24.5 C
Karnataka
Monday, May 13, 2024

    ಇನ್ಯಾವ ದೂರತೀರದ ಮೋಹದ ಮುರುಳಿ ನಿಮ್ಮನ್ನು ಆ ಮಟ್ಟಿಗೆ ದಂಡಿಸಿಕೊಳ್ಳುವಂತೆ ಮಾಡಿತು ಅಪ್ಪು?

    Must read

    ನಿಷ್ಕಲ್ಮಶ ನಗುವಿನ ಸರದಾರ ಹೊರಟು ಹೋಗಿದ್ದಾನೆ.ಹಣ್ಣೆಲೆಯನ್ನೇ ಉಳಿಸಿ ಚಿಗುರೆಲೆಯೊಂದು ಉದುರಿಹೋಗಿದೆ. ಏನೋ ಮೋಡಿಯಾಗಿ ಆ ಚಿಗುರೆಲೆಯನ್ನು ಮರ ಮತ್ತೆ ತನ್ನ ಹರೆಗೆ ಅಂಟಿಸಿಕೊಳ್ಳಬಹುದಾ ಎನ್ನುವ ನಿರೀಕ್ಷೆ ಮತ್ತೂಮತ್ತೂ ಹುಟ್ಟುತ್ತಲೇ ಇದೆ.ಅದು ಹುಸಿ ನಿರೀಕ್ಷೆ ಎಂಬುದು ಗೊತ್ತಿದ್ದರೂ ಮನಸ್ಸು ಸುಳ್ಳನ್ನೇ ನೆಚ್ಚಿ‌ಕೂತಿದೆ.

    ಆದರೂ..

    ಕಲಾವಿದರ ಎದೆ ಮೇಲೆ ನಿರೀಕ್ಷೆಯ ಹೊರೆಯನ್ನು ಹೇರುವವರು ನಾವೇ ಅಲ್ಲವೇ?ಅವರ ಅಭಿಮಾನಿಗಳು?

    ಅಪ್ಪುವಿನ ಸಿಕ್ಸ್ ಪ್ಯಾಕಿಗೆ ಥಿಯೇಟರ್ರೇ ಹಾರಿ ಹೋಗುವಂತೆ ಸಿಳ್ಳೆ ಚಪ್ಪಾಳೆ ಹೊಡೆದು ನೀವು ಹೀಗೇ ಇರಬೇಕು ಎನ್ನುವ ಭಾರ ಹೊರಿಸಿದವರು?

    ಅವರ ಅತಿವೇಗದ ನೃತ್ಯಕ್ಕೆ ಇನ್ನಿಲ್ಲದಂತೆ ಹುಚ್ಚೆದ್ದವರು?
    ಬ್ಯಾಕ್ ಕಿಕ್ಕನ್ನು ,ಫೈಟ್ ಮಾಡುವ ಸೊಗಸನ್ನು ಕಣ್ರೆಪ್ಪೆ ಮಿಟುಕಿಸದೆ ನೋಡಿ., ಆ ಮೂಲಕ ನೀವು ಹೀಗೇ ಇರಬೇಕು ಎಂಬ ಪರೋಕ್ಷ ಸಂದೇಶ ತಲುಪಿಸಿದವರು ನಾವೇ ಅಲ್ಲವೇ?

    ಅಪ್ಪು, ನಿಮ್ಮ ಸಿಕ್ಸಪ್ಯಾಕ್ ಹೊರತಾಗಿಯೂ ನೀವು ನಮಗಿಷ್ಟ.
    ಸಾದಾ ಡ್ಯಾನ್ಸ್ ಮಾಡಿದರೂ ನಿಮ್ಮನ್ನು ಆರಾಧಿಸುತ್ತೇವೆ.
    ನಿಮ್ಮನ್ನು ಪ್ರೀತಿಸುವುದು ನಿಮ್ಮ ನಗುವಿಗೆ,ನಿಮ್ಮ ಮಗುತನಕ್ಕೆ,ನಿಮ್ಮ ಹಮ್ಮುಬಿಮ್ಮುಗಳಿಲ್ಲದ ನಡಾವಳಿಗೆ.

    ಹೌದಲ್ಲವೇ?

    ಯಾವುದೇ ಕಲಾವಿದನಿಗೂ ಅಭಿಮಾನಿಗಳು ಮನದಟ್ಟು ಮಾಡಬೇಕಾದ ಸಂಗತಿ ಇದು ತಾನೇ?

    ಅಪ್ಪುವಿನ ಸಿನೆಮಾ ನೋಡಿದ ಯಾವುದೇ ಹೆಣ್ಣೂ ಅಂತಹ ಪಾರ್ಟನರ್ ಸಿಗಲಿ ಎಂದುಕೊಂಡಿದ್ದಕ್ಕಿಂತ ಇವನಂಥ ಜೀವದ ಗೆಳೆಯನೊಬ್ಬ ಸಿಕ್ಕರೆ ಎಂದುಕೊಂಡಿದ್ದೇ ಹೆಚ್ಚಲ್ಲವೇ?

    ಇವನಂಥ ಅಣ್ಣ ತಮ್ಮ ಸಿಕ್ಕರೇ ಅದೆಷ್ಟು ಸೊಗಸು ಎಂದುಕೊಂಡೆವಲ್ಲವೇ? ಪ್ರತಿ ತಾಯಿಯೂ ಅಪ್ಪುವಿನಂತ ಮಗ ಹುಟ್ಟಲಿ ಎಂದುಕೊಂಡಿದ್ದರಲ್ಲವೇ?

    ಹಾಗಿದ್ದರೆ

    ಇನ್ಯಾವ ದೂರತೀರದ ಮೋಹದ ಮುರುಳಿ ನಿಮ್ಮನ್ನು ಆ ಮಟ್ಟಿಗೆ ದಂಡಿಸಿಕೊಳ್ಳುವಂತೆ ಮಾಡಿತು ಅಪ್ಪು?

    ಪ್ರತಿ ಕಲಾವಿದನೂ ವೈಯುಕ್ತಿಕ ಆಸೆ ಹಂಬಲ ಗುರಿಗಳ ಜೊತೆಗೆ ಸಮಾಜದ ಜವಾಬ್ದಾರಿಯನ್ನು ಬೇಕಿಲ್ಲದಿದ್ದರೂ ಹೊತ್ತಿರುತ್ತಾನೆ.ಅವನನ್ನು ಹಿಂಬಾಲಿಸುವ ದೊಡ್ಡದೊಂದು ಯುವ ಸಮೂಹ ಇದ್ದೇ ಇರುತ್ತದೆ. ಅದರಲ್ಲೂ ಅಪ್ಪುವಿನಂಥ ಸಮಾಜಮುಖಿ ವ್ಯಕ್ತಿತ್ವದ ನಾಯಕನನ್ನು ನೂರಾರು ಜೀವಗಳು ನೆಚ್ಚಿಕೊಂಡಿರುತ್ತವೆ.
    ಈ ನೆಚ್ಚುಗೆಯ ಋಣ ಅಪ್ಪುವನ್ನು ಎಚ್ಚರಿಸಬೇಕಿತ್ತು ಅಂತ ತೀವ್ರವಾಗಿ ಅನಿಸ್ತಿದೆ.

    ಸಣ್ಣ ನೋವು ಕಾಣಿಸಿಕೊಂಡಾಗಲೇ ವೈದ್ಯರನ್ನು ಕಂಡಿದ್ದರೆ,ನೋವನ್ನು ಕಡೆಗಣಿಸದಿದ್ದರೆ ಅಥವಾ ಸುಮ್ಮನೆ ಆರಾಮು ಮಾಡಿದ್ದರೆ?ಅರಮನೆಯಲ್ಲಿ ರಾಜಕುಮಾರ ಉಳಿಯುತ್ತಿದ್ದ. ಲೋಕದ ಶೋಕ ಈ ಮಟ್ಟಿಗೆ ಹೆಚ್ಚುತ್ತಿರಲಿಲ್ಲ.ಪರಮ್ ಈ ಹೊತ್ತಿಗೆ ಪರಮಾತ್ಮನಾಗುತ್ತಿರಲಿಲ್ಲ.

    ನಿಮ್ಮ ದಿನಚರಿ ,ನಿಮ್ಮ ಆಹಾರ ವಿಹಾರ, ನಿಮ್ಮ ಕುಟುಂಬ, ನಿಮ್ಮ ಮನಸ್ಥಿತಿ ಎಲ್ಲವನ್ನೂ ಕೇಳಿ, ಓದಿ ಅಷ್ಟೇ ಪರಿಚಿತರು ನಾವು. ಜಡ್ಜಮೆಂಟಲ್ ಆದ ಮಾತುಗಳನ್ನು ಹೇಳುವುದು ಒಳಗೊಂದು ಮುಳ್ಳುಮುರಿದ ಭಾವ ಹುಟ್ಟಿಸುತ್ತದೆ.

    ಇದೆಲ್ಲದರ ಹೊರತಾಗಿಯೂ
    ‘ನಾವೇನ್ ತಿಂತಿವಿ..ಎಲ್ಲ್ ಮಲಗ್ತಿವಿ…ಎಲ್ಲ ಬರೆದುಬಿಟ್ಟಿದ್ದಾನೆ…ವಿಧಿ…ವಿಧಿಯ ಮುಂದೆ ನಮ್ದೇನಿಲ್ಲ..’

    ನಿಮ್ಮದೇ ಸಿನೆಮಾ ಡೈಲಾಗ್ …ಮತ್ತು ಇದೇ ಅಂತಿಮ ಸತ್ಯ.

    ನಂದಿನಿ ಹೆದ್ದುರ್ಗ
    ನಂದಿನಿ ಹೆದ್ದುರ್ಗ
    ನಂದಿನಿ ಹೆದ್ದುರ್ಗ ಅವರ ವಾಸ ಹಾಸನ ಜಿಲ್ಲೆ ಆಲೂರು ತಾಲೂಕಿನ ಹೆದ್ದುರ್ಗ ಎನ್ನುವ ಪುಟ್ಟ ಹಳ್ಳಿಯಲ್ಲಿ. ಬದುಕಿಗೆ ಕಾಫಿ ತೋಟ,ಕೃಷಿ. ಆಸಕ್ತಿ ಕೃಷಿ,ಕಾವ್ಯ,ಸಾಹಿತ್ಯ, ತಿರುಗಾಟ. ಮೂವತ್ತೈದನೇ ವಯಸಿನಲ್ಲಿ ಬರವಣಿಗೆ ಪ್ರಾರಂಭ. ಮೊದಲಿಗೆ ಹಾಸನದ ಪ್ರಾದೇಶಿಕ ಪತ್ರಿಕೆ ಜನತಾ ಮಾಧ್ಯಮಕ್ಕೆ ಅಂಕಣ ಬರಹಗಳನ್ನು ಬರೆಯುವುದರೊಂದಿಗೆ ಸಾಹಿತ್ಯಾರಂಭ. 2016 ಅಕ್ಟೋಬರ್ ನಲ್ಲಿ ಸಕಲೇಶಪುರದಲ್ಲಿ ನಡೆದಂತಹ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ "ಅಸ್ಮಿತೆ" ಎನ್ನುವ ಕವನ ಸಂಕಲನ ಖ್ಯಾತ ಕವಿ ಬಿ ಆರ್ ಲಕ್ಷ್ಮಣರಾವ್ ಅವರಿಂದ ಬಿಡುಗಡೆ. ಆ ನಂತರದಲ್ಲಿ ಅವರ ಮಾರ್ಗದರ್ಶನದಲ್ಲಿ ಕವಿತೆ ಬರೆಯಲು ಆರಂಭ. ಜನವರಿ 1,2017ರಲ್ಲಿ ಮೊದಲ ಕವನಗಳ ಗುಚ್ಛ ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟ. 2018ಜನವರಿಯಲ್ಲಿ ಬೆಂಗಳೂರಿನ ಅಂಕಿತ ಪ್ರಕಾಶನದಿಂದ ಎರಡನೇ ಸಂಕಲನ "ಒಳಸೆಲೆ"ಬಿಡುಗಡೆ. ಕನ್ನಡದ ಖ್ಯಾತ ವಿಮರ್ಶಕಿ ಎಮ್ ಎಸ್ ಆಶಾದೇವಿಯವರ ಮುನ್ನುಡಿ ಮತ್ತು ಸುವಿಖ್ಯಾತ ಕವಿ ಎಚ್ ಎಸ್ ವೆಂಕಟೇಶ ಮೂರ್ತಿಯವರ ‌ಬೆನ್ನುಡಿಯಿರುವ ಈ ಸಂಕಲನಕ್ಕೆ ಶಿವಮೊಗ್ಗದ ಕರ್ನಾಟಕ ಸಂಘ ಕೊಡುವ ಪ್ರತಿಷ್ಠಿತ ಜಿ ಎಸ್ ಎಸ್ ಪ್ರಶಸ್ತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಗೌರವದ ಪುರಸ್ಕಾರ.ಮಂಡ್ಯದ ಅಡ್ಡ್ವೆಸರ್ ಕೊಡಮಾಡುವ ಅಡ್ಡ್ವೆಸರ್ ವರ್ಷದ ಸಂಕಲನ ಪುರಸ್ಕಾರ ದೊರೆತಿದೆ. ದಸರಾಕವಿಗೋಷ್ಠಿ,ಆಳ್ವಾಸ್ ನುಡಿಸಿರಿ, ಬಾಗಲಕೋಟೆಯ ನುಡಿಸಡಗರ ,ಧಾರವಾಡದಲ್ಲಿ ನಡೆದ ರಾಜ್ಯ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಕವನ ವಾಚನ. ಇತ್ತೀಚೆಗೆ ಪ್ರಕಟವಾದ ಬ್ರೂನೊ..ದಿ ಡಾರ್ಲಿಂಗ್ ಎನ್ನುವ ಪ್ರಬಂಧ ಸಂಕಲನ ರತಿಯ ಕಂಬನಿ ಎಂಬ ಕವಿತಾ ಸಂಕಲನ ಮತ್ತು ಇಂತಿ ನಿನ್ನವಳೇ ಆದ ಪ್ರೇಮಕಥೆಗಳ ಸಂಕಲನ ಅಪಾರ ಓದುಗರ ಮೆಚ್ಚುಗೆ ಗಳಿಸಿವೆ.. ರತಿಯ ಕಂಬನಿ ಸಂಕಲನಕ್ಕೆ ಪ್ರತಿಷ್ಠಿತ ಅಮ್ಮ ಪ್ರಶಸ್ತಿ ಲಭಿಸಿದೆ.
    spot_img

    More articles

    1 COMMENT

    1. ಮನ ಮುಟ್ಟುವ ಹಾಗೆ ಬರೆದಿದ್ದೀರಿ ನಂದಿನಿಯವರೆ ಹಾಗೇ ಅಂತಿಮ ಸತ್ಯವನ್ನೂ ತಿಳಿಸಿದ್ದೀರಿ.

    LEAVE A REPLY

    Please enter your comment!
    Please enter your name here

    Latest article

    error: Content is protected !!