24.6 C
Karnataka
Monday, May 20, 2024

    Lata Mangeshkar :ಸೌಜನ್ಯ, ಸರಳತೆ ಮತ್ತು  ಸವಿನಯದ ಪ್ರತಿರೂಪ

    Must read

    ಎಂಟು ದಶಕಗಳಿಂದ ಭಾರತೀಯರಿಗೆ ಸುಮಧುರ ಗಾಯನವನ್ನು ನೀಡಿದ ಗಾನ ಕೋಗಿಲೆ ಇಂದು ಹಾಡು ನಿಲ್ಲಿಸಿದೆ. ಲತಾ ಮಂಗೇಶ್ಕರ್ ಅವರ ನಿಧನದಿಂದ ಭಾರತೀಯ ಸಂಗೀತ ಕ್ಷೇತ್ರಕ್ಕೆ ದೊಡ್ಡ ನಷ್ಟ. ಕೇಳುಗರಿಗೆ ಮತ್ತು ನೋಡುವವರಿಗೆ  ಬಾಲಿವುಡ್ ನಟಿಯರೇ ಹಾಡುತ್ತಿರಬಹುದೆಂಬ  ಭ್ರಮೆ ಹುಟ್ಟಿಸುವಂತಹ ಧ್ವನಿ ಅವರದು.  ಅಷ್ಟೊಂದು ವೈವಿಧ್ಯತೆಯಲ್ಲಿ ಹಾಡುವ ಲತಾಜೀಗೆ ಮತ್ತೊಬ್ಬರು ಸಾಟಿ ಇಲ್ಲ.

    ಸವಿನಯದ ಪ್ರತಿರೂಪ

    ಸೌಜನ್ಯ, ಸರಳತೆ ಮತ್ತು  ಸವಿನಯದ ಪ್ರತಿರೂಪವೇ ಲತಾ ಮಂಗೇಶ್ಕರ್. ಸದಾ ಬಿಳಿಯ ಉಡುಪಿನಲ್ಲಿ ಕಾಣಿಸಿಕೊಳ್ಳುವ ಈ ಸ್ವರ ಸಂಗೀತದ ಗಾನಕೋಗಿಲೆ, ಬಹಳ ಸಂಕೋಚದ ಸ್ವಭಾವದವರು.

    ಹಾಗೆಂದು ಜೀವನವೇನು ಸುಖದಲ್ಲಿ ಶುರುವಾಗಲಿಲ್ಲ.ತಂದೆ ದೀನಾನಾಥ್ ಅವರ  ಅಕಾಲಿಕ ಮರಣ ದಿಂದಾಗಿ 12 ವರ್ಷದ ಲತಾಗೆ ಮೂರು ಜನ ತಂಗಿಯರು ಮತ್ತು ಒಬ್ಬ ತಮ್ಮನನ್ನು ಸಾಕುವ ಜವಾಬ್ದಾರಿ ಹೆಗಲೇರಿ ಹೇಗಾದರೂ ಕಷ್ಟಪಟ್ಟು ಸಂಪಾದಿಸಲೇ ಬೇಕಾದ  ಪರಿಸ್ಥಿತಿ ಎದುರಾಯಿತು.

    ತಂದೆಯಿಂದ  ಶಾಸ್ತ್ರೀಯ ಸಂಗೀತದ ಪಾಠ
    ಮನೆಯವರೆಲ್ಲರಿಗೂ ಆಗಿತ್ತು.   ಜೀವನದ ದಾರಿಗೆ ಮತ್ತೇನು ಗೊತ್ತಿಲ್ಲದ ಲತಾ ಮರಾಠಿ ನಾಟಕದಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಅಭಿನಯಿಸಿ ಹಾಡುತ್ತಿದ್ದರು.ಈ ರೀತಿ ಸಣ್ಣ ಝರಿಯಾಗಿ ಶುರುವಾದದ್ದು ಇಂದು 25000ಕ್ಕೂ ಹೆಚ್ಚಿನ ಹಾಡುಗಳನ್ನು 36 ಭಾಷೆಗಳಲ್ಲಿ ಹಾಡಿ ಪ್ರಪಂಚದಲ್ಲಿ ಅತಿ ಹೆಚ್ಚು ಹಾಡುಗಳನ್ನು ಹಾಡಿರುವ  ಹಿನ್ನೆಲೆ ಗಾಯಕಿ ಎಂದು ಗಿನ್ನೀಸ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ಇದೆ.

    ಇವರು ಹಾಡಿದ ಚಾಂದಿನಿ ಚಿತ್ರದ ಮೇರೆ ಹಾಥೋ  ಮೆ ನೌ ನೌ ಚೂಡಿಯಾ  ಹೆ ಹಾಗೂ ಹಮ್ ಆಪ್ ಕೆ ಹೈ ಕೌನ್ ನ ದೀದೀ ತೇರಾ ದೇವರ್ ದೀವಾನಾ ಹಾಡುಗಳು ಎಷ್ಟು ಫೇಮಸ್ ಎಂದರೆ ಆ ಕಾಲದಲ್ಲಿ ಮದುವೆ ಮನೆಗಳಲ್ಲಿ ಈ ಹಾಡುಗಳು ಇರಲೇ ಬೇಕಿತ್ತು. ಉದಯೋನ್ಮುಖ ಗಾಯಕಿ ಪ್ರಿಯಾಂಕ ಪದಕಿ ಆ ಸಾಲನ್ನು ಇಲ್ಲಿ ನೆನಪಿಸಿದ್ದಾರೆ.

    ಒಮ್ಮೆ  ಹಾಡುವಾಗ ಲತಾಗೆ ನಟ ದಿಲೀಪ್ ಕುಮಾರ್ ಹೇಳಿದರಂತೆ ನಿಮ್ಮ ಹಿಂದಿ  ಉಚ್ಛಾರಣೆಯಲ್ಲಿ  ಮರಾಠಿ ಭಾಷೆಯ ಛಾಯೆ ಎದ್ದು ಕಾಣುತ್ತದೆ ಎಂದು. ಅಷ್ಟಕ್ಕೆ ಲತಾರವರು ಉರ್ದು ಮತ್ತು ಹಿಂದಿಯನ್ನು ಕಲಿತು ಎಲ್ಲರಿಗೂ ನಾನೂ ಸರಿಯಾದ ಹಿಂದಿಯಲ್ಲಿ  ಹಾಡಬಲ್ಲೆ ಎಂದು  ತೋರಿಸಿದರಂತೆ. ಹಿಂದುಸ್ಥಾನಿ ಸಂಗೀತವನ್ನು ಹಲವಾರು ಗುರುಗಳಿಂದ ಕಲಿತಿದ್ದಾರೆ.

    ನಮ್ಮ ದೇಶದ ಎಲ್ಲಾ ಭಾಗದಲ್ಲಿ  ಲತಾ ಅವರ ಅಭಿಮಾನಿಗಳಿದ್ದಾರೆ. .ಇಂದಿಗೂ ವಯಸ್ಸಾದವರೇ ಆಗಲಿ ಯುವಕರೇ ಆಗಲಿ  ಲತಾ ಹಾಡನ್ನು  ಕೇಳಿ ಸಂತೋಷಪಡುತ್ತಾರೆ. ನಮ್ಮ ದೇಶ ಒಂದೇ ಅಲ್ಲ ಪರದೇಶಗಳಲ್ಲಿರುವ ಭಾರತೀಯರನ್ನೂ ಭಾವನಾತ್ಮಕವಾಗಿ ಒಂದುಗೂಡಿಸುವುದರಲ್ಲಿ ಲತಾ ಹಾಡುಗಳು ಪ್ರಮುಖ ಪಾತ್ರ ವಹಿಸುತ್ತವೆ. 


    ಲಾಂಗ್ ಡ್ರೈವ್ ಹೋಗಬೇಕಾದರೆ ಮೊದಲು ಲತಾ ಹಾಡಿರುವ ಹಾಡುಗಳ ಪೆನ್ ಡ್ರೈವ್  ಅನ್ನು ತಮ್ಮ ಕಾರಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ಆಗ  ಎಲ್ಲರಿಗೂ ತಾಯಿನಾಡು ಭಾರತದೊಡನೆ ಸಂಪರ್ಕದಲ್ಲಿರುವೆವೇನೋ ಎಂಬಂತೆ  ಭಾಸವಾಗುತ್ತಿತ್ತಂತೆ. ಈಗ ಬಿಡಿ ಯಾವ ಹಾಡು ಬೇಕಾದರೂ ಆನ್ಲೈನ್ ನಲ್ಲಿ  ಸಿಗುತ್ತದೆ. ನನಗೆ ಈಗ  ಓ ಕೌನ್ ಥೀ ಚಿತ್ರದ ಲಗ್ ಜಾ ಗಲೆ ಹಾಡು ನೆನಪಿಗೆ ಬರುತ್ತಿದೆ. ಪ್ರಿಯಾಂಕ ಆ ಗೀತೆಯನ್ನು ಇಲ್ಲಿ ಗುಣ ಗುಣಸಿದ್ದಾರೆ.

    1962 ರಲ್ಲಿ ಭಾರತದೊಡನೆ ಚೀನಾ ಯುದ್ಧ ಮಾಡಿದ ಸಂದರ್ಭ. 1963ರ ಗಣರಾಜ್ಯೋತ್ಸವದಂದು ಲತಾಜಿ ನಮ್ಮ ಯೋಧರ ಬಲಿದಾನದ ಸ್ಮರಣಾರ್ಥ  ‘ಎ ಮೇರೆ ವತನ ಕೆ ಲೋಗೋ ಜ಼ರ  ಆಂಖೋ ಮೆ ಭರಲೋ ಪಾನಿ‘ ಎಂಬ ಹಾಡನ್ನು  ಹಾಡಿದರು.   ಆಗ ಅಲ್ಲಿ ಸೇರಿದ್ದ ಎಲ್ಲರ ಹಾಗೂ  ಪ್ರಧಾನಮಂತ್ರಿಗಳಾಗಿದ್ದ ನೆಹರೂ ಅವರ ಕಣ್ಣಲ್ಲಿ  ಸಹ ನೀರು ಬಂತಂತೆ.  ಈಗಲೂ ಆ ಹಾಡನ್ನು ಕೇಳಿದರೆ ಮೈ ಝುಮ್  ಎನ್ನುತ್ತದೆ. ಒಮ್ಮೆ ಕೇಳೋಣ ಬನ್ನಿ ಆ ಹಾಡಿನ ಎರಡು ಸಾಲುಗಳನ್ನು.

    ಆಲ್ಬರ್ಟ್ ಹಾಲ್ ಲಂಡನ್ನಲ್ಲಿ ಪ್ರಪ್ರಥಮ ಕನ್ಸರ್ಟ್ ಕೊಟ್ಟ ಶ್ರೇಯಸ್ಸು ಲತಾ ಮಂಗೇಶ್ವರ್ ಅವರ ಮುಡಿಗೇರಿದೆ. ಅಲ್ಲಿ ನೆಲೆಸಿದ್ದ 6000 ಪಾಕಿಸ್ತಾನಿಗಳು ಕನ್ಸರ್ಟ್ ಗೆ ಬಂದಿದ್ದರಂತೆ ! 1974ರಲ್ಲಿ ನಡೆದ ಈ ಉತ್ಸವಕ್ಕೆ ಕೆನಡಾ,ಅಮೇರಿಕಾ ಹಾಗೂ ಪ್ಯಾರಿಸ್ ನಿಂದ ಜನಗಳು ಬಂದಿದ್ದರಂತೆ. ಪ್ರಖ್ಯಾತಿ ಎಂದರೆ ಹೀಗೆ ಇರಬೇಕಲ್ಲವೇ?

    ಸಂಗೀತದಲ್ಲಿ ಮಾಡಿರುವ ಅದ್ವಿತೀಯ ಸೇವೆಗಾಗಿ ಭಾರತ ತನ್ನ  ಪ್ರಜೆಗಳಿಗೆ ಕೊಡುವ ಸರ್ವಶ್ರೇಷ್ಠ  ಭಾರತರತ್ನ  ಪ್ರಶಸ್ತಿಯನ್ನು ಲತಾಜಿ ಅವರಿಗೆ  2001ರಲ್ಲಿ ನಮ್ಮ ಘನ ಸರ್ಕಾರ ಕೊಟ್ಟು ಗೌರವಿಸಿದೆ. ಇದಕ್ಕೆ ಮೊದಲು ಎಂಎಸ್ ಸುಬ್ಬಲಕ್ಷ್ಮಿ ಯವರಿಗೆ 1998ರಲ್ಲಿ ಭಾರತರತ್ನ ಪ್ರಶಸ್ತಿ ಕೊಟ್ಟು ಗೌರವಿಸಿತ್ತು.

    ಇವರ ಜೀವನ ಚರಿತ್ರೆಯನ್ನು ಹಲವಾರು ಲೇಖಕರು ಬರೆದಿದ್ದಾರೆ. ಮನೆಗೆ ಬರುವ ಅತಿಥಿಗಳನ್ನು ಬಹಳ ಆದರದಿಂದ ಸ್ವಾಗತಿಸುತ್ತಾರೆ.  ಇವರನ್ನು  ನೈಟಿಂಗೇಲ್ ಆಫ್ ಬಾಲಿವುಡ್ ಅಂತ ಸಹ ಕರೆಯುತ್ತಾರೆ. ಲತಾಜೀಯವರಿಗೆ ಸ್ವಲ್ಪವೂ ಹಮ್ಮು-ಬಿಮ್ಮುಗಳಿಲ್ಲ. ಯಾವಾಗಲೂ ಕಲಿಯುತ್ತಲೇ ಇರಬೇಕೆಂದು ಹೇಳುವ ಲತಾಜೀಯವರ ಮನಸ್ಸು ಮಕ್ಕಳ ಮನಸ್ಸಿನಂತೆ ನಿಷ್ಕಲ್ಮಷ . ಸಂಗೀತ ನಿರ್ದೇಶಕರುಗಳು ಹೇಳುವ ಹಾಗೆ  ಭಾವನಾತ್ಮಕವಾಗಿ ಹಾಡುತ್ತಿದ್ದರು ಹಾಗೂ ಉಪಾಧ್ಯಾಯರು ಹೇಳಿದಂತೆ ಕಲಿಯುವ  ವಿದ್ಯಾರ್ಥಿನಿಯೂ  ಆಗುತ್ತಿದ್ದರಂತೆ. ಅವರ ಹಾಡುಗಳಲ್ಲಿ  ನಾನು  ಯಾವಾಗಲೂ ಗುನುಗುವ ಹಾಡು ಆಜ್ ಫಿರ್ ಜೀನೇ ಕಿ ತಮನ್ನಾ ಹೆ

    ನಾಲ್ಕು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಸ್ವತ:  ಹಾಡುಗಳ ನಿರ್ದೇಶನವನ್ನೂ ಮಾಡಿದ್ದಾರೆ.

    ಆಕೆಯ ಖ್ಯಾತಿ ಮುಗಿಲೆತ್ತರವಾದಾಗ ಎಲ್ಲರೂ ಸಂಗೀತ ಕೋಗಿಲೆಯ ಸಂಪರ್ಕವನ್ನು ಬಯಸುತ್ತಿದ್ದರು.1999ರಲ್ಲಿ ಪರ್ಫ್ಯೂಮ್ ಒಂದಕ್ಕೆ ಲತಾ ಪರ್ಫ್ಯೂಮ್ ಎಂದು ನಾಮಕರಣ ಮಾಡಿದರು.  ರಾಜ್ಯಸಭೆಯ ಮೆಂಬರ್ ಆಗಿ ನೇಮಕಗೊಂಡಿದ್ದರು. ಅನಾರೋಗ್ಯದ ಕಾರಣ  2005 ರಲ್ಲಿ ನಿವೃತ್ತಿ ಪಡೆದರು.ಪುಣೆಯಲ್ಲಿ ಅವರ ತಂದೆಯ ಹೆಸರಿನಲ್ಲಿ ದೀನನಾಥ ಮಂಗೇಶ್ಕರ್ ಹಾಸ್ಪಿಟಲ್ ಅಂಡ್ ರಿಸರ್ಚ್ ಸೆಂಟರ್  ನಡೆಸುತ್ತಿದ್ದಾರೆ.

    ಇವರು ಸೋದರ  ಹೃದಯನಾಥ್ ರೊಡನೆ ಕ್ರಿಕೆಟ್ ಆಡುತ್ತಿದ್ದರಂತೆ. ಬಹುಶ: ಇವರ ಕ್ರಿಕೆಟ್ ಮೇಲಿನ ಅಭಿಮಾನಕ್ಕೆ ಪರೋಕ್ಷವಾಗಿ ಇದು ಕಾರಣವಿರಬಹುದು. ಸಚಿನ್ ತೆಂಡೂಲ್ಕರ್ ಅವರ ಮೇಲೆ ಇವರಿಗೆ ಮಗನಂತೆ ವಿಶ್ವಾಸ. 

    ಮಹಾನ್ ಗಾಯಕಿಗೆ ಹೃದಯ ತುಂಬಿದ ಶ್ರದ್ದಾಂಜಲಿ ಸಲ್ಲಿಸೋಣ.

    .

    ಇಲ್ಲಿರುವ ಹಾಡುಗಳನ್ನು ನಮ್ಮಓದುಗರಿಗಾಗಿ ಹಾಡಿದ್ದು ಪ್ರಿಯಾಂಕ ಪದಕಿ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕಿ ಆಗಿರುವ ಪ್ರಿಯಾಂಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ್ದಾರೆ.

    .

    ಶಶಿಕಲಾ ರಾವ್
    ಶಶಿಕಲಾ ರಾವ್
    ಬೆಂಗಳೂರಿನಲ್ಲಿ ವಾಸ. ಕನ್ನಡ ಬರವಣಿಗೆಯಲ್ಲಿ ಆಸಕ್ತಿ
    spot_img

    More articles

    6 COMMENTS

    1. ಪ್ರಿಯಾಂಕ ಪದಕಿ ಹಾಡಿರುವ ಹಾಡುಗಳು ಲತಾ ಜೀ ಅವರ ಸುಮಧುರ ಕಂಠ, ಅವರ ತನ್ಮಯತೆ ಯನ್ನು ಮೆಲುಕು ಹಾಕುವ ಹಾಗಿದೆ

    LEAVE A REPLY

    Please enter your comment!
    Please enter your name here

    Latest article

    error: Content is protected !!