25.1 C
Karnataka
Friday, May 22, 2026
    Home Blog Page 142

    ಮೈಸೂರು ದಸರಾ ಎಷ್ಟೊಂದು ಸುಂದರ

    ದಸರಾ ಸಂಗೀತೋತ್ಸವ ಸಂಪನ್ನ ಗೊಂಡಿದೆ ಭಾಗವಹಿಸಿದ ಎಲ್ಲರಿಗೂ ಧನ್ಯವಾದ. ಈ ಒಂಭತ್ತು ದಿನಗಳ ಸಂಗೀತ ಸಂಜೆಯನ್ನು ಮೆಲುಕುಹಾಕುತ್ತಾ ಆಯ್ದ ಗೀತೆಗಳ ಗುಚ್ಛವನ್ನು ಇಲ್ಲಿ ನೀಡುತ್ತಿದ್ದೇವೆ. ಜೊತಗೆ ಮೈಸೂರು ದಸರಾ ಎಷ್ಟೊಂದು ಸುಂದರ ಎಂದು ಬನವಾಸಿ ಬಳಗದ ಆನಂದ್ ಜಿ ಹಾಡಿರುವ ಗೀತೆಯೂ ಇದೆ.

    ಆಲಿಸಿ ಪ್ರತಿಕ್ರಿಯಿಸಿ.

    ದಸರಾ ಗೊಂಬೆಗಳ ಸುಂದರ ನೋಟ

    ಕನ್ನಡಪ್ರೆಸ್.ಕಾಮ್ ಗೊಂಬೆ ಹಬ್ಬಕ್ಕೆ ಇನ್ನು ಫೋಟೋಗಳು ಹರಿದು ಬರುತ್ತಲೇ ಇವೆ. ಇಂದಿನ ಮತ್ತು ಕೊನೆಯ ಕಂತು ಇಲ್ಲಿದೆ . ಭಾಗವಹಿಸಿದ ಎಲ್ಲರಿಗೂ ಧನ್ಯವಾದ.

    ಡಾ. ಮೇಘನಾ ಶ್ರೀರಾಮ್

    ವಿವಿ ಪುರಂ ನ ಡಾ. ಮೇಘನಾ ಶ್ರೀರಾಮ್ ಮನೆಯಲ್ಲಿ ಕೂಡಿಸಿರುವ ದಸರಾ ಗೊಂಬೆಗಳ ಆಕರ್ಷಕ ನೋಟ ಇಲ್ಲಿದೆ.

    ಭಾನು,ರಾಜರಾಜೇಶ್ವರಿ ನಗರ

    ರಾಜರಾಜೇಶ್ವರಿ ನಗರದ ಭಾನು ಅವರ ಮನೆಯಲ್ಲಿ ಕೂಡಿಸಿರುವ ಗೊಂಬೆಗಳನ್ನು ನೋಡುವುದೇ ಒಂದು ಸೊಗಸು ಅವರ ಮನೆಯ ಗೊಂಬೆ ಸಂಗ್ರಹ ಇಲ್ಲಿದೆ.

    ಭಾನು ಅರುಣ್, ರಾಜಾಜಿನಗರ

    ರಾಜಾಜಿನಗರದ ಭಾನು ಅರುಣ್ ಕುಮಾರ್ ಮನೆಯಲ್ಲಿ ಗೊಂಬೆಗಳನ್ನು ಆಕರ್ಷಕವಾಗಿ ಜೋಡಿಸಲಾಗಿದೆ . ಅದರ ಆಲ್ಬಂ ಇಲ್ಲಿದೆ.

    ಒಂದೇ ಅಂಶ ಆಧಾರಿಸಿ ಹೂಡಿಕೆ ನಿರ್ಧರಿಸುವುದು ಅಪಾಯಕರ

    ಯೆಸ್‌ಬ್ಯಾಂಕ್‌ ತನ್ನ ಸೆಪ್ಟೆಂಬರ್ ‌ತ್ರೈಮಾಸಿಕ ಅಂತ್ಯದ ಫಲಿತಾಂಶ ಪ್ರಕಟಿಸಿದ್ದು ಮೇಲ್ನೋಟಕ್ಕೆ ಉತ್ತಮವಾಗಿದ್ದು, ಬಹಳಷ್ಟು ಸಾಮಾನ್ಯರನ್ನು ಆಕರ್ಷಿಸಿ, ಈ ಬ್ಯಾಂಕ್‌ನ ಷೇರು ಖರೀದಿಸುವಂತೆ ಪ್ರೇರೇಪಿಸಿರಲೂಬಹುದು. ಕೇವಲ ಒಂದಂಶವನ್ನಾಧರಿಸಿಕೊಂಡು ಹೂಡಿಕೆಯನ್ನು ನಿರ್ಧರಿಸುವುದು ಅಪಾಯಕರ.

    ಒಂದು ಸಮಯದಲ್ಲಿ ಈ ಬ್ಯಾಂಕ್‌ ಷೇರಿನ ಬೆಲೆ ಎರಡು ವರ್ಷಗಳ ಹಿಂದಷ್ಟೆ ರೂ.395 ರ ಸಮೀಪವಿದ್ದು, 2018 ರಲ್ಲಿ ಬ್ಯಾಂಕ್‌ನ ಪ್ರವರ್ತಕರು ತಮ್ಮ ಪಾಲಿನ ಷೇರುಗಳನ್ನು ತನ್ನ ಮಕ್ಕಳಿಗೆ, ನಂತರ ಅವರ ಮಕ್ಕಳಿಗೆ ಪಾರಂಪರಿಕವಾಗಿ, ವಾರಸುದಾರರಿಗೆ ಬಳುವಳಿಯಾಗಿ, ವಜ್ರಗಳಂತೆ ಮುಂದುವರೆಸಿಕೊಂಡು ಹೋಗುತ್ತೇವೆ ಎಂದಿದ್ದರು. ಆದರೆ ಮುಂದಿನ ಎರಡೇ ವರ್ಷಗಳ ಅವಧಿಯಲ್ಲಿ ಷೇರಿನ ಬೆಲೆ ರೂ.5.5 ಕ್ಕೆ ಕುಸಿಯಿತಲ್ಲದೆ, ಎರಡು ವರ್ಷಗಳ ಹಿಂದೆ ಅಂದರೆ ಸೆಪ್ಟೆಂಬರ್‌2018 ಲ್ಲಿ ಶೇ.20 ರಷ್ಟರ ಭಾಗಿತ್ವವನ್ನು ಹೊಂದಿದ್ದ ಪ್ರವರ್ತಕರು, ಸೆಪ್ಟೆಂಬರ್‌ 2020 ರಲ್ಲಿ ಪ್ರವರ್ತಕರೇ ಇಲ್ಲದ ಪರಿಸ್ಥಿತಿಗೆ ತಲುಪಿದೆ. ಅಲ್ಲದೆ ಈ ವರ್ಷ ಮಾರ್ಚ್‌ನಲ್ಲಿ ಉಂಟಾದ ಪ್ರವರ್ತಕರ ಗೊಂದಲದ ಕಾರಣದಿಂದಾಗಿ ಕೇಂದ್ರ ಸರ್ಕಾರ, ರಿಸರ್ವ್ ‌ಬ್ಯಾಂಕ್‌ ಆಫ್‌ ಇಂಡಿಯಾಗಳೊಂದಿಗೆ ಇತರೆ ಬ್ಯಾಂಕ್‌ಗಳು ಸೇರಿ ಈ ಬ್ಯಾಂಕ್‌ನ್ನು ಪುನಶ್ಚೇತನಗೊಳಿಸುವ ಸಲುವಾಗಿ ಬಂಡವಾಳವನ್ನು ಒದಗಿಸಿವೆ.

    ಅನೇಕ ಮೊದಲುಗಳು

    ಸೆಪ್ಟೆಂಬರ್‌ ಅಂತ್ಯದ ತ್ರೈಮಾಸಿಕ ಫಲಿತಾಂಶದ ನಂತರ ಬ್ಯಾಂಕ್‌ ನ ಎಂ ಡಿ ಮತ್ತು ಸಿ ಇ ಒ ರವರು, ಬ್ಯಾಂಕ್‌ ಸಹಜತೆಯತ್ತ ಮರಳಿದ್ದು ಇನ್ನು ಬಲಿಷ್ಟವಾಗಬೇಕಿದೆ ಎಂದಿದ್ದಾರೆ. ಈ ಒಂದು ಅಭಿಪ್ರಾಯಕ್ಕೆ ಸ್ಪಂದಿಸುವ ಮುನ್ನ ಕೆಲವು ಅಂಶಗಳನ್ನು ನೆನಪಿನಲ್ಲಿಡಬೇಕು. ಯೆಸ್‌ ಬ್ಯಾಂಕ್‌ ತನ್ನ ಹೆಸರಿಗೆ ಅನೇಕ ಮೊದಲುಗಳನ್ನು ಲಗತ್ತಿಸಿಕೊಂಡಿದೆ.

    ಮೊದಲನೆಯ ಅಂಶ ಎಂದರೆ ಈ ವರ್ಷ ಮಾರ್ಚ್ ನಲ್ಲಿ ಬ್ಯಾಂಕ್‌ ಗೊಂದಲದಲ್ಲಿದ್ದಾಗ ನಿಯಂತ್ರಕರು ಹಲವಾರು ಕ್ರಮಗಳನ್ನು ಕೈಗೊಂಡರು. ಅವುಗಳಲ್ಲಿ ತಾತ್ಕಾಲಿಕ ನಿಯಂತ್ರಿತ ಹಣ ಹಿಂಪಡೆಯುವಿಕೆಯೊಂದಿಗೆ, ಪ್ರತಿಯೊಬ್ಬ ಹೂಡಿಕೆದಾರರ ಶೇ.75 ರಷ್ಟನ್ನು ಮೂರು ವರ್ಷಗಳ ವರೆಗೂ ನಿಶ್ಚಲತೆ ವಿಧಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬ್ಯಾಂಕ್‌ ಪ್ರತಿ ಷೇರಿಗೆ ರೂ.12 ರಂತೆ ಪುನ: ಷೇರು ವಿತರಿಸಿ ಬಂಡವಾಳ ಹೆಚ್ಚಿಸಿಕೊಂಡಿದೆ. ಇದಕ್ಕೂ ಮುನ್ನ ವಿಧಿಸಿದ್ದ 3 ವರ್ಷಗಳ ನಿಶ್ಚಲತೆಯನ್ನು ತೆರವುಗೊಳಿಸಿದ್ದಲ್ಲಿ ಉತ್ತಮವಾಗಿತ್ತು. ವಿಚಿತ್ರವೆಂದರೆ 12 ರೂಪಾಯಿಗಳಿಗೆ ಕೊಂಡವರ ಷೇರು ಚಲಾವಣೆಯಲ್ಲಿದೆ, ಅಧಿಕ ಬೆಲೆಯಲ್ಲಿ ಕೊಂಡವರ ಷೇರುಗಳು ಲಾಕ್‌ ಆಗಿ ನಿಶ್ಚಲವಾಗಿದೆ.

    ಎರಡನೇ ಅಂಶವೆಂದರೆ ಆರ್‌ ಬಿ ಐ ತನ್ನ ಬ್ಯಾಂಕಿಂಗ್‌ ರೆಗ್ಯುಲೇಶನ್‌ ಆಕ್ಟ್‌ 1949 ರ ಸೆಕ್ಷನ್‌ 45 ರಂತೆ ಅಧಿಕಾರ ಚಲಾಯಿಸಿ, ಈ ಬ್ಯಾಂಕ್‌ ದುರ್ಬಲವಾಗಿದ್ದು, ಮುಂದುವರೆಯಲು ಸಾಧ್ಯವಿಲ್ಲವಾದ ಕಾರಣ ಬ್ಯಾಂಕ್‌ ಸಂಗ್ರಹಿಸಿದ್ದ ರೂ.8,415 ಕೋಟಿ ಮೌಲ್ಯದ AT 1 ಬಾಂಡ್‌ ಗಳನ್ನು ಸಂಪೂರ್ಣವಾಗಿ write off ಮಾಡಿದೆ. ಈ ಕ್ರಮದಿಂದ ವಿತ್ತೀಯ ಸಂಸ್ಥೆಗಳು, ಮ್ಯೂಚುಯಲ್‌ ಫಂಡ್‌ ಗಳ ಹೂಡಿಕೆಯಲ್ಲದೆ ಬಹಳಷ್ಟು ಸಣ್ಣ ಹೂಡಿಕೆದಾರರ ಹೂಡಿಕೆಯು ಸಂಪೂರ್ಣವಾಗಿ ಶೂನ್ಯಗೊಳಿಸಿ, ಬ್ಯಾಂಕಿಂಗ್‌ ವ್ಯವಸ್ಥೆಯ ಮೇಲಿನ ನಂಬಿಕೆಯನ್ನೇ ಅಲ್ಲಾಡಿಸಿದೆ. ಇದನ್ನು ಪ್ರಶ್ನಿಸಿ ವಿತ್ತೀಯ ಸಂಸ್ಥೆಗಳು ನ್ಯಾಯಾಲಯದ ಮೆಟ್ಟಲು ಹತ್ತಿವೆ. ಇಲ್ಲಿ ಪ್ರಯತ್ನಿಸಬೇಕಾದ ಅಂಶವೆಂದರೆ ಬ್ಯಾಂಕ್‌ ಈಗ ಸಹಜತೆಯತ್ತ ಬರುತ್ತಿದೆ ಎಂದಾದರೆ write off ಮಾಡಿದ ಬಾಂಡ್‌ ಗಳನ್ನು, ಕೊನೆಪಕ್ಷ, ವೈಯಕ್ತಿಕ ಹೂಡಿಕೆದಾರರ ಬಾಂಡ್‌ ಹಣವನ್ನು ಹಿಂದಿರುಗಿಸುವ ಯೋಚನೆ ಮಾಡುವುದು ಸೂಕ್ತವೆನಿಸುತ್ತದೆ. ಕೇವಲ ಒಂದೆರಡು ಪರ್ಸೆಂಟ್‌ ಹೆಚ್ಚಿನ ಬಡ್ಡಿ ನೀಡುವ ಆಶ್ವಾಸನೆ ನೀಡಿ ಸಂಗ್ರಹಿಸಿದ ಹಣವನ್ನು ಬಡ್ಡಿ ನೀಡದಿದ್ದರೂ ಅಸಲು ಹಣವನ್ನಾದರೂ ಹಿಂದಿರುಗಿಸುವ ಪ್ರಯತ್ನದಿಂದ ಬ್ಯಾಂಕಿಂಗ್‌ ವ್ಯವಸ್ಥೆಯ ಮೇಲಿನ ನಂಬಿಕೆ ಮರಳಿ ಬರಬಹುದು.

    ಹಿಂದಿನ ಘಟನೆಗಳು

    ಜಾಗತೀಕರಣದ ನಂತರದಲ್ಲಿ ಬದಲಾದ ಪರಿಸ್ಥಿತಿಯಲ್ಲಿ ಬ್ಯಾಂಕಿಂಗ್‌ ಪದ್ಧತಿಯಲ್ಲೂ ಹಲವಾರು ಬದಲಾವಣೆಗಳು ಬಂದಿದ್ದುಂಟು. ಆದರೂ 2002 ರಲ್ಲಿ ಖಾಸಗಿ ಬ್ಯಾಂಕ್‌ ಆದ ನೆಡುಂಗಡಿ ಬ್ಯಾಂಕ್‌ ದುರ್ಬಲಗೊಂಡಾಗ ಅದನ್ನು ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ ನಲ್ಲಿ ವಿಲೀನಗೊಳಿಸಿ ಡಿಪಾಜಿಟರ್‌ ಹಿತ ಕಾಪಾಡಲಾಯಿತು.

    2004 ರಲ್ಲಿ ಗ್ಲೋಬಲ್‌ ಟ್ರಸ್ಟ್‌ ಬ್ಯಾಂಕ್‌ ದುರ್ಬಲಗೊಂಡಾಗ ಅದನ್ನು ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ ನಲ್ಲಿ ವಿಲೀನಗೊಳಿಸಿ ಠೇವಣಿದಾರರ ಹಿತ ಕಾಪಾಡಲಾಯಿತು.

    2006 ರಲ್ಲಿ ಯುನೈಟೆಡ್‌ ವೆಸ್ಟರ್ನ್ ಬ್ಯಾಂಕ್‌ ವಿಫಲಗೊಂಡಾಗ ಅದನ್ನು ಐಡಿಬಿಐ ಬ್ಯಾಂಕ್‌ ನಲ್ಲಿ ವಿಲೀನಗೊಳಿಸಿ ಠೇವಣಿದಾರರ ಹಿತ ರಕ್ಷಿಸಲಾಯಿತು.

    ಆದರೆ ಈ ಪ್ರಕರಣದಲ್ಲಿ ಷೇರುಗಳ ಚಲಾವಣೆಗೆ ತಡೆಯೊಡ್ಡಿ ಷೇರುಪೇಟೆಯ ಪ್ರಮುಖ ಆಕರ್ಷಣೆ ಅಂಶವಾದ ದಿಢೀರ್‌ ನಗದೀಕರಣ ಸೌಲಭ್ಯ (creating ready liquidity )ಕ್ಕೆ ಚ್ಯುತಿಯುಂಟಾದಂತಿದೆ ಜೊತೆಗೆ ಠೇವಣಿಯಂತೆ AT 1 ಬಾಂಡ್‌ ಹೂಡಿಕೆಯ ಮೌಲ್ಯವನ್ನು ಶೂನ್ಯಗೊಳಿಸಿದ್ದು ಸಾಂಪ್ರದಾಯಿಕ ಚಿಂತನೆಗಳಾದ ಸುರಕ್ಷತೆ, ಸುಭದ್ರತೆಗಳಿಗೆ ಧಕ್ಕೆಯಾಗಿದೆ.

    ಇಂತಹ ಪರಿಸ್ಥಿತಿಯಲ್ಲಿ ಈ ಬ್ಯಾಂಕಿಂಗ್‌ ಷೇರಿನಲ್ಲಿ ಹೂಡಿಕೆ ಮಾಡುವ ಮುನ್ನ ಎಲ್ಲಾ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಮುಂದಡಿ ಇಡುವುದು ಸೂಕ್ತ.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ದಸರಾ ಗೊಂಬೆಗಳ ಆಕರ್ಷಕ ನೋಟ

    ಕನ್ನಡಪ್ರೆಸ್.ಕಾಮ್ ಗೊಂಬೆ ಹಬಕ್ಕೆ ಗೊಂಬೆಗಳ ಚಿತ್ರಗಳು ಹರಿದು ಬರುತ್ತಲೆ ಇವೆ. ಇಂದಿನ ಗೊಂಬೆ ಮನೆ ಚಿತ್ರ ಸಂಗ್ರಹ ಇಲ್ಲಿದೆ.

    ಗಾಯಿತ್ರಿ ಶಂಕರ್ ಅವರ ಮನೆಯಲ್ಲಿ ಶ್ರೀರಾಮ ಪಟ್ಟಾಭಿಷೇಕ

    ಬೆಂಗಳೂರು ಕನಕಪುರ ರಸ್ತೆಯ ಬ್ರಿಗೇಡ್ ಅಪಾರ್ಟ್ ಮೆಂಟ್ ನಲ್ಲಿ ನೆಲೆಸಿರುವ ಗಾಯಿತ್ರಿ ಶಂಕರ್ ಹಲವಾರು ವರ್ಷಗಳಿಂದ ಗೊಂಬೆ ಕೂಡಿಸುತ್ತಾ ಬರುತ್ತಿದ್ದಾರೆ. ಈ ಬಾರಿ ಅವರ ಮನೆಯ ವಿಶೇಷ ಶ್ರೀ ರಾಮ ಪಟ್ಟಾಭಿಷೇಕ.ತಂಜಾವೂರು ಕಲೆಯಲ್ಲಿ ಸಿದ್ಧ ಹಸ್ತರಾಗಿರುವ ಗಾಯಿತ್ರಿ ತಮ್ಮ ಮನೆಯ ಗೊಂಬೆಗಳಿಗೆ ತಮ್ಮ ಕಲಾ ಸ್ಪರ್ಶ ನೀಡಿದ್ದಾರೆ.

    ಡಾ. ಸುಚೇತಾ ಅವರ ಮನೆಯ ಆಕರ್ಷಕ ಗೊಂಬೆ ನೋಟ

    ವೃತ್ತಿಯಿಂದ ದಂತ ವೈದ್ಯೆ ಆಗಿರುವ ಡಾ. ಸುಚೇತಾ ಬನಶಂಕರಿ ಮೂರನೇ ಹಂತದ ತಮ್ಮ ಮನೆಯಲ್ಲಿ ಸೊಗಸಾಗಿ ದಸರಾ ಗೊಂಬೆ ಕೂಡಿಸಿದ್ದಾರೆ. ಉತ್ತಮ ಗಾಯಕಿ ಮತ್ತು ಭರತನಾಟ್ಯ ಕಲಾವಿದೆಯೂ ಆಗಿರುವ ಡಾ. ಸುಚೇತಾ ಅವರ ಮನೆಯ ಗೊಂಬೆಗಳನ್ನು ನೋಡುವುದೇ ಸೊಗಸು. ಅವರ ಮನೆಯ ಗೊಂಬೆ ಆಲ್ಬಂ ಇಲ್ಲಿದೆ.

    ಶ್ರೀ ಚಾಮುಂಡೇಶ್ವರಿ ಪಾಲಯ ಮಾಂ

    ಇಂದು ದಸರಾ ಸಂಗೀತೋತ್ಸವದ ಒಂಭತ್ತನೇ ದಿನ. ಇಂದಿನ ಸಂಗೀತ ಕಚೇರಿಯನ್ನು ಮಕ್ಕಳು ನಡೆಸಿಕೊಟ್ಟಿದ್ದಾರೆ. ಮಕ್ಕಳ ಬಾಯಿಂದ ದೇವಿ ಸ್ತುತಿಯನ್ನು ಕೇಳುವುದೇ ಆನಂದ. ಮಕ್ಕಳು ಹೇಗೆ ಹಾಡಿದರು ಸೊಗಸೇ. ಇಂದಿನ ಕಛೇರಿಯಲ್ಲಿ ದೂರದ ಅಮೆರಿಕದಿಂದಲೂ ಮಕ್ಕಳು ಭಾಗವಹಿಸಿದ್ದಾರೆ.

    ಶ್ರೇಯಾ ಮುದಲಗಿ ಅವರ ಗಣೇಶ ಸ್ತುತಿಯಿಂದ ಆರಂಭವಾಗುವ ಕಛೇರಿ ಶ್ರೇಯಾ ವಿನೋದ್ ಅವರ ಜಯ ಜಯ ದುರ್ಗೆ ಜೈ ಭವಾನಿಯ ಮೂಲಕ ಮುಂದುವರಿಯುತ್ತದೆ. ಇದಾದ ನಂತರ ಪವನ್, ಪದುಮನಾಭನನ್ನು ಪ್ರಾರ್ಥಿಸಿದರೆ ಎಸ್ . ವರ್ಷಿಣಿ ತಾಯಿ ಚಾಮುಂಡಿಯನ್ನು ಕೊಂಡಾಡುತ್ತಾಳೆ. ಇದಾದ ನಂತರ ತೃಪ್ತಿ ಎಸ್ ತಮ್ಮ ಕೀ ಬೋರ್ಡ್ ಮೂಲಕ ದೇವಿಯನ್ನು ಸ್ತುತಿಸಿ ಕಛೇರಿಯನ್ನು ಮತ್ತೊಂದು ಹಂತಕ್ಕೆ ಸಜ್ಜುಗೊಳಿಸುತ್ತಾರೆ. ಮುಂದೆ ತನ್ಮಯ್ , ವಿರಾಜ್ ಜೋಡಿ ಆನಂದ ರಮಣನನ್ನು ಸ್ಮರಿಸಿದರೆ ಶ್ರೀಯಾ, ಗರುಡ ಗಮನ ತವ ಚರಣ ಎಂದು ಹಾಡುತ್ತಾಳೆ. ಮುಂದೆ ಸಿರಿ ಹಾಗೂ ಸಂಜನಾ ಸಹೋದರಿಯರು ಫಲುಕೇ ಬಂಗಾರ ಮಾಯಾನ ಕೋದಂಡಪಾಣಿ ಎನ್ನುತ್ತಾ ಶ್ರೀನಿವಾಸನನ್ನು ಕೊಂಡಾಡುತ್ತಾರೆ.ಕೊನೆಯಲ್ಲಿ ಶ್ರೀಕೃತಿ ರಾಧೇ ಶ್ಯಾಮ ಘನ ಶ್ಯಾಮ ಗೀತೆಯೊಂದಿಗೆ ಕಛೇರಿಯನ್ನು ಸಂಪನ್ನ ಗೊಳಿಸುತ್ತಾಳೆ.

    ಹಿರಿಯ ಪತ್ರಕರ್ತ ಸತ್ಯನಾರಾಯಣ ನಾಡಿಗರು ತಮ್ಮ ದಸರಾ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಭಾರತಿ ಮತ್ತು ಶ್ರೀನಿವಾಸ ರ ವ್ಯಾಖ್ಯಾನವೂ ಇದೆ.

    ಆಲಿಸಿ ಪ್ರತಿಕ್ರಿಯಿಸಿ

    ಮಂಗಳ ಮಸ್ತು ಗೌರಿ ಪರಮೇಶ್ವರಿ

    ಇಂದು ನವರಾತ್ರಿಯ ಎಂಟನೇ ದಿನ ಅಷ್ಟಮಿ. ಕನ್ನಡಪ್ರೆಸ್.ಕಾಮ್ ನ ದಸರಾ ಸಂಗೀತೋತ್ಸವದಲ್ಲಿ ಇದು ಸರಸ್ವತಿಯ ಆರಾಧನೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಸುಗುಮ ಸಂಗೀತವನ್ನು ಅಭ್ಯಸಿಸಿರುವ ಲಕ್ಷ್ಮಿ ಶ್ರೇಯಾಂಶಿ ಇಂದಿನ ಸಂಗೀತ ಕಛೇರಿ ನಡೆಸಿಕೊಟ್ಟಿದ್ದಾರೆ.

    ಸಾಫ್ಟ್ ಸ್ಕಿಲ್ ಮತ್ತು ಇಂಗ್ಲಿಷ್ ಭಾಷೆಯ ತರಬೇತುದಾರರಾಗಿರುವ ಲಕ್ಷ್ಮಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಶಿವಮೊಗ್ಗದಲ್ಲಿ ಗುರು ನಾಗರಾಜ್ ಅವರಿಂದ ಕಲಿತರು. ಸುಗಮ ಸಂಗೀತ ಕಲಿತಿದ್ದು ಮಂಜುಳಾ ಗುರುರಾಜ್ ಅವರಿಂದ.

    ಇಂದಿನ ಸಂಗೀತ ಸಂಜೆ ನಮ್ಮಮ್ಮ ಶಾರದೆಯಿಂದ ಆರಂಭವಾಗಿ ಜಯ ಜಗದೀಶ್ವರಿ ಎಂದು ಸರಸ್ವತಿಯನ್ನು ಕೊಂಡಾಡುತ್ತದೆ. ನಂತರ ವಾಣಿ ವೀಣಾ ಪುಸ್ತಕ ಪಾಣಿ , ನಿಹಾರ ಕರ ವರ ವದನೆ ಎಂದು ಭಜಿಸಿ ಮಂಗಳ ಮಸ್ತು ಗೌರಿ ಪರಮೇಶ್ವರಿ ಎಂದು ಸಂಪನ್ನವಾಗುತ್ತದೆ.

    ಎಂದಿನಂತೆ ಭಾರತಿ ಅವರ ವ್ಯಾಖ್ಯಾನ ಪಾಡ್ಕಾಸ್ಟ್ ಅನ್ನು ಮತ್ತಷ್ಟು ಆಪ್ಯವೆನಿಸುತ್ತದೆ.

    ಆಲಿಸಿ ಪ್ರತಿಕ್ರಿಯಿಸಿ.

    ಬನ್ನಿ ತಗಂಡು ಬಂಗಾರದ ಹಂಗ ಇರಾನಾ…

    ದಸರಾ ಎನ್ನುವ ಶಬ್ದವೇ ರೋಮಾಂಚನ. ನೆನಪುಗಳನ್ನು ದಂಡಿಯಾಗಿ ಹೊತ್ತು ತರುವ ನಾವೆ. ಮರೆಯದ ಬಾಲ್ಯಕ್ಕೆ ತನ್ನದೇ ಮೆರುಗನ್ನು ನೀಡಿದೆ. ಬಾಲ್ಯದ ನನ್ನೂರ ದಸರಾದ ನೆನಪನ್ನು ನಿಮ್ಮೊಡನೆ ಹಂಚಿ ಸವಿಯುವ ಮನಸ್ಸಾಯ್ತು.

    ದಸರಾ ಎಂದಾಕ್ಷಣ ಮೊದಲಿಗೆ ನೆನಪಾಗುವುದೇ ಅರ್ಧ ವಾರ್ಷಿಕ ರಜೆಯ ಕಚಕುಳಿ. ಅರ್ಧ ವಾರ್ಷಿಕ ಪರೀಕ್ಷೆಗಳನ್ನು ಮುಗಿಸಿ,ಆಕ್ಟೊಬರ್ 2 ರ ಗಾಂಧಿ ಜಯಂತಿ ಮಾಡಿ ರಜೆ ಘೋಷಿಸುತ್ತಿದ್ದ ಶಾಲೆಗಳು ಮತ್ತೆ ತೆರೆಯುತ್ತಿದುದೇ ನವಂಬರ್ 1 ರ ರಾಜ್ಯೋತ್ಸವಕ್ಕೆ. ಬಯಲು ಸೀಮೆಯ ನನ್ನೂರು ಆಶ್ವಿಜ ಮಾಸದ ಈ ವೇಳೆಯಲ್ಲಿ ತುಂಬಿದ ಕೆರೆಯಿಂದ, ನವಿರು ಹಸಿರಿನ ಹೊಲ ಗದ್ದೆಗಳಿಂದ,ಹಿತವಾದ ಹವಾಮಾನದಲ್ಲಿ ನಲಿಯುತ್ತಿತ್ತು. ಉತ್ತರಾ ಮಳೆಯಿಂದ ಕೆರೆಕುಂಟೆಗಳು ತುಂಬಿ ಹರಿಯುತ್ತಿದ್ದರೆ, ಆಗ ತಾನೇ ಪ್ರವೇಶವಾಗುತ್ತಿದ್ದ ಚಿತ್ತಾ ಮಳೆ ನನಗೇನಾದ್ರು ಕೆಲಸ ಇದೆಯಾ ಎಂಬಂತೆ ಆಗೊಮ್ಮೆ,ಈಗೊಮ್ಮೆ ಇಣುಕಿ ಹಾಕುತ್ತಾ,ಕೆಲವೊಮ್ಮೆ ಸಿಟ್ಟು ಮಾಡಿಕೊಂಡು ಭೋರ್ಗರೆದು ಮನೆಯ ಮಣ್ಣಿನ ಮಾಡುಗಳನ್ನು,ಊರಿನ ರಸ್ತೆ, ಓಣಿಗಳನ್ನೆಲ್ಲ ರಚ್ಚ ರಚ್ಚ ಕೆಸರು ಮಾಡಿ ಮುಗುಳ್ನಗುತ್ತಿತ್ತು. ಚಿತ್ತಾ ಮಳೆ ಮುನಿಸುಕೊಂಡಿದ್ದರೆ, ಆಗಲೇ ತುಂಬಿರುತ್ತಿದ್ದ ಕೆರೆಯ ಮೇಲಿಂದ ಹಾಗೆಯೇ ಸುಯ್ಯೆಂದು ಗಾಳಿ ಬಂದರೆ, ಇಡೀ ಊರಿಗೆ ಊರೇ ಹವಾನಿಯಂತ್ರಣದಲ್ಲಿದೆಯೇನೋ ಎನ್ನುವಂತಹ ತಣ್ಣನೆಯ ಗಾಳಿ ಆವರಿಸುತ್ತಿತ್ತು. ಕ್ಷೀಣಿಸುತ್ತಿದ್ದ ಮಳೆ,ಮೆಲ್ಲನೆ ಇಣುಕುತ್ತಿದ್ದ ಚಳಿಗೆ ದಾರಿ ಬಿಡುತ್ತಿದ್ದ ಸಮಯದಲ್ಲಿ ಮೆಲ್ಲನೆ ದಸರಾ ಹಬ್ಬದ ಸಂಭ್ರಮ ನನ್ನೂರನ್ನುಆವರಿಸುತ್ತಿತ್ತು.

    ಮನೆಯವರಿಗೆಲ್ಲ ಹೊಸಬಟ್ಟೆ ಬರುವುದರೊಂದಿಗೆ ಹಬ್ಬದ ಕಳೆ ಕಟ್ಟುತ್ತಿತ್ತು. ಮಕ್ಕಳೇ ಸಂಪತ್ತು ಅಂತ ನಂಬಿದ್ದ ಕಾಲ ಅದು. ಒಂದು ಕುಟುಂಬದ ಮನೆಗಳಲ್ಲಿ ಕನಿಷ್ಠ ನಾಲ್ಕೈದು ಗಂಡು ಮಕ್ಕಳು, ಮೂರ್ನಾಲ್ಕು ಹೆಣ್ಣು ಮಕ್ಕಳು. ಬಟ್ಟೆ ನೋಡಿಯೇ ಯಾರ ಮನೆಯ ಹುಡುಗಿ, ಯಾರ ಮನೆಯ ಹುಡುಗ ಅಂತ ವರ್ಷ ಇಡೀ ಗುರುತಿಸುತ್ತಿದ್ದ ಕಾಲ ಅದು. ನನ್ನ ಮನೆಯಲ್ಲಿ ನಾವು ಐದು ಜನ ಗಂಡು ಹುಡುಗರು. ಎಲ್ಲರಿಗೂ ಒಂದೇ ತೆರನಾದ ಅಂಗಿ,ನಿಕ್ಕರ್. ಮಕ್ಕಳಲ್ಲಿ ಭೇದ ಭಾವ ಕೂಡದು.

    ನಮ್ಮೂರ ನಾರಾಯಣ ಶೆಟ್ರ ಅಂಗಡಿ ಅಂದ್ರೆ ಎಲ್ಲಾ ಸಾಮಾನು ಸಿಗುವಂಥ ಅಂಗಡಿ. ಮೊಳೆ,ಬೋಲ್ಟ್,ನಟ್, ಜ್ವರ ಕೆಮ್ಮು ನೆಗಡಿಯ ಗುಳಿಗೆಗಳು, ಪೆನ್ನಿನ ನಿಬ್ಬು,ಇಂಕು, ಪುಸ್ತಕಗಳು. ದೀಪಗಳ ಸೀಮೆ ಎಣ್ಣೆ, ಅಡುಗೆಯ ಒಳ್ಳೆಣ್ಣೆಯಿಂದ ಎಲ್ಲ ಅಡುಗೆ ಸಾಮಾನು. ಇಂತಹದು ಇಲ್ಲ ಅನ್ನುವ ಮಾತೇ ಇಲ್ಲ,ಬಟ್ಟೆಯ ಜವಳಿ ಅಂಗಡಿಯೂ ಸೇರಿ. ಊರಲ್ಲಿ ಯಾರಾದ್ರೂ ಬಿದ್ದು ಗಾಯ ಮಾಡಿಕೊಂಡರೂ ಟೀಂಚರ್ ಹಚ್ಚಿ ಅಂತ ಓಡುತ್ತಿದ್ದುದೇ ಅಲ್ಲಿಗೆ. ಅದು ಮಾತ್ರ ಉಚಿತ. ಹಾಗಾಗಿ ನಾರಾಯಣ ಶೆಟ್ಟರ ಅಂಗಡಿಗೆ ಭೇಟಿ ನೀಡದೇ ನಮ್ಮೂರಲ್ಲಿ ಯಾರೂ ದಿನಕಳೆಯಲು ಸಾಧ್ಯ ಇಲ್ಲ ಅನ್ನುವಷ್ಟು ನಂಟು. ಬಜಾರಾದ ಬಸವಣ್ಣ ಗುಡಿಯ ಹಿಂದೆ ದೊಡ್ಡದಾದ ಅವರ ಸಾಮಾನುಗಳನ್ನು ಇಡಲು ಮಾಡಿದಂತಹ ಮನೆ. ನನಗಂತೂ ಅದರ ಒಳಹೋಗಿ,ಮಬ್ಬುಗತ್ತಲಲ್ಲಿ ವಿಧ,ವಿಧ ಸಾಮಾನಿನ ವಾಸನೆ ಹೀರುತ್ತಾ, ದೊಡ್ಡ ದೊಡ್ಡ ಚೀಲಗಳಲ್ಲಿ ಇರುತ್ತಿದ್ದ ಸರಂಜಾಮು ನೋಡೋದೇ ವಿಸ್ಮಯ.

    ಅಪ್ಪನ ಗೆಳೆಯರಾಗಿದ್ದ ಕೃಷ್ಟಣ್ಣ ಶೆಟ್ಟಿ ಯವರ ಅಂಗಡಿಯಲ್ಲಿ ನಮ್ಮ ದಿನನಿತ್ಯದ ವ್ಯವಹಾರ.ತಿಂಗಳಿನ ಆಹಾರದ ಪಟ್ಟಿ ಹಿಡಿದು ರಾತ್ರಿ ಊಟದ ನಂತರ ಹೋದರೆ, ಬರುತ್ತಿದ್ದುದೇ ಮಧ್ಯರಾತ್ರಿಗೆ. ಆ ಅಂಗಡಿಯಲ್ಲಿ ಮಂಡಕ್ಕಿಯ ಚೀಲ ಯಾವಾಗಲೂ ಬಾಯಿ ತೆರೆದುಕೊಂಡೇ ಇರುತ್ತಿತ್ತು. ಆ ಚೀಲಕ್ಕೆ ಕೈ ಹಾಕಿ ಮಂಡಕ್ಕಿ ತಿನ್ನದವರೇ ಇಲ್ಲ ನಮ್ಮೂರಲ್ಲಿ. ಅದೇನೋ ಯಾರಿಗೂ ಬೇಡ ಅನ್ನುತ್ತಿರಲಿಲ್ಲ ಅವರು. ನಾನು ದೊಡ್ಡಪ್ಪ,ದೊಡ್ಡಮ್ಮಅಂತಲೇ ಕರೆದದ್ದು ಆ ದಂಪತಿಗಳನ್ನು. ಬಟ್ಟೆ ವ್ಯಾಪಾರ ಆಗ ಅಲ್ಲಿರದಿದ್ದ ಕಾರಣ ದಸರಾ ಬಟ್ಟೆಯ ಖರೀದಿ ನಾರಾಯಣ ಶೆಟ್ರ ಅಂಗಡಿಯಲ್ಲಿ. ಅಪರೂಪಕ್ಕೆ ಹೋಗುತ್ತಿದ್ದ ಅಪ್ಪನನ್ನು ಕೃಶ ದೇಹದ ಹಿರಿ ಜೀವ ನಾರಾಯಣ ಶೆಟ್ರು ಬಲು ಆಪ್ಯಾಯಮಾನವಾಗಿ ಮಾತಾಡಿಸುತ್ತ ಎಲ್ಲ ವಿಷಯಗಳ ವಿನಿಮಯವೂ ಆಗಿಬಿಡುತ್ತಿತ್ತು. ನನಗೋ ಹೊಸ ಬಟ್ಟೆ ನೋಡುವ ಆತುರ. ಕೊನೆಗೂ ನಾರಾಯಣ ಶೆಟ್ಟರು ಅಂಗಡಿಯ ಗಲ್ಲದಿಂದ ಜವಳಿ ಬೀರುಗಳ ಮುಂದೆ ಬಂದು ಕುಳಿತಾಗ ನನಗೆ ಕುತೂಹಲದ ಸಮಾಧಾನ. ಅಪ್ಪನಿಗೆ ನಾರಾಯಣ ಶೆಟ್ಟರೇ ಆಗಬೇಕು ವ್ಯವಹಾರಕ್ಕೆ. ಮಗ ಹನುಮಂತ ಶೆಟ್ಟಿ ಸರಿ ಬರುತ್ತಿರಲಿಲ್ಲ. ಆಗಿನ ವ್ಯವಹಾರಗಳೇ ಹಾಗಿರುತ್ತಿದ್ದವು.

    ಇದು ಟೆರಿಕಾಟ್ ಅಂತ. ಬಹಳ ಬೆಲೆಯದ್ದು,5 ರೂಪಾಯಿಗೆ ಗಜ (ಮೀಟರ್). ಇದನ್ನು ತೆಗೆದುಕೊ ಅಂತ ನಾರಾಯಣ ಶೆಟ್ರು ಹೇಳಿದರು ಅಂದ್ರೆ ಆಯ್ತು ಅನ್ನುತ್ತಿದ್ದರು ಅಪ್ಪ. ಅಂಗಿಗೆ ಟೆರಿಕಾಟ್, ನಿಕ್ಕರ್ರಿಗೆ ದಾವಣಗೆರೆ ಕಾಟನ್ ಮಿಲ್ಲಿನ ಬಟ್ಟೆ. ಎಷ್ಟು ಬೇಕಾಗುತ್ತೆ ಅಂತ ಅವರೇ ಲೆಕ್ಕ ಹಾಕಿ, ಕಾಲು ಇಂಚು ಅಗಲದ , ಮೀಟರ್ ಉದ್ದದ ತೆಳುವಾದ ಕಬ್ಬಿಣದ,ಗಜದ ಕಟ್ಟಿಗೆ ಅಂತ ಕರೆಯಲ್ಪಡುತ್ತಿದ್ದ ಕೋಲಿನಿಂದ ಬಟ್ಟೆ ಅಳೆಯುವುದೇ ನೋಡಲು ಚೆನ್ನ. ಅಳೆದ ನಂತರ ಕತ್ತರಿಯಿಂದ ಕತ್ತರಿಸುವುದಂತೂ ಇನ್ನೂ ಚೆನ್ನ. ಹಿರಿಯರಿಗೆ ಅಂತ ಹೇಳಿ ಅಪ್ಪ ಹಾಕುತ್ತಿದ್ದ ಕಚ್ಛೆ ಪಂಚೆ, ಅಮ್ಮನ ಸೀರೆ ತೆಗೆದುಕೊಂಡು ಸಣ್ಣ ಹಗ್ಗದ ಹುರಿಯಿಂದ ಕಟ್ಟಿದ ಬಟ್ಟೆಯ ಗಂಟನ್ನು ಒಂದು ಕಡೆ ಇಟ್ಟು, ಒಂದು ಸಣ್ಣ ಕಾಗದದಲ್ಲಿ ಎಷ್ಟಾಯ್ತು ಅಂತ ಬರೆಯುತ್ತಿದ್ದರು. ಆಗ ತಾನೇ ದಶಮಾಂಶದ ಗುಣಾಕಾರ,ಕೂಡುವಿಕೆ ಕಲಿತಿದ್ದ ನನ್ನತ್ತ ಕಾಗದ ಹಿಡಿದು, ಅಪ್ಪ ನೋಡು ನಾರಾಯಣ ಶೆಟ್ಟರ ಲೆಕ್ಕ ಸರಿಯಾಗಿದೆಯಾ ಅಂತ ಹೇಳುತ್ತಿದ್ದರು. ನಾನು ಲೆಕ್ಕ ಮಾಡುವುದರಲ್ಲಿ ಮಗ್ನ. ಕುತೂಹಲಿಗಳಾಗಿ ನಾರಾಯಣ ಶೆಟ್ರು ನನ್ನ ಕಡೆ ನೋಡುತ್ತಿದ್ದ ನೋಟವನ್ನು ಬೆರಳುಗಳ ಗೆರೆಗಳೊಂದಿಗೆ ಲೆಕ್ಕ ನೋಡುವುದರ ಜೊತೆ ನಾನು ಗಮನಿಸುತ್ತಿದ್ದೆ. ಅವರು ಬರೆದಿದ್ದ ಕೆಲವಾರು ಸಂಖ್ಯೆಗಳು ನನಗೆ ತಿಳಿಯುತ್ತಿರಲಿಲ್ಲ. ಅಪ್ಪನನ್ನು ಕೇಳುತ್ತಿದ್ದೆ. ನಕ್ಕ ಶೆಟ್ಟರು ನಿಮ್ಮ ಹಾಗೆ ಶಾಲೆಯಲ್ಲಿ ಕುಳಿತು ಕಲೀಲಿಲ್ಲಪ್ಪ, ಮರಳಿನ ಮೇಲೆ ಬರೆದು ಕಲಿತಿದ್ದೆ ಅಂತ ಬಾಯ್ತುಂಬ ನಕ್ಕು ನನಗೊಂದು ಆಗಿನ ಮೂರು ಪೈಸೆ ಆಕಾರದ ಬೆಳ್ಳನೆಯ ಚಪ್ಪಡಿ ಶುಂಠಿ ಪೆಪ್ಪರಮೆಂಟ್ ಕೊಡುತ್ತಿದ್ದರು. ಹುಲಿಕುಂಟೆಪ್ಪ, ನಿನ್ನ ಮಗ ಭಾಳ ಜಾಣ ಅದಾನೋ ಅಂದಾಗ ಅಪ್ಪ ತಲೆಮೇಲೆ ಕೈ ಸವರುತ್ತಿದ್ದರು. ನನಗೆ ಎಲ್ಲರೂ ಸೇರಿ ಕಿರೀಟ ಇಡುತ್ತಿದ್ದಾರೆ ಏನೋ ಅನ್ನುವಂತಹ ಸಂಭ್ರಮ.

    ರಾತ್ರಿಯಲ್ಲ ನಿದ್ದೆ ಇಲ್ಲದ ಸಡಗರ. ಬೆಳಿಗ್ಗೆಯೇ ತಂಬಿಗೆ ಹಿಡಿದು ಬಹಿರ್ದಶೆಗೆ ಹೊರಟ ದರ್ಜಿ ಬಂಡ್ರೆಪ್ಪನ ಬೆನ್ನು ಬಿದ್ದು, ಹಬ್ಬದ ಬಟ್ಟೆ ತಂದಿದ್ದೇವೆ. ಹೊಲೆದು ಕೊಡಲು ಅಳತೆ ತೊಗೋಬೇಕಂತೆ. ಮನೆಗೆ ಬರಲು ಅಪ್ಪ ಹೇಳಿದ್ದಾರೆ ಅಂತ ಹೇಳಿ ಉತ್ತರಕ್ಕೆ ಕಾಯ್ತಿದ್ದ ಕುತೂಹಲದ ಕ್ಷಣಗಳನ್ನು ಮರೆಯಲು ಆಗ್ತಿಲ್ಲ. ಒಂಬತ್ತು ಗಂಟೆಗೆ ಬರ್ತೀನಿ ಅಂತ ಹೇಳು ಅಂದಿದ್ದೇ ತಡ, ಮನೆಗೆ ಓಡಿ ಬಂದು ಎಲ್ಲರಿಗೂ ಎಬ್ಬಿಸಿ ಹೇಳೋದೇ.

    ಬೆಳೆಯೋ ಹುಡುಗ್ರೋ ಬಂಡ್ರೆಪ್ಪ, ದುಬಾರಿ ಬಟ್ಟೆ. ಸ್ವಲ್ಪ ಡೀಲ (ಸಡಿಲ) ಇಟ್ಟು ಹೊಲಿ ಅಂತ ಅಪ್ಪ ಹೇಳಿದರೆ,ಮತ್ತೂ ಸಡಿಲ ಹೋಲಿತಿದ್ದ ಬಂಡ್ರೆಪ್ಪ, ನೀರಲ್ಲಿ ಹಾಕಿದಾಗ ಚಿಕ್ಕಾದಾಗುತ್ತೆ ಅನ್ನುವ ಕಾರಣ. ಒಟ್ಟಾರೆ ದೊಗಳ ಬಗಳ ಅಂಗಿ,ನಿಕ್ಕರ್ರೇ ನಮ್ಮ ಬಾಲ್ಯದ ತುಂಬಾ. ಸೊಂಟದ ಉಡುದಾರದ ಸಹಾಯ ಇರದ ನಿಕ್ಕರ್ರೇ ಹಾಕಲಿಲ್ಲ ನಾವು. ಅಂಗಿಯಂತೂ ಕೇಳಲೇ ಬೇಡಿ. ತಮ್ಮಂದಿರದ್ದು ಹಾಕಿದರೆ ಸರಿಹೋಗಬಹುದು ಅಂತ ತೆಗೆದರೆ, ಅಮ್ಮ ಅದು ಹೇಗೆ ಗುರುತು ಮಾಡಿದ್ದಳೋ, ಏ ಅದು ನಿಂದಲ್ಲ ಅಂತ ಹೇಳಿಬಿಡುತ್ತಿದ್ದಳು. ಹೇಳಿದ ಸಮಯಕ್ಕೆ ಯಾವತ್ತೂ ಹೊಲಿದು ಕೊಡದ ಬಂಡ್ರೆಪ್ಪನ ಮನೆಗೆ ಆಯ್ತಾ,ಆಯ್ತಾ ಅಂತ ಅಲೆದದ್ದೇ ಅಲೆದದ್ದು. ಹಬ್ಬದ ಬಟ್ಟೆಗಳ ರಾಶಿಯಲ್ಲಿ ಎಲ್ಲಿ ಬೇರೆಯವರಿಗೆ ನಮ್ಮ ಬಟ್ಟೆ ಕೊಟ್ಟು ಬಿಡುತ್ತಾನೋ ಅನ್ನುವ ಆತಂಕದಲ್ಲಿ ಹೋದಾಗೊಮ್ಮೆ ಬಟ್ಟೆ ಹುಡುಕೋದು ಆ ಬಟ್ಟೆಗಳ ರಾಶಿಯಲ್ಲಿ. ಕತ್ತರಿಸಿನಿ, ಹೊಲಿದು ಆಗಿದೆ, ಗುಂಡಿ,ಕಾಜಾ ಹಚ್ಚಿಲ್ಲ ಅನ್ನುವ ಕಾರಣ ಕೇಳಿ,ಕೇಳಿ ಬೇಸರದಿಂದ ಬರೋದು. ಕೊನೆಗೆ ಅಪ್ಪನನ್ನು ದುಂಬಾಲು ಬಿದ್ದು ಕರೆದುಕೊಂಡು ಹೋಗೋದು,ನಾಳೆ ಕೋಟ್ಬಿಡ್ತೀನಿ ಸಾ, ನೀವು ಬರಬ್ಯಾಡ್ರಿ ಅಂತಿದ್ದ ಬಿಟ್ಟರೆ,ಕೊಡ್ತಿರಲಿಲ್ಲ. ನಾಳೆ ಹಬ್ಬಕ್ಕೆ ಹಾಕ್ಕೋಬೇಕು,ಕೊಡ್ಲಿಲ್ಲ ಅಂದ್ರೆ ನಿನ್ನ ಕಡೆನೆ ಇಟ್ಕೋ ಅಂತ ಅಪ್ಪ ಹೇಳ್ಯಾ ರ ನೋಡು ಅಂದ್ರೆ, ರಾತ್ರಿ ಬಂದು ತೊಗೊಂಡು ಹೋಗು ಅಂತಿದ್ದ. ಅಷ್ಟರಲ್ಲಾಗಲೇ ಸಿಕ್ಕ,ಸಿಕ್ಕ ಗೆಳೆಯರನ್ನ ಬಂಡ್ರೆಪ್ಪನ ಮನೆಗೇ ಕರ್ಕೊಂಡು ಹೋಗಿ,ನಮ್ಮ ಅಂಗಿ,ನಿಕ್ಕರ್ ಬಟ್ಟೆ ತೋರಿಸಿದ್ದು ಆಗಿರ್ತಿತ್ತು.

    ನಮ್ಮೂರಲ್ಲಿ ಒಂದು ವಿಶೇಷ ಪದ್ದತಿ ಇದೆ. ಅದು ದೇವರು ಊರೊಳಗೆ ಬರೋದು! ಹಿಂದೆ,ಮುಂದೆ ಇಬ್ಬರು ಹೊತ್ತ ಪಲ್ಲಕ್ಕಿಯಲ್ಲಿ ದೇವರ ಉತ್ಸವ ಮೂರ್ತಿಯನ್ನಿಟ್ಟು, ತಪ್ಪಡಿ, ಜಾಗಟೆ, ಶಂಖು ನಾದಗಳೊಂದಿಗೆ ಊರಿಂದ ಒಂದು ಮೈಲಿಯಷ್ಟು ದೂರದಲ್ಲಿರುವ ದೇವಸ್ಥಾನದಿಂದ ಊರ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ರೀತಿ ಮಾಡೋದು. ಅದಕ್ಕೆ ಹುಲಿಕುಂಟೆರಾಯ ಇವತ್ತು ಊರಕ ಬರ್ತಾನೆ ಅಂತಲೇ ಅನ್ನೋದು. ಉಗಾದಿ,ರಾಮನವಮಿ,ದಸರಾ,ನಮ್ಮೂರ ರಥೋತ್ಸವದ ಹಿಂದಿನ ದಿನ ಹೀಗೆ ಮುಂತಾದ ಹಬ್ಬಗಳಿಗೆ ದೇವಸ್ಥಾನದ ಉಸ್ತುವಾರಿಕೆಯಿಂದ ಕರೆದು ತಂದರೆ, ಬೇಡಿಕೆ ಅಥವಾ ಸೇವೆಯ ರೂಪವಾಗಿ ಭಕ್ತರು ತಮ್ಮ ಇಷ್ಟಾರ್ಥಗಳು ಕೈಗೂಡಿದಾಗ ಅದಕ್ಕೆ ತಗಲುವ ವೆಚ್ಚ ಭರಿಸಿ ದೇವರನ್ನು ಊರಲ್ಲಿ ಕರೆತರುವುದು ರೂಢಿ.

    ಇಡೀ ಊರು ಸಂಭ್ರಮಿಸುವ ಸಡಗರ ಅದು. ಮನೆಗಳ ಮುಂದೆ ಪಲ್ಲಕ್ಕಿ ಹೋಗುವಾಗ ಆಯಾಯ ಮನೆಗಳಿಂದ ಹಣ್ಣು,ಕಾಯಿ ಕೊಟ್ಟು ದೇವರಿಗೆ ಅಲ್ಲೇ ಮಂಗಳಾರತಿ ಮಾಡೋದು, ಹಾಗೆ ನಿಂತ ಪಲ್ಲಕ್ಕಿಯ ಕೆಳಗಡೆಯಿಂದ ಆ ಕಡೆ,ಈ ಕಡೆ ಮಕ್ಕಳು,ಹೊಸದಾಗಿ ಮದುವೆಯಾದ ಜೋಡಿಗಳು, ಆಗ ತಾನೇ ಹುಟ್ಟಿ,ತವರುಗಳಿಂದ ನಮ್ಮೂರಿಗೆ ಬಂದ ತಾಯಿ,ಮಗು ತೂರೋದು ನಡೆದು ಬಂದ ಪದ್ದತಿ.

    ನಮ್ಮ ಮನೆಯಲ್ಲಿ ನವಮಿಯಂದು ಆಯುಧ ಪೂಜೆಯ ಜೊತೆ ಹಿರಿಯರನ್ನು ಇಟ್ಟು ಪೂಜಿಸುವುದು ದಸರಾದ ವಿಶೇಷ. ಎರಡು ತಂಬಿಗೆಗಳಲ್ಲಿ ಕೆರೆ ನೀರನ್ನು ತಂದು, ಮೇಲೆ ವೀಳೆದೆಲೆಯಲ್ಲಿ ತೆಂಗಿನಕಾಯಿ ಇಟ್ಟು, ಒಂದಕ್ಕೆ ಪೇಟ,ಪಂಚೆ,ಮತ್ತೊಂದಕ್ಕೆ ಸೀರೆ,ಓಲೆ, ಅಮ್ಮನ ಮಾಂಗಲ್ಯ ಹಾಕಿ ಸಿಂಗರಿಸಿ ಇವರು ಅಜ್ಜ,ಅಜ್ಜಿ ಅಂತ ಅಪ್ಪ ಹೇಳುತ್ತಿದ್ದರು. ಅಮ್ಮ ಅವತ್ತು ಅರಿಶಿನದ ಚಿಕ್ಕ ತುಂಡನ್ನು ದಾರದಲ್ಲಿ ಕಟ್ಟಿಕೊಂಡು ಮಾಂಗಲ್ಯದ ಬದಲಿಗೆ ಕುತ್ತಿಗೆಯಲ್ಲಿ ಧರಿಸಿ ಪೂಜಿಸುತ್ತಿದ್ದರು. ನಾನು ತದೇಕ ಚಿತ್ತದಿಂದ ಅದನ್ನು ನೋಡುತ್ತಿದ್ದೆ. ಜೊತೆಯಲ್ಲಿ ರಾಮಾಯಣ, ಮಹಾಭಾರತ,ಭಗವದ್ಗೀತೆ, ಹರಿಶ್ಚಂದ್ರ ಕಾವ್ಯ ಮುಂತಾದ ಪುಸ್ತಕಗಳೂ ಪೂಜೆ ಗೊಳ್ಳುತ್ತಿದ್ದವು. ಅಪ್ಪನ ಜೊತೆಯಲ್ಲೇ ಸ್ನಾನ ಮಾಡಿ, ಅವರು ಮಾಡುವ ಪೂಜೆಗೆ ಸಾಕ್ಷಿಯಂತೆ, ಮೈಯೆಲ್ಲ ಗಂಧ ಹಚ್ಚಿಕೊಂಡು ಒಂದು ಮಣೆಯ ಮೇಲೆ ಕೂತಿರುತ್ತಿದ್ದೆ. ಇಡೀ ದೇವರ ಮನೆ ದೀಪ,ಧೂಪಗಳಿಂದ ವಿಶೇಷವಾದ ಸುವಾಸನೆಯಲ್ಲಿ ತುಂಬಿರುತ್ತಿತ್ತು. ಅಪ್ಪನ ಮಂತ್ರಗಳೊಂದಿಗಿನ ಪೂಜೆ ಮುಗಿಯುವಷ್ಟರಲ್ಲಿ ಅಮ್ಮ ಅಡುಗೆ ಮನೆಯಿಂದ ಹೋಳಿಗೆಯ ನೈವೇದ್ಯ ಸಿದ್ಧಮಾಡಿ ತರುತ್ತಿದ್ದರು. ಮಂಗಳಾರತಿಯೊಂದಿಗೆ ಪೂಜೆ ಮುಗಿಯುತ್ತಿತ್ತು. ಹೊರಗಡೆ ಒಬ್ಬ ದಾಸಯ್ಯ ಗರುಡಗಂಬ ಹಿಡಿದು ಶಂಖ ಊದುತ್ತಿದ್ದ. ಅಮ್ಮ ಅವನ ಕಾಲಿಗೆ, ಗರುಡಗಂಬಕ್ಕೆ ನೀರು ಹಾಕಿ ಒಳಬರಲು ಹೇಳುತ್ತಿದ್ದರು. ಅವನ ಶಂಖ ನಾದಕ್ಕೆ ಇಡೀ ಮನೆಯೇ ಘರ್ಜಿಸಿದಂತಹ ಅನುಭವ ನನಗೆ. ರಂಗೋಲಿ ಹಾಕಿ, ಅಕ್ಕಿಯ ಮೇಲೆ ದಾಸಯ್ಯನ ಗರುಡಗಂಬ ನಿಲ್ಲುತ್ತಿತ್ತು. ಅದಕ್ಕೆ ಪೂಜೆ,ನೈವೇದ್ಯೆ. ಅವನು ತಂದಿರುತ್ತಿದ್ದ ತಾಮ್ರದ ಬೋಗುಣಿ ತುಂಬಾ ಮಾಡಿದ್ದ ಅಡುಗೆಯ ಎಲ್ಲವನ್ನೂ ಅಮ್ಮ ಹಾಕಿ,ಕೆಳಗೆ ಬೀಳಿಸುತ್ತಿದ್ದಳು. ಇದು ಯಾವಾಗಲೂ ತುಂಬಿ ಹರಿಯಬೇಕು, ನೋಡಿಕೊಳ್ಳಿ ಅಂತ ನಮಗೆ ಹೇಳುತ್ತಿದ್ದಳು. ವಿಚಿತ್ರ,ವಿಸ್ಮಯದಿಂದ ,ತನ್ಮಯನಾಗಿ ನಾನು ಎಲ್ಲವನ್ನು ನೋಡುತ್ತಿದ್ದೆ. ಊಟ ಮಾಡಿ ಹೋಗು ದಾಸಯ್ಯ ಅಂತ ಅಂದ್ರೆ, ಇಲ್ಲಮ್ಮ, ಇನ್ನೂ ತುಂಬಾ ಮನೆಗಳಿಗೆ ಹೋಗೋದಿದೆ ಅಂತ ತುಂಬಿದ ಬೋಗುಣಿ,ಒಡೆದ ಕಾಯಿ ತೆಗೆದುಕೊಂಡು ಜಾಗಟಿ ಹೊಡೆಯುತ್ತ,ಶಂಖ ಊದಿ ಕೊಂಡು ಮನೆಯ ಪಡಸಾಲೆಯಿಂದ ಹೊರಹೋಗುತ್ತಿದ್ದರೆ, ಮನೆಯ ಎಲ್ಲರೂ ಅವನ ಹಿಂದೆ ಹೋಗಿ,ಬಿಳ್ಕೊಟ್ಟು ಬಂದರೆ ಊಟಕ್ಕೆ ತಯಾರು.

    ಕನ್ನಡ ಪಂಡಿತ್ ಪರೀಕ್ಷೆಗೆಂದು ಅಪ್ಪ 1968 ರಲ್ಲಿ ಮೈಸೂರಿಗೆ ಹೋಗಿದ್ದರಂತೆ. ಆಗ ಸುತ್ತೂರು ಸ್ವಾಮಿ ಮಠದಲ್ಲಿ ಇದ್ದರಂತೆ,ವಸತಿ ಮತ್ತು ಊಟಕ್ಕೆ. ಹಾಗಾಗಿ ಮೈಸೂರ ಅರಮನೆ,ಒಡೆಯರು,ಮೈಸೂರ ದಸರಾ ಅಂದ್ರೆ ಅವರಿಗೆ ಅಭಿಮಾನ. ಊಟದ ನಂತರ ಇವೆಲ್ಲವುಗಳ ಜೊತೆ ವಿಜಯನಗರ ಅರಸರ ದಸರಾ, ಮುಂದೆ ಕನ್ನಡ ನಾಡಿನ ನಾಡ ಹಬ್ಬ ಆದುದರ ಬಗ್ಗೆಯೂ ಹೇಳುತ್ತಿದ್ದರು. ಮಹಾನವಮಿ ದಿಬ್ಬ ಅಂತ ಈಗಲೂ ಇರುವ ಹಂಪಿಯಲ್ಲಿನ ಜಾಗ ಅಂದಿನ ದಸರಾ ಸಂಭ್ರಮದ ತಾಣವಾಗಿ,ವಿದೇಶಿ ಪ್ರವಾಸಿಗರನ್ನು ಸೆಳೆದಿದ್ದನ್ನು ಹೇಳುತ್ತಿದ್ದರು. ಆ ವಿಜಯನಗರದ ಸಿಂಹಾಸನವೇ ಪೆನುಕೊಂಡದ ಮಾರ್ಗವಾಗಿ ಮೈಸೂರು ಅರಮನೆ ಸೇರಿದ ಇತಿಹಾಸವನ್ನು ಹೇಳ್ತಾ, ಮೈಸೂರ ಅರಸರು ವಿಜಯನಗರದ ದಸರಾ ವೈಭವವನ್ನು ಮುಂದುವರೆಸಿದ್ದು, ಈಗಲೂ ಅದನ್ನು ನೋಡಲು ವಿದೇಶಿಯರು ಬರುತ್ತಿರುವುದನ್ನು ಕೇಳಲು ತುಂಬಾ ರೋಮಾಂಚನವಾಗುತ್ತಿತ್ತು. ದಶಮಿಯಂದು ಆಗುವ ಬನ್ನಿ ವಿನಿಮಯದ ವಿಷಯ ಬಂದಾಗ, ಪಾಂಡವರು ತಮ್ಮ ಶಸ್ತ್ರಗಳನ್ನು ಆ ಮರದಲ್ಲಿ ಇಟ್ಟು, ವನವಾಸಕ್ಕೆ ಹೋಗಿದ್ದರಂತೆ ಅಂತ ಹೇಳ್ತಿದ್ದರು.

    ನಮ್ಮಲ್ಲಿ ಸಾಮೂಹಿಕವಾಗಿ ನವರಾತ್ರಿ ಅಥವಾ ಶರನ್ನವರಾತ್ರಿ ಆಚರಿಸಿಲ್ಲ. ನವಮಿಯ ಆಯುಧಪೂಜೆ ಮತ್ತು ದಶಮಿಯ ಬನ್ನಿ ವಿನಿಮಯ ನನ್ನೂರಲ್ಲಿ ಜೋರು. ದಶಮಿಯ ಸಾಯಂಕಾಲ ಊರ ಹಿರಿಯರೊಂದಿಗೆ ತಪ್ಪಡಿ ಯ ಸದ್ದಿನೊಂದಿಗೆ ಊರ ಹೊರಗಿನ ಹುಲಿಕುಂಟೆರಾಯನ ಗುಡಿಗೆ ಹೋಗೋದು. ಅಲ್ಲೇ ಇರುವ ಬನ್ನಿ ಮಂಟಪಕ್ಕೆ ಆ ದಿನ ವಿಶೇಷ ಪೂಜೆ,ನಮ್ಮೂರ ವಿಶ್ವಕರ್ಮ ಮನೆಯವರಿಂದ. ಊರ ಪ್ರತಿಯೊಬ್ಬರೂ ಬನ್ನಿಗಿಡಕ್ಕೆ ಪೂಜೆ ಮಾಡಿ, ಅದರ ಎಲೆಯನ್ನು ಅಲ್ಲಿರುವ ಎಲ್ಲ ಹಿರಿಯರಿಗೂ ಕಿರಿಯರಿಗೂ ವಿನಿಮಯ ಮಾಡಿಕೊಂಡು, ಬನ್ನಿ ತೊಗೊಂಡು ಬಂಗಾರದ ಹಾಗೆ ಇರೋಣ ಅಂತ ಹಾರೈಸಿಕೊಂಡು ಸಂಭ್ರಮಿಸುವುದು ನೋಡಲು ಬಲು ಮುದವಾಗಿರುತ್ತದೆ. ವರ್ಷದಲ್ಲಿ ಯಾರೊಡನೆ ಜಗಳ ಆಡಿದ್ದರೆ, ಅವರನ್ನು ಹುಡುಕಿ,ಹುಡುಕಿ ಬನ್ನಿ ಕೊಡೋದು ನೆನೆಸಿಕೊಂಡರೇನೇ ಖುಷಿ ಆಗ್ತಿದೆ. ಊರಲ್ಲಿಯ ಎಲ್ಲರ ಮನೆಗೂ ಭೇಟಿ, ಬನ್ನಿ ವಿನಿಮಯ. ಊರ ಪ್ರತಿಯೊಬ್ಬ ಹಿರಿಯರ ಕಾಲಿಗೆ ಬೀಳೋದೇ.

    ಅಪ್ಪ ಪೆಪ್ಪರಮೆಂಟ್ ತಂದುಕೊಂಡು ನಮ್ಮ ಮನೆಯ ಹಾಲ್ ನಲ್ಲಿ ಕುರ್ಚಿ ಮೇಲೆ ಕೂತುಕೊಳ್ಳುತ್ತಿದ್ದರು. ಊರ ತುಂಬಾ ಅವರ ಶಿಷ್ಯರೇ. ಸುಮಾರು ಐವತ್ತು ವರ್ಷ ನಮ್ಮೂರಲ್ಲಿ ಅಕ್ಷರ ಕೃಷಿ ಅವರದ್ದು. ಎಷ್ಟೋ ಮನೆಗಳ ಅಪ್ಪ,ಮಗ,ಮೊಮ್ಮಗ ಅಪ್ಪನ ಶಿಷ್ಯರೇ…ಅವರೆಲ್ಲರೂ ಬಂದು ಅಪ್ಪನಿಗೆ ಬನ್ನಿ ವಿನಿಮಯ ಮಾಡಿ ನಮಸ್ಕಾರ ಮಾಡಿದರೆ, ಅಪ್ಪ ಎಲ್ಲರ ಬಾಯಿಗೆ ಒಂದೊಂದು ಪೆಪ್ಪರಮೆಂಟ್ ತಾವೇ ಇಡುತ್ತಿದ್ದರು. ಅಲ್ಲಿ ಆದ ನಂತರ ಪಡಸಾಲೆಯಲ್ಲಿರುತ್ತಿದ್ದ ಅಮ್ಮನಿಗೂ ಬನ್ನಿ. ಅಮ್ಮನನ್ನು ಎಲ್ಲರೂ ಅಕ್ಕ ಅಂತಾನೇ ಕರೀತ್ತಿದ್ದದ್ದು. ಶಿಷ್ಯರು ಇಂದು ಕುಟುಂಬ ಸಮೇತ ಬಂದು ಅಪ್ಪ ಅಮ್ಮನಿಗೆ ಬನ್ನಿ ಕೊಡೋದು ನನಗೆ ಮರೆಯಲಾರದ ನೆನಪು.

    ಅಮ್ಮ 2019 ರ ಡಿಸೆಂಬರ್ 17ಕ್ಕೆ, ಅಪ್ಪ 25ಕ್ಕೆ ನಮ್ಮೆಲ್ಲರನ್ನು ಬಿಟ್ಟು ಹೋಗಿದ್ದಾರೆ. ಹಬ್ಬ ಇಲ್ಲ. ಅವರಿರದ ಹಬ್ಬವನ್ನು, ನನ್ನೂರ ಮನೆಯನ್ನು ಕಲ್ಪಿಸಿಕೊಳ್ಳಲೂ ಆಗ್ತಿಲ್ಲ. ನಾವೆಷ್ಟೇ ದುಡಿದರೂ,ಸಂಪಾದಿಸಿದರೂ ಅವರ ಸಂಪಾದನೆ ಮುಂದೆ ಶೂನ್ಯ. ಕಾಲಾಯ ತಸ್ಮೈನ್ನಮಹಃ…..

    ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು. ಬನ್ನಿ ತಗಂಡು ಬಂಗಾರದ ಹಂಗ ಇರಾನಾ…

    ದಸರಾ ಗೊಂಬೆ ನೋಡಲು ಎಷ್ಟೊಂದು ಸುಂದರ

    ಕನ್ನಡಪ್ರೆಸ್.ಕಾಮ್ ನ ದಸರಾ ಗೊಂಬೆ ಹಬಕ್ಕೆ ನೂರಾರು ಫೋಟೋಗಳು ಬರುತ್ತಲೆ ಇವೆ. ಪ್ರತಿದಿನವೂ ಪ್ರಕಟಿಸುತ್ತಿದ್ದೇವೆ. ಇಂದಿನ ಕೆಲವು ದಸರಾ ಗೊಂಬೆ ಪ್ರದರ್ಶನದ ಫೋಟೋಗಳು ಇಲ್ಲಿವೆ.

    ಚಿತ್ರದುರ್ಗದ ಶೋಭಾ ಮಂಜುನಾಥ್ ಅವರ ಮನೆಯ ಗೊಂಬೆ ಸಂಗ್ರಹ

    ಕಳೆದ ಒಂಭತ್ತು ವರ್ಷಗಳಿಂದ ಶೋಭಾ ಮಂಜುನಾಥ ತಮ್ಮ ಮನೆಯಲ್ಲಿ ಗೊಂಬೆ ಕೂಡಿಸುತ್ತಿದ್ದಾರೆ. ಹಿರಿಯರಿಂದ ಬಂದ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಕೃಷಿ ಅಧಿಕಾರಿಯಾಗಿರುವ ಪತಿ ಹಾಗೂ ಕಾಲೆಜಿನಲ್ಲಿ ಓದುತ್ತಿರುವ ಮಕ್ಕಳು ಬೆಂಬಲವಾಗಿ ನಿಂತಿದ್ದಾರೆ.

    ಬೆಂಗಳೂರಿನ ಸುಮ ರಾಮಚಂದ್ರ ಅವರ ಮನೆ

    ವಿದ್ಯಾ ಜನಾರ್ದನ, ಪ್ರಾರ್ಥನಾ ಶಾಲೆ ವಿದ್ಯಾರ್ಥಿನಿ, ಶ್ರೀನಗರ

    ಎ. ಶೌರ್ಯ,ಬಿಜಿಎಸ್ ಪಬ್ಲಿಕ್ ಶಾಲೆ, ಕೆಂಗೇರಿ

    ಮೈಸೂರಿನ ಚೈತ್ರಾ ಅವರ ಮನೆಯ ಗೊಂಬೆ ಲೋಕ

    ಮೈಸೂರಿನ ಕೇರ್ಗಳ್ಳಿಯ ಸಿ.ಚೈತ್ರಾ ಅವರು ತಮ್ಮ ತಾಯಿ ಮನೆಯಿಂದ ಬಂದ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.ಕಳೆದ ಐದು ವರುಷಗಳಿಂದ ಗೊಂಬೆ ಕೂಡಿಸುತ್ತಿದ್ದಾರೆ.

    ವೆಲ್ತ್ ಅಡೈವಸರ್ ಆಗಿರುವ ತಮ್ಮ ಪತಿ ಗೊಂಬೆ ಕೂಡಿಸುವಲ್ಲಿ ಬೆಂಬಲವಾಗಿ ನಿಂತಿದ್ದಾರೆ ಎಂದು ಚೈತ್ರಾ ಹೇಳುತ್ತಾರೆ. ಪ್ರತಿವರ್ಷ ಎಲ್ಲರನ್ನೂ ಕರೆಯುತ್ತಿದ್ದೆವು ಆದರೆ ಈ ಬಾರಿ ಅಕ್ಕ ಪಕ್ಕದ ಮನೆಯವರು ಮಾತ್ರ ಗೊಂಬೆ ನೋಡಲು ಬರುತ್ತಿದ್ದಾರೆ ಎನ್ನುತ್ತಾರೆ.

    ಚೈತ್ರಾ ಅವರ ಮನೆಯ ಗೊಂಬೆ ಆಲ್ಬಂ ಇಲ್ಲಿದೆ.

    ಇವಳೇ ವೀಣಾಪಾಣಿ ತುಂಗಾ ತೀರ ವಿಹಾರಿಣಿ

    ಇಂದು ನವರಾತ್ರಿ ಏಳನೇ ದಿನ. ಕನ್ನಡಪ್ರೆಸ್.ಕಾಮ್ ನ ಸಂಗೀತೋತ್ಸವ ಮತ್ತೊಂದು ಹಂತವನ್ನು ತಲುಪಿದೆ.ಅರುಣ್ ಕುಮಾರ್ ಇಂದಿನ ಸಂಗೀತ ಸಂಜೆಯನ್ನು ನಡೆಸಿಕೊಟ್ಟಿದ್ದಾರೆ.

    ಗೆಳೆಯರ ಬಳಗದಲ್ಲಿ ಜ್ಯೂನಿಯರ್ ಎಸ್ ಪಿ ಬಾಲಸುಬ್ರಹ್ಮಣ್ಯಂ ಎಂದೇ ಕರೆಸಿಕೊಳ್ಳುವ ಅರುಣ್ ಕುಮಾರ್ ಶ್ರೋತೃಗಳು ತಲೆ ತೂಗುವಂತೆ ಹಾಡಬಲ್ಲರು. ತಮ್ಮ ಸಂಗೀತದಲ್ಲಿ ಜನಪ್ರಿಯ ಗೀತೆಗಳ ಕರೋಕೆ ಯನ್ನೂ ಬಳಸಿಕೊಂಡಿರುವ ಅರುಣ್ ಕುಮಾರ್ ವಿಶೇಷ ಅನುಭೂತಿ ಕಟ್ಟಿಕೊಡುತ್ತಾರೆ. ಜೊತೆಗೆ ದಸರಾ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

    ಭಾರತಿ ಎಸ್ ಎನ್ ಅವರ ನಿರರ್ಗಳ ವ್ಯಾಖ್ಯಾನ ಈ ಪಾಡ್ಕಾಸ್ಟ್ ಅನ್ನು ಮತ್ತಷ್ಟು ಆಪ್ಯವೆನಿಸುವಂತೆ ಮಾಡುತ್ತದೆ.

    ನೀವು ಆಲಿಸಿ, ಪ್ರತಿಕ್ರಿಯಿಸಿ.

    error: Content is protected !!