28.3 C
Karnataka
Tuesday, May 14, 2024

    ಪ್ರಬಲ ಹಾಗೂ ಸಶಕ್ತ ದೇಶವಾಗಿ ಹೊರಹೊಮ್ಮಿದ ಭಾರತ

    Must read

    75 ವರ್ಷಗಳ ಸ್ವಾತಂತ್ರ್ಯದ ಸಂಭ್ರಮವನ್ನು 75 ವಾರಗಳ ಮಹೋನ್ನತ ಉತ್ಸವವಾಗಿ ಆಚರಿಸಲು ಪ್ರೇರೇಪಿಸಿದ ಪ್ರಧಾನಿ ಮೋದಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳು. ದೇಶಕ್ಕಾಗಿ ತಮ್ಮ ತನುಮನಗಳನ್ನು ಸಮರ್ಪಿಸಿದ ಎಲ್ಲಾ ಮಹನೀಯರನ್ನು ಸ್ಮರಿಸುವ ಈ ಹಬ್ಬ ಕೋಟ್ಯಂತರ ಭಾರತೀಯರಿಗೆ ಎಂದೆಂದಿಗೂ ತ್ಯಾಗ, ಬಲಿದಾನ, ದೇಶ ಭಕ್ತಿ ಹಾಗೂ ದೃಢ ಸಂಕಲ್ಪದ ಪ್ರತೀಕ. ಇತಿಹಾಸದಲ್ಲಿ ಅಚ್ಚಳಿಯದೆ ನಿಂತ ಎಲ್ಲಾ ಮಹಾತ್ಮರಿಗೆ ನಾವು ಯಾವಾಗಲೂ ಚಿರರುಣಿ.

    ಪ್ರಸ್ತುತ ನಮ್ಮ ದೇಶವು ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿರುವುದು ನಿಶ್ಚಿತ. ಅದಕ್ಕೆ ನಾವು ಹೆಮ್ಮೆ ಪಡುವುದು ಸ್ವಾಭಾವಿಕ. ಆದರೆ ಭಾರತದ ಗತ ವೈಭವವನ್ನು ನಾವು ಮತ್ತೊಮ್ಮೆ ತಿರುಗಿ ನೋಡಿದರೆ ನಡೆದು ಬಂದ ಹಾದಿಯಲ್ಲಿ ಅಪ್ರತಿಮ ಸಾಧನೆಗಳು ಲೆಕ್ಕವಿಲ್ಲದಷ್ಟು.

    ಶತಮಾನಗಳ ಹಿಂದೆ ಜ್ಞಾನಾರ್ಜನೆಯೇ ನಮ್ಮ ಪರಂಪರೆ ಹಾಗೂ ತಳಹದಿಯಾಗಿತ್ತು. ಪ್ರಪಂಚದ ಸೃಷ್ಟಿಯ ಪರಿಕಲ್ಪನೆ ಹೊಂದಿರುವ ಋಗ್ವೇದ ಮನುಕುಲದ ಮೊದಲ ಗ್ರಂಥ. ವೇದ, ಪುರಾಣ ಉಪನಿಷತ್ತುಗಳು ಇಡೀ ವಿಶ್ವದ ಎಲ್ಲ ರಹಸ್ಯಗಳನ್ನೂ ಹುದುಗಿಸಿಟ್ಟುಕೊಂಡಿವೆ. ಸನಾತನ ಧರ್ಮದ ಸ್ಥಾಪನೆ ಶ್ರೇಷ್ಠ ಸಂಸ್ಕೃತಿಗೆ ನಾಂದಿ ಹಾಡಿತ್ತು. ಜಗತ್ತಿನ ಅತಿ ಶ್ರೇಷ್ಠ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತಗಳು ರಚನೆಯಾದ ಯುಗ. ಯೋಗ, ಆಯುರ್ವೇದ, ಸಂಸ್ಕೃತ ಭಾಷೆ ಹಾಗೂ ವ್ಯಾಕರಣವನ್ನು ಜಗತ್ತಿಗೆ ಪರಿಚಯಿಸಿದ ಗರಿಮೆ ನಮ್ಮದು. ವಿಜ್ಞಾನ, ಗಣಿತ, ಆಧ್ಯಾತ್ಮದಲ್ಲೂ ನಮ್ಮ ಕೊಡುಗೆ ಅಪಾರ. ಕಲೆ ತಂತ್ರಜ್ಞಾನ ಎಲ್ಲದರಲ್ಲೂ ಭಾರತ ಮುಂಚೂಣಿಯಲ್ಲಿ ಇದ್ದ ಕಾಲ. ವಿಶ್ವದ ಮೊದಲ ವಿಶ್ವ ವಿದ್ಯಾನಿಲಯ ತಕ್ಷಶಿಲ ಹಾಗೂ ನಳಂದ ಪ್ರಪಂಚಕ್ಕೆ ತನ್ನ ಜ್ಞಾನವನ್ನು ಧಾರೆ ಎರೆದ ಪರ್ವ ಅದು. ಒಂದು
    ಮಾತಿನಲ್ಲಿ ಹೇಳಬೇಕೆಂದರೆ ಭಾರತ ಆ ಕಾಲದ ವಿಶ್ವಗುರು ಎನ್ನುವುದರಲ್ಲಿ ಆಶ್ಚರ್ಯವೇ ಇಲ್ಲ.

    ಶತಕಗಳು ಉರುಳಿದಂತೆ ಭಾರತ ಅಪಾರ ಜ್ಞಾನ ಹಾಗೂ ಸಂಪತ್ತಿನ ಮೇರು ಶಿಖರವಾಗಿ ಬೆಳೆದು ನಿಂತಿತ್ತು. ಹಲವರಿಂದ ಈ ದೇಶದಲ್ಲಿ ನಡೆದ ದಬ್ಬಾಳಿಕೆ ನಮ್ಮ ಇತಿಹಾಸದಲ್ಲಿ ಒಂದು ಕರಾಳ ಪರ್ವ. ಎಷ್ಟೋ ಗಂಡುಗಲಿಗಳು ಪರಾಕ್ರಮ ಮೆರೆದು ವೀರಗತಿ ಸೇರಿದ್ದು ನಾವು ಮರೆಯುವಂತಿಲ್ಲ. ಆಂಗ್ಲರ ಸುಮಾರು ಇನ್ನೂರು ವರ್ಷಗಳ ಅಟ್ಟಹಾಸ ಭಾರತವನ್ನು ನಾನಾ ರೀತಿಯ ವಿನಾಶದ ಅಂಚಿಗೆ ತಂದು ನಿಲ್ಲಿಸಿತ್ತು. ಅಲ್ಲಿಯವರೆಗೂ ಪ್ರಾಂತ್ಯವಾರು ಹೋರಾಟವನ್ನೇ ಮಾಡಿಕೊಂಡಿದ್ದ ನಮ್ಮನ್ನು ಬಾಲಗಂಗಾಧರ ತಿಲಕ್ ಎಚ್ಚರಿಸಿದರು. ಭಾರತಮಾತೆ ಸ್ವತಂತ್ರವಾಗಬೇಕಾದರೆ ಸಂಘಟನೆಯೇ ಮಾರ್ಗ ಎಂದು ದೃಢ ಸಂಕಲ್ಪ ಮಾಡಿದರು. ಅವರ ಪ್ರೇರಣೆಯಿಂದ ಹಲವಾರು ನಾಯಕರು ಹುಟ್ಟಿಕೊಂಡು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡರು. ಎಷ್ಟೋ ಜನ ಹುತಾತ್ಮರಾದರೆ ಲಕ್ಷಾಂತರ ಯೋಧರು ವೀರ ಸ್ವರ್ಗ ಸೇರಿದರು. ಅವರೆಲ್ಲರ ಹೋರಾಟ ಹಾಗೂ ಬಲಿದಾನದ ಪ್ರತಿಫಲವಾಗಿ ಭಾರತ ಮಾತೆ ಸ್ವಾತಂತ್ರಳಾದಳು.

    ಸ್ವಾತಂತ್ರಾನಂತರ ಏಕೀಕರಣ, ಆರ್ಥಿಕ ಬಿಕ್ಕಟ್ಟು, ಕ್ಷಾಮ, ನೆರೆ ರಾಷ್ಟ್ರಗಳ ಜೊತೆ ಯುದ್ಧದಿಂದ ದೇಶದ ಅಭಿವೃದ್ಧಿ ಕುಂಟಿತು. ಆದರೆ ದೂರದೃಷ್ಟಿಯ ಪ್ರಭಲ ನಾಯಕರು ಚುಕ್ಕಾಣಿ ಹಿಡಿದು ದೇಶದ ದಿಕ್ಕನ್ನು ಕೀರ್ತಿ ಪಥದಲ್ಲಿ ತಂದು ನಿಲ್ಲಿಸಿದರು. ಮತ್ತೆ ಭಾರತ ಒಂದು ಪ್ರಭಲ ಹಾಗೂ ಸಶಕ್ತ ದೇಶವಾಗಿ ಹೊರಹೊಮ್ಮಿದೆ. ಮಂಗಳ ಗ್ರಹಕ್ಕೆ ಹೆಜ್ಜೆ ಇಟ್ಟಾಗಿದೆ, ಕೊರೋನಾಕ್ಕೆ ಲಸಿಕೆ ಕಂಡುಹಿಡಿದಿದೆ. ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಕಂಪನಿಗಳಲ್ಲಿ ಭಾರತೀಯರದೇ ಸಾರಥ್ಯ. ನಮ್ಮ ಪ್ರಧಾನಿ ವಿಶ್ವದ ಅತಿ ಪ್ರಭಲ ನಾಯಕ. ಭಾರತ ಮಾತೆಗೆ ಮತ್ತೆ ಕಾಶ್ಮೀರದ ಕಿರೀಟ ತೊಡಿಸಿ ಆಗಿದೆ. ಒಲಂಪಿಕ್ಸ್ ನಲ್ಲಿ ಜನಗಣಮನ ರಾರಾಜಿಸಿದೆ.

    ಭಾರತ ಮತ್ತೊಮ್ಮೆ ಕೀರ್ತಿಶಿಖರದ ಹೊಸ್ತಿಲಲ್ಲಿದೆ. ಇಷ್ಟರಲ್ಲೇ ರಾಮ ರಾಜ್ಯದ ಕನಸೂ ನನಸಾಗಲಿದೆ.

    ಸ್ವಾತಂತ್ರ್ಯೋತ್ಸವದ ಶುಭಾಶಯಗಳು.

    ಸಂದೀಪ್ ಶಾಸ್ತ್ರಿ ಅಗ್ರಹಾರ
    ಸಂದೀಪ್ ಶಾಸ್ತ್ರಿ ಅಗ್ರಹಾರ
    ವೃತ್ತಿಯಿಂದ ಎಂಜಿನಿಯರ್, ಪ್ರವಾಸ ಮತ್ತು ಬರವಣಿಗೆಯಲ್ಲಿ ಆಸಕ್ತಿ
    spot_img

    More articles

    2 COMMENTS

    1. The article takes you different level of deep knowledge and historical facts along with rich Bharat culture and periodicals update. Young Mr.S.S.Agrahara presentation of facts flows like crystal clear river through readers mind. Amazing depth of knowledge at this young age which shows his maturity level and patriotic inclined mind for his generation and generations to come. Worth reading. Keep it up Mr.Agrahara .

    LEAVE A REPLY

    Please enter your comment!
    Please enter your name here

    Latest article

    error: Content is protected !!