26.1 C
Karnataka
Saturday, June 13, 2026
    Home Blog Page 122

    ಬೆಂಗಳೂರು ನಗರ ಹೊರತು ಪಡಿಸಿ ಉಳಿದೆಡೆ ಫೆ.22ರಿಂದ 6ರಿಂದ 8ನೇ ತರಗತಿ ಆರಂಭ

    ಈ ಶೈಕ್ಷಣಿಕ ವರ್ಷದ 6 ರಿಂದ 8ನೇ ತರಗತಿಗಳನ್ನು ಬೆಂಗಳೂರು ನಗರ ಮತ್ತು ಕೇರಳ ಗಡಿಭಾಗಕ್ಕೆ ಹೊಂದಿಕೊಂಡ ಶಾಲೆಗಳನ್ನು ಹೊರತುಪಡಿಸಿ ರಾಜ್ಯಾದ್ಯಂತ ಫೆ. 22ರಿಂದ ಪೂರ್ಣ ಪ್ರಮಾಣದಲ್ಲಿ ಆರಂಭಿಸಲಾಗುವುದು ಎಂದು ತಿಳಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಬೆಂಗಳೂರು ನಗರ ಮತ್ತು ಕೇರಳ ಗಡಿ ಭಾಗದ ಶಾಲೆಗಳಲ್ಲಿ ಎಂದಿನಂತೆ ಈ ತರಗತಿಗಳಿಗೆ ವಿದ್ಯಾಗಮ ಕಾರ್ಯಕ್ರಮ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.

    ಎಲ್ಲ ತರಗತಿಗಳನ್ನು ಆರಂಭಿಸಬೇಕೆಂಬ ರಾಜ್ಯದ ವಿದ್ಯಾರ್ಥಿ ಮತ್ತು ಪೋಷಕ ವಲಯದ ಬೇಡಿಕೆ ಹಾಗೂ ಉಚ್ಚ ನ್ಯಾಯಾಲಯದ ಆಶಯದ ಹಿನ್ನೆಲೆಯಲ್ಲಿ ಮಂಗಳವಾರ ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸುದೀರ್ಘ ಚರ್ಚೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರೊಂದಿಗೆ ಈಗಾಗಲೇ ಆರಂಭವಾಗಿರುವ 9 ಮತ್ತು 12ನೇ ತರಗತಿಗಳಂತೆ 6ರಿಂದ 8ನೇ ತರಗತಿಗಳು ಪೂರ್ಣ ಪ್ರಮಾಣದಲ್ಲಿ ನಡೆಯಲಿವೆ ಎಂದರು.

    ಆ ವೇಳೆಗೆ ರಾಜ್ಯದ ಕೋವಿಡ್‍ಗೆ ಸಂಬಂಧಿಸಿದ ವಿವರವಾದ ವರದಿಯೊಂದು ತಾಂತ್ರಿಕ ಸಲಹಾ ಸಮಿತಿ ಕೈಸೇರಲಿದ್ದು ಅದನ್ನು ಗಮನದಲ್ಲಿಟ್ಟುಕೊಂಡು ಉಳಿದ ಒಂದರಿಂದ ಐದನೇ ತರಗತಿಗಳ ಆರಂಭ ಅಥವಾ ವಿದ್ಯಾಗಮ ಕಾರ್ಯಕ್ರಮವನ್ನು ಆರಂಭಿಸುವ ಸಂಬಂಧದಲ್ಲಿ ಫೆ. 24 ಇಲ್ಲವೇ 25ರಂದು ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಯಲಿದೆ ಎಂದರು.

    ಇನ್ನು ಮುಂದೆ ಆರೋಗ್ಯ ಇಲಾಖೆ ಈಗಾಗಲೇ ಶಾಲೆಗೆ ಹಾಜರಾಗುತ್ತಿರುವ ಮಕ್ಕಳ ಕೋವಿಡ್ ರ‍್ಯಾಂಡಮ್ ಟೆಸ್ಟ್ ಕೈಗೊಳ್ಳಲಿದೆ ಎಂದು ಸಹ ಸುರೇಶ್ ಕುಮಾರ್ ವಿವರಿಸಿದರು.

    ಹಾಜರಾತಿ ಕಡ್ಡಾಯವಿಲ್ಲ-ಪೋಷಕರ ಸಮ್ಮತಿ ಪತ್ರ ಕಡ್ಡಾಯ:
    ಈ ಮೊದಲು ನಿರ್ಧಾರ ಕೈಗೊಂಡಂತೆ 6ರಿಂದ 8ನೇ ತರಗತಿಗಳಿಗೆ ಹಾಜರಾಗಬೇಕಾದ ವಿದ್ಯಾರ್ಥಿಗಳು ತಮ್ಮ ಪೋಷಕರಿಂದ ಶಾಲೆಗೆ ಬರುವಾಗ ಒಪ್ಪಿಗೆ ಪತ್ರ ತರಬೇಕಿರುವುದು ಕಡ್ಡಾಯವಾಗಿದೆ. ಹಾಗೆಯೇ ಶಾಲೆಗೆ ಹಾಜರಾಗುವುದು ಕಡ್ಡಾಯವೇನಿಲ್ಲ. ಕೇರಳ ಭಾಗದಿಂದ ಗಡಿ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕೋವಿಡ್ ಪರೀಕ್ಷೆಗೆ ಒಳಗಾಗಿ ನೆಗೆಟೀವ್ ಫಲಿತಾಂಶವಿದ್ದರೆ ಮಾತ್ರವೇ ಶಾಲೆಗೆ ಹಾಜರಾಗಬೇಕಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    ಶಾಲೆಗಳನ್ನು ಆರಂಭಿಸುವ ಸಂಬಂಧದಲ್ಲಿ ಈಗಾಗಲೇ ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಐದು ಸಭೆಗಳನ್ನು ನಡೆಸಿ ಅವರು ಮಾರ್ಗದರ್ಶನದನ್ವಯವೇ ಶಾಲೆಗಳು ನಡೆಯುತ್ತಿದ್ದು, ಎಲ್ಲ ತರಗತಿಗಳಲ್ಲಿ ಹಾಜರಾತಿ ಕಡ್ಡಾಯವಲ್ಲವಾದರೂ ಶೇ. 70-89ರಷ್ಟು ಹಾಜರಾತಿ ಇದೆ ಎಂದು ಅವರು ವಿವರಿಸಿದರು. ಈ ಮೊದಲು ಆರಂಭವಾಗಿರುವ ಶಾಲೆಗಳ ಹಾಜರಾತಿ, ವಿದ್ಯಾರ್ಥಿಗಳ ಸುರಕ್ಷತೆ ಹಿನ್ನೆಲೆಯಲ್ಲಿ, ಶಾಲೆಗಳಲ್ಲಿ ಕೋವಿಡ್ ನಿಯಮಗಳ ಪಾಲನೆಯನ್ನು ಗಮನಿಸಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ 6ರಿಂದ 8ನೇ ತರಗತಿಗಳ ಆರಂಭಕ್ಕೆ ಹಸಿರು ನಿಶಾನೆ ತೋರಿದೆ ಎಂದು ಅವರು ವಿವರಿಸಿದರು.

    ಜ. 28ರಂದು ಒಂದರಿಂದ ಎಂಟನೇ ತರಗತಿಗಳನ್ನು ಆರಂಭಿಸುವ ಕುರಿತಂತೆ ಫೆಬ್ರವರಿ ಎರಡನೇ ವಾರದಲ್ಲಿ ಆರೋಗ್ಯ ಇಲಾಖೆ ಮತ್ತು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿತ್ತು. ಅದರಂತೆ ಇಂದು ಉಳಿದ ತರಗತಿಗಳನ್ನು ಸಮಿತಿಯ ಮಾರ್ಗದರ್ಶನದಂತೆ ಕೋವಿಡ್ ನಿಯಮಗಳನ್ನು ಅನುಸರಿಸಿ ನಡೆಯಲಿವೆ.

    ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್:ಶಾಲೆಗಳ ಸುರಕ್ಷತೆ ಮತ್ತು ಶಾಲೆಗಳಲ್ಲಿ ನಿಯಮಗಳ ಪಾಲನೆಯನ್ನು ಗಮನಿಸುವ ಹಾಗೂ ಸ್ಥಳೀಯ ಅಗತ್ಯತೆಗಗಳಿಗನುಸಾರವಾಗಿ ಶಾಲೆಗಳ ಆರಂಭಿಸುವ ಸಂಬಂಧದಲ್ಲಿ ಜಿಲ್ಲಾಧಿಕಾರಿಗಳಿಗೆ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ವಿವರಿಸುವ ಸಂಬಂಧದಲ್ಲಿ ಶೀಘ್ರದಲ್ಲೇ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ನಡೆಸಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

    ವಿದ್ಯಾರ್ಥಿಗಳ ಹಾಜರಾತಿಗೆ ಅನುಗುಣವಾಗಿ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿನಿಲಯಗಳನ್ನು ತೆರೆಯಲಿದ್ದಾರೆ. ವಿದ್ಯಾರ್ಥಿಗಳ ಅಗತ್ಯಕ್ಕೆ ತಕ್ಕಂತೆ ಸಾರಿಗೆ ಸಂಸ್ಥೆಯ ನಿಗಮಗಳು ಬಸ್ ಚಾಲನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿವೆ. ಈ ಕುರಿತಂತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ ಎಂದು ಸಚಿವರು ತಿಳಿಸಿದರು.

    ಅಜೀಂಪ್ರೇಂಜೀ ವಿವಿ ನಡೆಸಿದ ಸಮೀಕ್ಷೆಯೊಂದರಲ್ಲಿ ಶಾಲೆಗಳು ಆರಂಭವಾಗದೇ ಇರುವುದರಿಂದ ಶೇ. 92ರಷ್ಟು ಮಕ್ಕಳು ಗಣಿತದಲ್ಲಿ ಹಿಂದೆ ಬಿದ್ದಿದ್ದರೆ, ಶೆ. 80ರಷ್ಟು ಮಕ್ಕಳು ಅಕ್ಷರಗಳನ್ನೇ ಮರೆತಿದ್ದಾರೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಶಾಲಾರಂಭಕ್ಕೆ ಎಲ್ಲ ವಲಯಗಳಿಂದ ಬೇಡಿಕೆ ಹೆಚ್ಚಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    ಕೋವಿಡ್ ತಾಂತ್ರಿಕ ರಾಜ್ಯ ಸಲಹಾ ಸಮಿತಿ ಸೂಚಿಸಿದಂತೆ ಎಸ್ ಒ ಪಿ ಯನ್ವಯ ಸಾಮಾಜಿಕ ಅಂತರ ಪಾಲಿಸಬೇಕಿರುವುದರಿಂದ ವಿದ್ಯಾರ್ಥಿಗಳ ಮತ್ತು ಲಭ್ಯ ತರಗತಿ ಕೊಠಡಿಗಳ ಸಂಖ್ಯೆಗೆ ಅನುಗುಣವಾಗಿ ತರಗತಿಗಳನ್ನು ಪಾಳಿ ಇಲ್ಲವೇ ಅನುಕೂಲಕ್ಕೆ ತಕ್ಕಂತೆ ಹೊಂದಾಣಿಕೆ ಮತ್ತು ಬದಲಾವಣೆ ಮಾಡಿಕೊಳ್ಳಲು ಶಾಲೆಗಳಿಗೆ ಅವಕಾಶವಿದೆ. ಗ್ರಂಥಾಲಯ, ಪ್ರಾರ್ಥನಾ ಕೊಠಡಿ, ಪ್ರಯೋಗಲಯ, ಸಿಬ್ಬಂದಿ ಕೊಠಡಿ, ಕಂಪ್ಯೂಟರ್ ಕೊಠಡಿಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬಹುದಾಗಿದೆ ಎಂದು ಸಚಿವರು ವಿವರಿಸಿದರು.

    ತಾವು ಈ ಅವಧಿಯಲ್ಲಿ ಹತ್ತಕ್ಕೂ ಹೆಚ್ಚು ಜಿಲ್ಲೆಗಳ ಹಲವಾರು ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪೋಷಕರು ಮತ್ತು ಶಾಲಾಡಳಿತ ಮಂಡಳಿಗಳು ಎಲ್ಲ ತರಗತಿಗಳನ್ನು ಆರಂಭಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ನಾವು ಈ ಹಿಂದೆ ತಾಂತ್ರಿಕ ಸಲಹಾ ಸಮಿತಿಯ ನಿರ್ದೇಶನಗಳನ್ನು ಚಾಚೂ ತಪ್ಪದೇ ಪಾಲಿಸಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡ ಹಿನ್ನೆಲೆಯಲ್ಲಿ ಇಲ್ಲಿಯವರೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧೀನದಲ್ಲಿ ಬರುವ ಯಾವುದೇ ಶಾಲೆಯಿಂದ ಕೋವಿಡ್ ಸೋಂಕು ಹರಡುವಿಕೆ ವರದಿಯಾಗಿಲ್ಲ ಎಂದು ಸಚಿವರು ತಿಳಿಸಿದರು. ಮಕ್ಕಳು ಭೌತಿಕವಾಗಿ ಶಾಲೆಗಳಲ್ಲಿ ಹಾಜರಾಗುತ್ತಿರುವ ಕಾರಣ ಕಲಿಕಾ ಆಸಕ್ತಿ ಹೆಚ್ಚಿದೆ. ಬೋಧನೆ ಪರಿಣಾಮಕಾರಿಯಾಗುತ್ತಿದೆ ಎಂದು ತಿಳಿಸಿದ ಸಚಿವರು ಶಾಲೆ ಆರಂಭವಾದ ಮೇಲೆ ಮಕ್ಕಳಿಗಾಗಲೀ ಇಲ್ಲವೇ ಶಿಕ್ಷಕರಿಗಾಗಲಿ ಯಾವುದೇ ಸೋಂಕು ಹರಡಿಲ್ಲ ಎಂದರು.

    ಇದೇ ಸಂದರ್ಭದಲ್ಲಿ ಪಂಜಾಬ್ ಮತ್ತು ಆಂಧ್ರಪ್ರದೇಶದಲ್ಲಿ ಒಂದನೇ ತರಗತಿಯಿಂದ ಎಲ್ಲ ತರಗತಿಗಳು ಆರಂಭವಾಗಿವೆ. ದೆಹಲಿ ಮತ್ತು ಒರಿಸ್ಸಾದಲ್ಲಿ 9ರಿಂದ ಮೇಲಿನ ತರಗತಿಗಳು, ಕೇರಳದಲ್ಲಿ 10ರಿಂದ ಮೇಲಿನ ತರಗತಿಗಳು, ಮಹಾರಾಷ್ಟ್ರದಲ್ಲಿ 5ರಿಂದ ಮೇಲಿನ ತರಗತಿಗಳು ಹರಿಯಾಣದಲ್ಲಿ 9ರಿಂದ ಮೇಲಿನ ತರಗತಿಗಳು ಆರಂಭವಾಗಿವೆ ಎಂದು ಸಚಿವರು ವಿವಿಧ ರಾಜ್ಯಗಳ ಶೈಕ್ಷಣಿಕ ಚಟುವಟಿಕೆಗಳನ್ನು ವಿವರಿಸಿದರು.

    ಈಗಾಗಲೇ ಆರಂಭವಾಗಿರುವ 10ನೇ ತರಗತಿ ಸರಾಸರಿ ಹಾಜರಾತಿ – 70.7%, 9ನೇ ತರಗತಿ ಸರಾಸರಿ ಹಾಜರಾತಿ – 60.30%, 6 ರಿಂದ 8ನೇ ತರಗತಿ ವಿದ್ಯಾಗಮ ಕಾರ್ಯಕ್ರಮದ ಸರಾಸರಿ ಹಾಜರಾತಿ– 50.5 % ಇದೆ. ಪಿಯು ತರಗತಿಗಳಲ್ಲೂ ಶೇ. 75ಕ್ಕೂ ಹೆಚ್ಚು ಹಾಜರಾತಿ ಇದೆ. ಟಿ.ಎ.ಸಿ. ಶಿಫಾರಸ್ಸಿನಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಎಸ್.ಓ.ಪಿ ಅನುಸಾರ ತೆಗೆದುಕೊಂಡಿದ್ದರಿಂದ ಹಾಗೂ ಶಿಕ್ಷಕರಿಗೆ ಮುಂಚಿತವಾಗಿ ಕೋವಿಡ್-19 ಪರೀಕ್ಷೆಗಳನ್ನು ಮಾಡಿಸಿದ್ದ ಹಿನ್ನಲೆಯಲ್ಲಿ ಯಾವುದೇ ಶಾಲೆಯಿಂದ ಸೋಂಕು ಹರಡುವಿಕೆ ಕುರಿತು ಈ ವರೆಗೆ ವರದಿಯಾಗಿಲ್ಲ. ಈ ಎಲ್ಲ ಅಂಶಗಳನ್ನು ಅಂಶವನ್ನು ತಾಂತ್ರಿಕ ಸಲಹಾ ಸಮಿತಿ ಅವಲೋಕಿಸಿ ಎಲ್ಲ ತರಗತಿಗಳ ಆರಂಭಕ್ಕೆ ಅನುಮತಿ ನೀಡಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    ಮುಂದಿನ ಶೈಕ್ಷಣಿಕ ಸಾಲು:2021-22 ಸಾಲಿನ ಶೈಕ್ಷಣಿಕ ವರ್ಷವನ್ನು 2021ರ ಜುಲೈ 15ರಿಂದ ಏಕಕಾಲದಲ್ಲಿ ಆರಂಭವಾಗಲಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ. ಅನ್ಬುಕುಮಾರ್ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಜರಿದ್ದರು.

    ಬೆಂಗಳೂರಿನ ಪ್ರತಿ ವಿಧಾನಸಭೆ ಕ್ಷೇತ್ರಕ್ಕೊಂದು ಜಾಗತಿಕ ಗುಣಮಟ್ಟದ ಪದವಿ ಕಾಲೇಜು

    ಬೆಂಗಳೂರು ಉತ್ತರ ವಿವಿಗೆ 170 ಎಕರೆ ಭೂಮಿ;
    ಜಂಗಮಕೋಟೆಯಲ್ಲಿ ನಾಲೆಡ್ಜ್‌ ಸಿಟಿ

    ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ಎಲ್ಲ ಸಿದ್ಧತೆಗಳು ಅಂತಿಮ ಹಂತದಲ್ಲಿರುವಾಗಲೇ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ; ರಾಜಧಾನಿಯ 28 ವಿಧಾನಸಭೆ ಕ್ಷೇತ್ರಗಳಲ್ಲಿ ಗುಣಮಟ್ಟದ ಪದವಿ ಕಾಲೇಜುಗಳನ್ನು ಸ್ಥಾಪನೆ ಮಾಡುವುದಾಗಿ ಪ್ರಕಟಿಸಿದ್ದಾರೆ.

    ಬೆಂಗಳೂರಿನಲ್ಲಿ ಸೋಮವಾರ ಉನ್ನತ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು; ಗುಣಮಟ್ಟದ ಕಲಿಕೆ, ಬೋಧನೆ ಮತ್ತು ಸಂಶೋಧನೆ ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯ. ಅದರಂತೆ ಬೆಂಗಳೂರು ಕೇಂದ್ರ (ಸೆಂಟ್ರಲ್‌ ಕಾಲೇಜ್)‌, ಬೆಂಗಳೂರು (ಜ್ಞಾನಭಾರತಿ) ಹಾಗೂ ಬೆಂಗಳೂರು ಉತ್ತರ (ಕೋಲಾರ) ವಿಶ್ವವಿದ್ಯಾಲಯಗಳ ಮೂಲಕವೇ ಇಷ್ಟೂ ವಿಧಾನಸಭೆ ಕ್ಷೇತ್ರಗಳಲ್ಲಿ ಅತ್ಯುತ್ತಮ ಗುಣಮಟ್ಟದ ಪದವಿ ಕಾಲೇಜುಗಳನ್ನು ಸ್ಥಾಪಿಸಲಾಗುವುದು ಎಂದರು.

    ಬೆಂಗಳೂರು ಅಗಾಧವಾಗಿ ಬೆಳೆಯುತ್ತಿದ್ದು, ಜನಸಂಖ್ಯೆ 1.50 ಕೋಟಿಯನ್ನೂ ಮೀರಿದೆ. ಈ ಹಿನ್ನೆಲೆಯಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯಗಳನ್ನು ಪರಿಣಾಮಕಾರಿಯಾಗಿ ಪೂರೈಸಬೇಕಾದರೆ ಇಷ್ಟು ಕಾಲೇಜುಗಳ ನಿರ್ಮಾಣ ಅಗತ್ಯ. ಒಂದು ವೇಳೆ ಇಲ್ಲದಿದ್ದರೆ ಹೊಸ ಕಾಲೇಜನ್ನು ನಿರ್ಮಾಣ ಮಾಡಲಾಗುವುದು. ಖಾಸಗಿ ಕಾಲೇಜುಗಳಲ್ಲಿ ಶಿಕ್ಷಣ ಪಡೆಯಲಾಗದೆ ಆರ್ಥಿಕ- ಸಾಮಾಜಿಕವಾಗಿ ಹಿಂದುಳಿದಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಈ ಮೂಲಕ ಗುಣಮಟ್ಟದ ಶಿಕ್ಷಣ ಸಿಗಲಿದೆ ಎಂದು ಡಿಸಿಎಂ ಹೇಳಿದರು.

    ಜಾಗ ಸರಕಾರದ್ದು:ಇಷ್ಟು ಕಾಲೇಜುಗಳನ್ನು ನಿರ್ಮಾಣ ಮಾಡುವುದು ದೊಡ್ಡ ಕನಸು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಇದಕ್ಕೆ ಅಗತ್ಯವಾದ ಭೂಮಿಯನ್ನು ಸರಕಾರವೇ ನೀಡಬೇಕು. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. ಇಲಾಖೆಯ ಇವತ್ತಿನ ಪ್ರಗತಿ ಪರಿಶೀಲನಾ ಸಭೆಗೂ ಮುನ್ನ ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್‌ ಅವರ ಜತೆ ಮಾತುಕತೆ ನಡೆಸಿದ್ದೇನೆ. ನಗರದ ವ್ಯಾಪ್ತಿಯಲ್ಲಿ ಕಾಲೇಜುಗಳ ನಿರ್ಮಾಣಕ್ಕೆ ಬೇಕಾಗುವ ಭೂಮಿ ಎಲ್ಲೆಲ್ಲಿ ಲಭ್ಯವಿದೆ ಎಂಬ ಬಗ್ಗೆ ಅವರಿಂದ ಮಾಹಿತಿ ಕೇಳಿದ್ದೇನೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

    ಇನ್ನು ಕೆಲ ದಿನಗಳಲ್ಲಿಯೇ ನಗರದ ಎಲ್ಲ ಶಾಸಕರ ಸಭೆಯನ್ನು ಕರೆಯಲಿದ್ದೇನೆ. ಭೂಮಿ ಪಡೆಯುವ ಸಂಬಂಧ ಅವರೆಲ್ಲರ ವಿಶ್ವಾಸವನ್ನು ಪಡೆದು ಮುಂದಿನ ಹೆಜ್ಜೆ ಇಡಲಾಗುವುದು. ಎಲ್ಲ ಕ್ಷೇತ್ರಗಳೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಮಾನಾಂತರವಾಗಿ ಬೆಳೆಯಬೇಕು ಎಂಬುದು ನನ್ನ ಅಭಿಲಾಶೆಯಾಗಿದೆ. ಮೊದಲ ಹಂತದಲ್ಲಿ ಬೆಂಗಳೂರು ನಗರದಲ್ಲಿ ಈ ಯೋಜನೆಯನ್ನು ಕಾರ್ಯಗತ ಮಾಡಿ ನಂತರ ಇಡೀ ರಾಜ್ಯಕ್ಕೆ ವಿಸ್ತರಿಸಲಾಗುವುದು ಎಂದು ಅವರು ಹೇಳಿದರು.

    ಬೇಡಿಕೆ ಇರುವ ಕೋರ್ಸುಗಳು ಮಾತ್ರ:ಶಿಕ್ಷಣ ನೀತಿಯಲ್ಲಿ ಉಲ್ಲೇಖ ಮಾಡಿರುವ ಅಂಶಗಳ ಆಧಾರದ ಮೇಲೆ ಉದ್ಯೋಗಾಧಾರಿತ, ವೃತ್ತಿಪರ ಮತ್ತು ಜಾಗತಿಕವಾಗಿ ಬೇಡಿಕೆ ಹೊಂದಿರುವ ಕೋರ್ಸುಗಳನ್ನೂ ಆರಂಭಿಸಲಾಗುವುದು. ಈ ಮೂಲಕ ವಿದ್ಯಾರ್ಥಿಗಳ ಕನಸುಗಳು ಈಡೇರಿ ಅವರ ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳು ಸುಧಾರಿಸುತ್ತವೆ ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.

    8,000 ಬೋಧಕರ ಮಂಜೂರು:ಪ್ರಸ್ತುತ ರಾಜ್ಯದ ಪದವಿ ಕಾಲೇಜುಗಳಲ್ಲಿ ಬೋಧಕರ ಕೊರತೆ ಇದೆ. ಇದಲ್ಲದೆ ಇನ್ನೂ 8,000 ಬೋಧಕ ಹುದ್ದೆಗಳನ್ನು ಮಂಜೂರು ಮಾಡುವಂತೆ ಕೋರಲಾಗಿದೆ. ಈಗ ಖಾಲಿ ಇರುವ ಹುದ್ದೆಗಳ ಜತೆಗೆ ಈ ಹುದ್ದೆಗಳ ಮಂಜೂರು ಮಾಡಬೇಕಾಗಿದೆ. ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಈ ಬಗ್ಗೆ ಬೇಡಿಕೆ ಸಲ್ಲಿಸಲಾಗಿದೆ. ಹಾಗೇಯೇ, ಇಲಾಖೆಗೆ ಸಿಗುತ್ತಿರುವ ಒಟ್ಟಾರೆ ಅನುದಾನ ಕಡಿಮೆ ಇದ್ದು, ರಾಜ್ಯದ ಒಟ್ಟು ಬಜೆಟ್‌ ಗಾತ್ರದಲ್ಲಿ ಶೇ.3.5ರಷ್ಟು ಮೊತ್ತವನ್ನು ಉನ್ನತ ಶಿಕ್ಷಣಕ್ಕೆ ಮೀಸಲಿಡಬೇಕು ಎಂದು ಮನವಿ ಮಾಡಲಾಗಿದೆ. ಈಗ, ಅಂದರೆ; 2020-21ರ ಮುಂಗಪತ್ರದಲ್ಲಿ ಮಂಜೂರಾದ ಒಟ್ಟು 4687 ಕೋಟಿ ರೂ. ಅನುದಾನದಲ್ಲಿ ಶೇ.88ರಷ್ಟು ಅಂದರೆ; 3998 ಕೋಟಿ ರೂ. ವೇತನಕ್ಕೇ ಹೋಗಿದೆ. ಉಳಿದ ಶೇ.12ರಷ್ಟು ಅಂದರೆ 595 ಕೋಟಿ ರೂ. ಮೊತ್ತದಲ್ಲಿ ಮಾತ್ರ ಇಲಾಖೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಹೀಗಾಗಿ ಅನುದಾನವನ್ನು ಹೆಚ್ಚಿಸಬೇಕೆಂದು ಮುಖ್ಯಮಂತ್ರಿಗಳನ್ನು ಕೋರಲಾಗಿದೆ ಎಂದು ಮಾಹಿತಿ ನೀಡಿದರು ಉಪ ಮುಖ್ಯಮಂತ್ರಿ.

    ಉತ್ತರ ವಿವಿಗೆ ಭೂಮಿ:ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ಜಂಗಮಕೋಟೆ ಬಳಿ 172 ಎಕರೆ ಜಾಗ ಗುರುತಿಸಿದ್ದು, ಆ ಪೈಕಿ 57 ಎಕರೆಯನ್ನು ಹಸ್ತಾಂತರ ಮಾಡಲಾಗಿದೆ. ಇನ್ನೊಂದು ತಿಂಗಳಲ್ಲಿ 53 ಎಕರೆ ಹಸ್ತಾಂತರ ಮಾಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇದಲ್ಲದೆ 61 ಎಕರೆಯಲ್ಲಿ 51 ಎಕರೆ ಸರ್ಕಾರದ್ದೇ ಇದೆ ಎನ್ನುವುದು ಪರಿಶೀಲನೆ ವೇಳೆ ಗೊತ್ತಾಗಿದೆ. ಅದನ್ನೂ ವಶಕ್ಕೆ ಪಡೆಯಲಾಗುವುದು. ಇನ್ನೊಂದು ತಿಂಗಳ ಒಳಗಾಗಿ ಈ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಲಾಗುವುದು ಎಂದು ಡಾ.ಅಶ್ವತ್ಥನಾರಾಯಣ ಪ್ರಕಟಿಸಿದರು.

    ಜಂಗಮಕೋಟೆಯಲ್ಲಿ ನಾಲೆಡ್ಜ್‌ ಸಿಟಿ:2015ರಲ್ಲಿ ಈ ಬೆಂಗಳೂರು ಉತ್ತರ ವಿವಿ ಸ್ಥಾಪನೆ ಬಗ್ಗೆ ಸರಕಾರ ನಿರ್ಧಾರ ಕೈಗೊಂಡಿತಾದರೂ ಅದು ಅಸ್ತಿತ್ವಕ್ಕೆ ಬಂದಿದ್ದು 2018ರಲ್ಲಿ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಬಳಿ ಸುಸಜ್ಜಿತ ಕ್ಯಾಂಪಸ್‌ ನಿರ್ಮಾಣವಾಗಲಿದೆ. ಈ ಜಾಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಂಬಾ ಹತ್ತಿರದಲ್ಲಿದೆ. ಹೀಗಾಗಿ ಇಲ್ಲಿ ಒಂದು ಜ್ಞಾನ ನಗರ (ನಾಲೆಡ್ಜ್‌ ಸಿಟಿ) ವನ್ನು ಸ್ಥಾಪನೆ ಮಾಡಲಾಗುವುದು ಎಂದರು.

    ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ, ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ, ಬೆಂಗಳೂರು ಉತ್ತರ ವಿವಿ ಕುಲಪತಿ ಡಾ.ಕೆಂಪರಾಜು ಮತ್ತಿತರರು ಹಾಜರಿದ್ದರು.

    ಆಹಾರಕ್ಕೆ ಮಾತ್ರ ಬದುಕು ಎಂದರೆ ಈ ಹುಟ್ಟು ವ್ಯರ್ಥ


    ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು , ವಚನ ಸಾಹಿತ್ಯದಲ್ಲಿ ಅಡಗಿರುವ ಸಂಗತಿಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟು ಮತ್ತು ವಚನಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.


    ಕೂಳುಗೇಡಿಂಗೆ ಒಡಲ ಹೊರುವಿರಿ- ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂದು ಕರೆಸಿಕೊಂಡಿರುವ ಕುಮಾವ್ಯಾಸನ ಗದುಗಿನ ಭಾರತದಲ್ಲಿ  ಬರುವ ಮಾತಿದು.   ಐದೂ ಜನ ಗಂಡರಿದ್ದು  ನನ್ನೊಬ್ಬಳನ್ನು ರಕ್ಷಿಸುವುದಕ್ಕೆ ನಿಮ್ಮಿಂದಾಗುವುದಿಲ್ಲವೇ  ಎಂದು ನೋವಿನಿಂದ, ವಿಷಾದದಿಂದ ಹತಾಶೆಯಿಂದ  ದ್ರೌಪದಿ ಭೀಮನನ್ನು ಕುರಿತು ಈ ಮಾತುಗಳನ್ನಾಡುತ್ತಾಳೆ.

    ಮನುಷ್ಯ ಬುದ್ಧಿಜೀವಿ ಎಂಬುದಾದರೆ ಆತ ತನ್ನ ಜೀವಿತಾವಧಿಯಲ್ಲಿ ಒಂದಿಲ್ಲೊಂದು ಒಳ್ಳೆಯ ಕೆಲಸವನ್ನು ಮಾಡಬೇಕು. ಇಲ್ಲವಾದರೆ ವ್ಯರ್ಥವೇ.  (ಇಲ್ಲಿ ‘ಕೂಳು’ ಎಂದರೆ ಅನ್ನ ಎಂದರ್ಥ. ಕೂಳು  ಆಧುನಿಕ ಕಾಲದಲ್ಲಿ ಹೀನಾರ್ಥ ಪಡೆದುಕೊಂಡಿದೆ)

    ಆಹಾರ ಸೇವನೆ  ಪ್ರಾಣ ರಕ್ಷಣೆಗೆ.ಅದನ್ನು ಬಿಟ್ಟು ಅಳತೆಯಲ್ಲಿ ಮೂರಂಗುಲವಿರುವ ನಾಲಗೆಯ ಸೆಳೆತಕ್ಕೆ ಒಳಗಾಗಬಾರದು .  “ಜಿಹ್ವಾಚಾಪಲ್ಯಕ್ಕಿಂತ ಜವಾಬ್ದಾರಿ” ಮುಖ್ಯ ಎಂಬುದನ್ನು ಈ ವಾಕ್ಯ ಹೇಳುತ್ತದೆ.  ಆಹಾರಕ್ಕೆ ಮಾತ್ರ  ಈ ಬದುಕು ಎಂದರೆ ಈ ಹುಟ್ಟು ವ್ಯರ್ಥವೆಂದೇ  ತಿಳಿಯಬೇಕು.  ಪ್ರಾಣಿಗಳು ತಿಂದು ಬದುಕುತ್ತವೆ.  ಜನ ತಿಳಿದು ಬದುಕುತ್ತಾರೆ ಎಂದು ಹೇಳವುದು ಇದಕ್ಕೆ ಅಲ್ಲವೆ!

    ತಮ್ಮ  ಜವಾಬ್ದಾರಿಯನ್ನು ಚಾಚೂ ತಪ್ಪದೆ ಪಾಲಿಸಬೇಕು ಇಲ್ಲವಾದರೆ  ಈ ಹುಟ್ಟು ವ್ಯರ್ಥ  ಎಂದೇ ಇಲ್ಲಿ ವೇದ್ಯವಾಗುತ್ತದೆ.  ತಿನ್ನುವುದು ಉಡುವುದು ತೊಡುವುದರಾಚೆಗಿನ ಜೀವನ ಜೀವಿಸುವುದು ಮುಖ್ಯ  ಅದನ್ನು ಬಿಟ್ಟು  ಮೂಲ ಅವಶ್ಯಕತೆಗಳೆ   ಮುಖ್ಯವಾಗಬಾರದು. ಅವಲಂಬಿತರ ಮಾನಕ್ಕೆ ಧಕ್ಕೆಯುಂಟಾದಾಗ ಶೀಘ್ರ ಸ್ಪಂದಿಸಬೇಕು ಎಂಬ ಕಳಕಳಿ “ಕೂಳುಗೇಡಿಂಗೆ ಒಡಲ ಹೊರುವಿರಿ” ಮಾತಿನ ಹಿಂದಿದೆ.ವೈಯುಕ್ತಿಕ ಹಿತಾಸಕ್ತಿಗಳಿಗೆ ತನ್ನವರ ಮರ್ಯಾದೆಯನ್ನು ಪದೇ ಪದೇ ಪಣಕ್ಕಿಡುವುದು ಹೇಡಿಗಳ ಲಕ್ಷಣ  ಎಂಬ ಅರ್ಥವೂ ಇಲ್ಲಿ ಸ್ಫುರಿಸುತ್ತದೆ.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ. 

    ಬಂಡವಾಳಪೇಟೆಯಲ್ಲಿ speculation ಮಾಡದೆ ಹೂಡಿಕೆ ಮಾಡುವುದೆ ಜಾಣತನ

    ಷೇರುಪೇಟೆ ಎಂದೊಡೆ ಎಲ್ಲರ ಚಿತ್ತವೂ ಚುರುಕಾಗುವ ವಾತಾವರಣ ನಿರ್ಮಿತವಾಗಿದೆ. ಇದಕ್ಕೆ ಕಾರಣ ಷೇರುಪೇಟೆಯ ಹೆಗ್ಗುರುತಾದ ಸೆನ್ಸೆಕ್ಸ್‌ ಒಂದೇ ವರ್ಷದಲ್ಲಿ ದ್ವಿಗುಣಗೊಂಡಿರುವುದಲ್ಲದೆ ಸರ್ವಕಾಲೀನ ಗರಿಷ್ಠ ಮಟ್ಟಕ್ಕೆ ಜಿಗಿದಿರುವುದಾಗಿದೆ.

    ಇನ್ನು ಬಿ ಎಸ್‌ ಇ ಮಿಡ್‌ ಕ್ಯಾಪ್‌ ಇಂಡೆಕ್ಸ್‌ ಸಹ ದ್ವಿಗುಣಗೊಂಡರೆ, ಬಿ ಎಸ್‌ ಇ ಸ್ಮಾಲ್‌ ಕ್ಯಾಪ್‌ ಇಂಡೆಕ್ಸ್‌ ಸುಮಾರು ಎರಡೂವರೆ ಪಟ್ಟಿಗೆ ಸಮೀಪವಿದೆ. ಬಿಎಸ್‌ ಇ ಆಟೋ ಇಂಡೆಕ್ಸ್‌ ಸುಮಾರು ಎರಡೂವರೆಪಟ್ಟು ಹೆಚ್ಚಾಗಿದೆ. ಬಿ ಎಸ್‌ ಇ ಬ್ಯಾಂಕ್‌ ಇಂಡೆಕ್ಸ್‌ ಸಹ ಎರಡು ಪಟ್ಟಿಗೂ ಹೆಚ್ಚಿನ ಏರಿಕೆ ಪ್ರದರ್ಶಿಸಿದೆ. ಬಿ ಎಸ್‌ ಇ ಕನ್ಸೂಮರ್‌ ಡ್ಯೂರಬಲ್ಸ್‌, ಬಿ ಎಸ್‌ ಇ ಕ್ಯಾಪಿಟಲ್‌ ಗೂಡ್ಸ್‌ ಇಂಡೆಕ್ಸ್‌ , ಬಿ ಎಸ್‌ ಇ ಹೆಲ್ತ್‌ ಕೇರ್‌ ಇಂಡೆಕ್ಸ್‌ ಗಳೂ ಸಹ ದ್ವಿಗುಣಗೊಂಡಿವೆ.

    ಹೀಗಿರುವಾಗ ಷೇರುಪೇಟೆಯಲ್ಲಿ ವಹಿವಾಟಿಗೆ ಲಿಸ್ಟಿಂಗ್‌ ಆಗಿರುವ ಎಲ್ಲಾ ಷೇರುಗಳೂ ಏರಿಕೆಯನ್ನು ಕಂಡಿವೆ ಎಂಬ ಭ್ರಮೆ ಬೇಡ. ಬಹಳಷ್ಠು ಕಂಪನಿಗಳು ಹಿಂದೆ ಕಂಡಂತಹ ಬೆಲೆಗಳನ್ನು ಮತ್ತೆ ತಲುಪುದಾಗಿವೆ. ಉತ್ತಮ ಕಂಪನಿಗಳೇ ಆದರೂ ಪೇಟೆಯಲ್ಲಿ ಏರಿಕೆ ಕಾಣದ ಪರಿಸ್ಥಿತಿಗೆ ತಲುಪಿವೆ. ಇವುಗಳಲ್ಲಿ ಕೆಲವನ್ನು ಉದಾಹರಣೆಗಾಗಿ ನೀಡಲಾಗಿದೆ.

    ಚೇತರಿಕೆ ಕಂಡ ಕಂಪನಿಗಳ ಇತಿಹಾಸ:

    • ವೊಡಫೋನ್‌ ಐಡಿಯಾ ಕಂಪನಿಯ ಷೇರು ಕಳೆದ ಒಂದು ವರ್ಷದಲ್ಲಿ ರೂ.2.83 ರಿಂದ ರೂ.13.80 ರವರೆಗೂ ಜಿಗಿದಿದೆ. ಆದರೂ ಈ ಷೇರಿನ ಬೆಲೆ ಏಪ್ರಿಲ್‌ 2017 ರಲ್ಲಿದ್ದ ರೂ.90 ಹಂತಕ್ಕೆ ತಲುಪುವ ಸಾಧ್ಯತೆ ಸದ್ಯಕ್ಕಂತೂ ಕಾಣುತ್ತಿಲ್ಲ.
    • ದಾಲ್ಮಿಯಾ ಭಾರತ್‌ ಶುಗರ್ಸ್ ಕಂಪನಿ ಷೇರಿನ ಬೆಲೆ ರೂ.40 ರಿಂದ ರೂ.158 ರವರೆಗೂ ಏರಿಕೆ ಕಂಡಿದ್ದರೂ 2017 ರ ನವೆಂಬರ್‌ ತಿಂಗಳ ರೂ.175 ರ ಹಂತವನ್ನು ಇನ್ನೂ ತಲುಪಿಲ್ಲ.
    • ಪ್ರತಿ ಷೇರಿಗೆ ರೂ.6 ರಂತೆ ಡಿವಿಡೆಂಡ್‌ ವಿತರಿಸಿದ ಬಜಾಜ್‌ ಕನ್ಸೂಮರ್‌ ಕೇರ್‌ ಕಂಪನಿ ಷೇರಿನ ಬೆಲೆ ರೂ.118 ರ ಸಮೀಪದಿಂದ ರೂ.284 ರವರೆಗೂ ಏರಿಕೆಯನ್ನು ಕಂಡಿದ್ದರೂ 2019 ರ ಡಿಸೆಂಬರ್‌ ತಿಂಗಳ ರೂ.325 ನ್ನು ತಲುಪಲು ಇನ್ನಷ್ಠು ಸಮಯಬೇಕಾಗಬಹುದು.
    • ಕ್ಯಾಸ್ಟ್ರಾಲ್‌ ಇಂಡಿಯಾ ಷೇರಿನ ಬೆಲೆ ಹಿಂದಿನ ಫೆಬ್ರವರಿಯಲ್ಲಿ ರೂ.162 ರಲ್ಲಿತ್ತು. ಈ ಬೆಲೆಯು 2018 ರ ಆಗಷ್ಟ್‌ ತಿಂಗಳ ಬೆಲೆಯಾಗಿದ್ದು, ಅಲ್ಲಿಂದ ರೂ.89 ರವರೆಗೂ ಕುಸಿದು, ಸದ್ಯ ರೂ.129 ರ ಸಮೀಪವಿದೆ. ಎಲ್ಲಾ ಇಂಡೆಕ್ಸ್‌ ಗಳು ಏರಿಕೆ ಕಂಡಿದ್ದರೂ ಈ ಕಂಪನಿ ಷೇರಿನ ಬೆಲೆ ಇಳಿಕೆಯಲ್ಲೇ ಇದೆ.
    • ಎವರೆಸ್ಟ್‌ ಕ್ಯಾಂಟೋ ಸಿಲಿಂಡರ್ ಕಂಪನಿಯ ಎರಡು ರೂಪಾಯಿಗಳ ಮುಖಬೆಲೆಯ ಷೇರಿನ ಬೆಲೆ ರೂ.9 ರ ಸಮೀಪದಿಂದ ರೂ.70 ರ ವರೆಗೂ ಏರಿಕೆ ಕಂಡಿದೆ. ಈ ಕಂಪನಿಯು 2013 ರ ನಂತರದಲ್ಲಿ ಡಿವಿಡೆಂಡ್‌ ನೀಡಿಲ್ಲ. ಸಧ್ಯ ಕಂಪನಿಯು ಲಾಭ ಗಳಿಸುತ್ತಿದೆ. 2009 ರಲ್ಲಿ ರೂ.223 ರ ಸಮೀಪವಿದ್ದ ಈ ಷೇರನ್ನು ಆಗ ಖರೀದಿಸಿರುವವರು ಅನೇಕರು ತಮ್ಮ ಹೂಡಿಕೆಯನ್ನು ಮುಂದುವರೆಸಿದ್ದಾರೆ.
    • ವಕ್ರಾಂಗಿ ಲಿಮಿಟೆಡ್‌ ಕಂಪನಿಯ ಷೇರಿನ ಬೆಲೆ ಈ ವರ್ಷ ರೂ.17 ರ ಸಮೀಪದಿಂದ ರೂ.69 ರವರೆಗೂ ಜಿಗಿತ ಕಂಡಿದೆಯಾದರೂ 2018 ರ ಮಾರ್ಚ್‌ ಸಮಯದ ಬೆಲೆ ರೂ.150 ನ್ನು ತಲುಪದಾಗಿದೆ.
    • 2000 ದ ಟೆಕ್ನಾಲಜಿ ಬೂಮ್‌ ಸಮಯದಲ್ಲಿ ಸಾವಿರಾರು ರೂಪಾಯಿಗಳಲ್ಲಿ ವಹಿವಾಟಾಗುತ್ತಿದ್ದ ಜಿ ಟಿ ಎಲ್‌ ಲಿಮಿಟೆಡ್‌ ಕಂಪನಿಯ ಷೇರಿನ ಬೆಲೆ 2011 ರ ಜೂನ್‌ ನಲ್ಲಿ ರೂ.145 ರ ಸಮೀಪವಿತ್ತು. ಆದರೆ ಈ ವರ್ಷ ಈ ಷೇರಿನ ಬೆಲೆ ರೂ.1 ರ ಸಮೀಪದಲ್ಲಿದ್ದು ಅಲ್ಲಿಂದ ರೂ.9 ನ್ನು ತಲುಪಿ ಈಗ ರೂ.7 ರ ಸಮೀಪವಿದೆ. ಸುಮಾರು 9/10 ವರ್ಷಗಳ ಹಿಂದೆ ಖರೀದಿಸಿದವರ ಬೆಲೆ ಮತ್ತೊಮ್ಮೆ ತಲುಪಬಹುದೇ?
    • 2018 ರಲ್ಲಿ ರೂ.1,000 ಕ್ಕೂ ಹೆಚ್ಚಿದ್ದ ಗೋವಾ ಕಾರ್ಬನ್‌ ಕಂಪನಿ ಷೇರು ಈ ವರ್ಷ ರೂ.110 ರವರೆಗೂ ಕುಸಿದು ನಂತರ ಚೇತರಿಕೆಯಿಂದ ರೂ.300 ರ ಸಮೀಪವಿದೆ.
    • ರಿಲಯನ್ಸ್‌ ಎಡಿಎಜಿ ಸಮೂಹ, ಎನ್‌ ಬಿ ಸಿ ಸಿ, ಐ ಡಿ ಎಫ್‌ ಸಿ, ಜೆ ಪಿ ಅಸೋಸಿಯೇಟ್ಸ್‌, ಎರೋಸ್‌ ಇಂಟರ್ನ್ಯಾಶನಲ್, ಲ್ಯಾಂಕೋ ಇನ್ಫ್ರಾ, ರಿಸರ್ಜರ್‌ ಮೈನ್ಸ್‌, ಸುಜುಲಾನ್‌, ಅಸ್ಟ್ರಾಲ್‌ ಕೋಕ್‌, ಗಳು ಹೂಡಿಕೆದಾರರ ಸಂಪತ್ತನ್ನು ಕರಗಿಸಿದ ಕಂಪನಿಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿವೆ. ಇಂತಹ ಕಂಪನಿಗಳ ಪಟ್ಟಿಯು ಇನ್ನೂ ವಿಸ್ತಾರವಾಗಿದೆ.

    ಹಕ್ಕಿನ ಷೇರು ವಿತರಿಸಿದ ಕಂಪನಿಗಳ ಸ್ಥಿತಿ

    2015 ರಲ್ಲಿ ಟಾಟಾ ಮೋಟಾರ್ಸ್‌ ಕಂಪನಿಯು ಪ್ರತಿ ಷೇರಿಗೆ ರೂ.450 ರಂತೆ ಹಕ್ಕಿನ ಷೇರು ವಿತರಿಸಿತು. ಆದರೆ ಆ ಷೇರಿನ ಬೆಲೆ ನಿರಂತರವಾಗಿ ಕುಸಿಯುತ್ತಾ ಬಂದು ಈ ವರ್ಷ ರೂ.64 ನ್ನು ತಲುಪಿತ್ತು. ನಂತರದಲ್ಲಿ ಹತ್ತು ದಿನಗಳ ಹಿಂದೆ ರೂ.341 ರವರೆಗೂ ಏರಿಕೆ ಕಂಡು ವಿಜೃಂಭಿಸಿತು. ಆದರೂ ಆರು ವರ್ಷಗಳ ಹಿಂದೆ ವಿತರಿಸಿದ ಹಕ್ಕಿನ ಬೆಲೆ ಅರ್ಥಹೀನವಾಗಿಯೇ ಇದೆ.

    ಇಂದಿನ ಬಹಳಷ್ಟು ಕಂಪನಿಗಳ ಆಪತ್ತಿಗೆ ಅವುಗಳ ಆಡಳಿತ ಮಂಡಳಿಗಳ ತಪ್ಪು ನಿರ್ಧಾರಗಳೇ ಕಾರಣ ಎನ್ನಬಹುದಾಗಿದೆ. 2006 ರ ಸಮಯದಲ್ಲಿ ಪೇಟೆಗಳು ಉತ್ತುಂಗದಲ್ಲಿದ್ದಾಗ ಅನೇಕ ಕಂಪನಿಗಳು ಫಾರಿನ್‌ ಕರೆನ್ಸಿ ಕನ್ವರ್ಟಬಲ್‌ ಬಾಂಡ್ಸ್‌ ಗಳನ್ನು ಅಧಿಕ ಪ್ರೀಮಿಯಂನಲ್ಲಿ ವಿತರಿಸಿದವು. ಷೇರುಪೇಟೆಯಲ್ಲಿ ಷೇರಿನ ದರಗಳು ಏರುತ್ತಲೇ ಇರುತ್ತವೆ ಎಂಬುದು ತಪ್ಪು.

    ಬದಲಾವಣೆಗಳ ವೇಗ ಅತಿ ಹೆಚ್ಚಾಗಿರುವುದರಿಂದ ಷೇರಿನ ದರಗಳು ಗರಿಷ್ಠದಲ್ಲಿದ್ದಾಗ ಹೆಚ್ಚಿನ ಎಚ್ಚರ ಅಗತ್ಯ. ನಂತರದ ದಿನಗಳಲ್ಲಿ ಆರ್ಥಿಕತೆ ಕುಸಿದ ಪರಿಣಾಮ ಅನೇಕ ಕಂಪನಿಗಳು ಆಪತ್ತಿಗೊಳಗಾದವು. ಅವುಗಳಲ್ಲಿ ಸಿಂಟೆಕ್ಸ್‌ ಇಂಡಸ್ಟ್ರೀಸ್‌ ಸಹ ಒಂದು. ಒಂದು ಕಾಲದಲ್ಲಿ ಭಾರತ್‌ ವಿಜಯ್‌ ಮಿಲ್ಸ್‌ ಎಂದಿದ್ದ ಈ ಕಂಪನಿ ತನ್ನ ನೀರಿನ ಟ್ಯಾಂಕ್‌ ಯೋಜನೆಯ ಯಶಸ್ಸಿನ ಕಾರಣ ಹೆಸರನ್ನು ಬದಲಿಸಿಕೊಂಡಿತು. ಈ ಕಂಪನಿ ರೂ.91.16 ರಂತೆ ಪರಿವರ್ತಿಸಿದ ಷೇರುಗಳು ಈ ತಿಂಗಳ 10ರಿಂದ ವಹಿವಾಟಿಗೆ ಬಿಡುಗಡೆಯಾಗಿವೆ. ಅಂದರೆ ರೂ.91.16 ರ ಷೇರುಗಳು ರೂ.4 ರಲ್ಲಿದ್ದಾಗ ಚಲಾವಣೆಗೆ ಬಂದಲ್ಲಿ ಪೇಟೆಯ ಮೇಲೆ ಯಾವುದೇ ಪರಿಣಾಮ ಬೀರದು ಕಾರಣ ಆ ಷೇರುಗಳ ಮಾರಾಟದ ಸಾಧ್ಯತೆ ತೀರಾ ವಿರಳ. ಈ ಕಂಪನಿಯು 2016 ರಲ್ಲಿ ರೂ.1 ರ ಮುಖಬೆಲೆಯ ಪ್ರತಿ ಷೇರಿಗೆ ರೂ.65 ರಂತೆ ಹಕ್ಕಿನ ಷೇರು ವಿತರಿಸಲಾಯಿತು. ಈಗಿನ ಬೆಲೆ ರೂ.4 ರ ಸಮೀಪವಿದೆ. ಕಂಪನಿಯ ಉತ್ಪನ್ನವೇನೋ ಪೇಟೆಯಲ್ಲಿ ಪ್ರತಿಷ್ಠಿತವಾಗಿದ್ದರೂ, ಆಂತರಿಕವಾಗಿ ಆರ್ಥಿಕ ಒತ್ತಡದಲ್ಲಿದೆ ಎನ್ನಬಹುದು. ಡಿಸೆಂಬರ್‌ ತಿಂಗಳ ತ್ರೈಮಾಸಿಕದಲ್ಲಿ ವಹಿವಾಟಿನ ಗಾತ್ರ ಹೆಚ್ಚಿರುವುದು ಆಶಾಭಾವನೆ ಮೂಡಿಸಿದೆ.

    ಕೆನರಾ ಬ್ಯಾಂಕ್‌ 2017 ರಲ್ಲಿ ಪ್ರತಿ ಷೇರಿಗೆ ರೂ.207 ರಂತೆ ಹಕ್ಕಿನ ಷೇರು ವಿತರಿಸಿದೆ ಆದರೆ ನಂತರದಲ್ಲಿ ಷೇರಿನ ಬೆಲೆಗಳು ಕುಸಿದು ನೀರಸ ವಾತಾವರಣವನ್ನೆದುರಿಸಿತು. ಹಿಂದಿನ ವರ್ಷ ಫೆಬ್ರವರಿಯಲ್ಲಿ ರೂ.187 ರ ಗರಿಷ್ಠದಲ್ಲಿದ್ದ ಈ ಷೇರು ಮಾರ್ಚ್ ನಲ್ಲಿ ಉಂಟಾದ ಕುಸಿತದ ಕಾರಣ ಷೇರಿನ ಬೆಲೆ ರೂ.74 ರ ಸಮೀಪಕ್ಕೆ ಜಾರಿತು. ಈ ತಿಂಗಳಲ್ಲಿ ರೂ.172 ರವರೆಗೂ ಏರಿಕೆ ಕಂಡು ಸಧ್ಯ ರೂ.157 ರ ಸಮೀಪವಿರುವ ಈ ಕಂಪನಿ ಷೇರಿನ ಬೆಲೆ ಹಕ್ಕಿನ ಷೇರಿನ ಬೆಲೆ ರೂ.207 ಎಂದು ತಲುಪುವುದೋ ಕಾದುನೋಡಬೇಕಾಗಿದೆ.

    ಹಾಗೆಂದು ಎಲ್ಲಾ ಹಕ್ಕಿನ ಷೇರುಗಳೂ ನಿಶ್ಪಲವಾಗಿವೆ ಎಂದಲ್ಲ, 2015 ರಲ್ಲಿ ಕ್ಯಾನ್‌ ಫಿನ್‌ ಹೋಮ್ಸ್‌ ರೂ.450 ರಂತೆ ಹಕ್ಕಿನ ಷೇರು ವಿತರಿಸಿದೆ. ಅದರ ಬೆಲೆ ಈಗ ರೂ.516 ರಲ್ಲಿದೆ.

    2015 ರಲ್ಲಿ ಜಿ ಎಂ ಆರ್‌ ಇನ್ಫ್ರಾಸ್ಟ್ರಕ್ಚರ್‌ ಲಿ ಕಂಪನಿಯು ರೂ.15 ರಂತೆ ಹಕ್ಕಿನ ಷೇರು ವಿತರಿಸಿದೆ ಆ ಷೇರಿನ ಬೆಲೆ ರೂ.26 ರ ಸಮೀಪವಿದೆ. ಆದರೆ ಈ ಕಂಪನಿ ಷೇರು 2010 ರಲ್ಲಿ ರೂ.50/60 ರಲ್ಲಿತ್ತು ಆಗ ಖರೀದಿಸಿದವರು ದೀರ್ಘಕಾಲೀನ ಹೂಡಿಕೆದಾರರಾಗಿ ಮುಂದುವರಿಯುತ್ತಿದ್ದಾರೆ.

    2016 ರಲ್ಲಿ ಕರ್ನಾಟಕ ಬ್ಯಾಂಕ್‌ ಪ್ರತಿ ಷೇರಿಗೆ ರೂ.70 ರಂತೆ ಹಕ್ಕಿನ ಷೇರು ವಿತರಿಸಿತ್ತು. ನಂತರದ ಸುಧೀರ್ಘ ಕುಸಿತದ ನಂತರ ಈಗ ಮತ್ತೆ ವಿತರಣೆ ಬೆಲೆ ಸಮೀಪಕ್ಕೆ ಹಿಂದಿರುಗಿದೆ.

    2017 ರಲ್ಲಿ ಇಂಡಿಯನ್ ಹೋಟೆಲ್‌ ಪ್ರತಿ ಷೇರಿಗೆ ರೂ.75 ರಂತೆ ವಿತರಣೆ ಮಾಡಿತ್ತು. ಈ ವರ್ಷ ಷೇರಿನ ಬೆಲೆ ರೂ.62 ರವರೆಗೂ ಕುಸಿದು ನಂತರ ಚೇತರಿಕೆಯಿಂದ ರೂ.130 ರ ಸಮೀಪದಲ್ಲಿದೆ.

    ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದಾಗ ಷೇರುಪೇಟೆಯಲ್ಲಿ ಹೂಡಿಕೆ ಮಾಡುವಾಗ ಷೇರಿನ ಬೆಲೆಗಳು ಸೂಚ್ಯಂಕಗಳು ಗರಿಷ್ಠದಲ್ಲಿದ್ದಾಗ ಚಂಚಲತೆ ಹೆಚ್ಚು ಪ್ರದರ್ಶಿಸುವ ಕಾರಣ ಹೂಡಿಕೆಯನ್ನು ಅಲ್ಪಕಾಲೀನವಾಗಿಸಬೇಕು. ಉತ್ತಮ ಕಂಪನಿಗಳನ್ನು ಮಾತ್ರ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳಬೇಕು. ಪೇಟೆಗಳು ಕುಸಿತದಲ್ಲಿದ್ದಾಗ ದೀರ್ಘಕಾಲೀನ ತಂತ್ರ ಅಳವಡಿಸಬೇಕು. ಎಂತಹ ಪರಿಸ್ಥಿತಿಯಾದರೂ, ಹೂಡಿಕೆ ಮಾಡಿದ ಷೇರುಗಳ ಮೇಲೆ ಹೆಚ್ಚಿನ ನಿಗಾ ಇರಲೇಬೇಕು.

    ಉತ್ತಮ ಘನತೆಯ ಕಂಪನಿಗಳು, ಕುಸಿದರೂ ಪುಟಿದೇಳುವ ಸಾಧ್ಯತೆಗಳು ಹೆಚ್ಚು. ಇದಕ್ಕೆ ಸರಿಯಾದ ಉದಾಹರಣೆ ಎಂದರೆ ಟಾಟಾ ಸ್ಟೀಲ್‌, ಟಾಟಾ ಮೋಟಾರ್ಸ್‌, ಕ್ಲಾರಿಯಂಟ್‌ ಕೆಮಿಕಲ್ಸ್‌, ಅಶೋಕ್‌ ಲೇಲ್ಯಾಂಡ್‌, ಮಹೀಂದ್ರ ಅಂಡ್‌ ಮಹೀಂದ್ರ, ಸಿಪ್ಲಾ, ಬಯೋಕಾನ್‌, ಕೆನರಾ ಬ್ಯಾಂಕ್‌, ಎಸ್‌ ಬಿ ಐ, ಯು ಪಿ ಎಲ್‌ ಮುಂತಾದವಾಗಿವೆ.

    ಷೇರು ಪೇಟೆಯನ್ನು ಹೂಡಿಕೆಯಾಗಿ ಆಯ್ಕೆ ಮಾಡಿಕೊಂಡಲ್ಲಿ ಬಂಡವಾಳ ಅಲ್ಪಮಟ್ಟಿನ ಸುರಕ್ಷಿತ. ಸ್ಪೆಕ್ಯುಲೇಷನ್‌ ಎಂದರೆ ಅನಿಶ್ಚಿತತೆ ಅಪರಿಮಿತ.

    ಯುಜಿಸಿ ಹಿಂಬಾಕಿ ಪಾವತಿ, ಪ್ರಾಂಶುಪಾಲರ ಹುದ್ದೆ ಭರ್ತಿ ಸೇರಿದಂತೆ ಸರಕಾರಿ ಕಾಲೇಜು ಪ್ರಾಧ್ಯಾಪಕರ ಬೇಡಿಕೆ ಶೀಘ್ರ ಇತ್ಯರ್ಥ: ಡಿಸಿಎಂ

    ಯುಜಿಸಿ ವೇತನ ಹಿಂಬಾಕಿ ಪಾವತಿ, ವರ್ಗಾವಣೆ, ಪ್ರಾಂಶುಪಾಲರ ನೇಮಕ ಸೇರಿ ಸರಕಾರಿ ಕಾಲೇಜು ಪ್ರಾಧ್ಯಾಪಕರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಗಮನಹರಿಸಿರುವ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಎಲ್ಲ ಬೇಡಿಕೆಗಳನ್ನು ಆದಷ್ಟು ಶೀಘ್ರವೇ ಈಡೇರಿಸಲಾಗುವುದು ಎಂದು ತಿಳಿಸಿದರು.

    ಬೆಂಗಳೂರಿನಲ್ಲಿ ಗುರುವಾರ ಕರ್ನಾಟಕ ಸರಕಾರಿ ಕಾಲೇಜುಗಳ ಬೋಧಕರ ಸಂಘದ ಅಧ್ಯಕ್ಷ ಡಾ.ಡಿ.ಎಂ.ಮಂಜುನಾಥ್‌ ಮತ್ತಿತರೆ ಪದಾಧಿಕಾರಿಗಳ ಜತೆ ಮಾತುಕತೆ ನಡೆಸಿದ ಅವರು, ಈ ಬಗ್ಗೆ ಕ್ರಮಗಳನ್ನು ಕ್ಷಿಪ್ರವಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

    ಪ್ರಾಧ್ಯಾಪಕರ ರಾಷ್ಟ್ರೀಯ ಪಿಂಚಣಿ ಯೋಜನೆಗೆ ರಾಜ್ಯ ಸರಕಾರ ಪಾಲು ತುಂಬಲಾಗಿಲ್ಲ. ಈ ಮೊತ್ತವನ್ನು ಕೂಡಲೇ ತುಂಬುವುದು. 2006ರ ಯುಜಿಸಿ ವೇತನ ಹಿಂಬಾಕಿ ಮತ್ತು 2019ರ ಏಪ್ರಿಲ್ ತಿಂಗಳಿನಿಂದ ಪಾವತಿಯಾಗಬೇಕಿರುವ ವೇತನ ಕುರಿತು ಹಣಕಾಸು ಇಲಾಖೆಯೊಂದಿಗೆ ಚರ್ಚಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಮಾಹಿತಿ ನೀಡಿದರು.

    ವರ್ಗಾವಣೆ ಪ್ರಕ್ರಿಯೆ ಶೀಘ್ರ ಆರಂಭ:

    2021ರ ವರ್ಗಾವಣೆ ಕಾಯ್ದೆಯ ಪ್ರಕಾರ ಈಗಾಗಲೇ ಸರಕಾರ ವರ್ಗಾವಣೆ ನೀತಿ ರೂಪಿಸಿದೆ. ಈ ವರ್ಷದ ವರ್ಗಾವಣೆ ಪ್ರಕ್ರಿಯೆಯನ್ನು ಆದಷ್ಟು ಬೇಗ ಆರಂಭಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಜತೆಗೆ; ಪ್ರಾಂಶುಪಾಲರ ಹುದ್ದೆ ಭರ್ತಿಗೆ ಕೂಡಲೇ ಚಾಲನೆ ನೀಡುವುದು ಹಾಗೂ ಗರಿಷ್ಠ ವಯೋಮಿತಿಗೆ ವಿನಾಯಿತಿ ನೀಡಿ ಯುಜಿಸಿ ವೇತನ ಶ್ರೇಣಿಯಲ್ಲಿನ ಸಹ ಪ್ರಾಧ್ಯಾಪಕರ ನೇಮಕ ಮಾಡಿಕೊಳ್ಳುವುದು, ಪ್ರಾಧ್ಯಾಪಕ ಹುದ್ದೆಯ ಪದೋನ್ನತಿಗೆ ಕೂಡಲೇ ಚಾಲನೆ ನೀಡುವ ಬಗ್ಗೆಯೂ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು ಎಂದು ಡಿಸಿಎಂ ತಿಳಿದ್ದಾರೆ.

    ಪಿಹೆಚ್ʼಡಿ ವೇತನ ಬಡ್ತಿ ತಾರತಮ್ಯ ಬಗೆಹರಿಸುವ ಸಲುವಾಗಿ ಆಯುಕ್ತರೊಂದಿಗೆ ಪ್ರತ್ಯೇಕ ಸಭೆ ನಡೆಸುವಂತೆ ಸೂಚಿಸಿದ ಉಪ ಮುಖ್ಯಮಂತ್ರಿಗಳು; ಪಿಎಚ್‌ ಡಿ ಮಾಡಲು ಪ್ರಾಧ್ಯಾಪಕರು ಅರ್ಜಿ ಸಲ್ಲಿಸುವ ವೇಳೆ ನಿರಪೇಕ್ಷಣಾ ಪತ್ರ ಕೇಳಬಾರದು. ಬದಲಿಗೆ ಪ್ರವೇಶ ಪಡೆದ ಮೇಲೆ ಈ ಪತ್ರವನ್ನು ಸಲ್ಲಿಸಿದರೆ ಸಾಕು. ಈ ಬಗ್ಗೆ ಎಲ್ಲ ವಿವಿಗಳಿಗೆ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಬೋಧಕ ಸಿಬ್ಬಂದಿ ಪದನಾಮ

    ಕಾಲೇಜುಗಳಲ್ಲಿ ಈವರೆಗೂ ಬೋಧಕೇತರ ಸಿಬ್ಬಂದಿಯಾಗಿದ್ದ ಗ್ರಂಥಪಾಲಕರು ಹಾಗೂ ದೈಹಿಕ ಶಿಕ್ಷಣ ಸಿಬ್ಬಂದಿಗೆ ಪ್ರಾಧ್ಯಾಪಕರ ಸ್ಥಾನಮಾನ ನೀಡುವುದು, ಸರಕಾರಿ ಸ್ವಾಮ್ಯದಲ್ಲಿರುವ 108 ಸರಕಾರಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅರ್ಹ ಪ್ರಾಧ್ಯಾಪಕರಿಗೆ ಪಿಎಚ್‌ ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಲು ಅವಕಾಶ ಕೊಡುವ ಬಗ್ಗೆ ಪರಿಶೀಲಿಸಲು ನಿರ್ಧಾರ ಕೈಗೊಳ್ಳಲಾಯಿತು ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

    2003ರಲ್ಲಿ ನೇಮಕಗೊಂಡ ಅರೆಕಾಲಿಕ ಉಪನ್ಯಾಸಕರಿಗೆ ಮಾನವೀಯತೆಯ ಆಧಾರದ ಮೇಲೆ ಸ್ತಾನೀಕರಣ ನೀಡಲು ಸಕಾರಾತ್ಮಕವಾಗಿ ಪರಿಶೀಲಿಸಲು ಒಪ್ಪಿಗೆ ಹಾಗೂ ಬಾಕಿ ಇರುವ ಸ್ತಾನೀಕರಣ ಪ್ರಸ್ತಾವನೆಗಳನ್ನು ಕೆಲವೇ ದಿನಗಳಲ್ಲಿ ಮಂಜೂರು ಮಾಡಲಾಗುವುದು. ಜತೆಗೆ; 310 ಪ್ರಾಂಶುಪಾಲರನ್ನು ಆದಷ್ಟು ಬೇಗ ನೇಮಕ ಮಾಡಲಾಗುವುದು ಎಂದು ಡಿಸಿಎಂ ವಿವರ ನೀಡಿದರು.

    ಯುಜಿಸಿ ವೇತನ ಪಡೆಯುವ ಪ್ರಾಧ್ಯಾಪಕರಿಗೆ ವಾಹನ, ಮನೆ ಮತ್ತಿತರೆ ವಸ್ತುಗಳ ಖರೀದ ಮೇಲೆ ಇರುವ ಷರತ್ತುಗಳನ್ನು ಸರಳಗೊಳಿಸಲು ಬಗ್ಗೆಯೂ ಚರ್ಚಿಸಲಾಯಿತು ಎಂದು ಡಿಸಿಎಂ ಹೇಳಿದರು.

    ಸಭೆಯಲ್ಲಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್‌, ಮುಖ್ಯ ಆಡಳಿತಾಧಿಕಾರಿ ಬಾಲಚಂದ್ರ ಮತ್ತಿತರೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

    ಒಂದು ಪುಸ್ತಕ ನಿಮ್ಮ ಮಗುವಿನ ಬದುಕನ್ನೇ ಬದಲಿಸಬಹುದು

    ನನ್ನ ಎರಡು ವರ್ಷದ ಪುಟ್ಟ ಮಗ ಕೈಯಲ್ಲೊಂದು ಪುಸ್ತಕ ಹಿಡಿದು ಎಲ್ಲೋ ಪರೀಕ್ಷೆ ಹತ್ತಿರ ಬರುತ್ತಿರುವ ಮಕ್ಕಳು ಓದುತ್ತಿರುವಂತೆ ನಟಿಸುವುದನ್ನು ನೋಡುವುದೇ ಒಂದು ಖುಷಿ.  ಸಮಯ ಸಿಕ್ಕಾಗೆಲ್ಲ ಪುಸ್ತಕ ತಿರುವಿ ಹಾಕುವ ಇಲ್ಲವೇ ತನಗೆ ಬರುವ ಪದ್ಯಗಳನ್ನು ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಮಾಡಿ , ಹಾಡಿ ತೋರಿಸುವ ಪರಿ ಮನಸ್ಸಿಗೆ ಮುದ ಕೊಡುತ್ತದೆ.ಇಂದಿನ ಮಕ್ಕಳು ದಿನವಿಡೀ ಗ್ಯಾಜೆಟ್ ಕೊಟ್ಟರೂ ಹಿಡಿದು ಕುಳಿತುಬಿಡುವುದನ್ನು ನೋಡಿದರೆ ಎಂತಹ  ಪೋಷಕರಿಗೂ ಖೇದ ಎನಿಸದಿರದು.

    ನಮ್ಮ ಮಕ್ಕಳೂ ಕಥೆ ಓದಬೇಕು , ಸಾಹಿತ್ಯ  ತಿಳಿಯಬೇಕು ನಮ್ಮಂತೆಯೇ ಗಿಡಮರ ಮಣ್ಣುಗಳ  ಮಧ್ಯೆ ಬೆಳೆಯಬೇಕು ಎಂಬುದು ಎಲ್ಲರ ಆಕಾಂಕ್ಷೆ.  ಮಲೆನಾಡಿನ ಹಳ್ಳಿಯ ಹಸಿರುಗಾಡಿನ ಮಧ್ಯೆ ಹುಟ್ಟಿ ಬೆಳೆದ ನನಗೆ ನನ್ನ ಮಗ ಲಂಡನ್ ನ ಸಿಟಿಯಲ್ಲಿ ಬೆಳೆದರೆ ಏನೋ ಕಳೆದುಕೊಳ್ಳುವನೇನೋ ಎಂಬ ಆತಂಕ ಸದಾ  ಕಾಡುತ್ತಿತ್ತು.  ಆದರೆ ಹಾಗಾಗಲಿಲ್ಲ. ಅದಕ್ಕೆ ಕಾರಣವೆಂದರೆ ಇಲ್ಲಿನ ಚಿಲ್ಡ್ರನ್ ಸೆಂಟರ್ ಗಳು .

    ಇಲ್ಲಿನ ಪೋಷಕರಿಗೆ ಹಿರಿಯರ ನೆರವಿರುವುದಿಲ್ಲ ನಿಜ  , ಏನಾದರೂ ಆದರೆ ಮನೆಮದ್ದು ಮಾಡಲು, ಮಕ್ಕಳನ್ನು ಸಂತೈಸಲು  ಕೂಡ ಗೊತ್ತಿರದ ಯುವ ಪೋಷಕರ ಆತಂಕವನ್ನು ಕಡಿಮೆ ಮಾಡಲೆಂದೇ ಇಲ್ಲಿನ ಚಿಲ್ಡ್ರನ್ ಸೆಂಟರ್ ಗಳು ವಿಶೇಷ ಕಾಳಜಿ ತೆಗೆದುಕೊಂಡು ,  ವಿವಿಧ ರೀತಿಯ ತರಗತಿಗಳನ್ನು ಪ್ರತಿದಿನ ಇಟ್ಟಿರುತ್ತಾರೆ. ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳನ್ನು ಬುದ್ದಿವಂತರನ್ನಾಗಿ  ಮಾಡಬೇಕು ಎಂಬ ಆಸೆ ಇರುತ್ತದೆ. ಮಕ್ಕಳಲ್ಲಿ ಓದುವ ಗೀಳನ್ನು ಹಚ್ಚಬೇಕು ಹಾಗೆ ಮಾಡಿದಲ್ಲಿ ಅವರಿಗೆ ತರಗತಿಯಲ್ಲಿ ಕೂಡ ಏಕಾಗ್ರತೆ ಹೆಚ್ಚಲು ಮತ್ತು ಆಸಕ್ತಿ ಹೊಂದಲು ಸಹಕಾರಿಯಾಗುತ್ತದೆ ಎಂಬುದು ಇಲ್ಲಿನ ಮಕ್ಕಳ ತಜ್ಞರ ಅಂಬೋಣ .

    ಮಕ್ಕಳು ಗ್ಯಾಜೆಟ್ ಗಳನ್ನು ಹೆಚ್ಚು ಹೆಚ್ಚು ಬಳಸಿದಂತೆಲ್ಲ ಅವರ ಅರೋಗ್ಯ ಕೂಡ ಹದಗೆಡುತ್ತದೆ , ಕಣ್ಣಿನ ತೊಂದರೆ ಬರುತ್ತದೆ ,ಕುಳಿತಲ್ಲಿಂದ ಏಳದೆ ಬೊಜ್ಜು ಕೂಡ ಬರಬಹುದು. ಹಾಗೆಯೇ ಇಡೀ ದಿನ ಮಕ್ಕಳ ಮನಸ್ಸಿನಲ್ಲಿ ಗೇಮ್ಸ್ ತಲೆಯಲ್ಲಿ ಓದುವುದರಿಂದ ಓದಿನ ಬಗ್ಗೆ ಶಾಲೆಯೆಲ್ಲಿ ಮಾಡುವ ಪಾಠದ ಬಗ್ಗೆ ಯಾವುದೇ ರೀತಿಯ ಇಚ್ಛೆ ತೋರಿಸಲಾರರು . 

    ಅಷ್ಟೇ ಅಲ್ಲ ಮಕ್ಕಳು ಮನೆ ಬಿಟ್ಟು ಹೊರಹೋಗಲು ಕೂಡ ಚಿಂತಿಸುತ್ತಾರೆ . ಹಿಂದೆ ಮಕ್ಕಳು ಹೊರಹೋಗಲು ಕಾದು ಕುಳಿತಿರುತ್ತಿದ್ದರು , ಪರಿಚಯವಿಲ್ಲದ ಕಡೆಗಳಿಗೆ ಹೋದರೂ ಅಲ್ಲಿ ಸಿಕ್ಕ ಇತರ ಮಕ್ಕಳೊಂದಿಗೆ ಗೆಳೆತನ ಮಾಡಿಕೊಳ್ಳುತ್ತಿದ್ದರು . ಈ ರೀತಿಯಾಗಿ ಸಾಮಾಜಿಕವಾಗಿ ಬೆರೆಯುತ್ತಿದ್ದರು . ಆದರೆ ಈಗಿನ ಮಕ್ಕಳಿಗೆ  ನೆಂಟರಿಶ್ಟರ ಮದುವೆ , ಮುಂಜಿಗಳಿಗೆ ಹೋದರೆ ಅಲ್ಲಿ ಆಟವಾಡಲು ಮೊಬೈಲ್ ಬೇಕು , ಹೆಚ್ಚಿನ ಮಕ್ಕಳು ಹೊರಗೆ ಕರೆದುಕೊಂಡು ಹೋದರೆ ಮಂಕಾಗಿ ಕುಳಿತುಕೊಳ್ಳುವುದು ಕಂಡುಬರುತ್ತದೆ.    ಮಕ್ಕಳು ಗ್ಯಾಜೆಟ್ ಗಳ  ಮೊರೆ ಹೋಗಿ ದಿನವಿಡೀ ಅದರೊಂದಿಗೆ ಕಳೆಯುವುದನ್ನು ನೋಡಿದರೆ ಖೇದವೆನಿಸುತ್ತದೆ.

    ನಮ್ಮ ಕಾಲದಲ್ಲಿ ಗ್ಯಾಜೆಟ್ ಇಲ್ಲದೆ ನಾವೆಲ್ಲಾ ಮಣ್ಣು , ಗಿಡಮರಗಳ ನಡುವೆ ಆಡುತ್ತಾ ಬೆಳೆದಿರುವುದು ಅದೃಷ್ಟ ಎನ್ನಬಹುದು. ಹಾಗಾದರೆ ಈಗಿನ ಮಕ್ಕಳು ಹೀಗೆ ಗ್ಯಾಜೆಟ್ ಹಿಡಿದು ಕೂರುವುದನ್ನು ತಡೆಯಲು ಸಾಧ್ಯವಿಲ್ಲವೇ ? ಖಂಡಿತ ಸಾಧ್ಯ.  ಇದನ್ನು ಪೋಷಕರಾದ ನಾವೇ ಮನೆಯಿಂದಲೇ  ಪ್ರಾರಂಭಿಸಬೇಕು.  ಇದಕ್ಕಾಗಿ ಮಕ್ಕಳ ಜೊತೆ ಕಳೆಯಲು ಸಮಯ ನಿಗದಿ ಪಡಿಸಿಕೊಳ್ಳುವುದು ಅಷ್ಟೇ ಅವಶ್ಯಕ.

    ಲಂಡನ್ ನ ಪ್ರತಿ ಚಿಲ್ಡ್ರನ್ ಸೆಂಟರ್ ಗಳು ಇದಕ್ಕಾಗಿ ವಿವಿಧ ತರಗತಿಗಳನ್ನು ಮಾಡುತ್ತಿವೆ. ಮಗು ಮೂರು ತಿಂಗಳು ಇರುವಾಗಲೇ ಅವಕ್ಕೆ ಪುಸ್ತಕವನ್ನು ತೋರಿಸಲು ಪ್ರಾರಂಭಿಸಿದರೆ ಅವಕ್ಕೆ ಪುಸ್ತಕ ಪ್ರೀತಿ ಹುಟ್ಟುತ್ತದೆ ಎಂಬುದು ಸಂಶೋಧಕರು ಕಂಡುಕೊಂಡ ಸತ್ಯ. ಮೊದಮೊದಲು ಪುಸ್ತಕವನ್ನು ಬಾಯಿಗೆ ಇಡಬಹದು, ಕಾಲ ಕಳೆದಂತೆ ಅದರ ಪುಟವನ್ನು ತಿರುಗಿಸಿ ಅದರೊಂದಿಗೆ ಆಡಲು ಪ್ರಾರಂಭಿಸುವ ಮಗು ಕ್ರಮೇಣ ಪುಸ್ತಕದಲ್ಲಿರುವ ಚಿತ್ರಗಳ ಮೇಲೆ ತನ್ನ ಗಮನವನ್ನು ಹರಿಸುತ್ತದೆ. ಒಂದೇ ಪುಸ್ತಕವನ್ನು ಮತ್ತೆ ಮತ್ತೆ ತೋರಿಸಿ ಅದರಲ್ಲಿರುವ ಕಥೆ ಓದಲು ಪ್ರಾರಂಭಿಸಿದರೆ ಅಥವಾ ಅದರಲ್ಲಿರುವ ಬಣ್ಣ ಬಣ್ಣದ ಚಿತ್ರಗಳನ್ನು ತೋರಿಸಿದರೆ  ಮಗು ಅದರಲ್ಲಿ ಕುತೂಹಲ ಹೊಂದುವುದು ಮಾತ್ರವಲ್ಲ ಅದರ ಶಬ್ದಕೋಶ ಕೂಡ ಬೆಳೆಯುತ್ತಾ ಹೋಗುತ್ತದೆ. ದಿನದಲ್ಲಿ ಕೇವಲ ಅರ್ಧ ತಾಸಿನಷ್ಟು ಕಥೆ ಓದುವ ದಿನಚರಿ ಇಟ್ಟುಕೊಂಡರೆ ಮಗು ಒಂದು ವರ್ಷವಾಗುವಷ್ಟರಲ್ಲಿ ಸಾಕಷ್ಟು ವಸ್ತುಗಳನ್ನು ಗುರುತಿಸುತ್ತದೆ . ತೊದಲು ನುಡಿ ನುಡಿಯಲು ಕಲಿಯುತ್ತದೆ. ರೈಮ್ಸ್ ಗಳನ್ನು ಅಥವಾ ಕಥೆಗಳನ್ನು ದಿನನಿತ್ಯದ ಅಭ್ಯಾಸವಾಗಿಸಿಕೊಂಡ ಮಗು ಇತರ ಮಕ್ಕಳಿಗಿಂದ ಬೇಗ ಮಾತನಾಡುವುದನ್ನು ಕಲಿಯುವುದನ್ನು ಗಮನಿಸಬಹುದು. 

    ಮಕ್ಕಳ ಬುದ್ದಿ ವಿಕಾಸಕ್ಕೆ ಅವರು ಮಾಡುವ ಕೆಲಸದಲ್ಲಿ ಅಥವಾ ಆಟದಲ್ಲೇ ಇರಲಿ ಏಕಾಗ್ರತೆ ಹೆಚ್ಚಿಸಲು ಮಗುವಾಗಿರುವಾಗಲೇ ಕಥೆ ಓದುವುದು , ರೈಮ್ಸ್ ಹೇಳುವುದು ಈ ರೀತಿ ದಿನದಲ್ಲಿ ಸ್ವಲ್ಪ ಸಮಯವನ್ನು ಮೀಸಲಿಟ್ಟಲ್ಲಿ ಬಹಳಷ್ಟು ಉಪಯೋಗವಾಗುತ್ತದೆ ಎಂದು ತಜ್ಞರು ಕೂಡ ಹೇಳುತ್ತಾರೆ.

    ಒಟ್ಟಾರೆಯಾಗಿ ಕಲಿಕೆಯಲ್ಲಿ ಒಂದು ಮಗು ಮುಂದುವರೆಯಬೇಕು ಎಂದಲ್ಲಿ ಪುಸ್ತಕ ಪ್ರೀತಿ ಒರೆ ಹಚ್ಚುವುದು ಅಷ್ಟೇ ಅವಶ್ಯಕ. ಇಲ್ಲಿನ ಚಿಲ್ಡ್ರನ್ ಸೆಂಟರ್ ಗಳಲ್ಲಿ ಹೇಳುವ ಪ್ರಕಾರ ಮಕ್ಕಳಿಗೆ ಊಟ ತಿಂಡಿ ಮಾಡುವಾಗ ಟೀವಿ ಹಾಕಿಯೋ ಅಥವಾ ಮೊಬೈಲ್ ನಲ್ಲಿ ಸಾಕಷ್ಟು ಹಾಡುಗಳನ್ನು ಹಾಕಿಯೋ ತಿನಿಸುವುದು ಪೋಷಕರು ಮಾಡುವ ದೊಡ್ಡ ತಪ್ಪು , ಹಿಂದೆ ಈ ರೀತಿ ಮಾಡದೆ ಚಂದಮಾಮ ತೋರಿಸಿ ಅಥವಾ ಮರಗಿಡ ಇತರ ಪ್ರಾಣಿಗಳನ್ನು ತೋರಿಸಿ ಅಥವಾ ಕಟ್ಟು ಕಥೆ ಹೇಳಿ ಮಕ್ಕಳಿಗೆ ಊಟ ಮಾಡಿಸುತ್ತಿದ್ದರು ಇದರಿಂದ ಮಕ್ಕಳ ಯೋಚನಾ ಶಕ್ತಿ ಹೆಚ್ಚಿ ಮಕ್ಕಳು ಹೆಚ್ಚು ಕ್ರಿಯಾಶೀಲರಾಗುವಂತೆ ಮಾಡುತ್ತದೆ.

    ಹೌದು ಪೋಷಕರೇ ನಮ್ಮ ಮಕ್ಕಳು ಕಲಿಕೆಯಲ್ಲಿ ಮುಂದಿರಬೇಕು , ಬುದ್ದಿವಂತರಾಗಬೇಕು ಎಂದಿದ್ದಲ್ಲಿ  ಮಗುವಾಗಿರುವಾಗಿನಿಂದಲೇ ಎಚ್ಚೆತ್ತುಕೊಳ್ಳಕೊಳ್ಳೋಣ . ಅವರೊಡನೆ ಬೆರೆತು ಮಕ್ಕಳೊಡನೆ ಕುಳಿತು , ಟಿವಿ , ಮೊಬೈಲ್ , ಟ್ಯಾಬ್ಲೆಟ್ ಗಳನ್ನು ದೂರವಿಟ್ಟು ಮಗುವಿನಿನೊಡನೆ ಮಗುವಾಗಿ ಬೆರೆತುಬಿಡೋಣ. ಮಕ್ಕಳೊಡನೆ ಕಳೆಯುವ ಸಮಯ ನಮ್ಮ ಆರೋಗ್ಯವನ್ನು ಉಲ್ಲಸಿತವಾಗಿಡುವುದರಲ್ಲಿ ಅನುಮಾನವಿಲ್ಲ. ಇಂದೇ ಹೋಗಿ ನಿಮ್ಮ ಮಗುವಿಗೆ ಪುಸ್ತಕ ತಂದು ಕೊಡಿ , ಒಂದು ಪುಸ್ತಕ ನಿಮ್ಮ ಮಗುವಿನ ಬದುಕನ್ನೇ ಬದಲಿಸಬಹುದು.

    Photo by 🇸🇮 Janko Ferlič on Unsplash

    ಶುಲ್ಕ ಪಾವತಿ ಆದೇಶ: ಮಕ್ಕಳ ಹಿತಕ್ಕಾಗಿ ಎಲ್ಲರೂ ಪಾಲಿಸುವುದು ಒಳಿತು- ಸುರೇಶ್ ಕುಮಾರ್

    ಪೋಷಕರು ಮತ್ತು ಖಾಸಗಿ ಶಾಲಾ ಕಾಲೇಜುಗಳ ಮಧ್ಯೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದ ಪ್ರಸ್ತುತ ಶೈಕ್ಷಣಿಕ ವರ್ಷದ ಶುಲ್ಕ ಪಾವತಿ ಸಂಬಂಧದಲ್ಲಿ ಸರ್ಕಾರ ಎಲ್ಲರಿಗೂ ಅನುಕೂಲವಾಗುವಂತಹ ನಿಟ್ಟಿನಲ್ಲಿ ಚಿಂತಿಸಿ ಆದೇಶ ಹೊರಡಿಸಿದ್ದು ಅದನ್ನು ಈ ವರ್ಷದ ಮಟ್ಟಿಗೆ ಉಭಯತ್ರರೂ ಪಾಲಿಸುವುದರಿಂದ ನಮ್ಮ ವಿದ್ಯಾರ್ಥಿಗಳ ಹಿತರಕ್ಷಣೆ ಸಾಧ್ಯವಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

    ಬುಧವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಹಿನ್ನೆಲೆಯಲ್ಲಿ ಶಾಲೆಗಳು ಭೌತಿಕವಾಗಿ ಆರಂಭವಾಗದೇ ಇರುವುದರಿಂದ ಆರ್ಥಿಕವಾಗಿ ಜರ್ಝರಿತವಾಗಿದ್ದ ಪೋಷಕರು ಶುಲ್ಕ ಪಾವತಿಸಿರಲಿಲ್ಲವಾದ್ದರಿಂದ ಖಾಸಗಿ ಶಾಲೆಗಳೂ ಸಹ ತೀವ್ರ ತೊಂದರೆಗೀಡಾಗಿದ್ದುದನ್ನು ಗಮನಿಸಿ ಸರ್ಕಾರ ಒಂದು ಸಮನ್ವಯ ಸೂತ್ರ ಪಾಲಿಸಿ ಕಳೆದ ವರ್ಷದ ಬೊಧನಾ ಶುಲ್ಕದ ಶೇ. 30ರಷ್ಟು ಪಾವತಿಸಲು ಮತ್ತು ಸ್ವೀಕರಿಸಲು ಸೂಚಿಸಿ ಆದೇಶ ಹೊರಡಿಸಿತ್ತು ಎಂದರು.

    ಆದರೆ ಶೇ. 30 ಬೋಧನಾ ಶುಲ್ಕ ಪಾವತಿ ಆದೇಶವನ್ನು ಬಹುತೇಕ ಖಾಸಗಿ ಶಾಲಾ ಸಂಘಟನೆಗಳು ಸ್ವಾಗತಿಸಿದರೆ, ಕೆಲ ಖಾಸಗಿ ಶಾಲಾ ಸಂಘಟನೆಗಳು ಅಸಮಧಾನ ವ್ಯಕ್ತಪಡಿಸಿವೆ. ಹಿಂದೆಂದೂ ಕಾಣದಂತಹ ಈ ವರ್ಷದ ವಿಚಿತ್ರ ಸನ್ನಿವೇಶದಲ್ಲಿ ಎಲ್ಲ ಶೈಕ್ಷಣಿಕ ಪಾಲುದಾರರೊಂದಿಗೆ ಹತ್ತಾರು ಬಾರಿ ಚರ್ಚಿಸಿ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅವರ ಒಪ್ಪಿಗೆ ಪಡೆದು ಈ ವರ್ಷದ ಮಟ್ಟಿಗೆ ಶೇ. 30 ಶುಲ್ಕ ಪಾವತಿ ಕುರಿತು ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    ಕೊರೋನಾ ಹಿನ್ನೆಲೆಯಲ್ಲಿ ಶುಲ್ಕ ಪಾವತಿಸಲು ಪೋಷಕರು ಹಿಂಜರಿದಾಗ ಖಾಸಗಿ ಶಾಲೆಗಳು ತೊಂದರೆ ಅನುಭವಿಸಿದವು. ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಈ ಮೊದಲು ಒಂದು ಕಂತಿನ ಶುಲ್ಕ ಪಾವತಿಸಲು ಪೋಷಕರಿಗೆ ಸೂಚಿಸಿ ಸುತ್ತೋಲೆ ಹೊರಡಿಸಿತ್ತು. ಸÀಂಗ್ರಹವಾದ ಶುಲ್ಕವನ್ನು ಶಿಕ್ಷಕರ ಮತ್ತು ಸಿಬ್ಬಂದಿಯ ವೇತನಕ್ಕೆ ಮೊದಲ ಆದ್ಯತೆ ನೀಡಬೇಕೆಂದು ಸದರಿ ಸುತ್ತೋಲೆಯಲ್ಲಿ ಶಾಲೆಗಳಿಗೆ ಸೂಚಿಸಲಾಗಿತ್ತು. ಜೊತೆಗೆ ಈ ಬಾರಿ ಇದು ಸಂಕಷ್ಟದ ಸಮಯವಾದ್ದರಿಂದ ಈ ವರ್ಷ ಶುಲ್ಕ ಹೆಚ್ಚಳ ಮಾಡದಿರುವಂತೆ ಮತ್ತೊಂದು ಸುತ್ತೋಲೆ ಸಹ ಹೊರಡಿಸಿತ್ತು. ಈ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳು ಭೌತಿಕವಾಗಿ ಆರಂಭವಾಗದೇ ಇರುವುದರಿಂದ ಎಷ್ಟು ಶುಲ್ಕ ಪಾವತಿಸಬೇಕೆಂದು ಗೊತ್ತಾಗದೇ ಪೋಷಕರು ಶುಲ್ಕ ಪಾವತಿಗೆ ಮುಂದಾಗಲಿಲ್ಲ. ಹಲವಾರು ತಿಂಗಳು ಶುಲ್ಕ ಪಾವತಿಯಾಗದೇ ಶಾಲೆಗಳು ಆರ್ಥಿಕವಾಗಿ ತೊಂದರೆಗೊಳಗಾಗಿ ಶಿಕ್ಷಕರು ಸಿಬ್ಬಂದಿ ವೇತನಕ್ಕೆ ಪರದಾಡುವಂತಾಯಿತು. ಇದೆಲ್ಲವನ್ನೂ ಮನಗಂಡು ಎಲ್ಲರ ಹಿತದೃಷ್ಟಿಯಿಂದ ಸರ್ಕಾರ ಎಲ್ಲರೊಂದಿಗೆ ಚಿರ್ಚಿಸಿಯೇ ಒಂದು ಸಮನ್ವಯ ಸೂತ್ರದಂತೆ ಶೇ. 30 ಶುಲ್ಕ ಪಾವತಿಸಲು ಸೂಚಿಸಿತು ಎಂದು ಸಚಿವರು ಹೇಳಿದರು.

    ಸರ್ಕಾರ ಶೇ. 30ರಷ್ಟು ಶುಲ್ಕ ಪಾವತಿಸುವಂತೆ ಆದೇಶ ಹೊರಡಿಸಿದಾಗ ಪೋಷಕರು ತಮ್ಮ ಮಕ್ಕಳ ಶಾಲೆಗಳಿಗೆ ಶುಲ್ಕ ಪಾವತಿಸಲು ಮುಂದಾಗಿದ್ದಾರೆ. ಇದರಿಂದ ಅನೇಕ ಶಾಲೆಗಳು ಸದರಿ ಶುಲ್ಕ ಪಾವತಿಗೆ ಪೋಷಕರಿಗೆ ಅನುವು ಮಾಡಿಕೊಟ್ಟಿವೆ. ಇದರಿಂದ ಆ ಶಾಲೆಗಳ ಸಿಬ್ಬಂದಿಯ ವೇತನಕ್ಕೆ ಅನುಕೂಲವಾಗಿರುವುದಂತೂ ನಿಜ. ಸರ್ಕಾರ ಈ ಆದೇಶ ಹೊರಡಿಸಿದ್ದರ ಪರಿಣಾಮ ಪ್ರಸ್ತುತ ಶಾಲೆಗಳಲ್ಲಿ ಶುಲ್ಕ ಸಂಗ್ರಹವಾಗುತ್ತಿದೆ. ಇಲ್ಲದೇ ಹೋಗಿದ್ದರೆ ಇದು ಇನ್ನೂ ಬಿಗಡಾಯಿಸುತಿತ್ತು. ಸರ್ಕಾರ ಶುಲ್ಕ ಪಾವತಿಸಬೇಕೆಂದು ಆದೇಶ ಹೊರಡಿಸಿದ್ದರಿಂದಲೇ ಪೋಷಕರು ಶುಲ್ಕ ಪಾವತಿಸಲು ಮುಂದಾಗಿದ್ದಾರೆ ಎಂಬುದನ್ನು ನಮ್ಮ ಶಾಲೆಗಳು ಅರ್ಥೈಸಿಕೊಳ್ಳಬೇಕಿದೆ ಎಂದು ಸಚಿವರು ಹೇಳಿದರು.

    ಈ ಸಮಸ್ಯೆಯನ್ನು ಯಾವ ರೀತಿ ಪರಿಹರಿಸಬೇಕೆಂದು ಯಾರಾದರೂ ನನಗೆ ಸಲಹೆ ನೀಡಿದರೆ ನಾನಂತೂ ಮುಕ್ತವಾಗಿ ಸ್ವೀಕರಿಸುತೇನೆ. ಇದನ್ನು ನಾವು ಮಾತುಕತೆಯಿಂದಲೇ ಬಗೆಹರಿಸಿಕೊಳ್ಳಬೇಕು. ಇಂತಹ ವಿಚಿತ್ರ ಸನ್ನಿವೇಶದಲ್ಲಿ ನಾವು ನೀವೆಲ್ಲರೂ ಪೋಷಕರನ್ನೂ ಒಳಗೊಂಡು ಕುಳಿತು ಚರ್ಚೆ ಮಾಡೋಣ. ಈ ವಿಚಿತ್ರ ಸನ್ನಿವೇಶದಲ್ಲಿ ಈ ವರ್ಷದ ಮಟ್ಟಿಗೆ ಎಲ್ಲರೂ ಸಹಕಾರ ನೀಡುವ ಮೂಲಕ ನಮ್ಮ ಮಕ್ಕಳ ಭವಿಷ್ಯವನ್ನು ಕಾಯಲು ನಾವೆಲ್ಲ ಮುಂದಾಗಬೇಕು ಎಂದು ಸಚಿವರು ಪೋಷಕರು ಮತ್ತು ಶಾಲಾಡಳಿತ ಮಂಡಳಿಗಳಿಗೆ ಮನವಿ ಮಾಡಿದ್ದಾರೆ.

    ಚಿನ್ನಮ್ಮನ ಪುನರಾಗಮನ ಕಳಗಂ ನಲ್ಲಿ ಕೋಲಾಹಲ

    ಚುನಾವಣೆ ಪೂರ್ವ ಸಮೀಕ್ಷೆ


    ಜನತಂತ್ರದ ಪ್ರಮುಖ ಪ್ರಕ್ರಿಯೆ ಚುನಾವಣೆ. ದೇಶದ ಸುಮಾರು 19 ರಾಜ್ಯಗಳಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳನ್ನು ಆಯಾ ರಾಜ್ಯಗಳಿಗೆ ಹೋಗಿ ಸಮೀಕ್ಷಿಸುವುದು ಅತಿ ಪ್ರಯಾಸಕರ. ಬೆಂಗಳೂರಿನ ವರದಿಗಾರರ ತಂಡವೊಂದು ಕಳೆದ 25 ವರುಷಗಳಿಂದ ಚುನಾವಣೆ ಜನಾಭಿಪ್ರಾಯ ಸಮೀಕ್ಷೆ ನಡೆಸುತ್ತಾ ಬಂದಿದೆ. ಹಿರಿಯ ಪತ್ರಕರ್ತ ಎಸ್.ಕೆ. ಶೇಷಚಂದ್ರಿಕ ಈ ತಂಡದ ನೇತೃತ್ವ ವಹಿಸುತ್ತಾ ಬಂದಿದ್ದಾರೆ. ಇನ್ನೇನು ಎರಡು ತಿಂಗಳಲ್ಲಿ ನಡೆಯುವ ತಮಿಳುನಾಡು ರಾಜ್ಯ ವಿಧಾನಸಭೆಯ ಚುನಾವಣೆಯ ನಾಡಿ ಮಿಡಿತವನ್ನು ಅರಿಯುವ ಯತ್ನವನ್ನು ಈ ತಂಡ ಮಾಡಿದೆ.ಚುನಾವಣಾ ಸಮೀಕ್ಷೆಯ ಎರಡನೆ ಕಂತು ಇಲ್ಲಿದೆ.


    ಎಸ್.ಕೆ. ಶೇಷಚಂದ್ರಿಕ

    ತಮಿಳುನಾಡಿನ ಮತದಾರ ಮತ್ತು ಚುನಾವಣೆಗಳಲ್ಲಿ ಆತನ ಪಾಲ್ಗೊಳ್ಳುವಿಕೆ ಕುರಿತು ವರದಿ ಮಾಡುವ ಮುನ್ನ ತಮಿಳು ಜನರ ಅಮಿತೋತ್ಸಾಹ ಸಂಕಲ್ಪಗಳ ಬಗೆಗೆ ಹೇಳಲೇಬೇಕು.

    ಕನಸಿನ ಶೋ ಪ್ರಪಂಚದಿಂದ ಭೂಮಿಗೆ ನೇರವಾಗಿ ಇಳಿದುಬಂದವರು ತಮಿಳು ಜನ. ಸಿನಿಮಾದಲ್ಲಿ ನಟ ನಟಿ ಆಡಿತೋರಿಸುವುದನ್ನೆಲ್ಲಾ ಬಹುತೇಕ ಜನಸಾಮಾನ್ಯರು,ನಿಜಜೀವನದಲ್ಲಿ ಮಾಡಿ ತೋರಿಸುತ್ತಾರೆ ಎಂದು ಖಚಿತವಾಗಿ ನಂಬಿದವರು. ಕಳೆದ ನಾಲ್ಕು ದಶಕಗಳ ಸಿನಿರಂಗದ ನಟ ನಟಿಯರು ಮತ್ತು ರಾಜಕೀಯ ಪಕ್ಷಗಳ ಅವಿನಾಭಾವ ನೆಂಟಸ್ಥಿಕೆ ಇದಕ್ಕೊಂದು ನಿದರ್ಶನ.

    ಎರಡನೆಯ ಬಹುಮುಖ್ಯ ಅಂಶವೆಂದರೆ ತಮಿಳುನಾಡು ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳ ಪ್ರಣಾಳಿಕೆ, ತತ್ವ ಸಿದ್ಧಾಂತ ಮತ್ತು ಭರವಸೆಗಳಿಗಿಂತ ಇಲ್ಲಿನ ಮತದಾರರ ಗಮನ ಮುಂದಿನ ಮುಖ್ಯಮಂತ್ರಿ ಆಯ್ಕೆ. ಅಮೇರಿಕಾ ಜನತಂತ್ರವನ್ನು ಮೀರಿಸುವ ಚಾಲಾಕಿ ತಮಿಳು ಮತದಾರ.ಬಣಹಚ್ಚಿ ಮೇಕಪ್ ನಲ್ಲಿದ್ದ ನಟ ನಟಿಯರನ್ನು ನೇರವಾಗಿ ಮುಖ್ಯಮಂತ್ರಿ ಪಟ್ಟಕ್ಕೆ ಕೂರಿಸುವ ಹೆಗ್ಗಳಿಕೆ ಇಲ್ಲಿನ ಮತದಾರ ಸಂಸ್ಕೃತಿ.

    ರಾಜಮಾತೆಯಾದ ಶಶಿಕಲಾ

    ಮತದಾರನ ಈ ಮನೋಭೂಮಿಕೆಯ ಹಿನ್ನಲೆಯಲ್ಲಿ ಮುಂಬರುವ ಸಾರ್ವತ್ರಿಕ ಚುನಾವಣೆಯ ಪ್ರಕ್ರಿಯೆಗಳು ಈಗಾಗಲೇ ತಾರಕಕ್ಕೇರಿದಂತಾಗಿದೆ ತಮಿಳುನಾಡಿನ ಚಿತ್ರ. ಪ್ರಧಾನ ಕಳಗಂ ಪಕ್ಷ ಗಳಾದ ಪ್ರತಿಪಕ್ಷ ದ್ರಾವಿಡ ಮುನ್ನೇತ್ರ ಕಳಗಂ ಮತ್ತು ಆಡಳಿತಾರೂಢ ಎಐಎಡಿಎಂಕೆ ಪಕ್ಷಗಳ ಕಾರ್ಯಕರ್ತರು ಭಾಜಾ ಭಜಂತ್ರಿಯೊಂದಿಗೆ ಚುನಾವಣಾ ತಾಲೀಮು ನಡೆಸಿದ್ದಾರೆ. ಚೆನ್ನೈ, ಮಧುರೈ, ಸೇಲಂ, ತಿರುವಳ್ಳೂರು, ತೂತುಕುಡಿ, ದಿಂಡಿಗಲ್ ಇವೇ ಮೊದಲಾದ ಪ್ರಮುಖ ರಾಜಕಾರಣ ಕೇಂದ್ರಗಳಲ್ಲಿ ಪಕ್ಷದ ಕಚೇರಿಗಳು ಹುಟ್ಟಿಕೊಂಡಿವೆ.

    ತಮಿಳು ರಾಜಕಾರಣಿಗಳು ಬಹು ಚಾಣಾಕ್ಷ ಮಂದಿ. ಚುನಾವಣಾ ಆಯೋಗದ ನೀತಿ ಸಂಹಿತೆಗಳು ಜಾರಿಗೆ ಬರುವ ಮೊದಲೇ ತಮಿಳುನಾಡಿನ ನಗರ ಪಟ್ಟಣಗಳಲ್ಲಿ ಬೃಹತ್ ಬೋರ್ಡ್ ಗಳು, ಭಿತ್ತಿಪತ್ರಗಳು ಕಣ್ಣು ಕುಕ್ಕಲು ಆರಂಭಿಸಿವೆ.

    ಉದಾಹರಣೆಗೆ ಎಂ ಕೆ ಸ್ಟಾಲಿನ್ನರ ಡಿಎಂಕೆ ಪಕ್ಷ ಚಾಲೂಕಿನಿಂದ ಪ್ರಮುಖ ರಸ್ತೆಗಳಲ್ಲಿನ ಅಂಗಡಿ ಶೋ ರೂಮ್ ಗಳ ಮನ ಒಲಿಸಿ ಅವರ ಬೋರ್ಡಿನ ಮೇಲೆ ತಾತ್ಕಾಲಿಕವಾಗಿ ಡಿಎಂಕೆ ಪ್ರಚಾರ ನಡೆಸಿದೆ.

    ಏತನ್ಮಧ್ಯೆ ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದು, ಇದೀಗ ಬಿಡುಗಡೆಯಾಗಿರುವ ದಿ. ಜಯಲಲಿತಾರ ಬಲಗೈನಂತಿದ್ದ ಶಶಿಕಲಾ ಚೆನ್ನೈ ಸೇರಿದ್ದಾರೆ. ರಾತ್ರೋರಾತ್ರಿ ರಾಜಮಾತೆಯ ಪಟ್ಟಕ್ಕೆ ಏರಿರುವ ಚಿನ್ನಮ್ಮನ ಚೆನ್ನೈ ಪ್ರಯಾಣ ತಮಿಳುನಾಡಿನಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಿದೆ.

    ದಿನಕರನಿಗೆ ಭಾಗ್ಯದ ಬಾಗಿಲು

    ಸಣ್ಣಪುಟ್ಟ ಕಾರಣಗಳಿಗೆಲ್ಲ ಕೈಕೈ ಮಿಲಾಯಿಸಿ ಉದ್ರಿಕ್ತರಾಗುವ ಕಳಗಂ ಪಕ್ಷಗಳೆರಡರ ಕಾರ್ಯಕರ್ತರಿಗೂ ಶಶಿಕಲಾರ ಪುನರಾಗಮನ ಬಹು ಮಹತ್ವದ್ದಾಗಿದೆ. ಮುಖ್ಯಮಂತ್ರಿ ಇರಪ್ಪಾಡಿ ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಪನ್ನೀರಸೆಲ್ವಂ ತಮ್ಮ ಕುರ್ಚಿಗೆ ಸಂಚಕಾರ ಬಂತಂತೆ ಚಡಪಡಿಸುತ್ತಿದ್ದಾರೆ. ಗಾಳಿ ಬೀಸಿದತ್ತ ಹೊರಳುವ ಎಐಎಡಿಎಂಕೆ ಶಾಸಕರಿಗೆ ಶಶಿಕಲಾ ಆಗಮನ ನೂರೆಂಟು ಆಶೋತ್ತರಗಳ ಕನಸನ್ನು ತಂದಿದೆ. ಒಳಜಗಳ ತಾರಕಕ್ಕೇರಿದೆ.

    ಶಶಿಕಲಾಗೆ ಮಾನಸ ಪುತ್ರನೊಬ್ಬನಿದ್ದಾನೆ. ಮನೆ ಸಂಬಂಧದಲ್ಲಿ ಸೋದರಳಿಯ. ಈತನ ಹೆಸರು ಟಿ ಟಿ ಎ ದಿನಕರನ್. ಶಶಿಕಲಾ ಅವರ ಬಿಡುಗಡೆ ದಿನಕರನಿಗೆ ಭಾಗ್ಯದ ಬಾಗಿಲು ತೆರೆದಂತಾಗಿದೆ.ಈ ವಿವಾದದಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಎಐಎಡಿಎಂಕೆ ಪಕ್ಷದ ಬಾವುಟದ ಬಳಕೆ ಕುರಿತು ಜಟಾಪಟಿ ನಡೆದಿದೆ. ಈಗಾಗಲೇ ಪರಪ್ಪನ ಅಗ್ರಹಾರದಿಂದ ರೆಸಾರ್ಟ್ ಗೆ ಶಶಿಕಲಾ ಕಾರಿನಲ್ಲಿ ಹೋದಾಗ ದಿನಕರ್ ಪಕ್ಷದ ಬಾವುಟ ಹಾರಿಸಿದ್ದ.

    ಬಾವುಟದೊಂದಿಗೆ ಮೆರವಣಿಗೆ ನಡೆಸಲೇ ಬೇಕೆಂಬ ಹಟ
    ಸಾಧಿಸುತ್ತಿರುವ ದಿನಕರನ್ “ಸೇನಾ ದಂಡ ನಾಯಕನೇ ಎದುರು ನಿಂತರೂ ” ಮೆರವಣಿಗೆ ನಿಲ್ಲುವುದಿಲ್ಲ ಎಂದು ಸಿನಿಮೀಯ ರೀತಿಯಲ್ಲಿ ಸವಾಲೆಸೆದಿದ್ದ. ಆತ ಹಾಕಿದ್ದ ಮತ್ತೊಂದು ಬೆದರಿಕೆಯೆಂದರೆ “ದೇಹದಲ್ಲಿ ಬಾಂಬ್ ಇಟ್ಟು ಕೊಂಡಿರುವ ಆತ್ಮಾರ್ಪಣೆಯ ಕಾರ್ಯಕರ್ತರು ನಮ್ಮೊಂದಿಗಿದ್ದಾರೆ”. ಆತ ಅಂದು ಕೊಂಡಂತೆ ಚಿನ್ನಮ್ಮನ ತಮಿಳುನಾಡು ಪ್ರವೇಶ ಭರ್ಜರಿಯಾಗಿದೆ. ಬೆಂಗಳೂರಿನಿಂದ ಚೆನ್ನೈ ತಲುಪುಲು ಶಶಿಕಲಾ ತೆಗದುಕೊಂಡ ಸಮಯ 23 ಗಂಟೆ. ಹಾದಿ ಮಧ್ಯೆ ಬರುವ ಪ್ರತಿ ಊರಲ್ಲೂ ಭರ್ಜರಿ ಸ್ವಾಗತ.64 ಕಡೆ ಅದ್ದೂರಿ ಸಮಾರಂಭ. ಎಲ್ಲೆಡೆಯೂ ಚಿನ್ನಮ್ಮನದು ಜಯಲಲಿತಾ ಸ್ಟೈಲೇ.

    ಪೆರಂಬೂರಿನಲ್ಲಿ ಹಿಂದೆ ರಾಜೀವ್ ಗಾಂಧಿಯವರ ಹತ್ಯೆ ಯನ್ನು ಕಂಡಿದ್ದ ತಮಿಳುನಾಡು ಆಡಳಿತಕ್ಕೆ ಟಿ ಟಿ ಎ ದಿನಕರನ್ ಭಾರೀ ತಲೆನೋವಾಗಿದ್ದಾನೆ.

    ಇಬ್ಬರ ಜಗಳ ಮೂರನೆಯವನಿಗೆ ಲಾಭ

    ಚುನಾವಣೆಯ ವೇಳಾಪಟ್ಟಿಯ ಪ್ರಕಟಣೆಗೆ ಕ್ಷಣಗಣನೆ ಆರಂಭವಾಗಿರುವ ಪರಿಸ್ಥಿತಿಯಲ್ಲಿ ಎಐಎಡಿಎಂಕೆ ಮತ್ತು ಬಂಡಾಯ ಪಕ್ಷವಾದ ‘ಅಮ್ಮ ಮುನ್ನೇತ್ರ ಕಳಗಮ್’ ನಡುವೆ ತೀವ್ರ ರೀತಿಯ ವಾಗ್ವುದ್ಧ ನಡೆದಿರುವುದು ತಮಿಳುನಾಡು ರಾಜಕಾರಣಕ್ಕೆ ಹೊಸ ತಿರುವು ಸಿಕ್ಕಂತಾಗಿದೆ. ಪಕ್ಷದ ಜನನಿ, ಅಧಿನಾಯಕಿ,ಅನಭಿಷಕ್ತೆ ದಿ. ಜಯಲಲಿತಾಳ ಹೆಸರಿನಲ್ಲಿ ಚುನಾವಣೆಯಲ್ಲಿ ಆಯ್ಕೆಗೊಂಡು ಅಧಿಕಾರದಲ್ಲಿರುವ ಅಖಿಲ ಭಾರತ ಅಣ್ಣಾ ಡಿಎಂಕೆ (ಎಐಎಡಿಎಂಕೆ) ಪಕ್ಷದ ಅಸ್ತಿತ್ವಕ್ಕೆ ಪೆಟ್ಟು ಬಿದ್ದಂತಾಗಿದೆ. ಜೈಲಿನಿಂದ ಹೊರಬಂದ ಶಶಿಕಲಾ ಗಾಯಗೊಂಡ ಹುಲಿಯಂತಾಗಿದ್ದಾರೆ. ಪಕ್ಷದ ಭವಿಷ್ಯಕ್ಕಿಂತ ತನ್ನ ಇರುವಿಕೆಗೆ ಸವಾಲಾದ ಮರ್ಯಾದೆಯ ಪ್ರಶ್ನೆ ಇದರಲ್ಲಿ ಅಡಗಿದೆ.

    ಇದೇ ಸ್ಥಿತಿ ಮುಂದುವರಿದರೆ ಎಂಜಿಆರ್, ಜಯಲಲಿತಾ ಕಟ್ಟಿ ಬೆಳೆಸಿದ ಪಕ್ಷ ಉಳಿಯುವುದು ಕಷ್ಟವೆನಿಸುತ್ತದೆ.

    ನಿಮ್ಮ ಮನೆ ಅಂಗಳದಲ್ಲಿ ಸ್ಟಾಲಿನ್

    ಚುನಾವಣಾ ವೇಳಾಪಟ್ಟಿ ಪ್ರಕಟಣೆಯನ್ನು ಕಾಯದೆ ಮತದಾರರನ್ನು ಒಲಿಸಲು ಬೃಹತ್ ಪ್ರಚಾರಕಾರ್ಯಗಳನ್ನು ಹಮ್ಮಿಕೊಳ್ಳುವುದರಲ್ಲಿ ಕಳಗಂ ದ್ರಾವಿಡ ಪಕ್ಷಗಳು ಎತ್ತಿದ ಕೈ.ಉದಾಹರಣೆಗೆ ಪ್ರತಿಪಕ್ಷ ಡಿಎಂಕೆ ಮತ್ತು ಪಕ್ಷದ ನಾಯಕ ಎಂ ಕೆ ಸ್ಟಾಲಿನ್.ಆಡಳಿತಾರೂಢ ಎಐಎಡಿಎಂಕೆ ಪಕ್ಷದ ಆಂತರಿಕ ಕಚ್ಚಾಟ ವೈಮನಸ್ಸುಗಳಿಗಿಂತ ಮುಂಚೆಯೇ, ಈ ವರ್ಷದ ಜನವರಿ ಒಂದರಿಂದ ತಮ್ಮ ಚುನಾವಣಾ ಕಾರ್ಯ ಆರಂಭಿಸಿದ ನಾಯಕ ಸ್ಟಾಲಿನ್.ಈಗಂತೂ ಮುಖ್ಯಮಂತ್ರಿ ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಪನ್ನೀರ್ ಸೆಲ್ವಂರವರ ಅಸಹಾಯಕ ಪರಿಸ್ಥಿತಿ ಡಿಎಂಕೆ ಪಕ್ಷಕ್ಕೆ ಅನಿರೀಕ್ಷಿತ ಬೋನಸ್ ಸಿಕ್ಕಂತಾಗಿದೆ.2016ರ ಚುನಾವಣೆಯಲ್ಲಿ ಕೇವಲ 97 ಸ್ಥಾನಗಳಿಸಿ ಅಧಿಕಾರಕ್ಕೆ ಬರುವಲ್ಲಿ ವಿಫಲವಾದ ಸ್ಟಾಲಿನ್ ಈ ಬಾರಿ ಶತಾಯ ಗತಾಯ ಪಕ್ಷದ ಯಶಸ್ಸಿಗೆ ಕಂಕಣ ತೊಟ್ಟಿದ್ದಾರೆ.ಪಕ್ಷದ ಕಾರ್ಯಕರ್ತರಿಗೆ ‘ತಳಪತಿ’ ಎಂದೇ ಪರಿಚಿತರಾದ ಅರುವತ್ತೇಳು ವರುಷದ ಎಂ ಕೆ ಸ್ಟಾಲಿನ್ ದಿ. ಕರುಣಾನಿಧಿಯವರ ಪುತ್ರ. ನಾವು ಕಂಡಂತೆ ಸಮಕಾಲೀನ ರಾಜಕೀಯ ನಾಯಕರುಗಳ ಪೈಕಿ ತಮಿಳುನಾಡಿನಲ್ಲಿ ಸ್ಟಾಲಿನ್ ಅಮೋಘ ವಾಗ್ಮಿ, ಗೋಧಿ ಬಣ್ಣ,ಸಾಧಾರಣ ಮೈಕಟ್ಟು , ಅಗಲ ಹಣೆ, ನೀಟಾಗಿ ಬಾಚಿದ ತಲೆಕೂದಲು, ಯುದ್ಧಕ್ಕೆ ಮುನ್ನುಗ್ಗುವ ಭಂಗಿ ಇವು ಈತನ ಆಕರ್ಷಣೆ.ತಮಿಳು ಸಾಹಿತ್ಯ ಮತ್ತು ಇತಿಹಾಸವನ್ನು ಆಳವಾಗಿ ಅಭ್ಯಾಸ ಮಾಡಿರುವ ಸ್ಟಾಲಿನ್ ಅವರ ಭಾಷಣ ಕೇಳಲು ಬಲು ಚೆಂದ, ಆಕರ್ಷಕ. ತಮಿಳು ಭಾಷಾ ಜಗತ್ತಿನ ದಾರ್ಶನಿಕರು, ವಿಚಾರವಾದಿಗಳು, ಕವಿಗಳು ವಾಗ್ಗೇಯಕಾರರು, ಜನಪದ ಸಾಹಿತ್ಯ ಪ್ರಾಕಾರಗಳು ಸ್ಟಾಲಿನ್ ನಾಲಿಗೆಯ ಮೇಲೆ ಕುಣಿದಾಡುತ್ತವೆ. ಎಷ್ಟೇ ಹೊತ್ತು ಮಾತನಾಡಿದರೂ ಇನ್ನೂ ಕೇಳಬೇಕೆನಿಸುವ ಭಾಷಣ ಶೈಲಿ ಈತನದು.ಯಾವುದಾದರೊಂದು ಆಕರ್ಷಕ ತಲೆಬರಹದ ಘೋಷಣೆಯೊಂದಿಗೆ ಚುನಾವಣಾ ಭಾಷಣ ಮಾಲಿಕೆ ಆರಂಭಿಸುವುದು ಸ್ಟಾಲಿನ್ನರ ಪದ್ದತಿ. ಕಳೆದ ಬಾರಿ ಇವರಿಟ್ಟ ಘೋಷಣೆ ನಮ್ಮಕ್ಕುಂ ನಾಮೆ ( ತಮಿಳರಾದ ನಾವು ಎಲ್ಲಕ್ಕೂ ಮುಂದೆ). ಟೆಂಪೋ ಟ್ರಾವೆಲರ್ ಅಥವ ಮಿನಿ ಬಸ್ಸಿನಲ್ಲಿ ಸಂಚರಿಸುತ್ತಾ ಮೋಹಕವಾಗಿ ಮತದಾರನಿಗೆ ಮಾತಿನಿಂದ ಮುತ್ತಿಕ್ಕುವುದು ಸ್ಟಾಲಿನ್ನು ರ ಭಾಷಣ ಶೈಲಿ.ಈ ಬಾರಿ ಸ್ಟಾಲಿನ್ ರ ಶೋ ಹೆಸರು ” ಉಂಗಳ್ ತೌಗತ್ತಿಯೊಳ್ ಸ್ಟಾಲಿನ್ ” ಕನ್ನಡದಲ್ಲಿ ಭಾಷಾಂತರಿಸಿ ಹೇಳಬಹುದಾದರೆ “ನಿಮ್ಮ ಮನೆಯಂಗಳದಲ್ಲಿ ಸ್ಟಾಲಿನ್ “.


    ಎಸ್ .ಕೆ. ಶೇಷಚಂದ್ರಿಕ ನಾಡಿನ ಹಿರಿಯ ಪತ್ರಕರ್ತರು.  ಭಾರತ ಸರಕಾರದ ಕ್ಷೇತ್ರ ಪ್ರಚಾರಾಧಿಕಾರಿಯಾಗಿ, ದೂರದರ್ಶನ, ಆಕಾಶವಾಣಿಯಲ್ಲಿ ಸುದ್ದಿ ಸಂಪಾದಕ, ವಿಶೇಷ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ಪತ್ರಿಕಾ ಕಾರ್ಯದರ್ಶಿಯೂ ಆಗಿದ್ದರು.ದಿ ಟ್ರಿಬ್ಯೂನ್ ಪತ್ರಿಕೆಯ ವಿಶೇಷ ವರದಿಗಾರರು ಆಗಿ ಸೇವೆ ಸಲ್ಲಿಸಿದ ಅವರು ಈಗ ಬೆಂಗಳೂರು ನ್ಯೂಸ್ ಬ್ಯೂರೋದ ವಿಶೇಷ ವರದಿಗಾರರು ಹಾಗೂ ಗಾಂಧಿಯನ್ ಥಾಟ್ಸ್ ನ ವಿಸಿಟಿಂಗ್ ಪ್ರೊಫೆಸರ್ ಕೂಡ ಹೌದು.


    ಅಂಡ, ಪಿಂಡ, ಬ್ರಹ್ಮಾಂಡ

    ಎಂಜಿನಿಯರಿಂಗ್ ಮುಗಿಸಿ ಜೀವನದ ನೊಗಲಿಗೆ ಹೆಗಲು ಕೊಟ್ಟಿದ್ದೆ. ಅಪ್ಪ ಏನೋ ಡಿಗ್ರಿ ಕೊಡಿಸಿದ್ದರು. ಅದನ್ನು ಕಾಪಾಡಿಕೊಂಡು, ಅದಕ್ಕೆ ಧಕ್ಕೆ ಬರದ ರೀತಿಯಲ್ಲಿ ಜೀವಿಸಲು ಹೆಣಗಾಡುತ್ತಿದ್ದೆ. ಅಪ್ಪನಿಗೆ ಹೇಳಿಯೂ ಬಿಟ್ಟಿದ್ದೆ ಒಮ್ಮೆ, ನನ್ನ ಮದುವೆಗೆ ಒತ್ತಾಯಿಸುವಾಗ. ನನಗೇಕೆ ಇಂತಹ ದೊಡ್ಡ ಡಿಗ್ರಿ ಕೊಡಿಸಿದೆ. ಹೊತ್ತು ಹೊಟ್ಟೆ ಹೊರೆಯುವುದು ತುಂಬಾ ಕಷ್ಟ ಆಗ್ತಿದೆ. ಶಿಕ್ಷಕನೊ, ಕಾರಕೂನನೊ ಆಗಿದ್ದರೆ ನಿನಗೆ ಇಷ್ಟೊತ್ತಿಗೆ ತಾತನನ್ನು ಮಾಡಿರುತ್ತಿದ್ದೆ. ನೀನು ಕಷ್ಟ ಪಟ್ಟು ಕೊಡಿಸಿರುವ ಈ ಎಂಜಿನಿಯರ್ ಎನ್ನುವ ಡಿಗ್ರಿ ನನ್ನನ್ನು ಇನ್ನಿಲ್ಲದಂತೆ ಹಿಂಸಿಸುತ್ತಿದೆ. ಹೊಟ್ಟೆ ಹೊರೆಯಲು ಸಾಕಷ್ಟು ಮಾರ್ಗಗಳು ಇವೆ. ನಾನೂ ದೈಹಿಕವಾಗಿ, ಬೆವರು ಸುರಿಸಿ ದುಡಿಯಲು ತಯಾರಿದ್ದೇನೆ. ಆದರೆ ಈ ಡಿಗ್ರಿ ಅಡ್ಡ ಬರುತ್ತಿದೆ. ಎಂಜಿನಿಯರ್ ಡಿಗ್ರಿ ಹಿಡಿದು, ಇಂತಹ ಕೆಲಸ ಮಾಡುವುದಾ ಅಂತ ಯಾರಾದ್ರೂ ಕೇಳಿದರೆ ಅನ್ನುವ ಭಯ ಕಾಡ್ತಿದೆ.ಈ ಭಯದಿಂದ ಕೆಲವಾರು ಕೆಲಸ ಮಾಡೋದು ಸಾಧ್ಯವಾಗುತ್ತಿಲ್ಲ. ಅಂತ ನನ್ನ ತುಮುಲವನ್ನು ಅಪ್ಪನಲ್ಲಿ ತೋಡಿಕೊಂಡಿದ್ದೆ. ಮೌನಿಯಾಗಿದ್ದರು ಅಪ್ಪ. ಅಲ್ಲಿಗಾಗಲೇ ಅವರು ಹೇಳುವುದನ್ನು ಸಾಕಷ್ಟು ಸಾರಿ, ಸಾಕಷ್ಟು ಬಗೆಯಲ್ಲಿ ಹೇಳಿ ಆಗಿತ್ತು, ಯಾವುದಾದರೂ ನೌಕರಿ ಹಿಡಿ ಅಂತ. ಈ ನೌಕರಿ ಅನ್ನೋದು ನನಗೂ ಅಪ್ಪನಿಗೂ ಸಾಕಷ್ಟು ಕಂದಕ ತಂದೊಡ್ಡಿತ್ತು. ಆದರೂ ನನ್ನ ದುಗುಡು, ದುಮ್ಮಾನಗಳನ್ನು ಅಪ್ಪನಲ್ಲಿ ಹಂಚಿಕೊಂಡಷ್ಟು ಯಾರಲ್ಲಿಯೂ ಹಂಚಿಕೊಳ್ಳಲು ಆಗುತ್ತಿರಲಿಲ್ಲ. ಅವರಿಗೂ ಬೇಸರ ಆಗಿ ನನ್ನ ಮನೋಸ್ಥೈರ್ಯ ಕುಂದುವ ಸಲಹೆ ಬರುತ್ತವೆ ಅಂತ ಗೊತ್ತಿದ್ದೂ.

    ನಮ್ಮಿಬ್ಬರ ಮಧ್ಯೆ ಬಗೆ ಹರಿಯದ ವಿಷಯ ಇದು, ನನ್ನ ಹಠವನ್ನು ದುರ್ಯೋಧನನ ಹಠ ಅಂತ ಹೆಸರಿಸಿ, ವಿಷಯವನ್ನು ಬದಲಿಸಲು ಎಂಬಂತೆ ಇತ್ತೀಚೆಗೆ ಏನನ್ನಾದ್ರೂ ಓದಿದೆಯಾ ಅಂತ ಕೇಳಿದ್ದರು. ಈ ಓದು ಒಂದೇ ನನ್ನ ದುಗುಡಗಳಿಗೆ ಪರ್ಯಾಯ ಅಂತ ಅಪ್ಪನಿಗೂ ಅರ್ಥ ಆಗಿತ್ತು.

    ಹೂ ಓದಿದೆ. ಈ ಜಂಜಾಟದ ಜೀವನ ಬೇಸರವಾಗಿ ಎಲ್ಲ ಬಿಟ್ಟು ಸನ್ಯಾಸಿ ಆಗುವ ಅಂತ …ವೇದ,ವೇದಾಂತ, ಷಟ್ ದರ್ಶನಗಳು, ಉಪನಿಷತ್ತುಗಳು, ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ಶೈವ, ಶಾಕ್ತ, ಗಾಣಪತ್ಯ, ಜೈನ,ಬೌದ್ಧ, ಅಜೀವಕ, ಕಾಪಾಲಿಕ, ಅಘೋರಿ ಇವರ ಮಧ್ಯೆ ನಾಸ್ತಿಕರು….ಅಸಂಖ್ಯಾತ ಪಂಗಡಗಳ ಸಿದ್ಧಾಂತಗಳು ನನ್ನನ್ನು ಹುಚ್ಚು ಹಿಡಿಸಿವೆ. ಅಲ್ಲಿಯೂ ಏನೊಂದೂ ತೀರ್ಮಾನಿಸಲು ಆಗದೆ ಕೊನೆಯಲ್ಲಿ ನನಗೆ ಅನುಮಾನ ಅಂದರೆ ಈ ತ್ರಿಮೂರ್ತಿ ಗಳು ಅಂತ ಕರೆಸಿಕೊಳ್ಳುವ ಬ್ರಹ್ಮ, ವಿಷ್ಣು, ಮಹೇಶ್ವರರು ಅವಿರ್ಭವಿಸಿರುವುದು ಹೇಗೆ ಅಂದೆ.

    ದಡ್ಡ ಯಾರು ಹೇಳಿದ್ದು ನೀನು ಹೇಳಿದ ಎಲ್ಲವೂ ನಿನ್ನಂತಹ ಪಲಾಯನ ವಾದಿಗಳ ವಿಷಯಗಳು ಅಂತ?! ಅವುಗಳಲ್ಲಿ ಇರುವುದು ಮಹತ್ತರ ವಿಷಯಗಳು ಮತ್ತು ಅವುಗಳನ್ನು ಅರಿತು ಉಳಿಸಿಕೊಂಡು ಪುರುಷಾರ್ಥ ಸಾಧಿಸಲು ಬೇಕಾಗಿರುನೀನು ದು ಅಚಲ ಶ್ರದ್ಧೆ ಮತ್ತು ನಂಬಿಕೆ.

    ನನಗಿಂತಲೂ ಹೆಚ್ಚಿನ ವಿಜ್ಞಾನ ನೀನು ಓದಿಕೊಂಡಿದ್ದಿಯ , ಅದರಲ್ಲಿ ದ್ರವ್ಯ, (Matter/Mass) ಆಕಾಶ (space), ಕಾಲ (time) ಬಗ್ಗೆ ತುಂಬಾ ಓದಿರಬೇಕಲ್ಲ ನೀನು? ಅಂದಿದ್ದರು. ಅಲ್ಲಿಯ ತನಕ ಇದ್ದ ನನ್ನ ದುಗುಡತೆ ಒಮ್ಮೆಲೇ ಮಾಯವಾಗಿ ಇನ್ನಿಲ್ಲದ ಕುತೂಹಲದಿಂದ ಹೌದು ಅಂದೆ. ನಮ್ಮ ದಾರ್ಶನಿಕರು ಈ ಮೂರನ್ನೇ ತ್ರಿಮೂರ್ತಿ ಗಳು ಅಂದಿದ್ದಾರೆ ಅಂತ ಅಂದುಬಿಟ್ಟರು. ಅಪ್ಪಾ, ನಿಮಗೆಲ್ಲಾ ನಿಮ್ಮ ವೇದಾಂತಗಳನ್ನು ಈ ವಿಜ್ಞಾನಕ್ಕೆ ಸಮೀಕರಿಸಿಕೊಂಡು ಹೇಳೋದು ನನಗೆ ಬಹಳಷ್ಟು ಬಾರಿ ನಗೆ ತರಿಸಿದೆ. ಯಾಕೆ ನಿಮಗೆಲ್ಲಾ ಇಂತಹ ಹುಚ್ಚು? ಅದು ವಿಜ್ಞಾನವೇ ಆಗಿದ್ದರೆ, ವಿಜ್ಞಾನದಷ್ಟು ಸರಳವಾಗಿ ಯಾಕೆ ಹೇಳಲಿಲ್ಲ? ವಿಜ್ಞಾನ ಅಥವಾ ವಿಜ್ಞಾನದ ಅವಿಷ್ಕರಣೆಗಳು ಪ್ರಚಲಿತವಾದಾಗ, ಇದೇ ನೋಡು ವೇದ ಹೇಳಿರೋದು, ಆ ಈ ಧರ್ಮ ಸಿದ್ಧಾಂತ ಹೇಳಿರೋದು ಅಂತ ಹೇಳ್ತೀರಿ, ನಗೆಪಾಟಲಿಗೆ ಗುರಿ ಆಗ್ತೀರಿ ಅಂದೆ.

    ರೇಗಿಸಿದರೂ ಸಮಾಧಾನದಿಂದ ನಮ್ಮ ಸಿದ್ಧಾಂತಗಳು ಅವಿಷ್ಕಾರವಾದಾಗ ಮನುಷ್ಯನ ಬುದ್ಧಿಮತ್ತೆ ಈಗಿನಷ್ಟು ಬೆಳೆದಿರಲಿಲ್ಲ. ಸಾವಿರಕ್ಕೆ,ಲಕ್ಷಕ್ಕೆ ಒಬ್ಬರು ಜ್ಞಾನಿಗಳು ಇರ್ತಿದ್ದರು. ಶಾಲಾ ಶಿಕ್ಷಕನಾಗಿ 30 ವರ್ಷ ಕೆಲಸ ಮಾಡಿರುವ ಅನುಭವದಲ್ಲಿ ಹೇಳ್ತೇನೆ, ಹಳೆಯ ಪೀಳಿಗೆಗಳಿಗಿಂತ ಹೊಸ ಪೀಳಿಗೆಗಳು ತುಂಬಾ ಚುರುಕಾಗಿ, ಬುದ್ಧಿವಂತರಾಗಿರುವುದನ್ನು ನಾನು ಕಂಡು ಕೊಂಡಿದ್ದೇನೆ. ಸಾವಿರಾರು ವರ್ಷಗಳ ಹಿಂದೆ ವಿಧ್ಯೆಯ ಹಿಂದೆ ಹೋದವರು ತುಂಬಾ ಕಡಿಮೆ. ಆಗ ಅವರು ಕಂಡುಕೊಂಡದ್ದನ್ನು ಧರ್ಮ,ದೇವರು ಅಂತ ಹೇಳಿದರೆ ಮಾತ್ರ ಅದಕ್ಕೆ ಪವಿತ್ರತೆ ಇರ್ತಿತ್ತು. ಹಾಗಾಗಿ ದೇವರುಗಳಿಗೆ ಸಮೀಕರಿಸಿ ಅವರು ಕಂಡು ಕೊಂಡದ್ದನ್ನು ಹೇಳಿದ್ದಾರೆ.

    ಆವರು ಹೇಳಿರುವ ಸರಳತೆ, ಮುಂದುವರೆದ ನಿನ್ನ ಪೀಳಿಗೆಯವರಿಗೆ ನಗೆಪಾಟಲಾಗಿ ಕಾಣುವುದೂ ಆಶ್ಚರ್ಯವಲ್ಲ, ಅದರಲ್ಲಿ ನಿಮ್ಮ ತಪ್ಪು ಇಲ್ಲ. ಆಗಿದ್ದ ಅಲ್ಪ ಬುದ್ಧಿಗಳಿಗೆ ಅವರ ಸಮಕ್ಕೆ ಹೇಳಿದ್ದಾರೆ ಅಷ್ಟೇ ಅಂದು ಬಿಟ್ಟಿದ್ದರು ಅಪ್ಪ. ಉದಾಸಿನತೆ ಇಣುಕಿದರೂ ಆಸಕ್ತಿ ಎಲ್ಲೋ ಒಂದು ಕಡೆ ಹೆಡೆ ಬಿಚ್ಚುತ್ತಿತ್ತು ನನ್ನಲ್ಲಿ. ಸರಿ ಈ ದ್ರವ್ಯ,ಆಕಾಶ,ಕಾಲ ತ್ರಿಮೂರ್ತಿಗಳಾದದ್ದು ಹೇಗೆ ಹೇಳಿ ಅಂದೆ.

    ಸೃಷ್ಟಿಯ ಸಕಲ ಜಡ ಜೀವಗಳ ಅಂಡ, ಪಿಂಡ ಬ್ರಹ್ಮಾಂಡ ವು ಒಂದು ದ್ರವ್ಯದಿಂದ ತಯಾರಾಗಿ, ಆ ದ್ರವ್ಯವೇ ಸೃಷ್ಟಿಯನ್ನೂ ವ್ಯಾಪಿಸಿರುವುದನ್ನು ಅರಿತು ಅದನ್ನು ಬ್ರಹ್ಮ ಅಂದರು. ಅದನ್ನು ವಿಜ್ಞಾನ Matter/ mass ಅಂತ ಈಗ ಹೆಸರಿಸಿದೆ. ಸಕಲ ಚರಾಚರ ಜೀವಗಳ ಉಗಮಿಗೆ ಈ ದ್ರವ್ಯವೇ ಕಾರಣ ಎಂದರಿತು ಅದಕ್ಕೆ ಸೃಷ್ಟಿ ಕರ್ತ ಬ್ರಹ್ಮ ಅಂತ ಹೆಸರಿಸಿದರು. ಅತೀ ಪುರಾತನ ಈ ದ್ರವ್ಯ ಅಂತ ಹೇಳಲು ಬ್ರಹ್ಮನನ್ನು ಬಿಳಿ ಗಡ್ಡ ಮೀಸೆ ಕೂದಲುಗಳನ್ನೊಳಗೊಂಡವನನ್ನಾಗಿ ಚಿತ್ರಿಸಿದರು. ಈ ದ್ರವ್ಯ ಅಥವಾ ಬ್ರಹ್ಮ ಇರುವುದು ಎಲ್ಲಿ? ಆಕಾಶದಲ್ಲಿ. ಈ ಆಕಾಶವನ್ನು ವಿಷ್ಣು ಅಂದು ಅವನಲ್ಲಿ ದ್ರವ್ಯ ಇದೆ ಅಥವಾ ಅವನಿಂದ ಬ್ರಹ್ಮ ಹುಟ್ಟಿದ ಅಂತ ಹೇಳಲು ವಿಷ್ಣುವಿನ ನಾಭಿಯಿಂದ ಬ್ರಹ್ಮ ಜನಿಸಿದ ಅಂತ ಕಲ್ಪಿಸಿಕೊಟ್ಟರು. ಆಕಾಶಕ್ಕೆ ವಯಸ್ಸಿಲ್ಲ,ಸದಾ ಯವ್ವನವೇ. ಹಾಗಾಗಿ ಯವ್ವನ ಅವಸ್ಥೆಯ ವಿಷ್ಣುವಿನಿಂದ ಬ್ರಹ್ಮ ಹುಟ್ಟಿದ ಅನ್ನುವ ಪರಿಪಾಠ ಬಂತು. ಈ ಆಕಾಶವೇ ವಿಜ್ಞಾನದ Space. ಇನ್ನು ಕಾಲ ಅಥವಾ time. ಇದನ್ನು ಮಹೇಶ್ವರ/ ಶಿವ ಅಂದರು. ಇದು ಮಾತ್ರ ಹೊಸತನ್ನು (ಕ್ಷಣವನ್ನು )ಸೃಷ್ಟಿಸಿ, ಹಳತನ್ನ ನಾಶ ಮಾಡಬಲ್ಲದು. ಇದಕ್ಕೆ ಸೃಷ್ಟಿಯ ಸಂಕೇತ ಅಂದರು. ವಿನಾಶವನ್ನು ಹೇಳಲೂ ಇದೇ ಶಿವನನ್ನು ಕಾಲ ಭೈರವ/ ಪ್ರಳಯ ರುದ್ರ ಅಂದರು. ಆಕಾಶಕ್ಕೆ ಈ ಕಾಲನ ಮಿತಿ ಇಲ್ಲದೇ ಇರುವುದರಿಂದ ಅದು ಯಾವಾಗಲೂ ಒಂದೇ ಸ್ಥಿತಿ ಕಾಪಾಡಿಕೊಂಡಿರುವುದನ್ನು ಸೂಚಿಸಲು ವಿಷ್ಣುವನ್ನು ನವ ಯವ್ವನದಲ್ಲಿ ನಮಗೆ ಕಾಣಿಸಿಕೊಟ್ಟರು. ಈ ಮೂಲ ದರ್ಶನವು ಮಾನವ ವಿಕಸಿದಂತೆಲ್ಲಾ ಮೂರು ಬೇರೆ ಬೇರೆ ತತ್ವಗಳಾಗಿ ಸಿದ್ಧಾಂತಗಳ ರೂಪ ಪಡೆದಿದೆ. ಸಿದ್ದಾಂತ ಪ್ರತಿಪಾದಿಸುವವರ ಅಹಂ ನಿಂದಾಗಿ ಹೆಚ್ಚುಗಾರಿಕೆ ತೋರ್ಪಡಿಸಲು ವಿಷ್ಣು ಶ್ರೇಷ್ಠ, ಶಿವ ಶ್ರೇಷ್ಠ ಅನ್ನುವ ಭಾವಗಳು ಬಂದಿವೆ. ಇಲ್ಲಿ ಯಾರೂ ಎಲ್ಲಿಯೂ ಶ್ರೇಷ್ಠರಲ್ಲ. ತತ್ವಗಳ ಗುರುತಾಗಿ ಮೂಡಿದ ಗುರುತುಗಳು ಅಷ್ಟೇ. ಅಂತ ನಿರ್ವಿಕಾರವಾಗಿ ಹೇಳಿದ್ದರು. ನಾನು ಕ್ಷಣ ಕಾಲ ಸ್ಥoಬೀತ ನಾಗಿದ್ದೆ.

    ಇನ್ನ ವಿಶ್ವದ ಉಗಮದ ಜೊತೆ ಮಾನವ, ಭೂಮಿಯ ಉಗಮವನ್ನು ತಿಳಿಸಲು ಅದರ ವೈಶಾಲತೆಯನ್ನು ಸಂಕುಚಿಸಿ,Whole to Part ಅನ್ನುವ ನಿಯಮವನ್ನು ಪಾಲಿಸಿಕೊಂಡು ಮಾನವನಿಗೆ, ಈ ಭೂಮಿಗೆ ಮಾತ್ರ ಸೀಮಿತಿಗೊಳಿಸಿ ಹಲವು ಸಿದ್ದಾಂತಗಳನ್ನು ಹಲವಾರು ದಾರ್ಶನಿಕರು ಮಂಡಿಸಿದರು. ಇವರು ಮೂಲ ಮೂರರೊಂದಿಗೆ, ಮತ್ತೂ ಐದು ತತ್ವ ಹೇಳಿ ಪಂಚ ಮಹಾ ಭೂತಗಳು ಅಂತ ಹೆಸರಿಸಿದರು. ಅವೇ ಭೂಮಿ/ಮಣ್ಣು, ಗಾಳಿ, ನೀರು, ಬೆಂಕಿ ಮತ್ತು ಆಕಾಶ. ಭೂಮಿ , ಆಕಾಶ ಮೂಲ ರೂಪದ ದ್ರವ್ಯ,ಆಕಾಶದ ಸಂಕುಚಿತ ಅರ್ಥ ಹೇಳಿದರೆ, ಗಾಳಿ,ನೀರು,ಬೆಂಕಿ ಪ್ರತಿ ಜೀವಿಗಳಿಗೆ ಆಧಾರವಾದದ್ದನ್ನು ತಿಳಿಸಿಕೊಟ್ಟರು. ಪ್ರತಿ ಜೀವಿಗಳಿಗೆ ಬದುಕಿ,ವಿಕಸಿಸಲು ಈ ಮೂರು ಅಗತ್ಯ ಮತ್ತು ಅವು ಎಲ್ಲ ಜೀವಿಗಳಲ್ಲಿ ಇವೆ ಅಂತ ತೋರಿಸಿದರು. ಗಾಳಿ/ ವಾಯು ಐದು ರೂಪಗಳಲ್ಲಿ ಜೀವಿಗಳಲ್ಲಿ ಇದೆ.(ಪ್ರಾಣ, ಅಪಾನ, ವ್ಯಾನ ,ಉದಾನ, ಸಮಾನ ಅಂತ ನಮ್ಮ ದೇಹದಲ್ಲಿರುವ ಗಾಳಿಯನ್ನು ಅದು ಇರುವ ಮತ್ತು ಮಾಡುವ ಕೆಲಸದಿಂದಾಗಿ ವಿಭಜಿಸಿದ್ದಾರೆ) ಬೆಂಕಿಯು ಜಠರಾಗ್ನಿ ಅಂತ ಕರೆಸಿಕೊಂಡು ನಾವು ತಿಂದ ಅನ್ನವನ್ನು ಜೀರ್ಣಿಸಲು ಸಹಕಾರಿಯಾಗಿದೆ. (ಈ ತತ್ವವನ್ನು ಜೀವಂತ ಇಡುವ ಮಾರ್ಗವಾಗಿಯೇ ಹೋಮ ಹವನದಲ್ಲಿ ಅಗ್ನಿಗೆ ಹವಿಸ್ಸು ಕೊಡುವ ರೂಢಿ ಬಂತು) ಇನ್ನು ಇಡೀ ಶರೀರದ ಶೇಕಡಾ 60 ಭಾಗ ನೀರಿನಿಂದ ಆವರಿಸಿದೆ ಅಂತ ಈಗಿನ ವಿಜ್ಞಾನವೂ ಹೇಳಿದೆ. ಜೀವರಾಶಿಗಳಲ್ಲಿ ಬಹುಮುಖ್ಯವಾದ ಈ ತತ್ವಗಳು ಹೊರಗಿನ ಪ್ರಕೃತಿಯಲ್ಲಿಯೂ ಇರುವುದನ್ನು ಕಂಡು ಬ್ರಹ್ಮ,ಪರಬ್ರಹ್ಮ ಅಂದರು. ಈ ಜ್ಞಾನವು ಶಾಖೆಗಳಲ್ಲಿ ಉಳಿದು ಮುಂದುವರೆಯಲಿ ಅಂತ ಯೋಚಿಸಿ ನಿರ್ದಿಷ್ಟ ಗುಂಪುಗಳಿಗೆ ಒಂದೊಂದು ಸಿದ್ದಾಂತವನ್ನು ಹಂಚಿದರು. ಆ ಮಹೋದ್ದೇಶ ಮಾನವನ ಅಲ್ಪತನಕ್ಕೆ ತುತ್ತಾಗಿ ತನ್ನ ನಿಜರೂಪ ಕಳೆದುಕೊಂಡು ಮತ್ತೆಂತಹದೋ ವಿರೂಪ ತಾಳಿರುವುದು ಮೂಲ ದಾರ್ಶನಿಕರ ತಪ್ಪಾ? ಯೋಚನೆ ಮಾಡು. ಒಬ್ಬ ಡಾಕ್ಟರ್ ಮಾಡುವ ಎಡವಟ್ಟಿಗೆ ಇಡೀ ವೈದ್ಯಕೀಯ ಶಾಸ್ತ್ರ ಕೆಲಸಕ್ಕೆ ಬಾರದ್ದು ಎನ್ನುವುದು ಎಷ್ಟು ಸಮಂಜಸ ಅಂತ ನನ್ನನ್ನು ಪ್ರೆಶ್ನೆ ಕೇಳಿ ಸುಮ್ಮನಾಗಿ ದೀರ್ಘ ಉಸಿರು ಬಿಟ್ಟಿದ್ದರು. ಸ್ವಲ್ಪ ಹೊತ್ತು ಸುಮ್ಮನಿದ್ದು ಇದೆಲ್ಲಾ ವಿಜ್ಞಾನ ಅಲ್ಲದೆ ಮತ್ತೇನು ಅಂದರು.

    ಸೃಷ್ಟಿಯ ಪ್ರತಿಯೊಂದೂ ಚಲನೆ ಹೊಂದಿ, ಕಾಲನ ತುಳಿತಕ್ಕೆ ನಾಶ ಹೊಂದುತ್ತದೆ, ಒಂದು ಆಕಾಶವನ್ನು ಬಿಟ್ಟು. Space is independent of Time. ಈ ಆಕಾಶವನ್ನು ವಿಷ್ಣು ಅಂದಾಗ ಇದರ ಅನಂತತೆಯನ್ನು,ಶಾಶ್ವತತೆಯನ್ನು ಸಮೀಕರಿಸಲು ಯವ್ವನ ರೂಪದ ಮನುಷ್ಯನ ರೂಪಕ ಇಟ್ಟು ಅನಂತ ಶಯನದಲ್ಲಿ ಸುಖಿಸುವ ರೀತಿ ಹೇಳಿದ್ದಾರೆ. ದ್ರವ್ಯ ಆಕಾಶದಲ್ಲಿ ಇದೆ ಅಂತ ಹೇಳಲು ವಿಷ್ಣುವಿನಿಂದ ಬ್ರಹ್ಮ ಹುಟ್ಟಿದ ಅಂತ ಹೇಳಿದರು. ಎಲ್ಲವನ್ನು ಸೃಷ್ಟಿಸಿ, ನಾಶಪಡಿಸುವ ಕಾಲದ ರೂಪಕವನ್ನು ಶಿವನಿಗೆ ರೂಪಿಸಿ, ಈ ತ್ರಿಮೂರ್ತಿಗಳು ಅತ್ಯಂತ ಶ್ರೇಷ್ಠ ಅಂದರು,ಪೂಜ್ಯ ಭಾವನೆ ಬರಲಿ ಅಂತ. ಇದನ್ನು ಈಗ …ಹರೆಯದ ವಿಷ್ಣು ವೃದ್ಧ ಬ್ರಹ್ಮನಿಗೆ ತಂದೆಯಂತೆ….ಅಂತ ಅಜ್ಞಾನಿಗಳು ನಕ್ಕರೆ, ತಪ್ಪು ಯಾರದ್ದು? ಅರ್ಥೈಸುವಿಕೆ ಸರಿ ಇಲ್ಲದ್ದರಿಂದ ಇಂತಹ ಮಹಾ ಜ್ಞಾನವನ್ನು ಹೇಳುವ ಎಲ್ಲ ಮಾರ್ಗಗಳೂ ಇಂದು ನಗೆಪಾಟಲಾಗಿವೆ. ಇದು ಯಾರನ್ನೂ ಸುಲಿಗೆ ಮಾಡಲು, ಮೋಸ ಮಾಡಲು ,ಯಾಮಾರಿಸಲು ಮಾಡಿದ ಸೋಮಾರಿಗಳ ಕೆಲಸವಲ್ಲ. ದುರದೃಷ್ಟ ಎಂದರೆ ಆಧುನಿಕ ಜ್ಞಾನಿಗಳು ಮೂಲ ಅರ್ಥ ಅರಿಯದೆ ಶಬ್ದಾರ್ಥ,ರೂಪಕ ಅರ್ಥಗಳಲ್ಲಿ ತೊಡಗಿ ಗೊಂದಲ ಮಾಡಿರುವುದು ಅಂದಿದ್ದರು ಸ್ವಲ್ಪ ಅಸಹನೆಯಿಂದ.

    ಶಂಕರರ ಅದ್ವೈತದ ಬ್ರಹ್ಮ, ದ್ವೈತರ ಹರಿ ಸರ್ವೋತ್ತಮ, ವಾಯು ಜೀವೋತ್ತಮ, ವಿಶಿಷ್ಟಾದ್ವೈತರ ಮಹಾವಿಷ್ಣು, ಕಪಾಲಿಕರ ಕಾಲ ಭೈರವ, ಅಘೋರಿಗಳ ಶಿವ ಇವುಗಳೆಲ್ಲವೂ ಒಟ್ಟಿಗೇ ವೇದಿಕೆ ಮೇಲೆ ಬಂದು ಹೋದ ಅನುಭವ ಆಯ್ತು. ಈ ಮೂಲ ತತ್ವಗಳನ್ನು ಆಧಾರವಾಗಿಸಿ, ನಾಗರಿಕತೆ ಬೆಳೆದಂತೆಲ್ಲಾ ಮಾನವನ ನಾನಾ ಬಗೆಯ ಅವಿಷ್ಕರಣೆಗಳು ನಮ್ಮಲ್ಲಿ ಸಿದ್ದಾಂತಗಳಾಗಿ ನಾನಾ ದೇವ ದೇವಿಯರಾಗಿ ಮೈತಳೆದು ಮುಂದಿನ ಪೀಳಿಗೆಗಳಿಗೆ ರವಾನೆಯಾಗಿರುವ ಪರಿ ನನ್ನನ್ನು ಮೂಕನನ್ನಾಗಿಸಿತ್ತು. ಸಿದ್ದಾಂತಗಳ ಪವಿತ್ರತೆ ಕಾಪಾಡುವ ವಿಧಾನವಾಗಿ ಮಾನವರಲ್ಲಿ ಭಯ,ಭಕ್ತಿ ಗಳನ್ನು ಮೂಡಿಸಿಕೊಂಡು ಅವುಗಳನ್ನು ಕಾಪಾಡಿಕೊಂಡು ಬಂದ ವ್ಯವಸ್ಥೆ ನನ್ನಲ್ಲಿ ಬಹುಕಾಲ ಹಿಡಿದಿಟ್ಟಿತ್ತು. ಆಚಾರ, ಆಚರಣೆ, ಮಾನವನ ಸಂಸ್ಕಾರ, ಸಮಾಜದ ಸಂಸ್ಕೃತಿಗಳ ಅವಿಭಾಜ್ಯ ಅಂಗವಾಗಿ ಮೂಲ ಅರ್ಥಗಳ ಮಾಸುವಿಕೆಯಲ್ಲಿ ಪರ್ಯಸನ ಗೊಳ್ಳುತ್ತಿರುವುದು ಆತಂಕದ ವಿಷಯವೇನೋ ಅನ್ನಿಸಿತು. ಮಾನವ ಕುಲಕ್ಕೆ ಅನುಕೂಲವಾಗುವ ಇಂತಹ ವಿಷಯಗಳನ್ನು, ಆಗ್ಗೆ ಮಹಾ ಆವಿಷ್ಕಾರಗಳು ಆಗಿದ್ದ ಅಂಶಗಳನ್ನು ತಮಗೆ ತೋಚಿದ್ದ ಮಾರ್ಗಗಳಲ್ಲಿ ಪ್ರಚುರ ಪಡಿಸಿದ್ದನ್ನು ನನ್ನಂತಹ ಜೀವನ ಮಾಡಲೂ ಪರಿತಪಿಸುವಂತಹವರು ಟೀಕಿಸುವುದು ಎಷ್ಟು ಸರಿ? ಕಾಯ್ದುಕೊಂಡು ಬರುವ ಮಾರ್ಗಗಳು, ನೇಮಿಸಿದ್ದಂತಹ ವ್ಯಕ್ತಿಗಳಿಂದ ಕೆಲವೊಂದು ಕಡೆ ತಪ್ಪುಗಳಾಗಿರುವುದು ನಿಜವಾದರೂ ಮೂಲ ಅರ್ಥಗಳು ಕಳೆದುಹೋಗಿರುವುದಂತೂ ಸ್ಪಷ್ಟವಾಗಿದೆ. ಕೊಬ್ಬರಿಗೆ ಸಲ್ಲಬೇಕಿದ್ದ ಗಮನ ಕರಟಕ್ಕೆ ಸಲ್ಲಿಬಿಟ್ಟಿತಾ?…

    Photo by Greg Rakozy on Unsplash

    ಆದರ್ಶ ಶಿಕ್ಷಕ ಹೇಗಿರಬೇಕು?

    ರಾಷ್ಟ್ರ ನಿರ್ಮಾಣವೆಂದರೆ ಗಗನ ಚುಂಬಿ ಕಟ್ಟಡಗಳ ನಿರ್ಮಾಣವಲ್ಲ. ನಿಜವಾದ ಅರ್ಥದಲ್ಲಿ, ರಾಷ್ಟ್ರ ನಿರ್ಮಾಣವೆಂದರೆ ಮೌಲ್ಯ ಪೂರ್ಣ ಪ್ರಜೆಗಳ ನಿರ್ಮಾಣ. ಇಂತಹ ಉತ್ತಮ ಪ್ರಜೆಗಳ ನಿರ್ಮಾಣ ಕಾರ್ಯದಲ್ಲಿ ಮಾತಾ ಪಿತೃಗಳ ಪಾತ್ರ ಬಹಳಮುಖ್ಯ ಮತ್ತು ತಂದೆ ತಾಯಂದಿರೇ ಮೊದಲ ಗುರುಗಳು. ಮನೆಯೇ ಮೊದಲ ಪಾಠಶಾಲೆ ಮತ್ತು ತಾಯಿಯೇ ಮೊದಲ ಗುರು  ಎಂಬ ಮಾತನ್ನು ನಾವುಗಳು ಕೇಳಿದ್ದೇವೆ. ದುರದುಷ್ಟಕರ ಸಂಗತಿಯೆಂದರೆ, ಇಂದಿನ ಮಾತಾ ಪಿತೃಗಳಲ್ಲಿ ತಮ್ಮ ಮಕ್ಕಳನ್ನು ಸತ್ಪ್ರಜೆಗಳಾಗಿ ಬೆಳೆಸುವ ಸಾಮರ್ಥ್ಯ ಹಾಗೂ ವ್ಯವಧಾನವಿದ್ದಂತೆ ಕಾಣುವುದಿಲ್ಲ.

    ನನ್ನ ನಲವತ್ತೈದು ವರ್ಷಗಳ ಅನುಭವದಿಂದ ಈ ಮಾತನ್ನು ಹೇಳುತ್ತಿದ್ದೇನೆ. ಇಂದಿನ ವಿದ್ಯಾರ್ಥಿಗಳ ನಡವಳಿಕೆಗಳನ್ನು ಗಮನಿಸಿದರೆ ಇದು ತಿಳಿಯುತ್ತದೆ. ಹಲವಾರು ಪೋಷಕರು ಅವರ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಬೆಳೆಸಲು ತಮ್ಮಿಂದ ಸಾಧ್ಯವಾಗದೆ, ಶಿಕ್ಷಕರ ಮತ್ತು ಶಾಲೆಯ / ಕಾಲೇಜಿನ ಪ್ರಾಂಶುಪಾಲರ ಮೊರೆ ಹೋಗುವುದನ್ನು ನಾನು ಕಂಡಿದ್ದೇನೆ. ಏಕೆಂದರೆ, ಮಾತಾ ಪಿತೃಗಳ ನಂತರ, ವಿದ್ಯಾರ್ಥಿಗಳನ್ನು, ಯುವಕ / ಯುವತಿಯರನ್ನು ತಿದ್ದಿ ಒಳ್ಳೆಯ ದಾರಿಗೆ ತರುವ ಕಾರ್ಯ ಮಾಡಬೇಕಾದದ್ದು ಶಿಕ್ಷಕರು. ಎಷ್ಟೊ ಬಾರಿ, ತಂದೆ ತಾಯಂದಿರಿಂದ ಸಾಧ್ಯವಾಗದೇ, ಶಿಕ್ಷಕರಿಂದ ಯಶಸ್ವಿಯಾದ ಉದಾಹರಣೆಗಳಿವೆ. 

    ಶಿಕ್ಷಕರ ಸ್ಥಾನ

    ಸತ್ಪ್ರಜೆಗಳ ನಿರ್ಮಾಣ ಕಾರ್ಯದಲ್ಲಿ ಮಾತಾ ಪಿತೃಗಳು ಮೊದಲನೇ ಸ್ಥಾನದಲ್ಲಿದ್ದರೆ, ಶಿಕ್ಷಕರು ಎರಡನೇ ಸ್ಥಾನವನ್ನು ಪಡೆಯುತ್ತಾರೆ. ಆದ್ದರಿಂದ, ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮವಾದ ಶಿಕ್ಷಕರಿದ್ದರೆ, ಸುಸಂಸ್ಕೃತ ಪ್ರಜೆಗಳನ್ನು ಹೊಂದಿದ ರಾಷ್ಟ್ರ ನಿರ್ಮಾಣ ನಿಶ್ಚಯವಾಗಲು ಸಾಧ್ಯವಾಗುತ್ತದೆ. “A teacher is a nation builder” ಎಂಬ ಮಾತು ಪ್ರಚಲಿತವಾಗಿದೆ.

    ನಮ್ಮ ಸಂಸ್ಕೃತಿಯಲ್ಲಿ, ಶಿಕ್ಷಕ ವೃತ್ತಿ ಪವಿತ್ರವಾದಂತ ವೃತ್ತಿಯೆಂದು ಪರಿಗಣಿಸಲಾಗಿದೆ. ತೈತ್ತರೀಯ ಉಪನಿಷತ್‍ನಲ್ಲಿ “ಆಚಾರ್ಯ ದೇವೋ ಭವ” ಎಂದು ಹೇಳುವುದರ ಮೂಲಕ, ಶಿಕ್ಷಕರನ್ನು ದೇವರಿಗೆ ಹೋಲಿಸಲಾಗಿದೆ. ಗುರುವನ್ನು ದಿವ್ಯತ್ರಯರಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಿಗೆ ಹೋಲಿಸಲಾಗಿದೆ. “ಉತ್ತಮ ಶಿಕ್ಷಕ ರಾಷ್ಟ್ರ ರಕ್ಷಕ” ಎಂಬ ಮಾತನ್ನು ನಾವು ಕೇಳಿದ್ದೇವೆ. ಇನ್ನು ಆರೋಗ್ಯಕರ ಸಮಾಜವನ್ನು ಅಭಿವೃದ್ದಿ ಪಡಿಸುವಲ್ಲಿ, ಆರ್ಥಿಕತೆಯ ಬೆಳವಣಿಗೆಯಲ್ಲಿ, ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಣದ ಪಾತ್ರ ಅಪಾರ. ಈ ಅಂಶವು ಕೆಳಗಿನ ಹೇಳಿಕೆಗಳಿಂದ / ನಾಣ್ನುಡಿಗಳಿಂದ ಧೃಡಪಡುತ್ತದೆ.

    “ನೀವು ಒಂದು ವರ್ಷದ ಮಟ್ಟಿಗೆ ಯೋಜಿಸಿದರೆ, ಧಾನ್ಯಗಳ ಬೀಜಗಳನ್ನು ಬಿತ್ತನೆ ಮಾಡಿ. ಒಂದು ದಶಕದ ಕಾಲಕ್ಕೆ ಯೋಜಿಸಿದರೆ, ಮರಗಳನ್ನು ನೆಡುವ ಕಾರ್ಯ ಮಾಡಿ. ಒಂದು ಶತಮಾನಕ್ಕೂ ಹೆಚ್ಚಿನ ಅವಧಿಗೆ ಯೋಜಿಸಿದರೆ, ಶಿಕ್ಷಣದ ಬೀಜಗಳನ್ನು ಬಿತ್ತನೆ ಮಾಡಿ” – ಚೈನೀಸ್‍ ನಾಣ್ನುಡಿ.

    ದಕ್ಷಿಣ ಆಫ್ರಿಕಾದ ಒಂದು ವಿಶ್ವ ವಿದ್ಯಾಲಯದ ಪ್ರವೇಶ ದ್ವಾರದಲ್ಲಿ ಸಂದರ್ಶಕರ ಚಿಂತನೆಗಾಗಿ ಕೆಳಕಂಡಂತೆ ಫಲಕವನ್ನು ಅಳವಡಿಸಲಾಗಿತ್ತು.

    “ಯಾವುದೇ ರಾಷ್ಟ್ರವನ್ನು ನಾಶ ಮಾಡಲು ಅಣುಬಾಂಬಿನ ಅಥವಾ ದೂರ ವ್ಯಾಪ್ತಿಯ ಕ್ಷಿಪಣಿಗಳು (Missiles) ಅವಶ್ಯಕತೆಯಿರುವುದಿಲ್ಲ. ನಾಶಮಾಡಲು, ಶಿಕ್ಷಣದ ಗುಣ ಮಟ್ಟವನ್ನು ಕಡಿಮೆ ಮಾಡಿ, ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ನಕಲು ಮಾಡಲು ಅವಕಾಶ ಮಾಡಿಕೊಟ್ಟರೆ ಸಾಕು”.

     “Build a good school today, Avoid hundred jails tomorrow” – Swami Veereshananda Saraswathi Swamiji, Ramakrishnamutt, Tumkur. 

    “Destiny of nation is shaped in the classrooms” – Education report of 1968.

    ಈ ಹೇಳಿಕೆಗಳಿಂದ ಶಿಕ್ಷಣ ಮತ್ತು ಶಿಕ್ಷಣ ಸಂಸ್ಥೆಗಳು ರಾಷ್ಟ್ರದ ಪ್ರಗತಿಗೆ ಎಷ್ಟು ಮುಖ್ಯ ಎಂಬ ಅಂಶ ಸ್ಪಟಿಕದಂತೆ ಸ್ಪಷ್ಟವಾಗುತ್ತದೆ.

    ಶಿಕ್ಷಕರು ಶಿಕ್ಷಣ ಸಂಸ್ಥೆಯ ಬೆನ್ನೆಲುಬು

    ಯಾವುದೇ ಶಿಕ್ಷಣ ಸಂಸ್ಥೆಯು ಉತ್ತಮವಾಗಿ ಕಾರ್ಯ ನಿರ್ವಹಿಸ ಬೇಕಾದರೆ, ಉತ್ತಮ ಶಿಕ್ಷಣ ಪದ್ದತಿಯನ್ನು ಕಾರ್ಯಗತಗೊಳಿಸ ಬೇಕಾದರೆ, ಶೈಕ್ಷಣಿಕ ಯೋಜನೆಗಳು ಫಲಕಾರಿಯಾಗ ಬೇಕಾದರೆ, ಉತ್ತಮ ಹಾಗೂ ಸಮರ್ಥ ಶಿಕ್ಷಕರು ಬೇಕೇ ಬೇಕು. ಶಿಕ್ಷಕರು ಶಿಕ್ಷಣ ಸಂಸ್ಥೆಯ ಬೆನ್ನೆಲುಬು. ಒಂದು ಶಿಕ್ಷಣ ಸಂಸ್ಥೆಯು ಸುಂದರವಾದ ಬೃಹದಾಕಾರದ ಕಟ್ಟಡ ಹೊಂದಿದ್ದು, ಎಲ್ಲಾ ಮೂಲಭೂತ ಸೌಕರ್ಯಗಳಿದ್ದರೂ ಸಹ, ಉತ್ತಮ ಶಿಕ್ಷಕರಿಲ್ಲದಿದ್ದರೆ, ಆ ವಿದ್ಯಾ ಸಂಸ್ಥೆಯು ಯಶಸ್ಸನ್ನು ಕಾಣಲು ಸಾಧ್ಯವಿಲ್ಲ. ಇಂತಹ ಮಹಾತ್ಕಾರ್ಯದಲ್ಲಿ ತೊಡಗಿಸಬಲ್ಲ ಶಿಕ್ಷಕರು ಹೇಗಿರ ಬೇಕು, ಮತ್ತು ಇಂತಹ ಪವಿತ್ರವಾದಂತಹ ವೃತ್ತಿಗೆ ಯಾರು ಅರ್ಹರು ಎಂಬ ಅಂಶಗಳನ್ನು ತಿಳಿಯೋಣ.

    ಶಿಕ್ಷಕರಾಗಲು ಬಯಸುವವರು, ಈ ಕೆಳಗಿನ ವಿಶೇಷ ಗುಣಗಳನ್ನು ಹೊಂದಿರಬೇಕು.

    • ಶಿಕ್ಷಕ ವೃತ್ತಿಯನ್ನು ಇಷ್ಟಪಟ್ಟು, ಸಂತಸದಿಂದ ಆಯ್ಕೆ ಮಾಡಿಕೊಂಡು ಶಿಕ್ಷಕನಾಗಬೇಕು.
    • ಶಿಕ್ಷಣ ವೃತ್ತಿಯ ಬಗ್ಗೆ ಅಪಾರ ಅಭಿಲಾಷೆಯಿರಬೇಕು.
    • ಶಿಕ್ಷಕ ಆಯ್ಕೆ ಮಾಡಿಕೊಂಡ ಶಿಸ್ತೀಯ ವಿಷಯಗಳ ಬಗ್ಗೆ ಉತ್ತಮ ಮಟ್ಟದ ಜ್ಞಾನವನ್ನು ಹೊಂದಿರಬೇಕು.
    • ವಿದ್ಯಾರ್ಥಿಗಳನ್ನು ತನ್ನ ಮಕ್ಕಳಂತೆ ಕಾಣುವ ಗುಣವಿರಬೇಕು ಮತ್ತು ಸಹನೆಯು ಮುಖ್ಯ. ಪ್ರೀತಿ ವಾತ್ಸಲ್ಯಗಳಿಂದ ಬೋಧನೆ ಮಾಡಬೇಕು.
    • ಬೋಧಿಸುವ ವಿಷಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಕುತೂಹಲವನ್ನುಂಟು ಮಾಡುವ ಸಾಮರ್ಥ್ಯ ಹೊಂದಿರಬೇಕು.
    • ಸೃಜನಾತ್ಮಕ ಮತ್ತು ವಿಮರ್ಶಾತ್ಮಕ ಸಾಮರ್ಥ್ಯಗಳನ್ನು ಹೊಂದಿರಬೇಕು.
    • ಉತ್ತಮ ಗುಣಮಟ್ಟದ ಸಂವಹನ ಕೌಶಲ್ಯವನ್ನು ಹೊಂದಿರಬೇಕು.
    • ಜೀವನ ಪರ್ಯಂತ ಹೊಸತನ್ನು ಕಲಿಯುವ ಮತ್ತು ಜ್ಞಾನವನ್ನು ಬೆಳೆಸಿಕೊಳ್ಳುವ ಇಚ್ಛಾಶಕ್ತಿಯಿರಬೇಕು.
    • ಎಲ್ಲಾ ವಿದ್ಯಾರ್ಥಿಗಳಲ್ಲಿ ಕಲಿಯುವ ಸಾಮರ್ಥ್ಯ ಒಂದೇ ಮಟ್ಟದಲ್ಲಿರುವುದಿಲ್ಲ. ವಿದ್ಯಾರ್ಥಿಗಳ ಕಲಿಕೆಯ ಸಾಮರ್ಥ್ಯದಲ್ಲಿರುವ ವ್ಯತ್ಯಾಸಗಳನ್ನು ತಿಳಿದು, ಅದರಂತೆ ಬೋಧನಾ ಕ್ರಮವನ್ನು ಅಳವಡಿಸಿಕೊಂಡು ಎಲ್ಲಾ ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಪಾಠ ಪ್ರವಚನಗಳನ್ನು ಮಾಡುವ ಸಾಮರ್ಥ್ಯ ಮತ್ತು ಸಹನೆಯಿರಬೇಕು.
    • ವಿದ್ಯಾರ್ಥಿ ಸಮೂಹ ಮತ್ತು ಸಮಾಜವು ಮೆಚ್ಚುವ ಉತ್ತಮ ನಡವಳಿಕೆ ಇರಬೇಕು. ಶಿಕ್ಷಕನ ನಡವಳಿಕೆ ಆದರ್ಶ ಪ್ರಾಯವಾಗಿರಬೇಕು.
    • ಶಿಕ್ಷಕನಲ್ಲಿ ವೃತ್ತಿಪರ ನಡವಳಿಕೆಗೂ ಮತ್ತು ವೈಯಕ್ತಿಕ ನಡವಳಿಕೆಗೂ ವ್ಯತ್ಯಾಸವಿರಬಾರದು, ಪ್ರತ್ಯೇಕಿಸಬಾರದು.
    • ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಅದರ ವಿಕಾಸಕ್ಕೆ ಅವಕಾಶ ಮಾಡಿಕೊಟ್ಟು, ಪ್ರೋತ್ಸಾಹಿಸಬೇಕು.
    • ಪಾಠದ ಜೊತೆಗೆ, ಮುಖ್ಯವಾಗಿ ಮಾನವೀಯ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಆಸಕ್ತಿಯಿರಬೇಕು.

    ಉತ್ತಮ ಶಿಕ್ಷಕ ಬಹು ಆಯಾಮದ ಪಾತ್ರವನ್ನು ವಹಿಸಬೇಕಾಗುತ್ತದೆ. ಉದಾಹರಣೆಗೆ ಕಲ್ಲನ್ನು ಕೆತ್ತಿ ಸುಂದರವಾದ ವಿಗ್ರಹವನ್ನು ಮಾಡುವಂತೆ, ವಿದ್ಯಾರ್ಥಿಗಳ ಬುದ್ದಿಯನ್ನು ತಿದ್ದಿ, ಸುಶಿಕ್ಷಿತ ಪ್ರಜೆಯನ್ನು ಮಾಡುವ ಶಿಲ್ಪಿಯಾಗಬೇಕು. ವಿದ್ಯಾರ್ಥಿಗಳನ್ನು ಹುರಿದುಂಬಿಸುವ ಪ್ರೇರಕನಾಗಬೇಕು. ಬುದ್ಧಿ ಹೇಳುವ ಉತ್ತಮ ಸಲಹೆಗಾರನಾಗಬೇಕು. ಮುಖ್ಯವಾಗಿ ಶೈಕ್ಷಣಿಕ ಪೋಷಕ (Academic parent) ಮತ್ತು ಶೈಕ್ಷಣಿಕ ನಾಯಕನಾಗ ಬೇಕಾಗಿದೆ (Academic leader).

    ಉತ್ತಮ ಶಿಕ್ಷಕರು, ಶಿಕ್ಷಣ ಸಂಸ್ಥೆಯ ಮತ್ತು ವಿದ್ಯಾರ್ಥಿಗಳ ಏಳಿಗೆಗೆ ಕಾರಣರಾಗುತ್ತಾರೆ. ಶಿಕ್ಷಕ ವೃತ್ತಿ ಬಹಳ ಜವಾಬ್ದಾರಿಯುತವಾದ ಮತ್ತು ಪ್ರಯಾಸದ ಕೆಲಸವೆಂದು ಹೇಳಬಹುದು. ಒಂದು ತರಗತಿಯಲ್ಲಿ ವಿಭಿನ್ನವಾದ ಆಸಕ್ತಿ, ಸಾಮರ್ಥ್ಯ, ಬುದ್ಧಿಶಕ್ತಿ, ಚಂಚಲ ಬುದ್ಧಿಯಿರುವ ಜೊತೆಗೆ, ವಿವಿಧ ಸಂಸ್ಕೃತಿ, ಆರ್ಥಿಕ ಮತ್ತು ಸಾಮಾಜಿಕ ಹಿನ್ನೆಲೆಯಿರುವ ವಿದ್ಯಾರ್ಥಿಗಳಿರುತ್ತಾರೆ. ಇವರೆಲ್ಲರ ಬುದ್ಧಿಯನ್ನು ತಿದ್ಧಿ ಸುಶಿಕ್ಷಿತ ವ್ಯಕ್ತಿಗಳನ್ನಾಗಿ ಮಾಡುವ ಕೆಲಸ ಮಹಾ ಸಾಧನೆಯ ಕಾರ್ಯ. ಈ ಕೆಲಸ ಸಮರ್ಥ ಶಿಕ್ಷಕರಿಂದಲೇ ಸಾಧ್ಯ.

    ಅಪಾರ ಜ್ಞಾನವನ್ನು ಹೊಂದಿ, ಸಕಲ ಸದ್ಗುಣಗಳನ್ನು ಮತ್ತು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡರೆ ಮಾತ್ರ ಉತ್ತಮ ಶಿಕ್ಷಕರಾಗಲು ಸಾಧ್ಯ.ಶಿಕ್ಷಕರು ಸರಿಯಿಲ್ಲದಿದ್ದರೆ, ಮುಂದಿನ ಯುವ ಪೀಳಿಗೆ ನಾಶವಾಗುತ್ತದೆ. ವಕೀಲನಾಗಬಹುದು, ವೈದ್ಯನಾಗಬಹುದು, ಅಧಿಕಾರಿಯಾಗಬಹುದು ಹಾಗೂ ರಾಜಕಾರಣಿಯೂ ಆಗಬಹುದು. ಎಲ್ಲರನ್ನು ತಯಾರು ಮಾಡುವವರು ಶಿಕ್ಷಕರು. ಆದ್ದರಿಂದ ಶಿಕ್ಷಕ ವೃತ್ತಿಯನ್ನು ಆರಿಸಿಕೊಳ್ಳುವ ಸ್ನೇಹಿತರಲ್ಲಿ ನನ್ನ ಒಂದು ವಿನಂತಿ.

    ಮೊಟ್ಟ ಮೊದಲನೆಯದಾಗಿ, ಯಾವ ಕೆಲಸವೂ ಸಿಗಲಿಲ್ಲ, ಆದ್ದರಿಂದ ಶಿಕ್ಷಕ ವೃತ್ತಿಯನ್ನು ಆರಿಸಿಕೊಳ್ಳುವ ಮನೋಭಾವ ಬೇಡ. ನಿಜವಾಗಿಯೂ ಶಿಕ್ಷಕ ವೃತ್ತಿಯಲ್ಲಿ ಆಸಕ್ತಿಯಿದ್ದರೆ ಮಾತ್ರ ಶಿಕ್ಷಕರಾಗಿ. ಒಂದು ವೇಳೆ ಆಕಸ್ಮಿಕವಾಗಿ ಶಿಕ್ಷಕರಾದರೂ ಸಹ, ನಂತರ ಮೇಲೆ ತಿಳಿಸಿರುವ ಗುಣಗಳನ್ನು ಬೆಳಸಿಕೊಳ್ಳಿ, ಉತ್ತಮ ಶಿಕ್ಷಕರಾಗಿ, ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಯಶಸ್ವಿಯಾಗಿರಿ. “Education is the panacea for ills in the society” ಎಂಬ ಹೇಳಿಕೆಯನ್ನು ಮರೆಯ ಬೇಡಿ. ಉತ್ತಮ ಶಿಕ್ಷಕರಾಗುವ ಮೂಲಕ ಆರೋಗ್ಯಕರ, ಸಧೃಢ ಸಮಾಜವನ್ನು, ಸುಶಿಕ್ಷಿತ, ಭವ್ಯ ಭಾರತ ನಿರ್ಮಾಣ ಮಾಡುವ ಕಾರ್ಯದಲ್ಲಿ ಕೈ ಜೋಡಿಸಿ.

    “ಸ್ವದೇಶೇ ಪೂಜ್ಯತೇ ರಾಜಾ, ವಿದ್ವಾನ್ ಸರ್ವತ್ರ ಪೂಜ್ಯತೇ”

    ಚಿತ್ರ: ಕಿರಣ್ ಮಾಡಾಳು

    error: Content is protected !!