35 C
Karnataka
Saturday, May 11, 2024

    ನಮ್ಮೂರ ಗಣಪನ ನೋಡುವುದೆ ಹಬ್ಬ

    Must read

    ಮೂರು ದಿನ ದೀಪ ಆರಬಾರದು, ರಾತ್ರಿ,ಹಗಲು… ಎರಡೂ ದೀಪಗಳಿಗೆ ಖಾಲಿ ಆದಾಗಲೆಲ್ಲ ಪಕ್ಕದಲ್ಲಿರುವ ಶೀಶೆಯಿಂದ ಎಣ್ಣೆ ಹಾಕ್ತಾ ಇರಬೇಕು.ಎರಡು ರಾತ್ರಿ ಇರಬೇಕು, ಯಾರ್ಯಾರು ಇಲ್ಲೇ ಇರ್ತೀರಿ….ಅಂತ ದ್ಯಾಮಣ್ಣ ಮೇಷ್ಟ್ರು ಕೇಳಿದ್ರು ಅಂದ್ರೆ, ನಾನಿರ್ತೀನಿ ಸಾ…ನಾನಿರ್ತೀನಿ ಸಾ ಅಂತ ನನ್ನನ್ನು ಸೇರಿಸಿ,ನನ್ನ ಹಲವಾರು ಗೆಳೆಯರು ಕೈ ಎತ್ತುತ್ತಿದ್ದೆವು.

    ಮ್ಮೂರ ಶಾಲೆಯಲ್ಲಿ ಗಣಪತಿ ಹಬ್ಬಕ್ಕೆ ಗಣಪನನ್ನು ಕೂಡಿಸುವ ಸಲುವಾಗಿ ,ಪೂರ್ವಬಾವೀ ತಯಾರಿ ನಡೆಸುವ ಸಲುವಾಗಿ ಶಾಲೆಯಲ್ಲಿ ಒಂದು ಕೋಣೆಯಲ್ಲಿ ಜಮೆ ಆಗಿರುತ್ತಿದ್ದ ನಮ್ಮನ್ನು ಐದನೇ ತರಗತಿಯ ಕ್ಲಾಸ್ ಟೀಚರ್ ಆಗಿದ್ದ ಆಗಲೇ 55 ದಾಟಿದ್ದ ದ್ಯಾಮಣ್ಣ ಮಾಸ್ತರರು ಕೂಡಿ ಹಾಕಿ ಕೇಳಿದರು ಅಂದ್ರೆ ಹತ್ತಿರದಲ್ಲೇ ಗಣಪತಿ ಹಬ್ಬ ಬಂದಿದೆ, ಶಾಲೆಯಲ್ಲಿ ಗಣಪತಿ ಕೂಡಿಸುವ ಕಾರ್ಯಕ್ರಮ ಪ್ರಾರಂಭ ಗೊಂಡಿವೆ ಅಂತ ನಮ್ಮ ಮನಸ್ಸುಗಳು ಪುಳಕ ಗೊಳ್ಳುತ್ತಿದ್ದವು.

    ಇಡೀ ನಮ್ಮ ಊರಲ್ಲಿ ಶಾಲೆಯ ಗಣಪನೂ ಸೇರಿ ಮತ್ತೆರೆಡು ಗಣಪತಿಗಳು ಪ್ರಸಿದ್ದಿ. ಒಂದು ಪೂಲೆಪ್ಪ ಶೆಟ್ಟಿ ಹೋಟೆಲ್ ದು ಮತ್ತೊಂದು ಚನ್ನವೀರಯ್ಯ ಸ್ವಾಮಿ ಮನೆಯದ್ದು. ನಮ್ಮ ಮನೆಯೂ ಸೇರಿ,ಮನೆ ಮನೆಗಳಲ್ಲಿ ಗಣಪ ಇರುತ್ತಿರಲಿಲ್ಲ. ಅಪ್ಪ ತನ್ನ ಶಾಲೆಯ ಗಣಪನನ್ನು ಕೂಡಿಸುವಲ್ಲಿ ಬ್ಯುಸಿ ಇರುತ್ತಿದ್ದುದರಿಂದ ನಮ್ಮ ಮನೆಯಲ್ಲೂ ಗಣಪ ಕೂಡುತ್ತಿರಲಿಲ್ಲ.

    1ನೇ ತರಗತಿಯಿಂದ 4ನೇ ತರಗತಿ ವರೆಗೆ ಪ್ರತಿಯೊಬ್ಬರೂ 5 ಪೈಸೆ, 5,6 ಮತ್ತು 7ನೇ ತರಗತಿಯವರು 10 ಪೈಸೆ ಗಣಪನ ದೇಣಿಗೆ ಕೊಡಬೇಕು. ಅವುಗಳನ್ನೆಲ್ಲ ಕ್ಲಾಸ್ ಲೀಡರ್ ಗಳು ಸಂಗ್ರಹಿಸಿಕೊಂಡು ಇಟ್ಕೋಬೇಕು. ಈ ಪ್ರಕ್ರಿಯೆ 3-4 ದಿನದ ಮುಂಚೆಯೇ ಶುರು ಆಗಬೇಕು ಮತ್ತು ಗಣಪತಿ ಕೂಡುವ ಹಿಂದಿನ ದಿನಕ್ಕೆ ಮುಗಿಯಬೇಕು. 7ನೇ ಕ್ಲಾಸಿನ ಲೀಡರ್ ಬುಡ್ಡೆನಹಳ್ಳಿ ರಂಗಪ್ಪನಿಗೆ ಎಲ್ಲರೂ ಕೊಡಬೇಕು. ಹೆಡ್ಮಾಸ್ಟರ್ ಸಯ್ಯದ್ ಮಹಮ್ಮದ್ ಅವರು ದ್ಯಾಮಣ್ಣ ಮಾಸ್ತರನ್ನು ಉಸ್ತುವಾರಿಕೆಗೆ ನೇಮಿಸುತ್ತಿದ್ದರು. ನಮ್ಮ ಶಾಲೆಗೆ ಮೊದಲನೇ Graduate Head Master ಅಂತ ಬಂದಿದ್ದ ಸಯ್ಯದ್ ಮಾಸ್ಟರ್ ತುಂಬಾ ಸ್ಟ್ರಿಕ್ಟ್ ಮತ್ತು 5ನೇ ಕ್ಲಾಸ್ ನಿಂದ ಇಂಗ್ಲಿಷ್ ಹೇಳುವವರು. ಕೈಯಲ್ಲಿ ಯಾವಾಗಲೂ ಬೆತ್ತ, ಬಿಳೀ ಪೈಜಾಮ, ಬಿಳೀ ಶರ್ಟು. ಅಪ್ಪನೆಂದರೆ ಇವರಿಗೆ ಪ್ರೀತಿ, ಅಪ್ಪನಿಗೂ ಅಭಿಮಾನ. ಮಾತಿಗೊಮ್ಮೆ ನಮ್ಮೂರ ಶಾಲೆಗೆ Graduate Head Master ಬಂದಿರೋದು ಹೆಮ್ಮೆ ಅನ್ನುವ ರೀತಿ ಅವರ ನುಡಿಗಳು. ಅಪ್ಪ ಆಗ ಪಕ್ಕದ ಗೌರಿಪುರದ ಶಾಲೆಯಲ್ಲಿ ಇದ್ದರು. ಬಿಳೀ ಕಚ್ಛೆ,ಬಿಳೀ ಅಂಗಿ ತೊಟ್ಟು, ಎತ್ತರದ ನಿಲುವಿನ ವಿಭೂತಿ ಧಾರಿ ದ್ಯಾಮಣ್ಣ ಮಾಸ್ಟ್ರು ಸೊವೇನಹಳ್ಳಿ ಯಿಂದ ದಿನಾಲೂ ಬರ್ತಿದ್ದರು. ಹಾಗಾಗಿ ಕೂಡ್ಲಿಗಿಯಿಂದ ಗಣಪನನ್ನು ಖರೀದಿಸಿ ತರುವುದು ಅವರ ಜವಾಬ್ದಾರಿ.

    ಆಗ ನಮ್ಮೂರ ಶಾಲೆಯ ಒಟ್ಟು ಗಣತಿ 40 ದಾಟುತ್ತಿರಲಿಲ್ಲ…ಒಂದೂವರೆ ರೂಪಾಯಿಗೆ ಮೀರದ ಒಂದಡಿ ಗಣಪ, ಕಾಯಿ,ಕರ್ಪುರ,ಊದಿನಕಡ್ಡಿ,ದೀಪಕ್ಕೆ ಎಣ್ಣೆ, ಮೂರ್ನಾಲ್ಕು ಲೀಟರ್ ಮಂಡಕ್ಕಿ…ಇವು ಗಣಪತಿ ಹಬ್ಬದ ಬಜೆಟ್…ಬಣ್ಣ ಇಲ್ಲದ ಮಣ್ಣಿನ ಗಣಪಗಳೇ ಹೆಚ್ಚು ಆಗ. ಎಂಟಾಣೆ ಹೆಚ್ಚಿಗೆ ಕೊಟ್ಟು ಬಣ್ಣ ಇದ್ದ ಗಣಪನನ್ನು ದ್ಯಾಮಣ್ಣ ಮಾಸ್ಟ್ರು ಹಿಂದಿನ ದಿನ ತಂದರು ಎಂದರೆ,ಶಾಲೆಗೆಲ್ಲ ಸಂಭ್ರಮ. ಪೇಪರ್ ನಲ್ಲಿ ಮುಚ್ಚಿಟ್ಟಿರುತ್ತಿದ್ದ ಆ ಗಣಪನನ್ನು ನೋಡೋದೇ ಹಬ್ಬ ನಮಗೆಲ್ಲ.

    ಬೊಮ್ಮಘಟ್ಟದ ಶಾಲೆ

    ಸಾಲಾಗಿ ನಾಲ್ಕು ಕೋಣೆಗಳಿದ್ದ ನನ್ನೂರ ಶಾಲೆಯಲ್ಲಿ, 1,2 ಒಂದು ಕೋಣೆಯಲ್ಲಿ, 3,4 ಮತ್ತೊಂದು ಕೋಣೆಯಲ್ಲಿ, 5,6 ಇನ್ನೊಂದರಲ್ಲಿ, 7 ಮಾತ್ರ ಹೆಡ್ಮಾಸ್ಟರ್ ರೂಮ್ ಕಮ್ ಆಫೀಸ್ ಅನ್ನುವ ಕೋಣೆಯಲ್ಲಿ. ಸಾಮಾನ್ಯವಾಗಿ ಕೊನೆಯ ಕೋಣೆ, ಆಫೀಸ್ ಪಕ್ಕ ಗಣಪತಿಯನ್ನು ಕೂಡಿಸುತ್ತಿದ್ದೆವು. ಶ್ರಾವಣ ಮಾಸ ಮುಗಿಯುತ್ತ ಬರುತ್ತಿದ್ದ ಆ ದಿನಗಳಲ್ಲಿ, ಮಳೆ ಜೋರು ಬಂದರೆ, ಕೋಣೆಗಳು ಸೋರುತ್ತಿದ್ದವು, ಹಾಗೆ ಸೋರದ ಜಾಗ ನೋಡಿ ಕೂಡಿಸುತ್ತಿದ್ದೆವು.

    ಗಣಪತಿ ಬಂದ ದಿನವೇ ಶಾಲೆ ಮುಗಿದ ನಂತರ ಕೋಣೆಯಲ್ಲಿ ಇರುತ್ತಿದ್ದ ಟೇಬಲ್, ಅದರ ಮೇಲೆ ಕುರ್ಚಿ ಇಟ್ಟು, ಎರಡೂ ಕಡೆ ಬಾಳೆ ಕಂಬ,ಅಥವಾ ತೆಂಗಿನ ಗರಿಗಳನ್ನು ಇಟ್ಟು, ಕುರ್ಚಿಗೆ ಒಂದು ಬಿಳೀ ಬಟ್ಟೆ ಹಾಸಿದೆವು ಅಂದ್ರೆ ಗಣಪನ ಪೀಠ ಸಿದ್ಧವಾದಂತೆ. ಅದನ್ನೇ ಕಣ್ತುಂಬಾ ನೋಡ್ತಾ ಸಂಭ್ರಮಗೊಂಡು ಮನೆಗೆ ಹೋದರೆ,ನಿದ್ದೆಯೇ ಬರ್ತಿದ್ದಿಲ್ಲ ಅವತ್ತೆಲ್ಲ!

    ಆಗಸ್ಟ್ 15,ಜನವರಿ 26 ಬಿಟ್ಟರೆ ಬೆಳಿಗ್ಗೆ ಬೇಗನೇ ಶಾಲೆಯ ಬಯಲಲ್ಲಿ ಸೇರುತ್ತಿದ್ದೆಂದರೆ ಈ ಗಣಪನ ಹಬ್ಬಕ್ಕೇ. ಊರ ದಕ್ಷಿಣಕ್ಕೆ,ಎತ್ತರದ ಸ್ಥಳದಲ್ಲಿ, ಉತ್ತರಕ್ಕೆ ಮುಖ ಮಾಡಿ ನಿಂತಿದ್ದ ನಾಲ್ಕು ಕೋಣೆಗಳ ಮುಂದೆ 6ಅಡಿ ವಾರಾಂಡ ಹೊಂದಿದ್ದ,ಮಂಗಳೂರು ಹೆಂಚಿನ ಮಾಳಿಗೆಯ ಕಲ್ಲಿನ ಕಟ್ಟಡ ನನ್ನ ಶಾಲೆ. ಮುಂದಿನ ವಿಶಾಲ ಬಯಲು, ಇಡೀ ತಾಲೂಕಲ್ಲೇ ಯಾವ ಶಾಲೆಗೂ ಇರಲಿಲ್ಲ. ಊರಿಂದ ಹೊರಗೇ ಎನ್ನುವಷ್ಟು ದೂರದಲ್ಲಿತ್ತು. ಹೂ,ಎಣ್ಣೆ ಬತ್ತಿ,ದೀಪ ಹಿಡಿದು ಹುಡುಗಿಯರು ಬಂದರೆ, ಹಾಸಲು ಜಮಖಾನ,ತೆಂಗಿನ ಗರಿ,ಜಾಗಟೆ,ಗಂಟೆ ಮುಂತಾದುವುಗಳನ್ನು ಹೊತ್ತು ಹುಡುಗರು ಬರುತ್ತಿದ್ದರು. ಸಯ್ಯದ್ ಮೇಷ್ಟ್ರು ಆಗಲೇ ಇರುತ್ತಿದ್ದರು. ಗಾಂಧೀಜಿ, ನೆಹರು ಫೋಟೋಗಳ ಜೊತೆ ಲಕ್ಷ್ಮಿ,ಗಣಪ ಸರಸ್ವತಿಯರು ಇದ್ದ ಒಂದು ಫೋಟೋವನ್ನು ಬೀರುವಿನಿಂದ ತೆಗೆದು ಕೊಡುತ್ತಿದ್ದರು.

    ರೇವಣ ಸಿದ್ದಯ್ಯ,ದ್ಯಾಮಣ್ಣ,ಶಾಮಸುಂದರ್ ರಾವ್,ಅಗ್ರಹಾರದ ಶರಣಪ್ಪ,ರಾಮದುರ್ಗದ ಕೃಷ್ಣಮೂರ್ತಿ, ಶೆಲಿಯಪ್ಪನ ಹಳ್ಳಿಯ ಷಣ್ಮುಖಪ್ಪ ಮಾಸ್ಟರ್ ಗಳ ವೃಂದ ಒಬ್ಬೊಬ್ಬರಾಗಿ ಬರುತ್ತಿದ್ದರು. ಅಕ್ಕ ಪಕ್ಕದ 2,3 ಕಿ.ಮೀ ದೂರದ ಹಳ್ಳಿಗಳಿಂದ ನಮ್ಮ ಗೆಳೆಯರೂ ಬರುತ್ತಿದ್ದರು. ಬೆಳಗಿನ 9 ಘಂಟೆಗೆಲ್ಲ ಗಣಪನ ಹಬ್ಬದ ಸಡಗರ ಶಾಲೆಯ ಆವರಣದ ತುಂಬಾ ಪಸರಿಸುತ್ತಿತ್ತು.

    ಒಗೆದ,ಶುಭ್ರಗೊಂಡ ಬಟ್ಟೆಗಳನ್ನು ಹಾಕಿಕೊಂಡು,ಢಾಳಾಕಾರವಾಗಿ ಕೊಬ್ಬರಿ ಎಣ್ಣೆ ತಲೆಗೆ ಹಚ್ಚಿ ಬಾಚಿದ ತಲೆಗಳೊಂದಿಗೆ ಎಲ್ಲರೂ ಗಣಪನ ಪೀಠದ ಮುಂದೆ ನೆರೆದಿರುತ್ತಿದ್ದೆವು. ನಮ್ಮ ಗೆಳೆಯನೇ ಆದ ಗರಗದ ರಾಮಾಚಾರಿ ಮೊಮ್ಮಗ ಗುರುರಾಜ ಆಗತಾನೇ ಮುಂಜಿ ಮಾಡಿಸಿಕೊಂಡು ಮುಖಕ್ಕೆಲ್ಲ ಮುದ್ರೆ ಹೊತ್ತಿಸಿಕೊಂಡು, ಬರೀ ಮೈಯಲ್ಲಿ ಗಣಪನನ್ನು ಸಿಂಗರಿಸುತ್ತ ಹತ್ತಿರ ಕೂತಿರುತ್ತಿದ್ದ. ಏನೇನೋ ಮಂತ್ರ ಹೇಳ್ತಿದ್ದ, ಶುಕ್ಲಾಮ್ ಭರಧರಮ್  ಬಿಟ್ಟು ಬೇರೆ ನಮಗೆ ಅರ್ಥ ಆಗ್ತಿರಲಿಲ್ಲ.

    ಕರ್ಪೂರ,ಊದಿನಕಡ್ಡಿ ಪರಿಮಳಗಳೊಂದಿಗೆ ತುಂಬಿದ್ದ ಆ ಕೊಠಡಿ ನಮಗೆ ದೇವಸ್ಥಾನವಾಗಿ ಕಾಣುತ್ತಿತ್ತು. ಬುಡ್ಡೆನಹಳ್ಳಿ ಪಾಂಡು,ಪೂಜಾರಿ ಕಿಟ್ಟ  ನಮ್ಮ ಜೊತೆಯ ಸೊಗಸಾದ ಹಾಡುಗಾರರು  ಆಗ.  ….ಪಾರ್ವತಿ ಮಾತೆಯ ಮಗನಾಗಿ ಜನಿಸಿದ ಗಣಪತಿ…….ಅಂತ ಹಾಡಿನ ಜೊತೆ ಇನ್ನೂ ಮೂರ್ನಾಲ್ಕು ಗಣಪನ ಹಾಡುಗಳನ್ನು ತಯಾರು ಮಾಡಿಕೊಂಡು ಬಂದು ಹಾಡುತ್ತಿದ್ದರು. ಗುರು ಮಂತ್ರ ಜೋರಾಗಿ ಹೇಳಿದನೆಂದ್ರೆ, ಜಾಗಟೆ,ಶಂಖ ರೆಡಿಮಾಡಿಕೊಂಡ ತಂಡ ಜೋರಾಗಿ ಜಾಗಟೆ ಬಾರಿಸಿ,ಶಂಖ ಊದುತ್ತಿದ್ದರು. ಕಿಟ್ಟ ಇದರ ಉಸ್ತುವಾರಿ. ಎಲ್ಲರೂ…ಬೆನಕ,ಬೆನಕ ಏಕದಂತ ಪಚ್ಛೆಕಲ್ಲು ಪಾಣಿಪೀಠ….ಅಂತ ಶುರುಮಾಡಿ…… ಒಪ್ಪಿದ ವಿಘ್ನೇಶ್ವರನಿಗೆ ಇಪ್ಪತ್ತೊಂದು ನಮಸ್ಕಾರಗಳು ಅಂತ ಕಿವಿ ಹಿಡಿದುಕೊಂಡು ಮೇಲೆ,ಕೆಳಗೆ ಕುಳಿತು ಎದ್ದೆವೆಂದರೆ ಗಣಪನ ಶಾಲೆಯ ಪೂಜೆ ಮುಗಿತು.
    ಒಡೆದ ತೆಂಗಿನಕಾಯಿಗಳ ಕೊಬ್ಬರಿಯನ್ನು ಸಣ್ಣ ಸಣ್ಣ ಚೂರು ಮಾಡಿ,ಬೆಲ್ಲದ ಚೂರಿನೊಂದಿಗೆ ಮಂಡಕ್ಕಿಗೆ ಬೆರೆಸಿ, ಅದನ್ನು ಎಲ್ಲರಿಗೂ ಪ್ರಸಾದ ಅಂತ ಶಾಮಸುಂದರ್ ಮೇಷ್ಟ್ರು ಕೊಡ್ತಿದ್ದರು.

    ತಿಂದು ಬಯಲಿಗೆ ಬಂದರೆ ದಿನ ಇಡೀ ಕಬ್ಬಡ್ಡಿ,ಖೊಖೊ, ಮೂರುಕಾಲಿನ ಓಟ, ಚಮಚದಲ್ಲಿ ನಿಂಬೆ ಹಣ್ಣು ಇಟ್ಟುಕೊಂಡು ಓಡುವುದು, ಸೂಜಿಗೆ ದಾರ ಪೋಣಿಸುವುದು ಹೀಗೆ ವಿಧ,ವಿಧ ಆಟಗಳು. ಅಗ್ರಹಾರದ ಶರಣಪ್ಪ ಮೇಷ್ಟ್ರ ಫೈನಲ್ ಗೆ ಬಂದ ತಂಡಗಳ ಕಬ್ಬಡ್ಡಿ ಆಡಿಸುವುದಂತೂ ನಮಗೆ ವರ್ಲ್ಡ್ ಕಪ್. ಒಬ್ಬೊಬ್ಬ ಮೇಷ್ಟ್ರು ಒಂದೊಂದು ಆಟ ಆಡಿಸಿ,ಗೆದ್ದವರ ಹೆಸರು ಬರೆದುಕೊಳ್ಳುತ್ತಿದ್ದರು. ಅದರಲ್ಲೇ ಶಾಲೆಯ ಚಾಂಪಿಯನ್ನಗಳೂ ಇರುತ್ತಿದ್ದರು!

    ಕೂಡ್ಲಿಗಿ ಬಸ್ ಡಿಪೋದ ಗಣಪತಿ ಸುತ್ತ ಭಾರೀ ಪ್ರಸಿದ್ಧಿ. ಅವತ್ತು ಊರಿಗೆ ಬಸ್ಸುಗಳು ಬರ್ತಿರಲಿಲ್ಲ. ಸಾಯಂಕಾಲ ನಾವೇ ಎಂಟತ್ತು ಹುಡುಗರು ಗುಂಪು ಮಾಡಿಕೊಂಡು ಯಾವ್ಯಾವ ಮನೆಗಳಲ್ಲಿ ಗಣಪ ಇರುತ್ತಿದ್ದನೋ ಅಲ್ಲೆಲ್ಲಾ ಹೋಗಿ, ಸಾಲಾಗಿ ನಿಂತುಕೊಂಡು ಮೂರ್ನಾಲ್ಕು ಗಣಪನ ಹಾಡು ಹಾಡಿ ಮತ್ತೆ ಇಪ್ಪತ್ತೊಂದು ನಮಸ್ಕಾರ ಹಾಕಿ ಬರೋದು. ಹಾಗೆ ಪ್ರತೀ ಗಣಪನ ಮುಂದೆ ಹಾಕಿದ ನಮಸ್ಕಾರಗಳಿಗೆ ಲೆಕ್ಕವೇ ಇಲ್ಲ. ಕೆಲವು ಅವತ್ತೇ ಕೆರೆ ಸೇರುವ ಗಣಪಗಳಿದ್ದರೆ,ಅವುಗಳಿಗೆ ಮೊದಲೇ ನಮಸ್ಕಾರ. ಮೂರು ದಿನಕ್ಕೆ ಹೋಗುವ ಗಣಪಗಳಿಗೆ ನಾಳೆ ಹೋಗುವ ಅಂದು ಕೊಳ್ಳುತ್ತಿದ್ದೆವು.

    ಪೂಲೆಪ್ಪ ಶೆಟ್ಟಿ ಹೋಟೆಲಿನ ಗಣಪನದ್ದೇ ಒಂದು ಸ್ಪೆಷಲ್ ಏನಂದ್ರೆ, ಗಣಪ ಒಂದು ವರ್ಷ ಪೂರ್ತಿ ಹೋಟಲ್ ನಲ್ಲಿ ಇರ್ತಿದ್ದ. ಹೋದ ವರ್ಷದ ಹಳೆಯ ಗಣಪನನ್ನು ಈ ವರ್ಷ ಕೆರೆಗೆ ಹಾಕುವುದು. ಅಲ್ಲದೆ ವರ್ಷ ಇಡೀ ಶುಕ್ರವಾರಗಳ  ಸಾಯಂಕಾಲ ಮಂಡಕ್ಕಿ ಬೆಲ್ಲ ಹಂಚುತ್ತಿದ್ದರು,ಹುಡುಗರಿಗೆ.

     ಕತ್ತಲಾಗುವುದರೊಳಗೆ ಮನೆಯಲ್ಲಿರಬೇಕು, ಯಾರೂ ಚಂದ್ರನನ್ನು ನೋಡಬಾರದು ಇವತ್ತು ಅಂತ ಅಮ್ಮ,ಅಪ್ಪ ಹೇಳಿದ್ದ ಮಾತುಗಳು ನೆನಪಿಗೆ ಬಂದು, ಸ್ವಲ್ಪ ಕತ್ತಲಾದರೂ ತಲೆತಗ್ಗಿಸಿಕೊಂಡು,ಅಪ್ಪಿ ತಪ್ಪಿಯೂ ಆಕಾಶದ ಕಡೆ,ಚಂದ್ರನ ಕಡೆ ನೋಡ್ತಿರಲಿಲ್ಲ. ಅಪ್ಪನ ಶಮಂತಕೋಪಾಖ್ಯಾನ ಕಥೆಯಲ್ಲಿ ಹೊಟ್ಟೆತುಂಬಾ ಕಡಬು ತಿಂದು,ಹೊಟ್ಟೆ ಹೊಡೆದು,ಸಿಕ್ಕ ಹಾವನ್ನು ಹೊಟ್ಟೆಗೆ ಸುತ್ತಿಕೊಂಡ ಗಣಪನನ್ನು ನೆನೆಸಿಕೊಂಡು ನಗುವುದೇ ನಗುವುದು. ಸಿಟ್ಟಾದ ಗಣಪ,ಅವನ ಅವಸ್ಥೆ ನೋಡಿ ನಕ್ಕ ಚಂದ್ರನನ್ನು ಶಪಿಸಿದ್ದು ಕೇಳಿ ಗಂಭೀರವಾಗುವುದು. ಜೊತೆಗೆ ಅಪ್ಪ ಗಣಪನಿಗೆ ಮದುವೆ ಏಕೆ ಆಗಲಿಲ್ಲ ಅಂತ ಕಥೆ ಹೇಳ್ತಿದ್ದರು.

    ಕೃಷ್ಣ, ಕರಡಿ (ಜಾಂಬವಂತ) ಯುದ್ಧ ಮಾಡೋದು, ಸೋಲದೆ ಹೋದಾಗ,ಕೃಷ್ಣ ರಾಮನಾಗಿ ತೋರೋದು,ಜಾಂಬವತಿಯನ್ನು ಕೃಷ್ಣ ಮದುವೆ ಆಗೋದು,ಮತ್ತೆ ಶಮಂತಕ ಮಣಿ ಸಿಕ್ಕಾಗ ಆಗ್ತಿದ್ದ ಖುಷಿ ಎಲ್ಲಾ ಕೇಳಿ ನಾವು ದ್ವಾಪರ,ತೇತ್ರಾಯುಗಕ್ಕೆ ಹೋಗಿಬಿಟ್ಟಿರುತ್ತಿದ್ದೆವು.

    ಮೂರ್ನಾಲ್ಕು ದಿನ ಗಣಪನ ಕಥೆ ಶಾಲೆ,ಮನೆಗಳಲ್ಲಿ ಕೇಳ್ತಿದ್ದರೆ,ಈ ಶಿವನಿಗೆ ಯಾಕೆ ಅಷ್ಟು ಸಿಟ್ಟು ಬರಬೇಕು ಮಗನ ಮೇಲೆ ಅಂತ ಅನ್ನಿಸುತ್ತಿತ್ತು.  ಆದರೆ ನಮ್ಮ ಅಜ್ಜಿ ಬೇರೆಯದೇ ಕಥೆ ಹೇಳುತ್ತಿದ್ದರು. ಭೂಮಿ ಗೌರಮ್ಮನ ತವರು ಮನೆ. ಗೌರಮ್ಮ ತವರು ಮನೆಗೆ ಬಂದಿರ್ತಾಳೆ, ಮಗ ಗಣಪ ಅಮ್ಮನನ್ನು ಕರೆದುಕೊಂಡು ಕೈಲಾಸಕ್ಕೆ ಹೋಗಲು ಭೂಮಿಗೆ ಬರ್ತಾನೆ. ಹಾಗೆ ಬಂದವನು ಭೂಮಿಯ ಮೇಲೆ ಮಳೆ,ಬೆಳೆ,ಹಸಿರು ನೋಡಿ ತನ್ನ ಅಪ್ಪನಿಗೆ ವರದಿ ಒಪ್ಪಿಸುತ್ತಾನೆ….ಅಂತ…ಎಳೆ ಮೆದುಳಿಗೆ ಇಂತಹ ಕಥೆಗಳು ನಾಟಿ, ಶಿವ, ಗೌರಿ,ಗಣಪ ಎಲ್ಲ ನಮ್ಮ ಪಕ್ಕದ ಮನೆಯವರೇ ಎನ್ನುವಂತಹ ಕಲ್ಪನೆ,ಸಮಾಧಾನ, ಮುದ ನೀಡುತ್ತಿತ್ತು.

    ನಮ್ಮೂರಲ್ಲಿ ಆಗ ಸಾಮೂಹಿಕ ಗಣಪ ಇರಲಿಲ್ಲ. ಪೆಂಡಾಲ್,ಆರ್ಕೆಸ್ತ್ರಾ ಇಲ್ಲ. ಆದರೂ ಗಣಪನ ಹಬ್ಬ ನಮಗೆ ಅಳಿಯದ ನೆನಪುಗಳಲ್ಲಿ ಸೇರಿದೆ. ತುಂಬಾ ಸಂಭ್ರಮದಿಂದ ಮಾಡಿದ್ದೆವು ಅಂತ ಅನ್ನಿಸ್ತಿದೆ.


    ಒಂದು ಇಂಥ ಗಣಪತಿ ಹಬ್ಬ ಮುಗಿಸಿ, ಸಡಗರದಿಂದ ಗಣಪನನ್ನು ನಮ್ಮೂರ ಕೆರೆಯ ನೀರಲ್ಲಿ  …ಈ ವರ್ಷ ಹೋಗಯ್ಯ…ಬರೋ ವರ್ಷ ಬಾರಯ್ಯ…..ಚಿಕ್ಕೆರೆಗೆ ಎದ್ದ,…ಹಿರೇಕೆರೆಗೆ ಬಿದ್ದ….ಅಂತ ಮುಳುಗಿಸಿ ಶಾಲೆಗೆ ಬಂದಾಗ, ಸಯ್ಯದ್ ಮೇಷ್ಟ್ರು ಎಲ್ಲರಿಗೂ ಪೆಪ್ಪರಮೆಂಟ್ ಕೊಟ್ಟು, ಸುತ್ತಲೂ ಕರೆದುಕೊಂಡು ಎಲ್ಲರ ತಲೆಮೇಲೆ ಕೈ ಆಡಿಸುತ್ತಾ,ಕಣ್ಣಲ್ಲಿ ನೀರು ತಂದುಕೊಂಡು, ನಾಳೆಯಿಂದ ನಾನು ಶಾಲೆಗೆ ಬರಲ್ಲ,ಹೋಗ್ತಿದ್ದೇನೆ ಅಂತ ಭಾವಪರವಶರಾಗಿದ್ದರು.
    ರೈಲ್ವೇ ಇಲಾಖೆಯಲ್ಲಿ ಅವರಿಗೆ ನೌಕರಿ ಸಿಕ್ಕು, ಗುಂತಕಲ್ಲಿಗೆ ಹೋದರು. ಅವತ್ತೇ ಕೊನೆ ಮತ್ತೆ ನನಗೆ ಅವರನ್ನು ನೋಡುವ ಭಾಗ್ಯ ಸಿಕ್ಕಿಲ್ಲ.

    ಅವರ ಜಾಗಕ್ಕೆ ಹರಪನಹಳ್ಳಿಯಿಂದ ನಾಗಭೂಷಣ್ ನಮ್ಮೂರ ಶಾಲೆಗೆ Graduate Head Master ಆಗಿ ಬಂದಿದ್ದರು. ಸದ್ದಿಲ್ಲದೆ ಜರುಗುತ್ತಿರುವ ಈ ವರ್ಷದ ಕರೊನಾ ನನ್ನ ಬಾಲ್ಯದ ಸದ್ದಿಲ್ಲದ ಗಣಪನನ್ನು ನೆನಪಿಗೆ ತಂದ. ಅಷ್ಟೇ ಅಲ್ಲ,ಇಂತಹ ಒಂದು ಗಣಪತಿ ಹಬ್ಬದಂದೇ ಗೌರಿಪುರ ಶಾಲೆಯ ಗಣಪತಿ ಮುಂದೆ ನನಗೆ ಅಪ್ಪ ತನ್ನ ತೊಡೆಯ ಮೇಲೆ ಕೂಡಿಸಿಕೊಂಡು ಪ್ರಥಮವಾಗಿ ಅಕ್ಷರ ಅಭ್ಯಾಸ ಮಾಡಿಸಿದ್ದರಂತೆ.

    Photo by Shubham Belwate on Unsplash

    ಮಂಜುನಾಥ ಬೊಮ್ಮಘಟ್ಟ
    ಮಂಜುನಾಥ ಬೊಮ್ಮಘಟ್ಟ
    ವೃತ್ತಿಯಿಂದ ಎಂಜಿನಿಯರ್, ಪ್ರವೃತ್ತಿಯಿಂದ ಬರಹಗಾರ. ಸಧ್ಯ ಬಳ್ಳಾರಿಯಲ್ಲಿ ವಾಸ.
    spot_img

    More articles

    8 COMMENTS

    1. ಐವತ್ತು ವರ್ಷ ಹಿಂದಿನ ನೆನಪು ಮಾಡಿಸಿದ್ದೀಯಾ ವಂದನೆಗಳು 👍👍👏

    2. ಗಣೇಶ ಚೌತಿಯಂದು ಅಕ್ಷರದ ಓಂಕಾರ ಬರೆದ ಈ ದಿನ ಲೇಖಕರ ಬಾಳಲ್ಲಿ ಮಹತ್ವದ ದಿನ ಮತ್ತು ಮರೆಯಲಾರದ ದಿನ.ಅಪ್ಪನ ತೊಡೆಯ ಮೇಲೆ ಕುಳಿತು ಬರೆದ ಅಕ್ಷರ ನಾಲ್ಕು ನಿಮಿಷದ ಓದಿನ ನೆನಪಿನ ಬುತ್ತಿಯನ್ನು ಸಾವಿರಾರು ಜನಕ್ಕೆ ಹಂಚಿ ಆನಂದಪಡುವಂತಾಯಿತು.ಗಣಪನ ಮೋದಕದಂತಿತ್ತು.ಬೇಷ್………ಮಂಜು

    3. ಬಾಲ್ಯದ ಶಾಲಾ ಗಣೇಶ ಹಬ್ಬದ ಗ್ರಾಮೀಣ ಸೊಗಡಿನ ಆಚರಣೆಯನ್ನು ಸರಣಿ ನೆನಪುಗಳೊಂದಿಗೆ ಅತ್ಯುತ್ತಮ ವಾಗಿ ದಾಖಲಿಸಿದ್ದೀಯ. ಹಾಗೆಯೆ ನಮ್ಮ ಬಾಲ್ಯದ ಆಚರಣೆ ನೆನಪಿನ ಬುತ್ತಿ ಬಿಚ್ಚಿ ನೋಡಿದ ಅನುಭವ ಅನುರಣಿಸಿದ ಲೇಖನ ಮಂಜು

    4. ಅದ್ಭುತ ನೆನಪಿನ ಶಕ್ತಿಯನ್ನು ದೇವರು ನಿಮಗೆ ಕರುಣಿಸಿದ್ದಾನೆ.ಲೇಖನ ಓದಿ ಖುಷಿ ಆಯಿತು.

    5. ಮಂಜಣ್ಣ, ನೆನಪಿನ ಬುತ್ತಿ 👌🏻👍🏻.
      ಹೌದು ಬಾಲ್ಯದ ದಿನಗಳನ್ನು ಈ ತರಹದ ಸಂತೋಷ ಮಯವಾದ ವಾತಾವರಣ ದಲ್ಲಿ ಅನುಭವಿಸಿದೆವು ಎಂಬುದೇ ಮಹದಾನಂದ.

      ನಿಮ್ಮ ಅಪಾರ ಸ್ಮರಣಾ ಶಕ್ತಿ ಹಾಗೂ ಯಥಾವತ್ತಾಗಿ ಕಣ್ಣಿಗೆ ಕಾಣುವ ಹಾಗೆ ಸ್ವಾರಸ್ಯ ವಾಗಿ ಬರೆದಿದ್ದೀರ.

      ಇನ್ನು ಹೀಗೆ ಅನೇಕ ಬರವಣಿಗೆಗಳು ಬರಲಿ ಎಂದು ಆಶಿಸುತ್ತೇನೆ.

      ಧನಂಜಯ್ ಶ್ಯಾನಭೋಗ್.
      ಬೊಮ್ಮಘಟ್ಟ

    6. ಓದಿ ತುಂಬಾ ಸಂತೋಷವಾಯ್ತು, ಮಂಜು! ಎಂಥ ಒಳ್ಳೆಯ ನೆನೆಪುಗಳು… ಅಷ್ಟೇ ಹೃದ್ಯವಾದ ಬರೆಹ!

    LEAVE A REPLY

    Please enter your comment!
    Please enter your name here

    Latest article

    error: Content is protected !!