30.2 C
Karnataka
Saturday, May 23, 2026
    Home Blog Page 124

    ಪದವಿ, ಡಿಪ್ಲೊಮಾ, ಎಂಜಿನಿಯರಿಂಗ್‌ ಕಾಲೇಜುಗಳ ಉಪನ್ಯಾಸಕರ ವರ್ಗಕ್ಕೆ ಕೌನ್ಸೆಲಿಂಗ್; ಹೊಸ ಮಾರ್ಗಸೂಚಿ ಪ್ರಕಟಿಸಿದ ಸರ್ಕಾರ

    ಸರ್ಕಾರಿ ಪದವಿ, ಎಂಜಿನಿಯರಿಂಗ್‌ ಮತ್ತು ಡಿಪ್ಲೊಮೋ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆ ಕೌನ್ಸೆಲಿಂಗ್ ಮೂಲಕ ನಡೆಯಲಿದ್ದು, ಒಟ್ಟು ಬೋಧನಾ ಸಿಬ್ಬಂದಿಯ ಪೈಕಿ ಶೇ.15ರಷ್ಟು ಮೀರದಂತೆ ವರ್ಗಾವಣೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

    ಈ ಬಗ್ಗೆ ಪದವಿ ಹಾಗೂ ತಾಂತ್ರಿಕ ಕಾಲೇಜುಗಳ ಬೋಧನಾ ಸಿಬ್ಬಂದಿ ವರ್ಗಕ್ಕೆ ಹೊಸ ನಿಯಮಾವಳಿ ರೂಪಿಸಿ ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಒಂದೇ ಕಡೆ 4 ವರ್ಷ ಕೆಲಸ ಮಾಡಿರುವ ಬೋಧಕರು ವರ್ಗಾವಣೆಗೆ ಅರ್ಹರಾಗಿದ್ದು, ಈ ಅಂಶವನ್ನು ಆಧಾರವಾಗಿಟ್ಟುಕೊಂಡು ವರ್ಗಾವಣೆ ಪ್ರಮಾಣವನ್ನು ನಿಗದಿಪಡಿಸಲಾಗಿದೆ. ಪದವಿ ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವ ಬೋಧಕರಿಗೆ ಇದು ಅನ್ವಯವಾಗುತ್ತದೆ ಎಂದು ಎಂದು ಅವರು ತಿಳಿಸಿದ್ದಾರೆ.

    ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ವರ್ಗಾವಣೆಗೆ ಚಾಲನೆ ಸಿಗಲಿದೆ. ಆದಷ್ಟು ಬೇಗ ಕೌನ್ಸೆಲಿಂಗ್ ದಿನಾಂಕಗಳನ್ನು ಪ್ರಕಟಿಸಲಾಗುವುದು. ಎಲ್ಲರಿಗೂ ಇಷ್ಟವಾಗುವ ಹಾಗೆ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ ಎಂದು ಅವರು ವಿವರಿಸಿದರು.

    ಐದು ವಲಯ:ರಾಜ್ಯವನ್ನು ಎ, ಬಿ, ಸಿ, ಡಿ ಮತ್ತು ಇ ವಲಯ ಎಂದು ಐದು ವಿಭಾಗ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯನ್ನು ‘ಎ’ ವಲಯವೆಂದು; ಬಿಡಿಎ ಮತ್ತು ಬೆಂಗಳೂರು ಹೊರತುಪಡಿಸಿದ ಇತರ ಮಹಾನಗರ ಪಾಲಿಕೆಗಳ ವ್ಯಾಪ್ತಿಯನ್ನು ‘ಬಿ’ ವಲಯವೆಂದು; ಜಿಲ್ಲಾ ಕೇಂದ್ರ ಹಾಗೂ ನಗರಸಭೆಗಳ ವ್ಯಾಪ್ತಿಯನ್ನು ‘ಸಿ’ ವಲಯ; ತಾಲ್ಲೂಕು ಕೇಂದ್ರ ಹಾಗೂ ಪಟ್ಟಣ ಪಂಚಾಯತಿಗಳನ್ನು ‘ಡಿ’ ವಲಯ ಹಾಗೂ ಮೇಲಿನ ಎಲ್ಲ ವಲಯಗಳ ವ್ಯಾಪ್ತಿಯನ್ನು ಹೊರತುಪಡಿಸಿದ ಪ್ರದೇಶಗಳಲ್ಲಿನ ಕಾಲೇಜುಗಳನ್ನು ‘ಇ’ ವಲಯಗಳೆಂದು ವಿಂಗಡಿಸಲಾಗಿದೆ. ಯಾರು ಯಾವ ವಲಯದಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸುತ್ತಾರೊ ಅವರು ಬೇರೊಂದು ವಲಯಕ್ಕೆ ವರ್ಗವಾಗಲು ಅರ್ಹತೆ ಪಡೆಯುತ್ತಾರೆ ಎಂದು ಉಪ ಮುಖ್ಯಮಂತ್ರಿ ವಿವರಿಸಿದರು.

    ಶೇ.15ರಷ್ಟು ವರ್ಗಾವಣೆ ವಿವರ :ರಾಜ್ಯದ ಐದೂ ಶೈಕ್ಷಣಿಕ ವಿಭಾಗಗಳ ವ್ಯಾಪ್ತಿಯ ಪದವಿ, ಡಿಪ್ಲೊಮೋ ಮತ್ತು ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಒಟ್ಟು ಬೋಧನಾ ಸಿಬ್ಬಂದಿಯ ಪೈಕಿ ಶೇ.9ರಷ್ಟು ಬೋಧಕರನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಕಡ್ಡಾಯವಾಗಿ ವರ್ಗ ಮಾಡಲಾಗುವುದು. ಪತಿ-ಪತ್ನಿಯರ ಪ್ರಕರಣಗಳಲ್ಲಿ ಶೇ.3ರಷ್ಟು ಸಿಬ್ಬಂದಿಯನ್ನು ಮಾತ್ರ ವರ್ಗ ಮಾಡಲಾಗುವುದು. ವಿಧವೆಯರು, ಡಿವೋರ್ಸ್‌ ಪಡೆದ ಬೋಧಕಿಯರು, ವಿಕಲಚೇತನರ ಹೊಣೆಗಾರಿಕೆ ಇರುವವರು, ಸೇನೆ ಅಥವಾ ಅರೆ ಸೇನಾಪಡೆಯಲ್ಲಿ ಕೆಲಸ ಮಾಡುತ್ತಿರುವವರ ಪ್ರಕರಣಗಳಲ್ಲಿ ಶೇ.1ರಷ್ಟು, ಅಂಗವೈಕಲ್ಯ ಹೊಂದಿರುವ ವ್ಯಕ್ತಿಯ ಶೇ.1ರಷ್ಟು ಹಾಗೂ ಗಂಭೀರ ಆರೋಗ್ಯ ಸಮಸ್ಯೆಗಳು ಇರುವವರ ಪೈಕಿ ಶೇ.1ರಷ್ಟು ಬೋಧಕರನ್ನು ವರ್ಗಾವಣೆಗೆ ಪರಿಗಣಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಮಾಹಿತಿ ನೀಡಿದರು.

    ವರ್ಗಾವಣೆಯಲ್ಲಿ ಪಾರದರ್ಶಕತೆ:ವರ್ಗಾವಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಸರಕಾರದ ಮುಖ್ಯ ಉದ್ದೇಶವಾಗಿದೆ. 4 ವರ್ಷಗಳಿಗೂ ಹೆಚ್ಚು ಕಾಲದಿಂದ ಒಂದೇ ಕಡೆ ಠಿಕಾಣೆ ಹೂಡಿರುವ ಬೋಧನಾ ಸಿಬ್ಬಂದಿಯನ್ನು ಮುಲಾಜಿಲ್ಲದೆ ವರ್ಗ ಮಾಡಲಾಗುವುದು. ಇದಕ್ಕೆ ಸಂಬಂಧಿತ ಎಲ್ಲ ನಿಯಮಗಳನ್ನು ಪ್ರಕಟಿಸಲಾಗಿದೆ ಎಂದಿದ್ದಾರೆ.

    ಈ ಹಿಂದೆ ವರ್ಗಾವಣೆ ಎಂದರೆ ದೊಡ್ಡ ಪ್ರಹಸನದಂತೆ ನಡೆಯುತ್ತಿತ್ತು. ಆದರೆ, ಇಡೀ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸುಧಾರಣೆಗೊಳಪಡಿಸಿ ಎಲ್ಲವೂ ಆನ್‌ಲೈನ್‌ ಮೂಲಕವೇ ನಡೆಸಲಾಗುತ್ತಿದೆ. ವೈಜ್ಞಾನಿಕವಾಗಿ ಎಲ್ಲವೂ ನಡೆಯಲಿದೆ. ಉಪನ್ಯಾಸಕರು ಇನ್ನು ಮುಂದೆ ಸಚಿವರು, ಅಧಿಕಾರಿಗಳ ಕಚೇರಿಗಳ ಸುತ್ತ ಅಲೆಯುವ ಅವ್ಯವಸ್ಥೆ ಇರುವುದಿಲ್ಲ. ಕೌನ್ಸೆಲಿಂಗ್‌ ಮೂಲಕವೇ ವರ್ಗಾವಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.

    ಉನ್ನತ ಶಿಕ್ಷಣ ಇಲಾಖೆಯಿಂದ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆ

    ರಾಜ್ಯ ಉನ್ನತ ಶಿಕ್ಷಣ ಪರಿಷತ್ ನೀಡಿದ ವರದಿಯನ್ನು ಪರಿಶೀಲಿಸಿ ಅದರ ಅನುಸಾರ 2020-21 ಮತ್ತು 2021-22 ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯನ್ನು ಉನ್ನತ ಶಿಕ್ಷಣ ಇಲಾಖೆ ಹೊರಡಿಸಿದೆ.

    ಈ ಶೈಕ್ಷಣಿಕ ವೇಳಾಪಟ್ಟಿಯನ್ನು ರಾಜ್ಯದ ಎಲ್ಲಾ ವಿವಿಗಳು, ಕಾಲೇಜು ಶಿಕ್ಷಣ/ತಾಂತ್ರಿಕ ಶಿಕ್ಷಣ ಕಾಲೇಜುಗಳು ಕೂಡಲೇ ಕಡ್ಡಾಯವಾಗಿ ಜಾರಿಗೊಳಿಸುವಂತೆ ಸರ್ಕಾರದ ಆದೇಶ ಸಂಖ್ಯೆ ಇಡಿ/ 2/ವಿವಿಧ/ರಾಮು/2021, ಬೆಂಗಳೂರು ದಿನಾಂಕ 29-01-2021ರಲ್ಲಿ ತಿಳಿಸಲಾಗಿದೆ.

    ಈ ಆದೇಶದ ಪ್ರತಿ ಮತ್ತು ಶೈಕ್ಷಣಿಕ ವೇಳಾಪಟ್ಟಿಯ ಅನುಬಂಧಗಳನ್ನು ಇಲ್ಲಿ ನೀಡಲಾಗಿದೆ.

    ಬೆಂಗಳೂರಿನಲ್ಲಿ ಮಹಾತ್ಮ ಗಾಂಧೀಜಿಯವರ ಮೊದಲ ಹೆಜ್ಜೆ

    ಪ್ರತಿವರ್ಷ ಜನವರಿ ಮೂವತ್ತರಂದು ಹುತಾತ್ಮರ ದಿನವನ್ನು ಆಚರಿಸಲಾಗುತ್ತದೆ. ರಾಷ್ಟ್ರಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಎಲ್ಲಾ ಮಹನೀಯರನ್ನು ಗೌರವಿಸುವ ದಿನ. ಈ ಹುತಾತ್ಮರ ದಿನವನ್ನು ಸರ್ವೋದಯ ದಿನ ಎಂದು ಸಹ ಕರೆಯಲ್ಪಡುತ್ತದೆ. ಮಹಾತ್ಮ ಗಾಂಧೀಜಿಯವರು 1948 ರ ಜನವರಿ ಮೂವತ್ತರಂದು ನಾಥುರಾಮ್ ಗೋಡ್ಸೆಯವರ ಗುಂಡಿಗೆ ಬಲಿಯಾಗಿ ಇಹ ಲೋಕವನ್ನು ತ್ಯಜಿಸಿ ಸ್ವರ್ಗಸ್ಥರಾದ ದಿನ. ಈ ದಿನದಂದು ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು, ರಕ್ಷಣಾಸಚಿವರು ಹಾಗೂ ಮೂರು ಸೇನಾ ಮುಖ್ಯಸ್ಥರುಗಳು, ಅಲಂಕೃತಗೊಂಡ ಸಮಾಧಿ ಸ್ಥಳವಾದ ರಾಜಘಾಟ್‍ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಎರಡು ನಿಮಿಷಗಳ ಮೌನವನ್ನು ದೇಶಾದ್ಯಂತ ಬೆಳಿಗ್ಗೆ 11 ಗಂಟೆಗೆ ಆಚರಿಸಲಾಗುತ್ತದೆ. ಸರ್ವ ಧರ್ಮಗಳ ಪ್ರಾರ್ಥನೆಗಳನ್ನು ನಡೆಸಲಾಗುತ್ತದೆ ಮತ್ತು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಗೌರವವನ್ನು ಸಲ್ಲಿಸಲಾಗುತ್ತದೆ.

    ಸರ್ವೋದಯ ಸಂಸ್ಕೃತದ ಪದ. ಸರ್ವೋದಯ ಎಂದರೆ “Universal uplift” ( ಸಾರ್ವತ್ರಿಕ ಉನ್ನತಿ) ಅಥವಾ “Progress for all” ( ಎಲ್ಲರ ಪ್ರಗತಿ ). ಈ ಪದವನ್ನು ಮೋಹನ್ ದಾಸ್ ಗಾಂಧೀಜಿಯವರು 1908 ರಲ್ಲಿ ಜಾನ್ ರಸ್ಕಿನ್‍ ರ ರಾಜಕೀಯ ಆರ್ಥಿಕತೆಯನ್ನು ಕುರಿತ “unto this last” ಅನುವಾದದ ಶೀರ್ಷಿಕೆಯಾಗಿ ಬಳಸಿದರು ಹಾಗೂ ಅದರ ಪರಿಕಲ್ಪನೆಯನ್ನು ಜೀವನದಲ್ಲಿ ಮುಂದುವರಿಸಿದರು.

    ಮಹಾತ್ಮ ಗಾಂಧೀಜಿಯವರು ಬೆಂಗಳೂರಿಗೆ ಮೊಟ್ಟ ಮೊದಲ ಹೆಜ್ಜೆಯನ್ನಿಟ್ಟ, ಅವರ ಪಾದಗಳು ಮೊಟ್ಟ ಮೊದಲಿಗೆ ಬೆಂಗಳೂರಿನಲ್ಲಿ ಭೂ ಸ್ಪರ್ಶವಾದ ಸಂದರ್ಭ, ನಾಗರಿಕರಲ್ಲಿ ಅವರನ್ನು ಬರಮಾಡಿಕೊಳ್ಳಲು ಇದ್ದಂತಹ ಉತ್ಸಾಹ, ಆನಂದ ಹಾಗೂ ಕಾತುರ ಇವುಗಳ ಬಗ್ಗೆ ಮೆಲಕು ಹಾಕಿಕೊಳ್ಳುತ್ತಾ, ಓದುಗರಲ್ಲಿ ಹಂಚಿಕೊಳ್ಳುವ ಅಭಿಲಾಷೆಯ ಫಲವೇ ಈ ಲೇಖನ.

    ಮಹಾತ್ಮ ಗಾಂಧೀಜಿ ಮತ್ತು ಅವರ ವಿಚಾರಧಾರೆಗಳೆಂದರೆ, ಇಂದಿನ ಯುವಕರಲ್ಲಿ ಅಸಡ್ಡೆ ಮನೋಭಾವ ಎಂಬ ಅಭಿಪ್ರಾಯ ಹಿರಿಯರಲ್ಲಿ ಮೂಡುವುದು ಸಾಮಾನ್ಯ ಸಂಗತಿ. ಆದರೆ ನನ್ನ  ನಲವತ್ತೈದು ವರ್ಷಗಳ ಶೈಕ್ಷಣಿಕ ಸೇವೆಯಲ್ಲಿ ಕಂಡ ವಾಸ್ತವಾಂಶವೇ ವಿಭಿನ್ನ. ಪ್ರಾಥಮಿಕ ಶಾಲೆಯ ಮಕ್ಕಳಿಂದ ಕಾಲೇಜಿನ ವಿದ್ಯಾರ್ಥಿಗಳವರೆಗೆ ಗಾಂಧೀಜಿಯವರನ್ನು ಕುರಿತು ಉಪನ್ಯಾಸಗಳನ್ನು ಮಾಡಿದ್ದೇನೆ. ಅನೇಕ ವಿದ್ವಾಂಸರು, ಗಾಂಧೀಜಿಯವರ ಅನುಯಾಯಿಗಳು ನೀಡಿದ ಭಾಷಣಗಳನ್ನು ಕೇಳಿದ್ದೇನೆ. ನಾನು ಕಂಡಿದ್ದು, ಇಂದಿನ ವಿದ್ಯಾರ್ಥಿಗಳಿಗೆ ಗಾಂಧೀಜಿಯವರ ವ್ಯಕ್ತಿತ್ವ, ತಪ್ಪುಗಳನ್ನು ಮಾಡಿ ಬುದ್ಧಿಕಲಿತ ಸಂದರ್ಭಗಳು ಹಾಗೂ ಅವರ ತತ್ವಗಳನ್ನು ಮನಕಲಕುವಂತೆ ಹೇಳಿದ ಪಕ್ಷದಲ್ಲಿ, ಅತೀವ ಆಸಕ್ತಿಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಬಹುದು ಮತ್ತು ಯುವಕರ ನಡವಳಿಕೆಗಳಲ್ಲಿ ಅದ್ಬುತವಾದಂತಹ ಬದಲಾವಣೆಗಳನ್ನು ತರಬಹುದೆಂಬ ಸತ್ಯಾಂಶ.

    ಅಮೆರಿಕಾದ ಕಪ್ಪು ಜನಾಂಗದ ನಾಯಕ ಮಾರ್ಟಿನ್ ಲೂಥರ್ ಕಿಂಗ್ ಹೇಳಿರುವಂತೆ, “ಗಾಂಧೀಜಿ ಜಗತ್ತಿಗೆ ಅನಿವಾರ್ಯ, ಮರೆತರೆ ವಿಶ್ವದ ನಾಶ”. ಈ ನುಡಿ ಗಾಂಧೀಜಿಯವರ ವ್ಯಕ್ತಿತ್ವ ಮತ್ತು ವಿಚಾರಗಳು ಭೂಮಿಯ ಮೇಲೆ ಮನುಕುಲ ಇರುವ ವರೆಗೂ ಪ್ರಸ್ತುತ ಮತ್ತು ಅನಿವಾರ್ಯ ಎಂಬ ಅಂಶವನ್ನು ವಿದ್ಯಾರ್ಥಿಗಳ ಮನಸ್ಸಿನಲ್ಲಿ ನಾಟುವಂತೆ ಮಾಡಿ ಉತ್ತಮವಾದಂತಹ ಪರಿಣಾಮವನ್ನುಂಟು ಮಾಡಬಹುದು. ಯಾವ ರೀತಿಯಲ್ಲಿ ಯಶಸ್ವಿ ಕಾಣಬಹುದು, ಎಂಬುದು ಹಿರಿಯರಿಗೆ ಬಿಟ್ಟ ವಿಷಯ.

    ಗಾಂಧೀಜಿ ಬೆಂಗಳೂರಿಗೆ ಬಂದ ಆ ದಿನ

    ಈ ದಿಸೆಯಲ್ಲಿ, ಯುವಕರಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಹಾಗೂ ನಾಗರಿಕರಲ್ಲಿ ಕುತೂಹಲವನ್ನು ಕೆರಳಿಸುವ ಒಂದು ವಿಷಯವನ್ನು ಈ ಮೂಲಕ ತಿಳಿಸಲು ಬಯಸುತ್ತೇನೆ. ಮೇ 8, 1915 ರಂದು ಗಾಂಧೀಜಿಯವರು ಮೊಟ್ಟ ಮೊದಲಿಗೆ ಬೆಂಗಳೂರಿಗೆ ಬಂದದ್ದು, ಅವರ ಪಾದಗಳು ಮೊಟ್ಟ ಮೊದಲಿಗೆ ಬೆಂಗಳೂರಿನಲ್ಲಿ ಭೂ ಸ್ಪರ್ಶವಾದದ್ದು. ನಮ್ಮ ಹೆಮ್ಮೆಯ ಕರ್ನಾಟಕಕ್ಕೆ, ಗಾಂಧೀಜಿಯವರು ಪ್ರವೇಶ ಮಾಡಿ ಒಂದು ನೂರ ಐದು ವರ್ಷಗಳಾಗಿವೆ. ತದ ನಂತರ, ಗಾಂಧೀಜಿಯವರು 1915 ರಿಂದ 1937 ರ ನಡುವೆ ಕರ್ನಾಟಕಕ್ಕೆ ಹದಿನಾರು ಬಾರಿ ಬಂದಿದ್ದು ನೂರ ಎಂಬತ್ತಾರು ದಿನಗಳನ್ನು ಕಳೆದಿದ್ದಾರೆ. ಬೆಂಗಳೂರಿಗೆ ಹನ್ನೆರಡು ಬಾರಿ ಬಂದಿದ್ದು ಎಂಬತ್ತೊಂದು ದಿನಗಳ ಕಾಲ ವಾಸಿಸಿದ್ದಾರೆ.

    ಗೋಪಾಲ ಕೃಷ್ಣ ಗೋಖಲೆಯವರು ಗಾಂಧೀಜಿಯವರ ರಾಜಕೀಯ ಶಿಕ್ಷಕರು / ಗುರುಗಳು. ಈ ಮಾತನ್ನು ಸ್ವತಃ ಗಾಂಧೀಜಿಯವರೇ ಹೇಳಿದ್ದಾರೆ. ಇನ್ನೂ ಮುಂದುವರೆದು ಹೇಳುವುದಾದರೆ “ನನ್ನ ಬಾಳಿಗೆ ಉತ್ತೇಜನ ಕೊಟ್ಟವರು ಅವರೇ, ಇಂದಿಗೂ ಅವರ ಪ್ರೋತ್ಸಾಹ, ಉತ್ತೇಜನಗಳೇ ನನಗೆ ದಾರಿದೀಪ” ಎಂದು ಗಾಂಧೀಜಿಯವರು ನುಡಿದಿದ್ದಾರೆ. ಗೋಖಲೆಯವರ ಸಲಹೆಯ ಮೇರೆಗೆ ಭಾರತವನ್ನು ತಿಳಿಯಲು, ಗಾಂಧೀಜಿಯವರು ಭಾರತ ದೇಶದ ಪ್ರವಾಸವನ್ನು ಮಾಡಿದರು ಮತ್ತು ಪ್ರವಾಸದ ಬಗ್ಗೆ ಬಹಳಷ್ಟು ಕಾಳಜಿ, ಆಸಕ್ತಿಯನ್ನು ತೋರಿಸಿ ಅಧ್ಯಯನ ಮಾಡಿದರು.

    ದಕ್ಷಿಣ ಆಫ್ರಿಕದಲ್ಲಿ ದಿಗ್ವಿಜಯವನ್ನು ಸಾಧಿಸಿ, 1914 ರಲ್ಲಿ ತಾಯ್ನಾಡಿಗೆ ಮರಳಿದ ಕರ್ಮವೀರ ಗಾಂಧೀಜಿಯವರನ್ನು ಸ್ವಾಗತಿಸಲು ಇಡೀ ಬೆಂಗಳೂರು ನಗರ ಬಹಳ ಉತ್ಸಾಹದಿಂದ ಶೃಂಗಾರಗೊಂಡಿತ್ತು. ಗಾಂಧೀಜಿಯವರು ಮತ್ತು ಅವರ ಪತ್ನಿ ಕಸ್ತೂರಿ ಬಾ ರವರು ಮದರಾಸಿನಿಂದ ರೈಲಿನಲ್ಲಿ ಪ್ರಯಾಣಿಸಿ ಬೆಂಗಳೂರನ್ನು ತಲುಪಿದರು. ಕರ್ನಾಟಕದ ಹಿರಿಯ ಸಾಹಿತಿ ಡಿ. ವಿ ಗುಂಡಪ್ಪನವರು, ಅಂದಿನ ಮದರಾಸಿನ ಜಿ. ಎ ನಟೇಶನ್ ರವರ ಸಹಾಯವನ್ನು ಪಡೆದು, ಗಾಂಧೀಜಿಯವರು ಬೆಂಗಳೂರಿಗೆ ಪ್ರವಾಸ ಕೈಗೊಳ‍್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ದಕ್ಷಿಣ ಆಫ್ರಿಕಾದ ಸತ್ಯಾಗ್ರಹಕ್ಕೆ ನಿಧಿ ಸಂಗ್ರಹಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಕಾರಣದಿಂದಲೋ ಏನೋ, ಕನ್ನಡಿಗರಿಂದ ಬೆಂಗಳೂರಿಗೆ ಬರಬೇಕೆಂಬ ಆಹ್ವಾನವು ಗಾಂಧೀಜಿಯವರನ್ನು ತಲುಪಿದಾಗ ಸಂತೋಷದಿಂದ ಆಹ್ವಾನವನ್ನು ಮನ್ನಿಸಿದರು. ನಮ್ಮ ಕರ್ನಾಟಕ ಜನತೆಯ ಅದೃಷ್ಟ. ಮೇ 08, 1915 ರಂದು, ಗಾಂಧೀಜಿಯವರು ಪತ್ನಿ ಸಮೇತರಾಗಿ ಬೆಂಗಳೂರಿಗೆ ರೈಲಿನಲ್ಲಿ ಬಂದಿಳಿದರು. ಗಾಂಧೀಜಿಯವರು ಬಹಳ ಸರಳ ವ್ಯಕ್ತಿ. ಅದಕ್ಕೆ ನಿದರ್ಶನವೆಂಬಂತೆ, ಕೈಯಲ್ಲಿ ಒಂದು ಬಟ್ಟೆಗಳ ಗಂಟು ಮತ್ತು ನೀರಿನ ಬಾಟಲ್ ಹಿಡಿದು, ಅರ್ಧ ತೋಳಿನ ಷರ್ಟ್, ಪಂಚೆ ಮತ್ತು ಗುಜರಾತಿನ ಟರ್ಬನ್ ಧರಿಸಿದ್ದರು. ಅವರ ಪತ್ನಿಯು ಸಹ, ಬಹಳ ಸರಳವಾಗಿ ಕೆಂಪು ಹಂಚಿರುವ ಬಿಳಿ ಬಣ್ಣದ ಸೀರೆಯನ್ನು ಉಟ್ಟಿದ್ದರು.

    ಗಾಂಧೀಜಿಯವರನ್ನು ಕಾಣಲು ರೈಲ್ವೆ ನಿಲ್ದಾಣದ ಬಳಿ ಸಾವಿರಾರು ಜನ ಸೇರಿದ್ದರು. ಗಾಂಧೀಜಿಯವರನ್ನು ಕಂಡು ಜನ ಪುಳಕಿತರಾದರು. ಕೆಲವರು ಗಾಂಧೀಜಿಯವರನ್ನು ಕಂಡಾಗ ಜೀವನ ಸಾರ್ಥಕವಾಯಿತೆಂದರು. ಬೀದಿ, ಬೀದಿಗಳಲ್ಲಿ ಮಾವಿನ ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ಗಾಂಧೀಜಿ ಮತ್ತು ಕಸ್ತೂರಿ ಬಾ ರವರನ್ನು ಅತಿಥಿ ಗೃಹಕ್ಕೆ ಕರೆದೊಯ್ಯಲು, ಅಲಂಕರಿಸಿದ ಕುದುರೆಗಳ ಗಾಡಿ ಸಿದ್ಧವಾಗಿತ್ತು. ಗಾಂಧೀಜಿಯವರು ಅತಿಥಿ ಗೃಹವು ಕೇವಲ ಅರ್ಧ ಮೈಲಿಯಷ್ಟು ದೂರದಲ್ಲಿದೆ ಎಂದು ತಿಳಿದು ಕುದುರೆ ಗಾಡಿಯಲ್ಲಿ ಪ್ರಯಾಣಿಸಲು ನಿರಾಕರಿಸಿ, ಬಿಡಾರದತ್ತ ಕಾಲು ನಡಿಗೆಯಲ್ಲಿಯೆ ಹೊರಟರು. ಇದು ಅವರ ಸರಳಿಕೆಯ ಪ್ರತೀಕ. 

     ಬಿಡಾರವು ಈಗಿನ ಆನಂದ್ ರಾವ್ ವೃತ್ತ ಇದೆಯಲ್ಲ ಅದರ ಹತ್ತಿರವೇ ಇದ್ದ, ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್ ಕೃಷ್ಣ ಸ್ವಾಮಿ ಅಯ್ಯಂಗಾರ್ ರವರು ಹೊಸದಾಗಿ ನಿರ್ಮಿಸಿದ ನೂತನ ಗೃಹ. ಈಗಿರುವ ಶ್ರೀ ವೈಷ್ಣವ ಸಭಾ ಕಟ್ಟಡದ ಎದುರು.

    ಉಭಯ ಕುಶಲೋಪರಿಯಾದ ನಂತರ, ಸ್ನಾನ ಮತ್ತು ತಿಂಡಿಯ ವ್ಯವಸ್ಥೆಯನ್ನು ಮಾಡಲಾಯಿತು. ಗಾಂಧೀಜಿಯವರ ಆಹಾರ ಬಹಳ ಸರಳ.  ಕಡಲೆಕಾಯಿ ಮತ್ತು ಪರಂಗಿಹಣ‍್ಣು ಅವರ ಇಷ್ಟವಾದ ಆಹಾರ.  ಅತಿಥೆಯರು ಗಾಂಧೀಜಿಯವರಿಗೆ ಸೇಬಿನಹಣ‍್ಣು ಮತ್ತು ಕಡಲೆಕಾಯಿ ನೀಡಿದರಂತೆ. ಹೆಚ್ಚು ಬೆಲೆಯುಳ‍್ಳ ಸೇಬಿನಹಣ‍್ಣಿನ ಅವಶ್ಯಕತೆಯಿಲ್ಲವೆಂದು ತಿಳಿಸಿ, ಪರಂಗಿಹಣ‍್ಣನ್ನು ತರುವಂತೆ ಆದೇಶ ನೀಡಿದರಂತೆ.

    ಕಾಕತಾಳೀಯವೇನೊ ಎಂಬಂತೆ, ಗಾಂಧೀವಾದಿಗಳು, ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ನಮ್ಮ ಪ್ರಾಂಶುಪಾಲರಾಗಿದ್ದ, ಡಾ ಎಚ್ .ನರಸಿಂಹಯ್ಯನವರಿಗೂ ಸಹ, ಕಡಲೆಕಾಯಿ ಎಂದರೆ ಬಹಳ ಇಷ್ಟ. ಕೆಲವು ಸಂದರ್ಭಗಳಲ್ಲಿ ಹಾಸ್ಟಲ್ ನಲ್ಲಿದ್ದ ಅವರ ಕೊಠಡಿಗೆ ಅಥವಾ ಕಚೇರಿಗೆ ಹೋದಾಗ ವಿದ್ಯಾರ್ಥಿಗಳಿಗೆ ಕಡಲೆಕಾಯಿ ತರಿಸಿ ಕೊಟ್ಟಿದ್ದುಂಟು.

    ಆ ದಿನದ ಮೊದಲನೇ ಸಾರ್ವಜನಿಕ ಕಾರ್ಯಕ್ರಮವನ್ನು ಅಂದಿನ ಸರ್ಕಾರಿ  ಫ್ರೌಡ ಶಾಲೆ, ಇಂದಿನ ಸರಕಾರಿ ವಿಜ್ಞಾನ ಮತ್ತು ಕಲಾ ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾಗಿತ್ತು. ಅಂದಿನ ಗಣ್ಯಾತಿಗಣ್ಯರು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಗಾಂಧೀಜಿಯವರಿಗೆ ನೀಡಿದ ಭಿನ್ನವತ್ತಳೆಯನ್ನು ಆಂಗ್ಲಭಾಷೆಯಲ್ಲಿ ಶ್ರೀ ಕೃಷ‍್ಣ ಅಯ್ಯ‍ರ್‍ರವರು ಓದಿದರೆ, ಡಿ. ವಿ. ಗುಂಡಪ್ಪನವರು ಕನ್ನಡದಲ್ಲಿ ಓದಿದರು. ಗೋಪಾಲ ಕೃಷ‍್ಣ ಗೋಖಲೆಯವರ ಭಾವಚಿತ್ರವನ್ನು ಗಾಂಧೀಜಿಯವರು ಅನಾವರಣ ಮಾಡಿದರು. ಗಾಂಧೀಜಿಯವರು ಗೋಖಲೆಯವರ ವ್ಯಕ್ತಿತ್ವದ ಬಗ್ಗೆ ವಿವರವಾಗಿ ಸಭೆಗೆ ತಿಳಿಸಿ, ಪ್ರಗತಿಪಥದಲ್ಲಿ ಒಂದೊಂದು ಹೆಜ್ಜೆಯಾಗಿ ಹೋಗ ಬೇಕೆಂದು ಕಿವಿಮಾತನ್ನು ಹೇಳಿದರು. ಗಾಂಧೀಜಿಯವರು ಅನಾವರಣವನ್ನು ಮಾಡಿದ ಗೋಖಲೆಯವರ ಭಾವಚಿತ್ರವನ್ನು ಗೋಖಲೆ ಸಾರ್ವಜನಿಕ ಸಂಸ‍್ಥೆಯಲ್ಲಿ ಈಗಲೂ ನೋಡಲು ಲಭ್ಯವಿದೆ.

    ಸಮಾರಂಭದ ನಂತರ, ಗಾಂಧೀಜಿಯವರನ್ನು ಕುದುರೆಗಾಡಿಯಲ್ಲಿ ತಂಗಿದ್ದ ಬಿಡಾರಕ್ಕೆ ವಾಪಸ್ಸು ಕರೆತರುವಾಗ, ಗಾಡಿಯಲ್ಲಿ ಪುಟ್ಟಣ‍್ಣಶೆಟ್ಟರು ಮತ್ತು ಕೃಷ‍್ಣ ಅಯ್ಯರ್  ಅವರುಗಳು ಇದ್ದರು.  ಅವರಿಬ್ಬರೂ ಗಾಂಧೀಜಿಯವರಿಗೆ ಸೆಂಟ್ರಲ್ ಕಾಲೇಜನ್ನು ತೋರಿಸಿದರಂತೆ. ಆಗ, ಸೆಂಟ್ರಲ್ ಕಾಲೇಜಿನ ಕಟ್ಟಡವನ್ನು ನೋಡಲು ಆಸಕ್ತಿ ತೋರದ ಗಾಂಧೀಜಿಯವರು, ಬಡವರು, ದೀನ ದಲಿತರು ವಾಸಿಸುವ ಸ‍್ಥಳಗಳನ್ನು ತೋರಿಸಿ ಎಂದರಂತೆ. ಅವರ ಬಯಕೆಯ ಪ್ರಕಾರ, ಅರಳೇಪೇಟೆ ಮಾರ್ಗವಾಗಿ, ಬಿಡಾರಕ್ಕೆ ವಾಪಸ್ಸು ಕರೆತಂದರಂತೆ. ಈ ಒಂದು ಪ್ರಸಂಗ, ಗಾಂಧೀಜಿಯವರಿಗೆ ಬಡವರ ಮೇಲಿದ್ದ ಪ್ರೀತಿ, ಕಾಳಜಿಗೆ ಸಾಕ್ಷಿ.

    ನಂತರ, ನಗರದ ಪ್ರಮುಖರೊಡನೆ, ದೇಶದ ಬಡತನ, ಇಂಗ್ಲೀಷ್ ಭಾಷೆಯ ಪರಿಣಾಮ, ಆಧುನಿಕ ನಾಗರೀಕತೆ ಮತ್ತು ಅದರ ಪಾಪದ ಮೂಲಗಳು,  ಭಾರತೀಯ ಸಂಸ್ಕೃತಿ ಮತ್ತು ಆದರ್ಶಗಳು, ಹೀಗೆ ಹತ್ತು ಹಲವಾರು ವಿಷಯಗಳ ಬಗ್ಗೆ ವಿಚಾರ ವಿನಿಮಯಗಳು ನಡೆದವು.

    ಅಂದು ಸಂಜೆ,  ಲಾಲ್ ಭಾಗಿನ ಗಾಜಿನ ಮನೆಯಲ್ಲಿ ಒಂದು ದೊಡ್ಡ ಬಹಿರಂಗ ಸಭೆಯನ್ನು ಏರ್ಪಡಿಸಲಾಗಿತ್ತು. ಕನ್ನಡ, ಉರ್ದು ಮತ್ತು ತೆಲುಗು ಭಾಷೆಗಳಲ್ಲಿ ಪದ್ಯಗಳನ್ನು ಓದಿ, ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ರಾಜಕೀಯಕ್ಕು, ರಾಜಕೀಯ ಸಂಸ‍್ಥೆಗಳಿಗೂ ಧಾರ್ಮಿಕ ಸ್ವರೂಪವನ್ನು ಕೊಡಬೇಕೆಂಬ ಅಂಶಗಳನ್ನು ತಿಳಿಸಿದರು. ಸಾರ್ವಜನಿಕ ಸೇವಕರಿಗೆ ಹೆಚ್ಚು ಆಡಂಬರವಿಲ್ಲದೆ ಕಾರ್ಯ ನಿರ್ವಹಿಸಲು ಕರೆಯನ್ನು ಕೊಟ್ಟರು. ಸಂಜೆ, ದಿವಾನ್ ಸರ್ ಎಂ. ವಿಶ್ವೇಶ್ವರಯ್ಯನವರು, ಮೈಸೂರಿನಿಂದ ಕಾರಿನಲ್ಲಿ ಬಂದು ಗಾಂಧೀಜಿಯವರನ್ನು ಭೇಟಿ ಮಾಡಿದರು. ಸಂಘಟಕರು, ಮೊದಲನೆ ದರ್ಜೆ ರೈಲು ಡಬ್ಬಿಯಲ್ಲಿ ಪ್ರಯಾಣಿಸಲು ಗಾಂಧೀಜಿಯವರಿಗೆ ಮನವಿ ಮಾಡಿದರು. ಆದರೆ, ಈ ಮನವಿಯನ್ನು ನಯವಾಗಿ ನಿರಾಕರಿಸಿ, ಮೂರನೇ ದರ್ಜೆಯ ಡಬ್ಬಿಯಲ್ಲಿ ಪ್ರಯಾಣ ಮಾಡಿದರು. ರಾತ್ರಿ, ಗಾಂಧೀಜಿಯವರು ವಾಪಸ್ಸಾದರು.

    ಸರ್ವೋದಯ ದಿನ ಆಚರಣೆಯ   ಸಂದರ್ಭದಲ್ಲಿ ವಿಶ್ವದಾದ್ಯಂತ ಖ್ಯಾತಿಯನ್ನು ಪಡೆದಿರುವ, ವಿಶ್ವ ನಾಯಕ, ಅಹಿಂಸಾತ್ಮಕ ಚಳವಳಿಗೆ ಬುನಾದಿ ಹಾಕಿದ, ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಹೋರಾಡಿದ, ಮಹಾತ್ಮ ಗಾಂಧೀಜಿಯವರ ವಿಚಾರಗಳು ಮತ್ತು ಆದರ್ಶಗಳು ಇಂದಿಗೂ ಪ್ರಸ್ತುತ ಎಂಬ ಅಂಶವನ್ನು ಯುವಕರಿಗೆ ತಿಳಿಸಲು ಪ್ರಯತ್ನಿಸೋಣ. ಗಾಂಧೀಜಿಯವರ ನಾಲ್ಕು ಮೂಲಭೂತ ತತ್ವಗಳಾದಂತ ಸತ್ಯ, ಅಹಿಂಸೆ, ಸರ್ವೋದಯ ಮತ್ತು ಸತ್ಯಾಗ್ರಹ ಇವುಗಳನ್ನು ಪಾಲಿಸೋಣ. ಅನುಷ‍್ಠಾನಕ್ಕೆ ಶ್ರಮಿಸೋಣ. ಸಮಾಜದಲ್ಲಿ ಸಮಾನತೆಯ ಭಾವನೆಗಳನ್ನು ಬಿತ್ತುವ ಕಾರ್ಯದಲ್ಲಿ ತೊಡಗಿಸಿಕೊಳ‍್ಳೋಣ.

    ಇರುವ ಹೆಸರನು ಬಿಟ್ಟು…

    ಮೊನ್ನೆ ಗೆಳತಿಯ ಮನೆಗೆ ಹೋಗಿದ್ದೆ.ಅವಳ ಪತಿರಾಯರು ತುಸು ಹೊತ್ತು ಕುಶಲೋಪರಿ ಮಾತನಾಡಿದ ಮೇಲೆ ಮಹಡಿಯ ಅವರ ಕೋಣೆಗೆ ಹೋಗುತ್ತಾ ಮೆಟ್ಟಿಲಲ್ಲಿ ನಿಂತು ಮಂಜೇಗೌಡ ..ಮಂಜೇಗೌಡ ಅಂತ ದೊಡ್ಡ ಧ್ವನಿಯಲ್ಲಿ ಕರೆದರು.ವಿಷ್ಣುಭಕ್ತರ ಮನೆಯಲ್ಲಿ ಮಂಜೇಗೌಡ ಹೇಗೆ ಬಂದ ಅಂತ ನಾನು ತುಸು ಕನ್ಫ್ಯೂಸ್ ನಲ್ಲಿ ಇರುವಾಗಲೇ ಹಿಂದಿನ ಬಾಗಿಲಿಂದ ಇದ್ದಿಲಿಗಿಂತಲೂ ಕಪ್ಪಗಿನ ಎತ್ತರದ ನಾಯಿಯೊಂದು ಪೂರ್ಣ ಹಸನ್ಮುಖಿಯಾಗಿ ಬಾಲ,ಸೊಂಟ ಮುಖದವರೆಗೂ ವಿಧವಿಧವಾಗಿ ನುಲಿಯುತ್ತಾ ಗೆಳತಿಯ ಪತಿಯ ಹತ್ತಿರ ಹೋಗಿ ನಿಂತಾಗ ಈ ಮಂಜೇಗೌಡ ಯಾರೂಂತ ನನಗೆ ಗೊತ್ತಾದದ್ದು.

    ಇದೆಂಥ ಹೆಸರೇ ತಾಯಿ ಅಂತ ನನ್ನ ಗೆಳತಿಯನ್ನು ಕೇಳಿದ್ದಕ್ಕೆ ವ್ಯವಹಾರದಲ್ಲಿ ವಂಚಿಸಿದ ಗೆಳೆಯನೊಬ್ಬನ ಹೆಸರನ್ನು ನಾಯಿಗೆ ಇಟ್ಟುಕೊಂಡು ತೃಪ್ತರಾಗಿದ್ದಾರಂತೆ ಅವಳ ಪತಿರಾಯರು.

    ಈ ಸಾಕುಪ್ರಾಣಿಗಳಿಗೂ ಮನುಷ್ಯರ ಹೆಸರೇ ಇಡುತ್ತರಾದರೂ ಈಗೀಗ ಅವಕ್ಕೂ ವಿಪರೀತ ಹೊಸ ಮಾದರಿ ಹೆಸರುಗಳು.
    ಹಸುಗಳಿಗೆ ಗೌರಿ,ಪಾರು,ಮಂಗಳಿ,ಕೆಂಪಿ ಅಂತಲೂ ನಾಯಿಗಳಿಗೆ ಸೋನಿ,ಬ್ರೂನೋ,ರಂಗಣ್ಣ,ಕರಿಯ ಅನ್ನೋ ಸೆಮಿ ಸ್ಟೈಲಿಷ್ ಹೆಸರುಗಳು ಹಳೆಯ ಫ್ಯಾಷನ್ನಾದರೂ ನಮ್ಮ ಹಳ್ಳಿಯಲ್ಲಿ ಇನ್ನೂ ಹಳೆಯ ಹೆಸರುಗಳೇ ಮುಂದುವರೆದಿದ್ದು ನಾಯಿ ಹಸುಗಳೂ ಇದಕ್ಕೆ ಯಾವ ವಿರೋಧ ವ್ಯಕ್ತಪಡಿಸದೆ ಸಹಕರಿಸುತ್ತಿರುವುದರಿಂದ ನಮ್ಮಲ್ಲಿ ಪರಿಸ್ಥಿತಿ ಸಹಜವಾಗಿಯೇ ಇದೆ.

    ಇತ್ತೀಚೆಗೆ ನನ್ನ ಹಳ್ಳಿಯಲೊಂದು ಘಟನೆ ನಡೆಯಿತು.
    ನಮ್ಮೂರಿನ ಅರವತ್ತೆಂಟು ವರ್ಷದ ಅಜ್ಜ ಒಬ್ರು ಬಂದು ಸಣ್ಣನಿರ್ವಾಣಯ್ಯ ಅನ್ನೋ ಅವರ ಹೆಸರು ತೀರ ಹಳೇ ಥರವಾಗಿದೆಯಂತಲೂ,ಹೊಸದೊಂದು ಹೆಸರನ್ನು ತಾನು ಇಟ್ಕೋಬೇಕಂತಲೂ ಹೇಳಿ ,ನಾನಾದರೆ ಹೊರಗೆ ಹೋಗಿ ನಾಲ್ಕು ಜನರ ಜೊತೆಗೆ ಓಡಾಡಿದವಳಾದ್ದರಿಂದ ಈ ಹೆಸರು ಬದಲಿಸಿಕ್ಕೊಳ್ಳುವ ವಿಧಿ ವಿಧಾನಗಳು ತಿಳಿದಿರುತ್ತವದ್ದಾರಿಂದ ತನಗೆ ನೇರ್ಪು ಕೊಡಬೇಕಂತಲೂ ಕೇಳಿದರು.

    ಸದಾ ಪಟಾಪಟಿ ಡ್ರಾಸು(ಒಳಚಡ್ಡಿ),ಮೇಲೊಂದು ಶತಮಾನದ ಹಿಂದಿನ ಸಾವಿರ ಕಲೆಗಳುಳ್ಳ ಬಿಳಿ ಎಂದು ಹೆಸರಿಸಲಾಗುವ ಶರ್ಟು ತೊಡುವ ಅವರಿಗೆ ಹುಟ್ಟಿರುವ ಈ ಕೊನೆಯ ಇಚ್ಛೆ ಕೇಳಿ ಪ್ರಜ್ಞೆ ತಪ್ಪಿದಂತಾದರೂ ಮನಸು ಬೆಳೆದಂತೆಲ್ಲಾ ಹಸಿವೂ ಬೆಳೆಯುವುದು ಎನ್ನುವ ಡಿವಿಜಿಯವರ ಮಾತು ನೆನಪಾಗಿ ಇದೆಲ್ಲವೂ ನಾಗರಿಕತೆಯ ಕುರುಹು ಅಂದುಕೊಂಡು ‌ನಮ್ಮ ಹಳ್ಳಿ ಬೆಳೆಯುತ್ತಿರುವ ಕುರಿತು ಮೆಚ್ಚುಗೆಯೆನಿಸಿತು.ಅವರ ಜೀವನ್ಮುಖಿ ಮನಸ್ಸನ್ನು ಸಂತೋಷವಾಗಿಡಲು ಮಾಡಬೇಕಾದ ಸಹಾಯವೆಲ್ಲವನ್ನು ಮಾಡಿದ ನಂತರ ಅವರ ಎರಡು ಜೊತೆ ಚಪ್ಪಲಿ ಸವೆದು ಮೂರನೆಯದು ಕೊಳ್ಳುವ ಹೊತ್ತಿಗೆ ಸಣ್ಣನಿರ್ವಾಣಯ್ಯ ಎಂಬುವ ನಾನು ನಿರಂಜನನೆಂದು ಹೆಸರು ಬದಲಿಸಿಕೊಂಡಿರುವುದಕ್ಕೆ ಪತ್ರಿಕಾ ಪ್ರಕಟಣೆ, ಅಫಿಡವಿಟ್ಟು,ಅಧಿಕೃತ ದಾಖಲೆಗಳು ಅವರ ಕೈ ಸೇರಿದವು.

    ಆದರೆ ಅವರು ಮುಂದಲ ಕದ ಮುಚ್ಚಿ ಚಪ್ಪಲಿ ಮೆಟ್ಟಿದೊಡನೆ ಎತ್ಲಗ್ ಹೊಂಟೆ ಸಣ್ನಿರ್ವಾಣಣ್ಣೋ ಅನ್ನೋ ಮಾತು ಮಾತ್ರ ಕೊನೆವರೆಗೂ ಹಾಗೇ ಉಳಿದಿದ್ದು ವಿಪರ್ಯಾಸ.ಕೊನೆಗೆ ಅವರ ಕಾರ್ಯದ ಕಾರ್ಡಿನಲ್ಲೂ ಅವರ ಬಯಕೆಯ ‘ನಿರಂಜನ’ ಹೆಸರನ್ನು ಬ್ರಾಕೆಟ್ಟಿನಲ್ಲಾದರೂ ಇರಿಸುವಷ್ಟರಲ್ಲಿ ಸಾಕುಬೇಕಾಗಿದ್ದು ವಿಧಿಯ ಆಟವೇ ಸರಿ.

    ಒಂಚೂರು ಪುರಾಣ ಕಾಲಕ್ಕೆ ಹೋಗಿಬರೋದಾದ್ರೆ
    ಅಂಥ ಸೂರ್ಯ ಪುತ್ರನಿಗೆ..,ಹುಟ್ಟಿದಾಗಲೇ ಕುಂಡಲಗಳನ್ನು, ಕವಚವನ್ನೂ ಹೊಂದಿಯೇ ಹುಟ್ಟಿದ್ದ ಎನ್ನಲಾಗುವ ಕರ್ಣನಿಗೆ ..ಕರ್ಣ ಎನ್ನುವ ಹೆಸರನ್ನು ಅವನ ಅಮ್ಮ ಕುಂತಿ ಇಟ್ಟಿದ್ದಾ ಅಥವಾ ಸಾಕಿದ ಅಪ್ಪ ರಾಧೇಯ ಇಟ್ಟಿದ್ದ ಅನ್ನುವುದೂ ಯಾವಾಗಲೂ ನನ್ನ ತಕರಾರು.ರಾಧೇಯನೇ ಇಟ್ಟಿದ್ದರೂ ಕಿವಿಯೋಲೆಯೊಂದಿಗೇ ಹುಟ್ಟಿದ ಮಗನಿಗೆ ಕರ್ಣ ಅನ್ನುವುದೇ ಸೂಕ್ತ ಅಂತ ಬಾಸ್ಕೆಟ್ಟಿನೊಳಗಿಟ್ಟು ಹೊಳೆಗೆ ಬಿಡುವಾಗಲೇ ಕುಂತಿಗೂ ಅನಿಸಿರಬಹುದು.ಅದೂ ಅಲ್ಲದೇ ಆಗೆಲ್ಲಾ ಪುರಾಣಗಳಲ್ಲಿ ಅಷ್ಟು ಅದ್ಭುತವಾದ ಹೆಸರನ್ನು ಹುಡುಕಿದವರು ಯಾರು.?ರಂಭಾ,ಶಚಿ,ಮೇನಾ,ಶಕುಂತಲಾ, ದೇವಯಾನಿ, ನಚಿಕೇತ,ಪುರು,ಅಹಲ್ಯಾ..!!

    ಓಹ್ ..ಒಂದೇ ಎರಡೇ..

    ಯಾವ ಹೆಸರೂ ಕೇಳಿದ್ರೂ ಇದನ್ನು ನನ್ನ ಮೊಮ್ಮಗುವಿಗೆ ಇಡೋಣಾ,ಇದನ್ನು ಅದರ ಮಗುವಿಗೆ ಇಡೋಣಾ ಅನಿಸುವಷ್ಟು ಚಂದ.ಅದೂ ಅಲ್ಲದೇ ಈ ಪುರಾಣದ ಪಾತ್ರಗಳಿಗೆಲ್ಲಾ
    ಒಂದೇ ವ್ಯಕ್ತಿಗೆ ನಾಕಾರು ಹೆಸರುಗಳನ್ನು ಇಡುವ ಪದ್ದತಿಯಂತೆ.ಕರೆಯುವಾಗ ಕನ್ಫ್ಯೂಸ್ ಆಗ್ತಿರಲಿಲ್ಲವೇ ಅನ್ನುವ ಒಂದಷ್ಟು ಜಾಗತಿಕ ಮಟ್ಟದ ಪ್ರಶ್ನೆಗಳೂ ನನ್ನಲ್ಲಿ ಈ ಹೆಸರಿನ ವಿಷಯದಲ್ಲಿ ಆಗಾಗ ಕಾಡುವುದಿದೆ.

    ಇರಲಿ.ಅದೆಲ್ಲಾ ಮುಗಿದು ಹೋದ ಮಾತು..ಕಂಡವರಾರು..

    ಇನ್ನೊಂದು ವಿಚಾರವಿದೆ.

    ಕೆಲವರು ಚಂದ ಅಂದರೆ ಚಂದ.! ಥೇಟು ಇಂದ್ರ ಲೋಕದ ರಂಭೆಯರಂತೆ.ಅವರ ಹೆಸರುಗಳೂ ಅಷ್ಟೇ ಚಂದ.ಆಗೆಲ್ಲಾ ಇವರ ಚಂದ ನೋಡಿ ಇವರಿಗೆ ಈ ಹೆಸರಿಟ್ರೋ ಅಥವಾ ಚಂದದ ಹೆಸರಿನಿಂದಾಗಿಯೇ ಇವರು ಇಷ್ಟು ರೂಪವತಿಯಾದರಾ ಅನ್ನುವ ಸಮಸ್ಯೆ ಕೇವಲ ನನ್ನನ್ನು ಮಾತ್ರ ಕಾಡಿದ್ದಿರಬಹುದು.

    ಹೋಗಲಿ ಬಿಡಿ..ಇಲ್ಲಿ ಇದಕ್ಕಿಂತಲೂ ಚಂದದ ಇನ್ನೊಂದು ನಾಮಪುರಾಣವಿದೆ.ಮಗಳು ಗರ್ಭಿಣಿಯಾದ ಕೂಡಲೇ ಅಣ್ಣಪ್ಪ ಸ್ವಾಮಿಯ ದಯೆಯಿಂದ ಕೂಸು ಗಂಡಾದರೇ ‘ಅ’ ಯಿಂದಲೇ ಆರಂಭಿಸಿ ಹೆಸರು ಇಡುತ್ತೇನೆ ಅಂತ ನನ್ನ ಅಮ್ಮ ಹರಸಿಕೊಂಡಿದ್ದರು.
    ಮಗಳಾದ ಕಾರಣಕ್ಕೆ ಹದಿನಾರಕ್ಕೇ‌ ಮದುವೆ ಮಾಡಿ ಹೊರೆ ಇಳಿಸಿಕೊಂಡಿದ್ದ ಅಮ್ಮ ಹೊಟ್ಟೆಯ ಕೂಸು ಗಂಡಾಗಬೇಕೆಂದು ಬಯಸಿದ್ದು ಸಹಜವೇ ಬಿಡಿ.ಇಷ್ಟೆಲ್ಲಾ ಪೂರ್ವತಯಾರಿಯೊಂದಿಗೆ ಸಂಡೆ ಹುಟ್ಟಿದ ಮಗು ಗಂಡೇ ಆಗಿ ಅಮ್ಮನ ಆಸೆ ಕೈಗೂಡಿ ಅವನಿಗೆ ‘ಅ’ಯಿಂದ ಆರಂಭವಾಗುವ ಹೆಸರಿಟ್ಟು ವರ್ಷ ತುಂಬುವುದರೊಳಗಾಗಿ ಪುಟ್ಟ ಬೊಗಸೆಯಲ್ಲಿ ಕಾಸು ಅಭಿಷೇಕವನ್ನು ಅಣ್ಣಪ್ಪನಿಗೆ ಮಾಡಿಸಿ ಹರಕೆ ತೀರಿಸಿ ಸಂಭ್ರಮಿಸಿದ್ದು ಸಹಜ ಸಂಗತಿಯೇ.

    ಮಗನಿಗೆ ಮೂರು ವರ್ಷವಾಗುವಷ್ಟರಲ್ಲಿ ನಾಲ್ಕು ಮಾತು ಕಲಿತು ಜಗದೆಲ್ಲ ಪ್ರಶ್ನೆಗಳಿಗೂ ಇಂದೇ ,ಈ ಕ್ಷಣವೇ ಉತ್ತರ ಕಂಡುಕೊಳ್ಳುವವನಂತೆ ಅರಳುಹುರಿಯುತ್ತಿದ್ದವ ಅಜ್ಜನನ್ನು ಕುಂತಲ್ಲಿ,ನಿಂತಲ್ಲಿ ‘ಕತೆ ಹೇಳ್ತಾತ ,ಕತೆ ಹೇಳ್ತಾತ’
    ಅಂತ ಪೀಡಿಸಿ ಪೀಡಿಸಿ ಉಸಿರುಗಟ್ಟಿಸುತ್ತಿದ್ದ.

    ಹಗಲೆಲ್ಲಾ ತೋಟದಲ್ಲಿ ತಿರುಗಿ ಹೈರಾಣಾಗಿರುತ್ತಿದ್ದ ಅಪ್ಪ ಮಾತ್ರ ಮೊದಲ ಮೊಮ್ಮಗನೆಂಬ ಕಾರಣಕ್ಕೆ ತುಸುವೂ ಬೇಸರಿಸಿಕೊಳ್ಳದೇ ರಾತ್ರಿ ಹೊಟ್ಟೆ ಮೇಲೆ ಹತ್ತಿ ಎದೆಪದಕವಾಗುತ್ತಿದ್ದ ಪುಟ್ಟ ಬಾಹುಬಲಿಯಂತ ಮೊಮ್ಮಗನಿಗೆ ಭೀಮ,ಅರ್ಜುನ, ಕೃಷ್ಣ,ಪುಣ್ಯ ಕೋಟಿಯ ಕತೆಗಳನ್ನು ಹೇಳಿದ್ದೇ ಹೇಳಿದ್ದು.ಅಪ್ಪನ ಕಥೆ ಹೇಳುವ ಚಂದಕ್ಕೆ ಮರುಳಾಗಿ ನಾನೂ ಹೂಃಗುಟ್ಟರೆ ಅವನಿಗೆ ಸಿಟ್ಟೋಸಿಟ್ಟು..

    ಹೀಗೆ ನನ್ನ ಮಗ ಕೇಳಿಸಿಕೊಂಡ ಒಂದು ವಿಶೇಷ ಕಥೆ ಭೀಮ ಮತ್ತು ಬಕಾಸುರರದ್ದು.

    ಬಂಡಿ ಅನ್ನವುಂಡು ಕೊಲ್ಲಲು ಬಂದ ಬಕಾಸುರನನ್ನು ಭೀಮ ಕೊಂದ ಈ ಕತೆ ನನ್ನ ಮಗನ ಮೇಲೆ ಯಾವ ರೀತಿ ಪರಿಣಾಮ ಬೀರಿತೆಂದರೆ ಈ ಕತೆ ಶುರುವಾದೊಡನೆ ಹೊಟ್ಟೆಯ ಮೇಲೆ ಮಲಗಿದ್ದವನು ಚಕ್ಕನೆ ಎದ್ದು‌ಕೂತು ಕತೆ ಹೇಳುವ ತಾತನ ಮುಖವನ್ನೇ ನೋಡುತ್ತಿದ್ದ.ಕಥೆಯೊಂದಿಗೆ ಬದಲಾಗುತ್ತಿದ್ದ ಅವನ ದೇಹಭಾವ ,ಮುಖಬಾವ ಕಥೆ ಉಂಟು ಮಾಡಿದ ಪರಿಣಾಮ ಅಂತ ನಿಸ್ಸಂದೇಹವಾಗಿ ಹೇಳಬಹುದಿತ್ತು.

    ಪ್ರತೀಸಂಜೆಯೂ ಭೀಮನ ಕತೆಯೊಂದಿಗೆ ಆರಂಭವಾಗುವ ಕಥಾಕಾಲಕ್ಷೇಪ ಮೂರು ಗಂಟೆ ಮುಂದುವರೆದು ಅದೇ ಕಥೆಯೊಂದಿಗೆ ಮುಗಿಯಬೇಕಿತ್ತೆಂದರೆ ಆಗುವ ಕಿರಿಕಿರಿಯನ್ನು ಓದುಗರು ಊಹಿಸಿಕೊಳ್ಳಬಹುದು.ಅದಷ್ಟೇ ಆಗಿದ್ದರೆ ಈ ಪ್ರಸಂಗವನ್ನು ಇಲ್ಲಿ ಹೇಳಬೇಕಾಗಿಲ್ಲ.


    ಸುಮಾರು ಹತ್ತು ದಿನ ಈ ಕಥೆ ಕೇಳಿದ ಮೇಲೆ ನನ್ನ ಮಗ ಇದ್ದಕ್ಕಿದ್ದಂತೆ ಒಂದು ದಿನ “ನಾನು ಭೀಮ, ನನ್ನ ಭೀಮ ಅನ್ನಿ”
    ಅಂತ ಅನ್ನಲು ಶುರು ಮಾಡಿದ.ಕಥೆಯ ಎಫೆಕ್ಟ್ ಅಂದುಕೊಂಡ ನಾವು ಅವನು ಕೆನ್ನೆಯುಬ್ಬಿಸಿ ದೇಹ ಸೆಟೆದು “‌ನಾನು ಭೀಮ “ಎನ್ನುವುದನ್ನು ಮತ್ತೆಮತ್ತೆ ಕೇಳಿ ಸಂಭ್ರಮಿಸಿದ್ದೂ ಆಯ್ತು.

    ಆದರೆ ಪರಿಸ್ಥಿತಿ ಗಂಭೀರವಾದದ್ದೇ ಆಮೇಲೆ.

    ‘ಚಿನ್ನಾರಿ ,ಹಾಲು ಕುಡಿ ಬನ್ನಿ’ ಅಂದರೆ ” ಚಿನ್ನಾರಿ ಅಲ್ಲ ನಾನು..ಭೀಮ..”ಅಂತ ಹೂಃಕರಿಸುತ್ತಿದ್ದ.ಹಾಲು ಕುಡಿ ಬಾ ಭೀಮ ಅಂತ ಕರೆದ ಮೇಲೇ ಅವನ ಹಾಲೂ,ಊಟ,ಸ್ನಾನ ಎಲ್ಲವೂ ಆಗಿ ಒಂಥರಾ ಪೇಚಿಗೆ‌ ಸಿಕ್ಕಿಕೊಂಡ ಹಾಗಾಯ್ತು ಪರಿಸ್ಥಿತಿ.

    ಮಾತಿಗೂ‌ ಮೊದಲು ನನ್ನ ಭೀಮ ಅನ್ನಿ ಅನ್ನುತ್ತಿದ್ದ ಈ ‌ಮೂರು ವರ್ಷದ ಪುಟ್ಟ ಘಟೋತ್ಕಜ ಒಂದು ದಿನ ಬೆಳಿಗ್ಗೆ ಅಪ್ಪ ಕೇಳುತ್ತಿದ್ದ ರೇಡಿಯೋ ಹತ್ರ ನಿಂತು ”ಅವರಿಗೆ ಹೇಳಿ‌ ,ನಾನು ಭೀಮ ಆಗಿದ್ದೀನಿ ಅಂತ ” ಅಂತಂದು ರಚ್ಚೆ ಹಿಡಿದು ಅಳತೊಡಗಿದವನನ್ನು ಸಮಾಧಾನ ಮಾಡಬೇಕಾದರೆ ಸಾಕುಬೇಕಾಯ್ತು.ಇದ್ಯಾಕೋ ಅತಿರೇಕವಾಯ್ತು ಅಂತ ಹೆದರಿ ಒಂದು ದಿನ ಕರೆದು ಕೂರಿಸಿ ಕೊಂಡು ಮುದ್ದುಗರೆಯುತ್ತಾ ‘ಇಲ್ಲ ಕಂದ.ಮಾಮಿ ನಿಂಗೆ ಅಮೃತ್ ಅಂತಲೇ ಹೆಸರಿಟ್ಟಿರುವುದು.ಹಂಗೆಲ್ಲಾ ಭೀಮ ಅಂತ ಕರೆದ್ರೆ ನಿನ್ನ ಅಮ್ಮನನ್ನೂ ಬದಲು ಮಾಡಿಬಿಡುತ್ತೆ ಮಾಮಿ..!ಆಗುತ್ತಾ.?’ ಅಂತ ಸಾಮ ಪ್ರಯೋಗ ಮಾಡಿದ್ದೆ.
    ಅಮ್ಮ ಬದಲಾದರೆ ಅಂತ ತುಸು ಹೆದರಿ ದೊಡ್ಡ ಕಣ್ಣ ತುಂಬಾ ದಿಗಿಲು ತುಂಬಿಕೊಂಡು ಆ ರಾತ್ರಿ ಕಳೆಯುವವರೆಗೂ ಸುಮ್ಮನಾಗಿದ್ದ.

    ನಾನೂ ಹೇಗೋ ಭೀಮನಾಗುವ ಆಸೆ ತಪ್ಪಿತಲ್ಲ ಅಂತ ಸಮಾಧಾನ‌ಪಟ್ಟಿದ್ದು ರಾತ್ರಿ ಕಳೆಯುವವರೆಗಷ್ಟೆ..
    ಬೆಳಿಗ್ಗೆ ಅಮ್ಮ ಪೂಜೆ ಮಾಡುವಾಗ ಅಜ್ಜಿಯ ಪಕ್ಕ ಅಂಟಿಕೊಂಡು ಕುಳಿತು ‘ಅಜ್ಜಿ..ಅಜ್ಜೀ..ನನ್ನ ಭೀಮನ್ನ ಮಾಡು ಅಂತ ಮಾಮಿಗೆ ಹೇಳು..ಪ್ಲೀಸ್’ ಅಂತ ಪಿಸುಗುಟ್ಟ.

    ಮೊಮ್ಮಗುವಿನ ಮನಸ್ಸಿನ ಹೊಯ್ದಾಟಕ್ಕೆ ಅಮ್ಮನಿಗೆ ಪೂಜೆ ಮುಂದುವರಿಸಲೂ ಆಗದೇ ಅಲ್ಲೇ ಕಣ್ಣಿರಿಟ್ಟು ಅಪ್ಪನ್ನ ಬಯ್ಯಲಿಕ್ಕೆ ಶುರು ಮಾಡಿದ್ಳು .ಕೆಲಸಕ್ಕೆ ಬಾರದ ಕತೆ ಹೇಳಿ ಮಗಿನ ಮನಸಲ್ಲಿ ಆಸೆ ಹುಟ್ಟಿಸಿದ್ದಕ್ಕೆ ಅವಳಿಗೆ ಅಪ್ಪನ ಮೇಲೆ ವಿಪರೀತ ಕೋಪ.
    ಮಗನ ಸಂಕಟಕ್ಕೆ ನಾನೂ ಇದೇನಾಗೋಯ್ತು ಅಂತ ಅಂದು ಅತ್ತುಕರೆದದ್ದೂ ಆಯ್ತು.

    “ನನ್ನ ಭೀಮ ಅನ್ನಿ” ಅನ್ನುವ ನನ್ನ ಪುಟಾಣಿ ಮಗನ ಆಸೆ ಯಾವ ಗರಿಷ್ಠ ಮಟ್ಟ ತಲುಪಿತೆಂದರೆ ಒಬ್ಬೊಬ್ಬನೇ ದೇವರ ಮನೆಯಲ್ಲಿ ಕುಳಿತು ‘ನನ್ನ ಭೀಮನ್ನ ಮಾಡು‌ ಮಾಮಿ’ ಅಂತ ಕೇಳುವಷ್ಟು.

    ಮೂರು ತಿಂಗಳಿನಷ್ಟು ಸುದೀರ್ಘವಾಗಿ ನಡೆದ ಈ ‌ಭೀಮನಾಮ ಪ್ರಸಂಗ ನಿಧಾನವಾಗಿ ಅಪ್ಪನ “ಒಂದೂರಲ್ಲಿ ಒಬ್ಬ ರಾಜ ಇದ್ನಂತೆ.
    ಅವನ ಹತ್ರ ಮೂರು ಕುದುರೆಗಳಿದ್ವಂತೆ.ಅವನಿಗೆ ‌ಮೂರು‌ ಮಕ್ಕಳಿದ್ರಂತೆ.” ಎನ್ನುವ ಹೊಸ ಕತೆಯ ಶ್ರವಣದೊಂದಿಗೆ ಕ್ಷೀಣಗೊಂಡಿದ್ದು ಭೀಮನಾಮ ಪ್ರಸಂಗದ ಸುಖಾಂತ್ಯ ಅಂತಲೇ‌ ಭಾವಿಸಬೇಕು.

    **********
    ಇನ್ನು ನಾನು ಸ್ಕೂಲಿಗೆ,ಕಾಲೇಜಿಗೆ ಹೋಗುವಾಗ ಯಾವುದಾದರೂ ದಾಖಲೆಗೆ ನನ್ನ ತಾಯಿಯ ಹೆಸರು ಕೇಳಿದಾಗೆಲ್ಲಾ ಭೂಮಿಗಿಳಿದು ಹೋಗುತ್ತಿದ್ದೆ.ಬಾಲಮಣಿ ಎನ್ನುವ ಸುಂದರ ಹೆಸರಿನ ಅಮ್ಮ ತನ್ನ ಐದನೆ ಇಯತ್ತೆ ನಪಾಸಿನ ಕಾರಣದಿಂದ ಅದನ್ನು “ಬಾಲಾ ಮಣಿ “
    ಅಂತ ಅಂಕುಡೊಂಕಾಗಿ ಬರೆಯುತ್ತಿದ್ದು ಅದೇ ದಾಖಲೆಯಲ್ಲೂ ಸೇರಿಹೋಗಿತ್ತು.ಹೆಸರಿನಲ್ಲೇ ಬಾಲ ಇರುವ ಇದು ನನ್ನ ಆ ವಯಸ್ಸಿಗೆ ಭಾರಿ‌ ಮುಜುಗರದ ವಿಷಯ.

    ತಾಯಿಯ ಹೆಸರು ಅಂತ ದಾಖಲೆಯವರೇನಾದರೂ ಕೇಳುವಾಗ ಮೆಲ್ಲಗೆ ನಾನು ಬಾಲಾಮಣಿ ಅನ್ನುತ್ತಿದ್ದೆ.ಮತ್ತೊಮ್ಮೆ ಹೇಳಿ ಎನ್ನುವಾಗ ತುಸು ಜೋರಾಗಿ‌,ಅದೂ ಕೇಳದೇ ಮತ್ತೆ ಸ್ಪೆಲಿಂಗ್ ಕೇಳುವಾಗ ಸ್ಪಷ್ಟವಾಗಿ ಹೇಳಿ ಬೆವರೊರೆಸಿಕೊಂಡಿದ್ದೂ ಇದೆ.

    ಗೆಳತಿಯರೆಲ್ಲಾ ‘ಅದೆಂತ ಹೆಸರೇ‌ ಮಾರಾಯ್ತಿ.?
    ಬಾಲಾ. ಲಾ… ಮಣಿ ..?’ ಅಂದಾಗ ಅಮ್ಮನನ್ನು ಸರಿಯಾಗಿ ತರಾಟೆಗೆ ತಗೋಬೇಕು ಅಂತ ಅನಿಸಿದರೂ ಆಗ ಅದಕ್ಕೆ ಕಾಲ ಸಹಕರಿಸಿರಲಿಲ್ಲ ಎನುವುದು ಈಗ ಹೊಳೆವ ವಿಷಯ.ವೇದವತಿ ಎನ್ನುವ ನನ್ನ ಅಧಿಕೃತ ಹೆಸರೂ ಅದರ ಮೊದಲ ವೇದದ ಹೊರತಾಗಿ ಕೊನೆಯ
    ‘ವತಿ’ಯಿಂದ ಓತಿಕ್ಯಾತನ ಹೆಸರಿನಂತೆ ಅನ್ನಿಸಿ ಭಾರಿ ಬೇಸರವಾಗಿದ್ದೂ ಇದೆ.

    ದೇವರ ದಯದಿಂದ ನನ್ನ ಅಪ್ಪ ಅಮ್ಮನಿಗೆ ಮೊದಲಿಗೆ ಮಗ ಹುಟ್ಟಿ ಅವನಿಗೆ‌ ನಂದೀಶ ಎನ್ನುವ ಹೆಸರಿಟ್ಟ ಮೇಲೆ ಎರಡನೆಯವಳಾದ ನನಗೆ ಸಹಜವಾಗಿ ನಂದಿನಿ ಹೆಸರು ದಕ್ಕಿ ಜೀವನಪರ್ಯಂತದ ಖುಷಿಗೆ ಕಾರಣವಾಗಿದೆ.

    ಒಂದು ತಿಳಿವಳಿಕೆಯ ಪ್ರಕಾರ ಕೆಲವೊಂದು ಎವರ್ಗ್ರೀನ್ ಹೆಸರುಗಳಿರುತ್ತವೆ.ಅವು ಕಾಲದೇಶಗಳಿಗೂ ‌ಮೀರಿ ತಮ್ಮ ಸೌಂದರ್ಯ ಉಳಿಸಿಕೊಳ್ಳಲು ಸಮರ್ಥವಾಗಿರುತ್ತವೆ.ನಂದಿನಿ ಅಂತ ಒಂದು ಪರಮ ಅದ್ಭುತ ಹೆಸರು.

    ಅದರಲ್ಲೂ ಒಂದು ತೊಡಕಿದೆ ನೋಡಿ..

    ಇತ್ತಿಚೆಗೆ ನಾಕು ಮಾತಾಡಿ ಪರಿಚಯವಾದವರೆಲ್ಲಾ ನಂದು….ನಂದು..ನನ್ನದು ಅಂದು ಕರೆದು ಗೊಂದಲ ಮಾಡ್ತಾರೆ.ಹೆಣ್ಣುಮಕ್ಕಳು ,ಗೆಳತಿಯರೆಲ್ಲಾ “ನಂದು‌ ನಂದು” ಅಂದರೆ ಏನ್ ಪರವಾಗಿಲ್ಲ ಬಿಡಿ.ಆದರೆ ಲಿಂಗಭೇದವಿಲ್ಲದೇ ನಂದು.. ನಂದೂ..ಅಂತ ಅಂದು.,ನಿಧಾನವಾಗಿ ನಂದು ಮೀನ್ಸ್ ನನ್ನದು.. ಎನಿಸಿಕೊಳುವುದೂ ಹೆಂಗಿರಬೇಡಾ ಯೋಚಿಸಿ ನೋಡಿ.

    ಇದೇ ಹೆಸರು‌ ಪ್ರಾಯದಲಿದ್ದಾಗ ರೋಡ್ ರೋಮಿಯೋಗಳಿಗೆ ನಂದಿನಿ ಡೈರಿ ಅಂತಲೂ ಆಗಿ ಮೊದಲೇ ನಾಚಿಕೆ ಮುದ್ದೆಯಾದ ನಾನು ಇದ್ದ ಒಂದೇ ಒಂದು ದುಪ್ಪಟ್ಟವನ್ನು ಮೈತುಂಬ ಹೊದ್ದು ಹೋದರೂ‌ ನಂದಿನಿ ಜಾಹೀರಾತು ಎಲ್ಲೆಲ್ಲೂ ಕಂಡು ಮತ್ತೂ ಕುಗ್ಗಿ ಹೋದದ್ದು,ಬಗ್ಗಿ ನಡೆದದ್ದು ಆಗಿನ ಕಾಲಕ್ಕೆ ಏನು ಕಮ್ಮಿ ವಿಷಯವಲ್ಲ.

    ನಂದಿನಿ ಅನ್ನುವ ನನ್ನದೇ ಫೇವರಿಟ್ ಆದ ನನ್ನ ಹೆಸರು ಯಜಮಾನರ ಬಾಯಲ್ಲಿ ಎಲ್ಲೂ‌ ಕೇಳದ,ಯಾರೂ ಇಟ್ಟುಕೊಂಡಿರದ
    “ನನ್ನಿ” ಯಾಗಿದ್ದು ಮಾತ್ರ ‌ನನ್ನ ಅದೃಷ್ಟವೇ.!

    ನನ್ನ ಮಗ ಎರಡು ವರ್ಷದವನಿದ್ದಾಗ ನಿಮ್ಮ ಅಮ್ಮನ ಹೆಸರೇನು ಅಂತ ಪ್ರೀತಿಗೆ ಕೇಳುವಾಗ ಅವನ ತೊದಲು‌ನುಡಿಗೆ ಹುಟ್ಟಿದ ಹೆಸರೇ ಈ‌ ನನ್ನಿ ..!ಇವರೇನಾದರೂ ನಂದಿನಿ ಅಂತ ನನ್ನ ಪೂರ್ತಿ ಹೆಸರು ಕರೆದರೆ ಥೇಟು ಕಾಮಧೇನು ಮೈಮೇಲೆ ಬಂದವಳಂತೆ ಬುಸುಗುಡುವುದು ಇದ್ದದ್ದೆ.
    ಸಂಬಂಧಗಳೇ ಹಾಗಲ್ಲವೇ.ಯಾರು ಯಾವ ಹೆಸರಿಂದ ಕರೆಯುತ್ತಾರೋ ಹಾಗೇ ಕರೆಯಬೇಕು ಕೊನೆಯವರೆಗೂ.ನಂದಿನಿ,ನಂದು,ನನ್ನಿ,ನ್ನೀ…ಹೀಗೆ..

    ಅವರವರ ಅಕ್ಕರೆಗೆ ದಕ್ಕಿದ ಹೆಸರಿನ ಅರ್ದಗಿರ್ಧ ಭಾಗ ಅವರವರ ಪಾಲಿಗೆ.ಹೆಸರು ತುಂಡಾದಷ್ಟೂ ಬಾಂಧವ್ಯ ಹೆಚ್ಚಿದೆ ಅಂತ ಅರಿಕೆಯಾಗುವುದೂ ಒಂಥರ ಸುಖವೇ.

    ಇನ್ನೊಂದು ಸೊಗದ ಸಂಗತಿಯೆಂದರೆ, ಮಧ್ಯಯುಗದ(!) ಅರ್ಧ ಪ್ರತಿಶತ ಸಿನೆಮಾಗಳ ನಾಯಕಿ ನಂದಿನಿಯಾದರೆ,ನಾಯಕ ವಿಶ್ವ.ಅದೇ ಪದ್ದತಿ ಈಗಲೂ ಮುಂದುವರೆದಿರುವುದು,ಮುಂದಿನ ನೂರು ವರುಷವೂ ಕನ್ನಡ ಸಿನೆಮಾದ ನಾಯಕಿ ನಂದಿನಿಯೇ ಆಗಿರುವುದು ಸದ್ಯದ ಅವಲೋಕನದಲ್ಲಿ ‌ಖಚಿತವೇ.

    ಇದೂ ಕೂಡ ನನ್ನ ಹೆಸರು ಕೊಟ್ಟ ಸಂತೋಷಕ್ಕೆ ಮತ್ತೊಂದು ರೀಸನ್ನು.

    **********

    ಹುಟ್ಟಿದ ನಕ್ಷತ್ರಕ್ಕೆ ಅನುಸಾರ ನನ್ನ ಮಗಳಿಗೆ ಇಟ್ಟ ಹೆಸರು ಬೇರೆಯೇ ಇದ್ದರೂ ಅವಳದ್ದೂ ನಾಮಕರಣ ಪುರಾಣ ನಡೆಯುತ್ತಲೇ ಇದೆ.

    ಎರಡು ರಾತ್ರಿ ಸಹಿಸಲಾರದ ನೋವಿನೊಂದಿಗೆ ಕೊನೆಗೂ ಹುಟ್ಟಿದ ಈ ನನ್ನ ಮಗಳು ಹುಟ್ಟುವಾಗಲೇ ಹೊಕ್ಕಳುಬಳ್ಳಿ ಸುತ್ತಿಕೊಂಡು ,ಗರ್ಭದಲ್ಲಿ ನೀರು ಬತ್ತಿ ,ತಲೆಕೆಳಗೆ ಮಾಡಿ ಅಂಗಾಲು ಮಿಡಿದರೂ ,ಬುರುಡೆಗೆ ಹೊಡೆದರೂ

    ಕಂಯ್ ಕುಂಯ್ ಅಂತ ಅಳದೇ ಸಣ್ಣಗೆ ಮುಗುಳ್ನಕ್ಕು ಸುಮ್ಮನಾದ್ದುದ್ದಕ್ಕೆ ದಿಗಿಲಾಗಿ ಮಗು ಆರೋಗ್ಯವಾಗಿರಲಿ ನಿನ್ನ ಹೆಸರಿಟ್ಟು ಕರೆಯುತ್ತೇನೆ ಅಂತ ಪಾರ್ವತಿ ದೇವಿಗೆ ಹರಸಿಕೊಂಡಿದ್ದೆ.ಈಗಲೂ ಅವಳಿಗೆ ಕಟ್ಟಿದ ಹೆಸರಷ್ಟೇ ಇದ್ದು “ಪಾರ್ವತಿ ” ಅಂತ ಬದಲಾಯಿಸಬೇಕೆಂಬ ಆಸೆ ಕೈಗೂಡದೇ ಮುಂದಕ್ಕೆ ಹೋಗುತ್ತಲೇ ಇದೆ.

    ನಂದಿನಿ ಹೇಗೆ ನಂದು…ನನ್ನದು ಆಗಿಬಿಡುತ್ತದೋ ಹಾಗೇ ಕೆಲವು ಹೆಸರುಗಳನ್ನು ಕತ್ತರಿಸಿದರೆ ,ಅದಕ್ಕೆ ಅಣ್ಣ ಅಕ್ಕ ಸೇರಿಸಿದರೆ ಆಭಾಸ ಆಗಿಹೋಗುವ ಸಾಧ್ಯತೆಗಳೂ ಇವೆ.

    ವಸುಂಧರಾ ,ಇಂದಿರಾ ಇವರೆಲ್ಲಾ ರಾ ರಾ ಅಂತ ಆಪ್ತಮಿತ್ರದ ಆತ್ಮದ ಪ್ರತಿರೂಪವೆನಿಸಿದರೆ..ಮಲ್ಲಿಕಾ ,ರೇಣುಕಾ ಗಳಿಗೆ ಅಕ್ಕನನ್ನು ಸೇರಿಸಿದರೆ ಮಲ್ಲಿಕಕ್ಕ,ರೇಣುಕಕ್ಕಗಳು ಆಗಿ ವಿಪರೀತವಾಗಿ ಅವರನ್ನು ಚಿಕ್ಕವರೂ ಹೆಸರು ಹಿಡಿದೇ ಕರೆಯಬೇಕು ಅಥವಾ ಬರೀ ಅಕ್ಕ ಎನ್ನಬೇಕು.ಕೆಲವರಿಗೆ ಹೆಸರೆಷ್ಟೇ ಚಂದವಿದ್ದರೂ ಅವರ ಗುಣ ಸ್ವಭಾವ,ನಡಾವಳಿಗೆ ಅನುಗುಣವಾಗಿ ಅವರಿಗೆ ಅಡ್ಡ ಹೆಸರೂ,ಉದ್ದ ಹೆಸರೂ ಸಮುದಾಯದಿಂದ ನಾಮಕರಣವಾಗಿ ಅದೇ ಹೆಸರೂ ಶಾಶ್ವತವಾಗಿ ಉಳಿಯೋ ಸಾಧ್ಯತೆಗಳೂ ನಮ್ಮಲ್ಲಿ ಬಹಳಷ್ಟಿವೆ.

    ಪಿಟೀಲು, ಮೊಳೆ,ಗಾಂಧಿ, ಕಾಗೆ,ಬೊಬ್ಬೆ ,ಐಲು,ಬಿಜೆಪಿ,ಇವು ನಮ್ಮ ಹಳ್ಳಿಯಲ್ಲಿ ಸಮುದಾಯದ ಸಹಕಾರದೊಂದಿಗೆ ಕರೆಯಲ್ಪಡುತ್ತಿರುವ ಕೆಲವು ನಾಮಾವಳಿಗಳು.ನಮ್ಮ ಹಳ್ಳಿ ಹುಡುಗನೊಬ್ಬ ಪೇಟೆಗೆ ಹೋಗಿ ಶೂಸ್ ಕೊಳ್ಳಬೇಕು ಅಂತ ಚಪ್ಪಲಿ ಅಂಗಡಿಗೆ ಹೋದ.ಅವನ ವೇಷಭೂಷಣಗಳನ್ನು ನೋಡಿದ ಅಂಗಡಿಯವ ಅವನಿಗೆ ಐನೂರು ರೂಪಾಯಿಗಳ ಶೂ ತೋರಿಸಿದ.

    “ಇದಲ್ಲ..ಬೇರೆ ಥರದ್ದು” ಅಂದ ಇವ.

    ಯಾವ ಥರದ್ದು ಬೇಕು ಅಂದಾಗ ಸ್ವಲ್ಪ ಕಾಸ್ಟಲೀ ದು ತೋರ್ಸಿ ಅಂದ.
    ಅವರು ಎಂಟನೂರು ರೂಪಾಯಿ ದು ತೋರಿಸಿದ್ರು.

    ಇವನು ಇನ್ನೂ ಸ್ವಲ್ಪ ಕಾಸ್ಟಲೀ ಅಂದ..

    ಅವರು ಒಂದೂವರೆ ಸಾವಿರದ್ದು ತೋರಿಸಿದ್ರು.

    ಇವನು ಇನ್ನೂ ಕಾಸ್ಟ…

    ಎಷ್ಟ್ರುದ್ದು ಬೇಕಣ್ಣ ನಿಂಗೆ ಅಂದಾ ಅಂಗಡಿಯವ.
    ಇವನು ಸ್ವಲ್ಪ ಕಾಸ್ಟಲೀದು ಬೇಕಾಗಿತ್ತು ಅಂತ ತಲೆ ತುರಿಸ್ಕೊಂಡ.
    ಅದೇ ಎಷ್ಟು.

    ಮುನ್ನೂರು ರೂಪಾಯೊಳಗೆ ಅಂದ..ಆಂಗಡಿಯವ ಮುಗುಳ್ನಕ್ಕು ‘ತಗೋಳಣ್ಣಾ ,ನಿನ್ನ ಕಾಸ್ಟಲೀ ಶೂಸು ‘ ಅಂತ್ಹೇಳಿ ಇನ್ನೂರೈತ್ತರ ಶೂಸ್ ತೋರಿಸಿದ ಮೇಲೆ ಇವನ ಮುಖ ಬೆಳಗಿನ ಕಮಲದಂತೆ ಅರಳಿತು.
    ಅಂದಿನಿಂದ ಇವನಿಗೆ ಕಾಸ್ಟಲೀ ಅಂತಲೇ ಹೆಸರು. ಅವನೂ ಯಾವ ಬಿಗುಮಾವನ್ನೂ ತೋರಿಸದೆ ಕಾಸ್ಟಲೀ ಅಂದರೇ ಓ ಅಂತಾನೆ.

    ಹೆಸರಿನಿಂದಲೇ ಧರ್ಮದ ಗುರುತು ಹಿಡಿಯುವುದು ಜಗದ ಜನರ ಗುಣವಾದರೂ ಬೇರೆ ಧರ್ಮದ ಹೆಸರಿನ ಆಕರ್ಷಣೆ ಮಾತ್ರ ಯುವ ಮನಸ್ಸಿಗೆ ಸದಾ ಇರುವಂಥದ್ದೇ. ಶೀಬಾ,ರೀಮಾ,ರಿಯಾ,ನಿಧಾ ದಂತಹ ಚಂದದ ಹೆಸರುಗಳು ಮೌಸಮಿ,ಚಾರುಲತ,ಸುನೈನ,ಸುವಿಂಧ್ಯ ದವರನ್ನು ಆಕರ್ಷಿಸಿದರೆ ವಾನಿ,ಸೌರಭ,ದೇವಯಾನಿ,ಮಂಗಳಗೌರಿಯರು
    ಮ್ಯೂರಲ್,ಜೆನಿ,ಕ್ಲಿಯೋನಾ,ಲೀಡಾ,ಲೀಸಾಗಳ ಫೇವರಿಟ್ಟು.
    ಎಲ್ಲಾ ಕಾಲಕ್ಕೂ ವಸಿಷ್ಠ, ಕೌಶಿಕ್,ಹಿಮ,ಮೇನಾ,ಸ್ನಿಗ್ಧಗಳು ಅತ್ಯದ್ಭುತ ಹೆಸರುಗಳೇ. ಎಲ್ಲವೂ ಹಾಗೇ ತಾನೇ ..? ಇರುವುದೆಲ್ಲವಾ ಬಿಟ್ಟು ಇರುದುದಕೆ ತುಡಿಯುವುದು.!

    ನನ್ನ ಮದುವೆಯಾದ ಹೊಸತರಲ್ಲಿ ಮಧ್ಯಾಹ್ನ ತೋಟದಿಂದ ಬಂದ ಮಾವ ಅತ್ತೆಯ ಹತ್ತಿರ ‘ಕುಬೇರಪ್ಪ ಸಿಕ್ಕಿದ್ದ.ಸಂಜೆ ಮನೆಗೆ ಬರ್ತಿನಿ ಅಂದಿದ್ದಾನೆ’ ಅಂತಿದ್ರು.

    ಮನೆಯ ಮಾಮೂಲಿ ಜನರನ್ನೇ ನೋಡಿ ನೋಡಿ ಬೇಸರವಾಗಿದ್ದ ನನಗೆ ಈ ಹೊಸ ಕುಬೇರಪ್ಪ ಹೇಗಿರಬಹುದು ಅಂತೆಲ್ಲಾ ಯೋಚಿಸಿ
    ಹೆಸರೇ ಇಷ್ಟು ಚಂದ ಇರುವಾಗ ವ್ಯಕ್ತಿ ಹೇಗಿರಬೇಡ ಅಂತೆಲ್ಲ ಕಲ್ಪಿಸಿ ಸಂಭ್ರಮಿಸಿದ್ದೆ.

    ಹೊತ್ತು ಮುಳುಗಿದ ಮೇಲೆ ಇಳಿದ ಈ ಕುಬೇರಪ್ಪ ಹೆಸರಲ್ಲಿ ಮಾತ್ರ ಕು ಬೇರನನ್ನು ಇಟ್ಟುಕೊಂಡು ಉಳಿದಂತೆ ದಶರಂದ್ರವಿರುವ ಅಂಗಿಯ ಮಹಾನುಭಾವರಾಗಿದ್ದರಲ್ಲದೆ ಗಂಟಲುಮಟ ಸುರೆಯನ್ನೂ ಏರಿಸಿಕೊಂಡೇ ಬಂದಿದ್ದರು. ಆದರೂ ಇಂಥ ಹೆಸರಿನ ಇವರು ಪುಡಿಗಾಸು ಇರದ ಕುಚೇಲನಾಗಿದ್ದಾದರೂ ಹೇಗೆ ಎನ್ನುವ ಪ್ರಶ್ನೆ ನನ್ನ ಸಣ್ಣ ವಯಸ್ಸಿಗೆ ಸಹಜವಾದ ಕುತೂಹಲವಾಗಿ ಕೊನೇವರೆಗೂ ಹಾಗೇ ಉಳಿಯಿತು.

    ನಾಮ ಪುರಾಣಗಳು ಇನ್ನೂ ಅನೇಕನೇಕವಿದ್ದು ಕೆಲವರಿಗೆ ತಮ್ಮ ಮಕ್ಕಳಿಗೆ ತಮ್ಮಿಬ್ಬರ ಹೆಸರಿನ ಮೊದಲ ಅಕ್ಷರಗಳನ್ನು ಸೇರಿಸಿ ಹೆಸರಿಡುವ ಬಯಕೆ.

    ಇದೊಂಥರ ಅಫಿಡವಿಟ್ಟು.ರಿಜಿಸ್ಟ್ರೇಷನ್ ಮಾಡಿಸಿದ ಹಾಗೆ ಅನಿಸುತ್ತದೆ ನನಗೆ.

    ಇನ್ನೂ ಕೆಲವರು ಫ್ಯಾಷನ್ ಹೆಸರಿನಲ್ಲಿ ಅರ್ಥವಿರದ ಅಕ್ಷರಗಳನ್ನು ಒಟ್ಟು ಮಾಡಿ ಹೆಸರಿಟ್ಟು ಸಂಭ್ರಮಿಸುತ್ತಾರೆ.
    ಇನ್ನು ನ್ಯೂಮರಾಲಜಿಯ ಪ್ರಕಾರ ಕೂಡಿಸಿ ,ಕಳೆದು ಗೂಗಲ್ಲಣ್ಣನಲ್ಲಿ ಅರ್ದ ಶತಮಾನ ಹುಡುಕಿ ಹೆಸರಿಡುವ ಸಮರವೀರರೂ ಇದ್ದಾರೆ.
    ಅಜ್ಜನ,ಮುತ್ತಜ್ಜನ ಹೆಸರನ್ನೂ ಮಕ್ಕಳಿಗಿಡುವ ಖುಷಿ ಒಂದೆಡೆಯಾದರೆ ಹೆಸರೇ ಇರದೇ ಬೀದಿಗೆ ಬಿದ್ದ ಮಗುವಿಗೆ ಯಾರೋ ಕರೆದ ಎಂಥದ್ದೋ ಅಡ್ಡ ಹೆಸರೇ ಹೆಸರಾಗಿರುವ ಕಥೆಗಳೂ ನಮ್ಮಲ್ಲಿ ಇವೆ.
    ಹೆಸರಿನಿಂದಲೇ ಕೀಳರಿಮೆ ಬೆಳೆಸಿಕೊಂಡು ಹಿಂದೆ ಉಳಿದ ಉದಾಹರಣೆಗಳೂ ಕಡಿಮೆ ಇಲ್ಲ.

    ನನ್ನ ಮಗನಿಗೆ ಇಂಥದ್ದೇ ಹೆಸರಿಡಬೇಕೆಂದು ನಿರ್ಧರಿಸಿಕೊಂಡ ತಾಯಿಗೆ ಗಂಡನ ಮನೆಯವರಿಂದ ಆ ಹೆಸರಿಡಲು ಸಹಕಾರ ಸಿಗದೇ ಆ ಮದುವೆಯನ್ನೇ ಧಿಕ್ಕರಿಸಿ ಇನ್ನೊಂದು ಮದುವೆಯಾಗಿ ಮಗನನ್ನು ಪಡೆದು ಅದಕ್ಕೆ ಆ ಹೆಸರಿಟ್ಟ ತಾಯಿಯ ಕಥೆಯೂ ನಮ್ಮ ನಡುವೆ ಶ್ರೇಷ್ಠ ಕಥೆ ಎನಿಸಿಕೊಂಡಿದ್ದಿದೆ.

    ದೇಹವನ್ನು ಹೀಗಳೆಯಬೇಡ ಮನುಜ ದೇಹವನ್ನು ಹೀಗೆ ಅಳೆಯಬೇಡ ಎನ್ನುವ ಕವಿವಾಣಿಯ ಹಾಗೆ ಹೆಸರಿಗೂ ತನ್ನದೇ ಆದ ಪ್ರಾಮುಖ್ಯತೆ ಇದೆ.
    ಅಜ್ಜ ಹೇಳಿದ್ರು,ಅವ್ವ ಹೇಳಿದ್ಳು ,ಹರಕೆ ಹೊತ್ತಕೊಂಡಿದ್ದೆ ಅಂತ ಕರಿಮಾರಿಯಮ್ಮ ಅಂತಲೋ,ದುಗ್ಗಣ್ಣ ಅಂತಲೋ ಹೆಸರಿಡುವುದು ಹಳೆಯ ಮಾತಾಯಿತು ಅಂದುಕೊಂಡರೂ ಈಗಲೂ ನಮ್ಮ ನಡುವೆ ಅಂತವರಿರುವುದನ್ನು ಅಲ್ಲಲ್ಲಿ ಕಾಣುತ್ತೇವೆ.

    ದೇಹ ಎಷ್ಟು ಮುಖ್ಯವೋ ಆ ದೇಹಕ್ಕಿಡುವ ಹೆಸರೂ ಅಷ್ಟೇ ಸುಂದರವೂ,ಧ್ವನಿಪೂರ್ಣವೂ ಆಗಿದ್ದರೆ ಮಕ್ಕಳು ಮುಂದೆ ನೀವಿಟ್ಟ ಈ ಹೆಸರಿನಿಂದಾಗಿ ನಂಗೆ ಹೀಗಾಯ್ತು ಹಾಗಾಯ್ತು ಅಂತ ದೂರುವುದು ‌ತಪ್ಪುತ್ತದೆ.ಆದರೂ ಸುಂದರವಾದ ಹೆಸರು ಪ್ರತೀ ಮಗುವಿನ ಹಕ್ಕು.

    ಈ ಬರಹವನ್ನು ಇನ್ನೇನು ಬರೆದು ಮುಗಿಸಬೇಕು ಎನ್ನುವಾಗ ಕರೆಯೊಂದು ಬಂದು ನಂದಿನಿ ವಿಶ್ವನಾಥ ಹೆದ್ದುರ್ಗ ಎನ್ನುವ ನನ್ನ ಹೆಸರನ್ನು ಹೊಸದಾಗಿ ತುಂಡರಿಸಿ ಹೆದ್ದುರ್ಗೇಶ್ವರಿಯವರಾ ಅಂದರು..?
    ನಾನು ಹೌದು ಅನ್ನಬೇಕೆ ಅಲ್ಲ ಅನ್ನಬೇಕೆ ತಿಳಿಯದೇ
    ತಡವರಿಸಿದೆ..!!

    ಈ ಬರಹದೊಂದಿಗೆ ಪ್ರಕಟವಾಗಿರುವ ಚಿತ್ರ ರಚಿಸಿದವರು ಕಿರಣ್ ಮಾಡಾಳು. ಅರಸೀಕರೆ ತಾಲೂಕು ಮಾಡಾಳು ಗ್ರಾಮದ ಕಿರಣ್ ಫೈನ್ ಆರ್ಟ್ಸ್ ಓದಿದ್ದಾರೆ.ಇಲ್ ಸ್ಟ್ರೇಷನ್, ವ್ಯಂಗ್ಯ ಚಿತ್ರ , ಕಂಪ್ಯೂಟರ್ ಗ್ರಾಫಿಕ್ಸ್ ಎಲ್ಲದರಲ್ಲೂ ಅವರಿಗೆ ಪರಿಣತಿ. ಆಧ್ಯಾತ್ಮ ಸಂಗತಿಗಳ ಬಗ್ಗೆ ವಿಶೇಷ ಪಾಂಡಿತ್ಯ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಲಾವಿದರಾಗಿ ದುಡಿದ ಅನುಭವ. ಪ್ರವಾಸ ಮತ್ತು ಅಧ್ಯಯನದಲ್ಲಿ ಆಸಕ್ತಿ.ಅವರ ಸಂಪರ್ಕ ಸಂಖ್ಯೆ 9964655156

    ಮೇ 24ರಿಂದ 2ನೇ ಪಿಯು ಪರೀಕ್ಷೆ

    ಪದವಿ ಪೂರ್ವ ಶಿಕ್ಷಣ ಇಲಾಖೆ 2020-21 ಸಾಲಿನ ದ್ವಿತೀಯ ಪಿಯು ಪರೀಕ್ಷಾ ವೇಳಾ ಪಟ್ಟಿಯನ್ನು ಪ್ರಕಟಿಸಿದೆ.

    ಶುಕ್ರವಾರ ಸಂಜೆ ಪ್ರಕಟಿಸಲಾದ ಈ ತಾತ್ಕಲಿಕ ವೇಳಾಪಟ್ಟಿ ಪ್ರಕಾರ ಪರೀಕ್ಷೆಗಳು ಮೇ 24 ಕ್ಕೆ ಆರಂಭವಾಗಿ ಜೂನ್ 10 ಕ್ಕೆ ಮುಗಿಯಲಿದೆ.

    ವೇಳಾ ಪಟ್ಟಿಯ ಸಂಪೂರ್ಣ ವಿವರ ಇಲ್ಲಿದೆ.

    ಜೂನ್ 14 ರಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ

    ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಗಳು 2021ನೇ ಜೂನ್ 14ರಿಂದ ಜೂನ್ 25ರವರಗೆ ನಡೆಯಲಿವೆ. ಜೂ. 14- ಪ್ರಥಮ ಭಾಷೆ, ಜೂ. 16- ಗಣಿತ, ಜೂ. 18-ದ್ವಿತೀಯ ಭಾಷೆ, ಜೂ. 21- ವಿಜ್ಞಾನ, ಜೂ. 23- ತೃತೀಯ ಭಾಷೆ, ಜೂ. 25- ಸಮಾಜ ವಿಜ್ಞಾನ ಪತ್ರಿಕೆಗಳ ಪರೀಕ್ಷೆಗಳು ನಡೆಯಲಿವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

    ದ್ವಿತೀಯ ಪಿಯು ಪರೀಕ್ಷೆಗಳ ವೇಳಾಪಟ್ಟಿಯನ್ನು ಸಹ ಅಂತಿಮಗೊಳಿಸಲಾಗುತ್ತಿದ್ದು, ಒಂದೆರಡು ದಿನಗಳಲ್ಲಿ ಪರೀಕ್ಷಾ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಸಚಿವರು ವಿವರಿಸಿದರು.

    ಫೆ. 1ರಿಂದ 9 ಮತ್ತು ಫಸ್ಟ್ ಪಿಯು ತರಗತಿ ಆರಂಭ

    ಪ್ರಸ್ತುತ ಶೈಕ್ಷಣಿಕ ವರ್ಷದ 9 ಮತ್ತು 11ನೇ ತರಗತಿಗಳನ್ನು ಫೆಬ್ರವರಿ 1ರಿಂದ ಪೂರ್ಣ ಪ್ರಮಾಣದಲ್ಲಿ ಆರಂಭಿಸಲಾಗುವುದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಎಲ್ಲ ತರಗತಿಗಳನ್ನು ಆರಂಭಿಸಬೇಕೆಂಬ ವಿದ್ಯಾರ್ಥಿ ಮತ್ತು ಪೋಷಕ ವಲಯದ ಬೇಡಿಕೆಯ ಹಿನ್ನೆಲೆಯಲ್ಲಿ ಗುರುವಾರ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮತ್ತು ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸುದೀರ್ಘ ಚರ್ಚೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರೊಂದಿಗೆ ಈಗಾಗಲೇ ಆರಂಭವಾಗಿರುವ 10 ಮತ್ತು 12ನೇ ತರಗತಿಗಳೂ ಸಹ ಮೊದಲಿನಂತೆ ಪ್ರತಿದಿನ ಪೂರ್ಣ ಆವಧಿಯಲ್ಲಿ ನಡೆಯಲಿವೆ ಎಂದರು.

    ಒಂದರಿಂದ ಎಂಟನೇ ತರಗತಿಗಳನ್ನು ಆರಂಭಿಸುವ ಕುರಿತಂತೆ ಫೆಬ್ರವರಿ ಎರಡನೇ ವಾರದಲ್ಲಿ ಆರೋಗ್ಯ ಇಲಾಖೆ ಮತ್ತು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿದ್ದು, ಪ್ರಸ್ತುತ 9ರಿಂದ 12ವರೆಗಿನ ತರಗತಿಗಳು ಪೂರ್ಣ ಅವಧಿಯಲ್ಲಿ ಸಮಿತಿಯ ಮಾರ್ಗದರ್ಶನದಂತೆ ಕೋವಿಡ್ ನಿಯಮಗಳನ್ನು ಅನುಸರಿಸಿ ನಡೆಯಲಿವೆ. ಹಾಗೆಯೇ 6ರಿಂದ 8ನೇ ತರಗತಿಗಳಿಗೆ ಪರಿಷ್ಕೃತ ವಿದ್ಯಾಗಮ ತರಗತಿಗಳು ಈಗ ನಡೆಯುತ್ತಿರುವಂತೆ ಮುಂದುವರೆಯಲಿವೆ ಎಂದು ಸಚಿವರು ಹೇಳಿದರು.

    ಈಗಾಗಲೇ ಆರಂಭವಾಗಿರುವ 12ನೇ ತರಗತಿಯ ಸರಾಸರಿ ಶೇ. 75, 10ನೇ ತರಗತಿಯ ಶೇ.70, 6ರಿಂದ 9ನೇ ತರಗತಿಯ ವಿದ್ಯಾಗಮ ತರಗತಿಯ ಹಾಜರಾತಿ ಶೇ. 45ರಷ್ಟು ಹಾಜರಾತಿ ಇರುವ ಅಂಶವನ್ನು ಅಂಶವನ್ನು ತಾಂತ್ರಿಕ ಸಲಹಾ ಸಮಿತಿ ಅವಲೋಕಿಸಿ 9 ಮತ್ತು 11ನೇ ತರಗತಿಗಳ ಆರಂಭಕ್ಕೆ ಅನುಮತಿ ನೀಡಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    ತಾವು ಈ ಅವಧಿಯಲ್ಲಿ ಹತ್ತಕ್ಕೂ ಹೆಚ್ಚು ಜಿಲ್ಲೆಗಳ ಹಲವಾರು ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪೋಷಕರು ಮತ್ತು ಶಾಲಾಡಳಿತ ಮಂಡಳಿಗಳು ಎಲ್ಲ ತರಗತಿಗಳನ್ನು ಆರಂಭಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ನಾವು ಈ ಹಿಂದೆ ತಾಂತ್ರಿಕ ಸಲಹಾ ಸಮಿತಿಯ ನಿರ್ದೇಶನಗಳನ್ನು ಚಾಚೂ ತಪ್ಪದೇ ಪಾಲಿಸಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡ ಹಿನ್ನೆಲೆಯಲ್ಲಿ ಇಲ್ಲಿಯವರೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧೀನದಲ್ಲಿ ಬರುವ ಯಾವುದೇ ಶಾಲೆಯಿಂದ ಕೋವಿಡ್ ಸೋಂಕು ಹರಡುವಿಕೆ ವರದಿಯಾಗಿಲ್ಲ ಎಂದು ಸಚಿವರು ತಿಳಿಸಿದರು. ಮಕ್ಕಳು ಭೌತಿಕವಾಗಿ ಶಾಲೆಗಳಲ್ಲಿ ಹಾಜರಾಗುತ್ತಿರುವ ಕಾರಣ ಕಲಿಕಾ ಆಸಕ್ತಿ ಹೆಚ್ಚಿದೆ. ಬೋಧನೆ ಪರಿಣಾಮಕಾರಿಯಾಗುತ್ತಿದೆ ಎಂದು ಸಚಿವರು ತಿಳಿಸಿದ ಸಚಿವರು ಶಾಲೆ ಆರಂಭವಾದ ಮೇಲೆ ಮಕ್ಕಳಿಗಾಗಲೀ ಇಲ್ಲವೇ ಶಿಕ್ಷಕರಿಗಾಗಲಿ ಯಾವುದೇ ಸೋಂಕು ಹರಡಿಲ್ಲ ಎಂದು ತಿಳಿಸಿದರು.

    ಇತ್ತೀಚಿಗೆ ಶಿಕ್ಷಕ-ಪದವೀಧರ ಕ್ಷೇತ್ರದ ವಿಧಾನಪರಿಷತ್ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಎಲ್ಲ ತರಗತಿಗಳು ನಿರಂತರವಾಗಿ ನಡೆಯಬೇಕೆಂದು ಒತ್ತಾಯಿಸಿದ್ದಾರೆ. ಸರ್ಕಾರಿ ನೌಕರರ ಸಂಘ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಕರ ಸಂಘಟನೆಗಳು, ಪದವಿ ಪೂರ್ವ ಉಪನ್ಯಾಸಕರು ಮತ್ತು ಪ್ರಾಂಶುಪಾಲರ ಸಂಘಗಳು ಮಕ್ಕಳ ಹಿತದೃಷ್ಟಿಯಿಂದ ಎಲ್ಲ ತರಗತಿಗಳನ್ನೂ ಆರಂಭಿಸಬೇಕೆಂದು ಪದೇ ಪದೇ ಒತ್ತಾಯಿಸಿದ್ದಾರೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    ಬಾಲ ಕಾರ್ಮಿಕ ಪದ್ಧತಿ ಮತ್ತು ಬಾಲ ವಿವಾಹಗಳಂತಹ ಸಾಮಾಜಿಕ ಪಿಡುಗುಗಳ ಕುರಿತೂ ನಾವು ಎಚ್ಚರ ವಹಿಸಬೇಕಿದೆ. ಈ ಹಿನ್ನೆಲೆಯಲ್ಲಿ ಎಲ್ಲ ತರಗತಿಗಳನ್ನು ಆರಂಭಿಸಬೇಕೆಂಬುದು ಸಾರ್ವಜನಿಕ ವಲಯದ ಒತ್ತಾಯವಾಗಿದೆ ಎಂದು ಸಚಿವರು ತಿಳಿಸಿದರು.

    ಸಿಎಂ ಜೊತೆ ಚರ್ಚಿಸಿ ಶುಲ್ಕ ನಿಗದಿ:
    ಶಾಲಾ ಶುಲ್ಕ ನಿಗದಿ ಕುರಿತಂತೆ ಹಲವು ಸುತ್ತಿನ ಚರ್ಚೆಗಳು ನಡೆದಿದ್ದು, ಅಂತಿಮವಾಗಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬರಲಾಗುವುದು ಎಂದು ಸುರೇಶ್ ಕುಮಾರ್ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದರು. .

    ಸಭೆಯಲ್ಲಿ ಸಾರಿಗೆ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

    ಆಸೆಯೇ ದುಃಖಕ್ಕೆ ಮೂಲ


    ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು , ವಚನ ಸಾಹಿತ್ಯದಲ್ಲಿ ಅಡಗಿರುವ ಸಂಗತಿಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟು ಮತ್ತು ವಚನಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.


     “ Litreture is not only the effect of social causes it is also the cause of social effects”  ಹ್ಯಾರಿಸ್ ಲಿವಿಸ್  ಅವರ  ಈ ಮಾತುಗಳು ಸಾಹಿತ್ಯ ಮತ್ತು ಸಮಾಜಗಳ ನಡುವೆ ಇರುವ ಆಂತರಂಗಿಕ ಸಂಬಂಧವನ್ನು  ವಿವರಿಸುತ್ತದೆ. ಅಂತೆಯೇ ಬಸವಣ್ಣನವರ  ವಚನಗಳಲ್ಲಿಯೂ ಅವರ ಸಾಮಾಜಿಕ ಚಿಂತನೆಗಳಲ್ಲಿಯೂ ಇಂತಹ ಆಂತರಂಗಿಕ ಸಮಾಜವನ್ನು ಬೆಸೆಯುವ ಅಂಶಗಳನ್ನು ನೋಡಬಹುದು.  ಇಲ್ಲಿ ವ್ಯಕ್ತಿಸುಧಾರಣೆ, ಸಮಾಜ ಸುಧಾರಣೆ ಎಂಬ  ಎರಡು ಭಾಗಗಳನ್ನು ನೋಡಬಹುದು ಸಮಾಜ ಸುಧಾರಣೆಯ ಪರಿಪ್ರೇಕ್ಷದಲ್ಲಿ ಬರುವ  ಆರ್ಥಿಕ ಚಿಂತನೆ  ಕುರಿತ ವಚನ ಸಾರ್ವಕಾಲಿಕ ಮಹತ್ವವನ್ನು ಪಡೆದುಕೊಂಡಿದೆ. ಸಂಪತ್ತಿನ  ಅಕ್ರೋಢಿಕರಣ ಅದರಲ್ಲಿ ಪ್ರಮುಖವಾದುದು.

     ‘ ಸಂಪತ್ತನ್ನು ಹೊಂದಬೇಕೆನ್ನುವ  ಹಂಬಲ ಹಾಗೂ  ಆ ಬಗೆಗಿನ ಚತುರತೆ ಏನಿದೆಯೊ ಅದು ದುರಾಸೆಯ ಜೀವನಾಡಿ.  ಇದನ್ನೆ  ಗೌತಮಬುದ್ಧನೂ ಆಸೆಯೇ ದುಃಖಕ್ಕೆ ಮೂಲ  ಎಂದಿರುವುದು. ಸಂಪತ್ತನ್ನು ಕೂಡಿ ಹಾಕುವುದರಿಂದ ಸಮಾಜದಲ್ಲಿ ಅಸಮಾನತೆ ಉಂಟಾಗುತ್ತದೆ.ಇದನ್ನುತೀವ್ರವಾಗಿ ವಿರೋಧಿಸಿದವರು ಭಕ್ತಿ ಭಂಡಾರಿ ಬಸವಣ್ಣನವರು.  ಅನಗತ್ಯ ಸಂಪತ್ತನ್ನು ಕೂಡಿ ಹಾಕುವುದಕ್ಕೆ ವಿರೋಧವಿರುವ ವಚನವೊಂದು ಹೀಗಿದೆ-

           ಹೊನ್ನಿನಿಳಗೊಂದೊರೆಯ, ಸೀರೆಯೊಳಗೊಂದೆಳೆಯ

          ಇಂದಿಂಗೆ ನಾಳಿಂಗೆ ಬೇಕೆನೆಂದಾದರೆ

          ನಿಮ್ಮಾಣೆ! ಪುರಾತನರಾಣೆ,

          ನಿಮ್ಮ ಶರಣಿರಿಗಲ್ಲದೆ ಮತ್ತೊಂದನರಿಯೆ ಕೂಡಲಸಂಗಮದೇವಾ.

     ಸಂಪತ್ತಿನ ಸಂಗ್ರಹವಾದಂತೆಲ್ಲಾ ಅದು ಆಯಾ ವ್ಯಕ್ತಿಗಳಲ್ಲಿ ಇಲ್ಲದ ಪ್ರತಿಷ್ಠೆ ಮತ್ತು ಅಹಂಕಾರಗಳು ಹುಟ್ಟಲು ಕಾರಣವಾಗುತ್ತದೆ. ಅದೂ ಅನಾಯಾಸವಾಗಿ, ಮೋಸದಿಂದ, ವಾಮಮಾರ್ಗದಿಂದ,   ಇನ್ನೊಬ್ಬರಿಗೆ ಆತ್ಮವಂಚನೆ, ಅರ್ಥವಂಚನೆ ಮಾಡಿ ಅವರ ದಿಕ್ಕು ತಪ್ಪಿಸಿ ಅವರಿಗೆ ಅವಮಾನ ಮಾಡಿ ಪಡೆದಾಗಲಂತೂ  ಹೆಚ್ಚು.  ಇದರಿಂದ  ಕುಟುಂಬದಲ್ಲಿ, ಸಮಾಜದಲ್ಲಿ ಅಸಮತೋಲನ ಹೆಚ್ಚಿ, ಅದು ಎಲ್ಲಾ ಬಗೆಯ ಮಾನಸಿಕ ಕ್ಷೋಭೆಗಳಿಗೆ ಕಾರಣವಾಗಬಲ್ಲದು. ಸಂಬಂಧಗಳ ತಿರಸ್ಕಾರಕ್ಕೆ ಕಾರಣವಾಗಬಹುದು.

    ಈ ಕ್ಷೋಭೆಗಳೆ ಸಮಾಜದಲ್ಲಿ ಅರಾಜಕತೆಯನ್ನು ಸೃಷ್ಠಿಸಬಲ್ಲವು. ಎಂಬ  ಆತಂಕ ಬಸವಣ್ಣನವರಿಗೆ ಶತಮಾನಗಳ ಹಿಂದೆಯೇ ಕಾಡಿತ್ತು .ಅದು ಅಕ್ಷರಶಃ ಈಗಲೂ ನಡೆಯುತ್ತದೆ. ಹಣದ ವ್ಯಾಮೋಹಕ್ಕೆ,  ನಿಧಿಯ ವ್ಯಾಮೋಹಕ್ಕೆ ಭಗವಂತನ ಸನ್ನಿಧಿಯನ್ನು ನಾವು ಮರೆಯುತ್ತ ಇದ್ದೇವೆ.  “ಪರರ ವಸ್ತು ಪಾಷಾಣ” ಎಂಬ ಮಾತನ್ನು ನಮ್ಮ ಹಿರಿಯರು ಬಹಳ ಹಿಂದೆಯೇ ಹೇಳಿದ್ದಾರೆ  ಆದರೆ ನಮ್ಮ ಸಮಾಜದಲ್ಲಿ  ಮರೆತೇ ಹೋಗಿದೆ ಲೋಭಿತನದ ಬದುಕನ್ನು ಬದುಕುವ ಕುಹಕಿಗಳೆ ನಮ್ಮ ನಡುವಿರುವುದು. ಹಣದ ವಿಷಯ ವಿಷವಿದ್ದಂತೆ ನಿಧಾನವಾಗಿಯಾದರು ಅದು ಆಪೋಷಣ ತೆಗೆದುಕೊಳ್ಳುತ್ತದೆ.  ಹಾಗಾಗಿ ನಮ್ಮದೇನಿದೆಯೊ ಅಷ್ಟನ್ನು ಬಿಟ್ಟು ಪರರ ಪಾಲನ್ನು ಅನುಭವಿಸಿದರೆ  ಪಾಷಾಣ ತಿಂದಂತೆಯೇ. 

    ಸಂಪತ್ತಿನ ಅಕ್ರೋಢಿಕರಣ ಕುರಿತ ಇಂಥ ಬಸವಣ್ಣನವರ ವಚನಗಳು ಸಮಾಜ ಸುಧಾರಣೆಯ  ಉದ್ದೇಶಗಳನ್ನು ಹೊಂದಿದೆ. ಈ ಸುಧಾರಣೆಗಳು ವ್ಯಕ್ತಿ ಸುಧಾರಣೆಯಿಂದಲೇ ಆಗಬೇಕೆನ್ನುವುದು  ಪ್ರಸ್ತುತ ವಚನದ ಮುಖ್ಯ ಆಶಯವಾಗಿದೆ

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ. 

    ಐಪಿಒಗಳು ಎಷ್ಟರಮಟ್ಟಿಗೆ ಲಾಭದಾಯಕ

    ಷೇರುಪೇಟೆಗೆ ಆರಂಭಿಕ ಷೇರು ವಿತರಣೆಗಳು ಕಳಸಪ್ರಾಯಗಳಿದ್ಧಂತೆ. ಷೇರುಪೇಟೆಯಲ್ಲಿ ವಹಿವಾಟಾಗಲು ಸಾಮಾನ್ಯವಾಗಿ ಐಪಿಒ ಗಳು ಅತ್ಯವಶ್ಯಕ. ಹಾಗಾಗಿ ಹೆಚ್ಚಿನ ಕಂಪನಿಗಳು ಆರಂಭದಲ್ಲಿ ಪ್ರವೇಶವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಬೇಕೆಂದು ವೈವಿಧ್ಯಮಯ ರೀತಿಯ ಅಲಂಕಾರಿಕವಾದ ಪ್ರಚಾರ ನೀಡುತ್ತವೆ. ತಾರಾಮಣಿಗಳ ಮೂಲಕವೂ ಪ್ರಚಾರಗಳಿಗೆ ಹೆಚ್ಚಿನ ಒತ್ತು ನೀಡುತ್ತವೆ. ಇದಕ್ಕೆ ಪೂರಕವಾಗಿ ಐಪಿಒ ಗಳಿಗೆ ನಿಗದಿ ಪಡಿಸುವ ವಿತರಣೆ ಬೆಲೆಗಳು ಸಹ ಹೆಚ್ಚಾಗಿರುವುದರಿಂದ ಮಾರ್ಕೆಟಿಂಗ್‌ ತಂತ್ರವಾಗಿಯೂ ಪ್ರಚಾರ ನೀಡಬೇಕಾಗುತ್ತದೆ.

    ಪೇಟೆಯ ಸೂಚ್ಯಂಕಗಳು ಗರಿಷ್ಠಮಟ್ಟದಲ್ಲಿದ್ದಾಗ ಕಾರ್ಪೊರೇಟ್‌ ವಲಯದಲ್ಲಿ ಉತ್ಸಾಹ ತಾಂಡವವಾಡುತ್ತದೆ. ಈ ಉತ್ಸಾಹ ಆಂತರಿಕ ಸಾಧನೆಯಿಂದ ಆಗಿರದೆ ಅದು ಯಾವ ರೀತಿ ತನ್ನ ಸಂಪನ್ಮೂಲಗಳನ್ನು ಹೆಚ್ಚಿಸಿಕೊಳ್ಳಬೇಕು ಎಂಬುದರ ಬಗ್ಗೆ ಆಗಿರುತ್ತದೆ. ಹೀಗಾಗಿ ಆರಂಭದಲ್ಲಿ ವಿಜೃಂಭಿಸಿದ ಐಪಿಓ ಗಳು ದೀರ್ಘಕಾಲ ಅದೇ ಸಾಧನೆ ಮಾಡದೆ ಹೂಡಿಕೆದಾರರಿಗೆ ನಿರಾಶೆ ಮಾಡುತ್ತಿವೆ.

    ಸೆನ್ಸೆಕ್ಸ್‌ ಏರಿಕೆ- ಸಂಪನ್ಮೂಲ ಸಂಗ್ರಹಣೆ ಪೂರಕ

    ಈಗ ಸೆನ್ಸೆಕ್ಸ್‌ ಆದಿಯಾಗಿ ಎಲ್ಲಾ ಸೂಚ್ಯಂಕಗಳು ಗರಿಷ್ಠದಲ್ಲಿವೆ. ಈ ಸಂದರ್ಭದಲ್ಲಿ ಅನೇಕ ಕಂಪನಿಗಳು ನಾನ್‌ ಕನ್ವರ್ಟಬಲ್‌ ಬಾಂಡ್‌ ಗಳ ಮೂಲಕ ಸಂಪನ್ಮೂಲ ಸಂಗ್ರಹಣೆಗೆ ಮುಂದಾಗಿವೆ. ಅವುಗಳಲ್ಲಿ ಸಾರ್ವಜನಿಕ ವಲಯದ ಕಂಪನಿಗಳೂ ಕೂಡ ಸ್ಪರ್ಧಾತ್ಮಕ ರೀತಿಯಲ್ಲಿ ಸಾಗಿವೆ.

    ಪವರ್‌ ಫೈನಾನ್ಸ್‌ ಕಾರ್ಪೊರೇಷನ್ ಇತ್ತೀಚೆಗೆ ರೂ.1,000 ಮುಖಬೆಲೆಯ ಎನ್‌ ಸಿ ಡಿಗಳನ್ನು ಶೇ.7.15 ರ ಗರಿಷ್ಠ ಕೂಪನ್‌ ದರದಲ್ಲಿ ವಿತರಿಸಿದರೆ, ಎನ್‌ ಟಿ ಪಿ ಸಿ ಕಂಪನಿಯು ಶೇ.6.43 ರಂತೆ, ಎಸ್‌ ಜೆ ವಿ ಎನ್‌ ಎಲ್‌ ಕಂಪನಿ ರೂ.2,000 ಕೋಟಿ ಮೌಲ್ಯದ ಬಾಂಡ್‌ ಗಳನ್ನು ವಿತರಿಸಲು ಮುಂದಾಗಿವೆ. ಈ ಮಧ್ಯೆ ಹಿಂದಿನ ವರ್ಷ ಹೆಚ್ಚಿನ ಆಪತ್ತಿನಲ್ಲಿದ್ದು, ರೂ.8,000 ಕ್ಕೂ ಹೆಚ್ಚಿನ ಮೌಲ್ಯದ ಬಾಂಡ್‌ ಗಳನ್ನು ರೈಟಾಫ್ ಮಾಡಿದ, ಶೇಕಡ 75% ಷೇರುಗಳನ್ನು ಮೂರು ವರ್ಷಗಳವರೆಗೂ ಸ್ಥಗಿತಗೊಳಿಸಿದ ಯೆಸ್‌ ಬ್ಯಾಂಕ್‌ ತನ್ನ ಡಿಸೆಂಬರ್‌ ಫಲಿತಾಂಶ ಪ್ರಕಟಿಸಿದ ತಕ್ಷಣವೇ ರೂ.10,000 ಕೋಟಿ ಮೌಲ್ಯದ ಸಂಪನ್ಮೂಲ ಸಂಗ್ರಹಣೆಯ ಗುರಿಹೊಂದಿದೆ. ಇದು ಹಿಂದಿನ ವರ್ಷದ ಜುಲೈ ನಲ್ಲಿ ರೂ.15,000 ಕೋಟೆ ಮೌಲ್ಯದ ಹಕ್ಕಿನ ಷೇರು ವಿತರಿಸಿತ್ತು. ಎಲ್‌ ‍& ಟಿ ಫೈನಾನ್ಸ್‌ ಹೋಲ್ಡಿಂಗ್ಸ್‌, ಊರ್ಜಾ ಗ್ಲೋಬಲ್‌ ಕಂಪನಿಗಳು ಸಹ ಹಕ್ಕಿನ ಷೇರಿನ ಮೂಲಕ ಸಂಪನ್ಮೂಲ ಹೆಚ್ಚಿಸಿಕೊಳ್ಳಲು ಯೋಜಿಸಿವೆ.

    ಕಂಪನಿಗಳು ವಿತರಿಸುವ ಪರ್ಪೆಚುಯಲ್‌ ಬಾಂಡ್‌ ಗಳಿಗೆ ಹೆಚ್ಚಿನ ಕೂಪನ್‌ ದರ ನಿಗದಿಪಡಿಸಲಾಗುತ್ತಿದೆ. ಅಲ್ಲದೆ ಈ ಬಾಂಡ್‌ ಗಳ ಮುಖಬೆಲೆ ರೂ.10 ಲಕ್ಷವಾಗಿರುತ್ತದೆ. ಸೆಕ್ಯೂರ್ಡ್‌ ಎಂಬ ನಾಮಾಂಕಿತದಲ್ಲಿ ವಿತರಿಸಲಾಗುವ ಬಾಂಡ್‌ ಗಳೇ ಆಪತ್ತಿಗೆ ತಳ್ಳುವಾಗ, ಅಪಾಯದ ಹೂಡಿಕೆ ಎಂದು ಮೊದಲೇ ತಿಳಿದಿರುವ ಈ ಪರ್ಪೆಚುಯಲ್‌ ಬಾಂಡ್ ಗಳಲ್ಲಿ ಸಾಮಾನ್ಯರೂ ಹೂಡಿಕೆ ಮಾಡಲು ಅವಕಾಶ ಕಲ್ಪಿಸುವುದು ಅಗತ್ಯ. ಇದರ ಜೊತೆಗೆ ವಿತರಿಸಿದ ಬಾಂಡ್‌ ಗಳು ಸ್ಟಾಕ್‌ ಎಕ್ಸ್‌ ಚೇಂಜ್‌ ಫ್ಲೋರ್‌ ನಲ್ಲಿ ವಹಿವಾಟಿಗೆ ನೋಂದಾಯಿಸುವುದು ಕಡ್ಡಾಯ ಮಾಡಬೇಕು. ಈಗಿನಂತೆ ಕೇವಲ ಮ್ಯೂಚುಯಲ್‌ ಫಂಡ್‌ ಗಳು ವಿತ್ತೀಯ ಸಂಸ್ಥೆಗಳು ಮಾತ್ರ ಹೂಡಿಕೆಗೆ ಅವಕಾಶವಿದ್ದರೂ, ಮ್ಯೂಚುಯಲ್‌ ಫಂಡ್‌ ಗಳು ವಿತ್ತೀಯ ಸಂಸ್ಥೆಗಳಲ್ಲಿ ಪರೋಕ್ಷವಾಗಿ ಸಣ್ಣ ಹೂಡಿಕೆದಾರರ ಹೂಡಿಕೆಯೂ ಇರುತ್ತದೆ ಎಂಬುದು ಗಮನಾರ್ಹ ಅಂಶ.

    ಇವುಗಳಲ್ಲದೆ ಅನೇಕ ಕಂಪನಿಗಳು ಐ ಪಿ ಒ ಮೂಲಕ ಷೇರು ವಿತರಣೆಯ ಯೋಜನೆ/ ಯೋಚನೆಗಳನ್ನು ರೂಪಿಸಿಕೊಂಡಿವೆ. ಈ ತಿಂಗಳಲ್ಲಿ ಸಾರ್ವಜನಿಕ ವಲಯದ ಕಂಪೆನಿಯಾದ ಇಂಡಿಯನ್‌ ರೇಲ್ವೆ ಫೈನಾನ್ಸ್‌ ಕಾರ್ಪೊರೇಷನ್‌, ಇಂಡಿಗೋ ಪೇಂಟ್ಸ್‌, ಹೋಂ ಫಸ್ಟ್‌ ಫೈನಾನ್ಸ್‌ ಗಳು ಐ ಪಿ ಒ ಮೂಲಕ ಷೇರು ವಿತರಣೆ ಪ್ರಕ್ರಿಯೆ ಆರಂಭಿಸಿವೆ. ಸ್ಟೋವ್‌ ಕ್ರಾಫ್ಟ್‌ ಕಂಪನಿಯ ರೂ.385 ರಂತೆ ಷೇರು ವಿತರಣೆ 25 ರಿಂದ ಆರಂಭವಾಗಲಿದೆ. ಈ ಐ ಪಿ ಒ ಗಳು ಸರಣಿ ರೂಪದಲ್ಲಿ ಅಂದರೆ ಒಂದಾದ ನಂತರ ಒಂದರಂತೆ ಆರಂಭವಾಗುವ ರೀತಿ ಯೋಜಿಸಲಾಗಿದೆ ಎಂಬುದು ಗಮನಾರ್ಹ ಅಂಶ.

    ಗ್ರೇ ಮಾರ್ಕೆಟ್‌ ಎಂಬ ಭೂತಗನ್ನಡಿ

    ಷೇರುಗಳ ಐಪಿಒ ಗಳ ವಿತರಣೆಗೆ ಮುನ್ನ ಗ್ರೇ ಮಾರ್ಕೆಟ್‌ ಎಂಬ ಭೂತಗನ್ನಡಿಯ ಪ್ರಚಾರಕ್ಕೆ ಗಮನ ನೀಡುವುದು ಒಳಿತಲ್ಲ.ಗ್ರೇ ಮಾರ್ಕೆಟ್‌ ಎಂದು ಅನಾದಿಕಾಲದಿಂದ ಕರೆಯುವ ಊಹಾ ಪೋಹಗಳ ಆಧಾರಿತ ವರದಿಗಳು ಐಪಿಓ ಪ್ರೀಮಿಯಂ ದರದಲ್ಲಿ ವಿತರಣೆಯಾಗುವ ಸುದ್ದಿ ಹಬ್ಬಿಸುತ್ತವೆ. ಇದಕ್ಕೆ ಯಾವುದೇ ಆಧಾರ ಇರುವುದಿಲ್ಲ. ನಂತರ ವಿತರಣೆಯ ಕೊನೆಯ ದಿನ ಅಥವಾ ಲಿಸ್ಟಿಂಗ್‌ ಮುಂಚಿನ ದಿನಗಳಲ್ಲಿ ಗ್ರೇ ಮಾರ್ಕೆಟ್‌ ಪ್ರೀಮೀಯಂ ಕರಗಿಹೋಗಿರುತ್ತದೆ. ಈ ಗ್ರೇ ಮಾರ್ಕೆಟ್‌ ಎಂಬುದು ಅನಧಿಕೃತವಾಗಿದ್ದು, ಕಾನೂನು ಬಾಹಿರವಾದುದಾಗಿದೆ. ಸಣ್ಣ ಹೂಡಿಕೆದಾರರನ್ನು ಐಪಿಒ ಗಳಲ್ಲಿ ಹಣ ತೊಡಗಿಸಲು ಪ್ರೇರೇಪಿಸುವ ತಂತ್ರವೂ ಆಗಿರುತ್ತದೆ.

    ಆರಂಭ ಶೂರತ್ವ

    ಅನೇಕ ಕಂಪನಿಗಳು ವಿತರಣೆಯ ನಂತರ ಲಿಸ್ಟಿಂಗ್‌ ಪ್ರೈಸ್‌ ಉತ್ತಮವಾಗಿದ್ದು, ನಂತರದ ದಿನಗಳಲ್ಲಿ ಅವುಗಳ ಬೆಲೆ ವಿತರಣೆ ಬೆಲೆಗಿಂತ ಹೆಚ್ಚಿದ್ದರೂ ಆರಂಭದ ಗರಿಷ್ಠಮಟ್ಟವನ್ನು ಉಳಿಸಿಕೊಳ್ಳಲಾಗದೆ ಜಾರಿವೆ. ಒಂದು ರೀತಿಯ ಆರಂಭಿಕ ಶೂರತ್ವವನ್ನು ಪ್ರದರ್ಶಿಸುತ್ತವೆ. ಆದ್ದರಿಂದ ಹೆಚ್ಚಿನವುಗಳಲ್ಲಿ ಆರಂಭಿಕ ಹಂತದಲ್ಲೇ ಮಾರಾಟಮಾಡುವುದಕ್ಕೆ ಪ್ರೇರೇಪಿಸುತ್ತವೆ. ಇದು ಐ ಪಿ ಒ ಗಳು ಕೇವಲ ವ್ಯವಹಾರಿಕ ಪ್ರಕ್ರಿಯೆ ಎಂದು ಸಾಬೀತುಪಡಿಸಿವೆ.

    ಇತ್ತೀಚಿನ ಕೆಲ ಐ ಪಿ ಒ ಗಳ ಉದಾಹರಣೆ ಹೀಗಿವೆ:

    ಎಸ್‌ ಬಿ ಐ ಕಾರ್ಡ್ಸ್‌: ಎಸ್‌ ಬಿ ಐ ಕಾರ್ಡ್ಸ್‌ ಮಾರ್ಚ್‌ 2020 ರಲ್ಲಿ ರೂ.755 ರಲ್ಲಿ ವಿತರಣೆಯಾದ ನಂತರ ರೂ. 500 ರೊಳಗೆ ಕುಸಿದು ನಂತರ ಪುಟಿದೆದ್ದಿದೆ. ಈ ಕುಸಿತಕ್ಕೆ ಪೇಟೆಗಳು ಲಾಕ್‌ ಡೌನ್‌, ಕೊರೋನ ಕಾರಣದ ಸೀಮಿತ ಚಟುವಟಿಕೆಗಳೂ ಕಾರಣವಿರಬಹುದಾದರೂ, ಹೂಡಿಕೆದಾರರಿಗೆ ಲಾಭದಾಯಕವೇ ಎಂಬುದು ಮುಖ್ಯ.

    ಹ್ಯಾಪಿಯೆಸ್ಟ್‌ ಮೈಂಡ್ಸ್‌ ಟೆಕ್ನಾಲಜೀಸ್‌:ಹ್ಯಾಪಿಯೆಸ್ಟ್‌ ಮೈಂಡ್ಸ್‌ ಟೆಕ್ನಾಲಜೀಸ್‌ ಸೆಪ್ಟೆಂಬರ್‌ 2020 ರಲ್ಲಿ ರೂ.166 ರಲ್ಲಿ ವಿತರಿಸಿದ್ದು ರೂ.350 ರ ಸಮೀಪದಲ್ಲಿ ಲಿಸ್ಟಿಂಗ್‌ ಆದ ನಂತರ ನವೆಂಬರ್‌ ನಲ್ಲಿ ರೂ.286 ರವರೆಗೂ ಕುಸಿಯಿತು. ನಂತರ ಜನವರಿಯಲ್ಲಿ ರೂ.395 ಕ್ಕೆ ಜಿಗಿಯಿತು. ಸಧ್ಯ ರೂ.370 ರ ಸಮೀಪವಿದೆ.

    ಕೆಂಕಾನ್‌ ಸೆಷಾಲಿಟಿ ಕೆಮಿಕಲ್ಸ್‌:ಕೆಂಕಾನ್‌ ಸೆಷಾಲಿಟಿ ಕೆಮಿಕಲ್ಸ್‌ ಕಂಪನಿ ಸೆಪ್ಟೆಂಬರ್‌ 2020 ರಲ್ಲಿ ರೂ.340 ರಂತೆ ವಿತರಿಸಿದ್ದು, ರೂ.730 ರ ಸಮೀಪದಿಂದ ಆರಂಭವಾಗಿ ರೂ.743 ತಲುಪಿ ಅಕ್ಟೋಬರ್‌ ನಲ್ಲಿ ರೂ.398 ರವರೆಗೂ ಕುಸಿದು ನಂತರ ರೂ.440 ರ ಸಮೀಪಕ್ಕೆ ಹಿಂದಿರುಗಿಸಿದರೂ ಗರಿಷ್ಠದ ಬೆಲೆ ತಲುಪದಾಗಿದೆ.

    ಬರ್ಜರ್‌ ಕಿಂಗ್‌:ಬರ್ಜರ್‌ ಕಿಂಗ್‌ ಡಿಸೆಂಬರ್‌ ನಲ್ಲಿ ರೂ.60 ರಂತೆ ವಿತರಣೆಯಾದ ನಂತರ ರೂ.115 ರಂತೆ ಲೀಸ್ಟಿಂಗ್‌ ಆಗಿ ರೂ.219 ರವರೆಗೂ ಜಿಗಿದು ಮೂರೇ ದಿನಗಳಲ್ಲಿ ರೂ.108 ರವರೆಗೂ ಕುಸಿಯಿತು.

    ಆಂಟೋಣಿ ವೇಸ್ಟ್‌ ಹ್ಯಾಂಡ್ಲಿಂಗ್‌ ಸೆಲ್:ಕಳೆದ ಮಾರ್ಚ್‌ ತಿಂಗಳಲ್ಲಿ ಪ್ರತಿ ರೂ. 5 ರ ಮುಖಬೆಲೆಯ ಷೇರಿಗೆ ರೂ.300 ರಂತೆ ಐಪಿಒ ಮೂಲಕ ಷೇರು ವಿತರಿಸಲು ಪ್ರಯತ್ನಿಸಿ ವಿಫಲವಾದ ಈ ಕಂಪನಿ ಡಿಸೆಂಬರ್‌ ತಿಂಗಳಲ್ಲಿ ಪ್ರತಿಷೇರಿಗೆ ರೂ.315 ರಂತೆ ಷೇರು ವಿತರಿಸಲು ಜಯಶಾಲಿಯಾಗಿದೆ. ಇದು ಕಂಪನಿಗಳ ಧನದಾಹಿಗುಣವನ್ನು ಬಿಂಬಿಸುತ್ತದೆ. ಆರಂಭದಲ್ಲಿ ರೂ.436 ರಲ್ಲಿದ್ದು ನಂತರ ರೂ.492 ವರೆಗೂ ಜಿಗಿತ ಕಂಡು ಕೇವಲ 10/12 ದಿನಗಳಲ್ಲಿ ರೂ.296 ರವರೆಗೂ ಕುಸಿದು ಸಧ್ಯ ರೂ.302 ರ ಸಮೀಪವಿದೆ.

    ಹೂಡಿಕೆದಾರರ ಬಂಡವಾಳ ಕರಗಿಸಿದ ಐಪಿಒ ಗಳು

    ವಾಟೆಕ್‌ ವಾಬಾಗ್‌ ಕಂಪನಿ 2011 ರಲ್ಲಿ ರೂ.1,310 ರಂತೆ ವಿತರಿಸಿದ ನಂತರ 2015 ರಲ್ಲಿ 1:1 ರ ಬೋನಸ್‌ ನೀಡಿತು. ಈಗ ರೂ.194 ರ ಸಮೀಪವಿದೆ.
    ಇರೋಸ್‌ ಮೀಡಿಯಾ ಕಂಪನಿ ರೂ.175 ರಂತೆ ವಿತರಿಸಿದ್ದು ಈಗ ರೂ.22 ರ ಸಮೀಪವಿದೆ.
    ರಾಂಕಿ ಇನ್ಫ್ರಾಸ್ಟ್ರಕ್ಚರ್‌ ರೂ.450 ರಂತೆ ವಿತರಿಸಿದ್ದು ಈಗ ರೂ.46 ರ ಸಮೀಪವಿದೆ.
    ಬ್ರೂಕ್ಸ್‌ ಲ್ಯಾಬೊರೇಟರೀಸ್‌ ಕಂಪನಿ 2011 ರಲ್ಲಿ ಪ್ರತಿ ಷೇರಿಗೆ ರೂ.100 ರಂತೆ ವಿತರಿಸಿತು, ಆದರೆ ಷೇರಿನ ಬೆಲೆ ವಿತರಣೆಬೆಲೆಯಿಂದ ದೂರವಿದ್ದು ಸಧ್ಯ ರೂ.61 ರ ಸಮೀಪವಿದೆ. ಈ ವರ್ಷದ ಕನಿಷ್ಠ ಬೆಲೆ ರೂ.14.05 ಆಗಿದೆ.
    ಪ್ರಕಾಶ್‌ ಸ್ಟೀಲ್‌ ಏಜ್‌ : ರೂ.110 ರಂತೆ ವಿತರಿಸಿದ ಈ ಕಂಪನಿ ಷೇರಿನ ಬೆಲೆ ರೂ.0.95 ರಲ್ಲಿದೆ
    ತಿಜಾರಿಯಾ ಪೊಲಿಪೈಪ್ಸ್: 2011‌ ರಲ್ಲಿ ರೂ.60 ರಂತೆ ವಿತರಿಸಿದ ಈ ಕಂಪನಿ ಷೇರಿನ ಬೆಲೆ ರೂ.8 ರ ಸಮೀಪವಿದೆ.

    ಟಿಡಿ ಪವರ್‌ ಸಿಸ್ಟಂ, ಬಜಾಜ್‌ ಕಾರ್ಪ್‌ ( ಈಗಿನ ಬಜಾಜ್‌ ಕನ್ಸೂಮರ್ಸ್)‌, ನಿತೇಶ್‌ ಎಸ್ಟೇಟ್ಸ್‌ ( ಎನ್‌ ಇ ಎಲ್‌ ಹೋಲ್ಡಿಂಗ್ಸ್), ‌ ಸ್ಟರ್ಲಿಂಗ್‌ ಅಂಡ್‌ ವಿಲ್ಸನ್‌ ಸೋಲಾರ್‌, ಚಲೆಟ್‌ ಹೋಟೆಲ್ಸ್‌, ವರೋಕ್‌ ಇಂಜಿನಿಯರಿಂಗ್‌, ಲೆಮನ್‌ ಟ್ರೀ ಹೊಟೆಲ್ಸ್‌, ಹೆಚ್‌ ಎ ಎಲ್‌, ನ್ಯೂ ಇಂಡಿಯಾ ಅಶುರನ್ಸ್‌ ಕಂ, ಜನರಲ್‌ ಇನ್ಶೂರನ್ಸ್‌ ಕಾರ್ಪೊರೇಷನ್‌, ಹುಡ್ಕೋ, ಬಿ ಎಸ್‌ ಇ, ಮ್ಯೂಸಿಕ್‌ ಬ್ರಾಡ್ ಕ್ಯಾಸ್ಟ್‌, ಮುಂತಾದ ಕಂಪನಿಗಳು ಈ ಪಟ್ಟಿಯಲ್ಲಿವೆ.

    ಆಂಕರ್‌ ಇನ್ವೆಸ್ಟರ್ಸ್:ಕಂಪನಿಗಳು ತಮ್ಮ ಐಪಿಒ ಗಿಂತ ಮುಂಚಿತವಾಗಿ, ಹೂಡಿಕೆದಾರರಲ್ಲಿ, ವಿಶೇಷವಾಗಿ ಸಣ್ಣ ಹೂಡಿಕೆದಾರರಲ್ಲಿ ಕಂಪನಿಯ, ವಿತರಿಸುತ್ತಿರುವ ದರದ ಬಗ್ಗೆ ನಂಬಿಕೆ ಮೂಡಿಸಲು 2009 ರಲ್ಲಿ ಆಂಕರ್‌ ಇನ್ವೆಸ್ಟರ್‌ ಯೋಜನೆ ಜಾರಿಗೊಳಿಸಲಾಯಿತು. ಇದರಂತೆ ಶೇ.30 ರಷ್ಠು ವಿತರಣೆಯನ್ನು ಹಿತಾಸಕ್ತರ ಹೊರತಾದವರಿಗೆ, ಕನಿಷ್ಠ ರೂ.5 ಕೋಟಿಗೂ ಹೆಚ್ಚಿನ ಮೌಲ್ಯದ ಷೇರುಗಳನ್ನು ಹಿಂದಿನದಿನ ವಿತರಿಸಬಹುದಾಗಿದೆ. ಈ ರೀತಿ ವಿತರಿಸಿದ ಷೇರುಗಳು 30 ದಿನಗಳ ಲಾಕ್‌ ಇನ್‌ ಇದ್ದು, 30 ದಿನಗಳ ನಂತರ ಆಂಕರ್‌ ಇನ್ವೆಸ್ಟರ್‌ ಗಳು ಈ ಷೇರುಗಳನ್ನು ಮಾರಾಟಮಾಡಬಹುದಾಗಿದೆ.

    ವಿಸ್ಮಯಕಾರಿ ಅಂಶ:ಸೆನ್ಸೆಕ್ಸ್‌ 50 ಸಾವಿರದ ಗಡಿದಾಟಿ ದಾಖಲೆ ನಿರ್ಮಿಸಿದೆ. ಆದರೆ ಅದರ ಮಾತೃ ಸಂಸ್ಥೆ ಬಿ ಎಸ್‌ ಇ ಷೇರಿನ ಬೆಲೆ ಮಾತ್ರ ವಿತರಣೆ ಬೆಲೆಗಿಂತ ಕಡಿಮೆಯಿದೆ. 2017 ರಲ್ಲಿ ಪ್ರತಿ ಷೇರಿಗೆ ರೂ.806 ರಂತೆ ವಿತರಿಸಿದ ಈ ಷೇರಿನ ಬೆಲೆ ರೂ.601 ರ ಸಮೀಪವಿದೆ.

    ಈ ಎಲ್ಲಾ ಬೆಳವಣಿಗೆಗಳನ್ನು ಪರಿಶೀಲಿಸಿದಾಗ ಐಪಿಒ ಎಂದರೆ ಕೇವಲ ಇರಿಟೆಟಿಂಗ್‌ ಪಬ್ಲಿಕ್‌ ಆಫರ್‌ ಆಗಿದೆಯೇ ಎಂಬ ಭಾವನೆ ಸಾಮಾನ್ಯ ಹೂಡಿಕೆದಾರರಲ್ಲಿ ಬರುವಂತಾಗಿದೆ. ವಿತರಣೆಯಲ್ಲಿ ಹೆಚ್ಚು ಸಂಗ್ರಹಣೆಯಾದಲ್ಲಿ ಅಲಾಟ್ಮೆಂಟ್‌ ದೊರೆಯದು, ಕಡಿಮೆಯಾದಲ್ಲಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಲಭಿಸದು. ಆದ್ದರಿಂದ ಉತ್ತಮ ಮಾರ್ಗ ಎಂದರೆ ಲಿಸ್ಟಿಂಗ್‌ ಆದ ನಂತರ ಪೇಟೆಯ ಚಟುವಟಿಕೆ, ಕಂಪನಿಯ ಗುಣಮಟ್ಟ ಆಧರಿಸಿ ಖರೀದಿ ನಡೆಸುವುದಾಗಿದೆ.

    Photo by Alec Favale on Unsplash

    ಅಮೆರಿಕದ ಸಿಟಿಜೆನ್ ಷಿಪ್ ಆಕ್ಟ್ 2021;ಭಾರತೀಯರಿಗೆ ಆಗುವ ಲಾಭ ಏನು

    ಅಮೆರಿಕಾದಲ್ಲಿ ನೆಲಸಿರುವ ಭಾರತೀಯರಿಗೆ ಜೋ ಬೈಡನ್ ಉಡುಗೊರೆ. ಅಮೆರಿಕಾದ ಗ್ರೀನ್ ಕಾರ್ಡ್ ಹೊಂದುವುದು ಇನ್ನು ಮುಂದೆ ಮತ್ತಷ್ಟು ಸುಲಭ. ಬೈಡನ್ ಅವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯಂತೆ ಮಹತ್ವಾಕಾಂಕ್ಷೆಯ ಹೊಸ ವಲಸೆ ಸುಧಾರಣಾ ನೀತಿಗೆ ಸಹಿ ಹಾಕಿ ಅದನ್ನು ಕಾಂಗ್ರೆಸ್ ಗೆ ರವಾನಿಸಿದ್ದಾರೆ.  ಅದು ಜಾರಿಯಾದರೆ  ಕಳೆದ ಎಂಟು ವರ್ಷಗಳಿಂದ ಚಾತಕ ಪಕ್ಷಿಯಂತೆ  ‘ಗ್ರೀನ್ ಕಾರ್ಡ್’ ಹೊಂದಲು ಕಾಯುತ್ತಿರುವ  ಸುಮಾರು  ಐದು  ಲಕ್ಷ ಭಾರತೀಯರಿಗೆ  ಅಮೆರಿಕಾದ ಪೌರತ್ವ ಸಿಗಲಿದೆ. 
     
    ‘US  ಸಿಟಿಜೆನ್ ಷಿಪ್ ಆಕ್ಟ್ 2021’ನಿಂದ ಆಗುವ ಉಪಯೋಗಗಳೇನು   

    ಈ ಹೊಸ ಕಾಯಿದೆ   US  ಸಿಟಿಜೆನ್ ಷಿಪ್ ಆಕ್ಟ್ 2021 ಅಮೆರಿಕಾದ ಸಂಸತ್ ಆದ ಕಾಂಗ್ರೆಸ್ ನಲ್ಲಿ  ಅಂಗೀಕರಿಸಿದ ನಂತರ,  ವಲಸೆ ವ್ಯವಸ್ಥೆಯನ್ನು ಆಧುನಿಕರಿಸುವ ಜೊತೆಗೆ  ಹಳೆಯ ಹಲವಾರು ಉಪಯೋಗವಲ್ಲದ ನಿಯಮಗಳನ್ನು ನಿಲ್ಲಿಸಿ, H1B ವೀಸಾ ನಿಯಮಗಳನ್ನು ಸರಳೀಕರಣಗೊಳಿಸುತ್ತದೆ. ಇದರಿಂದ   ಈಗಾಗಲೇ ಅಮೆರಿಕಾದಲ್ಲಿ H1B ವೀಸಾ ಹೊಂದಿರುವವರಿಗೆ  ಗ್ರೀನ್ ಕಾರ್ಡ್ ಹೊಂದಲು ಇನ್ನು ಮುಂದೆ ವರ್ಷಾನುಗಟ್ಟಲೆ ಕಾಯುವುದು ತಪ್ಪುತ್ತದೆ. ಜೊತೆಗೆ  H1B ವೀಸಾ ಹೊಂದಿರುವವರ ಅವಲಂಬಿತರು  ( ಗಂಡ, ಹೆಂಡತಿ, ಮಕ್ಕಳು, ಪೋಷಕರಿಗೆ)  H-4 ವೀಸಾ ಶೀಘ್ರವಾಗಿ ಸಿಗುತ್ತದೆ.  

    1. ಈ ಮೊದಲು ಗ್ರೀನ್ ಕಾರ್ಡ್ ಹೊಂದಲು ಹಲವಾರು ವರ್ಷಗಳು ಕಾಯಬೇಕಿತ್ತು ಹಾಗು ನಿರ್ದಿಷ್ಟ ವೇತನ ಶ್ರೇಣಿಯವರಿಗೆ ಆದ್ಯತೆ ಮೇಲೆ ಬೇಗ ಗ್ರೀನ್ ಕಾರ್ಡ್ ದೊರೆಯುತ್ತಿತ್ತು.  ಇನ್ನು ಮುಂದೆ ಎಲ್ಲಾ ವೇತನ ಶ್ರೇಣಿಯವರಿಗೂ ಗ್ರೀನ್ ಕಾರ್ಡ್ ಬೇಗ ದೊರೆಯುವಂತೆ ಸರಳೀಕರಣ ಗೊಳಿಸಲಾಗಿದೆ. 
    2. ಅಮೆರಿಕಾದಲ್ಲಿ H1B ವೀಸಾ ಪಡೆದು ಉದ್ಯೋಗ ಮಾಡುತ್ತಿದ್ದವರ ಅವಲಂಬಿತರು ಅಮೆರಿಕಾದಲ್ಲಿ ಉದ್ಯೋಗ ಮಾಡಲು ಅಡೆ ತಡೆ ಇದ್ದ ಹಲವಾರು ಅಂಶಗಳನ್ನು ಕೈ ಬಿಡಲಾಗಿದೆ. ಇದರಿಂದ ಅಮೆರಿಕಾದಲ್ಲಿರುವ ಹೆಚ್ಚಿನ ಅವಲಂಬಿತ  ಭಾರತೀಯರು ಕೌಶಲ್ಯಾಧಾರಿತ ಉದ್ಯೋಗ ಮಾಡಲು ಅವಕಾಶ ಕಲ್ಪಿಸುತ್ತದೆ. 
      3.  ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾಗೆ ಹೋಗಿ ‘ಸ್ಟೆಮ್ ಡಿಗ್ರಿಗಳನ್ನು’   ಪಡೆದ ಭಾರತೀಯ ವಿದ್ಯಾರ್ಥಿಗಳಿಗೆ   ಇನ್ನು ಮುಂದೆ ಸುಲಭವಾಗಿ ಅಮೆರಿಕಾದ ಪೌರತ್ವ ಪಡೆಯಲು, ಅಮೆರಿಕಾದಲ್ಲಿ ಉದ್ಯೋಗ ಮಾಡಲು  ಅನುಕೂಲವಾಗಲಿದೆ. 
    3. ಅಮೆರಿಕಾದ ಯಾವ ರಾಜ್ಯದಲ್ಲಿ ಬೇಕಾದರೂ ಎಷ್ಟು ವರ್ಷಗಳು ಬೇಕಾದರೂ ನೆಲೆಸಲು ಸಹಾಯವಾಗುತ್ತದೆ. ಹಾಗು ಅಮೆರಿಕಾ ದಿಂದ ಹೊರ ಹೋಗಲು ಮತ್ತೆ ಬರಲು ಯಾವುದೇ ಅಡೆತಡೆ ಇರುವುದಿಲ್ಲ. 
    4. ಅಮೆರಿಕಾದ ಪೌರತ್ವ ಹೊಂದಲು   ಗ್ರೀನ್ ಕಾರ್ಡ್  ಸಹಾಯಮಾಡಲಿದೆ.  ಇದು ವರ್ಷ ಅಮೆರಿಕಾದಲ್ಲಿ ನೆಲಸಿದ ಗ್ರೀನ್ ಕಾರ್ಡ್ ಹೊಂದಿರುವವರು ಅಮೆರಿಕಾದ ಪೌರತ್ವ ಪಡೆಯಲು ಅರ್ಹರಾಗುತ್ತಾರೆ.   ಜೊತೆಗೆ ಅಮೆರಿಕಾದ ಫೆಡರಲ್ ಸೌಲಭ್ಯಗಳು ಸಿಗಲಿವೆ. ಜೊತೆಗೆ ಅಮೆರಿಕಾದ ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸುವ ಹಕ್ಕನ್ನು ಪಡೆದುಕೊಳ್ಳುತ್ತಾರೆ.  
    5. ಗ್ರೀನ್ ಕಾರ್ಡ್ ಹೊಂದಿರುವವರು ತಮ್ಮದೇ ಆದ ಉದ್ಯೋಗ ಸೃಷ್ಟಿಸಿಕೊಳ್ಳಲು, ವ್ಯಾಪಾರ ವಹಿವಾಟು ಮಾಡಲು ಅನುಕೂಲವಾಗಲಿದೆ.  ತಮ್ಮದೇ ಆದ ಸ್ವಂತ ಮನೆಯನ್ನು ಹೊಂದಲು ಸಹಾಯಕವಾಗಲಿದೆ.
    6. ಗ್ರೀನ್ ಕಾರ್ಡ್ ಹೊಂದಿರುವವರು ಅಮೆರಿಕಾದ ಯೂನಿವರ್ಸಿಟಿ ಯಲ್ಲಿ ಓದಲು ಸುಮಾರು 80% ಟ್ಯೂಷನ್ ಫಿ ಕಮ್ಮಿ ಆಗಲಿದೆ.  ಹಾಗು ಅಮೆರಿಕಾ ಫೆಡರಲ್  ಸ್ಟೂಡೆಂಟ್ ಲೋನ್ ತೆಗೆದುಕೊಳ್ಳಲು ಅರ್ಹರಾಗುತ್ತಾರೆ. 

    H1B ,L1 ವೀಸಾ  ಎಂದರೇನು?

    H1B: ಹದಿನಾರು ವರ್ಷದ ವಿದ್ಯಾಭ್ಯಾಸ  (ಎಂಜಿನಿಯರಿಂಗ್ ನಲ್ಲಿ ಯಾವುದೇ ಪದವಿ) ನಂತರ ಯಾವುದೇ ವಿಷಯದಲ್ಲಿ ಕೌಶಲ್ಯ ಗಳಿಸಿದ  ಕಾರ್ಮಿಕನಿಗೆ/ತಂತ್ರಜ್ಞರಿಗೆ  (ವೈಟ್ ಕಾಲರ್ ಜಾಬ್ ) ಅಮೆರಿಕಾದಲ್ಲಿ ಕೆಲಸ ಮಾಡಲು ಕೊಡುವ ವೀಸಾ.  ಆರು ವರ್ಷದ ಪರಿಮಿತಿ ಹೊಂದಿದ ಈ ವೀಸಾ ಪಡೆದು ಅಮೆರಿಕಾದ ಯಾವುದೇ ಕಂಪೆನಿಗಳಲ್ಲಿ ನೇರವಾಗಿ ಕೆಲಸ ಮಾಡಬಹುದು ಹಾಗೂ ನವೀಕರಿಸಲೂ ಬಹುದು. 

    L1: ಇದು H1B ವೀಸಾ ಕಿಂತ ಸ್ವಲ್ಪ ಭಿನ್ನ,  ಈಗಾಗಲೇ ಭಾರತದಲ್ಲಿ ಇರುವ ಕಂಪೆನಿಗಳಲ್ಲಿ  ಕೆಲಸ ಮಾಡುವ ತಂತ್ರಜ್ಞರು ಅದೇ ಕಂಪನಿಯ ಅಥವಾ ಆ ಕಂಪನಿಯ ಒಡಂಬಡಿಕೆಯಲ್ಲಿ ಹೊಂದಿರುವ  ಅಮೆರಿಕಾದಲ್ಲಿ ಇರುವ ಕಂಪನಿಗೆ  ಕೌಶಲ್ಯ ತುಂಬಿದ ನುರಿತ  ಕೆಲಸ ಮಾಡಲು ಕಳುಹಿಸುವುದು. 

    ಅಮೆರಿಕಾದಲ್ಲಿ ವರ್ಷಕ್ಕೆ ಸರಿ ಸುಮಾರು 65,000  H1B ವೀಸಾವನ್ನು ಲಾಟರಿ ಮೂಲಕ ವಿತರಣೆ ಮಾಡುತ್ತಾರೆ.  ಇದರ ಜೊತೆ L1  ವೀಸಾ ದಡಿಯಲ್ಲಿ ಸುಮಾರು 70 ಸಾವಿರದಷ್ಟು ಜನರು ಭಾರತದಿಂದ ಅಮೆರಿಕಾಕ್ಕೆ ಕೆಲಸಕ್ಕಾಗಿ ವಲಸೆ ಹೋಗುತ್ತಾರೆ.   ಅದರಲ್ಲಿ ಭಾರತದ  IT ದಿಗ್ಗಜ ಕಂಪನಿಗಳಾದ ಇನ್ಫೋಸಿಸ್, ವಿಪ್ರೊ, ಟಿಸಿಎಸ್   ಪಾಲೇ ಹೆಚ್ಚು. ಅದರೊಟ್ಟಿಗೆ  ನೇರವಾಗಿ ಕನ್ಸಲ್ಟೆಂನ್ಸಿಗಳ ಮೂಲಕವೂ H1B ಕೆಲಸಕ್ಕೆ ಅರ್ಜಿಹಾಕಿ ಅಮೆರಿಕಾ ಹಾರುವವರ ಸಂಖ್ಯೆಯೂ ಜಾಸ್ತಿಯೇ ಇದೆ. 

    error: Content is protected !!