30.2 C
Karnataka
Thursday, May 21, 2026
    Home Blog Page 155

    ಶುಭ ದಿನ

    ಇಂದಿನ ನುಡಿ

    ಮುಗಿದು  ಹೋದ ಕಾಲ ಚೆನ್ನಾಗಿ ಇರುತ್ತದೆ. ಏಕೆಂದರೆ ಮತ್ತೆ ತಿರುಗಿ ಬಾರದೆಂದು.
    ಬರುವಂತಹ ಭವಿಷ್ಯ ಕಾಲ ಅಂದವಾಗಿ ಇರುತ್ತದೆ. ಏಕೆಂದರೆ ನಮಗೆ ಬೇಕಾಗಿರುವ ರೀತಿಯಲ್ಲಿ ಉಹಿಸಿಕೊಳ್ಳುತ್ತೇವೆ.
    ಪ್ರಸ್ತುತ ಕಾಲ ಮಾತ್ರ ಕಷ್ಟವಾಗಿರುತ್ತದೆ‌ ಏಕೆಂದರೆ ಅನುಭವಿಸುತ್ತಾ ಇರುತ್ತೇವೆ.

    ಸಂಗ್ರಹ :ರಾಜೀವಲೋಚನ

    ಇಂದಿನ ಪಂಚಾಂಗ

    ದಿನಾಂಕ 10 ಸೆಪ್ಚೆಂಬರ್ 2020,ಗುರುವಾರ

    ಸಂವತ್ಸರ : ಶ್ರೀ ಶಾರ್ವರಿ, ಆಯನ :ದಕ್ಷಿಣಾಯನ, ಋತು: ವರ್ಷ, ಮಾಸ : ಭಾದ್ರಪದ, ಪಕ್ಷ :ಕೃಷ್ಣ ತಿಥಿ: ಅಷ್ಟಮಿ ನಕ್ಷತ್ರ: ರೋಹಿಣಿ

    ಸೂರ್ಯೋದಯ : ಬೆಳಿಗ್ಗೆ 6.15,

    ಸೂರ್ಯಾಸ್ತ: ಸಂಜೆ 6.33

    ಇಂದಿನ ವಿಶೇಷ

    ತೋಳಪ್ಪಾರ್ ಶ್ರೀಕೃಷ್ಣ ಜಯಂತಿ

    Photo by Aron Visuals on Unsplashh

    ಹಣದಲ್ಲೂ ಕೆಟ್ಟದ್ದೂ ಒಳ್ಳೆಯದು ಅಂಥ ಇದೆಯಾ

    ದುಡಿದ ಹಣ ಎಲ್ಲಿ ಎಷ್ಟು ಖರ್ಚಾಗುತ್ತದೆ ಎಂದು ನಿನ್ನೆ ಹೇಳಿದ್ದ ಮಂಜುನಾಥ ಬೊಮ್ಮಘಟ್ಟ ಅವರು ಈ ಸರಣಿಯ ಮೂರನೇ ಲೇಖನದಲ್ಲಿ ಹಣದಲ್ಲೂ ಒಳ್ಳೆಯ ಹಣ ಕೆಟ್ಟ ಹಣ ಎಂಬುದು ಇದೆಯಾ ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ.

    ಧರ್ಮ,ಅರ್ಥ,ಕಾಮ,ಮೋಕ್ಷ…..ಪುರುಷಾರ್ಥ ಅಂತ ಹೇಳುವ ಈ ನಾಲ್ಕೂ ಶಬ್ದಗಳು , ಮೋಕ್ಷಕ್ಕೆ ದಾರಿಯಲ್ಲಿರುವ ಈ   ಅರ್ಥ..ವೂ ತುಂಬಾ ದಿನಗಳವರೆಗೆ ನನಗೆ ಕುತೂಹಲದ ಸಂಗತಿಗಳಲ್ಲಿ ಒಂದಾಗಿತ್ತು.

    ನಮ್ಮೆಲ್ಲಾ ಹಿರಿಯರು ಧರ್ಮ ಮತ್ತು ಮೋಕ್ಷಗಳ ಬಗ್ಗೆಯೇ ಹೆಚ್ಚು ಮಾತಾಡುತ್ತಿದ್ದರು ಬಿಟ್ಟರೆ,ಉಳಿದೆರಡು ಪುರುಷಾರ್ಥ ಶಬ್ದಗಳಾದ ಅರ್ಥ,ಕಾಮದ ಬಗ್ಗೆ ಬಹು ದಿನಗಳ ತನಕ ನನ್ನಲ್ಲಿ  ಅವರ್ಣಿಯ ಕೌತುಕ ಹುಟ್ಟಿಸಿದ್ದವು. ತಾಳಲಾರದೆ ಅಪ್ಪನನ್ನು ಕೇಳಿಯೇ ಬಿಟ್ಟಿದ್ದೆ ಒಮ್ಮೆ. ಅರ್ಥ,ಕಾಮವನ್ನು ಮನವರಿಕೆ ಮಾಡುವುದೂ, ಮಾಡಿಕೊಳ್ಳುವುದೂ ತುಂಬಾ ಕ್ಲಿಷ್ಟ. ದೊಡ್ಡವನಾಗು ಎಂದಾದ್ರು ಒಮ್ಮೆ ಮಾತಾಡುವ ಅಂದಿದ್ದರು. ಹಲವಾರು ವಿಷಯಗಳಲ್ಲಿ ಅಪ್ಪನ ಹತ್ತಿರ ದೊಡ್ಡವನಾಗಲೇ ಇಲ್ಲ ನಾನು! ಅವುಗಳಲ್ಲಿ ಇವೆರಡೂ.

    ಧರ್ಮಿಷ್ಠನಾಗಿ,ಮಾಡಬೇಕಾದ ಕರ್ಮದ ಮೂಲಕ ಅರ್ಥವನ್ನು ಸಂಪಾದಿಸಿ, ಸಂನ್ಯಾಸಿಯಾಗದೆ ಸಂಸಾರಿಯಾಗಿ ಮೋಕ್ಷ ಹೊಂದಬೇಕು. ಆಗ ಮಾತ್ರ ಈ ಭವದ ಬಂಧನದಿಂದ ಮುಕ್ತಿ ಅಂತ ಸಂಕ್ಷಿಪ್ತವಾಗಿ ಹೇಳಿ ಮುಗಿಸಿದ್ದರು.ಕೆದಕುವ ಅದಮ್ಯತೆ ಒಳಗಿನಿಂದ ಒತ್ತುತ್ತಿದ್ದರೂ ಸುಮ್ಮನಾಗಿದ್ದೆ.

    ಹಣ ವಿಷ, ಅದು ಮಧುರ ಸಂಬಂಧಗಳನ್ನು ಹಾಳು ಮಾಡುತ್ತದೆ,ಅದರ ವಿಷಯವಾಗಿ ಒಂದು ಸುಪ್ತ ಜಾಗ್ರತೆ ಬಹು ಮುಖ್ಯ ಅಂತ ಹೇಳುವವರು ಒಂದು ಕಡೆ….ಮತ್ತೊಂದು ಕಡೆ ನಮ್ಮ ಆಧ್ಯಾತ್ಮಿಕರ ಮೋಕ್ಷದ ದಾರಿಗೆ ಬೇಕೇ ಬೇಕಾಗಿದ್ದ ಈ ಅರ್ಥ ಸಹಜವಾಗಿಯೇ ನನ್ನಲ್ಲಿ ಒಂದು ತೆರನಾದ,ಸ್ಪಷ್ಟತೆ ಇಲ್ಲದ ಸಾಮಗ್ರಿಗಳೊಡನೆ ಮನೆ ಮಾಡಿಕೊಂಡಿತ್ತು. ನನಗೆ ನಾನೇ ಸಮಾಧಾನ ಹೇಳಿಕೊಳ್ಳುವಂತೆ ಸಂಸಾರಿಯಾಗಿ,ದುಡಿಯುವ ಮೊದಲು ಧರ್ಮಿಷ್ಠನಾಗಬೇಕೇನೋ ಅಂದು ಕೊಂಡು ಸುಮ್ಮನಿದ್ದೆ.

    ಯಾಕೆಂದರೆ ಆಗ ದುಡಿಯುವ ವಯಸ್ಸು,ಮದುವೆ ಆಗುವ ವಯಸ್ಸು ಎರಡೂ ನನ್ನಲ್ಲಿ  ಇರಲಿಲ್ಲ. ಆದರೂ ಬೇರೆಯವರ ಹಣ,ನನ್ನ ಹಣದ ವ್ಯತ್ಯಾಸ, ಪಾಪದ ಹಣ, ಒಳ್ಳೆ ಹಣದ ವ್ಯತ್ಯಾಸ ತನ್ನದೇ ಆದ ಅರ್ಥದೊಂದಿಗೆ ನನ್ನಲ್ಲಿ ತುಂಬಾ ಎಳೆ ವಯಸ್ಸಿನಲ್ಲೇ ಮನೆ ಮಾಡಿಕೊಂಡಿತ್ತು. ಆಗಾಗ ಕೇಳುತ್ತಿದ್ದ…ಇವನು ಅವನ ಹಣ ತಿಂದು ನೀರು ಕುಡಿದ….ಅನ್ನುವಂತಾ ಮಾತುಗಳು ಹಣವನ್ನೂ ತಿನ್ನುತ್ತಾರಾ ಎನ್ನುವಂತಹ ಬಾಲಿಶ ಅನುಮಾನಕ್ಕೆ ಕಾರಣವಾದದ್ದು ಇದೆ.
    ಸಾಮಾನ್ಯ ಜನರ ಓಡಾಟ,ವ್ಯವಹಾರ ಕೆಲವು ಮೈಲಿಗಳ ಅಂತರಕ್ಕಷ್ಟೇ ಮೀಸಲಿದ್ದ ಸಮಯದಲ್ಲಿ, ನಮ್ಮ ನೆಲದ ಇತಿಹಾಸವನ್ನೊಮ್ಮೆ ಅವಲೋಕಿಸಿದರೆ, ವ್ಯಾಪಾರಕ್ಕೆಂದು ನಮ್ಮಲ್ಲಿಯ ವ್ಯಾಪಾರಿ ವರ್ಗ ಖಂಡಾಂತರ ಪ್ರಯಾಣ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತದೆ. ಭೈರಪ್ಪನವರ ಸಾರ್ಥ ಕಾದಂಬರಿಯಂತೂ ಇದರ ನಿಚ್ಚಳ ರೂಪ ಒದಗಿಸುತ್ತದೆ.  ಇಂಥವರಿಗೆ ರಾಜಾಶ್ರಯಗಳೂ ದೊರೆತ ಸಂದರ್ಭಗಳಿವೆ.

    ಇತಿಹಾಸದಲ್ಲಿ ಆಳಿದ ರಾಜರನ್ನು ಬಿಟ್ಟರೆ, ಈ ವ್ಯಾಪಾರಸ್ಥರ ಬಳಿ ಸಂಪತ್ತು ಹೇರಳವಾಗಿರುವುದೂ ದಾಖಲಾಗಿದೆ. ಹಾಗಾಗಿ ದಾನಿಗಳ ಪಟ್ಟಿಯಲ್ಲಿ ಅಂದಿನಿಂದಲೂ ಇಂದಿನವರೆಗೆ ಇವರ ಉಲ್ಲೇಖಗಳೇ ಹೆಚ್ಚು. ವಿದ್ಯಾ ಸಂಸ್ಥೆಗಳಿಗೆ, ಧಾರ್ಮಿಕ ಸಂಸ್ಥೆಗಳಿಗೆ ಇವರು ನೀಡಿರುವ ಕೊಡುಗೆಗಳೇ ಅದ್ಭುತ. ವ್ಯಾಪಾರ,ವ್ಯವಹಾರ ಅಂದರೇನೇ ಬಂಗಾರದಲ್ಲಿಯ ತಾಮ್ರದಂತೆ ಅಲ್ಪ ಸ್ವಲ್ಪ ಅಧರ್ಮ ಇರಲೇ ಬೇಕು,ಅಂದು ಮತ್ತು ಇಂದು. ಅಥವಾ ಅದೇ ಅವರ ವೃತ್ತಿ ಧರ್ಮ ಅಂತ ಕರೆಯಿಸಿಕೊಂಡು ಮಾನ್ಯವಾಗಿತ್ತೋ ಗೊತ್ತಿಲ್ಲ.

    ಏಕೆಲವು ಕಡೆ ವೇಶ್ಯೆಯರೂ ತಾವು ಗಳಿಸಿದ್ದ ಸಂಪತ್ತನ್ನು ಸಾಮಾಜಿಕ ಉದ್ದೇಶಿತ ಯೋಜನೆಗಳಿಗೆ ಕೊಟ್ಟ ಉದಾಹರಣೆ ಗಳೂ ಸಾಕಷ್ಟು ಇವೆ.ಏನೇನೂ ಕಾರಣ ಇಲ್ಲದೆ,ಕೇವಲ ಸಂಪತ್ತನ್ನು ಸೂರೆಗೊಳ್ಳಲು ನಮ್ಮಲ್ಲಿ ಯುದ್ಧಗಳು ನಡೆದಿವೆ.ಹೀಗಾಗಿ ರಾಜರು ಸೂರೆಗೊಂಡ ಸಂಪತ್ತಿಗೂ ಲೆಕ್ಕ ಇಲ್ಲ.

    ಹೀಗಿದ್ದೂ, ನಮ್ಮ ಹಿರಿಯರು ಇಂತಹ ಮೂಲದಿಂದ ಬಂದ ಹಣ ಅಥವಾ ಸಂಪತ್ತನ್ನು  ಅನೇಕ ಸಮಾಜಮುಖಿ ಕಾರ್ಯಗಳಿಗೆ,ಧಾರ್ಮಿಕ ಕಾರ್ಯಗಳಿಗೆ ಉಪಯೋಗಿಸಿದ್ದರು ಅಂದರೆ ಹಣ ಹಣವೇ, ಅದರಲ್ಲಿ ಕೆಟ್ಟದ್ದು,ಒಳ್ಳೆಯದ್ದು ಅಂತ ಇರುವುದಿಲ್ಲವೇನೋ ಎನ್ನುವ ಅನುಮಾನವೂ ಬಂದಿದ್ದಿದೆ. ಹಲವಾರು ವೃತ್ತಿಧರ್ಮಗಳನ್ನು ಅದರದೇ ಆದ ಕಟ್ಟಳೆಗಳೊಂದಿಗೆ ಅಂಗೀಕರಿಸಿ,ಆಗಿನ ಸಮಾಜ ಒಪ್ಪಿತ್ತೇನೋ,ಅಥವಾ ಒಪ್ಪಬೇಕಾದ ಅನಿವಾರ್ಯತೆಯೂ ಉಂಟಾಗಿತ್ತೇನೋ. ಯಾಕೆಂದರೆ ನಮ್ಮ ಸಂಸ್ಕೃತಿಯಲ್ಲಿ ಕಟುಕರೂ ಇದ್ದಾರೆ, ಸನ್ಯಾಸಿಗಳೂ ಇದ್ದಾರೆ. ಕೆರೆಯ ನೀರನ್ನು ಕೆರೆಗೇ ಚೆಲ್ಲುವುದರಿಂದ ನೀರಿನ ಮಲಿನತೆ ಗೌಣವಾಗುವ ಹಾಗೆ ಧಾರ್ಮಿಕ ಮತ್ತು  ಜನೋಪಯೋಗಿ ಕಾರ್ಯಗಳಿಗೆ ವಿನಿಯೋಗ ಆಗುವ ಹಣದ ಮಾಲಿನತೆಯೂ ಗೌಣವಾಗಿರಬೇಕು.

    ಹಾಗಾಗಿಯೇ ಇಂದಿಗೂ ನಮ್ಮ ದೇವಸ್ಥಾನದ ಹುಂಡಿಯಲ್ಲಿ ದೊರೆಯುವ ಹಣ ನಮಗೆ ಪರಮ ಪವಿತ್ರವಾಗಿ ಗೋಚರಿಸುವುದು.
    ಹುಟ್ಟಿನಲ್ಲಿ ಪವಿತ್ರತೆ ಪಡೆದು, ಹರಿಯುವಾಗ ಮಲಿನವಾಗಿ ಮತ್ತೆ  ಸೇರಿದ ಸಮುದ್ರದಲ್ಲಿ ಲೀನವಾಗಿ ಪವಿತ್ರತೆ ಹೊಂದುವ  ನಮ್ಮ ನದಿಗಳಂತೆ, ಈ ಹಣವೂ ಏನೋ. ಹಾಗಾಗಿ ಇದಕ್ಕೆ ಚಲಿಸುವ,ಚಂಚಲತ್ವ ಉಳ್ಳ ಗುಣವನ್ನು ಉಪಾಧಿಸಿರಬೇಕು ನಮ್ಮವರು. ಸಮಾಜದ ಒಳಿತಿಗಾಗಿ ರೂಪಗೊಂಡು, ಸಮಾಜದಲ್ಲಿ ಹರಿದಾಡುವಾಗ ಮಲಿನವಾಗಿ, ಕೊನೆಗೆ ಸಮಾಜಮುಖಿ ಕಾರ್ಯಗಳಲ್ಲಿ ವಿನಿಯೋಗವಾದಾಗ ಹಣ ಅದರ ಪಾವಿತ್ರತೆಯನ್ನು ಕಂಡುಕೊಂಡಿರಬೇಕು.
    ನದಿಯ ಎಲ್ಲಾ ನೀರು ಹರಿದು ಸಮುದ್ರ ಸೇರಲ್ಲ. ಅಲ್ಲಲ್ಲಿ ನಿಂತು ಕೊಳಚೆ ಗುಂಡಿಗಳಾಗಿ ಮಾರ್ಪಾಡುತ್ತವೆ. ಹಾಗೆ ಕೆಲ ಹಣ ಕೆಲವು ಕಡೆ ನಿಂತು ಕೊಚ್ಛೆ ಆಗುತ್ತದೆ. ಅದರ ಕೆಟ್ಟ ವಾಸನೆ ಸಮಾಜಕ್ಕೆ ಬಡಿದು,ಇಡೀ ಹಣವನ್ನೇ ಕೆಟ್ಟದ್ದು ಎಂದು ಬಿಂಬಿಸಿಬಿಟ್ಟಿತಾ?…ಗೊತ್ತಿಲ್ಲ.
    ಅಥವಾ ಹಣ ತಾನಿರುವ ಸ್ಥಾನಕ್ಕನುಗುಣವಾಗಿ ತನ್ನ ಗುಣವನ್ನು ಬದಲಾಯಿಸಿ ಕೊಳ್ಳುತ್ತಾ? ಮೋಸಗಾರನ ಹಣ ಕೆಟ್ಟದ್ದು, ಸನ್ಯಾಸಿಯ ಹಣ ಒಳ್ಳೆಯದಾ?! ಆದರೂ ನೀರಿನಂತೆ ಹರಿದುಬಂದು ಒಂದೆಡೆ ಸೇರುವ ಇದರ ಗುಣ ನನಗೆ ಅದ್ಭುತವಾಗಿ ಕಾಣುತ್ತದೆ.

    ಒಂದು ಮಾಹಿತಿಯ  ಪ್ರಕಾರ ಪ್ರಪಂಚಾದ್ಯಂತ ಧಾರ್ಮಿಕ (ಎಲ್ಲಾ ಧರ್ಮಗಳು ಸೇರಿ) ಕೆಲಸಗಳಿಗೆ ಹೆಚ್ಚು ಹಣ ವಿನಿಯೋಗವಾಗುವುದಂತೆ!ಅಲ್ಲಿಂದ ಮತ್ತೆ ಸಮಾಜಕ್ಕೆ ಹಲವು ಮುಖಗಳಲ್ಲಿ ಬಂದು ತನ್ನ ವೃತ್ತಿ ಅರಂಭಿಸುತ್ತದೆ, ಸಮುದ್ರದ ನೀರು ಆವಿಯಾಗಿ,ಮಳೆಯಾಗಿ,ಮತ್ತೆ ನದಿಯಾಗಿ  ಹರಿದಂತೆ.

    ಈ ಹಣದ ಸ್ವರೂಪವನ್ನು ಇದರ ವಿರಾಟ ರೂಪದಲ್ಲಿ ನೋಡಿದ ಮೇಲೆ ನಮ್ಮ ನಿಮ್ಮ ಕೈಯಲ್ಲಿರುವುದು ಒಳ್ಳೆಯ ಹಣವಾ ಅಥವಾ ಕೆಟ್ಟ ಹಣವಾ?! ಅನ್ನುವ ಜಿಜ್ಞಾಸೆ ಹುಟ್ಟುವುದು ಸಾಮಾನ್ಯವಲ್ಲವೇ? ಅಥವಾ ಹಣ ಹಣವೇ , ಒಳ್ಳೆಯದು,ಕೆಟ್ಟದ್ದು ಅನ್ನುವುದು  ನಮ್ಮ ಮಾನಸಿಕ ಭ್ರಮೆಯಾ? ಇಲ್ಲವಾದರೆ ನಮ್ಮ ನಮ್ಮ ವಿವೇಚನೆಯ ಪರಿಧಿಯಲ್ಲಿ ಹಣದ ಸ್ವರೂಪವನ್ನು ಹಿಡಿದಿಟ್ಟು ಬಿಟ್ಟಿದ್ದೇವಾ? ಇಂತಹ  ಸರಣಿ ಸರಣಿ ಪ್ರೆಶ್ನೆಗಳು ನನ್ನನ್ನು ಒಂದು ಕಾಲದಲ್ಲಿ ಕಾಡಿದ್ದಿದೆ. ಉತ್ತರ ಸಿಕ್ಕಿತ್ತಾ??…ನಾನಾ ರೂಪದಲ್ಲಿ ನನ್ನ ಬಳಿ ಬರುತ್ತಿದ್ದ ಹಣವನ್ನು ಇದು ಹೀಗೆ ಅಂತ ಹೇಗೆ ಹೇಳಲಿ??

    ಒಳ್ಳೆಯ ನೀರನ್ನು ಕುಡಿದವರು ಆರೋಗ್ಯವಂತರಾಗಿಯೂ, ಕೊಚ್ಛೆ ನೀರು ಕುಡಿದವರು ಅನಾರೋಗ್ಯ ಪೀಡಿತರಾಗುವುದು ನೈಸರ್ಗಿಕವಾಗಿ ಕಂಡುಕೊಂಡ ಸತ್ಯದಂತೆ, ಹಣ ಬೀರುವ ಪರಿಣಾಮದಿಂದ ಕೆಟ್ಟದ್ದೇ,ಒಳ್ಳೆಯದೇ ಅಂತ ಹೇಳಬಹುದು. ಯಾವ ಹಣ ಬಂದಾಗ ನನಗೆ ಆತ್ಮಸಂತೋಷ ಆಗಿ ಧನ್ಯತೆಯ ಭಾವನೆ ಆಗುತ್ತಿತ್ತೋ ಆಗ ಅದು ಒಳ್ಳೆಯ ಹಣ ಅಂತಾನೂ, ಯಾವ ಹಣ ಬಂದಾಗ ಮನಸ್ಸಿಗೆ ಕಿರಿಕಿರಿಯಾಗಿ,ನಿದ್ರೆ ಇಲ್ಲದೆ ಒರಳಾಡುತ್ತಿದ್ದೇನೋ ಆಗ ಕೆಟ್ಟ ಹಣ ಅಂತಲೂ ನನ್ನಷ್ಟಕ್ಕೆ ಅರ್ಥೈಸಿಕೊಂಡಿದ್ದೇನೆ. ಒಳ್ಳೆ ಹಣ ಸ್ವಚ್ಛ ತಿಳಿನೀರಂತೆ ನಳ ನಳಿಸುತ್ತಿದ್ದರೆ, ಕೆಟ್ಟ ಹಣ ತಡೆದುಕೊಳ್ಳಲಾರದ ದುರ್ವಾಸನೆಯಿಂದ, ನರಳುವವರ ಆಕ್ರಂದನದಿಂದ, ವಾಸಿಯಾಗದ ರೋಗಗಳ ರಕ್ತ,ಕೀವುಗಳಿಂದ ತುಂಬಿರುತ್ತಿತ್ತು. ಸ್ವಚ್ಛ ಮಾಡಲೆಂದು ಹಲವಾರು ತೀರ್ಥಕ್ಷೇತ್ರ ಅಲೆದು, ಅಲ್ಲಿಯ ಪವಿತ್ರ ತೀರ್ಥಗಳಿಂದ ತೊಳೆದು ನೋಡಿದೆ. ಆಗಲಿಲ್ಲ. ಇನ್ನು ಅದರ ಹಿಂಸೆ ಭರಿಸಲಾಗದೆ ಮತ್ತೆ ನರಳುವವರಿಗೆ,ಹಸಿದವರಿಗೆ ಕೊಡುತ್ತಿದ್ದೆ ನೋಡಿ, ಆಗ ಮತ್ತೆ ಅದು ಗರಿಗರಿಯಾಗಿ ನಳಿಸಿದಂತೆ ಅನ್ನಿಸುತ್ತಿತ್ತು!

    ಹಾಗಾಗಿ ನ್ಯಾಯವಾಗಿ ಸಂಪಾದಿಸಿದವರ ಹಣ ಒಳ್ಳೆಯದಾ,ಕೆಟ್ಟ ರೀತಿಯಲ್ಲಿ ಶೇಖರಿಸಿದ ಹಣ ಕೆಟ್ಟದ್ದಾ ಅಂತ ನಾನಿನ್ನು ನಿರ್ಧರಿಸುವ ಸ್ಥಿತಿ ತಲುಪಿಲ್ಲ. ಯಾಕೆಂದರೆ ನನ್ನಲ್ಲಿಯ ಹಣ ಎಂತಹದ್ದು ಅಂತಾನೇ ತಿಳಿಯದ ಅಜ್ಞಾನದಲ್ಲಿ ನಾನಿದ್ದೇನೆ. ವ್ಯಾಪಾರದ ಸಂತೆಯಲ್ಲಿ ನನ್ನ ಸರಕನ್ನು ಮಾರುವ ಭರದಲ್ಲಿದ್ದೇನೆ. ಬಂದ ಹಣದಿಂದ ಆಹಾರ ಪದಾರ್ಥ ಕೊಂಡು ಹೋಗಿ ಸಂಸಾರ ಸಮೇತನಾಗಿ ಊಟ ಮಾಡುತ್ತೇನೆ. ಊಟ ಮಾಡಿ ನೆಮ್ಮದಿಯಿಂದ ನಿದ್ದೆ ಮಾಡಿ,ಮಾಡಿದ ಊಟ ಮೈಗೆ ಹತ್ತಿ ಚೇತನ ಸಿಕ್ಕಿತ್ತಾ ಒಳ್ಳೆಯದೆಂದೂ, ಬಾರದ ರೋಗ ಬಂದು,ಗಳಿಸಿದ್ದೆಲ್ಲ ಖರ್ಚು ಮಾಡಿ ದಿವಾಳಿಯಾಗಿ ಭಿಕಾರಿಯಾದ್ರೆ ಕೆಟ್ಟದ್ದೆಂದೂ ಸಮಬುದ್ಧಿಯ,ಸಹೃದಯಿ,ವಿದ್ಯಾವಂತರು,ವಿವೇಕಿಗಳು ಅರ್ಥೈಸುತ್ತಾರೆ.

    ಶುಭ ದಿನ

    ನಮ್ಮ ಗುರಿಗೆ ಸಮಯದ ಮಿತಿಯನ್ನು ಅಳವಡಿಸಿಕೊಳ್ಳದಿದ್ದರೆ, ಅದು ಕೇವಲ ಒಂದು ಕನಸಾಗಿ ಬಿಡುತ್ತದೆ.

    ದುಡಿದ ಹೆಚ್ಚಿನ ಹಣ ಹೋಗುವುದೆ ಆಸ್ಪತ್ರೆಗೆ, ಶಿಕ್ಷಣಕ್ಕೆ

    ಹಣ ಇರುವುದು ಖರ್ಚು ಮಾಡಲು ಅಂತ ಕೆಲವರ ವಾದ. ಅಲ್ಲ ಅದು ಇರುವುದೇ ಗಳಿಸಲು ಅಂತ ಮತ್ತೊಬ್ಬರ ವಾದ ಎಂದು ನಿನ್ನೆ ಹೇಳಿದ್ದ ಮಂಜುನಾಥ ಬೊಮ್ಮಘಟ್ಟ ಅವರು ಈ ಸರಣಿಯ ಎರಡನೇ ಲೇಖನದಲ್ಲಿ ಶೇಖರಿಸಿದ ಹಣ ತರುವ ಅಪಾಯಗಳನ್ನು ತಿಳಿಸಿದ್ದಾರೆ.

    ತಾಮ್ರದ ನಾಣ್ಯ ತಾಯಿ ಮಕ್ಕಳನ್ನು ಅಗಲಿಸುತ್ತೆ. ಸಂಬಂಧಗಳಲ್ಲಿ ಹಣದ ವ್ಯವಹಾರ ಬೇಡ ಅಂತ ಮನೆಗಳಲ್ಲಿ ಹಿರಿಯರಾಡುವುದು ಇತ್ತೀಚಿನ ತನಕ ಸಾಮಾನ್ಯವಾಗಿತ್ತು. . ಹಣದ ವಿಷಯ ಕುಟುಂಬದ ಕೆಲವರಿಗೆ ಮಾತ್ರ ಸಂಬಂಧಿಸಿದ್ದಾಗಿರುತ್ತಿತ್ತು. ಕುಟುಂಬದ ಒಡೆಯನನ್ನು ಬಿಟ್ಟರೆ ಒಬ್ಬಿಬ್ಬರು ಮಾತ್ರ ಅದರ ವಿಚಾರಕ್ಕೆ ಅರ್ಹರು ಎಂಬಂತಿತ್ತು ನಮ್ಮ ಅವಿಭಕ್ತ ಕುಟುಂಬಗಳ ಹಣಕಾಸು ವಿಚಾರ. ಬೇರೆ ಎಲ್ಲರ ಭಾವನೆಯಲ್ಲಿ ಹಣ ಪಾಷಾಣ(ವಿಷ)  ಸಮ ಅಂತ ಬಿಂಬಿತವಾಗಿರುತ್ತಿತ್ತು.ಈಗಿನ ರೀತಿ ಎಲ್ಲಿಯಂದರಲ್ಲಿ ನಾಣ್ಯಗಳು,ನೋಟುಗಳು ಆಗ ಕಾಣ ಸಿಗುತ್ತಿರಲಿಲ್ಲ.
    ಇದು ಮನೆಗಳ ವಿಚಾರ ಆದರೆ, ಇನ್ನು ಊರ ವಿಚಾರದಲ್ಲೂ ಅಷ್ಟೇ. ಕೆಲವೇ ಕೆಲವು ಬೆರಳೆಣಿಕೆಯಷ್ಟು ಜನರ ಹತ್ತಿರ ಮಾತ್ರ ಹಣ ಇರ್ತಿತ್ತು. ಶೆಟ್ಟರ ಅಂಗಡಿಗಳಲ್ಲೂ ನಾಣ್ಯದ ವಿನಿಮಯಕ್ಕಿಂತ ಹೆಚ್ಚಾಗಿ ಹೊಲಗಳಲ್ಲಿ ಬೆಳೆಯುತ್ತಿದ್ದ ಕಾಳು, ದವಸ ಧಾನ್ಯ,ಹುಣಸೇ ಹಣ್ಣು, ಕೆಲವು ಕಾಡಿನ ಉತ್ಪನ್ನಗಳು ವಿನಿಮಯಕ್ಕೆ ಉಪಯೋಗಿಸಲ್ಪಡುತ್ತಿದ್ದವು. ಉಪ್ಪು ಬೇಕೆಂದರೆ ಪಾವು ರಾಗಿ ಅಥವಾ ಜೋಳ ಅಂಗಡಿಗೆ  ಹಾಕಿ ತರುತ್ತಿದ್ದರು. ಕೊನೆಗೆ ಬೀಡಿ, ಕಡ್ಡಿಪುಡಿ(ತಂಬಾಕು) ಬೇಕೆಂದರೂ ಮನೆಗಳಲ್ಲಿ ಚೀಲ,ಚೀಲ ಇರುತ್ತಿದ್ದ ಕಾಳನ್ನು ಅಂಗಡಿಗೆ ಹಾಕಿ ವ್ಯವಹಾರ ಮಾಡುತ್ತಿದ್ದರು. ಅಷ್ಟೇ ಅಲ್ಲ, ಏನಕ್ಕಾದರೂ ಹಣ ಬೇಕಾದಾಗಲೂ ಕಾಳು ಹಾಕಿ ಹಣ ತೆಗೆದುಕೊಳ್ಳುವ ಪದ್ದತಿ ಸಾಮಾನ್ಯವಾಗಿರುತ್ತಿತ್ತು.
    1,2,3,5,10,20 ಪೈಸೆ ನಾಣ್ಯಗಳಿಗೆ ಭಾರೀ ಬೆಲೆ. ಅದಕ್ಕಿಂತಲೂ ಮುಂಚೆ ಡಂಬಡಿ,ದುಗ್ಗಾಣಿ ಅಂತ ಕರೆಯಿಸಿಕೊಳ್ಳುವ ಬಿಲ್ಲೆಗಳು ಇದ್ದವು ಅಂತ ತಾತ ಹೇಳುತ್ತಿದ್ದರು. 25,50 ಪೈಸೆ ಮತ್ತು  1ರೂಪಾಯಿ ನಾಣ್ಯ ಇತ್ತು.(ಈಗಲೂ ಇವೆ,ಬೆಲೆ ಕಳೆದುಕೊಂಡು) 6 ಪೈಸೆಗೆ  ಆಣೆ ಅಂತಲೂ 25 ಪೈಸೆಗೆ ನಾಲ್ಕಾಣೆ,50 ಪೈಸೆಗೆ ಎಂಟಾಣೆ ಅಂತ ಕರೆಯುತ್ತಿದ್ದೆವು. ಮೊದಲೇ ಹೇಳಿದಹಾಗೆ ಇವು ಎಲ್ಲರ ಹತ್ತಿರ ಇರ್ತಿರಲಿಲ್ಲ.
    ಇನ್ನು ನೋಟಿನ ವಿಷಯ ಎಂದರೆ 1,2,5,10,20,50,100 ರ ನೋಟುಗಳು. ಅಪ್ಪನ ತಿಂಗಳ 130 ರೂಪಾಯಿ ಸಂಬಳ ಬಂದಾಗ, ಅಜ್ಜಿಗೆ ಕೆಲವು ನೋಟುಗಳನ್ನು ತೋರಿಸುತ್ತಿದ್ದರಂತೆ. ಅಲ್ಲಿಯವರೆಗೆ ಅಜ್ಜಿ ಆ ನೋಟುಗಳನ್ನು ನೋಡೇ ಇರುತ್ತಿರಲಿಲ್ಲ ಅಂತೆ. ಸಮಾಜದಲ್ಲಿ ಅಷ್ಟೊಂದು ವಿರಳ ನೋಟು,ನಾಣ್ಯಗಳು. ಊರಲ್ಲಿ ಸಾಹುಕಾರ, ಶೆಟ್ಟರು ಎನ್ನಿಸಿಕೊಂಡವರ ಹತ್ತಿರ ಬಿಟ್ಟರೆ, ಬೇರೆಯವರ ಹತ್ತಿರ ನೋಟುಗಳು ನೋಡಲೂ ಸಿಗುವುದು ಕಡಿಮೆ. ಹತ್ತು ರೂಪಾಯಿ ಜೇಬಲ್ಲಿ ಇಟ್ಟು ಹೊರಟವ ಊರ ಸಾಹುಕಾರನೆ ಆಗಿರಬೇಕಿತ್ತು!.
    ಇದು 70ರ ದಶಕದ ತನಕ ಇದ್ದ ಭಾರತದ ಗ್ರಾಮೀಣ ಭಾಗದ  ಹಣಕಾಸಿನ ಚಿತ್ರಣ. ಸಾವಿರ ರೂಪಾಯಿ ನೋಟುಗಳೂ ಇದ್ದವಂತೆ. ಪ್ರಥಮ ಬಾರಿಗೆ,ತುರ್ತುಪರಿಸ್ಥಿತಿ ಆದ ನಂತರ 1977 ರಲ್ಲಿ ಕಾಂಗ್ರೆಸ್ಸೇತರ ಸರ್ಕಾರ ಅಂತ ಬಂದ ಮುರಾರ್ಜಿ ದೇಸಾಯಿ ಸರ್ಕಾರ ಅಮಾನತ್ತು ಮಾಡಿತ್ತು. ನಮ್ಮೂರಲ್ಲಿ ಇರಲಿಲ್ಲ, ನಾನೂ ನೋಡಿಲ್ಲ. ಒಟ್ಟಾರೆ ಹಣದ ವಿನಿಮಯ ಕೆಲವೇ ಕೆಲವು ಜನರಿಗೆ ಸೀಮಿತವಾಗಿತ್ತು.
    ಇನ್ನೂ 30 ವರ್ಷ ಹಿಂದಕ್ಕೆ,ಸ್ವತಂತ್ರ ಬಂದ ವೇಳೆಯ ಭಾರತದ ಹಣಕಾಸು ಪರಿಸ್ಥಿತಿಯನ್ನು ನೀವೇ ಊಹಿಸಿಕೊಳ್ಳಿ. ನನಗೆ ನೆನಪಿರುವ ಹಾಗೆ, ಸುಮಾರು ಐದಾರು ಅಂಗಡಿಗಳ ನಮ್ಮೂರಲ್ಲಿ ಅಂಗಡಿಗೊಂದರಂತೆ  ದಿನಕ್ಕೆ ಸರಾಸರಿ ಹತ್ತು ರೂಪಾಯಿಗಳ ವಹಿವಾಟು ಇರುತ್ತಿತ್ತು. ಅಂದರೆ ಇಡೀ ನಮ್ಮೂರ ದಿನವೊಂದರ ವಹಿವಾಟು ಐವತ್ತರಿಂದ ಅರವತ್ತು ರೂಪಾಯಿಗಳು!
    ಗಮನಿಸಬೇಕಾದ ಅಂಶವೆಂದರೆ, ಪ್ರತೀ ಮನೆಗಳಲ್ಲಿ ಅಲ್ಪ ಸ್ವಲ್ಪ ಬೆಳ್ಳಿ,ಬಂಗಾರ,ತಾಮ್ರ ಇರುತ್ತಿತ್ತು, ವ್ಯವಸಾಯೋತ್ಪನ್ನ ಸರಕುಗಳೊಂದಿಗೆ. ಹಾಗಾಗಿ ಹಣಕಾಸು ವ್ಯವಹಾರ ತನ್ನ ಗಂಭೀರತೆಯನ್ನು ಉಳಿಸಿಕೊಂಡು ಆಯ್ದ ಕೆಲವರು ಮಾತ್ರ ಇದರ ಗೊಡವೆಗೆ ಹೋಗುತ್ತಿದ್ದರು. ಆದ್ದರಿಂದ ಹಣ ಎನ್ನುವುದು ಸಾರ್ವತ್ರಿಕವಾಗಿ ಮನ್ನಣೆಗೆ ಪಾತ್ರವಾದ ಅಂಶ ಆಗಿರಲಿಲ್ಲ ಆಗ.
    ಪ್ರತಿ ಹಳ್ಳಿಗಳಲ್ಲೂ ಆಗಿನ ಜೀವನ ಕ್ರಮಕ್ಕೆ ಅವಶ್ಯ ಅನ್ನಿಸಿಕೊಂಡಿದ್ದ ವೃತ್ತಿ ಧರ್ಮದವರಿದ್ದರು. ಯಾರದರೊಬ್ಬರ ಕೊರತೆ ಇದ್ದರೆ ಊರವರೆಲ್ಲ ಸೇರಿ ಬೇರೆ ಊರಿನಿಂದ ಕರೆತಂದು ತಮ್ಮ ಊರಲ್ಲಿರಲು ಅನುಕೂಲ ಮಾಡಿಕೊಡುತ್ತಿದ್ದರು. ಇವರೆಲ್ಲರ ವಿನಿಮಯ ರೂಪಕವಾಗಿರುತ್ತಿದ್ದುದು ಬೆಳೆದ ದವಸ ಧಾನ್ಯಗಳೇ. ಹಾಗಾಗಿ ಸಮಾಜಕ್ಕೂ ಈ ಹಣದ ಆವಶ್ಯಕತೆ ಅಷ್ಟಾಗಿ ಇರುತ್ತಿರಲಿಲ್ಲ. ಪಟ್ಟಣಗಳ ವ್ಯವಹಾರಕ್ಕೆ ಹಣ ಬೇಕಿತ್ತು. ಅದಕ್ಕೆ ವ್ಯಾಪಾರಸ್ಥರು ಇದ್ದರು. ಹೀಗೆ ಅನ್ಯೋನ್ಯೆತೆಯ ಸಮಾಜಕ್ಕೆ ಹಣದ ಅವಶ್ಯಕತೆ ಅಷ್ಟಾಗಿ ಇರುತ್ತಿರಲಿಲ್ಲ. ಯಾವಾಗ ನಮ್ಮ ಸಾಮಾಜಿಕ ವ್ಯವಸ್ಥೆ ಹಲವಾರು ಕಾರಣಗಳಿಗೆ ಒಡೆದು ಹೊಯ್ತೋ ಆಗ ಈ ಹಣ ಮುಂದಲೆಗೆ ಬಂದು ಬಿಡುತ್ತದೆ. ಜೀವನ ಪೂರ್ತಿ ನೋಟುಗಳನ್ನು ನೋಡದೇ, ಹಣಕಾಸಿನ ವಿನಿಮಯ ಇಲ್ಲದೇ ಬಂದಂತಹ ಜನರಿಗೆ, ಈ ಹಣ ಕೈಯಲ್ಲಿ ಒಂದು ದಿನ ಇಲ್ಲವೆಂದರೂ ಜೀವನ ನಡೆಯದ ಪರಿಸ್ಥಿತಿಗೆ ಸಮಾಜ ತಲುಪಿದಾಗ, ಆಗಿನ ಎಲ್ಲ ರೀತಿಯ ಪರಿಹಾರಕ್ಕೆ ಹಣವೇ ಮುಖ್ಯವಾಗಿ, ಅಲ್ಲಿಯ ತನಕ ಇದ್ದ ವಿಶ್ವಾಸ,ನಂಬಿಕೆ ಅಂತಹ ಮಾನವೀಯ ಗುಣಗಳನ್ನು ತಿಂದು ಹಾಕುವ ರಾಕ್ಷಸ ಹಣ ಎಲ್ಲರ ಅನಿವಾರ್ಯ ಆಗುತ್ತದೆ. ಈಗ ಎಲ್ಲರೂ ಇದರ ಬೆನ್ನು ಹತ್ತುವುದು ಜೀವನದ ಗುರಿಯಾಗಿ ಬಿಡುತ್ತದೆ.
    ನಮ್ಮ ಸಂಸ್ಕೃತಿಯಲ್ಲಿ ಪೂಜ್ಯ ಭಾವನೆ ಬೆಳೆಸಿಕೊಂಡಿದ್ದಂತಹ,ಸಮಾಜಕ್ಕೆ ಅನಿವಾರ್ಯ ಆಗಿದ್ದಂತಹ ವೈದ್ಯ ಪದ್ದತಿ, ಗುರು ಪದ್ಧತಿಗಳಿಗೆ ಈ ಹಣದ ಸೋಂಕು ಹತ್ತದಿರಲು ರೂಢಿಸಿಕೊಂಡಿದ್ದ ಪದ್ದತಿ ನನಗೆ ಆಶ್ಚರ್ಯ ತರಿಸಿತ್ತು. ಇಂತಹ ಅನಿವಾರ್ಯ ವೃತ್ತಿಯವರು ತಮ್ಮ ಕೊಡುಗೆಗೆ ಇಂತಿಷ್ಟೇ ಹಣ ಕೊಡಬೇಕು ಎನ್ನುವ ನಿಯಮವನ್ನು  ನಿಷೇಧಿಸಿದ್ದರು. ಉಪಕಾರ ಪಡೆದವರು ಸಂತೋಷದಿಂದ  ಕೊಡಮಾಡುವ ದಕ್ಷಿಣೆ ಪದ್ದತಿ ಇತ್ತೇ ಹೊರತು,ಕಡ್ಡಾಯದ ಶುಲ್ಕ ಇರಲಿಲ್ಲ. ಅದೂ ಹಣದ ರೂಪದಲ್ಲಿಯೇ ಇರಬೇಕು ಎನ್ನುವ ನಿಯಮವೂ ಇರಲಿಲ್ಲ. ಏನೂ ಕೊಡದಿದ್ದರೂ ಕೃತಜ್ಞತಾಪೂರ್ವಕ ಗೌರವ ಸಾಕು ಅಂತ ಹೇಳಿದ್ದ ಆ ಸಮಾಜದ ನಿಯಮ ನನ್ನನ್ನು ಮೂಕನಾಗಿಸಿತ್ತು. ಬರೀ ಎಲೆ,ಅಡಿಕೆಗೆ ನಮ್ಮೂರಲ್ಲಿ ಸೂಲಗಿತ್ತಿಯರು ಹೆರಿಗೆ ಮಾಡಿಸಿದ್ದು ಇನ್ನೂ ನನ್ನ ನೆನಪಲ್ಲಿ ಇದೆ!
    ಇದರ ಹಿನ್ನಲೆಯಲ್ಲಿ ಸುಮ್ಮನೆ ಒಂದು ಸಾರಿ ನಾವು ದುಡಿದ ಹಣದ ಹೆಚ್ಚಿನ ಭಾಗ ಎಲ್ಲಿ ಹೋಗುತ್ತದೆ ಈಗ ಅಂತ ಯೋಚಿಸಿದಾಗ ನನಗೆ ಕಂಡದ್ದು ಈಗಿನ ಆಸ್ಪತ್ರೆಗಳಿಗೆ ಮತ್ತು ವಿದ್ಯಾಲಯಗಳಿಗೆ!  ನಮ್ಮ ಹಿರಿಯರು ರೂಪಿಸಿದ್ದ ನಮ್ಮ ಸಂಸ್ಕಾರಯುತ ನಿಯಗಳಲ್ಲಿ ಈ ಎರಡೂ ಸಮಾಜಕ್ಕೆ ಉಚಿತವಾಗಿ ದೊರೆಯುತ್ತಿದ್ದವು. ಅವರ ದೂರದೃಷ್ಟಿಗೆ ನಮನ ಹೇಳಲೇ ಬೇಕಲ್ಲವೇ?
    ಸಮಾಜದಲ್ಲಿ ನಂಬಿಕೆ,ವಿಶ್ವಾಸ,ಪ್ರೀತಿ ಕಡಿಮೆ ಆದಾಗ ಅವು ಮಾಡುತ್ತಿದ್ದ ಕೆಲಸವನ್ನು ಈ ಹಣ ಮಾಡಲು ಶುರು ಮಾಡಿತು ನೋಡಿ,ಆಗ ಎಲ್ಲರಿಗೂ ಇದು ಬೇಕಾಯ್ತು. ಹಾಗಾಗಿಯೇ ಮಾನವೀಯ ಮೌಲ್ಯ ಕಳೆದುಕೊಂಡ ಸಮಾಜಕ್ಕೆ ಹಣ ಅನಿವಾರ್ಯವಾಗಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣದ ವಹಿವಾಟು ಸಮಾಜದ ಎಲ್ಲ ಹಂತಗಳಲ್ಲಿಯೂ ಅನಿವಾರ್ಯವಾಯ್ತು. ಎಂತಹ ವಿಪರ್ಯಾಸ ಅಲ್ಲವಾ?
    ಇದರ ಹಿನ್ನಲೆಯಲ್ಲೇ ಬೆಳೆದ ನಮ್ಮನ್ನೂ ಸೇರಿದ ಪೀಳಿಗೆ  ಹಣಕ್ಕಾಗಿ ಎಲ್ಲ ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರಲು ಸಿದ್ದವಾಗಿಬಿಟ್ಟಿದೆ. ಕಾರಣ ಹಣ ಈ ಎಲ್ಲ ಮೌಲ್ಯಗಳನ್ನೂ ಸರಿಗಟ್ಟುತ್ತದೆ ಅಥವಾ ಮೀರಿಸಿದೆ ಅಂತ ಭಾವಿಸಿರುವುದು.
    ಈಗ ಹೇಳಿ ಸಮಸ್ಯೆ ಹಣದ್ದಾ ಅಥವಾ ಬದಲಾದ ಮೌಲ್ಯರಹಿತ ಸಮಾಜದ್ದಾ?
    ಸಂಸ್ಕೃತಿಯನ್ನು ಮರೆತು,ಲಂಗು ಲಗಾಮು ಇಲ್ಲದೆ ಗುರಿತಪ್ಪಿದ ಕುದುರೆಯಂತೆ ಹಣದ ಹಿಂದೆ ಓಡುತ್ತಿರುವ ಪೀಳಿಗೆಯದ್ದಾ?? ಅದಕ್ಕೇ ಹೇಳೋದು, ನಾವೆಷ್ಟೇ ಪದವಿಗಳನ್ನು ಪಡೆದು,ವಿದೇಶ ಸುತ್ತಿ ನಾಗರಿಕತೆಯ ಮುಸುಕು ಹಾಕಿಕೊಂಡರೂ ಹಿರಿಯರ ಪಂಕ್ತಿಗಳನ್ನು ಧಿಕ್ಕರಿಸಿ ಹೋದಷ್ಟೂ ಕತ್ತಲೆಯ ಕೂಪದ ಮಂಡೂಕಗಳಾಗುತ್ತೇವೆ ಅಂತ.

    ಭಾರತದಿಂದ ಸೂಪರ್ ಸಾನಿಕ್ ಕ್ಷಿಪಣಿ ಪರೀಕ್ಷೆ ವಿಶ್ವದ ರಕ್ಷಣಾ ಕ್ಷೇತ್ರದಲ್ಲಿ ಮೈಲಿಗಲ್ಲು

     
    ಭಾರತ ರಕ್ಷಣಾ ಸಂಶೋಧನೆಗಳಲ್ಲಿ ಮುಂಚೂಣಿಯ ರಾಷ್ಟ್ರಗಳ ಸಾಲಿಗೆ ಸೇರಿದೆ. ಇದೀಗ ಸೋಮವಾರ ನಡೆಸಿದ ಕ್ಷಿಪಣಿ ಪರೀಕ್ಷೆ ವಿಶ್ವದ ಭೂಪಟದಲ್ಲಿ ಈ ತಂತ್ರಜ್ಞಾನ ಹೊಂದಿದ ಕೆಲವೇ ರಾಷ್ಟ್ರಗಳ ಪಟ್ಟಿಗೆ ಭಾರತವನ್ನು ಸೇರಿಸಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿ.ಆರ್.ಡಿ.ಒ) ಸೋಮವಾರ ಯಶಸ್ವಿಯಾಗಿ ಹೈಪರ್ ಸಾನಿಕ್ ಟೆಕ್ನಾಲಜಿ ಡೆಮಾನ್ ಸ್ಟ್ರೇಟರ್ ವೆಹಿಕಲ್(ಎಚ್.ಎಸ್.ಟಿ.ಡಿ.ವಿ) ಯಶಸ್ವಿಯಾಗಿ ಪರೀಕ್ಷೆ ನಡೆಸಿದ್ದು ಅಮೆರಿಕಾ, ಚೀನಾ ಮತ್ತು ರಷ್ಯಾ ನಂತರ ಅಂತಹ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ನಾಲ್ಕನೇ ರಾಷ್ಟ್ರವಾಗಿದೆ.

    ಸೋಮವಾರ ಈ ಪರೀಕ್ಷಾರ್ಥ ಪ್ರಯೋಗವನ್ನು ಒಡಿಶಾದ ವೀಲರ್ ದ್ವೀಪದಲ್ಲಿರುವ ಅಬ್ದುಲ್ ಕಲಾಂ ಉಡ್ಡಯನ ಕೇಂದ್ರದಿಂದ ನಡೆಸಲಾಗಿದೆ. ಒಂದು ವರ್ಷದ ಹಿಂದೆಯೇ ಈ ಪ್ರಯೋಗ ನಡೆಸಲಾಗಿದ್ದರೂ ಆಗ ಎಲ್ಲ ಮಾನದಂಡಗಳನ್ನೂ ತಲುಪಲಾಗಿರಲಿಲ್ಲ. 

    ಸೋಮವಾರ ನಡೆಸಲಾದ ಕ್ಷಿಪಣಿ ಪರೀಕ್ಷೆಯು ಶಬ್ದದ ವೇಗಕ್ಕಿಂತ ಆರು ಪಟ್ಟು ವೇಗವಾಗಿ ಚಲಿಸಬಲ್ಲ ತಂತ್ರಜ್ಞಾನ ಹೊಂದಿದ್ದು ಮುಂದಿನ ಐದು ವರ್ಷಗಳಲ್ಲಿ ಮೊದಲ ಹೈಪರ್ ಸಾನಿಕ್ ಕ್ಷಿಪಣಿ ನಿರ್ಮಿಸಲಿದೆ. ಈ ತಂತ್ರಜ್ಞಾನವನ್ನು ದೂರ ಪ್ರದೇಶಕ್ಕೆ ಹಾರಿಸುವ ಕ್ಷಿಪಣಿಗಳಿಗೆ ಹಾಗೂ ಕಡಿಮೆ ವೆಚ್ಚದಲ್ಲಿ ಉಪಗ್ರಹಗಳನ್ನು ಹಾರಿಸಲು ಬಳಸಬಹುದು. ಈ ಕ್ಷಿಪಣಿಗೆ ದೇಸೀಯವಾಗಿ ಅಭಿವೃದ್ಧಿಪಡಿಸಲಾದ ಸ್ಕ್ರಾಮ್ ಜೆಟ್ ಪ್ರೊಪಲ್ಷನ್ ಸಿಸ್ಟಂ ಬಳಸಲಾಗಿದೆ.

    ಈ ವ್ಯವಸ್ಥೆಯ ವಿಶೇಷವೆಂದರೆ ಅವು ವಾತಾವರಣದಲ್ಲಿರುವ ಆಮ್ಲಜನಕವನ್ನು ಬಳಸುತ್ತವೆ ಮತ್ತು ಉಪಗ್ರಹವನ್ನು ಕಕ್ಷೆಯ ಮೇಲೆ ಕೂರಿಸಲು ಅಗತ್ಯವಾದ ಪ್ರೊಪೆಲ್ಲೆಂಟ್ ಅನ್ನು ಕಡಿಮೆ ಮಾಡುತ್ತವೆ. ಡಿ.ಆರ್.ಡಿ.ಒ ಪರೀಕ್ಷಿಸಿದ ಕ್ಷಿಪಣಿ ತಂತ್ರಜ್ಞಾನವು ಮುಂದಿನ ತಲೆಮಾರಿನ ಹೈಪರ್ ಸಾನಿಕ್ ವಾಹನಗಳನ್ನು ಸಿದ್ಧಪಡಿಸಲು ನೆರವಾಗಲಿದೆ. ಹೈಪರ್ ಸಾನಿಕ್ ಕ್ಷಿಪಣಿಗಳು ಗಂಟೆಗೆ 3,800 ಮೈಲಿ ಅಥವಾ 6,115 ಕಿ.ಮೀ.ಗಿಂತ ವೇಗವಾಗಿ ಪ್ರಯಾಣಿಸುತ್ತವೆ, ಇದು ಖಂಡಾಂತರ ಮತ್ತು ಕ್ರೂಸ್ ಕ್ಷಿಪಣಿಗಳಿಗಿಂತ ಅತ್ಯಂತ ವೇಗ ಹೊಂದಿವೆ. ಇವು ಸಾಂಪ್ರದಾಯಿಕ ಅಥವಾ ಪರಮಾಣು ಬಾಂಬ್ ಗಳನ್ನು ಕೆಲ ನಿಮಿಷಗಳಲ್ಲಿ ಗುರಿ ತಲುಪಿಸಬಲ್ಲವು. ಇವು ಪ್ರಯಾಣಿಸುವಾಗ ಊಹಿಸಬಲ್ಲ ಪರಿಧಿಯನ್ನು ಅನುಸರಿಸುವುದಿಲ್ಲ. ಅವು ಬ್ಯಾಲಿಸ್ಟಿಕ್ ಕ್ಷಿಪಣಿಗಳಂತೆ ವೇಗ ಮತ್ತು ಕ್ರೂಸ್ ಕ್ಷಿಪಣಿಗಳಂತೆ ದಾರಿ ಬದಲಿಸಬಲ್ಲವು. ಇದರ ವೇಗದಿಂದ ಸಾಂಪ್ರದಾಯಿಕ ಕ್ಷಿಪಣಿ ತಂತ್ರಜ್ಞಾನಕ್ಕೆ ಕಂಡುಕೊಳ್ಳಲು ಕಷ್ಟವಾಗಿಸುತ್ತದೆ. ಈಗಾಗಲೇ ಭಾರತ ಬ್ರಹ್ಮೋಸ್ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿದ್ದು ಅವು ರಾಮ್ಜೆಟ್ ಎಂಜಿನ್ ಹೊಂದಿವೆ. 

    ಭಾರತಕ್ಕೆ ಗಡಿ ತಂಟೆ ಮಾಡುತ್ತಿರುವ ಚೀನಾ ತನ್ನ ನೌಕಾಪಡೆಯ ಸಾಮರ್ಥ್ಯವನ್ನು ತೀವ್ರವಾಗಿ ಹೆಚ್ಚಿಸಿಕೊಳ್ಳುತ್ತಿದೆ. ವಿಮಾನಗಳನ್ನು ಹೊತ್ತೊಯ್ಯುವ ಹಡಗುಗಳು, ಸಬ್ ಮೆರಿನ್ ಗಳು ಇತ್ಯಾದಿಗಳಿಂದ ತನ್ನ ಶಕ್ತಿ ವೃದ್ಧಿಸಿಕೊಳ್ಳುತ್ತಿದೆ. ಆದರೆ ಚೀನಾಗೆ ಹೈಪರ್ ಸಾನಿಕ್ ಹಡಗು ನಿರೋಧಕ ಕ್ಷಿಪಣಿಗಳಿಲ್ಲ. ಭಾರತದ ಹಡಗು ನಿರೋಧಕ ಕ್ಷಿಪಣಿಗಳು ಚೀನಾಗೆ ಹೊಸ ಆತಂಕ ಹುಟ್ಟಿಸಿದೆ. ಇದು ಚೀನಾದ ಶಕ್ತಿಯುತಗೊಳ್ಳುತ್ತಿರುವ ನೌಕಾಬಲಕ್ಕೆ ಸೆಡ್ಡು ಹೊಡೆಯುತ್ತಿದೆ.

    ಹುಟ್ಟು ಹಬ್ಬದ ಶುಭಾಶಯಗಳು ಆಶಾ ಜೀ

    ನಮ್ಮ ಬಾಲಿವುಡ್ ಸಂಗೀತದ ಜೀವನಾಡಿ, ಕಲಾವಿದರ ಧ್ವನಿಯಾಗಿ ಪಾತ್ರಗಳು ಹಾಡುವ ಚೇತನವಾಗಿ ಸುಮಾರು ಏಳೂವರೆ ದಶಕಗಳಿಂದ ಹಲವಾರು ತಲೆಮಾರು ಕಲಾವಿದರ ಪಾತ್ರಗಳಲ್ಲಿ ಹಾಡುತ್ತಾ ಇಂದಿಗೂ ಹಾಡುತ್ತಲೇ ಇದ್ದಾರೆ ಆಶಾ ಭೋಂಸ್ಲೆ. ಈ ಇಂಪಾದ ದನಿ ಬಹುಶಃ ಮತ್ತೊಬ್ಬರಿಗಿಲ್ಲ. ಹತ್ತಿರದ ಪ್ರತಿದ್ವಂದಿ ಇವರ ಅಕ್ಕ ಲತಾಮಂಗೇಶ್ಕರ್.

    ತಂದೆ ದೀನಾನಾಥ ರವರಿಂದ ಶಾಸ್ತ್ರೀಯ ಗಾಯನವನ್ನು ಅಭ್ಯಸಿಸಿದ್ದರು. ಮುಂದೆ ಜೀವನದುದ್ದಕ್ಕೂ ಈ ಸಂಗೀತವೇ ಕೈ ಹಿಡಿಯಿತು. ಹತ್ತನೇ ವಯಸ್ಸಿನಲ್ಲಿ ಮರಾಠಿ ಚಿತ್ರವೊಂದರ ಹಿಂಬದಿಯ ಗಾಯಕಿಯಾಗಿ ಹಾಡುವ ಅವಕಾಶ ಸಿಕ್ಕಿತು, ನಂತರ ಹಿಂದಿ ಸಿನಿಮಾಗಳಲ್ಲೂ ಅವಕಾಶಗಳು ಬಂತು.

    ಯೌವನಕ್ಕೆ ಕಾಲಿಡುತ್ತಿದ್ದ ಆಶಾರವರು ಮನೆಯವರೆಲ್ಲರ ವಿರುದ್ಧವಾಗಿ ಲತಾ ಅವರ ಸೆಕ್ರೆಟ್ರಿಯಾಗಿದ್ದ ಗಣಪತ್ ಭೋಂಸ್ಲೆಯವರನ್ನು  ವಿವಾಹವಾದರು. ಆದರೆ ವಿವಾಹ ಊರ್ಜಿತವಾಗಲಿಲ್ಲ. ಇಬ್ಬರು ಮಕ್ಕಳು ಮತ್ತು ಗರ್ಭಿಣಿ ಯಾಗಿದ್ದ ಆಶಾರವರನ್ನು ಮನೆಯಿಂದ ಹೊರಹಾಕಲಾಯಿತು. ವಿಧಿಯಿಲ್ಲದೆ ತವರಿಗೆ ವಾಪಸ್ಸಾದರು. ತನ್ನ ತಪ್ಪಿನ ಅರಿವಾಯಿತು. ಜೀವನವನ್ನು ಮೂರು ಮಕ್ಕಳೊಂದಿಗೆ ಹೇಗೆ ಸಾಗಿಸಬೇಕೆಂದು ಅಳುತ್ತಿದ್ದರು.

    ಆಶಾ ತನ್ನ ಜೀವನದ ಜಂಜಾಟದಲ್ಲಿ ನರಳುತ್ತಿದ್ದಾಗ ಲತಾ ಅವರು ಹಲವು ಸಿನಿಮಾಗಳಲ್ಲಿ ಹಾಡಿ ವಿಖ್ಯಾತರಾದರು. ಆರ್ಥಿಕವಾಗಿ ಕಂಗಾಲಾಗಿದ್ದ ಆಶಾ ಜೀವನ ನಿರ್ವಹಣೆಗಾಗಿ ಹಾಡಲು ಶುರು ಮಾಡಿದರು. ಆದರೆ ಮೊದಮೊದಲು ಆಶಾತಾಯಿಯವರಿಗೆ ಸೈಡ್ ರೋಲ್ ಪಾತ್ರಕ್ಕೆ ಕ್ಯಾಬರೆ ಹಾಡುಗಳು ಅಥವಾ ‘ಸಿ’ ಗ್ರೇಡ್ ಸಿನಿಮಾಗಳಲ್ಲಿ ಹಾಡುವಂತಾಯಿತು. 1956ರಲ್ಲಿ ಒ ಪಿ ನಯ್ಯರ್  ಅವರ ಆಶ್ರಯದಲ್ಲಿ ಮತ್ತು
    ಉತ್ತೇಜನದಿಂದ ಹಾಡಲು ಶುರು ಮಾಡಿದ ಮೇಲೆ ಅದೃಷ್ಟದ ಬಾಗಿಲು ತೆರೆಯಿತು. ಹಲವಾರು ಹಾಡುಗಳು ಬಹಳ ಹಿಟ್ ಆದವು. ಪ್ರಸಿದ್ಧರಾದ ಎಲ್ಲಾ ಸಂಗೀತ ನಿರ್ದೇಶಕರು ಆಹ್ವಾನ ನೀಡಿ ಹಾಡಿಸಿದರು . ನಮ್ಮ ದೇಶದ ಮೂಲೆ ಮೂಲೆಯಲ್ಲಿ ಆಶಾ ಅವರ ಹಾಡುಗಳು ವಿಜೃಂಭಿಸಿದವು . ಡ್ಯುಯೆಟ್ ಹಾಡುಗಳನ್ನು ಕಿಶೋರ್ ಕುಮಾರ್, ಹೇಮಂತ್ ಕುಮಾರ್, ಮೊಹಮ್ಮದ್ ರಫಿ , ಮುಖೇಶ್ ಹೀಗೆ ಪ್ರಸಿದ್ಧರಾದ ಎಲ್ಲರ ಜತೆ ಹಾಡಿದ್ದಾರೆ. 1980ರಲ್ಲಿ ಸಂಗೀತ ನಿರ್ದೇಶಕರಾದ ಆರ್ ಡಿ ಬರ್ಮನ್ ಜೊತೆ ಮತ್ತೆ ವಿವಾಹವಾದರು. ಸಂತೋಷದ ಜೀವನ ಕೇವಲ ಹದಿನಾಲ್ಕು ವರ್ಷಗಳು ಮಾತ್ರ. ಪತಿ ಹೃದ್ರೋಗದಿಂದ ದೈವಾಧೀನರಾದರು.

    ಆಶಾ ಭೋಸ್ಲೆ ಅವರ ಕಂಠದಲ್ಲಿ ಅದೆಷ್ಟು ಇಂಪು ತಂಪು ಇದೆಯೆಂದರೆ ಎಂಥವರಿಗೂ ಗಾನಸುಧೆಯನ್ನು ಕೇಳುತ್ತಿದ್ದರೆ ಮನದಲ್ಲಿ ಸಂತೋಷದ ಅಲೆಗಳು ಏಳುತ್ತವೆ. ಅದೇನು ಸ್ಫೂರ್ತಿ, ಸಕಾರಾತ್ಮಕವಾಗಿ ಹಾಡುವ ಅವರನ್ನು ನೋಡುತ್ತಿದ್ದರೆ ಮತ್ತಷ್ಟು ಆನಂದ. ದುಃಖ ಕಷ್ಟಗಳಿಲ್ಲದ ಕನಸಿನ ಲೋಕದಲ್ಲಿ ತೇಲುತ್ತೇವೆ ಎನಿಸುತ್ತದೆ. ಅವರು ಹಾಡುವ ಪ್ರಣಯಗೀತೆಗಳಂತೂ ಯುವ ಜನತೆಗೆ ಬಹಳ ಇಷ್ಟ….ತಮ್ಮ ಜೀವನದ ಝಲಕ್ ಕಾಣುತ್ತಾರೆ.

    ಆಶಾರವರ ಸ್ಟೈಲ್ ನಲ್ಲಿ ಬಹಳ ವೈವಿಧ್ಯತೆಯಿರುತ್ತದೆ. ಅವರು ಹಾಡುವ ಹಾಡಿನ ರೇಂಜ್ ಬಹುಶಃ ಬೇರೆ ಯಾರಿಗೂ ತಲುಪಲು ಸಾಧ್ಯವಿಲ್ಲ.ಅಷ್ಟು ಸಲೀಸಾದ ದನಿಯ ಏರಿಳಿತಗಳು. ಲಿರಿಕ್ಸ್ ನಲ್ಲಿ ಸ್ಪಷ್ಟತೆ ಹಾಗೂ ಹಾಡುವಾಗ ಅವರು ಅನುಭವಿಸುವ ಸಂತಸ, ಪ್ರೇಕ್ಷಕರೂ ಗುನಗುನಾಯಿಸುವಂತೆ ಮಾಡುತ್ತದೆ. ಯಾವುದೋ  ಮಾಯಾಲೋಕದಲ್ಲಿ ಎಲ್ಲರೂ ಮಂತ್ರಮುಗ್ಧರಾಗುವಂತೆ ಮಾಡುತ್ತದೆ!  1981ರ ಉಮರೋಜಾನ್ ಚಿತ್ರದ ರೇಖಾಳ ದುಃಖತಪ್ತ ಅಭಿನಯ ಹಾಗೂ ಅದಕ್ಕೆ ತಕ್ಕ ಆಶಾರ ವಿರಹ ಗಾನ ಎಂತಹ ಸಂಜೋಗ್. ನಿಮ್ಮ ಕಣ್ಣಲ್ಲೂ ಎರಡು ಹನಿ ನೀರು ಬರುತ್ತೆ . ಎದೆ ಕಿವುಚಿದಂತಾಗುತ್ತದೆ . ಜ಼ರಾಸೆ ಝೂಮ್ ಲೆ … DDLJಯ ಈ ಗಾನ ಕೇಳಿದಾಗ ಹಾಡಿನ ಜತೆ ನೀವೂ ಡ್ಯಾನ್ಸ್ ಮಾಡುತ್ತೀರ! . ಆಶಾ ಅವರು ನಮ್ಮ ಕನ್ನಡದಲ್ಲೂ  ಹಾಡು ಹಾಡಿದ್ದಾ‌ರೆ.

    ಎಲ್ಲಾ ಸಂಗೀತ ಕಾರ್ಗಯಕ್ರಮಗಳಲ್ಲೂ ಅವರು ಬಿಳಿಯ ರೇಷ್ಮೆ ಕಾಂಟ್ರಾಸ್ಟ್ ಬಾರ್ಡರ್ ಇರುವ ಸೀರೆ ಉಟ್ಟಿರುತ್ತಾರೆ. ಕಿವಿಯಲ್ಲಿ ದೊಡ್ಡದಾದ ವಜ್ರದ ಓಲೆ , ಚಿನ್ನದ ನೆಕ್ಲೇಸ್ ಮತ್ತು ಕೈಗೆ ಮುತ್ತಿನ ಪಟ್ಟಿ ಅದಕ್ಕೆ ತೂಗಾಡುವ ವಜ್ರಗಳು. ಶ್ವೇತಾಂಬರಿಯಾದ ಆಶಾ ನೋಡಲು ನಿಜಕ್ಕೂ ಗಾನ ದೇವತೆಯೇ ಭೂಮಿಗೆ ಇಳಿದು ಬಂದಂತಿರುತ್ತದೆ.

    2018ರಲ್ಲಿ ಬೆಂಗಳೂರಿಗೆ ಬಂದು ಇಷ್ಟು ಇಳಿ ವಯಸ್ಸಿನಲ್ಲಿ ಮೂರು ಗಂಟೆಗಳ ಕಾಲ ನಮ್ಮೆಲ್ಲರನ್ನೂ ರಂಜಿಸಿದ್ದಾರೆ. ಸಾವಿರಾರು ಜನ ಮೂರು ಸಾವಿರ ರೂಪಾಯಿಯ ಟಿಕೆಟ್ ತೆಗೆದುಕೊಂಡು ಕಿಕ್ಕಿರಿದು ನೆರೆದಿದ್ದರು.ಇಷ್ಟೆಲ್ಲಾ ನಮ್ಮನ್ನು ರಂಜಿಸುವ ಆಶಾ ತಾಯಿಗೆ ಹೃದಯದಲ್ಲಿ ದುಃಖ ಹೆಪ್ಪುಗಟ್ಟಿದೆ. ಮಗಳು ವರ್ಷಾ 2012ರಲ್ಲಿ ಆತ್ಮಹತ್ಯೆ ಮಾಡಿಕೊಂಡಳು, ಮಗ ಹೇಮಂತ್ ಕ್ಯಾನ್ಸರ್ ನಿಂದ ಮರಣಿಸಿದ್ದಾನೆ, ಆದರೆ ತನ್ನ ದುಃಖವನ್ನು ಎಲ್ಲೂ ತೋರಿಸಿಲ್ಲ.

    ಈ ತಿಂಗಳ 8ಕ್ಕೆ 87 ವರ್ಷ ತುಂಬುತ್ತದೆ. ಈ ವಯಸ್ಸಿನಲ್ಲಿ ವೃದ್ಧಾಪ್ಯದ ತೊಂದರೆಗಳಿರುತ್ತವೆ. ಆದರೆ ಇವರು ಇವನ್ನೆಲ್ಲಾ ಮೆಟ್ಟಿ ನಿಂತಿದ್ದಾರೆ.ಆಶಾ ಸಂಗೀತ ಒಂದರಲ್ಲೇ ಪರಿಣಿತಿ ಪಡೆದಿಲ್ಲ ಇವರು ರುಚಿ ರುಚಿಯಾದ ಅಡುಗೆಯನ್ನೂ ಮಾಡುತ್ತಾರೆ. ಇವರು ದುಬೈ ಮತ್ತು ಕುವೇಟ್ ನಲ್ಲಿ ತಮ್ಮ ರೆಸ್ಟೋರೆಂಟ್ ಗಳನ್ನು ತೆಗೆದು ಬಿಸ್ನೆಸ್ ವುಮನ್ ಸಹ ಆಗಿದ್ದಾರೆ.

    ಜನ್ಮದಿನವಾದ  ಇಂದು (8ನೇ ಸೆಪ್ಟೆಂಬರ್ ) ಆಶಾ ತಾಯಿಯವರಿಗೆ ದೇವರು ಆಯುರಾರೋಗ್ಯ ಕೊಟ್ಟು ಕಾಪಾಡಲಿ ಎಂದು ನಾವೆಲ್ಲಾ ಪ್ರಾರ್ಥಿಸೋಣ.

    ದುಡ್ಡು ಇದ್ದರೆ ಜಗವೆಲ್ಲ..ದುಡ್ಡು ಇಲ್ದೆ ಜಗವಿಲ್ಲ ದುಡ್ಡಿನ ಮುಂದೆ ಜಗದಲ್ಲಿ ಬೇರೆ ದೇವ್ರೆ ಇಲ್ವಲ್ಲ ಈ ಲೋಕ ಹೀಗೇತಕೋ…

    ಅನ್ನವಿಲ್ಲದ ಜ್ಞಾನಿ ಬೋಧಿಸಲಾರ.

    ಅನ್ನವಿಲ್ಲದ ರಾಜ ರಾಜ್ಯಭಾರ ಮಾಡಲಾರ

    ಅನ್ನವಿಲ್ಲದ ಗಂಡಸು ಎಂಥ ಹೆಣ್ಣಿಗೂ,ಎಂದಿಗೂ ಗಂಡನಾಗಲಾರ

     ಅಪ್ಪ ಯಾವಾಗಲೂ ಹೇಳ್ತಿದ್ದ ಮಾತುಗಳು ಇವು. ಎಳೆಯ ದಿನಗಳಲ್ಲಿ ಏನೆಂದ್ರೆ ಏನೂ ಅರ್ಥ ಆಗದಿದ್ದ ಈ ವಾಕ್ಯಗಳು ಸರಿಯಾಗಿ ಅರ್ಥವಾದಾಗ ನಾನು ಸಿವಿಲ್ ಎಂಜಿನಿಯರಿಂಗ್ ಪದವೀಧರನಾಗಿ, ಹಸಿದ ಹೊಟ್ಟೆಯಲ್ಲಿ ಎಷ್ಟೋ ದಿನ ಮಲಗಿ, ಆ ವಾಕ್ಯಗಳಿಗೆ ಅನ್ನಕ್ಕೆ ಬದಲಾಗಿ ಹಣ ಎನ್ನುವುದನ್ನು ನಾನೇ ಸೇರಿಸಿಕೊಂಡು ದಿನವೂ ನೋಡುವ ಕನ್ನಡಿ ಪಕ್ಕ ಬರೆದುಕೊಂಡಿದ್ದೆ ಮತ್ತು ಈ ವಾಕ್ಯಗಳ ಮೇಲೆ ಕಣ್ಣು ಹಾಯಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದೆ.

    ಮಕ್ಕಳ ಕೈಯಲ್ಲಿ ಹಣ ಕೊಡಬಾರದು,ಕೊಟ್ಟರೆ ಕೆಡುವುದಕ್ಕೆ ದೊಡ್ಡವರೇ ದಾರಿ ಹೇಳಿದ ಹಾಗೆ ಆಗುತ್ತೆ ಅಂತ ನಂಬಿದ್ದ ಅಪ್ಪ,  ನನ್ನ ಕೈಗೆ ಐದು,ಹತ್ತು ಪೈಸೆಯನ್ನೂ ಕೊಡುತ್ತಿರಲಿಲ್ಲ. ಆಗ ಬೇಕೂ ಆಗಿರಲಿಲ್ಲ,ಅದು ಬೇರೆ ವಿಷಯ. ಬೇರೆ ನನ್ನ ಗೆಳೆಯರಂತೆ ನಮ್ಮೂರ ಜಾತ್ರೆಯಲ್ಲಿಯೂ ಏನನ್ನು ಕೊಂಡದ್ದು ಇಲ್ಲ. ದೀಪಾವಳಿಯ ದಿನದಂದು ಪಟಾಕಿ ಹೊಡೆಯಲೂ ಅಪ್ಪನ ಅಪ್ಪಣೆ ಇಲ್ಲ. ಇದಕ್ಕೆಲ್ಲ ನನಗೆ ಆಗ ಹಣ ಕೊಡುತ್ತಿದ್ದದ್ದು ಎಂದರೆ ನನ್ನ ಕೊನೆಯ ಚಿಕ್ಕಪ್ಪ. ಅಪ್ಪನ ಸ್ಟ್ರಿಕ್ಟ್ ರಾಜ್ಯಭಾರವನ್ನು ನನಗಿಂತ ಮೊದಲು ಅನುಭವಿಸಿದರು ಅವರು,ಹಾಗಾಗಿ ನನ್ನ ಇಷ್ಟ,ಕಷ್ಟ ಅವರಿಗೆ ಬಲು ಬೇಗ ಅರ್ಥವಾಗುತ್ತಿದ್ದವು. ಹಾಗಾಗಿ ನಾನು ಕಂಡ ಮೊದಲ ಐದು,ಹತ್ತು ಪೈಸೆಗಳು ನನ್ನ ಚಿಕ್ಕಪ್ಪನವೇ. ಅವು ಆಗ್ಗೆ ನಮ್ಮೆಲ್ಲಾ ಇಷ್ಟಾರ್ಥಗಳನ್ನು ತೀರಿಸುತ್ತಿದ್ದವು.

    ಪ್ರೌಢ ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಮಲ್ಲಾಡಿಹಳ್ಳಿಯ ಆಶ್ರಮದಲ್ಲಿ ಮುದ್ದೆ ಊಟದೊಂದಿಗೆ ಮುಗಿಸಿದ್ದೆ. ಆ ಐದು ವರ್ಷಗಳೂ ನನ್ನ ಖರ್ಚಿಗೆಂದು ಅಪ್ಪ ,ಆಶ್ರಮಕ್ಕೆ ಕೊಡುತ್ತಿದ್ದ ಹತ್ತು ರೂಪಾಯಿಯ ಮೇಲೆ ಐದು ರೂಪಾಯಿ ಕಳುಹಿಸುತ್ತಿದ್ದರು ಎಂ. ಓ. ಮೂಲಕ. ಅದರಲ್ಲೇ ಸೋಪು,ಪೇಸ್ಟ್, ಪೆನ್, ಇಂಕು, ಪೆನ್ಸಿಲ್, ರಬ್ಬರ್, ಗ್ರಾಫ್ ಪೇಪರ್…ಇತ್ಯಾದಿ. ಎಂಜಿನಿಯರಿಂಗ್ ಓದುವಾಗ ಇದು ಐವತ್ತು ರೂಪಾಯಿಗಳಿಗೆ ಬಡ್ತಿ ಹೊಂದಿತ್ತು, ಅಷ್ಟೇ ವ್ಯತ್ಯಾಸ. ಪ್ರತಿ ತಿಂಗಳೂ ಲೆಕ್ಕ ತೋರಿಸಬೇಕು!

    ಪಿಯು 2 ಓದುವಾಗ ಎಕ್ಸಾಮ್ ಟೈಂ, ರಾತ್ರಿ ತುಂಬಾ ಹೊತ್ತಿನವರೆಗೆ ಓದಬೇಕು, ಅದಕ್ಕೆ ಟೀ ಕುಡಿಯಬೇಕು, ಐದು ರೂಪಾಯಿ ಹೆಚ್ಚಿಗೆ ಮೂರು ತಿಂಗಳು ಕಳಿಸಿ ಅಂತ ಜನವರಿಯಲ್ಲಿ  ಪತ್ರ ಬರೆದಿದ್ದಕ್ಕೆ ಸಾಧನೆಗೆ ಅನುಕೂಲಗಳ ಅಗತ್ಯ ಇಲ್ಲ. ಸಾಧಕ ಅವನ್ನು ಬೇಡುವುದೂ ಇಲ್ಲ. ಅರ್ಜುನ ಪಾಶು ಪತಾಸ್ತ್ರ ತರಲು ಕಾಡಿಗೆ ಹೋದಾಗ ಧರ್ಮರಾಯನನ್ನು ಅದು ಬೇಕು,ಇದು ಬೇಕು ಅಂತ ಕೇಳಲಿಲ್ಲ. ಎಲೆ ತಿಂದು,ನೀರು ಕುಡಿದು ಕೊನೆಯಲ್ಲಿ ಬರೀ ಗಾಳಿ ಸೇವನೆ ಮಾಡಿ ಪಾಶುಪತಾಸ್ತ್ರ ಪಡೆದ ಅಂತ ಉತ್ತರ ಬಂದಾಗ,ಮತ್ತೆಂದೂ ಅಪ್ಪನನ್ನು ಹಣ ಕೇಳಬಾರದು ಅಂತ ನಿರ್ಧಾರ ಮಾಡಿಬಿಟ್ಟೆ,ಹಾಗೆಯೇ ನಡೆದುಕೊಂಡೆ ಸಹಾ,ಕೊನೆಯತನಕ! ಹಾಗಾಗಿ ನನಗೆ ಹಣದ ಆವಶ್ಯಕತೆ ಯಾವಾಗಲೂ ಇದೆ ಅಥವಾ ಬೇಕು ಅಂತ ಅನ್ನಿಸಲಿಲ್ಲ ಏನೋ ಆಗ.

    ಡಾಕ್ಟರ್ ಆಗಬೇಕು ಅಂತ ಬಹುದಿನದ ಕನಸು ನನಗೆ. ಬರೀ ಒಂದು ಮಾರ್ಕ್ ಲ್ಲಿ ನನಗೆ ಸರ್ಕಾರಿ ಸೀಟು ತಪ್ಪಿದ್ದ ದಿನ ಪೂರ್ತಿ ಬಳ್ಳಾರಿ ಮೆಡಿಕಲ್ ಕಾಲೇಜ್ ಎದುರಿಗೆ ಕುಳಿತುಕೊಂಡು ಅತ್ತಿದ್ದೆ. ಒಂದು ವೇಳೆ ಡಾಕ್ಟರ್ ಆಗಿದ್ದರೆ,ಇನ್ನೂ ಓದುತ್ತಲೇ ಇರ್ತಿದ್ದೆ ಏನೋ…ಆಗ ಆಶ್ರಮದಲ್ಲಿ ಆಯುರ್ವೇದ ಕಾಲೇಜು ಇದ್ದಿದ್ದರೂ ಅಲ್ಲಿಯೇ ಓದಿ ಬಿಡುತ್ತಿದ್ದೆ,ಶಿಸ್ತಿನ ಜೀವನ ರೂಪಿಸಿಕೊಂಡು. ಅದಾಗಲಿಲ್ಲ ಅಂತ ಸುರತ್ಕಲ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಸೀಟ್ ಸಿಕ್ಕಿದೆ, ಒಳ್ಳೆಯದು ಹೋಗಿ ಬಿಡು ಅಂದ್ರು. ಆಗ ಎಂಜಿನಿಯರಿಂಗ್ ಲ್ಲಿ ಎಷ್ಟು ಭಾಗಗಳು ಇದ್ದವು ಅಂತಾನೂ ಗೊತ್ತಿಲ್ಲ! ಬೇಕಿಲ್ಲದ ಹೆಂಡತಿಯೊಡಗಿನ ಸಂಸಾರ ಆಯ್ತು ನನ್ನ ಎಂಜಿನಿಯರಿಂಗ್. ಮುಂದೆ ಓದಲು ಮನಸ್ಸಿರಲಿಲ್ಲ, ಸರ್ಕಾರಿ ಸ್ಟೈಪೆಂಡ್ ನೊಂದಿಗೆ ಎಂ ಟೆಕ್ ಸೀಟ್ ಸಿಕ್ಕರೂ. ಅದೇನೋ ನನಗೆ ಹೃದಯಪೂರ್ತಿ ಇಷ್ಟ ಇಲ್ಲದ್ದನ್ನು ಮಾಡಲು ಇಂದಿಗೂ ಆಗಲ್ಲ. ನನ್ನ ಜೀವನದಲ್ಲಿ ಆತ್ಮ ಸಾಕ್ಷಿಗೆ ವಿರುದ್ಧವಾಗಿ ನಾನು ಏನನ್ನೂ ಮಾಡಿಲ್ಲ,ಎಷ್ಟೇ ಕಷ್ಟ ಬಂದರೂ. ನನ್ನ ಈ ಗುಣ ನನಗಷ್ಟೇ ಅಲ್ಲ, ನನ್ನ ಸುತ್ತ ಇರುವವರಿಗೂ ತೊಂದರೆ ಮಾಡುತ್ತದೆ ಅಂತಾದ ಮೇಲೆ, ಸ್ವಂತವಾಗಿ ಜೀವನ ರೂಪಿಸಿಕೊಳ್ಳಲು ಪ್ರಾರಂಭಿಸಿದೆ ನೋಡಿ,ಅಲ್ಲಿಂದ ಶುರು ಆಯ್ತು ಜೀವನದ ಮತ್ತೊಂದು ಮುಖದ ದರ್ಶನ! ಮತ್ತು ಹಣ,ಅನ್ನದ ಬೆಲೆ ಏನು ಅನ್ನುವ ವಿಷಯ.

    ಬಳ್ಳಾರಿಯಲ್ಲಿ ಈಗ ನನ್ನ ವೃತ್ತಿ ಆರಂಭಿಸುವವರು 3-4 ವರ್ಷಗಳಲ್ಲಿ ಎಸಿ ಕಾರ್ ಗಳಲ್ಲಿ ಅಡ್ಡಾಡುತ್ತಾರೆ. 90 ರ ದಶಕ ಹಾಗಿರಲಿಲ್ಲ. ನಾನು ಎಸಿ ಕಾರಿನಲ್ಲಿ ಅಡ್ಡಾಡಲು ಬರೋಬ್ಬರಿ 10 ವರ್ಷ ಹಿಡಿದವು. ಅದರ ಮಧ್ಯೆ ಮದುವೆ,ಮನೆ. ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಎಲ್ಲದರ ಮಧ್ಯೆ ಇವತ್ತಿಗೂ ಸಮಾಧಾನದ ವಿಷಯ ಎಂದರೆ ನಾನಂದು ಕೊಂಡ ಜೀವನವನ್ನು,ಅಂದು ಕೊಂಡಿದ್ದಕ್ಕಿಂತಲೂ ಹೆಚ್ಚಿನ ಸ್ತರದಲ್ಲಿ ಯಾರನ್ನೂ ನೋಯಿಸದೆ,ಹಿಂಸಿಸದೆ ಸ್ವಂತವಾಗಿಯೇ  ರೂಪಿಸಿಕೊಂಡೆ ಅನ್ನುವುದು. ಇದೇ ಈ ಸಮಾಧಾನವೇ ನನ್ನಲ್ಲಿ ಇವತ್ತಿಗೂ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತಿರುವುದು.
    ದಾರಿ ಮುಖ್ಯವಲ್ಲ,ಗುರಿ ಮುಖ್ಯ ಅನ್ನುವ ಒಂದು ಸಿದ್ದಾಂತ ಇದೆ. ಇದಕ್ಕೆ ನನ್ನದೇ ಆದ ತಕರಾರು ಇದೆ. ಗುರಿ ಮುಟ್ಟಿದ ಮೇಲೂ ಜೀವನ ಆನಂದವಾಗಿರಬೇಕು ಅಂತಾದರೆ,ನಡೆದು ಬಂದ ದಾರಿಯ ಪಾತ್ರ ತುಂಬಾ ಇರುತ್ತದೆ. ಈ ದಾರಿಯ ನೆರಳು ಗುರಿಯ ಮೇಲೆ ಪ್ರಭಾವ ಬೀರುತ್ತವೆ. ಅದಕ್ಕೆ ಸಾಕಷ್ಟು ನಿದರ್ಶನ ದಿನ ಬೆಳಗಾದರೆ ಎಲ್ಲರೂ ನೋಡುತ್ತೇವೆ. 

    ಕಾರು,ಬಂಗಲೆಗಳು ಇಲ್ಲದ ದಿನಗಳಲ್ಲಿ ನೆಮ್ಮದಿ ಕಂಡುಕೊಂಡಿದ್ದ ಸಂಸಾರಗಳು, ಅವೆಲ್ಲವುಗಳನ್ನು ಹೊಂದಿಯೂ ಅಪಘಾತಕ್ಕೀಡಾಗಿರುವುದು ನಾವು ನೋಡಿದ್ದೇವೆ, ನೋಡುತ್ತಿದ್ದೇವೆ ಕೂಡಾ. ನೆಪಕ್ಕೆ ನಾವು ಯಾರನ್ನೋ ಹೊಣೆ ಮಾಡಿದರೂ,ಆಳದಲ್ಲಿ ನಡೆದು ಬಂದ ದಾರಿಯ ಕರಿ ನೆರಳು ಅಂತಹ ಸಂದರ್ಭದಲ್ಲಿ ಕಾಣುತ್ತೇವೆ. ಎಷ್ಟೋ ಸಾರಿ ಹಣ ಎಲ್ಲವನ್ನೂ ಸರಿದಾರಿಗೆ ತರುತ್ತದೆ ಅನ್ನುವ ಅಂಶ ಇತ್ತೀಚೆಗೆ ಸಮಾಜದಲ್ಲಿ ಗಾಢವಾದ ಪ್ರಭಾವ ಬೀರುತ್ತದೆ. ಅದು ತಪ್ಪು. ಹಣ ಎಷ್ಟಿರಬೇಕೋ ಅಷ್ಟಿದ್ದರೆ ಚೆನ್ನ. ಎಲ್ಲದ್ದಾಕ್ಕೂ ಹಣ ಬೇಕು,ಆದರೆ ಹಣದಿಂದಲೇ ಎಲ್ಲವೂ ಅಲ್ಲ. ಅದು ಇರದಿದ್ದಾಗ ಏನೂ ಇಲ್ಲ,ಎಲ್ಲವೂ ಶೂನ್ಯ ಅನ್ನುವ ಭ್ರಮೆ ಬರುವುದು ನಿಜ. ಅದಕ್ಕಾಗಿಯೇ ಎಲ್ಲವನ್ನು ಕಳೆದುಕೊಂಡು ಗಳಿಸುವುದು ಮೂರ್ಖತನ.
    ಹಣ ಒಂದೇ ಸುಖಕ್ಕೆ ಕಾರಣ ಅಂತಾಗಿದ್ದರೆ, ಇಂದು ಯಾವ ಶ್ರೀಮಂತರೂ ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಿರಲಿಲ್ಲ ಮತ್ತು ಸಾವಿರ ಸಾವಿರ ಬಡ ಜನರು ನಗುತ್ತಾ ಜೀವನ ನಡೆಸುತ್ತಿರಲಿಲ್ಲ. ಅದೂ ಒಂದು ಜೀವನಕ್ಕೆ ಬೇಕಾದ ವಸ್ತು, ಅದೇ ಜೀವನವಲ್ಲ.

    ಇಂದು ಇಡೀ ಪ್ರಪಂಚ ಇದರ ಹಿಂದೆ ಯಾವ ರೀತಿ ಓಡುತ್ತಿದೆ ಅಂದರೆ, ಯಾರೂ ಇದನ್ನು ನಿಯಂತ್ರಿಸಲು ಆಗುತ್ತಿಲ್ಲ. ಎಲ್ಲರೂ ಮರೆತಿರುವುದು ಅದರ ಹೊರತಾಗಿಯೂ ಜೀವನ ಇದೆ ಎನ್ನುವಂಥ ಅಂಶವನ್ನು. ಸಮಾಜವೂ ಹಣ ಇದ್ದವರಿಗೆ ಮಾತ್ರ ಗೌರವ ತೋರುವುದು,ಈ ನಡಿಗೆಗೆ ಇನ್ನಷ್ಟು ಹುರುಪು ತಂದಿದೆ. ಬಹುಶಃ ಮನುಷ್ಯನ ಆಸೆ ಎನ್ನುವ ಗುಣ ಈ ಹಣದಿಂದ ಉತ್ತೇಜನ ಗೊಂಡು, ಇದರ ಪ್ರಾಮುಖ್ಯತೆಯನ್ನು ಹೆಚ್ಚಿಸಿ,ಬೇರೆಲ್ಲ ವಿಷಯಗಳನ್ನು ಗೌಣ ಮಾಡಿದೆಯೇನೋ ಅಂತ ನನ್ನ ಅನ್ನಿಸಿಕೆ.

    ನಿಮಗೆ ಮತ್ತೊಂದು ಅಪ್ಪಟ ಸತ್ಯ ಹೇಳ್ತೇನೆ. ಈ ಹಣವನ್ನು ಗಳಿಸಿದವರು ಯಾರೂ ಅದನ್ನು ಖರ್ಚು ಮಾಡಿ ಸುಖವಾಗಿಲ್ಲ. ಅದರ ಸುಖ ಪಡುವವರು ಬೇರೆ ಯಾರೋ. ಗಳಿಸುವುದಕ್ಕಾಗಿ ಎಲ್ಲವನ್ನು ತೊರೆದವರು ಅದನ್ನು ಅನುಭವಿಸಲು ಸಮಯ ಇಲ್ಲದೆ ಸತ್ತಿರುವುದು ಕಟು ಸತ್ಯ. ಅದನ್ನು ನೋಡಿಯೂ ಎಲ್ಲರೂ ಅದರ ಗಳಿಕೆಯ ಹಿಂದೆ ಬಿದ್ದಿರುವುದು ಅದರ ಮಾಯೆ ಏನೋ ಅಂತ ತುಂಬಾ ಸಾರಿ ನನಗೆ ಅನ್ನಿಸಿದೆ. ಅದನ್ನು ಗಳಿಸಿದ ಮೇಲೆ,ಗಳಿಸಿದವರ ಹತ್ತಿರ ಕುಳಿತುಕೊಂಡು ಮಾತನಾಡಿ. ಗಳಿಸುವ ಭರದಲ್ಲಿ ಏನೆಲ್ಲಾ ಅವರು ಕಳೆದು ಕೊಂಡರು ಅಂತ ಅರ್ಥ ಆಗುತ್ತೆ.

    ಇಷ್ಟೆಲ್ಲಾ ಹೇಳಿದ ನಂತರ, ನಾನು ಸರಿಯಾದ ಮಾರ್ಗದಲ್ಲೇ ಹಣ ಗಳಿಸುತ್ತಿದ್ದೇನೆ,ಅದನ್ನು ನಿಲ್ಲಿಸಿಬಿಡಬೇಕಾ ಅನ್ನುವ ಅನುಮಾನ ಬರುವುದು ಸಹಜ. ಹಾಗೆ ಹಣಕ್ಕಾಗಿಯೇ ಕರ್ಮಗಳನ್ನು ಮಾಡದೆ,ಹಣ ತಾನಾಗಿ ಬರುತ್ತಿರುವುದನ್ನು ಹಲವರಲ್ಲಿ ನಾವು ನೋಡುತ್ತೇವೆ. ಕೃಷ್ಣ ಭಗವದ್ಗೀತೆಯಲ್ಲೂ ಮಾಡಬೇಕಾದ ಕರ್ಮವನ್ನು ಪ್ರತಿಯೊಬ್ಬರೂ ಮಾಡಲೇಬೇಕು ಅಂತಾನೇ ಹೇಳಿರೋದು. ಹಣಕ್ಕಾಗಿ ಕರ್ಮ ಮಾಡೋದು, ಮಾಡಿದ ಕರ್ಮಕ್ಕೆ ಹಣ ಬರೋದು ಎರಡು ಬೇರೆ ಬೇರೆ ವಿಷಯ. ಉದಾಹರಣೆಗೆ ಒಬ್ಬ ಒಳ್ಳೆಯ ಡಾಕ್ಟರ್ ತನ್ನ 90ನೆಯ ಇಳಿ ವಯಸ್ಸಿನಲ್ಲಿ, ರಾತ್ರಿ 11 ರವರೆಗೆ ರೋಗಿಗಳನ್ನು ನೋಡುವುದನ್ನು ಗಮನಿಸಿರುತ್ತೇವೆ. ಅಲ್ಲಿ ಹಣಕ್ಕಾಗಿ ಆ ವೃದ್ಧ ಕರ್ಮ ಮಾಡುತ್ತಿಲ್ಲ. ಕರ್ಮಕ್ಕೆ ಪ್ರತಿಫಲವಾಗಿ ಹಣ ಬರುತ್ತಿರುತ್ತದೆ. ಆದರೆ ಆ ವೃದ್ಧ ವೈದ್ಯ ಬರುವ ಹಣಕ್ಕಿಂತಲೂ ಹೆಚ್ಚಿನ ಆನಂದವನ್ನು ತನ್ನ ಕರ್ಮದಿಂದ ಕಾಣುತ್ತಾನೆ. ತನ್ನೆಲ್ಲಾ ಬಾಹ್ಯ ಪ್ರಾಪಂಚಿಕ ಸುಖಗಳಿಂದ ವಂಚಿತನಾದರೂ ರೋಗಿಗಳ ಮುಗುಳ್ನಗೆಯಲ್ಲಿ ಅವರು ಸುಖ ಕಾಣುತ್ತಾರೆ. ಅಂತಹ ಸುಖವನ್ನು ಎಲ್ಲರೂ ಕಾಣಲು ಸಾಧ್ಯವಿಲ್ಲ.

    ಹಾಗೆ ಎಲ್ಲರನ್ನೂ ಅರಸಿ ಹಣ ಬರುವುದಿಲ್ಲ. ಹಣಕ್ಕಿಂತಲೂ ಮುಖ್ಯವಾದದ್ದು ಏನೋ ಇದೆ ಅಂತಾದಾಗ ಪ್ರತಿಯೊಬ್ಬರೂ ಅಂತಹ ಕರ್ಮ ಮಾಡಬೇಕಾಗುತ್ತದೆ. ಇಲ್ಲವಾದರೆ ಸಮಾಜಕ್ಕೆ ಅಂತಹವರಿಂದ ಅನ್ಯಾಯ ಆಗುತ್ತದೆ. ಈ ಹಣದಲ್ಲಿ ಅದರ ಗಳಿಸುವ ಮಾರ್ಗಗಳನ್ನು ಅನುಸರಿಸಿ ಒಳ್ಳೆ ಹಣ,ಕೆಟ್ಟ ಹಣ ಎರಡು ವಿಧ ಇದೆ ಎನ್ನುವುದನ್ನು ಪ್ರತಿಯೊಬ್ಬರೂ ಅರಿತಾಗ ಇದರಿಂದ ಉಂಟಾಗುವ ಎಲ್ಲ ರೀತಿಯ ಸಮಸ್ಯೆ,ತೊಂದರೆಗಳು ಇಲ್ಲವಾಗುತ್ತವೆ.ಹಣ ಎಲ್ಲರಿಗೂ ಬೇಕು, ಹಣವೇ ಎಲ್ಲವೂ ಅಲ್ಲ.

    ಅಪ್ಪ ನನ್ನ ಕೈಗೆ ಎಳೆ ವಯಸ್ಸಲ್ಲಿ ಐದು,ಹತ್ತು ಪೈಸೆ ಕೊಡಲಿಲ್ಲ ಅಂತ ಬೇಸರ ಆಗ ಇತ್ತು. ಆದರೆ ಹಾಗೆ ಕೊಡದೇ ಇದ್ದುದರಿಂದ ಇಂದು ನನ್ನಲ್ಲಿ ಇರುವುದೇ ಹೆಚ್ಚಾಗಿ ಕಾಣುತ್ತಿದೆಯೇನೋ ಅನ್ನುವ ಅನುಮಾನ ತುಂಬಾ ಸಾರಿ ಬಂದಿದೆ. ನಿನಗೆ ಖರ್ಚು ಮಾಡಲು ಬರುವುದಿಲ್ಲ ಅಂತ ನನ್ನ ಹೆಂಡತಿ,ಮಕ್ಕಳು ಹೇಳುತ್ತಿದ್ದರೆ, ಅಪ್ಪ ನಿನ್ನ ಖರ್ಚು ನನಗೆ ನೋಡಲು ಆಗಲ್ಲ,ತುಂಬಾ ದುಂದು ವೆಚ್ಚ ಮಾಡುತ್ತಿದ್ದಿಯ,ಹಾಗಾಗಿಯೇ  ನಿನ್ನ ಮನೆಯಲ್ಲಿ ಇರಲು ನನಗೆ ಆಗುತ್ತಿಲ್ಲ ಎನ್ನುತ್ತಿದ್ದರು.

    ಈ ಹಣ, ಇದರ ಮಾಯೆ ನನಗೆ ಇನ್ನೂ ಅರ್ಥ ಆಗುತ್ತಿಲ್ಲ. ಹಣ ಇರುವುದು ಖರ್ಚು ಮಾಡಲು ಅಂತ ಕೆಲವರ ವಾದ. ಅಲ್ಲ ಅದು ಇರುವುದೇ ಗಳಿಸಲು ಅಂತ ಮತ್ತೊಬ್ಬರ ವಾದ. ನೀವೇನಂತಿರಾ??

    Photo by Josh Appel on Unsplash

    ಬಿಜೆಪಿಗೆ ಸಿಹಿ ನೀಡುವುದೇ ಶಿರಾ?

    ಅಶೋಕ ಹೆಗಡೆ
    ಕರ್ನಾಟಕದ ಮಟ್ಟಿಗೆ ಅನಿರೀಕ್ಷಿತವಾಗಿ ಎದುರಾಗಿರುವ ಉಪ ಚುನಾವಣೆ ಎಂದರೆ ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ್ದು. ಜೆಡಿಎಸ್ ಶಾಸಕರಾಗಿದ್ದ ಮಾಜಿ ಸಚಿವ ಬಿ.ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದ ಈ ಕ್ಷೇತ್ರ ತಿಂಗಳ ಹಿಂದೆ ತೆರವಾಗಿದೆ.

    ಯಾವಾಗ ಕಳೆದ ವಾರ ಚುನಾವಣಾ ಆಯೋಗವು, `ಬಿಹಾರ ವಿಧಾನಸಭೆ ಚುನಾವಣೆ ಜತೆಗೇ ಶಿರಾ
    ಸೇರಿದಂತೆ ದೇಶದ ೬೪ ವಿಧಾನಸಭಾ ಕ್ಷೇತ್ರಗಳು, ಒಂದು ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸಲಾಗುವುದು’ ಎಂದು ಘೋಷಿಸಿತೋ, ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಇದ್ದಕ್ಕದ್ದಂತೆ ತೀವ್ರಗೊಂಡಿವೆ.

    ಮೇಲ್ನೋಟಕ್ಕೆ ಇಲ್ಲಿ ಬಿಜೆಪಿ ಅಸ್ತಿತ್ವ ಅಷ್ಟಾಗಿ ಕಾಣಿಸುವುದಿಲ್ಲ. ಕ್ಷೇತ್ರದಲ್ಲಿ ಜೆಡಿಎಸ್, ಕಾಂಗ್ರೆಸ್ ಬಿಗಿ ಹಿಡಿತ ಹೊಂದಿವೆ. ಹೀಗಾಗಿ ಒಮ್ಮೆ ಜೆಡಿಎಸ್, ಮತ್ತೊಮ್ಮೆ ಕಾಂಗ್ರೆಸ್ ಹೀಗೆ ಸರದಿಯಂತೆ ಆ ಎರಡು ಪಕ್ಷಗಳ ಅಭ್ಯರ್ಥಿಗಳೇ ಆಯ್ಕೆಯಾಗುತ್ತಿದ್ದಾರೆ. ಸ್ಥಳೀಯವಾಗಿಯೂ ಜೆಡಿಎಸ್, ಕಾಂಗ್ರೆಸ್‌ನದ್ದೇ ಜಟಾಪಟಿ, ಹಣಾಹಣಿ. ಬಿಜೆಪಿಗೆ ಮಂಡ್ಯದ ಕೆ.ಆರ್.ಪೇಟೆ ಕ್ಷೇತ್ರದ ಗೆಲುವು ಹೊಸ ಹುರುಪು ನೀಡಿದೆ. ಅಸ್ತಿತ್ವವೇ ಇಲ್ಲದ ಮಂಡ್ಯ ಜಿಲ್ಲೆಯಲ್ಲಿ ಕಮಲ ಅರಳಿಸಿದಂತೆ ಮಧುಗಿರಿಯಲ್ಲಿಯೂ ವಿಜಯ ಪತಾಕೆ ಹಾರಿಸುವ
    ಉಮೇದಿಯಲ್ಲಿದೆ ಪಕ್ಷ.

    ಹಾಗೆ ನೋಡಿದರೆ ಬಿಜೆಪಿ ವಿಚಾರದಲ್ಲಿ ಮಂಡ್ಯಕ್ಕೂ, ತುಮಕೂರಿಗೆ ಬಹಳ ವ್ಯತ್ಯಾಸವಿದೆ.
    ಈಗಲೇ ಹೇಳಿದಂತೆ ಮಂಡ್ಯದಲ್ಲಿ ಬಿಜೆಪಿ ಸಂಘಟನೆ ಹೆಚ್ಚೂಕಡಿಮೆ ಶೂನ್ಯವೇ ಆಗಿತ್ತು.
    ಪಕ್ಷದ ಅಭ್ಯರ್ಥಿಗಳು ಗೆದ್ದಿರುವ ದಾಖಲೆ ಇರಲಿಲ್ಲ. ತುಮಕೂರು ಜಿಲ್ಲೆ ಹಾಗಲ್ಲ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ದಶಕಗಳಿಂದಲೂ ಬಿಜೆಪಿ ಗೆಲುವು ಸಾಧಿಸಿದೆ. ತುಮಕೂರು ನಗರ, ತುಮಕೂರು ಗ್ರಾಮಾಂತರ ಸೇರಿದಂತೆ ಜಿಲ್ಲೆಯ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ, ಸಚಿವರೂ ಆಗಿದ್ದಾರೆ. ಈಗ ಆಡಳಿತ ಪಕ್ಷವೆಂಬ `ಅಸ್ತ್ರ’ ಬೇರೆ ಇದೆ. ಹೀಗಾಗಿ ಬಿಜೆಪಿ ಗೆಲುವು ಸಾಧಿಸಿದರೂ ಅಚ್ಚರಿ ಪಡಬೇಕಾದ ಸಂಗತಿ ಅಲ್ಲ.

    ಒಳಜಗಳದ ಲಾಭ: ಜೆಡಿಎಸ್, ಕಾಂಗ್ರೆಸ್‌ಗೆ ಶಿರಾದಲ್ಲಿ ಅಭ್ಯರ್ಥಿ ಆಯ್ಕೆಯೇ ಕಷ್ಟವಾಗಬಹುದು. ಆ ಪಕ್ಷಗಳು ಇನ್ನೂ ಅಭ್ಯರ್ಥಿ ಕುರಿತು ತಲೆ ಕೆಡಿಸಿಕೊಂಡಿದ್ದರೆ ಬಿಜೆಪಿಯು ಅಭ್ಯರ್ಥಿ ವಿಚಾರವಾಗಿ ಚಿಂತಿಸದೇ ಪಕ್ಷ ಸಂಘಟನೆಯನ್ನು ಆರಂಭಿಸಿದೆ. ಬೂತ್
    ಸಮಿತಿಗಳನ್ನು ಪುನರ್ ರಚಿಸಲಾಗಿದೆ. ಯಡಿಯೂರಪ್ಪ ಸರಕಾರದ ಸಾಧನೆಗಳನ್ನು
    ಮುಂದಿಟ್ಟುಕೊಂಡು ಪ್ರಚಾರವನ್ನೂ ಆರಂಭಿಸಿಯಾಗಿದೆ. ಹೀಗಾಗಿ ಆರಂಭಿಕವಾಗಿ ಬಿಜೆಪಿ ಮುನ್ನಡೆ ಸಾಧಿಸಿದೆ ಎಂದೇ ಹೇಳಬಹುದು.

    ಜೆಡಿಎಸ್‌ನಲ್ಲಿ ಸತ್ಯನಾರಾಯಣ ಕುಟುಂಬ ಮತ್ತು ಇತರ ಮುಖಂಡರ ನಡುವೆ ಪೈಪೋಟಿ ಶುರುವಾಗಿದೆ. ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಸ್ಪರ್ಧೆಗೆ ನಿರಾಕರಿಸಿದ್ದು,
    ಪುತ್ರ ಬಿ.ಎಸ್.ಸತ್ಯಪ್ರಕಾಶ್‌ಗೆ ಟಿಕೆಟ್ ನೀಡುವಂತೆ ವರಿಷ್ಠರನ್ನಮು ಕೋರಿದ್ದಾರೆ. ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ಅವರ ಪುತ್ರ ರಾಜೇಶ್ ಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಆರ್.ಉಮೇಶ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ಅವರ ಪತಿ ಕಲ್ಕೆರೆ ರವಿಕುಮಾರ್ ಟಿಕೆಟ್‌ಗಾಗಿ ಪ್ರಯತ್ನ ಆರಂಭಿಸಿದ್ದಾರೆ. ಅನುಕಂಪದ ಲಾಭ ಪಡೆಯುವ ಜೆಡಿಎಸ್ ಸಂಪ್ರದಾಯ ಗಮನಿಸಿದರೆ ಸತ್ಯಪ್ರಕಾಶ್‌ಗೆ ಟಿಕೆಟ್ ಸಿಗಬಹುದು.

    ಕಾಂಗ್ರೆಸ್‌ನಲ್ಲಿ ಕಳೆದ ಬಾರಿ ಸೋತರೂ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು ಕ್ಷೇತ್ರದ
    ಜತೆ ಸತತ ಸಂಪರ್ಕ ಇಟ್ಟುಕೊಂಡಿದ್ದಾರೆ. ಅದರಲ್ಲಿಯೂ ಕೊರೊನಾ ಲಾಕ್‌ಡೌನ್ ಸಮಯದಲ್ಲಂತೂ ಆಹಾರ, ಔಷಧ ವಿತರಿಸಿ ಜನರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ತಮಗೇ ಟಿಕೆಟ್ ಖಚಿತ ಎನ್ನುವ ವಿಶ್ವಾಸದಲ್ಲಿದ್ದಾರೆ. ಆದರೆ ಮಧುಗಿರಿಯ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ತಾವೂ ಟಿಕೆಟ್ ಆಕಾಂಕ್ಷಿ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಇದು ಜಯಚಂದ್ರ
    ಅವರಿಗೆ ಸ್ವಲ್ಪ ಕಸಿವಿಸಿ ತಂದಿದೆ.

    ಕ್ಷೇತ್ರದಲ್ಲಿ ಕುರುಬರು ಹಾಗೂ ಕುಂಚಿಟಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಿಂದೆ ಸೋತಿದ್ದ ಬಿಜೆಪಿಯ ಬಿ.ಕೆ.ಮಂಜುನಾಥ್, ಜೆಡಿಎಸ್‌ನ ಕಲ್ಕೆರೆ ರವಿಕುಮಾರ್ ಕುರುಬರು, ಉಳಿದವರು ಕುಂಚಿಟಿಗರು. ಹೀಗಾಗಿ ಅಭ್ಯರ್ಥಿ ಆಯ್ಕೆಯಲ್ಲಿ ಜಾತಿಯೂ ಪ್ರಮುಖ ಪಾತ್ರವಾಗಲಿದೆ. ಅದೇನೇ ಇರಲಿ, ಜೆಡಿಎಸ್ ಹಾಗೂ ಕಾಂಗ್ರೆಸ್‌ಗಳು ಇನ್ನೂ ಅಭ್ಯರ್ಥಿ ಆಯ್ಕೆ, ಒಳಜಗಳ ಬಗೆಹರಿಸಿಕೊಳ್ಳುವುದರಲ್ಲೇ ತಲ್ಲೀನವಾಗಿದ್ದರೆ ಬಿಜೆಪಿ ಮಾತ್ರ ಶಿರಾದಲ್ಲಿಯೂ ಗೆಲುವು ಸಾಧಿಸಲೇಬೇಕೆಂಬ ರಣೋತ್ಸಾಹದಿಂದ ಮುನ್ನುಗ್ಗುತ್ತಿರುವುದರಂತೂ ಸತ್ಯ.

    ಅಸ್ಥಿರತೆಯಲ್ಲಿ ಅಲ್ಪಕಾಲೀನ ಅವಕಾಶಗಳು

    ಷೇರುಪೇಟೆಯ ಚಟುವಟಿಕೆ ಮತ್ತು ಸೂಚ್ಯಂಕಗಳ ಚಲನೆಯನ್ನು ಗಮನಿಸಿದಾಗ, ವಿಶೇಷವಾಗಿ ಮಿಡ್‌ ಕ್ಯಾಪ್‌ ಮತ್ತು ಸ್ಮಾಲ್‌ ಕ್ಯಾಪ್‌ ಕಂಪನಿಗಳು ಎಷ್ಟರ ಮಟ್ಟಿಗೆ ಏರಿಕೆ ಕಂಡಿವೆ ಅಂದರೆ,  ಪಾಪ್‌ ಕಾರ್ನ್‌ ನನ್ನು ಹೊರಗಡೆ ಸ್ಟೋರ್ಸ್‌ ನಲ್ಲಿ ಖರೀದಿಸುವುದಕ್ಕೂ ಮತ್ತು ಅದನ್ನೇ ಮಲ್ಟಿಪ್ಲೆಕ್ಸ್‌ ಗಳಲ್ಲಿ ಖರೀದಿಸುವುದಕ್ಕೂ ಇರುವ ಬೆಲೆಯಲ್ಲಿರುವಷ್ಠೇ ವ್ಯತ್ಯಾಸವೆನ್ನುವಂತಾಗಿದೆ. 

    ಅಂದರೆ ಈಗಿನ ಈ ವಲಯಗಳ ಷೇರುಗಳು ಮಲ್ಟಿಪ್ಲೆಕ್ಸ್‌ ದರಗಳಲ್ಲಿವೆ ಎನ್ನಬಹುದು.  ಕಂಪನಿಗಳ ಸಾಧನೆಯನ್ನು,  ದೇಶದ ಆರ್ಥಿಕತೆಯನ್ನು ಪರಿಗಣಿಸದೆ, ಕೆಳ ರೇಟಿಂಗ್‌ ಗಳನ್ನು ಲೆಕ್ಕಿಸದೆ, ಎಲ್ಲವನ್ನೂ ಮೀರಿದ ರೀತಿಯಲ್ಲಿ ಏರಿಕೆ ಪ್ರದರ್ಶಿಸುತ್ತಿರುವ ಷೇರಿನಬೆಲೆಗಳು ʼವ್ಯಾಲ್ಯೂ ಪಿಕ್‌ ಗಿಂತ ಪ್ರಾಫಿಟ್‌ ಬುಕ್‌ʼ ಗೆ ಹೆಚ್ಚು ಆದ್ಯತೆ ನೀಡುವ ಹಂತದಲ್ಲಿವೆ.

    ಇದಕ್ಕೆ ಪೂರಕ ಅಂಶವೆಂದರೆ ಎಸ್‌ ಬಿ ಐ ಸ್ಮಾಲ್‌ ಕ್ಯಾಪ್‌ ಫಂಡ್‌ ಗಜಗಾತ್ರದ ಹೂಡಿಕೆಯನ್ನು ನಿರಾಕರಿಸಲು ನಿರ್ಧರಿಸಿದೆ ಎಂಬ ಸುದ್ಧಿಯು ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.  ಮಿಡ್‌ ಕ್ಯಾಪ್‌ ಮತ್ತು ಸ್ಮಾಲ್‌ ಕ್ಯಾಪ್‌ ಕಂಪನಿಗಳ ವ್ಯಾಮೋಹವನ್ನು ತ್ಯಜಿಸಿ ವ್ಯಾಲ್ಯೂ ಪಿಕ್‌ ನತ್ತ ಗಮನ ಹರಿಸಿ ಹೂಡಿಕೆಮಾಡಿದ ಬಂಡವಾಳವನ್ನು ಸುರಕ್ಷಿತಗೊಳಿಸುವುದನ್ನು ಗುರಿಯಾಗಿಸಿಕೊಳ್ಳಬೇಕಾಗಿದೆ.

    ಈಗಿನ ದಿನಗಳಲ್ಲಿ ಅಗ್ರಮಾನ್ಯ ಕಂಪನಿಗಳು ಪ್ರದರ್ಶಿಸುತ್ತಿರುವ ಏರಿಳತಗಳ ವೇಗ ಹೇಗಿದೆ ಎಂದರೆ ಅಲ್ಪಕಾಲದಲ್ಲೇ ಅಗಾಧವಾದ ಲಾಭ ಗಳಿಸುವ ಅವಕಾಶ ಸೃಷ್ಠಿಸಿಕೊಡುತ್ತಿವೆ ಎಂದೆನಿಸುತ್ತದೆ.

    ಬಯೋಕಾನ್‌ಕಂಪನಿಯ ಷೇರಿನ ಬೆಲೆ ಈ ಒಂದೇ ವಾರದಲ್ಲಿ ರೂ.372 ರ ಸಮೀಪದಿಂದ ರೂ.434 ರವರೆಗೂ ಏರಿಕೆ ಕಂಡು ರೂ.420 ರ ಸಮೀಪಕ್ಕೆ ಹಿಂದಿರುಗಿದೆ.

    ಗ್ಲೆನ್‌ ಮಾರ್ಕ್‌ ಫಾರ್ಮ ಕಂಪನಿಯ ಷೇರಿನ ಬೆಲೆ ಈ ವಾರದಲ್ಲಿ ರೂ.461 ರ ಸಮೀಪದಿಂದ ರೂ.501 ರವರೆಗೂ ಏರಿಕೆ ಕಂಡು ರೂ.476 ಕ್ಕೆ ಹಿಂದಿರುಗಿದೆ.

    ಮಹೀಂದ್ರ ಅಂಡ್‌ ಮಹೀಂದ್ರ ಷೇರಿನ ಬೆಲೆ ರೂ.602 ರಿಂದ ರೂ.655 ರ ವಾರ್ಷಿಕ ಗರಿಷ್ಠ ತಲುಪಿ ನಂತರ ರೂ.632 ರ ಸಮೀಪಕ್ಕೆ ಹಿಂದಿರುಗಿದೆ.

    ಸನ್‌ ಫಾರ್ಮ ಷೇರಿನ ಬೆಲೆ ಸಹ ರೂ.506 ರ ಸಮೀಪದಿಂದ ರೂ.560 ರವರೆಗೂ ಏರಿಳಿತ ಕಂಡು ರೂ.512 ರಲ್ಲಿ ಕೊನೆಗೊಂಡಿದೆ.
    ಅಂತೆಯೇ ಪ್ರಮುಖ ಕಂಪನಿಗಳಾದ ಲಾರ್ಸನ್‌ ಅಂಡ್‌ ಟೋಬ್ರೋ, ಲುಪಿನ್‌, ಲೌರಸ್‌ ಲ್ಯಾಬ್‌,  ಟಾಟಾ ಮೋಟಾರ್ಸ್‌, ಬಂಧನ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌, ರೇಮಾಂಡ್ಸ್‌,  ಆಕ್ಸಿಸ್‌ ಬ್ಯಾಂಕ್‌, ಎಸ್‌.ಬಿ.ಐ, ಹೆಚ್‌ ಎ ಎಲ್‌, ಆರತಿ ಡ್ರಗ್ಸ್‌, ಐಷರ್‌ ಮೋಟಾರ್ಸ್‌, ಇಂಡಸ್‌ ಇಂಡ್ ಬ್ಯಾಂಕ್‌ ‌,  ಐಸಿಐಸಿಐ ಬ್ಯಾಂಕ್‌, ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌,  ಒ ಎನ್‌ ಜಿ ಸಿ, ಯು ಪಿ ಎಲ್‌, ಭಾರತ್‌ ಫೋರ್ಜ್‌, ಮುಂತಾದ ಕಂಪನಿಗಳು ಪ್ರದರ್ಶಿಸಿದ ರಭಸದ ಏರಿಳಿತಗಳು ಪೇಟೆಯ ಅಸ್ಥಿರತೆಗೆ ಹಿಡಿದ ಕನ್ನಡಿಯಾಗಿದೆ.   ಈ ಏರಿಕೆ ಮತ್ತು ಇಳಿಕೆಗಳಿಗೆ ಕಾರಣಗಳು ವೈವಿಧ್ಯಮಯವಾಗಿದ್ದರೂ, ಅವಕಾಶಗಳು ಸೃಷ್ಠಿಯಾಗಿದ್ದಂತೂ ದಿಟವಲ್ಲವೇ?

    ಅಗ್ರಮಾನ್ಯ ಕಂಪನಿಗಳು ಅಂದರೆ ಲಾರ್ಜ್‌ ಕ್ಯಾಪ್‌ ಕಂಪನಿಗಳ ಬೆಲೆಗಳು ಇಳಿಕೆ ಕಂಡಾಗಾಗಲಿ, ಏರಿಕೆಯಲ್ಲಿದ್ದಾಗಾಗಲಿ ಒಮ್ಮೆ ವ್ಯಾಲ್ಯು ಪಿಕ್‌ ಮತ್ತೊಮ್ಮೆ ಪ್ರಾಫಿಟ್‌ ಬುಕ್‌ ಗೆ ತ್ವರಿತ ಅವಕಾಶಗಳನ್ನು ಕಲ್ಪಿಸಿಕೊಡುತ್ತಿವೆ.   ಇದನ್ನು ಪರಿಸ್ಥಿತಿಯು ಷೇರಿನ ಬೆಲೆಗಳು ಗರಿಷ್ಠ ಹಂತ ತಲುಪಿರುವ ಸಂಕೇತವೆನ್ನಬಹುದು.

    ಆಕರ್ಷಕ ಕಾರ್ಪೊರೇಟ್‌ ಫಲಗಳನ್ನು ಘೋಷಿಸಿದ ಕಂಪನಿಗಳು

    ಇನ್ನು ಮಿಡ್‌ ಕ್ಯಾಪ್‌ ಮತ್ತು ಸ್ಮಾಲ್‌ ಕ್ಯಾಪ್‌ ಕಂಪನಿಗಳಲ್ಲಿ ಅನೇಕ ಉತ್ತಮ ಕಂಪನಿಗಳೂ ಇವೆ.  ಬಾಲ್ಮರ್‌ ಲೌರಿ ಕಂಪನಿಯು ಪ್ರತಿ ಷೇರಿಗೆ ರೂ.7.50 ಯಂತೆ ಡಿವಿಡೆಂಡ್‌ ನೀಡಲಿದ್ದು ಷೇರಿನ ಬೆಲೆ ಮಾತ್ರ ರೂ.117 ರಲ್ಲಿದೆ.  ಹೈಡಲ್ಬರ್ಗ್‌ ಇಂಡಿಯಾ ಕಂಪನಿ ಪ್ರತಿ ಷೇರಿಗೆ ರೂ.6 ರ ಡಿವಿಡೆಂಡ್‌ ನೀಡಲಿದ್ದು ರೂ.185 ರ ಸಮೀಪ ವಹಿವಾಟಾಗುತ್ತಿದೆ.  ಬಾಲ್ಮರ್‌ ಲೌರಿ ಇನ್ವೆಸ್ಟ್ ಮೆಂಟ್‌ ಪ್ರತಿ ಷೇರಿಗೆ ರೂ.37.50 ರ ಡಿವಿಡೆಂಡ್‌ ನೀಡಲಿದ್ದು ರೂ.410  ರ ಸಮೀಪ ವಹಿವಾಟಾಗುತ್ತಿದೆ.  ಪ್ರತಿ ಷೇರಿಗೆ ರೂ.9 ರಂತೆ ಡಿವಿಡೆಂಡ್‌ ಪ್ರಕಟಿಸಿರುವ  ಗಾಂಧಿ ಸ್ಪೆಷಲ್‌ ಟ್ಯೂಬ್‌ ಷೇರಿನ ಬೆಲೆ ರೂ.225 ರ ಸಮೀಪವಿದೆ.  ಪಿಟಿಸಿ ಇಂಡಿಯಾ ಪ್ರತಿ ಷೇರಿಗೆ ರೂ.5.50 ಯಂತೆ ಡಿವಿಡೆಂಡ್‌ ಘೋಷಿಸಿದ್ದು ರೂ.59 ರ ಸಮೀಪ ವಹಿವಾಟಾಗುತ್ತಿದೆ.  ಹುಡ್ಕೋ ಕಂಪನಿ ಪ್ರತಿ ಷೇರಿಗೆ ರೂ.2.35 ರ ಡಿವಿಡೆಂಡ್‌ ನೀಡುವ ಕಂಪನಿ ಷೇರು ರೂ.37 ರ ಸಮೀಪದಲ್ಲಿದೆ.  ಅಂದರೆ ನಿರಂತರವಾಗಿ ಆಕರ್ಷಕ ಕಾರ್ಪೊರೇಟ್‌ ಫಲಗಳನ್ನು ವಿತರಿಸುವ ಕಂಪನಿಗಳ ಬೆಲೆ ಕುಸಿತ ಕಂಡಾಗ ಧೀರ್ಘಕಾಲೀನ ಹೂಡಿಕೆಯನ್ನಾಗಿ ಆಯ್ಕೆಮಾಡಿಕೊಳ್ಳಬಹುದು.  

    ಕಾಯಂ ಹೂಡಿಕೆದಾರರನ್ನಾಗಿಸಿದ ಕಂಪನಿಗಳು

    ಒಂದು ಸಮಯದಲ್ಲಿ ಪ್ರಚಂಡ ಬೇಡಿಕೆಯಿಂದ ಮಿಂಚಿದ್ದಂತಹ  ಬರೋಡಾ ರೇಯಾನ್‌, ಐಸಿಡಿಎಸ್‌,  ಸಿಫ್ಕೋ ಫೈನಾನ್ಸ್‌,  ದೀವಾನ್‌ ಟೈರ್ಸ್‌,  ಫ್ಲಾಲೆಸ್‌ ಡೈಮಂಡ್‌, ಶ್ಯಾಂಕಿನ್‌ ಮಲ್ಟಿಫ್ಯಾಬ್‌, ಶ್ಯಾಂಕಿನ್‌ ಸ್ಪಿನ್ನರ್ಸ್‌, ಎಸ್‌ ಎಂ ಡೈಕೆಂ, ಹಿಂದೂಸ್ಥಾನ್‌ ಡೆವೆಲಪ್‌ ಮೆಂಟ್‌ ಕಾರ್ಪೊರೇಷನ್‌,  ಮಾಡರ್ನ್‌ ಡೆನಿಮ್‌,  ಸ್ಪಾರ್ಟೆಕ್‌ ಸಿರಾಮಿಕ್ಸ್,  ಸಿಲ್ವರ್‌ ಲೈನ್‌ ಟೆಕ್ನಾಲಜೀಸ್‌,  ಸ್ಟೈಲ್ಸ್‌ ಇಂಡಿಯಾ ಕಂಪನಿಗಳು ಬದಲಾದ ಪರಿಸ್ಥಿತಿ, ಚಿಂತನೆಗಳೂ ಸೇರಿದಂತೆ ವೈವಿಧ್ಯಮಯ ಕಾರಣಗಳಿಂದ ವಹಿವಾಟಿನಿಂದ ಮಾಯವಾಗಿ, ನಂತರ ಸ್ಟಾಕ್‌ ಎಕ್ಸ್‌ ಚೇಂಜ್‌ ಗಳ ನಿಯಮಗಳಿಗೆ ಬದ್ಧರಾಗಲು ಎಡವಿ ಡಿಲೀಸ್ಟ್‌ ಆಗಿ ಹೂಡಿಕೆ ಮಾಡಿದ ಅಗಾಧ ಸಂಖ್ಯೆಯ ಹೂಡಿಕೆದಾರರನ್ನು, ಹೂಡಿಕೆಯ ಮೌಲ್ಯವನ್ನು ಶೂನ್ಯಗೊಳಿಸುವುದರೊಂದಿಗೆ ಕಾಯಂ ಹೂಡಿಕೆದಾರರನ್ನಾಗಿಸಿವೆ.

    ಹಾಗಾಗಿ ಹೂಡಿಕೆಗೆ ಈಗ ಆಯ್ಕೆ ಮಾಡಿಕೊಳ್ಳುವಾಗ ಈ ರೀತಿಯ ಅಪಾಯದ ಅರಿವಿನಿಂದ ನಿರ್ಧರಿಸುವುದು ಸರಿ.  ಈಗಿನ ಪರಿಸ್ಥಿತಿಯಲ್ಲಿ ಹೂಡಿಕೆ ಮಾಡುವಾಗಲೇ, ರಿಟರ್ನ್‌ ಟಿಕೆಟ್‌ ನಂತೆ ಮಾರಾಟಮಾಡುವ ಉದ್ದೇಶದಿಂದಲೇ ಖರೀದಿಸುತ್ತಿದ್ದೇನೆ ಎಂಬ ಭಾವನೆಯಿರಬೇಕು.  ಭಾವನಾತ್ಮಕತೆಯಿಂದ ದೂರವಿರುವುದೇ ಹೂಡಿಕೆಯ ಯಶಸ್ಸಿಗೆ ಸುಲಭ ಸೂತ್ರ.

    ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಸಂವಿಧಾನದ ಆಶಯ ಎತ್ತಿ ಹಿಡಿಯಲು ನೆರವಾದ ಸ್ವಾಮೀಜಿ


    ಕೇರಳದ ಗಡಿಯಲ್ಲಿರುವ ಎಡನೀರು ಮಠದ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಅವರು ದೇವರ ಪಾದ ಸೇರಿದ್ದಾರೆ. ಅವರು ಬಿಟ್ಟು ಹೋದ ಹೆಜ್ಜೆಗಳು ಹಲವು. ಅವುಗಳ ಪೈಕಿ ಭಾರತದ ಪ್ರಜಾತಂತ್ರದ ಉಳಿವಿಗೆ ಅವರು ನೀಡಿದ ಕಾಣಿಕೆಯೂ ಬಹು ಮುಖ್ಯವಾಗುತ್ತದೆ.

    ಕೇಶವಾನಂದ ಭಾರತಿ ಸ್ವಾಮೀಜಿ ಮತ್ತು ಕೇರಳ ಸರಕಾರದ ನಡುವಿನ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿ ಅಲ್ಲಿ 13 ಸದಸ್ಯರ ಪೂರ್ಣಪೀಠ 7-6ರ ಅನುಪಾತದಲ್ಲಿ ನೀಡಿದ ತೀರ್ಪು ಭಾರತದ ಸಂವಿಧಾನದ ರಕ್ಷಣೆ, ಭಾರತೀಯ ನಾಗರಿಕರ ಹಕ್ಕುಗಳ ಸುರಕ್ಷತೆಯ ಬಗ್ಗೆ ನೀಡಿದ್ದ ಐತಿಹಾಸಿಕ ತೀರ್ಪು ಆಗಿಯೇ ಪರಿಗಣಿತವಾಗಿದೆ. ಮೂಲಭೂತ ಹಕ್ಕಿನ ಬಗ್ಗೆ ಯಾವುದೇ ಪ್ರಕರಣ ಬಂದರೂ ಇದೇ ಪ್ರಕರಣವನ್ನು ನ್ಯಾಯಾಲಯ ಉಲ್ಲೇಖಿಸುತ್ತಲೇ ಬಂದಿದೆ.

    ಏನಿದು ಪ್ರಕರಣ
    ಕೇರಳ ಸರಕಾರ ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೆ ತರಲು ಉದ್ದೇಶಿಸಿತ್ತು. ಕರ್ನಾಟಕದಲ್ಲೂ ಇದು ಜಾರಿಗೆ ಬಂದಿತ್ತು ಬಿಡಿ. ಆದರೆ ಇದು ಅದಕ್ಕಿಂತ ಭಿನ್ನ. ಎಡನೀರು ಮಠದ ಆಸ್ತಿಯನ್ನು ವಶಕ್ಕೆ ಪಡೆದುಕೊಂಡು ಅದನ್ನು ಬೇರೆಯವರಿಗೆ ಹಂಚುವ ಹುನ್ನಾರ ಅದರಲ್ಲಿತ್ತು. ಇದನ್ನು ಮನಗಂಡ ಶ್ರೀ ಕೇಶವನಾಂದ ತೀರ್ಥ ಭಾರತಿ ಸ್ವಾಮೀಜಿಗಳು ನ್ಯಾಯಾಲಯದ ಮೊರೆ ಹೋದರು. ಆದರೆ ರಾಜ್ಯ ಹೈಕೋರ್ಟ್ ನಲ್ಲಿ ಅವರ ಪರವಾಗಿ ತೀರ್ಪು ಬರಲಿಲ್ಲ. ಹೀಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಬೇಕಾಯಿತು.

    ರಾಜ್ಯಾಂಗ ಅಂದರೆ ಸಂಸತ್ತು ಮತ್ತು ನ್ಯಾಯಾಂಗ ನಡುವಿನ ತಿಕ್ಕಾಟ ಆಗಿನ ಸಂದರ್ಭ ಸಾಮಾನ್ಯವಾಗಿತ್ತು. ಆಗಿನ ಪ್ರಧಾನಿ ದಿವಂಗತ ಶ್ರೀಮತಿ ಇಂದಿರಾ ಗಾಂಧಿ ಅವರು ಆಗಲೇ ರಾಷ್ಟ್ರೀಕರಣದ ಮೂಲಕ ಹೆಸರು ಮಾಡಿದ್ದರು.ಅನಂತರ ಆಗ ಅವರ ಮನಸ್ಸಿಗೆ ಬಂದಿದ್ದೇ ಮಠ-ಮಾನ್ಯಗಳ ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳುವುದು. ಪ್ರಾಯಶಃ ಅದರಲ್ಲಿ ಉತ್ತರ ಭಾರತದ ಊಳಿಗಮಾನ್ಯ ಪದ್ಧತಿಯ ಜಮೀನ್ದಾರರನ್ನು ಮಟ್ಟಹಾಕುವ ಉದ್ದೇಶ ಇರಬಹುದಿರಬಹುದು. ಆದರೆ, ಅದಕ್ಕಿಂತಲೂ ಮುಖ್ಯವಾಗಿ ಓಟ್ ಬ್ಯಾಂಕ್ ಅವರಿಗೆ ಮುಖ್ಯವಾಗಿತ್ತು.

    ಸಂಸತ್ತಿನ ಎರಡೂ ಸದನಗಳಲ್ಲಿ ಬಲಾಢ್ಯ ಮತ್ತು ಏಕಮೇವ ದ್ವಿತೀಯ ಪಕ್ಷವಾಗಿದ್ದ ಕಾಂಗ್ರೆಸ್ ಇಂದಿರಾ ಗಾಂಧಿ ನೇತೃತ್ವದಲ್ಲಿ ಹೊಸದೊಂದು ಕಾಯ್ದೆ ಜಾರಿಗೆ ಮುಂದಾಯಿತು. ಅದುವರೆಗೆ ರಾಜ್ಯ ಪಟ್ಟಿಯಲ್ಲಿ ಬರುವ ಭೂ ವ್ಯವಹಾರ, ಕೇಂದ್ರ ಸರಕಾರದ ಪಟ್ಟಿಯಲ್ಲಿ ಸೇರುವ ರೀತಿಯಲ್ಲಿ ಸಂವಿಧಾನಕ್ಕೇ ತಿದ್ದುಪಡಿ ನಡೆಸುವಲ್ಲಿ ಯಶಸ್ವಿಯಾಯಿತು (9ನೇ ಪರಿಚ್ಚೇದ).

    ಶುರುವಾಯಿತು ಕಾನೂನು ಹೋರಾಟ

    ಇದು ಕೇವಲ ಕೇಶವಾನಂದ ಭಾರತಿ ಸ್ವಾಮೀಜಿಗಳಿಗೆ ಮಾತ್ರ ಸೀಮಿತವಲ್ಲ. ಅದಕ್ಕೆ ಮೊದಲು, ಗೋಲಕ್ ನಾಥ್ ವರ್ಸಸ್ ಪಂಜಾಬ್ ಗವರ್ನೆಂಟ್ (1967) ಸೇರಿದಂತೆ ಇಂತಹ ಹಲವು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಸಂಸತ್ತಿನ ಪಾರಮ್ಯ ಅಥವಾ ಸಾರ್ವಭೌಮತೆಯನ್ನು ಎತ್ತಿ ಹಿಡಿದಿತ್ತು. ಆದರೆ, ಯಾವಾಗ ಕೇಶವಾನಂದ ಭಾರತಿ ಸ್ವಾಮೀಜಿಗಳ ಪ್ರಕರಣ ಮೆಟ್ಟಿಲೇರಿತು ಆಗ ಸ್ವತಃ ಆಗಿನ ಖ್ಯಾತ ವಕೀಲ ಹಾಗೂ ಸಂವಿಧಾನ ತಜ್ಞ ನಾನಿ ಪಾಲ್ಕಿವಾಲ್ ಸ್ವಯಂ ಸಂವಿಧಾನದ ಆಶಯಗಳ ರಕ್ಷಣೆಗೆ ಮುಂದಾಗಿ ಸ್ವಾಮೀಜಿಯವರ ಮನವೊಲಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸುವಂತೆ ಒತ್ತಾಯಿಸಿದ್ದರು ಎಂದು ಹೇಳಲಾಗಿದೆ (ದಂತ ಕಥೆಯೆಂದರೆ ನಾನಿ ಪಾಲ್ಕಿವಾಲ್ ಅವರ ಆಗಿನ ದರ ನಿಮಿಷಗಳಿಗೆ ಒಂದು ಲಕ್ಷ ರೂ. ಇತ್ತಂತೆ !).

    ಸಂವಿಧಾನದ 13ನೇ ವಿಧಿ ಮತ್ತು ಹೆಚ್ಚುವರಿಯಾಗಿ ಇಂದಿರಾ ಗಾಂಧಿ ಸರಕಾರ ಸೇರಿಸಿದ 9ನೇ ಪರಿಚ್ಛೇದದ ಕಾನೂನಾತ್ಮಕತೆಯನ್ನು ಅವರು ಪ್ರತ್ಯೇಕ ಪ್ರತ್ಯೇಕವಾಗಿ ನ್ಯಾಯಾಲಯದಲ್ಲಿ ತಮ್ಮ ಪ್ರಖರ ವಾದದ ಮೂಲಕ ಪ್ರಶ್ನಿಸಿದ್ದರು.ಕೊನೆಗೆ ನ್ಯಾಯಕ್ಕೆ ಜಯ ಸಂದಿತು. ಸ್ವಾಮೀಜಿ ಗೆಲವು ಸಾಧಿಸಿದರು. ಆ ಮೂಲಕ ಇಡೀ ಭಾರತದ ಪ್ರಜಾತಂತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದರ.

    ಈಗಲೂ ವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆ ಬಂದರೆ ಆಗ ಉಲ್ಲೇಖವಾಗುವುದೇ ಕೇಶವಾನಂದ ಭಾರತಿ ಸ್ವಾಮೀಜಿ ವರ್ಸಸ್ ಕೇರಳ ಗವರ್ನಮೆಂಟ್ ಎಂಬ ಲ್ಯಾಂಡ್ ಮಾರ್ಕ್ ಜಡ್ಜ್ ಮೆಂಟ್.ಕೊನೆಗೂ ಸ್ವಾಮೀಜಿ ಗೆದ್ದು ಬಿಟ್ಟರು. ಮೂಲಭೂತ ಹಕ್ಕು ಮತ್ತು ಸಂಸತ್ತಿನ ಪಾರಮ್ಯದ ನಡುವಿನ ತೆಳುವಾದ ಗೆರೆಯನ್ನು ಸುಪ್ರೀಂ ಕೋರ್ಟ್ ಅಳಿಸಿ, ಅದಕ್ಕೆ ಸ್ಪಷ್ಟ ಗಡಿ ರೇಖೆ ಹಾಕಿ ಬಿಟ್ಟಿತು. ಇಲ್ಲವಾದರೆ ಈಗ ಸಂಸತ್ತು ಅಂಗೀಕರಿಸುವ ಯಾವುದೇ ಕಾಯ್ದೆಯನ್ನು ವಿಧಿಯಿಲ್ಲದೆ ನಾವು ಒಪ್ಪಿಕೊಳ್ಳಬೇಕಾಗುತ್ತಿತ್ತು

    error: Content is protected !!