25.8 C
Karnataka
Friday, May 22, 2026
    Home Blog Page 136

    ಧೀರನು ನಾನೇ,ಶೂರನು ನಾನೇ, ಅತಿ ಸುಂದರನೂ ನಾನೇ

    ಧೀರನು ನಾನೇ,ಶೂರನು ನಾನೇ ಅತಿ ಸುಂದರನೂ ನಾನೇ…ನಾಳೆ ಪಾಂಡವರ ಪಕ್ಷ ಸೇರುವವನೂ ನಾನೇ……

    ನಮ್ಮ ಮನೆಯ ಹಿಂದಿದ್ದ ಗೌಡರ ಗೋದಾಮಿನಲ್ಲಿ ತಡ ರಾತ್ರಿವರೆಗೆ ನಡೆಯುತ್ತಿದ್ದ ನಾಟಕದ ತಾಲೀಮು ನನ್ನನ್ನು ನಿದ್ದೆ ಮಾಡಲು ಬಿಡುತ್ತಿದ್ದಿಲ್ಲ. ಮಾರ್ಚ್ ನಲ್ಲಿ ಇರುತ್ತಿದ್ದ 7ನೇ ತರಗತಿಯ ಜಿಲ್ಲಾ ಮಟ್ಟದ ಪರೀಕ್ಷೆಯ ಸಲುವಾಗಿ ನವೆಂಬರ್, ಡಿಸೆಂಬರ್ ತಿಂಗಳ ಚಳಿಯಲ್ಲಿಯೇ ನಮ್ಮ ಮನೆಯ ಕಟ್ಟೆಯ ಮೇಲೆ ಅಪ್ಪನ ಮೇಲುಸ್ತುವಾರಿಕೆಯಲ್ಲಿ ತಯಾರಿ ನಡೆಯುತ್ತಿತ್ತು . ಗೊಲ್ಲರ ಮರಿಚಿತ್ತಜ್ಜನ ಮಗ ಚಿತ್ತ, ಮುದ್ದಪ್ಪನ ಮಗ ಕಾಳ, ತುಂಬರಗುದ್ದಿಯ ತಿಪ್ಪೇಸ್ವಾಮಿ, ಮಲ್ಲಾಪುರದ ರುದ್ರಮುನಿ,ಮಿತ್ರ ಸ್ವಾಮಿ ಇವರೆಲ್ಲ ನಮ್ಮ ಮನೆಯಲ್ಲೇ ಠಿಕಾಣಿ. ಗಲಾಟೆ ಮಾಡದೆ ಓದಬೇಕು ಅಂತ ಹೇಳಿ ಅಪ್ಪ ಹತ್ತು ಗಂಟೆಗೆ ಮಲಗಿದರೆ ಇನ್ನು ನಮ್ಮದೇ ಸಾಮ್ರಾಜ್ಯ.ಮನಸ್ಸು ಪೂರ್ಣ ನಾಟಕದ ಸದ್ದಿನತ್ತ ವಾಲುತ್ತಿತ್ತು. (ಚಳಿಯಲ್ಲಿ ರಾತ್ರಿ ಹೊಲಗಳಿಗೆ ನುಗ್ಗಿ,ಶೇಂಗಾ ಸುಟ್ಟು ತಿಂದದ್ದು,ಕಬ್ಬಿನ ಗದ್ದೆಗಳಲ್ಲಿ ಕಬ್ಬು ತಿಂದದ್ದೂ ಆಗಿನ ರಾತ್ರಿಗಳಲ್ಲೇ.)

    ನನಗೋ ನಾಟಕದ ತಾಲೀಮಿನ ಪಿಯಾನೋ ಶಬ್ಧ ಸೂಜಿಗಲ್ಲಿನಂತೆ ಸೆಳೆಯುತ್ತಿತ್ತು. ಅದನ್ನ ನುಡಿಸುತ್ತಿದುದು ನಮ್ಮೂರ ಬಡಿಗೇರ ರಾಮಚಂದ್ರಪ್ಪ. ಕುರುಡನಾದ ಆತನ ಅಪ್ಪ (ಹೆಸರು ನೆನಪಾಗ್ತಾ ಇಲ್ಲ) ಪಕ್ಕದಲ್ಲೇ ಕೂತು ಆಗಾಗ ವಿವರಣೆ ಕೊಡ್ತಿದ್ದ. ಹಾರ್ಮೋನಿಯಂ ಜೊತೆ ರಾಗ ಬೆರೆಸಿ, ಹಾಡೋರನ್ನ ನೋಡೋದಂತೂ ನನಗೆ ಬಲು ಅಚ್ಚುಮೆಚ್ಚು. ಜೊತೆಗೆ ಆ ಅಂಧ ವೃದ್ಧರಿಗೆ ಹಾರ್ಮೋನಿಯಂ ನ ಕಪ್ಪು ಬಿಳುಪು ತುಣುಕುಗಳು ಕಾಣುವುದಾದರೂ ಹೇಗೆ? ಕಣ್ಮುಚ್ಚಿಕೊಂಡೇ ನುಡಿಸುವ ಆತನ ಕೈಬೆರಳ ಓಡಾಟ ನನ್ನನ್ನು ಮೂಕನನ್ನಾಗಿ ಮಾಡಿತ್ತು. ಎಲ್ಲರೂ ಮಲಗಿದಾಗ ನಾನೊಬ್ಬನೇ ಅಲ್ಲಿಗೆ ಹೋಗಿ ನಿಲ್ಲುತ್ತಿದ್ದೆ. ಒಬ್ಬ ಹೋದರೆ ಯಾರೂ ಏನೂ ಅನ್ನುತ್ತಿರಲಿಲ್ಲ. ನಮ್ಮ ಕಪಿ ಗುಂಪು ಹೊಯ್ತೋ ಅಟ್ಟಿಸಿಕೊಂಡು ಬಂದು ಬಿಡುತ್ತಿದ್ದರು.

    ನಮ್ಮೂರಲ್ಲಿ ಆಗಾಗ ಪೌರಾಣಿಕ,ಸಾಮಾಜಿಕ ನಾಟಕಗಳನ್ನು, ಬಯಲಾಟಗಳನ್ನು ನಮ್ಮೂರ ಯುವಕರೇ ಆಡುತ್ತಿದ್ದರು. ನಾಟಕ ನಿರ್ದೇಶನ ಮಾಡುತ್ತಿದ್ದ ನಾಟಕ ಮೇಷ್ಟ್ರಗಳು ಇದ್ದರು. ಅವರಲ್ಲಿ ಯರ್ರಯ್ಯನಹಳ್ಳಿ ಓಬಯ್ಯ(ಇವರು ಶಾಲಾ ಮಾಸ್ತರೂ),ಗೌರಿಪುರದ ಗೌಡ್ರ ಬಸಪ್ಪ,ಚೋರನೂರಿನ ಹಾರ್ಮೋನಿಯಂ ಶಂಕರಪ್ಪ ಪ್ರಸಿದ್ದರು. ನಮ್ಮೂರ ಬಡಿಗೇರ ಮನೆಯಲ್ಲಿದ್ದ ದೊಡ್ಡ ಹಾರ್ಮೋನಿಯಂ ಫೇಮಸ್ಸು. ಬೇರೆಯವರೆಲ್ಲ ಹಳ್ಳಿ ಲೆವೆಲ್ ಆದರೆ,ಚೋರನೂರು ಶಂಕರಪ್ಪ ಕೂಡ್ಲಿಗಿ,ಹೊಸಪೇಟೆ,ಮರಿಯಮ್ಮನಹಳ್ಳಿ ನಾಟಕ ತಂಡಗಳು,ಹೆಂಗಸರು,ನಾಟಕ ಸೀನರಿ ಕಂಪನಿಗಳ ಜೊತೆ ಬಲು ಓಡಾಟ. ಇವರನ್ನೆಲ್ಲ ಅಪರೂಪಕ್ಕೆ ನೋಡೋದೂ ಒಂದು ವಿಶೇಷ ನಮಗಾಗ,ಈಗಿನ ಸೆಲೆಬ್ರಿಟಿಗಳ ತರಹ! ನಾಟಕ ಆಡ್ತಾರಂತೆ ಅಂತ ಸುತ್ತ ಊರುಗಳಿಗೆ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿ ಬಿಡುತ್ತಿತ್ತು.

    ಹೆಸರು,ಪಾತ್ರಧಾರಿಗಳ ಆಯ್ಕೆ,ದಿನಾಂಕ, ತಾಲೀಮು ಮನೆಗಳ ಆಯ್ಕೆಯೇ ಬಲು ರೋಮಾಂಚನ ಪ್ರಸಂಗಗಳು. ಆ ಮೂರ್ನಾಲ್ಕು ತಿಂಗಳು ನಾಟಕ ಮೇಷ್ಟ್ರಿಗೆ ಇನ್ನಿಲ್ಲದ ಗೌರವ! ತಾಲೀಮು ಮನೆಗಳ ಪ್ರಸಂಗಗಳೇ ನಾಟಕಕ್ಕಿಂತಲೂ ಹೆಚ್ಚು ಮುದ ನೀಡುತ್ತಿದ್ದವು. ಹಾರ್ಮೋನಿಯಂ ಮಾಸ್ಟರ್ ಗಳು ಅಲ್ಲಿಯೇ ಹಾಗೆಯೇ ರಾಗ ಸಂಯೋಜಿಸಿ,ಪ್ರಸಂಗಕ್ಕೆ ತಕ್ಕ ಅರ್ಥ ಬರುವ ಹಾಡು ಕಟ್ಟಿ ಅವುಗಳನ್ನು ಪಾತ್ರಧಾರಿಗಳಿಂದ ಹಾಡಿಸುತ್ತಿದ್ದ ಪರಿ ನನ್ನನ್ನು ಬಹುವಾಗಿ ಆಕರ್ಷಿಸುತ್ತಿತ್ತು. ಹೆಣ್ಣು ಪಾತ್ರಧಾರಿಗಳ ಜೊತೆ ನಮಗೂ ಒಂದು ಹಾಡನ್ನು ಹಾಕಿ ಅಂತ ಪಾತ್ರಿಗಳು ನಾಟಕ ಮಾಸ್ಟರ್ ಗಳನ್ನು ಕೇಳಿಕೊಳ್ಳೋದು,ಅವರಿಗೆ ಹೋಟೆಲ್ ಗಳಲ್ಲಿ ಉಪಚರಿಸೋದು ನೋಡಲು ಬಲು ಸೊಗಸಾಗಿರುತ್ತಿತ್ತು.

    ಇನ್ನು ತಾಲೀಮು ಮನೆಗಳಿಗೆ ಭೇಟಿ ನೀಡಿ ಅದರ ಅಣಕನ್ನು ಶಾಲೆಯಲ್ಲಿ ಮಾಡಿ ತೋರಿಸುತ್ತಿದ್ದ ಪ್ರತಿಭಾವಂತರೂ ನಮ್ಮಲ್ಲಿ ಇದ್ದರು. ರಕ್ತ ರಾತ್ರಿ ನಾಟಕದ ಹಾಸ್ಯ ಪಾತ್ರಧಾರಿಗಳ ಹಾಡಿನ ತುಣುಕೇ ಈ ಧೀರನು ನಾನೇ….ಶೂರನು ನಾನೇ… ಇದನ್ನಂತೂ ನಮ್ಮ ಸಹಪಾಠಿಗಳಾದ ನವಲಪ್ಪರ ಓಂಕಾರಿ, ಚನ್ನವೀರಯ್ಯರ ಸಿದ್ಲಿಂಗ ನಮ್ಮ ಶಾಲೆಯ ವಾರಾಂಡ ದಲ್ಲಿ ಬಲು ಸೊಗಸಾಗಿ ಅಭಿನಯಿಸಿ ತೋರಿಸುತ್ತಿದ್ದರು. ಬಿಡುವಾದಾಗ ರಾಮದುರ್ಗದ ಕೃಷ್ಣಮೂರ್ತಿ ಮೇಷ್ಟ್ರು ಲೇ ಆ ಓಂಕಾರಿ,ಸಿದ್ಲಿಂಗ ರನ್ನು ಕರೆಯಿರಿ ಅಂದ್ರೆ ಸಾಕು,ನಾವೆಲ್ಲ ಓಡಿಹೋಗಿ ಇವರನ್ನ ಅಪರಾಧಿಗಳ ತರಹ ಹಿಡ್ಕೊಂಡು ಬರ್ತಿದ್ದೆವು. ಯುದ್ಧದಲ್ಲಿ ಪಾಂಡವರ ಪಕ್ಷ ಸೇರಲು ಸಾಮಾನ್ಯನೂ ಎಷ್ಟೊಂದು ಉತ್ಸುಕನಾಗಿರುತ್ತಿದ್ದನು ಅನ್ನುವುದನ್ನು ಗ್ರಾಮೀಣ ನಾಟಕ ನಿರ್ದೇಶಕರು ಈ ಹಾಡು,ಕುಣಿತದಿಂದ ಹೇಳುವ ಪರಿ ನನಗೆ ಖುಷಿ ನೀಡುತ್ತಿತ್ತು.ಧೀರನು ನಾನೇ….ಅಂತ ಒಬ್ಬ ಅಂದ್ರೆ,ಮತ್ತೊಬ್ಬ ಶೂರನು ನಾನೇ…ಅಂತ ಹದವಾಗಿ ಕುಣಿದು ನಮ್ಮನ್ನು ರಂಜಿಸುತ್ತಿದ್ದರು. ಇವರಿಗೆ ಪ್ರತ್ಯೇಕವಾಗಿ ಯಾರೂ ಕಲಿಸಿರಲಿಲ್ಲ ಅನ್ನೋದು ಗಮನಿಸಬೇಕಾದ ವಿಷಯ.

    ಇನ್ನು ನಾಟಕದ ದಿನದ ಸಂಭ್ರಮವಂತೂ ಊರಲ್ಲಿಯ ಎಲ್ಲರಲ್ಲಿಯೂ ಸಡಗರ ತರುತ್ತಿತ್ತು. ಹಿಂದಿನ ದಿನವೇ ಬಂದು ವೇದಿಕೆ ಸಜ್ಜು ಮಾಡುತ್ತಿದ್ದ ಸೀನರಿಯವರು, ಧ್ವನಿ ವರ್ಧಕ ಇಟ್ಟು ಹಾಡನ್ನು ಹಾಕುತ್ತಿದ್ದರು. ಏನೋ ಸಂಭ್ರಮ,ಸಂತೋಷ. ನಮ್ಮೂರ ಒಂದೇ ಒಂದು ಟ್ರಾನ್ಸ ಫಾರ್ಮರ್ ಇದ್ದ ಜೋಡಿ ಕರೆಂಟ್ ಕಂಬ ಈ ವೇದಿಕೆಗೆ ಹತ್ತಿರವೇ ಇರುತ್ತಿತ್ತು. ಕರೆಂಟ್ ಏನಾದ್ರು ಹೆಚ್ಚು ಕಡಿಮೆ ಆಗಿ ಕೈಕೊಡದ ಹಾಗೆ ನೋಡಿಕೊಳ್ಳಲು ಆಗಿನ ಇಲೆಕ್ಟ್ರಿಷಿಯನ್, ಮೆಕಾನಿಕ್ ಜಿನ್ನಿನ ರುದ್ರಪ್ಪ ಜೂಟಿ ಕೋಲು ಹಿಡಿದು ಅಡ್ಡಾಡುವ ಸಡಗರ ಕಣ್ಮುಂದೆ ಇದೆ.

    ಕನ್ನಡದ ಕಲಾಭಿಮಾನಿಗಳೇ,ಕಲಾ ರಸಿಕರೇ ಈ ದಿನ ರಕ್ತರಾತ್ರಿ ಎಂಬ ಸುಂದರ ಪೌರಾಣಿಕ ನಾಟಕ. ಝಗಮಗಿಸುವ ವಿದ್ಯುದ್ದೀಪಗಳ ಅಲಂಕಾರದಲ್ಲಿ,ಇಟಗಿ ವೀರಭದ್ರೇಶ್ವರ ಕಂಪನಿಯ ಸುಂದರವಾದ ಸೀನರಿಗಳಿಂದ ಅಲಂಕೃತಗೊಂಡ ವೇದಿಕೆಯಲ್ಲಿ, ನಮ್ಮೂರ ಗೌಡ್ರ ಗೋದಾಮಿನ ಮುಂದಿನ ಜಾಗದಲ್ಲಿ.ಬನ್ನಿ,ನೋಡಿ ಆನಂದಿಸಿ,ಮರೆತು ಮಲಗಿ,ಮರುದಿನ ಮರುಗಬೇಡಿ ಅಂತ ನಮ್ಮೂರ ಐನಾರ ಶಂಭಣ್ಣ ಎತ್ತಿನ ಗಾಡಿಯಲ್ಲಿ ಕುಳಿತುಕೊಂಡು ಮೈಕಲ್ಲಿ ಹೇಳುತ್ತಿದ್ದರೆ, ನಾವೆಲ್ಲ ಗಾಡಿಯ ಹಿಂದೆ ಓಡುತ್ತಿದ್ದೆವು. ಇತ್ತ ನಾಟಕದ ವೇದಿಕೆ ಸಂಪೂರ್ಣ ಆಡಳಿತ ನಮ್ಮ ಐನಾರ ಸಿದ್ಲಿಂಗಣ್ಣ ನದು. ಚೋರನೂರಿನ ಹೈಸ್ಕೂಲ್ ನಲ್ಲಿ ಲ್ಯಾಬ್ ಅಸಿಸ್ಟೆಂಟ್ ಅಂತ ಸೇರಿದ್ದ ಸಿದ್ಲಿಂಗಣ್ಣ ನಮ್ಮೂರಿನ ಹುಡುಗ,ಹುಡುಗಿಯರನ್ನು ಹೈಸ್ಕೂಲ್ ಗೆ ಕರೆದುಕೊಂಡು ಹೋಗಿ,ಕರೆತರುತ್ತಿದ್ದರು ಕೂಡಾ. ಊರಿನ ಯಾವುದೇ ಸಭೆ,ಸಮಾರಂಭಗಳಲ್ಲಿ ಮೊದಲು ಭಾಗಿ. ಉರಿಮೀಸೆ ತಿರುವುತ್ತಾ ಕೈಯಲ್ಲಿ ಬೆತ್ತ ಹಿಡಿದು, ಹಾರ್ಮೋನಿಯಂ ಇಡಲು ವೇದಿಕೆಯ ಮುಂದೆ ಮಾಡಿದ್ದ ಗುಂಡಿಯ ಹತ್ತಿರ ನಾವ್ಯಾರೂ ಹೋಗದಂತೆ ತಡೆಯುತ್ತಿದ್ದರು. ಇನ್ನು ಊರೆಂಬ ಊರಿನ ಎಲ್ಲ ಪಡ್ಡೆ ಗಂಡಸರೂ ಕೂಡ್ಲಿಗಿ ಅಥವಾ ಹೊಸಪೇಟೆಯಿಂದ ಬಂದಿರುತ್ತಿದ್ದ ದ್ರೌಪದಿ ಪಾತ್ರಧಾರಿಯನ್ನು ನೋಡಲು ವೇದಿಕೆ ಹಿಂಬದಿಯ ಬಣ್ಣದ ಕೋಣೆಗೆ ನೂಕು ನುಗ್ಗಲು!!!

    ಇನ್ನು ನಾಟಕದ ಮಧ್ಯೆ ಆಗ ತಾನೇ ಬೇರೆ ಊರುಗಳಲ್ಲಿ ಮುಗಿದಿದ್ದ ನಾಟಕಗಳ ನೆಚ್ಚಿನ ಪಾತ್ರಗಳ ಡೈಲಾಗ್ ಗಳನ್ನು ಆಯಾಯ ಪಾತ್ರಧಾರಿಗಳು ಬಂದಿದ್ದರೆ ಹೇಳುತ್ತಿದ್ದರು. ಎಚ್ಚಮ ನಾಯಕನ ಡೈಲಾಗ್ ಆಗ ಭಾರೀ ಫೇಮಸ್…..ಯವನರು ಊರು ಸುಡುವಾಗ ಎಲ್ಲಿ ಅಡಗಿದ್ದೆಯೋ ವಿರೂಪಾಕ್ಷಾ… ಅಂದಾಗ ಬರುತ್ತಿದ್ದ ಹಿಮ್ಮೇಳದ ಸದ್ದು ಎಲ್ಲರನ್ನು ಬೆಚ್ಚಿ ಬೀಳಿಸುತ್ತಿತ್ತು. ನಂತರ ಊರ ಗಣ್ಯರನ್ನು,ಚೋರನೂರಿನ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಿ ಪಾತ್ರಧಾರಿಗಳಿಗೆ ಮುಯ್ಯಿ ಕೊಡುವುದೇ ಒಂದು ಕಾರ್ಯಕ್ರಮ! ಒಂದು ರೂಪಾಯಿ,ಎರಡು ರೂಪಾಯಿ ಮುಯ್ಯಿಗಳೇ ಹೆಚ್ಚು. ದ್ರೌಪದಿ ಪಾತ್ರಕ್ಕೆ ಮಾತ್ರ ಐದು ರೂಪಾಯಿಗಳ ಮುಯ್ಯಿಗಳೂ ಇರುತ್ತಿದ್ದವು!

    ಹಿತವಾದ ಚಳಿಯಲ್ಲಿ, ಮೈತುಂಬಾ ಹೊದ್ದು,ಬೆಳಗಾಗುವ ವರೆಗೆ ನೋಡುವ ನಾಟಕಗಳ ಸೋಬಗೇ ವರ್ಣಾತೀತ. ಹೆಚ್ಚು ಓದಿರದಿದ್ದ ಆಗಿನ ಜನರ ಸಾಹಿತ್ಯ, ಭಾಷಾ ಉಚ್ಚಾರಣೆ, ವ್ಯಾಕರಣ, ನುಡಿ ಸಂಪತ್ತು ನನ್ನನ್ನು ಒಮ್ಮೊಮ್ಮೆ ಬೆರಗು ಗೊಳಿಸುತ್ತಿತ್ತು. ಹಲವಾರು ಹಳೆಗನ್ನಡದ ಪದ್ಯಗಳಂತೂ ಅವರ ಬಾಯಲ್ಲಿ ಅಚ್ಚರಿ ಹುಟ್ಟಿಸುವ ಮಟ್ಟಿಗೆ ಉಚ್ಚರಿಸಲ್ಪಡುತ್ತಿದ್ದವು. ರೇಡಿಯೋದಲ್ಲಿ ಬರುತ್ತಿದ್ದ ಕನ್ನಡ ಚಿತ್ರ ಗೀತೆಗಳ ಸಾಹಿತ್ಯ, ನಮ್ಮ ಗ್ರಾಮೀಣ ನಾಡಿನ ಇಂತಹ ನಾಟಕಗಳು ನನ್ನಲ್ಲಿ ಸಾಹಿತ್ಯದ ಅಥವಾ ಅಕ್ಷರದ ಬೀಜ ಬಿತ್ತಿದವೇನೋ ಅಂತ ಬಹಳಷ್ಟು ಸಾರಿ ನನಗೆ ಅನ್ನಿಸಿದೆ. ಏನೇ ಆಗಲಿ ತೆರೆಮರೆಯಲ್ಲಿ ಇದ್ದು,ತಮ್ಮ ಕಾಯಕ ಬೀರಬಹುದಾದ ಯಾವುದೇ ಪರಿಣಾಮಗಳ ಅರಿವಿಲ್ಲದೇ ಹವ್ಯಾಸ ಅಂತಲೋ, ಜೀವನೋಪಾಯ ಅಂತಲೋ ಕನ್ನಡಮ್ಮನ ಸೇವೆ ಮಾಡಿದ ಇಂತಹ ಚೇತನಗಳಿಗೆ ನನ್ನ ನಮನಗಳು.

    ಈ ಪ್ರಬಂಧದೊಂದಿಗೆ ಪ್ರಕಟವಾಗಿರುವ ವ್ಯಂಗ್ಯ ಚಿತ್ರ ಬರೆದವರು ನಾಡಿನ ಪ್ರತಿಭಾವಂತ ಕಲಾವಿದ ಸಂತೋಷ್ ಸಸಿಹಿತ್ಲು.ಉಡುಪಿ ಜಿಲ್ಲೆಯ ಕುಂದಾಪುರದವರಾದ ಸಸಿಹಿತ್ಲು ಓದಿದ್ದು ಭಂಡಾರ್ಸ್ ಕರ್ ಸೈನ್ಸ್ ಮತ್ತು ಆರ್ಟ್ಸ್ ಕಾಲೇಜಿನಲ್ಲಿ. ಯಾವುದೇ ಕಲಾ ಶಿಕ್ಷಣದ ಹಿನ್ನೆಲೆ ಇಲ್ಲದೆ ಸ್ವಂತ ಆಸಕ್ತಿಯಿಂದ ಚಿತ್ರ ಬರೆಯುವುದನ್ನು ರೂಢಿಸಿಕೊಂಡವರು. ಮುಂಬೈನಲ್ಲಿ ಕೆಲ ಕಾಲವಿದ್ದಾಗ ಅಲ್ಲಿ ಅದಕ್ಕೊಂದು ಶಾಸ್ತ್ರೀಯ ಆಯಾಮ ದೊರೆಯಿತು. ವ್ಯಂಗ್ಯಚಿತ್ರ, ಇಲ್ಸ್ ಸ್ಟ್ರೇಷನ್ , ಭಾವ ವ್ಯಂಗ್ಯಚಿತ್ರ ..ಇತ್ಯಾದಿಗಳನ್ನು ಸೊಗಸಾಗಿ ಬಿಡಿಸಬಲ್ಲರು. ನಾಡಿನ ಹಲವು ಮುಂಚೂಣಿ ಪತ್ರಿಕೆಯಲ್ಲಿ ದುಡಿದ ಅನುಭವ.

    ಅತಿಥಿ ಉಪನ್ಯಾಸಕರ ಸೇವೆ ವರ್ಷದ ಮಟ್ಟಿಗೆ ಮುಂದುವರಿಸಿ ಆದೇಶ

    ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ 2019-20ನೇ ಸಾಲಿನಲ್ಲಿ ಕಾರ್ಯನಿರ್ವಹಿಸಿರುವ ಅತಿಥಿ ಉಪನ್ಯಾಸಕರ ಸೇವೆಯನ್ನು 2020-21ನೇ ಸಾಲಿಗೂ ಮುಂದುವರಿಸಿ ರಾಜ್ಯ ಸರಕಾರ ಸೋಮವಾರ ಆದೇಶ ಹೊರಡಿಸಿದೆ.

    ಕೋವಿಡ್‌-19 ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರ ಸೇವೆ ಅಗತ್ಯವಾಗಿದ್ದು, ಹೀಗಾಗಿ ಅವರನ್ನು ಇನ್ನೊಂದು ಅವಧಿಗೆ ಮುಂದುವರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

    Photo by Sharon McCutcheon on Unsplash

    ಎಂದಿನಂತೆ ಎಸ್ಎಸ್ಎಲ್ ಸಿ , ಪಿಯುಸಿ ಪರೀಕ್ಷೆ; ಶಾಲಾವಧಿ ಗಮನಿಸಿ ಪಠ್ಯ ಕ್ರಮ ನಿಗದಿ

    ಡಿಸೆಂಬರ್ ವರೆಗೂ ಶಾಲೆಗಳ ಆರಂಭವಿಲ್ಲ

    ಈ ವರ್ಷ ನಮ್ಮ ಪರೀಕ್ಷೆಗಳ ಗತಿ ಏನಾಗುವುದೋ ಎಂಬ ಚಿಂತೆಯಲ್ಲಿದ್ದ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಗೊಂದಲವನ್ನು ಶಿಕ್ಷಣ ಸಚಿವರು ಬಗೆ ಹರಿಸಿದ್ದಾರೆ. ಪ್ರತಿವರ್ಷಕ್ಕಿಂತ ಸ್ವಲ್ಪ ತಡವಾಗಿಯಾದರೂ ಈ ವರ್ಷ ನಡೆದಂತೆ (2019-20) ಬರುವ ವರ್ಷವೂ (2020-21)ಎಸ್ ಎಸ್ ಎಲ್ ಸಿ ಮತ್ತು ದ್ವೀತಿಯ ಪಿಯು ಪರೀಕ್ಷೆಗಳು ನಡೆಯಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಇಂದು ಸ್ಪಪ್ಟಪಡಿಸಿದ್ದಾರೆ.

    ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ಶಾಲೆಗಳನ್ನು ಆರಂಭಿಸುವ ಕುರಿತಂತೆ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯ ನಂತರ ಅವರು ಈ ವಿಷಯ ತಿಳಿಸಿದರು.

    ಈಗಾಗಲೇ ಸಂವೇದಾ ಪಾಠ ಸರಣಿಯಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ತರಗತಿಗಳಿಗೆ ನಿಗದಿಪಡಿಸಿದ ತರಗತಿಗಳು ಪರೀಕ್ಷಾ ಸಮಯದೊಳಗೆ ಪೂರ್ಣಗೊಳ್ಳಲಿವೆ. ಆದರೆ ಇಂತಹ ಪಾಠಗಳು ನೇರ ತರಗತಿಗಳಷ್ಟು ಪರಿಣಾಮಕಾರಿಯಾಗಿರುವುದಿಲ್ಲವಾದ್ದರಿಂದ ಪರೀಕ್ಷೆ ಸಮಯದೊಳಗೆ ಈ ಶೈಕ್ಷಣಿಕ ವರ್ಷದಲ್ಲಿ ದೊರೆಯಬಹುದಾದ ಶಾಲಾವಧಿಯನ್ನು ಗಮನದಲ್ಲಿಟ್ಟುಕೊಂಡು ಪಠ್ಯಕ್ರಮಗಳನ್ನು ನಿಗದಿಪಡಿಸಲಾಗುವುದು ಎಂದು ಸುರೇಶ್ ಕುಮಾರ್ ವಿವರಿಸಿದರು.ಉಳಿದಂತೆ ಶಾಲೆಗಳನ್ನು ಆರಂಭಿಸುವ ಕುರಿತಂತೆ ಡಿಸೆಂಬರ್ ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

    ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟಗಳಾದ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸುವ ಸಂಬಂಧದಲ್ಲಿ ವಿಶೇಷ ಚರ್ಚೆ ನಡೆಯಿತು. ಆರೋಗ್ಯ ತಜ್ಞರನ್ನೊಳಗೊಂಡ ತಾಂತ್ರಿಕ ಸಲಹಾ ಸಮಿತಿ ರಾಜ್ಯದಲ್ಲಿ ಕೊರೋನಾ ಪ್ರಸರಣದ ಏರಿಳಿತ ಹಿನ್ನೆಲೆಯಲ್ಲಿ ಈ ತರಗತಿಗಳನ್ನು ಆರಂಭಿಸುವ ಕುರಿತು ಡಿಸೆಂಬರ್ ಕೊನೆಯವಾರದ ತನಕ ಕಾದು ನೋಡಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್ ಅವರು ತಿಳಿಸಿದ್ದರಿಂದ ಮಾನ್ಯ ಮುಖ್ಯಮಂತ್ರಿಯವರು ಡಿಸೆಂಬರ್ ಮೂರನೇ ವಾರದಲ್ಲಿ ಈ ಕುರಿತು ಇನ್ನೊಮ್ಮೆ ಸಭೆ ಸೇರಿ ಅಂದಿನ ಪರಿಸ್ಥಿತಿಯನ್ನು ಅವಲೋಕಿಸಿ ತೀರ್ಮಾನಕ್ಕೆ ಬರೋಣವೆಂದು ಅಭಿಪ್ರಾಯಪಟ್ಟರು ಎಂದು ಸಚಿವರು ತಿಳಿಸಿದರು.

    ಈಗಾಗಲೇ ಶಾಲಾ ಕಾಲೇಜುಗಳು ಆರಂಭವಾಗಿರುವುದು ತಡವಾಗಿರುವುದರಿಂದ ಬಾಲ್ಯವಿವಾಹ ಮತ್ತು ಬಾಲಕಾರ್ಮಿಕ ಪದ್ಧತಿಯಂತಹ ಸಾಮಾಜಿಕ ಸಮಸ್ಯೆಗಳು ಹೆಚ್ಚಾಗುತ್ತಿದೆ. ಶಾಲೆಗಳನ್ನು ಆರಂಭಿಸಬೇಕೆಂಬ ಪೋಷಕರ ಒತ್ತಾಯ ಹಾಗೆಯೇ ಈಗಲೇ ಶಾಲಾರಂಭ ಬೇಡ ಎಂಬ ಇನ್ನೊಂದು ವರ್ಗದ ಒತ್ತಾಯದ ಹಿನ್ನೆಲೆಯಲ್ಲಿ ಶಿಕ್ಷಣ ಕ್ಷೇತ್ರದ ಪಾಲುದಾರರಾದ ಮಕ್ಕಳು, ಪೋಷಕರು, ಎಸ್‍ಡಿಎಂಸಿ, ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು, ಶಿಕ್ಷಣ ತಜ್ಞರು, ಖಾಸಗಿ ವಿದ್ಯಾಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಎಲ್ಲ ಸ್ತರದ ಜನರೊಂದಿಗೆ ಚರ್ಚೆ ನಡೆಸಿ ಈ ಎಲ್ಲ ಅಭಿಪ್ರಾಯಗಳನ್ನು ಮುಖ್ಯಮಂತ್ರಿಗಳ ಮುಂದೆ ಮಂಡಿಸಿ ಒಂದು ತೀರ್ಮಾನಕ್ಕೆ ಬರಬೇಕೆಂಬ ಹಿನ್ನೆಲೆಯಲ್ಲಿ ಇಂದಿನ ಸಭೆ ನಡೆಯಿತು. ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯದಂತೆ ಡಿಸೆಂಬರ್ ಮೂರನೇ ವಾರದಲ್ಲಿ ಈ ಕುರಿತು ಪುನಃ ಸಭೆ ಸೇರಿ ತೀರ್ಮಾನಕ್ಕೆ ಬರಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

    ಶಾಲೆಗಳನ್ನು ಆರಂಭಿಸಲೇಬೇಕೆಂಬುದು ನಮ್ಮ ಆಗ್ರಹವೂ ಅಲ್ಲ, ಆ ಕುರಿತು ಹಠವೂ ಇಲ್ಲ, ಮಕ್ಕಳ ಜೀವವೇ ಪ್ರಮುಖವಾದ್ದರಿಂದ ಡಿಸೆಂಬರ್ ರವರೆಗೂ ಶಾಲೆಗಳ ಆರಂಭದ ನಿರ್ಧಾರಕ್ಕೆ ಬರಲಾಗಿಲ್ಲ. ಆದಾಗ್ಯೂ ಈಗಾಗಲೇ ಮಕ್ಕಳ ಕಲಿಕಾ ನಿರಂತರತೆಗೆ ಇಲಾಖೆ ಉಪಕ್ರಮಗಳಾದ ಸಂವೇದಾ- ಚಂದನ ಪಾಠ ಸರಣಿ, ಯೂ-ಟ್ಯೂಬ್, ವಾಟ್ಸ್ ಆಪ್‍ಗಳ ಬೋಧನೆಗಳು ಎಂದಿನಂತೆ ಮುಂದುವರೆಯಲಿವೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    ಕೋವಿಡ್ ನಂತರದ ಲಾಕ್ ಡೌನ್ ಸೇರಿದಂತೆ ಕೈಗೊಂಡ ಯಾವುದೇ ಉಪಕ್ರಮಗಳ ಉದ್ದೇಶ ಜೀವನಕ್ಕಿಂತ ಜೀವನವೇ ಪ್ರಮುಖ ಎಂಬ ಅಂಶದ ಹಿನ್ನೆಲೆಯಲ್ಲಿ ಶಾಲಾರಂಭದ ವಿಷಯದಲ್ಲೂ ಜೀವವೇ ಪ್ರಮುಖ ಎಂಬ ಅಂಶಕ್ಕೆ ಸಭೆಯಲ್ಲಿ ಒತ್ತು ನೀಡಲಾಯಿತು ಎಂದು ಅವರು ತಿಳಿಸಿದರು.

    ಕೋವಿಡ್ ಪ್ರಸರಣ ಕಡಿಮೆ ಇರುವ ಯಾದಗಿರಿಯಂತಹ ಕೆಲವು ಜಿಲ್ಲೆಗಳಲ್ಲಾದರೂ ಈ ತರಗತಿಗಳನ್ನ ಆರಂಭಿಸುವ ಕುರಿತಂತೆ ಚರ್ಚೆ ನಡೆಯಿತಾದರೂ ಕೋವಿಡ್ ಪ್ರಸರಣದ ಏರಿಳಿತಗಳ ಹಿನ್ನೆಲೆಯಲ್ಲಿ ಯಾವುದೇ ಒಂದು ಭಾಗದಲ್ಲಿ ಶಾಲೆಗಳನ್ನು ಪ್ರಸ್ತುತ ಪರಿಸ್ಥಿತಿಯಲ್ಲಿ ಆರಂಭಿಸುವುದು ಉಚಿತವಲ್ಲ ಎಂದು ಸಭೆ ಅಭಿಪ್ರಾಯಪಟ್ಟಿತು ಎಂದು ಸಚಿವರು ವಿವರಿಸಿದರು.

    ಒಂದರಿಂದ 7ನೇ ತರಗತಿವರೆಗೆ ಶಾಲೆಗಳನ್ನು ತಕ್ಷಣವೇ ಪ್ರಾರಂಭಿಸುವುದು ನಮ್ಮ ಉದ್ದೇಶವಾಗಿಲ್ಲ. ಈ ಕುರಿತು ಸದ್ಯದ ಪರಿಸ್ಥಿತಿಯಲ್ಲಿ ಆ ವಿಚಾರವನ್ನು ಮಾಡಿಲ್ಲ. ನಾವು ಪ್ರಮುಖವಾಗಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸುವ ಕುರಿತಂತೆ ಮಾತ್ರವೇ ಇಂದಿನ ಸಭೆ ಕರೆಯಲಾಗಿತ್ತು. ವಿಶೇಷವಾಗಿ ನಮ್ಮ ಗ್ರಾಮೀಣ ಪ್ರದೇಶದ ಹಾಗೂ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸಭೆ ಕರೆಯಲಾಗಿತ್ತು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.

    ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್. ಆರ್. ಉಮಾಶಂಕರ್ ಶಾಲೆಗಳ ಆರಂಭಕ್ಕೆ ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತು ಪ್ರಾತ್ಯಕ್ಷಿಕೆ ಮಂಡಿಸಿ, ಈ ಸಂಬಂಧದಲ್ಲಿ ವಿವಿಧ ಇಲಾಖೆಗಳು ನೀಡಬಹುದಾದ ಸಹಕಾರವನ್ನು ಕೋರಿದರು.

    ಸಭೆಯಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ತ.ಮ. ವಿಜಯಭಾಸ್ಕರ್, ಬಿಬಿಎಂಪಿ ಆಯುಕ್ತರು ಸೇರಿದಂತೆ ಸೇರಿದಂತೆ ಶಿಕ್ಷಣ, ನಗರಾಭಿವೃದ್ಧಿ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಹಿಂದುಳಿದ‌ ವರ್ಗ ಕಲ್ಯಾಣ, ಸಮಾಜಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

    ಆರ್ಥಿಕ ಸಾಕ್ಷರತೆಯ ಮೂಲಕ ಆರ್ಥಿಕ ಸುರಕ್ಷತೆ

    ಬ್ಯಾಂಕಿಂಗ್‌ ವ್ಯವಸ್ಥೆಯು ಸುರಕ್ಷಿತವೇ ಎಂಬ ಪ್ರಶ್ನೆಯನ್ನು ಮತ್ತೆ ಹುಟ್ಟು ಹಾಕಿದ LVB ಪ್ರಕರಣ

    ನಮ್ಮ ಅಗತ್ಯಗಳನ್ನು, ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಈಗಿನ ದಿನಗಳಲ್ಲಿ ಮುಖ್ಯವಾಗಿ ಆರ್ಥಿಕ ಸಾಮರ್ಥ್ಯದ ಬೆಂಬಲವಿರಲೇಬೇಕು. ಸ್ವಂತವಾದ ಆರ್ಥಿಕ ಸಾಮರ್ಥ್ಯದ ಬೆಂಬಲವಿಲ್ಲದಿದ್ದಲ್ಲಿ ಬಾಹ್ಯವಾಗಿ ಅದನ್ನು ಪಡೆದು ಉದ್ದೇಶಿತ ಗುರಿ ಸಾಧಿಸಲು ಆರ್ಥಿಕ ಅಗತ್ಯತೆಯನ್ನು ಪೂರೈಸಿಕೊಳ್ಳಲು ಸಾಲದ ಮೊರೆಹೋಗಬೇಕಾಗಬಹುದು. ಈ ರೀತಿಯ ಸಾಲದ ಸೌಲಭ್ಯಗಳನ್ನು ಒದಗಿಸಲು ಕಟಿಬದ್ಧಸಂಸ್ಥೆಗಳೆಂದರೆ ಬ್ಯಾಂಕುಗಳು ಮತ್ತು ಖಾಸಗಿ ಲೇವಾದೇವಿ ಸಂಸ್ಥೆಗಳು. ಬ್ಯಾಂಕ್‌ ಗಳು ಈ ರೀತಿಯ ಅಗತ್ಯತೆಗಳನ್ನು ಪೂರೈಸಲು ಹಣವೆಲ್ಲಿಂದ ಬರುತ್ತದೆ ಎಂದರೆ ಅವು ಸಾರ್ವಜನಿಕರಿಂದ ಮತ್ತು ಸಂಸ್ಥೆಗಳ ಠೇವಣಿಗಳಿಂದ. ಹಲವಾರು ಭಾರಿ ಬೇಡಿಕೆ ಹೆಚ್ಚಾದಾಗ ಬ್ಯಾಂಕ್‌ ಗಳೂ ಸಹ ತಮ್ಮ ಅಗತ್ಯದ ಹೆಚ್ಚುವರಿ ಹಣವನ್ನು ಪಡೆಯಲು ಸಾಧ್ಯವಿದೆ. ಆ ಹೆಚ್ಚುವರಿ ಹಣವನ್ನು ಪೂರೈಸುವ ಮೂಲಕ ಬ್ಯಾಂಕಿಂಗ್‌ ಚಟುವಟಿಕೆಯನ್ನು ನಿರಾತಂಕವಾಗಿ ಮುನ್ನಡೆಸಲು ಬೆಂಬಲವಾಗಿ ನಿಲ್ಲುವ ಸಂಸ್ಥೆ ಎಂದರೆ ಅದು ಭಾರತೀಯ ರಿಸರ್ವ್‌ ಬ್ಯಾಂಕ್‌ ಆಗಿದೆ. ಬ್ಯಾಂಕ್‌ ಗಳು ತಮ್ಮಲ್ಲಿರುವ ಹೆಚ್ಚುವರಿ ಹಣವನ್ನು‌ ರಿಸರ್ವ್‌ ಬ್ಯಾಂಕ್ ನಲ್ಲಿ ಠೇವಣಿ ಇಡುತ್ತವೆ ಮತ್ತು ಅಗತ್ಯವಿದ್ದಾಗ ಅವಶ್ಯಕವಿರುವ ಹೆಚ್ಚುವರಿ ಹಣದ ಸಾಲವನ್ನು ಪಡೆಯುತ್ತವೆ. ಭಾರತೀಯ ರಿಸರ್ವ್‌ ಬ್ಯಾಂಕ್‌ ಈ ರೀತಿ ಬ್ಯಾಂಕ್‌ ಗಳ ಚಟುವಟಿಕೆಗೆ ಬೆಂಬಲಿಸುವುದರೊಂದಿಗೆ ಅವುಗಳ ನಿಯಂತ್ರಕ ಸಂಸ್ಥೆಯೂ ಆಗಿದೆ. ದೇಶದ ಆರ್ಥಿಕತೆಯನ್ನು ಮುಂದೆ ಸಾಗಿಸಲು, ಒದಗಿ ಬಂದ ಆರ್ಥಿಕ ಹಿನ್ನಡೆ ಅಥವಾ ಹಿಂಜರಿತಗಳನ್ನು ನಿಭಾಯಿಸಿ ಸಹಜ ಪರಿಸ್ಥಿತಿಗೆ ತರುವ ಹೊಣೆ ಭಾರತೀಯ ರಿಸರ್ವ್‌ ಬ್ಯಾಂಕ್‌ ದಾಗಿದೆ.

    ಬ್ಯಾಂಕಿಂಗ್‌ ಇತಿಹಾಸದ ಸಂಕ್ಷಿಪ್ತ ಪರಿಚಯ:

    1951 ರಲ್ಲಿ ಭಾರತದಲ್ಲಿ 566 ಬ್ಯಾಂಕ್‌ ಗಳಿದ್ದವು. 1960 ರಲ್ಲಿ ದುರ್ಬಲವಾಗಿರುವ ಬ್ಯಾಂಕ್‌ ಗಳನ್ನು ವಿಲೀನಗೊಳಿಸಿ ಸುಭದ್ರವಾದ ವ್ಯವಸ್ಥೆಯನ್ನು ನೀಡುವ ಅಧಿಕಾರವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಗೆ ನೀಡಲಾಯಿತು. ಈ ಕಾರಣ ವಿವಿಧ ಕಾರ್ಯಗಳ ಮೂಲಕ 1969 ರಲ್ಲಿ ಬ್ಯಾಂಕ್‌ ಗಳ ಸಂಖ್ಯೆಯನ್ನು 85 ಕ್ಕೆ ಇಳಿಸಲಾಯಿತು. ಆಗಿನ ಸೀಮಿತ ದೇಶೀಯ ಚಟುವಟಿಕೆಗಳ ಕಾರಣ ಸರಳವಾದ, ಸುಸೂತ್ರವಾದ ಪದ್ಧತಿಯಲ್ಲಿ ಕಾರ್ಯ ನಿರ್ವಹಣೆಯಾಗುತ್ತಿತ್ತು. ಆ ಸಂದರ್ಭದಲ್ಲಿ ರೂ.50 ಕೋಟಿಗೂ ಹೆಚ್ಚು ಠೇವಣಿಯಿದ್ದ ಬ್ಯಾಂಕ್‌ ಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು. ಈ ಅನುಭವದಿಂದ ಮುಂದೆ 1980 ರಲ್ಲಿ ರೂ.200 ಕೋಟಿ ಠೇವಣಿ ಹೊಂದಿರುವ ಬ್ಯಾಂಕ್‌ ಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು. ಅಲ್ಲಿಂದ ಭಾರತೀಯ ರಿಸರ್ವ್‌ ಬ್ಯಾಂಕ್‌ ತನ್ನ ಕಾರ್ಯವನ್ನು ಸುಸೂತ್ರವಾಗಿ ನಿರ್ವಹಿಸಿ ಅನೇಕ ಬಿಗಿ ನೀತಿಗಳನ್ನು ಜಾರಿಗೊಳಿಸಿ ಭಾರತೀಯ ಬ್ಯಾಂಕ್‌ ಗಳ ಮೇಲಿನ ನಂಬಿಕೆಯನ್ನು ಹೆಚ್ಚಿಸಿತು.

    ಈಗಿನ ಸಂಕೀರ್ಣಮಯ ದಿನಗಳಲ್ಲಿ ಸುರಕ್ಷಿತ ಎಂಬುದು ನಾವೇ ನಿರ್ಮಿಸಿಕೊಳ್ಳಬೇಕಾಗಿದೆ. ಸರ್ಕಾರಗಳಾಗಲಿ, ನಿಯಂತ್ರಕರಾಗಲಿ ತೆಗೆದುಕೊಳ್ಳುವ, ಆದೇಶಿಸುವ ಕಾರ್ಯಗಳಿಂದಾಗಲಿ ಸುರಕ್ಷಿತತೆ ಸಾಧ್ಯವಿಲ್ಲ, ಅದಕ್ಕೆ ಪೂರಕವಾಗಿ ನಾವು ನಮ್ಮ ಕೌಶಲ್ಯ, ಅರಿವು, ತಿಳಿವು, ಅನುಭವ, ಪರಿಸರ ಮುಂತಾದ ವಾಸ್ತವ ಅಂಶಗಳನ್ನಾಧರಿಸಿ, ಅರಿತು ತೆಗೆದುಕೊಳ್ಳುವ ನಿರ್ಧಾರಗಳಿಂದ ಮಾತ್ರ ಸಾಧ್ಯ. ಆರ್ಥಿಕ ಸಾಕ್ಷರತೆಯ ಮೂಲಕ ಮಾತ್ರ ಆರ್ಥಿಕ ಸುರಕ್ಷತೆ ಪಡೆಯಲು ಸಾಧ್ಯ.

    ಸುರಕ್ಷಿತ ಎಂಬುದು ಎಷ್ಟರಮಟ್ಟಿಗೆ ಸರಿ:

    ಷೇರುಪೇಟೆಯಲ್ಲಿ ಹೂಡಿಕೆ ಮಾಡಿದರೆ ಅಪಾಯ ಹೆಚ್ಚು ಎಂಬ ಕಲ್ಪನೆ ಹೆಚ್ಚಿನವರಲ್ಲಿದೆ. ಆದರೆ ಈಗಿನ ದಿನಗಳಲ್ಲಿ ಸುರಕ್ಷಿತ ಎಂಬುದು ಕೇವಲ ನಿಘಂಟಿನಲ್ಲಿದೆ. ಬ್ಯಾಂಕ್‌ಗಳಲ್ಲಿ ತಮ್ಮ ಹಣ ಇರಿಸಿದಲ್ಲಿ ಸುರಕ್ಷಿತ ಎಂಬುದು ಹಿಂದಿನಿಂದ ಬಂದಿರುವ ಸಾಂಪ್ರದಾಯಿಕ ಚಿಂತನೆಯಾಗಿದೆ. ಇದು ಸ್ವಲ್ಪಮಟ್ಟಿಗೆ ಸರಿಯೂ ಹೌದು.

    ಇದಕ್ಕೆ ಮುಖ್ಯ ಕಾರಣ ನಮಗೆ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್‌ಬ್ಯಾಂಕ್‌ಗಳ ಮೇಲಿರುವ ನಂಬಿಕೆಯಾಗಿದೆ ಮತ್ತು ಅವುಗಳು ತೆಗೆದುಕೊಳ್ಳುವ ನಿರ್ಧಾರ ಮತ್ತು ಜಾರಿಗೊಳಿಸುವ ನಿಯಮಗಳೇ ಕಾರಣ. ಆದರೂ ದುರ್ಬಲ ಬ್ಯಾಂಕ್‌ಗಳನ್ನು ಬಲಿಷ್ಠ ಬ್ಯಾಂಕ್‌ನಲ್ಲಿ ವಿಲೀನಗೊಳಿಸಲು 1960 ರಲ್ಲಿ ಭಾರತೀಯ ರಿಸರ್ವ್‌ಬ್ಯಾಂಕ್‌ಗೆ ನೀಡಿದ ಅಧಿಕಾರ ವನ್ನು ಆರ್‌ಬಿ ಐ ಈ ಕೆಳಗಿನ ಬ್ಯಾಂಕ್‌ಗಳ ಮೇಲೆ ಪ್ರಯೋಗಿಸಿದೆ. ಆಗ ಬ್ಯಾಂಕ್‌ ಗಳು ವಿಫಲವಾದಲ್ಲಿ ಠೇವಣಿದಾರರ ಹಿತ ಕಾಪಾಡಲು, ಗರಿಷ್ಠ ರೂ.1 ಲಕ್ಷದವರೆಗೂ ವಿಮಾ ಸೌಲಭ್ಯ ಒದಗಿಸಲಾಗಿತ್ತು. ಈ ಮಿತಿಯನ್ನು ಇತ್ತೀಚೆಗೆ ರೂ.5 ಲಕ್ಷಕ್ಕೆ ಏರಿಸಲಾಗಿದೆ.

    ನೆಡಂಗಡಿ ಬ್ಯಾಂಕ್‌ ಲಿಮಿಟೆಡ್:

    2002 ರಲ್ಲಿ ನೆಡಂಗಡಿ ಬ್ಯಾಂಕ್‌ ಎಂಬ ಖಾಸಗಿ ಬ್ಯಾಂಕ್‌ ತೊಂದರೆಗೊಳಗಾದ ಕಾರಣ ಠೇವಣಿದಾರರ ಹಿತದಿಂದ ಆರ್‌ಬಿ ಐ ಆ ಬ್ಯಾಂಕ್‌ನ್ನು ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ನಲ್ಲಿ ವಿಲೀನಗೊಳಿಸುವ ಮೂಲಕ ಠೇವಣಿದಾರರ ಹಿತವನ್ನು ಕಾಪಾಡಿತು. ಈ ವಿಲೀನವಾಗಿ 18 ವರ್ಷವಾದರೂ ಇದುವರೆಗೂ ಷೇರುದಾರರಿಗೆ ಯಾವುದೇ ರೀತಿಯ ಪರಿಹಾರ ದೊರೆತಿಲ್ಲ. ಆದರೆ ಠೇವಣಿದಾರರಿಗೆ ಯಾವುದೇ ರೀತಿಯ ಹಾನಿಯಾಗದಂತೆ ನೋಡಿಕೊಳ್ಳಲಾಯಿತು. ಎಷ್ಠರಮಟ್ಟಿಗೆ ಈ ವೀಲೀನ ಕಾರ್ಯ ನಡೆಸಲಾಯಿತೆಂದರೆ ಠೇವಣಿದಾರರ ವಿಮಾ ನಿಗಮದ ಅವಶ್ಯಕತೆಯೇ ಇರಲಿಲ್ಲ.

    ಗ್ಲೋಬಲ್‌ಟ್ರಸ್ಟ್‌ಬ್ಯಾಂಕ್‌:

    2004 ರಲ್ಲಿ ಗ್ಲೋಬಲ್‌ಟ್ರಸ್ಟ್‌ಬ್ಯಾಂಕ್‌ವಿಫಲಗೊಂಡಾಗ ಠೇವಣಿದಾರರ ಹಿತ ಕಾಪಾಡಲು ಆ ಬ್ಯಾಂಕ್‌ನ್ನು ಓರಿಯಂಟಲ್ ‌ಬ್ಯಾಂಕ್ ‌ಆಫ್‌ ಕಾಮರ್ಸ್‌ನಲ್ಲಿ ವಿಲೀನಗೊಳಿಸಲಾಯಿತು. ಇಲ್ಲಿಯೂ ಸಹ ಠೇವಣಿದಾರರಿಗೆ ತೊಂದರೆಯಾಗದಂತೆ ನಿರ್ವಹಿಸಿದ ಹೆಮ್ಮೆ ಆರ್‌ಬಿ ಐ ಗೆ ಸಲ್ಲುತ್ತದೆ. ಷೇರುದಾರರಿಗೆ ಮಾತ್ರ ಇದುವರೆಗೂ ಯಾವುದೇ ಪರಿಹಾರ ದೊರೆತಿಲ್ಲ. ಈ ಪ್ರಕ್ರಿಯಗೂ ಮುನ್ನ 2001 ರಲ್ಲಿ ಈ ಬ್ಯಾಂಕ್‌ ನ್ನು ಅಂದಿನ ಯು ಟಿ ಐ ಬ್ಯಾಂಕ್‌ ನಲ್ಲಿ ವಿಲೀನಗೊಳಿಸುವ ಪ್ರಸ್ತಾಪವೂ ತೇಲಿಬಂದು, ಈ ಬ್ಯಾಂಕಿನ ಮೌಲೀಕರಣಮಾಡಲಾಗಿತ್ತು.

    ಅದರಂತೆ 9 ಯು ಟಿ ಐ ಬ್ಯಾಂಕ್‌ ನ ಷೇರುಗಳಿಗೆ 4 ಗ್ಲೋಬಲ್‌ ಟ್ರಸ್ಟ್‌ ಬ್ಯಾಂಕ್‌ ಷೇರು ನೀಡುವ ಶಿಫಾರಸನ್ನು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಇನ್ವೆಸ್ಟ್ ಮೆಂಟ್‌ ಬ್ಯಾಂಕರ್‌ ಗಳು ಮಾಡಿದ್ದವಾದರೂ ಮೇನೇಜ್‌ ಮೆಂಟ್‌ ತಿರಸ್ಕರಿಸಿತು. ಅಂದಿನ ಯು ಟಿ ಐ ಬ್ಯಾಂಕ್‌ ಇಂದಿನ ಆಕ್ಸಿಸ್‌ ಬ್ಯಾಂಕ್‌ ಆಗಿದೆ.

    ಯುನೈಟೆಡ್‌ ವೆಸ್ಟರ್ನ್ ಬ್ಯಾಂಕ್‌‌ಲಿಮಿಟೆಡ್:

    2006 ರಲ್ಲಿ ಯುನೈಟೆಡ್‌ವೆಸ್ಟರ್ನ್ ಬ್ಯಾಂಕ್‌‌ದುರ್ಬಲಗೊಂಡ ಕಾರಣ ಆ ಬ್ಯಾಂಕನ್ನು ಐ ಡಿ ಬಿ ಐ ಬ್ಯಾಂಕ್‌ನಲ್ಲಿ ವಿಲೀನಗೊಳಿಸಲಾಯಿತು. ಈ ಸಂದರ್ಭದಲ್ಲಿ ಯುನೈಟೆಡ್‌ವೆಸ್ಟರ್ನ್‌ಬ್ಯಾಂಕ್‌ ಷೇರುದಾರರಿಗೂ ಪ್ರತಿ ಷೇರಿಗೆ ರೂ.28 ರಂತೆ ನೀಡಲಾಯಿತು. ಅಂದರೆ ಠೇವಣಿದಾರರ ಹಿತ ಕಾಪಾಡುವುದರೊಂದಿಗೆ ಷೇರುದಾರರ ಹಿತವನ್ನೂ ಕಾಪಾಡಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳ ಮೇಲಿನ ನಂಬಿಕೆ ಮತ್ತಷ್ಟು ಬಲಿಷ್ಠವಾಯಿತು

    ಯೆಸ್‌ಬ್ಯಾಂಕ್‌‌ಪ್ರಕರಣ:

    ಆದರೆ ಈ ವರ್ಷದ ಮಾರ್ಚ್‌ನಲ್ಲಿ ಯೆಸ್‌ಬ್ಯಾಂಕ್‌ದುರ್ಬಲಗೊಂಡ ಸುದ್ಧಿಯ ಕಾರಣ ಆ ಬ್ಯಾಂಕ್‌ಗೆ ಎಸ್‌ಬಿ ಐ ನೇತೃತ್ವದಲ್ಲಿ ವಿವಿಧ ಬ್ಯಾಂಕ್‌ಗಳು ಸೇರಿ ಆರ್ಥಿಕ ಬೆಂಬಲ ನೀಡಿದವು. ಈ ಸಂಪನ್ಮೂಲ ಕ್ರೋಡೀಕರಣ ಸಾಲದೆಂಬಂತೆ, ಬ್ಯಾಂಕ್‌ಉತ್ತುಂಗದಲ್ಲಿದ್ದಾಗ ವಿತರಿಸಿದ ಅಡಿಷನಲ್‌ಟೈರ್‌ 1 ಬಾಂಡ್‌ಗಳನ್ನು ಸಂಪೂರ್ಣವಾಗಿ ರದ್ದುಮಾಡಿ, ಹೂಡಿಕೆಯನ್ನು ಶೂನ್ಯವಾಗಿಸಿತು. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಈ ಕ್ರಮವು ಸಾರ್ವಜನಿಕವಾಗಿ ಬ್ಯಾಂಕಿಂಗ್‌ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಅಲ್ಲಾಡಿಸಿದೆ.

    ಯೆಸ್‌ಬ್ಯಾಂಕ್‌ನ ಈ ಹಗರಣವು ಅಲ್ಲಿಗೇ ನಿಲ್ಲದೆ, ಕ್ಯಾಪಿಟಲ್‌ಮಾರ್ಕೆಟ್‌ನ ಇತಿಹಾಸದಲ್ಲೇ ಮೊದಲ ಬಾರಿ ಬ್ಯಾಂಕ್‌ನ 75% ರಷ್ಟು ಚಲಾವಣೆಯಿಂದ ಸ್ಥಗಿತಗೊಳಿಸಿದ ಕ್ರಮವು ಅನೇಕ ಸಣ್ಣ ಹೂಡಿಕೆದಾರರು ತೊಂದರೆಗೊಳಗಾಗಿದ್ದಲ್ಲದೆ ಈ ಕ್ರಮದ ನಂತರ ಕಂಡ ಷೇರಿನ ಬೆಲೆ ಏರಿಳಿತಗಳ ಲಾಭದ ಅವಕಾಶದಿಂದ ವಂಚಿತರಾಗುವಂತಾಯಿತು. ಈ ಕ್ರಮವು ಪೇಟೆಯ ಮೂಲಭೂತ ಗುಣವಾದ ಷೇರುಗಳ ದಿಢೀರ್‌ ನಗದೀಕರಣ( creating ready liquidity) ಕ್ಕೆ ಅಪವಾದವಾಗಿದೆ.

    ಲಕ್ಷ್ಮೀ ವಿಲಾಸ್‌ ಬ್ಯಾಂಕ್:

    ಯೆಸ್‌ ಬ್ಯಾಂಕ್‌ ನ‌ ಹಗರಣವು ಇನ್ನೂ ಮಾಸದೆ ಇರುವಾಗಲೇ 94 ವರ್ಷಗಳ ಇತಿಹಾಸವುಳ್ಳ ಲಕ್ಷ್ಮೀ ವಿಲಾಸ್‌ ಬ್ಯಾಂಕ್‌ ದುರ್ಬಲಗೊಂಡಿರುವ ಕಾರಣ ಅದನ್ನು ಮೊರೆಟೋರಿಯಂ ನಲ್ಲಿರಿಸಿದೆ. ಅದನ್ನು ಸಿಂಗಾಪುರ ಮೂಲದ ಡಿ ಬಿ ಎಸ್‌ ಬ್ಯಾಂಕ್‌ ಇಂಡಿಯಾದಲ್ಲಿ ವಿಲೀನಗೊಳಿಸುವ ಪ್ರಸ್ತಾಪವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಇಟ್ಟಿದೆ. ಈ ಹಿಂದೆ ಇಂಡಿಯಾ ಬುಲ್‌ ಹೌಸಿಂಗ್‌ ಫೈನಾನ್ಸ್‌ ತದ ನಂತರ ಕ್ಲಿಕ್ಸ್‌ ಕ್ಯಾಪಿಟಲ್ ಗಳು ಈ ಬ್ಯಾಂಕ್‌ ಸ್ವಾದೀನಪಡಿಸಿಕೊಳ್ಳುವಲ್ಲಿ ವಿಫಲವಾಗಿವೆ. ಸುಮಾರು 563 ಶಾಖೆಗಳನ್ನು, 970 ಎ ಟಿ ಎಂ ಗಳನ್ನು ಹೊಂದಿರುವ ಈ ಬ್ಯಾಂಕ್‌ 2019 ರ ಸೆಪ್ಟೆಂಬರ್‌ ತಿಂಗಳಿಂದಲೂ ಪ್ರಾಂಪ್ಟ್‌ ಕರೆಕ್ಟಿವ್‌ ಆಕ್ಷನ್‌ ನಲ್ಲಿ ಭಾರತೀಯ ರಿಸರ್ವ್‌ ಬ್ಯಾಕ್‌ ಸೇರಿಸಿದೆ. ವಿಲೀನ ಯೋಜನೆಯಲ್ಲಿ ಠೇವಣಿದಾರರಿಗೆ ಯಾವುದೇ ರೀತಿ ಹಾನಿಯಾಗಲಾರದಾದರೂ ಬ್ಯಾಂಕ್‌ ವಿತರಿಸಿರುವ ಬಾಂಡ್‌ ಗಳ ಮತ್ತು ಅಸಂಖ್ಯಾತ ಷೇರುದಾರರ ಹಿತವನ್ನು ಕಾಪಾಡಲಾಗುವುದು ಎಂಬುದನ್ನು ಕಾದುನೋಡಬೇಕಾಗಿದೆ.

    ಈ ಎಲ್ಲಾ ಬೆಳವಣಿಗೆಗಳು ಮತ್ತು ಘಟನೆಗಳ ಕಾರಣ, ಅಪಾಯವೆಂಬುದು ಎಲ್ಲೆಡೆ ಇದ್ದು ಸುರಕ್ಷತೆ ಅಥವಾ ಗ್ಯಾರಂಟೀ ಎಂಬುದಿಲ್ಲವಾದ ಕಾರಣ ಎಚ್ಚರಿಕೆಯಿಂದ ವ್ಯವಹರಿಸಿದರೆ ಷೇರು ಪೇಟೆ ಹೂಡಿಕೆಯೇ ಸ್ವಲ್ಪಮಟ್ಟಿನ ಸುರಕ್ಷಿತ ವಿಧವಾಗಿದೆ ಎನ್ನಬಹುದು. ಅದರಲ್ಲೂ ಉತ್ತಮವಾಗಿ ಕಾರ್ಯ ನಿರ್ವಹಿಸುವ ಹೂಡಿಕೆದಾರ ಸ್ನೇಹಿ ಕಂಪನಿಗಳು ಯೋಗ್ಯವೆನ್ನಬಹುದು. ಲಾರ್ಜ್‌ಕ್ಯಾಪ್‌ಕಂಪನಿಗಳಲ್ಲಿ ಹೂಡಿಕೆಗೆ ಆದ್ಯತೆ ಇರಲಿ. ಇವು ಒಂದು ರೀತಿಯ ಡ್ರೈ ಫ್ರೂಟ್ಸ್‌ನಂತೆ ಹೆಚ್ಚಿನ ಅವಧಿಯವರೆಗೂ ಯೋಗ್ಯವಾಗಿರುತ್ತವೆ. ಈಗಿನ ಪೇಟೆಗಳು ಪ್ರವೇಶದಲ್ಲಿ ಹೂಡಿಕೆಯಾದರೂ ನಂತರದಲ್ಲಿ ಅವು ಅಪೂರ್ವವಾದ ಅವಕಾಶಗಳನ್ನೊದಗಿಸಿದಾಗ ವ್ಯವಹಾರದಂತೆ ಲಾಭವನ್ನು ಕೈಗೆಟುಕಿಸಿಕೊಳ್ಳುವುದು ಸುರಕ್ಷಿತವಾದ ವಿಧವಾಗಿವೆ.

    ಆದ್ದರಿಂದಲೇ Value pick – Prfit book ಸದಾ ಹಸಿರಾದ ಸಮೀಕರಣವಾಗಿದೆ. Invest it and forget it ಎಂಬುದು ಈಗಿನ ದಿನಗಳಲ್ಲಿ ತಪ್ಪು ಕಲ್ಪನೆ. Invest and track it ಎಂಬುದು ಈಗ ಅನ್ವಯವಾಗುವ ಸೂತ್ರ

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಕೋವಿಡ್ ಲಸಿಕೆ ಭ್ರಷ್ಟಾಚಾರ ಕೂಪ ಆಗದಿರಲಿ ಎಂದ ಸದ್ಗುರು

    ಕೋವಿಡ್ ಲಸಿಕೆಯನ್ನು ಮುಂದೆ ಮಾರುಕಟ್ಟೆಗೆ ಬಿಟ್ಟಾಗ ಯಾರು ಆರ್ಥಿಕವಾಗಿ ಸಮರ್ಥರೋ ಅವರಿಗೆ ಸೂಕ್ತ ಬೆಲೆ ನಿಗದಿ ಮಾಡಿ ಲಭ್ಯವಾಗುವಂತೆ ಮಾಡಬೇಕು. ಅದರಿಂದ ಬಂದ ಹಣದಲ್ಲಿ ಯಾರು ಆರ್ಥಿಕವಾಗಿ ಹಿಂದುಳಿದಿದ್ದಾರೋ ಅವರಿಗೆ ಉಚಿತವಾಗಿ ಕೊಡುವ ವ್ಯವಸ್ಥೆಯಾಗಬೇಕು ಎಂದು ಸದ್ಗುರು ಜಗ್ಗಿ ವಾಸುದೇವ್ ಅಭಿಪ್ರಾಯಪಟ್ಟರು.

    “ಬೆಂಗಳೂರು ತಂತ್ರಜ್ಞಾನ ಮೇಳ-2020”ದ ಕೊನೆಯ ದಿನವಾದ ಶನಿವಾರ “ಸ್ವಾಸ್ಥ್ಯಕ್ಕಾಗಿ ತಂತ್ರಜ್ಞಾನಗಳಲ್ಲಿ ಹೂಡಿಕೆ” ಕುರಿತ ಸಂವಾದ ಗೋಷ್ಠಿಯಲ್ಲಿ ಅವರು ಮಾತನಾಡಿದರು.

    ಮುಂಬರುವ ತಿಂಗಳುಗಳಲ್ಲಿ ಕೋವಿಡ್ ಲಸಿಕೆ ಮಾರುಕಟ್ಟೆಗೆ ಬಂದಾಗ ಅದು ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡುವ ಸಾಧ್ಯತೆಗಳಿವೆ. ಯಾರಿಗೆ ಸೋಂಕು ತಗುಲುವ ಅಪಾಯ ಹೆಚ್ಚೋ, ಉದಾಹರಣೆಗೆ ಆರೋಗ್ಯ ಸೇವೆಯಲ್ಲಿರುವವರು, ಪೊಲೀಸರು ಇಂಥವರಿಗೆ ಮೊದಲು ಲಸಿಕೆ ಹಾಕಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    “ಯಾರು ಎಲ್ಲಿಂದ ಬೇಕಾದರೂ ಕೆಲಸ ಮಾಡಬಹುದು” ಎಂಬುದನ್ನು ಕೋವಿಡ್ ಸೋಂಕು ಸನ್ನಿವೇಶ ದೃಢಪಡಿಸಿದೆ. ಇದನ್ನು ಅರ್ಥಮಾಡಿಕೊಂಡರೆ ಕಂಪನಿಗಳು ಮೂಲ ಸೌಕರ್ಯಕ್ಕಾಗಿ ಮಾಡುವ ಅನಗತ್ಯ ವೆಚ್ಚಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಜೊತೆಗೆ ತಮ್ಮ ನಿರ್ವಹಣಾ ಹೊರೆಯನ್ನೂ ಕಡಿಮೆ ಮಾಡಿಕೊಳ್ಳಬಹುದು. ಇದನ್ನು ಅನುಸರಿಸಿದರೆ ಅಂತಿಮವಾಗಿ ಅದು ಭೂಗ್ರಹದ ಮೇಲಿನ ಒತ್ತಡವನ್ನು ಕೂಡ ತಗ್ಗಿಸುತ್ತದೆ ಎಂದು ಸದ್ಗರು ವಿವರಿಸಿದರು.

    ಕಂಪನಿಗಳು ಮನುಷ್ಯರನ್ನು ಸಂಪನ್ಮೂಲ ಎಂದು ನೋಡುವ ಧೋರಣೆ ಬದಲಾಗಬೇಕು. ಬದಲಿಗೆ ಮನುಷ್ಯರನ್ನು ಅಂತಃಸತ್ವವುಳ್ಳವರು ಎಂಬ ದೃಷ್ಟಿಯಲ್ಲಿ ನೋಡುವ ಹಾಗೂ ಆ ಅಂತಃಸತ್ವ ಅನಾವರಣಗೊಳ್ಳಲು ಅನುವಾಗುವ ಕಾರ್ಯರೀತಿ ಅನುಷ್ಠಾನಗೊಳಿಸುವ ಕುರಿತು ಆಲೋಚಿಸಲು ಇದು ಸೂಕ್ತ ಸಮಯ ಎಂದರು.

    ಬುದ್ಧಿ ಎಂದರೆ ಕೇವಲ ನೆನಪಿನ ಶಕ್ತಿ ಅಲ್ಲ. ಬುದ್ಧಿಗೆ ನಾಲ್ಕು ಆಯಾಮಗಳಿವೆ. ಬೌದ್ಧಿಕತೆ, ಅಹಂಕಾರ, ಮನಸ್ಸು (ಸಂಸ್ಕಾರ), ಚಿತ್ತ ಎಂಬ ಆಯಾಮಗಳ ಬಗ್ಗೆ ಭಾರತೀಯರು ಪ್ರಾಚೀನ ಕಾಲದಲ್ಲೇ ಮನಗಂಡಿದ್ದರು. ದುರದೃಷ್ಟವಶಾತ್ ಇಂಗ್ಲಿಷ್ ಶಿಕ್ಷಣ ಪದ್ಧತಿಯು ಬುದ್ಧಿ ಎಂದರೆ ಕೇವಲ ಜ್ಞಾಪಕ ಶಕ್ತಿ ಎಂಬ ಭ್ರಮೆ ಹುಟ್ಟಿಸಿತು. ಈ ದೃಷ್ಟಿಯಲ್ಲಿ ನೋಡಿದರೆ ಚಿಪ್ ಗಳನ್ನು ಹಾಗೂ ಸ್ಮಾರ್ಟ್ ಫೋನ್ ಗಳನ್ನು ಮನುಷ್ಯರಿಗಿಂತ ಹೆಚ್ಚು ಬುದ್ಧಿಶಾಲಿಗಳು ಎನ್ನಬೇಕಾಗುತ್ತದೆ ಎಂದರು.

    ಬ್ರಹ್ಮಾಂಡದಲ್ಲಿ ಗ್ರಹಗಳು, ನಕ್ಷತ್ರಗಳು, ಎಲ್ಲಾ ಆಕಾಶಕಾಯಗಳನ್ನು ಸೇರಿಸಿದರೂ ಭೌತಿಕ ಪ್ರಪಂಚವು ಹೆಚ್ಚೆಂದರೆ ಅದು ಶೇ 1 ರಷ್ಟು ಮಾತ್ರ ಆಗುತ್ತದೆ. ಉಳಿದ ಶೇ 99 ರಷ್ಟು ಭಾಗವು ನಮಗೆ ಏನೂ ಎಂದು ಗೊತ್ತಿಲ್ಲದ “ಶೂನ್ಯ”ವೇ ಆಗಿದೆ. ವಿಜ್ಞಾನವು ಶೇ 1 ರಷ್ಟಿರುವ ಭೌತಿಕ ಪ್ರಪಂಚದ ಬಗ್ಗೆ ವಿವರಿಸಲು ಪ್ರಯತ್ನಿಸುತ್ತದೆ. ಆದರೆ ಅಧ್ಯಾತ್ಮವು ಶೇ 99ರಷ್ಟಿರುವ “ಶೂನ್ಯ”ವನ್ನೂ ದೃಷ್ಟಿಯಲ್ಲಿರಿಸಿಕೊಂಡು ಆಲೋಚನಾ ಮಗ್ನವಾಗಿರುತ್ತದೆ. ವಿಜ್ಞಾನ ಹಾಗೂ ಅಧ್ಯಾತ್ಮ ಬೇರೆ ಬೇರೆಯಲ್ಲ. ಆದರೆ ಅಧ್ಯಾತ್ಮದ ಚಿಂತನಾ ವ್ಯಾಪ್ತಿ ವಿಜ್ಞಾನಕ್ಕಿಂತ ವಿಶಾಲವಾದುದು ಎಂದು ಅಭಿಪ್ರಾಯಪಟ್ಟರು.

    ಪ್ರಪಂಚದಲ್ಲಿರುವ ಎಲ್ಲಾ ಗ್ರಂಥಾಲಯಗಳಲ್ಲಿರುವ ಪುಸ್ತಕಗಳೆಲ್ಲವನ್ನು ಓದಿದ ಮೇಲೂ ಯಾವುದೇ ವ್ಯಕ್ತಿ ತನಗೆ ಎಲ್ಲಾ ಗೊತ್ತು ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಇಷ್ಟೆಲ್ಲಾ ಆದರೂ ಬ್ರಹ್ಮಾಂಡದ ಶೇ 1ರಷ್ಟು ಮಾತ್ರವೂ ನಮಗೆ ತಿಳಿದಿಲ್ಲ. ಆದ್ದರಿಂದ ನಾವು “ನಮಗೆ ಗೊತ್ತಿಲ್ಲ” ಎಂದು ಹೇಳುವ ವಿನಮ್ರತೆಯನ್ನು ಬೆಳೆಸಿಕೊಳ್ಳಬೇಕು. ನಮ್ಮ ಮಕ್ಕಳಿಗೂ “ಏನೂ ಗೊತ್ತಿಲ್ಲ” ಎಂದು ಹೇಳಿಕೊಳ್ಳುವುದನ್ನು ಕಲಿಸಬೇಕು. ದುರಂತದ ಸಂಗತಿಯೆಂದರೆ ಇಂಗ್ಲಿಷ್ ಪ್ರಣೀತ ಶಿಕ್ಷಣ ಪದ್ಧತಿಯು ನಮ್ಮಲ್ಲಿ “ನನಗೆ ಎಲ್ಲಾ ಗೊತ್ತು” ಎಂಬ ಭ್ರಮೆ ಮೂಡಿಸುತ್ತಿದೆ. ಈ ಭಾವನೆಯು ನಮ್ಮ ಅರಿಯುವ ಸಾಮರ್ಥ್ಯಕ್ಕೆ ಮಬ್ಬು ಕವಿಸಿದೆ.

    ಯೋಗ ಎಂದರೆ ಕೇವಲ ದೇಹದ ವ್ಯಾಯಾಮ ಅಲ್ಲ. ಯೋಗ ಎಂದರೆ ಐಕ್ಯತೆ ಎಂದು ಅರ್ಥ. ಅಂದರೆ, ವ್ಯಕ್ತಿಯ ವೈಯಕ್ತಿಕ ಅಸ್ಮಿತೆಯು ಬಾಹ್ಯ ಜಗತ್ತಿನೊಂದಿಗೆ ಐಕ್ಯವಾಗುವುದು ಎಂದರ್ಥ. ಇದನ್ನೇ ಭಾರತೀಯ ಸಂಸ್ಕೃತಿ “ಅಹಂ ಬ್ರಹ್ಮಾಸ್ಮಿ” ಎಂದು ಕರೆಯುತ್ತದೆ. ಈ ಪ್ರಜ್ಞೆ ಬೆಳೆದರೆ ಬೇರೆ ಯಾವ ನೈತಿಕತೆಯೂ ಬೇಕಿಲ್ಲ. ಆಧುನಿಕ ಶಿಕ್ಷಣ ಪದ್ಧತಿ ಇದಕ್ಕೆ ತದ್ವಿರುದ್ಧವಾಗಿ ಸ್ವಕೇಂದ್ರಿತ ಮನೋಭಾವ ಬೆಳೆಸುತ್ತಿದೆ ಎಂದರು.

    ನಮ್ಮ ಮಕ್ಕಳು ಮರ-ಗಿಡ, ಬೆಳಕು, ಬಯಲು, ನದಿ, ತೊರೆಗಳಿಗೆ ತೆರೆದುಕೊಂಡು ಬದುಕಬೇಕು. ಆದರೆ ಈಗ ನಗರಗಳಲ್ಲಿ ಮಕ್ಕಳು ಮನೆಯಿಂದ ಆಚೆ ಕಾಲಿಟ್ಟರೆ ಸಾಕು ವಾಹನಗಳ ಗದ್ದಲದಲ್ಲಿ ಸಿಲುಕುವಂತಾಗಿದೆ. ಇದಕ್ಕೆ ಪರಿಹಾರ ಕಂಡಹಿಡಿಯಬೇಕು ಎಂದು ಅಭಿಪ್ರಾಯಪಟ್ಟರು.

    ತಮ್ಮ “ಈಶ” ಪ್ರತಿಷ್ಠಾನವು ಕಾರ್ಯನಿರ್ವಹಿಸುತ್ತಿರುವ 49 ಗ್ರಾಮಗಳಲ್ಲಿ ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಲಿಲ್ಲ (ಹೊರಗಿನಿಂದ ಬಂದ ಬೆರಳೆಣಿಕೆಯಷ್ಟು ಪ್ರಕರಣಗಳನ್ನು ಹೊರತುಪಡಿಸಿ). ತಜ್ಞರು ಕೂಡ ಇದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆರೋಗ್ಯ, ನೈರ್ಮಲ್ಯ ಹಾಗೂ ರೋಗ ನಿರೋಧಕ ಶಕ್ತಿ ಬಗ್ಗೆ ನಾವು ಮುಂಚಿನಿಂದಲೂ ಅರಿವು ಮೂಡಿಸುತ್ತಿರುವುದೇ ಇದಕ್ಕೆ ಕಾರಣ ಎಂದು ಸದ್ಗುರು ವಿವರಿಸಿದರು.

    ಇಂಟೆಲ್ ಇಂಡಿಯಾ ಕಂಟ್ರಿ ಹೆಡ್ ನಿವೃತಿ ರಾಯ್ ಪ್ರಶ್ನೆಗಳನ್ನು ಕೇಳುವ ಮೂಲಕ ಸಂವಾದ ಗೋಷ್ಠಿ ನಿರ್ವಹಿಸಿದರು.

    ಸಂವಾದದಲ್ಲಿ ಸದ್ಗುರು ನುಡಿಗಳು:

    • ನಾವು ಉಸಿರಾಡಿ ಹೊರಗೆ ಬಿಟ್ಟಿದ್ದನ್ನು ಸಸ್ಯಗಳು ಉಸಿರಾಡುತ್ತವೆ. ಅವು ಹೊರಗೆ ಬಿಟ್ಟಿದ್ದನ್ನು ನಾವು ಉಸಿರಾಡುತ್ತೇವೆ. ಇದನ್ನು ನಮ್ಮ “ಈಶ” ಪ್ರತಿಷ್ಠಾನ ಅರ್ಥ ಮಾಡಿಸಿದ್ದರಿಂದ ಜನ ತಾವಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ಬೆಳೆಸುತ್ತಿದ್ದಾರೆ. ಒಟ್ಟಾರೆ ದಕ್ಷಿಣ ಭಾರತದಲ್ಲಿ “ಹಸಿರು ಹೊದಿಕೆ” ಪ್ರದೇಶವು ಗೂಗಲ್ ಮ್ಯಾಪ್ ಪ್ರಕಾಶ ಕಳೆದ ದಶಕದಲ್ಲಿ ಶೇ 10ರಷ್ಟು ಹೆಚ್ಚಾಗಿದೆ.

    • ಬ್ರಿಟಿಷರು ಬರೆದ ಭಾರತದ ಇತಿಹಾಸವನ್ನು ನಾವು ಓದುತ್ತಿರುವುದು ದುರದೃಷ್ಟ. ನಮ್ಮನ್ನು ನಿಯಂತ್ರಿಸುವ ದುರುದ್ದೇಶದಿಂದ ಬರೆದ ಚರಿತ್ರೆ ಅದಾಗಿದೆ..

    • ಭಾರತದ ಮಣ್ಣಿನಲ್ಲಿ, ಅದರಲ್ಲೂ ದಕ್ಷಿಣ ಭಾರತದ ಮಣ್ಣಿನ ಒಂದು ಹಿಡಿಯಲ್ಲಿ 50,000 ಪ್ರಭೇದದ ಸೂಕ್ಷ್ಮಾಣುಜೀವಿಗಳಿವೆ. ಇಷ್ಟು ಸತ್ವಯುತವಾದ ಮಣ್ಣು ಬಹುಶಃ ಬೇರೆಲ್ಲೂ ಇಲ್ಲ.

    • ಭಾರತದ ಉತ್ತರದಲ್ಲಿ ಹಿಮಾಚಲ ಪರ್ವತ ನಮ್ಮ ರಕ್ಷತೆ ಇತ್ತು, ಇನ್ನೊಂದು ಕಡೆ ಹಿಂದೂ ಸಾಗರದ ರಕ್ಷಣೆ ಇತ್ತು. ಜೊತೆಗೆ ಸಮೃದ್ಧತೆ ಇತ್ತು. ಹೀಗಾಗಿ ಇಲ್ಲಿ ಸಾವಿರಾರು ವರ್ಷಗಳ ಕಾಲ ಯುದ್ಧದ ಭಯ ಎಂಬುದೇ ಇರಲಿಲ್ಲ. ಸಹಜವಾಗಿಯೇ ಜನರು ಸಂಗೀತ, ಕಲೆ, ವಿಜ್ಞಾನ, ಖಗೋಳ ಇತ್ಯಾದಿ ಚರ್ಚೆಗಳಲ್ಲಿ ತೊಡಗಿದ್ದರಿಂದ ಹಿಂದೂಸ್ತಾನದಲ್ಲಿ ಇವೆಲ್ಲವೂ ವಿಕಸನಗೊಂಡವು. ಇದನ್ನು ನಾನು ರಾಷ್ಟ್ರೀಯತಾವಾದಿಯ ನೆಲೆಯಲ್ಲಿ ಹೇಳುತ್ತಿಲ್ಲ. ಇದು ಚಾರಿತ್ರಿಕ ವಾಸ್ತವ.

    • ಕರ್ನಾಟಕ ಸರ್ಕಾರವು ಒಂದು ಪ್ರಯೋಗ ಮಾಡಿದರೆ ಒಳ್ಳೆಯದು. ಬೆಂಗಳೂರಿನಿಂದ ಆಚೆ 50 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ 1 ಎಕರೆಯಷ್ಟು ಜಾಗದಲ್ಲಿ ಜನರಿಗೆ ಬೇಕಾದ ಸೌಲಭ್ಯಗಳು ಇರುವಂತೆ ನೋಡಿಕೊಂಡು 100 ಅಂತಸ್ತುಗಳ ಕಟ್ಟಡ ಕಟ್ಟಬೇಕು. ಉಳಿದ 49 ಎಕರೆ ಪ್ರದೇಶದಲ್ಲಿ ಮರ ಗಿಡಗಳು, ಕೆರೆ ಇವೆಲ್ಲಾ ಇರಬೇಕು. ನಮ್ಮ ಮಕ್ಕಳು ಇಂತಹ ವಾತಾವರಣದಲ್ಲಿ ಬೆಳೆಯಬೇಕು.

    ಇಷ್ಟು ದಿನ ಶಿಕ್ಷಣ ನಮಗೆ ಕಲಿಸುತ್ತಿರುವುದಾದರು ಏನನ್ನು ?

    ನಿಮ್ಮ ಮಗು ಎಲ್ಲಿ? ನಮ್ಮೂರ ಶಾಲೆಯಲ್ಲಿ…..ಮರಳಿ ಬಾ ಶಾಲೆಗೆ….ವಿದ್ಯೆ ಇಲ್ಲದವನ ಮುಖ ಹದ್ದು, ವಿದ್ಯೆ ಕಲಿತವನ ಮುಖ ಮುದ್ದು…
    ಅನ್ನುವಂತಹ ಘೋಷಣೆಗಳೊಂದಿಗೆ 70ರ ದಶಕದಲ್ಲಿ ಸರ್ಕಾರ ಪ್ರಾಯೋಜಿತ ಕಾರ್ಯಕ್ರಮದ ಅಂಗವಾಗಿ ನಾವೆಲ್ಲಾ ಇಡೀ ಶಾಲೆಯ ವಿದ್ಯಾರ್ಥಿಗಳು ನಮ್ಮೂರ ಬೀದಿಗಳಲ್ಲಿ,ಓಣಿಗಳಲ್ಲಿ ಕೂಗುತ್ತಾ ಸಾಲಾಗಿ ಹೋಗುತ್ತಿದ್ದೆವು. ನಮ್ಮ ಹಿಂದೆ ಬರುತ್ತಿದ್ದ ಗುರುಗಳು ನೋಂದಾಯಿತ ಮಗು ಇದ್ದು, ಶಾಲೆ ಬಿಟ್ಟಿದ್ದರೆ, ಐದು ಆರು ವರ್ಷದ ಮಗು ಇದ್ದರೆ, ಅಂಥವರ ಮನೆಗಳಿಗೆ ಖುದ್ದು ಭೇಟಿ ನೀಡಿ, ಮಗುವನ್ನು ಶಾಲೆಗೆ ಕಳುಹಿಸುವ ಕುರಿತು ಪಾಲಕರಿಗೆ ತಿಳಿಹೇಳುವ ಕೆಲಸ ಮಾಡುತ್ತಿದ್ದರು. ಹಾಗೆ ಸೇರಿದ್ದ ಹಲವಾರು ಗೆಳೆಯರು ನನ್ನೊಟ್ಟಿಗೆ ಇದ್ದು, ಅವರು ನನಗಿಂತ ಮೂರ್ನಾಲ್ಕು ವರ್ಷ ಹಿರಿಯರೇ ಆಗಿರುತ್ತಿದ್ದರು, ಪ್ರಾಥಮಿಕ ಶಾಲೆಯಲ್ಲಿ.

    ಆಪ್ಪ ನಮ್ಮೂರ ಗೊಲ್ಲರಹಟ್ಟಿಯ ಪ್ರಾಥಮಿಕ ಶಾಲೆಯಲ್ಲಿ ಏಕೋಪಾಧ್ಯಾಯರಾಗಿ ಕೆಲಸ ಮಾಡುವಾಗ ನಾನಾಗಲೇ ಹೈಸ್ಕೂಲ್ ಮುಗಿಸಿದ್ದೆ. ಶಾಲೆಯ ಗಣತಿ ಉತ್ತೇಜನಕಾರಿಯಾಗಿಲ್ಲ. ಬರುವ ಶೈಕ್ಷಣಿಕ ವರ್ಷದಲ್ಲಿ ಗಣನೀಯವಾಗಿ ಮಕ್ಕಳು ನೋಂದಾಯಿತರಾಗದೇ ಹೋದಲ್ಲಿ, ಶಾಲೆಯನ್ನು ಮುಚ್ಚಬೇಕಾಗುತ್ತದೆ ಅನ್ನುವ ಪತ್ರ ಹಿಡಿದು ಅಪ್ಪ ಚಿಂತಾಕ್ರಾಂತರಾಗಿದ್ದರು. ಬೇಸಿಗೆಯ ರಜೆಯಲ್ಲಿ ಅಪ್ಪ ಗೊಲ್ಲರಹಟ್ಟಿಗೆ ಭೇಟಿ ನೀಡಿ, ಮಕ್ಕಳನ್ನು ಶಾಲೆಗೆ ಸೇರಿಸುವ ಕುರಿತು ಪಾಲಕರ ಮನ ಒಲಿಸಲು ಹೋಗುತ್ತಿದ್ದರು. ಕೆಲವೊಮ್ಮೆ ನಾನೂ ಅವರ ಜೋಡಿ ಹೋಗ್ತಿದ್ದೆ.

    ಅಪ್ಪ ನನ್ನೂರ ಶಾಲೆಯಲ್ಲಿ ಕೆಲಸ ಮಾಡಲೇ ಇಲ್ಲ. ಶಾಲೆಯಲ್ಲಿ ನನಗೆ ಒಂದಕ್ಷರವನ್ನೂ ಕಲಿಸಲಿಲ್ಲ, ನನ್ನ ಯಾವೊಂದು ಪರೀಕ್ಷೆಯ ಪತ್ರಿಕೆಯನ್ನು ಮಾಪನ ಮಾಡಿ,ಒಂದು ಅಂಕವನ್ನೂ ಕೊಡಲಿಲ್ಲ! ಒಂದು ಮೈಲಿ ದೂರದಲ್ಲಿದ್ದ ಗೌರಿಪುರ, ಬುಡ್ಡೆನಹಳ್ಳಿ, ಗೊಲ್ಲರಹಟ್ಟಿಯಲ್ಲಿಯೇ ಕಳೆದರು. ಐದಾರು ಮೈಲಿಗಳ ದೂರದಲ್ಲಿದ್ದ ಶೆ ಲಿಯಪ್ಪನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾರಾಗಿ ತಮ್ಮೊಡನೆ ಮತ್ತೊಬ್ಬ ಶಿಕ್ಷಕರೊಂದಿಗೆ ಅಂದಿನ 7ನೇ ತರಗತಿಯ ಜಿಲ್ಲಾ ಮಟ್ಟದ ಪರೀಕ್ಷೆಗಳಲ್ಲಿ ಅಪ್ಪ ಇರುವಷ್ಟೂ ವರ್ಷ ಆ ಶಾಲೆಯ ಫಲಿತಾಂಶ ಶೇಖಡಾ 100 ಅನ್ನುವ ವಿಷಯ ಈಗ ದಂತ ಕಥೆ ಆಗಬಹುದು. ಆಗ ಅಲ್ಲಿಗೆ ಅಡ್ಡಾಡಲು ಪೂಲೆಪ್ಪ ಶೆಟ್ಟಿಯ ಸೆಕೆಂಡ್ ಹ್ಯಾಂಡಲ್ ಸೈಕಲ್ ಕೊಂಡದ್ದು ನಮಗೆ BMW ಕಾರು ಕೊಂಡಷ್ಟು ಖುಷಿ ಆಗಿತ್ತು. ಗುಡ್ಡ ಗಾಡು ರಸ್ತೆಯಲ್ಲಿ ಅಪ್ಪ ಒಮ್ಮೆ ಸೈಕಲ್ ಸಮೇತ ಬಿದ್ದುದರ ಪರಿಣಾಮ ಗೊಲ್ಲರಹಟ್ಟಿಯ ಶಾಲೆಗೆ ಬಂದರು! ಸಂಡೂರಿನ ಶಿಕ್ಷಣಾಧಿಕಾರಿಗಳು ಯಾರೇ ಇರಲಿ,ಬರಲಿ ಅಪ್ಪನ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನೇ ಹೊಂದಿರುತ್ತಿದ್ದರು. ಆಗೆಲ್ಲ ಶಾಲೆಯ ಮೇಲ್ವಿಚಾರಕರು (ಇನ್ಸ್ ಪೆಕ್ಟರ್ಸ್) ಭೇಟಿ ನೀಡುತ್ತಾರೆ ಅಂದ್ರೆ, ಭಯಂಕರ ಮಹತ್ವದ ದಿನ ಆಗಿಬಿಡುತ್ತಿತ್ತು, ನಮ್ಮ ಹಳ್ಳಿ ಶಾಲೆಗಳಿಗೆ.

    ಹಾಗೆ ನೋಡಿದರೆ ಅಪ್ಪ ಬರೀ ಗೊಲ್ಲರಹಟ್ಟಿಯವರಿಗೆ ಮಾತ್ರ ಮಕ್ಕಳನ್ನು ಶಾಲೆಗೆ ಕಳಿಸಿ ಅಂತ ಹೇಳುತ್ತಿರಲಿಲ್ಲ. ಸಿಕ್ಕ ಪ್ರತಿಯೊಬ್ಬರಿಗೂ, ಬಂದ ಕಾಗದ,ಪತ್ರ ಓದಲಾಗದೆ ನಮ್ಮ ಮನೆಗೆ ಬರುತ್ತಿದ್ದವರಿಗೆಲ್ಲ ನಿಂದಂತೂ ಆಯ್ತು, ಮಗನನ್ನು ಶಾಲೆಗೆ ಕಳಿಸಿ ಓದಿಸು ಅಂತ ಹೇಳ್ತಿದ್ದರು. ದೊಡ್ಡ ಮಾದರಿ ಶಾಲೆಯಾದ ನಮ್ಮೂರ ಶಾಲೆಯಲ್ಲೇ ನಾವು ಇರುತ್ತಿದ್ದುದು ಗರಿಷ್ಠ 40 ಹುಡುಗರು. ಇನ್ನು ಅಪ್ಪ ಕೆಲಸ ಮಾಡುತ್ತಿದ್ದ ಸುತ್ತ ಹಳ್ಳಿಗಳ ಶಾಲೆಯ ಗಣತಿಯನ್ನು ಅಂದಾಜು ಮಾಡಿಕೊಳ್ಳಿ.

    ಕೆಂಗ ದೊಡ್ಡಪ್ಪ ಅಂದ್ರೆ, ನಮ್ಮೂರ ಗೊಲ್ಲರಹಟ್ಟಿಯ ಭರ್ಜರಿ ಕುಳ, ಆಗ. ನೂರಿನ್ನೂರು ಕುರಿಗಳು, ಮಾಗಾಣಿ ತುಂಬಾ ಗದ್ದೆಗಳು, ಒಣ ಭೂಮಿಯೂ ಸಾಕಷ್ಟಿತ್ತು. ಐದಾರು ಗಂಡು ಮಕ್ಕಳ ತಂದೆ. ಅಪ್ಪನೊಡನೆ ತುಂಬಾ ಒಡನಾಟ. ಹಣ ಎಣಿಸಲೂ ಬರ್ತೀರಲಿಲ್ಲ ಅಂದ್ರೆ ನೀವು ನಂಬಲೇಬೇಕು. ಮನೆಯಲ್ಲಿ ಒಟ್ಟಿದ್ದ ಕಾಳಿನ ಚೀಲಗಳ ಮಧ್ಯೆ ಹಣದ ಕಂತೆ ಇಡುತ್ತಿದ್ದ ಮನುಷ್ಯ. ಕೆಂಪಗೆ ಒಳ್ಳೆ ಇಂಗ್ಲಿಷರ ಬಣ್ಣ. ಎತ್ತರದ ಆಳು. ಯಾವಾಗಲೂ ಕರೀ ಕಂಬಳಿ ಹೆಗಲಿಗೆ, ಕೆಂಪಗಿನ ತಾಂಬೂಲದ ಬಣ್ಣ ಬಾಯಲ್ಲಿ. ನಕ್ಕರೆ ಅಪರೂಪದ ಚಲುವ ಅನ್ನಬಹುದಾದಂತಹ ರೂಪ.

    ಕೆಂಗಜ್ಜಾ ಕೊನೆಯ ಮಕ್ಕಳನ್ನಾದರೂ ಶಾಲೆಗೆ ಕಳಿಸೋ ಅಂತ ಅಪ್ಪ ಒಮ್ಮೆ ನಮ್ಮ ಮನೆಯ ಕಟ್ಟೆಯ ಮೇಲೆ ಪ್ರಸ್ತಾಪಿಸಿದರು. ದೊಡ್ಡ ಮಗ ದೊಡ್ಡನಿಗೆ ಆಗಲೇ ಮದುವೆ ಆಗಿ ಮಕ್ಕಳಾಗಿದ್ದರು. ಹಾವು ಕಚ್ಚಿದಂತೆ ಬೆಚ್ಚಿ ಬಿದ್ದು ಬಿಡೋದಾ?

    ಮೇಷ್ಟ್ರೇ ಈ ಓದಿದ ಹುಡುಗರು ಏನ್ಮಾಡ್ತಾರೆ ಗೊತ್ತಾ? ಬೆಳಿಗ್ಗೆ ಎದ್ದು, ಹಲ್ಲುಜ್ಜಲು ಪೇಷ್ಟು, ಬ್ರಷ್ಹು ಅಂತ ಹಿಡಿದು, ಹೆಂಗಸರಂತೆ ಮುಖಕ್ಕೆ ಪೌಡರ್ ಹಚ್ಚಿಕೊಂಡು,ಮನೆಯವರು ಒಗೆದಿಟ್ಟ ನೀಟಾದ ಬಟ್ಟೆ ಹಾಕಿಕೊಂಡು ಊರ ಸುತ್ತಲು ಹೊರಡುತ್ತಾರೆ. ಮನೆಯಲ್ಲಿ ಯಾರೂ ಇವರಿಗೆ ಕೆಲಸ ಹೇಳೋ ಆಗಿಲ್ಲ, ಅರಿತು ಇವರು ಮಾಡೋದೂ ಇಲ್ಲ, ಉಲ್ಟಾ ಮನೆಯವರು ಮಾಡುವ ಕೆಲಸ ಬಿಟ್ಟು ಇವರ ಸೇವೆ ಮಾಡಬೇಕು. ಇವರಿಂದ ದಿನಕ್ಕೆ ಕನಿಷ್ಠ 5 ರೂಪಾಯಿ ಖರ್ಚು. ಇನ್ನು ಓದಿಸೋಕ್ಕೆ, ಪುಸ್ತಕ, ಬಟ್ಟೆ ಎಲ್ಲ ನೀವೇ ಲೆಕ್ಕ ಹಾಕಿ. ಎಷ್ಟು ವರ್ಷ ಓದಿಸಬೇಕು, ಕನಿಷ್ಠ ಅಂದರೂ ಹತ್ತು ವರ್ಷ. ವರ್ಷಕ್ಕೆ ಸಾವಿರ ಅಂದ್ರೂ ಹತ್ತು ಸಾವಿರ ಖರ್ಚಾ? ಆಮೇಲೆ ಇವನು ತಂದು ನಮ್ಮನ್ನು ಸಾಕೋದು ಅಷ್ಟರಲ್ಲೇ ಇದೆ. ಮುದುಕರಾದ್ರು ಮದುವೆ ಆಗಲ್ಲ.

    ಶಾಲೆಗೆ ಕಳಿಸದೆ ಐದು ವರ್ಷದ ಹುಡುಗನನ್ನು ಕುರಿ ಕಾಯಲು ಕಳಿಸಿದರೆ, ವರ್ಷಕ್ಕೆ ಹತ್ತುಸಾವಿರದಷ್ಟು ದುಡಿಯುತ್ತಾನೆ. ಹತ್ತು ಸಾವಿರ ಎದುರು ಖರ್ಚಿನ ಬದಲಿಗೆ ಲಕ್ಷ ದುಡಿಯುತ್ತಾನೆ. 20 ವರ್ಷಕ್ಕೆ ಇಬ್ಬರು ಮೊಮ್ಮಕ್ಕಳನ್ನು ಕೈಗೆ ಕೊಡ್ತಾನೆ. ಒಳ್ಳೆಯದು ಹೇಳ್ತಾರೆನೋ ಮೇಷ್ಟ್ರು ಅಂದ್ರೆ ಹುಡುಗರನ್ನು ಶಾಲೆಗೆ ಕಳಿಸು ಅಂತಿರಲ್ಲಾರಿ…. ಅಂದು ಅಪ್ಪನಿಗೆ ಜೀವನದ ಪಾಠ ಹೇಳಿದ್ದ ನಮ್ಮ ಕೆಂಗ ದೊಡ್ಡಜ್ಜ!

    ನೀನೇಳೋದು ಎಲ್ಲ ಸರಿಯೋ ಕೆಂಗಜ್ಜಾ….ನೋಡು ನಿನ್ನ ಮನೆಯ ವ್ಯವಹಾರ,ಆಸ್ತಿ ಪಾಸ್ತಿಗಳ ಪತ್ರ ನೋಡೋಕ್ಕಾದ್ರು, ನಿಮ್ಮವನೇ ಅಂತ ಒಬ್ಬ ಇದ್ದರೆ ಒಳ್ಳೇದು. ನನ್ನಂತವರ ಹತ್ತಿರ ಎಷ್ಟು ದಿನ ಅಂತ ನಿನ್ನ ಎಲ್ಲ ವಿಷಯಗಳನ್ನು ಹೊರಗೆ ಹಾಕ್ತಿಯ? ಯಾರೋ ಬಂದು ನಿನ್ನ ಪತ್ರ ಸರಿ ಇಲ್ಲ, ನೀನು ತೆರಿಗೆ ಕಟ್ಟಿಲ್ಲ ಅಂದ್ರೆ, ಓದಿದ ನಿನ್ನ ಮಗ ಅಂತ ಒಬ್ಬ ಇದ್ರೆ ಎಷ್ಟು ಅನುಕೂಲ, ಯೋಚನೆ ಮಾಡು. ಸರ್ಕಾರ ನಿಮ್ಮಂತವರಿಗೆ ಅಂತ ತುಂಬಾ ಅನುಕೂಲ ಮಾಡಿದೆ ಅಂದಾಗ ಕಂಬಳಿ ಕೊಡವಿ ಮೇಲೆದ್ದಿದ್ದ.

    ನಮ್ಮ ಮನೆಯನ್ನು, ನಾವು ಐದು ಜನ ಗಂಡು ಮಕ್ಕಳು ಇದ್ದರೂ, ಹೇ ಇದು ನನ್ನ ಗುರುಗಳ ಮನೆ, ನನಗೇ ಮೊದಲ ಹಕ್ಕು, ನೀವೆಲ್ಲ ಆಮೇಲೆ ಅಂತಾನೇ ನಮ್ಮೆಲ್ಲರಿಗೆ ಆತ್ಮೀಯನಾಗಿ, ಇಡೀ ದಿನ ಮನೆಯಲ್ಲೇ ಇದ್ದು, ಅಪ್ಪನ ನೆಚ್ಚಿನ ಶಿಷ್ಯನಾಗಿ, ನನಗೆ ಐದಾರು ವರ್ಷ ದೊಡ್ಡವನಾದ್ರು, ಶಾಲೆಯಲ್ಲಿ ವರ್ಷಕ್ಕೆ ಚಿಕ್ಕ ಕ್ಲಾಸ್ನಲ್ಲಿ ಓದಿ, ಮುಂದೆ BA, BEd ಮಾಡಿ ಹೈಸ್ಕೂಲ್ ಹೆಡ್ಮಾಸ್ಟರ್ ಆಗಿ ಈಗ retired ಆಗಿರುವ ನಮ್ಮೂರ ಚಿತ್ತಪ್ಪ ಮಾಸ್ಟ್ರೇ ನಮ್ಮ ಕೆಂಗ ದೊಡ್ಡಪ್ಪನ ಮಗ!

    ನಮ್ಮೂರ ಗೊಲ್ಲರಹಟ್ಟಿಯ ಸಂಪ್ರದಾಯವೇ ಕುತೂಹಲಕರವಾದದ್ದು. ಅದೇ ಒಂದು ರೋಮಾಂಚನ ಬರವಣಿಗೆ ಆದೀತು. ಊರವರ ಯಾರ ಮನೆಯಲ್ಲೂ ನೀರನ್ನು ಕುಡಿಯದ ಈ ಜನ ತಮ್ಮದೇ ದೇವರು,ವಿಶಿಷ್ಟ ಆಚರಣೆಗಳೊಂದಿಗೆ ಊರ ಹೊರಗೆ ತಮ್ಮದೇ ಜನಾಂಗದವರೊಂದಿಗೆ ವಾಸಿಸುತ್ತಾರೆ, ಶ್ರೀಕೃಷ್ಣನ ನೇರ ವಂಶಸ್ಥರು ನಾವು ಅಂತ ಹೇಳುತ್ತಾ. ಇಡೀ ದಿನಗಳನ್ನು,ರಾತ್ರಿಗಳನ್ನು ನಮ್ಮ ಮನೆಯಲ್ಲೇ ಕಳೆಯುತ್ತಿದ್ದ ನಮ್ಮಪ್ಪನ ಈ ಶಿಷ್ಯ ಒಂದೇ ಒಂದು ದಿನ ಊಟ ಮಾಡಲಿಲ್ಲ! ಹೇ ಇವತ್ತು ಹಬ್ಬ ಕಣೋ, ಹೋಳಿಗೆ ಮಾಡಿನಿ,ಒಂದೇ ಒಂದು ತಿನ್ನೋ ಅಂತ ಅಮ್ಮ ಗೋಗರೆದರೂ ಒಂದು ದಿನಕ್ಕೂ ಏನನ್ನೂ ತಿನ್ನಲಿಲ್ಲ ಇವನು! ಅವನ ಮನೆ ಓದಿನ ಪರಿಸರಕ್ಕೆ ಅವನಿಗೆ ಒಗ್ಗುತ್ತಿರಲಿಲ್ಲವೇನೋ, ಅಲ್ಲಿಗೆ ಊಟಕ್ಕೆ ಮಾತ್ರ ಹೋಗಿ ಉಳಿದಂತೆ ನಮ್ಮೊಡನೆಯೇ ಒಬ್ಬನಾಗಿ, ಜಗಳ ಆಡುತ್ತಾ, ನಗುತ್ತಾ ನಮ್ಮವನೇ ಆಗಿದ್ದ.

    ಬೇಸಾಯ,ಕುರಿ ಸಾಗಾಣಿಕೆ, ಪಶು ಪಾಲನೆಯನ್ನು ವೃತ್ತಿಯನ್ನಾಗಿ ಮಾಡಿಕೊಂಡು, ಆಧುನಿಕ ಸಮಾಜ,ಜೀವನ ಶೈಲಿಯಿಂದ ದೂರ ಇರುತ್ತಿದ್ದ ಇವರ ಜೀವನ ವಿಧಾನ ನನಗೆ ಯಾವಾಗಲೂ ವಿಚಿತ್ರ ಅನ್ನಿಸುತ್ತಿತ್ತು. ಅಪ್ಪ ಮಾತ್ರ ಇವರ ಮುಗ್ಧತೆ,ಪ್ರಾಮಾಣಿಕತೆ, ಕಷ್ಟಪಟ್ಟು ದುಡಿಯುವ ಪರಿಯನ್ನು ನಮಗೆಲ್ಲ ಉದಾಹರಣೆ ರೂಪಕಗಳಲ್ಲಿ ಆಗಾಗ ಹೇಳುತ್ತಿದ್ದರು. ಇವರು ಸುತ್ತಲಿನ ಸುಧಾರಿತ ಸಮಾಜದೊಂದಿಗೆ ಪಡೆಯುತ್ತಿದ್ದುದು ಉಪ್ಪು ಮತ್ತು ಅಪರೂಪಕ್ಕೆ ಅಡುಗೆ ಎಣ್ಣೆಯನ್ನು ಮಾತ್ರ. ಮತ್ತೆಲ್ಲಾ ತಾವು ಬೆಳೆದ ಬೆಳೆಯಲ್ಲೇ. ಅಪ್ಪನಿಗೆ ಇವರ ಈ ಮಾದರಿಯ ಸ್ವಾವಲಂಬನೆಯ ಜೀವನ ಶೈಲಿ ಹೆಚ್ಚು ಇಷ್ಟವಾಗುತ್ತಿತ್ತು. ಅಪ್ಪ ಇವರಲ್ಲಿಯೇ ಒಬ್ಬರಾಗಿಬಿಟ್ಟಿದ್ದರು,ಇವರ ಕಷ್ಟ ಸುಖಗಳಲ್ಲಿ ಒಂದಾಗಿ! ನಾವೆಲ್ಲಾ ಪೆಟ್ರೋಲ್,ಡೀಸೆಲ್ ಹೆಚ್ಚಾಯ್ತು, ಎಲ್ಲ ಬೆಲೆ ಏರಿಕೆ ಆಯ್ತು ಅಂತ ಬೊಬ್ಬೆ ಹೊಡೀತಿವಿ, ಇವರು ನೋಡು, ಅದ್ಯಾವುದೂ ತಮಗೆ ಸಂಬಂಧವೇ ಇಲ್ಲದ ಹಾಗೆ ಬದುಕುತ್ತಿದ್ದಾರೆ ಅನ್ನುತ್ತಿದ್ದರು.

    ಆಗ ಅಪರೂಪಕ್ಕೆ ಪದವೀಧರರಿದ್ದ ನಮ್ಮೂರಲ್ಲಿ, ನಾನು ಪದವೀಧರನಾಗುವ ಹೊತ್ತಿಗೆ ಸುಮಾರಾಗಿ ವಿದ್ಯಾವಂತರಿದ್ದರು. ನಮ್ಮ ಮನೆಯನ್ನೂ ಸೇರಿಸಿ ಎಲ್ಲರ ಮನೆಯ ಓದಿದವರು ಅನ್ನಿಸಿಕೊಂಡವರ ಬಗ್ಗೆ ಇರುತ್ತಿದ್ದ ತಕರಾರು ಅಂದ್ರೆ, ಏನಂದ್ರೆ ಏನೂ ಮನೆ ಕೆಲಸ ಮಾಡಲ್ಲ ಅಂತ! ಅದು ಸತ್ಯವೂ ಹೌದು. ಶಾಲೆಯಲ್ಲಿ ಯಾವ ಗುರುಗಳೂ ಮನೆ ಕೆಲಸ, ಹೊಲದ ಕೆಲಸ ಮಾಡಬೇಡಿ ಅಂತ ಹೇಳುತ್ತಿರಲಿಲ್ಲ. ಆದ್ರೂ ನಮಗೆ ಯಾಕೆ ಒಂದು ರೀತಿಯ ಬಿಗುಮಾನ, ನಾವು ಬೇರೆ ಅನ್ನುವ ಭಾವನೆ ಬರುತ್ತಿತ್ತು?

    ಕೆಲವು ಮನೆಗಳಲ್ಲಿಯಂತೂ ಏ ಓದಿಕೊಂಡ ಹುಡುಗ,ಪಾಪ ಕೆಲಸಕ್ಕೆ ಹೇಗೆ ಹಚ್ಚೋದು ಅಂತಾನೇ ಅಂತಿದ್ದರು! ಅನಿವಾರ್ಯ ಅಂತಾದಾಗ ಎಲ್ಲ ಕೆಲಸಗಳನ್ನು ಮಾಡಿರುವ ನನ್ನ ಸ್ನೇಹಿತರೂ ಇದ್ದಾರೆ, ಆದರೆ ಅಂತಹವರು ಬಹಳ ವಿರಳ. ಅವರೆಡೆಗೆ ನನ್ನ ಗೌರವ ಯಾವಾಗಲೂ ಇದೆ. ನನ್ನನ್ನೂ ಸೇರಿಸಿ ಬಹುತೇಕರು ಹಲವಾರು ಹೊಲ,ಮನೆಯ ಗ್ರಾಮೀಣ ಕೆಲಸ ಕಾರ್ಯಗಳನ್ನು ಮಾಡಲು ಎಂತಹುದೋ ಮುಜುಗರ. ಆಗಲೇ ಮನೆಯ ಹಿರಿಯರು ಇವನನ್ನು ಓದಿಸಿ ತಪ್ಪು ಮಾಡಿದೆವು ಅನ್ನುತ್ತಿದ್ದರು.

    ನಮ್ಮ ಊರು,ನಮ್ಮ ಮನೆ,ನಮ್ಮ ಸಂಸ್ಕೃತಿ, ನಾವು ಬೆಳೆದ ರೀತಿ, ನಮ್ಮ ಹಿರಿಯರು ಎಲ್ಲರ ಎಲ್ಲವುದರ ಬಗ್ಗೆ ಅಸಡ್ಡೆ. ನಮ್ಮ ಭಾಷೆಯನ್ನೂ ಬೇರೆ ತೆರನಾಗಿ ಮಾತಾಡಿ, ನಾವೆಲ್ಲೋ ಬೇರೆಯೇ ತೆರನಾಗಿದ್ದೇವೆ ಅಂತ ತೋರಿಸಿಕೊಳ್ಳೋ ಹುಸಿ ದರ್ಪ. ಊರು ಬಿಟ್ಟು 2,3 ವರ್ಷ ಇದ್ದರಂತೂ ನಾವು ಬೇರೆ ಗ್ರಹಗಳಿಂದ ಬಂದಿದ್ದೇವೆ ಅನ್ನೋ ತರಹದ ಆಟಗಳು. ಏನನ್ನೋ ಮರೆತಂತೆ, ಯಾವುದನ್ನೊ ತನ್ನದಲ್ಲ ಎನ್ನುವಂತೆ ವರ್ತಿಸಿ, ತೋರ್ಪಡಿಸುವ ಧಿಮಾಕು. ಆಪ್ಯಾಯಮಾನವಾಗಿ,ಅಭಿಮಾನದಿಂದ ಹತ್ತಿರ ಬಂದವರನ್ನು ಬೇಕಾಗಿ ಕೀಳಾಗಿ ನೋಡುವ ದುರಹಂಕಾರ. ಅದೇನು ಕೀಳಿರಿಮೆ ಮುಚ್ಚಿಕೊಳ್ಳುವಿಕೆಯೋ ಅಥವಾ ಮೇಲಿರಿಮೆಯ ತೋರ್ಪಡಿಸುವಿಕೆಯೋ ಗೊತ್ತಾಗದ್ದು. ವಿದ್ಯಾವಂತರಾಗಿ ನಾವು ನಮ್ಮ ಸುತ್ತ ಎಂತಹ ಸಂದೇಶ ಹರಡುತ್ತಿದ್ದೇವೆ ಅನ್ನುವುದರ ಬಗ್ಗೆ ಎಳ್ಳಷ್ಟೂ ಯೋಚಿಸದ ಅಸಡ್ಡತೆ. ಪೇಟೆ ಮಂದಿ ಆಗ ಹೇಗಿದ್ದರೋ, ನಾವಂತೂ ಹಳ್ಳಿ ಮಂದಿ ಹೀಗಿರುತ್ತಿದ್ದೆವು.

    ಅರ್ಧಂಬರ್ಧ ಇಂಗ್ಲಿಷ್, ಅದನ್ನೂ ಪೂರ್ತಿ ಕಲಿತಿರಲಿಲ್ಲ. ಅದರಲ್ಲೇ ಹುಟ್ಟಿದ್ದೇವೆ ಏನೋ ಅಂತ ತೋರಿಸುವ ಒನಪುಗಳು. ಇಂತಹುವೇ ಆಗ ನಾವು ಅನುಸರಿಸಬೇಕಾದ್ದು ಅನ್ನುವ ರೀತಿ ಅವುಗಳನ್ನು ಅನುಕರಣೆ ಮಾಡುತ್ತಿದ್ದೆವು. ನಮ್ಮ ಧಿಮಾಕೇ ಇಷ್ಟಿರಬೇಕಾದಾಗ, ಇನ್ನು ವಿದೇಶದಿಂದ ಬಂದವರು ಹೇಗಿದ್ದರು, ಹೇಗಿದ್ದಿರಬಹುದು ಅನ್ನೋ ಅನುಮಾನ ಬರ್ತಿತ್ತು. ಆಗಿನ್ನೂ ಅಂತಹವರನ್ನು ಕಂಡಿರಲಿಲ್ಲ. 10-12 ವರ್ಷದ ಶಿಕ್ಷಣ ಅಥವಾ ವಿದ್ಯಾಭ್ಯಾಸ ಈ ಮಟ್ಟದ ಪರಿಣಾಮವನ್ನು ನಮ್ಮಲ್ಲಿ ತರುತ್ತಿದ್ದಾದರೂ ಹೇಗೆ ಅಂತ ಯೋಚಿಸಿದರೆ, ಸೋಜಿಗವಾಗುತ್ತದೆ.

    ನಮ್ಮ ವಿಚಿತ್ರ ವರ್ತನೆಗಳನ್ನು ಗಮನಿಸಿದ ಯಾರಾದ್ರು ಹಿರಿಯರು ನಮ್ಮ ಬಗ್ಗೆ ಕೇಳಿದರೆ,ಅವರಿಗೆ ಉತ್ತರ ಕೊಡುವ ಸೌಜನ್ಯವೂ ನಮ್ಮಲ್ಲಿ ಇರುತ್ತಿರಲಿಲ್ಲ. ನಮ್ಮವರೇ ಆದವರು ಅವನಾ SSLC ಪಾಸ್ ಆಗ್ಯಾನೆ, PUC ಪಾಸಾಗ್ಯಾನೆ,BA ಮುಗಿಸ್ಯಾನೆ, ಮೊನ್ನೆ ಸರ್ಕಾರ ಕಾಲ್ಫಾರ್ ಮಾಡಿತ್ತಲ್ಲ,ಅಥವಾ ಮುಂದಿನ ತಿಂಗಳು ಕಾಲ್ಫಾರ್ ಮಾಡ್ತಾರಲ್ಲ ಅದಕ್ಕೆ ಅರ್ಜಿ ಹಾಕ್ಯಾನೆ ಅಂತನೊ ನಮ್ಮ ಪರಿಚಯ ಮಾಡಬೇಕು. ಆಗಿನ ನಮ್ಮ ಬಿಗುಮಾನ ಇಲ್ಲಿ ಹೇಳಲು ಆಗಲ್ಲ ಬಿಡಿ.

    ಲಾರ್ಡ್ ವಿಲಿಯಂ ಬೆಂಟಿಕ್ 1835 ರಲ್ಲಿ ಭಾರತದಲ್ಲಿ ಜಾರಿಗೆ ತಂದಿದ್ದ ಇಂಗ್ಲಿಷ್ ಎಜುಕೇಶನ್ ಆಕ್ಟ್ ಬಗ್ಗೆ ಇಂಗ್ಲೆಂಡಿನ ಪಾರ್ಲಿಮೆಂಟ್ ನಲ್ಲಿ ಮಾತಾಡುತ್ತಾ ಇತಿಹಾಸಕಾರ ಮತ್ತು ರಾ ಜಕಾರಣಿ ಆಗಿದ್ದ ಲಾರ್ಡ್ ಮೆಕಾಲೆ ಹೇಳಿದ್ದ ಮಾತುಗಳು ಹೀಗಿವೆ. ಭಾರತದಲ್ಲಿ ನಮ್ಮ ಈ ಆಕ್ಟ್ ನಿಂದಾಗಿ ಭಾರತೀಯರಲ್ಲಿ ಅವರ ಬಗ್ಗೆ ಅವರಿಗೇ ಕೀಳಿರಿಮೆ ಮೂಡಬೇಕು. ಸಂಸ್ಕೃತ ಮತ್ತು ಪರ್ಶಿಯಾ ಒಳಗೊಂಡಂತೆ ಯಾವುದೇ ಭಾರತೀಯ ಭಾಷೆಗಿಂತ ಇಂಗ್ಲಿಷ್ ಉತ್ಕೃಷ್ಟ ಭಾಷೆಯೆಂದು ತಿಳಿಯಬೇಕು. ರಕ್ತ,ಮಾಂಸ ಮಾತ್ರ ಭಾರತಿಯವಾಗಿ, ಬುದ್ಧಿ,ವೇಷ, ಭೂಷಣ,ಮನಃಸತ್ವ ಇಂಗ್ಲಿಷ್ ಆಗಬೇಕು…..ತಮ್ಮದು ಎನ್ನುವ ಎಲ್ಲವೂ ಅವರಿಗೆ ನಿಕೃಷ್ಟವಾಗಬೇಕು, ಆಗ ಮಾತ್ರ ನಾವು ಅವರನ್ನು ಆಳಲು ಸಾಧ್ಯ.

    ಮೆಕಾಲೆ ಕನಸು ನನಸಾಗಿ ಬಿಟ್ಟಿತ್ತಾ?, ಬ್ರಿಟಿಷರು ಹೋಗಿ,ನಮಗೆ ಸ್ವಾತಂತ್ರ್ಯ ಬಂದರೂ ಅವರು ಬಿಟ್ಟು ಹೋದ ಈ ಶಿಕ್ಷಣದ ವ್ಯವಸ್ಥೆಯ ಷಡ್ಯಂತ್ರದಿಂದ ನಮ್ಮ ತನವನ್ನು ನಾವು ಕಳೆದುಕೊಂಡು ಬಿಟ್ಟೆವಾ??!!! ನಮಗೆ ನಮ್ಮ ಆಯುರ್ವೇದದಲ್ಲಿ ನಂಬಿಕೆ ಇಲ್ಲ. ನಮ್ಮ ಸಂಸ್ಕಾರ,ಸಂಸ್ಕೃತಿ ಮೂಢನಂಬಿಕೆ. ರನ್ನ ಪಂಪರಿಗಿಂತ ಹೆಚ್ಚು ಕೀಟ್ಸ್, ಶೇಕ್ಸ್ ಪಿಯ್ಯರ್, ಜಾರ್ಜ್ ಬರ್ನಾಡ್ ಷಾ ಹತ್ತಿರವಾಗಿದ್ದಾರೆ. ಆರಂಕುಶಯಿಟ್ಟೋಡೇಮ್, ನೆನೆವುದೆನ್ನ ಮನಂ, ಬನವಾಸಿ ದೇಶವಂ ಅನ್ನುವ ವಾಕ್ಯ ನೆನಪಿನಿಂದಲೇ ಹೋಗಿ, ಜೂಲಿಯಸ್ ಸೀಜರ್ ನಾಟಕದ ಡೈಲಾಗ್ ಗಳು ನಮಗೆ ಹತ್ತಿರವಾದವು!ನಮ್ಮ ಹಂಪಿ,ಅಜಂತಾ ಎಲ್ಲೋರಾ, ಹರಪ್ಪಾ ನಾಗರಿಕತೆಯ ಜಾಗಗಳನ್ನೂ ಅವರೇ ತೋರಿಸಿ, ಅವರು ಹೇಳಿದ ವಾಕ್ಯಗಳನ್ನು ದೇವವಾಕ್ಯಗಳೆಂದು ಇಂದಿಗೂ ತಿಳಿದಿದ್ದೇವೆ.

    ನಮ್ಮಲ್ಲಿಯ ಪ್ರಖಾಂಡ ಸಂಸ್ಕೃತ ಪಂಡಿತರಿಗಿಂತ, ಮ್ಯಾಕ್ಸ್ ಮುಲ್ಲರ್ ಬರೆದ ವೇದಗಳ ಬಗೆಗಿನ ವ್ಯಾಖ್ಯಾನ ದೈವ ವಾಣಿ ಆಗಿಬಿಡ್ತು! ಇವರು ಹಾಕಿದ ವ್ಯವಸ್ಥಿತ ಶಿಕ್ಷಣದ ದಾಸ್ಯ ಮನಸ್ಥಿತಿಯಲ್ಲಿ ಓದಿದವರು ನಮಗೆ ಬುದ್ಧಿಜೀವಿಗಳಾದಾಗ ಯಾವುದರ ಗಂಧ,ಗಾಳಿಯೂ ತಿಳಿಯದಿದ್ದರೂ ನಂದು ಡಿಗ್ರಿ ಆಗಿದೆ ಅನ್ನುವ ನನ್ನಂತಹವರ ವರ್ತನೆ ಆಶ್ಚರ್ಯ ತರಿಸಬೇಕಿಲ್ಲ ಅನ್ನಿಸುತ್ತೆ.

    ಇನ್ನೂ1000 ಪಿಯು ಉಪನ್ಯಾಸಕರ ಹುದ್ದೆ ಶೀಘ್ರ ಭರ್ತಿ

    ಪದವಿಪೂರ್ವ ಶಿಕ್ಷಣ‌ ಇಲಾಖೆಯಲ್ಲಿ ನೇರ‌ ನೇಮಕಾತಿಗೆ ಲಭ್ಯವಿರುವ ಸುಮಾರು ಒಂದು ಸಾವಿರ ಹುದ್ದೆಗಳನ್ನು ತುಂಬಲು‌ ಮುಂದಿನ ಆರು ತಿಂಗಳ‌ ಅವಧಿಯಲ್ಲಿ ಕ್ರಮ ವಹಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಹೇಳಿದ್ದಾರೆ.  ಮುಖ್ಯಮಂತ್ರಿಗಳ‌ ಅಧ್ಯಕ್ಷತೆಯಲ್ಲಿ‌ ಪದವಿಪೂರ್ವ ಶಿಕ್ಷಣ‌ ಇಲಾಖೆಗೆ ಹೊಸದಾಗಿ ನೇಮಕಾತಿ ಹೊಂದಿದ ಅಭ್ಯರ್ಥಿಗಳಿಗೆ ಸಾಂಕೇತಿಕ ನೇಮಕಾತಿ ಆದೇಶ ವಿತರಣಾ‌ ಕಾರ್ಯಕ್ರಮದಲ್ಲಿ‌  ಮಾತನಾಡಿದ ಸಚಿವರು ಇಷ್ಟರಲ್ಲಿಯೇ ಖಾಲಿಯಿರುವ ಎಲ್ಲ ಬೋಧಕ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲಾಗುವುದೆಂದರು.

    ನೇಮಕಾತಿ ಆದೇಶ ಪಡೆದ ಆಯ್ದ ಅಭ್ಯರ್ಥಿಗಳೊಂದಿಗೆ ಶಿಕ್ಷಣ ಸಚಿವರು

    ಪದವಿ ಪೂರ್ವ ಶಿಕ್ಷಣ ಇಲಾಖೆಯ ವಿವಿಧ ವಿಷಯಗಳ 1194 ಉಪನ್ಯಾಸಕ ಅಭ್ಯರ್ಥಿಗಳನ್ನು  ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಯ್ಕೆ ಮಾಡಿದೆ. ಅವರಲ್ಲಿ 1161 ಮಂದಿ ಈಗಾಗಲೇ ಸ್ಥಳ ನಿಯುಕ್ತಿ ಮಾಡಿಕೊಂಡಿದ್ದಾರೆ.

    1203 ಉಪನ್ಯಾಸಕರ ಆಯ್ಕೆಗೆ 2015ರಿಂದ ಪ್ರಕ್ರಿಯೆ ಶುರುವಾಗಿತ್ತು. ಆದರೆ ಅದು ಅರ್ಜಿ ಕರೆದುದರ ಹೊರತಾಗಿ ಮುಂದೆ ಹೋಗಿರಲಿಲ್ಲ. 2019ರಲ್ಲಿ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಈ ಪ್ರಕ್ರಿಯೆಗೆ ವೇಗ ದೊರಕಿತು.

    ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಪ್ರಕ್ರಿಯೆಗೆ ವೇಗ ದೊರಕಿತು. ಉಪನ್ಯಾಸಕರ ಆಯ್ಕೆ ಪೂರ್ಣಗೊಂಡು ಸ್ಥಳ ನಿಯುಕ್ತಿ ಮಾಡಿ ಇಂದು ಆದೇಶ ನೀಡುತ್ತಿದ್ದೇವೆ. ಈ ಕೆಲಸ ಇನ್ನೂ ಆರು ತಿಂಗಳ  ಮೊದಲೇ ನಡೆಯಬೇಕಿತ್ತು. ಆದರೆ ಕೋವಿಡ್-19 ಪ್ರಸರಣದಿಂದಾಗಿ ಲಾಕ್‍ಡೌನ್ ಹಿನ್ನೆಲೆ ಹಾಗೂ ಶಾಲಾ ಕಾಲೇಜುಗಳು ಪುನರಾರಂಭವಾಗುವುದರ ಅನಿಶ್ಚಿತ ವಾತಾವರಣದ ಹಿನ್ನೆಲೆಯಲ್ಲಿ ಈಗ ಇದಕ್ಕೆ ಮಹೂರ್ತ ನಿಗದಿಯಾಗಿದೆ, ತಾವು ಇಲಾಖೆಯ ಸಚಿವರಾದ ಮಾರನೇ ದಿನವೇ ಈ ಕುರಿತು ಅಧಿಕಾರಿಗಳ ಸಭೆ ನಡೆಸಿದೆ. ಸಚಿವನಾಗಿ ನಾನು ಕೈಗೆತ್ತಿಕೊಂಡ ಮೊದಲ ಕೆಲಸ ಇದು ಎಂದು ಹೇಳಲು ನನಗೆ ಹೆಮ್ಮೆಯಾಗುತ್ತದೆ ಎಂದು‌ ಸಚಿವ ಸುರೇಶ್‌ಕುಮಾರ್‌‌ ಹೇಳಿದರು.

    ಕಾಲೇಜುಗಳು ಆರಂಭವಾದ ದಿನದಿಂದ ನೇಮಕಾತಿ ಆದೇಶ ಜಾರಿಗೆ ಬರಲಿದ್ದು, ಅದಕ್ಕೂ ಮೊದಲು ನೂತನ ಉಪನ್ಯಾಸಕರಿಗೆ ಇಲಾಖೆಯ ನಿಯಮಗಳು, ಆಡಳಿತ, ವೃಂದ ಮತ್ತು ನೇಮಕಾತಿ ನಿಯಮಗಳು, ಉಪನ್ಯಾಸಕರ ವೃತ್ತಿ ಧರ್ಮ, ವೃತ್ತಿ ಗೌರವ ಸೇರಿದಂತೆ ಪ್ರೇರಣಾದಾಯಕ ತರಬೇತಿ ಕಾರ್ಯಾಗಾರವನ್ನು ಜಿಲ್ಲೆಗಳಲ್ಲಿ ಇಲ್ಲವೇ ವಿಭಾಗಗಳಲ್ಲಿ ನೀಡಲಾಗುವುದು ಎಂದ ಸಚಿವ ಸುರೇಶ್‌ಕುಮಾರ್,  ರಾಜ್ಯದಲ್ಲಿ  ಇರುವ 1231 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 12, 857 ಉಪನ್ಯಾಸಕ ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ 10370 ಉಪನ್ಯಾಸಕರ ಸ್ಥಾನಗಳು ಭರ್ತಿಯಾಗಿದ್ದು, 2487 ಹುದ್ದೆಗಳು ಖಾಲಿಯಾಗಿವೆ. ಈ ಖಾಲಿಯಾದ ಹುದ್ದೆಗಳಿಗೆ ಈಗ ನೇಮಕ ಮಾಡಿರುವ 1196 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಇದರ ಹೊರತಾಗಿಯೂ ಉಳಿಯುವ ಖಾಲಿ ಹುದ್ದೆಗಳ ಶೀಘ್ರ ಭರ್ತಿಗೆ ಸರ್ಕಾರ ಕ್ರಿಯಾ  ಯೋಜನೆ ರೂಪಿಸುತ್ತಿದೆ. ಮುಂದಿನ ಆರು ತಿಂಗಳ ಅವಧಿಯಲ್ಲಿ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಸರ್ಕಾರಿ, ಅನುದಾನಿತ, ಅನುದಾನಿತ ಹಾಗೂ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಒಟ್ಟು 12,22,273 ವಿದ್ಯಾರ್ಥಿಗಳ ಹಿತದೃಷ್ಟಿಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅವರು ಹೇಳಿದರು.

    ನೂತನ‌ ಉಪನ್ಯಾಸಕರಿಗೆ ಕಿವಿಮಾತು ಹೇಳಿದ ಸಚಿವ ಸುರೇಶ್‌ಕುಮಾರ್, ನಮ್ಮ ಸರ್ಕಾರ ಅತ್ಯಂತ ಪಾರದರ್ಶಕ ವಾಗಿ  ಭ್ರಷ್ಟಾಚಾರಕ್ಕೆ‌‌ ಎಡೆ ಮಾಡದೇ ನೇಮಕಾತಿ ಆದೇಶಗಳನ್ನು ನೀಡಿದ್ದು, ಮಕ್ಕಳ ಭವಿಷ್ಯವನ್ನು ಕಾಪಾಡುವ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸಬೇಕೆಂದು ಹೇಳಿದರು.

    ಕೋವಿಡ್ ತಂದೊಡ್ಡಿದ ಎಲ್ಲ ಆರ್ಥಿಕ ಸಂಕಷ್ಟದ ಸಮಯದಲ್ಲೂ ನೇಮಕಾತಿ ಆದೇಶಗಳನ್ನು ನೀಡಲಾಗಿದ್ದು ಎಲ್ಲ ಉಪನ್ಯಾಸಕರು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕರೆ ನೀಡಿದರು.

    ಶಿಕ್ಷಣ ಇಲಾಖೆಯ ಪ್ರಧಾನ‌ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಪದವಿಪೂರ್ವ ಶಿಕ್ಷಣ‌ ನಿರ್ದೇಶಕಿ ದೀಪಾ‌ಚೋಳನ್ ಸೇರಿದಂತೆ ಹಿರಿಯ ಅಧಿಕಾರಿಗಳು‌ ಉಪಸ್ಥಿತರಿದ್ದರು.

    ಕ್ರಿಸ್ಮಸ್ ವೇಳೆಗೆ ಲಸಿಕೆ ರೆಡಿ; ಮಡೋರ್ನ, ಫೈಜರ್ ಗೆಲ್ಲುವವರು ಯಾರು?

    ಎಲ್ಲವೂ ಅಂದು ಕೊಂಡಂತೆ ನಡೆದರೆ ಈ ತಿಂಗಳಾಂತ್ಯ ಅಥವಾ ಡಿಸೆಂಬರ್ ಮೊದಲ ವಾರ ಕೋವಿಡ್ ವಿರುದ್ಧದ ಲಸಿಕೆ ಎಲ್ಲರಿಗೂ ಲಭ್ಯವಾಗುವಂತೆ ಕಾಣಿಸುತ್ತಿದೆ.

    ಕಳೆದವಾರ ಶೇಕಡ 90ರಷ್ಟು ಪ್ರಗತಿ ಕಂಡಿರುವುದಾಗಿ ಹೇಳಿದ್ದ ಫೈಜರ್ ಕಂಪೆನಿ ನಿನ್ನೆ ಮತ್ತಷ್ಟು ಆಶಾದಾಯಕ ಫಲಿತಾಂಶ ನೀಡಿದ್ದು ಶೇಕಡ 95ರಷ್ಟು ಪ್ರಗತಿ ಸಾಧಿಸಿರುವುದಾಗಿ ಹೇಳಿದೆ. ಎಲ್ಲಾ ವಯೋಮಾನದವರಲ್ಲೂ ಈ ಲಸಿಕೆ ಆಶಾದಾಯಕ ಫಲಿತಾಂಶ ನೀಡಿದೆ ಎನ್ನಲಾಗಿದೆ. ಡಿಸೆಂಬರ್ ಎರಡನೇ ವಾರದಲ್ಲಿ ಸರಕಾರಗಳ ಅನುಮತಿ ಪಡೆದು ಕ್ರಿಸ್ಮಸ್ ಗೆ ಮುನ್ನವೇ ಜನರಿಗೆ ಲಭ್ಯವಾಗುವಂತೆ ಮಾಡುವ ಇಂಗಿತವನ್ನು ಕಂಪನಿ ವ್ಯಕ್ತಪಡಿಸಿದೆ.

    ಮತ್ತೊಂದು ಕಂಪೆನಿ ಕೇಂಬ್ರಿಡ್ಜ್ ನ ಮಡೋರ್ನ ಕೂಡ ಆಶಾದಾಯಕ ಫಲಿತಾಂಶ ನೀಡಿದ್ದು ಅದು ಶೇಕಡ 94.5 ರಷ್ಟು ಪ್ರಗತಿ ಸಾಧಿಸಿದೆ. ಇನ್ನುಳಿದಂತೆ ಸರಕಾರಗಳು ಪರಿಶೀಲಿಸಿ ಅನುಮತಿ ನೀಡಬೇಕು.

    ಆಸ್ಟ್ರಾ ಜೆನಿಕಾ ಮತ್ತು ಯೂನಿವರ್ಸಿಟಿ ಆಫ್ ಆಕ್ಸ್ ಫರ್ಡ್ ಸಿದ್ಧಪಡಿಸುತ್ತಿರುವ ಲಸಿಕೆ ಕೂಡ ವಯಸ್ಸಾದವರಲ್ಲೂ ಸಕ ಸಕರಾತ್ಮಕ ಫಲಿತಾಂಶ ವ್ಯಕ್ತಮಾಡಿದೆ. ಇದರ ಅಂತಿಮ ಪ್ರಯೋಗ ಈ ವಾರದಲ್ಲೇ ನಡೆಯಲಿದೆ.

    ಇಂದು ನಡೆದ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯ ನಾಯಕತ್ವ ಶೃಂಗದಲ್ಲಿ ಮಾತಾನಾಡಿದ ಸೆರಮ್ ಇನ್ಸ್ ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಓ ಅಡರ್ ಪೂನವಲ್ಲ , ಭಾರತದಲ್ಲಿ ಆಕ್ಸ್ ಫರ್ಡ್ ಲಸಿಕೆಯ ಬೆಲೆ 500 ರೂ. ಆಗಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದಕ್ಕೆ ಹೋಲಿಸಿದರೆ ಫೈಜರ್ ಮತ್ತು ಮಡೋರ್ನ ಕಂಪೆನಿಯ ಲಸಿಕೆಗಳ ಬೆಲೆ ಭಾರತಕ್ಕೆ ದುಬಾರಿ ಆಗಬಹುದು ಎಂದು ಅಂದಾಜಿಸಲಾಗಿದೆ.

    ಚೀನಾ ಅಭಿವೃದ್ಧಿ ಪಡಿಸಿರುವ ಕರೋನಾ ವಾಕ್ ಲಸಿಕೆ ಅಂತಿಮ ಹಂತದ ಪ್ರಯೋಗದಲ್ಲಿದೆ. ರಷ್ಯಾದ ಸ್ಪುಟ್ನಿಕ್ ವ್ಯಾಕ್ಸಿನ್ ಶೇಕಡ 92ರಷ್ಟು ಫಲಿತಾಂಶ ನೀಡಿದೆ.

    ಭಾರತದಲ್ಲಿ ಭಾರತ್ ಬಯೋಟೆಕ್ ಸಿದ್ಧಪಡಿಸುತ್ತಿರುವ ಕೋವ್ಯಾಕ್ಸ್ ವ್ಯಾಕ್ಸಿನ್ ಮೂರನೇ ಹಂತದ ಪ್ರಯೋಗಕ್ಕೆ ಸಿದ್ಧವಾಗಿದೆ.

    ಸವಾಲುಗಳು

    1 ವ್ಯಾಕ್ಸಿನ್ ಸಿದ್ಧವಾದರು -80 ಡಿಗ್ರಿ ಸೆಲ್ಸಿಯಸ್ ನಲ್ಲಿ ಅದನ್ನು ಸಂಗ್ರಹಿಸಿ ಸಾಗಿಸುವ ಸವಾಲು.

    2 ಈಗಿನ ಫಲಿತಾಂಶ ನಾಲ್ಕು ಐದು ತಿಂಗಳು ರೋಗದ ವಿರುದ್ಧ ರಕ್ಷಣೆಯ ಫಲಿತಾಂಶ ನೀಡಿದೆ. ದೀರ್ಘಕಾಲವೂ ಇದು ರಕ್ಷಣೆ ನೀಡಬಲ್ಲದೆ ಎಂಬುದು ಖಚಿತವಾಗಬೇಕಿದೆ. ಅದಕ್ಕೆ ಇನ್ನು ಸಮಯ ಬೇಕು. ಹೀಗಾಗಿ ಮಾನಿಟರ್ ಮಾಡುತ್ತಲೆ ಇರಬೇಕು.

    3 ಸರಕಾರಗಳು ನಕಲಿ ವ್ಯಾಕ್ಸಿನ್ ತಯಾರಕರ ಬಗ್ಗೆ ಎಚ್ಚರ ವಹಿಸಬೇಕಾದ ಅನಿವಾರ್ಯತೆ ಎದುರಾಗಲಿದೆ. ಕಾಳಸಂತೆಯಲ್ಲಿ ಮಾರಾಟವಾಗದಂತೆ ಕ್ರಮ ಕೈಗೊಳ್ಳಬೇಕಾಗುತ್ತದೆ.

    4 ಸೈಡ್ ಎಫೆಕ್ಟ್ ಗಳ ಬಗ್ಗೆ ಇನ್ನೂ ಪರಿಣಾಮಕಾರಿ ಅಧ್ಯಯನ ಆಗಬೇಕು.

    Photo by RF._.studio from Pexels

    ಒಂದು ಬಾಗಿಲು ಮುಚ್ಚಿದರೆ ಅವಕಾಶ ಅನ್ನೊ ಮತ್ತೊಂದು ಬಾಗಿಲು ತೆರೆದೇ ತೆರೆಯುತ್ತದೆ

    ಒಂದು ಪುರಾತನ ಊರು ಆ ಊರಿನಲ್ಲೊಂದು ಇತಿಹಾಸ ಪ್ರಸಿದ್ಧ ದೇವಸ್ಥಾನ . ಆ ದೇವರ ದರ್ಶನಕ್ಕಾಗಿ ದೂರದ ಊರುಗಳಿಂದ ಪ್ರತಿನಿತ್ಯ ನೂರಾರು ಭಕ್ತರು ಆಗಮಿಸುತ್ತಿದ್ದರು. ದೇವರು, ದೇವಸ್ಥಾನದ ಗೋಪುರ , ಗೋಡೆ , ಗರ್ಭಗುಡಿ ಮತ್ತು ಸ್ಥಂಭಗಳು ಅತ್ಯಂತ ಆಕರ್ಷಕವಾದ ಹಾಗೂ ಸುಂದರವಾದ ಪ್ರಾಚೀನ ಶಿಲ್ಪಕಲೆಗಳಿಂದ ಕೂಡಿತ್ತು. ಅರ್ಚಕರು ಪ್ರತಿದಿನವೂ ದೇವರಿಗೆ ವಿಶೇಷ ಪೂಜೆಗಳನ್ನು ಮಾಡುತ್ತಿದ್ದರು . ದೇವಸ್ಥಾನದ ಸಂಪೂರ್ಣ ಉಸ್ತುವಾರಿಯನ್ನು ಆಡಳಿತ ಮಂಡಳಿ ನಿರ್ವಹಿಸುತ್ತಿತ್ತು .

    ಆ ದೇವಸ್ಥಾನದಲ್ಲಿ ಶ್ರೀನಿವಾಸ ಎಂಬುವವನು ಗಂಟೆ ಬಾರಿಸುವ ಕೆಲಸ ಮಾಡುತ್ತಿದ್ದ . ದೇವಸ್ಥಾನದ ಮಹಿಮೆ ಹಾಗೂ ಹಿರಿಮೆ ಸ್ಥಳೀಯರಿಂದ ಹೊರಗಿನವರಿಂದ ಹಾಗೂ ಗೈಡ್ ಗಳಿಂದ ಪ್ರತಿಯೊಂದು ಕಡೆಯೂ ಪಸರಿಸಿತ್ತು.

    ದಿನಕಳೆದಂತೆ ಸ್ಥಳೀಯ ಭಕ್ತರ ಜೊತೆಗೆ ವಿದೇಶೀ ಟೂರಿಸ್ಚ್ ಗಳೂ ಸಹ ಗುಂಪು ಗುಂಪಾಗಿ ದೇವಸ್ಥಾನಕ್ಕೆ ಬರಲಾರಂಭಿಸಿದರು .
    ಬೆಳವಣಿಗೆ ಕಂಡ ದೇವಸ್ಥಾನದ ಆಡಳಿತ ಮಂಡಳಿ ಒಮ್ಮೆ ಒಂದು ತುರ್ತು ಸಭೆ ಕರೆದು ಪೂಜೆ ಮಾಡುವ ಅರ್ಚಕರಿಂದ ಹಿಡಿದು ಗಂಟೆ ಬಾರಿಸುವ ಶ್ರೀನಿವಾಸನವರೆಗೂ ದೇವಸ್ಥಾನದಲ್ಲಿ ಕೆಲಸ ನಿರ್ವಹಿಸುವ ಪ್ರತಿಯೊಬ್ಬರೂ ತಪ್ಪದೇ ಇಂಗ್ಲಿಷು ಕಲಿಯುವಂತೆ ಫರ್ಮಾನು ಹೊರಡಿಸುತ್ತಾರೆ .

    ಅನಕ್ಷರಸ್ಥನಾದ ಶ್ರೀನಿವಾಸ ಕಂಗಾಲಾಗಿ ಇಂಗ್ಲಿಷನ್ನು ಕಲಿಯುವ ಗೋಜಿಗೇ ಹೋಗುವುದಿಲ್ಲ ‌.ಆಡಳಿತ ಮಂಡಳಿ ಶ್ರೀನಿವಾಸನಿಗೆ ನೀನು ಇಂಗ್ಲಿಷು ಕಲಿಯದಿದ್ದರೇ ಕೆಲಸದಿಂದ ತೆಗೆದುಹಾಕುವುದಾಗಿ ಬೆದರಿಕೆ ಹಾಕುತ್ತಾರೆ .

    ಅವರು ತೆಗೆದುಹಾಕೋವರೆಗೂ ಯಾಕ್ ಇರ್ಬೇಕು ಅಂತಂದುಕೊಂಡ ಸ್ವಾಭಿಮಾನಿ ಶ್ರೀನಿವಾಸ ತಾನಾಗೇ ಗಂಟೆ ಬಾರಿಸುವ ಕೆಲಸ ಬಿಟ್ಟು ಬೇರೇ ದಾರಿಕಾಣದೇ ಬದುಕಲು ದೇವಸ್ಥಾನದ ಮುಂಭಾಗದ ರಸ್ತೆ ಬದಿಯಲ್ಲಿ ಒಂದು ಟೀ ಅಂಗಡಿಯನ್ನು ತೆರೆಯುತ್ತಾನೆ .ವ್ಯಾಪಾರ ಚೆನ್ನಾಗಿ ನಡಿಯತೊಡಗುತ್ತದೆ.ತಿಂಗಳು ಕಳೆದಂತೆ ಸಂಜೆ ಹೊತ್ತು ಬಿಸಿ ಬೋಂಡ ಬಜ್ಜಿ ಹಾಕಲು ಶುರುಮಾಡುತ್ತಾನೆ . ರುಚಿ ಜನರ ನಾಲಿಗೆಯನ್ನು ವ್ಯಾಪಾರ ಶ್ರೀನಿವಾಸನ ಕೈಯನ್ನೂ ಹಿಡಿಯುತ್ತದೆ .
    ನೋಡು ನೋಡುತ್ತಿದ್ದಂತೆ ಶ್ರೀನಿವಾಸನ ಟೀ ಅಂಗಡಿ ಹೋಟೆಲ್ಲಾಗುತ್ತದೆ .ಹೋಟೆಲ್ ರೆಸ್ಟೋರೆಂಟಾಗುತ್ತದೆ . ದೊಡ್ಡ ಹೋಟೆಲ್ ಉದ್ಯಮಿಯಾಗಿ ಗುರುತಿಸಿಕೊಂಡ ಶ್ರೀನಿವಾಸ ದೊಡ್ಡ ಶ್ರೀಮಂತನಾಗುತ್ತಾನೆ .

    ಅಷ್ಟು ದೊಡ್ಡ ಶ್ರೀಮಂತನಾದರೂ ಶ್ರೀನಿವಾಸ ಕನ್ನಡ ಬಿಟ್ಟು ಬೇರೆ ಭಾಷೆ ಕಲಿಯುವುದಿಲ್ಲ . ಒಮ್ಮೆ ಒಬ್ಬ ಆಂಗ್ಲ ಪತ್ರಿಕೆಯ ಪತ್ರಕರ್ತರೊಬ್ಬರು ಶ್ರೀನಿವಾಸನ ಸಂದರ್ಶನ ಮಾಡಲು ಬಂದು ನೀವು ಯಾಕೆ ಇಂಗ್ಲಿಷ್ ಕಲಿಯಲಿಲ್ಲ ? ಎಂದು ಶ್ರೀನಿವಾಸನನ್ನು ಪ್ರಶ್ನಿಸಿದಾಗ. ” ನಾ ಏನಾರ ಇಂಗ್ಲಿಷು ಕಲ್ತಿರ್ತಿದ್ರೆ ಇನ್ನೂ ದೇವಸ್ಥಾನದಲ್ಲಿ ಗಂಟೆ ಬಾರ್ಸ್ಕೊಂಡಿರ್ಬೇಕೀತ್ತು” ಎಂದು ಉತ್ತರಿಸುತ್ತಾನೆ .

    ಯಾರೋ ಮಹಾನುಭಾವ ಬರೆದಿದ್ದ ಈ ಸಣ್ಣ ಕತೆಯನ್ನು ಓದಿದ ತಕ್ಷಣ‌ ಮನಸ್ಸಿಗೆ ತುಂಬಾನೇ ಖುಷಿಯಾಯಿತು .

    • ಮಾಡುವ ಕೆಲಸ ಯಾವುದೇ ಆದರೂ ಶ್ರದ್ಧೆಯಿಂದ ಮಾಡಿದರೆ ಖಂಡಿತ ಯಶಸ್ಸು ಲಭಿಸುತ್ತದೆ .
    • ಒಂದು ಬಾಗಿಲು ಮುಚ್ಚಿದರೆ ಅವಕಾಶ ಅನ್ನೊ ಮತ್ತೊಂದು ಬಾಗಿಲು ತೆರೆದೇ ತೆರೆಯುತ್ತದೆ .
    • ಬದಲಾವಣೆ ಜಗದ ನಿಯಮ ಅದಕ್ಕೆ ಧೃತಿಗೆಡಬಾರದು .
    • ಸದಾ ಹೊಸತನಕ್ಕೆ ಒಗ್ಗಿಕೊಳ್ಳಬೇಕು .
    • ಮನಸ್ಸಿಗೆ ಸರಿ ಎನ್ನಿಸುವ ನಿರ್ಧಾರವನ್ನು ಧೈರ್ಯದಿಂದ ತೆಗೆದುಕೊಳ್ಳಬೇಕು .
    • ಎಂತಹುದೇ ಸಂದರ್ಭದಲ್ಲೂ ಸ್ವಾಭಿಮಾನವನ್ನು ಬಿಡಬಾರದು .
    • ಪರಿಶ್ರಮಕ್ಕೆ ಪ್ರತಿಫಲ ಕಟ್ಟಿಟ್ಟ ಬುತ್ತಿ .

    ಈ ಪುಟ್ಟ ಕತೆಯಲ್ಲಿ ಇಷ್ಟೊಂದು ಅದ್ಭುತವಾದ ಸಂಗತಿಗಳು ಅಡಕವಾಗಿವೆ ಅನ್ನಿಸ್ತು .

    Photo by Matthew T Rader on Unsplash

    ಅವನಿಗೆ ಒಳ್ಳೆಯ ಬುದ್ಧಿ ಬರದೇ ಹೋಗಿದ್ದರೆ ತಮಿಳುನಾಡಿನ ಹೆಸರಾಂತ ಅಧಿಕಾರಿಗಳು ಇಂದು ದಿವಂಗತರಾಗಿರುತ್ತಿದ್ದರು

    ನಿವೃತ್ತ ಡಿಜಿಪಿ ಡಾ. ಡಿ.ವಿ.ಗುರುಪ್ರಸಾದ್‌ ಬರೆದಿರುವ ದಂತಕತೆಯಾದ ದಂತಚೋರ ಕೃತಿ ನಿನ್ನೆಯಷ್ಟೆ ಬಿಡುಗಡೆಯಾಗಿದೆ. ಆ ಕೃತಿಯ ಆಯ್ದ ಒಂದು ಭಾಗ ಇಲ್ಲಿದೆ.

    ಗೋಪಾಲ್ ‌ಹೊಸೂರ್ ಮೇಲೆ ದಾಳಿಯಾದ ಕೇವಲ ಎರಡೇ ದಿನಗಳ ಬಳಿಕ ವೀರಪ್ಪನ್ ಮತ್ತೊಂದು ದಿಟ್ಟ ದಾಳಿಗೆ ಕ್ಯೆಹಾಕಿದ. ಪಾಲಾರ್ (ಸೊರಕೆಮಡು) ವಿನಲ್ಲಿ ಮಾಡಿದಂತೆಯೇಆತ ನೆಲ ಬಾಂಬ್‌ಗಳನ್ನಿಟ್ಟು ತಮಿಳುನಾಡಿದ ಪೊಲೀಸ್ ಅಧಿಕಾರಿಗಳನ್ನು ಕೊಲ್ಲುವ ಪ್ರಯತ್ನವನ್ನು ಮಾಡಿದ.

    ಈ ಬಗ್ಗೆ ತಮಿಳುನಾಡಿನ ನಿವೃತ್ತಎಸ್.ಪಿ. ಎಂ.ಅಶೋಕ್‌ಕುಮಾರ್ ನನಗೆ ಹೀಗೆಹೇಳಿದರು:

    “1993ರ ಮೇ ತಿಂಗಳ 26ರ ಬೆಳಿಗ್ಗೆ ನಮ್ಮಎಸ್.ಟಿ.ಎಫ್‌ತಂಡವು ಡಿ.ಐ.ಜಿ ವಿಜಯಕುಮಾರ್‌ ನೇತೃತ್ವದಲ್ಲಿಕಲ್ಲಟ್ಟಿಅರಣ್ಯ ಪ್ರದೇಶದಲ್ಲಿ ವೀರಪ್ಪನ್‌ಗಾಗಿ ಕೂಂಬಿಂಗ್‌ ಕಾರ್ಯಾಚರಣೆ ಮಾಡುತ್ತಿತ್ತು. ಆಗ ನಮ್ಮ ತಂಡದ ಕಾನ್ಸ್‌ಟೇಬಲ್ ಸೀಮೈಚಾಮಿ ಮರದ ಹಿಂದೆ ಅಡಗಿದ್ದ ಒಬ್ಬ ವ್ಯಕ್ತಿಯನ್ನು ನೋಡಿಕೂಡಲೇ ಅವನತ್ತ ಗುಂಡು ಹಾರಿಸಿದ. ಆಗ ಬಹಳ ಜನರುಓಡಿದ ಸಪ್ಪಳ ನಮಗೆ ಕೇಳಿಬಂದಿತು. ನಾವು ಆತ ಅಡಗಿದ್ದ ಜಾಗಕ್ಕೆ ಹೋಗಿ ನೋಡಿದಾಗ ಅಲ್ಲಿ ತಿಂಡಿ ತಿನಿಸುಗಳ ಪಾಕೆಟ್‌ಗಳು, ಬೀಡಿಯ ತುಂಡುಗಳು ಮುಂತಾದವುಬಿದ್ದಿದ್ದವು. ಅಲ್ಲಿ ಬ್ಯಾಟರಿಯೊಂದನ್ನು ಇಟ್ಟಿದ್ದು ಅದಕ್ಕೆ ವ್ಯೆರ್ ಸಂಪರ್ಕವನ್ನು ಮಾಡಿತ್ತು. ಇದನ್ನು ನಾವು ಕಂಡಕೂಡಲೇ ನಮಗೆ ನೆಲದಲ್ಲಿ ಬಾಂಬುಗಳನ್ನು ಹುಗಿದಿದ್ದಾರೆ ಎಂದು ಖಾತ್ರಿಯಾಯಿತು. ಮುಂದೆ ಹೋಗುವ ಹಾದಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ನೆಲಬಾಂಬುಗಳನ್ನು ಭೂಮಿಯಲ್ಲಿ ಹುಗಿದು ಅವನ್ನುಒಂದಕ್ಕೊಂದನ್ನು ವೈರ್ ಮೂಲಕ ಜೋಡಿಸಿ ಬ್ಯಾಟರಿಗೆ ಸಂಪರ್ಕವನ್ನುಕೊಡಲಾಗಿತ್ತು. ಪಾಲಾರ್‌ಸ್ಫೋಟದಲ್ಲಿ ಹೇಗೆ ಮಾಡಿದ್ದರೋ ಇದೂ ಅದೇರೀತಿಯಲ್ಲಿಯೇ ಇತ್ತು. ಸೀಮೈಚಾಮಿ ಗಮನಿಸಿಗುಂಡು ಹಾರಿಸಿದ ಕಾರಣ ಬ್ಯಾಟರಿಗೆ ಕರೆಂಟ್ ಹರಿಸಲಾಗದೆ ವೀರಪ್ಪನ್‌ ತಂಡದವರು ಓಡಿಹೋಗಿದ್ದರು. ಹಲವಾರು ಗಂಟೆಗಳ ಕಾಲದ ಶೋಧನೆಯ ನಂತರ 45 ಬಾಂಬ್‌ಗಳನ್ನು ಪತ್ತೆ ಮಾಡಿ ಅವನ್ನು ನೆಲದಿಂದ ಹೊರಕ್ಕೆ ತೆಗೆದೆವು. ಆ ನಂತರ ಅವನ್ನು ಪಾಲಾರ್‌ ಕ್ಯಾಂಪಿಗೆ ತೆಗೆದುಕೊಂಡು ಹೋದೆವು.

    “ಪಾಲಾರ್ ‌ಸ್ಫೋಟದ ಪ್ರಕರಣದಲ್ಲಿ ನಾವು ಸೈಮನ್‌ನನ್ನುಬಂಧಿಸಿ ಅವನನ್ನು ಈ ಬಗ್ಗೆ ವಿಚಾರಿಸಿದಾಗ ಆತ ಪೊಲೀಸರನ್ನುಕೊಲ್ಲಲು ವಾಳಂಗುಳಿಪಟ್ಟಿ ಬಳಿ ಹಲವಾರು ಕಡೆಗಳಲ್ಲಿ ಇಂತಹ ಸ್ಫೋಟಕಗಳನ್ನು ಹುದುಗಿಸಿ ಇಟ್ಟಿದ್ದೆವು ಎಂದು ತಿಳಿಸಿದ. ಆತ ಇಂತಹ ನಾಲ್ಕು ಇತರ ಜಾಗಗಳನ್ನು ನಮಗೆ ತೋರಿಸಿದ್ದ. ಅವುಗಳಲ್ಲಿ ಒಂದು ನಮ್ಮತಂಡದ ಸದಸ್ಯರು ಕಾಡಿನಲ್ಲಿ ಕಾಲಕಾಲಕ್ಕೆ ವಿಶ್ರಾಂತಿಯನ್ನು ಪಡೆಯುತ್ತ್ತಿದ್ದ ಓಸಾಡಪ್ಪ ದೇವಸ್ಥಾನದ ಸುತ್ತಇದ್ದ ಪ್ರದೇಶವೆಂದು ತಿಳಿದು ನಮಗೆ ಗಾಬರಿಯಾಗಿತ್ತು.”

    ಈ ಘಟನೆಯ ಬಗ್ಗೆ ತಮಿಳುನಾಡಿನ ಬರಗೂರು ಪೊಲೀಸ್‌ಠಾಣೆಯ ಅಪರಾಧ ಸಂಖ್ಯೆ 12/93 ರಲ್ಲಿ ಕೊಲೆಗೆ ಪ್ರಯತ್ನದ ಪ್ರಕರಣವೊಂದುದಾಖಲಾಯಿತು.

    ಆ ದಿನ ಕರ್ನಾಟಕದ ಪಾಲಾರ್ ‌ಕ್ಯಾಂಪಿನಲ್ಲಿದ್ದ ಇನ್ಸ್‌ಪೆಕ್ಟರ್ ಬಿ .ಎ.ಪೂಣಚ್ಚ ಈ ಘಟನೆಯ ಬಗ್ಗೆ ಹೇಳಿದ್ದು ಹೀಗೆ:

    “ತಮಿಳುನಾಡಿನ ಕಾಡಿನ ಪ್ರದೇಶದಲ್ಲಿಎಸ್.ಟಿ.ಎಫ್‌ನ 70 ಜನ ಸಿಬ್ಬಂದಿ ಕೂಂಬಿಂಗ್‌ ಆಪರೇಷನ್ ಮಾಡುತ್ತಿದ್ದರು. ಅವರನ್ನು ಕೊಲ್ಲಬೇಕೆಂಬ ಉದ್ದೇಶದಿಂದ ವೀರಪ್ಪನ್‌ಕಾಡಿನ ನೆಲದಲ್ಲಿ40-50 ಸ್ಫೋಟಕಗಳನ್ನು ಹುಗಿದಿದ್ದ. ತಮಿಳುನಾಡು ತಂಡದ ಜತೆಗೆ ಚಕಮಕಿಯಾದಾಗ ವೀರಪ್ಪನ್ ‌ತಂಡ ಅಲ್ಲಿಂದ ಪಲಾಯನ ಮಾಡಿತು. ನಂತರ ನಮಗೆ ತಿಳಿದುಬಂದಿದ್ದೇನೆಂದರೆ ವೀರಪ್ಪನ್ ‌ತಂಡದ ಒಬ್ಬ ಬಾಂಬ್‌ತಜ್ಞ ತಮಿಳು ನಾಡಿನ ಅಷ್ಟೊಂದು ಪೊಲೀಸರು ಸಾಯಬಾರದು ಎಂಬ ಸದುದ್ದೇಶದಿಂದ ಸ್ಫೋಟಕಗಳಿಗೆ ಕರೆಂಟ್ ಹರಿಯುವ ವೈರ್‌ನತುದಿಯನ್ನುಯಾರಿಗೂ ತಿಳಿಯದಂತೆ ಕತ್ತರಿಸಿದ್ದ. ಹೀಗಾಗಿ ಕರೆಂಟ್‌ಕೊಟ್ಟರೂ ಬಾಂಬುಗಳು ಸಿಡಿಯಲಿಲ್ಲ. ಒಂದು ವೇಳೆ ಆತ ಹೀಗೆ ಮಾಡಿರದಿದ್ದರೆ ತಮಿಳುನಾಡಿನ ೭೦ ಜನರು ಸಾಯಬೇಕಾಗಿತ್ತು.

    “ಆನಂತರ ತಮಿಳುನಾಡು ಎಸ್.ಟಿ.ಎಫ್‌ಯೋಧರು ಸ್ಫೋಟಕಗಳನ್ನು ನೆಲದಿಂದ ಹೊರಕ್ಕೆ ತೆಗೆದು ತಮ್ಮ ಹೆಗಲ ಮೇಲೆ ಹಾಕಿಕೊಂಡು ಪಾಲಾರ್‌ನಲ್ಲಿದ್ದ ನಮ್ಮ ಶಿಬಿರಕ್ಕೆ ಬಂದು ಅವನ್ನು ನಮಗೆ ತೋರಿಸಿ ನಾವು ಬದುಕಿದೆವುಎಂದು ಹೇಳಿದರು. ಈ ಘಟನೆಯಾದ ಹಲವಾರು ತಿಂಗಳುಗಳ ನಂತರ ನಾವು ವೀರಪ್ಪನ್‌ನ ಕೆಲವು ಸಹಚರರನ್ನು ಬಂಧಿಸಿ ಅವರನ್ನು ಈ ಘಟನೆಯ ಪ್ರಶ್ನಿಸಿದಾಗ, ಒಬ್ಬ ವ್ಯಕ್ತಿತಾನೇ ವೈರ್‌ಗಳನ್ನು ಕತ್ತರಿಸಿ ಪೊಲೀಸರನ್ನು ಉಳಿಸಿದ್ದಾಗಿ ನನ್ನ ಮುಂದೆಒಪ್ಪಿಕೊಂಡ. ಒಂದು ವೇಳೆ ಅವನಿಗೆ ಒಳ್ಳೆಯ ಬುದ್ಧಿ ಬರದೇ ಹೋಗಿದ್ದರೆ ತಮಿಳುನಾಡಿನ ಹೆಸರಾಂತ ಅಧಿಕಾರಿಗಳು ಇಂದು ದಿವಂಗತರಾಗಿರುತ್ತಿದ್ದರು.”


    (ಸಪ್ನ ಬುಕ್ ಬೆಂಗಳೂರು ಇವರು ಪ್ರಕಟಿಸಿರುವ 340 ಪುಟಗಳ ಈ ಕೃತಿಯ ಬೆಲೆ ರೂ .250)

    error: Content is protected !!