31.2 C
Karnataka
Sunday, May 12, 2024

    ಕೊರೊನಾ ಇನ್ನೂ ಮುಗಿದಿಲ್ಲ, ನಿರ್ಬಂಧ ತೆರವಿನ ನಂತರದ ಚಿತ್ರಣ ಆತಂಕಕಾರಿ: ಪ್ರಧಾನಿ ಕಳವಳ

    Must read

    ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೋವಿಡ್ ಸಂಬಂಧಿತ ಪರಿಸ್ಥಿತಿಯ ಕುರಿತು ಚರ್ಚಿಸಲು ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಒಡಿಶಾ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಂವಾದ ನಡೆಸಿದರು. ಕೇಂದ್ರ ಗೃಹ ಸಚಿವರು, ಆರೋಗ್ಯ ಸಚಿವರು ಈ ಸಭೆಯಲ್ಲಿ ಭಾಗಿಯಾಗಿದ್ದರು. ಕೋವಿಡ್ ಎದುರಿಸಲು ಎಲ್ಲ ಸಾಧ್ಯ ನೆರವು ಒದಗಿಸಿದ ಪ್ರಧಾನಮಂತ್ರಿಯವರಿಗೆ ಮುಖ್ಯಮಂತ್ರಿಗಳು ಧನ್ಯವಾದ ಅರ್ಪಿಸಿದರು. ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳಲ್ಲಿ ಸೋಂಕು ತಡೆಯಲು ಕೈಗೊಂಡಿರುವ ಕ್ರಮಗಳು ಮತ್ತು ಲಸಿಕಾ ಕಾರ್ಯಕ್ರಮದ ಪ್ರಗತಿಯ ಪ್ರಧಾನಮಂತ್ರಿಯವರಿಗೆ ವಿವರಿಸಿದರು. ಲಸಿಕಾ ಕಾರ್ಯತಂತ್ರದ ಕುರಿತಂತೆ ತಮ್ಮ ಪ್ರತಿಕ್ರಿಯೆಯನ್ನೂ ನೀಡಿದರು.

    ಮುಖ್ಯಮಂತ್ರಿಗಳು ವೈದ್ಯಕೀಯ ಮೂಲಸೌಕರ್ಯ ಹೆಚ್ಚಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾತನಾಡಿದರು ಮತ್ತು ಭವಿಷ್ಯದಲ್ಲಿ ಸಂಭಾವ್ಯ ಪ್ರಕರಣಗಳ ಹೆಚ್ಚಳದ ನಿರ್ವಹಣೆಯ ಕುರಿತಂತೆ ಸಲಹೆ ನೀಡಿದರು. ಕೋವಿಡ್ ನಂತರ ರೋಗಿಗಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅಂತಹ ಪ್ರಕರಣಗಳಲ್ಲಿ ನೆರವು ಒದಗಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಅವರು ಚರ್ಚಿಸಿದರು. ಸೋಂಕು ಹೆಚ್ಚಳವಾಗದಂತೆ ನಿಯಂತ್ರಿಸಲು ತಾವು ಎಲ್ಲ ಸಾಧ್ಯ ಕಾರ್ಯ ಮಾಡುವ ಭರವಸೆಯನ್ನು ನೀಡಿದರು.

    ಕೇಂದ್ರ ಗೃಹ ಸಚಿವರು ಈ ಆರು ರಾಜ್ಯಗಳು ಜುಲೈ ತಿಂಗಳಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಪೈಕಿ ಶೇಕಡ 80ಕ್ಕಿಂತ ಹೆಚ್ಚು ಪ್ರಕರಣಗಳನ್ನು ಹೊಂದಿದ್ದು, ಕೆಲವು ರಾಜ್ಯಗಳು ಅತಿ ಹೆಚ್ಚು ಪಾಸಿಟಿವಿಟಿ ದರವನ್ನೂ ಹೊಂದಿವೆ ಎಂದು ಉಲ್ಲೇಖಿಸಿದರು. ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ, ದೇಶದಲ್ಲಿ ಕೋವಿಡ್ ಪ್ರಕರಣಗಳ ಕುರಿತು ಚರ್ಚಿಸಿದರು ಮತ್ತು ಕೋವಿಡ್ ಸೂಕ್ತ ನಡವಳಿಕೆ ಮತ್ತು ನಿಗ್ರಹ ಕ್ರಮಗಳನ್ನು ಅತಿ ಹೆಚ್ಚು ಪ್ರಕರಣ ಇರುವ ಜಿಲ್ಲೆಗಳಲ್ಲಿ ಮರು ಜಾರಿ ಮಾಡುವ ಅಗತ್ಯ ಕುರಿತಂತೆ ಮಾತನಾಡಿದರು. ಈ ಜಿಲ್ಲೆಗಳಲ್ಲಿ ಕಾರ್ಯಚಟುವಟಿಕೆ ಮುಕ್ತಗೊಳಿಸುವುದನ್ನು ಹಂತಹಂತವಾಗಿ ಮತ್ತು ಕ್ರಮೇಣ ಮಾಡುವ ಕುರಿತು ಸಲಹೆ ಮಾಡಿದರು.

    ತಮ್ಮ ಸಮಾರೋಪ ನುಡಿಗಳಲ್ಲಿ ಪ್ರಧಾನಮಂತ್ರಿಯವರು ಸಾಂಕ್ರಾಮಿಕದ ವಿರುದ್ಧ ಹೋರಾಟದಲ್ಲಿ ರಾಜ್ಯ ಸರ್ಕಾರಗಳ ಪರಸ್ಪರ ಸಹಕಾರ ಮತ್ತು ಅರಿವನ್ನು ಶ್ಲಾಘಿಸಿದರು. ಮೂರನೇ ಅಲೆಯ ಬಗ್ಗೆ ನಿರಂತರವಾಗಿ ಹೇಳಲಾಗುತ್ತಿರುವ ಆತಂಕದ ಸನ್ನಿವೇಶದಲ್ಲಿ ನಾವಿದ್ದೇವೆ ಎಂದೂ ತಿಳಿಸಿದರು. ಇಳಿಕೆಯಾಗುತ್ತಿರುವ ಪ್ರಕರಣಗಳ ಸಂಖ್ಯೆಯಿಂದಾಗಿ ತಜ್ಞರು ಸಕಾರಾತ್ಮಕ ಸಂಕೇತಗಳನ್ನು ನೀಡುತ್ತಿದ್ದರೂ, ಕೆಲವು ರಾಜ್ಯಗಳಲ್ಲಿ ಹೆಚ್ಚುತ್ತಿರುವ ಪ್ರಕರಣಗಳು ಇನ್ನೂ ಆತಂಕ ಒಡ್ಡಿವೆ. ಕಳೆದ ವಾರದಲ್ಲಿ ಶೇ. 80ರಷ್ಟು ಪ್ರಕರಣಗಳು ಮತ್ತು ಶೇ.84ರಷ್ಟು ದುರದೃಷ್ಟಕರ ಸಾವುಗಳು ಈ ಸಭೆಯಲ್ಲಿ ಹಾಜರಿರುವ ರಾಜ್ಯಗಳಿಂದಲೇ ಬಂದಿವೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಎರಡನೆಯ ಅಲೆ ಬಂದಿದ್ದ ರಾಜ್ಯಗಳಲ್ಲಿ ಮೊದಲಿಗೆ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತದೆ ಎಂದು ಆರಂಭದಲ್ಲಿ ತಜ್ಞರು ನಂಬಿದ್ದರು. ಆದರೆ, ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಸಂಖ್ಯೆಯು ಗಂಭೀರ ಆತಂಕಕ್ಕೆ ಕಾರಣವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

    ಇದೇ ರೀತಿಯ ಪ್ರವೃತ್ತಿ ಎರಡನೇ ಅಲೆಗೂ ಮುನ್ನ ಜನವರಿ – ಫೆಬ್ರವರಿಯಲ್ಲಿ ಕಾಣಿಸಿಕೊಂಡಿತ್ತು ಎಂದು ಪ್ರಧಾನಮಂತ್ರಿ ಎಚ್ಚರಿಸಿದರು. ಹೀಗಾಗಿಯೇ ಪ್ರಕರಣಗಳು ಹೆಚ್ಚಳವಾಗುತ್ತಿರುವ ರಾಜ್ಯಗಳಲ್ಲಿ ನಾವು ಸಕಾರಾತ್ಮಕ ಕ್ರಮಗಳನ್ನು ಕೈಗೊಂಡು 3ನೇ ಅಲೆಯನ್ನು ತಡೆಯಬೇಕಾಗಿದೆ ಎಂದು ಪ್ರಧಾನಮಂತ್ರಿ ಸೂಚಿಸಿದರು.

    ದೀರ್ಘ ಸಮಯದವರೆಗೆ ಪ್ರಕರಣಗಳು ಹೆಚ್ಚುತ್ತಲೇ ಇದ್ದರೆ ಕೊರೊನಾ ವೈರಾಣುವಿನ ರೂಪಾಂತರದ ಸಾಧ್ಯತೆಯೂ ಹೆಚ್ಚಾಗಿರುತ್ತದೆ ಮತ್ತು ಹೊಸ ರೂಪಾಂತರಿಗಳ ಅಪಾಯವೂ ಹೆಚ್ಚಾಗುತ್ತದೆ ಎಂಬ ತಜ್ಞರ ಅಭಿಪ್ರಾಯವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಆದ್ದರಿಂದ, ಸೂಕ್ಷ್ಮ ಕಂಟೈನ್ಮೆಂಟ್ ವಲಯಗಳ ಜೊತೆಗೆ ನಾವು ಪರೀಕ್ಷೆ, ಪತ್ತೆ, ಚಿಕಿತ್ರೆ ಮತ್ತು ಲಸಿಕೆ ಕಾರ್ಯತಂತ್ರ ಮುಂದುವರಿಸುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಹೆಚ್ಚಿನ ಸಂಖ್ಯೆಯ ಪ್ರಕರಣ ಇರುವ ಜಿಲ್ಲೆಗಳ ಬಗ್ಗೆ ಗಮನ ಹರಿಸಬೇಕು. ಇಡೀ ರಾಜ್ಯಗಳಲ್ಲಿ ಪರೀಕ್ಷೆಯನ್ನು ಹೆಚ್ಚಿಸಬೇಕು ಎಂದು ಮೋದಿ ಒತ್ತಿ ಹೇಳಿದರು. ಅತಿ ಹೆಚ್ಚಿನ ಸೋಂಕಿನ ಪ್ರದೇಶಗಳಲ್ಲಿ ಲಸಿಕೆ ಒಂದು ವ್ಯೂಹಾತ್ಮಕ ಸಾಧನ ಎಂದು ಬಣ್ಣಿಸಿದ ಪ್ರಧಾನಮಂತ್ರಿಯವರು, ಲಸಿಕೆಯ ಸಮರ್ಥ ಬಳಕೆಯ ಬಗ್ಗೆ ಪ್ರತಿಪಾದಿಸಿದರು. ಆರ್.ಟಿ.ಪಿ.ಸಿ.ಆರ್. ಪರೀಕ್ಷಾ ಸಾಮರ್ಥ್ಯ ಸುಧಾರಣೆಗೆ ಈ ಸಮಯ ಬಳಸಿಕೊಳ್ಳುತ್ತಿರುವ ರಾಜ್ಯಗಳನ್ನು ಪ್ರಧಾನಮಂತ್ರಿ ಪ್ರಶಂಸಿಸಿದರು.

    ಐಸಿಯು ಹಾಸಿಗೆಗಳು ಮತ್ತು ಪರೀಕ್ಷಾ ಸಾಮರ್ಥ್ಯದಂತಹ ವೈದ್ಯಕೀಯ ಮೂಲಸೌಕರ್ಯ ಹೆಚ್ಚಳಕ್ಕೆ ಒದಗಿಸಲಾಗುತ್ತಿರುವ ಆರ್ಥಿಕ ನೆರವಿನ ಬಗ್ಗೆಯೂ ಪ್ರಧಾನಮಂತ್ರಿ ಮಾತನಾಡಿದರು. ಇತ್ತೀಚಿಗೆ ಅನುಮೋದಿಸಲಾದ 23,000 ತುರ್ತು ಕೋವಿಡ್ ಸ್ಪಂದನಾ ಪ್ಯಾಕೇಜ್ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ವೈದ್ಯಕೀಯ ಮೂಲಸೌಕರ್ಯವರ್ಧನೆಗೆ ಈ ನಿಧಿ ಬಳಸುವಂತೆ ತಿಳಿಸಿದರು.

    ರಾಜ್ಯಗಳು ಮೂಲಸೌಕರ್ಯದ ಕಂದಕ ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಇದನ್ನು ಸರಿದೂಗಿಸಬೇಕು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಐಟಿ ವ್ಯವಸ್ಥೆ, ನಿಯಂತ್ರಣ ಕೊಠಡಿ ಮತ್ತು ಕಾಲ್ ಸೆಂಟರ್ ಗಳನ್ನು ಬಲಪಡಿಸುವಂತೆ ತಿಳಿಸಿದ ಅವರು, ಇದರಿಂದ ನಾಗರಿಕರು ಸಂಪನ್ಮೂಲಗಳು ಮತ್ತು ದತ್ತಾಂಶವನ್ನು ಪಾರದರ್ಶಕ ರೀತಿಯಲ್ಲಿ ಪಡೆಯುತ್ತಾರೆ ಮತ್ತು ರೋಗಿಗಳು ತೊಂದರೆಯಿಂದ ದೂರವಾಗುತ್ತಾರೆ ಎಂದರು. ಸಭೆಯಲ್ಲಿ ಹಾಜರಿರುವ ರಾಜ್ಯಗಳಿಗೆ 332 ಪಿ.ಎಸ್.ಎ. ಸ್ಥಾವರಗಳನ್ನು ಹಂಚಿಕೆ ಮಾಡಲಾಗಿದ್ದು, ಇದರಲ್ಲಿ 53 ಕಾರ್ಯಾರಂಭ ಮಾಡಿವೆ ಎಂದು ಮೋದಿ ಹೇಳಿದರು. ಸ್ಥಾವರಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಪ್ರಧಾನಮಂತ್ರಿ ತಿಳಿಸಿದರು. ಮಕ್ಕಳು ಸೋಂಕಿತರಾಗದಂತೆ ತಡೆಯುವ ಅಗತ್ಯವನ್ನು ಪ್ರತಿಪಾದಿಸಿದ ಪ್ರಧಾನಮಂತ್ರಿಯವರು, ಈ ಸಂಬಂಧ ಎಲ್ಲ ಸಾಧ್ಯ ಸಿದ್ಧತೆ ಮಾಡುವಂತೆ ತಿಳಿಸಿದರು.

    ಯುರೋಪ್, ಅಮೆರಿಕಾ ಮತ್ತು ಬಾಂಗ್ಲಾದೇಶ, ಇಂಡೋನೇಷಿಯಾ, ಥೈಲ್ಯಾಂಡ್ ಮತ್ತು ಇತರ ಹಲವು ರಾಷ್ಟ್ರಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಬಗ್ಗೆ ಪ್ರಧಾನಮಂತ್ರಿಯವರು ಕಳವಳ ವ್ಯಕ್ತಪಡಿಸಿದರು. ಇದು ನಮ್ಮನ್ನು ಮತ್ತು ವಿಶ್ವವನ್ನು ಎಚ್ಚರಿಸಬೇಕು ಎಂದು ಪ್ರಧಾನಮಂತ್ರಿ ತಿಳಿಸಿದರು.

    ಕೊರೊನಾ ಇನ್ನೂ ಮುಗಿದಿಲ್ಲ ಎಂದು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು, ಲಾಕ್ ಡೌನ್ ನಂತರ ಬರುತ್ತಿರುವ ಚಿತ್ರಣದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಕೋವಿಡ್ ಶಿಷ್ಟಾಚಾರ ಪಾಲನೆಯ ಅಗತ್ಯ ಪ್ರತಿಪಾದಿಸಿದ ಅವರು, ಸಭೆಯಲ್ಲಿರುವ ಅನೇಕ ರಾಜ್ಯಗಳು ಜನದಟ್ಟಣೆಯ ಮಹಾನಗರಗಳನ್ನು ಹೊಂದಿರುವುದರಿಂದ ಜನಜಂಗುಳಿಯನ್ನು ತಪ್ಪಿಸುವಂತೆ ತಿಳಿಸಿದರು. ಜನರಲ್ಲಿ ಜಾಗೃತಿ ಮೂಡಿಸುವಂತೆ ರಾಜಕೀಯ ಪಕ್ಷಗಳು, ಸಾಮಾಜಿಕ ಸಂಸ್ಥೆಗಳು ಮತ್ತು ಎನ್‌.ಜಿ.ಒ.ಗಳಿಗೆ ಪ್ರಧಾನಮಂತ್ರಿ ಕರೆ ನೀಡಿದರು. (PIB ವರದಿ)


    .

    .

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!