BENGALURU SEPT 12
ಅರಣ್ಯ ಮತ್ತು ವನ್ಯಜೀವಿ ಸಂಪತ್ತಿನ ರಕ್ಷಣೆಗಾಗಿ ತಮ್ಮ ಪ್ರಾಣವನ್ನೆ ಪಣಕ್ಕಿಟ್ಟು ಹುತಾತ್ಮರಾದವರ ಧೈರ್ಯ ಮತ್ತು ಸೇವಾ ಮನೋಭಾವನೆ ಮುಂದಿನ ಪೀಳಿಗೆಗೆ ಸ್ಪೂರ್ತಿ ಎಂದು 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸೈಯದ್ ಬಲೀಗುರ್ ರಹಮಾನ್ ತಿಳಿಸಿದರು.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಅರಣ್ಯ ಮತ್ತು ವನ್ಯಜೀವಿ ಸಂಪತ್ತನ್ನು ಸಂರಕ್ಷಿಸುವಾಗ ವನ್ಯಜೀವಿ ದಾಳಿಯಿಂದ ಪ್ರಾಣ ತ್ಯಾಗ ಮಾಡಿದ ದಬ್ಬಣ್ಣ ಮತ್ತು ರಾಮಯ್ಯ ಎಂಬ ದಿನಗೂಲಿ ನೌಕರರ ಸೇವೆಯನ್ನು ಸ್ಮರಿಸುತ್ತಾ ಅವರು ಮಾತಾನಾಡಿದರು.
ದೇಶಾದ್ಯಂತ ಸೆಪ್ಟೆಂಬರ್ ಮಾಹೆಯಲ್ಲಿ
ಅರಣ್ಯ ಹುತಾತ್ಮರ ದಿನಾಚರಣೆ ನಡೆಸುತ್ತಿರುವುದು ತುಂಬಾ ಶ್ಲಾಘನೀಯವಾಗಿದ್ದು, ಈ ಸಂದರ್ಭದಲ್ಲಿ ಅರಣ್ಯ ಮತ್ತು ವನ್ಯಜೀವಿ ಸಂಪತ್ತನ್ನು ಸಂರಕ್ಷಿಸಲು ಪ್ರಾಣತ್ಯಾಗ ಮಾಡಿದ ನೌಕರರ ಸ್ಮರಣಾರ್ಥಕ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಮಾತನಾಡುವುದಕ್ಕಿಂತ ಮೌನ ಆಚರಿಸಿ ಶ್ರದ್ಧಾಂಜಲಿ ಅರ್ಪಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ ಎಂದು ಹೇಳಿದರು.
ನಂತರ ಮಾತನಾಡಿದ ಜೆ.ಎಂ.ಎಫ್.ಸಿ ನ್ಯಾಯಾಲಯ ಸಹಾಯಕ ಸರ್ಕಾರಿ ಅಭಿಯೋಜಕರಾದ ಚಂದ್ರಶೇಖರ ಅವರು ಆನೇಕಲ್ ತಾಲ್ಲೂಕಿನ ಸುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ವನ್ಯಜೀವಿ ದಾಳಿಯಿಂದ ಹುತಾತ್ಮರಾದ ದಬ್ಬಣ್ಣ ಮತ್ತು ರಾಮಯ್ಯ ದಿನಗೂಲಿ ನೌಕರರು ಶೌರ್ಯ ಅನುಕರಣೀಯ ಎಂದು ಹೇಳಿದರು.
ಅರಣ್ಯ ಸಿಬ್ಬಂದಿಗಳು ಕಾಡಿನಲ್ಲಿ ಕರ್ತವ್ಯ ನಿರ್ವಹಿಸುವಾಗ ಮುನ್ನೆಚ್ಚರಿಕೆ ವಹಿಸಿ ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸಿದಲ್ಲಿ ಇಂತಹ ಅನಾಹುತಗಳನ್ನು ತಡೆಯಬಹುದು ಎಂದು ಅಭಿಪ್ರಾಯ ಪಟ್ಟರು.
ನಂತರ ಮಾತನಾಡಿದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಡಾ ಪಿ ರಮೇಶ್ ಕುಮಾರ್ ಅವರು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರತಿ ವರ್ಷ ಅರಣ್ಯ ಹುತಾತ್ಮರ ದಿನಾಚರಣೆ ನಡೆದು ಬಂದ ದಾರಿಯನ್ನು ತಿಳಿಸಿದರು . ಅರಣ್ಯ ಮತ್ತು ವನ್ಯಜೀವಿ ಸಂಪತ್ತನ್ನು ಸಂರಕ್ಷಿಸಲು ಪ್ರಾಣತ್ಯಾಗ ಮಾಡಿದ ಶ್ರೀನಿವಾಸ್ ಪಿ ಮತ್ತು ಮಣಿಕಂದನ್ ಅವರುಗಳ ಸೇವೆಯನ್ನು ಸ್ಮರಿಸಿದರು.
ಇದೆ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾದ ಎ.ಡಿ ಪ್ರಕಾಶ್ ಅವರು ಅರಣ್ಯ ಮತ್ತು ವನ್ಯಜೀವಿ ಸಂಪತ್ತನ್ನು ಸಂರಕ್ಷಿಸಲು ಕರ್ತವ್ಯದಲ್ಲಿದ್ದಾಗ ಅರಣ್ಯ ಇಲಾಖೆಯ ಒಟ್ಟು 53 ಸಿಬ್ಬಂದಿ ಪ್ರಾಣತ್ಯಾಗ ಮಾಡಿದವರ ಹುತಾತ್ಮರ ಹೆಸರುಗಳನ್ನು ಓದಿ ನೆನಪಿಸಿದರು. ದಿವಂಗತ ದಬ್ಬಣ್ಣ ಮತ್ತು ರಾಮಯ್ಯ ಅವರ ಕುಟುಂಬಗಳಿಗೆ ಸಹಾಯ ಧನವನ್ನು ವಿತರಿಸಿದರು.