ಒಮ್ಮೆ ಪ್ರೀತಿಸಿ ನೋಡಿ..!

ಇವನು ನನ್ನನ್ನು ಅಥವಾ ನಾನು ಇವನನ್ನು ಪ್ರೀತಿಸದೇ ಹೋಗಿದ್ದರೆ ಇಷ್ಟೊತ್ತಿಗೆ ನಾನು ಏನಾಗಿರುತ್ತಿದ್ದೆ..

ಮನೆ ಬಿಟ್ಟು ಮೂರು ದಿನ ಆಯ್ತು..ನನ್ನ ಬ್ರೂನೋಗೆ ಊಟ ಸರಿಯಾಗಿ ಆಗ್ತಿದೆಯೋ ಇಲ್ವೋ.

ನಾನು ಮನೆಯಿಂದ ಹೊರಗೆ ಬಂದು ಪೋರ್ಟಿಕೊದಲ್ಲಿ ಕುಳಿತಕೂಡಲೇ ಅದೆಲ್ಲಿರ್ತವೋ ಏನೋ.ಗುಬ್ಬಚ್ಚಿಗಳು ಹಿಂಡಿನಲ್ಲಿ ಬಂದು ಚುಂಯೋಪಂಯೋ ಅನ್ನುತ್ತವೆ..

ನನ್ನ ಗೌರಿ.. ಅವಳನ್ನು ಮಾರಿ ಇಲ್ಲಿಗೆ ಹನ್ನೊಂದು ವರ್ಷ…ನನ್ನ ಚಿತ್ತದಲ್ಲಿನ್ನೂ ಅವಳು ಹಚ್ಚಹಸಿರು…

*******

ಯಾಕೆ ನಾವು ಯಾರನ್ನಾದರೂ, ಏನನ್ನಾದರೂ,ಯಾವುದನ್ನಾದರೂ ಹೀಗೆ ಅಕಾರಣ ಪ್ರೀತಿಸಲು ತೊಡಗುತ್ತೇವೆ. ಎಲ್ಲೋ ನೋಡಿದ ತುಂಬಾ ಸಾಮನ್ಯ ಹುಡುಗ. ಮಗ ಎತ್ತಿಕೊಂಡು ಬಂದು ಮಡಿಲಿಗೆ ಹಾಕಿದ ಪುಟ್ಟ ನಾಯಿಮರಿ.. ಗೆಳತಿ ಸುಮ್ಮನೆ ನೆನಪಿಗೆ ಕೊಟ್ಟ ಸೂಜಿ ಮಲ್ಲಿಗೆಬಳ್ಳಿ.
ಬಹಳ ಹಿಂದೆ ಕೊಂಡ ಕನಕಾಂಬರ ಬಣ್ಣದ ಕುರ್ತಾ..
ನಾನು ಬಂದೊಡನೆ ಹಾರಿಬರುವ ಆ ಪುಟ್ಟ ಗುಬ್ಬಿ
ಹೀಗೇ..ನಾವು ಪ್ರೀತಿಸುವವರ,ಪ್ರೀತಿಸುವುದರ ಪಟ್ಟಿ ಬೆಳೆಯತ್ತಾ ಹೋಗುತ್ತದೆ.

ಪ್ರೀತಿಗೆ ಸಾಮನ್ಯವಾಗಿ ಒಂದು ಗುಣವಿರುತ್ತದೆ.ಕೊಟ್ಟು ತೆಗೆದುಕೊಳ್ಳದ ಹೊರತು ಪ್ರೀತಿ ಹೆಚ್ಚು ಕಾಲ ಉಳಿಯದು.ಹಾಗಿದ್ದರೆ…ಮಲ್ಲಿಗೆ ಬಳ್ಳಿ,ಕುರ್ತಾ ಹೇಗಾದರೂ ಪ್ರೀತಿ ತೋರಿಸಿಯಾವು?

ಅಲ್ಲೇ ಇರುವುದು ಮನುಷ್ಯ ಮರ್ಮ..ಇಡೀ ಜಗತ್ತು ಇಂದು ಸಂತೋಷವಾಗಿರುವುದು ಹೇಗೆ ಯೌವನಿಗರಾಗಿರುವುದು ಹೇಗೆ ಎನ್ನುವುದರ ಬೆನ್ನು ಬಿದ್ದಿದೆ.

ಸೆರಟಾನಿನ್ ಮೆಲಟಾನಿನ್,ಡೊಪಮೈನ್ ಎಂಬಿತ್ಯಾದಿ ಖುಷಿಯ ಹಾರ್ಮೋನುಗಳು ನಮ್ಮೊಳಗೆ ಚಿಮ್ಮಿದಷ್ಟೂ ನಾವು ಚಿರ ಯೌವನಿಗರು..ಸಂತೋಷದ ಪ್ರಭಾವಳಿ ನಮ್ಮನ್ನು ಆವರಿಸುತ್ತದೆ ,ನಮ್ಮ ಜೊತೆಗಿರುವವರಿಗೂ ಖುಷಿಯ ಅಂಟುಜಾಡ್ಯ ಹಬ್ಬಿಸಬಲ್ಲೆವು ಆಗ ನಾವು.

ಯಾಕೆ ನಾವು ಏನನ್ನಾದರೂ,ಯಾರನ್ನಾದರೂ ಹಾಗೇ ಗಾಢವಾದ ತೀವ್ರತೆಯಲ್ಲಿ ಪ್ರೀತಿಸುತ್ತೇವೆ ಎನ್ನುವುದಕ್ಕೆ ನಮ್ಮ ಸ್ವಾರ್ಥವೂ ಕಾರಣ.
ಹೀಗೆ ಗಾಢವಾಗಿ ಪ್ರೀತಿಸುವಾಗ ನಮ್ಮೊಳಗೆ ಖುಷಿಯ ಹಾರ್ಮೋನುಗಳ ಸ್ರಾವ ಆಗುತ್ತದೆ‌.

ನಮಗರಿವಿದ್ದರೂ ಇಲ್ಲದಿದ್ದರೂ ಪ್ರೀತಿಸುವ,ಪ್ರೀತಿಸಲ್ಪಡುವ ಸರ್ವರಿಗೂ ಇದು ಆಗುವಂತದ್ದೆ.

ಇದಲ್ಲದೇ

ನನ್ನ ಡಾಗಿಯನ್ನು ಹೊಗಳಿದಾಗ,
ನನ್ನ ಸೂಜಿಮಲ್ಲಿಗೆ ಬಗ್ಗೆ ಮೆಚ್ಚುಗೆ ಸಿಕ್ಕರೆ,
ನಾನು ತೊಟ್ಟ ಕನಕಾಂಬರ ಬಣ್ಣದ ಕುರ್ತಾದಿಂದ ನನ್ನ ಚಲುವು ಇಮ್ಮಡಿಸಿದರೆ,
ಗೌರಿಹಸುವಿನ ಕುರಿತು ಯಾರಾದರೂ ಒಳ್ಳೆಯ ಮಾತಾಡಿದರೆ ಅದೆಲ್ಲವೂ ನಮ್ಮನ್ನೇ ಹೊಗಳಿದಂತೆ.
ಪರೋಕ್ಷವಾಗಿ ನಮಗೆ ಸದಾ ಯಾರಾದರೂ, ಯಾವುದಕ್ಕಾದರೂ ಹೊಗಳುತ್ತಿರಬೇಕು..
ಮನುಷ್ಯ ಸದಾ ಸ್ತುತಿಪ್ರಿಯ…
ಹೊಗಳಿದಷ್ಟೂ ಅವನಿಗೆ ಅವೆಲ್ಲವನ್ನೂ ಇನ್ನಷ್ಟು ಪ್ರೀತಿಸುವ,ಹಚ್ಚಿಕ್ಕೊಳ್ಳುವ ಉಮೇದು ಹುಟ್ಟುತ್ತದೆ.

*******

ಜಗತ್ತನ್ನು ಮನ್ನಣೆಯ ದಾಹ ಆಳುತ್ತಿದೆ

ಇನ್ನೂ ಅವನ,ಅವಳ ನಡುವಿನ ಪ್ರೀತಿ.. ಇದು ಮನುಷ್ಯ ಮಾತ್ರನಿಗೆ ಸಿಕ್ಕ ಅದ್ಭುತ..!
ಸುತ್ತಲಿನಷ್ಟೂ ಪರಿಸರವನ್ನು ಸುಂದರವಾಗಿಸುವ ಈ ಪ್ರೀತಿ ಒಮ್ಮೆ ಎದೆ ಹೊಕ್ಕಿತೆಂದರೆ ಹಾದಿಬದಿಯ ತಂಗಡಿಯೂ ಪಾರಿಜಾತವೇ..
ಕಡುಬಿಸಿಲೂ ಎಳಸು ಮುಂಜಾವೇ..ನಿದ್ದೆಯಿರದ ನಡುರಾತ್ರಿಗಳ ನೆನಪುಗಳಿಗೂ ಕೆನ್ನೆ ಹೊನ್ನು ಮೆತ್ತಿದ ಬೆಳಗು.

ಪ್ರೀತಿಸುವುದೆಂದರೆ ಸುಮಾನಿಯಲ್ಲ.
ಸುಮ್ಮನೆ ಅವನನ್ನೇ ಬದುಕುವುದು..
ಅವನನ್ನೇ ಉಣ್ಣುವುದು,ಉಡುವುದು,ಉಸುರುವುದು..
ಇದು ಹೀಗೆ ಆಗುವುದಕ್ಕೂ ಅದೃಷ್ಟ ಬೇಕು.
ಒಮ್ಮೆ ಹೀಗೆ ಪ್ರೀತಿಸಿದ ಮೇಲೆ ಜಗದ ಯಾವ ಸೌಂದರ್ಯ ತಜ್ಞರ ಬಳಿಯೂ ಸಿಗಲಾರದ ಸೊಬಗು ,ಕಾಂತಿ ವ್ಯಕ್ತಿತ್ವಕ್ಕೆ ಬಂದಿರುತ್ತದೆ..
ಇದು ಪ್ರೀತಿಯ ವೈಶಿಷ್ಟ್ಯ.

ತನ್ನನ್ನು ತಾನು ಪ್ರೀತಿಸಿಕೊಳ್ಳುವುದು ಇಲ್ಲಿ ಬಹುಮುಖ್ಯ..
ಒಂದು ಪ್ರೀತಿಯಲ್ಲಿ ಮುಳುಗಿದ ಮೇಲೆ ಇದೆಲ್ಲವೂ ಗುರುವಿಲ್ಲದೆ ಕಲಿಯುವ ವಿದ್ಯೆ.

ತಾನು ಸುಖವಾಗಿರುವುದಕ್ಕೆ,ತನ್ನ ಪರಿಸರ ಪ್ರಕೃತಿ ಸುರಕ್ಷಿತವಾಗುಳಿಯುವುದಕ್ಕೆ,ತನ್ನ ಸಂತೋಷದಿಂದ ಜಗತ್ತು ಸಂಭ್ರಮಿಸುವುದಕ್ಕೆ ನಾವು ಪ್ರೀತಿಸಬೇಕು..
ಯಾರಾನ್ನಾದರೂ,ಯಾವುದನ್ನಾದರೂ ಅಕಾರಣ ಪ್ರೀತಿಸಬೇಕು..

ಒಮ್ಮೆ ಪ್ರೀತಿಸಿ ನೋಡಿ..!
ಜಗತ್ತೇ ಪ್ರೀತಿಯಲ್ಲಿ ಅದ್ದಿಕೊಂಡಂತೆ ಕಂಡು ಬದುಕು ಅಚ್ಚರಿಯೆನಿಸುವುದು..!!

ಈ ಬರಹದೊಂದಿಗೆ ಪ್ರಕಟವಾಗಿರುವ ಚಿತ್ರ ರಚಿಸಿದವರು ಕಿರಣ್ ಮಾಡಾಳು. ಅರಸೀಕರೆ ತಾಲೂಕು ಮಾಡಾಳು ಗ್ರಾಮದ ಕಿರಣ್ ಫೈನ್ ಆರ್ಟ್ಸ್ ಓದಿದ್ದಾರೆ.ಇಲ್ ಸ್ಟ್ರೇಷನ್, ವ್ಯಂಗ್ಯ ಚಿತ್ರ , ಕಂಪ್ಯೂಟರ್ ಗ್ರಾಫಿಕ್ಸ್ ಎಲ್ಲದರಲ್ಲೂ ಅವರಿಗೆ ಪರಿಣತಿ. ಆಧ್ಯಾತ್ಮ ಸಂಗತಿಗಳ ಬಗ್ಗೆ ವಿಶೇಷ ಪಾಂಡಿತ್ಯ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಲಾವಿದರಾಗಿ ದುಡಿದ ಅನುಭವ. ಪ್ರವಾಸ ಮತ್ತು ಅಧ್ಯಯನದಲ್ಲಿ ಆಸಕ್ತಿ.ಅವರ ಸಂಪರ್ಕ ಸಂಖ್ಯೆ 9964655156

Previous article350 ಉಪನ್ಯಾಸಕರ ನೇಮಕ: ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಡಿಸಿಎಂ ಸೂಚನೆ
Next articleರಾಣಿ ಚನ್ನಮ್ಮ ವಿವಿಯಲ್ಲಿ ವಿದೇಶಿ ಭಾಷೆ ಅಧ್ಯಯನ ವಿಭಾಗ ತೆರೆಯಲು ನಿರ್ಧಾರ
ನಂದಿನಿ ಹೆದ್ದುರ್ಗ
ನಂದಿನಿ ಹೆದ್ದುರ್ಗ ಅವರ ವಾಸ ಹಾಸನ ಜಿಲ್ಲೆ ಆಲೂರು ತಾಲೂಕಿನ ಹೆದ್ದುರ್ಗ ಎನ್ನುವ ಪುಟ್ಟ ಹಳ್ಳಿಯಲ್ಲಿ. ಬದುಕಿಗೆ ಕಾಫಿ ತೋಟ,ಕೃಷಿ. ಆಸಕ್ತಿ ಕೃಷಿ,ಕಾವ್ಯ,ಸಾಹಿತ್ಯ, ತಿರುಗಾಟ. ಮೂವತ್ತೈದನೇ ವಯಸಿನಲ್ಲಿ ಬರವಣಿಗೆ ಪ್ರಾರಂಭ. ಮೊದಲಿಗೆ ಹಾಸನದ ಪ್ರಾದೇಶಿಕ ಪತ್ರಿಕೆ ಜನತಾ ಮಾಧ್ಯಮಕ್ಕೆ ಅಂಕಣ ಬರಹಗಳನ್ನು ಬರೆಯುವುದರೊಂದಿಗೆ ಸಾಹಿತ್ಯಾರಂಭ. 2016 ಅಕ್ಟೋಬರ್ ನಲ್ಲಿ ಸಕಲೇಶಪುರದಲ್ಲಿ ನಡೆದಂತಹ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ "ಅಸ್ಮಿತೆ" ಎನ್ನುವ ಕವನ ಸಂಕಲನ ಖ್ಯಾತ ಕವಿ ಬಿ ಆರ್ ಲಕ್ಷ್ಮಣರಾವ್ ಅವರಿಂದ ಬಿಡುಗಡೆ. ಆ ನಂತರದಲ್ಲಿ ಅವರ ಮಾರ್ಗದರ್ಶನದಲ್ಲಿ ಕವಿತೆ ಬರೆಯಲು ಆರಂಭ. ಜನವರಿ 1,2017ರಲ್ಲಿ ಮೊದಲ ಕವನಗಳ ಗುಚ್ಛ ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟ. 2018ಜನವರಿಯಲ್ಲಿ ಬೆಂಗಳೂರಿನ ಅಂಕಿತ ಪ್ರಕಾಶನದಿಂದ ಎರಡನೇ ಸಂಕಲನ "ಒಳಸೆಲೆ"ಬಿಡುಗಡೆ. ಕನ್ನಡದ ಖ್ಯಾತ ವಿಮರ್ಶಕಿ ಎಮ್ ಎಸ್ ಆಶಾದೇವಿಯವರ ಮುನ್ನುಡಿ ಮತ್ತು ಸುವಿಖ್ಯಾತ ಕವಿ ಎಚ್ ಎಸ್ ವೆಂಕಟೇಶ ಮೂರ್ತಿಯವರ ‌ಬೆನ್ನುಡಿಯಿರುವ ಈ ಸಂಕಲನಕ್ಕೆ ಶಿವಮೊಗ್ಗದ ಕರ್ನಾಟಕ ಸಂಘ ಕೊಡುವ ಪ್ರತಿಷ್ಠಿತ ಜಿ ಎಸ್ ಎಸ್ ಪ್ರಶಸ್ತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಗೌರವದ ಪುರಸ್ಕಾರ.ಮಂಡ್ಯದ ಅಡ್ಡ್ವೆಸರ್ ಕೊಡಮಾಡುವ ಅಡ್ಡ್ವೆಸರ್ ವರ್ಷದ ಸಂಕಲನ ಪುರಸ್ಕಾರ ದೊರೆತಿದೆ. ದಸರಾಕವಿಗೋಷ್ಠಿ,ಆಳ್ವಾಸ್ ನುಡಿಸಿರಿ, ಬಾಗಲಕೋಟೆಯ ನುಡಿಸಡಗರ ,ಧಾರವಾಡದಲ್ಲಿ ನಡೆದ ರಾಜ್ಯ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಕವನ ವಾಚನ. ಇತ್ತೀಚೆಗೆ ಪ್ರಕಟವಾದ ಬ್ರೂನೊ..ದಿ ಡಾರ್ಲಿಂಗ್ ಎನ್ನುವ ಪ್ರಬಂಧ ಸಂಕಲನ ರತಿಯ ಕಂಬನಿ ಎಂಬ ಕವಿತಾ ಸಂಕಲನ ಮತ್ತು ಇಂತಿ ನಿನ್ನವಳೇ ಆದ ಪ್ರೇಮಕಥೆಗಳ ಸಂಕಲನ ಅಪಾರ ಓದುಗರ ಮೆಚ್ಚುಗೆ ಗಳಿಸಿವೆ.. ರತಿಯ ಕಂಬನಿ ಸಂಕಲನಕ್ಕೆ ಪ್ರತಿಷ್ಠಿತ ಅಮ್ಮ ಪ್ರಶಸ್ತಿ ಲಭಿಸಿದೆ.

3 COMMENTS

  1. ಸದಾ ಸಂತೋಷದಿಂದಿರಲು ಜೀವದ್ರವ್ಯಗಳೊಂದಿಗೆ ಭಾವನಾತ್ಮಕ ನಂಟುಗಳೊಡಣೆ ವಿಶ್ಲೇಷಣೆ ಚೆನ್ನಾಗಿದೆ

LEAVE A REPLY

Please enter your comment!
Please enter your name here