ಕೋವಿಡ್ ಸೋಂಕು ಪ್ರಸರಣ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಹುಚರ್ಚಿತವಾಗಿರುವ ಒಂದರಿಂದ ಒಂಭತ್ತನೇ ತರಗತಿಗಳ ಮೌಲ್ಯಾಂಕನ ಪರೀಕ್ಷೆಗಳ ಕುರಿತಂತೆ ಅತಿ ಶೀಘ್ರದಲ್ಲಿ ಸೂಕ್ತ ನಿರ್ಧಾರವೊಂದಕ್ಕೆ ಬರಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸೋಮವಾರ ಬೆಂಗಳೂರಿನಲ್ಲಿ, ಕೋವಿಡ್ ಹಿನ್ನೆಲೆಯಲ್ಲಿ 2020-21ನೇ ಸಾಲಿಗೆ 1 ರಿಂದ 9ನೇ ತರಗತಿಗಳಿಗೆ ಮೌಲ್ಯಾಂಕನ ಪರೀಕ್ಷೆ ವೇಳಾಪಟ್ಟಿ ಹಾಗೂ ಶೈಕ್ಷಣಿಕ ಅವಧಿ ನಿಗದಿಪಡಿಸುವ ಕುರಿತು ಇಲಾಖೆಯ ಅಧಿಕಾರಿಗಳು, ಶಿಕ್ಷಣ ತಜ್ಞರು, ಖಾಸಗಿ ಶಾಲಾ ಸಂಸ್ಥೆಗಳು, ಪೋಷಕರ ಸಂಘಟನೆಗಳ ಪ್ರತಿನಿಧಿಗಳು ಹಾಗೂ ವಿವಿಧ ಶಿಕ್ಷಕರ ಸಂಘಟನೆಗಳ ಪ್ರತಿನಿಧಿಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲರ ಅಭಿಪ್ರಾಯಗಳನ್ನು ಕ್ರೋಢಿಕರಿಸಿ ಒಂದು ನಿರ್ಧಾರಕ್ಕೆ ಬರಲಾಗುವುದು ಎಂದರು.
45 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದು, ಅದರಲ್ಲಿ ಖಾಸಗಿ ಶಾಲೆಗಳ ಪ್ರತಿನಿಧಿಗಳು, ಪೋಷಕರು, ಶಿಕ್ಷಕರ ಸಂಘಟನೆಗಳ ಪ್ರತಿನಿಧಿಗಳು ಪರೀಕ್ಷೆ ನಡೆಸುವ ಕುರಿತು ಪ್ರತಿಯೊಬ್ಬರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಬಹುಪಾಲು ಪ್ರತಿನಿಧಿಗಳು ಯಾವುದಾದರೂ ಮಾದರಿಯ ಮೌಲ್ಯಮಾಪನ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಒಳ್ಳೆಯದೆಂದು ಅಭಿಪ್ರಾಯಪಟ್ಟಿದ್ದಾರೆ. ಹಾಗೆಯೇ ಸಭೆಯಲ್ಲಿ ಹಾಜರಿದ್ದ ಹಿರಿಯ ಶಿಕ್ಷಣ ತಜ್ಞ ಡಾ. ವಿ.ಪಿ. ನಿರಂಜನಾರಾಧ್ಯ ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ಪರೀಕ್ಷೆ ಕುರಿತಂತೆ ಇರುವ ನಿಯಮಗಳನ್ನು ವಿವರಿಸಿ, ಸದರಿ ಸಂದರ್ಭದಲ್ಲಿ ಈ ಕಾನೂನಿನಡಿ ಯಾವ ರೀತಿಯ ಉಪಕ್ರಮಗಳನ್ನು ಕೈಗೊಳ್ಳಬಹುದೆಂದು ವಿಷದವಾಗಿ ಸಾದರಪಡಿಸಿದ್ದಾರೆ. ಈ ಎಲ್ಲ ಅಭಿಪ್ರಾಯಗಳನ್ನೂ ಗಣನೆಗೆ ತೆಗೆದುಕೊಂಡು ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಯಾವ ಕ್ರಮಗಳನ್ನು ಕೈಗೊಳ್ಳಬಹುದೆಂಬ ಶೀಘ್ರದಲ್ಲಿ ನಿರ್ದೇಶನಗಳನ್ನು ಹೊರಡಿಸಲಾಗುವುದು ಎಂದು ಅವರು ಹೇಳಿದರು.
ಪ್ರಸ್ತುತ ಕೋವಿಡ್ ಸೋಂಕಿನ ಪ್ರಸರಣದ ಹಿನ್ನೆಲೆಯಲ್ಲಿ 6 ರಿಂದ 9ನೇ ತರಗತಿಗಳವರೆಗೆ ಭೌತಿಕ ತರಗತಿಗಳನ್ನು ನಿಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆ ಕುರಿತಂತೆ ವ್ಯಾಪಕ ಚರ್ಚೆ ಶುರುವಾಗಿದೆ. ಕಳೆದ ಬಾರಿ ನಾವು ಸೋಂಕಿನ ಹಿನ್ನೆಲೆಯಲ್ಲಿ ಈ ತರಗತಿಗಳಿಗೆ ಪರೀಕ್ಷೆ ನಡೆಸಿರಲಿಲ್ಲ. 10 ಮತ್ತು 12ನೇ ತರಗತಿಗಳಿಗೆ ಮಾತ್ರವೇ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದೆವು. ಆ ಅನುಭವದ ಆಧಾರದಲ್ಲಿ ಈ ಬಾರಿಯೂ 10 ಮತ್ತು 12ನೇ ತರಗತಿಗಳಿಗೆ ಪರೀಕ್ಷೆ ನಡೆಸಲಿದ್ದು ಈಗಾಗಲೇ ಪರೀಕ್ಷಾ ವೇಳಾಪಟ್ಟಿ ಪ್ರಕಟಸಿಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.
ಇಂದು ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ಸಂಘಟನೆಗಳ ಪ್ರತಿನಿಧಿಗಳು 1 ರಿಂದ 9ನೇ ತರಗತಿಗಳಿಗೆ ಸರ್ಕಾರ ನಿಗದಿಪಡಿಸಿದ್ದ ಪಠ್ಯಭಾಗವನ್ನು ಈಗಾಗಲೇ ಮುಗಿಸಿದ್ದು, ಪುನರಾವರ್ತನೆ ಸಹ ಮಾಡಲಾಗಿದೆ. ವಿದ್ಯಾರ್ಥಿಗಳು ಈಗಾಗಲೇ ಭೌತಿಕವಾಗಿ ಇಲ್ಲವೇ ಆನ್ ಲೈನ್ ಮೂಲಕ ಪಾಠಗಳನ್ನು ಆಲಿಸಿದ್ದಾರೆ. ಯಾವುದಾದರೂ ರೀತಿಯಲ್ಲಿ ಕಲಿಕೆಯ ಮೌಲ್ಯಾಂಕನವನ್ನು ನಡೆಸುವುದು ಸೂಕ್ತ. ಪರೀಕ್ಷೆ ನಡೆಸದೇ ಹೋದರೆ ಯಾವ ವಿದ್ಯಾರ್ಥಿ ಯಾವ ವಿಷಯದಲ್ಲಿ ಹಿಂದುಳಿದಿದ್ದಾನೆ, ಅವನನ್ನು ಮುಂದಿನ ತರಗತಿಗೆ ಯಾವ ರೀತಿಯಲ್ಲಿ ಸಜ್ಜುಗೊಳಿಸಬೇಕು ಎಂದು ಮೌಲ್ಯಾಂಕನವಿಲ್ಲದೇ ಅಳೆಯಲಾಗದು. ಮೌಲ್ಯಾಂಕನ ನಡೆಸದೇ ಮುಂದಿನ ತರಗತಿಗೆ ತೇರ್ಗಡೆ ಎಂದು ಒಮ್ಮೆ ಘೋಷಿಸಿದ್ದೇ ಆದರೆ ಮಕ್ಕಳು ಓದುವುದರತ್ತ ಆಸಕ್ತಿ ಕಳೆದುಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಯಾವುದಾದರೂ ರೀತಿಯಲ್ಲಿ ನಾವು ಮೌಲ್ಯಮಾಪನ ನಿರ್ವಹಿಸಿಯೇ ಮಕ್ಕಳ ಫಲಿತಾಂಶ ನೀಡಬೇಕೆಂದು ಪ್ರತಿನಿಧಿಗಳು ಅಭಿಪ್ರಾಯಪಟ್ಟಿದ್ದಾರೆ ಎಂದರು.
ಶಿಕ್ಷಣ ಹಕ್ಕು ಕಾಯ್ದೆಯ ಆವಕಾಶಗಳಡಿ ಯಾವ ತರಗತಿಗಳಿಗೆ ಮೌಲ್ಯಾಂಕನ ನಡೆಸಬೇಕು ಎಂಬುದೂ ಸೇರಿದಂತೆ ಪ್ರಸ್ತುತ ಸಂದರ್ಭದಲ್ಲಿ ಯಾವ ಉಪಕ್ರಮಗಳನ್ನು ಕೈಗೊಳ್ಳಬಹುದು, ನಮ್ಮ ಭಾವನೆಗಳು ಏನೇ ಇದ್ದರೂ ಈ ವಿಷಯದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಾಯ್ದೆಗಳನ್ನು ಪ್ರತಿಯೊಬ್ಬ ಶೈಕ್ಷಣಿಕ ಪಾಲುದಾರರು ಅನುಸರಿಸಲೇಬೇಕಾಗಿರುವ ಕುರಿತು ವಿ.ಪಿ. ನಿರಂಜನಾರಾಧ್ಯ ಸವಿವರವಾಗಿ ವಿವರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಂದಿನ ಶೈಕ್ಷಣಿಕ ಸಾಲಿನ ಪ್ರಾರಂಭದಲ್ಲಿ ಸೇತುಬಂಧ ಕಾರ್ಯಕ್ರಮವನ್ನು ಇನ್ನಷ್ಟು ವೇಗವರ್ಧಕಗೊಳಿಸುವ ಮಾದರಿಯಲ್ಲಿ ನಡೆಸಲು ಸಹ ಆಲೋಚಿಸಲಾಗುತ್ತಿದೆ ಎಂದು ಸುರೇಶ್ ಕುಮಾರ್ ವಿವರಿಸಿದರು.
ಯಾವುದೇ ಶಾಲೆಗಳೇ ಆಗಲಿ ಅನುತ್ತೀರ್ಣ ಮಾಡುವುದಕ್ಕೆಂದೇ ಪರೀಕ್ಷೆಗಳನ್ನು ಬಳಸಿಕೊಳ್ಳುವಂತಿಲ್ಲ. ಆದರೆ ಈ ಸಾಲಿನಲ್ಲಿ ಒಂದರಿಂದ ಐದು ಮತ್ತು ಆರರಿಂದ ಒಂಭತ್ತನೇ ತರಗತಿಗಳ ವಿದ್ಯಾರ್ಥಿಗಳ ಕಲಿಕಾನುಭವ ಸಮಾನವಾಗಿಲ್ಲವಾದ್ದರಿಂದ ಸಿಸಿಇ ಅಡಿಯಲ್ಲಿ ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಕಲಿಕೆಯನ್ನು ಅವಲೋಕಿಸಿ ದಾಖಲಿಸುವ ಜವಾಬ್ದಾರಿ ಹೊಂದಿದ್ದಾರೆ. ಹಾಗಾಗಿ ಯಾವುದೇ ಶಾಲೆಗಳು ಸಾರಾಂಶ ಮೌಲ್ಯಮಾಪನ (ಸಮ್ಮೇಟೀವ್ ಅಸೆಸ್ಮೆಂಟ್) ಮಾಡುವಲ್ಲಿ ಕ್ರಮ ಕೈಗೊಳ್ಳಬೇಕಿದೆ. ಮುಂದಿನ ತರಗತಿಗಳಿಗೆ ತೇರ್ಗಡೆ ಹೊಂದುವಲ್ಲಿ ರಚನಾತ್ಮಕ ಮೌಲ್ಯಮಾಪನ (ಫಾರ್ಮೇಟಿವ ಅಸೆಸ್ಮೆಂಟ್) ಪರಿಗಣಿಸಿಯೂ ತೀರ್ಮಾನ ಕೈಗೊಳ್ಳಬಹುದು ಎಂಬ ಅಭಿಪ್ರಾಯಗಳೂ ಇವೆ. ಈ ಎಲ್ಲ ಅವಕಾಶಗಳನ್ನು ಅವಲೋಕಿಸಿ ಸೂಕ್ತ ನಿರ್ಧಾರವೊಂದನ್ನು ಅತಿ ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಸಚಿವರು ತಿಳಿಸಿದರು.
ಈಗಾಗಲೇ ಪಾಠ ಪ್ರವಚನ ನಡೆದಿರುವುದರಿಂದ ಮಕ್ಕಳಿಗೆ ಪರೀಕ್ಷೆ ನಡೆಸಬೇಕು, ಪರೀಕ್ಷೆ ನಡೆಸದೇ ಹೋದರೆ ಓದದಿದ್ದರೂ ಪಾಸಾಗಬಹುದೆಂಬ ಭಾವನೆ ಮೂಡುತ್ತದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಎಸ್. ಹೊರಟ್ಟಿಯವರು ಸಹ ತಮಗೆ ಪತ್ರ ಬರೆದಿದ್ದಾರೆ ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಖಾಸಗಿ ಶಾಲಾ ಸಂಸ್ಥೆಗಳಾದ ರೂಪ್ಸಾ, ಕ್ಯಾಮ್ಸ್, ಪೋಷಕರ ಸಂಘಟನೆಗಳು, ಶಿಕ್ಷಕರ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಿ. ಕುಮಾರ ನಾಯ್ಕ, ಸಾಶಿಇ ಆಯಕ್ತ ವಿ. ಅನ್ಬು ಕುಮಾರ್, ಹಿರಿಯ ಶಿಕ್ಷಣ ತಜ್ಞ ಡಾ. ವಿ.ಪಿ. ನಿರಂಜನಾರಾಧ್ಯ ಸೇರಿದಂತೆ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಕತೆ ಯಾರಿಗೆ ಇಷ್ಟ ಇಲ್ಲ ಹೇಳಿ? ’ಒಂದಾನೊಂದು ಕಾಲದಲ್ಲಿ’ ’ಒಂದೂರಲ್ಲಿ’ ಅಂತ ಶುರು ಆಗುವ ಕತೆ ಕೇಳಲು ತೆರೆದುಕೊಳ್ಳುವ ಕಿವಿಗಳಿಗೇನು ಕಮ್ಮಿ ಇಲ್ಲ. ಕತೆ ಮುಗಿವವರೆಗೂ ಊಟ ತಿಂಡಿ ಯಾವುದೂ ನೆನಪಿಗೆ ಬರುವುದಿಲ್ಲ. ನಡು ನಡುವೆ ಬರುವ ತಿರುವುಗಳಂತೂ ಮತ್ತಷ್ಟು ಕೌತುಕತೆಯನ್ನು ಹೆಚ್ಚಿಸುತ್ತವೆ. ಅಷ್ಟೇ ಅಲ್ಲ ಬೇರೆ ಏನನ್ನೂ ಯೋಚಿಸದಂತೆ ಮಾಡುತ್ತವೆ. ಕತೆ ಯಾವ ವಯೋಮಾನದವರನ್ನೂ ಬಿಡುವುದಿಲ್ಲ. ಸುಂದರ ಕಾಮನಬಿಲ್ಲಿನಂತೆ ಸೆಳೆಯುವ ತಾಕತ್ತು ಅದಕ್ಕಿದೆ. ಅದರಲ್ಲೂ ಚಿಕ್ಕ ಮಕ್ಕಳಿಗಂತೂ ಅದೊಂದು ಸುಂದರ ಲೋಕ.
ಈಗೇನಿದ್ದರೂ ಯೂಟ್ಯೂಬ್ ಮೊಬೈಲ್ ಜಮಾನಾ. ಅದರಲ್ಲಿ ಮಕ್ಕಳ ಕಥೆಗಳು ಎಲ್ಲ ಭಾಷೆಯಲ್ಲೂ ಎಷ್ಟು ಬೇಕಷ್ಟು ಸಿಗುತ್ತವೆ. ಆದರೆ ಅಮ್ಮ ಹೇಳಿದ ಹಾಗೆ ಅಜ್ಜಿ ಹೇಳಿದ ಹಾಗೆ ಅನಿಸುವುದಿಲ್ಲ. ನೋಡುವ ಕತೆಗಳಿಗೂ ಕೇಳುವ ಕತೆಗಳಿಗೂ ಅಜಗಜಾಂತರವೆನಿಸುತ್ತದೆ. ಕೇಳುವ ಕತೆಯಲ್ಲಿ ಕಲ್ಪನೆಯಲ್ಲಿ ಪಾತ್ರಗಳು ಅವುಗಳ ಚಿತ್ರಗಳ ಮೂಲಕ ಕತೆ ಓಡುತ್ತಿರುತ್ತದೆ. ಅದು ’ಹ್ಞೂಂ’ ’ಹ್ಞೂಂ’ಎನ್ನುವ ಕಾಲುಗಳ ಜೊತೆ. ಎಷ್ಟು ಕೇಳಿದರೂ ಇನ್ನೊಂದು ಮತ್ತೊಂದು ಎಂದು ಪೀಡಿಸಲೇಬೇಕೆನಿಸುತ್ತದೆ.
ಕಥೆಯೊಳಗಿನ ಕಥೆಗಳು
ರಾತ್ರಿ ಮಲಗುವಾಗಲಂತೂ ಕತೆ ಕೇಳಿಯೇ ಮಲಗುವುದು. ಕೆಲವೊಂದಿಷ್ಟು ಮಕ್ಕಳಿಗಂತೂ ಊಟದ ಸಮಯದಲ್ಲೂ ಕತೆ ಬೇಕು. ಇಲ್ಲದಿದ್ದರೆ ಊಟ ಇಳಿಯುವುದಿಲ್ಲ. ರಾಮಾಯಣ ಮಹಾಭಾರತದಂಥ ಮಹಾಕಾವ್ಯಗಳ ಮೌಖಿಕ ಕಥೆಗಳು ಕಥೆಯೊಳಗಿನ ಕಥೆಗಳು ಉಪಕಥೆಗಳನ್ನು ಕೇಳಿ ಬೆಳೆದಿರುವ ಹಿಂದಿನ ತಲೆಮಾರಿನವರಿಗೆ ಕಥೆಯ ರುಚಿ ಗೊತ್ತು. ಅದು ಹುಟ್ಟಿಸುವ ರೋಚಕತೆಯಂತೂ ಈಗಿನ ಮಕ್ಕಳಿಗಿಂತ ಹೆಚ್ಚು ಗೊತ್ತು.
ಇನ್ನೊಂದು ಸ್ವಾರಸ್ಯಕರ ಸಂಗತಿಯೆಂದರೆ ಲಿಖಿತ ಪಠ್ಯಗಳು ತಾವು ತಮ್ಮ ಬಗೆಗೆ ಕಥೆಗಳನ್ನು ಹೊಂದಿವೆ. ಮಹಾಭಾರತದಂಥ ದೊಡ್ಡ ಕಾವ್ಯ ಹೇಗೆ ಬರೆಯಲ್ಪಟ್ಟಿತು ಎನ್ನುವುದಕ್ಕೆ ಅದರ ಸಂಪಾದಕನಾದ ವ್ಯಾಸ ತಾನು ಬಾಯಲ್ಲಿ ಹೇಳುತ್ತಿದ್ದಂತೆ ಬರೆದಕೊಳ್ಳಲು ಯಾರಾದರೂ ಬೇಕೆಂದು ಹುಡುಕುತ್ತಿದ್ದ.ಅದು ಅಷ್ಟು ಸುಲಭದ ಕೇಲಸವಲ್ಲ ಅಂತ ಎಲ್ಲರಿಗೂ ಗೊತ್ತಿತ್ತು. ಮಹಾಸಾಹಸದ ಕಾರ್ಯವೆಂದು ಯಾರೂ ಮುಂದೆ ಬರಲಿಲ್ಲ. ಅವನು ಹೇಳಿದಷ್ಟು ವೇಗವಾಗಿ ಯಾರಿಗೂ ಬರೆಯಲಾಗುತ್ತಿರಲಿಲ್ಲ. ಕೊನೆಗೆ ಗಣೇಶ ತಾನು ಬರೆಯುವಷ್ಟು ವೇಗವಾಗಿ ಹೇಳುತ್ತಲೇ ಇರಬೇಕು ಎಂಬ ಷರತ್ತಿನೊಂದಿಗೆ ಒಪ್ಪಿ ಬಂದ. ವ್ಯಾಸ ಮಹರ್ಷಿಯೂ ಅದಕ್ಕೆ ಒಪ್ಪಿಕೊಂಡ.
ಜಾನಪದ ಪಾಠ ಹೇಳುವಂತೆ, ಗಣೇಶನಾದರೋ ದೇವರು. ವ್ಯಾಸನಾದರೋ ಮಾನವ.ಮಾನವ ಸಹಜ ದೇಹ ಬಾಧೆಗಳನ್ನು ತೀರಿಸಿಕೊಳ್ಳಬೇಕಲ್ಲ.ಕೆಲವೊಮ್ಮೆ ಸರಿಯಾದ ಶಬ್ದಗಳನ್ನು ಹೇಳಲೂ ಆತನಿಗೆ ಯೋಚಿಸಬೇಕಾಗುತ್ತಿತ್ತು. ಅದಕ್ಕಾಗಿ ಆಗಾಗ ವ್ಯಾಸ ಗಣೇಶನ ಕೈಯಲ್ಲಿ ಬರೆಯಲು ಆಗದ ಕಷ್ಟದ ಪದಗಳನ್ನು ಹೇಳುತ್ತ ಆ ಸಮಯವನ್ನು ತನ್ನ ಅಗತ್ಯಕ್ಕೆ ಬಳಸಿಕೊಳ್ಳುತ್ತಿದ್ದನಂತೆ.ಅಂದ ಹಾಗೆ ಇಲಿಯಡ್ ಒಡಿಸ್ಸಿಗಳೆರಡರ ಎಂಟು ಪಟ್ಟು ದೊಡ್ಡದು ಮಹಾಭಾರತ. ಅಬ್ಬಬ್ಬಾ! ಇಷ್ಟು ದೊಡ್ಡ ಕತೆಯ ಬಗೆಗೆ ಕೇಳೋಕೆ ಖುಷಿ ಆಗುತ್ತದೆ ಅಲ್ವಾ!
ಈ ಕಥೆ ಕೇಳಿ
ಕತೆ ಬಗ್ಗೆ ಹೇಳುವಾಗ ಒಂದು ಕತೆ ಹೇಳದಿದ್ದರೆ ಹೇಗೆ? ಹಾಗಾದರೆ ಕೇಳಿ. ಒಂದೂರಿನಲ್ಲಿ ಒಬ್ಬ ರಾಜ ಇದ್ದ ಆತನಿಗೆ ಕತೆ ಅಂದರೆ ಬಲು ಇಷ್ಟ. ಎಷ್ಟು ಕೇಳಿದರೂ ಬೇಸರವಿಲ್ಲ. ತೃಪ್ತಿಯೂ ಇಲ್ಲ. ಎಷ್ಟು ಹೇಳಿದರೂ ಇನ್ನೊಂದು ಹೇಳು ಮತ್ತೊಂದು ಹೇಳು ಎಂದು ದುಂಬಾಲು ಬೀಳುತ್ತಿದ್ದ. ಆತನಿಗೆ ಕಥೆ ಹೇಳಿ ಹೇಳಿ ಎಲ್ಲರೂ ಸುಸ್ತಾಗಿದ್ದರು. ಆದರೂ ಆತ ತನಗೆ ಸಾಕು ಎನ್ನುವಷ್ಟು ಕಥೆ ಹೇಳುವವನಿಗೆ ಒಂದು ಸಾವಿರ ಚಿನ್ನದ ನಾಣ್ಯಗಳನ್ನು ಬಹುಮಾನವಾಗಿ ಕೊಡುವುದಾಗಿ ರಾಜ್ಯದಲ್ಲೆಲ್ಲ ಢಂಗುರ ಸಾರಿಸಿದ. ಹೇಳಲು ಬಂದವರೆಲ್ಲ ಸೋತು ಹೋದರು.ಅರಮನೆಯಿಂದ ಹಾಗೆ ಸೋತು ಹೋಗುತ್ತಿದ್ದ ಕತೆಗಾರನಿಗೆ ದಾರಿಯಲ್ಲಿ ಒಬ್ಬ ಬುದ್ಧಿವಂತ ಗೆಳೆಯ ಸಿಕ್ಕ. ಆ ಗೆಳೆಯ ರಾಜನಿಗೆ ಸಾಕೆನ್ನಿಸುವ ದಾರಿ ನನಗೆ ಗೊತ್ತು ಎಂದ.
ಮರು ದಿನ ಆತ ಅರಮನೆಗೆ ಹೋದ. ರಾಜ ಎಂದಿನಂತೆ ಕತೆ ಕೇಳಲು ಕುಳಿತ. ಕತೆಯೂ ಶುರುವಾಯ್ತು ’ಒಂದಾನೊಂದು ಕಾಲದಲ್ಲಿ ಒಂದು ದೊಡ್ಡ ಗಿಳಿಹಿಂಡು ಒಂದು ಮರದ ಮೇಲೆ ಕೂತಿತು. ಆ ಮರದ ಪಕ್ಕವೇ ಒಂದು ಕಣ ಇತ್ತು. ಅಲ್ಲಿ ಕಾಳುಗಳನ್ನು ಆಗ ತಾನೆ ಒಕ್ಕಿ ರಾಶಿ ರಾಶಿ ಹಾಕಿದ್ದರು. ಹಿಂಡಿನಿಂದ ಒಂದು ಗಿಳಿ ಕೆಳಗೆ ಹಾರಿ ಬಂದು ಒಂದು ಕಾಳನ್ನು ಕಚ್ಚಿಕೊಂಡು ಹೋಯಿತು. ಆಮೇಲೆ ಇನ್ನೊಂದು ಗಿಳಿ ಕೆಳಗೆ ಬಂದು ಕಾಳು ಎತ್ತಿಕೊಂಡು ಹೋಯಿತು. ಆಮೇಲೆ ಇನ್ನೂ ಒಂದು ಗಿಳಿ ಹಾರಿ ಕೆಳಕ್ಕೆ ಬಂದು ಕಾಳು ಎತ್ತಿಕೊಂಡು ಹೋಯಿತು. ಆಮೇಲೆ ಇನ್ನೂ ಒಂದು ಗಿಳಿ. . . . .ಹೀಗೆ ಗಂಟೆಗಟ್ಟಲೇ ಹೇಳುತ್ತ ಹೋದ. ರಾಜ ಕತೆ ಕೇಳುತ್ತಿದ್ದಂತೆ ತಲೆ ಹಾಕುತ್ತ ಹ್ಞೂಂಗುಟ್ಟಲೇಬೇಕಿತ್ತು. ರಾಜನಿಗೆ ಕೇಳಿದ್ದೇ ಕೇಳಿ ಸುಸ್ತಾಗಿ ನಿದ್ದೆ ಬರುವಂತಾಯ್ತು.
’ನೀನು ಇನ್ನೂ ಎಷ್ಟು ಹೊತ್ತು ಹೀಗೆ ಇನ್ನೂ ಒಂದು ಗಿಳಿ ಕೆಳಗೆ ಬಂತು ಅದು ಕಾಳು ಎತ್ತಿಕೊಂಡು ಹೋಯಿತು ಅಂತ ಹೇಳ್ತಿಯಾ? ಎಂದು ಕೇಳಿದ. ’ರಾಶಿಯಲ್ಲಿರುವ ಕಾಳುಗಳೆಲ್ಲ ಮುಗಿಯುವವರೆಗೆ ಪ್ರಭೂ.’ ಎಂದು ಮತ್ತೆ ಆತ ಮುಂದುವರೆಸಿದ. ’ಆಮೇಲೆ ಇನ್ನೂ ಒಂದು. . . .’ ರಾಜನಿಗೆ ತಡೆಯಲಾಗಲಿಲ್ಲ.ಅವನು ಸೋಲೊಪ್ಪಿಕೊಂಡ.ಹೇಳುಗನಿಗೆ ಸಾವಿರ ಚಿನ್ನದ ನಾಣ್ಯಗಳನ್ನು ಕೊಟ್ಟು ಕಳುಹಿಸಿದ.
ಬಾಲ್ಯದ ತಮಾಷೆಯ ಆಟಗಳು ತರಲೆಗಳು ತುಂಟಾಟಗಳು ಒಂದೇ ಎರಡೇ ಎಲ್ಲವೂ ಒಂದು ಸಲ ನೆನಪಿನ ಭಿತ್ತಿಯಲ್ಲಿ ಸುಳಿದರೆ ಸಾಕು ಮನಸ್ಸು ಮಗುವಾಗಿ ಬಿಡುತ್ತದೆ. ಅವ್ವನ ಕೈ ತುತ್ತು ಅಪ್ಪನ ಹೆಗಲೇರಿ ಜಾತ್ರೆ ಸಂತೆ ಸುತ್ತಿದ್ದು ಅಕ್ಕ ತಂಗಿಯರ ಜೊತೆ ಅಣ್ಣ ತಮ್ಮಂದಿರ ಸಂಗಡ ಆಟಿಕೆ ಸಾಮಾನುಗಳಿಗಾಗಿ ಜಗಳ ಮಾಡಿದ್ದು ಗೆಳತಿಯರ ಊರು ಕೇರಿಯಲ್ಲೆಲ್ಲ ಸುತ್ತಿ ರಾತ್ರಿ ತಡವಾಗಿ ಮನೆಗೆ ಬಂದು ಒದೆ ತಿಂದದ್ದು ಇವುಗಳ ಜೊತೆ ಕತೆಗಳು ಸಹ ಮನದ ಭಿತ್ತಿಯ ಮೇಲೆ ಅಳಿಸದಂತೆ ಅಚ್ಚೊತ್ತಿಕೊಂಡಿವೆ.
ಈ ಮೇಲಿನ ಕತೆಯಲ್ಲಿ ರಾಜನು ನಿಜಕ್ಕೂ ತಾನು ಆಸೆ ಪಡುವಷ್ಟು ಕತೆಗಳನ್ನು ಕೇಳಿಸಲಾಗದ ಹಿರಿಯರನ್ನು ಪೀಡಿಸುವ ಮಗುವಿನ ಹಾಗೆ. ಕತೆಯ ಮೂಲವನ್ನು ಈ ಕತೆ ಮುರಿಯುತ್ತದೆ. ಯಾವುದೇ ಕಥನವು ಒಂದು ಮುಕ್ತಾಯವನ್ನು ಹೊಂದಿರಬೇಕು. ಕತೆ ನಿಜ ಜೀವನದಂತದ್ದಲ್ಲ ಮುಗಿಸುವಂತದ್ದು. ಕಥನ ಮತ್ತು ವಾಸ್ತವ ಸಂಕಥನ ಮತ್ತು ವಸ್ತು ಬೇರೆ ಬೇರೆ ನಿಯಮಗಳನ್ನು ಅನುಸರಿಸುತ್ತವೆ. ಮೊದಲನೆಯವು ಅಂತ್ಯವುಳ್ಳವು ಆದರೆ ಎರಡನೆಯವು ಅನಂತವಾದವು. ಏನೇ ಹೇಳಿ ಕತೆಗಳು ಮಾಯದ ಮೋಡಿಗೆ ಸಿಲುಕಿಸುತ್ತವೆ. ತನ್ನ ದಾರಿಗೆ ನಮ್ಮನ್ನು ಎಳೆದೊಯುತ್ತದೆ.ಹಳೆಯ ನದಿಗಳು ಹಳೆಯ ಸಾಗರಗಳು ಹಳೆಯ ಗಾಳಿ ಇರಲು ಸಾಧ್ಯವಿಲ್ಲ. ಆದರೆ ಹಳೆಯ ಕತೆಗಳು ಹೊಸ ರೂಪ ಪಡೆದು ಇಲ್ಲವೇ ಮೊದಲಿನ ರೂಪದಲ್ಲೇ ನಮ್ಮ ಕಿವಿಗೆ ಬೀಳುವ ಸಾಧ್ಯತೆ ತುಂಬಾ ಹೆಚ್ಚು ಎಂದರೆ ನಂಬಲೇಬೇಕು.
ಮತ್ತೆ ಮತ್ತೆ ಕೇಳುವ ಕಿವಿಗಳಿವೆ ಎನ್ನುವ ಸಲುವಾಗಿಯೇ ಕತೆಗಳು ಹೇಳಲ್ಪಡುತ್ತವೆ ಮತ್ತು ಅಷ್ಟೇ ಸೊಗಸಾಗಿ ಹೆಣೆಯಲ್ಪಡುತ್ತವೆ. ಒಮ್ಮೆ ಹ್ಞೂಂಗುಟ್ಟತೊಡಗಿದರೆ ಸಾಕು ಕತೆ ಮುಗಿಯುವವರೆಗೆ ಅಲ್ಲಿಂದ ಮರಳಿ ಬರುವ ಮಾತಿಲ್ಲ! ಹೀಗೆ ಕತೆಯ ಬಗ್ಗೆ ಹೇಳುತ್ತ ಹೊರಟರೆ ಅದೊಂದು ಮುಗಿಯದ ಕತೆ. ಭಾವಕೋಶದ ಬೀಜದೊಳಗಿನ ಅಂಕುರದಂತೆ ನವೊಲ್ಲಾಸ ಮೂಡಿಸುವ ಹೊಸ ಹೊಸ ಹೊಳಹು ಮೂಡಿಸುತ್ತದೆ. ಅಷ್ಟೇ ಅಲ್ಲ ಕೇಳಲು ಹೊಸ ಹೊಸ ಕಿವಿಗಳನ್ನೂ ಹುಟ್ಟಿಸಿಕೊಳ್ಳುತ್ತದೆ. ಹೃನ್ಮನ ತಣಿಸುವ ತಾಕತ್ತು ಮನೋಹಾರಿ ಕತೆಗಳಿಗೆ ಮಾತ್ರ ಇರೋದು ಅಲ್ವೇನ್ರಿ??
ಬೆಂಗಳೂರಿನ ಮೇಕ್ರಿ ವೃತ್ತದಿಂದ ಯಶವಂತಪುರಕ್ಕೆ ಹೋಗುವ ರಸ್ತೆಯಲ್ಲಿ ಐದಾರು ನಿಮಿಷಗಳು ಕಾಲ್ನಡಿಗೆಯಲ್ಲಿ ಹೋದರೆ, ರಸ್ತೆಯ ಎಡ ಬದಿಯಲ್ಲಿ ಸುಮಾರು 400 – 500 ಅಡಿಗಳ ಉದ್ದದ ಪೌಳಿಯು ಕಾಣಿಸುತ್ತದೆ. ಸ್ವಲ್ಪ ಕುತೂಹಲದಿಂದ ಒಳಗೆ ದೃಷ್ಟಿ ಹರಿಸಿದರೆ, ನೀಲಗಿರಿ, ಮಾವು, ಸಂಪಿಗೆ ಮುಂತಾದ ಮರಗಳು ಮತ್ತು ಆಕರ್ಷಕವಾಗಿ ಬೆಳೆಸಿದ ಹೂ ದೋಟದ ಮಧ್ಯೆ ಭವ್ಯವಾದ ಕಲ್ಲಿನ ಕಟ್ಟಡವು ಕಂಗೊಳಿಸುತ್ತದೆ. ಇದೇ ವಿಶ್ವ ವಿಖ್ಯಾತ ನೊಬೆಲ್ ಪ್ರಶಸ್ತಿ ವಿಜೇತ ಭೌತ ವಿಜ್ಞಾನಿ ಸರ್ ಸಿ. ವಿ ರಾಮನ್ ರ ಕನಸಿನ ಕೂಸು “ರಾಮನ್ ಸಂಶೋಧನಾ ಸಂಸ್ಥೆ”.
ರಾಮನ್ ಸಂಶೋಧನಾ ಸಂಸ್ಥೆ / ಚಿತ್ರ ಕೃಪೆ : ವಿಕಿಪಿಡಿಯಾ
ನಿವೃತ್ತಿ ಹೊಂದಿದ ನಂತರ ಏನು ಮಾಡುವಿರಿ? ಎಂದು ನಾವು ಯಾರನ್ನಾದರೂ ಕೇಳಿದರೆ, ಹಾಯಾಗಿ, ನಿಶ್ಚಿಂತೆಯಾಗಿ, ಮೊಮ್ಮಕ್ಕಳ ಜೊತೆಯಲ್ಲಿ ಆಟವಾಡುತ್ತಾ ಕಾಲ ಕಳೆಯುತ್ತೇನೆ ಎಂಬ ಉತ್ತರ ಸಾಮಾನ್ಯವಾಗಿ ಬರುತ್ತದೆ. ಆದರೆ, ಸರ್ ಸಿ. ವಿ ರಾಮನ್ ರ ಉತ್ತರ ಭಿನ್ನವಾಗಿತ್ತು. ಭಾರತೀಯ ವಿಜ್ಞಾನ ಮಂದಿರದ ನಿರ್ದೇಶಕರ ಹುದ್ದೆಯಿಂದ 1948 ರಲ್ಲಿ ರಾಮನ್ ರು ನಿವೃತ್ತಿ ಹೊಂದಲಿದ್ದರು. ನಿವೃತ್ತಿಯ ನಂತರ ಬೆಂಗಳೂರಿನಲ್ಲಿಯೇ ನೆಲೆಸಿ, ಸ್ವತಂತ್ರವಾದ ಸಂಸ್ಥೆಯನ್ನು ಸ್ಥಾಪಿಸಿ, ತಮ್ಮ ಸಂಶೋಧನಾ ಕಾರ್ಯವನ್ನು ಯಾರ ಹಂಗು ಇಲ್ಲದೆ ಮುಂದುವರಿಸ ಬೇಕೆಂಬ ಧ್ಯೇಯವನ್ನು ಹೊಂದಿದ್ದರು.
ಇವರ ಹಂಬಲವನ್ನು ತಿಳಿದಿದ್ದ ಮೈಸೂರಿನ ಮಹಾರಾಜರಾದ ನಾಲ್ಕನೆ ಕೃಷ್ಣರಾಜ ಒಡೆಯರ್ ರವರು ರಾಮನ್ ರಿಗೆ ಭಾರತೀಯ ವಿಜ್ಞಾನ ಮಂದಿರದ ಬಳಿಯೇ 10 ಎಕರೆ ಜಮೀನನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ (Indian Academy of Sciences) ಸ್ಥಾಪಿಸಲು ಶಾಶ್ವತವಾದ ಜಾಗವನ್ನು ನೀಡುವುದು ಅವರ ಉದ್ದೇಶವಾಗಿತ್ತು. ವಿಜ್ಞಾನವನ್ನು ಬೆಳೆಸುವುದೇ ಅಕಾಡೆಮಿಯ ಮೂಲ ಉದ್ದೇಶವಾದ್ದರಿಂದ, 1943 ರಲ್ಲಿ ಅಕಾಡೆಮಿ ಮತ್ತು ರಾಮನ್ ರ ನಡುವೆ ರಾಮನ್ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಲು ಒಪ್ಪಂದವಾಯಿತು. ಅದರಂತೆ, 1943 ರಲ್ಲಿ ರಾಮನ್ ಸಂಶೋಧನಾ ಸಂಸ್ಥೆಯ ಕಟ್ಟಡದ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದರು. ಕಟ್ಟಡಕ್ಕೆ ಉಪಯೋಗಿಸಿರುವ ಕಲ್ಲುಗಳ ಆಯ್ಕೆಯಿಂದ ಹಿಡಿದು ಪ್ರತಿಯೊಂದು ವಿಷಯದಲ್ಲು, ಅತ್ಯಂತ ಆಸಕ್ತಿಯನ್ನು ರಾಮನ್ ರು ತೋರಿದರು. ಅವರ ಇಚ್ಚೆಯಂತೆ 1948 ರ ವೇಳೆಗೆ ಸಂಸ್ಥೆಯ ಕಟ್ಟಡ ಪೂರ್ಣಗೊಂಡಿತು.
ಭಾರತೀಯ ವಿಜ್ಞಾನ ಮಂದಿರದಿಂದ ನಿವೃತ್ತಿಗೊಂಡ ಸರ್ ಸಿ. ವಿ ರಾಮನ್ ರು 1948 ರಲ್ಲಿ ಸ್ವಂತ ಸಂಶೋಧನಾಲಯಕ್ಕೆ ಹೆಜ್ಜೆಯನ್ನಿಟ್ಟರು. ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ನ ಆಡಳಿತ ಮಂಡಳಿಯು ನೂತನ ಸಂಶೋಧನಾಲಯಕ್ಕೆ “ರಾಮನ್ ಸಂಶೋಧನಾ ಸಂಸ್ಥೆ” ಎಂದೆ ನಾಮಕರಣ ಮಾಡಿತು. ಅಂದಿನಿಂದ ಇಂದಿನವರೆವಿಗೆ, ಈ ಸಂಸ್ಥೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಾರ ಕೀರ್ತಿಯನ್ನು ಪಡೆಯುತ್ತಾ ಬಂದಿರುವುದು, ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡುವ ವಿಷಯ.
ಸಂಸ್ಥೆಯ ಮುಖ್ಯ ಕಟ್ಟಡದ ಮೊದಲನೇ ಅಂತಸ್ಥಿನಲ್ಲಿ ಚಿಕ್ಕ ಮತ್ತು ಚೊಕ್ಕವಾದ ಸಭಾಂಗಣ ಮತ್ತು ಅಮೂಲ್ಯ ವಸ್ತುಗಳಿಂದ ಕೂಡಿದ ಸಂಗ್ರಹಾಲಯಗಳಿವೆ. ಪ್ರೊ. ರಾಮನ್ ರೆ ಸ್ವತಃ ಸಂಗ್ರಹಿಸಿರುವ ಅಪೂರ್ವ ರತ್ನಗಳು, ವಜ್ರಗಳು, ಜ್ವಾಲಾಮುಖಿಯಿಂದ ಬರುವ ಲಾವಾ ಹರಿವನ್ನು ಸೂಚಿಸುವ ಶಿಲೆ ಮುಂತಾದ ಸ್ಪಟಿಕಗಳನ್ನು ಸಂಗ್ರಹಾಲಯದಲ್ಲಿ ನಾವು ನೋಡಬಹುದು. ವಿಶೇಷವಾಗಿ, ಅತಿ ನೇರಳೆ ಬೆಳಕಿನಲ್ಲಿ (U V rays) ಬಣ್ಣ ಬಣ್ಣದ ಬೆಳಕನ್ನು ಹೊರಸೂಸುವ ಖನಿಜಗಳನ್ನು ಕತ್ತಲೆಯ ಕೋಣೆಯಲ್ಲಿಟ್ಟು ಫಳ ಫಳನೆ ಪ್ರಕಾಶಿಸುವ ಒಂದು ಮೋಹಕ ಲೋಕವನ್ನೆ ಇಲ್ಲಿ ಸೃಷ್ಟಿಸಲಾಗಿದೆ. ಇದು ಅತಿ ನೇರಳೆ ಬಣ್ಣದ ಕೋಣೆಯೆಂದೆ ಪ್ರಖ್ಯಾತಿ ಹೊಂದಿದೆ.
ರಾಮನ್ ರಿಗೆ ಪ್ರಕೃತಿಯಲ್ಲಿ ಕಾಣುವ ಬಣ್ಣಗಳ ಬಗ್ಗೆ ಹೆಚ್ಚಿನ ಆಸಕ್ತಿ ಇತ್ತು. ಅದರಂತೆ, ಬಣ್ಣ ಬಣ್ಣದ ಚಿಟ್ಟೆಗಳನ್ನು ಮತ್ತು ಪಕ್ಷಿಗಳನ್ನು ಸಂಗ್ರಹಿಸಿ ಪ್ರತ್ಯೇಕ ಕೋಣೆಯಲ್ಲಿಡಲಾಗಿದೆ. ಪ್ರತಿಯೊಬ್ಬ ವಿಜ್ಞಾನದ ವಿದ್ಯಾರ್ಥಿ ನೋಡ ಬೇಕಾದಂತಹ ಸಂಗ್ರಹಾಲಯ ಇದಾಗಿದೆ. ಸಂಗ್ರಹಾಲಯದಲ್ಲಿ ಅಡ್ಡಾಡಿದ ಯಾವುದೇ ವ್ಯಕ್ತಿಗೆ ಸರ್ ಸಿ. ವಿ ರಾಮನ್ ರಿಗಿದ್ದ ಪ್ರಕೃತಿ ಪ್ರೇಮ ಮತ್ತು ವೈಜ್ಞಾನಿಕ ದೃಷ್ಠಿ ಅರಿವಾಗುತ್ತದೆ. ವಿದೇಶಗಳಿಂದ ಭಾರತಕ್ಕೆ ಆಗಮಿಸುವ ವಿಜ್ಞಾನಿಗಳಿಂದ ಉಪನ್ಯಾಸವನ್ನು ಏರ್ಪಡಿಸುವುದು, ಸಮ್ಮೇಳನಗಳನ್ನು ಏರ್ಪಡಿಸುವುದು, ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಯನ್ನು ಹೊಂದಿರುವ ಈ ಸಂಸ್ಥೆ ಬೆಳೆಸಿಕೊಂಡು ಬಂದಿರುವ ಸತ್ಸಂಪ್ರದಾಯವಾಗಿದೆ.
ಮೊಟ್ಟ ಮೊದಲ ಮಹಾತ್ಮ ಗಾಂಧಿ ಸ್ಮಾರಕ ಭಾಷಣವನ್ನು 1959 ಅಕ್ಟೋಬರ್ 2 ರಂದು ಡಾ. ಸಿ. ವಿ ರಾಮನ್ ರು ನೀಡಿದರು. ಅಂದಿನ ಉಪನ್ಯಾಸದ ವಿಷಯ “ಬೆಳಕು, ಬಣ್ಣ ಮತ್ತು ದೃಷ್ಟಿ”. ಗಾಂಧೀಜಿಯವರ ಜನ್ಮ ದಿನದಂದು ಸುಪ್ರಸಿದ್ಧ ವಿಜ್ಞಾನಿಗಳಿಂದ, ಗಣ್ಯ ವ್ಯಕ್ತಿಗಳಿಂದ ಹಲವಾರು ವಿಷಯಗಳ ಬಗ್ಗೆ ಉಪನ್ಯಾಸಗಳನ್ನು ಏರ್ಪಡಿಸುವುದು ಈಗಲೂ ನಡೆದುಕೊಂಡು ಬರುತ್ತಿದೆ.
ಸರ್ ಸಿ. ವಿ ರಾಮನ್ ರಿಗೆ ಪ್ರಕೃತಿಯ ಬಗ್ಗೆ ಅಪಾರವಾದ ಪ್ರೇಮ. ಅವರ ಜೀವನದ ಕೊನೆಯ ದಿನಗಳಲ್ಲಿ, ಸಂಸ್ಥೆಯ ಮನೆಯಲ್ಲಿಯೆ ವಿಶ್ರಾಂತಿ ಪಡೆಯಲು ವ್ಯವಸ್ಥೆ ಮಾಡಲಾಗಿತ್ತು. ಅವರ ಕೊಠಡಿಯ ಕಿಟಕಿಗಳು ಎತ್ತರದಲ್ಲಿದ್ದು, ಅವರು ಮಲಗಿದ್ದ ಮಂಚದ ಎತ್ತರ ಕಡಿಮೆ ಇದ್ದುದ್ದರಿಂದ ಅವರಿಗೆ ಕಿಟಕಿಯ ಮೂಲಕ ಗಿಡ ಮರಗಳನ್ನು ಮತ್ತು ಹೂದೋಟಗಳನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಈ ಕೊರತೆಯನ್ನು ಅವರ ಸ್ನೇಹಿತರ ಗಮನಕ್ಕೆ ತಂದಾಗ, ಕೂಡಲೆ ಕಿಟಕಿಗಳ ಮೂಲಕ ಹೊರಗಡೆಯ ಮರಗಿಡಗಳನ್ನು ಮತ್ತು ಹೂದೋಟಗಳನ್ನು ನೋಡಲು ಸಾಧ್ಯವಾಗುವಂತೆ, ಅವರು ಮಲಗಿದ್ದ ಮಂಚದ ಎತ್ತರವನ್ನು ಹೆಚ್ಚಿಸಲಾಯಿತಂತೆ.
ಸರ್ ಸಿ. ವಿ ರಾಮನ್ ನವೆಂಬರ್ 21, 1970 ರಂದು 82 ನೇ ವಯಸ್ಸಿನಲ್ಲಿ ದೈವಾಧೀನರಾದರು. ಅವರ ಸಂಸ್ಥೆಯಲ್ಲಿಯೇ ಅಂತ್ಯ ಕ್ರಿಯೆಯನ್ನು ನಡೆಸಲಾಯಿತು. ಆ ಜಾಗದಲ್ಲಿ ಇಂದು ಪ್ರಿಮ್ ವೆರ ಮರವು ಅದ್ಭುತವಾಗಿ ಬೆಳೆದು ಜೀವಂತ ಸ್ಮಾರಕವಾಗಿ ನಿಂತಿದೆ. ಮರವನ್ನು ಪ್ರೀತಿ ಮತ್ತು ಗೌರವಗಳಿಂದ, “ ರಾಮನ್ ಟ್ರೀ” ಎಂದು ಕರೆಯಲಾಗುತ್ತಿದೆ.
ರಾಮನ್ ಟ್ರೀ / ಚಿತ್ರ ಕೃಪೆ : ವಿಕಿಪಿಡಿಯಾ
ರಾಮನ್ ರ ನಿಧನದ ನಂತರ ಅವರ ಜ್ಞಾಪಕಾರ್ಥವಾಗಿ ಈ ಸಂಶೋಧನಾಲಯವನ್ನು ರಾಷ್ಟ್ರೀಯ ಸಂಶೋಧನಾಲಯವೆಂದು ಪರಿಗಣಿಸಿ ಭಾರತ ಸರ್ಕಾರವು ಧನ ಸಹಾಯವನ್ನು ನೀಡುತ್ತಿದೆ. ಮೂಲಭೂತ ಸಂಶೋಧನೆಗಳಿಗಾಗಿಯೇ ಮೀಸಲಾಗಿರುವ ಈ ಸಂಸ್ಥೆಯಲ್ಲಿ, ಭೌತಶಾಸ್ತ್ರದ ವಿವಿಧ ಶಾಖೆಗಳಲ್ಲಿ ಅಂತರ ರಾಷ್ಟ್ರೀಯ ಮಟ್ಟದ ಸಂಶೋಧನೆ ನಡೆಯುತ್ತಿದೆ. ಬೆಳಕು ಮತ್ತು ದ್ರವ್ಯ ಭೌತಶಾಸ್ತ್ರ (Light and Matter Physics), ಸೈದ್ಧಾಂತಿಕ ಭೌತಶಾಸ್ತ್ರ (Theoretical Physics), ಖಗೋಳ ವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರ (Astronomy and Astrophysics), ಮೃದು ಘನೀಕರಿಸಿದ ದ್ರವ್ಯ ಭೌತಶಾಸ್ತ್ರ (Soft condensed Matter Physics) ಹೀಗೆ ಹಲವಾರು ವಿಷಯಗಳ ಬಗ್ಗೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಹೊಂದಿರುವ ವಿಜ್ಞಾನಿಗಳು ಸಂಶೋಧನೆಯನ್ನು ನಡೆಸುತ್ತಿದ್ದಾರೆ.
ಸಂಸ್ಥೆಯಲ್ಲಿಯೆ 10.4m ಮಿಲಿ ಮೀಟರ್ ವೇವ್ ರೇಡಿಯೋ ದೂರದರ್ಶಕ, ಬೆಂಗಳೂರಿನ ಸಮೀಪದಲ್ಲಿರುವ ಗೌರಿಬಿದನೂರಿನಲ್ಲಿ ಭಾರತೀಯ ಖಭೌತ ವಿಜ್ಞಾನ ಸಂಸ್ಥೆಯ ಸಹಯೋಗದೊಂದಿಗೆ ಡೆಕಾ ಮೀಟರ್ ವೇವ್ ರೇಡಿಯೋ ದೂರ ದೂರದರ್ಶಕ ಹಾಗೂ ಮೌರಿಷಿಯಸ್ ನಲ್ಲಿ ಮೀಟರ್ ತರಂಗಾಂತರಗಳಲ್ಲಿ ಅಧ್ಯಯನ ಮಾಡುವ ಉದ್ದೇಶದಿಂದ ರೇಡಿಯೋ ದೂರದರ್ಶಕವನ್ನು ಸ್ಥಾಪಿಸಲಾಗಿದೆ. ಈ ದೂರದರ್ಶಕಗಳನ್ನು ಆಕಾಶ ಕಾಯಗಳ ವಿದ್ಯಮಾನಗಳ ಅಧ್ಯಯನಕ್ಕೆ ಬಳಸಲಾಗುತ್ತಿದೆ.
ಸಂಸ್ಥೆಯ ಗ್ರಂಥಾಲಯವು, 1948 ರಲ್ಲಿಯೆ ರಾಮನ್ ರಿಂದ ಸ್ಥಾಪಿತಗೊಂಡಿತು. ರಾಮನ್ ರ ಸ್ವಂತ ಪುಸ್ತಕಗಳು ಮತ್ತು ನಿಯತಕಾಲಿಕೆಗಳಿಂದ ಪ್ರಾರಂಭಗೊಂಡ ಗ್ರಂಥಾಲಯ, 1976 ರಲ್ಲಿ ಪ್ರತ್ಯೇಕವಾದ ಕಟ್ಟಡವನ್ನು ಹೊಂದಿ, ಈಗ ದೇಶದ ಪ್ರತಿಷ್ಠಿತ ಗ್ರಂಥಾಲಯಗಳಲ್ಲಿ ಒಂದಾಗಿ, ಬೃಹದಾಕಾರವಾಗಿ ಬೆಳೆದು ನಿಂತಿದೆ. ಇತ್ತೀಚಿನ ದಿನಗಳಲ್ಲಿ ಗ್ರಂಥಾಲಯದ ಕಟ್ಟಡದಲ್ಲಿಯೇ “Archival Gallery” ಯನ್ನ ಸ್ಥಾಪಿಸಲಾಗಿದೆ. ಸಂಶೋಧನಾ ಸಂಸ್ಥೆ, ಅದರ ಪ್ರಾರಂಭ, ನಡೆದು ಬಂದ ದಾರಿ, ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಸಂಶೋಧನೆಗಳು, ಸಂಶೋಧನೆಗಳಿಗೆ ಒದಗಿಸುವ ಸೌಲಭ್ಯಗಳು, ಹೀಗೆ ಹತ್ತು ಹಲವಾರು ವಿಷಯಗಳನ್ನು ಒಳಗೊಂಡಂತೆ, ಸಂಕ್ಷಿಪ್ತವಾದ ಪ್ರೌಢತೆಯನ್ನು ಬಿಂಬಿಸುವ ರೀತಿಯಲ್ಲಿ ವಿವರಗಳನ್ನು ನೀಡಲಾಗಿದೆ. ನಿಜವಾಗಲೂ ಬಹಳ ಒಳ್ಳೆಯ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ.
ರಾಮನ್ ಸಂಶೋಧನಾ ಸಂಸ್ಥಯಲ್ಲಿ ಲೇಖಕ ಡಾ. ಬಿ ಎಸ್ ಶ್ರೀಕಂಠ ಮತ್ತು ಅವರ ಪಿಎಚ್.ಡಿ ಸಹಪಾಠಿ ಡಾ. ಸುಬ್ರಹ್ಮಣ್ಯ ರಾಜೆ ಅರಸ್
ಇಂತಹ ಸಂಸ್ಥೆಯಲ್ಲಿ ಪಿಎಚ್.ಡಿ ಮಾಡಲು ನನಗೆ ಅವಕಾಶ ಸಿಕ್ಕಿದ್ದು ನನ್ನ ಜೀವನದ ಭಾಗ್ಯವೆಂದು ನಾನು ತಿಳಿದಿದ್ದೇನೆ. ಭೌತಶಾಸ್ತ್ರದಲ್ಲಿ ಸಂಶೋಧನೆಯನ್ನು ಮಾಡಲು ಇಚ್ಚೆಯುಳ್ಳವರಿಗೆ ಸಂಸ್ಥೆಯಲ್ಲಿ ಒಳ್ಳೆಯ ಅವಕಾಶಗಳನ್ನು ಒದಗಿಸಿ ಕೊಡಲಾಗಿದೆ. ಇಂತಹ ಹಲವಾರು ವೈಜ್ಞಾನಿಕ ಸಂಸ್ಥೆಗಳನ್ನು ಪಡೆದಿರುವ ಬೆಂಗಳೂರು ನಗರ “ವಿಜ್ಞಾನದ ರಾಜಧಾನಿ (Science capital)” ಎಂಬ ಬಿರುದನ್ನು ಪಡೆಯಲು ನಿಜವಾಗಿಯೂ ಅರ್ಹತೆಯನ್ನು ಪಡೆದಿದೆ.
ಇಂದಿನ ಬದಲಾವಣೆ ಹೇಗಿದೆ ಎಂದರೆ ಹಲವಾರು ಹವ್ಯಾಸಗಳ ಶೈಲಿಗಳ ವ್ಯಾಖ್ಯಾನವೂ ಬದಲಾಗಿದೆ. ಉಳಿತಾಯ ಎಂದರೆ ಈ ಹಿಂದೆ ಗಳಿಸಿದ, ಅದು ವ್ಯವಹಾರದಿಂದಾಗಲಿ, ಸಂಬಳದಿಂದಾಗಲಿ ಗಳಿಸಿರಬಹುದು ಅದರಲ್ಲಿ ವೆಚ್ಚ ಮಾಡದೆ ಉಳಿಸಿದ ಹಣವಾಗಿತ್ತು. ಆದರೆ ಈಗಿನ ವೆಚ್ಚಬಾಕು ದಿನಗಳಲ್ಲಿ ಉಳಿತಾಯ ಎಂದರೆ ವೆಚ್ಚ ಮಾಡುವುದರಲ್ಲಿ ಕಡಿತವಾದ ಹಣವಾಗಿದೆ. ಒಂದು ಮಾಲ್ ಅಥವಾ ಸ್ಟೋರ್ ನಿಂದ ಖರೀದಿ ಮಾಡಿದ ಬಿಲ್ ನಲ್ಲಿ ಅವರು ಡಿಸ್ಕೌಂಟ್ ಮಾಡಿದ ಹಣವನ್ನು ಉಳಿಸಿದ ಹಣವೆಂದು ತೋರಿಸುತ್ತಾರೆ.
ಕಣ್ತಪ್ಪಿನ ಸಂಕೇತ:2020.21 ರ ವರ್ಷಾಂತ್ಯದ ದಿನ ಅಂದರೆ ಮಾರ್ಚ್ 31 ರಂದು ಕೇಂದ್ರ ಸರ್ಕಾರದ ವಿತ್ತೀಯ ಮಂತ್ರಾಲಯದ ಆರ್ಥಿಕ ವಿಭಾಗವು ಸುತ್ತೋಲೆ ಹೊರಡಿಸಿ ಏಪ್ರಿಲ್ 1 ರಿಂದ ಮುಂದಿನ ಆರು ತಿಂಗಳವರೆಗೂ ಸಣ್ಣ ಉಳಿತಾಯ ಯೋಜನೆ, ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನಂತಹ ಹಲವಾರು ಯೋಜನೆಗಳಿಗೆ ನೀಡಲಾಗುವ ಬಡ್ಡಿದರವನ್ನು ಭಾರಿ ಕಡಿತವನ್ನು ಪ್ರಕಟಿಸಿತು. ಆದರೆ , ಏಪ್ರಿಲ್ 1 ರಂದು ಮುಂಜಾನೆಯೇ ಅದು ಕಣ್ತಪ್ಪಿನಿಂದಾದ ಅಚಾತುರ್ಯವೆಂದು ಕಡಿತದ ಪ್ರಸ್ತಾಪವನ್ನು ಹಿಂಪಡೆದಿದೆ. ಇದು ಮುಂದಿನ ದಿನಗಳಲ್ಲಿ ಸರ್ಕಾರ ತೆಗೆದುಕೊಳ್ಳಬಹುದಾದ ನಿರ್ಧಾರದ ಮುನ್ಸೂಚನೆಯೂ ಇರಬಹುದು. ಬ್ಯಾಂಕ್ ಬಡ್ಡಿದರ ಕಡಿತದ ಕಾರಣ ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿಯೂ ಕಡಿಮೆಯಾಗಿ, ಈ ಮಾಸಿಕ/ ಸಮಯಬದ್ಧ ಆದಾಯವನ್ನವಲಂಭಿಸಿರುವ ಅಸಂಖ್ಯಾತ ಜನಸ್ಥೋಮವನ್ನು ಆಪತ್ತಿಗೆ ತಳ್ಳಿದಂತಾಗುತ್ತದೆ.
ಕುಸಿಯುತ್ತಿರುವ ಬಡ್ಡಿ – ಹರಿದಾಡುತ್ತಿರುವ ಧನ:ಕಡಿತಗೊಳ್ಳುತ್ತಿರುವ ಬ್ಯಾಂಕ್ ಬಡ್ಡಿಯಿಂದ ಬೇಸತ್ತು, ಬ್ಯಾಂಕ್ ಗಳೇ ವಿತರಿಸಿದ ಪರ್ಪೆಚುಯಲ್ ಬಾಂಡ್ ಗಳಲ್ಲಿ ಹೂಡಿಕೆ ಮಾಡೋಣವೆಂದರೆ ಯೆಸ್ ಬ್ಯಾಂಕ್ ನ ರೂ.8,000 ಕೋಟಿಗೂ ಹೆಚ್ಚು, ಲಕ್ಷ್ಮಿ ವಿಲಾಸ್ ಬ್ಯಾಂಕ್ ನ ರೂ.318 ಕೋಟಿ ಹಣದ ಬಾಂಡ್ ಗಳನ್ನು write off ಮಾಡಿ ಶೂನ್ಯ ಮಾಡಿದ ಪ್ರಕರಣಗಳು ಅದಕ್ಕೂ ತಡೆಯೊಡ್ಡುತ್ತದೆ.
ಇತ್ತೀಚೆಗೆ ಹೆಚ್ಚಿನ ಬ್ಯಾಂಕ್ ಗಳು ಪರ್ಪೆಚುಯಲ್ ಬಾಂಡ್ ಗಳ ವಿತರಣೆಗೆ ಮುಂದಾಗುತ್ತಿವೆ. ಅಲ್ಲದೆ ಬ್ಯಾಂಕ್ ಗಳಾಗಲಿ, ಕಂಪನಿಗಳಾಗಲಿ ಈಗ ತೇಲಿಬಿಡುತ್ತಿರುವ ಯೋಜನೆಗಳಲ್ಲಿ ನೀಡುವ ಬಡ್ಡಿ ದರವೂ ಸಹ ಅತಿಯಾದ ಕಡಿಮೆಯಾಗಿದೆ. ಜಿ ಐ ಸಿ ಹೌಸಿಂಗ್ ಫೈನಾನ್ಸ್ ಶೇ.6.94 ಬಡ್ಡಿದರದ ಬಾಂಡ್ ಗಳನ್ನು, ಬಜಾಜ್ ಫೈನಾನ್ಸ್ ಒಂಬತ್ತು ವರ್ಷದ ಅವಧಿಗೆ ಶೇ.6.92% ರಂತೆ, ಎರಡು ವರ್ಷದ ಅವಧಿಗೆ ಶೇ.5.4022 ರಂತೆ, ಮೂರು ವರ್ಷದ ಅವಧಿಗೆ ಶೇ.5.95 ರಂತೆ, ಐ ಆರ್ ಎಫ್ ಸಿ ಕಂಪನಿ 20 ವರ್ಷದ ಅವಧಿಗೆ ಶೇ.6.80 ರಂತೆ ವಾರ್ಷಿಕ ಬಡ್ಡಿ ನೀಡುವ ಬಾಂಡ್ ಗಳನ್ನು ವಿತರಣೆ ಮಾಡಲು ಯಶಸ್ವಿಯಾಗಿವೆ.
ಇದು ಪೇಟೆಗಳಲ್ಲಿ ಹರಿದಾಡುವ ಹಣದ ಪ್ರಮಾಣವನ್ನು ತೋರಿಸುತ್ತದೆ. ಇಷ್ಠು ಸುಲಭವಾದ ಬಡ್ಡಿಯಲ್ಲಿ ಅವಶ್ಯವಿರುವ ಹಣ ದೊರೆಯುತ್ತಿರುವಾಗ ಬ್ಯಾಂಕ್ ಗಳಿಂದ ಹಣ ಪಡೆಯಲು ಕಾರ್ಪೊರೇಟ್ ವಲಯ ಹಿಂಜರಿಯುತ್ತಲಿದೆ. ಈ ಕಾರಣದಿಂದ ಬ್ಯಾಂಕ್ ಗಳು ಎಸ್ ಎಂ ಎಸ್ ಗಳ ಮೂಲಕ ರೀಟೇಲ್ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿವೆ.
ಸುರಕ್ಷತೆ – ಸ್ವಯಂ ನಿರ್ಧಾರ :ಯೆಸ್ ಬ್ಯಾಂಕ್ ನ ರೂ.8,400 ಕೋಟಿ ಮೌಲ್ಯದ ಬಾಂಡ್ ಗಳಲ್ಲಾಗಲಿ, ಲಕ್ಷ್ಮೀ ವಿಲಾಸ್ ಬ್ಯಾಂಕ್ ನ ರೂ.318 ಕೋಟಿ ಮೌಲ್ಯದ ಬಾಂಡ್ ಗಳಲ್ಲಾಗಲಿ ಕೇವಲ ಕೆಲವು ಕಂಪನಿಗಳು ಮಾತ್ರ ಹೂಡಿಕೆ ಮಾಡಿರುವುದಿಲ್ಲ, ಮ್ಯೂಚುಯಲ್ ಫಂಡ್ ಗಳೂ, ವ್ಯಕ್ತಿಗತ ಹೂಡಿಕೆದಾರರೂ ಸಹ ಹೂಡಿಕೆ ಮಾಡಿರುತ್ತಾರೆ. ಕೆಲವು ಸಂಪದ್ಬರಿತ ಕಂಪನಿಗಳೂ ಸಹ ಹೂಡಿಕೆ ಮಾಡಬಹುದಾಗಿದೆ. ಯೆಸ್ ಬ್ಯಾಂಕ್ ನ ಬಾಂಡ್ ಗಳನ್ನು ಶೂನ್ಯ ಮಾಡುವ ಸಂದರ್ಭದಲ್ಲಿ ಆಗಿನ ಅಂದಾಜು ಸುಮಾರು ರೂ.93,669 ಕೋಟಿ ಹಣವನ್ನು ಅಡಿಷನಲ್ ಟೈರ್ 1 ಬಾಂಡ್ ಗಳಲ್ಲಿ ಹೂಡಲಾಗಿತ್ತು. ದೀರ್ಘಾವಧಿಯ, ಸುಲಭ ಬಡ್ಡಿದರದ, ಹೆಚ್ಚಿನ ಜವಾಬ್ಧಾರಿಯಿಲ್ಲದ ಕೆಳದರ್ಜೆಅ ರೀತಿಯ ಸಂಪನ್ಮೂಲ ಟೈರ್ 1 ಮತ್ತು ಟೈರ್ 2 ಬಾಂಡ್ ಗಳಾಗಿವೆ.
ಹಣದ ಹೊಳೆ ಸರಾಗವಾಗಿ ಹರಿದಾಡುತ್ತಿರುವ ಈಗಿನ ಸಮಯದಲ್ಲಿ ಕಂಪನಿಗಳು ಉತ್ಪಾದನೆಯಿಂದ ಗಳಿಸಬಹುದಾದ ಲಾಭಕ್ಕೂ ಹೆಚ್ಚಿನ ವೇಗದ ಆದಾಯವನ್ನು ಅದೇ ಕಂಪನಿಗಳ ಷೇರುಗಳು ತಂದು ಕೊಡುತ್ತಿವೆ. ಇದು ಎಲ್ಲಾ ಕಂಪನಿಗಳಿಗೂ ಅನ್ವಯಿಸದು. ಹೂಡಿಕೆಯ ಸುರಕ್ಷತೆಯ ದೃಷ್ಠಿಯಿಂದ, ಅಧಿಕ ಆದಾಯ ಗಳಿಸುವ ದೃಷ್ಠಿಯಿಂದ ಈ ಕೆಲವು ಅಂಶಗಳನ್ನು ಗಮನಿಸಲೇಬೇಕು.
ಉತ್ತಮ ಅಗ್ರಮಾನ್ಯ ಕಂಪನಿಗಳಲ್ಲಿ ಇದು ಸಾಧ್ಯವಾಗಿದೆ. ಕೇವಲ ಬಾಹ್ಯ ಕಾರಣಗಳ ಪ್ರಭಾವದಿಂದ ಏರಿಕೆ ಕಾಣುತ್ತಿರುವ ಕಂಪನಿಗಳಿಂದ ದೂರವಿದ್ದು ಕಂಪನಿಗಳ ಆಂತರಿಕ ಸಾಮರ್ಥ್ಯವನ್ನಾಧರಿಸಿ ನಿರ್ಧರಿಸಬೇಕು. ಕಂಪನಿಗಳು ಉತ್ತಮ ಚಾರಿತ್ರ್ಯವುಳ್ಳವಾಗಿರಬೇಕು
ಹೂಡಿಕೆಗಾಗಿ ಆಯ್ಕೆಮಾಡಿಕೊಂಡ ಕಂಪನಿಯಲ್ಲಿ ಹೂಡಿಕೆಯ ಮೊತ್ತದಲ್ಲಿ, ಅರ್ಹತೆಯ ಆಧಾರದ ಮೇಲೆ ಶೇ.5 ರಿಂದ 10 ರಷ್ಠಕ್ಕೆ ಸೀಮಿತವಾದರೆ ಒಳಿತು. ಬೃಹತ್ ಗಾತ್ರದ ಕಂಪನಿಗಳಾಗಿದ್ದು, ತಮ್ಮಚಟುವಟಿಕೆಯ ವಲಯದಲ್ಲಿ ಯಶಸ್ಸು ಕಾಣುವ ಮಟ್ಟದಲ್ಲಿರಬೇಕು. ಕೇವಲ ಸುದ್ಧಿಸಮಾಚಾರಗಳನ್ನಾಧರಿಸಿ ನಿರ್ಧರಿಸಬಾರದು.
ಕಂಪನಿಗಳು ಉತ್ತಮ ಕಾರ್ಪೊರೇಟ್ ಫಲಗಳನ್ನು ವಿತರಿಸುವಂತಹವಾಗಿರುವ ಹೂಡಿಕೆದಾರರ ಸ್ನೇಹಿಯಾಗಿರಬೇಕು.
ಉತ್ತಮ ಗುಣಮಟ್ಟದ ಕಾರ್ಪೊರೇಟ್ ನೀತಿಪಾಲನೆಯುಳ್ಳವಾಗಿರಬೇಕು.
ಕಂಪನಿಗಳು ಉತ್ತಮವಾಗಿದ್ದು, ಸಂಪದ್ಭರಿತವಾಗಿದ್ದರೂ, ಕೆಲವು ಸಂದರ್ಭದಲ್ಲಿ ಅವು ಇಂಟರ್ ಕಾರ್ಪೊರೇಟ್ ಡಿಪಾಜಿಟ್ ಗಳ ಮೂಲಕ ಇತರೆ ಕಂಪನಿಗಳಿಗೆ ನೀಡಿರುತ್ತವೆ. ಹಣ ಪಡೆದುಕೊಂಡ ಕಂಪನಿಗಳು ಆರ್ಥಿಕ ಒತ್ತಡಕ್ಕೊಳಗಾದಲ್ಲಿ ಉತ್ತಮ ಕಂಪನಿಯ ಹಣವು ಕರಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕಂಪನಿಗಳು ನಿರ್ವಹಿಸುವ ಹೂಡಿಕೆ ಜಾಲದಲ್ಲಿರುವ ಕಂಪನಿಗಳ ಬಗ್ಗೆಯೂ ಗಮನವಿರಬೇಕು.
ಬದಲಾವಣೆಗಳ ವೇಗ ಹೆಚ್ಚಾಗಿದ್ದು ರೇಟಿಂಗ್ ಕಂಪನಿಗಳ ರೇಟಿಂಗ್, ವಿಶ್ಲೇಷಕರ ಅಭಿಪ್ರಯಗಳೂ ಸಹ ಅಷ್ಠೇ ವೇಗವಾಗಿ ಬದಲಾಗುತ್ತವೆ. ಆದ್ದರಿಂದ ಇಂತಹ ಅಂಶಗಳನ್ನೇ ಆಧಾರವಾಗಿರಿಸಿಕೊಂಡು ನಿರ್ಧರಿಸುವುದಕ್ಕಿಂತ ಇತರೆ ಅಂಶಗಳನ್ನೂ ಸಹ ಪರಿಗಣಿಸಬೇಕು.
ಪ್ರತಿ ತೈಮಾಸಿಕದಲ್ಲೂ ಡಿವಿಡೆಂಡ್ – ಹೂಡಿಕೆದಾರರಿಗೆ ವರದಾನ:
ಹೂಡಿಕೆ ಹೇಗಿರಬೇಕೆಂದರೆ ಬಂಡವಾಳ ಸ್ಥಿರತೆಯೊಂದಿಗೆ ಏಳ್ಗೆ ಹೊಂದುವುದರೊಂದಿಗೆ, ಆಗಿಂದಾಗ್ಗೆ ಆದಾಯವನ್ನು ಒದಗಿಸುವಂತಹದ್ದಾಗಿದ್ದರೆ ಒಳಿತು. ಇತ್ತೀಚೆಗೆ ಸಾರ್ವಜನಿಕ ವಲಯದ ಕಂಪನಿಗಳು ಹೆಚ್ಚಿನ ಆಕರ್ಷಕಮಯ ಪ್ರಮಾಣದ ಡಿವಿಡೆಂಡ್ ಗಳನ್ನು ಪ್ರಕಟಿಸಿ, ವಿತರಿಸುತ್ತಿವೆ. ಇದಕ್ಕೆ ಪೂರಕವಾಗಿ ಇತ್ತೀಚೆಗೆ ಕೇಂದ್ರ ಸರ್ಕಾರದ ಸಾರ್ವಜನಿಕ ವಲಯದ ಕಂಪನಿಗಳು ಪ್ರತಿ ತ್ರೈಮಾಸಿಕದ ಅಂತ್ಯದಲ್ಲೂ ಡಿವಿಡೆಂಡ್ ಗಳನ್ನು ವಿತರಿಸಬಹುದು ಎಂಬ ನೀತಿಯೂ ಪ್ರೇರಕಶಕ್ತಿಯಾಗಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ :ಈ ಕಂಪನಿಯಿಂದ ದೇಶದ ಶೇ.35 ರಷ್ಠರ ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರೈಸುವ ಈ ಕಂಪನಿಯ 10 ರೂಪಾಯಿ ಮುಖಬೆಲೆಯ ಷೇರಿನ ಬೆಲೆ ರೂ.93/94 ರಲ್ಲಿದೆ. ಇದರ ವಾರ್ಷಿಕ ಗರಿಷ್ಠವು ರೂ.105 ಆಗಿದ್ದು ಚುರುಕಾದ ವಹಿವಾಟು ಪ್ರದರ್ಶಿಸುತ್ತಿದೆ. ಕಳೆದ ಒಂದು ತಿಂಗಳಲ್ಲಿ ರೂ.105 ರಿಂದ ರೂ.91 ರವರೆಗೂ ಕುಸಿದಿದೆ. ಇದಕ್ಕೆ ಕಾರಣ ಕಂಪನಿಯು ಎರಡು ತಿಂಗಳಲ್ಲಿ ಎರಡು ಬಾರಿ ಡಿವಿಡೆಂಡ್ ವಿತರಿಸಿದೆ. ಈ ವರ್ಷದ ಫೆಬ್ರವರಿಯಲ್ಲಿ ಪ್ರತಿ ಷೇರಿಗೆ ರೂ.7.50 ಯಂತೆ, ಮಾರ್ಚ್ ನಲ್ಲಿ ಪ್ರತಿ ಷೇರಿಗೆ ರೂ.3.00 ರಂತೆ ಡಿವಿಡೆಂಡ್ ವಿತರಿಸಿದೆ. ಅಂದರೆ ರೂ.100 ರ ಸಮೀಪದ ಷೇರು ರೂ.10.50 ಯಷ್ಠರ ಡಿವಿಡೆಂಡ್ ವಿತರಿಸಿ, ಮಾರ್ಚ್ ಅಂತ್ಯದ ತೈಮಾಸಿಕದ ಡಿವಿಡೆಂಡ್ ವಿತರಣೆ ನಿರೀಕ್ಷಿಸಬಹುದಾಗಿದೆ. ಹಿಂದಿನ ವರ್ಷದ ಮಾರ್ಚ್ ಸಮಯದಲ್ಲಿ ರೂ.105 ವಾರ್ಷಿಕ ಕನಿಷ್ಠದಲ್ಲಿದ್ದ ಈ ಷೇರಿನ ಬೆಲೆಯು ಈ ವರ್ಷದ ವಾರ್ಷಿಕ ಗರಿಷ್ಠವಾಗಿದೆ.
ಆರ್ ಇ ಸಿ ಲಿಮಿಟೆಡ್:ಈ ಕಂಪನಿ ಪ್ರತಿ ಷೇರಿಗೆ ರೂ.6 ರಂತೆ ನವೆಂಬರ್ 2020 ರಲ್ಲಿ ಮಧ್ಯಂತರ ಡಿವಿಡೆಂಡ್ ವಿತರಿಸಿ, ಮತ್ತೊಮ್ಮೆ ಮಾರ್ಚ್ 2021 ರಲ್ಲಿ ಪ್ರತಿ ಷೇರಿಗೆ ರೂ.5 ರಂತೆ ಡಿವಿಡೆಂಡ್ ವಿತರಿಸಿದೆ. ಅಂದರೆ ರೂ.130/35 ರ ಸಮೀಪದ ಉತ್ತಮ ಕಂಪನಿಯ ಷೇರು ಈಗಾಗಲೇ ರೂ.11 ರಷ್ಠು ಡಿವಿಡೆಂಡ್ ವಿತರಿಸಿದೆ. ಮಾರ್ಚ್ ವರ್ಷಾಂತ್ಯದ ಡಿವಿಡೆಂಡ್ ಯಾವ ಪ್ರಮಾಣದಲ್ಲಿರಬಹುದೆಂಬುದೇ ಕುತೂಹಲಕಾರಿ ಅಂಶ.
ಎನ್ ಎಂ ಡಿ ಸಿ :ಮೈನಿಂಗ್ ವಿಭಾಗದ ಸಾರ್ವಜನಿಕ ವಲಯದ ಈ ಕಂಪನಿ 2010 ರಲ್ಲಿ ರೂ.300 ರಂತೆ, 2018 ರಲ್ಲಿ ಪ್ರತಿ ಷೇರಿಗೆ ರೂ.153.50 ಯಂತೆ ಷೇರು ವಿತರಿಸಿತ್ತು. ಸಧ್ಯ ಈ ಷೇರಿನ ಬೆಲೆ ರೂ.138 ರ ಸಮೀಪ ವಹಿವಾಟಾಗುತ್ತಿದೆ. ಈ ಬೆಲೆಯು ವಾರ್ಷಿಕ ಗರಿಷ್ಠದ ಸಮೀಪವಿದ್ದರೂ 2018 ರಲ್ಲಿ ವಿತರಿಸಿದ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ವಹಿವಾಟಾಗುತ್ತಿದೆ. 2019 ರಲ್ಲಿ ಪ್ರತಿ ಷೇರಿಗೆ ರೂ.5.52 ರಂತೆ, 2020 ರಲ್ಲಿ ರೂ.5.29 ರಂತೆ ಡಿವಿಡೆಂಡ್ ವಿತರಿಸಿದ ಈ ಕಂಪನಿ ಈ ವರ್ಷದ ಮಾರ್ಚ್ ನಲ್ಲಿ ರೂ.7.76 ರಂತೆ ಮಧ್ಯಂತರ ಡಿವಿಡೆಂಡ್ ವಿತರಿಸಿದೆ.
ಕೋಲ್ ಇಂಡಿಯಾ:2010 ರಲ್ಲಿ ಪ್ರತಿ ಷೇರಿಗೆ ರೂ.245 ರಂತೆ ಐ ಪಿ ಒ ಮೂಲಕ ಪೇಟೆ ಪ್ರವೇಶಿಸಿದ ಈ ಕಂಪನಿ 2014 ರಲ್ಲಿ ಪ್ರತಿ ಷೇರಿಗೆ ರೂ.29 ರಂತೆ, 2016 ರಲ್ಲಿ ರೂ.27.40 ರಂತೆ, 2018 ರಲ್ಲಿ ರೂ.23.75 ಇತರೆ ವರ್ಷಗಳಲ್ಲೂ ಆಕರ್ಷಕ ಪ್ರಮಾಣದ ಡಿವಿಡೆಂಡ್ ಗಳನ್ನು ವಿತರಿಸಿದೆ. ಈ ವರ್ಷ ಈಗಾಗಲೇ ಪ್ರತಿ ಷೇರಿಗೆ ರೂ.12.50 ಯಂತೆ ಡಿವಿಡೆಂಡ್ ವಿತರಿಸಿದೆ. ಅಂದರೆ ಸಧ್ಯ ರೂ.133 ರ ಸಮೀಪದಲ್ಲಿರುವ ಉತ್ತಮ ಕಂಪನಿಯೊಂದು ಈ ಪ್ರಮಾಣದ ಡಿವಿಡೆಂಡ್ ವಿತರಿಸುತ್ತಿರುವುದು ಹೂಡಿಕೆದಾರರನ್ನು ಹರ್ಷಿತಗೊಳಿಸುವುದಲ್ಲವೇ?
ಪವರ್ ಫೈನಾನ್ಸ್ ಕಾರ್ಪೊರೇಷನ್ :ಈ ವರ್ಷ ಮಾರ್ಚ್ ತಿಂಗಳಲ್ಲಿ ಪ್ರತಿ ಷೇರಿಗೆ ರೂ.8 ರಂತೆ ಡಿವಿಡೆಂಡ್ ವಿತರಿಸಿದ ಈ ಕಂಪನಿ ಹಿಂದಿನ ವರ್ಷವೂ ರೂ.9.50 ರಂತೆ ಡಿವಿಡೆಂಡ್ ವಿತರಿಸಿದೆ. ಸಧ್ಯ ಈ ಷೇರಿನ ಬೆಲೆ ರೂ.114 ರ ಸಮೀಪವಿದ್ದು, ಷೇರಿನ ಬೆಲೆಯು, ಕಂಪನಿ ವಿತರಿಸುವ ಡಿವಿಡೆಂಡ್ ಆಧರಿಸಿ ನೋಡಿದಾಗ ಹೂಡಿಕೆಗೆ ಆಕರ್ಷಣೀಯವೆನಿಸುತ್ತದೆ.
ಭಾರತ್ ಡೈನಾಮಿಕ್ಸ್ ಲಿಮಿಟೆಡ್ :ರಕ್ಷಣಾ ವಲಯದ ಕೇಂದ್ರ ಸರ್ಕಾರದ ಸಾರ್ವಜನಿಕ ವಲಯದ ಈ ಕಂಪನಿಯ ಷೇರಿನ ಬೆಲೆ ರೂ.337 ರ ಸಮೀಪವಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಕೇಂದ್ರ ಸರ್ಕಾರವು ಪ್ರತಿ ಷೇರಿಗೆ ರೂ.330 ರಂತೆ ಆಫರ್ ಫಾರ್ ಸೇಲ್ ಮೂಲಕ ಬಂಡವಾಳ ಹಿಂತೆಗೆತವನ್ನು ಮಾಡಿತು. ರೀಟೇಲ್ ಹೂಡಿಕೆದಾರರಿಗೆ ರೂ.20 ರ ಡಿಸ್ಕೌಂಟ್ ನೀಡಿತು. ಈ ಕಂಪನಿ ಹಿಂದಿನ ತಿಂಗಳು ಪ್ರತಿ ಷೇರಿಗೆ ರೂ.6.70 ರಂತೆ ಮಧ್ಯಂತರ ಡಿವಿಡೆಂಡ್ ವಿತರಿಸಿದೆ.
ಸಾರ್ವಜನಿಕ ವಲಯದ ಕಂಪನಿಗಳಾದ ಗೇಲ್ ಇಂಡಿಯಾ, ಭಾರತ್ ಎಲೆಕ್ಟ್ರಾನಿಕ್ಸ್, ಆಯಿಲ್ ಇಂಡಿಯಾ, ಒ ಎನ್ ಜಿ ಸಿ, ಭಾರತ್ ಪೆಟ್ರೋಲಿಯಂ, ಹಿಂದೂಸ್ಥಾನ್ ಪೆಟ್ರೋಲಿಯಂ, ಎನ್ ಟಿ ಪಿ ಸಿ, ಮುಂತಾದವು ಸಹ ಉತ್ತಮ ಡಿವಿಡೆಂಡ್ ನೀಡುತ್ತಿರುವ ಕಂಪನಿಗಳಾಗಿವೆ. ಭಾರಿ ಗಾತ್ರದ ಕಂಪನಿಗಳಾದ ರಿಲಯನ್ಸ್ ಇಂಡಸ್ಟ್ರೀಸ್ ಹಿಂದಿನ ವರ್ಷ, ರೂ.2000 ದಲ್ಲಿರುವ ಪ್ರತಿ ಷೇರಿಗೆ ರೂ.6.50 ಯಂತೆ, ಟಾಟಾ ಸ್ಟೀಲ್ ರೂ. 800 ರ ಸಮೀಪವಿರುವ ಪ್ರತಿ ಷೇರಿಗೆ ರೂ.10 ರಂತೆ, ಎಂ ಆರ್ ಏಫ್ ತನ್ನ ರೂ.85,000 ರೂಪಾಯಿಯ ಷೇರಿಗೆ ರೂ.97 ರ ಡಿವಿಡೆಂಡ್ ನೀಡಿದೆ. ಹೀಗಾಗಿ ಏರಿಕೆ ಕಂಡಾಗ ಮಾರಾಟಮಾಡಿದರೆ ಮಾತ್ರ ಲಾಭದಾಯಕ. ಇಲ್ಲವಾದಲ್ಲಿ ಕೇವಲ ಮಾನಸಿಕ ಭಾಂದವ್ಯಗಳನ್ನು ಬೆಳೆಸುತ್ತವೆಯೇ ಹೊರತು, ಆರ್ಥಿಕವಾಗಿ ಅನುಕೂಲ ಮಾಡಿಕೊಡುವುದಿಲ್ಲ.
ಷೇರುಪೇಟೆ ಮತ್ತು ಬ್ಯಾಂಕ್ ಠೇವಣಿ :ಬ್ಯಾಂಕ್ ಡಿಪಾಜಿಟ್ ಗಳಿಗೂ ಷೇರುಗಳಿಗೂ ಇರುವ ಮುಖ್ಯ ವ್ಯತ್ಯಾಸವೆಂದರೆ ಬ್ಯಾಂಕ್ ಡಿಪಾಜಿಟ್ ಗಳು ನಿಗದಿತ ಅವಧಿಯದಾಗಿದ್ದು, ಅವಧಿಗೆ ಮುನ್ನ ಹಣ ಹಿಂಪಡೆದರೆ, ಬಡ್ಡಿದರವೂ ಕಡಿತಗೊಳ್ಳುವುದು. ಆದರೆ ಷೇರುಗಳಲ್ಲಿ ಪೇಟೆಯ ದರ ಹೆಚ್ಚಿದಾಗ ಅಥವಾ ಅವಶ್ಯಕತೆ ಇದ್ದಾಗ ಪೇಟೆಯಲ್ಲಿ ಮಾರಾಟ ಮಾಡಿ ಹಣವನ್ನು ಟಿ+2 ಆಧಾರದ ಮೇಲೆ ಹಿಂಪಡೆಯಲು ಸಾಧ್ಯ. ಇಷ್ಠು ಕ್ಷಿಪ್ರವಾಗಿ ನಗದೀಕರಿಸಲು ಸಾಧ್ಯವಿರುವ ಏಕೈಕ ಸ್ವತ್ತು ಷೇರುಪೇಟೆಯಾಗಿದೆ. ಹೀಗೆ ಮಾರಾಟ ಮಾಡಿದ ಷೇರುಗಳ ಬೆಲೆಗಳು ಮತ್ತೊಮ್ಮೆ ಕುಸಿತ ಕಂಡಾಗ ಖರೀದಿಸಲು ಸಾಧ್ಯವಿದೆ. ಸಾಮಾನ್ಯವಾಗಿ ಕಂಪನಿಗಳು ಡಿವಿಡೆಂಡ್ ವಿತರಿಸಿದ ನಂತರ ಷೇರಿನ ಬೆಲೆಗಳು ಇಳಿಕೆ ಕಾಣುತ್ತವೆ. ಆ ಸಂದರ್ಭವು ಹೂಡಿಕೆಗೆ ಆಯ್ಕೆಗೆ ಉತ್ತಮವಾಗಿರುತ್ತದೆ. ಏರಿಳಿತಗಳ ಚಕ್ರದ ಲಾಭ ಪಡೆಯಬಹುದು.
ಎಚ್ಚರಿಕೆ:ಸಧ್ಯ ಬರುತ್ತಿರುವ ಎಲ್ಲಾ ಸ್ಥಳೀಯ ಮತ್ತು ವಿದೇಶಿ ವಿಶ್ಲೇಷಕರ ಅಭಿಪ್ರಾಯಗಳು ಸಕಾರಾತ್ಮಕವಾಗಿವೆ. ಆದರೆ ಹೂಡಿಕೆದಾರರು ಗಮನದಲ್ಲಿರಿಸಬೇಕಾದ ಅಂಶವೆಂದರೆ, ಹಿಂದಿನ ವರ್ಷ ಅನಿರೀಕ್ಷಿತವಾದ ಲಾಕ್ ಡೌನ್ ಸಂದರ್ಭದಲ್ಲಿ ಹಲವಾರು ದಶಕಗಳಿಂದಲೂ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳು ತಮ್ಮ ಸಿಬ್ಬಂದಿಗೆ ಸಂಬಳ ವಿತರಿಸಲೂ ಸಹ ಸಾಹಸಮಾಡಬೇಕಾದ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಅಂದರೆ ವಾಸ್ಥವವೇ ಬೇರೆ, ವಿಶ್ಲೇಷಣೆಗಳೇ ಬೇರೆ. ಎಲ್ಲಾ ಚಿಂತನೆಗಳಿಗೂ ತೆರೆದಿಡಿ ಮನ, ಆದರೆ ಸೂಕ್ತವಾಗಿರುವುದನ್ನ ನಿರ್ಧರಿಸಿ.
ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು
ಬೆಂಗಳೂರು ನಗರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಪರಿಗಣಿಸಿ ಪ್ರಸ್ತುತ ನಡೆಯುತ್ತಿರುವ 6-9ನೇ ಭೌತಿಕ ತರಗತಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಿಲ್ಲಿಸಲಾಗುತ್ತದೆ ಎಂದು ಸಚಿವ ಸುರೇಶ್ಕುಮಾರ್ ಹೇಳಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದ್ದು, ಈ ವಯೋಮಾನದ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 10 ನೇ ತರಗತಿಗಳು ಎಂದಿನಂತೆ ಮುಂದುವರೆಯಲಿದ್ದು, ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಲ್ಲ ಎಂದಿದ್ದಾರೆ.
ರಾಜ್ಯದ ಉಳಿದೆಡೆ ಪ್ರಸ್ತುತ ಇರುವ ವ್ಯವಸ್ಥೆ ಮುಂದುವರೆಯಲಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಪರೀಕ್ಷೆ: ಕಡ್ಡಾಯ ಶಿಕ್ಷಣ ಕಾಯಿದೆಯ ಅವಕಾಶಗಳಡಿಯಲ್ಲಿ 6-9ನೇ ತರಗತಿಗಳಿಗೆ ಸಂಬಂಧಿಸಿದಂತೆ ಶಾಲೆಗಳು ನಡೆಸಬೇಕಾದ ಮೌಲ್ಯಾಂಕನ ಪರೀಕ್ಷೆಗಳ ಕುರಿತಂತೆ ಮುಂದಿನ ದಿನಗಳಲ್ಲಿ ಅಗತ್ಯ ನಿರ್ದೇಶನಗಳನ್ನು ನೀಡಲಾಗುವುದೆಂದು ಸಚಿವರು ಸ್ಪಷ್ಟ ಪಡಿಸಿದ್ದಾರೆ.
ಮೂರು ದಶಕಗಳ ಹಿಂದೆ ಆಲ್ ದಿ ಬೆಸ್ಟ್ ಎಂಬ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ನಾಟಕ ಕರ್ನಾಟಕದಾದ್ಯಂತ ಉಂಟುಮಾಡಿದ ಸಂಚಲನವನ್ನು ಮರೆಯುವಂತಿಲ್ಲ. ಎಲ್ಲ ವಯಸ್ಸಿನವರನ್ನೂ ಕ್ಷಣಕ್ಷಣಕ್ಕೂ ನಗಿಸಬಲ್ಲ ಅಂಥ ಜನಪ್ರಿಯ ಹಾಸ್ಯ ನಾಟಕ ಇನ್ನೊಂದಿರಲಾರದು. ಮನುಷ್ಯನ ದೈಹಿಕ ನ್ಯೂನ್ಯತೆಗಳಿಂದ ಉಂಟಾಗಬಹುದಾದ ಹಾಸ್ಯಮಯ ಸನ್ನಿವೇಶಗಳನ್ನು ಆಧರಿಸಿ ನ್ಯೂನ್ಯತೆ ಇದ್ದಾಗಲೂ ಒಬ್ಬ ವ್ಯಕ್ತಿ ಹೇಗೆ ಏನನ್ನಾದರೂ ಸಾಧಿಸಬಲ್ಲ ಎಂಬುದನ್ನು ಸ್ಥೂಲವಾಗಿ ನಾಟಕ ಪರಿಚಯಿಸುತ್ತದೆ.
ಇಲ್ಲಿ ಅಚ್ಚರಿ ಎನಿಸುವುದು ಎಂತಹ ಬಿಗುಮಾನದವರನ್ನೂ ಹಾಸ್ಯದ ಹೊನಲಲ್ಲಿ ತೇಲಿಸಿ ಬಿಡುವ ನಗುವಿನ ಪ್ರಕ್ರಿಯೆ. ರವೀಂದ್ರನಾಥ್ ಟ್ಯಾಗೋರರು ಒಂದು ಮಾತು ಹೇಳುತ್ತಾರೆ.The burdon of self is lightened when I laugh at myself ಎಂದು. ಅದರಂತೆ ಈ ನಾಟಕದ ಪಾತ್ರಗಳು ತಮ್ಮನ್ನು ತಾವೇ ಗೇಲಿ ಮಾಡಿಕೊಳ್ಳುತ್ತ ಎಲ್ಲರಲ್ಲೂ ನಗೆಬುಗ್ಗೆಯನ್ನು ಚಿಮ್ಮಿಸುತ್ತವೆ.
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ
ಎಂದು ಡಿವಿಜಿ ಯವರು ನಗುವು ಸಹಜದ ಧರ್ಮ ಎಂದಿದ್ದರೂ ಇಂದು ಅದು ಅಪರೂಪವಾಗುತ್ತಿದೆ. ಗಡಿಬಿಡಿ, ಗೊಂದಲಗಳಲ್ಲಿ ಕಳೆದು ಹೋಗಿರುವ ಎಲ್ಲರೂ ನಗುವುದಕ್ಕೂ ಬಿಡುವಿಲ್ಲದವರಾಗಿದ್ದೇವೆ. ಮನಬಿಚ್ಚಿ ನಗುವುದಕ್ಕೂ ತಡೆಹಿಡಿಯುವ ಏನೇನೋ ಕಾರಣಗಳು. ಪರಿಚಯದವರನ್ನು ನೋಡಿ ನಕ್ಕರೆ ಏನೆಂದುಕೊಳ್ಳುವರೋ ಎಂಬ ಅಳುಕು. Loud laugh that spoke the vacant mind ಎಂಬ ಗೋಲ್ಡ್ ಸ್ಮಿತ್ ಕವಿಯ ಮಾತಿನಂತೆ ಅವರನ್ನು ನೋಡಿ ನಕ್ಕರೆ ತನ್ನ ಗೌರವವೆಲ್ಲಿ ಕಡಿಮೆಯಾಗುವುದೋ ಎಂಬ ಭಯ. ನಕ್ಕ ನಗು ಮನಃಪೂರ್ವಕವೇ ಎಂಬ ಅನುಮಾನ. ತನ್ನನ್ನು ಅವರೇನಾದರೂ ಅಪಹಾಸ್ಯ ಮಾಡುತ್ತಿಲ್ಲವಷ್ಟೇ ಎಂಬ ಶಂಕೆ. ಹೀಗೆ ಹುಚ್ಚು ಮನಸ್ಸು ತನ್ನೊಳಗೆ ವರ್ತುಲಗಳನ್ನು ನಿರ್ಮಿಸಿಕೊಳ್ಳುತ್ತ ಮುಕ್ತವಾಗಲು ಅಲ್ಲಗಳೆಯುತ್ತ ಹೋಗುವುದಕ್ಕೆ ಇಂದು ಮಾನಸಿಕ ತೊಂದರೆ, ಮಾನಸಿಕ ಕಾಯಿಲೆ ಎಂಬ ಹಣೆಪಟ್ಟಿಯೂ ದೊರೆತಿದೆ.
ಹಾಗೆ ನೋಡಿದರೆ ವೈಜ್ಞಾನಿಕವಾಗಿಯೂ ನಗು ಮಹತ್ವವನ್ನು ಪಡೆಯುತ್ತದೆ. ಅಳುವಿಗಿಂತ ನಗುವುದರಿಂದ ಮುಖದ ಹೆಚ್ಚು ಸ್ನಾಯುಗಳು ಕೆಲಸ ಮಾಡಿ ಮುಖಕ್ಕೆ ಒಳ್ಳೆಯ ವ್ಯಾಯಾಮ ನೀಡುತ್ತವೆ ಎಂಬುದು ಬಹಳ ಪ್ರಚಲಿತವಾಗಿರುವ ಒಂದು ವೈಜ್ಞಾನಿಕ ಹೇಳಿಕೆಯಾದರೆ ಇನ್ನೊಂದು ಅಳು ದೇಹದಲ್ಲಿ ಟಾಕ್ಸಿನ್ ಗಳ ಉತ್ಪಾದನೆಯನ್ನು ಹೆಚ್ಚಿಸಿ ಋಣಾತ್ಮಕತೆಯನ್ನು ಬೆಳೆಸಿದರೆ ನಗು ಧನಾತ್ಮಕ ಆಲೋಚನೆಗಳನ್ನು ಹೆಚ್ಚಿಸುತ್ತದೆ ಎಂಬುದು. ಭಾರತೀಯ ಸಂಪ್ರದಾಯದ ಪ್ರಕಾರ ‘ ಸುಖವಾಗಿರು’ ಎಂಬ ಹಾರೈಕೆಗೆ ಸಂತಸ, ನೆಮ್ಮದಿ ಜೊತೆಯಾಗಿರುತ್ತವೆ ಎಂಬ ಕಾರಣದಿಂದಲೇ ಹಿರಿಯರ ಕಾಲಿಗೆರಗಿದಾಗ ‘ ಸುಖೀ ಭವ’ ಎಂದು ಹರಸುವುದು.
ಇಂದು ಮುಖಗಳ ಮೇಲೆ ಮಂದಹಾಸ ಮರೆಯಾಗಿ ನಿರಾಸೆಯೋ, ಕಳವಳವೋ, ವಿಶಾದವೋ ಹರಡಿದಂತೆ ಕಾಣುವುದು ಪ್ರಮುಖವಾಗಿ ಎರಡು ಕಾರಣಗಳಿಂದ. ಮೊದಲನೆಯದಾಗಿ ತೃಪ್ತಿಯನ್ನು ಕಾಣದ ಜೀವನ. ಎರಡನೆಯದಾಗಿ ನಿರಾಶಾವಾದ. ಸುಖ ಅಥವಾ ತೃಪ್ತಿ ಒಂದು ಮಾನಸಿಕ ಸ್ಥಿತಿ. ಅದೊಂದು ವೈಯುಕ್ತಿಕ ಅನುಭವ. ಮನುಷ್ಯನ ಆಸೆಗಳು ಎಷ್ಟೆಂದರೆ ಅವು ಅವನನ್ನು ತೃಪ್ತ ಎಂದು ಒಪ್ಪಿಕೊಳ್ಳಲು ಬಿಡುವುದಿಲ್ಲ. ಒಂದರ ಹಿಂದೆ ಒಂದರಂತೆ ಬರುವ ಅವಶ್ಯಕತೆಗಳು, ಕೊನೆಯೇ ಇರದ ಆಸೆಗಳು, ಇನ್ನಷ್ಟು ಮತ್ತಷ್ಟು ಎಂದು ಎರಡೂ ಕೈಯಲ್ಲಿ ಬಾಚಿಕೊಳ್ಳುವಷ್ಟು ಆಸೆಬುರುಕತನ. ಇವೆಲ್ಲ ಸುಖಿಯನ್ನು ಅಸುಖಿಯನ್ನಾಗಿಯೂ ತೃಪ್ತನನ್ನು ಅತೃಪ್ತನನ್ನಾಗಿಯೂ ಮಾಡುತ್ತವೆ. ತನ್ನನ್ನು ಇತರರೊಂದಿಗೆ ಹೋಲಿಸಿಕೊಂಡು ಸಾಮಾಜಿಕ ಹಾಗೂ ಆರ್ಥಿಕ ಸಫಲತೆಯನ್ನು ಅಳೆಯುವ ಯಾರು ತಾನೇ ಸುಖವಾಗಿರಲು ಸಾಧ್ಯ? ಜನರ ಇಂಥ ನಡಾವಳಿಗಳನ್ನು ಭಂಡವಾಳವಾಗಿಸಿಕೊಂಡೇ ಓನಿಡಾ ಟಿವಿ ಇಪ್ಪತ್ತನೇ ಶತಮಾನದ ಕೊನೆಯ ದಶಕದಲ್ಲಿ ‘ ನೇಬರ್ಸ ಎನ್ವಿ , ಓನರ್ಸ್ ಪ್ರೈಡ್ ‘ ಎಂಬ ಟ್ಯಾಗ್ ಲೈನ್ ಹೊತ್ತು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಹಾಗೂ ಜನರಲ್ಲಿ ಸುಪ್ತವಾಗಿದ್ದ ಇಂಥ ಭಾವನೆಗಳನ್ನು ಕೆರಳಿಸಿ ಕೆಂಡವಾಗಿಸಿದ್ದು. ಇಂಥ ಅತೃಪ್ತಿಯ ಹೊಗೆಯೇ ಇಂದು ನಗುವನ್ನು ಮಾಸಲಾಗಿಸಿದೆಯೇನೊ!
ಕೆಲವರದು ಎಲ್ಲದರಲ್ಲೂ ದೋಷವನ್ನೇ ಹುಡುಕುವ ಸ್ವಭಾವ. ಯಾವುದನ್ನೂ ವಸ್ತುನಿಷ್ಠವಾಗಿ ಒಪ್ಪಿಕೊಳ್ಳದ , ಒಳ್ಳೆಯದನ್ನು ಒಪ್ಪಿಕೊಳ್ಳಲು, ಸತ್ಯವನ್ನು ಗುರುತಿಸಲು ಸಿದ್ಧವಿರದ ವಿಲಕ್ಷಣ ಮನಸ್ಸು. ತನ್ನ ನಿಲುವೇ ಸರಿ ಎಂದು ಸತ್ಯವನ್ನು ಅಲ್ಲಗಳೆಯುವುದು. ಇಂಥ ಮನೋಭಾವದ ವ್ಯಕ್ತಿ ಒಂದು ನಡುಗಡ್ಡೆಯಾಗುತ್ತಾನೆಯೇ ಹೊರತು ‘ ‘ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ಎಲ್ಲರೊಳಗೊಂದಾಗು ‘ ಎಂಬಂತೆ ಸಾಮರಸ್ಯದಿಂದ ಬದುಕವುದಿಲ್ಲ. ಆಂಗ್ಲ ಕವಿ ಎಸ್ ಟಿ ಕೊಲ್ರಿಜ್ “
Alone Alone All All Alone Alone on a wide wide See
ಎಂದು ಉದ್ಗರಿಸಿದಂತೆ ಒಂಟಿತನದ ಬಾಧೆಯಿಂದ ನರಳುತ್ತ ಸಮುದ್ರದ ಮಧ್ಯದಲ್ಲಿ ದಾಹ ಹಿಂಗಿಸಿಕೊಳ್ಳಲು ನೀರಿಲ್ಲದೆ ಕಂಗೆಡುವಂತಾಗಿದೆ. ಒಬ್ಬೊಬ್ಬರೂ ಒಂದು ಪ್ರಪಂಚವೇ ಆಗಿ ಎಲ್ಲೋ ಭೇಟಿಯಾದಾಗೊಮ್ಮೆ ನಕ್ಕು ಲೋಕಾಭಿರಾಮವಾಗಿ ಮಾತನಾಡಿ ನಾವೆಲ್ಲ ಒಂದು ಎಂದು ಕಲ್ಪಿಸಿಕೊಂಡು ಸುಖಿಸುವ ಭ್ರಮೆಯಲ್ಲಿ ನರಳುವುದು.
Laugh off if you are wise ಎಂಬ ಮಾತಿದೆ. ತಿಳಿಯಾದ ನಗು, ಅಬ್ಬರದ ನಗು, ಓರೆ-ಕೋರೆಯ ನಗು, ಅಪಹಾಸ್ಯದ ನಗು, ಅವಮಾನಿಸುವ ಹುಸಿ ನಗು ಇನ್ನೂ ಮುಂತಾಗಿ ಹೆಸರಿಸಬಹುದಾದ ಬಗೆಬಗೆಯ ನಗುಗಳಲ್ಲಿ ನಮ್ಮ ವ್ಯಕ್ತಿತ್ವ ಅಡಗಿದೆ ಎಂಬುದನ್ನೂ ಕೂಡ ಆಧುನಿಕ ಮಾನಸಿಕ ಶಾಸ್ತ್ರಜ್ಞರು ಗುರುತಿಸುತ್ತಾರೆ.
ಸಾಗರದ ಅಲೆಗಳಷ್ಟು ಪ್ರೀತಿಯನ್ನು ಉಕ್ಕಿಸಬಲ್ಲ, ಬೆಟ್ಟದಷ್ಟು ಕೋಪವನ್ನು ತಣಿಸಬಲ್ಲ, ಸ್ನೇಹದ ಕುರುಹಾಗಿರುವ, ಪ್ರೇಮದ ಸಂಕೇತವಾಗಿರುವ ಈ ನಗು ಒಂದು ಅಚ್ಚರಿಯೇ ಸರಿ. ನಮ್ಮ ನಲ್ಮೆಯ ಕವಿ ನಿಸಾರ್ ಅಹಮದ್ ಅವರು ಅದಕ್ಕಾಗಿ ” ಮರೆತೆಲ್ಲ ಕೊನೆಗೊಮ್ಮೆ ಮನಬಿಚ್ಚಿ ನಕ್ಕುಬಿಡಿ” ಎಂದು ಹಾರೈಸಿದ್ದಾರೆ.
ಕಲೆಗೆ ಭಾಷೆಯ ಮಿತಿಯಿಲ್ಲ, ಭಾವನೆಯ ಅಭಿವ್ಯಕ್ತಿಗೆ ಹಲವು ಮಾರ್ಗಗಳಿವೆ. ಸಂಗೀತ, ಚಿತ್ರಕಲೆ, ನಾಟ್ಯಗಳಿಗೆ ಭಾಷೆಯ, ಪರಿಧಿಯ ಹಂಗಿಲ್ಲ. ಹೀಗೆ ಕನ್ನಡ ನೆಲದಲ್ಲಿ ಲಲಿತಕಲೆಗೆ ಹೆಚ್ಚಿನ ಪ್ರೋತ್ಸಾಹ ಮನ್ನಣೆಗಳು ಲಭಿಸಲಿವೆ ಎಂದೂ, ಇಲ್ಲಿನವರು ಸಹೃದಯಿಗಳೆಂದೂ ಹೊರ ರಾಜ್ಯದವರೂ ಇಲ್ಲಿಗೆ ಬಂದು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸುತ್ತಿದ್ದಾರೆ. ಮೂಲ ಹೊರರಾಜ್ಯವಾದರೂ ಇಲ್ಲಿಗೆ ಬಂದು ಈ ನೆಲದಲ್ಲಿಯೇ ಬದುಕು ಕಟ್ಟಿಕೊಂಡದ್ದೇ ಅಲ್ಲದೇ ಇಲ್ಲಿಯೇ ತಮ್ಮ ಕಲಾಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ. ಅಂತಹ ಕಲಾ ಪ್ರತಿಭೆಗಳಲ್ಲಿ ಒಬ್ಬರು ಕೀರ್ತನಾ ಪ್ರಸಾದ್.
ಇವರದು ಮೂಲ ತಮಿಳುನಾಡಾದರೂ ತಮ್ಮ ಪತಿಯೊಂದಿಗೆ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ಇಲ್ಲಿನ ಸ್ವಚ್ಛಂದ ಪರಿಸರವು ಇವರಲ್ಲಿನ ಕಲಾವಿದೆಯನ್ನು ಎಚ್ಚರಗೊಳಿಸಿದೆ. ಬಾಲ್ಯದಿಂದಲೂ ರೂಢಿಸಿಕೊಂಡು ಬಂದಿದ್ದ ಚಿತ್ರಕಲೆಯಲ್ಲಿ ಮತ್ತೆ ತೊಡಗಿಕೊಂಡಿದ್ದಾರೆ. ಶಾಸ್ತ್ರೋಕ್ತವಾದ ಪೇಂಟಿಂಗ್ ಅನ್ನು ಅಭ್ಯಾಸಿಸುತ್ತಿದ್ದವರು ಸ್ವಲ್ಪ ಬದಲಾವಣೆಯತ್ತ ಮುಖಮಾಡಿ ಅಮೂರ್ತದತ್ತ ಹೆಜ್ಜೆ ಹಾಕಿದ್ದಾರೆ.
ತಮ್ಮ ಅಪಾರ್ಟ್ಮೆಂಟ್ ಸುತ್ತಲಿರುವ ಸ್ವಚ್ಛಂದ ಪರಿಸರದಲ್ಲಿ ಸ್ವೇಚ್ಛೆಯಿಂದ ಹಾರಾಡುವ ಪಕ್ಷಿಗಳನ್ನು ಗಮನಿಸಿದ್ದಾರೆ. ಅವುಗಳ ಹಾವ-ಭಾವ-ಚಿಲಿಪಿಲಿಗಳನ್ನಷ್ಟೇ ಅಲ್ಲದೇ ಅವು ಬದುಕುವ ಪರಿಯ ಸೂಕ್ಷ್ಮತೆಯನ್ನು ಗಮನಿಸುತ್ತಾ ಬಂದಿದ್ದಾರೆ. ಕಲಾವಿದೆಯಾದ ಕೀರ್ತನಾ ಅವರು ಅವುಗಳನ್ನು ಯಥಾವತ್ತಾಗಿ ಚಿತ್ರಿಸದೇ ಅವುಗಳಲ್ಲಿನ ಬಣ್ಣಗಳನ್ನು ತಮ್ಮದೇ ಶೈಲಿಯಲ್ಲಿ ಅಭಿವ್ಯಕ್ತಗೊಳಿಸಲು ಅಮೂರ್ತರೂಪದಲ್ಲಿ ಚಿತ್ರರೂಪಕ್ಕೆ ತಂದಿದ್ದಾರೆ.
ಕೀರ್ತನಾ ಅವರ ತಂದೆ ಹಾಗೂ ತಾಯಿ ಇಬ್ಬರೂ ಚಿತ್ರಕಾರರೇ ಆಗಿದ್ದರಿಂದ ಇವರಲ್ಲಿ ಚಿತ್ರ ರಚನೆಯು ಹುಟ್ಟಿದಾರಭ್ಯವೇ ಒಗ್ಗಿ ಹೋಗಿದೆ. ಗುರು ಎಸ್ ಧನಪಾಲ್ ಅವರು ಈಕೆಯಲ್ಲಿದ್ದ ಕಲಾವಿದೆಗೆ ಪೋಷಣೆಯನ್ನಿತ್ತು, ಶಾಸ್ತ್ರೋಕ್ತವಾಗಿ ಅಭ್ಯಾಸಿಸುವಂತೆ ಮಾಡಿ ಸ್ಫೂರ್ತಿಯಾದರು ಎನ್ನುತ್ತಾ ಗುರುವಿಲ್ಲದೇ ಇಂತಹ ಕಲೆಯು ಒಲಿಯದು ಎನ್ನುತ್ತಾರೆ. ಅಷ್ಟೇ ಅಲ್ಲದೇ ಪತಿಯೂ ಚಿತ್ರಕಾರರಾಗಿದ್ದು ತಂತ್ರಜ್ಞಾನವನ್ನು ಅಳವಡಿಸಿಕೊಂಡು ಅದನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದ್ದಾರೆ. ಕೀರ್ತನಾ ಓದಿದ್ದು ಇತಿಹಾಸವದರೂ ಪ್ರಸ್ತುತಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತಾ ತಮ್ಮನ್ನು ತಾವು ಹೊಸ ಹೊಸ ಆಲೋಚನೆಯತ್ತ ತೊಡಗಿಸಿಕೊಂಡಿದ್ದಾರೆ. ಒಟ್ಟು ಕಲಾ ಕುಟುಂಬವೇ ಇಲ್ಲಿ ನಿರ್ಮಾಣವಾಗಿದ್ದು ಕೀರ್ತನಾ ಅವರ ಚಿತ್ರಕಲಾ ಆಸಕ್ತಿಗೆ ರೆಕ್ಕೆ-ಪುಕ್ಕಗಳು ಬಂದಿವೆ. ಅದರ ಫಲವೇ ಕಲರ್ಸ್ ಆಫ್ ದ ವಿಂಡ್' ಪಕ್ಷಿಗಳ ಕುರಿತಾದ ಚಿತ್ರಕಲಾ ಪ್ರದರ್ಶನ.
ತಮಿಳುನಾಡಲ್ಲಿದ್ದರೂ ಬೆಂಗಳೂರಿನ ಸಿಕೆಪಿಯಲ್ಲಿ ನಡೆಯುತ್ತಿದ್ದ ಚಿತ್ರಸಂತೆಗೆ ಆಗಾಗ ಬಂದು ಹೋಗುತ್ತಿದ್ದರಂತೆ. ಎಂದಾದರೂ ಒಮ್ಮೆ ಇಲ್ಲಿನ ಕಲಾ ಗ್ಯಾಲರಿಯಲ್ಲಿ ತಮ್ಮದೊಂದು ಕಲಾ ಪ್ರದರ್ಶನ ಏರ್ಪಡಿಸಬೇಕೆಂಬ ಹೆಬ್ಬಯಕೆಯನ್ನು ಇಟ್ಟುಕೊಂಡಿದ್ದರಂತೆ! ಆದರದು ಇಷ್ಟು ಬೇಗ ಈಡೇರುತ್ತೇ ಅನ್ನುವ ನಂಬಿಕೆ ನನಗೆ ಇರಲಿಲ್ಲ ಎನ್ನುವುದು ಕೀರ್ತನಾ ಅವರ ಮಾತು.
ಚನ್ನೈ ನಲ್ಲಿ ಹಲವಾರು ಪ್ರದರ್ಶನಗಳನ್ನು ನಡೆಸಿದ್ದಾರೆ. ಆದರೆ ಈ ಸಿಕೆಪಿಯಲ್ಲಿ ಈಗ ನಡೆಸುತ್ತಿರುವ ಕಲಾಪ್ರದರ್ಶನದಲ್ಲಿ ಹೆಚ್ಚಿನ ವಿಶೇಷತೆಗಳಿವೆ ಎನ್ನುತ್ತಾರೆ. ಅದೇನೆಂದರೆ ಹೊಸ ಜಾಗ, ಹೊಸ ಜನ, ಹೊಸ ವಿಚಾರ ಮಾಡುವ ಹಲವು ಬಗೆಯ ಕಲಾರಾಧಕರು, ಉತ್ತಮ ಕಲಾ ಮಾರುಕಟ್ಟೆಗೆ ಹೆಸರಾದ ಊರು! ಹೀಗೆ ಹಲವು ವಿಶೇಷತೆಗಳು ಈ ಪ್ರದರ್ಶನದಲ್ಲಿವೆ. ಕಲೆಯನ್ನಷ್ಟೇ ನೋಡಿ ಮೆಚ್ಚುವ ಅಥವಾ ಮೆಚ್ಚದಿರುವ, ಸರಿಯಾದ ವಿಮರ್ಶೆ ಮಾಡುವ ಕಲಾಸಕ್ತರು ಇಲ್ಲಿ ಸಿಗುತ್ತಾರೆ. ಇಲ್ಲಿಯ ವಿಮರ್ಶೆ ನೇರವಾಗಿರುತ್ತೆ. ಕಾರಣ ನನಗೆ ತಿಳಿದವರು ಇಲ್ಲಿ ಯಾರೂ ಇಲ್ಲವಲ್ಲಾ? `ನೋ ಸಾಫ್ಟ್ ಕಾರ್ನರ್!’ ಎನ್ನುವುದು ಕಲಾವಿದೆ ಕೀರ್ತನಾ ಅವರ ಅಭಿಪ್ರಾಯ.
ನವಿಲು ಹಾಗೂ ಗಿಳಿಗಳಲ್ಲದೇ ಹಲವಾರು ಸಣ್ಣ ಪುಟ್ಟ ಹಕ್ಕಿಗಳನ್ನೂ ತಮ್ಮದೇ ಶೈಲಿಯ ವರ್ಣ ವಿನ್ಯಾಸದಲ್ಲಿ ಅಮೂರ್ತ ರೂಪದಲ್ಲಿ ಚಿತ್ರಿಸಿದ್ದಾರೆ. ಒಮ್ಮೆ ಕ್ಯಾನ್ವಾಸ್ ಮೇಲಿನ ಅಕ್ರಲಿಕ್ ಬಣ್ಣದಲ್ಲಿನ ನಿಖರ ಸ್ಕ್ರೋಕ್ಗಳ ಹೊಡೆತಗಳನ್ನು ಕ್ಯಾನ್ವಾಸ್ ಮುಂದೆ ನಿಂತು ನೋಡಬೇಕು. ಅದರ ಅನುಭವೇ ಬೇರೆ. ಎಷ್ಟೇ ಇ-ಕಲಾಪ್ರದರ್ಶನಗಳು ನಡೆದರೂ ನೇರಾನೇರ ಚಿತ್ರಕೃತಿಗಳನ್ನು ನೋಡುವ, ಆಸ್ವಾದಿಸುವ ಪರಿಯೇ ಬೇರೆ. ಕಲಾರಾಧಕನಿಗೂ ಹಾಗೂ ಕಲಾಕೃತಿಗೂ ಮಧ್ಯೆ ಏರ್ಪಡುವ ತರಂಗದ ಅನುಭವ ನೇರ ನೋಡುಗನೇ ಬಲ್ಲ. ಗೋಡೆಗೆ ತಗುಲಿಸಿದ ಕ್ಯಾನ್ವಾಸನ್ನು ಹೆಚ್ಚು ನಿಂತು ನೋಡುವ, ಬಣ್ಣಗಳ ತಾದಾನ್ಯತೆಯನ್ನು ಅನುಭವಿಸುವ ರೀತಿ ಇ-ಎಕ್ಸಿಬಿಷನ್ನಲ್ಲಿ ಸಿಗದು. ಅಲ್ಲಿ ತೋರು ಬೆರಳು ಮುಂದಿನ ಕಲಾಕೃತಿಯತ್ತ ಜಾರಲು ತುದಿ ಬೆರಳಲ್ಲಿ ಕಾದಿರುತ್ತೆ! ಸ್ಕಿಪ್ ಆಪ್ಷನ್ಗಳೇ ಹೆಚ್ಚು ಬಳಕೆಯಾಗುವುದಲ್ಲಿ!
ಒಟ್ಟಾರೆ ಹಕ್ಕಿರವದ ಸದ್ದಿಲ್ಲದ ವರ್ಣಮಯವಾದ ಕಲಾಪ್ರದರ್ಶನವು ಮಾರ್ಚ್ 31 ರಂದು (ಇಂದು) ಸಿಕೆಪಿಯ ಅಸಿಸ್ಟೆಂಟ್ ಪ್ರೊಫೆಸರ್ ಆದ ಹಾಗೂ ಖ್ಯಾತ ಕಲಾವಿದರಾದ ಬಾಬು ಜತ್ಕರ್ ಅವರು ಉದ್ಘಾಟಿಸಲಿದ್ದಾರೆ. ಮತ್ತೊಬ್ಬ ಖ್ಯಾತ ಚಿತ್ರಕಾರರಾದ ಎಸ್ ಎ ವಿಮಲನಾಥನ್ ಅವರು ಅತಿಥಿಯಾಗಿ ಆಗಮಿಸಲಿದ್ದಾರೆ. ಸಿಕೆಪಿಯ ಕಲಾಗ್ಯಾಲರಿಯಲ್ಲಿ ಸಂಜೆ 5ಕ್ಕೆ ಇದು ಉದ್ಘಾಟನೆಯಾಗಲಿದೆ. ಈ ಪ್ರದರ್ಶನವು ಏಪ್ರಿಲ್ 6ರವರೆಗೆ ಕಲಾಭಿಮಾನಿಗಳಿಗಾಗಿ ತೆರೆದಿರುತ್ತದೆ. ಸಿಕೆಪಿಯ ಉತ್ತಮ ಸ್ವಚ್ಛ ಪರಿಸರದಲ್ಲಿ ಸಾಕಷ್ಟು ಪಕ್ಷಿಗಳಿದ್ದು ಚಿಲಿಪಿಲಿ ಸದ್ದು ಗುನುಗುಡುತ್ತಿರುತ್ತೆ. ಅದರ ಇಂಪ್ಯಾಕ್ಟ್ ಎಂಬಂತೆ ಗ್ಯಾಲರಿಯಲ್ಲಿ ವರ್ಣಮಯವಾದ ಹಾರಾಡುವ ಪಕ್ಷಿಗಳು ಕ್ಯಾನ್ವಾಸ್ನಲ್ಲಿ ತಮ್ಮನ್ನು ಸೆಳೆಯಲಿದೆ. ಒಮ್ಮೆ ಬೇಟಿಕೊಡಿ, ಗೆಳೆಯರನ್ನೂ, ಆಸಕ್ತರನ್ನೂ ವೀಕ್ಷಿಸುವಂತೆ ಮಾಡಿ, ಕಲಾಚಟುವಟಿಕೆಗಳಲ್ಲಿ ತೊಡಗುವಂತೆ ಹುರಿದುಂಬಿಸಿ, ಕಲೆಯನ್ನು ಪ್ರೋತ್ಸಾಹಿಸಿ.
ಸಂಕೇತದತ್ತ ಎಂಬ ಹೆಸರಿನಿಂದ ಸುಪ್ರಸಿದ್ಧರಾಗಿರುವ ಸಂಕೇತ ಗುರುದತ್ತ ಅವರ ಮೂಲ ತುಮಕೂರು. ಅಲ್ಲಿ ತುಮಕೂರುವಾರ್ತೆ, ಪ್ರಜಾಪ್ರಗತಿ, ಕನ್ನಡ ಗಂಗೋತ್ರಿ, ನಗೆಮಿತ್ರ ಹಾಗೂ ನಗೆಮುಗುಳು, ಪತ್ರಿಕೆಗಳಿಗೆ ಕೆಲಸ ಮಾಡಿದ್ದರು. ಬೆಂಗಳೂರಿಗೆ ಬಂದು ಸುದ್ದಿ ಸಂಗಾತಿ ವಾರ ಪತ್ರಿಕೆಯಲ್ಲಿ ಕೆಲ ಕಾಲವಿದ್ದರು. ಆನಂತರ ಧಾರಾವಾಹಿ, ಸಿನಿಮಾಗಳಲ್ಲಿ ಕೆಲಸ ಮಾಡಿದರು. ನಂತರದಲ್ಲಿ ಕಿರ್ಲೋಸ್ಕರ್ ಮಲ್ಟಿಮೀಡಿಯಾಗೆ ಸೇರ್ಪಡೆ. ಅಲ್ಲಿಂದ ಒಂದಿಷ್ಟು ಕಲಿತು ಹೈದರಾಬಾದನತ್ತ ಪಯಣ. ಅಲ್ಲಿ ಹನ್ನೊಂದು ವರ್ಷವಿದ್ದು ಮತ್ತೆ ಬೆಂಗಳೂರಿಗೆ ವಾಪಸ್ ಆಗಿ ಸುಧಾ, ಮಯೂರ, ಪ್ರಜಾವಾಣಿ ವಿಶೇಷಾಂಕ, ಹೊಸತು, ಪ್ರಿಯಾಂಕಗಳಿಗೆ ಫ್ರೀಲ್ಯಾನ್ಸ್ ಆಗಿ ಕೆಲಸ ನಿರ್ವಹಿಸಿದರು. ಆ ಸಮಯದಲ್ಲಿಯೇ ಸಿಕ್ಕ ಮತ್ತೊಂದು ಉತ್ತಮ ಅವಕಾಶ ಕನ್ನಡಪ್ರಭದಲ್ಲಿ ಕಲಾಕಾರನಾಗಿದ್ದು. ಕಲಾ ವಿಭಾಗದ ಜೊತೆಗೆ ಪುರವಣಿಯ ಕೆಲ ಪುಟಗಳ ಜವಾಬ್ದಾರಿ ಸಿಕ್ಕಿತು. ಅಲ್ಲಿ ನಾಟಕ, ಸಿನಿಮಾ ಹಾಗೂ ಕಲಾಪ್ರದರ್ಶನಗಳ ವಿಮರ್ಶೆ, ವ್ಯಕ್ತಿ ಹಾಗೂ ಸಾಂಸ್ಕ್ರತಿಕ ತಂಡಗಳ ಪರಿಚಯ ಲೇಖನ ಹೀಗೆ ಹಲವಾರು ವಿಭಾಗದಲ್ಲಿ ಕೆಲಸ ಮಾಡಿದ ಅನುಭವ. ಪ್ರಸ್ತುತ ಐಟಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವಿಶ್ಲೇಷಣೆಗಳು, ವಿಚಾರಗಳು, ಶಿಫಾರಸುಗಳು ಇತ್ತೀಚಿನ ದಿನಗಳಲ್ಲಿ ತೀವ್ರ ಅಲ್ಪಾಯುವುಳ್ಳವಾಗಿವೆ. ಬದಲಾವಣೆಗೆ ತಕ್ಕಂತೆ ಶೈಲಿ ಬದಲಾಗುತ್ತದೆ.
ಹಿಂದಿನ ವರ್ಷ ಅಂದರೆ 2020 ರ ಮಾರ್ಚ್ ನಲ್ಲಿ ಕೊರೊನ ಕಾರಣ ವ್ಯವಹಾರಿಕ ಚಟುವಟಿಕೆಗಳು ಕ್ಷೀಣಿತಗೊಂಡು, ದೇಶದ ಆರ್ಥಿಕತೆಯು ನಿಶ್ಚೇಷ್ಠಿತ ಅವಸ್ಥೆಯಲ್ಲಿದ್ದ ಕಾರಣ ಬ್ಯಾಂಕಿಂಗ್ ವಲಯವೂ ಅದಕ್ಕನುಗುಣವಾಗಿ ನೀರಸಮಯ ವಾತಾವರಣದಲ್ಲಿತ್ತು. ಆ ನಿರುತ್ಸಾಹಿ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಒಂದು ವಿಶಿಷ್ಠ ರೀತಿಯ ಅನುಪಾತವನ್ನು (RATIO) ತೇಲಿಬಿಡಲಾಯಿತು. ಅದೆಂದರೆ ಠೇವಣಿ/ ಷೇರುಪೇಟೆ ಬಂಡವಾಳೀಕರಣ ಮೌಲ್ಯ ( Deposit/ Market Cap Ratio). ಇದರ ಪ್ರಕಾರ ಹಳೆಯ ಖಾಸಗಿ ಬ್ಯಾಂಕ್ ಗಳಾದ ಕರೂರು ವೈಶ್ಯ ಬ್ಯಾಂಕ್, ಫೆಡರಲ್ ಬ್ಯಾಂಕ್, ಲಕ್ಷ್ಮೀ ವಿಲಾಸ್ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಧನಲಕ್ಷ್ಮಿ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್ ಗಳು ಹೆಚ್ಚು ಆಪತ್ತಿಗೊಳಗಾಗಿವೆ ಎಂದು ಬಿಂಬಿಸಲಾಯಿತು.
ಇಲ್ಲಿ ಮಾರ್ಕೆಟ್ ಕ್ಯಾಪ್ ಎಂಬುದು ಷೇರುಪೇಟೆಯ ಮೌಲೀಕರಣವೇ ಹೊರತು ಕಂಪನಿಗಳ/ ಬ್ಯಾಂಕ್ ಗಳ ಕಾರ್ಯಾಚರಣೆಗೆ ಸಂಬಂಧಿಸಿರುವುದಿಲ್ಲ. ಷೇರುಪೇಟೆಗಳು ಕುಸಿತದಲ್ಲಿದ್ದಾಗ ಸಹಜವಾಗಿ ಮಾರ್ಕೆಟ್ ಕ್ಯಾಪ್ ಗಳು ಇಳಿಕೆಯಲ್ಲಿರುತ್ತವೆ. ಇದರಲ್ಲಿ ವಿಶೇಷವೇನೂ ಇಲ್ಲ. ಆದರೆ ಈ ರೀತಿಯ ಅನುಪಾತಗಳನ್ನು ತೇಲಿ ಬಿಟ್ಟು ಹೂಡಿಕೆದಾರರಲ್ಲಿ ಗಾಬರಿ/ ಭಯ ಮೂಡಿಸುವ ಪ್ರಯತ್ನಗಳು ನಡೆಯುವ ಕಾರಣ ಅಂತಹ ಕಂಪನಿಗಳಲ್ಲಿನ ಹೂಡಿಕೆದಾರರು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಅಸಮರ್ಥರಾಗಲೂಬಹುದು. ಇಂತಹ ವಿಶ್ಲೇಷಣೆಗಳನ್ನು ಪರಿಶೀಲಿಸಿ ನಿರ್ಧರಿಸಿದರೆ ಮಾತ್ರ ಹೂಡಿಕೆ ಸುರಕ್ಷಿತತೆ ಕಾಣಬಹುದು.
ಹಿಂದಿನ ವರ್ಷದ ಮಾರ್ಚ್ನಲ್ಲಿ ಕರೂರು ವೈಶ್ಯ ಬ್ಯಾಂಕ್ ನ ಷೇರಿನ ಬೆಲೆ ರೂ.18 ರ ಸಮೀಪವಿದ್ದು ಈ ತಿಂಗಳು ರೂ.64 ರ ಸಮೀಪದಿಂದ ರೂ.55 ರ ಸಮೀಪದಲ್ಲಿದೆ. ಫೆಡರಲ್ ಬ್ಯಾಂಕ್ ನ ಷೇರಿನ ಬೆಲೆಯೂ ಸಹ ರೂ.36 ರ ಸಮೀಪದಿಂದ ರೂ.92 ರವರೆಗೂ ಏರಿಕೆ ಕಂಡು ರೂ.77 ರ ಸಮೀಪವಿದೆ.ಲಕ್ಷ್ಮೀ ವಿಲಾಸ್ ಬ್ಯಾಂಕ್ ವಿಚಾರವೆಂದರೆ, ಆ ಸಮಯದಲ್ಲಾಗಲೇ ಆರ್ಥಿಕ ಒತ್ತಡದಲ್ಲಿದ್ದು, ಹಲವು ಕಂಪನಿಗಳು ಈ ಬ್ಯಾಂಕ್ ನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದವು. ಅಂತಿಮವಾಗಿ ಈ ಬ್ಯಾಂಕ್ ಡಿಬಿಎಸ್ ಬ್ಯಾಂಕ್ ನಲ್ಲಿ ವಿಲೀನಗೊಂಡಿತು.
ಕರ್ನಾಟಕ ಬ್ಯಾಂಕ್ ಹಿಂದಿನ ವರ್ಷ ಮಾರ್ಚ್ ನಲ್ಲಿ ರೂ.35 ರ ಸಮೀಪದಲ್ಲಿದ್ದು ಈ ವರ್ಷದ ಮಾರ್ಚ್ ನಲ್ಲಿ ರೂ.73 ರವರೆಗೂ ತಲುಪಿ ರೂ.61 ರ ಸಮೀಪದಲ್ಲಿ ವಹಿವಾಟಾಗುತ್ತಿದೆ. ಈ ಬ್ಯಾಂಕ್ 2007 ರಲ್ಲಿ ರೂ.120.50 ಕೋಟಿ ಮೌಲ್ಯದ ಶೇ.10.50 ಬಡ್ಡಿದರದ ಬಾಂಡ್ ಗಳನ್ನು, 2008 ರಲ್ಲಿ ರೂ.29.50 ಕೋಟಿ ಮೌಲ್ಯದ ಶೇ.10.25% ಬಡ್ಡಿದರದ ಹಾಗೂ 11.25% ಬಡ್ಡಿದರದ ರೂ.200 ಕೋಟಿ ಮೌಲ್ಯದ ಬಾಂಡ್ ಗಳನ್ನು ಟೈರ್ 2 ಕ್ಯಾಪಿಟಲ್ ಅಡಿಯಲ್ಲಿ ಸಂಗ್ರಹಿಸಿತ್ತು. ಈ ಎಲ್ಲಾ ಬಾಂಡ್ ಗಳನ್ನು ಸರಿಯಾದ ಸಮಯದಲ್ಲಿ ಅಂದರೆ 10 ವರ್ಷದ ಅವಧಿಯಲ್ಲಿ ಹೂಡಿಕದಾರರಿಗೆ ಸಂಪೂರ್ಣವಾಗಿ ಹಿಂದಿರುಗಿಸಿದೆ. ಇನ್ನು 2012 ರಲ್ಲಿ ವಿತರಿಸಿದ 11% ಬಡ್ಡಿದರದ ರೂ.250 ಕೋಟಿ ಮೌಲ್ಯದ ಬಾಂಡ್ ಗಳನ್ನು ಮುಂದಿನ ವರ್ಷ ಅಂದರೆ 2022 ರ ನವೆಂಬರ್ ನಲ್ಲಿ ಹಿಂದಿರುಗಿಸಲಿದೆ. ಉಳಿದಂತೆ ಶೇ.12% ವಾರ್ಷಿಕ ಬಡ್ಡಿ ನೀಡುತ್ತಿರುವ ರೂ.400 ಕೋಟಿಯ ಮತ್ತು ರೂ.320 ಕೋಟಿ ಮೌಲ್ಯದ ಬಾಂಡ್ ಗಳಿಗೆ ಬಡ್ಡಿಯನ್ನು ಸೂಕ್ತ ಸಮಯದಲ್ಲಿ ವಿತರಿಸಿ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ.
ಧನಲಕ್ಷ್ಮಿ ಬ್ಯಾಂಕ್ ಷೇರಿನ ಬೆಲೆಯು ಸಹ ಹಿಂದಿನ ವರ್ಷ ಮಾರ್ಚ್ ನ ಬೆಲೆ ರೂ.7 ರ ಸಮೀಪದಿಂದ ರೂ.17 ರವರೆಗೂ ಜಿಗಿತ ಕಂಡು ಸಧ್ಯ ರೂ.14 ರ ಸಮೀಪವಿದೆ.ಸೌತ್ ಇಂಡಿಯನ್ ಬ್ಯಾಂಕ್ ಷೇರಿನ ಬೆಲೆ ಹಿಂದಿನ ಮಾರ್ಚ್ ನಲ್ಲಿ ರೂ.5 ರ ಸಮೀಪವಿದ್ದು ಈ ವರ್ಷ ಅದು ರೂ.10 ರೂಪಾಯಿ ದಾಟಿ ನಂತರ ರೂ.8.40 ರ ಸಮೀಪವ ವಹಿವಾಟಾಗುತ್ತಿದೆ. ಈ ಬ್ಯಾಂಕ್ 2020 ರ ಜನವರಿಯಲ್ಲಿ ಶೇ,13.75 ಬಡ್ಡಿದರದ, ರೂ.500 ಕೋಟಿ ಮೌಲ್ಯದ ಟೈರ್ 1 ಬಾಂಡ್ಸ್ ಗಳನ್ನು ವಿತರಿಸಿದೆ. 2021 ರ ಜನವರಿಯಲ್ಲಿ ಬಡ್ಡಿಯ ಹಣವನ್ನು ವಿತರಿಸಿದೆ. ಅಂದರೆ ತನ್ನ ಆರ್ಥಿಕ ಸಾಮರ್ಥ್ಯತೆಯನ್ನು ಪ್ರದರ್ಶಿಸಿದೆ.
ಈ ಎಲ್ಲಾ ವಿಚಾರಗಳು ವಾಸ್ತವಾಂಶಗಳಾಗಿದ್ದು, ಯಾವುದೇ ಶಿಫಾರಸ್ಸಾಗಿ ಅಲ್ಲ. ಈ ಸಂದರ್ಭದಲ್ಲಿ ಒಂದು ವಿಚಾರವನ್ನು ನೆನಪಿನಲ್ಲಿಡಬೇಕು, ಏನೆಂದರೆ ಆರ್ ಬಿ ಐ ಆದೇಶದ ಪ್ರಕಾರ ಬ್ಯಾಂಕ್ ಗಳು ಲಾಭಾಂಶಗಳನ್ನು, ಮುಂದಿನ ಆದೇಶದವರೆಗೂ ಘೋಷಿಸುವಂತಿಲ್ಲ. ಆದ್ದರಿಂದ ಹೂಡಿಕೆದಾರರು ಬ್ಯಾಂಕಿಂಗ್ ವಲಯದಿಂದ ಡಿವಿಡೆಂಡ್ ಘೋಷಣೆ/ ವಿತರಣೆ ನಿರೀಕ್ಷಿಸುವಂತಿಲ್ಲ. ಹಾಗಾಗಿ ಡಿವಿಡೆಂಡ್ ಘೋಷಿಸದ ಬ್ಯಾಂಕ್ ಗಳು ಲಾಭಗಳಿಸುತ್ತಿಲ್ಲ ಎಂದು ಭಾವಿಸಬಾರದು.
ಬ್ಯಾಂಕಿಂಗ್ ವಲಯದ ಷೇರುಗಳಲ್ಲಿ ವಹಿವಾಟಾಗಿ / ವ್ಯವಹಾರಿಕವಾಗಿ ಚಟುವಟಿಕೆ ನಿರ್ವಹಿಸಬೇಕಷ್ಠೆ. ಇದಕ್ಕೆ ಪೂರಕವಾಗಿ ಕೆನರಾ ಬ್ಯಾಂಕ್ ಕಳೆದೆರಡು-ಮೂರು ತಿಂಗಳಲ್ಲಿ ರೂ.130 ರಿಂದ ರೂ.170 ಕ್ಕೆ ತಲುಪಿ ಮತ್ತೆ ರೂ.137 ರ ಸಮೀಪಕ್ಕೆ ಕುಸಿದದ್ದನ್ನು ಕಂಡಿದ್ದೇವೆ. ರೂ.170 ನ್ನು ಎರಡುಬಾರಿ ತಲುಪಿದೆ.
ಅದೇ ರೀತಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹ ಒಂದೇ ತಿಂಗಳಲ್ಲಿ ರೂ.355 ರ ಸಮೀಪದಿಂದ ರೂ.408 ರವರೆಗೂ ತಲುಪಿ ರೂ.355 ಕ್ಕೆ ಹಿಂದಿರುಗಿದೆ.ಕರ್ನಾಟಕ ಬ್ಯಾಂಕ್ ಷೇರು ಕಳೆದ ಒಂದು ತಿಂಗಳಲ್ಲಿ ರೂ.59 ರ ಸಮೀಪದಿಂದ ರೂ.73 ರವರೆಗೂ ಜಿಗಿತ ಕಂಡು ಮತ್ತೆ ರೂ.60 ಸಮೀಪಕ್ಕೆ ಮರಳಿದೆ.
ಷೇರುಪೇಟೆಯಲ್ಲಿ ವ್ಯವಹರಿಸುವಾಗ ಒಂದಂಶವನ್ನು ನೆನಪಿನಲ್ಲಿಡಬೇಕು, ಡಿವಿಡೆಂಡ್ ಗಳು ಸಹ ತೆರಿಗೆಗೊಳಪಡುತ್ತವೆ ಮತ್ತು ಅಲ್ಪಾವಧಿಯ ಲಾಭವೂ ತೆರಿಗೆಗೊಳಪಡುತ್ತವೆ ಆದ್ದರಿಂದ ಅಲ್ಪಾವಧಿಯಲ್ಲಿ ಏರಿಕೆ ಕಂಡಾಗ ಲಾಭದ ನಗದೀಕರಣವೂ ಹೆಚ್ಚಾಗಿ ಷೇರಿನ ಬೆಲೆ ಕುಸಿತಕ್ಕೊಳಗಾಗುತ್ತದೆ. ಪ್ರತಿ ಭಾರಿ ಇಳಿಕೆಯು ಉತ್ತಮ ವ್ಯಾಲ್ಯು ಪಿಕ್ ಗೆ ಅವಕಾಶ ಮತ್ತು ಪ್ರತಿ ಭಾರಿ ಏರಿಕೆಯು ಪ್ರಾಫಿಟ್ ಬುಕ್ ಗೆ ಅವಕಾಶ. ಪೇಟೆಗಳು ಗರಿಷ್ಠದಲ್ಲಿರುವಾಗ ಪ್ರತಿ ನಕಾರಾತ್ಮಕ ಸುದ್ಧಿಯು ಹೆಚ್ಚು ಕುಸಿತವನ್ನುಂಟುಮಾಡುತ್ತದೆ. ಆದ್ದರಿಂದ ಧೀರ್ಘಕಾಲೀನ ಹೂಡಿಕೆ ಎಂಬ ಚಿಂತನೆಯಿಂದ ಹೊರಬಂದು ಬಂಡವಾಳ ಸುರಕ್ಷತೆಯೊಂದಿಗೆ ವೃದ್ಧಿ ಸೂತ್ರವೇ ಒಳಿತೆನ್ನಬಹುದಲ್ಲವೇ? ವಿಶ್ಲೇಷಣೆಗಳನ್ನು ವಿವೇಚಿಸಿ, ತೂಗಿ ಸಂದರ್ಭಾನುಸಾರ ನಿರ್ಧಾರ ತೆಗೆದುಕೊಳ್ಳುವುದು ಆರ್ಥಿಕ ಸಾಕ್ಷರತೆ ತಲುಪುವ ಸುಲಭ ಮಾರ್ಗವೆನ್ನಬಹುದು.
ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು , ವಚನ ಸಾಹಿತ್ಯದಲ್ಲಿ ಅಡಗಿರುವ ಸಂಗತಿಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟು ಮತ್ತು ವಚನಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.
ಬಿತ್ತಿ ಬೆಳೆದಂತಕ್ಕುಂ ವಿಷೋದ್ಯಾನಂ- ‘ಅಭಿನವ ಪಂಪ’ನೆಂದು ಬಿರುದಾಂಕಿತನಾಗಿರುವ ನಾಗಚಂದ್ರ ಕವಿಯ ‘ರಾಮಚಂದ್ರ ಚರಿತ ಪುರಾಣ’ದಲ್ಲಿ ಉದ್ಗರಿಸಿರುವ ವಾಕ್ಯ ಇದು. ವಿಷಬೀಜ ಬಿತ್ತಿ ಬೆಳೆಸಿದರೆ ಆ ಉದ್ಯಾನ ವಿಷೋದ್ಯಾನವಾಗುತ್ತದೆ ಅದನ್ನು ಬಿಟ್ಟು ಹೂ-ಹಣ್ಣು ಔಷಧೀಯ ಸಸ್ಯ ಮುಂತಾದವುಗಳನ್ನು ಬೆಳೆಸಿದರೆ ಅದು ಅಮೃತತ್ವಕ್ಕೆ ಸಮಾನವಾಗಿರುತ್ತದೆ.
“ಬಿತ್ತಿದಂತೆ ಬೆಳೆ” ಅಂದರೆ ಒಳ್ಳೆಯ ಬೀಜ ಬಿತ್ತಿದರೆ ಒಳ್ಳೆಯ ಬೆಳೆಯನ್ನು ಕೊಡುತ್ತದೆ. ಆದರೆ ದೋಷಪೂರಿತ ಬೀಜಗಳು ಹೇಗೆ ಒಳ್ಳೆಯ ಬೆಳೆಯನ್ನು ಕೊಡಲಾಗದು.“ಬಿತ್ತಿ ಬೆಳೆದಂತಕ್ಕುಂ ವಿಷೋದ್ಯಾನಂ” ಎಂಬ ಮಾತನ್ನು ಸಮಾಜಕ್ಕೆ ಈ ಮಾತನ್ನು ಅನ್ವಯಿಸಬಹುದು. ಸಮಾಜದ ವಿಷ ಎಂದರೆ ಗರ್ವ. ನಮ್ಮಲ್ಲಿ ಹಲವರಿಗೆ ವಿದ್ಯಾವಂತರೆಂಬ ಗರ್ವವಿದೆ,ನಮಗೆ ತಿಳಿದಿರುವಂತದ್ದೆ ಅಂತಿಮ ಎಂಬ ಭ್ರಮೆಯೂ ಹಲವರಲ್ಲಿ ಇರುತ್ತದೆ.ಇದು ಕೆಲವೊಮ್ಮೆ ಜನ್ಮತಃ, ಬೆಳೆದ ಸಂದರ್ಭ, ಮನೆಯಲ್ಲಿನ ಸುಖದ ವಾತಾವರಣ, ಸಂಪತ್ತಿನ ಗರ್ವವೂ ಇಲ್ಲಿ ಇರುತ್ತವೆ.ಇಂತಹ ಸಂದರ್ಭಗಳು ಕೆಟ್ಟದ್ದನ್ನೆ ಸೃಷ್ಟಿ ಮಾಡುತ್ತವೆ.ಈ ‘ಗರ್ವ’ ಅನ್ನುವುದು ವಿಷ ಬೀಜವೇ ಇದು ಮತ್ಸರ, ದ್ವೇಷ, ಸೇಡು ಮುಂತಾದವುಗಳನ್ನು ಮಾತ್ರ ಕೊಡಲು ಸಾಧ್ಯ.
ವ್ಯಕ್ತಿಯೊಬ್ಬ ವಿದ್ಯಾವಂತ ಎಂದು ಕರೆಸಿಕೊಂಡರೆ ಸಾಲದು ಆತ ಕರಗತ ಮಾಡಿಕೊಂಡಿರುವ ವಿದ್ಯೆ ಎಂತಹದ್ದು ಎನ್ನುವುದರ ಅರಿವಿರಬೇಕು. ನಿಜಕ್ಕೂ ವಿದ್ಯಾವಂತನಾದವನು ಯುಕ್ತ ಮಾಹಿತಿಗಳನ್ನು ಪಡೆದುಕೊಂಡು ಜೀವನವನ್ನು ರಸೋದ್ಯಾನವಾಗಿಸಿಕೊಳ್ಳಬೇಕೇ ವಿನಾ ಅನಗತ್ಯ ವಿಚಾರಗಳನ್ನೇ ತುಂಬಿಸಿಕೊಂಡು ಮನೆ ಹಾಗು ಮನಸ್ಸನ್ನು ಕಸೋದ್ಯಾನವಾಗಿಸಿಕೊಳ್ಳಬಾರದು.
ಆಭರಣ ನೋಡುವುದಕ್ಕೆ ಆಕರ್ಷಕ, ಅತ್ಯಾಕರ್ಷಕ ಎಂದರೆ ಸಾಲದು ಅದರ ತಾಳುವಿಕೆ, ಮೌಲ್ಯವೂ ಮುಖ್ಯ. ಅವುಗಳನ್ನು ಯಾವ ಲೋಹದಿಂದ ಮಾಡಿದೆ ಎನ್ನುವುದರ ಮೇಲೆಯೂ ಅವುಗಳ ಘನತೆ ನಿರ್ಧಾರವಾಗುತ್ತದೆ. ಹಾಗೆ ನಮ್ಮ ಬದುಕೂ ಕೂಡ. ನಮ್ಮ ಒಡನಾಟವೂ ಇಲ್ಲ ಗಣನೆಗೆ ಬರುವಂಥದ್ದು. “ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ” ಮಾತನ್ನೂ ಇಲ್ಲಿ ಉಲ್ಲೇಖಿಸಬಹುದು.
ನಮ್ಮನ್ನಾವರಿಸಿರುವ ಕೆಟ್ಟದ್ದು ಎನ್ನುವ ಹಾಲಾಹಲವನ್ನು ಕಳೆದು ಅಮೃತತ್ವಕ್ಕೆ ಏರಿಸಬಲ್ಲ ಸದ್ಗುಣಗಳಿಂದ ನಾವು ಆವಕವಾಗಬೇಕು. ಯಾವಾಗಲೂ ಕೆಟ್ಟದ್ದರ ಸುತ್ತಲೂ ಸುತ್ತುತ್ತಿದ್ದರೆ ಅದು ನಮಗೆ ನಾವೇ ಏರ್ಪಡಿಸಿಕೊಳ್ಳುವ ವಿಷವರ್ತುಲವೇ ಸರಿ! ವಿಷತ್ವವನ್ನು ಬಿಟ್ಟು ಅಮೃತತ್ವಕ್ಕೆ ಏರೋಣ. ವಿಷೋದ್ಯಾನ ಅಳಿಸಿ ಅಮೃತೋದ್ಯಾನ ನಿರ್ಮಿಸೋಣ!
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.
ಭಾರತದಲ್ಲಿ ಆಚರಿಸುವ ವಿವಿಧ ಬಣ್ಣಗಳ ಹಬ್ಬ ಹೋಳಿ. ಇದನ್ನು ಕಾಮನ ಹುಣ್ಣಿಮೆ, ಹೋಳಿ ಹುಣ್ಣಿಮೆ, ವಸಂತ ಹುಣ್ಣಿಮೆ ಎಂದೆಲ್ಲಾ ಕರೆಯುತ್ತಾರೆ. ಶಿಶಿರ ಋತು ಮುಗಿದು, ವಸಂತ ಋತುವಿನ ಚೈತ್ರ ಮಾಸ ಕಾಲಿಡುವಾಗ ಹಣ್ಣಾದ ಎಲೆಗಳು ಉದುರಿ, ಹೊಸ ಎಲೆಗಳು ಚಿಗುರಿರುತ್ತವೆ. ಆ ಚಿಗುರಿನ ರಸ ಹೀರಿ ಸಂತಸದಿಂದ ಹಾಡುವ ಕೋಗಿಲೆಯ ಕುಹೂ…ಕುಹೂ…. ನಾದ ಕೇಳಿ ಬರುತ್ತಿರುತ್ತದೆ. ಮಾವು, ಮಲ್ಲಿಗೆ ಸಂಪಿಗೆ, ಮುತ್ತಗದ ಗಿಡಮರಗಳು ಹೂಬಿಟ್ಟು ನಿಸರ್ಗ ಬಣ್ಣಬಣ್ಣವಾಗಿ ಕಾಣುವಾಗ ಈ ಹಬ್ಬ ಬರುತ್ತದೆ.
ಪುರಾಣಗಳ ಪ್ರಕಾರ, ತಾರಕಾಸುರನ ಕಾಟಕ್ಕೆ ದೇವತೆಗಳು ಸೋತುಹೋಗಿದ್ದರು. ಶಿವನ ಪುತ್ರನಲ್ಲದೆ ಬೇರೆ ಯಾರೂ ತನ್ನ ಕೊಲ್ಲದಂತೆ ವರ ಪಡೆದಿದ್ದನವನು. ಆಗ ಬ್ರಹ್ಮನು ಶಿವ ಪಾರ್ವತಿಯರ ವಿವಾಹ ಮಾಡಿಸಲು ಹೇಳುತ್ತಾನೆ. ಆದರೆ ಶಿವ ವಿರಾಗಿಯಾಗಿ, ಕೈಲಾಸದಲ್ಲಿ ತಪಸ್ಸಿನಲ್ಲಿದ್ದಾನೆ. ಅವನು ಪಾರ್ವತಿಯಲ್ಲಿ ಅನುರಕ್ತನಾಗುವಂತೆ ಮಾಡಬಲ್ಲವನೆಂದರೆ ಮನ್ಮಥ ಮಾತ್ರ. ಇಂದ್ರ ಅವನನ್ನು ಕರೆಸಿ, ಈ ಕೆಲಸ ಮಾಡಲು ಹೇಳುತ್ತಾನೆ. ವಸಂತನನ್ನು, ಅಪ್ಸರೆಯರನ್ನು ಅವನ ಜೊತೆ ಕಳಿಸುತ್ತಾನೆ. ಮನ್ಮಥ ಶಿವನಿದ್ದಲ್ಲಿಗೆ ಬರುತ್ತಾನೆ. ಪಾರ್ವತಿ ಶಿವನ ಮುಂದೆ ಧ್ಯಾನದಲ್ಲಿರುತ್ತಾಳೆ. ಮನ್ಮಥನು ಪ್ರಯೋಗಿಸಿದ ಐದು ಹೂವಿನ ಬಾಣಗಳು ಶಿವನಿಗೆ ತಾಕಿ, ಎಚ್ಚರನಾಗಲು ಪಾರ್ವತಿ ಕಾಣಿಸಿ, ಕ್ಷಣಕಾಲ ಪರವಶನಾಗುತ್ತಾನೆ. ನಂತರ ಎಚ್ಚೆತ್ತು ಕೋಪದಿಂದ ತನ್ನ ಮೂರನೆ ಕಣ್ಣನ್ನು ತೆರೆದು ಮನ್ಮಥನ ಬೂದಿ ಮಾಡುತ್ತಾನೆ. ಶಿವ ಪಾರ್ವತಿಯರ ಮದುವೆ ನಡೆದಾಗ ಶಿವನು ಮನ್ಮಥನಿಗೆ ಜೀವ ನೀಡಿ, ಅವನು ಅವನ ಹೆಂಡತಿಗೆ ಮಾತ್ರ ಕಾಣುವಂತೆ ವರ ಕೊಡುತ್ತಾನೆ. ಅಂದಿನಿಂದ ಕಾಮನಿಗೆ ಎಲ್ಲಾ ಸ್ತ್ರೀ ಪುರುಷರ ಹೃದಯದಲ್ಲಿ ಸ್ಥಾನ ದೊರೆಯುತ್ತದೆ. ಈ ಘಟನೆ ಫಾಲ್ಗುಣ ಶುದ್ಧಹುಣ್ಣಿಮೆಯ ಪುಬ್ಬಾ ನಕ್ಷತ್ರದಂದು ನಡೆದಿದ್ದರಿಂದ ಇದನ್ನು ಕಾಮನ ಹುಣ್ಣಿಮೆ ಎನ್ನುತ್ತಾರೆಂದು ಪ್ರತೀತಿ ಇದೆ.
ಜಾನಪದ ಕಥೆಯೊಂದರ ಪ್ರಕಾರ ಕಾಮ-ರತಿಯರು ಪ್ರೇಮಾಲಾಪದಲ್ಲಿದ್ದಾಗ, ಒಬ್ಬ ಋಷಿ ಇವರ ಅಕಾಲ ಸಂಯೋಗವನ್ನು ಕಂಡು ಶಾಪಕೊಟ್ಟ. ನಂತರ ಅವರು ಭೂ ಲೋಕದಲ್ಲಿ ಬೇರೆ ಬೇರೆ ಜಾತಿಯಲ್ಲಿ ಜನಿಸಿದರು. ಒಂದು ದಿನ ರತಿಯ ಕಂಡ ಕಾಮ ಅನುರಕ್ತನಾಗಿ ಅವಳನ್ನೇ ಮದುವೆಯಾಗಲು ನಿರ್ಧರಿಸಿದ. ಅವನ ತಂದೆ ಪ್ರತಿಭಟಿಸಿದಾಗ ತನ್ನ ಮನೆ ಬಿಟ್ಟು ಅವಳ ಮನೆಯಲ್ಲಿಯೆ ಇರತೊಡಗಿದ. ಅಪಾರ ಬಡತನದ ರತಿಯ ಮನೆಯಲ್ಲಿ ದಿನವೂ ಏಕಾದಶಿಯೆ. ಸ್ವಲ್ಪ ಕಾಲದ ನಂತರ ಹಸಿವನ್ನು ತಾಳದೆ ಕಾಮ ಸತ್ತ. ಅವನ ಸಂಸ್ಕಾರಕ್ಕೆ ಕಟ್ಟಿಗೆ ಕೊಳ್ಳಲೂ ರತಿಗೆ ಶಕ್ತಿಯಿರಲಿಲ್ಲ. ಆಗ ಕಾಮನ ಗೆಳೆಯರು ಕಟ್ಟಿಗೆ, ಬೆರಣಿ ಸೇರಿಸಿ ತಂದು ರತಿಯ ಮನೆಯ ಬೆಂಕಿ ತಂದು ಸಂಸ್ಕಾರ ಮಾಡಿದರು. ಇದು ಸಹ ಫಾಲ್ಗುಣ ಮಾಸದ ಹುಣ್ಣಿಮೆಯಂದು ನಡೆಯಿತಂತೆ.
ನಾರದ ಪುರಾಣದಂತೆ; ರಾಕ್ಷಸ ರಾಜ ಹಿರಣ್ಯಕಶಿಪು ಹರಿಯನ್ನು ದ್ವೇಷಿಸುತ್ತಿದ್ದ. ಅವನ ಮಗ ಪ್ರಹ್ಲಾದ ಹರಿಭಕ್ತ. ಅವನನ್ನು ತಿದ್ದಲಾಗದೆ, ಕೊಲ್ಲಲು ಹಿರಣ್ಯಕಶಿಪು ನಿರ್ಧರಿಸುತ್ತಾನೆ. ತನ್ನ ಎಲ್ಲ ಪ್ರಯತ್ನ ವಿಫಲವಾದ್ದರಿಂದ ತನ್ನ ತಂಗಿ ಹೋಲಿಕಾಳ ನೆರವು ಕೇಳುತ್ತಾನೆ. ಅವಳನ್ನು ಬೆಂಕಿ ಸುಡುತ್ತಿರಲಿಲ್ಲ. ಅವಳು ಪ್ರಹ್ಲಾದನನ್ನು ಎತ್ತಿಕೊಂಡು ಅಗ್ನಿಕುಂಡ ಪ್ರವೇಶಿಸುತ್ತಾಳೆ. ಹರಿ ಹೋಲಿಕಾಳನ್ನೆ ಸುಟ್ಟು ಪ್ರಹ್ಲಾದನನ್ನು ಕಾಪಾಡುತ್ತಾನೆ. ಈ ದ್ಯೋತಕವಾಗಿ ಸಹ ಹೋಳಿ ಹಬ್ಬ ಆಚರಿಸಲ್ಪಡುತ್ತದೆ.
ಈ ಆಚರಣೆಯ ಹಿಂದಿರುವ ಸಂದೇಶವೇನೆಂದರೆ ಕೆಟ್ಟದ್ದನ್ನು ಸುಡು ಎಂದು. ಕಾಮ, ಕ್ರೋಧ, ಮದ, ಮತ್ಸರಾದಿ ಅರಿಷಡ್ವರ್ಗಗಳನ್ನು ಸುಟ್ಟು, ಅಸುರಿಶಕ್ತಿಗಳನ್ನು ನಿರ್ನಾಮ ಮಾಡಬೇಕೆಂಬ ಹಟ ಹುಟ್ಟಿದ ಹೊರತು ಪ್ರೀತಿ ಮೊಳೆಯುವುದಿಲ್ಲ. ಬದುಕಿಗೆ ಬಣ್ಣ ಬರುವುದಿಲ್ಲ. ಕಾಮವೆಂದರೆ ಬಯಕೆ, ಅದನ್ನು ಸುಡದ ಹೊರತು ಮುಕ್ತಿಯ ಮಾತು ಬರಿಯ ಕನಸಾಗುತ್ತದೆ.
ಕಾಮದಹನದ ನೆನಪಿಗೆ ಕಾಮನ ಪ್ರತಿಮೆ ಮಾಡಿಸಿ, ಶೃಂಗರಿಸಿ ಕಾಮನ ಕಟ್ಟೆಯ ಮೇಲೆ ಹಂದರ ಕಟ್ಟಿ, ಇಟ್ಟಿರುತ್ತಾರೆ. ಎಡಗಡೆ ರತಿಯ ಮೋಹಕ ಪ್ರತಿಮೆ ಇಡುವುದುಂಟು. ಕೆಲ ಊರುಗಳಲ್ಲಿ ಸರಕಾರಿ ಕಾಮಣ್ಣ, ಓಣಿಯ ಕಾಮಣ್ಣ, ದೈವದ ಕಾಮಣ್ಣ ಎಂದು ಮೂರು ಬಗೆಯ ಕಾಮಣ್ಣರನ್ನು ಪೂಜಿಸುತ್ತಾರೆ. ವಿಗ್ರಹಗಳನ್ನು ಪ್ರತಿಷ್ಠಾಪಿಸಿ, ಐದು ದಿನಗಳ ಕಾಲ ಪೂಜಿಸಿ, ಹುಣ್ಣಿಮೆಯ ದಿನ ದಹಿಸುವುದು ಸಂಪ್ರದಾಯ. ಕಾಮದಹನದ ನಂತರ ಓಕುಳಿಯಾಡಿ, ಎಣ್ಣೆ ಮಜ್ಜನ ಮಾಡಿ, ಹೋಳಿಗೆ ಮೆಲ್ಲುವುದೂ ಸಂಪ್ರದಾಯ.
ಲಂಬಾಣಿ ಜನಾಂಗದವರು ಹೋಳಿ ಹಬ್ಬವನ್ನು ಬಹಳ ವಿಶಿಷ್ಟವಾಗಿ ಆಚರಿಸುತ್ತಾರೆ. ಈ ಹಬ್ಬಕ್ಕೆ ಅವರು ದೋಂಢಾ ಎನ್ನುತ್ತಾರೆ. ಪಶ್ಚಿಮ ಬಂಗಾಳದಲ್ಲಿ ಇದನ್ನು ದೋಲ್ ಪೌರ್ಣಮಿ ಎಂದೂ, ಹರ್ಯಾಣದಲ್ಲಿ ದುಲಂದಿ ತ್ಯೋಹಾರ್ ಎಂದೂ ಆಚರಿಸುತ್ತಾರೆ. ಕೆಲವು ಕಡೆ ಇದನ್ನು ಐದು ದಿನಗಳ ಕಾಲ ಆಚರಿಸುತ್ತಾರೆ. ಜೈನರು ಹೋಳಿ ಹಬ್ಬದಂದು ರಾಧಾ ಕೃಷ್ಣನನ್ನು ಪೂಜಿಸಿ, ಗಸಗಸೆಯ ಹಾಲನ್ನು ಕುಡಿಯುತ್ತಾ ಸಂಭ್ರಮದಿಂದ ಹೋಳಿಯನ್ನು ಆಚರಿಸುತ್ತಾರೆ. ಒಟ್ಟಿನಲ್ಲಿ ಜಾತಿ-ಮತ-ವರ್ಗ- ವಯಸ್ಸಿನ ಬೇಧವಿಲ್ಲದೇ ಎಲ್ಲರೂ ಸಂತಸದಿಂದ ನಲಿಯುತ್ತಾ ಆಚರಿಸುವ ವಿಶಿಷ್ಟ ಹಬ್ಬ ಈ ಹೋಳಿ.
ತುಮಕೂರಿನ ಎಂ.ವಿ.ಶಂಕರಾನಂದ ಹಲವಾರು ಪುಸ್ತಕ ಪ್ರಕಾಶನ ಸಂಸ್ಥೆಗಳಲ್ಲಿ ಸಂಪಾದಕರಾಗಿ ದುಡಿದಿದ್ದಾರೆ. ಹಲವಾರು ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಲವು ಕೃತಿಗಳನ್ನು ರಚಿಸಿದ್ದಾರೆ. ಅನೇಕ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.