೊಂಡು ಉಕ್ಕಿ ಹರಿದ ಸೃಜನಸೀಲ ವಾಟ್ಸಾಪ್ ಮೆಸೇಜುಗಳು,ಕವನಗಳು, ಜೋಕುಗಳು ಇದೀಗ ಹಳಸಲಾಗುತ್ತಿವೆ. ಮನೆಯಲ್ಲೇ ಉಳಿದ ಗಂಡ,ಮಕ್ಕಳಿಗೆ ಮಾಡಿ ಹಾಕಿ ಸುಸ್ತಾದ ಗೃಹಿಣಿಯರು ರೋಸಿಹೋಗಿದ್ದಾರೆ. ಕೆಲಸದ ನಡುವೆಯಾದರೂ ಕೆಲ ಹೊತ್ತು ಬಿಡುವು ಸಿಗುತ್ತಿದ್ದ ಉದ್ಯೋಗಸ್ಥ ಮಹಿಳೆಯರು ಗೃಹಬಂಧನದಲ್ಲಿ ನಲುಗಿದ್ದಾರೆ. ಇನ್ನು ಮನೆಯಲ್ಲಿ ಹೆಚ್ಚು ಸಮಯ ಕಳೆಯದೆ ಹೊರಗೇ ಸುತ್ತುತ್ತಿದ್ದ ಗಂಡಸರು, ತರುಣ, ತರುಣಿಯರ ಕಾಲಿಗೆ ಬೇಡಿ ಬಿದ್ದು ದಿಗ್ಭ್ಹ್ರಾಂತಿ ಸ್ಥಿತಿಯಲ್ಲಿದ್ದಾರೆ. ಟಿ.ವಿ. ಯ ರಿಮೋಟಿಗೂ ಮನೆಗಳಲ್ಲಿ ಜಗಳವಾಗುತ್ತಿವೆ.

    ಸದಾ ಕೆಲಸಗಳಲ್ಲೇ ಮುಳುಗಿ ಅರೆಕ್ಷಣ ವ್ಯರ್ಥವಾದರೂ ಚಡಪಡಿಸುತ್ತಿದ್ದ ಮತ್ತೊಂದಷ್ಟು ಜನರಲ್ಲಿ “ಮನೆಯಲ್ಲಿಯೇ ಇರಿ…” ಎಂಬ ಸಾರ್ವಜನಿಕ ಕರೆ ಬಂದಾಗ ಮೊದ ಮೊದಲಿಗೆ ಆಶ್ಚರ್ಯ, ಹೊಸದೊಂದು ಉತ್ಸಾಹ, ಅನಿರೀಕ್ಷಿತ ಘಟನೆ ನಡೆಯುತ್ತಿರುವ ಉದ್ರೇಕವನ್ನು ಸೃಷ್ಟಿಸಿತು.ಅದರ ಹಿಂದೆಯೇ ’ ’ಸಮಯವಿಲ್ಲ ’ ಎನ್ನುವ ಸಮಸ್ಯೆ  ಬಗೆಹರಿದ ಕೂಡಲೇ ಥಟ್ಟನೆ ದೊರೆತ ಅನಿರೀಕ್ಷಿತ ಸಮಯಕ್ಕೆ ಹೊಂದಿಕೊಳ್ಳಲು ಇವರು ಹೆಣಗಿದ್ದೂ ಉಂಟು!

    ಸಮಯಕ್ಕೆ ಹೆಚ್ಚು ಪ್ರಾಧಾನ್ಯತೆಯನ್ನು ಕೊಡುವ ಈ  ಗುಂಪಿನ ಜನರಲ್ಲಿ ತಮ್ಮ ಅಥವಾ ಇತರರ ಸಮಯದ ಬಗ್ಗೆ ಬಹಳ ಗೌರವವಿರುತ್ತದೆ. ಮಾನಸಿಕವಾಗಿ, ಸಮಯ ಎನ್ನುವುದು ಇವರ ಅಧೀನದಲ್ಲಿಲ್ಲದಿದ್ದರೆ ಅಧೀರರಾಗುವ ರೀತಿಯ ಜನರಿವರು. ಸಮಯವನ್ನು ನಿಯಂತ್ರಿಸಲಾಗದಿದ್ದರೆ ಇವರಲ್ಲಿ ಆತಂಕ , ಅಸಮಾಧಾನ, ಕಿರಿ-ಕಿರಿಗಳು ಮೂಡಿ ಒಂದ ಬಗೆಯ ನಿರಾಶೆ ಮತ್ತು ಋಣಾತ್ಮಕ ಭಾವನೆಗಳನ್ನು ಮೂಡಿಸುತ್ತವೆ. ಇವರ ಸಂತೋಷವೆಲ್ಲ ’ಸಮಯ ಯಾನ ’ ದಲ್ಲಿ ತಾವೆಷ್ಟು ಉಪಯಕ್ತ ಅಥವಾ ಉತ್ಪಾದಕ ಕೆಲಸಗಳನ್ನು ಮಾಡಿದೆವು ಎನ್ನುವುದ ಮೇಲೆ ಆಧರಿಸಿರುವ ಕಾರಣ ಉಪಯೋಗವಾಗದೆ ಉರುಳಿಹೋಗುವ ಕ್ಷಣಗಳು ಅವರಲ್ಲಿ ಅಭದ್ರತೆಯನ್ನು ಮೂಡಿಸುತ್ತವೆ.ಒಂದು ರೀತಿಯಲ್ಲಿ, ಕೆಲಸಕ್ಕೆ ದಾಸರಾದ, ಸಮಯಕ್ಕೆ ಕಟ್ಟುಬಿದ್ದ ವ್ಯಸನಿಗಳಿವರು. ಸಮಯ ಮತ್ತು ಕೆಲಸ ಇವರ ಲೆಕ್ಕದಲ್ಲಿ ಯಾವತ್ತೂ ಜಂಟಿ ಪದಗಳು. ಕೆಲಸವಿಲ್ಲದ ಸಮಯ ಇವರಲ್ಲಿ ಸಹಜವಾಗಿಯೇ ಅಸಮಾಧಾನದ ವಿಚಾರವಾಗಿದೆ. ಇಂಥವರಿಗೆ ಲಾಕ್ ಡೌನ್ ಸಮಯ ಹ್ಯಾಬಿಟ್ ಬ್ರೇಕರ್ ( ಹವ್ಯಾಸಗಳನ್ನ ಮುರಿಯುವ ಸಾಧನ) ನಂತೆ ಕೆಲಸ ಮಾಡಿದೆ.

    ಜೊತೆಗೆ ಜೀವನದಲ್ಲಿ ಬ್ಯುಸಿಯಾಗಿರುವುದು ಒಂದು ಬಗೆಯ ಸಾಮಾಜಿಕ  ಘನತೆ ಮತ್ತು ಮಹತ್ವಕ್ಕೆ ತಳುಕುಹಾಕಿಕೊಂಡ ವಿಚಾರ. ಒಂದು ವರ್ಗದ ಜನರಲ್ಲಿ ಇದು  ಫ್ಯಾಶನ್ ಕೂಡ.ಸ್ವಂತ ಉದ್ಯೋಗ ಇರುವವರಿಗೆ ಇದು ಆದಾಯ ಮೂಲದ ಪ್ರಶ್ನೆ. ಮಾಧ್ಯಮಗಳು ಕೂಡ ಅವಿರತ ಕೆಲಸ ಮಾಡುವ ಮತ್ತು ಸಾಧಿಸುವವರನ್ನು ಹೊಗಳುವ ಕಾರಣ ಈ ಕೆಲಸದ ಗಾಣಕ್ಕೆ ಹಲವರು ಆಕರ್ಷಿತರಾಗುವುದೂ ಉಂಟು.ಇಂತಹ ಇನ್ನು ಕೆಲವರು ತಮ್ಮ ಕೈಲಾಗದ ಗುರಿಗಳನ್ನೆಲ್ಲ ಸಿಕ್ಕ ಈ ಸಮಯದಲ್ಲಿ  ಹಾಕಿಕೊಂಡು, ಸಾಧಿಸಲು ಸಾಧ್ಯವಾಗದೆ ಅಪರಾಧೀ  ಮನೋಭಾವದಲ್ಲಿ ಬದುಕಬಹುದು.

    ಹಾಗಂತ ಎಲ್ಲರಿಗೂ ಇವೇ ಗೊಂದಲಗಳಿವೆಯೆಂದು ಹೇಳುತ್ತಿಲ್ಲ. ಮೇಲೆ ಹೇಳಿದಂತೆ ಕೆಲವರು ಸಿಕ್ಕ ಸಮಯದ ಉಪಯೋಗ ಪಡೆದು ಹೊಸ ಯೋಜನೆಗಳಿಗೆ ನಾಂದಿಹಾಡಿದ್ದಾರೆ. ಬಹುದಿನದ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ತಯಾರಾಗಿದ್ದಾರೆ.ಅಂತರ್ಗತ ಲೋಕದ ಅವಲೋಕನಕ್ಕೂ ಕೈ ಹಾಕಿದ್ದಾರೆ.ಹಳೆಯ ಮಧುರ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

    ಸಮಯದ ಜೊತೆ ಮನುಷ್ಯನ ನಂಟು ಹಲವು ಬಗೆಯವಾದರೂ ಅನಿರೀಕ್ಷಿತವಾಗಿ, ಬಲವಂತವಾಗಿ, ಅಸಹಜವಾಗಿ ಜಗತ್ತಿನ ಬಹುತೇಕರಿಗೆ ಒಟ್ಟಿಗೆ ಸಮಯ ದೊರಕಿದರೆ ಅದರ ಪ್ರಯೋಜನ ಬಹಳ ವಿರಲಾರದೇನೋ?-ಎನ್ನುವ ವಾದಗಳೂ ಇವೆ.

    ಮಕ್ಕಳಿಗೆ ಹಲವು ದೊಡ್ಡ ಪರೀಕ್ಷೆಗಳು ರದ್ದಾಗಿ, ಆಟೋಟಗಳು ನಿಂತು ಹೋಗಿ ಆಲಸ್ಯ ಕಾಡಿದೆ. ಅವರಿಗೆ ಗುರಿಯಿಲ್ಲದಂತಾಗಿದೆ. ಸಮಯದ ಪರಿಮಿತಿಯಲ್ಲಿ ನಡೆಸಬೇಕಾದ ಪರೀಕ್ಷೆಯ ತಯಾರಿ, ದೊಡ್ಡ ಪರೀಕ್ಷೆಗಳನ್ನು ಬರೆವ ಅನುಭವ, ಆತಂಕ, ಫಲಿತಾಂಶ, ಸಾಧನೆ ಯಾವುದಕ್ಕೂ ಅವಕಾಶವಿರದ ಈ ವರ್ಷ ಪ್ರಪಂಚದಾದ್ಯಂತ ಒಂದು ತಲೆಮಾರಿನ ಮಕ್ಕಳು ವಿಚಿತ್ರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಆನ್ ಲೈನ್ ಪಾಠಗಳು ಇತ್ಯಾದಿ ಬಲವಂತದ ’ಹೊಸತು ’ಗಳ ಸವಾಲುಗಳನ್ನು ಎದುರಿಸಿದ್ದಾರೆ.ಜನಸಾಮಾನ್ಯರಿಗೆ ಸಿಕ್ಕಿರುವ ಈ ಅಧಿಕ ಬಿಡುವಿನ ಸಮಯ ನಿಜಕ್ಕೂ ಅವರ ಹಿಡಿತ ಮೀರಿದ ಹಲವು ಫಲಿತಾಂಶಗಳನ್ನು ನೀಡಿ ತೀವ್ರ ಅಸಮಾಧಾನವನ್ನು ಸೃಷ್ಟಿಸಿದೆ.

    ಸಮಯದ ಅಭಾವದಿಂದ ಊಟ ಮಾಡುವುದನ್ನು ಕೂಡ ದಿನದಲ್ಲಿ ಮಾಡಬೇಕಾಗಿದ್ದ ’ ಕೆಲಸಗಳ ಪಟ್ಟಿ’ ಯಲ್ಲಿ ಇಟ್ಟುಕೊಂಡು ಕೆಲಸಮಾಡುತ್ತಿದ್ದ ಮಂದಿಗೆ ಸಮಯ ಸಿಕ್ಕಿದೆ. ಆದರೆ ಸಾವು-ನೋವಿನ ಸುದ್ದಿಗಳ ನಡುವೆ ಅವರುತಮ್ಮ ಊಟವನ್ನು ಸಂತಸದಿಂದ ನುಂಗಲಾಗದೆ ಒಂದಷ್ಟು ಮಟ್ಟಿಗೆ ಗಂಟಲಲ್ಲೇ ಸಿಲುಕಿಕೊಂಡಂತೆ ಹೆಣಗುತ್ತಿದ್ದಾರೆ. ಸರ್ಕಾರವೇ ನೀಡುತ್ತಿರುವ ಬಿಟ್ಟಿ ಊಟಕ್ಕೂ ಸೂತಕದ ಕಳೆಯಿರುವಂತೆನಿಸುತ್ತಿದೆ.

    ಬರವಣಿಗೆಯಲ್ಲಿ ತೊಡಗಿಕೊಂಡವರಿಗೆ ಸಮಯ ಸಿಕ್ಕರೂ ಜೀವನದ ಹಲವು ಮಜಲುಗಳಲ್ಲಿ ದೊರೆವ ಪ್ರೇರೇಪಣೆಯಿಲ್ಲದೆ ನಿರುತ್ಸಾಹ ಕಾಡಿದೆ. ಪುಸ್ತಕ ಪ್ರಕಟಣೆ, ಮಾರಾಟ, ವಿತರಣೆ ಎಲ್ಲವೂ ನಿಂತು ಹೋಗಿ, ಯಾವ ಉದ್ದೇಶಕ್ಕೆ ಬರೆಯುವುದು ಎಂಬಂತಾಗಿದೆ. ಹಲವಾರು ಪತ್ರಿಕೆಗಳ ಪ್ರಕಟಣೆಗಳು ನಿಂತುಹೋಗಿದೆ. ಎಲ್ಲ ಕಷ್ಟಗಳ ನಡುವೆ ಹೊರಬರುತ್ತಿರುವ ದಿನ ಪತ್ರಿಕೆ, ಇನ್ನಿತರ ವಾರಪತ್ರಿಕೆಗಳು ಓಡಾಟಗಳ ನಿರ್ಭಂದಗಳ ನಡುವೆಯೇ ತಮ್ಮ ವೃತ್ತಿ ಧರ್ಮವನ್ನು ಎತ್ತಿ ಹಿಡಿಯಲು ಮತ್ತು ಕೆಲಸಗಾರರ ಆರೋಗ್ಯದ ನಡುವಿನ ಗೊಂದಲಗಳಲ್ಲಿ ಏಗುತ್ತಿವೆ. ಅವುಗಳಲ್ಲಿನ ಕಥೆ, ಕವನ, ಪ್ರವಾಸ, ಸಿನಿಮಾ ಇತ್ಯಾದಿ ಬರಹಗಳು ಕೊರಗುತ್ತಿವೆ.

    ಸಿನಿಮಾ, ನಾಟಕ, ಟಿವಿ ಯ ರೆಕಾರ್ಡಿಂಗ್ ಗಳು ನಿಂತು ಹೋಗಿ ದೃಶ್ಯ ಮಾಧ್ಯಮಗಳ ಸೃಜನಶೀಲತೆಗೂ ಧುತ್ತನೆ ಬ್ರೇಕ್ ಬಿದ್ದಿದೆ. ಕಲಾಕಾರರು, ಹಾಡುಗಾರರು, ನೃತ್ಯಪಟುಗಳು, ಶಿಲ್ಪಿಗಳು,ಆಟೋಟಗಾರರು ಎಲ್ಲರೂ ಇದ್ದಕ್ಕಿದ್ದಂತೆ ದೊರೆತ ಈ ಖಾಲಿ  ಸಮಯದಲ್ಲಿ ಕೈ ಚೆಲ್ಲಿ ಕುಳಿತಿದ್ದಾರೆ.ಇನ್ನು ಈ ಎಲ್ಲ ಉದ್ಯಮಗಳಲ್ಲಿ ತೊಡಗಿದ್ದವರ ದುಡಿಮೆ, ಆರ್ಥಿಕ ಸ್ಥಿತಿಗಳ ಬಗ್ಗೆ ಹೇಳುವಂತೆಯೇ ಇಲ್ಲ

    ಸಾಮಾಜಿಕ ಮತ್ತು ಸಮುದಾಯಗಳ ಸಂಪೂರ್ಣ ಪ್ರೇರೇಪಣೆಯಿಲ್ಲದೆ ಸೃಜನಶೀಲತೆ ಪರಿಪೂರ್ಣ ಪ್ರಮಾಣದಲ್ಲಿ ಅರಳುವುದಿಲ್ಲ. ಸೃಜನಶೀಲತೆಗೆ, ಮನುಷ್ಯನ ಸಂತೋಷಕ್ಕೆ ಸಮಯವೊಂದೇ ತೊಡಕಲ್ಲ. ಜೊತೆಗೇ ಸಮಯವೊಂದು ಮಾತ್ರ ಸಿಕ್ಕಿಬಿಟ್ಟರೆ ಸಾಲುವುದೂ ಇಲ್ಲ ಎನ್ನುವ ಹೊಸದೊಂದು ಹೊಳಹನ್ನು ಈ ವಿಚಾರಗಳು ದಟ್ಟಗೊಳಿಸಿದೆ. ಆ ಮಟ್ಟಕ್ಕೆ ನಮ್ಮದು ಸಂಘಜೀವನ. ಅದು ಎಲ್ಲರೂ ಸಹಜವಾದ, ಸಂತೋಷವಾದ ದಿನಚರಿಯನ್ನು ಹೊಂದಲೆಂದು ಆಶಿಸುತ್ತದೆ.

    ಇದೇ ಕಾರಣಕ್ಕೆ ಲಾಕ್ ಡೌನ್ ಸಮಯದ ಎಲ್ಲ ಕೆಲಸಗಳಲ್ಲಿ ಒಂದು ಬಗೆಯ ಅವಿನಾ ಕೊರತೆ ಎದ್ದು ಕಾಣುತ್ತಿದೆ. ಆತಂಕ,ಸಾವು ನೋವಿನ ಸುದ್ದಿಗಳು ಮಾನಸಿಕವಾಗಿ ಉತ್ಸಾಹವನ್ನು ಕಸಿದಿವೆ. ಪಾಶ್ಚಾತ್ಯ ದೇಶಗಳಲ್ಲಿ ಹೆಣಗಳನ್ನು ಸಮಾಧಿ ಮಾಡಲು ಇರುವ ಫ್ಯೂನರೆಲ್ ಸರ್ವಿಸ್ ನ ದಂಧೆ ನಡೆಸುವವರು ಕೂಡ ಮೊತ್ತ ಮೊದಲ ಬಾರಿಗೆ ತಮ್ಮ ಕೆಲಸವನ್ನು ಬಿಸಾಡಿ ಹೊರನಡೆಯಲು ತಯಾರಾದಂತ ಕಾಲವಿದು. ಸಮಾಧಿ ಮಾಡುವಾಗ ಸಾವಿನ ಘನತೆಯನ್ನು ಎತ್ತಿ ಹಿಡಿಯಲಾಗದ, ಶೋಕ ತಪ್ತ ಕುಟುಂಬದವರನ್ನು ಹತ್ತಿರ ಸೇರಿಸಲಾಗದ ನಿಬಂಧನೆಗಳ ಅಡಿಯಲ್ಲಿ ಅವರ ವೃತ್ತಿಧರ್ಮವೂ ಕುಸಿದ ಭಾವ ಮೂಡಿದ್ದು ಕೂಡ ಈ ಕಾಲದಲ್ಲಿ ದಾಖಲಾಯ್ತು.

    ಸೃಜನಶೀಲ ಕೆಲಸಗಳನ್ನು ಪ್ರದರ್ಶಿಸುವ, ಹಂಚಿಕೊಳ್ಳುವ ಅವಕಾಶಗಳ ಕೊರತೆಯಿದ್ದರೆ ಪ್ರೇರಣೆ ನಿಧಾನವಾಗಿ ಬಲಹೀನವಾಗುತ್ತದೆ. ಮುಂದೇನು? ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತದೆ.ಇಡೀ ಪ್ರಪಂಚವೇ ಒತ್ತಟ್ಟಿಗೆ ರಜಾದಲ್ಲಿರುವ ಹೊತ್ತಿನಲ್ಲಿ ಒಂದು ರೀತಿಯಲ್ಲಿ ಮನುಷ್ಯನ ಮಿದುಳು ಅರೆ ಬರೆ  ನಿಶ್ಕ್ರಿಯೆಗೊಂಡಿದೆ.ಇನ್ನೊಂದು ಅರ್ಥದಲ್ಲಿ ಮನುಷ್ಯನಿಗೆ ವರ್ತಮಾನದಲ್ಲಿ ಮಾಡುವ ಕೆಲಸಗಳಿಗೆ ಭವಿಷ್ಯದ ಕೊಂಡಿಯೆಂಬುದರ ಸಖ್ಯ ನಿಖರವಾಗಿರಬೇಕು. ನಿಚ್ಚಳವಾಗಿ ಕಾಣುತ್ತಿರಬೇಕು. ಅದಿಲ್ಲದಿದ್ದರೆ ವರ್ತಮಾನದ ಅರ್ಥವೇ ಮೊಟಕುಗೊಳ್ಳುತ್ತದೆ.

    ಸಮಯ ಸಿಕ್ಕಿರುವಾಗ ಹೆಚ್ಚು ಆರೋಗ್ಯವಂತರಾಗಿ, ಸೃಜನಶೀಲರಾಗಿ ಈ ಘಟ್ಟದಿಂದ ಹೊರಹೊಮ್ಮಲು ಸಾಧ್ಯವಾಗದಿದ್ದರೆ  “ನಮಗೆ ಸಮಯ ಇರಲಿಲ್ಲ “ ಎಂದು ಹೇಳಬೇಡಿ ಎನ್ನುವಂತ ಎಚ್ಚರಿಕೆಯ,ಉತ್ತೇಜಕ,ಬುದ್ದಿವಂತಿಕೆಯ ಮಾತುಗಳು ಸಂದೇಶಗಳಲ್ಲಿ ಹರಿದಾಡುತ್ತಿದ್ದರೂ ಜಗತ್ತನ್ನು ತನ್ನ ಆತಂಕಕಾರೀ ಮುಷ್ಟಿಯಲ್ಲಿ ಹಿಡಿದಿಟ್ಟಿರುವ ವೈರಾಣು ಸಮಸ್ಯೆ ಜನರ ಉತ್ಸಾಹಕ್ಕೆ ಭಾರೀ ಹೊಡೆತ ನೀಡಿದೆ.

    ಹೆಚ್ಚು ಕಾಲ ಬದುಕಿದಂತೆಲ್ಲ ನಮ್ಮ ಜೀವನದ ಕ್ಷಣಗಳ ಮಹತ್ವವೂ ಮನದಟ್ಟಾಗುತ್ತ ಹೋಗುತ್ತದೆ. ಈ ಕಾರಣ ಸಮಯ ಎನ್ನುವುದು ಅವರವರ ವ್ಯಕ್ತಿತ್ವ, ವಯಸ್ಸು, ಧೋರಣೆಗಳು, ಪ್ರಭುದ್ದತೆ, ಹವ್ಯಾಸ ಮತ್ತು  ಬದ್ದತೆಗಳನ್ನು ಅವಲಂಬಿಸುತ್ತದೆ ಅಂದುಕೊಳ್ಳಬಹುದು.ಆದರೆ ಇಂತಹ ಅತ್ಯಮೂಲ್ಯ ಸಮಯ ಕೋವಿಡ್ ಲಾಕ್  ಡೌನಿನ ಕಾಲದಲ್ಲಿ ಹಲವು ಪರ್ಯಾಯ ತುಲನೆಗಳನ್ನು ಸೃಷ್ಟಿಸಿದ್ದಂತೂ ನಿಜ.

    2008 ರ  ಪ್ರಪಂಚ ಮಟ್ಟದ ಆರ್ಥಿಕ ಕುಸಿತ ನಡೆದ ಕಾಲದಲ್ಲಿ ಕೆಲವರಷ್ಟೇ ಕೆಲಸಕ್ಕೆ ಹಿಂತಿರುಗಿದ್ದು. ಬಹಳಷ್ಟು ಉದ್ಯಮಗಳು ಕುಸಿದ ಕಾರಣ ಕೆಲವೇ ಕೆಲವು ಕೆಲಸಗಾರರು ಸಮಯದ ನಿಗಧಿಯಿಲ್ಲದೆ ಅವಿರತ ಕೆಲಸಮಾಡಿದರು. ಇವರಲ್ಲಿ ವಿರಮಿಸುವ ಸಮಯ ಅಂದರೆ ಏನು? ಎನ್ನುವುದರ ಅರ್ಥ ನಿಧಾನವಾಗಿ ಸಂಕುಚಿಸಿತು. ಒಂದು ಮಟ್ಟಕ್ಕೆ ಅದು ’ಪಾಪ ’ ಅಥವಾ  ’ತಪ್ಪು ’ ಎನ್ನುವ  ಭಾವನೆಗಳೂ ಮೂಡಿದ್ದನ್ನು ಅಧ್ಯಯನಗಳು ಧೃಡಪಡಿಸಿದವು. ಅದರ ಹಿಂದೆ ಅವರ ಮನಸ್ಸಿನಲ್ಲಿ ಮೂಡಿದ್ದ ಅಭದ್ರತೆಯ ಅಧೀರತೆಯೇ ಕಾರಣ ಎಂದು ಕೂಡ ತಿಳಿದುಬಂದಿದೆ.

    ಬದುಕು ಮತ್ತೆ ಸಹಜಸ್ಥಿತಿಗೆ ಬಂದರೂ ನಾವು ಬದುಕುವ ರೀತಿಯೇ ಬದಲಾಗಬಹುದಾದ  ’ಭವಿಷ್ಯ ಕಾಲ ’ದ ಬಗ್ಗೆ ’ಭೂತ ’ ದಲ್ಲಿ ಕಂಡರಿಯದ ಮಟ್ಟದಲ್ಲಿ ”ವರ್ತಮಾನದಲ್ಲಿ’ ಆತಂಕಗಳು ಗೂಡುಕಟ್ಟಿವೆ.ಸಮಯವನ್ನೂ ಸಮಯದ ಜೊತೆಯೇ ತುಲನೆ ಮಾಡುವ ಮನುಷ್ಯನ  ಅಭ್ಯಾಸ ಮುಂದುವರೆದಿದೆ.

    Photo by luizclas from Pexels

    error: Content is protected !!