24.2 C
Karnataka
Thursday, May 21, 2026
    Home Blog Page 165

    ನಿರುದ್ವಿಗ್ನ ನಿರೂಪಣೆಯ ಬಾಡಿಗೆ ಮನೆಗಳ ರಾಜಚರಿತ್ರೆ

    ಕನ್ನಡಿಗರಿಗೆ ಹೊಸ ಪುಸ್ತಗಳನ್ನು ಪರಿಚಯಿಸಬೇಕೆಂಬ ಉದ್ದೇಶದಿಂದ ಕನ್ನಡಪ್ರೆಸ್.ಕಾಮ್ ಪುಸ್ತಕ ಲೋಕವನ್ನು ಆರಂಭಿಸುತ್ತಿದೆ. ಈ ವಿಭಾಗದ ಮೊದಲ ಪ್ರಯತ್ನವಾಗಿ ಕಥೆಗಾರ ಕೆ. ಸತ್ಯನಾರಾಯಣ ಅವರ ಆತ್ಮಕಥನ ಬಾಡಿಗೆ ಮನೆಗಳ ರಾಜಚರಿತ್ರೆಯ ಬಗ್ಗೆ ಸತ್ಯಪ್ರಿಯ ಅವರು ಬರೆದಿರಿವ ವಿಮರ್ಶೆ ಪ್ರಕಟಿಸುತ್ತಿದ್ದೇವೆ. ಓದಿ ಪ್ರತಿಕ್ರಿಯಿಸಿ.

    ಸತ್ಯಪ್ರಿಯ

    ಕಳೆದ ಶತಮಾನದ ಕೊನೆಯ ಎರಡು ದಶಕಗಳು ಮತ್ತು ಈ ಶತಮಾನದ ಕಳೆದೆರಡು ದಶಕಗಳಲ್ಲಿ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರೆಯುತ್ತಿರುವ ಕೆ. ಸತ್ಯನಾರಾಯಣ ಅವರು ಮುಖ್ಯವಾಗಿ ಕತೆಗಾರ ಎಂದೇ ಪ್ರಸಿದ್ಧರಾದವರು. ತಮ್ಮ ಬರೆಹಗಳಲ್ಲಿ ಸದಾ ಪ್ರಯೋಗಶೀಲರಾಗಿರುವ ಅವರು ಹೊಸ ರೀತಿಯಲ್ಲಿ ಹೇಳುವುದಕ್ಕೆ ಸದಾ ತುಡಿಯುತ್ತಿರುತ್ತಾರೆ. ಈ ಮಾತಿಗೆ ಅವರ ಆತ್ಮಕಥನವೇ ಸಾಕ್ಷಿ.

    ಆತ್ಮಕಥನಗಳನ್ನು ಹೀಗೂ ಬರೆಯಬಹುದೇ ಎಂದು ಆಶ್ಚರ್ಯಪಡುವ ಹಾಗೆ ವಿಶಿಷ್ಟವಾಗಿ ಅವರು ಬರೆದಿರುವರು. ಅದು ಒಂದಲ್ಲ, ನಾಲ್ಕು ಸಂಪುಟಗಳಲ್ಲಿ. ಮೊದಲಿನದು, ನಾವೇನು ಬಡವರಲ್ಲ, ಎರಡನೆಯದು ಸಣ್ಣಪುಟ್ಟ ಆಸೆಗಳ ಆತ್ಮಚರಿತ್ರೆ, ಮೂರನೆಯದು ವೃತ್ತಿ ವಿಲಾಸ. ಇದೀಗ ಬಂದಿರುವುದು ಬಾಡಿಗೆ ಮನೆಗಳ ರಾಜಚರಿತ್ರೆ.

    ಮೊದಲಿನ ಮೂರನ್ನು ನಾನು ಓದಿಲ್ಲ. ಆದರೆ ಅವರ ಕೆಲವು ಕಥಾಸಂಕಲನ, ಕಾದಂಬರಿಗಳನ್ನು ನಾನು ಓದಿರುವೆನು. ಕೆ.ಸತ್ಯನಾರಾಯಣ ಅವರು ತಾವು ಬಾಲ್ಯದಿಂದ ನಿವೃತ್ತಿಯ ನಂತರ ಸ್ವಂತ ಮನೆಯಲ್ಲಿ ನೆಲೆಯಾಗುವ ವರೆಗೆ ಯಾವ ಯಾವ ಊರುಗಳಲ್ಲಿ ಬಾಡಿಗೆ ಮನೆಗಳಲ್ಲಿ ಇದ್ದೆವು, ಆ ಬಾಡಿಗೆ ಮನೆಗಳ ಮೂಲಕ ತಮ್ಮ ಬದುಕು ಹೇಗೆ ಪ್ರಭಾವಿತವಾಯಿತು, ಬಾಡಿಗೆ ಮನೆಗಳ ಕಾರಣದಿಂದ ಸಾಮೀಪ್ಯಕ್ಕೆ ಬಂದ ವಿವಿಧ ರೀತಿಯ ಜನರಿಂದ ತಮ್ಮ ಅನುಭವಕ್ಕೆ ಬಂದ ಅಧ್ಯಾತ್ಮ ಯಾವುದು ಎಂಬುದನ್ನು ತುಂಬ ಸರಳ ಸುಂದರ ಶೈಲಿಯಲ್ಲಿ ಹೇಳಿದ್ದಾರೆ. ಸಹಜ ಕತೆಗಾರರು ಅವರಾಗಿರುವ ಕಾರಣ ಇಲ್ಲಿ ಕಥಿಸುವುದು ಅವರಿಗೆ ಕಷ್ಟವಾಗಿಲ್ಲ. ಅವರ ದೃಷ್ಟಿಯಲ್ಲಿ ಪ್ರತಿಯೊಂದು ಮನೆಯೂ ವಾಸ್ತವ್ಯವೂ ಜಗತ್ತಿಗೆ, ಮನುಷ್ಯನ ಸ್ವಭಾವಕ್ಕೆ ಹೊಸದೊಂದು ಕಿಟಕಿ.

    ಆತ್ಮಕಥನ ಎಂಬುದು ಸಾಹಿತ್ಯದ ಒಂದು ಭಾಗವಾಗಿ ಪರಿಗಣಿತವಾಗಿದೆ. ವಿವಾದದ ಮೂಲಕ ಪ್ರಸಿದ್ಧಿಯನ್ನು ಪಡೆಯುವ ಉದ್ದೇಶದಿಂದಲೇ ಆತ್ಮಕಥನಗಳನ್ನು ಬರೆದವರೂ ಇದ್ದಾರೆ. ಆತ್ಮಕಥನವು ವ್ಯಷ್ಟಿ ಚರಿತ್ರೆಯಾದರೂ ವ್ಯಷ್ಟಿಯು ಸಮಾಜದ ಭಾಗವಾಗಿರುವ ಕಾರಣ ಸಮಷ್ಟಿ ಚರಿತ್ರೆಯೂ ಆಗಿರುತ್ತದೆ. ಆ ಕಾರಣಕ್ಕೆ ಆತ್ಮ ಕಥನವು ವ್ಯಕ್ತಿಯು ಬದುಕಿದ ಸಮಕಾಲೀನ ಸಮಾಜದ ಕಥನವೂ ಆಗಿರುತ್ತದೆ. ಈ ಮೂಲಕ ಆತ್ಮಕಥನಗಳ ಅಧ್ಯಯನವು ವ್ಯಕ್ತಿಯನ್ನು ಅರಿಯುವುದರ ಜೊತೆಗೆ ಆತನ ಸಮಕಾಲೀನ ಸಮಾಜವನ್ನು ಅರಿಯುವುದಕ್ಕೂ ಒಂದು ಕಿಂಡಿಯಾಗುತ್ತದೆ.

    ಆತ್ಮಕಥನ ಬರೆಯಬೇಕಾದರೆ ಮುಖ್ಯವಾಗಿ ಇರಬೇಕಾದ ಅರ್ಹತೆ ಪ್ರಾಮಾಣಿಕತೆ. ಮುಚ್ಚುಮರೆ ಇಲ್ಲದೆಯೇ ಬೆತ್ತಲಾಗುವ ಎದೆಗಾರಿಕೆ ಆತ್ಮಕಥನ ಬರೆಯುವವರಲ್ಲಿ ಇರಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಮಹಾತ್ಮ ಗಾಂಧೀಜಿಯವರ ಆತ್ಮಕಥನ `ನನ್ನ ಸತ್ಯಾನ್ವೇಷಣೆ’ (ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ಅವರ ಅನುವಾದ) ಸುಪ್ರಸಿದ್ಧವಾದದ್ದು. ಜಗತ್ತಿನ ಆತ್ಮಕಥನಗಳಲ್ಲೆಲ್ಲ ತುಂಬ ಶ್ರೇಷ್ಠವಾದದ್ದು ಮತ್ತು ನನಗೆ ಇಷ್ಟವಾದದ್ದು ಅದು. ಅದರ ಮುನ್ನುಡಿಯಲ್ಲಿ ಗಾಂಧೀಜಿಯವರು ಒಂದು ಮಾತನ್ನು ಹೇಳುತ್ತಾರೆ,- `ನಾನು ನನ್ನಲ್ಲೇ ಆಲೋಚನೆ ಮಾಡಿ ಹಿನ್ನೋಟ ಬೀರಿದಂತೆ ನನ್ನ ದೌರ್ಬಲ್ಯ ನನಗೆ ಹೆಚ್ಚು ಸ್ಪಷ್ಟವಾಗಿ ಅನುಭವವಾಗುತ್ತದೆ’ ಎಂದು. ನಿಜ, ಇದು ಪ್ರತಿಯೊಬ್ಬ ಆತ್ಮಕಥನಕಾರನ ಅನುಭವವಾಗಿರಬಹುದು.

    ಆತ್ಮಕಥನದಲ್ಲಿ ಇರುವ ಪ್ರಮುಖ ತೊಡಕು ಎಂದರೆ ನಮ್ಮ ಸಂಪರ್ಕದಲ್ಲಿ ಬರುವ ವ್ಯಕ್ತಿಗಳನ್ನು ನಮ್ಮದೇ ದೃಷ್ಟಿಯಲ್ಲಿ ಬೆಲೆಕಟ್ಟುವುದು. ನಾವು ನಮ್ಮೆರಡು ಕಣ್ಣುಗಳಿಂದ ಜಗತ್ತನ್ನು ನೋಡುತ್ತಿರುವಾಗ ಸಾವಿರ ಕಣ್ಣುಗಳು ನಮ್ಮನ್ನು ನೋಡುತ್ತಿರುತ್ತವೆ. ಆ ಸಾವಿರ ಕಣ್ಣುಗಳಿಗೆ ನಮ್ಮ ಕುರಿತು ಸಾವಿರ ಅಭಿಪ್ರಾಯಗಳಿರುತ್ತವೆ. ಊರವರ ವಿಚಾರವೇಕೆ, ಸ್ವತಃ ತಮ್ಮ ತಂದೆತಾಯಿಗಳ ಕುರಿತು, ಒಡಹುಟ್ಟಿದವರ ಕುರಿತು ನಮ್ಮ ಅಭಿಪ್ರಾಯಗಳು ಎಲ್ಲ ಕಾಲದಲ್ಲಿಯೂ ಸರಿಯಾಗಿಯೇ ಇರಬೇಕಾಗಿಲ್ಲ. ಯಾರು ಯಾರ ಕುರಿತೇ ಆಗಲಿ ಯಾವುದರ ಕುರಿತೇ ಆಗಲಿ ತಮ್ಮ ಅಭಿಪ್ರಾಯ ಹೇಳಿದರೆ ಅದು ಆಂಶಿಕ ಸತ್ಯವಾಗಿ ಮಾತ್ರ ಇರುತ್ತದೆ.

    ನನಗೆ ಮತ್ತೆ ಇಲ್ಲಿ ಗಾಂಧೀಜಿಯವರು ತಮ್ಮ ಆತ್ಮಕಥನದಲ್ಲಿ ಹೇಳಿದ ಈ ಮಾತು ನೆನಪಾಗುತ್ತದೆ, -`ತನ್ನ ತಪ್ಪನ್ನು ಯಾವಾಗಲೂ ದೊಡ್ಡದು ಮಾಡಿ ನೋಡಬೇಕು.ಇತರರ ತಪ್ಪನ್ನು ಚಿಕ್ಕದು ಮಾಡಿ ನೋಡಬೇಕು. ಆಗ ಮಾತ್ರ ಮನುಷ್ಯ ಎರಡರ ನ್ಯಾಯವಾದ ಸಮತೂಕವನ್ನು ಅರಿಯಬಲ್ಲನೆಂಬುದು ನನ್ನ ಅಭಿಪ್ರಾಯ.’ (ಪುಟ487)-. ನನ್ನ ದೃಷ್ಟಿಯಲ್ಲಿ ಇದು ಅತ್ಮಕಥನಕಾರರ ಎರಡನೆಯ ಅರ್ಹತೆಯಾಗಿರುತ್ತದೆ.

    ಬಾಡಿಗೆ ಮನೆಗಳ ರಾಜಚರಿತ್ರೆಯಲ್ಲಿ ಕೆ.ಸತ್ಯನಾರಾಯಣ ಅವರು ತಮ್ಮ ಬದುಕಿನಲ್ಲಿ ಸಂದುಹೋದ ಹಲವು ಘಟನೆಗಳ ಮರು ಅವಲೋಕನ ಮಾಡುವಾಗ ಇಂಥ ಸಮತೂಕವನ್ನು ಸಾಧಿಸುವ ಪ್ರಯತ್ನ ಮಾಡಿದ್ದಾರೆ. ತಮ್ಮ ಸಂಪರ್ಕದಲ್ಲಿ ಬಂದವರ ಕುರಿತು ಕೇವಲ ತಮ್ಮ ಅಭಿಪ್ರಾಯವನ್ನು ಮಾತ್ರ ಹೇಳದೆ ಅವರ ಮನದಲ್ಲಿ ತಮ್ಮ ಬಗ್ಗೆ ಯಾವ ಅಭಿಪ್ರಾಯ ಮೂಡಿರಬಹುದು ಎಂಬುದನ್ನೂ ಊಹಿಸಿಕೊಳ್ಳುತ್ತಾರೆ. ಇತರರ ಕುರಿತು ತಮ್ಮ ಅಭಿಪ್ರಾಯವನ್ನು ಹೇಳುವಾಗ ಖಚಿತವಾಗಿ ಹೀಗೇ ಎಂದು ಹೇಳುವುದಿಲ್ಲ. ಉದಾಹರಣೆಗೆ ತಮ್ಮ ತಂದೆಯ ಕುರಿತು ಅವರು ಹೇಳುವ ಒಂದು ಮಾತು,- `ಬಾಡಿಗೆ ಮನೆಗಳು ಕೂಡ ಇಂತಹದೇ ಇರಬೇಕು, ಇಷ್ಟೇ ಅನುಕೂಲಗಳಿರಬೇಕು ಎಂದು ಕೂಡ ನಮ್ಮ ತಂದೆ ನಂಬಿರಲಿಲ್ಲವೆಂದು ಕಾಣುತ್ತದೆ.’- ತಮ್ಮ ತಂದೆಯ ಆಲೋಚನೆ ಇದಕ್ಕೂ ಭಿನ್ನವಾಗಿದ್ದಿರಬಹುದು ಎಂಬ ಅರಿವು ಅವರಿಗೆ ಇದೆ. ಇತರರ ಕುರಿತು ಅಭಿಪ್ರಾಯ ವ್ಯಕ್ತಪಡಿಸುವಾಗ ಇರಬೇಕಾದ ಎಚ್ಚರ ಇದು.

    ಕೃತಿಯಲ್ಲಿ ಹಲವು ಕಡೆ ಮನುಷ್ಯ ಸ್ವಭಾವಗಳ ಸುಂದರ ವಿಶ್ಲೇಷಣೆ ಬರುತ್ತದೆ. `ವಯಸ್ಸಾಗುತ್ತಾ ಆಗುತ್ತಾ, ಗಂಡ-ಹೆಂಡತಿ ಇಬ್ಬರೂ ಎಲ್ಲ ಸಂಗತಿ- ವಿದ್ಯಮಾನಗಳನ್ನು ಕುರಿತಂತೆ ಒಂದೇ ಅಭಿಪ್ರಾಯಕ್ಕೆ ಬಂದುಬಿಡುತ್ತಾರೆ’ ಎಂಬ ಮಾತು. ನಿಜ, ಕೆಲವೊಮ್ಮೆ ಹೆಂಡತಿಯು ಆಡಬೇಕಾದ ಮಾತನ್ನು ಗಂಡನೇ ಮೊದಲು ಆಡಿಬಿಡುತ್ತಾನೆ. ಹಾಗೆಯೇ ಗಂಡನ ಮಾತನ್ನು ಹೆಂಡತಿಯೇ ಮೊದಲು ಆಡಿಬಿಡುತ್ತಾಳೆ. ಸುದೀರ್ಘ ದಾಂಪತ್ಯದಲ್ಲಿ ಇಂಥ ಅನುಭವ ಪ್ರತಿಯೊಬ್ಬರಿಗೂ ಆಗಿರುತ್ತದೆ. ಬದುಕಿನಲ್ಲಿ ಮಾಗಿದಂತೆ ಈ ರೀತಿಯ ಬರೆವಣಿಗೆ ಸಾಧ್ಯವಾಗುತ್ತದೆ.

    ಈ ಆತ್ಮಕಥನದಲ್ಲಿ ನಟ ರಾಜಕುಮಾರ್‌ ಅವರ ಪ್ರಸ್ತಾಪ ಬರುತ್ತದೆ. ರಾಜಕುಮಾರ್‌ ಅವರ ಹುಟ್ಟೂರು ಸಿಂಗಾನಲ್ಲೂರಿಗೆ ಮುಕ್ಕಾಲು ಮೈಲು ದೂರದಲ್ಲೇ ಲೇಖಕರು ಕೆಲವು ಕಾಲ ವಾಸಿಸಿದ್ದರು. ರಾಜಕುಮಾರ್‌ ಅವರ ಕುರಿತು ಆ ಹಳ್ಳಿಯ ಜನರಿಂದ ಹಲವು ಸಂಗತಿಗಳನ್ನು ಕೇಳಿದ್ದರು. ನಟನನ್ನು ತುಂಬಾ ಹತ್ತಿರದಿಂದ, ದಿನನಿತ್ಯದ ಜೀವನದ ಮನೆವಾರ್ತೆಯ ಭಾಗವಾಗಿ ಕಂಡಿದ್ದ ಅವರಿಗೆ ಈಗ ರಾಜಕುಮಾರ್‌ರನ್ನು ನಮ್ಮ ಸಂಸ್ಕೃತಿ ಚಿಂತನೆ ಕಟ್ಟಿಕೊಡುವ ರೀತಿ ಕಂಡಾಗ ಗಲಿಬಿಲಿಗೊಳ್ಳುತ್ತಾರೆ. `ವಸ್ತುವನ್ನಾಗಲೀ, ವ್ಯಕ್ತಿಯನ್ನಾಗಲೀ ಅದು ಇರುವ ಸ್ವರೂಪದಲ್ಲೇ ನಾವು ಗ್ರಹಿಸುವುದಿಲ್ಲ. ನಮಗೆ ಬೇಕಾದ ಹಾಗೆ, ನಮ್ಮ ಮಾನಸಿಕ ಅವಶ್ಯಕತೆಗನುಗುಣವಾಗಿ ಗ್ರಹಿಸುತ್ತೇವೆ ಎಂಬ ಮಾತು ಎಷ್ಟು ಸತ್ಯವಾದದ್ದು!’ ಎಂದು ಲೇಖಕರು ಬರೆದಿರುವುದು. ಆತ್ಮಕಥನಕಾರರ ಬಿಕ್ಕಟ್ಟಿನ ಒಂದು ಮುಖ ಇದು.

    ಹಾಗೆಯೇ ಅವರು ಹೇಳುವ ಇನ್ನೊಂದು ಮಾತು, `… ಒಂದನ್ನು ಅನುಭವಿಸುವಾಗ ಉಂಟಾಗುವ ಭಾವನೆಗಳು ನಿಜವೋ, ಈಗ ಹೋಲಿಕೆಯಲ್ಲಿ ನೆನಸಿಕೊಂಡಾಗ ಮೂಡುವ ಭಾವನೆಗಳು ನಿಜವೋ. ಇಲ್ಲ ಎರಡನ್ನೂ ಸರಿಯಾದ ಹದದಲ್ಲಿ ಬೆರೆಸಿ ನೆನಪುಗಳನ್ನು ಕಟ್ಟಬೇಕೋ?’ ಇದು ಬಿಕ್ಕಟ್ಟಿನ ಇನ್ನೊಂದು ಮುಖ.

    ತಮ್ಮ ಬಾಲ್ಯವನ್ನು ಗ್ರಾಮೀಣ ಭಾಗದಲ್ಲಿಯೇ ಹೆಚ್ಚು ಕಳೆದ ಲೇಖಕರು ಸ್ಪೃಶ್ಯ ಮತ್ತು ಅಸ್ಪೃಶ್ಯತೆಯ ಅನುಭವದ ವಿವಿಧ ಮುಖಗಳನ್ನು ಸ್ವಾರಸ್ಯಕರವಾಗಿ ಹೇಳುವರು. ಹಾಗೆಯೇ ಬದುಕಿನ ತತ್ವಜ್ಞಾನವನ್ನು ಕೂಡ. `ಮನುಷ್ಯ ಬೆಳೆಯುವಾಗ, ಸುಖಪಡುವಾಗ, ಸುಖವನ್ನು ಬಯಸುವಾಗ, ಯಾರ ಯಾರ ಸ್ವಾರ್ಥ ಯಾವಾಗ ಎಷ್ಟು ಮುಂದೆ ಬರುತ್ತದೆ ಎಂಬುದು ನಿಗೂಢವೇ. ಅದಕ್ಕೆ ವಯಸ್ಸಿನ ಹಂಗಿರುವುದಿಲ್ಲ. ಎಲ್ಲರಿಗೂ ಬೇರು ಬಿಡುವ, ಸ್ಥಾಪಿಸಿಕೊಳ್ಳುವ ಹಪಾಹಪಿಯೇ…’ ಎಂದು ಹೇಳುವಾಗ ಮತ್ತು, `ಇನ್ನೊಬ್ಬರ ಮನೆಯಲ್ಲಾದಾಗ ವೈಚಾರಿಕವಾಗಿ ಪ್ರತಿಕ್ರಿಯಿಸುವುದಕ್ಕೂ, ನಮ್ಮ ಮನೆಯಲ್ಲೇ ಆದಾಗ ಏನು ಮಾಡುತ್ತೇವೆ ಎಂಬ ಪ್ರಶ್ನೆಗೆ ಉತ್ತರಿಸುವುದಕ್ಕೂ ತುಂಬಾ ವ್ಯತ್ಯಾಸವಿದೆ. ನಮ್ಮ ನಮ್ಮ ವರ್ಗ ಹಿತಾಸಕ್ತಿಗಳನ್ನು ಮೀರಿ ಯೋಚಿಸುವುದು ನಿಜಕ್ಕೂ ಸಾಧ್ಯವೇ ಎಂಬ ಪ್ರಶ್ನೆಗೆ ನಿಜವಾಗಿಯೂ ಉತ್ತರವಿಲ್ಲ..’ ಎಂದು ಹೇಳುವಲ್ಲಿ ಈ ತತ್ವಜ್ಞಾನ ಕಾಣುತ್ತದೆ.
    `ಬಾಡಿಗೆ ಮನೆಗಳ ರಾಜಚರಿತ್ರೆ’ಗೆ ಭರತವಾಕ್ಯದಂತೆ ಈ ಮಾತುಗಳು ಕೃತಿಯಲ್ಲಿವೆ. `ನೀವು ಎಷ್ಟೇ ಮನೆಗಳನ್ನು ಬದಲಾಯಿಸಿದರೂ, ಎಷ್ಟೇ ಊರುಗಳಿಗೆ ಹೋದರೂ, ಕೊನೆಗೆ ನಿಮಗೆ ಸಿಗುವುದು ನಿಮ್ಮ ಸ್ವಭಾವ, ಜಾಯಮಾನಕ್ಕೆ ಸಮೀಪವಾದ ಜನಗಳು ಮಾತ್ರ. ಹಾಗಾಗಿ, ನಿಮಗೆ ಮನುಷ್ಯ ಸ್ವಭಾವದ, ವೈವಿಧ್ಯ-ಆಳಗಳ ಪರಿಚಯವಾಗುವುದೇ ಇಲ್ಲ. ಆದರೆ ಕೆಲವೊಂದು ಮನೆಗಳಲ್ಲಿ ಮನೆಗಳ ಮೂಲಕ ಸಿಗುವ ಸಂಬಂಧಗಳು ಕೆಲವು ಪಾಠಗಳನ್ನು ಕಲಿಸುತ್ತವೆ.’ ಲೇಖಕರ ಈ ಮಾತು ನಿಜ. ಇದನ್ನೇ ಹೇಳುವುದು, ತೆರೆದಷ್ಟೇ ಬಾಗಿಲು ಎಂದು.

    ನಾನು ಹಲವು ಆತ್ಮಕಥನಗಳನ್ನು ಓದಿದ್ದೇನೆ. ಅದರಲ್ಲೂ ಸಾಹಿತಿಗಳ ಆತ್ಮಕಥನಗಳನ್ನು ಓದಿದ್ದೇನೆ. ಆದರೆ ಅವೆಲ್ಲವುಗಳಿಗಿಂತ ಭಿನ್ನವಾದ ಕಟ್ಟುವಿಕೆಯಿಂದಾಗಿ, ಯಾವುದೇ ಆತ್ಮಪ್ರತ್ಯಯವಿಲ್ಲದೆ ಒಪ್ಪಿಕೊಳ್ಳುವಿಕೆಯ ಪ್ರಾಮಾಣಿಕತೆಯಿಂದಾಗಿ, ಬದುಕಿನ ಸರಳ ಸತ್ಯಗಳಿಗೆ ಉದಾಹರಣೆಗಳೆಂಬಂತೆ ಸಂಗತಿಗಳನ್ನು ಹೇಳುವ ಶೈಲಿಯಿಂದಾಗಿ, ವಿವಾದಗಳಿಂದ ದೂರವಾಗಿರುವ ಘಟನೆಗಳ ನಿರುದ್ವಿಗ್ನ ನಿರೂಪಣೆಯಿಂದಾಗಿ `ಬಾಡಿಗೆ ಮನೆಗಳ ರಾಜಚರಿತ್ರೆ’ಗೆ ರಾಜಕಳೆ ಬಂದಿದೆ.

    ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುತ್ತಿದ್ದವರಿಗೆ ಕಾಲಿಗೆ ಬೇಡಿ ಹಾಕಿದಂತಾಗಿದ್ದು ಸುಳ್ಳಲ್ಲ

    ರಸ್ತೆಯ ಆ ಪಕ್ಕ ದಟ್ಟ ಕಾಡು, ಈ ಕಡೆ ಅಡಿಕೆ ಮತ್ತು ಕಾಫಿ ತೋಟ, ಅದರಾಚೆಗೆ ಗದ್ದೆ, ಬಾಳೆ ತೋಟ, ಇವೆಲ್ಲದರ ನಡುವೆ ಇರುವ ಮನೆ. ಕಲ್ಮಶದ ಹೆಸರರಿಯದ ಬಾವಿನೀರು, ಮಾಲಿನ್ಯದುಸಿರೂ ಸೋಕಿಸಿಕೊಳ್ಳದ ಶುದ್ದ ಗಾಳಿಯ ಜೊತೆಗೇ ಬೆಳಗು ಕಂಡವರಿಗೆ ಮೊದಮೊದಲು ಹಾದಿಗೊಂದು, ಬೀದಿಗೊಂದಿರುವ ಕಾಣುವ ಪಾರ್ಕುಗಳು ತುಂಬಾ ಆಕರ್ಷಕವಾಗಿಯೇ ಕಂಡಿದ್ದವು. ಯಕ್ಷಗಾನದಲ್ಲಿ ಬಣ್ಣಗೊಂಡು ಮೆರೆವ ರಾಜ, ಬಣ್ಣ ಕಳೆದ ಮೇಲೆ ಮುಪ್ಪಿನ ಮುದುಕ ಎಂಬುದನ್ನು ಏಕ್ ದಮ್ ಒಪ್ಪಿಕೊಳ್ಳಲು ಮನಸು ಹೇಗೆ ತಯಾರಿರಲಿಲ್ಲವೋ ಹಾಗೇ ಈ ಪಾರ್ಕಿನ ಗೀಳು ಬಹಳ ಕಾಲವುಳಿಯಲಿಲ್ಲ.

    ಶಾಲೆ, ಕಾಲೇಜಿನ ಯುಗದಲ್ಲಿಯೂ ಪ್ರವಾಸ, ಕಾಡುಮೇಡೆಂದು ಅಲೆದಾಡುತ್ತಾ ನಿರಾಳವಾಗಿದ್ದವರಿಗೆ, ಆಫೀಸಿನ ಏಕತಾನತೆ ತಲೆಚಿಟ್ಟು ತರಿಸುತ್ತಿತ್ತು. ಮೀಟಿಂಗ್, ಜೀರಾ ಅಪ್ಡೇಟ್, ಬಿಲ್ಡ್, ಡಿಫೆಕ್ಟ್ ಲೈಫ್ ಸೈಕಲ್ಲುಗಳ ಚಕ್ರದ ನಡುವೆ ಸಿಕ್ಕಿಬಿದ್ದು ದೇಹವೂ, ಮನಸೂ ಭಾರವಾಗುತ್ತಿತ್ತು. ಇಂತಹ ಜಂಜಾಟದಿಂದ ಕ್ಷಣಕ್ಕಾದರೂ ಮುಕ್ತಿ ಪಡೆಯಲು ನಮ್ಮಂತಹ ಬಹುತೇಕ ಟೆಕ್ಕಿಗಳು ಕಂಡುಕೊಂಡ ಸುಲಭ ಪರಿಹಾರವೇ ಈ ವೀಕೆಂಡ್ ಟ್ರಿಪ್ ಅಂದ್ರೆ ವಾರಾಂತ್ಯದ ಸಣ್ಣ ಪ್ರವಾಸ.

    ಒಂದು ದಿನದ ಅಥವಾ ಎರಡು ದಿನಗಳ ಪ್ರವಾಸದ ಸಡಗರ ಗುರುವಾರದಿಂದಲೇ ಶುರುವಾಗುತ್ತಿತ್ತು. ಶುಕ್ರವಾರವಂತೂ ಬೆಟ್ಟದಷ್ಟಿದ್ದ ಕೆಲಸವನ್ನೂ ಕಲ್ಲು ಸಕ್ಕರೆಯಂತೇ ಕರಗಿಸಿಕೊಂಡು ಮುಗಿಸಿ ‌ಮನೆಗೋಡುವ ತರಾತುರಿ. ಬೆಂಗಳೂರಿನ ಸುತ್ತಲಿನ ನಂದಿಬೆಟ್ಟ, ಅವಳ ಬೆಟ್ಟ, ಮಲೆಮಹದೇಶ್ವರ ಬೆಟ್ಟ, ಬಿಳಿಗಿರಿ ರಂಗನ ಬೆಟ್ಟ, ಸಾವನದುರ್ಗ, ತುರಹಳ್ಳಿ ಮತ್ತು ಕನಕಪುರದ ಕಾಡು, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಮುಂತಾದ ಬೆಟ್ಟಗುಡ್ಡಗಳಿಗೆ ನಸುಕಿನಲ್ಲೇ ಟ್ರೆಕ್ಕಿಂಗ್ ಹೊರಡುವುದು, ಅಲ್ಲಿನ ಕಾಡಲ್ಲಿ ತಿರುಗುವುದು, ಅಲ್ಲಿಯ ಹಳ್ಳಿ ಜನರನ್ನು ಮಾತನಾಡಿಸಿ ಅವರು ಬೆಳೆದ ಸೊಪ್ಪು-ತರಕಾರಿ ಕೊಂಡು ಅವರ ಮುಗ್ಧ ನಗು ತರುವ ಸಂತಸವನ್ನು ವಾರಗಟ್ಟಲೇ ಕಾಪಿಟ್ಟುಕೊಳ್ಳುವುದು ನೆಚ್ಚಿನ ಸಂಗಾತಿಯಾಗಿತ್ತು.

    ಪೂರ್ವ ತಯಾರಿಯೇ ಇಲ್ಲದಾಗ ಜನಪದಲೋಕದಲ್ಲಿ ಚೂರು ವಿಹರಿಸಿ, ಕಾಮತ್ ಹೋಟೆಲಿನಲ್ಲಿ ಊರಕಡೆ ತಿಂಡಿಯನ್ನು ಮೆದ್ದು, ಸೂಕ್ಷ್ಮವಾದ ಕುಸುರಿ ಕಲೆಯಿಂದ ಮಾಡಿದ ಚೆನ್ನಪಟ್ಟಣದ ಗೊಂಬೆಗಳನ್ನು ಪ್ರವಾಸದ ನೆನಪಿಗೆಂದು ಮುಂದಿಟ್ಟುಕೊಳ್ಳುವುದು ಸಹಜ ಪ್ರಕ್ರಿಯೆಯೇ ಆಗಿಹೋಗಿತ್ತು. ವಾರಾಂತ್ಯದಲ್ಲಿ ಬೇರೆ ಬೇರೆ ಕೆಲಸದಿಂದ ಎಲ್ಲಿಗೂ ಹೋಗಲಿಕ್ಕೆ ಆಗದಿರುವಾಗ ಪಕ್ಕದ ರಾಗಿಗುಡ್ಡ,‌ ಬಸವನಗುಡಿ, ಓಂಕಾರೇಶ್ವರ, ಜಯನಗರದ ಕಾಂಪ್ಲೆಕ್ಸ್, ಬನ್ನೆರುಘಟ್ಟದ ಲಕ್ಷ್ಮೀ ನರಸಿಂಹ ದೇವಸ್ಥಾನದ ಗುಡ್ಡಕ್ಕೊ ವಿನಾಕಾರಣ ಸುತ್ತಿ ಬರುವ ಸಂಗತಿಗಳೆಲ್ಲ ಅದೆಷ್ಟು ನೈಜವಾಗಿ ದಿನಚರಿಯಲ್ಲಿ ಭಾಗವೇ ಆಗಿತ್ತಲ್ಲಾ ಎಂದು ಈಗ ಅನಿಸುತ್ತಿದೆ.

    ಮೊದಲೆಲ್ಲಾ ಪ್ರಕೃತಿಯ ಮಡಿಲಲ್ಲಿರುವ ನನ್ನವನೂರಿಗೆ ಬರಲು ಜೀವ ಜೀಕುತ್ತಿತ್ತು. ಅಕ್ಕಪಕ್ಕದ ಊರಿನ ರಾಣಿಝರಿ, ಕ್ಯಾತನಮಕ್ಕಿ, ಕುಂದಾದ್ರಿ, ಜೋಗಿ ಗುಂಡಿ, ಸಿರಿಮನೆ, ಮಘೇಬೈಲು, ನರಸಿಂಹ ಪರ್ವತ, ಕವಲೇದುರ್ಗ, ಕುಪ್ಪಳ್ಳಿ, ಆಗುಂಬೆ ಹೀಗೆ ಅನೇಕಾನೇಕ ನೈಸರ್ಗಿಕ ತಾಣಗಳ ಮಡಿಲಲ್ಲಿ ಶಿಶುವಾಗಿ ನಲಿವ ಸುಮಧುರ ಘಳಿಗೆಗಳನ್ನು ನಮ್ಮದಾಗಿಸಿಕೊಳ್ಳುವ ತವಕದಲ್ಲೇ ಇರುತ್ತಿದ್ದೆವು. ಹಾಗೆ ಕಳೆವ ಕ್ಷಣಗಳು ದಿನಕ್ಕಿಂತಲೂ ಕಮ್ಮಿ ಸಮಯವೇ ಆದರೂ ಪ್ರವಾಸ ತಂದುಕೊಡುವ ಸವಿನೆನಪಿಗೆ ಆಯಸ್ಸು ಜಾಸ್ತಿ.

    ಹೀಗಾಗಿ ಕೊರೊನ ಕಾಲದಲ್ಲಿ ಒಂದು ತಿಂಗಳು ಊರಲ್ಲಿದ್ದು, ವಾರಾಂತ್ಯದಲ್ಲಿ ಇಷ್ಟುದಿನ ನೋಡಲಿಕ್ಕಾಗದ ಸ್ಥಳಗಳನ್ನೆಲ್ಲಾ ನೋಡಿಬಿಡಬೇಕೆಂಬ ಲಿಸ್ಟ್ ತಯಾರಸಿಯೇ ಊರಿಗೆ ಹೊರಟೆವು. ‘ಲಾಕ್ಡೌನ್’ ಎಂಬ ಬಂಗಾರದ ಶರಪಂಜರದೊಳಗಿರುವ ಮುನ್ನವೇ ಮನೆಗೆ ಸಮೀಪವಿದ್ದ ಜಲಪಾತವೆರಡನ್ನು ಕಣ್ತುಂಬಿಸಿಕೊಂಡು ತಂಪಾಗಿದ್ದೆವು. ನಂತರ ವಾರಾಂತ್ಯ ಕಳೆಯಲು ಮನೆಯ ಹಿಂದಿನ ಗುಡ್ಡವನ್ನೇರಿ ಉದುರಿದ್ದ ನವಿಲುಗರಿಯನ್ನೆಲ್ಲಾ ಹೆಕ್ಕಿಕೊಂಡು ನಲಿದಿದ್ದೂ ಆಯ್ತು. ತಿಂಡಿ ಕಟ್ಟಿಕೊಂಡು ಮನೆಯವರೆಲ್ಲಾ ಒಣಗಿದ ಗದ್ದೆಬೈಲಿನಲ್ಲಿ ಕುಳಿತು ತಿಂದು ತೇಗಿದ್ದಕ್ಕೆ ಪಿಕ್ನಿಕ್ ಎಂದು ಕರೆದಿದ್ದಾಯ್ತು. ಆದರೂ ಮನಕ್ಕೆ ಎನೋ ಕಳೆದುಕೊಂಡು ಅನುಭವ.

    ಅಂತೂ ಲಾಕ್ಡೌನ್ ಮುಗೀತು, ನಾವಿದ್ದುದು ‘ಹಸಿರು ವಲಯ’ ಬೇರೆ, ಅದಕ್ಕೆ ಮನೆಯಿಂದ ತುಂಬಾ ಹತ್ತಿರದ ಬೆಟ್ಟಕ್ಕೆ ಹೊರಡುವ ಸಿದ್ಧತೆಯಾಯ್ತು. ಎರಡು ವರ್ಷದ ಮರಿಗುಬ್ಬಿಯನ್ನು ಮನೆಯಲ್ಲಿಯೇ ಅವನಜ್ಜಿ ಬಳಿ ಬಿಟ್ಟು ಹೊರಡಲು ನಾನೂ ತಯಾರಾದೆ. ತೊರೆ, ಹಳ್ಳ, ಸೇತುವೆಯ ಕಂಡೊಡನೆ ಬೈಕು ನಿಲ್ಲಿಸಿ ಕ್ಲಿಕ್ಕಿಸುವ ಕ್ಯಾಮೆರಾದ ಬೆಳಕಿಗೆ ಅಕ್ಕಪಕ್ಕದಲ್ಲಿರುತ್ತಿದ್ದ ಊರತಲೆಗಳು ಎಂತದೋ ಸಂಶಯದಿಂದ ನೋಡತೊಡಗಿದ್ದವು. ನಸುಕಿನಲ್ಲೇ ಮನೆಯಿಂದ ಹೊರಟವರು ಕ್ಷಣಕ್ಕೆ ಮೈಮುರಿ ತೆಗೆದು, ಬೆನ್ನು ನೆಟ್ಟಗಾಗಿಸಲು ಒಂದು ಎಸ್ಟೇಟ್ ಬಳಿ ನಿಲ್ಲಿಸಿದಾಗ, ಮುಂದೆ ಸಾಗುತ್ತಿದ್ದ ಗೂಡುರಿಕ್ಷಾದವ ರಿವರ್ಸ್ ಗೇರಿನಲ್ಲಿ ಬಂದಾಗ ಚೂರು ಕಸಿವಿಸಿಯಾಯ್ತು. ನಾವು ಬೆಟ್ಟಕ್ಕೆ ಹೋಗುವವರೆಂದು ತಿಳಿದು ‘ಆ ಬೆಟ್ಟದಲ್ಲಿ ಜೀಪುರುಳಿ ಬಿದ್ದಿದೆ, ಡಿವೈಎಸ್ಪಿ ಎಲ್ಲಾ ಬರ್ತಾರೆ, ಸ್ಥಳೀಯ ಜೀಪಿನಲ್ಲಿ ಹೋದರೆ ಒಳ್ಳೇದು’ ಎಂದೆಲ್ಲಾ ಪುಕ್ಕಟೆ ಸಲಹೆಯಿತ್ತು ಹೊರಟ. ಇಂತಹ ಲಾಬಿಯೆಲ್ಲಾ ಇದ್ದದ್ದೇ ಅಂದುಕೊಂಡು ಹೊರಟರೂ ಅವ್ಯಕ್ತ ಭಯವೊಂದು ಸಣ್ಣಗೆ ಭುಸುಗುಡುತ್ತಲೇ ಇತ್ತು. ನಂತರ ಅಲ್ಲಿನ ಸ್ಥಳೀಯರೊಬ್ಬರ ಮಾರ್ಗದರ್ಶನದಿಂದ ಅಲ್ಲಿನ ಬೆಟ್ಟವನ್ನೂ, ಆ ಹಳ್ಳಿಕೊಂಪೆಯ ತುದಿಗಿದ್ದ ಜೈನ ದೇಗುಲದ ವೈಭೋಗವನ್ನೂ, ಆ ಬೆಟ್ಟದ ಬುಡದಲ್ಲಿನ ಮಹಾವೀರನ ಗುಹೆಯ ಅಮೋಘ ಪ್ರಶಾಂತತೆಯನ್ನೂ ಸೋಜಿಗದಿಂದಲೇ ಸವಿದು ಹಿಂದಿರುಗಿದೆವು.

    ಮತ್ತೊಂದು ವಾರ ಮೂಲಮನೆಯ ಹತ್ತಿರದ ಜಲಪಾತವನ್ನು ನೋಡಲು ಹೊರಟಿದ್ದೆವು. ಊರ ಕಡೆಯವರಾದರೂ ಊರು ಬಿಟ್ಟವರೆನಿಸಿಕೊಂಡ ನಮ್ಮನ್ನು ಅಲ್ಲಿನ ಜನ ಧಿಕ್ಕರಿಸಬಹುದೆಂಬ ಕಲ್ಪನೆಯೂ ಇರಲಿಲ್ಲ. ಜಲಪಾತದ ಜಾಗ ಕೇಳಲು ಅಲ್ಲಿದ್ದ ಏಕೈಕ ಮನೆಯ ಬಳಿ ಬೈಕ್ ನಿಲ್ಲಿಸಿದೆವು. ಮುಂಚೆ ನಕ್ಸಲರ ಚಟುವಟಿಕೆ ಹೆಚ್ಚಾಗಿದ್ದ ಜಾಗ ಬೇರೆ, ಮೊದಲು ಅಲ್ಲಿನ ಜನ ನೋಡಿ ತುಸು ನಡುಕವೇ ಉಂಟಾಯ್ತು. ನಂತರ ಅವರು ಆತಿಥ್ಯ, ಅವರ ಔಚಿತ್ಯಪೂರ್ಣ ಮಾತು ನಮ್ಮನ್ನು ತಟ್ಟಿದವು. ನಾವು ಅಲ್ಲಿಗೆ ಹೋಗುವ ಎರಡು ದಿನಗಳ ಹಿಂದೆ ಬೆಂಗಳೂರಿನ ಕಡೆಯಿಂದ ಬಂದ ಉತ್ತರಭಾರತದ ಜನರ ಗುಂಪೊಂದು ಆ ಜಲಪಾತದ ನೀರಲ್ಲೇ ಸ್ನಾನ ಮಾಡಿ, ಅಲ್ಲಿಯ ಕುಡಿದು ಕುಣಿದು ಮಸ್ತಿ ಮಾಡಿ ತೆರಳಿದರು. ಆ ನೀರನ್ನೇ ಊರಲ್ಲಿನ ನಾಕೈದು ಮನೆಗಳು ಕುಡಿಯಲು ಬಳಸುವುದರಿಂದ ಅವರ ಕಾಳಜಿ,‌ ಕಳಕಳಿ ಸಹಜವೇ ಆಗಿತ್ತು. ಅದೊಂದು ಪಾಠವಾಗಿ ತೆಗೆದುಕೊಂಡು ಮರಳಿದೆವು.

    ನಮ್ಮ ಪ್ರವಾಸದ ಖುಶಿ ಮತ್ತೊಬ್ಬರಿಗೆ ಪ್ರಯಾಸ ತರುವಂತಾಗಬಾರದೆಂದು ಮನೆಬಿಟ್ಟು ತೆರಳದೇ ತಿಂಗಳೆರಡಾಯ್ತು. ವಾರಕ್ಕೂ, ವಾರಾಂತ್ಯಕ್ಕೂ ಹೆಚ್ಚಿನ ಪರಕ್ಕೇನೂ ಇಲ್ಲ ಈಗ. ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುತ್ತಿದ್ದವರಿಗೆ ಕಾಲಿಗೆ ಬೇಡಿ ಹಾಕಿದಂತಾಗಿದ್ದು ಸುಳ್ಳಲ್ಲ. ಆದರೆ ಮನೆಯೆಂದೂ ಜೈಲು ಅನಿಸಿದಂತೆ ಕಾದಿದ್ದು ಮಾತ್ರ ನಮ್ಮ ಹವ್ಯಾಸಗಳು. ಪ್ರವಾಸವಿಲ್ಲದೇ ಮನ ಭಣಗುಡುತ್ತಿದೆ, ಪ್ರಕೃತಿಯ ಮಡಿಲಲ್ಲಿ ಪದ್ಮಾಸನದಲ್ಲಿ ಕುಳಿತು ನಿಡುಸುಯ್ಯುವ ಸುಖವಿಲ್ಲ ಎಂಬುದೂ ನಿಜವೇ. ಆದರೂ ನಮ್ಮ ಪ್ರವಾಸದ ಹುಚ್ಚಿನಿಂದ ಮನೆಯವರಿಗೂ, ಉಳಿದವರಿಗೂ ಯಾವುದೇ ಸಮಸ್ಯೆಯಂತೂ ಆಗುತ್ತಿಲ್ಲ ಎಂಬ ಭಾವವೇ ಸಾಕು ನೆಮ್ಮದಿಯ ಮುಗುಳು ತರಲು. ಇಷ್ಟಕ್ಕೂ ಇದೇ ಜೀವನದ ಕೊನೆಯಲ್ಲವಲ್ಲ, ನಾಳೆಯೆಂಬ ತುಂಬು ಬೆಳಕೂ ನಮ್ಮ ಮುಂದಿದೆ. ಹಳಿ ತಪ್ಪಿದ ರೈಲಿನಿಂದಾಗಿ ಮುಂದಿನ ನಿಲ್ದಾಣಕ್ಕೆ ತೆರಳಲು ಚೂರು ತಡವಾಗಬಹುದು, ಅಲ್ಲಿಯ ತನಕ ಮನೆಯೆಂಬ ಪ್ಲಾಟ್ಫಾರ್ಮಿನಲ್ಲಿ ನಿಂತು ಕಾಯುವ ಅಲ್ಲವಾ?

    FB ಯಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುವ ವಿದ್ಯಾರ್ಥಿಗಳು, ಮೇಷ್ಟ್ರಿಗಿಂತ ಮೊದಲೆ ಎಲ್ಲಾ ಅರಿತಿರುವ ಶಿಷ್ಯರು!

    ಮೂವತ್ತು ವರುಷದ ನನ್ನ ವೃತ್ತಿ ಜೀವನದಲ್ಲಿ ಬಹಳಷ್ಟು ತಿರುವುಗಳನ್ನು ನೋಡಿರುವೆ. ಮೊದಮೊದಲು ನಾನು ಅಧ್ಯಾಪಕ ವೃತ್ತಿಗೆ ಸೇರಿದಾಗ ಇದ್ದ ವಿದ್ಯಾರ್ಥಿಗಳ ಮನೋಭಾವ ಸ್ವಾಭಾವಿಕವಾಗಿ ಈಗಿಲ್ಲ. ಆಗ ನನ್ನ ವಯಸ್ಸು ಚಿಕ್ಕದಾಗಿದ್ರೂ   ಮಕ್ಕಳಿಗೆ ಭಯ,ಭಕ್ತಿ ಇತ್ತು. ಈಗ ಸ್ವಲ್ಪ ಬದಲಾವಣೆಗಳಾಗಿವೆ.

    ಪ್ರಾಧ್ಯಾಪಕರೆಂದರೆ ಇದ್ದ ಗೌರವ, ಪ್ರೀತಿ ಈಗಲೂ ಇದೆ ಆದರೆ ಬೇರೆ ರೀತಿಯಲ್ಲಿ. ಮುಂಚೆ ಇಬ್ಬರ ನಡುವೆ ಒಂದು ಅಂತರವಿತ್ತು. ಮಾತನಾಡುವುದಕ್ಕೆ ಮುನ್ನ ಯೋಚಿಸಿ, ವಿವೇಚಿಸಿ ಆಡುತ್ತಿದ್ದರು. ಈಗ ಮನಸ್ಸಿಗೆ ಬಂದ ವಿಷಯಗಳನ್ನು ಅಷ್ಟು ಹಿಂಜರಿಕೆಯಿಲ್ಲದೆ ಹೇಳುವುದು, ಗುರುಗಳನ್ನು ಸ್ನೇಹಿತರಂತೆ ಕಾಣುವುದು ಸಾಮಾನ್ಯವಾಗಿದೆ. ಅಧ್ಯಾಪಕರೂ ಸಹ ಮುಂಚಿನಂತೆ ಕಠಿಣವಾಗಿರದೆ ಸ್ವಲ್ಪ ಮಟ್ಟಿಗೆ ಮೃದುವಾಗಿರುವುದು ಕಾಣಬಹುದು. ಹಿಂದೆ ಇರಲಿಲ್ಲವೆಂದಲ್ಲ, ಈಗ ಅಧ್ಯಾಪಕರ ಮನಸ್ಸು ಬೇರೆ ರೀತಿಯಲ್ಲಿ ಬದಲಾಗಿರುವುದನ್ನು ಕಾಣಬಹುದು. ಚಿಕ್ಕವರು, ಮಕ್ಕಳು ಎಂಬ ಭಾವನೆಗಿಂತ ಸಮಾನರು, ಸ್ವಲ್ಪ ಮಟ್ಟಿಗೆ ಗೆಳೆಯರು ಎಂಬ ಮನೋಭಾವ ಜಾಸ್ತಿಯಾಗುತ್ತಿದೆ.

    ಸಾಮಾಜಿಕ ಜಾಲತಾಣಗಳು ಇವರಿಬ್ಬರ ಮಧ್ಯೆ ಅಂತರವನ್ನು ಕಡಿಮೆ ಮಾಡಿದೆ. ಪರಸ್ಪರ  ಮೊದಲ ಸಲ ವಿದ್ಯಾರ್ಥಿಗಳಿಂದ ಫೇಸ್ ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಬಂದಾಗ ಸ್ವಲ್ಪ ಗೊಂದಲ ಉಂಟಾಗಿತ್ತು. ಎಷ್ಟೋ ವರುಷಗಳ ಹಿಂದೆ ಉತ್ತೀರ್ಣರಾಗಿ ಈಗ ಬದುಕಲ್ಲಿ ಬಹು ಮುಂದೆ ಸಾಗಿರುವ  ಅನೇಕ ವಿದ್ಯಾರ್ಥಿಗಳ ಜತೆ ಸಂಪರ್ಕ ಇಟ್ಟುಕೊಳ್ಳಲು ಇದೊಂದೇ ದಾರಿ, ಅವರು ನನ್ನನ್ನು, ನಾನು ಅವರನ್ನು ಸಂಪರ್ಕಿಸಲು ಸುಲಭವಾದ ಪಥ ಇದು ಎಂದರಿವಾದಾಗ ಖುಷಿಯಾಯಿತು. 

    ಆಗೆಲ್ಲಾ ಕ್ಲಾಸ್ ಅಲ್ಲಿ ತರ್ಲೆ ತಂಟೆ ಮಾಡುತ್ತಿದ್ದ ಹುಡುಗ ಹುಡುಗಿಯರು ಈಗ ಜವಾಬ್ದಾರಿಯುಳ್ಳ ವ್ಯಕ್ತಿಗಳಾಗಿ ಬದಲಾಗಿದ್ದು ಸಂತಸದ ವಿಷಯ. ನಮ್ಮ ಮನಸ್ಸಿನ ಮಾತುಗಳನ್ನು ನಿಲುಮೆಗಳಲ್ಲಿ, ಪಟಗಳಲ್ಲಿ ಹಂಚಿಕೊಂಡಾಗ ವಿದ್ಯಾರ್ಥಿಗಳಿಂದ ಬಂದ ಪ್ರತಿಕ್ರಿಯೆ, ಅದನ್ನು ಅವರು ಮುಕ್ತವಾಗಿ, ಸ್ಪಷ್ಟವಾಗಿ ಹೇಳುವ ಪರಿ ಬಹಳ ಖುಷಿ ಕೊಟ್ಟಿತು, ಮೊದಲಾದರೆ ತರಗತಿಯಲ್ಲಿ ತಮ್ಮ ವಾದ ಮಂಡಿಸುವುದಕ್ಕೆ ಹಿಂಜರಿಯುತ್ತಿದ್ದ ಮಕ್ಕಳು ಈಗ ಇಷ್ಟರ ಮಟ್ಟಿಗೆ ಮಾತಾಡಬಲ್ಲರು ಎಂಬುದೇ ಸಂತಸ.

    ಮೊದಲೆಲ್ಲಾ, ಪತ್ರ ಬರೆಯುವಾಗ, ಮಾತನಾಡುವಾಗ ಒಂದು ಭಯಮಿಶ್ರಿತ ಗೌರವ ಸೂಚಿಸುತ್ತಿದ್ದ ಮಕ್ಕಳು ಈಗ ಎದೆಯೆತ್ತಿ ಧೈರ್ಯವಾಗಿ ಮಾತಾಡುವುದನ್ನು ನೋಡಿದರೆ ಮೊದಮೊದಲು ಸ್ವಲ್ಪ ಕಸಿವಿಸಿ ಆಗುತ್ತಿತ್ತು. ಅವರ ಮನಸ್ಸಲ್ಲಿರುವ ಅನುಮಾನಗಳು, ಯೋಚನೆಗಳು ಮುಕ್ತವಾಗಿ ಹಂಚಿಕೊಳ್ಳುವಾಗ ಕೆಲವೊಮ್ಮೆ ಹೇಗೆ ಪ್ರತಿಕ್ರಿಯಸಬೇಕೆಂದು ಗೊತ್ತಾಗದೆ ಚಡಬಡಿಸಿದ್ದೂ ಉಂಟು. ಈಗ ಅದೆಲ್ಲ ಕ್ರಮೇಣವಾಗಿ ಅಭ್ಯಾಸವಾಗತೊಡಗಿದೆ. ಪಾಠಗಳಿಗೆ ಸಂಬಂಧ ಪಟ್ಟಂತೆ ವಾಟ್ಸಾಪಿನಲ್ಲಿ, FB ಯಲ್ಲಿ ಕೇಳುವುದು ಸಾಮಾನ್ಯವಾಗಿಬಿಟ್ಟಿದೆ.

    ಡಿಜಿಟಲ್ ಯುಗದಲ್ಲಿ ಮಾಹಿತಿಗಾಗಿ ಅಧ್ಯಾಪಕರನ್ನು ಅವಲಂಬಿಸುವ ಅಗತ್ಯವಿಲ್ಲ. ನೆಟ್ ಅಲ್ಲಿ ಎಲ್ಲಾ ಮಾಹಿತಿಗಳೂ ಲಭ್ಯವಿದೆ. ಆದ್ದರಿಂದ ತರಗತಿಯಲ್ಲಿ ಬಹಳ ಶ್ರದ್ಧೆಯಿಂದ ಹೊಸ ಆವಿಷ್ಕಾರಗಳ  ಬಗ್ಗೆ ಮಾಹಿತಿ ನೀಡಿ ಅವರ ಮನ ಮುಟ್ಟುವಂತೆ ಪಾಠ ಮಾಡುವುದು ಅನಿವಾರ್ಯ. ಎಷ್ಟೊ ಸಲ ನಾ ಹೊಸದೇನಾದರು ವಿವರಿಸುತ್ತಿದ್ದಾಗ ತರಗತಿಯ ಮಕ್ಕಳು ಬೆಂಚಿನ ಕೆಳಗೆ ಮೊಬೈಲ್ ತೆರೆದು ಅದರ ಬಗ್ಗೆ ಮಾಹಿತಿ ಹುಡುಕುವುದು, ಪ್ರಶ್ನಿಸುವುದು ನನ್ನರಿವಿಗೆ ಬಂದಿದೆ. ಆ ಕ್ಷಣದಲ್ಲಿ ತರಗತಿಯಲ್ಲಿ ಸೆಲ್ ಫೋನ್ ಬಳಕೆ ಮಾಡದು ಎಂದರೆ ಅವರಿಗೆ ನಮ್ಮ ಮೇಲೆ ಒಳ್ಳೆಯ ಭಾವನೆ ಉಂಟಾಗುವುದಿಲ್ಲ. ಅವರ ಪ್ರಶ್ನೆಗಳಿಗೆ ಉತ್ತರಿಸಿ, ಸಾಧ್ಯವಾಗದಿದ್ದರೆ ಆಮೇಲೆ ತಿಳಿದುಕೊಂಡು ಹೇಳುವೆ ಎಂದು ಅಲ್ಲಿಗೆ ಪ್ರಕರಣವನ್ನು ಮುಗಿಸಿದ್ದೇನೆ.

    ಮೊಬೈಲುಗಳ ಬಳಕೆ ಹೆಚ್ಚಾದಂತೆ ಅಧ್ಯಾಪಕರಿಗೆ ಕಷ್ಟವಾಗುತ್ತಾ ಇದೆ. ಮಧ್ಯೆ ಮಧ್ಯೆ ಸಂದೇಶಗಳನ್ನು ಚೆಕ್ ಮಾಡುವುದು, ಮೊಬೈಲಲ್ಲಿ ಇಣುಕುವುದು, ಅದರಿಂದ ಮನಸ್ಸು ಓದಿನಲ್ಲಿ ನಿಲ್ಲದಿರುವುದು, ಇದೆಲ್ಲಾ ಸರ್ವೇಸಾಮಾನ್ಯವಾಗುತ್ತಿದೆ. ಆದರೂ ತಾಳ್ಮೆ ಕಳೆದುಕೊಳ್ಳದೆ ಅವರ ಜತೆ ವರ್ತಿಸಬೇಕಾದ್ದು ಮುಖ್ಯವಾಗುತ್ತದೆ.

    Photo by Timon Studler on Unsplash

    ಸಿಕ್ಕಿದ ಬದುಕನ್ನು ಸಾರ್ಥಕ ಗೊಳಿಸುವುದೇ ಜೀವನದ ಗುರಿ ಆಗ ಬಾರದೇಕೆ?

    ದಿನೇ ದಿನೆ ಕಾಡುತ್ತಿರುವ ಕೊರೋನಾ ಕೆಲವರ ಬದುಕಿಗೆ ಪಾಠ ಕಲಿಸಿದ್ದರೆ, ಮತ್ತೆ ಕೆಲವರಿಗೆ ಬದುಕೇ ಬೇಡ ಅನ್ನುವಷ್ಟರ ಮಟ್ಟಿಗೆ ಸಂಕಷ್ಟ ತಂದೊಡ್ಡಿದೆ.ಕಾಯಿಲೆ ನಡುವೆ ಕಾಡುವ ಮನಸ್ಸಿನ ತೊಳಲಾಟ ಕೂಡಾ ನಿದ್ದೆಗೆಡಿಸಿದೆ.ಇದರಿಂದ ಮಾನಸಿಕ ನೆಮ್ಮದಿ ಕಳೆದುಕೊಂಡ ವರು, ಖಿನ್ನತೆಯಿಂದ ಬಳಲುವವರ ಸಂಖ್ಯೆ ಹೆಚ್ಚಿದೆ.

    ಮನುಷ್ಯ ಜೀವನ ಸಿಕ್ಕಿದ್ದು ಬದುಕಿ ಬಾಳಲು. ಅದನ್ನು ಹೇಗೆ ನಿರ್ವಹಿಸುತ್ತೇವೆ ಎನ್ನುವುದು ನಮ್ಮ ಮನಸ್ಸಿಗೆ ಸಂಬಂಧಿಸಿದ್ದು. ಮನಸ್ಸನ್ನು ನಿಯಂತ್ರಿಸುವ ಕಲೆ ಗೊತ್ತಿದ್ದರೆ ಎಂತಹದ್ದೇ ಸಂದರ್ಭ ಬರಲಿ ಬದುಕಿನ ಬಗೆಗೆನ ಭರವಸೆ ಕಳೆದುಕೊಳ್ಳುವುದಿಲ್ಲ.

    ಎಲ್ಲ ಸಂದರ್ಭಗಳಲ್ಲೂ ಆ ಕ್ಷಣದಿಂದ ಬಚಾವಾಗುವುದೊಂದೇ ಜೀವನದ ಗುರಿಯಾಗಿರುತ್ತದೆ. ಕಷ್ಟದ ಸಂದರ್ಭಗಳಲ್ಲಿ ಕಷ್ಟದಿಂದ ಪಾರಾದರೆ ಸಾಕು ಎಂದುಕೊಂಡಿರುತ್ತೇವೆ. ಆದರೆ ಜೀವನ ಅಂದರೆ ಅಷ್ಟೇ ಅಲ್ಲ. ಒಂದು ಕ್ಷಣ ಆ ಘಟನೆಯಿಂದ ತಪ್ಪಿಸಿಕೊಳ್ಳುವುದು ಮಾತ್ರವಲ್ಲ, ಅದರೊಂದಿಗೆ ಆಂತರಿಕ ನೆಮ್ಮದಿಯ ಶೋಧವೂ ಇರಬೇಕು. ಆಂತರಿಕ ನೆಮ್ಮದಿ ಕಂಡುಕೊಂಡಾಗಲೇ ಶಾಶ್ವತ ಸುಖ ಅನುಭವಿಸುವುದಕ್ಕೆ ಸಾಧ್ಯ. ಆಂತರಿಕ ನೆಮ್ಮದಿ ಬೇರೆಲ್ಲೋ ಕಂಡುಕೊಳ್ಳುವುದಕ್ಕೆ ಸಾಧ್ಯ ಇಲ್ಲ. ನಮ್ಮ ಮನಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟುಕೊಂಡು, ಸಂದರ್ಭಗಳಿಗೆ ಪ್ರತಿಕ್ರಿಯಿಸುವ ಜಾಣ್ಮೆಯಿದ್ದರೆ ಮಾತ್ರ ಆಂತರಿಕ ಶಾಶ್ವತ ಶಾಂತಿಯನ್ನು ಕಂಡುಕೊಳ್ಳಬಹುದು.

    ಯಾವಾಗ ನಮ್ಮನ್ನು ನಾವು ಇತರರೊಂದಿಗೆ ಹೋಲಿಸಿ ನೋಡಿಕೊಳ್ಳುತ್ತೇವೆಯೋ ಅದರಿಂದ ಬೇಸರ ಕಾಡುವುದು.ಇನ್ನು ಕೆಲವೊಮ್ಮೆ ನಮ್ಮ ವೈಫಲ್ಯತೆಗೆ ಸದ್ಯದ ಪರಿಸ್ಥಿತಿ ಕಾರಣ ಎಂದುಕೊಳ್ಳುತ್ತೇವೆ. ಆದರೆ ಪರಿಸ್ಥಿತಿಗಳು ಸೋಲಿಗೆ ಕಾರಣವಲ್ಲ. ನಮ್ಮ ಮನಸ್ಸು. ಯಾಕೆಂದರೆ ಯಾವುದೇ ಒಂದು ಸಂದರ್ಭದಲ್ಲಿ ನಾವು ಪರಿಸ್ಥಿತಿಗೆ ಯಾವ ರೀತಿ ಪ್ರತಿಕ್ರಿಯಿಸುತ್ತೇವೆ ಎಂಬುದು ಮುಖ್ಯ.

    ಗೆಲುವು ಅಥವಾ ಸೋಲು ಯಾವುದೇ ಆಗಿರಲಿ, ನಮ್ಮ ನಡೆವಳಿಕೆಗಳಿಂದಲೇ ಬದುಕು ನಿರ್ಧರಿತವಾಗಿರುತ್ತವೆ.ಜೀವನದಲ್ಲಿ ಎಲ್ಲವೂ ಇದೆ ಅಂದುಕೊಂಡಾಗ ಅಥವಾ ಕೊರತೆಗಳು ಇಲ್ಲದೇ ಹೋದಾಗ ಅವರಿಗೆ ಸೋಲು ಎಂಬುದು ಕಾಡುವುದಿಲ್ಲ. ಯಾವಾಗ ತಮ್ಮನ್ನು ತಾವು ಮತ್ತೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳುತ್ತಾರೋ ಆಗ ತಾನು ಸೋಲಿನ ಟ್ರ್ಯಾಕ್‍ನಲ್ಲಿದ್ದೇನೇನೋ ಎಂದೆಣಿಸುವುದು. ಹೋಲಿಕೆ ಮಾಡಿಕೊಳ್ಳುವುದರ ಮೂಲಕ ತಮ್ಮನ್ನು ತಾವು ಅಭಿವೃದ್ಧಿಪಡಿಸಿಕೊಳ್ಳುವುದಕ್ಕೋಸ್ಕರ ಮಾಡಿಕೊಳ್ಳಬೇಕೇ ವಿನಾಃ ಅದು ತಮ್ಮ ಶಕ್ತಿಯನ್ನು ಕುಗ್ಗಿಸುವಂತಿರಬಾರದು.

    ನಮ್ಮ ಮನಸ್ಥಿತಿಯೇ ಎಲ್ಲದಕ್ಕೂ ಕಾರಣ. ನಾವು ಸಕಾರಾತ್ಮಕವಾಗಿದ್ದರೆ ಸಕಾರಾತ್ಮಕ ಫಲಿತಾಂಶ ದೊರೆಯುತ್ತದೆ. ಇಲ್ಲವಾದರೆ ನಕಾರಾತ್ಮತೆಯ ಗೂಡಾಗುತ್ತದೆ. ಮನಸ್ಸೇ ಆಂತರಿಕ ಸ್ವರ್ಗವನ್ನು ಅಥವಾ ನಮ್ಮೊಳಗಿನ ನರಕವನ್ನು ಸೃಷ್ಟಿಸುವುದು.

    ಕೆಲವೊಂದು ಸಂದರ್ಭಗಳಲ್ಲಿ ಪ್ರಪಂಚವೇ ತಲೆಯ ಮೇಲೆ ಬಿದ್ದಂಥ ಘಟನೆಗಳು ನಡೆಯುವುದು ಸಹಜ. ಅದು ಜಗತ್ತಿನ ನಿಯಮ. ನಕಾರಾತ್ಮಕವಾಗಿ ಸ್ವೀಕರಿಸಿದರೆ ಇಲ್ಲದ ನೋವು ಹತಾಶೆಗಳು ಕಾಣಿಸಿಕೊಳ್ಳುವುದು. ಇದು ದೈಹಿಕವಾಗಿ ಘಾಸಿಗೊಳಿಸದೇ ಇದ್ದರೂ ಮನಸ್ಸಿಗೆ ನೋವನ್ನುಂಟು ಮಾಡುವುದು ಸಹಜ. ಅಂದರೆ ಒಂದು ಸಂದರ್ಭವನ್ನು ಮನಸ್ಸು ಯಾವ ರೀತಿ ಸ್ವೀಕರಿಸುತ್ತದೆ ಎಂಬುದರ ಮೇಲೆ ಫಲಿತಾಂಶ ನಿರ್ಣಯವಾಗುತ್ತದೆ.ಬದುಕಿನೊಂದಿಗೆ ಹೋರಾಟ ನಿರಂತರ. ಅದನ್ನು ಎದುರಿಸಬೇಕೇ ವಿನಃ ಅದರಿಂದ ತಪ್ಪಿಸಿ ಕೊಳ್ಳುವ ಪ್ರಯತ್ನ ಮಾಡಬಾರದು.”ಮಾನವ ಜನ್ಮ ದೊಡ್ಡದು ಅದನ್ನು ಹಾಳು ಮಾಡಿ ಕೊಳ್ಳದಿರಿ ಹುಚ್ಚಪ್ಪಗಳಿರಾ” ಎಂದಿದ್ದಾರೆ ಪುರಂದರ ದಾಸರು. ಮತ್ತೆ ಮನುಷ್ಯ ಜನ್ಮ ದಕ್ಕುವುದೋ ಇಲ್ಲವೋ ಗೊತ್ತಿಲ್ಲ. ಸಿಕ್ಕಿದ ಬದುಕನ್ನು ಸಾರ್ಥಕ ಗೊಳಿಸುವುದೇ ಜೀವನದ ಗುರಿ ಆಗ ಬಾರದೇಕೆ?

    Photo by Luca Upper on Unsplash

    ಉಗುಳು ವೀರರ ಜಗದಲ್ಲಿ..

    ಹೊರಗೆ ಹದವಾದ ಬಿಸಿಲು.

    ತೀರ ವೇಗವೂ ಅಲ್ಲದ ಮಂದವೂ ಅಲ್ಲದ ಹಾಗೇ ಚಲಿಸುತ್ತಿರುವ ಬಸ್ಸು.ಸಹಪಯಣಿಗರ ಸದುದ್ದೇಶ ಭರಿತ ಮೌನ.ಕಿಟಕಿ ಪಕ್ಕದ ಸೀಟಿನಲ್ಲಿ ಕುಳಿತು ಓಡುವ ಗಿರಿ, ಮರ ಕೆರೆಗಳನ್ನು ಕಣ್ತುಂಬಿಕೊಳ್ಳುತ್ತಾ,ಫೋರ್ಲೇನ್ ರಸ್ತೆಯ ನಡುಮಧ್ಯದ ಗ್ರೀನ್ ಸ್ಪೇಸಿನಲ್ಲಿ ನಿಚ್ಛಂಪೊಸತು ಎಂಬಂತೆ ಗಂಟೆಗಂಟೆಗೂ ಹೊಸ ಹೂವು ಅರಳಿಸಿಕೊಂಡು ನಗುವ ಕಣಗಿಲ ಹೂವ ರಾಶಿಯನ್ನು ಸವಿಯುತ್ತಾ ,ಹೊಳೆದ ಯಾವುದೋ ಸಾಲಿಗೆ ಮುದಗೊಂಡು ಮನಸಲ್ಲೇ ಮುಂದುವರೆಸುತ್ತಾ ಮುಗುಳ್ನಗುವೊಂದನ್ನು ಹೊದ್ದು ಸಾಗುತ್ತಿರುವ ಸಮಯ. ಹಾಸನದಿಂದ ಬೆಂಗಳೂರು ಮಹಾನಗರಿಗೆ ನನ್ನ ಪಯಣ.ಬಸ್ಸಿನ ಎಂಜಿನ್‌ ಸದ್ದೂ ಮೃದುವಾದ ಮುದವಾದ ಸಂಗೀತದಂತೆ ಅನಿಸುತ್ತಿರುವ ದಿವ್ಯ ಘಳಿಗೆಯದು.

    ಇಂತಹದೊಂದು ಸುದಿನ ಸುಮೂಹರ್ತದಲ್ಲಿ ಮುಂದಿನ ಸೀಟಿನಿಂದ
    “ಕ್ಯಾ…ವ್ಯಾ..ಕ್್ಕ್್್ಕ್್್್ಕ್್” ಎನ್ನುವ ಈ ಹಿಂದೆ ಎಂದೂ ಕೇಳಿರದಂತಹ ,ಕಂಡಿರದಂತಹ ಕ್ಯಾಕರಿಸಿದ ಸದ್ದಿಗೆ ಬಾಂಬು ಬಿದ್ದವಳಂತೆ ಭಯಭೀತಳಾಗಿ ಮುಂದಿನ ನೇರ ಪರಿಣಾಮದ ಗಾಬರಿಯಲ್ಲಿ ಕಿಟಿಕಿ ಗ್ಲಾಸು ಮುಚ್ಚಬೇಕೆಂದು ನನ್ನ ಬಲಗೈ ಗ್ಲಾಸಿನ ಮೇಲಿಡುವುದಕ್ಕೂ ,ಮುಂದಿದ್ದ ವ್ಯಕ್ತಿ ಕತ್ತುಹೊರಚಾಚಿ ‘ಕ್ಯಾಕ್್್್್್’ ಅಂತ ತುಪ್ಪುವುದಕ್ಕೂ ಸರಿಯಾಗಿಹೋಯ್ತು.

    ಥಿಯೇಟರ್ ಗೆ ಹೋದರೆ ಮನೆಯಿಂದ ಒಂದು ದುಪ್ಪಟ್ಟಾ ಒಯ್ದು ಸೀಟಿನ ಮೇಲೆ ಹಾಕಿಕೊಳ್ಳುವ,ಹೋಟೆಲಿಗೆ ಹೋಗಲೇ ಬೇಕಾದಾಗ ಮಾತ್ರ ಹೋಗಿ ,
    ಹೋದರೂ ತಟ್ಟೆ ಲೋಟ ಎಲ್ಲವನ್ನೂ ಹತ್ತು ಸರ್ತಿ ಟಿಷ್ಯುವಿನಲ್ಲಿ ಸ್ವಚ್ಛ ಗೊಳಿಸಿಕೊಳ್ಳುವ,ಮನೆಯಲ್ಲಿ ಮಕ್ಜಳಿಗೂ ಗಂಡನಿಗೂ ಕೆಮ್ಮುವುದಕ್ಕೂ ಸೀನುವುದಕ್ಕೂ ಬಿಗಿ ಕಾನೂನು ಕಟ್ಟಳೆ ರೂಪಿಸಿರುವ ಘನ ಮಹಿಮೆಯ ಮಹತ್ತುಳ್ಳ ನನ್ನ ಕೈ ಬೆರಳಿನ ಕಡೆಗೆ ಮುಂದಿದ್ದ ವ್ಯಕ್ತಿಯ ಶಿರದಿಂದ ಕಿರುಬೆರಳಿನವರೆಗಿನ ನರನಾಡಿಗಳಲ್ಲಿಸಂಚಯಿತವಾಗಿದ್ದ ಕಫದ ತೊಪ್ಪೆಯ ಒಂದು ತುಣುಕು ಹಾರಿ ಬಂದು ಕುಳಿತೇ ಬಿಟ್ಟಿತು.

    ನನ್ನ ಬಿಳಿಹರಳಿನ ಉಂಗುರ ನೀಟಾಗಿ ಕತ್ತರಿಸಿಕೊಂಡಿದ್ದ ಉಗುರು
    ಪದೇಪದೇ ಸ್ಯಾನಿಟೈಸ್ ಮಾಡಿಕೊಂಡಿದ್ದ ಬೆರಳುಗಳ ಮಹತ್ತನ್ನೂ ಗಮನಿಸದೆ ಕುಳಿತ ಆ ತೊಪ್ಪೆಯನ್ನು ಕ್ಷಣ ಗಾಬರಿಯಿಂದ ನೋಡಿದೆ.
    ಹೃದಯ ಶ್ವಾಸಕೋಶ, ಅನ್ನನಾಳದ ಸಮಸ್ತ ಪದಾರ್ಥವೂ ಕುಳಿತ ಆ ತೊಪ್ಪೆಯ ತುಣುಕಿನಿಂದ ಹೇವರಿಕೆಗೊಂಡು ಹೊರ ಬರಲು ಬಯಸಿ ವಾಕರಿಕೆ ಶುರುವಾಗುವ ಹೊತ್ತಿನಲ್ಲೇ ಇನ್ನೂ ಮುಚ್ಚದೇ ಇದ್ದ ನನ್ನ ಕಿಟಿಕಿಯ ಮುಂಬಾಗದ‌ ಬದಿಯಿಂದ ಎರಡೇ ಸೆಕೆಂಡಿನೊಳಗೆ ಮತ್ತದೇ ಕತ್ತು ಹೊರಬಂದು ಮತ್ತೊಮ್ಮೆ ಕರ್ಣಕಠೋರ ಸದ್ದಿನೊಡನೆ ತುಪ್ಪಿದ್ದು ನನ್ನ ಗೋಲ್ಡ್ ರೇಡಿಯೆನ್ಸ್ ಕ್ರೀಮು ಲೇಪಿಸಿ ಸಣ್ಣಗೆ ಹೊಳೆಯುತ್ತಿದ್ದ ಕೆನ್ನೆಯ ಮೇಲೆ ತುಂತುರು ಸೋನೆ ಮಳೆಯಂತೆ ಸಿಡಿದು ಬಿಟ್ಟಿತು.

    ನಖಶಿಖಾಂತ ಕೊಳಕಿನ ಕೊಳದಲ್ಲಿ ಅದ್ದಿದಂತಾಗಿ ಕೈ ಬೆರಳ ಮೇಲಿದ್ದ ತೊಪ್ಪೆ ತುಣುಕನ್ನು ಒರೆಸಿಕೊಳ್ಳಲು ಟಿಷ್ಯೂ ಹುಡುಕುವುದಕ್ಕೆ ಮತ್ತದೇ ಕೈಯ ನೆರವು ಪಡೆಯಲು ಮನಸ್ಸು ಒಪ್ಪದೆ, ಮುಖದ ಮೇಲಿನ ಕಫದ ಸೋನೆಗೆ ವ್ಯಾಕರಿಕೆ,ಕ್ಯಾಕರಿಕೆ,ಹುಃಕರಿಕೆ ,ಶೋಕ ಎಲ್ಲವೂ ಒಟ್ಟಿಗೆ ಆರಂಭವಾಗಿ ಎದುರು ಸೀಟಿನ ವ್ಯಕ್ತಿಗೆ ನಾನೂ ತುಪ್ಪೆ ಬಿಡುವ ಭರದಲ್ಲಿ ಎದ್ದುನಿಂತೆ.

    ಮುಖದ ಸೋನೆ ,ಬೆರಳ ತುಣುಕನ್ನು ಹತ್ತಾರು ಟಿಷ್ಯೂಗಳನ್ನು ಖರ್ಚು ಮಾಡಿ ಒರೆಸಿ ಹಾಕಿದರೂ ಮಹಾಹೇಸಿಗೆಯೊಂದರಲ್ಲಿ ಬಿದ್ದು ಎದ್ದಂಥ ಒದ್ದಾಟದಲ್ಲಿ
    ಕ್ರೋಧಾನ್ವಿತಳಾಗಿ ಗಂಟಲು ಸರಿ‌ಪಡಿಸಿಕೊಂಡೆ.

    “ಏನಯ್ಯಾ..ಮನುಷ್ಯತ್ವವೇ ಇಲ್ಲವೆ ನಿಮಗೆ.

    ಉಗುಳ ಬೇಕೆಂದ್ರೆ ಹಿಂದೆಮುಂದೆ ಕುಳಿತವರ ಪರಿಜ್ಞಾನ ಇಲ್ಲವೇ.?

    ನಿಮಿಷಕ್ಕೊಮ್ಮೆಉಗಿವ ಚಟವಿದ್ರೆ ಸರ್ಕಾರಿ ಬಸ್ ಯಾಕ್ರೀ ಹತ್ತಿದ್ರಿ.?
    ಹೋಗಬೇಕಿತ್ತು ದಾರಿಯುದ್ದಕ್ಕೂ ತುಪ್ಪಿಕೊಂಡು ನಿಮ್ಮ ಸ್ವಂತ ಗಾಡಿಯಲ್ಲಿ..
    ಯಾರು ಬೇಡಾಂದಿದ್ರು..?”

    ಮೈಮನಸ್ಸಿನ ಕೋಪವನ್ನು ಧ್ವನಿಯ ಮೂಲಕ ಹೊರಹಾಕಲು ಅಶಕ್ಯವೆನಿಸಿದರೂ ಶಕ್ತಿಮೀರಿ ಯತ್ನಿಸುತ್ತಿರುವಾಗಲೇ ಆ ಉಗುಳು ವೀರ ಮಾತ್ರ ಏನೂ ಕೇಳಲೇ ಇಲ್ಲವೆಂಬಂತೆ,ತನಗದು ಸಂಬಂಧಿಸಿಯೂ ಇಲ್ಲವೆಂಬಂತೆ ಶ್ವಾಸಕೋಶ ಖಾಲಿಯಾದ ಸುಖದ ನಿರಾಳತೆಯಲ್ಲಿ ನನ್ನೊಮ್ಮೆ ಕಡೆಗಣ್ಣಿನಲ್ಲಿ ನೋಡಿ ಮತ್ತೆ ಅರ್ದನಿಮೀಲಿತನಾದ.

    ಈ ಘನಘೋರ ಹೇಸಿಗಿ ಕೆಲಸ ಮಾಡಿದ್ದನ್ನು ವಿರೋಧಿಸಲು ಸಹಪಯಣಿಗರ ನೆರವು ಸಿಗಬಹುದೇ ಅಂತ ಸುತ್ತಾ ನೋಡಿದೆ. ಮುಕ್ಕಾಲು ಮಂದಿ‌ ಸುಖನಿದ್ರೆಯಲಿದ್ದರೆ ಉಳಿದವರು ಅಚಾನಕ್ಕು‌ಆರಂಭವಾದ ಗಲಾಟೆಗೆ ಎಚ್ಚರಾಗಿ ಮಂಪರು ಮೆತ್ತಿದ ನೋಟದಲ್ಲಿ ನನ್ನೊಮ್ಮೆ ನೋಡಿ ಯಥಾ ಸ್ವಲೋಕಕ್ಕೆ ತೆರಳಿ ತಣ್ಣಗಾದರು.ಈ ನಡುವೆ ಬಸ್ಸು ಹತ್ತಿದಾಗಿಂದ ನನ್ನನ್ನೇ ನೋಡುತ್ತಿದ್ದ ಆ ಚಲುವ ಮಾತ್ರ ನಿಂತಿರುವ ನನ್ನ ಪೋಸು ನೋಡಲೆಂದೇ ಇಷ್ಟು ಹೊತ್ತು ಕಾದಿದ್ದವನಂತೆ ನೆಟ್ಟಗೆ ಕುಳಿತ.ಅಸಡ್ಡೆಯಲ್ಲಿ ಬಿಗಿದ ತುರುಬಿನಿಂದ ಅವನಿಗೆ ಕಾಣುವ ನನ್ನ ನಡುವಿನವರೆಗೂ ನೋಡಿ ಸ್ಟೈಲಾಗಿ ಕಣ್ಣು ಮಿಟುಕಿಸಿಯೂಬಿಟ್ಟ.

    ಅರೆ..ತುಪ್ಪಿದವನನ್ನು ಮಾತಿನಲ್ಲಿ ತದುಕಲು ಎದ್ದು ನಿಂತವಳಿಗೆ ಮತ್ತೊಂದು ಬಾಣ ಚುಚ್ಚಿದಂತಾಗಿ‌ ಕುಕ್ಕರಿಸಿದರೂ‌ ಮನುಷ್ಯ ಸಹಜ ಬಯಕೆ. ಮತ್ತೊಮ್ಮೆ ನೋಡಿದೆ..ನನ್ನ ರಾಣಿ ಚೆನ್ನಮ್ಮ ಪೋಸನ್ನು ಬಹಳ ಮೆಚ್ಚಿಕೊಂಡವನಂತೆ ಸಣ್ಣಗೆ ನಕ್ಕ.ನನ್ನ ಸೋನೆ ಸಿಡಿದ ಮುಖದಲ್ಲಿ ಸಣ್ಣಗೆ ಬೆವರೊಡೆಯಿತು.

    ಅದೆಲ್ಲಾ ಅಂತಿರಲಿ.

    ನನ್ನ ಬೆರಳು ಮತ್ತು ಮುಖದ‌‌ ಸೋನೆ ತೊಪ್ಪೆಗಳು ಇನ್ನೂ ಅಲ್ಲೇ ಇವೆಯೇನೋ ಅನಿಸುವಂತಾಗಿಬಿಟ್ಟಿದೆ ಮನಸ್ಸಿಗೆ.ಮನೆಗೆ ಹೋದವಳೇ ನನ್ನ ಚರ್ಮದ ಒಂದು ಲೇಯರನ್ನೇ ‌ಕಿತ್ತುಹಾಕುವವಳಂತೆ ಸೀಗೆಪುಡಿ ತಿಕ್ಕಿ ,ಡೆಟಾಲ್ ಸುರಿದು,ಕುದಿ ಕುರಿ ನೀರನ್ನು ಸುರಿಸುರಿದುಕೊಂಡು‌ ಮಿಂದರೂ‌
    ಮನಸ್ಸಿಗೆ ಸಮಾಧಾನ ಆಗಲಿಲ್ಲ ಎನ್ನಿ.

    ಈ ಘಟನೆಯ ನಂತರ ಈ ಉಗುಳುವೀರರ ಕುರಿತು ಆರಂಭವಾದ ಅಸಹನೆ ಬಸ್ಸಿನಲ್ಲಿ ಸೀಟು ಹಿಡಿಯುವಾಗ ಮುಂದಿನವರ,ಹಿಂದಿನವರ,ಪಕ್ಕದವರ ಮೈಯಿ ಬಾಯಿ‌ ಕೈಯಿ,ಆರೋಗ್ಯ, ಅನಾರೋಗ್ಯಗಳ ವರದಿಯನ್ನು ಕಣ್ಣಲ್ಲೇ ಒಮ್ಮೆ ತಯಾರು ಮಾಡಿ ಯೋಗ್ಯವೆನಿಸಿದರೆ ಮಾತ್ರ’ಪವಡಿಸು ಪರಮಾತ್ಮ’
    ಹಂತಕ್ಕೆ ನನ್ನನ್ನು ತಂದಿಟ್ಟಿದೆ.

    ನನ್ನ ವಕ್ರ ಅದೃಷ್ಟಕೆಂಬಂತೆ ನಮ್ಮದೇ ಕಾರಿನಲ್ಲಿ ಹೋಗುವಾಗಲೂ ಎದುರು ಸಿಗುವ ಪಾದಾಚಾರಿಗಳು,ಬೈಕಿಗರು,ಸ್ಟೀರಿಂಗ್ ತಿರುಗಿಸುವವರಿಗೂ ನನ್ನ ನೋಟ ದಕ್ಕಿದೊಡನೆ ಗಂಟಲಲ್ಲಿ ಕಿಚ್ ಕಿಚ್ ಶುರುವಾಗಿ ತುಪ್ಪುವ ಅವಸರವಾಗ್ತದೆ.

    ಜೊತೆಯಲ್ಲಿದ್ದವರಿಗೆ ಕಾಣದ ಈ ಪೀಕುವ ದೃಶ್ಯ ನನ್ನ ಕಣ್ಣಿಗೆ ಮಾತ್ರ ಬಿದ್ದು ನನ್ನ ಸುಖಪಯಣವೂ ಪೀಕುಶೋಕದಲ್ಲಿ ಮುಳುಗಿಹೋಗುತ್ತದೆ.
    ಇನ್ನು ಕೆಲವರಂತೂ ತಾವು ಈ ‌ಮನುಷ್ಯ ಲೋಕದವರೇ ಅಲ್ಲವೇನೋ ಎಂಬಂತೆ ದೊಡ್ಡ ದೊಡ್ಡ ಬಿಳಿ ಹಳದಿ ತೊಪ್ಪೆ ಗುಪ್ಪೆಗಳನ್ನು ನಿಂತಲ್ಲಿಂದ ಅಲುಗಾಡದೇ ಸುತ್ತಲೂ ತುಪ್ಪಿಕೊಳ್ಳುತ್ತಾರೆ.

    ಜೊತೆಗೆ ಅದೇನು ಅಂತಹ ಘನಂದಾರಿ ಗಲೀಜಲ್ಲವೇನೋ ಎಂಬಂತೆ ಅಕ್ಕಪಕ್ಕ ಹಾದುಹೋಗುವವರಿಗೆ ದಾರಿ ಬಿಡದೆ,ತಾವು ತುಪ್ಪಿದ್ದರ ಮೇಲೆ ನಡೆದುಹೋದರೆ ಅವರ ಜನ್ಮ ಪರಮ ಪಾವನವಾಗುವುದೇನೋ ಎಂಬಂತ ಕೃತಕೃತ್ಯ ಭಾವದಲ್ಲಿ ಮತ್ತಷ್ಟು ಅದೇ ಜಾಗದಲ್ಲಿ ಮೊಳೆಕೆಯೊಡೆದಂತೋ, ಮೊಳೆ ಹೊಡೆದಂತೋ ನಿಂತು ಬಿಡುತ್ತಾರೆ.ಇದನ್ನೆಲ್ಲಾ ನೋಡಿಯೇ ಸಂಭ್ರಮಿಸಬೇಕು.(?)

    ಹೋಟೆಲುಗಳಲ್ಲಿ ಈ ಉಗುಳುವೀರರ ದರ್ಬಾರಿಗೆ ಹೊಸ ಕಳೆ.ಓಪನ್ ದರ್ಶಿನಿಗಳಲ್ಲಂತೂ ಕೈ ತೊಳೆಯುವ ಸಿಂಕೂ ಅಲ್ಲೇ ಇದ್ದುದರ ಪರಿಣಾಮ ಊಟಕ್ಕೂ‌ ಮೊದಲು ಮತ್ತು ನಂತರ ತಮ್ಮ ಬಾಯಿ ಗಂಟಲು ಅನ್ನನಾಳ ಕ್ಕೂ ಕೆಳಗಿಳಿದು ಸಂಚಯಿತ ಪದಾರ್ಥಗಳನ್ನು ಚಿತ್ರ ವಿಚಿತ್ರ ಸದ್ದಿನೊಂದಿಗೆ ಹೊರಹಾಕಿ ಕೊನೆಯ ದಾಗಿ ಮೂಗಿನ ಶುದ್ದತೆಗೂ ಗಮನ ಹರಿಸುವ ಅವರನ್ನು ಕಂಡಾಗ ಸ್ವಚ್ಛ ಭಾರತದ ಕಲ್ಪನೆ ಎಷ್ಟೊಂದು ಯಶಸ್ವಿಯಾಗಿ ಕಾರ್ಯಗತವಾಗಿದೆ ಎನಿಸ್ತದೆ.ಅಲ್ಲಿ ನಿಂತುಕುಂತು ತಿನ್ನುತ್ತಿರುವವರ ಕುರಿತು ಮರುಕವೂ ಆಗ್ತದೆ ಅನ್ನಿ.

    ಗಲ್ಲಿಗಳಲ್ಲಿ,ತಿರುವುಗಳಲ್ಲಿ, ಸರ್ಕಲ್ಲುಗಳಲ್ಲಿ,ರಸ್ತೆಗಳಲ್ಲಿ ಉಗುಳು ವೀರರ ದಾಳಿಗೆ ಬಲಿಯಾಗುವುದು ನಗರವಾಸಿಗಳಿಗೆ ತೀರಾ ಸಹಜವಾಗಿರುವಾಗ ನನ್ನ ‘ಛೀಈಈ..ವ್ಯಾಕ್..’ಎನ್ನುವ ಸಶಬ್ದ ಹೇಸಿಕೊಳ್ಳುವ ಬಗೆ ನಗರಿಗರಿಗೆ ಅಷ್ಟೇನೂ ಸಮಂಜಸವಾಗಲಾರದೇನೊ.

    ಇನ್ನು ಈ ಪೀಕುಗಾರರಿಗಾಗಿಯೇ ಇರುವ ಬರಹಗಳು , ಫಲಕಗಳು ಇನ್ನೂ ಪುಲಕ ಕೊಡುತ್ತವೆ. ಅಪರೂಪಕ್ಕೆ ಟ್ರೈನು ಹತ್ತುವ ನಾನು ಒಮ್ಮೆ ಅಲ್ಲಿ ಕಂಡ “ಟ್ರೈ ನಿನ ಒಳಗೆ ಉಗಿಯುವಂತಿಲ್ಲ’ ಬರಹ ನೋಡಿ ಗಾಬರಿಯಾಗಿ ಎಲ್ಲಿ ಕೂರುವುದು,ಎಲ್ಲಿ ನಿಲ್ಲುವುದು,ಎಲ್ಲಿ ಹಿಡಿಯುವುದು ,ಎಲ್ಲಿ ಮಡಿಯುವುದು (ಛೆ..ಪ್ರಾಸಕ್ಕೆ ಬಂದ್ ಬಿಡ್ತು)ತಿಳಿಯದೆ ಪರದಾಡಿದ್ದೆ.
    ಈಗಲೂ ರೈಲು ಪ್ರಯಾಣದಲ್ಲಿ ಈ ಬರಹದ ನೆನಪಾಗಿ ಗ್ಲಿಟರ್ ಕ್ರಿಮು ಲೇಪಿಸಿಕೊಂಡು ಹೊಳೆಯುವ ನನ್ನ ‌ಮುಖ ಹುಳ್ಳಗಾಗುತ್ತದೆ.

    ಒಮ್ಮೆ ಬೆಂಗಳೂರೆಂಬ ಮಹಾನಗರದಲ್ಲಿ ಶಾಪಿಂಗಿನ‌ ಸಲುವಾಗಿ ಬೀದಿ ಪಾಲಾದ ಸಮಯ. ನನ್ನ ಹಾದುಹೋದ ಸ್ಕೂಟರಿನವನೊಬ್ಬ ಕ್ಯಾಕರಿಸಿ’ಕತ್ರಿಗುಪ್ಪೆ’ ಎನ್ನುವ ಬೋರ್ಡುಗಲ್ಲಿಗೆ ತುಪ್ಪಿದಾಗ ಆ ತೊಪ್ಪೆ ನೇರ ‘ಕತ್ರಿ’ಯ‌ಮೇಲೆ ಆಸೀನವಾಗಿ ‘ಗುಪ್ಪೆ’ಯನ್ನು ‌ಮಾತ್ರ ಕಾಣಗೊಟ್ಟಿತು ಎಂದರೆ ಆ ಉಗುಳು ವೀರನ‌ ಪರಾಕ್ರಮ ವನ್ನು ಊಹಿಸಿಕೊಳ್ಳಬಹುದು.
    ನನ್ನೆದುರೇ ನಡೆದ ಈ ದಾಳಿಗೆ ನನ್ನೊಳಗಿಂದಲೂ ದ್ರವವೊಂದು ಉಕ್ಕಿಬಂದು ಅಲ್ಲೇ ಬದಿಯಲ್ಲಿ ಕಂಡ ಡ್ರೈನೇಜಿಗೆ ತುಪ್ಪುವ‌ ತೀವ್ರ ತುಡಿತವನ್ನು ಪೂರೈಸಿಕೊಳ್ಳುವ ‌‌ಮೊದಲು ಯಾರಾದರೂ ನೋಡ್ತಿದ್ದಾರಾ ಅಂತ ಸುತ್ತ ನೋಡಿ ‌ಪರೀಕ್ಷಿಸಿಕೊಂಡಾಗ ಡ್ರೈನೇಜಿನ ಪಕ್ಕದ ಗೋಡೆ ಮೇಲೆ‌ ಕಂಡಿದ್ದು
    ” ಇಲ್ಲಿ ಉಗುಳುವವರು ಮಲ ತಿಂದಂತೆ” ಎಂಬ ಬರಹ.!!
    ಮತ್ತೆಂದೂ ನನ್ನ ಬಾಯಿ ದ್ವಾರದಿಂದ ಹೊರಬರುವುದಿಲ್ಲವೆಂಬಂತೆ ಒಳಹೋದ ದ್ರವ ಹುಟ್ಟಿಸಿದ ತಳಮಳವನ್ನು ಯಾವ ಪದ ಬಳಸಿ ಇಲ್ಲಿ ಬರೆದರೂ‌ ನಿಮಗೂ ತುಪ್ಪುವ ತೀವ್ರ ತುಡಿತವುಂಟಾಗಿ..ಆಮೇಲೆ…

    ಸದಾ ಹಚ್ಚ ಹಸುರು, ಶುಭ್ರ ಗಾಳಿ,ಮಂಜುಹೊತ್ತ ಗರಿಕೆ,ಪುಟಾಣಿ ಇರುವೆ ಗೂಡು, ಕಲರವಿಸುವ ಹಕ್ಕಿ,ಅಳಿಲು ನವಿಲುಗಳೇ ಯೋಗಕ್ಷೇಮ ವಿಚಾರಿಸಿಕೊಳ್ಳುವ ಪುಟ್ಟ ಹಳ್ಳಿಯಲ್ಲಿ ನನ್ನ ವಾಸ.
    ಇಂತಹ ಚಂದದೂರಿನಲ್ಲಿ‌‌ ನನ್ನ ಇರಿಸಿದ್ದಕ್ಕಾಗಿ ದೇವರಿಗೆ ಆಗಾಗ ಕೈಮುಗಿದರೂ ಅವನೇನು ಅಷ್ಟೊಂದು ಕರುಣಾಮಯಿಯಾಗಲಿಲ್ಲ‌ ನನ್ನ ಪಾಲಿಗೆ.

    ಕಾರಣ..

    ದೊಡ್ಡದಾದ ಒಡಮನೆಯ ಎಡಬಾಗದಲ್ಲಿ ನಮ್ಮ ವಾಸ್ತವ್ಯ.
    ಈಗೈದು ವರ್ಷಗಳ ಹಿಂದೆ ನನ್ನ ಮಲಗು ಕೋಣೆಯ ನೇರ ಎದುರಿಗಿದ್ದ ಸಣ್ಣ ತೋಟವನ್ನು ನೆಲಸಮ ಮಾಡಿ ಮನೆಯೊಂದು ತಲೆಯೆತ್ತಿದೆ.
    ಅಚೀಚೆ ಮನೆಯ ಈ ಇಬ್ಬರು ಗಂಡಸರೂ ಆಗಾಗ ಕ್ಯಾಕರಿಸುವ ವ್ಯಾಕರಿಸುವ ಘನಘೋರ ಸದ್ದು ವಾಚಮಗೋಚರ ನನ್ನ ಕಿವಿಗೆ ಬಿದ್ದು
    ‘ದೂರ ಬಯಲಿನಲ್ಲಿ ಒಂದು ‌ಮನೆಯಿರಬೇಕು’ ಎನ್ನುವ ಅಸೆ ದಿನೇದಿನೇ ಗಟ್ಟಿಯಾಗುತ್ತಿದೆ.. ಇದಕ್ಕಿಂತಲೂ ದೊಡ್ಡ ಸಂಗತಿಯೆಂದರೆ ಈ ಆಚೀಚೆ ಮನೆಯ ಗಂಡಸರಿಗೆ ನನ್ನ ಊಟತಿಂಡಿಯ ಕರಾರುವಾಕ್ಕು ಸಮಯ ಗೊತ್ತಾಗಿ ಅದೇ ಹೊತ್ತಿನಲ್ಲಿ ಕ್ಯಾಕರಿಸಲು ಮೊದಲಿಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಊಟಕ್ಕೂ‌ ಮೊದಲು ಆಚೆ ಬಗ್ಗಿನೋಡಿ ಅವರವರ ಶೆಡ್ಡಿನಲ್ಲಿ ಕಾರುಗಳು ಇಲ್ಲದಿದ್ದರೆ ನಿರಾಳವಾಗಿ ಊಟ ಮಾಡುವ ಪದ್ದತಿ ಆರಂಭವಾಗಿಬಿಟ್ಟಿದೆ.

    ನಮ್ಮದು ಕಾಫಿ ತೋಟವಾದ್ದರಿಂದ ಹಣ್ಣು‌ಕುಯ್ಲಿನ ‌ನಂತರ ‘ಹನಕಲು’ಅಥವಾ ‘ಬೇಳೆ ಆಯುವ’ಕೆಲಸ ಕಾಯಮ್ಮಾಗಿ ಮಾಡಲೇಬೇಕು.
    ಹಣ್ಣು ಕೊಯ್ಲಿನಲ್ಲಿ ಉದುರಿದ್ದ,ಪ್ರಾಣಿ ಪಕ್ಷಿಗಳು ತಿನ್ನುವಾಗ ಉದುರಿಸಿದ ಕಾಫಿ ಬೆಳೆಗಳನ್ನು ಆಯುವ ಕೆಲಸ. ಈ ಕೆಲಸದ ಸಂದರ್ಭದಲ್ಲಿ ತೋಟಕ್ಕೆ ಹೋಗುತ್ತಿದ್ದ ನಾನೂ ನಮ್ಮ ಹೆಣ್ಣಾಳುಗಳ ಜೊತೆಗೆ ಬೇಳೆ ಆಯಲಿಕ್ಕೆ ಕೈ ಜೋಡಿಸ್ತಿದ್ದೆ.

    ಹೇಳಿಕೇಳಿ ನಮ್ಮ ಕಡೆ ಕೂಲಿ ಕಾರ್ಮಿಕರಿಗೆ ತಂಬಾಕಿನ ಖಯಾಲಿ.
    ಅದ್ರಲ್ಲೂ ಹೆಣ್ಣಾಳಿಗೆ ಎಲೆಅಡಿಕೆ ಜೊತೆಗೆ ಕಡ್ಡಿಪುಡಿ ತಮ್ಮ ಕೆನ್ನೆ ಬದಿಯಲ್ಲಿ ದೊಡ್ಡ ನಿಂಬೆಕಾಯಿ ಗಾತ್ರದಲ್ಲಿ ಇರಲೇಬೇಕು. ಕರಸೋಟೆಯಲ್ಲಿ ಸದಾ ರಸ ಒಸರುತ್ತಲೇ ಮಾತಾಡ್ತಾ ಅಲ್ಲಲ್ಲಿ ಹೆಚ್ಚಿದ್ದ ರಸವನ್ನು ಕಡ್ಡಿಪುಡಿ ರಾಶಿ ಸಮೇತ ತುಪ್ಪುತ್ತಾ ಕೆಲಸ ಮಾಡುವುದು ಅನೂಚಾನ. ಈ ಅಭ್ಯಾಸ ಇರದವರೂ ‌ಕೂಡ ಕೆಲಸಕ್ಕೆ ಬಂದ ನಂತರದ ದಿನಗಳಲ್ಲಿ ತಂಬಾಕು ಜಗಿಯುವುದನ್ನು ಕಲಿತುಬಿಡುತ್ತಾರೆ.ಇದಕ್ಕೆ ಮಹತ್ತರವಾದ ಕಾರಣವೂ ‌ಇದೆ.

    ಐದು ಗಂಟೆಯ ಕೆಲಸದ ಅವಧಿಯಲ್ಲಿ ಆರು ಬಾರಿಯದರೂ ‘ಎಲೆ ಹಕ್ಕಾ ಬಾರದಾ ಕಾಣಿ’ ಅಂತ ಓನರಮ್ಮನನ್ನು ಗದರಿಸಿ ಅಲ್ಲಲ್ಲಿ ಮೊಳಕೆ ಬಿಡುವುದು ತಂಬಾಕಿನ ಮೂಲ ಉದ್ದೇಶ.

    ಹೋಗಲಿ.ಅದು ಪರಂಪರಾಗತವಾದ್ದರಿಂದ ಅದಕ್ಕೆ ಹೆಚ್ಚಿನ ಮಹತ್ವ ಬೇಡ.
    ಇಂತದ್ದೇ ಹೊತ್ತಿನಲ್ಲಿ ನಾನು ತೋಟದಲ್ಲಿ ಬೇಳೆ ಆಯುತ್ತಿದ್ದೆ.ಕಾಟಾಚಾರಕ್ಕೆ ಆಯ್ದುಕೊಂಡು ಮುಂದೆ ಮುಂದೆ ಹೋಗ್ತಿದ್ದ ಹೆಣ್ಣಮಗಳೊಬ್ಬಳ ಸಾಲಿನಲ್ಲಿ ಹಿಂದಿನಿಂದ ನಾನು ಒಂದೂ ಕಾಳುಳಿಯದಂತೆ ಆಯ್ದುಕೊಂಡು ಬರುತ್ತಿದ್ದೆ.
    ಒಂದು ವಿಶಾಲ ಕಾಫಿ ಗಿಡದ ಕೆಳಗೆ ಆಯುವ ಬರಸಿನಲ್ಲಿದ್ದ ನಾನು ಮುಂದೆ ಹೋದವರು ತುಪ್ಪಿದ್ದ ಕಡ್ಡಿಪುಡಿಯ ಕೆಂಪು ಬೆಟ್ಟಕ್ಕೆ ನೇರ ಕೈ‌ಹಾಕಿಬಿಟ್ಟೆ.
    ಅಂದಿನ ನನ್ನ ಮನಸ್ಥಿತಿಯನ್ನು, ಬೆರಳ ಸ್ಥಿತಿಯನ್ನು ‌ಹೇಳುವುದು ಹೇಗೂ ತ್ರಾಸವೇ.ಹೋಗಲಿ ಬಿಡಿ.

    ಇನ್ನೊಂದು ಮಾತು.

    ಹಳೆಯ ಕಂಚಿನ ಪಾತ್ರೆಗಳು ಹಿತ್ತಾಳೆ ಬಟ್ಟಲುಗಳೆಲ್ಲಾ ಈಗ ಪಾಲೀಷ್ ಹಾಕಿಸಿಕೊಂಡು ಡ್ರಾಯಿಂಗ್ ರೂಮಿನಲ್ಲಿ ಆರಾಮು ಪಡೆಯುವುದು ಅವುಗಳ ಪುನರ್ಜನ್ಮ ದ ಕಥೆ.ಇಂಥದ್ದೇ ಒಂದು ಚಂದದ ತಳ ಎತ್ತರವಿದ್ದ ಸುಂದರ ಬಟ್ಟಲೊಂದನ್ನು ನನ್ನ ಬೆಡ್ ರೂಮ್ ನಲ್ಲಿ ಇಟ್ಟು ನಾನು ಆಗಾಗ ಬಾಯಿಗೆ ಹಾಕಿಕೊಳ್ಳುವ ಚಿಕ್ಕಿಸ್ ಹಾಕಿಟ್ಟೆ. ಬಹಳ ದಿನಗಳಾದ ಮೇಲೆ ತಿಳಿಯಿತು ಅದು ‘ಪೀಕುದಾನಿ’ ಯೆಂದು.!ಚಿಕ್ಕಿಯೂ ಆ ಬಟ್ಟಲೂ ನಂತರದ ದಿನಗಳಲ್ಲಿ ವಿನಾ ನನ್ನ ಅಸಹನೆಗೆ ಗುರಿಯಾದವು.

    ಸ್ನೇಹಿತರನ್ನು ಆರಿಸಿಕೊಳ್ಳುವುದು,ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಅವರವರ ವೈಯಕ್ತಿಕ ಆಯ್ಕೆ.ಹನ್ಸ್ ,ಜರ್ದಾ,ತಂಬಾಕು ,ಧೂಮಪಾನಗಳ ಸುಸ್ನೇಹದಲ್ಲಿರುವವರಿಗೆ ಅಡಿಗಡಿಗೆ ತುಪ್ಪುವುದು ಅಗತ್ಯವೇ ಇದ್ದರೂ ಅವರಿಗದೇನು ಪಾತಕ ಅಂತ ಅನಿಸದೇ ಹೋಗುವುದು ಮಾತ್ರ ‌ನನಗೆ‌ ಕೌತುಕ.

    ಕಾಯ್ದೆ ಕಾನೂನು ಮಸೂದೆಗಳಂತವು ಈ ಉಗುಳವೀರರಿಗಾಗಿಯೇ ಮಂಡನೆಯಾಗಿದ್ರೂ‌,ಮೋದಿಜಿಯವರ ಮನ್ ಕೀ ಬಾತ್ ಲ್ಲೂ ಇಂಥ ಉಗುಳು ವೀರರ ಪ್ರಸ್ತಾಪ ವಾದರೂ,ಸ್ಮಾರಕ ಶಿಲ್ಪ ದೇವಾಲಯ ಸೇತುವೆ ರಸ್ತೆ ಕಟ್ಟೆ ಕೈಮರ ಪಾರ್ಕುಗಳೆಲ್ಲವೂ ಈ ಉಗುಳುವೀರರ ಕೃಪೆಗೆ ಪಾತ್ರರಾಗಿ ಅಚ್ಚಗೆಂಪುನ ಚಿತ್ತಾರ ಹೊದ್ದುಕೊಂಡಾದ ಮೇಲೂ ಈ ಪೀಕುದಾರರ ಲೋಕ ಮಾತ್ರ ತಮ್ಮ ಪಾಡಿಗೆ ತಾವು ಪೀಕುವುದನ್ನು ರಣವೇಗದಲ್ಲಿ ಮುಂದುವರೆಸುತ್ತಲೇ ಇದೆ. ರಾಜ್ಯಸರ್ಕಾರವೂ ೨೦೧೩ರ‌ ಪೌರ ಕಾಯ್ದೆಯನ್ವಯ ಸಾರ್ವಜನಿಕವಾಗಿ ತುಪ್ಪುವುದು ಅಪರಾಧ ಅಂತ ಕಾನೂನು ಮಾಡಿದರೂ ಅದಕ್ಕೆಲ್ಲಾ ಗೋಲಿ ಮಾರೋ ಎಂಬಂತೆ ಜನಗಳಲ್ಲಿ ಜನಜನಿತವಾದ ಉಗುಳುಕಾರ್ಯ ರಣ ವೇಗದಲ್ಲಿ ಮುಂದುವರೆದಿದೆ.

    ಇದು ಕರೋನಾ ಯೆರಾ.ಉಗುಳುವ,ಸೀನುವ,ಸಿಡಿಯುವ ಹಲವು ಬಗೆಗಳಿಂದಲೇ ವೈರಾಣು ನೆರೆಮನುಜರ ಮೊಗದ ದ್ವಾರಗಳಲ್ಲಿ ದಾರಿ ಗಿಟ್ಟಿಸಿ ಸವಾರಿ ಮಾಡುತ್ತದೆ ಎನ್ನುವುದೂ , ಕೆಲವರಿಗೆ ವೈಕುಂಠವನ್ನೂ ತೋರಿಸಿದೆ ಎನ್ನುವುದೂ ತಿಳಿದ ವಿಚಾರವೇ.ಕ್ಷಯದಂತಹ ಮಾರಣಾಂತಿಕ ರೋಗದಲ್ಲೂ ಉಗುಳುವೀರರ ಕೊಡುಗೆಯೇ ಘನವಾದದ್ದು.

    ಮೂಢನಂಬಿಕೆ ಎನ್ನುವ ಅಸ್ಟ್ರಾಲಜಿಯ ಪ್ರಕಾರವೂ ನಮ್ಮ ಬದುಕಿನಲ್ಲಿ ಕೆಡುಕುಂಟು ಮಾಡುವ ಹತ್ತು ಕೆಲಸಗಳಲ್ಲಿ ಪದೇಪದೇ ತುಪ್ಪುವ ಕಾರ್ಯವೂ ಒಂದು.ಇನ್ನು ನಮ್ಮ ಪೌರಾತ್ಯ ರಾಷ್ಟ್ರಗಳಲ್ಲಿ ಸಾರ್ವಜನಿಕವಾಗಿ ಉಗುಳುವುದು ಸ್ವಚ್ಚತೆಯ ದೃಷ್ಟಿಯಿಂದ ‌ಮಾತ್ರವಲ್ಲ ನಂಬಿಕೆಯಿಂದಲೂ ತಪ್ಪು.ಉಗುಳಿದ ಕೊಪ್ಪೆಯಡಿ ಸಿಲುಕಿದ ಅಸಂಖ್ಯ ಜೀವಿಗಳು ಉಸಿರುಕಟ್ಟಿ ಸಾಯುತ್ತವಂತೆ.ಕೊಂದ ಪಾಪದ ಹೊರೆ ಬರಬಾರದೆಂದರೆ ತಮ್ಮ ತಮ್ಮ ಬಚ್ಚಲುಮನೆಯಲ್ಲಿ ಮಾತ್ರ ತುಪ್ಪಿಕೊಳ್ಳುವುದು ಅಲ್ಲಿನ ವಾಡಿಕೆಯಂತೆ.
    ಎಂತೆಂತದನ್ನೋ ನಂಬುವ,ಎರವಲು ಪಡೆಯುವ,ಅನುಸರಿಸುವ ನಾವು ಇದನ್ನು ಮಾತ್ರ ಕಡೆಗಣಿಸಿ ತುಪ್ಪು ಕಾರ್ಯದಲ್ಲೇ ಮಗ್ನರಾಗಿದ್ದೇವೆ.

    ಆದರೆ…

    ಈ ರಣರೋಗಗಳ ಸಂದರ್ಭದಲ್ಲಾದರೂ ಸರ್ಕಾರಗಳು ಸಾರ್ವಜನಿಕವಾಗಿ ಉಗುಳುವುದು ಶಿಕ್ಷಾರ್ಹ ಅಪರಾಧ ಎನ್ನುವ ಕಾನೂನನ್ನು ಬಿಗಿಯಾಗಿ ಜಾರಿಗೆ ತರಬಾರದೇ ಅನಿಸ್ತದೆ.ದಂಡ ಶಿಕ್ಷೆ ಗಳಿಗೆ ನಮ್ ಜನರೆಲ್ಲಿ ಹೆದರುತ್ತಾರೆ ಅನಿಸಬಹುದು.ದಿನದಲ್ಲಿ ಸಾವಿರದ ಲೆಕ್ಕದಲ್ಲಿ ಕೇವಲ ತುಪ್ಪಿದ್ದಕ್ಕೇ ಖಾಲಿಯಾದರೆ ಭಾರತ ದೇಶ ಪೀಕು‌ಮುಕ್ತವಾಗಲಾರದೇ?

    ತೊಳೆವ ಜಲಗಾರರೂ ನಮ್ಮಂತೆ ಹೇಸಿಗೆ ಅಸಹ್ಯಗಳ ಪರಿಧಿಗೇ ಬರುವ ಜೀವವಲ್ಲವೇ.?ಈ ತರಹದ ಯಾವ ಮೌಲ್ಯಗಳೂ ತಾಕದೇ ಹೋದವರಿಗೆ ವ್ಯವಸ್ಥೆಯ ಕಡುಬಿಗಿಯ ನಿಯಮಗಳಲ್ಲಿ ಬಾಯಿ ಹೊಲೆಸಬೇಕಿದೆ..
    ಶಿಕ್ಷೆಯಿಂದಾದರೂ ಉಗುಳು ವೀರರಿಂದ ಸಾಮಾನ್ಯ ಜನತೆಗೆ ಮುಕ್ತಿ ಕೊಡಿಸಬಹುದೇ? ಉಗುಳು ವೀರರ ದಾಳಿಗೆ ಪದೇಪದೇ ಬಲಿಯಾದ ಅಸಹಾಯಕ ಜೀವವೊಂದರ ಬೇಡಿಕೆ ಇದು.

    ಸಂತೋಷ ಸಸಿಹಿತ್ಲು

    ಈ ಪ್ರಬಂಧದೊಂದಿಗೆ ಪ್ರಕಟವಾಗಿರುವ ವ್ಯಂಗ್ಯ ಚಿತ್ರ ಬರೆದವರು ನಾಡಿನ ಪ್ರತಿಭಾವಂತ ಕಲಾವಿದ ಸಂತೋಷ್ ಸಸಿಹಿತ್ಲು.ಉಡುಪಿ ಜಿಲ್ಲೆಯ ಕುಂದಾಪುರದವರಾದ ಸಸಿಹಿತ್ಲು ಓದಿದ್ದು ಭಂಡಾರ್ಸ್ ಕರ್ ಸೈನ್ಸ್ ಮತ್ತು ಆರ್ಟ್ಸ್ ಕಾಲೇಜಿನಲ್ಲಿ. ಯಾವುದೇ ಕಲಾ ಶಿಕ್ಷಣದ ಹಿನ್ನೆಲೆ ಇಲ್ಲದೆ ಸ್ವಂತ ಆಸಕ್ತಿಯಿಂದ ಚಿತ್ರ ಬರೆಯುವುದನ್ನು ರೂಢಿಸಿಕೊಂಡವರು. ಮುಂಬೈನಲ್ಲಿ ಕೆಲ ಕಾಲವಿದ್ದಾಗ ಅಲ್ಲಿ ಅದಕ್ಕೊಂದು ಶಾಸ್ತ್ರೀಯ ಆಯಾಮ ದೊರೆಯಿತು. ವ್ಯಂಗ್ಯಚಿತ್ರ, ಇಲ್ಸ್ ಸ್ಟ್ರೇಷನ್ , ಭಾವ ವ್ಯಂಗ್ಯಚಿತ್ರ ..ಇತ್ಯಾದಿಗಳನ್ನು ಸೊಗಸಾಗಿ ಬಿಡಿಸಬಲ್ಲರು. ನಾಡಿನ ಹಲವು ಮುಂಚೂಣಿ ಪತ್ರಿಕೆಯಲ್ಲಿ ದುಡಿದ ಅನುಭವ.

    ಪವರ್ ಸ್ಟಾರ್‌ ಸಿನಿಮಾವಲ್ಲ ಕಿರು ಚಿತ್ರ

    ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಇತ್ತೀಚೆಗೆ ಡಿಜಿಟಲ್‌ ಪ್ಲಾಟ್‌ಫಾರ್ಮ್‌ನಲ್ಲಿ ಸಿಕ್ಕಾಪಟ್ಟೆ ಪ್ರಯೋಗ ಮಾಡುತ್ತಿದ್ದಾರೆ.

    ‘ನೆಕೆಡ್‌’, ‘ಕ್ಲೈಮ್ಯಾಕ್ಸ್’ ಹೆಸರಿನಲ್ಲಿ ಸಣ್ಣ ಸಣ್ಣ ಸಿನಿಮಾಗಳನ್ನು ಮಾಡಿ ತಮ್ಮದೆ ಆದ ಡಿಜಿಟಲ್‌ ಪ್ಲಾಟ್‌ಫಾರ್ಮ್‌ ಸೃಷ್ಟಿ ಮಾಡಿ ಅದರಲ್ಲಿ ಅವುಗಳನ್ನು ರಿಲೀಸ್‌ ಮಾಡಿದ್ದರು. ಆ ಎರಡು ಸಿನಿಮಾಗಳಲ್ಲಿ ಕಥೆ ಇಲ್ಲದೇ ಹೋದರು ಜನ ಮಾತ್ರ ಮುಗಿ ಬಿದ್ದು ನೋಡಿ ಆರ್‌ಜಿವಿ ಜೇಬನ್ನು ತುಂಬಿಸಿದರು. ಇಂತಹ ಆರ್‌ಜಿವಿ ಕೆಲ ದಿನಗಳ ಹಿಂದೆ ‘ಪವರ್‌ ಸ್ಟಾರ್‌’ ಎಂಬ ಸಿನಿಮಾ ಮಾಡುವುದಾಗಿ ಅನೌನ್ಸ್‌ ಮಾಡಿದರು. ಈ ಪವರ್‌ ಸ್ಟಾರ್‌ ಸಿನಿಮಾದಲ್ಲಿ ತೆಲುಗಿನ ಸ್ಟಾರ್‌ ನಟ ಪವನ್‌ ಕಲ್ಯಾಣ್‌ರನ್ನೇ ಹೋಲುವಂತ ನಟನನ್ನು ಕರೆತಂದು ಫೋಟೋ ಗಳನ್ನು ಟ್ವೀಟ್ಟರ್‌ ಮೂಲಕ ರಿಲೀಸ್‌ ಮಾಡಿದರು. ಆಗ ಇಡೀ ಟಾಲಿವುಡ್‌ ಆರ್‌ಜಿವಿಗೆ ತಲೆ ಕೆಟ್ಟಿದೆ, ಹಾಗಾಗಿ ಪವನ್‌ ಕಲ್ಯಾಣ್‌ರನ್ನು ವಿಡಂಭನೆ ಮಾಡುವಂತಹ ಸಿನಿಮಾ ಮಾಡುತ್ತಿದ್ದಾರೆ. ಇದರಿಂದ ಅವರು ತೊಂದರೆಗೆ ಸಿಲುಕಿಕೊಳ್ಳಲಿದ್ದಾರೆ ಎಂದು ಮಾತನಾಡಿಕೊಂಡರು. ಅಂದುಕೊಂಡಂತೆ ತಮ್ಮ ಡಿಜಿಟಿಲ್‌ ಪ್ಲಾಟ್‌ಫಾರ್ಮ್‌ನಲ್ಲಿ ಸಿನಿಮಾವನ್ನು ರಿಲೀಸ್‌ ಮಾಡಿದರು. ಈ ಚಿತ್ರದ ಟ್ರೇಲರ್‌ ನೋಡಲು ದುಡ್ಡು ಕೊಡಬೇಕು ಎಂದು ಹೇಳಿದ್ದ ಆರ್‌ಜಿವಿ ಅದನ್ನು ಯೂ ಟ್ಯೂಬ್‌ನಲ್ಲಿ ರಿಲೀಸ್‌ ಮಾಡಿದ್ದರು.

    ರಾಮ್ ಗೋಪಾಲ್ ವರ್ಮಾ

    ಸಿನಿಮಾ ನೋಡಿದ ಸಾಕಷ್ಟು ಮಂದಿ ಚಿತ್ರದ ಬಗ್ಗೆ ಬೇರೆ ಬೇರೆ ರೀತಿ ಮಾತನಾಡಿದರು, ಈ ಚಿತ್ರದಲ್ಲಿ ಪವನ್‌ ಕಲ್ಯಾಣ್‌ರನ್ನು ಅವಹೇಳನ ಮಾಡುವಂತಹ ದೃಶ್ಯಗಳಿಗಿಂತಲೂ ಅವರ ಸುತ್ತ ಇರುವವರು ಅವರನ್ನು ದಾರಿ ತಪ್ಪಿಸಿದ ಬಗೆ ಹೇಗೆ ಎಂಬುದನ್ನು ಆರ್‌ಜಿವಿ ವಿವರಿಸಿದ್ದಾರೆ. ಇದರಲ್ಲಿ ಎಷ್ಟು ಸತ್ಯ ಎಷ್ಟು ಸುಳ್ಳು ಎಂಬುದು ಗೊತ್ತಿಲ್ಲ.

    ವಿಶೇಷ ಎಂದರೆ 37 ನಿಮಿಷ ಇರುವ ಇದನ್ನು ಸಿನಿಮಾ ಎನ್ನುವುದಕ್ಕಿಂತ ಕಿರು ಚಿತ್ರ ಎನ್ನಬಹುದು. ಇಡೀ ಸಿನಿಮಾ ಕಾಮಿಡಿ   ಅನಿಸಿದರು, ಕ್ಲೈಮ್ಯಾಕ್ಸ್‌ನಲ್ಲಿ ಈ ಚಿತ್ರ ಮಾಡಿದ ಉದ್ದೇಶವೇನು ಎಂಬುದನ್ನು ಆರ್‌ಜಿವಿ ತಾವೇ ನಟಿಸುವ ಮೂಲಕ ಹೇಳಿದ್ದಾರೆ. ಪವನ್‌ ಕಲ್ಯಾಣ್‌ ಅವರ ಯೋಚನಾ ಲಹರಿ, ಅವರ ಸಿನಿಮಾಗಳ ಆಯ್ಕೆ, ಅವರ ಸಿದ್ಧಾಂತಗಳಿಗೆ ಆರ್‌ಜಿವಿ ತಾವು ದೊಡ್ಡ ಫ್ಯಾನ್‌ ಎಂದು ಹೇಳುತ್ತಾರೆ. ಈ ಮೂಲಕ ಪವನ್‌ ಕಲ್ಯಾಣ್‌ ಬದಲಾಗಬೇಕು, ತನ್ನ ಸುತ್ತ ಇರುವವರನ್ನು ಬದಲಾಯಿಸಬೇಕು, ತಮ್ಮ ಐಡಿಯಾಲಜಿಗಳ ಮೂಲಕ ತೆಲುಗು ಜನರಿಗೆ ಒಳ್ಳೆಯದನ್ನು ಮಾಡಬೇಕು ಎಂದು ಈ ಕಿರುಚಿತ್ರದ ಮೂಲಕ ಆರ್‌ಜಿವಿ ಹೇಳುವ ಪ್ರಯತ್ನ ಮಾಡಿದ್ದಾರೆ.

    ಜನರ ಚಪ್ಪಾಳೆ, ಪಂಚ್‌ ಮತ್ತು ಮಾಸ್‌ ಡೈಲಾಗ್‌ಗಳಿಗೆ ಬೀಳುವ ಶಿಳ್ಳೆಗಳಾವುವು ಮತಗಳಾಗಿ ಪರಿವರ್ತನೆ ಆಗುವುದಿಲ್ಲ. ಬದಲಿಗೆ ಜನ ಸೇವೆಯೇ ನಾಯಕರನ್ನಾಗಿಸುತ್ತದೆ ಎಂದು ಆರ್‌ಜಿವಿ ತಮ್ಮದೇ ಆದ ಶೈಲಿಯಲ್ಲಿ ಹೇಳಿದ್ದಾರೆ. ಆದರೆ ಪವನ್‌ ಕಲ್ಯಾಣ್‌ ಫ್ಯಾನ್ಸ್‌ಗೆ ಈ ಚಿತ್ರ ಬೇಸರ ತರಿಸಿದರೂ ಕ್ಲೈಮ್ಯಾಕ್ಸ್‌ ನೋಡಿ ಅವರು ಖುಷಿಯಾಗಬಹುದೇನೊ. ಇಲ್ಲಿ ಇನ್ನೊಂದು ಗಮನಿಸಬೇಕಾದ ಅಂಶವಂತೆ ಆರ್‌ಜಿವಿ ಕಳೆದ ನಾಲ್ಕೈದು ತಿಂಗಳಿನಿಂದ ಏನಿಲ್ಲವೆಂದರೂ 3 ಕೋಟಿಗೂ ಅಧಿಕ ಹಣವನ್ನು ಈ ರೀತಿಯ ಸಿನಿಮಾಗಳಿಂದ ಮಾಡುತ್ತಿದ್ದಾರೆ. ಅಲ್ಲಿಗೆ ಅವರು ಮತ್ತೊಮ್ಮೆ ನಾನು ಟ್ರೆಂಡ್‌ ಸೆಟರ್‌ ಎಂಬುದನ್ನು ಸಾಬೀತು ಪಡಿಸಿದ್ದಾರೆ. 

    ಹೂಡಿಕೆ ಮಾಡುವಾಗ ಮೋಹಕ ಪದಗಳಿಂದ ದೂರವಿರಿ

    ನಮ್ಮ ಶ್ರಮದ- ದುಡಿಮೆಯ ಹಣದಲ್ಲಿ ಅಲ್ಪಸ್ವಲ್ಪವಾದರೂ ಉಳಿಸಿ, ಅದನ್ನು ಭವಿಷ್ಯಕ್ಕಾಗಿ ಕೂಡಿಡಬೇಕು ಅನ್ನೋದು ನಿರ್ವಿವಾದಿತ ಅಂಶ. ಆ ಹಣವೂ ಒಂದಿಷ್ಟು ಹಣ ದುಡಿಯಲಿ ಎಂಬ ಭಾವನೆ ಎಲ್ಲರಲ್ಲೂ ಇರುತ್ತದೆ. ಹಾಗೆ ಆಲೋಚಿಸುವಾಗ ಗೋಚರಿಸುವ ಮೊದಲ ದಾರಿ ಷೇರುಪೇಟೆ.
    ಆದರೆ, ಇತ್ತೀಚಿನ ದಿನಗಳಲ್ಲಿ ಷೇರುಪೇಟೆಯು ಅಸ್ಥಿರತೆಯಿಂದ ಕೂಡಿದೆ. ಷೇರಿನ ಬೆಲೆಗಳು ವಿನಾಕಾರಣ ಇಳಿಯುತ್ತವೆ. ಅದೇ ರೀತಿ ಏರಿಕೆ ಆಗುತ್ತವೆ. ಈ ಏರಿಳಿತಕ್ಕೆ ರುಪಾಯಿಯ ಬೆಲೆ ಕುಸಿತ, ಕಚ್ಚಾ ತೈಲ ಬೆಲೆ ಏರಿಕೆ, ಅಂತರ ರಾಷ್ಟ್ರೀಯ ಪೇಟೆಗಳಲ್ಲಾಗುವ ಇಳಿಕೆ ಮುಂತಾದವುಗಳ ಕಾರಣವನ್ನು ನೀಡಲಾಗುವುದು. ಆದರೆ ಈಗ ಕೋವಿಡ್‌ ಪ್ರಭಾವದ ಕಾರಣ ಪೇಟೆಯೊಳಗೆ ಹರಿದುಬರುತ್ತಿರುವ ಹಣದ ಹೊಳೆ ಈ ಎಲ್ಲಾ ಕಾರಣಗಳನ್ನು ಬದಿಗೊತ್ತಿ ವಿಭಿನ್ನತೆ ಪ್ರದರ್ಶಿತವಾಗುತ್ತಿದೆ.

    ಷೇರಿನ ಬೆಲೆಗಳ ಏರಿಳಿತಕ್ಕೆ ಕಂಪನಿಗಳು ಅಂತರ್ಗತವಾಗಿ ಸಾಧಿಸಿದ ಅಂಶಗಳನ್ನು ಪರಿಗಣಿಸದೆ, ಕೇವಲ ಬಾಹ್ಯ ಬೆಳವಣಿಗೆಗಳಿಗೆ, ವಿತ್ತೀಯ ಸಂಸ್ಥೆಗಳು ನೀಡುವ ರೇಟಿಂಗ್ ಗಳನ್ನು ಆಧರಿಸಿ ಅಲಂಕಾರಿಕ ಶೈಲಿಯಲ್ಲಿ ವರ್ಣಿಸಲಾಗುವುದು. ಇಂತಹ ವಾತಾವರಣವು ಪಾರಂಪರಿಕವಾಗಿ ಬೆಳೆದು ಬಂದಿರುವ ದೀರ್ಘಕಾಲೀನ ಹೂಡಿಕೆಗೆ ಅಪವಾದವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶದ ಪ್ರತಿಷ್ಠೆ ಹೆಚ್ಚುತ್ತಿದೆ. ಭಾರತದ ಷೇರುಪೇಟೆಯು 2018 ರ ಸಮೀಕ್ಷೆ ಪ್ರಕಾರ, ವಿಶ್ವದ ಏಳನೇ ಸ್ಥಾನದಲ್ಲಿದೆ. ಈ ಕೋವಿಡ್‌ಸಮಯದಲ್ಲಿ ಸಕಾರಾತ್ಮಕ ಭಾವನೆಗಳನ್ನು ಜನಮನದಲ್ಲಿ ಪ್ರತಿಷ್ಠಾಪಿಸುತ್ತಿರುವುದು ಒಂದು ಕಡೆಯಾದರೆ, ಆಂತರಿಕವಾಗಿ ಆರ್ಥಿಕ ಚಟುವಟಿಕೆಗಳು ಚೇತರಿಕೆಗೆ ಪ್ರಯತ್ನಿಸಲಾಗುತ್ತಿದ್ದು, ತಳಮಟ್ಟದ, ಮಧ್ಯಮ ವರ್ಗದವರ ನಿತ್ಯದ ಬವಣೆಗಳು ಹೆಚ್ಚಾಗಿ ಅಸಮಾಧಾನವು ತುಂಬಿ ತುಳುಕಾಡುತ್ತಿದೆ.

    ಜನಸಾಮಾನ್ಯರ ಖರೀದಿಸುವ ಸಾಮರ್ಥ್ಯವು ಕ್ಷೀಣಿಸುತ್ತಿದೆ. ನಮ್ಮ ದೇಶದ ಆರ್ಥಿಕ ಬೆನ್ನೆಲುಬಾಗಿರುವ ಗ್ರಾಹಕ ವೃಂದದ ಖರೀದಿ ಸಾಮರ್ಥ್ಯವು ಹೆಚ್ಚುವವರೆಗೂ ಯಾವ ಯೋಜನೆಯು ಯಶಸ್ಸು ಕಾಣಲಾಗದು. ಈ ದಿಶೆಯಲ್ಲಿ ಭಾವನೆಗಳನ್ನು ಮತ್ತು ವಾಸ್ತವವನ್ನು ಬೇರ್ಪಡಿಸಿ, ಪರಿಶೀಲಿಸಿ, ನಿರ್ಧರಿಸುವ ಚಿಂತನೆಯನ್ನು ಅಳವಡಿಸಿಕೊಂಡು ಆರ್ಥಿಕ ಸಾಕ್ಷರತೆಯನ್ನು ಬೆಳೆಸಿಕೊಳ್ಳಬೇಕಾಗಿದೆ. ಕೇವಲ ಸಾಕ್ಷರತೆಯೊಂದೇ ಸಾಲದು, ಜೊತೆಗೆ ಆರ್ಥಿಕ ಸಾಕ್ಷರತೆ ಬೆಳೆಸಿಕೊಂಡಲ್ಲಿ ಜೀವನವು ಸುಖಕರವಾಗಿಸಲು ಸಾಧ್ಯ.

    ಷೇರುಪೇಟೆಯಲ್ಲಿ ಪ್ರದರ್ಶಿತವಾಗುತ್ತಿರುವ ಅಸಹಜ ನಡೆ ಬಹಳಷ್ಟು ಹೂಡಿಕೆದಾರರನ್ನು ದೂರ ತಳ್ಳಿರಬಹುದು. ಹೆಚ್ಚಿನವರು ಸುರಕ್ಷತಾ ಕಾರಣಕ್ಕಾಗಿ ಬ್ಯಾಂಕ್ ಡಿಪಾಸಿಟ್ ಗಳನ್ನು ಆಶ್ರಯಿಸಿರಬಹುದು. ಬ್ಯಾಂಕ್ ಗಳು ಸಹ ಸಂಪನ್ಮೂಲ ಕೊರತೆಯಿಂದ ಬಳಲುತ್ತಿವೆ. ಕಾರ್ಪೊರೇಟ್ ವಲಯವು ಸಹ ಸಂಪನ್ಮೂಲ ಕೊರತೆಯಿಂದ ಹೆಚ್ಚಿನ ಕಂಪನಿಗಳು ವಿವಿಧ ರೀತಿಯ ಯೋಜನೆಗಳಿಂದ, ವಿವಿಧ ಮೂಲಗಳಿಂದ ಹಣ ಸಂಗ್ರಹಣಾ ಕಾರ್ಯವನ್ನು ಚುರುಕುಗೊಳಿಸಿವೆ. ಈ ಮಧ್ಯೆ ಬ್ಯಾಂಕ್‌ಬಡ್ಡಿದರಗಳು ಕುಸಿಯುತ್ತಿರುವುದು, ಬ್ಯಾಂಕ್‌ಗಳಿಂದ ಸಾಲ ಪಡೆಯುವವರ ಸಂಖ್ಯೆ ಕ್ಷೀಣಿತವಾಗುತ್ತಿದ್ದು ಬೇಡಿಕೆ ಕಡಿಮೆಯಾಗುತ್ತಿದೆ. ಉದ್ಯಮಗಳು ಹೆಚ್ಚಿನ ಸಮಯ ಸ್ಥಬ್ಧವಾಗಿದ್ದ ಕಾರಣ ಸಾಲ ಮರುಪಾವತಿಗೂ ತೊಂದರೆಯಾಗಿದೆ. ಹೆಚ್ಚಿನ ತಾಂತ್ರಿಕತೆ ಆಧಾರಿತ ಉದ್ಯಮಗಳು ʼವರ್ಕ್‌ಫ್ರಂ ಹೋಂʼ ಅಳವಡಿಸಿಕೊಂಡಿರುವುದರ ಜೊತೆಗೆ ಷೇರುಪೇಟೆಯೂ ಚಟುವಟಿಕೆಯಲ್ಲಿರುವುದು ಬಹಳಷ್ಟು ಹೊಸ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ಇದರ ಹಿಂದೆ ಷೇರುಪೇಟೆಯಲ್ಲಿ ಷೇರಿನ ಬೆಲೆಗಳು ಸತತವಾದ ಏರಿಕೆ ಪಡೆಯುತ್ತಿರುವುದು, ದಿನೇ ದಿನೇ ಷೇರಿನ ಬೆಲೆಗಳು ವಾರ್ಷಿಕ ಗರಿಷ್ಟದ ಸುದ್ಧಿಯೂ ಸಹ ಹೊಸ ಹೂಡಿಕೆದಾರರನ್ನು ಪ್ರವೇಶಿಸಲು ಪ್ರೇರೇಪಿಸುತ್ತದೆ.

    ಸಾಮಾನ್ಯವಾಗಿ ಸುರಕ್ಷಿತ ಹೂಡಿಕೆ ಎಂದರೆ ಬ್ಯಾಂಕ್ ಡಿಪಾಸಿಟ್ ಗಳು ಎಂಬ ಕಲ್ಪನೆ ಎಲ್ಲರಲ್ಲೂ ಬೇರೂರಿದೆ. ಆದರೆ ಬ್ಯಾಂಕ್ ಗಳಲ್ಲಿ ಕೇವಲ ರೂ.ಐದು ಲಕ್ಷದವರೆಗೂ ಮಾತ್ರ ವಿಮೆಯ ಸುರಕ್ಷತೆ ಇರುತ್ತದೆ. ಹೆಚ್ಚಿನದಕ್ಕೆ ಯಾವುದೇ ರೀತಿಯ ಗ್ಯಾರಂಟಿ ಇರುವುದಿಲ್ಲ. ಆದರೂ ನಾವು ಸರತಿಯಲ್ಲಿ ಬ್ಯಾಂಕ್ ಗಳಲ್ಲಿ ಠೇವಣಿ ಇಡುತ್ತೇವೆ. ಇದಕ್ಕೆ ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯ ಮೇಲಿರುವ ನಂಬಿಕೆ ಕಾರಣವಾಗಿದೆ. ಕೇಂದ್ರ ಸರ್ಕಾರವು ಸಹ ತನ್ನ ವಿವಿಧ ಯೋಜನೆಗಳಿಗೆ ಸಂಪನ್ಮೂಲ ಸಂಗ್ರಹಣೆಯ ಯೋಜನೆಗಳನ್ನು ರೂಪಿಸಿಕೊಳ್ಳುತ್ತಿದೆ. ಅಲ್ಲದೆ ಬಂಡವಾಳ ಹಿಂತೆಗೆತದ ನೆಪದಲ್ಲಿ ಸಾರ್ವಜನಿಕ ವಲಯದ ಕಂಪೆನಿಗಳಲ್ಲಿರುವ ಮೀಸಲು ನಿಧಿಯ ಮೇಲೆ ಗಮನಹರಿಸಿ, ಆ ನಿಧಿಯನ್ನು ಕಂಪನಿಗಳ ವಿಲೀನ, ಸ್ವಾಧೀನ, ಭಾಗಿತ್ವ ಖರೀದಿ ಮುಂತಾದವುಗಳಿಗೆ ವಿನಿಯೋಗಿಸುವ ಮೂಲಕ ತನ್ನ ಗುರಿಯನ್ನು ತಲುಪಲು ಪ್ರಯತ್ನಿಸುತ್ತಿದೆ. ಹೀಗಿರುವಾಗ ನಾವು, ಸಣ್ಣ ಹೂಡಿಕೆದಾರರು ನಮ್ಮಲ್ಲಿರುವ ಸಮನ್ಮೂಲವನ್ನು ಕರಗಿಸಿಕೊಳ್ಳದೆ, ಸಾಧ್ಯವಾದಷ್ಟು ಸುರಕ್ಷತೆಯಿಂದ ಉಳಿಸಿ ಬೆಳೆಸುವ ಮೂಲಕ ಆರ್ಥಿಕ ಸಾಕ್ಷರತೆಯನ್ನು ಗಳಿಸಬೇಕಾಗಿದೆ. ಬ್ಯಾಂಕ್ ಗಳು ತಮ್ಮ ಠೇವಣಿದಾರರಿಗೆ ಸುಮಾರು ಶೇ 5ರಿಂದ ಶೇ 7 ರವರೆಗೂ ವಾರ್ಷಿಕ ಬಡ್ಡಿ ನೀಡುತ್ತವೆ. ಇದೇ ಬ್ಯಾಂಕ್ ಗಳಲ್ಲಿ ಹಲವಾರು ಬ್ಯಾಂಕ್ ಗಳು ತಮ್ಮ ಬೆಸಲ್ 3 ರ ನಿಯಮಾನುಸಾರ ಅಗತ್ಯಕ್ಕೆ ತಕ್ಕಂತೆ ಹೆಚ್ಚಿನ ಬಡ್ಡಿ ನೀಡುವ ಸಾಲಪತ್ರಗಳನ್ನು ವಿತರಿಸಿವೆ, ವಿತರಿಸುತ್ತಿವೆ.

    ʼಸೆಕ್ಯೂರ್ಡ್‌ʼ ಮತ್ತು ʼ ಹೈಲಿ ರೇಟೆಡ್‌ʼ ಮೋಹಕ ಪದಗಳಿಂದ ದೂರವಿರಿ:

    ಹೆಚ್ಚಿನ ಕಾರ್ಪೊರೇಟ್‌ಗಳು ಸಂಪನ್ಮೂಲ ಸಂಗ್ರಹಣೆಯಲ್ಲಿ ತೊಡಗಿಸಿಕೊಂಡಿವೆ. ಇವುಗಳಲ್ಲಿ ಕಾರ್ಪೊರೇಟ್‌ಡಿಪಾಜಿಟ್‌, ಎನ್‌ಸಿ ಡಿ ಗಳನ್ನು ಸಹ ತೇಲಿಬಿಡುತ್ತವೆ. ಅವುಗಳಲ್ಲಿ ಪ್ರಯೋಗಿಸುವ ʼಸೆಕ್ಯೂರ್ಡ್‌ʼ ಎಂಬ ಪದಕ್ಕೆ ಹೆಚ್ಚು ಒತ್ತು ನೀಡುವ ಅಗತ್ಯವಿಲ್ಲ. ನಮ್ಮಲ್ಲಿ ʼಸೆಕ್ಯೂರ್ಡ್‌ʼ ಎಂಬ ಪದಕ್ಕೆ ಹೆಚ್ಚು ಮಹತ್ವ ನೀಡುವ ಗುಣ ಬೆಳೆದಿದೆ. ಕಾರ್ಪರೇಟ್‌ವಲಯದ ಯೋಜನೆಗಳು ʼಸೆಕ್ಯೂರ್ಡ್‌ʼ ಆಗಿರಬೇಕಾದಲ್ಲಿ ಕಂಪನಿಗಳು ಅಂತರ್ಗತವಾಗಿ ಕಂಪನಿಗಳು ಸುಭದ್ರವಾಗಿರಬೇಕು. ಮತ್ತು ಈ ಕಂಪನಿಗಳು ಇಂದು ಸುಭದ್ರವಾಗಿದ್ದರೂ ಮುಂದೆ ಅವು ಕಾರಣಾಂತರದಿಂದ ದುರ್ಬಲವಾಗಿ ಹೂಡಿಕೆಗೆ ಕುತ್ತಾಗಬಹುದು. ಈ ರೀತಿಯ ಬದಲಾವಣೆಗಳ ವೇಗ ಹೇಗಿರಬಹುದೆಂಬುದಕ್ಕೆ 2018 ರ ಸೆಪ್ಟೆಂಬರ್‌ತಿಂಗಳಲ್ಲಿ AAA ರೇಟಿಂಗ್‌ಪಡೆದಿದ್ದ ಐ ಎಲ್‌ಎಫ್‌ಎಸ್‌ಸಂಸ್ಥೆಯು ನಂತರ ತನ್ನ ಠೇವಣಿದಾರರಿಗೆ ಬಡ್ಡಿ ನೀಡಲು ಎಡವಿದಾಗ ಆ ಕಂಪನಿಯನ್ನು ʼಜಂಕ್‌ʼ ರೇಟಿಂಗ್‌ನೀಡಿವೆ ರೇಟಿಂಗ್‌ಕಂಪನಿಗಳು. ಹೀಗೆ ಬದಲಾದ ರೇಟಿಂಗ್‌ಕಾರಣ ಠೇವಣಿಗಳನ್ನು ಹಿಂಪಡೆಯಲಾಗದು. ಆದ್ದರಿಂದ ʼಸೆಕ್ಯೂರ್ಡ್‌ʼ ʼ ಹೈಲಿ ರೇಟೆಡ್‌ʼ ಎಂಬ ಅಲಂಕಾರಿಕ ಪದಗಳಿಗೆ ಹೆಚ್ಚು ಗಮನದ ಅಗತ್ಯವಿಲ್ಲ.

    ಬ್ಯಾಂಕ್‌ ಠೇವಣಿಗಳಿಗೆ ಪರ್ಯಾಯ ಹೂಡಿಕೆ:

    2018 ರ ಮೇ ತಿಂಗಳಲ್ಲಿ ದಿವಾನ್ ಹೌಸಿಂಗ್ ಫೈನಾನ್ಸ್ ಕಂಪನಿಯು ರೂ.1,000 ಮುಖಬೆಲೆಯ, ಶೇ.8.56 ರಿಂದ ಶೇ.9.1 ರವರೆಗಿನ ವಾರ್ಷಿಕ ಬಡ್ಡಿಯ ಸೆಕ್ಯೂರ್ಡ್ ನಾನ್ ಕನ್ವರ್ಟಬಲ್ ಡಿಬೆಂಚರ್ ಗಳನ್ನು ವಿತರಿಸಿತು. ಆರಂಭದಲ್ಲಿ ಈ ಬಾಂಡ್ ಗಳು ಆಕರ್ಷಕ ಬೆಲೆಯಲ್ಲಿ ವಹಿವಾಟಾಗುತ್ತಿದ್ದವು. ಆದರೆ ಸೆಪ್ಟೆಂಬರ್ ತಿಂಗಳಲ್ಲಿ ಹೊರಬಿದ್ದ ಎನ್ ಬಿ ಎಫ್ ಸಿ ಕಂಪನಿಗಳ ಗೊಂದಲದ ಪ್ರಭಾವದಿಂದ ಒಂದೇ ದಿನ ಷೇರಿನ ಬೆಲೆ ರೂ.615 ರ ಸಮೀಪದಿಂದ ರೂ.246 ರವರೆಗೂ ಕುಸಿದ ಕಾರಣದಿಂದ ಈ ಬಾಂಡುಗಳ ಬೆಲೆ ಹೆಚ್ಚು ಒತ್ತಡವನ್ನೆದುರಿಸಿ. ಸಧ್ಯ ರೂ.1,000 ಮುಖಬೆಲೆಯ ಸೆಕ್ಯೂರ್ಡ್ ಎನ್ ಸಿ ಡಿ ಗಳು ರೂ.250 ರಿಂದ 300 ರ ಸಮೀಪ ವಹಿವಾಟಾಗುತ್ತಿವೆ. ಅಂದರೆ ಸುಮಾರು ಒಂದೆರಡು ವರ್ಷದಲ್ಲಿ ಸೆಕ್ಯೂರ್ಡ್ ಎನ್ ಸಿ ಡಿ ಗಳಲ್ಲಿ ಶೇ.65 ಕ್ಕೂ ಹೆಚ್ಚು ಬಂಡವಾಳ ಕರಗಿಹೋಗಿದೆ. ಖಾಸಗಿ ಕಂಪನಿಗಳಾದ ಶ್ರೀರಾಮ್ ಟ್ರಾನ್ಸ್ ಪೋರ್ಟ್ ಫೈನಾನ್ಸ್, ಈ ಸಿ ಎಲ್ ಫೈನಾನ್ಸ್, ಮನಪುರಂ ಫೈನಾನ್ಸ್, ಶ್ರಯ್ ಇನ್ಫ್ರಾ, ರಿಲಯನ್ಸ್ ಕ್ಯಾಪಿಟಲ್, ಇಂಡಿಯಾ ಬುಲ್‌ ಹೌಸಿಂಗ್ ಫೈನಾನ್ಸ್, ಮುಂತಾದವುಗಳ ಬಾಂಡ್ ಗಳು ಮುಖಬೆಲೆಗಿಂತಲೂ ಕಡಿಮೆ ಬೆಲೆಗೆ ವಹಿವಾಟಾಗುತ್ತಿವೆ. ಕೆಲವು ಕಂಪನಿಗಳು ಬಡ್ಡಿ ಹಣ ನೀಡದೆ ತೊಂದರೆಗೊಳಪಟ್ಟಿವೆ. ಬ್ಯಾಂಕ್‌ ಬಡ್ಡಿದರ ಕುಸಿತದ ಈ ಸಂದರ್ಭದಲ್ಲಿ ಕಂಪನಿ ಡಿಪಾಜಿಟ್‌ ಗಳು ಘೋಷಿಸುವ ಬಡ್ಡಿದರಗಳಿಗೆ ಪ್ರೇರೇಪಿತರಾಗದೆ ವಾಸ್ತವ ಅಂಶಗಳನ್ನರಿತು ನಿರ್ಧರಿಸಿರಿ.

    ಬ್ಯಾಂಕ್‌ ಎನ್‌ ಸಿ ಡಿ ಮತ್ತು ಪರ್ಪೆಚುಯಲ್‌ ಬಾಂಡ್:

    ಈಚಿನ ವರ್ಷಗಳಲ್ಲಿ ಕರ್ಣಾಟಕ ಬ್ಯಾಂಕ್ ಶೇ 12ರಂತೆ ಬಡ್ಡಿ ನೀಡುವ ಎನ್ ಸಿಡಿಗಳನ್ನು, ಕರೂರ್‌ ವೈಶ್ಯ ಬ್ಯಾಂಕ್‌ 11.95% ಬಡ್ಡಿ ನೀಡುವ ಬಾಂಡ್‌, ಸೌತ್‌ ಇಂಡಿಯನ್‌ ಬ್ಯಾಂಕ್‌ ಶೇ.11.75 ಮತ್ತು 13.75 ಬಡ್ಡಿದರದ ಬಾಂಡ್‌ ಗಳು, ಇಂಡಸ್‌ ಇಂಡ್‌ ಬ್ಯಾಂಕ್‌ ನ ಶೇ.9.50 ದರದ ಬಾಂಡ್‌ ಗಳು, ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಶೇ 11.7 ಬಡ್ಡಿ ನೀಡುವ ಟೈರ್ 2 ಬಾಂಡ್ ಗಳನ್ನು ವಿತರಿಸಿವೆ. ಈ ರೀತಿಯ ಬ್ಯಾಂಕ್ ಬಾಂಡ್ ಗಳು ಪೇಟೆಯಲ್ಲಿ ಹಲವು ಬಾರಿ ಸ್ವಲ್ಪ ಪ್ರೀಮಿಯಂನಲ್ಲಿ ದೊರೆಯುತ್ತವೆ. ಆದಾಯ ತೆರಿಗೆಯನ್ನು ಪಾವತಿಸುವವರು ಹೆಚ್ಚಿನ ಸ್ಲಾಬ್ ನಲ್ಲಿದ್ದರೆ ಅವರು ತೆರಿಗೆ ಮುಕ್ತ ಬಡ್ಡಿ ನೀಡುವ, ಅಂದರೆ ಪವರ್‌ ಫೈನಾನ್ಸ್‌, ಆರ್‌ ಇ ಸಿ, ಹುಡ್ಕೋ, ಐಆರ್‌ ಎಫ್‌ ಸಿ, ಮುಂತಾದ ಉತ್ತಮ ಕಂಪನಿಗಳ ಬಾಂಡ್ ಗಳನ್ನೂ ಖರೀದಿಸಲು ಪೇಟೆ ಅವಕಾಶ ಮಾಡಿಕೊಟ್ಟಿದೆ. ಬ್ಯಾಂಕ್ ಗಳಲ್ಲಿ ಠೇವಣಿ ಇಟ್ಟು ಕಡಿಮೆ ಬಡ್ಡಿ ಪಡೆಯುವುದಕ್ಕಿಂತ ಅದೇ ಬ್ಯಾಂಕ್ ಗಳು ವಿತರಿಸಿರುವ ಸಾಲಪತ್ರಗಳಲ್ಲಿ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಬಡ್ಡಿ ಪಡೆಯಬಹುದು. ತುಲಾನಾತ್ಮಕವಾಗಿ ಅಡಕವಾಗಿರುವ ವಿವಿಧ ಅಂಶಗಳನ್ನು ಪರಿಗಣಿಸಿ, ನಿರ್ಧರಿಸುವ ಆರ್ಥಿಕ ಸಾಕ್ಷರತಾ ಮಟ್ಟ ಬೆಳೆಸಿಕೊಳ್ಳುವುದು ಇಂದಿನ ಅವಶ್ಯವಾಗಿದೆ. ಕೆಲವು ಬ್ಯಾಂಕ್‌ಗಳು ಧೀರ್ಘಕಾಲೀನ ಹೂಡಿಕೆಯಾಗಿ ʼ ಪರ್ಪೆಚುಯಲ್‌ಬಾಂಡ್‌ʼ ಗಳನ್ನು ತೇಲಿಬಿಟ್ಟಿವೆ. ಸಾಮಾನ್ಯವಾಗಿ ಬ್ಯಾಂಕ್‌ಯೋಜನೆಗಳಲ್ಲಿ ನಮ್ಮ ಹೂಡಿಕೆಯ ಹಣವು ಸುರಕ್ಷಿತ ಎಂಬ ನಿರ್ಧಾರ ಎಲ್ಲರಲ್ಲಿದೆ.

    ಇದಕ್ಕೆ ಅಪವಾದ ಎಂಬಂತೆ ಇತ್ತೀಚೆಗೆ ಯೆಸ್‌ಬ್ಯಾಂಕ್‌ಹಗರಣಗಳು ಬೆಳಕಿಗೆ ಬಂದು, ಬ್ಯಾಂಕ್‌ಆರ್ಥಿಕ ಒತ್ತಡಕ್ಕೊಳಗಾದ ಸಂದರ್ಭದಲ್ಲಿ ನಿಯಂತ್ರಕರು ಈ ಬ್ಯಾಂಕ್‌ವಿತರಿಸಿದ ʼಟೈರ್‌1ʼ ಬಾಂಡ್‌ಗಳನ್ನು ಸಂಪೂರ್ಣವಾಗಿ ಶೂನ್ಯವಾಗಿಸಿದೆ. ಅಷ್ಟೆ ಅಲ್ಲ, ಟೈರ್‌ 2 ಬಾಂಡ್‌ ಗಳ ಮೇಲೆ ಜೂನ್‌ ನಲ್ಲಿ ನೀಡಬೇಕಾದ ಶೇ.10.25 ರ ಬಡ್ಡಿ ಹಣವನ್ನು ಸಹ ವಿತರಿಸಲಿಲ್ಲ. ಇದು ಬ್ಯಾಂಕ್‌ಗಳ ಮೇಲಿನ ನಂಬಿಕೆಯನ್ನು ಸ್ವಲ್ಪ ಮಟ್ಟಿಗೆ ಕರಗಿಸಿದೆ.

    ಪ್ರಮುಖ ಬ್ಯಾಂಕ್‌ಗಳಾದ ಎಸ್‌ಬಿ ಐ, ಐಸಿಐಸಿಐ ಬ್ಯಾಂಕ್‌, ಬ್ಯಾಂಕ್‌ಆಫ್‌ಬರೋಡ, ಆಕ್ಸಿಸ್‌ಬ್ಯಾಂಕ್‌, ಕೆನರಾ ಬ್ಯಾಂಕ್‌, ಪಿ ಎನ್‌ಬಿ ಅಲ್ಲದೆ 11.8% ಬಡ್ಡಿ ನೀಡುವ ಟಾಟಾ ಸ್ಟೀಲ್‌ಬಾಂಡ್‌ಗಳು ಸ್ಟಾಕ್‌ಎಕ್ಸ್‌ಚೇಂಜ್‌ಗಳಲ್ಲಿ ವಹಿವಾಟಾಗುತ್ತವೆ. ಇವುಗಳ ವಿವರಗಳನ್ನು ಪಡೆದುಕೊಂಡು ಅವರವರ ಅನೂಕೂಲಕ್ಕೆ ತಕ್ಕಂತೆ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳಬಹುದು. ಟಾಟಾ ಸ್ಟೀಲ್‌ಬಾಂಡ್‌ಗಳು 2011 ರಿಂದಲೂ ಜಾರಿಯಲ್ಲಿರುವ ಕಾರಣ ಇಷ್ಟು ಹೆಚ್ಚಿನ ಬಡ್ಡಿ ನೀಡುವ ಯೋಜನೆಯಾಗಿದೆ. ಅಲ್ಲದೆ ಮುಂದಿನ ವರ್ಷದ ಮಾರ್ಚ್‌ನಿಂದ ಕಂಪನಿಯಿಂದಲೇ ಪ್ರತಿ ವರ್ಷದ ಮಾರ್ಚ್‌ನಲ್ಲಿ ʼಬೈ ಬ್ಯಾಕ್‌ʼ ಗೆ ಅವಕಾಶವಿರುತ್ತದೆ. ಪೇಟೆಯಲ್ಲಿ ವಹಿವಾಟಾಗದಿದ್ದಲ್ಲಿ ಕಂಪನಿಗೆ ಹಿಂದಿರುಗಿಸಬಹುದು.

    ಸಾಲಪತ್ರ ಪೇಟೆಯಲ್ಲಿ ಎರಡು ರೀತಿ ವ್ಯವಹರಿಸಬಹುದು. ಒಂದು ನೇರವಾಗಿ ಷೇರುಪೇಟೆಯಲ್ಲಿ ಮತ್ತೊಂದು ಷೇರುಪೇಟೆ ಹೊರಗೆ ಡೆಟ್‌ಮಾರ್ಕೆಟ್‌ನ ಡೀಲರ್‌ಗಳ ಮೂಲಕ. ಷೇರುಪೇಟೆಯಲ್ಲಿ ವ್ಯವಹರಿಸುವುದರಿಂದ ಹೂಡಿಕೆದಾರರಿಗೆ ಖರೀದಿಸಿದ ದರ ಮತ್ತು ಅದಕ್ಕೆ ತಗಲಿದ ಬ್ರೋಕರೇಜ್‌, ತೆರಿಗೆಯಂತಹವುಗಳು ಮಾತ್ರ ಸೇರುತ್ತದೆ. ಆದರೆ ಹೊರಗಿನ ಡೆಟ್‌ಮಾರ್ಕೆಟ್‌ಡೀಲರ್‌ಗಳ ಮೂಲಕ ಖರೀದಿಸಿದಲ್ಲಿ, ಖರೀದಿದಾರರು, ಆ ಕಂಪನಿ ಹಿಂದೆ ಬಡ್ಡಿ ವಿತರಿಸಿದ ದಿನದಿಂದ ಖರೀದಿಸುವ ದಿನದವರೆಗೂ ಸಂಗ್ರಹವಾದ ಬಡ್ಡಿ ಮೊತ್ತವನ್ನು ತೆರಬೇಕಾಗುವುದು. ಅದ್ದರಿಂದ ಖರೀದಿಸುವ ಮುನ್ನ ಈ ಅಂಶಗಳನ್ನು ಪರಿಗಣಿಸಿ ಯಾವುದು ಅನುಕೂಲಕರ ಎಂದು ನಿರ್ಧರಿಸಬೇಕು.

    ಇತ್ತೀಚಿನ ಬೆಳವಣಿಗೆಗಳಲ್ಲಿ ಪೇಟೆಯ ನಿಯಂತ್ರಕ ಸಂಸ್ಥೆ ʼ ಸೆಬಿʼ ಸಾಲಪತ್ರ ಪೇಟೆಯನ್ನು ಚುರುಕುಗೊಳಿಸಿ ರೀಟೇಲ್‌ ಹೂಡಿಕೆದಾರರು ಸಹ ಸಾಲಪತ್ರ ಪೇಟೆಯಲ್ಲಿಯೂ ಚಟುವಟಿಕೆ ನಡೆಸಲು ಹಾದಿ ಸುಗಮಗೊಳಿಸುವತ್ತ ಗಮನಹರಿಸಿರುವುದು ಬ್ಯಾಂಕ್‌ ಬಡ್ಡಿಯ ಅವಲಂಬಿತರಾದವರಿಗೂ, ನಿವೃತ್ತರಿಗೂ ಒಂದು ಉತ್ತಮ ಬೆಳವಣಿಗೆಯಾಗಿದೆ.

    ನೆನಪಿರಲಿ: ಸುರಕ್ಷತೆಯು ಹೂಡಿಕೆಯ ಸೂತ್ರವಾದಲ್ಲಿ, ಗಳಿಕೆಯು ಸುಸೂತ್ರ

    Photo by Micheile Henderson on Unsplash

    ಕಷ್ಟಪಟ್ಟು ಪದವಿ ಪಡೆದರೂ ಇಷ್ಟಪಟ್ಟು ಆಡಳಿತ ನಡೆಸಲು ಅಡ್ಡಿ

    ಅಶೋಕ ಹೆಗಡೆ
    ಕರ್ನಾಟಕದ ರಾಜಕಾರಣದಲ್ಲಿ ‘ಛಲದಂಕ ಮಲ್ಲ’ ಯಾರಾದರೂ ಇದ್ದರೆ ಅದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತ್ರ. ಹಾಗೆಯೇ ‘ದುರಂತ ನಾಯಕ’ ಎಂದು ಯಾರನ್ನಾದರೂ ಹೇಳವುದಿದ್ದರೆ ಅದೂ ಸಹ ಯಡಿಯೂರಪ್ಪನವರೇ. ನಾಲ್ಕು ಸಲ ಮುಖ್ಯಮಂತ್ರಿಯಾದರೂ ಒಮ್ಮೆಯೂ ಪೂರ್ಣಾವಧಿ ಪೂರೈಸುವ ಅದೃಷ್ಟವಿಲ್ಲ, ಒಮ್ಮೆಯೂ ನಿರಾತಂಕವಾಗಿ ಆಡಳಿತ ನಡೆಸುವ ಸೌಭಾಗ್ಯವಿಲ್ಲ. ಈಗಲೂ ಅಷ್ಟೇ, ಮುಖ್ಯಮಂತ್ರಿಯಾಗಿ ಭಾನುವಾರ (ಜುಲೈ ೨೬) ವರ್ಷ ತುಂಬಿದರೂ ಅದನ್ನು ಸಂಭ್ರಮಿಸಲು ಪರಿಸ್ಥಿತಿ ಇಲ್ಲ.

    ಮೊದಲ ಸಲ ಮುಖ್ಯಮಂತ್ರಿಯಾಗಿದ್ದು ಬೆರಳೆಣಿಕೆಯ ದಿನಗಳ ಅವಧಿಗೆ. ೨೦೧೮ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ‘ವಚನ ಭ್ರಷ್ಟತೆ’ಯನ್ನೇ ಜನರ ಮುಂದಿಟ್ಟು ಅನುಕಂಪ ಗಳಿಸುವಲ್ಲಿ ಯಶಸ್ವಿಯಾದರೂ ಅಧಿಕಾರಕ್ಕೆ ಏರುವಷ್ಟು ಬಹುಮತ ಸಿಗಲಿಲ್ಲ. ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸರಳ ಬಹುಮತಕ್ಕೆ ನಾಲ್ಕು ಸ್ಥಾನಗಳ ಅಗತ್ಯವಿತ್ತು. ಆರು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿ ಸರಕಾರ ರಚಿಸಿದರೂ, ಯಾವುದೇ ಕ್ಷಣದಲ್ಲಿ ಪಕ್ಷೇತರರು ಕೈ ಕೊಡಬಹುದು ಎಂಬ ಆತಂಕದಿಂದ ‘ಆಪರೇಷನ್ ಕಮಲ’ ನಡೆಸಿದರು.

    ಅದೇ ‘ಆಪರೇಷನ್ ಕಮಲ’ವೇ ಅವರ ನೆಮ್ಮದಿ ಕಸಿದುಕೊಂಡಿದ್ದು ಸುಳ್ಳಲ್ಲ. ಬಿಜೆಪಿಯ ಆಂತರಿಕ ತಿಕ್ಕಾಟದಿಂದ ಮೂರೂವರೆ ವರ್ಷಕ್ಕೆ ರಾಜೀನಾಮೆ ನೀಡಬೇಕಾಯಿತು. ತಮ್ಮದೇ ಸ್ವತಂತ್ರ ಪಕ್ಷವನ್ನೂ ರಚಿಸಿ ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆದದ್ದೂ ಆಯಿತು.

    ೨೦೧೩ರ ಚುನಾವಣೆ ಸಂದರ್ಭದಲ್ಲಿ ಕೆಜೆಪಿ ರಚಿಸಿದಾಗ ಅವರ ಗುರಿ ತಾವು ಮತ್ತೆ ಅಧಿಕಾರಕ್ಕೆ ಏರುವುದಾಗಿರಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯುವುದಾಗಿತ್ತು, ಯಡಿಯೂರಪ್ಪ ಇಲ್ಲದ ಬಿಜೆಪಿ ಕರ್ನಾಟಕದಲ್ಲಿ ಹೇಗಿರುತ್ತದೆ ಎಂಬುದನ್ನು ತೋರಿಸಿಕೊಡುವುದಾಗಿತ್ತು ಮತ್ತು ಅದರಲ್ಲಿ ಯಶಸ್ವಿಯೂ ಆದರು. ಮೂವರು ಮುಖ್ಯಮಂತ್ರಿಗಳೊಂದಿಗೆ ಐದು ವರ್ಷ ಆಡಳಿತ ನಡೆಸಿದ ನಡೆಸಿದ್ದ ಬಿಜೆಪಿ ಮತ್ತೆ ೫೦ಕ್ಕಿಂತ ಕಡಿಮೆ ಸ್ಥಾನ ಗಳಿಸಿ ನೆಲಕಚ್ಚಿತು. ಹೀಗೆ ತಮ್ಮ ‘ಸಾಮರ್ಥ್ಯ’ ತೋರಿಸಿದ ಯಡಿಯೂರಪ್ಪನವರನ್ನು ಬಿಜೆಪಿ ಪುನಃ ಪಕ್ಷಕ್ಕೆ ಸೇರಿಸಿಕೊಂಡು ಶಿವಮೊಗ್ಗದಿಂದ ಲೋಕಸಭೆಗೆ ಕಳುಹಿಸಿತು. ಅದರ ನಡುವೆಯೇ ಕಾನೂನು ಹೋರಾಟದಲ್ಲಿ ಜಯ ಗಳಿಸಿ ನಿರ್ದೋಷಿಯೂ ಆದರು.

    ಎರಡನೇ ಅಧ್ಯಾಯ: ಆದರೆ ರಾಷ್ಟ್ರ ರಾಜಕಾರಣದಲ್ಲಿ ಯಡಿಯೂರಪ್ಪನವರಿಗೆ ಯಾವತ್ತೂ ಆಸಕ್ತಿ ಇರಲಿಲ್ಲ. ಅವರ ಗಮನ ಇದ್ದುದೆಲ್ಲ ಕರ್ನಾಟಕದ ಮೇಲೆಯೇ. ಅದನ್ನು ಹಲವು ಸಲ ನರೇಂದ್ರ ಮೋದಿ-ಅಮಿತ್ ಶಾ ಬಳಿ ಹೇಳಿಕೊಂಡಿದ್ದರು. ಗುಮಾಸ್ತನಾಗಿ ರೈಸ್‌ಮಿಲ್ ಮ್ಯಾನೇಜರ್, ಹಾರ್ಡ್‌ವೇರ್ ಅಂಗಡಿ ಮಾಲೀಕನ ಸ್ಥಾನದವರೆಗೆ; ಪುರಸಭೆ ಸದಸ್ಯನಿಂದ ಮುಖ್ಯಮನಂತ್ರಿ ಹುದ್ದೆವರೆಗೆ ಏರಿದ್ದ ಅವರಿಗೆ ಈ ನೆಲದ ಇಂಚಿಂಚೂ ರಾಜಕಾರಣ ಗೊತ್ತು. ಜಾತಿ ಸಮೀಕರಣದಲ್ಲಿ ಯಡಿಯೂರಪ್ಪನವರ‍್ನು ಹೊರಗಿಟ್ಟು ಚುನಾವಣೆ ಎದುರಿಸುವುದು ಸುಲಭವಲ್ಲ ಎನ್ನುವುದು ಮೋದಿ-ಶಾ ಜೋಡಿಗೂ ಅರ್ಥವಾಗಲು ಹೆಚ್ಚುಕಾಲ ಬೇಕಾಗಲಿಲ್ಲ.

    ಹೀಗಾಗಿ ಮತ್ತೆ ಅವರಿಗೇ ರಾಜ್ಯಾಧ್ಯಕ್ಷ ಪದವಿ ನೀಡಿ, ಅವರ ನೇತೃತ್ವದಲ್ಲೇ ಚುನಾವಣೆ ಎಂದು ಘೋಷಿಸಿದರು. ಖುದ್ದು ಅಮಿತ್ ಶಾ ಅವರೇ ‘ಯಡಿಯೂರಪ್ಪ ಮುಂದಿನ ಮುಖ್ಯಮಂತ್ರಿ’ ಎಂದು ಘೋಷಿಸಿದರು. ಅವರಿಗೆ ಇಷ್ಟ ಇತ್ತೋ, ಇಲ್ಲವೋ, ಹಾಗೆ ಘೋಷಿಸಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದ್ದು ಯಡಿಯೂರಪ್ಪನವರ ಚಾಣಾಕ್ಷತೆ.

    ೨೦೧೮ರ ವಿಧಾನಸಭೆಯಲ್ಲಿ ಚುನಾವಣೆಯಲ್ಲಿ ಪುನಃ ಬಿಜೆಪಿ ಅತಿದೊಡ್ಡ ಪಕ್ಷವಾದರೂ ಬಹುಮತ ಸಿಗಲಿಲ್ಲ. ಯಡಿಯೂರಪ್ಪ ಎರಡು ದಿನಗಳ ಅವಧಿಗೆ ಸಿಎಂ ಹುದ್ದೆ ಅಲಂಕರಿಸಿದ್ದಷ್ಟೇ ಬಂತು. ಕಾಂಗ್ರೆಸ್ ರಾಷ್ಟ್ರೀಯ ನಾಯಕರ ಮಿಂಚಿನ ನಡೆಯಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಬಂದಿತು. ಈ ಮೈತ್ರಿ ಹೆಚ್ಚುಕಾಲ ಬಾಳುವುದಿಲ್ಲ ಎನ್ನುವುದು ಯಡಿಯೂರಪ್ಪನವರಿಗೆ ಸ್ಪಷ್ಟವಾಗಿ ಗೊತ್ತಿತ್ತು. ಹೀಗಾಗಿ ಮೈತ್ರಿಕೂಟದ ಅತೃಪ್ತ ಶಾಸಕರ ಬಗ್ಗೆ ಕಣ್ಣಿಟ್ಟಿದ್ದರು. ಆರೇಳು ಸಲ ‘ಆಪರೇಷನ್’ಗೆ ಪ್ರಯತ್ನಿಸಿ, ಕೊನೆಗೂ ಯಶಸ್ವಿಯಾಗಿ ಬರೋಬ್ಬರಿ ೧೭ ಶಾಸಕರ ರಾಜೀನಾಮೆ ಕೊಡಿಸಿ ನಾಲ್ಕನೇ ಅವಧಿಗೆ ಮುಖ್ಯಮಂತ್ರಿಯಾದರು. ಉಪ ಚುನಾವಣೆಯಲ್ಲಿ ಶಾಸಕನ್ನು ಗೆಲ್ಲಿಸಿಕೊಂಡು ಸ್ಪಷ್ಟಬಹುತದ ಸರಕಾರವನ್ನು ಮುನ್ನಡಸುತ್ತಿದ್ದಾರೆ. ಉಪ ಚುನಾವಣೆಯಲ್ಲಿ ಸೋತವರನ್ನು ವಿಧಾನ ಪರಿಷತ್ ಸದಸ್ಯರಾಗಿ ನೇಮಕ ಮಾಡುವ ಮೂಲಕ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ.

    ಅಡಿಗಡಿಗೂ ಹೆಜ್ಜೆ: ಜುಲೈ ೨೬, ೨೦೧೯ರಂದು ಯಡಿಯೂರಪ್ಪ ನಾಲ್ಕನೇ ಅವಧಿಗೆ ಮುಖ್ಯಮಂತ್ರಿಯಾದರು ಖರೆ. ಆದರೆ ಒಂದು ಹೆಜ್ಜೆಯನ್ನೂ ಸಮಾಧಾನದಿಂದ ಇಡಲು ಅವರಿಗೆ ಸಾಧ್ಯವಾಗಿಲ್ಲ ಎನ್ನುವುದೂ ಸತ್ಯ. ಪೂರ್ಣ ಪ್ರಮಾಣದ ಸಂಪುಟ ರಚನೆಗೆ ಅವಕಾಶ ನೀಡದೇ ಶುರುವಿನಲ್ಲೇ ವರಿಷ್ಠರು ಕೈ ಕಟ್ಟಿ ಹಾಕುವ ಪ್ರಯುತ್ನ ಮಾಡಿದರು. ಮಿಗಿಲಾಗಿ ಈ ಬಾರಿ ಯಡಿಯೂರಪ್ಪ ಸರಕಾರ ರಚಿಸುವುದು ಮೋದಿ-ಶಾಗೆ ಇಷ್ಟವಿರಲಿಲ್ಲ. ಹಾಗಂತ ದೂರ ಇಡುವುದೂ ಸಾಧ್ಯವಿರಲಿಲ್ಲ. ಈ ಅಸಮಾಧಾನವನ್ನು ಅವರ ತೀರಿಸಿಕೊಂಡಿದ್ದು ಶಿವಮೊಗ್ಗದವರೇ ಆದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಮೂಲಕ.

    ಯಡಿಯೂರಪ್ಪನವರಿಗೂ, ಸಂತೋಷ್‌ಗೂ ಎಣ್ಣೆ-ಸೀಗೆಕಾಯಿ ಸಂಬಂಧ ಎನ್ನುವುದರ ಅರಿವಿದ್ದ ದಿಲ್ಲಿ ಜೋಡಿ ಅವರನ್ನೇ ಬಿಎಸ್‌ವೈ ವಿರುದ್ಧದ ಅಸ್ತ್ರವಾಗಿ ಬಳಸಿಕೊಂಡಿತು. ಅಷ್ಟು ಸಾಲದಂತೆ ಸಂತೋಷ್ ಅವರ ಪರಮಾಪ್ತ ನಳಿನ್‌ಕುಮರ್ ಕಟೀಲು ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿತು. ಮೂವರು ಉಪ ಮುಖ್ಯಮಂತ್ರಿಗಳ ಮೂಲಕ ಪರ್ಯಾಯ ನಾಯಕತ್ವದ ಸೂಚನೆಯನ್ನೂ ರವಾನಿಸಿತು.

    ಅದಕ್ಕಿಂತ ದೊಡ್ಡ ಸವಾಲು ಯಡಿಯೂರಪ್ಪನವರಿಗೆ ಎದುರಾದದ್ದು ಅಧಿಕಾರ ವಹಿಸಿಕೊಂಡ ತಕ್ಞಣ ಸುರಿದ ಭಾರಿ ಮಳೆ. ೨೦೦೮ರಲ್ಲಿ ಸಿಎಂ ಆದಾಗಲೂ ಅತಿವೃಷ್ಟಿ, ಪ್ರವಾಹದಿಂದ ರಾಜ್ಯ ಕಂಗೆಟ್ಟಿತ್ತು. ೨೦೧೯ರಲ್ಲಿಯೂ ಬರದ ಛಾಯೆಯಲ್ಲಿದ್ದ ರಾಜ್ಯದಲ್ಲಿ ಯಡಿಯೂರಪ್ಪ ಸಿಎಂ ಆಗುತ್ತಿದ್ದಂತೆ ಸಾಕು ಅನ್ನಿಸುವಷ್ಟು ಮಳೆ ಸುರಿಯಿತು. ಒಂದೆಡೆ ಪೂರ್ಣ ಪ್ರಮಾಣದ ಸಂಪುಟವಿಲ್ಲ, ತಮ್ಮದೇ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಬಿಡಿಗಾಸಿನ ನೆರವೂ ಇಲ್ಲ. ಖುದ್ದು ಗೃಹ ಸಚಿವ, ಹಣಕಾಸು ಸಚಿವರು ರಾಜ್ಯಕ್ಕೆ ಭೇಟಿ ನೀಡಿ ಹೋದರೂ ರಾಜ್ಯದ ಬಗ್ಗೆ ಕಿಂಚಿತ್ತೂ ಮಮಕಾರ ತೋರಲಿಲ್ಲ. ಪ್ರತಿಪಕ್ಷಗಳ ಟೀಕೆಗೂ ಇದು ಆಹಾರವಾಯಿತು. ಆದರೂ ಯಡಿಯೂರಪ್ಪ ಕುಗ್ಗಲಿಲ್ಲ, ಅಳುಕಲಿಲ್ಲ. ಏಕಾಂಗಿ ಯೋಧನಂತೆ ಮಡಿಕೇರಿಯಿಂದ ಕಲಬುರಗಿವರೆಗೆ ಸುತ್ತಾಡಿದರು,. ತಾವೇ ಖುದ್ದು ಪರಿಹಾರ ಕಾರ್ಯಗಳ ನಿಗಾವಹಿಸಿದರು. ಇಳಿವಯಸ್ಸಿನಲ್ಲಿಯೂ ಅವರ ಕ್ರಿಯಾಶೀಲತೆ ನೋಡಿ ರಾಜ್ಯಕ್ಕೆ ರಾಜ್ಯವೇ ಬೆರಗಾಯಿತು.

    ಅತಿವೃಷ್ಟಿ ಸಮಸ್ಯೆ ಮುಗಿಯಿತು ಎನ್ನುವಷ್ಟರಲ್ಲಿ ಸಂಪುಟ ರಚನೆ, ಅದರ ಬಳಿಕ ಖಾತೆ ಹಂಚಿಕೆ ಕಸರತ್ತಿನಲ್ಲಿ ಕೆಲದಿನಗಳು ಕಳೆದವು. ಎಲ್ಲವೂ ಒಂದು ಹಂತಕ್ಕೆ ಬಂತು ಎನ್ನುವಷ್ಟರಲ್ಲಿ ಕೊರೊನಾ ವಕ್ಕರಿಸಿದೆ. ಕೋವಿಒಡ್-೧೯ ಸೋಂಕು ನಿಯಂತ್ರಣದಲ್ಲೂ ಯಡಿಯೂರಪ್ಪನವರ ನಡೆ, ಪ್ರಯತ್ನ ಪ್ರತಿಪಕ್ಷಗಳ ಶ್ಲಾಘನೆಗೂ ಪಾತ್ರವಾಗಿದೆ. ಗಮನಿಸಬೇಕಾದ ಅಂಶವೆಂದರೆ ಅತಿವೃಷ್ಟಿ ಇರಲಿ, ಕೊರೊನಾ ಇರಲಿ, ಯಡಿಯೂರಪ್ಪನವರಿಗೆ ಸಂಪುಟದ ಹಳೆ ಸದಸ್ಯರಿಂದ ಅಷ್ಟಾಗಿ ಬೆಂಬಲ ಸಿಕ್ಕಿಲ್ಲ. ‘ಆಪರೇಷನ್’ಗೆ ಒಳಗಾಗಿ ಬಿಜೆಪಿಗೆ ಬಂದು ಸಚಿವರಾದವರು ಸಿಎಂ ಹೆಗೆಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದಾರೆ. ಹಳಬರು ವರಿಷ್ಠರಿಗೆ ನಿಷ್ಠರಾಗಿ ಯಡಿಯೂರಪ್ಪನರಿಂದ ಅಂತರ ಕಾಪಾಡಿಕೊಂಡರೆ, ಹೊಸಬರು ಕೊಟ್ಟ ಮಾತಿನಂತೆ ಮಂತ್ರಿ ಮಾಡಿದ ಯಡಿಯೂರಪ್ಪನವರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತಿದ್ದಾರೆ.

    ಬೊಕ್ಕಸವೂ ಖಾಲಿ: ರಾಜಕೀಯ ಅಡೆತಡೆಗಳು ಯಡಿಯೂರಪ್ಪನವರಿಗೆ ಹೊಸತೇನಲ್ಲ. ಅವರಿಗೆ ದೊಡ್ಡ ಸವಾಲು ಇರುವುದು ಹಣಕಾಸು ಖಾತೆ ನಿರ್ವಹಣೆಯಲ್ಲಿ. ಹಿಂದಿನ ಸರಕಾರಗಳ ಬೇಕಾಬಿಟ್ಟಿ ಯೋಜನೆಗಳಿಂದ ರಾಜ್ಯದ ಮೇಲೆ ಸಾಲದ ದೊಡ್ಡ ಹೊರೆ ಇದೆ. ವಿತ್ತೀಯ ಕೊರತೆ ಮಿತಿ ಕಾಪಾಡಿಕೊಂಡು, ಆರ್ಥಿಕ ಶಿಸ್ತು ಕಾಪಾಡಿಕೊಳ್ಳಬೇಕೆಂದರೆ ಹೊಸದಾಗಿ ಭಾರಿ ಪ್ರಮಾಣದ ಸಾಲ ಪಡೆಯುವಂತಿಲ್ಲ. ಕೇಂದ್ರ ಸರಕಾರವೂ ರಾಜ್ಯಕ್ಕೆ ಬರಬೇಕಾದ ಅನುದಾನ, ತೆರಿಗೆ ಪಾಲನ್ನು ಸಕಾಲದಲ್ಲಿ ಬಿಡುಗಡೆ ಮಾಡುತ್ತಿಲ್ಲ. ಬಜೆಟ್ ಮಂಡನೆ ವೇಳೆ ಹಣಕಾಸು ಖಾತೆ ಹೊಂದಿ ಮುಖ್ಯಮಂತ್ರಿಯೊಬ್ಬರು ತಮ್ಮದೇ ಪಕ್ಷ ಕೇಂದ್ರದಲ್ಲಿದ್ದರೂ, ‘ಕೇಂದ್ರದಿಂದ ನೆರವು ಸಿಗುತ್ತಿಲ್ಲ’ ಎಂದು ಸದನದಲ್ಲೇ ಹೇಳಿದ್ದು ಇದೇ ಮೊದಲು.

    ಇದೆಲ್ಲದರ ನಡುವೆಯೂ ಮುಖ್ಯಮಂತ್ರಿಯಾಗಿ ಒಂದು ವರ್ಷದ ಅವಧಿಯಲ್ಲಿ ಯಡಿಯೂರಪ್ಪನವರ ಕಾರ್ಯವೈಖರಿ ಬಗ್ಗೆ ಯಾರದ್ದೂ ಆಕ್ಷೇಪವಿಲ್ಲ. ಬಿಜೆಪಿಯಲ್ಲಿನ ಮುಖಂಡರೇ ಹೇಳುವಂತೆ ಯಡಿಯೂರಪ್ಪ ‘ಹಠವಾದಿ’. ಅಂದುಕೊಂಡಿದ್ದನ್ನು ಸಾಧಿಸುವವರೆಗೂ ವಿರಮಿಸುವುದು ಅವರಿಗೆ ಗೊತ್ತಿಲ್ಲ. ರಾಜ್ಯದ ಬಗ್ಗೆ ಅವರಿಗೆ ಸ್ಪಷ್ಟ ಕನಸುಗಳಿವೆ, ರೈತ ನಾಯಕನಾಗಿ ರೈತರಿಗೆ ಮತ್ತಷ್ಟು ನೆರವು ನೀಡಬೇಕೆಂಬ ಹಂಬಲವಿದೆ. ಜನಪರ ಯೋಜನೆಗಳನ್ನು ನೀಡಬೇಕೆಂಬ ಆಸೆಯಿದೆ. ಇನ್ನೂ ಎರಡೂವರೆ ವರ್ಷ ಅಧಿಕಾರವಿದೆ. ‘ಛಲದಂಕ ಮಲ್ಲ’ನ ಒಳಗಿರುವ ‘ಹಠವಾದಿ’ ಎದ್ದುಕುಳಿತಿದ್ದಾನೆ. ೭೭ರಲ್ಲಿರುವ ಯಡಿಯೂರಪ್ಪನವರಿಗೆ ಇದು ಕೊನೆಯ ಅವಕಾಶ. ಈ ಸಲವೂ ಯಡಿಯೂರಪ್ಪ ರಾಜಕಾರಣದ ‘ದುರಂತ ನಾಯಕ’ ಆಗದಿರಲಿ.

    ನಾಗರ ಪಂಚಮಿ ನಾಡಿಗೆ ದೊಡ್ಡದು

    ಶ್ರಾವಣ ಮಾಸದ ಜಿಟಿ,ಜಿಟಿ ಮಳೆ ನನ್ನ ಬಾಲ್ಯವನ್ನು ಎಳೆದು ತಂದು ಲವಲವಿಕೆ ಮೂಡಿಸುತ್ತದೆ.ಆಗ ತಾನೇ ಶಾಲೆಗಳು ಬೇಸಿಗೆಯ ರಜೆ ಕಳೆದು ಮುಂದಿನ ತರಗತಿಗಳ ಕೋಣೆಯೊಳಕ್ಕೆ ಎಂತಹುದೋ ಆಹ್ಲಾದಕರ ಮನಸ್ಸಿನಿಂದ ನಮ್ಮನ್ನು ಬರಮಾಡಿರುತ್ತಿದ್ದವು. ಹೊಸ ಪೆನ್ನು,ಇಂಕಿನ ವಾಸನೆ,ಹೊಸ ಪುಸ್ತಕಗಳ ವಾಸನೆ,ಲೇಖಕ್ ನೋಟ್ ಬುಕ್ಕಗಳ ವಾಸನೆ ,ಮೋಡ ತುಂಬಿದ ನವಿರಾದ ದಿನಗಳ ಸೊಬಗಿನಲ್ಲಿ ತರಗತಿಗಳಲ್ಲಿ ಕುಳಿತುಕೊಳ್ಳುವ ಸೊಬಗೇ ಈಗ ಮುದಕೊಡುತ್ತಿದೆ. ಹಾಗೆ ಸೇರಿದ ಹೊಸತರಗತಿಗಳಿಗೆ ಮೊದಲಾಗಿ ರಜೆ ಅಂತ ಬರ್ತಿದ್ದುದೇ ಈ ನಾಗರ ಪಂಚಮಿಗೆ. ಈ ದಿನ ನಮ್ಮ ಜೊತೆಯ ಹುಡುಗಿಯರು ಕಾಲು ಪೂರ್ತಿ ಮುಚ್ಚುವ ಲಂಗಗಳನ್ನು ಹಾಕಿಕೊಂಡು ಸಂಭ್ರಮಿಸುತ್ತಿದ್ದರು.

    ನನ್ನೂರಲ್ಲಿ ಜಾತಿ,ಮತಗಳ ಭೇದಗಳಿಲ್ಲದೆ ಇಂದು ಎಲ್ಲರೂ ದೇವಸ್ಥಾನದ ಹತ್ತಿರ ಇದ್ದ ನಾಗರ ಕಟ್ಟೆಗೆ ಹಾಲೆರೆಯಲು ಬೆಳಿಗ್ಗೆ 10 ಗಂಟೆಯಿಂದ ಪ್ರಾರಂಭಿಸಿ,12 ಗಂಟೆಯವರೆಗೆ ಊರಿಂದ ಗುಂಪುಗಳಲ್ಲಿ ಊರ ಹೆಂಗಳೆಯರೆಲ್ಲ ಹುರುಪಿನೊಂದಿಗೆ ಹೊರಡುವ ದೃಶ್ಯ ಅವಿಸ್ಮರಣೀಯ. ಹೊಸದಾಗಿ ಮದುವೆಯಾಗಿ ಹೋಗಿದ್ದ ಹೆಂಗಳೆಯರ ಸಡಗರವಂತೂ ಕೇಳಲೇ ಬೇಡಿ. ಅವರ ಒನಪು, ವಯ್ಯಾರ,ಸಂಭ್ರಮ ಮುಗಿಲು ಮುಟ್ಟಿ ಅಲ್ಲ, ದಾಟಿ ಮೇಲೆ ಮೂರಿಂಚು!

    ಬೇಸಿಗೆ ರಜೆಯ ಮಧ್ಯಾಹ್ನಗಳಲ್ಲಿ ಮನೆಗೆಲಸ ಮಾಡುತ್ತಾ,ಸಿಕ್ಕ ಅಲ್ಪ ಸ್ವಲ್ಪ ಸಮಯದಲ್ಲಿ ಕೈ ಕಸೂತಿ ಹಾಕಿ,ಎರಡು ಮೂರು ಬಣ್ಣಗಳಿಂದ ಹೂ,ಹಣ್ಣು ಕಾಣುವ ರೀತಿ ಹೆಣೆದುಕೊಂಡು, ಬಲೆಯಂತಿದ್ದ ಬಿಳೀ ಬಣ್ಣದ ಬಟ್ಟೆಯನ್ನು ತಟ್ಟೆಯಲ್ಲಿಟ್ಟಿದ್ದ ಹಾಲೆರೆಯುವ ಸಾಮಗ್ರಿಗಳನ್ನು ಮುಚ್ಚಲು ಉಪಯೋಗಿಸಿ ಸಡಗರದಿಂದ ಹೊರಡುತ್ತಿದ್ದ ಅಮ್ಮನ ಹಿಂದೆ ಹೊರಡುವುದೇ ನನಗೆ ಹಬ್ಬ.

    ಎದುರಿಗೆ ಬರುತ್ತಿದ್ದವರು ಹಾಲು ಹಾಕಿದಿರಾ ಅಂತ ನಗುಮೊಗದಲ್ಲಿ ಮಾತಾಡಿಸಿ, ನಿಂತು ಅವರ ಸೀರೆ,ಹೆಣೆದ ತಟ್ಟೆಯಮೇಲಿನ ಬಟ್ಟೆಗಳ ವಿಷಯ ವಿನಿಮಯ ಮಾಡಿಕೊಳ್ಳುತ್ತ ಜಿಟಿ,ಜಿಟಿ ಮಳೆಯಲ್ಲಿ,ಸಾಮಾನ್ಯವಾಗಿ ಬರಿದಾಗಿರುತ್ತಿದ್ದ ನಮ್ಮೂರ ಕೆರೆ ಅಂಗಳದ ಮುಖಾಂತರ ದೇವಸ್ಥಾನದ ನಾಗರ ಕಟ್ಟೆಗೆ ಹೋಗುವ ಸಂಭ್ರಮ ಇಂದಿನ ಯಾವ ಮಾಲ್ ಗಳ ಭೇಟಿಗೂ ಸಮ ಇಲ್ಲ ಬಿಡಿ.

    ಈ ಸಡಗರದ ನಡಿಗೆಯಲ್ಲಿ ಸಿಗುತ್ತಿದ್ದ ನನ್ನ ಗೆಳೆಯರ ಕೈಯಲ್ಲಿರುತ್ತಿದ್ದ ಕೊಬ್ಬರಿ ಬಟ್ಟಲಿನ ತಿರುಗುಗಳು,ಅದಕ್ಕೆ ಜೋಡಿಸಿದ್ದ ಬಿಳೀ ದಾರ ಎಳೆದೆಳೆದು ಕೊಬ್ಬರಿಬಟ್ಟಲನ್ನು ತಿರುಗಿಸುವ ಖುಷಿ,ಅದಕ್ಕಿಂತ ನನ್ನದು ಹೇಗೆ ಬೇರೆ ಅಂತ ತುಲನೆ ಮಾಡಿ ಆನಂದಿಸುವುದು ಮುಗಿಯುವುದರಲ್ಲಿ ನಾಗರಕಟ್ಟೆಯ ಹತ್ತಿರವಿರುತ್ತಿದ್ದ ಹೆಂಗಳೆಯರ ಗುಂಪಿನಲ್ಲಿ ಸೇರಿ ಆಗಿರುತ್ತಿತ್ತು. ಅಲ್ಲಿ ಅಮ್ಮನೂ ನನ್ನನ್ನು ಮರೆತಂತೆ ತನ್ನ ಸರದಿ ಬರುವವರೆಗೆ ಅಲ್ಲಿಗೆ ಬಂದಿದ್ದ ಎಲ್ಲ ಸಡಗರದ ಹೆಂಗಸರೊಂದಿಗೆ ಮಾತುಗಳು. ….ಯಾವಗಾ ಬಂದಿಯೇ,ಮನೆಕಡೆ ಬರ್ಲಿಲ್ಲ,ನಿನ್ನ ಗಂಡನೂ ಬಂದನಾ,ಅತ್ತೆ ಮನೆ ಹೇಗಿದೆ,ನೋಡಿದರೆ ಗಂಡನ ಮನೆ ನೀರು ಹೊಂದಿಕೊಂಡ ಹಾಗಿದೆ ಬಿಡು….ಅಂತ ಮದುವೆಯಾದ ನನ್ನೂರ ಚೆಲುವೆಯರನ್ನು ವಿಚಾರಿಸುತ್ತಿದ್ದರೆ,ಆ ಹುಡುಗಿಯರ ಮುಖದ ನಾಚಿಕೆಯ ನಗು ಇರುತ್ತಿತ್ತಲ್ಲ, ಅದು ಈಗಿನ ಯಾವ ಮಾಡೆಲ್ ಗಳೂ ಅನುಸರಿಸಲು ಸಾಧ್ಯವಿಲ್ಲ ಬಿಡಿ.

    ನೀವು ಹಾಲು ಎರೆಯಿರಿ,ನೀವು ಎರೆಯಿರಿ ಅಂತ ಪ್ರೀತಿಯಿಂದ ಹಾಲು ಹಾಕಲು ಜಾಗ ಮಾಡಿಕೊಡುತ್ತಿದ್ದವರನ್ನು ಮಾತಾಡಿಸುತ್ತಲೇ ನನ್ನನ್ನು ಕೂಗಿ ಕರೆದು ಹುತ್ತದ ಹತ್ತಿರ ನಿಲ್ಲಿಸಿ ಬಲ ಮುಂಗೈಗೆ ಒಂದೇ ಒಂದು ಮಲ್ಲಿಗೆ ಹೂ ಕಟ್ಟಿದ್ದ ಬಿಳೀ ದಾರವನ್ನು ಕಟ್ಟಿ, ತಟ್ಟೆಯಲ್ಲಿ ಮನೆಯಿಂದ ಮಾಡಿಕೊಂಡು,ಹೆಣೆದ ಬಟ್ಟೆ ಮುಚ್ಚಿ ತಂದಿದ್ದ ಚಿಗಳೆ, ತಂಬಿಟ್ಟು (ಅಕ್ಕಿ,ಎಳ್ಳು ಗಳಿಂದ ಮಾಡಿದ ಸಿಹಿ ಉಂಡೆಗಳು) ಉಂಡೆಗಳನ್ನು ವೀಳ್ಯೇದ ಎಲೆಮೇಲೆ,ಅಡಿಕೆ ,ಈ ಉಂಡೆಗಳನ್ನು ಇಟ್ಟು, ನೆನಸಿದ್ದ ಕಡ್ಲೆ ಬೇಳೆ ಜೊತೆಗೆ ಹುತ್ತದ ಮೇಲಿದ್ದ ಹುಣಸೆಮರದಿಂದ ಆಗತಾನೇ ಚಿಗುರಿ,ಸಣ್ಣ ಮರಿ ಹಾವುಗಳ ರೂಪದಲ್ಲಿರುತ್ತಿದ್ದ ಹುಣಸೇ ಕಾಯಿಗಳನ್ನು ಇಟ್ಟು, ಊದಿನಕಡ್ಡಿ ಹಚ್ಚಿ ಪೂಜೆ ಮಾಡಿ, ತಟ್ಟೆಯಲ್ಲಿದ್ದ ಚಿಕ್ಕ ಗಿಂಡಿಯೊಳಗಿನ ಹಾಲನ್ನು ಬಿಳೀ ದಾರ ಸುತ್ತ ಕಟ್ಟಿದ್ದ ಹುತ್ತಕ್ಕೆ ಮೂರು ಸಲ ಹಾಕುವುದು…ಅಲ್ಲಿಗೆ ಅಮ್ಮ ಹಿಂದಕ್ಕೆ ತಿರುಗಿ ಸರದಿಯಲ್ಲಿದ್ದವರಿಗೆ ಚಿಗಳೆ ತಂಬಿಟ್ಟು ಕೊಡುತ್ತಾ,ಬನ್ನಿ ನಮ್ದು ಆಯ್ತು,ನೀವೂ ಎರೆಯಿರಿ ಅಂತ ಹೇಳಿದರೆ,ಅಲ್ಲಿಗೆ ಪಂಚಮಿಯ ನಾಗನಿಗೆ ಹಾಲೆರೆಯುವುದು ಮುಗಿದ ಹಾಗೆ.

    ಆಕಾಶದ ಕಡೆ ಬಾಯಿ ತೆರೆದುಕೊಂಡ ದೊಡ್ಡ ಬಿಲಗಳು ನನಗೆ ಹಾವಿನ ಬಾಯಿಗಳು ಏನೋ ಅನ್ನುವ ರೀತಿ ಕಾಣಿಸುತ್ತಿದ್ದವು. ಹಾಲು ಹಾಕಿ ಅವುಗಳ ಒಳಗೆ ಹಾವು ಇದೆಯೇನೋ ಅಂತ ಹತ್ತಿರ ಬಗ್ಗಿ ನೋಡುತ್ತಿದ್ದವನನ್ನು ಎಳೆದು ಕೊಂಡು ಅಮ್ಮ ಹೊರಡುವಾಗ ಎಂತಹದೋ ನಿರಾಶೆ!

    ಮನೆಗೆ ಮತ್ತೆ ಜಿಟಿ,ಜಿಟಿ ಮಳೆಯಲ್ಲಿ ಹಿಂತಿರುಗುವ ನಡಿಗೆಯಲ್ಲಿ, ಬರುವಾಗಿನ ಎಲ್ಲ ಸಂಭ್ರಮ ಮರುಕಳಿಸುತ್ತಿತ್ತು. ವ್ಯತ್ಯಾಸ ಅಂದ್ರೆ ಅಮ್ಮ ಈಗ ಎದುರು ಬರುತ್ತಿದ್ದವರನ್ನು ಯಾಕೆ ತಡ ಮಾಡಿಕೊಂಡು ಬಿಟ್ಟಿಯಲ್ಲ ಅಂತ ವಿಚಾರಿಸಿ,ನಗುವಿನ ವಿನಿಮಯ. ಮನೆಗೆ ಬಂದು ಪಾಯಸದ ಜೊತೆ,ಪಂಚಮಿ ಉಂಡೆಗಳನ್ನು ತಿಂದು,ಊಟ ಅಂತ ಮುಗಿಯುವುದನ್ನು ಕಾಯ್ತಿದ್ದ ಹಾಗೆ ಹೊರಗಡೆಗೆ ಜಿಗಿತ. ಇವತ್ತು ಅಪ್ಪನ ರಜೆ ದಿನಗಳ ಲೆಕ್ಕದ ಕ್ಲಾಸ್ ಇರುತ್ತಿರಲಿಲ್ಲ. ಊರಲ್ಲಿ ಬಂದರೆ, ಬಜಾರದಲ್ಲಿ ವಿಧ ವಿಧದ ಸ್ಪರ್ಧೆಗಳು ಗುಂಪು,ಗುಂಪಾಗಿ ಇರುತ್ತಿದ್ದವು. ನಮ್ಮಲ್ಲಿ ಸಜ್ಜೆ ಹುರಿದು,ಪುಡಿಮಾಡಿ ಬೆಲ್ಲದ ಜೊತೆ ಹುರಿದ ಶೇಂಗಾ ಬೀಜ,ಎಳ್ಳು ಹಾಕಿ ಮಾಡಿದ ಉಂಡೆಗೆ ಟಮಟ ಅಂತೀವಿ. ಆರಿದ ನಂತರ ಇವು ಕಲ್ಲಿನ ತರ ಗಟ್ಟಿ ಆಗ್ತಿದ್ದವು. ಇಂತಹ ಉಂಡೆಗಳನ್ನು ಕೈಯಿಂದ ಹೊಡೆದು ಪುಡಿ ಮಾಡುವ ಸ್ಪರ್ಧೆಗಳು ಊರ ತುಂಬಾ ಇರುತ್ತಿದ್ದವು. ಮತ್ತೆ ಕೆಲವು ಕಡೆ ತೆಂಗಿನ ಕಾಯಿಯನ್ನು ಕೈಯಿಂದ ಗುದ್ದಿ ಹೊಡೆಯುವ ಸ್ಪರ್ಧೆಗಳು. ಊರ ಗಟ್ಟಿ ಯುವಕರು ತಲೆಮೇಲಿನ ಟವೆಲ್ ತೆಗೆದು,ಮುಂಗೈ ಪೂರ್ತಿ ಮುಚ್ಚುವ ಹಾಗೆ ಕಟ್ಟಿಕೊಂಡು,ಸಣ್ಣ ಬೆಂಕಿಕಡ್ಡಿಯನ್ನು ತೆಂಗಿನಕಾಯಿಯ ಕೆಳಗೆ ಒಂದು ಕಡೆ ನಿಲ್ಲಿಸಿ, ನೆರೆದವರನ್ನೆಲ್ಲ ಒಮ್ಮೆ ನೋಡಿ, ಅವನ ಬಟ್ಟೆ ಮುಚ್ಚಿದ ಬಲ ಮುಂಗೈ ಯನ್ನು ವಿಶಿಷ್ಟ ರೀತಿಯಲ್ಲಿ ಸಜ್ಜಾಗಿಸಿ, ತನ್ನೆರಡು ಮೊಳಕಾಲ ಮೇಲೆ ಭಾರ ಹಾಕಿ,ಕೈ ಎತ್ತಿ, ಒಂದೇ ಏಟಿಗೆ ಕಾಯಿ ಒಡೆದನೆಂದರೆ,ಅದರ ಚೂರುಗಳೆಲ್ಲ ಚೆಲ್ಲಾ ಪಿಲ್ಲಿ!

    ಇವು ದಂತ ಕಥೆಗಳಾಗಿ ತಿಂಗಳುಗಳ ಕಾಲ ಊರವರ ಬಾಯಲ್ಲಿ ಇರುತ್ತಿತ್ತು. ಇವೆಲ್ಲಕ್ಕೆ ಸಾಕ್ಷಿಯಾಗಿ,ಮುಂದಿನ ಸಾಲಲ್ಲೇ ಇದ್ದು ನೋಡುತ್ತಿದ್ದ ನನಗೆ ಎಲ್ಲಿಲ್ಲದ ಸಂಭ್ರಮ! ಯಾರಾದ್ರೂ ಚೂರು ಸಿಡಿಯುತ್ತೆ ಹಿಂದೆ ಬಾ ಅಂತ ಎಳೆದರೆ,ಹೊಡೆದು ಬಿಡುವಷ್ಟು ಸಿಟ್ಟು.

    ಚಿಕ್ಕ ಮಕ್ಕಳಾಗಿದ್ದ ನಮ್ಮ ಕೈಗಳಲ್ಲಿ ನಾನಾ ತರಹದ ದಾರಗಳಿಂದ ಮಾಡಿದ ತಿರುಗುಗಳು. ದಾರವನ್ನು ಎರಡೂ ಕೈಗಳ ಹೆಬ್ಬೆರಳು ಮತ್ತು ಕಿರುಬೆರಲುಗಳಿಗೆ ಹಾಕಿಕೊಂಡು,ಹಿಂದೆ,ಮುಂದೆ ಕೈ ಗಳನ್ನು ತಂದರೆ,ಜಿಯ್,ಜಿಯ್ ಅನ್ನುವ ಶಬ್ದದೊಂದಿಗೆ ಮದ್ಯೆ ಇರುತ್ತಿದ್ದ ದುಂಡನೆಯ,ಚಪ್ಪಟೆಯ ವಸ್ತು ತಿರುಗುತ್ತಿತ್ತು. ಬೆಳಿಗ್ಗೆಯಿಂದ,ಸಾಯಂಕಾಲದ ವರೆಗೆ ಇದನ್ನು ಕೈಯಲ್ಲಿ ಭಯಂಕರ ಮೌಲ್ಯವಾದದ್ದು ಅನ್ನುವ ರೀತಿಯಲ್ಲಿ ಹಿಡಿದು,ಹೊಸ ಗೆಳೆಯರು ಕಂಡ ತಕ್ಷಣ ತಿರುಗಿಸಿ ತೋರಿಸುವುದರ ಸಂಭ್ರಮ ಇತ್ತಲ್ಲ, ಇವತ್ತು 30 ಲಕ್ಷ ಕಾರು ಕೊಂಡರೂ ಅನುಭವಿಸಲು ಸಾಧ್ಯ ಇಲ್ಲ ಬಿಡಿ.

    ಹಾಗೇ ಇಳಿಸಂಜೆ ಆಗುತ್ತಿದ್ದಂತೆ ಮನೆಗೊಂದರಂತೆ ಕಟ್ಟಿದ್ದ ಹಗ್ಗದ ಜೋಕಾಲಿಗಳಲ್ಲಿ ತೂರಾಟ. ಹೆಚ್ಚಾಗಿ ಹೆಣ್ಣು ಮಕ್ಕಳು ಹಾಡು ಹಾಡುತ್ತಾ ತಮ್ಮನ್ನು ತಾವೇ ಜೀಕಿ ಕೊಳ್ಳುತ್ತ ತುರಾಡುವುದನ್ನು ನೋಡಲು ಸುತ್ತ ಹತ್ತು ಹುಡುಗ ಹುಡುಗಿಯರ ಗುಂಪು. ಜೋಕಾಲಿ,ಮನೆಗಳ ಕಟ್ಟೆಯ ಮೇಲೆ,ಮನೆ ಮುಂದಿನ ಮರಕ್ಕೆ ಕಟ್ಟುತ್ತಿದ್ದರು. ಈ ಜೋಕಾಲಿಗಳು,ಕೆಲವರ ಜಗುಳಿಗಳ ಮೇಲೆ ಮುಂದೆ ಬರ್ತಿದ್ದ ಗೌರಿ ಹುಣ್ಣಿಮೆ ವರೆಗೂ ಇರುತ್ತಿದ್ದವು. ಅಂತಹ ಅಪ್ಪ,ಅಮ್ಮಂದಿರಿಗೆ ನಮ್ಮ ಗುಂಪುಗಳಲ್ಲಿ ಭಾರೀ ಮೆಚ್ಚುಗೆ ಮತ್ತು ಅವರೆಡೆಗೆ ಹೆಮ್ಮೆ. ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಜಿಟಿ ಜಿಟಿ ಮಳೆಯಲ್ಲೇ ಕಳೆಯುತ್ತಿದ್ದ ನಾಗರ ಪಂಚಮಿಯ ಸಡಗರ,ಹಳ್ಳಿಗಳಲ್ಲೂ ಸಹ ಮರೆಯಾಗುತ್ತಿವೆ ಎನ್ನುವುದು ವಿಷಾದಕರ ಸಂಗತಿ.

    ಆಧುನಿಕತೆಯ ಮನೆ ಬದಲಾವಣೆಗಳು ಜೋಕಾಲಿ ಕಟ್ಟುವ ವ್ಯವಸ್ಥೆಯನ್ನೇ ಹಾಳು ಮಾಡಿವೆ. ಮನೆ ಮುಂದಿನ ಮರಗಳು ಕಾಣೆಯಾಗಿ ಸಿಮೆಂಟ್ ಅಂಗಳಗಳು,ಸಗಣಿ ನೀರಿನ ಸಿಂಚನದೊಂದಿಗೆ ಮೈತಳೆಯುತ್ತಿದ್ದ ಬೆಳಗಿನ ರಂಗೋಲಿಗಳನ್ನು ತಿಂದು ಹಾಕಿವೆ. ಸ್ಕೂಲು,ಕಾಲೇಜು ಅಂತ ಓದುತ್ತಿರುವ ಹುಡುಗಿಯರಿಗೆ, ನಾಗ ಪಂಚಮಿ,ಗೌರಿ ಹಬ್ಬಗಳ ಜೋಕಾಲಿಗಳು ನಾಚಿಕೆಯ ವಿಷಯಗಳಾಗಿರುವುದು ನನಗಂತೂ ನೋವಿನ ಸಂಗತಿ.

    ಶ್ರಾವಣದ ಜಿಟಿ,ಜಿಟಿ ಮಳೆಗೆ ರೈತಾಪಿ ಜನರು ಬೆಳೆಯ ಪ್ರಾರಂಭಿಕ ಕೆಲಸಗಳನ್ನು ಮುಗಿಸಿ,ಮಳೆರಾಯನ ಕರುಣೆಗೆ ಕಾಯುತ್ತ, ಜೀವನ ಪ್ರೀತಿಯನ್ನು ಉಳಿಸಿಕೊಂಡು,ಚೇತನಗಳನ್ನು ಲವಲವಿಕೆಯಿಂದ ಇರಿಸಿಕೊಳ್ಳಲು ಬೇಕಾದ ಹಾಗೆ ಋತುಮಾನಗಳಿಗೆ ತಕ್ಕ ಆಹಾರ,ಹಬ್ಬಗಳನ್ನು ಹೆಣೆದುಕೊಂಡಿದ್ದ ನಮ್ಮ ಪೂರ್ವಿಕರು ನನಗಂತೂ ಮಹಾನ್ ಮಾನವರು ಅಂತಲೇ ಅನ್ನಿಸುವುದು……ನಿಮಗೆ???

    ಬೆಂಗಳೂರಿನ ಗಲ್ಲಿಗಳಲ್ಲಿ ಹಾಸ್ಯದ ಓಟ

    ವಿಮಾನ ನಿಲ್ದಾಣದಲ್ಲಿ ಇಳಿದ ಕೂಡಲೇ ಯಾರದೋ ಕೈಗೆ ಸಿಕ್ಕಿ ತನ್ನ ಸೂಟ್ ಕೇಸ್ ಕಳೆದುಕೊಳ್ಳುವ ಫ್ರೆಂಚ್ ಪ್ರಜೆ, ಆತನನ್ನು ತನ್ನ ಬಾಸ್ ಬಳಿಗೆ ಕರೆದೊಯ್ಯಲಾಗದ ಚಾಲಕ, ತನ್ನ ಆಟೊದಲ್ಲಿ ಹತ್ತಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿ, ತನ್ನ ಬೆನ್ನಿಗೆ ಕಟ್ಟಿಕೊಳ್ಳುವ ನಾಯಕ, ಆತನ ತಂಗಿಯ ಅಂತರ್ಧರ್ಮೀಯ ವಿವಾಹ, ಅವರಿಗೆ ಮಕ್ಕಳಾಗದ ಸಮಸ್ಯೆ, ವಿದೇಶಿ ಪ್ರಜೆ ಮತ್ತು ಆತನ ಸೂಟ್ ಕೇಸ್ ಹುಡುಕಾಡುವ ರೌಡಿಗಳು, ಇವರನ್ನು ಹಿಡಿದುಕೊಂಡು ಹೋಗುವ, ಫ್ರಾನ್ಸ್ ಎಂದರೆ ಫ್ರಾನ್ಸ್ ಚಿಲ್ಲಿ, ಫ್ರಾನ್ಸ್ ಕರಿ, ಫ್ರಾನ್ಸ್ ಬಿರಿಯಾನಿ ಎಂದು ತಿಳಿಯುವ ಕನಿಷ್ಠ ಜ್ಞಾನವಿಲ್ಲದ ಪೊಲೀಸರು… ದಾನಿಶ್ ಸೇಠ್ ಪ್ರಮುಖ ಪಾತ್ರದ ಪನ್ನಗ ಭರಣ ನಿರ್ದೇಶನದ “ಫ್ರೆಂಚ್ ಬಿರಿಯಾನಿ” ಚಿತ್ರ ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಓಡುವಂತೆ ಚಕಚಕನೆ ಸುತ್ತಿ ಪ್ರೇಕ್ಷಕರನ್ನು ಅಷ್ಟೇ ವೇಗವಾಗಿ ನಗಿಸಿ ಕ್ಲೈಮ್ಯಾಕ್ಸ್ ಥಿಯೇಟರ್ ನಲ್ಲಿ ಅಂತ್ಯ ಕಾಣುತ್ತದೆ.

    ಒಂದೇ ತಿಂಗಳಲ್ಲಿ ಪಿ.ಆರ್.ಕೆ. ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಯಿಂದ ನಿರ್ಮಿಸಿರುವ “ಲಾ” ಮತ್ತು “ಫ್ರೆಂಚ್ ಬಿರಿಯಾನಿ” ಚಿತ್ರಗಳು ಥಿಯೇಟರ್ ಪ್ರದರ್ಶನ ಇಲ್ಲದ ಕಾರಣಕ್ಕೆ ಬಹಳ ಚರ್ಚೆಗೆ ಒಳಗಾಗಿದ್ದವು. ಮೊದಲು ಬಿಡುಗಡೆಯಾದ `ಲಾ’ ಚಿತ್ರದಂತೆ “ಫ್ರೆಂಚ್ ಬಿರಿಯಾನಿ” ಪ್ರೇಕ್ಷಕರನ್ನು ನಿರಾಸೆಗೊಳಿಸುವುದಿಲ್ಲ.

    ವಿದೇಶದಿಂದ `ಸಾಮಾನು’ ತರಬೇಕಾದ ವ್ಯಕ್ತಿ ತನ್ನ ಹೆಸರು ಸೈಮನ್ ಎಂದ ಕೂಡಲೇ ತಪ್ಪಾಗಿ ಗ್ರಹಿಸಿ ಹಿಡಿದು ಕರೆ ತರುವುದರಿಂದ ಪ್ರಾರಂಭವಾಗುವ ಸಿನಿಮಾ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ಅಡೆತಡೆಯಿಲ್ಲದೆ ಓಡುತ್ತಿರುತ್ತದೆ. ಇತ್ತೀಚೆಗೆ ಒಟಿಟಿಯಲ್ಲಿ ಹಲವು ಭಾಷೆಗಳ ಚಲನಚಿತ್ರಗಳು ಬಿಡುಗಡೆಯಾಗುತ್ತಿವೆ. ಇವುಗಳಲ್ಲಿ ಬಹಳಷ್ಟು ಸಿನಿಮಾಗಳು ಮೊದಲ ಹದಿನೈದು ನಿಮಿಷಗಳಲ್ಲಿ ಆಸಕ್ತಿ ಕಳೆದುಕೊಳ್ಳುವಂತಿವೆ. ಆದರೆ ಫ್ರೆಂಚ್ ಬಿರಿಯಾಗಿ ಒಂದರೆಕ್ಷಣವೂ ನಿಲ್ಲದೆ, ಬೋರು ಹೊಡೆಸದೆ ಅಲ್ಲಿನ ಪಾತ್ರಗಳು ಚಲಿಸಿದಷ್ಟೇ ವೇಗವಾಗಿ ಚಲಿಸುತ್ತಾ ಇರುತ್ತದೆ. ಈ ವೇಗ ಚಿತ್ರವನ್ನು ತಡೆಯಿರದಂತೆ ಮುನ್ನಡೆಸಿದರೂ ಗಟ್ಟಿ ಕಥೆಯ ಕೊರತೆ ಎದ್ದು ಕಾಣುತ್ತದೆ. ಕೆಲವು ಪಾತ್ರಗಳು ಯಾವುದೇ ಕಾರಣವಿಲ್ಲದೆ ಇರುತ್ತವೆ.

    ಹಾಸ್ಯರಸವು ನಟ, ನಿರ್ದೇಶಕರಿಬ್ಬರಿಗೂ ಸವಾಲು. ಕೊಂಚ ಹದ ತಪ್ಪಿದರೆ ಅಪಹಾಸ್ಯವಾಗುತ್ತದೆ. ದಾನಿಶ್ ಸೇಠ್ ಲೀಲಾಜಾಲವಾಗಿ ತಮ್ಮ ಪಾತ್ರ ನಿಭಾಯಿಸಿದ್ದಾರೆ. ರಂಗಾಯಣ ರಘು ಯಾವತ್ತಿನಂತೆ ತಮ್ಮ ನಟನೆಯಲ್ಲಿ ಹಿಡಿದಿಡುತ್ತಾರೆ. ಚಿಕ್ಕಣ್ಣ ಬರುವುದು ಕೆಲ ನಿಮಿಷಗಳಾದರೂ ತಮ್ಮ ಛಾಪು ಒತ್ತಿ ಹೋಗುತ್ತಾರೆ. ಬಹುತೇಕ ಕಡಿಮೆ ಪರಿಚಯದ, ಹೊಸ ಮುಖಗಳೇ ಇರುವ ಈ ಚಿತ್ರ ಅಂತಹ ಕೊರತೆಗಳೇನನ್ನೂ ಎತ್ತಿ ತೋರದೆ ಮುನ್ನಡೆಯುತ್ತದೆ.

    ಚಿತ್ರಮಂದಿರದ ಪ್ರದರ್ಶನ ಇಲ್ಲದ ಕಾರಣಕ್ಕೆ ಚಿತ್ರಮಂದಿರದಲ್ಲಿ ಕುಳಿತು ಆನಂದಿಸಬಹುದಾದ ಕಾಮಿಡಿ ಚಿತ್ರ ಕೈ ತಪ್ಪಿತು ಎನ್ನಿಸುವುದು ಸುಳ್ಳಲ್ಲ.ದಾನಿಶ್ ಸೇಠ್, ಫ್ರಾನ್ಸ್ ದೇಶದಿಂದ ಬಂದು ಇಲ್ಲಿ ಎಲ್ಲವನ್ನೂ ಕಳೆದುಕೊಳ್ಳುವ ವಿದೇಶಿಗನಾಗಿ ಸಾಲ್ ಯೂಸುಫ್ ಮನೋಜ್ಞ ಅಭಿನಯ. ಭಾಷೆ ಗೊತ್ತಿಲ್ಲದೆ ತನಗೆ ಸಂಬಂಧಿಸದ ಸಿಕ್ಕುಗಳಲ್ಲಿ ಸಿಲುಕಿಕೊಳ್ಳುವ ಸೈಮನ್ ಪಾತ್ರಧಾರಿಯಾಗಿ ಅವರದು ಅತ್ಯಂತ ಸಮರ್ಥ ಅಭಿನಯ. ರಂಗಾಯಣ ರಘು, ಸಂಪತ್ ಕುಮಾರ್ ಅವರದು ಪಾತ್ರಗಳಲ್ಲಿ ಲೀಲಾಜಾಲ ಅಭಿನಯ.

    ಡಾನ್ ಮಗ ಮಣಿಯಾಗಿ ಮಹಾಂತೇಶ್ ಹಿರೇಮಠ್ ತನ್ನ “ಲ”ಕಾರ ಉಚ್ಚಾರಣೆಯಿಂದ ಗಮನ ಸೆಳೆಯುತ್ತಾರೆ. ಅವರ ಪಾತ್ರ, ಅಭಿನಯ, ವೇಷಭೂಷಣ ಎಲ್ಲವೂ ಪೂರಕವಾಗಿದ್ದು ಹಾಸ್ಯ ಕಲಾವಿದರ ಕೊರತೆ ತುಂಬುತ್ತಾರೆ.

    ಯಾರೂ ಊಹಿಸಲಾಗದ ದುರಂತವೆಂದರೆ ಇತ್ತೀಚೆಗೆ ಮೃತರಾದ ನಟ ಮೈಕೆಲ್ ಮಧು ಈ ಚಿತ್ರದಲ್ಲಿ ಮೃತರಾಗಿ ಅವರ ಶವದ ಮೆರವಣಿಗೆ ದೃಶ್ಯವಿದೆ. ಅವರ ಮರಣದ ನಂತರದ ಬಂದ ಸಿನಿಮಾದಲ್ಲಿ ಅವರ ಸಾವಿನ ಮೆರವಣಿಗೆ ಕಾಕತಾಳೀಯ.

    ಕೋವಿಡ್ ಸಾಂಕ್ರಾಮಿಕದಿಂದಾಗಿ ಜನರು ಥಿಯೇಟರ್ ನಲ್ಲಿ ಚಿತ್ರ ಆನಂದಿಸುವ ಅವಕಾಶ ಕಳೆದುಕೊಂಡಿದ್ದಾರೆ. ಚಲನಚಿತ್ರವನ್ನು ಥಿಯೇಟರ್ ನಲ್ಲಿ ವೀಕ್ಷಿಸಲು ಅದರ ಕ್ಯಾನ್ವಾಸ್ ಬೃಹತ್ತಾಗಿರಲೇಬೇಕು ಎಂದೇನೂ ಇಲ್ಲ. ಫ್ರೆಂಚ್ ಬಿರಿಯಾನಿ ಥಿಯೇಟರ್ ಪ್ರೇಕ್ಷಕರಿಗೆ ಹೇಳಿ ಮಾಡಿಸಿದ ಚಿತ್ರ. ಫ್ರೆಂಚ್ ಬಿರಿಯಾನಿ ಥಿಯೇಟರ್ ವೀಕ್ಷಕರಿಗೆ ಆದ ನಷ್ಟ ಎಂದೇ ಹೇಳಬಹುದು. ಪ್ರೇಕ್ಷಕರು ಥಿಯೇಟರ್ ನಲ್ಲಿ ಆತ್ಮೀಯರೊಂದಿಗೆ ಕುಳಿತು ನಕ್ಕು ನಲಿಯಬಹುದಾದ ಚಿತ್ರವೊಂದು ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಹಾಗೆಂದು ಇದು ಕುಟುಂಬ ಸಮೇತ ನಲಿಯುವ ಚಿತ್ರವೆಂದೇನೂ ಅಲ್ಲ. ಅಲ್ಲಲ್ಲಿ ಭಾಷೆ ಕೊಂಚ ಮಿತಿ ಮೀರುತ್ತದೆ. ಹಾಗಿದ್ದರೂ ಚಿತ್ರದ ಒಟ್ಟಂದಕ್ಕೆ ಇದು ಅಡ್ಡಿಯಾಗಿಲ್ಲ.

    ಹಾಡಿನಲ್ಲಿ ಕಾಣಿಸಿಕೊಳ್ಳುವ ಅಗತ್ಯ ನಿರ್ದೇಶಕ ಪನ್ನಗ ಭರಣರಿಗೆ ಇತ್ತೇ? ಈ ಎಲ್ಲ ಕೊರತೆಗಳ ನಡುವೆಯೂ ಪನ್ನಗ ಭರಣರಿಂದ ಮತ್ತಷ್ಟು ಒಳ್ಳೆಯ ಚಿತ್ರಗಳನ್ನು ನಿರೀಕ್ಷೆ ಮಾಡಬಹುದು.

    ಈ ಕೆಳಗಿನ ಲಿಂಕ್ ಒತ್ತುವ ಮೂಲಕ ನೀವು ಪ್ರೈಮ್ ವಿಡಿಯೋ ಸದಸ್ಯರಾಗಬಹುದು.

    error: Content is protected !!