33.6 C
Karnataka
Monday, May 13, 2024

    ತಿರುಮಲೇಶರ  ಅಕ್ಷರ ಲೋಕದ ಅಂಚಿನಲ್ಲಿ 

    Must read


    ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಕನ್ನಡದ ಹೆಸರಾಂತ ಲೇಖಕ ಕೆ ವಿ ತಿರುಮಲೇಶ್‌(82) ಇಂದು ಮುಂಜಾನೆ ಹೈದರಾಬಾದಿನ ತಮ್ಮ ಮಗಳ ನಿವಾಸದಲ್ಲಿ ವಿಧಿವಶರಾಗಿದ್ದಾರೆ.ಇತ್ತೀಚೆಗೆ ತಿರುಮಲೇಶ್ ಅವರಿಗೆ ಹೃದಯದ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಕಳೆದ ವಾರದವರೆಗೂ ಆಸ್ಪತ್ರೆಯಲ್ಲಿದ್ದ ಅವರು ಭಾನುವಾರ ಡಿಸ್ಚಾರ್ಜ್‌ ಆಗಿ ಮನೆಗೆ ಬಂದಿದ್ದರು. ಪತ್ನಿ, ಮೂವರು ಹೆಣ್ಣು ಮಕ್ಕಳನ್ನು ತಿರುಮಲೇಶ್‌ ಅಗಲಿದ್ದಾರೆ. ತಿರುಮಲೇಶರ ಅಕ್ಷರ ಲೋಕದ ಅಂಚಿನಲ್ಲಿ ಕೃತಿಯ ಪರಿಚಯ ಇಲ್ಲಿದೆ.


    ಸುಮಾ ವೀಣಾ 

    ಕನ್ನಡ ಭಾಷೆಯ ಮತ್ತು ಕಾವ್ಯದ ಮರ್ಮ ಬಲ್ಲ ಕವಿ-ಭಾಷಾವಿಜ್ಞಾನಿ ತಿರುಮಲೇಶ. ತಿರುಮಲೇಶರ ಹುಟ್ಟೂರು  ಕಾಸರಗೋಡಿನ ಕಾರಡ್ಕ .   ಕಾರಡ್ಕವೆಂಬುದು ಗ್ರಾಮದ ಹೆಸರು  ಮಲೆಯಾಲದಲ್ಲಿ  ‘ಕಾಡಗಂ’  ಎಂಬ ಹೆಸರಿನಿಂದ ಕರೆಯುತ್ತಾರೆ. ಪೂರ್ವಕ್ಕೆ ಪಶ್ಚಿಮ ಘಟ್ಟದ ಪರ್ವತ ಶ್ರೇಣಿ, ಪಶ್ಚಿಮಕ್ಕೆ  ಅರಬ್ಬಿ ಸಮುದ್ರ   ಇವೆರಡರ ನಡುವಿನ   ಭೂಭಾಗ ಕಾಸರಗೋಡು ಅಲ್ಲಿನ ಕಾರಡ್ಕದ ಪರಿಸರದಿಂದ  ವೃತ್ತಿಬದುಕಿಗಾಗಿ ತಿರುವನಂತಪುರ ನಂತರ ಅದರೆದೇ ಭಾಗವಾಗಿ  ಹೈದರಬಾದನ್ನು  ಸೇರಿ ಅಲ್ಲಿಯೂ ತಮ್ಮ ಸೇವೆಯನ್ನು ಮುಂದುವರೆಸುತ್ತಾರೆ. 

    ವೃತ್ತಿಬದುಕನ್ನು ಅನ್ಯಭಾಷೆಯ ನೆಲದಲ್ಲಿ  ಕಳೆದರೂ  ಇವರ ನಿತ್ಯ  ಸಾಹಿತ್ಯ ಸೇವೆ ಸಂದಾಯವಾದದ್ದು  ಕನ್ನಡಕ್ಕೆ .  ಕಾರಡ್ಕ ನೆಲದ   ಅಪ್ಪಟ ಕನ್ನಡಿಗ ತಿರುಮಲೇಶರು  ಕನ್ನಡ ತುಳು ಮತ್ತು ಮಲೆಯಾಳಂ ಭಾಷೆಗಳೊಂದಿಗೆ ಕಲೆತು ಬೆಳೆದವರು.   ಭಾರತಕ್ಕೆ ಸ್ವಾತಂತ್ರ್ಯ  ಬರುವ ಕಾಲಘಟ್ಟದಲ್ಲಿ ಹುಟ್ಟಿದ ಇವರು ಭಾರತ ಸಾಮಾಜಿಕ,  ಆರ್ಥಿಕ,  ರಾಜಕೀಯ ವ್ಯವಸ್ಥೆಯ  ಬೆಳವಣಿಗೆಯೊಂದಿಗೆ ತಾವೂ ಬೆಳೆದವರಾಗಿ  ಆ ಕಾಲಘಟ್ಟದ ಘಟನೆಗಳನ್ನು ತಮ್ಮ ಅಂಕಣ ಬರೆಹದಲ್ಲಿ ಬಿಡಿಸಿಡುತ್ತಾರೆ.

    ತಿರುಮಲೇಶರ ಒಂದು ಕಥೆ

    ಇಂಥ  ಕೆ.ವಿ ತಿರುಮಲೇಶರ ಅಂಕಣ  ಬರೆಹಗಳು ಕನ್ನಡದ ಕನವರಿಕೆಗಳನ್ನು  ದೇಶ ಭಾಷೆಗಳಾಚೆಗೆ  ತಲುಪಿಸಿವೆ.  ಇವರ ಅಂಕಣ ಬರಹಗಳು  ರಾಜಕೀಯ,  ಸಾಂಸ್ಕೃತಿಕ, ದೈನಂದಿನ ವಿದ್ಯಾಮಾನಗಳಿಗೆ  ಸಂಬಂಧಿಸಿದವಾಗಿರುತ್ತವೆ.  ಅರ್ಥಾನುಸಾರಿ, ಸ್ವಭಾವಾನುಸಾರಿ ಅನ್ನುತ್ತಾರಲ್ಲ  ಹಾಗೆ ಒಂದು  ವಿಷಯವನ್ನು ಆರಿಸಿಕೊಂಡರೆ   ಆ ವಸ್ತುವನ್ನು ಏಕಸ್ಥಗೊಳಿಸದೆ ಅದಕ್ಕೆ  ತಕ್ಕುದಾದ ಅನೇಕ ಪರಿಪ್ರೇಕ್ಷಗಳನ್ನು ಅನ್ವಯಿಸಿ ಸಾಧಿಸಿ ಮತ್ತದೇ ಆರಿಸಿಕೊಂಡ ವಿಷಯಕ್ಕೆ ಓದುಗರನ್ನು   ತಂದು ನಿಲ್ಲಿಸುವ ಅವರ ಶೈಲಿ ಅನನ್ಯವಾದುದು.

    ಅಂಕಣ ಬರೆಹಗಳ  ಒಟ್ಟು  ಸಂಗ್ರಹ “ಅಕ್ಷರ ಲೋಕದ  ಅಂಚಿನಲ್ಲಿ” ಕೃತಿ  “ಮರೆತ ಮಾತು ಮರೆಯಾಗದ ನೆನಪು” ಎಂಬ ಉಪ ಶೀರ್ಷಿಕೆಯೊಡನೆ     ಇದೀಗ ಅಭಿನವದ  ಮೂಲಕ ಓದುಗರ ಕೈಸೇರಿದೆ  ತನ್ನಿಮಿತ್ತ ಕೃತಿಯ ಕಡೆಯಲ್ಲಿ   ಅವರನ್ನೂ ಸ್ಮರಿಸಿದ್ದಾರೆ.  ತಮ್ಮ  ಸುದೀರ್ಘ ಜೀವನಾನುಭವ,  ಸಾಹಿತ್ಯದ ಬದುಕು , ಅಧ್ಯಾಪನ, ಭಾಷಾಸಂಶೋಧನೆಯ   ವಿಚಾರಧಾರೆ ಇಲ್ಲಿ ಸಂಕಲಿತವಾಗಿದೆ.  ಹೈದರಾಬಾದಿನ ‘ಪರಿಚಯ’, ಆನ್ಲೈನ್ ಪತ್ರಿಕೆ ‘ಕೆಂಡಸಂಪಿಗೆ’, ಮೈಸೂರಿನ ‘ಆಂದೋಲನ’  ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾದ ಬರೆಹಗಳ ಕಟ್ಟು ಇಲ್ಲಿದೆ. ಒಂದು ಕಾಲದಲ್ಲಿ ದೈವವಿಶ್ವಾಸಿಯಾಗಿ ಕ್ರಮೇಣ ಚಿಂತನಾಶೀಲನಾದ  ಬಗೆಯನ್ನು ಡಾರ್ವಿನ್ನ ಜೀವ ವಿಕಸನದ ಸಿದ್ಧಾಂತದ ಮೂಲಕ   ಮಂಢಿಸುತ್ತಾರೆ.ಇವುಗಳು ಪದಗಳಷ್ಟೇ ಇದರಾಚೆಗೂ ತಿರುಮಲೇಶರ ಕುರಿತಾದ ಚಿಂತನೆ  ಅಧ್ಯಾಹಾರ ಮಾಡಿಕೊಂಡಷ್ಟೂ ಧಕ್ಕುತ್ತದೆ.

    ಕೆಂಡ  ಸಂಪಿಗೆ ಆನ್ಲೈನ್ ಪತ್ರಿಕೆಯ   ಒಂದೊಂದು ಅಧ್ಯಾಯದಲ್ಲೂ  ಒಂದೊಂದು ವಿಚಾರದ ಬಗ್ಗೆ ಸುದೀರ್ಘ  ಚರ್ಚೆ ನಡೆಸಿದ್ದಾರೆ.  ಕೆಲವೊಂದು ಅಧ್ಯಾಯದ ಕಡೆಯಲ್ಲಿ ಇಂಗ್ಲಿಷಿನ ನುಡಿಗಳನ್ನು ,ಕವಿಮಾತುಗಳನ್ನು ಸೇರಿಸಿರುವುದು ಬರೆಹಗಳ ಸೊಬಗನ್ನು ಹೆಚ್ಚಿಸಿದೆ. ಪರಂಪರೆ ಮತ್ತು ಆಧುನಿಕತೆ ಇವುಗಳ ನಡುವಿನ ಹಾದಿಯ ಚರಿತ್ರೆ ಜೀವನ ಪಲ್ಲಟದ ಹಾದಿಯನ್ನು ಸಮಗ್ರವಾಗಿ ವಿಶ್ಲೇಶಿಸುವ ಪ್ರಯತ್ನ ಇಲ್ಲಿ ನಡೆದಿದೆ.  ನಡುವೆ ನಡುವೆ ಅವರು ವಿದೇಶದಲ್ಲಿದ್ದಾಗ ನಡೆದ ಘಟನೆಗಳನ್ನು , ನೆನಪುಗಳನ್ನೂ ಇಲ್ಲಿ  ಓದುಗರೊಂದಿಗೂ ಹಂಚಿಕೊಂಡಿದ್ದಾರೆ.   

    ತಿರುಮಲೇಶರ ಒಂದು ಕವನ

    ಭಾಷಾ ಶಿಕ್ಷಕರು ಈ ಕೃತಿಯನ್ನು ಅನುಸಂಧಾನಿಸಲೇ ಬೇಕು  ಅಂಕಣ ಬರೆಹಗಳು ಅನುಭವಗಳನ್ನೋ ತತ್ಕಾಲಿನ ವಿಷಯಗಳನ್ನು ಮಾತ್ರ  ಚರ್ಚಿಸಿಲ್ಲ  ಭಾಷಾ ವಿಜ್ಞಾನದ ಬಗ್ಗೆ  ಸಾಹಿತ್ಯ ಸಾಹಿತಿಗಳ ಬಗ್ಗೆ ಜನಸಾಮಾನ್ಯರ ಬಗ್ಗೆ ತಿಳಿಯದ ಅನೇಕ ವಿಚಾರಗಳ ಬಗ್ಗೆ ಬೆಳಕು ಚೆಲ್ಲುತ್ತದೆ.  ಈ ಕಾರಣದಿಂದಲೆ  “ಗುಂಪಿನ ನಡುವೆಯೂ ಥಟ್ಟನೆ ಏಕಾಂಗಿಯಂತೆ ತೋರುವ ಕವಿ.ಅಭಿಮಾನ ಬಿಟ್ಟು ಕೊಡದ  ಸ್ವಾಂತದ ಆರಾಧಕ. ಗೊತ್ತಿಲ್ಲದ್ದು ಏನೋ ಇದೆ  ಎನ್ನುವ ವಿಶ್ವಾಸದಲ್ಲಿ  ಹೊಸ ದಾರಿ ಮತ್ತು ಹೊಸ ಊರಿನ ಹುಡುಕಾಟದಲ್ಲಿರುತ್ತಾರೆ”  ಎಂದು ಹೆಚ್.ಎಸ್ ವೆಂಕಟೇಶಮೂರ್ತಿಯವರು ಹೇಳಿರುವುದು. 

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

     

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!