24.4 C
Karnataka
Tuesday, May 14, 2024

    ಹವಾಮಾನ ವೈಪರೀತ್ಯದಲ್ಲೂ ಭರ್ಜರಿ ಮಾವು ಇಳುವರಿ; ಸ್ವಯಂ ಮಾರುಕಟ್ಟೆ ಕಂಡುಕೊಂಡ ಮಾವು ಬೆಳೆಗಾರ

    Must read

    ಕಳೆದ ಮೂರ್ನಾಲ್ಕು ವರ್ಷದಿಂದ ಹವಾಮಾನ ವೈಪರೀತ್ಯದ ಕಾರಣ ಮಾವು ಇಳುವರಿ ತೀವ್ರ ಕುಸಿತವಾಗುತ್ತಿರುವುದು ಮಧ್ಯ ಕರ್ನಾಟಕದ ಬಹುತೇಕ ಮಾವು ಬೆಳೆ ರೈತರ ಆತ್ಮವಿಶ್ವಾಸವನ್ನು ಕಸಿದಿದೆ. ಇದರ ಬೆನ್ನಲ್ಲೇ ಬಂದಷ್ಟು ಇಳುವರಿ ಮಾರುಕಟ್ಟೆ ತಲುಪುವ ಸಂಕ್ರಮಣ ಕಾಲಕ್ಕೆ ಕೋವಿಡ್ ಕರ್ಫ್ಯೂ, ಲಾಕ್ ಡೌನ್ ಗಳ ಹೇರಿಕೆ ಅವರನ್ನು ಮತ್ತಷ್ಟು ಕಂಗೆಡಿಸಿದೆ. ಇಂತ ಸ್ಥಿತಿಯಲ್ಲಿ ದಾವಣಗರೆ ಜಿಲ್ಲೆ, ಚನ್ನಗಿರಿ ತಾಲ್ಲೂಕಿನ ದೊಡ್ಡಬ್ಬಿಗೆರೆ ರೈತ ತಿಪ್ಪೇಸ್ವಾಮಿ ತಮ್ಮದೇ ಪ್ರರಿಶ್ರಮದಲ್ಲಿ ಭರಪೂರ ಇಳುವರಿ ಹಾಗೂ ಲಾಭದಾಯಕ ಮಾರುಕಟ್ಟೆ ಸೃಷ್ಟಿಸಿಕೊಂಡು ಯಶಸ್ಸಿಗೆ ಮಾದರಿ ಎನಿಸಿದ್ದಾರೆ.

    ತಮ್ಮಐದು ಎಕರೆ ತೋಟದಲ್ಲಿ ಬೆಳೆದ ರುಚಿಕರ ತಳಿಯ ಬಾದಾಮ್ ಹಾಗೂ ಸಿಂಧೂರ ಮಾವಿನ ಹಣ್ಣುಗಳನ್ನು ಕಳೆದ ಮೂರು ವಾರದಿಂದ ದಾವಣಗೆರೆ, ಚಿತ್ರದುರ್ಗದ ಗ್ರಾಹಕ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ. ಗೇಣಿ ಕೊಟ್ಟು ಕೈ ತೊಳೆದುಕೊಳ್ಳುವ ಪ್ರವೃತ್ತಿಯಲ್ಲಿರುವ ಅನೇಕ ರೈತರು ಅಲ್ಪ ಆದಾಯಕ್ಕೆ ತೃಪ್ತಿ ಪಡೆಯುತ್ತಾರೆ. ಆದರೆ ತಿಪ್ಪೇಸ್ವಾಮಿ ಮಾರುಕಟ್ಟೆಗೆ ಸಂಶೋಧನಾತ್ಮಕ ರೂಪು ನೀಡಿದ್ದಾರೆ. ಸ್ವಂತ ವಾಹನದಲ್ಲಿ ನಗರ ಪ್ರದೇಶದ ಬಡಾವಣೆಗಳಲ್ಲಿ ಮಾರಾಟಕ್ಕೆ ಮುಂದಾಗಿದ್ದಾರೆ. ಸಾವಯವ ಕೃಷಿಯಲ್ಲಿ ಬೆಳೆದ ಆಲ್ಪೋನ್ಸೋ ಹಾಗೂ ಸಿಂಧೂರ ತಳಿಯ ಮಾವಿನ ಹಣ್ಣುಗಳನ್ನು ಸ್ವಯಂ ಮಾರಾಟ ಮಾಡುವ ಮೂಲಕ ತಮ್ಮದೇ ಆದ ಮಾರುಕಟ್ಟೆ ನಿರ್ಮಿಸಿಕೊಂಡಿದ್ದಾರೆ. ಸ್ವ ಮಾರುಕಟ್ಟೆ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಾರುಕಟ್ಟೆ ವಿಸ್ತರಣೆಗೆ ಸೂಕ್ತ ಸಂಪರ್ಕ ಗ್ರಾಹಕರಿಂದಲೇ ಸಿಗುತ್ತಿದೆ. ಎರಡು ಕೆ.ಜಿ. ಗಿಂತ ಹೆಚ್ಚು ಬೇಡಿಕೆ ಬಂದರೂ ಮನೆ ಬಾಗಿಲಿಗೆ ತಲುಪಿಸುತ್ತಾರೆ.

    ನಿತ್ಯ ಕನಿಷ್ಟ 200 ಕೆ.ಜಿ.ಯಿಂದ 500 ಕೆ.ಜಿ.ವರೆಗೆ ಮಾವು ಮಾರಾಟವಾಗುತ್ತಿದೆ. ಪ್ರತಿ ಕೆ.ಜಿ. ಆಲ್ಪೋನ್ಸೊ(ಬಾದಾಮ್) ಮಾವು ಬೆಲೆ ರೂ.130 ಬೆಲೆ ನಿಗದಿಗೊಳಿಸಿದ್ದೇನೆ. ದಾವಣಗೆರೆ, ಚಿತ್ರದುರ್ಗ ನಗರಗಳಲ್ಲಿ ಒಟ್ಟಾರೆ ಒಂದು ವಾರಕ್ಕೆ 1 ಟನ್ ಮಾರುತ್ತಿದ್ದೇನೆ. ಮೂರು ವಾರಗಳಲ್ಲಿ 3 ಟನ್ ಮಾರಾಟವಾಗಿದೆ. ಮೇ 15ರ ವರೆಗೆ ಇನ್ನೂ 5 ವಾರ ನಮ್ಮದೇ ತೋಟದ ಮಾವು ಮಾರಾಟ ಮಾಡುವ ಭರವಸೆ ಇದೆ. ಶಿವಮೊಗ್ಗ ನಗರದಿಂದಲೂ ಬೇಡಿಕೆ ಬರುತ್ತಿದೆ. ಇವರ ತೋಟದಿಂದಲೇ ಸುಮಾರು 8 ಟನ್ ಏಕಾಂಗಿಯಾಗಿ ಮಾರುವ ಗುರಿ ಇದೆ. ರೂ 8ಲಕ್ಷ ಗಳಿಕೆಯ ಗುರಿ ಇದೆ ಎನ್ನುತ್ತಾರೆ ತಿಪ್ಪೇಸ್ವಾಮಿ.

    ದೊಡ್ಡಬ್ಬಿಗೆರೆ ಸಮೀಪ 5 ಎಕರೆ ಮಾವಿನ ತೋಟ. ಕೊಳವೆ ಬಾವಿಯಲ್ಲಿ ಅಲ್ಪ ನೀರು. ಮಾವಿಗೆ ನೀರಿನ ಬೇಡಿಕೆ ಕಡಿಮೆ. ವಿನೂತನ ಪ್ರಯೋಗಕ್ಕೆ ಮುಂದಾಗಿ ಇರುವ ಅಲ್ಪ ನೀರಿನಲ್ಲಿ ಕೃಷಿ ವಿಜ್ಞಾನಿ ಹಾಗೂ ಅಧಿಕಾರಿಗಳ ಮಾರ್ಗದರ್ಶನದಂತೆ ನೀರುಣಿಸಿಲಾಗಿತ್ತು. ಜುಲೈ ತಿಂಗಳಲ್ಲೆ ತೋಟ ಉಳುಮೆ ಮಾಡಿಸಿ, ಗುಣಿ ಸುತ್ತು ಮಾಡಲಾಗಿತ್ತು. ಪ್ರೂನಿಂಗ್ ಮೂಲಕ ರೆಂಬೆಗಳ ನಡುವೆ ಗಾಳಿ ಸುಳಿಯುವಂತೆ ಹೆಚ್ಚುವರಿ ರೆಂಬೆಗಳನ್ನು ತೆರವುಗೊಳಿಸಿದ್ದರು. ಬುಡದಿಂದ ಅಂತರ ಕಾಯ್ದುಕೊಂಡು, 5 ಪುಟ್ಟಿ ಕಾಂಪೋಸ್ಟ್ ಗೊಬ್ಬರ, 2 ಕೆ.ಜಿ. ಸುಣ್ಣ ಕೊಡಲಾಗಿತ್ತು. ಹಾಗಾಗಿ ನವೆಂಬರ್ನಲ್ಲಿ ಹೂ ಬಿಟ್ಟು ಜನವರಿಯಲ್ಲಿ ಈಚು ಕಾಣಿಸಿದ್ದವು. ಆನಂತರ ವಾರಕ್ಕೊಮ್ಮೆ ಹನಿ ನೀರಾವರಿ ಪದ್ಧತಿಯಲ್ಲಿ ನೀರು ಕೊಡುವ ಮೂಲಕ ಇಳುವರಿ ವೃದ್ಧಿಸಿದೆ. ಅಕ್ಕಪಕ್ಕದ ತೋಟಗಳಲ್ಲಿ ಮಾವು ಬೆಳೆ ನೆಲಕಚ್ಚಿದೆ. ಜನವರಿಯಲ್ಲಿ ಬಿದ್ದ ಮಳೆಗೆ ಆಗ ಹೂವಾದ ತೋಟಗಳಲ್ಲಿ ಬೆಳೆ ಕುಸಿತದ ಪ್ರಮಾಣ ಅಧಿಕ. ಸಕಾಲದ ಪೋಷಣೆಯಿಂದ ಬೇಗ ಹೂವಾದ ಕಾರಣ ಜನವರಿ ತಿಂಗಳ ಮಳೆ ಬಿದ್ದರೂ ಕಾಯಿಗಟ್ಟಿದ ಕಾರಣ ಭರ್ಜರಿ ಇಳುವರಿ ಸಿಕ್ಕಿದೆ ಎನ್ನುತ್ತಾರೆ ಅವರು.

    ರೈತ ಕೃಷಿಯಲ್ಲಿ ವಿನೂತನ ಸಂಶೋಧನಾಧರಿತ ಪದ್ದತಿ ಅಳವಡಿಸಿಕೊಳ್ಳಬೇಕು. ಲಭ್ಯ ಸಂಪನ್ಮೂಲಗಳ ಬಳಕೆಗೆ ನಿಗಾವಹಿಸಬೇಕು. ಕರ್ಫ್ಯೂ ಹೇರಿಕೆಯಿಂದ ಹೊರರಾಜ್ಯಗಳಿಗೆ ಮಾವು ಸಾಗಣೆ ಕುಸಿದಿದೆ. ಬಾಹ್ಯ ಮಾರುಕಟ್ಟೆಯಲ್ಲಿ ಬಂದ್ ಆಗಿರುವ ಕಾರಣ ಸಗಟು ಮಾರಾಟದಲ್ಲಿ ಲಾಭದಾಯಕ ಬೆಲೆ ಸಿಗುತ್ತಿಲ್ಲ. ಮಹಾರಾಷ್ಟ್ರ ರಾಜ್ಯಕ್ಕೆ ರವಾನೆಯಾಗುತ್ತಿದ್ದ ಮಾವು ಕೋವಿಡ್ ನಿಂದ ಹಿನ್ನಡೆ ಆಗಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಗೇಣಿ ಕೊಟ್ಟು ಕೈ ತೊಳೆದುಕೊಳ್ಳುವ ಬದಲು ಸ್ವಂತ ಮಾರುಕಟ್ಟೆ ಕಲ್ಪಿಸಿಕೊಳ್ಳುವ ಪರಿಶ್ರಮದಿಂದ ಲಾಭದಾಯಕವಾಗಬಲ್ಲದು ಎಂದು ಅವರು ಅನುಭವ ಬಿಚ್ಚಿೇಹಹಮಟ್ಟರು.

    ರಾಸಾಯನಿಕ ಔಷದೋಪಚಾರದಿಂದ ದೂರ ಉಳಿದು. ಸಾವಯವ ಕೃಷಿಯಲ್ಲಿ ಬೆಳೆದ ಮಾವು ಬೆಳೆಯನ್ನು ಸ್ವಾಭಾವಿಕವಾಗಿ ಹಣ್ಣಾಗಿಸಲು ದಾವಣಗೆರೆ ತರಳಬಾಳು ಕೃಷಿ ಸಂಶೋಧನಾ ಕೇಂದ್ರದಲ್ಲಿನ ಈಥಲೀನ್ ಅನಿಲ ಚೇಂಬರ್ ನಲ್ಲಿ ಸತತ 24 ಗಂಟೆ ಶೇಖರಿಸಲಾಗುವುದು. ಆನಂತರ ಉಗ್ರಾಣಕ್ಕೆ ಸ್ಥಳಾಂತರಿಸಲಾಗುವುದು. ಒಂದು ವಾರದಲ್ಲಿ ಬಂಗಾರದ ಬಣ್ಣದ ಹಣ್ಣಾಗುವ ಪ್ರಕ್ರಿಯೆ ನಡೆಯುತ್ತದೆ. ಇದರಿಂದ ರಾಸಾಯನಿಕ ಪೌಡರ್ ಬಳಸದೆ ಆರೋಗ್ಯ ಪೂರ್ಣ ಮಾವಿನ ಹಣ್ಣಿ ಸ್ವಾದ ಸವಿಯಬಹುದು ಎನ್ನುತ್ತಾರೆ ತಿಪ್ಪೇಸ್ವಾಮಿ.

    ಕೆ ಎಸ್ ವೀರೇಶ ಪ್ರಸಾದ್
    ಕೆ ಎಸ್ ವೀರೇಶ ಪ್ರಸಾದ್https://kannadapress.com/
    ವೃತ್ತಿ ಯಿಂದ ವಿಜ್ಞಾನ ಶಿಕ್ಷಕ . ಪ್ರವೃತ್ತಿಯಿಂದ ಪತ್ರಕರ್ತ.
    spot_img

    More articles

    7 COMMENTS

    1. ತಿಪ್ಪೇಸ್ವಾಮಿಯವರ ನಡೆ ಆದರ್ಶ ಪ್ರಾಯ. ಎಲ್ಲದಕ್ಕೂ ಸರಕಾರವನ್ನೇ ಅವಲಂಬಿಸುವ ಬದಲು ತಮ್ಮದೇ ಆದ ಮಾರುಕಟ್ಟೆ ಕಂಡು ಕೊಂಡ ಅವರಿಗೆ ಅಭಿನಂದನೆ. ಬೆಂಗಳೂರಿಗೆ ತಲುಪಿಸುವ ವ್ಯವಸ್ಥೆ ಇದೆಯೇ ?

    2. ಸಮಯೋಚಿತ ಲೇಖನ ಪ್ರಸಾದ್… ನಿಮ್ಮ ಲೇಖನದಿಂದ ಉತ್ತೇಜಿತರಾಗಿ ಇನ್ನೂ ಹೆಚ್ಚಿನ ಮಾವು ಬೆಳೆಗಾರರು ತಿಪ್ಪೇಸ್ವಾಮಿಯವರ ಅಸಂಪ್ರಾದಾಯಿಕ ವಿಧಾನಗಳನ್ನು ಅಳವಡಿಸಿಕೊಂಡರೆ ನಿಮ್ಮ ಲೇಖನಕ್ಕೊಂದು ಸಾರ್ಥಕತೆ….👍

    3. ತಿಪ್ಪೇಸ್ವಾಮಿ ಅವರ ಜಂಗಮವಾಣಿ ಸಂಖ್ಯೆ ತಿಳಿಸಿ

    LEAVE A REPLY

    Please enter your comment!
    Please enter your name here

    Latest article

    error: Content is protected !!