30.2 C
Karnataka
Thursday, May 21, 2026
    Home Blog Page 28

    Russia attacks Ukraine:ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಆರಂಭ

    ಬೆಳ್ಳಂಬೆಳಗ್ಗೆ ಆದೇಶ ನೀಡಿದ ವ್ಲಾದಿಮೀರ್‌ ಪುಟಿನ್; ಅಮೆರಿಕ ಸೇರಿ ಜಾಗತಿಕ ಸಮುದಾಯ ಖಂಡನೆ, ಯುದ್ಧ ನಿಲ್ಲಿಸುವಂತೆ ಆಗ್ರಹ

    MOSCOW FEB 24

    ಜಾಗತಿಕ ಸಮುದಾಯ ಆತಂಕ ನಿಜವಾಗಿದ್ದು, ನಿರೀಕ್ಷೆಯಂತೆ ರಷ್ಯಾ ತನ್ನ ನೆರೆಯ ಉಕ್ರೇನ್‌ ಮೇಲೆ ಯುದ್ಧ ಆರಂಭಿಸಿದೆ. ಎರಡೂ ಕಡೆಯಿಂದಲೂ ಸಾವು ನೋವಿನ ವರದಿಗಳು ಬರುತ್ತಿವೆ. ಜಾಗತಿಕ ಮಟ್ಟದಲ್ಲಿ ಈ ಯುದ್ಧಕ್ಕೆ ವಿರೋಧ ವ್ಯಕ್ತವಾಗಿದೆ.

    ಭಾರತೀಯ ಕಾಲಮಾನದಂತೆ ಇಂದು ಬೆಳಗ್ಗೆ ಹೊತ್ತಿಗೆ ಮಾಸ್ಕೋದಲ್ಲಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ರಷ್ಯಾ ಅಧ್ಯಕ್ಷ ವ್ಲಾದಿಮೀರ್‌ ಪುಟಿನ್‌‌, ಉಕ್ರೇನ್‌ ಮೇಲೆ ರಷ್ಯಾ ದಾಳಿಗೆ ಆದೇಶ ನೀಡಿರುವುದಾಗಿ ಘೋಷಣೆ ಮಾಡಿದರು. ಬೆಳಗ್ಗೆ ಸುಮಾರು ಆರು ಗಂಟೆ ಹೊತ್ತಿಗೆ ರಷ್ಯಾ ಪಡೆಗಳು ದಾಳಿ ಶುರು ಮಾಡಿವೆ ಎಂದು ಗೊತ್ತಾಗಿದೆ.

    ರಷ್ಯಾ ನಡೆಸಿರುವ ಶೆಲ್‌ ದಾಳಿಯಲ್ಲಿ ಉಕ್ರೇನ್‌ʼನ ಕೆಲ ಗ್ರಾಮಗಳಲ್ಲಿ ಮನೆಗಳಿಗೆ ಹಾನಿಯಾಗಿದೆ. ಕೆಲ ಜನರಿಗೆ ಗಾಯಗಳಾಗಿವೆ. ಸಾವು ನೋವಿನ ಬಗ್ಗೆ ಯಾವ ಮಾಹಿತಿಯೂ ಸಿಕ್ಕಿಲ್ಲ. ಇದೇ ವೇಳೆ ರಷ್ಯಾಕ್ಕೆ ತಿರುಗೇಟು ನೀಡಲು ಉಕ್ರೇನ್‌ ಕೂಡ ಸಿದ್ಧತೆ ಮಾಡಿಕೊಂಡಿದೆ. ಕೆಲವು ರಷ್ಯಾ ಸೈನಿಕರನ್ನು ಸೆರೆ ಹಿಡಿದಿರುವುದಾಗಿ ಉಕ್ರೇನ್ ಹೇಳಿಕೊಂಡಿದೆ. 14 ಜನರಿದ್ದ ಉಕ್ರೇನ್ ವಿಮಾನವನ್ನು ಪತನಗೊಂಡಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

    ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಶರಣಾಗುವಂತೆ ಉಕ್ರೇನ್‌ ಸೇನೆಗೆ ಕರೆ ನೀಡಿರುವ ಪುಟಿನ್‌, ರಷ್ಯಾ ಸಾರ್ವಭೌಮತೆ ರಕ್ಷಿಸಿಕೊಳ್ಳಲು ಹಾಗೂ ಯುರೋಪ್‌ ಖಂಡದಲ್ಲಿ ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಎಲ್ಲ ರೀತಿ ಕ್ರಮಗಳನ್ನು ಕೈಗೊಳ್ಳಲು ಮುಕ್ತ ಅಧಿಕಾರ ಹೊಂದಿದೆ ಎಂದು ಪುಟಿನ್‌ ಹೇಳಿದ್ದಾರೆ.

    ಈ ವಿಷಯದಲ್ಲಿ ಯಾರೇ ಮೂರನೇ ಶಕ್ತಿ ಮಧ್ಯಪ್ರವೇಶ ಮಾಡಿದರೆ ಅವರಿಗೂ ತಕ್ಕ ಉತ್ತರ ನೀಡಲಾಗುವುದು ಎಂದು ಪುಟಿನ್‌ ಇದೇ ವೇಳೆ ಅಮೆರಿಕ ಹಾಗೂ ನ್ಯಾಟೋ ಪಡೆಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಎಚ್ಚರಿಕೆ ನೀಡಿದ್ದಾರೆ.

    ಇದಕ್ಕೆ ಪ್ರತಿಯಾಗಿ ಹೇಳಿಕೆ ನೀಡಿದರುವ ಅಮೆರಿಕ ಅಧ್ಯಕ್ಷ ಜೋ ಬೈಡನ್‌, ರಷ್ಯಾ ದಾಳಿಯನ್ನು ಕಠಿಣ ಶಬ್ದಗಳಲ್ಲಿ ಖಂಡಿಸಿದ್ದು, ಇದು ಉಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ಅಪ್ರಚೋದಿತ ದಾಳಿ ಎಂದು ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ, ಈ ದಾಳಿಗೆ ರಷ್ಯ ತಕ್ಕ ಬೆಲೆ ತೆರಲಿದೆ ಎಂದು ಬೈಡನ್‌ ಎಚ್ಚರಿಕೆ ನೀಡಿದ್ದಾರೆ. ಜತೆಯಲ್ಲಿ ಜರ್ಮನಿ, ಬ್ರಿಟನ್‌ ಸೇರಿದಂತೆ ಯುರೋಪ್‌,ನ ಬಹುತೇಕ ದೇಶಗಳು ದಾಳಿಯನ್ನು ಖಂಡಿಸಿವೆ.

    ಇದರ ಬೆನ್ನಲ್ಲೇ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ ಸೇರಿದ್ದು, ರಷ್ಯಾ ದಾಳಿಯನ್ನು ಖಂಡಿಸಿದೆ. ಆದರೆ, ಜಾಗತಿಕ ಸಮುದಾಯದ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಹೇಳಿರುವ ಪುಟಿನ್‌, ರಷ್ಯದ ಹಿತವನ್ನು ಬಲಿಗೊಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.

    ಭಾರತದ ಆತಂಕ :

    ಉಕ್ರೇನ್ ನಲ್ಲಿನ ಸ್ಥಿಗತಿಗಳ ಬಗ್ಗೆ ಭಾರತದ ಆತಂಕವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವ್ಯಕ್ತಪಡಿಸಿದ್ದಾರೆ. ಉಕ್ರೇನ್ ನಲ್ಲಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರುವ ಬಗ್ಗೆ ಭಾರತ ಸರಕಾರ ಎಲ್ಲಾ ರೀತಿಯ ಪ್ರಯತ್ನ ಮಾ್ಡುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಈ ಪ್ರಾಂತ್ಯದಲ್ಲಿ ಶಾಂತಿ ಮತ್ತು ಸುಭದ್ರತೆಯನ್ನು ಭಾರತ ಬಯಸುತ್ತದೆ ಎಂದು ಅವರು ಹೇಳಿದ್ದಾರೆ.

    ಉಕ್ರೇನ್ ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಸೂಕ್ತ ಕ್ರಮ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    ಉಕ್ರೇನ್ ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

    ರಷ್ಯಾ ಮತ್ತು ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಸುಮಾರು ಭಾರತದ ವಿದ್ಯಾರ್ಥಿಗಳು ವಿಮಾನ ನಿಲ್ದಾಣಕ್ಕೆ ತಲುಪುವಾಗ ಯುದ್ಧ ಪ್ರಾರಂಭವಾಗಿದ್ದರಿಂದ ೧೦೦ ವಿದ್ಯಾರ್ಥಿಗಳು ಎರಡು ಬಸ್‌ಗಳಲ್ಲಿ ಸಿಲುಕಿಕೊಂಡಿದ್ದಾರೆ. ಇವರಲ್ಲಿ ೧೦ ಕ್ಕಿಂತ ಹೆಚ್ಚು ಕನ್ನಡಿಗರಿದ್ದು, ಅವರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಾಗುತ್ತಿದೆ. ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೂ ನಿರಂತರ ಸಂಪರ್ಕದಲ್ಲಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

    ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳ ಸುರಕ್ಷಿತವಾಗಿರಲು ಭಾರತೀಯ ರಾಯಭಾರ ಕಚೇರಿ ಸೂಕ್ತ ಮಾರ್ಗದರ್ಶನವನ್ನು ನೀಡಿದೆ. ವಿಮಾನಗಳು ಪುನ: ಪ್ರಾರಂಭವಾದಾಗ ವಿದ್ಯಾರ್ಥಿಗಳನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತರಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರದ ವಿದೇಶಾಂಗ ಕಾರ್ಯದರ್ಶಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕೇಂದ್ರ ವಿದೇಶಾಂಗ ಸಚಿವರೊಂದಿಗೂ ಈ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

    ಉಕ್ರೇನ್‌ನಲ್ಲಿ ಯುದ್ಧದ ಛಾಯೆಯಿಂದಾಗಿ ಕಳೆದ ವಾರವೇ 200 ಭಾರತೀಯರು ಮರಳಿದ್ದರು. ಆಗ ವಿದ್ಯಾರ್ಥಿಗಳಿಗೆ ಮಾಹಿತಿ ಇರಲಿಲ್ಲವೇ ಎಂಬುದಕ್ಕೆ ಪ್ರತಿಕ್ರಯಿಸಿ, ವಿದ್ಯಾರ್ಥಿಗಳು ಬ್ಯಾಚ್‌ಗಳಲ್ಲಿ ಭಾರತಕ್ಕೆ ಮರಳುತ್ತಿದ್ದು, ಈ ಬ್ಯಾಚ್ ಕಡೆಯದಾಗಿತ್ತು. ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗುವುದು ಎಂದು ತಿಳಿಸಿದರು.

    ಟೆಂಪಲ್ ಟೂರಿಸಂಗೆ ಆದ್ಯತೆ ನೀಡಲು ಮುಖ್ಯಮಂತ್ರಿ ಕರೆ

    BENGALURU FEB 23
    ಕರ್ನಾಟಕದ ಉತ್ತರ, ದಕ್ಷಿಣ ಹಾಗೂ ಕರಾವಳಿ ಭಾಗದಲ್ಲಿ ದೇವಸ್ಥಾನ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಇದರ ಜೊತೆಗೆ ಸ್ಮಾರಕ ಪ್ರವಾಸೋದ್ಯಮಕ್ಕೂ ಅವಕಾಶವಿರುವುದರಿಂದ ಇದಕ್ಕೆ ಉತ್ತೇಜನ ನೀಡಲು ಎರಡನ್ನೂ ಸಂಯೋಜಿಸಿ ಟೂರಿಸಂ ಸರ್ಕೂಟ್ ನಿರ್ಮಿಸುವಂತೆ ಮಖ್ಯಮಂತ್ರಿಗಳು ಸೂಚಿಸಿದರು.

    ಅವರು ಇಂದು ಹಿಂದೂ ಧಾರ್ಮಿಕ ದತ್ತಿ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಸಮಗ್ರ ದೇವಸ್ಥಾನಗಳ ನಿರ್ವಹಣಾ ವ್ಯವಸ್ಥೆ ಹಾಗೂ ದೈವ ಸಂಕಲ್ಪ ಯೋಜನೆಗಳನ್ನು (Integrated Temple Management System- ಐಟಿಎಂಎಸ್) ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು.ದೇವಸ್ಥಾನಗಳಲ್ಲಿ ಸೌಲಭ್ಯಗಳನ್ನು ಒದಗಿಸಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸುವಂತೆ ಮುಖ್ಯಮಂತ್ರಿಗಳು ತಿಳಿಸಿದರು.

    ಐಟಿಎಂಎಸ್ ನ್ನು ಜಾರಿಗೆ ತಂದಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ದೇವಸ್ಥಾನಗಳ ನಿರ್ವಹಣೆ ಬಹಳ ಮುಖ್ಯ. ದೇವಸ್ಥಾನಗಳಿಗೆ ಭೇಟಿ ನೀಡುವವರ ಸಂಖ್ಯೆ ಮುಂತಾದವುಗಳನ್ನು ದಾಖಲಿಸುವ ಪ್ರಯತ್ನವಾಗಬೇಕು. ದೇವಸ್ಥಾನಗಳ ಆಸ್ತಿಗಳ ನಿರ್ವಹಣೆಯನ್ನು ಅತ್ಯಂತ ಸಮರ್ಪಕವಾಗಿ ಮಾಡುವ ಅಗತ್ಯವಿದೆ ಎಂದರು.

    ದೇವಸ್ಥಾನಗಳ ಸಮಗ್ರ ಅಭಿವೃದ್ಧಿ ಮಾಡಿ , ಪೂರ್ಣಪ್ರಮಾಣದಲ್ಲಿ ಸ್ಥಳೀಯವಾಗಿ ವ್ಯವಸ್ಥೆ ಮಾಡಿ ಆಡಳಿತ ಸುಧಾರಿಸುವ ಅಗತ್ಯವಿದೆ. ಸಾರ್ವಜನಿಕರ ದೇಣಿಗೆ ಹಾಗೂ ಆಸ್ತಿ ಒಳಗೊಂಡಿರುವುದರಿಂದ ನಿರ್ವಹಣೆಯ ಜೊತೆಗೆ ನಿಯಂತ್ರಣವೂ ಅಗತ್ಯ ಎಂದರು. ದೇವಸ್ಥಾನಗಳ ಅರ್ಚಕರು ಹಾಗೂ ಪೂಜಾರಿಗಳ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

    ದೇವಸ್ಥಾನಗಳ ಸ್ವಚ್ಛತೆಗೆ ಆದ್ಯತೆ:ದೇವಸ್ಥಾನಗಳ ಸ್ವಚ್ಥತೆಯನ್ನು ಕಾಪಾಡಲು ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿಗಳು ದೇವಸ್ಥಾನಗಳ ಆವರಣಗಳ ವಾತಾವರಣ ಕಲುಷಿತಗೊಳ್ಳದಂತೆ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು ಎಂದರು.

    ಕಾರ್ಯಕ್ರಮದಲ್ಲಿ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಎಸ್ ಎ ರಾಮದಾಸ್, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಕಂದಾಯ ಇಲಾಖೆ ಕಾರ್ಯದರ್ಶಿ ತುಷಾರ ಗಿರಿನಾಥ, ಮುಜರಾಯಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಮೊದಲಾದವರು ಉಪಸ್ಥಿತರಿದ್ದರು.

    ಮಂತ್ರಿಗಳ ಶಾಸಕರ ವೇತನ ಹೆಚ್ಚಳ; ಮಾರ್ಚ್ 4 ರಾಜ್ಯ ಬಜೆಟ್

    ಕಾಂಗ್ರೆಸ್ ವಿರೋಧ ಪಕ್ಷವಾಗಿ ವಿಫಲವಾಗಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    BENGALURU FEB 22

    ಆಡಳಿತ ಪಕ್ಷವಾಗಿ ನೀವು ಕೆಲಸ ಮಾಡಲು ಯೋಗ್ಯರಲ್ಲ ಎಂದು ಜನ 2018 ರಲ್ಲಿ ತೀರ್ಮಾನ ಮಾಡಿದರು. ಕನಿಷ್ಠ ವಿರೋಧ ಪಕ್ಷವಾಗಿಯಾದರೂ ಕಾಂಗ್ರೆಸ್ ಪಕ್ಷ ಕೆಲಸ ಮಾಡಬೇಕಿತ್ತು. ವಿರೋಧ ಪಕ್ಷವಾಗಿಯೂ ಕಾಂಗ್ರೆಸ್ ವಿಫಲವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

    ರಾಜಕಾರಣದ ಮುಸುಕು ಅವರ ಹಾಗೂ ಅವರ ಪಕ್ಷದ ಮೇಲೆ ಬಿದ್ದಿದೆ. ಎಲ್ಲವನ್ನೂ ರಾಜಕೀಯವಾಗಿ ನೋಡುವುದು, ಧ್ವೇಷದಿಂದ ನೋಡುವುದರಿಂದ ಅವರಿಗಾಗಲಿ, ಅವರ ಪಕ್ಷಕ್ಕಾಗಲಿ ರಾಜಕೀಯ ಭವಿಷ್ಯವಿಲ್ಲ. ಸದನ ಶುಕ್ರವಾರದ ವರೆಗೂ ನಡೆಯಬೇಕಿತ್ತು. ಸದನವನ್ನು ಇಂದೇ ಮೊಟಕುಗೊಳಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದ್ದು ಬೇಸರದ ಸಂಗತಿ. ಪ್ರತಿಪಕ್ಷದವರು ಸದನ ಕರೆಯಿರಿ ಚರ್ಚಿಸಬೇಕು ಎನ್ನುತ್ತಾರೆ. ಅಧಿವೇಶನ ನಡೆಯುವಾಗ ಚರ್ಚೆ ಮಾಡಲು ಅವರು ತಯಾರಿಲ್ಲ. ಯಾವುದೇ ವಿಚಾರವನ್ನೇ ಆಗಲಿ ಚರ್ಚೆ ಹಾಗೂ ವಾದ ಮಾಡಬಹುದು. ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಸರ್ಕಾರದ ಸಾಧನೆಯನ್ನು ಹೇಳಿಕೊಂಡಾಗ ಅದರ ನ್ಯೂನ್ಯತೆ ಗಳನ್ನು ಹೇಳಬಹುದಾಗಿತ್ತು. ಆ ಕರ್ತವ್ಯವನ್ನೂ ಅವರು ಮಾಡಲಿಲ್ಲ.

    ಇಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಯ ಬಗ್ಗೆಯೂ ಚರ್ಚೆ ಮಾಡಬಹುದಾಗಿತ್ತು. ಯಾವುದೇ ವಿಚಾರದ ಬಗ್ಗೆ ಚರ್ಚೆ ಮಾಡಲು ಸರ್ಕಾರ ಸಿದ್ಧವಿತ್ತು. ಆದರೆ, ಆ ಹೇಳಿಕೆಯಲ್ಲಿ ಏನೂ ಇಲ್ಲ ಎಂದು ಅವರಿಗೆ ಗೊತ್ತಿದೆ ಎಂದು ಅವರು ಹೇಳಿದರು.

    ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ
    ಧರಣಿ ಮಾರ್ಗದ ಮುಖಾಂತರ ರಾಜ್ಯದ ಜನತೆ ಹಾಗೂ ಸದನದ ದಾರಿಯನ್ನು ತಪ್ಪಿಸಲು ನೋಡುತ್ತಿದ್ದಾರೆ. ವಸ್ತ್ರ ಸಂಹಿತೆಯ ಬಗ್ಗೆ ಉಚ್ಛ ನ್ಯಾಯಾಲಯದಲ್ಲಿ ಗಂಭೀರವಾದ ಚರ್ಚೆ ನಡೆಯುತ್ತಿದೆ. ಈಗಾಗಲೇ ಮಧ್ಯಂತರ ಆದೇಶ ನೀಡಿದೆ. ಅದರ ಅನುಷ್ಠಾನವಾಗುತ್ತಿದೆ. ಈ ಸಂದರ್ಭದಲ್ಲಿ ಕೆಲವು ಗೊಂದಲಗಳನ್ನು ಸೃಷ್ಟಿ ಮಾಡಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ನಾವೆಲ್ಲರೂ ಒಕ್ಕೊರಲಿನ ಸಂದೇಶವನ್ನು ನೀಡೋಣ, ಅಂತಿಮ ಆದೇಶ ಬರುವವರೆಗೂ ಕಾದು, ಶಾಂತಿಯಿಂದ ಇರಬಹುದಾಗಿತ್ತು. ಮಕ್ಕಳ ವಿದ್ಯಾಭ್ಯಾಸ ಬಹಳ ಮುಖ್ಯ. ಪರೀಕ್ಷೆಗಳಿವೆ ಎಂಬ ಕನಿಷ್ಠ ಸಂದೇಶವನ್ನು ಕೊಡಲು ಕೂಡ ಅವರಿಗೆ ಸಾಧ್ಯವಾಗಲಿಲ್ಲ. ಮಾನವೀಯತೆ ವಿಚಾರವನ್ನೇ ಇಟ್ಟುಕೊಂಡಿಲ್ಲ. ರಾಜಕಾರಣವೇ ಪ್ರಮುಖವಾಗಿದೆ. ರಾಜಕಾರಣದಲ್ಲೂ ಕೂಡ ವಿರೋಧ ಪಕ್ಷದ ನಾಯಕರು, ಕಾಂಗ್ರೆಸ್ ಅಧ್ಯಕ್ಷರು, ಹಿರಿಯರು. ಬಹಳ ವರ್ಷಗಳಿಂದ ರಾಜಕಾರಣದಲ್ಲಿರುವವರು. ಅವರ ಅನುಭವ ಎಲ್ಲಿ ಹೋಯಿತು. ಅವರ ಅನುಭವದಿಂದ ವಿರೋಧ ಪಕ್ಷವಾಗಿ ಕೆಲಸ ಮಾಡಿದ್ದರೆ, ಜನ ಮೆಚ್ಚಿಕೊಳ್ಳುತ್ತಿದ್ದರು ಎಂದರು.

    ಮತಾಂತರ ನಿಷೇಧ ಕಾಯ್ದೆ:
    ಬೆಳಗಾವಿಯಲ್ಲಿ ಅಧಿವೇಶನದಲ್ಲಿ ಮತಾಂತರ ನಿಷೇಧ ವಿಧೇಯಕವನ್ನು ವಿಧಾನಪರಿಷತ್ತಿನಲ್ಲಿ ಮಂಡನೆಯಾಗಲಿಲ್ಲ. ಈಗ ಮಂಡಿಸಲು ಸಾಧ್ಯವಾಗಲಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಸದನ ವ್ಯವಸ್ಥಿತವಾಗಿಲ್ಲ. ಚರ್ಚೆ ಮಾಡಿ ಅಂಗೀಕರಿಸಲಾಗುವುದು ಎಂದರು.

    ಸಚಿವರು ಹಾಗೂ ಶಾಸಕರ ವೇತನ ಹೆಚ್ಚಳ:
    ರಾಜ್ಯದಲ್ಲಿ ಆರ್ಥಿಕ ಮುಗ್ಗಟ್ಟಿರುವ ಸಂದರ್ಭದಲ್ಲಿ ಸಚಿವರು ಮತ್ತು ಶಾಸಕ ವೇತನವನ್ನು ಹೆಚ್ಚಿಸಿರುವ ಬಗ್ಗೆ ಚರ್ಚೆಯಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ಹಲವಾರು ವಿಚಾರದಲ್ಲಿ ವೇತನ ಹೆಚ್ಚಾಗಿರಲಿಲ್ಲ. ಎಲ್ಲಾ ಪಕ್ಷದ ಶಾಸಕರ ಅಭಿಪ್ರಾಯ, ದಿನನಿತ್ಯದ ಓಡಾಟ, ಹಣದುಬ್ಬರ ಎಲ್ಲವನ್ನೂ ಪರಿಗಣಿಸಿ ವೇತನವನ್ನು ಹೆಚ್ಚಿಸಲಾಗಿದೆ ಎಂದರು.

    ಮಾರ್ಚ್ 4 ರಂದು ಬಜೆಟ್:
    ಬಜೆಟ್ ಮಾರ್ಚ್ 04 ರಂದು ಮಂಡಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಬೇಲಿಯೇ ಎದ್ದು ಹೊಲಮೇಯ್ದಂತೆ

    ಸುಮಾ ವೀಣಾ

    ಕಾವರೆ ಕಣೆಗೊಂಡರ್ – ಅಭಿನವಪಂಪನೆಂದು ಬಿರುದಾಂಕಿತನಾಗಿರುವ  ನಾಗಚಂದ್ರ ಕವಿಯ ರಾಮಚಂದ್ರ ಚರಿತಪುರಾಣದಲ್ಲಿ ಈ  ಮಾತು ಉಲ್ಲೇಖವಾಗಿದೆ.

    ರಾವಣ  ವಿಧಿಯ ಅಟ್ಟಹಾಸಕ್ಕೆ ಸಿಕ್ಕು ‘ಪದ್ಮಪತ್ರದ ಜಲಬಿಂದುವಿನಂತೆ ಚಲಿತಮಾದುದು ಚಿತ್ತಂ’ ಎಂಬ ನಾಗಚಂದ್ರನ  ಮಾತುಗಳನ್ವಯವೇ ಚಿತ್ತಚಾಂಚಲ್ಯಕ್ಕೊಳಗಾಗಿ  ಸೀತೆಯನ್ನು ಅಪಹರಿಸಿಕೊಂಡು ಹೋಗಿ ಪ್ರಮದ ವನದಲ್ಲಿ ಇರಿಸಿರುತ್ತಾನೆ. ಹೇಗಾದರೂ ಸರಿ  ಆಕೆಯನ್ನು ನಾನು ಕೈವಶಮಾಡಿಕೊಳ್ಳಬೇಕು ಅದಕ್ಕೆ  ನೀನು ಸಹಾಯಮಾಡಬೇಕೆಂದು ತಾನು ಒಲಿಸಿಕೊಂಡಿದ್ದ ಅವಲೋಕಿನಿ ವಿದ್ಯೆಯಲ್ಲಿ  ರಾವಣ ಕೇಳಿಕೊಳ್ಳುತ್ತಾನೆ.

    ಅದಕ್ಕೆ  ಆಕೆ ಉತ್ತರವಾಗಿ  ‘ನಿಷ್ಕಾರಣಮಿವರೊಳ್ ವಿರೋಧಮಂ  ಮಾಡುವುದೇ? ಎನ್ನುತ್ತಾ ರಾಮ ಕಾರಣಪುರುಷ ಆತನ ಹೆಂಡತಿಯನ್ನು ವಿನಾಕಾರಣ  ಅಪಹರಿಸಿ ವಿರೋಧ ಕಟ್ಟಿಕೊಳ್ಳುವುದು ಸರಿಯಲ್ಲ  . ಅಧರ್ಮವನ್ನು ನಿಯಂತ್ರಿಸುವುದು  ರಾಜನ ಕೆಲಸ ಆದರೆ ಅದನ್ನು ಮೀರಿ  ದುರ್ವಿಷಯಕ್ಕೆ ನೀನೇ ಮನಸ್ಸು ಮಾಡುತ್ತಿರುವುದು ಸರಿಯಲ್ಲ.  ನಿನ್ನ ಈ  ಕೆಟ್ಟನಡತೆ ಕಾಯುವ ಕೈಗಳೆ ಕತ್ತಿಹಿಡಿವರೆಂಬ ನಾಣ್ಣುಡಿಗೆ ಸಮ  ಎಂದು ಅವಲೋಕಿನಿ ವಿದ್ಯೆ ಬುದ್ಧಿ ಹೇಳುವ ಪ್ರಯತ್ನವನ್ನು ಮಾಡುತ್ತದೆ. 

    ‘ಕಾವರೆ ಕಣೆಗೊಂಡರ್’ ಎಂಬ ಮಾತು  ಬೇಲಿಯೇ ಎದ್ದು ಹೊಲಮೇಯ್ದಂತೆ,ರಕ್ಷಕರೆ ಭಕ್ಷಕರಾದಂತೆ.  ತಾಯಿಯ ಹಾಲೆ ನಂಜಾದಂತೆ  ಮುಂತಾದ  ನುಡಿಗಳಿಗೆ ಸಮವಾಗಿದೆ.  ಜವಾಬ್ದಾರಿಯಿಲ್ಲದೆ, ತನಗಿರುವ  ಸ್ಥಾನಕ್ಕೆ  ಘನತೆಗೆ ಧಕ್ಕೆ  ತಂದುಕೊಳ್ಳುವ ಕೆಲಸವನ್ನು ಕೆಲವರು ಮಾಡಿಕೊಳ್ಳುತ್ತಾರೆ.  ಅಧಿಕಾರದ ಮದವಾವರಿಸಿರುವವರು, ದುಶ್ಚಟಗಳನ್ನು ಹೊಂದಿರುವವರು ಎಂಥ ನೀಚ ಕೃತ್ಯಕ್ಕೂ ಇಳಿಯಬಲ್ಲರು ಎಂಬುದನ್ನು ಇಲ್ಲಿ  ಅರ್ಥ ಮಾಡಿಕೊಳ್ಳಬಹುದಾಗಿದೆ.  

    ನಾಗಚಂದ್ರ ಕೇವಲ  ಒಂದು ಅಪಸವ್ಯವನ್ನಷ್ಟೇ ಅವಲೋಕಿನಿ ವಿದ್ಯೆಯ ಮೂಲಕ ಹೇಳಿಸಿದ್ದಾನೆ  ಆದರೆ ಇಂಥ ಅನೇಕ  ವೈರುಧ್ಯಗಳು ನಮ್ಮ ನಡುವಿವೆ.  ಇಂದಿನ  ದಿನಮಾನಗಳಲ್ಲಿ  ಕರ್ತವ್ಯ ಮತ್ತು ಜವಾಬ್ದಾರಿಗಳ ಮಹತ್ವವನ್ನು ಯಾರೂ ಅರಿಯುತ್ತಿಲ್ಲ ತಮಗೆ  ಹೇಗೆ ಬೇಕೋ ಹಾಗೆ ಸಾಮಾಜಿಕ, ನೈತಿಕ   ಇತಿಮಿತಿಗಳನ್ನು ಮೀರಿ  ಸ್ವೇಚ್ಛೆಗೆ  ಮನವನ್ನು ಒಪ್ಪಿಸುತ್ತಿದ್ದಾರೆ   ಈ ಕಾರಣದಿಂದಲೇ  ಕೆಲವೊಮ್ಮೆ ಸಾಮಾಜಿಕ ರಕ್ಷಣೆ ಸವಾಲಾಗುತ್ತಿದೆ.  ತನ್ನ ಸ್ಥಾನ,ಕಾರ್ಯ,ಜವಾಬ್ದಾರಿಯನ್ನು  ಅರಿತು  ಸಾಮಾಜಿಕರು ಮುನ್ನಡೆಯಬೇಕಾಗುತ್ತದೆ. 

    ಕಾಯುವವರೆ ಕತ್ತಿ ಹಿಡಿದರು,ಕಾಯುವ ಕೈಗಳೆ  ಕೊಡಲಿ ಕಾವುಗಳಾದವು ಎಂಬ ಮಾತುಗಳು ವಿನಾಶತ್ವವನ್ನು ಎಚ್ಚರಿಸುವ ಮಾತುಗಳು .   ಸಾಮಾಜಿಕ ವ್ಯವಸ್ಥೆಯಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವವರೆಲ್ಲಾ   ಇದನ್ನು ಅರಿಯಬೇಕಿದೆ…. ಪಾಲಿಸಬೇಕಿದೆ!

    This image has an empty alt attribute; its file name is suma-veena-2-edited.jpg

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    Indian Stock Market: ಐಪಿಒ ಗಳ ಬಗ್ಗೆ ತಿಳಿಯಲೇಬೇಕಾದ ಅಂಶಗಳು

    ಕಂಪನಿಗಳು, ವಿಶೇಷವಾಗಿ ಸ್ಟಾರ್ಟ್‌ ಅಪ್‌, ಯೂನಿಕಾರ್ನ್‌ ಎಂಬ ನಾಮಾಂಕಿತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಂಪನಿಗಳಲ್ಲಿ ಪ್ರವರ್ತಕರ ಹೂಡಿಕೆಯಲ್ಲದೆ, ಹೊರಗಡೆಯಿಂದ ಅನೇಕ ಸಂಸ್ಥೆಗಳು ಈ ಸ್ಟಾರ್ಟ್‌ ಅಪ್‌ ಕಂಪನಿಗಳಿಗೆ ಫಂಡಿಂಗ್‌ ಒದಗಿಸುವ ವ್ಯವಸ್ಥೆಯು ಜಾರಿಯಲ್ಲಿದೆ. ಈ ಅಂಶವು ಎಲ್ಲಾ ಹೂಡಿಕೆದಾರರಿಗೂ ತಿಳಿದಿರುವುದಿಲ್ಲ. ಕೇವಲ ಮಾಧ್ಯಮಗಳಲ್ಲಿ ಬಂದಂತಹ ಅಂಶಗಳನ್ನಾಧರಿಸಿ ನಿರ್ಧರಿಸುತ್ತಾರೆ. ಅದೇ ಮಾಧ್ಯಮದಲ್ಲಿ ಅರಿತು ಹೂಡಿಕೆ ಮಾಡಿ ಎಂದು ಹೇಳುವುದನ್ನು ಕಡೆಗಣಿಸುತ್ತಾರೆ.

    ಯಾವುದೇ ಕಂಪನಿಯಲ್ಲಿ ಸಾರ್ವಜನಿಕ ವಿತರಣೆಗೆ ಮುನ್ನ ಪ್ರೈವೇಟ್‌ ಈಕ್ವಿಟಿ ಇನ್ವೆಸ್ಟರ್‌ ಅಥವಾ ವೆಂಚರ್‌ ಕ್ಯಾಪಿಟಲ್‌ ಸಂಸ್ಥೆಗಳು ಹೂಡಿಕೆ ಮಾಡಿದ್ದಲ್ಲಿ ಅಂತಹ ಕಂಪನಿಗಳು ನಿಗದಿ ಪಡಿಸುವ ಐ ಪಿ ಒ-IPO- ಷೇರುಗಳ ಬೆಲೆ ಅತಿ ಹೆಚ್ಚಾಗಿರುತ್ತವೆ. ಹೆಚ್ಚಿನ ಕಂಪನಿಗಳಲ್ಲಿ ವೆಂಚರ್‌ ಕ್ಯಾಪಿಟಲ್‌ ಸಂಸ್ಥೆಗಳ ಫಂಡಿಂಗ್‌ ಇದೆ. ಐ ಪಿ ಒ ಗೂ ಮುನ್ನ ಗ್ರೇ ಮಾರ್ಕೆಟ್ ಎಂಬ ಅನಧಿಕೃತ ಪೇಟೆಯಲ್ಲಿ ಪ್ರೀಮಿಯಂ ಹೆಚ್ಚಿದೆ ಎಂಬ ಪ್ರಚಾರ ಸಹ ನಡೆಯುತ್ತಿರುತ್ತದೆ. ಇಂತಹ ಗ್ರೇ ಮಾರ್ಕೆಟ್‌ ದರಗಳಿಗೆ ಮಾನ್ಯತೆ ಇರುವುದಿಲ್ಲ. ಇಂತಹವುಗಳಿಂದ ದೂರವಿದ್ದಲ್ಲಿ ಕ್ಷೇಮ. ಏರಿಕೆ ಮತ್ತು ಇಳಿಕೆಗಳಿಗೆ ಇತಿಮಿತಿಗಳಿರುವುದಿಲ್ಲ. ಅಧಿಕೃತವಾಗಿಯೇ ಅನೇಕ ಅವಕಾಶಗಳು ಲಭ್ಯವಿರುವಾಗ, ಅನಧಿಕೃತ ವ್ಯವಹಾರಿಕ ಚಿಂತನೆ ಏಕೆ?

    ಸಂಪನ್ಮೂಲ ಅಗತ್ಯತೆ ಯಾರಿಗಾಗಿ:

    ಒಟ್ಟಾರೆ ಒಂದು ಕಂಪನಿಯ ಹಿಂದೆ ಅಡಗಿರುವ ಆರ್ಥಿಕ ಸಾಮರ್ಥ್ಯ, ತೊಳಲಾಟ, ಗೊಂದಲ, ಒತ್ತಡಗಳು ಸಂಪೂರ್ಣ ಪಾರದರ್ಶಕವಾಗಿರಲು ಸಾಧ್ಯವಿರಲಾರದು. ಹಿಂದೆ ಇನ್ಫೋಸಿಸ್‌ ನಂತಹ ಕಂಪನಿಗಳು ಷೇರು ವಿತರಣೆಯ ಸಂದರ್ಭದಲ್ಲಿ ಹೂಡಿಕೆದಾರರ ಹಿತದಿಂದ ನಿಗದಿಪಡಿಸುತ್ತಿದ್ದ ಪ್ರೀಮಿಯಂ ಕಡಿಮೆ ಇರುತ್ತಿತ್ತು. ಆಗ ಆ ಕಂಪನಿಗೆ ಅಭಿವೃದ್ಧಿಯ ದೃಷ್ಠಿಯಿಂದ, ಸಂಪನ್ಮೂಲದ ಅಗತ್ಯತೆ ಇತ್ತು. ಅದರ ಮೂಲಕ ತನ್ನ ಗುರಿ ಸಾಧನೆಯ ಪ್ರಯತ್ನ ನಡೆಯಬೇಕಿತ್ತು. ಆದರೆ ಈಗ ಕಂಪನಿಯ ಚಟುವಟಿಕೆಗೆ, ಅಭಿವೃದ್ಧಿಗೆ ಸಂಪನ್ಮೂಲದ ಅಗತ್ಯವಿಲ್ಲ. ಕಾರಣ ಕಂಪನಿಯ ಪ್ರವರ್ತಕರು ಮತ್ತು ವೆಂಚರ್‌ ಕ್ಯಾಪಿಟಲ್‌ ಸಂಸ್ಥೆಗಳು ಕಂಪನಿಯ ಅಗತ್ಯವಿರುವ ಸಂಪನ್ಮೂಲವನ್ನು ಪೂರೈಸಿ, ಕಂಪನಿಗೆ ಉತ್ತಮ ಬ್ರಾಂಡ್‌ ಇಮೇಜನ್ನು ತಂದುಕೊಂಡ ಮೇಲೆ ಮೌಲ್ಯಾಧಾರಿತ ವಿತರಣೆ ಮಾಡುವ ಬದಲು, ಸ್ವಹಿತವನ್ನೇ ಆಧರಿಸಿ ಅವಕಾಶಗಳ ಲಾಭ ದೊರಕಿಸಿಕೊಳ್ಳಲು ಐ ಪಿ ಒ ವಿತರಣೆಗೆ ಮುಂದಾಗುತ್ತಾರೆ.

    ಐ ಪಿ ಒ ಮೂಲಕ ಹೂಡಿಕೆದಾರರಿಂದ ಸಂಗ್ರಹಿಸಿದ ಸಂಪನ್ಮೂಲವು ಹಲವ ಭಾರಿ ನೇರವಾಗಿ, ಸಂಪೂರ್ಣವಾಗಿ ಪ್ರವರ್ತಕರು, ಮತ್ತು ಫಂಡಿಂಗ್‌ ಮಾಡಿರುವವರ ಖಜಾನೆ ತುಂಬಿಸುವ ರೀತಿ ಪ್ರೀಮಿಯಂ ನಿಗದಿಪಡಿಸಲಾಗುತ್ತಿದೆ. ಹಲವು ಕಂಪನಿಗಳಂತೂ ವಿತರಣೆಯನ್ನು ಸಂಪೂರ್ಣವಾಗಿ ಆಫರ್‌ ಫಾರ್‌ ಸೇಲ್‌ ಮೂಲಕ ಪ್ರವರ್ತಕರ ಮತ್ತು ವೆಂಚರ್‌ ಕ್ಯಾಪಿಟಲ್‌ ಸಂಸ್ಥೆಗಳ ಖಜಾನೆಗೆ ಸೇರಿ, ಕಂಪನಿಗೆ ಒಂದು ಬಿಡಿಕಾಸು ಸಿಗುವುದಿಲ್ಲ.

    ಪ್ರೈವೇಟ್‌ ಲಿಮಿಟೆಡ್‌ ನಿಂದ ಪಬ್ಲಿಕ್‌ ಲಿಮಿಟೆಡ್‌ ಕಂಪನಿಯಾಗಿ ಪರಿವರ್ತನೆ:

    ಕೆಲವು ಕಂಪನಿಗಳು ಐ ಪಿ ಒ ಗಳನ್ನು ಅಧಿಕ ಪ್ರೀಮಿಯಂನಲ್ಲಿ ತೇಲಿಬಿಡುವುದಕ್ಕಾಗಿಯೇ ತಮ್ಮ ಕಂಪನಿಗಳನ್ನು ಪ್ರೈವೇಟ್‌ ಲಿಮಿಟೆಡ್‌ ನಿಂದ ಪಬ್ಲಿಕ್‌ ಲಿಮಿಟೆಡ್‌ ಕಂಪನಿಗಳಾಗಿ ಪರಿವರ್ತಿಸಿ, ಕೆಲವೇ ತಿಂಗಳಲ್ಲಿ ಐ ಪಿ ಒ ಮೂಲಕ ವಿತರಣೆ ಮಾಡುವರು.

    ಐ ಪಿ ಒ ಗೂ ಮುಂಚೆ ಮುಖಬೆಲೆ ಸೀಳಿಕೆ:

    ಈಚಿನ ದಿನಗಳಲ್ಲಿ ಷೇರುಪೇಟೆಯ ಸೂಚ್ಯಂಕಗಳು ಗಗನದತ್ತ ಚಿಮ್ಮುತ್ತಿರುವುದರ ಪ್ರಚಾರದಿಂದ ಪ್ರೇರಿತರಾಗಿ ಐ ಪಿ ಒ ಎಂದರೆ ಸದಾ ಲಾಭದಾಯಕ ಎಂಬ ವಿಶ್ವಾಸದಿಂದ, ಬೇರೆ ಯಾವುದೇ ಚಿಂತನೆ, ವಿಶ್ಲೇಷಣೆಗಳನ್ನು ಮಾಡದೆ ಅರ್ಜಿ ಸಲ್ಲಿಸುತ್ತಾರೆ. ಕೆಲವು ಕಂಪನಿಗಳು ಅಧಿಕ ಪ್ರೀಮಿಯಂ ನಿಗದಿಪಡಿಸುವುಕ್ಕಾಗಿ ಕೆಲವು ತಿಂಗಳುಗಳ ಮುಂಚೆ ತಮ್ಮ ಷೇರಿನ ಮುಖಬೆಲೆಯನ್ನು ಸೀಳಿರುತ್ತವೆ. ಅಂದರೆ ಉದಾಹರಣೆಗೆ ಮುಖಬೆಲೆ ರೂ.10 ರ ಷೇರನ್ನು ಐಪಿಒ ವಿತರಣೆ ಬೆಲೆ ರೂ. 2000 ಎಂದಾದರೆ, ಕೆಲವು ಕಂಪನಿಗಳು ರೂ.10 ರ ಮುಖಬೆಲೆಯ ಷೇರನ್ನು ರೂ.1 ಅಥವಾ 2 ಕ್ಕೆ ಸೀಳಿಕೆ ಮಾಡಿ ಅದನ್ನೇ ರೂ.2,000 ಎಂದು ವಿತರಣೆ ನಿಗದಿಪಡಿಸುವ ಚಿಂತನೆಯು ಆರ್ಥಿಕ ಸಾಕ್ಷರತಾ ಮಟ್ಟವು ಶೇ.27 ರ ಸಮೀಪವಿದ್ದು, ಹೆಚ್ಚಿನವರು ಷೇರುಪೇಟೆಯ ಚಟುವಟಿಕೆಯ ಅರಿವಿಲ್ಲದೆ ಪ್ರವೇಶಿಸಿರುವ ಸಂದರ್ಭದಲ್ಲಿ ಈ ರೀತಿಯ ಚಿಂತನೆ ಸರಿಯಲ್ಲ.

    ಕಾರ್ಪರೇಟ್‌ ಫಲ ವಿತರಣೆ:

    ಕಂಪನಿಗಳು ಐ ಪಿ ಒ ವಿತರಣೆಗೂ ಮುಂಚೆ ಭಾರಿ ಗಾತ್ರದ ಲಾಭಾಂಶವನ್ನಾಗಲಿ ಅಥವಾ ಅಸಹಜ ಮಟ್ಟದ ಬೋನಸ್‌ ಷೇರು ವಿತರಣೆಯನ್ನು ಮಾಡುವ ಮೂಲಕ ಕಂಪನಿಯಲ್ಲಿರುವ ಮೀಸಲು ನಿಧಿಯನ್ನು ಖಾಲಿ ಮಾಡುವ ಚಿಂತನೆಗಳುಳ್ಳವನ್ನೂ ಈಚಿನ ದಿನಗಳಲ್ಲಿ ಕಂಡಿದ್ದೇವೆ. ಐಪಿಒ ಮೂಲಕ ಪ್ರವೇಶ ಪಡೆದ ಹೂಡಿಕೆದಾರರ ಹಿತಕ್ಕೆ ವಿರುದ್ಧವಾದ ಕ್ರಮವಿದಾಗಿದೆ.

    ಇಂತಹ ಚಿಂತನೆಗಳಿರುವ ಕಂಪನಿಗಳಲ್ಲಿ ಹೂಡಿಕೆ ಅಂದರೆ ಪ್ರಾಫಿಟಬಲ್‌ ಅನ್ನುವುದಕ್ಕಿಂತ ಚಾರಿಟಬಲ್‌ ರೀತಿಯಾಗುತ್ತದೆ. ಸಾಧ್ಯವಾದಷ್ಟು ಮಾಹಿತಿಯನ್ನು ಸಂಗ್ರಹಿಸಿ ನಂತರ ಆ ಕಂಪನಿ ವಿತರಿಸುತ್ತಿರುವ ಬೆಲೆ ಸೂಕ್ತವೆಂದು ದೃಢಪಡಿಸಿಕೊಂಡಲ್ಲಿ, ಹೂಡಿಕೆ ಸ್ವಲ್ಪಮಟ್ಟಿನ ಸುರಕ್ಷತೆ ಕಾಣಲು ಸಾಧ್ಯ.

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    Kalatapasvi Rajesh:ಕಲಾತಪಸ್ವಿ ರಾಜೇಶ್ ನಿಧನ

    BENGALURU FEB 19

    ಕನ್ನಡ ಚಿತ್ರರಂಗದ ಹಿರಿಯ ನಟ, ‘ಕಲಾತಪಸ್ವಿ’ ರಾಜೇಶ್ ಇಂದು ಮುಂಜಾನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ 84 ವರ್ಷದ ರಾಜೇಶ್ ಅವರನ್ನು ತೀವ್ರ ನಿಗಾ ಘಟಕ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆ ಫಲಿಸದೇ ಇಂದು ಇಹಲೋಕವನ್ನು ತ್ಯಜಿಸಿದ್ದಾರೆ.

    ರಾಜೇಶ್ ಅವರು ಏಪ್ರಿಲ್ 15, 1935ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು.ರಾಜೇಶ್ ಪಿ.ಡಬ್ಲ್ಯೂಡಿ ಇಲಾಖೆಯಲ್ಲಿ ಶೀಘ್ರಲಿಪಿ ಮತ್ತು ಬೆರಳಚ್ಚುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು.

    ಹೈಸ್ಕೂಲಿನ ದಿನಗಳಿಂದಲೇ ಅವರಿಗೆ ರಂಗಭೂಮಿಯ ಸೆಳೆತ ಅಪಾರವಾಗಿತ್ತು. ಅಂದಿನ ರಂಗಭೂಮಿ ಕಲಾವಿದರಾದ ತ್ಯಾಗರಾಜ ಭಾಗವತರ್, ಟಿ. ಆರ್. ಮಹಾಲಿಂಗಂ ಅಂತಹ ಕಲಾವಿದರ ಬಗ್ಗೆ ಅವರಿಗೆ ತುಂಬು ಅಭಿಮಾನ. ಹೀಗಾಗಿ ಮನೆಯವರಿಗೆ ತಿಳಿಯದಂತೆ ಸುದರ್ಶನ್ ನಾಟಕ ಮಂಡಳಿಯಲ್ಲಿ ಪಾತ್ರವಹಿಸತೊಡಗಿದರು.ಮುಂದೆ ತಮ್ಮದೇ ಆದ ‘ಶಕ್ತಿ ನಾಟಕ ಮಂಡಳಿ’ಯನ್ನು ಸ್ಥಾಪಿಸಿದ ರಾಜೇಶ್ ನಾಡಿನೆಲ್ಲೆಡೆ ಪ್ರಸಿದ್ಧ ನಾಟಕಗಳನ್ನಾಡಿದರು.

    ನಾಟಕಗಳಲ್ಲಿನ ಜನಪ್ರಿಯತೆ ರಾಜೇಶರನ್ನು ಚಿತ್ರರಂಗಕ್ಕೂ ಕರೆದು ತಂದಿತು. ಅಂದಿನ ಪ್ರಸಿದ್ಧ ನಿರ್ದೇಶಕರಾದ ಹುಣಸೂರು ಕೃಷ್ಣಮೂರ್ತಿಯವರು ವಿದ್ಯಾಸಾಗರ್ ಎಂಬ ಹೆಸರಿದ್ದ ರಾಜೇಶ್ ಅವರನ್ನು ‘ವೀರ ಸಂಕಲ್ಪ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು.

    ಪ್ರಸಿದ್ಧ ನಿರ್ಮಾಪಕ ಬಿ. ಎಸ್. ನಾರಾಯಣ್ ನಿರ್ಮಿಸಿ, ಸಿ.ವಿ. ಶಿವಶಂಕರ್ ಅವರು ನಿರ್ದೇಶಿಸಿದ ‘ನಮ್ಮ ಊರು’ ಚಿತ್ರ ಭರ್ಜರಿ ಯಶಸ್ಸು ಕಂಡಿದ್ದಲ್ಲದೆ ರಾಜೇಶ್ ಅವರಿಗೆ ಅಪಾರ ಜನಪ್ರಿಯತೆಯನ್ನು ತಂದಿತು. ಹೀಗೆ ಸಾಗಿದ ತಮ್ಮ ಚಿತ್ರರಂಗದ ಬದುಕಿನಲ್ಲಿ ರಾಜೇಶ್ ಅವರು150ಕ್ಕೂ ಹೆಚ್ಚು ನಾಯಕ ಪ್ರದಾನ ಪಾತ್ರಗಳು ಮತ್ತು ವೈವಿಧ್ಯಮಯ ಪೋಷಕ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.

    ‘ನಮ್ಮ ಊರು’, ‘ಗಂಗೆ ಗೌರಿ’, ‘ಸತೀ ಸುಕನ್ಯ’, ಬೆಳುವಲದ ಮಡಿಲಲ್ಲಿ’, ‘ಕಪ್ಪು ಬಿಳುಪು’, ‘ಬೃಂದಾವನ’, ‘ಬೋರೆ ಗೌಡ ಬೆಂಗಳೂರಿಗೆ ಬಂದ’, ‘ಮರೆಯದ ದೀಪಾವಳಿ’, ‘ಪ್ರತಿಧ್ವನಿ’, ‘ಕಾವೇರಿ’, ‘ದೇವರ ಗುಡಿ’, ‘ಬದುಕು ಬಂಗಾರವಾಯ್ತು’, ‘ಸೊಸೆ ತಂದ ಸೌಭಾಗ್ಯ’, ‘ಮುಗಿಯದ ಕಥೆ’, ‘ಬಿಡುಗಡೆ’, ‘ದೇವರದುಡ್ಡು’, ‘ಕಲಿಯುಗ’, ‘ಪಿತಾಮಹ’ ಮುಂತಾದ ಚಿತ್ರಗಳಲ್ಲಿ ರಾಜೇಶರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು. ರಾಜೇಶ್ ಅವರು ನಾಯಕನಾಗದೆ, ನಾಯಕನ ಅಥವಾ ನಾಯಕಿಯ ಅಣ್ಣನಂತಹ ಪಾತ್ರಗಳಲ್ಲಿ ಅಭಿನಯಿಸಿದಾಗ ಸಹಾ ಅದು ಬಹಳಷ್ಟು ಜನಪ್ರಿಯವಾಗಿದೆ. ‘ಪ್ರತಿಧ್ವನಿ’, ‘ದೇವರಗುಡಿ’, ‘ಬದುಕು ಬಂಗಾರವಾಯ್ತು’ ಚಿತ್ರಗಳಲ್ಲಿ ಅವರು ನಾಯಕನಾಗಿ ಅಭಿನಯಿಸದಿದ್ದರೂ ಬಹಳ ಕಾಲ ನೆನಪಿನಲ್ಲುಳಿಯುತ್ತಾರೆ. ‘ಕರ್ಣ’ ಚಿತ್ರದಲ್ಲಿ ಡಾಕ್ಟರ್ ಆಗಿ ಅಭಿನಯಿಸಿದ ಅವರ ಗಾಂಭೀರ್ಯ ಕೂಡಾ ಬಹಳ ಕಾಲ ನೆನಪಿನಲ್ಲಿ ಉಳಿಯುವಂತದ್ದು. ಪಾತ್ರವೇ ತಾನಾಗಿ ಪರಕಾಯ ಪ್ರವೇಶ ಮಾಡುವಂತಹ ನಟನೊಬ್ಬನ ಪ್ರಧಾನ ಗುಣಗಳಿವು.

    ರಾಜೇಶ್ ಅವರ ಭಾಷಾ ಉಚ್ಚಾರ, ಭಾವಾಭಿನಯ ಉತ್ತಮ ಮಟ್ಟದ್ದಾಗಿದ್ದು ನಿರಂತರವಾಗಿ ಅವರು ಉತ್ತಮ ಪಾತ್ರಗಳನ್ನು ನಿರ್ವಹಿಸುತ್ತಾ ಬಂದರು. ‘ಬೆಳುವಲದ ಮಡಿಲಲ್ಲಿ ಬೆವರ ಹನಿ ಬಿದ್ದಾಗ’, ‘ನಾನೇ ಎಂಬ ಭಾವ ನಾಶವಾಯಿತೋ’, ‘ರವಿವರ್ಮನ ಕುಂಚದ ಕಲೆ’, ‘ಈ ದೇಶ ಚೆನ್ನ ಈ ಮಣ್ಣು ಚಿನ್ನ’, ‘ಕಂಗಳು ವಂದನೆ ಹೇಳಿವೆ’ ಮುಂತಾದ ಜನಪ್ರಿಯ ಹಾಡುಗಳನ್ನು ನೆನೆದಾಗ ತಟ್ಟನೆ ರಾಜೇಶ್ ಕಣ್ಮುಂದೆ ಬಂದು ನಿಲ್ಲುತ್ತಾರೆ.

    ‘ಕಲಾತಪಸ್ವಿ ರಾಜೇಶ್’ ಎಂಬುದು ಅವರ ಆತ್ಮಚರಿತ್ರೆಯ ಹೆಸರು. ಅವರ ಅಭಿನಯ ಮೇರು ನಟ ಶಿವಾಜಿಗಣೇಶನ್ ಅವರ ಅಭಿನಯವನ್ನು ನೆನಪಿಸುವಂತದ್ದು ಎಂಬುದು ಅಂದಿನ ದಿನಗಳಲ್ಲಿ ಅವರನ್ನು ಕುರಿತ ಮೆಚ್ಚುಗೆಯ ಮಾತಾಗಿತ್ತು. ಶ್ರೀಮಂತವಾದ ತಮಿಳು ಚಿತ್ರರಂಗದಿಂದ ಅಂದಿನ ದಿನಗಳಲ್ಲಿ ಅವಕಾಶಗಳು ಕೂಡಿಬಂದರೂ ಕನ್ನಡದ ನೆಲದಲ್ಲೇ ಏನನ್ನಾದರೂ ಸಾಧಿಸಬೇಕೆಂಬ ಪ್ರಬಲ ಇಚ್ಛೆ ಹೊಂದಿದ್ದ ರಾಜೇಶ್ ಅಂತಹ ಕರೆಗಳನ್ನು ನಯವಾಗಿ ನಿರಾಕರಿಸಿದ್ದರು.

    ರಾಜೇಶ್ ಅವರನ್ನು ಹಲವಾರು ಪ್ರಶಸ್ತಿ ಗೌರವಗಳು ಅರಸಿ ಬಂದಿವೆ. ಇವಕ್ಕೆಲ್ಲ ಶಿಖರ ಪ್ರಾಯದಂತೆ ಧಾರವಾಡ ವಿಶ್ವವಿದ್ಯಾಲಯವು ರಾಜೇಶ್ ಅವರಿಗೆ ಡಾಕ್ಟರೇಟ್ ಗೌರವವನ್ನು ಸಲ್ಲಿಸಿದೆ. ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ರಾಜೇಶ್ ಅವರ ಅಳಿಯ.

    ನಾನು ಆಗ ಸಿಎಂ ಅಲ್ಲ, ಎಫ್ ಡಿಸಿ ಕೆಲಸ ಮಾಡಿಕೊಂಡಿದ್ದೆ ಎಂದ ಎಚ್.ಡಿ.ಕುಮಾರಸ್ವಾಮಿ

    BENGALURU FEB 19

    ರಾಷ್ಟ್ರಧ್ವಜದ ವಿಷಯದಲ್ಲಿ ನಾನು ಸಚಿವ ಕೆ ಎಸ್ ಈಶ್ವರಪ್ಪ ಅವರ ಪರ ವಕೀಲಿಕೆ ಮಾಡುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದರು.

    ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು; ನಾನು ಇರುವ ವಿಷಯವನ್ನು ಇದ್ದ ಹಾಗೆ ಹೇಳಿದ್ದೇನೆ. ಈಶ್ವರಪ್ಪ ಅವರು ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಸಹಜವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅವರೇನೂ ದ್ವಜಕ್ಕೆ ಅಪಮಾನ ಆಗುವಂತಹ ಹೇಳಿಕೆ ಕೊಟ್ಟಿಲ್ಲ. ಹಾಗಂತ ನಾನೇನೂ ಈಶ್ವರಪ್ಪ ಪರ ವಕೀಲಿಕೆ ಮಾಡುತ್ತಿಲ್ಲ ಎಂದರು.

    ಧ್ವಜದ ಬಗ್ಗೆ ಅಷ್ಟೊಂದು ಹೇಳುವ ಕಾಂಗ್ರೆಸ್ ನಾಯಕರು, ಸದನದ ಬಾವಿಯಲ್ಲಿ ರಾಷ್ಟ್ರಧ್ವಜ ಹಾರಿಸುತ್ತ ಪ್ರತಿಭಟನೆ ಮಾಡಿದರು. ಇದು ರಾಷ್ಟ್ರಧ್ವಜಕ್ಕೆ ನೀಡುವ ಗೌರವವೇ? ಸುಖಾ ಸುಮ್ಮನೆ ಸದನದ ಕಲಾಪ ವ್ಯರ್ಥ ಮಾಡದೇ ಹೈಕೋರ್ಟ್ ನಲ್ಲಿ ಪಿಐಎಲ್ ಹಾಕಿ ಹೋರಾಟ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿಗಳು ಟಾಂಗ್ ನೀಡಿದರು.

    ಪ್ರತಿಷ್ಠೆಗೆ ಬಿದ್ದು ಮಂತ್ರಿಯ ರಾಜೀನಾಮೆ ಪಡೆಯಲು ಹೊರಟ ಕಾಂಗ್ರೆಸ್ ನಡೆಯನ್ನು ಜನ ಗಮನಿಸುತ್ತಾ ಇದ್ದಾರೆ. ಕಲಾಪಕ್ಕೆ ಅಡ್ಡಿ ಮಾಡುವವರನ್ನು ಸದನದಿಂದ ಅಮಾನತು ಮಾಡಿ, ಆ ನಂತರ ಸದನ ನಡೆಸಿ ಎಂದು ಸಭಾಧ್ಯಕ್ಷರಿಗೂ ಮನವಿ ಮಾಡುತ್ತೇನೆ. ಕೋವಿಡ್ ಅನಾಹುತ ಸಂದರ್ಭದಲ್ಲಿ ಆಗುತ್ತಿರುವ ಮತ್ತೊಂದು ‘ ರಾಜಕೀಯ ಕೋವಿಡ್ ದುರಂತ ‘ ಇದು. ಈ ವಿನಾಶಕಾರಿ ಕೋವಿಡ್ ಅನ್ನು ಎಲ್ಲಾ ಸೇರಿ ಹರಡಿಸಬೇಡಿ ಎಂದು ಕುಮಾರಸ್ವಾಮಿ ಅವರು ಖಾರವಾಗಿ ಪ್ರತಿಕ್ರಿಯಿಸಿದರು.

    ನಾವು ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಸದನಕ್ಕೆ ಬಂದಿದ್ದೆವು. ಆದರೆ ಇವರು ಹಿಜಾಬ್ ಮತ್ತು ಕೇಸರಿ ಶಾಲು ಎಂದು ಕಲಾಪವನ್ನು ಹಾಳು ಮಾಡಿದರು. ಆಮೇಲೆ ಸಚಿವರ ರಾಷ್ಟ್ರಧ್ವಜದ ಹೇಳಿಕೆ ಇಟ್ಟುಕೊಂಡು ಎರಡು ದಿನಗಳ ಕಲಾಪವನ್ನು ಹಾಳುಗೆಡವಿದರು. ಇದನ್ನು ಒಪ್ಪಲು ಸಾಧ್ಯವೇ? ತಪ್ಪು ಎಂದಿದ್ದಕ್ಕೆ ಕಾಂಗ್ರೆಸ್ ನಾಯಕರು ಈಗ ಬೇರೆ ರಾಗ ಹಾಡುತ್ತಿದ್ದಾರೆ ಎಂದು ಅವರು ಹೇಳಿದರು.

    ಕರಾವಳಿಯ ಒಂದು ಭಾಗದಲ್ಲಿ ಶುರುವಾದ ಹಿಜಾಬ್ ಗೊಂದಲ ಮತ್ತಿತರ ಭಾಗದವರಿಗೆ ಪ್ರೇರೇಪಣೆ ಕೊಟ್ಟಂತೆ ಆಗಿದೆ. ಆ ಪ್ರದೇಶದ ಕೆಲ ಭಾಗದಲ್ಲಿ ಮಕ್ಕಳು ಹಿಜಾಬ್ ಧರಿಸಿ ಶಾಲೆಗೆ ಹೋಗುತ್ತಿದ್ದರು. ತರಗತಿ ಪ್ರವೇಶ ಮಾಡುವ ಸಮಯದಲ್ಲಿ ಹಿಜಾಬ್ ತೆಗೆದು, ಮನೆಗೆ ಹೋಗುವಾಗ ಮತ್ತೆ ಧರಿಸಿ ಹೋಗುತ್ತಿದ್ದರು.

    ಆರಂಭದಲ್ಲೇ ಚಿವುಟಿ ಹಾಕಬಹುದಾಗಿದ್ದ ವಿವಾದ ಎರಡು ಧರ್ಮದವರ ಸಂಘರ್ಷಕ್ಕೆ ಕಾರಣವಾಗಿದೆ. ಮಕ್ಕಳ ಮನಸ್ಸಲ್ಲಿ ದ್ವೇಷ ಬಿತ್ತಲಾಗಿದೆ. ಕೆಲ ಸಂಘಟನೆಗಳು ಇದನ್ನು ಮತಬ್ಯಾಂಕ್ ಆಗಿ ಪರಿವರ್ತನೆ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿವೆ. ಕಳೆದ ಎರಡು ದಿನಗಳಿಂದ ಎರಡು ಸದನದಲ್ಲಿ ಕಲಾಪಗಳು ಸ್ಥಗಿತಗೊಳಿಸುವ ಹಾಗೆ ಕಾಂಗ್ರೆಸ್ ನಡವಳಿಕೆ ಇದೆ. ಜನರು ಇದನ್ನು ಕ್ಷಮಿಸುವುದಿಲ್ಲ ಎಂದರು ಕುಮಾರಸ್ವಾಮಿ ಅವರು.

    ಮಾಧ್ಯಮಗಳಲ್ಲಿ ಬಂದ ಈಶ್ವರಪ್ಪ ಅವರ ಪ್ರತಿಕ್ರಿಯೆ ಇವತ್ತಿನ ಈ ರೀತಿಯ ಕಲಾಪಗಳಿಗೆ ಕಾರಣವಾಗಿದೆ. ಅದಕ್ಕಿಂತಲೂ ಹೆಚ್ಚಿನ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಯಬೇಕಿತ್ತು. ಆದರೆ ಆಗಲಿಲ್ಲ. ಕಾರವಾರದ
    ಸಂಸದರೊಬ್ಬರು ಹಿಂದೆ ದೇಶದ ಸಂವಿಧಾನ ಬದಲಾಯಿಸುತ್ತೇವೆ ಎಂಬಂತೆ ಮಾತನಾಡಿದ್ದರು. ಬಿಜೆಪಿಯವರ ಅಜೆಂಡಾಗಳೇ ಈ ರೀತಿ ಇವೆ. ಈ ದೇಶದಲ್ಲಿ ಹಿಂದೂಗಳು ಮಾತ್ರ ಬದುಕಬೇಕು ಎಂಬ ಅಜೆಂಡಾ ಇಟ್ಟುಕೊಂಡಿದ್ದಾರೆ‌ ಅವರು. ಇಂತಹ ಭಾವನಾತ್ಮಕ ವಿಚಾರಗಳನ್ನು ಇಟ್ಟುಕೊಂಡೇ ಚುನಾವಣೆಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

    ಕೇಸರಿ ಎಂಬುದಕ್ಕೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನ ಇದೆ. ಅದರ ಬಗ್ಗೆ ನಮಗೂ ಪೂಜ್ಯ ಭಾವನೆ ಇದೆ. ಧಾರ್ಮಿಕ ಕ್ಷೇತ್ರದಲ್ಲಿ ಕಠಿಣ ಜೀವನಶೈಲಿ ರೂಢಿಸಿಕೊಂಡವರು ಕೇಸರಿ ಧರಿಸುತ್ತಾ ಇದ್ದರು. ಈಗ ಎಲ್ಲರ ಮೈಮೇಲೆ ಕೇಸರಿ ಹಾಕುವ ಕೆಲಸ ನಡೆಯುತ್ತಿದೆ. ಬಿಜೆಪಿ ಅಯೋಧ್ಯ ಮಂದಿರ ಕಟ್ಟುವ ಚಳವಳಿ ಶುರು ಮಾಡಿದಾಗ ಇದನ್ನು ಬಳಸುವುದನ್ನು ಬಿಜೆಪಿ ಶುರು ಮಾಡಿದ್ದರು. ಭಾವನಾತ್ಮಕ ವಿಚಾರ ಮುಂದಿಟ್ಟುಕೊಂಡು ಬದಲಾವಣೆ ತರಲು ಅವರು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

    ಸರ್ಕಾರದ ಆಡಳಿತದ ವೈಫಲ್ಯ ಮತ್ತಿತರ ವಿಚಾರಗಳು ಕಲಾಪದಲ್ಲಿ ಚರ್ಚೆ ಆಗಬೇಕಿತ್ತು. ಉದ್ಯೋಗ, ಆರ್ಥಿಕ ಪರಿಸ್ಥಿತಿ, ಶಾಲೆಗಳ ಪರಿಸ್ಥಿತಿ ಬಗ್ಗೆ ಚರ್ಚೆ ಆಗಬೇಕಿತ್ತು.

    ಭ್ರಷ್ಟ ಹಗರಣಗಳ ಬಗ್ಗೆ ಚರ್ಚೆ ಮಾಡುವವನಿದ್ದೆ:ನಾನು ಈ ಬಾರಿ ಸದನದಲ್ಲಿ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ನಡೆದ ಭ್ರಷ್ಟಾಚಾರಗಳ, ಹಗರಣಗಳ ಬಗ್ಗೆ ಸದನದಲ್ಲಿ ದಾಖಲೆಗಳನ್ನು ಇಡಲು ತಯಾರಿ ಮಾಡಿಕೊಂಡಿದ್ದೆ. ಆದರೆ ಸದನವು ಸರಿಯಾಗಿ ನಡೆಯಲೇ ಇಲ್ಲ. ನೀವು ಕೂಡ 14 ತಿಂಗಳು ಆಡಳಿತ ಮಾಡಿದ್ದಿರಿ. ಆಗ ಸರಿ ಮಾಡಬಹುದಿತ್ತಲ್ಲ ಎಂದು ಯಾರಾದರೂ ಕೇಳಬಹುದು. ಆದರೆ ನಾನು ಆಗ ಸಿಎಂ ಅಲ್ಲ, ಎಫ್ ಡಿಸಿ ಕೆಲಸ ಮಾಡಿಕೊಂಡಿದ್ದೆ ಅಷ್ಟೇ ಎಂದು ಮಾಜಿ ಮುಖ್ಯಮಂತ್ರಿಗಳು ಬೇಸರದಿಂದ ಹೇಳಿದರು.

    Administrative-Reforms -ಆಡಳಿತ ಸುಧಾರಣಾ ಆಯೋಗ-2ರ ಎರಡು ಮತ್ತು ಮೂರನೇ ವರದಿ ಸಲ್ಲಿಕೆ; ಕಡತಗಳ ಹಂತ ಇಳಿಕೆಗೆ ಶಿಫಾರಸ್ಸು

    BENGALURU FEB 18

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ರ ಎರಡು ಮತ್ತು ಮೂರನೇ ವರದಿಗಳನ್ನು ಆಯೋಗದ ಅಧ್ಯಕ್ಷರಾದ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು ಸಲ್ಲಿಸಿದರು.

    ವರದಿಯ ಮುಖ್ಯಾಂಶಗಳ ಮಾಹಿತಿ ಪಡೆದ ಮುಖ್ಯಮಂತ್ರಿಗಳು ವರದಿಯಲ್ಲಿ ಮಾಡಿರುವ ಶಿಫಾರಸುಗಳನ್ನು ಪರಿಶೀಲಿಸಿ, ಕೂಡಲೇ ಜಾರಿಗೊಳಿಸಲು ಸಾಧ್ಯವಿರುವ ಅಂಶಗಳನ್ನು ಅನುಷ್ಠಾನಕ್ಕೆ ತರಲು ಕ್ರಮ ವಹಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದರು.

    ಇಂದು ಸಲ್ಲಿಸಿದ ವರದಿಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ನಗರಾಭಿವೃದ್ಧಿ, ಇಂಧನ, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಹಿಂದುಳಿದ ವರ್ಗಗಳ ಅಭಿವೃದ್ಧಿ, ಅಲ್ಪ ಸಂಖ್ಯಾತರ ಕಲ್ಯಾಣ ಹಾಗೂ ಒಳಾಡಳಿತ ಇಲಾಖೆಗಳಿಗೆ ಸಂಬಂಧಿಸಿದ ಶಿಫಾರಸುಗಳನ್ನು ಒಳಗೊಂಡಿದೆ.

    ಈ ಸಂದರ್ಭದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

    ಪ್ರಮುಖ ಶಿಫಾರಸುಗಳು

    1. ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ, ನಿಗಮ ಮಂಡಳಿ ಇತ್ಯಾದಿಗಳಲ್ಲಿ ಆಗುವ ಅನುಪಯುಕ್ತ ವೆಚ್ಚಗಳನ್ನು ತಡೆಯುವ ಕುರಿತು ಸಲಹೆ ನೀಡಲು ಅನುಪಯುಕ್ತ ವೆಚ್ಚ ತಡೆ ಕಾರ್ಯಪಡೆಯನ್ನು ರಚಿಸಬಹುದು.
    2. ಭಾರತ ಸರ್ಕಾರವು ತನ್ನ ಸಚಿವಾಲಯಗಳಲ್ಲಿ ಯಾವುದೇ ಕಡತವು ನಾಲ್ಕು ಹಂತಗಳಿಗಿಂತ ಹೆಚ್ಚು ಚಲನವಲನವಾಗಬಾರದು ಎಂದು ನಿರ್ಧರಿಸಿರುವಂತೆ ರಾಜ್ಯ ಸರ್ಕಾರವು ಸಹ ಸಚಿವಾಲಯದಲ್ಲಿ ಯಾವುದೇ ಇಲಾಖೆಯ ಕಡತಗಳು ಮೂರು ಅಥವಾ ನಾಲ್ಕು ಹಂತಗಳಿಗಿಂತ ಹೆಚ್ಚು ಚಲನವಲನವಾಗಬಾರದೆಂದು ನಿರ್ಧಾರ ತೆಗೆದುಕೊಳ್ಳಬಹುದು. ಪ್ರಸ್ತುತ ರಾಜ್ಯದಲ್ಲಿ ಕಡತಗಳು 5-10 ಹಂತಗಳಲ್ಲಿ ಚಲಾವಣೆಯಾಗುತ್ತಿವೆ.
    3.  ಎಲ್ಲ ಇಲಾಖೆಗಳ ಸೂಚಿಸಿದ ಗ್ರೂಪ್-ಸಿ ಮತ್ತು ಡಿ ನೌಕರರ ವರ್ಗಾವಣೆಯನ್ನು ಗಣಕೀಕೃತ ಕೌನ್ಸಿಲಿಂಗ್‌ ಮೂಲಕ ಮಾಡಲು ಕಾಯ್ದೆ ಜಾರಿಗೆ ತರಬಹುದು.
    4. ರಾಜ್ಯ ಸರ್ಕಾರವು ರಾಜ್ಯದಲ್ಲಿರುವ ಎಲ್ಲ ಅಂಚೆ ಕಚೇರಿಗಳಲ್ಲಿ ರಾಜ್ಯ ಸರ್ಕಾರದ ಸೇವೆಗಳನ್ನು   ಒದಗಿಸಲು ಬಳಸಿಕೊಳ್ಳಬಹುದು. ಪ್ರಸ್ತುತ ಅಂಚೆ ಕಚೇರಿಗಳು ಭಾರತ ಸರ್ಕಾರದ ಸೇವೆಗಳನ್ನು ಒದಗಿಸುತ್ತಿವೆ.
    5. ಗ್ರಾಮ ಮಟ್ಟದ ಉದ್ಯಮಿಗಳಿಂದ(VLE) ಸ್ಥಾಪಿಸಲಾದ ಸಾಮಾನ್ಯ ಸೇವಾ ಕೇಂದ್ರಗಳನ್ನು (CSC) ರಾಜ್ಯವು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುವುದರ ಮೂಲಕ ಸರ್ಕಾರಿ ಮತ್ತು ಸರ್ಕಾರೇತರ ಸೇವೆಗಳನ್ನು ಮನೆ ಬಾಗಿಲಿಗೆ ಒದಗಿಸಲು VLE ಗಳನ್ನು ʼಜನಸೇವಕರಾಗಿʼ ಬಳಸಿಕೊಳ್ಳಬಹುದು.
    6. ಜಿಲ್ಲಾಧಿಕಾರಿಯವರಿಗೆ ಸಾರ್ವಜನಿಕ ಉದ್ದೇಶಕ್ಕಾಗಿ ಸರ್ಕಾರದ ಇಲಾಖೆಗಳಿಗೆ ನಾಲ್ಕು ಹೆಕ್ಟೇರ್‌ವರೆಗೆ ಮತ್ತು ಜಮೀನಿನ ಮೌಲ್ಯವು ರೂ.5 ಕೋಟಿ ಮೀರದ ಸರ್ಕಾರಿ ಜಮೀನನ್ನು ಪರಿವರ್ತನಾ ಶುಲ್ಕದ ವಿನಾಯಿತಿ ನೀಡಿ ಉಚಿತವಾಗಿ ಮಂಜೂರು ಮಾಡುವ ಹೆಚ್ಚಿನ ಅಧಿಕಾರವನ್ನು ಪ್ರತ್ಯಾಯೋಜಿಸಬಹುದು.
    7. ಸಾರ್ವಜನಿಕ ಉದ್ಯಮಗಳ ಇಲಾಖೆಯನ್ನು(DPE) ಆರ್ಥಿಕ ಇಲಾಖೆಯಲ್ಲಿ ವಿಲೀನಗೊಳಿಸಬಹುದು.
    8. ಭೂಸ್ವಾಧೀನಕ್ಕೆ ಪರಿಹಾರ ಧನದ ಪಾವತಿಯು ಕಾಲಮಿತಿಯದ್ದಾಗಿರಬೇಕು. ಕಾಲಮಿತಿಯಲ್ಲಿ ಪಾವತಿಸದಿದ್ದರೆ ವಿಳಂಬವಾದ ಅವಧಿಗೆ ಅನವಶ್ಯಕಾಗಿ ಹೆಚ್ಚುವರಿ ಪರಿಹಾರ ಧನವನ್ನು ಪಾವತಿಸಬೇಕಾಗುತ್ತದೆ ಹಾಗಾಗಿ ಇದನ್ನು ಭೂ ಕೋರಿಕೆ ಸಂಸ್ಥೆಗಳು ಮತ್ತು ಕಂದಾಯ ಇಲಾಖೆಯು ಸಕಾಲ ಸೇವೆಯಾಗಿ ಅಧಿಸೂಚಿಸಬೇಕು ಮತ್ತು ಪರಿಹಾರ ಧನವನ್ನು ಆಧಾರ್‌ ಬೇಸ್ಡ್‌ ಪಾವತಿ ಮಾಡುವಂತೆ ಪ್ರಕ್ರಿಯೆಗೊಳಿಸಬೇಕು ಇದರಿಂದ ಚೆಕ್‌ ಮೂಲಕ ಪರಿಹಾರ ಧನ ಪಾವತಿಯಲ್ಲಾಗುವ ವಂಚನೆಯನ್ನು ತಡೆಗಟ್ಟಬಹುದು.
    9. ಅಧಿಕಾರಿಗಳ ಮತ್ತು ಸಿಬ್ಬಂದಿವರ್ಗದವರ ಕಾರ್ಯನಿರ್ವಹಣೆಯನ್ನುಮೌಲ್ಯಮಾಪನ ಮಾಡುವ ನಮೂನೆಯನ್ನು ಪರಿಷ್ಕರಿಸಿದ್ದು ಅದರಂತೆ ಕ್ರಮವಹಿಸಬಹುದು.      
    10. ಸಾಧನೆ (ಕಾರ್ಯಕ್ಷಮತೆ ನಿರ್ವಹಣೆ ಮತ್ತು ಮೌಲ್ಯಮಾಪನ ಪದ್ದತಿ) ಇಲಾಖೆಗಳ ಕಾರ್ಯಕ್ಷಮತೆ ನಿರ್ವಹಣೆ ಮತ್ತು ಮೌಲ್ಯಮಾಪನ ಪದ್ದತಿಯನ್ನು ಜಾರಿಗೊಳಿಸಿ ಇಲಾಖೆಗಳ ಮೌಲ್ಯಮಾಪನ ಮಾಡಬಹುದು.
    11. ರಾಷ್ಟ್ರಮಟ್ಟದಲ್ಲಿ ರಾಜ್ಯದ ಸೂಚ್ಯಾಂಕವನ್ನು   ಸುಧಾರಿಸಲು ಬಹು ವಲಯ, ವಲಯ ಸೂಚ್ಯಂಕಗಳ ವಿಶ್ಲೇಷಣೆ, ಸುಧಾರಣೆ, ಮೇಲ್ವಿಚಾರಣೆ ಮಾಡಲು ಸಮಿತಿ ರಚಿಸಲು ಕ್ರಮ ತೆಗೆದುಕೊಳ್ಳಬಹಬುದು ಮತ್ತು ಇವೇ ಸೂಚ್ಯಂಕಗಳ ಆಧಾರದ ಮೇಲೆ ಜಿಲ್ಲಾ ಮತ್ತು ತಾಲ್ಲೂಕುಗಳ ಶ್ರೇಣಿಗಳನ್ನು ಪ್ರಕಟಿಸುವುದು.
    12. ಅತಿ ಹೆಚ್ಚಿನ ಮೌಲ್ಯದ ಟೆಂಡರ್‌ಗಳನ್ನು ಕರೆಯುವ ಮೊದಲು ಕರಡು ಬಿಡ್‌ ಡ್ಯಾಕ್ಯುಮೆಂಟ್‌ನ್ನು ಇ-ಪ್ರೊಕ್ಯುರ್‌ಮೆಂಟ್‌ ವೆಬ್‌ಸೈಟ್‌ ಮೂಲಕ ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಬಹುದು. ಆಕ್ಷೇಪಣೆಗಳಿಗೆ ಇಲಾಖೆಗಳು ತಮ್ಮ ನಿರ್ಧಾರಗಳನ್ನು ದಾಖಲಿಸಬೇಕು ನಂತರವೇ ಬಿಡ್‌ ಡ್ಯಾಕ್ಯುಮೆಂಟ್‌ನ್ನು ಅಂತಿಮಗೊಳಿಸಬೇಕು.
    13. ಎಲ್ಲ ಇಲಾಖೆಗಳು ಸಿಬ್ಬಂದಿಗಳನ್ನು ಹೊರಗುತ್ತಿಗೆಯ ಆಧಾರದ ಮೇಲೆ ನಿಯೋಜಿಸಿಕೊಳ್ಳುತ್ತಿದ್ದು, ನಿಯೋಜಿಸಿಕೊಳ್ಳುವಾಗ ಯಾವುದೇ ರೀತಿಯ ಮೀಸಲಾತಿ ಪದ್ದತಿಯನ್ನು ಅಳವಡಿಸಿಕೊಳ್ಳದೆ ಇರುವುದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಅನಾನುಕೂಲವಾಗುತ್ತಿರುವುದು ಕಂಡುಬಂದಿರುತ್ತದೆ.   ಸರ್ಕಾರವು ಹೊರ ಗುತ್ತಿಗೆ ಮೇಲೆ ಸಿಬ್ಬಂದಿಗಳನ್ನು ನಿಯೋಜಿಸಿಕೊಳ್ಳುವಾಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಅಗತ್ಯ ಪ್ರಾತಿನಿಧ್ಯ ನೀಡಿ ನಿಯೋಜಿಸುವಂತೆ ಸೂಕ್ತ ಆದೇಶವನ್ನು ಹೊರಡಿಸಬಹುದು.
    14. ವಿವಿಧ ಕಚೇರಿಗಳಲ್ಲಿ ಕಾರ್ಯಭಾರದ ಆದಾರದ ಮೇಲೆ ಹುದ್ದೆಗಳ ‍ ಸ್ಥಳಾಂತರ ಮಾಡಬಹುದು. ಉದಾ:  ತಹಶೀಲ್ದಾರ್‌ ಕಚೇರಿಗಳಲ್ಲಿನ ಗ್ರೂಪ್‌-ಸಿ ಸಿಬ್ಬಂದಿಗಳು, ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳು ಹಾಗೂ ಪೋಲೀಸ್‌ ಕಾನ್ಸ್‌ಟೇಬಲ್‌ಗಳು ಇತ್ಯಾದಿ.

    ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ಇಲಾಖೆಯ  ಮುಖ್ಯ ಶಿಫಾರಸ್ಸುಗಳು

    1. ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆ ಮತ್ತು ಕರ್ನಾಟಕ ಗ್ರಾಮೀಣಾಭಿವೃದ್ಧಿ ರಸ್ತೆ ಅಭಿವೃದ್ಧಿ ಸಂಸ್ಥಯನ್ನು ವಿಲೀನಗೊಳಿಸಬಹುದು.
    2. ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯನ್ನು ಇಂಧನ ಇಲಾಖೆಗೆ ವರ್ಗಾಯಿಸುವುದು ನಂತರ ಇಂಧನ ಇಲಾಖೆಯ ಆಡಳಿತದ ನಿಯಂತ್ರಣದಲ್ಲಿರಿಸಿ ಕರ್ನಾಟಕ ನವೀಕರಿಸಬಹುದಾದ ಇಂಧನಗಳ ಅಭಿವೃದ್ಧಿ ನಿಗಮದ ಜೊತೆ ವಿಲೀನ ಮಾಡಬಹುದು.
    3.  ಬಿಬಿಎಂಪಿಯಲ್ಲಿ ಅನಧಿಕೃತ, ಅಕ್ರಮ ನಿವೇಶನಗಳು ಮತ್ತು ಕಟ್ಟಡಗಳಿಗೆ ಆಸ್ತಿ ತೆರಿಗೆಯ ಎರಡುಪಟ್ಟು ದಂಡವನ್ನು ಸಂಗ್ರಹಿಸುವಂತೆ ಗ್ರಾಮೀಣ ಪ್ರದೇಶದಲ್ಲಿಯೂ ಸಹ ಗ್ರಾಮ ಪಂಚಾಯತ್‌ಗಳು ಅಕ್ರಮ ನಿವೇಶನ ಹಾಗೂ ಕಟ್ಟಡಗಳಿಗೆ ಆಸ್ತಿ ತೆರಿಗೆಯ ಎರಡು ಪಟ್ಟು ದಂಡವನ್ನು ವಿಧಿಸಲು ಅನೂಕೂಲವಾಗುವಂತೆ ಕರ್ನಾಟಕ ಪಂಚಾಯತ್‌ ರಾಜ್‌ ಕಾಯಿದೆ 1993, ಕರ್ನಾಟಕ ಪಂಚಾಯತ್‌ ರಾಜ್‌ (ಗ್ರಾಮ ಪಂಚಾಯತ್‌ ಬಜೆಟ್‌ ಮತ್ತು ಲೆಕ್ಕ ಪತ್ರ ನಿಯಮಗಳು) 2006 ಗೆ ತಿದ್ದುಪಡಿ ಮಾಡಬಹುದು.
    4. ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳನ್ನು ಮತ್ತು ನಗರ ಸ್ಥಳೀಯ ಸಂಸ್ಥಗಳ ಮುಖ್ಯಾಧಿಕಾರಿಗಳನ್ನು ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ನೋಂದಣಿ ಪ್ರಾಧಿಕಾರಗಳನ್ನಾಗಿ ಅಧಿಸೂಚಿಸಬೇಕು. ಗ್ರಾಮ ಪಂಚಾಯತ್‌ಗಳಿಗೆ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸಾಮಾಜಿಕ ಬದ್ರತಾ ಪಿಂಚಣಿಗಳ ಅರ್ಜಿ ಪಡೆದು  ಶಿಫಾರಸು ಮಾಡುವ ಅಧಿಕಾರ ನೀಡಬಹುದು.
    1. ಬಿಡಿಎ, ನಗರಾಭಿವೃದ್ಧಿ ಪ್ರಾಧಿಕಾರಗಳು, ಕೆಹೆಚ್‌ಬಿ ಮತ್ತು ಕೆಐಎಡಿಬಿಯಂತಹ ಸಂಸ್ಥೆಗಳು ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಸದರಿ ಪ್ರಾಧಿಕಾರಗಳು ಮಂಜೂರು ಮಾಡಿದ ನಿವೇಶನಗಳಿಗೆ ಖಾತೆ ನೀಡುವುದು ಮತ್ತು ಆಸ್ತಿ ತೆರಿಗೆಯನ್ನು ಸಂಗ್ರಹಿಸುವದು ಗ್ರಾಮ ಪಂಚಾಯತ್‌ಗಳ ಬದಲಾಗಿ ಸದರಿ ಪ್ರಾಧಿಕಾರಗಳು ಮಾಡುತ್ತಿದ್ದು ಇದರಿಂದ ಗ್ರಾ ಪಂ ಗಳು ಆಸ್ತಿ ತೆರಿಗೆ ಆದಾಯದಿಂದ ವಂಚಿತರಾಗುತ್ತಿವೆ ಆದುದರಿಂದ ಖಾತಾ ನಿರ್ವಹಣೆ, ತೆರಿಗೆ ಸಂಗ್ರಹವನ್ನು ಆಯಾ ಗ್ರಾಮ ಪಂಚಾಯತ್‌ ಗಳು ಮಾಡಬಹುದು.
    2. ಗ್ರಾಮ ಪಂಚಾಯತ್‌ಗಳ ವಿದ್ಯುತ್‌ ಬಿಲ್‌ ಮತ್ತು ಬಾಕಿಗಳನ್ನು ನಿರ್ವಹಿಸುವುದರ ಕುರಿತಂತೆ ಶಿಫಾರಸುಗಳು. 2021-22 ರಲ್ಲಿ ವಿದ್ಯುತ್‌ ಶುಲ್ಕಕ್ಕಾಗಿ ಎಲ್ಲಾ ಗ್ರಾಮ ಪಂಚಾಯತಿಗಳ ಒಟ್ಟು ವೆಚ್ಚ ರೂ.1725 ಕೋಟಿ ಹಾಗೂ ಎಸ್ಕಾಮ್ಸ್‌ಗಳಿಗೆ ಬರಬೇಕಾದ ಒಟ್ಟು ವಿದ್ಯತ್‌ ಬಿಲ್‌ ಬಾಕಿ ರೂ. 3993 ಕೋಟಿ.

    ನಗರಾಭಿವೃದ್ಧಿ ಇಲಾಖೆ, ಮುಖ್ಯ ಶಿಫಾರಸ್ಸುಗಳು

    1. ಅಪರಾಧಗಳ ಸಂಯೋಜನೆಗಾಗಿ ಕೆಟಿಸಿಪಿ ಕಾಯಿದೆಯ ಸೆಕ್ಷನ್‌ 76 ಎಫ್‌ ಅಡಿಯಲ್ಲಿ ವಿಶೇಷ ಆದೇಶ ನಿಡುವುದರ ಮೂಲಕ ಬಿ-ಖಾತಾ ನಿವೇಶನಗಳನ್ನು ಭೂ ಪರಿವರ್ತನೆ ಶುಲ್ಕ ಹಾಗೂ ದಂಡ, ಯೋಜನಾ ಪ್ರಾಧಿಕಾರಕ್ಕೆ ಕಾಂಪೌಂಡಿಂಗ್‌ ಶುಲ್ಕ, ಕಟ್ಟಡ ಯೋಜನಾ ಮಂಜೂರಾತಿ ಶುಲ್ಕ ಹಾಗೂ ದಂಡ ಇತ್ಯಾದಿಗಳನ್ನು ಪಾವತಿಸಿಕೊಂಡು ಎ-ಖಾತಾಗಳಾಗಿ ಪರಿವರ್ತಿಸಬಹುದು.
    2. ಬಿಎಂಆರ್‌ಡಿಎ ಮತ್ತು ಬಿಡಿಎ ವಿಲೀನಗೊಳಿಸಲು ಬಿಡಿಎ ಕಾಯ್ದೆ ತಿದ್ದುಪಡಿ ಮಾಡಿ ಬಿಡಿಎ ಅನ್ನು ಬಿಎಂಅರ್‌ಡಿಎ ಆಗಿ ಪರಿವರ್ತಿಸಿ ಬಿಡಿಎ ಕಛೇರಿಗೆ ಸ್ಥಳಾಂತರಿಸಬಹುದು.
    3. 2400 ಚದರ ಅಡಿವರೆಗಿನ ನಿವೇಶನಗಳಲ್ಲಿ ಭೂ ಮಾಲೀಕರ ಸ್ವಯಂ ಘೋಷಣೆ ಮತ್ತು ಪ್ರಮಾಣೀಕರಣದ ಆದಾರದ ಮೇಲೆ ಆನ್‌ಲೈನ್‌ನಲ್ಲಿಯೇ ಶುಲ್ಕವನ್ನು ಪಾವತಿಸಿಕೊಂಡು ಕಟ್ಟಡ ಯೋಜನೆಗೆ   ತಕ್ಷಣದಲ್ಲಿ ಮಂಜೂರಾತಿ ನೀಡಬಹುದು.
    4. ಬಿಬಿಎಂಪಿ ವ್ಯಾಪ್ತಿಯಲ್ಲಿ, ವಲಯಗಳಲ್ಲಿ ವಲಯ ಆಯುಕ್ತರ ಅಧ್ಯಕ್ಷತೆಯಲ್ಲಿ, ಸಿಟಿ ಕಾರ್ಪೋರೇಷನ್‌ಗಳಲ್ಲಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ರಚನೆ ಮಾಡಬಹುದು.
    5. ಬಿಬಿಎಂಪಿಯಲ್ಲಿ ಬಿ-ಖಾತಾ, ಗ್ರಾಮ ಪಂಚಾಯತ್‌ಗಳಲ್ಲಿ 11-B ಇರುವಂತೆ ಸ್ಥಳೀಯ ನಗರ ಸಂಸ್ಥೆಗಳಲ್ಲಿ ಬಿ-ಖಾತಾಗಳನ್ನು ತೆರೆಯಲು ಬಿಬಿಎಂಪಿ ಕಾಯಿದೆಯ ಮಾದರಿಯಲ್ಲಿ ಕೆಎಂಸಿ ಕಾಯಿದೆ, ಕೆಎಂ ಕಾಯಿದೆಗಳಿಗೆ ಸೂಕ್ತ ತಿದ್ದುಪಡಿಗಳನ್ನು ಮಾಡಬಹುದು.
    6. ಕೆಎಂಸಿ ಕಾಯಿದೆ 1976 ಮತ್ತು ಕೆಎಂ ಕಾಯಿದೆ 1964 ರ ಅಡಿಯಲ್ಲಿ ವಿಧಿಸುವ ವಿವಿಧ ತೆರಿಗೆಗಳು ಮತ್ತು ದಂಡಗಳನ್ನು ಪ್ರಸಕ್ತ ಸಾಲಿಗೆ ಹಣದುಬ್ಬರ ಸೂಚ್ಯಂಕಕ್ಕೆ ಪರಿಷ್ಕರಿಸಬಹುದು. ಉದಾ:  ಕೆಲವು ದರಗಳು 5 ರೂಪಾಯಿಯಿಂದ ವಿಧಿಸಲಾಗುತ್ತಿದೆ.
    7. 74 ನೇ ಸಾಂವಿಧಾನಿಕ ತಿದ್ದುಪಡಿ ಕಾಯಿದೆಯನ್ವಯ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮೈಸೂರು, ಕಲಬುರಗಿ ಮತ್ತು ಬೆಳಗ/ಾವಿ ಮುಂತಾದ ಮಹಾನಗರಗಳಿಗೆ ಮಹಾನಗರ ಯೋಜನಾ ಸಮಿತಿ ರಚನೆ ಮಾಡಬಹುದು.
    8. ಬಿಬಿಎಂಪಿಯ ಮುಖ್ಯ ಆಯುಕ್ತರ ಮೇಲಿನ ಕೆಲಸದ ಒತ್ತಡವನ್ನು ಕಡಿಮೆ ಮಾಡಲು   ಮುಖ್ಯ ಆಯುಕ್ತರ ಕೆಲವು ಅಧಿಕಾರಗಳನ್ನು ಉದಾ: 2 ಕೋಟಿವರೆಗಿನ ಬಜೆಟ್‌ ಕಾಮಗಾರಿಗಳ ಅನುಮೋದನೆ, ವಲಯ ವ್ಯಾಪ್ತಿಯಲ್ಲಿ ಅಭಿಯಂತರರುಗಳ, ಸಿಬ್ಬಂದಿಗಳ ಹಾಗೂ ಗ್ರೂಪ್-ಸಿ ನೌಕರರ ವರ್ಗಾವಣೆ ಮುಂತಾದ ಅಧಿಕಾರಗಳನ್ನು ಪ್ರತ್ಯಾಯೋಜಿಸಿ ವಲಯ ಆಯುಕ್ತರುಗಳಿಗೆ ನೀಡಬಹುದು.
    9. ಅದೇ ರೀತಿಯಾಗಿ, ಆಯುಕ್ತರು ಬಿಡಿಎ ರವರ ಭೂ ಸ್ವಾಧೀನದ ಅಧಿಕಾರಗಳನ್ನು ಡೆಪ್ಯೂಟಿ ಕಮಿಷನರ್‌ರವರಿಗೆ, ನಿವೇಶನ ಸಂಬಂಧಿತ ಅಧಿಕಾರಗಳನ್ನು ಕಾರ್ಯದರ್ಶಿ, ಉಪಕಾರ್ಯದರ್ಶಿಗಳಿಗೆ, ರಜೆ ನಗದೀಕರಣ, ರಜೆ ಮಂಜೂರಾತಿ, ವೈದ್ಯಕೀಯ ಬಿಲ್‌ ಮಂಜೂರಾತಿ ಇತ್ಯಾದಿಗಳನ್ನು ಕಾರ್ಯದರ್ಶಿಗೆ, 1 ಲಕ್ಷದವರೆಗಿನ ಯುಟಿಲಿಟಿ ಬಿಲ್‌, ಆಕಸ್ಮಿಕ, ಜಾಹೀರಾತು ಬಿಲ್‌ಗಳ ಪಾವತಿಯನ್ನು ವಿಭಾಗ ಮುಖ್ಯಸ್ಥರಿಗೆ ಮುಂತಾದ ಅಧಿಕಾರಗಳ ಪ್ರತ್ಯಾಯೋಜನೆ ಮಾಡಬಹುದು.

    ಇಂಧನ ಇಲಾಖೆಯ ಮುಖ್ಯ ಶಿಫಾರಸುಗಳು

    1. ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಬೋರ್‌ವೆಲ್‌ಗಳಿಗೆ ವಿದ್ಯುತ್‌ ಶಕ್ತಿ ಸಂಪರ್ಕಕ್ಕೆ ವಾಸ್ತವಿಕ ವೆಚ್ಚ ಸುಮಾರು 1.50 ಲಕ್ಷದಿಂದ ರೂ. 3.5 ಲಕ್ಷಗಳಾಗಿದ್ದು,  ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಿಂದ ಕೇವಲ ರೂ.50,000 ಗಳನ್ನು ಪಾವತಿಸಲಾಗುತ್ತಿದೆ ಎಂದು ವರದಿಯಾಗಿದೆ. ವಿದ್ಯುತ್‌ ಶಕ್ತಿ ಸಂಪರ್ಕದ  ನೈಜ ವೆಚ್ಚವನ್ನು ಮರುಪಾವತಿಸಲು ಅಥವಾ ನಿರ್ದಿಷ್ಟ ಮೊತ್ತವನ್ನು ಹೆಚ್ಚಿಸಲು ಕ್ರಮವನ್ನು ಪ್ರಾರಂಭಿಸಬಹುದು.
    2. ಸುಮಾರು 75% ರಿಂದ 80% ಹೊಸ ಸಂಪರ್ಕಗಳು 5 KW ಗಿಂತ ಕಡಿಮೆಯಿವೆ. ಅಂತಹ ಸಂಪರ್ಕಗಳಿಗೆ ವಿದ್ಯುತ್ ಮಂಜೂರಾತಿ ನೀಡುವ ಅಧಿಕಾರವನ್ನು ಸಂಬಂಧಪಟ್ಟ ಶಾಖಾಧಿಕಾರಿಗಳಿಗೆ ಪ್ರತ್ಯಾಯೋಜಿಸಬಹುದು.
    3. ಹೆಚ್ಚಿನ ಸಂಖ್ಯೆಯ ಅನುಸ್ಥಾಪನೆಗಳು CEI ಯ ವ್ಯಾಪ್ತಿಯಲ್ಲಿವೆ. ಸಕಾಲ ಅಡಿಯಲ್ಲಿ 18 ಸೇವೆಗಳನ್ನು ಒದಗಿಸುವುದರ ಜೊತೆಗೆ, ಇದು ನಿಯಮಿತವಾಗಿ ವಿದ್ಯುತ್ ಸ್ಥಾಪನೆಗಳನ್ನು ಪರಿಶೀಲಿಸಬೇಕು, ಲಭ್ಯವಿರುವ ಎಲ್ಲಾ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಂಸ್ಥೆಗೆ ಸಾಧ್ಯವಾಗದಿರಬಹುದು ಹಾಗಾಗಿ  ಹೊಸ ಹುದ್ದೆಗಳನ್ನು ಮಂಜೂರು ಮಾಡುವುದಕ್ಕಿಂತ ಬದಲಾಗಿ, CEI ಯ ಮೇಲ್ವಿಚಾರಣೆಯ ಅಡಿಯಲ್ಲಿ Chartered Electrical Safety Engineer ಗಳನ್ನು Central Electrical Authority ಮಾರ್ಗಸೂಚಿ ಪ್ರಕಾರ ಅಧಿಕೃತಗೊಳಿಸಲು ಅಧಿಸೂಚನೆ ಹೊರಡಿಸಬಹುದು.

    ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪ ಸಂಖ್ಯಾತರ ಇಲಾಖೆಯ ಮುಖ್ಯ ಶಿಫಾರಸ್ಸುಗಳು

    1. ಅರಣ್ಯ ಹಕ್ಕು ಕಾಯಿದೆ, 2006 ರ ನಿಬಂಧನೆಗಳ ಪ್ರಕಾರ, ಬಳಕೆಯ ಹಕ್ಕುಗಳನ್ನು ST, SC, OBC ಮತ್ತು ಇತರರಿಗೆ ಸೇರಿದ ಅರ್ಹ ವ್ಯಕ್ತಿಗಳಿಗೆ ದೃಢಪಡಿಸಲಾಗಿದೆ. ಅವರಿಗೆ ಹಕ್ಕು ಪತ್ರ(ಹಕ್ಕುಗಳ ಪ್ರಮಾಣಪತ್ರ) ಗಳನ್ನು ಸಹ ನೀಡಲಾಗುತ್ತದೆ. ಈ ಹಕ್ಕುಗಳ ವಿವರಗಳನ್ನು RTC ಯ ಇತರ ಹಕ್ಕುಗಳ ಕಾಲಂನಲ್ಲಿ ನಮೂದಿಸಬೇಕು. ಇದಲ್ಲದೆ, ಈ ರೈತರನ್ನು ಬೆಳೆ ಪರಿಹಾರ, ಬೀಜ ಮತ್ತು ಗೊಬ್ಬರ ಸಬ್ಸಿಡಿ, ಬ್ಯಾಂಕ್ ಸಾಲ ಇತ್ಯಾದಿ ಪ್ರೋತ್ಸಾಹಕಗಳಿಗೆ ಅರ್ಹರು ಎಂದು ಘೋಷಿಸಲಾಗಿಲ್ಲ. ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳು ಜಂಟಿಯಾಗಿ ಸರ್ಕಾರಿ ಆದೇಶವನ್ನು ಹೊರಡಿಸಿ, ರಾಜ್ಯ ಸರ್ಕಾರ ರೈತರಿಗೆ ನೀಡುವಂತಹ ಎಲ್ಲ ಪ್ರೋತ್ಸಾಹಕಗಳಿಗೆ ಅವರು ಸಹ ಅರ್ಹರು ಎಂದು ಪರಿಗಣಿಸುವಂತೆ ಅನುಷ್ಠಾನ ಅಧಿಕಾರಿಗಳಿಗೆ ನಿರ್ದೇಶನ ನೀಡಬಹುದು.
    2. ವಿದ್ಯಾರ್ಥಿನಿಲಯಗಳಲ್ಲಿ ಮಂಜೂರಾದ ಸಾಮರ್ಥ್ಯಕ್ಕಿಂತ ಶೇ. 50 ಕ್ಕಿಂತ ಕಡಿಮೆ ದಾಖಲಾತಿ ಇರುವ ಸುಮಾರು 103 ವಿದ್ಯಾರ್ಥಿನಿಲಯಗಳನ್ನು ವಿಲೀನಗೊಳಿಸಬಹುದು ಮತ್ತು ಆ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳನ್ನು ಹತ್ತಿರದ 93 ವಿದ್ಯಾರ್ಥಿನಿಲಯಗಳಿಗೆ ಸ್ಥಳಾಂತರಿಸಬಹುದು.
    3. ಸಿಬ್ಬಂದಿ ಕೊರತೆಯ ಹಿನ್ನೆಲೆಯಲ್ಲಿ ತಾಲ್ಲೂಕು ಮಟ್ಟದಲ್ಲಿ ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ತಾಲೂಕಾ ಕಛೇರಿಗಳನ್ನು ಒಟ್ಟಿಗೆ ಕಾರ್ಯನಿರ್ವಹಿಸುವಂತೆ ಆದೇಶ ಮಾಡಬಹುದು ಅದೇ ರೀತಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತ ಇಲಾಖೆಗಳ ತಾಲೂಕಾ ಕಛೇರಿಗಳನ್ನು ಒಟ್ಟಿಗೆ ಕಾರ್ಯನಿರ್ವಹಿಸುವಂತೆಯೂ ಸಹ ಆದೇಶ ಮಾಡಬಹುದು.

    ಒಳಾಡಳಿತ ಇಲಾಖೆಯ ಮುಖ್ಯ ಶಿಫಾರಸ್ಸುಗಳು

    1. ನಾಗರಿಕರು ಪೊಲೀಸ್ ಠಾಣೆಗಳಿಗೆ ಬರಲು ತುಂಬಾ ಸಂಕೋಚ ಪಡುತ್ತಾರೆ ಎಂಬುದು ಸಾಮಾನ್ಯ ಸಂಗತಿಯಾಗಿದೆ. ಇಲಾಖೆಯು 32 ಕ್ಕೂ ಹೆಚ್ಚು ನಾಗರಿಕ ಕೇಂದ್ರಿತ ಸೇವೆಗಳನ್ನು ಒದಗಿಸುತ್ತಿದೆ ಹಾಗಾಗಿ ಎಲ್ಲಾ ಪೊಲೀಸ್‌ ಠಾಣೆಗಳಲ್ಲಿ ನಾಗರಿಕ ಸೇವೆಗಳ ಸಹಾಯ ಕೇಂದ್ರ ಸ್ಥಾಪಿಸುವುದು ಹಾಗೂ ಪೋಲೀಸ್‌ ಕೈಪಿಡಿಯಲ್ಲಿ ಇದನ್ನು ಸೇರಿಸಬಹುದು.
    2. ಕರ್ನಾಟಕದಲ್ಲಿ ಗೆಜೆಟೆಡ್ ಅಲ್ಲದ ಪೊಲೀಸ್ ಸಿಬ್ಬಂದಿಗಳಲ್ಲಿ ಶೇಕಡಾವಾರು ಮಹಿಳಾ ಪ್ರಾತಿನಿಧ್ಯವು 8.3% ಆಗಿದೆ (2020 ರಲ್ಲಿ). ಕಾನ್‌ಸ್ಟೆಬಲ್‌ಗಳು ಇತ್ಯಾದಿ ಹುದ್ದೆಗಳ ನೇಮಕಾತಿಯಲ್ಲಿ ಮಹಿಳೆಯರಿಗೆ 25% ಹುದ್ದೆಗಳನ್ನು ಮೀಸಲಿಡಲು ರಾಜ್ಯವು ಆದೇಶಿಸಿದೆ. ಆದರೆ ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯವು ದಿನಾಂಕ:12.05.2015 ರಂದು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪೊಲೀಸ್ ಪಡೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸಲು ಮಹಿಳೆಯರಿಗೆ 33% ಮೀಸಲಾತಿಯನ್ನು ನೀಡಲು ಸಲಹೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಸಹ ಪೊಲೀಸ್ ಪಡೆಗಳಲ್ಲಿ ಕಾನ್ಸ್‌ಟೇಬಲ್‌ನಿಂದ ಸಬ್-ಇನ್‌ಸ್ಪೆಕ್ಟರ್‌ವರೆಗಿನ ಗೆಜೆಟೆಡ್ ಅಲ್ಲದ ಹುದ್ದೆಗಳಲ್ಲಿ ನೇರ ನೇಮಕಾತಿಯಲ್ಲಿ ಮಹಿಳೆಯರಿಗೆ, ಸಮತಳವಾಗಿ ಮತ್ತು ಪ್ರತಿ ವರ್ಗದಲ್ಲಿ (ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಇತರರು) 33% ಮೀಸಲಾತಿಯನ್ನು ಅನುಮೋದಿಸಬಹುದು.

    ಅಡಿಗರ  ‘ಸಮಾಜಭೈರವ ಕವಿತೆ’ ಒಂದು ಅನುಸಂಧಾನ

    ಸುಮಾ ವೀಣಾ

    ಸಾಹಿತ್ಯದಲ್ಲಿ  ಮಣ್ಣಿನ ವಾಸನೆಯ ಅಗತ್ಯವನ್ನು ಬಲವಾಗಿ  ಪ್ರತಿಪಾದಿಸಿರುವ ಗೋಪಾಲಕೃಷ್ಣ ಅಡಿಗರು ಹೊಸಗನ್ನಡ ಕಾವ್ಯ ಸಂದರ್ಭದ   ಪ್ರಮುಖ ಅಂತಃಶಕ್ತಿಯಾಗಿದ್ದವರು.  ಕಾವ್ಯವಸ್ತು ಮತ್ತು ರೂಪದಲ್ಲಿ ಕನ್ನಡ ಕಾವ್ಯಕ್ಕೆ ನವ್ಯತೆಯ ಹೊಸ ನೆಲೆಯನ್ನು  ತಂದವರು.  ಸ್ವಾತಂತ್ರ್ಯೋತ್ತರ  ಭಾರತದ   ಸಂಕೀರ್ಣ ಅನುಭವಗಳನ್ನು  ಸಂಕೇತ ಮತ್ತು ಪ್ರತಿಮೆಗಳಲ್ಲಿ  ಬಂಧಿಸಿ  ಅನನ್ಯ ಕಾವ್ಯಾನುಭೂತಿ ನೀಡಿದವರು. ಇವರ ಕಾವ್ಯದ ಪ್ರಮುಖ ಗುಣಗಳು ವಸ್ತು ನಿಷ್ಟತೆ ಹಾಗು ವೈಚಾರಿಕತೆ.

    ನವ್ಯದ ಹರಿಕಾರನಾಗಿದ್ದರೂ   ಗೋಪಾಲಕೃಷ್ಣ ಅಡಿಗರು ಪ್ರಗತಿಶೀಲ ಧೋರಣೆಗೆ ಒಳಗಾಗಿ  ಬರೆದ ಕವನಗಳಲ್ಲಿ ‘ಸಮಾಜ ಭೈರವ’  ಸಮಾಜಕೇಂದ್ರಿತವಾಗಿದೆ. ಗೋಪಾಲಕೃಷ್ಣ ಅಡಿಗರು ಬರೆದಿರುವ ‘ಕಟ್ಟುವೆವು ನಾವು’  ಕವನ ಸಂಕಲನದಿಂದ  ‘ಸಮಾಜಭೈರವ’ ಕವಿತೆಯನ್ನು ಆರಿಸಲಾಗಿದೆ. ಸಮಾಧಾನದಿಂದ ಕೂಡಿದ ಸಾಮಯಿಕ ಸಂಕಲ್ಪಗಳು   ಭ್ರಷ್ಟಸಮಾಜಕ್ಕೆ  ಆತ್ಯಂತಿಕ ಮಿತಿಯನ್ನು ತೋರಿಸುವ ಈ ಕವಿತೆಯ  ಪದರೂಪದ ಹೂರಣವಾಗಿದೆ.  ನಾನು, ನನ್ನ ಎಂಬ ಪದಗಳು ಸಾಮಾಜಿಕರನ್ನು ಸಮಷ್ಟಿ ಪ್ರಜ್ಞೆಯಿಂದ ಪ್ರತಿನಿಧಿಸುವ  ಪದಗಳಾಗಿವೆ.   ಪುನರಾವರ್ತಿತವಾಗಿ ಈ ಕವಿತೆಯಲ್ಲಿ ಬರುವ “ನನ್ನ” ಎಂದರೆ ಕೇವಲ ವ್ಯಕ್ತಿಯಲ್ಲ  ಪ್ರತಿಯೊಬ್ಬ  ಸಾಮಾಜಿಕನೂ ಹೌದು!

    ಸಮಾಜ ಭೈರವ

     ‘ಸಮಾಜ ಭೈರವ’  ಪ್ರಸ್ತುತಕ್ಕೂ ಅನ್ವಯವಾಗುವಂಥ ಉತ್ತಮ ಕವಿತೆಗಳಲ್ಲಿ ಒಂದಾಗಿದೆ. ಇಲ್ಲಿ ಅಡಿಗರು ಸಮಾಜವನ್ನು ನಾಶಕರ್ತನಾದ ಭೈರವನಿಗೆ  ಹೋಲಿಸಿರುವುದು ವಿಶಿಷ್ಟವಾಗಿದೆ. ಸಮಾಜ  ಮಾನವನ ಏಳಿಗೆಗೆ ಪೂರಕವಾಗಿರಬೇಕೇ ವಿನಃ ಹೇಳಿಗೆಯಂತೆ ಕೆಲವೊಮ್ಮೆ ಭಯವನ್ನು ತರಿಸಬಾರದು.  ಮನುಷ್ಯ  ಸಾಮಾಜಿಕ ಪ್ರಾಣಿ ಹಾಗು ಸಂಘಜೀವಿ ಅವನ ಸಾಂಘಿಕ ಜೀವನದಲ್ಲಿ  ಅನೂಚಾನವಾಗಿ ರೂಢಿಗೆ ಬಂದ ಕೆಲವು ಸಂಪ್ರದಾಯಗಳು ಕಟ್ಟು ಕಟ್ಟಳೆಗಳು ಇರುವುದು ಸತ್ಯ . ಆದರೆ ಅವುಗಳನ್ನು ಸಾಮಾಜಿಕರ  ಇಚ್ಛೆಯ ವಿರುದ್ಧ ಬಲವಂತವಾಗಿ ಹೇರುವುದು  ತಪ್ಪು . ಆ ಹೇರಿಕೆಯ ಸ್ವರೂಪವನ್ನೇ  ಅಡಿಗರು  ಇಲ್ಲಿ’’ಭೈರವ” ಎಂದಿರುವುದು. ವ್ಯಕ್ತಿ ಸ್ವಾತಂತ್ರ್ಯವನ್ನು , ವ್ಯಕ್ತಿ  ವಿಶಿಷ್ಟತೆಯನ್ನೂ ಪ್ರತಿಪಾದಿಸುವ ಈ ಕವನದ  ಆಶಯವನ್ನು ಸಮಗ್ರವಾಗಿ  ಗ್ರಹಿಸಲು “ಆ ಹೆಸರೇ ಸೇರದೇನು ನಿನ್ನ ಯಶೋಮಾಲೆಗೆ?” ಎಂಬ ಸಾಲಿನೊಡನೆ ಅನ್ವಯಿಸಿಕೊಂಡು   ಅನುಸಂಧಾನಿಸಬೇಕಾಗಿದೆ, ವ್ಯಷ್ಟಿ ವಿಶೇಷಗಳಿಂದ, ಶೇಷಗಳಿಂದಲೇ ಸಮಾಜ ಭೈರವನ   ಅವಿರ್ಭಾವವಾಗಿದೆ. ಸಮಷ್ಟಿ ಅಳಿದರೂ ಸಮಾಜಭೈರವ ಮಾತ್ರ ಶಾಶ್ವತ  ಎಂಬ ಧ್ವನಿ ಇಲ್ಲಿ ಬರುತ್ತದೆ.

     “ನನ್ನ ಮನವ ನನಗೆ ಕೊಡು”   ಇದು ‘ಸಮಾಜಭೈರವ’ ಕವಿತೆಯ ಮೊದಲ ಸಾಲು . “ನನ್ನ”  ಎಂಬ ಪದವನ್ನು ಇಲ್ಲಿ  ಎಲ್ಲಾ ಸಾಮಾಜಿಕರನ್ನು ಒಟ್ಟುಗೂಡಿಸಿಯೇ ಸಮಷ್ಟಿಯ  ಅರ್ಥದಲ್ಲಿ ಸಮಾಜಭೈರವನನ್ನು  ಸಮಷ್ಟಿಯ ವಿನಾಶಕಾರಕ ಶಕ್ತಿ  ಎಂದೇ ಇಲ್ಲಿ  ಅಡಿಗರು ಹೇಳಿದ್ದಾರೆ.    ಆ ಶಕ್ತಿಯಲ್ಲಿ  ಅಂದರೆ ಸಮಾಜಭೈರವನಲ್ಲಿ ಕವಿ ನನಗೆ ಬೇಕಾದದ್ದನ್ನು ನೀನು ಕೊಡು, ನನ್ನ  ಬದುಕಿನ ಹಸೆಯಲ್ಲಿ ನೀನು ಇಣುಕಬೇಡ,  ನನ್ನ  ಈ ಮನೋಭೂಮಿಕೆಯಲ್ಲಿ ಅಂತರ್ಗತವಾಗಿರುವ ನನ್ನ  ಸ್ವಗತಗಳು  ವಾಸ್ತವವಾಗಿಯೂ ಲಹರಿಯಾಗಿಯೂ ಹರಿಯಲಿ ಅದನ್ನು ನಿಯಂತ್ರಿಸಬೇಡ  ನನ್ನ ಅವಕಾಶಗಳಿಗೆ  ನೀನು ನನೆಯಾಗಬೇಡ  ಬಿಟ್ಟುಬಿಡು ದಾರಿಯನ್ನು    ಎಂಬುದನ್ನು,ದೈನ್ಯವಾಗಿ ಹೇಳದೆ ದರ್ಪದಿಂದ  ಆರ್ಭಟಿಸಿಯೂ ಕೇಳದೆ  ನಿಷ್ಟುರವಾಗಿಯೇ ಅದೂ  ಕಟುವಲ್ಲದ ಗಾಂಭೀರ್ಯ ಹಾಗು ಮೃದುಹಾಸದಲ್ಲಿ   ನಗೆ,ಜಗ, ಮನ ಎಂಬ ಮೂರು ಪದಗಳ ಮೂಲಕ ಕೇಳಿರುವುದು ಅವರ ಸೌಧರ್ಮಿಕೆಯನ್ನು ಸೂಚಿಸುತ್ತದೆ.

    ಸಮಾಜದ ಹಿಡಿತ ಇಲ್ಲಿ ಅಡಿಗರಿಗೆ ಬಂಗಾರದ ಸಂಕೋಲೆಯಂತೆ ಕಂಡಿದೆ.  ಆ ಭಾವವನ್ನು   “ತೊಡಿಸ ಬರಲು ಬೇಡ ನಿನ್ನ ಹೊನ್ನ ಸಂಕೋಲೆಯ”  ಎಂಬ ಮಾತಿನ ಮೂಲಕ ಹೇಳಿದ್ದಾರೆ. ಹೊಗಳಿ ಹೊಗಳಿ ಹೊನ್ನ ಶೂಲಕ್ಕೆ ಏರಿಸಿದರು ಎಂಬಂತೆ   ಹೊಗಳಿಯೇ ಬಂಗಾರದ ಸರಪಳಿ ತೊಡಿಸಿ ನನ್ನನ್ನು ಬಂಧಿಯಾಗಿಸಬೇಡ  ನನ್ನ ಭಾವಭಿತ್ತಿಗೆ ನಿನ್ನ  ನಿರ್ಧಾರವನ್ನು  ಹೇರುವುದು ನಿನ್ನ  ಬಟ್ಟೆಯನ್ನು  ನನಗೆ ಬಲವಂತವಾಗಿ ತೊಡಿಸಿದಂತೆ, ಹಾಗಾಗಿ ಬಲವಂತವಾಗಿ  ಯಾವುದನ್ನೂ ಹೇರಿ ನಂತರಾಗುವ ಅವ್ಯವಸ್ಥೆಯನ್ನು ಕಂಡು ಮರುಗುವ ನಿನ್ನ ಮಾತುಗಳು ನನಗೆ ದಯೆ ಎಂಬ ಸಾಲವನ್ನು ಹೊರಿಸಿದಂತೆ.  ನನಗೆ ಆ ಸಾಲದ ಹೊರೆ ಬೇಡ   ಎಂಬ ಆಶಯವನ್ನು ವ್ಯಕ್ತಪಡಿಸುತ್ತಾರೆ.  ಇಲ್ಲಿ ಅಡಿಗರು ಸಾಮಾಜಿಕರನ್ನು ಸ್ವಹಂ ಇಲ್ಲದ ಸ್ವಾಭಿಮಾನಿಗಳಂತೆ  ಕಂಡಿರುವುದು ವಿಶೇಷ.  ಹಾಡು- ಪಾಡು, ಕತೆ- ವ್ಯಥೆಗಳಲ್ಲಿ  ಮೂಗು ತೂರಿಸುವ  ಸಮಾಜಭೈರವನ  ಅಧಿಕಪ್ರಸಂಗವನ್ನು  ಇಲ್ಲಿ ಧಿಕ್ಕರಿಸಿದ್ದಾರೆ.

    ಸಮಾಜದಲ್ಲಿ ಇರುವ ಮೂಢನಂಬಿಕೆ ಇಲ್ಲಿ ಕವಿಗೆ ಬಿಕ್ಕಟ್ಟು ಅನ್ನಿಸಿದೆ. ಅಂಥ  ಇಕ್ಕಟ್ಟಿನ ಹಂದರವನ್ನು ಆಕರ್ಷಣೀಯವಾಗಿ  ನಯವಾಗಿ ಹೆಣೆಯದಿರು  ಸಾಮಾಜಿಕರನ್ನು ಉಪಾಯದಲ್ಲಿ ಅದರಲ್ಲಿ ಸಿಕ್ಕು ತೊಳಲುವಂತೆ ಮಾಡದಿರು . ಇಹಲೋಕ ಪರಲೋಕವೆಂಬ ಮಾತೇ ಬೇಡ  ನೋಡದ ಪರಲೋಕದ ಆಕಾಂಕ್ಷೆಗೆ  ಇರುವ ಬನದುಕನ್ನು ವ್ಯರ್ಥಮಾಡಬೇಕೆ?  ಇಂಥ ನಯವಾದ  ದಿಗ್ಬಂಧಗಳ ಹೇರಿಕೆಯನ್ನು ನಿಲ್ಲಿಸಿಬಿಡು. ಮೊದಲಿ ಇರುವ ಈ ಲೋಕದ ಬದುಕಲ್ಲಿ ಅವರವರ  ಇಚ್ಛೆಯಂತೆ ಬದುಕಬಿಡು ಎನ್ನುತ್ತಾರೆ.  “ಬಿಟ್ಟು ಬಿಡು ನನ್ನ ಮಾತ್ರ ನನ್ನೆದೆಯ ನಚ್ಚಿಗೆ:”  ಎಂಬಲ್ಲಿ ಸಂಪ್ರದಾಯ ಮತ್ತು ಮೌಢ್ಯತೆಯ ಬಲೆಯಲ್ಲಿ  ಸಮಷ್ಟಿಯನ್ನು ಬಂಧಿಸದಿರು  ಎಂದಿದ್ದಾರೆ. ಈ ಸಾಲುಗಳಲ್ಲಿ ಸ್ವೇಚ್ಛೇ ಇರಬೇಕು ಸ್ಚೇಚ್ಛಾರವಲ್ಲ ಎಂಬ ಸೂಕ್ಷ್ಮವೂ     ಸುಳಿ ಮಿಂಚಿನಂತೆ ಮಾಯವಾಗುತ್ತದೆ.  ಆದ್ದರಿಂದಲೇ “ಎದೆಯ ನಚ್ಚಿಗೆ” ಮೊದಲಾದ ಪದ ಬಳಸುತ್ತಾರೆ.  ಹಾಗೊಂದು ವೇಳೆ ಅವರರಿಗೆ ಸ್ವೇಚ್ಛಾಚಾರದ  ಅಹಂ ಇದ್ದಿದ್ದರೆ  “ಎದೆಯ ಕೆಚ್ಚಿಗೆ” ಎನ್ನುತ್ತಿದ್ದರೇನೋ?….. ಅನುಭವಗಳ  ನೈಜತೆ, ತೀವ್ರತೆ, ಭಾವಗಳ ನಾವೀನ್ಯತೆ,ಶಬ್ದಗಳ ಸೌಂದರ್ಯ ಮತ್ತು ಸಾಮರ್ಥ್ಯದಿಂದ ಅಡಿಗರ ಕವಿತೆಗಳು ಯಾವತ್ತೂ ಕಳೆಗಟ್ಟುತ್ತವೆ.

    ವಿಶ್ವಮಾನವತೆಯೂ ಇಲ್ಲಿದೆ

    ಕುವೆಂಪು ಹೇಳುವ “ವಿಶ್ವಮಾನವತೆಯೂ ಇಲ್ಲಿದೆ. “ಕಟ್ಟುವೆವು ನಾವು ಹೊಸ ನಾಡೊಂದನು” ಎಂಬ ಅವರದೇ ಮಾತಿನಂತೆ ಇಲ್ಲಿ ಮನಸ್ಸು ಅನ್ನುವ ಮಲ್ಲಿಗೆ   ಪಾತಾಳದ ಅಂಚಿನಿಂದ ದಿಗಂತದಾಚೆಗೂ ಮುಳುಗಿ , ತೇಲಿ ವಿಭ್ರಮಿಸಬೇಕು  ತಾರೆಗಳ ಲೋಕವನ್ನೂ ಇಣುಕಾಡಿ   ಸೌಸವ ಬೀರಿ  ಅದರ ಒಳಗುಟ್ಟನ್ನು ಅರಿತುಬರಬೇಕು ಬ  ಎಂಬ ಹಂಬಲವನ್ನು  ಇಲ್ಲಿ ಉತ್ಕಟವಾಗಿ ತೋರಿಸಿದ್ದಾರೆ.   ಅಡಿಗರ ಅಡಿಗಡಿಯ ವಿಶಾಲ ಚಿಂತ ನೆಯನ್ನು ಇಲ್ಲಿ ನೋಡಬಹುದು.  ಆದರ ಇಲ್ಲಿ  ಸಮಾಜಭೈರವ ಅಂಥ ಆಸೆಗಳಿಗೆ  ಆಘಾತವನ್ನು ಉಂಟುಮಾಡುತ್ತಾನೆ ಎಂಬ ವಿಷಾದ ವ್ಯಕ್ತ ಪಡಿಸಿದ್ದಾರೆ. ಇಷ್ಟ್ಟಾದರೂ ಸಮಾಜಭೈರವನ ಬಗ್ಗೆ ಕಿಂಚಿತ್ ದುರಾಲೋಚನೆ ಮಾಡದೆ  ತಾಳ್ಮೆ ವಹಿಸಿ  ಸಮಾಜಿಕರಿಗೂ ವಿವೇಕಯುತರಾಗಬೇಕು ಎನ್ನುತ್ತಾರೆ.  “ನೀರಗುಳ್ಳೆ ಕುಣಿದು ಕುಣಿದು ಒಡೆಯಲಿ” ಎಂಬ ಮಾತು ಓದುಗರನ್ನು ಅರ್ಥಧ್ವನಿಯಲ್ಲಿ ಬಂಧಿಗಳನ್ನಾಗಿಸುತ್ತದೆ.  ಬದುಕು ಮೂರು ನಿಮಿಷವೋ? ನೂರು ವರುಷವೋ ? ಆದರೆ ಬದುಕು ಮಾತ್ರ ಅಮೂಲ್ಯ ಅಂಥ ಬದುಕಿನ  ಸವಿಯನ್ನು ಇಂಚಿಂಚಾಗಿ ಅನುಭವಿಸಬೇಕು. ಬದುಕೆಂಬ ಬಣ್ಣದೋಕುಳಿಯಲ್ಲಿ ನಾನು ಮಿಂದೇಳಬೇಕು ಪ್ರತಿಬಣ್ಣದಲ್ಲೂ  ನಾನು ಹೇಗೆ ಕಾಣಬಲ್ಲೆ ಎಂಬ ಕುತೂಹಲ ಅಡಿಗರಿಗೆ ಇದೆ ಹಾಗಾಗಿ ಅದನ್ನು ನೋಡಿಯೇ ಸಿದ್ಧ ಎಂಬ ಸಂಕಲ್ಪವನ್ನು ಹೊಂದಿದ್ದಾರೆ. . ಅಂದರೆ ಬದುಕಿನ ರಸಘಟ್ಠಗಳನ್ನು  ಅನುಭವಿಸಿಯೇ ಸಿದ್ಧ ಅದಕ್ಕೆ ಸಮಾಜ ಭೈರವ ನೀನು ಕೊಡಲಿ  ಪೆಟ್ಟಾಗದಿರು ಎನ್ನುತ್ತಾರೆ.

      “ಬಂದ ಯಾತ್ರಿ ನಿಲ್ಲಲಾರ”  ಎಂಬ ಪದಗಳ ಮೂಲಕ  ಅಡಿಗರು ಅಧ್ಯಾತ್ಮದ ಹೊಸ್ತಿಲಲ್ಲಿ ನಿಂತು ಇಲ್ಲಿ ಬರುವ ಸಾಮಾಜಿಕರು ಅನ್ನುವ ಬಾವ ಜೀವಿಗಳು ಪ್ರಪಂಚದ ನಿತ್ಯ ವಾಸಿಗಳಲ್ಲ . ತಮ್ಮ ಬಾಳ್ವೆ ಎಂಬ ಯಾತ್ರೆ ಮುಗಿದ ನಂತರ ಇಲ್ಲಿ  ಅರೆಕ್ಷಣವೂ ನಿಲ್ಲರು. ಅಂಥ ನಶ್ವರ ಬದುಕಲ್ಲಿ  ನಿನ್ನದೇನು ತಗಾದೆ ಬುಡು ದಾರಿಬಿಡು ಸಮಾಜ  ಭೈರವ ಮತ್ತೆ ಅಡ್ಡಿ ಮಾಡಬೇಡ ಎನ್ನುತ್ತಾರೆ.ಸಮಾಜ ಶಾಶ್ವತವೇ ವಿನಃ  ಸಾಮಾಜಿಕ  ಅಲ್ಲ ಎನ್ನುತ್ತಾರೆ.

     ಸಾಮಾಜಿಕ ರಾಜಕೀಯ, ಆರ್ಥಿಕ , ಬೌದ್ಧಿಕ, ,  ಕೆಲವೊಮ್ಮೆ ಸಾಂಸ್ಕೃತಿಕ  ಶಕ್ತಿಗಳು  ಮಾನವನನ್ನು  ಶೋಷಣೆಗೆ ಗುರಿ ಮಾಡಬಾರದು.  ಒಂದು ವೇಳೆ ಅದು ಹಿಡಿತಕ್ಕೆ ಬಂದರೆ ಅದು ಸಮಾಜ ಭೈರವನ  ಅಸ್ತ್ತಿತ್ವದ ಪ್ರತೀಕ ಎನ್ನುತ್ತಾರೆ. ನಮ್ಮದು ಹೇಗಿದ್ದರೂ ಪ್ರಜಾಪ್ರಭುತ್ವ ರಾಷ್ಟç ಹಾಗಾಗಿ ವ್ಯಕ್ತಿಗತ ಮಾನ ಸಮ್ಮಾನಕ್ಕೂ ಆದ್ಯತೆ ಇರಲಿ ಎಂಬುದು ಕವಿಯ ಪ್ರಧಾನ ಆಶಯವಾಗಿದೆ

     ಅಣುವಿನಲ್ಲೂ ಆ ಮಹತ್ತು ಬಿತ್ತದಂತೆ ಮಲಗಿದೆ ಅಣುವೆಂದು ನಿರ್ಲಕ್ಷ್ಯ ಬೇಡ  ಅಣುವಿನಲ್ಲೂ ಲೋಕವನ್ನುದ್ಧರಿಸಬಹುದಾದ  ಚೈತನ್ಯ ಶಕ್ತಿ  ಇದ್ದೇ ಇರುತ್ತದೆ. ಅಂಥ ಗೌಣವಾದ ಶಕ್ತಿ  ಗಾಳಿ , ಮಳೆ ಬೆಳಕಿಗೆ ತೆರವಾದರೆ  ಅದರಲ್ಲಿಯೂ ಸಮಷ್ಟಿಗೆ ಉಪಯೋಗವಾದೀತು ಎಂಬ ಸದಾಶಯವನ್ನು ವ್ಯಕ್ತಪಡಿಸಿ  ಅದರ ಶ್ರೇಯಸ್ಸಿನ ಲೆಖ್ಖಣಿಕೆ ನಿನ್ನ ಸಿವುಡಿಗೇ ಬರುತ್ತದೆ  ತತ್ಫಲವಾಗಿ  ಸಮಾಜಭೈರವ ಬಲವಂತ ದಯವಂತ ಅನ್ನುವ ಶ್ರೇಯಸ್ಸು ನಿನಗೇ ಲಭಿಸುತ್ತದೆ  ಎಂಬ ಸಂದೇಶವನ್ನೂ ಕೊಡುತ್ತಾರೆ.

    ಹುಲ್ಲಿಗಿಲ್ಲ, ಕಳ್ಳಿಗಿಲ್ಲ, ಹೂವಿಗೇಕೆ ಸೌಸವ ಎನ್ನಬೇಡ ಭೈರವ   ಎಲ್ಲವನ್ನು ಒಂದೇ ತಕ್ಕಡಿಗಿಟ್ಟು ತೂಗಲೂಬೇಡ  ಮನಸ್ಸು ಅನ್ನುವದು ಅಣುವೂ ಹೌದು ಅನಲವೂ ಹೌದು  ಹಾಗಾಗಿ ತಮಷ್ಟಕ್ಕೆ ತಮ್ಮ ತನವನ್ನು  ತೀರಿಸಿಕೊಂಡೇ ನಯಜವಾಗಿ ಯಾವುದೇ ಕೃತ್ರಿಮತೆ ಇಲ್ಲದಂತೆ ಬದುಕುವ ಅವಕಾಶವಿದೆ ಅದಕ್ಕೆ ಮುಳ್ಳುಗಂಟಿಯಾಗಬೇಡ. ಆ ಮನಸ್ಸೆಂಬ ಹೂವನ್ನು ಪದೇ ಪದೇ ಹಿಂಸಿಸಿ ಕಾಂತಿಯನ್ನು ಮಸುಕು ಮಾಡಬೇಡ ಎಂದು  ಪ್ರತಿಭಟಿಸುತ್ತಾರೆ.

    ಅನುಭವ ಶೂನ್ಯವಾಗಿ ಬಂದ ಮನ ತನುವನ್ನು ಇಲ್ಲಿ ಒಗ್ಗಿಸಿಕೊಂಡು, ಅನುಭವವನ್ನು  ಒಳಗುಮಾಡಿಕೊಂಡು  ಕಡೆಗೊಮ್ಮೆ ಖಾಲಿ ಒಡಲನ್ನು  ಬಿಟ್ಟು ಅನುಭವವನ್ನು ಮಾತ್ರ ಹೊತ್ತು   ನಿರ್ಗಮಿಸುವ ತನಕ ನೀನು ಯಾಜಮಾನ್ಯ ತೋರಿಸಬೇಢ ಸ್ವಚ್ಛಂದಕ್ಕೆ ಬಿಟ್ಟು ಬಿಡು ಎನ್ನುತ್ತಾರೆ. .  ಚಿಂತನಶೀಲತೆ , ಸಂಕೀರ್ಣತೆ ,  ಭ್ರಷ್ಟತೆಯ ಕುರಿತ ಆಕ್ರೋಶ ವಿಡಂಬನೆ,  ಅಡಿಗರ ಈ ಪದ್ಯದ ವಿಶೇಷತೆ. ಕವಿತೆಯನ್ನು ಓದುವಾಗ    ನಿರಾಶೆ ಯಿಂದ  ಅಡಿಗರು ಮೆತ್ತಗಾದರೇನೋ  ಅನ್ನುವಷ್ಟರಲ್ಲಿ ಮರುಸಾಲಿನಲ್ಲಿಯೇ  ಬತ್ತದ ಜೀವನೋತ್ಸಾಹವನ್ನು ತೋರಿಸಿ ಓದುಗನನ್ನೂ ಉತ್ಸಾಹಿಯಾಗಿಸುತ್ತಾರೆ. ಪು.ತಿ.ನರಸಿಂಹಾಚಾರ್  ಅವರು ಅಡಿಗರ  ಕಾವ್ಯವನ್ನು “ಶಬ್ದದೊಳಗಣ ಶಬ್ದದಂತೆ” ಎನ್ನುತ್ತಾರೆ.  ಕಾವ್ಯದ ಆತ್ಮ ಕವನದಲ್ಲಿಯೇ ಹುದುಗಿ ಹೋಗಿರುತ್ತದೆ. ಅರ್ಥಸಹಿತವಾದ  ಪದಸಮೂಹದಿಂದ ಕಾವ್ಯದ ಆತ್ಮವನ್ನು ದರ್ಶಿಸುವ ಕೌಶಲ್ಯ ಮಾಂತ್ರಿಕ ಎನ್ನಬಹುದು.

    ಯಾವುದೇ ಕಟ್ಟು ಪಾಡಿಗೆ ಒಳಗಾಗದೆ  ಬದುಕುವ ಹಂಬಲ ಕವಿಯಲ್ಲಿದೆ.  ಅಪ್ಪಟ ಪ್ರಜಾಪ್ರಭುತ್ವ ವಾದಿಯಾಗಿ ಸ್ವಾತಂತ್ರ್ಯವನ್ನು  ಹತ್ತಿಕ್ಕುವ ಸರ್ವಾಧಿಕಾರಿ ಧೋರಣೆಯನ್ನು ಇಲ್ಲಿ   ನಯವಾಗಿಯೇ ಧಿಕ್ಕರಿಸಿದ್ದಾರೆ ಎನ್ನಬಹುದು. ವೈ ಎನ್ಕೇಯವರು  ಅಡಿಗರ ಪದ್ಯವನ್ನು ಒಮ್ಮೆಓದಿ   “ಅಡಿಗ ಫಾರ್ ಆಲ್ ಅಕೇಷನ್ಸ್” ಎಂದಿದ್ದು ಅಕ್ಷರಶಃ ಸತ್ಯವಾಗಿದೆ. ಹೌದು  ಎಲ್ಲಾ ಸಂದರ್ಭಗಳಿಗೂ ಅಡಿಗರು ಅಡಿಗಡಿಗೆ ಇದ್ದಾರೆ.   ಒಟ್ಟಾರೆಯಾಗಿ  ಗೋಪಾಲಕೃಷ್ಣ ಅಡಿಗರು  ಇಲ್ಲಿ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಆಯಾಮಗಳಲ್ಲಿ   ಸಮಾಜವನ್ನು ನೋಡಿ ಜವಾಬ್ದಾರಿಯನ್ನು ಓರ್ವ ಕವಿಯಾಗಿ ನಿಭಾಯಿಸಿದ್ದಾರೆ  ಎಂದರೆ ಅತಿಶಯೋಕ್ತಿಯಲ್ಲ. 

    This image has an empty alt attribute; its file name is suma-veena-2-edited.jpg

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಿ ಘೋಷಣೆಗೆ ಕೇಂದ್ರ ಸರ್ಕಾರ ಅನುಮೋದನೆ

    CHITRADURGA FEB 16
    ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡಲು ಕೇಂದ್ರ ಸರ್ಕಾರ ನಿನ್ನೆ ನಡೆದ ಹೈಪವರ್ ಕಮಿಟಿಯಲ್ಲಿ ಅನುಮೋದನೆ ನೀಡಿದೆ. ರಾಷ್ಟ್ರೀಯ ಯೋಜನೆಯ ನೆರವಿನಿಂದ ರಾಜ್ಯಕ್ಕೆ ಸುಮಾರು ರೂ.12,500 (ಹನ್ನೇರೆಡುವರೆ) ಸಾವಿರ ಕೋಟಿಯ ನೆರವು ಸಿಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ತರಳುಬಾಳು ಬೃಹನ್ಮಠದ ವತಿಯಿಂದ ಬುಧವಾರ ಗುರುಶಾಂತೇಶ್ವರ ದಾಸೋಹ ಭವನದಲ್ಲಿವ ಆಯೋಜಿಸಿದ್ದ ತರಳುಬಾಳು ಹುಣ್ಣಿಮೆ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
    ಭದ್ರಾ ಮೇಲ್ದಂಡೆ ಯೋಜನೆಯು ರಾಷ್ಟ್ರೀಯ ಯೋಜನೆಯಾದ ಏಕೈಕ ಯೋಜನೆ ಇದಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯಿಂದ ಮಧ್ಯಕರ್ನಾಟಕದ ನೀರಾವರಿ ಯೋಜನೆಗೆ ತುಂಬಾ ಸಹಕಾರಿಯಾಗಿದ್ದು, ಇದರಿಂದ ಅಂತರ್ಜಲ ಹೆಚ್ಚಳದ ಜೊತೆಗೆ ನೀರನ್ನು ಒದಗಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

    ಭದ್ರಾ ಮೇಲ್ದಂಡೆ ಯೋಜನೆಗೆ 2008ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಿದ್ದರು. ಇದರ ಜೊತೆಗೆ ಕೆರೆಗಳ ತುಂಬಿಸುವ ಯೋಜನೆಗೆ ಕ್ರಮಕೈಗೊಂಡಿದ್ದೇವೆ. ಹಿಂದಿನ ಸರ್ಕಾರ ಕೆರೆಗಳಿಗೆ ನೀರು ಭರ್ತಿ ಮಾಡುವ ವಿದ್ಯುತ್ ಶುಲ್ಕವನ್ನು ರೈತರೇ ಪಾವತಿಸಬೇಕು ಎಂದು ತಿಳಿಸಲಾಗಿತ್ತು. ಸಿರಿಗೆರೆ ಗುರುಗಳು ಹೇಳಿ ಈ ಹಣವನ್ನು ಸರ್ಕಾರದಿಂದಲೇ ಭರಿಸಬೇಕು ಎಂದು ಹೇಳಿದ ತಕ್ಷಣವೇ ಆ ಆದೇಶವನ್ನು ಬದಲಿಸಲಾಗಿದೆ ಎಂದರು.

    ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಎದುರಾಗಿದ್ದ ಅನೇಕ ಅಡ್ಡಿ ಆತಂಕಗಳನ್ನು ಎಲ್ಲ ನಿವಾರಣೆ ಮಾಡಲಾಗಿದೆ. ಅಜ್ಜಂಪುರ ಟನಲ್‍ನಿಂದ ವಿವಿಸಾಗರಕ್ಕೆ ನೀರು ಹರಿಸಲಾಗಿದ್ದು, ವಿವಿಸಾಗರ ನಿರ್ಮಾಣ ಮಾಡಿದಾಗಿನಿಂದ ಎರಡು-ಮೂರು ಬಾರಿ ತುಂಬಿದೆ. ಭೂಮಿ ತಾಯಿಗೆ ಹಸಿರು ಸೀರೆ ಉಡಿಸುವ ಕೆಲಸವನ್ನು ನಾವು ಮಾಡಿದ್ದೇವೆ. ಪ್ರಧಾನಿ ಮೋದಿ ಅವರು ಈಗಾಗಲೇ ಕೃಷಿ ಸಿಂಚಾಯಿ, ಕಿಸಾನ್ ಸಮ್ಮಾನ್ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದು ಹೇಳಿದರು. ನಾವುಗಳು ಜನಪರವಾಗಿದ್ದು, ದುಡಿಯುವ ವರ್ಗವನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ರೂಪಿಸಲಾಗುತ್ತಿದ್ದು, ದುಡಿಮೆಯೇ ದೊಡ್ಡಪ್ಪ, ಕಾಯಕ ಸಮಾಜ ದೇಶ, ನಾಡು ನಿರ್ಮಾಣ ಮಾಡಿದಾಗ ಅಭಿವೃದ್ಧಿ ಸಾಧ್ಯ. ನವಕರ್ನಾಟಕದಿಂದ ನವಭಾರತ ನಿರ್ಮಾಣ ನಮ್ಮ ಘೋಷಣೆಯಾಗಿದೆ ಎಂದು ಹೇಳಿದರು.

    ವೀರ ಮರಣ ಹೊಂದಿದ ಸೈನಿಕರ ಪತ್ನಿಯರಿಗೆ ಸನ್ಮಾನ: ಸೈನಿಕರು ವೀರ ಮರಣ ಹೊಂದಿದ ಬಗ್ಗೆ ವಿವರಣೆ ನೀಡಲಾಗುತ್ತಿದ್ದ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವುಕರಾದರು.
    ವೀರ ಮರಣ ಹೊಂದಿದ ಸೈನಿಕರ ಪತ್ನಿಯರಿಗೆ ಶ್ರೀಮಠದಿಂದ ಸನ್ಮಾನಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಭಾವುಕರಾದರು. ವೀರಮರಣ ಹೊಂದಿದ ಸೈನಿಕರ ಪತ್ನಿಯರಿಗೆ ಸಿರಿಗೆರೆ ತರಳುಬಾಳು ಬೃಹನ್ಮಠದಿಂದ ಸನ್ಮಾನ ಮಾಡಲಾಯಿತು. ತಲಾ ರೂ.50 ಸಾವಿರ ರೂಪಾಯಿಗಳಂತೆ ಒಟ್ಟು ಒಂಭತ್ತು ಮಂದಿಗೆ ಶ್ರೀಮಠದ ವತಿಯಿಂದ ಚೆಕ್ ವಿತರಿಸಲಾಯಿತು.
    ಈ ಸಂದರ್ಭದಲ್ಲಿ ವೀರ ಮರಣ ಹೊಂದಿದ ಸೈನಿಕರ ಪತ್ನಿಯರು ಕುಂದುಕೊರತೆಗಳನ್ನು ಒಳಗೊಂಡ ಮನವಿ ಪತ್ರವನ್ನು ಸಿರಿಗೆರೆ ಶ್ರೀಗಳಿಗೆ ನೀಡಿದರು. ಈ ಮನವಿ ಪತ್ರವನ್ನು ಸಿರಿಗೆರೆ ಶ್ರೀಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನೀಡಿದರು.
    ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲ್, ರೈತರಿಗಾಗಿ ಕೆಲಸ ಮಾಡುವ ಉದ್ದೇಶದಿಂದ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನೇ ಕೇಳಿ ಅರಣ್ಯ ಬದಲಾಗಿ ಕೃಷಿ ಇಲಾಖೆಯನ್ನು ಪಡೆದು ರೈತರ ಸೇವೆ ಮಾಡಲು ಅವಕಾಶ ಪಡೆದೆ. ರೈತರ ಸಮಸ್ಯೆಯನ್ನು ಆಲಿಸಿ, ರೈತರ ಕಣ್ಣೀರು ಒರೆಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದ್ದೇನೆ ಎಂದರು.

    ರೈತರ ಮಕ್ಕಳ ಬಿ.ಎಸ್.ಸಿ ಕೃಷಿ ಪದವಿ ವ್ಯಾಸಂಗಕ್ಕಾಗಿ ಶೇ.40 ರಿಂದ ಶೇ.50ಕ್ಕೆ ಸೀಟು ಹೆಚ್ಚಳ ಮಾಡಲಾಗಿದೆ. ರೈತರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಮುಖ್ಯಮಂತ್ರಿ ರೈತವಿದ್ಯಾನಿಧಿ ಯೋಜನೆ ಸ್ಥಾಪನೆ ಮಾಡಿ ರೈತರ ಮಕ್ಕಳಿಗೆ ನೆರವು ನೀಡಲಾಗುತ್ತಿದೆ ಎಂದು ಹೇಳಿದರು.

    ಜಲ ಸಂರಕ್ಷಣವಾದಿ ಮತ್ತು ಪರಿಸರವಾದಿ ರಾಜೇಂದ್ರ ಸಿಂಗ್ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಹೇರಳವಾದ ಸಂಪನ್ಮೂಲವಿದ್ದು, ಅದು ಸಂಪೂರ್ಣವಾಗಿ ಸದುಪಯೋಗವಾಗಬೇಕು. ಕರ್ನಾಟಕ ಒಂದು ಸುಂದರವಾದ ರಾಜ್ಯ. ಇಲ್ಲಿ ವಿಶೇಷವಾಗಿ ಪ್ರಕೃತಿಯನ್ನು ಸಂರಕ್ಷಣೆ ಮಾಡುವಂತಹ ವಿಶ್ವವಿದ್ಯಾಲಯಗಳನ್ನು ತೆರೆಯಬೇಕು. ಅದರಲ್ಲೂ ನೀರಿನ ಸಂರಕ್ಷಣೆ ಮತ್ತು ಅದರ ಉಪಯೋಗದ ಕುರಿತು ಮಾಹಿತಿಯನ್ನು ಒಳಗೊಂಡ ಪರಿಣಿತರನ್ನು ತಯಾರು ಮಾಡುವ ಕೆಲಸ ರಾಜ್ಯದ ಮುಖ್ಯಮಂತ್ರಿಗಳಿಂದ ಆರಂಭವಾಗಬೇಕು. ಇದೊಂದು ಅದ್ಭುತವಾದ ಕೆಲಸವಾಗಿದ್ದು, ಇದರು ಬೇರೆ ರಾಜ್ಯದ ಮುಖ್ಯಮಂತ್ರಿಗಳಿಗೆ ಇದು ಮಾದರಿಯಾಗಬೇಕು. ಈ ಹಿಂದೆ ಚನ್ನಗಿರಿಯಲ್ಲಿ ನಡೆದ ತರಳಬಾಳು ಹುಣ್ಣಿಮೆ ಸಮಾರಂಭದಲ್ಲಿ ಕೆರೆಯಿಂದ ಕೆರೆಗೆ ನೀರು ತುಂಬಿಸುವ ಯೋಜನೆ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದು, ಅದು ಅತ್ಯುತ್ತಮವಾದ ಕೆಲಸವಾಗಿದ್ದು, ರಾಜ್ಯ ಸರ್ಕಾರವೇ ಜಲ ವಿಶ್ವವಿದ್ಯಾಲಯವನ್ನು ಆರಂಭ ಮಾಡಬೇಕು ಎಂದು ಮನವಿ ಮಾಡಿದರು.

    ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿದರು. ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಮಾರಂಭದ ನೇತೃತ್ವದ ವಹಿಸಿದ್ದರು.

    ಕಾರ್ಯಕ್ರಮದಲ್ಲಿ ಕೈಗಾರಿಕಾ ಸಚಿವ ಮುರುಗೇಶ್‍ನಿರಾಣಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ಸಂಸದ ಜಿ.ಎಂ.ಸಿದ್ದೇಶ್ವರ್, ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ, ಹೊನ್ನಳಿ ಮಾಜಿ ಶಾಸಕ ಶಾಂತನಗೌಡ, ನೀರಾವರಿ ನಿಗಮ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಸಪ್ಪ ಗುಂಗೆ, ಜಗಳೂರು ಶಾಸಕ ಎಸ್.ವಿ.ರಾಮಚಂದ್ರಪ್ಪ, ಮಾಜಿ ಸಚಿವ ಹೆಚ್.ಆಂಜನೇಯ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ನಂದಿನಿದೇವಿ, ದಾವಣಗೆರೆ ವಿವಿ ಕುಲಪತಿ ಪ್ರೊ.ಶರಣಪ್ಪ ಹಲಸೆ ಸೇರಿದಂತೆ ಮತ್ತಿತರರು ಇದ್ದರು.

    error: Content is protected !!