23.5 C
Karnataka
Saturday, May 23, 2026
    Home Blog Page 131

    ಇದು ಕೋವಿಡ್ ವೈರಸ್ ನ 24ನೇ ಅವತಾರ;ಆಟ ಇನ್ನೂ ಮುಗಿದಿಲ್ಲ ಹಾಗೆಂದು ಭೀತಿಯೂ ಪಡಬೇಕಿಲ್ಲ

    ಕೊರೋನ ವೈರಸ್‌ನ ಪ್ರಭಾವ ನಮ್ಮ ದೇಶದಲ್ಲಿ ಕಡಿಮೆಯಾಗಿದ್ದು, ಹೊಸ ವರ್ಷಕ್ಕೆ ಎಲ್ಲವೂ ಮೊದಲಿನಂತಾಗುತ್ತದೆ ಎಂಬ ಆಶಾ ಭಾವನೆ ಮೂಡುತ್ತಿದೆ. ಮದುವೆ ಮತ್ತು ಹಬ್ಬದ ಸಂದರ್ಭಗಳು ಮೊದಲಿನ ರೀತಿಯಲ್ಲಿ ಮರುಕಳಿಸುತ್ತಿವೆ. ಶಾಲಾ ಕಾಲೇಜುಗಳು ಆರಂಭವಾಗುವ ಶುಭ ಸೂಚನೆ ದೊರೆತಿದೆ.ಇಂತಹ ಸಂದರ್ಭದಲ್ಲಿ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಕಂಡುಬಂದ ರೂಪಾಂತರ ತಳಿ (Mutated) ಎಲ್ಲರಲ್ಲೂ ಮತ್ತೆ ಆತಂಕ ಮೂಡಿಸಿದೆ.

    2020 ರ ಮಧ್ಯಭಾಗದಲ್ಲಿ ಕೋವಿಡ್ ಉಂಟುಮಾಡಿದ ಅನಾಹುತಗಳು ಮತ್ತೆ ಮರುಕಳಿಸುತ್ತದೆ ಎಂಬ ಭಯ ಎಲ್ಲರಲ್ಲೂ ಉಂಟುಮಾಡಿದೆ.


    ಈಗಾಗಲೇ ಲಂಡನ್‌ನಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದೆ. ಯುರೋಪ್‌ನ ಎಲ್ಲಾ ದೇಶಗಳಲ್ಲಿ ಮತ್ತೆ ಲಾಕ್‌ಡೌನ್ ಘೋಷಿಸುವ ಸ್ಥಿತಿ ನಿರ್ಮಾಣವಾಗಿದೆ. ಲಂಡನ್‌ನಿಂದ ಬೇರೆ ದೇಶಗಳಿಗೆ ಹೋಗುವ ವಿಮಾನ ಹಾರಾಟವನ್ನು ನಿಷೇಧಿಸಿದೆ. ಭಾರತದ ಸ್ಟಾಕ್‌ಮಾರ್ಕೆಟ್‌ನಲ್ಲಿ ಗಣನೀಯ ಕುಸಿತ ಕಂಡಿದೆ. ಹಾಗೆಂದ ಮಾತ್ರಕ್ಕೆ ಪ್ಯಾನಿಕ್ ಆಗಬೇಕಿಲ್ಲ.

    ವೈರಸ್ ರೂಪಾಂತರ ಸಹಜ ಪ್ರಕ್ರಿಯೆ

    ಈ ರೂಪಾಂತರಕ್ಕೆ ಏನು ಕಾರಣ? ಇದರ ಪರಿಣಾಮಗಳಾವುವು? ಇದು ಪ್ರಪಂಚದ ಮತ್ತು ನಮ್ಮ ದೇಶದ ಮೇಲೆ ಮಾಡುವ ಅನಾಹುತ ಎಷ್ಟು ಎಂಬುವ ಭಯ ಸಹಜವಾಗಿ ಎಲ್ಲರನ್ನು ಕಾಡುತ್ತಿದೆ.

    2019ರ ಅಂತ್ಯದಲ್ಲಿ ಕಾಣಿಸಿದ ಕೋವಿಡ್-19 ವೈರಸ್ ಈಗಾಗಲೇ 23 ಬಾರಿ ರೂಪಾಂತರಗೊಂಡಿದೆ. ಅದರಲ್ಲಿ UUI202012/01 ಎಂಬ ತಳಿಯು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಕಂಡುಬಂದಿದ್ದು ಅದು ಹೆಚ್ಚು ಪ್ರಸರಣ (spreading) ಹೊಂದುವ ಶಕ್ತಿ ಹೊಂದಿದೆ. ವೈರಸ್‌ಗಳು ರೂಪಾಂತರಗೊಳ್ಳುವುದು ಸಹಜ ಪ್ರಕ್ರಿಯೆ. ಮಾನವನ ದೇಹದಲ್ಲಿ ಪ್ರತಿಕಾಯಗಳು (Resistance) ಉತ್ಪಾದನೆಯಿಂದ ವೈರಸ್‌ನ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ. ವೈರಸ್ ತನ್ನ ಉಳಿವಿಗಾಗಿ ರೂಪಾಂತರಗೊಳ್ಳುತ್ತದೆ.

    ವೈರಸ್‌ RNA ನ ಸ್ಪೈಕ್ ಪ್ರೋಟೀನ್‌ನ 69/70 ಮತ್ತು 149/150 ಸ್ಥಾನದಲ್ಲಿ ಅಳಿಸಿದ (deletion) ಪರಿಣಾಮದಿಂದಾಗಿ ಈ ರೂಪಾಂತರಗೊಂಡ ವೈರಸ್ ಜನ್ಮ ತಾಳಿದೆ.ಆದರೆ ಇದು ಹಳೆಯ ಕೋವಿಡ್-19 ಗಿಂತ ಹೆಚ್ಚು ಹಾನಿಕಾರಕ ಎಂದು ಕಂಡುಬಂದಿಲ್ಲ. ರೂಪಾಂತರ ಗೊಳ್ಳುವ ವೈರಸ್ ಗಳು ಹಿಂದಿನ ಅವತಾರದಷ್ಟು ಶಕ್ತಿಯುತವಾಗಿರುವುದು ಹಿಂದಿನ ಘಟನೆಗಳಲ್ಲಿ ಸಾಬೀತಾಗಿಲ್ಲ. ಆದರೆ ರೂಪಾಂತರಗೊಂಡಿರುವ ವೈರಸ್ ತನ್ನ ಹಳೆಯ ಅವತಾರಕ್ಕಿಂತ ಶೇಕಡ 75ರಷ್ಟು ಹೆಚ್ಚು ಪ್ರಸರಣ ವೇಗ ಹೊಂದಿದ್ದು, ಹಳೆಯ ವೈರಸ್‌ಗಿಂತ ಹೆಚ್ಚು ಸೌಮ್ಯ ಎಂದು ಅಂದಾಜಿಸಲಾಗಿದೆ. ರೋಗಿಗಳ ಮತ್ತು ವೈರಸ್ ಜಿನೋಮ್ ಡಾಟಾ ಅಧ್ಯಯನದ ಹೆಚ್ಚಿನ ವಿವರಗಳು ಈ ವಿಷಯದಲ್ಲಿ ಇನ್ನಷ್ಟೆ ದೊರಕಬೇಕಿದೆ.

    ಆಟ ಮುಗಿದಿಲ್ಲ.ಹಾಗೆಂದು ಭೀತಿ ಪಡಬೇಕಿಲ್ಲ

    ನಾವಂದುಕೊಂಡಂತೆ ಕೋವಿಡ್-19 ರ ಆಟ ಮುಗಿಯಿತು ಮತ್ತು ಎಲ್ಲವೂ ಮೊದಲಿನಂತಾಗುತ್ತದೆ ಎಂದು ಭಾವಿಸುವವರಿಗೆ ಇದು ಎಚ್ಚರಿಕೆಯ ಕರೆಗಂಟೆ.

    ಒಟ್ಟಾರೆ ಈ ರೂಪಾಂತರಗೊಂಡ ವೈರಸ್‌ನ ಪರಿಣಾಮಗಳ ಸಾರಾಂಶ ಈ ಕೆಳಗಿನಂತಿದೆ.

    ಹೊಸ ವೈರಸ್‌ನ ತಳಿಯು ಹಳೆಯ ವೈರಸ್‌ಗಿಂತ ಸೌಮ್ಯ ಎಂದು ಅಂದಾಜಿಸಲಾಗಿದೆ.

    ಹೊಸ ತಳಿಯು ಹೆಚ್ಚು ಪ್ರಸರಣ ಶಕ್ತಿ ಹೊಂದಿದೆ.

    ಈಗಾಗಲೇ ಕೋವಿಡ್-೧೯ ವೈರಸ್‌ನಿಂದ ಬಾಧೆಗೊಳಗಾಗಿರುವವರಿಗೆ ಈ ವೈರಸ್ ಯಾವುದೇ ತೊಂದರೆಯನ್ನುಂಟುಮಾಡುವುದಿಲ್ಲ ಎಂದು ಭಾವಿಸಲಾಗಿದೆ.

    ಇನ್ನಷ್ಟು ಕಾಲ ನಿಯಮ ಪಾಲನೆ ಅಗತ್ಯ

    ಲಾಕ್‌ಡೌನ್ ತಡೆಯುವಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದು ಅನಿವಾರ್ಯ.2020ರಲ್ಲಿ ಅನುಸರಿಸಿದ ಜೀವನ ಶೈಲಿಯನ್ನು 2021ರಲ್ಲೂ ಇನ್ನೂ ಕೆಲ ಕಾಲ ಮತ್ತೆ ಮುಂದುವರೆಸುವುದು ಅತಿ ಅವಶ್ಯಕ.ಆದರೆ ಮತ್ತೊಮ್ಮೆ ಲಾಕ್‌ಡೌನ್ ಘೋಷಿಸುವುದು ಮತ್ತು ಶಾಲಾಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಸಂದರ್ಭ ಉದ್ಭವಿಸಲಾರದು.

    32 ವರ್ಷದ ಬದುಕಿನಲ್ಲಿ 300 ವರ್ಷದ ಸಾಧನೆ ಮಾಡಿದ ಗಣಿತ ಶಾಸ್ತ್ರದ ದಿವ್ಯಜ್ಞಾನಿ

    ನಮ್ಮ ದೇಶದಲ್ಲಿ ಜನಿಸಿ, ಪ್ರಪಂಚದಾದ್ಯಂತ ಖ್ಯಾತಿಯನ್ನು ಪಡೆದ ವಿಜ್ಞಾನಿಗಳ ಪಂಕ್ತಿಗೆ ಸೇರುವ ಆಧುನಿಕ ಗಣಿತ ಶಾಸ್ತ್ರದ ದಿವ್ಯಜ್ಞಾನಿ, ಗಣಿತಾಚಾರ್ಯ ಶ್ರೀನಿವಾಸ ರಾಮಾನುಜನ್.ಇಂದು ಅವರ ಜನುಮ ದಿನ.

    ಇವರಂತಹ ಶ್ರೇಷ್ಠ ವಿಜ್ಞಾನಿಗಳ ಸಂಖ್ಯೆ ಬಹಳ ವಿರಳ ಎಂದು ಹೇಳಿದರೆ ತಪ್ಪಾಗಲಾರದು.ಕೇವಲ ಮೂವತ್ತೆರಡು ವರ್ಷಗಳ ಜೀವನದಲ್ಲಿ ಗಣಿತಶಾಸ್ತ್ರದಲ್ಲಿಅದ್ಭುತ ಸಾಧನೆಯನ್ನು ಮಾಡಿದ ಮಹಾನ್ ವ್ಯಕ್ತಿ. ಪ್ರತಿಯೊಂದು “ಧನಪೂರ್ಣಾಂಶವು ರಾಮಾನುಜನ್ನರ ವೈಯಕ್ತಿಕ ಮಿತ್ರಗಳಲ್ಲೊಂದು” ಎಂಬುದು ಲೋಕ ಪ್ರಖ್ಯಾತದ ನುಡಿ.ಅವರು ಶುದ್ಧ ಗಣಿತ ಶಾಸ್ತ್ರದಲ್ಲಿ ಯಾವುದೇ ಔಪಚಾರಿಕ ತರಬೇತಿಯನ್ನು ಪಡೆಯದಿದ್ದರೂ, ಗಣಿತಶಾಸ್ತ್ರದ ವಿಶ್ಲೇಷಣೆ (Mathematical Analysis) , ಸಂಖ್ಯೆಯ ಸಿದ್ಧಾಂತ (Number Theory), ಅನಂತ ಸರಣಿ(Infinite series) ಮತ್ತು ಮುಂದುವರಿದ ಭಿನ್ನರಾಶಿಗಳು (Continued Fractions) ಇವುಗಳ ಬಗ್ಗೆ ಗಣನೀಯವಾದ ಕೊಡುಗೆಯನ್ನು ನೀಡಿದರು.

    ರಾಮಾನುಜನ್‌ರವರು ಡಿಸೆಂಬರ್‌ ಇಪ್ಪತ್ತೆರೆಡು, 1887 ರಲ್ಲಿಈಗಿನ ತಮಿಳುನಾಡಿನ ಈರೋಡ್ ಪಟ್ಟಣದಲ್ಲಿ ಜನಿಸಿದರು.ಬಡ ಮತ್ತು ಸಾಂಪ್ರದಾಯಿಕ ಕುಟುಂಬದಲ್ಲಿ ಹುಟ್ಟಿ, ಬಡತನದ ಬೇಗೆಯನ್ನು ಅನುಭವಿಸಿದರು.ಇವರ ತಂದೆ ಕೆ.ಶ್ರೀನಿವಾಸ ಅಯ್ಯಂಗಾರ್‌ ಮತ್ತು ತಾಯಿ ಕೋಮಲತಮ್ಮಾಳ್.ತಂದೆ ಒಂದು ಬಟ್ಟೆಯ ಅಂಗಡಿಯಲ್ಲಿ ಗುಮಾಸ್ತನಾಗಿ ಕೆಲಸ ಮಾಡಿ ಕೇವಲ ಇಪ್ಪತ್ತು ರೂಪಾಯಿಗಳ ವೇತನವನ್ನುಪಡೆಯುತ್ತಿದ್ದರು.

    1892 ರಲ್ಲಿ ಕುಂಭಕೋಣಂ ಪಟ್ಟಣದಲ್ಲಿರುವ ಪಯಾಲ್ ಶಾಲೆಗೆ ಪ್ರವೇಶ ಪಡೆದರು.ನಂತರ, ಕಂಗಾಯನ್ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ಶಾಲೆಯಲ್ಲಿಇವರ ಜ್ಞಾಪಕ ಶಕ್ತಿಯನ್ನು ಕಂಡು, ಉಪಾಧ್ಯಾಯರುಗಳು ಮತ್ತು ಸಹಪಾಠಿಗಳು ಬೆರಗಾಗುತ್ತಿದ್ದರು. ಹತ್ತನೆಯ ವಯಸ್ಸಿನಲ್ಲಿ ಅಂದರೆ, 1897 ರ ನವೆಂಬರ್‌ ಪರೀಕ್ಷೆಯಲ್ಲಿ, ಆಂಗ್ಲ ಭಾಷೆ, ತಮಿಳು, ಭೂಗೋಳ ಮತ್ತುಅಂಕಗಣಿತದಲ್ಲಿ ಜಿಲ್ಲೆಗೆ ಹೆಚ್ಚು ಅಂಕಗಳನ್ನು ಗಳಿಸಿ, ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ, ಟೌನ್‌ ಫ್ರೌಢಶಾಲೆಗೆ ಪ್ರವೇಶವನ್ನು ಪಡೆದರು. ಚಿಕ್ಕ ವಯಸ್ಸಿನಲ್ಲಿಯೇ ಎರಡರ (2) ಮೂಲವರ್ಗ(Square root) ಮತ್ತು‘e’ನ ಬೆಲೆಗಳನ್ನು ಅತಿ ಹೆಚ್ಚು ದಶಮಾಂಶ ಸ್ಥಳಗಳಿಗೆ ಕೊಡತ್ತಿದ್ದರಂತೆ. ಇವರು ಗಳಿಸಿದ ಅಂಕಗಳನ್ನು ಆಧರಿಸಿ ಶಾಲೆಯಲ್ಲಿಅರ್ಧ ಶುಲ್ಕ ವಿನಾಯಿತಿಯನ್ನು ನೀಡಲಾಯಿತು.

    ಪ್ರೊ. ಪಿ.ಶೇಷು ಅಯ್ಯರ್ ಮತ್ತು ದಿವಾನ್ ಬಹದೂರ್‌ ರಾಮಚಂದ್ರರಾಯರು ಹೇಳಿರುವಂತೆ, ಆಗಿನ ಸೆಕೆಂಡ್ ಫಾರಂ ವಿದ್ಯಾರ್ಥಿಯಾಗಿ, ಗಣಿತಶಾಸ್ತ್ರಕ್ಕೆ ಸಂಬಂಧಿಸಿದಂತೆ ಗರಿಷ್ಠ ಮಟ್ಟದ ಸತ್ಯವನ್ನುಕಂಡು ಕೊಳ್ಳುವ ಅಪರೂಪದ ಮತ್ತು ಮಹತ್ವದ ಆಸಕ್ತಿಯನ್ನು ಹೊಂದಿದ್ದರು. ಹನ್ನೆರಡನೇ ವಯಸ್ಸಿನಲ್ಲಿ ಲೋನಿಯವರ ತ್ರಿಕೋನ ಮಿತಿ (Trigonometry) ಪುಸ್ತಕವನ್ನು ನೆರೆಯವರಿಂದ ಎರವಲು ಪಡೆದು, ಎಲ್ಲಾ ಅಂಶಗಳನ್ನು ಗ್ರಹಿಸಿ, ಪುಸ್ತಕದಲ್ಲಿರುವ ಪ್ರತಿಯೊಂದು ಸಮಸ್ಯೆಯನ್ನು ಬಿಡಿಸಿದರು. ಹದಿಮೂರನೇ ವಯಸ್ಸಿನಲ್ಲಿ ಯಾರ ಸಹಾಯವು ಇಲ್ಲದೆ, ಸೈನ್ ಮತ್ತು ಕೊಸೈನ್‌ ತ್ರಿಕೋನಮಿತ ಅನುಪಾತಗಳಿಗೆ ಆಯಿಲರ್‌ ಪ್ರಮೇಯವನ್ನು ತೋರಿಸಿಕೊಟ್ಟರು. ಹೀಗೆ ಬಹಳ ಚಿಕ್ಕ ವಯಸ್ಸಿನಲ್ಲಿಯೇ ಗಣಿತ ಶಾಸ್ತ್ರದಲ್ಲಿ ರಾಮಾನುಜನ್‌ರವರಿಗಿರುವ ಆಸಕ್ತಿ ಮತ್ತುಅಗಾಧವಾದ ಪ್ರತಿಭೆ ವ್ಯಕ್ತವಾಯಿತು.

    ಇದೇ ಸಮಯಕ್ಕೆ ಗಣಿತಶಾಸ್ತ್ರಜ್ಞ ಕಾರ್ ಬರೆದಿರುವ “ಶುದ್ಧ ಮತ್ತು ಅನ್ವಯಿಸಿದ ಗಣಿತ ಶಾಸ್ತ್ರದ ಮೂಲ ರೂಪದ ಫಲಿತಾಂಶಗಳುಳ್ಳ ಸಾರಾ ಸಂಗ್ರಹ”ದ ಪುಸ್ತಕ ರಾಮಾನುಜನ್‌ರವರಿಗೆ ದೊರೆಯಿತು.
    ಆರುಸಾವಿರ ಪ್ರಮೇಯಗಳನ್ನು ಈ ಪುಸ್ತಕದಲ್ಲಿ ಪ್ರಸ್ತಾಪಿಸಲಾಗಿದೆ.ಈ ಪ್ರಮೇಯಗಳು ರಾಮಾನುಜನ್‌ರವರನ್ನು ಸ್ಪೂರ್ತಿಗೊಳಿಸಿ, ಅವರ ಜೀವನ ವೃತ್ತಿಗೆ ನಾಂದಿಯಾಗಿ ಪರಿಣಮಿಸಿತು.ಕೆಲವೊಂದು ಪ್ರಮೇಯಗಳನ್ನು ತಮ್ಮ ಆಲೋಚನಾ ಶಕ್ತಿಯನ್ನು ಬಳಸಿ, ತಮ್ಮದೇ ಆದ ಪದ್ಧತಿಯಲ್ಲಿ ಸಾಧಿಸಿ ತೋರಿಸಿದರು. ಮಡಿಸಿದ ಹಾಳೆಗಳ ಮೇಲೆ ನೂರಾರು ಪ್ರಮೇಯಗಳನ್ನು ಬರೆದು ದಾಖಲಿಸಿದರು.ಈ ಸಂಗ್ರಹವು ಇಂದು ರಾಮಾನುಜನ್‌ರವರ “ನೋಟ್‌ಬುಕ್ ”ಎಂಬುದಾಗಿ ಹೆಸರುವಾಸಿಯಾಗಿದೆ.

    1903 ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಪ್ರಥಮದರ್ಜೆಯನ್ನು ಪಡೆದರು.ನಂತರ, ಕುಂಭಕೋಣಂನಲ್ಲಿರುವ ಸರ್ಕಾರಿಕಾಲೇಜಿನಲ್ಲಿ ಎಫ್. ಎ. ಕ್ಲಾಸಿಗೆ ಪ್ರವೇಶವನ್ನು ಪಡೆದರು. ಎಫ್.ಎ.ಕ್ಲಾಸಿನಲ್ಲಿ ರಾಮಾನುಜನ್‌ರು ಓದಬೇಕಾಗಿದ್ದ ವಿಷಯಗಳು: ಇಂಗ್ಲೀಷ್, ಗಣಿತಶಾಸ್ತ್ರ, ಶರೀರಶಾಸ್ತ್ರ, ಗ್ರೀಕ್ ಮತ್ತುರೋಮನ್‌ ಇತಿಹಾಸ ಮತ್ತು ಸಂಸ್ಕೃತ. ಆದರೆ, ಗಣಿತಶಾಸ್ತ್ರದ ಬಗ್ಗೆ ಇವರಿಗೆ ಆಸಕ್ತಿ ಮತ್ತು ಪ್ರೇಮ ಎಷ್ಟರ ಮಟ್ಟಿಗೆ ಇತ್ತೆಂದರೆ, ಸದಾಕಾಲ ಗಣಿತಶಾಸ್ತ್ರ ಅಧ್ಯಯನದಲ್ಲಿ ಮಗ್ನನಾಗಿರುತ್ತಿದ್ದರು. ಪರಿಣಾಮವಾಗಿ ಬೇರೆಲ್ಲಾ ವಿಷಯಗಳಲ್ಲಿ ಅನುತ್ತೀರ್ಣರಾಗಿ, ವಿದ್ಯಾರ್ಥಿ ವೇತನವನ್ನುಕಳೆದುಕೊಂಡರು.ಎಫ್.ಎ. ಕ್ಲಾಸ್‌ನಲ್ಲಿಉತ್ತೀರ್ಣರಾಗಲು ಸಾಧ್ಯವಾಗಲಿಲ್ಲ. ಕಾಲೇಜು ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದರು.

    ಪರೀಕ್ಷೆಯಲ್ಲಿಅನುತ್ತೀರ್ಣ, ನಿರುದ್ಯೋಗ, ಮನೆಯಲ್ಲಿ ಬಡತನ ಇವುಗಳು ಯಾವುವು ಸಹ ರಾಮಾನುಜನ್‌ರವರಿಗೆ ಗಣಿತಶಾಸ್ತ್ರದಲ್ಲಿದ್ದ ಆಸಕ್ತಿಯನ್ನು ಕುಗ್ಗಿಸಲು ಸಾಧ್ಯವಾಗಲಿಲ್ಲ. ಇಪ್ಪತ್ತೆರಡನೆ ವಯಸ್ಸಿನಲ್ಲಿ ಜಾನಕಿದೇವಿ ಜೊತೆಯಲ್ಲಿ ವಿವಾಹವಾಯಿತು. 1910 ರಲ್ಲಿ ರಾಮಾನುಜನ್‌ರವರು ಇಂಡಿಯನ್‌ ಮ್ಯಾಥಮೆಟಿಕಲ್ ಸೊಸೈಟಿ ಸಂಸ್ಥೆಯ ಸ್ಥಾಪಕರಾದ ಪ್ರೊ.ವಿ.ರಾಮಸ್ವಾಮಿ ಅಯ್ಯರ್ ಅವರನ್ನು ಭೇಟಿ ಮಾಡಿ ಸಹಾಯ ಮಾಡುವಂತೆ ಕೋರಿದರು.ರಾಮಾನುಜನ್ನರ ನೋಟ್ ಪುಸ್ತಕವನ್ನು ಅಧ್ಯಯಿಸಿ, ಅವರ ಮಹಾಪ್ರತಿಭೆಯನ್ನು ಕೂಡಲೇ ಗುರುತಿಸಿದರು. ನಂತರ, ತಮ್ಮಸ್ನೇಹಿತರಾಗಿದ್ದ ಶೇಷು ಅಯ್ಯರ್‌ರವರ ಮೂಲಕ, ನೆಲ್ಲೂರಿನಲ್ಲಿ ಸಹ ಕಲೆಕ್ಟರ್‌ರಾಗಿದ್ದ ರಾಮಚಂದ್ರರಾಯರನ್ನು ಭೇಟಿ ಮಾಡಲು ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ರಾಮಾನುಜನ್‌ರವರಿಗೆ ಅನುಕೂಲ ಮಾಡಿಕೊಟ್ಟರು. ರಾಮಾನುಜನ್ನರನ್ನು ಭೇಟಿಮಾಡಿದ ರಾಮಚಂದ್ರರಾಯರು ಹೀಗೆ ಹೇಳಿದ್ದಾರೆ.

    ಕುಳ್ಳಗೆ, ಸ್ವಲ್ಪ ಮಟ್ಟಿಗೆ ದಪ್ಪನಾದ ಬಡಯುವಕನೊಬ್ಬಒಂದು ನೋಟ್‌ಪುಸ್ತಕ ಹಿಡಿದು ನನ್ನ ಬಳಿಗೆ ಬಂದ. ತಾನು ಸಾಧಿಸಿದ್ದ ಪ್ರಮೇಯಗಳನ್ನು ನನ್ನಮುಂದಿಟ್ಟ. ವಿಲಕ್ಷಣವಾಗಿದ್ದ ವಿಷಯಗಳು ನನಗೆ ಅರ್ಥವಾಗಲಿಲ್ಲ. ಮತ್ತೊಮ್ಮೆ ಬರುವಂತೆಸೂಚಿಸಿದೆ. ನನಗೆ ವಿಷಯ ಅರ್ಥವಾಗಲಿಲ್ಲವೆಂದು ಆ ಯುವಕ ಅರಿತುಕೊಂಡು, ಬಹಳಷ್ಟು ಧೈರ್ಯದಿಂದ ಮೊದ ಮೊದಲು ಸುಲಭವಾದ ಪ್ರಮೇಯಗಳನ್ನು ತೋರಿಸಿ, ಕ್ರಮೇಣ ಜಟಿಲವಾದಂತ ವಿಷಯಗಳನ್ನು ಅರ್ಥೈಸಿದ. ಇದರಿಂದ, ಈ ಯುವಕ ಪ್ರತಿಭಾವಂತಎಂದು ನನಗೆ ಅರಿವಾಯಿತು. ಹೊಟ್ಟೆ ಪಾಡಿಗಾಗಿ ಕೆಲಸ ನೀಡಿದರೆ, ಸಂಶೋಧನೆಯನ್ನು ಮುಂದುವರಿಸುವ ಉತ್ಸುಕತೆ ಅವನದು.

    ರಾಮಚಂದ್ರರಾಯರ ಪ್ರಯತ್ನದಿಂದ, 1913 ರಲ್ಲಿರಾಮಾನುಜನ್ನರಿಗೆ ಮದ್ರಾಸ್‌ ಬಂದರಿನಲ್ಲಿ ಗುಮಾಸ್ತ ಕೆಲಸ ದೊರೆಯಿತು. ವೇತನ ಮೂವತ್ತು ರೂಪಾಯಿಗಳು.ಕಚೇರಿ ಕೆಲಸದ ನಡುವೆಯು ರಾಮಾನುಜನ್‌ತನ್ನಅಭ್ಯಾಸವನ್ನು ಮುಂದುವರಿಸುತ್ತಿದ್ದರು.ಅವರು ಆಗಲೆ ಹಲವಾರು ಪ್ರಮೇಯಗಳನ್ನು ಕಂಡು ಹಿಡಿದಿದ್ದರು. ಹಣದಕೊರತೆಯಿಂದಾಗಿ, ಸ್ಲೇಟು ಹಲಗೆಯ ಮೇಲೆಯೇ ಬರೆಯುತ್ತಿದ್ದರು. ಯಾವುದಾದರೂ ವಿಶೇಷವಾದಂತಹ ಫಲಿತಾಂಶ ಹೊಳೆದಾಗ, ನೋಟ್ ಪುಸ್ತಕದಲ್ಲಿ ದಾಖಲಿಸುತ್ತಿದ್ದರು.ಅವರುಕಂಡು ಹಿಡಿದಪ್ರಮೇಯಗಳನ್ನು ಇಂಡಿಯನ್ ಮ್ಯಾಥಮೆಟಿಕಲ್ ಸೊಸೈಟಿಯ ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದರು. ಇದರಿಂದ, ಗಣಿತಶಾಸ್ತ್ರದ ಹಲವಾರು ವಿದ್ವಾಂಸರ ಗಮನಸೆಳೆಯಲು ಸಹಾಯವಾಯಿತು.

    ಹಿತೈಷಿಗಳಾಗಿದ್ದ ಶೇಷು ಅಯ್ಯರ್ ಮತ್ತು ಮೊದಲಾದವರು. ಕೇಂಬ್ರಿಡ್ಜ್‌ನಲ್ಲಿ ಪ್ರಾಧ್ಯಾಪಕರಾಗಿದ್ದ ಪ್ರೊ.ಜಿ.ಎಚ್.ಹಾರ್ಡಿಯವರೊಡನೆ ಪತ್ರ ವ್ಯವಹಾರನಡೆಸುವಂತೆಸಲಹೆ ನೀಡಿದರು. ಪ್ರೊ.ಜಿ.ಎಚ್. ಹಾರ್ಡಿಯವರನ್ನು“ರಾಮಾನುಜನ್ನರನ್ನು ನಿಜವಾದ ಅನ್ವೇಷಕ”.ಎಂಬುದಾಗಿಯೇ ಬಣ್ಣಿಸುತ್ತಾರೆ .ಮೊದಲನೆಯ ಪತ್ರದಲ್ಲಿಯೇ (1913 ರಲ್ಲಿ) ತಾವು ಕಂಡುಹಿಡಿದಿದ್ದ 120 ಪ್ರಮೇಯಗಳ ಫಲಿತಾಂಶಗಳನ್ನು ರಾಮಾನುಜನ್ ‌ತಿಳಿಸಿದ್ದರು. ಇವುಗಳನ್ನು ಕಂಡ ಹಾರ್ಡಿಯವರು ರೋಮಾಂಚಿತರಾದರೂ ಸಹ, ರಾಮಾನುಜನ್ ‌ರವರ ಬಗ್ಗೆ ನಂಬಿಕೆ ಬರಲಿಲ್ಲ. ರಾತ್ರಿಯಊಟದ ನಂತರ, ಅವರ ಮಿತ್ರರಾದಪ್ರೊ. ಲಿಟಲ್‌ವುಡ್‌ಜೊತೆಯಲ್ಲಿಸುಮಾರುಎರಡುಮೂರು ತಾಸುಗಳ ಕಾಲ ರಾಮಾನುಜನ್ನರುಕಂಡು ಹಿಡಿದ ಪ್ರಮೇಯಗಳ ಬಗ್ಗೆ ಸಮಾಲೋಚನೆ ನಡೆಸಿದರು. ನಂತರ ಅವರಿಗೆ ರಾಮಾನುಜನ್ ಸಾಮಾ ನ್ಯ ಮನುಷ್ಯನಲ್ಲ,ಗಣಿತಶಾಸ್ತ್ರದ ಮೇಧಾವಿ (Mathematical Genius ಎಂಬುದು ಅರಿವಾಯಿತು.

    ಪ್ರೊ.ಹಾರ್ಡಿಯವರುರಾಮಾನುಜನ್‌ರನ್ನುಆಯಿಲರ್ ಮತ್ತು ಜಾಕೋಬಿ ಎಂಬ ಗಣಿತಶಾಸ್ತ್ರದ ವಿದ್ವಾಂಸರಿಗೆ ಹೋಲಿಸಬಹುದು ಎಂದುನುಡಿದಿದ್ದಾರೆ. ರಾಮಾನುಜನ್ ರ ಪ್ರತಿಭೆಹೆಚ್ಚು ಅರಳಲು ಅವಕಾಶ ನೀಡುವ ಸಲುವಾಗಿ, ಪೊ. ಹಾರ್ಡಿಯವರು, ರಾಮಾನುಜನ್ ‌ಅವರಿಗೆ ಇಂಗ್ಲೆಂಡಿಗೆ ಬರುವಂತೆ ಆಹ್ವಾನವನ್ನು ನೀಡಿದರು. ಆಚಾರವಂತರಾಗಿದ್ದ ರಾಮಾನುಜನ್ ತಾಯಿ ಮಗನ ವಿದೇಶ ಪ್ರಯಾಣಕ್ಕೆ ಒಪ್ಪಲಿಲ್ಲ. ಮಿತ್ರರ ಮೂಲಕ ಹಾರ್ಡಿಯವರು ಒತ್ತಡತಂದರು. ತಾಯಿಕೊನೆಗೆ ಒಪ್ಪಿಗೆ ನೀಡಿದರು. 1914, ಮಾರ್ಚ್ 17 ರಂದು ಇಂಗ್ಲೆಂಡ್‌ಗೆ ರಾಮಾನುಜನ್ ಪ್ರಯಾಣ ಬೆಳೆಸಿದರು. ಏಪ್ರಿಲ್ 14 ರಂದು ಇಂಗ್ಲೆಂಡ್ ಸೇರಿದರು. ನಂತರ ನಾಲ್ಕು ವರ್ಷಗಳ ಕಾಲ ಕೇಂಬ್ರಿಡ್ಜ್‌ನಲ್ಲಿ ಪ್ರೊ.ಹಾರ್ಡಿಯವರ ಜೊತೆಗೂಡಿ ಸಂಶೋಧನೆ ನಡೆಸಿದರು. ಈ ಅವಧಿಯಲ್ಲಿ 27 ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದರು.

    “ಥಿಯರಿಆಫ್‌ಪಾರ್ಟಿಸನ್ಸ್”ಬಗ್ಗೆ ರಾಮಾನುಜನ್ ಮಾಡಿರುವ ಸಂಶೋಧನೆ ಅಸಾಧಾರಣ ಮತ್ತುಅಪೂರ್ವ ಎಂಬುದಾಗಿ ಹೆಸರು ವಾಸಿಯಾಗಿದೆ. ಗಣಿತಶಾಸ್ತ್ರದ ವಿವಿಧ ಭಾಗಗಳಾದಂತ, ಮುಂದುವರಿದ ಭಿನ್ನರಾಶಿಗಳು (Continued Fractions), ಹೈಪರ್‌ಜೆಮಿಟ್ರಿಕ್‌ಸರಣಿಗಳು, ಸಂಖ್ಯೆಗಳ ಸಿದ್ದಾಂತ, ದೀರ್ಘವೃತ್ತಾಕಾರದ ಸಮಗ್ರತೆ (Eliptic Integrals) ಇವುಗಳ ಬಗ್ಗೆ ಅಪಾರವಾದ ಸಂಶೋಧನೆಯನ್ನು ಮಾಡಿದ ಮಹಾನ್‌ವ್ಯಕ್ತಿರಾಮಾನುಜನ್.

    ಇವರ ಕೀರ್ತಿ ಇಂಗ್ಲೆಂಡಿನಲ್ಲೆಲ್ಲ ಹರಡಿ, ಭಾರತದೇಶವನ್ನುಸಹ ಮುಟ್ಟಿತು. 1916 ರಲ್ಲಿ ಕೇಂಬ್ರಿಡ್ಜ್‌ ವಿಶ್ವ ವಿದ್ಯಾಲಯವು ಬಿ.ಎ. ಡಿಗ್ರಿ ನೀಡಿ ಗೌರವಿಸಿತು.1918ರಲ್ಲಿ ರಾಯಲ್ ಸೊಸೈಟಿಯ ಫೆಲೋಷಿಪ್ ಪಡೆದರು. ಈ ಫೆಲೋಷಿಪ್ ದೊರೆತ ಮೊಟ್ಟ ಮೊದಲ ಭಾರತೀಯ ಎಂಬ ಕೀರ್ತಿಗೆ ಅರ್ಹರಾದರು. ಇದು ಭಾರತೀಯರಿಗೆ ಹೆಮ್ಮೆಯ ವಿಷಯವಾಯಿತು.ಆಗ ರಾಮಾನುಜನ್ನರ ವಯಸ್ಸು ಕೇವಲ 30ವರ್ಷ.ಆದರೆ ಸಾಧನೆ ಅಸಾಧ್ಯ ಮತ್ತುಅಪೂರ್ವ.

    ಇಂಗ್ಲೆಂಡಿನ ತಣ್ಣನೆಯ ವಾತಾವರಣ, ಆಹಾರ ಪದ್ದತಿ, ಆಚಾರಗಳು, ತಂದೆ-ತಾಯಿ ಹಾಗೂ ಪತ್ನಿಯರ ಬಗ್ಗೆ ಚಿಂತೆ, ಸಂಶೋಧನೆಯಲ್ಲಿ ಮಗ್ನತೆ, ಆರೋಗ್ಯದಕಡೆ ನಿರ್ಲಕ್ಷಗಳಿಂದ ಅವರಆರೋಗ್ಯ ಸ್ಥಿತಿ ಕೆಟ್ಟಿತು. ಕ್ಷಯರೋಗ ಕಾಣಿಸಿತು.1919 ರಲ್ಲಿ ಭಾರತದೇಶಕ್ಕೆ ಹಿಂದಿರುಗಿದರು. ಆಗಿನ ಕಾಲಕ್ಕೆ ತಕ್ಕಂತೆ, ಉತ್ತಮರೀತಿಯ ವೈದ್ಯಚಿಕಿತ್ಸೆ ಮತ್ತು ಆರೈಕೆ ಮಾಡಿದರೂ ಸಹ ಪ್ರಯೋಜನವಾಗಲಿಲ್ಲ. ಅನಾರೋಗ್ಯದ ನಡುವೆಯೂ ಸಹ, “ಮಾಕ್‌ಥೀಟ್ ಫಂಕ್ಷನ್ಸ್”ನನ್ನು ಕಂಡು ಹಿಡಿದರು.
    ಗಣಿತದ ಜೊತೆಗೆ, ಹಸ್ತ ಸಾಮುದ್ರಿಕ ವಿದ್ಯೆಯಲ್ಲಿಯೂ ಸ್ವಲ್ಪ ಮಟ್ಟಿಗೆ ಆಸಕ್ತಿಯಿತ್ತು.ಮರಣದ ಬಗ್ಗೆ ಅವರಿಗೆ ಪೂರ್ವಸೂಚನೆ ಇತ್ತುಎಂಬುದಾಗಿ ಹೇಳಲಾಗಿದೆ. ಹಸ್ತ ರೇಖೆಗಳನ್ನು ನೋಡಿ, ನನ್ನಆಯಸ್ಸುಕೇವಲ 35 ವರ್ಷಗಳು. ಆನಂತರ ನಾನು ಬದುಕಿರುವುದಿಲ್ಲ ಎಂಬುದಾಗಿ ಸ್ನೇಹಿತರೊಡನೆ ಹಲವಾರು ಸಂದರ್ಭಗಳಲ್ಲಿ ಹೇಳಿದ್ದರಂತೆ. ದುರದೃಷ್ಟಕರ, ಅವರು ಹೇಳಿದ ಮಾತುಗಳು ನಿಜವಾಗಿ, ಕೇವಲ 32ನೇ ವಯಸ್ಸಿನಲ್ಲಿಏಪ್ರಿಲ್20,1920 ರಲ್ಲಿ ಇಹಲೋಕ ತ್ಯಜಿಸಿದರು.

    ಪುಟ್ನಿಯಲ್ಲಿ ಒಮ್ಮೆ ಹಾರ್ಡಿಯವರು ರಾಮಾನುಜನ್ ಅವರನ್ನು ಕಾಣಲು ಹೋದರು.ಅವರನ್ನುಕಂಡು, ಈಗ ನಾನು ಟ್ಯಾಕ್ಸಿಯಲ್ಲಿಪ್ರಯಾಣಿಸಿ ಬಂದೆ, ಅದರ ಸಂಖ್ಯೆ 1729. ಈ ಸಂಖ್ಯೆ ವಿಶೇಷ ಗುಣ ಲಕ್ಷಣಗಳಿರುವ ಸಂಖ್ಯೆಯಲ್ಲವಷ್ಟೆಎಂದು ನುಡಿದರು. ಥಟ್ಟನೆ, ರಾಮಾನುಜನ್ನರು ಈ ಸಂಖ್ಯೆಗೆಒಂದು ವಿಶೇಷ ಗುಣವಿದೆ. ಎರಡು ಘನಗಳ ಮೊತ್ತವನ್ನುಅದು ಎರಡು ರೀತಿಯಲ್ಲಿ ಸೂಚಿಸುತ್ತದೆ. ಮತ್ತುಅಂಥ ಸಂಖ್ಯೆಗಳಲ್ಲಿ ಅತಿ ಚಿಕ್ಕದು ಎಂದರು.

    13 +123 =93 +103 =1729. ಗಣಿತಶಾಸ್ತ್ರದಲ್ಲಿಅಪೂರ್ವ ಸಾಧನೆಯನ್ನು ಮಾಡಿ, ದೇಶಕ್ಕೆ ಕೀರ್ತಿಯನ್ನು ತಂದ ರಾಮಾನುಜನ್ ಭೂಮಿಗೆ ಬಂದು ಮಾಯವಾದರು.ರಾಮಾನುಜನ್ ಅವರು 32 ವರ್ಷಗಳಲ್ಲಿ ಕಂಡು ಹಿಡಿದ ಪ್ರಮೇಯಗಳನ್ನು ಮತ್ತು ಸಿದ್ದಾಂತಗಳನ್ನು ಪರಿಪೂರ್ಣವಾಗಿ ತಿಳಿಯಲು ಮುನ್ನೂರು ವರ್ಷಗಳು ಬೇಕೆನ್ನುವ ಮಾತು ವಿಶ್ವ ನುಡಿಯಾಗಿದೆ.

    ಏರುವಾಗ ಮೆಟ್ಟಿಲು ಇಳಿಯುವಾಗ ಲಿಫ್ಟ್;15 ದಿನಗಳ ಏರಿಕೆ ಮೂರೇ ಗಂಟೆಯಲ್ಲಿ ಕುಸಿತ

    ಷೇರುಪೇಟೆಯ ಸೂಚ್ಯಂಕಗಳು ಏರುತ್ತಲೇ ಇದ್ದಲ್ಲಿ ಹೂಡಿಕೆದಾರರ ಚಿತ್ತಗಳು ಉಲ್ಲಾಸಮಯವಾಗಿ ವಿಜೃಂಭಿಸುತ್ತವೆ. ಆದರೆ ಅನಿರೀಕ್ಷಿತವಾಗಿ ಇಳಿಕೆಯತ್ತ ಅದು ಭಾರಿ ಇಳಿಕೆಯತ್ತ ತಿರುಗಿದಾಗ ಚಿತ್ತವು ಚಿಂತಾಕ್ರಾಂತವಾಗಿ, ಷೇರು ಪೇಟೆಯೇ ಅಪಾಯ ಎಂಬ ಭಾವನೆ ಮೂಡಿಸುತ್ತದೆ. ಶುಕ್ರವಾರದಂದು 47 ಸಾವಿರದ ಗಡಿ ದಾಟಿ ಸರ್ವಕಾಲೀನ ದಾಖಲೆ ನಿರ್ಮಿಸಿದ ಸೆನ್ಸೆಕ್ಸ್‌ ಇಂದು ಭಾರಿ ಕುಸಿತಕ್ಕೊಳಗಾಯಿತು .

    ದಿನದ ಆರಂಭದಲ್ಲಿ 47,055 ಪಾಯಿಂಟುಗಳನ್ನು ತಲಯಪಿದ ಸೆನ್ಸೆಕ್ಸ್‌ ಮತ್ತೊಮ್ಮೆ ದಾಖಲೆ ನಿರ್ಮಿಸಿ ನಂತರ ವಿರಮಿಸಿತು. ದಿನದ ಮಧ್ಯಂತರದವರೆಗೂ ಸ್ಥಿರತೆಯಲ್ಲಿದ್ದ ಸೆನ್ಸೆಕ್ಸ್‌ ನಂತರದಲ್ಲಿ ಸತತವಾದ ಇಳಿಕೆಗೆ ಜಾರಿ 45,553 ರಲ್ಲಿ ಕೊನೆಗೊಂಡಿತು.

    ಘಟಾನುಘಟಿ ಕಂಪನಿಗಳಿಗೂ ಟೆನ್ಷನ್

    ಸೋಜಿಗವೆಂದರೆ ಘಟಾನುಘಟಿ ಕಂಪನಿಗಳೂ ಸಹ ಭಾರಿ ಒತ್ತಡಕ್ಕೊಳಗಾದವು. ಅವುಗಳಲ್ಲಿ ಪ್ರಮುಖವಾದುದೆಂದರೆ ಲಾರ್ಸನ್‌ ಅಂಡ್‌ ಟೋಬ್ರೋ ಕಂಪನಿಯಾಗಿದೆ. ಆರಂಭ ಒಂದೆರಡು ಗಂಟೆಗಳಲ್ಲಿ ಷೇರಿನ ಬೆಲೆ ರೂ.1,338 ರವರೆಗೂ ಜಿಗಿತ ಕಂಡಿತು. ನಂತರ ಇಳಿಕೆಯತ್ತ ತಿರುಗಿತು. ರೂ.1,308 ರ ಸಮೀಪ ಭಾರಿ ಸಂಖ್ಯೆಯ ವಹಿವಾಟು ಪ್ರದರ್ಶಿಸಿತು. ನಂತರ ಅಂತಿಮ ಒಂದು ಗಂಟೆಯ ಸಮಯದಲ್ಲಿ ಇಳಿಕೆಗೂ ಮುನ್ನ ಪ್ರದರ್ಶಿಸಿದ ಸಂಖ್ಯಾಗಾತ್ರಕ್ಕೆ ಸುಮಾರು 7 ಪಟ್ಟು ಹೆಚ್ಚಿನ ವಹಿವಾಟಿನೊಂದಿಗೆ ರೂ.1,180 ರಿಂದ ಪುಟಿದೆದ್ದು ರೂ.1,210 ಕ್ಕೆ ತಲುಪಿ ಚಟುವಟಿಕೆ ಭರಿತವಾಯಿತು. ರೂ.1,235 ರಲ್ಲಿ ಅಂತ್ಯ ಕಂಡಿತು.

    ಟಾಟಾ ಸ್ಟೀಲ್‌ ಕಂಪನಿ ಷೇರಿನ ಬೆಲೆ ರೂ.627 ರಿಂದ ರೂ.585 ರವರೆಗೂ ಕುಸಿದು ರೂ.595 ರಲ್ಲಿ ಕೊನೆಗೊಂಡಿತು.

    ಮಹೀಂದ್ರ ಅಂಡ್‌ ಮಹೀಂದ್ರ ದಿನದ ಆರಂಭದಿಂದಲೇ ರೂ.730 ರಿಂದ ಜಾರುತ್ತಾ ರೂ.660 ಕ್ಕೆ ತಲುಪಿತು. ಪುಟಿದೆದ್ದ ನಂತರ ರೂ.690 ರ ಸಮೀಪ ಭಾರಿ ಸಂಖ್ಯೆಯ ವಹಿವಾಟು ಪ್ರದರ್ಶಿಸಿತು.

    ಇತ್ತೀಚೆಗೆ ಭರ್ಜರಿ ಏರಿಕೆ ಪ್ರದರ್ಶಿಸಿದ್ದ ಬಜಾಜ್‌ ಫೈನಾನ್ಸ್‌ ಷೇರು ಇಂದು ರೂ.5,230 ರ ಸಮೀಪದಿಂದ ರೂ.4,907 ರವರೆಗೂ ಜಾರಿತು. ಸೋಜಿಗವೆಂದರೆ ಇಳಿಕೆಗೂ ಮುನ್ನ ರೂ.5,150 ರ ಸಮೀಪ ಸುಮಾರು 3.85 ಲಕ್ಷ ಷೇರು ವಹಿವಾಟಾಗಿದ್ದುದು ಮಾರಾಟದ ಒತ್ತಡಕ್ಕೆ ಮೂಲವಾಯಿತು. ದಿನದ ಅಂತ್ಯ ರೂ.5,042 ರ ಸಮೀಪ ಕೊನೆಗೊಂಡಿದೆ.

    ರಿಲಯನ್ಸ್‌ ಇಂಡಸ್ಟ್ರೀಸ್‌ ರೂ.2,022 ವರೆಗೂ ಏರಿಕೆ ಕಂಡು ಅಲ್ಲಿಂದ ರೂ.1,856 ರವರೆಗೂ ಕುಸಿಯಿತು. ಅಂತ್ಯದಲ್ಲಿ ರೂ.1,939 ರಲ್ಲಿ ನಿಂತಿತು. ವಿಶೇಷವೆಂದರೆ ಮಧ್ಯಾಹ್ನ 2 ಗಂಟೆಯವರೆಗೂ ಅಲ್ಪ ಸಂಖ್ಯೆಯಲ್ಲಿ ವಹಿವಾಟಾಗುತ್ತಿದ್ದು ದಿಢೀರನೆ 1.54 ಲಕ್ಷ ಷೇರುಗಳು ರೂ.1,995 ರಲ್ಲಿ ವಹಿವಾಟಾಗಿವೆ.

    ಇವುಗಳಲ್ಲದೆ ಭಾರತಿ ಏರ್‌ ಟೆಲ್‌, ಆಕ್ಸಿಸ್‌ ಬ್ಯಾಂಕ್‌, ಐ ಸಿ ಐ ಸಿ ಐ ಬ್ಯಾಂಕ್‌, ಎಸ್‌ ಬಿ ಐ, ಐ ಟಿ ಸಿ ಗಳೂ ಸಹ ಭಾರಿ ಪ್ರಮಾಣದ ಏರಿಳಿತ ಪ್ರದರ್ಶಿಸಿ ಹೆಚ್ಚಿನ ಕುಸಿತ ತೋರಿವೆ.

    ಇವಲ್ಲದೆ ಫಾರ್ಮಾ ವಲಯದ ಪ್ರಮುಖ ಕಂಪನಿಗಳಾದ ಗ್ಲೆನ್‌ ಮಾರ್ಕ್‌ ಫಾರ್ಮ, ಆರತಿ ಡ್ರಗ್ಸ್‌, ಅಲೆಂಬಿಕ್‌ ಫಾರ್ಮ, ಲುಪಿನ್‌, ಸಿಪ್ಲಾ, ಅರವಿಂದೋ ಫಾರ್ಮ, ಲೌರಸ್‌ ಲ್ಯಾಬ್‌, ಶಿಲ್ಪ ಮೆಡಿ ಮುಂತಾದವು ಒಂದೇ ದಿನ ಹೆಚ್ಚಿನ ಏರಿಳಿತಗಳನ್ನು ಪ್ರದರ್ಶಿಸಿದವು.

    ಕಂಪನಿಗಳಾದ ಇಂಡಿಯನ್‌ ಆಯಿಲ್‌, ಬಿ ಪಿ ಸಿ ಎಲ್‌, ಹೆಚ್‌ ಪಿ ಸಿ ಎಲ್‌, ಗೇಲ್‌, ಆರ್‌ ಇ ಸಿ, ಒ ಎನ್‌ ಜಿ ಸಿ, ಆಯಿಲ್‌ ಇಂಡಿಯಾ, ಕೆನರಾ ಬ್ಯಾಂಕ್‌, ಎಸ್‌ ಬಿ ಐ, ಚೆನ್ನೈ ಪೆಟ್ರೋ, ಎಲ್‌ ಐ ಸಿ ಹೌಸಿಂಗ್‌, ಬಿ ಇ ಎಲ್‌ ಗಳಲ್ಲದೆ ಇತ್ತೀಚೆಗೆ ರಭಸದ ಏರಿಕೆಗೊಳಗಾಗಿದ್ದ ರೇಮಾಂಡ್‌, ಗ್ರಾಫೈಟ್‌, ಯು ಪಿ ಎಲ್‌, ಹೆಚ್‌ ಸಿ ಎಲ್‌ ಟೆಕ್‌, ಇಂಡಿಯಾ ಬುಲ್‌ ಹೌಸಿಂಗ್‌, ಗಳೆಲ್ಲವೂ ಹೆಚ್ಚಿನ ಒತ್ತಡದಿಂದ ಕುಸಿದವು.

    ಅಚ್ಚರಿಯ ಸಂಗತಿ ಎಂದರೆ ಡಿಸೆಂಬರ್‌ 7 ರಿಂದ 15 ದಿನಗಳಲ್ಲಿ ಕಂಡಿದ್ದ ವಾರ್ಷಿಕ ಗರಿಷ್ಠದ ಏರಿಕೆಯನ್ನು ಕೇವಲ ಮೂರೇ ಗಂಟೆಗಳಲ್ಲಿ ಅಳಿಸಿ ಹಾಕಿ 15 ದಿನಗಳ ಹಿಂದಿನ ಹಂತಕ್ಕೆ ತಲುಪಿರುವುದು ಏರಿಕೆಯನ್ನು ಮೆಟ್ಟಲುಗಳ ಮೂಲಕ ತಲುಪಿ, ಲಿಫ್ಟ್‌ ಮೂಲಕ ಇಳಿಕೆ ಪ್ರದರ್ಶಿಸಿದೆ ಎನ್ನಬಹುದು.

    ಹೊಸ ರೂಪದ ಕೋವಿಡ್ ಸುದ್ದಿಯಿಂದ ಒತ್ತಡ

    ಕೋವಿಡ್‌ ಲಸಿಕೆ ಬರುತ್ತಿದೆ ಎಲ್ಲವೂ ನಿಯಂತ್ರಣಕ್ಕೆ ಬರುತ್ತದೆ ಎಂಬ ಕಾರಣದಿಂದ ನಿರಂತರವಾಗಿ ಏರಿಕೆ ಕಂಡ ಸೆನ್ಸೆಕ್ಸ್‌ ಇಂದು ಇಂಗ್ಲೆಂಡ್ ಲ್ಲಿ ಕಾಣಿಸಿಕೊಂಡ ಹೊಸ ಕೋವಿಡ್‌ ಕಾರಣದಿಂದಲೇ ಹೆಚ್ಚಿನ ಮಾರಾಟದ ಒತ್ತಡ ಉಂಟುಮಾಡಿರುವುದು ಕೇವಲ ವ್ಯವಹಾರಿಕ ಚದುರಂಗದಾಟವೆನ್ನಬಹುದು. ಹಲವಾರು ಕಂಪನಿಗಳ ಷೇರುಗಳು ಭಾರಿ ಕುಸಿತದ ಸಂದರ್ಭದಲ್ಲಿ, ಗರಿಷ್ಠದ ಹಂತದಲ್ಲಿ ಪ್ರದರ್ಶಿತವಾದ ವಹಿವಾಟಿನ ಸಂಖ್ಯಾಗಾತ್ರವು ಪ್ರಾಫಿಟ್‌ ಬುಕ್- ವ್ಯಾಲ್ಯೂ ಪಿಕ್‌ ‌ ಗಳು ಇಂದು ವಿಜೃಂಭಿಸಿದುದು ಗಮನಾರ್ಹ. ಅಲ್ಲದೆ ಡಿಸೆಂಬರ್‌ ತಿಂಗಳು ಎಫ್‌ ಐ ಐ ಗಳಿಗೆ ವರ್ಷಾಂತ್ಯವಾಗಿರುವ ಕಾರಣ ಲಾಭದ ನಗದೀಕರಣ ಮಾಡಿದ್ದಲ್ಲದೆ, ಭಾರಿ ಕುಸಿತದ ಸಂದರ್ಭದಲ್ಲಿ ಮತ್ತೊಮ್ಮೆ ವ್ಯಾಲ್ಯು ಪಿಕ್‌ ಗೆ ಮುಂದಾಗಿರಬಹುದು.

    ಗರಿಷ್ಠದಲ್ಲಿದ್ದಾಗ ದೀರ್ಘಕಾಲೀನ ಹೂಡಿಕೆಗಿಂತ ಲಾಭದ ನಗದೀಕರಣ ಮಾಡಿಕೊಂಡಿದ್ದರೆ ಅದೇ ಷೇರು ಬೆಲೆ ಇಳಿಕೆಗೊಳಗಾದಾಗ ಪುನ: ಖರೀದಿಸಲೂಬಹುದು. ಬಂಡವಾಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ಎಂಬುದು ನೆನಪಿರಲಿ.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು

    ಆತ್ಮ, ಪರಮಾತ್ಮ ಮತ್ತು ಕಂಪ್ಯೂಟರ್

    ಇನ್ನೂ ಎಷ್ಟೊತ್ತು ಅಂತ ಆಫೀಸ್ ನಲ್ಲೇ ಕೆಲಸ ಮಾಡ್ತಿದ್ದೀಯ, ಸಾಕು ಬಾ ಮಲಗು, ಉಳಿದದ್ದು ಬೆಳಿಗ್ಗೆ ನೋಡಿಕೊ ಅಂತ ಅಪ್ಪ ಒಂದು ದಿನ ಬಳ್ಳಾರಿಯ ನನ್ನ ಮನೆಯ ಕಾಂಪೌಂಡ್ ನಲ್ಲೇ ಇದ್ದ ನನ್ನ ಆಫೀಸ್ ಒಳಗೆ ತಡರಾತ್ರಿ ಬಂದರು. ಅವರಿಗೆ ನಿದ್ರೆ ಬಂದಿರಲಿಲ್ಲ ಅಂತ ಕಾಣುತ್ತೆ. ಮನೆಯ ಪ್ಲಾನ್ ಆಯ್ತು, ಪ್ರಿಂಟ್ ಕೊಟ್ಟು ಬರ್ತೀನಿ ಅನ್ನುವಷ್ಟರಲ್ಲಿ ಮನೆ, ಆಫೀಸ್ ಒಂದೇ ಕಡೆ ಇದ್ದರೆ ಹೀಗೇ ಆಗೋದು ನೋಡು ಅಂತ ಬಂದು ಒಂದು ಕುರ್ಚಿಯಲ್ಲಿ ಕುಳಿತು ಕೊಂಡರು.

    ನಾನು ಪ್ರಿಂಟರ್ ರೆಡಿಮಾಡಿ ಮರುದಿನ ಬೆಳಿಗ್ಗೆಯೇ ಸೈಟ್ ನಲ್ಲಿ ಬೇಕಾಗುವ ಕಟ್ಟಡದ ಪ್ಲಾನ್ ನ್ನು ಪ್ರಿಂಟ್ ಕೊಟ್ಟು ಆಯ್ತು,ಹೊರಡುವ ಅಂದೆ. ಆಶ್ಚರ್ಯವಾಗಿ ಪ್ರಿಂಟ್ ಕಡೆ ನೋಡ್ತಾ ಕುಳಿತ ಅಪ್ಪ ಬೆರಗಾಗಿ ಎಂತಹ ಅದ್ಭುತ! ಈ ಕಂಪ್ಯೂಟರ್ ಪರದೆಯ ಮೇಲಿನ ನಕ್ಷೆ, ತಥಾರೀತಿ ಪ್ರಿಂಟರ್ ಮೂಲಕ ಹಾಳೆಯಲ್ಲಿ ಮೂಡಿಬರುತ್ತಿದೆ ಅಂದರು. ಅಪ್ಪಾ, ಇಲ್ಲಿರುವ ಎಲ್ಲ ಸಲಕರಣೆಗಳು ವೈರ್ ಗಳ ಮೂಲಕ ಸಂಪರ್ಕ ಹೊಂದಿವೆ. ಈಗ ವೈರ್ ಗಳು ಇಲ್ಲದೆಯೇ ಈ ಎಲ್ಲ ಕೆಲಸ ನಿರ್ವಹಿಸುವ ಪರಿಕರಗಳು ಬರುತ್ತಿವೆ. ಅದು ಇನ್ನೂ ಆಶ್ಚರ್ಯ ಅಲ್ಲವಾ ಅಂದೆ. ಹೌದು, ಮನುಷ್ಯ ಎಷ್ಟೊಂದು ಮುಂದುವರಿದು ಬಿಟ್ಟ ಅಂತ ನಿಟ್ಟುಸಿರು ಬಿಟ್ಟಿದ್ದರು.

    ಮಾರನೆಯ ದಿನ ಉಪಹಾರಕ್ಕೆ ಕುಳಿತಾಗಲೂ ಅಪ್ಪ ಅದರ ಗುಂಗಿನಿಂದ ಹೊರಬಂದಿರಲಿಲ್ಲ. ನನಗೆ ಸೈಟ್ ಗೆ ಹೋಗುವ ತರಾತುರಿ. ರಾತ್ರಿ ತೆಗೆದಿದ್ದ ಪ್ರಿಂಟ್ ಹಿಡಿದು ಮಧ್ಯಾಹ್ನ ಬರ್ತೀನಿ ಇರು, ಮಾತಾಡುವ ಅಂತೇಳಿ ನಾನು ಹೊರಬಿದ್ದೆದ್ದೆ.

    ಅಪ್ಪಾ, ನಮ್ಮ ದಾರ್ಶನಿಕರು ದೇಹವನ್ನು ಸ್ಥೂಲ ಶರೀರ ಅಂತಲೂ, ಮನಸ್ಸನ್ನು ಸೂಕ್ಷ್ಮ ಶರೀರ ಅಂತಲೂ ಹೇಳಿದ್ದಾರೆ ಅಂತ ನೀವೇ ಹೇಳುತ್ತಿರಲ್ಲಾ ಅದೇ ರೀತಿಯೇ ಈ ಕಂಪ್ಯೂಟರ್ ನೋಡು. ಇದರಲ್ಲಿ ಕಣ್ಣಿಗೆ ಕಾಣುವ ಎಲ್ಲವನ್ನು hardware ಅಂತಲೂ, ಕಣ್ಣಿಗೆ ಕಾಣದೆ ಇದನ್ನು ನಿಯಿಂತ್ರಿಸುವುದನ್ನು software ಅಂತಲೂ ಅಂತಾರೆ. ಇದರಲ್ಲಿ ನಮ್ಮ ದೇಹದಲ್ಲಿರುವಂತೆ ಹೃದಯ ಭಾಗವನ್ನು cpu ಅಂತ, ಮೆದುಳಿನ ತರಹದ್ದನ್ನು hard disk ಅಂತ ,ಆತ್ಮದ ಕೆಲಸವನ್ನು power ಅಥವಾ ಕರೆಂಟ್ ನಿರ್ವಹಿಸಿದರೆ, ಇದರಲ್ಲಿಯ ವೈರ್ ಗಳು ನಮ್ಮ ದೇಹದ ನರಗಳಾಗಿ ಕೆಲಸ ಮಾಡ್ತಿವೆ ಅಂತ ಹೇಳಿದೆ.

    ನಮಗೆ ಭೌತಿಕ ಶರೀರದ ಡಾಕ್ಟರ್ ಗಳೂ ಮಾನಸಿಕ ಸ್ವಾಸ್ಥಕ್ಕೆ ಆಧ್ಯಾತ್ಮಿಕತೆ ಇರುವಂತೆ ಎಲೆಕ್ಟ್ರಾನಿಕ್ಸ್ ಓದಿ ಕೊಂಡ hard ware ಎಂಜಿನಿಯರ್ ಗಳೂ ನಿನ್ನ ಸೊಸೆಯ ರೀತಿ ಕಂಪ್ಯೂಟರ್ ವಿಜ್ಞಾನ ಓದಿಕೊಂಡ software ಎಂಜಿನಿಯರ್ ಗಳೂ ಇದ್ದಾರೆ ಅಂತ ವಿವರಿಸಿದೆ. ಅಪ್ಪನಿಗೆ ಏನೋ ಹೊಳೆದಂತಾಗಿ ಆಶ್ಚರ್ಯದ ಮಟ್ಟ ಕಡಿಮೆ ಆಯ್ತು ಅನ್ನುವ ರೀತಿ ಸಮಾಧಾನದ ದೃಷ್ಟಿ ನನ್ನೆಡೆಗೆ ಹರಿಸಿ, ಪ್ರಕೃತಿಯೇ ಪ್ರಧಾನ ನಿರ್ಮಾತೃ, ಅದನ್ನ ಅನುಸರಿಸಿಯೇ ಎಲ್ಲ ಇದೆ ಅಲ್ಲ ಅಂದರು. ಹೌದು ಅಂದೆ.

    ವೇದವನ್ನು ನಮ್ಮವರು ವಿಜ್ಞಾನ ಅಂತ ಯಾಕೆ ಅಂದಿದ್ದರು ಅನ್ನೋದು ನನಗೆ ಇವತ್ತು ಸ್ಪಷ್ಟವಾಯ್ತು ನೋಡು. ನನಗೇ ಈ ವಿಷಯದ ಬಗ್ಗೆ ಬಹಳ ಅನುಮಾನ ಇತ್ತು. ಯಾರೂ ಹೇಳದ ಆತ್ಮ,ಪರಮಾತ್ಮ ವಾದವನ್ನು ವೇದಾಂತ ಅಂತ ಹೆಸರಿಸಿ ಈ ಜ್ಞಾನಕ್ಕೆ ವಿಶೇಷ ತರಬೇತಿ ಅನಿವಾರ್ಯ ಅಂದದ್ದು ಎಷ್ಟು ಸಮಂಜಸ ಅಲ್ಲ ಅಂದ್ರು. ಅವರ ಆ ಸಮಾಧಾನಕ್ಕೆ ಧಕ್ಕೆ ತರಲು ಇಚ್ಛಿಸದೆ ಹೌದು ಅಂದಿದ್ದೆ. ಯಾಕಂದ್ರೆ ಒಮ್ಮೆ ಅಪ್ಪ ವಿಜ್ಞಾನ ಉಚ್ಚ ಮಟ್ಟದ್ದು ಅಲ್ಲ, ಜ್ಞಾನ, ವಿಜ್ಞಾನ, ಸುಜ್ಞಾನ ಅಂತಿರುವ ಸಾಲಿನಲ್ಲಿ ವಿಜ್ಞಾನ ಮಧ್ಯೆದ್ದು, ಅದರ ಮೇಲೆ ಸುಜ್ಞಾನ ಎಂಬುದು ಒಂದಿದೆ, ಅದು ಅಧ್ಯಾತ್ಮಿಕ ಆದರೆ ಮಾತ್ರ ಸಾಧ್ಯ ಅಂದಿದ್ದರು. ಇದು ನೆನಪಿಗೆ ಬಂದರೂ ನಾನಾಗ ಪ್ರಸ್ತಾಪಿಸಲಿಲ್ಲ.

    ಸರಿ,ಎಲ್ಲ ರಂಗಗಳಲ್ಲೂ ಈ ಕಂಪ್ಯೂಟರ್ ಮಾನವನ ನೆರವಿಗೆ ಬಂದಿದೆಯಲ್ಲಾ, ಅದು ಹೇಗೆ ಸಾಧ್ಯವಾಯ್ತು? ಅಂದ್ರೆ ಇದೇ ಕಂಪ್ಯೂಟರ್ ನಿನ್ನ ಹತ್ತಿರ,ಡಾಕ್ಟರ ಹತ್ತಿರ,ವಿಜ್ಞಾನಿಗಳ ಹತ್ತಿರ ಇದ್ದು ಬೇರೆ,ಬೇರೆ ಕೆಲಸ ಹೇಗೆ ಮಾಡ್ತಿದೆ? ಅಂದ್ರು. ಆಗ ತಾನೇ ಕಂಪ್ಯೂಟರ್ ಭಾಷೆ ಅಥವಾ ಕೋಡಿಂಗ್ ಕಲೀತಿದ್ದ ನನ್ನ ಮಗ ತಾತಾ, ಕಂಪ್ಯೂಟರ್ ಒಂದು ಸಾಧಾರಣ ಕೆಲಸ ಮಾಡುವ ವಿನಮ್ರ ಸೇವಕ. ಅದಕ್ಕೆ ಅದರದ್ದೇ ಬುದ್ಧಿ ಇಲ್ಲ. ಹೇಳಿದ್ದನ್ನು, ಹೇಳಿದ್ದಷ್ಟೇ ಬಲು ವೇಗವಾಗಿ ಮಾಡುವ ಅದ್ಭುತ ಕುಶಲತೆ ಇದೆ. ಅದಕ್ಕೆ ಅದರದ್ದೇ ಆದ ಭಾಷೆ ಅಂತ ಇದೆ. ಅದು ಏನು ಮಾಡಬೇಕು ಅಂತ ನಾವು ಅದರ ಭಾಷೆಯಲ್ಲಿಯೇ ಹೇಳಬೇಕು. ಹಾಗೆ ಅದರ ಭಾಷೆಯಲ್ಲಿ ಹೇಳಿದ ಎಲ್ಲ ತರಹದ ಕೆಲಸವನ್ನೂ ಅದು ಮಾಡುತ್ತದೆ ಅಂತ ಅಂದಾಗ ಅಪ್ಪ ನನ್ನ ಮಗನನ್ನು ಅಪ್ಪಿಕೊಂಡು ಮುದ್ದಾಡಿದ್ದರು.

    ನೀನು ಆ ಭಾಷೆ ಕಲೀತಿದ್ದಿಯಾ? ಹೇಗಿದೆ ತೋರಿಸು ನೋಡ್ತೀನಿ ಅಂದ್ರು. ನನ್ನ ಮಗ ನಕ್ಕು ತಾತಾ ಅದರ ಭಾಷೆಗೆ ಮೂಲ ಅಕ್ಷರಗಳು ಅಂತ ಇರೋದು ಎರಡೇ. ಸೊನ್ನೆ ಮತ್ತು ಒಂದು! ನಮ್ಮ ಹಾಗೆ ಇಂಗ್ಲಿಷಿಗೆ26, ಕನ್ನಡಕ್ಕೆ 52 ಅಂತ ಇಲ್ಲ ಅಂದಾಗ ನನ್ನ ಅಪ್ಪನ ಆಶ್ಚರ್ಯ ವರ್ಣಿಸಲು ಆಗ್ತಿಲ್ಲ. ಅದಕ್ಕೆ ಹೇಳುವುದನ್ನೆಲ್ಲಾ 0,1 ಬಳಸಿಯೇ ಹೇಳಬೇಕು, ಇವೆರಡನ್ನು ಬಿಟ್ಟರೆ ಅದಕ್ಕೆ ಬೇರೆ ಏನೂ ಅರ್ಥ ಆಗಲ್ಲ ಅಂತ ನನ್ನ ಹೆಂಡತಿ ಮಧ್ಯೆ ಬಂದು ಹೇಳಿದಾಗ ಅಪ್ಪ ತೆರೆದ ಬಾಯಿಯನ್ನು ಸ್ವಲ್ಪ ಹೊತ್ತು ಮುಚ್ಚಿಯೇ ಇರಲಿಲ್ಲ.

    ಮಂಜೂ, ಈ ಸೊನ್ನೆ ಮತ್ತು ಒಂದು ನಮ್ಮ ಆಧ್ಯಾತ್ಮಿಕತೆಯಲ್ಲಿಯೂ ಬಹಳ ಪ್ರಾಶಸ್ತ್ಯ ಹೊಂದಿದೆ ಕಣೋ. ಒಂದರ ಎಡಕ್ಕೆ ಸೊನ್ನೆ ಇದ್ದರೆ, ಹತ್ತಾಗಿ ಆ ಒಂದಕ್ಕೆ ಬೆಲೆ ಬರುತ್ತೆ. ಹಾಗಾಗಿಯೇ ಹೆಂಡತಿ ಯಾವಾಗಲೂ ಗಂಡನ ಎಡಕ್ಕೆ ಇರುವುದು. ವೈಷ್ಣವರು ಸೊನ್ನೆಯನ್ನು ಲಕ್ಷ್ಮಿ ಅಂತಲೂ ಒಂದನ್ನು ವಿಷ್ಣು ಅಂತಲೂ ಅಂದ್ರೆ, ಶೈವರು ಮೇಲಿನ ಲಿಂಗವನ್ನು ಒಂದು ಎಂದೂ ಕೆಳಗಿನ ಪಾಣಿ ಪೀಠವನ್ನು ಸೊನ್ನೆ ಅಂತಲೂ ಅಂದಿದ್ದಾರೆ ಕಣೋ ಅಂದಾಗ ನಾನು ದಂಗಾಗಿದ್ದೆ.

    ಶೂನ್ಯತಾವಾದದ ಮುಖಾಂತರ ಏಕದೇವೋಪಾಸನೆ ಹೇಳಿದ ಸಿದ್ಧಾಂತ ಎಷ್ಟೊಂದು ಅರ್ಥಗರ್ಭಿತ ಆಗಿದೆ ಅಲ್ಲಾ ಅಂದಿದ್ದರು. ಅಂದಿಗೂ,ಇಂದಿಗೂ ಈ ಸೊನ್ನೆ,ಒಂದು ಎನ್ನುವ ಸಾಂಖ್ಯರ ಅವಿಷ್ಕರಣೆ ತನ್ನ ಪ್ರಸ್ತುತೆಯನ್ನು ಕಾಪಾಡಿಕೊಂಡು ಪ್ರಪಂಚವನ್ನು ವಿಜ್ಞಾನ ಅಥವಾ ಸಿದ್ಧಾಂತದ ಮುಖಾಂತರ ಅಚ್ಚರಿಪಡುವ ಮಟ್ಟಕ್ಕೆ ಕೊಂಡೊಯ್ದಿದೆಯಲ್ಲಾ ಅಂತ ಹರ್ಷಿಸಿದ್ದರು!

    ಹೌದು ಅಪ್ಪ ಯಾವಾಗಲೂ ಏನೇ ಹೊಸದನ್ನು ತಾನು ಬಲವಾಗಿ ನಂಬಿದ್ದ ತನ್ನ ಅಧ್ಯಾತ್ಮಿಕತೆಯೊಂದಿಗೆ ತಳುಕು ಹಾಕಿಕೊಂಡು ವಿಸ್ಮಯರಾಗುತ್ತಿದ್ದರು. ತಪ್ಪಿಲ್ಲ ಅಂತ ಅನ್ನಿಸಿ,ನಾನೂ ಸಹಮತನಾಗುತ್ತಿದ್ದೆ. ಹೀಗೆ ಶುರುವಾಗಿದ್ದು ಅಂದಿನ ನನ್ನ, ಅಪ್ಪನ ಮಂಥನ ಮತ್ತೆ ಆತ್ಮ,ಪರಮಾತ್ಮನ ಕಡೆಗೆ ತಿರುಗಿತ್ತು.

    ಅಪ್ಪಾ, ಅಂತರ್ಯಾಮಿ ಆದ ಪರಮಾತ್ಮ ಎಲ್ಲಾ ಕಡೆ ಇರುವಾಗ, ಅದರ ಭಾಗವಾದ ಆತ್ಮ, ಜೀವಿಯು ಸತ್ತ ನಂತರ ಪ್ರಯಾಣಿಸುವುದಾದರೂ ಎಲ್ಲಿಗೆ, ಮತ್ತೆ ಹೊಸ ಜೀವವನ್ನು ಸೇರುವುದಾದರೂ ಹೇಗೆ? ಮರುಜನ್ಮದ ವಿಷಯವಾಗಿ ಕೃಷ್ಣ ಭಗವದ್ಗೀತೆಯಲ್ಲಿ ಆತ್ಮಕ್ಕೆ ಸಾವಿಲ್ಲ, ಹಳೆ ಬಟ್ಟೆ ತೊರೆದು, ಹೊಸ ಬಟ್ಟೆ ಧರಿಸುವ ರೀತಿ ಜೀರ್ಣಗೊಂಡ ದೇಹ ತೊರೆದು, ಆತ್ಮ ಹೊಸ ದೇಹ ಪ್ರವೇಶ ಪಡೆಯುತ್ತದೆ ಅಂದಿದ್ದಾನಲ್ಲ ಇದರರ್ಥ ಏನು ಅಂದಿದ್ದೆ.

    ಅದು ಹಾಗಲ್ಲ, ಆತ್ಮ ಅಂತ ವಿಸ್ತಾರವಾಗಿ ಹೇಳಿರುವುದು ಸಾಮಾನ್ಯರಿಗೂ ಅರ್ಥ ಆಗಲಿ ಅಂತ. ಬುದ್ಧಿ,ಅಹಂಕಾರ,ಚಿತ್ತ,ಪ್ರಾಣ ಹೀಗೆ ಹಲವು ಪ್ರಭೇಧಗಳಿವೆ. ಮೇಲ್ನೋಟಕ್ಕೆ ಇವೆಲ್ಲವೂ ಆತ್ಮದ ರೂಪವನ್ನೇ ದೇಹದಲ್ಲಿ ಹೊಂದಿವೆ. ಹಾಗಾಗಿ ಆತ್ಮದ ಸ್ಥಾನ ಎಲ್ಲಿದೆ ದೇಹದಲ್ಲಿ ಎನ್ನುವುದು ಇನ್ನೂ ಜಿಜ್ಞಾಸೆಯಾಗಿಯೇ ಇದೆ. ನೋಡುವುದು ಕಣ್ಣಾದರೂ,ಕೇಳುವುದು ಕಿವಿಯಾದರೂ ಮತ್ತೊಂದು ಶಕ್ತಿ ಇವುಗಳ ಹಿಂದೆ ಇದ್ದು,ಎಲ್ಲ ಇಂದ್ರಿಯಗಳಿಗೂ ಪ್ರೇರಕ ಶಕ್ತಿ ಆಗಿದೆ. ಅದನ್ನು ವ್ಯಾಪಕವಾಗಿ ಆತ್ಮ ಅಂದಿದ್ದಾರೆ. ಜ್ಞಾನಿಗಳು ಇದನ್ನು ಸೂಕ್ಷ್ಮ ಶರೀರ ಅಂದು ಅಲ್ಲಿ ಎಲ್ಲ ಇಂದ್ರಿಯಗಳ,ಹೃದಯದ ಬಡಿತವೂ ಸೇರಿದಂತೆ ಇರುವ ಬುದ್ಧಿ,ಅಹಂಕಾರ,ಚಿತ್ತ(ಮನಸ್ಸು),ಪ್ರಾಣ(ಉಸಿರು) ಇವೆಲ್ಲವುಗಳ ಮಿಶ್ರಣ. ಸ್ಥೂಲ ದೇಹದಲ್ಲಿ ಅಂಗಾಂಗ,ತಲೆ,ನರವ್ಯೂಹ ಇದ್ದಂತೆ.

    ನಿಜವಾಗಿಯೂ ಮನುಷ್ಯ ಅಥವಾ ಪ್ರಾಣಿ ನಿರ್ಜೀವ ಅಂತಾದಾಗ ಈ ಸೂಕ್ಷ್ಮ ಶರೀರ ಇಲ್ಲವಾಗುತ್ತದೆ. ಅಂತರ್ಯಾಮಿ ಪರಮಾತ್ಮನ ಅಂಶವಾದ ಆತ್ಮ ಆ ಸತ್ತ ದೇಹದಲ್ಲಿಯೂ ಇರುವ ಸಾಧ್ಯತೆ ಇದೆ. ಎಲ್ಲಿಯ ತನಕ? ಆ ದೇಹ ಈ ಪಂಚಭೂತಗಳಲ್ಲಿ ಲೀನ ವಾಗುವ ತನಕ. ಈ ನಂಬಿಕೆಯನ್ನು ಅನುಸರಿಸಿಯೇ ಸತ್ತ ನಂತರದ ಕ್ರಿಯೆಗಳು ಚಾಲ್ತಿಗೆ ಬಂದಿವೆ. ಕೆಲವರು ದೇಹವನ್ನು ಸುಡುವುದರ ಮೂಲಕ ಆ ಆತ್ಮದ ಬಿಡುಗಡೆಗೆ ಸಹಕರಿಸುತ್ತಾರೆ. ಮತ್ತೆ ಕೆಲವರು ಅದು ದೇಹದ ಜೊತೆಗೇ ಇರಲಿ ಅಂತ air tight chamber (ಸಮಾಧಿ) ಮಾಡುತ್ತಾರೆ, ದೇಹ ಜೀರ್ಣವಾದರೂ ಅವರ ಆತ್ಮ ಅಲ್ಲಿಯೇ ಇರಲಿ ಅಂತ. ಅದಕ್ಕೇ ನೋಡಿದ್ದಿಯಾ ಕೆಲವು ಆತ್ಮಗಳನ್ನು ಶೀಶೆಯಲ್ಲಿ ಬಂಧಿಸಿ, ತಾಂತ್ರಿಕರು ಉಪಾಸನೆ ಮಾಡುತ್ತಾರೆ. ಅದರ ಬಂಧನ,ಬಿಡುಗಡೆಯೇ ನಾನಾ ತರಹದ ನಂಬಿಕೆಗಳನ್ನು ಹುಟ್ಟು ಹಾಕಿದೆ ಅಂದು ಷರಾ ಹೇಳಿದ್ದರು.

    ಆಪ್ಪ ಸತ್ತು ಇನ್ನೆರಡು ದಿನಕ್ಕೆ ಒಂದು ವರ್ಷ ಆಗ್ತಿದೆ. ಅಪ್ಪನ ಆತ್ಮ ಆ ಸಮಾಧಿಯಲ್ಲಿಯೇ ಇರಬಹುದು ಅನ್ನುವ, ಅಪ್ಪ ಹೇಳಿದ್ದ ಅನ್ನುವ ಕಾರಣಕ್ಕೆ ನಾಳೆ ಅಲ್ಲಿಗೆ ಹೋಗಿ ತಿಳಿದ ಪೂಜೆ ಮಾಡಿ, ಅಪ್ಪನೊಂದಿಗಿನ ನನ್ನೆಲ್ಲಾ ಅಧ್ಯಾತ್ಮಿಕತೆಯ ವಿಷಯಗಳನ್ನು ಅಲ್ಲಿ ಕುಳಿತು ಮೇಲುಕುಹಾಕಿ ಬರುತ್ತೇನೆ.ನಿರಂತರ ಮಂಥನಗಳಲ್ಲಿ ಸಿಗದ ಆತ್ಮ,ಪರಮಾತ್ಮನ ವಿಷಯವನ್ನು ಇದು ಹೀಗೆಯೇ ನೋಡು ಅಂತ ಅಪ್ಪ ಮೇಲೆದ್ದು ಬಂದು ಹೇಳುವ ಹಾಗಿದ್ದರೆ,ಎಷ್ಟು ಚೆನ್ನಾಗಿ ಇರುತ್ತಿತ್ತು ಅಲ್ಲವೇ?

    Photo by Ashley Batz on Unsplash

    ಹತ್ತು ತಿಂಗಳಿಂದ ಅರೆಹೊತ್ತು ಊಟ; ನೇಯ್ಗೆ ಬದುಕಿನ ಸಂಕಟ

    ಡಿ.ಸಿ.ಬಾಬು ಕಳೆದ ಇಪ್ಪತ್ತೈದು ವರ್ಷಗಳಿಂದ ನೇಯ್ಗೆಯನ್ನೇ ನಂಬಿ ಬದುಕುತ್ತಿರುವ, ಬೇರಾವ ಕಲೆಯೂ ಗೊತ್ತಿಲ್ಲದ ನೇಕಾರ. ಸರಾಗವಾಗಿ ಬದುಕಿನ ಹಾಯಿದೋಣಿ ನಡೆಸುತ್ತಿದ್ದ ಆತನಿಗೆ ನದಿಯ ಮಧ್ಯದಲ್ಲಿ ದಡ ಸೇರದ ಪರಿಸ್ಥಿತಿ. ಮತ್ತೊಂದು ಕೆಲಸ ಮಾಡಲಾಗದ ಇರುವ ಕೆಲಸದಲ್ಲಿ ಮುಂದುವರಿಯಲಾಗದ ಸಂಕಷ್ಟ.

    ಕೋವಿಡ್-19 ಅಸಂಖ್ಯ ವೃತ್ತಿಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಅದರಲ್ಲಿ ನೇಕಾರಿಕೆಯೂ ಒಂದು. ನಿತ್ಯ ನೇಯುವ ಕಾಯಕದಿಂದ ಬದುಕಿನ ಬಂಡಿ ನಡೆಸುತ್ತಿದ್ದ ಅಸಂಖ್ಯ ಕುಟುಂಬಗಳು ಮುಂದೇನು ಎಂದು ತೋಚದೆ ಕಂಗಾಲಾಗಿವೆ. ಕಳೆದ 10 ತಿಂಗಳಿಂದಲೂ ನಿಂತು ಹೋಗಿರುವ ಆದಾಯ ಇನ್ನು ಸುಧಾರಿಸುವ ಲಕ್ಷಣಗಳು ಕಾಣಿಸುತ್ತಿಲ್ಲ.

    ಸ್ವಂತ ಮಗ್ಗ ಹೊಂದಿದ್ದರೂ ಕೂಲಿಗೆ ಬಟ್ಟೆ ನೇಯುವ ಈತನಿಗೆ ಸದ್ಯ ಹದಿನೈದು ದಿನಕ್ಕೆ ಹತ್ತು ಸೀರೆಗಳ ನೇಯುವ ಕೆಲಸ ದೊರೆಯುತ್ತಿದೆ. ಇದು ಉಪ್ಪು, ಸೊಪ್ಪಿಗೂ ಸಾಕಾಗದು. ಅಲ್ಲದೆ ಕೋವಿಡ್-19 ಸಮಸ್ಯೆಯ ಹಿನ್ನೆಲೆಯಲ್ಲಿ ಕೆಲಸ ಕಡಿಮೆ ಮಾಡಿರುವುದೇ ಅಲ್ಲದೆ ಕೂಲಿಯನ್ನೂ ಕಡಿಮೆ ಮಾಡಲಾಗಿದೆ. ನೇಯ್ಗೆ ಬಿಟ್ಟು ಬೇರೆ ಕೆಲಸ ಗೊತ್ತಿಲ್ಲದ ಬಾಬು ಮುಂದೇನು ಎಂದು ತಲೆ ಮೇಲೆ ಕೈ ಹೊತ್ತಿಕೊಂಡಿರುವ ಅಸಂಖ್ಯ ನೇಕಾರರಲ್ಲಿ ಒಬ್ಬನಾಗಿದ್ದಾನೆ.

    ಹೊಸ ವೃತ್ತಿ ಕಷ್ಟ

    ನೇಯ್ಗೆಯೇ ಒಂದು ಕೌಶಲ್ಯ. ಆದರೆ ಅದಕ್ಕೆ ಬೆಲೆ ಇಲ್ಲದಾಗ ಬೇರೆ ಹೊಸ ಕೌಶಲ್ಯ ಕಲಿಯಲು ಸಮಯವೂ ಇಲ್ಲದೆ ಕೆಲವರು ಹತ್ತಿರದ ಫ್ಯಾಕ್ಟರಿಗಳಲ್ಲಿ ಸೆಕ್ಯುರಿಟಿಗಳಾಗಿ ಸೇರಿದ್ದಾರೆ. ಅದರಲ್ಲೂ ಹಲವು ಬಗೆಯ ಸಂಕಷ್ಟಗಳಿವೆ. ಸ್ವಂತವಾಗಿ ಇನ್ನೊಬ್ಬರ ಹಂಗಿಲ್ಲದೆ ಬದುಕುತ್ತಿದ್ದ ನೇಕಾರರು ಮತ್ತೊಬ್ಬರ ಅಡಿಯಲ್ಲಿ ಸೆಕ್ಯುರಿಟಿಯಾದರೂ ಸಂಕಷ್ಟಕ್ಕೆ ಕೊನೆಯಿಲ್ಲ. ದಿನಕ್ಕೆ 12 ಗಂಟೆ ಕೆಲಸ. ರಾತ್ರಿ ಪಾಳಿಯಲ್ಲಿ ನಿದ್ರೆ ಕೆಡಬೇಕು. ಅಲ್ಲದೆ ಪಾಳಿಯಲ್ಲಿ ಬದಲಾವಣೆಯಾಗುವ ದಿನ 24 ಗಂಟೆ ಕೆಲಸ ಮಾಡಬೇಕು. ಈ ಅಮಾನವೀಯ ವೃತ್ತಿ ಚಕ್ರದಲ್ಲಿ ಈಗಾಗಲೇ ಕೆಲವರು ಸಿಕ್ಕಿಕೊಂಡಿದ್ದಾರೆ. ಕೆಲವರು ಅಲ್ಲಿರಲಾಗದೆ ಬಿಟ್ಟು ಬಂದಿದ್ದಾರೆ. ಅಷ್ಟೇ ಸಮಯ ನೇಯ್ಗೆ ಕೆಲಸ ಮಾಡಿದರೆ ಕುಟುಂಬದೊಂದಿಗೆ ಉಂಡು ಉಳಿಸಿ, ಸಂತೋಷವಾಗಿರಬಹುದಿತ್ತು. ಈಗಾಗಲೇ ಮಧ್ಯಮ ವಯಸ್ಸಿನಲ್ಲಿರುವ ನೇಕಾರರು ಹೊಸ ವೃತ್ತಿಗೆ ಹೊಂದಿಕೊಳ್ಳಲಾರರು. ಇತರೆ ಕೌಶಲ್ಯಗಳ ಕೆಲಸಗಳನ್ನು ಕಲಿಯಲು ಸಾಧ್ಯವಿಲ್ಲ.

    ಹತ್ತಿರದ ಗಾರ್ಮೆಂಟ್ ಕಾರ್ಖಾನೆಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಆದಿಪ್ರಕಾಶರಿಗೆ ಕೋವಿಡ್-19 ಸಂಕಷ್ಟದ ಸಮಯದಲ್ಲಿ ಜೀವನ ನಡೆಸಲು ಈ ಕೆಲಸ ನೆರವಾಗಿದ್ದರೂ ಇದೇ ಕೆಲಸದಲ್ಲಿ ಮುಂದುವರಿದರೆ ಮುಂದೆ ನೇಯ್ಗೆಯಾಗಲಿ ಮತ್ತೊಂದು ಕೆಲಸವಾಗಲೀ ಮಾಡಲು ಸಾಧ್ಯವೇ ಇಲ್ಲ ಎಂಬ ಆತಂಕ ಪ್ರಾರಂಭವಾಗಿ ಅದನ್ನು ಬಿಡಬೇಕಾಯಿತು. ಸಂಪಾದನೆ ಕಡಿಮೆ ಇದ್ದರೂ ಮರಳಿ ಮಗ್ಗಕ್ಕೆ ಬಂದಾಗಿದೆ. ಇದು ಕೈಯಲ್ಲಿರುವ ಕೆಲಸ, ನನಗೆ ನಾನೇ ಯಜಮಾನ. ಆದರೆ ಸೆಕ್ಯುರಿಟಿ ಗಾರ್ಡ್ ಕೆಲಸ ಸುಲಭದಂತೆ ಕಂಡರೂ ರಾತ್ರಿ ಪಾಳಿಗಳಲ್ಲಿ ನಿದ್ರೆಗೆಟ್ಟು ಕಾವಲು ಕಾಯಬೇಕಾದ ಅನಿವಾರ್ಯತೆ, ಗಾರ್ಡ್ ಕೆಲಸದ ಏಕತಾನತೆಯಿಂದ ಮುಂದೆ ನೇಯ್ಗೆ ಉದ್ಯಮ ಸುಧಾರಿಸಬಹುದು ಎಂದು ಮರಳಿದ್ದಾನೆ.

    ರೇಷ್ಮೆ ನೇಕಾರರಿಗೂ ಸಂಕಷ್ಟ

    ಕೆಲ ವೆರೈಟಿಯ ಸೀರೆಗಳಿಗೆ ತಕ್ಕಷ್ಟು ಬೇಡಿಕೆ ಒದಗಿದೆ. ಸಾದಾ ರೇಷ್ಮೆ ಸೀರೆಗಳನ್ನು ನೇಯುತ್ತಿದ್ದವರು ನಿತ್ಯದ ವ್ಯಾಪಾರ ಕುಂಠಿತವಾಗಿರುವುದರಿಂದ ಸ್ಟಾಕ್ ಮಾಡಿ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ರೇಷ್ಮೆ ನೇಯುತ್ತಿದ್ದವರು ಸಂಕಷ್ಟದಲ್ಲಿದ್ದಾರೆ. ಆದರೆ ಒಟ್ಟಾರೆ ಕೋವಿಡ್-19 ಸಾಂಕ್ರಾಮಿಕವು ನೇಯ್ಗೆಯ ಕೂಲಿ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
    ಹಾಗೆಂದು ನೇಯ್ಗೆ ಬಹಳ ಚೆನ್ನಾಗಿಯೇನೂ ಇರಲಿಲ್ಲ. ಆಗಾಗ್ಗೆ ಅಮಾನಿಯಿಂದ ನಿಧಾನಗತಿಯಾದರೂ ಮತ್ತೆ ಚೇತರಿಸಿಕೊಳ್ಳುತ್ತಿತ್ತು. ತುತ್ತಿನ ಚೀಲ ತುಂಬಿಸುತ್ತಿತ್ತು. ಈಗ ಚೇತರಿಕೆಯ ಲಕ್ಷಣಗಳೇ ಕಾಣುತ್ತಿಲ್ಲ. ಬದುಕಿನ ಕುರಿತು ಭರವಸೆ, ಮಕ್ಕಳ ಶಾಲೆಗಳಿಗೆ ಶುಲ್ಕ ಕಟ್ಟಲಾಗದ ಸಂಕಷ್ಟ, ಭವಿಷ್ಯದ ಕುರಿತು ಆತಂಕ ಸದ್ಯ ನೇಕಾರರ ಬದುಕಿನ ವಾಸ್ತವಗಳು.

    ನೇಯ್ಗೆ ಕುಟುಂಬಗಳು ಹಲವು ಪಲ್ಲಟಗಳನ್ನು ಕಾಣುತ್ತಿವೆ. ನೇಯ್ಗೆ ಕುಟುಂಬಗಳೂ ಕೃಷಿ ಕುಟುಂಬಗಳಂತೆ ಮನೆ ಮಂದಿ ಎಲ್ಲರೂ ನೇಯ್ಗೆಯಲ್ಲಿ ತೊಡಗುತ್ತಾರೆ. ಆದರೆ ಬೇಡಿಕೆಯೇ ಇಲ್ಲದೆ ನೇಯ್ದು ಮಾಡುವುದಾದರೂ ಏನು ಎನ್ನುವುದು ಎಲ್ಲರನ್ನೂ ಕಾಡುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆ.

    ಸ್ವಂತ ಮಗ್ಗ ನಡೆಸುವ ವಿಶ್ವನಾಥ್ ಸ್ವಲ್ಪಮಟ್ಟಿಗೆ ಪರವಾಗಿಲ್ಲ ಎನ್ನುವಂತಿದ್ದರೂ ಮಾರುಕಟ್ಟೆಯಿಂದ ಹಣ ಬರುತ್ತಿಲ್ಲ ಎನ್ನುತ್ತಾರೆ. ಕೋವಿಡ್ ಸಮಸ್ಯೆಯಿಂದಾಗಿ ಮಾರುಕಟ್ಟೆಯಲ್ಲಿ ಯಾರಲ್ಲೂ ಹೆಚ್ಚು ಹಣ ವಹಿವಾಟು ಆಗುತ್ತಿಲ್ಲ. ಸೀರೆ ತೆಗೆದುಕೊಂಡರೂ ಉತ್ಸಾಹದಿಂದ ಹಣ ಪಾವತಿಸುವುದಿಲ್ಲ. ಸಾಕಷ್ಟು ಬಾಕಿ ಮಾರುಕಟ್ಟೆಯಲ್ಲಿದೆ. ಮುಂದೆ ನಡೆಸೋದಕ್ಕೆ ಕಷ್ಟ ಎನ್ನುತ್ತಾರೆ.

    ಒಟ್ಟಾರೆ ನೇಕಾರರು ನೇಯ್ಗೆಯ ಭವಿಷ್ಯದ ಬಗ್ಗೆ ಭರವಸೆಯೇ ಕಳೆದುಕೊಂಡಿದ್ದಾರೆ. ಒಮ್ಮೆ ಅವರು ಬೇರೆ ಉದ್ಯೋಗಗಳಿಗೆ ಬದಲಾದರೆ ಮತ್ತೆ ನೇಯ್ಗೆಗೆ ಮರಳಲಾಗದೇ ಇರುವ ಪರಿಸ್ಥಿತಿಗೆ ಸಿಲುಕಿಕೊಳ್ಳುತ್ತಾರೆ.

    ಶೇ.40ರಷ್ಟು ನೇಯ್ಗೆ ಉದ್ಯಮ ಕಾಣೆ

    ನಾಗರಾಜ ಹೊಂಗಲ್

    ನೇಕಾರರ ಹೋರಾಟಗಾರ ನಾಗರಾಜ್ ಹೊಂಗಲ್, “ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಶೇ.40ರಷ್ಟು ನೇಯ್ಗೆ ಉದ್ಯಮ ಕಾಣೆಯಾಗಿದೆ. ಕೋವಿಡ್-19 ಇನ್ನಷ್ಟು ಕುಸಿತಕ್ಕೆ ಕಾರಣವಾಗಿದೆ. ಸಮಾಜದಲ್ಲಿ ಆಗುತ್ತಿರುವ ಬದಲಾವಣೆಗಳೂ ಇದಕ್ಕೆ ಕಾರಣ. ರಿಯಲ್ ಎಸ್ಟೇಟ್, ಗಣಿಗಾರಿಕೆ ಇತ್ಯಾದಿ ಉದ್ಯಮಗಳು ನೇಯ್ಗೆ ಉದ್ಯಮಕ್ಕೆ ಕಂಟಕವಾಗಿವೆ. ನೇಯ್ಗೆ ನಂಬಿದವರು ಅಲ್ಲಿಂದ ವಿಮುಖರಾಗಿ ಸರಳ ದಾರಿಗಳಲ್ಲಿ ಹಣ ಮಾಡುವ ವಿಧಾನ ಅರಸುತ್ತಿದ್ದಾರೆ” ಎಂದು ಹೇಳುತ್ತಾರೆ.

    “ಇಳಕಲ್ ನಲ್ಲಿ ಸಾವಿರಗಟ್ಟಲೆ ಇದ್ದ ಕೈಮಗ್ಗಗಳು ಈಗ ಬೆರಳೆಣಿಕೆಯಷ್ಟಾಗಿವೆ. ಅದೇ ರಾಮದುರ್ಗದಂತಹ ಪ್ರದೇಶಗಳಲ್ಲಿ ನೇಕಾರಿಕೆ ವಿಸ್ತಾರಗೊಳ್ಳುತ್ತಿದೆ. ಇಳಕಲ್ ನಲ್ಲಿ ಸಾವಿರದೈನೂರು ಇದ್ದ ವಿದ್ಯುಚ್ಛಾಲಿತ ಮಗ್ಗಗಳು ಈಗ ನಾಲ್ಕುನೂರರಷ್ಟಾಗಿವೆ. ಅದೇ ರೀತಿಯಲ್ಲಿ ದೊಡ್ಡಬಳ್ಳಾಪುರ, ಯಲಹಂಕ, ಬೆಂಗಳೂರುಗಳಲ್ಲಿ ಹತ್ತಾರು ಸಾವಿರ ಮಗ್ಗಗಳಿಂದ ನೇಯ್ಗೆ ಮಾಡುತ್ತಿದ್ದರು. ಈಗ ಅರ್ಧದಷ್ಟು ಮಗ್ಗಗಳು ಕಾಣೆಯಾಗಿವೆ“.

    “ಕೋವಿಡ್-19ರಿಂದ ಸಂಕಷ್ಟಕ್ಕೆ ಸಿಲುಕಿದ ನೇಕಾರರಿಂದ ಸರ್ಕಾರ ಸರ್ಕಾರ ಸೀರೆಖರೀದಿ ಮಾಡುವ ಭರವಸೆ ನೀಡಿದ್ದರೂ ಅದು ಈಡೇರಿಲ್ಲ. ನೇಕಾರಿಕೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ ಪರಿಣಾಮ ಇದು. ಜನರು ನೇಕಾರಿಕೆಯ ಆಚೆಗೆ ಉದ್ಯೋಗಗಳನ್ನು ಅರಸುತ್ತಿದ್ದಾರೆ. ನೇಯ್ಗೆಗೆ ಯುವಜನರನ್ನು ಆಕರ್ಷಿಸದೇ ಇದ್ದಲ್ಲಿ ನೇಕಾರಿಕೆ ಸಾಯುವುದು ಖಂಡಿತ” ಎನ್ನುತ್ತಾರೆ.

    Dont come..ಬಳಿ ಹುಳುವೇ

    ಕೆಲವೊಮ್ಮೆ ನಮ್ಮ ದಿನಚರಿಯಲ್ಲಿ ಯಾರ್ಯಾರದೋ ಯಾವ್ಯಾವುದರ ಜೊತೆಗೋ ಹೊಂದಾಣಿಕೆ ಮಾಡ್ಕೋಬೇಕಾಗುತ್ತೆ.ಮನುಷ್ಯ ಮನುಷ್ಯರ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಇದ್ದಿದ್ದೇ.ಆದರೆ ಮನುಷ್ಯನಾಗಿ ಇಲ್ಲಿ ಹುಟ್ಟಿದ ಮೇಲೆ ಸ್ವಜಾತಿ ಮಾತ್ರವಲ್ಲದೇ ಸೊಳ್ಳೆ ನೊಣ ಜಿರಲೆ ಹಲ್ಲಿ ಇಲಿ ಇರುವೆ ಚಿಗಟ ಹೀಗೆ ನಾನಾ ಥರದ ಜೀವಿಗಳೆಲ್ಲವೂ ದಿನ ಇಪ್ಪತ್ನಾಲ್ಕು ಗಂಟೆಯೂ ಒಂದಲ್ಲ ಒಂದು ಬಗೆಯಲ್ಲಿ ‘ಅಲಾ…ನಾವೂ ಬದುಕೋಕೇ ಅಂತಲೇ ಭೂಮಿ ಮೇಲೆ ಹುಟ್ಟಿರುವುದು’ಅಂತ ಎಚ್ಚರಿಸುತ್ತಲೇ ಇರುತ್ತವೆ.ಉದಾಹರಣೆಗೆ ನೋಡಿ.

    ನಡುರಾತ್ರಿಯಲ್ಲಿ ಎದ್ದು ನೋಡಿದರೆ ಜಿರಲೆಗಳು ಅದೆಷ್ಟು ಆರಾಮವಾಗಿ ಅಡುಗೆ ಮನೆ ಬಚ್ಚಲು ವಾಷ್ ಬೇಸಿನ್ನು ಹೀಗೆ ಎಲ್ಲೆಡೆ ಓಡಾಡಿಕೊಂಡು, ನಾವು ಮನುಷ್ಯರು ಈ ಮನೆಯಲ್ಲಿ ಇರುವುದೇ ಸುಳ್ಳೆಂಬಂತೆ ಸಂಸಾರ ಸಾಗಿಸುತ್ತವೆ.

    ಅದಷ್ಟೇ ಅಲ್ಲ.

    ಡೈನಿಂಗ್ ಟೇಬಲ್ಲಿನ ಮೇಲೇ ಕುಳಿತು ಸಹಭೋಜನ ಮಾಡ್ತಾ ಅಡುಗೆ ಮನೆಗೂ ಟಾಯ್ಲೆಟ್ಟಿಗೂ ಅದದೇ ಕಾಲಲ್ಲಿ ಓಡಾಡ್ತಾ ಎಂಜಾಯ್ ಮಾಡ್ತಿರ್ತವೆ.

    ದೊಡ್ಡಮ್ಮ ಅಜ್ಜ ಮುತ್ತಜ್ಜಿಯರ ಮೂರು ತಲೆಮಾರಿನ ಸದಸ್ಯರೆಲ್ಲರೂ ತಮ್ಮ ನೀಳ ಮೀಸೆ ,ಅಗಲ ರೆಕ್ಕೆ, ಕಪ್ಪು ಕಂದು ದೇಹದೊಂದಿಗೆ ಠಾಕೂಠೀಕು ಓಡಾಡ್ತಾ ನಮ್ಮನ್ನು ನಮ್ಮ ಈ ಸ್ವಂತ(?) ಮನೆಯಿಂದ ಎತ್ತಂಗಡಿ ಮಾಡಿಸುವುದರ ಕುರಿತು ಗಂಭೀರ ಸಮಾಲೋಚನೆ ಮಾಡ್ತಿರ್ತವೆ. ಮೈ ಉರಿದು ಕೆಂಪು ಹಿಟ್ಟೋ ಕಪ್ಪು ಹಿಟ್ಟೊ ಹೊಡೆದು ಅಟ್ಟಿದೆವು ಎಂದುಕೊಳ್ಳಿ.ಆಳ ಪಾತಾಳ ತಳಾತಳಗೊಳೊಳಗೆ ಅವು ಸರಿದು ಕುಳಿತು ನೀವು ಅತ್ತ ಹೋಗಿ ಕತ್ತಲು ಆವರಿಸುವುದನ್ನೇ ಕಾದು ಮತ್ತೆ ಮೀಸೆ ತಿರುವುತ್ತಾ ‘ಹೆಂಗೆ‌ ನಾವು’ಎನ್ನುತ್ತಾ ಆಚೆ ಬರುತ್ತವೆ.

    ಸೊಳ್ಳೆಗಳಿನ್ನೇನೂ ‘ಸಂಗೀತವೇ ನಮ್ಮ ಉಸಿರು’ ಅನ್ನುವಂತೆ ಕಚೇರಿ ನಡೆಸುತ್ತ ಬಂದು ಭಲೆಭಲೇಭಲೆ ದೊರಕಿತು ಎನಗೆ ಇಂದು ಸುಭೋಜನ ಎನ್ನುವಂತೆ ನಾವು ಒಂದೇ ಒಂದು ಸೆಕೆಂಡು ತಟಸ್ಥ ಸ್ಥಿತಿಯಲ್ಲಿ ಕೂರುವುದನ್ನೇ ಕಾಯ್ದು ಸಾಧ್ಯವಾದಷ್ಟು ನೆತ್ತರು ಹೀರಿ ನಾಳೆಗೂ ನಾಡಿದ್ದಿಗೂ ಇನ್ನೊಂದು ತಿಂಗಳಿನವರೆಗೂ ಹಾರುವ ಕಷ್ಟ ಬ್ಯಾಡೆಂಬಂತೆ ಹೀರಿ ಹೀರಿ ಒಬೇಸ್ ಆಗಿ ಹಾರಲಾರದೆ ಹಾರುವಾಗ ಕೈಗೆ ಸಿಕ್ಕಿ ಟಪ್ ಎನಿಸಿದರೆ ಕೈಯೆಲ್ಲ ಕೆಂಪುಕೆಂಪು.ಇಷ್ಯೀ.

    ಇರುವೆಗಳಂತೂ ‘ಓ..ಇವತ್ತು ಜಾಮೂನು ಮಾಡಿದ್ರಾ..ನಮಗಿಷ್ಟ’
    ಅಂತ ಮಕ್ಕಳು ಮೊಮ್ಮಕ್ಕಳು ಮರಿಮಕ್ಕಳ ಸಂತಾನ ಸಂಸಾರವಂದಿಗರಾಗಿ ಬಂದು ತಿಂದು ಲಕ್ಷ್ಮಣ ರೇಖೆ ಬರೆಯುವ ತನಕ ಹೊರಡವುದಿಲ್ಲ ಅಂತ ಪಟ್ಟಾಗಿ ಕೂತು ಜಾಮೂನು ಕುರಿತು ಪಟ್ಟಾಂಗ ಹೊಡಿಯುವುದಲ್ಲದೇ ಚಳಿಗಾಲಕ್ಕಿರಲಿ ಅಂತ ತಮಗಿಂತಲೂ ಹತ್ತು ಪಟ್ಟು ದಪ್ಪದ ಜಾಮೂನು ತುಣುಕನ್ನು ಸಲೀಸಾಗಿ ತಮ್ಮ ಎರಡು ಕಾಲಲ್ಲಿ ಹಿಡಿದು ರಾಕೆಟ್ ವೇಗದಲ್ಲಿ ಗೂಡಿಗೆ ಹೋಗ್ತಾ ಎದುರಿಗೆ ಸಿಕ್ಕವರನ್ನು ಇದೇ ದಾರಿಯಲ್ಲಿ ಸ್ರೈಟು ಹೋಗಿ‌ ಲೆಫ್ಟಿಗೆ ತಿರುಗಿದ್ರೆ ಜಾಮೂನು ಪಾತ್ರೆ ಸಿಗುತ್ತೆ ಅಂತ ಲೋಕೆಶನ್ನು ಹೇಳಿ‌ ಮತ್ತೆ ಓಡಲಾರಂಭಿಸುತ್ತವೆ.

    ಹೀಗೆ ನಾವು ಕಟ್ಟಿಸಿದ ಈ ಮನೆಯಲ್ಲಿ ಸುತ್ತಲಿನ ಸಮಸ್ತ ಕ್ರಿಮಿಕೀಟಾದಿಗಳಿಗೂ ವಾಸಿಸುವ ಹಕ್ಕು ಇದೆಯೆಂದು ಅರ್ಥವಾದ ಮೇಲೆ ಸಮಬಾಳು ಸಮಪಾಲು ಮಾತನ್ನು ಆಗಾಗ ಗೆಪ್ತಿಗೆ ತಂದುಕೊಂಡು ಒಮ್ಮೊಮ್ಮೆ ಈ ಸಹಜೀವನ ಸಹಿಸಲಾಗದ ತೊಂದರೆ ಕೊಟ್ಟು ವಿಷಪ್ರಯೋಗ ಮಾಡುವಾಗೆಲ್ಲಾ ಸಹಿಸಲಾಗದ ಪಾಪ ಪ್ರಜ್ಞೆಯಲ್ಲಿ ಒದ್ದಾಡುವಂತೆ ಮಾಡುತ್ತವೆ.

    ಇನ್ನು ನಮ್ಮ ಮೂಷಕಗಳದ್ದು ಎಲ್ಲಕ್ಕೂ ದೊಡ್ಡ ಸ್ಟೋರಿ. ಔಷಧಿ ಇಟ್ಟು ,ಇಲಿಬೋನು, ಕತ್ತರಿ ,ಇಲಿಗಮ್ಮು ಏನೇ ತಂದಿಟ್ರೂ

    ‘ನೀನೇನೇ ಮಾಡು
    ಹೆದರುವೆನೇನು,
    ಬದುಕುವೆನು ನಾನು
    ಬಾಳುವೆನು ನಾನು

    ಅಂತ ಹಾಯಾಗಿ ಓಡಾಡ್ತಾ ವರ್ಷಕ್ಕೊಂದೆರಡು ಬಾರಿ ಸಹಜವಾಗಿ ಸಂಭವಿಸುವ ಇಲಿಸಾವನ್ನು ಓಹೋ ಔಷ್ದಿ ತಿಂದು ಸತ್ತೋಗಿದೆ ಅಂತ ನಾವು ಭ್ರಮಿಸಿ ತೃಪ್ತಿ ಪಟ್ಟುಕೊಳ್ಳುವಂತೆ ಮಾಡ್ತವೆ.

    ದೊಡ್ಡಿಲಿ ಚಿಕ್ಕಿಲಿ ಅಮ್ಮಿಲಿ ಅಪ್ಪಿಲಿಗಳ ನಡುರಾತ್ರಿಯ ಪ್ರಣಯದ ಸದ್ದುಗಳಿಗೆ ಆಗಾಗ ಭಯ ಹುಟ್ಟಿ ಜೊತೆಗೆ ಅಸೂಯೆಯೂ ಆಗಿ ಅಲ್ಲಿ ಏನಾಗ್ತಿದೆಯೋ ,ಕಿಟಿಕಿ ಮುರಿತಿರಬಹುದಾ,ಗೋಡೆ ಕೊರೆತಿರಬಹುದಾ ಅಂತ ಆತಂಕದಲ್ಲಿ ಕಳೆದದ್ದೂ ಇದೆ. ಇಲಿಯನ್ನು ಅಟ್ಟೋಡಿಸಲು ಬೆಕ್ಕು ಸಾಕುವ ಮನಸ್ಸು ಮಾಡಿ ಆ ಪ್ರಯೋಗವೂ ಸೋತ ಮೇಲೆ ಸಹಬಾಳ್ವೆಯೊಂದೇ ಮಾರ್ಗವಾಗಿ ಹಾಗೇ ಬದುಕುತ್ತಿದ್ದೇನೆ ಕೂಡ.

    ಮೇಲೆ ಹೇಳಿದ ಕ್ರಿಮಿಕೀಟಾದಿಗಳು ಇಲಿಹೆಗ್ಗಣಗಳು ಪುರಾತನ ಕಾಲದಿಂದಲೂ ಸಹಜೀವನಕ್ಕೆ ನಮ್ಮನ್ನು ಬಗ್ಗಿಸಿಕೊಂಡಿರುವುದರಿಂದ ಕಷ್ಟವಾದರೂ ಹೇಗೊ ಒಗ್ಗಿದ್ದೇವೆ.

    ಆದರೆ ಈ ಜಾಗತಿಕ ತಾಪಮಾನದ ಏರಿಕೆಯೋ ಅಕಾಲಿಕ ಮಳೆಯೋ ಮತ್ತೊಂದೋ ಆಗಿ ಕಳೆದ ಒಂದೂವರೆ ದಶಕದಿಂದ ನಮ್ಮ ಆಲೂರು ಸಕಲೇಶಪುರ ಭಾಗದ ಮನೆಗಳಲ್ಲಿ ಕಂಬಳಿಹುಳುಗಳು ಇನ್ನಿಲ್ಲದಂತೆ ಹೆಚ್ಚಾಗುತ್ತಿವೆ.

    ಮೊದಲ ಮಳೆ ಬಂದು ಮೂರು ದಿನವಾಗುವುದೇ ತಡ.
    ಅದ್ಯಾವಾಗ ಲವ್ ಮಾಡಿ ಮೊಟ್ಟೆ ಇಟ್ಟಿರ್ತವೋ ಗೊತ್ತಿಲ್ಲ.ಕೂದಲಿಗಿಂತಲೂ ತೆಳುವಾದ ಸೂಕ್ಷ್ಮವಾಗಿ ನೋಡಿದರೆ ಮಾತ್ರ ಕಾಣುವಂಥ ಮರಿಗಳು ಸೂರಿನಲ್ಲಿ ಹೆಂಚಿನ ಮೇಲೆ ಗೋಡೆಯ ಮೇಲೆ ಕಂಪೌಂಡಿನ ಮೇಲೆ ಗುಂಪುಗುಂಪಾಗಿ ಕಾಣಲಾರಂಭಿಸುತ್ತವೆ.
    ಮೂರು ದಿನ ಅಂಬೆಗಾಲು. ಹಾಗಾಗಿ ಹೆಚ್ಚಿಗೆ ದೂರ ಹೋಗುವುದಿಲ್ಲ. ಅದೇ ಸರ್ಕಲ್ಲು ಶೇಪಿನಲ್ಲಿ ಮುಲುಮುಲು ಮಾಡ್ಕೊಂಡು ಇರುತ್ತವೆ.
    ವಾರ ಕಳೆಯುವುದೇ ತಡ.ಕಿರುಬೆರಳು ಗಾತ್ರದ ಮೈತುಂಬ ಚೂರಿಯಂಥ ಕೂದಲುಗಳನ್ನು ತುಂಬಿಕೊಂಡ ಹುಳುಗಳು ಬುಳುಬುಳು ಓಡಾಟ ಆರಂಬಿಸುತ್ತವೆ. ‘ಇಲ್ಲ ಇಲ್ಲ.,ಏನ್ ಮಾಡಿದ್ರೂ ವರ್ಷದ ಆರು ತಿಂಗಳು ನಾವೂ ನಿಮ್ಮೊಂದಿಗೆ ಇರೋದೆಯಾ’ ಅಂತ ಪಣ ತೊಟ್ಟು ಮಾಡು ಸೂರು ಗೋಡೆ ಕಂಪೌಂಡು ಎಲ್ಲದರ ಮೇಲೂ ತಮ್ಮ ಸಾಮ್ರಾಜ್ಯ ಸ್ಥಾಪಿಸಿಕೊಂಡು ನಿರಾತಂಕವಾಗಿ ತಮ್ಮ ಮುಂದಿನ ಹಂತಗಳನ್ನು ನಿರ್ವಿಘ್ನವಾಗಿ ಮುಂದುವರಿಸಿಕೊಳ್ಳುತ್ತಿರುವುದು ನೀವೇನಾದರೂ ನೋಡಿದ್ರೆ ನಮ್ ಕಡೆಗೆ ತಲೆ ಹಾಕಿಯೂ ಮಲಗಲ್ಲ ಬಿಡಿ.

    ಬೇರೆ ಯಾವುದರ ಜೊತೆಗಾದರೂ ಸಹಜೀವನ ಸಾಧ್ಯವಾಗಬಹುದು.ಆದರೆ ಕಂಬಳಿಹುಳುವಿನ ಜೊತೆಗೆ??

    ಏನು ಮಾಡುವುದು? -ನಾವು ಮನೆಬಿಟ್ಟು ಹೋಗಲಾಗದ ಕಾರಣ ವಿಧಿಯಿರದೇ ಕಂಬಳಿಹುಳದ ಜೊತೆಗೂ ಹೊಂದಾಣಿಕೆ ‌ಮಾಡ್ಕೋಬೇಕು ,ಅದರ ಅಮ್ಮನ ಜೊತೆಗೂ ಹೊಂದಾಣಿಕೆ ‌ಮಾಡ್ಕೋಬೇಕು.
    ‘ಓ ಚಿಟ್ಟೆ ಜೊತೆಗಾ…ನಾವು ಆಗಾಗ ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ’
    ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಿದೆ ಅಂತ ಹಳೆ‌ನೆನಪುಗಳಿಗೆ ಮುಗುಳ್ನಗುತ್ತಾ ಅರೆಗಣ್ಣಿನಲ್ಲಿ ಜಾರಬೇಡಿ. ಇದು ಕಂಬಳುಹುಳ ಅಗುವ ಚಿಟ್ಟೆಯ ಬಗ್ಗೆ ಹೇಳ್ತಿರುವುದು.

    ಜೂನ್ ಮಧ್ಯದಿಂದ ಶುರುವಾಗುವ ಈ ಕಂಬಳಿಹುಳುಗಳು ಆರಂಭದಲ್ಲಿ ಅದೆಲ್ಲಿ ಕೋಶವಾಗಿರ್ತವೋ ಗೊತ್ತಿಲ್ಲ. ಮಳೆ ಬಂದ ನಾಕು ದಿನಕ್ಕೆ ಸಣ್ಣಗಾತ್ರದ ಚಿಟ್ಟೆಗಳು ಗೋಡೆಮಾಡಿನ ತುಂಬೆಲ್ಲಾ ಪಟಗುಡುತ್ತಾ ಪ್ರಣಯ ಮುಗಿಸಿ ಮೊಟ್ಟೆ ಇಟ್ಟು ‌ನಾಕಾರು ದಿನದೊಳಗೆ ಬುಳುಬುಳು ಮರಿ ಓಡಾಡಲಾರಂಬಿಸುತ್ತವೆ.ಮೊದಲ ಅಷ್ಟು ದಿನ ಸೂರನ್ನು ಗೋಡೆಯನ್ನು ನೇಪುಲು ಪೊರಕೆಯಲ್ಲು ಗುಡಿಸಿ ಗುಡಿಸಿ ಮೊರದ ತುಂಬಾ ಎತ್ತಿಹಾಕಿ ಒಳಬರುವ ಅಷ್ಟರಲ್ಲಾಗಲೇ ‌ಮತ್ತೆ ಅದದೇ ಜಾಗದಲ್ಲಿ ಅಷ್ಟೇ ಹುಳುಗಳು‌ ಪಿತುಗುಡುತ್ತಿರುವುದನ್ನ ನೋಡಿದಾಗ ಹಿಂದೆ ಇದ್ದ ರಕ್ತಬೀಜಾಸುರನ‌ ವಂಶವಿರಬಹುದೇ ಅಂತ‌ ಅನುಮಾನವೂ ಆಗುವುದುಂಟು.ಗುಡಿಸಿ ಹೊರಹಾಕಿದಾಗೆಲ್ಲಾ ಅಕ್ಕಪಕ್ಕದವರಿಂದ ಬಿಟ್ಟಿಯಾಗಿ ಒಂದು ಉಪದೇಶ ಸಿಕ್ಕೋದುಂಟು.

    ‘ಒಲೆಗಿಲೆಗೆ ಹಾಕಬೇಡ ಮತ್ತೆ..ನೂರು ಪಟ್ಟು ಜಾಸ್ತಿ ಆಗ್ತವೆ.ಮನೆದೇವರಿಗೆ ಹರಕೆ ಹೊತ್ರೆ ಮನೆಲೂ ಬೆಳೆಯಲ್ಲೂ ಇರುವ ಹುಳಹುಪ್ಟೆ ಕಂಡೇ ಕಾಣೇ ಅನ್ನಂಗೆ ಮಾಯ ಆಯ್ತವೆ’

    ಕಂಬಳಿಹುಳ ಒಲೆಗೆ ಹಾಕಿ ಸುಡುವಂಥ ಜೀವವಿರೋಧಿ ಕೃತ್ಯವನ್ನು ನಾ ಎಂದೂ ಮಾಡದವಳಾದರೂ ಈ ಹುಳ ಗುಡಿಸುವ ಕೆಲಸದಿಂದ ಮುಕ್ತಿಗಾಗಿ ಮನೆದೇವರಿಗೆ ನಮ್ಮನೆಯವರಿಂದ ಕೈ ಮುಗಿಸಿದ್ದೆ.
    ಯಾಕೋ ದೇವರು ನಮ್ಮ ಇದೊಂದು ಕೇಳ್ಮೆಗೆ ಮಾತ್ರ ಗಮನ‌ಕೊಡದೆ ವರ್ಷದಿಂದ ವರ್ಷಕ್ಕೆ ಹಾಗೇ ಸೃಷ್ಟಿ ಕ್ರಿಯೆ ನಡೆಸ ಹತ್ತಿದಾಗ ನಾನೂ ಸೋತು ಈ ಕರಿಕರೀ ಕಂಬಳಿಹುಳುವನ್ನೇ‌ ಮುದ್ದಿಸಲಾರಂಭಿಸಿದೆ.
    ನೋಡುವವರ ಕಣ್ಣಿಗೆ ಕಂಬಳುಹುಳು ವಿಚಿತ್ರವೂ ಭಯಾನಕವೂ ಅನಿಸುವಾಗ‌ ನಾನು ಅವುಗಳನ್ನು ಅಂಗೈಮೇಲೆ ಹತ್ತಿಸಿಕೊಂಡು ವಂಡರ್ ಲಾ ಡ್ರೈ ಗೇಮ್ಸನಂತೆ ಬೆರಳು ಉಯ್ಯಲೆಯಲ್ಲಿ ಜೋಲಿಜೋಕಾಲಿ ಹೊಡಿಸಿ ಹೊರಗೆ ಕಳೆ ಗಿಡದ ಮೇಲೆ ಬಿಡುತ್ತೇನೆ.

    ‘ಇಸ್ಸೀ’ ಅಂತ ಅಂದ್ರಾ.

    ಒಂದ ಸರ್ತಿ ನಮ್ ಕಂಬಳಿ ಹುಳು ಅಂಗೈ ಮೇಲೆ ಹತ್ತಿ‌ ಕಚಗುಳಿ ಇಡಲಾರಂಭಿಸಿತು ಅಂದ್ರೆ ಯಾವ ಪ್ರೇಮಿಯೂ ಅಷ್ಟರ ಮಟ್ಟಿಗೆ ನೇವರಿಸುವುದಕ್ಕೆ ಸಾಧ್ಯವಿಲ್ಲದಂತೆ ಗುಳುಗುಳುಗುಡಿಸುತ್ತವೆ.
    ಮೈಮೇಲೆ ಬಿದ್ರೂ ಆರಾಮವಾಗಿ ಓಡಾಡಿಕೊಂಡಿರಿ ಅಂದ್ರೆ ಅವುಗಳಿಂದ ಉಪದ್ರ ಇಲ್ಲ.

    ಅದೇ ಬಲವಂತವಾಗಿ ‌ನೀವೇನಾದರೂ‌ ನಿಮ್ಮ ಮೈಯಿಂದ ಕಿತ್ತು ತೆಗೆದು ಬಿಸಾಡ ನೋಡಿದ್ರೋ ನಿಮ್ಮ ಕಥೆ ಮುಗೀತು.ತನ್ನ ಮೇಲಿನ ಕಂಬಳುಮುಳ್ಳುಗಳನ್ನೆಲ್ಲ ಅಲ್ಲೇ ಉದುರಿಸಿ ಶರಪರ ಕೆರೆತ ಹುಟ್ಟಿಸಿ ದದ್ದು ಬರಿಸಿ ನರಕದರ್ಶನ ಕೊಟ್ಟು ಬಿಸಾಟ ಮೇಲೆ ಎಸೆದಲ್ಲಿ ನುಲಿಯುತ್ತಾ ಓಡಾಡಿಕೊಂಡಿರುತ್ತವೆ.

    ಪಾಪ.

    ಎಷ್ಟೇ ಆಗಲಿ ದೇವರು ಸೃಷ್ಟಿಸಿದ ಜೀವ ಅಲ್ವಾ.ನಾವು ಪ್ರೀತಿಸ್ದೇ ಹೋದರೆ ಇನ್ಯಾರು ಪ್ರೀತಿಸ್ತಾರೆ ಅಲ್ವಾ? ಕಾಲಕ್ರಮದಲ್ಲಿ ಈ ಕರಿಜೀವಿಗಳ ಮೇಲೆ ನಂಗೊಂಥರ‌ ಮುದ್ದು ಹುಟ್ತು.ನನ್ನ ಒಂಟಿ ದಿನಗಳಿಗೆ ಸಾಥ್ ಕೊಡುತ್ತವೆ ಅಂತಲೋ ಅವೂ ಕುಟುಂಬದ ‌ಮಂದಿ ಹಂಗಾಗಿದಾವೆ ಅಂತಲೋ‌ ನಾನು ಅವುಗಳನ್ನು ‌ಕೊಲ್ಲುವ ಸುಡುವ ಕೆಲಸ ಮಾಡ್ತಿರಲಿಲ್ಲ.

    ಅವೂ ಹಾಗೆ.

    ನಂಗೆ ಅಭ್ಯಾಸ ಆಗಿ ಅವುಗಳ‌ ಮದ್ಯದಲ್ಲೇ ನಿಂತು‌ ಮಾತಾಡ್ತಿದ್ದರೂ ಮೆಚ್ಕೊತಿದ್ವೇ ಹೊರತು ಚುಚ್ಚತ್ತಿರಲಿಲ್ಲ.ಅಟ್ಟದಲ್ಲಿ ದಟ್ಟವಾಗಿ ‌ವಾಸ ಹಾಕಿಕೊಂಡಿದ್ದ ಈ‌ ಕಂಬಳಿ ಹುಳುಗಳು ನಾನು ನೆಟ್ವರ್ಕಿಗಾಗಿ ಅಟ್ಟದಲ್ಲಿಟ್ಟಿರುತ್ತಿದ್ದ ಫೋನಿಗೆ ಕರೆ ಬಂದಾಗಲೆಲ್ಲ ಅವುಗಳ ಯೋಗಕ್ಷೇಮವನ್ನೂ ವಿಚಾರಿಸಿಕೊಂಡು ಬರುವಂತೆ ಅಭ್ಯಾಸ ಆಗಿಹೋದವು.

    ಈ ಬಗೆಯ ನನ್ನ ಮತ್ತು ಕಂಬಳಿಹುಳುವಿನ ಪ್ರೀತಿ ಮನೆಯವರೆಲ್ಲರ ಮುನಿಸಿಗೂ ಕಾರಣವಾಗಿ ನನಗೂ ಆ ಕಂಬಳುಹುಳುಗಳಿಗೂ ಪಾಯಿಸನ್ ಹಾಕಿ ಸಾಯಿಸ್ಬಿಡಬೇಕು ಅನ್ನುವವರೆಗೂ ಮುಂದುವರೆಯಿತು.ಆ ನಂತರ ನಾನು ಅಪರಾಧಂಗಳ ಮನ್ನಿಸಿ ದಮ್ಮಯ್ಯ ಅಂತ ಮನೆಯವರ ಬಳಿ ಮಾಫ್ ತಗೊಂಡು ಅಂದಿನಿಂದ ಅಂದಂದಿನ ಕಂಬಳಿಹುಳು ಗಳನ್ನು ಅಂದಂದೇ ಮನೆಯಿಂದ ನಾಮವಶೇಷ ಮಾಡಬೇಕು ಎನ್ನುವ ಪಣ ತೊಟ್ಟು ಎರಡೆರಡು ಬಾರಿ ಗುಡಿಸಿ ಮೊರದ ತುಂಬಾ ಳುಮುಳುಗುಡುವ ಕಂಬಳುಹುಳಗಳನ್ನು ದೂರದ ತೋಟಕ್ಕೆ ಸುರಿದು ತಿಂದುಂಡು ಆರಾಮವಾಗಿರಿ ಎನ್ನುತ್ತಾ ಹರಸಿ ಬರ್ತಿದ್ದೆ.ಆದರೆ ಗ್ರಹಚಾರವೋ ಮೋಹವೋ ಗುಡಿಸಿದಷ್ಟೂ ಹುಡುಕಿಕೊಂಡು ಮತ್ತೆ ಬರ್ತಿದ್ವು ಅವು.
    ದಿನಚರಿ ಪುನರಾವರ್ತನೆ.

    ಹೀಗೇ ಸಹಜೀವನ ಏರಿಗೇಳೆಯುತ್ತಾ ನೀರಿಗಿಳಿಯುತ್ತ ಸಾಗುತ್ತಿದ್ದಾಗ ಒಂದಾನೊಂದು ದಿನ ಒಂದು ಕಂಬಳಿಹುಳಕ್ಕೆ ಮನದೊಡತಿಯ ಮೇಲೆ ವಿಪರೀತ ಮುದ್ದುಕ್ಕಿ ಅಟ್ಟಕ್ಕೆ ಫೋನಿಗೆ ಉತ್ತರಿಸಲು ಹೋಗಿದ್ದಾಗ ಕಣ್ಣೊಳಗೇ ನೇರವಾಗಿ ಬಿದ್ದು ಮುದ್ದಿಡಲು ಹೋಗಿ ತನ್ನ ಮುದ್ದು ಚೂರಿಯಂತ ಕೂದಲುಗಳನ್ನು ನನ್ನ ಕಣ್ಣಿನೊಳಕ್ಕೆ ಇಳಿಸಿಬಿಡ್ತು.

    ಅರೆ, ಇದೇನಾಯ್ತು ಅಂತ ರೆಪ್ಪೆ ಪಟಗುಡಿಸುವಷ್ಟರಲ್ಲಿ ಕಣ್ಣೊಳಗಿಳಿದಿದ್ದ ಕೂದಲು ನಾಟಿಕೊಂಡು ಕೆಲಸ ಆರಂಭಿಸಿ ಅಸಾಧ್ಯ ಉರಿಯೂ‌ ನೋವೂ ಕಿರಿಕಿರಿಯೂ ಕೆರೆತವೂ ಕೆಂಪೂ ಆಗಿ ಇನ್ನು ತಡೆಯಲಾರೆ ಎನಿಸುವಷ್ಟು ಹಿಂಸೆ ಶುರುವಾಯ್ತು.

    ಮೊದಲ ಬಾರಿಗೆ ಈ‌ ಕರಿ ಗೆಳೆಯರ ಮೇಲೆ ಕೋಪ ಉಂಟಾಯ್ತು.ಎರಡು ಗಂಟೆ ಕಳೆಯುತ್ತಲೂ ಕಣ್ಣು ಅಸಾಧ್ಯ ನೋವಿನಿಂದಾಗಿ ಒಂದರೆ ಘಳಿಗೆಯೂ ಬಿಡಲಾರದಂತಾಗಿ ಕಣ್ಣ ಕೆಳಗಿನ ಭಾಗವೆಲ್ಲವೂ ಊದಿಕೊಂಡು ಕಣ್ಣುಮುಚ್ಚಿದ್ದರೂ ನೀರು ಧಾರಕಾರ ಸುರಿದು ರಣನೋವಿನ ಪರಿಚಯವಾಗಿ ಕಣ್ಣುಳಿದರೆ ಸಾಕು ಎನಿಸಿತೊಡಗಿತು.
    ಗಂಧದವರ ಜೊತೆಗೆ ಗುದ್ದಾಡಿದರೂ ಪರವಾಗಿಲ್ಲ ಸಗಣಿಯವರ ಜೊತೆಗೆ ಸರಸ ಆಡಬಾರದು ಎನ್ನುವ ಗಾದೆ ಎಷ್ಟು ಸೂಕ್ತ ಅಂತ ಜ್ಞಾನೋದಯವೂ ಆಯಿತಾದರೂ ನೋವಿಂದ ಮುಕ್ತಿಗೆ ಡಾಕ್ಟರನ್ನು ನೋಡುವುದು ಎಂದು ತೀರ್ಮಾನಿಸಿದೆ.

    ಮನೆಯವರು ನನ್ನ ಕಣ್ಣುಬಿಡದ ಕಾರಣದಿಂದ ಹೆಗಲಿಗೆ ಬಿದ್ದ ಮನೆಗೆಲಸದ ಕಿರಿಕಿರಿಯಲ್ಲಿದ್ದರು. ಹೇಗಾದರೂ ಇವಳು ಕೆಲಸ ಆರಂಭಿಸಿ ಮನೆಯೆಂಬೋ ಫ್ಯಾಕ್ಟರಿ ಯಥಾಸ್ಥಿತಿಯಲ್ಲಿ ನಡೆದರೆ ಸಾಕೆಂಬಂತೆ ಹತ್ತಿರದಲ್ಲೇ ಇದ್ದ ವೈದ್ಯ ದರ್ಶನಕ್ಕೆ ಮನಸ್ಸು ಮಾಡಿದರು.
    ನಾನು ಬಿಡಲಾರದ ಕಣ್ಣಿನೊಡಗೂಡಿ ನಡೆಯಲಾರದೆ ನಡೆದು ಆ ವೈದ್ಯರ ಎದುರು ನಿಂತು ಹೀಗೀಗೆ ಅಂದರೆ ಆ ಮಹಾಶಯ ‘ಎಲ್ಲಿ ಉಗುರು ತೋರ್ಸಿ’ ಎನ್ನುವುದೇ?

    ಅರೆ ಇವ ಯಾ ಸೀಮೆ ಡಾಕ್ಟರಪ್ಪಾ .ಕಣ್ಣಿಗೆ ಕಂಬಳಿಹುಳು ಬಿದ್ದು ನೋವು ತಡೆಯುವುದಕ್ಕಾಗದೆ ಒದ್ದಾಡುವಾಗ ಉಗುರು ಕೇಳ್ತಿದ್ದರಲ್ಲಾ ಅನಿಸಿದ್ರೂ ಸಾಮಾನ್ಯ ಮನ್ಷಂಗೂ ವೈದ್ಯ ಮಹಾಶಯನಿಗೂ ಯತ್ವಾಸ ಇರೋದಿಲ್ವೇ ಎನಿಸಿ ಕೈ ಕೊಟ್ಟೆ.

    ಕೈ ಹಿಡಿದವರು ನನ್ನ ನೀಳ ನೇಲ್ ಪೈಂಟ್ ಮಾಡಿದ ಉಗುರುಗಳನ್ನು ನೋಡ್ತಾ(ಡಾಕ್ಟರು ಹೇಗಿದ್ರೋ.ನೋಡ್ಲಿಕ್ಕೂ ಆಗಲಿಲ್ಲ)
    ‘ನೋಡಿ..ಉಗುರು ಚಿಕ್ಕದಾಗಿ ಕತ್ತರಿಸ್ಕೋಬೇಕಮ್ಮಾ.ಇಲ್ಲಾಂದ್ರೆ ನೋಡಿ ಹೀಗೇ ಆಗುವುದು’ಅಂದರು.

    ಅರೆರೆ..

    ಉಗುರು ಕತ್ತರಿಸುವುದಕ್ಕೂ ಕಂಬಳಿಹುಳು ಕಣ್ಣಿಗೆ ಬೀಳುವುದಕ್ಕೂ ಎತ್ತಣಿದ್ದೆಂತಣ ಸಂಬಂಧವಯ್ಯಾ ಎನ್ನುವ ಅನುಮಾನಕ್ಕೆ ತಲೆಯಲ್ಲಿ ಕಂಬಳಿಹುಳು ಓಡಾಡಲಾರಂಭಿಸಿದವು.

    ‘ಅಲಾ ಡಾಕ್ಟರೇ..ಕಂಬಳಿಹುಳು…’

    ಮಾತನ್ನು ಶುರುವಲ್ಲೇ ತಡೆದು ‘ನಂಗೆಲ್ಲಾ ಗೊತ್ತಮ್ಮ.ಡೋಂಟ್ ವರಿ.ಯೂ ವಿಲ್ ಬಿ ಆಲ್ರೈಟ್’ ಅಂತಂದು ಉಗುರು ‌ಕತ್ತರಿಸುವುದನ್ನು ಮತ್ತೊಮ್ಮೆ ನೆನಪಿಸಿ ‘ನೋಡಿ ಈ ಮಾತ್ರೆ ಬರಕೊಡ್ತೀನಿ.ದಿವಸ ಮೂರು ಸರ್ತಿ‌ ಮೂರು ದಿನ ತಗೋಳಿ.ಹಾಗೇ ಇದೊಂದು ಹೆಲ್ತ್ ಡ್ರಿಂಕ್ ಬರೀತೀನಿ.ದೇಹದಲ್ಲಿ ಪೌಷ್ಟಿಕಾಂಶದ ಕೊರತೆಯಿಂದಾಗಿ ಕೂಡ ಹೀಗಾಗುವ ಸಾಧ್ಯತೆ ಇದೆ”ಅಂದರು.

    ದೇವರೇ.

    ಮೂರ್ಛೆ ತಪ್ಪುವುದೊಂದು ಬಾಕಿ.ಇನ್ನೂ ಮೂರ್ಛೆ ತಪ್ಪಿದರೆ ಇನ್ನಾವ ಮಾತ್ರೆ ಬರೆಯುತ್ತಾರೋ‌ಎಂಬ ದಿಗಿಲಿಗೆ ಪ್ರಜ್ಞೆಯನ್ನು ಕಷ್ಟಪಟ್ಟು ಇರಿಸಿಕೊಂಡು ಗೋಡೆ ಹಿಡಿದು ಆಚೆ ಬಂದೆ.
    ಅಲ್ಲೇ ಆಚೆ ಇದ್ದ ಯಜಮಾನರು ಮಾತ್ರೆ ಚೀಟಿ ಪಡೆದು ಮೆಡಿಕಲ್ ಸ್ಟೋರಿಂದ ವಾಪಸು ಬಂದವರು ಮುಖ ದುಮ್ಮಿಸಿ ಗುರುಗಟ್ಟತೊಡಗಿದರು.ಅದ್ಯಾವ ಸೀಮೆ ಹೆಲ್ತ್ ಡ್ರಿಂಕೇ ಅದು ಸಾವಿರದಿನ್ನೂರು ರೂಪಾಯಿ ಅಂದ್ರು.ನನ್ನ ಎದೆಯೊಡೆದು ಉಳಿದೊಂದು ಕಣ್ಣೂ ಕಾಣದಾದಂಗೆ ಅನಿಸತೊಡಗಿತು.

    ಮನೆ ತಲುಪಿದೊಡನೆ ಯಜಮಾನರು’ಇಕಾ ಮಾತ್ರೆ.ಮಲಕ್ಕಂಡೆ ಕಾಲ ಕಳಿಬೇಡ’ಅಂದರು.

    ‘ಮದ್ದು ಕೈಗೆ ಬಂದೊಡನೆ ಎದ್ದು‌ಕೂರಬೇಕು’
    ಎನ್ನುವ ನ್ಯೂಟನ್ ಮೂರನೇ ನಿಯಮವನ್ನು ನನ್ನ ‌ಮೇಲೆ ಬಲವಂತವಾಗಿ ಹೇರಿದ ಗಂಡನ‌ ಮೇಲೆ ಇನ್ನಿಲ್ಲದ ಕೋಪ ಬಂದಿತಾದರೂ ಮತ್ತದೆ ಬಡವ ದವಡೆ ನೆನಪಾಗಿ ಸುಮ್ಮನಾದೆ.

    ಆದರೆ

    ಹೃದಯಕ್ಕೆ ವಿಪರೀತ ಘಾಸಿಯಾಗಿ ಕಣ್ಣೀರು ಇಳಿಯಲಾರಂಬಿಸಿತು.
    ಈ ಹಾಳು ಕಂಬಳಿಹುಳುವಿಂದಾಗಿ ಎಂತೆಂಥ ಮಾತು ಕೇಳಬೇಕಾಯ್ತಪ್ಪಾ ಎಂದುಕೊಂಡು ನೋವಿನ ಮದ್ದು ಕುಡಿದು ಮಲಗಿಬಿಟ್ಟೆ.
    ಮಾತ್ರೆಯ ಪ್ರಭಾವಕ್ಕೆ ಒಂದೆರಡು ಘಂಟೆ ಅಮಲಿನಂಥ ನಿದ್ದೆ ಬಂದರೂ ಎಚ್ಚರದೊಡನೇ ಮೊದಲಿಗಿಂತಲೂ ತೀವ್ರವಾದ ನೋವಾಗಿ ಮುಂದಿನ ಗತಿಯೇನಪ್ಪಾ ಅಂತ ಭಯಕ್ಕೆ ಅಳು ಉಕ್ಕಿ ಬಂತು.
    ಬೆಳಿಗ್ಗೆ ಎಳಲಾಗದೇ ಮಲಗೇ ಇದ್ದಾಗ ‘ಕ್ಯಾಮೆ ಯಾರ ನೋಡೋವ್ರೋ’
    ಅಂದ ಗಂಡನ ಮಾತು ಕೇಳಿ ಯಃಕಶ್ಚಿತ್ ಈ ಹುಳುಗಳಿಂದಾಗಿ ಸ್ವಾಭಿಮಾನಿಯಾದ ನನಗೆ ಏನೆಲ್ಲಾ ‌ಮಾತು ಕೇಳಬೇಕಾಗಿ ಬಂತು ಅಂತ ಖುದ್ದು ಕ್ರುದ್ದಳಾಗಿ ಹೋದೆ.

    ಒಂದು ಕಂಬಳಿಹುಳು ಹಿಡಿದು ಇವನ ಕಣ್ಣಿಗೆ ತುರುಕಿ ಈಗ ಮಾಡು ಕ್ಯಾಮೆ ಎನ್ನಬೇಕು ಅಂತಲೂ ಅನಿಸಿತಾದರೂ ಅಸಹಾಯಕತೆಯಲ್ಲಿ ಹಾಗೇ ಮಲಗಿದೆ.ಕಣ್ಣಿನ ನೋವು ಕ್ಷಣ ಕ್ಷಣ ಕ್ಕೂ ಹೆಚ್ಚಿ ಬೆಳಕಿನ ಒಂದು ಕಣವನ್ನೂ ಎದುರಿಸಲಾಗದೆ ಕಿರುತೋಡಿನಂತೆ ನೀರು ಹರಿಯಲಾರಂಬಿಸಿದಾಗ ಭಯ ಆರಂಭವಾಯಿತು.

    ಅದೇ ಸಮಯಕ್ಕೆ ಫೋನು ಬಂದು ಗೋಡೆ ಹಿಡಿದು ಸಾವರಿಸಿಕೊಂಡು ಫೋನ್ ರಿಸೀವ್ ಮಾಡಿದರೆ ಅಮ್ಮ.!

    ಆ ದೇವರಿಗೂ ಗೊತ್ತಾಗುತ್ತೆ.

    ಯಾವ್ಯಾವ ಸಂದರ್ಭದಲ್ಲಿ ಅಮ್ಮನ ಫೋನು ಬರುವಂತೆ ಮಾಡಬೇಕು ಅಂತ.ಅಮ್ಮನ ಧ್ವನಿ ಕೇಳಿದೊಡನೆ ಇನ್ನಿಲ್ಲದಂತೆ ದುಃಖ ಉಮ್ಮಳಿಸಿ
    ” ಅಮ್ಮಾ ಹೀಗೀಗೆ ‘ಅಂದೆ.
    ಅಮ್ಮ ಮಾಮೂಲಿನಂತೆ ಕಂಬಳಿ ಹುಳಕ್ಕೆ ಹಿಡಿಶಾಪ ಹಾಕಿ ಹೋಗಿ ಹರಕೆ ಮಾಡ್ಕೋ ಎಂದರು.

    ಮೊದಲೇ‌ ನೋವು.ಜೊತೆಗೆ ಉಪದೇಶ.ಮೈ ಉರಿದು ಸರಿ ಫೋನಿಡ್ತೀನಿ ಅಂದೆ.

    ಹೆಣ್ಮಕ್ಕಳಿಗೆ ಅಮ್ಮ ಒಬ್ಬಳೇ ತಾನೇ, ನೋವು ಸುರಿಯಲು ಇರುವ ಏಕೈಕ ತಗ್ಗು.

    ಆಗ ಅಮ್ಮ ‘ಈಗ ಹಾಸನಕ್ಕೆ ಹೋಗ್ತಿದ್ದಿವಿ.ಹೊರಟಿರು.ಆಸ್ಪತ್ರೆ ಗೆ ಹೋಗಿಬರೋಣ’ ಎಂದಾಗ ‘ಎಂತ ಮಣ್ಣು ಹೊರಡದು ಅಮ್ಮ. ನನ್ನ ಮೂತಿ ಹೆಂಗಿದೆ ಅಂತ ನೋಡ್ಕೊಂಡು ಎರಡು ದಿನ ಆಯ್ತು.
    ನೀವೊಂದ್ಸರ್ತಿ ಬನ್ನಿ’ಅಂದೆ.

    ಅಪ್ಪ ಅಮ್ಮ ನೊಡನೆ ಮೊದಲು ಹಾಸನದ ಕಣ್ಣಿನ ಡಾಕ್ಟರ್ ಹತ್ರ ಹೋಗಿ ತೋರಿಸಿದ ಕೂಡಲೇ ಅವರು ಸೂಕ್ಷ್ಮ ಇಕ್ಕಳದಿಂದ ಕಣ್ಣು ಗುಳ್ಳೆಗೆ ಹೊಕ್ಕಿದ್ದ ಎರಡು ಮುಳ್ಳಿನಂತ ಕೂದಲನ್ನು ‌ಹೊರತೆಗೆದು ಎರಡು ಡ್ರಾಪ್ ಔಷಧಿ ಹಾಕಿ ಎರಡು ನಿಮಿಷ ಕೂತಿದ್ದು ಹೋಗಿ ಎಂದರು.
    ಒಂದೇ ಘಳಿಗೆಗೆ ಜಗವೆಲ್ಲ ಬದಲಾದ ಹಾಗೆ‌!ಉರಿ ನೋವು ಕೆರೆತ ಕ್ಷಣಾರ್ಧದಲ್ಲಿ ಮರೆಯಾಯಿತು.ತೋಡಿನಲ್ಲಿ ಹರಿಯುತ್ತಿದ್ದ ಜಲಜಲ ಸಲಿಲ ನಲ್ಲಿ ನಿಲ್ಲಿಸಿದಂತೆ ನಿಂತು ಹೋಯಿತು.

    ಆ ಡಾಕ್ಟರು ನನ್ನಯ ಪಾಲಿಗೆ ಸಾಕ್ಷಾತ್ ದೇವರಂತೆ ಕಂಡರು.
    ‘ಕಣ್ಣು‌ ಕೊಟ್ಟ ದೇವರು ನೀವು’ ಎಂದು ಅವರ ಕೈಹಿಡಿದು ನಮಸ್ಕರಿಸಿದೆ.
    ಅಪ್ಪ ಅಮ್ಮನ ಶಾಪಿಂಗ್ ಮುಗಿಸಿ ಮನೆಗೆ ಬಂದರೆ‌ ಮನೆ ತುಂಬಾ ಹಮ್ಲಾ ವಾಸನೆ.

    ಇದೇನು ಹೊಸ ಆವಾಂತರ ಎನ್ನುವಾಗ ಯಜಮಾನರು ‘ಕಂಬಳಿ ಹುಳ ಕ್ಕೆ ಪಾಯಿಸನ್ ಸ್ಪ್ರೆ ಮಾಡಿದ್ದೇನೆ.ಎರಡು ದಿನ ನೀ ತವರಿಗೆ ಹೋಗಿ ಬಾ.ನಾ ಹೇಗೂ ತೋಟದಲ್ಲಿರ್ತೀನಿ.ಸಂಜೆ ಹೊರಗಿರ್ತೀನಿ’
    ಅಂದರು.

    ಅಯ್ಯೋ ನನ್ನ ಮುದ್ದು ಪಾಪದ ಕಂಬಳಿಹುಳಗಳೇ ಅಂತ ತಕ್ಷಣಕ್ಕೆ ಅನಿಸಿತಾದರೂ ಕಣ್ಣು ಕಂಬಳಿಹುಳುಗಳಿಗಿಂತ ಮುಖ್ಯ ಎನಿಸಿ ಅಚಾನಕ್ಕು ಮಂಜೂರಾದ ರಜೆಯಿಂದಾಗಿ ಈಗಷ್ಟೇ ಸರಿಯಾದ ಕಣ್ಣಲ್ಲಿ ಅವರಿಗೊಂದು ಥ್ಯಾಂಕ್ಸ್ ಹೇಳಿ ತವರಿಗೆ ಹೋದೆ.

    ನಾಕಾರು ದಿನ ಕಳೆದು ಕಂಬಳಿಹುಳುವಿನ ಸಹವಾಸ ತಪ್ಪಿ
    ಅವುಗಳಿರುವನ್ನು ಮರೆತು ಇನ್ನೇನು ಮನೆಯಲ್ಲೂ ಅವು ಇರಲಾರವು ಎನಿಸಿ ಮನೆಗೆ ಬಂದೆ.

    ಬಂದವಳು ಮೊದಲಿಗೆ ಪೋನನ್ನು ನೆಟ್ವರ್ಕಿಗಾಗಿ‌ ಅಟ್ಟಕ್ಕೆ ಇಡಲು ಹೋದವಳು ಮೇಲೆ ಸೂರು ಹಿಡಿವಾಗ ಮೆತ್ತಗೆ ಗುಳುಗುಳುವಾದಂತೆನಿಸಿ ನೋಡಿದರೆ ಕೂದಲೆಳೆಯಂತ ಕಂಬಳಿಹುಳುಗಳ ಗುಂಪು ಸತ್ತು ಮತ್ತೆ ಹುಟ್ಟಿಯಾಗಿತ್ತು.!!

    ಅಮೃತ ಕುಡಿದು ಚಿರಂಜೀವಿಗಳಾದ ದೇವತೆಗಳು ನೆನಪಾದರು.
    ಇವು ವಿಷವೂಡಿಸಿಕೊಂಡೂ ಹೊಸಜನ್ಮವೆತ್ತಿದ ಯಃಕಶ್ಚಿತ್ ಕಂಬಳಿಹುಳುಗಳು.ಮನುಷ್ಯ ತಾನೇ ಮಿಗಿಲು ಎಂದುಕೊಂಡಾಗೆಲ್ಲ ಬದುಕು ಇದಲ್ಲ ಇದಲ್ಲವೆನ್ನುತ್ತದೆ. ನಾವು ಮಾತ್ರ ಕೇಳಿಸಿಕೊಳ್ಳಬೇಕಾದ ಒಳಗಿವಿಗೆ ಸೀಸ ಸುರಿದು ಬಿಗಿ‌ಮಾಡಿಕೊಂಡಿರುತ್ತೇವೆ.
    ಜೀವ ಕೊಡಲಾಗದ ನಾವು ತೆಗೆಯುವಾಗ ಮಾತ್ರ ವಿಪರೀತ ವೇಗ ತೋರಿಸುವ ಕುರಿತು ನಾಚಿಕೆಯೆನಿಸಿತಾದರೂ ಪಾಪದ ಜೀವಿಗಳು
    ಬಿಡೆನು ನಿನ್ನ ಮಾಡು..ಓಹೋ ಅದುವೆ ನಮ್ಮ ಗೂಡು
    ಅಂತಂದಿದ್ದು ಮಾತ್ರ ನನ್ನ ಗೆಲುವು ಅಂದುಕೊಂಡೆ.

    ನೆಟ್ವರ್ಕ್ ಸಿಕ್ಕಿದೊಡನೇ ಫೋನೂ ಪ್ರಾಯ ಪಡೆದುಕೊಂಡು ಕಿಣಿಕಿಣಿಗುಟ್ಟಿ,

    ಆ ಕಡೆಯಿಂದ ಅಮ್ಮ..

    ‘ಪೂರ್ತೀ ಸತ್ತೇ ಹೋಗಿರಬೇಕು ಅಲ್ವಾ.ಸದ್ಯ ‌ಕಾಟ ತಪ್ತು’
    ಅಂದಳು.

    ‘ಹೋದೆಯಾ ಅಂದರೆ ಇಲ್ಲೇ ಸಂದಿಲಿದೀವಿ ಅಂದ್ವು‌ ಕಣಮ್ಮಾ’
    ಅಂದೆ ಖುಷಿಯಿಂದ.ಅಮ್ಮ ಅರ್ಥವಾಗದೆ ಏನಂದೇ ಅಂದರು.

    ಇದಾಗಿ ಎಷ್ಟೋ ವರ್ಷಗಳ ನಂತರವೂ ಪ್ರತಿ ಮಳೆಗಾಲದಲ್ಲೂ
    ಕಂಬಳಿಹುಳುವಿನಿಂದ ಕಣ್ಣು ಕಾಪಾಡಿಕೊಳ್ಳುವ ಅದೇ ಎಚ್ಚರದಿಂದ
    ಅವುಗಳ ಜೀವನ ಚಕ್ರದ ಕುರಿತು ಗೂಗಲಿಸಿ ಜೀವಹಾನಿಯಾಗದಂತೆ ಏನಾದರೂ ಹೊಸ ರೆಮಿಡಿ ಸಿಗಬಹುದೇ ಅಂತ ಹುಡುಕುವುದು ಈಚಿನ
    ವರ್ಷಗಳಲ್ಲಿ ಕಾಯಮ್ಮು ಅಭ್ಯಾಸ ಆಗಿ ಹೋಗಿದೆ.

    ಅಂದ ಹಾಗೇ..ನಿಮಗೇನಾದರೂ ಇದರ ಬಗ್ಗೆ ಗೊತ್ತಾ?

    ಈ ಬರಹದೊಂದಿಗೆ ಪ್ರಕಟವಾಗಿರುವ ಚಿತ್ರ ರಚಿಸಿದವರು ಕಿರಣ್ ಮಾಡಾಳು. ಅರಸೀಕರೆ ತಾಲೂಕು ಮಾಡಾಳು ಗ್ರಾಮದ ಕಿರಣ್ ಫೈನ್ ಆರ್ಟ್ಸ್ ಓದಿದ್ದಾರೆ.ಇಲ್ ಸ್ಟ್ರೇಷನ್, ವ್ಯಂಗ್ಯ ಚಿತ್ರ , ಕಂಪ್ಯೂಟರ್ ಗ್ರಾಫಿಕ್ಸ್ ಎಲ್ಲದರಲ್ಲೂ ಅವರಿಗೆ ಪರಿಣತಿ. ಆಧ್ಯಾತ್ಮ ಸಂಗತಿಗಳ ಬಗ್ಗೆ ವಿಶೇಷ ಪಾಂಡಿತ್ಯ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಲಾವಿದರಾಗಿ ದುಡಿದ ಅನುಭವ. ಪ್ರವಾಸ ಮತ್ತು ಅಧ್ಯಯನದಲ್ಲಿ ಆಸಕ್ತಿ.ಅವರ ಸಂಪರ್ಕ ಸಂಖ್ಯೆ 9964655156

    ಪೇಟೆ ಗರಿಷ್ಠದಲ್ಲಿದ್ದಾಗ Royalty ಕುಸಿತದಲ್ಲಿದ್ದಾಗ Loyalty

    ಷೇರುಪೇಟೆ ಸೆನ್ಸೆಕ್ಸ್‌ ಶುಕ್ರವಾರ 47 ಸಾವಿರದ ಗಡಿದಾಟಿ ಹೊಸ ದಾಖಲೆ ನಿರ್ಮಿಸಿದೆ. ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನ ಮಾರ್ಕೆಟ್‌ ಕ್ಯಾಪಿಟಲೈಸೇಷನ್‌ ರೂ.185 ಲಕ್ಷ ಕೋಟಿಯನ್ನು ತಲುಪಿದೆ. ಆದರೆ ಸುಮಾರು 138 ಕೋಟಿ ಜನಸಂಖ್ಯೆಯಿರುವ ದೇಶದಲ್ಲಿ ಕೇವಲ 5.81 ಕೋಟಿ ನೋಂದಾಯಿತ ಹೂಡಿಕೆದಾರರಿದ್ದಾರೆ. ಇದು ದೇಶದಲ್ಲಿ ಆರ್ಥಿಕ ಸಾಕ್ಷರತೆಗೆ ನೀಡಲಾಗುತ್ತಿರುವ ಪ್ರಾಶಸ್ತ್ಯವನ್ನು ಬಿಂಬಿಸುತ್ತದೆ. ನ್ಯಾಷನಲ್‌ ಸ್ಟಾಕ್‌ ಎಕ್ಸ್ ಚೇಂಜ್‌ ನ 1605 ಲಿಸ್ಟೆಡ್‌ ಕಂಪನಿಗಳ ವಿವರದಂತೆ ಸಣ್ಣ ಹೂಡಿಕೆದಾರರ ಹೂಡಿಕೆಯ ಪ್ರಮಾಣವು ರೂ.10.58 ಲಕ್ಷ ಕೋಟಿಯಷ್ಟಿದೆ. ಸುಮಾರು ರೂ.185 ಲಕ್ಷ ಕೋಟಿ ಮಾರ್ಕೆಟ್‌ ಕ್ಯಾಪ್‌ ಇರುವ ಪೇಟೆಯಲ್ಲಿ ಕೇವಲ ರೂ.10.58 ಲಕ್ಷ ಕೋಟಿ ಸಣ್ಣ ಹೂಡಿಕೆದಾರರ ಪಾಲು ಎಂಬುದು ನಿರಾಶಾದಾಯಕ ಸಂಗತಿ.

    ಇಂಟರ್‌ ನ್ಯಾಷನಲ್‌ ಕಾಂಪಿಟೇಟಿವ್‌ ಇಂಡೆಕ್ಸ್‌ ನಲ್ಲಿರುವ 141 ದೇಶಗಳಲ್ಲಿ ಭಾರತವು ಮಾರ್ಕೆಟ್‌ ಸೈಜ್‌ ನಲ್ಲಿ ಮೂರನೇ ಸ್ಥಾನದಲ್ಲಿರುವ ಅಂಶ ದೇಶದಲ್ಲಿರುವ ಬಳಕೆದಾರರು ಮತ್ತು ಜಾಗತಿಕ ಮಟ್ಟದಲ್ಲಿರುವ ಬೃಹತ್‌ ಕಂಪನಿಗಳನ್ನು, ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ಆದರೆ ಈ ಮಟ್ಟದ ಬಳಕೆದಾರರ ಭಂಡಾರವನ್ನು ದೇಶದ ಅರ್ಥಿಕತೆಯನ್ನು ಸದೃಢಗೊಳಿಸಲು ಸೂಕ್ತವಾಗಿ ಬಳಸಿಕೊಳ್ಳುವಲ್ಲಿ ನಿರ್ಲಕ್ಷ ತೋರಲಾಗುತ್ತಿದೆ ಎಂದೇ ಭಾವಿಸಬಹುದಾಗಿದೆ,

    ಸ್ಟಾಕ್‌ ಮಾರ್ಕೆಟ್‌ ನಲ್ಲಿ ಹೂಡಿಕೆಯು ದೀರ್ಘಕಾಲೀನವಾಗಿರಬೇಕೆಂಬುದರ ಪ್ರತಿಫಲವಾಗಿ ಹೂಡಿಕೆ ಮಾಡಿದ ಕಂಪನಿಗಳು ಕಾರ್ಪೊರೇಟ್‌ ಫಲಗಳ ಮೂಲಕ ಹೂಡಿಕೆದಾರರಿಗೆ ಹರ್ಷಗೊಳಿಸುವುದು ವಾಸ್ತವ ಸಂಗತಿಯಾಗಿದೆ. ಆಕರ್ಷಕ ಕಾರ್ಪೊರೇಟ್‌ ಫಲಗಳಾದ ಡಿವಿಡೆಂಡ್‌, ಬೋನಸ್‌ ಮುಂತಾದವುಗಳು ಲಭ್ಯವಾಗುವುದೆಂಬ ಕಾರಣವು ಹೂಡಿಕೆದಾರರಲ್ಲಿ ಭಾವನಾತ್ಮಕತೆಯ ವಿಧೇಯತೆ (Loyalty) ಬೆಸೆಯುತ್ತದೆ. ಇದು ಪರಸ್ಪರ ಬೆಳವಣಿಗೆಗೆ ಕಾರಣವಾಗುತ್ತದೆ. ಆದರೆ ಈಗಿನ ದಿನಗಳಲ್ಲಿ ಈ ಬಾಂಧವ್ಯದ ಬೆಸುಗೆ ಸಡಿಲಗೊಂಡು, ಕೇವಲ ವ್ಯವಹಾರಿಕಾತೆ ತಾಂಡವವಾಡುತ್ತಿರುವುದು ಸಾಂಘಿಕ ಶೈಲಿ ಜೀವನಕ್ಕೆ ವಿರುದ್ಧವಾಗಿದೆ. ಷೇರುಪೇಟೆಯಲ್ಲಿ ಕೆಲವು ಕಾರ್ಪೊರೇಟ್‌ ವಲಯದ ಹೂಡಿಕೆದಾರರ ನಡುವಳಿಕೆಗಳು Loyalty ಯನ್ನು ಹೊರದೂಡಿ Royalty ಆಕ್ರಮಿಸಿದಂತೆ ತೋರುತ್ತದೆ.

    1. ಕೈಗೆಟಕುವ ರೀತಿಯಲ್ಲಿ ಷೇರುಗಳು ದೊರೆತಾಗ ಅವುಗಳನ್ನ ಕಡೆಗಣಿಸಿ, ಬೆಲೆ ಏರಿಕೆಯಲ್ಲಿದ್ದಾಗ ಅವುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು ಹೂಡಿಕೆ ತತ್ವಕ್ಕೆ ವಿರುದ್ಧ. ಡಿವಿಡೆಂಡ್‌ ಗಳನ್ನು ಆದಾಯ ತೆರಿಗೆಯ ಜಾಲಕ್ಕೆ ಈ ವರ್ಷ ಸೇರಿಸಿರುವುದರಿಂದ ಅನೇಕ ಕಂಪನಿಗಳು ವಿತರಿಸಬಹುದಾದ ಡಿವಿಡೆಂಡ್‌ ಗಳಿಗೆ ಸೂಕ್ತ ಬೆಂಬಲ ದೊರೆಯುತ್ತಿಲ್ಲ.
    2. ಸ್ಟ್ರೈಡ್ಸ್‌ ಫಾರ್ಮ ಸೈನ್ಸ್‌ ಎಂದಿರುವ ಕಂಪನಿ 2013 ರಲ್ಲಿ ಸ್ಟ್ರೈಡ್ಸ್‌ ಶಾಸೂನ್‌ ಎಂದಿದ್ದು, ಆಗ ಪ್ರತಿ ಷೇರಿಗೆ ರೂ.500 ರಂತೆ ವಿಶೇಷ ಡಿವಿಡೆಂಡ್‌ ನ್ನು ಘೋಷಿಸಿತ್ತು. ಆ ಸಂದರ್ಭದಲ್ಲಿ ಕಂಪನಿಯು ತನ್ನ ಉತ್ಪನ್ನವನ್ನು ಮಾರಾಟಮಾಡಿ ಲಭ್ಯವಾದ ಹಣವನ್ನು ಈ ರೀತಿ ವಿಶೇಷವಾದ ಡಿವಿಡೆಂಡ್‌ ಎಂದು ಘೋಷಿಸಿ ವಿತರಿಸಿತು. ಆ ಸಮಯದಲ್ಲಿ ಷೇರಿನ ಬೆಲೆಯು ರೂ.1.000 ನ್ನು ದಾಟಿತ್ತು. 2014 ರಲ್ಲಿ ಷೇರಿನ ಬೆಲೆ ರೂ.340 ರವರೆಗೂ ಇಳಿಕೆ ಕಂಡಿತು. 2015 ರಲ್ಲಿ ಮತ್ತೆ ಪ್ರತಿ ಷೇರಿಗೆ ರೂ.105 ರಂತೆ ಡಿವಿಡೆಂಡ್‌ ಘೋಷಿಸಿ ವಿತರಿಸಿತು ಆ ಸಂದರ್ಭದಲ್ಲಿ ಷೇರಿನ ಬೆಲೆ ರೂ.1,400 ನ್ನು ದಾಟಿ ಗರಿಷ್ಠಕ್ಕೆ ಜಿಗಿದಿತ್ತು. 2019 ರಲ್ಲಿ ಷೇರಿನ ಬೆಲೆ ರೂ.290 ರ ಸಮೀಪಕ್ಕೆ ಕುಸಿದು ಈ ವರ್ಷ ರೂ.900 ರವರೆಗೂ ಏರಿಕೆ ಕಂಡಿದೆ. ಇದರ ತಾತ್ಪರ್ಯ ಆಕರ್ಷಕ ಡಿವಿಡೆಂಡ್‌ ವಿತರಣೆಯು ಕಂಪನಿಯ ಷೇರಿನ ಬೆಲೆ ಕುಸಿತ ಕಂಡಾಗ ಉತ್ತಮ ವ್ಯಾಲ್ಯೂ ಪಿಕ್‌ ಆಗುತ್ತದೆ.
    3. ಮೆಜೆಸ್ಕೊ ಷೇರು ಪ್ರತಿ ಷೇರಿಗೆ ರೂ.974 ರಂತೆ ಡಿವಿಡೆಂಡ್‌ ನ್ನು ಘೋಷಿಸಿದೆ. ಷೇರಿನ ಬೆಲೆಯೂ ರೂ.970 ರಲ್ಲಿದೆ. ಲಾಭಾಂಶದ ಮೇಲೆ ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ ಎನ್ನುವ ವಿಶ್ಲೇಷಣೆಗಳು ಹೆಚ್ಚಾದ ಕಾರಣ ಪೇಟೆಯಲ್ಲಿ ಈ ಷೇರಿಗೆ ಹೆಚ್ಚಿನ ಬೆಂಬಲ ದೊರಕುತ್ತಿಲ್ಲವಾದರೂ ಈ ಷೇರಿನ ಬೆಲೆ ವಾರ್ಷಿಕ ಗರಿಷ್ಠಕ್ಕೆ ಜಿಗಿದು ಲಾಭದ ನಗದೀಕರಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಕಂಪನಿಯಲ್ಲಿ ವಿದೇಶಿ ವಿತ್ತೀಯ ಸಂಸ್ಥೆಗಳು ಜೂನ್‌ ಅಂತ್ಯದ ತ್ರೈಮಾಸಿಕದಲ್ಲಿ ಶೇ.13.05 ರಷ್ಟಿದ್ದು, ಸೆಪ್ಟೆಂಬರ್‌ ಅಂತ್ಯದ ತ್ರೈಮಾಸಿಕದಲ್ಲಿ ಅದು ಶೇ.15.20 ಕ್ಕೆ ಏರಿಕೆ ಕಂಡಿದೆ. ಶೇ.4.1 ರಷ್ಠು ಪ್ರವರ್ತಕರ ಭಾಗಿತ್ವವು ಪ್ಲೆಡ್ಜ್‌ ಆಗಿದ್ದರೂ ಸಹ ಈ ಪ್ರಮಾಣದ ಡಿವಿಡೆಂಡ್‌ ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದೇ ಭಾವಿಸಬಹುದಲ್ಲವೆ.
    4. ಕೋಟಕ್‌ ಮಹೀಂದ್ರ ಬ್ಯಾಂಕ್‌ ಷೇರಿನ ರೂ.1,950 .ಈ ಕಂಪನಿಯು ಪ್ರತಿ ಷೇರಿಗೆ ರೂ.0.80 ರಂತೆ ಡಿವಿಡೆಂಡ್‌ ನ್ನು ನೀಡುತ್ತಿದೆ. ಕಳೆದ ವರ್ಷ ಆರ್‌ ಬಿ ಐ ನಿರ್ದೇಶನದ ಕಾರಣ ಡಿವಿಡೆಂಡ್‌ ನೀಡಲಿಲ್ಲ. ಇಲ್ಲಿ ಆದಾಯ ತೆರಿಗೆಯ ಪ್ರಶ್ನೆಯೇ ಇಲ್ಲ.
    5. ಎಂ ಆರ್‌ ಎಫ್‌ ಕಂಪನಿ ಹಿಂದಿನ ವರ್ಷ ಪ್ರತಿ ಷೇರಿಗೆ ರೂ.100 ‌ ಡಿವಿಡೆಂಡ್ ವಿತರಿಸಿದೆ. ಈ ವರ್ಷ ಪ್ರತಿ ಷೇರಿಗೆ ರೂ.30 ರ ಡಿವಿಡೆಂಡ್‌ ನ್ನು ಮಧ್ಯಂತರವಾಗಿ ವಿತರಿಸಿದ ಈ ಷೇರಿನ ಬೆಲೆ ರೂ.77,600 ರಲ್ಲಿದ್ದು ಶುಕ್ರವಾರ ರೂ.299 ರ ಏರಿಕೆ ಕಂಡಿದೆ.
    6. ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರಿನ ಬೆಲೆ ರೂ.1,992 ರಲ್ಲಿದೆ. ಈ ಕಂಪನಿ ಇತ್ತೀಚೆಗೆ ಹಕ್ಕಿನ ಷೇರು ವಿತರಿಸಿದೆ. ಅನೇಕ ವಿದೇಶಿ ಕಂಪನಿಗಳಿಗೆ ತನ್ನ ಅಂಗ ಸಂಸ್ಥೆಗಳ ಭಾಗಿತ್ವವನ್ನು ವಿತರಿಸುವ ಮೂಲಕ ಸಂಪನ್ಮೂಲ ಸಂಗ್ರಹಿಸಿದ ಹಣದ ಮೂಲಕ ಕಂಪನಿಯು ಸಾಲ ಮುಕ್ತವಾಗಲು ಪ್ರಯತ್ನಿಸಿದೆ. ಈ ಕಂಪನಿ ಹಿಂದಿನ ವರ್ಷ ಪ್ರತಿ ಷೇರಿಗೆ ರೂ.6.50 ಯಂತೆ ಡಿವಿಡೆಂಡ್‌ ವಿತರಿಸಿದೆ.
    7. ಯೆಸ್‌ ಬ್ಯಾಂಕ್‌ ಹಿಂದಿನ ವರ್ಷದಲ್ಲಿ ಎದುರಿಸಿದ ಆರ್ಥಿಕ ಒತ್ತಡದಿಂದ ಬ್ಯಾಂಕ್‌ ನ್ನು ಪಾರುಮಾಡಲು ಶೇ.75 ರಷ್ಟು ಷೇರುಗಳನ್ನು ಚಲಾವಣೆಯಿಂದ ಸ್ಥಗಿತಗೊಳಿಸಿ, ರೂ.10 ಲಕ್ಷ ಮುಖಬೆಲೆಯ ಬಾಂಡ್‌ ಗಳನ್ನು ಶೂನ್ಯಗೊಳಿಸದೆ, ಅಲ್ಲದೆ ರೂ.12 ರಂತೆ ಹಕ್ಕಿನ ಷೇರು ವಿತರಿಸಿದೆ. ಸಧ್ಯ ಷೇರಿನ ಬೆಲೆ ರೂ.18 ರ ಸಮೀಪವಿದೆ. ಹಿಂದಿನ ತ್ರೈಮಾಸಿಕದ ಫಲಿತಾಂಶದ ನಂತರ ಮುಂದಿನ ದಿನಗಳಲ್ಲಿ ಉತ್ತಮ ಸಾಧನೆಯ ಆಶ್ವಾಸನೆ, ನಂಬಿಕೆಯನ್ನು ಆಡಳಿತ ಮಂಡಳಿ ತಿಳಿಸಿದೆ. ಸಧ್ಯಕ್ಕಂತೂ ಆದಾಯ ತೆರಿಗೆಯ ಚಿಂತೆಯಿಲ್ಲ.
    8. ಬಜಾಜ್‌ ಫೈನಾನ್ಸ್‌ ಲಿಮಿಟೆಡ್ ಕಂಪನಿಯು ಸೆಪ್ಟೆಂಬರ್‌ ತಿಂಗಳ ಅಂತ್ಯದ ಸಾಧನೆಯು ತೃಪ್ತಿಕರವಾಗಿಲ್ಲ ಎಂಬ ಕಾರಣಕ್ಕಾಗಿ ರೂ.3,100 ರೂಪಾಯಿಗಳವರೆಗೂ ಅಕ್ಟೋಬರ್‌ ಮೂರನೇ ವಾರದಲ್ಲಿ ಕುಸಿದಿದ್ದಂತಹ ಷೇರಿನ ಬೆಲೆ ಈ ವಾರದಲ್ಲಿ ರೂ.5,300 ನ್ನು ತಲುಪಿದೆ. ಅಂದರೆ ಕೇವಲ ಎರಡೇ ತಿಂಗಳಲ್ಲಿ ಶೇ.60 ಕ್ಕೂ ಹೆಚ್ಚಿನ ಏರಿಕೆಯನ್ನು ಕಂಡಿದೆ. NBFC ಗಳಿಂದ ಡಿವಿಡೆಂಡ್‌ ಘೋಷಣೆ ಈ ವರ್ಷ ಅನುಮಾನಾಸ್ಫದವಾಗಿರುವಾಗ ಈ ರೀತಿಯ ಏರಿಳಿತಗಳು ಹೂಡಿಕೆದಾರರಿಗೆ ಲಾಭದ ನಗದೀಕರಣಕ್ಕೆ ಅಪೂರ್ವ ಅವಕಾಶ ಒದಗಿಸುತ್ತವೆಯಲ್ಲವೇ?

    ಈ ಎಲ್ಲಾ ಅಂಶಗಳು ಆರ್ಥಿಕ ಸಾಕ್ಷರತೆಯ ಅವಶ್ಯಕತೆಯನ್ನು ಎತ್ತಿ ಹಿಡಿಯುತ್ತದೆ. ಒಟ್ಟಾರೆಯಾಗಿ ಷೇರುಪೇಟೆಗಳು ಗರಿಷ್ಠದಲ್ಲಿದ್ದಾಗ ರಾಯಲ್ಟಿಗೇ ಹೆಚ್ಚಿನ ಆದ್ಯತೆ, ಕುಸಿತದಲ್ಲಿದ್ದಾಗ ಲಾಯಲ್ಟಿಗೆ ಪ್ರಾಮುಖ್ಯತೆ ಕೊಡುವುದು ಸರಿಯೆನಿಸುತ್ತದೆ.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು

    ಜವಾಬ್ದಾರಿ ಮತ್ತು ಉತ್ತರದಾಯಿತ್ವ

    ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು ಮತ್ತು ಗಾದೆಗಳು ಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟುಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.

    ಪರರ ಕಷ್ಟಮಂ ಸುಖಿ ಅರಿಯನ್ – ಕಷ್ಟ ಸುಖಗಳ  ಪರಾಮರ್ಶೆ ಮಾಡುವಂತಹ  ವಾಕ್ಯವಿದು. ದೇವರಾಜ ಕವಿಯ ‘ರಾಜಾವಳಿ ಕಥಾಸಾರ’ ದಲ್ಲಿ ಬರುತ್ತದೆ.  ಕೆಲವರಿಗೆ ತಾನೂ  ಚೆನ್ನಾಗಿದ್ದೇನೆ ಎಂದ ಮಾತ್ರಕ್ಕೆ ಎಲ್ಲರೂ ಚೆನ್ನಾಗಿ ಇರುತ್ತಾರೆ ಎಂಬ  ಹುಂಬ ನಂಬಿಕೆ ಇರುತ್ತದೆ.  ಸುಖವಿದ್ದಾಗ ಎಲ್ಲರು ಸುಖಿಗಳು ಎಂದು ತಿಳಿಯುವವನು ಕಷ್ಟ  ಎಂದಾಗ ಆಚೆ ತಿರುಗಿ ಕೂಡ  ನೋಡುವುದಿಲ್ಲ. ಇದೊಂದು ವೈರುಧ್ಯ ಹೌದು!.

    ಒಮ್ಮೆ ನದಿ ದಡದಲ್ಲಿ ವ್ಯಕ್ತಿಯೊಬ್ಬ ನಾಮ ಹಾಕಿಕೊಳ್ಳುತ್ತಿರುತ್ತಾನೆ.  ಆಚೆ ದಡದಲ್ಲಿರುವ ಇನ್ನೊಬ್ಬನ್ನನ್ನು ಬೇಗ ಬರುವಂತೆ  ಕೂಗುತ್ತಾನೆ. ಈ ಭಾಗದ ದಡದಲ್ಲಿದ್ದ ವ್ಯಕ್ತಿ ಗಾಬರಿಯಿಂದ ಏನಾಯ್ತು ಅಂಥ ನೀರನ್ನು ಹಾದು  ತರಾತುರಿಯಿಂದ ಹೋದರೆ ನಾಮ ಹಾಕಿ ಕೊಳ್ಳುತ್ತಿದ್ದ ವ್ಯಕ್ತಿ   “ನನ್ನ ಯಾವ ಭಾಗದ ನಾಮ ಚೆನ್ನಾಗಿದೆ ಹೇಳು” ಎಂದು ಕೇಳುತ್ತಾನೆ. ಗಾಬರಿಗೊಂಡು ಆತುರದಿಂದ  ದಡ ದಾಟಿ ಹೋದ ವ್ಯಕ್ತಿಗೆ ನಿರಾಶೆಯಾಗುತ್ತದೆ. ಅಷ್ಟೇನು ಮಹತ್ವವಲ್ಲದ   ಕಾರಣಕ್ಕೆ ತನ್ನ ಸಮಯ ಮತ್ತು ಶ್ರಮವನ್ನು   ವ್ಯರ್ಥ ಮಾಡಿಕೊಂಡಂತಾಗುತ್ತದೆ.  

    ಫ್ರಾನ್ಸಿನ ಮಹಾಕ್ರಾಂತಿಯಲ್ಲಿ ಬರುವ ‘ರೊಟ್ಟಿ ಪ್ರಕರಣ’ವನ್ನು ಇಲ್ಲಿ ಉದಾಹರಿಸಬಹುದು . ಹಸಿವಿನಿಂದ ಕಂಗಾಲಾಗಿದ್ದ ಪ್ರಜೆಗಳು ಅತ್ಯಂತ ವಿಲಾಸಿ ಜೀವನದಲ್ಲಿದ್ದ ರಾಣಿ  ಆ್ಯಂಟನಿಟೆ  ಬಳಿ “ತಿನ್ನಲು  ರೊಟ್ಟಿಯಿಲ್ಲ”  ಎಂದು  ಕೇಳಿದರೆ ಆಕೆ  “ರೊಟ್ಟಿಯಿಲ್ಲದಿದ್ದರೆ ಕೇಕ್ ತೆಗೆದುಕೊಂಡು ತಿನ್ನಿ” ಎಂದಿದ್ದಳಂತೆ.  ಸಿರಿಗರ ಬಡಿದವರು ಹಾಗೆನೇ ಅಲ್ವೇ!.

    ಹೊಟ್ಟೆ ತುಂಬಿದವನಿಗೆ ಹಸಿವಿನ ಸಂಕಟ ತಿಳಿಯದು. ಬೇಂದ್ರೆಯವರ “ಹಸಿದವನೆ ಹಸಿವೆಯ ಶೂಲಿ” ಎಂಬ  ಮಾತುಗಳು ಇಲ್ಲಿ ನೆನಪಿಗೆ ಬರುತ್ತವೆ.  ತಾವು ಅನುಭವಿಸಿದಾಗ   ಮಾತ್ರ  ಆ ಕಷ್ಟದ ತೀವ್ರತೆಯನ್ನು ಕೆಲವರು ಅರಿಯುತ್ತಾರೆ,  ಆದರೆ ಸ್ಪಂದಿಸಲು ಮರೆಯುತ್ತಾರೆ. 

    ಇನ್ನೊಂದು  ಪ್ರಸಂಗದಲ್ಲಿ  “ರೋಮ್ ನಗರವೇ ಹೊತ್ತಿ ಉರಿಯುತ್ತಿರುವ ಸಂದರ್ಭದಲ್ಲಿ  ನಿರೋ ಪಿಟೀಲು ಬಾರಿಸುತ್ತಿದ್ದ” ಎಂಬ ವಿಚಾರವೂ ಎಲ್ಲರಿಗೂ ತಿಳಿದಿರುವಂಥದ್ದೆ.  ‘ಬೆಕ್ಕಿಗೆ ಚೆಲ್ಲಾಟ   ಇಲಿಗೆ ಪ್ರಾಣ ಸಂಕಟ’ , ‘ಚಿಂತೆಯಿಲ್ಲದವನಿಗೆ ಸಂತೆಯಲ್ಲಿ ನಿದ್ರೆ’ ಎಂಬ ಗಾದೆಗಳನ್ನು ಸಂವಾದಿಯಾಗಿ ತೆಗೆದುಕೊಳ್ಳಬಹುದು ‘ಅಜ್ಜಿಗೆ ಅರಿವೆ ಚಿಂತೆಯಾದರೆ ಮಗಳಿಗೆ ಬೇರೆಯದೆ ಚಿಂತೆ’ ಎನ್ನುತ್ತಾರಲ್ಲ ಹಾಗೆ ! ಜವಾಬ್ದಾರಿ ಮತ್ತು ಉತ್ತರದಾಯಿತ್ವ  ಇಲ್ಲದೆ ಇರುವವರು ಹೀಗೆ  ವರ್ತಿಸುವುದು.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

    400 ವರ್ಷಗಳಿಗೊಮ್ಮೆ ಗುರು ಮತ್ತು ಶನಿ ಸನಿಹ ಸಮಾಗಮ; 21ರಂದು ಮಿಸ್ ಮಾಡದೆ ನೋಡಿ


    ಹರೋನಹಳ್ಳಿ ಸ್ವಾಮಿ

    ‘ಗಗನವನು ನೋಡು ಮೈ ನೀಲಿಗಟ್ಟುವವರೆಗೆ’ಎಂಬ ಕುವೆಂಪು ಅವರ ಈ ಮಾತು ಅವರು ಈ ಖಗೋಳ ಕಾಯಗಳ ಸಂಮ್ಮೋಹನಕ್ಕೆ ಒಳಗಾಗಿಯೇ ಬರೆದಿದ್ದಾರೆನ್ನಬಹುದು. ಪ್ರತಿದಿನವೂ ಒಂದಲ್ಲಾ ಒಂದು ವೈವಿಧ್ಯಮಯ ಚಟುವಟಿಕೆಗಳು ಈ ನಿಸರ್ಗ ನಮಗೆ ನೀಡಿರುವ ಮುಕ್ತ ಪ್ರಯೋಗಾಲಯವಾಗಿರುವ ಆಕಾಶದಲ್ಲಿ ಸಂಭವಿಸುತ್ತಿರುತ್ತವೆ.

    ಈಗಂತೂ ಚಂದದ ಸ್ವಚ್ಛ ಆಕಾಶ. ವೀಕ್ಷಿಸುವವರಿಗೆ ಸಂಭ್ರಮವೋ ಸಂಭ್ರಮ. ಮಿನುಗುವ ಬಿಳಿ, ನೀಲಿ, ಹಳದಿ, ಕೆಂಪು ಇತ್ಯಾದಿ ಬಣ್ಣಗಳ ನಕ್ಷತ್ರಗಳು, ಮಿನುಗದ ಆದರೆ ಹೊಳೆಯುವ ಬರಿಗಣ್ಣಿಗೆ ಕಾಣುತ್ತಿರುವ ಮಂಗಳ, ಗುರು ಮತ್ತು ಶನಿ ಗ್ರಹಗಳು.(ಈಗ ಕಾಣುತ್ತಿರುವ ಗ್ರಹಗಳಿವು) ಆಗಾಗ್ಗೆ ಮಿಂಚುತ್ತಾ ರಾಕೆಟ್‌ನಂತೆ ಭೂಮಿಗಪ್ಪಳಿಸುವ ಉಲ್ಕೆಗಳು ಮತ್ತು ಉಲ್ಕಾಪಾತ, ರಾಶಿ ನಕ್ಷತ್ರ ಪುಂಜಗಳು, ವಿವಿಧ ವಿನ್ಯಾಸಗಳ ನಕ್ಷತ್ರ ಪುಂಜಗಳು, ಒಂದೆಡೆ ಸ್ಥಿರವಾಗಿ ನಿಂತಂತಿರುವ ಧ್ರುವ ನಕ್ಷತ್ರ, ಸ್ವಲ್ಪ ಆಳವಾಗಿ ಗಮನಿಸಿದರೆ ಕಾಣುವ ನಮ್ಮ ಆಕಾಶಗಂಗೆ ಗೆಲಾಕ್ಸಿಯ ಸುರುಳಿಯೊಂದರ ಭಾಗಗಳು, ಆಗಾಗ ಕಾಣುವ ಚಂದ್ರಗ್ರಹಣ ಮತ್ತು ಸೂರ್ಯಗ್ರಹಣಗಳು, ಜೊತೆಗೆ ಆಗೊಮ್ಮೆ ಈಗೊಮ್ಮೆ ಸಂಭವಿಸುವ ಗ್ರಹಕೂಟಗಳು, ನೆಂಟರಂತೆ ಬಂದು ಹೋಗುವ ಧೂಮಕೇತುಗಳು ಹೀಗೆ ಪ್ರತಿಕ್ಷಣವೂ ರೋಚಕತೆಗಳಿಂದ ತುಂಬಿ ಆಕಾಶ ವೀಕ್ಷಕರಿಗೆ ಮತ್ತು ಖಗೋಳ ವಿಜ್ಞಾನಿಗಳಿಗೆ ಸಂಭ್ರಮವನ್ನು ನೀಡುತ್ತಲೇ ಇರುತ್ತದೆ ಈ ಖಗೋಳ ಪ್ರಯೋಗಶಾಲೆ. ಇಲ್ಲಿ ಎಲ್ಲವೂ ಉಚಿತ ಹಾಗೂ ಖಚಿತ ಆದರೆ ಅವುಗಳನ್ನು ನೋಡುವ, ಅರ್ಥಮಾಡಿಕೊಳ್ಳುವ ಹವ್ಯಾಸ ನಮ್ಮದಾಗಬೇಕಾಗಿದೆ.


    ಈಗಿನ ವಿಶೇಷ ಗುರು ಮತ್ತು ಶನಿಗ್ರಹಗಳ ಸನಿಹ ಸಮಾಗಮ.
    ನಮಗೆಲ್ಲಾ ತಿಳಿದಿರುವಂತೆ ನಮ್ಮ ಸೌರವ್ಯೂಹದಲ್ಲಿ ಸೂರ್ಯನ ಸುತ್ತ ವಿವಿಧ ಕಕ್ಷೆಗಳಲ್ಲಿ , ವಿವಿಧ ಅವಧಿಗಳಲ್ಲಿ ಗ್ರಹಗಳು ಸುತ್ತುತ್ತಿರುತ್ತವೆ. ಒಮ್ಮೊಮ್ಮೆ ಆಕಾಶದಲ್ಲಿ ಹಲವು ಗ್ರಹಗಳು ಒಟ್ಟಾಗಿ, ಜೊತೆಗಾರಂತೆ ಜೊತೆಯಾಗಿ ಕಾಣುವ ಅಪರೂಪದ ದೃಶ್ಯಗಳು ಘಟಿಸುತ್ತಿರುತ್ತವೆ. ಈಗ ಅಂತಹುದೇ ವಿಶೇಷ ಘಟನೆ ನಡೆಯುತ್ತಿದೆ.ನಮ್ಮ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ನೋಡಲು ಸಾಧ್ಯವಾಗುವಂತಹ ಈ ಘಟನೆ ಬರೀಗಣ್ಣಿಗೆ ಗೋಚರಿಸುತ್ತಿದೆ.

    ಅದೇ ದೈತ್ಯಗ್ರಹಗಳಾದ ಗುರು ಮತ್ತು ಶನಿಗ್ರಹಗಳು ಜೊತೆಯಲ್ಲಿಯೇ ಅಕ್ಕಪಕ್ಕದಲ್ಲಿಯೇ ಇರುವಂತೆ ಕಾಣುತ್ತಿರುವ ದೃಶ್ಯ. ಇದನ್ನು ಗುರು ಮತ್ತು ಶನಿಗ್ರಹಗಳ ಸನಿಹ ಸಮಾಗಮ ಎಂದು ಕರೆಯಲಾಗುತ್ತಿದ್ದು ಇದು 21 ನೇ ಶತಮಾನದ ದೊಡ್ಡ ವಿಶೇಷ ಘಟನೆಯೇ ಆಗಿದೆ. ಈ ಎರಡೂ ದೈತ್ಯ ಗ್ರಹಗಳು ಅತೀ ಸಮೀಪಕ್ಕೆ ಬಂದಿದ್ದು ಭೂಮಿಯಿಂದ ನೋಡುವ ವೀಕ್ಷಕರಿಗೆ ಕಾಣುತ್ತಿರುವುದು 400 ವರ್ಷಗಳಿಗೊಮ್ಮೆ ಸಂಭವಿಸುವ ಘಟನೆಯಾಗಿದೆ. ಒಂದೆ ಜಾಗದಲ್ಲಿ ಈ ಎರಡೂ ಗ್ರಹಗಳನ್ನು ನೋಡುವ ಕೌತುಕಮಯ ಸನ್ನಿವೇಶ ಈಗ ಆಗಸದಲ್ಲಿ ಸಂಭವಿಸಿದ್ದು, ಬರಿಗಣ್ಣಿನಿಂದಲೂ, ಬೈನಾಕ್ಯುಲರ್ ಮತ್ತು ಟೆಲಿಸ್ಕೋಪ್‌ಗಳ ಮೂಲಕವೂ ನೋಡಿ ಮೈದುಂಬಿಕೊಳ್ಳಬಹುದು.

    ಜೊತೆಗೆ ಇದೇ ಡಿಸೆಂಬರ್ 21ನೇ ತಾರೀಖು ಈ ಎರಡೂ ಗ್ರಹಗಳು, ಅತ್ಯಂತ ಸನಿಹ ಗೋಚರಿಸಿ, ಅದ್ಭುತ ಸಮಾಗಮದಂತೆ ಕಾಣುತ್ತದೆ.

    ಈ ಗುರು ಮತ್ತು ಶನಿಗ್ರಹಗಳ ಸಮಾಗಮಕ್ಕೆ ಕಾರಣವೇನು?

    ಸೂರ್ಯನ ಸುತ್ತ ನಮ್ಮ ಸೌರವ್ಯೂಹದ 8 ಗ್ರಹಗಳೂ ವಿವಿಧ ಪಥಗಳಲ್ಲಿ, ಬೇರೆ ಬೇರೆ ಅವಧಿಗಳಲ್ಲಿ ತಿರುಗುತ್ತವೆ. ಸೌರವ್ಯೂಹದ ದೈತ್ಯ ಗ್ರಹಗಳಾದ ಗುರುಗ್ರಹವು ಸೂರ್ಯನ ಸುತ್ತಾ ಒಂದು ಸುತ್ತು ಹಾಕಲು ತೆಗೆದುಕೊಳ್ಳುವ ಅವಧಿಯು 11 ವರ್ಷ 314 ದಿನಗಳಾದರೆ, ಎರಡನೇ ದೈತ್ಯಗ್ರಹ ಶನಿಯು ತನ್ನ ವಾರ್ಷಿಕ ಚಲನೆ ಪೂರೈಸಲು ತೆಗೆದುಕೊಳ್ಳುವ ಅವಧಿ 29 ವರ್ಷ 168 ದಿನಗಳಾಗಿದೆ. ಜೊತೆಗೆ ಸೂರ್ಯನಿಂದ ಗುರುಗ್ರಹಕ್ಕಿರುವ ದೂರ ಸು.74 ಕೋಟಿ, 10ಲಕ್ಷ ಕಿ.ಮೀ ಗಳಾಗಿದ್ದು, ಶನಿಗ್ರಹವು ಸುಮಾಉ 134 ಕೋಟಿ ಕಿ.ಮೀ. ದೂರದಲ್ಲಿದೆ.ಈ ಗುರು ಮತ್ತು ಶನಿಗ್ರಹಗಳ ದೂರಗಳೂ ಮತ್ತು ವಾರ್ಷಿಕ ಚಲನೆಯು ಬೇರೆ ಬೇರೆಯಾಗಿದ್ದು, ಈಗಿನ ಸನಿಹ ಸಮಾಗಮಕ್ಕೆ ಕಾರಣ ಭೂಮಿ, ಗುರು ಮತ್ತು ಶನಿಗ್ರಹಗಳು ಒಂದೆ ನೇರದಲ್ಲಿ ಕಂಡು ಬರುತ್ತಿರುವುದೇ ಆಗಿದೆ.

    ಈಗ ಕಂಡು ಬರುತ್ತಿರುವ ಗ್ರಹಗಳ ಸಮಾಗಮಕ್ಕೆ ಭೂಮಿ, ಗುರು ಮತ್ತು ಶನಿಗ್ರಹಗಳ ಚಲನೆ, ಅವುಗಳ ದೀರ್ಘವೃತ್ತಾಕಾರದ ಪಥ, ಆ ಕಕ್ಷೆಗಳಿಗೆ ಗ್ರಹಗಳ ಓರೆ ಇವೆಲ್ಲ ಅಂಶಗಳೂ ಕಾರಣವಾಗುತ್ತವೆ.ಎರಡು ಗ್ರಹಗಳು ಸನಿಹ ಸಮಾಗಮ ನಡೆಯುವುದು 20 ವರ್ಷಗಳಿಗೊಮ್ಮೆಯಾದರೂ ಕೂಡ, ಪ್ರಸ್ತುತ ಗುರು ಮತ್ತು ಶನಿಗ್ರಹಗಳು ಅತ್ಯಂತ ಸನಿಹಕ್ಕೆ ಬಂದು ಸಮಾಗಮಿಸಲು 400 ವರ್ಷಗಳೇ ಬೇಕಾಗುತ್ತವೆ.1226 ರಲ್ಲಿ ಮತ್ತು 1623 ರಲ್ಲಿ ಈ ಗುರು ಮತ್ತು ಶನಿಗ್ರಹಗಳ ಸಮಾಗಮ ಸಂಭವಿಸಿತ್ತು.

    ಈ ಗ್ರಹಗಳ ಸಮಾಗಮ ನೋಡುವುದು ಎಲ್ಲಿ? ಹೇಗೆ?

    ಡಿಸೆಂಬರ್ ತಿಂಗಳು ಮುಗಿಯುವವರೆಗೂ ಈ ಗುರು ಮತ್ತು ಶನಿಗ್ರಹಗಳ ಸಮಾಗಮವು ಬರೀಗಣ್ಣಿಗೆ ಗೋಚರಿಸುವುದು. ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದಂತೆಯೇ, ಪಶ್ಚಿಮ ಮತ್ತು ದಕ್ಷಿಣ ದಿಕ್ಕುಗಳ ಮಧ್ಯೆ ಬರುವ ನೈಋತ್ಯ ದಿಕ್ಕಿನೆಡೆಗೆ ತಿರುಗಿ, ಕ್ಷಿತಿಜದಿಂದ ಸುಮಾರು 400 ಡಿಗ್ರಿಗಳಲ್ಲಿ ತಲೆ ಮೇಲೆತ್ತಿ ನೋಡಿದರೆ ಹೊಳೆಯುವ ದೊಡ್ಡ ಗುರುಗ್ರಹ ಅದರ ಮೇಲೆಯೇ ಒಂದಡಿ ದೂರದಲ್ಲಿ ಶನಿಗ್ರಹ ಎರಡೂ ಕಂಡು ಬರುತ್ತವೆ. ಜೊತೆಗೆ ನೆತ್ತಿಯ ಮೇಲೆ ಕೆಂಪು ಬಣ್ಣದಿಂದ ಹೊಳೆಯುವ ಮಂಗಳ ಗ್ರಹವೂ ಕಾಣುವುದನ್ನು ನೋಡಬಹುದು.

    ಸಂಜೆಯಾಗುತ್ತಿದ್ದಂತೆ ನೈಋತ್ಯ ದಿಕ್ಕಿನಲ್ಲಿ, ನಕ್ಷತ್ರಗಳು ಕಾಣುವ ಮುನ್ನವೇ ಈ ಗುರು ಮತ್ತು ಶನಿಗ್ರಹಗಳು ಗೋಚರಿಸುತ್ತವೆ.
    ಇದೇ ಡಿಸೆಂಬರ್ 21 ರಂದು ಈ ಎರಡೂ ಗ್ರಹಗಳ ಅಂತರ ಅತ್ಯಂತ ಸನಿಹದಲ್ಲಿ ಗೋಚರಿಸುತ್ತವೆ, ಟೆಲಿಸ್ಕೋಪ್‌ನಲ್ಲಿ ಒಮ್ಮೆಲೇ ಎರಡೂ ಗ್ರಹಗಳನ್ನು ನೋಡಬಹುದಾಗಿದೆ.

    ಅವೈಜ್ಞಾನಿಕ ಮಾಹಿತಿಗಳ ಬಗ್ಗೆ ಎಚ್ಚರವಿರಲಿ

    ಆಗಸದಲ್ಲಿ ಗ್ರಹಣಗಳಾದಾಗ, ಇಂತಹ ಗ್ರಹಗಳ ಕೂಟಗಳು ಸಂಭವಿಸಿದಾಗ,ಕೆಲ ಮಾಧ್ಯಮಗಳಲ್ಲಿ ಖಗೋಳದ ತಜ್ಞರಲ್ಲದವರು ಚರ್ಚೆಗಿಳಿದು, ಅವೈಜ್ಞಾನಿಕ ಮಾಹಿತಿ ನೀಡುತ್ತ, ಜನರಲ್ಲಿ ಭೀತಿ ಹುಟ್ಟಿಸುವ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ. ಆದರೆ ಇಂತಹ ಸುಳ್ಳು ಮಾಹಿತಿಗಳಿಂದ ಸಾರ್ವಜನಿಕರು ಎಚ್ಚರಗೊಂಡು, ಖಗೋಳ ಸತ್ಯಗಳನ್ನು ವೈಜ್ಞಾನಿಕವಾಗಿ ಅರಿತು, ನೋಡಿ ಆನಂದಿಸಬೇಕಾಗಿದೆ.
    ಆಕಾಶ ವೀಕ್ಷಣೆಯ ನಮ್ಮ ಹವ್ಯಾಸಗಳಲ್ಲೊಂದಾಗಿ, ಈ ವಿಶ್ವದರ್ಶನ ಮಾಡುತ್ತಾ ವಿಶ್ವಮಾನವರಾಗುವೆಡೆಗೆ ಸಾಗೋಣ.

    ವೃತ್ತಿಯಲ್ಲಿ ವಿಜ್ಞಾನ ಶಿಕ್ಷಕರಾಗಿರುವ ಹರೋನಹಳ್ಳಿ ಸ್ವಾಮಿ
    ಪ್ರವೃತ್ತಿಯಿಂದ ಹವ್ಯಾಸಿ ಖಗೋಳ ವೀಕ್ಷಕ ಹಾಗೂ ಗಾಯಕ. ಖಗೋಳ ವೀಕ್ಷಣೆ ಬಗ್ಗೆ ಆಗಾಗ್ಗೆ ಕಾರ್ಯಗಾರಗಳನ್ನು ನಡೆಸುತ್ತಾರೆ. ರಾಜ್ಯಾದ್ಯಂತ ಪವಾಡ ಬಯಲು ಕಾರ್ಯಕ್ರಮ ಆಯೋಜಿಸಿ ಜನರಲ್ಲಿ ವೈಜ್ಞಾನಿಕ ತಿಳಿವಳಿಕೆ ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ತಮ್ಮದೆ ಗಾಯನ ತಂಡದೊಂದಿಗೆ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾರೆ. ಅವರ ಸಂಪರ್ಕ 9880498300 / 7892154695

    ಕೋವಿಡ್ ಸಲಹಾ ಸಮಿತಿ ವರದಿ ಆಧರಿಸಿ ಶಾಲಾರಂಭ

    ಎಸ್ ಎಸ್ ಎಲ್ ಸಿ , ದ್ವಿತೀಯ ಪಿಯುಸಿ ಮತ್ತು ಪರಿಷ್ಕೃತ ವಿದ್ಯಾಗಮ ಆರಂಭಿಸುವ ಬಗ್ಗೆ ಸಲಹಾ ಸಮಿತಿ ಸಲಹೆ

    ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಗುರುವಾರ ನೀಡಿರುವ ವರದಿಯ ಆಧಾರದಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪ್ರಸ್ತುತ ವರ್ಷದಲ್ಲಿ ಶಾಲಾರಂಭ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಗುರುವಾರ ವಿಧಾನಸೌಧದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರೊಂದಿಗೆ ಚರ್ಚೆ ನಡೆಸಿದ ನಂತರ ಮಾತನಾಡಿದ ಅವರು, ಇಂದಿನ ಸಭೆಯಲ್ಲಿ ರಾಜ್ಯದ ಕೋವಿಡ್ ಪರಿಸ್ಥಿತಿ ಕುರಿತಂತೆ ಶಾಲೆಗಳ ಆರಂಭದ ಹಿನ್ನೆಲೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು ಎಂದು ಹೇಳಿದರು.

    ಪರಿಸ್ಥಿತಿಯನ್ನು ಅವಲೋಕಿಸಿ ತಾಂತ್ರಿಕ ಸಲಹಾ ಸಮಿತಿ ಯಾವ ಯಾವ ತರಗತಿಗಳನ್ನು ಯಾವ ದಿನಗಳಲ್ಲಿ ಪ್ರಾರಂಭಿಸಬಹುದು, ಪ್ರಾರಂಭಿಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಪ್ರಮಾಣಿತ ಕಾರ್ಯಾಚರಣೆ ವಿಧಾನ-ಎಸ್ ಒ ಪಿಗಳನ್ನು ಸಿದ್ಧಪಡಿಸಿಕೊಟ್ಟಿದ್ದು, ಅದರ ಆಧಾರದಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಶಾಲಾರಂಭಕ್ಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದರು.

    ಮೊದಲಿಗೆ ಮುಂದಿನ ವ್ಯಾಸಂಗಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅಗತ್ಯವಾದ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳನ್ನು ಮತ್ತು ಪರಿಷ್ಕೃತ ವಿದ್ಯಾಗಮ ಆರಂಭಿಸುವ ಸಂಬಂಧದಲ್ಲಿ ಕ್ರಮಗಳ ಕುರಿತು ಸಲಹಾ ಸಮಿತಿ ಸಲಹೆ ನೀಡಿದೆ. ನಂತರ ಉಳಿದ ತರಗತಿಗಳ ಆರಂಭಕ್ಕೆ ಕ್ರಮವಹಿಸಲೂ ಸಹ ಸಮಿತಿ ಅಭಿಪ್ರಾಯಪಟ್ಟಿದೆ ಎಂದು ಅವರು ಹೇಳಿದರು.

    ಕೋವಿಡ್-19 ಮುನ್ನೆಚ್ಚರಿಕೆ ಕ್ರಮಗಳನ್ನು ಖಾತರಿಪಡಿಸುವ ಮೂಲಸೌಲಭ್ಯಗಳನ್ನು ಮತ್ತು ಇತರೆ ಸೌಲಭ್ಯಗಳ ಗಮನಿಸಿದ ನಂತರವೇ ತರಗತಿಗಳನ್ನು ಆರಂಭಿಸುವುದು. ತರಗತಿಗಳಿಗೆ ಹಾಜರಾಗಬೇಕಾದ ವಿದ್ಯಾರ್ಥಿಗಳು ಶಾಲೆಗೆ ಬರುವ ಮೊದಲು ತಮ್ಮ ಪೋಷಕರಿಂದ ಅನುಮತಿ ಪತ್ರವನ್ನು ತರುವುದು ಕಡ್ಡಾಯವಾಗಿದೆ. ಆರೋಗ್ಯದ ತೊಂದರೆ ಇಲ್ಲವೇ ಶೀತ, ನೆಗಡಿ, ಕೆಮ್ಮು ಹಾಗೆಯೇ ಕೋವಿಡ್ ಲಕ್ಷಣಗಳಿರುವ ಮಕ್ಕಳು ಶಾಲೆಗೆ ಬರುವಂತಿಲ್ಲ. ಅವರು ಪರೀಕ್ಷೆ ಮಾಡಿಸಿಕೊಂಡು ವೈದ್ಯಕೀಯ ವರದಿಯೊಂದಿಗೆ ಹಾಜರಾಗಬೇಕಿದೆ. ತಮ್ಮ ಮಕ್ಕಳಿಗೆ ರುಚಿ, ವಾಸನೆ ಕೊರತೆ, ಉಸಿರಾಟ ತೊಂದರೆ, ಗಂಟಲು ನೋವು ಸೇರಿದಂತೆ ಮೇಲ್ಕಂಡ ಯಾವುದೇ ಲಕ್ಷಣಗಳಿಲ್ಲ ಎಂದು ಪೋಷಕರು ತಾವು ತಮ್ಮ ಮಕ್ಕಳು ಶಾಲೆಗೆ ಹಾಜರಾಗುವಾಗ ನೀಡುವ ಅನುಮತಿ ಪತ್ರದಲ್ಲಿ ತಿಳಿಸುವುದು ಕಡ್ಡಾಯವಾಗಬೇಕು. ಅಗತ್ಯ ಮುನ್ನೆಚ್ಚರಿಕೆಯ ಸುರಕ್ಷಾ ಕ್ರಮಗಳನ್ನು ಕೈಗೊಂಡು ಪರಿಣಾಮಕಾರಿಯಾಗಿ ಅನುಸರಿಸುತ್ತಿರುವುದರಿಂದ ಪದವಿ ಹಾಗೂ ಉನ್ನತ ಶಿಕ್ಷಣದ ತರಗತಿಗಳು ಸುಸೂತ್ರವಾಗಿ ನಡೆಯುತ್ತಿವೆ. ವಿದ್ಯಾರ್ಥಿಗಳು ಪಾಳಿಯಲ್ಲಿ ಕಡಿಮೆ ಸಂಖ್ಯೆಯಲ್ಲಿ ವಾರದಲ್ಲಿ ಎರಡು ದಿನಗಳು ಮಾತ್ರವೇ ಬರುವುದರಿಂದ ಸುರಕ್ಷಾ ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬಹುದು ಎಂದು ಸಮಿತಿ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ ಎಂದು ಸಚಿವರು ತಿಳಿಸಿದರು.

    ಜುಲೈನಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಯಾವುದೇ ಸಂದರ್ಭದಲ್ಲೂ ಕೋವಿಡ್ ಪ್ರಸರಣವಾಗರಿಲಿಲ್ಲ ಎಂಬುದನ್ನು ಸಮಿತಿ ಈ ಸಂದರ್ಭದಲ್ಲಿ ಅವಲೋಕಿಸಿತು ಎಂದು ಅವರು ಹೇಳಿದ್ದಾರೆ.
    ಶಾಲಾರಂಭಕ್ಕೂ ಮುನ್ನ ಡಿಸೆಂಬರ್ ಮಾಸದಲ್ಲಿ ಶಾಲಾಡಳಿತಗಳು/ ಶಾಲಾ ಮೇಲುಸ್ತುವಾರಿ ಸಮಿತಿಗಳು ಪೋೀಷಕರು, ಮಕ್ಕಳು ಸೇರಿದಂತೆ ಇನ್ನಿತರೆ ಶೈಕ್ಷಣಿಕ ಪಾಲುದಾರರನ್ನು ಸಭೆ ನಡೆಸಿ ಶಾಲೆಗಳ ಪುನರಾರಂಭ ಕುರಿತು ವಿಶ್ವಾಸ ಮೂಡಿಸುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು ಎಂದು ಸಚಿವರು ವಿವರಿಸಿದ್ದಾರೆ.

    ವೈದ್ಯಕೀಯ ಪರೀಕ್ಷೆಗೆ ಅಗತ್ಯವಿರುವ ವಿದ್ಯಾರ್ಥಿಗಳು, ಶಿಕ್ಷಕರು, ಶಾಲಾ ಸಿಬ್ಬಂದಿಗೆ ಕೋವಿಡ್ ಪರೀಕ್ಷೆಗೆ ಮೊದಲ ಪ್ರಾಶಸ್ತ್ಯ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಆರೋಗ್ಯ ಇಲಾಖೆ ಆಯುಕ್ತರು ಅಭಿಪ್ರಾಯಪಟ್ಟಿದ್ದು, ಈ ಎಲ್ಲ ಸಂಗತಿಗಳನ್ನು ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ವಿವಿಧ ಇಲಾಖೆಗಳ ಮುಖ್ಯಸ್ಥರ ಸಭೆಯಲ್ಲಿ ಚರ್ಚಿಸಿ ಎಲ್ಲರ ಸಹಕಾರ ಪಡೆದು ಶಾಲಾರಂಭಕ್ಕೆ ಮುಂದಿನ ನಿರ್ಧಾರಗಳನ್ನು ತೆಗೆದಕೊಳ್ಳಲಾಗುವುದು ಎಂದು ಸಚಿವರು ವಿವರಿಸಿದರು.

    ಸಭೆಯಲ್ಲಿ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಸುದರ್ಶನ್, ಸದಸ್ಯರಾದ ಡಾ. ವಿ. ರವಿ, ಡಾ. ಎಂ. ಶರೀಫ್, ಡಾ. ಶಶಿಭೂಷಣ್ ಬಿ.ಎಲ್., ಡಾ. ಲೋಕೇಶ್ ಅಲ್ಹಾರಿ ಸೇರಿದಂತೆ ಕೋವಿಡ್ ಸಲಹಾ ಸಮಿತಿ ಸದಸ್ಯರಾದ ಹಲವಾರು ಸದಸ್ಯರು, ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಸಾಶಿಇ ಆಯುಕ್ತ ವಿ. ಅನ್ಬುಕುಮಾರ್, ಪಿಯು ನಿರ್ದೇಶಕಿ ಸ್ನೇಹಲ್ ಸೇರಿದಂತೆ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.

    error: Content is protected !!