23.2 C
Karnataka
Thursday, May 21, 2026
    Home Blog Page 159

    ಗಣಪತಿ ಹಬ್ಬಕ್ಕೆ ಬಗೆ ಬಗೆ ಮೋದಕ

    ನಮ್ಮ ದೇಶದಲ್ಲಿ ಗಣಪತಿಯ ಪೂಜೆಯು ಅನಾದಿ ಕಾಲದಿಂದಲೂ ನಡೆದು ಬಂದಿದೆ. ಕಾಡು ಪ್ರಾಣಿಗಳ ಹಿಂಡು ಹೊಲ ಗದ್ದೆಗಳಿಗೆ ನುಗ್ಗಿ ಬೆಳೆಯನ್ನು ಹಾಳು ಮಾಡುವುದನ್ನು ತಡೆಯುವ ಸಲುವಾಗಿ ರೈತರು ಆನೆಯ ಮುಖವುಳ್ಳ ದೇವನನ್ನು ಪೂಜಿಸಿದರೆ, ಗೋದಾಮುಗಳಲ್ಲಿ ಧಾನ್ಯಗಳನ್ನು ತಿಂದು ಹಾಳು ಮಾಡುವ ಇಲಿಗಳನ್ನೂ ಪೂಜಿಸಿ ಇಬ್ಬರನ್ನೂ ಸಮಾಧಾನಿಸುವುದೂ ಹಬ್ಬದ ಒಂದು ಕಾರಣವೆಂದು ಕೆಲವರು ಹೇಳುವರು.

    ಗಣಪತಿಯ ಮೂರ್ತಿಯ ಪೂಜೆಗೆ ಮೊದಲು ಸಗಣಿಯಿಂದ ಗಣೇಶನನ್ನು ಮಾಡಿ ಅದರ ಮೇಲೆ ಗರಿಕೆಯನ್ನಿಟ್ಟು ಅದನ್ನು ಪಿಳ್ಳೇರಾಯನೆಂದು ಕರೆದು ಅದಕ್ಕೆ ಪೂಜಿಸುವರು.

    ಚೌತಿ ಗಣೇಶನನ್ನು ನಿತ್ಯ ಪೂಜೆ ಮಾಡಿ ೧೦ನೆಯ ದಿನ ಅಂದರೆ ಅನಂತ ಚತುರ್ದಶಿಯ ದಿನದಂದು ವಿಸರ್ಜನೆ ಮಾಡುವರು. ದಕ್ಷಿಣ ಭಾರತದಲ್ಲಿ ಮನೆ ಮನೆಗಳಲ್ಲಿ ಗಣಪತಿಯ ಮೂರ್ತಿಗೆ ಪೂಜಿಸಿದರೆ, ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಜನಗಳನ್ನು ಒಗ್ಗೂಡಿಸಲು ಆರಂಭಿಸಿದ ಸಾರ್ವಜನಿಕ ಗಣಪತಿ ಪೂಜೆ ಇಂದಿಗೂ ಹಾಗೆಯೇ ಮುಂದುವರೆಯುತ್ತಿದೆ.

    ಇನ್ನು ಚೌತಿ ಹಬ್ಬದಂದು ಗಣೇಶನಿಗೆ ಪ್ರಿಯವಾದ ಮೋದಕ / ಕಡುಬು ತಯಾರಿಸಿ ನೈವೇದ್ಯ ಅರ್ಪಿಸಿದರೇನೇ ಹಬ್ಬ ಪರಿಪೂರ್ಣವಾಗುವುದು ಎಂಬ ನಂಬಿಕೆಯಿದೆ. ಮೋದಕ ಪ್ರಿಯ ನಮ್ಮ ಗಣೇಶ.ಅಂಥ ಕೆಲವು ಮೋದಕಗಳ ಪರಿಚಯ ಇಲ್ಲಿದೆ.

    1. ಕಡುಬು/ ಮೋದಕ – ಎಣ್ಣೆಯಲ್ಲಿ ಕರಿಯುವ ವಿಧಾನ

    ಬೇಕಾಗುವ ಪದಾರ್ಥಗಳು:ಮೈದಾ ಹಿಟ್ಟು/ಗೋಧಿ ಹಿಟ್ಟು 2 ಬಟ್ಟಲು
    2 ದೊಡ್ಡ ಚಮಚ ಚಿರೋಟಿ ರವೆ
    ಬೆಲ್ಲ 1 ಬಟ್ಟಲು
    ತುರಿದ ಕೊಬ್ಬರಿ 1 ಬಟ್ಟಲು
    ಏಲಕ್ಕಿ ಪುಡಿ
    ಸ್ವಲ್ಪ ಎಣ್ಣೆ

    ಹೂರಣ: ಮೊದಲಿಗೆ ಪುಡಿ ಮಾಡಿದ ಬೆಲ್ಲ , ಏಲಕ್ಕಿ ಮತ್ತು ತುರಿದ ಹಸಿ ಕೊಬ್ಬರಿಯನ್ನು ಒಟ್ಟಿಗೆ ಸೇರಿಸಿ
    ಬಾಣಲೆಯಲ್ಲಿ ಹಾಕಿ ಸಣ್ಣ ಉರಿಯಲ್ಲಿ ಬಿಸಿ ಮಾಡುತ್ತಾ ಸೌಟ್ ನಿಂದ ಕೈಆಡಿಸುತ್ತಿರಬೀಕು.
    ಬೆಲ್ಲ ಕಾದು ನೀರಾಗಿ ನಂತರ ಗಟ್ಟಿಯಾಗಿ ಬೆಲ್ಲ ಮತ್ತು ಕೊಬ್ಬರಿಯ ಹೂರಣ ರೆಡಿಯಾಗುತ್ತದೆ.

    ಕಣಕ: ಮೈದಾ /ಗೋಧಿ , ಚಿರೋಟಿ ರವೆ ಜೊತೆ ಸೇರಿಸಿ ಸ್ವಲ್ಪ ಗಟ್ಟಿಯಿರುವಂತೆ ಎಣ್ಣೆ ಮತ್ತು ನೀರಿನೊಡನೆ ನಾದಿಕೊಳ್ಳಬೇಕು. ಕಲೆಸಿದ ಹಿಟ್ಟು ಚಪಾತಿ ಹಿಟ್ಟಿನಷ್ಟು ಗಟ್ಟಿಯಾಗಿರಬೇಕು.

    ಈಗ, ಹಿಟ್ಟನ್ನು ಒಂದು ಉಂಡೆಯಷ್ಟು ತೆಗೆದುಕೊಂಡು ಪೂರಿಯ ಗಾತ್ರದಲ್ಲಿ ಲಟ್ಟಿಸಿ ಅದರಲ್ಲಿ ಸ್ವಲ್ಪ ಬೆಲ್ಲ ಕೊಬ್ಬರಿ ಹೂರಣವನ್ನು ತುಂಬಿ ಅದರ ಮೇಲ್ತುದಿಯನ್ನು ಮುಚ್ಚಬೇಕು. (ಮೋದಕ ನೋಡಲು ಬೆಳ್ಳುಳ್ಳಿಯ ಆಕಾರದಲ್ಲಿರುವಂತೆ ತುದಿಯನ್ನು ಮುಚ್ಚಿ).

    ಈ ರೀತಿ ಮೋದಕಗಳನ್ನು ರೆಡಿಯಾಗಿಟ್ಟುಕೊಂಡು ಎಣ್ಣೆಯಲ್ಲಿ ಕಂದುಬಣ್ಣ ಬರುವವರೆಗೆ ಕರಿಯಿರಿ.

    ಅದೇ ಹಿಟ್ಟನ್ನು ಹಪ್ಪಳದಂತೆ ಲಟ್ಟಿಸಿ ಹೂರಣವನ್ನು ಅದರಲ್ಲಿ ಇಟ್ಟು ಎರಡೂ ತುದಿಯನ್ನು ಅಂಟಿಸಿ ಎಣ್ಣೆಯಲ್ಲಿ ಕಂದುಬಣ್ಣ ಬರುವವರೆಗೆ ಕರಿಯಿರಿ. ಅದು ಕಡುಬು.

    2. ಆವಿಯಲ್ಲಿ ಬೇಯಿಸಿ ಮಾಡುವ ಮೋದಕ/ ಕುಚ್ಚಿದ ಕಡುಬು.

    ಬೇಕಾಗುವ ಪದಾರ್ಥಗಳು:

    ಕಣಕ:ಒಂದು ಕಪ್ ಅಕ್ಕಿ ಹಿಟ್ಟು
    ಒಂದೂವರೆಯಿಂದ ಎರಡು ಕಪ್ಪು ನೀರು
    ಚಿಟಿಕೆ ಉಪ್ಪು, ಎಣ್ಣೆ.

    ಮಾಡುವ ವಿಧಾನ :ಒಂದು ಬಾಣಲೆಯಲ್ಲಿ ನೀರು ಅರ್ಧ ಟೀ ಸ್ಪೂನ್ ಎಣ್ಣೆ ಮತ್ತು ಉಪ್ಪು ಹಾಕಿ ಕುದಿಯಲು ಇಡಿ. ನೀರು ಕುದಿಯಲು ಪ್ರಾರಂಭಿಸಿದ ನಂತರ ಅಕ್ಕಿ ಹಿಟ್ಟನ್ನು ಹಾಕಿ ಚೆನ್ನಾಗಿ ಮಗುಚಿ ಸ್ಟವ್ ಆಫ್ ಮಾಡಿ ಮುಚ್ಚಳ ಮುಚ್ಚಿ ಪಕ್ಕಕ್ಕಿಡಿ. ಅಕ್ಕಿಹಿಟ್ಟು ಬಿಸಿಯಾಗಿರುತ್ತದೆ. ಆರಿದ ನಂತರ ಚೆನ್ನಾಗಿ ನಾದಿ ಒಂದು ನಿಂಬೆ ಗಾತ್ರದ ಹಿಟ್ಟು ತೆಗೆದುಕೊಂಡು ಹಪ್ಪಳದ ಗಾತ್ರ ಲಟ್ಟಿಸಿ ಕಾಯಿ ಹೂರಣ ಇಟ್ಟು ಎರಡೂ ತುದಿ ಅಂಟಿಸಿ ಕಡುಬು ಮಾಡಿ.

    ಹಿಟ್ಟನ್ನು ಒಂದು ಉಂಡೆಯಷ್ಟು ತೆಗೆದುಕೊಂಡು ಅದರಲ್ಲಿ ಸ್ವಲ್ಪ ಬೆಲ್ಲ ಕೊಬ್ಬರಿ ಹೂರಣವನ್ನು ತುಂಬಿ ಅದರ ಮೇಲ್ತುದಿಯನ್ನು ಮುಚ್ಚಬೇಕು. ಮೋದಕ ನೋಡಲು ಬೆಳ್ಳುಳ್ಳಿಯ ಆಕಾರದಲ್ಲಿರುವಂತೆ ತುದಿಯನ್ನು ಮುಚ್ಚಿ.

    ಈಗ ಕಡುಬು ಮತ್ತು ಮೋದಕವನ್ನು ಆವಿಯಲ್ಲಿ ಬೇಯಿಸಿ.

    3 ಕರ್ಜಿಕಾಯಿ

    ಒಣ ಕೊಬ್ಬರಿ ತುರಿ, ಬೆಲ್ಲ, ಏಲಕ್ಕಿ, ಬಿಳಿ ಎಳ್ಳು, ಗಸಗಸೆ ಸೇರಿಸಿ ಪುಡಿ ಮಾಡಿ ಕಲೆಸಿ ಹೂರಣ ಕಲೆಸಿಕೊಂಡು
    ಮೈದಾ, ರವೆಯ ಕಣಕದಲ್ಲಿಟ್ಟು ಕಡುಬು ಎಣ್ಣೆಯಲ್ಲಿ ಕರಿಯುವುದು.

    4 ಖಾರದ ಕಡುಬು

    ಬೇಳೆಗಳನ್ನು ನೆನೆಸಿ ರುಬ್ಬಿ ಉಪ್ಪು ಖಾರ ಹಾಕಿ ಅಕ್ಕಿಹಿಟ್ಟಿನ ಕಣಕದಲ್ಲಿಟ್ಟು ಬೇಯಿಸುವುದು.

    ಅರಿಶಿನ ಎಲೆಯಲ್ಲಿ ಇಟ್ಟು ಕುಚ್ಚಿದ ಕಡುಬು ಮಾಡಿದರೆ ಅದರ ಘಮವೇ ಬೇರೆ.

    5ಅಕ್ಕಿತರಿ ಕಡುಬು

    ಇದು ಮಲೆನಾಡ ಅಡಿಗೆ. ಆವಿಯಲ್ಲಿ ಬೇಯಿಸುವ ಈ ಕಡುಬುಗಳು ರುಚಿಕರ ಹಾಗೂ ಆರೋಗ್ಯಕರ. ಅಕ್ಕಿತರಿ ಉಪಯೋಗಿಸಿ ಮಾಡುತ್ತಾರೆ.

    6 ಹಲಸಿನ ಹಣ್ಣಿನ ಕಡುಬು

    ಮಳೆಗಾಲದಲ್ಲಿ ಮಲೆನಾಡಿನಲ್ಲಿ ಹಲಸಿನ ಮೇಳ ನಡೆಯುತ್ತದೆ .
    ಈ ಹಣ್ಣಿನಲ್ಲಿ ತರತರದ ಖಾದ್ಯಗಳನ್ನು ಮಾಡುತ್ತಾರೆ . ಅದರಲ್ಲಿ ಹಲಸಿನ ಇಡ್ಲಿ ಅಥವಾ ಕಡುಬು ಕೂಡ ಒಂದು.

    7 ಕುಂಬಳ ಕಾಯಿ ಕಡುಬು

    ಸಿಹಿ ಕುಂಬಳಕಾಯಿ ಹಾಕಿ ಮಾಡುತ್ತಾರೆ. ಇದು ತುಂಬ ಆರೋಗ್ಯಕರವಾದದ್ದು.

    8ಕೊಟ್ಟೆ ಕಡುಬು

    ಹಲಸಿನ ಅಥವಾ ಬಾಳೆ ಎಲೆಗಳಲ್ಲಿ ಕೊಟ್ಟೆ ಮಾಡಿ ಅದಕ್ಕೆ ಇಡ್ಲಿಹಿಟ್ಟು ಹಾಕಿ ಹಬೆಯಲ್ಲಿ ಬೇಯಿಸುವುದು.

    ಒಟ್ಟಿನಲ್ಲಿ ಕಣಕ ಎರಡೆ. ಒಂದು ಅಕ್ಕಿ ಹಿಟ್ಟಿನದು ಇನ್ನೊಂದು ಗೋಧಿ/ ಮೈದಾಹಿಟ್ಟಿನದು. ಅದರೊಳಗಿನ ಹೂರಣ ಮಾತ್ರ ನಿಮ್ಮ ಇಚ್ಛೆಯಂತೆ ಬದಲಾಯಿಸಿ ಕೊಳ್ಳಬಹುದು.

    ಈಗಿನ ಜನರೇಶನ್ ಮಕ್ಕಳಿಗೆ ಬೇಕಾದಲ್ಲಿ ನೀವು
    ಡ್ರೈಫ್ರೂಟ್ ಹೂರಣ ಮಾಡಿ ಮೋದಕ ತಯಾರಿಸಬಹುದು, ಕ್ಯಾರೆಟ್ ಹೂರಣ ಮಾಡಿ ಕಡುಬು , ಚಾಕೊಲೇಟ್ ಮೋದಕ, ರವೆ ಮೋದಕ ಹೀಗೆ ನಾನಾ ತರಹದ ಮೋದಕ, ಕಡುಬುಗಳನ್ನು ಮಾಡಿ ವಿಘ್ನರಾಜನಿಗೆ ನೈವೇದ್ಯಮಾಡಬಹುದು.

    Photo by Mohnish Landge on Unsplash

    ಗಲ್ಫ್ ನಾಡಿನಲ್ಲಿ ಗಣೇಶ ಉತ್ಸವ

    ಮಮತಾ ಕುಲಕರ್ಣಿ

    ಭಾರತ ದೇಶ ತನ್ನದೇ ಆದ ವೈವಿಧ್ಯತೆಗಳಿಂದ ದೊಡ್ಡ ರಾಷ್ಟ್ರವಾಗಿ ಮೆರೆಯುತ್ತಿದೆ. ಅದೇ ರೀತಿ ಅರಬ್ ಸಾಮ್ರಾಜ್ಯವೆಂದು ಪ್ರಸಿದ್ಧಿಯಾಗಿರುವ ಗಲ್ಫ್ ನಾಡು ತನ್ನದೇ ಆದ ವಿಶಿಷ್ಟತೆಗಳಿಂದ ಕೂಡಿದೆ.

    ವಿಧವಿಧದ ರೆಂಬೆ-ಕೊಂಬೆಗಳಂತೆ ದುಬೈ,ಕತಾರ್, ಅಬು ದಾಬಿ, ಬೆಹರಿನ್,ಹೀಗೆ ಅನಂತ ದೇಶಗಳಿಂದ ಕೂಡಿದ ಒಂದು ಹೆಮ್ಮರ ಗಲ್ಫ್ ನಾಡು. ಈ ನಾಡಲ್ಲಿ ಅನೇಕ ಭಾರತೀಯರು ತಮ್ಮದೇ ಆದ ವೈಯಕ್ತಿಕ ಕಾರಣಗಳಿಂದ ವಾಸವಾಗಿ ಅನಿವಾಸಿ ಭಾರತೀಯರಾಗಿದ್ದಾರೆ. ಆದರೆ ಕುಟುಂಬ ಹಾಗೂ ತಮ್ಮ ದೇಶದಿಂದ ದೂರವಿದ್ದರೂ ತಮ್ಮ ದೇಶದ ಸಂಪ್ರದಾಯ ಹಬ್ಬ-ಹರಿದಿನಗಳನ್ನು ತಪ್ಪದೆ ಈ ನಾಡಲ್ಲೂ ಆಚರಿಸುವುದು ಒಂದು ಹೆಮ್ಮೆ ಹಾಗೂ ಹಾಗೂ ವಿಶಿಷ್ಟ.

    ದುಬೈನಲ್ಲಿ ಎಷ್ಟೊ ಹಿಂದೂ ಭಾರತೀಯರು ಇಂಡಿಯನ್ ಕಮ್ಯುನಿಟಿ ತರಹ ಭಾರತದ ವಿವಿಧ ಭಾಗದ ಜನರು ಸೇರಿ ಸಂಘಗಳನ್ನು ಮಾಡಿಕೊಂಡಿದ್ದಾರೆ. ಅದರಲ್ಲಿ ಸದಸ್ದೆಯರಾಗಿ ಅದೆಷ್ಟೊ ಅಪರಿಚಿತ ಭಾರತೀಯರು ಸ್ನೇಹ ಬಾಂಧವ್ಯದ ಜೊತೆಗೆ ಪುಟ್ಟ ಕೌಟುಂಬಿಕ ಭಾವನೆಗಳೊಂದಿಗೆ ಹಬ್ಬ-ಹರಿದಿನಗಳನ್ನು ಸಂಭ್ರಮಿಸುತ್ತಾರೆ. ಬರ್ ದುಬಾಯಿ, ಮೀನಾ ಬಜಾರ್ ನಲ್ಲಿ ಪ್ರತಿ ವರ್ಷ ದೊಡ್ಡ ಗಣೇಶನ ಮೂರ್ತಿ ಇಟ್ಟು ಎಲ್ಲ ರೀತಿಯ ಸಂಪ್ರದಾಯ ಆಚಾರ ವಿಚಾರಗಳೊಂದಿಗೆ ಮೋದಕದ ಪ್ರಸಾದ ದೊಂದಿಗೆ ಐದು ದಿನ ಗಣೇಶ ಉತ್ಸವ ನಡೆಯುತ್ತದೆ.

    ಮೀನಾ ಬಜಾರ್ ರಸ್ತೆಯಲ್ಲಿ ಎಷ್ಟೊ ವಿಧವಿಧದ ಗಣೇಶ ಮೂರ್ತಿಗಳು ಮಾರಾಟ ವಾಗುತ್ತವೆ. ಎಷ್ಟೋ ಜನರು ಭಾರತದಂತೆ ತಮ್ಮ ತಮ್ಮ ಮನೆಗಳಿಗೆ ಮೂರ್ತಿಗಳನ್ನು ಖರೀದಿಸಿ ಪೂಜೆ ಮಾಡಿ ಹಬ್ಬ ಆಚರಿಸುವರು. ಈ ದಿನಗಳಲ್ಲಿ ಹಬ್ಬದ ಸಾಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ತೊಟ್ಟು ಗಣೇಶನ ದರ್ಶನ ಮಾಡುತ್ತಾರೆ. ಸಂಜೆ ಭಜನೆ ಕೀರ್ತನೆಗಳು ನಮ್ಮ ದೇಶದ ಆಚರಣೆಗಳನ್ನು ನೆನಪಿಸುತ್ತವೆ. ಚಿಕ್ಕ ಪುಟ್ಟ ಮಕ್ಕಳಿಗೆ ತಮ್ಮ ಸಂಪ್ರದಾಯವನ್ನು ಪರಿಚಯಿಸಲು, ದೂರದಲ್ಲಿ ತಮ್ಮ ಕುಟುಂಬಸ್ಥರಿಂದ ದೂರವಿದ್ದು ಅವರನ್ನು ಮನದಲ್ಲಿ ನೆನೆಯುತ್ತಾ ಅಪರಿಚಿತರೊಂದಿಗೆ ಸ್ನೇಹದಿಂದ, ಭಕ್ತಿಭಾವನೆಗಳನ್ನು ಗಣೇಶನ ಪಾದಕ್ಕೆ ಇಟ್ಟು ಭಕ್ತಿಪೂರ್ವಕವಾಗಿ ನಮಿಸುತ್ತಾರೆ.

    ಆದರೆ ಈ ವರ್ಷ ಕೊರೊನಾ ಕಾರಣದಿಂದಾಗಿ ಸಾರ್ವಜನಿಕವಾಗಿ ಮೂರ್ತಿಯನ್ನು ಪ್ರತಿಷ್ಠಾಪಿಸಿರುವುದಾದರೂ, ಹೆಚ್ಚಾಗಿ ಸಾಮೂಹಿಕ ಆಚರಣೆಗೆ ನಿರ್ಬಂಧ ಇರಲಿ ಎಂದು ಕಮ್ಯುನಿಟಿ ಅವರ ಅಭಿಪ್ರಾಯ ಹಾಗೂ ಮನವಿ. ಜನರು ಕೂಡ ತಮ್ಮ ತಮ್ಮ ಮನೆಗಳಲ್ಲಿ ಮಣ್ಣಿನ ಮೂರ್ತಿಗಳನ್ನು ಮಾಡಿ ಆಚರಿಸುವ ಮನೋಭಾವನೆಯಲ್ಲಿದ್ದಾರೆ.ಮಿಸ್ ಕಿಸ್ನಿ ದುಬೈವಾಸಿ, ಗಣೇಶ ಮೂರ್ತಿಗಳನ್ನು ಮಾಡಿ ಮಾರುವ ವ್ಯಾಪಾರಿ.ಒಂದು 15-50ಸೆಂಮಿ ಎತ್ತರದ ಮೂರ್ತಿಯನ್ನು ಮಾಡಲು 10ಕೆಜಿ ಮಣ್ಣನ್ನು ಬಳಸುವರು.ಅವರ ಪ್ರಕಾರ ಈ ಮೂರ್ತಿಯ ವಿಸರ್ಜನೆಗೆ 3-4ಗಂಟೆ ಸಾಕು ಹಾಗು ಮಣ್ಣಿನ ಪೋಷಕಾಂಶಗಳು ಸಸಿಗಳನ್ನು ಬೆಳೆಸಲು ಸಹಕಾರಿ. ಈ ಬಾರಿ ಹೆಚ್ಚಿನ ಜನರು ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪನೆಗೆ ಮುಂದಾಗಿದ್ದಾರೆ ಎಂಬುದು ಅವರ ಅನಿಸಿಕೆ.

    ಒಟ್ಟಿನಲ್ಲಿ ಸಂದರ್ಭ ಹೇಗೆ ಇರಲಿ ಯಾವ ದೇಶದಲ್ಲೆ ಇರಲಿ,ಆಚರಣೆ ನಿಲ್ಲದೆ ನಿಜವಾದ ಸಂಪ್ರದಾಯಗಳೊಂದಿಗೆ ಮಣ್ಣಿನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ವಿಧಿವಿಧಾನಗಳನ್ನು ಕೀರ್ತನೆಗಳನ್ನು ಭಾವದಿಂದ ಮಾಡುವುದು ಮುಖ್ಯ. ಆಡಂಬರ ತಾತ್ಕಾಲಿಕ ಖುಷಿಗಾದರೂ ಮೂಲ ಉದ್ದೇಶ ಮರೆಯಬಾರದು. ರಾಸಾಯನಿಕಯುಕ್ತ ಮೂರ್ತಿ ಪರಿಸರಕ್ಕೆ ಹಾನಿಕರ ಹಾಗೆ ವಿಸರ್ಜನೆಯಿಂದ ನೀರು ಕಲುಷಿತ. ಪಟಾಕಿ ಸಿಡಿಸುವುದು ವಾಯುಮಾಲಿನ್ಯಕ್ಕೆ ದಾರಿ. ದೇವರು ಪರಿಸರಕ್ಕೆ ಹಾನಿ ಮಾಡಿ ಪೂಜಿಸು ಎಂದು ಎಲ್ಲೂ ಹೇಳಿಲ್ಲ ಅಲ್ಲವೇ. ಹಾಗಾದರೆ ಜವಾಬ್ದಾರಿಯುತ ನಾಗರಿಕರಾಗಿ ನಮ್ಮ ಸಂಪ್ರದಾಯಗಳನ್ನು ಸರಿಯಾದ ರೀತಿಯಲ್ಲಿ ಪಾಲಿಸೋಣ. ದುಬೈನಲ್ಲೇ ಇರಲಿ, ಅಮೆರಿಕದಲ್ಲಿ ಇರಲಿ, ಸ್ವದೇಶದಲ್ಲೇ ಇರಲಿ ಭಾರತೀಯರಾಗಿ ಇರೋಣ.

    ಧಾರವಾಡದ ಮಮತಾ ಕುಲಕರ್ಣಿ ಓದಿದ್ದು ಸಿವಿಲ್  ಎಂಜಿನಿಯರಿಂಗ್. ಸಧ್ಯ ಇರುವುದು ದುಬೈ. ಮೊದಲು ಬೆಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಆಗಿ ವೃತ್ತಿಯಲ್ಲಿದ್ದು ಈಗ ಹೋಮ್ ಮೇಕರ್ .ಕವನ, ಸಾಹಿತ್ಯ ರಚನೆ ಹವ್ಯಾಸ . ಬರಹ ಕೌಶಲ್ಯವನ್ನು ಬೆಳೆಸಿಕೊಳ್ಳುವ ಆಸಕ್ತಿ. ಪತಿ ವಿಜಯ್ ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ.

    ಬದುಕಿನ ಭಾಗವಾಗಿ ಸದಾ ನಮ್ಮೊಂದಿಗಿರುವ ಚಂದಮಾಮಾ

    ‘ ಚಂದ್ರ ‘…… ಹುಣ್ಣಿಮೆಯಲ್ಲಿ ಆಗ ತಾನೇ ತುಪ್ಪದ ಕೈಯಿಂದ ಕಟ್ಟಿದ ರವೆ ಉಂಡೆಯಂತೆ. ಒಮ್ಮೆ ನಿಸರ್ಗವೇ ಅರ್ಧ ತಿಂದುಳಿಸಿದ ರಸಗುಲ್ಲದಂತೆ . ಮತ್ತೊಮ್ಮೆ ನೈಲ್ ಕಟ್ಟರಿನಿಂದ ಕತ್ತರಿಸಿದ ಉಗುರಿನ ಚೂರಿನ ಹಾಗೆ ಬಾನಿನಲ್ಲಿ ಕಾಣಸಿಗುತ್ತದೆ.

    ಅಮ್ಮನ ತೋಳಿನಲ್ಲಿ ಇರುವ ಮುಗ್ಧ ಮಗುವಿಗೆ ಚೆಂದದ ಮಾಮನಾಗಿ ,ಪ್ರೇಮಿಗಳಿಗೆ ಸಾಕ್ಷಿಯಾಗಿ ,ಒಮ್ಮೊಮ್ಮೆ ಕತೆಯಾಗಿ ಕವನವಾಗಿ,ಗ್ರಹವಾಗಿ ಗ್ರಹಣವಾಗಿ , ಬೆಳದಿಂಗಳ ಆಸೆಯಾಗಿ ಅಮಾವಾಸ್ಯೆಯ ನಿರಾಸೆಯಾಗಿ,ಹಸೀ ಸುಳ್ಳಾಗಿ ನೈಜ ನಿಜವಾಗಿ , ಭಕ್ತಿಯಾಗಿ ಶಕ್ತಿಯಾಗಿ ,ನಂಬಿಕೆಯಾಗಿ ಮೂಢನಂಬಿಕೆಯಾಗಿ , ಹಬ್ಬವಾಗಿ ಹರಿದಿನವಾಗಿ, ಭಾಗಶಃ ಬದುಕಿನ ಭಾಗವಾಗಿ ಸದಾ ನಮ್ಮ ಜೊತೆಗಿರುತ್ತದೆ .

    ಆಕಾಶದ ಇರುಳಿನ ತಂಪುಗ್ರಹ ಈ ಚಂದಮಾಮ .‌ ಗ್ರಹಣಕ್ಕೊಳಗಾಗುವ ಕೆಲವೇ ಗ್ರಹಗಳಲ್ಲಿ ಚಂದ್ರ ಗ್ರಹವೂ ಒಂದು.ಅಮ್ಮನ ಬಾಯಿಂದ ಕಂದ ಕೇಳಿಸಿಕೊಳ್ಳುವ ಮೊದಲ ಸುಳ್ಳು…. ಇದನ್ನ ತಿಂದುಬಿಡು ನಿನಗೆ ಚಂದಮಾಮನ ಹತ್ರ ಕರ್ಕೊಂಡ್ ಹೊಗ್ತೀನಿ ಅಂತ . ಆಗಿನ ಪ್ರಿಯತಮ ತನ್ನ ಪ್ರೇಯಸಿಗೆ ಕೊಡುತ್ತಿದ್ದ ಹುಸಿ ಭರವಸೆ ನಿನಗೋಸ್ಕರ ಚಂದ್ರನ್ನ ಬೇಕಾದ್ರೂ ತಂದುಕೊಡ್ತೀನಿ ಅಂತ.

    ಹಳೆಯ ಸಿನಿಮಾಗಳಲ್ಲಿ ನಾಯಕ ನಾಯಕಿ ಇಬ್ಬರೂ ತಮ್ಮ ಅದರಗಳನ್ನು ಹತ್ತಿರ ತರುತ್ತಿದ್ದಂತೆ ನಿರ್ದೇಶಕರು ಚಂದಿರನ ಷಾಟ್ ತೋರಿಸುತ್ತಿದ್ದರು……ಅದೊಂಥರ ಮೂನಿಂಗ್ ಫುಲ್ ಷಾಟ್ .ಮದುವೆಯಾದ ನೂತನ ಜೋಡಿಯ ಮೊದಲ ರಾತ್ರಿಯ ಹೆಸರೇ ಮಧುಚಂದ್ರ . ಬೆಲೆ ಕಟ್ಟಲಾಗದ ಬೆಳದಿಂಗಳ ಒಡೆಯ ಈ ಚಂದ್ರ . ಬಾಲಕನೊಬ್ಬ ಮೊದಲು ಬಿಡಿಸಿದ ಚಿತ್ರದಲ್ಲಿ ಕಾಣುವ ಕಲಾಕೃತಿ ಈ ಚಂದ್ರ . ಈಶ್ವರನ ಮುಡಿಯಲ್ಲಿ ಮುಡಿದಿರುವ ಸೌಂದರ್ಯ ಪರಿಕರ . ಸಾಹಿತಿಗಳ ಸ್ಪೂರ್ತಿ, ಲೇಖಕರ ಮೂರ್ತಿ ಇದು .

    ಇಂತಹ ಚಂದ್ರನ ಮೇಲೂ ಗಣೇಶನನ್ನು ನೋಡಿ ನಕ್ಕಿದ ಅಪವಾದವಿದೆ . ಬಾಲ್ಯದಲ್ಲಿ ಊರಿಗೆ ಹೋದಾಗೋ ಇಲ್ಲ ಊರಿನವರು ನಮ್ಮ ಮನೆಗೆ ಬಂದಾಗ್ಲೋ ಅವರುಗಳ ಜೊತೆ ಕೂತ ನಮಗೆ ಅಮ್ಮ ಬೆಳದಿಂಗಳ ಬೆಳಕಿನಲ್ಲಿ ಅನ್ನ ಸಾರನ್ನು ಕಲಿಸಿ ಕೈತುತ್ತು ಹಾಕುತ್ತಿದ್ದಾಗ ನಾವು ಸವಿಯುತ್ತಿದ್ದರೆ ಚಂದ್ರನ ಅಂಗಳದಲ್ಲೇ ಕೂತು ತಿನ್ನುತ್ತಿದ್ದೇವೇನೋ ಎನ್ನುವ ಸ್ವರ್ಗಾನುಭವವಾಗುತ್ತಿತ್ತು .

    ಹೀಗೆ ನಿಬ್ಬೆರಗಾಗಿ ಚಂದ್ರನನ್ನು ನೋಡುತ್ತಾ ಅಮ್ಮನ ತೋಳಿನಿಂದ….. ಬೇಬಿ ವಾಕರಿನಿಂದ ಇಳಿದ ಮಗು ತನ್ನೊಂದಿಗೇ ಬೆಳೆದ ಜಗತ್ತು ಮತ್ತು ವಿಜ್ಞಾನದ ಸಹಕಾರದಿಂದ ಸೀದಾ ಹೋಗಿ ಲಕ್ಷಾಂತರ ಕಿಲೋಮೀಟರ್ ದೂರದ ಚಂದ್ರನ ಮೇಲೆಯೇ ಕಾಲಿಟ್ಟು ಇತಿಹಾಸ ನಿರ್ಮಿಸಿದ. ಚಂದ್ರನಲ್ಲಿ ಏನಿದೆ ಏನಿಲ್ಲ ಎಂಬುದನ್ನು ಕಣ್ಣಾರೆ ಕಂಡು ಸಾಕ್ಷಿ ಸಮೇತ ಹಿಂದಿರುಗಿದ.

    ಇವತ್ತಿಗೂ ವಿಜ್ಞಾನಿಗಳು ಸಂಶೋಧನೆಗಳನ್ನು ನಿತ್ಯ ಪೂಜೆಗಳಂತೆ , ಜ್ವಾಲೆ ಆರದ ಯಾಗದಂತೆ ಮಾಡುತ್ತಿದ್ದಾರೆ . ಅಲ್ಲಿಯೂ ಗಾಳಿ ನೀರು ಇದೆ ಎಂದು ಖಾತ್ರಿಯಾದರೆ ಸಾಕು ಮನುಷ್ಯ ಚಂದ್ರಮಂಡಲದಲ್ಲಿ ರಿಯಲ್ ಎಸ್ಟೇಟ್ ಆಫೀಸು ತೆರೆಯುವುದು ಗ್ಯಾರಂಟಿ .

    ಅಮೇರಿಕ, ರಷ್ಯ, ಜರ್ಮನಿ, ಇಟಲಿ, ಚೀನಾ, ,ಜಪಾನ್ ನಂತಹ ದೈತ್ಯ ರಾಷ್ಟ್ರಗಳು ಸಹಸ್ರಾರು ಕೋಟಿಗಳನ್ನು ವ್ಯಯಿಸಿ ದೊಡ್ಡ ದೊಡ್ಡ ವಿಜ್ಞಾನಿಗಳನ್ನು ನೇಮಿಸಿ ಗ್ರಹವನ್ನೇ ಗೃಹವನ್ನಾಗಿಸಲು ಪಣ ತೊಟ್ಟಿದ್ದಾರೆ . ಅದರ ಮೇಲೆ ಉಪಗ್ರಹಗಳನ್ನು ಇಳಿಬಿಟ್ಟಿದ್ದಾರೆ , ಪ್ರಯೋಗಾಲಯಗಳಲ್ಲಿ ತಂತ್ರಜ್ಞಾನ ಮತ್ತು ತಂತ್ರಗಾರಿಕೆಯನ್ನು ಎತ್ತುಗಳಂತೆ ದುಡಿಸುತ್ತಿದ್ದಾರೆ.

    ಇವರ ಅನ್ವೇಷಣೆ ಫಲಿಸಿ ಪ್ರಯತ್ನ ಯಶಸ್ವಿಯಾಗಿ ಜನ ಜೀವನ ನಡೆಸಲು ಶುರು ಮಾಡಿದರೆ …..ಚಂದ್ರನ ಮೇಲೆ ಅಮ್ಮ ಮಗೂನ ಎತ್ಕೊಂಡು ಬಟ್ಲಲ್ಲಿ ಅನ್ನ ಕಲ್ಸ್ಕೊಂಡು ಮಗುವಿಗೆ ತಿನ್ನಿಸುತ್ತ ದೂರದ ಭೂಮಿಯನ್ನು ತೋರಿಸಿಕೊಂಡು ಅದರ ಬಗ್ಗೆ ಕತೆಗಳನ್ನು ಹೇಳುತ್ತಾಳೇನೋ ಅನ್ಸುತ್ತೆ .

    ಕಿರಣ ಆರ್

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೈಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    ಕೊರೊನಾದ ಎರಡನೇ ಅಲೆ- ಹಾಗೆಂದರೇನು

    ಸಮುದ್ರತಟದಲ್ಲಿ ಒಂದು ಅಲೆ ಉಬ್ಬಿ ಬಂದು ಅಪ್ಪಳಿಸಿ ನೆಲಸಮವಾಗುತ್ತದೆ. ಅದರ ಹಿಂದೆಯೇ ಮತ್ತೊಂದು ಅಲೆ ಎತ್ತರಕ್ಕೇರಿ  ಉಬ್ಬಿಬ್ಬಿ ಬಂದು ದಡವನ್ನು ಅಪ್ಪಳಿಸಿ ನೆಲಸಮವಾಗುತ್ತದೆ. ಇದುವರೆಗೆ ಕಾಡಿರುವ ಕೊರೊನ ವೈರಸ್ಸು ಹಲವು ದೇಶಗಳಲ್ಲಿ ಮೊದಲನೆಯ ಅಲೆಯ ಹಂತದಲ್ಲಿದೆ. ಅಂದರೆ ಅದರ ಅಬ್ಬರವಿನ್ನೂ ಮುಗಿದಿಲ್ಲ. ಪ್ರತಿನಿತ್ಯ 50-60 ಸಾವಿರ ಜನರಲ್ಲಿ ಸೋಂಕು ಹರಡುತ್ತಿರುವ ಭಾರತದಲ್ಲಿ ಮೊದಲ ಅಲೆಯಿನ್ನೂ ಎತ್ತರದಲ್ಲೇ ಇದೆ ಮತ್ತು ಕೆಳಮುಖವಾಗಿಲ್ಲ  ಅಥವಾ ನೆಲಸಮವಾಗಿಲ್ಲ.

    ಮೊದಲ ಅಲೆ ಮುಗಿದಿದೆ ಎನ್ನುವ ದೇಶಗಳಲ್ಲಿ ಹೊಸದಾಗಿ ಪತ್ತೆಯಾಗುವ ಸೋಂಕಿತರ ಸಂಖ್ಯೆ ಸೊನ್ನೆಯಾಗಬೇಕು ಅಥವಾ ಒಂದಕಿಗೆ ಇಳಿಯಬೇಕು. ಸಾಯುವವರು ಕೂಡ ಕಡಿಮೆಯಾಗಬೇಕು.ಇದು ಒಂದು ನಿಗದಿತ ಸಮಯದವರೆಗೆ ಬದಲಾಗದಂತಿರಬೇಕು. ಆ ನಂತರ ಮತ್ತೆ ಸೋಂಕುಗಳು ಹೊಸ ಸಂಪರ್ಕದೊಂದಿಗೆ ಶುರುವಾದಲ್ಲಿ ಅದನ್ನು ಎರಡನೆಯ ಅಲೆಯೆನ್ನುತ್ತೇವೆ.

    ಮೊದಲನೆಯ ಅಲೆ ನೆಲಸಮವಾಗುವತ್ತ ಸಾಗಿರುವ ಹಲವು ದೇಶಗಳಲ್ಲಿ ಪೂರ್ಣ ಪ್ರಮಾಣದ ಸಾವುಗಳಿನ್ನೂ ನಿಂತಿಲ್ಲ. ಆದರೆ ಬಹುತೇಕ ಕಡಿಮೆಯಾಗಿವೆ.ಆದರೆ ಈ ದೇಶಗಳಲ್ಲಿ ಇದೀಗ ಎರಡನೆಯ ಅಲೆ ಅಲ್ಲಲ್ಲಿ ಉಬ್ಬಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹಿಂದೆಯೇ ಸಾವಿನ ಸಂಖ್ಯೆ ಏರುವ ಸಾಧ್ಯತೆಯಿದೆ.ಈ ಕಾರಣ  ಪ್ರತಿಯೊಂದು ದೇಶದಲ್ಲಿ ಎಚ್ಚರಿಕೆ, ಸಾಮಾಜಿಕ ಅಂತರ, ಮಾಸ್ಕಗಳ  ಬಳಕೆ ಎಲ್ಲವೂ ಮುಂದುವರೆಯುತ್ತಿವೆ.

    ಆದರೆ ’ ಅಲೆ  ’ ಅಥವಾ  ’ವೇವ್ ’ ಎನ್ನುವ ಪದ ವೈಜ್ಞಾನಿಕವಲ್ಲ. ಏರಿಳಿತವನ್ನು ಸೂಚಿಸುವ ಜನ ಸಾಮಾನ್ಯರ ಬಳಕೆಗಾಗಿ ಇರುವ ಪದ. ಎರಡನೆಯ ಅಲೆಯ ಸೋಂಕುಗಳು ಮೊದಲ ಅಲೆಯ ಜನರಿಂದಲೇ ಬಂದಿರಬಹುದು.  ಅದನ್ನು ತಿಳಿಯುವುದು ಕಷ್ಟ ಸಾಧ್ಯ. ಒಟ್ಟಿನಲ್ಲಿ ಕೊರೊನಾ ಸೋಂಕಿನ ಕೊಳದಲ್ಲಿ ನೀರಿರುವರೆಗೆ ಅಲೆಗಳು ಮೂಡುತ್ತಲೇ ಇರಬಹುದು ಎನ್ನುವ ಗ್ರಹಿಕೆಯನ್ನು ನೀಡುವ ಪದ.

    ಉದಾಹರಣೆಗೆ ಜೂನ್  16 ಕ್ಕೆ ನ್ಯೂಝಿಲ್ಯಾಂಡಿನಲ್ಲಿ ಸೋಂಕಿತರ ಸಂಖ್ಯೆ ಸೊನ್ನೆಯನ್ನು ಮುಟ್ಟಿತು. 24 ಗಂಟೆಗಳಲ್ಲಿ ಯಾವೊಂದು ಹೊಸ ಸೋಂಕು ಪತ್ತೆಯಾಗಲಿಲ್ಲ. ಆದರೆ ಹೊರಗಿನಿಂದ ಇಬ್ಬರು ಸೋಂಕಿತರು ಆಕ್ಲ್ಯಾಂಡಿನಲ್ಲಿ ಬಂದಿಳಿದರು. ಜೂನ್ 18 ರಿಂದ ಇವರನ್ನು ಪೂರ್ತಿ ಕ್ವಾರಂಟೈನ್ ನಲ್ಲಿಟ್ಟು ವೈರಸ್ಸನ್ನು ನಿಯಂತ್ರಿಸಲಾಯಿತು.

    ಆದರೆ ಇದೇ ತಿಂಗಳ 11 ರಂದು ಮತ್ತೂ ನಾಲ್ವರು ಸೋಂಕಿತರು ಪತ್ತೆಯಾಗಿದ್ದಾರೆ.  ಅಲ್ಲಿನ ಪ್ರಧಾನಿ ಜಸಿಂದಾ ಆರ್ಡೆಮ್ ಆಕ್ಲ್ಯಾಂಡಿನಲ್ಲಿ ಮತ್ತೆ ಮೂರನೇ ಶ್ರೇಣಿಯ ಎಚ್ಚರಿಕಾ ಕ್ರಮಗಳನ್ನು ಮತ್ತು  ನಿರ್ಬಂಧಗಳನ್ನು ಜಾರಿಗೊಳಿಸಬೇಕಾಯಿತು. ಏಕೆಂದರೆ ಇದಕ್ಕಿನ್ನ ಹೆಚ್ಚು ಸೋಂಕಿತರು ಸಮಾಜದ ಸಮುದಾಯಗಳಲ್ಲಿ ಇರಬಹುದು ಎನ್ನುವ ವಿಚಾರ ಅವರದು. ಈ ನಾಲ್ವರು ಒಂದೇ ಸಂಸಾರದ ಜನ. ಆದರೆ ನಾಲ್ವರೂ ನಗರದ ಬೇರೆ ಬೇರೆ ಪ್ರದೇಶಗಳಲ್ಲಿ ಕೆಲಸಮಾಡುತ್ತಿದ್ದ ಕಾರಣ ಇಡೀ ನಗರದ  ಮೇಲೆ ಜಾಗರೂಕತಾ ನಿರ್ಬಂಧಗಳನ್ನು ಹೇರಲಾಯಿತು.

    ಆ ವೇಳೆಗೆ ಆಸ್ಟ್ರೇಲಿಯಾದಲ್ಲಿ ಇಂಥದ್ದೇ ಒಂದು ಘಟನೆ ನಡೆದಿತ್ತು. ಒಂದು ತಿಂಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ಇದೇ ರೀತಿಯ ಘಟನೆ ನಡೆದಾಗ ಆ ದೇಶ ಬರೀ ಸಂಭಂದಪಟ್ಟ  ಉಪನಗರದ ಏರಿಯಾಗಳನ್ನು ಮಾತ್ರ ಮುಚ್ಚಿತ್ತು. ಆದರೆ ಅದರಿಂದ ಪ್ರಯೋಜನವಾಗಿರಲಿಲ್ಲ. ಇದೇ ಕಾರಣಕ್ಕೆ ನ್ಯೂಜಿಲ್ಯಾಂಡ್ ಬೇರೆಯ ಪ್ರದೇಶಗಳಿಗೆ ವಿನಾಯತಿಯನ್ನು ತೋರಿಸದೆ ಇಡೀ ನಗರದ ವಹಿವಾಟುಗಳನ್ನು ಮುಚ್ಚಿತು.

    ಈ ಮೇಲಿನ ಘಟನೆ ಒತ್ತಿ ಹೇಳುವುದೆಂದರೆ, ಎರಡನೆಯ ಅಲೆಯನ್ನು ಹತ್ತಿಕ್ಕಲು ಕೂಡ ಅತ್ಯಂತ ತ್ವರಿತ ಮತ್ತು ಧೃಡ ನಿರ್ಧಾರಗಳನ್ನು ದೇಶದ ನಾಯಕರು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದಲ್ಲಿ  ವೈರಸ್ಸಿನ ನಿಯಂತ್ರಣ ಸಾಧ್ಯವಾಗುವುದಿಲ್ಲ.

    ಭಾರತದಲ್ಲಿ ಇದೀಗ ಸೋಂಕಿತರಿಗಾಗಿ ಪರೀಕ್ಷೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿವೆ. ಆದರೆ, ಬೃಹತ್ ದೇಶವಾದ ಭಾರತದಲ್ಲಿ ಈ ಸೋಂಕಿತರ ಪರೀಕ್ಷೆ ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲ ಎಂಬುದು ಅಂತಾರಾಷ್ಟ್ರೀಯ ಮಟ್ಟದ ಅಭಿಪ್ರಾಯವಾಗಿದೆ. ಇಲ್ಲದಿದ್ದಲ್ಲಿ ದಿನಕ್ಕೊಂದು ಲಕ್ಷ ಸೋಂಕಿತರು ಪತ್ತೆಯಾಗುವುದೇನೂ ಕಷ್ಟವಿರಲಿಲ್ಲ ಎನ್ನುವುದು ಇವರ ಅಂಬೋಣ.

    ಭಾರತದಲ್ಲಿ ಈಗಾಗಲೇ ಸರಿಸುಮಾರು ವಹಿವಾಟುಗಳು ಶುರುವಾಗಿರುವ ಕಾರಣ ಸೋಂಕು ಹರಡುವುದನ್ನು ತಪ್ಪಿಸುವುದು ಅತ್ಯಂತ ಕಷ್ಟ.ಈ ಕಾರಣ ಮೊದಲ ಅಲೆಯೇ ಇನ್ನೂ ಬಹುಕಾಲ ಇರುವ ಸಾಧ್ಯತೆಗಳಿವೆ.

    ನಾಳಿನಿಂದ ಶುರುವಾಗಲಿರುವ ಗೌರಿ-ಗಣೇಶನ ಹಬ್ಬಕ್ಕೆ ಈ ವರ್ಷ ಸಾರ್ವಜನಿಕ ಸಮಾರಂಭಗಳನ್ನು ಮಾಡಬೇಡಿ, ಹಬ್ಬವನ್ನು ಮನೆಯ ಮಟ್ಟಕ್ಕೆ ಸೀಮಿತಗೊಳಿಸಿ ಎಂದು ಸರ್ಕಾರ ವಿನಂತಿಸಿಕೊಂಡರೂ , ಸಾರ್ವಜನಿಕವಾಗಿ ಮಾಡೇ ತೀರುತ್ತೇವೆಂದು ಹೇಳುವವರು ಇದ್ದಾರೆ. ಸರಕಾರ ಈಗ ಸಾರ್ವಜನಿಕ ಗಣೇಶೋತ್ಸವಗಳಿಗೆ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದೆ. ಸರಕಾರ ಎಷ್ಟೇ ಹೇಳಿದರು ಮಾಸ್ಕ್ ಧರಿಸದೆ, ಅಂತರ ಪಾಲಿಸದೆ ಓಡಾಡುವ ಅನೇಕರನ್ನು ಕಾಣುತ್ತಲೇ ಇದ್ದೇವೆ. ಮಾಸ್ಕ್ ಅನ್ನು ಸರಿಯಾಗಿ ಧರಿಸದೆ ಅದನ್ನು ಕತ್ತಿಗೆ ಸರದಂತೆ ಧರಿಸುವವರು ಸಾಮಾನ್ಯ ವಾಗಿದ್ದಾರೆ. ಹೀಗಾಗಿ ಮೊದಲ ಅಲೆಯೇ ಇನ್ನೂ ಸೊಕ್ಕಿ ಮೆರೆಯುತ್ತಿದೆ. ಹೀಗಿರುವಾಗ ಎರಡನೆಯ ಅಲೆಯ ಬಗ್ಗೆ ಗಂಭೀರವಾದ ವಿಚಾರಮಾಡುವ ಕಾಲವಿನ್ನೂ ಭಾರತಕ್ಕೆ ಬಂದಿಲ್ಲ.

    ಆದರೆ, ಮತ್ತೊಂದು ಬಗೆಯಲ್ಲಿ ಎರಡನೇ ಅಲೆ ಹರಡುವ ಸಾಧ್ಯತೆಗಳಿವೆ. ಕೋವಿಡ್ -19 ತನ್ನ ಸ್ವರೂಪವನ್ನು ಬದಲಾಯಿಸಿಕೊಂಡು ಹೊಸ ಅವತಾರದಲ್ಲಿ ಮರಳಿ ಮತ್ತೆ ಅವಾಂತರ ಮಾಡುವ ಸಾಧ್ಯತೆಗಳಿವೆ. ಇದನ್ನೂ ಎರಡನೆಯ ಅಲೆ ಎನ್ನಬಹುದು ಈ ಎರಡನೆಯ ಭಿನ್ನ ಅಲೆಯ ದರ್ಶನ ಮತ್ತಷ್ಟು ಕಷ್ಟಗಳನ್ನು ತರಬಹುದಾದ ಸಾಧ್ಯತೆಗಳನ್ನು ಪರಿಣಿತರು ಗಂಭೀರವಾಗಿ ತೆಗೆದುಕೊಂಡು ಅದಕ್ಕಾಗಿ ತಯಾರಿಯನ್ನು ಶುರುಮಾಡಿದ್ದಾರೆ.

    ಮುಂದಿನ ತಿಂಗಳುಗಳಲ್ಲಿ ಚಳಿಗಾಲ ಆರಂಭವಾದಾಗ ’ ವಿಂಟರ್ ಫ್ಲೂ”  ಎನ್ನುವ ಮತ್ತೊಂದು ಬಗೆಯ ಜ್ವರ ಕೆಮ್ಮು ದಮ್ಮಿನ ಸೋಂಕು ಶುರುವಾಗಲಿದೆ. ಇದು ಚಳಿ ದೇಶಗಳಲ್ಲಿ ಪ್ರತಿವರ್ಷವೂ ನಡೆಯುವ ವಿದ್ಯಮಾನ.ಇಂತಹ ದೇಶಗಳಲ್ಲಿ  ಕೋವಿಡ್-19 ಈ ಹಳೆಯ ವೈರಸ್ಸಿನ ಜೊತೆ ಸೇರಿ ಹೊಸದೊಂದು ಅವತಾರ ತಾಳಿ ಕಾಡುವ ಸಾಧ್ಯತೆಗಳ ಬಗ್ಗೆ ಎಲ್ಲರೂ ಆತಂಕದಲ್ಲಿರುವುದು ಅತ್ಯಂತ ನಿಜ. ಆಗ ಹೊಸದೊಂದು ವೈರಸ್ಸಿನ ತಳಿಯೇ ಸೃಷ್ಟಿಯಾಗುವ ಸಾದ್ಯತೆಗಳ ಬಗ್ಗೆ ಎಲ್ಲರಗೂ ಅಧೈರ್ಯವಿದೆ. ಹಾಗೆ ಆದಲ್ಲಿ ಅದರ ಅಲೆ ಮತ್ತೆ ಪ್ರಪಂಚವನ್ನು ತನ್ನ ಸೆಳೆತಕ್ಕೆ ತೆಗೆದುಕೊಳ್ಳಬಹುದು.

    ಚೈನಾದಲ್ಲಿ ಮೊದಲು ಶುರುವಾಗಿ, ಇಡೀ ಪ್ರಪಂಚಕ್ಕೆ ಹರಡಿದಂತೆ, ಪ್ರಪಂಚದ ಯಾವುದೇ ದೇಶದಲ್ಲಿ ಈ ವೈರಸ್ಸು ಬೇರೊಂದು ಸ್ವರೂಪಕ್ಕೆ ರೂಪಾಂತರ ಹೊಂದಿದರೂ ಅದು ಮತ್ತೆ ಪ್ರಪಂಚದಲ್ಲೆಲ್ಲ ಹರಡುವ ಸಾಧ್ಯತೆಗಳಿವೆ. ಹಾಗಾದಲ್ಲಿ ಪ್ರಪಂಚದ ವಹಿವಾಟುಗಳಿಗೆ ಮತ್ತೊಮ್ಮೆ ಕೊಖ್ ಬೀಳಲಿದೆ.

    ಎರಡನೆಯ ಅಲೆಯ ಸ್ವರೂಪ ಹೇಗಿರಬಹುದು?

    ಈ ಬಗ್ಗೆ ಪ್ರಪಂಚಕ್ಕಿನ್ನೂ ಹೆಚ್ಚಿನ ಅರಿವಿಲ್ಲ. ಇದರ ಅಗಾಧತೆ ಮೊದಲಿನಷ್ಟೇ ಗಂಭೀರವೇ?- ಎನ್ನುವ ಬಗ್ಗೆ ತಿಳಿದವರಿಗೂ ಕರಾರುವಕ್ಕಾಗಿ ಹೇಳಲು ಸಾಧ್ಯವಾಗಿಲ್ಲ.

    ಆದರೆ, ಮೊದಲ ಅಲೆಯಿಂದಾಗಿ ತೆರೆದುಕೊಂಡಿರುವ  ಆರೋಗ್ಯ ಕೇಂದ್ರಗಳು, ತಪಾಸಣಾ ಕೇಂದ್ರಗಳು, ಚಿಕಿತ್ಸಾ ಆಸ್ಪತ್ರೆಗಳು, ಅವಲಂಬಿತ ಸಹಾಯಕ ಘಟಕಗಳನ್ನು ತತ್ ಕ್ಷಣ ಪುನರುಜ್ಜೀವನಗೊಳಿಸಲು ಸಾಧ್ಯವಿದೆ. ಈಗಾಗಲೇ ಖರೀದಿಸಿರುವ ವೆಂಟಿಲೇಟರ್ ಗಳು, ತರಬೇತುಗೊಳಿಸಿರುವ ಸಿಬ್ಬಂದಿ ಇವರ ಬಳಕೆಯನ್ನು ಮತ್ತೆ ಮಾಡಬಹುದಾಗಿದೆ. ಈಗಾಗಲೇ ಜಾರಿಯಿರುವ ಕಾಂಟಾಕ್ಟ್ ಟ್ರೇಸಿಂಗ್, ಬಳಸಿರುವ ಚಿಕಿತ್ಸೆಗಳು, ಮಾಸ್ಕ್, ಸಾಮಾಜಿಕ ಅಂತರಗಳು, ಕ್ವಾರಂಟೈನ್ ಕೇಂದ್ರಗಳು ಇತ್ಯಾದಿ ಅನುಭವಗಳನ್ನು ಬಳಸಿಕೊಂಡು ಸೋಂಕು ಹರಡುವಿಕೆಯನ್ನು ತಕ್ಕಮಟ್ಟಿಗೆ ನಿಯಂತ್ರಿಸಬಹುದಾಗಿದೆ ಎನ್ನುವ ಆಶಾವಾದಗಳಿವೆ.

    ಆದರೆ ಜೊತೆ ಜೊತೆಯಲ್ಲೆ, ಕೆಲವು ಆತಂಕಗಳಿವೆ.

    ಮೊದಲು ಈ ವಿಶ್ವವ್ಯಾಪಿ ವ್ಯಾಧಿ ಅಪ್ಪಳಿಸಿದಾಗ ಜನರು ಭಯಭೀತಿಯಿಂದ ನಿಯಮಗಳನ್ನು ಪಾಲಿಸಿದರು.ಆದರೆ ಈಗ ಜನರ ಸಹನೆ ಮೀರಿದೆ. ಆರ್ಥಿಕ ಕಷ್ಟ -ನಷ್ಟಗಳನ್ನು ತಡೆದುಕೊಳ್ಳುವ ತಾಳ್ಮೆ ಮುಗಿದಿದೆ. ಸರ್ಕಾರಗಳು ನಲುಗಿವೆ. ವಾಣಿಜ್ಯ ಕುಸಿದಿದೆ. ದೇಶ-ವಿದೇಶಗಳ ಓಡಾಟ, ಪ್ರವಾಸ, ಸಾರಿಗೆ, ವಿಮಾನ ಎಲ್ಲವೂ ತತ್ತರಿಸಿವೆ. ಹೀಗಾಗಿ ಎರಡನೆಯ ಅಲೆಯನ್ನು ತಡೆದುಕೊಳ್ಳುವ ಜನರ ಮತ್ತು ಸಂಘ ಸಂಸ್ಥೆ, ಸರ್ಕಾರಗಳ ಹರವು ಸಂಕುಚಿಸಿವೆ. ಹಾಗಾದಲ್ಲಿ ನಾವು ಇದುವರೆಗೆ ಮಾಡಿಕೊಂಡ ವ್ಯವಸ್ಥೆಗಳು ನಲುಗಿಹೋಗುತ್ತವೆ. ಮೊದಲ ಅಲೆಯನ್ನು ತಡೆಗಟ್ಟಿದಷ್ಟು ಪರಿಣಾಮಕಾರಿಯಾಗಿ ಎರಡನೆಯ ಅಲೆಯನ್ನು ತಡೆದುಕೊಳ್ಳುವುದು ಸಾಧ್ಯವಾಗುವುದಿಲ್ಲ ಎನ್ನುವ ಎಚ್ಚರಿಕೆಯ ಗಂಟೆಗಳು ಮೊಳಗುತ್ತಿವೆ.

    ಅಸಲಿಗೆ ದಿನಕ್ಕೆ ಸಾವಿರಾರು ಸೋಂಕಿತರು ಪತ್ತೆಯಾಗುತ್ತಿರುವಾಗಲೇ ಲಾಕ್ ಡೌನ್ ಅನ್ನು ಸಡಿಲಗೊಳಿಸಬೇಕಾದ ಸ್ಥಿತಿಯನ್ನು ಬಂದು ಮುಟ್ಟಿರುವ ನೂರಾರು ದೇಶಗಳಲ್ಲಿ ಇದೇ ಕಾರಣಕ್ಕೆ ಎರಡನೇ ಅಲೆ ಮೊದಲಿಗಿಂತ ಹೆಚ್ಚು ಅಪಾಯಕಾರಿ ಮತ್ತು ಸಾವು ನೋವುಗಳನ್ನು ತರಬಲ್ಲದು ಎನ್ನುವ ಆತಂಕ ಇದ್ದೇ ಇದೆ.

    ಎರಡನೇ ಅಲೆಯ ಆತಂಕದಲ್ಲಿರುವ ದೇಶಗಳು

    250,000 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕನ್ನು ನೋಡಿರುವ 45 ದೇಶಗಳಿವೆ. ಇವುಗಳಲ್ಲಿ 21 ದೇಶಗಳು ಲಾಕ್ ಡೌನ್ ನ್ನು ಸಡಿಲಿಸಿವೆ. ಇವುಗಳಲ್ಲಿ 10 ದೇಶಗಳು ಎರಡನೇ ಅಲೆಯ ಸೋಂಕನ್ನು ವರದಿಮಾಡಿವೆ. ಈ ಹತ್ತು ದೇಶಗಳು ಕೊರೊನಾ ವೈರಸ್ಸಿನ ನಿಯಂತ್ರಣದಲ್ಲಿ  ಸಡಿಲವಾದ ಆಸಕ್ತಿ ತೋರಿಸಿದ ದೇಶಗಳಾಗಿವೆ. ಆಕ್ಸ್ ಫರ್ಡ್ ನ ಕೊರೊನಾ ವೈರಸ್ ಟ್ರಾಕರ್ ಪ್ರಕಾರ ಅಮೆರಿಕಾ, ಇರಾನ್, ಜೆರ್ಮನಿ, ಸ್ವಿಟ್ಜರ್ ಲ್ಯಾಂಡ್, ಫ್ರಾನ್ಸ್ ಇತ್ಯಾದಿ ದೇಶಗಳು ಈ ಪಟ್ಟಿಯಲ್ಲಿವೆ. ಒಂದು ಹಂತಕ್ಕೆ ನಿಯಂತ್ರಣಕ್ಕೆ ಬಂದಿದ್ದ ಕೊರೊನಾ, ಇದೀಗ ಮತ್ತೆ ಈ ದೇಶಗಳಲ್ಲಿ ಬಲಗೊಳ್ಳುತ್ತ ಸಂತಾನ ವೃದ್ಧಿಯನ್ನು ನಡೆಸುತ್ತಿವೆ. ಎರಡು ವಾರಗಳ ಹಿಂದೆ ಭಾನುವಾರದಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಪಂಚದಲ್ಲಿ ಅತ್ಯಧಿಕ  ಕೊರೊನಾ ವೈರಸ್ಸುಗಳ ಸೋಂಕಿತರನ್ನು ಇತ್ತೀಚೆಗೆ ಕಂಡ ಬಗ್ಗೆ ವರದಿ ಮಾಡಿ ಆತಂಕ ವ್ಯಕ್ತಪಡಿಸಿತು.

    ಪ್ರಪಂಚದಲ್ಲಿ ಅತ್ಯಧಿಕ ಸೋಂಕಿತರನ್ನು ಹೊಂದಿರುವ ಮೊದಲ ಹನ್ನೆರಡು ದೇಶಗಳು ಒಂಭತ್ತು ದೇಶಗಳಿನ್ನೂ ಪ್ರತಿದಿನ ಹೆಚ್ಚಾಗುತ್ತಲೇ ಇರುವ ಮಾದರಿಯ ಸೋಂಕಿತರ ಸಂಖ್ಯೆಯನ್ನು ನೀಡಿದ್ದರೆ ಇನ್ನು ಮೂರು ದೇಶಗಳಲ್ಲಿ ಈ ರೇಖೆ ಕೆಳಮುಖವಾಗಿ ಸಾಗಿವೆ.ಆದರೆ, ಈ ಎಲ್ಲ ದೇಶಗಳು ತಮ್ಮ ಆರ್ಥಿಕತೆಯನ್ನು ಈಗಾಗಲೇ ಸಡಿಲಗೊಳಿಸಿವೆ.

    ಅಂದರೆ ಆಯಾ ದೇಶಗಳ ಲಾಕ್ ಡೌನ್ ನ್ನು ನೂರು ಅಂಕಗಳೊಂದಿಗೆ (Stringency scale) ನಾವು ಅಳೆಯುವುದಾದರೆ ಅದರಲ್ಲಿ 70 ಕ್ಕಿನ್ನ ಕಡಿಮೆ ಅಂಕಗಳಿಸುವ ದೇಶಗಳನ್ನು  ರಿಲ್ಯಾಕ್ಸಡ್  ಅಥವಾ ಸಡಿಲ ನೀತಿಯ ದೇಶಗಳೆಂದು ಕರೆಯಬಹುದು. ಈ ದೇಶಗಳು ಕೊರೊನಾ ವಿರುದ್ಧ ಮಾಡುವ ಪ್ರಚಾರ ಪ್ರಣಾಳಿಕೆಗಳು, ಸೋಂಕನ್ನು ಹತ್ತಿಕ್ಕಲು ತೆಗೆದುಕೊಳ್ಳುವ ಕ್ರಮ ಮತ್ತು  ಲಾಕ್ ಡೌನ್ ಕ್ರಮಗಳನ್ನು ಆಧರಿಸಿ ಈ ಸೂಚ್ಯಂಕದ ಗಣನೆಯನ್ನು ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯ ಅಳೆಯುತ್ತದೆ.

    ಉದಾಹರಣೆಗೆ ಕಟ್ಟು ನಿಟ್ಟಾದ ಕ್ರಮಗಳನ್ನು ಕೈ ಬಿಟ್ಟಕೂಡಲೆ ಜರ್ಮನಿಗೆ ದೊರಕಿದ್ದ 73 ಅಂಕಗಳು ಐವತ್ತಕ್ಕಿಳಿದವು. ಹತ್ತು ದಿನದ ಕೆಳಗೆ ಜರ್ಮನಿಯಲ್ಲಿ ಕೊರೊನಾ ಸಂತಾನೋತ್ಪತ್ತಿಯ ವೇಗ  ಮೂರಕ್ಕೇರಿತು. ಸೋಂಕಿತರ ಸಂಖ್ಯೆ ಅತ್ಯಂತ ವೇಗವಾಗಿ ಏರತೊಡಗಿತು. ಸೌದಿ ಅರೇಬಿಯ ಮತ್ತು ಇರಾನಿನಲ್ಲೂ ಸಂಖ್ಯೆಗಳು ಏರು ಮುಖದಲ್ಲಿ ಸಾಗಿ ಎರಡನೇ ಅಲೆಯನ್ನು ಖಾತರಿಪಡಿಸಿದವು.ಆದರೆ ವಿಚಿತ್ರವೆಂಬಂತೆ ಇಟಲಿಯಲ್ಲಿ ಕ್ರಮಗಳನ್ನು ಸಡಿಲಗೊಳಿಸಿದರೂ ಸೋಂಕಿತರ ಸಂಖ್ಯೆ ಏರಿಲ್ಲ. ಆದರೆ ಅಲ್ಲಿ ಕೂಡ ಶಿಸ್ತಾಗಿ ನಿಯಮಗಳನ್ನು ಪಾಲಿಸಬೇಕು ಎನ್ನುವುದು ಪಂಡಿತರ ಪ್ರತಿಕ್ರಿಯೆಯಾಗಿದೆ.

    ಒಂಭತ್ತು ದೇಶಗಳಲ್ಲಿ  ದಕ್ಷಿಣ ಅಮೆರಿಕಾದ ಮೂರು ದೇಶಗಳು ಬಿಗಿಯಾದ ಲಾಕ್ ಡೌನ್ (?) ಪಾಲಿಸಿದರೂ ಬೊಲಿವಿಯ, ಅರ್ಜೆಂಟಿನಾ ಮತ್ತು ಕೊಲಂಬಿಯ ದೇಶಗಳಲ್ಲಿ ಸೋಂಕಿತರ ಸಂಖ್ಯೆ ಏರುತ್ತಲೇ ಹೋಗಿದ್ದು ಈ ಹಿಂದೆ ಆತಂಕಕ್ಕೆ ಎಡೆಮಾಡಿಕೊಟ್ಟಿತ್ತು. ಇವುಗಳಲ್ಲಿ ಅರ್ಜೆಂಟಿನಾ ಮೊದಲೇ ಲಾಕ್ ಡೌನ್ ಪ್ರವೇಶಿಸಿ ಬಹುಕಾಲ ಸೋಂಕನ್ನು ಹತ್ತಿಕ್ಕಿತ್ತಾದರೂ ಅದನ್ನು ಸಡಿಲಗೊಳಿಸಿದ ಕೂಡಲೇ ಅತಿಹೆಚ್ಚಿನ ಸೋಂಕಿತರನ್ನು ವರದಿ ಮಾಡಿತು.ಭಾರತದಲ್ಲಿಯೂ ಇದೇ ನಡೆದದ್ದು.

    ಮೊದಮೊದಲಿನಲ್ಲೇ 200,000 ಸೋಂಕಿತರನ್ನು ಹೊಂದಿದ್ದ  ಇರಾನ್ ಏಪ್ರಲ್ ಅಥವಾ ಮೇ ವೇಳೆಗೆ ಸೋಂಕಿತರು ಕಡಿಮೆಯಾಗುತ್ತಿರುವ ಬಗ್ಗೆ ಹೇಳಿತ್ತು. ಒಂದು ವಾರದ ಕಾಲ ಅಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತ ಹೋಗಿತ್ತು.ಒಂದು ತಿಂಗಳ ಕಾಲ ಅದು ಕಡಿಮೆಯೇ ಉಳಿದು ಆ ದೇಶಕ್ಕೆ ಆಶಾ ದೀಪವನ್ನು ಹಚ್ಚಿಟ್ಟಿತ್ತು.

    ಆದರೆ ನಂತರ ಶುರುವಾದ ಎರಡನೇ ಅಲೆಯ ಸೋಂಕುಗಳು ಮತ್ತೆ ಆ ದೇಶವನ್ನು ಕಾಲೂರುವಂತೆ ಮಾಡಿತು.ಇದೀಗ ಎರಡನೆಯ ಅಲೆಯೂ ಮತ್ತೆ ನೆಲಸಮವಾಗುತ್ತಿದೆ. ಇಸ್ರೇಲ್, ಸೌದಿ ಅರೇಬಿಯ ಇತರೆ ದೇಶಗಳಲ್ಲಿ ಎರಡನೇ ಅಲೆ ನಿಧಾನವಾಗಿ ಮೇಲೇರಿತು. ಕೆಲವನ್ನು ಮೊದಲನೇ ಅಲೆಯ ಸೋಂಕೇ ಅಥವಾ ಎರಡನೆಯ ಅಲೆಯ ಸೋಂಕೇ ಎಂದು ಹೇಳಲಾಗಲಿಲ್ಲ. ಏಕೆಂದರೆ ಕೆಲವು ಬಾರಿ ಅದು ಗರಿಷ್ಠ ಮಟ್ಟ (ಪೀಕ್) ಮುಟ್ಟಿದ ವರದಿ ಸುಳ್ಳಾಗಿತ್ತು. ಹಾಗಾಗಿ ಎರಡನೇ ಅಲೆ ಅಂದುಕೊಂಡಿದ್ದು ಇನ್ನೂ ಮೊದಲ ಅಲೆಯ ಮುಂದುವರಿಕೆಯಾಗಿದ್ದ ವರದಿಗಳು ಬಂದಿವೆ. ಚೈನಾದಲ್ಲಿ, ಏಪ್ರಿಲ್ ವೇಳೆಗೆ ಮುಗಿದೇ ಹೋಯಿತು ಎಂದುಕೊಂಡಿದ್ದ ಸೋಂಕು, ಜೂನ್ ವೇಳೆಗೆ ಮತ್ತೆ ಕಾಣಿಸಿಕೊಂಡು ಅಲ್ಲಿಯ ಜನರಿಗೆ ಭಾರೀ ಆತಂಕವನ್ನು ಹುಟ್ಟಿಸಿತು.ಇದೀಗ ಅದನ್ನ ಹತ್ತಿಕ್ಕಿದ ವರದಿ ಬಂದಿದೆ.

    ಅಮೆರಿಕಾದಲ್ಲಿ ಮೊದಲ ಅಲೆಯೇ ತಗ್ಗಲಿಲ್ಲ. ಬಹುಕಾಲ ಹೊಸ ಸೋಂಕಿತರನ್ನು ವರದಿಮಾಡುತ್ತಲೇ ಇದ್ದರು.ಆದರೆ, ಯುನೈಟೆಡ್ ಕಿಂಗ್ಡಮ್ಮಿನಲ್ಲಿ ಮೇ ಮತ್ತು ಜೂನ್ ವೇಳೆಗೆ ನಿಖರವಾದ ದಾಖಲೆಗಳೊಂದಿಗೆ ಮೊದಲ ಅಲೆ ನೆಲಸಮನಾಗುತ್ತ ಹೋಯಿತು. ಆದರೆ ಹಲವಾರು ನಗರಗಳಲ್ಲಿ ಎರಡನೆಯ ಅಲೆಯ ವರದಿಯಾಗಿ ಆಯಾ ನಗರಗಳಲ್ಲಿ ಮತ್ತೆ ಲಾಕ್ ಡೌನ್ ನ್ನು  ಘೋಷಿಸಲಾಯಿತು. ಭಾರತದಲ್ಲಿ ಕೊರೊನಾ ಕಾಣಿಸಿಕೊಂಡಾಗಿನಿಂದ ಇದುವರೆಗೆ ಸೋಂಕಿತರ ಸಂಖ್ಯೆ ಏರುಹಾದಿಯಲ್ಲಿಯೇ ಸಾಗಿದ್ದು, ಶೃಂಗ ಶಿಖರವನ್ನಿನ್ನೂ ಮುಟ್ಟಿಲ್ಲ. ಯಾರಿಂದ ಸೋಂಕು ಬಂದಿರಬಹುದೆಂಬುದನ್ನು ಇದೀಗ ಕಂಡುಹಿಡಿಯಲು ಸಾದ್ಯವಾಗದೆ ಇದು ಸಮುದಾಯಮಟ್ಟದಲ್ಲಿ  ಹರಡುತ್ತಲೇ ಇದೆ.

    ಜೀವನಿರೋಧಕ ಶಕ್ತಿ ಕಡಿಮೆ ಇರುವ  ಜನಸಮುದಾಯಗಳಲ್ಲಿ ಅತಿ ಹೆಚ್ಚಿನ ಸೋಂಕು ಹರಡಬಲ್ಲದು. ಈ ಕಾರಣ ನಾವು ವಾಸ್ತವ ಪರಿಸ್ಥಿತಿಯನ್ನು ಮರೆತು ಆರ್ಥಿಕತೆಯನ್ನು ಪೂರ್ತಿ ಸಡಿಲಿಸಕೂಡದು. ಇದುವರೆಗೆ ಪಾಲಿಸಿದ ಸಾಮಾಜಿಕ ಅಂತರ,ಮಾಸ್ಕ್ ಗಳು, ದೀರ್ಘಕಾಲ ಕೈ ತೊಳೆಯುವುದು ಇತ್ಯಾದಿಯನ್ನು ಬಹುಕಾಲ ಮುಂದುವರೆಸಬೇಕಾಗಿದೆ.ಇಲ್ಲದಿದ್ದಲ್ಲಿ ಮೊದಲ ಅಲೆಯ ಮಾರಣ ಹೋಮಕ್ಕಿಂತ ಹೆಚ್ಚು ಗಂಭೀರವಾದ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು.

    ರಾಜಕೀಯ ಲಾಭಕ್ಕೆ ಜ್ಞಾನವನ್ನು ಒತ್ತೆ ಇಡುವುದು ಎಷ್ಟು ಸರಿ?

    ಅದು 80ರ ದಶಕದ ಮಧ್ಯದ ಭಾರತ. ಇಂದಿರಾಗಾಂಧಿಯ ಹತ್ಯೆಯೊಂದಿಗೆ ಒಂದು ರಾಜಕೀಯ ಪರ್ವವೇ ಮುಗಿದಿದ್ದಂಥಕಾಲ.ಅಲ್ಲಿಗೆ ವಿದೇಶಗಳಲ್ಲಿ ಓದಿ ಬಂದವರಿಗೆ ಫಾರಿನ್ ರಿಟರ್ನ್ಡ್ಅನ್ನುವ ಗೌರವ ಕಡಿಮೆ ಆಗಿದ್ದಂತಹ ಕಾಲ. ಹೋದವರು ಬಾರದೇ ಅಲ್ಲೇ ನೆಲೆಸುತ್ತಿದ್ದುದರಿಂದ, Brain Drain ಎನ್ನುವ ವಿಷಯ ಮುಂದಲೆಗೆ ಬಂದು ಅನೇಕ ಆಯಾಮಗಳಲ್ಲಿ ಚರ್ಚೆ ಆಗುತ್ತಿದ್ದ ಕಾಲ ಘಟ್ಟ.

    ನಾನು ಓದಿದ್ದಂತಹ ತಾಂತ್ರಿಕ ಕಾಲೇಜುಗಳಲ್ಲಿ ಇಂತಹ ಚರ್ಚೆಗೆ ಆಯಾಮಗಳು ಏನೇ ಇದ್ದರೂ ಭಾರತದಲ್ಲಿ ತಾಂತ್ರಿಕ ವಿಷಯಗಳ ಅವಿಷ್ಕರಣೆಗೆ ಬೇಕಾದ ವಾತಾವರಣ,ಲಭ್ಯತೆ ಎರಡೂ ಇಲ್ಲ. ಹಾಗಾಗಿ ವಿದೇಶವೇ ನಮ್ಮ ಮೊದಲ ಆಯ್ಕೆ ಎಂಬಂಥ ಸ್ನೇಹಿತರ ಮಧ್ಯೆ ಇದ್ದ ನನಗೆ ಹಲವಾರು ಬಾರಿ ಆಶ್ಚರ್ಯ ಆಗುತ್ತಿತ್ತು. ಹಾಗೆ ನೋಡಿದರೆ ಅವರ ಅಭಿಪ್ರಾಯವೂ ಸರಿಯೇ,ಆದರೆ ಸರ್ಕಾರ ನಮ್ಮಂಥ ಆಯ್ದ ಮೆದುಳಿಗಳಿಗೆ ಉಚಿತವಾಗಿ ಅಂದಿನ ದಿನಗಳಲ್ಲಿ ಉತ್ಕೃಷ್ಟ ಎನ್ನಬಹುದಾದಂತಹ ಶಿಕ್ಷಣವನ್ನು ಉಚಿತವಾಗಿ, ಸಾರ್ವಜನಿಕರ ತೆರಿಗೆ ಹಣದಿಂದ ಕೊಡುತ್ತಿದ್ದು,ಅಂತಹ ಶಿಕ್ಷಣ ಪಡೆದ ನಾವು ಏನೋ ಕಾರಣ ಹೇಳಿ ಪುರ್ ಅಂತ ವಿದೇಶಕ್ಕೆ ಹಾರುವುದು ಯಾಕೋ ನನ್ನ ಮನಸ್ಸಿಗೆ ಒಗ್ಗದ ವಿಷಯವಾಗಿತ್ತು.

    ಹೀಗೆಯೇ ಸರ್ ಸಿ ವಿ ರಾಮನ್, ಜೇಮ್ಸಶೇಡ್ಜಿ ಟಾಟಾ, ವಿಶ್ವೇಶ್ವರಯ್ಯ,ಅಣು ವಿಜ್ಞಾನಿ ಬಾಬಾ ಮುಂತಾದವರು ಯೋಚಿಸಿ,ವಿದೇಶಕ್ಕೆ ಹೋಗಿದ್ದರೆ ಗತಿ ಏನಾಗ್ತಿತ್ತು ಎನ್ನುವುದು ನನ್ನ ಪ್ರಶ್ನೆಯಾಗಿರುತ್ತಿತ್ತು. ಬುದ್ಧಿವಂತರು ಅಂತ ಸಮಾಜದಲ್ಲಿ ಗುರುತಿಸಿಕೊಂಡವರು ಸ್ವಾರ್ಥಿಗಳಾದರೆ ಸಮಾಜಕ್ಕೆ ತೊಂದರೆ ಆಗುತ್ತೇನೋ ಎನ್ನುವಂತಹ ಸ್ಪಷ್ಟತೆ ಇಲ್ಲದ ಯೋಚನೆಗಳು ಆಗ ನನ್ನನ್ನು ಇಲ್ಲಿಯೇ ಇರಬೇಕಾದ್ದು ನಮ್ಮ ನೈತಿಕ ಕರ್ತವ್ಯದ ಜವಾಬ್ದಾರಿ ಅಂತ ಹೇಳುತ್ತಿದ್ದವು. ನಾವು ಅಲ್ಲಿ ಗಳಿಸುವ ಹಣ ಭಾರತಕ್ಕೆ ಯಾವುದೋ ರೂಪದಲ್ಲಿ ಬರುತ್ತದೆ,ಹಾಗಾಗಿ ಭಾರತದ ಅರ್ಥ ವ್ಯವಸ್ಥೆಗೆ ನಮ್ಮಿಂದ ಸಹಾಯ ಆಗುತ್ತೆ ಅಂತ ಹೇಳುವ ಒಂದು ವಾದ ನನಗೆ ಸಮಂಜಸ ಅನ್ನಿಸುತ್ತಿರಲಿಲ್ಲ. ಆರ್ಥಿಕತೆ ಯ ಸಮಜಾಯಿಷಿ ಎಲ್ಲ ವಿಷಯಗಳಲ್ಲಿ ಸಮರ್ಪಕವಾದ ಉತ್ತರ ಅಲ್ಲ ಅಂತ ಇಂದಿಗೂ ನನ್ನ ಅಭಿಪ್ರಾಯ, ಅದು ಮನೆಯಾಗಲೀ,ದೇಶವಾಗಲಿ.

    ಈ ಮಧ್ಯೆ ಕಂಪ್ಯೂಟರ್ ಪ್ರವೇಶ ಆಗುತ್ತದೆ. ಇಂದಿರಾ ನಂತರ ಬಂದ ರಾಜೀವರು ಈ ಎಲೆಕ್ಟ್ರಾನಿಕ್ ಭೂಮಿಕೆಗೆ ಹೆಚ್ಚು ಒತ್ತು ಕೊಟ್ಟು 21ನೇ  ಶತಮಾನದ ಭಾರತವನ್ನು ಬೇರೆಯದೇ ಆಯಾಮಕ್ಕೆ ಕೊಂಡೊಯ್ಯುತ್ತೇನೆ ಅಂತಿದ್ದರು. ಆಗಾಗ ಔಪಚಾರಿಕವಾಗಿ ಇದರ ವಿಷಯವನ್ನು ನಮ್ಮ ಪ್ರೊಫೆಸರ್ಗ ಗಳು ತರಗತಿಗಳಲ್ಲಿ ಹೇಳುತ್ತಿದ್ದರೂ,ಇದರ ಆಳ,ಅಗಲ ಪರಿಚಯ ಇರಲಿಲ್ಲ. ಆಗಲೇ ನಮ್ಮ ಕೈಗಳಲ್ಲಿ ಇದ್ದ ಎಂಜಿನಿಯರಿಂಗ್ ಕ್ಯಾಲುಕಲೇಟರ್ ಕಡೆ ನೋಡ್ತಾ, ಇದರ ಮುಂದುವರೆದ,ಇದಕ್ಕಿಂತಲೂ ಹೆಚ್ಚಿನ ಕೆಲಸ ಮಾಡುವ ಒಂದು ಸಾಧನ ಅಂತ ತಿಳಿಸಲಾಗುತ್ತಿತ್ತು. ಜೊತೆಗೆ ಅದರದ್ದೇ ಆದ ಭಾಷೆ ಕಲಿಯಬೇಕು,ಅದನ್ನು ಬಳಸಿಕೊಳ್ಳಲು ಅಂತ Basic, Fortron ಎನ್ನುವಂತಹ ಭಾಷೆಗಳನ್ನು ಕಲಿಸುತ್ತಿದ್ದರು.

    ಈ ಮಧ್ಯೆ ಎಡ ಪಂಥೀಯರ ಬ್ಯಾಂಕ್ ನೌಕರರ ಸಂಘಗಳು ನಮಗೆ ಕಂಪ್ಯೂಟರ್ ಬೇಡವೇ ಬೇಡ ಎನ್ನುವ ಬೇಡಿಕೆಯೊಂದಿಗೆ ಧರಣಿ ಮಾಡುತ್ತಿದ್ದರು! ಜಪಾನ್ ನಲ್ಲಿ ಜನಸಂಖ್ಯೆ ಕಡಿಮೆ,ಕೆಲಸ ಜಾಸ್ತಿ ಹಾಗಾಗಿ ಅಲ್ಲಿ ಅವುಗಳ ಆವಶ್ಯಕತೆ ಇದೆ. ಭಾರತದಲ್ಲಿ ಜನಸಂಖ್ಯೆ ತುಂಬಾ ಇದೆ,ಇಲ್ಲಿ ಉದ್ಯೋಗ ಸೃಷ್ಟಿ ಆಗಬೇಕೆ ಹೊರತು,ಕಸಿಯುವ ಕಂಪ್ಯೂಟರ್ ಬೇಡ ಅನ್ನುವುದು ಅವರ ವಾದ. ಯಾರೋ ಹೇಳಿದ್ದರಂತೆ ಒಂದು ಕಂಪ್ಯೂಟರ್ 100 ಉದ್ಯೋಗಿಗಳ ಕೆಲಸ ಮಾಡುತ್ತೆ ಬ್ಯಾಂಕ್ ನಲ್ಲಿ ಅಂತ.

    ನನ್ನ ಪ್ರೆಶ್ನೆ ಏನು ಅಂದ್ರೆ, ಅದರ ಆಳ,ಅಗಲಗಳು ಇನ್ನೂ ಸರಿಯಾಗಿ ತಿಳಿಯದೇ ಇದ್ದ ವೇಳೆಯಲ್ಲಿ ಇಂಥ ಜನರನ್ನು ತುಂಬಾ ವೇಗವಾಗಿ, ಸಮರ್ಥವಾಗಿ ತಲುಪಬಲ್ಲ ವಾದಗಳಿಗೆ ಯಾರು,ಏಕೆ ರೆಕ್ಕೆ ಪುಕ್ಕ ಕಟ್ಟಿ ಹಾರಿಬಿಡುತ್ತಾರೆ ಎಂಬುದು! ಇಂತಹ ಬದ್ಧತೆ ಇಲ್ಲದ ಬುದ್ಧಿಜೀವಿಗಳಿಗೆ ನಮ್ಮಲ್ಲಿ ಕಡಿಮೆ ಇಲ್ಲ. ಇವರ ಬಾಲಿಶ ವಾದಕ್ಕೆ ಬೆಲೆ ಇಲ್ಲ ಎನ್ನುವುದು ಗೊತ್ತಾಗಲು ಸಮಯಬೇಕು.ಅಷ್ಟರಲ್ಲಾಗಲೇ ಇವರು ಮತ್ತೊಂದಕ್ಕೆ ರೆಕ್ಕೆ,ಪುಕ್ಕ ಕಟ್ಟುವ ಕೆಲಸದಲ್ಲಿ ಭಾಗಿಯಾಗಿರುತ್ತಾರೆ. ಇವರಿಗೆ ಸಾಮಾಜಿಕ ಬದ್ಧತೆ ಇರುವುದೇ ಇಲ್ಲ.ನೀವು ಹೇಳಿದ್ದು ತಪ್ಪು ಅಂತ ಯಾರೂ ಛಿ ಮಾರಿ ಹಾಕಲ್ಲ,ಇವರು ಇದನ್ನೇ ವೃತ್ತಿ ಮಾಡಿಕೊಂಡು ಜನರನ್ನು ತಪ್ಪು ದಾರಿಗೆ ಕೊಂಡೊಯ್ಯುತ್ತಾರೆ.

    ಇಂದು ಕಂಪ್ಯೂಟರ್ ಇಲ್ಲದ ಜೀವನವನ್ನು ಊಹಿಸಲು ಸಾಧ್ಯವೇ?! ತುಂಬಾ ಸಮಂಜಸ ಅಂತ ಆಗ ಕಾಣುತ್ತಿದ್ದ ಇವರ ವಾದಕ್ಕೆ ಮನ್ನಣೆ ನೀಡುವ ಸರ್ಕಾರಗಳು ಇದ್ದಿದ್ದರೆ,ಎಂತಹ ದುರಂತ ಆಗ್ತಿತ್ತು?!

    ಇದು ಉದಾಹರಣೆ ಅಷ್ಟೇ. ಆಗ ಇಂತಹುದೆ ಮತ್ತೊಂದು ರಾಷ್ಟವ್ಯಾಪ್ತಿ ಚರ್ಚೆ ಆಗ್ತಿದ್ದ ವಿಷಯ ಇಂದು ಸರ್ದಾರ್ ವಲ್ಲಭಬಾಯಿ ಆಣೆಕಟ್ಟು ಅಂತ ಅನ್ನಿಸಿಕೊಂಡಿರುವ ಗುಜರಾತಿನ ನರ್ಮದಾ ಕಣಿವೆಯ ಪ್ರಾಜೆಕ್ಟ್. ನೆನಪಿರಬಹುದು ಮೇಧಾ ಪಾಟ್ಕರ್ ಎನ್ನುವಂತಹ ಪರಿಸರ ತಜ್ಞೆಯ ನೇತೃತ್ವದಲ್ಲಿ ಮಾನವ ಹಕ್ಕುಗಳ ಹೋರಾಟದವರು ಅಲ್ಲಿನ ನಿವಾಸಿಗಳೊಂದಿಗೆ ಸೇರಿ ದಶಕಗಳ ಕಾಲ ಇನ್ನಿಲ್ಲದಂತೆ ವಿರೋಧಿಸುತ್ತಾರೆ. ಇಂದು ಈ ಅಣೆಕಟ್ಟು 4 ಕೋಟಿ ಜನರ ನೀರಿನ ಸಮಸ್ಯೆ ಮತ್ತು 20 ಲಕ್ಷ ಹೆಕ್ಟರ್ ಭೂಮಿಗೆ ನೀರಾವರಿ ಒದಗಿಸುತ್ತಿದೆ ಅಲ್ಲದೆ ನರ್ಮದೆಯ ಪ್ರವಾಹವನ್ನು ನಿಯಂತ್ರಿಸಿದೆ.
    ನಿಮಗೆ ಭಾರತದ ಯಾವುದೇ ಜನೋಪಕಾರಿ ಯೋಜನೆ ತೆಗೆದುಕೊಂಡು ಅದರ ಇತಿಹಾಸ ತಿರುವಿ ನೋಡಿದರೆ ಇಂತಹ ಅವೈಜ್ಞಾನಿಕ,ಅರೆತಿಳಿವಳಿಕೆಯ ವಿರೋಧವನ್ನು ಒಂದು ಗುಂಪು ಬಹಳ ವ್ಯವಸ್ಥಿತವಾಗಿ ಮಾಡಿಕೊಂಡು ಬಂದಿರುವುದು ಸ್ಪಷ್ಟವಾಗಿ ಕಾಣುತ್ತದೆ.

    ಅದರ ರಾಜಕೀಯ ಕಾರಣ ಏನೇ ಇರಲಿ,ಇಲ್ಲಿ ತಂತ್ರಜ್ಞಾನ ಹೊಂದಿದ ಯಾವನೋ ಒಬ್ಬ ಬುದ್ಧಿಜೀವಿ ಇಂಥವರಿಗೆ ಗುರು ಆಗಿರಲೇ ಬೇಕಲ್ಲ,ಅಲ್ಲಿ ನನ್ನ ವಿಚಾರ ಲಹರಿ ನಿಲ್ಲುತ್ತದೆ. ಅದು ಪರಿಸರ ತಜ್ಞ, ಎಂಜಿನಿಯರ್, ಅರಣ್ಯ ತಜ್ಞ ಹೀಗೆ ಬೇರೆ ಬೇರೆ ತಜ್ಞರೂ ಒಳಗೊಂಡಿರಬಹುದು. ನಷ್ಟ ಇಲ್ಲದ ಯಾವ ವ್ಯವಹಾರವೂ ಇಲ್ಲ. ಹಾಗಂತ ಬರೀ ನಷ್ಟದ ಲೆಕ್ಕಾಚಾರ ಹಾಕುತ್ತಾ ,ಲಾಭವನ್ನು ಬೇಕಾಗಿ ಮುಚ್ಚಿಟ್ಟು,ಯಾವುದೋ ಸಂಸ್ಥೆಗಳಿಗೆ,ರಾಜಕೀಯ ಲಾಭಕ್ಕೆ ಇಂತಹ ತಜ್ಞರು ತಮ್ಮ ಜ್ಞಾನವನ್ನು ಒತ್ತೆ ಇಡುವುದು ಎಷ್ಟು ಸರಿ? ಇವರಿಗೆ ಎಲ್ಲರಿಗಿಂತಲೂ ಹೆಚ್ಚಿನ ನೈತಿಕತೆ ಇರಬೇಕಾದ್ದು ಅವಶ್ಯಕ ಹಾಗೂ ಅದನ್ನು ಸಮಾಜ ಬಯಸುವುದು,ಸಮಾಜದ ಹಕ್ಕಲ್ಲವೇ?

    ಅರ್ಧ ದಶಕದಿಂದ ಇಂತಹುದೇ ನರಳಿಕೆಯಲ್ಲಿರುವ  ಭಾರತದ ಒಂದು ಪ್ರಮುಖವಾದ ಯೋಜನೆ ಅಂದರೆ,ಅದು ನದಿ ಜೋಡಣೆ. ಇದರ ಮೂಲ ಉದ್ದೇಶ ಉತ್ತರದ ಬಿಹಾರದ ಕೋಸಿ,ಅಸ್ಸಾಮ್ ನ ಬ್ರಹ್ಮಪುತ್ರ ನದಿಗಳ ಪ್ರವಾಹದ ನೀರನ್ನು ದಕ್ಷಿಣದ ನದಿಗಳಿಗೆ ಹರಿಸಿ, ದಕ್ಷಿಣ ನದಿಗಳ ನೀರಿನ ಕೊರತೆಯನ್ನು ನೀಗಿಸಿ, ಉತ್ತರ ಭಾರತದ ನದಿಗಳ ಪ್ರವಾಹ ನೀರನ್ನು ನಿಯಂತ್ರಿಸುವುದಲ್ಲದೆ ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡು ಭಾರತದ ನೀರಿನ ಕೊರತೆಯಿಂದ ಬಳಲುತ್ತಿರುವ ಭೂಮಿಯನ್ನು ನೀರಾವರಿ ವ್ಯಾಪ್ತಿಗೆ ತರುವುದು.

    ವರ್ಷ ಇಡೀ ಭಾರತದ ನದಿಗಳು ನೀರಿನಿಂದ ತುಂಬಿ,ಭಾರತದ ಬಂಜರು ಭೂಮಿ ಫಲವತ್ತತೆಯನ್ನು ಹೊಂದಿ,ಅರ್ಧ ಪ್ರಪಂಚಕ್ಕೆ ಅಡುಗೆ ಮನೆಯನ್ನಾಗಿ ಭಾರತವನ್ನು ಪರಿವರ್ತಿಸುವುದು. ಊಹಿಸಿಕೊಂಡರೇ ಪುಳಕವಾಗುತ್ತೆ ಅಲ್ವಾ?

    19ನೇ ಶತಮಾನದ ಅಂತ್ಯದಿಂದಲೇ ಬ್ರಿಟಿಷರಿಂದ ರೂಪಿತಗೊಂಡ ಈ ಯೋಜನೆ ನಮ್ಮಲ್ಲಿ ಇನ್ನೂ ಸಾಕಾರಗೊಂಡಿಲ್ಲ. ಇದಕ್ಕೆ ಆರ್ಥಿಕ ಸಮಸ್ಯೆ ಇಲ್ಲ. ಇರುವುದು ತಜ್ಞರ ತಲೆ,ಬುಡ ಗಳು ಇಲ್ಲದ ಅಭಿಪ್ರಾಯಗಳಲ್ಲಿ. ಈ ಯೋಜನೆ ಜಾರಿಯಾದರೆ,ಯಾವೊಬ್ಬ ಭಾರತೀಯ ಯಾವುದೇ ರಾಜಕಾರಣಿಯ ಹಿಂದೆ ಬಹುಪರಾಕ್ ಹಾಕ್ತಾ ಸುತ್ತಾಡಲ್ಲ,ಅಷ್ಟೊಂದು ಸ್ವಾವಲಂಬಿಯಾಗಿ ಅನ್ನ ದಾತನಾಗುತ್ತಾನೆ. ನಿರ್ಲಕ್ಷಿಸಿರುವ ವ್ಯವಸಾಯದತ್ತ ಯುವಕರು ಬನ್ನಿ ಅಂತ ಕರೆಯುವ ಅವಶ್ಯಕತೆಯೇ ಇಲ್ಲ. ಆತ್ಮ ನಿರ್ಭರ ಭಾರತ ಪ್ರತಿಪಾದನೆಯ ಅದ್ಭುತ ಯೋಜನೆ ಇದು.

    ಇದಕ್ಕಿರುವ ವಿಘ್ನಗಳ ಪಟ್ಟಿಯೇ ತಲೆ ಕೆಡಿಸುತ್ತದೆ. ಅದರಲ್ಲಿಯ ಕೆಲವು ಅಂಶಗಳು,ಸಾಮಾನ್ಯರಿಗೆ ಅರ್ಥ ಆಗುವುವುಗಳನ್ನು ಇಲ್ಲಿ ಉಲ್ಲೇಖಿಸುತ್ತೇನೆ. ಉತ್ತರ ನದಿಗಳ ಹಿಮಾಲಯದ ಹಿಮದಿಂದ ಕೂಡಿದ ನೀರು,ದಕ್ಷಿಣದ ಮಳೆಯಾಧಾರಿತ  ನದಿಗಳ ಜೊತೆ ಬೆರೆತರೆ ಜಲಚರ ಪ್ರಾಣಿಗಳ ಮೇಲೆ ಭಯಂಕರ ಪರಿಣಾಮ ಉಂಟಾಗಿ ಜೈವಿಕ ಸರಪಣಿ ಮೇಲೆ ಪರಿಣಾಮ ಬಿರುತ್ತೆ ಅನ್ನುವ ಅಂಶ ನೋಡಿ. ಇದರಲ್ಲಿ ಯಾವ ತಜ್ಞತೆ ಇಲ್ಲದ ನನಗೆ ಇದು ಯಾಕೋ ಹೆಚ್ಚಿದ ತಜ್ಞತೆಯನ್ನು ಒಳಗೊಂಡಿದೆಯೇನೂ ಅಂತ ಅನುಮಾನ.

    ನಮ್ಮ ಪೂರ್ವಜರು ಉತ್ತರ,ದಕ್ಷಿಣದುದ್ದಕ್ಕೂ ಸಂಚರಿಸಿ ಕಂಡುಕೊಂಡ ಸತ್ಯವನ್ನು ಇಲ್ಲಿ ಹೇಳ್ತೇನೆ ಕೇಳಿ. ನಮ್ಮಲ್ಲಿ ಗಂಗೆ ಪೂಜೆ ಅಂತ ಒಂದು ಪದ್ದತಿ ಇದೆ. ಅದನ್ನು ಮಾಡುವಾಗ ಮಾಡಿಸುವವ ಉತ್ತರ ಭಾರತದ ನದಿಗಳಾದ ಗಂಗೇ ಯಮುನೆ, ದಕ್ಷಿಣ ನದಿಗಳಾದ ಕಾವೇರಿ,ಗೋದಾವರಿಯರ ಜೊತೆ ಸೇರಿಸಿ, ಎಲ್ಲವೂ ಈ ಬಿಂದಿಗೆಯಲ್ಲಿವೆ ಅಂತ ಹೇಳುವ ಮಂತ್ರ ಗಮನಿಸಿದರೆ,ನನಗೆ ಈ ತಜ್ಞರ ಅನಿಸಿಕೆಯಲ್ಲಿ ಹುಳಿ ಕಾಣುತ್ತದೆ. ಕಾಡಿನ ಬೇರು,ಸೊಪ್ಪು,ಕಟ್ಟಿಗೆ ಬಗ್ಗೆ ಸಾವಿರಾರು ಪುಟಗಳ ಜ್ಞಾನವನ್ನು ತಿಳಿಸಿರುವ ನಮ್ಮ ಗ್ರಂಥಗಳು,ಹಾಗೇನಾದ್ರು ಇವರು ಹೇಳಿದ ಹಾಗೆ ನದಿಗಳ ನೀರಿನ ವ್ಯತ್ಯಾಸ ಇದ್ದದ್ದೇ ಆಗಿದ್ದರೆ,ನಮೂದಿಸದೆ ಇರ್ತಿದ್ದರಾ? ಇವರನ್ನು ಓದಿಸಿ,ತಜ್ಞರನ್ನಾಗಿ ಮಾಡಿದ್ದೇ ತಪ್ಪಾಯ್ತೆನೋ ಅನ್ನುವಷ್ಟು ಭಯಂಕರವಾಗಿ ಹೇಳಿಬಿಡ್ತಾರೆ. ಈ ವರದಿ ತಯಾರಿಸುವ ತಜ್ಞರು ಇದ್ದಾರಲ್ಲ ನಮ್ಮ ದೇಶದಲ್ಲಿ ಇವರನ್ನು ಯಾರೂ ಪ್ರಶ್ನಿಸುವ ಹಾಗಿಲ್ಲ! ನೀನು ಖಾಸಗಿಯವನು,ಸರ್ಕಾರದಿಂದ ವರದಿ ನೀಡುವ ಪ್ರಮಾಣಪತ್ರ ನಿನಗಿಲ್ಲ ಎನ್ನುವ ಬಾಲಿಶ ಕಾರಣಗಳು ಇನ್ನೂ ಇವೆ ಇಲ್ಲಿ.

    ಅದಕ್ಕೇ ಏನೋ ಇಂದು ಭಯಂಕರ ಮಳೆ ಬರುತ್ತೆ ಅಂತ ಅವರು ಹೇಳಿದ್ರೆ,ಒಂದು ಹನಿಯೂ ಮಳೆ ಬರಲ್ಲ!ಸ್ವತಂತ್ರ ಭಾರತದ ಮೊದಲ ಡ್ಯಾಮ್ ಆದ ಭಕ್ರಾನಂಗಲ್ ನಿಂದ ಹಿಡಿದು, ಮೊನ್ನೆಯ ಕೊಂಕಣ ರೈಲ್ವೇ ಯೋಜನೆಯ ತನಕ ಈ ಪರಿಸರ ತಜ್ಞರ ನಿರಾಕರಣೆಯೊಂದಿಗೇ ಜಾರಿ ಆಗಿರುವುದು. ಅವರ ಅಭಿಪ್ರಾಯ ಪೂರ್ತಿ ತಪ್ಪು ಅಂತ ಹೇಳಲು ಆಗಲ್ಲ,ಆದರೆ ಸಾಧಕ,ಬಾಧಕಗಳನ್ನು ತುಲನೆ ಮಾಡಿ ವರದಿ ತಯಾರಿಸಬೇಕು. 80 ರ ದಶಕದ ಒಡೆದ ಓಜೋನ್ ಪದರು ಈಗ ಸರಿಯಾಗಿದೆಯಂತೆ! ಅಂದ್ರೆ ಆಗಿಗಿಂತ ಈಗ ಪರಿಸರದ ಮೇಲೆ ಹಾನಿ ಕಡಿಮೆ ಆದ ಹಾಗೆ ಆಯ್ತಲ್ಲ? ಆಗಿದೆಯಾ?

    ರಾಜಕೀಯವಾಗಿ,ಅಥವಾ ಬೇರೆ ಕಾರಣಗಳಿಗೆ ತಜ್ಞರ ವರದಿಗಳು ಬಳಕೆ ಆಗುವತ್ತ ಗಮನ ಹರಿಸಿ, ವಿಷಯದ ಜ್ಞಾನಕ್ಕೆ ಅಗೌರವ ತರುವುದನ್ನು ನಿಲ್ಲಿಸಬೇಕು. ಇದರ ಮೊದಲ ಹೆಜ್ಜೆ ತಜ್ಞರಿಂದಲೇ ಆಗಬೇಕು. ಇಲ್ಲವಾದರೆ,ವಿದೇಶಕ್ಕೆ ಹೋದ ತಜ್ಞರೇ ನಮ್ಮ ದೇಶಕ್ಕೆ ಹೆಚ್ಚು ಉಪಕಾರ ಮಾಡಿದ್ದಾರೆ ಅಂತ ಮುಂದಿನ ಪೀಳಿಗೆ ನಮ್ಮನ್ನು ಹಾಸ್ಯ ಮಾಡಬಹುದು.

    ಮಾನ್ಯತೆ ಪಡೆದ ಕಾನೂನು ತಜ್ಞರ ಅಭಿಪ್ರಾಯಗಳೇ ಸಮಾಜದಲ್ಲಿ ಗೊಂದಲ ಸೃಷ್ಟಿಸುತ್ತಿವೆ. ಇವು ಬೇಗ ಸಮಾಜದ ಕಣ್ಣಿಗೆ ಕಾಣುತ್ತವೆ. ಆದರೆ ಕೆಲವು ತಜ್ಞರ ಅಭಿಪ್ರಾಯಗಳು ಯಾರ ಗಮನಕ್ಕೂ ಬಾರದೆ ಬೀರುವ ಪರಿಣಾಮ ತುಂಬಾ ಇರುತ್ತದೆ. ಅಂತಹವರು ಅವರ ಆತ್ಮಸಾಕ್ಷಿಯನ್ನು ಎದುರಿಗಿಟ್ಟುಕೊಂಡು ಕೆಲಸಮಾಡಿ, ತಮ್ಮ ಉನ್ನತಿಗೆ ಕಾರಣವಾದ ಈ ಅಮಾಯಕ ಸಮಾಜಕ್ಕೆ ಋಣ ತೀರಿಸುವ ಕೆಲಸ ಮಾಡಬೇಕು.

    Photo by Chinta Pavan Kumar on Unsplash

    ಹಾರುತಾ ದೂರ ದೂರ ..ಮೇಲೇರುವ ಬಾರಾ ಬಾರಾ

    ಎನ್.ಶೈಲಜಾ ಹಾಸನ

    ಶಾಂತಿಗ್ರಾಮದ  ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ  ಶೈಲಜಾ ಅವರ ಅನೇಕ ಕಾದಂಬರಿಗಳು ನಾಡಿಲ ಪ್ರಮುಖ ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಸಾರವಾಗಿ ಅಪಾರ ಮೆಚ್ಚುಗೆ ಪಡೆದಿವೆ.ಕಥಾ ಸಂಕಲನ,ಕಾದಂಬರಿ,ಲೇಖನಗಳ ಸಂಕಲನ,ಕವನ ಸಂಕಲನ ,ಪ್ರಬಂಧ ಸಂಕಲನ ಹೀಗೆ ಒಟ್ಟು 20 ಕೃತಿಗಳು ಪುಸ್ತಕ ರೂಪದಲ್ಲಿ ಹೊರಬಂದಿದೆ.ಅನೇಕ ಪ್ರಶಸ್ತಿ ಪುರಸ್ಕಾರಗಳು ಈ ಕೃತಿಗಳಿಗೆ ಲಭಿಸಿದೆ.

    ಚಿಕ್ಕ ವಯಸ್ಸಿನಲ್ಲಿ ವಿಮಾನ ಹಾರುವ ಶಬ್ದ ಕೇಳಿಸಿದಾಕ್ಷಣ ಏನೇ  ಕೆಲಸ ಮಾಡುತ್ತಿದ್ದರೂ ಹೊರಗೆ ಓಡಿ ಬಂದು ಬಿಡುತ್ತಿದ್ದೆವು.ಊಟ ಮಾಡುತ್ತಿರಲಿ ,ಓದುತ್ತಿರಲಿ ,ಬರೆಯುತ್ತಿರಲಿ ಮಲಗಿರಲಿ, ಕೆಲಸ ಮಾಡುತ್ತಿರಲಿ ,ಸ್ನಾನ ಮಾಡುತ್ತಿರಲಿ ,ಕೊನೆಗೆ ಶೌಚ ಗೃಹದಲ್ಲಿ ಇರಲಿ ಅರ್ಧಕ್ಕೆ ನಿಲ್ಲಿಸಿ  ಓಡೋಡಿ ಬಂದು ತಲೆ ಎತ್ತಿ  ಆಕಾಶದಲ್ಲಿ ಚುಕ್ಕೆಯಂತೆ ಕಾಣುತ್ತಿದ್ದ ವಿಮಾನವನ್ನು ಅದು ಮರೆಯಾಗುವ ತನಕ ಪುಳಕದಿಂದ ನೋಡುತ್ತಿದ್ದೆವು. ಅಷ್ಟು ಪುಟಾಣಿ ವಿಮಾನದಲ್ಲಿ ಜನ ಹೇಗೆ ಕೂರುತ್ತಾರೆ ,ಅದನ್ನು ಹೇಗೆ ಹಾರಿಸುತ್ತಾರೆ ಎನುವ ಸಂದೇಹ  ಸದಾ ನನ್ನನ್ನು ಆ ವಯಸ್ಸಿನಲ್ಲಿ ಕಾಡುತ್ತಿದ್ದವು. ಆ ಸಂದೇಹ ಸ್ವಲ್ಪ ದೊಡ್ಡವರಾದ ಮೇಲೆ ನಿವಾರಣೆ ಆಯಿತು.

    ಸಿನಿಮಾಗಳನ್ನು ನೋಡುವಾಗ ವಿಮಾನ ಬಸ್ ಗಿಂತ ದೊಡ್ಡದು .ಆಕಾಶದ ಮೇಲೆ ಮೇಲೆ ಹೋದಾಗ ನಮಗೆ ಚುಕ್ಕೆಯಂತೆ ಕಾಣಿಸುತ್ತದೆ ಅಂತ ಗೊತ್ತಾಯಿತು.  ಆದರೆ  ಹೈಸ್ಕೂಲಿಗೆ ಬರುವ ತನಕ ಈ ವಿಮಾನ ಅದು ಹೇಗೆ ಮೇಲೆ ಹಾರುತ್ತದೆ,ಅದು ಹೇಗೆ ಕೆಳಗೆ ಬೀಳದೆ ಇರುತ್ತದೆ ಅನ್ನುವ  ಸಂದೇಹ ಮಾತ್ರ ನಿವಾರಣೆ ಆಗಿರಲೇ ಇಲ್ಲ. ವಿಮಾನವನ್ನು ದೂರದಿಂದಲೇ ನೋಡಿ ಖುಷಿಪಡುತ್ತಿದ್ದೆ.

    ವಿಮಾನ ಪ್ರಯಾಣ ಮಾಡುವವರು ಜೀವದ ಆಸೆ ಬಿಟ್ಟು ಪ್ರಯಾಣ ಮಾಡಬೇಕು ಅನ್ನುವುದು ಮಾತ್ರ ನನಗೆ ಚೆನ್ನಾಗಿ ಮನದಟ್ಟು ಆಗಿಬಿಟ್ಟಿತ್ತು. ನಾನಂತೂ ಯಾವ ಕಾಲಕ್ಕೂ ಜೀವವನ್ನು ಪಣಕ್ಕಿಡುವ  ವಿಮಾನವನ್ನು ಹತ್ತಲಾರೆ ಅಂತ ಮನದಲ್ಲಿಯೇ ಶಪಥ ಮಾಡಿದ್ದೆ.ಆದರೆ ಅದನ್ನು ಎಲ್ಲರ ಮುಂದೂ ಹೇಳಲಾದೀತೆ. ಹೇಳಿದರೆ ಆಡಿಕೊಂಡು ನಕ್ಕಾರೆಂದು ಯಾರ ಬಳಿಯೂ ಹೇಳಿರಲಿಲ್ಲ.ಆ ಕಾಲದಲ್ಲಿ ಎರಡು ಚಕ್ರದ
     ವಾಹನದಲ್ಲಿಯೇ ಕೂರುವುದು ಕನಸು ಎನಿಸಿಕೊಳ್ಳುತ್ತಿದ್ದಾಗ ವಿಮಾನ ಎರಲಾರೆ ಅಂದರೆ ಕೇಳಿದವರು ಹಾಸ್ಯ ಮಾಡುವುದಿಲ್ಲವೆ. ಹಾಗಾಗಿ ನಾನು ಯಾರಿಗೂ ಹೇಳುವ ಧೈರ್ಯ ಮಾಡಲಿಲ್ಲ.  

    ಕಾಲೇಜಿನಲ್ಲಿ ಓದುವಾಗ ಉತ್ತರ ಭಾರತ ಪ್ರವಾಸಕ್ಕೆ ಹೋಗುವ ಅವಕಾಶ ಸಿಕ್ಕಿತ್ತು. ರಾಜಧಾನಿ ದೆಹಲಿಯಲ್ಲಿ ಎಲ್ಲರಿಗೂ ವಿಮಾನದಲ್ಲಿ ನಗರ ಪ್ರದಕ್ಷಿಣೆ ಮಾಡಿಸುತ್ತೆವೆ ಎಂದು ನಮ್ಮ ಅಧ್ಯಾಪಕರು ಹೇಳಿದಾಗ ಆತಂಕವಾಗಿತ್ತು. ಆಗ ನನಗೆ  ಹೊಸ ಚಿಂತೆ ಶುರುವಾಗಿತ್ತು. ನಾನು ವಿಮಾನ ಏರಲಾರೆ ಅಂತ ಶಪಥ ಮಾಡಿಬಿಟ್ಟಿದ್ದೆನೆ. ಆದರೆ ಎಲ್ಲರೂ ಹೋಗುವಾಗ ನಾನೊಬ್ಬಳೇ ಬರುವುದಿಲ್ಲ ಅಂತ ಹೇಗೆ ಹೇಳುವುದು.ನನ್ನ ಶಪಥದ ಬಗ್ಗೆಯಾಗಲಿ ವಿಮಾನ ಬಗ್ಗೆ ಇರುವ ಭಯವನ್ನಾಗಲಿ ಹೇಳಲಾದೀತೆ. ಪ್ರವಾಸಕ್ಕೆ ಹೋಗುವುದು ಬೇಡ ಅಂತ ಅಂದುಕೊಂಡಿದ್ದೆ. ಆದರೆ ಗೆಳತಿಯರು ಬಿಡಬೇಕಲ್ಲ.ಅವರ ಬಲವಂತಕ್ಕೆ ಹಾಗೂ ಪ್ರವಾಸ ನನಗೆ ತುಂಬಾ ಇಷ್ಟವಾದ್ದರಿಂದ ಅವಕಾಶ ಮಿಸ್ ಮಾಡಿಕೊಳ್ಳುವ ಮನಸ್ಸಿಲ್ಲದೆ ಹೊರಟಿದ್ದೆ.

    ವಿಮಾನ ಹತ್ತುವ ಸಮಯದಲ್ಲಿ ಏನೋ ಕಾರಣ ಹೇಳಿ ತಪ್ಪಿಸಿ ಕೊಂಡರಾಯಿತು ಅಂತ ಅಂದು ಕೊಂಡಿದ್ದೆ. ಆದರೆ ಅದಕ್ಕೆ ಅವಕಾಶವೇ ಸಿಗಲಿಲ್ಲ. ನಮ್ಮ ಪ್ರಾಧ್ಯಾಪಕರು ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿಯರು ಪ್ರವಾಸಕ್ಕೆ ಬರಲೆಂದು  ವಿಮಾನಯಾನ ಮಾಡಿಸುತ್ತೆವೆ ಎಂದು ಒಂದು ಡೋಸ್ ಕೊಟ್ಟದ್ದರು  ಅಂತ ನಂತರ ಗೊತ್ತಾಗಿ ಸಮಾಧಾನದ ಉಸಿರು ಬಿಟ್ಟಿದ್ದೆ.  ಬೇರೆಯವರಿಗೆಲ್ಲ ಈ ಮೋಸ ಗೊತ್ತಾಗಿ ನಿರಾಶರಾಗಿದ್ದರು ಅಧ್ಯಾಪಕರ ಮೇಲೆ ಕೋಪಗೊಂಡರೂ ಏನೂ ಪ್ರಯೋಜನ ಇಲ್ಲ  ಅಂತ  ಸುಮ್ಮನಾಗಿದ್ದರು.ಪ್ರವಾಸ  ಮಾತ್ರ ತುಂಬಾ ಚೆನ್ನಾಗಿತ್ತು. ಆ ಮಜದಲ್ಲಿ ವಿಮಾನ ಯಾನದ ವಿಚಾರವನ್ನು ಮರೆತು ಬಿಟ್ಟು ಪ್ರವಾಸದ ಖುಷಿಯಲ್ಲಿ ಮುಳುಗಿ ಹೋದರು.

    ನಂತರ ಕಾಲೇಜು ಶಿಕ್ಷಣ ಮುಗಿಸಿ ಉದ್ಯೋಗಕ್ಕೆ ಸೇರಿ ಮದುವೆಯೂ ಆಯಿತು.  ನನ್ನಂತೆಯೇ ನನ್ನ ಪತಿಗೂ ಪ್ರವಾಸದ ಬಗ್ಗೆ  ಆಸಕ್ತಿ. ಹಾಗಾಗಿ ಪ್ರತಿ ವರ್ಷ ಪ್ರವಾಸಕ್ಕೆ ಹೋಗುವ ಹವ್ಯಾಸ ಶುರುವಾಯಿತು. ಹಾಗೆ ಪ್ರವಾಸಕ್ಕೆ ಮಂಗಳೂರು ಗೆ ಹೋಗಿದ್ದೆವು.ಪ್ರವಾಸ ಮುಗಿಸಿ ವಾಪಸ್ಸು ಬರುವಾಗ ನಮ್ಮ ಟ್ಯಾಕ್ಸಿ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಾಗ ನನಗೆ ಅಚ್ಚರಿಯಾಯಿತು. ನನ್ನ ಪತಿ ನಿನ್ನನ್ನು ವಿಮಾನದಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತೆನೆ ಅಂದಾಗ ಹೌಹಾರಿ ಬಿದ್ದೆದ್ದೆ .

    ವಿಮಾನ ಪ್ರಯಾಣದ ಸರ್ಫ್ರೈಜ್ ಕೊಡಲಿದ್ದ ನನ್ನ ಪತಿಗೆ ನಾನು ವಿಮಾನ ಹತ್ತುವುದಿಲ್ಲವೆಂದು ಖಡಾಖಂಡಿತವಾಗಿ ಹೇಳಿ ಅವರಿಗೇ ಸರ್ಫ್ರೈಜ್ ಕೊಟ್ಟು ಬಿಟ್ಟೆ. ನಿರಾಸೆಯಿಂದ ಮತ್ತು ಬೇಸರದಿಂದ ವಿಮಾನ ಹಾರುವ ತನಕ ಅಲ್ಲಿದ್ದು ನನ್ನ ಮೇಲೆ ಕೋಪ ಮಾಡಿ ಕೊಂಡು ವಾಪಸ್ ಟ್ಯಾಕ್ಸಿಯಲ್ಲಿ ನನ್ನ ನ್ನು ಕರೆದುಕೊಂಡು ಬಂದಿದ್ದರು.ಆ ಘಟನೆಯಾದ ಮೇಲೇ ಮತ್ತೆ ವಿಮಾನ ಪ್ರಯಾಣದ ಪ್ರಸ್ತಾಪ ಬಂದಿರಲಿಲ್ಲ . ಕೆಲ ವರ್ಷಗಳ ನಂತರ ನನಗೂ ವಿಮಾನ ಪ್ರಯಾಣ ಮಾಡಬೇಕು ಅನ್ನೊ ಸಣ್ಣ ಆಸೆ ಮನದೊಳಗೇ ಮೊಳೆಯುತ್ತಿತ್ತು.ಆದರೆ ಭಯ ಅದನ್ನು ಚಿವುಟಿ ಹಾಕುತ್ತಿತ್ತು.

    ಪ್ರತಿ ವರ್ಷದಂತೆ ಈ ಬಾರಿ ಉತ್ತರ ಭಾರತ ಪ್ರವಾಸ ಹೊರಟಾಗ ಸಮಯ ಕಡಿಮೆ ಆಗುತ್ತದೆ ಆನ್ನೊ ಕಾರಣಕ್ಕೆ ದೆಹಲಿಗೆ ವಿಮಾನದಲ್ಲಿ ಹೋಗಲೇ ಬೇಕಾಯಿತು. ತಪ್ಪಿಸಿ ಕೊಳ್ಳುವ ಅವಕಾಶವನ್ನು ನನಗೆ ಕೊಡದೆ ನನ್ನಪತಿ ಟಿಕೆಟ್ ಬುಕ್ ಮಾಡಿಸಿಯೇ ಬಿಟ್ಟರು. ವಿಧಿ ಇಲ್ಲದೆ  ಧೈರ್ಯ ಮಾಡಿ ಸಿದ್ಧವಾದೆ. ಒಂದು ಕಡೆ ಮೊದಲ ಬಾರಿ ಆಕಾಶದಲ್ಲಿ ಹಾರುವ ರೋಮಾಂಚನ.ಮತ್ತೊಂದು ಕಡೆ ಜೀವ ಭಯ. ಎರಡೂ ಭಾವದಲ್ಲಿ ಬಳಲಿ ಹೋದೆ.  

    ಪ್ರಯಾಣದ ದಿನ ಬಂದೇ ಬಿಟ್ಟಿತು. ಜೀವವನ್ನು ಕೈಲಿ ಹಿಡಿದುಕೊಂಡು  ವಿಮಾನ ನಿಲ್ದಾಣ ತಲುಪಿದೆ. ನನ್ನ ಪತಿ ಅಂತೂ ತುಂಬಾ ಸಡಗರದಿಂದ ಇದ್ದಾರೆ. ನನಗೊ ಎದೆ ಡವ ಡವ ಅನ್ನುತ್ತಿದೆ . ಎಲ್ಲ  ಪ್ರಕ್ರಿಯೆಗಳು ಮುಗಿಸಿ ಹೇಗೊ ವಿಮಾನ ಹತ್ತಿ ಸೀಟಿನ ಮೇಲೆ ಕುಳಿತು ಕೊಂಡೆ.

    ವಿಮಾನ ಹೊರಡುವ ವೇಳೆಯಾಯಿತು.  ಆತಂಕ ಹೆಚ್ಚಾಯಿತು. ಗಗನ ಸಖಿ ಸೀಟ್ ಬೆಲ್ಟ್ ಕಟ್ಟಿಕೊಳ್ಳಲು ಹೇಳಿ ಕೊಟ್ಟಳು.  ಮೊದಲ ಬಾರಿ ವಿಮಾನ ಮೇಲೇರುವಾಗ ಏನೇನೂ ಆಗುತ್ತದೆ ಅಂತ ಕೇಳಿದ್ದೆ.ತಲೆ ಸುತ್ತು ,ವಾಂತಿ ,ಎದೆಬಡಿತ ತೀವ್ರವಾಗುವಿಕೆ ಹೀಗೇ ಏನೇನೋ ನನಗೂ ಆಗುತ್ತದೆ ಅಂತ ಆತಂಕದಿಂದ ಕಾಯುತ್ತಿದ್ದೆ. ವಿಮಾನ ರನ್ ವೇನಲ್ಲಿ ಓಡುತ್ತಾ ನಿಧಾನವಾಗಿ ಮೇಲೇರ ತೊಡಗಿತು. ನಿಲ್ದಾಣದಲ್ಲಿ ಇದ್ದದ್ದೆಲ್ಲ ಚಿಕ್ಕದಾಗಿ ಕಾಣುತ್ತ ಕೊನೆಗೆ ಏನೂ ಕಾಣದಾಯಿತು.

    ಆಶ್ಚರ್ಯ ,ನನಗೆ ಏನೂ ಆಗಲಿಲ್ಲ. ಹೊಟ್ಟೆ ತೊಳಸೂ ಇಲ್ಲ ,ತಲೆ ಸುತ್ತೂ ಇಲ್ಲ ,ಎದೆ ಬಡಿತದ ತೀವ್ರತೆಯೂ ಇಲ್ಲ. ಯಾವ ಅಹಿತಕರ ಅನುಭವವೂ ಆಗಲಿಲ್ಲ. ಕಿಟಕಿಯ ಹೊರಗೆ ಬರಿ ಮೋಡ ಅಷ್ಟೇ ಕಾಣಿಸುತ್ತಿತ್ತು. ವಿಮಾನ ಒಂಚೂರು ಅಲ್ಲಾಡದ ಹಾಗೆ ಹಾರುತ್ತಿದೆ .ಅಥವಾ ಹಾಗೆ ನನಗೆ ಅನಿಸಿತು. ಸುಮಾರು ನಾಲ್ಕು ಗಂಟೆ ಗೋಡನ್ನಿನಲ್ಲಿ ಕುಳಿತಂತಾಗಿ ಯಾವ ರೋಮಾಂಚನವೂ ನನಗಾಗದೆ ವಿಮಾನ ಪ್ರಯಾಣ ನೀರಸವೆನಿಸಿತು. ಯಾವ ತೊಂದರೆಯೂ ಆಗದೆ ಕ್ಷೇಮವಾಗಿ ನನ್ನ ವಿಮಾನ ಪ್ರಯಾಣ ಮುಗಿದಿತ್ತು.

    Photo by Vincent Camacho on Unsplash

    ಅರಿಷಿಣ ಗಣಪ,ಪರಿಸರ ಗಣಪ, ನೀವೇ ಮಾಡಿದ ಗಣಪ

    ಕೋವಿಡ್ ಮಧ್ಯೆಯೇ ಗಣೇಶ ಚತುರ್ಥಿ ಆಗಮಿಸುತ್ತಿದೆ. ಈ ಬಾರಿ ಯಾವ ಹಬ್ಬದಲ್ಲೂ ಅಂಥ ಸಂಭ್ರಮ ಕಾಣುತ್ತಿಲ್ಲ. ಯುಗಾದಿಯಿಂದ ಆರಂಭವಾದ ಕೋವಿಡ್ ಗದ್ದಲ ಗಣೇಶ ಹಬ್ಬ ಬಂದರೂ ಮುಗಿಯುವಂತೆ ಕಾಣುತ್ತಿಲ್ಲ. ಗಣೇಶ ಹಬ್ಬವೆಂದರೆ ಅದೊಂದು ಸಾರ್ವಜನಿಕ ಉತ್ಸವ.  ಬೀದಿ ಬೀದಿಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸಿ ಸಂಭ್ರಮಿಸುವ ಪರಂಪರೆ ಭಾರತೀಯರದ್ದು. ಈ ಬಾರಿ ಸರಕಾರ ಅದಕ್ಕೆ ಕೆಲವು ನಿಯಮಗಳನ್ನು ರೂಪಿಸಿ ಅನುಮತಿ ನೀಡಿದೆ. ಕೋವಿಡ್ ಕಾರಣದಿಂದ ಹೆಚ್ಚು ಜನ ಸೇರಬಾರದೆಂತಲೂ. ಮೂರ್ತಿಯನ್ನು ತರುವಾಗ ಮತ್ತು ವಿಸರ್ಜಿಸುವಾಗ ಮೆರವಣಿಗೆ ಬೇಡ ಎಂತಲೂ ಹೇಳಿದೆ. ಸಾರ್ವಜನಿಕರು ತಮ್ಮ ಮನೆಯಲ್ಲಿ ಪ್ರತಿಷ್ಟಾಪಿಸುವ ಗಣೇಶ ಮೂರ್ತಿಗಳನ್ನು ಮನೆ ಮನೆಗಳಲ್ಲೇ ವಿಸರ್ಜಿಸುವಂತೆಯೂ ಸಲಹೆ ನೀಡಿದೆ.

    ಅರಿಷಿಣ ಗಣಪತಿ

    ಪರಿಸರ ನಿಯಂತ್ರಣ ಮಂಡಳಿ ಈ ಬಾರಿ ಅರಿಷಿಣ ಗಣಪತಿಯ ಕಾನ್ಸೆಪ್ಟನ್ನು ಹರಿಯ ಬಿಟ್ಟಿದೆ. ಆದರೆ ಎಲ್ಲರಿಗೂ ಗಣೇಶನ ಆಕಾರ ಮಾಡಲು ಬರಬೇಕಲ್ಲ. ಅರಿಶಿಣ ಜೊತೆ ಒಂದಿಷ್ಟು ಮೈದಾ ಮತ್ತು ಸಕ್ಕರೆ ಸೇರಿಸಿದರೆ  ಮೂರ್ತಿ ಮಾಡಲು ಸುಲಭವಾಗುತ್ತದೆ. ಪರಿಸರ ನಿಯಂತ್ರಣ ಮಂಡಳಿಯ ಈ  ವಿಡಿಯೋ ಗಮನಿಸಿ.

    ಈ ಬಾರಿ ಕೋವಿಡ್ ಕಾರಣದಿಂದ ಪೇಟೆಯಿಂದ ಗಣೇಶನ್ನು ಮನೆಗೆ ತರಲು ಹಲವರು ಹಿಂಜರಿಯುತ್ತಿದ್ದಾರೆ. ಕೆಲವವರಂತೂ ಒಂದು ವಾರ ಮೊದಲೇ ಗಣೇಶನನ್ನು ಮನೆಗೆ ತಂದು ಬಿಟ್ಟಿದ್ದಾರೆ. ಗಣೇಶ ಹಬ್ಬಕ್ಕೆ ತಿಂಗಳ ಮುಂಚೆಯೇ ಬೀದಿ ಬದಿಯಲ್ಲಿ ಕಾಣುತ್ತಿದ್ದ ಗಣೇಶ ಮೂರ್ತಿಗಳೂ ಈ ಬಾರಿ ಕಾಣುತ್ತಿಲ್ಲ. ಅನೇಕರು ಆನ್ ಲೈನ್ ನಲ್ಲಿ ಸಿಗುವ  ಡೂ ಇಟ್ ಯುವರ್ ಸೆಲ್ಫ್ ಕಿಟ್ ಗಳನ್ನು ಮನೆಗೆ ತರಿಸಿಕೊಂಡು ಅದರಿಂದಲೇ ಗಣೇಶನ್ನು ತಯಾರಿಸಿಕೊಳ್ಳುತ್ತಿದ್ದಾರೆ.

    ಮನೆ ಮನೆ ಗಣೇಶಕ್ಕೆ ಬೇಡಿಕೆ

    ಶಿವಕುಮಾರ ಹೊಸಮನಿ

    ಕೋವಿಡ್ ಕಾರಣದಿಂದ ಈ ಬಾರಿ ಸಾರ್ವಜನಿಕ ಗಣೇಶೋತ್ಸವಗಳ ಸಂಖ್ಯೆ ಕಡಿಮೆಯಾಗಿರುವುದು ಹಾಗೂ ಹೆಚ್ಚು ಜನ ಸೇರುವುದನ್ನು ನಿರ್ಬಂಧಿಸಿರುವುದರಿಂದ ಮನೆಯಲ್ಲಿ ಗಣೇಶನ್ನು ಇಟ್ಟು ಪೂಜಿಸುವವರ ಸಂಖ್ಯೆ ಹೆಚ್ಚಾಗಿದೆ  ಎಂದು ಸಮರ್ಪಣಾ ಸಂಸ್ಥೆಯ ಶಿವಕುಮಾರ ಹೊಸಮನಿ ಅಭಿಪ್ರಾಯ ಪಡುತ್ತಾರೆ.

    ಕುಂಬಾರಿಕೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಅವರು ಅನೇಕ ವರ್ಷಗಳಿಂದ ಕುಂಬಾರರರನ್ನು  ಬೆಂಗಳೂರಿಗೆ ಕರೆಸಿ ಅವರಿಂದ  ಪರಿಸರ ಗಣೇಶ ಮೂರ್ತಿಗಳನ್ನು ಮಾಡಿಸಿ ಮಾರಾಟ ಮಾಡುವ ವ್ಯವಸ್ಥೆ ಮಾಡುತ್ತಿದ್ದಾರೆ.

    ಸರಕಾರ ಈ ಬಾರಿ ಅರಿಶಿಣ ಗಣಪನನ್ನು ಮನೆಯಲ್ಲೇ ಮಾಡಿ ಪೂಜಿಸಿ ಎನ್ನುತ್ತಿದ್ದಾರೆ. ಅದು ಕೇಳಲು ಚೆನ್ನಾಗಿದೆ. ಆದರೆ ಅನೇಕರು  ಅರಿಶಿಣದಿಂದ ಮೂರ್ತಿ ಮಾಡಲು ಹೋಗಿ ಅದು ರೂಪ ಪಡೆಯದಿದ್ದಾಗ ನಿರಾಶರಾಗಿದ್ದಾರೆ. ಹೀಗಾಗಿ ನಮ್ಮ ಬಳಿ ಬರುತ್ತಿದ್ದಾರೆ. ನಾವು ಮಣ್ಣನಿಂದ ಮಾಡಿದ ಗಣೇಶ ಮೂರ್ತಿಗೆ ಅರಿಷಿಣ ಲೇಪನ ಮಾಡುತ್ತಿದ್ದೇವೆ ಇದು ಕೂಡ ಹಲವರಿಗೆ ಇಷ್ಟವಾಗಿದೆ ಎನ್ನುತ್ತಾರೆ ಅವರು . ಅದೇ ರೀತಿ ಸ್ಚೀಲ್ ಬಟ್ಟಲಿನಲ್ಲಿ ಗಣೇಶನನ್ನು ಮಾಡಿ ಪೂಜಿಸಿ ಅಲ್ಲಿಯೇ ವಿಸರ್ಜಿಸುವ ಕಳೆದ ವರ್ಷದ ಪದ್ಧತಿ ಈ ವರುಷವೂ ಜನಪ್ರಿಯವಾಗಿದೆ ಎನ್ನುತ್ತಾರೆ ಅವರು. ವಿಸರ್ಜಿಸಿದ ನಂತರ ಅದರಲ್ಲೇ ಸಸಿ ಬೆಳೆಯುತ್ತದೆ

    ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮನೆಯಲ್ಲೇ ಇಟ್ಟು ಪೂಜಿಸಲು ಬಯಸುವವರ ಸಂಖ್ಯೆ ಹೆಚ್ಚಾಗಿದೆ .ಜೊತೆಗೆ ಕೆಲವು ಆಪರ್ಟ್ಮೆಂಟ್ ಗಳಿಗೆ ಹೋಗಿ ಗಣೇಶ ಮೂರ್ತಿಯನ್ನ ತಯಾರಿಸಿಕೊಡುವ ಕೆಲಸವನ್ನು ಅವರ ತಂಡ ಮಾಡಿದೆ.

    ಗಣಪ ಹೇಗಾದರು ಇರಲಿ ಭಕ್ತಿ ಮುಖ್ಯ

    ಆನಂದ ತೀರ್ಥಾಚಾರ್.

    ಈ ಬಾರಿ ದಾವಣಗೆರೆಯಲ್ಲಿ ದೊಡ್ಡ  ಮೂರ್ತಿಗಳ ಸಂಖ್ಯೆ ಕಡಿಮೆ ಇದೆ .ಆದರೆ ಮನೆ ಮನೆಗಳಲ್ಲಿ ಗಣೇಶ ನ್ನು ಪೂಜಿಸುವ ಪದ್ಧತಿ ಅಬಾಧಿತವಾಗಿ ಮುಂದುವಿರಿಯಲಿದೆ ಎನ್ನುತ್ತಾರೆ ಖ್ಯಾತ ಜ್ಯೋತಿಷಿ ಸಿ.ಕೆ ಆನಂದ ತೀರ್ಥಾಚಾರ್.

    ಅರಿಷಿಣದಲ್ಲಿ ಮನೆಯಲ್ಲೇ ಮಾಡುವ ಗಣಪತಿ ರೂಪ ಪಡೆಯುವುದು ಕಷ್ಟ. ಅದಕ್ಕೆ ಗಣಪನನ್ನು ಮಾಡುವ ಕಲೆ ಗೊತ್ತಿರಬೇಕು.  ಗೋಮಯಕ್ಕೆ ಗರಿಕೆಯನ್ನು ಸೇರಿಸಿ ಗಣಪನೆಂದು ಪೂಜಿಸುವ ಪದ್ಧತಿ ನಮ್ಮಲ್ಲಿಇದೆ. ‌ಇದನ್ನು ಪೂಗಿ ಗಣಪ ಎಂದು ಕರೆಯುತ್ತಾರೆ . ಇನ್ನೂ ಕೆಲವು ಶುಭ ಕಾರ್ಯಗಳಲ್ಲಿ  ಅಡಿಕೆಯನ್ನೇ ಗಣಪನೆಂದು ಭಾವಿಸುವ ಪದ್ಧತಿ ಇದೆ . ಹೀಗಾಗಿ ಅನಿವಾರ್ಯ  ಸಂದರ್ಭದಲ್ಲಿ ನಿಶ್ಚಿತ ಆಕಾರ ಪಡೆಯದಿದ್ದರೂ ಭಕ್ತಿಯಿಂದ ಪೂಜಿಸಬಹುದು ಎನ್ನುತ್ತಾರೆ ಅವರು.

    ಈ ಬಾರಿಯದು ವಿಶೇಷ ಸಂದರ್ಭ. ಸರಕಾರ ರೂಪಿಸಿದ ಸುರಕ್ಷಿತ ನಿಯಮಗಳನ್ನು ಪಾಲಿಸುವುದರ ಜೊತೆಗೆ  ಹಬ್ಬವನ್ನು ಸಂಭ್ರಮದಿಂದ ಆಚರಿಸೋಣ. ಕೋವಿಡ್ ಬೇಗ ದೂರವಾಗಿ ಎಂದಿನಂತೆ ಎಲ್ಲವೂ ಸಹಜ ಸ್ಥಿತಿಗೆ ಬಹು ಬೇಗ ಮರಳಲಿ ಎಂದು ಆಶಿಸೋಣ.

    ಸೂಳೆಕೆರೆ ವಿದ್ಯುತ್ ಯೋಜನೆ ಪ್ರಸ್ತಾವಕ್ಕೆ ಪರಿಸರವಾದಿಗಳ ವಿರೋಧ

    ಸೂಳೆಕೆರೆ ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯ ಚನ್ನಗಿರಿನ ತಾಲ್ಲೂಕಿನ ಭೂಪಟದ ಕೇಂದ್ರ ಭಾಗದಲ್ಲಿರುವ ಜಲರಾಶಿಯ ಪ್ರಸಿದ್ಧ ತಾಣ. ಏಷ್ಯಾಖಂಡದಲ್ಲಿಯೇ ಎರಡನೇ ದೊಡ್ಡ ಕೆರೆಯ ಖ್ಯಾತಿ ಪಡೆದ ಸೂಳೆಕೆರೆ ವಿಶಿಷ್ಟ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಗಿರಿ, ಶಿಖರಗಳಿಂದ ಆವೃತ ಸದಾ ಹಸಿರು ಹೊದ್ದ ಪ್ರವಾಸಿಗರ ಅಚ್ಚುಮೆಚ್ಚಿನ ಸ್ಪಾಟ್. ಅಪರೂಪದ ವನರಾಶಿ, ಪ್ರಾಣಿ ಪಕ್ಷಿಗಳ ಮೌನ ಕಣಿವೆ. ಶಾಂತವ್ವೆ ಕಟ್ಟಿಸಿದಳೆಂದು ಹೇಳಲಾಗುವ ಸುಮಾರು 6 ಸಾವಿರ ವಿಸ್ತೀರ್ಣ ಹೊಂದಿದ ತಿಳಿನೀರಿನ ವಿಹಂಗಮ ದೃಶ್ಯ ಕಣ್ಣಿನ ದೃಷ್ಟಿ ಹಾಯುವವರೆಗೆ ಮುದನೀಡುತ್ತದೆ.

    ಎರಡು ಗುಡ್ಡಗಳ ನಡುವೆ ಏರಿ ನಿರ್ಮಿಸುವ ಮೂಲಕ ಸರಳ ತಂತ್ರಜ್ಞಾನದಿಂದ ನೀರು ನಿಲ್ಲಿಸುವ ಮೂಲಕ ಅಪಾರ ಪ್ರಮಾಣದ ನೀರು ಹಿಡಿದಡಲ್ಪಟ್ಟಿದೆ. ನೈಸರ್ಗಿಕ ಜಲಮೂಲ ಹರಿದ್ರಾವತಿ ಹಳ್ಳದೊಂದಿಗೆ ಇತರೆ ಹಳ್ಳಗಳು. ಭ್ರದ್ರಾ ನಾಲೆಯ ನೀರು ಕೆರೆಯಲ್ಲಿ ಸದಾ ನೀರು ತುಂಬಿರಲು ತನ್ನದೇ ಕೊಡುಗೆ ನೀಡುತ್ತಿದೆ. ನೀರಾವರಿ ಸೌಲಭ್ಯಕ್ಕಿಂತ ಮಧ್ಯ ಕರ್ನಾಟಕದ ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ನಗರ, ಪಟ್ಟಣ ಹಾಗೂ ನೂರಾರು ಹಳ್ಳಿಗಳಿಗೆ ಕುಡಿಯುವ ನೀರಿನ ಆಸರೆ.

    ನೈಸರ್ಗಿಕ ತಾಣಗಳು ಯಥಾಸ್ಥಿತಿ ಬಿಡದೇ ವಾಣಿಜ್ಯೋದ್ಯಮಕ್ಕೆ ಪರಿವರ್ತಿಸಿ ಲಾಭಗಳಿಸುವ ಕಾರ್ಪೋರೇಟ್ ವ್ಯವಸ್ಥೆಯ ಕಪಿಮುಷ್ಟಿಯಲ್ಲಿ ಸಿಲುಕಿದ ಪರಿಣಾಮ ಮೂಲ ಸ್ವರೂಪ ಕಳೆದುಕೊಂಡಿವೆ. ಕಾಡುನಾಶ, ಗುಡ್ಡ ನೆಲಸಮ ಮಾಡಿ ಉದ್ಯಮಗಳತ್ತ ವಾಲುವಿಕೆ ದುರಂತಗಳಿಗೆ ದಾರಿ ಮಾಡಿದೆ. ಬೃಹತ್ ಯಂತ್ರಗಳ ಸದ್ದಿಗೆ ಪ್ರಾಣಿ ಪಕ್ಷಿಗಳು ಪಲಾಯನ. ನೈಸರ್ಗಿಕ ಬೀಜ ಪ್ರಸರಣವಿಲ್ಲದೇ ಕಾಡು ನಾಶ. ಅವೈಜ್ಞಾನಿಕ ಯಂತ್ರಾಧಾರಿತ ಉದ್ಯಮಗಳ ಆಕ್ರಮಣದಿಂದ ಪರಿಸರ ಸಮತೋಲನ ಕಳೆದುಕೊಂಡಿದೆ.

    ಇಂದು ಮಳೆಗಾಲ ಬಂತೆಂದರೆ ಆತಂಕ. ಪ್ರವಾಹ, ಗುಡ್ಡ ಕುಸಿತ. ಭೂ ಸವಕಳಿ, ನದಿಯಲ್ಲಿ ಹೂಳು. ಇವೆಲ್ಲಾ ಅಸಮತೋಲನದ ಪರಿಣಾಮವೇ. ತಕ್ಷಣದ ಲಾಭಕ್ಕಾಗಿ ಲಕ್ಷಾಂತರ ವರ್ಷದಿಂದ ನೆಲೆ ಕಂಡುಕೊಂಡಿದ್ದ ಮಳೆಕಾಡು ಕೆಲವೇ ಗಂಟೆಗಳಲ್ಲಿ ನೆಲಸಮ ಮಾಡುವ ಹುನ್ನಾರ ನಡೆದಿದೆ. ಹಿಂದೆಯೂ ಇದಕ್ಕಿಂತ ಭರ್ಜರಿ ಮಳೆ ಸುರಿಯುತ್ತಿತ್ತು. ಈಗಿನಂತಹ ಅನಾಹುತಗಳು ಇರಲಿಲ್ಲ. ಕಳೆದ ಬಾರಿ ಕೊಡಗಿನಲ್ಲಾದ ಕುಸಿತ, ಈ ಬಾರಿ ಭಾಗಮಂಡಲದಲ್ಲಿ ಅರ್ಚಕರ ಮನೆ ಗುಡ್ಡ ಕುಸಿತ ಇವುಗಳ ಪ್ರತಿಫಲಗಳೇ. ಕಾಡಿನಲ್ಲಿ ಹೆದ್ದಾರಿ ನಿರ್ಮಾಣ, ವಿದ್ಯುತ್ ಮಾರ್ಗಗಳಿಗೆ ಮರಗಳ ಮಾರಣ ಹೋಮ ನಡೆಯುತ್ತಿದೆ. ಕೊಳವೆ ಬಾವಿಗಳು, ಜೆಸಿಬಿ ಯಂತ್ರದಿಂದ ಗುಡ್ಡದ ಬುಡ ಸಮತಟ್ಟು ಮಾಡುವ ಪ್ರಕ್ರಿಯೆಗಳಿಂದ ಅವಘಡಗಳು ಸಂಭವಿಸುತ್ತಿವೆ. ನೂರಾರು ವರ್ಷ ಬದುಕು ಕಟ್ಟಿಕೊಂಡ ಪರಂಪರಾಗತ ಕುಟುಂಬಗಳ ಹೇಳ ಹೆಸರಿಲ್ಲದಂತೆ ಮಣ್ಣು ಪಾಲಾಗುತ್ತಿವೆ.

    ಜೋಗದಲ್ಲಿಯೂ ದಟ್ಟಡವಿಯಲ್ಲಿ ನೀರೆತ್ತುವ ಮೂಲಕ ವಿದ್ಯುತ್ ಉತ್ಪಾದನೆ ಯೋಜನೆಗೆ ಪರೀಕ್ಷೆ ನಡೆಸಲು ಪರಿಸರ ಇಲಾಖೆ ಅನುಮತಿ ನೀಡಿತ್ತು. ತೀವ್ರ ವಿರೋಧದ ನಡುವೆಯೂ ಯಂತ್ರಗಳ ಸದ್ದು ನಡೆಯಿತು. ರಾಜಕಾರಣಿಗಳೂ ಕೂಡ ಕಾರ್ಪೋರೇಟ್ ವ್ಯವಸ್ಥೆಯ ಬಂಡವಾಳಶಾಹಿಗಳ ಹಿತಾಸಕ್ತಿಗೆ ಬೆನ್ನೆಲುಬಾಗಿ ನಿಲ್ಲುವುದು ದೇಶದ ಮಳೆಕಾಡು ಪ್ರದೇಶ ನಿತ್ಯ ಕರಗುತ್ತಿದೆ. ಪ್ರಪಂಚದಲ್ಲಿಯೇ ತೇವಾಂಶಭರಿತ ಭಾರತ ದೇಶದಲ್ಲಿ ಕಾಡಿನ ಪ್ರಮಾಣ ಕ್ಷೀಣಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ದೇಶದ ಪರಿಸರ ಸಮತೋಲನಕ್ಕೆ ಶೇ.33 ಮಳೆಕಾಡು ಇರುವುದು ಅಗತ್ಯ. ಕಾಡು ಕಡಿದು ಮರಬೆಳೆಸುವುದು ಕಣ್ಣೆರೊಸುವ ತಂತ್ರ. ವಾಸ್ತವ ನೈಸರ್ಗಿಕವಾಗಿ ಬೆಳೆಯುವ ವೈವಿಧ್ಯಮಯ ಜಾತಿಯ ಗಿಡಮರದ ದಟ್ಟಕಾಡು ಮಳೆ ತರಿಸುವುದು. ಈ ಎಲ್ಲಾ ಅಂಶಗಳನ್ನು ಒತ್ತಿ ಹೇಳುವ ಉದ್ದೇಶ ಸೂಳೆಕೆರೆಯೂ ಹಾಗಾಗದಿರಲಿ ಎಂಬ ಸದಾಶಯ.

    ಸೂಳೆಕೆರೆಯಲ್ಲಿ ವಿದ್ಯುತ್ ಉತ್ಪಾದನೆ ಮಾಡಲು ಖಾಸಗಿ ಕಂಪನಿಯೊಂದು ನೀಡಿದ ಪ್ರಸ್ತಾವವನನ್ನು ಪರಿಶೀಲಿಸಲು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಅನುಮೋದನಾ ಸಮಿತಿ ಒಪ್ಪಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಪರಿಸರ ಕಾಳಜಿಯ ಸಾರ್ವಜನಿಕರಲ್ಲಿ ತಲ್ಲಣ ಉಂಟಾಗಿದೆ. ವಿದ್ಯುತ್ ಉತ್ಪಾದನೆ ಘಟಕ ಕಾರ್ಯಾರಂಭ ಮಾಡಿದಲ್ಲಿ ಸೈಲೆಂಟ್ ವ್ಯಾಲಿಯೆಂದೇ ಗುರುತಿಸಿಕೊಂಡ ಸೂಳೆಕೆರೆ ಗಿಜಿಗುಡುವ ವಾಣಿಜ್ಯ ಪ್ರದೇಶವಾಗಿ ಪರಿವರ್ತಿತಗೊಳ್ಳುವುದು. ಇದರಿಂದ ಇಲ್ಲಿನ ಪರಿಸರಕ್ಕೆ ಹಾನಿ ಖಂಡಿತ. ಈ ಹಿನ್ನೆಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.

    ಏನಿದು ವಿದ್ಯುತ್ ಉತ್ಪಾದನೆ:ಬೆಂಗಳೂರು ಮೂಲದ ಖಾಸಗಿ ಕಂಪನಿಯೊಂದು ಸೂಳೆಕೆರೆಯಲ್ಲಿ ವಿದ್ಯುತ್ ಉತ್ಪಾದನೆ ಮಾಡಲು ಪ್ರಸ್ತಾವ ಸಲ್ಲಿಸಿದೆ. ಪರ್ವ ಜನರೇಷನ್ ಪಂಪ್ ಸ್ಟೊರೇಜ್ ಪ್ರಾಜೆಕ್ಟ್ ಹೆಸರಿನಲ್ಲಿ ರೂ.1347 ಕೋಟಿ ವೆಚ್ಚದಲ್ಲಿ ಯೋಜನೆ ಜಾರಿಗೆ ಪ್ರಸ್ತಾವನೆಯಲ್ಲಿದೆ. ಚನ್ನಗಿರಿ ತಾಲ್ಲೂಕಿನ ಸೋಮಶೆಟ್ಟಿ ಹಳ್ಳಿ ಹಾಗೂ ಅರಿಶಿನಘಟ್ಟ ಗ್ರಾಮಗಳಲ್ಲಿ ಯೋಜನೆ ಅನುಷ್ಟಾನಕ್ಕೆ ಆಯ್ಕೆಮಾಡಿಕೊಳ್ಳಲಾಗಿದೆ. ಸೂಳೆಕೆರೆಯಿಂದ 0.279 ಟಿಎಂಸಿ ನೀರನ್ನು ಎತ್ತರದ ಗುಡ್ಡಕ್ಕೆ ಪಂಪ್ ಮಾಡಲಾಗುವುದು. ಅಲ್ಲಿಂದ ನೀರನ್ನು ಲಿಂಗನಮಕ್ಕಿ ಮಾದರಿಯಲ್ಲಿ ದುಮ್ಮುಕ್ಕಿಸಿ ವಿದ್ಯುತ್ ತಯಾರು ಮಾಡಲು ಪ್ರಸ್ತಾವನೆಯಲ್ಲಿ ಮಂಡಿಸಲಾಗಿದೆ. ಗರಿಷ್ಟ 25 ಮೆಗಾವ್ಯಾಟ್ ವಿದ್ಯುತ್ ತಯಾರಿಕೆ ಗುರಿ ಸೂಚಿಸಲಾಗಿದೆ.

    ಈ ಯೋಜನೆಗೆ 201 ಎಕರೆ ಭೂಮಿ ಅಗತ್ಯವಿದೆ. ಅರಣ್ಯ ಇಲಾಖೆ 137 ಎಕರೆ, ಹಾಗೂ 67 ಎಕರೆ ಖಾಸಗಿ ಜಮೀನು ನೀಡುವಂತೆ ಕಂಪನಿ ಪ್ರಸ್ತಾವನೆಯಲ್ಲಿ ನಮೂದಿಸಿದೆ. ಈ ಪ್ರಸ್ತಾವಣೆ ಜಿಲ್ಲಾಡಳಿತಕ್ಕೆ ರವಾನಿಸಲಾಗಿದೆ. ಸ್ಥಳ ಪರಿಶೀಲನೆ ನಡೆಸಲು ಅನುಮೋದನಾ ಸಮಿತಿ ತಿಳಿಸಿದೆ.

    ಯೋಜನೆಗೆ ವಿರೋಧ:ಚನ್ನಗಿರಿ ಕ್ಷೇತ್ರದ ಶಾಸಕ ಹಾಗೂ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಮಾಡಾಳ್ ವಿರೂಪಾಕ್ಷಪ್ಪ ಯೋಜನೆಗೆ ವಿರೋಧ ವ್ಯಕ್ತಪಡಿಸಿದರು. ನೀರಾವರಿ ಪ್ರದೇಶ, ಕುಡಿಯುವ ನೀರು ಹಾಗೂ ಮೀನುಗಾರರ ಜೀವನದ ಮೂಲ ಸೂಳೆಕೆರೆ. ಯೋಜನೆಗೆ ಅಸ್ತು ನೀಡಿದರೆ ದೊಡ್ಡಮಟ್ಟದಲ್ಲಿ ಪರಿಸರ ಹಾನಿಗೆ ದಾರಿ ಮಾಡಿಕೊಡಲಿದೆ. ಸೂಳೆಕೆರೆ ಗುಡ್ಡದಲ್ಲಿ ಪ್ಲಾಟಿನಂ ಹಾಗೂ ಯುರೇನಿಯಂ ನಿಕ್ಷೇಪ ಇರುವುದರಿಂದ ದುರುದ್ದೇಶದಿಂದ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೈಗಾರಿಕಾ ಸಚಿವರಿಗೆ ಹಾಗೂ ಜಲ ಸಂಪನ್ಮೂಲ ಸಚಿವರಿಗೆ ಯೋಜನೆಗೆ ಅನುಮತಿ ನೀಡಬಾರದೆಂದು ಮನವಿ ಮಾಡಿದ್ದೇನೆ. ಅದನ್ನು ಮೀರಿ ಅನುಮತಿ ನೀಡಿದಲ್ಲಿ ದೊಡ್ಡ ಮಟ್ಟದ ಹೋರಾಟಕ್ಕೆ ಸಿದ್ಧ ಎಂದು ಎಚ್ಚರಿಕೆ ನೀಡಿದ್ದಾರೆ.

    ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮತ್ತು ಶಾಸಕ ಮಾಡಾಳು ವಿರೂಪಾಕ್ಷಪ್ಪ

    ಈ ಹಿನ್ನೆಲೆಯಲ್ಲಿ ಈಚೆಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅರಿಶಿನಘಟ್ಟದ ಬಳಿ ಸ್ಥಳ ಪರಿಶೀಲನೆ ನಡೆಸಿದರು. ಅವರ ಅಭಿಪ್ರಾಯದಲ್ಲಿ ದೇವರು ಕೊಟ್ಟ ಸುಂದ ಕೆರೆ ಸೂಳೆಕೆರೆ. ಇದನ್ನು ನಂಬಿ 4 ರಿಂದ 5 ಲಕ್ಷ ಜನರು ಜೀವನ ನಡೆಯುತ್ತಿದೆ. ಯೋಜನೆಗೆ ಅನುಮತಿ ನೀಡಿದರೆ ತೀವ್ರ ತೊಂದರೆ ಅನುಭವಿಸುವರು. ಪರಿಸರ ಹಾಗೂ ಅರಣ್ಯ ಇಲಾಖೆಗಳಿಂದ ಗುಡ್ಡಗಳ ಮಾಹಿತಿ ಪಡೆದು ನಾಲ್ಕೈದು ದಿನಗಳಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ದಾವಣಗೆರೆ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿ ಇರುವವರೆಗೂ ಅನುಮತಿ ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು. ಇದರಿಂದ ಸುತ್ತಮುತ್ತಲಿನಗ ಗ್ರಾಮಸ್ಥರಲ್ಲಿ ಭರವಸೆ ಮೂಡಿತು.

    ಖಡ್ಗ ಸಂಘದ ಹೋರಾಟ: ಕಳೆದು ಮೂರ್ನಾಲ್ಕು ವರ್ಷದಿಂದ ಸೂಳೆಕೆರೆ ರಕ್ಷಣೆಗೆ ತನು,ಮನ ಧನದಿಂದ ಹೋರಾಟ ನಡೆಸುತ್ತಿರುವ ಖಡ್ಗ ಸಂಘ ಯೋಜನೆ ಪ್ರಸ್ತಾವನೆಗೆ ತೀವ್ರ ಹೋರಾಟ ನಡೆಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸಿದೆ.

    ಖಡ್ಗ ಸಂಘದ ರಾಜ್ಯಾಧ್ಯಕ್ಷ ಬಿ.ಆರ್.ರಘು

    ಇದೊಂದು ಅವೈಜ್ಞಾನಿಕ ಯೋಜನೆ. ನೀರನ್ನು ಗುಡ್ಡದ ಮೇಲಕ್ಕೆ ಎತ್ತಲು ಎಷ್ಟು ವಿದ್ಯುತ್ ಬೇಕು. ಅಲ್ಲಿಂದ ನೀರು ದುಮ್ಮುಕ್ಕಿಸಿ ಎಷ್ಟು ವಿದ್ಯುತ್ ಉತ್ಪಾದನೆ ಸಾಧ್ಯ. ಇದು ಲಾಭಕರ ಅಲ್ಲವೇ ಅಲ್ಲ. ಪರಿಸರಕ್ಕೆ ದೊಡ್ಡ ಹಾನಿ ಸಂಭವಿಸಲಿದೆ. ಇಲ್ಲಿನ ರೈತರ, ಜನರ ಹಾಗೂ ಮೀನುಗಾರರ ಜೀವನದ ಮೇಲೆ ದುಷ್ಪರಿಣಾಮ ಬೀರಲಿದೆ. ಯೋಜನೆ ಅನುಷ್ಟಾನಗೊಳ್ಳದಂತೆ ತಡೆಯಲು ಯಾವುದೇ ಹೋರಾಟಕ್ಕೆ ಸಿದ್ದ ಎಂದು ಖಡ್ಗ ಸಂಘದ ರಾಜ್ಯಾಧ್ಯಕ್ಷ ಬಿ.ಆರ್.ರಘು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದರು.

    ಡೇ ಟ್ರೇಡಿಂಗ್‌ ಸುರಕ್ಷಿತವಾಗಿ ನಡೆಸುವುದು ಹೇಗೆ?


    ಷೇರುಪೇಟೆಯ ಹೂಡಿಕೆಯ ಮೂಲ ಉದ್ದೇಶ ಹೂಡಿಕೆ ಮಾಡಿದ ಕಂಪನಿಗಳು ಲಾಭಗಳಿಸಿ ಹಂಚುವ ಕಾರ್ಪೊರೇಟ್‌ ಫಲಗಳನ್ನು ಪಡೆಯುವುದಾಗಿತ್ತು.  ಆದರೆ ಬದಲಾದ ವಿಶ್ಲೇಷಣೆಗಳ ವಿಧದ ಪ್ರಭಾವ, ಕಾಲಾನುಕಾಲಕ್ಕೆ ಹೊರಬರುವ ಕಂಪನಿಗಳ ಆಂತರಿಕ ಮತ್ತು ಬಾಹ್ಯ ಬೆಳವಣಿಗೆಗಳ ಸುದ್ಧಿ ಸಮಾಚಾರಗಳ ಕಾರಣ ಕಾರ್ಪೊರೇಟ್‌ ಫಲಗಳಿಗಿಂತ ಷೇರಿನ ಬೆಲೆಗಳ ವೃದ್ಧಿಯತ್ತ ಗಮನಹರಿಸುವಂತಾಗಿದೆ.  ಈ ಬದಲಾವಣೆಯು ಕಂಪನಿಗಳ ಬಗ್ಗೆ ಇರಬಹುದಾದ  Loylty ಯನ್ನು ಹೊರಹಾಕಿ, ಅದರ ಬದಲು ದೊರೆಯಬಹುದಾದ  Royalty ಬಗ್ಗೆ ಚಿಂತಿಸುವಂತೆ ಮಾಡಿದೆ.

    ಷೇರುಪೇಟೆ  ವಿವಿಧ ಸೂಚ್ಯಂಕಗಳು ಪ್ರದರ್ಶಿಸುತ್ತಿರುವ  ಏರಿಕೆಗಳ ಆಧಾರದ ಮೇಲೆ   ಷೇರುಪೇಟೆಗಳು ಮೇಲ್ನೋಟಕ್ಕೆ ಭಾರಿ ಹಣ ಗಳಿಸಲು ಸಾಧ್ಯವಿರುವ ತಾಣ ಎಂಬ ಕಲ್ಪನೆ ಹಲವರಲ್ಲಿ ಮೂಡಿರಲು ಸಾಧ್ಯ.  ಆದರೆ ವಾಸ್ತವ ಸಂಗತಿಯೇ ಬೇರೆ.  ಇಲ್ಲಿ ಹಣ ಸಂಪಾದನೆ ಅತಿ ಸುಲಭ ಎನಿಸಿಕೊಳ್ಳಬೇಕಾದರೆ ಅದಕ್ಕೆ ತಕ್ಕ ಸಿದ್ಧತೆಗಳ ಅಗತ್ಯ. ಡೇ ಟ್ರೇಡಿಂಗ್‌ ನಲ್ಲಿ ವ್ಯವಹರಿಸಲು ಬಹು ಜನರಿಗೆ ಹೆಚ್ಚಿನ ಆಸಕ್ತಿ. ಅದರಂತೆ ಹೆಚ್ಚಿನವರು ಹಣ ಕಳೆದುಕೊಂಡಿರುವುದೂ ಇದೇ ಕಾರಣ.

    ಹೂಡಿಕೆಯ ಹಣ ಸುರಕ್ಷಿತವಾಗಿರಸಬೇಕಾದಲ್ಲಿ ಡೇ ಟ್ರೇಡಿಂಗ್‌ ನಲ್ಲಿ ಹಲವು ಮುನ್ನೆಚ್ಚರಿಕೆಯ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು.
    ಡೇ ಟ್ರೇಡಿಂಗ್‌ ನಲ್ಲಿ ಈಗ ಹೆಚ್ಚಿನವರು ತಮ್ಮ ಮಿತಿ ಮೀರಿದ ಸಂಖ್ಯಾ ಗಾತ್ರದ ಷೇರುಗಳನ್ನು ಕೊಳ್ಳುವುದು ಮಾರಾಟಮಾಡುವುದು ಸಾಮಾನ್ಯ. ಹೇಗಿದ್ದರೂ ದಿನದ ಅಂತ್ಯದಲ್ಲಿ ವಹಿವಾಟು ಚುಕ್ತಾ ಆಗುವುದರಿಂದ ಎಷ್ಟು ಲಾಭ ಬಂದರೂ ಸರಿ ಎಂದುಕೊಳ್ಳುವರು.  ಅದರ ಹಿಂದೆ ಅಡಗಿರುವ ಹಾನಿಯಾಗಬಹುದಾದ ಅಂಶವನ್ನು ಗಮನಿಸದೆ ವಹಿವಾಟಿಗೆ ಮುಂದಾಗುವರು,  ಈ ಪ್ರಕ್ರಿಯೆಯಲ್ಲಿ ದಿನದ ಮಧ್ಯೆ ಲಭಿಸುವ ಅವಕಾಶಗಳನ್ನುಉಪಯೋಗಿಸಿಕೊಳ್ಳದೆ,  ವಹಿವಾಟು ಚುಕ್ತಾಮಾಡಲು ಕೊನೆಗಳಿಗೆಯವರೆಗೂ ಕಾಯುವರು, ಕಳೆದುಕೊಳ್ಳುವರು.  

    ಸುರಕ್ಷತೆಗೆ ಯಾವ ಕ್ರಮ ಸರಿ

    ಡೇ ಟ್ರೇಡಿಂಗ್‌ ನಲ್ಲಿ ಸ್ವಲ್ಪಮಟ್ಟಿನ ಬದಲಾವಣೆಗಳಲ್ಲಿ ಅಳವಡಿಸಿಕೊಂಡಲ್ಲಿ ಸುರಕ್ಷತೆಯ ಜಾಲ ನಿರ್ಮಿಸಿಕೊಳ್ಳಬಹುದಾಗಿದೆ.  ಡೇ ಟ್ರೇಡಿಂಗ್‌ ನ ಉದ್ದೇಶದಿಂದ ಖರೀದಿಸುವಾಗ,  ಖರೀದಿಸಿದ ಬೆಲೆಗಿಂತ ಷೇರಿನ ಬೆಲೆ ಇಳಿಕೆ ಕಂಡಲ್ಲಿ ಖರೀದಿಸಿದ ಷೇರುಗಳನ್ನು ಹಣ ಪಾವತಿಸುವುದರೊಂದಿಗೆ ಡೆಲಿವರಿ ತೆಗೆದುಕೊಳ್ಳುವ ಮಟ್ಟಕ್ಕೆ ಸೀಮಿತಗೊಳಿಸಿದಲ್ಲಿ ಬಂಡವಾಳ ಕರಗಿಸುವ ಸಾಧ್ಯತೆ ಮೊಟಕುಗೊಳಿಸಿದಂತಾಗುತ್ತದೆ.   ಹೀಗೆ ಡೆಲಿವರಿ ತೆಗೆದುಕೊಂಡ ಷೇರುಗಳು ಉತ್ತಮ ಗುಣಮಟ್ಟದ್ದಾಗಿರಬೇಕು.  ಈ ಷೇರುಗಳ ಬೆಲೆ ಏರಿಕೆ ಕಂಡಾಗ ಮಾರಾಟ ಮಾಡಿ ಬಂಡವಾಳ ಉಳಿಸಿಕೊಂಡು ಲಾಭಗಳಿಸುವುದು ಸಾಧ್ಯ.ಅಂದರೆ ಗಜಗಾತ್ರದ  ಸಂಖ್ಯೆಯ ಷೇರುಗಳಲ್ಲಿ ವಹಿವಾಟು ನಿರ್ವಹಿಸುವ ಬದಲು, ತಮ್ಮ ಬಂಡವಾಳದ ಸಾಮರ್ಥ್ಯಕ್ಕನುಗಣವಾಗಿ,  ಷೇರುಗಳನ್ನು ಖರೀದಿಸುವುದು ಸೂಕ್ತ,  ಕೇವಲ ಬ್ರೋಕರೇಜ್‌ ಉಳಿಸುವ ಉದ್ದೇಶದಿಂದ ಬಂಡವಾಳ ಕರಗಿಸುವ ಕೃತ್ಯಕ್ಕೆ ಕೈ ಹಾಕುವುದು ಸರಿಯೆನಿಸಲಾರದು.
    ಉದಾಹರಣೆಗೆಈ ಕೆಳಗಿನ ಕಂಪನಿಗಳನ್ನು ಗಮನಿಸಿರಿ:

    ಲುಪಿನ್‌ ಲಿಮಿಟೆಡ್:
    ಶುಕ್ರವಾರದಂದು ಲುಪಿನ್‌ ಲಿಮಿಟೆಡ್‌ ಕಂಪನಿಯ ಷೇರಿನ ಬೆಲೆ ದಿನದ ಆರಂಭದಲ್ಲಿ ರೂ.932 ರ ಸಮೀಪದಲ್ಲಿದ್ದು  ನಂತರ ಏಕಮುಖವಾಗಿ ಏರಿಕೆ ಕಂಡು ರೂ.1,020 ರವರೆಗೂ ಜಿಗಿಯಿತು.  ನಂತರ ದಿನದ ಮಧ್ಯಂತರದಲ್ಲಿ ಸೆನ್ಸೆಕ್ಸ್‌ ಕುಸಿತದೊಂದಿಗೆ ಈ ಕಂಪನಿಯ ಷೇರಿನ ಬೆಲೆಯು ಗರಿಷ್ಠದಿಂದ ಕುಸಿದು ರೂ.985 ರವರೆಗೂ ಕುಸಿದು ಮತ್ತೆ ಕ್ಷಿಪ್ರಗತಿಯಲ್ಲಿ ಏರಿಕೆಯಿಂದ ರೂ.1,023 ಕ್ಕೆ ಏರಿಕೆ ಕಂಡಿತು.  ಈ ಏರಿಳಿತಗಳ ಜೋಕಾಲಿಯಲ್ಲಿ ಜೀಕುತ್ತಿದ್ದ ಈ ಷೇರಿನ ಬೆಲೆ ಡೇ ಟ್ರೇಡಿಂಗ್‌ ಗೂ ಉತ್ತಮ ಅವಕಾಶ ಒದಗಿಸಿತು.

    ಟಾಟಾ ಸ್ಟೀಲ್‌ ಲಿಮಿಟೆಡ್:

    ಶುಕ್ರವಾರ, 14 ರಂದು ಈ ಕಂಪನಿಯ ಷೇರಿನ ಬೆಲೆ ದಿನದ ಆರಂಭದಲ್ಲಿ ರೂ.409 ರ ಸಮೀಪದಿಂದ ಪುಟಿದೆದ್ದು ರೂ.430 ರವರೆಗೂ ಜಿಗಿತ ಕಂಡಿತು.   ನಂತರ ದಿನದ ಮಧ್ಯಂತರದಲ್ಲಿ ಸೆನ್ಸೆಕ್ಸ್‌ ನ ಇಳಿಕೆಯೊಂದಿಗೆ  ಷೇರಿನ ಬೆಲೆ ರೂ.412 ರ ವರೆಗೂ ಜಾರಿ ರೂ.418 ರ ಸಮೀಪ ಕೊನೆಗೊಂಡಿತು.   ಖರೀದಿಸಿದ ಷೇರಿನ ಬೆಲೆ ದಿನದ  ಮಧ್ಯೆಯೇ ಏರಿಕೆ ಕಂಡಲ್ಲಿ ಲಾಭ ನಗದೀಕರಿಸಿಕೊಳ್ಳಬೇಕು, ಇಲ್ಲವಾದಲ್ಲಿ ಅವಕಾಶ ವಂಚಿತರಾಗಬಹುದು ಎಂಬುದನ್ನು ಈ ಉದಾಹರಣೆಯುಎತ್ತಿಹಿಡಿದಿದೆ.

    ಲಾರ್ಸನ್ ಅಂಡ್‌ ಟೋಬ್ರೊ ಲಿಮಿಟೆಡ್:
    14 ರಂದು  ಈ ಕಂಪನಿ ಷೇರಿನ ಬೆಲೆಯು ರೂ.998 ರ ಸಮೀಪದಿಂದ ರೂ.1,017ರವರೆಗೂ ಏರಿಕೆ ಕಂಡು ರೂ.994 ಕ್ಕೆ ಇಳಿದು, ನಂತರ ರೂ.1,014 ಕ್ಕೆ ಜಿಗಿದು,  ದಿನದ  ಅಂತಿಮ ಗಂಟೆಯಲ್ಲಿ ರೂ.977 ಕ್ಕೆ ಜಾರಿ ರೂ.982 ರ ಸಮೀಪ ಕೊನೆಗೊಂಡಿದೆ. 

     ಒಂದೇ ದಿನ ಈ ರೀತಿಯ ಭರ್ಜರಿ ಏರಿಳಿತ ಪ್ರದರ್ಶಿಸುವ ಈಗಿನ ಪೇಟೆಯಲ್ಲಿ ಕಡಿಮೆ ಸಂಖ್ಯೆಯ ಷೇರುಗಳಲ್ಲಿ, ಅಪಾಯದ ಅರಿವಿನಿಂದ, ಡೇ ಟ್ರೇಡಿಂಗ್‌ ನಡಸಬಹುದು.  ದಿನದ ಮಧ್ಯೆಯೇ ಲಾಭಗಳಿಕೆಯ ಅವಕಾಶವಿದ್ದಲ್ಲಿ ನಗದೀಕರಿಸಿಕೊಂಡು ಸುರಕ್ಷಿತವಾಗಿರಬಹುದು.  ಇಲ್ಲದಿದ್ದಲ್ಲಿ ಡೆಲಿವರಿ ತೆಗೆದುಕೊಳ್ಳುವ ಹವ್ಯಾಸದಲ್ಲಿದ್ದರೆ ಉತ್ತಮ.  ಕಾರಣ ಅಗ್ರಮಾನ್ಯ ಕಂಪನಿಗಳೂ ಸಹ ಹೆಚ್ಚಿನ ಏರಿಳಿತಗಳಿಂದ ಲಾಭಗಳಿಕೆಯ ಅವಕಾಶಗಳನ್ನು ಸೃಷ್ಠಿಸಿಕೊಡುತ್ತವೆ.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಮೌನದ ಪ್ರೀತಿ ಮಾತಾದಾಗ

    ಅನೇಕ ಹೊಸ ಲೇಖಕರು ಕನ್ನಡಪ್ರೆಸ್. ಕಾಮ್ ನ ಮೇಲೆ ಪ್ರೀತಿ ಇಟ್ಟು ತಮ್ಮ ಬರಹಗಳನ್ನು ಕಳಿಸುತ್ತಿದ್ದಾರೆ. ತಮ್ಮ ಬರಹಗಳು ಫೇಸ್ ಬುಕ್ ಆಚೆಗಿನ ಅನೇಕ ಓದುಗರನ್ನು ಸೇರಬೇಕೆಂಬ ಬಯಕೆ ಅವರದ್ದು . ಹೀಗಾಗಿ ಇಂಥ ಲೇಖನಗಳಿಗೆ ಅವಕಾಶ ನೀಡಲು ಈ ವೇದಿಕೆ ಆರಂಭಿಸುತ್ತಿದ್ದೇವೆ. ಇದು ನಿಮ್ಮದೇ ವೇದಿಕೆ. ನಿಮ್ಮ ಬರಹಗಳನ್ನು [email protected] ಇಲ್ಲಿಗೆ ಇ ಮೇಲ್ ಮಾಡಿ

    ಮಮತಾ ಕುಲಕರ್ಣಿ

    ಧಾರವಾಡದ ಮಮತಾ ಕುಲಕರ್ಣಿ ಓದಿದ್ದು ಸಿವಿಲ್  ಎಂಜಿನಿಯರಿಂಗ್. ಸಧ್ಯ ಇರುವುದು ದುಬೈ. ಮೊದಲು ಬೆಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಆಗಿ ವೃತ್ತಿಯಲ್ಲಿದ್ದು ಈಗ ಹೋಮ್ ಮೇಕರ್ .ಕವನ, ಸಾಹಿತ್ಯ ರಚನೆ ಹವ್ಯಾಸ . ಬರಹ ಕೌಶಲ್ಯವನ್ನು ಬೆಳೆಸಿಕೊಳ್ಳುವ ಆಸಕ್ತಿ. ಪತಿ ವಿಜಯ್ ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ.

    ನೂರಾರು ಬಣ್ಣ ಬಣ್ಣದ ಮನಸ್ಸುಗಳಿಂದ ಕೂಡಿದ ಈ ಜಗತ್ತಲ್ಲಿ ಪ್ರೀತಿಯೆಂಬ ಸಿಂಚನ ಇಲ್ಲದೆ ಇದ್ದರೆ ಏನು ಚೆನ್ನ. ಪ್ರೀತಿಯೆಂದರೆ ಕೇವಲ ಯೌವನಕ್ಕೆ ಮಾತ್ರ ಸೀಮಿತವಲ್ಲ.

    ಪೋಷಕರ ಮಕ್ಕಳ ಪ್ರೀತಿ, ಅಣ್ಣ-ತಂಗಿ ಅಕ್ಕ ತಮ್ಮ, ಸ್ನೇಹಿತರ ನಡುವೆ….. ಹೀಗೆ ಪ್ರತಿಯೊಂದು ಜೀವಿಗಳ ಮನದ ಮೂಲೆಯಲ್ಲಿ ಪ್ರೀತಿಯು ಅವಿತು ಕುಳಿತಿರುತ್ತದೆ. ಹಾಗೆ ನೋಡಿದ್ರೆ ಮೂಕಪ್ರಾಣಿಗಳ ಮಧ್ಯೆಯು ಪ್ರೀತಿಯ ಬಾಂಧವ್ಯ ಇರುತ್ತೆ. ಅವು ಕೂಡ ತನ್ನದೇ ಆದ  ರೀತಿಯಲ್ಲಿ ವ್ಯಕ್ತಪಡಿಸುತ್ತವೆ. ಆದರೆ ಅತೀ ಬುದ್ಧಿಜೀವಿ ಪ್ರಜ್ಞಾವಂತ ಪ್ರಾಣಿ ಎನಿಸಿಕೊಂಡ ಮನುಷ್ಯ ತನ್ನಲ್ಲಿ ಇತರರ ಪರ ಇರುವ ಪ್ರೇಮ ಭಾವನೆಯನ್ನು ಕೇವಲ ಮನಸ್ಸಲ್ಲಿ ಮುಚ್ಚಿಟ್ಟು ವ್ಯಕ್ತಪಡಿಸದೇ ಪ್ರಯತ್ನಿಸದಿದ್ದರೆ ಎಷ್ಟೊ ಸಾರಿ ಸಂಬಂಧಗಳು ಮೂಕಸನ್ನೆಯಲ್ಲಿ ಬತ್ತಿ ಹೋಗುತ್ತವೆ.

    ಎಷ್ಟೋ ಸಾರಿ ಅತೀ ಚಿಕ್ಕ ವಿಷಯಗಳಲ್ಲಿ ವಿಶ್ವಾಸದ ಮಾತುಗಳಿಂದ ಬಂಧಗಳ ಬುಡಗಳು ಗಟ್ಟಿಯಾಗುತ್ತವೆ. ಎಷ್ಟೋ ಕನಸುಗಳಿಗೆ ಹುಮ್ಮಸ್ಸು ನೀಡುತ್ತವೆ. ಮನೆಯ ಎಲ್ಲರನ್ನೂ  ಪ್ರೀತಿಸುವ ಗೃಹಿಣಿಗೆ ತನ್ನ ಪತಿ ಬಂದು ನಿನ್ನ ಮನಸ್ಸು ತುಂಬಾ ಒಳ್ಳೇದು ಅಂತ ಅಂದರೆ ಸಾಕು ಅವಳ ನಗುವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ವಯಸ್ಸಾದವರ ಜೊತೆ ನಗುನಗುತ್ತ ಏನೇ ಮಾತನಾಡಿದರು ಅವರಿಗೆ ಖುಷಿ. ಹೀಗೆ ಸಹಸ್ರಾರು ಸಂದರ್ಭಗಳಲ್ಲಿ ಮಾತಿನಿಂದ ನಿಮ್ಮ ಭಾವನೆಗಳನ್ನು ಪ್ರೇಮವನ್ನು ಹೇಳಿಕೊಂಡರೆ ನಿಮ್ಮ ಖುಷಿ ದ್ವಿಗುಣವಾಗುವುದಲ್ಲದೆ, ಸಂಬಂಧಗಳು ಚಿರಕಾಲ ಆನಂದದಿಂದ ಇರುತ್ತವೆ.

    ಸಂಕಷ್ಟದ ಸಮಯದಲ್ಲಿ ಸಾಂತ್ವನ ಹಾಗೂ ಪ್ರೀತಿಯಿಂದ ಆಡಿದ ಎರಡು ಮಾತುಗಳು ಎಷ್ಟೋ ಬತ್ತಿಹೋದ ದಣಿದ ಮನಸ್ಸನ್ನು ಪುಳಕಗೊಳಿಸುತ್ತವೆ. ಅದಕ್ಕೆ ‘ಮಧುರವಾದ ಪ್ರೀತಿಯ ಮಾತುಗಳನ್ನು ಹೇಳಿ ನಿಮ್ಮ ನಾಲಿಗೆಯೊಳ್’ ಎಂಬುದು ಒಂದು ಅನಿಸಿಕೆ. 

    Photo by Jasmine Carter from Pexels

    error: Content is protected !!