23 C
Karnataka
Sunday, June 14, 2026
    Home Blog Page 118

    105 ವರ್ಷಗಳ E=mC^2 ಹಾಗೂ ಬ್ರಹ್ಮ ಬರಹ

    ಕುಶಸ್ಥಲಿಯ ರೈವತನ ಮಗನಾದ ಕಾಕುಡ್ಮಿ ಎಂಬ ರಾಜನು ತನ್ನ ಮಗಳಾದ ರೇವತಿಗೆ ವರ ಹುಡುಕಲು ಮಾಡಿದ ಯೋಚನೆ ಏನೆಂದರೆ ಅಲ್ಲಿ ಇಲ್ಲಿ ರೇವತಿಯ ವರನನ್ನು ಹುಡುಕಿ,ಕಾಲ ಹರಣ ಮಾಡುವ ಬದಲು, ಸೃಷ್ಟಿ ಕರ್ತ ಬ್ರಹ್ಮನಲ್ಲಿಯೇ ಹೋಗಿ, ತನ್ನ ಮಗಳಿಗಾಗಿ ಸೃಷ್ಟಿಸಿರುವ ವರನ ಬಗ್ಗೆ ತಿಳಿದುಕೊಳ್ಳುವುದು! ಸರಿ ಬ್ರಹ್ಮ ಲೋಕಕ್ಕೆ ಮಗಳೊಂದಿಗೆ ಹೋಗ್ತಾನೆ. ಬ್ರಹ್ಮ ವಿರಾಮಕ್ಕೆಂದು ಸಂಗೀತ ಕೇಳ್ತಿರುತ್ತಾನೆ. ಸ್ವಲ್ಪ ಸಮಯದ ಕಾಯುವಿಕೆಯ ಬಳಿಕ ಸಂದರ್ಶನ ಸಿಕ್ಕು,ತಾನು ಬಂದ ಕಾರಣ ಬ್ರಹ್ಮನಿಗೆ ಅರುಹಿಕೊಂಡಾಗ, ನಕ್ಕ ಬ್ರಹ್ಮ ನೀನಿಲ್ಲಿ ನನಗಾಗಿ ಕಾದ ಸಮಯ ಭೂಲೋಕದಲ್ಲಿ ಸಾವಿರ ಸಾವಿರ ವರ್ಷಗಳು ಆಗಿವೆ. ರೇವತಿಯ ವಯಸ್ಸಿನವರು ಈಗ ಅಲ್ಲಿ ಇಲ್ಲ. ನೀನು ಮರಳಿ ಹೋಗು ಆಗ ದ್ವಾಪರ ಯುಗ ಇರುತ್ತದೆ, ಕೃಷ್ಣನ ಅಣ್ಣ ಬಲರಾಮನೊಂದಿಗೆ ನಿನ್ನ ಮಗಳು ರೇವತಿಯ ಮದುವೆ ಮಾಡು ಅನ್ನುತ್ತಾನೆ.

    ಇದು ಭಾಗವತದ 3ನೇ ಅಧ್ಯಾಯದ 9ನೇ ಶ್ಲೋಕದಲ್ಲಿ ಬರುವ ಕಥೆ. ನನಗೆ ಭಾಗವತ ಯಾರು ಹೇಳಿ ಯಾರು, ಯಾವಾಗ ಬರೆದರು ಅನ್ನುವಂತಹ ಅಂಶಗಳು, ತಂದೆ ಮಗಳು ವಿಮಾನದಲ್ಲಿ ಹೋದರೇ, ಹಾರುತ್ತಾ ಹೋದರೇ, ಅಥವಾ ಅದರಲ್ಲಿರುವ ದೈವೀಕರಣ ಮತ್ತು ಅತಿಂದ್ರಿಯ ವಿಷಯಗಳು ಗೌಣ. ನಾನು ಅಪ್ಪನಿಂದ ಈ ಕಥೆ ಕೇಳಿದಾಗಿನಿಂದ ನನ್ನ ಚಿಕ್ಕ ಮೆದುಳಿಗೆ ತಾಕಿದ್ದ ವಿಷಯ ಏನೆಂದರೆ, ಆ ಕಾಕುಡ್ಮಿ ಮತ್ತು ರೇವತಿ ಬ್ರಹ್ಮ ಲೋಕಕ್ಕೆ ಹೋಗಿ ಭೂಮಿಗೆ ಬಂದಾಗ ಹಾಗೆಯೇ ಇದ್ದು, ಭೂಲೋಕದ ಜನರು ಮಾತ್ರ ಸಾವಿರ ಸಾವಿರ ವರ್ಷಗಳನ್ನು ಕಳೆದು ಸತ್ಯಯುಗದಿಂದ ದ್ವಾಪರ ಯುಗಕ್ಕೆ ಬಂದದ್ದು!! …..ಅಪ್ಪ , ಅದು ಹಾಗೆಯೇ…ಬ್ರಹ್ಮನ ಅಥವಾ ಬ್ರಹ್ಮ ಲೋಕದ ಒಂದು ದಿನ ಭೂಲೋಕದ ಸಾವಿರ ಸಾವಿರ ವರ್ಷಗಳಿಗೆ ಸಮ…ಒಂದು ರಾತ್ರಿಯೂ ಅಷ್ಟೇ… ಭೂಲೋಕಕ್ಕಿಂತಲೂ ಎತ್ತರದ ಸ್ತರದಲ್ಲಿರುವ ಲೋಕಗಳು ಅವು (different dimensional)…..ಹಾಗೆ ಹೀಗೆ ಅಂತ ಆಗ ಊಹಿಸಲು ಆಗದಂಥಹಾ ಸಂಖ್ಯೆಗಳನ್ನು ಹೇಳಿದ್ದರು….ಅತ್ಯಂತ ಭಯ,ಭಕ್ತಿ,ಶ್ರದ್ಧೆಯಿಂದ!

    20ನೇ ಶತಮಾನದ ವಿಸ್ಮಯ ವಿಜ್ಞಾನಿಯೆಂದೇ ಹೆಸರುವಾಸಿಯಾದ, ಹೆಚ್ಚೇನೂ ವಿದ್ಯಾಭ್ಯಾಸ ಮಾಡದ, ಆಗಿನ ಹಲವಾರು ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶವನ್ನೂ ಪಡೆಯಲು ಆಗದೆ, ಸಾಮಾನ್ಯ ಕಾರಕೂನನಾಗಿ ಕೆಲಸ ಮಾಡುತ್ತಿದ್ದ ಆಲ್ಬರ್ಟ್ ಐನ್ ಸ್ಟೈನ್ ಅಷ್ಟೇ ವಿಚಿತ್ರ ಕುತೂಹಲ ಮೂಡಿಸಿದ್ದ ನನ್ನಲ್ಲಿ. ವಿಜ್ಞಾನದ ವಿದ್ಯಾರ್ಥಿಯಾಗಿದ್ದ ನನಗೆ ಇವನು ಎಲ್ಲಿಯಾದ್ರು ತಗಲಿಕೊಳ್ಳಬಹುದು ಅಂತ ತುಂಬಾ ಕಾತುರತೆ ಇತ್ತು. ಉ ಹೂ ಮಹಾಶಯ ಎಲ್ಲಿಯೂ ಸಿಕ್ಕಲಿಲ್ಲ. ಭಗವದ್ಗೀತೆ ನನ್ನ ಪ್ರೇರಣೆ, ಭಾರತೀಯ ಮೂಲದ ಆಧ್ಯಾತ್ಮಿಕತೆ ನನ್ನ ಜ್ಞಾನದ ಸೆಲೆ ಅಂತ ಹೇಳಿದ್ದಂತೂ ನನ್ನ ಮೂಲಾಧಾರವನ್ನೇ ಕಲಕಿಬಿಟ್ಟಿತ್ತು! Einstain Theory of Relativity,/ General Theory of Relativity ಅಂತ ಹೆಸರಿಸಿದ್ದ E=mc2 ಅನ್ನೋ ಒಂದು ಸಮೀಕರಣವನ್ನು ಬಿಟ್ಟರೆ ಮತ್ತೇನನ್ನೂ ನಾನು ತಿಳಿಯಲಿಲ್ಲ. ಆಗ್ಗೆ ಈ ಸಮೀಕರಣ ತುಂಬಾ ಗೊಂದಲದಿಂದ ಕೂಡಿತ್ತು. ಅತೀ ಚಿಕ್ಕ ಭಾರವಿರುವ ವಸ್ತು, ಭಯಂಕರ ಶಕ್ತಿಯನ್ನು ಹೊಂದಿದೆ ಎಂದು ಹೇಳುವ ಈ ಸಮೀಕರಣದ ಆಧಾರದ ಮೇಲೆಯೇ ಅಣು ಬಾಂಬ್ ತಯಾರಾಗಿದ್ದು, ತನ್ನ ಜೀವಂತ ಅವಧಿಯಲ್ಲಿಯೇ ಆದ ಪ್ರಪಂಚದ ಎರಡನೆಯ ಮಹಾಯುದ್ಧದ ಸಮಯದಲ್ಲಿ ಅಮೆರಿಕಾದ ಪಡೆ ಹೀರೋಷಿಮಾ, ನಾಗಸಾಕಿ ಎಂಬ ಜಪಾನ್ ದೇಶದ ನಗರಗಳ ಮೇಲೆ ಈ ಅಣುಬಾಂಬನ್ನು ಹಾಕಿ, ಅಲ್ಲಿಯ ಮಾನವಕುಲಕ್ಕೆ ವಿನಾಶತೆ ತಂದು, ಸುಮಾರು ಪೀಳಿಗೆಗಳ ಅಂಗವಿಕಲತೆಗೆ ಕಾರಣ ಆಯ್ತು ಅಂತ ತಿಳಿದು ತುಂಬಾ ನೊಂದು ಕೊಂಡನಂತೆ… ಇನ್ಮುಂದೆ ಇದನ್ನು ಪ್ರಪಂಚದ ಶಾಂತಿಗೆ ಮಾತ್ರ ಉಪಯೋಗಿಸಬೇಕು, ವಿನಾಶಕ್ಕೆ ಅಲ್ಲ ಅಂತ ಮುಚ್ಚಳಿಕೆ ಬರೆದನಂತೆ, ನೋಬಲ್ ಶಾಂತಿ ಪಾರಿಷೋತಕ ಪಡೆದನಂತೆ…ಹಾಗೆ ಹೀಗೆ ಅಂತ ಅಲ್ಲಿ ಇಲ್ಲಿ ಕೇಳಿ ತಿಳಿದುಕೊಂಡಿದ್ದೆ ಬಿಟ್ಟರೆ ಪೂರ್ಣ ಗೊತ್ತಿರಲಿಲ್ಲ .

    ಸಾಧಾರಣ ಭಾಷೆಯಲ್ಲಿ E=mc2

    ಇದೇ ಸಮೀಕರಣದ ಮತ್ತೊಂದು ಅರ್ಥವನ್ನು ಸಾಧಾರಣ ಭಾಷೆಯಲ್ಲಿ ಹೇಳುವುದಾದರೆ ಭೂಮಿಯ ಮೇಲೆ ಆಗ ತಾನೇ ಹುಟ್ಟಿದ ಎರಡು ಅವಳಿ ಜವಳಿ ಮಕ್ಕಳಲ್ಲಿ ಒಂದನ್ನು ಭೂಮಿಯ ಮೇಲೆಯೇ ಬಿಟ್ಟು, ಮತ್ತೊಂದನ್ನು ಬಾಹ್ಯಾಕಾಶದಲ್ಲಿ ಬೆಳಕಿನ ವೇಗದಲ್ಲಿ ಕೊಂಡೊಯ್ದು ತಿರುಗಾಡಿಸಿಕೊಂಡು ಮತ್ತೆ ಭೂಮಿಗೆ ಬಂದರೆ, ಭೂಮಿಯ ಮೇಲಿದ್ದ ಮಗುವಿಗೆ 50 ವರ್ಷ ಆಗಿರುತ್ತದೆ, ಬಾಹ್ಯಾಕಾಶದಿಂದ ಬಂದ ಮಗುವಿಗೆ 5 ವರ್ಷ ವಯಸ್ಸಾಗಿರುತ್ತದೆ …… ಇದನ್ನು ಆಗ ಕೇಳಿದವರು ಇವನಿಗೆ ಹುಚ್ಚು ಹಿಡಿದಿರಬೇಕು,ಏನೇನೋ ಮಾತಾಡ್ತಾನೆ ಅಂದಿದ್ದರಂತೆ!

    ಬೆಳಕಿನ ವೇಗ ಅಂದರೆ 3ಲಕ್ಷ ಕಿಲೋಮೀಟರ್ ಪ್ರತಿ ಸೆಕೆಂಡಿಗೆ!ಈ ವೇಗದಲ್ಲಿ ಚಲಿಸುವಾಗ ಕಾಲ ಅಥವಾ time ಕುಗ್ಗುತ್ತದೆ ಅಂತೆ!ಇದನ್ನ Time dilation ಅಂತ ಕರೆದುಕೊಂಡಿದ್ದಾರೆ ವಿಜ್ಞಾನದ ಭಾಷೆಯಲ್ಲಿ. ಭಾಗವತದ ಸಂಖ್ಯೆಗಳ ಆಗಾಧತೆಗೆ ಬೆಚ್ಚಿ ಕೆಲಸಕ್ಕೆ ಬಾರದವರು ನಮಗೂ ಸಂಖ್ಯೆಗಳು ಗೊತ್ತಿವೆ ಅನ್ನೋದನ್ನ ಹೇಳಲಿಕ್ಕೆ ಹುಚ್ಚುಚ್ಚು ಬರೆದುಕೊಂಡಿದ್ದಾರೆ ಅಂತ ಅಂದುಕೊಂಡಿದ್ದ ನನಗೆ ಈ ಬೆಳಕಿನ ವೇಗದ ಸಂಖ್ಯೆ ನೋಡಿ ಮೊದಲಿಗೆ ಬೆಚ್ಚಿ ಬಿದ್ದಿದ್ದೆ. ಅಷ್ಟರಲ್ಲಾಗಲೇ ಬೆಳಕಿನ ಕಿರಣಗಳು ಅಲೆಯ ರೂಪದಲ್ಲಿ ಅಲ್ಲ, ಅಣುಗಳ (photons/particle) ರೂಪದಲ್ಲಿ ಇವೆ ಅಂತ ಸಿದ್ಧಮಾಡಿ ವೇಗವನ್ನು ಪ್ರಮಾಣಿಸಿ ಆಗಿತ್ತು,ಅಷ್ಟೇ ಅಲ್ಲ ಮಾನವ ನಿರ್ಮಿತ ಅಂತಹ ವೇಗವನ್ನು ಸಾಧಿಸಲು ಅಣುಗಳ ಶೋಧನೆಯೂ ನಡೆದು ಯಶಸ್ವಿ ಆಗಿ E=mC^2 ಎನ್ನುವುದು ಅನುಮಾನ ರಹಿತ ಸಿದ್ದಾಂತ ಅಂತ ವಿಜ್ಞಾದ ವಲಯದಲ್ಲಿ ಅಂಗೀಕರಿಸಲ್ಪಟ್ಟಿತ್ತು, ಇಂದಿಗೆ 105 ವರ್ಷಗಳ ಹಿಂದೆ! (ಮಾರ್ಚ್ 20,1916)

    ಅಂದರೆ, ಭಾಗವತದ ಜನರಿಗೆ ಇದರ ಕಲ್ಪನೆ ಸ್ಪಷ್ಟವಾಗಿತ್ತು ಅಂತ ಅನ್ನಿಸುತ್ತದೆ. ಸತ್ಯಯುಗ, ತೇತ್ರಾ,ದ್ವಾಪರ ಕಲಿಯುಗ ಅವುಗಳ ಕಾಲ ಏನೇ ಇರಲಿ, ಭಾಗವತವನ್ನಂತೂ ಐನ್ ಸ್ಟೈನ್ ಹುಟ್ಟುವ (1879-1955) ಮೊದಲಿಗೆ ನಮ್ಮ ನೆಲದಲ್ಲಿ ಬರೆದಿದ್ದಾರೆ ಅನ್ನುವುದಂತೂ ನಿಜ. ಇಂಥಹ ಕ್ಲಿಷ್ಟಕರವಾದ ವಿಷಯಗಳನ್ನು ಬಾಲಿಶ ಅನ್ನಿಸಬಹುದಾದಂತಹ ಕಥೆಗಳು ಅನ್ನುವ ಮಾಧ್ಯಮದ ಮೂಲಕ ನಮ್ಮ ದಾರ್ಶನಿಕರು ನಮಗೆ ಬಿಟ್ಟು ಹೋಗಿರುವುದೂ ಗೋಚರಿಸುತ್ತದೆ. ಇಂತಹ ಸಾವಿರ ಸಾವಿರ ಕಥೆಗಳು ಹೇರಳವಾಗಿ ನಮ್ಮಲ್ಲಿ ದೊರಕುತ್ತಿವೆ, ದಿನವೂ ಒಂದಿಲ್ಲೊಂದು ಕಡೆ ಪಠಣಗೊಳ್ಳುತ್ತಿವೆ.

    ಇನ್ನು ಮುಂದುವರೆದ ಭಾಗವಾಗಿ ಇದೇ ಸಮೀಕರಣದ ತಳಹದಿಯಲ್ಲಿ, ಈ ಬೆಳಕಿನ ವೇಗಕ್ಕಿಂತಲೂ ಹೆಚ್ಚಿನ ವೇಗದೊಂದಿಗೆ ಒಂದು ವೇಳೆ ಪಯಣಿಸುವುದು ಸಾಧ್ಯವಾದರೆ, ಆಗ ನಾವು ಭೂತ ಭವಿಷತ್ತುಗಳನ್ನೂ ಕಾಣಬಹುದು ಅನ್ನುವ ಅಂಶವನ್ನು ಭೌತ ವಿಜ್ಞಾನಿಗಳು ಮುಂದಿಟ್ಟು, ಅದರ ನಿಟ್ಟಿನಲ್ಲಿ ಪ್ರಯತ್ನ ಸಾಗಿಸಿದ್ದಾರೆ. ಇದನ್ನು Time Travelling ಅಂತಾರೆ. ಇದು ಸಿದ್ಧವಾಗುವಾಗ ನಾನು ಇರುತ್ತೇನೋ ಇಲ್ಲವೋ ಗೊತ್ತಿಲ್ಲ ಆದರೆ ನನಗೆ ನನ್ನ ಅಪ್ಪ ಈ ತರಹದ ಸಾಧ್ಯತೆಯನ್ನು (ತೊರವೇ)ರಾಮಾಯಣದಲ್ಲಿ ಇರುವುದನ್ನು ಹೇಳಿದ್ದಾರೆ. ಅದೆಂದರೆ, ಸಕಲ ಲೋಕಗಳನ್ನೂ ಗೆದ್ದಿದ್ದ, ದಿಕ್ಪಾಲಕರನ್ನು ತನ್ನ ಸಿಂಹಾಸನದ ಮೆಟ್ಟಿಲುಗಳಾಗಿ ಮಾಡಿಕೊಂಡಿದ್ದ ಅಜೇಯ ರಾವಣನಿಗೆ ತನ್ನ ಅಂತ್ಯವನ್ನು (ಭವಿಷತ್ತನ್ನು) ತಿಳಿಯುವ ಕುತೂಹಲವಾಗಿ, ಬ್ರಹ್ಮನನ್ನು ಪೀಡಿಸಿ ಕಂಡುಕೊಂಡದ್ದು! ಮಾನವನಾದ ರಾಮ ಎಂಬುವನಿಂದ ನನ್ನ ಅಂತ್ಯ ಬರೆದಿದ್ದಿಯಲ್ಲ ಅಂತ ಬ್ರಹ್ಮನನ್ನು ಲೇವಡಿ ಮಾಡಿದರೂ ಉದಾಸೀನತೆ ಹೊಂದದೆ, ದಶರಥ,ಕೌಶಲ್ಯೆಯರ ಮದುವೆಯೇ ಆಗದಂತೆ ತಡೆದ ಅವನ ವಿಫಲ ಪ್ರಯತ್ನ ! ಕೊನೆಗೆ ಬ್ರಹ್ಮ ಬರಹವನ್ನು ಯಾರಿಂದಲೂ ತಪ್ಪಿಸಲು ಆಗಲ್ಲ ಅನ್ನುವ ಸಂದೇಶ.

    ಬ್ರಹ್ಮ ಬರಹ ಅಥವಾ Destiny

    ಇಂತಹ ಸಂದೇಶ ಪುಟಕ್ಕೊಂದರಂತೆ ನಮ್ಮ ಪುಸ್ತಕಗಳಲ್ಲಿ ಇವೆ. ಹಾ…ಬ್ರಹ್ಮ ಬರಹ ಅಥವಾ Destiny ಅನ್ನೋದು ಪೂರ್ವ ನಿಯೋಜಿತ ಅಂತ ಅನ್ನುವ ಒಂದು ಸಿದ್ದಾಂತವನ್ನೂ ಈಗಿನ ಮುಂದುವರೆದ ಭೌತ ವಿಜ್ಞಾನ ಕಂಡುಕೊಂಡಿದೆಯಂತೆ, ಈ Time Travelling ಮಾಡುವಾಗ!! ಎಂತಹಾ ಆಶ್ಚರ್ಯ! ಇವುಗಳನ್ನೆಲ್ಲ ನಮ್ಮ ಪೂರ್ವಜರು ಸಾವಿರ ಸಾವಿರ ವರ್ಷಗಳ ಹಿಂದೆ ನಮಗೆ ಹೇಳಿದ್ದಾರೆ ಅನ್ನುವುದು ನನಗೆ ಭಯಂಕರ ಕುತೂಹಲ. ಇಂದು ಈ ಲೇಖನ ಬರೆಯುತ್ತಿರುವುದು ಕಾಕತಾಳೀಯ ಅಂತ ನನಗೆ ಅನ್ನಿಸಿದರೂ ಯಾವಾಗಲೋ ಪೂರ್ವ ನಿಯೋಜನೆಯಾಗಿ ನಿರ್ಧರಿತ ವಾಗಿತ್ತಾ?!!…ಗೊತ್ತಿಲ್ಲ.

    ಒಂದು ಸಂಶೋಧನೆಯ ಮೂಲದ ಪ್ರಕಾರ ಈ ಬೆಳಕಿನ ವೇಗಕ್ಕಿಂತಲೂ ಹೆಚ್ಚಿನ ವೇಗ ಇರಬಹುದಾ, ಎಲ್ಲಿರಬಹುದು, ಹೇಗಿರಬಹುದು, ಯಾವುದಿರಬಹುದು ಅನ್ನುವ ಅಂಶವನ್ನು ದಶಕಗಳ ಕಾಲ ಯೋಚಿಸಿ, ವಿಜ್ಞಾನಿಗಳು ಕಡೆಗೆ ನಮ್ಮ ಗ್ರಂಥಗಳಲ್ಲಿ ಇರುವ ಮನೋವೇಗ ಅನ್ನುವ ಶಬ್ದಕ್ಕೆ ತತ್ತರಿಸಿ ಹೋಗಿದ್ದಾರಂತೆ! ಹೌದು ಮನಸ್ಸಿನ ವೇಗ, ಸಾಮರ್ಥ್ಯದ ಬಗ್ಗೆ ಸಾಕಷ್ಟು ನಿದರ್ಶನ ನಮ್ಮಲ್ಲಿದೆ.

    ಭೃಗು ಮಹರ್ಷಿ ಅಂತೂ ವೈಕುಂಠಕ್ಕೆ ಸಶರೀರನಾಗಿ ಹೋಗಿ ವಿಷ್ಣುವಿನ ಎದೆಗೆ ಕಾಲಿಂದ ಒದ್ದು, ತಿರುಪತಿಯ ಶ್ರೀನಿವಾಸನ ವೃತ್ತಾಂತಕ್ಕೆ ಕಾರಣನಾಗುತ್ತಾನೆ. ಬೆಳಕಿನ ವೇಗವನ್ನು ದಾಟಲು ಅಸಾಧ್ಯ ಅಂತ ಗೆರೆ ಎಳೆದಿದ್ದ ಭೌತ ವಿಜ್ಞಾನ, ಮತ್ತೆ ವಿಸ್ತರಿಸಿಕೊಂಡಿದ್ದೇ ಅದಕ್ಕಿಂತಲೂ ಹೆಚ್ಚಿನ ವೇಗವನ್ನು ನಮ್ಮ ನೆಲದ ಹಿರಿಯರು ಮನೋವೇಗ ಅಂತ ಹೇಳಿದ್ದರಿಂದ. ಇದರ ಸಾಧ್ಯತೆಯನ್ನು ಭೌತಿಕವಾಗಿ ಕಂಡುಕೊಳ್ಳಲು ನಮ್ಮ ಯೋಗ, ಧ್ಯಾನಗಳ ಮೊರೆ ಹೋಗಿದ್ದಾರಂತೆ! ಇದರಲ್ಲಿ ಜಪಾನ್ ವಿಜ್ಞಾನಿಗಳು ಅಗ್ರ ಸ್ಥಾನದಲ್ಲಿದ್ದಾರಂತೆ. ಆದರೆ ನಾವುಗಳು ಮಾತ್ರ ಚೀನಾ ಸಾಮಾನುಗಳನ್ನು ಬಹಿಷ್ಕರಿಸುವುದರ,ಉಪಯೋಗಿಸುವ ಬಗ್ಗೆ ಗಹನ ಚಿಂತೆಯಲ್ಲಿದ್ದೇವೆ.

    ಐನ್ ಸ್ಟೈನ್ ತನ್ನ ಸಂಶೋಧನೆಯ ಕುತೂಹಲವನ್ನು 16ನೇ ವಯಸ್ಸಿನಿಂದ ಶುರು ಮಾಡ್ತಾನೆ. ಅವನಿಗೆ ಐಸಾಕ್ ನ್ಯೂಟನ್ ಕಂಡು ಹಿಡಿದಿದ್ದ ಗುರುತ್ವಾಕರ್ಷಣೆ ಏನೇನನ್ನೋ ಯೋಚಿಸುವಂತೆ ಮಾಡಿರುತ್ತದೆ ಮತ್ತು ಪ್ರೇರಣೆ ಆಗಿರುತ್ತದೆ. ಅಷ್ಟೇ ಅಲ್ಲ ನ್ಯೂಟನ್ ಹೇಳಿದ ಗುರುತ್ವಾಕರ್ಷಕ ನಿಯಮದಂತೆ ಸಾಧಿಸಲಾಗದ ಮೆರ್ಕ್ಯುರಿ ಎಂಬ ಗ್ರಹದ ಸೂರ್ಯನ ಸುತ್ತಲಿನ ಪಥ ಚಲನೆಯ ಆಕಾರವನ್ನು ಇವನು ಸರಿಯಾಗಿ ಹೇಳುತ್ತಾನೆ. ಅವನ ಮೂಲ ವಿಷಯ time, space ಅಂದರೆ ಕಾಲ ಮತ್ತು ಆಕಾಶ. ಅಲ್ಲಿಯತನಕ x,y,z ಅಂತ ಆಕಾಶದಲ್ಲಿ(space) ಕರೆದುಕೊಂಡ 3 ಆಯಾಮಗಳು (dimensions) ಮಾತ್ರ ಇದ್ದವು. ಅವುಗಳ ಜೊತೆ ಕಾಲವೂ (time) ಒಂದು ಆಯಾಮ ಅಂತ ಮೊದಲಿಗೆ ಹೇಳಿದ್ದೇ ಐನ್ ಸ್ಟೈನ್. ಭೂಮಿಯ ತಿರುಗುವಿಕೆ, ಮತ್ತು ಸೂರ್ಯನ ಸುತ್ತುವ ಪರಿಭ್ರಮಣೆಯ ವೇಗಗಳು ಮತ್ತು ಅವುಗಳ ಪ್ರಭಾವ ಯಾವ ರೀತಿಯಲ್ಲಿ ಭೂಮಿಯ ಮೇಲಿನ ವಸ್ತುಗಳ ವೇಗವನ್ನು, ಆಕಾಶದಲ್ಲಿ ಹಾರಾಡುವ ವಸ್ತುಗಳ ವೇಗಗಳನ್ನು ತನ್ನ ಕಕ್ಷೆಯೊಳಗೆ ಹಿಡಿದಿಟ್ಟಿದೆ ಅನ್ನುವುದನ್ನು ಆಸಕ್ತಿಯಿಂದ ಅಭ್ಯಸಿಸಿ, ಪ್ರಪಂಚ ಅಲ್ಲಿಯವರೆಗೆ ಕಂಡು ಕೇಳರಿಯದ ಸಿದ್ದಾಂತ ಮಂಡಿಸುತ್ತಾನೆ ಮತ್ತು ಇಂದಿನ ಎಲ್ಲ ಅದ್ಭುತ ಅವಿಷ್ಕಾರಗಳಿಗೆ ಮೂಲನಾಗುತ್ತಾನೆ.

    ಭಾರೀ ಕುತೂಹಲ ಅಂದರೆ ನಮ್ಮ ದಾರ್ಶನಿಕರು time ನ್ನು ಕಾಲ/ ಶಿವ ತತ್ವಅಂತಲೂ space ನ್ನು ವಿಷ್ಣು ತತ್ವ ಅಂತಲೂ ಬಹಳ ಹಿಂದೆಯೇ ಹೇಳಿ ಲೆಕ್ಕವಿಲ್ಲದಷ್ಟು ಪುರಾಣಗಳಲ್ಲಿ ಎಷ್ಟೋ ವಿಷಯಗಳನ್ನು ಕಥೆಗಳ ರೂಪದಲ್ಲಿ ಬರೆದಿದ್ದಾರೆ. ದುರ್ದೈವ ಅಂದರೆ ನಮಗೆ ಅದರಲ್ಲಿ ಏನು ಹೇಳಿದ್ದಾರೆ ಅಂತಾನೇ ಗೊತ್ತಾಗದೇ ಇರೋದು, ಇಂತಹ ಅವಿಷ್ಕಾರಗಳು ಪ್ರಪಂಚದ ಯಾವುದಾದ್ರು ಮೂಲೆಯಿಂದ ಬಂದಾಗ, ತಲೆಯಲ್ಲಿನ ದೀಪ ಒಮ್ಮೆಲೇ ಬೆಳಗಿದಂತೆ ಅಯ್ಯೋ ಇದು ನಮ್ಮ ಗ್ರಂಥಗಳಲ್ಲಿ ಇದೆಯಲ್ಲಾ ಅಂತ ಹೇಳಿ, ನಗೆಪಾಟಲಿಗೆ ಕಾರಣ ಆಗುವುದು! ಅದೇಕೆ ನಮ್ಮ ಗ್ರಂಥದಲ್ಲಿರುವುದು ಏನು ಅಂತ ನಮಗೆ ತಿಳಿಯುವುದಿಲ್ಲ? ನಾವು ಬರೀ ಗ್ರಂಥ ಪಾಲಕರಾ?ಅಥವಾ ಅದರಲ್ಲಿರುವುದಕ್ಕೆ ಬೇರೆಯಾಗಿ ನಾವು ಅರ್ಥೈಸಿ, ವಿಷಯ ಪಲ್ಲಟ ಮಾಡುವುದಕ್ಕೆ ಏನಾದ್ರು ಗಹನ ಕಾರಣ ಇದೆಯಾ? ಇವು ಗಂಭೀರ ಅಧ್ಯಯನದ ವಿಷಯ ಈಗಲಾದ್ರೂ ಆಗಬೇಕು.

    E=mc2 ಅನ್ನುವ ಸಮೀಕರಣದಲ್ಲಿ E ಅಂದ್ರೆ ಶಕ್ತಿ, m ಅಂದ್ರೆ ವಸ್ತುವಿನ ಭಾರ, c ಅಂದ್ರೆ ಬೆಳಕಿನ ವೇಗ. ಪ್ರತಿ ವಸ್ತುವಲ್ಲೂ ಅಗಾಧ ಶಕ್ತಿ ಇರುವುದನ್ನು ಇದು ಪ್ರತಿಪಾದಿಸುತ್ತದೆ. ನಮ್ಮವರು ಈ ಶಕ್ತಿಯನ್ನು ಎಲ್ಲೆಡೆಯಲ್ಲಿ ಕಂಡುಕೊಂಡು ಪ್ರತಿ ಚರಾಚರ ವಸ್ತುಗಳನ್ನು ನಮ್ಮಲ್ಲಿ ಪೂಜಿಸಲ್ಪಟ್ಟಿರುವುದು ಮತ್ತೊಂದು ಬಗೆಯ ವ್ಯಂಗ್ಯಕ್ಕೆ ಕಾರಣವಾಗಿದೆ. ವೇಗಕ್ಕೆ ಗಾಳಿ ರೂಪಕ ಕೊಟ್ಟು ಅದಕ್ಕೂ ಒಂದು ತತ್ವ ರೂಪಿಸಿದ್ದಾರೆ. ಐನ್ ಸ್ಟೈನ್ ಹೇಳಿದ ಮೇಲೆ 20 ವರ್ಷಗಳ ತನಕ ಅವನು ಹೇಳಿದ್ದು ಯಾರಿಗೂ ಅರ್ಥ ಆಗಿಲ್ಲ ಅಂದ್ರೆ ಇಂತಹ ವಿಷಯಗಳನ್ನು ಎಷ್ಟೋ ಹಿಂದೆ ಹೇಳಿ,ಮುಂದಕ್ಕೆ ಜೋಪಾನವಾಗಿ ಇಡೋದು ಎಂತಹ ಕಷ್ಟದ ಕೆಲಸ ಯೋಚಿಸಿ. ಅದನ್ನು ನಮ್ಮ ದಾರ್ಶನಿಕರು ಮಾಡಿದ್ದಾರೆ. ಆದರೆ ನಮಗೆ ಜೋಪಾನವಾಗಿ ಇಟ್ಟುಕೊಳ್ಳುವ ಕೆಲಸಕ್ಕಷ್ಟೇ ಸೀಮಿತ ಗೊಳಿಸಿದರಾ?!

    By JTBarnabas – Own work, CC BY-SA 3.0, https://commons.wikimedia.org/w/index.php?curid=25129322

    ಇದನ್ನು ಐನ್ ಸ್ಟೈನ್ ಕಂಡುಕೊಂಡು ಭಾರತದ ಅಧ್ಯಾತ್ಮಿಕತೆಗೆ ತನ್ನ ಪರಮ ಗೌರವವನ್ನು ಸೂಚಿಸಿದನಾ? ಈ ನಿಟ್ಟಿನಲ್ಲಿ ಅವನೊಡನೆ ಮಾತಾಡಿ ಅನಿಸಿಕೆಗಳನ್ನು ಸ್ಪಷ್ಟವಾಗಿ ದಾಖಲಿಸುವ ವ್ಯವಧಾನ ನಮ್ಮ ಭಾರತೀಯರಿಗೆ ಇಲ್ಲದೇ ಹೋಗಿದ್ದು ಒಂದು ದುರಂತವೇ. ಅವನು parallel universe ಅಂದ್ರೆ ನಮ್ಮಂತಹ ಸುಮಾರು ವಿಶ್ವಗಳು ಇರುವ ಬಗ್ಗೆ ಮಾತಾಡುತ್ತಾನೆ. ನಮ್ಮವರು ಅದನ್ನೇ ಬಹು ಲೋಕಗಳು ಅಂದು ಪುರಾಣಗಳನ್ನು ಪುಟಗಟ್ಟಲೆ ಬರೆದು, ಕೋಟಿ ಸೂರ್ಯರ ಬಗ್ಗೆ ಹೇಳಿದುದನ್ನು ಅವನಿಗೆ ಅವನ ಭಾಷೆಯಲ್ಲಿ ಮನದಟ್ಟು ಮಾಡಿದ್ದರೆ, ನಮ್ಮ ಜೀವಿತ ಅವಧಿಯಲ್ಲೇ ಕಾಲದ ಹಿಂದೆ, ಮುಂದೆ ಅಡ್ಡಾಡಬಹುದಿತ್ತೇನೋ?(Time travelling) ಈಗ ನಮ್ಮ ಪುರಾಣದ ಎಲ್ಲ ವಿಷಯಗಳನ್ನೂ ಮುಂದುವರೆದ ವಿಜ್ಞಾನ ಅನ್ನಿಸಿಕೊಂಡಿರುವುದು ಭಾರೀ ಶ್ರದ್ಧೆಯಿಂದ ಅಭ್ಯಾಸ ಮಾಡುತ್ತಿದೆ! ನಮ್ಮಲ್ಲಿ ಮಾತ್ರ ಆಸಡ್ಡತೆಯ ಆಗರ ಆಗುತ್ತಿರುವುದು ದುರಂತ.

    ಧಾರ್ಮಿಕ ಗ್ರಂಥಗಳು ಜ್ಞಾನದ ಭಂಡಾರಗಳು

    ಇಲ್ಲಿ ನಾವು ನಮ್ಮ ಪುರಾಣಗಳಿಗೆ ಇಲ್ಲದ ಅಪವಾದಗಳನ್ನು, ಸಲ್ಲದ ಟೀಕೆಗಳನ್ನು ಬೆಳಗಾದ್ರೆ ಮಾಡುತ್ತಾ ಅಥವಾ ಅರ್ಥವಾಗದ ಭಾಷೆಯಲ್ಲಿ ಅವುಗಳನ್ನು ವ್ಯಾಖ್ಯಾನಿಸುತ್ತಾ ಮೂರ್ಖರಂತೆ ವರ್ತಿಸುತ್ತಿದ್ದೇವೆ. ಅದರಲ್ಲಿರುವುದು ದೈವವಾಣಿ . ಶ್ರದ್ಧೆ, ನಂಬಿಕೆಯಿಂದ ಕೇಳಬೇಕು, ಕೇಳಿ ವೈಕುಂಠದಲ್ಲಿ, ಕೈಲಾಸಗಳಲ್ಲಿ ಸೇರಿಕೊಳ್ಳಬೇಕು ಎಂಬಂತಹ ಷರಾಗಳನ್ನು ಮಹಾಪ್ರಸಾದವೆಂಬಂತೆ ತಲೆ ತಲಾಂತರದಿಂದ ಕೇಳಿಸಿಕೊಂಡು, ಅವು ಬೇರೆ ಯಾವುದೋ ಲೋಕದ ವಿಷಯಗಳು, ಇಲ್ಲಿಯ ಜೀವನಕ್ಕಲ್ಲ ಅನ್ನುವುದನ್ನು ನಮ್ಮ ಜೀವತಂತುಗಳಲ್ಲಿ ತುಂಬಿ ಬಿಟ್ಟಿದ್ದಾರೆ. ಪುರಾಣಗಳ ವಠಾರಗಳಿಂದ ಯಾವೊಬ್ಬ ಐನ್ ಸ್ಟೈನ್ ಏಕೆ ಹೊರಬರಲಿಲ್ಲ ಅಂತ ನಾನು ಬಹು ನೋವಿನಿಂದ ಕೇಳುತ್ತೇನೆ. ನಮ್ಮ ಹಿರಿಯರು ಶ್ರದ್ಧೆ ಇರಬೇಕು ಅಂದರೇ ಹೊರತು ಅಂಧ ಶ್ರದ್ಧೆ ಇರಬೇಕು ಅನ್ನಲಿಲ್ಲ. ನಂಬಿಕೆ ಇಡಿ ಅಂದರೇ ವಿನಃ ಮೂಢನಂಬಿಕೆ ಇಡಿ ಅನ್ನಲಿಲ್ಲ. ಧಾರ್ಮಿಕ ಗ್ರಂಥಗಳು ಜ್ಞಾನದ ಭಂಡಾರಗಳು, ಅವುಗಳ ಜ್ಞಾನವನ್ನು ಸರಿಯಾದ ಅವುಗಳ ದಾರಿಯಲ್ಲಿ ಅರಿತು, ಉಪಯೋಗಿಸಿಕೊಳ್ಳು ಬೇಕು ಅಂತ ನಾವು ಅರಿಯದ ಹೊರತು ಅವು ಬಾಲಿಶವಾಗಿಯೇ ಕಾಣುವುದು. ಅಸಡ್ಡೆಯ ಗುಡ್ಡೆಗಳಾಗಿ ಅಪ್ರಯೋಜಕ ಎನಿಸುವುದು. ಅಪ್ಪ ನನಗೆ ಯಾವಾಗಲೂ ಹೇಳುತ್ತಿದ್ದರು…ಮೇಷ್ಟ್ರ ಮಗ ನೀನು ಅಂತ ಅಹಂ ಇರಬಾರದು, ಬರಬಾರದು… ಮೇಷ್ಟ್ರ ಮಗನಾದಾಕ್ಷಣ ಆಗಲೀ, ಎಲ್ಲಾ ಪುಸ್ತಕಗಳು ನಿನ್ನಲ್ಲಿ ಇವೆ ಅಂತಾಗಲೀ ವಿದ್ಯೆ ಬರಲ್ಲ. ಪುಸ್ತಕಗಳೇ ಇಲ್ಲದವನೂ ಬುದ್ದಿವಂತ ಆಗಿರುತ್ತಾನೆ. ನಿನಗಿಂತಲೂ ಸಮರ್ಥನಾದವನ ಹತ್ತಿರ ಪುಸ್ತಕ ಇಲ್ಲದಿದ್ದರೂ ನಿನ್ನ ಪುಸ್ತಕ ಕೊಟ್ಟು ಅವನಿಂದ ಅರ್ಥೈಸಿಕೊಳ್ಳಬೇಕು. ಅವನ ಕೈ ಕೊಳಕಾಗಿದೆ, ಅವನು ಮುಟ್ಟಿದರೆ ನನ್ನ ಪುಸ್ತಕ ಮಾಸಿ, ಅಪವಿತ್ರ ಆಗುತ್ತದೆ ಅಂತ ಯೋಚಿಸುವುದು ಮೂರ್ಖರ ಲಕ್ಷಣ ಮತ್ತು ಪುಸ್ತಕ, ಅದರಲ್ಲಿರುವುದು ಏನು ಅಂತ ಅರಿಯದ ಅವಿವೇಕಿಗಳು. ಅರ್ಥದ ಅಧ್ಯಯನ ಕಾಲ ಕಾಲಕ್ಕೆ ಇರಬೇಕು. ಓದನ್ನು ಜೀರ್ಣಿಸಿಕೊಳ್ಳಬೇಕೇ ಹೊರತು ಪರೀಕ್ಷೆಗಳಲ್ಲಿ ವಾದ ಮಾಡಿ, ವಾಂತಿ ಮಾಡಿ ನಿರಾಯಾಸವಾಗಬಾರದು…ಶಂಕರರಿಗೆ ತಾನು ಬೋಧಿಸಿದ್ದು, ಅರಿತದ್ದು ಏನು ಅಂತ ದಿವ್ಯ ಜ್ಞಾನ ತಿಳಿಸಿದವನು ಒಬ್ಬ ನಿಕೃಷ್ಟನೇ…..ಅಂತ.

    ಧರ್ಮವನ್ನು ಮೀರಿ ಮಾನವನ ಕಲ್ಯಾಣಕ್ಕೆ ಕಂಡುಕೊಂಡಂತಹ ಸತ್ಯಗಳನ್ನು ನಮ್ಮ ದಾರ್ಶನಿಕರು ತಮ್ಮ ಹೆಸರುಗಳನ್ನು ಎಲ್ಲಿಯೂ ನಮೂದಿಸದೆ ನಮಗೆ ಕೊಟ್ಟು ಹೋಗಿದ್ದಾರೆ. ಹೆಸರನ್ನು ನಮೂದಿಸಿದರೆ ಆ ಹೆಸರನ್ನು ದ್ವೇಷಿಸುವ ತಮ್ಮ ವೈರಿಗಳು ಎಲ್ಲಿ ಇಂತಹ ಸತ್ಯಗಳಿಂದ ವಂಚಿತರಾಗುತ್ತಾರೋ ಅನ್ನುವ ಅವರ ಕಳಕಳಿ ದೈವತ್ವವೇ ಸರಿ. ಈಗಿನ ನವೀನ ಭೌತ ವಿಜ್ಞಾನ Quantum Physics /Mechancis ಅಂತ ಕರೆಯಿಸಿಕೊಂಡು ತನ್ನ ಕಾರ್ಯವನ್ನು ಅತ್ಯಾಧುನಿಕ, ಅತೀ ವಿಚಿತ್ರ ಅನ್ನುವಂತಹ ಸೂಕ್ಷ್ಮ ವಿಷಯಗಳ ಮೇಲೆ ಶುರು ಮಾಡಿದೆ. ಅದನ್ನು ನೋಡಿದರೆ ನಮ್ಮ ಆರು ಷಟ್ ದರ್ಶನಗಳನ್ನು, ಹದಿನೆಂಟು ಪುರಾಣಗಳನ್ನು, ಮಹಾಕಾವ್ಯಗಳನ್ನು ಹೊಸ ಭಾಷೆಯಲ್ಲಿ ನೋಡುತ್ತಿರುವಂತೆ ಭಾಸವಾಗುತ್ತದೆ. ಸಂಬಂಧ ಪಟ್ಟ ಆಧ್ಯಾತ್ಮಿಕ ಚಿಂತನೆಯ ಪ್ರಾಜ್ಞರು , ಅದಕ್ಕೆಂದೇ ಇರುವ ವೇದ ವಿದ್ಯಾಲಯಗಳು ವಿಶಾಲ ಹೃದಯಿಗಳಾಗಿ ಅವರೊಡನೆ ಕೈಜೋಡಿಸುವ ಕೆಲಸವನ್ನು ಆದಷ್ಟು ಶೀಘ್ರವಾಗಿ ಮಾಡಿದರೆ ಮಾನವ ಕುಲದ ಕಲ್ಯಾಣ ಭೂಮಿಯಲ್ಲೇ ಆಗಬಹುದು ಅಂತ ನನ್ನ ಅನಿಸಿಕೆ.

    आ: नो भद्रा: क्रतवो यन्तु विश्वत:
    ऋग्वेद 1-89-1
    ಒಳ್ಳೆಯ ಜ್ಞಾನ ನಮಗೆ ಎಲ್ಲ ಕಡೆಯಿಂದ ಹರಿದು ಬರಲಿ.
    ಋಗ್ವೇದ 1-89-1

    ಚಿತ್ರಗಳು: pexels ಮತ್ತು ವಿಕಿಪಿಡಿಯಾ

    IPO ದಲ್ಲಿ ಭಾಗವಹಿಸುವ ಮುನ್ನ ಗಮನಿಸಬೇಕಾದ ಅಂಶಗಳು

    ಇತ್ತೀಚೆಗೆ ತಾಂತ್ರಿಕತೆ, ಆರ್ಥಿಕತೆ, ಚಿಂತನೆಗಳು ಹೆಚ್ಚಿನ ಬದಲಾವಣೆಗಳನ್ನು ಕಂಡಿವೆಯಾದರೂ ಜನಸಾಮಾನ್ಯರಾದಿಯಾಗಿ ಎಲ್ಲರೂ ಒಂದಲ್ಲಾಒಂದು ರೀತಿಯ ವ್ಯಸನಿಗಳಾಗಿ, ಮನಸ್ಸಿನ ನೆಮ್ಮದಿ ಕಳೆದುಕೊಂಡಿರುತ್ತಾರೆ. ಸರಳೀಕೃತ ತೆರಿಗೆ ಪದ್ದತಿ G S T ಜಾರಿಯಾದರೂ, N S T ಗಾಗಿ ಪರಿತಪಿಸುತ್ತಿದ್ದೇವೆ. ಏನದು N S T? . N S T ಎಂದರೆ ನೆಮ್ಮದಿ, ಸಂತೋಷ, ತೃಪ್ತಿ.

    ನಾವು ಸಾಕ್ಷರತೆ ಮತ್ತು ಆರ್ಥಿಕ ಸಾಕ್ಷರತೆ ಎರಡು ಒಂದೇ ನಾಣ್ಯದ ಎರಡುಮುಖಗಳು ಎಂಬುದನ್ನು ಮರೆತು ಕೇವಲ ಸಾಕ್ಷರತೆಗೆ ಹೆಚ್ಚು ಆದ್ಯತೆ ನೀಡಿದ ಕಾರಣ ಆರ್ಥಿಕ ಸಾಕ್ಷರತೆಯು ತುಕ್ಕು ಹಿಡಿಯುವ ಮಟ್ಟಕ್ಕೆ ಹೋಗಿ ಸಂತೋಷ, ನೆಮ್ಮದಿ, ತೃಪ್ತಿಗಳನ್ನು ನಿಶ್ಚೇಷ್ಟಿತಗೊಳಿಸಿದೆ. ಸಾಕ್ಷರತೆಯ ಮಟ್ಟವನ್ನು ಸುಧಾರಿಸಿಕೊಂಡಿರುವ ನಾವುಗಳು ಈಗಲಾದರೂ ಆರ್ಥಿಕ ಸಾಕ್ಷರತೆಯತ್ತ ಗಮನಕೊಡದಿದ್ದಲ್ಲಿ ಹೆಚ್ಚಿನ ಅಪಾಯ ಎದುರಿಸಬೇಕಾಗುವುದು.

    ಮನರಂಜನೆ, ಕ್ರೀಡಾ ಚಟುವಟಿಕೆ ಗಳಿಗೆ ನೀಡುವ ಮಟ್ಟದ ಆದ್ಯತೆಯನ್ನು ಸಹ ನಾವು ಆರ್ಥಿಕ ಸಾಕ್ಷರತೆಗೆ ನೀಡುತ್ತಿಲ್ಲ. ಆರ್ಥಿಕ ಸಾಕ್ಷರತೆಯು ತೀರಾ ಕಡೆಗಣಿಸಲ್ಪಟ್ಟಿದೆ. ಈಗ ಪ್ರಕಟವಾಗಿರುವ 149 ದೇಶಗಳ ‘ವರ್ಲ್ಡ್ ಹ್ಯಾಪಿನೆಸ್ಸ್ ಇಂಡೆಕ್ಸ್’ ನಲ್ಲಿ 139 ನೇ ಸ್ಥಾನದಲ್ಲಿದ್ದೇವೆ. ಹಣ ಮತ್ತು ಸ್ವತ್ತು ಸಂಪಾದನೆಯನ್ನೇ ಗುರಿಯಾಗಿಸಿಕೊಂಡಿರುವ ನಮಗೆ, ನೆಮ್ಮದಿ, ಸಂತೋಷ, ತೃಪ್ತಿಯನ್ನು ಕಳೆದುಕೊಳ್ಳುವಂತಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಸಾಧನೆಯನ್ನು ಮಾಡುತ್ತಿರುವ ಈಗಿನ ಪೀಳಿಗೆಯು ಹಣಕಾಸಿನ ನಿರ್ವಹಣೆಯ ಕೌಶಲ್ಯದಿಂದ ವಂಚಿತರಾಗಿದ್ದಾರೆ ಎನ್ನಬಹುದು. ಈಗಿನ ಶಾಲಾ ಕಾಲೇಜುಗಳಲ್ಲಿ ಬೋಧಿಸುವ ವಿಚಾರಗಳಿಗೂ, ದಿನನಿತ್ಯದಲ್ಲಾಗುತ್ತಿರುವ ಅಳವಡಿಕೆಗಳಿಗೂ ತೀರಾ ಬಿನ್ನತೆಯಿದೆ. ಅಂದರೆ Theory ಯೇ ಬೇರೆ, practical ಜೀವನದ ಶೈಲಿಯೇ ಬೇರೆ. ಹಾಗಾಗಿ ಆರ್ಥಿಕ ಅನಕ್ಷರತೆ ಹೆಚ್ಚಾಗುತ್ತಿದೆ.

    ಎಲ್ಲರೂ ಸುಶಿಕ್ಷಿತರಾಗಬೇಕೆಂಬ ಜಾಗೃತಿ ಬೆಳೆದು ಬಡವ ಬಲ್ಲಿದರೆನ್ನದೆ ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುತ್ತಿರುವ ಬೆಳವಣಿಗೆಯು ಸ್ವಾಗತಾರ್ಹವಾಗಿದೆ. ಜೀವನದಲ್ಲಿ ಏನಾದರೂ ಸಾಧಿಸಬೇಕಾದರೆ ಶಿಕ್ಷಣದ ಪಾತ್ರ ಅತಿ ಮುಖ್ಯ ಎಂಬುದು ಮನದಟ್ಟಾಗಿರುವ ಕಾರಣ ಎಲ್ಲರ ಚಿತ್ತ ಶಿಕ್ಷಣ ಪಡೆಯುವತ್ತ ತಿರುಗಿದೆ. ಆದರೆ ನಾವು ಶಿಕ್ಷಣವನ್ನು ಕೇವಲ ನಮ್ಮ ವೃತ್ತಿ ಅಥವಾ ನೌಕರಿಗಾಗಿ ಪಡೆಯುವ ಸ್ಪರ್ಧಾತ್ಮಕ ಚಿಂತನೆಯಲ್ಲಿದ್ದೇವೆ. ತನ್ಮೂಲಕ ನಾವು ಹಣ ಸಂಪಾದನೆಯನ್ನು ಮಾಡುವತ್ತ ನಮ್ಮ ಧ್ಯೇಯವನ್ನು ಕೇಂದ್ರೀಕರಿಸಿದ್ದೇವೆ. ಆಸ್ತಿ, ಹಣವೇ ಸರ್ವಸ್ವ ಎಂಬ ಚಿಂತನೆಯನ್ನು ನಮ್ಮ ಕಣ ಕಣಗಳಲ್ಲೂ ಬೆಳೆಸಿಕೊಂಡಿದ್ದೇವೆ, ವೃತ್ತಿಪರತೆ, ಭಾಧ್ಯತೆ, ಬಧ್ದತೆಗಳನ್ನು ಕೈಬಿಟ್ಟಿದ್ದೇವೆ. ಈ ಚಿಂತನೆಯೇ ನಮ್ಮ ಭವಿಷ್ಯಕ್ಕೆ ಮಾರಕ ಎಂಬುದನ್ನು ಗಮನಿಸುತ್ತಿಲ್ಲ.

    ಶೇ.20. 30, 40. 60, ಮುಂತಾದ ವಿವಿಧ ಪ್ರಮಾಣದ ಡಿಸ್ಕೌಂಟ್ ಗೆ ನಾವು ಮಾರುಹೋಗಿ ಖರೀದಿಗೆ ಮುಂದಾಗುತ್ತೇವೆ. ಅಷ್ಟರ ಮಟ್ಟಿಗೆ ಡಿಸ್ಕೌಂಟ್ ನಲ್ಲಿ ಮಾರಾಟಮಾಡುವ ಸಾಮಾಗ್ರಿ ನಿಜವಾಗಿಯೂ ಖರೀದಿಗೆ ಅರ್ಹವೇ? ಇಷ್ಟರ ಮಟ್ಟಿಗೆ ಡಿಸ್ಕೌಂಟ್ ನೀಡುವ ಸಾಮಾಗ್ರಿಯ ಗುಣಮಟ್ಟವು ಕಳಪೆಯೇ? ಅಥವಾ ಅದರ ಬೆಲೆಯನ್ನು ಅತಿಯಾಗಿ ಹೆಚ್ಚಿಸಿ ಡಿಸ್ಕೌಂಟ್‌ ನೀಡಲಾಗುತ್ತಿದೆಯೇ ಎಂಬ ಅಂಶಗಳನ್ನು ಗಮನಿಸದೆ ಕೇವಲ ಡಿಸ್ಕೌಂಟ್‌ ಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಇದು ಕಳಪೆ ಸಾಮಾಗ್ರಿಗಳಿಗೆ, ಅನರ್ಹ ಪದಾರ್ಥಗಳಿಗೂ ಅರ್ಹ ಬೆಲೆಯನ್ನು ಕೊಟ್ಟಂತಾಗುತ್ತದೆ. ಹಾಗಾಗಿ ಪ್ರದರ್ಶಿಸಿದ ಡಿಸ್ಕೌಂಟ್‌ ಗಳು ಸಹಜವೇ ಎಂಬುದನ್ನು ದೃಢೀಕರಿಸಿಕೊಂಡು ನಿರ್ಧರಿಸಬೇಕು.

    ಷೇರುಪೇಟೆಯ ದೃಷ್ಟಿಯಿಂದ ನೋಡಿದಲ್ಲಿ ಇತ್ತೀಚಿನ ದಿನಗಳಲ್ಲಿ, ಪೇಟೆಗಳು ಸರ್ವಕಾಲೀನ ಗರಿಷ್ಠದ ಹಂತದಲ್ಲಿರುವ ಕಾರಣ, ಜನಸಾಮಾನ್ಯರಲ್ಲಿ ಮೂಡಿರುವ ತೇಜಿ ಚಿಂತನೆಗಳು, ವಿಶ್ಲೇಷಕರ ಸಕಾರಾತ್ಮಕ ಅಭಿಪ್ರಾಯಗಳಿಗೆ ಮನ್ನಣೆ ನೀಡಿ ತೇಲಿಬರುತ್ತಿರುವ ಅನೇಕ ಐ ಪಿ ಒಗಳು ವಿಜೃಂಭಣೆಯ ಯಶಸನ್ನು ಕಾಣುತ್ತಿವೆ. ಸೋಜಿಗವೆಂದರೆ ಕಂಪನಿಗಳು ತೇಲಿಬಿಡುವ ವಿತರಣೆಯ ದರವು ಯೋಗ್ಯವೇ ಎಂಬುದರ ಚಿಂತನೆಯನ್ನೂ ಸಹ ಮಾಡುವ ಗೋಜಿಗೆ ಹೋಗದೆ, ಹರಿದಾಡುತ್ತಿರುವ ಅಭಿಪ್ರಾಯಗಳಿಗೆ ಹೆಚ್ಚು ಆಧ್ಯತೆ ನೀಡುತ್ತೇವೆ.

    ಮೂಲಭೂತಾಂಶಗಳನ್ನು ಲೆಕ್ಕಿಸದೆ ಕೇವಲ ಹೊರಗಿನ ಸುದ್ಧಿಗಳಿಗೆ ಒತ್ತು ನೀಡುವುದರಿಂದ ಬಂಡವಾಳ ಸುರಕ್ಷಿತವೂ ಅಲ್ಲ, ಇಂತಹ ಹೂಡಿಕೆಯು ದೀರ್ಘಕಾಲೀನದಲ್ಲಿ ಲಾಭದಾಯಕವೂ ಅಲ್ಲ. ಕೇವಲ ಅನಧಿಕೃತವಾದ ಗ್ರೇ ಮಾರ್ಕೆಟ್‌ ಪ್ರೀಮಿಯಂ ನ್ನು ಆಧರಿಸಿ, ಪ್ರವರ್ತಕರು, ಹೂಡಿಕೆದಾರರನ್ನಾಧರಿಸಿ ನಿರ್ಧರಿಸುವುದು ತಾತ್ಕಾಲಿಕವಾಗಿದ್ದು, ಅಲಾಟ್ಮೆಂಟ್‌ ಬಂದಾಕ್ಷಣ ಪೇಟೆ ಉತ್ತಮ ಫಲ ನೀಡುವಂತಿದ್ದರೆ ನಿರ್ಗಮಿಸಿದಲ್ಲಿ ಮಾತ್ರ ಹೂಡಿಕೆ ಮಾಡಿದ ಬಂಡವಾಳ ಸ್ವಲ್ಪ ಮಟ್ಟಿನ ಸುರಕ್ಷತೆ ಕಾಣಬಹುದು.

    ಇತ್ತೀಚೆಗೆ ಪೇಟೆ ಪ್ರವೇಶಿಸಿ ಆರಂಭ ಶೂರತ್ವವನ್ನು ಪ್ರದರ್ಶಿಸಿ ಕುಸಿದ ಆನೇಕ ಕಂಪನಿಗಳನ್ನು ಹೆಸರಿಸಬಹುದು. ಕೆಂಕಾನ್‌ ಸ್ಪೆಷಾಲಿಟಿ ಕೆಮಿಕಲ್ಸ್‌ ಕಂಪನಿ ಸೆಪ್ಟೆಂಬರ್‌ 2020 ರಲ್ಲಿ ರೂ.340 ರಂತೆ ವಿತರಿಸಿದ್ದು, ರೂ.730 ರ ಸಮೀಪದಿಂದ ಆರಂಭವಾಗಿ ರೂ.743 ತಲುಪಿ ಅಕ್ಟೋಬರ್‌ ನಲ್ಲಿ ರೂ.398 ರವರೆಗೂ ಕುಸಿದು ನಂತರ ರೂ.419 ರ ಸಮೀಪಕ್ಕೆ ಹಿಂದಿರುಗಿಸಿದರೂ ಗರಿಷ್ಠದ ಬೆಲೆ ತಲುಪದೆ. ಲಿಸ್ಟಿಂಗ್‌ ನ ಆರಂಭದ ಸಮಯದಲ್ಲಿ ಖರೀದಿಸಿದವರಿಗೆ ಅತೀವ ಹಾನಿ ಉಂಟುಮಾಡಿದೆ. ಮಿಸ್ಸಸ್‌ ಬೆಕ್ಟಾರ್‌ ಫುಡ್‌ ಸ್ಪೆಷಾಲಿಟೀಸ್ ಲಿಮಿಟೆಡ್‌, ವಿತರಿಸಿದ ಬೆಲೆ ರೂ.288 ಆದರೂ ಷೇರಿನ ಬೆಲೆ ರೂ.629 ರವರೆಗೂ ಜಿಗಿದು ಈ ವಾರ ರೂ.338 ರವರೆಗೂ ಕುಸಿದು ರೂ.345 ರ ಸಮೀಪವಿದೆ. ಇಂಡಿಗೋ ಪೇಂಟ್ಸ್‌ ಲಿಸ್ಟಿಂಗ್‌ ಬೆಲೆಗಿಂತ ಸುಮಾರು ಶೇ.30 ಕ್ಕೂ ಹೆಚ್ಚು ಕುಸಿತದಲ್ಲಿದೆ.

    ಅನೇಕ ಕಂಪನಿಗಳು ವಿತರಣೆಯ ನಂತರ ಲಿಸ್ಟಿಂಗ್‌ ಪ್ರೈಸ್‌ ಉತ್ತಮವಾಗಿದ್ದು, ನಂತರದ ದಿನಗಳಲ್ಲಿ ಅವುಗಳ ಬೆಲೆ ವಿತರಣೆ ಬೆಲೆಗಿಂತ ಹೆಚ್ಚಿದ್ದರೂ ಆರಂಭದ ಗರಿಷ್ಠಮಟ್ಟವನ್ನು ಉಳಿಸಿಕೊಳ್ಳಲಾಗದೆ ಜಾರಿವೆ. ಆದ್ದರಿಂದ ಹೆಚ್ಚಿನವುಗಳಲ್ಲಿ ಆರಂಭಿಕ ಹಂತದಲ್ಲೇ ಮಾರಾಟಮಾಡುವುದಕ್ಕೆ ಪ್ರೇರೇಪಿಸುತ್ತವೆ. ಇದು ಐ ಪಿ ಒ ಗಳು ಕೇವಲ ವ್ಯವಹಾರಿಕ ಪ್ರಕ್ರಿಯೆ ಎಂದು ಸಾಬೀತುಪಡಿಸಿವೆ.

    IPO ಗಳಲ್ಲಿ ಗಮನಿಸಲೇಬೇಕಾದ ಕೆಲವು ಅಂಶಗಳು:

    ಇಂದಿನ IPO ಗಳಿಗೆ ಅಪ್ಲೈ ಮಾಡುವಾಗ Risk factor ಗಳನ್ನು ಗಮನಿಸಬೇಕು. ಕೇವಲ ಪೇಟೆಯ ಸುದ್ಧಿಗಳೇ ನಿರ್ಣಾಯಕವಾಗಬಾರದು.

    ಉದಾಹರಣೆಗೆ ಒಂದು ಕಂಪನಿ ತನ್ನ ಪ್ರಕಟಣೆಯಲ್ಲಿ ‘ Price/ earnings Ratio cannot be computed as both basic and diluted EPS for the Financial year ended for March 31. 2021 are negative, ಅಲ್ಲದೆ Weighted Average Return on net worth for Fiscals 2020,2019 and 2018 is 1.3% ಎಂದು ಮುದ್ರಿಸಿದ್ದರೂ, ರೂ.1,100 ರ ಬೆಲೆಯಲ್ಲಿ ಅತ್ಯಧಿಕವಾದ ಬೆಂಬಲ ಪಡೆದುಕೊಂಡಿದೆ.

    • 2017 ರಲ್ಲಿ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ ಎಂದು ಸ್ಥಾಪಿತವಾದ ಬ್ಯಾಂಕ್‌ ನ ಷೇರುದಾರರು ರೂ.58.77 ರಂತೆ ಪಡೆದುಕೊಂಡ ಷೇರುಗಳನ್ನು ಪೇಟೆಯು ಉತ್ತುಂಗದಲ್ಲಿರುವಾಗ ತೇಜಿ ವಾತಾವರಣದಲ್ಲಿ ರೂ.305 ರಂತೆ ಮಾರಾಟಮಾಡಲು ಮುಂದಾಗಿ ಯಶಸ್ವಿಯಾಗಿದ್ದಾರೆ.
    • ಸಾಮಾನ್ಯವಾಗಿ ಲಿಸ್ಟಿಂಗ್‌ ದಿನದಂದು ಷೇರುಗಳು ಗರಿಷ್ಠಮಟ್ಟ ತಲುಪುವುವು. ಇದು ಸಂಬಂಧಿತ Book Running Managers ರವರ ಕಿರೀಟಕ್ಕೆ ಗರಿಯಾಗಿದೆ. ಏಕೆಂದರೆ ಅವರು ಮುಂದಿನ ವಿತರಣೆಗಳಲ್ಲಿ ನೀಡುವ ಪ್ರಕಟಣೆಗಳಲ್ಲಿ ನೇತೃತ್ವ ವಹಿಸಿದ ಕಂಪನಿಗಳಲ್ಲಿ ಲೀಸ್ಟಿಂಗ್‌ ದಿನದಂದು ವಿತರಣೆ ಬೆಲೆಗಿಂತ ಕಡಿಮೆದರದಲ್ಲಿ ವಹಿವಾಟಾದ ಕಂಪನಿಗಳ ಸಂಖ್ಯೆಯನ್ನು ನಮೂದಿಸುತ್ತಾರೆ. ಅಂದರೆ ಅರ್ಹತಾ ಮಟ್ಟವನ್ನು ಹೆಚ್ಚಿಸುತ್ತದೆ.
    • ರೇಟಿಂಗ್‌ ಸಂಸ್ಥೆಗಳು ತಮ್ಮ ಮಾಪನ ಪ್ರಕ್ರಿಯೆಯಿಂದ ನೀಡಿದ ರೇಟಿಂಗ್‌ ಗೆ ಯಾವುದೇ ಅವಧಿಯಿರುವುದಿಲ್ಲ. ಸಂದರ್ಭಕ್ಕೆ ತಕ್ಕಂತೆ ಅವು ಮುಂದಿನ ದಿನಗಳಲ್ಲಿ ಬದಲಾವಣೆ ಕಾಣಬಹುದು.
    • ವಿತರಣೆಗೆ SEBI ಅನುಮತಿ ನೀಡಿದೆ ಎಂದರೆ, ಅದು ಷೇರಿನ ವಿತರಣೆದರವನ್ನು ದೃಢೀಕರಿಸಿದೆ ಎಂದಲ್ಲ, ವಿತರಿಸುತ್ತಿರುವ ಕಂಪನಿಯು ಪಾರದರ್ಶಿಕತೆಯೊಂದಿಗೆ ನೀಡಬಹುದಾದ, ಅನುಸರಿಸಬೇಕಾದ ಎಲ್ಲಾ ಅಂಶಗಳನ್ನು ಪಾಲಿಸಿದೆ ಎಂದಷ್ಠೆ. ವಿತರಣೆ ಬೆಲೆಗೂ SEBI ಸಮ್ಮತಿಗೂ ಸಂಬಂಧವಿರುವುದಿಲ್ಲ.

    ಬ್ಯಾಂಕ್‌ ಬಡ್ಡಿದರ ಫ್ಲೋಟ್‌, ಪೆಟ್ರೋಲ್‌ ದರ ಫ್ಲೋಟ್‌, ಬಸ್‌ ಪ್ರಯಾಣದರ ಫ್ಲೋಟ್‌, ಹೀಗೆ ಎಲ್ಲವೂ ಫ್ಲೋಟ್‌ ಎಂದಾದಾಗ ಹೂಡಿಕೆದಾರರ ನಿರ್ಧಾರವೂ ಸಂಧರ್ಭಾನುಸಾರ ತಮ್ಮ ಅನುಕೂಲಕ್ಕೆ ತಕ್ಕಂತೆ ನಿಯಮಗಳಿಗನುಗುಣವಾಗಿ ಫ್ಲೋಟ್‌ ಆದಲ್ಲಿ ಮಾತ್ರ ಹೂಡಿಕೆ ಮಾಡಿದ ಬಂಡವಾಳ ಸುರಕ್ಷಿತವಾಗಬಹುದು.

    ಪರೀಕ್ಷಾ ಪೇ ಚರ್ಚಾಗೆ ಆಯ್ಕೆಯಾದ ವಿದ್ಯಾರ್ಥಿ ಭೇಟಿ ಮಾಡಿದ ಸುರೇಶ್‌ ಕುಮಾರ್

    ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜತೆ ನಡೆಯುವ ಪರೀಕ್ಷಾ ಪೇ ಚರ್ಚಾ ಸಂವಾದಕ್ಕೆ ಆಯ್ಕೆಯಾಗಿರುವ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳೊಂದಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮಾತನಾಡಿ ಅಭಿನಂದನೆ ಸಲ್ಲಿಸಿದ್ದಾರೆ.

    ಹೊಸಕೋಟೆ ತಾಲೂಕಿನ ತಾವರಕೆರೆ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿ ಮನೋಜ್ನನ್ನು ಸ್ವತಃ ಭೇಟಿ ಮಾಡಿ ಅಭಿನಂದಿಸಿದ ಸಚಿವರು, ಪ್ರಧಾನಿಯವರೊಂದಿಗೆ ಆತ್ಮವಿಶ್ವಾಸದಿಂದ ಮಾತನಾಡಬೇಕೆಂದು ಸಲಹೆ ನೀಡಿದರು.

    ಕೊನೆಯಲ್ಲಿ ಎಲ್ಲ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಸಚಿವರು, ಪರೀಕ್ಷೆ, ಶಾಲೆ, ತರಗತಿ, ಪಠ್ಯ, ಆರೋಗ್ಯ ರಕ್ಷಣೆ, ಸಾಂಕ್ರಾಮಿಕ ರೋಗಗಳಿಂದ ದೂರ ಇರುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದ ಸಚಿವರು ಪರೀಕ್ಷೆಗೆ ಚೆನ್ನಾಗಿ ಅಭ್ಯಾಸ ಮಾಡಬೇಕೆಂದರು.

    ಅನುಷಾಳೊಂದಿಗೆ ದೂರವಾಣಿಯಲ್ಲಿ ಸಂವಾದ:ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಚಾರಮಕ್ಕಿ ನಾರಾಯಣಶೆಟ್ಟಿ ಸ್ಮಾರಕ ಆರ್ಡಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಅನುಷಾ ಕೃಷ್ಣ ಕುಲಾಲ್ಳನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಸಚಿವ ಸುರೇಶ್ ಕುಮಾರ್, ಪ್ರಧಾನಿಯೊಂದಿಗೆ ಪರೀಕ್ಷಾ ಪೇ ಚರ್ಚಾ ಸಂವಾದದಲ್ಲಿ ಭಾಗವಹಿಸಿಲು ಆಯ್ಕೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
    ವಿದ್ಯಾರ್ಥಿನಿಯ ಕುಟುಂಬ, ತಂದೆ-ತಾಯಿ ಕುರಿತು ವಿವರ ತಿಳಿದುಕೊಂಡ ಸಚಿವರು ಪ್ರಧಾನಿಯೊಂದಿಗೆ ಸಂವಾದಕ್ಕೆ ಆಯ್ಕೆಯಾಗಿರುವುದು ನಮ್ಮ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ. ನೀವು ಮುಂದೆಯೂ ಸಹ ಚೆನ್ನಾಗಿ ಓದಿ ಶಾಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತರಬೇಕೆಂದದರು. ಇಡೀ ರಾಜ್ಯದ ಪರವಾಗಿ ತಮಗೆ ಅಭಿನಂದನೆಗಳನ್ನು ಸಲ್ಲಿಸುತ್ತಿರುವೆ ಎಂದರು.

    ಇಬ್ಬರೊಂದಿಗೂ ಮಾತನಾಡುವಾಗ ಕಳೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ. 98 ಅಂಕ ಪಡೆದ ಯಾದಗಿರಿ ಮೂಲದ ವಲಸೆ ವಿದ್ಯಾರ್ಥಿಯೊಬ್ಬನ ಗುಡಿಸಲಿಗೆ ಭೇಟಿ ನೀಡಿದ ಪ್ರಸಂಗವನ್ನು ವಿವರಿಸಿ ಕಟ್ಟಡ ಕಾರ್ಮಿಕನಾದ ವಿದ್ಯಾರ್ಥಿ ಆ ಸ್ಥಿತಿಯಲ್ಲೂ ಹತ್ತನೇ ತರಗತಿಯಲ್ಲಿ ಉತ್ತಮ ಅಂಕಗಳಿಸಿರುವುದು ಆತನ ಛಲವನ್ನು ಬಿಂಬಿಸಿದೆ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳೂ ತಾನು ಚೆನ್ನಾಗಿ ಓದಬೇಕು ಎಂಬ ಛಲ ಹೊಂದಬೇಕು ಎಂದರು.

    ರಾಜ್ಯದ ಇಬ್ಬರು ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಪ್ರಧಾನಿ ಜೊತೆ ಪರೀಕ್ಷಾ ಪೇ ಚರ್ಚಾ ಸಂವಾದದಲ್ಲಿ ಭಾಗವಹಿಸಲು ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರವಾಗಿದೆ. ಉಡುಪಿ ವಿದ್ಯಾರ್ಥಿನಿಯ ತಂದೆ ಗಾರೆ ಕೆಲಸಗಾರರಾಗಿದ್ದರೆ, ಮನೋಜ್ ತಂದೆ ಹೂ ವ್ಯಾಪಾರಿಯಾಗಿದ್ದಾರೆ. ಈ ಇಬ್ಬರೂ ವಿದ್ಯಾರ್ಥಿಗಳು ಬಡತನದ ಹಿನ್ನೆಲೆಯವರು ಹಾಗೆಯೇ ಗ್ರಾಮೀಣ ಪರಿಸರದಿಂದ ಬಂದವರು. ಪ್ರತಿಭೆ ಎಲ್ಲಿದ್ದರೂ ಅರಳುತ್ತದೆ ಎಂಬುದಕ್ಕೆ ಈ ಮಕ್ಕಳೇ ಸಾಕ್ಷಿಯಾಗಿದ್ದಾರೆ. ಈ ಇಬ್ಬರೂ ವಿದ್ಯಾರ್ಥಿಗಳು ನಮ್ಮ ರಾಜ್ಯಕ್ಕೆ ಅಭಿಮಾನ ಮೂಡುವಂತೆ ಮಾಡಿದ್ದಾರೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

    ಹಿಚ್ ಕಾಕ್ ಛಾಯೆಯ ಕಿರುಚಿತ್ರ ಯಮಸಂಧಿ

    ತುಮಕೂರಿನ ಸ್ಟೂಡೆಂಟ್ ಬುಕ್ ಕಂಪನಿ ಎಂಬ ಪುಸ್ತಕ ಪ್ರಕಾಶನ ಕಂಪನಿಯಿಂದ ಪುಸ್ತಕ ಪ್ರಕಾಶನ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಸದಾಶಿವ ಮಂಗಳೂರು ಇದೀಗ ಸದಾ ಬಂಜನ್ ಎಂಬ ನಾಮಧೇಯದೊಂದಿಗೆ ಸಿನಿಮಾ ಕ್ಷೇತ್ರದಲ್ಲಿಯೂ ದೊಡ್ಡ ಕನಸುಗಳನ್ನು ಈಡೇರಿಸಿಕೊಳ್ಳಲು ಮನಸ್ಸು ಮಾಡಿದ್ದಾರೆ.

    ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ಕಿರುಚಿತ್ರ “ಯಮಸಂಧಿ” ಯೂಟ್ಯೂಬ್ ನಲ್ಲಿ ಜನಪ್ರಿಯವಾಗಿದೆ. ಈ ಕಿರು ಚಿತ್ರ ಸದಾಶಿವ ಅವರನ್ನೂ ಭರವಸೆಯ ನಟನನ್ನಾಗಿಸುವ ನಿರೀಕ್ಷೆ ಹುಟ್ಟಿಸಿದೆ. ಮರ್ಡರ್ ಮಿಸ್ಟರಿಯ ಈ ಚಿತ್ರದಲ್ಲಿ ನಿರ್ದೇಶಕ ಪ್ರಾಣ್ ಕೊಲೆಗಾರನು ಕೊನೆಗೆ ಪೊಲೀಸರಿಗೆ ಸಿಕ್ಕಿ ಬೀಳುತ್ತಾನಾ, ಅವನ ಅಂತ್ಯವಾಗುತ್ತದಾ? ನಂತರ ಏನು ಎನ್ನುವುದನ್ನು ಕುತೂಹಲಕಾರಿಯಾಗಿ ನಿರೂಪಿಸಿದ್ದಾರೆ. ಮುಂದೆ ಈ ಕಥೆಯನ್ನು ಮತ್ತಷ್ಟು ವಿಸ್ತರಿಸುವ ಅವಕಾಶವಿರುವಂತೆ ಕಥೆಯನ್ನು ಅಂತ್ಯಗೊಳಿಸಿದ್ದಾರೆ.

    ಸದಾ ಬಂಜನ್ ಸ್ವತಃ ರಂಗಭೂಮಿ ಕಲಾವಿದರು ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ತುಮಕೂರಿನ ಡಮರುಗ ರಂಗ ಸಂಪನ್ಮೂಲ ಕೇಂದ್ರದ ಸಂಸ್ಥಾಪಕ, ರಂಗಕರ್ಮಿ ಮೆಳೇಹಳ್ಳಿ ದೇವರಾಜ್ ಅವರ ಗರಡಿಯಲ್ಲಿ ಅಸಂಖ್ಯ ನಾಟಕಗಳಲ್ಲಿ ನಟಿಸಿದ್ದಾರೆ, ನಿರ್ದೇಶಿಸಿಯೂ ಇದ್ದಾರೆ. ಸ್ವತಃ ಲೇಖಕರೂ ಹೌದು. ಪ್ರಕಾಶಕರಾಗಿ ಒಂದು ಕೃತಿಯನ್ನು ಅದರ ಮೊದಲ ಪುಟದಲ್ಲಿಯೇ ಮೌಲ್ಯಮಾಪನ ಮಾಡುವ ಶಕ್ತಿ ಹೊಂದಿರುವ ಸದಾ ಬಂಜನ್ ಭವಿಷ್ಯದಲ್ಲಿ ಉತ್ತಮ ಚಿತ್ರಗಳನ್ನು ನೀಡುವ ನಿರೀಕ್ಷೆ ಹೊಂದಿದ್ದಾರೆ.

    ಬರ್ಬರಿಕ ನಾಟಕದಲ್ಲಿ ಬರ್ಬರಿಕ, ಕರ್ವಾಲೋ ನಾಟಕದಲ್ಲಿ ಕರ್ವಾಲೋ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಕಳೆದ ಒಂದು ದಶಕದಿಂದ ಅಸಂಖ್ಯ ನಾಟಕಗಳಲ್ಲಿ ನಟಿಸಿದ್ದಾರೆ. ಜನರ ಮನಸ್ಸಿನಲ್ಲಿ ಉಳಿಯುವ ಪಾತ್ರಗಳಲ್ಲಿ ನಟಿಸಬೇಕು ಎನ್ನುವುದು ಅವರ ಬಯಕೆ. ಅದಕ್ಕಾಗಿ ಹಲವು ಕಥೆಗಳನ್ನು ಕೇಳುತ್ತಿದ್ದಾರೆ.
    ಈ ಕಿರುಚಿತ್ರದಿಂದ ಬೆಳ್ಳಿತೆರೆಯ ಪ್ರಮುಖ ನಿರ್ದೇಶಕರ ಕಣ್ಣಿಗೆ ಬೀಳುವಂತಾದರೆ ಸಾಕು ಎನ್ನುವುದು ಚಿತ್ರಪ್ರಿಯರ ನಿರೀಕ್ಷೆ. ಈಗಾಗಲೇ ಮನಸಿನ ಮರೆಯಲಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

    ಪ್ರೀತಿ, ಲವ್, ಪ್ಯಾರ್ ಚಿತ್ರದ ಮೂವರು ನಾಯಕರಲ್ಲಿ ಒಬ್ಬರಾಗಿದ್ದರು. ಹಲವು ಕಾರಣಗಳಿಂದ ಆ ಚಿತ್ರ ಸ್ಥಗಿತಗೊಂಡಿತು. ಉತ್ತಮವಾದ ಹಾಗೂ ಸವಾಲಿನ ಪಾತ್ರಗಳಲ್ಲಿ ನಟಿಸಬೇಕೆನ್ನುವುದು ಸದಾ ಬಂಜನ್ ಅವರ ಬಯಕೆ. ಸ್ವತಃ ಪುಸ್ತಕ ಪ್ರಕಾಶಕ, ಬರಹಗಾರರೂ ಆಗಿರುವ ಅವರ ಬತ್ತಳಿಕೆಯಿಂದ ಉತ್ತಮ ಚಿತ್ರಗಳು ಮೂಡಿಬರಲಿ ಎನ್ನುವುದು ನಮ್ಮ ನಿರೀಕ್ಷೆ.ಮನಸಿನ ಮರೆಯಲಿ ಚಿತ್ರದ ನಾಯಕ ಕಿಶೋರ್ ಯಾದವ್, ರಘುನಂದನ್, ಪ್ರಕಾಶ್ ಮೆಳೇಹಳ್ಳಿ ಮುಂತಾದವರು ನಟಿಸಿದ್ದಾರೆ.

    ಅಮ್ಮಾ ನೀ ಆಕಾಶ…ಮಾತೆಗೆ ಮಿಕ್ಕ ದೇವರಿಲ್ಲ ಎಂಬುದು ಅದೆಷ್ಟು ಸತ್ಯವಲ್ಲವೇ…

    ಗಿರೀಶ್‌ ಪಿಎಂ

    ಆ ಶಕ್ತಿಗೆ ಅಮ್ಮ, ತಾಯಿ, ಮಾತೆ, ಜನನಿ ಹೀಗೆ ಹಲವು ನಾಮಗಳು. ಆದರೆ ಆಕೆಯನ್ನು ಬಣ್ಣಿಸಹೊರಟರೆ ಶಬ್ದಗಳು ಸೋಲುತ್ತವೆ. ಅದೊಂದು ಸಂಬಂಧಕ್ಕೆ ಮೀರಿದ ಅನುಬಂಧ. ʼಹೆತ್ತ ಕರುಳುʼ ಎಂಬ ಶಬ್ದ ಅಮ್ಮನನ್ನು ಬಣ್ಣಿಸಲು ಸೂಕ್ತವೇನೋ. ನೋವ ಅನುಭವಿಸಿದರೂ, ಜೀವ ಬೇರೆಯಾದರೂ ಅಮ್ಮನ ಪ್ರೀತಿಯಲ್ಲಿ ಕೊಂಚವೂ ಕೊರತೆಯಾಗದು. ತುತ್ತು ಅನ್ನವಾದರೂ ತನ್ನ ಕರುಳ ಬಳ್ಳಿಗೆ ತಿನ್ನಿಸದೆ ತಾನು ತಿನ್ನಲಾರಳು. ನನಗೂ ಮೊದಲ ಗುರುವಾಗಿ ಗುರಿ ತಲುಪಲು ದಾರಿ ತೋರಿದವರು ಅಮ್ಮನೇ.

    ನಮ್ಮದು ಸಣ್ಣ ಮಧ್ಯಮ ಕುಟುಂಬ. ಅಪ್ಪನಿಗೆ ಕೂಲಿ ಕೆಲಸ. ಅಮ್ಮನಿಗೆ ಬೀಡಿ ಕಟ್ಟುವ ಕಾಯಕ. ಅಮ್ಮ ಬೀಡಿ ಕಟ್ಟುವ ಕಲೆಯನ್ನು ಚಿಕ್ಕಂದಿನಲ್ಲೇ ಕಲಿತಿದ್ದರಂತೆ. ಚಿಕ್ಕವಯಸ್ಸಿನಲ್ಲಿ ಮನೆಯಲ್ಲಿ ಹಾಸುಹೊದ್ದು ಮಲಗಿದ್ದ ಬಡತನ. ಜೀವನದ ಬಂಡಿ ಸಾಗಲು, ಮಕ್ಕಳನ್ನು ಓದಿಸಲು ಬೀಡಿ ಕಟ್ಟುತ್ತಾರೆ. ಈಗಲೂ ಕಟ್ಟುತ್ತಲೇ ಇದ್ದಾರೆ. ಅದರಿಂದ ಬಂದ ಹಣದಲ್ಲಿ ಬಿಡಿಗಾಸೂ ಇಟ್ಟುಕೊಳ್ಳದೆ ಎಲ್ಲವನ್ನೂ ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು ಮಾಡುತ್ತಾರೆ. ಕಷ್ಟಪಟ್ಟು ದುಡಿದು ಮಗನ ಭವಿಷ್ಯ ಉಜ್ವಲವಾಗಲಿ ಎಂಬ ಕನಸು ಕಾಣುತ್ತಾರೆ.

    ತನ್ನ ಆರೋಗ್ಯದ ಬಗ್ಗೆ ಕಾಳಜಿವಹಿಸದೆ ಮಕ್ಕಳಿಗೆ ಏನು ಆಗಬಾರದೆಂದು ಪ್ರತಿಕ್ಷಣ ನೆನೆಯುವ ಜೀವ ಅದು. ಕರೆಂಟ್ ಹೋದರೆ ಸೊಳ್ಳೆಕಾಟ ತುಸು ಜಾಸ್ತಿಯೇ ನಮ್ಮಲ್ಲಿ. ಮಕ್ಕಳು ಬೇಗನೆ ಏಳಬೇಕು, ಚೆನ್ನಾಗಿ ನಿದ್ದೆ ಮಾಡಲಿ ಎಂದು ತಾನು ನಿದ್ದೆ ಬಿಟ್ಟು ಬೀಸಣಿಗೆಯಿಂದ ಗಾಳಿ ಹಾಕುವುದು ಆಕೆಗೇನೂ ಹೊಸತಲ್ಲ. ಹೊಟ್ಟೆ ತುಂಬುವಷ್ಟು ಕೈ ತುತ್ತು, ಸಿಹಿ ಮುತ್ತನ್ನು ಕೊಟ್ಟು ಖುಷಿಪಡಿಸುವುದರಲ್ಲಿ ಆಕೆ ಯಾವತ್ತೂ ಶ್ರೀಮಂತೆ. ಒಂಬತ್ತು ತಿಂಗಳು ಹೊತ್ತು, ಹೆತ್ತು ಸಾಕಿ ಸಲಹುತ್ತಿರುವೆ. ನಿನಗೆ ನಾನೇನು ಕೊಡಲಿ ಅಮ್ಮಾ…

    ಮಹಿಳಾ ದಿನಾಚರಣೆಯೇನೋ ಕಳೆಯಿತು. ಆದರೆ ನನ್ನ ಅಮ್ಮನ ತ್ಯಾಗವನ್ನು ಒಂದು ದಿನ ನೆನೆದರೆ ಸಾಕೇ? ಆಕೆಯ ನೋವು, ತ್ಯಾಗ ಒಂದೆರಡೇ? ಬಾಲ್ಯದಲ್ಲಿ ತನ್ನ ಮನೆಯಲ್ಲಿ ಕಂಡ ಬಡತನ, ತಿಂದ ಏಟು, ಪತಿಯ ಮನೆಯಲ್ಲಿ ಸಂಸಾರ ಸಾಗರವೆಂಬ ಮಹತ್ವದ ಜವಾಬ್ದಾರಿ ಹೊತ್ತು ಮುನ್ನಡೆಸುವುದು…ಇದೆಲ್ಲಾ ನಿನಗೆ ಹೇಗೆ ಸಾದ್ಯವಾಯಿತಮ್ಮಾ…?

    ಎದುರಾಗುವ ಪ್ರತಿಯೊಂದು ನೋವಿಗೂ ಕುಗ್ಗದೆ ಮುಂದೆ ನಡೆಯುವರು ನೀವು. ಅತ್ತೆ, ಮಾವ, ಬಂಧುಗಳ ಸ್ನೇಹ ಸಂಪಾದಿಸಿ ಕುಟುಂಬಕ್ಕೆ ಒಳ್ಳೆಯ ಸೊಸೆ ಎಂದು ಕರೆಸಿಕೊಂಡವರು. ಬೆಟ್ಟದಷ್ಟು ನೋವು ಮನದೊಳಗಿದ್ದರೂ ಒಂದಿಂಚೂ ಮುಖದಲ್ಲಿ ಕಾಣಿಸದು. ಸದಾ ಮಂದಹಾಸದ ನಗು ಹೊಳೆಯೋ ಚಂದಿರನಂತೆ. ಅಮ್ಮನ ಗುಣಶೀಲತೆಯ ಹೊಗಳಲು ನಾ ಏಳು ಜನುಮ ಎತ್ತಿ ಬಂದರೂ ಸಾಲದು.

    ಅಮ್ಮಾ ನೀ ಆಕಾಶ…


    ಗಿರೀಶ್‌ ಪಿಎಂ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇಲ್ಲಿ
    ಪತ್ರಿಕೋದ್ಯಮ ವಿಭಾಗದ ಪ್ರಥಮ ಬಿಎ ವಿದ್ಯಾರ್ಥಿ

    ಚಿತ್ರ : ಕಿರಣ ಆರ್

    ಲಸಿಕೆಯು ವ್ಯರ್ಥವಾಗದಂತೆ ಎಚ್ಚರ ವಹಿಸಲು ಪ್ರಧಾನಿ ಕರೆ

    ದೇಶದ ಕೋವಿಡ್-19 ಪರಿಸ್ಥಿತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.

    ಕೋವಿಡ್ ವಿರುದ್ಧದ ಸಮರದಲ್ಲಿ ಪ್ರಧಾನಮಂತ್ರಿಯವರ ನಾಯಕತ್ವವನ್ನು ಮುಖ್ಯಮಂತ್ರಿಗಳು ಶ್ಲಾಘಿಸಿದರು. ಲಸಿಕಾ ಅಭಿಯಾನವನ್ನು ದೇಶಾದ್ಯಂತ ಸುಗಮವಾಗಿ ಅನುಷ್ಠಾನಗೊಳಿಸಿದ್ದಕ್ಕಾಗಿ ಅವರು ಪ್ರಧಾನಿಯವರಿಗೆ ಧನ್ಯವಾದ ತಿಳಿಸಿದರು. ಲಸಿಕೆಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವ ಕುರಿತು ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡಿದರು.

    ಇತ್ತೀಚೆಗೆ ಕೆಲವು ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರು ಕೋವಿಡ್ ಸೂಕ್ತ ನಡವಳಿಕೆಯನ್ನು ಕಾಪಾಡಿಕೊಳ್ಳಬೇಕಾದ ಸವಾಲಿನ ಬಗ್ಗೆಯೂ ಚರ್ಚಿಸಲಾಯಿತು. ಹೆಚ್ಚಿನ ಜಾಗರೂಕತೆ ಮತ್ತು ಪರಿಸ್ಥಿತಿಯ ಮೇಲ್ವಿಚಾರಣೆಯ ಅಗತ್ಯದ ಬಗ್ಗೆ ಮುಖ್ಯಮಂತ್ರಿಗಳು ಸಹಮತ ಸೂಚಿಸಿದರು.

    ವೈರಾಣು ಹರಡುವುದನ್ನು ತಡೆಗಟ್ಟಲು ಮುಖ್ಯಮಂತ್ರಿಗಳು ವಿಶೇಷ ಗಮನ ಹರಿಸಬೇಕಾದ ಜಿಲ್ಲೆಗಳನ್ನು ಗೃಹ ಸಚಿವರು ಪಟ್ಟಿ ಮಾಡಿದರು. ದೇಶದ ಪ್ರಸ್ತುತ ಕೋವಿಡ್ ಪರಿಸ್ಥಿತಿ ಮತ್ತು ಲಸಿಕಾ ತಂತ್ರದ ಬಗ್ಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ಪ್ರಾತ್ಯಕ್ಷಿಕೆ ನೀಡಿದರು.

    ಮುಖ್ಯಮಂತ್ರಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿಯವರು, ಭಾರತದಲ್ಲಿ ಶೇ.96 ಕ್ಕೂ ಹೆಚ್ಚು ಕೋವಿಡ್ ರೋಗಿಗಳು ಗುಣಮುಖರಾಗಿದ್ದಾರೆ ಮತ್ತು ಭಾರತವು ವಿಶ್ವದ ಅತಿ ಕಡಿಮೆ ಸಾವಿನ ಪ್ರಮಾಣವನ್ನು ಹೊಂದಿರುವ ರಾಷ್ಟ್ರಗಳಲ್ಲೊಂದಾಗಿದೆ ಎಂದರು. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಹೆಚ್ಚಿನ ಸಕಾರಾತ್ಮಕ ಪ್ರಕರಣಗಳ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದರು. ಕಳೆದ ಕೆಲವು ವಾರಗಳಲ್ಲಿ ದೇಶದ 70 ಜಿಲ್ಲೆಗಳಲ್ಲಿ ಶೇಕಡಾ 150 ರಷ್ಟು ಪ್ರಕರಣಗಳು ಏರಿಕೆಯಾಗಿವೆ. ಕೊರೋನಾದ ಈ “ಎರಡನೇ ಉತ್ತುಂಗವನ್ನು” ಕೂಡಲೇ ತಡೆಯಬೇಕು ಎಂದು ಆಗ್ರಹಿಸಿದ ಅವರು, ಹೆಚ್ಚುತ್ತಿರುವ ಈ ಸಾಂಕ್ರಾಮಿಕ ರೋಗವನ್ನು ನಾವು ಈಗಲೇ ನಿಗ್ರಹಿಸದಿದ್ದರೆ, ದೇಶಾದ್ಯಂತ ತೀವ್ರವಾಗಿ ಹರಡಬಹುದು ಎಂದು ಎಚ್ಚರಿಸಿದರು.

    ಕೊರೋನಾದ ಈ “ಎರಡನೇ ಉತ್ತುಂಗವನ್ನು” ತಡೆಯಲು ತ್ವರಿತ ಮತ್ತು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು. ಮುಖಗವಸುಗಳ ಬಳಕೆಯ ಬಗ್ಗೆ ಸ್ಥಳೀಯ ಆಡಳಿತಗಳ ಗಂಭೀರತೆ ಕಡಿಮೆಯಾಗುತ್ತಿದೆ ಎಂದ ಪ್ರಧಾನಿ, ಪ್ರಾದೇಶಿಕ ಮಟ್ಟದಲ್ಲಿ ಆಡಳಿತ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಬೇಕೆಂದು ಕರೆ ನೀಡಿದರು. ಕೊರೋನಾ ವಿರುದ್ಧದ ಸಮರದಲ್ಲಿ ಸಾಧನೆಗಳಿಂದ ಗಳಿಸಿದ ವಿಶ್ವಾಸವು ನಿರ್ಲಕ್ಷ್ಯಕ್ಕೆ ತಿರುಗಬಾರದು ಎಂದು ಅವರು ಎಚ್ಚರಿಕೆ ನೀಡಿದರು. ಸಾರ್ವಜನಿಕರನ್ನು ಭಯಭೀತರನ್ನಾಗಿಸಬಾರದು ಮತ್ತು ಅದೇ ಸಮಯದಲ್ಲಿ ಸಮಸ್ಯೆಯಿಂದಲೂ ಮುಕ್ತರಾಗಬೇಕು ಎಂದು ಅವರು ಒತ್ತಿ ಹೇಳಿದರು. ನಮ್ಮ ಹಿಂದಿನ ಅನುಭವಗಳನ್ನು, ಸದ್ಯದ ಪ್ರಯತ್ನಗಳಲ್ಲಿ ಸೇರಿಸಿಕೊಳ್ಳುವ ಮೂಲಕ ಕಾರ್ಯತಂತ್ರ ರೂಪಿಸುವ ಅಗತ್ಯದ ಬಗ್ಗೆ ಅವರು ಒತ್ತಿ ಹೇಳಿದರು.

    ಸೂಕ್ಷ್ಮ ನಿಗ್ರಹ ವಲಯಗಳ ಅಗತ್ಯದ ಬಗ್ಗೆ ಪ್ರಧಾನಿ ಮಾತನಾಡಿದರು. ಕಳೆದ ಒಂದು ವರ್ಷದಿಂದ ಮಾಡುತ್ತಿರುವಂತೆ ‘ಪರೀಕ್ಷೆ, ಪತ್ತೆ ಮತ್ತು ಚಿಕಿತ್ಸೆ’ ಯನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು. ಪ್ರತಿ ಸೋಂಕಿತ ವ್ಯಕ್ತಿಯ ಸಂಪರ್ಕಗಳನ್ನು ಶೀಘ್ರವಾಗಿ ಪತ್ತೆಹಚ್ಚುವುದು ಮತ್ತು ಆರ್‌ಟಿ-ಪಿಸಿಆರ್ ಪರೀಕ್ಷೆಗಳ ಪ್ರಮಾಣವನ್ನು ಶೇಕಡಾ 70 ಕ್ಕಿಂತ ಹೆಚ್ಚಿಸುವುದು ಬಹಳ ಮುಖ್ಯವಾಗಿದೆ ಎಂದು ಅವರು ಹೇಳಿದರು. ಆ್ಯಂಟಿಜನ್ ಪರೀಕ್ಷೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿರುವ ಕೇರಳ, ಒಡಿಶಾ, ಚತ್ತೀಸ್‌ಗಢ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಹೆಚ್ಚಿನ ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ನಡೆಸಬೇಕು ಎಂದು ಅವರು ಹೇಳಿದರು.

    ಈಗ ಇಡೀ ದೇಶವು ಪ್ರಯಾಣಕ್ಕೆ ಮುಕ್ತವಾಗಿದೆ ಮತ್ತು ಪ್ರಯಾಣಿಸುವವರ ಸಂಖ್ಯೆಯೂ ಹೆಚ್ಚಾಗಿರುವುದರಿಂದ ಸಣ್ಣ ನಗರಗಳಲ್ಲಿ ಪರೀಕ್ಷೆಗಳನ್ನು ಹೆಚ್ಚಿಸಬೇಕು ಹಾಗೂ “ರೆಫರಲ್ ಸಿಸ್ಟಮ್” ಮತ್ತು “ಆಂಬ್ಯುಲೆನ್ಸ್ ನೆಟ್ವರ್ಕ್” ಬಗ್ಗೆ ವಿಶೇಷ ಗಮನ ಹರಿಸಬೇಕೆಂದು ಪ್ರಧಾನಿ ಆಗ್ರಹಿಸಿದರು. ಪರಸ್ಪರ ಮಾಹಿತಿಯನ್ನು ಹಂಚಿಕೊಳ್ಳಲು ಹೊಸ ಕಾರ್ಯವಿಧಾನದ ಅಗತ್ಯವನ್ನು ಅವರು ಒತ್ತಿ ಹೇಳಿದರು. ಹಾಗೆಯೇ, ವಿದೇಶಗಳಿಂದ ಬರುವ ಪ್ರಯಾಣಿಕರ ಸಂಪರ್ಕಗಳ ಮೇಲೆ ನಿಗಾ ಇಡಲು ಎಸ್‌ಒಪಿ ಅನುಸರಿಸುವ ಜವಾಬ್ದಾರಿಯೂ ಹೆಚ್ಚಾಗಿದೆ ಎಂದು ಪ್ರಧಾನಿ ತಿಳಿಸಿದರು.

    ರೂಪಾಂತರಿ ಕೊರೋನಾ ವೈರಾಣುಗಳನ್ನು ನಾವು ಗುರುತಿಸಬೇಕು ಮತ್ತು ಅವುಗಳ ಪರಿಣಾಮಗಳನ್ನು ನಿರ್ಣಯಿಸಬೇಕು ಎಂದು ಪ್ರಧಾನಿ ಹೇಳಿದರು. ದೇಶದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಲಸಿಕಾ ವೇಗ ಮತ್ತು ಲಸಿಕೆಯ ಪ್ರಮಾಣಗಳು ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿಯವರು, ಒಂದೇ ದಿನದಲ್ಲಿ 3 ಮಿಲಿಯನ್‌ಗಿಂತಲೂ ಹೆಚ್ಚು ಲಸಿಕೆಗಳನ್ನು ನೀಡಲಾಗಿದೆ ಎಂದರು. ಆದರೆ ಲಸಿಕೆಯು ವ್ಯರ್ಥವಾಗುತ್ತಿವ ಸಮಸ್ಯೆಯನ್ನು ಸಹ ಬಹಳ ಗಂಭೀರವಾಗಿ ತೆಗೆದುಕೊಳ್ಳುವಂತೆ ಎಚ್ಚರಿಸಿದರು. ತೆಲಂಗಾಣ, ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಶೇ.10 ರಷ್ಟು ಲಸಿಕೆಯು ವ್ಯರ್ಥವಾಗುತ್ತಿದೆ ಎಂದು ಅವರು ಹೇಳಿದರು. ಲಸಿಕೆಯ ವ್ಯರ್ಥವನ್ನು ಕಡಿಮೆ ಮಾಡಲು ಸ್ಥಳೀಯ ಮಟ್ಟದಲ್ಲಿ ಯೋಜನೆ ರೂಪಿಸಬೇಕು ಮತ್ತು ಆಡಳಿತದ ನ್ಯೂನತೆಗಳನ್ನು ತಕ್ಷಣ ಸರಿಪಡಿಸಬೇಕು ಎಂದು ಅವರು ಕರೆ ಕೊಟ್ಟರು.

    ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಮೇಲಿನ ಕ್ರಮಗಳ ಜೊತೆಗೆ ಮೂಲಭೂತ ಕ್ರಮಗಳಾದ ಮುಖಗವಸುಗಳನ್ನು ಧರಿಸುವುದು, ದೈಹಿಕ ಅಂತರವನ್ನು ಕಾಪಾಡಿಕೊಳ್ಳುವುದು, ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸುವುದು ಮುಖ್ಯ ಎಂದು ಪ್ರಧಾನಿ ತಿಳಿಸಿದರು. ಈ ಕ್ರಮಗಳಲ್ಲಿ ಯಾವುದೇ ನಿರ್ಲಕ್ಷ್ಯ ಇರಬಾರದು ಮತ್ತು ಈ ಕುರಿತು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದರು. ಲಸಿಕಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಕರೆ ನೀಡಿದ ಅವರು, ಲಸಿಕೆಯ ಅವಧಿ ಮುಗಿಯುವ ದಿನಾಂಕದ ಬಗ್ಗೆ ಜಾಗರೂಕರಾಗಿರಬೇಕು ಎಂದರು. ‘ಔಷಧಿ ಮತ್ತು ಎಚ್ಚರಿಕೆ’ ಎರಡೂ ಇರಬೇಕು ಎಂದು ಪ್ರಧಾನ ಮಂತ್ರಿಯವರು ತಿಳಿಸಿದರು.

    (ಪಿಐಬಿ ವರದಿ)

    ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ; ಮುಖ್ಯಮಂತ್ರಿ, ಹಣಕಾಸು ಇಲಾಖೆ ಜತೆ ಚರ್ಚೆ ನಡೆಸಿದ ನಂತರ ನಿರ್ಧಾರ: ಡಿಸಿಎಂ ಭರವಸೆ

    ರಾಜ್ಯ ಸರಕಾರಿ ಪದವಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರಿಗೆ ಕನಿಷ್ಠ  25 ಸಾವಿರ ರೂಪಾಯಿ ವೇತನ‌ ನಿಗದಿ, ಸೇವಾ ಭದ್ರತೆ ಒದಗಿಸುವುದು ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಭರವಸೆ ನೀಡಿದ್ದಾರೆ.

    ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರ ಕಚೇರಿಯಲ್ಲಿ ರಾಜ್ಯ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳ ಜತೆ ಮಾತುಕತೆ ನಡೆಸಿದ ನಂತರ ಈ ವಿಷಯ ತಿಳಿಸಿದ ಡಿಸಿಎಂ ಅವರು; ಮಾನವೀಯತೆ ಆಧಾರದ ಮೇಲೆ ಈ ಬೇಡಿಕೆಗಳನ್ನು ಪರಿಶೀಲನೆ ಮಾಡಲಾಗುವುದು ಎಂದರು.

    ಅತಿಥಿ ಉಪನ್ಯಾಸಕರ ಸೇವಾ ಸಕ್ರಮಾತಿ/ ಸೇವಾ ಭದ್ರತೆಗೆ ಸಂಬಂಧಿಸಿದಂತೆ ಮಾನವೀಯ ನೆಲೆಯಲ್ಲಿ ನಿರ್ಣಯ ಕೈಗೊಳ್ಳಬೇಕೆಂದು ಸಭಾಪತಿಗಳಾದ ಬಸವರಾಜ ಹೊರಟ್ಟಿ, ಶಿಕ್ಷಕರ ಕ್ಷೇತ್ರಗಳನ್ನು ಪ್ರತಿನಿಧಿಸುವ ವಿಧಾನ ಪರಿಷತ್‌ ಸದಸ್ಯರು ಕೂಡ ಮನವಿ ಮಾಡಿದ್ದಾರೆ ಡಿಸಿಎಂ ತಿಳಿಸಿದರು.

    ಹತ್ತು ವರ್ಷ ಸೇವಾವಧಿ ಪೂರೈಸಿರುವ ಉಪನ್ಯಾಸಕರ ಸೇವೆಯನ್ನು ಕಾಯಂ ಮಾಡಿ. ಪ್ರತಿ ಹನ್ನೆರಡು ತಿಂಗಳಿಗೊಮ್ಮೆ ಮರು ನೇಮಕ ಮಾಡಿಕೊಳ್ಳುವುದು ಬೇಡ. ಕಾಯಂ ಆಗುವವರೆಗೆ ಅವರ ಸೇವೆಯನ್ನು ನಿರಂತರವಾಗಿ ಬಳಸಿಕೊಳ್ಳುತ್ತಿರಬೇಕು. ಇನ್ನು, ಗೌರವ ಧನದ ಮೊತ್ತವನ್ನು ಮಾಸಿಕ ಕನಿಷ್ಠ 25,000 ರೂ.ಗಳನ್ನಾದರೂ ನಿಗದಿ ಮಾಡಬೇಕು ಎಂಬ ಬೇಡಿಕೆಗಳಿವೆ.  ಇವೆಲ್ಲವನ್ನು ಪರಿಶೀಲನೆ ಮಾಡಲಾಗುವುದು ಎಂದು ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

    ಸಭಾಪತಿ ಅವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯರಾದ ಆಯನೂರು ಮಂಜುನಾಥ್‌, ಅರುಣ್‌ ಶಹಾಪೂರ್‌, ಎಸ್.ಎಲ್.ಬೋಜೇಗೌಡ, ಎಸ್.ವಿ.ಸಂಕನೂರು, ಸುಶಿಲ್‌ ನಮೋಶಿ ಮುಂತಾದವರು ಉಪಸ್ಥಿತರಿದ್ದರು.

    ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಲ್ಲ ಅಶ್ವತ್ಥನಾರಾಯಣ ಮತ್ತು ಸುರೇಶ್ ಕುಮಾರ್ ಸ್ಪಷ್ಟನೆ

    ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆ (ಸೋಮವಾರ) ಯಿಂದ 15 ದಿನಗಳ ಕಾಲ ಸರಕಾರಿ-ಅನುದಾನಿತ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂಬ ಸುಳ್ಳುಸುದ್ದಿ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು, ಈ ಸುಳ್ಳು ಸುದ್ದಿ ಹರಡಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ತಮ್ಮ ಇಲಾಖೆಯ ಅಧಿಕಾರಿಗಳಿಗೆ ಹುಬ್ಬಳ್ಳಿಯಲ್ಲಿ ಸೂಚಿಸಿದ್ದಾರೆ.

    ಸರಕಾರ ಯಾವುದೇ ಕಾರಣಕ್ಕೂ ಕಾಲೇಜುಗಳಿಗೆ ರಜೆ ನೀಡುವ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿರುವ ಅವರು, ಹುಬ್ಬಳ್ಳಿಯಲ್ಲಿಂದು ಈ ಬಗ್ಗೆ ಹೇಳಿಕೆ ನೀಡಿದ್ದಾರೆ.

    ಯಾರೋ ಕಿಡಿಗೇಡಿಗಳು ನಕಲಿ ಸುತ್ತೋಲೆಯನ್ನು ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಅದು ವೈರಲ್ ಆಗಿದೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ತೀವ್ರ ಗೊಂದಲವಾಗಿದೆ. ಅದೂ ಸರಕಾರದ ಹೆಸರಿನಲ್ಲಿ ನಕಲಿ ಸುತ್ತೋಲೆ ಸೃಷ್ಟಿಸುವುದು ದೊಡ್ಡ ಅಪರಾಧ. ಹೀಗಾಗಿ ಸೈಬರ್ ಪೊಲೀಸರಿಗೆ ತಕ್ಷಣ ಕಿಡಿಗೇಡಿಗಳನ್ನು ಪತ್ತೆ ಹಚ್ಚುವಂತೆ ಸೂಚಿಲಾಗಿದೆ ಎಂದು ಡಿಸಿಎಂ ತಿಳಿಸಿದ್ದಾರೆ.

    ಮಕ್ಕಳ ಭವಿಷ್ಯದ ಜತೆ ಯಾರೂ ಚೆಲ್ಲಾಟ ಆಡಬಾರದು. ಮೊದಲೇ ಕೋವಿಡ್ ಕಾರಣಕ್ಕೆ ಎಲ್ಲರಿಗೂ ಆತಂಕ ಇದೆ. ಶೈಕ್ಷಣಿಕ ವ್ಯವಸ್ಥೆ ಹಳಿ ತಪ್ಪದಂತೆ ಸರಕಾರ ಎಲ್ಲ ಕ್ರಮಗಳನ್ನೂ ಕೈಗೊಳ್ಳುತ್ತಿದ್ದರೂ ಕೆಲವರು ಇಂಥ ಕೃತ್ಯ ಎಸಗಿದ್ದಾರೆ. ಅಂಥವರಿಗೆ ತಕ್ಕ ಶಾಸ್ತಿ ಕಾದಿದೆ ಎಂದು ಉಪ ಮುಖ್ಯಮಂತ್ರಿ ಎಚ್ಚರಿಸಿದರು

    ಬೇಸಿಗೆ ರಜೆ ಘೋಷಣೆ‌ ಸುಳ್ಳು- ಸುರೇಶ್ ಕುಮಾರ್

    ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿನ ಶಾಲೆಗಳಲ್ಲಿ ಕಲಿಯುತ್ತಿರುವ ಒಂದರಿಂದ ಆರನೇ ತರಗತಿ ವಿದ್ಯಾರ್ಥಿಗಳಿಗೆ ಇಂದಿನಿಂದ‌ ಬೇಸಿಗೆ ರಜೆ ಘೋಷಣೆ, ಪರೀಕ್ಷೆ ಇಲ್ಲದೇ‌ ಮುಂದಿನ ತರಗತಿಗೆ ಪಾಸ್ ಎಂಬ ಸುದ್ದಿ ದೃಶ್ಯ‌ಮಾಧ್ಯಮದ ಚಾನೆಲ್ ಒಂದರಲ್ಲಿ ಬಿತ್ತರವಾಗಿದ್ದು ಇದು ಸತ್ಯಕ್ಕೆ‌ ದೂರವಾದ ಸಂಗತಿ‌ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೂ ಶನಿವಾರ ಸ್ಪಷ್ಟಪಡಿಸಿದ್ದಾರೆ.

    ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ‌ ಪರ್ಯಾಯ ಕಲಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಬಗ್ಗೆ ಮುಕ್ತ ನಿಲುವನ್ನು ಹೊಂದಿದೆ. ಖಾಸಗಿ ಶಾಲೆಗಳು ಆನ್ ಲೈನ್ ಮೂಲಕ ಕಲಿಕೆಗೆ ಮುಂದಾಗಿವೆ. ಒಂದರಿಂದ ಐದರ‌ ತರಗತಿ ಸರ್ಕಾರಿ ಶಾಲಾ ಮಕ್ಕಳಿಗೆ ಆಕಾಶವಾಣಿಯಲ್ಲಿ ಕಲಿಯೋಣ ನಲಿಯೋಣ ಕಾರ್ಯಕ್ರಮ ಬಿತ್ತರ ಮಾಡಲಾಗುತ್ತಿದೆ. ದೂರದರ್ಶನದಲ್ಲಿ‌ ಸಂವೇದಾ‌ ಕಾರ್ಯಕ್ರಮ‌ ಪ್ರಸಾರಗೊಂಡಿದೆ. ಶಿಕ್ಷಕರು ವಿದ್ಯಾರ್ಥಿಗಳ‌ ಕಲಿಕೆಯ ಪ್ರಗತಿಯನ್ನು ತಮ್ಮದೇ ಸ್ಥಳೀಯ‌ ಸಂಪನ್ಮೂಲಗಳ ನೆರವಿನಲ್ಲಿ‌ ಪರಾಮರ್ಶೆ ಮಾಡುತ್ತಿದ್ದಾರೆ. ಇದು ರಾಜ್ಯಾದ್ಯಂತ ಜಾರಿಯಲ್ಲಿದ್ದು, ಈ ಹಂತದಲ್ಲಿ ಬೇಸಿಗೆ ರಜೆಯನ್ನು ಘೋಷಿಸುವ ಪ್ರಸ್ತಾಪ ಇಲಾಖೆಯ ಮುಂದಿಲ್ಲ ಎಂದು ಅವರು ಸ್ಪಷ್ಟ‌ಪಡಿಸಿದ್ದಾರೆ.

    ಮುತ್ತು ಮತ್ತು ಮೆಣಸು


    ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು , ವಚನ ಸಾಹಿತ್ಯದಲ್ಲಿ ಅಡಗಿರುವ ಸಂಗತಿಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟು ಮತ್ತು ವಚನಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.


    ಮುತ್ತಮ್ ಮೆಳಸಮ ಕೋದಂತೆ-ಕನ್ನಡದ ಮೊದಲ ಲಕ್ಷಣ ಕೃತಿ ‘ಕವಿರಾಜಮಾರ್ಗ’ದಲ್ಲಿ ಬರುವ  ದೇಸೀ ಮಾತಿದು. ಮುತ್ತಿನ ಬಣ್ಣ ಬಿಳಿಪು, ಮೆಣಸು ಕಪ್ಪು ಬಣ್ಣದ್ದು. ಮುತ್ತು ಅಂದಕ್ಕೆ ಉಪಯೋಗಿಸುವುದಾದರೆ ಆಹಾರದಲ್ಲಿ ಉಪಯೋಗಿಸುವುದು ಮೆಣಸು. ದೇಹದ ಒಳ ಹಾಗು ಹೊರೆಗೆ ಇವುಗಳು ಬಳಕೆಯಾಗುವುದು. 

    ಕಪ್ಪು -ಬಿಳಿಪು , ದೇಹದ ಹೊರ ಹಾಗು ಒಳ ಈ ಅರ್ಥದಲ್ಲಿ ಮುತ್ತು ಹಾಗು ಮೆಣಸು ಪರಸ್ಪರ ವಿರುದ್ಧವಾಗಿರುವುದು.  ಹಾಗೆ  ಇವುಗಳ ಬೆಲೆಯಲ್ಲಿಯೂ ಅಜಗಜಾಂತರ ವ್ಯತ್ಯಾಸವಿದೆ.ಒಟ್ಟಿಗೆ ಇವುಗಳ ಬಳಕೆ ನಿಷಿದ್ದ ಆದರೆ ಪ್ರತ್ಯೇಕವಾಗಿ ಇವುಗಳಿಗೆ ಅವುಗಳದ್ದೆ ಆದ ಶ್ರೇಷ್ಠತೆ ಖಂಡಿತಾ ಇದೆ.  ಪರಸ್ಪರ ಪೂರಕವಾಗಿರುವ ವಸ್ತುಗಳನ್ನು ಬಳಕೆ ಮಾಡದೆ ಹೋದರೆ  ಆಗುವ ವೈರುಧ್ಯವನ್ನು ಪ್ರಸ್ತುತ ವಾಕ್ಯದಲ್ಲಿ ಹೇಳಲಾಗಿದೆ. ಹುಣ್ಣಿಮೆ ಅಮವಾಸ್ಯೆಗಳು ಹೇಗೆ  ಒಟ್ಟಿಗೆ ಬರಲಾಗದೋ ಹಾಗೆ ಮುತ್ತು ಮತ್ತು ಮೆಣಸು ಎನ್ನಬಹುದು.

    ಮುತ್ತು ಮತ್ತು ಮೆಣಸನ್ನು ಏಕಕಾಲಕ್ಕೆ ಒಂದೇ ಸರದಲ್ಲಿ ಅಳವಡಿಸಲು ಸಾಧ್ಯವೇ? ಹಾಗೊಂದು ವೇಳೆ ಸಾಧ್ಯವಾದರೆ ಅಂದವಾಗಿಯಾದರೂ ಕಾಣಬಲ್ಲುದೆ? ಎಂಬ ಪ್ರಶ್ನೆಗಳನ್ನು  “ಮುತ್ತಮ್ ಮೆಣಸಮ್ ಕೋದಂತೆ” ವಾಕ್ಯ ಹುಟ್ಟುಹಾಕುತ್ತದೆ.  ಈ ‘ಮುತ್ತು’ ಮತ್ತು ‘ಮೆಣಸ’ನ್ನು ಏಕಕಾಲಕ್ಕೆ ಒಂದೇ ಸರದಲ್ಲಿ  ಪೋಣಿಸಲಾಗದು  ಆಕಾರ, ಬಣ್ಣ, ತಾಳುವಿಕೆಯಲ್ಲೂ  ಇವು ಹೊಂದಿಕೆಯಾಗುವುದಿಲ್ಲ . ಹೇತಿ -ಪ್ರಹೇತಿ, ಉತ್ತರಕ್ಕೊಬ್ಬ-ದಕ್ಷಿಣಕ್ಕೊಬ್ಬ ಎಂಬ  ಮಾತುಗಳನ್ನು  ಇಲ್ಲಿ ಸಂವಾದಿಯಾಗಿ ತೆಗೆದುಕೊಳ್ಳಬಹುದು. 

    “ಕಿರಿದರಲ್ಲಿ ಪಿರಿದರ್ಥ”  ಎಂಬಂತೆ  ವೈರುಧ್ಯದ ಬಗೆಗೆ ಹಲವು ಮಾತುಗಳನ್ನು ಹೇಳುವ ಬದಲು  ಕೇವಲ ಮೂರು ಪದಗಳಲ್ಲಿ ಹಲವು ಅಯಾಮಗಳ ಅರ್ಥವನ್ನು ಒಟ್ಟಿಗೆ ಸೆರೆಹಿಡಿಯಲಾಗಿದೆ. ಇದೇ ಭಾಷಾ ಸೊಬಗು ಅಲ್ಲವೆ.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

    ಪಿ ಎಸ್ ಯು ಕಂಪನಿಗಳಿಂದ ಲಾಭಾಂಶಗಳ ಸುರಿಮಳೆ

    ಹಣಕಾಸಿನ ವ್ಯವಹಾರ ನಡೆಸುವುದು ತಿಳಿದಿದ್ದರೆ ಸಾಕು ಅದು ಆರ್ಥಿಕ ಸಾಕ್ಷರತೆ ಎಂಬುದು ಹೆಚ್ಚಿನವರ ಅಭಿಪ್ರಾಯ. ಈಗಿನ ತಂತ್ರಜ್ಞಾನದ ಯುಗದಲ್ಲಿ ಕೇವಲ ಈ ಸರಳ ಗಣಿತದ ಲೆಕ್ಕ ಕ್ಯಾಲುಕಲೇಟರ್‌ ಗಳು ಮೊಬೈಲ್‌, ಲ್ಯಾಪ್‌ ಟ್ಯಾಪ್‌, ವಾಚ್‌ ಗಳಲ್ಲಿ ಲಭ್ಯವಿರುವುದರಿಂದ ಹೆಚ್ಚಿನವರು ಸರಳ ಗಣಿತದ ಕೂಡುವ, ಕಳೆಯುವ, ಭಾಗಾಕಾರ, ಗುಣಾಕಾರಗಳಿಗೆ ಇವನ್ನೇ ಅವಂಲಂಬಿಸುತ್ತಾರೆ. ಇದು ನಮ್ಮ ಚಿಂತನಾ ಸಾಮರ್ಥ್ಯವನ್ನು ಕ್ಷೀಣಿತಗೊಳಿಸಿದೆ. ಈಗಿನ ಸ್ಪೆಷಾಲಿಟಿ, ಸೂಪರ್‌ ಸ್ಪೆಷಾಲಿಟೀಸ್‌ ಸಮಯದಲ್ಲಿ ಆರ್ಥಿಕ ಸಾಕ್ಷರತೆಯೂ ಸರಳವಾಗಿಲ್ಲ. ಆರ್ಥಿಕ ಪೇಟೆಗಳಲ್ಲಿ ಆಗುತ್ತಿರುವ ಘಟನೆಗಳು, ಅಳವಡಿಸಿಕೊಳ್ಳುತ್ತಿರುವ ಶೈಲಿ, ಬೆಳವಣಿಗೆಗಳ ಬಗ್ಗೆ ಅರಿತುಕೊಳ್ಳುವುದು ಅವಶ್ಯಕವಾಗಿದೆ.

    ಕಾರ್ಪೊರೇಟ್‌ ವಲಯದಲ್ಲಾಗುತ್ತಿರುವ ಬದಲಾವಣೆಗಳು ಅತಿಯಾದ ವೇಗದಲ್ಲಿದ್ದು, ಕೋವಿಡ್ ಪ್ರಭಾವ ಭರ್ಜರಿಯಾದ ಸುಧಾರಣೆಗಳ ಕಾರಣ ಅನಿರೀಕ್ಷಿತ ಮಟ್ಟದ ಅಭಿವೃದ್ಧಿಯ ಅಂಕಿ ಅಂಶಗಳು ಹೊರಬೀಳುತ್ತಿರುವುದರಿಂದ ವಿಶ್ವದ ನಾನಾ ದೇಶಗಳು ಆಕರ್ಷಿತರಾಗಿ ಹೆಚ್ಚಿನ ಹಣವನ್ನು ಭಾರತದಲ್ಲಿ ಹೂಡಿಕೆಗೆ ಹರಿಸುತ್ತಿವೆ. ಇದು ಸ್ಥಳೀಯ ವಿತ್ತೀಯ ಸಂಸ್ಥೆಗಳನ್ನೂ ಸಹ ಚುರುಕುಗೊಳಿಸಿ ಷೇರುಪೇಟೆ, ಬಂಡವಾಳ ಪೇಟೆಗಳಲ್ಲಿ ಉತ್ಸಾಹಮಯ ವಾತಾವರಣವನ್ನು ನಿರ್ಮಿಸಿದೆ. ವಿಶ್ವಮಾನ್ಯತೆ ಪಡೆದ, ದೇಶದ ಹೆಗ್ಗುರುತಾದ ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನ ಸೆನ್ಸೆಕ್ಸ್‌ 52 ಸಾವಿರ ಪಾಯಿಂಟುಗಳ ಗಡಿದಾಟಿದ ಸರ್ವಕಾಲೀನ ದಾಖಲೆ ನಿರ್ಮಿಸಿದ ನಂತರವಂತೂ ಷೇರುಪೇಟೆಯಲ್ಲಿ ಚಟುವಟಿಕೆಯು ಗರಿಗೆದರಿದೆ.

    ರಿಲಯನ್ಸ್‌ ಇಂಡಸ್ಟ್ರೀಸ್‌ ಕಂಪನಿಯ ಷೇರಿನ ಬೆಲೆ ಕಳೆದ ಒಂದು ವರ್ಷದಲ್ಲಿ ಕೋವಿಡ್‌ ಕಾರಣದಿಂದ ಮಾರ್ಚ್‌ 2020 ರಲ್ಲಿ ರೂ.880 ಕ್ಕೆ ಕುಸಿದಿದ್ದು ಅಲ್ಲಿಂದ ಸತತವಾದ ಏರಿಕೆಯಿಂದ ಸೆಪ್ಟೆಂಬರ್‌ ತಿಂಗಳಲ್ಲಿ ರೂ.2,368 ರ ವಾರ್ಷಿಕ ಗರಿಷ್ಠಕ್ಕೆ ಜಿಗಿದು ಸಧ್ಯ ರೂ.2,140 ರಲ್ಲಿ ವಹಿವಾಟಾಗುತ್ತಿದೆ. ಅಂದರೆ ಮಾರ್ಚ್‌ 2020 ರಲ್ಲಿ ರೂ.5.50 ಲಕ್ಷ ಕೋಟಿಯಷ್ಠು ಮಾರ್ಕೆಟ್‌ ಕ್ಯಾಪಿಟಲೈಸೇಷನ್‌ ಹೊಂದಿದ್ದ ಕಂಪನಿ ಸೆಪ್ಟೆಂಬರ್‌ ತಿಂಗಳಲ್ಲಿ ಸುಮಾರುಮೂರು ಪಟ್ಟು ಜಿಗಿತ ಕಂಡು ರೂ.16 ಲಕ್ಷ ಕೋಟಿ ದಾಟಿದೆ. ಈ ಹಂತದಲ್ಲಿ ಕಂಪನಿಯ ಚೇರ್ಮನ್‌ ರ ಆಸ್ತಿಯು ಹೆಚ್ಚಿನ ಜಿಗಿತ ಕಂಡಿದೆ ಎಂದು ವರ್ಣಿಸಲಾಯಿತು. ಇಲ್ಲಿ ಓದುಗರು/ ಹೂಡಿಕೆದಾರರು ಗಮನಿಸಬೇಕಾದ ಅಂಶ ಎಂದರೆ ರಿಲಯನ್ಸ್‌ ಇಂಡಸ್ಟ್ರೀಸ್‌ ಕಂಪನಿಯ ಗಾತ್ರ ಎಷ್ಠಿದೆ ಎಂದರೆ ಪೇಟೆಯಲ್ಲಿ ಒಂದು ರೂಪಾಯಿಯ ಏರಿಕೆಯಾಗಲಿ ಅಥವಾ ಇಳಿಕೆಯಾಗಲಿ ಕಂಡಾಗ ಆ ಷೇರಿನ ಮಾರ್ಕೆಟ್‌ ಕ್ಯಾಪಿಟಲೈಸೇಷನ್‌ ನಲ್ಲಿ ರೂ.633.94 ರಷ್ಠು ಏರಿಳಿತ ಕಾಣುತ್ತದೆ ಎಂಬುದು.

    ಇದೇ ರೀತಿ ಅನೇಕ ಕಂಪನಿಗಳು ಪೇಟೆಯ ಚೇತರಿಕೆಗನುಗುಣವಾಗಿ ಭರ್ಜರಿ ಏರಿಕೆಯನ್ನು ಪ್ರದರ್ಶಿಸಿವೆ. ಟಾಟಾ ಸ್ಟೀಲ್‌ ಕಂಪನಿಯ ಷೇರಿನ ಬೆಲೆ ಹಿಂದಿನ ವರ್ಷ ಮಾರ್ಚ್‌ ನಲ್ಲಿ ರೂ.250 ರ ಸಮೀಪವಿದ್ದು, ಈ ವರ್ಷ ಅದರ ಬೆಲೆ ರೂ.780 ರವರೆಗೂ ಏರಿಕೆ ಕಂಡು ರೂ.720 ರ ಸಮೀಪ ವಹಿವಾಟಾಗುತ್ತಿದೆ. ಟಾಟಾ ಮೋಟಾರ್ಸ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಕೆನರಾ ಬ್ಯಾಂಕ್‌, ಹೆಚ್‌ ಡಿ ಎಫ್‌ ಸಿ, ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌, ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌, ಕೋಲ್‌ ಇಂಡಿಯಾ, ಐಟಿಸಿ, ಲಾರ್ಸನ್‌ ಅಂಡ್‌ ಟೋಬ್ರೋ, ಆರ್‌ ಇ ಸಿ ಮುಂತಾದ ಅನೇಕ ಕಂಪನಿಗಳು ಸಹ ಅವುಗಳ ಗಾತ್ರಕ್ಕನುಗುಣವಾಗಿ ಏರಿಕೆ ಪ್ರದರ್ಶಿಸಿವೆ.

    ಸಧ್ಯದ ಪರಿಸ್ಥಿತಿಯಲ್ಲಿ ಸೆನ್ಸೆಕ್ಸ್‌, ನಿಫ್ಟಿ, ವಲಯಾವಾರು ಸೂಚ್ಯಂಕಗಳು ಗರಿಷ್ಠ ಮಟ್ಟದಲ್ಲಿವೆ ಹಾಗಾಗಿ ಈ ಸಂದರ್ಭದಲ್ಲಿ ಯಾವ ಶೈಲಿಯಲ್ಲಿ ಷೇರುಪೇಟೆಯಲ್ಲಿ ಚಟುವಟಿಕೆ ನಿರ್ವಹಿಸಿದಲ್ಲಿ ಸುರಕ್ಷತೆ ಸಾಧ್ಯ ಎಂಬುದು ಹಲವರ ಪ್ರಶ್ನೆಯಾಗಿದೆ.

    ಇಲ್ಲಿ ಸಣ್ಣ ಹೂಡಿಕೆದಾರರು ಮಾತ್ರವಲ್ಲದೆ, ನಿವೃತ್ತರು, ಹೂಡಿಕೆಗೆ ಪ್ರತಿಯಾಗಿ ನಿಯತವಾಗಿ ಆದಾಯ ಪಡೆಯಲಿಚ್ಚಿಸುವವರಿಗೆ ಈಗಿನ ಪೇಟೆಗಳು ಸುವರ್ಣಾವಕಾಶ ಕಲ್ಪಿಸುತ್ತಿವೆ ಎನ್ನಬಹುದು. ಆದರೆ INVEST IT & FORGET IT ಮಾಧರಿಯಲ್ಲ INVEST & TRACK IT ಮಾಧರಿ ಚಟುವಟಿಕೆಯಾದಲ್ಲಿ ಮಾತ್ರ ಉತ್ತಮ ಅವಕಾಶಗಳು ಸಾಧ್ಯ. ಹೆಚ್ಚಿನವರು ಷೇರುಪೇಟೆಯಲ್ಲಿಯಾಗಲಿ, ಮ್ಯುಚುಯಲ್‌ ಫಂಡ್‌ ಗಳಲ್ಲಾಗಲಿ, ಬ್ಯಾಂಕ್‌ ಡಿಪಾಜಿಟ್‌ ಗಳಲ್ಲಾಗಲಿ ಹೂಡಿಕೆ ಮಾಡುವುದು ದೀರ್ಘಕಾಲೀನ ಹೂಡಿಕೆಯು ಲಾಭ ಗಳಿಸಿಕೊಡುತ್ತದೆ ಎಂಬ ಚಿಂತನೆಯಿಂದ. ಆದರೆ ಷೇರುಪೇಟೆಯಲ್ಲಿ ಹೆಚ್ಚಿನ ಕಂಪನಿಗಳ ಷೇರುಗಳು ಗರಿಷ್ಠದಲ್ಲಿರುವುದರಿಂದ ಏರಿಕೆ ಲಾಭವಾಗಲಿ, ಅಥವಾ ಆ ಕಂಪನಿಗಳು ನೀಡುವ ಫಲಗಳಾದ ಡಿವಿಡೆಂಡ್‌ ಗಳಾಗಲಿ ಆಕರ್ಷಕವಾಗಿರಲಾರದು.

    ಉದಾಹರಣೆಗೆ ರಿಲಯನ್ಸ್‌ ಇಂಡಸ್ಟ್ರೀಸ್‌ ನಲ್ಲಿ ಈ ಬೆಲೆಯಲ್ಲಿ ಹೂಡಿಕೆ ಮಾಡಿದಲ್ಲಿ ಆ ಕಂಪನಿ ವರ್ಷಾಂತ್ಯದ ನಂತರ ಹಿಂದಿನ ವರ್ಷ ನೀಡಿದ ಪ್ರತಿ ಷೇರಿಗೆ ರೂ.6.50 ಯ ಡಿವಿಡೆಂಡ್‌ ವಿತರಣೆ ಮಾಡಬಹುದು. ಷೇರಿನ ಬೆಲೆ ಈಗಾಗಲೆ ಗರಿಷ್ಠದ ಸಮೀಪದಲ್ಲಿರುವುದರಿಂದ ಷೇರಿನ ಬೆಲೆ ಏರಿಕೆಯೂ ಹೂಡಿಕೆಯ ಮೊತ್ತಕ್ಕೆ ಆಕರ್ಷಕವಾಗಿರಲಾರದು. ಏರಿಕೆ ಕಂಡರೂ ಹೆಚ್ಚಿನ ಹೂಡಿಕೆದಾರರು ಮಾರಾಟ ಮಾಡಲು ಇಚ್ಚಿಸಲಾರರು. ಅದೇ ರೀತಿ ಕೋಟಕ್‌ ಮಹೀಂದ್ರ ಬ್ಯಾಂಕ್‌ ಸುಮಾರು ರೂ.2000 ದ ಸಮೀಪವಿದೆ. ಈ ಬ್ಯಾಂಕ್‌ ನ ಷೇರು ಖರೀದಿಸಿದಲ್ಲಿ ಯಾವ ರೀತಿಯ ಲಾಭ ಗಳಿಸಬಹುದು? ಈ ಕಂಪನಿ ಪ್ರತಿ ರೂ.2,000 ದ ಷೇರಿಗೆ 80 ಪೈಸೆ ಯಂತೆ ಡಿವಿಡೆಂಡ್‌ ಹಿಂದಿನ ವರ್ಷ ನೀಡಿದೆ.

    ಇನ್ನು ಬ್ಯಾಂಕ್‌ ಡಿಪಾಜಿಟ್‌ ಗಳು ಕೇವಲ 5 ರಿಂದ 6% ನಷ್ಟು ಬಡ್ಡಿ ಗಳಿಸಿಕೊಡುತ್ತವೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹೊಸ ಡಿವಿಡೆಂಡ್‌ ನೀತಿಯನ್ನು ಸಾರ್ವಜನಿಕ ವಲಯದ ಕಂಪನಿಗಳಲ್ಲಿ ಜಾರಿಗೊಳಿಸಿದೆ. ಅದರಂತೆ ಸಾರ್ವಜನಿಕ ವಲಯದ ಕಂಪನಿಗಳು ವರ್ಷಕ್ಕೆ ಕನಿಷ್ಠ 2 ಡಿವಿಡೆಂಡ್‌ ಗಳನ್ನು, ಕೆಲವು ಕಂಪನಿಗಳು ವರ್ಷಕ್ಕೆ 4 ಬಾರಿ ಮಧ್ಯಂತರ ಡಿವಿಡೆಂಡ್‌ ಗಳನ್ನು ವಿತರಿಸಬಹುದಾಗಿದೆ. ಈ ದಿಶೆಯಲ್ಲಿ ಅನೇಕ ಕಂಪನಿಗಳು ಸಾಗಿವೆ. ಇದು ಜನಸಾಮಾನ್ಯರನ್ನು ಆಕರ್ಷಿಸುತ್ತಲಿದೆ.

    ಅನೇಕ ಅಗ್ರಮಾನ್ಯ ಕಂಪನಿಗಳು ಇತ್ತೀಚೆಗೆ ಪ್ರಕಟಿಸಿದ ಡಿವಿಡೆಂಡ್‌ ಗಳ ಪ್ರಮಾಣ ಇಂತಿದೆ.

    ಆರ್‌ ಇ ಸಿ ಲಿಮಿಟೆಡ್:ಈ ಷೇರಿನ ಬೆಲೆ ಹಿಂದಿನ ವರ್ಷದ ಮಾರ್ಚ್‌ ನಲ್ಲಿ ರೂ.80 ರಲ್ಲಿತ್ತು, ಸಧ್ಯ ರೂ.152 ರ ಸಮೀಪವಿದೆ. ಅಂದರೆ ಬೆಲೆ ಒಂದೇ ವರ್ಷದಲ್ಲಿ ದ್ವಿಗುಣದ ಸಮೀಪವಿದ್ದರೂ, ಈ ಕಂಪನಿ ನವೆಂಬರ್‌ 2020 ರಲ್ಲಿ ರೂ.6 ರಂತೆ ಡಿವಿಡೆಂಡ್‌ ವಿತರಿಸಿದೆಯಲ್ಲದೆ, ಈಗ ಮತ್ತೊಮ್ಮೆ ರೂ.5 ರ ಡಿವಿಡೆಂಡ್‌ ಪ್ರಕಟಿಸಿದೆ. ಈ ತಿಂಗಳ 17 ರವರೆಗೂ ಡಿವಿಡೆಂಡ್‌ ಯುಕ್ತ ಷೇರು ಖರೀದಿಗೆ ಅವಕಾಶವಿದೆ. ಅಂದರೆ ಒಂದೇ ವರ್ಷದಲ್ಲಿ ರೂ.150 ರ ಬೆಲೆಯಲ್ಲಿರುವ ಸಾರ್ವಜನಿಕ ವಲಯದ ಉತ್ತಮ ಕಂಪನಿ ರೂ.11 ರಷ್ಠು ಡಿವಿಡೆಂಡ್‌ ನೀಡಿದೆ. ವರ್ಷಾಂತ್ಯದ ನಂತರ ಮತ್ತೊಂದು ಡಿವಿಡೆಂಡ್‌ ನಿಡಬಹುದಾದ ಅವಕಾಶವಿದೆ.

    ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಲಿಮಿಟೆಡ್:ಒಂದು ಷೇರಿಗೆ ರೂ.7.50 ಯಂತೆ ಡಿವಿಡೆಂಡನ್ನು ಹಿಂದಿನ ತಿಂಗಳು( ಫೆಬ್ರವರಿ) ವಿತರಿಸಿದ ಈ ಕಂಪನಿಯ ಷೇರಿನ ಬೆಲೆ ಕೇವಲ ರೂ.101 ರಲ್ಲಿದೆ. 2017 ರಲ್ಲಿ ಈ ಕಂಪನಿಯ ಷೇರಿನ ಬೆಲೆ ಸುಮಾರು ರೂ.400 ಕ್ಕೂ ಹೆಚ್ಚಿದ್ದು, 2018 ರಲ್ಲಿ 1:1 ರ ಅನುಪಾತದ ಬೋನಸ್‌ ಷೇರು ವಿತರಿಸಿದ ನಂತರದಿಂದ ಷೇರಿನ ಬೆಲೆ ಹೆಚ್ಚಿನ ಏರಿಕೆ ಪ್ರದರ್ಶಿಸಿಲ್ಲವಾದರೂ ಪ್ರತಿ ವರ್ಷವೂ ಆಕರ್ಷಕ ಡಿವಿಡೆಂಡನ್ನು ವಿತರಿಸುತ್ತಿದ್ದು, ಈ ವಾರ 16 ರಂದು ಎರಡನೇ ಮಧ್ಯಂತರ ಡಿವಿಡೆಂಡನ್ನು ವಿತರಿಸಲು ಮುಂದಾಗಿದೆ. ಈ ತಿಂಗಳ 22 ರವರೆಗೂ ಕಂ-ಡಿವಿಡೆಂಡ್‌ ವಹಿವಾಟಿಗೆ ಅವಕಾಶವಿದೆ.

    ಕೋಲ್‌ ಇಂಡಿಯಾ ಲಿಮಿಟೆಡ್:2010‌ ರಲ್ಲಿ ಪ್ರತಿ ಷೇರಿಗೆ ರೂ.245 ರಂತೆ ಐ ಪಿ ಒ ಮೂಲಕ ವಿತರಣೆಗೊಂಡು ಷೇರುಪೇಟೆ ಪ್ರವೇಶಿಸಿದ ಈ ಸಾರ್ವಜನಿಕ ನವರತ್ನ ಕಂಪನಿಯು ಪ್ರತಿ ವರ್ಷವೂ ಹೂಡಿಕೆದಾರರಿಗೆ ಆಕರ್ಷಕವಾದ ಡಿವಿಡೆಂಡನ್ನು ವಿತರಿಸಿದ ಹೆಗ್ಗಳಿಕೆಯನ್ನು ಹೊಂದಿದೆ. ಕಂಪನಿಯ ಘನತೆ ಹೇಗಿದೆ ಎಂದರೆ ಐ ಪಿ ಒ ಮೂಲಕ ಸಂಗ್ರಹಣೆಯ ಗುರಿ ಇದ್ದುದು ರೂ.15 ಸಾವಿರ ಕೋಟಿಯಾದರೂ ಸಂಗ್ರಹಣೆಯಾಗಿದ್ದು ರೂ.2 ಲಕ್ಷ ಕೋಟಿಯಷ್ಠು. ನವೆಂಬರ್‌ 2020 ರಲ್ಲಿ ಪ್ರತಿ ಷೇರಿಗೆ ರೂ.7.50 ಯಂತೆ ಡಿವಿಡೆಂಡ್‌ ವಿತರಿಸಿದ ಈ ಕಂಪನಿ ಈಗ ಮತ್ತೊಮ್ಮೆ ರೂ.5 ರಂತೆ ಡಿವಿಡೆಂಡ್‌ ಘೋಷಿಸಿದೆ. ಷೇರಿನ ಬೆಲೆ ಮಾತ್ರ ರೂ.150 ರ ಸಮೀಪವಿದೆ.

    ಎನ್‌ ಎಂ ಡಿ ಸಿ ಲಿಮಿಟೆಡ್:ಸಾರ್ವಜನಿಕ ವಲಯದ ಈ ಕಂಪನಿ ಷೇರಿನ ಬೆಲೆ ರೂ.134 ರ ಸಮೀಪವಿದೆ. ಇದು ವಾರ್ಷಿಕ ಗರಿಷ್ಠದ ಸಮೀಪವಿದೆಯಾದರೂ, ಖಾಸಗಿ ವಲಯದ ಕಂಪನಿಗಳಿಗೆ ಹೋಲಿಸಿದಲ್ಲಿ ಇದು ತೀರಾ ಕಳಪೆ ಬೆಲೆಯಾಗಿದೆ. ಆದರೆ ಈ ಕಂಪನಿಯು ಪ್ರತಿ ವರ್ಷವೂ ಆಕರ್ಷಕ ಲಾಭಾಂಶ ವಿತರಿಸುತ್ತಿದೆ. ಸಧ್ಯ ಪ್ರತಿ ಷೇರಿಗೆ ರೂ.7.76 ರಂತೆ ಡಿವಿಡೆಂಡ್‌ ಪ್ರಕಟಿಸಿದ್ದು ಈ ತಿಂಗಳ 21 ರವರೆಗೂ ಡಿವಿಡೆಂಡ್‌ ಯುಕ್ತ ವಹಿವಾಟಿಗೆ ಅವಕಾಶವಿದೆ.

    ಭಾರತ್‌ ಡೈನಾಮಿಕ್ಸ್‌ ಲಿಮಿಟೆಡ್‌ :ರಕ್ಷಣಾ ವಲಯದ ಈ ಕಂಪನಿಯ ಷೇರಿನ ಬೆಲೆಯು ರೂ.363 ರ ಸಮೀಪವಿದೆ. ಈ ಕಂಪನಿಯ ಷೇರಿನ ಬೆಲೆ ಹಿಂದಿನ ವರ್ಷದ ಮಾರ್ಚ್‌ ನಲ್ಲಿ ರೂ.147 ರವರೆಗೂ ಕುಸಿದು ನಂತರ ಆಗಷ್ಟ್ ತಿಂಗಳಲ್ಲಿ ಪುಟಿದೆದ್ದು ರೂ.481 ರವರೆಗೂ ಏರಿಕೆ ಕಂಡಿದೆ. ಆ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಆಫರ್‌ ಫಾರ್‌ ಸೇಲ್‌ ಮೂಲಕ ಶೇ.5 ರಷ್ಠರ ಭಾಗಿತ್ವವನ್ನು ರೂ.330 ರ ಮೂಲ ಬೆಲೆಯಲ್ಲಿ ಮಾರಾಟ ಮಾಡಿದ ಕಾರಣ ಷೇರಿನ ಬೆಲೆ ಕುಸಿತ ಕಂಡಿದೆ. ಆದರೆ ಈಗ ಕಂಪನಿಯು ಪ್ರತಿ ಷೇರಿಗೆ ರೂ.6.70 ರಂತೆ ಮಧ್ಯಂತರ ಡಿವಿಡೆಂಡನ್ನು ಘೋಷಿಸಿದೆ. ಈ ತಿಂಗಳ 17 ರವರೆಗೂ ಕಂ-ಡಿವಿಡೆಂಡ್‌ ವಹಿವಾಟಿಗೆ ಅವಕಾಶವಿದೆ.

    ಪವರ್‌ ಫೈನಾನ್ಸ್‌ ಕಾರ್ಪರೇಷನ್‌ ಲಿಮಿಟೆಡ್:ಒಂದು ವರ್ಷದಲ್ಲಿ ರೂ.74 ರ ಸಮೀಪದಿಂದ ರೂ.140 ರ ಗರಿಷ್ಠದವರೆಗೂ ಜಿಗಿತ ಕಂಡಿರುವ ಈ ಕಂಪನಿಯು ಸಧ್ಯ ರೂ.138 ರ ಸಮೀಪವಿದೆ. ಈಗ ಪ್ರತಿ ಷೇರಿಗೆ ರೂ.8 ರಂತೆ ಡಿವಿಡೆಂಡ್‌ ಘೋಷಿಸಿದೆ. ಇದಕ್ಕೆ ಈ ತಿಂಗಳ 18 ರವರೆಗೂ ಕಂ- ಡಿವಿಡೆಂಡ್‌ ವಹಿವಾಟಿಗೆ ಅವಕಾಶವಿದೆ.

    ಹೀಗೆ ಕಡಿಮೆ ಬೆಲೆಯಲ್ಲಿ ಆಕರ್ಷಕ ಡಿವಿಡೆಂಡ್‌ ಗಳನ್ನು ವಿತರಿಸುತ್ತಿರುವ ಸರ್ಕಾರಿ ಸ್ವಾಮ್ಯದ ಬೃಹತ್‌ ಕಂಪನಿಗಳು ಬ್ಯಾಂಕ್‌ ಡಿಪಾಜಿಟ್ ಗಳಿಗಿಂತಲೂ ಉತ್ತಮವೆನಿಸುತ್ತದೆ. ಅಲ್ಲದೆ ಮಾರ್ಚ್‌ ಅಂತ್ಯದ ವರ್ಷದ ನಂತರ ಮತ್ತೊಮ್ಮೆ ಫೈನಲ್‌ ಡಿವಿಡೆಂಡನ್ನೂ ಸಹ ಘೋಷಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಜೊತೆಗೆ ಹೂಡಿಕೆ ಮಾಡಿದ ಬಂಡವಾಳವು ಷೇರಿನ ಬೆಲೆ ಏರಿಕೆಯಿಂದ ಬೆಳವಣಿಗೆಯನ್ನೂ ಕಾಣುವ ಸಾಧ್ಯತೆಗಳು ಹೆಚ್ಚು. ಪ್ರಮುಖವಾದ ಮತ್ತೊಂದು ಅಂಶವೆಂದರೆ ಷೇರುಪೇಟೆಯಲ್ಲಿ ಖರೀದಿಸಿದ ಷೇರುಗಳನ್ನು ಅವಶ್ಯವಿದ್ದಲ್ಲಿ, ಅನುಕೂಲಕರವಾದ ಲಾಭ ಗಳಿಸಿದಲ್ಲಿ ತಕ್ಷಣ ಮಾರಾಟಮಾಡಿ ಎರಡು- ಮೂರು ದಿನಗಳಲ್ಲಿ ಹಣ ಕೈಗೆಟುಕಿಸಿಕೊಳ್ಳಲು ಅವಕಾಶವಿದೆ. ಇದರಿಂದ ಕಂಪನಿಗಳ ಬಗ್ಗೆ ನಕಾರಾತ್ಮಕ ಭಾವನೆ ಮೂಡಿದಾಗ ನಿರ್ಗಮಿಸಲು ಸಾಧ್ಯ. ಅತಿ ಹೆಚ್ಚಿನ ಮೌಲ್ಯದ ಖಾಸಗಿ ಕಂಪನಿಗಳ ಬಗ್ಗೆ ಹೊರಬೀಳುವ ವೈವಿಧ್ಯಮಯ ವಿಶ್ಲೇಷಣೆಗಳಿಗೆ ತುಲನೆ ಮಾಡಿದಲ್ಲಿ ಸಾರ್ವಜನಿಕ ವಲಯದ ಬೃಹತ್‌ ಕಂಪನಿಗಳು ಹೂಡಿಕೆಗೆ ಉತ್ತಮವಾದರೂ ತುಲನಾತ್ಮಕ ನಿರ್ಧಾರ ಒಳಿತು.

    error: Content is protected !!