29.4 C
Karnataka
Monday, May 20, 2024

    ಪಾಸಿಟೀವ್ ಎಂದ ಕೂಡಲೇ ನೆಗೆಟೀವ್ ಯೋಚನೆ ಬೇಡ

    Must read

    ಕೋವಿಡ್ ಮಹಾಮಾರಿಯ ಈ ಸಂದರ್ಭದಲ್ಲಿ ಅನೇಕ ಸಾವು ನೋವುಗಳು ದಿನೇ ದಿನೆ ಕಾಣಿಸಿಕೊಳ್ಳುತ್ತಿದೆ. ಕೋವಿಡ್‌ಗೆ ಲಸಿಕೆ ಸ್ವಲ್ಪ ಮಟ್ಟಿನ ಸಮಾಧಾನ ತಂದಿದ್ದರೂ ಕೂಡಾ ಇಂದಿನ ಪರಿಸ್ಥಿತಿಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದು ಬಹುತೇಕರಲ್ಲಿ ಆತಂಕ ಉಂಟು ಮಾಡಿದೆ ನಿಜ. ಆದರೆ ನಮ್ಮ ಜಾಗ್ರತೆಯಲ್ಲಿ, ನಮ್ಮನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು, ಬರದಂತೆ ಹೇಗೆ ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕು ಎಂಬ ಅರಿವು ನಮಗಿರಬೇಕು. ಅಲ್ಲಲ್ಲಿ ಜನಜಾಗೃತಿ, ಮಾಹಿತಿ ಎಲ್ಲೆಡೆ ಲಭ್ಯವಿರುವುದರಿಂದ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವುದಕ್ಕೆ ಕಷ್ಟವೇನಲ್ಲ.

    ಆದರೆ ಕೊರೊನಾದಿಂದಷ್ಟೇ ಅಲ್ಲ, ‘ಕೊರೊನಾ ಪಾಸಿಟಿವ್’ ಬಂದಿದೆ ಎಂಬ ಭಯ ಮತ್ತು ಒತ್ತಡ ಕೂಡಾ ಬದುಕನ್ನು ಕಸಿದುಕೊಳ್ಳುತ್ತಿರುವುದು ವಿಷಾದನೀಯ.ಕೊರೊನಾದಿಂದ ಮರಣ ಹೊಂದಿದವರ ಸಂಖ್ಯೆಯಲ್ಲಿಕೊರೊನಾ ರಿಪೋರ್ಟ್ ಪಾಸಿಟಿವ್ ಅಂದಾಕ್ಷಣ ಹೆದರಿಕೆಯಿಂದ ಹಾರ್ಟ್ ಅಟ್ಯಾಕ್, ರಕ್ತದೊತ್ತಡಕ್ಕೆ ಒಳಗಾಗಿ ಪ್ರಾಣ ಕಳೆದಕೊಂಡವರೂ ಇದ್ದಾರೆ.

    ಒಂದುವೇಳೆ ಕೊರೋನಾದ ಲಕ್ಷಣಗಳು ಕಾಣಿಸಿಕೊಂಡಿವೆ, ಟೆಸ್ಟ್ ರಿಪೋರ್ಟ್ನಲ್ಲಿ ಪಾಸಿಟಿವ್ ಬಂದಿದೆ ಅಂತಾದರೆ ತಕ್ಷಣವೇ ನೆಗೇಟೀವ್ ಆಗಿ ಯೋಚನೆ ಮಾಡುವುದಕ್ಕೆ ಶುರು ಮಾಡಿಬಿಡುತ್ತಾರೆ. ಒಮ್ಮಿಂದೊಮ್ಮೆಲೇ ಭಯಕ್ಕೊಳಗಾಗುತ್ತೇವೆ, ಒತ್ತಡ ಶುರುವಾಗಿಬಿಡುತ್ತದೆ. ಇದ್ದಕ್ಕಿದ್ದ ಹಾಗೇ ಬಿಪಿ ಏರಿ ಬಿಡುತ್ತದೆ. ಅದು ಸಹಜವೇ. ಆದರೆ ಕೊರೊನಾದಿಂದ ಮುಕ್ತರಾಗುತ್ತೇವೆ ಎನ್ನುವ ಸಕಾರಾತ್ಮಕ ಮನೋಭಾವ ನಮ್ಮನ್ನು ಇತರೆ ಆರೋಗ್ಯ ಸಮಸ್ಯೆಗಳಿಂದ ಪಾರುಮಾಡಿಬಿಡುತ್ತದೆ.
    ಮೊದಲಾಗಿ ಸ್ವತಃ ಸಾರ್ವಜನಿಕರಿಂದ ಸಾಮಾಜಿಕ ಅಂತರವನ್ನು ಕಾದಿಟ್ಟುಕೊಳ್ಳಬೇಕು, ಮನೆಯಲ್ಲಾದರೂ ಸರಿ ಇತರರಿಂದ ದೂರ ಇದ್ದು ರೋಗದ ಹರಡುವಿಕೆಗೆ ಕಾರಣರಾಗಬಾರದು. ಕೊರೊನಾ ಬಂದಿದ್ದರೆ ರೋಗ ಉಲ್ಬಣಿಸುವವರೆಗೆ ಕಾಯದೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲು ಯಾವುದೇ ಕಾರಣಕ್ಕೂ ಹಿಂಜರಿಯಬಾರದು.

    ಕಾಯಿಲೆಯನ್ನು ಯಾವುದೇ ಕಾರಣಕ್ಕೂ ಮನಸ್ಸಿಗೆ ತಂದುಕೊಳ್ಳಬಾರದು. ಯಾಕೆಂದರೆ ಸಾವು ನೋವು ಆಗುತ್ತಿರುವುದು ಒಂದೆಡೆಯಾದರೆ, ಕೊರೋನಾ ಮುಕ್ತರಾಗಿ ಮತ್ತೆ ಮನೆ ಸೇರಿ ನಿಟ್ಟುಸಿರು ಬಿಟ್ಟವರು ಸಾಯುವವರ ಸಂಖ್ಯೆಗಿಂತ ಸಾವಿರಪಟ್ಟು ಹೆಚ್ಚು ಎಂಬುದನ್ನು ಮರೆಯಬಾರದು.

    ಮಾನಸಿಕ ಒತ್ತಡದಿಂದ ಉಂಟಾಗುವ ಅನಾರೋಗ್ಯ

    • ಒತ್ತಡಕ್ಕೊಳಗಾಗುವುದರಿಂದ ಭಯ,ಸಿಟ್ಟು, ಬೇಸರ, ದುಃಖ, ಖಿನ್ನತೆ ಉಂಟಾಗಬಹುದು.
    • ಬದುಕಿನ ಬಗ್ಗೆ ನಿರಾಸೆ ಉಂಟಾಗಬಹುದು, ಹಸಿವು, ನಿದ್ದೆ, ಆಸಕ್ತಿಗಳು ಕುಂಠಿತಗೊಳ್ಳಬಹುದು.
    • ನಿದ್ರಾಹೀನತೆಯ ಜತೆಗೆ ದುಸ್ವಪ್ನಗಳು ಕಾಡಬಹುದು.
    • ಏಕಾಗ್ರತೆ ಕಡಿಮೆಯಾಗುವುದು, ಯಾವುದೇ ನಿರ್ಧಾರಗಳನ್ನು ಕೈಗೊಳ್ಳಲು ಅಸಮರ್ಥರಾಗಬಹುದು.
    • ದೈಹಿಕ ಆರೋಗ್ಯ ಹದಗೆಡಬಹುದು, ತಲೆನೋವು, ಹೊಟ್ಟೆ, ಇವೇ ಮೊದಲಾದ ಸಮಸ್ಯೆಗಳು ಉಂಟಾಗಬಹುದು.
    • ದೀರ್ಘ ಕಾಲದ ಆರೋಗ್ಯ ಸಮಸ್ಯೆಗಳಿದ್ದರೆ ಅದನ್ನು ಮತ್ತಷ್ಟು ಹದಗೆಡಿಸಬಹುದು.
    • ಮಾನಸಿಕ ಆರೋಗ್ಯವನ್ನು ಹಾಳು ಮಾಡುವುದು.
    • ಕುಡಿತ, ತಂಬಾಕು ಸೇವನೆ ಅಥವಾ ಇತರೆ ದುಶ್ಚಟಗಳಿದ್ದರೆ ಅದನ್ನು ಹೆಚ್ಚು ಮಾಡುವ ಸಾಧ್ಯತೆಯೂ ಇರುತ್ತದೆ.

    ಕೊರೋನಾದ ಸುದ್ದಿಯಿಂದಲೇ ಉಂಟಾಗುವ ಒತ್ತಡವನ್ನು ಹೇಗೆ ಕಡಿಮೆ ಮಾಡಿಕೊಳ್ಳಬಹುದು.

    • ಪತ್ರಿಕೆ, ಟಿವಿ, ಸೋಷಿಯಲ್ ಮೀಡಿಯಾದಂತ ಫೇಸ್‌ಬುಕ್, ವಾಟ್ಸಪ್‌ನಲ್ಲಿ ಕೂಡಾ ಹರಿದಾಡುತ್ತಿರುವುದು ಕೊರೋನಾದ ಸಾವು ನೋವುಗಳೇ. ಹಾಗಾಗಿ ಅದರಿಂದ ಸ್ವಲ್ಪ ಬ್ರೇಕ್ ತೆಗೆದುಕೊಳ್ಳಬಹುದು. ಅದರ ಬದಲು ಆಧ್ಯಾತ್ಮಿಕವಾಗಿ, ವ್ಯಕ್ತಿತ್ವ ವಿಕಸನದಂತಹ ಲೇಖನಗಳನ್ನು ಓದುವುದು, ಪುಸ್ತಕ ಓದುವುದು, ಕಲೆಯ ಬಗ್ಗೆ ಆಸಕ್ತಿ ಇದ್ದರೆ ತಮಗಿಷ್ಟವಾದ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದರಿಂದ ನಕಾರಾತ್ಮಕ ಮನಸ್ಥಿತಿಯನ್ನು ದೂರ ಮಾಡಿಕೊಳ್ಳಬಹುದು.
    • ಉಸಿರಾಟಕ್ಕೆ ಸಂಬಂಧಿಸಿದಂತೆ ಪ್ರಾಣಾಯಾಮ, ಯೋಗ, ಧ್ಯಾನದಂತಹ ಆರೋಗ್ಯಕರ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು.
    • ಪ್ರತಿನಿತ್ಯ ದೈಹಿಕ ವ್ಯಾಯಾಮ ಕೈಗೊಳ್ಳುವುದು ಕೂಡಾ ಆರೋಗ್ಯಕರ ಮನಸ್ಥಿತಿಯನ್ನು ಹೊಂದಬಹುದು.
    • ಸಾಕಷ್ಟು ನಿದ್ದೆ ಮಾಡುವುದು.
    • ಮಾದಕ ವಸ್ತುಗಳ ಸೇವನೆಯನ್ನು ನಿಯಂತ್ರಣದಲ್ಲಿರಿಸಿಕೊಳ್ಳುವುದು. ದಿನನಿತ್ಯದ ಆರೋಗ್ಯಕರ ಕ್ರಮಗಳನ್ನು ತಪ್ಪದೇ ಪಾಲಿಸುವುದು, ಉದಾಹರಣೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಹೊರಗೆ ಹೋದಾಗ ಮಾಸ್ಕ್ ಧರಿಸುವುದು, ಸಾನಿಟೈಸರ್ ಬಳಸುವುದು, ಹೊರಗೆ ಹೋಗಿ ಬಂದಾ ಕೂಡಲೇ ಸ್ನಾನ ಮಾಡಿಯೇ ಮನೆ ಒಳಪ್ರವೇಶಿಸುವುದು ಇವೇ ಮೊದಲಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
    • ಆಹಾರ ಸೇವನೆಯಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವಂತಹ ಆಹಾರವನ್ನು ಸೇವಿಸುವುದು.
    • ಔಷಧಗಳನ್ನು ಸೇವನೆ ಮಾಡಿ ನಮ್ಮ ಮೇಲೆಯೇ ಪ್ರಯೋಗ ಮಾಡುವುದಕ್ಕಿಂತ ತಜ್ಞ ವೈದ್ಯರ ಸಲಹೆಯಂತೆ ಔಷಧ ತೆಗೆದುಕೊಳ್ಳುವುದು ಕೂಡಾ ಬಹಳ ಅಗತ್ಯ.

    Photo by Nathan Dumlao on Unsplash

    ಶ್ರೀದೇವಿ ಅಂಬೆಕಲ್ಲು
    ಶ್ರೀದೇವಿ ಅಂಬೆಕಲ್ಲು
    ಶ್ರೀದೇವಿ ಅಂಬೆಕಲ್ಲು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ. ಪದವಿ ಪಡೆದಿದ್ದು ಉಜಿರೆಯ ಶ್ರೀ ಧರ್ಮಸ್ಥಳ ಮಂಜನಾಥೇಶ್ವರ ಕಾಲೇಜಿನಲ್ಲಿ. ಪತ್ರಿಕೋದ್ಯಮ ಪದವಿ ಮಂಗಳೂರು ವಿವಿ. ಆಸಕ್ತಿದಾಯಕ ಓದು ಇವರ ಬರವಣಿಗೆಯ ವಿಶೇಷ.
    spot_img

    More articles

    4 COMMENTS

    LEAVE A REPLY

    Please enter your comment!
    Please enter your name here

    Latest article

    error: Content is protected !!