26.3 C
Karnataka
Monday, May 20, 2024

    ಅಗತ್ಯದ ಕೆಲಸಗಾರರ ಪೂರೈಕೆಯಾಗದ ಅಗತ್ಯಗಳು

    Must read

    ಬದುಕಿನ ಹೃದಯದ ಬಡಿತಕ್ಕೆ ಹಲವು ಮಿಡಿತಗಳ ಪೂರೈಕೆಯಾಗುತ್ತಿರಬೇಕು. ಇಲ್ಲದಿದ್ದರೆ ಅದು ಸ್ಥಗಿತವಾಗಿ ಜೀವನದಲ್ಲಿ ಆಹಾಕಾರ ಶುರುವಾಗುತ್ತದೆ.ಇಂದಿನ ಜಗತ್ತು ಹಿಂದೆಂದಿಗಿಂತಲೂ ಸಂಕೀರ್ಣವಾಗಿದೆ.ಬದುಕಿನಲ್ಲಿ, ಹೆಚ್ಚು, ಹೆಚ್ಚು ಸಮಯ ಸಿಗುತ್ತದ್ದಂತೆ ಅದಕ್ಕಿನ್ನ ಹೆಚ್ಚು ಅನಗತ್ಯ ಕೆಲಸಗಳನ್ನು,ಹವ್ಯಾಸಗಳನ್ನು ಸೃಷ್ಬಿಸಿಕೊಂಡು ಬಿಟ್ಟಿದ್ದೇವೆ.ಹಾಗಾಗಿ ಇಂದಿನ ಕಾಲದ  ‘ಅಗತ್ಯದ ಬದುಕು ‘ ಎನ್ನುವ ಅರ್ಥಕ್ಕೆ ಬಹು ದೊಡ್ಡ ವ್ಯಾಪ್ತಿಯಿದೆ.

    ಕೋವಿಡ್ ನ ಕಾರಣವಾಗಿ ’ ಅಗತ್ಯ ಕೆಲಸಗಾರರು ’ ಮತ್ತು‘ಅಗತ್ಯವಾದಷ್ಟು ಬದುಕು ‘ ಎಂದರೆ ಏನು ಎಂದು ಎಲ್ಲರೂ ತಿಳಿಯುವಂತಾಗಿದೆ. ಜೊತೆ ಜೊತೆಯಲ್ಲೇ ಬದುಕನ್ನು ನಡೆಸಲುಸಮಾಜದ ಎಲ್ಲರೂ ಬೇಕು ಎನ್ನುತ್ತಿದ್ದ ವಿಶಾಲ ಅರ್ಥಕ್ಕೆ ಕಡಿವಾಣ ಬಿದ್ದು, ಬದುಕಿನ ಮೂಲಭೂತ ಅಗತ್ಯಗಳೇನು ಎನ್ನುವುದನ್ನು ಅರಿಯಲು ಲಾಕ್ ಡೌನ್ ಅನುವುಮಾಡಿಕೊಟ್ಟಿದೆ. ಅಗತ್ಯ ಕೆಲಸಗಾರರು ಯಾರು ಎನ್ನುವುದನ್ನು ಪ್ರತಿದೇಶದ ಜನರು ಅರಿಯುವಂತಾಗಿದೆ. ಅಗತ್ಯ ಕೆಲಸಗಾರರು ( Essential workers) ಎಂದು ಕರೆಸಿಕೊಳ್ಳುವ ಇವರಿಗೆ ಹಿಂದೆಂದೂ ಸಿಗದ ಗೌರವ ಮತ್ತು ಮನ್ನಣೆಗಳು ದೊರೆತಿವೆ.

    ಕೈ ತುಂಬ ಕೆಲಸ, ಹೊಟ್ಟೆಯ ತುಂಬ ಊಟ, ಸಂಸಾರ, ನಿದ್ದೆ -ಇವಿಷ್ಟೇ ಸಾಧಾರಣವಾದ ದಿನವೊಂದರಲ್ಲಿ ಇರುತ್ತಿದ್ದ ಕಾಲ ಮುಗಿದಿದೆ. ಸಾಧಾರಣ ದಿನವೊಂದರ ಸ್ವರೂಪವೇ ಬದಲಾಗಿದೆ. ಅಗತ್ಯಗಳೂ ಬದಲಾಗಿವೆ. ಹೀಗಾಗಿ ನಾವೆಲ್ಲ ಪ್ರಗತಿಯ ಪ್ರತಿ ಉತ್ಪಾದನೆಗೆ ಹರಕೆಯ ಕುರಿಗಳಂತೆ ಗ್ರಾಹಕರಾಗಿದ್ದೇವೆ.ಹೊಸ ಹೊಸ ಆವಿಷ್ಕಾರಗಳನ್ನು ನಮ್ಮದಾಗಿಸಿಕೊಳ್ಳುವ ಕನಸಿನಲ್ಲೇ ನಮ್ಮ ದುಡಿಮೆಯನ್ನು ಕೇಂದ್ರೀಕರಿಸಿಕೊಂಡಿದ್ದೇವೆ. ಇದು ಬದಲಾವಣೆಗೆ ಸದಾ ತುಡಿವ ಮನುಷ್ಯನ ಸಹಜ ವರ್ತನೆ.’ಇರುವುದನ್ನೆಲ್ಲ ಹಿಂದಿಕ್ಕಿ ಇಲ್ಲದುದರೆಡೆಗೆ ತುಡಿವುದೇ ಜೀವನ ’-ಎನ್ನುವ ಸರ್ವಕಾಲಿಕ ಮಾತಿನಂತೆ.

    ದೊಡ್ಡ ಚಿತ್ರಣವೊಂದರಲ್ಲಿ ಕೆಲವೆಲ್ಲ ವಿಚಾರಗಳು ಗೌಣವಾದರೂ ನಮ್ಮ ಹಲವು ಅಗತ್ಯಗಳು ಸುತ್ತ ಮುತ್ತಲಿನ ಜಗತ್ತಿನ ಮೇಲೆ ಅವಲಂಬಿತವಾಗಿವೆ. ಈ ಕಾರಣ ಜಗತ್ತಿನೊಂದಿಗೆ ನಾವು ಒಪ್ಪಂದ ಮಾಡಿಕೊಳ್ಳುತ್ತ  ಸಾಗುತ್ತೇವೆ. ಒಂದು ಅರ್ಥದಲ್ಲಿ ಬೇರೆ ವಿಧಿಯೂ ಇಲ್ಲ.ಉದಾಹರಣೆಗೆ ಮೂಲಭೂತ ಶಿಕ್ಷಣ,ಮಾಹಿತಿಗಳು, ಓದು,ಬರಹ,ವ್ಯಾಪಾರ,ಕೆಲಸಗಳು, ಮನರಂಜನೆಗಳು ಎಲ್ಲವೂ ಅಂತರ್ಜಾಲ ಮಾಧ್ಯಮಕ್ಕೆ ಶರಣಾಗಿರುವಾಗ, ಎಷ್ಟು ಜನರು, ಎಷ್ಟು ಕಾಲ ಬದಲಾವಣೆಗಳನ್ನು ವಿರೋಧಿಸಬಲ್ಲರು? ಸ್ಮಾರ್ಟ್ ಫೋನ್ ಗಳು, ಖಾಸಗೀ ಮನರಂಜನೆಯ ಚಾನಲ್ ಗಳು , ಅಂತರ್ಜಾಲ, ಸಾಮಾಜಿಕ ಜಾಲತಾಣಗಳು ಇವೆಲ್ಲ ಬದುಕಿಗೆ ವೇಗವನ್ನು ನೀಡುತ್ತಲೇ ಸಾಗಿವೆ.ಅವುಗಳ ಮೇಲೆ ನಮ್ಮ ಅವಲಂಬನೆ ಹೆಚ್ಚಾದಂತೆಲ್ಲ ನಮ್ಮ ಅಗತ್ಯಗಳ ಪರಿಧಿಯೂ ಹಿಗ್ಗಿದೆ. ಹೀಗಾಗಿ ನಮ್ಮ ಸಾಮಾನ್ಯ ಬದುಕಿನ ಇಂದಿನ ಮೂಲಭೂತ ಅಗತ್ಯಗಳು ಹಿಂದೆಂದಿಗಿಂತಲೂ ಹೆಚ್ಚಾಗಿವೆ.

    ಸಾಮಾಜಿಕ ಸಂಸ್ಕೃತಿಗಳನ್ನು ಆಧರಿಸಿಆಯಾ ದೇಶಗಳು ತಮ್ಮ ’ಅಗತ್ಯ ಕೆಲಸಗಾರರನ್ನು ’ ಹೆಸರಿಸಿವೆ.ಇವುಗಳಲ್ಲಿ ಹಲವು ಸಣ್ಣ ಪುಟ್ಟ ವ್ಯತ್ಯಾಸಗಳಿವೆ. ಹೀಗಿದ್ದೂ.ಜಾಗತೀಕರಣದ ಕಾರಣ ಇಂದಿನ ಜಗತ್ತಿನ ಬಹುತೇಕ ಎಲ್ಲ ದೇಶಗಳ ಜನರ ಅಗತ್ಯಗಳು ಒಂದೇ ಆಗುತ್ತ ಸಾಗಿವೆ.

    ಯಾರು ಅಗತ್ಯ ಕೆಲಸಗಾರರು?

    ಆರೋಗ್ಯ ಇಲಾಖೆಗೆ ಸಂಬಂಧಿಸಿದ ಎಲ್ಲ ಕೆಲಸಗಾರರು,ಆಹಾರ ಸರಬರಾಜು ಸರಪಳಿಯಲ್ಲಿರುವ  ಅಂದರೆ ಬೆಳೆವವರು,ಉತ್ಪಾದಕರು, ಆಹಾರದ ಕಾರ್ಖಾನೆ, ಪ್ಯಾಕ್ ಮಾಡುವವರು, ಟ್ರಾನ್ಸ್ ಪೋರ್ಟ್ ನ ವ್ಯವಹಾರದವರು ಇನ್ನಿತರ ಎಲ್ಲ  ಕೆಲಸಗಾರರು, ಪೊಲೀಸರು,ಲಾಯರುಗಳು ಮತ್ತುಕಾನೂನು ಮಂಡಳಿ, ಸ್ವಚ್ಛತೆಯನ್ನು ಕಾಪಾಡುವ ಕೆಲಸಗಾರರು, ಆಡಳಿತ ವರ್ಗದವರು, ಅಂಚೆ ಕೆಲಸಗಾರರು,ಶೈಕ್ಷಣಿಕ ಇಲಾಖೆಯ ಎಲ್ಲ ಕೆಲಸಗಾರರು,ಸತ್ತವರನ್ನು ಹೂಳುವವರು, ಸಮಾಜಕ್ಕೆ ಕಣ್ಣಾಗಿ ಕೆಲಸಮಾಡುವ ಎಲ್ಲ ಮಾಧ್ಯಮದವರು, ಸಂಪರ್ಕ ವ್ಯವಸ್ಥೆಯ ಜಾಲದವರು, ಮನೆಯೊಂದು ನಡೆಯಲು ಬೇಕಿರುವ ನೀರು, ವಿದ್ಯುತ್,ಗ್ಯಾಸ್ ಇತ್ಯಾದಿ ಅತ್ಯಗತ್ಯಗಳನ್ನು ಪೂರೈಸುವ ಸರಪಳಿಯಲ್ಲಿರುವ ಎಲ್ಲರು, ಹಲವು ಬಗೆಯ ಸಾರಿಗೆ ವ್ಯವಸ್ಥೆಗಳ ಕೆಲಸಗಾರರು, -ಇತ್ಯಾದಿ ಜನರು ಅಗತ್ಯ ಕೆಲಸಗಾರರ ಪಟ್ಟಿಯಲ್ಲಿದ್ದಾರೆ.

    ಸ್ವಂತ ಉದ್ಯೋಗ ಅಥವಾ ಖಾಸಗೀ ಸಂಸ್ಥೆಯ ಅಗತ್ಯ ಕೆಲಸಗಾರರಿಗೆ ಲಾಕ್ ಡೌನ್ ಸಮಯದಲ್ಲಿ ಕೆಲಸ ಮಾಡಲು ಪರವಾನಗಿ ಇದ್ದರೂ ಕೆಲಸ ಮಾಡಬೇಕೇ ಇಲ್ಲವೇ -ಎನ್ನುವ ಬಗ್ಗೆ ತಮ್ಮದೇ ನಿಲುವನ್ನು ತಳೆಯಬಹುದಾಗಿದೆ. ಮತ್ತೆ ಕೆಲವರ ಜತೆ ಸರ್ಕಾರಗಳು ಇಂತಿಷ್ಟು ಎಂದು ಮಾತಾಡಿ ಒಪ್ಪಂದ ಮಾಡಿಕೊಂಡಿವೆ (ಉದಾಹರಣೆಗೆ-ಖಾಸಗೀ ಆಸ್ಪತ್ರೆಗಳು). ಸರ್ಕಾರದಿಂದ ಆರ್ಥಿಕ ಸಹಾಯ ಪಡೆದು ಕೊಳ್ಳುತ್ತಿರುವ ಸ್ವಂತ ಉದ್ಯೋಗ ಉಳ್ಳ ಜನರು ಸರ್ಕಾರದ ಆದೇಶಗಳ ಪ್ರಕಾರ ಕೆಲಸವನ್ನು ಮಾಡಬೇಕಿದೆ.

    ಆದರೆ ಬಹುತೇಕ ದೇಶಗಳಲ್ಲಿ, ಸ್ವಂತ ಉದ್ಯೋಗವುಳ್ಳ ಜನರು ವೈಯಕ್ತಿಕ ಆಸಕ್ತಿಗಳ ಕಾರಣ ತಾವೇ ಮುಗಿಬಿದ್ದು  ತಮ್ಮ ಅಗತ್ಯದ ಗಳಿಕೆಗಾಗಿ ಕೆಲಸ ಮಾಡುತ್ತಿದ್ದಾರೆ. ಇಲ್ಲವೇ ಕೆಲಸಕ್ಕೆ ಮರಳಲು ಕಾಯುತ್ತಿದ್ದಾರೆ.ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಜನರು ಸರ್ಕಾರದ ಆದೇಶ ಮತ್ತು ಲಾಕ್ ಡೌನ್ ನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಲಾಕ್ ಡೌನ್ ನ್ನು ತೆರವುಗೊಳಿಸಿ ಎಲ್ಲ ಉದ್ಯಮಗಳನ್ನು ಮತ್ತೆ ಸಹಜ ಸ್ಥಿತಿಗೆ ತರಲು ಆಗ್ರಹಿಸುತ್ತಿದ್ದಾರೆ.ಕೆಲಸಕ್ಕೆ ಮರಳಲು ಅನುಮತಿ ಕೋರಿ ತಮ್ಮ ಆರೋಗ್ಯವನ್ನು ಕಡೆಗಣಿಸಿ ಇಂಥವರು ರಸ್ತೆಗಿಳಿದು ಮೆರವಣಿಗೆ ನಡೆಸಿದ್ದಾರೆ.

    ಇವರ ತುರ್ತು ಅಗತ್ಯ ಸಮಾಜಕ್ಕಿಲ್ಲದಿದ್ದರೂ ಸಮಾಜದ ಸಹಜ ಆಗು ಹೋಗುಗಳ ಸುತ್ತ ತಮ್ಮ ಬದುಕನ್ನು ಕಟ್ಟುಕೊಂಡ ಇವರಿಗೆ ಸಮಾಜದ ಅಗತ್ಯವಿದೆ. ತುರ್ತಾಗಿ ಹೊಟ್ಟೆ ಹೊರೆಯುವ ಅಥವಾ ಪರಿಹಾರ ಧನದ ಜರೂರತ್ತಿದೆ.

    ಅಗತ್ಯ ಕೆಲಸಗಾರರ ಬವಣೆಗಳು

    ಅಗತ್ಯ ಕೆಲಸಗಾರರಿಗೆ ಹೊಟ್ಟೆ ಹೊರೆಯಲು ದಾರಿಯಿದೆ.ಆದರೆ,ಅವರ ಆರೋಗ್ಯ ಅಪಾಯದಲ್ಲಿದೆ.ಆದರೆ ಆರೋಗ್ಯ ಸಂಬಂಧೀ ಬೇಡಿಕೆಗಳನ್ನು ಮುಂದಿಟ್ಟರೆ ಕೆಲಸಗಳನ್ನು ಕಳೆದುಕೊಳ್ಳುವ ಆತಂಕ ಅವರಿಗಿದೆ. ಕಂಡರಿಯದ ಈ ಕೋವಿಡ್ ಪರಿಸ್ಥಿತಿಯಲ್ಲಿ ಅವರ ಮೇಲೆ ಬಹಳ ಕೆಲಸದ ಒತ್ತಡವಿದೆ. ಅಕಸ್ಮಾತ್ ಕೆಲಸದ ರೀತಿ -ನೀತಿಯನ್ನು ಪ್ರಶ್ನಿಸಿದರೆ ಕೆಲಸವನ್ನು ಕಳೆದುಕೊಳ್ಳುತ್ತಿದ್ದಾರೆ. ಅವರ ಸ್ಥಾನವನ್ನು ತುಂಬಲು ನಿರುದ್ಯೋಗಿಗಳ ದಂಡೇ ಸರದಿಯಲ್ಲಿ ನಿಂತಿದ್ದಾರೆ.

    ಎಲ್ಲ ಸಮಾಜಗಳಲ್ಲಿ, ಹೊಡೆತ ಬೀಳುತ್ತಿರುವುದು ಅಗತ್ಯ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರವ ಮೂರು ಮತ್ತು ನಾಲ್ಕನೇ ದರ್ಜೆಯ ಕೆಲಸಗಾರರ ಮೇಲೆ. ಕಾಯಂ ಕೆಲಸದ ಆದೇಶ ಇಲ್ಲದವರ ಮೇಲೆ. ಅರೆಕಾಲಿಕ ಉದ್ಯೋಗಸ್ಥರ ಮೇಲೆ.ಕೆಲಸಗಾರರ ಯೂನಿಯನ್ ಇತ್ಯಾದಿಗಳ ಬೆಂಬಲವಿಲ್ಲದವರ ಕಾರಣ ಅವರ ಮೇಲೆ ಇನ್ನಿಲ್ಲದ ಒತ್ತಡಗಳಿವೆ.ಶೋಷಣೆಗಳೂ ನಡೆದಿವೆ.

    ಉದಾಹರಣೆಗೆ, ಏಪ್ರಿಲ್ ನಲ್ಲಿ ಒಂದು ದೊಡ್ಡ ಸುದ್ದಿಯಾದದ್ದು ಜೊಮ್ಯಾಟೊ ದ ಪಿಜ್ಜಾ ಸರಬರಾಜು ಮಾಡುತ್ತಿದ್ದ ಅರೆಕಾಲಿಕ ಸಮಯದ ಉದ್ಯೋಗಿಯೊಬ್ಬನು ಕರೋನ ಸೋಂಕಿತ ಎಂದು ತಿಳಿದ ಕೂಡಲೇ ಆತನೂ ಸೇರಿದಂತೆ ಆತ ಪಿಜ್ಜಾ ತಲುಪಿಸಿದ 72 ಕುಟುಂಬದವರು ಕ್ವಾರಂಟೈನ್ ಗೆ ಒಳಪಟ್ಟದ್ದು.ಅವನ ಜೊತೆ ಕೆಲಸಮಾಡುತ್ತಿದ್ದ 17 ಮಂದಿಯೂ 14 ದಿನ ಕ್ವಾರೈಂಟೈನ್ ಗೆ ಒಳಪಟ್ಟದ್ದು.

    ಭಾರತದಲ್ಲಿ ಮಾರ್ಚ್ 24 ರಂದೇ ಲಾಕ್ ಡೌನ್ ಶುರುವಾಗಿತ್ತು. ಆದರೆ,  ಸಾಮಾಜಿಕ ಅಂತರದ ಲಕ್ಷುರಿ ಅಥವಾ ವಿಶೇಷ ಸವಲತ್ತು ಡೆಲವರಿ ಬಾಯ್  ಆಗಿದ್ದ ಈತ ಮತ್ತು ಈತನಂತಹ ಮಿಲಿಯನ್ ಗಟ್ಟಲೆ ಜನರಿಗೆ ದೊರೆತಿರಲಿಲ್ಲ. ಏಪ್ರಿಲ್ 14 ರಂದು ಈತ ಕರೋನ ಸೋಂಕಿತ ಎಂದು ಖಾತರಿಯಾಗುವ  ವೇಳೆಗೆ ಈತ ಹಲವರ ಸಂಪರ್ಕಕ್ಕೆ ಬಂದಾಗಿತ್ತು.

    ಈ ಘಟನೆ ತಕ್ಷಣ ಹಲವು ಪ್ರಶ್ನೆಗಳನ್ನು ಹುಟ್ಟಿಹಾಕಿತು.

    ಪಿಜ್ಜಾ ಡೆಲಿವರಿ ಅಥವಾ ಆಹಾರ ಸರಬರಾಜು ಅಗತ್ಯ ಸೇವೆಯ ಕೆಳಗೆ ಬಂದರೂ, ಯಾವುದೇ ಉದ್ಯೋಗದ ಗುತ್ತಿಗೆ, ರಕ್ಷಣೆ, ರಜಾಗಳು, ಪಿಂಚಣಿ ಇಲ್ಲದ ಆತನ ಆರೋಗ್ಯಕ್ಕೆ ಯಾವುದೇ ರಕ್ಷಣೆಯಿರಲಿಲ್ಲ. ಇತ್ತ ಉದ್ಯೋಗದಾತ, ಅತ್ತ ಪೋಲೀಸರು, ಜೊತೆಗೆ ಬೇಜವಾಬ್ದಾರೀ  ಗ್ರಾಹಕರು ಎಲ್ಲರನ್ನೂ ಮೌನವಾಗಿ ಸಹಿಸಿಕೊಳ್ಳಬೇಕಾದ ಕಟು ವಾಸ್ತವವನ್ನು ಅಗತ್ಯ ಕೆಲಸಗಾರರು ಎದುರಿಸುತ್ತಿದ್ದರು.

    ಸರ್ಕಾರದ ನಿಯಮಗಳ ಬಗ್ಗೆ ಅಷ್ಟೇನೂ ತಿಳಿವಳಿಕೆ ಇಲ್ಲದಿರುವುದು,ಕಡಿಮೆ ಆದಾಯ, ತುಟ್ಟಿ ಕಾನೂನು ಮತ್ತು ಆರೋಗ್ಯ ರಕ್ಷಣೆ ಎಲ್ಲವೂ ಇಂತಹ ಕೆಲಸಗಾರರನ್ನುಇಂದಿಗೂ ನಲುಗಿಸಿವೆ.ಉದ್ಯೋಗ ನೀಡುವ ಸಂಸ್ಥೆಗಳು ಅಕಸ್ಮಾತ್ ಕೆಲಸಗಾರರಿಗೆ ಆರೋಗ್ಯ ವ್ಯವಸ್ಥೆಯನ್ನು ಕಲ್ಪಿಸಿದರೂ ಅವರ ಕುಟುಂಬದವರಿಗೆ ಸೋಂಕು ಹರಡಿದರೆ ಅದಕ್ಕೆಯಾರೂ ಜವಾಬ್ದಾರಿ ಹೊರುವುದಿಲ್ಲ. ಹಾಗಾಗಿ ಅಗತ್ಯ ಕೆಲಸಗಾರರಷ್ಟೇ ಅಲ್ಲದೆ ಅವರ ಇಡೀ ಕುಟುಂಬಗಳು ತಮ್ಮ ಆರೋಗ್ಯದ ವಿಚಾರದಲ್ಲಿ ಆತಂಕಗಳನ್ನು ಎದುರಿಸಿದ್ದಾರೆ.

    ನಮ್ಮ ದೇಶದಲ್ಲಿ ಆರ್ಥಿಕ ವ್ಯತ್ಯಾಸಗಳು ಹೆಚ್ಚಿರುವ ಕಾರಣ ಶ್ರೀಮಂತರು ಬಡವರಿಂದ ಅತ್ಯಂತ ಬೇಗನೆ ಅಂತರ ನಿರ್ಮಿಸಿಕೊಂಡರು. ಆದರೆ ಬಡವರು ಶ್ರೀಮಂತರ ಬೇಡಿಕೆಗಳನ್ನು ಪೂರೈಸಲು ತಮ್ಮ ಆರೋಗ್ಯವನ್ನು ಕಡೆಗಣಿಸಿ ದುಡಿಯದೆ ವಿಧಿಯಿರಲಿಲ್ಲ. ಮೇಲು-ಕೀಳುಗಳಲಂಬವಾದ (vertical) ಅಂತರ ಸುಲಭವಾದರೂ, ಸಾಮಾಜಿಕವಾಗಿ ಮಟ್ಟಸವಾದ (Horizontal) ಅಂತರವನ್ನು ಕಾಪಾಡುವುದು ಸುಲಭವಾಗಲಿಲ್ಲ.ಈ ಡೆಲಿವರಿಯ ಮನುಷ್ಯ ರಾಜ್ಯ ,ಅಥವಾ ದೇಶವನ್ನು ಬಿಟ್ಟು ಎಲ್ಲಿಯೂ ಹೋಗಿರದಿದ್ದರೂ, ಗ್ರಾಹಕರಿಂದಲೋ ಮತ್ತೊಬ್ಬರಿಂದಲೋ ಸೋಂಕನ್ನು ಪಡೆದಿದ್ದ.ಆದರೆ ಹೊಟ್ಟೆ ಹೊರೆಯಲು ಇದ್ದ ಈ ಅರೆಕಾಲಿಕ ಕೆಲಸವನ್ನು ಅವನು ನಿಲ್ಲಿಸಲು ಸಾಧ್ಯವಿರಲಿಲ್ಲ. ಆರೋಗ್ಯ ಸೇತುವಿನಂತಹ ಆಪ್ ನ್ನು ಕೆಲಸಗಾರರು ಹೊಂದಿದ್ದರೂ, ಗ್ರಾಹಕರಿಗೆ ಅದರ ಕಡ್ಡಾಯವಿರಲಿಲ್ಲ.ಏಪ್ರಿಲ್ ನ ಕರೋನಾ ಕಾಲದಲ್ಲಿ ನಮ್ಮ ದೇಶದ 55.1% ಕುಟುಂಬಗಳಿಗೆ ಎರಡು ಹೊತ್ತಿನ ಊಟವನ್ನಷ್ಟೇ ಮಾಡಲು ಸಾಧ್ಯವಾಗಿದೆ ಎಂಬುದನ್ನು ಒಂದು ಸಮೀಕ್ಷೆ ತಿಳಿಸಿದೆ.ಈ ಸಮೀಕ್ಷೆಯಲ್ಲಿ5,500 ಕುಟುಂಬಗಳು ಭಾಗವಹಿಸಿದ್ದವು.ಇವರಲ್ಲಿ ಶೇಕಡಾ ಶೇಕಡ 60 ಜನರ ಉದ್ಯೋಗಕ್ಕೂ ಸಂಚಕಾರ ಬಂದಿತ್ತು.

     ವಿಶ್ವದ ಹಲವು ದೇಶಗಳಲ್ಲಿಯೂ ಅಗತ್ಯ ಕೆಲಸಗಾರರು ಎದುರಿಸಿದ ಸಮಸ್ಯೆಗಳು ಈ ರೀತಿಯವೇ ಆಗಿವೆ. ಸರ್ಕಾರದ ಆಶ್ವಾಸನೆ, ಯೋಜನೆಗಳು, ಭರವಸೆಗಳು ಒಂದೆಡೆಯಾದರೆ, ನಿಜಗಳು ಮತ್ತೊಂದು ಚಿತ್ರವನ್ನು ಕಟ್ಟಿಕೊಡುತ್ತವೆ.

    ಉದಾಹರಣೆಗೆ ಅಮೆರಿಕಾದಲ್ಲಿ ಅಗತ್ಯ ವಸ್ತುಗಳನ್ನು ಆನ್ ಲೈನ್ ಗ್ರಾಹಕರಿಗೆ ಸರಕನ್ನು ತಲುಪಿಸುವ ಸಂಸ್ಥೆಯೊಂದರ ಅರೆಕಾಲಿಕ ಉದ್ಯೋಗಿಗಳಲ್ಲಿ ಕೆಲಸದ ಒತ್ತಡ ನೂರುಪಟ್ಟಾಯಿತು. ಕೋವಿಡ್ ಕಾರಣ ಅವರ ವಹಿವಾಟು ನೂರಾರು ಪಟ್ಟು ಹಿಗ್ಗಿತು.ಸಾವಿರಾರು ಜನರಿಗೆ ಹೊಸ ಉದ್ಯೋಗಾವಾಕಾಶಗಳೂ ಹುಟ್ಟಿಕೊಂಡವು. ಆದರೆ ಸಾಮಾಜಿಕ ಅಂತರ, ಕೆಲಸದಲ್ಲಿನ ಆರೋಗ್ಯ ಮೂರಾಬಟ್ಟೆಯಾಯಿತು.ಹೆಚ್ಚಿದಬೇಡಿಕೆಗಳನ್ನು ಪೂರೈಸಲು ಹಲವರನ್ನು ವೇರ್ ಹೌಸ್ ಕೆಲಸ ಬಿಡಿಸಿ ಡೆಲಿವರಿ ಕೆಲಸಕ್ಕೆ ಹಚ್ಚಲಾಯಿತು. ಆಫೀಸಿನಲ್ಲಿ ಕೆಲಸ ಮಾಡುವವರು ಮನೆಯಿಂದ ಕೆಲಸ ಮಾಡಿದರೆ, ನೆಲ ಗೆಲಸಗಾರರಿಗೆ ಮಾತ್ರ ಸಾಮಾನ್ಯ ರಕ್ಷಣೆಯಲ್ಲೂ ಕೊರತೆಯಿತ್ತು.ಈ ಬೃಹತ್ ಸಂಸ್ಥೆಯ ಹಲವು ಸೋಂಕಿತರ ವಿಚಾರವನ್ನು ಗುಟ್ಟಾಗಿಡಲಾಯಿತೆಂಬ ಗುಮಾನಿ ಕೆಲಸಗಾರರಲ್ಲಿ ಹರಡಿತು.

    ಇಟಲಿ ಮತ್ತು ಸ್ಪೇನಿನ ಸಂಸ್ಥೆಗಳು ಸೋಂಕಿತರು ಪತ್ತೆಯಾದ ನಂತರ ಅವರನ್ನು ಮನೆಗೆ ಕಳಿಸಿದರೇ ಹೊರತು ವೇರ್ ಹೌಸ್ ಗಳನ್ನು ಮುಚ್ಚಲು ನಿರಾಕರಿಸಿದರು.ನ್ಯೂಯಾರ್ಕಿನ ವೇರ್ ಹೌಸ್ ನ ಒಬ್ಬನಿಗೆ ಸೋಂಕು ಪತ್ತೆಯಾದ ನಂತರ ಅವರು ಆತ ಕೆಲಸಮಾಡುತ್ತಿದ್ದ ಜಾಗವನ್ನು ಒಂದು ಪಾಳಿಯ ಲೆಕ್ಕಕ್ಕೆಮಾತ್ರ ಮುಚ್ಚಲು ಒಪ್ಪಿದ್ದು. ಒಂದೇ ಸೂರಿನಡಿ ಕೆಲಸಮಾಡುತ್ತಿದ್ದ ಸಹೋದ್ಯೋಗಿಯೊಬ್ಬನ ಕರೋನ ಸಾವಿನ ನಂತರವಂತೂ ಅಲ್ಲಿನ ಕೆಲಸಗಾರರಲ್ಲಿ ಈ ಬಗ್ಗೆ ದಟ್ಟ ಅಸಮಾಧಾನ ಶುರುವಾಯಿತು.

    ಜನದಟ್ಟಣೆಯ ಜಾಗದ ಅಲ್ಲಿನ ಕೆಲಸ, ಕೆಲಸದ ಮಧ್ಯೆ ಪ್ರತಿಬಾರಿ ಕೈ ತೊಳೆಯಲು ಸಾಧ್ಯವಾಗದ ಕೆಲಸದ ಗತಿ, ಆರೋಗ್ಯ ತಪಾಸಣೆಗಿಲ್ಲದ ಸೌಲಭ್ಯಗಳು ಜೊತೆಗೆ ಮುರಿದು ಬಿದ್ದ ವಿಶ್ವಾಸಗಳು ಅಮೆರಿಕಾದ ಅಗತ್ಯಕೆಲಸಗಾರರನ್ನು ರಸ್ತೆಗಿಳಿಸಿತು.ಅವರು ಮುಷ್ಕರ ಆರಂಭಿಸಿದರು. ಅರೆಕಾಲಿಕ ಗುತ್ತಿಗೆಯ ಇವರಿಗೆ ಯಾವ ಯೂನಿಯನ್ ಗಳ ಬೆಂಬಲವೂ ಇರಲಿಲ್ಲ. ಕೊನೆಗೆ ಆ ಸಂಸ್ಥೆ ತನ್ನ ಕೆಲಸಗಾರರ ಹಲವು ಒತ್ತಡಗಳಿಗೆ ಮಣಿಯಬೇಕಾಯಿತು.ಹಲವು ಬದಲಾವಣೆಗಳನ್ನು ಜಾರಿಗೆ ತರಬೇಕಾಯಿತು.

     ಭಾರತದಲ್ಲಿ ನಾನಾ ವಸ್ತುಗಳನ್ನು ಡೆಲಿವರಿ ಮಾಡುವ ಸಂಸ್ಥೆಗಳು ಲಾಕ್ಡೌನಿನ ಸಮಯದಲ್ಲಿ ತಮ್ಮ ಆದಾಯವನ್ನು ಹೆಚ್ಚಿಸಿಕೊಂಡರೇ ಹೊರತು ಕಳೆದುಕೊಳ್ಳಲಿಲ್ಲ. ಬಹುತೇಕ ದೇಶಗಳಲ್ಲಿ ಅಂತರ್ಜಾಲ ಮಾರುಕಟ್ಟೆಗಳೇ ಕರೋನ ಕಾಲದಲ್ಲಿ ಅತ್ಯಧಿಕ ವಹಿವಾಟು ನಡೆಸಿದ್ದು.

    ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವ ಎಲ್ಲ ಅಗತ್ಯಕೆಲಸಗಾರರು ಆತಂಕದಲ್ಲೇ ಕೆಲಸಮಾಡುತ್ತಿದ್ದಾರೆ.ಆಟೋ-ಟ್ಯಾಕ್ಸಿಗಳನ್ನು ಓಡಿಸುವವರು, ಬಸ್ಸು-ಲಾರಿಯ ಚಾಲಕರು, ಅಂಚೆ ಮತ್ತು ಕುರಿಯರ್ ನವರು, ಬರಹ ಮತ್ತು ದೃಶ್ಯ ಮಾಧ್ಯಮದವರು, ಹಣ್ಣು-ತರಕಾರಿ ಮಾರುವವರು,ಹೋಟೆಲಿನವರು,ಗ್ರಾಹಕರನ್ನು ಇದುರಿಸುವ ಪ್ರತಿ ಅಂಗಡಿ-ಮಳಿಗೆಯವರು,ನಮ್ಮ  ದಿನನಿತ್ಯದ ಅಗತ್ಯಗಳನ್ನು ಪೂರೈಸುವಕಾರ್ಖಾನೆಗಳಲ್ಲಿ ಕೆಲಸಮಾಡುವವರು, ಅವುಗಳನ್ನು ನಮ್ಮ ಮನೆಬಾಗಿಲಿಗೇ ತಲುಪಿಸುವ ಎಲ್ಲರೂ ಕೋವಿಡ್ ನ ಆತಂಕದಲ್ಲೇ ದಿನಶುರುಮಾಡಿ-ದಿನವನ್ನು ಮುಗಿಸುತ್ತಿದ್ದಾರೆ. ಸಾಮಾಜಿಕ ಅಂತರಗಳನ್ನು ಕಾಯ್ದುಕೊಳ್ಳುವುದು ಕೇವಲ ಉಳ್ಳವರಿಗೆ ಸಾಧ್ಯವಾಗಿದೆ. ಆದರೆ ಅಗತ್ಯ ಕೆಲಸಗಾರರಿಗೆ ಇರಬೇಕಾದ ಸಾಮಾಜಿಕ ರಕ್ಷಣೆ ಮಾತ್ರ ಇಲ್ಲವಾಗಿದೆ.

    ಇವರ ಅಗತ್ಯ ಸೇವೆಗಳನ್ನು ನಾವು ಇನ್ನಿಲ್ಲದಂತೆ ನಿಸ್ಸಂಕೋಚವಾಗಿ ಬಳಸಿಕೊಳ್ಳುತ್ತಿರುವಾಗಲೇ ಇವರ ಆರೋಗ್ಯ ಮತ್ತು ಆರ್ಥಿಕ ಅಗತ್ಯಗಳು ಮೂಲೆಗುಂಪಾಗಿವೆ. ಹಲವು ಸಂಸ್ಥೆಗಳು ಅವರಿಗೊಂದಿಷ್ಟು ಹೆಚ್ಚುವರಿ ಹಣ ನೀಡಿದರು. ಮತ್ತೆ ಕೆಲವರಿಗೆ ಅವರಿಗೆ ಕೋವಿಡ್ ಬಂದರೆ ಆಸ್ಪತ್ರೆಯ ಖರ್ಚನ್ನ ಭರಿಸುವುದಾಗಿ ಹೇಳಿದರು. ಆದರೆ ಅವರು ತಪಾಸಣೆಗೆ ಹೋದದಿನ ಮತ್ತು ಪರೀಕ್ಷೆಯ ಫಲಿತಾಂಶ ಸಿಗುವವರೆಗಿನ ದಿನಗಳ ದಿನಗೂಲಿಯನ್ನು ಕತ್ತರಿಸಿದರು.ಕೋವಿಡ್ ಪರೀಕ್ಷೆಯ ವೆಚ್ಚವೂ ಕೆಲಸಗಾರರೇ ಭರಿಸಬೇಕಾಯಿತು .ಅಕಸ್ಮಾತ್ ಅವರ ಕುಟುಂಬದ ಸದಸ್ಯರಿಗೆ ಕೋವಿಡ್ ಬಂದರೆ ಅದರ ಖರ್ಚಿಗೆ ಯಾರೂ ಜವಾಬ್ದಾರಿಯನ್ನು ಹೊರಲು ಮುಂದೆ ಮುಂದಿಲ್ಲ.

    ಕೋವಿಡ್ ನ ಬಿಕ್ಕಟ್ಟಿನಲ್ಲಿ ಒದಗಿದ ಅವಕಾಶದಿಂದ ಲಾಭಮಾಡಿಕೊಂಡ ಹಲವು ಕಂಪನಿಗಳುಅವರ ಜೊತೆ ಕೆಲಸಮಾಡುವ ಅಗತ್ಯ ಕೆಲಸಗಾರರ ಜೊತೆ ಈ ಲಾಭವನ್ನು ಹಂಚಿಕೊಂಡಿದ್ದು ದೂರದ ಮಾತಾಯಿತು.ಅಗತ್ಯ ಕೆಲಸಗಾರರ ಅಗತ್ಯಗಳ ಆರೈಕೆಗೆ ನಿಂತ ಸಂಸ್ಥೆಗಳು ಬಹಳ ಕಡಿಮೆ. ಅಗತ್ಯ ಕೆಲಸಗಾರರು ಹಲ್ಲು ಕಚ್ಚಿ, ತುಟಿಬಿಚ್ಚದೆ, ಆತಂಕದಲ್ಲಿ ಕೆಲಸ ಮಾಡಿದ್ದೇ ಹೆಚ್ಚು.

    ಸಾರ್ವಜನಿಕರ ಹೊಣೆಗಳು

    ಅಗತ್ಯ ಕೆಲಸಗಾರರ  ಆರೋಗ್ಯದ ಆತಂಕಗಳನ್ನು ಕಡಿಮೆ ಮಾಡುವಲ್ಲಿ ಸಾರ್ವಜನಿಕರ ಪಾತ್ರವೂ ಹಿರಿದು. ಅಗತ್ಯ ಕೆಲಸಗಾರರಿಂದ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಅವರ ಕೆಲಸವನ್ನು ಸುಗಮಗೊಳಿಸಲು ಇತರರು ಸಹಕರಿಸಬೇಕಿದೆ.

    ಅಗತ್ಯ  ಕೆಲಸಗಾರರ ಮೇಲೆ ಅನಗತ್ಯ ಬೇಡಿಕೆಗಳ ಹೊಣೆಯನ್ನು ಕಡಿಮೆ ಮಾಡಲು ನಾವು ಸಹಕರಿಸಬಹುದಾಗಿದೆ.ಉದಾಹರಣೆಗೆ ಮೆಡಿಕಲ್ ಸಪ್ಪ್ಲೈ, ಸ್ಯಾನಿಟೈಸರ್ ಗಳು, ಮಾಸ್ಕ್ ಗಳ ಅಗತ್ಯವನ್ನು ಪೂರೈಸಲು ಅನುವು ಮಾಡಿಕೊಟ್ಟು ತತ್ ಕ್ಷಣಕ್ಕೆ ಬೇಡದ ವಸ್ತುಗಳನ್ನು ನಂತರ ತರಿಸಿಕೊಳ್ಳಬಹುದಿದೆ.

    ಅಗತ್ಯ ಕೆಲಸಗಾರರನ್ನು ಅನಗತ್ಯವಾಗಿ ಪೊಲೀಸರು ರಸ್ತೆಯಲ್ಲಿ ತಡೆಯುವುದು, ಶೋಷಿಸುವುದು ಇವನ್ನು ಕಡಿಮೆ ಮಾಡಲು ಆಗ್ರಹಿಸಬಹುದಿದೆ. ಸ್ವತಃ ಮುಖಗವಸುಗಳನ್ನು ಧರಿಸಿ ಅಗತ್ಯ ಕೆಲಸಗಾರರೊಡನೆ ವ್ಯವಹರಿಸಬಹುದಿದೆ.ಅವರ ವೇತನದಲ್ಲಿ ಹೆಚ್ಚಳ ಅಥವ ಅವರಿಗೆ ಒಂದಿಷ್ಟು ಹೆಚ್ಚು ಟಿಪ್ಸ್ ಕೊಡುವ ಮೂಲಕ ನಮ್ಮ ಅಭಿನಂದನೆಗಳನ್ನು ಸಲ್ಲಿಬಹುದಾಗಿದೆ. ಅವರ ಕೋವಿಡ್ ತಪಾಸಣೆ ಮತ್ತು ಚಿಕಿತ್ಸೆಯಲ್ಲಿ ರಿಯಾಯಿತಿಯನ್ನು ತೋರಿಸಬಹುದಾಗಿದೆ. ಅವರ ಮಾನಸಿಕ  ಆತಂಕಗಳನ್ನು ಅರ್ಥಮಾಡಿಕೊಂಡು ಅನಗತ್ಯ ಕೆಲಸಗಳ ಹೊರೆ ಅವರ ಮೇಲೆ ಬೀಳದಂತೆ ನೋಡಿಕೊಳ್ಳಬಹುದಾಗಿದೆ.

    ಅಗತ್ಯ ಕೆಲಸಗಾರರು ನಾವು ಸುರಕ್ಷಿತವಾಗಿರಲು, ನಮ್ಮ ಜೀವನದ ಅಗತ್ಯಗಳಿಗೆ ಧಕ್ಕೆಯಾಗದಿರಲು ತಮ್ಮ ಜೀವಗಳನ್ನು ಒತ್ತೆಯಿಟ್ಟು ಕೆಲಸಮಾಡುತ್ತಿದ್ದಾರೆ. ವೈರಸ್ಸಿನ ದಾಳಿಯಿಂದ ನಮ್ಮನ್ನು ರಕ್ಷಿಸುತ್ತಿದ್ದಾರೆ.ಅವರನ್ನು ಬಲಿಪಶುಗಳಂತೆ ಬಳಸಿಕೊಳ್ಳದಿರಲು ಸರ್ಕಾರ, ಉದ್ಯೋಗದಾತರು, ಪೊಲೀಸರು ಎಲ್ಲಕ್ಕಿಂತ ಹೆಚ್ಚಾಗಿ ಸಾರ್ವಜನಿಕರು ಪ್ರಯತ್ನಿಸಬೇಕಿದೆ.

    Photo by Anna Shvets from Pexels

    ಡಾ. ಪ್ರೇಮಲತ ಬಿ
    ಡಾ. ಪ್ರೇಮಲತ ಬಿhttps://kannadapress.com/
    ಮೂಲತಃ ತುಮಕೂರಿನವರಾದ ಪ್ರೇಮಲತ ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ಸದ್ಯ ಇಂಗ್ಲೆಂಡಿನಲ್ಲಿ ವಾಸ. ದಿನಪತ್ರಿಕೆ, ವಾರಪತ್ರಿಕೆ ಮತ್ತು ಅಂತರ್ಜಾಲ ತಾಣಗಳಲ್ಲಿ ಕಥೆ, ಕವನಗಳು ಲೇಖನಗಳು,ಅಂಕಣ ಬರಹ, ಮತ್ತು ಪ್ರಭಂದಗಳನ್ನು ಬರೆದಿದ್ದಾರೆ. ’ಬಾಯೆಂಬ ಬ್ರಹ್ಮಾಂಡ’ ಎನ್ನುವ ವೃತ್ತಿಪರ ಕಿರು ಪುಸ್ತಕವನ್ನು ಜನಸಾಮಾನ್ಯರಿಗಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ಪ್ರಕಟಿಸಿದ್ದಾರೆ.’ ಕೋವಿಡ್ ಡೈರಿ ’ ಎನ್ನುವ ಅಂಕಣ ಬರಹದ ಪುಸ್ತಕ 2020 ರಲ್ಲಿ ಪ್ರಕಟವಾಗಿದೆ.ಇವರ ಸಣ್ಣ ಕಥೆಗಳು ಸುಧಾ, ತರಂಗ, ಮಯೂರ, ಕನ್ನಡಪ್ರಭ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
    spot_img

    More articles

    3 COMMENTS

    1. Dr.B Premalatha article has touched the finer fabrics of psychology of our human population where there is mentality of survival of fittest and vast differences between rich affordability and poor helplessness which makes casual and daily wage workers to risk of this pandemic where there is hardly any protection for essential workers. The society in all parts has devise a sort of insurance where the fear of working in this atmosphere is completely eradicated. Some years back very eminent person had cautioned that none of country is prepared for epidemic of this proportion though we are economically rich and developed in all fields except facing the pandemic. His prophecy has come true. Very interesting facts and figures Dr.B.Premalatha has provided and an eye opener for present situation. Good article.

    2. ಕೋವಿಡ್ -19 ಸಾಂಕ್ರಾಮಿಕವು ಆರೋಗ್ಯ ಸಮಸ್ಯೆಗಳನ್ನು ಮಾತ್ರವಲ್ಲದೆ ಆರ್ಥಿಕತೆ ಮತ್ತು ಸಮಾಜದ ಮೇಲೆ ಅನೇಕ ದುಷ್ಪರಿಣಾಮಗಳಿಗೆ ದಾರಿ ಮಾಡಿಕೊಟ್ಟಿದೆ. ಕರೋನವೈರಸ್ ಅನ್ನು ನಿಯಂತ್ರಿಸಲು ಎಲ್ಲಾ ಚಟುವಟಿಕೆಗಳನ್ನು ಮುಚ್ಚಬೇಕೆ ಅಥವಾ ಜೀವನದ ಒಂದು ಭಾಗವಾಗಿ ಕರೋನದೊಂದಿಗೆ ಬದುಕಬೇಕೆ ಎಂದು ಸರ್ಕಾರಗಳು ಮತ್ತು ಜನರು ಸಂದಿಗ್ಧತೆಯಲ್ಲಿದ್ದಾರೆ. ಆದರೆ, ನಿಜವಾದ ಬಲಿಪಶುಗಳು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು. ಲೇಖನವು ಅರ್ಥಪೂರ್ಣ ಮತ್ತು ತಾತ್ವಿಕವಾಗಿದೆ.

    LEAVE A REPLY

    Please enter your comment!
    Please enter your name here

    Latest article

    error: Content is protected !!