27 C
Karnataka
Tuesday, May 14, 2024

    ಚಿನ್ನವನ್ನು ಹೂಡಿಕೆಯಾಗಿ ಆಯ್ಕೆ ಮಾಡಲು ಪರ್ಯಾಯ ಯೋಜನೆ ಸವರಿನ್‌ ಗೋಲ್ಡ್‌ ಬಾಂಡ್

    Must read

    ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಮಾಧ್ಯಮದಲ್ಲೂ ಚಿನ್ನದ ಬೆಲೆ ಗಗನಕ್ಕೇರುತ್ತಿರುವ ಬಗ್ಗೆ ಹೆಚ್ಚು ಹೆಚ್ಚು ಪ್ರಚಾರ ನೀಡಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆ ಗಗನಕ್ಕೇರುತ್ತಿತ್ತು. ಸೋಜಿಗವೆಂದರೆ ಆ ಸಂದರ್ಭದಲ್ಲಿ, ಚಿನ್ನ ಮಾರಬೇಕೇ, ತಕ್ಷಣ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆಯನ್ನು ನಮ್ಮ …………..ಗೋಲ್ಢ್‌ಕಂಪನಿ ನೀಡುತ್ತದೆ ಎಂಬ ವೈವಿಧ್ಯಮಯ ರೀತಿಯ ಹೆಚ್ಚಿನ ಗೋಲ್ಡ್‌ಕಂಪನಿಗಳ ಪ್ರಚಾರ ಹೆಚ್ಚಾಯಿತು.

    ವಿಪರ್ಯಾಸವೆಂದರೆ ಇಂತಹ ಗೋಲ್ಡ್‌ಕಂಪನಿಗಳ ಪ್ರಚಾರ ಹೆಚ್ಚಾದರೂ ಸಹ ಚಿನ್ನವನ್ನು ಅಡವಿಟ್ಟು ಸಾಲ ಪಡೆದವರು, ಸಾಲ ಮರುಪಾವತಿ ಮಾಡದ ಕಾರಣ ಆ ಚಿನ್ನವನ್ನು ಹರಾಜು ಹಾಕುವ ಬಗ್ಗೆ ಪುಟಗಟ್ಟಲೆ ಜಾಹಿರಾತುಗಳು ಬರುತ್ತಲೇ ಇವೆ. ಜನಸಾಮಾನ್ಯರ ಮನದಲ್ಲಿ ಆಸೆ ಮತ್ತು ಆಸಕ್ತಿಯನ್ನು ಕೆರಳಿಸಿ, ಚಿನ್ನ ಕೊಳ್ಳಬೇಕೆಂಬ ಆಸೆಯನ್ನು ಸಹ ಬಿತ್ತಲಾಯಿತು. ಅದಕ್ಕೆ ಪೂರಕವಾಗಿ 2021 ರಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ರೂ.82 ಸಾವಿರ ತಲುಪುತ್ತದೆಂಬ ವಿಶ್ಲೇಷಣೆಗಳು ಸಹ ಹೊರಬಂದವು. ಕಮಾಡಿಟೀಸ್ ಮಾರ್ಕೆಟ್‌ ಚಟುವಟಿಕೆ ಆರಂಭವಾದ ಮೇಲೆ ಇವು ಸಹ ಸರಕು ಪೇಟೆಯ ವಹಿವಾಟಿನ ಸರಕಾಗಿದೆ. ಅಂದರೆ ಇಲ್ಲಿಯೂ ಏರಿಳಿತಗಳ ಒತ್ತಡವಿರುತ್ತದೆ. ಹಲವಾರು ಪವಿತ್ರವಾದ, ಹಬ್ಬ ಹರಿದಿನಗಳಲ್ಲಿ ಚಿನ್ನ-ಬೆಳ್ಳಿಗಳಂತಹ ಅಮೂಲ್ಯವಾದ ಲೋಹಗಳನ್ನು, ಕನಿಷ್ಟ ಪಕ್ಷ ಸಾಂಕೇತಿಕವಾಗಿಯಾದರೂ ಕೊಳ್ಳುವ ಸಂಪ್ರದಾಯ ರೂಢಿಯಲ್ಲಿದೆ. ಈಗಿನ ದರಗಳಲ್ಲಿ ಚಿನ್ನದ ಆಭರಣವಾಗಲಿ ಬೆಳ್ಳಿಯ ವಸ್ತುಗಳಾಗಲಿ ಕೊಳ್ಳುವುದಕ್ಕೆ ಸಾಮಾನ್ಯರಿಗೆ ಸಾಧ್ಯವಿಲ್ಲ ಎಂಬಂತಾಗಿದೆ.

    ಬೆಳ್ಳಿಯ ಬೆಲೆ

    2008 ರ ಡಿಸೆಂಬರ್‌ ತಿಂಗಳಲ್ಲಿ ಬೆಳ್ಳಿಯ ಬೆಲೆ ರೂ.18,500 ರಲ್ಲಿತ್ತು. ಅಲ್ಲಿಂದ ಕ್ರಮೇಣವಾಗಿ ಏರಿಕೆಯ ಪಥದಲ್ಲಿ ಚಲಿಸುತ್ತಾ 2011 ರ ಏಪ್ರಿಲ್‌ ನಲ್ಲಿ ರೂ.75 ಸಾವಿರ ರೂಪಾಯಿಗಳನ್ನು ತಲುಪಿತು. ಆ ಸಂದರ್ಭದ ವಿಶ್ಲೇಷಣೆಗಳು ಬೆಳ್ಳಿಯ ದರ ರೂ.1,00,000 ಕ್ಕೆ ತಲುಪುವುದೆಂಬ ಮುನ್ನುಡಿದವು. ಅದಕ್ಕೆ ಪೂರಕವಾಗಿ, ರೂ.75 ಸಾವಿರಕ್ಕೂ ಬೆಳ್ಳಿ ಲಭ್ಯವಿಲ್ಲ ಎಂದು ಕಂದು ಬಣ್ಣದ ದಿನಪತ್ರಿಕೆಗಳು ಸುದ್ಧಿ ಪ್ರಕಟಿಸಿದ್ದವು. ಇದು ಇನ್ನಷ್ಟು ಬೇಡಿಕೆ ಹೆಚ್ಚಿಸಿದವು. ಈ ಎಲ್ಲಾ ಬೆಳವಣಿಗೆಗಳ ಹಿಂದೆ ಅಡಕವಾಗಿರುವ ಅಂಶವೆಂದರೆ ಆ ಸಂದರ್ಭವು ಅಕ್ಷಯ ತೃತೀಯ ಆಚರಣೆಯ ಸಮೀಪದ ದಿನವಾಗಿತ್ತು. ವಿಸ್ಮಯವೆಂದರೆ ಮೇ6 ರಂದು ಅಕ್ಷಯ ತೃತೀಯದ ದಿನ ಬೆಳ್ಳಿಯ ಬೆಲೆ ರೂ.53 ಸಾವಿರ ರೂಪಾಯಿಗಳಿಗೆ ಕುಸಿದಿತ್ತು. ನಂತರದ ವರ್ಷಗಳಲ್ಲಿ ಬೆಳ್ಳಿಯ ಬೆಲೆ ರೂ.30 ಸಾವಿರದವರೆಗೂ ಜಾರಿ ಪುನ: ಚೇತರಿಕೆ ಕಂಡಿತು. ಬೆಳ್ಳಿ, ಚಿನ್ನ ಗಳು ಆಂತರಿಕವಾಗಿ ಸುಭದ್ರವಾದ ಹೂಡಿಕೆ ಎಂದೆನಿಸಿದರೂ, ಖರೀದಿಸುವ ಬೆಲೆಯೂ ಮುಖ್ಯ. ಸುಮಾರು 11 ವರ್ಷಗಳಿಂದಲೂ ಬೆಳ್ಳಿಯ ಮೇಲಿನ ಹೂಡಿಕೆಗೆ ಅಸಲು ಹಣವೂ ಲಭ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ರೀತಿ ಚಿನ್ನದ ಬೆಲೆ ಗರಿಷ್ಟಮಟ್ಟದಲ್ಲಿದ್ದಾಗ ಖರೀದಿಸಿದಲ್ಲಿ ಹೂಡಿಕೆಯ ಹಣ ಸುಭದ್ರವೆನಿಸದು ಅಲ್ಲವೇ?

    ಹಳದಿ ಲೋಹದ ಬೇಡಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ, ಸರ್ಕಾರಗಳ ಮಟ್ಟದಲ್ಲಿ, ಹೆಚ್ಚಾಗಲು ಆರಂಭವಾಗಿದ್ದು 2009 ರಲ್ಲಿ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ 200 ಟನ್‌ ಚಿನ್ನವನ್ನು ಐ ಎಂ ಎಫ್‌ ನಿಂದ ರೂ.31,490 ರಂತೆ ಖರೀದಿಸಿದ್ದಾಗಿದೆ. ನವೆಂಬರ್‌ 2017 ರಿಂದ 2019 ರ ನವೆಂಬರ್‌ ಅವಧಿಯಲ್ಲಿ ಆರ್‌ ಬಿ ಐ ಸುಮಾರು 75 ಟನ್ ಚಿನ್ನವನ್ನು ಖರೀದಿಸಿದೆ. ಈ ರೀತಿಯ ಬೇಡಿಕೆಯು ಚಿನ್ನದ ಬೆಲೆ ಸತತ ಏರಿಕೆ ಕಾಣುವಂತೆ ಮಾಡಿದೆ.

    ಹೂಡಿಕೆಯಾಗಿಯೋ, ಆಭರಣವಾಗಿಯೋ

    ಚಿನ್ನ ಕೊಳ್ಳಬೇಕೆ, ಹಾಗಿದ್ದರೆ ಚಿನ್ನವನ್ನು ಆಭರಣಕ್ಕಾಗಿಯೋ ಅಥವಾ ಹೂಡಿಕೆಯಾಗಿ ಕೊಳ್ಳಬೇಕಾಗಿದೆಯೋ ಎಂಬುದನ್ನು ನಿರ್ಧರಿಸಿರಿ. ಹೂಡಿಕೆಯಾಗಿ ಚಿನ್ನವನ್ನು ಖರೀದಿಸುವ ಉದ್ದೇಶವಾಗಿದ್ದರೆ ಕೇಂದ್ರ ಸರ್ಕಾರದ ಸವರಿನ್‌ ಗೋಲ್ಡ್‌ ಬಾಂಡ್‌ ಯೋಜನೆ ಸೂಕ್ತವೆನಿಸಬಹುದು. ಈ ಬಾಂಡ್‌ ಗಳು ಡಿಮ್ಯಾಟ್‌ ರೂಪದಲ್ಲಿರುವುದರಿಂದ, ಈ ಹಿಂದೆ ವಿತರಣೆಯಾಗಿರುವ ಬಾಂಡ್‌ ಗಳು ಷೇರುಪೇಟೆಯಲ್ಲಿ ಖರೀದಿಸಬಹುದು. ಸವರಿನ್‌ ಗೋಲ್ಡ್‌ ಬಾಂಡ್‌ 7 ವಿತರಣೆಗೆ ಸಿದ್ಧವಾಗಿದ್ದು, ವಿತರಣೆಯ ಬೆಲೆ ರೂ.5,051 ಎಂದು ನಿಗದಿಪಡಿಸಲಾಗಿದೆ. ಆನ್‌ ಲೈನ್‌ ನಲ್ಲಿ ಅರ್ಜಿ ಸಲ್ಲಿಸಿದವರಿಗೆ ರೂ.50 ರಂತೆ ರಿಯಾಯಿತಿ ನೀಡಲಾಗುವುದು. 8 ವರ್ಷಗಳ ಅವಧಿಯ ಈ ಬಾಂಡ್‌ ಗಳು ಪ್ರತಿ ವರ್ಷ ಶೇ.2.50 ಯಂತೆ ಬಡ್ಡಿ ಗಳಿಸುವುದಲ್ಲದೆ, ಸ್ಟಾಕ್‌ ಎಕ್ಸ್‌ ಚೇಂಜ್‌ ಗಳಲ್ಲಿ ವಹಿವಾಟಿಗೆ ಅನುಮತಿಯಿದೆ. ಅವಧಿಯ ನಂತರ ಅದರ ಹಿಂದಿನ ವಾರದ ಸರಾಸರಿ ಬೆಲೆಯಲ್ಲಿ ಬಾಂಡ್‌ ಹೋಲ್ಡರ್‌ ಗಳಿಗೆ ರೂಪಾಯಿಗಳಲ್ಲಿ ಹಿಂದಿರುಗಿಸಲಾಗುವುದು. ಸೋಜಿಗವೆಂದರೆ ಈ ಹಿಂದಿನ ವರ್ಷಗಳಲ್ಲಿ, ಹಿಂದಿನ ತಿಂಗಳಲ್ಲಿ ವಿತರಿಸಿದ ಬಾಂಡ್‌ ಗಳು ರೂ.4,800 ರಿಂದ ರೂ.5,000 ಗಳವರೆಗೂ ವಹಿವಾಟಾಗುತ್ತಿದ್ದು, ಅವುಗಳು ವಿತರಿಸಿದ ಬೆಲೆಗಳ ಮೇಲೆ ಬಡ್ಡಿ ನೀಡಲಾಗುತ್ತದೆ. ಒಟ್ಟಾರೆ ಹೂಡಿಕೆಯಾಗಿ ಚಿನ್ನವನ್ನು ಆಯ್ಕೆ ಮಾಡಿಕೊಳ್ಳುವವರಿಗೆ ಇದು ಉತ್ತಮ ಯೋಜನೆ. ಹೂಡಿಕೆಗೆ ಮುನ್ನ ವಿತರಣೆ ಬೆಲೆ ಮತ್ತು ವರ್ಷ ಅರಿತು ನಿರ್ಧರಿಸಿರಿ.

    2017 ರಲ್ಲಿ ವಿತರಿಸಿದ ಮೇ 2025 ರ ಪಕ್ವತೆಯುಳ್ಳ ಬಾಂಡ್‌ ಗಳು ರೂ.2,951 ರಲ್ಲಿ ವಿತರಿಸಲಾಗಿದ್ದು, ಸಧ್ಯ ರೂ.4,800 ರ ಸಮೀಪ ವಹಿವಾಟಾಗುತ್ತಿದೆ. ಇಲ್ಲಿ ಚಿನ್ನದ ಬೆಲೆ 2025 ರ ಪೇಟೆಯನ್ನವಲಂಭಿಸಿದ್ದರೂ, ಅಲ್ಲಿಯವರೆಗೂ ದೊರೆಯುವ ಬಡ್ಡಿ ಮಾತ್ರ ವಿತರಣೆ ಬೆಲೆಯಾದ ರೂ.2,951 ರ ಮೂಲ ಬೆಲೆಮೇಲೆ. ಅದೇ ಸೆಪ್ಟೆಂಬರ್‌ 2028 ಬಾಂಡ್‌ ಗಳ ವಿತರಣೆ ಬೆಲೆ ರೂ.5,117 ಆಗಿದ್ದು, ಈ ಬಾಂಡ್‌ ಗಳು ಸಹ ರೂ.4,850 ರ ಸಮೀಪ ವಹಿವಾಟಾಗುತ್ತಿವೆ. ಹೀಗೆ ವಹಿವಾಟಾಗುತ್ತಿರುವ ದರ ಈಗಿನ ಚಿನ್ನದ ದರವನ್ನವಲಂಭಿಸಿದ್ದರೂ, ವಿತರಣೆ ಬೆಲೆ ಮತ್ತು ಪಕ್ವತೆಯ ಅವಧಿಗಳು ಬೇರೆ ಬೇರೆಯಾಗಿರುತ್ತವೆ. ಹೂಡಿಕೆಗೆ ಮುಂಚೆ ಚಿಂತಿಸಿ ನಿರ್ಧರಿಸಿರಿ.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!