22.4 C
Karnataka
Saturday, May 23, 2026
    Home Blog Page 129

    ಶಾಲೆಗಳಲ್ಲಿ ಮಕ್ಕಳ ಕಲರವ; ಸಮವಸ್ತ್ರದೊಂದಿಗೆ ಶಾಲೆಗಳತ್ತ ಹೆಜ್ಜೆ ಹಾಕಿದ ವಿದ್ಯಾರ್ಥಿಗಳು

    ಶಾಲಾರಂಭ: ಪೋಷಕರು-ಮಕ್ಕಳ ಮುಖದಲ್ಲಿ ಮಂದಹಾಸ- ಸುರೇಶ್ ಕುಮಾರ್

    ‘ಕರೋನಾ ಓಡಿಸೋಣ… ನಮ್ಮ ಮಕ್ಕಳನ್ನು ಸುರಕ್ಷಿತ ವಾತಾವರಣದಲ್ಲಿ ಓದಿಸೋಣ…’ ಎಂಬ ಧ್ಯೇಯವಾಖ್ಯದೊಂದಿಗೆ ಹೆಚ್ಚುಕಮ್ಮಿ ಆರೇಳು ತಿಂಗಳ ನಂತರ ಶಾಲೆಗಳು ಆರಂಭವಾಗಿ ರಾಜ್ಯದೆಲ್ಲೆಡೆ ಶಾಲಾ ಪರಿಸರದಲ್ಲಿ ಮಕ್ಕಳ ಕಲರವ ಕೇಳಿ ಬಂದಿದ್ದು, ಮಕ್ಕಳು ಮತ್ತು ಪೋಷಕರಲ್ಲಿ ಸಂಭ್ರಮ ಮನೆ ಮಾಡಿತ್ತು ಎಂದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

    ಹೊಸ ವರ್ಷದ ಮೊದಲ ದಿನವಾದ ಶುಕ್ರವಾರ 10 ಮತ್ತು 12ನೇ ತರಗತಿಗಳು ಮತ್ತು 6 ರಿಂದ 9ನೇ ತರಗತಿಗಳಿಗೆ ಪರಿಷ್ಕೃತ ವಿದ್ಯಾಗಮ ತರಗತಿಗಳ ಆರಂಭವಾದ ಹಿನ್ನೆಲೆಯಲ್ಲಿ ಇಂದು ಆನೇಕಲ್ ತಾಲೂಕಿನ ಹೆನ್ನಾಗರ, ಹೆಬ್ಬಗೋಡಿ, ಚಂದಾಪುರ ಚತ್ರಖಾನೆ, ಅತ್ತಿಬೆಲೆ, ಸರ್ಜಾಪುರದ ಸರ್ಕಾರಿ ಪ್ರೌಢಶಾಲೆಗಳು ಮತ್ತು ಚಂದಾಪುರದ ಸ್ವಾಮಿ ವಿವೇಕಾನಂದ ಗ್ರಾಮಾಂತರ ಪ್ರೌಢಶಾಲೆ, ದೊಮ್ಮಸಂದ್ರದ ಸರಸ್ವತಿ ವಿದ್ಯಾನಿಕೇತನ ಶಾಲೆಗಳಿಗೆ ತಾವು ಭೇಟಿ ನೀಡಿದ್ದು, ಮಕ್ಕಳು ಮತ್ತು ಪೋಷಕರು ಶಾಲೆ ಆರಂಭದಿಂದ ಅತ್ಯಂತ ಖುಷಿಯಾಗಿರುವುದನ್ನು ಕಣ್ಣಾರೆ ಕಂಡಿದ್ದೇನೆ ಎಂದು ಅವರು ಶುಕ್ರವಾರ ಸಂಜೆ ಶಾಲಾರಂಭದ ಅನುಭವಗಳನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

    ರಾಜ್ಯಾದ್ಯಂತ ಹೊಸ ವರ್ಷದ ಮೊದಲ ದಿನವಾದ ಶುಕ್ರವಾರ ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಶಾಲೆಗಳು ಪ್ರಾರಂಭವಾಗಿವೆ. ರಾಜ್ಯದಲ್ಲಿರುವ 5492 ಪದವಿ ಪೂರ್ವ ಕಾಲೇಜುಗಳಲ್ಲಿ ದಾಖಲಾಗಿರುವ 241965 ವಿದ್ಯಾರ್ಥಿಗಳ ಪೈಕಿ ಇಂದು 78794 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. (ಶೇ. 32.56 ಹಾಜರಿ) ಅಂತೆಯೇ 16850 ಪ್ರೌಢಶಾಲೆಗಳಲ್ಲಿ 10ನೇ ತರಗತಿಗೆ ದಾಖಲಾಗಿರುವ ವಿದ್ಯಾರ್ಥಿಗಳ ಪೈಕಿ 927472 ವಿದ್ಯಾರ್ಥಿಗಳು 380264 ಹಾಜರಾಗಿದ್ದಾರೆ. (ಶೇ. 41 ಹಾಜರಾತಿ) ಮಧ್ಯಾಹ್ನದ ಮೇಲೆ 6ರಿಂದ 9ನೇ ತರಗತಿಗಳಿಗೆ ಸಂಬಂಧಿಸಿದಂತೆ ವಿದ್ಯಾಗಮ ತರಗತಿಗಳು ಪ್ರಾರಂಭವಾಗಿವೆ. ಇದರ ಅಂಕಿ-ಅಂಶಗಳು ಅಪ್‍ಡೇಟ್ ಆಗುತ್ತಿದ್ದು, ವಿವರಗಳು ಇನ್ನೂ ದೊರೆಯಬೇಕಿದೆ ಎಂದು ಸಚಿವರು ವಿವರಿಸಿದರು.

    ಎಲ್ಲರ ಸಹಕಾರದಿಂದ ಶಾಲೆಗಳು ಆರಂಭ: ಇಲಾಖೆಯ ಹಿರಿಯ ಅಧಿಕಾರಿಗಳು, ಜಿಲ್ಲಾಡಳಿತಗಳು, ಜನಪ್ರತಿನಿಧಿಗಳು ಎಲ್ಲರೂ ಒಗ್ಗಟ್ಟಾಗಿ ನಮ್ಮ ಮಕ್ಕಳ ಭವಿಷ್ಯಕ್ಕೆ ಒಂದು ರೀತಿಯ ಕಾಯಕಲ್ಪವನ್ನು ದೊರಕಿಸಿಕೊಟ್ಟಿದ್ದಾರೆ. ರಾಜ್ಯದ ಎಲ್ಲ ಜನಪ್ರತಿನಿಧಿಗಳು ಸಹಕರಿಸಿದ್ದಾರೆ ಎಂದು ಸಚಿವರು ಹೇಳಿದರು.

    ಮಕ್ಕಳು ಮಾಸ್ಕ್ ಹಾಕಿಕೊಂಡು, ಪೋಷಕರ ಅನುಮತಿ ಪತ್ರದೊಂದಿಗೆ ಶಾಲೆಗೆ ಹಾಜರಾದರು. ರಾಜ್ಯದ ಬಹುತೇಕ ಎಲ್ಲ ಶಾಲೆಗಳಲ್ಲಿ ಮಕ್ಕಳನ್ನು ಬರಮಾಡಿಕೊಳ್ಳಲು ಊರವರು, ಶಾಲಾಭಿವೃದ್ಧಿ ಸಮಿತಿಗಳವರು ಮಾವು, ತೆಂಗಿನ ಗರಿ, ಬಾಳೆಕಂಬಗಳೊಂದಿಗೆ ತಳಿರು ತೋರಣ ಕಟ್ಟಿದ್ದು ವಿಶೇಷವಾಗಿತ್ತು. ರಂಗೋಲಿ ಬಿಡಿಸಲಾಗಿತ್ತು. ಇಂದು ರಾಜ್ಯದ ಹಬ್ಬದ ವಾತಾವರಣ ಮೂಡಿತ್ತು. ಹಳ್ಳಿಗಳಲ್ಲಿ ಮನೆಮನೆಗಳಲ್ಲಿ ಹೊಸ ವರ್ಷದ ಈ ದಿನ ಹಬ್ಬದ ವಾತಾವರಣವನ್ನೇ ಸೃಷ್ಟಿಸಿತ್ತು. ಬೆಳ್ಳಂಬೆಳಗ್ಗೆಯೇ ಮಕ್ಕಳನ್ನು ಎಬ್ಬಿಸಿ ಶಾಲೆಗೆ ಹೋಗಲು ತಯಾರಿ ನಡೆಸಿದ ಪೋಷಕರು ಮಕ್ಕಳಿಗೆ ಲಘು ಉಪಹಾರ ಮತ್ತು ಬಿಸಿ ನೀರಿನ ಬಾಟಲಿಯೊಂದಿಗೆ ಶಾಲೆಗೆ ಕಳಿಸಿದ್ದರು ಎಂದು ಸುರೇಶ್ ಕುಮಾರ್ ಹೇಳಿದರು.

    ಶಾಲಾರಂಭದ ಒಂದು ಸ್ಲೈಡ್ ಶೋ ಇಲ್ಲಿದೆ.

    10ನೇ ತರಗತಿ ಮತ್ತು ದ್ವಿತೀಯ ಪಿಯು ತರಗತಿಗಳು ಬೆಳಗ್ಗೆ ಆರಂಭವಾದರೆ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನದ ಪಾಳಿಗಳಲ್ಲಿ 6ರಿಂದ 9ನೇ ತರಗತಿಗಳ ವಿದ್ಯಾಗಮ ತರಗತಿಗಳು ಶಾಲಾವರಣದಲ್ಲಿ ಪುಟ್ಟಪುಟ್ಟ ತಂಡಗಳಲ್ಲಿ ಮಾರ್ಗದರ್ಶಿ ಶಿಕ್ಷಕರ ಕಣ್ಗಾವಲಿನಲ್ಲಿ ಆರಂಭಗೊಂಡವು. ಹಲವಾರು ಕಡೆಗಳಲ್ಲಿ ಕೆಲವು ಮಕ್ಕಳು ತಮ್ಮದೇ ಆದ ಸ್ಯಾನಿಟೈಜ್ ಬಾಟಲಿಗಳನ್ನು ಜೊತೆಗಿಟ್ಟುಕೊಂಡಿದ್ದು ಕಂಡು ಬಂತು. ಮಾಸ್ಕ್ ಮರೆತು ಬಂದ ಮಕ್ಕಳಿಗೆ ಶಾಲೆಯ ಶಿಕ್ಷಕರು ಮಾಸ್ಕ್ ಗಳನ್ನು ನೀಡಿದರು. ಶಾಲೆಗೆ ಬರುವುದರಿಂದ ಹಿಡಿದು ಶಾಲೆಯಿಂದ ಹೋಗುವ ತನಕವೂ ಒಬ್ಬರಿಗೊಬ್ಬರು ದೈಹಿಕ ಅಂತರ ಕಾಪಾಡಿಕೊಳ್ಳುವಂತೆ ಶಿಕ್ಷಕರು ನೋಡಿಕೊಂಡರು. ಮೊದಲ ದಿನವಾದ ಇಂದು ತರಗತಿಗಳಲ್ಲಿ ಕೋವಿಡ್ ಕುರಿತು ಮುಂಜಾಗ್ರತ ಕ್ರಮಗಳು, ಅನುಸರಿಸಬೇಕಾದ ನಿಯಮಗಳು, 10 ಮತ್ತು 12ನೇ ತರಗತಿಗಳ ಶಿಕ್ಷಣದ ಮಹತ್ವ ಮತ್ತು ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾಗಿ ಶಾಲೆಗೆ ಮತ್ತು ಪೋಷಕರಿಗೆ ಕೀರ್ತಿತರಬೇಕೆಂಬುದರ ಉಪಯುಕ್ತತೆಯನ್ನು ಶಿಕ್ಷಕರು ಹೇಳುತ್ತಿದ್ದರು ಎಂದು ಸಚಿವರು ಹೇಳಿದರು.

    ಪೋಷಕರ ಸಮಾಧಾನ: ಶಾಲೆಗಳಿಗೆ ತಮ್ಮ ಮಕ್ಕಳೊಂದಿಗೆ ಬಂದ ಪೋಷಕರು ಶಾಲೆಯಲ್ಲಿ ಮಕ್ಕಳಿಗಾಗಿ ಕೈಗೊಂಡಿರುವ ಕ್ರಮಗಳು, ಸ್ವಚ್ಛತೆ ಕುರಿತು ಕೈಗೊಂಡ ಕ್ರಮಗಳನ್ನು ಗಮನಿಸಿ ತಮ್ಮ ಮಕ್ಕಳ ಸುರಕ್ಷೆ ಕುರಿತು ಸಮಾಧಾನದಿಂದ ಹೋಗುತ್ತಿದ್ದುದು ವಿಶೇಷವಾಗಿತ್ತು. ಹಲವಾರು ಕಡೆಗಳಲ್ಲಿ ದೃಶ್ಯಮಾಧ್ಯಮಗಳ ಪ್ರತಿನಿಧಿಗಳು ಶಾಲೆಗಳಿಗೆ ಭೇಟಿ ನೀಡಿ ಶಾಲಾರಂಭಕ್ಕೆ ಕೈಗೊಳ್ಳಲಾದ ಸಚಿತ್ರ ವರದಿಗಳನ್ನು ಬಿತ್ತರಿಸುತ್ತಿದ್ದುದರಿಂದ ಪೋಷಕರು ಸಮಾಧಾನವಾಗಿದ್ದರು. ಕೆಲವು ಕಡೆಗಳಲ್ಲಿ ಶಿಕ್ಷಕರು ಆರತಿ ಬೆಳಗಿದರು. ಸಿಹಿ ತಿನ್ನಿಸಿದರು. ಚಾಕೋಲೇಟ್ ಹಂಚಿದರು. ವಿದ್ಯಾರ್ಥಿಗಳು ಬಹಳ ದಿನಗಳ ನಂತರ ಸ್ನೇಹಿತರು-ಸಹಪಾಠಿಗಳನ್ನು ಕಂಡು ಪುಳಕಿತರಾಗಿ ಹಾಯ್ ಹಾಯ್ ಎನ್ನುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು ಎಂದು ಅವರು ವಿವರಿಸಿದರು.

    ಕೆಲವು ಶಾಲೆಗಳ ಆವರಣದಲ್ಲ್ಲಿ ಮಕ್ಕಳನ್ನು ಸಾಲಾಗಿ ನಿಲ್ಲಿಸಿ ಶಿಕ್ಷಕರು, ಜಿಲ್ಲಾಧಿಕಾರಿಗಳು, ಸಿಒಇಗಳು ಮಾತನಾಡಿ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ ಮಾತುಗಳನ್ನಾಡಿದ್ದು ವಿಶೇಷವಾಗಿತ್ತು. ಕೆಲವು ಶಾಲೆಗಳಲ್ಲಿ ಸರಸ್ವತಿ-ಗಣೇಶ ಫೋಟೋಗಳಿಗೆ ಪೂಜೆಗಳು ನಡೆದು, ಸರಸ್ವತಿ ಮತ್ತು ಗಣೇಶನ ಸ್ತೋತ್ರವನ್ನು ಮಕ್ಕಳು ಹಾಡಿ ಸರಸ್ವತಿ ಮತ್ತು ಗಣೇಶನ ಆಶೀರ್ವಾದ ಪಡೆದು ತರಗತಿಗಳತ್ತ ನಡೆದರು. ಪ್ರತಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯು ತರಗತಿ ಕೊಠಡಿಗಳಲ್ಲಿ 15 ವಿದ್ಯಾರ್ಥಿಗಳಿಗೆ ಕೂರಲು ಅವಕಾಶ ಮಾಡಿಕೊಡಲಾಗಿತ್ತು. ದೊಡ್ಡ ಕೊಠಡಿಗಳಲ್ಲಿ 20 ಮಕ್ಕಳ ತಂಡ ಮಾಡಲಾಗಿತ್ತು. ಬಳ್ಳಾರಿಯ ವಿವಿಧ ಶಾಲೆಗಳಲ್ಲಿ ಶಿಕ್ಷಕಿಯರು, ತಾಯಂದಿರು ಶಾಲಾ ಮಕ್ಕಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರ ಮಾಡಿಕೊಂಡಿದ್ದು ಮಕ್ಕಳು ಮತ್ತು ಊರವರಲ್ಲಿ ಖುಷಿಯ ವಾತಾವರಣ ಮೂಡಿಸಿತ್ತು. ಕೆಲವಡೆಗಳಲ್ಲಿ ಮಕ್ಕಳನ್ನು ಓಲಗ ವಾದ್ಯ, ತಮಟೆಗಳಿಂದ ಸ್ವಾಗತಿಸಿದ್ದು ವಿಶೇಷವಾಗಿತ್ತು ಎಂದು ಸಚಿವರು ವಿವಿಧೆಡೆಯ ಶಾಲಾರಂಭದ ವಿವರ ನೀಡಿದರು.

    ಕೊಪ್ಪಳದ ಹಲವಾರು ಶಾಲೆಯಲ್ಲಿ ಶಿಕ್ಷಕರು ಗುಲಾಬಿ ಹೂ ನೀಡಿ ಮಕ್ಕಳನ್ನು ಬರಮಾಡಿಕೊಂಡರು. ರಾಯಚೂರಿನ ಕೆಲವು ಶಾಲೆಗಳಲ್ಲಿ ಹೊಸ ವರ್ಷದ ಅಂಗವಾಗಿ ಮಕ್ಕಳಿಂದ ಕೇಕ್ ಕತ್ತರಿಸಿ ಪ್ರೀತಿಯಿಂದ ಬರಮಾಡಿಕೊಳ್ಳಲಾಯಿತು. ಇಡೀ ರಾಜ್ಯ ಶಾಲಾರಂಭದ ಮೂಲಕ ಹೊಸ ವರ್ಷವನ್ನು ಆಚರಿಸುತ್ತಿರುವುದು ಬಹುದೊಡ್ಡ ವಿಶೇಷವಾಗಿದೆ. ಕೊರೋನಾ ಕರಿನೆರಳಿನ ನಡುವೆಯೂ ನೀವು ಎಸ್ ಎಸ್ ಎಲ್ ಸಿ/ ಪಿಯುಸಿ ಪರೀಕ್ಷೆಗಳನ್ನು ನಡೆಸಿದ ಸಂದರ್ಭದಲ್ಲಿ ನಮ್ಮ ಮಕ್ಕಳು ಸರ್ಕಾರದ ಮೇಲೆ ಭರವಸೆಯಿಟ್ಟು ಶಾಲೆಯೊಳಗೆ ನಡೆದು ಬಂದರು. ನಮ್ಮ ಪೋಷಕರೂ ಸಹ ತೋರಿದ ವಿಶ್ವಾಸ, ಇಂದು ನಮ್ಮ ಮಕ್ಕಳ ಭವಿಷ್ಯಕ್ಕೆ ಕಾಯಕಲ್ಪವನ್ನು ಒದಗಿಸುವಲ್ಲಿ ಸಹಕಾರಿಯಾಗಿದೆ. ಮಕ್ಕಳು ಶಾಲೆಗೆ ಬರುವುದು ಕಡ್ಡಾಯವಲ್ಲವಾಗಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ತರಗತಿಗಳಿಗೆ ಹಾಜರಾಗಿದ್ದರು. ಸೋಮವಾರದಿಂದ ಹಾಜರಾತಿ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಸುರೇಶ್ ಕುಮಾರ್ ಹೇಳಿದರು.

    ಸ್ವಾಮೀಜಿಗಳ ಸ್ವಾಗತ, ಜನಪ್ರತಿನಿಧಿಗಳ ಭೇಟಿ:
    ಧರ್ಮಸ್ಥಳದ ಧರ್ಮಾಧಿಕಾರಿಗಳು, ಸುತ್ತೂರು, ಸಿರಿಗೆರೆ, ಸಿದ್ದಗಂಗಾ, ಆದಿಚುಂಚನಗಿರಿ ಸೇರಿದಂತೆ ನಾಡಿನ ವಿವಿಧ ಮಠಾಧೀಶರು ಶಾಲೆ ಆರಂಭವನ್ನು ಸ್ವಾಗತಿಸಿದ್ದು, ಈ ಕಾರ್ಯ ಮೊದಲೇ ಆಗಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಸಚಿವರು ಹೇಳಿದರು.

    ರಾಜ್ಯದ ವಿವಿಧೆಡೆಗಳಲ್ಲಿ ಆಯಾ ಭಾಗದ ಹಲವಾರು ಶಾಸಕರು, ಜನಪ್ರತಿನಿಧಿಗಳು ಶಾಲೆಗೆ ಭೇಟಿ ನೀಡಿ ಮಕ್ಕಳನ್ನು ಶಾಲೆಗಳಿಗೆ ಬರಮಾಡಿಕೊಂಡಿದ್ದಾರೆ. ಹೂ ಕೊಟ್ಟು ಸ್ವಾಗತಿಸಿದ್ದಾರೆ. ವಿಶೇಷವಾಗಿ ಮಾಜಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರೂ ಆದ ನಮ್ಮ ವಿಧಾನಸಭಾಧ್ಯಕ್ಷರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸಿರ್ಸಿಯ ಸರ್ಕಾರಿ ಮಾರಿಕಾಂಬ ಪ್ರೌಢಶಾಲೆ ಸೇರಿದಂತೆ ಹಲವಾರು ಶಾಲೆಗಳಿಗೆ ಭೇಟಿ ನೀಡಿದರು. ಪಶು ಸಂಗೋಪನಾ ಸಚಿವ ಪ್ರಭು ಬಿ. ಚೌಹಾಣ್ ಬೀದರ್ ಜಿಲ್ಲೆಯ ಶಾಲೆಯಲ್ಲಿ ತರಗತಿಗೆ ಹೋಗಿ ಮಕ್ಕಳಿಗೆ ಸಹಿ ಹಂಚಿ ಸಂಭ್ರಮಿಸಿದರು. ಬೆಂಗಳೂರಿನಲ್ಲಿ ಸಚಿವ ಕೆ.ಗೋಪಾಲಯ್ಯ ಕೆಲವು ತಮ್ಮ ವಿಧಾನಸಭಾ ಕ್ಷೇತ್ರದ ಶಾಲೆಗಳಿಗೆ ಭೇಟಿ ಮಾಸ್ಕ್ ಮತ್ತು ಸ್ಯಾನಿಟೈಜ್ ವಿತರಿಸಿದ್ದು ವಿಶೇಷವಾಗಿತ್ತು. ವಿಧಾನಸಭಾ ಉಪಾಧ್ಯಕ್ಷ ಆನಂದ ಮಾಮನಿ, ವಿಧಾನಸಭಾ ಸದಸ್ಯರಾದ ಮಾಡಾಳು ವಿರೂಪಾಕ್ಷಪ್ಪ, ಎಂಎಲ್ ಸಿ ಡಾ. ವೈ.ಎ. ನಾರಾಯಣಸ್ವಾಮಿ, ಜ್ಯೋತಿ ಗಣೇಶ್, ಸಿ.ಎಸ್. ಪಟ್ಟರಾಜು, ಉಮಾನಾಥ ಕೋಟ್ಯಾನ್, ಡಾ.ರಾಜೇಶ್ ನಾಯಕ್ ಉಳಿಪ್ಪಾಡಿ ಸೇರಿದಂತೆ ರಾಜ್ಯದ ವಿವಿಧೆಡೆ ಹಲವಾರು ಶಾಸಕರು, ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು, ಜಿಲ್ಲಾ ಪಂಚಾಯ್ತಿ ಶಿಕ್ಷಣ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ತಾಪಂ ಸದಸ್ಯರು ಸೇರಿದಂತೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಹಲವಾರು ಕಡೆಗಳಲ್ಲಿ ಸ್ವಾಮೀಜಿಯವರು, ಶಾಲೆಗಳಿಗೆ ಭೇಟಿ ನೀಡಿದ ಮಕ್ಕಳು ಮತ್ತು ಪೋಷಕರಲ್ಲಿ ಭರವಸೆ ಮೂಡಿಸಿದ್ದು ವರದಿಯಾಗಿದೆ. ಅವರೆಲ್ಲರಿಗೆ ನನ್ನ ಮನದಾಳದ ಕೃತಜ್ಞತೆಗಳು ಸಲ್ಲುತ್ತವೆ ಎಂದು ಸಚಿವರು ಹೇಳಿದರು.

    ಬಹುತೇಕ ಕಡೆಗಳಲ್ಲಿ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು ಹಾಗೂ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಪ್ರತ್ಯೇಕ ತಂಡಗಳಲ್ಲಿ ಭೇಟಿ ನೀಡಿ ಮಕ್ಕಳನ್ನು ಹುರಿದುಂಬಿಸಿದ್ದಾರೆ. ಶಾಲೆಗಳಲ್ಲಿ ಮಕ್ಕಳು ಅತ್ಯುತ್ಸಾಹದಿಂದ ಬರುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು ಎಂದು ಅವರು ಹೇಳಿದರು.

    ಶಿರಸಿ ಶೈಕ್ಷಣಿಕ ಜಿಲ್ಲೆಯ ಗಡಿಭಾಗದ ಹಳ್ಳಿಯಾದ ಗೋಲವಾಡದಲ್ಲಿ ಒಟ್ಟು 52 ಮಕ್ಕಳಲ್ಲಿ 45 ಮಕ್ಕಳು ಬಂದಿದ್ದರು. ಮಧುಗಿರಿಯ ಬಡವನಹಳ್ಳಿ ಶಾಲೆಯಲ್ಲಿ 180ಕ್ಕೆ 170 ಮಕ್ಕಳು ಹಾಜರಿದ್ದರು. ಧಾರವಾಡದ ಆರ್‍ಎನ್ ಶೆಟ್ಟಿ ಸರ್ಕಾರಿ ಪ್ರೌಢಶಾಲೆ ಮತ್ತು ಕರ್ನಾಟಕ ಹೈಸ್ಕೂಲ್‍ಗಳಲ್ಲಿ ಜಿಲ್ಲಾಧಿಕಾರಿ ಮತ್ತು ಸಿಇಒಗಳು ಮಕ್ಕಳನ್ನು ಹೂ ನೀಡಿ ಬರಮಾಡಿಕೊಂಡರು. ಹಲವಾರು ಕಡೆಗಳಲ್ಲಿ ದಾನಿಗಳು ಸೋಪು, ಸ್ಯಾನಿಟೈಜರ್, ಮಾಸ್ಕ್‍ಗಳನ್ನು ನೀಡಿ ಸಹಕಾರದ ಹಸ್ತ ಚಾಚಿದ್ದಾರೆ. ಮಾಗಡಿ ತಾಲೂಕಿನಲ್ಲಿ ದಾನಿಯೊಬ್ಬರು ಎರಡು ಸಾವಿರ ಮಾಸ್ಕ್‍ಗಳನ್ನು ಬಿಇಒರಿಗೆ ತಲುಪಿಸಿದ್ದಾರೆ ಎಂದು ಸಚಿವರು ವಿವರಿಸಿದರು.

    ಮಕ್ಕಳಿಲ್ಲದ ಶಾಲೆಗಳನ್ನು ನಾವು ಕಲ್ಪಿಸಿಕೊಳ್ಳುವುದೇ ಕಷ್ಟ. ಇಂದು ಶಾಲಾ ಪರಿಸರಕ್ಕೆ ಜೀವ ಬಂದಂತಾಗಿತ್ತು. ಕಳೆದ 10 ತಿಂಗಳಿಂದ ಶಾಲಾ ಪರಿಸರ ಬಣಗುಟ್ಟುತ್ತಿದ್ದುದರಿಂದ ಬೇಜಾರಾಗಿದ್ದ ಶಿಕ್ಷಕರು ಶಾಲೆಗಳಲ್ಲಿ ಮಕ್ಕಳ ಕಲರವ ಕೇಳಿ ಶಿಕ್ಷಕರು ಆನಂದ ತಂದಿಲರಾಗಿದ್ದರು ಎಂದು ಸಚಿವರು ಹೇಳಿದರು.

    ಉಡುಪಿಯ 2 ಶಾಲೆ ಸೋಮವಾರ ಆರಂಭ:
    ಉಡುಪಿ ಜಿಲ್ಲೆಯಲ್ಲಿ ಒಬ್ಬ ಶಿಕ್ಷಕ ಮತ್ತು ಒಬ್ಬ ಸಹಾಯಕನಿಗೆ ಕೊರೋನಾ ಪಾಸಿಟೀವ್ ಫಲಿತಾಂಶದ ಹಿನ್ನೆಲೆಯಲ್ಲಿ ಎರಡು ಶಾಲೆಗಳು ಇಂದು ಆರಂಭವಾಗಿಲ್ಲ. ಹೆಬ್ರಿಯ ಕೆಪಿಎಸ್ ಶಾಲೆಯ ಅಟೆಂಟರ್ ಮತ್ತು ಬ್ರಹ್ಮಾವರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಗೆ ಕೊರೋನಾ ಪಾಸಿಟೀವ್ ಬಂದಿದ್ದು, ಈ ಶಾಲೆಗಳು ಆರಂಭವಾಗಲಿಲ್ಲ. ಸೋಮವಾರದಿಂದ ಈ ಶಾಲೆಗಳು ಆರಂಭವಾಗಲಿವೆ.

    ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಅಧಿಕಾರಿಗಳ ತಂಡಗಳನ್ನು ರಚಿಸಿದ್ದು, ಅವರು ಶಾಲಾ ಆರಂಭದ ಕುರಿತು ಗಮನ ಹರಿಸುವರು ಎಂದು ಸಚಿವರು ವಿವರಿಸಿದರು.

    ಮೊದಲ ದಿನವಾದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಶಾಲೆಯೊಳಗೆ ಕಳಿಸಿ, ಶಾಲೆಯ ಸಿದ್ಧತೆಗಳನ್ನು ಗಮನಿಸಿ, ಶಿಕ್ಷಕರೊಂದಿಗೆ ಮಾತನಾಡುತ್ತಿದ್ದುದು ಕಂಡು ಬಂದಿತು ಎಂದು ಸುರೇಶ್ ಕುಮಾರ್ ಹೇಳಿದರು.

    ವಿಶೇಷವಾಗಿ ಗ್ರಾಮೀಣ ಭಾಗದ ಪೋಷಕರು ಶಾಲೆ ಆರಂಭವಾದುದಕ್ಕೆ ಭಾರಿ ಖುಷಿಯಲ್ಲಿದ್ದರು.

    ವಿಜಯಪುರ ತಾಲೂಕಿನ ಟಕ್ಕಳಕಿ ತಾಂಡಾದ ಮಹಿಳೆಯರು ತಮ್ಮ ಮಕ್ಕಳನ್ನು ಶಾಲೆಗೆ ಕರೆತಂದು ಶಾಲೆ ಆರಂಭವಾದುದಕ್ಕೆ ಬೆಟ್ಟದಷ್ಟು ಖುಷಿಯಾಗಿದೆ ಎಂದು ಶಿಕ್ಷಕರ ಬಳಿ ಹೇಳುತ್ತಿದ್ದರು.

    ಟಕ್ಕಳಕಿ ತಾಂಡಾದ ಓರ್ವ ಪೋಷಕಿ ಮಲ್ಲಮ್ಮ ನಾಯ್ಕ, ‘ಶಾಲೆ ಆರಂಭವಾಗದಿರುವುದರಿಂದ ಮಕ್ಕಳು ಮನೆಮಠ ಬಿಟ್ಟು ಸಿಕ್ಕಸಿಕ್ಕ ಕಡೆಗಳಲ್ಲೆಲ್ಲಾ ತಿರುಗಾಡುತ್ತಿದ್ದರು. ಶಾಲೆ ಆರಂಭವಾಗಿರುವುದು ನಮಗೆ ಹೇಳಲಾರದಷ್ಟು ಖುಷಿಯಾಗಿದೆ. ಸಾರ್ ಇವರೆಲ್ಲ ಇನ್ನು ನಿಮ್ಮ ಮಕ್ಕಳು. ಚೆನ್ನಾಗಿ ನೋಡಿಕೊಳ್ಳಿ.. ಶಾಲೆ ಆರಂಭಿಸಿದುದಕ್ಕೆ ಶಿಕ್ಷಕರಿಗೆ ಕೈಮುಗಿದು ಕೃತಜ್ಞತೆ ವ್ಯಕ್ತಪಡಿಸಿದರು.

    ದಕ್ಷಿಣ ಕನ್ನಡ ಜಿಲ್ಲೆಯ ಮಿಜಾರಿನ ವಿದ್ಯಾರ್ಥಿಯೊಬ್ಬನ ತಾಯಿ ಸುಮಿತ್ರಾ, ‘ಶಾಲೆ ಆರಂಭಿಸಿದ್ದು, ನಮಗೆ ಖುಷಿಯ ವಿಷಯವಾಗಿದೆ. ಹೆಚ್ಚುಕಮ್ಮಿ ಒಂದು ವರ್ಷದಿಂದ ಶಾಲೆಗಳಿಲ್ಲದೇ ಮಕ್ಕಳನ್ನು ನಾವು ಹಿಡಿಯುವುದೇ ಕಷ್ಟವಾಗಿತ್ತು. ಇನ್ನಾದರೂ ಶಾಲೆ ಆರಂಭವಾಯಿತಲ್ಲ, ಶಾಲೆಗಳು ಯಾವುದೇ ತೊಂದರೆಯಿಲ್ಲದೇ ನಡೆಯಲು ಭಗವಂತ ಹರಸಲಿ’ ಎಂದು ಶಿಕ್ಷಕರೊಂದಿಗೆ ಮಾತನಾಡುತ್ತಾ ಸಂಭ್ರಮ ವ್ಯಕ್ತಪಡಿಸಿದರು.

    ಈ ಅಭಿಪ್ರಾಯಗಳು ರಾಜ್ಯದ ಬಹುತೇಕ ಪೋಷಕರ ಅಭಿಪ್ರಾಯವನ್ನು ಅಭಿವ್ಯಕ್ತಿಯಾಗಿತ್ತು. ನಾನು ಭೇಟಿ ಮಾಡಿದ ಬಹುತೇಕ ಕಡೆಗಳಲ್ಲಿ ಉಳಿದ ತರಗತಿಗಳನ್ನೂ ಆರಂಭಿಸಿ ಎಂದು ಪೋಷಕರು ಒತ್ತಾಯಿಸುತ್ತಿದ್ದರು. ಪರಿಸ್ಥಿತಿ ಗಮನಿಸಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಭಿಪ್ರಾಯ ಪಡೆದು ಈ ಕುರಿತು ಮುಂದೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರಿಗೆ ತಿಳಿಸಿದೆ ಎಂದು ಸುರೇಶ್ ಕುಮಾರ್ ಹೇಳಿದರು.

    ಪತ್ರಿಕಾಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ. ಅನ್ಬುಕುಮಾರ್, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸ್ನೇಹಲ್ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಜರಿದ್ದರು

    ಹ್ಯಾಪಿ ನ್ಯೂ ಯಿಯರ್ 2021

    ನಮ್ಮೆಲ್ಲಾ ಓದುಗರಿಗೆ, ಲೇಖಕರಿಗೆ ಮತ್ತು ಜಾಹೀರಾತುದಾರರಿಗೆ ಹೊಸ ವರ್ಷ 2021 ಸಂಸತವನ್ನು ತರಲೆಂದು ಶುಭ ಹಾರೈಕೆ. ಕನ್ನಡಪ್ರೆಸ್.ಕಾಮ್ ನ ಮೇಲೆ ನಿಮ್ಮ ಪ್ರೀತಿ , ವಿಶ್ವಾಸ, ಅಭಿಮಾನ ನೂತನ ಸಂವತ್ಸರದಲ್ಲೂ ಹೀಗೆಯೇ ಮುಂದುವರಿಯಲಿ.

    ಶ್ರೀವತ್ಸ ನಾಡಿಗ್, ಪ್ರಧಾನ ಸಂಪಾದಕ

    ಉಸಿರು ಹೋದರು ಉಳಿಯುವುದು ಹೆಸರೊಂದೇ

    ಹುಟ್ಟಿದ ಮಗುವಿಗೆ ಹೆಸರು ಹುಡುಕುವುದು ಎಷ್ಟು ಕುತೂಹಲಕಾರಿ ಘಟ್ಟವೋ ಅಷ್ಟೇ ತ್ರಾಸದ ಕೆಲಸವೂ ಹೌದು .

    ಪೋಷಕರು ಮಗು ಇನ್ನೂ ಭ್ರೂಣದಲ್ಲಿರುವಾಗಲೇ ಹೆಸರನ್ನು ಹುಡುಕುತ್ತಿರುತ್ತಾರೆ . ಇಂತಹ ಅಕ್ಷರದಲ್ಲಿ ಮಗುವಿಗೆ ಹೆಸರೊಂದನ್ನು ಸೂಚಿಸಿ ಅಂತ ಫೇಸ್ಬುಕ್ಕು, ವಾಟ್ಸಪ್ ಮತ್ತು ಮೆಸೇಂಜರ್ ಗಳ ಮೂಲಕ ತಮ್ಮ ಸ್ನೇಹಿತರಿಗೆ ಕೋರಿಕೆ ಸಲ್ಲಿಸಿರುತ್ತಾರೆ .

    ಈಗಿನವರು ಇಡುವ ಹೆಸರುಗಳನ್ನು ಕೂಗುವುದಕ್ಕೆ ನಾಲಿಗೆಯೇ ಹೊರಳುವುದಿಲ್ಲ ಹಾಗೆ ಇರುತ್ತವೆ . ಏನು ಹೆಸರು ಅಂತ ಕೇಳಿದ್ರೆ ಅಮ್ಮನ ಹೆಸರಿನಿಂದ ಅರ್ಧ ಅಪ್ಪನ ಹೆಸರಿನಿಂದರ್ಧ ತೆಗೆದು ಎರಡನ್ನೂ ಜೋಡಿಸಿ ಮಗುವಿಗೊಂದು ಹೆಸರಿಟ್ಟಿರೋದು ಅಂತಾರೆ . ಇನ್ನೂ ಜಾಸ್ತಿ ಕೇಳಿದ್ರೆ ಸಂಸ್ಕೃತದ್ದು ಅಂತ ಹೇಳಿ ಸಾರಿಸಿ ಬಿಡ್ತಾರೆ.

    ಕೆಲವರು ಮಗುವಿಗೆ ಹೆಸರು ಇಡುವ ಪ್ರಸಂಗವೇ ಸ್ವಾರಸ್ಯಕರವಾಗಿರುತ್ತೆ.

    ನಾವು ಸಣ್ಣವರಿದ್ದಾಗ ನಮ್ಮ ಪಕ್ಕದ ಮನೆಯ ಒಂಬತ್ತು ತಿಂಗಳ ತುಂಬು ಗರ್ಭಿಣಿಯೊಬ್ಬರು ಸುಂದರ ಸ್ವಪ್ನಗಳು ಅನ್ನೋ ಸಿನಿಮಾಗೆ ಹೋಗಿ ಬಂದಿದ್ದರು , ಮರುದಿನವೇ ಅವರಿಗೆ ಹೆಣ್ಣು ಮಗುವಾಗಿತ್ತು ಅವರು ಆ ಮಗುವಿಗೆ ‘ ಸ್ವಪ್ನ ‘ಅಂತ ಹೆಸರಿಟ್ಟಿದ್ದರು .

    ಹಿಂದೆ ಹಳ್ಳಿಗಳಲ್ಲಂತೂ ಹೆಸರಿಡುವ ರೀತಿಯೇ ವಿಚಿತ್ರವಾಗಿತ್ತು .
    ತುಂಬಾ ಮಂದಿ ಮಕ್ಕಳು ಆಗ್ತಿದ್ದರಿಂದ ಹೆಸರಿನ ಬಗ್ಗೆ ಅವರು ತಲೇನೇ ಕೆಡುಸ್ಕೋತಿರಲಿಲ್ಲ . ದೊಡ್ಡ ಮಗ ಹುಟ್ಟಿದರೆ ದೊಡ್ಡಯ್ಯ . ಎರಡನೆಯವನಿಗೆ ಚಿಕ್ಕಯ್ಯ , ಮೂರನೆಯವನು ದೊಡ್ಡಚಿಕ್ಕ , ನಾಲ್ಕನೆಯವನು ಚಿಕ್ಕದೊಡ್ಡ ಹೀಗೆ . ಇನ್ನು ಕೆಲವರು ಅವರ ತಾತನ ಹೆಸರನ್ನೇ ಇಟ್ಟು ನಾಮಕರಣ ಮಾಡೋವ್ರು .
    ಕೆಲವರಂತೂ ಹುಡುಗನಿಗೆ ಸೀತಯ್ಯ ಹುಡುಗಿಗೆ ರಾಮಕ್ಕ ಅಂತ ಇಟ್ಟಿರುತ್ತಿದ್ದರು .

    ದಂಪತಿಗಳಿಗೆ ಮಗುವಾಗುವುದು ತಡವಾಗಿಯೋ ಅಥವಾ ‌ತುಂಬಾ ವರುಷ ಮಕ್ಕಳಾಗಿಲ್ಲ ಅಂತಲೋ ಅವರಿಷ್ಟದ ದೇವರಿಗೆ ಹರಕೆ ಹೊತ್ತು ….ಬಳಿಕ ಜನಿಸಿದ ಮಗುವಿಗೆ ಅದೇ ದೇವರ ಹೆಸರಿಟ್ಟು ಹರಕೆ ತೀರಿಸುವುದು ವಾಡಿಕೆಯಾಗಿತ್ತು .

    ಇನ್ನು ಹಬ್ಬದ ದಿನಾನೋ ಹಬ್ಬದ ಹಿಂದಿನ ದಿನವೋ ಅಥವಾ ಮಾರನೇ ದಿನವೂ ಹುಟ್ಟಿದರಂತೂ ದೇವರ ಹೆಸರು ಫಿಕ್ಸ್ .

    ಏನೇ ಆಗಲಿ ನಾಮಕರಣ ಮಾಡಿ ಬೇಗ ಹೆಸರು ಇಟ್ಬಿಡಬೇಕು ಇಲ್ಲ ಅಂದ್ರೆ ಗುಂಡ , ಪುಟ್ಟಿ , ಚಿಂಟು , ಲಡ್ಡು , ಬಾಬು ಹೀಗೆ ಸುಮ್ಮನೆ ಟೆಂಪರ್ವರಿಯಾಗಿ ಕರೆಯುವ ಹೆಸರುಗಳೇ ಮುಂದೆ ಪರ್ಮನೆಂಟ್ ಆಗಿ ಕರೆಯುವ ಹೆಸರುಗಳಾಗಿಬಿಡುತ್ತವೆ .

    ಹಿಂದೆಲ್ಲಾ ಹೆಸರಿಂದಲೇ ವ್ಯಕ್ತಿಯ ನೆಲ ಭಾಷೆಯನ್ನು ಕಂಡುಹಿಡಿಯಬಹುದಾಗಿತ್ತು ತೆಲುಗಿನವರು ತಮ್ಮ ಹೆಸರಿನ ಕೊನೆಯಲ್ಲಿ ‘ ಲು ‘ ಎಂದು ತಮಿಳಿನವರು ‘ ನ್ ‘ ಎಂದು , ಮರಾಠಿಗರು ‘ ಕರ್ ‘ ಎಂದು ಸೇರಿಸಿಕೊಳ್ಳುತ್ತಿದ್ದರು ಮತ್ತು ಈಗಲೂ ಸೇರಿಸಿಕೊಳ್ಳುತ್ತಿದ್ದಾರೆ .

    ತಮ್ಮ ಹೆಸರಲ್ಲದೇ …..ಮನೆಯ ಹೆಸರು , ಕಾರ್ಖಾನೆಯ ಹೆಸರು , ಸಂಸ್ಥೆಯ ಹೆಸರು , ಹೊಸ ಉತ್ಪನ್ನದ ಹೆಸರು , ರೆಸ್ಟೋರೆಂಟ್ ನ ಹೆಸರು , ಹೊಸ ಖಾದ್ಯಗಳ ಹೆಸರು , ವಿಜ್ಞಾನಿಗಳ ಆವಿಷ್ಕಾರಗಳ ಹೆಸರು , ವೈದ್ಯರು ಪತ್ತೆಹಚ್ಚಿದ ಹೊಸ ವ್ಯಾಧಿಗಳ ಹೆಸರು ಹೀಗೆ ಜಗತ್ತಿನಲ್ಲಿ ಪ್ರತಿದಿನ ಪ್ರತಿಕ್ಷಣ ಈ ಹೆಸರು ಹುಡುಕುವ ಮತ್ತು ಹೆಸರಿಡುವ ಪ್ರಕ್ರಿಯೆ ನಿರಂತರವಾಗಿ ಜರುಗುತ್ತಲೇ ಇರುತ್ತದೆ .

    ಯಾರೇ ಆಗಲಿ ಯಾವ ಕ್ಷೇತ್ರದಲ್ಲಿಯೇ ಆಗಲಿ ಸಾಧನೆಗೈದಾಗ ಆ ವ್ಯಕ್ತಿ ” ಹೆಸರುವಾಸಿ ” ಆಗುತ್ತಾರೆ . ಜಗತ್ತಿನಲ್ಲಿ ಮಹಾನುಭಾವರ ಉಸಿರು ಹೋದರು ಉಳಿಯುವುದು ಅವರ ಹೆಸರೊಂದೇ .

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೇಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    ಮಕ್ಕಳ ಸುರಕ್ಷತೆ ನಮ್ಮದು, ಶಾಲೆಗೆ ಧೈರ್ಯವಾಗಿ ಕಳಿಸಿ ಎಂದು ಮನವಿ ಮಾಡಿದ ಸುರೇಶ್ ಕುಮಾರ್

    ಶಾಲೆಯಲ್ಲಿ ಮಕ್ಕಳ ಸುರಕ್ಷತೆಯ ಜವಾಬ್ದಾರಿ ನಮ್ಮದು, ಎಲ್ಲ ಪೋಷಕರು ಮಕ್ಕಳನ್ನು ಆಶೀರ್ವದಿಸಿ ಧೈರ್ಯವಾಗಿ ಶಾಲೆಗೆ ಕಳಿಸಿ, ಅವರ ಶೈಕ್ಷಣಿಕ ಭವಿಷ್ಯ ಉಜ್ವಲವಾಗಲಿ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ರಾಜ್ಯದ ಪೋಷಕರಲ್ಲಿ ಮನವಿ ಮಾಡಿದ್ದಾರೆ.

    ಜ. 1ರ ಶುಕ್ರವಾರದಿಂದ ಪ್ರಸ್ತುತ ಶೈಕ್ಷಣಿಕ ವರ್ಷದ 10 ಮತ್ತು 12ನೇ ತರಗತಿಗಳು ಸುರಕ್ಷಿತ ವಾತಾವರಣದಲ್ಲಿ ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಮುನ್ನಾ ದಿನವಾದ ಗುರುವಾರ ರಾಜ್ಯದ ಮಕ್ಕಳ ಪೋಷಕರಿಗೆ ಮನವಿ ಮಾಡಿಕೊಂಡಿರುವ ಅವರು, ಶಾಲೆಗಳಲ್ಲಿ ನಿಮ್ಮ ಮಕ್ಕಳನ್ನು ನಮ್ಮ ಮಕ್ಕಳಂತೆಯೇ ನೋಡಿಕೊಳ್ಳುತ್ತೇವೆ. ಶಾಲೆ ಮಕ್ಕಳ ಇನ್ನೊಂದು ಮನೆಯಾಗಿರಲಿದ್ದು, ಶಾಲಾ ವಿದ್ಯಾಲಯ ಸುರಕ್ಷಿತಾಲಯವಾಗಿರಲಿದೆ ಎಂದು ಭರವಸೆ ನೀಡುವೆ ಎಂದು ಅಭಯ ನೀಡಿದ್ದಾರೆ.

    ‘ಕೊರೋನಾ ಓಡಿಸೋಣ.. ಮಕ್ಕಳನ್ನು ಸುರಕ್ಷಿತವಾಗಿ ಓದಿಸೋಣ…’ ಎಂಬ ಧ್ಯೇಯದೊಂದಿಗೆ ಆರಂಭವಾಗಲಿರುವ ಈ ಶೈಕ್ಷಣಿಕ ವರ್ಷ ಮಕ್ಕಳ ಬಾಳಿಗೆ ಒಂದು ಹೊಸ ಪರ್ವಕಾಲವಾಗಿ ಹೊರಹೊಮ್ಮಲಿದೆ. ಶಾಲೆಗಳಲ್ಲಿ ಮಕ್ಕಳ ಕಲರವವೇ ಇರಲಿಲ್ಲ. ಶಾಲೆಗಳು ಮುಚ್ಚಿಕೊಂಡಿದ್ದವು, ಮೈದಾನಗಳು ಬಿಕೋ ಎನ್ನುತ್ತಿದ್ದವು. ಅದೆಲ್ಲಕ್ಕೂ ಅಂತ್ಯವೆಂಬಂತೆ ಶಾಲೆಗಳು ಆರಂಭವಾಗುತ್ತಿರುವುದು ಮಕ್ಕಳು ಮತ್ತು ಪೋಷಕರಲ್ಲಿ ಒಂದು ಹೊಸ ಉತ್ಸಾಹಕ್ಕೆ ಕಾರಣವಾಗಿದ್ದು, ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ತಮ್ಮ ಒಪ್ಪಿಗೆ ಪತ್ರ ನೀಡಿ ಕಳಿಸಬೇಕು ಎಂದು ಸಚಿವರು ಹೇಳಿದ್ದಾರೆ. ಶಾಲೆಗಳು ಆರಂಭವಾಗುತ್ತಿರುವುದು ವಿಶೇಷವಾಗಿ ಗ್ರಾಮೀಣ ಪ್ರದೇಶದ ಪೋಷಕರು ಮತ್ತು ಮಕ್ಕಳಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಮಕ್ಕಳಂತೂ ಶಾಲೆಯಲ್ಲಿ ಬಹುದಿನಗಳ ನಂತರ ತಮ್ಮ ಗೆಳೆಯರನ್ನು ನೋಡಲು ಕಾತರರಾಗಿ ಶಾಲೆ ಆರಂಭವಾಗು ಕ್ಷಣಗಣನೆಯಲ್ಲಿದ್ದಂತೆ ತೋರುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

    ಮಕ್ಕಳಿಗೆ ಶೀತ, ಜ್ವರ, ನೆಗಡಿಯಂತ ಲಕ್ಷಣಗಳಿದ್ದರೆ ಕಳಿಸುವುದು ಬೇಡ. ನಮಗೆ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕಿಂತ ಅವರ ಆರೋಗ್ಯವೂ ಸಹ ಮುಖ್ಯವಾಗಿದೆ. ಶಾಲೆಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಶಾಲೆಗಳನ್ನು ಸ್ಯಾನಿಟೈಜೇಶನ್ ಮಾಡಲಾಗಿದೆ. ಪ್ರತಿ ಸಂಜೆಯೂ ಸ್ಯಾನಿಟೈಸೇಷನ್ ಮಾಡಲಾಗುತ್ತದೆ. ಪ್ರತಿ ದಿನ ಮಕ್ಕಳ ಆರೋಗ್ಯದ ಕಡೆ ಓರ್ವ ಶಿಕ್ಷಕರು ಕಣ್ಗಾವಲು ಇಟ್ಟಿರುತ್ತಾರೆ. ರೋಗ ಲಕ್ಷಣವಿರುವುದು ಕಂಡು ಬಂದರೆ ಅಂತಹ ವಿದ್ಯಾರ್ಥಿಯನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಿ ಮುಂದಿನ ಆರೋಗ್ಯ ತಪಾಸಣೆಯಂತಹ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಮಕ್ಕಳ ಸುರಕ್ಷಿತ ಶಿಕ್ಷಣಕ್ಕಾಗಿ ಆರೋಗ್ಯ, ಸಾರಿಗೆ, ನಗರಾಭಿವೃದ್ಧಿ, ಪೌರಾಡಳಿತ, ಕಂದಾಯ, ಗ್ರಾಮೀಣಾಭಿವೃದ್ಧಿ ಇಲಾಖೆಗಳು ಇಲಾಖೆಗಳು ಶಿಕ್ಷಣ ಇಲಾಖೆಯೊಂದಿಗೆ ಕೈಜೋಡಿಸಿವೆ. ಇಡೀ ರಾಜ್ಯ ಸರ್ಕಾರವೇ ನಿಮ್ಮ ಮಕ್ಕಳ ಹಿತದೃಷ್ಟಿಗೆ ಟೊಂಕ ಕಟ್ಟಿ ನಿಂತಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

    ಕೆಲವೇ ತಿಂಗಳಲ್ಲಿ ಮಂಡಳಿ ಪರೀಕ್ಷೆಗಳಿರುವ ಹಿನ್ನೆಲೆಯಲ್ಲಿ 10 ಮತ್ತು 12ನೇ ತರಗತಿಗಳ ಮಕ್ಕಳಿಗೆ ಶಾಲಾ ತರಗತಿಗಳು ಪುಟ್ಟ ಪುಟ್ಟ ತಂಡಗಳಲ್ಲಿ ಸಾಮಾಜಿಕ ಅಂತರದಲ್ಲಿ ಆರಂಭಗೊಂಡರೆ, 6ರಿಂದ 9ನೇ ತರಗತಿಗಳ ಪರಿಷ್ಕೃತ ವಿದ್ಯಾಗಮ ತರಗತಿಗಳು ಸುರಕ್ಷಿತ ಶಾಲಾವರಣದಲ್ಲಿ ನಡೆಯಲಿವೆ. ಶಾಲೆಗಳ ಆರಂಭದ ವಿಚಾರದಲ್ಲಿ ಶಾಲಾಭಿವೃದ್ಧಿ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರು ತೋರುತ್ತಿರುವ ಉತ್ಸುಕತೆ ನಮಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಪ್ರೇರಣೆಗೆ ಕಾರಣವಾಗಿವೆ. 2020 ಕೊರೋನ ವರ್ಷವಾದರೆ, 2021ನೇ ವರ್ಷ ಕೊರೋನಾ ಎದುರಿಸುವ ಶಕ್ತಿಯನ್ನು ಪಡೆಯುವ ವರ್ಷವಾಗಿದ್ದು, ಅದು ನಮ್ಮ ಮಕ್ಕಳೇ ನಮಗೆ ನಿದರ್ಶನವಾಗಲಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

    ಶಾಲಾ ತರಗತಿ, ಶಾಲಾವರಣ ಸ್ವಚ್ಛವಾಗಿರಲಿದೆ. ಶೌಚಾಲಯಗಳು ಸ್ವಚ್ಚವಾಗಿರಲಿವೆ. ಮಕ್ಕಳು ಗುಂಪು ಗೂಡುವುದಿಲ್ಲ, ಪ್ರತಿಯೊಬ್ಬರ ಆರೋಗ್ಯ ತಪಾಸಣೆ ನಡೆಯಲಿದೆ, ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪೋಷಕರ ಸಹಕಾರ ನಿಜಕ್ಕೂ ದೊಡ್ಡದು, ಮಕ್ಕಳ ಭವಿಷ್ಯವೂ ಇದರಲ್ಲಿ ಪ್ರಮುಖವಾಗಿರುವುದರಿಂದ ನಮ್ಮ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಲು ಮುಂದಾಗಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ. ಮಕ್ಕಳಿಗೆ ಮನೆಯಿಂದಲೇ ಕುಡಿಯುವ ನೀರು ಕಳಿಸಿಕೊಡಿ, ಶಾಲಾ ತರಗತಿಗಳು ಕೆಲವೇ ಗಂಟೆಗಳ ಕಾಲ ನಡೆಯಲಿವೆ. ಆಯಾ ತರಗತಿಗಳಲ್ಲೇ ಬೆಳಗಿನ ಪ್ರಾರ್ಥನೆ ನಡೆಯಲಿವೆ. ಮಕ್ಕಳು ಗುಂಪು ಗುಂಪಾಗಿ ಸೇರುವ ಪ್ರಮೇಯವೇ ಇರುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ. ತಮ್ಮತಮ್ಮ ಭಾಗದ ಜನಪ್ರತಿನಿಧಿಗಳು ಶಾಲೆಗಳ ಆರಂಭದ ವಿಷಯದಲ್ಲಿ ಎಲ್ಲ ರೀತಿಯ ಸಹಕಾರ ನೀಡಲಿದ್ದಾರೆ. ಮಕ್ಕಳು ಶಿಕ್ಷಕರು

    10 ಮತ್ತು 12ನೇ ತರಗತಿಯಂತೆಯೇ ಉಳಿದ ತರಗತಿಗಳನ್ನು ಆರಂಭಿಸಬೇಕೆಂದು ಬಹು ಭಾಗದಿಂದ ಒತ್ತಾಯಗಳು ಕೇಳಿಬರುತ್ತಿವೆ. ಇನ್ನು ಕೆಲವೇ ದಿನಗಳಲ್ಲಿ ಇಂದಿನ ಶಾಲೆಗಳ ನಡೆಯನ್ನು ಅನುಸರಿಸಿ ಒಂದು ನಿರ್ಧಾರಕ್ಕೆ ಬರಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಚಂದನಾ ವಾಹಿನಿ ಮೂಲಕ ಪ್ರಸಾರವಾಗುವ ತರಗತಿಗಳು, ಯೂ-ಟ್ಯೂಬ್ ಪಾಠಗಳು ಎಂದಿನಂತೆ ನಡೆಯಲಿವೆ ಎಂದು ಸಚಿವರು ತಿಳಿಸಿದ್ದಾರೆ.

    ಶಾಲಾಭೇಟಿ ಮುಂದುವರಿಕೆ: ಶಾಲಾರಂಭದ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವಾರು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಶಾಲಾರಂಭದ ಸಿದ್ಧತೆಗಳನ್ನು ಪರಿಶೀಲಿಸಿ ಕೈಗೊಂಡಿರುವ ಕ್ರಮಗಳನ್ನು ವೀಕ್ಷಿಸಿದರು. ಬೆಂಗಳೂರಿನ ಬಸವನಗುಡಿಯ ಬಿಎಂಎಸ್, ಜಯನಗರದ ಎನ್‍ಎಂಕೆಆರ್ ವಿ, ಬಿಇಎಸ್, ಆರ್.ವಿ., ನ್ಯಾಷನಲ್ ಕಾಲೇಜು, ವಿಜಯ ಕಾಲೇಜು ಸೇರಿದಂತೆ ಹಲವಾರು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿದರು.

    ನಮ್ಮ ಸುತ್ತಲೂ ನಡೆದ ದುರಂತಗಳ ನಡುವೆ ನಾವು ಸಂಭ್ರಮಿಸುವುದು ಸಹ್ಯವೇ?

    ಕ್ಯಾಲೆಂಡರ್ ಬದಲಾಗಿದೆ.ಇನ್ನೇನು 2020 ಮರೆಯಾಗಿ 2021 ಕಾಣಿಸಿಕೊಳ್ಳುತ್ತದೆ. ವರ್ಷ ಕಳೆದು ವರ್ಷ ಕಳೆಯುತ್ತಿದ್ದಂತೆ ಹಳೆಯದನ್ನೆಲ್ಲ ತೊಡೆದು ಹೊಸ ಉತ್ಸಾಹದಲ್ಲಿ ಮುನ್ನಡೆಯೋಣ ಎಂಬ ಅನಿಸಿಕೆ ಸಹಜ. 2020 ಜಗತ್ತಿನಲ್ಲಿ ಯಾರೂ ಕಲ್ಪಿಸಿಕೊಳ್ಳಲೇ ಸಾಧ್ಯವಿಲ್ಲದಷ್ಟು ಸಂಕಷ್ಟದ ವರ್ಷವಾಗಿ ಇತಿಹಾಸದಲ್ಲಿ ದಾಖಲಾಗಿತು. ತಾಂತ್ರಿಕವಾಗಿ ಮುಂದುವರಿದ ಮಾನವನನ್ನು ಯಕಃಶ್ಚಿತ್ ವೈರಾಣುವೊಂದು ಅಲ್ಲೋಲ ಕಲ್ಲೋಲ ಮಾಡಿತು.

    ಇಂಗ್ಲಿಷ್ ನಲ್ಲಿ ಕವಿತೆಯೊಂದರ ಪ್ರಖ್ಯಾತ ಸಾಲಿದೆ- This too shall pass. ಇದೂ ಕೊನೆಗೊಳ್ಳುತ್ತದೆ. ನೀವು sit and relax ಎನ್ನುತ್ತದೆ. ಆದರೆ ಎಷ್ಟೋ ಮಂದಿಗೆ ಬದುಕು ಇನ್ನೆಂದೂ ಚೇತರಿಸಿಕೊಳ್ಳದ ಭಾವನಾತ್ಮಕ, ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ದುಡಿಯುತ್ತಿದ್ದ ಕೈಗಳಿಂದ ಕೆಲಸ ಕಿತ್ತುಕೊಂಡಿದೆ. ಸಾರಿಗೆ, ಮಾಧ್ಯಮ, ಸಿನಿಮಾ, ಹೋಟೆಲ್, ನೇಯ್ಗೆ ಇತ್ಯಾದಿ ವಲಯಗಳಲ್ಲಿ ಹೊಟ್ಟೆ ಹೊರೆಯುತ್ತಿದ್ದವರು ಒಂದು ದುಷ್ಟ ಕನಸಿನಂತಹ 2020ರ ವರ್ಷವನ್ನು ಇನ್ನೆಂದಿಗೂ ಮರೆಯಲಾರರು. ಮುಂದೆಂದೂ ಇಂತಹ ವರ್ಷ ಬಾರದೇ ಇರಲಿ, ಕನಿಷ್ಠ ಉಟ್ಟು, ಉಡಲಾದರೂ ದೊರೆಯಲಿ ಎಂದು ಇನ್ನೂ ಮೊರೆ ಇಡುತ್ತಿದ್ದಾರೆ.

    ಹಾಗೆಯೇ 2020 ಎಂಬ ದುಃಸ್ವಪ್ನ ಕೊನೆಗೊಂಡಿದೆ. ಈ ವರ್ಷ ಹೇಳಿಕೊಳ್ಳಲು ಹಲವು ಕಥೆಗಳಿವೆ. ಸಾವಿರಾರು ಮೈಲಿ ನಡೆದ ಬಡ ಕಾರ್ಮಿಕರ ಸಂಕಟವಿದೆ. ಅವರಿಗೆ ದೇವರಂತೆ ಬಂದು ನೆರವಾದ, ಯಾವ ರಾಜಕಾರಣಿಯೂ ಶ್ರೀಮಂತನೂ ಆಲೋಚಿಸದ, ಕನಿಷ್ಠ ಮಾನವೀಯತೆಯಿಂದ ನೆರವಾದ ಸಿನಿಮಾದ ಖಳನಟ, ನಿಜ ಜೀವನದ ಹೀರೋ ಸೋನು ಸೂದ್ ಯಶೋಗಾಥೆಯಿದೆ. ದಿಢೀರ್ ಬಂದೆರಗಿದ ಕೋವಿಡ್ ಸಂಕಷ್ಟಕ್ಕೆ ಯಾರು ಹೇಗೆ ಸ್ಪಂದಿಸಬೇಕೆಂದು ತಿಳಿಯದೇ ಹೋದಾಗ ಹೀಗೆ ಸ್ಪಂದಿಸಬಹುದು ಎಂದು ತೋರಿಸಿಕೊಟ್ಟ ಆತನ ಅಂತಃಕರಣವಿದೆ. ಸೇವೆಯನ್ನೇ ಉಸಿರಾಡುವ ರಾಜಕಾರಣಿಗಳು ನಾಚಿಕೊಳ್ಳುವಂತೆ ಕೆಲಸ ಮಾಡಿದ ನಿಜವಾದ ನಾಯಕನಾಗಿ ಸೋನು ಸೂದ್ ಹೊರಹೊಮ್ಮಿದ ವರ್ಷವಿದು.

    ಕ್ಯಾಲೆಂಡರ್ ಬದಲಾದರೆ ಸಂಭ್ರಮಿಸುವುದೇಕೋ! ಸಂಭ್ರಮಕ್ಕೊಂದು ನೆಪ ಸಾಕು. ಹಬ್ಬ ಹರಿದಿನಗಳು ಹುಟ್ಟಿಕೊಂಡಿದ್ದು ಹೀಗೆಯೇ ಅಲ್ಲವೇ?
    ಆದರೆ ಜನರ ಸಂಭ್ರಮಕ್ಕೆ ಈ ವರ್ಷ ನೂರಾರು ಅಡ್ಡಿ ಆತಂಕಗಳು. ಸರ್ಕಾರಗಳು ಕಠಿಣ ನಿಯಮಗಳ ಮೂಲಕ ಸಂಭ್ರಮಕ್ಕೆ ಮೂಗುದಾರ ಹಾಕಬೇಕಾದ ಅನಿವಾರ್ಯತೆ. ಕೆಲಸ ಬಿಟ್ಟವರು, ಊರು ಬಿಟ್ಟವರಿಗೆ ಜೀವನ ಹೊಸ ಅರ್ಥ ತೋರಿಸುತ್ತಿದೆ. ಹಳ್ಳಿಗಳಿಗೆ “ರಿವರ್ಸ್ ಮೈಗ್ರೇಷನ್” ಆಗಿರುವ ಮಂದಿಗೆ ದೂರದ ಬೆಟ್ಟ ನುಣ್ಣಗಾಗಿದೆ.

    ಈ ವರ್ಷ ಎಂದಿನಂತಿಲ್ಲ

    ಬೆಂಗಳೂರು ಪೊಲೀಸರ ಸರ್ಪಗಾವಲಿನಲ್ಲಿದೆ. ನಿಮ್ಮ ಸಂಭ್ರಮಕ್ಕಿಲ್ಲಿ ತಾವಿಲ್ಲ. ಬೆಂಗಳೂರಿನ ರಸ್ತೆ ರಸ್ತೆಗಳಲ್ಲಿ ನಿಮ್ಮ ಆಟಾಟೋಪ ನಡೆಯುವುದಿಲ್ಲ. ಎಂ.ಜಿ.ರೋಡ್, ಬ್ರಿಗೇಡ್ ಕಿಕ್ಕಿರಿಯುವುದಿಲ್ಲ. ಇದರಿಂದ ಬೆಂಗಳೂರಿನ ಬೀದಿ ಬೀದಿಯಲ್ಲಿ ಹೆಣ್ಣುಮಕ್ಕಳ ಮೇಲೆ ಅಸಭ್ಯವಾಗಿ ವರ್ತಿಸಿ ಅದು ದೊಡ್ಡ ಪ್ರಮಾಣದಲ್ಲಿ ಸುದ್ದಿಯಾಗುವ ಪುನರಾವರ್ತನೆಗೆ ಅವಕಾಶವಿಲ್ಲ ಎಂದು ನಿಟ್ಟುಸಿರು ಬಿಡಬೇಕು. ಈ ವರ್ಷ ನ್ಯೂಸ್ ಚಾನೆಲ್ ಗಳಿಗೆ ಅಂತಹ ಸುದ್ದಿ ಎಂ.ಜಿ.ರೋಡ್, ಬ್ರಿಗೇಡ್ ರೋಡ್ ಗಳಿಂದಲಂತೂ ಬರುವುದಿಲ್ಲ.

    ಹೊಸ ವರ್ಷವೆಂದರೆ ಏನು? ಕುಡಿತ, ಕುಣಿತ, ಸಂಭ್ರಮ ನಂತರ ಯಾವತ್ತಿನಂತೆ ಎಲ್ಲವನ್ನೂ ಮರೆತು ದಿನಚರಿಯಲ್ಲಿ ತೊಡಗುವುದು. ಈ ವರ್ಷ ಎಂದಿನಂತಿಲ್ಲ. ಜನರ ಜೊತೆಗೂಡಿ ಸಂಭ್ರಮಿಸುವಂತಿಲ್ಲ. ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು. ಉದಾಸೀನ ಮಾಡಿದರೆ ಕೊರೋನಾ ಅದರ ಮ್ಯುಟೇಷನ್ ವೈರಸ್ ಗಳು ನಿಮ್ಮನ್ನು ಹಣ್ಣು ಮಾಡುತ್ತವೆ.
    ಕೋವಿಡ್ ಒಂದು ನೆಪವಾಗಿ ಕೆಲವು ಕುಟುಂಬಗಳು ಎಂದಿಗೂ ಮರೆಯಲಾಗದ, ಸಹಿಸಲಾಗದ ಸಂಕಷ್ಟಗಳಿಗೆ ಸಿಕ್ಕಿವೆ.

    ಕುಟುಂಬವೊಂದರಲ್ಲಿ ಕೋವಿಡ್ ಬಂದೆರಗಿ ತಾಯಿ, ತಂದೆಯರನ್ನು ಕಳೆದುಕೊಂಡ ಪುಟ್ಟ ಕಂದಮ್ಮಗಳು, ವಿವಾಹಿತೆಯಾಗಿ ಸುಖವಾಗಿದ್ದ ಮಗಳು ಕೋವಿಡ್ ಬಾಧಿತಳಾಗಿ ತವರಿಗೆ ಬಂದವಳು, ತನ್ನೊಂದಿಗೆ ತನ್ನ ತಂದೆ, ತಾಯಿಯರನ್ನೂ ಕರೆದೊಯ್ದ ದಾರುಣ ಘಟನೆಗಳು ಜರುಗಿವೆ. ಮನೆ ಮನೆಯಲ್ಲಿ ಒಂದೊಂದು ದುರಂತ ಕಥೆಗಳು ಅಳಿಸದ ಅಕ್ಷರಗಳಲ್ಲಿ ಇತಿಹಾಸ ಪುಟ ಸೇರಿವೆ. ಇದರ ಮಧ್ಯದಲ್ಲಿ ಮನೆ, ಮಕ್ಕಳನ್ನು ಮರೆತು ಸೇವೆ ಮಾಡಿದ ವೈದ್ಯರ ಒಳ್ಳೆಯತನ ಮನುಷ್ಯರ ಮೇಲೆ ನಂಬಿಕೆಯನ್ನು ಇಮ್ಮಡಿಸಿದರೆ ಅವಕಾಶವಾದಿಗಳಾಗಿ ಜನರ ರಕ್ತ ಹೀರಿದ ಆಸ್ಪತ್ರೆಗಳು ಮಾನವತ್ವದ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುವಂತೆ ಮಾಡಿವೆ.

    ಎಲ್ಲ ವೈರುಧ್ಯಗಳ ವರ್ಷ 2020!

    ನಮ್ಮ ಸುತ್ತಲೂ ನಡೆದ ಇಂತಹ ದುರಂತಗಳ ನಡುವೆ ನಾವು ಸಂಭ್ರಮಿಸುವುದು ಸಹ್ಯವೇ?

    ಪ್ರತಿ ಹೊಸ ವರ್ಷಕ್ಕೆ ಹೊಸ ತೀರ್ಮಾನ. ಅದನ್ನು ಈಡೇರಿಸಿಕೊಳ್ಳಲು ಪ್ರಯತ್ನ. ವರ್ಷಾಂತ್ಯವಾದಾಗ ಅದರ ಅವಲೋಕನ ನಡೆಯುತ್ತಿರುತ್ತದೆ. ಈ ವರ್ಷ ಮಾಡಬೇಕಾದ ತೀರ್ಮಾನಗಳಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳಿ.

    • ಎಲ್ಲದಕ್ಕೂ ವ್ಯವಸ್ಥೆಯನ್ನು ಟೀಕಿಸುತ್ತೇವೆ. ಇದರಲ್ಲಿ ನಮ್ಮ ಜವಾಬ್ದಾರಿಯೇನು ಎಂದು ಅರಿತುಕೊಳ್ಳಿ. ನೀವು ವ್ಯವಸ್ಥೆಯ ಭಾಗ ಹಾಗೂ ನೀವು ಅದರ ಸುವ್ಯವಸ್ಥೆಯನ್ನು ಕಾಪಾಡುವ ಹೊಣೆ ಹೊಂದಿದ್ದೀರಿ ಎಂದು ಅರಿತುಕೊಳ್ಳಿ. ಕೋವಿಡ್ ಕಡ್ಡಾಯವಾಗಿ ಹರಡದಂತೆ ಎಚ್ಚರಿಕೆ ವಹಿಸಿ.

    • ಸಹಾಯ ಮಾಡಿ. ಸಾವಿರಾರು ಮೈಲಿ ನಡೆದು ಹೊರಟವರಿಗೆ ದಾರಿಯಲ್ಲಿ ಯಾವುದೇ ಕೋವಿಡ್ ಭಯವಿಲ್ಲದೆ ನೀರು, ಊಟ ನೀಡಿದ ಎಷ್ಟೋ ಕಾರುಣ್ಯ ಹೃದಯಗಳಲ್ಲಿ ಮಾನವತೆ ಇನ್ನೂ ಜೀವಂತವಾಗಿದೆ. ಸಹ ಜೀವಿಗಳಲ್ಲಿ ಇಂತಹ ಮಾನವತೆ ರೂಢಿಸಿಕೊಳ್ಳಿ.

    • ನೀವು ಉದ್ಯೋಗ ನೀಡುವ ಸ್ಥಾನದಲ್ಲಿದ್ದರೆ ಎಷ್ಟು ಸಾಧ್ಯವೋ ಅಷ್ಟು ಉದ್ಯೋಗ ಉಳಿಸಲು ಪ್ರಯತ್ನಿಸಿ, ಉದ್ಯಮಿಗಳಾದರೆ ಹೊಸ ಉದ್ಯೋಗದ ಸಾಧ್ಯತೆ ಸೃಷ್ಟಿಸಿ ಕೆಲಸ ಕಳೆದುಕೊಂಡವರಿಗೆ ನೆರವಾಗಿರಿ.

    • ಕೋವಿಡ್ ಸನ್ನಿವೇಶದಿಂದ ಹಲವು ಉದ್ಯಮ ನಷ್ಟವಾದರೆ ಹಲವರು ಡಿಜಿಟಲ್ ರೂಪದಲ್ಲಿ ಹೊಸ ವ್ಯಾಪ್ತಿ ಕಂಡುಕೊಂಡಿದ್ದಾರೆ. ನೀವು ಎಂತಹ ಸಣ್ಣ ಕೆಲಸವನ್ನಾದರೂ ಮಾಡಿ ಅದನ್ನು ಡಿಜಿಟೈಸ್ ಮಾಡುವ ಮೂಲಕ ಅದರ ಅನುಕೂಲ ಪಡೆಯಿರಿ.

    • ಸಂಭ್ರಮಿಸುವ ಮುನ್ನ ನಿಮ್ಮ ಸುತ್ತಲೂ ಸಂಕಷ್ಟದಲ್ಲಿರುವವರಿಗೆ ಸಹಾಯ ನೀಡುವ ಆಲೋಚನೆ ಮಾಡಿ. ಹೊಸ ವರ್ಷ ಅವರಿಗೂ ಸಂಭ್ರಮ ತರಲಿ.

    • ನೀವು ಕೊಳ್ಳುವಾಗ ನಿಮ್ಮ ಬಳಿ ಹಣ ಇದೆ ಎಂದಲ್ಲ, ಅದರ ಉತ್ಪಾದಕರಾದ ಕಾರ್ಮಿಕರಿಗೆ ಅನುಕೂಲವಾಗುತ್ತದೆ ಎಂಬ ದೃಷ್ಟಿಯಿಂದ ಕೊಳ್ಳಿರಿ. ಈ ಸಂಕಷ್ಟದ ಸಮಯದಲ್ಲಿ ನೇಕಾರರು, ಕರಕುಶಲ ಕರ್ಮಿಗಳು, ಸಿನಿಮಾ ಕಾರ್ಮಿಕರು, ಅರೆಕಾಲಿಕ ಶಿಕ್ಷಕರು, ವಾಹನ ಚಾಲಕರು ಮುಂತಾದವರಿಗೆ ಅವರ ಸೇವೆಗಳನ್ನು ಕೊಳ್ಳುವ ಅಗತ್ಯವಿದೆ.

    • ಪೋಷಕರು ಕೆಲಸ ಕಳೆದುಕೊಂಡಿದ್ದರಿಂದ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳು ನಿಮ್ಮ ಸುತ್ತಲೂ ಇದ್ದಲ್ಲಿ ಅವರಿಗೆ ನೆರವಾಗಿರಿ.


    ಹೀಗೆ ಹೊಸ ವರ್ಷವನ್ನು ಹೊಸ ರೀತಿಯಲ್ಲಿ ಸಂಭ್ರಮಿಸಲು ಸಜ್ಜಾಗಿರಿ.

    ಎಸ್ ಎಸ್ ಎಲ್ ಸಿ ಹಾಗೂ ಪಿಯು ತರಗತಿ ಪುನಾರಂಭ: ಶಿಕ್ಷಣ ಸಚಿವರಿಂದ ಪರಿಶೀಲನೆ

    ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಮಾರ್ಗದರ್ಶನದಂತೆ ಶಿಕ್ಷಣ ಇಲಾಖೆ ರೂಪಿಸಿದ  ಎಸ್.ಒ.ಪಿ.ಯನ್ನು ಆಧರಿಸಿ ಶಾಲಾ ಕಾಲೇಜುಗಳು ಜ.1ರಿಂದ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾಕಾಲೇಜುಗಳ ಆರಂಭದ ಪೂರ್ವ ಸಿದ್ಧತೆಯನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ  ಸಚಿವ ಎಸ್. ಸುರೇಶ್ ಕುಮಾರ್ ಪರಿಶೀಲಿಸಿದರು.

    ಬುಧವಾರ ಬೆಂಗಳೂರಿನ ನಾನಾ ಸರ್ಕಾರಿ ಹಾಗೂ ಖಾಸಗಿ ಪದವಿ ಪೂರ್ವ ಕಾಲೇಜು ಮತ್ತು ಸರ್ಕಾರಿ ಪ್ರೌಢಶಾಲೆಗಳಿಗೆ ಭೇಟಿ ನೀಡಿ ಸಿದ್ಧತೆಗಳನ್ನು ಅವಲೋಕಿಸಿದರು. ಪ್ರತಿಯೊಂದು ಶಾಲೆಗಳಲ್ಲಿ ತರಗತಿ ಕೊಠಡಿಗಳಿಗೆ ಭೇಟಿ ನೀಡುವ ಮೊದಲು ಶಾಲೆಯಲ್ಲಿ ಹಾಜರಿದ್ದ ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಕರನ್ನುದ್ದೇಶಿಸಿ ಮಾತನಾಡಿ, ತರಗತಿಗಳನ್ನು ಆರಂಭಿಸುವಾಗ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ವಿವರಿಸಿದರು. 

    ಮೊದಲ ದಿನದ ಮೊದಲ ತರಗತಿ ಅವಧಿಯಲ್ಲಿ ಕೊರೋನಾ ಕುರಿತು ಮುನ್ನೆಚ್ಚರಿಕೆ ಕ್ರಮಗಳು, ಪಾಲಿಸಬೇಕಾದ ನಿಯಮಗಳು ಮತ್ತು ವಿಶೇಷವಾಗಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯು ತರಗತಿಗಳ ಮಹತ್ವ ಮತ್ತು ಈ ಪರೀಕ್ಷೆಗಳಲ್ಲಿ ಕಷ್ಟಪಟ್ಟು ಓದಿ ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾಗಬೇಕಾದ ಮಹತ್ವವನ್ನು ವಿವರಿಸಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸಬೇಕು ಎಂದು ಸಚಿವರು ಸಲಹೆ ನೀಡಿದರು.

    ಸರ್ಕಾರಿ ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೊರತೆಯಿಲ್ಲ. ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಶಾಲಾಕಾಲೇಜುಗಳಿಂದ ಹೆಚ್ಚಿನ ಸಂಖ್ಯೆಯ ಪ್ರತಿಭಾವಂತರು ಹೊರಬರುತ್ತಿದ್ದಾರೆ. ಅನೇಕ ಕೊರತೆಗಳ ಮಧ್ಯೆಯೂ ಸರ್ಕಾರಿ ಶಾಲೆಗಳಲ್ಲಿ ಅಭ್ಯಸಿರುವ ಅನೇಕ ವಿದ್ಯಾರ್ಥಿಗಳು ಉನ್ನತ ಮಟ್ಟಕ್ಕೆ ಏರಿದ್ದಾರೆ. ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ. 97-98 ಅಂಕಗಳೊಂದಿಗೆ ಉತ್ತೀರ್ಣರಾದ ಸರ್ಕಾರಿ ಶಾಲೆಯ ಮಕ್ಕಳಾದ ಬೆಂಗಳೂರಿನ ಯಾದಗಿರಿಯ ವಲಸೆ ವಿದ್ಯಾರ್ಥಿ ಮತ್ತು ವಿಜಯಪುರದ ಸಾವಳಗಿ ಸೇರಿದಂತೆ ಅನೇಕ ವಿದ್ಯಾರ್ಥಿಗಳ ಪರಿಶ್ರಮವನ್ನು ಉದಾಹರಿಸಿದ ಸಚಿವರು ಈ ಕುರಿತು ವಿದ್ಯಾರ್ಥಿಗಳ ಗಮನಕ್ಕೆ ತಂದು ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ತಾವೂ ಸಹ ಅದೇ ರೀತಿ ಹೆಚ್ಚಿನ ಅಂಕಗಳನ್ನು ಪಡೆಯಬೇಕೆಂಬ ಹುಮ್ಮಸ್ಸು, ಆಸಕ್ತಿ ಮೂಡುವಂತೆ  ಪ್ರೇರೇಪಿಸಬೇಕೆಂದು ಉಪಾಧ್ಯಾಯ ಸಮೂಹಕ್ಕೆ ಸಚಿವರು ಸಲಹೆ ನೀಡಿದರು.

    ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು, ಕೈತೊಳೆಯಲು ಸ್ಯಾನಿಟೈಸರ್ ಇಲ್ವೇ ಸಾಬೂನು ಬಳಸುವುದು, ಉಪಾಧ್ಯಾಯರು ಕೋವಿಡ್ ಪರೀಕ್ಷೆ ಫಲಿತಾಂಶದೊಂದಿಗೆ ಬರುವುದು, ಫೇಸ್ ಮಾಸ್ಕ ಮತ್ತು ಫೇಸ್ ಶೀಲ್ಡ್ ಧರಿಸುವುದು, ಮಕ್ಕಳ ಶಾರೀರಿಕ‌ ಅಂತರವನ್ನು ಉಳಿಸಿಕೊಳ್ಳುವಲ್ಲಿ ಗಮನ ಹರಿಸುವುದು, ಅವರ ಆರೋಗ್ಯ, ರೋಗಲಕ್ಷಣಗಳ ಕುರಿತು ಆಗಾಗ್ಗೆ ಗಮನ ಹರಿಸುವುದು, ತರಗತಿ ಕೊಠಡಿಯಲ್ಲಿ ಚಿಕ್ಕ ಸಂಖ್ಯೆಯ ಮಕ್ಕಳನ್ನು ಸಾಮಾಜಿಕ ಅಂತರದಲ್ಲಿ ಕೂರಿಸುವುದು ಸೇರಿದಂತೆ ಕೋವಿಡ್ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದು ಸುರೇಶ್ ಕುಮಾರ್ ಹೇಳಿದರು.

    ಸಂಜೆ ಶಾಲೆ ಮುಗಿದ ನಂತರ ಶಾಲಾವರಣ, ತರಗತಿ ಕೊಠಡಿ ಮತ್ತು ಶೌಚಾಲಯಗಳನ್ನು ಸ್ಯಾನಿಟೈಸರ್ ಮಾಡುವುದನ್ನು ಮರೆಯದೇ ಪಾಲಿಸಬೇಕಿದೆ. ಈಗಾಗಲೇ ಹೆಚ್ಚಿನ ದಿನಗಳು  ಮುಗಿದಿರುವುದರಿಂದ ಉಪನ್ಯಾಸಕರು ಇಲಾಖೆ ನಿಗದಿಪಡಿಸುವ ಪಠ್ಯಕ್ರಮವನ್ನು ಪೂರ್ಣಗೊಳಿಸಲು ಕ್ರಮ ವಹಿಸಬೇಕು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಿಗದಿತ ಅವಧಿಯೊಳಗೆ ಪೋರ್ಷನ್ ಮುಗಿಸುವುದರತ್ತ ಗಮನ ಹರಿಸಬೇಕು ಎಂದರು.

    ಕಳೆದ ವರ್ಷದ ಬಸ್ ಪಾಸುಗಳನ್ನೇ ಬಳಸಲು ಅವಕಾಶವಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದಿಲ್ಲ ಎಂಬುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಬೇಕೆಂದು  ಹೇಳಿದರು.

    ಮಕ್ಕಳನ್ನು ಶಾಲೆಗೆ ಕಳಿಸುವ ಪೋಷಕರು ಉತ್ಸುಕರಾಗಿದ್ದು, ಪ್ರಥಮ ಪಿಯುಸಿ ತರಗತಿಗಳನ್ನೂ ಆರಂಭಿಸಬೇಕೆಂದು ಒತ್ತಾಯಿಸುತ್ತಿದ್ದಾರೆಂದು ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಪೋಷಕರ ಮನಸ್ಥಿತಿಯನ್ನು ಸಚಿವರ ಗಮನಕ್ಕೆ ತಂದಾಗ, ಪರಿಸ್ಥಿತಿಯನ್ನು ಅವಲೋಕಿಸಿ ಈ ಕುರಿತು ಕೆಲ ದಿನಗಳ ನಂತರ ನಿರ್ಧಾರಕ್ಕೆ ಬರಲಾಗುವುದು ಎಂದು ಸಚಿವರು  ಹೇಳಿದರು.

    ಶಾಲೆಗಳ 10ನೇ ತರಗತಿ ಮತ್ತು ಪದವಿ ಪೂರ್ವ ಕಾಲೇಜುಗಳ ದ್ವಿತೀಯ ಪಿಯು ವಿದ್ಯಾರ್ಥಿಗಳ ಸಂಖ್ಯೆಯನ್ನು ವಿಚಾರಿಸಿ ಎಷ್ಟು ತಂಡಗಳು ಮತ್ತು ಎಷ್ಟು ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ ಎಂಬುದನ್ನು ಗಮನಿಸಿ ತರಗತಿ ಕೊಠಡಿಗಳನ್ನು ಪರಿಶೀಲಿಸಿದರು.

    ಮಲ್ಲೇಶ್ವರಂ 18ನೇ ಕ್ರಾಸ್, ಯಲಹಂಕದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳು, ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಬಿಇಎಸ್ ಪದವಿ ಪೂರ್ವ ಕಾಲೇಜು ಸೇರಿದಂತೆ  ಹೆಬ್ಬಾಳ,  ಮಲ್ಲೇಶ್ವರಂ, ಮತ್ತಿತರ ಕಡೆಯ ಸರ್ಕಾರಿ ಪ್ರೌಢಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

    ನಂತರ ರಾಜ್ಯದ ವಿವಿಧೆಡೆ ಕೈಗೊಳ್ಳಲಾಗಿರುವ ಸಿದ್ಧತೆಗಳ ಕುರಿತು ಡಿಡಿಪಿಐ, ಡಿಡಿಪಿಯು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ದೂರವಾಣಿ ಮೂಲಕ ಮಾಹಿತಿ ಪಡೆದು, ಅಗತ್ಯ ಸಲಹೆ, ಸೂಚನೆಗಳನ್ನು  ನೀಡಿದರು.

    ಶೈಕ್ಷಣಿಕ ಚಟುವಟಿಕೆ ನಿಂತ ಪರಿಣಾಮ ತಂದೆಯೊಂದಿಗೆ ಬದುಕಿನ ಪಾಠ

    ಪಠ್ಯ ಬೋಧನೆ ಅಂತಿಮ ಹಂತ ತಲುಪಿ ಪರೀಕ್ಷಾ ಸಿದ್ಧತೆಯ ಪ್ರಮುಖ ಘಟ್ಟ ಇದು. ಕೋವಿಡ್ ಅವಾಂತರದಲ್ಲಿ ಶೈಕ್ಷಣಿಕ ಚಟುವಟಿಕೆಗಳ ನಿರಂತರತೆಗೆ ಕಡಿವಾಣ. ರೂಪಾಂತರಿ ವೈರಸ್ ನ ಎರಡನೆ ಅಲೆಯ ರಕ್ಕಸ ಪ್ರವೇಶದ ಭೀತಿಯಲ್ಲಿ ಮತ್ತೆ ಶಾಲಾ-ಕಾಲೇಜು ಆರಂಭಗೊಳ್ಳುವ ಭರವಸೆ ಕುಸಿತ.  ನಗರದ ಆರ್ಥಿಕ ಬಲಾಢ್ಯ ಮಕ್ಕಳು ಮೊಬೈಲ್, ಟಿವಿ, ಗ್ಯಾಡ್ಜೆಟ್, ಪಿಜ್ಜಾ, ಬರ್ಗರ್ ಗಳ ಒಡನಾಟದಲ್ಲಿ ಮೈಮರೆತಿದ್ದರೆ. ಅಂದೆ ದುಡಿದು ಅಂದೆ ತಿನ್ನುವ ಪರಿಸ್ಥಿತಿಯಲ್ಲಿನ ಪೋಷಕರ ಮಕ್ಕಳು ಜೀವನೋಪಾಯಕ್ಕಾಗಿ ದುಡಿಮೆಗೆ ಪೂರಕ ಸಹಕಾರ ನೀಡುತ್ತಿದ್ದಾರೆ.

    ಏಷ್ಯಾ ಖಂಡದ ಎರಡನೆ ದೊಡ್ಡ ಕೆರೆ ಸೂಳೆಕೆರೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಹೋಬಳಿಯಲ್ಲಿ ಸುಮಾರು 6 ಸಾವಿರ ಎಕರೆಯಲ್ಲಿ ವ್ಯಾಪಿಸಿದೆ. ಸದಾ ತುಂಬಿರುವ ಕೆರೆಯಲ್ಲಿ ವೈವಿಧ್ಯಮಯ ಮೀನುಗಳ ಆವಾಸ ಸ್ಥಾನ.  ಹಿನ್ನೀರಿನ ತೆಳು ಅಲೆಗಳ ಅಂಚಿನಲ್ಲಿರುವ ಜಕ್ಕಲಿ ಗ್ರಾಮದ ಗಿರೀಶ್ ಕಳೆದ ಬಾರಿ ಎಸ್ಸೆಸ್ಸೆಲ್ಸಿ ಆಂಗ್ಲ ಮಾಧ್ಯಮದಲ್ಲಿ ಶೆ.73 ಅಂಕ ಗಳಿಸಿದ್ದ. ಪ್ರಥಮ ಪಿಯುಗೆ ಸಮೀಪದ ಸಂತೇಬೆನ್ನೂರಿನ ಕೆಪಿಎಸ್ ಶಾಲೆಗೆ ಪ್ರವೇಶ ಪಡೆದಿದ್ದ. ಕಾಲೇಜು ಆರಂಭವಾಗದ ಕಾರಣ ಸೂಳೆಕೆರೆ ಕೆರೆ ಹಿನ್ನೀರಿನಲ್ಲಿ ನಿತ್ಯ ತಂದೆಯೊಂದಿಗೆ ಸಣ್ಣ ಹಾಯಿ ದೋಣಿಯಲ್ಲಿ ಮೀನು ಹಿಡಿಯಲು ತೆರಳಿ ತಂದೆಗೆ ದುಡಿಮೆಯಲ್ಲಿ ಸಹಕಾರ ಕೊಡುತ್ತಿದ್ದಾನೆ.

    ಈಗ ಏನು ಮಾಡುತ್ತೀಯ ಎಂದವರಿಗೆ ಬ್ಯಾಟೆಗೆ ಹೋಕಿನಿ.ಏನು ಬ್ಯಾಟೆ ಎಂದರೆ ಮೀನು ಬ್ಯಾಟೆ ಎನ್ನುವೆ ಎಂದು ಹೇಳುತ್ತಾನೆ ಗಿರೀಶ.

    ನಿತ್ಯ ಬೆಳಗಿನ ಜಾವ 5 ಗಂಟೆಗೆ ತಂದೆಯೊಂದಿಗೆ ಸೂಳೆಕೆರೆಯಲ್ಲಿ ದೋಣಿ ಹುಟ್ಟು ಹಾಕುತ್ತ ಗಿರೀಶ ಸಾಗುತ್ತಾನೆ. ತಂದೆ ಬಲೆಗೆ ಬಿದ್ದ ಮೀನು ಸಂಗ್ರಹಿಸುವರು. ಬೆ.9 ಗಂಟೆವರೆಗೆ ಬ್ಯಾಟೆ ನಡೆಯುತ್ತದೆ. ಸದ್ಯ  ದಿನಕ್ಕೆ 5 ರಿಂದ 10 ಕೆ.ಜಿ. ಮೀನು ಸಿಗುತ್ತಿವೆ. ಸದ್ಯ ಗೌರಿ, ರೋವ್, ಜಲೇಬಿ ತಳಿಯ ಮೀನುಗಳು ಸಿಗುತ್ತಿವೆ. ಪ್ರತಿ ಕೆ.ಜಿ. ಗೌರಿ ಮೀನು ರೂ.250, ರೋವ್ ರೂ.130 ಹಾಗೂ ಜಲೇಬಿ ರೂ.100 ರಂತೆ ಸಗಟು ಮಾರಾಟ ಮಾಡುತ್ತೇವೆ ಎನ್ನುತ್ತಾನೆ ಗಿರೀಶ.

    ಈ ಕೆರೆಯಲ್ಲಿ ನಿತ್ಯ 200 ರಿಂದ 300 ಮೀನುಗಾರರು ಮೀನುಗಾರಿಕೆ ನಡೆಸುತ್ತಾರೆ. ಹಿಂದಿನ ದಿನ ಸುಮಾರು 2 ರಿಂದ 3 ಕಿ.ಮೀ. ನೀರಿನಲ್ಲಿ ಸಾಗಿ ಬಲೆ ಬಿಡುತ್ತಾರೆ. ಮಾರನೆ ದಿನ ಬೆಳಗಿನ ಜಾವ ಮೀನು ಸಂಗ್ರಹ ನಡೆಸುತ್ತಾರೆ. ಮಳೆಗಾಲದ ಅವಧಿಯಲ್ಲಿ ದಿನಕ್ಕೆ 50 ಕೆ.ಜಿ.ವರೆಗೂ ಮೀನು ಸಿಗುತ್ತವೆ. ಈಗ ವಂಶಾಭಿವೃದ್ಧಿ ಸಮಯ. ಹಾಗಾಗಿ ಮೀನು ಸಿಗುವುದು ಕಡಿಮೆ.

    ಪ್ರತಿ ವರ್ಷ ಮೀನು ಪರವಾನಿಗಾಗಿ ರೂ.3500 ಕಟ್ಟಬೇಕು. ಮೀನುಗಾರಿಕಾ ಇಲಾಖೆ ದೋಣಿ ಹಾಗೂ ಬಲೆಗಳನ್ನು ಕೊಡುತ್ತಿದ್ದರು. ಒಂದೆರೆಡು ವರ್ಷದಿಂದ ಕೊಡುತ್ತಿಲ್ಲ. ನಿತ್ಯ ಚಳಿಯಲ್ಲಿ ಮೀನು ಹಿಡಿಯಲು ಸೂರ್ಯೋದಯಕ್ಕೆ ಮುನ್ನ ತೆರಳಬೇಕು. ಸ್ಥಿರ ಆದಾಯ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಗ ಗಿರೀಶನನ್ನು ಓದಿಸಲು ಶ್ರಮಿಸುತ್ತಿರುವೆ ಎಂದು ಗಿರೀಶನ ತಂದೆ ಹನುಮಂತಪ್ಪ ಅಭಿಪ್ರಾಯ ಪಡುತ್ತಾನೆ.

    ಎಷ್ಟೇ ಕಷ್ಟವಾದರು ಸರಿ ಓದು ಮುಂದುವರಿಸಿ ಪದವಿ ಪಡೆದು ಉದ್ಯೋಗ ಪಡೆಯಲು ಇಚ್ಚಿಸಿದ್ದೇನೆ ಎಂದು ಹೇಳುತ್ತಾನೆ ಗಿರೀಶ.

    ಪುಸ್ತಕ ರೂಪದಲ್ಲಿ ಕೋವಿಡ್ ಡೈರಿ; ಸಾವಣ್ಣ ಪ್ರಕಾಶನದ ಕೊಡುಗೆ

    ಕನ್ನಡ ಪ್ರೆಸ್.ಕಾಮ್ ನಲ್ಲಿ 25 ವಾರಗಳ ಕಾಲ ಪ್ರಕಟವಾಗಿ ಅಪಾರ ಓದುಗರನ್ನು ಸಂಪಾದಿಸಿದ್ದ ಡಾ. ಪ್ರೇಮಲತ ಬಿ ಅವರ ಜನಪ್ರಿಯ ಅಂಕಣ ಬರಹ ಕೋವಿಡ್ ಡೈರಿ ಇದೀಗ ಮತ್ತಷ್ಟುಸಮಗ್ರ ಅಪ್ ಡೇಟ್ ನೊಂದಿಗೆ ಪುಸ್ತಕ ರೂಪದಲ್ಲಿ ಹೊರ ಬರುತ್ತಿದೆ. ನಾಡಿನ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಾವಣ್ಣ ಪ್ರಕಾಶನ ಈ ಪುಸ್ತಕವನ್ನು ಹೊರ ತರುತ್ತಿದೆ.

    ಈ ವರುಷ ಮನುಕುಲವನ್ನು ವಿಧ ವಿಧವಾಗಿ ಕಾಡುತ್ತಿರುವ ಕೊರೋನಾ ಎಂಬ ಮಹಾರೋಗದ ಸಮಗ್ರ ಚರಿತ್ರೆಯನ್ನು ಈ ಕೃತಿಯಲ್ಲಿ ಡಾ. ಪ್ರೇಮಲತ ತೆರೆದಿಟ್ಟಿದ್ದಾರೆ.  ಕೋವಿಡ್ 19 ಎಂಬ ವೈರಸ್ ಕಣ್ಣಿಗೆ ಕಾಣದಿದ್ದರೂ ಅದು ಇಡೀ ಜಗತ್ತನ್ನೆ ಅಲ್ಲಾಡಿಸಿದ್ದು ಈಗ ಇತಿಹಾಸ. ಕೊರೋನಾ ಕೇವಲ ಒಂದು ರೋಗವಷ್ಟೇ ಅಲ್ಲ ಅದು ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಕಲಿಸಿದ  ಪಾಠ ದೊಡ್ಡದು. ಅದೆಲ್ಲವನ್ನೂ ಈ ಹೊತ್ತಿಗೆ ವಿಶ್ಲೇಷಿಸಿದೆ.

    ಪುಸ್ತಕ ರೂಪದಲ್ಲಿ ಬರುತ್ತಿರುವುದರಿಂದ ಮಾಹಿತಿಯನ್ನು ಮತ್ತಷ್ಟು ಅಪ್ ಡೇಟ್ ಮಾಡಿದ್ದೇನೆ. ಓದುಗರಿಗೆ ಈ ಕೃತಿ ಕೋವಿಡ್ ಬಗ್ಗೆ ಸಮಗ್ರ ಮಾಹಿತಿ ನೀಡುವ ಗ್ರಂಥವಾಗುತ್ತದೆ ಎಂಬ ನಂಬಿಕೆ ನನಗಿದೆ ಎಂದು ಲೇಖಕಿ ಪ್ರೇಮಲತ ಅಭಿಪ್ರಾಯ ಪಟ್ಟಿದ್ದಾರೆ. ಥಟ್ ಅಂತ ಹೇಳಿ ಖ್ಯಾತಿಯ ಲೇಖಕ ಡಾ. ನಾ .ಸೋಮೇಶ್ವರ ಅವರ ಮುನ್ನುಡಿ ಪುಸ್ತಕದ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಹೆಸರಾಂತ ಕಲಾವಿದ ಸಂತೋಷ ಸಸಿಹಿತ್ಲು ಪ್ರತಿ ಅಧ್ಯಾಯಕ್ಕೂ ಚಿತ್ರದ ಬೆಂಬಲ ನೀಡಿದ್ದು ಓದುಗರಿಗೆ ವಿಶಿಷ್ಟ ಅನುಭವ ನೀಡುತ್ತದೆ.

    ಇಂಥ ಒಂದು ಮೌಲಿಕ ಕೃತಿ ತಮ್ಮ ಪ್ರಕಾಶನದಿಂದ ಹೊರ ಬರುತ್ತಿರುವ ಬಗ್ಗೆ ಸಾವಣ್ಣ ಪ್ರಕಾಶನದ ಜಮೀಲ್ ಸಾವಣ್ಣ ಸಂತಸ ವ್ಯಕ್ತಪಡಿಸಿದ್ದಾರೆ. ಪುಸ್ತಕದ ಮುದ್ರಣ ಅಂತಿಮ ಹಂತದಲ್ಲಿದ್ದು ಸಧ್ಯದಲ್ಲೇ ಬಿಡುಗಡೆಯ ದಿನಾಂಕವನ್ನು ಪ್ರಕಟಿಸುವುದಾಗಿ ತಿಳಿಸಿದ್ದಾರೆ.

    .

    ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು

    ಇಂದು ರಾಷ್ಷ್ರಕವಿ ಕುವೆಂಪು ಅವರ ಜನುಮ ದಿನ. ಮಹಾಕವಿ ರಚಿಸಿದ ಗೀತೆಗಳ ಪಾಡ್ಕಾಸ್ಟ್ ಮೂಲಕ ಕನ್ನಡಪ್ರೆಸ್.ಕಾಮ್ ಅವರಿಗೆ ನಮನ ಸಲ್ಲಿಸುತ್ತಿದೆ.

    ಪ್ರಜ್ವಲ್ ಬುರ್ಲಿ, ಲಕ್ಷ್ಮಿ ಶ್ರೇಯಾಂಶಿ, ಅಕ್ಷತಾ ಅರ್ಜುನಗಿ, ಜಿ. ಮೀರಾ ಗೀತೆಗಳನ್ನು ಹಾಡಿದ್ದಾರೆ.

    ಶಿಕ್ಷಕಿ ಪ್ರಭಾ ರಾಮ್ ಕವಿಗೆ ನುಡಿ ನಮನ ಸಲ್ಲಿಸಿದ್ದಾರೆ, ಭಾರತಿ ಅವರ ನಿರೂಪಣೆ ಈ ಪಾಡ್ಕಾಸ್ಟ್ ಅನ್ನು ಮತ್ತಷ್ಟು ಆಪ್ತವೆನಿಸುತ್ತದೆ.

    ಕೇಳಿ ಪ್ರತಿಕ್ರಿಯಿಸಿ.

    ಈ ಬಾರಿಯ ಚಿತ್ರ ಸಂತೆ ಆನ್ ಲೈನ್ ನಲ್ಲಿ

    ಬಳಕೂರ. ವಿ.ಎಸ್.ನಾಯಕ

    ಕರ್ನಾಟಕ ಚಿತ್ರಕಲಾ ಪರಿಷತ್ತಿನ ಜನಪ್ರಿಯ ಚಿತ್ರ ಸಂತೆ ಈ ವರ್ಷ ಆನ್ ಲೈನ್ ಸ್ಪರೂಪ ಪಡೆದಿದೆ. ಕೋವಿಡ್ ಕಾರಣದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ ಎಲ್ ಶಂಕರ್ ತಿಳಿಸಿದ್ದಾರೆ.

    ಕಲಾವಿದರು ಮತ್ತು ಸಾರ್ವಜನಿಕರ ಹಿತ ಹಿತದೃಷ್ಟಿಯಿಂದ ಪ್ರಸ್ತುತ ಈ ವರ್ಷದ ಚಿತ್ರಸಂತೆಯನ್ನು ಆನ್ಲೈನ್ ಮೂಲಕ ಆಯೋಜಿಸಲಾಗಿದೆ . ಜನವರಿ 3 ರ ಭಾನುವಾರದಂದು 18ನೇ ಚಿತ್ರಸಂತೆಯನ್ನು ಉದ್ಘಾಟಿಸಲಾಗುವುದು. ಇದನ್ನು ಪರಿಷತ್ ನ ಫೇಸ್ ಬುಕ್ ಮತ್ತು chitrasanthe.org ಜಾಲತಾಣಗಳಲ್ಲಿ ವೀಕ್ಷಿಸಬಹುದು ಎಂದು ಅವರು ಹೇಳಿದರು.


    ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಪರಿಷತ್ ಅಧ್ಯಕ್ಷ ಬಿಎಲ್ ಶಂಕರ್, ಪ್ರಧಾನ ಕಾರ್ಯದರ್ಶಿ ಕೆ ಎಸ್ ಅಪ್ಪಾಜಯ್ಯ,ಉಪಾಧ್ಯಕ್ಷರುಗಳಾದ ಎಂ ಜೆ ಕಮಲಾಕ್ಷಿ, ರಾಮಕೃಷ್ಣಪ್ಪ, ಪಿ. ಪ್ರಭಾಕರ್, ಕಾಲೇಜ್ ಆಫ್ ಫೈನ್ ಆರ್ಟ್ಸ್ ನ ಪ್ರಿನ್ಸಿಪಾಲ್ ತೇಜೇಂದ್ರ ಸಿಂಗ್ ಬಯೋನಿ ಮತ್ತು ಬೆಂಗಳೂರು ಸ್ಕೂಲ್ ಆಫ್ ವಿಷುಯಲ್ ಆರ್ಟ್ಸ್ನ ಪ್ರಿನ್ಸಿಪಾಲ್ ಸೌಮ್ಯ ಚೌಹಾಣ್ ಚಿತ್ರದಲ್ಲಿದ್ದಾರೆ.

    ಆನ್ ಲೈನ್ ಸಂತೆಯನ್ನು ಒಂದು ತಿಂಗಳ ಅವಧಿಯವರೆಗೆ ಸಾರ್ವಜನಿಕರು, ಕಲಾಸಕ್ತರು ಮತ್ತು ಕಲಾವಿದರು ವೀಕ್ಷಿಸಬಹುದು. ಕೋರೋನಾ ಯೋಧರ ಉದಾತ್ತ ಸೇವೆಗೆ ಈ ಬಾರಿಯ ಸಂತೆಯನ್ನು ಅರ್ಪಣೆ ಮಾಡಲಾಗಿದೆ.

    ಚಿತ್ರಕಲಾ ಪರಿಷತ್ತಿನ ಎಲ್ಲಾ ಗ್ಯಾಲರಿಗಳಲ್ಲಿ ಭಾರತದ ಆಯ್ದ ಆಹ್ವಾನಿತ ಪ್ರಸಿದ್ಧ ಕಲಾವಿದರ ಕಲಾಕೃತಿಗಳನ್ನು ಚಿತ್ರಸಂತೆಯ ಅವಧಿ ಪೂರ್ತಿ ಪ್ರದರ್ಶಿಸಲಾಗುವುದು. ಸುಮಾರು ಸಾವಿರದ ಐನೂರು ಕಲಾವಿದರು ಭಾರತದ ಎಲ್ಲಾ ಪ್ರಾಂತ್ಯ ಗಳಿಂದಲೂ ಮತ್ತು ಹೊರ ದೇಶಗಳಿಂದಲೂ ಈ ವರ್ಷದ ಚಿತ್ರಸಂತೆಯಲ್ಲಿ ಭಾಗವಹಿಸಲು ಆಸಕ್ತಿ ತೋರಿರುವುದು ವಿಶೇಷ.

    ಇದೇ ಸಂದರ್ಭದಲ್ಲಿ ದೇವರಾಜು ಅರಸು ಪ್ರಶಸ್ತಿ,ವೈ ಸುಬ್ರಹ್ಮಣ್ಯರಾಜು ಪ್ರಶಸ್ತಿ,ಎಂ ಆರ್ಯ ಮೂರ್ತಿ ಪ್ರಶಸ್ತಿ ಮತ್ತು ಎಚ್ ಕೆ ಕೇಜ್ರಿವಾಲ್ ಪ್ರಶಸ್ತಿಯನ್ನು ಹಿರಿಯ ಕಲಾವಿದರಾದ ಪ. ಸ ಕುಮಾರ್,ವಿಜಯ್ ಬಾಗೋಡಿ,ಆರ್ ರಾಜ ಮತ್ತುಕಲಾ ಇತಿಹಾಸಕಾರ ಡಾ.ಚೂಡಾಮಣಿ ನಂದಗೋಪಾಲ್ ಅವರಿಗೆ 50 ಸಾವಿರ ರೂಪಾಯಿ ನಗದು ಪುರಸ್ಕಾರದೊಂದಿಗೆ ನೀಡಲಾಗುವುದು.

    ಪರಿಷತ್ತಿನ ಸಂಸ್ಥಾಪಕ ಮುಖ್ಯ ಕಾರ್ಯದರ್ಶಿಗಳಾಗಿದ್ದ ಎಂಎಸ್ ನಂಜುಂಡರಾವ್ ರಾಷ್ಟ್ರೀಯ ಪ್ರಶಸ್ತಿಯನ್ನು ಹಿರಿಯ ಕಲಾವಿದರಾದ ನಿಲಿಮಾ ಶೇಖ್ ಅವರಿಗೆ ಒಂದು ಲಕ್ಷ ರೂಪಾಯಿ ನಗದು ಪುರಸ್ಕಾರದೊಂದಿಗೆ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗುವುದು. ಕಾಲೇಜುಗಳ ಮತ್ತು ಪರಿಷತ್ತಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹಲವಾರು ಉಪಸಮಿತಿಗಳ ಅಡಿಯಲ್ಲಿ ಚಿತ್ರಸಂತೆಯನ್ನು ಯಶಸ್ವಿಯಾಗಿ ನಡೆಯುವಂತೆ ಶ್ರಮಿಸುತ್ತಿದ್ದಾರೆ ಎಂದು ಶಂಕರ್ ಹೇಳಿದರು.

    18ರಿಂದ 80 ವರ್ಷ ವಯಸ್ಸಿನ ವೃತ್ತಿಪರ ಮತ್ತು ಶಿಕ್ಷಿತ ಕಲಾವಿದರು 18ನೇ ಚಿತ್ರಸಂತೆಯಲ್ಲಿ ಭಾಗವಹಿಸುತ್ತಿರುವುದು ವಿಶೇಷ. ಈ ಚಿತ್ರಸಂತೆಯಲ್ಲಿ ಹಲವಾರು ಆನ್ಲೈನ್ ವಿಮರ್ಶೆಗಳು ಕಲಾತ್ಮಕ ಚರ್ಚೆಗಳನ್ನು ಆಯೋಜಿಸಲಾಗುತ್ತದೆ.

    ಚಿತ್ರಸಂತೆಯಲ್ಲಿ ಭಾಗವಹಿಸುವ ಸಾವಿರದ ಐದುನೂರು ಕಲಾವಿದರಿಗೂ ಪ್ರತ್ಯೇಕವಾಗಿ ಒಂದು ಆನ್ಲೈನ್ ಪುಟವನ್ನು ಮೀಸಲಿಡಲಾಗಿದೆ. ಆನ್ಲೈನಲ್ಲಿ ಸಂಪರ್ಕದ ವಿವರಗಳನ್ನು ಮತ್ತು ಅವರ ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತದೆ. ಸಮಕಾಲೀನ ಕಲಾಕೃತಿಗಳು ಮಾತ್ರವಲ್ಲದೆ ಸಾಂಪ್ರದಾಯಿಕ ಕಲಾ ಶೈಲಿಗಳಾದ ಮೈಸೂರು, ತಂಜಾವೂರು , ರಾಜಸ್ಥಾನಿ ಮತ್ತು ಮಧುಬನಿ ಇನ್ನಿತರ ಕಲಾಕೃತಿಗಳನ್ನು ಕೂಡ ಈ ಆನ್ಲೈನ್ ಚಿತ್ರಸಂತೆಯಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ.

    ಕರ್ನಾಟಕ ಚಿತ್ರಕಲಾ ಪರಿಷತ್ತು ಸ್ಥಾಪನೆಯಾಗಿ 60 ವರ್ಷವಾಗಿರುವ ಹಿನ್ನಲೆಯಲ್ಲಿ ಈ ಬಾರಿಯ ಚಿತ್ರಸಂತೆ ವಿಶೇಷ ಮಹತ್ವ ಪಡೆದಿದೆ.

    error: Content is protected !!