ಮಧ್ಯಮ ವರ್ಗದ ಕುಟುಂಬಗಳಿಗೆ ಶ್ರೀಮಂತಿಕೆ ಅಂದರೇಕೆ ಭಯ
ಆಗಿನ ಕಥೆಗಳು ಶುರು ಆಗುತ್ತಿದ್ದುದೇ ಒಂದೂರಲ್ಲಿ ಒಬ್ಬ ರಾಜ ಇದ್ದ ಅಂತ ಅಥವಾ ಒಬ್ಬ ಶ್ರೀಮಂತ ಇದ್ದ ಅಂತ. ನಂತರ ಒಬ್ಬ ಬಡವನಾದ್ರೂ ಇರ್ತಿದ್ದ ಇಲ್ಲ ಒಬ್ಬ ಕಳ್ಳನಾದ್ರೂ ಇರ್ತಿದ್ದ ಆ ಕಥೆಗಳಲ್ಲಿ. ನನಗೆ ಆಗ ಇವರೆಲ್ಲ ಈಗಲೂ ಇದ್ದಾರಾ,ಇದ್ದರೆ ಎಲ್ಲಿದ್ದಾರೆ,ನಾನು ನೋಡಬಹುದಾ ಎನ್ನುವಂತಹ ಕುತೂಹಲಗಳು.
ಈಗ ರಾಜರುಗಳು ಇಲ್ಲ.ಉಳಿದವರು ಇದ್ದಾರೆ ಅಂತ ಅಪ್ಪ ಹೇಳಿದರೆ, ಮತ್ತೆ ಸಂಡೂರು ರಾಜ,ಮೈಸೂರು ಮಹಾರಾಜ ಅಂತ ನೀನೇ ಹೇಳ್ತಿದ್ದೀಯ ಅಂತ ಕೇಳುವ ನನ್ನ ಪ್ರಶ್ನೆಗೆ, ಹೆಸರುಗಳು ಹಾಗೇ ಉಳಿದುಕೊಂಡು ಬಂದಿವೆ,ಅವರ ರಾಜ್ಯಗಳು ಇಲ್ಲ ಈಗ ಅಂತಿದ್ದರು. ಅರ್ಥವಾಗುತ್ತಿರಲಿಲ್ಲ. ಮತ್ತೆ ಯಾವಾಗಲೋ ಇವರು ಯುದ್ಧ ಮಾಡಿ ರಾಜ್ಯ ಪಡೆದುಕೊಳ್ಳಬಹುದಲ್ಲ, ಯಾಕೆ ಸುಮ್ಮನಿದ್ದಾರೆ ಅಂತ ಹಠಾತ್ತನೆ ಕೇಳಿದಾಗ, ಅಪ್ಪ ಸರ್ಕಾರ,ಚುನಾವಣೆ, ಪ್ರಜಾಪ್ರಭುತ್ವ ಏನೇನೋ ಹೇಳ್ತಿದ್ದರು, ಅದೂ ಅರ್ಥವಾಗ್ತಿರಲಿಲ್ಲ. ತುಂಬಾ ದಿನಗಳವರೆಗೆ ರಾಜ್ಯ ಸರ್ಕಾರ,ಕೇಂದ್ರ ಸರ್ಕಾರ, ಅವುಗಳ ಚುನಾವಣೆ, ಮೇಲ್ಮನೆ,ಕೆಳಮನೆ ಗಳು ಗೊಂದಲದ ಗೂಡಾಗಿದ್ದವು ನನಗೆ. ಪ್ರಜೆಯೇ ಪ್ರಭು ಈಗ ಅಂತ ಹೇಳ್ತಿದ್ದ ಅಪ್ಪನ ಅರ್ಥವಾಗದ ಮಾತು, ಬೆಳೆದಂತೆಲ್ಲ ಓದಿದ ಅದ್ವೈತದ ಅಹಂ ಬ್ರಹ್ಮಾಸ್ಮಿ ಅಥವಾ ನಾನೇ ಬ್ರಹ್ಮ ಎನ್ನುವ ಮಾತು ಅರ್ಥವಾಗದಂತಹ ಗೊಂದಲಕ್ಕೆ ನನ್ನನ್ನು ಬಹಳ ಕಾಲದವರೆಗೆ ದೂಡಿದ್ದವು.
ಅಂಕ ಪಡೆದರೆ ಜೀವನ
ಚೆನ್ನಾಗಿ ಓದು. ಈಗಿನ ವ್ಯವಸ್ಥೆಯಲ್ಲಿ ಹೆಚ್ಚಿನ ಅಂಕ ಪಡೆದು ಪಾಸಾಗಲೇ ಬೇಕು ಒಳ್ಳೆಯ ಜೀವನ ರೂಪಿಸಿಕೊಳ್ಳಲು ಅಂತ ಹೇಳ್ತಿದ್ದದ್ದೂ ನನಗೆ ಗೊಂದಲದ ಗೂಡೇ ಆಗ. ಅಪ್ಪನ ಪರಿಭಾಷೆಯಲ್ಲಿ ಓದಿ ಯಾವುದಾದ್ರು ಸರ್ಕಾರಿ ನೌಕರಿ ಹಿಡಿದರೆ,ಜೀವನ ರೂಪಿಸಿಕೊಂಡಂತೆ. ಜೀವನ ಅಂದ್ರೆ ಓದೋದು,ನೌಕರಿ ಹಿಡಿದು ಗಳಿಸೋದು, ಮದುವೆ ಆಗಿ ಮಕ್ಕಳನ್ನು ಮಾಡೋದು. ಇದು ಅಪ್ಪನಿಂದ ನನಗೆ ಸಿಕ್ಕ ಜೀವನದ ಬಗೆಗಿನ ಕಲ್ಪನೆ.
ಯಾಕೆ ಅಪ್ಪ ಗಾಂಧಿ,ಬೋಸ್ ತರಹ ಆಗು ಅಂತ ಹೇಳ್ತಿಲ್ಲ. ಯಾಕೆ ನೀನೂ ಪ್ರಭು ಆಗಬಹುದು ಈ ವ್ಯವಸ್ಥೆಯಲ್ಲಿ ಅಂತ ಹೇಳಲಿಲ್ಲ ಆಗ? ಅದು ನಮ್ಮಂಥವರಿಗಲ್ಲ ಎನ್ನುವಂಥ ಮಡಿವಂತಿಕೆಯನ್ನು ಆಗಿನ ಎಲ್ಲರೂ ಒಂದಿಲ್ಲೊಂದು ಸಂದರ್ಭದಲ್ಲಿ ಪಾಲಿಸಿಕೊಂಡು ಬಂದಿದ್ದರು,ಅಪ್ಪನೂ ಹಾಗೆಯೇ ಪಾಲಿಸಿದರೇನೋ ಅಂತ ಈಗ ನನಗೆ ಅನ್ನಿಸ್ತಿದೆ.
ಹಾಗಿದ್ದರೆ, ಗುರಿ ಆಕಾಶದೆತ್ತರಕ್ಕೆ ಇರಬೇಕು ಅಂತ ಯಾಕೆ ಹೇಳಿಕೊಟ್ಟರು?! Sky is limit ಅಂತ ಇದ್ದ ಇಂಗ್ಲಿಷ್ ಗಾದೆಯನ್ನು ಒಪ್ಪದೇ Beyond sky should be your limit ಅಂತ ನನಗೆ ಹೇಳಿದರೇಕೆ?! ಹೀಗೆ ಹೇಳುತ್ತಾ ಬೆಳೆಸಿ,ಬೆಳೆದಂತೆಲ್ಲ ನನ್ನನ್ನು ನಿರ್ದಿಷ್ಟ ಚೌಕಟ್ಟಿನೊಳಗೆ ಬಂಧಿಸುವ ಸಲಹೆ ಕೊಡುತ್ತಿದ್ದರಲ್ಲಾ ಏಕೆ?!
ಅರಿವಿನ ನನ್ನ ಜೀವನವನ್ನು ರೂಪಿಸಿಕೊಳ್ಳಲು ನಾನೇ ನಿರ್ಧರಿಸಿದಾಗ ಅಪ್ಪ ತೀರಾ ಅಸಹಾಯಕರಂತೆ ನನಗೆ ಕಂಡುಬಂದಿದ್ದರು. ಉನ್ನತ ವ್ಯಾಸಂಗ ನನಗಿಷ್ಟ ಇಲ್ಲ ಅಂದಾಗ, ಸರ್ಕಾರಿ ಅಥವಾ ಯಾವುದೇ ನೌಕರಿ ನನಗೆ ಒಗ್ಗಲ್ಲ ಅಂತ ಹೇಳಿದಾಗ ಅರಿಯದ ಮೌನಕ್ಕೆ ಶರಣಾಗಿದ್ದರು. ಹೊರಹಾಕದ ಅಸಮ್ಮತಿ ತುಂಬಾ ದಿನ ಅವರಲ್ಲಿ ಮಡು ಗಟ್ಟಿತ್ತು. ಯಾಕೆ ಹೀಗೆ? ನನ್ನ ಪ್ರತಿ ನಡಿಗೆಯನ್ನು ರೂಪಿಸಿ,ನನ್ನಲ್ಲಿ ಪ್ರತಿಯೊಂದನ್ನು ತುಂಬಿದವರೂ ಅವರೇ. ಅದೇಕೆ ಅವರೆಣಿಸಿದ ಜೀವನದಿಂದ ಬೇರೆ ತೆರನಾದ ಜೀವನ ನಾನು ರೂಪಿಸಿಕೊಳ್ಳಲು ಹೊರಟಾಗ ಬೇಡ ಅಂದರು? ಕ್ಷಾತ್ರದವರು ಅವರ ರಾಜ್ಯ ಅವರೇ ಕಟ್ಟಿಕೊಳ್ಳಬೇಕು,ಯಾರೋ ಕಟ್ಟಿದ ಸಾಮ್ರಾಜ್ಯ ನನ್ನದು ಅನ್ನಬಾರದು ಅಂತ ಶಸ್ತ್ರಾಭ್ಯಾಸ ಮಾಡಿಸಿ, ಯುದ್ಧಕ್ಕೆ ಹೊರಟಾಗ ಅಧೈರ್ಯರಾದದ್ದು ಯಾಕೆ?! ಅಪ್ಪನಿಗೇ ನನ್ನ ಮೇಲೆ ವಿಶ್ವಾಸ ಇರದಿದ್ದ ಮೇಲೆ ಯಾರಿಗೆ ತಾನೇ ಇರಲು ಸಾಧ್ಯ? ಅವರ ಅಸಮ್ಮತಿ ನನ್ನ ಆತ್ಮಸ್ಥೈರ್ಯ ಕುಗ್ಗಿಸಬಹುದು ಎಂದೇಕೆ ಯೋಚಿಸಲಿಲ್ಲ?
ಇದೆಲ್ಲದರ ಮಧ್ಯೆ ನಾನು ನನ್ನದೇ ಆದ ಜೀವನ ರೂಪಿಸಿಕೊಂಡೆ,ಅವರು ಹಾಕಿಕೊಟ್ಟಿದ್ದ ಪಂಕ್ತಿಯಲ್ಲಿಯೇ. ಸಂತೋಷಿಸಿದರು ನನ್ನ ಬದುಕನ್ನು ಕಂಡು. ಸರ್ಕಾರಕ್ಕೆ ನಾನು ತೋರಿಸುತ್ತಿದ್ದ ಹಣಕಾಸು ಲೆಕ್ಕದಲ್ಲಿ ಚಿಕ್ಕ ಪುಟ್ಟ ತಪ್ಪಿರುತ್ತಿತ್ತೇನೋ, ಅಪ್ಪನಿಗೆ ಮಾತ್ರ ನನ್ನ ಎಲ್ಲ ಹಣಕಾಸಿನ ವ್ಯವಹಾರ ತಿಳಿಸಿ, ಅವರ ಸಮಾಧಾನದ ಒಪ್ಪಿಗೆಯನ್ನು ಪಡೆಯುತ್ತಿದ್ದೆ.
ಯಾಕೋ ಅಪ್ಪನಿಗೆ ಹಣ, ಅದೂ ನಿರೀಕ್ಷೆಗೆ ಮೀರಿದ ಹಣ ಎಂದರೆ ಭಯ ಇತ್ತು. ಅದನ್ನರಿತೇ ಅವರಿಗೆ ಪ್ರತಿಯೊಂದನ್ನೂ ಎಳೆ ಎಳೆಯಾಗಿ ವಿವರಿಸುತ್ತಿದ್ದೆ. ಕೊನೆಯತನಕ ಒಂದು ರೂಪಾಯಿಯನ್ನೂ ನನ್ನಿಂದ ಕೇಳಲಿಲ್ಲ ಅವರು. ದೊಡ್ಡ ಮಗನಾಗಿದ್ದರೂ ಮನೆಯ ಯಾವ ಆರ್ಥಿಕ ಜವಾಬ್ದಾರಿಯನ್ನೂ ನನ್ನ ಮೇಲೆ ಹೇರಲಿಲ್ಲ. ನೀನು,ನಿನ್ನ ಸಂಸಾರ ಚೆನ್ನಾಗಿರಲಿ,ದುಡಿಯುವ ಮಾರ್ಗದಲ್ಲಿ ದಾರಿ ತಪ್ಪಬೇಡ ಅಂತಷ್ಟೇ ಹೇಳಿದ್ದರು. ಅವರೆಣಿಸಿದ ನನ್ನ ಸನಿಹ ಅವರಿಗೆ ಸಿಗಲಿಲ್ಲ ಅನ್ನಿಸಿದಾಗ ನನ್ನ ಹೆಂಡತಿ ಹತ್ತಿರ ಇನ್ನೆಷ್ಟು ದುಡಿಯಬೇಕು ನೀವೆಲ್ಲ ಅಂತ ಸಿಟ್ಟು ಮಾಡಿಕೊಂಡದ್ದೂ ಇದೆ. ನಾನು,ನನ್ನ ಹೆಂಡತಿ ಆ ಮಾತಿಗೆ ನಕ್ಕಿದ್ದೇವೆ.
ಮೇಲೆ ಹೇಳಿದ ಎಲ್ಲ ವಿಷಯಗಳು ಮಧ್ಯಮ ವರ್ಗದ ನಮ್ಮ ಕುಟುಂಬಗಳಲ್ಲಿ ಸಾಮಾನ್ಯ. ಏಕೆ ನಮಗೆ ಹಣ,ಶ್ರೀಮಂತಿಕೆ ಅಂದರೆ ಭಯ?ಅಥವಾ ಹಣ ಗಳಿಸುತ್ತಾರೆ ಅಂದ್ರೆ, ಅದು ಅಡ್ಡ ದಾರಿಯಿಂದ ಮಾತ್ರ ಸಾಧ್ಯ ಎನ್ನುವ ನಿಲುವು?! ಹಣವಂತರನ್ನು ಒಂದು ಥರಾ ಕಾಣುವ ನಮ್ಮ ಮಾನಸಿಕ ವ್ಯವಸ್ಥೆ ಇದಕ್ಕೆ ಕಾರಣವಾ? ಅಥವಾ ಹಣ ಬಂದು ಬಿಟ್ಟರೆ ಮನುಷ್ಯ ಬದಲಾಗಿ ಬಿಡುತ್ತಾನೆ ಅನ್ನುವ ಸಂಕುಚಿತ ಮನೋಭಾವನೆಯಾ?
ಒಮ್ಮೆ ಬಂದ ಹಣ, ಕಳೆದುಕೊಂಡರೆ, ಅದರಿಂದಾಗುವ ನೋವು, ಮನಸ್ಸಿನ ಖಿನ್ನತೆ ನೋಡಿರುವ ನಮ್ಮ ಹಿರಿಯರು, ಇದು ಬೇಡವೇ ಬೇಡ ಅಂತ ದೂರ ಮಾಡಿಬಿಟ್ಟರಾ?ಅರ್ಥವಾಗದ ಪ್ರಶ್ನೆಗಳು ಇವು.
ಶ್ರೀಮಂತಿಕೆ,ಶ್ರೀಮಂತ ಅಂದರೇನು?
ನನ್ನ ಈಗಿನ ಪ್ರೆಶ್ನೆ ಏನಂದ್ರೆ, ಶ್ರೀಮಂತಿಕೆ,ಶ್ರೀಮಂತ ಅಂದರೇನು? ಅನ್ನುವುದು! ಶ್ರೀಮಂತಿಕೆಯ ನಿಜವಾದ ಮಾಪನ ಹಣ ಒಂದೇನಾ? ಹಾಗಾದ್ರೆ ಎಷ್ಟು ಹಣ ಇರುವವರು ಶ್ರೀಮಂತರು? ಒಂದೊಮ್ಮೆ ಲಕ್ಷಾಧೀಶ್ವರರು, ಕೋಟ್ಯಧಿಪತಿಗಳು ಅಂತೆಲ್ಲಾ ಕರೆಸಿಕೊಂಡವರು ಇಂದು ಶ್ರೀಮಂತರಾ? ಲಕ್ಷ, ಕೋಟಿಗೆ ಇಂದು ನಿಜವಾಗಿಯೂ ಬೆಲೆ ಇದೆಯಾ? ಇದ್ದರೂ ಎಷ್ಟು ಜನ ಇವರಲ್ಲಿ ನೆಮ್ಮದಿಯ ನಿದ್ರೆ ಮಾಡುತ್ತಿದ್ದಾರೆ? ಶ್ರೀಮಂತ ಅಪ್ಪನ ಮಕ್ಕಳು ನಮ್ಮೆದುರಲ್ಲೇ ಭಿಕಾರಿಗಳಾಗಿದ್ದಾರಲ್ಲ, ಇವರನ್ನ ಶ್ರೀಮಂತನ ಮಕ್ಕಳು ಅನ್ನಬೇಕಾ?
ಅದಕ್ಕೇ ಏನೋ ನಮ್ಮ ಹಿರಿಯರು ಹೃದಯ ಶ್ರೀಮಂತಿಕೆ ಅನ್ನುವ ಮತ್ತೊಂದು ಪದವನ್ನೂ ನಮ್ಮ ಕಿವಿಗಳಿಗೆ ಹಾಕಿದ್ದಾರೆ. ಈ ಶ್ರೀಮಂತಿಕೆ ಇರುವವನು ಎಂದಿಗೂ ಬಡವನೇ ಅಲ್ಲವಂತೆ! ಹೋಗಲಿ ಈ ಹೃದಯ ಶ್ರೀಮಂತಿಕೆ ಯನ್ನಾದರೂ ಹೊಂದಲು ನಮ್ಮ ಅಪ್ಪ,ಅಮ್ಮಗಳು ಸಮ್ಮತಿಸುತ್ತಾರಾ? ಹೃದಯ ಶ್ರೀಮಂತನನ್ನು ಮನೆಗೆ ಮಾರಿ ಪರರಿಗೆ ಉಪಕಾರಿ ಅಂತ ಜರೆದದ್ದನ್ನು ನೋಡಿದ್ದೇನೆ. ಯಾಕೆ ಹೀಗೆ? ಇದು ಮಧ್ಯಮ ವರ್ಗಗಳ ಸಮಸ್ಯೆಯೋ ಅಥವಾ ಎಲ್ಲರದ್ದಾ? ನಾವು ಮಕ್ಕಳಿಗೆ ಆದರ್ಶಗಳನ್ನು ಹೇಳುತ್ತೇವೆ, ನಿಜವಾಗಿಯೂ ಮಾಡಲು ಬಿಡುತ್ತೇವಾ? ಅದನ್ನು ಬೇರೆ ಯಾರೋ ಮಾಡುತ್ತಾರೆ,ನಾವಲ್ಲ,ನಮ್ಮ ಮಕ್ಕಳಲ್ಲ ಅನ್ನುವ ಧೋರಣೆ ಎಷ್ಟು ಸರಿ? ಯಾರಾದ್ರೂ ನಾವುಗಳು ಮಕ್ಕಳಿಗೆ ಸುಭಾಷ್ ಚಂದ್ರ ಬೋಸ್ ಆಗು, ಭಗತ್ ಸಿಂಗ್ ಆಗು ಅಂತ ಹೇಳೊಲ್ಲ ಯಾಕೆ?
ಓದಿ,ನೌಕರಿ ಹಿಡಿದು,ಮದುವೆ ಮಾಡಿಕೊಂಡು,ಮಕ್ಕಳನ್ನು ಮಾಡು, ಅದು ಒಂದೋ,ಎರಡೋ ಸಾಕು ಎನ್ನುವಂತಹ ಸ್ವಾರ್ಥ ಸಲಹೆ ಕೊಡುವುದು ಎಷ್ಟು ಸರಿ? ಯಾರಿಗೂ ಸಹಾಯ ಮಾಡದಿದ್ದರೂ ತೊಂದರೆ ಕೊಡದೆ, ಬದುಕಿ ಬಿಟ್ಟರೆ ಅದೇ ಮಹಾ ಸಾಧನೆ ಅಂತ ಹೇಳೋದನ್ನ ಹೇಗೆ ಅರ್ಥೈಸಬೇಕು? ನಮಗೆ ನಾವೇ ಇಂತಹ ಚೌಕಟ್ಟು ಹಾಕಿ, ನಮ್ಮ ಮಕ್ಕಳನ್ನು ಈಗಿನ ಸ್ಪರ್ಧಾ ಜಗತ್ತಿಗೆ ಬಿಡುವುದು ಎಷ್ಟು ಸಮಂಜಸ? ಎಲ್ಲರಿಗೂ ಓದಿದಾಕ್ಷಣ ಸುರಕ್ಷತೆಯ ಬದುಕು ಸಾಧ್ಯವಾ? 50,60 ವರ್ಷಗಳ ಹಿಂದೆ ಅದು ಸಾಧ್ಯ ಇತ್ತೇನೋ. ಇಂದಂತೂ ಅದು ಅಸಾಧ್ಯ. ಎಲ್ಲರೂ ಓದುವವರೇ, ಎಲ್ಲರೂ 100 ಕ್ಕೆ 100 ಅಂಕ ತರುವವರೇ.
ಅಂಕ ಪಡೆಯುವುದೊಂದೇ ಶಿಕ್ಷಣವಲ್ಲ
ಹಣ ಒಂದೇ ಶ್ರೀಮಂತಿಕೆಯ ಮಾಪನವಲ್ಲ ಅನ್ನುವುದರ ಜೊತೆಗೆ ಅಂಕ ಪಡೆಯುವುದೊಂದೇ ಶಿಕ್ಷಣವಲ್ಲ ಅಂತ ಯಾವಾಗ ನಾವು ತಿಳಿಯುವುದು? ಸರ್ಕಾರಿ ನೌಕರರು ಅಂತ ಇರುವುದು ಈ ದೇಶದ ಜನಸಂಖ್ಯೆಯ ಪ್ರತಿಶತ 2 ರಷ್ಟು ಮಾತ್ರ. ಇನ್ನೂ 98 ಜನ ಹೇಗೆ ಬದುಕು ಕಟ್ಟಿಕೊಳ್ಳುತ್ತಿದ್ದಾರೆ ಅಂತ ನಮ್ಮ ಮಕ್ಕಳಿಗೆ ಹೇಳುತ್ತೇವಾ, ಹೇಳಿದ್ದೇವಾ? ಮಕ್ಕಳು 100 ಕ್ಕೆ 2 ಅಂಕ ಕಡಿಮೆ ತಂದರೂ ಅವರ ಜೀವನ ಹಾಳಾಯ್ತೇನೋ ಅಂತ ಯೋಚಿಸುವ ನಮ್ಮ ಮನಃಸ್ಥಿತಿ ಬದಲಾಗೋದು ಯಾವಾಗ? 21 ವರ್ಷದ ವರೆಗೆ ಅಂಕ ಗಳಿಸುವ ಯಂತ್ರಗಳನ್ನಾಗಿ ತಯಾರು ಮಾಡುವ ನಾವು ಅವರ ನಿಜವಾದ ಸಾಮರ್ಥ್ಯ ಅಳೆಯುವ ಪ್ರಯತ್ನ ಮಾಡಿದ್ದೇವಾ? ಎಡವಿ ಬೀಳ್ತಾನೆ ಅಂತ ನಡೆಯನ್ನು ಕಲಿಸದೆ ಹಾಗೇ ಬಿಟ್ಟಿದ್ದೇವಾ? ಈಗೇಕೆ ಭಯ? ಬರೀ ಗೆಲುವಿನ ಬಗ್ಗೆ ಹೇಳಿ,ಸೋಲು ಎಂದರೆ ಜೀವನದ ಅಂತ್ಯ ಅನ್ನುವ ಭಾವನೆ ಅವರಲ್ಲಿ ಮಾರಕವಲ್ಲವೇ? ಅವರು ಸ್ವತಂತ್ರವಾಗಿ ಹಾರಲು ನಾವೆಷ್ಟು ಸಹಾಯಕರಾಗಿದ್ದೇವೆ? ಈಗಲೂ ನಾವು ಇಂಥಹ ಸುರಕ್ಷತೆ ಎನ್ನುವ ಚಿಪ್ಪಿನಿಂದ ಹೊರಬರದಿದ್ದರೆ,ನಮ್ಮ ಮಕ್ಕಳು ನಮ್ಮ ಮುಂದೆಯೇ ಕೆಲಸಕ್ಕೆ ಬಾರದವರಾಗುವುದು ದೂರ ಇಲ್ಲ. ಅವರಿಗೆ ಸೋಲನ್ನು ಅಪ್ಪಿಕೊಂಡು ಪ್ರೀತಿಸುವುದನ್ನು ಕಲಿಸಿದರೆ, ಗೆಲುವು ತಾನಾಗಿಯೇ ಬರುವುದರ ಕುರಿತು ಹೇಳೋಣ. ನಮ್ಮ ಹಿರಿಯರ ಇಂಥಹ ಭಯದಿಂದಲೇ ನಮ್ಮವರ್ಯಾರೂ ವಾಸ್ಕೊಡಿಗಾಮ ಆಗಲೀ, ಕೊಲಂಬಸ್ ಆಗಲೀ ಆಗಿಲ್ಲ.
ಇದು ನಮಗೆ ಥರವಲ್ಲ, ನಮ್ಮ ಅಪ್ಪ ಹಾಗೆ ಇದ್ದ,ನಾನೂ ಹೀಗೆ,ಹಾಗಾಗಿ ನೀವುಗಳೂ ಹೀಗೇ ಇರಬೇಕು ಅಂತ ಮಕ್ಕಳಿಗೆ ಹೇಳೋದನ್ನ ನಿಲ್ಲಿಸೋಣ. ಜೀವನ ರೂಪಿಸಿಕೊಳ್ಳಲು ಮಕ್ಕಳು ಶ್ರಮ ಪಡುತ್ತಾರೆ ಅಂತಾದರೆ,ಖುಷಿ ಪಡುವ ಸಂಭ್ರಮ ನಮ್ಮದಾಗಬೇಕು. ಸೋತಾಗ ನಗುಮುಖದಿಂದ ನಾವು ಸ್ವಾಗತಿಸಬೇಕು ಯಾಕಂದ್ರೆ ಗೆದ್ದಾಗ ಸಂಭ್ರಮಿಸಲು ಅವನಿಗೆ ಬಹಳಷ್ಟು ಜನ ಇರ್ತಾರೆ. ಸೋಲಿನ ಮಹತ್ವ ನಮ್ಮ ಮಕ್ಕಳಿಗೆ ತುಂಬಾ ಅಗತ್ಯ. ಅದನ್ನು ನಾವು ಹೇಳೋಣ ಅವರಿಗೆ. ಗೆಲ್ಲಲೇ ಬೇಕು ಎನ್ನುವ ಹೊರೆಯನ್ನು ಅವರಿಗೆ ಹೊರಿಸೋದು ಬೇಡ. ಸೋತ ಹೊರೆಯನ್ನ ಹಂಚಿಕೊಳ್ಳಲು ಅವರಿಗೆ ಯಾರಂದ್ರೆ ಯಾರೂ ಇರಲ್ಲ. ನಾವು ಇರೋಣ. ಗೆಲುವಿನ ಸಂಭ್ರಮ ಅವರು ಹೇಗಾದ್ರೂ ಆಚರಿಸಿಕೊಳ್ಳಲಿ, ಅದರ ಗೊಡವೆ ನಮಗೆ ಬೇಡ ಅಂತ ಅವರಿಗೆ ಹೇಳೋಣ. ಸೋಲಲು ತಯಾರಾದವನು ಯಾವತ್ತಿಗೂ ಜಯಶಾಲಿಯೇ ಅನ್ನೋದನ್ನ ನಾವೂ ಮರೆಯೋದು ಬೇಡ.
Photo by Adeolu Eletu on Unsplash
ಶುಭ ದಿನ

ಇಂದಿನ ನುಡಿ
ಸಂಬಂಧಗಳ ಸುಳಿಯಲ್ಲಿ ಸತ್ಯ ಹೇಳುವವನು ಸದಾ ಏಕಾಂಗಿ
ಸಂಗ್ರಹ :ರಾಜೀವಲೋಚನ
.
ಇಂದಿನ ಪಂಚಾಂಗ
ದಿನಾಂಕ 25 ಸೆಪ್ಟಂಬರ್ 2020,ಶುಕ್ರವಾರ
ಸಂವತ್ಸರ : ಶ್ರೀ ಶಾರ್ವರಿ, ಆಯನ :ದಕ್ಷಿಣಾಯನ, ಋತು: ಶರದ್, ಮಾಸ : ಅಧಿಕ ಆಶ್ವೀಜ, ಪಕ್ಷ :ಶುಕ್ಲ ತಿಥಿ:ನವಮಿ ನಕ್ಷತ್ರ: ಪೂಷಾ
ಸೂರ್ಯೋದಯ : ಬೆಳಿಗ್ಗೆ 6.09
ಸೂರ್ಯಾಸ್ತ: ಸಂಜೆ 6.12
P
ಹಣ ಇದ್ರೆ ಹಾಸಿಗೇನ ಕೊಂಡ್ಕೋಬಹುದು ನಿದ್ದೇನಲ್ಲ
ನಿದ್ದೆಯನ್ನು ನಾವುಗಳು ವಿಶ್ರಾಂತಿ ಅನ್ನಬೇಕಾ ಇಲ್ಲ ಚಟುವಟಿಕೆ ಅನ್ನಬೇಕಾ ಅನ್ನೋದೇ ಗೊತ್ತಾಗುತ್ತಿಲ್ಲ . ನಿದ್ದೆಯನ್ನು ವಿವಿಧ ಹೆಸರುಗಳಲ್ಲಿ ಕರೆಯುತ್ತೇವೆ . ಯಾವುದರ ಪರಿವೆಯೂ ಇಲ್ಲದೇ ಸುತ್ತಲಿನ ಗೊಡವೆಯೂ ಇಲ್ಲದೇ ಮಾಡುವ ನಿದ್ದೆಯನ್ನು ಸವಿ ನಿದ್ದೆಯೆಂದು , ಮುಂಜಾವಿನ ನಸುಕಿನ ನಿದ್ದೆಯನ್ನು ಸಕ್ಕರೆ ನಿದ್ದೆಯೆಂದು , ಅರೆಕ್ಷಣ ತೂಕಡಿಸುವುದನ್ನು ಕೋಳಿನಿದ್ದೆಯೆಂದು ,ಗದ್ಧಲವೆಬ್ಬಿಸಿ ಎಬ್ಬಿಸಿದರೂ ಏಳದೇ ಮಾಡುವ ನಿದ್ದೆಗೆ ಗಾಢ ನಿದ್ದೆಯೆಂದು ಕರೆಯುತ್ತಾರೆ .
ನಾವುಗಳು ಶ್ರದ್ಧೆಯಿಂದ ಮಾಡೋದು ಇದೊಂದುನ್ನೇ ಅನ್ಸುತ್ತೆ . ಸಮಾಜ ಮನುಷ್ಯನನ್ನು ಅಳೆಯೋದು ಅವನು ಮಾಡಿರೋ ಆಸ್ತಿಯಿಂದ , ಇರೋ ಅಂತಸ್ತಿಂದ ,ಹಾಕಿರೋ ಒಡವೆಯಿಂದ , ಓಡಾಡೋ ಕಾರಿನಿಂದಾದರೂ ಅವನ ನೆಮ್ಮದೀನ ಅಳೆಯೋದು ಮಾತ್ರ ಅವನು ಮಾಡೋ ನಿದ್ದೆಯಿಂದಾನೆ .
ನಿದ್ದೆ ಅನ್ನೋದು ಒಂದು ರೀತಿಯ ಸುಖ ಮತ್ತೊಂದು ರೀತಿಯ ಆರೋಗ್ಯ . ಹೆಚ್ಚು ಮಾಡಿದರೂ ಆಲಸ್ಯ ಕಡಿಮೆ ಮಾಡಿದರೂ ಆಲಸ್ಯ . ನಿದ್ದೆಗೆಟ್ಟರೆ ಅಂದಿನ ನಮ್ಮಕೆಲಸ ಕೆಟ್ಟಂತೆಯ.
ರಾತ್ರಿ ಏನ್ ನಿದ್ದೆ ಗೊತ್ತಾ ? ಟೀವಿ ನೋಡ್ಕೊಂಡ್ ಹಂಗೇ ಮಲಗ್ಬಿಟ್ಟಿದೀನಿ . ಊಟ ಮಾಡಿ ಕೂತೆ ನೋಡು ಕಣ್ಣು ಎಳ್ಕೊಂಡ್ ಹೋಗ್ತಾಇತ್ತು . ಕಣ್ ಮುಚ್ಚಿ ಕಣ್ ತೆಗೆಯೋದ್ರೊಳಗಡೆ ಬೆಳಗಾಗೋಗಿದೆ . ರಾತ್ರಿ ಸಕ್ಕತ್ತಾಗಿ ಮಳೆ ಸುರಿದಿದೆ…. ಗೊತ್ತೇ ಆಗಿಲ್ಲ . ಈ ಮಾತುಗಳೆಲ್ಲಾ ಕಣ್ತುಂಬ ನಿದ್ದೆ ಮಾಡುವವರ ಮಾತುಗಳು.
ಅದೇ …. ರಾತ್ರಿ ನಿದ್ದೇನೆ ಬರ್ಲಿಲ್ಲಾ .ನಿನ್ನೆ ರಾತ್ರಿ ಮಲಗ್ದಾಗ ಮೂರು ಗಂಟೆ . ಹಾಸಿಗೇಲಿ ಒದ್ದಾಡಿ ಒದ್ದಾಡಿ ನಿದ್ದೇನೆ ಬರ್ಲಿಲ್ಲ . ಒಂದೊತ್ತಲ್ಲಿ ಎದ್ದೆ ನೀರು ಕುಡಿದೆ. ಟಾಯ್ಲೆಟ್ಟಿಗೆ ಹೋಗಿ ಬಂದೆ ಏನ್ ಮಾಡಿದ್ರು ನಿದ್ದೆ ಬರ್ಲಿಲ್ಲ. ಥೂ ನಾಯಿ ಪಾಡು . ರಾತ್ರಿ ಎಲ್ಲಾ ನಿದ್ದೆ ಬರದೆ ಒಳ್ಳೇ ಗೂಬೆ ಥರ ಎದ್ದಿದ್ದೆ …… ಇವೆಲ್ಲಾ ನಿದ್ದೆ ಬರದವರ ಪಾಡು .
ಅಷ್ಟಿಲ್ಲದೇ ಹೇಳ್ತಾರ ‘ಹಣ ಇದ್ರೆ ಹಾಸಿಗೇನ ಕೊಂಡ್ಕೋಬಹುದು ನಿದ್ದೇನಲ್ಲ ಅಂತಾ’ .
ನಿದ್ದೇನ ಯಾರೂ ಶಾಪ ಅಂತ ಹೇಳಿದ ಇತಿಹಾಸಾನೇ ಇಲ್ಲ ನಿಜವಾಗ್ಲೂ ನಿದ್ದೆ ಒಂದು ವರ .
ಒಂದು ನಿಮಿಷಾನು ಸುಮ್ಮನಿರದ ಮನುಷ್ಯನನ್ನು ಸೋಲು ಗೆಲುವು , ಹಣ ಅಂತಸ್ತು , ದ್ವೇಷ ಅಸೂಯೆ , ಪ್ರೀತಿ ಪ್ರೇಮ , ಸ್ನೇಹ ಸಂಬಂಧ, ಸಾಲ ಸೋಲ , ಬದುಕು ಬವಣೆ , ಕಷ್ಟ ಕಾರ್ಪಣ್ಯ , ಜಾತಿ ಧರ್ಮ ಇವೆಲ್ಲವುಗಳಿಂದಾನು ದೂರ ಇರಿಸಿ ಗಂಟೆಗಳಗಟ್ಟಲೇ ಒಂದು ಕಡೆ ಮಲಗುಸುತ್ತೆ ಅಂದ್ರೆ ಅದು ನಿದ್ದೆಗೆ ಇರೋ ತಾಕತ್ತು .
ಚಾಪೆ ಹಾಸಿಗೆ ದಿಂಬು ಬೆಡ್ ಷೀಟು ಇವು ನಿದ್ದೆಯ ಪಟಾಲಂ ಗೆಳೆಯರು. ಆಕಳಿಕೆ ಗೊರಕೆ ಕನಸು ಇವು ನಿದ್ದೆಯ ಸಂಬಂಧಿಕರು . ನಿದ್ದೆಯಂತಾ ನಿದ್ದೇಗು ಒಬ್ಬ ಶತ್ರುವಿದ್ದಾನೆ ಅವನೇ ಅಲಾರಂ .
ಅಮ್ಮನ ಒಡಲಲ್ಲಿ , ಮಡಿಲಲ್ಲಿ , ತೋಳಲ್ಲಿ , ಸೀರೆ ಜೋಳಿಗೆಯಲ್ಲಿ ಹೀಗೆ ಸಣ್ಣ ವಯಸ್ಸಿಂದಾ ನಮ್ಮ ಜೊತೇಗೆ ಇರೋ ನಿದ್ದೆಗೂ ನಮ್ಮಷ್ಟೇ ವಯಸ್ಸಾಗಿದೆ.
ಅದೆಷ್ಟೋ ಜನ ಹಿರಿಯರ ಬಾಯಲ್ಲಿ ಇವತ್ತಿಗೂ ಬರೋ ಮಾತು ಏನು ಅಂದ್ರೆ ಈ ಆಸ್ಪತ್ರೆ ಕಾಯಿಲೆ ಕಸಾಲೆ ಆಕ್ಸಿಡೆಂಟು ಹಿಂಗೆಲ್ಲಾ ನರಳಿ ಸಾಯೋದಕ್ಕಿಂತ ರಾತ್ರಿ ಊಟ ಮಾಡಿ ಮಲಗದವ್ರು ಬೆಳಿಗ್ಗೆ ಏಳಬಾರದು ಅಂತ .
ಅದೇ ಬದುಕಿನ ಕೊನೆಯ ನಿದ್ದೆ ” ಚಿರನಿದ್ರೆ “.

ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೇಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.
ಕೋವಿಡ್ ದುರಂತಕ್ಕೆ ಕಾರಣಗಳಾದರು ಏನು
2020 ನ್ನು ಕೋವಿಡ್ ದುರಂತ ಸಂಭವಿಸಿದ ವರ್ಷವೆಂದು ನಾವು, ನಮ್ಮ ಮಕ್ಕಳು ಮತ್ತು ಮುಂದಿನ ತಲೆಮಾರಿನವರೆಲ್ಲ ಕರೆಯುವುದು ನಿರ್ಧರಿತ ವಿಚಾರ. ಆದರೆ, ಇಂತಹ ಘಟನೆ ಹಠಾತ್ತನೆ ಹೇಗೆ ಸಂಭವಿಸಿತು ಎನ್ನುವ ಪ್ರಶ್ನೆಗೆ ಉತ್ತರವೂ ಬೇಕಲ್ಲ?
ಅದರ ಹುಡುಕಾಟ ಬಹಳ ಬೇಗನೆ ಶುರುವಾಯಿತು.ಈ ರೀತಿಯ ಪತ್ತೇದಾರಿಕೆ ಮಾಡುವಾಗ ಎಲ್ಲಿ ನಡೆಯಿತು? ಹೇಗೆ ನಡೆಯಿತು? ಎಂದು ತಿಳಿಯುವುದು ತುರ್ತು ಅಗತ್ಯವಾದರೂ ನಂತರ ಸಮಸ್ಯೆಯ ಬುಡವನ್ನು ತಲುಪುವುದು ಅತ್ಯಂತ ಮುಖ್ಯವಾಗುತ್ತದೆ. ಏತಕ್ಕೆ ನಡೆಯಿತು? ಎನ್ನುವ ಪ್ರಶ್ನೆಗೆ ಉತ್ತರವನ್ನು ಹುಡುಕಬೇಕಾಗುತ್ತದೆ.
ನಮಗೆಲ್ಲ ಮಾಧ್ಯಮಗಳ ಮೂಲಕ ತಿಳಿದ ವಿಚಾರಗಳೆಂದರೆ, ಕೋವಿಡ್ ಸೋಂಕು ಶುರುವಾದ್ದು ಚೈನಾದ ವೂಹಾನ್ ನಗರದ ಮಾಂಸದ ಮಾರುಕಟ್ಟೆಯಿಂದ ಎಂಬುದು. ಅದರಲ್ಲೂ ಇದು ವನ್ಯ ಮೃಗಗಳನ್ನು ಮಾರಲು ಅಧಿಕೃತವಾಗಿ ಪರವಾನಗಿ ಇರುವ ಮಾಂಸದ ಮಾರುಕಟ್ಟೆ. ಇಲ್ಲಿ ಮಾರುವ ಪ್ಯಾಂಗೋಲಿನ್ (ಚಿತ್ರ ನೋಡಿ) ಎನ್ನುವ ಪ್ರಾಣಿಯ ಮಾಂಸದ ಮೂಲಕ ಸೋಂಕು ಹರಡಿತು ಎನ್ನಲಾಗಿದೆ. ಅದರೆ ಆ ಪ್ರಾಣಿಯಲ್ಲಿ ಕೊರೋನ ವೈರಸ್ಸು ಹೊಕ್ಕಿದ್ದು ಹರಡಿದ್ದು ಬಾವುಲಿಯ ಕಡಿತದ ಮೂಲಕ.
ಈ ಎರಡೂ ಪ್ರಾಣಿಗಳು ಮನುಷ್ಯನ ಬಗ್ಗೆ ಯಾವ ಲಕ್ಶ್ಯವನ್ನೂ ಕೊಡದೆ ತಮ್ಮ ಪಾಡಿಗೆ ತಾವಿದ್ದರೂ ಮನುಷ್ಯನ ಅತಿಯಾಸೆ ಮತ್ತು ಏನನ್ನು ತಿಂದರೂ ಮುಗಿಯದ ಜಿಹ್ವಾ ಚಪಲದಿಂದ ಇಡೀ ಪ್ರಪಂಚವೇ ಇಂದು ನಲುಗಿಹೋಗಿದೆ. ಈ ಹಿಂದೆಯೂ ನಲುಗಿದೆ. ಮುಂದೆ ಭವಿಷ್ಯತ್ತಿನಲ್ಲಿ ಈ ಬಗೆಯ ಘಟನೆಗಳು ಬಹುಬಾರಿ ಮನುಷ್ಯರನ್ನು ನೋಯಿಸಬಲ್ಲವು ಎಂಬ ಗಂಭೀರ ಎಚ್ಚರಿಕೆಗಳಿವೆ
ಪ್ಯಾಂಗೊಲಿನ್ ಮಾಂಸವನ್ನು ಕೇವಲ ಚೈನೀಸ್ ಜನರು ಮಾತ್ರ ತಿನ್ನುತ್ತಾರೆಯೇ? ಖಂಡಿತ ಇಲ್ಲ. ಹಾಗಾಗಿ ಅವರನ್ನು ಮಾತ್ರ ಜರೆದರೆ ಈ ಬಗೆಯ ಅವಘಡಗಳು ನಿಲ್ಲುವುದೂ ಇಲ್ಲ. ಉದಾಹರಣೆಗೆ, ಇಂಡೋನೇಷಿಯಾದಲ್ಲಿ ಪೊಲೀಸರು ದಾಳಿ ನಡೆಸಿ ಸಾವಿರಾರು ಪ್ಯಾಂಗೋಲಿನ್ ಗಳನ್ನು ಶೀಥಲ ಕೋಣೆಯಲ್ಲಿ ಅನಧಿಕೃತವಾಗಿ ಇಟ್ಟದ್ದನ್ನು ಪತ್ತೆಹಚ್ಚಿದ್ದಾರೆ. ಆಫ್ರಿಕಾದಲ್ಲಿ ಅವಿರತವಾಗಿ ನಡೆದಿರುವ ಬುಶ್ ಮೀಟ್ ಮಾಂಸ ಕೂಡ ಇದೇ ಬಗೆಯ ಕಾೆಯಿಲೆ ಹಾಗೂ ಸೋಂಕನ್ನು ಹರಡಬಲ್ಲದು.
ಗಮನಿಸಬೇಕಾದ ವಿಚಾರವೆಂದರೆ ಇದು ಏಷಿಯಾ ಮತ್ತು ಆಫ್ರಿಕಾ ಜನರು ತಿನ್ನುವ ಮಾಂಸ ಮಾತ್ರವಲ್ಲ. ಕಳ್ಳ ಸಾಗಾಣಿಕೆಯಲ್ಲಿ ಇದು ಯಾವ ದೇಶವನ್ನಾದರೂ ತಲುಪಬಲ್ಲದು. ಯಾರಿಂದ ಬೇಕಾದರೂ , ಯಾವ ದೇಶದಿಂದ ಬೇಕಾದರೂ ಹರಡಬಲ್ಲದು. ಹಾಗಾಗಿ ಇಂತಹ ಇಡೀ ಸರಬರಾಜು ಸರಣಿಯನ್ನೇ ಪ್ರಶ್ನಿಸಬೇಕಾಗುತ್ತದೆ.ವನ್ಯ ಮೃಗಗಳನ್ನು ತಿನ್ನುವ ಪದ್ಧತಿಯನ್ನು ಕೈಬಿಡಲು ಕೈ ಜೋಡಿಸಬೇಕಾಗುತ್ತದೆ.ಸ್ವತಃ ನಾವೇ ಮಾಂಸವನ್ನು ತಿನ್ನದಿದ್ದರೂ ಈ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪಾತ್ರ ವಹಿಸಬೇಕಾಗುತ್ತದೆ.
ಪ್ರಾಣಿಗಳಿಂದಲೇ ಬರುತ್ತವೆ
ಕಾರಣವಿಷ್ಟೆ. ಧುತ್ತೆಂದು ಮನುಕುಲವನ್ನು ಕಾಡುವ ಕಾಯಿಲೆಗಳ ಮೂರು ಭಾಗದಲ್ಲಿ ಎರಡರಷ್ಟು ಪ್ರಾಣಿಗಳಿಂದಲೇ ಬರುತ್ತವೆ. ಅಮೆರಿಕಾದಲ್ಲಿ ಜೀವ ವೈವಿಧ್ಯತೆಯ ಪಿತಾಮಹ ಎಂದೇ ಹೆಸರುವಾಸಿಯಾದ ಥಾಮಸ್ ಲವ್ ಜಾಯ್ ಎಂಬ ವಿಜ್ಞಾನಿ ಇದ್ದಾನೆ. 79 ವರ್ಷದ ಈತ ಅಮೆಜಾನ್ ಅರಣ್ಯ ಜೀವ ವೈವಿಧ್ಯ ವಿಭಾಗದ ಅಧ್ಯಕ್ಷ, ಯುನೈಟೆಡ್ ನೇಷನ್ಸ್ ನ ಹಿರಿಯ ಸದಸ್ಯ, ಮತ್ತು ಜಾರ್ಜ್ ಮೇಸನ್ ವಿಶ್ವವಿದ್ಯಾನಿಲಯದ ಪ್ರಕೃತಿ ಮತ್ತು ಪಾಲಿಸಿಗಳ ವಿಭಾಗದ ಮುಖ್ಯಸ್ಥನೂ ಆಗಿ ತನ್ನ ಮಹತ್ವದ ಕೆಲಸವನ್ನು ಮುಂದುವರೆಸಿದ್ದಾನೆ. “ಜೀವ ವೈವಿಧ್ಯತೆ” ಎನ್ನುವ ಪದವನ್ನು ಕೂಡ ಈತನೇ ಬಳಕೆಗೆ ತಂದವನು.ಅದರ ಮಹತ್ವವನ್ನು ಕೂಡ ಜಗತ್ತಿಗೆ ತಿಳಿಸಿದವನು.ಈತ 1980 ರಲ್ಲೇ ವಿಜ್ಞಾನಿಗಳು ಪ್ರತಿವರ್ಷ 2 ರಿಂದ 4 ಹೊಸ ವೈರಸ್ಸುಗಳನ್ನು ಗುರುತಿಸುತ್ತಿರುವುದಾಗಿ ಹೇಳಿದ್ದ.ಇವೆಲ್ಲವೂ ಪ್ರಕೃತಿಯ ಮೇಲೆ ಮನುಷ್ಯರು ನಡೆಸುತ್ತಿರುವ ಅತಿಕ್ರಮಣ, ಅತ್ಯಾಚಾರದಿಂದಲೇ ನಡೆಯುತ್ತಿದೆ ಎಂದು ಹೇಳಿದ್ದ.ಇಂತಹ ಅತಿಕ್ರಮಣಗಳು ವಿಶ್ವವ್ಯಾಪೀ ಹೊಸವ್ಯಾಧಿಯನ್ನು ಉಂಟುಮಾಡಬಲ್ಲದು ಎಂದು ಮನುಷ್ಯರನ್ನು ಎಚ್ಚರಿಸಿದ್ದ.
ಇದೀಗ ಆತನ ಭವಿಷ್ಯ ವಾಣಿ ನಿಜವಾಗಿದೆ. ಅದರ ಜೊತೆಯಲ್ಲೇ ಆತ ನೀಡಿದ ಕಾರಣಗಳ ಅವಲೋಕನ ಮತ್ತು ಭವಿಷ್ಯತ್ತಿನಲ್ಲಿ ಇವೇ ಪ್ರಮಾದಗಳನ್ನು ತಡೆಗಟ್ಟಲು ಸರಕಾರಗಳ ಪಾಲಿಸಿಗಳು, ಯೋಜನೆಗಳು ಮತ್ತು ಆತ್ಮಾವಲೋಕನ ತ್ವರಿತವಾಗಿ ಆಗಬೇಕೆಂದು ವಿಶ್ವ ಅರೋಗ್ಯ ಸಂಸ್ಥೆ ಕರೆನೀಡಿದೆ.
ಇದೇ ವರ್ಷ ಏಪ್ರಿಲ್ 20 ರಂದು ಅಮೆರಿಕಾದ ತಜ್ಞ ಲವ್ ಜಾಯ್ ಹೇಳುವ ಪ್ರಕಾರ ಅವುಗಳಲ್ಲಿ ಶೇಕಡಾ.71 ರಷ್ಟು ಕಾಯಿಲೆಗಳು ವನ್ಯಜೀವಿಗಳಿಂದ ಹರಡುತ್ತವೆ.ಈ ಹಿಂದೆ ಮನುಕುಲವನ್ನು ಕಾಡಿದ ಎಚ್. ಐ.ವಿ, ಏಡ್ಸ್, ಎಬೋಲ ಮತ್ತು ಸಾರ್ಸ್ ರೋಗಗಳು ಹರಡಿದ್ದು ಕೂಡ ಕಾಡು ಪ್ರಾಣಿಗಳ ಮೇಲೆ ಮನುಷ್ಯ ಮಾಡಿದ ಅತಿಕ್ರಮಣದಿಂದಲೇ ಶುರುವಾದ ಖಾಯಿಲೆಗಳು.
ಪ್ರಕೃತಿಯ ಮೇಲೆ ಹಲವು ರೀತಿಯಲ್ಲಿ ಅತಿಕ್ರಮಣಗಳು ನಡೆಯುತ್ತಿವೆ.ಮನುಷ್ಯರು ಕಾಡನ್ನು ಕಡಿದು ನೆಲಸಮಗೊಳಿಸಿದ್ದಾರೆ. ಕಾಡು ಪ್ರಾಣಿಗಳು ಬದುಕಲು ಜಾಗವಿಲ್ಲದಂತೆ ಒತ್ತರಿಸಿದಂತೆಲ್ಲ ಅವುಗಳು ದಿಕ್ಕಿಲ್ಲದೆ ಮನುಷ್ಯರ ಜೊತೆ ಸಂಧಿಸಲೇ ಬೇಕಾಗುತ್ತದೆ. ಇಂತಹ ಎಲ್ಲ ಸಂದರ್ಭಗಳಲ್ಲಿ ಆಯಾ ಪ್ರಾಣಿ ಸಂಕುಲಗಳನ್ನು ವಿಲ್ಲನ್ ಗಳೆಂದು ಚಿತ್ರಿಸುವ ನಾವು ಮನುಷ್ಯರು ಮಾಡಿದ ತಪ್ಪುಗಳನ್ನು ಗಮನಿಸದವರಾಗಿದ್ದೇವೆ. ಬೇಕಂತಲೇ ಮರೆತುಬಿಡುತ್ತೇವೆ.
ಆದರೆ 10 ಲಕ್ಷಕ್ಕೂ ಹೆಚ್ಚು ಜನರು ಸತ್ತ ಬಳಿಕ, ಮೂರು ಕೋಟಿಗೂ ಹೆಚ್ಚು ಜನರು ಅಧಿಕೃತವಾಗಿ ಸೋಂಕಿತರೆಂದು ಘೋಷಿತರಾಗಿರುವಾಗ ಮನುಷ್ಯ ತನ್ನ ತಪ್ಪು ಏನೆಂದು ನೋಡಿಕೊಳ್ಳದೆ ವಿಧಿಯಿಲ್ಲದಾಗಿದೆ.
ಇಡೀ ಪ್ರಪಂಚ ಮತ್ತೊಮ್ಮೆ “ಮನುಷ್ಯನ ಅವಿರತ ಪಾಪಗಳು ಅವನನ್ನು ಕಾಡದೇ ಬಿಡುವುದಿಲ್ಲ “- ಎಂಬ ತತ್ವವನ್ನು, ಪ್ರಕೃತಿಯ ಸಮತೋಲನದ ವಿಜ್ಞಾನವನ್ನು ಮತ್ತು ವಿವೇಕವನ್ನು ಮಾತನಾಡತೊಡಗಿವೆ. ಥಟ್ಟೆಂದು ಉರಿದುಬೀಳುತ್ತಿರುವ ಅರಣ್ಯಗಳು, ತೀಡಿ ಬೀಸುತ್ತಿರುವ ಚಂಡಮಾರುತಗಳು, ಧಗ ಧಗಿಸುತ್ತಿರುವ ಭೂ ಭಾಗಗಳು, ಸಾಗರದಲ್ಲಿ ಏರುತ್ತಿರುವ ಉಷ್ಣಾಂಶ, ಕರಗಿ ಹರಿಯುತ್ತಿರುವ ಮಂಜಿನ ಗಡ್ಡೆಗಳು, ಏರುತ್ತಿರುವ ಸಮುದ್ರ ಮಟ್ಟಗಳು ಆಕಾಶವೇ ಕಿತ್ತು ಬಿದ್ದಂತೆ ಬೀಳುವ ಮಳೆ ಎಲ್ಲವೂ ಮನುಷ್ಯರು ಪ್ರಕೃತಿಯ ಮೇಲೆ ಮಾಡುತ್ತಿರುವ ಆಕ್ರಮಣ ಮತ್ತು ಅತ್ಯಾಚಾರಗಳ ಕಾರಣವೇ ಎಂದು ಪ್ರಕೃತಿ ತಜ್ಞರು ಹೇಳಿದ್ದ ಮಾತುಗಳು ಕೊರೋನಾ ರೂಪದಲ್ಲಿ ತನ್ನ ವಿರಾಟ್ ದರ್ಶನವನ್ನು ನೀಡಿದೆ ಎಂಬ ವಿಚಾರಕ್ಕೆ ಈಗ ಮತ್ತಷ್ಟು ಮೌಲ್ಯ ದೊರೆತಿದೆ. ಇವೆಲ್ಲ ಈ ಹಿಂದೆಯೂ ನಡೆಯುತ್ತಿದ್ದವಾದರೂ ಅವುಗಳ ಭೀಕರತೆ ಈಗಿನಂತಿರಲಿಲ್ಲ ಎನ್ನಲಾಗಿದೆ. ಅವಿರತ ಪ್ರಕೃತಿ ನಾಶ, ಅತಿಕ್ರಮಣ ಮತ್ತು ಪರಿಸರ ಮಾಲಿನ್ಯಈ ಮೂರು ವಿಚಾರಗಳು ಒತ್ತಟ್ಟಿಗೆ ಬಹುಕಾಲ ಸಂಭವಿಸಿದ ಪರಾಕಾಷ್ಠೆಯನ್ನು ತಲುಪಿರುವುದೇ ಈ ವಿಶ್ವವ್ಯಾಪೀ ಪಿಡುಗಿಗೆ ಕಾರಣ ಎಂದು ಹೇಳಲಾಗಿದೆ.
ವೈರಸ್ಸಿನ ಹರಡುವಿಕೆಗೆ ಲಗಾಮು
ಅತಿ ಸಣ್ಣದ್ದು ಎನ್ನಿಸುವ ಬದಲಾವಣೆಗಳು ಕೂಡ ವೈರಸ್ಸಿನ ಹರಡುವಿಕೆಗೆ ಲಗಾಮು ಹಾಕಲು ಕಾರಣವಾಗಬಲ್ಲವು. ಉದಾಹರಣೆಗೆ ಫಾರಂ ಗಳಲ್ಲಿ ಬೆಳೆದ ಪ್ರಾಣಿಗಳ ಮಾರುಕಟ್ಟೆ ಮತ್ತು ಕಾಡುಗಳಿಂದ ಹಿಡಿದು ತಂದ ಪ್ರಾಣಿಗಳ ಮಾರುಕಟ್ಟೆಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸುವುದು, ಅವುಗಳ ಆಮದು ಮತ್ತು ರಫ್ತುಗಳನ್ನು ನಿಯಂತ್ರಿಸುವುದು, ಕಳ್ಳ ಸಾಗಾಣಿಕೆಯ ಮೇಲೆ ಕಡಿವಾಣ ಹಾಕುವುದು ಇತ್ಯಾದಿಗಳಿಂದ ವೈರಸ್ಸುಗಳು ಒಂದು ಪ್ರಭೇದದಿಂದ ಇತರೆ ಪ್ರಭೇದಗಳಿಗೆ ಹರಡುವುದನ್ನು ಬಹುಮಟ್ಟಿಗೆ ತಡೆಯಬಹುದು.
ಆದರೆ ಸಧ್ಯಕ್ಕೆ ಮನುಷ್ಯನ ದಾರ್ಷ್ಟ್ಯ ಇವೆಲ್ಲ ಕ್ರಮಗಳನ್ನು ಅವನು ಕಡೆಗಣಿಸುವಂತೆ ಮಾಡಿದ್ದರಿಂದಲೇ ಇಂತಹ ದೊಡ್ಡ ಅವಘಡ ಸಂಭವಿಸಿದ್ದು.
ಯು.ಎನ್. ನ ಪರಿಸರ ತಜ್ಞರ ಮುಖ್ಯಸ್ಥ ಇಂಗರ್ ಆಂಡರ್ಸನ್ ಕೊರೊನ ಸೋಂಕು ಪ್ರಕೃತಿಯೇ ಮಾನವನಿಗೆ ಕಳಿಸಿರುವ ಎಚ್ಚರಿಕೆಯ ಉಡುಗೊರೆ ಎಂದಿದ್ದಾನೆ. ಪ್ರಕೃತಿಯ ನಾಶದೊಂದಿಗೇ ಮನುಷ್ಯನ ನಾಶವೂ ಖಚಿತ ಎಂದು ಹೇಳುತ್ತಾನೆ. ಇವನ ಪ್ರಕಾರ ಪ್ರಕೃತಿಯ ಬತ್ತಳಿಕೆಯಲ್ಲಿ ಕೊರೊನಕ್ಕಿಂತಲೂ ಅತ್ಯಂತ ಮಾರಣಾಂತಿಕವಾದ ಹತ್ತಾರು ಅಸ್ತ್ರಗಳಿವೆ.
ಪ್ರಕೃತಿ ಅವುಗಳನ್ನು ನಮ್ಮಿಂದ ದೂರವಿಟ್ಟಿದ್ದರೂ ಪ್ರತಿಬಾರಿ ಮನುಷ್ಯನೇ ಆ ಅಂತರವನ್ನು ಅತಿಕ್ರಮಿಸಿ ಆಪತ್ತುಗಳನ್ನು ಆಮಂತ್ರಿಸಿಕೊಳ್ಳುತ್ತಿದ್ದಾನೆ. ಕೋವಿಡ್ ಕಾಯಿಲೆ ಕೇವಲ ಒಂದು ಎಚ್ಚರಿಕೆಯಷ್ಟೇ ಎಂದು ವಿವೇಕ ಹೇಳಿದ್ದಾನೆ.
ಇಂತಹ ಕಾಯಿಲೆಗಳಿಂದ ದೂರವಿರಲು ತತ್ ಕ್ಷಣದಿಂದಲೇ ಗ್ಲೋಬಲ್ ಹೀಟಿಂಗ್, ವ್ಯವಸಾಯಕ್ಕಾಗಿ ಅರಣ್ಯ ನಾಶ, ಗಣಿಗಾರಿಕೆ ಮತ್ತು ಕಾಡು ಕಡಿದು ವಸತಿ ವಿಸ್ತರಣೆ , ವನ್ಯ ಪ್ರಾಣಿಗಳ ಭಕ್ಷಣೆ, ಮಾರಾಟ, ಆಮದು-ರಫ್ತು ಇವುಗಳನ್ನು ನಿಲ್ಲಿಸಬೇಕಿದೆ ಎನ್ನುತ್ತಾನೆ.ಇಲ್ಲದಿದ್ದರೆ ಮತ್ತೆ ಮತ್ತೆ ಇಂತಹ ವಿಶ್ವ ವ್ಯಾಪೀ ಪಿಡುಗುಗಳು ಮನುಷ್ಯನನ್ನೂ ಗೋಳಾಡಿಸಬಲ್ಲವು.
ಇತ್ತೀಚೆಗಿನ ಆಷ್ಟ್ರೇಲಿಯದ ಕಾಳ್ಗಿಚ್ಚು ಹಿಂದಿನ ಎಲ್ಲ ದಾಖಲೆಗಳನ್ನು ಮುರಿಯಿತು. 70 ವರ್ಷಗಳಲ್ಲಿ ನಡೆದಿರದಂತ ಆಫ್ರಿಕಾದ ಲೋಕಸ್ಟ್ ಗಳ ದಾಳಿ, ಬೋರ್ನಿಯೋದ ಅರಣ್ಯ ನಾಶ ಇಂತಹ ಪ್ರತಿ ಘಟನೆಗಳೂ ಪ್ರಕೃತಿ ಪ್ರಿಯ ಜನರನ್ನು ಉತ್ತರಗಳನ್ನು ಹುಡುಕುವಂತೆ ಬಲವಂತ ಮಾಡಿತು.ಇತ್ತೀಚೆಗಿನ ವರ್ಷಗಳಲ್ಲಿ ಕಂಡ ಎಬೋಲ, ಬರ್ಡ್ ಫ್ಲೂ, ಮೆರ್ಸ್, ರಿಫ್ಟ್ ವ್ಯಾಲಿ ಜ್ವರ, ಸಾರ್ಸ್, ಜೀಕ ವೈರಸ್, ಪಶ್ಚಿಮ ನೈಲ್ ವೈರಸ್ ಎಲ್ಲವೂ ವನ್ಯ ಪ್ರಾಣಿಗಳಿಂದ ಮನುಷ್ಯನಿಗೆ ಹರಡಿದಂತ ಕಾಯಿಲೆಗಳು.ಹಾಗಾಗಿ ಕೊರೊನಾ ವೈರಸ್ ನಂತವು ಬರಬಹುದಾದ ಸಾಧ್ಯತೆ ಹತ್ತಿರದಲ್ಲೇ ಕಾಯುತ್ತಿತ್ತು. ಕೊನೆಗೂ ವನ್ಯ ಪ್ರಾಣಿ ಭಕ್ಷಣೆಯ ಮೂಲಕ ಬಂದೇ ಬಂದಿತು.ಆದರೆ ಅದೃಷ್ಟವಶಾತ್ ಕೋವಿಡ್ ಸೋಂಕಿನಲ್ಲಿ ಮರಣದ ಸಂಖ್ಯೆ ಕಡಿಮೆಯಿದೆ.
ಎಬೋಲಾ ವಿಶ್ವ ವ್ಯಾಪಿಯಾಗಿದ್ದರೆ ಮರಣದ ವೇಗ ಶೇಕಡ 50, ನಿಪಾ ವೈರಸ್ ನಲ್ಲಿ ಶೇಕಡ 60-75 ಇರುತ್ತಿತ್ತು. ಹಾಗಾಗಿ ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಮನುಷ್ಯ ಪ್ರಭೇದ ಅತ್ಯಂತ ವೇಗವಾಗಿ ನಿರ್ನಾಮವಾಗುತ್ತದೆ ಎನ್ನುತ್ತಾನಿವನು.
ಸಧ್ಯಕ್ಕೆ ಪರಸರ ಕುರಿತ ಕಾಯಿದೆಗಳು ಮತ್ತು ಆರೋಗ್ಯ ಕುರಿತಾದ ಕಾಯಿದೆಗಳು ಬೇರೆ, ಬೇರೆಯಾಗಿವೆ.ಆದರೆ ಪರಿಸರ ಮತ್ತು ಮನುಷ್ಯ ಬೇರೆ ಬೇರೆಯಲ್ಲ.ಅವೆರಡನ್ನೂ ಒಟ್ಟಾಗಿ ನೋಡಬೇಕು ಎನ್ನುವ ಬೇಡಿಕೆಗಳಿವೆ.ಜನವರಿ ತಿಂಗಳಲ್ಲಿ ಇಡೀ ವೂಹಾನ್ ಪ್ರಾಣಿ ಮಾರುಕಟ್ಟೆಯನ್ನು ಮುಚ್ಚಲಾಯಿತು.ಇದೀಗ ಅದನ್ನು ಶಾಶ್ವತವಾಗಿ ಮುಚ್ಚಿ ಎನ್ನುವ ಅಹವಾಲುಗಳಿವೆ.
ಈ ಹಿಂದೆ ಅಂತಾರಾಷ್ಟ್ರೀಯ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸರುವ ಜಾನ್ ಸ್ಕಾನ್ಲ್ಯಾನ್ ವನ್ಯ ಮೃಗಗಳ ಮಾರಾಟದ ಅನಧಿಕೃತ ಮಾರುಕಟ್ಟೆಯ ಮೊತ್ತ ವರ್ಷವೊಂದಕ್ಕೆ ಸುಮಾರು 1 ಬಿಲಿಯನ್ ಡಾಲರ್ ಗಳಷ್ಟು ದೊಡ್ಡದು ಎನ್ನುತ್ತಾನೆ.ಈ ಕಾಲದಲ್ಲಿ ಒಬ್ಬ ಮನುಷ್ಯ ಇಂದು ಮಧ್ಯ ಆಪ್ರಿಕಾದಲ್ಲಿದ್ದರೆ ನಾಳೆ ಲಂಡನ್ ನಗರದಲ್ಲಿರಬಹುದು,ಆದ್ದರಿಂದ ಕಾಯಿಲೆಗಳು ಒಂದು ಖಂಡದಿಂದ ಇನ್ನೊಂದು ಖಂಡಕ್ಕೆ ತಕ್ಷಣ ಹರಡಬಲ್ಲದು ಇದನ್ನು ಹತ್ತಿಕ್ಕುವುದು ಅಸಾಧ್ಯ ಆದ್ದರಿಂದ ಯಾವುದೇ ಕಾನೂನು ಬಂದರೂ ಅದು ಅಂತಾರಾಷ್ಟ್ರೀಯ ಮಟ್ಟದ ಕಾನೂನಾದರೆ ಮಾತ್ರ ಕೆಲಸ ಮಾಡಬಲ್ಲದು ಎಂದು ಈತ ಹೇಳುತ್ತಾನೆ.
ಉದಾಹರಣೆಗೆ ಆಮದು ಮಾಡಿಕೊಳ್ಳುವ ದೇಶಗಳು ಯಾವುದೇ ಮಾಂಸ ಮಡ್ಡಿಗಳು ಅವುಗಳನ್ನು ರಫ್ತುಮಾಡುವ ದೇಶದ ಕಾನೂನುಗಳ ಪ್ರಕಾರ ಅದನ್ನು ಪಡೆಯಲಾಗಿದೆ ಎನ್ನುವ ರುಜವಾತಿಲ್ಲದೆ ಖರೀದಿ ಮಾಡಬಾರದು. ಇದನ್ನು ಅಪರಾಧಿ ವಿಭಾಗದವರು ಜೊತೆ ಜೊತೆಯಲ್ಲೇ ಕಾನೂನು ಬದ್ದವಾಗಿ ಅನುಮೋದಿಸಬೇಕು, ಆಗ ಸರಿಯಾದ ಕ್ರಮದಲ್ಲಿ ಪ್ರಾಣಿಗಳ ಸಾಕಾಣಿಕೆ ಮಾಡಿ ಮಾರುವವರು ಕಳ್ಳ ದಂಧೆಯವರಿಗೆ ತಮ್ಮ ಮಾರುಕಟ್ಟೆಯ ಕಳೆದುಕೊಳ್ಳುವುದಿಲ್ಲ. ಜೊತೆಯಲ್ಲೇ ಜೀವ ವೈವಿಧ್ಯತೆ, ಅವುಗಳು ಬದುಕುವ ಪರಿಸರದ ಸಮತೋಲನ ಉಳಿಯುತ್ತದೆ ಮತ್ತು ಪ್ರಭೇದಗಳ ನಾಶವನ್ನು ತಡೆಯಬಹುದಾಗಿದೆ.
ನಶಿಸಿದ ಪ್ರಾಣಿ ಸಂಕುಲ
ವನ್ಯಜೀವಿಗಳ ಧರ್ಮಾರ್ಥ ಸಂಸ್ಥೆ WWF ಪ್ರಕಾರ ಸಸ್ತನಿಗಳು, ಪಕ್ಷಿ, ಮೀನು, ಉಭಯಜೀವಿಗಳು ಮತ್ತು ಸರೀಸೃಪಗಳ ಸಂಖ್ಯೆ 1970 ರನಂತರ ಅಚ್ಚರಿಗೊಳಿಸಬಲ್ಲ ಅಸಾಧಾರಣ ಸರಾಸರಿ ಶೇಕಡ 68 ನಶಿಸಿಹೋಗಿವೆ. ಅಂದರೆ ಕೇವಲ 50 ವರ್ಷಗಳಲ್ಲಿ ಎರಡನೇ ಮೂರು ಭಾಗದಷ್ಟು ಜೀವಿಗಳು ಈ ಭೂಗೋಲದಿಂದ ನಿರ್ಗಮಿಸಿಬಿಟ್ಟಿವೆ. ಇದರ ಜೊತೆಯೇ ಕಂಡು ಕೇಳರಿಯದ ರೀತಿಯಲ್ಲಿ ಅವುಗಳ ವಾಸಸ್ಥಾನಗಳೂ ನಾಶವಾಗುತ್ತಿವೆ.ಇಂತಹ ಕೃತ್ಯಗಳು ನಿಲ್ಲುವ ಸೂಚನೆಗಳನ್ನೇ ತೋರಿಸದಿರುವಾಗ ಕೊರೊನಾ ಸೋಂಕಿನಂತಹವು ಮನುಕುಲವನ್ನು ಅಪ್ಪಳಿಸಿರುವುದು ಅತ್ಯಂತ ಸಹಜ ಎಂಬ ಹೇಳಿಕೆಗಳಿವೆ.
ಒಂದೇ ಪ್ರಭೇದವನ್ನು ಅವಿರತ ಬೇಟೆಯಾಡುವ ಕಳ್ಳ ದಂಧೆಗಳಿಗೆ ಪೂರ್ಣ ವಿರಾಮ ಬೀಳದಿದ್ದರೆ ಉದಾಹರಣೆಗೆ, ಘೇಂಡಾಮೃಗಗಳು, ಆನೆ ಅಥವಾ ಸಿಂಹಗಳಂತ ದೊಡ್ಡ ಪ್ರಾಣಿಗಳು, ಸಣ್ಣ ಪ್ರಾಣಿಗಳು, ಪಕ್ಷಿಗಳು, ಕೆಲವು ಬಗೆಯ ಮೀನುಗಳು ಅತ್ಯಂತ ಬೇಗನೆ ದಂತಕಥೆಗಳಾಗಿ ಬಿಡಬಲ್ಲವು.ಇದು ನೇರವಾಗಿ ನಡೆದರೆ ಪರೋಕ್ಷವಾಗಿ ಅವುಗಳನ್ನೇ ನಂಬಿ ಬದುಕುವ ಇತರೆ ಪ್ರಾಣಿ ಮತ್ತು ಕೀಟಗಳೂ ಸಾಯುತ್ತವೆ.
ಉಗಾಂಡದಲ್ಲಿ ಇದಕ್ಕೆ ತದ್ವಿರುದ್ಧವಾದದ್ದು ಕೂಡ ನಡೆಯಿತು. ಅಲ್ಲಿನ ಕಾಡಿನಲ್ಲಿದ್ದ ಸಣ್ಣ ಪ್ರಾಣಿಗಳನ್ನು ಬೇಟೆಯಾಡಲು ಬಂದಿದ್ದವರು ಅತ್ಯಂತ ವಿರಳವಾಗಿ ಕಂಡುಬರುವ ಬೆಳ್ಳಿ ಬೆನ್ನಿನ ಬೆಟ್ಟದ ಗೊರಿಲ್ಲ ವೊಂದನ್ನು ಕೊಂದರು.
ಬೋಸ್ವಾನದಲ್ಲಿ ಸರಕಾರವೇ ಆನೆಗಳನ್ನ ಬೇಟೆಯಾಡಲು ಪರವಾನಗಿ ನೀಡುತ್ತದೆ. ಇದರ ಜೊತೆಯಲ್ಲಿ ಇದೇ ವರ್ಷದ ಏಪ್ರಿಲ್,ಮೇ, ಜೂನ್ ನಲ್ಲಿ ನೂರಾರು ಆನೆಗಳು ಅತ್ಯಂತ ರಹಸ್ಯಮಯವಾಗಿ ಸತ್ತು ಬಿದ್ದವು.
21 ನೇ ತಾರೀಕಿನ ವೇಳೆಗೆ ಅವುಗಳು ಕುಡಿಯುತ್ತಿದ್ದ ನೀರಿನಲ್ಲಿದ್ದ ಒಂದು ರೀತಿಯ ಬ್ಯಾಕ್ಟೀರಿಯಾಗಳು ಅವುಗಳ ಸಾವಿಗೆ ಕಾರಣವೆಂದು ಹೇಳಲಾಯಿತು.
ನಮ್ಮಂತೆ ಅವುಗಳಿಗೂ ತಮ್ಮದೇ ಆದ ಕಾಯಿಲೆ ಇತ್ಯಾದಿಗಳು ಕಾಡುತ್ತವೆ. ಕಾಡು ಪ್ರಾಣಿಗಳು ಒಂದನ್ನೊಂದು ಬೇಟೆಯಾಡುತ್ತವೆ. ಜೊತೆಗೆ ಮನುಷ್ಯನ ಅಧಿಕೃತ ಬೇಟೆ, ಅನಧಿಕೃತ ಭೇಟೆಗಳಿಗೆ ಅವು ತುತ್ತಾಗುತ್ತವೆ.ಅವುಗಳು ಬದುಕುವ ಪರಿಸರಗಳು ಅಪಾಯಕಾರಿಯಾಗಿ ಬದಲಾಗುತ್ತಿವೆ. ಇದು ಮಾತ್ರ ಸಾಲದು ಎಂದು ಮಾನವ ಅವುಗಳ ವಾಸಿಸುತ್ತಿರುವ ಪರಿಸರವನ್ನು ವ್ಯವಸಾಯ, ಕೈಗಾರಿಕೆ, ಗಣಿಗಾರಿಕೆ, ಮರ ಸಾಗಾಣಿಕೆ, ಮನೆ ಕಟ್ಟುವಿಕೆ ಇತ್ಯಾದಿಗಳಿಗಾಗಿ ನಾಶಮಾಡುತ್ತಲೇ ಹೋಗುತ್ತಿದ್ದಾನೆ.
ಇದನ್ನೆಲ್ಲ ಸಹಿಸಿಕೊಂಡು ಉಳಿಯುವ ಶಕ್ತಿ ಮೂಕ ಪ್ರಾಣಿಗಳಿಗೆ ಖಂಡಿತಾ ಇಲ್ಲ. ಈ ಕಾರಣ ಜೀವ ವೈವಿಧ್ಯತೆ ಇಲ್ಲವಾಗುತ್ತದೆ. ಇದರ ಜೊತೆ ಅಪಾಯಕಾರಿ ಪ್ರಭೇದಗಳು, ವೈರಸ್ಸುಗಳು, ಬ್ಯಾಕ್ಟೀರಿಯಾಗಳು ಹೆಚ್ಚಾಗುತ್ತವೆ. ಪ್ರಕೃತಿ ವಿಕೋಪಗಳು ಹೆಚ್ಚುತ್ತವೆ. ಮನುಷ್ಯರು ನಿಧಾನವಾಗಿ ಆದರೆ ಖಚಿತವಾಗಿ ತಮ್ಮ ನಾಶಕ್ಕೂ ಕಾರಣರಾಗಿದ್ದಾರೆ.
ಕಾಡು ಕಡಿದು ಮಾಡುವ ಯಾವುದೇ ಪ್ರಾಜೆಕ್ಟುಗಳನ್ನು ಆಯಾ ದೇಶಗಳು ಅನೂರ್ಜಿತಗೊಳಿಸಬೇಕಿದೆ. ಇವೇ ವಿಚಾರಗಳು ಸಮುದ್ರ ಮತ್ತು ಜಲಚರಗಳ ಶೋಷಣೆಯ ವಿಚಾರಕ್ಕೂ ಜಾರಿಯಾಗಲಿ ಎನ್ನುವ ಆಶಯಗಳಿವೆ. ಈಗಾಗಲೇ ಗ್ಲೋಬಲ್ ವಾರ್ಮಿಂಗ್ , ಕಾರ್ಬನ್ ಎಮಿಶನ್ ಮತ್ತು ಪರಿಸರ ಮಾಲಿನ್ಯಗಳ ಆಂದೋಲನ ಶುರುವಾಗಿ ದಶಕಗಳೇ ಕಳೆದರೂ ತತ್ ಕ್ಷಣದ ಲಾಭಗಳಿಗಾಗಿ ಹೆಚ್ಚಿನ ಬದಲಾವಣೆಗಳನ್ನು ಜಾರಿಗೆ ತಂದಿಲ್ಲ. ಈ ವಿಚಾರದಲ್ಲಿ ಇನ್ನೂ ಕಾಯಲು ಸಮಯ ಉಳಿದಿಲ್ಲ ಎನ್ನುವ ಅರಿವು ಈಗ ನಿಚ್ಚಳವಾಗುತ್ತದೆ.
ಗಮನಿಸಿ ಕೋವಿಡ್ ನಂತಹ ವೈರಸ್ಸುಗಳನ್ನು ದೇಶದಿಂದ ದೇಶಕ್ಕೆ ಹರಡಿದ್ದು ಕೂಡ ಮನುಷ್ಯರೇ ಹೊರತು ವೈರಸ್ಸುಗಳು ತಾವಾಗಿ ಹೋಗಲಿಲ್ಲ.ಪರಸ್ಪರರಿಗೆ ನೀಡುತ್ತಿರುವವರೂ ಮನುಷ್ಯರೇ.
ಮಾನವನಿಂದಲೇ ವಿನಾಶ
ಮನುಷ್ಯ ಮಾಡುತ್ತಿರುವ ಪ್ರಕೃತಿ ವಿನಾಶದ ವಿಷಮತೆ ಅದಷ್ಟು ಗಂಭೀರವಾಗಿದೆಯೆನ್ನಲು ನಾವು ಕೆಳಗಿನ ಕೆಲವು ಅಂಕಿ-ಅಂಶಗಳನ್ನು ನೋಡಬಹುದು.
1) ಲ್ಯಾಟಿನ್ ಅಮೆರಿಕಾ ಮತ್ತು ಕ್ಯಾರೆಬ್ಬಿಯನ್ ದೇಶದಲ್ಲಿನ ವನ್ಯಜೀವಿಗಳ ಪ್ರಮಾಣಗಳು ಶೇಕಡ 94 ಕಡಿಮೆಯಾಗಿದೆ. ಇದು ದಾಖಲೆ ಪ್ರಮಾಣದ ಜೀವ ಜಾಲ ನಾಶ.
2) ಸಿಹಿನೀರಿನ ಜೀವ ಜಾಲ ಜಗತ್ತುಶೇಕಡ 84 ಅಳಿದಿದೆ. ಚೈನಾದ ಯಾಂಗ್ಸೆ ನದಿಯ 27 ವಿಧದ ಮೀನುಗಳ ಪ್ರಮಾಣ ಶೇ.97% ಇಳಿದಿವೆ.
3) ಪ್ರಪಂಚದ ವಿವಿದೆಡೆ ಅಳಿವಿನ ಅಂಚಿನಲ್ಲಿರುವ ಲೆದರ್ ಬ್ಯಾಕ್ ಆಮೆಗಳು ಶೇ.20 ರಿಂದ 98 ನಾಶವಾಗಿವೆ.ಕೋಸ್ಟಾರಿಕಾದ ಟಾರ್ಟುಗೆರ ಬೀಚ್ ಒಂದರಲ್ಲೇ ಇವುಗಳ ಸಂತತಿ ಶೇ.84 ಇಳಿಕೆ ಕಂಡಿದೆ
4) ಮಧ್ಯ ಆಫ್ರಿಕಾದ ಆನೆಗಳ ಸಂಖ್ಯೆಶೇಕಡ 98 ಇಳಿಕೆ ಕಂಡಿದೆ.
5) ಇಂಗ್ಲೆಂಡಿನ ಬೂದು ಪಾರ್ಟಿಡ್ಜ್ ಪಕ್ಷಿಗಳ ಸಂಖ್ಯೆಶೇಕಡ 85 ಇಳಿಕೆ ಕಂಡಿದೆ.ಇಲ್ಲಿಯ ಆರ್ಕ್ನಿ ಎನ್ನುವ ದ್ವೀಪದ ಮತ್ತೊಂದು ಪಕ್ಷಿ ಆರ್ಕಿಟ್ಕ್ ಸ್ಕುವಾಗಳ ಸಂಖ್ಯೆಶೇಕಡ 62 ಕುಸಿದಿದೆ.
6) ಹಿಮದಿಂದ ಆವೃತವಾಗಿಲ್ಲದ ಶೇಕಡ 75 ಭಾಗ ಭೂಮಿಯನ್ನು ಮನುಷ್ಯ ತನ್ನ ಚಟುವಟಿಕೆಯಿಂದ ಬದಲಾಯಿಸಿದ್ದಾನೆ.
ಹೊಸ ಕಾನೂನಿನ ಕಾರಣದಿಂದಾಗಿ ಘಾನದ ಆನೆಗಳು, ಆಸ್ಟ್ರೇಲಿಯಾದ ಕಪ್ಪು ಬಾಲದ ಶಾರ್ಕ್ ಗಳು, ನೇಪಾಳದ ಹುಲಿಗಳು ಸಂರಕ್ಷಣಾ ಮತ್ತೆ ತಮ್ಮ ಸಂತಾನವನ್ನು ವೃದ್ಧಿಸಿಕೊಂಡ ನಿದರ್ಶನಗಳಿವೆ. ಹಾಗಾಗಿ ಪ್ರಕೃತಿಯನ್ನು ಕಾನೂನುಗಳ ಮೂಲಕ ಮತ್ತು ಅಪರಾಧಿಗಳನ್ನು ಶಿಕ್ಷಿಸುವ ಮೂಲಕ ಕಾಯುವುದು ಸಾಧ್ಯವಿದೆ.
ಬರಿಯ ರಾಷ್ಟ್ರೀಯ ಕಾಯಿದೆಗಳ ಬದಲು ಇದಕ್ಕಾಗಿ ಅಂತಾರಾಷ್ಟ್ರೀಯ ಕಾಯಿದೆಗಳ ಅಗತ್ಯವಿದೆ. ಕೋವಿಡ್-19 ಎನ್ನುವ ಒಂದೇ ಒಂದು ವೈರಸ್ಸು ಪ್ರಪಂಚವನ್ನೆಲ್ಲ ನಲುಗಿಸಿ ಮನುಷ್ಯರನ್ನು ಎಚ್ಚರಿಸಿರುವ ಕಾಲದಲ್ಲಿ ಪರಿಸರ ತಜ್ಞರು ಕೇಳಿರುವಮಹತ್ತರ ಬದಲಾವಣೆಗಳನ್ನು ತರುವುದುಅತ್ಯಂತ ಸೂಕ್ತವಾದ ನಿರ್ಧಾರವಾಗುತ್ತದೆ.
ಶುಭ ದಿನ

ಇಂದಿನ ನುಡಿ
ಮಾತು ಮನಸ್ಸುಗಳನ್ನು ಒಂದುಗೂಡಿಸಬೇಕೇ ಹೊರತು ಒಡೆಯಬಾರದು.
ಸಂಗ್ರಹ :ರಾಜೀವಲೋಚನ
.
ಇಂದಿನ ಪಂಚಾಂಗ
ದಿನಾಂಕ 24 ಸೆಪ್ಟಂಬರ್ 2020,ಗುರುವಾರ
ಸಂವತ್ಸರ : ಶ್ರೀ ಶಾರ್ವರಿ, ಆಯನ :ದಕ್ಷಿಣಾಯನ, ಋತು: ಶರದ್, ಮಾಸ : ಅಧಿಕ ಆಶ್ವೀಜ, ಪಕ್ಷ :ಶುಕ್ಲ ತಿಥಿ:ಅಷ್ಟಮಿ ನಕ್ಷತ್ರ: ಮೂಲ
ಸೂರ್ಯೋದಯ : ಬೆಳಿಗ್ಗೆ 6.09
ಸೂರ್ಯಾಸ್ತ: ಸಂಜೆ 6.14
P
89 ವರ್ಷದ ವೃದ್ಧ ರನ್ನು ಗುಣಪಡಿಸಿದ ಮೈಸೂರು ಜಿಲ್ಲಾ ಕೋವಿಡ್ ಆಸ್ಪತ್ರೆ
ಯಾವುದೇ ವಯಸ್ಸಿನ ಕೋವಿಡ್ ರೋಗಿಗಳನ್ನು ಗುಣಪಡಿಸಬಹುದು ಎಂಬುದನ್ನು ಮೈಸೂರು ಜಿಲ್ಲಾ ಕೋವಿಡ್ ಆಸ್ಪತ್ರೆ ವೈದ್ಯರು ಹಲವಾರು ಪ್ರಕರಣಗಳಲ್ಲಿ ಸಾಬೀತು ಮಾಡಿದ್ದಾರೆ. ಇದಕ್ಕೆ ಇತ್ತೀಚಿನ ನಿದರ್ಶನ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ 89 ವರ್ಷದ ವೃದ್ಧ, ಕೊಳಲು ವಾದಕ ಸಿ.ಎಸ್. ನಾಗರಾಜು ಅವರು.
ಇವರು ಹುಣಸೂರು ತಾಲ್ಲೂಕು ಚಿಲ್ಕುಂದ ಗ್ರಾಮದವರು. ಮೂಲತಃ ಕೃಷಿಕರಾದರೂ ಕೊಳಲು ವಾದಕರಾಗಿ 1990ರ ದಶಕದ ವರೆಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿದ್ದಾರೆ.
ಸೆಪ್ಟೆಂಬರ್ ಮೊದಲ ವಾರ ಜ್ವರ ಬಂದಿತ್ತು. ಸ್ಥಳೀಯ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದರೂ ಗುಣವಾಗಿರಲಿಲ್ಲ. ಜ್ವರ ತೀವ್ರಗೊಂಡು ಮಾತನಾಡದ ಸ್ಥಿತಿಗೆ ಬಂದಾಗ ಹುಣಸೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಅಲ್ಲಿನ ವೈದ್ಯರು ತಕ್ಷಣ ಕೋವಿಡ್ ಪರೀಕ್ಷೆ ಮಾಡಿಸಿ, ಪಾಸಿಟೀವ್ ಬಂದ ಕೂಡಲೇ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಶಿಫಾರಸ್ಸು ಮಾಡಿದ್ದರು.
ಸೆಪ್ಟೆಂಬರ್ 10 ರಂದು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಇವರನ್ನು ದಾಖಲಿಸಿಕೊಂಡು ಸೂಕ್ತ ಚಿಕಿತ್ಸೆ ನೀಡಲಾಯಿತು. ವೈದ್ಯರು, ನರ್ಸ್ ಗಳು, ಸಿಬ್ಬಂದಿ ಎಲ್ಲರೂ ಇವರನ್ನು ಅತ್ಯಂತ ಕಾಳಜಿಯಿಂದ ನೋಡಿಕೊಂಡಿದ್ದಾರೆ.
ಐ.ಸಿ.ಯು. ಮಟ್ಟಕ್ಕೆ ಹೋಗುವ ರೋಗಿಯನ್ನು ಗುಣಪಡಿಸುವುದು ಕಷ್ಟಕರವಾದ ಸ್ಥಿತಿ. ಅಂತಹದರಲ್ಲಿ ಇವರು 10 ದಿನಗಳ ಕಾಲ ಐ.ಸಿ.ಯು.ನಲ್ಲಿ ಇದ್ದರು. ಆ ಸ್ಥಿತಿಯಲ್ಲಿ ರೋಗಿಯನ್ನು ಗುಣಪಡಿಸಿ ಐ.ಸಿ.ಯು.ನಿಂದ ಹೊರತರುವುದು ಅತ್ಯಂತ ಸವಾಲಿನ ಕೆಲಸ. ಈ ಸವಾಲನ್ನು ಸ್ವೀಕರಿಸಿ 89 ವರ್ಷದ ವ್ಯಕ್ತಿಯನ್ನು ಗುಣಪಡಿಸಿದ್ದು ಹೆಮ್ಮೆಯಾಗಿದೆ. ನಮ್ಮ ವೈದ್ಯಕೀಯ ತಂಡ ಹಾಗೂ ಸಿಬ್ಬಂದಿಗಳನ್ನು ಅದಕ್ಕಾಗಿ ಅಭಿನಂದಿಸುತ್ತೇನೆ ಎಂದು ಕೋವಿಡ್ ಆಸ್ಪತ್ರೆ ಜಿಲ್ಲಾ ಸರ್ಜನ್ ಡಾ. ರಾಜೇಶ್ವರಿ ಅವರು ತಿಳಿಸಿದ್ದಾರೆ.
ಸಿ.ಎಸ್. ನಾಗರಾಜ್ ಅವರಿಗೆ ಪಾರ್ಕಿನ್ಸನ್ ಕಾಯಿಲೆ ಇತ್ತು. ಜೊತೆಗೆ ತೀವ್ರ ಜ್ವರದಿಂದ ಬಳಲಿದ್ದರು. ಇಂತಹ ಪರಿಸ್ಥಿತಿಯಲ್ಲೂ ನಮ್ಮ ವೈದ್ಯರು ಯಶಸ್ವಿಯಾಗಿ ಚಿಕಿತ್ಸೆ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕೋವಿಡ್ ರೋಗಿ ಜೊತೆ ಕೇರ್ ಟೇಕರ್ ಆಗಿ ಇರಲು ಬಹುತೇಕರು ಒಪ್ಪುವುದಿಲ್ಲ. ಅಂತಹದರಲ್ಲಿ ಸಿ.ಎಸ್. ನಾಗರಾಜ್ ಅವರ ಮಗ 53 ವರ್ಷದ ವೆಂಕಟೇಶ್ ಮೂರ್ತಿ ಅವರು ರೋಗಿಯೊಂದಿಗೆ ಆಸ್ಪತ್ರೆಯಲ್ಲೇ ಇದ್ದು ತಂದೆಗೆ ಧೈರ್ಯ ತುಂಬಿದ್ದಾರೆ.
ಇವರು ಗುಣವಾಗಿ ಸೆಪ್ಟೆಂಬರ್ 22 ರಂದು ಆಸ್ಪತ್ರೆಯಿಂದ ಬಿಡುಗಡೆ ಆಗುವಾಗ ಎಲ್ಲರೂ ಸಂಭ್ರಮಿಸಿದ್ದಾರೆ. ಮನೆಗೆ ಬಂದ ಮರುದಿನ ಸೆಪ್ಟೆಂಬರ್ 23 ರಂದು ಸ್ವತಂತ್ರವಾಗಿ ಶೌಚಾಲಯಕ್ಕೆ ಹೋಗಿ ಬಂದರು. ಅದನ್ನು ನೋಡಿ ನಮ್ಮ ಕುಟುಂಬದವರಿಗೆಲ್ಲಾ ಸಂತೋಷವಾಗಿದೆ ಎಂದು ಅವರ ಮಗ ವೆಂಕಟೇಶ್ ಮೂರ್ತಿ ಅವರು ತಿಳಿಸಿದ್ದಾರೆ.
ಕೋವಿಡ್ ಬಂದ ಕೂಡಲೇ ಧೈರ್ಯಗೆಡದೆ ವೈದ್ಯರ ಮಾರ್ಗದರ್ಶನ ಹಾಗೂ ಚಿಕಿತ್ಸೆ ಪಡೆದುಕೊಂಡರೆ ಗುಣವಾಗಬಹುದು ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ
ಅಮೆರಿಕಾದ ಚುನಾವಣೆಯ ಕಣದಲ್ಲಿ ದೇಜಾ ವು
ಅಮೆರಿಕಾದ ಚುನಾವಣೆಯ ಕಣದಲ್ಲಿ ದೇಜಾ ವು (Déjà vu) ಎನ್ನುವ ಕ್ಷಣವೊಂದು ಸೃಷ್ಟಿಯಾಗಿದೆ. ರಾಜಕೀಯ ಪಕ್ಷಗಳ ನಡುವೆ ಏಟು-ಎದಿರೇಟುಗಳು ನಡೆಯುತ್ತಿವೆ. ಕೊನೆಯ ಕ್ಷಣಗಳಲ್ಲಿ ಪಕ್ಷಗಳು ತಮ್ಮ ತಮ್ಮ ಬಲಹೀನತೆಗಳನ್ನು ತಿದ್ದಿಕೊಂಡು ಹೆಚ್ಚು ಹೆಚ್ಚು ಜನರ ಮನವೊಲಿಸುವ ಪ್ರಯತ್ನವನ್ನು
ಮಾಡುತ್ತಿದ್ದಾರೆ.ಹಾಗಿರುವಾಗಲೇ ಆಗಬಹುದೆಂದು ನಿರೀಕ್ಷಿಸಿದ್ದ ಘಟನೆಯೊಂದು ನಡೆದದ್ದು ಈ
ಚುನಾವಣೆಗೆ ಮತ್ತೊಂದು ಆಯಾಮವನ್ನು ಸೃಷ್ಟಿಸಿದೆ.
ಜಸ್ಟಿಸ್ ರೂತ್ ಬೇಡರ್ ಜಿನ್ಸ್ಬರ್ಗ್(87) ಎಂಬುವ ಸುಪ್ರೀಂ ಕೋರ್ಟ್ ನ್ಯಾಯಾಧೀಶೆ ಕಳೆದ ಶುಕ್ರವಾರ ನಿಧನರಾದ ಕೂಡಲೇ ಚುನಾವಣೆಯ ಮುನ್ನಾ ದಿನಗಳ ಹಣಾಹಣಿಗೆ ಮತ್ತೊಂದು ಹೊಸ ಎಳೆ ಸಿಕ್ಕಿಹೋಗಿದೆ. ಅಮೆರಿಕಾದ ಸುಪ್ರೀಂ ಕೋರ್ಟಿಗೆ ನ್ಯಾಯಾಧೀಶರಾಗಿ ಒಮ್ಮೆ ಚುನಾಯಿತರಾದರೆಂದರೆ ಅದು ಅವರ
ಜೀವಿತಾವಧಿಯ ಹುದ್ದೆಯಾಗುತ್ತದೆ.ಅಥವಾ ಅವರು ತಾವಾಗಿ ನಿವೃತ್ತಿ ಬೇಡುವವರೆಗೆ ಅವರು ಆ ಹುದ್ದೆಯಲ್ಲಿ ಇರಬಹುದಾಗಿದೆ. ಇದುವರೆಗೆ ನಾಲ್ವರು ರಿಪಬ್ಲಿಕನ್ ನಾಮಿತ ಜಸ್ಟಿಸ್ ಗಳು
ನೇಮಕವಾಗಿದ್ದರೆ ಮೂವರು ಡೆಮೊಕ್ರಟ್ ಗಳ ಬೆಂಬಲಿಗರು ನೇಮಕವಾಗಿದ್ದಾರೆ. ಈಗ ನಿಧನರಾದ ರೂತ್ಎಂಬ ಹೆಸರುವಾಸಿ ನ್ಯಾಯಾಧೀಶೆ ಟ್ರಂಪ್ ಆಡಳಿತ ನೀತಿಗಳನ್ನು ಬಹಿರಂಗವಾಗಿ ವಿರೋಧಿಸಿದವರು. ಈಕೆ
ಉದಾರ ನೀತಿಯ ದಿಟ್ಟ ಮಹಿಳೆ. ಇಡೀ ನ್ಯಾಯಾಂಗ ವೃತ್ತಿಯಲ್ಲಿ ಆಕೆಯದು ಶಿಸ್ತಿನ
ಹೆಸರಾಗಿತ್ತು. ಟ್ರಂಪ್ ಆಡಳಿತ ಕಾಲದಲ್ಲಿ ಆತನ ನಿರಂಕುಶ ಪ್ರಭುತ್ವಕ್ಕೆ ಅವಕಾಶ
ಮಾಡಿಕೊಡಬಾರದೆಂದು ತನ್ನ ಹುದ್ದೆಯನ್ನು ಬಿಟ್ಟುಕೊಡದೆ ಇದ್ದವರು.ಆದರೆ ಚುನಾವಣೆಗೆ ಕೆಲವೇ ದಿನಗಳ ಮೊದಲು ವಿಧಿವಶರಾಗಿ ಇಡೀ ಚುನಾವಣೆಯಲ್ಲಿ ಬಿರುಗಾಳಿಯನ್ನೆಬ್ಬಿಸಿದ್ದಾರೆ. ಅದು ಆಕೆಯ ಇಷ್ಟಕ್ಕೆ ವಿರುದ್ಧವಾದ ವಿಚಾರವಾದರೂ ಅಮೆರಿಕಾದ ಕ್ಯಾಪಿಟಲ್ ಬಿಲ್ಡಿಂಗ್ ನಲ್ಲಿ ಸಮಾಧಿಯಾಗುತ್ತಿರುವ ಪ್ರಥಮ ಮಹಿಳೆ ಎಂಬ ಘನತೆಗೆ ಈಕೆ ಪಾತ್ರಳಾಗಿ ಚರಿತ್ರೆಯ ಪುಟಗಳನ್ನುಸೇರುತ್ತಿದ್ದಾರೆ.
ಅಷ್ಟೇ ಏಕೆ? ಆಕೆಯ ಆರೋಗ್ಯ ಕ್ಷೀಣಿಸಿದ ಇತ್ತೀಚೆಗಿನ ದಿನಗಳಲ್ಲಿ ತನ್ನ ಕೊನೆಯ ಆಸೆಯೇನೆಂದು ಆಕೆ
ಬರೆದಿಟ್ಟೇ ಸತ್ತರು. ಆ ಪ್ರಕಾರ ನವೆಂಬರಿನ ಎಲೆಕ್ಷನ್ ಮುಗಿಯುವ ಮುನ್ನ ತನ್ನ ಸ್ಥಾನಕ್ಕೆ ಯಾರನ್ನೂ ಚುನಾಯಿಸಬೇಡಿ ಎಂಬುದು ಆಕೆಯ ಬೇಡಿಕೆ. ಇದನ್ನು ಮುಂದಿಟ್ಟುಕೊಂಡೇ ಬಿಡನ್ ಪಕ್ಷ ತಕ್ಷಣಕ್ಕೆ ನೇಮಕಾತಿ ಬೇಡ ಎಂದು ವಿರೋಧಿಸುತ್ತಿದೆ. ಆದರೆ ಟ್ರಂಪ್ ಪಕ್ಷ ಈ ಕೂಡಲೇ ಆ ಸ್ಥಾನಕ್ಕೆ 52, 48
ಮತ್ತು 38 ವರ್ಷಗಳ ಮೂವರು ಮಹಿಳೆಯರ ಹೆಸರನ್ನು ಮುಂದಿಟ್ಟಿದೆ. ಈ ವಾರಾಂತ್ಯದೊಳಗೆ ಇವರಲ್ಲಿ ಒಬ್ಬರನ್ನು ತೆರವಾದ ಹುದ್ದೆಗೆ ತುಂಬಲೇ ಬೇಕೆಂದು ಪಣತೊಟ್ಟಿದೆ.
ಸಾಮಾನ್ಯವಾಗಿ ಹೆಚ್ಚು ಅನುಭವವಿರುವ ಜನರನ್ನೇ ಈ ಹುದ್ದೆಗೆ ಆರಿಸುವುದು ವಾಡಿಕೆಯಾದರೂ ಕೇಲವ 38 ವರ್ಷದ
ವ್ಯಕ್ತಿಯನ್ನು ಹೆಸರಿಸುವ ಮೂಲಕ ತಮ್ಮ ತರಾತುರಿಯನ್ನು ರಿಪಬ್ಲಿಕನ್ನರು
ವಿವಾದಕ್ಕೊಡ್ಡಿದ್ದಾರೆ. ಸಧ್ಯಕ್ಕೆ ಅಮೆರಿಕಾದ ಸೆನೆಟ್ ನಲ್ಲಿ ರಿಪಬ್ಲಿಕನ್ ಸೆನೇಟರುಗಳದೇ ಬಹುಮತವಿದೆ.ಆದರೆ ಚುನಾವಣೆ ಬಹಳಷ್ಟು ಹತ್ತಿರದಲ್ಲಿರುವ ಕಾರಣ ಈ ವಿಚಾರದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ. 2016 ರಲ್ಲಿ ಇಂತದ್ದೇ ಘಟನೆ ನಡೆದಿತ್ತು. ಬಾರಕ್ ಒಬಾಮರ ಆಡಳಿತ ಕೊನೆಗೊಳ್ಳುತ್ತಿರುವ ಸಮಯದಲ್ಲೇ ಮತ್ತೊಬ್ಬ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ವಿಧಿವಶವಾಗಿದ್ದರು. ಆಗ ಇವೆರಡೂ
ರಾಜಕೀಯ ಪಕ್ಷಗಳು ಅದಲು-ಬದಲಾದ ಸ್ಥಾನದಲ್ಲಿದ್ದವು.ಆಗ ಚುನಾವಣೆಗೆ ಇನ್ನೂ 8
ತಿಂಗಳುಗಳಿದ್ದವು. 2016 ರ ಮಾರ್ಚ್ 16 ರಂದು ಬಾರಕ್ ಒಬಾಮ ಮೆರ್ರಿಕ್ ಗಾರ್ಲ್ಯಂಡ್
ಎಂಬಾತನನ್ನು ಒಂದು ತಿಂಗಳ ಹಿಂದೆ ಮೃತಪಟ್ಟಿದ್ದ ಸ್ಕೇಲಿಯಾನ ಸ್ಥಾನಕ್ಕೆ
ಚುನಾಯಿಸಿದ್ದರು.ಆದರೆ ಚುನಾವಣೆ ಮುಗಿಯುವವರೆಗೆ ಮತ್ತೊಬ್ಬ ನ್ಯಾಯಾಧೀಶನನ್ನು ಚುನಾಯಿಸಬಾರದೆಂದು ಆಗ ರಿಪಬ್ಲಿಕನ್ ಗಳು ಆಗ್ರಹಿಸಿದ್ದರು.
ದೇ ಜಾ ವೂ!
ರಿಪಬ್ಲಿಕನ್ನರು ಆಗ ಆಡಿದ್ದ ಮಾತುಗಳನ್ನು ಡೆಮೊಕ್ರಾಟ್ ಗಳು ಇದೀಗ ಒಂದಕ್ಷರವನ್ನೂ ಬಿಡದೆಯಥಾವತ್ ನಕಲು ಮಾಡಿ, ಆಗ ಅವರು ನೀಡಿದ್ದ ಹೇಳಿಕೆಗಳ ವೀಡೀಯೋಗಳನ್ನು ಮತ್ತೆ ಲೈಮ್ ಲೈಟಿಗೆ ತಂದು ಅವರ ಬದಲಾದ ನೀತಿಗಳನ್ನು ಹೀಯಾಳಿಸಿದ್ದಾರೆ. ರಾಜಕೀಯದ ಮುಖಗಳನ್ನುಮಾಧ್ಯಮಗಳಿಗೆ ಬಿತ್ತರಿಸಲು ಅನುಮತಿ ನೀಡಿ, ಒಂದಿಬ್ಬರಾದರೂ ಸೆನೇಟರುಗಳು ತಮ್ಮ ಅಂದಿನ ನಿಲುವಿಗನುಗುಣವಾಗಿ ಮನಸ್ಸು ಬದಲಾಯಿಸುತ್ತಾರೇನೋ ಎಂದು ಕಾಯುತ್ತಿದ್ದಾರೆ.
ಜನರು ಸೆನೇಟರ್ ಗಳ ಮೇಲೆ ಒತ್ತಡ ಹೇರಿ ಅವರ ಮನಸ್ಸನ್ನು ಬದಲಾಯಿಸಬೇಕೆಂದು ಕರೆ ನೀಡಿದ್ದಾರೆ.ಒಟ್ಟು 9 ಜನ ನ್ಯಾಯಾಧೀಶರಿರುವ ಈ ಸುಪ್ರೀಂ ಕೋರ್ಟ್ ನ ನ್ಯಾಯಪೀಠದ ಸೈದ್ಧಾಂತಿಕ ನಿಲುವು ಅತ್ಯಂತ ಮುಖ್ಯವಾದದ್ದು. ಈ ನ್ಯಾಯ ಪೀಠ ತೆಗೆದುಕೊಳ್ಳುವ ನಿರ್ಧಾರಗಳು ಇಡೀ ಪ್ರಪಂಚದ ಮೇಲೆ
ಪ್ರಭಾವ ಬೀರಬಲ್ಲವು. ಏಕೆಂದರೆ ಇಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಅಮೆರಿಕಾದ ಹಲವು ಅತಿ ಮುಖ್ಯ ವಿಚಾರಗಳಾದ ವಲಸೆ ನೀತಿಗಳು, ಗರ್ಭಪಾತ, ಮರಣ ದಂಡನೆ, ಕಾರ್ಬನ್ ಎಮಿಶನ್, ಗೇ ವಿವಾಹಗಳ
ಮೇಲೆ ಪ್ರಭಾವ ಬೀರಬಲ್ಲವು. ಭಾರತದ ವಲಸಿಗರ, ಅವಕಾಶಗಳನ್ನು ಕೂಡ ನಿರ್ಧರಿಸಬಲ್ಲವು.
ಅಕಸ್ಮಿಕವಾಗಿ ರಿಪಬ್ಲಿಕನ್ನರು ಈ ಚುನಾವಣೆಯಲ್ಲಿ ಸೋತರೆ, ಡೆಮೊಕ್ರಾಟ್ ಗಳು ಜನವರಿಯವರೆಗೂ
ತಮ್ಮ ಅಧಿಕಾರ ಸ್ವೀಕರಿಸಿರುವುದಿಲ್ಲ. ಈ ಕಾರಣ ಟ್ರಂಪ್ ನ ನ್ಯಾಯಧೀಶರ ಆಯ್ಕೆಯನ್ನು ಅವರು
ಜನವರಿಯಲ್ಲಿ ಮತ್ತೆ ಪ್ರಶ್ನಿಸಬಹುದಾಗಿದೆ. ಜನವರಿ ಇಪ್ಪತ್ತನೆಯ ತಾರೀಖಿನವರೆಗೆ ಇದು
ನಿರ್ಧರಿತವಾಗದಿದ್ದರೆ ಆಗ ಅಂದಿನ ಹೊಸ ಅಧ್ಯಕ್ಷ ಮತೊಬ್ಬ ಹೊಸ ನ್ಯಾಯಾಧೀಶರನ್ನು
ಆರಿಸಬಹುದಾಗಿದೆ.
ಸಧ್ಯಕ್ಕೆ ಈ ಶುಕ್ರವಾರ ಅಥವಾ ಶನಿವಾರದ ವೇಳೆಗೆ ಏನಾಗುತ್ತದೆ ಎಂದು ನೋಡಲು ಇಡೀ ಪ್ರಪಂಚವೇ ಕಾದು ಕುಳಿತಿರುವಾಗ ಅಮೇರಿಕಾದಲ್ಲಿ ಕೊರೋನಾ ದಿಂದ ಸತ್ತವರ ಸಂಖ್ಯೆ ಎರಡು ಲಕ್ಷ್ಯವನ್ನು ದಾಟಿ
ನಿರುಮ್ಮಳವಾಗಿ ಮುನ್ನಡೆದಿದೆ.
ಎರಡು ಡಬ್ಬಿಂಗ್ ಸೀರಿಯಲ್ ಗಳ ಯಶಸ್ಸು
ಲಾಕ್ಡೌನ್ ಅವಧಿಯಲ್ಲಿ ಅತಿ ಹೆಚ್ಚು ಜನ ನೋಡಿದ್ದು ಸಿನಿಮಾ ವೆಬ್ ಸಿರೀಸ್ ಜತೆಗೆ ಮಹಾಭಾರತ ಮತ್ತು ರಾಧಾಕೃಷ್ಣ ಸೀರಿಯಲ್. ಅದರಲ್ಲೂ ಮಹಾಭಾರತ ನೋಡದವರು ಯಾರು ಇಲ್ಲ ಈ ಒಂದೇ ಸೀರಿಯಲ್ನಿಂದಾಗಿ ಸ್ಟಾರ್ ಸುವರ್ಣ ವಾಹಿನಿಗೆ ರೇಟಿಂಗ್ ಸಿಕ್ಕಿದೆ.
ಒಂದು ಕಾಲದಲ್ಲಿ ಸ್ಟಾರ್ ಸುವರ್ಣ ವಾಹಿನಿ ನಂ 1 ಸ್ಥಾನದಲ್ಲಿತ್ತು. ಆ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ, ಅಮೃತ ವರ್ಷಿಣಿ, ಲಕುಮಿ, ಪ್ಯಾಟೆ ಹುಡ್ಗೀರ ಹಳ್ಳಿ ಲೈಫು ಸೇರಿದಂತೆ ಸಾಕಷ್ಟು ಕಾರ್ಯಕ್ರಮಗಳಿಂದ ಟಿಆರ್ಪಿ ರೇಸ್ನಲ್ಲಿ ಸಾಕಷ್ಟು ಮುಂದಿತ್ತು. ಆದರೆ ಇದ್ದಕ್ಕಿದ್ದ ಹಾಗೆ ಅದೇನಾಯ್ತೋ ಏನೋ ಚಾನೆಲ್ ಹಂತ ಹಂತವಾಗಿ ಕುಸಿಯುತ್ತಾ ಬಂತು. ಸಾಕಷ್ಟು ಒಳ್ಳೊಳ್ಳೆ ಕಾರ್ಯಕ್ರಮಗಳು ಮೂಡಿ ಬಂದರು ಯಾರ ಗಮನಕ್ಕೂ ಅದು ಬರಲೇ ಇಲ್ಲ.
ಮಹಾಭಾರತ ಆ್ಯಕ್ಸಿಜನ್

ಇಂತಹ ಸಮಯದಲ್ಲಿ ಸಾಯಿಪ್ರಸಾದ್ ಎಂಬ ಬಿಸ್ನೆಸ್ ಹೆಡ್ ಚಾನೆಲ್ ಸೇರಿಕೊಂಡು ಸ್ಟಾರ್ ಸುವರ್ಣಗೆ ಒಂದು ವಿಭಿನ್ನ ರೂಪ ಕೊಡುವತ್ತ ಗಮನ ಹರಿಸಿದರು. ಹೊಸ ಹೊಸ ಧಾರಾವಾಹಿಗಳು, ರಿಯಾಲಿಟಿ ಶೋಗಳನ್ನು ಆರಂಭಿಸಿದರು. ಆದರೂ ರೇಟಿಂಗ್ ಅವರು ಅಂದುಕೊಂಡಷ್ಟು ಬರಲಿಲ್ಲ. ಛಲ ಬಿಡದ ತ್ರಿವಿಕ್ರಮನಂತೆ ಇನ್ನೂ ಒಂದಷ್ಟು ಹೊಸ ಹೊಸ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಲೇ ಚಾನೆಲ್ ಅನ್ನು ಮೂರನೇ ಸ್ಥಾನದಿಂದ ಎರಡನೇ ಸ್ಥಾನದತ್ತ ತಂದರು. ಅಷ್ಟೊತ್ತಿಗೆ ಲಾಕ್ಡೌನ್ ಆಯಿತು. ಇನ್ನೇನು ಮಾಡಲಾಗುವುದಿಲ್ಲ ಎನ್ನುವ ಹೊತ್ತಿಗೆ, ‘ಮಹಾಭಾರತ’, ‘ರಾಧಾಕೃಷ್ಣ’ ಸೀರಿಯಲ್ಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಿರ ಪ್ರಸಾರ ಮಾಡುವ ನಿರ್ಧಾರ ಮಾಡಲಾಯಿತು. ಇದೊಂದು ನಿರ್ಧಾರ ಚಾನೆಲ್ನ ದಿಕ್ಕನ್ನೆ ಬದಲಿಸಿದೆ ಎಂದರೆ ತಪ್ಪಾಗುವುದಿಲ್ಲ.
ಕರ್ನಾಟಕದ ಪ್ರತಿ ಮನೆ ಮನೆಯಲ್ಲಿಯೂ ಮಹಾಭಾರತ, ರಾಧಾಕೃಷ್ಣ ಸೀರಿಯಲ್ ಅನ್ನು ಜನ ನೋಡಲು ಆರಂಭಿಸಿದರು. ಎಷ್ಟರ ಮಟ್ಟಿಗೆ ಎಂದರೆ ಆ ಸಮಯದ ಹೊತ್ತಿಗೆ ಎಲ್ಲರು ಟಿವಿ ಮುಂದೆ ಕುಳಿತಿರುವಷ್ಟರ ಮಟ್ಟಿಗೆ.
ಒಂದು ವೇಳೆ ರಾತ್ರಿ ಹೊತ್ತು ನೋಡಲಾಗದವರು ಹಾಟ್ಸ್ಟಾರ್ನಲ್ಲಿ, ಬೆಳಗ್ಗೆ ಹೊತ್ತು ನೋಡುತ್ತಿದ್ದಾರೆ. ಈ ಎರಡು ಸೀರಿಯಲ್ಗಳ ಯಶಸ್ಸಿನಿಂದಾಗಿ ಸಾಕಷ್ಟು ಹಿಂದಿ,ತೆಲುಗು ಸೀರಿಯಲ್ಗಳನ್ನು ಡಬ್ಬಿಂಗ್ ಮಾಡಲಾಯಿತು. ಆದರೆ ಇವುಗಳಿಗೆ ಸಿಕ್ಕ ಯಶಸ್ಸು ಬೇರೆ ಯಾವುದೇ ಸೀರಿಯಲ್ಗೂ ಅಷ್ಟಾಗಿ ಸಿಕ್ಕಿಲ್ಲ.
ಗುಣಮಟ್ಟ ಮುಖ್ಯ
ಈ ಸೀರಿಯಲ್ಗಳ ಯಶಸ್ಸಿನ ಹಿಂದೆ ಪಾತ್ರಗಳಿಗೆ ಡಬ್ಬಿಂಗ್ ಮಾಡಿರುವ ಧ್ವನಿ ಕಲಾವಿದರ ಶ್ರಮವೂ ಇದೆ. ಪ್ರತಿಯೊಂದು ಪಾತ್ರಗಳನ್ನು ಅನುಭವಿಸಿ ಡಬ್ಬಿಂಗ್ ಮಾಡುತ್ತಿದ್ದಾರೆ. ಹೀಗಾಗಿ ಇದನ್ನು ತಪ್ಪದೇ ನೋಡುತ್ತೇನೆ ಎಂದು ಹೇಳುತ್ತಾರೆ ದಾವಣಗೆರೆಯ ಪ್ರಜ್ವಲ್ ಬುರ್ಲಿ.
ಗುಣ ಮಟ್ಟದ ಸರಕನ್ನು ಕೊಟ್ಟಾಗ ಜನ ಅದನ್ನು ಸ್ವೀಕರಿಸುತ್ತಾರೆ ಎಂಬುದಕ್ಕೆ ಇದು ಸಾಕ್ಷಿ ಎಂದು ಅಭಿಪ್ರಾಯ ಪಡುತ್ತಾರೆ ಬನವಾಸಿ ಬಳಗದ ಅಧ್ಯಕ್ಷ ಆನಂದ್ ಗುರು. ಅದು ಡಬ್ಬಿಂಗ್ ಆಗಿರಲಿ ಅಥವಾ ಇಲ್ಲೇ ತಯಾರಾದ ಧಾರಾವಾಹಿಯೆ ಆಗಿರಲಿ ಗುಣಮಟ್ಟ ಮುಖ್ಯ. ಎಲ್ಲವೂ ತನ್ನ ಭಾಷೆಯಲ್ಲಿ ಸಿಕ್ಕಾಗ ಕನ್ನಡಿಗರು ಇಷ್ಟಪಡುತ್ತಾರೆ. ಮಹಾನಾಯಕ ಧಾರಾವಾಹಿಯ ಯಶಸ್ಸಿಗೂ ಇದೇ ಕಾರಣ ಎಂದು ಅವರು ಹೇಳುತ್ತಾರೆ.
.
ಯಂತ್ರಗಳಿಲ್ಲದೆ ಬದುಕಿಲ್ಲ

ಮಮತಾ ಕುಲಕರ್ಣಿ
ಹಿಂದೊಂದು ಕಾಲವಿತ್ತು, ಬಾವಿಯಿಂದ ನೀರು ಸೇದಿ ನೀರು ತರುವುದು, ಒಲೆ ಊದಿ ಅಡುಗೆ ಮಾಡುವುದು, ಕೈಗಳಿಂದ ಬಟ್ಟೆ ಒಗೆದು ಪಾತ್ರೆ ತೊಳೆಯುವುದು ಹೀಗೆ ..
ಆದರೆ ಕಾಲ ಬದಲಾಗುತ್ತಿದೆ. ಆಧುನಿಕತೆ ಎಲ್ಲರನ್ನು ಆವರಿಸುತ್ತಿದೆ. ಮಷೀನ್ ಗಳು ಮನೆ ಮನೆಯ ಒಂದೊಂದು ಮೂಲೆಯನ್ನು ಆಕ್ರಮಿಸಿವೆ. ಹೀಗೊಂದು ಮಾತು ಇತ್ತು, ಸಾಲ ಮಾಡಿಯಾದ್ರೂ ತುಪ್ಪ ತಿನ್ನು ಅಂತ. ಆದರೆ ಈಗ ಹಾಗಲ್ಲ. ಸಾಲ ಮಾಡಿಯಾದರೂ ಫ್ರಿಡ್ಜ್ ವಾಷಿಂಗ್ ಮಷಿನ್ ಖರೀದಿ ಮಾಡಲೇಬೇಕು. ಮನುಷ್ಯ ಅಷ್ಟು ಕಾರ್ಯೋನ್ಮುಖನಾಗುತಿದ್ದಾನೊ ಅಥವಾ ಆಲಸಿ ಆಗುತ್ತಿದ್ದಾನೊ ಎಂಬ ಗೊಂದಲವಿದ್ದರೂ ಮಶೀನ್ ಗಳು ಮನುಷ್ಯನನ್ನ ಆಕ್ರಮಿಸಿವೆ ಅನ್ನೊದಂತು ನಿಜ.
ಬಟ್ಟೆ ಒಗೆಯಲು ವಾಷಿಂಗ್ ಮಷಿನ್, ಅನ್ನ ಮಾಡಲು ರೈಸ್ ಕುಕ್ಕರ್, ನೀರು ಕಾಯಿಸಲು ಗೀಜರ್,ಕೆಟಲ್, ಜಗತ್ತನ್ನೇ ತನ್ನೊಡಲ ತುಂಬಿಸಿಕೊಂಡಿರುವ ಮೊಬೈಲ್. ಹಾಗೆ, ಪಾತ್ರೆ ತೊಳೆಯಲು ಡಿಶ್ ವಾಶರ್, ಚಪಾತಿ ಮಾಡಲು ರೋಟಿ ಮೇಕರ್, ಕಸ ಗುಡಿಸಲು ವ್ಯಾಕ್ಯೂಮ್ ಕ್ಲೀನರ್ , ತಲೆ ಕೂದಲು ಒಣಗಿಸಲು ಹೇರ್ ಡ್ರೈಯರ್, ಹೇರ್ ಕಟ್ ಮಾಡೋಕು ಮಷೀನ್. ಬಗೆ ಬಗೆಯ ವಾಹನಗಳು, ಫ್ಯಾನ್ ಗಳು,ಎಸಿ ,ಅಬ್ಬಬ್ಬಾ ಇದನ್ನೆಲ್ಲಾ ನೋಡ್ತಿದ್ರೆ ವೈಜ್ಞಾನಿಕವಾಗಿ ಎಷ್ಟು ಮುಂದುವರೆದಿದ್ದೇವೆ ಅನ್ನೋದು ಒಂದು ಕಡೆಯಾದರೆ ಇನ್ನೊಂದು ಕಡೆ ಇವುಗಳ ಬಳಕೆ ಆವಶ್ಯಕತೆ ಇದ್ದಲ್ಲಿ ಮಾತ್ರ ಬಳಸುವುದು ಒಳಿತು ಅನ್ನೊದು ಈಗಿನ ಕಾಲದಲ್ಲಂತು ಮೆದುಳಿನಲ್ಲಿ ಸದಾ ಜಾಗ್ರತವಾಗಿರಬೇಕು.
ದಿನನಿತ್ಯದ ಚಟುವಟಿಕೆಗಳನ್ನು ಮಷೀನುಗಳ ಸಹಾಯವಿಲ್ಲದೆ ಮಾಡುವುದರಿಂದ ದೇಹಕ್ಕೆ ಒಳ್ಳೆಯ ವ್ಯಾಯಾಮವಿದ್ದಂತೆ. ನಮ್ಮ ದೇಹದ ಕ್ಯಾಲೋರಿ ಕರಗಿಸೋಕೆ ಈ ಕೆಲಸಗಳು ತುಂಬಾ ಸಹಕಾರಿಯಾಗುತ್ತವೆ. ನಾವು ಎಷ್ಟು ಆಹಾರ ತಿನ್ನುತ್ತೇವೆ ಅನ್ನೊದಕ್ಕಿಂತ ಹೇಗೆ ಅದನ್ನು ಕರಗಿಸುತ್ತೇವೆ ಅನ್ನೋದು ಮುಖ್ಯ. ಎಷ್ಟು ನಾವು ಮಷೀನ್ ಮೇಲೆ ಅನವಶ್ಯಕವಾಗಿ ಅವಲಂಬಿತವಾಗಿರುತ್ತೇವೆಯೊ, ಅಷ್ಟು ಅವು ನಮ್ಮ ದೇಹವನ್ನು ದುರ್ಬಲಗೊಳಿಸುತ್ತಾ ಹೋಗುತ್ತವೆ. ಮಶಿನ್ ಸಹಾಯದಿಂದ ಕೆಲಸ ಮಾಡೋದು , ಮತ್ತದೇ ಮಶಿನ್ ಸಹಾಯದಿಂದ ಜಿಮ್ ಗಳಲ್ಲಿ ಕೊಬ್ಬು ಕರಗಿಸಲು ಕಸರತ್ತು ಮಾಡೋದು. ಈಗಿನ ಮಕ್ಕಳು ಕೂಡ ರಿಮೋಟ್ ಕಾರ್, ಬ್ಯಾಟರಿ ಚಾಲಿತ ವಾಹನಗಳು ಬೇಕು ಆಟ ಆಡೋಕೆ. ಏಕೆಂದರೆ ಅವರು ಕೂಡ ಶ್ರಮ ಪಡೋದು ಬೇಡ ಅನ್ನೊ ಮನಸ್ಥಿತಿಗೆ ಹೋಗುತ್ತಿದ್ದಾರೆ. ದೈಹಿಕ ಚಟುವಟಿಕೆಗಳಿಂದ ದೂರವಾಗುತ್ತಿದ್ದಾರೆ. ಮೊಬೈಲ್ನಲ್ಲಿ ಮೂಲೆಯಲ್ಲಿ ಕೂತ್ಕೊಂಡು ಆಟ ಆಡಿದರೆ ಕೊಬ್ಬು ಶೇಖರಣೆ ಆಗದೆ ಬೆಳವಣಿಗೆಯಾಗುವುದು, ಇಮ್ಯೂನಿಟಿ ವೃದ್ಧಿಸುವುದು ಅಸಾಧ್ಯದ ಮಾತು.
ಹಾಗೆ ವಾಹನಗಳ ಬಳಕೆ ಕೂಡ ಇವುಗಳಲ್ಲಿ ಒಂದು. ಎಷ್ಟು ಸಾಧ್ಯವೋ ಅಷ್ಟು ಕಾಲ್ನಡಿಗೆ ರೂಢಿಸಿಕೊಳ್ಳಬೇಕು. ಕಾಲುಗಳ ಸ್ನಾಯುಗಳು ಬಲಗೊಳಿಸಿಕೊಳ್ಳಲು ಇದೊಂದು ಮಾರ್ಗ. ಸ್ವಲ್ಪ ಬೆವರು ಬಂದರೂ ಫ್ಯಾನ್ ಚಾಲನೆ ಶುರುವಾಗುತ್ತದೆ, ಅಷ್ಟು ಸಹನಾಶಕ್ತಿ ಮನುಷ್ಯನಿಂದ ದೂರವಾಗುತ್ತಿದೆ.
ಮಶಿನ್ ಗಳು ಎಷ್ಟೇ ಇರಲಿ, ಅವುಗಳ ಅನಿವಾರ್ಯತೆ ಇದ್ದಲ್ಲಿ ಹಿತಕರವಾದ ಮಿತವಾದ ಬಳಕೆ ತುಂಬಾನೇ ಮುಖ್ಯ. ಅದರಿಂದ ನಮ್ಮ ಆರೋಗ್ಯ ಸದೃಢವಾಗುವುದರ ಜೊತೆಗೆ, ಮಾನಸಿಕವಾಗಿ ದೈಹಿಕವಾಗಿ ಮನುಷ್ಯ ಗಟ್ಟಿಯಾಗುತ್ತಾನೆ. ಒಂದು ಬಟನ್ ಒತ್ತಿ ಕೆಲಸ ಮಾಡಿ ಮುಗಿಸೊ ಮಶೀನ್ ಗಳು, ನಮ್ಮ ದೇಹದ ಮೂಳೆಗಳನ್ನು ಗಟ್ಟಿಗೊಳಿಸಲು ಅಷ್ಟೇ ವೇಗವಾಗಿ ಸಹಕರಿಸುತ್ತವೆಯೆ? ಕೆಲಸವು ಆಯಿತು ವ್ಯಾಯಾಮವು ಆಯ್ತು ಅಂತ ಇರೋದೇ ಒಳ್ಳೆಯದು. ಮಷೀನುಗಳ ದರ್ಬಾರ್ ಕಡಿಮೆಯಾಗಲಿ, ಕ್ರಿಯಾತ್ಮಕ ಬೆಳವಣಿಗೆ ವೃದ್ಧಿಸಲಿ. ಇದರಿಂದ ಆರೋಗ್ಯಕರವಾಗಿ ಇರುವಿಕೆ, ವಿದ್ಯುತ್ ಉಳಿತಾಯ, ಮಾಲಿನ್ಯ ತಡೆಗಟ್ಟುವಿಕೆ, ಇತ್ಯಾದಿ ಬೆಳವಣಿಗೆ ಸಾಗಲಿ.
ಧಾರವಾಡದ ಮಮತಾ ಕುಲಕರ್ಣಿ ಓದಿದ್ದು ಸಿವಿಲ್ ಎಂಜಿನಿಯರಿಂಗ್. ಸಧ್ಯ ಇರುವುದು ದುಬೈ. ಮೊದಲು ಬೆಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಆಗಿ ವೃತ್ತಿಯಲ್ಲಿದ್ದು ಈಗ ಹೋಮ್ ಮೇಕರ್ .ಕವನ, ಸಾಹಿತ್ಯ ರಚನೆ ಹವ್ಯಾಸ . ಬರಹ ಕೌಶಲ್ಯವನ್ನು ಬೆಳೆಸಿಕೊಳ್ಳುವ ಆಸಕ್ತಿ. ಪತಿ ವಿಜಯ್ ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ.
Photo by Andrea Piacquadio from Pexels

