25.2 C
Karnataka
Sunday, June 14, 2026
    Home Blog Page 112

    ಬಿಗ್ ಬಾಸ್ ಸೀಸನ್ 8 ನಾಳೆಯೇ ಕೊನೆ ದಿನ

    ಲಾಕ್ ಡೌನ್ ಕಾರಣದಿಂದಾಗಿ ಚಿತ್ರೀಕರಣ ನಿಲ್ಲಿಸುವ ನಿರ್ಧಾರಕ್ಕೆ ಎಲ್ಲಾ ವಾಹಿನಿಗಳು ಬಂದಂತಿದೆ. ಇದೇ ಕಾರಣದಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ರಿಯಲಿಟಿ ಶೋ ಕೂಡ ಎಪ್ಪತೆರಡೇ ದಿನಕ್ಕೆ ಅಂದರೆ ನಾಳೆಯೇ ಮುಕ್ತಾಯವಾಗುತ್ತಿದೆ.

    ಈ ಬಗ್ಗೆ ವಾಹಿನಿಯ ಬಿಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ತಮ್ಮ ಫೇಸ್ ಬುಕ್ನಲ್ಲಿ ಈಗ್ಗೆ ಸ್ವಲ್ಪ ಹೊತ್ತಿಗೆ ಮುಂಚೆ ಪ್ರಕಟಿಸಿದ್ದಾರೆ.

    ಬಿಗ್ ಬಾಸ್ ಶುರುವಾಗಿ ಇವತ್ತಿಗೆ ಎಪ್ಪತ್ತೊಂದನೇ ದಿನ. ಪಿಸಿಆರ್‍ ನಲ್ಲಿ ನಿಂತು ಈ ಮನೇಲಿರೋ ಹನ್ನೊಂದು ಜನ ಓಡಾಡುತ್ತಿರುವುದನ್ನು ನೋಡಿದಾಗ ಒಂದಕ್ಕಿಂತ ಹೆಚ್ಚು ಭಾವನೆಗಳು ಒಂದೇ ಸಲಕ್ಕೆ ಬಂದು ಮನಸ್ಸಿಗೆ ವಿಚಿತ್ರವಾದ ತಳಮಳ. ಹೊರಗಡೆ ಎದುರಾಗಿರುವ ಕಷ್ಟದ ಸವಾಲು ಗೊತ್ತಿಲ್ಲದೇ ಒಳಗಡೆ ಇರುವವರೆಲ್ಲಾ ಖುಷಿಯಾಗಿದ್ದಾರೆ. ಐಸೋಲೇಷನ್ನಿನಲ್ಲಿ ಇರುವುದರಿಂದ ಸುರಕ್ಷಿತವಾಗಿಯೂ ಇದ್ದಾರೆ. ಎಲ್ಲರಿಗೂ ಹೊರಗಡೆ ಆಗಿರುವ ಬೆಳವಣಿಗೆ ತಿಳಿಸಿ ನಾಳೆ ಹೊರಗಡೆ ಕರೆಯುತ್ತಿದ್ದೇವೆ. ಅನಂತರ ಅವರನ್ನು ಮತ್ತು ತಂಡವನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲು ವ್ಯವಸ್ಥೆ ಆಗುತ್ತಿದೆ “ಎಂದು ಹೇಳಿದ್ದಾರೆ.

    ಬಿಗ್ ಬಾಸ್ ಸ್ಥಗಿತ ಗೊಳ್ಳುತ್ತಿರುವ ಬಗ್ಗೆ ಫೇಸ್ ಬುಕ್ ನಲ್ಲಿ ಪರಮೇಶ್ವರ ಗುಂಡ್ಕಲ್ ಹೇಳಿದ್ದೇನು. ಇಲ್ಲಿದೆ .

    ಲಾಕ್ ಡೌನ್: ಯಾವುದಕ್ಕೆಲ್ಲಾ ಅನುಮತಿ? ಯಾವುದಕ್ಕೆಲ್ಲಾ ನಿರ್ಬಂಧ?

    ಕೋವಿಡ್ ಪ್ರಕರಣಗಳು ನಿಯಂತ್ರಣಕ್ಕೆ ಬರದ ಹಿನ್ನೆಲೆಯಲ್ಲಿ ತನ್ನ ಏಪ್ರಿಲ್ 26ರ ಆದೇಶವನ್ನು ಮಾರ್ಪಡಿಸಿರುವ ರಾಜ್ಯ ಸರಕಾರ ಮೇ 10ರ ಸೋಮವಾರ ಮುಂಜಾನೆ 6ರಿಂದ ಮೇ 24ರ ಮುಂಜಾನೆ 6ರವರೆಗೆ ಲಾಕ್ ಡೌನ್ ಘೋಷಣೆ ಮಾಡಿದೆ.ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ವಲ್ಪ ಹೊತ್ತಿಗೆ ಮುಂಚೆ ಈ ವಿಷಯ ಪ್ರಕಟಿಸಿದ್ದಾರೆ.

    ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಅವಶ್ಯಕ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಅಂತರ ಜಿಲ್ಲಾ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ವ್ಯಾಕ್ಸಿನೇಷನ್ ಸೇರಿದಂತೆ ಆರೋಗ್ಯ ಸೇವೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

    ಈ ಲಾಕ್ ಡೌನ್ ನಲ್ಲಿ ಯಾವುದೆಕ್ಕಲ್ಲಾ ಅವಕಾಶ ಇದೆ. ಯಾವುದಕ್ಕೆ ಇಲ್ಲ ಎಂಬುದರ ಅಧಿಕೃತ ಸರಕಾರಿ ಆದೇಶ ಇಲ್ಲಿದೆ.

    ಕೋವಿಡ್‌ ಆಕ್ಸಿಜನ್‌ ಬೆಡ್‌ ಕೊರತೆ ನೀಗಿಸಲು ಪರಿಹಾರ ಸೂತ್ರ:ಗಂಭೀರವಲ್ಲದ ಸೋಂಕಿತರನ್ನು ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ಶಿಫ್ಟ್‌ ಮಾಡಲು ನಿರ್ಧಾರ

    ರಾಜ್ಯದಲ್ಲಿ ಕೋವಿಡ್‌ ಸೋಂಕಿತರಿಗೆ ಹಾಸಿಗೆ ಕೊರತೆ ನೀಗಿಸುವ ಉದ್ದೇಶದಿಂದ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಂಭೀರವಲ್ಲದ ಸೋಂಕಿತರನ್ನು ಸ್ಟೆಪ್‌ʼಡೌನ್‌ ಆಸ್ಪತ್ರೆ ಇಲ್ಲವೇ ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ಶಿಫ್ಟ್‌ ಮಾಡಿ ಚಿಕಿತ್ಸೆ ನೀಡಲು ಸರಕಾರ ನಿರ್ಧರಿಸಿದೆ.

    ಬೆಂಗಳೂರಿನಲ್ಲಿ ಶುಕ್ರವಾರ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿಎನ್‌.ಅಶ್ವತ್ಥನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆದ ʼಕೋವಿಡ್‌ ಚಿಕಿತ್ಸೆ ಶಿಷ್ಟಾಚಾರ ಸಮಿತಿʼ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

    ತಜ್ಞರು ಕೊಟ್ಟ ವರದಿ ಪ್ರಕಾರ ಶೇ.30ರಿಂದ 40ರಷ್ಟು ಗಂಭೀರವಲ್ಲದ ಸೋಂಕಿತರು ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೂಡಲೇ ಇವರೆಲ್ಲರನ್ನೂ ಸ್ಟೆಪ್‌ಡೌನ್‌ ಆಸ್ಪತ್ರೆಗಳಿಗೆ ಶಿಫ್ಟ್‌ ಮಾಡುವ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

    ಕೂಡಲೇ ಈ ಕೆಲಸ ಆಗಬೇಕು. ಇಷ್ಟು ಬೆಡ್‌ಗಳು ಖಾಲಿಯಾದರೆ ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರಿಗೆ ಬೆಡ್‌ಗಳು ಲಭ್ಯವಾಗುತ್ತವೆ. ಇದರಿಂದ ಸಾವಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಡಿಸಿಎಂ ಡಾ.ಅಶ್ವತ್ಥನಾರಾಯಣ ಸಭೆಯಲ್ಲಿ ಹೇಳಿದರು.

    ಸರಕಾರಿ ಆಸ್ಪತ್ರೆಗಳು ಮಾತ್ರವಲ್ಲದೆ ಖಾಸಗಿ ಆಸ್ಪತ್ರೆಗಳು ಕೂಡ ಕಡ್ಡಾಯವಾಗಿ ಈ ನಿರ್ಣಯವನ್ನು ಜಾರಿಗೆ ತರಬೇಕು. ನೋಡೆಲ್‌ ಅಧಿಕಾರಿಗಳ ಉಸ್ತುವಾರಿಯಲ್ಲಿ ಈ ಪ್ರಕ್ರಿಯೆ ಕಟ್ಟುನಿಟ್ಟಾಗಿ ನಡೆಯಬೇಕು ಎಂದು ಅವರು ಸೂಚಿಸಿದರು.

    ಅನೇಕರು ಆಸ್ಪತ್ರೆಗೆ ಸೇರುವ ಅಗತ್ಯ ಇಲ್ಲದಿದ್ದರೂ ಬಂದು ಸೇರುತ್ತಿದ್ದಾರೆ. ಇದನ್ನು ಕೂಡ ತಡೆಯಬೇಕು ಹಾಗೂ ಅವರನ್ನು ಹೋಮ್‌ ಐಸೋಲೇಷನ್‌ ಮಾಡಿ ಚಿಕಿತ್ಸೆ ಕೊಡಬೇಕು. ಸರಕಾರದ ಮಾರ್ಗಸೂಚಿ ಪ್ರಕಾರ 90ಕ್ಕಿಂತ‌ ಕಡಿಮೆ ಸ್ಯಾಚುರೇಷನ್ ಇರುವವರು ಮಾತ್ರ ಆಸ್ಪತ್ರೆಗೆ ದಾಖಲಾಗಬೇಕು. ಹಣ ಕೊಡ್ತಾರೆ ಎಂದು ಆಸ್ಪತ್ರೆಗಳಿಗೆ ದಾಖಲು ಮಾಡಿಕೊಳ್ಳುವಂತಿಲ್ಲ. ಇದು ಖಾಸಗಿ ಆಸ್ಪತ್ರೆಗಳಿಗೂ ಕಡ್ಡಾಯವಾಗಿ ಅನ್ವಯವಾಗುತ್ತದೆ ಎಂದು ಡಿಸಿಎಂ ಸಭೆಯಲ್ಲಿ ಹೇಳಿದರು.

    ಸಂಬಂಧಿಕರಿಗೆ ಮಾಹಿತಿ ಕಡ್ಡಾಯ:ಸರಕಾರಿ ರೂಪಿಸಿರುವ ಕೋವಿಡ್‌ ಚಿಕಿತ್ಸಾ ವಿಧಾನದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಖಾಸಗಿ ಆಸ್ಪತ್ರೆಗಳೂ ಪಾಲಿಸಬೇಕು. ಕೋವಿಡ್‌ ಶಿಷ್ಟಾಚಾರವನ್ನು ಯಾರೂ ಉಲ್ಲಂಘಿಸುವಂತಿಲ್ಲ. ಆಸ್ಪತ್ರೆಗಳಲ್ಲಿ ಸಮರ್ಪಕ ಚಿಕಿತ್ಸೆ ನೀಡುತ್ತಿಲ್ಲ ಎಂದು ದೂರುಗಳು ಬಂದಿವೆ. ಈ ಬಗ್ಗೆ ಕರಾರುವಕ್ಕಾದ ಸಮೀಕ್ಷೆ-ಪರಿವೇಕ್ಷಣೆ ನಡೆಸಿ. ಗುಣಮಟ್ಟದ ಚಿಕಿತ್ಸೆ ಸಿಗಬೇಕು. ಚಿಕಿತ್ಸೆಯಲ್ಲಿ ಎಲ್ಲಾದರೂ ಲೋಪವಾಗಿದ್ದರೆ ಕಠಿಣ ಕ್ರಮ ಜರುಗಿಸಿ. ಇದೇ ವೇಳೆ ರಿಮೋಟ್‌ ಐಸಿಯು ವ್ಯವಸ್ಥೆಯನ್ನು ಕೆಲ ದಿನಗಳಲ್ಲಿಯೇ ಅನುಷ್ಟಾನಕ್ಕೆ ತರಲಾಗುತ್ತಿದೆ ಎಂದು ಡಿಸಿಎಂ ಹೇಳಿದರು.

    ಚಿಕಿತ್ಸೆ ಪಡೆಯುತ್ತಿರುವ ಸೋಂಕಿರಿಗೆ ಯಾವ ಚಿಕಿತ್ಸೆ ನೀಡಲಾಗುತ್ತಿದೆ? ಅವರ ಆರೋಗ್ಯ ಹೇಗಿದೆ? ಎಂಬ ಮಾಹಿತಿಯನ್ನು ಸಂಬಂಧಿಕರಿಗೆ ನೀಡುವುದು ಕಡ್ಡಾಯ. ವೈದ್ಯರು ಈ ಬಗ್ಗೆ ಸಂಬಂಧಿಕರಿಗೆ ಸಮರ್ಪಕ ಮಾಹಿತಿ ನೀಡಲಾಗುತ್ತಿಲ್ಲ ಎಂದು ದೂರುಗಳು ಬರುತ್ತಿವೆ. ಸಾವುಗಳ ಬಗ್ಗೆಯೂ ಸಮರ್ಪಕ ಆಡಿಟ್‌ನಡೆಯಬೇಕು ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.

    ರಕ್ತ ಪರೀಕ್ಷೆ ಮಾಡಿ:ಹೋಮ್‌ ಐಸೋಲೇಷನ್‌ ಆಗಿರುವ ಸೋಂಕಿತರ ರಕ್ತ ಪರೀಕ್ಷೆ ನಡೆಸುವಂತೆ ಸೂಚಿಸಿದ ಡಿಸಿಎಂ ಅವರು, ಇತ್ತೀಚಿನ ಕೆಲ ದಿನಗಳಲ್ಲಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯದಲ್ಲಿ ಬಹಳ ಏರುಪೇರಾಗುತ್ತಿರುವ ವರದಿಗಳು ಬರುತ್ತಿವೆ. ಹೀಗಾಗಿ ಅವರೆಲ್ಲರ ರಕ್ತ ಪರೀಕ್ಷೆ ಮಾಡಿ, ಸಮಸ್ಯೆ ಪತ್ತೆ ಹಚ್ಚಬೇಕು. ಸೋಂಕು ಪತ್ತೆ ಹಚ್ಚುವ ಕೆಲಸ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೇ ಮುಗಿಯಬೇಕು ಎಂದು ಅಧಿಕಾರಿಗಳಿಗೆ ಡಾ.ಅಶ್ವತ್ಥನಾರಾಯಣ ಸೂಚಿಸಿದರು.

    ಸಭೆಯಲ್ಲಿ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಆಕ್ತರ್‌, ಇಲಾಖೆ ಆಯುಕ್ತ ತ್ರಿಲೋಕ ಚಂದ್ರ, ಡಿಸಿಎಂ ಅವರ ಕಾರ್ಯದರ್ಶಿ ಪ್ರದೀಪ್‌, ಚಿಕ್ಸಿತೆಯ ಶಿಷ್ಟಾಚಾರ ಸಮಿತಿ ಅಧ್ಯಕ್ಷರೂ ಆದ ಆರೋಗ್ಯ ವಿವಿ ಕುಲಪತಿ ಡಾ.ಸಚ್ಚಿದಾನಂದ ಸೇರಿದಂತೆ ಇತರ ಹಿರಿಯ ವೈದರು ಸಭೆಯಲ್ಲಿ ಇದ್ದರು.

    ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಆಪರೇಷನ್‌ ಆಕ್ಸಿಜನ್;‌ ಉಳಿಯಿತು 200 ಸೋಂಕಿತರ ಜೀವ


    ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ, ವೈದ್ಯರು ಹಾಗೂ ಇಡೀ ಆಸ್ಪತ್ರೆಯ ಸಿಬ್ಬಂದಿ ಮುನ್ನೆಚ್ಚರಿಕೆ ಮತ್ತು ಕ್ಷಿಪ್ರ ಕಾರ್ಯಾಚರಣೆಯಿಂದ ಸಂಭವೀಯ ಬಹುದೊಡ್ಡ ಆಕ್ಸಿಜನ್‌ ದುರಂತವೊಂದು ಬೆಂಗಳೂರಿನಲ್ಲಿ ಸ್ವಲ್ಪದರಲ್ಲೇ ತಪ್ಪಿದೆ.

    ಮಲ್ಲೇಶ್ವರದ ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಈ ದುರಂತ ತಪ್ಪಿದ್ದು, ಇಡೀ ರಾತ್ರಿ ಡಿಸಿಎಂ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆಮ್ಲಜನಕದ ವ್ಯವಸ್ಥೆ ಮಾಡಲಾಗಿದ್ದು, ಈ ಮೂಲಕ ವೆಂಟಿಲೇಟರ್‌ ಹಾಗೂ ಆಕ್ಸಿಜನ್‌ ಬೆಡ್‌ಗಳ ಮೇಲೆ ಚಿಕಿತ್ಸೆ ಪಡೆಯುತ್ತಿದ್ದು ಒಟ್ಟು 200 (100 ಬೆಡ್ ಐಸಿಯು ವೆಂಟಿಲೇಟರ್, 100 ಆಮ್ಲಜನಕ ಸಹಿತ ಬೆಡ್) ಕೋವಿಡ್‌ ಸೋಂಕಿತರ ಅಮೂಲ್ಯ ಜೀವ ಉಳಿದಿದೆ.

    ಆಸ್ಪತ್ರೆಯಲ್ಲಿ ಏನಾಗಿತ್ತು?:

    ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ 200 ಸೋಂಕಿತರು ಆಕ್ಸಿಜನ್ ಬೆಡ್ʼಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅವರಿಗೆ ಒದಗಿಸಲಾಗುತ್ತಿದ್ದ ಆಮ್ಲಜನಕವು ರಾತ್ರಿಯ ವೇಳೆಗೆ ಖಾಲಿಯಾಗುತ್ತಾ ಬಂದಿತ್ತು. ಪ್ರಾಕ್ಸಿ ಏರ್‌ ಎನ್ನುವ ಕಂಪನಿ ಬುಧವಾರ ರಾತ್ರಿ 11 ಗಂಟೆಗೆ ಆಸ್ಪತ್ರೆಗೆ ಆಮ್ಲಜನಕ ಪೂರೈಕೆ ಮಾಡಬೇಕಾಗಿತ್ತು. ಆದರೆ, ಬಳ್ಳಾರಿಯಿಂದ ಬರಬೇಕಾಗಿದ್ದ ಆ ಕಂಪನಿಯ ಟ್ಯಾಂಕರ್‌ ರಾತ್ರಿ 11.30 ಆದರೂ ಬರಲೇ ಇಲ್ಲ. ಬದಲಿಗೆ ಆ ಟ್ಯಾಂಕರ್‌ ಕೆ.ಸಿ.ಜನರಲ್‌ಗೆ ಬರುವ ಬದಲು ಖಾಸಗಿ ಆಸ್ಪತ್ರೆಗೆ ಹೋಗಿದೆ ಎಂಬ ವಿಷಯ ತಿಳಿದುಬಂದಿದೆ.

    ಒಂದೆಡೆ ಆಕ್ಸಿಜನ್‌ ಕಡಿಮೆಯಾಗುತ್ತಿರುವ ವಿಷಯ ಗೊತ್ತಾದ ಕೂಡಲೇ ಸಿಬ್ಬಂದಿ, ಆಕ್ಸಿಜನ್ ನಿರ್ವಹಣೆ ಹೊಣೆ ಹೊತ್ತಿದ್ದ ವೈದ್ಯಾಧಿಕಾರಿ ಡಾ.ರೇಣುಕಾ ಪ್ರಸಾದ್ ಗಮನಕ್ಕೆ ತಂದಿದ್ದಾರೆ. ಕೂಡಲೇ ಡಾ.ಪ್ರಸಾದ್‌ ಅವರು ಪ್ರಾಕ್ಸಿ ಏರ್‌ ಸಂಸ್ಥೆಯನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದಾರೆ. ಅವರ ಪ್ರಯತ್ನಗಳು ಸಫಲವಾಗಿಲ್ಲ. ತತ್‌ಕ್ಷಣವೇ ಅವರು ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರಿಗೆ ಮಧ್ಯರಾತ್ರಿ 12.30ರ ಹೊತ್ತಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

    ಕೂಡಲೇ ಕಾರ್ಯ ಪ್ರವೃತ್ತರಾದ ಡಿಸಿಎಂ, ಎಲ್ಲೆಲ್ಲಿ ಆಮ್ಲಜನಕ ಲಭ್ಯವಿದೆ ಎಂದು ಕ್ಷಿಪ್ರಗತಿಯಲ್ಲಿ ಪತ್ತೆ ಹಚ್ಚಿದ್ದಾರೆ. ಕೊನೆಗೆ ಯುನಿವರ್ಸಲ್‌ ಎಂಬ ಕಂಪನಿ ಜತೆ ಮಾತನಾಡಿದರಲ್ಲದೆ ತುರ್ತಾಗಿ ಆಕ್ಸಿಜನ್‌ ವ್ಯವಸ್ಥೆ ಮಾಡಿದ್ದಾರೆ.

    ಆಪರೇಷನ್‌ ಆಕ್ಸಿಜನ್!!‌

    ಯುನಿವರ್ಸಲ್‌ ಕಂಪನಿಯಿಂದ ಆಕ್ಸಿಜನ್‌ ವ್ಯವಸ್ಥೆ ಮಾಡಿದ ಡಿಸಿಎಂ ಅವರು ಮಲ್ಲೇಶ್ವರ ಪೊಲೀಸರ ಜತೆಯೂ ಮಾತನಾಡಿ ಆಮ್ಲಜನಕದ ನಿರಾತಂಕ ಸಾಗಣೆಗೆ ನೆರವಾಗುವಂತೆ ಸೂಚಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರೂ ಯುನಿವರ್ಸಲ್‌ ಕಂಪನಿ-ಕೆ.ಸಿ.ಜನರಲ್‌ ನಡುವಿನ ಮಾರ್ಗ ಮಧ್ಯೆ ಝೀರೋ ಟ್ರಾಫಿಕ್‌ ವ್ಯವಸ್ಥೆ ಮಾಡಿ ಮೊದಲು 20 ಜಂಬೋ ಸಿಲಿಂಡರ್‌ಗಳನ್ನು ತರಿಸಲು ಸಹಕರಿಸಿದರು. ಅರೆಕ್ಷಣ ಸಮಯವನ್ನು ಪೋಲು ಮಾಡದೇ ಇಡೀ ಆಸ್ಪತ್ರೆಯ ಸಿಬ್ಬಂದಿಯೆಲ್ಲ ಒಟ್ಟಾಗಿ ಬೆಳಗಿನ ಜಾವ 4.45ರವರೆಗೆ ರೋಗಿಗಳಿಗೆ ಆ ಸಿಲಿಂಡರ್‌ಗಳ ಮೂಲಕ ಆಮ್ಲಜನಕ ಸಂಪರ್ಕ ಕಲ್ಪಿಸಿದ್ದಾರೆ.

    ಇದಾದ ಸ್ವಲ್ಪ ಹೊತ್ತಿನಲ್ಲಿಯೇ ಲಿಕ್ವಿಡ್‌ ಆಕ್ಸಿಜನ್‌ ಇರುವ ಟ್ಯಾಂಕರ್‌ ಕೂಡ ಯುನಿವರ್ಸಲ್‌ ಕಂಪನಿಯಿಂದ ಕೆ.ಸಿ.ಜನರಲ್‌ ಆಸ್ಪತ್ರೆಗೆ ಬಂದಿದೆ. ಅಲ್ಲಿಗೆ ಇಡೀ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

    ಇಡೀ ಸಿಬ್ಬಂದಿ ಹೈ ಆಲರ್ಟ್‌

    ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ಸಮಯ ಪ್ರಜ್ಞೆ, ಸಕಾಲಿಕ ಕ್ರಮಗಳಿಂದ ಸೋಂಕಿತರ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಆಗಿಲ್ಲ. ಬುಧವಾರ ರಾತ್ರಿ 11.30ಯಿಂದ ಗುರುವಾರ ಬೆಳಗಿನ ಜಾವ 4.45ರ ವರೆಗೆಗೂ ಎಲ್ಲಾ 200 ಸೋಂಕಿತರ ಮೇಲೆ ತೀವ್ರ ನಿಗಾ ಇಟ್ಟ ಸಿಬ್ಬಂದಿ ಸಂಕಷ್ಟದ ಸಮಯದಲ್ಲಿ ಆಮ್ಲಜನಕದ ಉಳಿತಾಯಕ್ಕೂ ಶ್ರಮಿಸಿದರು.

    ಪರಿಸ್ಥತಿಯ ತೀವ್ರತೆಯನ್ನು ಅರಿತ ಅವರೆಲ್ಲರೂ ಎಲ್ಲ ಸೋಂಕಿತರ ಪರಿಸ್ಥಿತಿಯನ್ನು, ಆಕ್ಸಿಜನ್‌ ಸ್ಯಾಚುರೇಷನ್‌ ಸ್ಥಿತಿಯನ್ನು ಕ್ಷಿಪ್ರಗತಿಯಲ್ಲಿ ಪರಿಶೀಲನೆ ಮಾಡಿದರು. ಯಾರಿಗೆ ಹೆಚ್ಚು, ಯಾರಿಗೆ ಕಡಿಮೆ ಆಮ್ಲಜನಕದ ಅಗತ್ಯ ಇದೆ ಎಂಬುದನ್ನು ನೋಡಿಕೊಂಡು ಗಂಭೀರ ಸ್ಥಿತಿಯಲ್ಲಿದ್ದ ಸೋಂಕಿತರಿಗೆ ಆಕ್ಸಿಜನ್‌ ಕಡಿಮೆಯಾಗದಂತೆ ನೋಡಿಕೊಂಡಿದ್ದಾರೆ. ಹೀಗಾಗಿ ಆಮ್ಲಜಕದ ಕೊರತೆ ಉಂಟಾಗಲಿಲ್ಲ.

    ಚಾಮರಾಜನಗರ ಸೇರಿದಂತೆ ರಾಜ್ಯದ ವಿವಿಧೆಡೆ ಆಕ್ಸಿಜನ್‌ ವೈಫಲ್ಯದಿಂದ ಉಂಟಾಗಿದ್ದ ದುರಂತಗಳು ನಮ್ಮ ಕಣ್ಮುಂದೆ ಇವೆ. ಹೀಗಾಗಿ ವಿಷಯ ಗೊತ್ತಾದ ಕೂಡಲೇ ನಾನು ಕಾರ್ಯಪ್ರವೃತ್ತನಾದೆ. ಒಂದು ಆಕ್ಸಿಜನ್‌ ತರಿಸುವುದು, ಇನ್ನೊಂದೆಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಜೀವ ರಕ್ಷಣೆ ಮಾಡುವುದು.. ಈ ಎರಡೂ ಸವಾಲುಗಳನ್ನು ಏಕಕಾಲಕ್ಕೆ ಎದುರಿಸಬೇಕಾಯಿತು. ನಾನು ಆಕ್ಸಿಜನ್‌ ವ್ಯವಸ್ಥೆ ಮಾಡುವ ಕೆಲಸ ಮಾಡಿದೆ. ವೈದ್ಯರು & ಸಿಬ್ಬಂದಿ ಸೋಂಕಿತರನ್ನು ನೋಡಿಕೊಂಡರು. ಪೊಲೀಸರು ಸಕಾಲಕ್ಕೆ ನೆರವಾದರು. ಇಡೀ ರಾತ್ರಿ ನಡೆದ ಕಾರ್ಯಾಚರಣೆಯಿಂದ ಅಮೂಲ್ಯ ಜೀವಗಳು ಉಳಿದಿವೆ.

    _ಡಾ.ಸಿ.ಎನ್.‌ಅಶ್ವತ್ಥನಾರಾಯಣ, ಉಪ ಮುಖ್ಯಮಂತ್ರಿ

    ಮಧ್ಯರಾತ್ರಿ 12.45ರಿಂದ ಬೆಳಗಿನ ಜಾವ 4 ಗಂಟೆ ವರೆಗೂ ಆಕ್ಸಿಜನ್‌ ಕಾರ್ಯಾಚರಣೆಯಲ್ಲಿ ಭಾಗಿಯಾದ ಡಿಸಿಎಂ ಡಾ.ಅಶ್ವತ್ಥನಾರಾಯಣ ಅವರು ಕೊನೆಗೂ ದೊಡ್ಡ ದುರಂತವನ್ನು ತಪ್ಪಿಸುಲ್ಲಿ ಯಶಸ್ವಿಯಾದರು. ಎಲ್ಲ ಸೋಂಕಿತರಿಗೂ ಆಕ್ಸಿಜನ್‌ ಪೂರೈಕೆಯಾಗಿ ಪರಿಸ್ಥಿತಿ ಸರಿಹೋದ ನಂತರ ವೈದ್ಯರ ಜತೆಗೆ ಮಾತನಾಡಿದ ಅವರು ಸಮಾಧಾನದ ನಿಟ್ಟುಸಿರು ಬಿಟ್ಟರು. ಈ ಸಂದರ್ಭದಲ್ಲಿ ವೈದ್ಯ ಸಿಬ್ಬಂದಿಯ ಸಮಯ ಪ್ರಜ್ಞೆಯನ್ನು ಡಿಸಿಎಂ ಮನಸಾರೆ ಶ್ಲಾಘಿಸಿದರು. ಸಂಕಷ್ಟದ ಸಮಯದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಸೋಂಕಿತರ ಜೀವ ಉಳಿಸಿದ್ದಾಗಿ ಸಂತಸ ವ್ಯಕ್ತಪಡಿಸಿದರು.

    ಜನರಿಕ್ ಔಷಧ :ಜನತೆಗೊಂದು ವರದಾನ!

    ಇತ್ತೀಚಿಗಷ್ಟೇ ನನ್ನ ತಾಯಿಯವರ ಮಂಡಿನೋವಿಗೆ ಜನರಿಕ್ ಔಷಧ ಮಳಿಗೆಯಲ್ಲಿ  ಒಂದು ಜೆಲ್ ಆಯಿಂಟ್ ಮೆಂಟ್ ಖರೀದಿಸಿದೆ.ಅದಕ್ಕೆ ಇಪ್ಪತ್ತೆರಡು ರೂಪಾಯಿ ಕೊಟ್ಟೆ. ಕೆಲವು ವಾರಗಳು ಕಳೆದವು.ನನ್ನ ಮಡದಿಯ ಬೆನ್ನು ನೋವಿಗೆ ವೈದ್ಯರು ಆಯಿಂಟ್ ಮೆಂಟ್ ಬರೆದು ಕೊಟ್ಟರು. ಅದನ್ನ ಕೊಳ್ಳಲು ಮೆಡಿಕಲ್ ಶಾಪಿಗೆ ಹೋದೆ.ನಾನು ಜನೌಷಧಿ ಮಳಿಗೆಯಲ್ಲಿ ಕೊಂಡಿದ್ದ ಆಯಿಂಟ್ ಮೆಂಟ್ ಕೂಡ ಅದೇ ರಾಸಾಯನಿಕ ಒಳಗೊಂಡಿದ್ದು ತಿಳಿಯಿತು. ಮಾರುಕಟ್ಟೆ ಹೆಸರು ಬೇರೆ.ಬೆಲೆ ಎಪ್ಪತೈದು ರೂಪಾಯಿಗಳು. ಒಂದೇ ಔಷಧ ಬೇರೆ ಕಂಪೆನಿ ಉತ್ಪನ್ನ. ಬೇರೆಯದೇ ಹೆಸರುಗಳು.ಆದರೆ ಮುಖಬೆಲೆ ಅಜಗಜಾಂತರ ವ್ಯತ್ಯಾಸ!

    ಹೀಗೆಯೇ ಜನರಿಕ್ ಜಾಡನ್ನ ಅರಸುತ್ತಾ ಹೋದೆ. ಒಂದು ಸಮಾಧಾನಕರ ವಿಚಾರ ಸಿಕ್ಕಿತು.

    generic drug is a pharmaceutical drug that contains the same chemical substance as a drug that was originally protected by chemical patents. Generic drugs are allowed for sale after the patents on the original drugs expire.

    ಏನಿದು ಜನರಿಕ್ ಅನಿವಾರ್ಯತೆ?

    ಫೇಸ್ ಬುಕ್ ಮಿತ್ರರು,ಹಿರಿಯ ಪಶುವೈದ್ಯರಾಗಿರುವ ಡಾ. ಎನ್.ಬಿ. ಶ್ರೀಧರ್ ಅವರ ಲೇಖನವನ್ನ ಫೇಸ್ ಬುಕ್ ನಲ್ಲಿ ಕೂಡ ಓದಿದ್ದೆ.ಅವರೂ ಕೂಡ ಈ ಹಿನ್ನೆಲೆಯಲ್ಲಿಯೇ ವಿಸ್ತರಿಸಿ ಬರೆದಿದ್ದರು.ಜನರಿಕ್ ಅಥವಾ ಜನ ಔಷಧ ಈಗ ವ್ಯಾಪಕವಾಗಿ ಮನೆಮಾತಾಗುತ್ತಿದೆ.ಕಾಯಿಲೆಯೇ ಒಂದು ಸಮಸ್ಯೆ. ಅದಾದ ನಂತರ ವೈದ್ಯರ ಚಿಕಿತ್ಸೆ ಬಿಲ್ ಭರಿಸುವುದು ಇನ್ನೊಂದು. ಜೊತೆಗೆ ದೀರ್ಘಕಾಲೀನ ಔಷಧಗಳನ್ನ ಕೊಳ್ಳುವುದು ಮತ್ತೊಂದು ಸಮಸ್ಯೆ.ಇಂತಹ ಸನ್ನಿವೇಶ ಮಧ್ಯಮ ವರ್ಗ ಮತ್ತು ಕಡುಬಡವರನ್ನ ಕಾಡುತ್ತಿದೆ. ಔಷಧ ಕಂಪನಿಗಳು ಒಟ್ಟು ತಮ್ಮಉತ್ಪನ್ನಗಳ ದರವನ್ನ ಪ್ರತೀ ಉತ್ಪಾದನಾ ಹಂತದಲ್ಲೂ ಏರಿಕೆಮಾಡುತ್ತಲೇ ಇವೆ.ಅದಕ್ಕೆ ಸರಿಸಾಟಿಯಾಗಿ ತಮ್ಮ ಉತ್ಪನ್ನಗಳನ್ನ ಮಾರುಕಟ್ಟೆಯಲ್ಲಿ ರಭಸದಿಂದ ತಳ್ಳಲು ಕಂಪನಿಗಳು ವಿವಿಧ ತಂತ್ರಗಳನ್ನು ಅನುಸರಿಸುತ್ತವೆ. ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿನಿರತರಿಗೆ ಪ್ರಲೋಭನೆಗಳನ್ನೂ ಒಡ್ಡುತ್ತಿದೆ.ಇದರ ಬಗ್ಗೆ  ಅನೇಕ ವೈದ್ಯರು ವಿರೋಧವ್ಯಕ್ತಪಡಿಸುತ್ತಾರೆ.

    ಇಂತಹ ಸನ್ನಿವೇಶ ನಮಗೆ ಯಾವಾಗಲೂ ಎದುರಾಗುತ್ತಿದೆ. ನಿಮಗೆ ನೆನಪಾಗಬಹುದು. ಕೇಂದ್ರ ಸಚಿವರಾಗಿದ್ದ ದಿವಂಗತ ಅನಂತ ಕುಮಾರ್ ಅವರ ತೀವ್ರ ಒತ್ತಡದಿಂದ ಜನ ಔಷಧ ಕಲ್ಪನೆ  ಮೂರ್ತ ಸ್ವರೂಪತಾಳಿತು. ಅಲ್ಲಿಯವರೆಗ ನೆನೆಗುದಿಯಲ್ಲೇ ಇತ್ತೇನೊ ? ಗೊತ್ತಿಲ್ಲ. ಅಥವಾ ಅವರ ಕಾಲದಲ್ಲಿ ಜನಪ್ರಿಯವಾಯಿತೇನೊ?.ಏನೇ ಇರಲಿ. ಔಷಧಗಳಿಗೆ ತಮ್ಮ ಮಾಸಿಕ ಆದಾಯದ ಬಹುಪಾಲನ್ನ ಔಷಧಗಳಿಗೇ ಮೀಸಲಾಗಿಟ್ಟವರು ಅನೇಕರು. ಮಿಕ್ಕ ದೈನಂದಿನ ಖರ್ಚುವೆಚ್ಚಗಳಿಗೆ ಸಾಲಸೋಲಮಾಡುವ ಅನಿವಾರ್ಯತೆಯ ಸುಳಿಗೆ ಸಿಲುಕಿದ್ದಾರೆ. ಅಂಥವರಿಗೆ ಜನರಿಕ್ ಔಷಧಗಳು ಒಂದು ವರದಾನವೆಂದೇ ಹೇಳಬಹುದು.

    ಕೈಗೆಟುಕುವ ದರ,ಶೀಘ್ರ ಪರಿಣಾಮ.

    ನನ್ನ ಆತ್ಮೀಯ ಮಿತ್ರರೊಬ್ಬರು ಜನೌಷಧಗಳ ಬಗ್ಗೆ ಅಭಿಪ್ರಾಯ ಕೇಳಿದರಂತೆ.ಅವರಿಗೆ ಸಕ್ಕರೆ ಕಾಯಿಲೆ ತೊಂದರೆ ಇದೆ.ಅದಕ್ಕೆ ವೈದ್ಯರು ಒಳ್ಳೆಯ ಪ್ರತಿಕ್ರಿಯೆ ನೀಡಿದರಂತೆ.ಆವತ್ತಿನಿಂದ ತಾವು ಜನರಿಕ್ ಔಷಧಗಳನ್ನೇ ಸೇವಿಸುತ್ತಿರುವೆ ಎಂದರು. .ಅವರಿಗೀಗ ತಮ್ಮ ಆದಾಯದಲ್ಲಿ ಶೇಕಡ ನಲವತ್ತರಷ್ಟು ಉಳಿಕೆಯಾಗುತ್ತಿದೆಯಂತೆ. ನಿವೃತ್ತರಿಗೆ ಈ ಉಳಿಕೆ ಒಂದು ಒಳ್ಳೆಯ ಮೊತ್ತವೆ!.

    ಜನರಿಕ್ ಔಷಧಗಳು ಮಾರುಕಟ್ಟೆ ಹೆಸರಿನ ಔಷಧಗಳಷ್ಟೇ ಸಮ.ಅದರಲ್ಲಿನ ಪ್ರಮಾಣ,ಬಳಕೆ,ಪರಿಣಾಮ, ಎಲ್ಲವೂ ಒಂದೇ ಎಂಬ ಮತ್ತೊಂದು ಅಭಿಪ್ರಾಯ ಅಂತರ್ಜಾಲದಲ್ಲಿದೆ.

    Generic drugs are copies of brand-name drugs that have exactly the same dosage, intended use, effects, side effects, route of administration, risks, safety, and strength as the original drug. In other words, their pharmacological effects are exactly the same as those of their brand-name counterparts.

    ಇಷ್ಟೆಲ್ಲ ನಂಬಲರ್ಹ ಸಂಗತಿಗಳಿದ್ದರೂ ನಮ್ಮ ಬಹುತೇಕ ವೈದ್ಯರು ಯಾಕೆ ಜನರಿಕ್ ಔಷಧಗಳನ್ನ  ಬರೆದು ಕೊಡುವುದಿಲ್ಲ? ಎಂಬ ಪ್ರಶ್ನೆ ನಮ್ಮನ್ನ ಕಾಡದೇ ಇಲ್ಲ. ಅದಕ್ಕೆ ವೈದ್ಯರಲ್ಲಿ ಹಾಗೂ ರೋಗಿಗಳಲ್ಲಿ ಜನರಿಕ್ ಔಷಧಗಳ ಬಗ್ಗೆ ವಿಶ್ವಾಸಮೂಡಿಲ್ಲ. ಇನ್ನೊಂದು ಕಾರಣವೆಂದರೆ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಬ್ರಾಂಡೆಡ್ ಕಂಪನಿಗಳ  ದೈತ್ಯಬಲ.

    ಮಾರುಕಟ್ಟೆಯ ಮೇಲಿನ ಅವುಗಳ ಅವುಗಳ ದಾಳಿ ಮತ್ತು ಹಿಡಿತ.ಹೀಗಾಗಿ ಜನರಿಕ್ ಔಷಧಗಳ ಅಸ್ತಿತ್ವ ಕ್ಷೀಣವಾಗಿ ಕಾಣುತ್ತಿದೆ.

    ಪ್ರಸ್ತುತ ಆಗಬೇಕಾಗಿರುವುದೇನು?

    ಸರ್ಕಾರದ ಆಶಯ ಬಹಳ ನೇರ ಮತ್ತು ಸರಳ.ಶ್ರೀಸಾಮಾನ್ಯನ ಸಂಸಾರಕ್ಕೂ ಉತ್ತಮ ಔಷಧಗಳು ಕೈಗೆಟಕುವ ದರದಲ್ಲಿ ಸಿಗುವಂತೆ ಮಾಡುವುದು.ಆದರೆ ಅದರ ಜಾರಿಗೆ ಬಹಳ ದುರ್ಬಲ.ಏಕೆಂದರೆ ಸರ್ಕಾರಿ ಆಸತ್ರೆಗಳಲ್ಲಿ ಮೊದಲಿಗೆ ಜನರಿಕ್ ಔಷಧಗಳನ್ನ ಬರೆಯುವ ಬಗ್ಗೆ ವೈದ್ಯರಿಗೆ ಪ್ರೇರಣೆ ಹಾಗೂ ಜವಾಬ್ದಾರಿ ನೀಡಬೇಕು.ಅವುಗಳ ಬಗ್ಗೆ ರೋಗಿಗಳಲ್ಲಿ ಎರಡುಮಾತು ಹೇಳಿ ವಿಶ್ವಾಸ ಮೂಡಿಸಬೇಕು.ಅಲ್ಲಿ ಜನರಿಕ್ ಔಷಧಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಕಾರ್ಯ ನಡೆಯಬೇಕು.ಕೇವಲ ಜನ ಔಷಧ ಮಳಿಗೆಗಳನ್ನ ವೇಗವಾಗಿ ತೆರೆಯುವ ಕೆಲಸವಾದರೆ ಸಾಲದು. ಮಾಹಿತಿಯೂ ಕೂಡ ಮಿಂಚಿನಂತೆ ಜನತೆಯನ್ನ ತಲುಪಬೇಕು.

    ಅಥವಾ ಜನರಿಕ್ ಮಳಿಗೆಯಲ್ಲಿ ಮಾರುಕಟ್ಟೆ ಹೆಸರು ಮತ್ತು ಅದಕ್ಕೆ ಸಮವಾಗಿರುವ ಜನರಿಕ್ ಉತ್ಪನ್ನಗಳ ಹೆಸರಿನ ಪಟ್ಟಿ ಜನರಿಕ್ ಮಳಿಗೆಗಳಲ್ಲಿ ಲಭ್ಯವಿರಬೇಕು. ಮುಖ್ಯವಾಗಿ ಜಿಲ್ಲಾ ಮತ್ತು ತಾಲೂಕು,ಹೋಬಳಿ ಸರ್ಕಾರಿ ಆಸ್ಪತ್ರೆಗಳಲ್ಲಿನ ವೈದ್ಯರಿಗೆ ಜನರಿಕ್ ಔಷಧ ಬರೆಯಲು ಸರ್ಕಾರವೇ ಸೂಚನೆ ನೀಡಬೇಕು. ವೈದ್ಯರಿಗೆ ಜನರಿಕ್ ಉತ್ಪನ್ನಗಳ ಬಗ್ಗೆ ಮಾಹಿತಿ ಶಿಬಿರ ನಡೆಸಬೇಕು. ಸರ್ಕಾರ ಪ್ರಚಾರ ಮಾಧ್ಯಮಗಳ ಮೂಲಕ ಈ ಬಗ್ಗೆಯೂ ಜನತೆಯಲ್ಲಿ ಜಾಗೃತಿ ಮೂಡಿಸಬೇಕು.

    ಕಾಸಿಗೆ ತಕ್ಕ ಕಜ್ಜಾಯವೆ?

    ಕಾಸಿಗೆ ತಕ್ಕ ಕಜ್ಜಾಯ ಎಂಬ ಮಾತು ನಮ್ಮಲ್ಲಿ ಬಳಕೆಯಲ್ಲಿದೆ. ಆ ಇಂಗಿತವನ್ನೇ ಜನರಿಕ್ ಔಷಧಗಳ ಬಗ್ಗೆ ಸಹಜವಾಗೇ ಹೊಂದಿರುತ್ತೇವೆ.

    ಬಹಳ ಮಂದಿಗೆ ಜನರಿಕ್ ಔಷಧಗಳು ಕಡಿಮೆ ಬೆಲೆಗೆ ಸಿಗುತ್ತವೆಂದರೆ ಅಚ್ಚರಿಯ ಸಂಗಡ  ಅದರ ಗುಣಮಟ್ಟದ ಬಗ್ಗೆ ದೇಹತಾಳುತ್ತಾರೆ.ಕಡಿಮೆ ದರ ,ಕಡಿಮೆ ಸಾಮರ್ಥ್ಯ ಎಂಬ ಭಾವನೆ ಬರುತ್ತದೆ.ಆದರೆ ಅದು ಸಲ್ಲದು.

    ಭದ್ರಾವತಿಯ ಜನಪ್ರಿಯ ಪ್ರಸೂತಿ ತಜ್ಞೆ, ವೈದ್ಯಕೀಯ ಬರಹಗಳ ಲೇಖಕಿ ಡಾ.ವೀಣಾಭಟ್ ಅವರ ಪ್ರತಿಕ್ರಿಯೆಯೂ ಜನರಿಕ್ ಔಷಧಗಳ ಮಹತ್ವ ಸಾರುತ್ತದೆ.” For chronic illness I advise to go for  generic drugs only “.ಅವರ ನಿಚ್ಚಳ ಅಭಿಪ್ರಾಯವಿದು.

    ಏನಿದು ಜನರಿಕ್?

    ಮಾರುಕಟ್ಟೆಯಲ್ಲಿ ಸಿಗುವ ಹೆಸರಾಂತ ಔಷಧ ಉತ್ಪನ್ನದ ಹಿಂದೆ ಸಂಶೋಧನೆ, ಅಭಿವೃದ್ಧಿ,ತಯಾರಿಕೆ,ಪ್ರಚಾರ ಮುಂತಾದ ವೆಚ್ಚಗಳನ್ನ ಭರಿಸಬೇಕಾಗುತ್ತದೆ.

    ಅದು ತನ್ನ ಉತ್ಪನ್ನದ ಹಕ್ಕನ್ನ ಹೊಂದಿ ಇಂತಿಷ್ಟು ವರ್ಷಗಳವರೆಗೆ ಏಕಮೇವತೆಯನ್ನ ಸ್ಥಾಪಿಸಿಕೊಂಡಿರುತ್ತದೆ.ಯಾರೂ ಆ ಔಷಧವನ್ನ ತಯಾರುಮಾಡುವಂತಿಲ್ಲ‌.ಇಂತಿಷ್ಟು ವರ್ಷಗಳ ಗಡುವು ತೀರಿದ ನಂತರ ಅದರ ಮೇಲಿನ ಸ್ವಾಮ್ಯತೆ ಕಳೆದುಕೊಳ್ಳತ್ತದೆ. ಆಗ ಅದನ್ನ ಜನರಿಕ್ ಉತ್ಪನ್ನವಾಗಿ ಮಾರ್ಪಡಿಸಬಹುದು. ಖಾಸಗಿಯವರು ಮುಂದಾಗಿ ಅಂತಹ ಔಷಧ ತಯಾರಿಸಲು ಅನುಮತಿ ಪಡೆದುಕೊಳ್ಳುತ್ತಾರೆ.ಹಲವಾರು ಹಂತದ ವೆಚ್ಚಗಳು ಉಳಿದುಕೊಳ್ಳುತ್ತವೆ.ಕೇವಲ ತಯಾರಿಕೆ ಮತ್ತು ಮಾರಾಟ ಮಾತ್ರ.ಹೀಗಾಗಿ ಕಡಿಮೆ ದರ ವಿಧಿಸಲು ಸಾಧ್ಯವಾಗುತ್ತದೆ.

    ಉದಾಹರಣೆಗೆ ಒಂದು ಮಾತ್ರೆಯ ಉತ್ಪಾದನಾ ವೆಚ್ಚ ಒಂದು ರೂಪಾಯಿ ಇದೆ ಅನ್ನೋಣ.ಅದರ ಪ್ರಚಾರಕ್ಕೇ ಕಂಪನಿಯು ಒಂಭತ್ತು ರೂಪಾಯಿಗಳನ್ನು ವೆಚ್ಚಮಾಡುತ್ತದೆ.ಅಂದರೆ ಒಂದು ಮಾತ್ರೆಯ ಮುಖಬೆಲೆ ಲಾಭಾಂಶ ಸೇರಿಸಿ ಹತ್ತು ರೂಪಾಯಿ ಆಗುತ್ತದೆ..( ಉಲ್ಲೇಖ,ಡಾ‌.ಬಿ.ಎಚ್.ಮಂಜುನಾಥ್ ಅವರ ವಿಜಯವಾಣಿ  ಕಳಕಳಿ ಅಂಕಣ ).ಅವರೇ ಉಲ್ಲೇಖಿಸಿರುವಂತೆ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ ನಂಥ ಕಾಯಿಲೆಗಳು ಸರ್ವೇ ಸಾಮಾನ್ಯವಾಗಿದೆ.ಈಗ ಖಾಸಗಿ ಔಷಧ ತಯಾರಕರ ಔಷಧ ಮಾತ್ರೆಗಳು ದುಬಾರಿ ಎನಿಸಿದರೂ ಕೊಳ್ಳುವುದು ಅನಿವಾರ್ಯವಾಗುವಂತೆ ವ್ಯವಸ್ಥಿತ ಜಾಲ ಕೆಲಸಮಾಡುತ್ತಿದೆ.ಜನೌಷಧ ಮಳಿಗೆಗಳಲ್ಲಿ ಈಗ 500ಕ್ಕೂ ಹೆಚ್ಚು ಬಗೆಯ ಔಷಧಗಳು ಸಿಗುತ್ತವೆ.150 ಮಾದರಿಯ ವೈದ್ಯಕೀಯ ಪರಿಕರಗಳು ಲಭ್ಯವಿವೆ.

     ಖಾಸಗಿ ಕಂಪನಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬಂದರೆ ನಾಗರಿಕರಿಗೆ ಮತ್ತಷ್ಟು ಕಡಿಮೆಬೆಲೆಯಲ್ಲಿ ದೊರೆಯುತ್ತವೆ. ಆದ್ದರಿಂದ ಕಡಿಮೆ ದರ ಎಂದಾಕ್ಷಣ ಔಷಧಗಳು ಪರಿಣಾಮಕಾರಿಯಲ್ಲ ಎಂಬ ಅಭಿಪ್ರಾಯ ತಾಳುವುದು ಬೇಡ.ಹೆಸರುವಾಸಿ ಕಂಪೆನಿಗಳು ತಮ್ಮ ಹಕ್ಕುಸ್ವಾಮ್ಯದಲ್ಲಿ  ದುಬಾರಿ ಎನಿಸುವ  ಔಷಧಗಳ ಉತ್ಪಾದನೆ ಈಗಾಗಲೇ ಮಾಡುತ್ತಿವೆ. ಜೊತೆಗೆ ಅರ್ಧಕ್ಕರ್ಧಷ್ಟು ಕಂಪನಿಗಳು ಜನರಿಕ್ ಉತ್ಪನ್ನಗಳನ್ನೂ ತಯಾರಿಸುತ್ತಿವೆ. ಜನರಿಕ್ ಔಷಧಗಳು ಪರಿಣಾಮದಲ್ಲಿ ಬಹಳ ನಿಧಾನ ಎನ್ನುವ ತಪ್ಪು ನಂಬಿಕೆಯಿದೆ.ಆದರೆ ಔಷಧನಿಯಂತ್ರಣ ಸಂಸ್ಥೆ ಅವುಗಳು ಹೆಸರಾಂತ ಉತ್ಪನ್ನಗಳಷ್ಟೇ ಶೀಘ್ರ ಪರಿಣಾಮ ಹೊಂದಿರಬೇಕೆಂದು ಆಶಿಸುತ್ತದೆ.

    ಈ ಉತ್ಪನ್ನಗಳು ಯಾವುದೇ ನಿರ್ದಿಷ್ಟ ಕಂಪನಿಗಳ ಸಂಬಂಧ ಹೊಂದಿರುವುದಿಲ್ಲ. ಜನರಿಕ್ ಔಷಧಗಳು ಯಾವ ದೇಶದಲ್ಲಿ ಬಳಸಲ್ಪಡುತ್ತದೆಯೋ ಆಯಾ ದೇಶದ ನಿಯಂತ್ರಣದಲ್ಲಿರುತ್ತವೆ.

    ನಮ್ಮ ದೇಶದಲ್ಲಿ ಔಷಧ ನಿಯಂತ್ರಕ ಸಂಸ್ಥೆಯಿದೆ .Drugs Standard Control Organization .ಈ ಸಂಸ್ಥೆಯು ಅಮೆರಿಕದ ಎಫ್ ಡಿ ಎ ಗೆ ಸಮವಾಗಿದೆ. ಭಾರತದಲ್ಲಿ ಔಷಧಗಳ ಮತ್ತು, ವೈದ್ಯಕೀಯ ಉಪಕರಣಗಳ ಕುರಿತು ಮಾರಾಟ ಹಾಗೂ ಅನುಮತಿ ನೀಡುತ್ತದೆ. ಈ ಸಂಸ್ಥೆಯ ಮೂಲಕವೇ

    ಅಧಿಕೃತವಾಗಿ ಜನರಿಕ್ ಔಷಧಗಳು ಅನುಮತಿ ಹೊಂದಿವೆ. ಹೀಗಿರುವಾಗ ಔಷಧ ಪರಿಣಾಮ ಮತ್ತು ಜನತೆಯ ಜೀವರಕ್ಷಣೆ ಸರ್ಕಾರದ್ದೇ ಆಗಿರುತ್ತದೆ. ಈ ಕುರಿತು ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯನಮ್ಮಲ್ಲಿ  ಆಗಬೇಕಿದೆ.ಇಂತಹ ಸನ್ನಿವೇಶದಲ್ಲಿ ನಮ್ಮ ಸ್ವಯಂ ಸೇವಾ ಸಂಘಸಂಸ್ಥೆಗಳ ಪಾತ್ರವನ್ನೂ ಬಹಳ ಪ್ರಮುಖ ಎಂದು ಹೇಳಬಹುದು. ಅಷ್ಟೇ ನಮ್ಮ ಸೇವಾಮನೋಭಾವ ಹಾಗೂ ವೃತ್ತಿಪರ ವೈದ್ಯರ ಒಳಗೊಳ್ಳುವಿಕೆಯೂ ಅಗತ್ಯವಿದೆ.

    ಆಭಿಯಾನದ ಅವಶ್ಯಕತೆ.

    ಮುಂದುವರೆದ ದೇಶವೆಂಬ ಹೆಗ್ಗಳಿಕೆಯ ಅಮೆರಿಕದ್ದು.ಅಲ್ಲಿ 2014 ರ ಒಂದು ಅಧ್ಯಯನದ ಪ್ರಕಾರ ವೈದ್ಯರುಗಳು ಬರೆದ ಸುಮಾರು ನಾಲ್ಕು ಬಿಲಿಯನ್ ಗೂ ಅಧಿಕ ಸಲಹಾಚೀಟಿಗಳಲ್ಲಿ ಶೇ 88 ರಷ್ಟು ಜನರಿಕ್ ಉತ್ಪನ್ನಗಳಿವೆ ಎಂದು ಅಲ್ಲಿ ಜನರಿಕ್ ಔಷಧ ಉತ್ಪನ್ನ ಸಂಸ್ಥೆ ತಿಳಿಸುತ್ತದೆ.  ನಮ್ಮ ದೇಶದಲ್ಲೂ ಈಗಿನ ಜನರಿಕ್ ಔಷಧ ಬಳಸಿದ ರೋಗಿಗಳ ಪ್ರತಿಕ್ರಿಯೆ ಸಂಗ್ರಹಿಸಬೇಕು. ಸಾಕಷ್ಟು ಅನುಕೂಲಕರವಾಗಿದ್ದನ್ನೇ ಕೇಳಿದ್ದೇವೆ. ಈ ಬಗ್ಗೆ ನಮ್ಮಲ್ಲಿ ನಾವಿನ್ನೂ ಮೀನ ಮೇಷ ಎಣಿಸುತ್ತಿದ್ದೇವೇನೊ!

    ಸ್ಯಾನಿಟರಿ ಪ್ಯಾಡ್ ಗಳ ಬಗ್ಗೆ, ರಕ್ತ ಗುಂಪುಗಳ ಕುರಿತು, ಮಕ್ಕಳಲ್ಲಿನ ಆಟಿಸಂ ಕಾಯಿಲೆ ಬಗ್ಗೆ, ಮಾನಸಿಕ ತೊಂದರೆಗಳು ಹಾಗೂ ಅನೇಕ ಸಮುದಾಯ ಕ್ಷೇಮಪರ ಸೇವೆ ಹಾಗೂ ಜಾಗೃತಿ ಆಂದೋಲನ ಮಾಡುತ್ತಿವೆ.ಸಂತೋಷ. ಈಗ  ಜನರಿಕ್ ಔಷಧಗಳ ಬಗ್ಗೆಯೂ ವಿಶಿಷ್ಟವಾದ ಅಭಿಯಾನ ಆರಂಭಿಸಬೇಕೆನಿಸುತ್ತದೆ. ಜನರಿಕ್ ಔಷಧಗಳು ಮತ್ತು ಅದಕ್ಕೆ ಸಮವಾದ ಮಾರುಕಟ್ಟೆ ಹೆಸರುಗಳು,  ಅವುಗಳಲ್ಲಿನ ರಾಸಾಯನಿಕ ಅಂಶ ಇತ್ಯಾದಿಗಳ ಬಗ್ಗೆ ಎಚ್ಚೆತ್ತ ಶ್ರೀಸಾಮಾನ್ಯರಲ್ಲಿ ಅರಿವು ಮೂಡಿಸಬಹುದು. ನಮ್ಮ ವೈದ್ಯರ ಸಂಘ ಅಂದರೆ ಐಎಂಎ ಉತ್ತಮ ಸೇವಾಕಾರ್ಯಗಳನ್ನ ಮಾಡುತ್ತಿರುತ್ತದೆ.ಈಗ ಜನೌಷಧ ಕುರಿತು ವೈದ್ಯಸಮೂಹ  ಮತ್ತು ಔಷಧ ಮಾಹಿತಿ ಬಗ್ಗೆ ಸೇತುಬಂಧ ಆಂದೋಲನ ಹಮ್ಮಿಕೊಂಡರೆ ಬಡ ರೋಗಿಗಳಿಗೆ ಕಿಂಚಿತ್ ನೆರವು ನೀಡಿದ ಪುಣ್ಯ ಬರುತ್ತದೆ.

    ನಮ್ಮ ದೇಶೀಯ ಮಾರುಕಟ್ಟೆಯಲ್ಲಿ ಬಟ್ಟೆ,ವಾಹನ,ಚಪ್ಪಲಿ,  ಟೀವಿ, ,ಸೌಂದರ್ಯಸಾಧನಗಳು. ಇತ್ಯಾದಿ ವಸ್ತುಗಳನ್ನ ಶೇ ರಿಯಾಯಿತಿಯಿಟ್ಟು ಗ್ರಾಹಕರನ್ನ  ಆಕರ್ಷಿಸುವ ಪ್ರಯತ್ನ ನಡೆಯುತ್ತಿದೆ.ಆದರೆ ಕ್ಷೇಮಲಾಭದ ಔಷಧ,ಮಾತ್ರೆಗಳ ಬಗ್ಗೆ ಅಷ್ಟು ಸಮನಾದ ತಂತ್ರಗಳಿಲ್ಲ ಎನ್ನುವುದು ದುರದೃಷ್ಟಕರ. .ಪತಂಜಲಿ ಉತ್ಪನ್ನಗಳು ಹೇಗೆ ಒಂದು ಹರಿವನ್ನೇ ಹುಟ್ಟುಹಾಕುತ್ತಿದೆಯೋ ಅದೇ ತೆರನಾಗಿ, ಸುಲಭ ದರದ ಪರಿಣಾಮಕಾರೀ  (ಜನರಿಕ್ )ಜನೌಷಧ ಬಗ್ಗೆ  ಜಾಗೃತಿ ಅಭಿಯಾನ ರೂಪುಗೊಳ್ಳಬೇಕಾದದ್ದು ಈಗಿನ ಜರೂರು ಅನಿಸುತ್ತದೆ.

    ಕೊನೇಹನಿ: ಜನರಿಕ್ ಜನಪ್ರಿಯತೆಯನ್ನ ಸ್ವಾರ್ಥಕಾಗಿ ಕೆಲವು ಕಂಪನಿಗಳು ಕೆಳದರ್ಜೆಯ ಔಷಧಗಳನ್ನು ಈ ಮಳಿಗೆಗಳಲ್ಲಿ ಮಾರಾಟಮಾಡಿತ್ತಿದ್ದಾರೆ ಎಂದು ನನ್ನ ಮಿತ್ರರಾದ ಕೆ.ಜಿ.ಮಂಜುನಾಥ ಶರ್ಮ ಅವರು ಹೇಳಿದ್ದಾರೆ. ಹೀಗಾದರೆ ಸರ್ಕಾರ ಮತ್ತಷ್ಟು ಗುಣಮಟ್ಟ ತಪಾಸಣೆಯ ಕ್ರಮಗಳ ಮೂಲಕ ಈರೀತಿಯ ದುರ್ಬಳಕೆಯನ್ನ ತಪ್ಪಿಸಬೇಕು.

    Photo by Thought Catalog on Unsplash

    ಪ್ರೈಮರಿ ಶಾಲೆಗಳಿಗೆ ಜೂನ್ 14 ರವರಗೆ, ಹೈಸ್ಕೂಲ್ ಗಳಿಗೆ ಮೇ 31ರವರೆಗೆ ಬೇಸಿಗೆ ರಜೆ

    ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶಾಲೆಗಳನ್ನು ಮುಚ್ಚಲಾಗಿದ್ದು, ಪ್ರಸಕ್ತ‌ ಸನ್ನಿವೇಶವನ್ನು ಗಮನದಲ್ಲಿರಿಸಿ 2020-21 ನೇ ಸಾಲಿನ ರಜಾವಧಿಯನ್ನು ಪರಿಷ್ಕರಿಸಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

    ಈ ಬಗ್ಗೆ ಶಿಕ್ಷಣ ಇಲಾಖೆಯು ಸುತ್ತೋಲೆಯನ್ನು ಹೊರಡಿಸಿರುವ ಬಗ್ಗೆ ಖಚಿತ‌ಪಡಿಸಿದ ಸಚಿವರು ಪ್ರಾಥಮಿಕ ಶಾಲೆಗಳಿಗೆ ಹಿಂದೆ ತಿಳಿಸಲಾದಂತೆ 14.06.2021ರವರೆಗೆ ಬೇಸಿಗೆ ರಜೆ, ಪ್ರೌಢ ಶಾಲೆಗಳಿಗೆ 27.04.2021 ರಿಂದ 31.05.2021ರವರೆಗೆ ಬೇಸಿಗೆ ರಜೆ ಘೋಷಿಸಲಾಗಿದೆ‌ ಎಂದಿದ್ದಾರೆ.

    01.06.2021ರಿಂದ 14.06.2021ರವರೆಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಪುನರ್ಮನನ ತರಗತಿಗಳು ನಡೆಯಲಿವೆ. 15.06.2021ರಿಂದ 8-10 ನೇ ತರಗತಿಗಳು‌ ಪ್ರಾರಂಭವಾಗಲಿವೆ ಎಂದು ಹೇಳಿದ್ದಾರೆ. ಅಂದರೆ ಹೈಸ್ಕೂಲ್ ಶಿಕ್ಷಕರ ಬೇಸಿಗೆ ರಜೆ ಮೇ 31 ಕ್ಕೆ ಮುಗಿಯುತ್ತದೆ. ವಿದ್ಯಾರ್ಥಿಗಳಿಗೆ ಜೂನ್ 14 ರವರೆಗೂ ರಜೆ ಮುಂದುವರಿಯುತ್ತದೆ.

    ಪ್ರೌಢಶಾಲಾ‌ ಶಿಕ್ಷಕರು ರಜೆ ಅವಧಿಯಲ್ಲಿ‌ ಎಸ್.ಎಸ್.ಎಲ್.ಸಿ ಮಕ್ಕಳ ಪರೀಕ್ಷಾ ಸಿದ್ಧತೆಯ ಬಗ್ಗೆ ಗಮನ ಹರಿಸಬೇಕು, ದೂರವಾಣಿ ಮೂಲಕ ಸಂಪರ್ಕದಲ್ಲಿದ್ದು ಅವರ ಕಲಿಕೆಗೆ ಪ್ರೇರೇಪಿಸಬೇಕು ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.

    ಖಾಸಗಿ ಆಸ್ಪತ್ರೆ ಸರಕಾರಿ ಬೆಡ್‌ ದರ ಪರಿಷ್ಕರಣೆ;ಹೆಚ್ಚು ಹಣ ವಸೂಲಿ ಮಾಡಿದರೆ ಗೂಂಡಾ ಕಾಯ್ದೆ

    ಖಾಸಗಿ ಆಸ್ಪತ್ರೆಗಳಲ್ಲಿ ಸರಕಾರದ ವಶದಲ್ಲಿರುವ ಬೆಡ್‌ ದರ ಪರಿಷ್ಕರಣೆ, ಕೂಡಲೇ 5 ಲಕ್ಷ ರೆಮಿಡಿಸ್ವಿರ್‌ ಡೋಸ್‌ ಖರೀದಿ ಹಾಗೂ ಅಗತ್ಯವಿದ್ದಷ್ಟು ರಾಟ್‌ ಕಿಟ್‌ಗಳನ್ನು ತಕ್ಷಣವೇ ಖರೀದಿ ಮಾಡುವ ಮಹತ್ವದ ನಿರ್ಧಾರಗಳನ್ನು ಕೋವಿಡ್‌ ಕಾರ್ಯಪಡೆಯ ಸಭೆಯಲ್ಲಿ ಕೈಗೊಳ್ಳಲಾಗಿದೆ.

    ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಮಂಗಳವಾರ ಬೆಂಗಳೂರಿನಲ್ಲಿ ಕಾರ್ಯಪಡೆ ಸಭೆ ನಡೆಸಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು, ದೇಶಿಯ ಅಥವಾ ಜಾಗತಿಕವಾಗಿ ಯಾವುದೇ ಕಂಪನಿ ಆಗಿರಲಿ. ಇವತ್ತೇ ರೆಮಿಡಿಸ್ವೀರ್‌ ಖರೀದಿಗೆ ಜಾಗತಿಕ ಟೆಂಡರ್‌ ಕರೆಯಿರಿ ಎಂದು ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ರೆಮಿಡಿಸ್ವೀರ್‌ ಕೊರತೆ ಆಗಬಾರದು:

    ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ರೆಮಿಡಿಸ್ವೀರ್‌ ಕೊರತೆ ಉಂಟಾಗಬಾರದು. ಕೂಡಲೇ 5 ಲಕ್ಷ ಡೋಸ್‌ ಆಮದು ಮಾಡಲು ಜಾಗತಿಕ ಟೆಂಡರ್‌ ಕರೆಯಿರಿ. ಯಾವುದೇ ಕಂಪನಿಯಾದರೂ ಪರವಾಗಿಲ್ಲ. ವಿದೇಶದಿಂದ ಆಮದು ಮಾಡಿಕೊಂಡರೂ ಸರಿ. ರೆಮಿಡಿಸ್ವೀರ್‌ ಕೊರತೆಯಿಂದ ಜೀವ ಹೋಯಿತು ಎನ್ನುವ ಮಾತು ಇನ್ನು ಕೇಳಿಬರಬಾರದು. ಇವತ್ತೇ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಎಂದು ಡಿಸಿಎಂ ಅಧಿಕಾರಿಗಳಿಗೆ ತಾಕೀತು ಮಾಡಿದರು.

    ಖಾಸಗಿ ಆಸ್ಪತ್ರೆಗಳ ಸರಕಾರದ ಬೆಡ್‌ ದರ ಪರಿಷ್ಕರಣೆ

    ಇದೇ ಸಭೆಯಲ್ಲಿ ಸರಕಾರ ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಹೊಂದಿರುವ ಹಾಸಿಗೆಗಳ ಪ್ರತಿದಿನದ  ದರವನ್ನು ಪರಿಷ್ಕರಣೆ ಮಾಡುವ ನಿರ್ಧಾರವನ್ನೂ ಕೈಗೊಳ್ಳಲಾಯಿತು.

    ಗಂಭೀರವಲ್ಲದ ಕೋವಿಡ್‌ ಸೋಂಕಿತರ ಬೆಡ್‌ ದರ ಪ್ರತಿದಿನಕ್ಕೆ ಈಗ 5,200 ರೂ. ಇದ್ದು, ಇದರಲ್ಲಿ ಯಾವುದೇ ಹೆಚ್ಚಳ ಮಾಡಲಾಗಿಲ್ಲ.
    ಆಕ್ಸಿಜನ್‌ಯುಕ್ತ ಬೆಡ್‌ ದರವನ್ನು ದಿನಕ್ಕೆ 7,000ದಿಂದ 8,000 ರೂ.ಗಳಿಗೆ ಹೆಚ್ಚಿಸಲಾಗಿದೆ.ಐಸಿಯುನಲ್ಲಿ ವೆಂಟಿಲೇಟರ್‌ ಹೊರತಾದ ಬೆಡ್‌ ದರವನ್ನು 8,500ರಿಂದ 9,750 ರೂ.ಗಳಿಗೆ ಹಾಗೂ ಐಸಿಯುನಲ್ಲಿ ವೆಂಟಿಲೇಟರ್‌ ಸಹಿತ ಬೆಡ್‌ ದರವನ್ನು 10,000ರಿಂದ 11,500 ರೂ.ಗಳಿಗೆ ಏರಿಸಲಾಗಿದೆ.ಹೊಸ ದರಗಳು ಯಾವಾಗಿನಿಂದ ಜಾರಿಗೆ ಬರುತ್ತವೆ ಎಂಬುದಕ್ಕೆ ಸರಕಾರ ಶೀಘ್ರವೇ ಆದೇಶ ಹೊರಡಿಸಲಿದೆ ಎಂದು ಡಿಸಿಎಂ ಸಭೆಯಲ್ಲಿ ಪ್ರಕಟಿಸಿದರು.

    ಹೆಚ್ಚು ವಸೂಲಿ ಮಾಡಿದರೆ ಗೂಂಡಾ ಕಾಯ್ದೆಯಡಿ ಕ್ರಮ

    ಯಾವುದೇ ಖಾಸಗಿ ಆಸ್ಪತ್ರೆ ಬೆಡ್‌, ಔಷಧಿ, ಆಕ್ಸಿಜನ್‌, ರೆಮಿಡಿಸ್ವೀರ್ ಸೇರಿದಂತೆ ಸರಕಾರ ನಿಗದಿ ಮಾಡಿದ ದರಕ್ಕಿಂತ ಹೆಚ್ಚಿನ ಹಣ ಸುಲಿಗೆ ಮಾಡಿದರೆ ಗೂಂಡಾ ಕಾಯ್ದೆ ಅಡಿಯಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಿಮಿನಲ್‌ ಪ್ರಕರಣ ದಾಖಲ ಮಾಡಲಾಗುವುದು ಎಂದು ಡಿಸಿಎಂ ಸ್ಪಷ್ಟ ಎಚ್ಚರಿಕೆ ನೀಡಿದರು.

    ಯಾರಾದರೂ ಹೆಚ್ಚು ಶುಲ್ಕ ವಸೂಲಿ ಮಾಡಿದರೆ 112 ಹೆಲ್ಪ್‌ಲೈನ್‌ಗೆ ಕರೆ ಮಾಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ಲಭ್ಯವಿರುವ ತಮ್ಮ ಹಾಗೂ ಸರಕಾರದ ಬೆಡ್‌ಗಳ ಮಾಹಿತಿಯನ್ನು ಸುವರ್ಣ ಆರೋಗ್ಯ ಟ್ರಸ್ಟ್‌ ಪೋರ್ಟಲ್‌ನಲ್ಲಿ ಅಪ್‌ಡೇಟ್‌ ಮಾಡಬೇಕು. ಹಾಸಿಗೆಗಳ ಲೈವ್‌ ಸ್ಟೇಟಸ್‌ ಇರಬೇಕು. ಅಧಿಕಾರಿಗಳು ಇದರ ಮೇಲೆ ನಿಗಾ ಇಡಬೇಕು ಎಂದು ಡಿಸಿಎಂ ತಾಕೀತು ಮಾಡಿದರು.

    ಇದೇ ವೇಳೆ, ಖಾಸಗಿ ಆಸ್ಪತ್ರೆಗಳ ಬಿಲ್‌ ಬಾಕಿ ಇದ್ದರೆ ತಕ್ಷಣವೇ ಚುಕ್ತಾ ಮಾಡಿ. ಹಾಗೆಯೇ ಕೋವಿಡ್‌ ಯೋಧರಾಗಿ ಕೆಲಸ ಮಾಡುತ್ತಿರುವ ಯಾರ ವೇತನವೂ ತಡವಾಗಬಾರದು ಎಂದು ಮುಖ್ಯ ಕಾರ್ಯದರ್ಶಿಗಳಿಗೆ ಡಾ.ಅಶ್ವತ್ಥನಾರಾಯಣ ಸೂಚನೆ ಕೊಟ್ಟರು.

    ಲಸಿಕೆ ಖರೀದಿಗೆ ಸೂಚನೆ

    18ರಿಂದ 44 ವರ್ಷ ವಯಸ್ಸಿನ ಎಲ್ಲರಿಗೂ ವ್ಯಾಕ್ಸಿನೇಷನ್‌ ಮಾಡುವ ಕೆಲಸ ಮಂದಗತಿಯಲ್ಲಿ ಸಾಗುತ್ತಿದೆ. ಲಸಿಕೆ ಅಭಾವದಿಂದ ಹೀಗಾಗಿದೆ. ಎಲ್ಲರಿಗೂ ಸರಕಾರವೇ ಲಸಿಕೆ ಕೊಡಬೇಕಾಗಿದೆ. ರಾಜ್ಯದಲ್ಲಿ 3.26 ಕೋಟಿ ಜನರಿಗೆ ಲಸಿಕೆ ನೀಡಬೇಕಾಗಿದ್ದು, ಇವರಿಗೆ ಎರಡು ಡೋಸ್‌ ನೀಡಲು 6.52 ಕೋಟಿ ರೂ. ಅಗತ್ಯವಿದೆ. ಕೇಂದ್ರ ಸರಕಾರದಿಂದ 3 ಲಕ್ಷ ಡೋಸ್‌ ಕೋವಿಶೀಲ್ಡ್‌  ಬಂದಿದ್ದು, ಮೇ ಎರಡನೇ ವಾರಕ್ಕೆ 15 ಲಕ್ಷ ಡೋಸ್‌ ಬರುತ್ತದೆ ಎಂದು ಸಭೆಗೆ ಡಿಸಿಎಂ ಮಾಹಿತಿ ನೀಡಿದರು.

    ತಕ್ಷಣವೇ ಲಸಿಕೆ ಅಭಿಯಾನದ ಕಾರ್ಯತಂತ್ರವನ್ನು ಬದಲಿಸಬೇಕು. ಲಸಿಕೆಯನ್ನು ಯಾರಿಗೆ ನೀಡಬೇಕು ಎಂಬ ಹೊಸ ಮಾರ್ಗಸೂಚಿ ರೂಪಿಸಬೇಕಿದೆ ಎಂದು ಅವರು ಹೇಳಿದರು.

    ರಾಟ್‌ ಕಿಟ್‌ ಖರೀದಿಸಿ

    ವ್ಯಕ್ತಿಯ ಸ್ಯಾಂಪಲ್‌ ಸ್ವೀಕರಿಸಿದ ಐದು ನಿಮಿಷಗಳಲ್ಲಿ ಫಲಿತಾಂಶ ಕೊಡುವ ರಾಟ್‌ ಕಿಟ್‌ಗಳನ್ನು ಎಷ್ಟು  ಅಗತ್ಯವೋ ಅಷ್ಟೂ ಖರೀದಿ ಮಾಡಲು ಡಿಸಿಎಂ ಅವರು ಅಧಿಕಾರಿಗಳಿಗೆ ಸೂಚಿಸಿದರು. ಈ ಕಿಟ್‌ಗೆ ಐಸಿಎಂಅರ್‌ ಕೂಡ ಮಾನ್ಯತೆ ನೀಡಿದ್ದು, ರೋಗ ಲಕ್ಷಣಗಳಿದ್ದರೆ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಬೇಕು ಎಂದು ಸೂಚಿಸಿದರು.

    ಉಳಿದಂತೆ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿರುವ ಕೋವಿಡ್‌ ವಾರಿಯರ್‌ಗಳು, ವೈದ್ಯರು, ನರ್ಸುಗಳಿಗೆ ಸೋಂಕು ತಗುಲುತ್ತಿದ್ದು, ಆಯಾ ಜಿಲ್ಲೆಗಳ ವಿವಿಧ ವೈದ್ಯಕೀಯ ಕಾಲೇಜುಗಳಲ್ಲಿ ಅಂತಿಮ ವರ್ಷ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಕೋವಿಡ್‌ ಕರ್ತವ್ಯಕ್ಕೆ ತಕ್ಷಣವೇ ನಿಯೋಜಿಸುವಂತೆ ಉಪ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದರು.

    ಜತೆಗೆ, ವೈದ್ಯಕೀಯ ಸಿಬ್ಬಂದಿ ಬಳಕೆ ಮಾಡುವ ವಸ್ತುಗಳ ಕೊರತೆಯಾಗಬಾರದು. ಮಾಸ್ಕ್‌, ಪಿಪಿಎ ಕಿಟ್‌, ಸ್ಯಾನಿಟೈಸರ್‌ ಇತ್ಯಾದಿಗಳು ಅಗತ್ಯ ಪ್ರಮಾಣದಲ್ಲಿ ಸದಾ ಲಭ್ಯ ಇರಬೇಕು ಎಂದು ಡಿಸಿಎಂ ಸೂಚಿಸಿದರು.

    ಸಭೆಯಲ್ಲಿ ಕಾರ್ಯಪಡೆ ಸದಸ್ಯರೂ ಸಚಿವರೂ ಆದ ಡಾ.ಕೆ.ಸುಧಾಕರ್‌, ಎಸ್.‌ಸುರೇಶ್‌ ಕುಮಾರ್‌, ಸಿ.ಸಿ.ಪಾಟೀಲ್‌ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೆದ್ ಆಖ್ತರ್  ಸೇರಿದಂತೆ ಇತರ ಉನ್ನತ ಅಧಿಕಾರಿಗಳು ಇದ್ದರು.

    ಕೋವಿಡ್ ಲಸಿಕೆ ಎಲ್ಲರೂ ಹಾಕಿಸಿಕೊಳ್ಳಲೇಬೇಕು ಏಕೆಂದರೆ…ಡಾಕ್ಟರ್ ಹೇಳುತ್ತಾರೆ ಕೇಳಿ

    ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಸಿ ಜಿ ಪ್ರಹ್ಲಾದ್ ರಾವ್ ಅವರದು ದೊಡ್ಡ ಹೆಸರು. ಮೈಸೂರಿನ ಜನಪ್ರಿಯ ವೈದ್ಯರಾಗಿರುವ ಪ್ರಹ್ಲಾದ್ ರಾವ್, ಕೋವಿಡ್ ಸಂಕಷ್ಟ ಕಾಲದಲ್ಲಿ ಒಂದು ದಿನವೂ ತಪ್ಪದೇ ರೋಗಿಗಳ ಸೇವೆ ಮಾಡಿಕೊಂಡು ಬಂದಿದ್ದಾರೆ. ಕೋವಿಡ್ ಬಗ್ಗೆ ಆಗುತ್ತಿರುವ ಹೊಸ ಸಂಶೋಧನೆಗಳು, ಮಾಹಿತಿಗಳನ್ನು ಸಾಮಾಜಿಕ ಜಾಲತಾಣ ಮೂಲಕ ಹಂಚಿಕೊಳ್ಳುತ್ತಲೇ ಇರುತ್ತಾರೆ.

    ಮೈಸೂರಿನ ಸುಪ್ರಸಿದ್ಧ ಎಂಜಿನಿಯರ್ ಕಾಲೇಜುಗಳಲ್ಲಿ ಒಂದಾದ ವಿದ್ಯಾವರ್ಧಕ ಕಾಲೇಜ್ ಆಫ್ ಎಂಜಿನಿಯರಿಂಗ್ ನ ವಿದ್ಯಾರ್ಥಿಗಳೊಂದಿಗೆ ಆನ್ ಲೈನ್ ಸಂವಾದ ನಡೆಸಿದ ಡಾ. ಪ್ರಹ್ಲಾದ್ ಕೋವಿಡ್ ಬಗ್ಗೆ ಅನೇಕ ಅಂಶಗಳನ್ನು ಹಂಚಿಕೊಂಡಿದ್ದಾರೆ. ಕೋವಿಡ್ ಬಂದ ಕೂಡಲೇ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು? ಕೋವಿಡ್ ನಿಗ್ರಹಿಸುವಲ್ಲಿ ಯುವ ಜನರ ಪಾತ್ರವೇನು? ಲಸಿಕೆಯ ಮಹತ್ವ ಏನು?- ಇತ್ಯಾದಿ ಸಂಗತಿಗಳ ಬಗ್ಗೆ ವಿವರವಾಗಿ ಮಾತಾನಾಡಿದ್ದಾರೆ.

    ನಮ್ಮ ಓದುಗರಿಗಾಗಿ ಆ ಸಂವಾದದ ವಿಡಿಯೋವನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ. ಆಲಿಸಿ. ಎಲ್ಲರೂ ಸೇರಿ ಕೋವಿಡ್ ಹಿಮ್ಮೆಟ್ಟಿಸೋಣ.

    ದ್ವಿತೀಯ ಪಿಯು ಪರೀಕ್ಷೆ ಮುಂದಕ್ಕೆ; ಪ್ರಥಮ ಪಿಯು ಪರೀಕ್ಷೆ ಇಲ್ಲದೆ ಪಾಸ್; ಉಪನ್ಯಾಸಕರಿಗೆ ವರ್ಕ್ ಫ್ರಂ ಹೋಮ್

    ಕೋವಿಡ್ ಸೋಂಕಿನ ಪ್ರಸರಣದ ಹಿನ್ನೆಲೆಯಲ್ಲಿ ಮೇ 24ರಿಂದ ಆರಂಭವಾಗಬೇಕಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ತಿಳಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಮುಂದಿನ ದಿನಗಳಲ್ಲಿ ಪರೀಕ್ಷೆಗಳ ದಿನಾಂಕಗಳನ್ನು ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.

    ಮಂಗಳವಾರ ವಿಧಾನಸೌಧದಲ್ಲಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಮಾತನಾಡಿದ ಅವರು, ಪರೀಕ್ಷಾ ದಿನಾಂಕಗಳನ್ನು ಪರೀಕ್ಷೆಗಳು ಆರಂಭವಾಗುವುದಕ್ಕೆ 15-20 ದಿನಗಳ ಮುನ್ನವೇ ಪ್ರಕಟಿಸಲಾಗುವುದು ಎಂದರು.

    ಈಗಾಗಲೇ ಪರೀಕ್ಷೆಗೆ ಸಜ್ಜಾಗಿದ್ದ ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡಿರುವುದರಿಂದ ಯಾವುದೇ ಕಾರಣಕ್ಕೂ ವಿಚಲಿತರಾಗದೇ ಶ್ರದ್ಧೆಯಿಂದ ತಮ್ಮ ವಿದ್ಯಾಭ್ಯಾಸವನ್ನು ಎಂದಿನಂತೆ ಮುಂದುವರೆಸಬೇಕೆಂದು ಅವರು ಮನವಿ ಮಾಡಿದ್ದಾರೆ.

    ಮೊದಲನೆ ಪಿಯು ವಿದ್ಯಾರ್ಥಿಗಳಿಗೆ ಪ್ರಮೋಷನ್:
    ದ್ವಿತೀಯ ಪಿಯು ಪರೀಕ್ಷೆಗಳ ನಂತರ ನಡೆಸಬೇಕೆಂದು ನಿರ್ಧರಿಸಲಾಗಿದ್ದ ಪ್ರಥಮ ಪಿಯು ಪರೀಕ್ಷೆಗಳನ್ನು ಕೋವಿಡ್ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದ್ದು, ಪ್ರಥಮ ವರ್ಷದ ಪಿಯು ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡುವ ನಿರ್ಧಾರವನ್ನೂ ಇದೇ ಸಂದರ್ಭದಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಈ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದ ಪ್ರಾರಂಭದ ಮುನ್ನ ಬ್ರಿಡ್ಜ್ ಕೋರ್ಸ್ಗಳನ್ನು ನಡೆಸಲಾಗುತ್ತದೆ. ಹಾಗೆಯೇ ಇಲಾಖೆಯ ಯೂ-ಟ್ಯೂಬ್ ಚಾನಲ್ಗಳ ಮೂಲಕ ಈಗಿನಿಂದಲೇ ಈ ಬ್ರಿಡ್ಜ್ ಕೋರ್ಸ್ಗಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದೂ ಅವರು ತಿಳಿಸಿದರು.

    ಉಪನ್ಯಾಸಕರಿಗೆ ವರ್ಕ್ ಫ್ರಂ ಹೋಂ:
    ಪರೀಕ್ಷೆಗಳನ್ನು ಮುಂದೂಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸತತವಾಗಿ ಸಂಪರ್ಕದಲ್ಲಿರುವಂತೆ ಉಪನ್ಯಾಸಕರು ವರ್ಕ್ ಫ್ರಂ ಹೋಂ ಕೆಲಸ ಮಾಡಲು ಸೂಚಿಸಲಾಗಿದೆ.

    ವಿದ್ಯಾರ್ಥಿಗಳೊಂದಿಗೆ ನಿರಂತರ ಸಂಪರ್ಕ, ಇಲಾಖೆಯ ಪಠ್ಯ ಬೋಧನಾ ಕ್ರಮಗಳನ್ನು ಅವರೊಂದಿಗೆ ಚರ್ಚಿಸುವುದು ಸೇರಿದಂತೆ ಎಲ್ಲ ಆಡಳಿತಾತ್ಮಕ ಕ್ರಮಗಳಲಿಗೆ ಅವರು ಸದಾ ಲಭ್ಯವಾಗಬೇಕಿದೆ. ಹಾಗೆಯೇ ಕೋವಿಡ್ ಕರ್ತವ್ಯಗಳಲ್ಲಿ ತೊಡಗಿಸಿಕೊಂಡಿರುವ ಉಪನ್ಯಾಸಕರು ತಮ್ಮ ಕೋವಿಡ್ ಜವಾಬ್ದಾರಿಗಳನ್ನು ಪೂರೈಸಬೇಕಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    ಮೇ 24ರಿಂದ ಜೂ.16ರವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳನ್ನು ನಡೆಸಲು ಈ ಮೊದಲು ನಿರ್ಧರಿಸಲಾಗಿತ್ತು. ರಾಜ್ಯಾದ್ಯಂತ 1047 ಕೇಂದ್ರಗಳಲ್ಲಿನ 5562 ಕಾಲೇಜುಗಳಲ್ಲಿ ಪರೀಕ್ಷೆಗಳನ್ನು ನಡೆಸಲು ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು.

    ಸಭೆ ಪರಿಗಣಿಸಿದ ಅಂಶಗಳು

    ಪ್ರಾಯೋಗಿಕ ಪರೀಕ್ಷೆಗಳನ್ನು ಈಗಾಗಲೇ ಮುಂದೂಡಲಾಗಿದೆ.

    ರಾಜ್ಯಾದ್ಯಂತ ಕೋವಿಡ್ ಎರಡನೇ ಅಲೆ ತೀವ್ರವಾಗುತ್ತಿರುವ ಹರಡುತ್ತಿರುವುದು

    ಪರೀಕ್ಷೆಗೆ ಸಹಕಾರ ನೀಡಬೇಕಿದ್ದ ಇಲಾಖೆಗಳು ಕೋವಿಡ್ ಕರ್ತವ್ಯದಲ್ಲಿ ತೊಡಗಿಸಿಕೊಂಡಿರುವುದು ಹಾಗೆಯೇ ಪರೀಕ್ಷೆ ತೆಗೆದುಕೊಳ್ಳಬೇಕಿದ್ದ ವಿದ್ಯಾರ್ಥಿಗಳು ತಮ್ಮ ತಮ್ಮ ಊರಿನಲ್ಲಿ ವಾಸ್ತವ್ಯ ಮಾಡಿರುವುದು

    ವಿದ್ಯಾರ್ಥಿಗಳ ಮತ್ತು ಪೋಷಕರ ಮಾನಸಿಕ ಒತ್ತಡಗಳು ಸೇರಿದಂತೆ ಎಲ್ಲ ಆಯಾಮಗಳನ್ನು ಸಮಗ್ರವಾಗಿ ಚರ್ಚಿಸಲಾಯಿತು.

    ಸಿಬಿಎಸ್ಇ ಸೇರಿದಂತೆ ಕೇಂದ್ರ ಮಂಡಳಿ ಪರೀಕ್ಷೆಗಳು ಹಾಗೆಯೇ ಮಧ್ಯಪ್ರದೇಶ, ಜಾರ್ಖಂಡ್, ಮಹಾರಾಷ್ಟ್ರ,ತಮಿಳುನಾಡು, ಹಿಮಾಚಲ ಪ್ರದೇಶ, ಛತ್ತೀಸ್ಘಡ್, ರಾಜಸ್ಥಾನ, ಪಂಜಾಬ್ ಹಾಗೂ ತೆಲಂಗಾಣ ರಾಜ್ಯಗಳ 12ನೇ ತರಗತಿ ಮಂಡಳಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.

    ಈ ಎಲ್ಲ ಅಂಶಗಳನ್ನು ಪರಿಗಣಿಸಿ ಪರೀಕ್ಷೆ ಮುಂದೂಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    ಸಭೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್, ಪಿಯು ಮಂಡಳಿ ನಿರ್ದೇಶಕಿ ಆರ್. ಸ್ನೇಹಲ್ ಮತ್ತಿತರರು ಭಾಗವಹಿಸಿದ್ದರು.

    ಪಾಸಿಟೀವ್ ಎಂದ ಕೂಡಲೇ ನೆಗೆಟೀವ್ ಯೋಚನೆ ಬೇಡ

    ಕೋವಿಡ್ ಮಹಾಮಾರಿಯ ಈ ಸಂದರ್ಭದಲ್ಲಿ ಅನೇಕ ಸಾವು ನೋವುಗಳು ದಿನೇ ದಿನೆ ಕಾಣಿಸಿಕೊಳ್ಳುತ್ತಿದೆ. ಕೋವಿಡ್‌ಗೆ ಲಸಿಕೆ ಸ್ವಲ್ಪ ಮಟ್ಟಿನ ಸಮಾಧಾನ ತಂದಿದ್ದರೂ ಕೂಡಾ ಇಂದಿನ ಪರಿಸ್ಥಿತಿಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದು ಬಹುತೇಕರಲ್ಲಿ ಆತಂಕ ಉಂಟು ಮಾಡಿದೆ ನಿಜ. ಆದರೆ ನಮ್ಮ ಜಾಗ್ರತೆಯಲ್ಲಿ, ನಮ್ಮನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು, ಬರದಂತೆ ಹೇಗೆ ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕು ಎಂಬ ಅರಿವು ನಮಗಿರಬೇಕು. ಅಲ್ಲಲ್ಲಿ ಜನಜಾಗೃತಿ, ಮಾಹಿತಿ ಎಲ್ಲೆಡೆ ಲಭ್ಯವಿರುವುದರಿಂದ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವುದಕ್ಕೆ ಕಷ್ಟವೇನಲ್ಲ.

    ಆದರೆ ಕೊರೊನಾದಿಂದಷ್ಟೇ ಅಲ್ಲ, ‘ಕೊರೊನಾ ಪಾಸಿಟಿವ್’ ಬಂದಿದೆ ಎಂಬ ಭಯ ಮತ್ತು ಒತ್ತಡ ಕೂಡಾ ಬದುಕನ್ನು ಕಸಿದುಕೊಳ್ಳುತ್ತಿರುವುದು ವಿಷಾದನೀಯ.ಕೊರೊನಾದಿಂದ ಮರಣ ಹೊಂದಿದವರ ಸಂಖ್ಯೆಯಲ್ಲಿಕೊರೊನಾ ರಿಪೋರ್ಟ್ ಪಾಸಿಟಿವ್ ಅಂದಾಕ್ಷಣ ಹೆದರಿಕೆಯಿಂದ ಹಾರ್ಟ್ ಅಟ್ಯಾಕ್, ರಕ್ತದೊತ್ತಡಕ್ಕೆ ಒಳಗಾಗಿ ಪ್ರಾಣ ಕಳೆದಕೊಂಡವರೂ ಇದ್ದಾರೆ.

    ಒಂದುವೇಳೆ ಕೊರೋನಾದ ಲಕ್ಷಣಗಳು ಕಾಣಿಸಿಕೊಂಡಿವೆ, ಟೆಸ್ಟ್ ರಿಪೋರ್ಟ್ನಲ್ಲಿ ಪಾಸಿಟಿವ್ ಬಂದಿದೆ ಅಂತಾದರೆ ತಕ್ಷಣವೇ ನೆಗೇಟೀವ್ ಆಗಿ ಯೋಚನೆ ಮಾಡುವುದಕ್ಕೆ ಶುರು ಮಾಡಿಬಿಡುತ್ತಾರೆ. ಒಮ್ಮಿಂದೊಮ್ಮೆಲೇ ಭಯಕ್ಕೊಳಗಾಗುತ್ತೇವೆ, ಒತ್ತಡ ಶುರುವಾಗಿಬಿಡುತ್ತದೆ. ಇದ್ದಕ್ಕಿದ್ದ ಹಾಗೇ ಬಿಪಿ ಏರಿ ಬಿಡುತ್ತದೆ. ಅದು ಸಹಜವೇ. ಆದರೆ ಕೊರೊನಾದಿಂದ ಮುಕ್ತರಾಗುತ್ತೇವೆ ಎನ್ನುವ ಸಕಾರಾತ್ಮಕ ಮನೋಭಾವ ನಮ್ಮನ್ನು ಇತರೆ ಆರೋಗ್ಯ ಸಮಸ್ಯೆಗಳಿಂದ ಪಾರುಮಾಡಿಬಿಡುತ್ತದೆ.
    ಮೊದಲಾಗಿ ಸ್ವತಃ ಸಾರ್ವಜನಿಕರಿಂದ ಸಾಮಾಜಿಕ ಅಂತರವನ್ನು ಕಾದಿಟ್ಟುಕೊಳ್ಳಬೇಕು, ಮನೆಯಲ್ಲಾದರೂ ಸರಿ ಇತರರಿಂದ ದೂರ ಇದ್ದು ರೋಗದ ಹರಡುವಿಕೆಗೆ ಕಾರಣರಾಗಬಾರದು. ಕೊರೊನಾ ಬಂದಿದ್ದರೆ ರೋಗ ಉಲ್ಬಣಿಸುವವರೆಗೆ ಕಾಯದೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲು ಯಾವುದೇ ಕಾರಣಕ್ಕೂ ಹಿಂಜರಿಯಬಾರದು.

    ಕಾಯಿಲೆಯನ್ನು ಯಾವುದೇ ಕಾರಣಕ್ಕೂ ಮನಸ್ಸಿಗೆ ತಂದುಕೊಳ್ಳಬಾರದು. ಯಾಕೆಂದರೆ ಸಾವು ನೋವು ಆಗುತ್ತಿರುವುದು ಒಂದೆಡೆಯಾದರೆ, ಕೊರೋನಾ ಮುಕ್ತರಾಗಿ ಮತ್ತೆ ಮನೆ ಸೇರಿ ನಿಟ್ಟುಸಿರು ಬಿಟ್ಟವರು ಸಾಯುವವರ ಸಂಖ್ಯೆಗಿಂತ ಸಾವಿರಪಟ್ಟು ಹೆಚ್ಚು ಎಂಬುದನ್ನು ಮರೆಯಬಾರದು.

    ಮಾನಸಿಕ ಒತ್ತಡದಿಂದ ಉಂಟಾಗುವ ಅನಾರೋಗ್ಯ

    • ಒತ್ತಡಕ್ಕೊಳಗಾಗುವುದರಿಂದ ಭಯ,ಸಿಟ್ಟು, ಬೇಸರ, ದುಃಖ, ಖಿನ್ನತೆ ಉಂಟಾಗಬಹುದು.
    • ಬದುಕಿನ ಬಗ್ಗೆ ನಿರಾಸೆ ಉಂಟಾಗಬಹುದು, ಹಸಿವು, ನಿದ್ದೆ, ಆಸಕ್ತಿಗಳು ಕುಂಠಿತಗೊಳ್ಳಬಹುದು.
    • ನಿದ್ರಾಹೀನತೆಯ ಜತೆಗೆ ದುಸ್ವಪ್ನಗಳು ಕಾಡಬಹುದು.
    • ಏಕಾಗ್ರತೆ ಕಡಿಮೆಯಾಗುವುದು, ಯಾವುದೇ ನಿರ್ಧಾರಗಳನ್ನು ಕೈಗೊಳ್ಳಲು ಅಸಮರ್ಥರಾಗಬಹುದು.
    • ದೈಹಿಕ ಆರೋಗ್ಯ ಹದಗೆಡಬಹುದು, ತಲೆನೋವು, ಹೊಟ್ಟೆ, ಇವೇ ಮೊದಲಾದ ಸಮಸ್ಯೆಗಳು ಉಂಟಾಗಬಹುದು.
    • ದೀರ್ಘ ಕಾಲದ ಆರೋಗ್ಯ ಸಮಸ್ಯೆಗಳಿದ್ದರೆ ಅದನ್ನು ಮತ್ತಷ್ಟು ಹದಗೆಡಿಸಬಹುದು.
    • ಮಾನಸಿಕ ಆರೋಗ್ಯವನ್ನು ಹಾಳು ಮಾಡುವುದು.
    • ಕುಡಿತ, ತಂಬಾಕು ಸೇವನೆ ಅಥವಾ ಇತರೆ ದುಶ್ಚಟಗಳಿದ್ದರೆ ಅದನ್ನು ಹೆಚ್ಚು ಮಾಡುವ ಸಾಧ್ಯತೆಯೂ ಇರುತ್ತದೆ.

    ಕೊರೋನಾದ ಸುದ್ದಿಯಿಂದಲೇ ಉಂಟಾಗುವ ಒತ್ತಡವನ್ನು ಹೇಗೆ ಕಡಿಮೆ ಮಾಡಿಕೊಳ್ಳಬಹುದು.

    • ಪತ್ರಿಕೆ, ಟಿವಿ, ಸೋಷಿಯಲ್ ಮೀಡಿಯಾದಂತ ಫೇಸ್‌ಬುಕ್, ವಾಟ್ಸಪ್‌ನಲ್ಲಿ ಕೂಡಾ ಹರಿದಾಡುತ್ತಿರುವುದು ಕೊರೋನಾದ ಸಾವು ನೋವುಗಳೇ. ಹಾಗಾಗಿ ಅದರಿಂದ ಸ್ವಲ್ಪ ಬ್ರೇಕ್ ತೆಗೆದುಕೊಳ್ಳಬಹುದು. ಅದರ ಬದಲು ಆಧ್ಯಾತ್ಮಿಕವಾಗಿ, ವ್ಯಕ್ತಿತ್ವ ವಿಕಸನದಂತಹ ಲೇಖನಗಳನ್ನು ಓದುವುದು, ಪುಸ್ತಕ ಓದುವುದು, ಕಲೆಯ ಬಗ್ಗೆ ಆಸಕ್ತಿ ಇದ್ದರೆ ತಮಗಿಷ್ಟವಾದ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದರಿಂದ ನಕಾರಾತ್ಮಕ ಮನಸ್ಥಿತಿಯನ್ನು ದೂರ ಮಾಡಿಕೊಳ್ಳಬಹುದು.
    • ಉಸಿರಾಟಕ್ಕೆ ಸಂಬಂಧಿಸಿದಂತೆ ಪ್ರಾಣಾಯಾಮ, ಯೋಗ, ಧ್ಯಾನದಂತಹ ಆರೋಗ್ಯಕರ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು.
    • ಪ್ರತಿನಿತ್ಯ ದೈಹಿಕ ವ್ಯಾಯಾಮ ಕೈಗೊಳ್ಳುವುದು ಕೂಡಾ ಆರೋಗ್ಯಕರ ಮನಸ್ಥಿತಿಯನ್ನು ಹೊಂದಬಹುದು.
    • ಸಾಕಷ್ಟು ನಿದ್ದೆ ಮಾಡುವುದು.
    • ಮಾದಕ ವಸ್ತುಗಳ ಸೇವನೆಯನ್ನು ನಿಯಂತ್ರಣದಲ್ಲಿರಿಸಿಕೊಳ್ಳುವುದು. ದಿನನಿತ್ಯದ ಆರೋಗ್ಯಕರ ಕ್ರಮಗಳನ್ನು ತಪ್ಪದೇ ಪಾಲಿಸುವುದು, ಉದಾಹರಣೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಹೊರಗೆ ಹೋದಾಗ ಮಾಸ್ಕ್ ಧರಿಸುವುದು, ಸಾನಿಟೈಸರ್ ಬಳಸುವುದು, ಹೊರಗೆ ಹೋಗಿ ಬಂದಾ ಕೂಡಲೇ ಸ್ನಾನ ಮಾಡಿಯೇ ಮನೆ ಒಳಪ್ರವೇಶಿಸುವುದು ಇವೇ ಮೊದಲಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
    • ಆಹಾರ ಸೇವನೆಯಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವಂತಹ ಆಹಾರವನ್ನು ಸೇವಿಸುವುದು.
    • ಔಷಧಗಳನ್ನು ಸೇವನೆ ಮಾಡಿ ನಮ್ಮ ಮೇಲೆಯೇ ಪ್ರಯೋಗ ಮಾಡುವುದಕ್ಕಿಂತ ತಜ್ಞ ವೈದ್ಯರ ಸಲಹೆಯಂತೆ ಔಷಧ ತೆಗೆದುಕೊಳ್ಳುವುದು ಕೂಡಾ ಬಹಳ ಅಗತ್ಯ.

    Photo by Nathan Dumlao on Unsplash

    error: Content is protected !!