ಸಂಭಾವ್ಯ ಸಚಿವರೊಂದಿಗೆ ಲೋಕ ಕಲ್ಯಾಣ್ ಮಾರ್ಗದ ನಿವಾಸದಲ್ಲಿ ನಡೆಸಿದ ಸಭೆ
ಹಲವು ಹಾಲಿ ಸಚಿವರ ರಾಜಿನಾಮೆಯಿಂದ ಕೇಂದ್ರ ಸಂಪುಟ ಹೊಸ ರೂಪ ಪಡೆಯುವುದು ನಿಶ್ಚಿತವಾಗಿದೆ. ಪ್ರಧಾನಿ ಸಂಪುಟ ಸೇರುವ ಹೊಸ ಸಚಿವರೊಂದಿಗೆ ಲೋಕ ಕಲ್ಯಾಣ ಮಾರ್ಗದ ನಿವಾಸದಲ್ಲಿ ನಡೆಸಿದ ಸಭೆ ಮುಕ್ತಾಯಗೊಂಡಿದೆ.
ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್, ಸದಾನಂದ ಗೌಡ, ರಮೇಶ್ ಪೋಖ್ರಿಯಾಲ್ ನಿಶಾಂಕ್, ಸಂತೋಷ್ ಗಂಗ್ವಾರ್, ಬಾಬುಲ್ ಸುಪ್ರಿಯೋ ಸೇರಿದಂತೆ 11 ಸಚಿವರು ಸರ್ಕಾರದಿಂದ ನಿರ್ಗಮಿಸಿದ್ದಾರೆ. ಮತ್ತೊಬ್ಬ ಸಚಿವ ಥಾವರ್ ಚಂದ್ ಗಹ್ಲೋಟ್ ಕರ್ನಾಟಕದ ರಾಜ್ಯಪಾಲರಾಗಿ ನೇಮಕವಾಗಿದ್ದಾರೆ.
ಈ ಬಾರಿ ಜೆಡಿಯು ಸಂಪುಟದಲ್ಲಿ ಸ್ಥಾನ ಪಡೆಯಲಿದೆ. ಪಶುಪತಿ ಕುಮಾರ್ ಪರಾಸ್ ಸೇರ್ಪಡೆಗೊಳ್ಳುವ ಮೂಲಕ ಎಲ್ ಜೆ ಪಿ ಕೂಡ ಸಂಪುಟದಲ್ಲಿ ಸ್ಥಾನ ಗಿಟ್ಟಿಸಲಿದೆ. ಜ್ಯೋತಿರಾಧಿತ್ಯ ಸಿಂಧ್ಯಾ ಸೇರ್ಪಡೆ ಮಧ್ಯಪ್ರದೇಶ ರಾಜಕೀಯದಲ್ಲಿ ಹೊಸ ಅಧ್ಯಾಯಕ್ಕೆ ಕಾರಣವಾಗಲಿದೆ.
ಕರ್ನಾಟಕದಿಂದ ಶೋಭಾ ಕರಂದ್ಲಾಜೆ, ಚಿತ್ರದುರ್ಗ ಸಂಸದ ನಾರಾಯಣ ಸ್ವಾಮಿ, ಬೀದರ್ ಸಂಸದ ಭಗವಂತ ಖೂಬಾ ಮತ್ತು ರಾಜ್ಯಸಭೆ ಸದಸ್ಯ ರಾಜೀವ್ ಚಂದ್ರಶೇಖರ್ ಸಂಪುಟ ಸೇರುವುದು ಬಹುತೇಕ ನಿಶ್ಚಿತವಾಗಿದೆ. ಇದರಿಂದ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ , ಪ್ರಹ್ಲಾದ್ ಜೋಷಿ ಸೇರಿ ಕೇಂದ್ರ ಸಂಪುಟದಲ್ಲಿ ರಾಜ್ಯದ ಪ್ರಾತಿನಿಧ್ಯ 6ಕ್ಕೆ ಏರಲಿದೆ.