31.7 C
Karnataka
Tuesday, April 30, 2024

    ಸಿ ಎಸ್ ಚರಣ್ ಅವರ ಆಸಕ್ತಿದಾಯಕ ‘ಈ’ಕಥೆಗಳು

    Must read

    ಅಪೂರ್ವ ಅಜ್ಜಂಪುರ

    ಒಂದು ಲಕ್ಷಕ್ಕೂ ಹೆಚ್ಚು ಕಿ.ಮೀ. ಹಾದಿಯನ್ನು ಸೈಕಲ್ ನಲ್ಲಿ ಕ್ರಮಿಸಿರುವ ವಿಭಿನ್ನ ಸೈಕಲ್ಲಿಗ ಚರಣ್ ಅವರ ಕಥಾ ಕಾಲಕ್ಷೇಪವೂ ಕೂಡ ಒಂದು ರೀತಿಯಲ್ಲಿ ಅವರ ಹವ್ಯಾಸದಂತೆ ವಿಭಿನ್ನವಾಗಿದೆ. “ಗಾಲಿ-ಗಾಳಿಯ ಅನೂಹ್ಯಬಂಧ ನನ್ನನ್ನು ಕಥೆಗಾರನನ್ನಾಗಿ ಮಾಡಿದೆ…” ಎಂದು ಹೇಳುವ ಚರಣ್ “….‘ಹ್ಯಾಪಿ ಹಾರ್ಮೋನುಗಳು’ ನನ್ನಲ್ಲಿ ಮರೆಮಾಡಿರುವ ವಿಶಿಷ್ಟ/ವಿಕ್ಷಿಪ್ತವಾದ ವಿಷಯ/ಘಟನೆಗಳು ನನ್ನಿಂದ ಬರೆಸಿಕೊಳ್ಳುವ ಕಥೆಗಳಿಗೆ ಹಿನ್ನೆಲೆ ಒದಗಿಸಿದರೆ ಸುದ್ದಿಯಾಗಿ ಮರೆಯಾದ ವ್ಯಕ್ತಿಗಳು ಬೇರೆಯದೇ ರೂಪದಲ್ಲಿ ಪಾತ್ರಗಳಾಗಿಬಿಡುತ್ತಾರೆ” ಎಂದು ಕಥೆಗಳು ಹುಟ್ಟಿದ ಬಗೆಯನ್ನು ವಿವರಿಸುತ್ತಾರೆ. ಅದೇನೇ ಇರಲಿ, ಚರಣ್ ಅತ್ಯಾಧುನಿಕ ‘ಈ’ತಂತ್ರಜ್ಞಾನದ ಬಳಕೆಯ ಸನ್ನಿವೇಶಗಳ ಸೃಷ್ಟಿಯ ಮೂಲಕ ತಮ್ಮ ಕಥೆಗಳ ಜಾಲವನ್ನು ಹೆಣೆಯುತ್ತಾರೆ. ಇಂತಹ ಜಾಲದ ಹೆಣಿಗೆಯ ಕಥೆಗಳನ್ನು ಅರ್ಥಮಾಡಿಕೊಳ್ಳಲು ತುಸುವಾದರೂ ತಾಂತ್ರಿಕ ಪದಗಳ ಪರಿಚಯವಿರಬೇಕಾಗುತ್ತದೆ.

    ಭಾಷಾಮಾಧ್ಯಮದ ಒಂದು ಹಳೆಯ ಸಾಹಿತ್ಯ ಪ್ರಕಾರವಾದ ಸಣ್ಣಕತೆಗಳ ಸ್ವರೂಪದ ಬಗೆಗೆ ಪೂರ್ವಸೂರಿಗಳು ಹೇಳಿರುವ ಕೆಲವು ಮಾತುಗಳನ್ನು ಇಲ್ಲಿ ಸ್ಮರಿಸಲಿಚ್ಛಿಸುವೆ. ಸಂಸ್ಕೃತದ ಆಖ್ಯಾಯಿಕೆಯು ಮೂಲತಃ ಕತೆಹೇಳುವ ಪ್ರಕಾರವೆ. ಆದರೆ ಅದು ನಿಜವಾದ ಘಟನೆಯನ್ನು ಯಥಾರ್ಥ ನಿರೂಪಿಸುವ ಗದ್ಯಪ್ರಕಾರ ಎಂಬುದು ಬಲ್ಲವರ ಹೇಳಿಕೆ. ಪಾಶ್ಚಿಮಾತ್ಯರಿಂದ ಬಂದ ಸಣ್ಣಕತೆಯ ಪ್ರಕಾರದ ಬಗ್ಗೆ ಅವರೇ ಹೇಳಿರುವುದನ್ನು ಇಲ್ಲಿ ಉಲ್ಲೇಖಿಸುವುದು ಒಳಿತು. ಎಚ್.ಜಿ.ವೆಲ್ಸ್ ಹೇಳುವ ಪ್ರಕಾರ : ಬದುಕಿನ ಏನನ್ನಾದರೂ ಕಲಾತ್ಮಕವಾಗಿ ಕಥೆ ಕಟ್ಟಿ ಹೇಳುತ್ತಾ ಅದು ಉಜ್ವಲವಾಗುವಂತೆಯೂ, ಚಲನಶೀಲವಾಗಿವಂತೆಯೇ ಮಾಡುವುದು ಸಣ್ಣಕತೆಗಳ ಉದ್ದೇಶ.

    ಸಾಮರ‍್ಸೆಟ್ ಮೌಮ್ ನ ದೃಷ್ಟಿಯಲ್ಲಿ ಒಂದು ಸಣ್ಣಕತೆಗೆ ನಿರ್ದಿಷ್ಟ ವಿನ್ಯಾಸವಿರಬೇಕು. ಪ್ರಾರಂಭ, ಬೆಳವಣಿಗೆ, ಶಿಖರ ಮತ್ತು ನಿಲುಗಡೆಯ ಬಿಂದು ಇರಬೇಕು. ಹ್ಯೂಗ್ ವಾಲ್ ಪೋಲ್‌ನ ಪ್ರಕಾರ, ಸಣ್ಣಕತೆಯೆಂದರೆ ಬದುಕಿನಲ್ಲಿ ನಡೆಯುವ ಸಂಗತಿಗಳು, ಘಟನಾವಳಿಯೊಂದಿಗೆ ಕಥೆ ಕಟ್ಟುವುದು. ಅದರಲ್ಲಿ ಶೀಘ್ರಚಲನೆ, ಅನಿರೀಕ್ಷಿತ ಬೆಳವಣಿಗೆಗಳ ಮೂಲಕ ತೃಪ್ತಿಕರ ಅಂತ್ಯ ಕಾಣಿಸುವುದು. ಆಂಟನ್ ಚೆಕಾವ್ ಎಂಬ ರಷಿಯನ್ ಕಥೆಗಾರನ ದೃಷ್ಟಿಯಲ್ಲಿ, ಸಣ್ಣಕತೆಗೆ ಪ್ರಾರಂಭವಾಗಲಿ, ಒಂದು ಅಂತ್ಯವಾಗಲಿ ಇರಬೇಕಿಲ್ಲ. ಸೂಚ್ಯವಾಗಿ ಬದುಕಿನ ಒಂದು ಭಾಗದ ಪ್ರಾತಿನಿಧಿಕ ಚಿತ್ರ. ಚೆಕಾವ್ ಕತೆಗಳ ಅಂತ್ಯಗಳು ಮುಕ್ತವಾಗಿರುತ್ತವೆ.
    ಒಟ್ಟಾರೆ ಕಥೆಯ ಜೀವಾಳ ಬದುಕಿನ ಘಟನೆ/ಘಟನಾವಳಿಯ ಕೌಶಲ್ಯಪೂರ್ಣ ನಿರೂಪಣೆ. ಅಂತಹ ನಿರೂಪಣೆಯ ಮೂಲಕ ಹೊಸ ಅನುಭವವನ್ನು ಕಟ್ಟಿಕೊಡುವುದು ಎಂದು ಹೇಳಬಹುದು.

    ಆ ಪರಿಪ್ರೇಕ್ಷ್ಯದಲ್ಲಿ ಕಥೆಗಾರ ಚರಣ್ ಅನೇಕ ಕಥೆಗಳು ಯಶಸ್ವಿಯಾಗಿವೆ. ವಾಟ್ಸಪ್ ಬಿಗ್ ಬಾಸ್, ಸಿಸಿಟಿವಿ, ರೆಕ್ಕೆ, ವ್ಯೂಹ ಹಾಗೂ ಸಮ್ಮಿಲನ್ ೨.೦(ನೀಳ್ಗತೆ) ಈ ಗುಂಪಿನಲ್ಲಿ ಬರುತ್ತವೆ. ನ್ಯಾನೋ ಕಥೆಗಳು ಸೊಗಸಾಗಿವೆ. ಸಿಗ್ನಲ್, ಮಹಾನುಭಾವ,ಚಕ್ರವ್ಯೂಹ, ಬಾಸ್ ಮತ್ತು ಸ್ಕ್ರಾಚ್ ಕಾರ್ಡ್ ನ್ಯಾನೊ ಕಥೆಗಳಲ್ಲಿ ಕ್ಷಿಪ್ರದಲ್ಲಿ ಅಡಕವಾಗಿ ಸ್ವಾರಸ್ಯಕರವಾಗಿ ಕಥೆಯು ಅನಾವರಣವಾಗುತ್ತದೆ. ಸ್ಕ್ರಾರ್ಚ್ ಕಾರ್ಡ್ ಕಥೆಯು ಅನಿರೀಕ್ಷಿತ ತಿರುವುಗಳಿಂದ ಕೂಡಿದ್ದು, ಕುತೂಹಲಕಾರಿಯಾಗಿದೆ.

    ‘ವಾಟ್ಸಪ್ ಬಿಗ್ ಬಾಸ್’ ಕಥೆಯ ಪ್ರಾರಂಭವು ಒಂದು ಕಾಲದ ಸಹಪಾಠಿಗಳ ಬಿಗ್ ಬಾಯ್ಸ್ ಅಂಡ್ ಗರ್ಲ್ಸ್ ಗ್ರೂಪ್‌ನ ಚಟುವಟಿಕೆಯೊಂದಿಗೆ ಲಘು ಲಹರಿಯಲ್ಲಿ ಇದ್ದು, ಅಂತ್ಯದಲ್ಲಿ ಗಂಭೀರ ತಿರುವು ಪಡೆಯುತ್ತದೆ. ಮನಕಲಕುವ ಸನ್ನಿವೇಶಕ್ಕೆ ಪರಿಹಾರ ಕಂಡುಕೊಳ್ಳುವ ರೀತಿಯೂ ಹೃದಯಸ್ಪರ್ಶಿಯಾಗಿದೆ. ಸಿಸಿಟಿವಿ ಕಥೆಯ ಲಲಿತಮ್ಮನ ಪಾತ್ರದ ಮೂಲಕ ಒಂದು ಮಾನವೀಯ ಪ್ರಸಂಗವನ್ನು ಓದುಗರ ಕಣ್ಮುಂದೆ ತೋರಿಸುತ್ತದೆ. ಓದುಗನ ಮನೋಭಿತ್ತಿಯಲ್ಲಿ ಒಂದು ಅನಿರೀಕ್ಷಿತ ಬೆಳವಣಿಗೆಯನ್ನು ದಾಖಲಿಸುತ್ತದೆ.

    “ಲಲಿತಮ್ಮನ ಹತ್ತಿರ ಹೇಳಿಕೊಳ್ಳುವಷ್ಟು ಹಣ ಇಲ್ಲದಿದ್ದರೂ ಸಹ ಮನೆ ಅವಳ ಹೆಸರಲ್ಲೇ ಇದ್ದುದರಿಂದ ತಾನೇನು ಮಾಡಿದರೂ ತಾನೇನು ಅಂದರೂ ಸೊಸೆಗೆ ಸಹಿಸಿಕೊಳ್ಳದೆ ವಿಧಿಯಿಲ್ಲ ಅಂತ ಗೊತ್ತಿದ್ದರಿಂದ ಮನೆಮುಂದಿನ ಬೆಂಚನ್ನೇ ಸಿಂಹಾಸನ ಮಾಡಿಕೊಂಡು ರಾಜಮಾತೆ ರೀತಿಯಲ್ಲಿ ಕುಳಿತು ದರ್ಪ ತೋರುತ್ತಿದ್ದಳು.” ಹೀಗಿದ್ದ ಲಲಿತಮ್ಮ ತಮ್ಮ ಮೊಮ್ಮಗನ ಮೋಟಾರ್ ಬೈಕಿನ ಅವಾಂತರದಿಂದ ಇಕ್ಕಟ್ಟಿಗೆ ಸಿಲುಕುತ್ತಾಳೆ. ಅಪಘಾತದ ದೆಸೆಯಿಂದ ಕಾಲು ಮುರಿದುಕೊಂಡ ನಾಯಿಯ ವಿಚಾರಕ್ಕೆ ಲಲಿತಮ್ಮನಲ್ಲಿ ಪಾಪಪ್ರಜ್ಞೆಯು ಕಾಡುತ್ತದೆ. ತನಗೆ ತಾನೇ ಶಿಕ್ಷಿಸಿಕೊಳ್ಳಲು ಪ್ರಾರಂಭಿಸುತ್ತಾಳೆ. ಕೊನೆಯಲ್ಲಿ ಲಲಿತಮ್ಮ ಪಾಪಪ್ರಜ್ಞೆಯಿಂದ ಹೊರಬರಲು ಪೊಲೀಸ್ ಇನ್ಸ್‌ಪೆಕ್ಟರ್ ಒಂದು ಪರಿಹಾರವನ್ನು ಸೂಚಿಸುತ್ತಾನೆ.
    ‘ರೆಕ್ಕೆ’ ಕಥೆಯಲ್ಲಿ ಚರಣ್ ಅವರ ಜೀವನದ ಅವಿಭಾಜ್ಯ ಅಂಗವಾದ ಸೈಕಲ್ ಕೂಡ ಒಂದು ಪಾತ್ರವಾಗಿದೆ.

    ಶಿಕ್ಷಣದಿಂದ ವಂಚಿತಳಾದ ಒಬ್ಬ ಬಾಲಕಿಯ ತಾಯಿ ಮನೆಗೆಲಸದವಳು. ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರ ಮನೆಯಲ್ಲಿ ಆಕೆಯ ಕೆಲಸ. ಅಧಿಕಾರಿಯ ಅನುಕಂಪದ ದೆಸೆಯಿಂದ ಆ ಬಾಲಕಿಗೆ ಶಿಕ್ಷಣದ ಅವಕಾಶವೇನೊ ದೊರೆಯುತ್ತದೆ. ಸರ್ಕಾರದ ಉಚಿತ ಸೈಕಲ್ ಕೂಡ ಅವರು ಕೊಡಿಸುತ್ತಾರೆ. ಬಾಲಕಿಗೆ ಸಿಕ್ಕಿದ್ದು, ರೆಕ್ಕೆ-ಪುಕ್ಕಗಳು ಬಂದಂತಾಗುತ್ತದೆ. ಈ ಕಥೆಯಲ್ಲೂ ಡಿಜಿಟಲ್ ಮಾಧ್ಯಮದ ಒಂದು ಅಂಶವು ಕಥೆಯ ತಿರುವಿಗೆ ಕಾರಣವಾಗುತ್ತದೆ. ವಾಟ್ಸಪ್‌ನಲ್ಲಿ ಅಧಿಕಾರಿಯು ಕಳುಹಿಸಿದ ಸಂದೇಶವು ಕೋಲಾಹಲವನ್ನು ಸೃಷ್ಟಿಸುತ್ತದೆ.

    ‘ವ್ಯೂಹ’ದಲ್ಲಿ ಸ್ಮಾರ್ಟ್‌ಫೋನ್ ಬಳಕೆಯು ಒಂದು ಕುಟುಂಬದಲ್ಲಿ ದೈನಂದಿನ ಜೀವನವನ್ನು ಇಡಿಯಾಗಿ ಆವರಿಸಿಕೊಳ್ಳುವುದನ್ನು ಚಿತ್ರಿಸುತ್ತದೆ. ಈ ವ್ಯೂಹವನ್ನು ಭೇದಿಸಿ ಒಳಹೋಗಬಹುದು. ಹೊರಬರಲು ಸಾಧ್ಯವಿಲ್ಲ! ತಂದೆ-ತಾಯಿ ಹಾಗೂ ಮಗ-ಮಗಳು ಎಲ್ಲರೂ ಸ್ಮಾರ್ಟ್‌ಫೋನ್ ಅವಲಂಬಿತರೇ. ಈ ಸ್ಮಾರ್ಟ್‌ಫೋನ್ ಎಂಬ ಮಾಯಾಜಾಲವನ್ನು ಬಿಟ್ಟಿರಲಾರರು. ಒಂದು ರೀತಿಯಲ್ಲಿ ಎಲ್ಲರೂ ಡಿಜಿಟಲ್ ಅಡಿಕ್ಷನ್‌ಗೆ ಒಳಗಾದವರೇ೧ ಹಾಗಾದರೆ ಬಿಡುಗಡೆ?ಕೌನ್ಸಿಲಿಂಗ್ ಪರಿಹಾರವೆ. ಅಥವಾ ಮನೋಬಲವೆ?
    ‘ಸಮ್ಮಿಲನ ೨.೦’ ಒಂದು ಸುದೀರ್ಘ ನೀಳ್ಗತೆ. ಒಂದು ಸ್ಟಾರ್ಟ್‌ಅಪ್ ಉದ್ಯಮಕ್ಕೆ ಬೇಕಾದ ವಿಭಿನ್ನ ಸಾಧ್ಯತೆಯನ್ನು ಈ ಕಥೆಯು ಹೊಂದಿರುವುದು ಒಂದು ವಿಶೇಷತೆ. ಅನ್ವೇಷಣ ಬುದ್ಧಿಯ ನಾಯಕ ಯಶ್, ಹೊಸ ಆಪ್‌ನ್ನೇ ಸೃಷ್ಟಿಸಿಕೊಡುವ ನಾಯಕಿ ಕನ್ನಿಕಾ. ಭಾರತೀಯ ವಿವಾಹ ಸಂಪ್ರದಾಯಗಳನ್ನು ಸ್ವತಃ ಸಾಕ್ಷಿಯಾಗುವ ಮೂಲಕ ವಿದೇಶಿ ಪ್ರವಾಸಿಗರಿಗೆ ಪರಿಚಯಿಸುವ ಹೊಸ ಉದ್ಯಮದ ಪರಿಕಲ್ಪನೆಯು ಕಥೆಯುದ್ದಕ್ಕೂ ಆವರಿಸಿಕೊಳ್ಳುತ್ತದೆ. ಆದರೆ ಕಥೆಯ ಅಂತ್ಯದ ವಿವಾಹವು ಅಂತಹ ಅವಕಾಶವನ್ನು ಕೊಡುವುದಿಲ್ಲ!
    ‘೧೧೧’ ಎಫ್.ಎಂ.ರೇಡಿಯೋದ ಮೂಲಕ ಅನ್ಯಭಾಷಿಕ ಯುವತಿಗೆ ಕನ್ನಡ ಭಾಷೆ ಕಲಿಸುವ ರೀತಿ, ತಂತ್ರಗಾರಿಕೆ ವಿಶಿಷ್ಟವಾಗಿದೆ. ಆಕೆಗೆ ಕನ್ನಡದ ಎಫ್‌ಎಂ ರೇಡಿಯೋ ಜಾಕಿಯಾಗಲು ಕನ್ನಡ ಕಲಿಸುವ ತಂತ್ರ ಸಫಲವಾಗುತ್ತದೆ. ಕಥೆಯಲ್ಲಿ ಇಂಗ್ಲಿಷ್ ಸಂಭಾಷಣೆಗಳು ಅನಿವಾರ‍್ಯವಾದರೂ ಅದಕ್ಕೆ ಕನ್ನಡದ ಸಮಾನ ಸಂಭಾಷಣೆಗಳನ್ನು ಕಂಸಗಳಲ್ಲಿ ಕೊಡಬಹುದಿತ್ತು.

    ಭ್ರಷ್ಟ ವ್ಯವಸ್ಥೆಯು ಒಬ್ಬ ಪಶುವೈದ್ಯಾಧಿಕಾರಿಯ ಸೇವೆಯನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದನ್ನು ‘ವೆಟ್ಟು’ ಕಥೆಯಲ್ಲಿ ಕಾಣಬಹುದು. ‘ಕುದುರೆಮುಖ ಪುಸ್ತಕ’ ಕಥೆಯಲ್ಲಿ ಜೀವಂತ ಗ್ರಂಥಾಲಯದ ಜೀವಂತ ಪುಸ್ತಕಗಳು ಬದುಕಿನ ಸಂಕೀರ್ಣತೆಯನ್ನು ಕಥೆಗಳ ಮೂಲಕ ಹೇಳುತ್ತವೆ.

    ಆಧುನಿಕ ಡಿಜಿಟಲ್ ತಂತ್ರಜ್ಞಾನದ ಅನೇಕ ಅಂಶಗಳು ಕಥೆಯ ಸಾವಯವ ಭಾಗವಾಗಿ ಬಂದಿವೆ. ಎಲ್ಲೂ ಕೃತ್ರಿಮವೆನಿಸುವುದಿಲ್ಲ. ನಗರ ಜೀವನದಲ್ಲಿ ಇಂತಹದೆಲ್ಲ ಸಹಜವೆನ್ನಿಸುವಂತೆ ಚಿತ್ರಿಸಿದ್ದಾರೆ. ಸೈಕಲ್ಲೇರಿ ಪಯಣಿಸುವಾಗ ಚರಣ್‌ರ ‘ತಲೆಯ ಮೇಲೆ ಹತ್ತಿ ಕುಳಿತ’ ಘಟನೆ, ವ್ಯಕ್ತಿಗಳು ಉತ್ತಮವಾದ ಕಥೆಗಳನ್ನು ‘ಬರೆಸಿವೆ’.


    ಅಪೂರ್ವ ಅಜ್ಜಂಪುರ ಅವರ ಹೆಸರು ಜಿ ಬಿ ಅಪ್ಪಾಜಿ. ರಾಜ್ಯ ಸರ್ಕಾರದ ಕೃಷಿ ಇಲಾಖೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಕಥೆ, ಕವನ , ಸಾಹಿತ್ಯ ವಿಮರ್ಶೆ ಬರೆಯುವುದು ಹವ್ಯಾಸ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!