29.4 C
Karnataka
Monday, May 20, 2024

    ಮೌಢ್ಯಕ್ಕೆ ಬಲಿ-ನ್ಯಾಯವೇ ?

    Must read


    ಹರೋನಹಳ್ಳಿ ಸ್ವಾಮಿ

    “ಧರೆಯ ಬದುಕೇನದರ ಗುರಿಯೇನು ಸ್ಥಲವೇನು?
    ಬರಿಬಳಸು ಬಡಿದಾಟ ಬರಿ ಪರಿಭ್ರಮಣೆ
    ತಿರುತಿರುಗಿ ಹೊಟ್ಟೆ ಹೊರಕೊಳ್ಳುವ ಮೃಗಖಗಕಿಂತ
    ನರನು ಸಾದ್ದಿಪುದೇನು ? ಮಂಕುತಿಮ್ಮ

    ಈ ಭೂಮಿಯ ಮೇಲೆ ಮಾನವರಾಗಿ ಜನಿಸಿರುವುದೇ ನಮ್ಮ ಭಾಗ್ಯವಲ್ಲವೇ ? ಈ ವಿಶ್ವದ ಹುಟ್ಟು, ಬದುಕು, ಸಾವುಗಳೂ ನಿಯಮಬದ್ಧವಾದ ವೈಜ್ಞಾನಿಕ ಪ್ರಕೃತಿ ನಿಯಮಗಳ ಅಣತಿಗೊಳಪಟ್ಟು ನಡೆಯುತ್ತಿವೆ. ಸುಮಾರು 12 ರಿಂದ 15 ಬಿಲಿಯನ್ ವರ್ಷಗಳ ಹಿಂದೆ ಹುಟ್ಟಿರುವ ವಿಶ್ವ, ಸೂರ್ಯನಿಂದಲೇ ಸು.460 ಕೋಟಿ ವರ್ಷಗಳ ಹಿಂದೆ ಸೃಷ್ಟಿಯಾಗಿರುವ ನಮ್ಮ ಭೂಮಿ, ನಂತರದ ವಿಕಾಸದ ಹಾದಿಗಳೆಲ್ಲಕ್ಕೂ ಕಾರಣಗಳಿವೆ.

    ಈ ಗಾಳಿ, ಶಾಖ, ನೀರು, ಮರ, ಗಿಡ, ಬಳ್ಳಿಗಳು ಹಕ್ಕಿ ಪಕ್ಕಿ ಕ್ರಿಮಿ, ಕೀಟ ಇತ್ಯಾದಿ ಜೀವಿ ನಿರ್ಜೀವಿಗಳೆಲ್ಲದರ ಬದುಕು ನಿಸರ್ಗದ ನಿಯಮಕ್ಕೊಳಪಟ್ಟಿವೆ. ಗಾಳಿ ಬೀಸಲು, ಹಗಲು, ಇರುಳು, ನೆರಳು, ಬಿಸಿಲು, ಮಳೆ ಮಂಜು, ಜೊತೆಗೆ ಬೆಂಕಿ, ಬಿರುಗಾಳಿ, ಮಿಂಚು ಗುಡುಗು, ಭೂಕಂಪ, ಜ್ವಾಲಾಮುಖಿ, ಚಂಡಮಾರುತ ಹೀಗೆ ನಾವು ನೋಡುವ ಅನುಭವಿಸುತ್ತಿರುವ ಎಲ್ಲಾ ಆಗುಹೋಗುಗಳೂ ಸಂಭವಿಸಲೂ ವೈಜ್ಞಾನಿಕ ಕಾರ್ಯಕಾರಣ ಸಂಬಂಧಗಳೂ ನಿಯಮಬದ್ಧವಾಗಿಯೇ ನಡೆಯುತ್ತಿವೆ. ಆದರೆ ಯಾವ ನಿಯಮಕ್ಕೂ, ಇತಿ ಮಿತಿಗಳಿಗೂ ಒಳಪಡದೆ ಸ್ವೇಚ್ಛೆಯಾಗಿ, ತನಗೆ ತಿಳಿದಂತೆ, ಗೊತ್ತು ಗುರಿಗಳಿಲ್ಲದೆ ಬದುಕು ನಡೆಸುವವನೇ ಈ ಬುದ್ಧಿಜೀವಿ ಎಂದು ಕರೆಸಿಕೊಳ್ಳುವ ಆಧುನಿಕ ಮಾನವ.

    ಇಷ್ಟೆಲ್ಲಾ ಪೀಠಿಕೆಗಳಿಗೆ ಕಾರಣ, ನಮ್ಮ ವಿದ್ಯೆ, ನಮ್ಮ ಚಿಂತನೆಗಳು, ನಮ್ಮ ನಡೆ ನುಡಿಗಳು ಎತ್ತ ಸಾಗುತ್ತಿವೆ ಎಂದು ಅವಲೋಕಿಸಿದಾಗ ಆಗುವ ನೋವುಗಳನ್ನು ನಿಮ್ಮೊಡನೆ ಹಂಚಿಕೊಳ್ಳಲು ಇಚ್ಛಿಸುವೆನು.

    ಕೆಲದಿನಗಳ ಹಿಂದೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ ಎಂಬಲ್ಲಿ “ಕ್ಷುದ್ರಶಕ್ತಿ” ನಂಬಿ ಪುತ್ರಿಯರನ್ನು ಕೊಂದ ಪೋಷಕರ ಕರಾಳ ದುಷ್ಕೃತ್ಯವು ಪ್ರತಿಕ್ಷಣವೂ ಮನ ಕಲಕುತ್ತಿದೆ. ಹೆತ್ತ ತಾಯಿಯೇ ತನ್ನ ಕರುಳಬಳ್ಳಿಗಳನ್ನು ಮೂಢನಂಬಿಕೆಯಿಂದ ಕೈಯಾರೆ ಮಾಡಿರುವ ಅಮಾನುಷ ಹತ್ಯೆಯಿಂದ ಮಡಿದ ಆ ಹೆಣ್ಣುಮಕ್ಕಳ ನೆನೆದು ಹೃದಯ ಹಿಂಸಿಸುತ್ತಿದೆ.

    ಎಂ.ಎಸ್ಸಿ, ಪಿ.ಎಚ್ಡಿ ಓದಿ ಸಹಾಯಕ ಪ್ರಾಧ್ಯಾಪಕರಾದ ತಂದೆ, ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದು ಪ್ರಾಂಶುಪಾಲೆಯಾಗಿ ಕೆಲಸ ಮಾಡುತ್ತಿರುವ ತಾಯಿ, ಇಂತಹ ಉನ್ನತ ಪದವಿ ಪಡೆದು, ಉದ್ಯೋಗದಲ್ಲಿರುವ ಪೋಷಕರು, ತಮ್ಮ ಒಡಲ ಕುಡಿಗಳಾದ ವಿದ್ಯಾವಂತ ಹೆಣ್ಣುಮಕ್ಕಳ ಹತ್ಯೆ ಮಾಡಿದ ಕಾರಣ ಕೂಡ ವಿಲಕ್ಷಣವಾಗಿದೆ, ಅವೈಜ್ಞಾನಿಕವಾಗಿದೆ ಮತ್ತು ಬಾಲಿಶವಾಗಿದೆ.

    ಅದೇನೆಂದರೆ “ಕಲಿಯುಗ ಮುಗಿದು ಸತ್ಯಯುಗ ಆರಂಭವಾಗುತ್ತದೆ. ಕ್ಷುದ್ರಶಕ್ತಿಯಿಂದ ಸತ್ತವರು ಕೆಲವೇ ಗಂಟೆಗಳಲ್ಲಿ ಮತ್ತೆ ಹುಟ್ಟಿಬರುತ್ತಾರೆ” ಎಂಬ ಜ್ಯೋತಿಷಿಯೊಬ್ಬನ ಮಾತನ್ನು ನಂಬಿ ಮಾಡಿರುವ ಕೊಲೆಗಳಿವು.
    ನನಗೆ ಚಿಂತನೆಗೆ ಹಚ್ಚಿರುವುದು, ಖಂಡಿತಾ ಜ್ಯೋತಿಷಿಯ ಮಾತಲ್ಲ, ಕಾರಣ ಇಂತಹ ಮೂಢನಂಬಿಕೆಗಳನ್ನೇ ಬಿತ್ತಿ, ಬೆಳೆದು ತಮ್ಮ ಹೊಟ್ಟೆ ತುಂಬಿಸಿಕೊಳ್ಳುವ ಡೋಂಗಿ ಬಾಬಾಗಳು, ಜ್ಯೋತಿಷಿಗಳ ಹೇಳಿಕೆಗಳನ್ನು ದಿನವೂ ಕಂಡು ಕೇಳುತ್ತೇವೆ. ಆದರೆ ಇಂತಹ ಸುಳ್ಳರ ಮಾತನ್ನು ನಂಬಿ ತಮ್ಮ ಮಕ್ಕಳನ್ನು ಕೊಂದ ಪೋಷಕರು ಅವಿದ್ಯಾವಂತರಲ್ಲ, ನಿರುದ್ಯೋಗಿಗಳಲ್ಲ, ಸಾಮಾಜಿಕವಾಗಿ ತುಳಿತ, ಅವಮಾನಕ್ಕೊಳಪಟ್ಟವರಲ್ಲ, ಬದಲಾಗಿ ಉನ್ನತ ವಿದ್ಯೆ ಮತ್ತು ಸ್ಥಾನಮಾನ ಪಡೆದವರಾಗಿರುವುದು ಪ್ರತಿಭಾವಂತ ವಯಸ್ಕ ಹೆಣ್ಣುಮಕ್ಕಳಿಬ್ಬರೂ ತಾಯಿ ತಂದೆಯರಿಂದಲೇ ಡಂಬೆಲ್‌ಗಳಿಂದ ಹೊಡೆಸಿಕೊಂಡು, ತ್ರಿಶೂಲದಿಂದ ಚುಚ್ಚಿಸಿಕೊಂಡು, ನೋವಿನಿಂದ ಒದ್ದಾಡಿ, ಒದ್ದಾಡಿ ಪ್ರಾಣ ಬಿಡುವಾಗ ಅನುಭವಿಸಿರುವ ನೋವು ಸಂಕಟಗಳನ್ನು ನೆನೆದರೆ ತುಂಬಾ ಕಸಿವಿಸಿಯಾಗುತ್ತದೆ.

    ಮಂಕುತಿಮ್ಮನ ಮೂಲಕ ಡಿ.ವಿ.ಜಿ.ಯವರು… ‘ತಿರುತಿರುಗಿ ಹೊಟ್ಟೆ ಹೊರಕೊಳುವ ಮೃಗಖಗಕಿಂತ ನರನು ಸಾಧಿಪುದೇನು?” ಎಂಬ ಸಾಲುಗಳು ಚಿಂತನಾರ್ಹವಾಗಿವೆ. ಕ್ರೂರ ಮೃಗಗಳೂ ಕೂಡ, ತಮ್ಮ ಸಂತಾನಗಳನ್ನು ವೈರಿಗಳಿಂದ ರಕ್ಷಿಸಲು ಜೀವವನ್ನೇ ಪಣಕ್ಕಿಟ್ಟು ಹೋರಾಡುತ್ತವೆ. ಆದರೆ ಈ ಘಟನೆ 21ನೇ ಶತಮಾನದಲ್ಲಿನ ಅತ್ಯಂತ ಅಮಾನವೀಯ, ಅಕ್ಷಮ್ಯ ಅಪರಾಧವಾಗಿದೆ.

    ನಾವು ಕಲಿತ ವಿದ್ಯೆಗೂ (ಅದರಲ್ಲೂ ವಿಜ್ಞಾನ ಪದವಿ ಪಡೆದ ಪೋಷಕರು) ನಮ್ಮ ಚಿಂತನೆ, ನಂಬಿಕೆ, ಆಚರಣೆಗಳಿಗೂ ಸಂಬಂಧಗಳೇ ಇಲ್ಲದಂತಾಗಿದೆ.ಕಲಿತವರೇ ಇಂತಹ ಮೂಢನಂಬಿಕೆಗಳನ್ನು ನಂಬಿ, ಮಕ್ಕಳನ್ನೇ ಬಲಿ ಪಡೆದರೆ ಇನ್ನು ಅವಿದ್ಯಾವಂತ ಅಮಾಯಕ ಮುಗ್ಧರು ಇಂತಹವರ ಮಾತಿಗೆ ಬಲಿಯಾಗುವುದರಲ್ಲಿ ಆಶ್ಚರ್ಯವಿಲ್ಲವೆನಿಸುತ್ತಿದೆ.

    “ಕ್ಷುದ್ರ ಶಕ್ತಿಯಿಂದ ಸತ್ತವರು ಕೆಲವೇ ಗಂಟೆಗಳಲ್ಲಿ ಮತ್ತೆ ಹುಟ್ಟಿ ಬರುತ್ತಾರೆ” ಎಂಬ ನಂಬಿಕೆ ಹುಟ್ಟಿಸಿದ ಆ ಮಹಾಪುರುಷ, ಇನ್ನೆಷ್ಟು ಬಲಿ ಪಡೆದಿರಬಹುದೆಂದು ನೆನೆದರ ಗಾಬರಿಯಾಗುತ್ತದೆ. ವಿದ್ಯಾವಂತರೇ ಇಂತಹ ಮೂಢನಂಬಿಕೆಗಳಿಗೆ ಬಲಿಯಾಗುತ್ತಿರುವುದು ಹೆಚ್ಚಾಗುತ್ತಿರುವುದನ್ನು ನೋಡಿದರೆ, ನಮ್ಮ ವಿದ್ಯೆ ವೈಚಾರಿಕ ಚಿಂತನೆಯನ್ನು ಬೆಳೆಸುತ್ತಿಲ್ಲವೆಂದೇ ಹೇಳಬೇಕು.

    ಅಲ್ಲದೇ ವಿದ್ಯೆಗೂ ವೈಜ್ಞಾನಿಕ ಮನೋಭಾವಕ್ಕೂ ಸಂಬಂಧವಿಲ್ಲದಂತಾಗಿದೆ.ಚಂದ್ರಲೋಕಕ್ಕೆ ಮಾನವ ಸುರಕ್ಷಿತವಾಗಿ ಹೋಗಿಬಂದು, ಈಗ ಮಂಗಳಯಾನಕ್ಕೆ ಸಿದ್ಧತೆ ನಡೆಸುತ್ತಿದ್ದರೂ ಗ್ರಹಗಳ ಚಲನೆ, ಹಸ್ತರೇಖೆ, ಅಲ್ಲದೆ ಮನುಷ್ಯನ ಹೆಸರಿನಲ್ಲಿರುವ ಅಕ್ಷರಗಳ ಸಂಖ್ಯೆ ಕೂಡ ಭವಿಷ್ಯವನ್ನು ನಿರ್ಧರಿಸಬಲ್ಲವೆಂಬ ಜ್ಯೋತಿಷಿಗಳನ್ನು ನಂಬುತ್ತಿರುವ ಜನರು ಹೆಚ್ಚುತ್ತಿದ್ದಾರೆ. ಇದರಲ್ಲಿ ಅಕ್ಷರಸ್ಥ ವಿದ್ಯಾವಂತರ ಸಂಖ್ಯೆಯೂ ಹೆಚ್ಚಾಗಿರುವುದು ಚಿಂತೆಗೀಡುಮಾಡುತ್ತಿವೆ. ಆಹಾರದ ಮತ್ತು ಉಡುವ ತೊಡುವ ಪೋಷಾಕುಗಳಿಂದಿಡಿದು, ಮನೆಯ ಮೂಲೆ ಮೂಲೆಯ ವಾಸ್ತುಗಳ ಕುರಿತು, ಮೂಢನಂಬಿಕೆಗಳು ಹೆಚ್ಚಾಗುತ್ತಿವೆ. ಕೋಟ್ಯಂತರ ಜನರು ಬಡತನ ರೇಖೆಯ ಕೆಳಗಿದ್ದು, ಹಸಿವಿನಿಂದ ನರಳುತ್ತಿರುವಾಗ ಹೋಮ, ಹವನ, ಯಜ್ಞ, ಯಾಗಾದಿಗಳಲ್ಲಿ ಅಮೂಲ್ಯ ಸಂಪತ್ತನ್ನು ಸುಟ್ಟು ಬೂದಿ ಮಾಡುವ ಮಂದಿಯೂ ಅನೇಕರಿರುತ್ತಾರೆ.
    ಮೌಢ್ಯಕ್ಕೆ ಪ್ರಚೋದಿಸುವ ಮತ್ತು ಮೌಢ್ಯವನ್ನು ಆಚರಿಸುವ ಜನರ ವಿರುದ್ಧ ಕಠಿಣ ಶಿಕ್ಷೆಯ ಕಾನೂನುಗಳು ರೂಪಗೊಂಡು ಅನುಷ್ಠಾನಕ್ಕೆ ತರಬೇಕಾದುದು ಇಂದಿನ ಅವಶ್ಯವಾಗಿದೆ.ಮೌಢ್ಯ ನಿಷೇಧ ಕಾನೂನು ಅನೇಕ ರಾಜ್ಯಗಳಲ್ಲಿ ಜಾರಿ ಇದ್ದರೂ ರಾಷ್ಟ್ರಮಟ್ಟದಲ್ಲಿ ಇಂತಹ ಕಾನೂನುಗಳು ರಚಿತಗೊಂಡು ಜಾರಿಯಾಗಬೇಕಾಗಿದೆ.

    ವೈಚಾರಿಕತೆಯನ್ನು, ವೈಜ್ಞಾನಿಕ ಮನೋಭಾವವನ್ನು ಸಾರಿದ ಬುದ್ಧ, ಬಸವ, ಅಂಬೇಡ್ಕರರ ನಾಡಿದು.ದೃಶ್ಯ ಮಾಧ್ಯಮಗಳೂ ಅವೈಜ್ಞಾನಿಕ ಧಾರಾವಾಹಿಗಳು, ಜ್ಯೋತಿಷಿಗಳ ಪ್ರವಚನಗಳನ್ನು ಹೆಚ್ಚು ಹೆಚ್ಚು ಪ್ರಸಾರ ಮಾಡಿ ಜನರ ಚಿಂತನೆಗಳನ್ನು ಕೆಳಮಟ್ಟಕ್ಕೆ ಕೊಂಡೊಯ್ಯುತ್ತಿರುವುದೂ ದಿನನಿತ್ಯದ ಸಂಗತಿಯಾಗಿದೆ.

    “ತಮಗೆ ಮುಂಬಹ ಸುಖ ದುಃಖಗಳ ನರಿಯದವರು
    ಮತ್ತೊಬ್ಬರ ಸುಖದುಃಖಂಗಳ ಮೊದಲೇ ಅರಿಯರು” ಎಂಬ ಶರಣ ಚನ್ನಬಸವಣ್ಣನವರ ಮಾತು ಈ ಜ್ಯೋತಿಷಿಗಳೂ ಮತ್ತು ಅವರನ್ನು ನಂಬುವ ಜನರಿಬ್ಬರೂ ಅರಿಯಬೇಕಲ್ಲವೇ ? ಗ್ರಹಣಗಳಿಂದಾಗಿ ಹೆದರುವ ಮತ್ತು ಹೆದರಿಸುವ ಜನರಿಂದ ಅನೇಕ ಅಂಧಾಚರಣೆಗಳನ್ನು ನೋಡಿದ್ದೇವೆ. ವೈಕುಂಠ ಏಕಾದಶಿಗೆ ಸ್ವರ್ಗದ ಬಾಗಿಲು ತೆರೆದಿರುತ್ತದೆಂದು ನಂಬಿ ಆತ್ಮಹತ್ಯೆ ಮಾಡಿಕೊಂಡವರುಂಟು, ಸ್ವರ್ಗಪ್ರಾಪ್ತಿ ಎಂದು ಸಾಮೂಹಿಕ ಆತ್ಮಹತ್ಯೆಗಳಾಗಿರುವುದನ್ನು ಕಂಡಿದ್ದೇವೆ. ಧನಪ್ರಾಪ್ತಿಗಾಗಿ ಮಕ್ಕಳ ಬಲಿ ನೀಡುವುದನ್ನು ಕಾಣುತ್ತಿದ್ದೇವೆ. ಮಾಡಿದ ಪಾಪಕೃತ್ಯಗಳಿಗಾಗ ಪ್ರಾಯಶ್ಚಿತ್ತವೆಂಬಂತೆ ಪ್ರಸಿದ್ಧ ದೇವಸ್ಥಾನಗಳಿಗೆ ಹೋಗಿ ಕೋಟಿ ಕೋಟಿ ಹಣ, ವಜ್ರ ವೈಢೂರ್ಯಗಳನ್ನು ಹುಂಡಿಗಳಿಗೆ ಹಾಕುವ ಜನರನ್ನು ಕಂಡಿದ್ದೇವೆ. ಜೊತೆಗೆ ಅಂತಹವರ ಅಧಃಪತನವನ್ನು ಕಂಡಿದ್ದೇವೆ.

    ಆದರೆ ವಿಜ್ಞಾನ ತಂತ್ರಜ್ಞಾನಗಳು ಬೆಳೆದಂತೆ ನಾಗರಿಕತೆ ಮುಂದುವರಿದಂತೆ ಆಂಧ್ರಪ್ರದೇಶಗಳು, ಮೌಢ್ಯಾಚರಣೆಗಳು ಹೆಚ್ಚತ್ತಿವೆ. ಇದು ಒಂದು ದೇಶಕ್ಕೆ, ಜನಾಂಗಕ್ಕೆ ಸೀಮಿತವಾಗಿಲ್ಲ, ಜಗತ್ತಿನಾದ್ಯಂತ ನಾನಾ ಕಡೆಗಳಲ್ಲಿ ವಿವಿಧ ರೂಪಗಳಲ್ಲಿ ಕಂಡುಬರುತ್ತಿದೆ.
    ಜ್ಞಾನ ವಿಜ್ಞಾನದ ಬಲದಿಂದ ಅಜ್ಞಾನದ ಕೇಡನ್ನು ಅರಿತು ಬದುಕಬೇಕಾಗಿದೆ. ವೈಚಾರಿಕತೆಯಿಂದ ಮನುಷ್ಯನ ಎಷ್ಟೋ ಸಂಕಷ್ಟಗಳನ್ನು ಬಗೆಹರಿಸಲು ಸಾಧ್ಯವಿದೆ ಎಂಬುದನ್ನು ತಿಳಿಯಬೇಕಾಗಿದೆ.

    ವೈಜ್ಞಾನಿಕ ಮನೋಭಾವದ ಮೂಲ ಲಕ್ಷಣಗಳಾದ-ಸತ್ವಶೀಲ ವೈಚಾರಿಕತೆ, ಪ್ರಶ್ನಿಸುವ ಮತ್ತು ಪ್ರಶ್ನಿಸಿಕೊಳ್ಳುವ ಮನೋಭಾವ-ಇವುಗಳನ್ನು ಶಿಕ್ಷಣದ ಕಲಿಸುವ ಮತ್ತು ಕಲಿಯುವಿಕೆಯ ಭಾಗವಾಗಿಸಿಕೊಂಡು, ವೈಚಾರಿಕ ಜನಾಂಗವನ್ನು ಸೃಷ್ಟಿಸಬೇಕಿದೆ.
    ಭಾರತ ಸರ್ಕಾರವು ೧೯೫೮ ಮಾರ್ಚ್ ೪ ರಂದು ವಿಜ್ಞಾನ ಧೋರಣೆಗೆ ಸಂಬಂಧಿಸಿದಂತೆ ಗೊತ್ತುವಳಿಯೊಂದನ್ನು ಅಂಗೀಕರಿಸಿತು. ಅದರಲ್ಲಿ ವಿಶೇಷ ಅಂಶವೊಂದಿದೆ. ಅದು ಹೀಗಿದೆ. “ಸಮಾಜದ ಪ್ರತಿಯೊಬ್ಬನಿಗೂ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವ ಕೆಲಸ ವೈಜ್ಞಾನಿಕ ದೃಷ್ಟಿಕೋನ ಮತ್ತು ವಿಧಾನದಿಂದ ಮಾತ್ರ ಸಾಧ್ಯ” ಆದರೆ ಇದರ ಮಹತ್ವವನ್ನು ಅರಿತು ನಮ್ಮನ್ನಾಳುವ ಮಂದಿ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಬೇಕಾಗಿದೆ.

    ನೆಹರೂರವರ ಮಾತೊಂದು ಅರ್ಥಪೂರ್ಣವೆನಿಸುತ್ತಿದೆ. ಅದು ಹೀಗಿದೆ “ವಿಜ್ಞಾನವೆಂದರೆ ಪರೀಕ್ಷಾ ನಳಿಕೆಗಳ ಸಹಾಯಕದಿಂದ ಒಂದು ವಸ್ತುವಿನಲ್ಲಿ ಇನ್ನೊಂದನ್ನು ಸೇರಿಸಿ ಸಣ್ಣ ದೊಡ್ಡ ವಸ್ತುಗಳನ್ನು ತಯಾರಿಸುವುದಲ್ಲ, ನಮ್ಮ ಇಡೀ ಜೀವನ ಕ್ರಮವು ವೈಜ್ಞಾನಿಕ ವಿಧಾನಗಳಿಗೆ ಅನುಗುಣವಾಗಿರುವಂತೆ ಮನಸ್ಸನ್ನು ತರಬೇತಿಗೊಳಿಸಿವುದೇ ಆಗಿದೆ.” ಈ ಮನಸ್ಸನ್ನು ವೈಜ್ಞಾನಿಕವಾಗಿ ಅಣಿಗೊಳಿಸುವ ಕೆಲಸ ಮನೆ, ಶಾಲೆ, ಸಮಾಜ ಮತ್ತು ಮಾಧ್ಯಮ ಇವೆಲ್ಲವುಗಳೂ ಜವಾಬ್ದಾರಿಯಿಂದ ತಮ್ಮ ಕೆಲಸ ನಿರ್ವಹಿಸಿದಾಗ ಮಾತ್ರ ಸಾಧ್ಯವಾಗುತ್ತದೆ. ಯಾವುದೇ ದೇಶದ ಅಥವಾ ವ್ಯಕ್ತಿಯ ಸಮಸ್ಯೆಗಳನ್ನು ಅಧ್ಯಯನ ಮಾಡಿ ಅವುಗಳ ಪರಿಹಾರಕ್ಕೆ ವೈಜ್ಞಾನಿಕ ಅನ್ವೇಷಣೆಯ ದಾರಿ ಹಿಡಿದು, ಆ ಮೂಲಕ ಸಾಮಾಜಿಕ ಬದಲಾವಣೆಯನ್ನು ವೈಚಾರಿಕತೆಯ ಮಾರ್ಗದಿಂದ ತರಲು ಪ್ರಯತ್ನಿಸಿದಾಗ ಕ್ರಾಂತಿಕಾರಕ ಬದಲಾವಣೆ ಸಾಧ್ಯವಲ್ಲವೇ ?

    ಜೊತೆಗೆ ನಮ್ಮ ಭಾರತದ ಸಂವಿಧಾನ ನೀಡಿರುವ ಮೂಲಭೂತ ಕರ್ತವ್ಯಗಳಲ್ಲಿ 51 (h) ಹೀಗಿದೆ. ಪ್ರತಿಯೊಬ್ಬ ನಾಗರಿಕನಿಗೂ ವೈಜ್ಞಾನಿಕ ಮನೋಭಾವನೆ, ಮಾನವೀಯತೆ, ಜಿಜ್ಞಾಸೆ ಮತ್ತು ಸುಧಾರಣಾ ಪ್ರವೃತ್ತಿಯನ್ನು ಅಭಿವೃದ್ಧಿಗೊಳಿಸುವುದು ಕರ್ತವ್ಯವಾಗಿರತಕ್ಕದ್ದು. ಎಂದಿದೆ. ಅಂದರೆ ಅವೈಜ್ಞಾನಿಕ ಆಚರಣೆಗಳು ಮತ್ತು ಅವುಗಳ ಪ್ರಚೋದನೆ, ಪ್ರೇರಣೆ ಕೂಡ ನಮ್ಮ ಸಂವಿಧಾನಕ್ಕೆ ವಿರೋಧವಾಗಿದ್ದು, ಮೌಢ್ಯಗಳ ವಿರುದ್ಧದ ಕಾಯಿದೆಗಳು ಬೇಗ ರೂಪುಗೊಂಡು, ತಪ್ಪಿತಸ್ಥರಿಗೆ ಶಿಕ್ಷಿಸುವ ವ್ಯವಸ್ಥೆ ಆಗಬೇಕಾಗಿದೆ.

    ವೃತ್ತಿಯಲ್ಲಿ ವಿಜ್ಞಾನ ಶಿಕ್ಷಕರಾಗಿರುವ ಹರೋನಹಳ್ಳಿ ಸ್ವಾಮಿ
    ಪ್ರವೃತ್ತಿಯಿಂದ ಹವ್ಯಾಸಿ ಖಗೋಳ ವೀಕ್ಷಕ ಹಾಗೂ ಗಾಯಕ. ಖಗೋಳ ವೀಕ್ಷಣೆ ಬಗ್ಗೆ ಆಗಾಗ್ಗೆ ಕಾರ್ಯಗಾರಗಳನ್ನು ನಡೆಸುತ್ತಾರೆ. ರಾಜ್ಯಾದ್ಯಂತ ಪವಾಡ ಬಯಲು ಕಾರ್ಯಕ್ರಮ ಆಯೋಜಿಸಿ ಜನರಲ್ಲಿ ವೈಜ್ಞಾನಿಕ ತಿಳಿವಳಿಕೆ ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ತಮ್ಮದೆ ಗಾಯನ ತಂಡದೊಂದಿಗೆ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾರೆ. ಅವರ ಸಂಪರ್ಕ 9880498300 / 7892154695

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!