23 C
Karnataka
Sunday, June 14, 2026
    Home Blog Page 119

    ಸ್ಯಾಂಕಿ ಕೆರೆ ಬಳಿ ಜಲಪಾತ ನಿರ್ಮಾಣ; ಉದ್ಯಾನ ನಗರಿಯಲ್ಲಿ ಹೊಸ ಆಕರ್ಷಣೆ

    ಉದ್ಯಾನನಗರಿ ಬೆಂಗಳೂರಿನಲ್ಲಿ ಜಲಪಾತವೊಂದು ಸೃಷ್ಟಿಯಾಗಲಿದ್ದು, ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ಮಹಾ ಶಿವರಾತ್ರಿ ದಿನ ಆ ಯೋಜನೆ ಕುರಿತು ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.

    ಮಲ್ಲೇಶ್ವರದ ಸ್ಯಾಂಕಿ ಕೆರೆಯ ಈಜುಕೊಳದ ಪಕ್ಕದಲ್ಲಿ ಜಲಪಾತ ನಿರ್ಮಿಸುವ ಸಂಬಂಧ ಗುರುವಾರ ಬೆಳಗ್ಗೆ ಡಿಸಿಎಂ ಸ್ಥಳ ಪರಿಶೀಲನೆ ನಡೆಸಿದರು.ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಿಸಿಕೊಂಡು ಕೃತಕ ಜಲಪಾತವನ್ನು ನಿರ್ಮಾಣ ಮಾಡಲಾಗುತ್ತಿದೆ.

    ಸ್ಯಾಂಕಿ ಕೆರೆ ಬಳಿ ನಿರ್ಮಾಣವಾಗಲಿರುವ ಜಲಪಾತ ಹೀಗಿರಲಿದೆ

    ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ; “ಸದಾಶಿವನಗರದ ಸ್ಯಾಂಕಿ ಕೆರೆ ನವೀಕರಣ ಕಾಮಗಾರಿ‌‌‌ ನಡೆಯುತ್ತಿದ್ದು ಹೆಚ್ಚುವರಿಯಾಗಿ ಕೆರೆ ಪಕ್ಕದ ಈಜುಕೊಳಕ್ಕೆ ಹೊಂದಿಕೊಂಡಂತೆ ಜಲಪಾತದ ಗೋಡೆ‌ ನಿರ್ಮಿಸಲಾಗುವುದು.ವಾಟರ್ ಫಾಲ್ಸ್ ಜತೆಗೆ ಏರಿಯೇಟರ್ಸ್ ಕೂಡ ಅಳವಡಿಸಲಾಗುವುದು. ಇದರಿಂದ ಕೆರೆ ನೀರು ಸ್ವಚ್ಛ ಆಗಲಿದೆ. ಈಗಾಗಲೇ ಸರ್ವಋತುಗಳಲ್ಲಿಯೂ ನಳನಳಿಸು ಉದ್ಯಾನವನಗಳಿಂದ ಜಗತ್ಪ್ರಸಿದ್ಧವಾಗಿರುವ ಬೆಂಗಳೂರು ನಗರಕ್ಕೆ ಈ ಜಲಪಾತ ಮತ್ತಷ್ಟು ಮೆರಗು ನೀಡಲಿದೆ. ಮಲ್ಲೇಶ್ವರದ ಪಾರಂಪರಿಕ ವೈಭವಕ್ಕೆ ಪೂರಕವಾಗಿರಲಿದೆ. ಇದಕ್ಕೆ ಒಂದೂವರೆ ಕೋಟಿ ಖರ್ಚಾಗುವ ಅಂದಾಜಿದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

    12ರಿಂದ 15 ಅಡಿ ಎತ್ತರ ಹಾಗೂ ಸುಮಾರು 100 ಅಡಿ ಅಗಲ ಇರಲಿರುವ ಈ ಜಲಪಾತ ನಗರದ ಪ್ರವಾಸೋದ್ಯಮಕ್ಕೂ ಪುರಕವಾಗಿರಲಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.

    ಸ್ಯಾಂಕಿ ಕೆರೆಯು ಮಲ್ಲೇಶ್ವರಕ್ಕೆ ಮಾತ್ರವಲ್ಲ, ಇಡೀ ಬೆಂಗಳೂರಿಗೆ ಒಂದು ಮಹತ್ವದ ತಾಣ. ಮುಂದಿನ ದಿನಗಳಲ್ಲಿ ಕೆರೆಗೆ ಇನ್ನಷ್ಟು ಕಾಯಕಲ್ಪ ನೀಡಲಾಗುವುದು. ಪ್ರತಿಯೊಬ್ಬ ಬೆಂಗಳೂರಿಗರೂ ಇಲ್ಲಿಗೆ ಭೇಟಿ ನೀಡಲೇಬೇಕು. ಆ ರೀತಿಯಲ್ಲಿ ಇಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.

    ಪಾಲಿಕೆ‌ಯ ಮುಖ್ಯ ಎಂಜಿನಿಯರ್ (ಕೆರೆ) ಮೋಹನ್ ಕೃಷ್ಣ, ಪಾಲಿಕೆ ಕಾರ್ಯನಿರ್ವಾಹಕ ಎಂಜಿನಿಯರ್ ಪಾಪರೆಡ್ಡಿ, ಸಹಾಯಕ ಎಂಜಿನಿಯರ್ ಗಳಾದ ಸುಷ್ಮಾ, ಸ್ಬಪ್ನಾ, ಬಿಬಿಎಂಪಿ ಮಾಜಿ ಸದಸ್ಯರಾದ ಮಂಜುನಾಥ ರಾಜು ಸೇರಿದಂತೆ ಹಲವು ಬಿಜೆಪಿ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು

    ಭೋ ಶಂಭೋ ಶಿವ ಶಂಭೋ ಸ್ವಯಂಭೋ

    ಇಂದು ನಾಡಿನಾದ್ಯಂತ ಮಹಾ ಶಿವರಾತ್ರಿಯ ಸಂಭ್ರಮ. ಪರಮೇಶ್ವರನ ದರ್ಶನಕ್ಕೆ ಎಲ್ಲೆಲ್ಲೂ ಸರತಿ ಸಾಲು. ಇಡೀ ರಾತ್ರಿ ವಿಷಕಂಠನ ನಾಮ ಸ್ಮರಣೆ. ಭೋ ಶಂಭೋ ಶಿವ ಶಂಭೋ ಸ್ವಯಂಭೋ ಎಂಬ ಝೇಂಕಾರ.

    ಮಹಾಶಿವರಾತ್ರಿಯನ್ನು ಮತ್ತಷ್ಟು ಭಕ್ತಿ ಪೂರ್ವಕವಾಗಿಸಲು ಶಿವನಾಮ ಸ್ಮರಣೆಯ ಈ ಪಾಡ್ಕಾಸ್ಟ್ ಅನ್ನು ಕನ್ನಡಪ್ರೆಸ್.ಕಾಮ್ ಪ್ರಸ್ತುತ ಪಡಿಸುತ್ತಿದೆ.

    ನಂಜನಗೂಡಿನ ನಂಜುಂಡೇಶ್ವರನ ಪ್ರಾರ್ಥನೆಯೊಂದಿಗೆ ಆರಂಭವಾಗುವ ಶಿವನಾಮ ಸ್ಮರಣೆ ಸೋಜಿಗಾದ ಸೂಜು ಮಲ್ಲಿಗೆ ಹಾಡಿನ ಮೂಲಕ ಮಾದೇವನನ್ನು ಸ್ಮರಿಸಿ ಮುಂದುವರಿಯುತ್ತದೆ. ಚಂದ್ರಚೂಡ ಶಿವಶಂಕರನನನ್ನು ಧ್ಯಾನಿಸುತ್ತಾ ಭೋ ಶಂಭೋ ಶಿವ ಶಂಭೋ ಸ್ವಯಂಭೋ ಎಂಬ ಝೇಂಕಾರದೊಂದಿಗೆ ಮುಕ್ತಾಯ ಆಗುತ್ತದೆ.

    ಮೈಸೂರಿನ ಅವನಿ ಹರ್ಷ, ಬೆಂಗಳೂರಿನ ಪ್ರಿಯಾಂಕ ಪದಕಿ, ಶ್ಯಾಮಲಾ ಮತ್ತು ಧರ್ಮಪುರಿಯಿಂದ ಐಶ್ವರ್ಯ ಮತ್ತು ಲಕ್ಷ್ಮಿ ಇಲ್ಲಿರುವ ಗೀತೆಗಳನ್ನು ಹಾಡಿದ್ದಾರೆ. ಭಾರತಿ ಎಸ್ ಎನ್ ಈ ಪಾಡ್ಕಾಸ್ಟ್ ನಿರೂಪಿಸಿದ್ದಾರೆ.

    ಆಲಿಸಿ , ಶಿವನೊಲುಮಗೆ ಪಾತ್ರರಾಗಿ.

    ಪರಿಸರ ಸಂರಕ್ಷಣೆಯಲ್ಲಿ ಮಹಿಳೆಯರ ಪಾತ್ರ


    ಇಂದು ಮಾರ್ಚ್ 8, 2021;  ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಕೋವಿಡ್-19   ಸಂಧಿಗ್ಧ ದಿನಗಳಲ್ಲಿ  ಮಹಿಳೆಯರು ಸಲ್ಲಿಸಿರುವ ಸೇವೆ ಮತ್ತು ಸಮರ್ಥ ನಾಯಕತ್ವವನ್ನು  ಪರಿಗಣಿಸಿ,    “ಮುಂದಾಳತ್ವದಲ್ಲಿ  ಮಹಿಳೆಯರು: ಕೋವಿಡ್ -19  ಜಗತ್ತಿನಲ್ಲಿ ಸಮಾನ ಭವಿಷ್ಯವನ್ನು ಸಾಧಿಸುವುದು” ಎಂಬ  ಧ್ಯೇಯವಾಕ್ಯದೊಂದಿಗೆ    2021 ರ ಮಹಿಳಾ ದಿನಾಚರಣೆಯನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ.  ಲಿಂಗ ಸಮಾನತೆ ಮತ್ತು ಮಹಿಳೆಯರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಅನೇಕ ಚರ್ಚೆ,  ಉಪನ್ಯಾಸ, ವಿಚಾರಗೋಷ್ಠಿಗಳ  ನಡುವೆ   ”ಮಹಿಳೆ ಮತ್ತು ಪರಿಸರ’ ಕುರಿತು ಒಂದು ಲೇಖನ.  


    ಅಭಿವೃದ್ಧಿಯ ಪಥದಲ್ಲಿ ಆಗಾಗ ಕೇಳಿಬರುವ ಜಾಗತೀಕರಣ, ಉದಾರೀಕರಣ, ಖಾಸಗೀಕರಣ  ಎಂಬ ವಿದ್ಯಮಾನಗಳ ಹಿನ್ನಲೆಯೊಂದಿಗೆ ‘ಮಹಿಳೆ’ ಹಾಗೂ ‘ಪರಿಸರ’ ಎಂಬ ವಿಷಯಗಳೂ ಸಹ ಇಂದು  ಹೆಚ್ಚು ಪ್ರಸ್ತುತವಾಗುತ್ತಿವೆ.  ಮಹಿಳೆ ಎಂದ ಕೂಡಲೆ ಸಾಂಪ್ರದಾಯಿಕ ಗ್ರಹಿಕೆಗಳಾದ ಅಬಲೆ, ಮಾತೆ, ಮಾಯೆ ಮೊದಲಾದ ಆಕೆಯ ಕುರಿತು ಇರುವ ಭಾಷಾ ಪ್ರಯೋಗಗಳೊಂದಿಗೆ ಇತ್ತೀಚಿನ ಮಹಿಳಾವಾದ, ಮಹಿಳಾ ಸಂಘಟನೆಗಳು, ಮಹಿಳಾ ಸ್ವಾಯತ್ತತೆ, ವಿಮೋಚನೆ ಎನ್ನುವ ಪದಪ್ರಯೋಗಗಳು ಮನಸ್ಸಿನಲ್ಲಿ ಹಾದು ಹೋಗುತ್ತವೆ.   ಪರಿಸರ ಎಂದಾಗ ಸಾಮಾನ್ಯವಾಗಿ ಕೇಳಿಬರುವುದು ಕೈಗಾರಿಕೀಕರಣ, ನಗರೀಕರಣ, ಗಣಿಗಾರಿಕೆ, ಮಾಲಿನ್ಯ, ಸಂರಕ್ಷಣೆ ಮೊದಲಾದ ಪದಗಳು.

    ಮಹಿಳೆ ಹಾಗೂ ಪರಿಸರಕ್ಕೆ ಪರಸ್ಪರ ಸಂಬಂಧ ಇದೆ ಎಂದು ಅರ್ಥೈಸಿ ಆಕೆ ಪರಿಸರಕ್ಕೆ ಹೆಚ್ಚು ನಿಕಟವಾಗಿರುವವಳು ಎಂದು ವಿವರಿಸಿಕೊಂಡಿರುವ ಸಾಕಷ್ಟು ಅಧ್ಯಯನಗಳು ನಮ್ಮೆದುರಿಗಿವೆ.  ಹೀಗಾಗಿ ಪರಿಸರಕ್ಕೆ ಮಾರಕಗಳಾದ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಕೈಗಾರಿಕೀಕರಣ, ನಗರೀಕರಣಗಳನ್ನು ಮಹಿಳಾ ವಿರೋಧಿ ಎಂದು ಗುರುತಿಸಿ ಮಹಿಳೆಯರು   ಅವುಗಳನ್ನು ಎದುರಿಸಲು ಇರುವ ದಾರಿಗಳ ಕುರಿತು ಹಾಗೂ ಪರಿಸರ ಸಂರಕ್ಷಣಾ ಕಾರ್ಯಗಳಲ್ಲಿ ಮಹಿಳೆಯರು ಹೇಗೆ  ತಮ್ಮನ್ನು ತೊಡಗಿಸಿಕೊಳ್ಳಬಹುದು ಎನ್ನುವುದರ ಬಗ್ಗೆ ಈ ಲೇಖನದಲ್ಲಿ ಚರ್ಚಿಸಲು ಒಂದು ಚಿಕ್ಕ ಪ್ರಯತ್ನ.

    ಅಭಿವೃದ್ಧಿ ಎನ್ನುವುದು ಒಂದು ದೇಶದ  ಸರ್ವತೋಮುಖ ಪ್ರಗತಿಯ ಅವಿಭಾಜ್ಯ ಅಂಗ.  ಆದರೆ ಅಭಿವೃದ್ಧಿಯ ಹೆಸರಿನಲ್ಲಿ ದಿಕ್ಕುದೆಸೆಯಿಲ್ಲದೆ ಮುಂದುವರಿಯುತ್ತಿರುವ ಕೈಗಾರೀಕರಣ, ನಗರೀಕರಣ,  ಗಣಿಗಾರಿಕೆಯಂತಹ ಪರಿಸರ ವಿನಾಶಕ ಯೋಜನೆಗಳಿಂದ ಸಮಾಜದ ಎಲ್ಲಾ ಸ್ತರದಲ್ಲಿರುವವರಿಗೆ ಒಂದಲ್ಲ ಒಂದು ರೀತಿಯಲ್ಲಿ ದುಷ್ಪರಿಣಾಮಗಳು ತಟ್ಟುತ್ತವೆ.  ಪರಿಸರ ವಿನಾಶಕ ಚಟುವಟಿಕೆಗಳಿಂದ ಸಮಾಜದ ಎಲ್ಲಾ ವರ್ಗದ ಜನರು ಬವಣೆಗಳನ್ನು ಪಡುತ್ತಿದ್ದರೂ ಅದರಲ್ಲಿ ಮುಖ್ಯ ಬಲಿಪಶು ಮಹಿಳೆಯರೇ.  ಉದಾಹರಣೆಗೆ, ಹೆಚ್ಚಿನ ಎಲ್ಲ ಅಭಿವೃದ್ಧಿಪರ ಯೋಜನೆಗಳಿಗೆ ಅರಣ್ಯನಾಶ ಸಾಮಾನ್ಯ.  ಜೀವ-ಪರಿಸರದ ಸಮತೋಲನವನ್ನು ಕಾಪಾಡಲು ವನ್ಯಸಂಪತ್ತು ಎಷ್ಟು ಮುಖ್ಯ ಎನ್ನುವುದು ತಿಳಿದೇ ಇದೆ.  ನಿಸರ್ಗದ ವನ್ಯ ಸಂಪತ್ತನ್ನು ಧ್ವಂಸಮಾಡುವುದು ಹಲವಾರು ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತವೆ.  ಅದರಲ್ಲಿ ಬಹುಮುಖ್ಯವಾದದ್ದು ನೀರಿನ ಸಮಸ್ಯೆ .

    ನೀರಿನ ಸಮಸ್ಯೆ ಕಾಡುವುದು ಮಹಿಳೆಯರನ್ನೇ

    ಪ್ರಾಕೃತಿಕವಾಗಿ ನಡೆಯುವ ನೀರಿನಚಕ್ರದಲ್ಲಿ ಮುಖ್ಯ ಪಾತ್ರವಹಿಸುವ ಕಾಡನ್ನು ಕಡಿದರೆ ಮಳೆಯ ಪ್ರಮಾಣ ಕಡಿಮೆಯಾಗುವುದು ಮಾತ್ರವಲ್ಲ.  ಬಿದ್ದ ಮಳೆನೀರು ಸಮುದ್ರಕ್ಕೆ ಕೊಚ್ಚಿ ಹೋಗಿ ಅಂತರ್ಜಲ ಮಟ್ಟ ಕುಸಿಯುತ್ತದೆ.  ಕೆರೆ, ಬಾವಿ, ನದಿ ತೊರೆಗಳು ಖಾಲಿಯಾಗುತ್ತವೆ.  ಇಂತಹ ಸಂದರ್ಭದಲ್ಲಿ ಉದ್ಭವವಾಗುವ  ನೀರಿನ ಸಮಸ್ಯೆಯಿಂದ ಬವಣೆ ಪಡುವವರು ಬಹುಮುಖ್ಯವಾಗಿ ಮಹಿಳೆಯರು.  ಗ್ರಾಮೀಣ ಪ್ರದೇಶಗಳಲ್ಲಿ  ನೀರಿಗಾಗಿ ಹಲವು ಮೈಲಿ ದೂರವನ್ನು ಕ್ರಮಿಸಿ ಉರಿಬಿಸಿಲಿನಲ್ಲಿ ನೀರನ್ನು ತಲೆಯ ಮೇಲೆ ಹೊತ್ತು ತರುವ ದೃಶ್ಯ  ಮತ್ತು ನಗರ, ಪಟ್ಟಣಗಳಲ್ಲಿ ನೀರಿಗಾಗಿ ಮಹಿಳೆಯರು ನಲ್ಲಿಯ  ಮುಂದೆ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುವಂತಹ ದೃಶ್ಯಗಳನ್ನು ನಾವು ದಿನನಿತ್ಯ ಕಾಣುತ್ತಿದ್ದೇವೆ.  ಗ್ರಾಮೀಣ ಪ್ರದೇಶಗಳಲ್ಲಿ  ಮಹಿಳೆಯರು ವನ್ಯ ಸಂಪತ್ತನ್ನು ಅವಲಂಬಿಸಿ ದುಡಿಮೆಯನ್ನು ಮಾಡಿಕೊಂಡು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿ ಕೊಂಡಿರುತ್ತಾರೆ.  ಕಟ್ಟಿಗೆ ಮಾರಾಟ, ಚಾಪೆ ಹೆಣೆಯುವುದು, ಬುಟ್ಟಿ ನೇಯುವಿಕೆ, ಅಡಿಕೆ ಸುಲಿಯುವುದು ಹೀಗೆ ಹಲವಾರು ಸಣ್ಣ ಕಸುಬುಗಳನ್ನು ನಿರ್ವಹಿಸಿ ಸ್ವಾಲಂಬಿಗಳಾಗಿರುತ್ತಾರೆ.  ಕಾಡನ್ನು ಮಿತಿಮೀರಿ ಕಡಿಯುವುದರಿಂದ ಅವರ ದುಡಿಮೆಗೆ ದೊಡ್ಡ ಹೊಡೆತ ಬೀಳುತ್ತದೆ.  ಕೈಗಾರೀಕರಣ, ಗಣಿಗಾರಿಕೆ, ವಿದ್ಯುತ್‍ಸ್ಥಾವರ, ಅಣೆಕಟ್ಟು ನಿರ್ಮಾಣ ಹೀಗೆ ಹಲವು ಯೋಜನೆಗಳನ್ನು ಕೈಗೊಳ್ಳುವಾಗ ಸರಕಾರವು ಒಂದಿಷ್ಟು ಪರಿಹಾರವನ್ನು ನೀಡಿ ಹಳ್ಳಿಯ ಜನರನ್ನು/ಬುಡಕಟ್ಟು ಜನಾಂಗಗಳನ್ನು ಒಕ್ಕಲೆಬ್ಬಿಸುವುದರಿಂದ ಮುಖ್ಯವಾಗಿ ಮಹಿಳೆಯರು ಬದುಕು ದಯನೀಯವಾಗುತ್ತದೆ.

    ಪ್ರಕೃತಿ ಮಿಕೋಪಗಳಾದ ಬರಗಾಲ, ಕ್ಷಾಮ, ನೆರೆ ಹಾವಳಿ, ಜೊತೆಗೆ ದೋಷಪೂರಿತ ಬಿತ್ತನೆ ಬೀಜ, ಗೊಬ್ಬರಗಳನ್ನು ಉಪಯೋಗಿಸುವುದರಿಂದ, ಅಲ್ಲದೇ ಬೆಳೆದ ಫಸಲಿಗೆ ಮಾರುಕಟ್ಟೆಯಲ್ಲಿ ಬೆಲೆಸಿಗದೇ ಇರುವುದು,  ಹೀಗೆ ಹಲವಾರು ಕಾರಣಗಳಿಂದ ಪಾರಂಪರಿಕವಾಗಿ ಕೃಷಿಯನ್ನೇ ನಂಬಿಕೊಂಡಿರುವ ಬಂದಿರುವ ರೈತರು ಕೃಷಿಯನ್ನು ತ್ಯಜಿಸಿ  ಉದ್ಯೋಗ ಅರಸುತ್ತ ಹಳ್ಳಿಯಿಂದ ಪಟ್ಟಣವನ್ನು ಸೇರುತ್ತಿದ್ದಾರೆ.  ಹೀಗಾಗಿ ಗ್ರಾಮೀಣ ಮಹಿಳೆಯರ ಮೇಲೆ ಮನೆವಾರ್ತೆ ಕೆಲಸಗಳ ಜೊತೆಗೆ ಕೃಷಿಯನ್ನು ಸಹ ತಾವೇ ನೋಡಿಕೊಳ್ಳಬೇಕಾಗಿರುವುದರಿಂದ ಅವರ ಮೇಲೆ ಇನ್ನಷ್ಟು ಕೆಲಸದ ಒತ್ತಡ ಬೀಳುತ್ತದೆ.  ಸಮೀಕ್ಷೆಯ ಪ್ರಕಾರ ಗ್ರಾಮೀಣ ಮಹಿಳೆಯರು ಪುರುಷರಿಗಿಂತ ಶೇಕಡ 35ರಷ್ಟು ಹೆಚ್ಚು ಸಮಯ ಕೆಲಸದಲ್ಲಿ ನಿರತರಾಗಿರುತ್ತಾರೆ.  

    ಪ್ರಕೃತಿ ವಿಕೋಪ ಮತ್ತು ಮಹಿಳೆಯರು

    ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಆವರ್ತನದಲ್ಲಿ ಸಂಭವಿಸುವ ಪ್ರವಾಹ, ಚಂಡಮಾರುತ, ಬರಗಾಲ ಇನ್ನಿತರ ನೈಸರ್ಗಿಕ ವಿಕೋಪಗಳು ಮಾನವ ಪ್ರಕೃತಿಯ ಮೇಲೆ ನಡೆಸಿದ ದಬ್ಬಾಳಿಕೆಯ ಪ್ರತಿಫಲ.   ಇದನ್ನು ಅನೇಕ ವೈಜ್ಞಾನಿಕ ಸಂಶೋಧನೆಗಳು ನಿರೂಪಿಸಿವೆ. ಜಾಗತಿಕ ತಾಪಮಾನ ಏರುವಿಕೆ ಮತ್ತು  ಹವಾಗುಣ ಬದಲಾವಣೆಯಿಂದಾಗಿ ಸಮಸ್ಯೆಗಳು ಇನ್ನಷ್ಟೂ  ಬಿಗಡಾಯಿಸುತ್ತಿವೆ.    ನಿಸರ್ಗವು ಪ್ರತಿಯೊಂದು ಪ್ರಾಕೃತಿಕ ಕ್ರಿಯೆಗಳನ್ನು ಸಮತೋಲನದಲ್ಲಿ ಇಡುವ ಸಂಕೀರ್ಣವಾದ ವ್ಯವಸ್ಥೆಯನ್ನು ಹೊಂದಿರುತ್ತದೆ. ಆದರೆ, ಮನುಷ್ಯನ ಸ್ವಾರ್ಥ ಸಾಧನೆಯಿಂದಾಗಿ ಈ ಸಮತೋಲನದಲ್ಲಿ ಏರುಪೇರು ಉಂಟಾಗಿ ಮೇಲೆ ತಿಳಿಸಿರುವ ಪ್ರಕೃತಿ-ವಿಕೋಪಗಳಿಗೆ ಕಾರಣವಾಗಿ ಸಾವುನೋವುಗಳು ಸಂಭವಿಸುತ್ತವೆ.  ಇಂತಹ ಪರಿಸ್ಥಿತಿಯಲ್ಲಿ ಆಸ್ತಿಪಾಸ್ತಿ, ಮನೆಮಠಗಳನ್ನು ಕಳೆದುಕೊಂಡ ಮಹಿಳೆಯರ ಸ್ಥಿತಿ ಶೋಚನೀಯವಾಗುತ್ತದೆ.

    ಭಾರತದಲ್ಲಿ ಕರಾವಳಿ ಮತ್ತು ನದಿಗಳು ಶೇಕಡ 65 ಮೀನುಗಾರ ಕುಟುಂಬಗಳಿಗೆ ಆಧಾರಸ್ತಂಭವಾಗಿವೆ.  ಮೀನುಗಾರರ ಕುಟುಂಬದಲ್ಲಿ ಪುರುಷದೊಂದಿಗೆ ಕೆಲಸಗಳನ್ನು ಹಂಚಿಕೊಂಡು ಮಹಿಳೆಯರೂ ದುಡಿಮೆಯಲ್ಲಿ ಭಾಗಿಯಾಗಿರುತ್ತಾರೆ.  ಒಂದು ಕಡೆ ಕಾರ್ಖಾನೆಗಳು ಹೊರಚೆಲ್ಲುವ ತ್ಯಾಜ್ಯಗಳಿಂದ ಜಲಮಾಲಿನ್ಯ, ಇನ್ನೊಂದು ಕಡೆ ಮೀನುಗಾರಿಕೆಗೆ ಸರಕಾರವು ಗೊತ್ತುಗುರಿಯಿಲ್ಲದೆ ಆಧುನಿಕ ತಂತ್ರಜ್ಞಾನ (ಕೆಲವು ಮೈಲುಗಳ ವ್ಯಾಪ್ತಿಯಲ್ಲಿ ಒಂದೇ ಸಲಕ್ಕೆ ಸಾವಿರಾರು ಮೀನುಗಳನ್ನು ಹಿಡಿಯವುದು) ಉಪಯೋಗಿಸುವ ಬಂಡವಾಳಶಾಹಿಗಳಿಗೆ ಅವಕಾಶ ನೀಡಿರುವುದರಿಂದ, ಇದು ಮತ್ಸ್ಯಕ್ಷಾಮಕ್ಕೆ ಕಾರಣವಾಗುವುದಲ್ಲದೆ, ಸಣ್ಣ ಪ್ರಮಾಣದಲ್ಲಿ ಮೀನುಗಾರಿಕೆಯನ್ನು ನಂಬಿಕೊಂಡಿರುವ ಮಹಿಳೆಯರು ಮತ್ತು ಅವರನ್ನು ನಂಬಿಕೊಂಡಿರುವ ಕುಟುಂಬವು ಬೀದಿಗೆ ಬೀಳುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತದೆ.

    ಗ್ರಾಮೀಣ ಹಾಗು ಕರಾವಳಿ ಪ್ರದೇಶದ ಮಹಿಳೆಯರ ದುಸ್ಥಿತಿ ಈ ರೀತಿಯಾದರೆ, ಪರಿಸರ-ವಿನಾಶಕ ಕ್ರಿಯೆಗಳು ನಗರವಾಸಿ ಮಹಿಳೆಯರ ಸ್ಥಿತಿಯನ್ನು ಇನ್ನೊಂದು ರೀತಿಯಲ್ಲಿ ಸಂಕಷ್ಟಕ್ಕೆ ಈಡುಮಾಡಿವೆ.   ಉಸಿರಾಡುವ ಗಾಳಿ, ಕುಡಿಯುವ ನೀರು, ತಿನ್ನುವ ಆಹಾರ,  ಇವೆಲ್ಲವನ್ನು ನಾವು ನಿಸರ್ಗದಿಂದ ಪಡೆಯುತ್ತೇವೆ.  ಇವೆಲ್ಲವೂ ನಿರ್ಮಲವಾಗಿದ್ದರೆ ಆರೋಗ್ಯವೂ ಉತ್ತಮವಾಗಿರುತ್ತದೆ. ಆದರೆ ವಿಪರೀತವಾದ ಕೈಗಾರಿಕೀಕರಣ, ನಗರೀಕರಣ, ಹಸಿರು ಕ್ರಾಂತಿಯ ಹೆಸರಿನಲ್ಲಿ ಅನುಸರಿಸಿಕೊಂಡು ಬಂದಿರುವ ಆಧುನಿಕ ಮಾದರಿಯ ಕೃಷಿಪದ್ಧತಿ ಹಾಗೂ ಆಧುನಿಕ ಜೀವನ ಶೈಲಿಯಿಂದ ಪರಿಸರದ ಪ್ರತಿಯೊಂದು ಅಂಗವು ಸಾವಿರಾರು ಬಗೆಯ ರಾಸಾಯನಿಕ ವಸ್ತುಗಳಿಂದ ಮಾಲಿನ್ಯಗೊಂಡಿದೆ.  ಈ ರಾಸಾಯನಿಕಗಳು ಗಾಳಿ, ನೀರು, ಆಹಾರ ಮೂಲಕ ದೇಹವನ್ನು ಸೇರಿ ದುಷ್ಪರಿಣಾಮಗಳನ್ನು  ಉಂಟುಮಾಡುತ್ತವೆ.  ಈ ಕಾರಣದಿಂದ ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ಕ್ಯಾನ್ಸರ್, ಅಸ್ತಮ, ಚರ್ಮಸಂಬಂಧಿ ರೋಗಗಳಿಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.  ಕಲುಷಿತಗೊಂಡ ಅನಾರೋಗ್ಯಕರ ಪರಿಸರದಲ್ಲಿ ಬದುಕುವ ಎಲ್ಲರೂ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

    ಇತ್ತೀಚಿನ ಹಲವು ಸಂಶೋಧನೆಗಳು  ಪರಿಸರಕ್ಕೆ ಬಿಡುಗಡೆಯಾಗುವ ಅನೇಕ ರಾಸಾಯನಿಕಗಳು ಸ್ತ್ರೀಯರ ಆರೋಗ್ಯದ ಮೇಲೆ ಅನಪೇಕ್ಷಿತ ಪರಿಣಾಮಗಳನ್ನು ಬೀರಿ ಮಾರಕ ಕಾಯಿಲೆಗಳನ್ನು ಉಂಟುಮಾಡುತ್ತವೆ ಎಂದು ದೃಢಪಡಿಸಿವೆ.  ಕ್ರಿಮಿನಾಶಕಗಳಾದ ಎಂಡೋಸಲ್ಪಾನ್, ಡಿ.ಡಿ.ಟಿ., ಪ್ಲಾಸ್ಟಿಕ್ ಘಟಕವಾದ ಬಿಸ್‍ಫಿನೋಲ್-ಎ, ಅನೇಕ ಔಷಧಿಗಳು (ಟೆಮೋಕ್ಸಿಫಿನ್, ಸ್ಟಿಲ್‍ಬೆಸ್ಟ್ರೊಲ್, ಇತರ) ಹೀಗೆ ಅನೇಕ ಮಾನವ-ನಿರ್ಮಿತ ರಾಸಾಯನಿಕ ವಸ್ತುಗಳು ಹೆಣ್ಣು-ಲಿಂಗ ಹಾರ್ಮೋನ್ (ಇಸ್ಟೋಜನ್)ಗಳನ್ನು ಹೋಲುವುದರಿಂದ ಅವುಗಳು ಮಹಿಳೆಯರ ದೇಹವನ್ನು ಸೇರಿದರೆ ಆರೋಗ್ಯ ಸ್ಥಿತಿಯನ್ನು ಏರುಪೇರು ಮಾಡಿ ಅನೇಕ ಸ್ತ್ರೀಸಂಬಂಧಿ ಕಾಯಿಲೆಗಳಿಗೆ ಎಡೆಮಾಡಿಕೊಡುತ್ತದೆ.  ಇದಕ್ಕೆ ಸಾಕ್ಷಿ ಎನ್ನುವಂತೆ ಸ್ತನ ಕ್ಯಾನ್ಸರ್‍ನಿಂದ ಬಳಲುತ್ತಿರುವ ಮಹಿಳೆಯರ ಸಂಖ್ಯೆ ಜಗತ್ತಿನಾದ್ಯಂತ ಕಳೆದ 20 ವರ್ಷಗಳಿಂದೀಚೆ ಶೇಕಡ 60ರಷ್ಟು ಏರಿದೆ.  ಮಾತ್ರವಲ್ಲ, ಈ ರಾಸಾಯನಿಕಗಳು ತಾಯಿಯ ಗರ್ಭದಲ್ಲಿ ಬೆಳೆಯುವ ಮಗುವಿನ ಮೇಲೂ ದುಷ್ಪರಿಣಾಮ ಬೀರಿ ಅಂಗವಿಕಲತೆ ಮತ್ತು ಬುದ್ಧಿಮಾಂದ್ಯ ಮಗುವಿನ ಜನ್ಮಕ್ಕೆ ಕಾರಣವಾಗುತ್ತವೆ.  ವಿಕಲತೆ ಇರುವ ಮಗುವಿಗೆ ಜನ್ಮ ನೀಡುವ ತಾಯಿಯು ಜೀವನಪರ್ಯಂತ ಬವಣೆ ಪಡುವುದಲ್ಲದೆ, ಎಷ್ಟೋ ಕಡೆಗಳಲ್ಲಿ ಇದಕ್ಕೆ ಹೆತ್ತ ತಾಯಿಯ ಮೇಲೆ ಅಪವಾದ ಹೋರಿಸಿ ಅವರನ್ನು ಅವಹೇಳನ ಮಾಡುವಂತಹ ಪುರುಷಪ್ರಧಾನ ಸಮಾಜವೂ  ಇದೆ.  

    ಪರಿಸರ ಮಾಲಿನ್ಯದಿಂದ ಮತ್ತು ಪರಿಸರ-ವಿನಾಶಕಾರಿ ಯೋಜನೆಗಳಿಂದ ವಿವಿಧ ಸ್ತರದಲ್ಲಿರುವ ಮಹಿಳೆಯರು ನೇರವಾಗಿ ಅಥವಾ ಪರೋಕ್ಷವಾಗಿ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿರುವಾಗ ಅಂತಹ ಯೋಜನೆಗಳ ವಿರುದ್ಧ ಅವರು ಧ್ವನಿಯೆತ್ತಲೇ ಬೇಕಾಗಿರುವ ಅನಿವಾರ್ಯತೆಯಿದೆ.  ಲಿಂಗ-ತಾರತಮ್ಯವಿರುವ ದೇಶಗಳಲ್ಲಿ  ಸಮಾಜದ ಮುಖ್ಯವಾಹಿನಿಯಲ್ಲಿ ಅವರನ್ನು ಕಡೆಗಣಿಸಿರುವುದರಿಂದ ಮತ್ತು ಅವರನ್ನು ಕೇವಲ ಮನೆವಾರ್ತೆ ಕೆಲಸಗಳಿಗೆ ಸೀಮಿತಗೊಳಿಸಿ ಮೂಲೆಗುಂಪಾಗಿಸಿರುವುದರಿಂದ ಮಹಿಳೆಯರು ತಮಗಾಗುತ್ತಿರುವ ಅನ್ಯಾಯವನ್ನು ನೋಡಿಯೂ ಮೌನವಾಗಿ ಅನುಭವಿಸಬೇಕಾಗಿದೆ.  ಸಮೀಕ್ಷೆಯ ಪ್ರಕಾರ  ಜತ್ತಿನಾದ್ಯಂತ   ರಾಷ್ಟ್ರೀಯ ಸರ್ಕಾರಗಳಿಂದ ಹಿಡಿದು ಸ್ಥಳೀಯ ಸಮುದಾಯ ಗುಂಪುಗಳವರೆಗೆ  ನಿರ್ಧಾರ ತೆಗೆದುಕೊಳ್ಳುವಲ್ಲಿ ಮಹಿಳೆಯರನ್ನು ಕಡಿಮೆ ಸಂಖ್ಯೆಯಲ್ಲಿ  ಪ್ರತಿನಿಧಿಸಲಾಗುತ್ತಿದೆ. ಉದಾಹರಣೆಗೆ, ಜಗತ್ತಿನ ಎಲ್ಲ ರಾಷ್ಟ್ರೀಯ ಸಂಸದರಲ್ಲಿ ಶೇಕಡ 25ಕ್ಕಿಂತ ಕಡಿಮೆ ಮಹಿಳಾ  ಪ್ರತಿನಿಧಿ ಇದ್ದು, ಅದರಲ್ಲೂ   ಪರಿಸರ   ಸಂಬಂಧಿತ ಕ್ಷೇತ್ರಗಳಲ್ಲಿ ಉನ್ನತ ಮಂತ್ರಿ ಸ್ಥಾನ  ಅಥವಾ ಸಮುದಾಯ ಮಟ್ಟದ ಸಮಿತಿಗಳನ್ನು ಕೇವಲ ಶೇಕಡ 12 ಮಹಿಳೆಯರು  ಪ್ರತಿನಿಧಿಸುತ್ತಾರೆ.  

    “ಮಣ್ಣು, ನೀರು, ಅರಣ್ಯ  ಮತ್ತು ಶಕ್ತಿ ಸೇರಿದಂತೆ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು,  ಮಾತ್ರವಲ್ಲ   ತಮ್ಮ ಸುತ್ತಲಿನ ಪರಿಸರದ  ಬಗ್ಗೆ  ಮಹಿಳೆಯರು ಆಳವಾದ   ಸಾಂಪ್ರದಾಯಿಕ ಮತ್ತು ಸಮಕಾಲೀನ ಜ್ಞಾನವನ್ನು ಹೊಂದಿರುತ್ತಾರೆ” ಎಂದು  1991 ರಲ್ಲಿ  ವಿಶ್ವಬ್ಯಾಂಕ್  ಸಂಶೋಧನಾಧಾರಿತವಾಗಿ  ಪ್ರಕಟಿಸಿರುವುದು ಎಲ್ಲರೂ  ಒಪ್ಪುವಂತದ್ದು. ಹೀಗಿದ್ದೂ,  ಯಾವುದೇ ಪ್ರಗತಿಪರ ಯೋಜನೆಗಳನ್ನು ಪ್ರಾರಂಭಿಸುವಾಗ ಸರಕಾರವಾಗಲಿ ಅಥವಾ ಬಂಡವಾಳಶಾಹಿಗಳಾಗಲಿ ಮಹಿಳೆಯರಿಗೆ ಅದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಗಮನ ಕೊಡದೆ ಜಾಣಕುರುಡು ಪ್ರದರ್ಶಿಸುತ್ತವೆ.  ಈ ಹಿನ್ನೆಲೆಯಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ರೂಪಿಸುವ ಯಾವುದೇ ಯೋಜನೆಗಳಿರಲಿ, ಆ ಯೋಜನೆಗಳ ಸಂಪೂರ್ಣ ರೂಪುರೇಷೆಗಳನ್ನು ತಿಳಿಯುವ ಹಕ್ಕು ಮತ್ತು ತಮ್ಮ ಅಭಿಪ್ರಾಯಗಳನ್ನು ಮಂಡಿಸುವ ಹಕ್ಕನ್ನು ಮಹಿಳೆಯರು ಪಡೆದುಕೊಳ್ಳಬೇಕು.  ನೈಸರ್ಗಿಕ ಸಂಪನ್ಮೂಲಗಳು ಮತ್ತು ಪ್ರಮುಖ ನಾಗರಿಕ ನಿರ್ಧಾರಗಳನ್ನು  ತೆಗೆದುಕೊಳ್ಳುವ ಅವಕಾಶಗಳಿಗೆ ಮಹಿಳೆಯರ ಭಾಗವಹಿಸುವಿಕೆಯನ್ನು   ಸೀಮಿತಗೊಳಿಸುವಂತಹ    ಲಿಂಗ-ಅಸಮಾನತೆಯು ಸುಸ್ಥಿರ ಅಭಿವೃದ್ಧಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ವಿಫಲವಾಗುತ್ತದೆ ಎಂಬುವುದನ್ನು ಈಗಾಗಲೇ ಜಾಗತಿಕವಾಗಿ ಮನಗಾಣಲಾಗಿದೆ.  

    ಮಹಿಳೆಯರು ಎಚ್ಚೆತ್ತುಕೊಳ್ಳಬೇಕು

    ತಮ್ಮನ್ನು ಪರಿಗಣನೆಗೆ ತೆಗೆದುಕೊಳ್ಳದೇ ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ಮಹಿಳೆಯರು ಎಚ್ಚೆತ್ತುಕೊಳ್ಳಬೇಕು ಮತ್ತು ಅದರ ವಿರುದ್ಧ ಪ್ರತಿಭಟಿಸುವ ಸಾಂವಿಧಾನಿಕ  ಹಕ್ಕು  ಇದ್ದೇ  ಇದೆ. ಒಬ್ಬಂಟಿಗಳಾಗಿ ಹೋರಾಡಿದರೆ ಅವಳಿಗೆ ನ್ಯಾಯ ಸಿಗುತ್ತದೆಯೇ ಎಂಬ ಪ್ರಶ್ನೆ ಮೂಡುತ್ತದೆ.  ಇಂತಹ ಸಂದರ್ಭದಲ್ಲೇ ಮಹಿಳಾ ಸಂಘಟನೆಗಳ ಅಗತ್ಯತೆ ಕಂಡುಬರುವುದು.  ಗ್ರಾಮೀಣ ಅಥವಾ ನಗರ ಪ್ರದೇಶವಿರಲಿ, ಮಹಿಳೆಯರು ತಮ್ಮದೇ ಆದ ಸಂಘಟನೆಗಳನ್ನು  ಮಾಡಿಕೊಂಡು ಅಥವಾ ಈಗಾಗಲೇ ಅಸ್ತಿತ್ವದಲ್ಲಿರುವ ಮಹಿಳಾ ಸಂಘಟನೆಗಳೊಂದಿಗೆ ಕೂಡಿಕೊಂಡು ತಮ್ಮ ಬದುಕಿನ ಮೇಲೆ ದುಸ್ತರ ಪರಿಣಾಮ ಬೀರುವ ಪರಿಸರ-ವಿನಾಶಕ ಯೋಜನೆ, ಚಟುವಟಿಕೆಗಳ ವಿರುದ್ಧ ಒಗ್ಗಟ್ಟಿನಿಂದ ಹೋರಾಡಿದರೆ ಅದರಲ್ಲಿ ಯಶಸ್ಸು ಕಾಣಲು ಸಾಧ್ಯವಿದೆ. 

    ಭಾರತದಂತಹ ಪ್ರಜಾಪ್ರಭುತ್ವ ದೇಶದಲ್ಲಿ ಮಹಿಳಾ-ಸಂಘಟನೆಗಳು ನಡೆಸುವ ಪ್ರತಿಭಟನೆಗಳನ್ನು ಸರ್ಕಾರವಾಗಲಿ, ಖಾಸಗಿ ಹಿತಾಸಕ್ತಿಗಳಾಗಲಿ ಅಷ್ಟು ಸುಲಭವಾಗಿ ಧಮನಿಸಲು ಸಾಧ್ಯವಿಲ್ಲ ಮತ್ತು ಮಹಿಳಾ ಸಂಘಟನೆಗಳು ನಡೆಸುವ ಪ್ರತಿಭಟನೆಗಳು ನ್ಯಾಯ ಸಿಗುವ ಅವಕಾಶಗಳು ಹೆಚ್ಚು.  ಅನೇಕ ಮಹಿಳಾ ಸಂಘಟನೆಗಳು ತಮ್ಮ ಹಕ್ಕಿಗಾಗಿ ನಡೆಸಿದ ಪ್ರತಿಭಟನೆ ಯಶಸ್ವಿಯಾಗಿರುವಂತಹ ಅನೇಕ ಘಟನೆಗಳು ನಮ್ಮ ದೇಶದಲ್ಲಿ ಇವೆ.

    ಉತ್ತರ ಪ್ರದೇಶದ ಚಾಮೋಲಿ ಜಿಲ್ಲೆಯಲ್ಲಿ 1974ರಲ್ಲಿ ಅಲ್ಲಿನ ಮಹಿಳೆಯರು ಗೌರಾದೇವಿಯವರ ನಾಯಕತ್ವದಲ್ಲಿ ಚಿಪ್ಕೊ ಚಳವಳಿಯನ್ನು ಹುಟ್ಟುಹಾಕಿ  ಸಾವಿರಾರು ಮರಗಳನ್ನು  ಪರಿಸರ-ವಿನಾಶಕ ಶಕ್ತಿಗಳಿಂದ ರಕ್ಷಿಸುವಲ್ಲಿ ಸಫಲರಾಗಿರುತ್ತಾರೆ.  1877ರಲ್ಲಿ “ಮಹಿಳಾ ಮಂಗಳ ದಾಸ” ಸಂಘಟನೆಯ ಮೂಲಕ ಬಾಚನಿ ದೇವಿ ಅವರ ನಾಯಕತ್ವದಲ್ಲಿ ಸಾವಿರಾರು ಮಹಿಳೆಯರು ಭಾಗವಹಿಸಿ ಈಗಿನ ಉತ್ತರಾಖಂಡದಲ್ಲಿರುವ ಕಾಡನ್ನು ಪರಿಸರ ವಿರೋಧಿ ಯೋಜನೆಯಿಂದ ಹೋರಾಟದ  ಮೂಲಕ ಸಂರಕ್ಷಿಸಿದರು.

    ಕರ್ನಾಟಕದಲ್ಲಿ “ಅಪ್ಪಿಕೋ” ಎನ್ನುವ ಚಳುವಳಿಯನ್ನು ಮಾಡಿ ಇಲ್ಲಿನ ಮಹಿಳೆಯರು ಕೈಗಾರಿಕೋದ್ಯಮಿಗಳ ಕಪಿಮುಷ್ಟಿಯಿಂದ ಸಾವಿರಾರು ಮರಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವಂತಹ ಘಟನೆಗಳನ್ನು ಮಹಿಳೆಯರು ಸ್ಪೂರ್ತಿಯಾಗಿ ತೆಗೆದುಕೊಳ್ಳಕೊಳ್ಳಬಹುದು.    ಸಮಾಜಸೇವಕಿ, ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್‍ರವರು ಬಡಜನರನ್ನು ಬೀದಿಗೆ ತರುವ ಹಲವಾರು ಪರಿಸರ-ವಿನಾಶಕಾರಿ ಯೋಜನೆಗಳ ವಿರುದ್ಧ ಪ್ರತಿಭತಿಸಲು ದಮನಿತರ ಧ್ವನಿಯಾಗಿ ನಿಂತಿರುವುದನ್ನು ಮಹಿಳೆಯರು ಮನಗಾಣಬೇಕು.  ಈ ಸಂದರ್ಭದಲ್ಲಿ ತಮ್ಮ ಲೇಖನ, ಭಾಷಣ ಮತ್ತು ಹೋರಾಟಗಳ ಮೂಲಕ ಪರಿಸರ-ವಿರೋಧಿ ಯೋಜನೆಗಳ ಬಗ್ಗೆ ಸರ್ಕಾರ ಮತ್ತು ಸಾರ್ವಜನಿಕರ ಕಣ್ಣುತರೆಸಿದ್ದ ಡಾ. ಕುಸುಮ ಸೊರಬ ಅವರನ್ನು ಮತ್ತು ಅವರ ಸೇವೆಯನ್ನು ನೆನಪಿಸಿಕೊಳ್ಳುವುದು ಸೂಕ್ತ. ಈ ರೀತಿ ಪರಿಸರ ಮತ್ತು ಅದರ ಸಂರಕ್ಷಣೆಗೆ ಸಂಬಂಧಿಸಿದಂತೆ ಸಂಶೋಧನೆ, ಚಳವಳಿ, ನಾಯಕತ್ವ, ಮತ್ತು  ಸ್ವಯಂಸೇವೆಯ ಮೂಲಕ ಬಹಳಷ್ಟು ಕೊಡುಗೆ ನೀಡಿದ ಅನೇಕ ಮಹಾನ್ ಮಹಿಳೆಯರು  ಇದ್ದಾರೆ. 

    ನಿರ್ಮಲವಾದ ಪರಿಸರ ಉಳಿಸುವಲ್ಲಿ ಮಹಿಳೆಯರ ಪಾತ್ರ ಹಿರಿದು

    ಪ್ರತಿಯೊಂದು ಮೂಲಭೂತ ಅವಶ್ಯಕತೆಗಳನ್ನು ನೀಗಿಸುವುದು ಮಾತ್ರವಲ್ಲ  ನಮ್ಮ ಉತ್ತಮವಾದ ಮಾನಸಿಕ ದೈಹಿಕ ಹಾಗೂ ಸಾಮಾಜಿಕ ಆರೋಗ್ಯವನ್ನು ಕಾಪಾಡುವ ಪರಿಸರವನ್ನು ಮಾಲಿನ್ಯರಹಿತವಾಗಿ ಕಾಪಾಡುವಲ್ಲಿ ಮಹನೀಯರು  ಮಹಿಳೆಯರು ಎನ್ನುವ ಭೇದ ಭಾವವಿಲ್ಲದೆ ಅದರಲ್ಲಿ ತೊಡಗಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ.  ಪರಿಸರ ಸಂರಕ್ಷಣೆಯ ವಿಷಯ ಬಂದಾಗ ಅದು ವಿದ್ಯಾರ್ಥಿಗಳ ಪಾತ್ರ, ಸರ್ಕಾರದ ಪಾತ್ರ, ಸಾರ್ವಜನಿಕರ ಪಾತ್ರ, ಹೀಗೆ ವಿಂಗಡಣೆ ಮಾಡಿಕೊಂಡು ಚರ್ಚಿಸುವುದು ಸಾಮಾನ್ಯ. ಆದರೆ ಪರಿಸರ ಸಂರಕ್ಷಣೆಯಲ್ಲಿ ಮಹಿಳೆಯರು ಹೇಗೆ ಕೈಜೋಡಿಸಬಹುದು ಎನ್ನುವುದರ ಬಗ್ಗೆ ಜಿಜ್ಞಾಸೆ ಕಡಿಮೆ.  ಪ್ರಾಯೋಗಿಕವಾಗಿ ನೋಡಿದರೆ ಮಹಿಳೆಯರು ತಮ್ಮದೇ ಆದ ನೆಲೆ ಮತ್ತು ಪರಿಮಿತಿಯಲ್ಲಿ ನಿರ್ಮಲವಾದ ಪರಿಸರವನ್ನು ಉಳಿಸುವಲ್ಲಿ ಮತ್ತು ನಿರ್ಮಾಣ ಮಾಡುವಲ್ಲಿ ಪರಿಣಾಮಕಾರಿಯಾಗಿ ಅನೇಕ ವಿಧದಲ್ಲಿ ಸೇವೆಯನ್ನು ಮಾಡಲು ಅವಕಾಶವಿದೆ. 

    ‘ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು’ ಒಬ್ಬ ವ್ಯಕ್ತಿಯ ಆಚಾರ ವಿಚಾರ ಆ ವ್ಯಕ್ತಿಯ ಹೆತ್ತವರ, ಮುಖ್ಯವಾಗಿ ತಾಯಿಯು ಆತ/ಆಕೆಯನ್ನು  ಬೆಳೆಸಿದ ರೀತಿಯ ಮೇಲೆ ಅವಲಂಬಿತವಾಗಿರುತ್ತದೆ.  ಪ್ರತಿಯೊಂದು ಹೆಣ್ಣು ಜೀವನದ ವಿವಿಧ ಹಂತಗಳಲ್ಲಿ ತಾಯಿಯ ಸ್ಥಾನವನ್ನು ತುಂಬುತ್ತಾರೆ.  ಈ ಸ್ಥಾನದಲ್ಲಿರುವಾಗ ಮಕ್ಕಳಿಗೆ ಭಾಷೆ ಮತ್ತು ಶಿಷ್ಟಾಚಾರವನ್ನು ಕಲಿಸುವ ಜವಾಬ್ದಾರಿಯನ್ನು ಹೊತ್ತಿರುವ ತಾಯಂದಿರು ಮುಗ್ಧಮನಸ್ಸಿನ ತಮ್ಮ ಮಕ್ಕಳಿಗೆ ಪರಿಸರವನ್ನು ಪ್ರೀತಿಸುವಂತೆ ಮಾಡಲು ಸಾಧ್ಯವಿದೆ.  ಉದಾಹರಣೆಗೆ, ಚಿಕ್ಕಮಕ್ಕಳು ಬಣ್ಣಬಣ್ಣದ ಚಿಟ್ಟೆಗಳಿಗೆ ಆಕರ್ಷಿತರಾಗಿ ಅವುಗಳನ್ನು ಹಿಡಿದು ಆಡುವುದು (ಹೀಗೆ ಮಾಡುವಾಗ ಚಿಟ್ಟೆಯು ಅರೆಜೀವ ಸ್ಥಿತಿಗೆ ಬರಬಹುದು ಅಥವಾ ಸಾಯಲೂಬಹುದು), ಗಿಡಗಳ ಮೊಗ್ಗನ್ನು ಚಿವುಟುವುದು, ಕಸಕಡ್ಡಿಗಳನ್ನು ಅಲ್ಲಲ್ಲೇ ಬಿಸಾಡುವಂತಹ ತಪ್ಪುಗಳನ್ನು ಅರಿವಿಲ್ಲದೆ ಮಾಡುತ್ತವೆ.  ಇಂತಹ ಸಂದರ್ಭದಲ್ಲಿ ತಾಯಿಯು ತನ್ನ ಮಗುವಿಗೆ ಹಾಗೆ ಮಾಡುವುದು ತಪ್ಪು ಎಂದು ತಿಳಿಹೇಳಿ ಜೀವಿಗಳ ಮತ್ತು ಪರಿಸರದ ಮಹತ್ವವನ್ನು ಅವರಿಗೆ ಅಕ್ಕರೆಯಿಂದ ವಿವರಿಸಿದರೆ ಅಥವಾ ಕತೆಯ ಮೂಲಕ ಮನದಟ್ಟು ಮಾಡುವುದರ ಮೂಲಕ ಮಕ್ಕಳಲ್ಲಿ ಪರಿಸರದ ಬಗ್ಗೆ ಆಸಕ್ತಿ,  ಪ್ರೀತಿ ಬರುವಂತೆ ಪ್ರೇರೇಪಿಸಬಹುದು. 

    ಈ ಕ್ರಿಯೆಯು  ಎರಡು ದೃಷ್ಟಿಕೋನದಿಂದ ಪರಿಣಾಮಕಾರಿಯಾಗಿರುತ್ತದೆ.  ಒಂದು, ನಾವು ಯಾವುದನ್ನು ಗಮನಿಸುತ್ತೆವೆಯೋ, ಅದರ ಬಗ್ಗೆ  ಅರಿಯಲು ಪ್ರಯತ್ನಿಸುತ್ತೇವೆ.  ಯಾವುದರ ಅಗತ್ಯತೆಯ ಬಗ್ಗೆ ಅರಿತಿರುತ್ತೇವೆಯೋ, ಅದನ್ನು ಪ್ರೀತಿಸುತ್ತೇವೆ; ಯಾವುದನ್ನು ಪ್ರೀತಿಸುತ್ತೇವೆಯೋ ಅದನ್ನು ರಕ್ಷಿಸುತ್ತೇವೆ.  ಇನ್ನೊಂದು, ಬಾಲ್ಯಾವಸ್ಥೆಯಲ್ಲಿ ಮನದಟ್ಟಾಗುವ ವಿಷಯಗಳು ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುತ್ತದೆ ಎನ್ನುವುದು ಮನಶಾಸ್ತ್ರಿಕವಾಗಿ ಕಂಡುಕೊಂಡ ಸತ್ಯ.  “ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು”.  ಹಾಗಾಗಿ, ಮಹಿಳೆಯರು ತಾಯಿಯ ಶ್ರೇಷ್ಠ  ಸ್ಥಾನದಲ್ಲಿರುವಾಗ ಭವಿಷ್ಯದ ದೃಷ್ಟಿಯಿಂದ ಪರಿಸರವನ್ನು ಪ್ರೀತಿಸುವ ಮತ್ತು ಕಾಪಾಡುವ ಸುಸಂಸ್ಕೃತ ಪ್ರಜೆಗಳನ್ನು ತಯಾರು ಮಾಡುವಂತಹ ಅತ್ಯುನ್ನತ ಜವಾಬ್ದಾರಿಯನ್ನು ನಿಭಾಯಿಸುವ ಅವಕಾಶ ಇರುತ್ತದೆ. 

    ಮಹಿಳೆಯರು ವೈಯಕ್ತಿಕವಾಗಿ ಅಥವಾ ಸಂಘಟನೆಯ ಮೂಲಕ ಪರಿಸರ-ಸ್ನೇಹಿ ಮತ್ತು ಸಂರಕ್ಷಣಾ ಕಾರ್ಯಗಳಲ್ಲಿ ಭಾಗವಹಿಸಬಹುದು.  ಇದನ್ನು ಒಂದು ಉದಾಹರಣೆಯೊಂದಿಗೆ ನೋಡೋಣ. ಆಧುನಿಕ ಕೃಷಿ ಪದ್ಧತಿಯಲ್ಲಿ  ಉತ್ತಮ ಫಸಲನ್ನು ಪಡೆಯಲು ರಾಸಾಯನಿಕ  ಗೊಬ್ಬರಗಳನ್ನು ಉಪಯೋಗಿಸುವುದು ಸಾಮಾನ್ಯ. ಆದರೆ  ಅದರಿಂದ ಪರಿಸರದ ಮೇಲೆ ಅಷ್ಟೇ ದುಷ್ಪರಿಣಾಮಗಳೂ ಇವೆ.  ಯಥೇಚ್ಛವಾಗಿ ರಸಗೊಬ್ಬರವನ್ನು ಬಳಸುವುದರಿಂದ ಮಣ್ಣಿನಲ್ಲಿರುವ ಸೂಕ್ಷ್ಮಾಣುಜೀವಿಗಳು ನಾಶವಾಗಿ ಮಣ್ಣಿನ ಫಲವತ್ತತೆ ಕ್ರಮೇಣ ಕಳೆದು ಕೃಷಿಭೂಮಿ ಬರಡಾಗುತ್ತದೆ.    ಇದಕ್ಕೆ ಒಂದು ಉತ್ತಮ ಪರಿಹಾರ  ಸಾವಯವ ಗೊಬ್ಬರ ಉತ್ಪಾದನೆ, 

    ಕಸವನ್ನು    ಸಿಕ್ಕಿದಲ್ಲಿ ಎಸೆಯುವುದು,  ಕಸದ ರಾಶಿಯನ್ನು ಸುಡುವುದು ವಾಯು,  ಜಲ ಮತ್ತು ನೆಲ ಮಾಲಿನ್ಯಗಳಿಗೆ ಕಾರಣವಾಗಿ ಪರಿಸರಕ್ಕೆ ಮಾರಕವಾಗುತ್ತದೆ. ತ್ಯಾಜ್ಯಗಳನ್ನು ಸುಡುವ ಮೂಲಕ ಪರಿಸರಕ್ಕೆ ಹಾನಿಯುಂಟುಮಾಡುವ ಅನೇಕ ಹಸಿರುಮನೆ ಅನಿಲಗಳು ಮತ್ತು ವಿಷಕಾರಿ ಅನಿಲಗಳು ಬಿಡುಗಡೆಯಾಗುತ್ತವೆ.  ಭಾರತ ಸೇರಿದಂತೆ   ಅನೇಕ ದೇಶಗಳಲ್ಲಿ  ಘನ ತ್ಯಾಜ್ಯ ನಿರ್ವಹಣೆ  ಒಂದು ಪ್ರಮುಖ ಸವಾಲು.  ಮಹಿಳೆಯರು ಈ ಸಮಸ್ಯೆಯನ್ನು ಪರಿಹರಿಸುವಲ್ಲಿ ಪರಿಣಾಮಕಾರಿಯಾಗಿ ಪಾಲ್ಗೊಳ್ಳಬಹುದು.  ಮನೆಯಲ್ಲಿ  ಉತ್ಪನ್ನವಾಗುವ   ಹಸಿಕಸ  ಮತ್ತು ಒಣಕಸಗಳನ್ನು  ಪ್ರತ್ಯೇಕ ವಾಗಿ  ಶೇಖರಿಸಿ  ಹಸಿಕಸವನ್ನು ಮನೆಯ ಹಿತ್ತಲಿನಲ್ಲಿ  ಮಡಿಕೆ ಅಥವಾ ಎರೆಗೊಬ್ಬರ ತಯಾರಿಕೆಗೆ ಒಣಕಸಗಳನ್ನು  ಮರುಚಕ್ರೀಕರಣ ಕ್ರಿಯೆಗೆ ಅಲ್ಲಲ್ಲಿನ  ಗ್ರಾಮ ಪಂಚಾಯತ್,  ಪುರಸಭೆ, ನಗರಸಭೆಯ ತ್ಯಾಜ್ಯ ವಿಲೇವಾರಿಯ ಪ್ರಕ್ರಿಯೆಗೆ ಕೈಜೋಡಿಸಬಹುದು.  ಈ ನಿಟ್ಟಿನಲ್ಲಿ ನಮ್ಮ ದೇಶದ ಅನೇಕ ಕಡೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯಿಂದ ಸಾಕಷ್ಟು   ಯಶಸ್ಸು ಕಂಡಿರುವುದು ಪರಿಸರ ಸಂರಕ್ಷಣೆಯಲ್ಲಿ ಮಹಿಳೆಯರ ಕೊಡುಗೆ ಎಷ್ಟು ಪರಿಣಾಮಕಾರಿ ಎಂಬುವುದಕ್ಕೆ   ಇದು ಒಂದು ಪಥ್ಯಕ್ಷ  ಸಾಕ್ಷಿ.

    ಪರಿಸರಸ್ನೇಹಿ ಚಟುವಟಿಕೆ

    ಇಂತಹ ಪರಿಸರಸ್ನೇಹಿ ಚಟುವಟಿಕೆಗಳ ಬಗ್ಗೆ ಕೆಲವು ಸಂಘಸಂಸ್ಥೆಗಳು ನೀಡುವ ತರಬೇತಿಯ ಪ್ರಯೋಜನವನ್ನು ಮಹಿಳೆಯರು ಪಡೆದು ಅದರಲ್ಲಿ ಆಸಕ್ತಿ ತೋರಿಸಬೇಕು.  ಮಹಿಳೆಯರು ಹೀಗೆ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಹಲವಾರು ಪ್ರಯೋಜನಗಳಿವೆ.  ಸುತ್ತಮುತ್ತಲಿನ ಪರಿಸರವನ್ನು ಕಸಕಡ್ಡಿಗಳಿಂದ ಮುಕ್ತವಾಗಿಸಿ ಸ್ವಚ್ಛವಾಗಿ ಇಟ್ಟುಕೊಳ್ಳಬಹುದು.  ಮಣ್ಣಿನ ಫಲವತ್ತತೆಯನ್ನು ಉಳಿಸಿಕೊಂಡು ಉತ್ತಮ ಫಸಲನ್ನು ಪಡೆಯಲು ಸಹಾಯವಾಗುತ್ತದೆ.  ಮಾತ್ರವಲ್ಲ.  ಹೀಗೆ ತಯಾರಿಸಿದ ಗೊಬ್ಬರಕ್ಕೆ ಮರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಇರುವುದರಿಂದ ತಕ್ಕಮಟ್ಟಿಗೆ ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಬಹುದು. 

    ಮನೆಯ ಸುತ್ತಲೂ ಉದ್ಯಾನವನ್ನು ನಿರ್ವಹಿಸುವುದು, ಬೇಸಿಗೆಯಲ್ಲಿ ಪಕ್ಷಿಗಳಿಗೆ ಒಂದು ಚೊಂಬು ನೀರನ್ನು ಇಡುವುದು, ಶಾಪಿಂಗ್‌ಗೆ ಹೋಗುವಾಗ ಪಾಲಿಥೀನ್ ಕ್ಯಾರಿಬ್ಯಾಗ್ ಬದಲಿಗೆ ಮರುಬಳಕೆ ಮಾಡಬಹುದಾದ ಚೀಲಗಳನ್ನು ತೆಗೆದುಕೊಳ್ಳುವುದು.  ಇಂತಹ  ಪರಿಸರ-ಸ್ನೇಹಿ ಚಟುವಟಿಕೆಗಳನ್ನು  ಮಹಿಳೆಯರು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ಅಮೂಲ್ಯ ಕೊಡುಗೆ ನೀಡಬಹುದು. “ಹನಿ- ಹನಿ ಸೇರಿದರೆ ಹಳ್ಳ, ತೆನೆ ತೆನೆ ಕೂಡಿದರೆ ರಾಶಿ” ಎಂಬ  ನಾಣುಡಿಯಂತೆ   ಮಹಿಳೆಯರ  ಸಣ್ಣ ಚಟುವಟಿಕೆಗಳು  ಪರಿಸರ ಸಂರಕ್ಷಣೆಗೆ ಪರಿಣಾಮಕಾರಿಯಾಗಿ  ನೆರವಾಗುತ್ತದೆ. 

    ಸಮಾಜ  ಸೇವೆಯಲ್ಲಿ ತೊಡಗಿಕೊಂಡಿರುವ ಅನೇಕ ಮಹಿಳಾ ಸಂಘಟನೆಗಳು ಅಸ್ತಿತ್ವದಲ್ಲಿವೆ. ವನಮಹೋತ್ಸವ, ಪ್ಲಾಸ್ಟಿಕ್ ನಿರ್ಮೂಲನೆ, ಗ್ರಾಮೀಣ ಮಹಿಳೆಯರಿಗೆ ಪರಿಸರ ಸಂಬಂಧಿ ವಿಷಯಗಳ ಬಗ್ಗೆ ಅರಿವು ಮೂಡಿಸುವಿಕೆ ಇಂತಹ ಹಲವಾರು ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಮಹಿಳಾ ಸಂಘಟನೆಗಳು ಪರಿಸರ ಸಂರಕ್ಷಣೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ತೊಡಗಿಕೊಳ್ಳಬಹುದು.  ಇದಕ್ಕೆ ಒಂದು ಮಾದರಿ ಎನ್ನುವಂತೆ, ಕೀನ್ಯಾ ದೇಶದ ವಾಂಗರಿ ಮಾಥಯಿಯವರು ಗ್ರೀನ್ ಬೆಲ್ಟ್ ಎನ್ನುವ ಚಳವಳಿಯ ಮೂಲಕ ಮಹಿಳೆಯರನ್ನು ಒಗ್ಗೂಡಿಸಿ ಸುಮಾರು 10 ಮಿಲಿಯನ್ ಗಿಡಗಳನ್ನು ನೆಟ್ಟು ಪೋಷಿಸಿ  ಸದಾ ಬರಗಾಲದಿಂದ ನರಳುತ್ತಿದ್ದ ಅಲ್ಲಿನ ಜನರ ಹಸಿವನ್ನು ನೀಗಿಸಿದ ದಿಟ್ಟ ಕಾರ್ಯ ಒಂದು ಮಾದರಿ.   ಅವರ ಈ ಮಹಾನ್ ಸೇವೆಯನ್ನು ಪರಿಗಣಿಸಿ, ಅನೇಕ ಅಂತರಾಷ್ಟ್ರೀಯ ಪ್ರಶಸ್ತಿಗಳು ಮಾತ್ರವಲ್ಲ, 2004ರಲ್ಲಿ ನೋಬೆಲ್ (Nobel Peace Prize) ಪಾರಿತೋಷಕವನ್ನು ಅವರಿಗೆ ನೀಡಲಾಯಿತು.  ಇದೇ ರೀತಿಯಲ್ಲಿ ಇತ್ತೀಚೆಗೆ ಚೀನಾ ಮತ್ತು ಜಪಾನ್ ದೇಶಗಳಲ್ಲಿ ಮಹಿಳಾ ಸಂಘಟನೆಗಳು ದೇಶದಾದ್ಯಂತ ಗಿಡ ಮರಗಳನ್ನು ನೆಟ್ಟು ಪೋಷಿಸಿ ನೈಜ ಹಸಿರುಕ್ರಾಂತಿಯನ್ನು ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

    ತಲತಲಾಂತರಗಳಿಂದ ನಡೆದುಕೊಂಡು ಬಂದಂತಹ ಸಂಪ್ರದಾಯ, ಪದ್ಧತಿಗಳ ಹೆಸರಿನಲ್ಲಿ ಧಾರ್ಮಿಕ ಚೌಕಟ್ಟನ್ನು ಹಾಕಿ ಸಮಾಜದಲ್ಲಿ ಮಹಿಳೆಯರನ್ನು ಅಬಲೆ ಎನ್ನುವ ಹಣೆಪಟ್ಟಿ ಕಟ್ಟಿ ಮೂಲೆಗುಂಪು ಮಾಡಿರುವುದರಿಂದ, ಇಂದು ಎಲ್ಲಾ ಧರ್ಮದ ಮಹಿಳೆಯರು ತಮಗಾಗುತ್ತಿರುವ ಅನ್ಯಾಯದ ವಿರುದ್ಧ  ಧ್ವನಿ ಎತ್ತಲು ಅವಕಾಶ ವಂಚಿತರಾಗಿರುವುದನ್ನು ಕಾಣಬಹುದು.  ಹಾಗಾಗಿ, ಪರಿಸರ-ವಿನಾಶಕ ಯೋಜನೆಗಳು ಅವರ ಬದುಕಿನಲ್ಲಿ ತಂದಿರುವ ಕಷ್ಟ-ಬವಣೆಗಳನ್ನು ಮೌನವಾಗಿ ಅನುಭವಿಸುತ್ತಿದ್ದಾರೆ. ಜೀವಶಾಸ್ತ್ರೀಯವಾಗಿ, ದೈಹಿಕವಾಗಿ, ಮಾನಸಿಕವಾಗಿ ಮಹಿಳೆಯರು ಪುರುಷರಿಗಿಂತ ಭಿನ್ನವಾಗಿರಬಹುದು.  ಆದರೆ ಮಹಿಳೆಯರು ಕೂಡ ನಾಗರಿಕ ಸಮಾಜದಲ್ಲಿ  ದೇಶವನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸುವಲ್ಲಿ ಮತ್ತು ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಸಮಾನ ಪಾತ್ರವನ್ನು ವಹಿಸಬಲ್ಲರು. 

    ಇತ್ತೀಚಿನ ದಿನಗಳಲ್ಲಿ ಲಿಂಗತಾರತಮ್ಯದ ವಿರುದ್ಧ ಮತ್ತು ಮಹಿಳೆಯರಿಗೆ ಸಮಾನ ಸ್ಥಾನಮಾನವನ್ನು ನೀಡುವುದರ ಪರವಾಗಿ ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿ ಧ್ವನಿ ಕೇಳಿಬರುತ್ತಿದೆ.  ಈ ಸಂದರ್ಭದಲ್ಲಿ ಅಭಿವೃದ್ಧಿಪರ ಯೋಜನೆಗಳನ್ನು ರೂಪಿಸುವಾಗ ಮಹಿಳೆಯರಿಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಮತ್ತು ಕಾರ್ಯರೂಪಕ್ಕೆ ತರಲು ಸಮಾನ ಅವಕಾಶಗಳನ್ನು ನೀಡಬೇಕು.  ಪರಿಸರ-ವಿನಾಶಕ ಯೋಜನೆಗಳಿಂದ ಮಹಿಳೆಯರ ದೈನಂದಿನ ಬದುಕಿನಲ್ಲಿ ಮತ್ತು ಅವರ ಆರೋಗ್ಯದಲ್ಲಿ ಉಂಟಾಗುವ ಪರಿಣಾಮಗಳ ಬಗ್ಗೆ ಹೆಚ್ಚು ಹೆಚ್ಚು ಸಂಶೋಧನೆ/ಅಧ್ಯಯನಗಳು ನಡೆಯಬೇಕು, ಮತ್ತು ಇಂತಹ ಅಧ್ಯಯನಗಳಲ್ಲಿ ಭಾಗಿಯಾಗಲು ಮಹಿಳೆಯರಿಗೆ ಅವಕಾಶ ಪ್ರಾಶಸ್ತ್ಯಗಳನ್ನು ನೀಡಬೇಕು.  ಇಲ್ಲಿ ಅವಕಾಶಗಳನ್ನು ನೀಡಬೇಕು ಎನ್ನುವುದಕ್ಕಿಂತ ಅವಕಾಶಗಳನ್ನು ಮಹಿಳೆಯರೇ ಪಡೆದುಕೊಳ್ಳಬೇಕು ಅನ್ನುವುದು ಹೆಚ್ಚು ಸಮಂಜಸ.  ಒಂದೊಮ್ಮೆ ಅದಕ್ಕೆ ಅವಕಾಶ ಇಲ್ಲದೇ ಇದ್ದರೆ ಅದಕ್ಕಾಗಿ ಹೋರಾಡುವುದರಲ್ಲಿ ನ್ಯಾಯವಿದೆ.  ಮಹಿಳೆಯರಿಗೆ, ಮುಖ್ಯವಾಗಿ ಗ್ರಾಮೀಣ  ಪ್ರದೇಶದ ಮಹಿಳೆಯರಿಗೆ ಪರಿಸರದ ಮಹತ್ವ ಮತ್ತು ಅದರ ಸಂರಕ್ಷಣೆಯಲ್ಲಿ ಅವರು ಹೇಗೆ ತೊಡಗಿಸಿಕೊಳ್ಳಬಹುದು ಎನ್ನುವುದರ ಬಗ್ಗೆ ಶಿಕ್ಷಣ/ಅರಿವು ಮೂಡಿಸುವಂತಹ ಕೆಲಸಗಳು ಇನ್ನಷ್ಟೂ ಹೆಚ್ಚಾಗಬೇಕು. 

    ಈ ನಿಟ್ಟಿನಲ್ಲಿ ಅಸ್ತಿತ್ವದಲ್ಲಿರುವ ಮಹಿಳಾ ಸಂಘಟನೆಗಳು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಯರೂಪಕ್ಕೆ  ತರಬೇಕು.  ಮಹಿಳೆಯರು, ಪುರುಷ-ಪ್ರಧಾನ ಸಮಾಜ ಹೊರಿಸಿರುವ ‘ಅಬಲೆಯರು’ ಎನ್ನುವ ಆರೋಪವನ್ನು ಒಪ್ಪಿಕೊಂಡು ತಮ್ಮ ಬದುಕನ್ನೇ  ಬುಡಮೇಲು ಮಾಡುತ್ತಿರುವ ಪರಿಸರ-ವಿನಾಶಕಾರಿ ಶಕ್ತಿ ವ್ಯವಸ್ಥೆಗಳ   ವಿರುದ್ಧ ಧ್ವನಿಯೆತ್ತದೇ ಮೌನವಾಗಿದ್ದರೆ ಮುಂದೊಂದು ದಿನ ಇನ್ನಷ್ಟು ಸಂಕಷ್ಟ ಬವಣೆಗಳನ್ನು ಅನುಭವಿಸಬೇಕಾಗಬಹುದು.  ಆದುದರಿಂದ, ಅನ್ಯಾಯದ ವಿರುದ್ಧ  ಹೋರಾಡುವುದರೊಂದಿಗೆ ಸುಸ್ಥಿರ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವಿಕೆ  ಮತ್ತು ಪರಿಸರಸ್ನೇಹಿ ಚಟುವಟಿಕೆಗಳಲ್ಲಿ ತೊಡಗಿಕೊಂಡು     ಮಹಿಳೆಯರು ತಮ್ಮ ಜೀವನವನ್ನು ಇನ್ನಷ್ಟೂ  ಕ್ಷೇಮಮಯವಾಗಿಸಿಕೊಳ್ಳಬೇಕು.  

    ‘ಸಮ ಪಾಲು, ಸಮ ಬಾಳು’   ಎಂಬ ತತ್ವವನ್ನು ಅಳವಡಿಸಿಕೊಂಡು   ಬದುಕಲು ಪ್ರತಿಯೊಂದನ್ನು ನೀಡುವ ಪರಿಸರವನ್ನು ಸಂರಕ್ಷಿಸುವ ಮಹತ್ತರ ಕಾರ್ಯದಲ್ಲಿ    ನಾವೆಲ್ಲರೂ  ಜಂಟಿಯಾಗಿ ಭಾಗಿಯಾಗೋಣ. 

    ರಾಜ್ಯ ಬಜೆಟ್ ಮುಖ್ಯಾಂಶಗಳು

    ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇದೀಗ 2021-22 ನೇ ಸಾಲಿನ ಮುಂಗಡ ಪತ್ರವನ್ನು ಮಂಡಿಸಿದರು. ಈ ಮುಂಗಡ ಪತ್ರದ ಮುಖ್ಯಾಂಶಗಳನ್ನು ಇಲ್ಲಿ ನೀಡಲಾಗಿದೆ.

    ಹೊಯ್ದಾಡುವ ಹೊಸಿಲ ದೀಪ

    ಆಕೆ ಯಾವುದೋ ವೈಯುಕ್ತಿಕ ಕಾರಣಕ್ಕಾಗಿ ದೂರದ ಊರಿಗೆ ಪ್ರಯಾಣ ಮಾಡುತ್ತಿದ್ದಳು. ಸುಮಾರು ನಲವತ್ತೈದರ ಆಸುಪಾಸು. ನಲವತ್ತು ದಾಟಿದ ಐವತೈದರ ಒಳಗಿನ ಹೆಣ್ಣಿಗೆ ಇರಬೇಕಾದ ಪ್ರೌಢಿಮೆ ,ಅಂದಚಂದ, ಕಸುವು ಎಲ್ಲವೂ ಅವಳಲ್ಲಿ ಹದವಾಗಿತ್ತು. ಕಾಣದ ನೋವಿನ ಎಳೆಯೊಂದು ಅದೆಲ್ಲದರ ನಡುವೆಯೂ ತಾನೂ ಒಂದು ಪಾಲು ಎಂಬಂತಿದ್ದು ಆ ನೋವು ಇಣುಕಿದಾಗೆಲ್ಲ ಅದನ್ನು ಅಡಗಿಸಿ ಸಹಜವಾಗಿರಲು ಸಾಹಸ ಪಡುತ್ತಿದ್ದಳು.

    ಮೂರು ಸೀಟಿನ ಎಡತುದಿಯ ಬದಿಯಲ್ಲಿ ಇವಳು ಕುಳಿತಿದ್ದಳು.
    ಕಿಟಕಿ ಪಕ್ಕ ಒಬ್ಬ ಧಡೂತಿ ಆಸಾಮಿ. ಮಧ್ಯಕ್ಕೆ ಇಪ್ಪತೈದರ ಆಸುಪಾಸಿನ ಯುವಕ.ಆ ಘಾಟಿ ರಸ್ತೆಯಲ್ಲಿ ಬಸ್ಸು ವಾಲಿದಾಗೆಲ್ಲ ಆ ಹುಡುಗನ ತೀರ ಸನಿಹಕ್ಕೆ ಅಬಾಧಿತವಾಗಿ ಜಾರಿಕೊಳ್ಳುತ್ತಿದ್ದಳು ಇವಳು.ಈ ಬದಿಗೆ ವಾಲಿದಾಗ ಸೀಟಿನಿಂದ ಬೀಳುವ ಬಗೆ.

    ಆ ಹುಡುಗನೂ ಈ ಇವಳೂ ಒಬ್ಬರಿಗೊಬ್ಬರು ಹೀಗೆ ತೀರ ಸನಿಹಕ್ಕೆ ತಾಗಿಕೊಂಡಿದ್ದು ಅವನದೇ ವಯಸ್ಸಿನ ಮಗನ ತಾಯಿಯಾದ ಇವಳಿಗೆ ಮೊದಲಿಗೆ ಏನೂ ಅನಿಸಲಿಲ್ಲ.

    ಮುಂದೆ ಒಂದು ಹೇರ್ಪಿನ್ ತಿರುವು.

    ಇನ್ನೇನು ಸೀಟಿನಿಂದ ಬಿದ್ದೆಹೋದಂತಾದಾಗ ಆ ಹುಡುಗ ಇವಳ ಒಳಭುಜವನ್ನು ಬಲವಾಗಿ ಹಿಡಿದುಕೊಂಡ.ಇವಳು ನಖಶಿಖಾಂತ ನಡುಗಿಹೋದಳು.ಆದರೆ ಅದನ್ನು ತೋರಿಸಿಕೊಳ್ಳದೆ ಒಂದು ಕೃತಜ್ಞತೆಯ ನೋಟವಷ್ಟೇ ಅವನೆಡೆಗೆ ಬೀರಿದಳು.ಎಳೆ ಹುಡುಗನ ಮನಸ್ಸು ನವಿರಾಯಿತು. ಅವಳ ಚಂದಕ್ಕೆ ,ಪ್ರೌಢಿಮೆಗೆ ,ನೋಟಕ್ಕೆ ಆ ಒಂದು ಕ್ಷಣದಲ್ಲಿ ಮಾರುಹೋಗಿದ್ದ ಅವನು.ಈ ಬಗೆಯ ಹಿರಿತನದ ಕುರಿತಾದ ಆಕರ್ಷಣೆ ಇಂದು-ನಿನ್ನೆಯದಲ್ಲ ನಮ್ಮ ನಡುವೆ.

    ಆ ನಂತರದಲ್ಲಿ ಹರೆಯದ ಹುಡುಗನ ಒರಟು ಬೆರಳುಗಳು ಸಾವಕಾಶ ಅವಳ ತೋಳುಗಳ ಮೇಲೆ ನವುರಾಗಿ ಹರಿದಾಡಿದವು.ಒಂದು ಹಂತದಲ್ಲಿ ಅವನ ಮೊಣಕೈ ಅವಳ ಮೃದುತ್ವಕ್ಕಾಗಿ ಕೂಡ ತಡಕಾಡಿತು.

    ಹಾಗಿದ್ರೆ….

    ಇದೆಲ್ಲಾ ನಡೀತಿದ್ದಾಗ ಇವಳೇನು ಮಾಡ್ತಿದ್ದಳು.
    ಹುಡುಗನಿಗೆ ಗದರಿಸಿ ಸರಿಕೂರಲು ಹೇಳಿದಳೇ.?
    ಅಥವಾ ದೊಡ್ಡ ಧ್ವನಿಯಲ್ಲಿ ಕೂಗಾಡಿದಳೆ?
    ವಿಡಿಯೋ ರೆಕಾರ್ಡ್ ಮಾಡಿಕೊಂಡು ಹರಿಬಿಟ್ಟಳೆ?
    ಉಹು..ಇದಾವುದೂ ಅಲ್ಲ.

    ಸದಾಕಾಲ ಗಂಡನ ಕ್ರೌರ್ಯ ಅಸಡ್ಡೆ ಅಹಂಕಾರ ಬೇಜವಾಬ್ದಾರಿತನ ನಡವಳಿಕೆಯಿಂದಾಗಿ ಇನ್ನಿಲ್ಲದಂತೆ ನಲುಗಿಹೋಗಿದ್ದಳು ಈಕೆ. ಪ್ರತಿದಿನ ಅವನಿಂದ ಎದುರಿಸುತ್ತಿದ್ದ ಅವಮಾನಗಳ ಹೊರೆ ಹೊತ್ತೇ ಆ ರಥದ ಗಾಲಿ ನಡೆಯುತಿತ್ತು.ಸಮಾಜಕ್ಕಾಗಿ ಮಕ್ಕಳಿಗಾಗಿ ತನ್ನ ಸುರಕ್ಷತೆಗಾಗಿ ದಾಂಪತ್ಯವನ್ನು ಸಹಿಸಿಕೊಂಡಿದ್ದೀನಿ ಅಷ್ಟೇ ಎನ್ನುವುದನ್ನು ಬಿಕ್ಕಿನ ನಡುವೆ ಹೇಳುವಾಗೆಲ್ಲ ಹಿಡಿಯಾಗುತ್ತಿದ್ದಳು.

    ತೋರಿಕೆಯ ಈ ದಾಂಪತ್ಯದಲ್ಲಿ ಅವಳು ಪತಿಯನ್ನು ಬಯಸಿದಾಗೆಲ್ಲ ಆತ ಕೊಂಕಿನ ಮಾತು ತೆಗೆದು ಕಾಯುವಂತೆ ಮಾಡಿ ಕಾಯದ ಕಾವು ಏರಿಸಿ ತಾನು ಅಂಗಿ ತೊಟ್ಟು ವ್ಯಂಗ್ಯನೋಟ ಬೀರಿ ಆಚೆ ಹೊರಡುತ್ತಿದ್ದನಂತೆ.ಅಥವಾ ಎಲ್ಲದಕ್ಕೂ ತಾನೇ ಮೊದಲು ಪ್ರೇರೇಪಿಸಿ ನಂತರ ಮುಂದುವರೆಯದೆ ಎದ್ದು ಹೊರಡುತ್ತಿದ್ದನಂತೆ.
    ಆಕೆಯ ಆ ಕ್ಷಣದ ನೋವು ನಿರಾಸೆ ಅಪಮಾನ ಅಸಹ್ಯಗಳನ್ನು ಮಾರನೆಯ ದಿನ ಹಂಚಿಕೊಳ್ಳುವಾಗ ನನ್ನ ಜೀವ ಕುದಿಯುತಿತ್ತು.

    ಬಹುತೇಕ ತನ್ನ 35ನೇ ವಯಸ್ಸಿನಿಂದಲೂ ಇಂತಹುದೇ ದಬ್ಬಾಳಿಕೆಯನ್ನು ಸಹಿಸಿ ಸಹಿಸಿ ಒಳಗೊಳಗೇ ಕಾಷ್ಟವಾಗಿದ್ದಳು.

    ಪ್ರಕೃತಿ ಸಹಜವಾದ ಬಯಕೆಗಳನ್ನು ಅಡಗಿಸಿಕೊಂಡು, ಮಿತಿಯ ಗಡಿ ದಾಟದೆ ಪಾಲಿಗೆ ಬಂದದ್ದು ಎಂಬಂತೆ ಸನ್ಯಾಸದ ಬದುಕನ್ನು ಅಪ್ಪಿಕೊಂಡವಳು,ಸಾವಿರ ಸೂಜಿಮೊನೆಯಿಂದ ಚುಚ್ಚುವಂತಹ ಅವಮಾನದ ಬದುಕನ್ನೂ ಅನಿವಾರ್ಯವಾಗಿ ಒಪ್ಪಿಕೊಂಡಿದ್ದಳು.

    ಆದರೆ…

    ಅಚಾನಕ್ಕು ಸಿಕ್ಕ ಈ ಸಾನಿಧ್ಯವನ್ನು ಸ್ಪರ್ಶ ಸುಖವನ್ನು ಅನುಭವಿಸದೇ ಅಸ್ವಾಧಿಸದೆ ಇರುವುದು ಅವಳ ದೇಹಕ್ಕೆ ಸಾಧ್ಯವಾಗಲಿಲ್ಲ.
    ತುಂಬಿದ ಬಸ್ಸಿನಲ್ಲಿ ಕಳ್ಳಬೆಕ್ಕಿನಂತೆ ಅವನ ಬೆರಳುಗಳು ಅವಳ ದೇಹದ ಒಂದು ಬದಿಯ ಮೇಲೆ ಆಡುವಾಗ ಕಾದ ಬಂಡೆಯಂತಹ ಅವಳ ದೇಹ ಪ್ರತಿಕ್ರಿಯಿಸಿದೆ ಇರುವುದಾದರೂ ಹೇಗೆ?

    ಹುಡುಗ ಹಿಡಿದ ಅವಳ ಒಳ ತೋಳಿನ ಮೇಲೆ ತನ್ನ ಬೆರಳಿಂದ ಬರೆದದ್ದೆಲ್ಲವೂ ಅಪ್ಯಾಯಮಾನವೆನಿಸಿತು.
    ಮತ್ತೆ ಮತ್ತೆ ಅವನು ಫೋನ್ ನಂಬರ್ ಪ್ಲೀಸ್ ಅಂತ ಬರೆದು ಕೇಳುತ್ತಿದ್ದುದ್ದು ಗಮನಕ್ಕೆ ಬಂದಿತ್ತಾದರೂ ಅರಿವಾಗದಂತೆ ಸುಮ್ಮನೇ ಇದ್ದಳು.

    ಕಾತರತೆಯ ಈ ಕ್ಷಣಗಳು ಅವಳ ಒಣಗಿದ ಬಾಳಿನಲ್ಲಿ ಚಿರವಾದ ಸಿಹಿ ನೆನಪುಗಳಾಗಿ ಉಳಿದು ಹೋಗಲಿ ಎಂಬಂತೆ ಅವನೆಡೆಗೆ ನೋಡಿದಳು.
    ಅದೇ ಕ್ಷಣಕ್ಕಾಗಿ ಕಾದವನಂತೆ ಹುಡುಗ ಬಯಕೆ ತುಂಬಿಕೊಂಡ ಕಣ್ಣುಗಳಿಂದ ಅವಳೆಡೆಗೆ ಯಾಚನೆಯ ನೋಟ ಬೀರಿದ.
    ಅಸಹಜವೆನಿಸಬಹುದಾದ ಆ ಸಂದರ್ಭಕ್ಕೆ ಅವಳು ಒಂದು ದೀರ್ಘ ನಿಟ್ಟುಸಿರಿನೊಂದಿಗೆ ಪ್ರತಿಕ್ರಿಯಿಸಿದ್ದಳು.ಈ ಕ್ಷಣಕ್ಕೆ ಅವಳಿಗೆ ತನ್ನ ಹೆಣ್ತನ ಸಾರ್ಥಕವಾಯಿತು ಎನಿಸಿತ್ತಂತೆ.

    ******

    ಈಚೀಚಿನ ದಿನಗಳಲ್ಲಿ ಬಹಳ ಗೆಲುವಾಗಿ ನಳನಳಿಸುತ್ತಿದ್ದಆಕೆಯನ್ನು ಕಂಡು ನನಗೂ ಸಂತೋಷವಾಗಿ ಮನೆಯಲ್ಲಿ ಸರಿಗಮವಾ ಅಂತ ತಮಾಷೆಯಾಗಿ ಕೇಳಿದೆ.

    ನಕ್ಕಾಗ ಪುಟ್ಟದಾಗುವ ತನ್ನ ಚುಕ್ಕಿಗಣ್ಣುಗಳನ್ನು ಇನ್ನಷ್ಟು ಚಿಕ್ಕದಾಗಿಸಿ ಅವಳು ಕಣ್ಣು ಮಿಟುಕಿಸಿದಳು.ಅವಳು ಅಷ್ಟೊಂದು ಗೆಲುವಾಗಿದ್ದ ಆ ದೃಶ್ಯ ಬಹುತೇಕ ಅವಳ ನನ್ನ ಪರಿಚಯದ ವ್ಯಾಪ್ತಿಯಲ್ಲಿ ಕಂಡಿರಲಿಲ್ಲ.ಬೆರಗಿನಿಂದ ಏನಾಯಿತೇ ಅಂತ ಒತ್ತಾಯಿಸಿದಾಗ ಬಾಯಿಬಿಟ್ಟಳು.

    ಮನೆಗೆ ಬಂದ ನಂತರ ತನಗೆ ಅಪರಾಧಿ ಪ್ರಜ್ಞೆ ಕಾಡಿದರೂ ಅಂತಹುದೊಂದು ಸುಮಧುರ ಸ್ಪರ್ಶ ತನ್ನ ಬದುಕಿಡೀ ಸಿಕ್ಕೇ ಇರಲಿಲ್ಲವೆಂಬುದನ್ನು ಹೇಳುತ್ತಾ ಕೊನೆಯಲ್ಲಿ ಆ ಹುಡುಗನ ಕಣ್ಣುಗಳಲ್ಲಿದ್ದ ಬೇಡಿಕೆ ನನ್ನನ್ನು ಖುಷಿಯ ಕಡಲಲ್ಲಿ ಮುಳುಗಿಸಿದೆ ಎಂದವಳು ಮತ್ತೆ ಧೀರ್ಘ ನಿಟ್ಟುಸಿರಿಟ್ಟು ಕಣ್ಣು ಮುಚ್ಚಿದಳು. ಬಹುಶಃ ನೆನಪುಗಳನ್ನು ಮತ್ತೆ ಅಪ್ಪಿಕೊಂಡಳು ಕಾಣುತ್ತೆ.

    ******
    ಈ ಘಟನೆಯನ್ನು ಬೇರೆಬೇರೆ ದೃಷ್ಟಿಕೋನದಲ್ಲಿ ಬೇರೆಬೇರೆ ಮನಸ್ಥಿತಿಯವರು ಬೇರೆಬೇರೆ ಬಗೆಯಲ್ಲಿ ವಿಮರ್ಶಿಸಬಹುದು. ಕಟ್ಟಾ ಸಾಂಪ್ರದಾಯಿಕ ಮನಸ್ಸುಗಳು ಆಕೆಯನ್ನು ಹಾದಿತಪ್ಪಿದವಳೆನ್ನಬಹುದು.ರೆಬೆಲ್ ಮನಸ್ಸಿನವರು ಕಟ್ಟಿಕೊಂಡವನಿಗೆ ತಕ್ಕಶಾಸ್ತಿ ಆಗಬೇಕಿದ್ದರೆ ಅವಳು ಮುಂದಿನ ಹೆಜ್ಜೆಯನ್ನೂ ಇಡಬೇಕಿತ್ತು ಎಂದಾರು.

    ಒಂದಷ್ಟು ಸ್ವರಗಳು ಹಾಗೆ ಉಚಿತ ಸಿಕ್ಕಿದ ಸುಖವೆಲ್ಲವನ್ನು ಬಗ್ಗಿಸಿ ಕೊಳ್ಳ ಹೋದರೆ ಅವರು ಮನುಷ್ಯರೆನಿಸಿಕೊಳ್ಳಲಾರರು ಎಂದರು.
    ಯಾವುದೋ ತಪ್ತ ಮನಸ್ಸು ಕೊನೆಗೂ ನಿನಗೊಂದಾದರೂ ಸುಖದ ಅನುಭವ ದಕ್ಕಿತ್ತಲ್ಲ ,ಬಿಡು ಸಾಕು ಎಂದಿತು.
    ಇನ್ನು ಗಂಡಸರು …ಇಂತಹವರಿಂದಲೇ ವಯಸ್ಸಿನ ಗಂಡು ಮಕ್ಕಳು ಹಾದಿ ತಪ್ಪುವುದು ಅಂತ ಸ್ವರವೇರಿಸಿದರೂ ಮುಂದಿನ ಬಾರಿ ಪ್ರಯಾಣದಲ್ಲಿ ತಮ್ಮ ಪಕ್ಕದ ಸೀಟಿಗೆ ಕುಳಿತುಕೊಳ್ಳಬಹುದಾದ ಮೃದು ಮಾಂಸಕ್ಕಾಗಿ ಚಡಪಡಿಸಿ ಕಾಯ್ದರು.ಮುಖವಾಡ ತೊಟ್ಟವರು ಶ್ಯೀ..ಥೂ ಎಂದರು.

    ಆದರೆ..

    ಎಂದೂ ಕಾಣದ ಆಕೆಯ ಪ್ರಸನ್ನ ಮುಖದ ಚಲುವು ನೋಡಿದ ನಾನು ಅವಳು ಸದಾಕಾಲ ಹೀಗೆ ಇದ್ದರೆ ಎಷ್ಟು ಚೆನ್ನ ಅನ್ನಿಸಿ ಮತ್ತೆ ಮತ್ತೆ ಅವಳನ್ನು ನೋಡಿದೆ.

    ಒಂದು ಪ್ರಶ್ನೆ.

    ಈ ಇಡೀ ಪ್ರಸಂಗ ಮಹಿಳಾ ದಿನದ ಸಂದರ್ಭಕ್ಕೆ ಪ್ರಸ್ತುತವೋ ಅಲ್ಲವೋ ತಿಳಿಯುತ್ತಿಲ್ಲ.

    ಇಪ್ಪತ್ತೊಂದನೇ ಶತಮಾನದಲ್ಲಿ ಇದ್ದುಕೊಂಡೂ ನಾವು ಮಹಿಳಾ ದಿನವನ್ನು ಆಚರಿಸುತ್ತಿದ್ದೇವೆ ಎನ್ನುವುದೇ ಮೊದಲಿಗೆ ಆಭಾಸ ಎಂದುಕೊಳ್ಳುವವಳು ನಾನು.ಸಾವಿರ ಪುರುಷರಿಗೆ 950 ಮಾತ್ರ ಹೆಣ್ಣು ಗಳಿದ್ದಾರೆ ಎನ್ನುವುದನ್ನು ಅಂಕಿ-ಅಂಶಗಳಲ್ಲಿ ಕೊಡುವಾಗ ಜಗತ್ತಿಗೆ ಅಗತ್ಯವಿರುವ ಪ್ರತಿಕ್ಷೇತ್ರದಲ್ಲೂ ಅವಳ ಸಂಖ್ಯೆ ಸಮ ಇದೆಯೇ ಎನ್ನುವುದನ್ನು ಯಾಕೆ ಗಮನಿಸುತ್ತಿಲ್ಲ.?

    ಕಡಿಮೆಯಾಗಿದೆಯಾದರೆ ಹೇಗೆ ಮತ್ತು ಏಕೆ ಕಡಿಮೆ ಆಗ್ತಿದೆ?

    ದೌರ್ಜನ್ಯ ,ಅತ್ಯಾಚಾರಗಳನ್ನು ಪ್ರತಿನಿತ್ಯ ನೋಡುತ್ತಿರುವ ನಾವು ಅದರ ಬಗ್ಗೆ ತೆರೆದ ಸ್ವರದಲ್ಲಿ ಮಾತಾಡುತ್ತಿದ್ದೇವೆ.ಇನ್ನೂ ಹತ್ತು ಶತಮಾನದ ನಂತರವೂ ಈ ಸ್ವರದಲ್ಲಿ ಬದಲಾವಣೆ ಬರಬಹುದು ಎಂಬ ಯಾವ ನಂಬಿಕೆಯೂ ಇಲ್ಲ.

    ಆದರೆ,

    ಅದೇ ಅದೇ ಸಮಸ್ಯೆಯ ಮತ್ತೊಂದು ಮಗ್ಗುಲಿದೆ.
    ಇಲ್ಲೀವರೆಗೆ ಯಾರೂ ಬಾಯಿ ಬಿಡದೇ ಹೋದದ್ದು!
    ಬಾಯಿ ಬಿಟ್ಟರೆ ಜಗದ ಹಸಿದ ಕಣ್ಣುಗಳು ಹುರಿದು‌ ಮುಕ್ಕುವ ಭಯವಿರುವಂತದ್ದು.ಸಮಾಜದ ತಿರಸ್ಕಾರದ ನೋಟ ಎದುರಿಸುವ ಆತಂಕ ಹುಟ್ಟುವಂತದ್ದು.

    ಬಹುತೇಕ ದಾಂಪತ್ಯಗಳಲ್ಲಿ ಹೆಂಡತಿ ಬಲವಂತವಾಗಿಯಾದರೂ ಅನುಸರಿಸಲೇಬೇಕಾದ ದಾಂಪತ್ಯ ಪಥ್ಯ ದ ಅನಿವಾರ್ಯತೆ!!

    ಇದು ಯಾಕೆ ಹೀಗೆ?

    ನಿಜವಾಗಿಯೂ ಗಂಡು ದಾಂಪತ್ಯದ ನಡುವಯದಲ್ಲಿ ಹೆಣ್ಣಿನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾನಾ? ಹಾಗೆಂದುಕೊಳ್ಳುವುದಕ್ಕೆ ನಮ್ಮಲ್ಲಿ ಯಾವ ಪುರಾವೆಯೂ ಇಲ್ಲ. ಮೆನ್ ಆರ್ ನಾಟಿ ಎಟ್ ಫಾರ್ಟಿ ಅಂತ ಆರಂಭಿಸಿದವರು ಅರವತ್ತಕ್ಕೆ ಮರಳಿ ಅರಳುವ ವಯಸ್ಸು ಅಂತಂದುಕೊಂಡು ಎಪ್ಪತ್ತು-ಎಂಬತ್ತಕ್ಕೆ ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪೆ ಎನ್ನುವ ಮಾತುಗಳಿಂದ ಬದುಕನ್ನು ಆಸ್ವಾದಿಸುವವರ ಘನವಾದ ಪಡೆಯೇ ನಮ್ಮ ನಡುವಿದೆ.ಇರಲಿ.ತಪ್ಪೆನ್ನುವುದಿಲ್ಲ.

    ಆದರೆ.,

    ಹೆಣ್ಣು ನಲವತ್ತರಿಂದ ಐವತ್ತರ ಆಸುಪಾಸಿನಲ್ಲಿ ದೇಹದಲ್ಲಿ ಸಹಜವಾಗಿ ಹಾರ್ಮೋನುಗಳ ಸ್ರಾವದಲ್ಲಿ ಏರಿಳಿತಗಳನ್ನು ಹೊಂದುತ್ತಾಳೆ.
    ಆ ಸಂದರ್ಭದಲ್ಲಿ ಅವಳ ತುಡಿತ ಮಿಡಿತಗಳು ಒಂದು ಮುಟಿಗೆ ಮಿಗಿಲೆ ಆಗಿರುತ್ತವೆ ಎನ್ನುವುದೂ ನಿಜ. ಆದರೆ ಹಾಗೆಲ್ಲ ನಮ್ಮ ಹುಳಿ ಮುಪ್ಪಾಗಿಲ್ಲ ಅಂತ ತೋರಿಸಿ ಕೊಳ್ಳಬಹುದೆ ಈ ಲೋಕದಲ್ಲಿ?
    ಮೇಲೆ ಉದಾಹರಿಸಿದ ಘಟನೆಯಲ್ಲಿ ಗಂಡನ ಕ್ರೌರ್ಯಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದ ನಾನು,ಅದೇ ಮನುಷ್ಯ ತನ್ನ ವೃತ್ತಿ ಜಾಗದಲ್ಲಿ ಇತರ ಸಂಬಂಧಗಳನ್ನು ಹೊಂದಿರುವುದು ಕೂಡ ತಿಳಿದವಳು.
    ಅದನ್ನು ಸಣ್ಣದೊಂದು ಹುಸಿನಗೆಯೊಂದಿಗೆ ಒಪ್ಪಿಕೊಳ್ಳುವ ಸಮಾಜ ಇವಳ ಒಂದು ಗಂಟೆಯ ಪ್ರಯಾಣದ ಪುಳಕವನ್ನು ಕೊಳಕು ಎನ್ನುವ ಹೆಸರಿಟ್ಟು ಅಟ್ಟುತ್ತದೆ.

    ಮನುಷ್ಯರಲ್ಲಿ ಮಾತ್ರ ಇರುವ ಈ ವಿವಾಹಗಳ ಮೂಲ ಉದ್ದೇಶವೇ ಸಹಜ ಲೈಂಗಿಕ ಅವಕಾಶ ಮತ್ತು ಸಂತಾನಾಭಿವೃದ್ಧಿ.ಈಗೀಗ ಎರಡನೆಯ ಉದ್ದೇಶ ತನ್ನ ಅರ್ಥ ಕಳೆದುಕೊಂಡು ಮಕ್ಕಳು ಹುಟ್ಟಿಸುವ ‌ಮತ್ತು ಅವರನ್ನು ಘಟ್ಟ ತಲುಪಿಸುವ ಗೋಜೆ ತಮಗೆ ಬೇಡವೆನ್ನುತ್ತಿದೆ.
    ಇದನ್ನು ತಪ್ಪೆನ್ನಲಾಗದು.ಮಕ್ಕಳಿರಲವ್ವ ಮನೆ ತುಂಬಾ ಎನ್ನುವುದರಿಂದ ಆರಂಭವಾದ ಈ ಸರಣಿ ನಾವಿಬ್ಬರು ನಮಗಿಬ್ಬರು ಎಂಬಲ್ಲಿಗೆ ಬೆಳೆದು ಹೆಣ್ಣಾಗಲಿ ಗಂಡಾಗಲಿ ನಮಗೊಂದೇ ಮಗುವಿರಲಿ ಎಂದು ಮುಂದುವರೆದು ಈಗ ‘ನನಗೆ ನಾನು’ ಎನ್ನುವಲ್ಲಿಗೆ ನಿಂತಿದೆ.

    ಜಗದ ಸರ್ವಭಾವ ಗಳು ಹರಿಯುವ ನೀರು.
    ಕಾಲಕಾಲಕ್ಕೆ ಬದಲಾಗುವ ಅನಿಸಿಕೆ ಅಭಿಪ್ರಾಯಗಳಿಗೆ ತಪ್ಪು ಒಪ್ಪಿನ ಹೇರಿಕೆ /ಹೇಳಿಕೆ ಸಲ್ಲದು.
    ಅದೇ ನದಿಯಲ್ಲಿ ಅದೇ ನೀರಿಗೆ ನೀವು ಮತ್ತೆ ಮತ್ತೆ ಕಾಲಿಡಲಾರಿರಿ ಎನ್ನುವ ಮಾತಿದೆ.

    ಇಂತಹುದೊಂದು ಪ್ರಸಂಗವನ್ನು ಬರೆಯುವ ಮೊದಲು ಸಾಕಷ್ಟು ಗಟ್ಟಿತನವಿರಬೇಕು ಎನ್ನುವುದನ್ನೂ ನಾನು ಒಪ್ಪಿಕೊಳ್ಳುತ್ತೇನೆ. ಯಾಕೆಂದರೆ ಅಕ್ಷರಲೋಕಕ್ಕೆ ಒಂದು ಹುಚ್ಚುತನವಿದೆ.
    ಹೆಣ್ಣು ಏನನ್ನೇ ಬರೆಯಲಿ,ಅದು ಅವಳ ಸ್ವಂತ ಅನುಭವವೇ ಇರಬೇಕು ಅಂತ ನಿರ್ಧರಿಸಿ ಬಿಡುವುದು. ಆಕೆಯೊಬ್ಬಳ ಅನುಭವ ಅಂತ ಇಲ್ಲಿ ದಾಖಲಾದರೂ ನಮ್ಮ ಮುಕ್ಕಾಲು ಹೆಣ್ಣುಗಳ ಅಡಗಿಸಿಕೊಂಡಿರುವ ಸತ್ಯ ಇದು. ಈ ಬರಹ ಒಬ್ಬ ಗಂಡಸಿನ ಮನಸ್ಸನ್ನಾದರೂ ಬದಲಿಸಿದರೆ ಆ ಮಟ್ಟಿಗೆ ಈ ಅಕ್ಷರಗಳು ಸಾರ್ಥಕ.

    ಬಹುತೇಕ ನಡುವಯಸ್ಸಿನ ಹೆಣ್ಣುಮಕ್ಕಳು ಅನುಭವಿಸುತ್ತಿರುವ ಮಾನಸಿಕ ಒಂಟಿತನ ,ದಾಂಪತ್ಯ ಪಥ್ಯ, ಮಕ್ಕಳ ಅವಜ್ಞೆ, ಶಾರೀರಿಕ ಏರುಪೇರುಗಳು, ಕುಂದುತ್ತಿರುವ ಸೌಂದರ್ಯ, ಏರುತ್ತಿರುವ ದೇಹತೂಕ ಇವೆಲ್ಲವುಗಳನ್ನು ಬಾಯಿಬಿಟ್ಟು ಹೇಳಲಾರರು. ಹಾಗಂತ ಈ ಎಲ್ಲ ಸಮಸ್ಯೆಗಳನ್ನು ಎಲ್ಲಾ ಹೆಣ್ಣು ಮಕ್ಕಳು ಎದುರಿಸುತ್ತಾರೆ ಎನ್ನುವಂತಿಲ್ಲ.
    ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹೆಣ್ಣುಮಕ್ಕಳು ಭಾವನಾತ್ಮಕವಾಗಿ ಬಲವಾಗಿದ್ದಾರೆ.

    ಕೆಲವರು ಫೇಸ್ಬುಕ್ ವಾಟ್ಸಪ್ಪ್ ಗಳಿಗೆ ಮೊರೆ ಹೋಗಿ ತಮ್ಮ ಒಂಟಿತನದಿಂದ ಮುಕ್ತಿ ಹೊಂದುತ್ತಿರುವ ಭ್ರಮೆಯಲ್ಲಿ ಇರುತ್ತಾರೆ.
    ಇದು ಸಹ ಮತ್ತೊಂದು ಅಪಾಯಕ್ಕೆ ಆಹ್ವಾನ ನೀಡುವಂಥದ್ದೆ.

    ನಡುವಯಸ್ಸಿನ ಹೆಣ್ಣಿಗೆ ಬೇಕಾಗುವ ಅವಶ್ಯಕತೆಗಳನ್ನು /ಅನಿವಾರ್ಯತೆಗಳನ್ನು ಅರಿಯುವಲ್ಲಿ‌ ಕುಟುಂಬದ ಮನಸ್ಸುಗಳ ಪಾತ್ರವೇನು? ಅಕಸ್ಮಾತ್ ಅವಳಲ್ಲಿ ಭಾವನೆಗಳ ಏರಿಳಿತ, ದುಃಖ ,ಸಿಡುಕು ಇದ್ದರೂ ಪ್ರೀತಿಯಿಂದ ಅವಳನ್ನು ಸಮಾಧಾನಿಸುವುದೂ ಏಕೆ ಅವಶ್ಯಕ?
    ಒಂದು ಮನೆಯ ಪರಿಸರ ಆ ಮನೆಯ ಹೆಣ್ಣಿನ ಭಾವನೆಗಳ ಮೇಲೆ ನಿರ್ಧರಿತವಾಗುವುದು ಬಹುತೇಕ ನಮ್ಮೆಲ್ಲರ ಅನುಭವಕ್ಕೂ ಬಂದಿದೆ.
    ಅವಳಿಗೆ ಸಿಡುಕಿದ್ದರೆ ಮನೆಯ ಗೋಡೆಗೋಡೆಗೂ ತಳಮಳ.
    ಅವಳು ದುಃಖಿಸಿದರೆ ಮನೆ ಅನಾಥ. ಪ್ರಸನ್ನಳಾಗಿ ನಗುನಗುತ್ತಿದ್ದರೆ ಮನೆಯೇ ನವವಧು.

    ಅದೆಷ್ಟೇ ಮುಂದುವರೆದ ಹೆಣ್ಣಾದರೂ ಪ್ರೀತಿಗಾಗಿ ಹಂಬಲಿಸುವ ಆರ್ತಳಾಗುವ ಅವಳ ಸ್ವಭಾವ ಎಂದೂ ಬದಲಾಗದು.
    ಹೆಣ್ಣಿನ ನಡುವಯಸ್ಸು ಹೊಸ್ತಿಲ ಮೇಲೆ ಹೊಯ್ದಾಡುವ ದೀಪದಂತೆ.
    ಕ್ಷಣಚಿತ್ತ ಕ್ಷಣಪಿತ್ತ.ಆ ಬದಿಗೋ ಈ ಬದಿಗೋ.
    ಬೊಗಸೆ ಕೈಗಳನ್ನು ಕುಡಿಯ ಸುತ್ತ ಘಳಿಗೆ ಇಟ್ಟರೆ ಸಾಕು, ಕುಡಿ ಧೃಢವಾಗುತ್ತದೆ.ಬದುಕು ಬಲವಾಗುತ್ತದೆ.

    ಕೇವಲ ಮಾರ್ಚ್ ತಿಂಗಳ ಮಹಿಳಾ ದಿನದ ಆಚರಣೆಯಿಂದ ಮತ್ತೇನನ್ನೂ ಸಾಧಿಸಲಾಗುವುದಿಲ್ಲ.ಪ್ರತಿದಿನ ಪ್ರತಿ ಕ್ಷಣ ಅವಳು ನಮ್ಮಂತೆಯೇ ಎನ್ನುತ್ತಲೇ ಅವಳ ಭಿನ್ನತೆಗಳನ್ನು ಗೌರವಿಸುವುದರ ಮೂಲಕ ಅವಳನ್ನು ಸಧೃಢಗೊಳಿಸುವುದು,ಆ ನಿಟ್ಟಿನಲ್ಲಿ ತಾವೂ ಸಂಸಾರದೊಳಗೆ ಒಳಗೊಳ್ಳುವುದು,ಅವಳ ಹಕ್ಕಿನ ಪ್ರೀತಿಯನ್ನು ಭರಪೂರ ನೀಡುವುದು ನಿಜವಾದ ಮಹಿಳಾದಿನದ ಆಚರಣೆ.

    ಎಣ್ಣೆ ಬಂದಾಗ ಕಣ್ಣು ಮುಚ್ಚುವುದು ಜಾಣತನವಲ್ಲ

    ಷೇರುಪೇಟೆಯಲ್ಲಿ ಹೂಡಿಕೆಯನ್ನು ದೀರ್ಘಕಾಲೀನವಾಗಿ ಆಯ್ಕೆ ಮಾಡಿಕೊಳ್ಳಿ, ಎಸ್‌ ಐ ಪಿ ವಿಧದಲ್ಲಿ ಹೂಡಿಕೆಯು ಹೆಚ್ಚು ಸುರಕ್ಷಿತ ಮುಂತಾದ ಶಿಫಾರಸುಗಳು ಅನೇಕ ತಜ್ನರ ಅಭಿಪ್ರಾಯವಾಗಿರುತ್ತದೆ. ಈ ರೀತಿಯ ಹೂಡಿಕೆಯು ಪೇಟೆಗಳು ಕನಿಷ್ಠ ಮಟ್ಟದಲ್ಲಿದ್ದಾಗ ಸೂಕ್ತವಾದ ಸಂದೇಶವಾಗಿದೆ. ಆದರೆ ಪೇಟೆಗಳು ಗರಿಷ್ಠ ಮಟ್ಟದಲ್ಲಿ ತೇಲಾಡುತ್ತಿರುವ ಸಂದರ್ಭದಲ್ಲಿ ಅನಿಶ್ಚಿತತೆಯ ಸಮಯದಲ್ಲಿ ದೀರ್ಘಕಾಲೀನ ಹೂಡಿಕೆ ಎಂಬ ಉದ್ದೇಶದಿಂದ ಆಯ್ಕೆಮಾಡಿಕೊಂಡಿದ್ದರೂ ಅನಿರೀಕ್ಷಿತ ಮಟ್ಟದ ಏರಿಕೆಯನ್ನು ಕಂಡಾಗ ಅದನ್ನು ಉಪಯೋಗಿಸಿಕೊಳ್ಳುವುದು ಸಹಜತೆ ಎಂಬುದನ್ನು ಈ ಕೆಳಕಂಡ ಉದಾಹರಣೆಗಳಿಂದ ದೃಢಪಡುತ್ತದೆ.

    ದಿಲೀಪ್‌ ಬ್ಯುಲ್ಡ್‌ ಕಾನ್‌ ಲಿಮಿಟೆಡ್:ಈ ಕಂಪನಿಯು ರೋಡ್ಸ್‌ ಮತ್ತು ಹೈವೇ ವಲಯದ ಕಂಪನಿಯಾಗಿದೆ. ಹಿಂದಿನ ವರ್ಷ ಮಾರ್ಚ್‌ ನಲ್ಲಿ ಭಾರಿ ಕುಸಿತ ಕಂಡು ರೂ.194 ರ ಸಮೀಪಕ್ಕೆ ತಲುಪಿತ್ತು. ಸೆಪ್ಟೆಂಬರ್‌ ಅಂತ್ಯದ ಸಾಧನೆಗಿಂತ ಡಿಸೆಂಬರ್‌ ತಿಂಗಳ ಅಂತ್ಯದ ಸಾಧನೆಯು ಅತ್ಯುತ್ತಮವಾಗಿದೆ ಎಂಬ ಕಾರಣ ಕಳೆದ ಒಂದು ತಿಂಗಳಲ್ಲಿ ರೂ.479 ರ ಸಮೀಪದಿಂದ ರೂ.719 ರವರೆಗೂ ಜಿಗಿತ ಕಂಡು ಹೂಡಿಕೆದಾರರ ಗಮನ ಸೆಳೆದಿದೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ದಿನಾಂಕ ಈ ತಿಂಗಳ 2 ರಂದು ರೂ.710 ರ ವಾರ್ಷಿಕ ದಾಖಲೆ ನಿರ್ಮಿಸಿದ ನಂತರದ ದಿನಗಳಲ್ಲಿ ಅಂದರೆ 4 ರಂದು ಷೇರಿನ ಬೆಲೆ ರೂ.620 ರವರೆಗೂ ಜಾರಿತು. ಸೋಜಿಗವೆಂದರೆ ಅಂದೇ ದಿನದ ಕೊನೆಯ ಅರ್ಧ ಗಂಟೆಯ ವಹಿವಾಟಿನಲ್ಲಿ ಷೇರಿನ ಬೆಲೆ ರೂ.645 ರ ಸಮೀಪದಿಂದ ರೂ.719 ರವರೆಗೂ ಜಿಗಿದು ವಿಸ್ಮಯಕಾರಿ ಅಂಶ ಪ್ರದರ್ಶಿಸಿದೆ. ಒಂದೇ ದಿನ ರೂ.651 ರಿಂದ ರೂ.620 ರವರೆಗೂ ಕುಸಿದು ನಂತರ ರೂ.719 ಕ್ಕೆ ಪುಟಿದೆದ್ದು ಸುಮಾರು ರೂ.130 ರಷ್ಟರ ಏರಿಳಿತವನ್ನು ಪ್ರದರ್ಶಿಸಿದೆ. ಒಂದೇ ದಿನ ಶೇ.20 ರಷ್ಟು ಬದಲಾವಣೆಯು ಅಸಹಜ ನಡೆಯಾಗಿದೆ. ಈ ರೀತಿಯ ನಡೆಗೆ ಕಾರಣವೇನಿರಬಹುದೆಂದು ತಿಳಿಯುವ ವೇಳೆಗೆ ಪೇಟೆಯ ಚಟುವಟಿಕೆಯ ಸಮಯ ಮುಗಿದಿತ್ತು. ನಂತರದ ದಿನ ಕಂಪನಿಯಿಂದ ಹೊರಬಿದ್ದ ಪ್ರಕಟಣೆಯಲ್ಲಿ ಕಂಪನಿಯು ಕರ್ನಾಟಕದ ಭಾರತ್‌ ಮಾಲಾ ಪರಿಯೋಜನೆಯ ಮೊದಲನೆಯ ಹಂತದ ರೂ.2,439 ಕೋಟಿಯ ಆರ್ಡರ್‌ ನ್ನು ಪಡೆದಿದೆ ಎಂದು ತಿಳಿಸಿದೆ. ಕೇವಲ ಆರ್ಡರ್‌ ಪಡೆದುಕೊಂಡ ಕಾರಣಕ್ಕೆ ಈ ರೀತಿಯ ಸ್ಪಂದನವು ತಾತ್ಕಾಲಿಕವಾಗಿರುತ್ತದೆ.

    ಬಾಲ್ಮರ್‌ ಲೌರಿ ‌ & ಕೋ ಲಿಮಿಟೆಡ್:ಈ ಕಂಪನಿಯು ಈ ವರ್ಷ ಇಂಟೀರಿಯಂ ಡಿವಿಡೆಂಡ್‌ ವಿತರಿಸುವುದಿಲ್ಲವೆಂಬ ನಿರ್ಧಾರದಿಂದ ಷೇರಿನ ಬೆಲೆ ಮಾರಾಟದ ಒತ್ತಡವನ್ನೆದುರಿಸಬೇಕಾಯಿತು. ಷೇರಿನ ಬೆಲೆಯು ಫೆಬ್ರವರಿ ಕೊನೆ ವಾರದಲ್ಲಿ ರೂ.114 ರಲ್ಲಿದ್ದ ಷೇರಿನ ಬೆಲೆ ಗುರುವಾರದಂದು ರೂ.152 ರವರೆಗೂ ಜಿಗಿತ ಕಂಡಿತು. ಈ ರೀತಿಯ ಏರಿಕೆಗೆ ಯಾವುದೇ ಕಾರಣವಿಲ್ಲದಿದ್ದರೂ ಅನಿರೀಕ್ಷಿತ ಏರಿಕೆಯು ಲಾಭ ನಗದೀಕಾರಿಸಿಕೊಳ್ಳಲು ಉತ್ತಮ ಅವಕಾಶವನ್ನು ಕಲ್ಪಿಸಿತು. ವಾರಾಂತ್ಯದಲ್ಲಿ ರೂ.138 ರ ಸಮೀಪ ಕೊನೆಗೊಂಡಿದೆ.

    ಬಾಲ್ಮರ್‌ ಲೌರಿ ‌ಇನ್ವೆಸ್ಟ್ ಮೆಂಟ್ಸ್ ಲಿಮಿಟೆಡ್:ಈ ಕಂಪನಿ ಸಾರ್ವಜನಿಕ ವಲಯದ ಕಂಪನಿಯಾಗಿದೆ. ಗುರುವಾರದಂದು ಈ ಷೇರಿನ ಬೆಲೆ ರೂ.415 ರ ಆಸುಪಾಸಿನಲ್ಲಿದ್ದು, ನಂತರ ದಿಢೀರ್‌ ರೂ.475 ರವರೆಗೂ ಜಿಗಿತ ಕಂಡಿತು. ಈ ಜಿಗಿತಕ್ಕೆ ಅಧಿಕೃತವಾದ ಕಾರಣವೇನೂ ಇಲ್ಲದಿದ್ದರೂ ಈ ಪ್ರಮಾಣದ ಏರಿಕೆಯು ವಿಸ್ಮಯಕಾರಿಯಾಗಿದೆ. ‌ ಹಿಂದಿನ ವರ್ಷದ ಸೆಪ್ಟೆಂಬರ್‌ ನಲ್ಲಿ ಪ್ರತಿಷೇರಿಗೆ ರೂ.37.50 ಯಂತೆ ಲಾಂಭಾಂಶ ವಿತರಿಸಿದ ನಂತರ ಷೇರಿನ ಬೆಲೆ ರೂ.333 ರ ಸಮೀಪಕ್ಕೆ ಇಳಿಕೆ ಕಂಡಿದ್ದ ಈ ಷೇರು ದಿಢೀರನೆ ಬೆಂಬಲ ಪಡೆದಿದ್ದು ವಿತ್ತೀಯ ಸಂಸ್ಥೆಗಳ ಖರೀದಿ ಕಾರಣವಾಗಿರಬಹುದು.

    ಹಿಂದೂಸ್ಥಾನ್‌ ಕಾಪರ್‌ ಲಿಮಿಟೆಡ್:ಜಾಗತಿಕ ಪೇಟೆಗಳಲ್ಲಿ ಲೋಹಗಳ ಬೆಲೆಯು ಗಗನದತ್ತ ಚಿಮ್ಮುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಲೋಹಗಳ ಷೇರುಗಳು ಏರಿಕೆಯನ್ನು ಕಂಡವು. ಇದರಲ್ಲಿ ಹಿಂದೂಸ್ಥಾನ್‌ ಕಾಪರ್‌ ಸಹ ಒಂದು. ಕಳೆದ ಒಂದೇ ತಿಂಗಳಲ್ಲಿ ರೂ.69 ರ ಸಮೀಪದಿಂದ ರೂ.165 ರ ಸಮೀಪಕ್ಕೆ ಏರಿಕೆ ಕಂಡು ಎಲ್ಲರ ಗಮನ ಸೆಳೆದ ಕಂಪನಿ ಇದಾಗಿದೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಕಳೆದ ಎಂಟೊಂಬತ್ತು ವರ್ಷಗಳ ಹಿಂದೆ ಖರೀದಿಸಿದವರಿಗೆ ಆ ಷೇರಿನಿಂದ ಹೊರಬರುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಡಿಸೆಂಬರ್‌ 2012 ರಲ್ಲಿ ಈ ಷೇರಿನ ಬೆಲೆ ರೂ.155 ರ ಸಮೀಪವಿತ್ತು. ಈಗ ರೂ.165 ರ ಸಮೀಪಕ್ಕೆ ಬರುತ್ತಿದ್ದಂತೆಯೇ ಮಾರಾಟದ ಒತ್ತಡದಿಂದ ರೂ.129 ರವರೆಗೂ ಕುಸಿದು ನಂತರ ಮತ್ತೆ ಚೇತರಿಕೆಯಿಂದ ರೂ.142 ರ ಸಮೀಪವಿದೆ.

    ಹೆಚ್‌ ಸಿ ಎಲ್ ಟೆಕ್ನಾಲಜೀಸ್‌ ಲಿಮಿಟೆಡ್:ಕಳೆದ ಒಂದು ತಿಂಗಳಿನಲ್ಲಿ, ಅಂದರೆ ಫೆಬ್ರವರಿ 12 ರಂದು ರೂ.986 ರಲ್ಲಿದ್ದ ಈ ಕಂಪನಿ 24 ರಂದು ಈ ಷೇರು ರೂ.890 ರ ಕನಿಷ್ಠ ದಾಖಲಿಸಿ, ನಂತರ ಕನಿಷ್ಠದಿಂದ ರೂ.971 ರ ಗರಿಷ್ಠದವರೆಗೂ ಏರಿಕೆ ಕಂಡು ಈಗ ರೂ.941 ರ ಸಮೀಪವಿದೆ. ಕಳೆದ 26 ರಂದು ಷೇರಿನ ಬೆಲೆ ರೂ.905 ರಲ್ಲಿತ್ತು. ನಂತರ ಮಾರ್ಚ್‌ 4 ರಂದು ರೂ.969 ರವರೆಗೂ ಏರಿಕೆ ಪ್ರದರ್ಶಿಸಿ 5 ರಂದು ರೂ.941 ರಲ್ಲಿ ವಾರಾಂತ್ಯ ಕಂಡಿದೆ.

    ಇದೇ ರೀತಿ ಅಗ್ರಮಾನ್ಯ ಕಂಪನಿಗಳಾದ ಹೆಚ್‌ ಡಿ ಎಫ್‌ ಸಿ ಬ್ಯಾಂಕ್, ಕೆನರಾ ಬ್ಯಾಂಕ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಟಾಟಾ ಸ್ಟೀಲ್‌, ಟಾಟಾ ಮೋಟಾರ್ಸ್‌, ಐ ಆರ್‌ ಸಿ ಟಿ ಸಿ, ಮುಂತಾದವುಗಳು ರಭಸದ ಏರಿಳಿತಗಳನ್ನು ಪ್ರದರ್ಶಿಸಿವೆ. ಅಂದರೆ ವಹಿವಾಟುದಾರರು, ತ್ವರಿತವಾದ ಏರಿಕೆ ಕಂಡ ಷೇರುಗಳಿಂದ ನಿರ್ಗಮಿಸಿ, ಅನಿರೀಕ್ಷಿತ ಕುಸಿತ ಪ್ರದರ್ಶಿಸಿದ ಕಂಪನಿಗಳನ್ನು ಖರೀದಿಸುತ್ತಾರೆ. ಇಂತಹ ವಾತಾವರಣದಲ್ಲಿ ಷೇರುಗಳ ಬಗ್ಗೆ ವ್ಯಾಮೋಹ ತ್ಯಜಿಸಿ, ಕೇವಲ ಲಾಭಗಳಿಕೆಯತ್ತ ಕೇಂದ್ರೀಕರಿಸಿದಲ್ಲಿ ಮಾತ್ರ ಹೂಡಿಕೆ ಹಣ ಸ್ವಲ್ಪಮಟ್ಟಿನ ಸುರಕ್ಷತೆ ಕಾಣಬಹುದು.

    ಜಾಗತಿಕ ಪೇಟೆಗಳ ಏರಿಳಿತಗಳ ನೆಪದಲ್ಲಿ ಕುಸಿಯುವಂತಾಗುವ, ದೇಶದ ಆಂತರಿಕ ಆರ್ಥಿಕತೆ ನೆಪದಲ್ಲಿ ಏರಿಕೆ ಕಾಣುವಂತಾಗುತ್ತಿರುವ ಈ ಸಂದರ್ಭದಲ್ಲಿ ಯಶಸ್ಸು ಕಾಣಬೇಕೆಂದರೆ ಕೇವಲ ʼ ವ್ಯಾಲ್ಯು ಪಿಕ್-‌ ಪ್ರಾಫಿಟ್‌ ಬುಕ್‌ʼ ಪಟ್ಟು ಅಳವಡಿಸಿಕೊಂಡಲ್ಲಿ ಮಾತ್ರ ಸಾಧ್ಯ. ಸುದ್ಧಿಗಳಿಗೆ ಮಾರುಹೋಗದೆ, ಸುದ್ಧಿಗಳ ಪ್ರಭಾವವನ್ನು ನಮ್ಮ ಅನುಕೂಲಕ್ಕೆ ಬಳಸಿಕೊಳ್ಳುವುದು ಅಗತ್ಯ. Investors in performance based quality shares, generally, never lose money ಎಂಬುದು ನೆನಪಿರಲಿ. ಒಂದು ವೇಳೆ ಖರೀದಿಸಿದ ಷೇರಿನ ಬೆಲೆ ಕುಸಿತಕ್ಕೊಳಗಾದಲ್ಲಿ, ದೀರ್ಘಕಾಲೀನ ಹೂಡಿಕೆಯಾಗಿ ಮುಂದುವರೆಸುವಂತಿದ್ದರೆ ಒಳಿತು.

    ಹೃದಯಸ್ಪರ್ಶಿ ಭಾವಗೀತೆಗಳ ಸೃಷ್ಟಿಕರ್ತ

    ಎಲ್ಲಿ  ಜಾರಿತೋ ಮನವು ಎಲ್ಲೇ ಮೀರಿತೋ …” 

    “ಬನ್ನಿ ಭಾವಗಳೇ ಬನ್ನಿ ನನ್ನೆಡೆಗೆ ಕರೆಯುವೆ ಕೈಬೀಸಿ…..

    ಬಂದೆ ಬರತಾವ ಕಾಲ…..”

    “ಹಿಂದೆ ಹೇಗೇ  ಚಿಮ್ಮುತ್ತಿತ್ತು ಕಣ್ಣ ತುಂಬಾ ಪ್ರೀತಿ…” 

    ಹಾಡುಗಳನ್ನು ಕೇಳದ  ಕನ್ನಡಿಗರು ವಿರಳ. ಇಂತಹ ಅನೇಕ  ಹೃದಯಸ್ಪರ್ಶಿ ಭಾವಗೀತೆಗಳ ಸೃಷ್ಟಿಕರ್ತ ಮತ್ತ್ಯಾರು ಅಲ್ಲ,   ನಿನ್ನೆಯಷ್ಟೇ ನಮ್ಮನ್ನಗಲಿದ  ಕನ್ನಡಿಗರ ಅಚ್ಚುಮೆಚ್ಚಿನ ಕವಿ  ಡಾ.  ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ. 6 ಮಾರ್ಚ್ 2021 ರಂದು ಅವರು ನಮ್ಮನ್ನು ಭೌತಿಕವಾಗಿ ಅಗಲಿದರೂ ತಮ್ಮ ಅಪಾರವಾದ ಸಾಹಿತ್ಯ ಕೃಷಿಯ ಮೂಲಕ ಕರ್ನಾಟಕ  ಮಾತ್ರವಲ್ಲ ಜಗತ್ತಿನಾದ್ಯಂತ ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುವರು.   

    1968ರಲ್ಲಿ ಬಿಡುಗಡೆಯಾದ ಅವರ  ಪ್ರಥಮ ’ವೃತ್ತ ಕವನ ಸಂಕಲನ’ ದಿಂದ ಪ್ರಾರಂಭವಾಗಿ ಇತ್ತೀಚಿನ   ‘ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ’  ತನಕ  ಕನ್ನಡ ಸಾರಸ್ವತ ಲೋಕಕ್ಕೆ ಅವರದ್ದು ಅನುಪಮ ಕೊಡುಗೆ. ತಮ್ಮ ಆಪ್ತರ ವಲಯದಲ್ಲಿ  ‘ಎನ್. ಎಸ್. ಎಲ್.’  ಎಂದೇ ಚಿರಪರಿಚಿತರಾಗಿರುವ  ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ  ಅವರು   ಒಬ್ಬ ಶ್ರೇಷ್ಠ ಕವಿ ಅನ್ನುವುದರಲ್ಲಿ ಎರಡು ಮಾತಿಲ್ಲ.   ಆದರೆ   ಕೇವಲ ಕಾವ್ಯಕ್ಕೆ  ಸಿಮೀತವಾಗಿರದೇ   ವಿಮರ್ಶೆ, ಅನುವಾದ, ಮಕ್ಕಳ  ಸಾಹಿತ್ಯ,   ಸಂಶೋಧನಾ ಪ್ರಬಂಧ,    ಮುಂತಾದ ಹಲವಾರು ಪ್ರಕಾರಗಳಲ್ಲಿ  ಅವರ ಸಾಹಿತ್ಯ ಕೃಷಿ ವಿಸ್ತಾರಗೊಂಡಿದ್ದು ಕನ್ನಡ ನಾಡಿಗೆ  ಅಪೂರ್ವವಾದ ಕೊಡುಗೆಯನ್ನು ನೀಡಿರುವರು. ಅಷ್ಟು ಮಾತ್ರವಲ್ಲದೇ  ಸಂಸ್ಕೃತ ಮತ್ತು ಆಂಗ್ಲ  ಭಾಷೆಗಳಲ್ಲಿಯೂ    ಕೃತಿಗಳನ್ನು  ರಚಿಸಿ ಸಾಹಿತ್ಯದಲ್ಲಿ ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲೂ  ಗುರುತಿಸಿಕೊಂಡವರು.  ಹಳೆಗನ್ನಡ ಕಾವ್ಯಗಳನ್ನು ನವ್ಯ  ಸಾಹಿತ್ಯದೊಂದಿಗೆ ಸಮನ್ವಯಗೊಳಿಸಿ ತಮ್ಮದೇ  ಶೈಲಿಯಲ್ಲಿ  ಅಭಿವ್ಯಕ್ತಗೊಳಿಸುವ ಅವರ ಪಾಂಡಿತ್ಯ  ಅನನ್ಯವಾದದ್ದು.

    ತಂದೆ  ಶಿವರಾಮ ಭಟ್ಟ, ತಾಯಿ  ಮೂಕಾಂಬಿಕೆ  ಅವರ ಮಗನಾಗಿ  1936 ಅಕ್ಟೋಬರ 29ರಂದು ಶಿವಮೊಗ್ಗದಲ್ಲಿ  ಜನಿಸಿದ  ಭಟ್ಟರು  ಚಿಕ್ಕಂದಿನಿಂದಲೂ ಒಬ್ಬ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದವರು.   ಮೈಸೂರಿನ ಮಹಾರಾಜ ಕಾಲೇಜಿನಲ್ಲಿ  ಎಂ.ಎ. ಆನರ್ಸ್ ಪದವಿ  ಪಡೆದು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪಿಎಚ್‌.ಡಿಗಾಗಿ ಸಂಶೋಧನೆ ನಡೆಸಿ ಮುಂದೆ  ತಮ್ಮ ಇಷ್ಟದ ಅಧ್ಯಾಪನದಲ್ಲಿ ವೃತ್ತಿ ಜೀವನವನ್ನು ಪ್ರಾರಂಭಿಸಿದರು.  ಬೆಂಗಳೂರು ವಿಶ್ವವಿದ್ಯಾನಿಲಯದ  ಕನ್ನಡ ಅಧ್ಯಯನ ವಿಭಾಗದಲ್ಲಿ ಸುಮಾರು ಮೂರು  ದಶಕಗಳ ಕಾಲ  ಅಧ್ಯಾಪಕ,   ರೀಡರ್, ಪ್ರಾಧ್ಯಾಪಕ,  ನಿರ್ದೇಶಕ,   ಡೀನ್  ಹಾಗೂ  ಇನ್ನಿತರ ಅತ್ಯುನ್ನತ  ಸ್ಥಾನಗಳಲ್ಲಿ ಸೇವೆ ಸಲ್ಲಿಸಿರುವ ಡಾ. ಲಕ್ಷ್ಮೀನಾರಾಯಾಣ ಭಟ್ಟರು ಒಬ್ಬ ಸರಳ ಸಜ್ಜನಿಕೆಯ ಹಾಗೂ  ನೇರ ನಡೆನುಡಿಯ ವ್ಯಕ್ತಿ ಎಂದು ಅವರನ್ನು ಹತ್ತಿರದಿಂದ ಬಲ್ಲ  ಸಹದ್ಯೋಗಿಗಳ, ಬಂಧುಮಿತ್ರರ  ಮತ್ತು ವಿದ್ಯಾರ್ಥಿಗಳ ನುಡಿನಮನ. 

    ಸಿ. ಅಶ್ವಥ್, ಮೈಸೂರು ಅನಂತಸ್ವಾಮಿ, ಎಸ್. ಪಿ. ಬಾಲಸುಬ್ರಹ್ಮಣ್ಯಂ,  ಶಿವಮೊಗ್ಗ ಸುಬ್ಬಣ್ಣ,  ಎಚ್.ಕೆ.ನಾರಾಯಣ,  ಎಂ.ಡಿ.ಪಲ್ಲವಿ, ಮುಂತಾದ  ಖ್ಯಾತ ಹಿನ್ನೆಲೆ ಗಾಯಕರು ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ  ಅವರ ಕಾವ್ಯಗಳಿಗೆ  ತಮ್ಮ ಧ್ವನಿಯನ್ನು ನೀಡಿ    ಸುಗಮ-ಸಂಗೀತ ಕ್ಷೇತ್ರದಲ್ಲಿ ಒಂದು ಹೊಸ ಸಂಚಲವನ್ನು ಮೂಡಿಸಿದ್ದು ಅವರ ಕಾವ್ಯದಲ್ಲಡಗಿರುವ  ಮಾಂತ್ರಿಕ ಶಕ್ತಿಗೆ ಒಂದು ಉದಾಹರಣೆ. ಶಿಶುನಾಳ ಶರೀಫರ ಗೀತೆಗಳು  ಮತ್ತು ತತ್ವಪದಗಳನ್ನು ಕಲೆಹಾಕಿ  ಅವುಗಳ ಕಂಪನ್ನು  ಕನ್ನಡಿಗರಿಗೆ ಪಸರಿಸಿದ ಕೀರ್ತಿ  ಪ್ರೊ. ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ  ಅವರಿಗೆ ಸಲ್ಲುತ್ತದೆ. ಅವರ ಕೆಲವು ಕೃತಿಗಳು ಹಲವು ಆವೃತ್ತಿಯೊಂದಿಗೆ  ಪ್ರಕಟಣೆಗೊಂಡು  2 ಲಕ್ಷಕ್ಕೂ ಮೀರಿ ದಾಖಲೆ ಮಟ್ಟದಲ್ಲಿ ಖರೀದಿಯಾಗಿರುವುದು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಒಂದು ಐತಿಹಾಸಿಕ ಹೆಗ್ಗುರುತು. 

    ಪ್ರೊ. ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ  ಅವರ ಅಪೂರ್ವವಾದ ಸಾಹಿತ್ಯ ಕೃತಿಗಳು ಇಂತಿವೆ: 

    ಕವನ ಸಂಕಲನಗಳು:  ವೃತ್ತ ಕವನ ಸಂಕಲನ;  ಕಾವ್ಯಪ್ರತಿಮೆ; ನಂದನ ಕಿಶೋರಿ; ಬಾರೋ ವಸಂತ; ನಿನ್ನೆಗೆ ನನ್ನ ಮಾತು;  ಸುಳಿ; ದೀಪಿಕಾ;  ಹೊಳೆ ಸಾಲಿನ ಮರ;  ಚಿತ್ರಕೂಟ’, ಅರುಣ ಗೀತೆ; ಭಾವಸಂಗಮ, ನೀಲಾಂಜನ; ಊರ್ವಶಿ ಗೀತ ನಾಟಕ. 

    ಮಕ್ಕಳ ಸಾಹಿತ್ಯ: ಜಗನ್ನಾಥ ವಿಜಯ;  ಮುದ್ರಾಮಂಜೂಷ. 

    ಸಂಶೋಧನಾ ಪ್ರಬಂಧ: ಆಧುನಿಕ ಕನ್ನಡ ಕಾವ್ಯ 

    ವಿಮರ್ಶೆ: ವಿವೇಚನ; ಹೊರಳು ದಾರಿಯಲ್ಲಿ ಕಾವ್ಯ; ಕಾವ್ಯಶೋಧನ 

    ಅನುವಾದ ಗ್ರಂಥಗಳು: ಸುನೀತ (ಶೇಕ್ಸಪಿಯರನ ಐವತ್ತು ಸಾನೆಟ್ಟುಗಳು); ಚಿನ್ನದ ಹಕ್ಕಿ ( ಯೇಟ್ಸ ಕವಿಯ ಐವತ್ತು ಕವನಗಳು); ಮೃಚ್ಛಕಟಿಕ;  ಇಸ್ಪೀಟ್ ರಾಜ್ಯ;  ಟ್ವೆಲ್ಫ್ತ್ ನೈಟ್;  ಭಾರತೀಯ ಗ್ರಂಥ ಸಂಪಾದನಾ ಪರಿಚಯ’.

    ದಿ ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೇನಿಂಗ್  (ಎನ್.ಸಿ.ಇ.ಆರ್.ಟಿ) ಸಂಸ್ಥೆಯಿಂದ ಶಿಶು ಸಾಹಿತ್ಯಕ್ಕಾಗಿ ’ಬಾಲಸಾಹಿತ್ಯ ಪುರಸ್ಕಾರ’; ಮೂರುಬಾರಿ ಕರ್ನಾಟಕ  ಸಾಹಿತ್ಯ ಅಕಾಡೆಮಿಯ ಬಹುಮಾನ;   ಶಿವರಾಮಕಾರಂತ ಪ್ರಶಸ್ತಿ;   ರಾಜ್ಯೋತ್ಸವ ಪ್ರಶಸ್ತಿ; ಮಾಸ್ತಿಪ್ರಶಸ್ತಿ;  “ಅನಕೃ ಪ್ರಶಸ್ತಿ” ವರ್ಧಮಾನ ಪ್ರಶಸ್ತಿ’   ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’  ಇನ್ನೂ  ಹತ್ತು ಹಲವಾರು   ಪ್ರಶಸ್ತಿ ಪುರಸ್ಕಾರಗಳು ಅವರ ಸಾಹಿತ್ಯ ಕೃತಿಗಳಿಗೆ  ಮತ್ತು  ಅವರು ನೀಡಿದ ಅನುಪಮ ಕೊಡುಗೆಗೆ   ಅರಸಿಕೊಂಡು ಬಂದವು. 

    ಸಾಹಿತ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆಯನ್ನು ನೀಡಿ ಕನ್ನಡ ನಾಡಿನಲ್ಲಿ ಮತ್ತು    ಕನ್ನಡಿಗರ ಹೃದಯದಲ್ಲಿ  ಚಿರಸ್ಥಾಯಿಯಾಗಿರುವ ಪ್ರೊ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ  ಅವರಿಗೆ ಒಂದು ಭಾವಪೂರ್ಣ ಶ್ರದ್ಧಾಂಜಲಿ.  

    ಯಥಾ ರಾಜ ತಥಾ ಪ್ರಜಾ


    ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು , ವಚನ ಸಾಹಿತ್ಯದಲ್ಲಿ ಅಡಗಿರುವ ಸಂಗತಿಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟು ಮತ್ತು ವಚನಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.


    ಯಥಾ ರಾಜ ತಥಾ ಪ್ರಜಾ-ಶಿವಕೋಟ್ಯಾಚಾರ್ಯರ ವಡ್ಡಾರಾಧನೆಯ  ‘ಕಾರ್ತೀಕ  ಋಷಿ’ ಎಂಬ ಕಥೆಯಲ್ಲಿ ಬರುವ ಮಾತಿದು .ರಾಜರು ಕೆಲವೊಮ್ಮೆ ಅಧಿಕಾರದ ದರ್ಪದಿಂದ ಅಧರ್ಮವನ್ನು ಆಚರಣೆ ಮಾಡುತ್ತಾರೆ.  ರಾಜಾಧಿಕಾರವನ್ನು ತಮಗೆ ಹೇಗೆ ಬೇಕೋ  ಹಾಗೆ ಬಳಕೆ ಮಾಡಿಕೊಳ್ಳುತ್ತಾರೆ. ರಾಜ್ಯದ ಹಿರಿಯರು ಹೇಳಿದರೂ, ಎಚ್ಚರಿಸಿದರೂ ಅದರ ಕಡೆ ಗಮನ ಹರಿಸದೆ ತಮಗೆ ತೋಚಿದ ದುರ್ಮಾರ್ಗದಲ್ಲಿಯೇ ನಡೆದು ಪ್ರಜೆಗಳನ್ನೂ ದಾರಿ ತಪ್ಪಿಸುತ್ತಾರೆ.

    ‘ಕಾರ್ತೀಕ  ಋಷಿ’ ಕಥೆಯಲ್ಲಿ ನಂದೀಶ್ವರ ಹಬ್ಬದ ದಿನ ಅಗ್ನಿರಾಜ ಅಲಂಕೃತೆಯಾದ ತನ್ನ ಮಗಳನ್ನೇ ನೋಡಿ ಮದುವೆಯಾಗಲೇ ಬೇಕು ಎಂದು ತೀರ್ಮಾನಿಸಿ “ನಾನು ರಾಜ್ಯಭಾರ ಮಾಡತಕ್ಕ  ಪ್ರದೇಶಗಳಲ್ಲಿ ಹುಟ್ಟಿಬಂದ ಶ್ರೇಷ್ಠವಾದ ವಸ್ತು ಯಾರಿಗೆ ಸೇರಬೇಕಾದುದು?” ಎಂದು  ಪಂಡಿತರಲ್ಲಿ ಒಗಟಿನ ರೂಪದಲ್ಲಿ ಕೇಳುತ್ತಾನೆ. “ಒಳ್ಳೆಯದಾದ ಆನೆಯೂ ಕುದುರೆಯೂ ಮುತ್ತೂ ಮಾಣಿಕ್ಯವೂ ಸ್ತ್ರೀರತ್ನ ಮುಂತಾದ ಒಳ್ಳೆಯದಾದ ಶ್ರೇಷ್ಠ ವಸ್ತುಗಳೆಲ್ಲವೂ ಭೂಮಿಯನ್ನು ಆಳತಕ್ಕವನಿಗೆ ಸೇರಬೇಕಾದವು” ಎಂದು  ಸರಿಯಾಗಿ ವಿಷಯ ತಿಳಿಯದ  ಪಂಡಿತರು ಹೇಳುತ್ತಾರೆ. ಆದರೆ ರಾಜನ ದುರುದ್ದೇಶ ಗಮನಿಸಿ ಕೆಲವರು ತೀವ್ರ ವಿರೋಧ ವ್ಯಕ್ತಪಡಿಸುತ್ತಾರೆ. 

    ಆಗ ರಾಜ್ಯದಲ್ಲಿ ಒಬ್ಬೊಬ್ಬರನ್ನೇ ಕರೆದು  ತಾನು ತನ್ನ ರಾಜ್ಯದಲ್ಲಿ ಅತ್ಯುತ್ತಮವಾದುದನ್ನು ಉಪಭೋಗಿಸಬಹುದು ಎಂದು ಅವರಿಂದಲೇ ಹೇಳಿಸುತ್ತಾನೆ.  ಅವನ ಮಾತಿಗೆ ವಿರುದ್ಧವಾಗಿದ್ದವರನ್ನು ಸೆರೆಮನೆಗೆ ಕಳುಹಿಸುತ್ತಾನೆ.  ನಂತರ ಅಗ್ನಿರಾಜ ಸ್ವಂತ ಮಗಳು  ಕೃತ್ತಿಕೆಯನ್ನು ಮದುವೆಯಾಗುತ್ತಾನೆ.

    ರಾಜನ ಧರ್ಮ ವಿರುದ್ಧವಾದ ವರ್ತನೆಗೆ ವೀರಮತಿ ಬ್ರಹ್ಮಚರ್ಯವನ್ನು ಸ್ವೀಕರಿಸುತ್ತಾಳೆ. ಕೃತ್ತಿಕೆಯ ಪ್ರತಿಕ್ರಿಯೆಗಳು ಮಾತಿನಲ್ಲಿ ಬರುವುದೇ ಇಲ್ಲ. ಕಾರ್ತಿಕ ಋಷಿಯ ಕಥೆಯಲ್ಲಿ  ಅಗ್ನಿರಾಜ ಸಮಾಜದ ಕಟ್ಟಳೆಗಳನ್ನ ಮುರಿಯಲು ಪ್ರಯತ್ನ ಮಾಡಿದ ನಂತರ “ಯಥಾ ರಾಜ ತಥಾ ಪ್ರಜಾ” ಎಂಬಂತೆ  ಕೃತ್ತಿಕಾಪುರ ಭೋಗಂಕಾರೋಹಣ   ಅಥವಾ ಭೋಗಪಟ್ಟಣ ಆಗಿಬಿಡುತ್ತದೆ.

     ಹಿರಿಯರು ತಮ್ಮನ್ನು ಆಳುವವರು ಹೇಗೆ ನಡೆದುಕೊಳ್ಳುತ್ತಾರೆಯೋ ಹಾಗೆ ಕಿರಿಯರಯ ನಡೆದುಕೊಳ್ಳುತ್ತಾರೆ.  ರಾಜನಾದವನಿಗೆ ತನ್ನ ದಾರಿ ಪ್ರಜೆಗಳಿಗೆ ಯಾವಾಗಲೂ ಮಾರ್ಗದರ್ಶನ ನೀಡುವಂತೆ ಇರಬೇಕು ಎಂಬ ಧ್ಯೇಯ ನೆನಪಲ್ಲಿರಬೇಕು.  ಆದರ್ಶಗಳಿಗೆ ತಿಲಾಂಜಲಿ ಇತ್ತ  ರಾಜ, ನಾಯಕ, ಮನೆಯ ಹಿರಿಯ ಯಾರೇ ಆಗಲಿ ಅವರಂತೆ ಪ್ರಜೆಗಳ, ಕುಟುಂಬ ಸದಸ್ಯರ ನಡತೆಯೂ ಕುಂಟುತ್ತದೆ ಎಂಬುದನ್ನು ಪ್ರಸ್ತುತ ಮಾತು ಹೇಳುತ್ತದೆ. ಹಾಗಾಗಿ ಹಿರಿಯರು, ನೈತಿಕತೆಯನ್ನು ಬಿಡದೆ, ಭ್ರಷ್ಟತೆಗೆ ಇಳಿಯದೆ  ಪ್ರಾಮಾಣಿಕ, ಸನ್ನಡತೆಯ ಹಾದಿಯಲ್ಲಿಯೇ ಸಾಗಬೇಕು ಕಿರಿಯರಿಗೆ ಆದರ್ಶಪ್ರಾಯರಾಗಿರಬೇಕು.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

                     

    ಸಿನಿಮಾ ಇತಿಹಾಸ ಹೇಳುವ ಚಿತ್ರಪಥ

    ಸಿನಿಮಾ ಇತಿಹಾಸ ಹೇಳುವ ‘ಚಿತ್ರಪಥ’ ಪೋರ್ಟಲ್‌ ಶನಿವಾರ ಲೋಕಾರ್ಪಣೆ ಗೊಳ್ಳಲಿದೆ. ಹಿರಿಯ ಪತ್ರಕರ್ತ ಶಶಿಧರ ಚಿತ್ರದುರ್ಗ ಈ ಪೋರ್ಟಲ್ ರೂಪಿಸಿದ್ದಾರೆ.

    ಇಲ್ಲಿ ಪ್ರಮುಖವಾಗಿ ಕನ್ನಡ ಸಿನಿಮಾ ಹಾಗೂ ಭಾರತದ ಇತರೆ ಪ್ರಾದೇಷಿಕ ಭಾಷಾ ಸಿನಿಮಾ ಸೇರಿದಂತೆ ಜಾಗತಿಕ ಸಿನಿಮಾ ಕುರಿತಾಗಿಯೂ ಫೋಟೋ – ಮಾಹಿತಿ ಇರಲಿದೆ. ಜಾಗತಿಕ ಸಿನಿಮಾದ ವಸ್ತು – ವಿಷಯವನ್ನು ಕನ್ನಡಿಗರಿಗೆ ತಲುಪಿಸುವ ಪುಟ್ಟ ವಾಹಕವಾಗಿಯೂ ‘ಚಿತ್ರಪಥ’ ಆರ್ಕೈವ್ ಪೋರ್ಟಲ್ ಕಾರ್ಯನಿರ್ವಹಿಸಲಿದೆ.ಚಿತ್ರರಂಗ ನಡೆದುಬಂದ ಹಾದಿಯನ್ನು ದಾಖಲಿಸುವ, ಅಲ್ಲಿನ ಶ್ರೀಮಂತಿಕೆ, ಬೆರಗು-ಹೊಳಪನ್ನು ಹೇಳುವ, ಚಿತ್ರರಂಗದ ಅಂದಿನ ಕಾರ್ಯವೈಖರಿ, ಶೂಟಿಂಗ್ ಸ್ಟುಡಿಯೋಗಳು ಹಾಗೂ ಪರಿಕರಗಳ ವಿವರಗಳನ್ನು ನೀಡುವುದರ ಜೊತೆಗೆ ಚಿತ್ರರಂಗದ ದಂತಕಥೆಗಳು ಎನಿಸಿದ ತಂತ್ರಜ್ಞರು ಹಾಗೂ ಕಲಾವಿದರ ಅಪರೂಪದ ಫೋಟೋಗಳೊಂದಿಗಿನ ಮಾಹಿತಿ, ಪ್ರತಿಭಾವಂತರ ಕುರಿತ ಟಿಪ್ಪಣಿಗಳು ಇಲ್ಲಿ ಇರಲಿದೆ ಎಂದು ಶಶಿಧರ ತಿಳಿಸಿದ್ದಾರೆ.

    ‘ನಾಸ್ಟಾಲ್ಜಿಯಾ’, ‘ಚಿತ್ರ-ಕಥೆ’, ‘ಶೂಟಿಂಗ್ ಸೋಜಿಗ’, ‘ಮಾಹಿತಿ – ವಿಶೇಷ’, ‘ನೆನಪು’, ‘ಪೋಸ್ಟರ್ ಮಾಹಿತಿ’, ‘ಅತಿಥಿ ಅಕ್ಷರ’ ವಿಭಾಗಗಳ ಮೂಲಕ ತೀರಾ ಅಕಾಡೆಮಿಕ್ ಧಾಟಿಯಲ್ಲಿ ಸಾಗದೆ, ಓದುಗರೊಂದಿಗೆ ಇಂಟರಾಕ್ಟೀವ್‌ ಆಗಿ ಮಾಹಿತಿ ನೀಡುವ ಪ್ರಯತ್ನ. ಫೋಟೋಗಳ ಹಿಂದಿನ ಕತೆ, ಸಂದರ್ಭಗಳನ್ನು ಸ್ವತಃ ಫೋಟೋಗಳನ್ನು ಸೆರೆಹಿಡಿದ ಸ್ಥಿರಚಿತ್ರ ಛಾಯಾಗ್ರಾಹಕರು ನಿರೂಪಿಸಿದ್ದು, ಈ ವೀಡಿಯೋಗಳನ್ನು ’ಚಿತ್ರಪಥ’ ಯೂಟ್ಯೂಬ್ ಚಾನೆಲ್‌ನಲ್ಲಿ ನೋಡಬಹುದು.

    ‘ಚಿತ್ರಪಥ’ದಲ್ಲಿ ಪ್ರಮುಖವಾಗಿ ಕನ್ನಡ ಚಿತ್ರರಂಗದ ಬಗ್ಗೆ ಹೆಚ್ಚಿನ ಮಾಹಿತಿ ಇರಲಿದೆ. ಕನ್ನಡ ಚಿತ್ರರಂಗದ ಹಿರಿಯ ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕರಾದ ಭವಾನಿ ಲಕ್ಷ್ಮೀನಾರಾಯಣ ಮತ್ತು ಪ್ರಗತಿ ಅಶ್ವತ್ಥ ನಾರಾಯಣ ಅವರು ಸೆರೆಹಿಡಿದ ಫೋಟೋಗಳು ಪ್ರಮುಖವಾಗಿ ಪೋರ್ಟಲ್‍ನಲ್ಲಿ ಬಳಕೆಯಾಗಲಿವೆ.

    ಭವಾನಿ ಲಕ್ಷ್ಮೀನಾರಾಯಣ: ಕನ್ನಡ ಸಿನಿಮಾಗಳು ಮದರಾಸಿನ ಸ್ಟುಡಿಯೋಗಳಲ್ಲಿ ಚಿತ್ರೀಕರಣಗೊಳ್ಳುತ್ತಿದ್ದ ಕಾಲ ಅದು. ಅಲ್ಲಿನ ಸಿನಿಮಾ ಸುದ್ದಿಗಳನ್ನು ತಮ್ಮ ಫೋಟೋಗಳೊಂದಿಗೆ ಕನ್ನಡನಾಡಿಗೆ ಮುಟ್ಟಿಸುತ್ತಿದ್ದವರು ಭವಾನಿ ಲಕ್ಷ್ಮೀನಾರಾಯಣ. ಆಗ ನಟ-ನಟಿಯರು, ತಂತ್ರಜ್ಞರಿಗೆ ಅವರು ‘ಸ್ಟಾರ್ ಫೋಟೋಗ್ರಾಫರ್’! ಕನ್ನಡ ಬೆಳ್ಳಿಪರದೆ ಪ್ರವೇಶಿಸಿದ ಬಹುತೇಕ ಕಲಾವಿದರ ಭಾವಚಿತ್ರಗಳನ್ನು ಕ್ಲಿಕ್ಕಿಸಿದ ಹೆಗ್ಗಳಿಕೆ ಅವರದು. ಫೋಟೋ ಜರ್ನಲಿಸ್ಟ್ ಆಗಿ ಸುಮಾರು ಎರಡೂವರೆ ದಶಕಗಳ ಕಾಲ (1955ರಿಂದ 1980) ಅವರು ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ. ಐವತ್ತರ ದಶಕದಲ್ಲಿ ಹೆಚ್ಚಿನ ಸಂಖ್ಯೆಯ ಸಿನಿಮಾ ಸ್ಟಿಲ್ ಛಾಯಾಗ್ರಾಹಕರು ಇರಲಿಲ್ಲ. ಹಾಗಾಗಿ ಭವಾನಿಯವರ ಸಿನಿಮಾ ಸ್ಟಿಲ್‍ಗಳಿಗೆ ಬಹುಬೇಡಿಕೆ ಇತ್ತು. ಚಲನಚಿತ್ರ ಇತಿಹಾಸ ಗ್ರಂಥ ಸೇರಿದಂತೆ ಹತ್ತಾರು ಸಿನಿಮಾ ಪುಸ್ತಕಗಳು, ಪತ್ರಿಕೆಗಳಲ್ಲಿ ಭವಾನಿಯವರು ಸೆರೆಹಿಡಿದ ಅಸಂಖ್ಯ ಛಾಯಾಚಿತ್ರಗಳು ಬಳಕೆಯಾಗಿವೆ. ರಾಜ್ಯೋತ್ಸವ ಪುರಸ್ಕಾರ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ, ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಸೇರಿದಂತೆ ಅವರಿಗೆ ಹತ್ತುಹಲವು ಗೌರವ ಸಂದಿವೆ.

    ಪ್ರಗತಿ ಅಶ್ವತ್ಥನಾರಾಯಣ :

    ಕನ್ನಡ ಚಿತ್ರರಂಗದ ಬೆಳವಣಿಗೆಯ ಹಾದಿಯಲ್ಲಿ ಪ್ರಗತಿ ಸ್ಟುಡಿಯೋ ಹೆಸರು ಕಡ್ಡಾಯವಾಗಿ ಪ್ರಸ್ತಾಪವಾಗುತ್ತದೆ. ಸ್ಥಿರಚಿತ್ರ ಛಾಯಾಗ್ರಹಣದ ಮೂಲಕ ನಾಲ್ಕು ದಶಕಗಳ ಕಾಲ ಕನ್ನಡ ಚಿತ್ರಜಗತ್ತಿನ ಭಾಗವಾಗಿದ್ದು `ಪ್ರಗತಿ’ಯ ಹೆಮ್ಮೆ. ಸಿನಿಮಾ ಸ್ಥಿರಚಿತ್ರ ಛಾಯಾಗ್ರಹಣದಲ್ಲಿ ಅಶ್ವತ್ಥ ಅವರದ್ದು ನಾಲ್ಕು ದಶಕಗಳ ಅನುಭವ. ಅಧಿಕೃತವಾಗಿ ಅಶ್ವತ್ಥರ ಸ್ಥಿರಚಿತ್ರ ಛಾಯಾಗ್ರಹಣ ವೃತ್ತಿ ಆರಂಭವಾಗಿದ್ದು ಮದರಾಸಿನಲ್ಲಿ `ಬೆಳ್ಳಿಮೋಡ’ ಚಿತ್ರದೊಂದಿಗೆ. ಅವರು ಸ್ಥಿರಚಿತ್ರ ಛಾಯಾಗ್ರಹಣ ಮಾಡಿದ ಕೊನೆಯ ಚಿತ್ರ `ಪ್ರೇಮ ಪ್ರೇಮ ಪ್ರೇಮ’. `ಪ್ರಗತಿ’ ಸ್ಟುಡಿಯೋ ಆರಂಭಿಸಿದ ನಂತರ ಸುಮಾರು 275 ಸಿನಿಮಾಗಳಿಗೆ ಅಶ್ವತ್ಥರು ಸ್ಟಿಲ್ ಫೋಟೋಗ್ರಫಿ ಮಾಡಿದ್ದಾರೆ. ಮದರಾಸಿನಲ್ಲಿದ್ದಾಗ ಮಲಯಾಳಂ ಚಿತ್ರಗಳೂ ಸೇರಿದಂತೆ 25ಕ್ಕೂ ಹೆಚ್ಚು ಚಿತ್ರಗಳಿಗೆ ದುಡಿದಿದ್ದರು. ಒಟ್ಟಾರೆ ಸ್ಟಿಲ್ ಫೋಟೋಗ್ರಾಫರ್ ಆಗಿ ಅವರು ಕೆಲಸ ಮಾಡಿದ ಚಿತ್ರಗಳ ಸಂಖ್ಯೆ 300 ದಾಟುತ್ತದೆ.

    ಪುಟ್ಟಣ್ಣ ಕಣಗಾಲ್ ನಿರ್ದೇಶನದ ಹನ್ನೊಂದು, ಸಿದ್ದಲಿಂಗಯ್ಯನವರ ಹದಿನಾಲ್ಕು ಸಿನಿಮಾಗಳಿಗೆ ಅಶ್ವತ್ಥರು ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ. `ಪ್ರಗತಿ’ಯಲ್ಲಿ ಹತ್ತಾರು ಸ್ಟಿಲ್ ಫೋಟೋಗ್ರಾಫರ್‍ಗಳು ತಯಾರಾಗಿದ್ದಾರೆ. ಮೈಲುಗಲ್ಲು ಎನಿಸಿದ ಹಲವಾರು ಕನ್ನಡ ಚಿತ್ರಗಳಿಗೆ ಕಾರ್ಯನಿರ್ವಹಿಸಿರುವ ಅಶ್ವತ್ಥರ ಸಂಗ್ರಹದಲ್ಲಿ ಸಹಸ್ರಾರು ಫೋಟೋ ನೆಗೆಟಿವ್ ಇವೆ. ಸಿನಿಮಾ ಸ್ಥಿರಚಿತ್ರ, ಸಿನಿಮಾಗೆ ಸಂಬಂಧಿಸಿದ ಇತರೆ ಫೋಟೋ, ಚಿತ್ರೀಕರಣದ ಸಂದರ್ಭದ ಕ್ಲಿಪಿಂಗ್, ಚಿತ್ರೋದ್ಯಮದ ಕಾರ್ಯಕ್ರಮ, ನಟ-ನಟಿಯರ ಭಾವಚಿತ್ರ, ಕಲಾವಿದರ ಕುಟುಂಬಗಳ ವೈಯಕ್ತಿಕ ಸಮಾರಂಭಗಳು… ಹೀಗೆ ಅವರ ಸಂಗ್ರಹದಲ್ಲಿನ ಅಸಂಖ್ಯಾತ ಫೋಟೋಗಳು ಕನ್ನಡ ಚಿತ್ರರಂಗದ ಇತಿಹಾಸ ದಾಖಲಿಸುತ್ತವೆ.

    ‌‘ಚಿತ್ರಪಥ’ ಅನಾವರಣ

    ಮಾರ್ಚ್‌ 6ರಂದು ಶನಿವಾರ ಕನ್ನಡದ ಹೆಮ್ಮೆಯ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರು ‘ಚಿತ್ರಪಥ’ ಅನಾವರಣಗೊಳಿಸಲಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್‌, ಚಿತ್ರಸಾಹಿತಿ ಕವಿರಾಜ್‌ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯ ಸ್ಥಿರಚಿತ್ರ ಛಾಯಾಗ್ರಾಹಕರಾದ ಭವಾನಿ ಲಕ್ಷ್ಮೀನಾರಾಯಣ ಮತ್ತು ಪ್ರಗತಿ ಅಶ್ವತ್ಥ ನಾರಾಯಣ ಅವರನ್ನು ಸನ್ಮಾನಿಸಲಾಗುವುದು.

    ದಿನಾಂಕ : ಮಾರ್ಚ್‌ 6, ಶನಿವಾರ, ಬೆಳಗ್ಗೆ 10.30ಕ್ಕೆ

    ಸ್ಥಳ : ರೇಣುಕಾಂಬ ಸ್ಟುಡಿಯೋ, ಮಲ್ಲೇಶ್ವರ 18ನೇ ಕ್ರಾಸ್‌,

    ಬೆಂಗಳೂರು.

    ಚಿತ್ರಪಥದಲ್ಲಿರುವ ಚಿತ್ರಗಳ ಝಲಕ್


    ಇನ್ನು ಎಲ್ ಎಲ್ ಪಡೆಯಲು ಆರ್ ಟಿ ಓ ಕಚೇರಿಗೆ ಹೋಗಬೇಕಿಲ್ಲ

    ಲರ್ನಿಂಗ್ ಲೈಸೆನ್ಸ್ ಸೇರಿದಂತೆ 18 ವಿವಿಧ ಸೇವೆಗಳಿಗೆ ಇನ್ನು ಮುಂದೆ ಆರ್ ಟಿ ಓ ಕಚೇರಿಗೆ ಹೋಗಬೇಕಿಲ್ಲ. ಈ ಸೇವೆಗಳು ಆನ್ ಲೈನ್ ಮೂಲಕವೇ ಸಿಗಲಿದೆ. ಈ ಬಗ್ಗೆ ಮಾರ್ಚ್ 4 ರಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಗೆಜೆಟ್ ಪ್ರಕಟಣೆ ಮಾಡಿದೆ.

    ಲರ್ನಿಂಗ್ ಲೈಸೆನ್ಸ್, ಡ್ರೈವಿಂಗ್ ಲೈಸೆನ್ಸ್ ನ ನವೀಕರಣ ಸೇರಿದಂತೆ ಹಲವು ಸೇವೆಗಳನ್ನು ಸಂಪೂರ್ಣವಾಗಿ ಆನ್ ಲೈನ್ ಮಾಡಲಾಗಿದೆ. ಆಧಾರ್ ಅಥೆಂಟಿಕೇಷನ್ ಮಾಡುವ ಮೂಲಕ ಈ ಸೇವೆಗಳನ್ನು ನಾಗರಿಕರು ಪಡೆಯಬಹುದಾಗಿದೆ.

    ಆನ್ ಲೈನ್ ಮೂಲಕವೆ ಪಡೆಯಬಹುದಾದ ಆನ್ ಲೈನ್ ಸೇವೆಗೆಳು ಹೀಗಿವೆ.

    1. Learner’s License can now be availed completely online

    2. Duplicate Driving License

    3. Renewal of Driving License for which test of competence to drive is not required

    4. Change of Address in Driving License and Certificate of Registration

    5. Issue of International Driving Permit

    6. Temporary Registration of motor vehicle

    7. Registration of motor vehicle with a fully built body

    8. Application for issue of duplicate Certificate of Registration

    9. Application for Grant of NOC for Certificate of Registration

    10. Surrender of Class of Vehicle from License

    11. Notice of Transfer of Ownership of motor vehicle

    12. Application for Transfer of Ownership of motor vehicle

    13. Intimation of Change of Address in Certificate of Registration

    14. Application for registration for driver training from Accredited Driver training centre

    15. Application for registration of motor vehicle of Diplomatic Officer

    16. Application for assignment of Fresh Registration Mark of motor vehicle of Diplomatic Officer

    17. Endorsement of hire-purchase agreement

    18. Termination of hire-purchase agreement.

    ಚಾಲನಾ ಪರವಾನಿಗೆ ಪಡೆಯಲು ಪರೀಕ್ಷೆ ಅಗತ್ಯ ಇರುವುದರಿಂದ ಆ ಸೇವೆ ಆನ್ ಲೈನ್ ನಲ್ಲಿ ಸಿಗುವುದಿಲ್ಲ. https://sarathi.parivahan.gov.in/sarathiservice ಇಲ್ಲಿಗೆ ಭೇಟಿ ನೀಡಿ ಅಪ್ಲೆ ಮಾಡಬಹುದು.

    ಈ ಗೆಜೆಟ್ ಪ್ರಕಟಣೆಯ ಅನುಸಾರ ರಾಜ್ಯ ಸರಕಾರ ಆದೇಶ ಹೊರಡಿಸಿದ ಮೇಲೆ ರಾಜ್ಯದ ಆರ್ ಟಿ ಓ ಗಳಲ್ಲಿ ಇದು ಜಾರಿಗೆ ಬರಲಿದೆ

    error: Content is protected !!