24.2 C
Karnataka
Wednesday, May 20, 2026
    Home Blog Page 15

    Indian Stock Market:ಷೇರುಪೇಟೆ ಚಟುವಟಿಕೆ ಹೂಡಿಕೆಯೋ, ಉಳಿತಾಯವೋ, ವ್ಯವಹಾರವೋ?

    ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿರುವ ಷೇರುಪೇಟೆಯಲ್ಲಿನ ಏರಿಳಿತಗಳು ಗ್ರಾಹಕರಿಗೆ ಯಾವ ರೀತಿಯ ಚಟುವಟಿಕೆ ಸರಿ ಎಂಬುದನ್ನು ನಿರ್ಧರಿಸುವುದು ಗೊಂದಲಮಯವಾಗಿರಲೇಬೇಕು.ಕಾರಣ ಪೇಟೆಯಲ್ಲಿ ಅಗ್ರಮಾನ್ಯ ಕಂಪನಿಗಳೂ ಸೇರಿ ಹೆಚ್ಚಿನ ಏರಿಳಿತಗಳನ್ನು, ಸೂಕ್ತ ಕಾರಣಗಳಿಲ್ಲದೆಯೂ ಪ್ರದರ್ಶಿಸುತ್ತಿರುವುದಾಗಿದೆ. ಕೆಲವು ಬೆಳವಣಿಗೆಗಳನ್ನು ತಿಳಿಯೋಣ ಆಗ ಪರಿಸ್ಥಿತಿಯನ್ನರಿಯಲು ಸಾಧ್ಯವಾಗುತ್ತದೆ.

    ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನ ಹೆಗ್ಗುರುತಾದ ಸಂವೇದಿ ಸೂಚ್ಯಂಕ (Sensex) ಅಕ್ಟೋಬರ್‌ ತಿಂಗಳಿನಲ್ಲಿ 62,245 ಪಾಯಿಂಟುಗಳಿಗೆ ತಲುಪಿ ಸರ್ವಕಾಲೀನ ಗರಿಷ್ಠದ ದಾಖಲೆ ಸ್ಥಾಪಿಸಿತು.
    ಅಂದು ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನ ಮಾರ್ಕೆಟ್‌ ಕ್ಯಾಪಿಟಲೈಸೇಷನ್‌ ರೂ.271.42 ಲಕ್ಷ ಕೋಟಿಯಲ್ಲಿತ್ತು. ನಂತರದಲ್ಲಿ ಮೇ ತಿಂಗಳ ಮಧ್ಯಂತರದಲ್ಲಿ 52,800 ರ ಸಮೀಪಕ್ಕೆ ಕುಸಿದು ಮಾರ್ಕೆಟ್‌ ಕ್ಯಾಪಿಟಲೈಸೇಷನ್‌ ರೂ.241.34 ಲಕ್ಷ ಕೋಟಿಗೆ ಮೇ 12 ರಂದು ತಲುಪಿತು.
    ಅಲ್ಲಿಂದ ಸೆನ್ಸೆಕ್ಸ್‌ ಪುಟಿದೆದ್ದು ಮೇ ಅಂತ್ಯದಲ್ಲಿ 56,000 ಪಾಯಿಂಟುಗಳ ಸಮೀಪಕ್ಕೆ ಏರಿಕೆ ಕಂಡಿತು. ಜೊತೆಗೆ ಮಾರ್ಕೆಟ್‌ ಕ್ಯಾಪಿಟಲೈಸೇಷನ್‌ ರೂ.258 ಲಕ್ಷ ಕೋಟೆ ಮೀರಿತು.
    ಜೂನ್‌ ತಿಂಗಳ 17 ರಂದು ಮಧ್ಯಂತರದಲ್ಲಿ ಸೆನ್ಸೆಕ್ಸ್‌ 50,921 ನ್ನು ತಲುಪಿ ವಾರ್ಷಿಕ ಕನಿಷ್ಠದ ದಾಖಲೆ ಬರೆಯಿತು. ಅಂದಿನ ಮಾರ್ಕೆಟ್‌ ಕ್ಯಾಪಿಟಲೈಸೇಷನ್‌ ರೂ.239.18 ಲಕ್ಷ ಕೋಟಿಗೆ ಕುಸಿದಿತ್ತು. ಆದರೆ ಜುಲೈ ತಿಂಗಳ ಅಂತ್ಯದಲ್ಲಿ ಸೆನ್ಸೆಕ್ಸ್‌ 57,570 ಪಾಯಿಂಟುಗಳೊಂದಿಗೆ ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.266.58 ಲಕ್ಷ ಕೋಟಿಗೆ ಜಿಗಿದಿದೆ. ಅಂದರೆ ಮೇ ತಿಂಗಳ ಆರಂಭದಲ್ಲಿ 57,000 ಪಾಯಿಂಟುಗಳಲ್ಲಿದ್ದುದು ಜೂನ್‌ ತಿಂಗಳ ಮಧ್ಯಂತರದಲ್ಲಿ 50,921 ಪಾಯಿಂಟುಗಳಿಗೆ ಕುಸಿದು ಮತ್ತೆ ಜುಲೈ ಅಂತ್ಯಕ್ಕೆ 57 ಸಾವಿರದ ಗಡಿ ದಾಟಿರುವುದು ಹೂಡಿಕೆಯೆನಿಸದು. ಇದು ಒಂದು ರೀತಿಯ ವ್ಯವಹಾರಿಕತೆಗೆ ಪುಷ್ಠಿ ನೀಡುವಂತಹುದಾಗಿದೆ. ಇಂತಹ ವಾತಾವರಣದಲ್ಲಿ ಅನೇಕ ಕಂಪನಿಗಳ ಷೇರಿನ ಬೆಲೆ ಚಲನೆಗಳನ್ನು ಹೆಸರಿಸಬಹುದು.

    ಜಿ ಎಂ ಎಂ ಫೌಡ್ಲರ್ ಲಿಮಿಟೆಡ್:

    ಈ ಕಂಪನಿಯು ಈ ತಿಂಗಳ 10 ರಂದು ಪ್ರತಿ ಷೇರಿಗೆ ಎರಡರಂತೆ 2:1 ರ ಅನುಪಾತದಲ್ಲಿ ಬೋನಸ್‌ ಷೇರನ್ನು ವಿತರಿಸಿತು. ಆಗ ಷೇರಿನ ಬೆಲೆಯು ರೂ.4,200 ರ ಸಮೀಪದಲ್ಲಿದ್ದು, ಬೋನಸ್‌ ಷೇರು ವಿತರಣೆಯ ನಂತರೆ ಷೇರಿನ ಬೆಲೆ ಕುಸಿಯುತ್ತಾ 28 ರಂದು ರೂ.1,336 ರ ವರೆಗೂ ಇಳಿಯಿತು. 29 ನೇ ಶುಕ್ರವಾರದಂದು ಷೇರಿನ ಬೆಲೆ ರೂ.1,428 ರ ಸಮೀಪದಿಂದ ರೂ.1,611 ರವರೆಗೂ ಏರಿಕೆ ಕಂಡು ಅಂತ್ಯದಲ್ಲಿ ರೂ.1,599 ರ ಸಮೀಪ ಕೊನೆಗೊಂಡಿದೆ. ಈ ಷೇರಿನ ವಹಿವಾಟು ಈ ತಿಂಗಳ 15 ರಿಂದಲೂ ಸುಮಾರು ಶೇ.50 ಕ್ಕೂ ಹೆಚ್ಚಿನ ವಿಲೇವಾರಿ ಆಧರಿತ ಚುಕ್ತಾ ಚಟುವಟಿಕೆಯಾಗಿದ್ದು, ಶುಕ್ರವಾರದಂದು ಷೇರಿನ ಬೆಲೆ ಶೇ.20 ರಷ್ಟು ಏರಿಕೆ ಕಂಡ ಕಾರಣ ಮಾರಾಟದ ಪ್ರಮಾಣದೊಂದಿಗೆ ವಿಲೇವಾರಿ ಆಧರಿತ ಚುಕ್ತಾ ವಹಿವಾಟು ಕ್ಷೀಣಿತವಾಗಿದ್ದು, ದೈನಂದಿನ ಚುಕ್ತಾ ಚಟುವಟಿಕೆ ಹೆಚ್ಚಾಗಿದೆ. ಅಂದರೆ ಒಂದೇ ದಿನ ಭಾರಿ ಪ್ರಮಾಣದ ಏರಿಳಿತದ ಕಾರಣ ಡೇ ಟ್ರೇಡಿಂಗ್‌ ಹೆಚ್ಚಾಗಿದೆ. ಇದನ್ನು ಅಂದು ನಡದ ವಹಿವಾಟಿನ ಗಾತ್ರವೂ ಪುಷ್ಠೀಕರಿಸುತ್ತದೆ. ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನಲ್ಲಿ 28 ರಂದು ವಹಿವಾಟಾದ ಷೇರುಗಳ ಸಂಖ್ಯೆಗಿಂತ 29 ರಂದು ನಡೆದ ಚಟುವಟಿಕೆಗಳಲ್ಲಿ8 ಪಟ್ಟು ಹೆಚ್ಷಾಗಿದೆ. ಆದರೆ NSE ಯಲ್ಲಿ 28ರಂದು 88 ಸಾವಿರ ಷೇರುಗಳು ವಹಿವಾಟಾದರೆ, 29 ರಂದು 15 ಲಕ್ಷ 94 ಸಾವಿರ ಷೇರುಗಳು ವಹಿವಾಟಾಗಿವೆ. ಅಂದರೆ ಆ ದಿನ ಡೇ ಟ್ರೇಡಿಂಗ್‌ ನೊಂದಿಗೆ ಪ್ರಾಫಿಟ್‌ ಬುಕಿಂಗ್‌ ಆಗಿರಲೂ ಸಾಧ್ಯವಿದೆ.

    ತಾನ್ಲಾ ಪ್ಲಾಟ್‌ ಫಾರ್ಮ್ಸ್‌ ಲಿಮಿಟೆಡ್‌ :

    ಐ ಟಿ ವಲಯದ ಈ ಕಂಪನಿ ಜೂನ್‌ ತ್ರೈಮಾಸಿಕದ ಸಾಧನೆಯು ಅಷ್ಠು ಪರಿಣಾಮಕಾರಿಯಾಗಿರದೆ ಇದ್ದ ಕಾರಣ ಷೇರಿನ ಬೆಲೆ ಒಂದೇ ವಾರದಲ್ಲಿ ಅಂದರೆ ಜುಲೈ 22 ರಂದು ಒಂದು ಸಾವರ ರೂಪಾಯಿಗಳ ಸಮೀಪವಿದ್ದು, ನಂತರದ ಒಂದು ವಾರದಲ್ಲಿ ಅಂದರೆ ಗುರುವಾರ 28 ರಂದು ರೂ.585 ರ ಕನಿಷ್ಠ ಬೆಲೆಗೆ ಕುಸಿದು ಅಂದು ಕೆಳ ಆವರಣಮಿತಿಯಲ್ಲಿ ಲಾಕ್‌ ಆಗಿತ್ತು. ಆದರೆ ನಂತರದ 29 ರಂದು ಷೇರಿನ ಬೆಲೆ ಪುಟಿದೆದ್ದು ರೂ.699 ರವರೆಗೂ ಏರಿಕೆ ಕಂಡು ರೂ.694 ರ ಸಮೀಪ ಕೊನೆಗೊಂಡಿದೆ. ಈ ಬದಲಾವಣೆಗೆ ಪೂರಕವಾದ ಅಂಶ ಎಂದರೆ ಕಂಪನಿಯ ಆಡಳಿತ ಮಂಡಳಿಯು 4 ರಂದು ಸಭೆ ಸೇರಲಿದೆ. ಅಂದು ಕಂಪನಿಯು ತನ್ನ ಲಾಭಾಂಶ ನೀತಿಯನ್ನು ಪರಿಶೀಲಿಸಲಿದೆ ಮತ್ತು ಮಧ್ಯಂತರ ಲಾಭಾಂಶ ಪ್ರಕಟಿಸುವ ಬಗ್ಗೆಯೂ ನಿರ್ಧರಿಸಲಿದೆ. ಆಗಸ್ಟ್‌ 18 ರಿಂದ ಪ್ರತಿ ಷೇರಿಗೆ ರೂ.2 ರಂತೆ ವಿತರಿಸಲಿರುವ ಲಾಭಾಂಶ ರಹಿತ ವಹಿವಾಟು ಆರಂಭವಾಗಲಿದೆ.

    ಎಸ್‌ ಬಿ ಐ ಕಾರ್ಡ್ಸ್‌ ಅಂಡ್‌ ಪೇಮೆಂಟ್ಸ್‌ ಸರ್ವಿಸಸ್‌ ಲಿಮಿಟೆಡ್ :

    ಈ ಕಂಪನಿಯ ಷೇರಿನ ಬೆಲೆ ಡಿಸೆಂಬರ್‌ ತಿಂಗಳಲ್ಲಿ ರೂ.1,000 ಕ್ಕೂ ಹೆಚ್ಚಿದ್ದು ನಂತರದಲ್ಲಿ ಪ್ರತಿ ತಿಂಗಳೂ ನಿರಂತರವಾಗಿ ಕುಸಿಯಿತು. ಜೂನ್‌ ತಿಂಗಳಲ್ಲಿ ರೂ.656 ರ ಸಮೀಪಕ್ಕೆ ಜಾರಿ ನಂತರ ಸ್ವಲ್ಪಮಟ್ಟಿನ ಮೌಲ್ಯಾಧಾರಿತ ಖರೀದಿಯ ಕಾರಣ ಗುರುವಾರದಂದು ಕಂಪನಿಯ ತ್ರೈಮಾಸಿಕ ಫಲಿತಾಂಶದ ಕಾರಣ ಸುಮಾರು ರೂ.54 ರಷ್ಟು ಏರಿಕೆಯನ್ನು ಕಂಡುಕೊಂಡಿತು. ಶುಕ್ರವಾರವೂ ಚುರುಕಾದ ಚಟುವಟಿಕೆಯಿಂದ ಮುನ್ನುಗ್ಗಿ ರೂ.968 ರವರೆಗೂ ಏರಿಕೆ ಕಂಡು ರೂ.937 ರ ಸಮೀಪ ಕೊನೆಗೊಂಡಿದೆ. ಈ ರೀತಿಯ ಅನಿರೀಕ್ಷಿತ ಮಟ್ಟದ ಏರಿಕೆಗೆ ಕೇವಲ ಕಂಪನಿಗಳ ಸಾಧನೆಯೊಂದೇ ಮುಖ್ಯವಲ್ಲ ಉತ್ತಮ ಕಂಪನಿಯಾಗಿದ್ದಲ್ಲಿ, ಅದು ಹಿಂದೆ ಕಂಡಿರುವ ಕುಸಿತದ ಪ್ರಮಾಣಕ್ಕನುಗುಣವಾಗಿ ಪುಟಿದೇಳುವ ಸಾಧ್ಯತೆಗಳು ಹೆಚ್ಚು. ಈ ರೀತಿಯ ಚೇತರಿಕೆಯ ಗರಿಷ್ಠ ಬೆಲೆಗಳು ಸ್ಥಿರತೆ ಕಾಣುವುದು ಸಹ ಬಹು ಅಪರೂಪ.

    ಸಿ ಎಲ್ ಎಸ್ ಎ ಸಂಸ್ಥೆಯು ಎಸ್ ಬಿ ಐ ಕಾರ್ಡ್ಸ್ ಅಂಡ್ ಪೇಮೆಂಟ್ ಸರ್ವಿಸಸ್ ಕಂಪನಿಯ ಷೇರಿಗೆ ʼ ಸೆಲ್ʼ ರೇಟಿಂಗ್ ಕೊಟ್ಟಿದೆ. ಸೋಜಿಗವೆಂದರೆ ಈ ಸುದ್ಧಿ ಹೊರಬಂದ ದಿನ ಷೇರಿನ ಬೆಲೆಯು ಸುಮಾರು 48 ರೂಪಾಯಿಗಳಷ್ಠು ಏರಿಕೆ ಕಂಡು ದಿನದ ಅಂತ್ಯದಲ್ಲಿ ರೂ.42 ರಷ್ಟರ ಏರಿಕೆಯಿಂದ ಕೊನೆಗೊಂಡಿದೆ. ಈ ಷೇರಿನ ಬೆಲೆ ರೂ.754 ರ ಸಮೀಪದಿಂದ ರೂ.937 ರವರೆಗೂ ಏರಿಕೆಯನ್ನು ಕೇವಲ ಒಂದು ತಿಂಗಳಲ್ಲಿ ಕಂಡಿದೆ. ಇಂತಹ ಏರಿಕೆಯ ಹಿನ್ನೆಲೆಯಲ್ಲಿ ಮಾರಾಟದ ರೇಟಿಂಗ್ ನೀಡಿರುವುದು ʼ ಪ್ರಾಫಿಟ್ ಬುಕ್ಕಿಂಗ್ʼ ಗೆ ಸೂಕ್ತವಾದ ಸಮಯವೆನ್ನಬಹುದು. ಆದರೆ ಕಂಪನಿಯು ಅಂದೇ ಪ್ರಕಟಿಸಿದ ತನ್ನ ತ್ರೈಮಾಸಿಕ ಫಲಿತಾಂಶವು ಪ್ರೋತ್ಸಾಹದಾಯಕವಾಗಿದ್ದಂತೆ ಕಂಡಿದ್ದು, ಈ ಸೆಲ್ ರೇಟಿಂಗ್ ಎಷ್ಟು ಪರಿಣಾಮಕಾರಿ ಎಂಬುದು ಸೋಜಿಗದ ಸಂಗತಿಯಾಗಿದೆ ಮುಂದಿನ ದಿನಗಳಲ್ಲಿ ತಿಳಿಯಲಿದೆ.

    ನೋವಾರ್ಟಿಸ್‌ ಇಂಡಿಯಾ ಲಿಮಿಟೆಡ್:

    ಫಾರ್ಮಾ ವಲಯದ ಈ ಕಂಪನಿ ಷೇರು 1983 ರಿಂದಲೂ ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನಲ್ಲಿ ಲೀಸ್ಟಿಂಗ್‌ ಆಗಿ ವಹಿವಾಟಾಗುತ್ತಿರುವ ಕಂಪನಿ. ಮಾರ್ಚ್‌ ತಿಂಗಳ ತ್ರೈಮಾಸಿಕದಲ್ಲಿ ಮತ್ತು ಹಿಂದಿನ ವರ್ಷ ಹಾನಿಗೊಳಗಾಗಿದ್ದ ಕಂಪನಿ, ಆದರೂ ಪ್ರತಿ ಷೇರಿಗೆ ರೂ.10 ರ ಲಾಭಾಂಶವನ್ನು ಘೋಷಿಸಿ ವಿತರಿಸಿದ ಕಂಪನಿ. ಮೇ ತಿಂಗಳ ಅಂತ್ಯದಲ್ಲಿ ರೂ.566 ರ ವಾರ್ಷಿಕ ಕನಿಷ್ಠ ಬೆಲೆಗೆ ಕುಸಿದಿತ್ತು. ಜುಲೈನಲ್ಲಿ ಲಾಭಾಂಶ ವಿತರಣೆಯ ನಂತರದಲ್ಲಿ ಕಂಪನಿ ಘೋಷಿಸಿದ ಸಕಾರಾತ್ಮಕ ತ್ರೈಮಾಸಿಕ ಫಲಿತಾಂಶ ಷೇರಿನ ಬೆಲೆಯಲ್ಲಿ ಮಿಂಚು ಸಂಚರಿಸುವಂತೆ ಮಾಡಿತು. ಬುಧವಾರದಂದು ರೂ.653 ರ ಸಮೀಪದಲ್ಲಿದ್ದಂತಹ ಷೇರಿನ ಬೆಲೆ ಗುರುವಾರದಂದು ಆರಂಭದಿಂದಲೇ ಏರಿಕೆ ಕಂಡು ರೂ.694 ರಿಂದ ರೂ.760 ರ ಗಡಿ ದಾಟಿತು. ವಾರಾಂತ್ಯದಲ್ಲಿ ರೂ.722 ರ ಸಮೀಪ ಕೊನೆಗೊಂಡಿದೆ.

    ಈ ರೀತಿಯ ಅಸಹಜ ಏರಿಳಿತಗಳನ್ನು ಅನೇಕ ಪ್ರಮುಖ ಕಂಪನಿಗಳಲ್ಲಿ ಅಂದರೆ ಎಸ್ಕಾರ್ಟ್ಸ್‌, ಟಾಟಾ ಸ್ಟೀಲ್‌, ಗ್ರಾಸಿಂ, ಜಿಎಂಎಂ ಫೌಡ್ಲರ್, ಡಿಕ್ಸನ್‌ ಟೆಕ್ನಾಲಜೀಸ್‌, ಇನ್ಫೋಸಿಸ್‌, ಟಿಸಿಎಸ್‌, ವೇದಾಂತ, ಹಿಂಡಲ್ಕೊ, ರಿಲಯನ್ಸ್‌ ಇಂಡಸ್ಟ್ರೀಸ್‌, ಡಾಕ್ಟರ್‌ ಲಾಲ್‌ ಪತ್‌ ಲ್ಯಾಬ್‌, ಬಾಟಾ ಇಂಡಿಯಾ, ದೀಪಕ್‌ ನೈಟ್ರೈಟ್‌, ಎಸ್‌ ಬಿ ಐ, ಕೆನರಾ ಬ್ಯಾಂಕ್‌, ಆಕ್ಸಿಸ್‌ ಬ್ಯಾಂಕ್‌, ಬಜಾಜ್‌ ಫೈನಾನ್ಸ್‌, ಹೆಚ್‌ ಡಿ ಎಫ್‌ ಸಿ, ಹೆಚ್‌ ಡಿ ಎಫ್‌ ಸಿ ಬ್ಯಾಂಕ್‌, ಐ ಸಿ ಐ ಸಿ ಐ ಬ್ಯಾಂಕ್‌, ಕಾಲ್ಗೇಟ್‌, ಅಲ್ಟ್ರಾಟೆಕ್‌, ಏಶಿಯನ್‌ ಪೇಂಟ್ಸ್‌, ಬರ್ಜರ್‌ ಪೇಂಟ್ಸ್‌, ಲೌರಸ್‌ ಲ್ಯಾಬ್‌, ಚೆನ್ನೈ ಪೆಟ್ರೋ, ಟಾಟಾ ಮೋಟಾರ್ಸ್‌, ಐಟಿಸಿ, ಹಿಂದೂಸ್ಥಾನ್‌ಝಿಂಕ್‌, ಹೆಚ್‌ಎ ಎಲ್‌, ಟಾಟ ಕಮ್ಯುನಿಕೇಷನ್ಸ್‌ ನಂತಹ ಕಂಪನಿಗಳಲ್ಲಿಯೂ ಕಳೆದ ಒಂದು ವಾರದಲ್ಲಿ ಕಂಡುಬಂದಿದೆ. ಹಾಗಾಗಿ ಉತ್ತಮ ಅಗ್ರಮಾನ್ಯ ಕಂಪನಿಗಳು ಒದಗಿಸುವ ಅವಕಾಶಗಳು ಆಕರ್ಷಣೀಯವಾಗಿರುವಾಗ ಕಳಪೆ ಕಂಪನಿಗಳತ್ತ ಗಮನಹರಿಸುವ ಅವಶ್ಯಕತೆ ಇರದು.

    ಈ ರೀತಿಯ ಭಾರಿ ಏರಿಳಿತಗಳ ಹಿಂದೆ ಅಡಕವಾಗಿರುವ ಅಂಶವೆಂದರೆ ಪೇಟೆಯಲ್ಲಿ ಅತಿ ಹೆಚ್ಚು ಕಂಪನಿಗಳನ್ನು ಲೀಸ್ಟಿಂಗ್‌ ಮಾಡಿಕೊಂಡಿರುವ ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನಲ್ಲಿ ಲೀಸ್ಟಿಂಗ್‌ ಕಂಪನಿಗಳ ಸಂಖ್ಯೆ ಸ್ಥಿರವಾಗಿದ್ದು, ಚಟುವಟಿಕೆದಾರರ ಸಂಖ್ಯೆ ಅತಿ ಹೆಚ್ಚಾಗಿ ಬೆಳೆಯುತ್ತಿರುವ ಕಾರಣ ಬೇಡಿಕೆ ಹೆಚ್ಚುತ್ತಿದೆ. ಯಾವುದೇ ಒಂದು ಸಾಧನೆಯಾಧಾರಿತ ಕಂಪನಿಯ ಷೇರಿನ ಬೆಲೆ ಕುಸಿತ ಕಂಡಿದೆ ಎಂದರೆ ಅದಕ್ಕೆ ಅನಿರೀಕ್ಷಿತ ಮಟ್ಟದ ಬೇಡಿಕೆ ಬರುತ್ತಿದೆ. ವ್ಯಾಲ್ಯೂ ಪಿಕ್‌ – ಪ್ರಾಫಿಟ್‌ ಬುಕ್‌ ಚಟುವಟಿಕೆ ಮೂಲಕವಷ್ಠೇ ಸುರಕ್ಷತೆಯನ್ನು ಕಾಣಬಹುದಾಗಿದೆಯಲ್ಲವೇ?

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    Karnataka CET:ಸಿಇಟಿ ಫಲಿತಾಂಶ ಪ್ರಕಟ:ಆಗಸ್ಟ್ 5ರಿಂದ ದಾಖಲೆಗಳ ಆನ್ ಲೈನ್ ಪರಿಶೀಲನೆ, ಸೆಪ್ಟೆಂಬರ್ ಮೊದಲ ವಾರ ಕೌನ್ಸೆಲಿಂಗ್ ಆರಂಭ

    BENGALURU JULY 30

    2022-23ನೇ ಶೈಕ್ಷಣಿಕ ಸಾಲಿನಲ್ಲಿ ನಾನಾ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ನಡೆಸಿದ್ದ ಸಿಇಟಿ ಪರೀಕ್ಷೆಯ ಫಲಿತಾಂಶ ಶನಿವಾರ ಪ್ರಕಟಸಲಾಗಿದ್ದು, ಎಲ್ಲ ವಿಭಾಗಗಳ ಟಾಪರ್ ಗಳು ಈ ಬಾರಿ ಬಾಲಕರೇ ಆಗಿರುವುದು ವಿಶೇಷವಾಗಿದೆ.ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಫಲಿತಾಂಶದ ಮಾಹಿತಿಯನ್ನು ನೀಡಿದರು.

    ಎಂಜಿನಿಯರಿಂಗ್, ಕೃಷಿ, ನ್ಯಾಚುರೋಪಥಿ ಮತ್ತು ಯೋಗ, ಪಶುಸಂಗೋಪನೆ, ಫಾರ್ಮಸಿ ಕೋರ್ಸುಗಳ ಪ್ರವೇಶಕ್ಕಾಗಿ ಸಿಇಟಿ ನಡೆಸಲಾಗಿತ್ತು. ಅಚ್ಚರಿಯ ಅಂಶವೆಂದರೆ, ಈ ಬಾರಿ ನ್ಯಾಚುರೋಪತಿ ವಿಭಾಗ ಹೊರತುಪಡಿಸಿ ಉಳಿದ ಎಲ್ಲ ವಿಭಾಗಗಳಲ್ಲೂ ಬಾಲಕರೇ ಅಗ್ರ 9 ರಾಂಕ್ ಗಳನ್ನೂ ಬಾಚಿಕೊಂಡು, ಪಾರಮ್ಯ ಮೆರೆದಿದ್ದಾರೆ.

    ಎಂಜಿನಿಯರಿಂಗ್ ವಿಭಾಗದಲ್ಲಿ ಮೊದಲ ಒಂಬತ್ತು ರಾಂಕ್ ಪಡೆದಿರುವುದು ಬಾಲಕರೇ ಆಗಿದ್ದು, ಎಲ್ಲರೂ ಬೆಂಗಳೂರಿನ ವಿದ್ಯಾರ್ಥಿಗಳೇ ಆಗಿದ್ದಾರೆ. ಸಿಬಿಎಸ್ಸಿಯಲ್ಲಿ ವ್ಯಾಸಂಗ ಮಾಡಿದವರೇ ಅದರಲ್ಲೂ ಹೆಚ್ಚು ಇದ್ದಾರೆ ಎಂದು ಅವರು ವಿವರಿಸಿದರು.

    ಈ ಬಾರಿಯ ಸಿಇಟಿ ಯಲ್ಲಿ ವಿದ್ಯಾರ್ಥಿಗಳಿಗೆ 7 ಕೃಪಾಂಕಗಳನ್ನು (ಗಣಿತ ವಿಷಯಕ್ಕೆ ಐದು, ರಸಾಯನವಿಜ್ಞಾನ ಮತ್ತು ಭೌತವಿಜ್ಞಾನ ವಿಷಯಕ್ಕೆ ತಲಾ ಒಂದು ಅಂಕ) ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಒಟ್ಟು 2,16,559 ಮಂದಿ ಸಿಇಟಿಗೆ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 2,10,829 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಒಟ್ಡು 486 ಕೇಂದ್ರಗಳಲ್ಲಿ ಸಿಇಟಿ ನಡೆಸಲಾಗಿತ್ತು ಎಂದು ಅವರು ತಿಳಿಸಿದರು.

    ಆಗಸ್ಟ್ 5ರಿಂದ ದಾಖಲೆಗಳ ಪರಿಶೀಲನೆ ಆನ್ ಲೈನ್ ನಲ್ಲಿ ನಡೆಯಲಿದೆ. ರಕ್ಷಣೆ, ಎನ್.ಸಿ.ಸಿ, ಕ್ರೀಡೆ, ವಿಕಲಚೇತನ ಇತ್ಯಾದಿ ಕೋಟಾಗಳ ಅಡಿಯಲ್ಲಿ ಬರುವ ಶೇ.10ರಷ್ಟು ವಿದ್ಯಾರ್ಥಿಗಳ ದಾಖಲೆಗಳನ್ನು ಮಾತ್ರ ಭೌತಿಕವಾಗಿ ಪರಿಶೀಲಿಸಲಾಗುತ್ತದೆ ಎಂದು ಅವರು ವಿವರಿಸಿದರು.

    ನೀಟ್ ಪರೀಕ್ಷೆಯ ಫಲಿತಾಂಶ ಬಂದ ಬಳಿಕ, ಅಲ್ಲಿಯ ಅಂಕಗಳನ್ನು ಪರಿಗಣಿಸಿ ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ ಮತ್ತು ಹೋಮಿಯೋಪತಿ ಕೋರ್ಸುಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ.

    ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ ಸೈಟ್ http://karresults.nic.in ನಲ್ಲಿ ಪ್ರಕಟಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

    ಪತ್ರಿಕಾಗೋಷ್ಠಿಯಲ್ಲಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯ ಇದ್ದರು.

    ಕೌನ್ಸೆಲಿಂಗ್ ಮತ್ತು ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ಎದುರಾಗುತ್ತಿದ್ದ ಅನೇಕ ಸಮಸ್ಯೆಗಳನ್ನು ಮನಗಂಡು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಎಲ್ಲ ಹಂತದ ಪ್ರಕ್ರಿಯೆಗಳನ್ನು ಆನ್ ಲೈನ್ ನಲ್ಲಿ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.

    ಆದಾಯ, ಜಾತಿ, ವ್ಯಾಸಂಗ ಪ್ರಮಾಣ ಪತ್ರ, ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡಿದ ಪ್ರಮಾಣ ಪತ್ರ, ಭಾಷಾ ಅಲ್ಪಸಂಖ್ಯಾತರ ಪ್ರಮಾಣ ಪತ್ರ, ಇತ್ಯಾದಿ ಪ್ರಮಾಣ ಪತ್ರಗಳನ್ನು ಆನ್ ಲೈನ್ ನಲ್ಲೇ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಗಳಿಂದ ಆನ್ ಲೈನ್ ನಲ್ಲಿ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ಸಿಬಿಎಸ್ಸಿ, ಐಸಿಎಸ್ಇ ಹೊರತುಪಡಿಸಿ ರಾಜ್ಯ ಪಠ್ಯಕ್ರಮದಲ್ಲಿ ಪಿಯುಸಿ ಮಾಡಿದವರ ಅಂಕ ಪಟ್ಟಿಗಳನ್ನು ಕೂಡ ಕೆಇಎ ಅನ್ ಲೈನ್ನಲ್ಲಿ ಪಡೆದು, ಸೀಟು ಹಂಚಿಕೆ ಪ್ರಕ್ರಿಯೆಯನ್ನು ಮಾಡಲಿದೆ ಎಂದು ಅವರು ವಿವರಿಸಿದರು.

    ತಂತ್ರಜ್ಞಾನ ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ ಮನೆಗಳಿಂದಲೇ ಸುಲಭ-ಸರಳವಾಗಿ ಅರ್ಜಿಗಳನ್ನು ಸಲ್ಲಿಸುವ ಹಾಗೆ ಮಾಡುವುದು ನಮ್ಮ ಉದ್ದೇಶ. ಈ ಸಲುವಾಗಿ ಸಾಫ್ಟ್ ವೇರ್ ಉನ್ನತೀಕರಣ ಕೂಡ ಮಾಡಲಾಗುತ್ತಿದೆ. ಕೊನೆ ಹಂತದ ಪರೀಕ್ಷೆಗಳು ನಡೆಯುತ್ತಿದ್ದು, ವಿದ್ಯಾರ್ಥಿಸ್ನೇಹಿ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದರು.

    ಪ್ರಾಧಿಕಾರದ ಸಹಾಯವಾಣಿಯ ಸಾಫ್ಟ್ ವೇರ್ ಕೂಡ ಉನ್ನತೀಕರಿಸುತ್ತಿದ್ದು, ಒಮ್ಮೆಗೇ ಸಾವಿರ ಜನರು ಕರೆ ಮಾಡಿದರೂ ಅದನ್ನು ನಿರ್ವಹಿಸುವ ಸಾಮರ್ಥ್ಯವೃದ್ಧಿಸಲಾಗಿದೆ. ಇದರಿಂದ ಅನುಮಾನಗಳಿಗೆ ಬೇಗ ಪರಿಹಾರ ಸಿಗಲಿದೆ ಎಂದು ಸಚಿವರು ವಿವರಿಸಿದರು.


    ಕಳೆದ ವರ್ಷ ದ್ವಿತೀಯ ಪಿಯುಸಿ ಉತ್ತೀರ್ಣರಾದ ಕೆಲವು ವಿದ್ಯಾರ್ಥಿಗಳು ಈ ಬಾರಿಯೂ ಸಿಇಟಿ ಪರೀಕ್ಷೆ ತೆಗೆದುಕೊಂಡಿದ್ದು, ಅಂತಹ ವಿದ್ಯಾರ್ಥಿಗಳ ರಾಂಕಿಂಗ್ ಅನ್ನು ಕೇವಲ ಸಿಇಟಿ ಪರೀಕ್ಷೆಯ ಅಂಕಗಳನ್ನು ಆಧಾರಿಸಿಯೇ ನಿರ್ಧರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಅವರು ವಿವರಿಸಿದ್ದಾರೆ.

    ಸಾಮಾನ್ಯವಾಗಿ ಕೆಇಎನಲ್ಲಿ ಸಿಇಟಿ ಮತ್ತು ದ್ವಿತೀಯ ಪಿಯುಸಿ- ಎರಡೂ ಪರೀಕ್ಷೆಗಳ ಅಂಕಗಳನ್ನು ಆಧಾರವಾಗಿ ಇಟ್ಟುಕೊಂಡೇ ರಾಂಕಿಂಗ್ ನಿರ್ಧರಿಸಲಾಗುತ್ತದೆ. ಈ ಬಾರಿಯೂ ಅದೇ ರೀತಿ ಮಾಡಲಾಗಿದೆ. ಆದರೆ, ಕಳೆದ ಬಾರಿ ಕೋವಿಡ್ ಇದ್ದ ಕಾರಣ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಡೆಸಿರಲಿಲ್ಲ. ಹೀಗಾಗಿ ಆ ಸಂದರ್ಭದಲ್ಲಿ ಕೇವಲ ಸಿಇಟಿ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಆಧಾರಿಸಿಯೇ ರಾಂಕಿಂಗ್ ನೀಡಲಾಗಿತ್ತು. ಆ ವರ್ಷದ ವಿದ್ಯಾರ್ಥಿಗಳಿಗೆ ಅದೇ ನಿಯಮ ಈಗಲೂ ಅನ್ವಯವಾಗುತ್ತದೆ ಎಂದು ರಮ್ಯಾ ತಿಳಿಸಿದ್ದಾರೆ.

    ಕಳೆದ ವರ್ಷದವರೇ ಸುಮಾರು 24 ಸಾವಿರ ಮಂದಿ ಈ ಬಾರಿಯೂ ಸಿಇಟಿ ಪರೀಕ್ಷೆ ತೆಗೆದುಕೊಂಡಿದ್ದು, ಅವರೆಲ್ಲರೂ ದ್ವಿತೀಯ ಪಿಯುಸಿ ಅಂಕಗಳನ್ನು ಪರಿಗಣಿಸಿ ಸಿಇಟಿ ರಾಂಕಿಂಗ್ ಪ್ರಕಟಿಸಿ ಎನ್ನುವ ಒತ್ತಾಯ ಮಾಡುತ್ತಿದ್ದು, ಇದನ್ನು ಒಪ್ಪಲು ಸಾಧ್ಯ ಇಲ್ಲ ಎನ್ನುವ ಉತ್ತರವನ್ನು ರಮ್ಯಾ ಅವರು ಕೊಟ್ಟಿದ್ದಾರೆ.

    ಒಂದು ವೇಳೆ ಇವರ ಮನವಿಯನ್ನು ಪರಿಗಣಿಸಿದರೆ ಕಳೆದ ಬಾರಿ ಕೇವಲ ಸಿಇಟಿ ಪರೀಕ್ಷೆ ಮೇಲೆ ರಾಂಕಿಂಗ್ ಪಡೆದು ಈಗ ಬೇರೆ ಬೇರೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ ಅನ್ಯಾಯ ಮಾಡಿದಂತೆ ಆಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

    1. ಅಫೂರ್ವ ಟಂಡನ್
    2. ಸಿದ್ಧಾರ್ಥ್ ಸಿಂಗ್
    3. ಆತ್ಮಕೂರಿ ವೆಂಕಟ ಮಾಧವ ಶ್ರೀರಾಮ್.
    4. ಆರ್ ಕೆ ಶ್ರೀಧರ್
    5. ವಿಶಾಲ್ ಬೈಸಾನಿ
    6. ಕೆ ವಿ ಸಾಗರ್
    7. ವಿ.ಮಹೇಶಕುಮಾರ್
    8. ಜಿ ವಿ ಸಿದ್ಧಾರ್ಥ್
    9. ವಿ. ಸಾತ್ತ್ವಿಕ್
      (ಎಲ್ಲರೂ ಬೆಂಗಳೂರಿನ ವಿದ್ಯಾರ್ಥಿಗಳು)

    Karnataka CET:30ರಂದು ಸಿಇಟಿ ಫಲಿತಾಂಶ

    BENGALURU JULY 25

    ಜೂನ್ ಮಧ್ಯಭಾಗದಲ್ಲಿ ನಡೆಸಲಾಗಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ-CET) ಫಲಿತಾಂಶವನ್ನು ಇದೇ 30ರಂದು ಪ್ರಕಟಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.

    ಸೋಮವಾರ ಈ ವಿಚಾರ ತಿಳಿಸಿರುವ ಅವರು, ವಿವಿಧ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆದುಕೊಳ್ಳಲು ನಡೆದಿದ್ದ ಸಿಇಟಿ ಪರೀಕ್ಷೆಯನ್ನು ಈ ಬಾರಿ ಬಿಗಿ ಭದ್ರತೆ ನಡುವೆ ಕಟ್ಟುನಿಟ್ಟಾಗಿ ನಡೆಸಲಾಗಿತ್ತು’ ಎಂದರು.

    ಸಿಇಟಿ ಪರೀಕ್ಷೆ ನಡೆಸುವಾಗ ಸಿಬಿಎಸ್ ಸಿ ಮತ್ತು ಐಸಿಎಸ್ಇ ಪಠ್ಯಕ್ರಮದಲ್ಲಿ 12ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳಿಗೂ ಅವಕಾಶ ಕೊಡಲಾಗಿತ್ತು. ಈಗ ಅವರ ಫಲಿತಾಂಶ ಬಂದಿದ್ದು, ಸಿಇಟಿ ಬರೆದಿದ್ದ ಈ ವಿದ್ಯಾರ್ಥಿಗಳು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ ಸೈಟ್ ನಲ್ಲಿ ತಮ್ಮ ಅಂಕಗಳನ್ನು ನಾಳೆ (ಜು.26) ಸಂಜೆಯೊಳಗೆ ಅಪ್ಲೋಡ್ ಮಾಡಬೇಕು ಎಂದು ಅವರು ಹೇಳಿದ್ದಾರೆ.

    7 ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳು ಕೆಐಟಿ -KIT-ದರ್ಜೆಗೆ; ಕಾರ್ಯಪಡೆ ರಚನೆ

    BENGALURU JULY 23

    ರಾಜ್ಯದಲ್ಲಿರುವ 14 ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳ ಪೈಕಿ 7 ಕಾಲೇಜುಗಳನ್ನು ‘ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ (ಕೆಐಟಿ) ಆಗಿ ಉನ್ನತೀಕರಿಸುವ ನಿಟ್ಟಿನಲ್ಲಿ ಪ್ರೊ.ಶಡಗೋಪನ್ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

    ಬುಧವಾರ ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಯೋಜನೆಯ ಅಡಿಯಲ್ಲಿ ಹಾಸನ, ಹಾವೇರಿ, ಕೆ.ಆರ್. ಪೇಟೆ, ಕಾರವಾರ, ರಾಮನಗರ ಮತ್ತು ತಳಕಲ್ ನಲ್ಲಿರುವ ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಬೆಂಗಳೂರಿನ ಎಸ್.ಕೆ.ಎಸ್.ಜೆ.ಐ.ಟಿ. ಕಾಲೇಜನ್ನು ಕೆಐಟಿ ಆಗಿ ಉನ್ನತೀಕರಿಸಲು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಸಡಗೋಪನ್ ಅವರು ಬೆಂಗಳೂರಿನ ಐಐಐಟಿಯ ಸ್ಥಾಪಕ ನಿರ್ದೇಶಕರು.

    ಈ ಕಾಲೇಜುಗಳಲ್ಲಿ ಮೊದಲ ಹಂತದಲ್ಲಿ ಹೆಚ್ಚಿನ ಬೇಡಿಕೆ ಮತ್ತು ಉದ್ಯೋಗಾವಕಾಶ ಇರುವ ತಲಾ 2 ವಿಭಾಗಗಳನ್ನು ಐಐಟಿ ಮಾದರಿಯಲ್ಲಿ ಕೆಐಟಿ ಆಗಿ ಬೆಳೆಸಲಾಗುವುದು ಎಂದು ಅವರು ವಿವರಿಸಿದ್ದಾರೆ.

    ಸಂಶೋಧನೆ, ನಾವೀನ್ಯತೆ ಮತ್ತು ಅತ್ಯುನ್ನತ ಗುಣಮಟ್ಟದ ಶಿಕ್ಷಣಕ್ಕೆ ಸರಕಾರ ಉತ್ತೇಜನ ನೀಡುತ್ತಿದೆ. ಇದಕ್ಕಾಗಿ ವಿದೇಶದ ಶ್ರೇಷ್ಠ ವಿಶ್ವವಿದ್ಯಾಲಯಗಳೊಂದಿಗೆ ಸಹಭಾಗಿತ್ವ ಒಡಂಬಡಿಕೆಗಳನ್ನು ಈ ಕಾಲೇಜುಗಳು ಮಾಡಿಕೊಳ್ಳಲಿವೆ. ಈ ಮೂಲಕ ಇವುಗಳನ್ನು ಅಂತಾರಾಷ್ಟ್ರೀಯ ಉತ್ಕೃಷ್ಟತಾ ಕೇಂದ್ರಗಳನ್ನಾಗಿ ಮಾಡಲಾಗುವುದು
    ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

    ಈ ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ ಒಟ್ಟು 95 ಕೋಟಿ ರೂ. ಅಗತ್ಯವಿದ್ದು, ಈಗಾಗಲೇ 21 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕಾರ್ಯಪಡೆಯು ಈ ಕಾಲೇಜುಗಳ ಉನ್ನತೀಕರಣಕ್ಕೆ ಎರಡು ತಿಂಗಳಲ್ಲಿ ವಿಸ್ತೃತ ಯೋಜನಾ ವರದಿ ಸಲ್ಲಿಸಲಿದೆ ಎಂದು ಅವರು ಹೇಳಿದ್ದಾರೆ.

    ಅಲ್ಲದೆ, ಈ ಕಾಲೇಜುಗಳಲ್ಲಿ ಮುಂದಿನ 5 ವರ್ಷಗಳಲ್ಲಿ ಕೈಗೊಳ್ಳಬಹುದಾದ ಶೈಕ್ಷಣಿಕ ಚಟುವಟಿಕೆಗಳನ್ನು ಸೂಚಿಸಲಿದೆ ಎಂದು ಸಚಿವರು ನುಡಿದಿದ್ದಾರೆ.

    ಪರಿಣತರಾದ ಪ್ರೊ.ಎಲ್ ಎಸ್ ಗಣೇಶ್, ಪ್ರೊ.ಸಿ ರಾಜೇಂದ್ರ, ಪ್ರೊ. ರಾಮಗೋಪಾಲ್ ರಾವ್, ಪ್ರೊ. ಚಕ್ರವರ್ತಿ, ಪ್ರೊ.ಮಣೀಂದ್ರ ಅಗರವಾಲ್ ಮತ್ತು ಪ್ರೊ. ವೈ ನರಹರಿ ಅವರು ಈ ಕಾರ್ಯಪಡೆಯ ಸದಸ್ಯರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

    ಆನೆ ಮಹಾರಾಜರಿಗೆ ಅಪ್ಪನ ಮೌನ ಪ್ರಾರ್ಥನೆ

    ಕಳೆದ ಸರ್ತಿ ಇನ್ನೂ ಬಡಿಯದ ಹುಲ್ಲುಬಣವೆಯಿಂದ ನಾಕಾರು ಬಾಯಿ ಹುಲ್ಲು ಮೆದ್ದು ನಂತರ ಅದೂ ಬೇಸರವಾಗಿ ಗೇಟನ್ನು ಮುರಿಯಲು ಹೋಗಿ ಅಪ್ಪ ‘ಯಾಕಪ್ಪ ಮುರಿತೀಯಾ…ಮಣ್ಣು ನೆಚ್ಚಿ ಬಾಳ್ವೆ ಮಾಡೋ ನಮಗೂ ಕಷ್ಟ ನಷ್ಟ ಇರ್ತವೆ ಕಣೋ,ದಾಟುಕೊಂಡು ಹೋಗಬಾರದಾ’ಎಂದಾಗ ತಿರುಗಿ ನೋಡಿ ಕಾಂಪೌಂಡನ್ನು ಸ್ವಲ್ಪ ತ್ರಾಸದಲ್ಲೇ ದಾಟಿ ಆಚೆ ಹೋದ ನಮ್ಮ ಬೆನವಣ್ಣ ಆನೆ ಮಹಾರಾಜ ನಿನ್ನೆ ರಾತ್ರಿ ‌ಮತ್ತೆ ಅಪ್ಪನ ಮನೆಯ ಸೂರಿನ ಬದಿಯಲ್ಲೇ ಹಾದು ಹೋಗಿದ್ದಾನೆ.

    ರಾತ್ರಿ ಹತ್ತರ ಹೊತ್ತಿಗೆ ಅಪ್ಪನ ಚಿಳ್ಳೆಪಿಳ್ಳೆಗಳಾದ ಸೋನಿ ಕೀನ್ಯಾ ರಾಜ ಇತರೆ ನಾಯಿಗಳು ಬೊಗಳಿದ್ದು ಕೇಳಿ ಎಂದಿನಂತೆ ಮೇಲಿನ ಹೊಲದ ತೋಟದಲ್ಲಿ ಆನೆ ದಾಟ್ತಿರಬೇಕು ಅಂದುಕೊಂಡು ಮಾಮೂಲಿನಂತೆ ಪಟ್ಟಾಂಗ ಹೊಡಿತಾ ಕೂತಿದ್ದಾರೆ.ಯಾಕೋ ನಾಯಿಗಳ ಬೊಗಳುವಿಕೆ ಕಡಿಮೆಯಾಗಿ ದೊಡ್ಡದೊಂದು ಉಸಿರು ಕೇಳಿದಾಗ ಅಮ್ಮ ಮಲಗಿದ್ದ ಮಂಚದ ಪಕ್ಕದಲ್ಲಿರುವ ಕಿಟಿಕಿ ತೆಗೆದರೆ ಎರಡು ಕೈಯಾಚೆ ದೊಡ್ಡ ಹೆಬ್ಬಂಡೆಯಂತಹ ಒಂಟಿಸಲಗ ನಿಂತಿದೆ.ಅಮ್ಮನ ಮೈ ತಣ್ಣಗಾದಂತಾಗಿ ಅಲ್ಲೇ ಇದ್ದ ನನ್ ‌ಮಗ ಮತ್ತು ಅಣ್ಣನನ್ನು ಕೂಗಿದ್ದಾರೆ.ಇಬ್ಬರೂ ಕಿಟಿಕಿಯಲ್ಲಿ ನೋಡುವಷ್ಟರಲ್ಲಿ ಆನೆ ಸೋಲಾರ ಪ್ಯಾನಲ್ ಪಕ್ಕ ಹೋಗಿ ನಿಂತಿದೆ.ಸಣ್ಣಗೊಮ್ಮೆ ಸೊಂಡಿಲಿನಿಂದ ಮುತ್ತಿಟ್ಟರೂ ಸೋಲಾರು ಸೋತು ಶರಣಾಗ್ತದೆ.
    ಅದೇನೋ ಗೊತ್ತಿಲ್ಲ. ಅಪ್ಪನ ಎಂದಿನ ಗದರುವಿಕೆಯ ಸದ್ದಿಗಾಗಿ ಆಲಿಸಿದಂತೆ ಮತ್ತೆ ಸುತ್ತ ನಿಂತು ನೋಡಿದೆ.ಅಪ್ಪಂಗೆ ಸ್ವಲ್ಪ ಮೈ ಹುಷಾರಿಲ್ಲದೆ ಆ ಮಳೆಯ ಅಬ್ಬರದಲ್ಲಿ‌ ಜೋರು ಧ್ವನಿಯಲ್ಲಿ ಗದರಲಾಗದೆ ‘ನೀನೆ ಸರಿ ತಪ್ಪು ನೋಡ್ಕೊಂಡು ಹೋಗಪ್ಪ’ ಅಂತ ಮನಸಲ್ಲೇ ಹೇಳಿದ್ರಂತೆ.

    ಈ ಆನೆ ಮಹಾರಾಜರಿಗೆ ಅಪ್ಪನ ಮೌನ ಪ್ರಾರ್ಥನೆ ಕೇಳಿರಬಹುದು ಕಾಣುತ್ತೆ.ಸ್ವಲ್ಪ ಹೊತ್ತು ಅಲ್ಲೇ ನಿಂತು ಯೋಚಿಸಿ ಮತ್ತೆ ಅಲ್ಲಿಂದ ಎರಡು ಹೆಜ್ಜೆ ಮುಂದೆ ಬಂದು ನಮ್ಮ ಸೇದೋ ಬಾವಿಯ ಬಳಿ ನಿಂತು ಅಪ್ಪನ ಧ್ವನಿ ಗಾಗಿ ಎಂಬಂತೆ ಕಾಯ್ದಿದೆ.
    ಅಪ್ಪಂದು ಈ ಬಾರಿಯೂ ಎಂದಿನಂತೆ ಮೌನ ಸಂಭಾಷಣೆ.ಅಲ್ಲಿಂದ ಎರಡು ಹೆಜ್ಜೆ ಆಚೆ ಸ್ವಲ್ಪ ಇಕ್ಕಟ್ಟು.

    ಕಾರಣ ಅಣ್ಣ ತನ್ನ ಎಕ್ಸ್ ಯು ವಿ ಕಾರನ್ನು ಅದೇ ಬದಿಯಲ್ಲಿ ನಿಲ್ಲಿಸಿದ್ದ.ಅಲ್ಲೂ ನಮ್ಮ ಆನೆಯಣ್ಣನಿಗೆ ಕಾರನ್ನು ಸ್ವಲ್ಪ ಮಾತಾಡಿಸುವ ಅಂತ ಮನಸ್ಸಾಗಿದ್ದಿದ್ರೆ ಎನೋ ಎಂತೊ.
    ಅಲ್ಲಿಂದ ಕಾರಿಗೂ ತಾಗದಂತೆ ಸೋಲಾರಿಗೂ ನೋವಾಗದಂತೆ, ಬಾವಿ ಕಟ್ಟೆಗೂ ತೊಂದರೆಯಾಗದಂತೆ ಹೆಜ್ಜೆ ಹಾಕಿ ಮುಂದೆ ಬಂದಿದೆ.ಅಲ್ಲಿಂದ ಆನೆ ಮಹಾರಾಜ ಹನ್ನೆರಡು ಹೆಜ್ಜೆ ಹಾಕಿದರೆ ಹೊರ ಗೇಟು ಸಿಕ್ತದೆ.ಅಲ್ಲಿಂದ ಸುತ್ತಕೂ ಕಾಂಪೌಂಡು.

    ಸಂಜೆಯಾಗುತ್ತಲೂ ಒಂಟಿಮನೆಯಾದ್ದರಿಂದ ಗೇಟಿಗೆ ದೊಡ್ಡ ಬೀಗ ಹಾಕಿರ್ತಾರೆ.
    ಬೆನವಣ್ಣ ಅಪ್ಪನ ಮೌನ ಬೇಡಿಕೆಗೆ ಈಗ ಎಂತ ಮಾಡೋದು ಅಂತ ಸ್ವಲ್ಪ ಯೋಚಿಸಿ ಬೀಗ ಮಾತ್ರ ಮುರಿದು ಮೆಲ್ಲಗೆ ಗೇಟು ಅಲುಗಿಸಿದ್ದಾನೆ.ಮನೆಯ ಕಡೆಗೆ ಸ್ವಲ್ಪ ತಗ್ಗಿರುವ ಕಾರಣ ಗೇಟಿನ ಒಂದು ಬದಿ ತೆರೆದು ಕೊಂಡಿದೆ.ಸೀದಾ ಆಚೆ ಹೋಗಿ ಒಂದ್ನಿಮಿಷ ನಿಂತು ತಿರುಗಿ ನೋಡಿ ಎಡಕ್ಕೆ ಹೊರಳಿ ತೋಟದ ರಸ್ತೆಯಲ್ಲಿ ಆಚೆ ಎಲ್ಲೋ ಹೋಗಿದ್ದಾನೆ.

    ಅಮ್ಮ ಬೆಳಿಗ್ಗೆ ಇದನ್ನು ಹೇಳುವಾಗ ಆನೆಯ ಬುದ್ಧಿವಂತಿಕೆ ,ನೆನಪಿನ ಶಕ್ತಿ ಮತ್ತು ಅದರ ಮೆದುಳಿನಲ್ಲಿರುವ ಕಂಪಾಸ್ ವ್ಯವಸ್ಥೆಯ ಬಗ್ಗೆ ಅಲ್ಪಸ್ವಲ್ಪ ತಿಳಿದಿದ್ದ ನನಗೆ ಮತ್ತೊಮ್ಮೆ ಮನೆ ಬಾಗಿಲಿಗೆ ಬಂದು ಹೋದ ಗಜರಾಜನ ಬಗ್ಗೆ ಪ್ರೀತಿಯುಕ್ಕಿತು.

    ಕಳೆದ ವಾರದಲ್ಲಿ ಮನೆಯಿಂದ ಕೆಳಗಿರುವ ಬಾಳೆ ತೋಟಕ್ಕೆ ನುಗ್ಗಿ ಹತ್ತಿಪ್ಪತ್ತು ಬಾಳೆಯ ಗೊನೆಗಳನ್ನು ಕಿತ್ತು ಬಾಳೆಯ ಕಂದುಗಳನ್ನೂ ಎಳೆದಾಡಿ ಅಡಾವುಡಿ ಮಾಡಿದ್ದಕ್ಕೆ ಅಪ್ಪ ಫೋನ್ ಮಾಡಿ ನನ್ ಹತ್ರ ಬೈಕೊಂಡಿದ್ರು.’ಮದುವೆಗೆಂತ ಎಂತ ಚೆನ್ನಾಗಿ ಬಾಳೆ ಗೊನೆ ತೂಗಾಡಿದ್ದವು.ಈ ನನ್ಮಗಂದು ಬಂದು ಎಲ್ಲನೂ ಹುಡಿ ಎಬ್ಸಿದೆ”ಅಂದಿದ್ರು.

    ‘ಅಯ್ಯೋ ಅಪ್ಪಾಜಿ..ಮದುವೆ ಇರೋದು ನವೆಂಬರ್ ಗೆ..ಈ ಬಾಳೆಗೊನೆ ಅಲ್ಲಿಯವರೆಗೂ ಎಲ್ಲಿ ಉಳಿತಿದ್ವು.ಸುಮ್ನಿರಿ ನೀವೊಂದು’ ಎಂದಿದ್ದೆ.

    ಅಪ್ಪ ಆನೆಗಳಿಗೆ ಬಯ್ಯುವಾಗಲೂ ಅದೆಂತದೋ ಅಕ್ಕರೆಯನ್ನು ತುಂಬ್ಕೊಂಡೇ ಬಯ್ತಾರೆ.
    ಅವೂ ಕೂಡಾ ‘ನೀ ಬೆಳೆದಿರೋದ್ರಲ್ಲಿ ಒಂದು ಐದು ಪರ್ಸೆಂಟು ನಾವು ಮೇಯಕ್ಕೇ ಇರೋದು’ ಅಂತ ವರ್ಷ ವರ್ಷವೂ ಚಂಡಿ ಹಿಡಿದು ತೋಟ ನುಗ್ತವೆ.
    ….
    ಹಾಗಂತ ಸಮಸ್ಯೆ ಇಷ್ಟು ಸಲೀಸಾಗಿ ಮಾರ್ಧವವಾಗಿ ಮುಗಿದು ಹೋಗ್ತದೆ ಅಂತಲ್ಲ.
    ಆಲೂರು ಸಕಲೇಶಪುರ ತಾಲ್ಲೂಕಿನಲ್ಲಿ ಆನೆಯಿಂದ ಆಗ್ತಿರುವ ಸಾವಿನ ಪ್ರಮಾಣ ವರ್ಷವರ್ಷವೂ ಜಾಸ್ತಿಯಾಗ್ತಿದೆ.ಬೆಳೆ ಹಾನಿಗೆ ಸರ್ಕಾರ ಕೊಡುವ ಪರಿಹಾರ ಅರೆಕಾಸಿನ ಮಜ್ಜಿಗೆಯಂತಿದೆ.

    ಅಪ್ಪನ ಮನೆಯ ಬಳಿಯೂ ಅಸ್ಸಾಮಿನಿಂದ ಬರುವ ವಲಸೆ ಕಾರ್ಮಿಕರ ಮಕ್ಕಳು ಅಷ್ಟಗಲಕ್ಕೂ ಹೊತ್ತಿನ ಪರಿವೆಯಿಲ್ಲದೆ ಆಡುತ್ತಿರುತ್ತವೆ. ಮನೆಗೆ ಸಂಜೆ ಮೇಲೆ ಯಾರೇ ಬರಲಿಕ್ಕೂ ಭಯ ಬೀಳ್ತಾರೆ.ನಾವು ಕೂಡ ಬೆಳಕಿದ್ದ ಹಾಗೇ ಮನೆ ಸೇರಿಕೊಳ್ಳುವ ಅನಿವಾರ್ಯತೆ.

    ಆನೆಗಳ ಮನಸ್ಸು ಹೀಗೇ ಎಂದು ಹೇಳಲಾಗದು.ಅಲ್ಲೆಲ್ಲೋ ಬೆದೆಗೆ ಬಂದ ಹೆಣ್ಣಾನೆ ಇದ್ದರೆ ಸುತ್ತಿನ ನಲ್ವತ್ತು ಕಿಮೀ ವರೆಗಿನ ಇತರೆ ಗಂಡು ಆನೆಗಳಿಗೆ ಬೆದೆಯ ಆನೆ ಸ್ರವಿಸುವ ಫಿರಮೋನ್ ಮನಸ್ಸನ್ನು ತಲ್ಲಣಗೊಳಿಸುತ್ತದೆ.ಅದರ ಬುದ್ದಿ ಸ್ಥಿಮಿತದಲ್ಲಿರುವುದಿಲ್ಲ.ಇದು ಪ್ರಕೃತಿ ಸಹಜ ಕ್ರಿಯೆ.ಆಗ ಅವುಗಳನ್ನು ಕೆಣಕಿದಂತೆನಿಸುವ ಯಾವ ಘಟನೆಗಳಿಗೂ ಅವುಗಳ ಪ್ರತಿಕ್ರಿಯೆ ವಿಪರೀತದ್ದೆ.

    ಮನುಷ್ಯ ನಿರ್ಮಿತ ವಿಕೃತಿಗಳೂ ದಿನೇದಿನೇ ಹೆಚ್ಚುತ್ತಿವೆ.ನೆಟ್ಟಗೆ ನಿಂತಿದ್ದ ಬೆಟ್ಟ ಹತ್ತಾರು ವರ್ಷಗಳಲ್ಲಿ ಜೆಸಿಬಿ ಅಗೆದು ಅರ್ಧ ಖಾಲಿಯಾಗಿ ಸಪ್ಪೆ ಮುಖ ತೋರುತ್ತಿದೆ.ಎಲ್ಲೊ ಇದ್ದ ಕಾಲುಹಾದಿ ,ನೀರಿನ ಝರಿ,ತಗ್ಗು ತೋಡು,ದೊಡ್ಡದಾದ ಶತಮಾನ ಹಳೆಯ ಮರ ಎಲ್ಲವೂ ಅರ್ಥಮೂವರ್ಸ್ ಗಳ ದೊಡ್ಡ ಬಾಯಿಗೆ ಆಹಾರವಾಗಿ ವರ್ಷ ಬಿಟ್ಟು ನೋಡುವಾಗ ಇದು ನಮ್ಮೂರೇನಾ ಎನ್ನುವಂತೆ ರೂಪು ಕಳೆದುಕೊಳ್ಳುತ್ತಿದೆ.

    ನಿರಂತರವಾಗಿ ಬದಲಾಗುತ್ತಿರುವ ಲ್ಯಾಂಡ್ ಸ್ಕೆಪಿನಿಂದಾಗಿ ಆನೆಗಳು ಗೊಂದಲಕ್ಕೊಳಗಾಗುತ್ತಿವೆ.ಮೂರು ತಲೆಮಾರುಗಳಿಂದ ತಾವು ತಿರುಗಾಡಿದ ಹಾದಿಯನ್ನು ಕರಾರುವಾಕ್ಕಾಗಿ ನೆನಪಿಟ್ಟುಕೊಳ್ಳುವ ಆನೆಯಲ್ಲಿರುವ ಮೆದುಳಿನ ಸಂಕೀರ್ಣ ವ್ಯವಸ್ಥೆ ತಮ್ಮ ಹಾದಿ ಕಾಣೆಯಾದ ಕಾರಣ ಸಿಕ್ಕಸಿಕ್ಕಲ್ಲಿ ದಾರಿ ಕಂಡುಕೊಳ್ಳುತ್ತಿವೆ.ಇನ್ನೂ ಇತ್ತೀಚಿನ ತಲೆಮಾರುಗಳ ಆನೆಮರಿಗಳು ಹುಟ್ಟಿರುವುದೇ ಕಾಫಿ ತೋಟಗಳಲ್ಲಿ. ಅವುಗಳ ಮಾಮೂಲು ತಿರುಗಾಟವೂ ಊರಿನ ಒಳಗೇ.ಹಾಗಾಗಿ ಈ ತಲೆಮಾರಿನವು ನಾವು ಊರಿಗೇ ಸೇರಿದವುಗಳು ಎಂದೇ ಅಂದುಕೊಂಡಿರುತ್ತವೆ.

    ಆನೆಧಾಮ ಯೋಜನೆ ಪ್ರತಿ ಒಂದೂವರೆ ವರ್ಷಕೊಮ್ಮೆ ಧಿಡೀರನೆ ಮುನ್ನೆಲೆಗೆ ಬಂದು ನಿಧಾನವಾಗಿ ಹಿಂಜರಿಯುತ್ತಿದೆ.ಇಚ್ಛಾಶಕ್ತಿಯ ಕೊರತೆ ಅಂತ ನಾವು ಬಾಯಿ ಹರಿಯುವವರೆಗೂ ಒದರುತ್ತಿದ್ದೇವೆ.ಆನೆಯೆಂಬ ಮಹಾ ಜೀವದ ಒಂದು ದಿನ ಓಡಾಟದ ದೂರ ಅಂದಾಜು ಸುಮಾರು ಅರುನೂರು ಕಿಮೀ ಅಂತ ಹೇಳುವುದಿದೆ.ಅವಕ್ಕೆ ಧಾಮ ಎಂದಾದಲ್ಲಿ ಬೇಕಾದ ಅತ್ಯಂತ ವಿಶಾಲವಾದ ಜಾಗ ಯಾವುದು ಎನ್ನುವ ಗೊಂದಲದ ಜೊತೆಗೆ ಆನೆಧಾಮದ ಸಾಧಕಬಾಧಕಗಳ ಕುರಿತೂ ಸಾಕಷ್ಟು ಗೊಂದಲಗಳಿವೆ.

    ಕಾಫಿತೋಟದಲ್ಲಿ ಸಮೃದ್ಧವಾಗಿ ಸಿಗುತ್ತಿರುವ ಪ್ರೋಟೀನ್ ಭರಿತ ಆಹಾರ ಮತ್ತು ನೀರಿನ ಮೂಲಗಳಿಂದ ಆನೆಗಳ ವಂಶಾಭಿವೃದ್ಧಿಯೂ ಈಚಿನ ದಶಕಗಳಲ್ಲಿ ವೇಗವಾಗಿ ವೃದ್ಧಿಸಿದೆ.
    ನಾಲ್ಕು ವರ್ಷದಾಚೆ ನಮ್ಮಲ್ಲಿ ನಲ್ವತ್ತೆರಡು ಆನೆಗಳಿವೆ ಎಂದು ಅಂದಾಜಿಸಲಾಗಿತ್ತು.ಈಚಿನ ಗಣತಿ ನಡೆದಿದೆಯಾ.ನಡೆದರೂ ನಿಜವಾದ ಅಂಕಿಅಂಶ ಬಿಡುಗಡೆ ಮಾಡಿದರೆ ಜನ ಭೀತರಾಗುವ ಆತಂಕದಿಂದ ಮುಚ್ಚಿಟ್ಟಿದ್ದಾರಾ ಗೊತ್ತಿಲ್ಲ.

    ಇದೆಲ್ಲದರ ನಂತರವೂ ಒಂಟಿಮನೆಗಳು ಆನೆಯ ಕಾರಣದಿಂದಾಗಿ ಸುರಕ್ಷಿತವಾಗಿದ್ದಾವೆ ಅಂತ ಖಂಡಿತವಾಗಿ ಹೇಳಬಹುದು. ಎಷ್ಟೇ ಬೆಳೆ ಹಾಳು ಮಾಡಿದರೂ ಆನೆ ಎಂದೊಡನೆ ಭಕ್ತಿಯ ಜೊತೆಗೆ ಪ್ರೀತಿಯೂ ಇದ್ದೇ ಇದೆ.ಆನೆಯೊಂದು ಕಾರಣಾಂತರಗಳಿಂದ ದೈವಾಧೀನವಾದರೆ ಅದನ್ನು ವಿಧಿಪೂರ್ವಕವಾಗಿ ಸಂಸ್ಕಾರ ಮಾಡುವುದು ನಮ್ಮಲ್ಲಿ ಸಾಮಾನ್ಯ.
    ಅಪ್ಪ ಹೇಳುವ ಹಾಗೆಯೇ ಬಹುತೇಕರು ‘ಈ ನನ್ಮಗಂದು’ ಅಂತ ಗದರುತ್ತಾರೆ ಅಷ್ಟೇ. ಆನೆಯ ಕಾರಣಕ್ಕೆ ಸಾವುನೋವು ಸಂಭವಿಸಿದಾಗ ಮನಸ್ಸು ಎಂದಿನಂತೆ ಕುಸಿಯುತ್ತದೆ.

    ಹೊಂದಾಣಿಕೆ ಬಾಳುವೆ ಮಾಡಿ ಎನ್ನುವ ಪ್ರಭುಗಳ ಹೇಳಿಕೆ ನಗೆಪಾಟಲಿನ ಜೊತೆಗೆ ಆಕ್ರೋಶಕ್ಕೂ ಕಾರಣವಾಗಿ ಆಗಾಗ ರಸ್ತೆ ತಡೆ ಚಳವಳಿ ನಡೆಯುತ್ತವೆ.ನಿಮ್ಮ ಪಾಡು ನಿಮ್ಮದು ನಮ್ಮ ಡೌಲು ನಮ್ಮದು ಅಂತಿದ್ದಾರೆ ರಾಜಕಾರಣಿಗಳು..

    ಆನೆಯಣ್ಣ ಬಂದರೂ ಹೋದರೂ ತೊಂದರೆ ಕೊಡದಂತೆ ಸಾವರಿಸಿಕೊಂಡು ಹೋಗು ಅಂತಷ್ಟೆ ಬೇಡಿಕೊಳ್ತಾ ಸದ್ಯಕ್ಕೆ ದ್ವೀಪದಂತಾಗಿರುವ ತವರಿನ ಫೋಟೋ ನೋಡ್ತಾ ಕೂತಿದ್ದೇನೆ.

    ಕೆಟ್ಟ ಗುಣಗಳನ್ನೆ ರೂಢಿಸಿಕೊಂಡವರು ಸುಲಭಕ್ಕೆ ಒಳ್ಳೆಯವರಾಗುವುದು ಕಷ್ಟ

    ಸುಮಾ ವೀಣಾ

    ತುಪ್ಪೇರಿದ ದರ್ಪಣದೊಳ್  ಪಜ್ಜಳಿಸಲಾರ್ಪುದೆ ಬಿಂಬಂ–  ಜನ್ನ ಕವಿಯ ಯಶೋಧರ ಚರಿತೆಯಿಂದ ಪ್ರಸ್ತುತ ಸಾಲನ್ನು ಆರಿಸಲಾಗಿದೆ.

    ಜನ್ನ ಕವಿ

    ಹೀನ ಹೃದಯಿಗಳು ಎಂದು ಸಾಬೀತಾದ ಮೇಲೆ ಅವರು ಸಭ್ಯರು ಎಂದು ಒಪ್ಪಿಕೊಳ್ಳುವುದು ಕಷ್ಟ. ನಿರಂತರ ಪಾಪಕೃತ್ಯಗಳಲ್ಲಿ ತೊಡಗುವವರನ್ನು  ಪುಣ್ಯಾತ್ಮರು ಎಂದು   ಒಪ್ಪುವುದು ಅಸಾಧ್ಯದ ಮಾತು.  ಅವರನ್ನು  ಒಳ್ಳೆಯವರು ಎಂದು ಬಿಂಬಿಸುವುದು ಕ್ರೂರ ಮೃಗಕ್ಕೆ  ಮುನಿಯ ವೇಷ ತೊಡಿಸಿದ ಹಾಗಾಗುತ್ತದೆ ಎಂದು ಬರೆದಿದ್ದಾರೆ. ದರ್ಪಣ ಪರಿಶುದ್ಧತೆಯ ಸಂಕೇತ  ಹಾಗೆ  ತುಪ್ಪ  ತೊಡಕಿನ ಸಂಕೇತವಾಗಿ ಇಲ್ಲಿ ಬಂದಿದೆ.

    ಅಭಯ ರುಚಿ ಮತ್ತು ಅಭಯಮತಿ ಇಬ್ಬರೂ ಮಾರಿದತ್ತನ ಮನವೊಲಿಸುವ ಸಂದರ್ಭದಲ್ಲಿ ಆಡಿದ ಮಾತುಗಳಿವು. ಮಾರಿದತ್ತನೆಂಬ ಮಂತ್ರಿ ಮಾರಿದೇವತೆಗೆ ಬಲಿಕೊಡಲು ಅಭಯರುಚಿ ಮತ್ತು ಅಭಯಮತಿ ಎಂಬ  ಇಬ್ಬರು  ಅಣ್ಣ ತಂಗಿಯರನ್ನು ಎಳೆ ತರುತ್ತಾನೆ.  ಮಾರಿದತ್ತ  ಆ ಮಕ್ಕಳನ್ನು ಅವರ ಪೂರ್ವಪರಗಳನ್ನು ಕೇಳುತ್ತಾನೆ.  ಆ ಸಂದರ್ಭದಲ್ಲಿ ಇಬ್ಬರು ಮಕ್ಕಳು ಅಧರ್ಮವನ್ನೇ ಪಾಲಿಸುತ್ತಿರುವವರಿಗೆ ನಮ್ಮ ನಿರ್ಮಲವಾದ ಚರಿತ್ರೆ ರುಚಿಸುವುದಿಲ್ಲ.  ಗುಣಗಳು ಅನ್ನುವ  ರತ್ನದ ಆಭರಣಗಳು ಕಟ್ಟ  ಅರಸರಿಗೆ ಸೊಗಸವು  ಅದು  ತುಪ್ಪ ಸವರಿದ ಕನ್ನಡಿಯಲ್ಲಿ ಪ್ರತಿಬಿಂಬವನ್ನು   ನೋಡುವ ವ್ಯರ್ಥ ಪ್ರಯತ್ನದಂತೆ ಎನ್ನುತ್ತಾನೆ.

     ಜೈವಿಕ ಗುರುತನ್ನು ಕಳೆದು ನಾವು ಇನ್ಯಾವುದೇ ವೇಷ ಹಾಕಿಕೊಂಡರೂ ಅದು ತಾತ್ಕಾಲಿಕವೇ.   ಹಾಗೆ   ಧರಿಸುವ ವೇಷ    ಅಶಾಶ್ವತ. ಹಾಗೆ ಮೂಲತಃ ಕೆಟ್ಟ ಗುಣವನ್ನು ಹೊಂದಿರುವವರು ಪ್ರಾಯಶ್ಚಿತ್ತ ಮಾಡಿಕೊಳ್ಳದೆ ಒಳ್ಳೆಯವರು ಎಂದು ನಟಿಸುವುದು ಮೇಲ್ನೋಟಕ್ಕೆ ಬೇಗ ತಿಳಿಯುತ್ತದೆ. 

    ಷಡ್ರಸಾನ್ನವನ್ನು   ತಿಂದರೂ ಉರ ಹಂದಿ ಹೊಲಸು ಕಂಡಾಗ   ಜಿಗಿದು ತನ್ನ ಮೂಲತನವನ್ನು ಅದು ತೋರಿಸುತ್ತದೆ ಅದು ಅದರ ಗುಣ ಬದಲಾವಣೆ ಮಾಡಲು ಸಾದ್ಯವಿಲ್ಲ.  ಅಂತೆಯೇ   ಕೆಟ್ಟ ಗುಣಗಳನ್ನೆ ರೂಢಿಸಿಕೊಂಡವರು ಸುಲಭಕ್ಕೆ ಒಳ್ಳೆಯವರಾಗುವುದು ಕಷ್ಟ  ಎಂಬುದನ್ನು . “ತುಪ್ಪೇರಿದ ದರ್ಪಣದೊಳ್  ಪಜ್ಜಳಿಸಲಾರ್ಪುದೆ ಬಿಂಬಂ” ಎಂಬ ಮಾತು ಹೇಳುತ್ತದೆ.

    ಈ ಅಂಕಣದ ಹಿಂದಿನ ಸಂಚಿಕೆಗಳ ಧ್ವನಿರೂಪಕವನ್ನು ಆಲಿಸಲು ಈ ಕೆಳಗಿನ ಯೂ ಟ್ಯೂಬ್ ಲಿಂಕ್ ನ್ನು ಕ್ಲಿಕ್ ಮಾಡಿ. ಹಾಗೆಯೇ ನಮ್ಮ ಯೂ ಟ್ಯೂಬ್ ಚಾನಲ್ ಗೆ SUBSCRIBE ಆಗಿರಿ.

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    ಸರ್ಕಾರಿ ಪದವಿ, ಪಾಲಿಟೆಕ್ನಿಕ್, ಎಂಜಿನಿಯರಿಂಗ್ ಕಾಲೇಜುಗಳಿಗೆ ಆರ್ಥಿಕ ಸ್ವಾಯತ್ತತೆ; ವಿದ್ಯಾರ್ಥಿಗಳ ಶುಲ್ಕ ಆಯಾ ಕಾಲೇಜುಗಳ ಶೈಕ್ಷಣಿಕ ಅಭಿವೃದ್ಧಿಗೆ ಮೀಸಲು

    BENGALURU JULY 17

    ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಯಡಿ ಬರುವ 430 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳು, 91 ಪಾಲಿಟೆಕ್ನಿಕ್‌ಗಳು ಮತ್ತು 14 ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಸಂಗ್ರಹವಾಗುವ ಸರಕಾರಿ ನಿಗದಿತ ನಾನಾ ಶುಲ್ಕಗಳನ್ನು ಆಯಾ ಕಾಲೇಜುಗಳ ಶೈಕ್ಷಣಿಕ ಅಭಿವೃದ್ಧಿಗೆ ಬಳಸಿಕೊಳ್ಳಲು ಅನುವು ನೀಡಿ, ಆದೇಶ ಹೊರಡಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

    ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ ಸ್ವಾಯತ್ತತೆ ನೀಡಬೇಕು ಮತ್ತು ಈ ಮೂಲಕ ಆಯಾಯ ಸಂಸ್ಥೆಗಳು ಸುಗಮವಾಗಿ ಸಂಪನ್ಮೂಲ ಕ್ರೋಡೀಕರಣ ಮಾಡಿಕೊಳ್ಳಲು ಅವಕಾಶ ನೀಡಬೇಕೆನ್ನುವುದು ಸರಕಾರದ ಆಶಯವಾಗಿದೆ. ಹೀಗಾಗಿ, ಸರ್ಕಾರಿ ಶುಲ್ಕಗಳ ಸದ್ಬಳಕೆಗೆ ಕ್ರೋಡೀಕೃತ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಇದು ಈ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಲಿದೆ’ ಎಂದಿದ್ದಾರೆ.

    ಇದಕ್ಕಾಗಿ ಮೇಲ್ಕಂಡ ಸಂಸ್ಥೆಗಳ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ಸಮಿತಿಗಳು ಅಸ್ತಿತ್ವಕ್ಕೆ ಬರಲಿವೆ. ಇದರಲ್ಲಿ ಐಕ್ಯೂಎಸಿ ಸಂಚಾಲಕರು, ನಿಕಾಯವಾರು ಹಿರಿಯ ಉಪನ್ಯಾಸಕರು, ಅಧೀಕ್ಷಕರು, ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ತಲಾ ಇಬ್ಬರು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಸದಸ್ಯರಾಗಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.

    ಈ ಸಮಿತಿಗಳು ಆಯಾ ಶೈಕ್ಷಣಿಕ ವರ್ಷದ ಜೂನ್‌ನಲ್ಲಿ ರಚನೆಗೊಂಡು, ಆಗಸ್ಟ್‌ ಹೊತ್ತಿಗೆ ಈ ಶುಲ್ಕ ಬಳಕೆಗೆ ಸಂಬಂಧಿಸಿ ವಾರ್ಷಿಕ ಸಾಂಸ್ಥಿಕ ಅಭಿವೃದ್ಧಿ ಯೋಜನೆ ಮತ್ತು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ, ಅನುಮೋದನೆಗಾಗಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಆಯುಕ್ತರ ಕಚೇರಿಗೆ ಕಳಿಸುವುದು ಕಡ್ಡಾಯವಾಗಿದೆ. ಹೀಗೆ ಬಂದ ಪ್ರಸ್ತಾವನೆಗಳನ್ನು ಪರಿಶೀಲಿಸಿ, ಆಯುಕ್ತರ ಕಚೇರಿಯು ಸೆಪ್ಟೆಂಬರ್‍‌ ಹೊತ್ತಿಗೆ ಒಪ್ಪಿಗೆ ನೀಡಲಿವೆ. ಇದಕ್ಕಾಗಿ ಈ ಹಂತದಲ್ಲೂ ಇಲಾಖೆಯ ನಿರ್ದೇಶಕರ ಅಧ್ಯಕ್ಷತೆಯ ಒಂದು ಸಮಿತಿ ಕಾರ್ಯ ನಿರ್ವಹಿಸಲಿದೆ ಎಂದು ಅವರು ವಿವರಿಸಿದ್ದಾರೆ.

    ಈ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾತಿ, ಬೋಧನೆ, ಪ್ರಯೋಗಾಲಯ, ವೈದ್ಯಕೀಯ ತಪಾಸಣೆ, ವರ್ಗಾವಣೆ ಪತ್ರ, ಪ್ರಮಾಣಪತ್ರ, ಶಿಕ್ಷಕರ ಕಲ್ಯಾಣ ನಿಧಿ, ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಸ್ಕೌಟ್ಸ್ ಮತ್ತು ಗೈಡ್ಸ್, ರೆಡ್‌ಕ್ರಾಸ್, ಎನ್‌ಎಸ್‌ಎಸ್‌, ಗ್ರಂಥಾಲಯ ಬಳಕೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಕಾಲೇಜು ಮ್ಯಾಗಜೈನ್, ಪರಿಚಯ ಪುಸ್ತಕ ಮತ್ತು ಗುರುತಿನ ಚೀಟಿ ಶುಲ್ಕಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಹೊಸ ಆದೇಶದ ಪ್ರಕಾರ, ಈ ಶುಲ್ಕಗಳ ಹೆಚ್ಚಿನ ಭಾಗವನ್ನು ಆಯಾ ಕಾಲೇಜುಗಳಿಗೇ ಕೊಡಲಾಗುವುದು. ಈ ನಿಧಿಯನ್ನು ಬಳಸಿಕೊಂಡು ಕಟ್ಟಡಗಳ ನಿರ್ವಹಣೆ, ದುರಸ್ತಿ, ಗ್ರಂಥಾಲಯಕ್ಕೆ ಪುಸ್ತಕ ಮತ್ತು ನಿಯತಕಾಲಿಕೆಗಳ ಖರೀದಿ, ಪ್ರಯೋಗಾಲಯಗಳ ಉಪಕರಣ, ಇಂಟರ್‍‌ನೆಟ್‌, ಕಚೇರಿ ವೆಚ್ಚ, ಎನ್‌ಎಸ್‌ಎಸ್‌ ಘಟಕ ಸ್ಥಾಪನೆ, ಕಂಪ್ಯೂಟರ್‍‌, ಸಿ.ಸಿ. ಕ್ಯಾಮರಾ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮುಂತಾದವುಗಳಿಗೆ ಬಳಸಿಕೊಳ್ಳಬಹುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

    ಹೊಸ ನಿಯಮದ ಪ್ರಕಾರ, ಆಯಾ ಕಾಲೇಜುಗಳು ಈ ರೀತಿಯಲ್ಲಿ ಸಂಗ್ರಹವಾಗಿರುವ ನಿಧಿ ಮತ್ತು ಅವುಗಳ ಖರ್ಚುವೆಚ್ಚದ ರೀತಿಗಳನ್ನು ತಮ್ಮ ಸೂಚನಾ ಫಲಕ ಮತ್ತು ವೆಬ್‌ಸೈಟ್‌ಗಳಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು. ಜೊತೆಗೆ, ಎಲ್ಲ ರೀತಿಯ ವ್ಯವಹಾರಗಳನ್ನೂ ಆನ್‌ಲೈನ್‌ ಮೂಲಕ ಮಾತ್ರವೇ ಮಾಡಬೇಕು. ಇದರಲ್ಲಿ ಭೌತಿಕ ಸ್ವರೂಪದ ವ್ಯವಹಾರಗಳಿಗೆ ಅವಕಾಶ ಇರುವುದಿಲ್ಲ ಎಂದು ಅಶ್ವತ್ಥನಾರಾಯಣ ತಿಳಿಸಿದ್ದಾರೆ.

    ಬ್ಯಾಂಕುಗಳ ಕ್ಲರಿಕಲ್ ಹುದ್ದೆಗೆ ಅರ್ಜಿ ಆಹ್ವಾನ

    ಬ್ಯಾಂಕ್  ನಲ್ಲಿ ಕ್ಲರ್ಕ್ ಹುದ್ದೆಯ ಕನಸು ಹೊತ್ತವರಿಗೆ ಇಲ್ಲಿದೆ ಮತ್ತೊಂದು ಸಿಹಿ ಸುದ್ದಿ. ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ ದೇಶದ 11 ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ  ಖಾಲಿ ಇರುವ  ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಸರಿ ಸುಮಾರು  6,035 ಹುದ್ದೆಗಳಿಗೆ  ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆ ನಡೆಸಲು ತೀರ್ಮಾನಿಸಿದೆ.

    2019-20 ರಲ್ಲಿ ಐಬಿಪಿಎಸ್, ನೇಮಕಕ್ಕೆ ಅಧಿಸೂಚನೆ ಹೊರಡಿಸಿದಾಗ 12,075 ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು. 2020-21 ರಲ್ಲಿ 2557 ಹುದ್ದೆಗಳಿಗೆ ಪರೀಕ್ಷೆ ನಡೆಸಿದರೆ 2021-22 ರಲ್ಲಿ 7,855 ಹುದ್ದೆಗಳಿಗೆ  ನೇಮಕಾತಿ  ಅಧಿಸೂಚನೆ ಹೊರಡಿಸಿತು. ಇದೀಗ 2022-23 ರಲ್ಲಿ 6,035 ಹುದ್ದೆಗಳಿಗೆ ನೇಮಕ ನಡೆಸಲು ಅಧಿಸೂಚನೆ ಹೊರಡಿಸಲಾಗಿದೆ. ಇದರಿಂದ ವರ್ಷದಿಂದ ವರ್ಷಕ್ಕೆ ನೇಮಕಾತಿಯಲ್ಲಿ ಇಳಿಮುಖ ವಾಗಿರೋದನ್ನ ಸ್ಪಷ್ಟವಾಗಿ ಕಾಣಬಹುದು.

    ರಾಜ್ಯದ  12 ಜಿಲ್ಲಾ ಕೇಂದ್ರಗಳಲ್ಲಿ ಪೂರ್ವಭಾವಿ ಪರೀಕ್ಷೆ ಮತ್ತು 3 ಜಿಲ್ಲಾ ಕೇಂದ್ರಗಳಲ್ಲಿ ಮುಖ್ಯ ಪರೀಕ್ಷೆ ಆನ್ ಲೈನ್ ನಲ್ಲಿ ನಡೆಯಲಿದೆ.

    ಯಾವ ಬ್ಯಾಂಕಿನಲ್ಲಿ ಎಷ್ಟು ಹುದ್ದೆ?

    ಕೆನರಾ ಬ್ಯಾಂಕ್ 140,  ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 156, ಯೂಕೋ ಬ್ಯಾಂಕ್ 13, ಪಂಜಾಬ್ ಎಂಡ್ ಸಿಂಧ ಬ್ಯಾಂಕ್ 2, ಸೆಂಟ್ರಲ್ ಬ್ಯಾಂಕ್ ಆಪ್ ಇಂಡಿಯಾ 36, ಬ್ಯಾಂಕ್ ಆಫ್ ಇಂಡಿಯಾ 6, ಪಂಜಾಬ್ ನ್ಯಾಷನಲ್ ಬ್ಯಾಂಕ್ 5, ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವುದಾಗಿ ಪ್ರಕಟಿಸಿವೆ. ಹೀಗೆ ಒಟ್ಟಾರೆ ಕರ್ನಾಟಕದಲ್ಲಿ 358 ಹುದ್ದೆಗಳಿವೆ.(ಟೇಬಲ್ ಹಾಕಿ )

    ಶೈಕ್ಷಣಿಕ ಅರ್ಹತೆ:

    ಮಾನ್ಯತೆ ಪಡೆದ ವಿಶ್ವವಿದ್ಯಾಲಯ ದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಮಾನ ಅರ್ಹತೆ. ಅಭ್ಯರ್ಥಿಯು ಕಂಪ್ಯೂಟರ್ ನಲ್ಲಿ ಕಾರ್ಯ ನಿರ್ವಹಿಸುವ ಜ್ಞಾನ ಹೊಂದಿರುವುದು ಕಡ್ಡಾಯ. ಹೀಗಾಗಿ ಕಂಪ್ಯೂಟರ್ ಕಲಿಕೆಯ ಬಗ್ಗೆ ದೃಢೀಕರಣ ಪತ್ರವನ್ನು ಕೂಡ ಅಭ್ಯರ್ಥಿಯುಹೊಂದಿರಬೇಕಾಗುತ್ತದೆ.(ಕಂಪ್ಯೂಟರ್ ಗೆ ಸಂಬಂಧಿಸಿದ ವಿಷಯದಲ್ಲಿ ಸರ್ಟಿಫಿಕೇಟ್/ ಡಿಪ್ಲೊಮಾ ಅಥವಾ ಡಿಗ್ರಿ ಪಡೆದಿರುವುದು ಅಥವಾ ಶಾಲೆ ಅಥವಾ ಕಾಲೇಜಿನಲ್ಲಿ ಕಂಪ್ಯೂಟರ್ ಅಥವಾ ಐಟಿ(InformationTechnology) ಯನ್ನು ಒಂದು ವಿಷಯವಾಗಿ ಓದಿರಬೇಕು. ಅಲ್ಲದೆ, ರಾಜ್ಯದ ಅಧಿಕೃತ ಭಾಷೆಯಲ್ಲಿ ಮಾತನಾಡುವ, ಬರೆಯುವ ಸಾಮರ್ಥ್ಯ ಹೊಂದಿರಬೇಕು)

    ಗಮನಿಸಿ: ಪದವಿ ಪೂರ್ಣಗೊಳಿಸಿದವರು ಮಾತ್ರ ಅರ್ಜಿ ಸಲ್ಲಿಸಬಹುದು. ಪದವಿಯಲ್ಲಿ ಪಡೆದ ಶೇಕಡಾವಾರು ಅಂಕಗಳನ್ನು ಅರ್ಜಿಯಲ್ಲಿ ಭರ್ತಿ ಮಾಡಬೇಕಾಗಿರುತ್ತದೆ.

    ಒಂದು ವೇಳೆ ಆಯ್ಕೆಯಾದಲ್ಲಿ, ಅಂತಹ ಅಭ್ಯರ್ಥಿಗಳು 21 ನೇ ಜುಲೈ 2022 ಅಥವಾ ಅದಕ್ಕಿಂತ ಮೊದಲು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದಕ್ಕೆ ಪುರಾವೆ ಗಳನ್ನು ಒದಗಿಸಬೇಕು.

    ಅರ್ಜಿ ಸಲ್ಲಿಕೆ ವಿಧಾನ: ಆನ್ ಲೈನ್.

    ಅರ್ಜಿ ಸಲ್ಲಿಕೆಯ  ದಿನಾಂಕ: ಜುಲೈ  1 ರಿಂದ ಜುಲೈ 21 ರವರೆಗೆ.

    ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನಿಮ್ಮ ಆಯ್ಕೆಯ ಬ್ಯಾಂಕಿನ ಆದ್ಯತೆಯ ಆದೇಶವನ್ನು ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಳವಡಿಸಲಾಗಿದೆ. ಅಭ್ಯರ್ಥಿಗಳು ಈ ಹಂತದಲ್ಲಿ ಅವರ ಬ್ಯಾಂಕ್ ಗಳ ಆದ್ಯತೆಯ ಕ್ರಮವನ್ನು ಅಗತ್ಯವಾಗಿ ಸೂಚಿಸಬೇಕು.

    ಯಾವ್ಯಾವ ಬ್ಯಾಂಕ್ ಗಳಲ್ಲಿ ಎಷ್ಟೆಷ್ಟು ಹುದ್ದೆಗಳಿವೆ ಹಾಗೂ ನಮ್ಮ ರಾಜ್ಯದಲ್ಲಿ ಆ ಬ್ಯಾಂಕ್ ಗಳ ಶಾಖೆಗಳಿವೆಯಾ ಎಂಬುದರ ಮೇಲೆ ನಿಮ್ಮ ಆದ್ಯತೆಯ ಆಯ್ಕೆ ಇರಲಿ. ಒಮ್ಮೆ ನೀವು ಆಯ್ಕೆಯಾದರೆ ಬ್ಯಾಂಕ ಬದಲಾವಣೆಗೆ/ಸ್ಥಳ ಬದಲಾವಣೆ ಗೆ  ಯಾವುದೇ ವಿನಂತಿಯನ್ನು ನಂತರದ ದಿನಗಳಲ್ಲಿ ಪರಿಗಣಿಸಲಾಗುವುದಿಲ್ಲ.

    ಕೈಬರಹದ ಘೋಷಣೆಯ ಪಠ್ಯ ಹೀಗಿದೆ-“ನಾನು,_______ (ಅಭ್ಯರ್ಥಿಯ ಹೆಸರು),ಈ ಮೂಲಕ ನಾನು ಅರ್ಜಿಯಲ್ಲಿ ಸಲ್ಲಿಸಿದ ಎಲ್ಲಾ ಮಾಹಿತಿಯು ಸರಿಯಾಗಿದೆ, ನಿಜ ಮತ್ತು ಮಾನ್ಯವಾಗಿದೆ ಎಂದು ಘೋಷಿಸುತ್ತೇನೆ. ಅಗತ್ಯವಿದ್ದಾಗ ನಾನು ಪೂರಕ ದಾಖಲೆಗಳನ್ನು ಪ್ರಸ್ತುತಪಡಿಸುತ್ತೇನೆ.”

    ಮೇಲೆ ತಿಳಿಸಿದ ಕೈ ಲಿಖಿತ ಘೋಷಣೆಯು ಅಭ್ಯರ್ಥಿಯ ಕೈ ಬರಹದಲ್ಲಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಇರಬೇಕು ಮತ್ತು ಕ್ಯಾಪಿಟಲ್ ಲೆಟರ್ಸ್‌ನಲ್ಲಿ ಇರಬಾರದು. ಇದನ್ನು ಬೇರೆಯವರು ಅಥವಾ ಬೇರೆ ಯಾವುದೇ ಭಾಷೆಯಲ್ಲಿ ಬರೆದಿದ್ದರೆ, ಅರ್ಜಿಯನ್ನು ಅಮಾನ್ಯವೆಂದು ಪರಿಗಣಿಸಲಾಗುತ್ತದೆ. ಕ್ಯಾಪಿಟಲ್ ಲೆಟರಗಳಲ್ಲಿ ಹಾಕಿದ ಸಹಿಯನ್ನು ಸ್ವೀಕರಿಸಲಾಗುವುದಿಲ್ಲ. ಎಡ ಹೆಬ್ಬೆರಳಿನ ಗುರುತು ಸರಿಯಾಗಿ ಸ್ಕ್ಯಾನ್ ಮಾಡಬೇಕು ಮತ್ತು ಮಸುಕಾಗಿರಬಾರದು.

    ಆಯ್ಕೆ ಪ್ರಕ್ರಿಯೆಯ ಹಂತದಲ್ಲಿ ಅಥವಾ ಅಪಾಯಿಂಟ್‌ಮೆಂಟ್‌ನ ನಂತರ ನಿಮ್ಮ ಕೈಬರಹದ ಘೋಷಣೆ ಹಾಗೂ ನಿಮ್ಮ ಕೈಬರಹದಲ್ಲಿ  ಭಿನ್ನವಾಗಿರುವುದು ತಜ್ಞರ ವಿಶ್ಲೇಷಣೆಯಲ್ಲಿ ಕಂಡುಬಂದರೆ, ಅಭ್ಯರ್ಥಿಯ ಉಮೇದುವಾರಿಕೆಯನ್ನ ರದ್ದುಗೊಳಿಸಲಾಗುವುದು. ಹೀಗಾಗಿ ಅರ್ಜಿ ಸಲ್ಲಿಸುವ ಹಂತದಲ್ಲಿಯೇ ಬಹಳ ಎಚ್ಚರಿಕೆಯಿಂದ ಅರ್ಜಿ ಸಲ್ಲಿಸುವುದು ಒಳಿತು.

    ಪರೀಕ್ಷಾ ಪೂರ್ವ ತರಬೇತಿ:

    ಐಬಿಪಿಎಸ್ ಎಸ್ ಸಿ/ಎಸ್ ಟಿ, ಅಲ್ಪಸಂಖ್ಯಾತ ಅಭ್ಯರ್ಥಿಗಳು ಮಾಜಿ ಸೈನಿಕರು ವಿಕಲಚೇತನ ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ನೀಡಲಿದೆ. ತರಬೇತಿ ಪಡೆಯುವ ಅಭ್ಯರ್ಥಿಗಳು ಆನ್‌ ಲೈನ್ ನಲ್ಲಿಅರ್ಜಿ ಸಲ್ಲಿಸುವಾಗಲೇ ತರಬೇತಿ ಪಡೆಯುವ ಬಗ್ಗೆ ಅದಕ್ಕಾಗಿ ಮೀಸಲಿಟ್ಟ ಕಾಲಂನಲ್ಲಿ ನಮೂದಿಸಬೇಕು,ತರಬೇತಿ ಸ್ಥಳದ ಖರ್ಚು ವೆಚ್ಚಗಳನ್ನು ಹಾಗೂ ಪ್ರಯಾಣದ ಖರ್ಚು ವೆಚ್ಚವನ್ನು ಅಭ್ಯರ್ಥಿಗಳ ಭರಿಸಬೇಕಾಗುತ್ತದೆ.

    ಪರೀಕ್ಷಾ ಪ್ರಕ್ರಿಯೆ:

    ಮೊದಲ ಹಂತ: ಆನ್ಲೈನ್ ಪೂರ್ವಭಾವಿ ಪರೀಕ್ಷೆಸೆಪ್ಟೆಂಬರ್ 2022

    ಎರಡನೇ ಹಂತ: ಆನ್ಲೈನ್ ಮುಖ್ಯ ಪರೀಕ್ಷೆಸೆಪ್ಟೆಂಬರ್ಅಕ್ಟೋಬರ್, 2022

    ವಯೋಮಿತಿ:

    01.07.2022 ಕ್ಕೆ, 20 ವರ್ಷಕ್ಕಿಂತ ಕಡಿಮೆ ಇರಬಾರದು. ಮತ್ತು 1.07.2022 ಕ್ಕೆ 28 ವರ್ಷಗಳಿಗಿಂತ ಹೆಚ್ಚಿರಬಾರದು.ಅಂದರೆ 20 ವರ್ಷದಿಂದ 28 ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಂದರೆ ಅಭ್ಯರ್ಥಿಗಳು 02.07.1994 ಕ್ಕಿಂತ ಮುಂಚಿತವಾಗಿ ಮತ್ತು 01.07.2002 ಕ್ಕಿಂತ ನಂತರ ಜನಿಸಿರಬಾರದು. (ಎರಡೂ ದಿನಾಂಕಗಳು ಒಳಗೊಂಡಂತೆ)

    ಸರಕಾರದ ನಿಯಮದಂತೆ ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ವಿಕಲಚೇತನರಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

    ಶುಲ್ಕಪಾವತಿ:

    ನೋಂದಣಿ ನಂತರ ಅಭ್ಯರ್ಥಿಗಳು ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಇಂಟರ್ನೆಟ್ ಬ್ಯಾಂಕಿಂಗ್ ಬಳಸಿ ಆನ್‌ಲೈನ್ ಮೋಡ್ ಮೂಲಕ ಅಗತ್ಯವಾದ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

    ಅರ್ಜಿ ಶುಲ್ಕ:

    ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 850 ರೂ. ಹಾಗೂ ಎಸ್‌ಸಿ/ಎಸ್‌ಟಿ/ವಿಕಲಚೇತನರು/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 175 ರೂ.ಶುಲ್ಕ ನಿಗದಿಪಡಿಸಲಾಗಿದೆ. ಬ್ಯಾಂಕ್ ಸೇವಾ ಶುಲ್ಕ ಮತ್ತು  ಇಂಟಿಮೇಷನ್ ಫೀ ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ. ಆನ್‌ ಲೈನ್ ಮೂಲಕ ಮಾತ್ರ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ.

    ಹೆಚ್ಚಿನಮಾಹಿತಿಗೆವೆಬ್: www.ibps.in ಭೇಟಿ ನೀಬಹುದು.

    ಅಣಬೆಯ ರುಚಿ ತಿಂದವರೇ ಬಲ್ಲರು

    ಆಷಾಡದ ಮಳೆಗೆ ಬಿಡುವು ಕೊಡುವ ಉಮೇದಿರುವುದಿಲ್ಲ.ಜೋ ಎನ್ನುವುದನ್ನು ಹೊರತುಪಡಿಸಿದರೆ ಜೀರುಂಡೆಗಳ ಜೀಗುಟ್ಟುವಿಕೆ ಮಾತ್ರ ಸದ್ಯ ನನ್ನ ಮನೆ ಸುತ್ತ ಕೇಳ್ತಿರೋ ಸದ್ದು.ಹೊರಗೆ ಕಾಲಿಟ್ಟರೆ ಜಾರಿಕೆ.ಮಳೆ ಶುರುವಾಗಿ ಇಪ್ಪತ್ತು ದಿನ ಅಯ್ತು. ಅಂಗಳದಲ್ಲಿ ಪಾಚಿ ಬೆಳೆದು ಹಸಿರುಗಟ್ಟಿಯಾಗಿದೆ.ಇಷ್ಟು ಸಣ್ಣ ಅವಧಿಯಲ್ಲಿ ಜೀವ ಜಿನುಗುವುದು ನಂಗೆ ಯಾವತ್ತಿಗೂ ಅಚ್ಚರಿಯೇ.

    ಅಂಗಳ ದಾಟಿ ಆಚೆಗೆ ಹೋದರೆ ಅಣುವಗಲದ ಎಲೆ ಹರವಿಕೊಂಡ ಧಿಮಾಕಿನ ಪುಟಾಣಿ ಸಸಿಗಳು ‘ಹೆಂಗೆ ನಾವು’ ಅಂತಿದ್ದಾವೆ !ಕರಗಿದ ಮರದ ಬೊಡ್ಡೆಯ ಮೇಲೆಲ್ಲ ಮೊಲ್ಲೆ ಹೂಚೆಲ್ಲಿದಂತೆ ಅಣಬೆ! ಅವು ತಿನ್ನುವ ಅಣಬೆಗಳಾ ಕಹಿ ಜಾತಿಯವಾ ನಂಗೊಂದೂ ಗೊತ್ತಾಗಲ್ಲ. ಕೆಲಸದವರು ಬಂದಾಗ ಮಾತ್ರ ‘ಯೇ ಎಷ್ಟ್ ಸರ್ತಿ ಹೇಳ್ಕೊಟ್ರು ನಿಮಗ ತಿಳಿಯಕಿಲ್ಲ ಹೋಗತ್ಲಗಿ’ ಅಂತ ಹುಸಿ ಸಿಟ್ಟು ತೋರಿಸ್ತಾರೆ.

    ಅಮ್ಮ ಚಿಕ್ಕಂದಿನಿಂದಲೂ ಹೇಳಿಕೊಟ್ಟ ಪ್ರಕಾರ ‘ಅಣಬೆ ಮುಟ್ಟುವುದು ಉಣ್ಣುವುದು ಎರಡೂ ಮಾಂಸ ತಿಂದ ಹಾಗೆ’. ಇಷ್ಟು ದೊಡ್ಡವಳಾಗಿ(?) ಅಷ್ಟಿಷ್ಟು ಓದಿಕೊಂಡು ಅಣಬೆಯೂ ಸಾಮಾನ್ಯ ಸಸ್ಯ ಜಾತಿಗೆ ಸೇರಿದ್ದು,ಪತ್ರ ಹರಿತ್ತು ಇರುವುದಿಲ್ಲ ಅಷ್ಟೇ ಅಂತ ಗೊತ್ತಾದ ಮೇಲೂ ಅಣಬೆಯನ್ನು ಮುಟ್ಟುವಾಗ ತುಸು ಹಿಂಜರಿಕೆ. ಮನೆಯ ಉಳಿದವರೆಲ್ಲರೂ ಅಮ್ಮ ಕಲಿಸಿದ್ದನ್ನು ಮೀರಿ ಅಣಬೆಯ ಜೊತೆಗೆ ಮೊಟ್ಟೆ ಗಿಟ್ಟೆ ತಿನ್ನುವುದನ್ನು ಸಲೀಸು ಮಾಡಿಕೊಂಡರಾದರೂ‌ ನಂಗೆ ಅದಿನ್ನೂ ಒಗ್ಗಿಲ್ಲ.

    ಅಪ್ಪ ಮಾತ್ರ ಮಳೆಗಾಲ ಬಂತು ಅಂದರೆ ಅಮ್ಮನ ಈ ಕಂತೆ ಪುರಾಣಗಳನ್ನೆಲ್ಲ ಟ್ರಂಕಿನೊಳಗಿಟ್ಟು ಪ್ರತಿವರ್ಷವೂ ಅಣಬೆ ಹುಟ್ಟುವ ಅದೇ ಜಾಗವನ್ನು ಗುರುತಿಟ್ಟುಕೊಂಡು ಅವು ಅರಳುವ ಮುನ್ನ ಹೂವಿನಷ್ಟೇ ಜೋಪಾನವಾಗಿ ಬಿಡಿಸಿಕೊಂಡು ತರ್ತಾರೆ.ತಂದದನ್ನು ಅಮ್ಮ ಹಾಗೆಲ್ಲ ಒಳಗಿಡಲಿಕ್ಕೆ ಬಿಡೋರಲ್ಲ.ಹಿಂದುಗಡೆಯ ಕಾಯಿ ಸುರಿಯುವ ರೂಮಿನಲ್ಲಿ ಒಂದು ಬಟ್ಟೆ ಹಾಸಿ ಅದರಲ್ಲಿ ಸೋಸಿಕೊಳ್ಳಿ ಅಂತ ಆಜ್ಞೆ ಬರ್ತದೆ.ಅಣಬೆ ಸೋಸುವಾಗಿನ ಅಪ್ಪನ ಏಕಾಗ್ರತೆಯನ್ನು ನೋಡಬೇಕು.

    ಧ್ಯಾನಸ್ಥ!

    ನಡುನಡುವೆ ‘ಎಳೆ ಮಕ್ಳಂಗೆ ನೋಡು’ ಎಂಬೋ ಉವಾಚ.ಅಣಬೆಯ ಕಾಲು.. ಹೂವು ಎರಡೂ ಮುಕ್ಕಾಗದಂತೆ ಮೆತ್ತಗೆ ಕೈಗೆತ್ತಿಕೊಂಡು ಒಂದೊಂದನ್ನೇ ನೋಡಿ ಹುಳು ಹುಪ್ಪಡಿ ಇದೆಯಾ ಸೋಸಿ ಬೆಚ್ಚಗಿನ ನೀರಿನಲ್ಲಿ ತೊಳೆದು ಸೋರಿಡ್ತಾರೆ.

    ಅಮ್ಮ ಅಷ್ಟರಲ್ಲಿ ಒಗ್ಗರಣೆಗೆ ಈರುಳ್ಳಿ ಹಸೀ ಮೆಣಶಿನಕಾಯಿ ಹೆಚ್ಚಿ ಮೊಟ್ಟೆ ಮಾಡಿಕೊಳ್ಳುವ ಪಾತ್ರೆಯನ್ನೂ ಕೊಟ್ಟು ಹೊರಕೋಣೆಯಲ್ಲಿರುವ ಸ್ಟೌವು ಹಚ್ಚಿಕೊಡ್ತಾರೆ.ಅಪ್ಪ ಅಣಬೆಗೆ ಒಗ್ಗರಣೆ ಹಾಕುವ ಪರಿಮಳವನ್ನು ಬರೆಯಲು ನಂಗೆ ಪದಗಳು ಒದಗುವುದಿಲ್ಲ.
    ಅದು ಇಡೀ ಮನೆಯನ್ನು ತುಂಬಿ ಎಂದೂ ಅಣಬೆ ರುಚಿ ನೋಡದ ನನ್ನ ನಾಲಿಗೆಯೂ ಸೋರಿ ರುಚಿ ನೋಡುವ ಒಮ್ಮೆ ಅಂತನಿಸದೇ ಇರಲು ಸಾಧ್ಯವೇ ಇಲ್ಲ.
    ಒಂದು ಒಂದೂವರೆ ತಾಸಿನ ಕಾರ್ಯಾಚರಣೆಯ ನಂತರ ಅಣಬೆ ಪಲ್ಯ ತಯಾರಾಗಿ ಡೈನಿಂಗ್ ಹಾಲಿಗೆ ಅಮ್ಮನ ಸಿಡಿಮಿಡಿಯೊಂದಿಗೆ ಆಗಮಿಸ್ತದೆ.ಅಷ್ಟರಲ್ಲಿ ಅಮ್ಮ ಬಿಸಿರೊಟ್ಟಿಯೋ ಚಪಾತಿಯೊ ಹಾಕಿಟ್ಟಿರ್ತಾರೆ.

    ಹೊರಗೆ ಬಯ್ದಂತೆ ನಟಿಸುವ ಅಮ್ಮನಿಗೂ ಅಪ್ಪನಿಗೆ ಆಸೆ ಬಂದಿದ್ದನ್ನು ತಿನ್ನಲಿ ಅಂತ ಒಳಗೊಂದು ಮನಸಿರ್ತದೆ ಕಾಣುತ್ತೆ. ಒಂದು ದೊಡ್ಡ ಕೈಚೀಲದ ಭರ್ತಿ ತಂದಿದ್ದ ಅಣಬೆ ಒಗ್ಗರಣೆ ಯಲ್ಲಿ ಬೆಂದು ಸಣ್ಣ ಸರ್ವಿಂಗ್ ಬೌಲು ತುಂಬುವಷ್ಟು ಮಾತ್ರ ಪಲ್ಯ ಆದದ್ದು ನೋಡಿದಾಗ ಅಪ್ಪನಿಗೆ ಇನ್ನಷ್ಟು ಸಿಕ್ಕಿದ್ರೆ ಖುಷಿಯಲ್ಲಿ ತಿಂತಿದ್ರೋ ಏನೋ ಅಂತ ಅನಿಸಿ ‘ಇಷ್ಟೇ ಇಷ್ಟು ಆಯ್ತಲ್ಲಪ್ಪಜಿ’ ಅಂತೀನಿ. ವರ್ಷಕೊಂದ್ಸರ್ತಿ ಸಿಗುವ ತರಕಾರಿನ ಒಂದು ಗುಕ್ಕೇ ಆಗಲಿ,ತಿನ್ನಬೇಕು ಎನ್ನುವುದು ಅಪ್ಪನ ವಾದ.

    ಮೊಮ್ಮಕ್ಕಳು ಮನೆಯಲ್ಲಿದ್ರೆ ಅಪ್ಪನ ಈ ಅಣಬೆ ಗ್ರೆವಿ ತಯಾರಿಕೆಗೆ ಮತ್ತಷ್ಟು ಉತ್ಸಾಹ.ನಾನೂ ತವರುಮನೆಯಲ್ಲಿದ್ದಾಗ ಒಂಚೂರು ತಿಂದು ನೋಡು ಅಂತ ಪದೇಪದೇ ಒತ್ತಾಯಿಸಿದ್ರೂ ಅದರ ಪರಿಮಳಕ್ಕೆ ಜಿಹ್ವಾರಸ ಚುರುಕಾಗಿದ್ರೂ ಅಮ್ಮನ ಚಿಕ್ಕಂದಿನ ‘ಮಾಂಸ ತಿಂದಂತೆ’ ಮಾತು ನೆನಪಾಗಿ ‘ನಂಗ್ ಬ್ಯಾಡ ನೀವು ತಿನ್ನಪ್ಪಜಿ’ ಅಂತೀನಿ.

    ಮಳೆ ಹಿಡಿದು ಇಷ್ಟು ದಿನ ಆಗಿದೆ.ಅಣಬೆಗಳೂ ಎದ್ದೂ ಅರಳಿ ಮಾಸಿಯೂ ಆಗಿರಬಹುದು. ಅಥವಾ ಮತ್ತೆಲ್ಲೋ ಹುಟ್ಟುತ್ತಲೂ ಇರಬಹುದು.ಅಪ್ಪಾಜಿಗೆ ಈ ಸರ್ತಿ ಮಳೆಗಾಲದಲ್ಲಿ ಮೊದಲಿನಂತೆ ಬೇಕು ಬೇಕಾದಲ್ಲಿ ಸುತ್ತಾಡೋ ಹಾಗಿಲ್ಲ ಅಂತ ಮಕ್ಕಳಿಂದ ಎಚ್ಚರಿಕೆ ರವಾನೆಯಾಗಿದೆ.

    ಅಪ್ಪನ ಮನೆಯಂಗಳದ ಕೊನೆಯಲ್ಲೇ ಒಂದು ರಾಶಿ ಅಣಬೆ ಹುಟ್ಟಿ ಒಂದರ್ದ ತಾಸು ಮಳೆ ಬಿಡುವು ಕೊಡಲಿ,’ಸೀಸನ್ನಿಗೊಂದ್ಸಾರಿ ಬರೋ ತಿನ್ನೋ ಪದಾರ್ಥನ ಹಂಗ್ ತಿನ್ದೆ ಇರಬಾರದು ನಾಗಮ್ಮ’ ಅಂತ ಅಮ್ಮನಿಗೆ ಕನ್ವಿನ್ಸ್ ಮಾಡಿ ಅಪ್ಪ ಮಳೆ ನಿಂತ ಸಮಯ ನೋಡ್ಕೊಂಡು ಒಂದು ಕೈಚೀಲ ಭರ್ತಿ ಅಣಬೆ ಎತ್ಕೊಂಡು ಬರಲಿ ಅಂತ ಮನಸ್ಸು ಬಯಸ್ತಿದೆ.

    ಅತೃಪ್ತ ಮನಸ್ಸು  ಎಂದಿಗೂ ಅಪಾಯಕಾರಿ

    ಸುಮಾ ವೀಣಾ

    ಕೊಲ್ಲದುದೆ ಧರ್ಮ-  ಶಿವಕೋಟ್ಯಾಚಾರ್ಯರ ವಡ್ಡಾರಾಧನೆಯ ಲಲಿತ ಘಟೆಯ ಕತೆಯಲ್ಲಿ  ಉಲ್ಲೇಖವಾಗಿರುವ ಮಾನವ ಧರ್ಮವನ್ನು ಸಾರುವ ವಾಕ್ಯವಿದು.  ಬೇಟೆಯಲ್ಲಿದ್ದ ಲಲಿತಘಟನಿಗೆ ಅಭಯಸೇನಾ ಭಟಾಚಾರ್ಯರು   ಕೊಲ್ಲದುದೆ ಧರ್ಮ ಎಂದು ಉಪದೇಶಿಸುತ್ತಾರೆ.

    ಹುಟ್ಟು ಮನುಷ್ಯನಿಗೂ ಪ್ರಾಣಿಗಳಿಗೂ ಸಸ್ಯಾವಳಿಗೂ ಒಂದೇ. ಬದುಕಲೇಬೇಕೆಂಬ ಆಸೆ ಮನುಷ್ಯ ಮಾತ್ರವಲ್ಲ ಪ್ರಾಣಿಗಳಿಗೂ ಇರುತ್ತದೆ.   ಮನುಷ್ಯ ಬುದ್ದಿಯನ್ನು,  ದೈಹಿಕ ಶ್ರಮವನ್ನು ಉಪಯೋಗಿಸಿ ಕೆಲಸ ಮಾಡುತ್ತಾನೆ ಹಾಗೆ ಪ್ರಾಣಿಗಳು ಆಕ್ರಮಣಕಾರಿಗಳಾಗುವುದು ಹೊಟ್ಟೆಗಾಗಿ ಮತ್ತು ಇತರರಿಂದ ರಕ್ಷಿಸಿಕೊಳ್ಳಲು . ಆಸೆ, ಸುಖದ ಅನ್ವೇಷಣೆಯಲ್ಲಿ  ಮನುಷ್ಯ ಪ್ರತೀ ಕ್ಷಣವೂ ಕಾಲ ಕಳೆಯುತ್ತಿರುತ್ತಾನೆ.  ಮನುಷ್ಯ  ಮನುಷ್ಯನನ್ನೆ ನಿರ್ದಾಕ್ಷಿಣ್ಯವಾಗಿ  ಕೊಲ್ಲುವ ಹಂತಕ್ಕೆ ಬಂದಿದ್ದಾನೆ. ಈ ಕಾರಣದಿಂದ ಮನುಷ್ಯ ಸಂಘಜೀವಿ  ಎನಿಸಿಕೊಂಡಿದ್ದರ ಉದ್ದೇಶ ದಿಕ್ಕು ತಪ್ಪುತ್ತಿದೆಯೇ ಅನ್ನುವ  ಭಾವ ಆವರಿಸುತ್ತದೆ.

    ಸ್ವಾರ್ಥವನ್ನು ಬಿಟ್ಟು ತನ್ನಂತೆ ಬದುಕುವ ಸಹಮಾನವರಿಗೆ  ಪರಸ್ಪರ ಸಂಚನೆಗಳಾಗದಂತೆ  ಬದುಕುವುದೆ  ಮನುಷ್ಯ ಧರ್ಮವಾಗಬೇಕು. ಪರರಿಗೋಸ್ಕರವೇ ಬದುಕಿದ ಅದೆಷ್ಟೋ  ಜನರು ಸಿದ್ಧಪುರುಷರು, ಸಾಧಕರು, ಹೋರಾಟಗಾರರು  ನಮ್ಮ ನಡುವಿದ್ದಾರೆ ಅಲ್ಲವೆ. ಇತ್ತೀಚೆಗೆ  ಇರಿದು ಕೊಲ್ಲುವ,ಗುಂಡಿಕ್ಕಿ ಕೊಲ್ಲುವ,ಹೊಡೆದು ಕೊಲ್ಲುವ   ಸುದ್ದಿಗಳು  ಹೆಚ್ಚು ಹೆಚ್ಚು ಕೇಳಿಸುತ್ತಿವೆ .  ಹೀಗೆ ಮುಂದುವರೆದರೆ ಮನುಷ್ಯಶರೀರ ಹೊತ್ತ ಮೃಗೀಯ ಸಮಾಜವಾಗಿಬಿಡುತ್ತದೆಯೋ ಏನೋ? ಸುರಕ್ಷತೆ ಅನ್ನುವುದು ಮರೀಚಿಕೆಯಾಗಿ ಬಿಡುತ್ತದೆಯೋ ಅನ್ನುವ ಪ್ರಶ್ನೆಗಳು ಕಾಡಲು ಪ್ರಾರಂಭವಾಗುತ್ತವೆ.

    ಮನುಷ್ಯ ಮನುಷ್ಯನನ್ನೆ ನಿರ್ದಾಕ್ಷಿಣ್ಯವಾಗಿ  ಕೊಲ್ಲುತ್ತಿರುವುದು ಸಾಮಾಜಿಕ ಸ್ವಾಸ್ಥ್ಯದ ಮಧುರತೆಯನ್ನು  ಹಾಳು ಮಾಡುತ್ತದೆ .ಅಲ್ಪದರಲ್ಲಿಯೇ ತೃಪ್ತಿ ಹೊಂದುವಂಥವರಾಗಬೇಕು  ಅತೃಪ್ತ ಮನಸ್ಸು  ಎಂದಿಗೂ ಅಪಾಯಕಾರಿ  ಪರರ ಜೀವ ತೆಗೆದು   ನೆಮ್ಮದಿಯ ಬದುಕು  ಬದುಕಲು ಸಾಧ್ಯವೇ ಖಂಡಿತಾ ಇಲ್ಲ ಕಾನೂನು ಕಟ್ಟಳೆಗಳಲ್ಲಿ ಬಂಧಿಯಾಗಿ ನಿತ್ಯ ಸಾವನ್ನು ಅನುಭವಿಸಬೇಕಾಗುತ್ತದೆ.  ಇಷ್ಟು ಚಂದದ ಬದುಕನ್ನು ನಾವು ಪಡೆದಿದ್ದೇವೆ ಎಂದಮೇಲೆ ಈ ಆಕ್ರಮಣಕಾರಿ ಮನಸ್ಥಿತಿ ಕೊಂದು ಬದುಕುವ ದುರಾಲೋಚನೆ ಏಕೆ ತಿಳಿಯುತ್ತಿಲ್ಲ.   ಒಂದೇ ರಸ್ತೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರು ರಸ್ತೆಯನ್ನೆ ಹಂಚಿಕೊಂಡು   ಆದಷ್ಟು ಎಚ್ಚರದಿಂದ   ಕ್ಷೇಮವಾಗಿ ಮನೆ ತಲುಪುವಂತೆ  ಈ ಬದುಕಿನ ಪ್ರಯಾಣವನ್ನು ಸುಖಾಂತ್ಯ ಮಾಡಿಕೊಳ್ಳುವುದು  ಒಂದು ಧರ್ಮವೇ ಸರಿ!

    ಈ ಅಂಕಣದ ಹಿಂದಿನ ಸಂಚಿಕೆಗಳ ಧ್ವನಿರೂಪಕವನ್ನು ಆಲಿಸಲು ಈ ಕೆಳಗಿನ ಯೂ ಟ್ಯೂಬ್ ಲಿಂಕ್ ನ್ನು ಕ್ಲಿಕ್ ಮಾಡಿ. ಹಾಗೆಯೇ ನಮ್ಮ ಯೂ ಟ್ಯೂಬ್ ಚಾನಲ್ ಗೆ SUBSCRIBE ಆಗಿರಿ.

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    error: Content is protected !!