ಕುಶಸ್ಥಲಿಯ ರೈವತನ ಮಗನಾದ ಕಾಕುಡ್ಮಿ ಎಂಬ ರಾಜನು ತನ್ನ ಮಗಳಾದ ರೇವತಿಗೆ ವರ ಹುಡುಕಲು ಮಾಡಿದ ಯೋಚನೆ ಏನೆಂದರೆ ಅಲ್ಲಿ ಇಲ್ಲಿ ರೇವತಿಯ ವರನನ್ನು ಹುಡುಕಿ,ಕಾಲ ಹರಣ ಮಾಡುವ ಬದಲು, ಸೃಷ್ಟಿ ಕರ್ತ ಬ್ರಹ್ಮನಲ್ಲಿಯೇ ಹೋಗಿ, ತನ್ನ ಮಗಳಿಗಾಗಿ ಸೃಷ್ಟಿಸಿರುವ ವರನ ಬಗ್ಗೆ ತಿಳಿದುಕೊಳ್ಳುವುದು! ಸರಿ ಬ್ರಹ್ಮ ಲೋಕಕ್ಕೆ ಮಗಳೊಂದಿಗೆ ಹೋಗ್ತಾನೆ. ಬ್ರಹ್ಮ ವಿರಾಮಕ್ಕೆಂದು ಸಂಗೀತ ಕೇಳ್ತಿರುತ್ತಾನೆ. ಸ್ವಲ್ಪ ಸಮಯದ ಕಾಯುವಿಕೆಯ ಬಳಿಕ ಸಂದರ್ಶನ ಸಿಕ್ಕು,ತಾನು ಬಂದ ಕಾರಣ ಬ್ರಹ್ಮನಿಗೆ ಅರುಹಿಕೊಂಡಾಗ, ನಕ್ಕ ಬ್ರಹ್ಮ ನೀನಿಲ್ಲಿ ನನಗಾಗಿ ಕಾದ ಸಮಯ ಭೂಲೋಕದಲ್ಲಿ ಸಾವಿರ ಸಾವಿರ ವರ್ಷಗಳು ಆಗಿವೆ. ರೇವತಿಯ ವಯಸ್ಸಿನವರು ಈಗ ಅಲ್ಲಿ ಇಲ್ಲ. ನೀನು ಮರಳಿ ಹೋಗು ಆಗ ದ್ವಾಪರ ಯುಗ ಇರುತ್ತದೆ, ಕೃಷ್ಣನ ಅಣ್ಣ ಬಲರಾಮನೊಂದಿಗೆ ನಿನ್ನ ಮಗಳು ರೇವತಿಯ ಮದುವೆ ಮಾಡು ಅನ್ನುತ್ತಾನೆ.
ಇದು ಭಾಗವತದ 3ನೇ ಅಧ್ಯಾಯದ 9ನೇ ಶ್ಲೋಕದಲ್ಲಿ ಬರುವ ಕಥೆ. ನನಗೆ ಭಾಗವತ ಯಾರು ಹೇಳಿ ಯಾರು, ಯಾವಾಗ ಬರೆದರು ಅನ್ನುವಂತಹ ಅಂಶಗಳು, ತಂದೆ ಮಗಳು ವಿಮಾನದಲ್ಲಿ ಹೋದರೇ, ಹಾರುತ್ತಾ ಹೋದರೇ, ಅಥವಾ ಅದರಲ್ಲಿರುವ ದೈವೀಕರಣ ಮತ್ತು ಅತಿಂದ್ರಿಯ ವಿಷಯಗಳು ಗೌಣ. ನಾನು ಅಪ್ಪನಿಂದ ಈ ಕಥೆ ಕೇಳಿದಾಗಿನಿಂದ ನನ್ನ ಚಿಕ್ಕ ಮೆದುಳಿಗೆ ತಾಕಿದ್ದ ವಿಷಯ ಏನೆಂದರೆ, ಆ ಕಾಕುಡ್ಮಿ ಮತ್ತು ರೇವತಿ ಬ್ರಹ್ಮ ಲೋಕಕ್ಕೆ ಹೋಗಿ ಭೂಮಿಗೆ ಬಂದಾಗ ಹಾಗೆಯೇ ಇದ್ದು, ಭೂಲೋಕದ ಜನರು ಮಾತ್ರ ಸಾವಿರ ಸಾವಿರ ವರ್ಷಗಳನ್ನು ಕಳೆದು ಸತ್ಯಯುಗದಿಂದ ದ್ವಾಪರ ಯುಗಕ್ಕೆ ಬಂದದ್ದು!! …..ಅಪ್ಪ , ಅದು ಹಾಗೆಯೇ…ಬ್ರಹ್ಮನ ಅಥವಾ ಬ್ರಹ್ಮ ಲೋಕದ ಒಂದು ದಿನ ಭೂಲೋಕದ ಸಾವಿರ ಸಾವಿರ ವರ್ಷಗಳಿಗೆ ಸಮ…ಒಂದು ರಾತ್ರಿಯೂ ಅಷ್ಟೇ… ಭೂಲೋಕಕ್ಕಿಂತಲೂ ಎತ್ತರದ ಸ್ತರದಲ್ಲಿರುವ ಲೋಕಗಳು ಅವು (different dimensional)…..ಹಾಗೆ ಹೀಗೆ ಅಂತ ಆಗ ಊಹಿಸಲು ಆಗದಂಥಹಾ ಸಂಖ್ಯೆಗಳನ್ನು ಹೇಳಿದ್ದರು….ಅತ್ಯಂತ ಭಯ,ಭಕ್ತಿ,ಶ್ರದ್ಧೆಯಿಂದ!
20ನೇ ಶತಮಾನದ ವಿಸ್ಮಯ ವಿಜ್ಞಾನಿಯೆಂದೇ ಹೆಸರುವಾಸಿಯಾದ, ಹೆಚ್ಚೇನೂ ವಿದ್ಯಾಭ್ಯಾಸ ಮಾಡದ, ಆಗಿನ ಹಲವಾರು ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶವನ್ನೂ ಪಡೆಯಲು ಆಗದೆ, ಸಾಮಾನ್ಯ ಕಾರಕೂನನಾಗಿ ಕೆಲಸ ಮಾಡುತ್ತಿದ್ದ ಆಲ್ಬರ್ಟ್ ಐನ್ ಸ್ಟೈನ್ ಅಷ್ಟೇ ವಿಚಿತ್ರ ಕುತೂಹಲ ಮೂಡಿಸಿದ್ದ ನನ್ನಲ್ಲಿ. ವಿಜ್ಞಾನದ ವಿದ್ಯಾರ್ಥಿಯಾಗಿದ್ದ ನನಗೆ ಇವನು ಎಲ್ಲಿಯಾದ್ರು ತಗಲಿಕೊಳ್ಳಬಹುದು ಅಂತ ತುಂಬಾ ಕಾತುರತೆ ಇತ್ತು. ಉ ಹೂ ಮಹಾಶಯ ಎಲ್ಲಿಯೂ ಸಿಕ್ಕಲಿಲ್ಲ. ಭಗವದ್ಗೀತೆ ನನ್ನ ಪ್ರೇರಣೆ, ಭಾರತೀಯ ಮೂಲದ ಆಧ್ಯಾತ್ಮಿಕತೆ ನನ್ನ ಜ್ಞಾನದ ಸೆಲೆ ಅಂತ ಹೇಳಿದ್ದಂತೂ ನನ್ನ ಮೂಲಾಧಾರವನ್ನೇ ಕಲಕಿಬಿಟ್ಟಿತ್ತು! Einstain Theory of Relativity,/ General Theory of Relativity ಅಂತ ಹೆಸರಿಸಿದ್ದ E=mc2 ಅನ್ನೋ ಒಂದು ಸಮೀಕರಣವನ್ನು ಬಿಟ್ಟರೆ ಮತ್ತೇನನ್ನೂ ನಾನು ತಿಳಿಯಲಿಲ್ಲ. ಆಗ್ಗೆ ಈ ಸಮೀಕರಣ ತುಂಬಾ ಗೊಂದಲದಿಂದ ಕೂಡಿತ್ತು. ಅತೀ ಚಿಕ್ಕ ಭಾರವಿರುವ ವಸ್ತು, ಭಯಂಕರ ಶಕ್ತಿಯನ್ನು ಹೊಂದಿದೆ ಎಂದು ಹೇಳುವ ಈ ಸಮೀಕರಣದ ಆಧಾರದ ಮೇಲೆಯೇ ಅಣು ಬಾಂಬ್ ತಯಾರಾಗಿದ್ದು, ತನ್ನ ಜೀವಂತ ಅವಧಿಯಲ್ಲಿಯೇ ಆದ ಪ್ರಪಂಚದ ಎರಡನೆಯ ಮಹಾಯುದ್ಧದ ಸಮಯದಲ್ಲಿ ಅಮೆರಿಕಾದ ಪಡೆ ಹೀರೋಷಿಮಾ, ನಾಗಸಾಕಿ ಎಂಬ ಜಪಾನ್ ದೇಶದ ನಗರಗಳ ಮೇಲೆ ಈ ಅಣುಬಾಂಬನ್ನು ಹಾಕಿ, ಅಲ್ಲಿಯ ಮಾನವಕುಲಕ್ಕೆ ವಿನಾಶತೆ ತಂದು, ಸುಮಾರು ಪೀಳಿಗೆಗಳ ಅಂಗವಿಕಲತೆಗೆ ಕಾರಣ ಆಯ್ತು ಅಂತ ತಿಳಿದು ತುಂಬಾ ನೊಂದು ಕೊಂಡನಂತೆ… ಇನ್ಮುಂದೆ ಇದನ್ನು ಪ್ರಪಂಚದ ಶಾಂತಿಗೆ ಮಾತ್ರ ಉಪಯೋಗಿಸಬೇಕು, ವಿನಾಶಕ್ಕೆ ಅಲ್ಲ ಅಂತ ಮುಚ್ಚಳಿಕೆ ಬರೆದನಂತೆ, ನೋಬಲ್ ಶಾಂತಿ ಪಾರಿಷೋತಕ ಪಡೆದನಂತೆ…ಹಾಗೆ ಹೀಗೆ ಅಂತ ಅಲ್ಲಿ ಇಲ್ಲಿ ಕೇಳಿ ತಿಳಿದುಕೊಂಡಿದ್ದೆ ಬಿಟ್ಟರೆ ಪೂರ್ಣ ಗೊತ್ತಿರಲಿಲ್ಲ .
ಸಾಧಾರಣ ಭಾಷೆಯಲ್ಲಿ E=mc2
ಇದೇ ಸಮೀಕರಣದ ಮತ್ತೊಂದು ಅರ್ಥವನ್ನು ಸಾಧಾರಣ ಭಾಷೆಯಲ್ಲಿ ಹೇಳುವುದಾದರೆ ಭೂಮಿಯ ಮೇಲೆ ಆಗ ತಾನೇ ಹುಟ್ಟಿದ ಎರಡು ಅವಳಿ ಜವಳಿ ಮಕ್ಕಳಲ್ಲಿ ಒಂದನ್ನು ಭೂಮಿಯ ಮೇಲೆಯೇ ಬಿಟ್ಟು, ಮತ್ತೊಂದನ್ನು ಬಾಹ್ಯಾಕಾಶದಲ್ಲಿ ಬೆಳಕಿನ ವೇಗದಲ್ಲಿ ಕೊಂಡೊಯ್ದು ತಿರುಗಾಡಿಸಿಕೊಂಡು ಮತ್ತೆ ಭೂಮಿಗೆ ಬಂದರೆ, ಭೂಮಿಯ ಮೇಲಿದ್ದ ಮಗುವಿಗೆ 50 ವರ್ಷ ಆಗಿರುತ್ತದೆ, ಬಾಹ್ಯಾಕಾಶದಿಂದ ಬಂದ ಮಗುವಿಗೆ 5 ವರ್ಷ ವಯಸ್ಸಾಗಿರುತ್ತದೆ …… ಇದನ್ನು ಆಗ ಕೇಳಿದವರು ಇವನಿಗೆ ಹುಚ್ಚು ಹಿಡಿದಿರಬೇಕು,ಏನೇನೋ ಮಾತಾಡ್ತಾನೆ ಅಂದಿದ್ದರಂತೆ!
ಬೆಳಕಿನ ವೇಗ ಅಂದರೆ 3ಲಕ್ಷ ಕಿಲೋಮೀಟರ್ ಪ್ರತಿ ಸೆಕೆಂಡಿಗೆ!ಈ ವೇಗದಲ್ಲಿ ಚಲಿಸುವಾಗ ಕಾಲ ಅಥವಾ time ಕುಗ್ಗುತ್ತದೆ ಅಂತೆ!ಇದನ್ನ Time dilation ಅಂತ ಕರೆದುಕೊಂಡಿದ್ದಾರೆ ವಿಜ್ಞಾನದ ಭಾಷೆಯಲ್ಲಿ. ಭಾಗವತದ ಸಂಖ್ಯೆಗಳ ಆಗಾಧತೆಗೆ ಬೆಚ್ಚಿ ಕೆಲಸಕ್ಕೆ ಬಾರದವರು ನಮಗೂ ಸಂಖ್ಯೆಗಳು ಗೊತ್ತಿವೆ ಅನ್ನೋದನ್ನ ಹೇಳಲಿಕ್ಕೆ ಹುಚ್ಚುಚ್ಚು ಬರೆದುಕೊಂಡಿದ್ದಾರೆ ಅಂತ ಅಂದುಕೊಂಡಿದ್ದ ನನಗೆ ಈ ಬೆಳಕಿನ ವೇಗದ ಸಂಖ್ಯೆ ನೋಡಿ ಮೊದಲಿಗೆ ಬೆಚ್ಚಿ ಬಿದ್ದಿದ್ದೆ. ಅಷ್ಟರಲ್ಲಾಗಲೇ ಬೆಳಕಿನ ಕಿರಣಗಳು ಅಲೆಯ ರೂಪದಲ್ಲಿ ಅಲ್ಲ, ಅಣುಗಳ (photons/particle) ರೂಪದಲ್ಲಿ ಇವೆ ಅಂತ ಸಿದ್ಧಮಾಡಿ ವೇಗವನ್ನು ಪ್ರಮಾಣಿಸಿ ಆಗಿತ್ತು,ಅಷ್ಟೇ ಅಲ್ಲ ಮಾನವ ನಿರ್ಮಿತ ಅಂತಹ ವೇಗವನ್ನು ಸಾಧಿಸಲು ಅಣುಗಳ ಶೋಧನೆಯೂ ನಡೆದು ಯಶಸ್ವಿ ಆಗಿ E=mC^2 ಎನ್ನುವುದು ಅನುಮಾನ ರಹಿತ ಸಿದ್ದಾಂತ ಅಂತ ವಿಜ್ಞಾದ ವಲಯದಲ್ಲಿ ಅಂಗೀಕರಿಸಲ್ಪಟ್ಟಿತ್ತು, ಇಂದಿಗೆ 105 ವರ್ಷಗಳ ಹಿಂದೆ! (ಮಾರ್ಚ್ 20,1916)
ಅಂದರೆ, ಭಾಗವತದ ಜನರಿಗೆ ಇದರ ಕಲ್ಪನೆ ಸ್ಪಷ್ಟವಾಗಿತ್ತು ಅಂತ ಅನ್ನಿಸುತ್ತದೆ. ಸತ್ಯಯುಗ, ತೇತ್ರಾ,ದ್ವಾಪರ ಕಲಿಯುಗ ಅವುಗಳ ಕಾಲ ಏನೇ ಇರಲಿ, ಭಾಗವತವನ್ನಂತೂ ಐನ್ ಸ್ಟೈನ್ ಹುಟ್ಟುವ (1879-1955) ಮೊದಲಿಗೆ ನಮ್ಮ ನೆಲದಲ್ಲಿ ಬರೆದಿದ್ದಾರೆ ಅನ್ನುವುದಂತೂ ನಿಜ. ಇಂಥಹ ಕ್ಲಿಷ್ಟಕರವಾದ ವಿಷಯಗಳನ್ನು ಬಾಲಿಶ ಅನ್ನಿಸಬಹುದಾದಂತಹ ಕಥೆಗಳು ಅನ್ನುವ ಮಾಧ್ಯಮದ ಮೂಲಕ ನಮ್ಮ ದಾರ್ಶನಿಕರು ನಮಗೆ ಬಿಟ್ಟು ಹೋಗಿರುವುದೂ ಗೋಚರಿಸುತ್ತದೆ. ಇಂತಹ ಸಾವಿರ ಸಾವಿರ ಕಥೆಗಳು ಹೇರಳವಾಗಿ ನಮ್ಮಲ್ಲಿ ದೊರಕುತ್ತಿವೆ, ದಿನವೂ ಒಂದಿಲ್ಲೊಂದು ಕಡೆ ಪಠಣಗೊಳ್ಳುತ್ತಿವೆ.
ಇನ್ನು ಮುಂದುವರೆದ ಭಾಗವಾಗಿ ಇದೇ ಸಮೀಕರಣದ ತಳಹದಿಯಲ್ಲಿ, ಈ ಬೆಳಕಿನ ವೇಗಕ್ಕಿಂತಲೂ ಹೆಚ್ಚಿನ ವೇಗದೊಂದಿಗೆ ಒಂದು ವೇಳೆ ಪಯಣಿಸುವುದು ಸಾಧ್ಯವಾದರೆ, ಆಗ ನಾವು ಭೂತ ಭವಿಷತ್ತುಗಳನ್ನೂ ಕಾಣಬಹುದು ಅನ್ನುವ ಅಂಶವನ್ನು ಭೌತ ವಿಜ್ಞಾನಿಗಳು ಮುಂದಿಟ್ಟು, ಅದರ ನಿಟ್ಟಿನಲ್ಲಿ ಪ್ರಯತ್ನ ಸಾಗಿಸಿದ್ದಾರೆ. ಇದನ್ನು Time Travelling ಅಂತಾರೆ. ಇದು ಸಿದ್ಧವಾಗುವಾಗ ನಾನು ಇರುತ್ತೇನೋ ಇಲ್ಲವೋ ಗೊತ್ತಿಲ್ಲ ಆದರೆ ನನಗೆ ನನ್ನ ಅಪ್ಪ ಈ ತರಹದ ಸಾಧ್ಯತೆಯನ್ನು (ತೊರವೇ)ರಾಮಾಯಣದಲ್ಲಿ ಇರುವುದನ್ನು ಹೇಳಿದ್ದಾರೆ. ಅದೆಂದರೆ, ಸಕಲ ಲೋಕಗಳನ್ನೂ ಗೆದ್ದಿದ್ದ, ದಿಕ್ಪಾಲಕರನ್ನು ತನ್ನ ಸಿಂಹಾಸನದ ಮೆಟ್ಟಿಲುಗಳಾಗಿ ಮಾಡಿಕೊಂಡಿದ್ದ ಅಜೇಯ ರಾವಣನಿಗೆ ತನ್ನ ಅಂತ್ಯವನ್ನು (ಭವಿಷತ್ತನ್ನು) ತಿಳಿಯುವ ಕುತೂಹಲವಾಗಿ, ಬ್ರಹ್ಮನನ್ನು ಪೀಡಿಸಿ ಕಂಡುಕೊಂಡದ್ದು! ಮಾನವನಾದ ರಾಮ ಎಂಬುವನಿಂದ ನನ್ನ ಅಂತ್ಯ ಬರೆದಿದ್ದಿಯಲ್ಲ ಅಂತ ಬ್ರಹ್ಮನನ್ನು ಲೇವಡಿ ಮಾಡಿದರೂ ಉದಾಸೀನತೆ ಹೊಂದದೆ, ದಶರಥ,ಕೌಶಲ್ಯೆಯರ ಮದುವೆಯೇ ಆಗದಂತೆ ತಡೆದ ಅವನ ವಿಫಲ ಪ್ರಯತ್ನ ! ಕೊನೆಗೆ ಬ್ರಹ್ಮ ಬರಹವನ್ನು ಯಾರಿಂದಲೂ ತಪ್ಪಿಸಲು ಆಗಲ್ಲ ಅನ್ನುವ ಸಂದೇಶ.
ಬ್ರಹ್ಮ ಬರಹ ಅಥವಾ Destiny
ಇಂತಹ ಸಂದೇಶ ಪುಟಕ್ಕೊಂದರಂತೆ ನಮ್ಮ ಪುಸ್ತಕಗಳಲ್ಲಿ ಇವೆ. ಹಾ…ಬ್ರಹ್ಮ ಬರಹ ಅಥವಾ Destiny ಅನ್ನೋದು ಪೂರ್ವ ನಿಯೋಜಿತ ಅಂತ ಅನ್ನುವ ಒಂದು ಸಿದ್ದಾಂತವನ್ನೂ ಈಗಿನ ಮುಂದುವರೆದ ಭೌತ ವಿಜ್ಞಾನ ಕಂಡುಕೊಂಡಿದೆಯಂತೆ, ಈ Time Travelling ಮಾಡುವಾಗ!! ಎಂತಹಾ ಆಶ್ಚರ್ಯ! ಇವುಗಳನ್ನೆಲ್ಲ ನಮ್ಮ ಪೂರ್ವಜರು ಸಾವಿರ ಸಾವಿರ ವರ್ಷಗಳ ಹಿಂದೆ ನಮಗೆ ಹೇಳಿದ್ದಾರೆ ಅನ್ನುವುದು ನನಗೆ ಭಯಂಕರ ಕುತೂಹಲ. ಇಂದು ಈ ಲೇಖನ ಬರೆಯುತ್ತಿರುವುದು ಕಾಕತಾಳೀಯ ಅಂತ ನನಗೆ ಅನ್ನಿಸಿದರೂ ಯಾವಾಗಲೋ ಪೂರ್ವ ನಿಯೋಜನೆಯಾಗಿ ನಿರ್ಧರಿತ ವಾಗಿತ್ತಾ?!!…ಗೊತ್ತಿಲ್ಲ.
ಒಂದು ಸಂಶೋಧನೆಯ ಮೂಲದ ಪ್ರಕಾರ ಈ ಬೆಳಕಿನ ವೇಗಕ್ಕಿಂತಲೂ ಹೆಚ್ಚಿನ ವೇಗ ಇರಬಹುದಾ, ಎಲ್ಲಿರಬಹುದು, ಹೇಗಿರಬಹುದು, ಯಾವುದಿರಬಹುದು ಅನ್ನುವ ಅಂಶವನ್ನು ದಶಕಗಳ ಕಾಲ ಯೋಚಿಸಿ, ವಿಜ್ಞಾನಿಗಳು ಕಡೆಗೆ ನಮ್ಮ ಗ್ರಂಥಗಳಲ್ಲಿ ಇರುವ ಮನೋವೇಗ ಅನ್ನುವ ಶಬ್ದಕ್ಕೆ ತತ್ತರಿಸಿ ಹೋಗಿದ್ದಾರಂತೆ! ಹೌದು ಮನಸ್ಸಿನ ವೇಗ, ಸಾಮರ್ಥ್ಯದ ಬಗ್ಗೆ ಸಾಕಷ್ಟು ನಿದರ್ಶನ ನಮ್ಮಲ್ಲಿದೆ.
ಭೃಗು ಮಹರ್ಷಿ ಅಂತೂ ವೈಕುಂಠಕ್ಕೆ ಸಶರೀರನಾಗಿ ಹೋಗಿ ವಿಷ್ಣುವಿನ ಎದೆಗೆ ಕಾಲಿಂದ ಒದ್ದು, ತಿರುಪತಿಯ ಶ್ರೀನಿವಾಸನ ವೃತ್ತಾಂತಕ್ಕೆ ಕಾರಣನಾಗುತ್ತಾನೆ. ಬೆಳಕಿನ ವೇಗವನ್ನು ದಾಟಲು ಅಸಾಧ್ಯ ಅಂತ ಗೆರೆ ಎಳೆದಿದ್ದ ಭೌತ ವಿಜ್ಞಾನ, ಮತ್ತೆ ವಿಸ್ತರಿಸಿಕೊಂಡಿದ್ದೇ ಅದಕ್ಕಿಂತಲೂ ಹೆಚ್ಚಿನ ವೇಗವನ್ನು ನಮ್ಮ ನೆಲದ ಹಿರಿಯರು ಮನೋವೇಗ ಅಂತ ಹೇಳಿದ್ದರಿಂದ. ಇದರ ಸಾಧ್ಯತೆಯನ್ನು ಭೌತಿಕವಾಗಿ ಕಂಡುಕೊಳ್ಳಲು ನಮ್ಮ ಯೋಗ, ಧ್ಯಾನಗಳ ಮೊರೆ ಹೋಗಿದ್ದಾರಂತೆ! ಇದರಲ್ಲಿ ಜಪಾನ್ ವಿಜ್ಞಾನಿಗಳು ಅಗ್ರ ಸ್ಥಾನದಲ್ಲಿದ್ದಾರಂತೆ. ಆದರೆ ನಾವುಗಳು ಮಾತ್ರ ಚೀನಾ ಸಾಮಾನುಗಳನ್ನು ಬಹಿಷ್ಕರಿಸುವುದರ,ಉಪಯೋಗಿಸುವ ಬಗ್ಗೆ ಗಹನ ಚಿಂತೆಯಲ್ಲಿದ್ದೇವೆ.
ಐನ್ ಸ್ಟೈನ್ ತನ್ನ ಸಂಶೋಧನೆಯ ಕುತೂಹಲವನ್ನು 16ನೇ ವಯಸ್ಸಿನಿಂದ ಶುರು ಮಾಡ್ತಾನೆ. ಅವನಿಗೆ ಐಸಾಕ್ ನ್ಯೂಟನ್ ಕಂಡು ಹಿಡಿದಿದ್ದ ಗುರುತ್ವಾಕರ್ಷಣೆ ಏನೇನನ್ನೋ ಯೋಚಿಸುವಂತೆ ಮಾಡಿರುತ್ತದೆ ಮತ್ತು ಪ್ರೇರಣೆ ಆಗಿರುತ್ತದೆ. ಅಷ್ಟೇ ಅಲ್ಲ ನ್ಯೂಟನ್ ಹೇಳಿದ ಗುರುತ್ವಾಕರ್ಷಕ ನಿಯಮದಂತೆ ಸಾಧಿಸಲಾಗದ ಮೆರ್ಕ್ಯುರಿ ಎಂಬ ಗ್ರಹದ ಸೂರ್ಯನ ಸುತ್ತಲಿನ ಪಥ ಚಲನೆಯ ಆಕಾರವನ್ನು ಇವನು ಸರಿಯಾಗಿ ಹೇಳುತ್ತಾನೆ. ಅವನ ಮೂಲ ವಿಷಯ time, space ಅಂದರೆ ಕಾಲ ಮತ್ತು ಆಕಾಶ. ಅಲ್ಲಿಯತನಕ x,y,z ಅಂತ ಆಕಾಶದಲ್ಲಿ(space) ಕರೆದುಕೊಂಡ 3 ಆಯಾಮಗಳು (dimensions) ಮಾತ್ರ ಇದ್ದವು. ಅವುಗಳ ಜೊತೆ ಕಾಲವೂ (time) ಒಂದು ಆಯಾಮ ಅಂತ ಮೊದಲಿಗೆ ಹೇಳಿದ್ದೇ ಐನ್ ಸ್ಟೈನ್. ಭೂಮಿಯ ತಿರುಗುವಿಕೆ, ಮತ್ತು ಸೂರ್ಯನ ಸುತ್ತುವ ಪರಿಭ್ರಮಣೆಯ ವೇಗಗಳು ಮತ್ತು ಅವುಗಳ ಪ್ರಭಾವ ಯಾವ ರೀತಿಯಲ್ಲಿ ಭೂಮಿಯ ಮೇಲಿನ ವಸ್ತುಗಳ ವೇಗವನ್ನು, ಆಕಾಶದಲ್ಲಿ ಹಾರಾಡುವ ವಸ್ತುಗಳ ವೇಗಗಳನ್ನು ತನ್ನ ಕಕ್ಷೆಯೊಳಗೆ ಹಿಡಿದಿಟ್ಟಿದೆ ಅನ್ನುವುದನ್ನು ಆಸಕ್ತಿಯಿಂದ ಅಭ್ಯಸಿಸಿ, ಪ್ರಪಂಚ ಅಲ್ಲಿಯವರೆಗೆ ಕಂಡು ಕೇಳರಿಯದ ಸಿದ್ದಾಂತ ಮಂಡಿಸುತ್ತಾನೆ ಮತ್ತು ಇಂದಿನ ಎಲ್ಲ ಅದ್ಭುತ ಅವಿಷ್ಕಾರಗಳಿಗೆ ಮೂಲನಾಗುತ್ತಾನೆ.
ಭಾರೀ ಕುತೂಹಲ ಅಂದರೆ ನಮ್ಮ ದಾರ್ಶನಿಕರು time ನ್ನು ಕಾಲ/ ಶಿವ ತತ್ವಅಂತಲೂ space ನ್ನು ವಿಷ್ಣು ತತ್ವ ಅಂತಲೂ ಬಹಳ ಹಿಂದೆಯೇ ಹೇಳಿ ಲೆಕ್ಕವಿಲ್ಲದಷ್ಟು ಪುರಾಣಗಳಲ್ಲಿ ಎಷ್ಟೋ ವಿಷಯಗಳನ್ನು ಕಥೆಗಳ ರೂಪದಲ್ಲಿ ಬರೆದಿದ್ದಾರೆ. ದುರ್ದೈವ ಅಂದರೆ ನಮಗೆ ಅದರಲ್ಲಿ ಏನು ಹೇಳಿದ್ದಾರೆ ಅಂತಾನೇ ಗೊತ್ತಾಗದೇ ಇರೋದು, ಇಂತಹ ಅವಿಷ್ಕಾರಗಳು ಪ್ರಪಂಚದ ಯಾವುದಾದ್ರು ಮೂಲೆಯಿಂದ ಬಂದಾಗ, ತಲೆಯಲ್ಲಿನ ದೀಪ ಒಮ್ಮೆಲೇ ಬೆಳಗಿದಂತೆ ಅಯ್ಯೋ ಇದು ನಮ್ಮ ಗ್ರಂಥಗಳಲ್ಲಿ ಇದೆಯಲ್ಲಾ ಅಂತ ಹೇಳಿ, ನಗೆಪಾಟಲಿಗೆ ಕಾರಣ ಆಗುವುದು! ಅದೇಕೆ ನಮ್ಮ ಗ್ರಂಥದಲ್ಲಿರುವುದು ಏನು ಅಂತ ನಮಗೆ ತಿಳಿಯುವುದಿಲ್ಲ? ನಾವು ಬರೀ ಗ್ರಂಥ ಪಾಲಕರಾ?ಅಥವಾ ಅದರಲ್ಲಿರುವುದಕ್ಕೆ ಬೇರೆಯಾಗಿ ನಾವು ಅರ್ಥೈಸಿ, ವಿಷಯ ಪಲ್ಲಟ ಮಾಡುವುದಕ್ಕೆ ಏನಾದ್ರು ಗಹನ ಕಾರಣ ಇದೆಯಾ? ಇವು ಗಂಭೀರ ಅಧ್ಯಯನದ ವಿಷಯ ಈಗಲಾದ್ರೂ ಆಗಬೇಕು.
E=mc2 ಅನ್ನುವ ಸಮೀಕರಣದಲ್ಲಿ E ಅಂದ್ರೆ ಶಕ್ತಿ, m ಅಂದ್ರೆ ವಸ್ತುವಿನ ಭಾರ, c ಅಂದ್ರೆ ಬೆಳಕಿನ ವೇಗ. ಪ್ರತಿ ವಸ್ತುವಲ್ಲೂ ಅಗಾಧ ಶಕ್ತಿ ಇರುವುದನ್ನು ಇದು ಪ್ರತಿಪಾದಿಸುತ್ತದೆ. ನಮ್ಮವರು ಈ ಶಕ್ತಿಯನ್ನು ಎಲ್ಲೆಡೆಯಲ್ಲಿ ಕಂಡುಕೊಂಡು ಪ್ರತಿ ಚರಾಚರ ವಸ್ತುಗಳನ್ನು ನಮ್ಮಲ್ಲಿ ಪೂಜಿಸಲ್ಪಟ್ಟಿರುವುದು ಮತ್ತೊಂದು ಬಗೆಯ ವ್ಯಂಗ್ಯಕ್ಕೆ ಕಾರಣವಾಗಿದೆ. ವೇಗಕ್ಕೆ ಗಾಳಿ ರೂಪಕ ಕೊಟ್ಟು ಅದಕ್ಕೂ ಒಂದು ತತ್ವ ರೂಪಿಸಿದ್ದಾರೆ. ಐನ್ ಸ್ಟೈನ್ ಹೇಳಿದ ಮೇಲೆ 20 ವರ್ಷಗಳ ತನಕ ಅವನು ಹೇಳಿದ್ದು ಯಾರಿಗೂ ಅರ್ಥ ಆಗಿಲ್ಲ ಅಂದ್ರೆ ಇಂತಹ ವಿಷಯಗಳನ್ನು ಎಷ್ಟೋ ಹಿಂದೆ ಹೇಳಿ,ಮುಂದಕ್ಕೆ ಜೋಪಾನವಾಗಿ ಇಡೋದು ಎಂತಹ ಕಷ್ಟದ ಕೆಲಸ ಯೋಚಿಸಿ. ಅದನ್ನು ನಮ್ಮ ದಾರ್ಶನಿಕರು ಮಾಡಿದ್ದಾರೆ. ಆದರೆ ನಮಗೆ ಜೋಪಾನವಾಗಿ ಇಟ್ಟುಕೊಳ್ಳುವ ಕೆಲಸಕ್ಕಷ್ಟೇ ಸೀಮಿತ ಗೊಳಿಸಿದರಾ?!

ಇದನ್ನು ಐನ್ ಸ್ಟೈನ್ ಕಂಡುಕೊಂಡು ಭಾರತದ ಅಧ್ಯಾತ್ಮಿಕತೆಗೆ ತನ್ನ ಪರಮ ಗೌರವವನ್ನು ಸೂಚಿಸಿದನಾ? ಈ ನಿಟ್ಟಿನಲ್ಲಿ ಅವನೊಡನೆ ಮಾತಾಡಿ ಅನಿಸಿಕೆಗಳನ್ನು ಸ್ಪಷ್ಟವಾಗಿ ದಾಖಲಿಸುವ ವ್ಯವಧಾನ ನಮ್ಮ ಭಾರತೀಯರಿಗೆ ಇಲ್ಲದೇ ಹೋಗಿದ್ದು ಒಂದು ದುರಂತವೇ. ಅವನು parallel universe ಅಂದ್ರೆ ನಮ್ಮಂತಹ ಸುಮಾರು ವಿಶ್ವಗಳು ಇರುವ ಬಗ್ಗೆ ಮಾತಾಡುತ್ತಾನೆ. ನಮ್ಮವರು ಅದನ್ನೇ ಬಹು ಲೋಕಗಳು ಅಂದು ಪುರಾಣಗಳನ್ನು ಪುಟಗಟ್ಟಲೆ ಬರೆದು, ಕೋಟಿ ಸೂರ್ಯರ ಬಗ್ಗೆ ಹೇಳಿದುದನ್ನು ಅವನಿಗೆ ಅವನ ಭಾಷೆಯಲ್ಲಿ ಮನದಟ್ಟು ಮಾಡಿದ್ದರೆ, ನಮ್ಮ ಜೀವಿತ ಅವಧಿಯಲ್ಲೇ ಕಾಲದ ಹಿಂದೆ, ಮುಂದೆ ಅಡ್ಡಾಡಬಹುದಿತ್ತೇನೋ?(Time travelling) ಈಗ ನಮ್ಮ ಪುರಾಣದ ಎಲ್ಲ ವಿಷಯಗಳನ್ನೂ ಮುಂದುವರೆದ ವಿಜ್ಞಾನ ಅನ್ನಿಸಿಕೊಂಡಿರುವುದು ಭಾರೀ ಶ್ರದ್ಧೆಯಿಂದ ಅಭ್ಯಾಸ ಮಾಡುತ್ತಿದೆ! ನಮ್ಮಲ್ಲಿ ಮಾತ್ರ ಆಸಡ್ಡತೆಯ ಆಗರ ಆಗುತ್ತಿರುವುದು ದುರಂತ.
ಧಾರ್ಮಿಕ ಗ್ರಂಥಗಳು ಜ್ಞಾನದ ಭಂಡಾರಗಳು
ಇಲ್ಲಿ ನಾವು ನಮ್ಮ ಪುರಾಣಗಳಿಗೆ ಇಲ್ಲದ ಅಪವಾದಗಳನ್ನು, ಸಲ್ಲದ ಟೀಕೆಗಳನ್ನು ಬೆಳಗಾದ್ರೆ ಮಾಡುತ್ತಾ ಅಥವಾ ಅರ್ಥವಾಗದ ಭಾಷೆಯಲ್ಲಿ ಅವುಗಳನ್ನು ವ್ಯಾಖ್ಯಾನಿಸುತ್ತಾ ಮೂರ್ಖರಂತೆ ವರ್ತಿಸುತ್ತಿದ್ದೇವೆ. ಅದರಲ್ಲಿರುವುದು ದೈವವಾಣಿ . ಶ್ರದ್ಧೆ, ನಂಬಿಕೆಯಿಂದ ಕೇಳಬೇಕು, ಕೇಳಿ ವೈಕುಂಠದಲ್ಲಿ, ಕೈಲಾಸಗಳಲ್ಲಿ ಸೇರಿಕೊಳ್ಳಬೇಕು ಎಂಬಂತಹ ಷರಾಗಳನ್ನು ಮಹಾಪ್ರಸಾದವೆಂಬಂತೆ ತಲೆ ತಲಾಂತರದಿಂದ ಕೇಳಿಸಿಕೊಂಡು, ಅವು ಬೇರೆ ಯಾವುದೋ ಲೋಕದ ವಿಷಯಗಳು, ಇಲ್ಲಿಯ ಜೀವನಕ್ಕಲ್ಲ ಅನ್ನುವುದನ್ನು ನಮ್ಮ ಜೀವತಂತುಗಳಲ್ಲಿ ತುಂಬಿ ಬಿಟ್ಟಿದ್ದಾರೆ. ಪುರಾಣಗಳ ವಠಾರಗಳಿಂದ ಯಾವೊಬ್ಬ ಐನ್ ಸ್ಟೈನ್ ಏಕೆ ಹೊರಬರಲಿಲ್ಲ ಅಂತ ನಾನು ಬಹು ನೋವಿನಿಂದ ಕೇಳುತ್ತೇನೆ. ನಮ್ಮ ಹಿರಿಯರು ಶ್ರದ್ಧೆ ಇರಬೇಕು ಅಂದರೇ ಹೊರತು ಅಂಧ ಶ್ರದ್ಧೆ ಇರಬೇಕು ಅನ್ನಲಿಲ್ಲ. ನಂಬಿಕೆ ಇಡಿ ಅಂದರೇ ವಿನಃ ಮೂಢನಂಬಿಕೆ ಇಡಿ ಅನ್ನಲಿಲ್ಲ. ಧಾರ್ಮಿಕ ಗ್ರಂಥಗಳು ಜ್ಞಾನದ ಭಂಡಾರಗಳು, ಅವುಗಳ ಜ್ಞಾನವನ್ನು ಸರಿಯಾದ ಅವುಗಳ ದಾರಿಯಲ್ಲಿ ಅರಿತು, ಉಪಯೋಗಿಸಿಕೊಳ್ಳು ಬೇಕು ಅಂತ ನಾವು ಅರಿಯದ ಹೊರತು ಅವು ಬಾಲಿಶವಾಗಿಯೇ ಕಾಣುವುದು. ಅಸಡ್ಡೆಯ ಗುಡ್ಡೆಗಳಾಗಿ ಅಪ್ರಯೋಜಕ ಎನಿಸುವುದು. ಅಪ್ಪ ನನಗೆ ಯಾವಾಗಲೂ ಹೇಳುತ್ತಿದ್ದರು…ಮೇಷ್ಟ್ರ ಮಗ ನೀನು ಅಂತ ಅಹಂ ಇರಬಾರದು, ಬರಬಾರದು… ಮೇಷ್ಟ್ರ ಮಗನಾದಾಕ್ಷಣ ಆಗಲೀ, ಎಲ್ಲಾ ಪುಸ್ತಕಗಳು ನಿನ್ನಲ್ಲಿ ಇವೆ ಅಂತಾಗಲೀ ವಿದ್ಯೆ ಬರಲ್ಲ. ಪುಸ್ತಕಗಳೇ ಇಲ್ಲದವನೂ ಬುದ್ದಿವಂತ ಆಗಿರುತ್ತಾನೆ. ನಿನಗಿಂತಲೂ ಸಮರ್ಥನಾದವನ ಹತ್ತಿರ ಪುಸ್ತಕ ಇಲ್ಲದಿದ್ದರೂ ನಿನ್ನ ಪುಸ್ತಕ ಕೊಟ್ಟು ಅವನಿಂದ ಅರ್ಥೈಸಿಕೊಳ್ಳಬೇಕು. ಅವನ ಕೈ ಕೊಳಕಾಗಿದೆ, ಅವನು ಮುಟ್ಟಿದರೆ ನನ್ನ ಪುಸ್ತಕ ಮಾಸಿ, ಅಪವಿತ್ರ ಆಗುತ್ತದೆ ಅಂತ ಯೋಚಿಸುವುದು ಮೂರ್ಖರ ಲಕ್ಷಣ ಮತ್ತು ಪುಸ್ತಕ, ಅದರಲ್ಲಿರುವುದು ಏನು ಅಂತ ಅರಿಯದ ಅವಿವೇಕಿಗಳು. ಅರ್ಥದ ಅಧ್ಯಯನ ಕಾಲ ಕಾಲಕ್ಕೆ ಇರಬೇಕು. ಓದನ್ನು ಜೀರ್ಣಿಸಿಕೊಳ್ಳಬೇಕೇ ಹೊರತು ಪರೀಕ್ಷೆಗಳಲ್ಲಿ ವಾದ ಮಾಡಿ, ವಾಂತಿ ಮಾಡಿ ನಿರಾಯಾಸವಾಗಬಾರದು…ಶಂಕರರಿಗೆ ತಾನು ಬೋಧಿಸಿದ್ದು, ಅರಿತದ್ದು ಏನು ಅಂತ ದಿವ್ಯ ಜ್ಞಾನ ತಿಳಿಸಿದವನು ಒಬ್ಬ ನಿಕೃಷ್ಟನೇ…..ಅಂತ.
ಧರ್ಮವನ್ನು ಮೀರಿ ಮಾನವನ ಕಲ್ಯಾಣಕ್ಕೆ ಕಂಡುಕೊಂಡಂತಹ ಸತ್ಯಗಳನ್ನು ನಮ್ಮ ದಾರ್ಶನಿಕರು ತಮ್ಮ ಹೆಸರುಗಳನ್ನು ಎಲ್ಲಿಯೂ ನಮೂದಿಸದೆ ನಮಗೆ ಕೊಟ್ಟು ಹೋಗಿದ್ದಾರೆ. ಹೆಸರನ್ನು ನಮೂದಿಸಿದರೆ ಆ ಹೆಸರನ್ನು ದ್ವೇಷಿಸುವ ತಮ್ಮ ವೈರಿಗಳು ಎಲ್ಲಿ ಇಂತಹ ಸತ್ಯಗಳಿಂದ ವಂಚಿತರಾಗುತ್ತಾರೋ ಅನ್ನುವ ಅವರ ಕಳಕಳಿ ದೈವತ್ವವೇ ಸರಿ. ಈಗಿನ ನವೀನ ಭೌತ ವಿಜ್ಞಾನ Quantum Physics /Mechancis ಅಂತ ಕರೆಯಿಸಿಕೊಂಡು ತನ್ನ ಕಾರ್ಯವನ್ನು ಅತ್ಯಾಧುನಿಕ, ಅತೀ ವಿಚಿತ್ರ ಅನ್ನುವಂತಹ ಸೂಕ್ಷ್ಮ ವಿಷಯಗಳ ಮೇಲೆ ಶುರು ಮಾಡಿದೆ. ಅದನ್ನು ನೋಡಿದರೆ ನಮ್ಮ ಆರು ಷಟ್ ದರ್ಶನಗಳನ್ನು, ಹದಿನೆಂಟು ಪುರಾಣಗಳನ್ನು, ಮಹಾಕಾವ್ಯಗಳನ್ನು ಹೊಸ ಭಾಷೆಯಲ್ಲಿ ನೋಡುತ್ತಿರುವಂತೆ ಭಾಸವಾಗುತ್ತದೆ. ಸಂಬಂಧ ಪಟ್ಟ ಆಧ್ಯಾತ್ಮಿಕ ಚಿಂತನೆಯ ಪ್ರಾಜ್ಞರು , ಅದಕ್ಕೆಂದೇ ಇರುವ ವೇದ ವಿದ್ಯಾಲಯಗಳು ವಿಶಾಲ ಹೃದಯಿಗಳಾಗಿ ಅವರೊಡನೆ ಕೈಜೋಡಿಸುವ ಕೆಲಸವನ್ನು ಆದಷ್ಟು ಶೀಘ್ರವಾಗಿ ಮಾಡಿದರೆ ಮಾನವ ಕುಲದ ಕಲ್ಯಾಣ ಭೂಮಿಯಲ್ಲೇ ಆಗಬಹುದು ಅಂತ ನನ್ನ ಅನಿಸಿಕೆ.
आ: नो भद्रा: क्रतवो यन्तु विश्वत:
ऋग्वेद 1-89-1
ಒಳ್ಳೆಯ ಜ್ಞಾನ ನಮಗೆ ಎಲ್ಲ ಕಡೆಯಿಂದ ಹರಿದು ಬರಲಿ.
ಋಗ್ವೇದ 1-89-1
ಚಿತ್ರಗಳು: pexels ಮತ್ತು ವಿಕಿಪಿಡಿಯಾ





