ಬಳಕೂರು ವಿ ಎಸ್ ನಾಯಕ
ಧ್ಯಾನಾಸಕ್ತರಾಗಿ ಕುಳಿತಿರುವ ಗಾಂಧಿ,ಮಂದಸ್ಮಿತ ನಗುವನ್ನು ಬೀರುವ ಗೌತಮ ಬುದ್ಧ, ರಾಧಾಕೃಷ್ಣ ,ಕುದುರೆಯನೇರಿದ ಶಿವಾಜಿ, ಜಗತ್ತಿಗೆ ಶಾಂತಿಯನ್ನು ಸಾರಿದ ಬಸವಣ್ಣ, ಗುರುಸಾರ್ವಭೌಮ ಶ್ರೀ ರಾಘವೇಂದ್ರ, ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀಬಾಲಗಂಗಾ ರನಾಥ ಸ್ವಾಮೀಜಿ, ಅಂಬೇಡ್ಕರ್ ಶಿಲ್ಪ ಹೀಗೆ ಒಂದೇ ಎರಡೇ ಒಂದು ಕ್ಷಣ ಅಲ್ಲಿ ತೆರಳಿದರೆ ಸಾಕು ಭಾವ ಪರವಶರಾಗಿ ನಿಲ್ಲುವುದಂತು ಸತ್ಯ.

ಇಲ್ಲಿಯ ವಿಭಿನ್ನ ಶಿಲ್ಪಗಳು ನಿಜವಾಗಿಯೂ ಪ್ರತಿ ಸಾಧುಸಂತರು ಮಹಾನ್ ವ್ಯಕ್ತಿಗಳ ಇರುವಿಕೆಯನ್ನು ಸೂಚಿಸುವಂತಿದೆ. ಇಂತಹ ವಿಬಿನ್ನ ಶಿಲ್ಪಕಲಾಕೃತಿಗಳನ್ನು ರಚಿಸಿ ಜನಮಾನಸದಲ್ಲಿ ಹೆಸರು ಮಾಡಿದವರು ಕಲಾವಿದರಾದ ಕೃಷ್ಣ ನಾಯಕ್ . ಇವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಇಡಗುಂಜಿ ಯವರು. ಇವರಿಗೆ ಬಾಲ್ಯದಲ್ಲಿಯೇ ಕಲೆಯ ಬಗ್ಗೆ ಅಪಾರ ಆಸಕ್ತಿ. ಮನೆಯ ಮುಂದಿನ ಶರಾವತಿ ನದಿ,ಅಲ್ಲಿಯ ಬೆಟ್ಟಗುಡ್ಡಗಳೆಲ್ಲ ಇವರಿಗೆ ಪರಿಚಿತ. ಇವೆಲ್ಲವನ್ನೂ ಕಲಾ ವಸ್ತುವನ್ನಾಗಿಸಿ ಕೊಂಡ ಇವರು ತಮ್ಮ ಯೋಚನೆಯಲ್ಲಿ ವಿಭಿನ್ನ ಶಿಲ್ಪಕಲಾಕೃತಿಗಳನ್ನು ತಯಾರಿಸಿ ಇಂದು ನಾಡಿನ ಪ್ರಸಿದ್ಧ ಕಲಾವಿದರ ಸಾಲಿನಲ್ಲಿದ್ದಾರೆ.
ಕಲಾ ಪಯಣ ಆರಂಭವಾಗಿದ್ದು ಹೀಗೆ
ಕಲಾವಿದ ಕೃಷ್ಣ ನಾಯಕ್ ಅವರು ತಂದೆಯಿಂದ ಪ್ರೇರಿತರಾಗಿ ಮೊದಲು ಮರ ಮತ್ತು ಕಲ್ಲಿನ ಕೆತ್ತನೆಯಲ್ಲಿ ಕಾರ್ಯ ಆರಂಭಿಸಿದರು ಕೂಡ ಅವರನ್ನು ಆಕರ್ಷಿಸಿದ್ದು ಶಿಲ್ಪಕಲೆ.ಅವರಿಗೆ ತಾವು ವಿದ್ಯಾರ್ಥಿ ದೆಸೆಯಲ್ಲಿ ನೋಡಿದ ಕುದುರೆ ಲಕ್ಷ್ಮಿ ಗಣೇಶ ಇತ್ಯಾದಿ ಶಿಲ್ಪಗಳು ಆಕರ್ಷಣೆಗೆ ಒಳಗಾಗಿ ಅದೇ ಮಾದರಿಯ ಶಿಲ್ಪಗಳನ್ನು ರಚಿಸಲು ಆರಂಭಿಸಿದರು.
ಕೃಷ್ಣ ನಾಯಕ್ ರವರು ಬೆಂಗಳೂರಿನ ನಾಗರಭಾವಿಯಲ್ಲಿ ಕ್ರಿಶ್ ಪಾರ್ಟ್ ವರ್ಲ್ಡ್ ಎಂಬ ಕಲಾ ಗ್ಯಾಲರಿಯನ್ನು ಆರಂಭಿಸಿ ಇಲ್ಲಿ ತಾವು ರಚಿಸಿದ ಮಹಾನ್ ವ್ಯಕ್ತಿಗಳ ಶಿಲ್ಪಗಳನ್ನು ಅಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಅಲ್ಲಿ ಪ್ರವೇಶಿಸಿದವರಿಗೆ ಯಾವುದೋ ಒಂದು ಕಲಾಲೋಕಕ್ಕೆ ಪ್ರವೇಶಿಸಿದ ಅನುಭವ ಆಗುತ್ತದೆ.
ರಾಜ್ಯದ ಮೂಲೆ ಮೂಲೆಯಲ್ಲಿ ಶಿಲ್ಪಕಲಾಕೃತಿಗಳು
ಶ್ರೀ ಕೃಷ್ಣ ನಾಯಕ್ ರವರು ರಾಜ್ಯದ ವಿಭಿನ್ನ ಭಾಗಗಳಲ್ಲಿ ತಮ್ಮ ಕೈಚಳಕದಲ್ಲಿ ಅನೇಕ ಶಿಲ್ಪಗಳನ್ನು ರಚಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಮುಂಭಾಗ ದಲ್ಲಿರುವ ಬುದ್ಧ ಬಸವಣ್ಣ ಅಂಬೇಡ್ಕರ್ ಶಿಲ್ಪಗಳು, ರವೀಂದ್ರ ಕಲಾಕ್ಷೇತ್ರದ ಮುಂಭಾಗದಲ್ಲಿ ಇರುವ ಬುದ್ಧನ ಶಿಲ್ಪ , ಮಲ್ನಾಡ್ ಎಂಜಿನಿಯರಿಂಗ್ ಕಾಲೇಜು ಮುಂಭಾಗದ ಗಣೇಶನ ಶಿಲ್ಪ, ತುಮಕೂರಿನ ಸಿದ್ದಗಂಗಾ ಮಠದಲ್ಲಿರುವ ಶ್ರೀ ಶಿವಕುಮಾರ ಸ್ವಾಮೀಜಿಯವರ ಶಿಲ್ಪ ಮತ್ತು ಬಾಲಗಂಗಾಧರ ಸ್ವಾಮೀಜಿಯವರ 9 ಅಡಿ ಎತ್ತರದ ಶಿಲ್ಪ ಇವ ಕಲಾ ಪ್ರೌಢಿಮೆಗೆ ಸಾಕ್ಷಿ .
ಸುಮಾರು 25 ವರ್ಷಗಳಿಂದ ಕಲಾ ಸೇವೆ ಮಾಡುತ್ತಿರುವ ಅವರು ಬಹಳಷ್ಟು ಶಿಲ್ಪಗಳನ್ನು ರಚಿಸಿದ್ದಾರೆ. ಯಾವುದೇ ಶಿಲ್ಪಗಳನ್ನು ರಚಿಸುವುದು ಸುಲಭದ ಮಾತಲ್ಲ ಮೊದಲು ಮಣ್ಣಿನಲ್ಲಿ ಕಲಾಕೃತಿಯನ್ನು ಮಾಡಿ ಸಿಲಿಕಾನ್ ಅಲ್ಲಿ ಮಾದರಿ ಮಾಡಿದನಂತರ ಫೈಬರ್ ನಲ್ಲಿ ತಯಾರಿಸಿ ಕಂಚಿನಲ್ಲಿ ಸರಿಯಾಗಿ ಮಾಡಬೇಕಾದರೆ ಸುಮಾರು ಆರರಿಂದ ಎಂಟು ತಿಂಗಳುಗಳ ಪರಿಶ್ರಮದ ಅಗತ್ಯವಿದೆ ಎಂದು ಕೃಷ್ಣ ನಾಯಕ್ ಹೇಳುತ್ತಾರೆ.

ವಿ. ಎಸ್ . ನಾಯಕ
ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.












ಮತ್ತೊಂದು ಉತ್ತಮ ಪರಿಚಯ. ಸೃಜನಶೀಲ ಕಲಾವಂತಿಕೆ ಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಹಾಗೆಯೇ ಕಲಾವಿದರ ಸಾಧನೆಗೆ ಕೂಡ 🙏
[…] : ಕಲಾವಿದ ಕೃಷ್ಣ ನಾಯಕ್ ಅವರ ಶಿಲ್ಪ […]