35.8 C
Karnataka
Sunday, May 12, 2024

    ಬದುಕೆಂಬ ಪ್ರಯಾಣದಲ್ಲಿ ಬಾಲ್ಯದ ಶಾಲಾ ಪ್ರವಾಸ ಅತ್ಯಮೂಲ್ಯ

    Must read

    ಮೇಷ್ಟ್ರು ಶಾಲೆಯಲ್ಲಿ ಪಾಠ ಮಾಡ್ತಿರೋವಾಗ ಮಧ್ಯೆ ಅಟೆಂಡರ್ ತಂದ ಒಂದು ಮೆಮೋ ಇಡೀ ಶಾಲೆಯ ಅಷ್ಟೂ ಮಕ್ಕಳ ಮನಸ್ಸಿನಲ್ಲಿ ಸಂಚಲನ ಸೃಷ್ಟಿ ಮಾಡಿಬಿಡುತ್ತಿತ್ತು . ಅದೇನಿತ್ತು ಅಂತಹ ವಿಶೇಷ ಆ ಮೆಮೋನಲ್ಲಿ ಅಂದ್ರೆ ಟೂರಿನ ಸುದ್ದಿ , ಶೈಕ್ಷಣಿಕ ಪ್ರವಾಸ .

    ಮಾಸ್ತರು ಮೆಮೋವನ್ನು ಸ್ಪಷ್ಟವಾಗಿ ಓದಿ ಎಷ್ಟು ಸ್ಥಳಗಳು , ಯಾವ ಯಾವ ಊರು , ಅಲ್ಲಿನ ವಿಶೇಷತೆ ಏನು , ಪ್ರವಾಸದ ಶುಲ್ಕ ಎಷ್ಟು , ಹೊರಡುವ ದಿನಾಂಕ ಹಿಂದಿರುಗುವ ದಿನಾಂಕ ಯಾವುದು , ಏನು ಎತ್ತ ಅಂತೆಲ್ಲಾ ಸಂಕ್ಷಿಪ್ತವಾಗಿ ಓದಿ ಹೇಳುತ್ತಿದ್ದರು .

    ನಾವು ಶಾಲೆ ಮುಗಿಸಿ ಸಂಜೆ ಮನೆಗೆ ಹೋಗುತ್ತಿದ್ದಂತೆ ಮೊದಲಿಗೆ ಅಮ್ಮನಿಗೆ ಟೂರಿನ ಬಗ್ಗೆ ಹೇಳುತ್ತಿದ್ದೆವು , ಅಮ್ಮನ ಬಾಯಿಂದ ಬರುತ್ತಿದ್ದ ಮೊದಲನೇ ಪದವೇ…. ನಿಮ್ ಮೇಷ್ಟ್ರುಗಳಿಗೆ ಮಾಡಕ್ಕೆ ಇನ್ನೇನೂ ಕೆಲಸ ಇಲ್ವಾ ? ಅಂತ ! ಸುಮ್ನೆ ಓದ್ಕೋ ಹೋಗು ಈ ವಯಸ್ಸಿಗೇ ಟೂರೂ ಗೀರು ಅಂತೆಲ್ಲಾ ಹೋಗ್ಬಾರ್ದು ಅಲ್ಲೆಲ್ಲಾ ನೀರು ಇರುತ್ತೆ .
    ನಮಗೆ ಅಲ್ಲೇ ಭ್ರಮನಿರಸನ ಆಗೋಗೋದು . ನಾವು ಆಗ್ಲೇ ಅಲ್ಲೇ ಹಠ ಶುರುಮಾಡ್ಬಿಡ್ತಾಇದ್ವಿ ಆಗ ಅಮ್ಮ ……. ನಿಮ್ಮಪ್ಪ ಬರ್ತಾರಲ್ಲ ಪರ್ಮೀಷನ್ ತಗೊಂಡು ಧಾರಾಳವಾಗಿ ಹೋಗಪ್ಪ ಯಾರು ಬೇಡ ಅಂದ್ರು , ಅಂತ ಹೇಳಿ ಕೈ ತೊಳ್ಕೊಂಬಿಡೋವ್ರು .‌

    ಸಂಜೆ ಮನೆಗೆ ಬಂದ ಅಪ್ಪನ ಮನಸ್ಥಿತಿ ನೋಡಿ ಕೇಳೋಣ ಅನ್ಕೊಂಡು ಕೇಳಕ್ಕಾಗದೇ ಒದ್ದಾಡಿ ಭಯ ಪಟ್ಟು ಅಮ್ಮನನ್ನು ಮನಸ್ಸಿನಲ್ಲಿಯೇ ಬೈಕೊಂಡು ಉಂಡು ಮಲಗಿಬಿಡುತ್ತಿದ್ದೆವು .

    ಮಾರನೇ ದಿನ ಮೇಷ್ಟ್ರು… ಯಾರ್ ಯಾರು ಬರ್ತಿದೀರೋ ಟೂರಿಗೆ ಅಂತ ಒಂದು ನೂರು ಪೇಜಿನ ಹೊಚ್ಚಹೊಸಾ ನೋಟ್ ಬುಕ್ಕು ಪೆನ್ನು ಹಿಡಿದು ನೊಂದಣಿಗೆ ತಯಾರಾಗಿಬಿಡೋವ್ರು. ಒಂದಿಬ್ಬರು ದುಡ್ಡು ಕೊಟ್ಟು ಹೆಸರು ಬರೆಸಿಬಿಡೋವ್ರು ನಮ್ ಕಣ್ಣಿಗೆ ಅವರು ಅದೃಷ್ಟವಂತರಂತೆ ಕಾಣೋವ್ರು .

    ಮನೆಯಲ್ಲಿ ಕೊನೆಗೆ ಧೈರ್ಯ ಮಾಡಿ ಅಪ್ಪನ ಹತ್ತಿರ ಪ್ರವಾಸದ ಅಹವಾಲನ್ನು ಇಡುತ್ತಿದ್ದೆವು . ಅಪ್ಪ ಕಳಿಸಲು ಸಾಧ್ಯಾನೇ ಇಲ್ಲ ಅಂತ ಕಡ್ಡಿತುಂಡು ಮಾಡಿದಂಗೆ ಹೇಳಿಬಿಡೋವ್ರು . ಶಾಲೆಯಲ್ಲಿ ಎಲ್ಲಾ ಹೋಗ್ತಿದಾರೆ , ಹದಿಮೂರು ಸ್ಥಳಗಳಂತೆ , ಹುಷಾರಾಗಿ ಕರ್ಕೊಂಡೋಗ್ತಾರಂತೆ ಹೀಗೆ ಏನೇ ಹೇಳಿದರೂ . ಕೊನೆಗೆ ಒಂದೆರಡೊತ್ತು ಊಟ ಬಿಟ್ಟು ಸತ್ಯಾಗ್ರಹ ಕೈಗೊಂಡು ಅತ್ತು ಸುರಿದು ಏನೇ ಮಾಡಿದ್ರೂ ಅಪ್ಪ ಕರಗುತ್ತಿರಲಿಲ್ಲ .

    ಕೊನೆಗೆ ನಮ್ಮನ್ನ ಕಳಿಸಲ್ಲ ಅಂತ ನಾವೇ ತೀರ್ಮಾನಿಸಿ ಶಾಲೆಯಲ್ಲಿ ಪೆಚ್ಚುಮೋರೆಯೊಂದಿಗೆ ಪ್ರವಾಸಕ್ಕೆ ಹೋಗುವವರ ಚಟುವಟಿಕೆ ಉತ್ಸಾಹ ಕಂಡು ಖುಷಿ ಪಡುತ್ತಿದ್ದೆವು .

    ಪ್ರವಾಸಕ್ಕೆ ತೆರಳುವರ ಖುಷಿಯೋ ಹೇಳತೀರದ್ದು ಮನೆಯಲ್ಲಿ ಚಕ್ಕುಲಿ ನಿಪ್ಪಟ್ಟು, ಕೋಡುಬಳೆ ,ರವೆಉಂಡೆ….ಹೀಗೆ ತರಹೇವಾರಿ ತಿನಿಸುಗಳನ್ನು ಮಾಡಿಸಿಕೊಂಡು ಅದನ್ನು ಡಬ್ಬಿಗಳಲ್ಲಿ ಪಟ್ಟಣ ಕಟ್ಟಿಸಿಕೊಂಡು ಸಿದ್ದವಾಗುತ್ತಿದ್ದರು .

    ಟೂರಿಗೆ ಹೊರಡುವ ದಿನ ಮುಂಜಾನೆ ಶಾಲೆಯ ಬಳಿಯೇ ಬಸ್ಸು ಬರುತ್ತಿತ್ತು , ಅದಕ್ಕೆ ಟೀಚರ್ರು ಮತ್ತು ಒಂದಿಬ್ಬರು ವಿದ್ಯಾರ್ಥಿನಿಯರು ಪೂಜೆ ಸಲ್ಲಿಸುತ್ತಿದ್ದರು . ಮಕ್ಕಳು ಸಂಭ್ರಮದಿಂದ ಕಿಟಕಿ ಬಳಿ ಕೂರುತ್ತಿದ್ದರು . ನಾವು ಟೂರಿಗೆ ಹೋಗದಿದ್ದರು ಆ ಕುತೂಹಲವನ್ನು ಕಣ್ತುಂಬಿಕೊಳ್ಳಲು ಹೋಗುತ್ತಿದ್ದೆವು . ಟೀಚರ್ಗಳು ತಮ್ಮೊಂದಿಗೆ ತಮ್ಮ ಮಕ್ಕಳನ್ನೂ ಕರೆದೊಯ್ಯುತ್ತಿದ್ದರು .

    ನಾವು ಹೋಗಲಿಲ್ಲ ಅನ್ನೋ ಬೇಸರ ನಮ್ಮಲ್ಲಿದ್ದರು ಮೂರು ದಿನದ ರಜೆಯಲ್ಲಿ ಅದನ್ನು ಮರೆತುಬಿಡುತ್ತಿದ್ದೆವು . ಪ್ರವಾಸ ಮುಗಿಸಿ ಬಂದವರು ಶಾಲೆಯಲ್ಲಿ ಅನುಭವದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರೆ ನಾವು ಮಿಕ ಮಿಕ ನೋಡುತ್ತಿದ್ದೆವು . ಟೀಚರ್ರ ಆದೇಶದ ಮೇರೆಗೆ ಆ ಮಕ್ಕಳು ಪ್ರವಾಸದ ಬಗ್ಗೆ ಒಂದು ಪುಟಕ್ಕೂ ಮೀರದಂತೆ ಪ್ರಬಂಧ ಬರೆಯುತ್ತಿದ್ದರು . ನಾವು ಅದನ್ನ ಕುತೂಹಲದಿಂದ ಓದುತ್ತಿದ್ದೆವು . ಅವರ ಬರವಣಿಗೆಯಲ್ಲಿ ಪ್ರವಾಸವನ್ನು ಅನುಭವಿಸುತ್ತಿದ್ದೆವು .

    ಏನೇ ಹೇಳಿ ಬದುಕೆಂಬ ಪ್ರಯಾಣದಲ್ಲಿ ಬಾಲ್ಯದ ಶಾಲಾ ಪ್ರವಾಸವು ಅತ್ಯಮೂಲ್ಯ.

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೇಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    ಮಾಸ್ತಿ
    ಮಾಸ್ತಿhttps://kannadapress.com
    ಕನ್ನಡ ಚಿತ್ರರಂಗದಲ್ಲಿ ಪ್ರಸ್ತುತ ಬೇಡಿಕೆ ಇರುವ ಸಂಭಾಷಣೆಕಾರ ಮಾಸ್ತಿ ಮೂಲತಃ ಕೋಲಾರ ಜಿಲ್ಲೆಯವರು. ಸುಂಟರಗಾಳಿ ಚಿತ್ರದಿಂದ ಆರಂಭವಾದ ಇವರ ಸಿನಿಮಾ ಜರ್ನಿ ನಟ, ಸಹ ನಿರ್ದೇಶಕ, ಈಗ ಕಥೆಗಾರ, ಸಂಭಾಷಣೆಕಾರ ಮತ್ತು ಚಿತ್ರಕಥೆಗಾರರಾಗಿ ಮುಂದುವರೆದಿದೆ. ಟಗರು ಇವರ ವೃತ್ತಿ ಜೀವನದ ಮೈಲಿಗಲ್ಲು.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!