29.4 C
Karnataka
Monday, May 20, 2024

    ಪ್ರತಿಯೊಂದಕ್ಕೂ, ಪ್ರತಿಯೊಬ್ಬರಿಗೂ ವಿಜಯೇಂದ್ರನನ್ನು ನೋಡು ಎಂದರಾ ಯಡಿಯೂರಪ್ಪ

    Must read

    ಚಿರಾಗ್
    ಮಹಾಭಾರತ ಯುದ್ಧ ಕಾರಣ ಧೃತರಾಷ್ಟçನ ಪುತ್ರ ವ್ಯಾಮೋಹ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪವರು ಒಮ್ಮೆ ಅಧಿಕಾರ ಕಳೆದುಕೊಳ್ಳಲು ಕಾರಣವಾಗಿದ್ದೂ ಪುತ್ರವ್ಯಾಮೋಹವೇ. ಈಗ ಅವರ ವಿರುದ್ಧ ಪಕ್ಷದ ಹಿರಿಯ ಶಾಸಕರು ಅಸಮಾಧಾನಗೊಳ್ಳುವಂತೆಮಾಡಿದ್ದೂ ಪುತ್ರ ವ್ಯಾಮೋಹವೇ.

    ಹಿರಿಯ ಶಾಸಕ ಉಮೇಶ ಕತ್ತಿ ಮನೆಯಲ್ಲಿ ಉತ್ತರ ಕರ್ನಾಟಕ ಭಾಗದ ಬಿಜೆಪಿ ಶಾಸಕರು ಸಭೆಸೇರಿದ್ದು, ಸರಕಾರದ ವಿರುದ್ಧ ಅತೃಪ್ತಿ ಹೊರ ಹಾಕಿದ್ದು ಕೇವಲ ಆರಂಭ ಮಾತ್ರ. ಇಲ್ಲಿಕತ್ತಿಯವರ ಸಚಿವ ಸ್ಥಾನದ ಲಾಬಿ ಅಥವಾ ಸಹೋದರ ರಮೇಶ ಕತ್ತಿ ಅವರಿಗೆ ರಾಜ್ಯಸಭೆ ಟಿಕೆಟ್ ನೀಡಬೇಕೆಂಬ ಬೇಡಿಕೆ ನೆಪ ಮಾತ್ರ. ಅದು ಕತ್ತಿಯವರ ವೈಯಕ್ತಿಕ ಬೇಡಿಕೆ, ಇಲ್ಲವೇಬೆಳಗಾವಿಯ ಕುಟುಂಬ ರಾಜಕಾರಣದ ಭಾಗ. ಆದರೆ ಕತ್ತಿಯವರ ಮನೆಗೆ ಬಸನಗೌಡ ಪಾಟೀಲ ಯತ್ನಾಳ ಸೇರಿ ಇತರ ಶಾಸಕರು ಊಟದ ನೆಪದಲ್ಲಿ ಹೋಗಿದ್ದರಲ್ಲ, ಅದಕ್ಕೆ ಕಾರಣ ಮಾತ್ರಯಡಿಯೂರಪ್ಪನವರ ಪುತ್ರ ವ್ಯಾಮೋಹವೇ.


    ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೇ ಯಡಿಯೂರಪ್ಪ ಅವರ ಪುತ್ರಬಿ.ವೈ.ವಿಜಯೇಂದ್ರ ಅವರಿಗೆ ಟಿಕೆಟ್ ನಿರಾಕರಿಸುವ ಮೂಲಕ ಹೈಕಮಾಂಡ್ ಮೂಗುದಾರಹಾಕಿತ್ತು. ಅಂದರೆ ಯಡಿಯೂರಪ್ಪ ಅವರ ಪುತ್ರ ವ್ಯಾಮೋಹದ ಕುರಿತು ವರಿಷ್ಠರಿಗೆ ಮೊದಲಿನಿಂದಲೂ ಅರಿವಿದೆ. ಕುಟುಂಬವನ್ನು ದೂರ ಇಡಬೇಕು ಎಂಬ ಷರತ್ತಿನ ಮೇಲೆಯೇ ಅವರಿಗೆ
    ಆಪರೇಷನ್ ಕಮಲ ನಡೆಸಲು ಅನುಮತಿ ನೀಡಿದ್ದು. ಆರಂಭದಲ್ಲಿ ಮಾತಿಗೆ ಬದ್ಧರಾಗಿ ನಡೆದುಕೊಂಡ ಯಡಿಯೂರಪ್ಪ ಕೊನೆ ಕೊನೆಗೆ ಪುತ್ರನಿಗೇ ಮಣೆ ಹಾಕುತ್ತಿದ್ದಾರೆ. ಇದು ಸಹಜವಾಗಿಯೇ ಶಾಸಕರ ಕಣ್ಣು ಕೆಂಪಗಾಗಿಸಿದೆ.


    ಹಾಗೆ ನೋಡಿದರೆ ಯತ್ನಾಳರು ಯಡಿಯೂರಪ್ಪನವರ ಕಟ್ಟಾ ಅಭಿಮಾನಿ. ಅಂತಹವರೇ ಈಗ ಸಿಡಿದುಬೀಳುತ್ತಾರೆ ಎಂದರೆ ಕಾರಣ ಇರಲೇಬೇಕಲ್ಲ. ಕ್ಷೇತ್ರಕ್ಕೆ ಸಂಬಧಿಸಿದ ಕೆಲಸಕ್ಕೆ ಹೋದಾಗ ಯಡಿಯೂರಪ್ಪನವರು, ’ವಿಜಯೇಂದ್ರನನ್ನು ನೋಡು’ ಎಂದಿದ್ದಾರೆ. ವಾಜಪೇಯಿ ಸಂಪುಟದಲ್ಲೇ
    ಸಚಿವರಾಗಿದ್ದ ಯತ್ನಾಳರನ್ನು ಅದು ಕೆರಳಿಸಿದೆ. ಬಹುತೇಕ ಶಾಸಕರಿಗೂ ಇದೇ
    ಅನುಭವವಾಗಿದೆ. ಇನ್ನು ಕೆಲವು ಸಚಿವರು ಶಾಸಕರನ್ನು ವಿಶ್ವಾಸಕ್ಕೆ
    ತೆಗೆದುಕೊಳ್ಳುತ್ತಿಲ್ಲ ಎನ್ನುವ ಆರೋಪಗಳೂ ಇವೆ.

    ಇದೆಲ್ಲದರ ಮಧ್ಯೆ ತಮ್ಮ ಆಪ್ತ, ದೂರದ ಸಂಬಂಧಿ ಎನ್.ಆರ್.ಸಂತೋಷ್ ಅವರನ್ನು ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಿರುವುದು ಬಹಳಷ್ಟು ಶಾಸಕರಿಗೆ ಆಕ್ರೋಶ ಮೂಡಿಸಿದೆ.ಆಪರೇಷನ್ ಕಮಲದಲ್ಲಿ ಸಂತೋಷ್ ಮುಖ್ಯ ಪಾತ್ರ ವಹಿಸಿದ್ದರು ಎನ್ನುವುದು ನಿಜ.
    ಯಡಿಯೂರಪ್ಪ ಆಪ್ತ ಎಂಬ ಕಾರಣಕ್ಕೆ ಅವರ ಶ್ರಮಕ್ಕೆ ಗೌರವ ಕೊಡದಿರುವುದೂ ಸರಿಯಲ್ಲ.ಆದರೆ ಪಕ್ಷದ ಹಿರಿಯರನ್ನು ಕಡೆಗಣಿಸಿ, ಶಾಸಕರನ್ನು ಪಕ್ಕಕ್ಕಿಟ್ಟು ಇಂತಹ ತೀರ್ಮಾನ ಕೈಗೊಳ್ಳುವುದು ಸರಿಯಲ್ಲ ಎನ್ನುವುದು ಹಲವರ ಭಾವನೆ.ವಿಜಯೇಂದ್ರ ಅವರನ್ನು ವಿಧಾನಪರಿಷತ್ತಿಗೆ ಮಾಡುವ ವಿಚಾರವೂ ಹರಿದಾಡಿದೆ. ಅದೂ ಸಹ
    ಪಕ್ಷದಲ್ಲಿ ಅಸಮಾಧಾನದ ಅಲೆ ಎಬ್ಬಿಸಿದೆ.

    ‘ಹಿರಿಯ ಮಗ ರಾಘವೇಂದ್ರನಿಗೆ ನೆಲೆ ಕಾಣಿಸಿದ್ದಾಗಿದೆ, ಕಿರಿಯ ಮಗನಿಗೂ ವ್ಯವಸ್ಥೆ ಮಾಡಿ’ ಎಂದು ಕುಟುಂಬ ಸದಸ್ಯರು,ವಿಶೇಷವಾಗಿ ಹೆಣ್ಣು ಮಕ್ಕಳು ಒತ್ತಡ ಹೇರುತ್ತಿದ್ದಾರೆ ಎನ್ನುವ ವದಂತಿಯೂ ಇದೆ.ಯಡಿಯೂರಪ್ಪನವರು ಶ್ರಮಜೀವಿ ಎನ್ನುವುದರಲ್ಲಿ ಎರಡು ಮಾತೇ ಇಲ್ಲ.

    ಇಳಿವಯಸ್ಸಿನಲ್ಲಿಯೂ ಅವರ ಕ್ರಿಯಾಶೀಲತೆಯನ್ನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಪ್ರತಿಪಕ್ಷಗಳ ನಾಯಕರೂ ಮೆಚ್ಚುತ್ತಾರೆ. ಬಹುಶಃ ವಯೋಸಹಜ ಬಳಲಿಕೆಯಿಂದಲೂಯಡಿಯೂರಪ್ಪ ಈಗ ಅಧಿಕಾರ ನಡೆಸಲು ಕುಟುಂಬದ ಸದಸ್ಯರನ್ನು, ವಿಶೇಷವಾಗಿ ವಿಜಯೇಂದ್ರ ಅವರನ್ನು ನೆಚ್ಚಿಕೊಂಡಿಕ್ಕೆ ಸಾಕು. ಆದರೆ ಅದಕ್ಕೂ ಒಂದು ಮಿತಿ ಎನ್ನುವುದು ಇರಬೇಕು.


    ಪ್ರತಿಯೊಂದಕ್ಕೂ, ಪ್ರತಿಯೊಬ್ಬರಿಗೂ ‘ವಿಜಯೇಂದ್ರನನ್ನು ನೋಡು’ ಎಂದರೆ ಏನಾಗುತ್ತದೆ? ಸದ್ಯಕ್ಕೆ ಕೊರೊನಾ ಅವರಿಗೆ ರಕ್ಷಾ ಕವಚವಾಗಿದೆ, ಆದರೆ ಅದೇ ಎಲ್ಲಾ ಸಮಯದಲ್ಲಿಯೂನೆರವಿಗೆ ಬರುವುದಿಲ್ಲವಲ್ಲ?

    ಶ್ರೀವತ್ಸ ನಾಡಿಗ್
    ಶ್ರೀವತ್ಸ ನಾಡಿಗ್https://kannadapress.com/
    ಶ್ರೀವತ್ಸ ನಾಡಿಗ್ ಕನ್ನಡಪ್ರೆಸ್.ಕಾಮ್ ನ ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ
    spot_img

    More articles

    1 COMMENT

    1. ಸುದ್ದಿಗಳು ಆಕರ್ಷಕವಾಗಿವೆ. ಸಾಧ್ಯವಾದಷ್ಟೂ ಸತ್ಯಕ್ಕೆ ಹತ್ತಿರ ವಿರುವಂತೆ ನೋಡಿಕೊಳ್ಳಿ. ಶುಭವಾಗಲಿ.
      ವೆಂಕಟನಾರಾಯಣ

    LEAVE A REPLY

    Please enter your comment!
    Please enter your name here

    Latest article

    error: Content is protected !!