30.2 C
Karnataka
Monday, May 25, 2026
    Home Blog Page 103

    ಅಧಿಕಾರಿಗಳ ಜೊತೆ ಮೀಟಿಂಗ್: ಅನುಮತಿ ಕೊಡಲು ಸರ್ಕಾರಕ್ಕೆ ಸೂಚಿಸಿ ಎಂದು ಸ್ಪೀಕರ್ ಗೆ ಪತ್ರ ಬರೆದ ಸಿದ್ಧರಾಮಯ್ಯ

    ಕೊರೊನಾ ವಿಚಾರದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಸೂಚಿಸಿ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಕೋರಿದ್ದಾರೆ.

    ಈ ಸಂಬಂಧ ವಿಧಾನಸಭೆ ಅಧ್ಯಕ್ಷರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ ಅವರು, ಕೊರೋನಾ ಸಾಂಕ್ರಾಮಿಕವನ್ನು ನಿರ್ವಹಿಸಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಕುರಿತು ಝೂಮ್ ತಂತ್ರಾಂಶದ ಮೂಲಕ ಮಾಹಿತಿ ಪಡೆಯಲು ಉದ್ದೇಶಿಸಿ ಅಧಿಕಾರಿಗಳಿಗೆ ಪತ್ರ ಬರೆದಿದ್ದೆ. ಝೂಮ್ ಮೀಟಿಂಗ್ ಮೂಲಕ ಹಾಜರಾಗಿ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಸಹ ಪತ್ರ ಬರೆಯಲಾಗಿತ್ತು. ಮೂರು ದಿನಗಳ ನಂತರ ಮುಖ್ಯ ಕಾರ್ಯದರ್ಶಿಗಳು ನನಗೆ ಪತ್ರ ಬರೆದು ವಿರೋಧ ಪಕ್ಷದ ನಾಯಕರು ಸಭೆ ನಡೆಸಬಾರದು, ಬೇಕಿದ್ದರೆ ಪತ್ರ ಬರೆದು ಮಾಹಿತಿ ಪಡೆಯಬಹುದಾಗಿದೆ ಎಂದು ಮುಖ್ಯ ಮಂತ್ರಿಗಳು ಅನುಮೋದನೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

    ಆದರೆ ಕಳೆದ 21 ತಿಂಗಳಲ್ಲಿ ಸರ್ಕಾರಕ್ಕೆ ಹಲವು ಪತ್ರಗಳನ್ನು ಬರೆದಿದ್ದೇನೆ. ಕೋವಿಡ್ ಸಂದರ್ಭದಲ್ಲೂ ಸುಮಾರು 15 ಕ್ಕೂ ಹೆಚ್ಚು ಪತ್ರಗಳನ್ನು ಬರೆದಿದ್ದೇನೆ. ಇವುಗಳಿಗೆ ಇದುವರೆಗೂ ಸಹ ಒಂದು ಅಕ್ಷರದ ಉತ್ತರವೂ ಬಂದಿಲ್ಲ. ಸರ್ಕಾರವೊಂದು ಜೀವಂತವಾಗಿದ್ದರೆ, ಅದಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇದ್ದರೆ ವಿರೋಧ ಪಕ್ಷದ ನಾಯಕರು ಪತ್ರ ಬರೆದ ಕೂಡಲೇ ಮಾಹಿತಿ ನೀಡುತ್ತಿತ್ತು.
    ವಿರೋಧ ಪಕ್ಷವಾಗಿ ನಾವೂ ಸಹ ಜನರ ಜೊತೆ ನಿಂತು ಅವರ ದುಃಖಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇವೆ. ಆದರೆ ರಾಜ್ಯದ ಆರೋಗ್ಯ, ಆರ್ಥಿಕ ಮತ್ತು ಕೃಷಿ ವಲಯಗಳಲ್ಲಿ ಏನಾಗುತ್ತಿದೆ? ಎಂದು ತಿಳಿದುಕೊಂಡು ಅವುಗಳ ಸಮಸ್ಯೆಗಳನ್ನು ಸರಿಪಡಿಸುವಂತೆ ಒತ್ತಾಯಿಸಬೇಕಾದುದು, ಸಲಹೆಗಳನ್ನು ನೀಡಬೇಕಾದುದು ವಿರೋಧ ಪಕ್ಷದ ನಾಯಕನ ಶಾಸನಾತ್ಮಕ ಅಧಿಕಾರ.ವಿಳಂಬ ಮಾಡದೆ ವಿರೋಧ ಪಕ್ಷದ ನಾಯಕರಿಗೆ ಸಮರ್ಪಕವಾದ ಮಾಹಿತಿಯನ್ನು ನೀಡಬೇಕಾಗಿರುವುದು ರ್ಕಾರದ ಸಂವಿಧಾನಾತ್ಮಕ ಜವಾಬ್ಧಾರಿ. ಆದರೆ ಈ ಜವಾಬ್ಧಾರಿಗಳನ್ನು ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದೆ. ಹಾಗಾಗಿ ಸರ್ಕಾರವು ಉದ್ದೇಶಪೂರ್ವಕವಾಗಿ ಮಾಹಿತಿ ಕೊಡದೆ ಹಕ್ಕು ಚ್ಯುತಿಯನ್ನುಂಟು ಮಾಡಿದೆ ಎಂಬ ನಿಲುವಿಗೆ ಬರಬೇಕಾದ ಕೃತ್ಯವೆಸಗುತ್ತಿದೆ.

    ನನಗೆ ಅಧಿಕಾರಿಗಳ ಕಾರ್ಯವೈಖರಿಗಳ ಕುರಿತು ಪರಿಶೀಲನೆ ನಡೆಸುವ, ನಿರ್ದೇಶನಗಳನ್ನು ನೀಡುವ ಉದ್ದೇಶವಿಲ್ಲ. ಅಷ್ಟರಮಟ್ಟಿಗಿನ ಸಾಂವಿಧಾನಿಕ ಅರಿವು ಇದೆ. ಕೆಲವು ಮಾಹಿತಿ ಪಡೆಯುವುದಷ್ಟೇ ನನ್ನ ಉದ್ದೇಶ. ಮಾಹಿತಿ ನೀಡಬೇಕಾದ ನಮೂನೆಯನ್ನು ಸಿದ್ಧಪಡಿಸಿ ಅಧಿಕಾರಿಗಳಿಗೆ ನೀಡಲಾಗಿದೆ. ಆ ನಮೂನೆಯನ್ನು ಸಮರ್ಪಕವಾಗಿ ಅರ್ಥ ಮಾಡಿಕೊಂಡು ಭರ್ತಿ ಮಾಡುವಷ್ಟು ತಿಳಿವಳಿಕೆ ಇರುವವರೂ ಕಡಿಮೆ ಇದ್ದಾರೆ. ಕಳೆದ ಎರಡು ವರ್ಷಗಳಿಂದ ನಾವು ಕೇಳಿರುವ ಮಾಹಿತಿಯೊಂದಾದರೆ ಅಧಿಕಾರಿಗಳು ಇನ್ನೊಂದು ಮಾಹಿತಿ ನೀಡಿದ್ದಾರೆ. ಈ ಗೊಂದಲಗಳಿಗೆ ಅವಕಾಶ ನೀಡಬಾರದೆಂಬ ಉದ್ದೇಶದಿಂದಲೇ ನೇರವಾಗಿ ಮುಖತಃ ಮಾಹಿತಿ ಪಡೆಯಲು ಉದ್ದೇಶಿಸಿದ್ದೆ. ಅದಕ್ಕಾಗಿ ಒಂದು ಜಿಲ್ಲೆಗೆ ಅರ್ಧ ಗಂಟೆಯಿಂದ ಒಂದು ಗಂಟೆಯಷ್ಟು ಮಾತ್ರ ಕಾಲ ನಿಗಧಿ ಪಡಿಸಿದ್ದೆ. ಖುದ್ದು ಮಾಹಿತಿ ಪಡೆಯುವ ನನ್ನ ಹಕ್ಕನ್ನು ಸರ್ಕಾರವು ನಿರಾಕರಿಸಿರುವುದರಿಂದ ಅದು ಹಕ್ಕು ಚ್ಯುತಿಯಾಗುವುದಿಲ್ಲವೆ?

    ಜೊತೆಗೆ ನಾನು ಕಳುಹಿಸಿದ್ದ ನಮೂನೆಯಲ್ಲಿ ಕೇವಲ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮಾತ್ರ ಮಾಹಿತಿ ಕಳುಹಿಸಿದ್ದಾರೆ. ಉಳಿದವರು ಬೇಜವಾಬ್ಧಾರಿ ವರ್ತನೆ ತೋರಿದ್ದಾರೆ. ಅವರ ವರ್ತನೆಗೆ ಯಾವ ಶಿಕ್ಷೆ ವಿಧಿಸುತ್ತೀರಿ? ಮುಖ್ಯ ಕಾರ್ಯದರ್ಶಿಗಳು ನನಗೆ ಕಳಿಸಿರುವ ಪತ್ರದಲ್ಲಿ 2009 ರ ಸುತ್ತೋಲೆಯನ್ನು ನಮೂದಿಸಿದ್ದಾರೆ. 2009 ರ ಸುತ್ತೋಲೆಯನ್ನು 2016 ರಲ್ಲಿ ಪುನರುಚ್ಛರಿಸಲಾಗಿದೆ ಎಂದು ತಿಳಿಸಲಾಗಿದೆ. ಆದರೆ ಹಿಂದೆ ಸುತ್ತೋಲೆಗಳನ್ನು ಹೊರಡಿಸಿದಾಗ ಸರ್ಕಾರಕ್ಕೆ ತಂತ್ರಜ್ಞಾನ ಸಂಬಂಧಿ ಅನುಕೂಲಗಳಿರಲಿಲ್ಲ. ಹಾಗಾಗಿ ಸಭೆ ಕರೆದು ಮಾಹಿತಿ ಪಡೆಯಬೇಕಾಗಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಝೂಮ್, ಗೂಗಲ್ ಮುಂತಾದ ಅಪ್ಲಿಕೇಷನ್ನುಗಳ ಮೂಲಕ ಮಾಹಿತಿ ಪಡೆಯಬಹುದಾಗಿದೆ. ಇದಕ್ಕಾಗಿ ಸರ್ಕಾರವೇನೂ ವ್ಯವಸ್ಥೆ ಮಾಡಬೇಕಾಗಿರಲಿಲ್ಲ. ಸರ್ಕಾರ ಇದಿಷ್ಟನ್ನೂ ಅರ್ಥಮಾಡಿಕೊಳ್ಳದ ಸ್ಥಿತಿ ತಲುಪಿದೆ.

    ಹಿಂದೆ ನಾನು ಮುಖ್ಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರು ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಿ ಬರ ಮುಂತಾದ ವಿಚಾರಗಳ ಕುರಿತು ಖುದ್ದು ಮಾಹಿತಿ ಪಡೆದಿದ್ದರು. ಅದಕ್ಕೆ ನನ್ನ ಸರ್ಕಾರ ವಿರೋಧ ವ್ಯಕ್ತಪಡಿಸಿರಲಿಲ್ಲ. ಆದರೆ ಈಗ ಅದೇ ರೀತಿಯಲ್ಲಿ ತಂತ್ರಜ್ಞಾನದ ನೆರವು ಪಡೆದು ಮಾಹಿತಿ ಸಂಗ್ರಹಿಸುವುದನ್ನು ನಿರಾಕರಿಸಲಾಗುತ್ತಿದೆ. ಸರ್ಕಾರದ ಈ ಕ್ರಮವು ಸಂವಿಧಾನದ ಹಲವು ಅನುಚ್ಛೇದಗಳ ಪ್ರಕಾರ ಹಕ್ಕುಚ್ಯುತಿಯಾಗುತ್ತದೆ ಎಂದು ಸಿದ್ದರಾಮಯ್ಯ ಅವರು ಸ್ಪೀಕರ್ ಅವರಿಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.

    ಬಂದದ್ದೆಲ್ಲಾ ಬರಲಿ,ಗೋವಿಂದನ ದಯೆ ಇರಲಿ

    ನಮ್ಮ ಹೊಲದ ಬದುವಿನಲ್ಲಿ ಒಂದು ಬಂಡೆ ಇದೆ. ಅದರ ಮಧ್ಯದ ಬಿರುಕಿನಿಂದ ಹುಟ್ಟಿದ್ದ ಒಂದು ಕೇರೆ(ಗೇರು ಬೀಜ ಅಥವಾ ಗೋಡಂಬಿ) ಹಣ್ಣಿನ ಮರ ಇತ್ತು. ಅದರ ಹಣ್ಣು ಕೆಂಪಗೆ ಇದ್ದು ತಿನ್ನಲು ಬಲು ರುಚಿ ಇರ್ತಿತ್ತು. ಅದರ ಬೀಜ ಹಣ್ಣಿನ ಕೆಳಗೆ ನೇತಾಡುತ್ತಿತ್ತು. ಹುಡುಗರಾದ ನಾವು ಹಣ್ಣು ತಿಂದು ಬೀಜವನ್ನು ಒಡೆದು,ಒಳಗಿನ ಬಿಳಿ ಬೀಜವನ್ನು ತಿನ್ನುತ್ತಿದ್ದೆವು. ಈ ಬೀಜವನ್ನು ಒಣಗಿಸಿದರೆ, ಕಪ್ಪುಬಣ್ಣಕ್ಕೆ ತಿರುಗುತ್ತಿತ್ತು. ಒಣಗಿದ ಬೀಜವನ್ನು ಕುಟ್ಟಿ ಒಳಗಿನ ಬೀಜ ತಿನ್ನಬೇಕಾದರೆ ಕಪ್ಪನೆಯ ದ್ರವ ಕೈಗೆ ಅಂಟುತ್ತಿತ್ತು. ಹಾಗೆ ಅಂಟಿದ ದ್ರವ ಕೆಲವು ನನ್ನ ಸ್ನೇಹಿತರಿಗೆ ತಿಂದ ಬಾಯಿಯನ್ನು,ಮುಖವನ್ನು ಊದಿಕೊಳ್ಳುವ ಹಾಗೆ ಮಾಡುತ್ತಿತ್ತು.

    ನಮ್ಮ ಊರಲ್ಲಿಯ ಅಜ್ಜಿಯಂದಿರು ಊದಿಕೊಂಡ ಮುಖದವರಿಗೆ ಅಯ್ಯೋ ನಿಮ್ಮಮ್ಮ ನಿನಗೆ ಕೇರು ಕುಡಿಸಿಲ್ಲ ಅನ್ನಿಸುತ್ತೆ, ಬಾ ಅಂತ ಹತ್ತಿರ ಕರೆದು, ಅದೇ ಒಣಗಿದ ಕೇರು ಬೀಜಕ್ಕೆ ಸುಟ್ಟ ಪಿನ್ನಿನ ಮೊನಚಾದ ತುದಿಯನ್ನು ಚುಚ್ಚಿ, ಅದರ ಕಪ್ಪುರಸ ಪಿನ್ನಿಗೆ ಅಂಟುವಂತೆ ಮಾಡಿ, ಅದನ್ನು ಊದಿ ಕೊಂಡವರ ದೇಹದ ಯಾವುದಾದರೂ ಭಾಗಕ್ಕೆ(ಸಾಮಾನ್ಯವಾಗಿ ಹೊಟ್ಟೆಯ ಮೇಲೆ) ಅಂಟಿಸುತ್ತಿದ್ದರು. ಹಾಗೆ ಅಂಟಿಸಿಕೊಂಡವರಿಗೆ ಮತ್ತೆ ಕೇರುಬೀಜ ತಿಂದಾಗ ಮುಖ ಊದಿಕೊಳ್ಳುತ್ತಿರಲಿಲ್ಲ.

    ಇದೇನಾ ಇವತ್ತು ವೈರಾಣು ಕೊಲ್ಲಲು ವಿಜ್ಞಾನ ಅಳವಡಿಸಿಕೊಂಡಿರುವ ಲಸಿಕೆ ಅಥವಾ ವ್ಯಾಕ್ಸಿನೇಶನ್?ಇರಬೇಕು ಅನ್ನಿಸ್ತಿದೆ. ಲೂಯಿಸ್ ಪಾಶ್ಚರ್ ಎಂಬ ಫ್ರೆಂಚ್ ವಿಜ್ಞಾನಿ 1880 ರಲ್ಲಿ ಹುಚ್ಚುನಾಯಿ ಕಡಿತಕ್ಕೆ ರೇಬಿಸ್ ಎಂಬ ಲಸಿಕೆ ಕಂಡುಹಿಡಿದ ಅಂತ ನಾವೆಲ್ಲ ಆಗ ಓದಿದ್ದೆವು. ಅವನೂ ಆ ಹುಚ್ಚು ನಾಯಿಯ ಜೊಲ್ಲನ್ನು ಸಂಸ್ಕರಿಸಿ, ಕಡಿಸಿಕೊಂಡವನಿಗೆ ಅದನ್ನೇ ಚುಚ್ಚಿ ಗುಣಪಡಿಸಿದನಂತೆ! ಹಾಲು ಮೊಸರಾಗುವ ವಿಧಾನವನ್ನು ಅವನು ಗಮನಿಸಿ,ಅಭ್ಯಸಿಸಿದನಂತೆ. ಹಾಗೆ ಹಾಲು ಮೊಸರಾಗುವುದಕ್ಕೆ Yeast, Fermentation ಅಂತ ಹೆಸರಿಸಿ, ಫ್ರೆಂಚರಿಗೆ ಪ್ರಿಯವಾದ ಬೀರ್, ವೈನ್ ತಯಾರಿಕೆಯಲ್ಲಿ ನೆರವಾದನಂತೆ. ಮತ್ತೆ ನಾವು ಮನೆಗಳಲ್ಲಿ ಮಳೆಗಾಲದಲ್ಲಿ ನೀರನ್ನು ಕುದಿಸಿ,ಆರಿಸಿ ಕುಡಿತಿದ್ದೆವಲ್ಲ ಅದಕ್ಕೆ ಅವನು ಪ್ಯಾಸ್ಟರೈಸೇಶನ್ (Pastueurization) ಅಂತ ಹೆಸರಿಟ್ಟು ದೊಡ್ಡ ವಿಜ್ಞಾನಿಯಾದನಂತೆ.ನೀರನ್ನು ಕುದಿಸಿ, ಆರಿಸಿಯೇ ವಿಜ್ಞಾನಿ ಆದ ಅಂದ್ರೆ,ಇವನು ನಮ್ಮ ಅಡುಗೆ ಮನೆಗಳನ್ನು ನೋಡಿದ್ರೆ ಏನೇನು ಆಗ್ತಿದ್ದಾನೋ?

    ಮುಂದೆ ಹೋಗುವ ಮುಂಚೆ ಬ್ಯಾಕ್ಟೀರಿಯಾ ಮತ್ತು ವೈರಾಣುಗಳ ವ್ಯತ್ಯಾಸವನ್ನ ಸಂಕ್ಷಿಪ್ತವಾಗಿ ತಿಳಿಯುವ. ಬ್ಯಾಕ್ಟೀರಿಯಾ ಗಳು ಏಕ ಜೀವಿ ಕಣಗಳು ಮತ್ತು ಇಂದಿನ ಎಲ್ಲ ಜೀವ ರಾಶಿಗಳ ಪೂರ್ವಜರು. ಇವು ಭೂಮಿಯ ಮೇಲೆ 300 ಕೋಟಿ ವರ್ಷಗಳಿಂದ ಇವೆ. ಇವು ಇಲ್ಲದ ಜಾಗವೇ ಇಲ್ಲ. ಇವು ಎಂತಹ ಸನ್ನಿವೇಶ ಮತ್ತು ಪರಿಸ್ಥಿತಿಯಲ್ಲೂ ಜೀವಿಸುತ್ತವೆ. ಕೊರೆಯುವ ಮಂಜುಗಡ್ಡೆಯಲ್ಲಿ, ಜ್ವಾಲಾಮುಖಿಗಳಲ್ಲಿ, ಜಡ ವಸ್ತುವಲ್ಲಿ,ಜೀವಿಗಳಲ್ಲಿ, ಗಾಳಿ ಇರುವ ಕಡೆ,ಇಲ್ಲದ ಕಡೆ ಹೀಗೆ ಇದು ಒಂಥರಾ ನಮ್ಮ ಪುರಾಣಗಳಲ್ಲಿ ಬರುವ ಕೆಲವು ಪಾತ್ರಗಳ ರೀತಿ ಇವೆ. ಇವು ಸಾಮಾನ್ಯವಾಗಿ ಗುಂಪುಗಳಲ್ಲಿ, ದುಂಡಗೆ,ನೆಟ್ಟಗೆ,ಸುರುಳಿ ಆಕಾರದಲ್ಲಿರುತ್ತವೆ. ಇವುಗಳಲ್ಲಿ ತೀರಾ ಕಡಿಮೆ ಅಂದ್ರೆ ಪ್ರತಿಶತ ಒಂದರಷ್ಟು ಮಾತ್ರ ಮಾನವನಿಗೆ ಕೆಟ್ಟದ್ದು ಮಾಡುವಂತಹವುಗಳು. ಇವುಗಳು ಪ್ರಾಣಿಗಳಾ,ಸಸ್ಯಗಳಾ,ಜಡವಸ್ತುಗಳಾ ಅಂತ ಕೇಳಿದ್ರೆ, ಎಲ್ಲವೂ ಹೌದು ಅಂತ ಮಾತ್ರ ಹೇಳಬಹುದು. ಒಂದು ತರಹ ಸರ್ವಾಂತರ್ಯಾಮಿ!.

    ಇನ್ನು ವೈರಿ ಅಣು ಅಂತ ಹೆಸರನ್ನು ಹೊಂದಿದ ವೈರಾಣು ಈ ಬ್ಯಾಕ್ಟೀರಿಯಾ ಗಳ ಸತ್ತ ಪಳಿಯುಳಿಕೆ ಅಂತ ಒಂದು ಸಿದ್ದಾಂತ ಹೇಳ್ತಿದೆ. ಇದಕ್ಕೆ ಜೀವ ಇಲ್ಲ. ಬ್ಯಾಕ್ಟೀರಿಯಾಗಿಂತ ತುಂಬಾ ತುಂಬಾ ಚಿಕ್ಕದ್ದು. ಇವು ಜೀವಿಗಳಿಗೆ ಹಾನಿ ಮಾಡೋದೇ ಬಂಡವಾಳ. ಇವುಗಳ ಆಯಸ್ಸು ತುಂಬಾ ಕಡಿಮೆ. ಜಡವಾಗಿರುವ ಇವು ಯಾವುದಾದ್ರೂ ಜೀವಕೋಶ ಸಿಕ್ಕಾಗ ಮಾತ್ರ ಬಲು ಚುರುಕುಗೊಂಡು ಬಹುವೇಗವಾಗಿ ಊಹಿಸಲು ಅಸಾಧ್ಯ ಅನ್ನುವಷ್ಟು ಸಂಖ್ಯೆಯಲ್ಲಿ ವೃದ್ಧಿಹೊಂದಿ, ಆಶ್ರಯಿಸಿದ ಜೀವಕೋಶವನ್ನೇ ಕೊಂದು ಬಿಡುತ್ತದೆ. ಇವು ಒಂದೊಂದೇ ಇರುತ್ತವೆ,ಗುಂಪುಗಳಲ್ಲಿ ಇರೋಲ್ಲ.

    ಈ ಜಡ ವೈರಾಣು ಮನುಷ್ಯನ ನವ ರಂಧ್ರಗಳ ಮೂಲಕ ಯಾವುದಾದ್ರು ರಂಧ್ರದಿಂದ ಪ್ರವೇಶ ಪಡೆಯುತ್ತವೆ ಅಂತೆ ಅವುಗಳ ಗುಣಕ್ಕೆ ಅನುಸಾರವಾಗಿ. ಪ್ರವೇಶ ಆದ ಸ್ವಲ್ಪದಿನ ತನಗೆ ಅನುಕೂಲವಾದ ಜಾಗದಲ್ಲಿದ್ದು ತನ್ನ ರಾಕ್ಷಸ ಸಂತತಿಯನ್ನು ಬೆಳೆಸುತ್ತೆ. ದೇಹ ಪ್ರತಿರೋಧ ಒಡ್ಡಿದರೆ 15-20 ದಿನಗಳಲ್ಲಿ ಸಾಯುತ್ತೆ ಆದರೆ ತನ್ನ ಮತ್ತೊಂದು ರೂಪವನ್ನು ಜೀವಂತವಾಗಿರಿಸಿ!! ಇದನ್ನು Mutation ಅಂತಾರೆ. ಹೀಗಾಗಿ ಇದು ಒಂಥರಾ ರಕ್ತಬೀಜಾಸುರನ ಸಂತತಿ. ಸತ್ತರೂ ತನಗಿಂತಲೂ ಶಕ್ತಿವಂತ ತಳಿಗಳನ್ನು ಉತ್ಪಾದಿಸಿ ಸಾಯುತ್ತೆ. ಇದರ ಈ ಗುಣವೇ ಮುಂದುವರೆದ ಮಾನವನಿಗೆ ಸವಾಲಾಗಿರೋದು. ಒಂದರ ಗುಣ ಲಕ್ಷಣ ಅಭ್ಯಸಿಸಿ, ಅದಕ್ಕೆ ನಿರೋಧಕ ಕಂಡುಕೊಳ್ಳುವಷ್ಟರಲ್ಲಿ ಇದರ ಮತ್ತೊಂದು ರೂಪ ಕೇಕೆ ಹಾಕುತ್ತದೆ!

    ಬದಲಾದ ಪ್ರಕೃತಿಗೆ ಜೀವಿಗಳನ್ನು ಹೊಂದಿಕೊಳ್ಳುವ ಹಾಗೆ ಮಾಡೋದು ಇದರ ಧರ್ಮವಂತೆ. ಇದು ಇಲ್ಲಿಯತನಕ ನೈಸರ್ಗಿಕ ಕ್ರಿಯೆ ಆಗಿತ್ತು. ಏನೇ ನೈಸರ್ಗಿಕ ವಾದಾದ್ದು ಯಾವುದೇ ಜೀವಿಗಳಿಗೆ ಅನಾನುಕೂಲ ಮಾಡಲ್ಲ,ಸ್ವಲ್ಪ ತೊಂದರೆ ಕೊಡಬಹುದು. ದೇವರು ಕಷ್ಟ ಕೊಟ್ಟು ನಮ್ಮನ್ನು ಗಟ್ಟಿ ಮಾಡ್ತಾನೆ ಅಂತಾರಲ್ಲ,ಹಾಗೆ. ಹಾಗಾಗಿ ನೂರು ವರ್ಷಕ್ಕೊಮ್ಮೆ ಇಂತಹ ವೈರಾಣುವಿನ ಆಕ್ರಮಣ ಸಾಮಾನ್ಯ ಅಂತ ಜೀವವಿಜ್ಞಾನ ಹೇಳಿದೆ. ನೂರು ವರ್ಷಕ್ಕೊಮ್ಮೆ ಮಾನವನ ಮೇಲೆ ಎರಗುವ ಈ ವೈರಾಣುವಿನ ಲಕ್ಷಣ ತಿಳಿಯಲು ಸಾಧ್ಯವೇ ಇಲ್ಲದ ಕಾರಣ, ಇದನ್ನು ಎದುರಿಸಲು ಪೂರ್ವ ತಯಾರಿ ಇಂದಿನ ವಿಜ್ಞಾನಕ್ಕೂ ಅಸಾಧ್ಯ. ಇದು ಎರಗಿದ ಮೇಲಷ್ಟೇ ನಿರೋಧಕದ ಕ್ರಮಗಳು,ತಯಾರಿ ಸಾಧ್ಯ. ಹಾಗಾಗಿ ಎಲ್ಲ ಅಭಿವೃದ್ಧಿ ಹೊಂದಿದ ದೇಶಗಳೂ ಇದರ ಹಾವಳಿಗೆ ತತ್ತರಿಸಿ ಹೋಗೋದು.

    ಆದರೆ ಈಗಿನ ಕರೊನಾ ಪುರಾಣ ಸ್ವಲ್ಪ ಭಿನ್ನವಾಗಿದೆ. ಏನಂದ್ರೆ ಅತೀ ಬುದ್ಧಿವಂತ,ಸ್ವಾರ್ಥ ಮನುಷ್ಯ ತನ್ನ ತೆವಲನ್ನು ಮಾನವ ಜನಾಂಗದ ಮೇಲೆ ವಿಕೃತವಾಗಿ ತೀರಿಸಿಕೊಳ್ಳಲು ಈ ರಾಕ್ಷಸನನ್ನು ಎಬ್ಬಿಸಿದ್ದಾನಂತೆ! ಇದು ಪ್ರಕೃತಿ ನಿರ್ಮಿತವಾಗಿದ್ದರೆ ನಿಯಂತ್ರಣ ಸುಲಭ. ಒಂದು ವೇಳೆ ಮಾನವ ನಿರ್ಮಿತ ಆದ್ರೆ ಮಾತ್ರ ಇದರ ಭೀಕರತೆ ಊಹಿಸಲು ಅಸಾಧ್ಯ ಅನ್ನುವಷ್ಟು ಆಗುತ್ತದೆ. ಎಷ್ಟಾದರೂ ಪ್ರಕೃತಿ ಮಾನವನ ಹಿಡಿತದಲ್ಲಿದೆಯಲ್ಲಾ? ಇಂತಹ ಸಂದರ್ಭಗಳನ್ನು ನಮ್ಮ ಪುರಾಣಗಳಲ್ಲಿ ರಾಕ್ಷಸರ ಅಟ್ಟಹಾಸಕ್ಕೆ ನೊಂದ ಭೂದೇವಿ ವಿಷ್ಣುವಿನಲ್ಲಿ ನೋವು ತೋಡಿಕೊಂಡು ನೆರವು ಕೇಳಿರುವುದನ್ನು ಬಹು ರೋಮಾಂಚನವಾಗಿ ವಿವರಿಸಿದ್ದಾರೆ. ಅಂದರೆ ಇಂತಹ ರಾಕ್ಷಸರೂ ಈ ಭೂಮಿಯ ಮೇಲಿರೋದು ಹೊಸದೇನಲ್ಲ ಮತ್ತು ಮನುಕುಲವನ್ನು ನರಳಿಸಿ, ವಿಕೃತ ಆನಂದ ಪಡೆಯೋದೂ ಹೊಸದಲ್ಲ ಅನ್ನೋದನ್ನ ನಮ್ಮ ಹಿರಿಯರು ಪುರಾಣದ ಮುಖಾಂತರ ನಮಗೆ ಹೇಳಿ ಧೈರ್ಯ ತುಂಬಿದ್ದಾರೆ.

    ಬ್ಯಾಕ್ಟೀರಿಯಾಗಳಿಗೆ ಸೂಕ್ಷ್ಮಾಣುಜೀವಿ ಅಂತ ಹೆಸರಿಸಿ, ಇವುಗಳಿಗೆ ವೈರಿ ಅಣು ಅಂತ ನಮ್ಮವರು ಹೆಸರಿಸಿದ್ದಾರೆ ಅಂದ್ರೆ, ಇವುಗಳ ಹುಟ್ಟು,ಜಾತಕ,ನೆಂಟರಿಷ್ಟರು,ಬಂಧುಬಳಗ ,ಕಾರ್ಯ ವೈಖರಿ ಗೊತ್ತಿರಲೇ ಬೇಕೆಂಬುದು ನನ್ನ ಬಲವಾದ ನಂಬಿಕೆ. Measles ಅಂತ ಕರೆಸಿಕೊಂಡ ದಡಾರ ವನ್ನು ಅಮ್ಮ ಅಂದು ಬೇವಿನ ಎಲೆಯಲ್ಲಿ ಅದಕ್ಕೆ ಪರಿಹಾರ ಕಂಡುಕೊಂಡಿದ್ದರು. ಈ ವೈರಿ ಅಣುಗಳು ಗಾಳಿಯಲ್ಲಿಯೂ ಬರುತ್ತವೆ ಅನ್ನುವ ಅಂಶ ತಿಳಿದೇ ಊರುಗಳ ಹೊರವಲಯದಲ್ಲಿ ಗಾಳೆಮ್ಮ ದೇವಿಯ ಗುಡಿ ಕಟ್ಟಿಸಿಕೊಂಡಿದ್ದರು. ಕಾಲಕ್ಕನುಸಾರವಾಗಿ,ಋತುಮಾನ ಬಡಲಾವಣೆಯೊಂದಿಗೆ ಬರುತ್ತಿದ್ದ ಇದರ ನಾನಾ ಮುಖಗಳಲ್ಲಿ ಒಂದಾದ ನೆಗಡಿ,ಕೆಮ್ಮು,ಜ್ವರ ಮುಂತಾದುವುಗಳಿಗೆ ನಮ್ಮ ಅಡುಗೆ ಮನೆಯಲ್ಲಿನ ಸಾಮಗ್ರಿಗಳಲ್ಲೇ ಔಷಧಿಗಳನ್ನು ಇರಿಸಿದ್ದರು. ಹೊಸಮಳೆ ಬಂದಾಗ ಬರುತ್ತಿದ್ದ ನೆಗಡಿಗೆ ಶುಂಠಿ ಕಾಫಿ ಅಂತ ಜೀರಿಗೆ, ಶುಂಠಿ, ಬೆಲ್ಲ,ಕೊತ್ತಂಬರಿ ಬೀಜ, ಕರಿಬೇವು ಎಲೆಗಳನ್ನು ಬೆರೆಸಿ,ಬೇಯಿಸಿ ಕುಡಿಯಲು ಕೊಡ್ತಿದ್ದದ್ದು ನಮಗೆಲ್ಲ ಗೊತ್ತೇ ಇದೆ. ಗಂಟಲು ತುರಿಸಿದರೆ, ಇನ್ನೂ ನೆಗಡಿ ಇದ್ದರೆ, ಉಪ್ಪು ನೀರಿನ ಗಾರ್ಗ್ಲಿಂಗ್ ಜೊತೆ ರಾಗಿಹಿಟ್ಟನ್ನು ಕೆಂಡದ ಮೇಲೆ ಹಾಕಿ,ಅದರ ಹೊಗೆಯನ್ನು ಮೂಗಿನ ಹೊಳ್ಳೆಗಳ ಮುಖಾಂತರ ತೆಗೆದುಕೊಂಡು,ಬಾಯಲ್ಲಿ ಬಿಡಲು ಹೇಳ್ತಿದ್ದರು. ಹೊಸ ನೀರಲ್ಲಿ ತುಂಬಾ ಅಪಾಯಕಾರಿ ವೈರಸ್ ಇರುತ್ತವೆ. ಈಜಾಡುವಾಗ, ಕುಡಿಯುವಾಗ ಹುಷಾರು ಅಂತ ಹೇಳ್ತಿದ್ದರು. ನೀರನ್ನು ಕುದಿಸಿ,ಆರಿಸಿ ಕುಡಿಯುತ್ತಿದ್ದೆವು. ಹಾಗಾಗಿ ಈ ಕರೊನಾ ಸಹ ಅದೇ ಜಾತಿಯದು, ಹೆದರಬೇಡಿ ಅಂದಿದ್ರು. ಆದ್ರೆ ಇದರ ಹಿಂದೆ ಪಾಪಿ ಮಾನವ ಇರೋದೇ ಆಘಾತಕರ.

    ಇಂಥಹ ದೇಸೀ ಜ್ಞಾನ ಹೊಂದಿದ್ದ ಭಾರತ ಪ್ರಥಮವಾಗಿ ವೈರಾಣುವಿನ ವಿರುದ್ಧ ಹೋರಾಡಲು ನಿಂತು covaccine ಮತ್ತು covishield ಎನ್ನುವಂತಹ ಲಸಿಕೆ ತಯಾರಿಸಿ ವಿಶ್ವಕ್ಕೆ ಮಾದರಿ ಆದದ್ದು ನನಗಂತೂ ಗರ್ವದ ವಿಷಯ. ಹೈದರಾಬಾದ್ DRDO ಅನ್ನೋ ಸೈನ್ಯದ ಸಂಶೋಧನಾ ಕೇಂದ್ರ 2DG ಅನ್ನುವ ಮತ್ತೊಂದು ಪ್ರಭಾವೀ ಔಷಧಿಯನ್ನು ಕಂಡುಕೊಂಡಿದೆ. ಇದರ ಮೊದಲ ಹಂತದ ಪ್ರಯೋಗ ಸಾಕಷ್ಟು ಉತ್ತೇಜನಕಾರಿ ಫಲಿತಾಂಶ ನೀಡಿದೆ. ವೈರಿಯನ್ನು ಕೊಲ್ಲಲು ಎಲ್ಲಾ ಅಸ್ತ್ರಗಳು ಇದ್ದರೆ ಏನೂ ತಪ್ಪಲ್ಲ. ಆದರೆ ವೈರಿ ಮಾನವ ಆಗುತ್ತಿರುವುದು ಆತಂಕದ ವಿಷಯ. ಇದು ವೈರಾಣುವಿಗಿಂತಲೂ ಅಪಾಯಕಾರಿ ಬೆಳವಣಿಗೆ.

    ರಾಸಾಯನಿಕವನ್ನು ಮಣ್ಣಿಗೆ ಸೇರಿಸಿದ ದಿನದಿಂದ ಪ್ರಕೃತಿಯ ಸ್ವಾಸ್ಥ್ಯ ಕೆಡುತ್ತಾ ಬಂದಿದೆ. ಮುನಿದ ಪ್ರಕೃತಿಗೆ ತಿರುಗೇಟನ್ನು ನಾವು ಮತ್ತೆ ರಾಸಾಯನಿಕಗಳಿಂದ ಕೊಡುವುದು ಅನಿವಾರ್ಯ ಎಂಬಂಥ ಸ್ಥಿತಿ ತಲುಪಿದ್ದೇವೆ. ಪ್ರಕೃತಿಯಿಂದ ಬರುವ ಎಲ್ಲ ರೋಗಗಳಿಗೂ ಪ್ರಕೃತಿಯೇ ಔಷಧಿ ಒದಗಿಸುತ್ತದೆ ಅನ್ನುವುದು ಸಾಮಾನ್ಯ ತಿಳಿವಳಿಕೆ. ಆದರೆ ಈಗ ರೋಗಗಳೂ ಮಾನವ ನಿರ್ಮಿತವಂತೆ, ಇದು ಬಲು ಅಪಾಯಕಾರಿ. ಇನ್ನು 3ನೇ ಕರೊನಾ ಅಲೆ ಬರುತ್ತಿದೆಯಂತೆ. ಪ್ರಕೃತಿಯದ್ದಾಗಿದ್ದರೆ 2ನೇ ಅಲೆಗೆ ಕೊನೆಗೊಳ್ಳಬೇಕಿತ್ತು. ಮಾನವ ನಿರ್ಮಿತವಾಗಿದ್ದರೆ ಇನ್ನೆಷ್ಟೋ ಅಲೆಗಳು ಬರುವ ಸಂಭವ ಇರಬಹುದು. ಇದಕ್ಕೆ ಬೇರೆಯದೇ ಔಷಧಿಯ ಅಗತ್ಯ ಇದೆ ಅಂತ ಅನ್ನಿಸುವುದಿಲ್ಲವೇ?! ಭೂ ಭಾರ ಹೆಚ್ಚಾದಾಗ ಭಗವಂತ ಅವತರಿಸುತ್ತಾನೆ ಅನ್ನೋ ನಂಬಿಕೆಯನ್ನು ನಮ್ಮ ಹಿರಿಯರು ಅನುಸರಿಸಿ ನಮಗೂ ಅನುಸರಿಸಲು ಹೇಳಿದ್ದಾರೆ. ಇದರಲ್ಲಿ ಎನಿಲ್ಲದಿದ್ದರೂ ಹತಾಶೆ ಮನಸ್ಸಿಗೆ ಎಂತಹದೋ ಧೈರ್ಯವನ್ನಂತೂ ತುಂಬುತ್ತದೆ.

    ನಾವು ನೀವು ಲಸಿಕೆ ಹಾಕಿಸಿಕೊಂಡು ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು ಸ್ವಾಸ್ಥ್ಯ ಕಾಪಾಡಿಕೊಳ್ಳೋದು ಬಹು ಮುಖ್ಯವಾದ ಕರ್ತವ್ಯವಾಗಿದೆ ಈಗ. ಬಂದದ್ದೆಲ್ಲಾ ಬರಲಿ,ಗೋವಿಂದನ ದಯೆ ಇರಲಿ.

    ಸರ್ವೇ ಜನಾಃ ಸುಖಿನೋ ಭವಂತು.

    Photo by cottonbro from Pexels

    ಮುಂದಿನ ಕೋವಿಡ್ ಅಲೆಗಳಲ್ಲಿ ಮಕ್ಕಳು ಸೋಂಕಿತರಾಗುವರು ಎಂಬುದಕ್ಕೆ ಯಾವುದೇ ಆಧಾರ ಇಲ್ಲ

    ಕೋವಿಡ್ -19 ಸಾಂಕ್ರಾಮಿಕದ ಮುಂದಿನ ಅಲೆಗಳು ಮಕ್ಕಳಲ್ಲಿ ತೀವ್ರ ಅನಾರೋಗ್ಯಕ್ಕೆ ಕಾರಣವಾಗುತ್ತವೆ ಎನ್ನುವುದು ತಪ್ಪು ಮಾಹಿತಿಯಾಗಿದೆ. ಮುಂದಿನ ಅಲೆಗಳಲ್ಲಿ ಮಕ್ಕಳು ಗಂಭೀರವಾಗಿ ಸೋಂಕಿಗೆ ಒಳಗಾಗುತ್ತಾರೆ ಎಂಬುದನ್ನು ತೋರಿಸಲು ಭಾರತದಲ್ಲಿ ಅಥವಾ ಜಾಗತಿಕವಾಗಿ ಯಾವುದೇ ದತ್ತಾಂಶಗಳ ಆಧಾರಗಳು ಇಲ್ಲ.

    ಪಿಐಬಿ ದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ನಡೆದ ಕೋವಿಡ್ -19 ಕುರಿತ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ದೆಹಲಿಯ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಈ ವಿಷಯವನ್ನು ತಿಳಿಸಿದರು.

    ಭಾರತದ ಎರಡನೇ ಅಲೆಯ ಸಂದರ್ಭದಲ್ಲಿ ಸೋಂಕಿಗೆ ಒಳಗಾದ ಮತ್ತು ಆಸ್ಪತ್ರೆಗಳಲ್ಲಿ ದಾಖಲಾದ ಶೇಕಡ 60 ರಿಂದ 70 ಮಕ್ಕಳು ಬೇರೆ ರೋಗದಿಂದ ಬಳಲುತ್ತಿದ್ದರು ಇಲ್ಲವೇ ಕಡಿಮೆ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದವರು ಎಂದು ಡಾ. ಗುಲೇರಿಯಾ ಉಲ್ಲೇಖಿಸಿದ್ದಾರೆ; ಆರೋಗ್ಯವಂತ ಮಕ್ಕಳು ಆಸ್ಪತ್ರೆಗೆ ದಾಖಲಾಗದ ಅವಶ್ಯಕತೆಯಿಲ್ಲದೆ ಸೌಮ್ಯ ಕಾಯಿಲೆಯಿಂದ ಚೇತರಿಸಿಕೊಂಡರು.

    ಭವಿಷ್ಯದ ಅಲೆಗಳನ್ನು ತಡೆಗಟ್ಟುವಲ್ಲಿ ಕೋವಿಡ್ ಸೂಕ್ತ ವರ್ತನೆ ಮುಖ್ಯವಾಗಿದೆ

    ಉಸಿರಾಟ ಸಂಬಂಧಿ ವೈರಾಣುಳಿಂದ ಉಂಟಾಗುವ ಸಾಂಕ್ರಾಮಿಕ ರೋಗಗಳಲ್ಲಿ ಅಲೆಗಳು ಸಾಮಾನ್ಯವಾಗಿ ಸಂಭವಿಸುತ್ತವೆ. 1918 ರ ಸ್ಪ್ಯಾನಿಷ್ ಜ್ವರ, ಎಚ್ 1 ಎನ್ 1 (ಹಂದಿ) ಜ್ವರ ಇದಕ್ಕೆ ಉದಾಹರಣೆಗಳಾಗಿವೆ ಎಂದು ಡಾ. ಗುಲೇರಿಯಾ ಹೇಳಿದರು. “1918 ರ ಸ್ಪ್ಯಾನಿಷ್ ಜ್ವರದ ಎರಡನೇ ಅಲೆ ದೊಡ್ಡದಾಗಿತ್ತು, ಅದರ ನಂತರ ಸಣ್ಣ ಮೂರನೇ ಅಲೆ ಇತ್ತು ಎಂದೂ ಅವರು ವಿವರಿಸಿದರು.

    ವೈರಸ್ ಗೆ ಸುಲಭವಾಗಿ ತುತ್ತಾಗುವ ಜನಸಂಖ್ಯೆ ಇರುವಾಗ ಆ ಸೋಂಕಿನ ಬಹು ಅಲೆಗಳು ಸಂಭವಿಸುತ್ತವೆ.ಜನಸಂಖ್ಯೆಯ ಬಹುಪಾಲು ಭಾಗವು ಸೋಂಕಿನ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಪಡೆದಾಗ, ವೈರಸ್ ಹರಡುವುದು ಕಡಿಮೆಯಾಗುತ್ತದೆ ಮತ್ತು ಸೋಂಕು ನಿರ್ದಿಷ್ಟ ಋತುವಿಗೆ ಸೀಮಿತವಾಗುತ್ತದೆ. ಉದಾಹರಣೆಗೆ H1N1 ಸಾಮಾನ್ಯವಾಗಿ ಮಾನ್ಸೂನ್ ಅಥವಾ ಚಳಿಗಾಲದಲ್ಲಿ ಹರಡುತ್ತದೆ.

    ವೈರಸ್ ನ ಬದಲಾವಣೆಯಿಂದಾಗಿ ಅಲೆಗಳು ಸಂಭವಿಸಬಹುದು.(ಉದಾಹರಣೆಗೆ ಹೊಸ ರೂಪಾಂತರಗಳು)ಹೊಸ ರೂಪಾಂತರಗಳು ಹೆಚ್ಚು ಸಾಂಕ್ರಾಮಿಕವಾಗುವುದರಿಂದ, ವೈರಸ್ ಹರಡಲು ಹೆಚ್ಚಿನ ಅವಕಾಶವಿರುತ್ತದೆ.

    ಪ್ರಕರಣಗಳು ಹೆಚ್ಚಾದಾಗ, ಜನರಲ್ಲಿ ಭಯವಿರುತ್ತದೆ ಮತ್ತು ಮಾನವರ ನಡವಳಿಕೆಯು ಈ ಸಮಯದಲ್ಲಿ ಬದಲಾಗುತ್ತದೆ. ಕೋವಿಡ್ ಶಿಷ್ಟಾಚಾರವನ್ನು ಪಾಲಿಸುತ್ತಾರೆ. ಇದು ಪ್ರಸರಣ ಸರಪಳಿಯನ್ನು ಮುರಿಯಲು ಸಹಾಯ ಮಾಡುತ್ತದೆ. ಹೀಗಾಗಿ ಅನ್ಲಾಕ್ ಸಂದರ್ಭದಲ್ಲಿ ಸೋಂಕು ದೂರುವಾಗೆ ಬಿಟ್ಟಿತು ಎಂದು ಜನ ಭಾವಿಸಿ ಕೋವಿಡ್ ಸೂಕ್ತ ನಡವಳಿಕೆಯನ್ನು ಮರೆತು ಬಿಡುತ್ತಾರೆ. ಈ ಕಾರಣದಿಂದಾಗಿ, ವೈರಸ್ ಮತ್ತೆ ಸಮುದಾಯದಲ್ಲಿ ಹರಡಲು ಪ್ರಾರಂಭಿಸುತ್ತದೆ, ಇದು ಮತ್ತೊಂದು ಅಲೆಗೆ ಕಾರಣವಾಗುತ್ತದೆ. .

    ನಮ್ಮ ಜನಸಂಖ್ಯೆಯ ಹೆಚ್ಚಿನ ಭಾಗಕ್ಕೆ ಲಸಿಕೆ ಹಾಕಲಾಗಿದೆ ಮತ್ತು ಹೆಚ್ಚಿನ ಜನರಲ್ಲಿ ನೈಸರ್ಗಿಕ ರೋಗನಿರೋಧಕ ಶಕ್ತಿ ಉಂಟಾಗಿದೆ ಎಂದು ಹೇಳುವವರೆಗೂ ನಾವು ಕೋವಿಡ್ ಸೂಕ್ತ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕಾಗಿದೆ ಎಂದು ಅವರು ಹೇಳಿದರು.

    “ಸಾಕಷ್ಟು ಜನರಿಗೆ ಲಸಿಕೆ ಹಾಕಿದಾಗ ಅಥವಾ ಸೋಂಕಿನ ವಿರುದ್ಧ ನಾವು ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿಯನ್ನು ಪಡೆದಾಗ, ಈ ಅಲೆಗಳು ನಿಲ್ಲುತ್ತವೆ. ಕೋವಿಡ್ ಸೂಕ್ತವಾದ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಅನುಸರಿಸುವುದೊಂದೇ ಇದಕ್ಕೆ ಮಾರ್ಗವಾಗಿದೆ


    ನೂತನ ಚುನಾವಣಾ ಆಯುಕ್ತರಾಗಿ ಅನೂಪ್ ಚಂದ್ರ ಪಾಂಡೆ ಅಧಿಕಾರ ಸ್ವೀಕಾರ

    https://static.pib.gov.in/WriteReadData/userfiles/image/image002594C.jpg
    ಮುಖ್ಯಚುನಾವಣಾಆಯುಕ್ತ ಸುಶೀಲ್ ಚಂದ್ರ ಮತ್ತು ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರೊಂದಿಗೆ ಅನೂಪ್ ಚಂದ್ರ ಪಾಂಡೆ

    ಭಾರತದ ನೂತನ ಚುನಾವಣಾ ಆಯುಕ್ತರಾಗಿ (ಇಸಿ) ಅನೂಪ್ ಚಂದ್ರ ಪಾಂಡೆ ಇಂದು ಅಧಿಕಾರ ವಹಿಸಿಕೊಂಡರು. ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ನೇತೃತ್ವದ ಭಾರತ ಚುನಾವಣಾ ಆಯೋಗಕ್ಕೆ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಜೊತೆಗೆ ಪಾಂಡೆ ಎರಡನೇ ಚುನಾವಣಾ ಆಯುಕ್ತರಾಗಿ ಸೇರಿದ್ದಾರೆ.

    ಫೆಬ್ರವರಿ 15, 1959 ರಂದು ಜನಿಸಿದ ಅನೂಪ್ ಚಂದ್ರ ಪಾಂಡೆ 1984 ನೇ ತಂಡದ ಭಾರತೀಯ ಆಡಳಿತ ಸೇವಾ ಅಧಿಕಾರಿಯಾಗಿದ್ದಾರೆ. ಸುಮಾರು 37 ವರ್ಷಗಳ ಭಾರತ ಸರ್ಕಾರದ ಸೇವೆಯ ಅವಧಿಯಲ್ಲಿ, ಪಾಂಡೆ ಅವರು ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಮತ್ತು ಅವರ ಕೇಡರ್ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

    ಅನೂಪ್ ಚಂದ್ರ ಪಾಂಡೆ, ಪಂಜಾಬ್ ಎಂಜಿನಿಯರಿಂಗ್ ಕಾಲೇಜಿನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಮತ್ತು ಪಂಜಾಬ್ ವಿಶ್ವವಿದ್ಯಾಲಯದಿಂದ ಮೆಟೀರಿಯಲ್ಸ್ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇತಿಹಾಸ ಅಧ್ಯಯನದಲ್ಲಿ ತೀವ್ರ ಆಸಕ್ತಿ ಹೊಂದಿರುವ ಅವರು ಮಗಧ್ ವಿಶ್ವವಿದ್ಯಾಲಯದಿಂದ ಪ್ರಾಚೀನ ಭಾರತೀಯ ಇತಿಹಾಸದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ.

    ಪಾಂಡೆ ಅವರು ಆಗಸ್ಟ್ 2019 ರಲ್ಲಿ ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು. ಭಾರತದ ಚುನಾವಣಾ ಆಯೋಗಕ್ಕೆ ಸೇರುವ ಮೊದಲು, ಪಾಂಡೆ ಉತ್ತರ ಪ್ರದೇಶದ ಸದಸ್ಯ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮೇಲ್ವಿಚಾರಣಾ ಸಮಿತಿಯಾಗಿ ಸೇವೆ ಸಲ್ಲಿಸುತ್ತಿದರು.ಮುಖ್ಯ ಕಾರ್ಯದರ್ಶಿಯಾಗಿ ಅವರ ಆಡಳಿತದಲ್ಲಿ, ರಾಜ್ಯವು ಪ್ರಯಾಗರಾಜ್‌ನಲ್ಲಿ ಕುಂಭಮೇಳವನ್ನು ಮತ್ತು 2019 ರಲ್ಲಿ ವಾರಣಾಸಿಯಲ್ಲಿ ಪ್ರವಾಸಿ ಭಾರತೀಯ ದಿವಸವನ್ನು ಯಶಸ್ವಿಯಾಗಿ ಆಯೋಜಿಸಿತು.

    ಇದಕ್ಕೂ ಮೊದಲು ಅನೂಪ್ ಚಂದ್ರ ಅವರು ರಾಜ್ಯದ ಕೈಗಾರಿಕಾ ಅಭಿವೃದ್ಧಿ ಆಯುಕ್ತರಾಗಿ ಸೇವೆ ಸಲ್ಲಿಸಿದರು ಮತ್ತು 2018 ರಲ್ಲಿ ಲಖನೌದಲ್ಲಿ ಬೃಹತ್ ಹೂಡಿಕೆದಾರರ ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದರು. ಸಿಂಗಲ್ ವಿಂಡೋ ನಿವೇಶ್ ಮಿತ್ರ ಪೋರ್ಟಲ್ ಸೇರಿದಂತೆ ಕೈಗಾರಿಕೆಗಳು ಮತ್ತು ವ್ಯಾಪಾರ ಕ್ಷೇತ್ರದಲ್ಲಿ ವಿವಿಧ ನೀತಿ ಸುಧಾರಣೆಗಳನ್ನು ಅವರು ಪರಿಚಯಿಸಿದರು.

    ಉತ್ತರ ಪ್ರದೇಶ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ (ಹಣಕಾಸು), ಪಾಂಡೆ ಅವರು ಮಾಡಿದ ಪ್ರಯತ್ನಗಳು ಉತ್ತರ ಪ್ರದೇಶದ ಕೃಷಿ ಸಾಲ ಮನ್ನಾ ಯೋಜನೆಯ ಯಶಸ್ವಿ ವಿನ್ಯಾಸ, ಯೋಜನೆ ಮತ್ತು ಅನುಷ್ಠಾನಕ್ಕೆ ಕಾರಣವಾಯಿತು. ಪಾಂಡೆ ಅವರು ಕೇಂದ್ರ ಸರ್ಕಾರದಲ್ಲಿ ವಿವಿಧ ಕೆಲಸ ನಿರ್ವಹಿಸಿದ್ದಾರೆ. ಅವರು ರಕ್ಷಣಾ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯಾಗಿ ಮತ್ತು ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ, ಅವರು ಜಿ 20 ಮತ್ತು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯಂತಹ ವಿವಿಧ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ನಿರ್ದೇಶಕರೂ ಆಗಿದ್ದರು.

    ಪಾಂಡೆ ಅವರು ಬರವಣಿಗೆಯಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ್ದಾರೆ ಮತ್ತು “ಪ್ರಾಚೀನ ಭಾರತದಲ್ಲಿ ಆಡಳಿತ”ಎಂಬ ಪುಸ್ತಕವನ್ನು ಬರೆದಿದ್ದಾರೆ, ಇದು ಪ್ರಾಚೀನ ಭಾರತೀಯ ನಾಗರಿಕ ಸೇವೆಯ ವಿಕಸನ, ಸ್ವರೂಪ, ವ್ಯಾಪ್ತಿ, ಕಾರ್ಯಗಳು ಮತ್ತು ಸಂಬಂಧಿತ ಅಂಶಗಳನ್ನು ಋಗ್ವೇದ ಕಾಲದಿಂದ ಕ್ರಿ.ಶ 650 ರವರೆಗೆ ಪರಿಶೋಧಿಸುತ್ತದೆ.(ವರದಿ :ಪಿಐಬಿ)

    ರಾಜ್ಯ ಸಾರಿಗೆ ಬಸ್ಸುಗಳಲ್ಲಿ ಚಾಲಕ ನಿದ್ದೆ ಮಾಡಿದರೆ ಎಚ್ಚರಿಸುವ ತಂತ್ರಜ್ಞಾನ

    ಸಾರ್ವಜನಿಕ ಸಾರಿಗೆಯಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಮೊದಲ ಬಾರಿಗೆ ಎ.ಐ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಟೆಕ್ನಾಲಜಿ ಅಳವಡಿಸುವ ಮಹತ್ವದ ಯೋಜನೆಗೆ ಹೆಜ್ಜೆ ಇಡಲಾಗಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

    ಕೆಲವು ಮುಂದುವರಿದ ರಾಷ್ಟ್ರಗಳಲ್ಲಿ ಇಂತಹ ತಂತ್ರಜ್ಞಾನವನ್ನು ಬಳಸಲಾಗುತ್ತಿದ್ದರೂ ನಮ್ಮ ಸರ್ಕಾರಿ ಸಾರಿಗೆ ಕ್ಷೇತ್ರದ ಇತಿಹಾಸದಲ್ಲಿ ಇದೊಂದು ವಿನೂತನ ಪ್ರಯೋಗ ಎನ್ನಲಾಗಿದೆ.

    ಇದರಲ್ಲಿ ಸಿಡಬ್ಲ್ಯುಎಸ್ ಮತ್ತು ಡಿಡಿಎಸ್ ಎಂಬ ಎರಡು ರೀತಿಯ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ. ಸಿಡಬ್ಲ್ಯುಎಸ್ ಎಂದರೆ ಕೊಲಿಜಿಯನ್ ವಾರ್ನಿಂಗ್ ಸಿಸ್ಟಮ್. ಡಿಡಿಎಸ್ ಎಂದರೆ ಡ್ರೈವರ್ ಡ್ರೋಜಿನೆಸ್ ಡಿಟೆಕ್ಷನ್ ಸಿಸ್ಟಮ್ . ಇದರಿಂದ ಬಸ್ಸಿನ ಸಮೀಪಕ್ಕೆ ಮತ್ತೊಂದು ವಾಹನ ಬಂದರೆ ಅಥವಾ ಚಾಲಕ ನಿದ್ರಿಸಿ ಡಿವೈಡರ್ ಕಡೆ ಸಾಗುತ್ತಿದ್ದರೆ ಈ ಆರ್ಟಿಫಿಷಿಯಲ್ ತಂತ್ರಜ್ಞಾನ ಶಬ್ದ ಮಾಡಿ ಎಚ್ಚರಿಸುತ್ತದೆ. ಜೊತೆಗೆ ಕಂಟ್ರೋಲ್ ರೂಮ್ ಗೆ ಮಾಹಿತಿ ರವಾನೆ ಮಾಡುತ್ತದೆ. ಇದರಿಂದಾಗಿ ಚಾಲಕ ಸದಾ ಜಾಗರೂಕತೆಯಿಂದ ಇರುವಂತೆ ಮಾಡುವುದರ ಜೊತೆಗೆ ಅಪಘಾತ ಮತ್ತು ಅನಾಹುತಗಳನ್ನು ತಪ್ಪಿಸಬಹುದಾಗಿದೆ.

    ನಮಗೆ ನಮ್ಮ ಜನರ ಜೀವ ಮುಖ್ಯ ಇದರಿಂದಾಗಿ ಅಪಘಾತ ರಹಿತ ಸಾರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಈ ಟೆಕ್ನಾಲಜಿಯನ್ನು ಕರಾರಸಾ ನಿಗಮದ 1044 ಬಸ್ಸುಗಳಿಗೆ ಮೊದಲು ಅಳವಡಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಇದನ್ನು ಮತ್ತಷ್ಟು ವಾಹನಗಳಿಗೆ ಹೆಚ್ಚಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಚಿಂತನೆ ಮಾಡಿದೆ ಎಂದು ಲಕ್ಷ್ಮಣ ಸವದಿ ಅವರು ತಿಳಿಸಿದ್ದಾರೆ.

    ಕೋವಿಡ್ ಸೋಂಕು ತಹಬಂದಿಗೆ ಬಂದ ನಂತರವೇ SSLC ಪರೀಕ್ಷೆ

    ಮುಂದಿನ ವ್ಯಾಸಂಗಕ್ಕಾಗಿ ತಮ್ಮ ಸಾಮರ್ಥ್ಯವನ್ನು ಗುರುತಿಸಿಕೊಳ್ಳುವ ಅವಕಾಶ ದೊರಕಿಸಿಕೊಡಬೇಕೆನ್ನುವ ಮಹತ್ವದ ದೃಷ್ಟಿಯಿಂದ ನಡೆಸಲಾಗುತ್ತಿರುವ  ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆ ಕುರಿತು ಮಕ್ಕಳು ಮತ್ತು ಪೋಷಕರಲ್ಲಿ ಆತ್ಮವಿಶ್ವಾಸ ಮೂಡಿಸುವ ಕ್ರಮಗಳನ್ನು ಕೈಗೊಳ್ಳಬೇಕೆಂದು ಪ್ರಾಥಮಿಕ ಮತ್ತು  ಪ್ರೌಢಶಿಕ್ಷಣ  ಸಚಿವ ಎಸ್. ಸುರೇಶ್ ಕುಮಾರ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಮುಂಬರುವ ಎಸ್ ಎಸ್ ಎಲ್ ಸಿ ಪರೀಕ್ಷೆಗಳ ಕುರಿತು ರಾಜ್ಯದ ಎಲ್ಲ 34 ಶೈಕ್ಷಣಿಕ ಜಿಲ್ಲೆಗಳ   ಉಪನಿರ್ದೇಶಕರು, ಬಿಇಒ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್  ಮೂಲಕ ಮಾರ್ಗದರ್ಶನ ನೀಡಿದ ಅವರು, ಈ ಬಾರಿಯ ಬದಲಾಗಿರುವ ಪರೀಕ್ಷೆ ಪದ್ಧತಿಯಲ್ಲಿ ಕುರಿತು ಮಕ್ಕಳಿಗೆ ಶಿಕ್ಷಕರು ಸೂಕ್ತ ತಿಳಿವಳಿಕೆ ನೀಡಲು ಕ್ರಮ ವಹಿಸಬೇಕೆಂದರು.

    ಎಲ್ಲದಕ್ಕಿಂತ ಮುಖ್ಯವಾಗಿ ಈ ಪರೀಕ್ಷೆಗಳನ್ನು ಕೋವಿಡ್-19 ಸೋಂಕು ತಹಬಂದಿಗೆ ಬಂದ ನಂತರವೇ ನಡೆಸಲಾಗುವುದು ಎಂಬ ಭರವಸೆಯನ್ನು ಮಕ್ಕಳು ಮತ್ತು ಪೋಷಕರಲ್ಲಿ ಮೂಡಿಸಬೇಕು ಎಂದು ಸಚಿವರು ಹೇಳಿದರು.  

    ಈ ವಾರಂತ್ಯಕ್ಕೆ ಮಾದರಿ ಪ್ರಶ್ನೆ ಪತ್ರಿಕೆಗಳು ಎಲ್ಲ ಶಾಲೆಗಳಿಗೆ ಆಯಾ ಬಿಇಒ ಕಚೇರಿಗಳ ಮೂಲಕ ತಲುಪಲಿವೆ. ಮಕ್ಕಳಿಗೆ ಓಎಂಆರ್ ಶೀಟ್ ರೂಪದಲ್ಲಿರುವ ಪ್ರಶ್ನೆ ಪತ್ರಿಕೆಗಳಿಗೆ ಹೇಗೆ ಉತ್ತರಿಸಬೇಕೆಂಬ ಕುರಿತು ಶಿಕ್ಷಕರು ಸಲಹೆ ನೀಡಬೇಕು. ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ಅಧಿಕಾರಿಗಳು ಮತ್ತು ಶಿಕ್ಷಕರು ವಿವಿಧ ರೀತಿಯಲ್ಲಿ ಮಕ್ಕಳನ್ನು ತಲುಪಿ ಪರೀಕ್ಷೆ ಕುರಿತು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ ಪರೀಕ್ಷೆಗೆ ಸಜ್ಜುಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ಉಪಯುಕ್ತ ಮತ್ತು ಉತ್ತಮ ನಡೆಯನ್ನು ಉಳಿದ ಜಿಲ್ಲೆಗಳೂ ಅನುಸರಿಸಬೇಕೆಂದು  ಸುರೇಶ್ ಕುಮಾರ್ ಹೇಳಿದರು.

    ಮುಂದಿನ ವ್ಯಾಸಂಗವನ್ನು ಆಯ್ದುಕೊಳ್ಳುವ ನಿಟ್ಟಿನಲ್ಲಿ ಈ ಪರೀಕ್ಷೆಯು ದಿಕ್ಸೂಚಿಯಾಗಿರುವುದರಿಂದ  ಪರೀಕ್ಷೆಯಲ್ಲಿ ತಲಾ ಒಂದು ವಿಷಯಕ್ಕೆ ತಲಾ 40 ಅಂಕದ ಪ್ರಶ್ನೆಪತ್ರಿಕೆಯಿದ್ದು, ಅದರಲ್ಲೇ ನಾಲ್ಕು ಉತ್ತರಗಳಲ್ಲಿ ಒಂದು ಉತ್ತರವನ್ನ ಗುರುತು ಮಾಡುವಂತಹ ಪ್ರಕ್ರಿಯೆ ಚಾಲ್ತಿಯಲ್ಲಿರಲಿದೆ. ಪ್ರಶ್ನೆಗಳು ನೇರ ಮತ್ತು ಸುಲಭವಾಗಿರುವುದರಿಂದ ಮಕ್ಕಳಿಗೆ ಹೆಚ್ಚಿನ ಗೊಂದಲವಾಗುವುದಿಲ್ಲ. ಆದರೂ ಈ ಕುರಿತು ಮಕ್ಕಳಿಗೆ ಸುಲಭವಾಗಿ ಅರ್ಥೈಸುವಂತೆ ಮಾಹಿತಿ ನೀಡಿ ಈ ಹೊಸ ಪದ್ಧತಿ ಕುರಿತು ಹೆಚ್ಚಿನ ಜಾಗೃತಿ ಮೂಡಿಸಲು ಕ್ರಮ ವಹಿಸಬೇಕಾದ ಅಗತ್ಯವಿದೆ ಎಂದು ಸಚಿವರು ತಿಳಿಸಿದರು.

    ಹಲವಾರು ಸ್ತರದ ಜನರೊಂದಿಗೆ ಹಲವಾರು ಸುತ್ತಿನ ಚರ್ಚೆಗಳ ನಂತರ ಮಕ್ಕಳ ಹಿತದೃಷ್ಟಿಯಿಂದ ಕೇವಲ ಎರಡು ದಿನಗಳ ಪರೀಕ್ಷೆ ನಡೆಸಲಾಗುತ್ತಿದೆ. ಕಳೆದ ಬಾರಿಗಿಂತ ಹೆಚ್ಚಿನ ಸುರಕ್ಷತಾ ವಾತಾವರಣದಲ್ಲಿ ಪರೀಕ್ಷೆಗಳು ನಡೆಯುತ್ತಿದ್ದು, ಅದಕ್ಕಾಗಿ ಇಲಾಖೆ ಈಗಾಗಲೇ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.  ಮಕ್ಕಳ ಹಿತದೃಷ್ಟಿಯಿಂದ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗುತ್ತಿದ್ದು, ಕೋವಿಡ್-19ರ ಲಸಿಕೆ ಪಡೆದ ಶಿಕ್ಷಕರನ್ನೇ ಕೊಠಡಿ ಮೇಲ್ವಿಚಾರಕರನ್ನಾಗಿ ನೇಮಿಸಿಕೊಳ್ಳಬೇಕಾಗಿರುವುದರಿಂದ ಶಿಕ್ಷಕರಿಗೆ ಲಸಿಕೆ ನೀಡಲು ಕ್ರಮ ವಹಿಸುವಂತೆ ಈಗಾಗಲೇ ಆರೋಗ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.  ಈ ಬಗ್ಗೆ ಕಲಬುರಗಿ, ಧಾರವಾಡ ಅಪರ ಆಯುಕ್ತರು ವಿಶೇಷ ಗಮನ ಹರಿಸಿ ಲಸಿಕೆ ಪಡೆದ ಶಿಕ್ಷಕರನ್ನೇ ಮೇಲ್ವಿಚಾರಕರನ್ನಾಗಿ‌ ನೇಮಿಸಬೇಕೆಂದು ಸುರೇಶ್ ಕುಮಾರ್ ಸೂಚಿಸಿದರು.

    ಕಳೆದ ವರ್ಷದಂತೆ ಸ್ಥಳೀಯ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರತಿನಿಧಿಗಳು ಸಮವಸ್ತ್ರದಲ್ಲಿ ಪರೀಕ್ಷಾ ಕೇಂದ್ರದಲ್ಲಿ ಹಾಜರಿದ್ದು, ಮಕ್ಕಳ ಸುರಕ್ಷತೆಗೆ ಮಾರ್ಗದರ್ಶನ ನೀಡಲಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯೂ ಮಕ್ಕಳು ತಮ್ಮ ವಾಸಸ್ಥಳದ ಸನಿಹದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅವಕಾಶವಿದ್ದು, ಹೆಚ್ಚಿನ ಸಂಖ್ಯೆಯ ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದರು.

    ಕಳೆದ ಬಾರಿಗಿಂತ ಈ ಬಾರಿ 30 ಸಾವಿರ ಮಕ್ಕಳು ಹೆಚ್ಚಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದಾರೆ. ಪರೀಕ್ಷೆ ಯಶಸ್ಸಿಗಾಗಿ ಕಳೆದ ಬಾರಿಯಂತೆ ಎಲ್ಲ ಇಲಾಖೆಗಳೂ ಸಹಕಾರ ನೀಡಲಿವೆ. ಈ ಕುರಿತಂತೆ ವಾರದೊಳಗೆ ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಮತ್ತು ಆಯುಕ್ತರು/ನಿರ್ದೇಶಕರ ಸಭೆ ನಡೆಸಲಾಗುವುದು ಹಾಗೆಯೇ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವಿಡೀಯೋ ಕಾನ್ಫೆರೆನ್ಸ್ ಮೂಲಕ ಸಭೆ ನಡೆಸಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

    ಪರೀಕ್ಷೆಗೆ ಹಾಜರಾಗಲಿರುವ ಎಲ್ಲ ಮಕ್ಕಳಿಗೂ ಎನ್-95 ಮಾಸ್ಕ್ಗಳನ್ನು ಒದಗಿಸಲು ಕ್ರಮ ವಹಿಸಲಾಗುತ್ತದೆ. ಮಕ್ಕಳ  ಹಿತದೃಷ್ಟಿಯಿಂದಲೇ ನಡೆಯುತ್ತಿರುವ ಈ ಪರೀಕ್ಷೆಯನ್ನು ಯಶಸ್ವಿಗೊಳಿಸಲು ಅಧಿಕಾರಿಗಳು ಹೆಚ್ಚಿನ ಶ್ರಮ ವಹಿಸಬೇಕು. ಪರೀಕ್ಷೆಯೊಳಗೆ ಎಲ್ಲ ಜಿಲ್ಲೆಗಳಿಗೆ ಭೇಟಿ  ನೀಡಿ ಪರೀಕ್ಷಾ ಸಿದ್ಧತೆ ಪರಿಶೀಲಿಸಲು  ಖುದ್ದಾಗಿ ಭೇಟಿ ನೀಡುವ ಕುರಿತೂ ಚಿಂತನೆ ನಡೆಸಿದ್ದೇನೆ ಎಂದೂ ಸುರೇಶ್ ಕುಮಾರ್ ಹೇಳಿದರು.

    ಪರೀಕ್ಷೆ ಕುರಿತಂತೆ  ಮಕ್ಕಳು ಮತ್ತು  ಪೋಷಕರಲ್ಲಿ  ಸದಭಿಪ್ರಾಯವಿದ್ದು,  ಪರೀಕ್ಷೆ ಬರೆಯುವ ಕುರಿತು ಮಕ್ಕಳು ಆತ್ಮಸ್ಥೈರ್ಯದಿಂದ ಇದ್ದಾರೆ ಎಂದು ಡಿಡಿಪಿಐಗಳು ಸಚಿವರೊಂದಿಗೆ ಅನಿಸಿಕೆಗಳನ್ನು ಹಂಚಿಕೊಂಡರು. ತಮ್ಮ ತಮ್ಮ ಜಿಲ್ಲೆಗಳಲ್ಲಿ ಪರೀಕ್ಷೆ ಕುರಿತು ಕೈಗೊಳ್ಳಲಾಗಿರುವ ಮತ್ತು ಮಕ್ಕಳಿಗೆ ಹೊಸ ಪರೀಕ್ಷಾ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸುವ ಕುರಿತು ಮಾರ್ಗದರ್ಶನ ನೀಡಲು ಶಾಲಾ ಹಂತದಲ್ಲಿ ಮತ್ತು ತಾಲೂಕು ಮಟ್ಟದಲ್ಲಿ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ತಾವು ಈಗಾಗಲೇ ಡಿಸಿ ಮತ್ತು ಸಿಇಒಗಳನ್ನು ಭೇಟಿ ಮಾಡಿದ್ದು, ಅವರೆಲ್ಲ ಪರೀಕ್ಷೆಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆಂದು  ಡಿಡಿಪಿಐಗಳು ಸಚಿವರ ಗಮನಕ್ಕೆ ತಂದರು.

    ಜಿಲ್ಲಾ ಶೈಕ್ಷಣಿಕ ಉಪನಿರ್ದೇಶಕರು ತಮ್ಮ ಜಿಲ್ಲೆಯಲ್ಲಿ ಪರೀಕ್ಷೆಗಳನ್ನು ಯಶಸ್ವಿಗೊಳಿಸುವ ಸಂಬಂಧದಲ್ಲಿ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದು, ಅವರಿಂದ ಎಲ್ಲ ರೀತಿಯ ಸಹಕಾರ ಪಡೆಯಬೇಕೆಂದು ಸೂಚನೆ ನೀಡಿದರು. 

    ಕಳೆದ ಬಾರಿಯ ಎಸ್ಒಪಿ ಕುರಿತು ಹೈಕೋರ್ಟ್ ಮತ್ತು ಸುಪ್ರಿಂಕೋರ್ಟ್ ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದವು. ಈ ಬಾರಿ ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅದಕ್ಕಿಂತ ಸುಧಾರಿತ ಎಸ್ಒಪಿ ನೀಡಲಿದ್ದು, ಅದೇ ಪ್ರಕಾರವೇ ಪರೀಕ್ಷೆಗಳು ಸುರಕ್ಷತಾ ಪರಿಸರದಲ್ಲಿ ನಡೆಯಲಿರುವುದರಿಂದ ಯಾರೂ ಆತಂಕಕ್ಕೊಳಗಾಗುವ ಪ್ರಮೇಯವೇ ಇಲ್ಲ ಎಂದು ಸುರೇಶ್ ಕುಮಾರ್ ಹೇಳಿದರು.  

    ಶಾಲೆಗಳು ಆರಂಭವಾದ ನಂತರ ಪ್ರತಿದಿನವೂ ನಾಲ್ಕೈದು ಮಕ್ಕಳನ್ನು ಶಾಲೆಗಳಿಗೆ ಕರೆಸಿ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಲೂ ಕ್ರಮ ವಹಿಸಬಹುದೆಂದೂ ಸಚಿವರು ಸಲಹೆ ನೀಡಿದರು. ಮಕ್ಕಳು ಪರೀಕ್ಷಾ ಕೇಂದ್ರ ಪ್ರವೇಶಿಸಿದ ತಕ್ಷಣವೇ ಪರೀಕ್ಷೆ ಕುರಿತು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ ಮತ್ತು ಆತ್ಮಸ್ಥೈರ್ಯ ಹೆಚ್ಚಿಸುವಂತಹ ಭಿತ್ತಿಪತ್ರಗಳಿರುತ್ತವೆ. ಸ್ಥಳೀಯ ಮಟ್ಟದಲ್ಲೂ ಇಂತಹ ಇನ್ನೂ ಅನೇಕ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳು ಕ್ರಮ ವಹಿಸಲು ಅವಕಾಶವಿದೆ ಎಂದೂ ಸಚಿವರು ಹೇಳಿದರು.

    ಪರೀಕ್ಷೆಯ ಸಂಪೂರ್ಣ ಯಶಸ್ಸಿಗೆ ಕಳೆದ ಬಾರಿಯಂತೆ ಈ ವರ್ಷವೂ ಅಧಿಕಾರಿಗಳು ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡು ಹೆಚ್ಚಿನ ಸಹಕಾರ ನೀಡಬೇಕೆಂದು ಸಚಿವರು ಕೋರಿದರು. 

    ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ. ಅನ್ಬುಕುಮಾರ್, ಅಪರ ಆಯುಕ್ತರಾದ ನಳಿನ್ ಅತುಲ್ (ಕಲಬುರಗಿ) ಮೇಜರ್ ಸಿದ್ದಲಿಂಗಯ್ಯ ಹಿರೇಮಠ (ಧಾರವಾಡ), ಇಲಾಖೆಯ ನಿರ್ದೇಶಕರು ಭಾಗವಹಿಸಿದ್ದರು.

    ನಾಳೆಯಿಂದ ರಾಜ್ಯದ್ಯಂತ 10 ಸಾವಿರ ಕ್ರೀಡಾಪಟುಗಳಿಗೆ ಉಚಿತ ಕೋವಿಡ್ -19 ಲಸಿಕೆ

    ಕೋವಿಡ್ ಲಸಿಕೆಯನ್ನು ಕ್ರೀಡಾಪಟುಗಳಿಗೆ ಉಚಿತವಾಗಿ ನೀಡಲು ತೀರ್ಮಾನಿಸಲಾಗಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಾಳೆ ಈ ಲಸಿಕಾ ಅಭಿಯಾನಕ್ಕೆ ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನಾ ಇಲಾಖೆ ಸಚಿವ ಡಾ. ನಾರಾಯಣಗೌಡ ಚಾಲನೆ ನೀಡಲಿದ್ದಾರೆ.

    ರಾಜ್ಯ ಸರ್ಕಾರವು 18 ವರ್ಷ ಮೇಲ್ಪಟ್ಟ ಕ್ರೀಡಾಪಟುಗಳನ್ನು ಆದ್ಯತಾ ಗುಂಪಿಗೆ ಸೇರಿಸಿದ್ದು, ನೋಂದಣಿ ಮಾಡಿಕೊಂಡ ಕ್ರೀಡಾಪಟುಗಳಿಗೆ ಲಸಿಕೆ ನೀಡಲಿದೆ. ಈಗಾಗಲೆ 2200 ಕ್ರೀಡಾಪಟುಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, 10 ಮತ್ತು 11 ನೇ ತಾರೀಖಿನಂದು ಇವರಿಗೆ ಲಸಿಕೆ ನೀಡಲಾಗುವುದು. ಇದುವರೆಗು ಹೆಸರನ್ನು ನೋಂದಾಯಿಸಿಕೊಳ್ಳದ ಕ್ರೀಡಾಪಟುಗಳು, ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಅಥವಾ ಆಯಾ ರಾಜ್ಯ ಕ್ರೀಡಾ ಸಂಸ್ಥೆಗಳ ಮೂಲಕ ನೋಂದಾಯಿಸಿಕೊಳ್ಳಬೇಕು.

    ಕ್ರೀಡಾಪಟುಗಳಿಗೆ ಲಸಿಕೆ ನೀಡಲು ದಿನಾಂಕ ನಿಗದಿ

    10-06-2021 ಗುರುವಾರದಂದು ಬಾಸ್ಕೆಟ್‌ಬಾಲ್, ಫೆನ್ಸಿಂಗ್, ಈಜು, ಹಾಕಿ, ಟೆನ್ನಿಕಾಯ್ಸ್, ಬ್ಯಾಡ್ಮಿಂಟನ್, ರೋಯಿಂಗ್ ಮತ್ತು ನೆಟ್‌ಬಾಲ್ ಕ್ರೀಡೆಗಳ ಕ್ರೀಡಾಪಟುಗಳಿಗೆ ಹಾಗೂ 11-06-2021 ಶುಕ್ರವಾರದಂದು ಶೂಟಿಂಗ್, ಹ್ಯಾಂಡ್‌ಬಾಲ್, ಫುಟ್ಬಾಲ್ ಅಥ್ಲೆಟಿಕ್ಸ್, ಟೇಬಲ್ ಟೆನ್ನಿಸ್, ವಾಲಿಬಾಲ್ ಮತ್ತು ರೋಲರ್ ಸ್ಕೇಟಿಂಗ್ ಕ್ರೀಡಾಪಟುಗಳಿಗೆ ಲಸಿಕೆ ನೀಡಲಾಗುವುದು. ರಾಜ್ಯಾತ 10 ಸಾವಿರಕ್ಕು ಹೆಚ್ಚು ಕ್ರೀಡಾಪಟುಗಳಿಗೆ ಲಸಿಕೆ ನೀಡಲಾಗುವುದು. ಈಗಾಗಲೆ ನೋಂದಣಿ ಮಾಡಿಸಿಕೊಂಡವರನ್ನು ಹೊರತುಪಡಿಸಿ ಉಳಿದ ಕ್ರೀಡಾಪಟುಗಳಿಗೆ ಲಸಿಕಾ ಅಭಿಯಾನವನ್ನು ಮುಂದುವರೆಸಿ ಮುಂದಿನ ದಿನಗಳಲ್ಲಿ ನೀಡಲಾಗುವುದು.

    ಕ್ರೀಡಾಪಟುಗಳು ರಾಜ್ಯದ, ರಾಷ್ಟ್ರದ ಹೆಮ್ಮೆ. ಅವರ ಆರೋಗ್ಯ ರಕ್ಷಣೆ ಸರ್ಕಾರದ ಜವಾಬ್ದಾರಿ. ಹೀಗಾಗಿ ಕ್ರೀಡಾಪಟುಗಳಿಗಾಗಿಯೇ ಪ್ರತ್ಯೇಕವಾಗಿ ಲಸಿಕಾ ಅಭಿಯಾನ ಆರಂಭಿಸಲಾಗುತ್ತಿದೆ. ಪ್ರತಿಯೊಬ್ಬ ಅರ್ಹ ಕ್ರೀಡಾಪಟುಗಳು ಹೆಸರು ನೋಂದಾಯಿಸಿಕೊಂಡು ನಿಗದಿತ ದಿನಾಂಕದಂದು ಲಸಿಕೆ ಪಡೆದುಕೊಳ್ಳಬೇಕು. ಕೇವಲ ಎರಡು ದಿನ ಮಾತ್ರವಲ್ಲ, ಎಲ್ಲ ಕ್ರೀಡಾಪಟುಗಳಿಗೆ ಲಸಿಕೆ ನೀಡುವವರೆಗೆ ಈ ಅಭಿಯಾನ ನಡೆಯಲಿದೆ ಎಂದು ಸಚಿವ ಡಾ. ನಾರಾಯಣಗೌಡ ತಿಳಿಸಿದ್ದಾರೆ

    ವಿದೇಶಗಳಲ್ಲಿ ಓದುವ ವಿದ್ಯಾರ್ಥಿಗಳ 2ನೇ ಡೋಸ್‌ ಅಂತರ 4-6 ವಾರಕ್ಕೆ ಕುಗ್ಗಿಸಲು ಕೇಂದ್ರ ಸಮ್ಮತಿ


    ವಿದೇಶಗಳಲ್ಲಿ ವ್ಯಾಸಂಗ ಮಾಡುತ್ತಿರುವ ರಾಜ್ಯದ ವಿದ್ಯಾರ್ಥಿಗಳು, ಉದ್ಯೋಗ ಮಾಡುವವರಿಗೆ ಬೆಂಗಳೂರಿನ ಸೆಂಟ್ರಲ್‌ ಕಾಲೇಜ್‌ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಲಸಿಕೆ ಅಭಿಯಾನವು ಶುಕ್ರವಾರ (ಜೂನ್‌ 11)ದ ವರೆಗೂ ನಡೆಯಲಿದೆ ಎಂದು ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ತಿಳಿಸಿದ್ದಾರೆ.

    ಈ ಬಗ್ಗೆ ಮಂಗಳವಾರ ಹೇಳಿಕೆ ನೀಡಿರುವ ಆವರು, ಕಳೆದ ಮಂಗಳವಾರದಿಂದ ಅರಂಭಿಸಲಾದ ಈ ವ್ಯಾಕ್ಸಿನೇಷನ್‌ ಕ್ಯಾಂಪ್‌ನಲ್ಲಿ ಈವರೆಗೆ 1,200 ಜನರಿಗೆ ಕೋವಿಶೀಲ್ಡ್ ಲಸಿಕೆ ನೀಡಲಾಗಿದೆ. ಇಂದು ಕೂಡ 50 ಜನ ಬಂದು ಲಸಿಕೆ ಪಡೆದಿದ್ದಾರೆ. ಶುಕ್ರವಾರ ಸಂಜೆಯೊಳಗೆ ವಿದೇಶಕ್ಕೆ ಹೋಗುವವರು ಇದ್ದರೆ ಬಂದು ಲಸಿಕೆ ತೆಗೆದುಕೊಳ್ಳಬಹುದು ಎಂದರು ಅವರು ಕೋರಿದ್ದಾರೆ.

    ಆದ್ಯತಾ ಗುಂಪಿನ ಕೋಟಾದಲ್ಲಿ ಇವರೆಲ್ಲರಿಗೂ ಲಸಿಕೆ ಕೊಡಲಾಗಿದ್ದು, 2ನೇ ಡೋಸ್‌ ನೀಡುವ ದಿನಾಂಕವನ್ನು ಶೀಘ್ರವೇ ತಿಳಿಸಲಾಗುವುದು. ಇವರೆಗೆ ನೀಡಲಾಗುವ ಎರಡನೇ ಡೋಸ್‌ ಅವಧಿಯನ್ನು 4ರಿಂದ 6 ವಾರಗಳಿಗೆ ಕುಗ್ಗಿಸುವ ರಾಜ್ಯದ ಕ್ರಮಕ್ಕೆ ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿದೆ. ಈ ಬಗ್ಗೆ ರಾಜ್ಯ ಸರಕಾರ ಪತ್ರ ಬರೆದು ಮನವಿ ಮಾಡಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.

    ಜಿಲ್ಲೆಗಳ್ಲಲೂ ಇವರಿಗೆ ಲಸಿಕೆ:

    ಬೆಂಗಳೂರಿನಲ್ಲಿ ಈ ಲಸಿಕೆ ಶಿಬಿರ ಯಶಸ್ವಿಯಾದ ಬೆನ್ನಲ್ಲೇ ಎಲ್ಲ ಜಿಲ್ಲೆಗಳಲ್ಲಿಯೂ ವಿದೇಶಗಳಲ್ಲಿ ವ್ಯಾಸಂಗ ಮತ್ತು ಉದ್ಯೋಗ ಮಾಡುವ ಕನ್ನಡಿಗರಿಗೆ ಇದೇ ರೀತಿಯ ಲಸಿಕೆ ಅಭಿಯಾನ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಡಿಸಿಎಂ ತಿಳಿಸಿದ್ದಾರೆ

    ಪಿಕ್ಸ್4ಕಾಸ್ ನಿಂದ ಕಟ್ಟಡ ಕಾರ್ಮಿಕರಿಗೆಸಹಾಯಹಸ್ತ

    ವನ್ಯಜೀವಿ ಛಾಯಾಗ್ರಾಹಕರ ಸಂಘಟನೆ ಪಿಕ್ಸ್4ಕಾಸ್ ಬೆಂಗಳೂರಿನಲ್ಲಿ ಕೋವಿಡ್-19ರಿಂದ ಸಂಕಷ್ಟಕ್ಕೆ ಸಿಲುಕಿದವರು ಹಾಗೂ ಕಟ್ಟಡ ಕಾರ್ಮಿಕರಿಗೆ ಆಹಾರದ ಪ್ಯಾಕೆಟ್ ಗಳನ್ನು ವಿತರಿಸಿ ನೆರವು ನೀಡಿದೆ. ಬೆಂಗಳೂರು, ಹೈದರಾಬಾದ್ ಮತ್ತು ಕೊಯಮತ್ತೂರುಗಳಲ್ಲಿ ಇಲ್ಲಿಯವರೆಗೆ 28000 ಆಹಾರದ ಪ್ಯಾಕೆಟ್ ಗಳನ್ನು ವಿತರಿಸಿದ್ದು ಲಾಕ್ ಡೌನ್ ಅಂತ್ಯವಾಗುವವರೆಗೂ ಈ ಉಪಕ್ರಮ ಮುಂದುವರಿಸಲಿದೆ.

    ಈ ಉಪಕ್ರಮದ ಕುರಿತು ಪಿಕ್ಸ್4ಕಾಸ್ ಅಧ್ಯಕ್ಷ ಮೋಹನ್ ಥಾಮಸ್, “ ವನ್ಯಜೀವಿ ಸಂರಕ್ಷಣೆಗೆ ಶ್ರಮಿಸುವ ಸಿಬ್ಬಂದಿ ಹಾಗೂ ಸಂರಕ್ಷಣೆಯಲ್ಲಿ ತೊಡಗಿರುವ ಇತರರಿಗೆ ನೆರವಾಗುವ ಉದ್ದೇಶದಿಂದ ಪ್ರಾರಂಭವಾದ ಪಿಕ್ಸ್4ಕಾಸ್ ಸಂಸ್ಥೆಯು ವಿಶ್ವವನ್ನು ಕಾಡುತ್ತಿರುವ ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಸಮಾಜದ ಅಸಹಾಯಕ, ದುರ್ಬಲ ವರ್ಗಗಳಿಗೆ ನೆರವಾಗುವ ನಿರ್ಧಾರ ತಳೆದು ಬೆಂಗಳೂರು ಹಾಗೂ ಇತರೆ ನಗರಗಳ ಸರ್ಕಾರದ ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳು ಹಾಗೂ ಅವರ ಕಡೆಯ ಬಂಧುಗಳು ಹಾಗೂ ವಲಸಿಗ ಕಟ್ಟಡ ಕಾರ್ಮಿಕರಿಗೆ ಆಹಾರದ ಪ್ಯಾಕೆಟ್ ಗಳನ್ನು ವಿತರಿಸುವ ಮೂಲಕ ನೆರವಾಗಿದೆ.

    ನಮ್ಮ ಛಾಯಾಚಿತ್ರಗಳ ಮಾರಾಟ ಹಾಗೂ ವನ್ಯಜೀವಿ ಛಾಯಾಗ್ರಾಹಕರ ಸ್ನೇಹಿತರು ಮತ್ತು ಬಂಧುಬಳಗ ನೀಡಿದ ದೇಣಿಗೆ ಸುಮಾರು 22 ಲಕ್ಷ ರೂ. ಸಂಗ್ರಹವಾಗಿದ್ದು ಈ ನಿಧಿಯ ಸದ್ಬಳಕೆ ಮಾಡಿ ಸಮಾಜದ ಸಂಕಷ್ಟಗಳಿಗೆ ಸದಾ ಮಿಡಿಯುವುದು ನಮ್ಮ ಗುರಿಯಾಗಿದೆ” ಎಂದರು.

    ಪಿಕ್ಸ್4ಕಾಸ್ ಮುಂಬೈ, ಬೆಂಗಳೂರು, ಕೊಲ್ಕತಾ, ಚೆನ್ನೈ, ಕೊಯಮತ್ತೂರು, ದೆಹಲಿ ಅಲ್ಲದೆ ದೋಹಾ, ಸಿಂಗಪೂರ್ ದೇಶಗಳಲ್ಲಿರುವ 30ಕ್ಕೂ ಹೆಚ್ಚು ಛಾಯಾಗ್ರಾಹಕರ ನೆರವಿನೊಂದಿಗೆ ಮಾರ್ಚ್ 2020ರಂದು ಪ್ರಾರಂಭವಾಯಿತು. ಜೀವನದ ವಿವಿಧ ಕ್ಷೇತ್ರಗಳಲ್ಲಿನ ಸಮಾನ ಮನಸ್ಕ ಛಾಯಾಗ್ರಾಹಕರ ಗುಂಪು `ಪಿಕ್ಸ್4ಕಾಸ್’ ಹೆಸರಿನಲ್ಲಿ ಒಗ್ಗೂಡಿದೆ. ನಮ್ಮ ಉದ್ದೇಶವು ಪರಿಸರ ಸಂರಕ್ಷಣೆ ಹಾಗೂ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವುದಾಗಿದೆ. ಈ ಸಂಸ್ಥೆಯ ಸದಸ್ಯರ ಛಾಯಾಚಿತ್ರಗಳನ್ನು ಮಾರಾಟ ಮಾಡಲು ಹಾಗೂ ನಿಧಿ ಸಂಗ್ರಹಿಸಲು ಡಿಜಿಟಲ್ ಪ್ಲಾಟ್ ಫಾರಂ ಸೃಷ್ಟಿಸಲಾಗಿದೆ. ಈ ಇಡೀ ಪ್ರಕ್ರಿಯೆಯು ಮುದ್ರಣ ವೆಚ್ಚಗಳು ಹಾಗೂ ತೆರಿಗೆಗಳಿಂದ ಮುಕ್ತವಾಗಿದ್ದು ಈ ನಿಶ್ಯಬ್ದವಾಗಿ ಕಾರ್ಯ ನಿರ್ವಹಿಸುವ ನಾಯಕರಿಗೆ ನೆರವಾಗುತ್ತವೆ ಮತ್ತು ಸಂರಕ್ಷಣೆಯ ಪ್ರಯತ್ನಗಳಿಗೆ ಮತ್ತಷ್ಟು ನೆರವಾಗುತ್ತದೆ.

    ಪಿಕ್ಸ್4ಕಾಸ್ ವೆಬ್ ಸೈಟ್ ನಲ್ಲಿ ಹಲವಾರು ವರ್ಣರಂಜಿತ ಮತ್ತು ಅಸಾಧಾರಣ ವನ್ಯಜೀವಿಗಳ ಛಾಯಾಚಿತ್ರಗಳಿದ್ದು ಜನರು ಭೇಟಿ ನೀಡಿ ಈ ಚಿತ್ರಗಳನ್ನು ಕೊಳ್ಳಬಹುದು. ಪ್ರಸ್ತುತ ಸನ್ನಿವೇಶದಲ್ಲಿ ಪಿಕ್ಸ್4ಕಾಸ್ ಹೈದರಾಬಾದ್, ಬೆಂಗಳೂರು ಮತ್ತು ಕೊಯಮತ್ತೂರುಗಳಲ್ಲಿ ಆಹಾರದ ಪ್ಯಾಕೆಟ್ ಗಳನ್ನು ವಿತರಿಸಿತು. ಮೇ 10, 2021ರಂದು ಪ್ರಾರಂಭಿಸಿ ಇಲ್ಲಿಯವರೆಗೂ 28000 ಆಹಾರದ ಪಾಕೆಟ್ ಗಳನ್ನು ವಿತರಿಸಿದೆ. ಲಾಕ್ ಡೌನ್ ತೆರವಾಗುವವರೆಗೂ ಪಿಕ್ಸ್4ಕಾಸ್ ಇದನ್ನು ಮುಂದುವರಿಸಲಿದೆ.

    ಲಸಿಕೆ ಪಡೆಯುವ ಮೊದಲು ಅಥವಾ ನಂತರ ಪ್ರತಿಕಾಯ ಪರೀಕ್ಷೆಗಳನ್ನು ಮಾಡಿಸುವ ಪ್ರವೃತ್ತಿ ಬೇಡ

    • ಅಲರ್ಜಿ ಹೊಂದಿರುವ ಜನರು ಲಸಿಕೆ ಪಡೆಯಬಹುದೇ?
    • ಗರ್ಭಿಣಿಯರು ಕೋವಿಡ್-19 ಲಸಿಕೆಯನ್ನು ತೆಗೆದುಕೊಳ್ಳಬಹುದೇ? ಹಾಲುಣಿಸುವ ತಾಯಂದಿರ ಕಥೆ ಏನು?
    • ಲಸಿಕೆ ಪಡೆದ ನಂತರ ನನ್ನ ದೇಹದಲ್ಲಿ ಸಾಕಷ್ಟು ಪ್ರತಿಕಾಯಗಳು ಉತ್ಪಾದನೆಯಾಗುತ್ತವೆಯೇ?
    • ಲಸಿಕೆಯ ಡೋಸ್‌ಗಳನ್ನು ತೆಗೆದುಕೊಂಡ ನಂತರ ರಕ್ತ ಹೆಪ್ಪುಗಟ್ಟುವುದು ಸಾಮಾನ್ಯವೇ?
    • ನಾನು ಕೋವಿಡ್ ಸೋಂಕಿಗೆ ಒಳಗಾದರೆ ಎಷ್ಟು ದಿನಗಳ ನಂತರ ನಾನು ಲಸಿಕೆ ಪಡೆಯಬಹುದು.

    ಇವು ಕೋವಿಡ್ ಲಸಿಕೆಯ ಬಗ್ಗೆ ಜನರು ಆಗಾಗ್ಗೆ ಕೇಳುವ ಕೆಲವು ಪ್ರಶ್ನೆಗಳು. ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ. ವಿ.ಕೆ. ಪಾಲ್ ಮತ್ತು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಅವರು ಜೂನ್ 6ರ ಭಾನುವಾರ ಡಿಡಿ ನ್ಯೂಸ್‌ ವಾಹಿನಿಯ ವಿಶೇಷ ಕಾರ್ಯಕ್ರಮದಲ್ಲಿ ಕೋವಿಡ್-19 ಲಸಿಕೆಗಳ ಬಗ್ಗೆ ಜನರು ಹೊಂದಿರುವ ವಿವಿಧ ಅನುಮಾನಗಳನ್ನು ಪರಿಹರಿಸಿದ್ದಾರೆ.ಅವುಗಳ ಸಾರಸಂಗ್ರಹ ವನ್ನು ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪ್ರಕಟಿಸಿದ್ದು ಅದರ ಆಯ್ದ ಭಾಗ ಇಲ್ಲಿದೆ.


    ಡಾ. ಪಾಲ್: ಯಾರಿಗಾದರೂ ಗಂಭೀರವಾದ ಅಲರ್ಜಿ ಸಮಸ್ಯೆ ಇದ್ದರೆ, ಅಂಥವರು ವೈದ್ಯಕೀಯ ಸಲಹೆಯ ನಂತರವೇ ಕೋವಿಡ್ ಲಸಿಕೆಯನ್ನು ತೆಗೆದುಕೊಳ್ಳಬೇಕು. ಆದರೆ, ಇದು ಸಾಮಾನ್ಯ ಶೀತ, ಚರ್ಮದ ಅಲರ್ಜಿ ಮುಂತಾದ ಸಣ್ಣ ಅಲರ್ಜಿಗಳ ಪ್ರಶ್ನೆಯಾಗಿದ್ದರೆ, ಲಸಿಕೆಯನ್ನು ತೆಗೆದುಕೊಳ್ಳಲು ಹಿಂಜರಿಯಬಾರದು.

    ಡಾ. ಗುಲೇರಿಯಾ: ಅಲರ್ಜಿಗಾಗಿ ಮೊದಲಿನಿಂದಲೂ ಔಷಧ ತೆಗೆದುಕೊಳ್ಳುತ್ತಿರುವವರು ಅವುಗಳನ್ನು ನಿಲ್ಲಿಸಬಾರದು, ಅವರು ತಮ್ಮನ್ನು ಲಸಿಕೆ ಪಡೆಯುವಾಗ ನಿಯಮಿತವಾಗಿ ಔಷಧ ಸೇವನೆ ಮುಂದುವರಿಸಬೇಕು. ಲಸಿಕೆಯಿಂದಾಗಿ ಉದ್ಭವಿಸುವ ಅಲರ್ಜಿಗಳ ನಿರ್ವಹಣೆಗಾಗಿ ಎಲ್ಲಾ ಲಸಿಕೆ ಸ್ಥಳಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಆದ್ದರಿಂದ, ನೀವು ತೀವ್ರ ಅಲರ್ಜಿಯನ್ನು ಹೊಂದಿದ್ದರೂ, ಔಷಧ ತೆಗೆದುಕೊಳ್ಳುವುದನ್ನು ಮುಂದುವರಿಸಿ ಮತ್ತು ಹೋಗಿ ಲಸಿಕೆ ಹಾಕಿಸಿಕೊಳ್ಳಿ ಎಂಬುದು ನಮ್ಮ ಸಲಹೆ.

    ಡಾ. ಪಾಲ್: ನಮ್ಮ ಪ್ರಸ್ತುತ ಮಾರ್ಗಸೂಚಿಗಳ ಪ್ರಕಾರ ಗರ್ಭಿಣಿಯರಿಗೆ ಲಸಿಕೆನೀಡಬಾರದು. ಏಕೆಂದರೆ, ಲಸಿಕೆ ಪ್ರಯೋಗಗಳಿಂದ ಪ್ರಸ್ತುತ ಲಭ್ಯವಿರುವ ದತ್ತಾಂಶದ ಆಧಾರದ ಮೇಲೆ ಗರ್ಭಿಣಿಯರಿಗೆ ಲಸಿಕೆಯನ್ನು ಶಿಫಾರಸು ಮಾಡಬಹುದೇ ಎಂಬ ಬಗ್ಗೆ ವೈದ್ಯರು ಮತ್ತು ವೈಜ್ಞಾನಿಕ ಸಮುದಾಯ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಆದಾಗ್ಯೂ, ಹೊಸ ವೈಜ್ಞಾನಿಕ ಮಾಹಿತಿಗಳ ಆಧಾರದ ಮೇಲೆ ಕೆಲವೇ ದಿನಗಳಲ್ಲಿ ಭಾರತ ಸರಕಾರವು ಈ ಬಗ್ಗೆ ಸ್ಪಷ್ಟತೆ ಒದಗಿಸಲಿದೆ.

    ಅನೇಕ ಕೋವಿಡ್-19 ಲಸಿಕೆಗಳು ಗರ್ಭಿಣಿಯರಿಗೆ ಸುರಕ್ಷಿತವೆಂದು ಕಂಡುಬಂದಿವೆ; ನಮ್ಮ ಎರಡು ಲಸಿಕೆಗಳಿಗೂ ಈ ಮಾರ್ಗವನ್ನು ಮುಕ್ತಗೊಳಿಸಬೇಕು ಎಂಬುದು ನಮ್ಮ ಭಾವನೆ. ನಾವು ಈ ಬಗ್ಗೆ ಸ್ವಲ್ಪ ತಾಳ್ಮೆಯಿಂದಿರಿ ಎಂದು ವಿನಂತಿಸುತ್ತೇವೆ. ಏಕೆಂದರೆ, ಈಗಿನ ಲಸಿಕೆಗಳನ್ನು ಬಹಳ ಕಡಿಮೆ ಅವಧಿಯಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಸುರಕ್ಷತಾ ಕಾಳಜಿಗಳಿಂದಾಗಿ ಗರ್ಭಿಣಿಯರನ್ನು ಆರಂಭಿಕ ಪ್ರಯೋಗಗಳಲ್ಲಿ ಬಳಸಿಕೊಂಡಿಲ್ಲ.

    ಡಾ. ಗುಲೇರಿಯಾ: ಅನೇಕ ದೇಶಗಳು ಗರ್ಭಿಣಿಯರಿಗೆ ಲಸಿಕೆಯನ್ನು ಪ್ರಾರಂಭಿಸಿವೆ. ಅಮೆರಿಕದ ʻಎಫ್‌ಡಿಎʼ ಫೈಜರ್ ಮತ್ತು ಮಾಡರ್ನಾ ಲಸಿಕೆಗಳಿಗೆ ಅನುಮೋದನೆ ನೀಡಿದೆ. ಕೋವಾಕ್ಸಿನ್ ಮತ್ತು ಕೋವಿಶೀಲ್ಡ್‌ಗೆ ಸಂಬಂಧಿಸಿದ ದತ್ತಾಂಶವೂ ಶೀಘ್ರದಲ್ಲೇ ಹೊರಬೀಳಲಿದೆ. ಈಗಾಗಲೇ ಕೆಲವೊಂದು ದತ್ತಾಂಶಗಳು ಲಭ್ಯವಿದ್ದು, ಕೆಲವೇ ದಿನಗಳಲ್ಲಿ ಭಾರತದಲ್ಲಿಯೂ ಗರ್ಭಿಣಿಯರಿಗೆ ಲಸಿಕೆ ಹಾಕಲು ಅಗತ್ಯವಿರುವ ಸಂಪೂರ್ಣ ದತ್ತಾಂಶವನ್ನು ಪಡೆಯಲು ಮತ್ತು ಅನುಮೋದಿಸಲು ಸಾಧ್ಯವಾಗಲಿದೆ ಎಂದು ನಾವು ಆಶಿಸುತ್ತೇವೆ.

    ಡಾ. ಪಾಲ್: ಈ ಬಗ್ಗೆ ಒಂದು ಸ್ಪಷ್ಟ ಮಾರ್ಗಸೂಚಿ ಇದೆ, ಹಾಲುಣಿಸುವ ತಾಯಂದಿರಿಗೆ ಲಸಿಕೆಯು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಯಾವುದೇ ಭಯದ ಅಗತ್ಯವಿಲ್ಲ. ಲಸಿಕೆಯ ಮೊದಲು ಅಥವಾ ನಂತರ ಸ್ತನ್ಯಪಾನವನ್ನು ನಿಲ್ಲಿಸುವ ಅಥವಾ ವಿರಮಿಸುವ ಅಗತ್ಯವಿಲ್ಲ.

    ಡಾ. ಗುಲೇರಿಯಾ: ಲಸಿಕೆಗಳ ಪರಿಣಾಮಕಾರಿತ್ವವನ್ನು ನಾವು ಕೇವಲ ಪ್ರತಿಕಾಯಗಳು- ಆಂಟಿ ಬಾಡೀಸ್- ಉತ್ಪತ್ತಿಯಾಗುವ ಪ್ರಮಾಣದಿಂದ ಮಾತ್ರ ನಿರ್ಣಯಿಸಬಾರದು ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಲಸಿಕೆಗಳು ಅನೇಕ ರೀತಿಯ ರಕ್ಷಣೆಯನ್ನು ನೀಡುತ್ತವೆ.ಪ್ರತಿಕಾಯಗಳ ಮೂಲಕವಷ್ಟೆ ಅಲ್ಲದೆ ಜೀವಕೋಶ-ಮಧ್ಯಸ್ಥಿಕೆಯ ರೋಗನಿರೋಧಕತೆ ಮತ್ತು ಸ್ಮರಣೆ ಜೀವಕೋಶಗಳ ಮೂಲಕ ದೇಹಕ್ಕೆ ರಕ್ಷಣೆ ಒದಗಿಸುತ್ತವೆ. (ಇದರಿಂದ ನಾವು ಸೋಂಕಿಗೆ ಒಳಗಾದಾಗ ಹೆಚ್ಚು ಪ್ರತಿಕಾಯಗಳು ಉತ್ಪಾದನೆಯಾಗುತ್ತವೆ)

    ಇಲ್ಲಿಯವರೆಗೆ ಲಭ್ಯವಿರುವ ದತ್ತಾಂಶವು ಎಲ್ಲಾ ಲಸಿಕೆಗಳ – ಕೋವಾಕ್ಸಿನ್, ಕೋವಿಶೀಲ್ಡ್ ಅಥವಾ ಸ್ಪುಟ್ನಿಕ್ ವಿ – ಪರಿಣಾಮವು ಹೆಚ್ಚು ಕಡಿಮೆ ಸಮಾನವಾಗಿದೆ ಎಂದು ಸ್ಪಷ್ಟವಾಗಿ ತೋರಿಸುತ್ತದೆ. ಆದ್ದರಿಂದ ಈ ಲಸಿಕೆಯನ್ನು ತೆಗೆದುಕೊಳ್ಳಿ ಅಥವಾ ಆ ಲಸಿಕೆಯನ್ನು ತೆಗೆದುಕೊಳ್ಳಿ ಎಂದು ನಾವು ಹೇಳಿದರೆ ತಪ್ಪಾಗುತ್ತದೆ. ನಿಮ್ಮ ಪ್ರದೇಶದಲ್ಲಿ ಯಾವ ಲಸಿಕೆ ಲಭ್ಯವಿದ್ದರೂ ದಯವಿಟ್ಟು ಅದನ್ನು ತೆಗೆದುಕೊಳ್ಳಿ. ಇದರಿಂದ ನೀವು ಮತ್ತು ನಿಮ್ಮ ಕುಟುಂಬ ಸುರಕ್ಷಿತವಾಗಿರುತ್ತೀರಿ.

    ಡಾ. ಪಾಲ್: ಲಸಿಕೆಯ ನಂತರ ಪ್ರತಿಕಾಯ ಪರೀಕ್ಷೆಯನ್ನು ಮಾಡಿಸಲು ಕೆಲವರು ಯೋಚಿಸುತ್ತಿದ್ದಾರೆ. ಆದರೆ ಕೇವಲ ಪ್ರತಿಕಾಯಗಳು ಮಾತ್ರ ವ್ಯಕ್ತಿಯ ರೋಗನಿರೋಧಕತೆಯನ್ನು ಸೂಚಿಸುವುದಿಲ್ಲ. ಈ ಕಾರಣಕ್ಕಾಗಿ ಇಂತಹ ಪರೀಕ್ಷೆ ಮಾಡಿಸುವ ಅಗತ್ಯವಿಲ್ಲ. ಅಲ್ಲದೆ, ಟಿ-ಕೋಶಗಳು ಅಥವಾ ಸ್ಮರಣೆ ಕೋಶಗಳೂ ಸಹ ದೇಹದ ಪ್ರತಿರೋಧಕ ಶಕ್ತಿಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ನಾವು ಲಸಿಕೆಯನ್ನು ಪಡೆದಾಗ ಇವು ಕೆಲವು ಬದಲಾವಣೆಗಳಿಗೆ ಒಳಗಾಗುತ್ತವೆ, ಅವು ಬಲಗೊಳ್ಳುತ್ತವೆ ಮತ್ತು ಪ್ರತಿರೋಧ ಶಕ್ತಿಯನ್ನು ಪಡೆಯುತ್ತವೆ. ಆದರೆ, ಪ್ರತಿಕಾಯ ಪರೀಕ್ಷೆ ವೇಳೆ ಟಿ-ಜೀವಕೋಶಗಳು ಪತ್ತೆವಾಗುವುದಿಲ್ಲ. ಏಕೆಂದರೆ ಇವು ಇರುವುದು ಮೂಳೆ ಮಜ್ಜೆಯಲ್ಲಿ. ಆದ್ದರಿಂದ, ಲಸಿಕೆ ಪಡೆಯುವ ಮೊದಲು ಅಥವಾ ನಂತರ ಪ್ರತಿಕಾಯ ಪರೀಕ್ಷೆಗಳನ್ನು ಮಾಡಿಸುವ ಪ್ರವೃತ್ತಿ ಬೇಡ. ಲಭ್ಯವಿರುವ ಲಸಿಕೆಯನ್ನು ತೆಗೆದುಕೊಳ್ಳಿ, ಸರಿಯಾದ ಸಮಯದಲ್ಲಿ ಎರಡೂ ಡೋಸ್‌ಗಳನ್ನು ತೆಗೆದುಕೊಳ್ಳಿ ಮತ್ತು ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸಿ ಎಂಬುದು ನಮ್ಮ ಮನವಿ. ಅಷ್ಟೇ ಅಲ್ಲ, ಕೋವಿಡ್-19 ಸೋಂಕಿಗೆ ಒಳಗಾಗದವರಿಗೆ ಲಸಿಕೆಯ ಅಗತ್ಯವಿಲ್ಲ ಎಂಬ ತಪ್ಪು ಕಲ್ಪನೆಯಿಂದಲೂ ಜನರು ಹೊರಬರಬೇಕು.

    ಡಾ. ಪಾಲ್: ವಿಶೇಷವಾಗಿ ʻಆಸ್ಟ್ರಾ-ಜೆನೆಕಾʼ ಲಸಿಕೆಗೆ ಸಂಬಂಧಿಸಿದಂತೆ ಇಂತಹ ಸಮಸ್ಯೆಯ ಕೆಲವು ಪ್ರಕರಣಗಳು ಗಮನ ಸೆಳೆದಿವೆ. ಈ ಸಮಸ್ಯೆ ಯುರೋಪಿನಲ್ಲಿ, ಅದರಲ್ಲೂ ಕೊಂಚ ಮಟ್ಟಿಗೆ ಯುವ ಜನರಲ್ಲಿ ಕಾಣಿಸಿಕೊಂಡಿದೆ. ಅಲ್ಲಿ ಅವರ ಜೀವನಶೈಲಿ, ದೇಹ ಮತ್ತು ಆನುವಂಶಿಕ ರಚನೆ ಇದಕ್ಕೆ ಕಾರಣ. ಆದರೆ, ನಾವು ಭಾರತದಲ್ಲಿ ಈ ದತ್ತಾಂಶವನ್ನು ವ್ಯವಸ್ಥಿತವಾಗಿ ಪರಿಶೀಲಿಸಿದ್ದೇವೆ. ಅಂತಹ ರಕ್ತ ಹೆಪ್ಪುಗಟ್ಟುವ ಘಟನೆಗಳು ಇಲ್ಲಿ ಬಹುತೇಕ ನಗಣ್ಯವಾಗಿವೆ. ಅದರ ಬಗ್ಗೆ ಚಿಂತಿಸುವ ಅಗತ್ಯವೇ ಇಲ್ಲವೆಂಬ ಭರವಸೆಯನ್ನು ನಾನು ನಿಮಗೆ ನೀಡಲು ಬಯಸುತ್ತೇನೆ. ಯುರೋಪಿಯನ್ ದೇಶಗಳಲ್ಲಿ, ಈ ಸಮಸ್ಯೆ ನಮ್ಮ ದೇಶಕ್ಕಿಂತಲೂ ಸುಮಾರು 30 ಪಟ್ಟು ಹೆಚ್ಚಾಗಿರುವುದು ಕಂಡುಬಂದಿದೆ.

    ಡಾ. ಗುಲೇರಿಯಾ: ಅಮೆರಿಕ ಮತ್ತು ಯುರೋಪಿಯನ್ ಜನರಿಗೆ ಹೋಲಿಸಿದರೆ ಶಸ್ತ್ರಚಿಕಿತ್ಸೆಯ ನಂತರವೂ ಭಾರತೀಯರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಕಡಿಮೆ ಎಂದು ಈ ಮೊದಲೇ ಕಂಡು ಬಂದಿದೆ. ವ್ಯಾಕ್ಸಿನ್ ಪ್ರೇರಿತ ʻಥ್ರಾಂಬೋಸಿಸ್ʼ ಅಥವಾ ʻಥ್ರಾಂಬೋಸೈಟೊಪೆನಿಯಾʼ ಎಂದು ಹೆಸರಿಸಲಾದ ಈ ಅಡ್ಡ ಪರಿಣಾಮವು ಭಾರತದಲ್ಲಿ ಬಹಳ ವಿರಳವಾಗಿದ್ದು, ಭಾರತದಲ್ಲಿ ಇದರ ಪ್ರಮಾಣ ಯುರೋಪ್‌ಗಿಂತ ಕಡಿಮೆ ಪ್ರಮಾಣದಲ್ಲಿ ಕಂಡುಬಂದಿದೆ. ಆದ್ದರಿಂದ, ಈ ಬಗ್ಗೆ ಭಯಪಡುವ ಅಗತ್ಯವಿಲ್ಲ. ಇದಕ್ಕಾಗಿ ಚಿಕಿತ್ಸೆಗಳು ಸಹ ಲಭ್ಯವಿದ್ದು, ಬೇಗನೆ ಸಮಸ್ಯೆ ಪತ್ತೆ ಮಾಡಿದರೆ ಇದರ ಮೊರೆ ಹೋಗಲು ಅವಕಾಶವಿದೆ.

    ಡಾ. ಗುಲೇರಿಯಾ: ಕೋವಿಡ್-19 ಸೋಂಕಿಗೆ ಒಳಗಾದ ವ್ಯಕ್ತಿಯು ಚೇತರಿಸಿಕೊಂಡ ದಿನದಿಂದ ಮೂರು ತಿಂಗಳ ಬಳಿಕ ಲಸಿಕೆಯನ್ನು ತೆಗೆದುಕೊಳ್ಳಬಹುದು ಎಂದು ಇತ್ತೀಚಿನ ಮಾರ್ಗಸೂಚಿಗಳು ಸ್ಪಷ್ಟವಾಗಿ ಹೇಳುತ್ತವೆ. ಹೀಗೆ ಮಾಡುವುದರಿಂದ ದೇಹವು ಬಲವಾದ ರೋಗನಿರೋಧಕಶಕ್ತಿಯನ್ನು ಅಭಿವೃದ್ಧಿಪಡಿಸಲು ಸಹಾಯಕವಾಗುತ್ತದೆ ಮತ್ತು ಲಸಿಕೆಯ ಪರಿಣಾಮವು ಉತ್ತಮವಾಗಿರುತ್ತದೆ.

    ನಮ್ಮ ಲಸಿಕೆಗಳು ಇದುವರೆಗೂ ಭಾರತದಲ್ಲಿ ಕಂಡುಬರುವ ರೂಪಾಂತರಿ ವೈರಾಣುವಿನ ವಿರುದ್ಧ ಪರಿಣಾಮಕಾರಿಯಾಗಿವೆ ಎಂದು ತಜ್ಞರಾದ ಡಾ. ಪಾಲ್ ಮತ್ತು ಡಾ. ಗುಲೇರಿಯಾ ಇಬ್ಬರೂ ಪ್ರತಿಪಾದಿಸಿದರು ಹಾಗೂ ಭರವಸೆ ನೀಡಿದರು. ಲಸಿಕೆಗಳನ್ನು ತೆಗೆದುಕೊಂಡ ನಂತರ ನಮ್ಮ ರೋಗನಿರೋಧಕ ವ್ಯವಸ್ಥೆ ದುರ್ಬಲವಾಗುತ್ತದೆ ಅಥವಾ ಲಸಿಕೆಗಳನ್ನು ತೆಗೆದುಕೊಂಡ ನಂತರ ಜನರು ಸಾಯುತ್ತಾರೆ ಎಂಬ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ವದಂತಿಗಳನ್ನು ಅವರು ಸುಳ್ಳು ಮತ್ತು ಆಧಾರರಹಿತ ಎಂದು ತಳ್ಳಿಹಾಕಿದರು. ಇದು ಗ್ರಾಮೀಣ ಪ್ರದೇಶಗಳು ಮತ್ತು ದೂರ ಪ್ರದೇಶಗಳಲ್ಲಿರುವ ಕೆಲವರು ಹೊಂದಿರುವ ತಪ್ಪು ನಂಬಿಕೆ ಎಂದು ಹೇಳಿದರು. (ವರದಿ ಕೃಪೆ: ಪಿಐಬಿ)


    error: Content is protected !!